Tuesday, 16 September 2025

ಬಾನು ಮುಶ್ತಾಕ್‌ರನ್ನು ಬಿಜೆಪಿ ವಿರೋಧಿಸಿರುವುದಕ್ಕೆ ಧರ್ಮ ಕಾರಣವೇ?


ಸನ್ಮಾರ್ಗ ಸಂಪಾದಕೀಯ 

ನಾಡಹಬ್ಬ ದಸರಾವನ್ನು ಸಾಹಿತಿ ಬಾನು ಮುಶ್ತಾಕ್ ಅವರು ಉದ್ಘಾಟಿಸುವುದು ಸರಿಯೋ ತಪ್ಪೋ ಎಂಬ ಚರ್ಚೆಯೊಂದನ್ನು ಬಿಜೆಪಿ ಕನ್ನಡಿಗರ ಮೇಲೆ ಎತ್ತಿ ಹಾಕಿದೆ. ಮಾಜಿ ಸಂಸದ ಪ್ರತಾಪಸಿಂಹ, ಶಾಸಕ ಯತ್ನಾಳ್ ಅವರು ಬಹಿರಂಗವಾಗಿಯೇ ಬಾನು ಮುಶ್ತಾಕ್ ಅವರ ಉದ್ಘಾಟನೆಯನ್ನು ವಿರೋಧಿಸಿದ್ದಾರೆ. ಬಾನು ಮುಶ್ತಾಕ್ ಅವರ ಧಾರ್ಮಿಕ ನಂಬಿಕೆಯೇ  ಈ ವಿರೋಧಕ್ಕೆ ಕಾರಣ ಎಂದೂ ಹೇಳಿದ್ದಾರೆ. ಬಾನು ಮುಶ್ತಾಕ್ ಅವರ ಧರ್ಮ ಈ ಉದ್ಘಾಟನಾ ವಿಧಾನವನ್ನು ಒಪ್ಪುವುದಿಲ್ಲ ಎಂಬುದು ಈ ಇಬ್ಬರ ವಾದ. ನಿಜವಾಗಿ,

ಈ ಪ್ರತಾಪಸಿಂಹ ಆಗಲಿ, ಯತ್ನಾಳ್ ಆಗಲಿ ನಿನ್ನೆ ಮೊನ್ನೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರಲ್ಲ. 2017ರಲ್ಲಿ ಈ ದಸರಾವನ್ನು ಉದ್ಘಾಟಿಸಿದ್ದು ಕವಿ ನಿಸಾರ್ ಅಹ್ಮದ್. ಆಗ ಪ್ರತಾಪಸಿಂಹ ಸಂಸದರಾಗಿದ್ದರು. ಯತ್ನಾಳ್ ಶಾಸಕರಾಗಿದ್ದರು. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೆ ರಾಜ್ಯದಲ್ಲಿ ಪ್ರಧಾನ ವಿರೋಧ ಪಕ್ಷವಾಗಿ ಬಿಜೆಪಿ ಚಟುವಟಿಕೆಯಲ್ಲಿತ್ತು. ಅಂದೂ ಮುಖ್ಯಮಂತ್ರಿಯಾಗಿದ್ದುದು ಸಿದ್ದರಾಮಯ್ಯ. ಇಂದೂ ಮುಖ್ಯಮಂತ್ರಿಯಾಗಿರುವುದು ಸಿದ್ದರಾಮಯ್ಯರೇ. ಆದರೆ,

2017ರಲ್ಲಿ ನಿಸಾರ್ ಅಹ್ಮದ್‌ರ ಧರ್ಮವನ್ನು ಉಲ್ಲೇಖಿಸಿ ಯಾವ ವಿರೋಧವನ್ನೂ ವ್ಯಕ್ತಪಡಿಸದ ಬಿಜೆಪಿ, 2025ರಲ್ಲಿ ಬಾನು ಮುಶ್ತಾಕ್‌ಗೆ ಧರ್ಮದ ಆಧಾರದಲ್ಲಿ ವಿರೋಧ ವ್ಯಕ್ತಪಡಿಸಲು ಕಾರಣವೇನು? ನಿಸಾರ್ ಅಹ್ಮದ್‌ರಿಗೆ ಹೋಲಿಸಿದರೆ ಬಾನು ಮುಶ್ತಾಕ್ ಅವರ ಆಯ್ಕೆಗೆ ಇನ್ನೂ ಹೆಚ್ಚು ತೂಕವಿದೆ. ಇವರು ಬೂಕರ್ ಪ್ರಶಸ್ತಿ ವಿಜೇತ ಮೊದಲ ಕನ್ನಡ ಸಾಹಿತಿ. ಅರ್ಹತೆ ಮತ್ತು ಆಯ್ಕೆಗೆ ಸಂಬಂಧಿಸಿ ಒಂದಿನಿತೂ ಅನುಮಾನ ಇಲ್ಲದಷ್ಟು ಸೂಕ್ತ ವ್ಯಕ್ತಿತ್ವ ಬಾನು ಮುಶ್ತಾಕ್‌ರದ್ದು. ಇಷ್ಟಿದ್ದೂ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಬಾನು ಮುಶ್ತಾಕ್‌ರ ಧರ್ಮವನ್ನು ಎತ್ತಿಕೊಂಡು ಮತ್ತು ಅವರ ಧರ್ಮದಲ್ಲಿರುವ ಏಕದೇವಾರಾಧನೆಯನ್ನು ಮುಂದು ಮಾಡಿಕೊಂಡು ಬಿಜೆಪಿ ವ್ಯಕ್ತಪಡಿಸುತ್ತಿರುವ ಈ ವಿರೋಧದ ಹಿಂದೆ ನಿಜಕ್ಕೂ ಕೆಲಸ ಮಾಡುತ್ತಿರುವುದು ಅವರ ಧರ್ಮವೋ ಅಥವಾ ಅವರ ನಿಲುವುಗಳೋ?

ಬಾನು ಮುಶ್ತಾಕ್ ಅಂದರೆ ಬಿಜೆಪಿಗೆ ಬಿಸಿ ತುಪ್ಪ. ಯಾಕೆಂದರೆ, ಬಾನು ಮುಶ್ತಾಕ್ ಬರೇ ಓರ್ವ ಸಾಹಿತಿಯಲ್ಲ. ಅವರು ವಕೀಲರು. ಅದಕ್ಕಿಂತಲೂ ಮುಖ್ಯವಾಗಿ ತಾಯಿ ಹೃದಯದ ಹೋರಾಟಗಾರರು. ಬಿಜೆಪಿಯ ಕೋಮುವಾದವನ್ನು ಸದಾ ಎದುರಿಸುತ್ತಲೇ ಬಂದ ಲಂಕೇಶ್ ಅವರ ಶೋಧನೆಯೇ ಈ ಬಾನು ಮುಶ್ತಾಕ್. ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಇವರು ಬರಹ ಜಗತ್ತಿನಲ್ಲಿ ಗುರುತಿಸಿಕೊಂಡರು. ಅವರು ಬರೇ ತನ್ನನ್ನು ಬರಹಕ್ಕೆ ಮತ್ತು ವಕೀಲಗಾರಿಕೆಗೆ ಮಾತ್ರ ಸೀಮಿತಗೊಳಿಸಲಿಲ್ಲ. ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗಿಯಾದರು. ಅದರಲ್ಲಿ ಬಾಬಾ ಬುಡನ್‌ಗಿರಿ ಚಳವಳಿಯೂ ಒಂದು.

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಹೊರಟ ಕೋಮುವಾದಿಗಳ ವಿರುದ್ಧ 2000 ಇಸವಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹೋರಾಟವನ್ನು ಹುಟ್ಟು ಹಾಕಿತ್ತು. ಬುಡನ್‌ಗಿರಿಗೆ ಭೇಟಿ ನೀಡುವುದರಿಂದ ಮುಸ್ಲಿಮರನ್ನು ಕೋಮುವಾದಿಗಳು ತಡೆದಿದ್ದರು. ‘ದತ್ತಪೀಠವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಹಸ್ತಾಂತರಿಸಬೇಕು, ಅಲ್ಲಿನ ಗೋರಿಗಳನ್ನು ಸ್ಥಳಾಂತರಿಸಬೇಕು, ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ದತ್ತಾತ್ರೇಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು...’ ಇತ್ಯಾದಿ ಬೇಡಿಕೆಯೊಂದಿಗೆ ಸಂಘಪರಿವಾರ ಬಲವಂತದ ಹೋರಾಟಕ್ಕೆ ಮುಂದಾದಾಗ ಅದಕ್ಕೆ ವಿರೋಧವನ್ನು ಒಡ್ಡಿ ಕೋಮು ಸೌಹಾರ್ದ ವೇದಿಕೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿತು. 1999ರ ವರೆಗೆ ಸಹಜವಾಗಿದ್ದ ಮತ್ತು ಶಾಂತವಾಗಿದ್ದ ಬಾಬಾ ಬುಡನ್‌ಗಿರಿಯನ್ನು ದಿಢೀರ್ ಆಗಿ ಅಶಾಂತಿಯ ತಾಣವಾಗಿಸಿದುದರ ಹಿಂದೆ ರಾಜಕೀಯ ಕಾರಣ ಇದೆ ಎಂಬುದನ್ನು ಅರಿತುಕೊಂಡ ಕೋಮುಸೌಹಾರ್ದ ವೇದಿಕೆಯು ಬುಡನ್‌ಗಿರಿಯಲ್ಲಿ 1975ಕ್ಕಿಂತ ಮೊದಲಿದ್ದ ಪದ್ಧತಿಗಳನ್ನೇ ಮುಂದುವರಿಸಬೇಕು ಮತ್ತು ದರ್ಗಾದಲ್ಲಿ ಕೋಮುವಾದಿಗಳ ಆಚರಣೆಗಳನ್ನು ತಡೆಯಬೇಕು ಎಂದು ಆಗ್ರಹಿಸಿ ಬೀದಿಗಿಳಿಯಿತು. ಅದರಲ್ಲಿ ಭಾಗಿಯಾದವರೇ ಈ ಬಾನು ಮುಶ್ತಾಕ್.

ಶಿವಮೊಗ್ಗದವರಾದ ಮತ್ತು ಹೋರಾಟ ಮನೋಭಾವದ ಬಾನು ಮುಶ್ತಾಕ್‌ರು ವಕೀಲ ವೃತ್ತಿಯ ಅನುಭವದೊಂದಿಗೆ ಹೋರಾಟಕ್ಕೆ ಮಹತ್ವದ ಕೊಡುಗೆಯನ್ನು ಸಲ್ಲಿಸಿದರು. ಕೋಮುವಾದಿ ಚಟುವಟಿಕೆಗಳಿಗೆ ವಿರೋಧವನ್ನು ವ್ಯಕ್ತಪಡಿಸಿದರು. ಮುಸ್ಲಿಮ್ ಸಮುದಾಯದಲ್ಲಿದ್ದ ಮಡಿವಂತರು ಮಹಿಳೆಗೆ ಮಸೀದಿ ಪ್ರವೇಶವನ್ನು ನಿರಾಕರಿಸಿದಾಗ ಅವರು ಹೇಗೆ ವಿರೋಧಿಸಿ ಹೋರಾಟಕ್ಕಿಳಿದಿದ್ದರೋ ಅದೇ ರೀತಿಯ ಮನೋಭಾವವನ್ನು ಅವರು ಇಲ್ಲೂ ಪ್ರದರ್ಶಿಸಿದರು. ಈ ಕಾರಣದಿಂದಲೇ ಕೋಮುವಾದಿಗಳಿಗೆ ಬಾನು ಮುಶ್ತಾಕ್ ನುಂಗಲಾರದ ತುತ್ತಾಗಿ ಬಿಟ್ಟರು. ಬರೇ ಕತೆ, ಕವನ, ಬರಹಕ್ಕೆ ಸೀಮಿತವಾಗದೇ ನಾಡಿನ ಸಮಸ್ಯೆಗಳಿಗೆ ದನಿಯಾಗುವ ಬಾನು ಮುಶ್ತಾಕ್ ಅವರಿಗೆ ಬೇಕಾಗಿರಲಿಲ್ಲ. ಧರ್ಮದ್ವೇಷವನ್ನು ಪ್ರಶ್ನಿಸುವ ಬಾನು ಅವರಿಗೆ ಬೇಕಾಗಿರಲಿಲ್ಲ. ಆದ್ದರಿಂದಲೇ, ಬಾನು ಮುಶ್ತಾಕ್‌ರನ್ನು ಗಡಿಯಲ್ಲಿಟ್ಟೇ ಅವರು ನೋಡತೊಡಗಿದರು. ಆದರೆ,

ಬಾನು ಮುಶ್ತಾಕ್ ಇವುಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಮುಸ್ಲಿಮ್ ದ್ವೇಷಿ ಮತ್ತು ಕೋಮುವಾದಿ ವಿಚಾರಧಾರೆಯನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತಲೇ ಬಂದ ಬಾನು ಮುಶ್ತಾಕ್ ಅವರು ಹಿಜಾಬ್ ವಿವಾದದ ಸಂದರ್ಭದಲ್ಲಿ ಮತ್ತೆ ತನ್ನ ಖಚಿತ ನಿಲುವಿನ ಮೂಲಕ ಬಿಜೆಪಿಯ ಕೆಂಗಣ್ಣಿಗೆ ಗುರಿಯಾದರು. ಶಾಲೆಗಳಲ್ಲಿ ಹಿಜಾಬ್ ಧರಿಸುವ ಹೆಣ್ಣು ಮಕ್ಕಳ ಹಕ್ಕನ್ನು ಅವರು ಬೆಂಬಲಿಸಿದರು. ಸಾಮಾನ್ಯವಾಗಿ,

ಸರಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಸಾಹಿತಿಗಳು ಧ್ವನಿಯೆತ್ತುವುದು ಕಡಿಮೆ ಎಂಬ ಮಾತಿದೆ. ಅದರಲ್ಲೂ ಬಿಜೆಪಿ ಸರಕಾರದ ಅವಧಿಯಲ್ಲಂತೂ ಇಂಥ ನಡವಳಿಕೆ ಹೆಚ್ಚು. ಮನ್‌ಮೋಹನ್ ಸಿಂಗ್ ಸರಕಾರವಿದ್ದಾಗ ಸಿನಿಮಾ ತಾರೆಯರಿಂದ ಹಿಡಿದು ಸಾಹಿತಿಗಳ ವರೆಗೆ ಎಲ್ಲರೂ ಸರಕಾರದ ನೀತಿ-ಧೋರಣೆಗಳನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ನಿಲುವನ್ನು ಸ್ವಚ್ಛಂದವಾಗಿ ವ್ಯಕ್ತಪಡಿಸುತ್ತಿದ್ದರು. ಆದರೆ, ಮೋದಿ ಸರಕಾರದ ಕಳೆದ 11 ವರ್ಷಗಳ ಅವಧಿಯಲ್ಲಿ ಈ ಪ್ರಕ್ರಿಯೆಯೇ ನಿಂತು ಹೋಗಿದೆ. ಆದರೆ, ಬಾನು ಮುಶ್ತಾಕ್ ಹಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿದಾಗ ಬಾನು ಮುಶ್ತಾಕ್ ತನ್ನ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು. ‘ಹಿಂದೆ ಸರಿದ ಮುಸ್ಲಿಮ್ ಹುಡುಗಿಯರ ಶಿಕ್ಷಣ’ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ 2022 ಫೆಬ್ರವರಿ 26ರಂದು ದೀರ್ಘ ಲೇಖನ ಬರೆದರು. ಹಿಜಾಬ್ ನಿಷೇಧದ ರಾಜಕೀಯ ಒಳಸುಳಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದ್ದ ಅವರು, ಇದರಿಂದಾಗಿ ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಎಚ್ಚರಿಸಿ ಆತಂಕವನ್ನೂ ವ್ಯಕ್ತಪಡಿಸಿದ್ದರು. ನಿಜವಾಗಿ,

ಬಿಜೆಪಿಗೆ ತಕರಾರಿರುವುದೇ ಇಲ್ಲಿ. ತನಗೆ ವಿನೀತವಾಗಿರದ ಬಾನು ಮುಶ್ತಾಕ್‌ರ ಮೇಲೆ ಬಿಜೆಪಿಗೆ ದ್ವೇಷವಿದೆ. ಅದರಲ್ಲೂ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ಅವರ ಬಂಡಾಯ ಮತ್ತು ಧರ್ಮದ್ವೇಷ ವಿರೋಧಿ ನೀತಿಯ ಬಗ್ಗೆ ಆಕ್ರೋಶವಿದೆ. ಬೂಕರ್ ಪ್ರಶಸ್ತಿ ಪಡೆದಾಗಲೂ ಬಾನು ಮುಶ್ತಾಕ್‌ರನ್ನು ಬಿಜೆಪಿ ಪೂರ್ಣ ಮನಸ್ಸಿನಿಂದ ಅಭಿನಂದಿಸದೇ ಇರಲೂ ಇದುವೇ ಕಾರಣ. ಇಡೀ ರಾಜ್ಯವೇ ಬಾನು ಮುಶ್ತಾಕ್‌ರನ್ನು ಬೂಕರ್ ಮುಶ್ತಾಕ್ ಎಂದು ಸಂಭ್ರಮಿಸುತ್ತಿದ್ದಾಗಲೂ ಬಿಜೆಪಿ ಮನೆಯನ್ನು ಮೌನ ಹೊದ್ದುಕೊಂಡಿತ್ತು. ಇದೀಗ ಬಿಜೆಪಿ ತನ್ನ ಅಸಲು ಮುಖವನ್ನು ಬಹಿರಂಗಕ್ಕೆ ತಂದಿದೆ. ಧರ್ಮದ ನೆಪವನ್ನು ಮುಂದಿಟ್ಟುಕೊಂಡು  ನಾಡಹಬ್ಬವನ್ನು ಉದ್ಘಾಟಿಸುವುದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಒಂದುವೇಳೆ,

ದಸರಾ ಉದ್ಘಾಟಿಸುವುದಕ್ಕೆ ತನ್ನ ಧಾರ್ಮಿಕ ವಿಶ್ವಾಸ ಅಡ್ಡಿ ಬರುತ್ತದೆಂದಾದರೆ ಅದನ್ನು ಹೇಳಬೇಕಾಗಿರುವುದು ಬಾನು ಮುಶ್ತಾಕ್‌ರೇ ಹೊರತು ಬಿಜೆಪಿ ಅಲ್ಲ. ಆದರೆ ಬಾನು ಮುಶ್ತಾಕ್ ದಸರಾ ಉದ್ಘಾಟನೆಗೆ ಒಪ್ಪಿಕೊಂಡಿದ್ದಾರೆ. ತನ್ನನ್ನು ಆಯ್ಕೆ ಮಾಡಿರುವುದಕ್ಕೆ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೀಗಿರುವಾಗ, ಬಿಜೆಪಿಗೇನು ತೊಂದರೆ? ಬಾನು ಮುಶ್ತಾಕ್‌ರಿಗೇ ಇಲ್ಲದ ವಿರೋಧವನ್ನು ಬಿಜೆಪಿ ಹುಡುಕುತ್ತಿರುವುದೇಕೆ? ತನ್ನ ನಂಬಿಕೆಗೆ ಚ್ಯುತಿ ಬಾರದಂತೆ ನಾಡಹಬ್ಬವನ್ನು ಹೇಗೆ ಉದ್ಘಾಟಿಸಬೇಕು ಎಂಬುದನ್ನು ಬಾನು ಮುಶ್ತಾಕ್‌ರಿಗೆ ಬಿಜೆಪಿ ಹೇಳಿಕೊಡಬೇಕಾಗಿಲ್ಲ. ಅದನ್ನು ಅವರೇ ನಿರ್ಧರಿಸಿಕೊಳ್ಳಲಿ.

No comments:

Post a Comment