Showing posts with label ಗೋವು. Show all posts
Showing posts with label ಗೋವು. Show all posts

Thursday, 9 August 2018

ಗೋವು, ಹೆಣ್ಣು ಮತ್ತು ನಾವು...


ಅತ್ಯಾಚಾರವನ್ನು ತಡೆಗಟ್ಟುವುದು ಹೇಗೆ ಎಂಬ ಪ್ರಶ್ನೆ ಅತ್ಯಂತ ಗಂಭೀರ ಸ್ವರೂಪವನ್ನು ಪಡೆದುಕೊಂಡದ್ದು ನಿರ್ಭಯ ಪ್ರಕರಣದ ಬಳಿಕ. ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕು ಎಂಬ ಕೂಗು ಬಲ ಪಡೆದದ್ದೂ ಆ ಬಳಿಕವೇ. ಮನ್‍ಮೋಹನ್ ಸಿಂಗ್ ಸರಕಾರವು ಈ ಕುರಿತಂತೆ ಕೆಲವು ಕ್ರಮಗಳನ್ನು ಕೈಗೊಂಡಿತು. ಕಾನೂನಿಗೆ ಬಲ ತುಂಬುವ ಕೆಲಸವನ್ನು ಮಾಡಿತು. ನಿರ್ಭಯ ನಿಧಿಯ ಸ್ಥಾಪನೆಯೂ ಆಯಿತು. ಇದು 5 ವರ್ಷಗಳ ಹಿಂದಿನ ಬೆಳವಣಿಗೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸರಕಾರವು ವಿಧೇಯಕವೊಂದನ್ನು ಲೋಕಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದುಕೊಂಡಿದೆ. ಈ ವಿಧೇಯಕವೂ ಅತ್ಯಾಚಾರಕ್ಕೆ ಸಂಬಂಧಿಸಿದ್ದೇ. ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರ ಮೇಲೆ ಅತ್ಯಾಚಾರ ಎಸಗುವ ಅಪರಾಧಿಗಳಿಗೆ ಮರಣ ದಂಡನೆ ವಿಧಿಸಲು ಈ ವಿಧೇಯಕ ಅವಕಾಶ ಮಾಡಿಕೊಡುತ್ತದೆ. ಈ ವಿಧೇಯಕಕ್ಕಿಂತ ಮೊದಲು ಇನ್ನೊಂದು ವಿಧೇಯಕಕ್ಕೂ ನಮ್ಮ ದೇಶದ ಸಂಸತ್ತು ಅನುಮೋದನೆ ನೀಡಿತ್ತು. ಅದೂ ಅತ್ಯಾಚಾರಕ್ಕೆ ಸಂಬಂಧಿಸಿದ ವಿಧೇಯಕವೇ. ಅತ್ಯಾಚಾರದಲ್ಲಿ ಭಾಗಿಯಾದ ಅಪ್ರಾಪ್ತ ವಯಸ್ಕನನ್ನು ಪ್ರಾಪ್ತನಂತೆ ಪರಿಗಣಿಸಿ ವಿಚಾರಣೆಗೆ ಒಳಪಡಿಸಲು ಅನುವು ಮಾಡಿಕೊಡುವ ವಿಧೇಯಕ ಅದಾಗಿತ್ತು. ವಿಷಾದ ಏನೆಂದರೆ,
     
     ಸಂಸತ್ತಿನಲ್ಲಿ ವಿಧೇಯಕಗಳು ಒಂದರ ಮೇಲೊಂದರಂತೆ ಮಂಡನೆಯಾಗುತ್ತಲೇ ಇದೆ. ಅಲ್ಲದೇ, ಅಂಗೀಕಾರವನ್ನೂ ಪಡೆದುಕೊಳ್ಳುತ್ತಿದೆ. ಆದರೆ, ಅತ್ಯಾಚಾರದ ಪ್ರಕರಣಗಳಲ್ಲಿ ಇಳಿಕೆ ಆಗುತ್ತಲೇ ಇಲ್ಲ. ಮಾತ್ರವಲ್ಲ, ಅತ್ಯಾಚಾರ ಪ್ರಕರಣಗಳ ಭೀಭತ್ಸಕತೆಯಲ್ಲಿ ಮೊನ್ನೆಯಿಂದ, ನಿನ್ನೆಗೆ, ನಿನ್ನೆಯಿಂದ ಇವತ್ತಿಗೆ ಏರಿಕೆ ಆಗುತ್ತಲೇ ಇದೆ. ಇದು ಹೇಗೆ ಸಾಧ್ಯ? ಒಂದು ಕಡೆ, ಬಲ ಪಡೆಯುತ್ತಿರುವ ಕಾನೂನು ಮತ್ತು ಇನ್ನೊಂದು ಕಡೆ, ಅತ್ಯಾಚಾರ ಮತ್ತು ಅದರ ಭೀಕರತೆಯಲ್ಲಿ ಹೆಚ್ಚಳವಾಗುತ್ತಿರುವುದು- ಇವೆಲ್ಲ ಏನು ಮತ್ತು ಏಕೆ? 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣ ದಂಡನೆ ವಿಧಿಸುವ ವಿಧೇಯಕ ಸಂಸತ್ತಿನಲ್ಲಿ ಮಂಡನೆಯಾಗುತ್ತಿರುವ ಹೊತ್ತಿಲ್ಲೇ  ತೆಲಂಗಾಣದಿಂದ ಭೀಕರ ಸುದ್ದಿಯೊಂದು ಹೊರಬಿತ್ತು. 10 ವರ್ಷಕ್ಕಿಂತ ಕಿರಿಯ ವಯಸ್ಸಿನ ಬಾಲಕಿಯರಿಗೆ ಹಾರ್ಮೋನ್ ಇಂಜಕ್ಷನ್ ಚುಚ್ಚಿ ಸೆಕ್ಸ್ ದಂಧೆಗೆ ಬಳಸಿಕೊಳ್ಳುವ ಜಾಲ ಅಲ್ಲಿ ಪತ್ತೆಯಾಯಿತು. 12ರಷ್ಟು ಬಾಲಕಿಯರನ್ನು ಆ ಕ್ರೌರ್ಯದಿಂದ ರಕ್ಷಿಸಲಾಯಿತು. ಇದಕ್ಕಿಂತ ಎರಡು ವಾರಗಳ ಮೊದಲು ಬಿಹಾರದ ಮುಝಫ್ಫರ್‍ಪುರ ನಗರದಲ್ಲಿ ಸರಕಾರದ ಅನುದಾನದಿಂದ ‘ಸೇವಾ ಸಂಕಲ್ಪ ಏವಂ ವಿಕಾಸ್ ಸಮಿತಿ’ಯು ನಡೆಸುತ್ತಿದ್ದ ಬಾಲಿಕಾಗೃಹದಲ್ಲಿ 24ರಷ್ಟು ಹೆಣ್ಮಕ್ಕಳು ಮೇಲೆ ನಿರಂತರ ಅತ್ಯಾಚಾರಕ್ಕೊಳಗಾದ ಘಟನೆ ಬಹಿರಂಗಕ್ಕೆ ಬಂತು. ಇದನ್ನು ನಡೆಸುತ್ತಿದ್ದವ ಬೃಜೇಶ್ ಠಾಕೂರ್ ಎಂಬ ಅರೆಕಾಲಿಕ ಪತ್ರಕರ್ತ. ಕಳೆದವಾರ ನಮ್ಮದೇ ರಾಜ್ಯದ ಮಾಲೂರಿನಲ್ಲಿ 9ನೇ ತರಗತಿಯ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಯಿತು. ಹಾಗಂತ, ಇಲ್ಲಿ ಉಲ್ಲೇಖಗೊಂಡ ಕೃತ್ಯಗಳನ್ನು ಬಿಡಿಬಿಡಿಯಾಗಿ ಓದಬೇಕಿಲ್ಲ. ಈ ದೇಶದಲ್ಲಿ ನಿರಂತರ ನಡೆಯುತ್ತಿರುವ ಪ್ರಕರಣಗಳಿಂದ ಹೆಕ್ಕಿಕೊಂಡ ಘಟನೆಗಳಷ್ಟೇ ಇವು.
   
       ಹೆಣ್ಣು ಪದೇ ಪದೇ ಈ ದೇಶದಲ್ಲಿ ಅಸುರಕ್ಷಿತೆಯಾಗಿ ಗುರುತಿಸಿಕೊಳ್ಳುವುದಕ್ಕೆ ಕಾರಣಗಳು ಏನು? ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಾಚ್‍ನ ವರದಿಯ ಪ್ರಕಾರ, ಭಾರತದ ಸುಮಾರು ಒಂದು ಲP್ಷÀದ 50 ಸಾವಿರಕ್ಕಿಂತಲೂ ಅಧಿಕ ಹೆಣ್ಣು ಮಕ್ಕಳು ದೇಶ-ವಿದೇಶಗಳಲ್ಲಿ ವೇಶ್ಯಾವಾಟಿಕೆಯ ದಂಧೆಗೆ ಸಿಲುಕಿ ಬಿಟ್ಟಿದ್ದಾರೆ. ಭಯಾನಕ ಏನೆಂದರೆ, ಇವರಲ್ಲಿ ಶೇ. 40ರಷ್ಟು ಹೆಣ್ಣು ಮಕ್ಕಳೂ ಅಪ್ರಾಪ್ತರು. ಅವರ ಬಾಲ್ಯವೇ ನಾಶವಾಗಿ ಹೋಗಿದೆ. ಈ ದೇಶದಲ್ಲಿ ಪ್ರತಿವರ್ಷ 6 ಲಕ್ಷ ಹೆಣ್ಣು ಭ್ರೂಣದ ಹತ್ಯೆಯಾಗುತ್ತಿದೆ. ವರ್ಷಕ್ಕೆ 5 ಲಕ್ಷ ಮಕ್ಕಳನ್ನು ಲೈಂಗಿಕ ವ್ಯಾಪಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಈ ದೇಶದ ಒಟ್ಟು ಮಕ್ಕಳ ಜನಸಂಖ್ಯೆಯಲ್ಲಿ ಶೇ. 53ರಷ್ಟು ಮಕ್ಕಳು ಯಾವುದಾದರೊಂದು ರೀತಿಯಲ್ಲಿ ಲೈಂಗಿಕ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಯುನಿಸೆಫ್‍ನ ವರದಿಯೂ ಹೇಳುತ್ತಿದೆ. ಅಲ್ಲದೇ, ಪ್ರತಿ 155 ನಿಮಿಷಕ್ಕೊಮ್ಮೆ ದೇಶದಲ್ಲಿ 16 ವರ್ಷದೊಳಗಿನ ಒಂದು ಹೆಣ್ಣು ಮಗು ಅತ್ಯಾಚಾರಕ್ಕೆ ಒಳಗಾಗುತ್ತಿದೆ. ಪ್ರತಿ 13 ಗಂಟೆಗೊಮ್ಮೆ 10 ವರ್ಷಕ್ಕಿಂತ ಕೆಳಗಿನ ಒಂದು ಹೆಣ್ಣು ಮಗು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದೆ.


     ಹೀಗೆ ಪಟ್ಟಿ ಮಾಡುತ್ತಾ ಹೋದರೆ ಪುಟ ತುಂಬುವಷ್ಟು ಅಂಕಿ-ಅಂಶಗಳಿವೆ. ಈ ಅಂಕಿ-ಅಂಶಗಳ ಆಚೆಗೆ ಈ ದೇಶವನ್ನು ಹೆಣ್ಣಿನ ಪಾಲಿಗೆ ಸುರಕ್ಷಿತಗೊಳಿಸುವುದು ಹೇಗೆ? ತಮಾಷೆ ಏನೆಂದರೆ, ಗೋವುಗಳ ಸುರಕ್ಷಿತತೆಯ ಬಗ್ಗೆ ಆತಂಕ ತೋಡಿಕೊಳ್ಳುವ ರಾಜಕಾರಣಿಗಳು ಈ ದೇಶದಲ್ಲಿದ್ದಾರೆ. ಗೋವುಗಳಿಗೆ ಸಂಬಂಧಿಸಿ ಪ್ರತಿ ದಿನ ಒಂದು ಹೇಳಿಕೆಯಾದರೂ ಮಾಧ್ಯಮಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳುವ ಜಾಣತನವೂ ಅವರಿಗೆ ಗೊತ್ತಿದೆ. ಗೋಸಾಗಾಟದ ಹೆಸರಲ್ಲಿ ಹಲ್ಲೆ-ಹತ್ಯೆಗಳು ನಡೆದಾಗಲೆಲ್ಲ ಈ ಮಂದಿ ತಾರಕ ದನಿಯಲ್ಲಿ ಮಾತಾಡುತ್ತಾರೆ. ಗೋಸಂತತಿಯನ್ನು ಉಳಿಸುವ ಬಗ್ಗೆ, ಅಳಿವಿನಂಚಿನಲ್ಲಿರುವ ಗೋ ಸಂತತಿಗಳ ಬಗ್ಗೆ, ಗೋಮಾಂಸ ಸೇವಕರ ಬಗ್ಗೆ, ಗೋಹತ್ಯಾ ಮುಕ್ತ ದೇಶ ಕಟ್ಟುವ ಬಗ್ಗೆ, ಗೋಗ್ರಾಮ-ಗೋ ಅರಣ್ಯ ಸ್ಥಾಪಿಸುವ ಬಗ್ಗೆ.. ಹೀಗೆ ಹೇಳಿಕೆಗಳು ಬರುತ್ತಲೇ ಇರುತ್ತವೆ. ಅದೇವೇಳೆ, ಪ್ರತಿವರ್ಷ ಸುಮಾರು 40 ಸಾವಿರದಷ್ಟು (2014ರಲ್ಲಿ 37,681) ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ ಈ ಬಗ್ಗೆ ಗಂಭೀರ ಹೇಳಿಕೆಗಳು ಮತ್ತು ಆವೇಶದ ಮಾತುಗಳು ಕೇಳಿ ಬರುತ್ತಲೇ ಇಲ್ಲ. ಗೋಸಂತತಿಯನ್ನು ಉಳಿಸಬೇಕೆನ್ನುವ ಅದೇ ಕಾಳಜಿಯಲ್ಲಿ ಹೆಣ್ಣು ಸಂತತಿಯನ್ನು ಉಳಿಸಿಕೊಳ್ಳಬೇಕೆಂಬ ಆಗ್ರಹಗಳು ವ್ಯಕ್ತವಾಗುತ್ತಿಲ್ಲ. ಹೆಣ್ಣಿನ ಮೇಲಿನ ಅತ್ಯಾಚಾರವು ಗೋಹತ್ಯೆಯ ಮುಂದೆ ಜುಜುಬಿ ಅನ್ನಿಸಿಕೊಂಡದ್ದು ಯಾಕಾಗಿ?
    
     ಅತ್ಯಾಚಾರವೆಂದರೆ, ಒಂದು ಮನಸ್ಸಿನ ಸಾವು. 'ಅತ್ಯಾಚಾರ'ವೆಂಬುದು ಬಾಹ್ಯನೋಟಕ್ಕೆ ನಾಲ್ಕು ಶಬ್ದಗಳಾದರೂ ಅದರ ಅರ್ಥ ಅತ್ಯಂತ ಆಳವಾದದ್ದು. ಹೆಣ್ಣಿನ ಮೇಲೆ ಗಂಡು ತನ್ನ ಬಲವನ್ನು ತೋರ್ಪಡಿಸುವ ಕ್ರಿಯೆಯಷ್ಟೇ ಅಲ್ಲ ಅದು. ಆಕೆಯ ಸಂವೇದನೆಯನ್ನು ಕೊಲೆಗೈದ ಕ್ರಿಯೆ ಕೂಡ. ಆದರೂ ಗೋವಿಗಾಗಿ ಮಾತಾಡುವ ಯಾವ ರಾಜಕೀಯದ ಬಾಯಿಗಳೂ ಅದೇ ಉಗ್ರತಮ ಭಾಷೆಯಲ್ಲಿ ಹೆಣ್ಣಿಗಾಗಿ ಮಾತಾಡುವುದಿಲ್ಲ. ಅತ್ಯಾಚಾರವನ್ನು ಸಹಜವೂ ಗೋಮಾಂಸವನ್ನು ಅಸಹಜವೂ ಆಗಿ ನಮ್ಮ ರಾಜಕಾರಣಿಗಳು ಪರಿಗಣಿಸಿದ್ದಾರೆಯೇ? ಅಥವಾ ರಾಜಕೀಯ ದೃಷ್ಟಿಯಲ್ಲಿ ಹೆಣ್ಣಿಗಿಂತ ಗೋವು ಹೆಚ್ಚು ಮತ ತಂದುಕೊಡುತ್ತದೆ ಎಂಬ ನಂಬಿಕೆಯೇ? ಅತ್ಯಾಚಾರದ ವಿರುದ್ಧ ಆಡುವ ಮಾತಿಗಿಂತ ಗೋವಿಗಾಗಿ ಆಡುವ ಮಾತು ಯಾಕೆ ತೂಕವುಳ್ಳದ್ದಾಗಿ ಈ ದೇಶದಲ್ಲಿ ಗುರುತಿಸಿಕೊಂಡಿದೆ? ಹೆಣ್ಣನ್ನು ಮಾತೆ, ದೇವಿ ಎಂದೆಲ್ಲಾ ಕರೆದು ಗೌರವಿಸುವ ದೇಶದಲ್ಲಿ ಹೆಣ್ಣಿನ ಮಾನ ಮತ್ತು ಪ್ರಾಣಕ್ಕಿಂತ ಗೋವಿನ ಪ್ರಾಣ ಹೆಚ್ಚು ತೂಗುವಂತಾದುದು ಯಾವುದರ ಸೂಚನೆ?

      ಬರೇ ಕಾನೂನು-ಕಾಯ್ದೆಗಳಷ್ಟೇ ಹೆಣ್ಣಿಗೆ ಈ ಭೂಮಿಯನ್ನು ಸುರಕ್ಷಿತಗೊಳಿಸಲಾರದು. ಹೆಣ್ಣನ್ನು ಗೌರವಾರ್ಹವಾಗಿ ಕಾಣುವ ಮನಸ್ಥಿತಿಯೊಂದರ ನಿರ್ಮಾಣವೇ ಇದರ ಪ್ರಥಮ ಬೇಡಿಕೆ. ಇದು ಒಂದು ರಾತ್ರಿಯಿಂದ ಬೆಳಗಾಗುವುದರ ನಡುವೆ ಸಾಧ್ಯವಾಗುವಂಥದ್ದಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಪುರುಷರನ್ನು ನಿರಂತರವಾಗಿ ತರಬೇತುಗೊಳಿಸುವ ಕ್ರಿಯೆ. ಮಕ್ಕಳಿಂದಲೇ ಈ ತರಬೇತಿ ಪ್ರಾರಂಭವಾಗಬೇಕು. ಹೆಣ್ಣಿನ ಬಗ್ಗೆ ಗೌರವ ಮೂಡುವಂಥ ಮಾತು-ಕೃತಿಗಳನ್ನು ಹೆತ್ತವರು ಮಕ್ಕಳಿಗೆ ನೀಡುತ್ತಲಿರಬೇಕು. ಹೆಣ್ಣನ್ನು ನಕಾರಾತ್ಮಕವಾಗಿ ನೋಡುವ ಎಲ್ಲದರಿಂದಲೂ ದೂರ ನಿಲ್ಲಬೇಕು.

        ಈ ಜಗತ್ತು ನಡೆಯುವುದೇ ಹೆಣ್ಣು ಮತ್ತು ಗಂಡು ಎಂಬ ಜೀವಿಯಿಂದ. ಇವೆರಡೂ ಜಗತ್ತನ್ನು ಮುಂದಕ್ಕೊಯ್ಯುವ ಗಾಲಿಗಳು. ಈ ಗಾಲಿಗಳಲ್ಲಿ ಒಂದರ ಮೇಲೆ ನಿರಂತರ ದಾಳಿ ನಡೆಯುತ್ತಿರುವುದು ಅಪಾಯಕಾರಿ.

Wednesday, 29 January 2014

ಹುಲಿ, ಗೋವು, ಭಯೋತ್ಪಾದನೆ ಮತ್ತು ದಲಿತರು

 2000ದಲ್ಲಿ ನಡೆದ ದಲಿತ ಹತ್ಯಾಕಾಂಡದಲ್ಲಿ
ಕುಟುಂಬದ ನಾಲ್ವರನ್ನು ಕಳಕೊಂಡ
 ಗೋಪಿನಾಥನ್

  1. ಪಶ್ಚಿಮ ಬಂಗಾಲದ ಬೀರ್ಭಮ್ ಜಿಲ್ಲೆ, 2. ಕರ್ನಾಟಕದ ಕೋಲಾರ ಜಿಲ್ಲೆ , 3. ಸುಪ್ರೀಮ್ ಕೋರ್ಟು.. ಇವು ಮೂರೂ ಕಳೆದ ವಾರ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಗಮನ ಸೆಳೆದುವು. ಮನುಷ್ಯರ ಪ್ರಾಣ, ಘನತೆಯ ಬಗ್ಗೆ ಸುಪ್ರೀಮ್ ಕೋರ್ಟು ಅತೀವ ಕಾಳಜಿಯನ್ನು ವ್ಯಕ್ತಪಡಿಸಿ, ಮರಣ ದಂಡನೆಯನ್ನು ಜೀವಾವಧಿಗೆ ಇಳಿಸಲು ತೀರ್ಮಾನಿಸಿದಾಗ ಮೇಲಿನೆರಡು ಜಿಲ್ಲೆಗಳು ಅದನ್ನು ಅಪಹಾಸ್ಯಗೊಳಿಸುವಂತೆ ವರ್ತಿಸಿದುವು. ಒಂದು ವೇಳೆ ಸಮಾನತೆ, ಮಾನವ ಘನತೆ, ದಲಿತ ಸಬಲೀಕರಣ.. ಮುಂತಾದುವುಗಳ ಬಗ್ಗೆ ಮಾಧ್ಯಮಗಳು ವ್ಯಕ್ತಪಡಿಸುತ್ತಿರುವ ಕಾಳಜಿ ಪ್ರಾಮಾಣಿಕವೇ ಆಗಿರುತ್ತಿದ್ದರೆ, ಮಿಕ್ಕೆಲ್ಲ ಸುದ್ದಿಗಳನ್ನು ತುಸು ಬದಿಗಿರಿಸಿ ಈ ಬಗ್ಗೆ ನಿರಂತರ ಸಾರ್ವಜನಿಕ ಜಾಗೃತಿಯನ್ನು ಮೂಡಿಸುವುದಕ್ಕೆ ಈ ಎರಡು ಪ್ರಕರಣಗಳು ಅರ್ಹವಾಗಿದ್ದುವು.
 ಬೀರ್ಭಮ್ ಜಿಲ್ಲೆಯ ಸುಬಲ್‍ಪುರ್ ಗ್ರಾಮದ ಬುಡಕಟ್ಟು ಜನಾಂಗದ ಯುವತಿಯೊಬ್ಬಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿದಳು. ಈ ಪ್ರೀತಿಯನ್ನು ಗಂಭೀರ ಅಪರಾಧವೆಂದು ಪರಿಗಣಿಸಿದ ಖಾಪ್ ಪಂಚಾಯತ್, ಯುವಕನಿಗೆ ದಂಡ ವಿಧಿಸಿ ಬಿಟ್ಟು ಬಿಟ್ಟಿತಲ್ಲದೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಆದೇಶಿಸಿತು. ಒಂದು ರಾತ್ರಿಯಿಡೀ ಯುವತಿಯನ್ನು ಲೈಂಗಿಕವಾಗಿ ಹಿಂಸಿಸಲಾಯಿತು. ಕೋಲಾರ ಜಿಲ್ಲೆಯ ನಂಗಲಿ ಬಳಿಯ ಕಗ್ಗನ ಹಳ್ಳಿಯಲ್ಲಂತೂ ದಲಿತ ಕುಟುಂಬಗಳಿಗೆ ಮೇಲ್ವರ್ಗವು ಸಾಮೂಹಿಕ ಬಹಿಷ್ಕಾರವನ್ನು ಹೇರಿದೆ. ಹೊಟೇಲು, ಅಂಗಡಿಗಳು ಈ ಕುಟುಂಬಗಳೊಂದಿಗೆ ವ್ಯವಹರಿಸದಂತೆ ಧ್ವನಿವರ್ಧಕಗಳಲ್ಲಿ ಎಚ್ಚರಿಸಲಾಗಿದೆ. ಉಲ್ಲಂಘಿಸಿದವರಿಗೆ ನಿರ್ದಿಷ್ಟ ಪ್ರಮಾಣದ ದಂಡವನ್ನು ಘೋಷಿಸಲಾಗಿದೆ. ಊರ ಕೊಳವೆ ಬಾವಿಯಿಂದ ದಲಿತರು ನೀರು ಬಳಸದಂತೆ ತಡೆಯಲಾಗಿದೆ. ಸಂಕ್ರಾಂತಿ ಹಬ್ಬವನ್ನು ಮೇಲ್ವರ್ಗಕ್ಕಿಂತ ಮೊದಲೇ ಆಚರಿಸಿದುದು ಇದಕ್ಕೆ ಕಾರಣ ಎಂದು ದಲಿತರು ಹೇಳುತ್ತಿದ್ದಾರೆ..
 ಇಲ್ಲಿ ಗೋಹತ್ಯೆ ವಿರೋಧಿ ರಾಲಿಗಳನ್ನು ಏರ್ಪಡಿಸಿ ಆಗಾಗ ಜನರ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಭಿನ್ನ ಧರ್ಮದ ಯುವಕ-ಯುವತಿಯರು ಪರಸ್ಪರ ಮಾತಾಡುವುದನ್ನು ತಡೆಯಲು, ಅವರನ್ನು ಪತ್ತೆ ಹಚ್ಚಿ ಥಳಿಸಲು ಇಲ್ಲಿ ತಂಡಗಳೇ ರಚನೆಯಾಗಿವೆ. ‘ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಮಾಡಿರುವುದೇ ಭಯೋತ್ಪಾದನೆ ಉಂಟಾಗಲು ಕಾರಣ..’ ಎಂದು ಪೇಜಾವರ ಶ್ರೀಗಳೇ ಹೇಳುತ್ತಿದ್ದಾರೆ. ‘ಸಾಧು ಪ್ರಾಣಿಯಾದ ಗೋವನ್ನು ಒಂದು ವೇಳೆ ರಾಷ್ಟ್ರ ಪ್ರಾಣಿಯಾಗಿ ಮಾಡಿರುತ್ತಿದ್ದರೆ ದೇಶ ಉಗ್ರವಾದದಿಂದ ಮುಕ್ತವಾಗಿರುತ್ತಿತ್ತು..’ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಉರುಳು ಸೇವೆ ನಡೆಯುತ್ತಿದೆ. ಪಂಕ್ತಿ ಬೇಧ ಜಾರಿಯಲ್ಲಿದೆ. ದಲಿತ ವರ್ಗವನ್ನು ಪ್ರತಿನಿಧಿಸುತ್ತಿರುವ ಅಂಬೇಡ್ಕರ್‍ರ ನೇತೃತ್ವದಲ್ಲಿ ರಚನೆಯಾದ ಸಂವಿಧಾನಕ್ಕೆ 67 ವರ್ಷಗಳು ತುಂಬಿದ ಈ ಹೊತ್ತಲ್ಲಿ ಕಾಣುತ್ತಿರುವ ವೈರುಧ್ಯಗಳಿವು. ಹುಟ್ಟಿನ ಆಧಾರದಲ್ಲಿ ಒಂದು ದೊಡ್ಡ ಸಮೂಹವನ್ನು ಭಯದ ಕೂಪಕ್ಕೆ ತಳ್ಳುವುದನ್ನು ಏನೆಂದು ಕರೆಯಬೇಕು? ಬಹಿಷ್ಕಾರದ ಭೀತಿಯಲ್ಲಿ ಬದುಕುವ ಒಂದು ಸಮೂಹದ ಪಾಲಿಗೆ ಯಾವುದು ಭಯೋತ್ಪಾದನೆಯಾಗಿರಬಹುದು? ಬಾಂಬು, ಬಂದೂಕುಗಳನ್ನು ಈ ವರೆಗೂ ನೋಡಿರದ ಈ ದೇಶದ ಅಸಂಖ್ಯ ಗ್ರಾಮಗಳ ಕೋಟ್ಯಂತರ ದಲಿತರು ಭಯೋತ್ಪಾದನೆಗೆ ಕೊಡುವ ವ್ಯಾಖ್ಯಾನ ಏನಿರಬಹುದು?
 ನಾವೆಲ್ಲ ಭಯೋತ್ಪಾದನೆಗೆ ಒಂದು ಸೀಮಿತ ಅರ್ಥವನ್ನು ಕೊಟ್ಟಿದ್ದೇವೆ. ಆ ಅರ್ಥದಂತೆ ಬಾಂಬು, ಬಂದೂಕುಗಳು ಮಾತ್ರ ಭಯೋತ್ಪಾದನೆಯ ಚೌಕಟ್ಟಿನೊಳಗೆ ಬರುತ್ತದೆ. ಮಾಧ್ಯಮಗಳ ಮುಖಪುಟದಲ್ಲಿ ಇಂಥ ಪ್ರಕರಣಗಳಿಗೆ ದಪ್ಪಕ್ಷರದ ಹೆಡ್‍ಲೈನ್‍ಗಳೂ ಸಿಗುತ್ತವೆ. ಅವು ತಪ್ಪು ಎಂದಲ್ಲ. ಮನುಷ್ಯರನ್ನು ಕೊಲ್ಲುವ, ಅವರನ್ನು ಭೀತಿಯಲ್ಲಿ ಕೆಡಹುವ ಯಾವ ಕೃತ್ಯಗಳೇ ಆಗಲಿ ಅದು ಖಂಡನಾರ್ಹ ಮತ್ತು ಅಂಥ ಪ್ರಕರಣಗಳು ಮಾಧ್ಯಮಗಳ ಮುಖಪುಟದಲ್ಲಿ ಪ್ರಮುಖ ಸುದ್ದಿಯಾಗಿ ಕಾಣಿಸಿಕೊಳ್ಳಬೇಕಾದದ್ದು ಅತ್ಯಂತ ಅಗತ್ಯ. ಆದರೆ, ಭಯೋತ್ಪಾದನೆಯ ವ್ಯಾಖ್ಯಾನವನ್ನು ನಾವು ಅಷ್ಟಕ್ಕೇ ಸೀಮಿತಗೊಳಿಸಿದರೆ ಸಾಕೇ? ಬಾಂಬು ಭಯೋತ್ಪಾದನೆಯ ವಿರುದ್ಧ ಜನರಲ್ಲಿ ಒಂದು ಬಗೆಯ ಪ್ರಜ್ಞೆಯನ್ನು ಬೆಳೆಸಲು ಸಾಧ್ಯವಾಗಿರುವಂತೆಯೇ ಹುಟ್ಟಿನ ಆಧಾರದಲ್ಲಿ ನಡೆಸಲಾಗುವ ಭಯೋತ್ಪಾದನೆಯ ಬಗ್ಗೆಯೂ ಸಮಾಜವನ್ನು ಜಾಗೃತಗೊಳಿಸುವ ಅಗತ್ಯವಿಲ್ಲವೇ? ನಮ್ಮಂತೆ ಕಣ್ಣು, ಕೈ, ಕಾಲು, ಕಿವಿ, ಮೂಗನ್ನು ಹೊಂದಿರುವ ಒಂದು ದೊಡ್ಡ ಸಮೂಹವನ್ನು ಬಹಿಷ್ಕಾರಕ್ಕೆ ಒಳಪಡಿಸುವುದನ್ನೇಕೆ ನಾವು ಬಾಂಬು ಭಯೋತ್ಪಾದನೆಯಷ್ಟೇ ಗಂಭೀರ ಪ್ರಕರಣವಾಗಿ ಪರಿಗಣಿಸುತ್ತಿಲ್ಲ? ಈ ಭಯೋತ್ಪಾದನೆಗೆ ಯಾವ ಪ್ರಾಣಿ ಕಾರಣ? ರಾಜ್ಯದಲ್ಲಿ ಮುಖ್ಯವಾಗಿ ನಮ್ಮ ಕರಾವಳಿ ಪ್ರದೇಶದಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗೆ ತಲುಪದಂತೆ ಬಲವಂತದಿಂದ ತಡೆಯುವ ಪ್ರಯತ್ನಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಜಾನುವಾರುಗಳನ್ನು ಕೊಂಡೊಯ್ಯುವ ವಾಹನಗಳನ್ನು ಅಡ್ಡಗಟ್ಟಿ ಅದರಲ್ಲಿರುವವರನ್ನು ಥಳಿಸುವ ಪ್ರಕರಣಗಳು ನಡೆಯುತ್ತಿರುತ್ತವೆ. ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನು ತಡೆಯುವುದಕ್ಕೆ ಇಲ್ಲಿ ತಂಡಗಳು ಕಾರ್ಯಾಚರಿಸುತ್ತಿವೆ. ಮಾತ್ರವಲ್ಲ, ತಮ್ಮೆಲ್ಲ ಕೃತ್ಯಗಳನ್ನು ಧರ್ಮರಕ್ಷಣೆ ಎಂದು ಅವು ಸಮರ್ಥಿಸಿಕೊಳ್ಳುತ್ತಲೂ ಇವೆ. ಹೋಮ್‍ಸ್ಟೇ, ಪಬ್ ದಾಳಿ, ಹಾಜಬ್ಬ ಬೆತ್ತಲೆ ಪ್ರಕರಣಗಳನ್ನೆಲ್ಲ ಧರ್ಮರಕ್ಷಣೆಯ ಹೆಸರಲ್ಲಿಯೇ ಇಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಅಷ್ಟಕ್ಕೂ, ಯುವತಿಯರು ಮತ್ತು ಜಾನುವಾರುಗಳ ಮೇಲೆ ತೋರುತ್ತಿರುವ ಈ ಮಟ್ಟದ ಪ್ರೀತಿಯ ಸಣ್ಣದೊಂದು ಅಂಶವನ್ನಾದರೂ ದಲಿತರ ಮೇಲೆ ತೋರುತ್ತಿದ್ದರೆ, ಈ ದೇಶದ ಪರಿಸ್ಥಿತಿ ಹೇಗಿರುತ್ತಿತ್ತು? ನಿಜವಾಗಿ, ಕೋಲಾರದ ನಂಗಲಿ ಗ್ರಾಮ ಕೇವಲ ಒಂದು ಉದಾಹರಣೆ ಅಷ್ಟೇ. ಇಂಥ ಪ್ರಕರಣಗಳು ಈ ದೇಶದಲ್ಲಿ ಆಗಾಗ ನಡೆಯುತ್ತಲೇ ಇವೆ. ಆದರೆ, ಧರ್ಮರಕ್ಷಣೆಯ ಹೆಸರಲ್ಲಿ ಜಾನುವಾರುಗಳನ್ನು ತಡೆಯುವ ಮತ್ತು ಯುವಕರನ್ನು ಥಳಿಸುವ ತಂಡಗಳು, ದಲಿತರನ್ನು ಬಹಿಷ್ಕರಿಸಿದವರನ್ನು ಥಳಿಸಿದ ಪ್ರಕರಣ ಈವರೆಗೂ ನಡೆದಿಲ್ಲ. ಯಾಕೆ ಹೀಗೆ? ಹೆಣ್ಣು-ಗಂಡು ಮಾತಾಡುವುದು ಒಂದು ಸಮೂಹವನ್ನೇ ಬಹಿಷ್ಕಾರಕ್ಕೆ ಒಳಪಡಿಸುವುದಕ್ಕಿಂತಲೂ ಭೀಕರ ಅಪರಾಧವೇ? ಅಥವಾ ದಲಿತರು ಧರ್ಮದ ಚೌಕಟ್ಟಿನೊಳಗೆ ಬರುವುದಿಲ್ಲವೇ? ಬಹಿಷ್ಕಾರದಂಥ ಭಯೋತ್ಪಾದನಾ ಕೃತ್ಯಗಳ ಕುರಿತಂತೆ ಥಳಿಸುವ ತಂಡಗಳು ತೋರುತ್ತಿರುವ ಮೌನ ಪ್ರತಿಕ್ರಿಯೆಯನ್ನು ನೋಡಿದರೆ, ಈ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತವೆ. ನಿಜವಾಗಿ, ಹೆಣ್ಣು-ಗಂಡು ಮಾತುಕತೆ, ಜಾನುವಾರು ಹತ್ಯೆ.. ಮುಂತಾದುವುಗಳಿಗಿಂತಲೂ ದಲಿತ ಬಹಿಷ್ಕಾರದಂಥ ಪ್ರಕರಣಗಳು ಅತೀ ಗಂಭೀರವಾದುದು. ಇಂಥ ಕೃತ್ಯಗಳು ಧರ್ಮದ  ನಿಜ ಸ್ವರೂಪವನ್ನೇ ಪ್ರಶ್ನಿಸುತ್ತವೆ. ಮನುಷ್ಯರು ಎಲ್ಲ ಪ್ರಾಣಿಗಳಿಗಿಂತಲೂ ಮಿಗಿಲು ಎಂದು ನಾವು ಒಪ್ಪುವುದಾದರೆ ಮೊಟ್ಟಮೊದಲು ಹುಟ್ಟಿನ ಆಧಾರದಲ್ಲಿ ಆಗುವ ಭಯೋತ್ಪಾದನೆಯ ಬಗ್ಗೆ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸಬೇಕಾಗುತ್ತದೆ. ಬಹಿಷ್ಕøತರ ಬೆಂಬಲಕ್ಕೆ ಧಾವಿಸಬೇಕಾಗುತ್ತದೆ. ಆ ಮೂಲಕ ಮನುಷ್ಯರೆಲ್ಲ ಸಮಾನ ಎಂದು ಸಾರಬೇಕಾಗುತ್ತದೆ. ಆದರೆ, ಜಾನುವಾರುಗಳ ಬಗ್ಗೆ ಮತ್ತು ಹೆಣ್ಣು-ಗಂಡು ಮಾತುಕತೆಯ ಬಗ್ಗೆ ಒಂದು ವರ್ಗದಿಂದ ವ್ಯಕ್ತವಾಗುತ್ತಿರುವ ಕಾಳಜಿಯು ದಲಿತರ ಬಗ್ಗೆ ಕಾಣಿಸುತ್ತಿಲ್ಲ. ನಿಜವಾಗಿ, ಧರ್ಮವನ್ನು ಪ್ರೀತಿಸುವುದೆಂದರೆ ಧರ್ಮದ ಹೆಸರಲ್ಲಿ ಅಸ್ತಿತ್ವದಲ್ಲಿರುವ ಅನಾಚಾರಗಳನ್ನು ವಿರೋಧಿಸುವುದು. ಅವುಗಳ ನಿರ್ಮೂಲನೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದು. ಮಾತ್ರವಲ್ಲ, ನಿಷ್ಠಾವಂತ ಧರ್ಮಾನುಯಾಯಿಯಾಗಿ ಜೀವಿಸುವುದು. ಆದರೆ, ಇವತ್ತು ಇನ್ನೊಂದು ಧರ್ಮವನ್ನು ಮತ್ತು ಅದರ ಆಚರಣೆಗಳನ್ನು ಗೇಲಿ ಮಾಡುವುದೇ ಧರ್ಮಪ್ರೀತಿ ಆಗಿಬಿಟ್ಟಿದೆ. ದಲಿತ ಬಹಿಷ್ಕಾರದಂಥ ಮನುಷ್ಯ ವಿರೋಧಿ ಕೃತ್ಯಗಳನ್ನು ತಡೆಯುವ ಅಥವಾ ಅದನ್ನು ಪ್ರತಿಭಟಿಸುವ ಬಗ್ಗೆ ಇಲ್ಲದ ಉತ್ಸಾಹ ಹೆಣ್ಣು-ಗಂಡನ್ನು ಥಳಿಸುವಲ್ಲಿ, ಜಾನುವಾರುಗಳ ವಾಹನವನ್ನು ತಡೆದು ಹಲ್ಲೆಗೈಯುವಲ್ಲಿ ಕಾಣಿಸುತ್ತಿದೆ. ಪ್ರಾಣಿಗೆ ಇರುವ ಮಹತ್ವದ ಒಂದಂಶವನ್ನೂ ಮನುಷ್ಯರಿಗೆ ಕೊಡದೆಯೂ ಧರ್ಮಪ್ರೇಮಿಗಳಾಗಿ ಗುರುತಿಸಿಕೊಳ್ಳುವುದಕ್ಕೆ ಇವತ್ತು ಸಾಧ್ಯವಾಗುತ್ತಿದೆ. ಬಹುಶಃ ನಂಗಲಿ ಮತ್ತು ಸಬಲ್‍ಪುರದ ಘಟನೆಗಳು ಇಂಥ ಧರ್ಮಪ್ರೇಮವನ್ನು ಇವತ್ತು ಬಹಿರಂಗವಾಗಿಯೇ ಪ್ರಶ್ನಿಸುತ್ತಿದೆ. ದಲಿತರನ್ನು ಮನುಷ್ಯರಾಗಿ ಒಪ್ಪಲೂ ಸಿದ್ಧವಿಲ್ಲದ ಸಾಮಾಜಿಕ ಮನಸ್ಥಿತಿಗೆ ಎಲ್ಲರೆದುರೇ ಛೀಮಾರಿ ಹಾಕುತ್ತಿದೆ. ಹುಲಿಯನ್ನೂ ಗೋವನ್ನೂ ತುಲನೆ ಮಾಡಿ ಚರ್ಚಿಸುವುದಕ್ಕಿಂತ ಮೊದಲು ಮನುಷ್ಯರನ್ನು ಮನುಷ್ಯರಿಗೆ ತುಲನೆ ಮಾಡಿ ಚರ್ಚಿಸಿ ಎಂದು ಕರೆ ಕೊಡುತ್ತಿದೆ.