Wednesday, 19 June 2013

ಹೇಮಾವತಿಯ ಮನೆಯಿಂದ ಜಿಯಾಖಾನ್ ಳ ಮನೆಯವರೆಗೆ

   ಮನೆ, ಶಾಲೆ, ಹಾಸ್ಟೆಲ್ಲು, ಆಸ್ಪತ್ರೆ, ವೃದ್ಧಾಶ್ರಮ, ಹೊಟೇಲು, ಕಚೇರಿ.. ಹೀಗೆ ಗುರುತಿಸಿಕೊಳ್ಳುವ ಅಸಂಖ್ಯ ಕಟ್ಟಡಗಳು ನಮ್ಮ ಸುತ್ತು-ಮುತ್ತು ಇವೆ. ಈ ಕಟ್ಟಡಗಳ ವಿಶೇಷತೆ ಏನೆಂದರೆ, ಇವೆಲ್ಲ ಒಂದೇ ಬಗೆಯ ವಸ್ತುಗಳಿಂದ ನಿರ್ಮಾಣಗೊಂಡಿರುವುದು. ಶಾಲೆಯನ್ನು ಕಟ್ಟುವುದಕ್ಕೆ ಕಲ್ಲು, ಸಿಮೆಂಟು, ಹೈಗೆ, ಕಬ್ಬಿಣದಂಥ ವಸ್ತುಗಳನ್ನು ಹೇಗೆ ಬಳಸಲಾಗುತ್ತದೋ ಹಾಗೆಯೇ ಮನೆಯನ್ನು ಕಟ್ಟುವುದಕ್ಕೂ ಇವೇ ವಸ್ತುಗಳನ್ನು ಬಳಸಲಾಗುತ್ತದೆ. ಇವಷ್ಟೇ ಅಲ್ಲ, ವೃದ್ಧಾಶ್ರಮ ಎಂದು ಬೋರ್ಡು ತಗುಲಿಸಿಕೊಂಡ, ಆಸ್ಪತ್ರೆಯಾಗಿ, ಹೊಟೇಲಾಗಿ ಗುರುತಿಸಿಕೊಳ್ಳುವ ಎಲ್ಲವನ್ನೂ ನಿರ್ಮಿಸಿರುವುದು ಇವೇ ವಸ್ತುಗಳಿಂದ. ಹಾಗಿದ್ದರೂ ಕೆಲವು ಕಟ್ಟಡಗಳು ಮನೆಯಾಗಿ, ಕೆಲವು ಕಚೇರಿಗಳಾಗಿ, ಕೆಲವು ಇನ್ನೇನೋ ಆಗಿ ಯಾಕೆ ಗುರುತಿಸಿಕೊಳ್ಳುತ್ತವೆ? ಅದಕ್ಕಿರುವ ಕಾರಣಗಳು ಏನು? ಕಟ್ಟಡದ ಆಕೃತಿಯೇ? ಕಿಟಕಿ, ಬಾಗಿಲುಗಳ ಸಂಖ್ಯೆಯೇ? ಒಂದು ಕಟ್ಟಡದ ಎದುರು 'ಆಸ್ಪತ್ರೆ' ಎಂದು ಬೋರ್ಡು ತಗುಲಿಸಿದ ಮಾತ್ರಕ್ಕೇ ಅದು ಆಸ್ಪತ್ರೆಯಾಗಿ ಬಿಡಲು ಸಾಧ್ಯವಿಲ್ಲವಲ್ಲ. ಮನೆ ಎಂಬ ಬೋರ್ಡಿನಿಂದಾಗಿ ಮನೆಯಾಗುವುದು, ವೃದ್ಧಾಶ್ರಮ ಎಂಬ ಫಲಕದಿಂದಾಗಿ ವೃದ್ಧಾಶ್ರಮವಾಗುವುದು, ಹೊಟೇಲು ಎಂಬ ಗುರುತು ಚಿಹ್ನೆಯಿಂದಾಗಿ ಹೊಟೇಲು ಆಗುವುದೆಲ್ಲ ಸಾಧ್ಯವೇ? ಇಲ್ಲ ಎಂದಾದರೆ ಒಂದು ಕಟ್ಟಡದ ಮನೆಯಾಗಿ ಗುರುತಿಸಿಕೊಳ್ಳುವುದಕ್ಕೆ ಇರುವ ಅರ್ಹತೆಗಳೇನು?
    ನಿಜವಾಗಿ, ಇಂಥ ಪ್ರಶ್ನೆಗಳು ನಮ್ಮನ್ನು ಎದುರುಗೊಂಡಾಗಲೇ ನಾವು ಏನು ಮತ್ತು ನಮ್ಮ ವರ್ತನೆಗಳು ಹೇಗಿರಬೇಕು ಎಂಬುದಕ್ಕೆ ಉತ್ತರ ಸಿಗುವುದು. ಇವತ್ತಿನ ದಿನಗಳಲ್ಲಿ ಮನೆಗಳು ಮತ್ತೆ ಮತ್ತೆ ಚರ್ಚೆಗಳಗಾಗುತ್ತಲೇ ಇವೆ. ನಾಲ್ಕು ವರ್ಷಗಳಿಂದ ಗೃಹಬಂಧನದಲ್ಲಿದ್ದ ಬೆಂಗಳೂರಿನ ಹೇಮಾವತಿಯ ಮನೆಯಿಂದ ಹಿಡಿದು ಚಿತ್ರ ನಟಿ ಜಿಯಾಖಾನ್‍ಳ ಮನೆಯ ವರೆಗೆ ಅಸಂಖ್ಯ ಮನೆಗಳು ಸುದ್ದಿಯಲ್ಲಿವೆ. ಮನೆ ಅಂದ ಕೂಡಲೇ ನಮ್ಮ ಮುಂದೆ ಕೆಲವು ಸಿದ್ಧ ಮಾದರಿಗಳು ಮೂಡಿ ಬರುತ್ತವೆ. ಹಿರಿಯರು, ಕಿರಿಯರು, ಮಕ್ಕಳು ಮುಂತಾಗಿ ಪರಸ್ಪರ ಕರುಳಬಳ್ಳಿ ಸಂಬಂಧ ಇರುವ ಒಂದು ಗುಂಪು. ಆ ಗುಂಪಿನ ಮಧ್ಯೆ ಭಾವನಾತ್ಮಕ ಸಂಬಂಧ ಇರುತ್ತದೆ. ಮಗು ಎಡವಿ ಬಿದ್ದಾಗ ಎತ್ತಿಕೊಳ್ಳುವುದಕ್ಕೆ ಆ ಮಗುವಿನ ತಾಯಿಯಷ್ಟೇ ವೇಗವಾಗಿ ಅಜ್ಜನೋ ಅಜ್ಜಿಯೋ ತಮ್ಮನೋ ಬಂದಿರುತ್ತಾರೆ. ಒಬ್ಬರ ನೋವನ್ನು ಇನ್ನೊಬ್ಬರು ಅಷ್ಟೇ ತೀವ್ರವಾಗಿ ಅನುಭವಿಸುವ ಸಂಬಂಧವೊಂದು ಮನೆಯೊಳಗೆ ನೆಲೆಸಿರುತ್ತದೆ. ತಂದೆ ಅಸೌಖ್ಯದಿಂದ ಮಲಗಿದ್ದರೆ ಮನೆಯ ಇತರ ಸದಸ್ಯರ ಮಾತು-ಕೃತಿಗಳಲ್ಲಿ ಅದು ಪ್ರಕಟವಾಗುತ್ತಿರುತ್ತದೆ. ಮನೆಯಲ್ಲಿ ಮಗನಿಗೋ ಮಗಳಿಗೋ ಮದುವೆಯ ಬಗ್ಗೆ ಚರ್ಚೆಗಳಾಗುತ್ತವೆ. ಸೂಕ್ತ ಸಂಬಂಧಕ್ಕಾಗಿ ಹುಡುಕಾಟ ನಡೆಯುತ್ತದೆ. ಶಾಲೆಗೆ ಹೋಗುವ ಮಕ್ಕಳ ಹೋಮ್ ವರ್ಕ್, ಟಿಫಿನ್ ಬಾಕ್ಸ್, ಶಾಲಾ ಬಸ್ಸಿನ ಬಗ್ಗೆ ಕೇವಲ ಆ ಮಕ್ಕಳ ಹೆತ್ತವರು ಮಾತ್ರ ಕಾಳಜಿ ತೋರುವುದಲ್ಲ, ಮನೆಯ ಇತರ ಸದಸ್ಯರೂ ಆ ಬಗ್ಗೆ ಎಚ್ಚರಿಸುತ್ತಿರುತ್ತಾರೆ. ಬಟ್ಟೆ ಹೊಲಿಸುವಾಗ, ಟೂರ್ ಹೋಗುವಾಗ, ಆಹಾರ ತಯಾರಿಸುವಾಗ.. ಮನೆಯ ಎಲ್ಲರ ಅಭಿರುಚಿಗಳನ್ನು ಪರಿಗಣಿಸಲಾಗುತ್ತದೆ. ಒಂದು ರೀತಿಯಲ್ಲಿ, ಇವು ಮತ್ತು ಇಂಥ ಇನ್ನೂ ಅನೇಕ ಗುರುತುಗಳು ಒಂದು ಕಟ್ಟಡವನ್ನು ಮನೆಯಾಗಿಸುತ್ತದೆಯೇ ಹೊರತು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ 'ನಿಲಯ' ಎಂದು ಚಂದದ ಬೋರ್ಡು ತೂಗು ಹಾಕುವುದರಿಂದಲ್ಲ. ಕಟ್ಟಡವೊಂದು ಹೊಟೇಲ್ ಆಗುವುದಕ್ಕೂ ಕೆಲವು ಮುಖ್ಯ ಗುರುತುಗಳಿರಬೇಕು. ವಿವಿಧ ಬಟ್ಟೆಗಳನ್ನು ಧರಿಸಿದ, ವಿವಿಧ ಅಂತಸ್ತಿನ ನೂರಾರು ಮಂದಿ ಒಂದೇ ಟೇಬಲಿನಲ್ಲಿ ಪರಸ್ಪರ ಎದುರು-ಬದುರು ಕೂತಿದ್ದರೂ ಮಾತಾಡದೇ, ಭಾವನೆಗಳನ್ನು ಹಂಚಿಕೊಳ್ಳದೇ ಹೋಗುವ ತಾಣ ಅದು. ಓರ್ವ ಅತಿ ದುಬಾರಿ ಆಹಾರವನ್ನು ತಿನ್ನುವಾಗ, ಆತನ ಎದುರೇ ಕೂತವ ಸಾದಾ ಉಪ್ಪಿಟ್ಟು ತಿಂದು ಎದ್ದೇಳುತ್ತಾನೆ. ಹಾಗಂತ, ದುಬಾರಿ ಮನುಷ್ಯ ಈ ಉಪ್ಪಿಟ್ಟು ಮನುಷ್ಯನಿಗೆ ತನ್ನದನ್ನು ಹಂಚುವುದಿಲ್ಲ. ಉಪ್ಪಿಟ್ಟಿನ ಬಿಲ್ ಅನ್ನೂ ಪಾವತಿಸುವುದಿಲ್ಲ. ಒಟ್ಟಿಗೆ ಇದ್ದೂ ಒಂಟಿಯಾಗಿರುವ, ಗುಂಪಿನಲ್ಲಿದ್ದೂ ಪರಸ್ಪರ ಕಾಳಜಿ ತೋರದ ಒಂದು ಕಟ್ಟಡವಾಗಿದೆ ಹೊಟೇಲು. ವೃದ್ಧಾಶ್ರಮ, ಶಾಲೆ, ಕಚೇರಿಗಳಿಗೂ ಕೂಡ ಅವುಗಳದ್ದೇ ಆದ ಭಿನ್ನ ಭಿನ್ನ ಗುರುತುಗಳಿವೆ..
   ದುರಂತ ಏನೆಂದರೆ, ಇವತ್ತಿನ ಮನೆಗಳು 'ಮನೆ'ಯಾಗಿ ಗುರುತಿಸಿಕೊಳ್ಳುವಲ್ಲಿ ತೀವ್ರ ವೈಫಲ್ಯವನ್ನು ಕಾಣುತ್ತಿವೆ ಅನ್ನುವುದು. ಎಷ್ಟೋ ಮನೆಗಳ ಒಳಗಿನ ವಾತಾವರಣ ಹೇಗಿದೆ ಎಂದರೆ, ಅವು ಮನೆಗಳಾಗಿರದೇ ವೃದ್ಧಾಶ್ರಮಗಳೋ, ಜೈಲುಗಳೋ, ಹೊಟೇಲುಗಳೋ ಆಗಿ ಮಾರ್ಪಟ್ಟಿವೆ. ಒಂದೇ ಮನೆಯಲ್ಲಿದ್ದರೂ ಅಣ್ಣ-ತಮ್ಮಂದಿರು, ಅತ್ತೆ-ಸೊಸೆಯಂದಿರು ಪರಸ್ಪರ ಮಾತಾಡುತ್ತಿಲ್ಲ. ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಒಲೆಗಳು ಉರಿಯುತ್ತವೆ. ಹೆತ್ತವರನ್ನು ಮಾತಾಡಿಸದ, ಕಾಳಜಿ ತೋರದ ಮಕ್ಕಳಿದ್ದಾರೆ. ಪತ್ನಿಯ ಮೇಲೆ ದೌರ್ಜನ್ಯ ಎಸಗುವ ಪತಿಯಿದ್ದಾನೆ. ವರದಕ್ಷಿಣೆಗಾಗಿಯೋ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟೋ ಹೆಣ್ಣು ಮಗಳನ್ನು ಶೋಷಿಸುವ ಮನುಷ್ಯರಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳಿದ್ದಾರೆ.. ಹೀಗೆ ಹೊರಗೆ ಮನೆ ಎಂದು ಗುರುತಿಸಿಕೊಳ್ಳುವ ಆದರೆ ಆಂತರಿಕವಾಗಿ, ಹೊಟೇಲೋ, ಜೈಲೋ, ಆಸ್ಪತ್ರೆಯೋ ಆಗಿ ಮಾರ್ಪಟ್ಟಿರುವ ಅಸಂಖ್ಯ ಕಟ್ಟಡಗಳ ಮಧ್ಯೆ ನಾವೆಲ್ಲ ಬದುಕುತ್ತಿದ್ದೇವೆ. ಆದ್ದರಿಂದಲೇ, ಮನೆಗಳನ್ನು ನಿಜ ಅರ್ಥದಲ್ಲಿ ಮನೆಗಳಾಗಿಸುವ ಜಾಗೃತಿ ಕಾರ್ಯಕ್ರಮವೊಂದರ ಅಗತ್ಯ ತಲೆದೋರಿರುವುದು. ಮನೆ ನೆಮ್ಮದಿಯಾಗಿದ್ದರೆ ಸಮಾಜ ನೆಮ್ಮದಿಯಾಗಿರುತ್ತದೆ. ಅಂಗಳ ಸ್ವಚ್ಛವಾಗಿದ್ದರೆ ಪರಿಸರ ಸ್ವಚ್ಛವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮನೆಗಳನ್ನು ನೆಮ್ಮದಿಯ ಕೇಂದ್ರವಾಗಿಸುವ ಪ್ರಯತ್ನಗಳಲ್ಲಿ ಎಲ್ಲರೂ ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ಇವತ್ತು ಟಿ.ವಿ.ಗಳು, ಇಂಟರ್‍ನೆಟ್‍ಗಳೆಲ್ಲಾ ನಮ್ಮ ನಮ್ಮ ಬದುಕುವ ವಿಧಾನವನ್ನೇ ಬದಲಿಸಿವೆ.  ಒಬ್ಬರನ್ನೊಬ್ಬರು ಮೀರಿ ಹೋಗುವ, ಮೌಲ್ಯಗಳನ್ನು ಲೆಕ್ಕಿಸದ, ಸ್ವತಂತ್ರ ಮನಸ್ಥಿತಿಯ ಪೀಳಿಗೆಯನ್ನು ಇವು ನಿತ್ಯ ಬೆಳೆಸುತ್ತಿವೆ. ಇಂಥ ಹೊತ್ತಲ್ಲಿ ಮನೆಯನ್ನು 'ಮನೆ'ಯಾಗಿಯೇ ಉಳಿಸಿಕೊಳ್ಳುವ ಮೂಲಕ ಸಮಾಜದ ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಎಲ್ಲರೂ ವಹಿಸಿಕೊಳ್ಳಬೇಕು.
ಅಂದಹಾಗೆ

ಪ್ರೀತಿ, ಕರುಣೆ, ನೈತಿಕತೆಯಂಥ ಮೌಲ್ಯಗಳ ಕಾರಣಕ್ಕಾಗಿ ಎಲ್ಲ ಮನೆಗಳೂ ಸುದ್ದಿಗೀಡಾಗಲಿ. ಹೇಮಾವತಿ, ಜಿಯಾಖಾನ್‍ಳಂಥವರಿಗಾಗಿ ಯಾವ ಮನೆಗಳೂ ಸುದ್ದಿಗೀಡಾಗದಿರಲಿ.

Monday, 10 June 2013

ಜಿಯಾಗ್ರಫಿ ಚಾನೆಲ್‍ನ ಪ್ರಾಣಿ ಮತ್ತು ಅದನ್ನು ಸೆರೆ ಹಿಡಿಯುವ ಮನುಷ್ಯ

ಅನಂತರಾಮ ಶೆಟ್ಟಿ
    ಕಳೆದವಾರ ಕನ್ನಡಿಗರ ಮಧ್ಯೆ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ವಿಷಯ ಮನುಷ್ಯತ್ವ . ರಾಜಕೀಯ, ಕ್ರಿಕೆಟ್ಟು, ಗುಟ್ಕಾ.. ಸಹಿತ ಹತ್ತು-ಹಲವು ವಿಷಯಗಳ ಮಧ್ಯೆಯೂ ಮನುಷ್ಯತ್ವವನ್ನು ಪ್ರಧಾನ ಚರ್ಚಾ ವಸ್ತುವಾಗಿ ಮುನ್ನಲೆಗೆ ತಂದ ಕೀರ್ತಿ 35 ವರ್ಷದ ಹೇಮಾವತಿ, 93ರ ಅನಂತರಾಮ ಶೆಟ್ಟಿ, 48ರ ಹನುಮಂತಪ್ಪ.. ಮತ್ತಿತರರಿಗೆ ಸಲ್ಲಬೇಕು. ಇಷ್ಟಕ್ಕೂ, 'ಮನುಷ್ಯತ್ವವನ್ನು ಚರ್ಚಾವಸ್ತುವಾಗಿ ಆಯ್ಕೆ ಮಾಡಿಕೊಳ್ಳಿ' ಎಂದು ಇವರೇನೂ ಪ್ರತಿಭಟನೆ ಮಾಡಿಲ್ಲ. ಹೇಳಿಕೆಯನ್ನೂ ಕೊಟ್ಟಿಲ್ಲ. ಮನುಷ್ಯತ್ವವೇ ಇಲ್ಲದವರ ಕೈಯಲ್ಲಿ ಸಿಲುಕಿ ಪಡಬಾರದ ಕಷ್ಟವನ್ನು ಅನುಭವಿಸುತ್ತಾ ಇವರೆಲ್ಲ ಮನುಷ್ಯತ್ವವನ್ನು ಚರ್ಚೆಯ ವಸ್ತುವಾಗಿ ತೇಲಿಸಿಬಿಟ್ಟರು. ಕೈ ಕಾಲಿಗೆ ಸರಪಳಿ ಬಿಗಿದ, ದನದ ಕೊಟ್ಟಿಗೆಯಲ್ಲಿ ಮಲಗಿಸಿದ, ವರ್ಷಗಟ್ಟಲೆ ಸ್ನಾನವನ್ನೇ ಮಾಡಿಸದ, ವಾರಗಟ್ಟಲೆ ಉಪವಾಸ ಕೆಡವಿದ, ನಾಯಿಗೂಡಿನಲ್ಲಿ ಕೂರಿಸಿ ಬೀಗ ಹಾಕಿದ.. ಅನೇಕ ಪ್ರಕರಣಗಳು ಇವರ ಮುಖಾಂತರ ಬೆಳಕಿಗೆ ಬಂದುವು. ನಗ್ನ ಶಿಕ್ಷೆಗೆ ಒಳಗಾಗಿದ್ದ ಬೆಂಗಳೂರಿನ ಹೇಮಾವತಿ, ಸರಪಳಿ ಶಿಕ್ಷೆಗೆ ಗುರಿಯಾಗಿದ್ದ ಅನಂತರಾಮ ಶೆಟ್ಟಿ, ಕೊಟ್ಟಿಗೆಯಲ್ಲಿದ್ದ ಹನುಮಂತಪ್ಪರು,  ಮೋದಿ-ಅಡ್ವಾಣಿಯವರನ್ನು ಪಕ್ಕಕ್ಕೆ ಸರಿಸುವಷ್ಟು ಜನರ ಮಧ್ಯೆ ಚರ್ಚೆಗೊಳಗಾದರು.
   ಅಂದಹಾಗೆ;  ಹುಲಿ, ಸಿಂಹ, ಚಿರತೆ.. ಮುಂತಾದುವುಗಳನ್ನು ಅಪಾಯಕಾರಿ ಪ್ರಾಣಿಗಳು ಎಂದು ನಾವು ಈಗಾಗಲೇ ಸಾರಿಬಿಟ್ಟಿದ್ದೇವೆ. ಪ್ರಾಣಿ ಸಂಗ್ರಹಾಲಯದಲ್ಲಿ ಇವುಗಳನ್ನು ಕಂಡ ಕೂಡಲೇ ನಮ್ಮ ಮಕ್ಕಳು ಅಂಜುತ್ತವೆ. ಇದಕ್ಕೆ ಕಾರಣ, ಮಕ್ಕಳು ಆ ಪ್ರಾಣಿಗಳ ಅಪಾಯಕಾರಿ ವರ್ತನೆಯನ್ನು ನೋಡಿರುವುದಲ್ಲ. ಮಕ್ಕಳಿಗೆ ಅದನ್ನು ಅಪಾಯಕಾರಿಗಳು ಎಂದು ನಾವೇ ಕಲಿಸಿಕೊಟ್ಟಿದ್ದೇವೆ. ಅದಕ್ಕೆ ಪೂರಕವಾಗಿ, ಎನಿಮಲ್ ಪ್ಲಾನೆಟ್‍ನಲ್ಲಿ ಅಥವಾ ನ್ಯಾಷನಲ್ ಜಿಯಾಗ್ರಫಿ ಚಾನೆಲ್‍ನಲ್ಲಿ, ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ಅಟ್ಟಾಡಿಸಿಕೊಂಡು ಬೇಟೆಯಾಡುವ, ಕೊಂದು ತಿನ್ನುವ ದೃಶ್ಯ ಗಳೂ ಪ್ರಸಾರ ಆಗುತ್ತಾ ಇರುತ್ತವೆ. ಪ್ರಾಣಿಗಳು ಇಡೀ ದಿನ ಪರಸ್ಪರ ಕೊಂದು ತಿನ್ನುವುದನ್ನೇ ಮಾಡುತ್ತಿರುತ್ತವೆ ಎಂದು ಮಕ್ಕಳು ನಂಬುವಷ್ಟು ಈ ಪ್ರಸಾರಗಳು ಏಕಮುಖವಾಗಿರುತ್ತವೆ. ಅಂದಹಾಗೆ, ಇಂಥ ದೃಶ್ಯಗಳನ್ನು ಸೆರೆ ಹಿಡಿದು ಪ್ರಸಾರ ಮಾಡುವುದು ಪ್ರಾಣಿಗಳೇನೂ ಅಲ್ಲವಲ್ಲ. ಒಂದು ವೇಳೆ, ಮನುಷ್ಯರು ಎಸಗುವ ಕ್ರೌರ್ಯ, ಕೊಲೆಪಾತಕಗಳನ್ನು ಸೆರೆಹಿಡಿದು ಪ್ರಸಾರ ಮಾಡುವ ಸಾಮರ್ಥ್ಯ ಪ್ರಾಣಿಗಳಿಗಿರುತ್ತಿದ್ದರೆ, ಜಗತ್ತಿನಲ್ಲಿ ಮನುಷ್ಯರ ಇಮೇಜು ಹೇಗಿರುತ್ತಿತ್ತು? ಚಾನೆಲ್‍ಗಳಲ್ಲಿ ಅಂಥ ದೃಶ್ಯಗಳನ್ನು ನೋಡುವ ಅವಕಾಶ ಮಕ್ಕಳಿಗೆ ಸಿಗುತ್ತಿದ್ದರೆ, ಅವರು ಯಾರನ್ನು ಅಪಾಯಕಾರಿ ಪಟ್ಟಿಯಲ್ಲಿ ಸೇರಿಸುತ್ತಿದ್ದರು? ಪ್ರಾಣಿಗಳಂತೆ ಮನುಷ್ಯರನ್ನೂ ಪ್ರಾಣಿ ಸಂಗ್ರಹಾಲಯಗಳಲ್ಲಿ ಯಾಕೆ ಕೂಡಿ ಹಾಕಿಲ್ಲ ಎಂದು ಅವು ತಲೆ ಕೆಡಿಸುವ ಸಾಧ್ಯತೆ ಇತ್ತೇ, ಇಲ್ಲವೇ?
   ನಿಜವಾಗಿ, ಈ ಜಗತ್ತಿನಲ್ಲಿ ಮನುಷ್ಯರ ಪಾಲಿಗೆ ಅತಿದೊಡ್ಡ ಶತ್ರು ಮನುಷ್ಯರೇ. ಇರಾಕಿನ ಮಕ್ಕಳಲ್ಲಿ; ಫೆಲೆಸ್ತೀನ್, ಅಫಘನ್ನಿನ ಮಕ್ಕಳಲ್ಲಿ ನಿಮ್ಮ ಶತ್ರುಗಳು ಯಾರು ಎಂದು ಪ್ರಶ್ನಿಸಿದರೆ ಅವರು ಪ್ರಾಣಿಗಳನ್ನು ತೋರಿಸುವುದಕ್ಕೆ ಸಾಧ್ಯವೇ ಇಲ್ಲ. ಅಮೇರಿಕ-ಇಸ್ರೇಲ್‍ಗಳೇ ಅವರ ಪಾಲಿನ ಶತ್ರುಗಳು. ಈ ಎರಡು ರಾಷ್ಟ್ರಗಳು ಜಗತ್ತಿನ ಇತರ ಮನುಷ್ಯರ ಪಾಲಿಗೆ ಎಷ್ಟು ಅಪಾಯಕಾರಿಗಳಾಗಿವೆಯೆಂದರೆ, ಅಪಾಯಕಾರಿಯೆಂದು ಹಣೆಪಟ್ಟಿ ಹಚ್ಚಿಕೊಂಡ ಜಗತ್ತಿನೆಲ್ಲಾ ಪ್ರಾಣಿಗಳು ಜೊತೆ ಸೇರಿದರೂ ಹತ್ಯೆ ಮಾಡಲು ಸಾಧ್ಯವಾಗದಷ್ಟು ಸಂಖ್ಯೆಯ ಮನುಷ್ಯರನ್ನು ಅವು ಹತ್ಯೆ ಮಾಡಿವೆ. ಅಂದಹಾಗೆ, ಅಮೇರಿಕದಿಂದ ಹಿಡಿದು ಹೇಮಾವತಿಯ ಹೆತ್ತವರ ವರೆಗೆ, ಇಸ್ರೇಲ್‍ನಿಂದ ಹಿಡಿದು ಅನಂತರಾಮ ಶೆಟ್ಟಿಯವರ ಮಕ್ಕಳ ವರೆಗೆ, ಕ್ರೌರ್ಯದ ರೂಪದಲ್ಲಿ ವ್ಯತ್ಯಾಸಗಳಿವೆಯೇ ಹೊರತು ಕ್ರೌರ್ಯದ ಭಾವನೆಯಲ್ಲಿ ಅಲ್ಲ. ಅಮೇರಿಕ ಒಂದು ರಾಷ್ಟ್ರವಾಗಿ ಬಾಂಬನ್ನು ಎತ್ತಿಕೊಳ್ಳುವಾಗ ಅನಂತರಾಮ ಶೆಟ್ಟಿಯವರ ಮಕ್ಕಳು ತಮ್ಮ ಇತಿ-ಮಿತಿಯೊಳಗೆ ಸರಪಳಿಯನ್ನು ಎತ್ತಿಕೊಳ್ಳುತ್ತಾರೆ. ಫೆಲೆಸ್ತೀನಿಯರನ್ನು ಇಸ್ರೇಲ್ ದಿಗ್ಬಂಧನಕ್ಕೆ ಒಳಪಡಿಸಿದಂತೆಯೇ ಹೇಮಾವತಿಯ ಹೆತ್ತವರು ಸಣ್ಣ ಮಟ್ಟದಲ್ಲಿ ಅದನ್ನೇ ಮಾಡುತ್ತಾರೆ.
   ಜಗತ್ತು ಹೆಚ್ಚೆಚ್ಚು ಆಧುನಿಕಗೊಂಡಂತೆಯೇ, ಮಾನವೀಯತೆಯ ಮಟ್ಟ ಕುಸಿಯುತ್ತಿರುವುದೇಕೆ ಎಂಬ ಬಗ್ಗೆ ಗಂಭೀರ ಚರ್ಚೆಯೊಂದು ನಡೆಯಬೇಕಾದ ಅಗತ್ಯವನ್ನು ಈ ಪ್ರಕರಣಗಳು ಎತ್ತಿ ಹೇಳುತ್ತಿವೆ. ನಿಜವಾಗಿ, ಮನುಷ್ಯರನ್ನು ಇನ್ನಷ್ಟು ಹತ್ತಿರಕ್ಕೆ, ಆಪ್ತ ವಲಯಕ್ಕೆ ಕೊಂಡೊಯ್ದಿದ್ದು ಆಧುನಿಕ ಆವಿಷ್ಕಾರಗಳೇ. ತಾಯಿಯನ್ನು ಅತ್ಯಂತ ಹೃದ್ಯವಾಗಿ ಕಟ್ಟಿಕೊಡುವುದಕ್ಕೆ ಇಂದಿನ ಸಿನಿಮಾ, ಡಾಕ್ಯುಮೆಂಟರಿಗಳಿಗೆ ಸಾಧ್ಯವಾಗುತ್ತಿದೆ. ಮಕ್ಕಳನ್ನು ಬೆಳೆಸುವುದಕ್ಕೆ ಹೆತ್ತವರು ಯಾವ ರೀತಿಯಲ್ಲಿ ಶ್ರಮ ವಹಿಸುತ್ತಾರೆ ಅನ್ನುವುದನ್ನು ಅತ್ಯಂತ ಆಪ್ತವಾಗಿ, ನೈಜವಾಗಿ ಇಂದಿನ ತಂತ್ರಜ್ಞಾನಗಳು ಹೇಳಿ ಕೊಡುತ್ತಿವೆ. ಮಕ್ಕಳನ್ನು ಹೇಗೆ ಬೆಳೆಸಬೇಕು; ರೋಗಿಗಳನ್ನು ಹೇಗೆ ನೋಡಿಕೊಳ್ಳಬೇಕು; ಬದುಕು ಎಷ್ಟು ಅನಿಶ್ಚಿತ; ಸಂಪತ್ತು-ಆಯುಷ್ಯ.. ಎಲ್ಲವೂ ಹೇಗೆ ನಶ್ವರ ಎಂಬುದನ್ನೆಲ್ಲಾ ಇವತ್ತಿನ ವಿವಿಧ ಸಿನಿಮಾಗಳು, ಕಾದಂಬರಿಗಳು ಬಾರಿ ಬಾರಿಗೂ ಹೇಳುತ್ತಿವೆ. ಹಿಂದಿನವರಿಗೆ ಹೋಲಿಸಿದರೆ, ಇಂದಿನ ಪೀಳಿಗೆ ಅಪಾರ ಮಾಹಿತಿಯುಳ್ಳವು. ಇಷ್ಟೆಲ್ಲಾ ಇದ್ದೂ ಹೆತ್ತವರನ್ನೇ ಸರಪಳಿ ಬಿಗಿದು ಕಟ್ಟಿ ಹಾಕುವುದೆಂದರೆ, ಏನು ಕಾರಣ? ಮಗಳನ್ನೇ ಕೂಡಿ ಹಾಕುವ ಹೆತ್ತವರಿದ್ದಾರೆಂದರೆ ಏನೆನ್ನಬೇಕು?
   ಆಧುನಿಕ ಆವಿಷ್ಕಾರಗಳು ಮನುಷ್ಯರಲ್ಲಿ ಮಾನವೀಯತೆಯನ್ನು ತುಂಬಲು ಎಷ್ಟರ ಮಟ್ಟಿಗೆ ಸಫಲವಾಗಿವೆ ಎಂಬ ಪ್ರಶ್ನೆಗೆ ಅಮೇರಿಕದಿಂದ ಹಿಡಿದು ಬೆಂಗಳೂರಿನ ಅನಂತರಾಮ ಶೆಟ್ಟಿಯವರ ಮಕ್ಕಳ ವರೆಗೆ ನಕಾರಾತ್ಮಕ ಉತ್ತರಗಳಷ್ಟೇ ದೊರಕುತ್ತಿವೆ. ಆದ್ದರಿಂದ, ಆಧುನಿಕತೆ ಮತ್ತು ಧಾರ್ಮಿಕತೆಯ ನಡುವೆ ಇವತ್ತು ತುರ್ತಾಗಿ ಸಮನ್ವಯತೆ ಸಾಧ್ಯವಾಗಬೇಕಾಗಿದೆ.  ಧರ್ಮದ ಮೌಲ್ಯಗಳನ್ನು ಪಕ್ಕಕ್ಕಿಡುವ ಜೀವನ ಪದ್ಧತಿಗಳು ಅಂತಿಮವಾಗಿ ಅನಂತರಾಮ ಶೆಟ್ಟಿಯಂಥ ಅಪ್ಪಂದಿರನ್ನು, ಹೇಮಾವತಿಯಂಥ ಮಕ್ಕಳನ್ನು ಸೃಷ್ಟಿಸುವುದಕ್ಕೆ ಕಾರಣವಾಗುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿದೆ. ಹೆತ್ತವರನ್ನು, ಮಕ್ಕಳನ್ನು, ಹಿರಿಯರನ್ನು, ರೋಗಿಗಳನ್ನು ಹೇಗೆ ನೋಡಬೇಕೆಂದು ಧರ್ಮ ಕಲಿಸಬಲ್ಲುದೇ ಹೊರತು ವಿಜ್ಞಾನಿಗಳ ಬಾಂಬ್ ಅಲ್ಲ. ಆದ್ದರಿಂದ ಧರ್ಮದಂತೆ ಬದುಕುವ, ಇಲ್ಲಿನ ಪ್ರತಿಯೊಂದು ಕರ್ಮಗಳ ಬಗ್ಗೆಯೂ ಪರಲೋಕದಲ್ಲಿ ವಿಚಾರಣೆಯಿದೆ ಮತ್ತು ಶಿಕ್ಷೆ-ಪುರಸ್ಕಾರಗಳೂ ಲಭಿಸಲಿವೆ ಎಂದು ಬಲವಾಗಿ ನಂಬುವ ಜೀವನ ಕ್ರಮದ ಕಡೆಗೆ ಎಲ್ಲರೂ ಮರಳಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಅನಂತರಾಮ ಶೆಟ್ಟಿಯಂಥವರ ಸಂಖ್ಯೆ ಹೆಚ್ಚಾದೀತು.

Wednesday, 5 June 2013

ಇದು ಹೆಗ್ಗಳಿಕೆಯಲ್ಲ, ಅವಮಾನ

   ಬಿಜೆಪಿಯಿಂದ ರಾಮ್ ಜೇಠ್ಮಲಾನಿಯ ಉಚ್ಛಾಟನೆ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‍ರ ಪರ ಅಡ್ವಾಣಿಯವರು ವಕಾಲತ್ತು ವಹಿಸಿರುವುದು ಬಿಜೆಪಿಯನ್ನು ಮತ್ತೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಪಡಿಸಿದೆ. ಮೋದಿ          v/s ಚೌಹಾನ್ ಅನ್ನುವ ಶೀರ್ಷಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗತೊಡಗಿವೆ. ಲೋಕಸಭಾ ಚುನಾವಣೆಗೆ ಇನ್ನಿರುವುದು
ಒಂದೇ ವರ್ಷ. ಈ ಹಂತದಲ್ಲಿ ಬಿಜೆಪಿಯು ಒಳಜಗಳ, ದ್ವಂದ್ವ, ಕಾಲೆಳೆಯುವಿಕೆಗಾಗಿ ಸುದ್ದಿಗೀಡಾಗುತ್ತಿರುವುದನ್ನು ಅದರ ಬೆಂಬಲಿಗರು ಹತಾಶೆಯಿಂದ ನೋಡುತ್ತಿದ್ದಾರೆ. ನಿಜವಾಗಿ, ಬಿಜೆಪಿಯೊಳಗಿನ ದ್ವಂದ್ವ ಪ್ರಕಟವಾಗುತ್ತಿರುವುದು ಇದು ಮೊದಲೇನೂ ಅಲ್ಲ. ಒಂದು ವೇಳೆ ಆ ಪಕ್ಷಕ್ಕೆ ಪಾರದರ್ಶಕ ಪ್ರಣಾಳಿಕೆ, ನಿರ್ದಿಷ್ಟ ನಿಲುವು, ತತ್ವ ಇರುತ್ತಿದ್ದರೆ ಅದು ಈ ದೇಶದ ದೊಡ್ಡದೊಂದು ಜನಸಮೂಹದ ಪಾಲಿಗೆ ‘ಅಸ್ಪೃಶ್ಯ' ಅನ್ನಿಸಿಕೊಳ್ಳುತ್ತಿರಲಿಲ್ಲ. ಒಂದೆಡೆ, ಬಾಬರಿ ಮಸೀದಿಯನ್ನು ಉರುಳಿಸುವ ಉದ್ದೇಶವನ್ನಿಟ್ಟುಕೊಂಡೇ ಅಡ್ವಾಣಿ ರಥಯಾತ್ರೆ ನಡೆಸುತ್ತಾರೆ. ಇನ್ನೊಂದೆಡೆ, ಉರುಳಿದ ಬಾಬರಿಗಾಗಿ ವಿಷಾದ ವ್ಯಕ್ತಪಡಿಸುತ್ತಾರೆ. ಒಂದೆಡೆ, ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್‍ಳ ಪರ ಪ್ರಭಾವ ಬೀರುವುದಕ್ಕಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರನ್ನು ಭೇಟಿಯಾಗುತ್ತಾರೆ. ಇನ್ನೊಂದೆಡೆ, ತಾವು ಮಾಡದ ಕೃತ್ಯಕ್ಕಾಗಿ ಐದಾರು ವರ್ಷ ಜೈಲಲ್ಲಿದ್ದು ಬಿಡುಗಡೆಗೊಂಡ ಮಕ್ಕಾ ಮಸೀದಿ ಬಾಂಬ್ ಸ್ಫೋಟದ ‘ಶಂಕಿತ' ಮುಸ್ಲಿಮ್ ಯುವಕರ ಬಗ್ಗೆ ಸಣ್ಣದೊಂದು ಹೇಳಿಕೆಯನ್ನೂ ಹೊರಡಿಸುವುದಿಲ್ಲ. ಇದು ದ್ವಂದ್ವದ ಚಿಕ್ಕದೊಂದು ತುಣುಕು ಅಷ್ಟೇ. ಬಿಜೆಪಿಯ ಉದ್ದಕ್ಕೂ ಇಂಥ ದ್ವಂದ್ವಗಳ ದೊಡ್ಡದೊಂದು ಮೂಟೆಯೇ ಇದೆ.
   ‘ತಾನು ಮುಸ್ಲಿಮರ ವಿರೋಧಿಯಲ್ಲ’ ಎಂದು ನಂಬಿಸುವುದಕ್ಕೆ ಬಿಜೆಪಿ ಆಗಾಗ ಕಸರತ್ತುಗಳನ್ನು ನಡೆಸುವುದಿದೆ. ‘ತನ್ನ ವಿರೋಧ ದೇಶವಿರೋಧಿಗಳ ಬಗ್ಗೆ ಮಾತ್ರ’ ಎಂಬ ಸಮಜಾಯಿಷಿಕೆಯನ್ನೂ ಅದು ಕೊಡುವುದಿದೆ. ಅಷ್ಟಕ್ಕೂ, ‘ದೇಶವಿರೋಧಿಗಳು ಮುಸ್ಲಿಮರಲ್ಲಿ ಮಾತ್ರ ಇರಲು ಸಾಧ್ಯ’ ಎಂಬ ಸೂಕ್ಷ್ಮ ಸಂದೇಶ ಈ ಹೇಳಿಕೆಯಲ್ಲಿದೆ ಎಂಬ ಸತ್ಯ ಬಿಜೆಪಿಗೆ ಗೊತ್ತಿಲ್ಲ ಎಂದಲ್ಲ. ಮುಸ್ಲಿಮರ ಬಗ್ಗೆ; ಅವರ ಆಚಾರ, ದೇಶಪ್ರೇಮ, ತತ್ವನಿಷ್ಠೆಯ ಬಗ್ಗೆ ಅದು ಮಾತಾಡುವುದೇ ದ್ವಂದ್ವದೊಂದಿಗೆ. ಗುಜರಾತ್ ಹತ್ಯಾಕಾಂಡವನ್ನು ಮುಂದಿಟ್ಟುಕೊಂಡು ಯಾರಾದರೂ ಬಿಜೆಪಿಯ ‘ಮುಸ್ಲಿಮ್ ನೀತಿಯನ್ನು' ಪ್ರಶ್ನಿಸಿದರೆ ಅದು, ಬಿಹಾರದಲ್ಲಿ 1964ರಲ್ಲಿ ನಡೆದ ಹತ್ಯಾಕಾಂಡ, 1980ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ, 1969ರಲ್ಲಿ ಅಹ್ಮದಾಬಾದ್‍ನಲ್ಲಿ, 1983ರಲ್ಲಿ ಅಸ್ಸಾಮ್‍ನ ನೆಲ್ಲಿಯಲ್ಲಿ, 1989ರಲ್ಲಿ ಬಿಹಾರದ ಭಾಗಲ್ಪುರದಲ್ಲಿ, 1993ರಲ್ಲಿ ಮುಂಬೈಯಲ್ಲಿ.. ನಡೆದ ಹತ್ಯಾ ಕಾಂಡವನ್ನು ಪ್ರಸ್ತಾಪಿಸುತ್ತದೆ. ಇಲ್ಲೆಲ್ಲಾ ಮುಸ್ಲಿಮರು ಗುಜರಾತ್‍ಗಿಂತ ಹೆಚ್ಚಿನ ಪ್ರಮಾಣಧಲ್ಲಿ ಹತ್ಯೆ ಗೀಡಾಗಿದ್ದಾರೆ. ಅಲ್ಲದೇ ಈ ಸಂದರ್ಭಗಳಲ್ಲೆಲ್ಲಾ ಅಲ್ಲಿ ಅಧಿಕಾರದಲ್ಲಿದ್ದುದು ಬಿಜೆಪಿಯಲ್ಲ, ಕಾಂಗ್ರೆಸ್. ಹೀಗಿರುವಾಗ ಗುಜರಾತ್‍ನ ಏಕೈಕ ಘಟನೆಗಾಗಿ ಬಿಜೆಪಿಯನ್ನು ಮುಸ್ಲಿಮ್ ವಿರೋಧಿಯಾಗಿ ಬಿಂಬಿಸುವುದೇಕೆ ಎಂಬ ಮುಗ್ಧ ಪ್ರಶ್ನೆಯನ್ನೂ ಅದು ಎಸೆಯುವುದಿದೆ.
   ನಿಜವಾಗಿ, ಬಿಜೆಪಿಯನ್ನು ಅಳೆಯಬೇಕಾದದ್ದು ಅದು ಎಷ್ಟು ಮಂದಿ ಮುಸ್ಲಿಮರನ್ನು ಕೊಂದಿದೆ ಎಂಬುದರಿಂದಲ್ಲ ಬದಲು ಮುಸ್ಲಿಮರ ಕುರಿತಂತೆ ಅದರ ನಿಲುವು ಏನು ಎಂಬುದರಿಂದ. ಕಾಂಗ್ರೆಸ್‍ನ ಅಧಿಕಾರದ ಅವಧಿಯಲ್ಲಿ ಮುಸ್ಲಿಮರ ಹತ್ಯಾಕಾಂಡಗಳಾಗಿರಬಹುದು. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್‍ನ ವರ್ತನೆ ಬಿಜೆಪಿಯಂತೆ ಖಂಡಿತ ಇರಲಿಲ್ಲ. ಅದು ‘ಕ್ರಿಯೆಗೆ ಪ್ರತಿಕ್ರಿಯೆ' ಎಂಬ ನುಡಿಗಟ್ಟನ್ನು ಬಳಸಿರಲಿಲ್ಲ. ಮುಸ್ಲಿಮರಲ್ಲಿ ವಿಶ್ವಾಸ ತುಂಬುವ, ಆದ ತಪ್ಪಿಗೆ ವಿಷಾದ ಸೂಚಿಸುವ ಪ್ರಯತ್ನಗಳನ್ನು ಅದು ಮಾಡುತ್ತಾ ಬಂದಿದೆ. ಅಂದಹಾಗೆ, ಇವು ಪರಿಹಾರ ಅಲ್ಲದೇ ಇರಬಹುದು. ಆದರೆ, ಹತಾಶೆಯ ಸಂದೇಶವನ್ನಂತೂ ಅದು ರವಾನಿಸಿಲ್ಲ. ಅದರ ಹೇಳಿಕೆಗಳು, ಕ್ರಮಗಳೆಲ್ಲ ಒಂದು ಹಂತದ ವರೆಗೆ ಆ ಪಕ್ಷವನ್ನು ಮುಸ್ಲಿಮರು ಮುನಿಸಿನೊಂದಿಗೆ ಒಪ್ಪಿಕೊಳ್ಳುವಂತೆ ಮಾಡುವಷ್ಟು ಉತ್ತಮವಾಗಿತ್ತು. ಇದಕ್ಕೆ ಹೋಲಿಸಿದರೆ, ಬಿಜೆಪಿಯ ವರ್ತನೆ ಅತ್ಯಂತ ಆಘಾತಕಾರಿಯಾದದು. ಅದು ಮುಸ್ಲಿಮರ ಬಗ್ಗೆ ರವಾನಿಸುವ ಸಂದೇಶಗಳೆಲ್ಲ ಯಾವ ಮಟ್ಟದಲ್ಲಿರುತ್ತದೆಂದರೆ ಅದರ ಉದ್ದೇಶ ಶುದ್ಧಿಯ ಬಗ್ಗೆಯೇ ಅನುಮಾನಿಸುವಷ್ಟು. ಕಾಂಗ್ರೆಸ್ ಎಂದಲ್ಲ, ಯಾವ ಪಕ್ಷವೇ ಆಗಲಿ ಮುಸ್ಲಿಮರ ಕಲ್ಯಾಣಕ್ಕಾಗಿ ಎಲ್ಲಾದರೂ ಯೋಜನೆಗಳನ್ನು ಪ್ರಕಟಿಸಿದರೆ ತಕ್ಷಣ ತುಷ್ಟೀಕರಣ ಎಂಬ ಪದ ಬಳಸಿ ಮೊದಲಾಗಿ ಖಂಡಿಸುವುದು ಬಿಜೆಪಿಯೇ. ಅಲ್ಪಸಂಖ್ಯಾತ ವಿವಿಯನ್ನು ‘ಮುಸ್ಲಿಮ್ ವಿವಿ' ಎಂದು ಅಪಪ್ರಚಾರ ಮಾಡುತ್ತಿರುವುದೂ ಬಿಜೆಪಿಯೇ. ಮುಸ್ಲಿಮರನ್ನು ಹಣಿಯುವುದಕ್ಕಾಗಿ ಭಯೋತ್ಪಾದನೆಯನ್ನು, ಗೋವನ್ನು, ಸಮಾನ ಸಿವಿಲ್ ಕೋಡನ್ನು ಬಳಸುತ್ತಿರುವುದೂ ಬಿಜೆಪಿಯೇ. ಮುಸ್ಲಿಮರಿಗೆ ಸಂಬಂಧಿಸಿದ ಯಾವುದೇ ವಿಚಾರವಿರಲಿ, ಬಿಜೆಪಿಯ ನಿಲುವು ಯಾವಾಗಲೂ ಏಕಮುಖವಾಗಿರುತ್ತದೆ. ಅದರ ಬೆಂಬಲಿಗರ ಭಾಷಣ, ಘೋಷಣೆ, ಕಾರ್ಯಕ್ರಮಗಳೆಲ್ಲ ಮುಸ್ಲಿಮ್ ದ್ವೇಷದಿಂದ ತುಂಬಿರುತ್ತದೆ. ಇಷ್ಟೆಲ್ಲಾ ಇದ್ದೂ ಬಿಜೆಪಿ ತನ್ನನ್ನು ತಾನು ಸಭ್ಯ ಎಂದು ಘೋಷಿಸಿ ಕೊಂಡರೆ ಯಾರಾದರೂ ನಂಬಿಯಾರೇ? ಬಿಜೆಪಿ ಮತ್ತು ಇತರ ಪಕ್ಷಗಳ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ, ಮುಸ್ಲಿಮರಿಗೆ ಇತರ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳದೇ ಬೇರೆ ಅವಕಾಶವೇ ಇಲ್ಲದಂಥ ಇಮೇಜನ್ನು ಬಿಜೆಪಿ ಸೃಷ್ಟಿಸಿ ಬಿಟ್ಟಿದೆ. ಹೀಗಿರುವಾಗ, ಮುಸ್ಲಿಮರು ತನ್ನಲ್ಲಿ ನಂಬಿಕೆ ಇಡಬೇಕು ಎಂದು ಅದು ಬಯಸುವುದಾದರೂ ಹೇಗೆ?
   ಮುಸ್ಲಿಮರು ದೂರ ನಿಂತಿರುವುದು ಬಿಜೆಪಿಯಿಂದಲ್ಲ, ಅದರ ಮನುಷ್ಯ ವಿರೋಧಿ ನಿಲುವುಗಳಿಂದ. ಅದು ಒಂದೊಮ್ಮೆ ತನ್ನ ನಿಲುವನ್ನು ಬದಲಿಸಿಕೊಂಡರೆ, ಮನುಷ್ಯ ವಿರೋಧಿಗಳನ್ನು ದೂರ ಇಟ್ಟರೆ, ಸರ್ವರನ್ನೂ ಸಮಾನ ರೀತಿಯಲ್ಲಿ ಕಾಣುವ ಹೊಸ ಅಜೆಂಡಾವನ್ನು ರೂಪಿಸಿದರೆ, ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಿಸುವ ಕೆಲಸವನ್ನು ಕೈಬಿಟ್ಟರೆ, ಮುಸ್ಲಿಮರನ್ನು ಒಳಗೊಳಿಸುವ ರಾಜಕೀಯ ನೀತಿಯನ್ನು ರೂಪಿಸಿದರೆ.. ಖಂಡಿತ ಮುಂದೊಂದು ದಿನ ಮುಸ್ಲಿಮರು ಬಿಜೆಪಿಯ ಬಗ್ಗೆ ನಿರೀಕ್ಷೆಯೊಂದಿಗೆ ಮಾತಾಡುವ ಸಂದರ್ಭವೂ ಬರಬಹುದು. ಈ ದೇಶದ ಹೆಚ್ಚಿನೆಲ್ಲಾ ರಾಜಕೀಯ ಪಕ್ಷಗಳಲ್ಲೂ ಮುಸ್ಲಿಮರು ಗುರುತಿಸಿಕೊಂಡಿದ್ದಾರೆ. ಆದರೆ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಯಾಕೆ ಅವರ ಒಲವನ್ನು ಗಳಿಸಲಾಗಿಲ್ಲ ಅನ್ನುವ ಬಗ್ಗೆ ಅದು ಆತ್ಮಾವಲೋಕನ ನಡೆಸಲಿ. ಮೋದಿ v/s ಚೌಹಾನ್‍ಗಿಂತ ಗಂಭೀರವಾದ ವಿಚಾರ ಇದು. ರಾಷ್ಟ್ರೀಯ ಪಕ್ಷವೊಂದಕ್ಕೆ 20 ಕೋಟಿಯಷ್ಟು ಸಂಖ್ಯೆಯ ಒಂದು ದೊಡ್ಡ ಸಮುದಾಯದ ನಂಬಿಕೆಯನ್ನು ಗಳಿಸಲಾಗುತ್ತಿಲ್ಲ ಅನ್ನುವುದು ಹೆಗ್ಗಳಿಕೆಯಲ್ಲ, ಅವಮಾನ.

Tuesday, 28 May 2013

ನಮ್ಮ ವೈಫಲ್ಯಗಳನ್ನು ಅಡಗಿಸುವುದಕ್ಕಾಗಿ ಅತಿಥಿಯನ್ನು ದೂರದಿರೋಣ

   ಬಾಯಿ ಬಾರದ, ದಾವೆ ಹೂಡುವ ಸಾಮರ್ಥ್ಯವೂ ಇಲ್ಲದ ಮಳೆಯ ಮೇಲೆ ಆರೋಪಗಳನ್ನು ಹೊರಿಸಿ, ತಮ್ಮೆಲ್ಲ ವೈಫಲ್ಯಗಳಿಂದ ನುಣುಚಿಕೊಳ್ಳಲು ವ್ಯವಸ್ಥೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ‘ಮಳೆಗೆ, ಚಳಿಗೆ ಮತ್ತು ಬಿಸಿಲಿಗೆ ಇಂತಿಷ್ಟು ಮಂದಿ ಸಾವಿಗೀಡಾದರು’ ಎಂಬ ಪದವನ್ನು ನಾವು ಈಗಾಗಲೇ ಸಂಶೋಧಿಸಿ ಇಟ್ಟಿದ್ದೇವೆ. ಇಂಥ ಪದಗಳನ್ನು ಅತ್ಯಂತ ಹೆಚ್ಚು ಬಳಕೆ ಮಾಡುವುದು ವ್ಯವಸ್ಥೆ. ಜನರು ನೀರಿನಲ್ಲಿ ಕೊಚ್ಚಿ ಹೋದರೆ, ಗುಡಿಸಲು ಕುಸಿದು ಬಿದ್ದರೆ ಇಲ್ಲವೇ ಒಂದು ಪ್ರದೇಶವೇ ನೀರಿನಿಂದ ಆವೃತ್ತವಾದರೆ ತಕ್ಷಣ ಸಚಿವರು ಮಳೆಯನ್ನು ಅಪರಾಧಿಯೆಂದು ಘೋಷಿಸುತ್ತಾರೆ. ಅಷ್ಟಕ್ಕೂ, ಮಳೆಯೇನೂ ಸರದಿ ತಪ್ಪಿಸಿ ಸೆಖೆಗಾಲದಲ್ಲೋ ಚಳಿಗಾಲದಲ್ಲೋ ಬರುವುದಿಲ್ಲವಲ್ಲ. ಅದು ಬರುವುದಕ್ಕಿಂತ ತಿಂಗಳುಗಳ ಮೊದಲೇ ಸೂಚನೆ ಕೊಡುತ್ತದೆ. ಒಂದೆರಡೆ ಬಾರಿ ಸುರಿದು, ಅವ್ಯವಸ್ಥೆಗಳ ಕಡೆಗೆ ಬೊಟ್ಟು ಮಾಡಿ ಕೆಲವು ದಿನಗಳ ವರೆಗೆ ಕಾಯುತ್ತದೆ. ಒಂದು ರೀತಿಯಲ್ಲಿ, ಚರಂಡಿಯನ್ನು ದುರಸ್ತಿಗೊಳಿಸುವುದಕ್ಕೆ, ರಸ್ತೆಗಳನ್ನು ತೋಡುಗಳಾಗುವುದರಿಂದ ತಪ್ಪಿಸುವುದಕ್ಕೆ, ಉರುಳಿ ಬೀಳಬಹುದಾದ ಮರಗಳನ್ನು ತೆರವುಗೊಳಿಸುವುದಕ್ಕೆ ರವಾನೆಯಾಗುವ ಕೊನೆಯ ಸೂಚನೆ ಅದು. ಎಷ್ಟೋ ವಿದ್ಯುತ್ ಕಂಭಗಳು ಉರುಳಿ ಬೀಳುವುದು ಮಳೆಗಾಲದಲ್ಲೇ. ವಿದ್ಯುತ್ ತಂತಿಗಳೂ ಮಳೆಗಾಲದಲ್ಲಿ ಕಡಿದು ಬೀಳುವುದಿದೆ.  ರಸ್ತೆಗಳಂತೂ ಹೊಂಡಗಳ ರೂಪ ಪಡೆಯುತ್ತವೆ. ಇನ್ನು, ಕಾಯಿಲೆಗಳ ಬಗ್ಗೆ ಹೇಳುವಂತೆಯೇ ಇಲ್ಲ. ಡೆಂಗ್ಯೂ ಈಗಾಗಲೇ ಕೆಲವು ಜೀವಗಳನ್ನು ಬಲಿ ಪಡೆದಿದೆ. ಕಳೆದ ವರ್ಷ 3824 ಮಂದಿಯನ್ನು ಈ ಡೆಂಗ್ಯೂ ಕಾಡಿತ್ತು. ಅಲ್ಲದೆ, ಮಲೇರಿಯ ಮತ್ತಿತರ ಕಾಯಿಲೆಗಳು ಕಾಣಿಸಿಕೊಳ್ಳುವುದೂ ಈ  ಮಳೆಗಾಲದಲ್ಲೇ. ದುರಂತ ಏನೆಂದರೆ, ಮಳೆ ರವಾನಿಸುವ ಯಾವ ಸೂಚನೆಯನ್ನೂ ಗಂಭೀರವಾಗಿ ಎತ್ತಿಕೊಳ್ಳದೇ, ಅದು ಹರಿದು ಹೋಗುವಲ್ಲೆಲ್ಲಾ ಅಡೆ-ತಡೆಗಳನ್ನು ನಿರ್ಮಿಸಿ, ಕಾಯಿಲೆಗಳಿಗೆ ಪೂರಕವಾದ ಪರಿಸರವನ್ನು ಸೃಷ್ಟಿ ಮಾಡಿ, ಕೊನೆಗೆ ಮಳೆಯನ್ನೇ ನಾವು ಅಪರಾಧಿಯೆಂದು ದೂಷಿಸುತ್ತೇವೆ.
   ಈ ಭೂಮಿಯ ಮೇಲೆ ಸುರಿಯುವುದರಿಂದ ಮಳೆಗೆ ಭಾರೀ ಲಾಭ ಇದೆ ಎಂದು ಈ ವರೆಗೆ ಯಾರೂ ವಾದಿಸಿಲ್ಲ. ಯಾಕೆಂದರೆ, ಮಳೆಯ ಅಗತ್ಯ ಮನುಷ್ಯನಿಗಿದೆಯೇ ಹೊರತು ಮನುಷ್ಯನ ಅಗತ್ಯ ಮಳೆಗಲ್ಲ. ನೀರಿಲ್ಲದೇ ಮನುಷ್ಯ ಬದುಕಲಾರ. ಮಳೆ ಸುರಿದು ಭೂಮಿ ಹಸನಾಗದೇ ಬೆಳೆಗಳೂ ಉತ್ಪತ್ತಿಯಾಗವು. ಹೀಗೆ ಮಳೆಯನ್ನು ಅವಲಂಬಿಸಿಕೊಂಡ ಮನುಷ್ಯ ಮತ್ತು ಭೂಮಿ ಅಂತಿಮವಾಗಿ, ಮಳೆಯನ್ನೇ ಆರೋಪಿ ಸ್ಥಾನದಲ್ಲಿ ಕೂರಿಸುವುದಕ್ಕೆ ಏನೆನ್ನಬೇಕು? ಒಂದು ವೇಳೆ, ಹಾನಿ ಮಾಡುವುದು ಮಳೆಯ ಉದ್ದೇಶವೇ ಆಗಿದ್ದರೆ, ಅದು ಪೂರ್ಣ ವೇಗದಲ್ಲಿ ಸುರಿದರೂ ಧಾರಾಳ ಸಾಕಿತ್ತು. ಮಳೆ ಭೂಮಿಯ ಮೇಲೆ 1200 ಮೀಟರ್ ಎತ್ತರದಿಂದ ಸುರಿಯುತ್ತದೆ. ನಿಜವಾಗಿ, ಒಂದು ಮಳೆ ಬಿಂದುವಿನಷ್ಟೇ ಭಾರದ ಕಲ್ಲೋ ಅಥವಾ ಇನ್ನಾವುದಾದರೂ ವಸ್ತೋ ಅಷ್ಟೇ ಎತ್ತರದಿಂದ ಭೂಮಿಗೆ ಬೀಳುವುದಾದರೆ ಅದರ ವೇಗ ಗಂಟೆಗೆ 558 ಕಿಲೋ ಮೀಟರ್ ಆಗಿರುತ್ತದೆ. ಇಷ್ಟು ವೇಗದಿಂದ ಮಳೆ ಬಂದು ಭೂಮಿಗೆ ಬಿದ್ದರೆ ಖಂಡಿತ ಬೆಳೆಗಳು ನಾಶವಾದೀತು. ಮನುಷ್ಯರಿಗೆ ಗಂಭೀರ ಗಾಯಗಳಾದಾವು. ಮನೆಗಳಿಗೂ ಹಾನಿಯಾದೀತು. ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಳ್ಳದೇ ಯಾವೊಬ್ಬ ಮನುಷ್ಯನಿಗೂ ಮನೆಯಿಂದ ಹೊರಬರಲು ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದಲೇ, ಮಳೆ ಭೂಮಿಗೆ 8-10 ಕಿಲೋ ಮೀಟರ್ ವೇಗದಲ್ಲಷ್ಟೇ ಬೀಳುತ್ತದೆ. ಅದಕ್ಕೊಂದು ನಿಯಂತ್ರಣವನ್ನು ಮತ್ತು ನಿಶ್ಚಿತ ಪ್ರಮಾಣವನ್ನು ಪ್ರಕೃತಿಯೇ (ಪವಿತ್ರ ಕುರ್‍ಆನ್: 43: 11) ಅಳವಡಿಸಿಬಿಟ್ಟಿದೆ. ಈ ಕಾರಣದಿಂದಲೇ ಮಳೆ ಸುರಿದ ಕೂಡಲೇ ಒಣಗಿದ ಭೂಮಿ ಮತ್ತೆ ಜೀವ ಪಡೆಯುವುದು ಮತ್ತು ಹಚ್ಚಹಸಿರಾಗುವುದು (ಪವಿತ್ರ ಕುರ್‍ಆನ್: 22: 63, 30: 24). ಆದರೆ ನಮ್ಮ ಸ್ಥಿತಿ ಹೇಗಿದೆಯೆಂದರೆ, ಮಳೆಗಾಲ ಮುಗಿದ ಬಳಿಕ, ಮಳೆ ನೀರು ಹರಿದು ಹೋಗುವ ತೋಡು, ಚರಂಡಿಗಳನ್ನೆಲ್ಲ ಎಷ್ಟು ಸಾಧ್ಯವೋ ಅಷ್ಟು ಕೆಡಿಸಿ ಬಿಡುತ್ತೇವೆ. ಅವುಗಳನ್ನೇ ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟುತ್ತೇವೆ. ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸುಟು, ಸೊಳ್ಳೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ. ದುರ್ಬಲ ಗುಡಿಸಲುಗಳಲ್ಲಿ ಬದುಕುವ ಬಡವರಿಗೆ ಸೂಕ್ತ ಸೂರಿನ ವ್ಯವಸ್ಥೆ ಮಾಡುವ ಹೊಣೆಗಾರಿಕೆ ಸರಕಾರದ್ದಾದರೂ ಅದು ನುಣುಚಿಕೊಳ್ಳುತ್ತದೆ. ಅಂದಹಾಗೆ, ಮರಗಳು, ವಿದ್ಯುತ್ ತಂತಿಗಳು, ರಸ್ತೆಗಳು.. ಇವೆಲ್ಲದರ ರಕ್ಷಣೆ ಯನ್ನು ಮಳೆ ವಹಿಸಿಕೊಂಡಿಲ್ಲವಲ್ಲ. ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿ ಮಾಡಿಡಬೇಕಾದ ಹೊಣೆಯಾದರೂ ಯಾರದ್ದು, ಮಳೆಯದ್ದೇ? ಉರುಳಿ ಬೀಳಬಹುದಾದ ಮರಗಳನ್ನು ಕತ್ತರಿಸುವ ಕೆಲಸವನ್ನು ಮಳೆಗೆ ವಹಿಸಿಕೊಡಲಾಗಿದೆಯೇ?
   ನಿಜವಾಗಿ, ಮಳೆಗಾಲದಲ್ಲಿ ಮಳೆಯ ಮೇಲೆ ಏನೆಲ್ಲ ಆರೋಪಗಳನ್ನು ಹೊರಿಸಲಾಗುತ್ತದೋ ಆ ಎಲ್ಲ ಆರೋಪಗಳ ಹಿಂದೆ ಆರೋಪಿಸುವವರದ್ದೇ  ದೊಡ್ಡ ಪಾತ್ರವಿದೆ. ತಮ್ಮ ಅಪರಾಧವನ್ನು ಮುಚ್ಚಿಡುವುದಕ್ಕಾಗಿಯೇ ಮಳೆಯನ್ನು ಅವರು ಕಟಕಟೆಯಲ್ಲಿ ನಿಲ್ಲಿಸುತ್ತಿದ್ದಾರೆ. ಒಂದು ವೇಳೆ ಮಳೆ ರವಾನಿಸುವ ಸೂಚನೆಗೆ ಅವರೆಲ್ಲ ತುಸು ಸ್ಪಂದಿಸಿರುತ್ತಿದ್ದರೂ, 'ಮಳೆಯಿಂದಾಗಿ ಹಾನಿ, ಮಳೆಯಿಂದಾಗಿ ಸಾವು..' ಎಂಬೆಲ್ಲ ಸಂದರ್ಭಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬಹುದಿತ್ತು. ಮಳೆಯನ್ನು ಪ್ರೀತಿಯಿಂದ ಸ್ವಾಗತಿಸುವಂಥ ವಾತಾವರಣವನ್ನು ನಿರ್ಮಿಸಬಹುದಿತ್ತು. ಮಳೆಯೆಂಬುದು ಭೂಮಿಯ ಪಾಲಿಗೆ ಎರಡ್ಮೂರು ತಿಂಗಳ ಅತಿಥಿ. ಮನುಷ್ಯರ ಒಟ್ಟು ಬದುಕಿನ ವಿಧಾನವನ್ನೇ ಬದಲಿಸುವ, ರಮ್ಯ ಭಾವನೆಗಳನ್ನು ಹುಟ್ಟು ಹಾಕುವ, ಪರಿಸರವನ್ನು ಹಚ್ಚಹಸಿರಾಗಿಸುವ ಈ ಅತಿಥಿ, ಯಾವತ್ತೂ ಮನುಷ್ಯ ವಿರೋಧಿ ಆಗಿರಲು ಸಾಧ್ಯವೇ ಇಲ್ಲ. ಮಳೆಯ ಸುತ್ತ ಸಾವಿರಾರು ಕತೆ, ಕವನ, ಕಾದಂಬರಿಗಳು ನಿರ್ಮಾಣವಾಗಿವೆ. ಬಾಲ್ಯದಲ್ಲಿ ಕಾಗದದ ದೋಣಿಯನ್ನು ನೀರಿನಲ್ಲಿ ಹರಿಸಿ ಖುಷಿಪಟ್ಟವರೇ ನಾವೆಲ್ಲ. ಮಕ್ಕಳ ಪಾಲಿಗೆ ಈಗಲೂ ಕೂಡ ಮಳೆಯೆಂದರೆ ಖುಷಿಯೇ. ಅದು ಅವರ ಪಾಲಿನ ಆತ್ಮೀಯ ಅತಿಥಿ. ಆದರೆ ಮನುಷ್ಯ ಬೆಳೆಯುತ್ತಾ ಎಷ್ಟು ಬದಲಾದನೆಂದರೆ ತನ್ನೆಲ್ಲ ವೈಫಲ್ಯಗಳನ್ನು ದುರ್ಬಲರ ಮೇಲೆ ಹೊರಿಸತೊಡಗಿದ. ಆಡಳಿತದ ಮಂದಿ ಇವತ್ತು ಮಳೆಯನ್ನು ದೂರುವುದು ಈ ಆಧಾರದಲ್ಲೇ. ಒಂದು ವೇಳೆ ಮಳೆಗಾಲದಲ್ಲಿ ಸಾವಿಗೀಡಾಗುವವರು, ಕಾಯಿಲೆ ಬೀಳುವವರೆಲ್ಲ  ಮಳೆಯಂತೆ ಬಾಯಿ ಬಾರದವರು ಆಗಿರುತ್ತಿದ್ದರೆ, ಅವರನ್ನೂ ಈ ವ್ಯವಸ್ಥೆ ಆರೋಪಿ ಸ್ಥಾನದಲ್ಲಿ ಕೂರಿಸುತ್ತಿತ್ತೋ ಏನೋ? ಆದ್ದರಿಂದ ಮಳೆಯನ್ನು ದೂರುವುದಕ್ಕಿಂತ ನಮ್ಮ ನಮ್ಮ ದುರಾಸೆಯನ್ನು ದೂರೋಣ. ತಪ್ಪುಗಳನ್ನು ತಿದ್ದಿಕೊಂಡು ಸೂಕ್ತ ತಯಾರಿಯೊಂದಿಗೆ ಅತಿಥಿಯನ್ನು ಸ್ವಾಗತಿಸೋಣ.

Monday, 20 May 2013

ಮಾರ್ಗ ಮಧ್ಯೆ ಸಾವಿಗೀಡಾಗುವ ‘ಶಂಕಿತರು’?

ಖಾಲಿದ್ ಮುಜಾಹಿದ್
    ಭಯೋತ್ಪಾದಕರ ಬಗ್ಗೆ; ಅವರ ಉಡುಪು, ಅಡಗುತಾಣ, ಸಂಚುಗಳ ಕುರಿತಂತೆ ಖಾಲಿದ್ ಮುಜಾಹಿದ್ ಮತ್ತು ಲಿಯಾಕತ್ ಷಾ ಎಂಬಿಬ್ಬರು ವ್ಯಕ್ತಿಗಳು ಈ ದೇಶದ ಮುಂದೆ ಕೆಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ,  ಈ ಪ್ರಯತ್ನದಲ್ಲಿ ಖಾಲಿದ್ ಮೃತಪಟ್ಟು ಲಿಯಾಕತ್  ಷಾ ಸುರಕ್ಷಿತವಾಗಿ ಮನೆ ತಲುಪಿದ್ದಾನೆ. ಪ್ರಕರಣ ಎಷ್ಟು ಗಂಭೀರವಾದುದೆಂದರೆ, ಮೇ 20ರಂದು ದಿ ಹಿಂದೂ ಇವರ ಮೇಲೆ ಸಂಪಾದಕೀಯ ಬರೆದಿದೆ. ಉತ್ತರ ಪ್ರದೇಶ ಸರಕಾರವು ಖಾಲಿದ್‍ನ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿಕೊಟ್ಟಿದೆ. ಪೊಲೀಸರು ಮತ್ತು ಹಿರಿಯ ಅಧಿಕಾರಿಗಳ ಸಹಿತ 42 ಮಂದಿಯ ವಿರುದ್ಧ, ಕೊಲೆ, ಕೊಲೆ ಸಂಚುಗಳ ಆರೋಪ ಪಟ್ಟಿಯನ್ನು (FIR) ದಾಖಲಿಸಲಾಗಿದೆ.
   2007ರಲ್ಲಿ ಉತ್ತರ ಪ್ರದೇಶದ ಗೋರಖ್‍ಪುರ್, ಲಕ್ನೋ, ಫೈಝಾಬಾದ್ ಕೋರ್ಟ್ ಆವರಣದಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದುವು. 2007 ಡಿಸೆಂಬರ್ 20ರಂದು ಉತ್ತರ ಪ್ರದೇಶದ ವಿಶೇಷ ಪೊಲೀಸ್ ದಳದ ಅಧಿಕಾರಿಗಳು ಖಾಲಿದ್ ಮುಜಾಹಿದ್‍ನನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ, ಬರಬಂಕಿ ರೈಲ್ವೆ ನಿಲ್ದಾಣದ ಬಳಿ ಸ್ಫೋಟಕಗಳೊಂದಿಗೆ ಈತನನ್ನು ಬಂಧಿಸಿರುವುದಾಗಿ ಹೇಳಿಕೊಂಡಿದ್ದರು. ಆದರೆ ಖಾಲಿದ್‍ನ ಕುಟುಂಬ ಆರಂಭದಿಂದಲೂ ಇದನ್ನು ಕಟ್ಟುಕತೆ ಅಂದಿತ್ತು. ಖಾಲಿದ್ ಒಳಸಂಚಿಗೆ ಬಲಿಯಾಗಿದ್ದಾನೆ ಎಂದು ವಾದಿಸಿತ್ತು. ಆದ್ದರಿಂದಲೇ, ಮಾಯಾವತಿಯವರ ಸರಕಾರವು ಪ್ರಕರಣವನ್ನು ತನಿಖಿಸುವುದಕ್ಕಾಗಿ ನಿಮೇಶ್ ಆಯೋಗವನ್ನು ರಚಿಸಿತ್ತು. ಅದು, ಖಾಲಿದ್‍ನ ಮೇಲೆ ಹೊರಿಸಲಾಗಿರುವ ಆರೋಪಗಳು ಸುಳ್ಳಾಗಿದ್ದು, ಆತನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂದು ಬಲವಾಗಿ ವಾದಿಸಿತು. ಇದನ್ನನುಸರಿಸಿಯೇ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್‍ರು, ಖಾಲಿದ್‍ನನ್ನು ಆರೋಪಮುಕ್ತಗೊಳಿಸಿ ಬಿಡುಗಡೆಗೊಳಿಸುವಂತೆ ಫೈಝಾಬಾದ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಮೇ 10ರಂದು ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತ್ತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಲೇರಲು ಸರಕಾರ ತೀರ್ಮಾನಿಸಿರುವಂತೆಯೇ, ಮೊನ್ನೆ  ಮೇ 18ರಂದು ಫೈಝಾಬಾದ್ ನ್ಯಾಯಾಲಯದಿಂದ ಲಕ್ನೋ ಜೈಲಿಗೆ ಪೊಲೀಸರ ಜೊತೆ ಸಾಗುವಾಗ ದಾರಿ ಮಧ್ಯೆ ಆತ ಮೃತಪಟ್ಟಿದ್ದಾನೆ.
   ಭಯೋತ್ಪಾದನೆಯು ಈ ದೇಶದಲ್ಲಿ ಅಸಂಖ್ಯ ಬಾರಿ ಚರ್ಚೆಗೊಳಗಾಗಿದೆ. 10 ವರ್ಷಗಳ ಹಿಂದೆ ಈ ಚರ್ಚೆಯ ಧಾಟಿ, ಆರೋಪಗಳ ಗುರಿ ಹೇಗಿತ್ತೋ ಹಾಗೆ ಇವತ್ತಿಲ್ಲ. ಅಷ್ಟಕ್ಕೂ, ಇದಕ್ಕೆ ಸ್ಫೋಟ ಪ್ರಕರಣಗಳಲ್ಲಿ ಆಗಿರುವ ವ್ಯತ್ಯಾಸ ಕಾರಣ ಅಲ್ಲ. 10 ವರ್ಷಗಳ ಹಿಂದೆ ಭಯೋತ್ಪಾದನಾ ಕೃತ್ಯಕ್ಕೆ (ನಿಜವಾಗಿ ಬಾಂಬ್ ಸ್ಫೋಟವೊಂದೇ ಭಯೋತ್ಪಾದನೆ ಅಲ್ಲ) ಯಾವೆಲ್ಲ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತೋ ಬಹುತೇಕ ಅವುಗಳನ್ನೇ ಇವತ್ತೂ ಬಳಸಲಾಗುತ್ತಿದೆ. ಅವತ್ತೂ ಶಂಕಿತರಾಗಿ ಪ್ರದರ್ಶನಗೊಳ್ಳುತ್ತಿದ್ದುದು ಮನುಷ್ಯರೇ. ಇವತ್ತೂ ಮನುಷ್ಯರೇ. ಆದರೆ ಬರಬರುತ್ತಾ, ಬಾಂಬ್ ಸ್ಫೋಟಗಳು ಅನುಮಾನ ತರಿಸತೊಡಗಿದುವು. ಮುಸ್ಲಿಮ್ ಹೆಸರುಳ್ಳ, ಗಡ್ಡ, ಟೋಪಿ, ಪೈಜಾಮ ಧರಿಸಿದ ವ್ಯಕ್ತಿಗಳಿಗೆ ಮಾತ್ರ ಬಾಂಬ್ ಸ್ಫೋಟಿಸಲು ಸಾಧ್ಯ ಎಂದು ಬಲವಾಗಿ ನಂಬಿದ್ದ ಮುಗ್ಧ ಭಾರತೀಯರನ್ನು ಸಾಧ್ವಿಗಳು, ಪುರೋಹಿತ್‍ಗಳು ಬೆಚ್ಚಿ ಬೀಳಿಸಿದರು. ಆ ಬಳಿಕ ಭಡ್ತಿಗಾಗಿ, ಪರಮ ವೀರ ಚಕ್ರಕ್ಕಾಗಿ ಪೊಲೀಸರು ಹೇಗೆ ನಕಲಿ ಭಯೋತ್ಪಾದಕರನ್ನು ಸೃಷ್ಟಿಸುತ್ತಾರೆ ಅನ್ನುವುದು ಇಶ್ರತ್ ಜಹಾನ್ ಘಟನೆಯ ಸಹಿತ ಕೆಲವಾರು ಪ್ರಕರಣಗಳು ಮನದಟ್ಟು ಮಾಡಿದುವು. ಖಾಲಿದ್ ಮುಜಾಹಿದ್‍ನ ಸುತ್ತ ಹಬ್ಬಿರುವುದೂ ಇಂಥ ಅನುಮಾನಗಳೇ. ರಾಜ್ಯ ಸರಕಾರ ಹೈಕೋರ್ಟ್ ಮೆಟ್ಟಲೇರಿ ಆತನನ್ನು ಬಿಡುಗಡೆಗೊಳಿಸಿಕೊಂಡರೆ ಮುಂದೆ ಆತ ಪೊಲೀಸ್ ಭಯೋತ್ಪಾದನೆಗೆ  ಪ್ರಬಲ ಸಾಕ್ಷಿಯಾಗಬಹುದು ಎಂಬುದನ್ನು ಮನಗಂಡೇ ಆತನನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲದಿದ್ದರೆ, ಆರೋಗ್ಯವಂಥ ಯುವಕನೊಬ್ಬ ಕೋರ್ಟು ಮತ್ತು ಜೈಲಿನ ನಡುವಿನ ಹಾದಿಯ ಮಧ್ಯೆ ಸಾವಿಗೀಡಾಗುವುದೆಂದರೇನು? ಕಳೆದ ಮಾರ್ಚ್ 20ರಂದು ನೇಪಾಳದ ಗಡಿಯಿಂದ ಲಿಯಾಕತ್ ಷಾನನ್ನು ಬಂಧಿಸಿದ ದೆಹಲಿ ಪೊಲೀಸರು ಹೇಳಿದ್ದೂ ಭಯೋತ್ಪಾದಕ ಕಥೆಯನ್ನೇ ಅಲ್ಲವೇ? ಹೋಳಿಯ ಸಂದರ್ಭದಲ್ಲಿ ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಲು ಆತ ಸಂಚು ನಡೆಸಿದ್ದ ಎಂಬ ದೆಹಲಿ ಪೊಲೀಸರ ಆರೋಪ ನಿಜವೇ ಆಗಿದ್ದರೆ, ಕೇಂದ್ರ ತನಿಖಾ ತಂಡ ಆತನನ್ನು ನಿರ್ದೋಷಿ ಎಂದದ್ದೇಕೆ? ಜಾಮೀನಿನಲ್ಲಿ ಕೋರ್ಟು ಕಳೆದ ವಾರ ಬಿಡುಗಡೆಗೊಳಿಸಿದ್ದೇಕೆ? ಅಂದಹಾಗೆ, ಆತ ಕಾಶ್ಮೀರದ ಪ್ರತ್ಯೇಕತಾ ಹೋರಾಟಗಾರ ಎಂಬುದು ನಿಜ. ಕಳೆದ 15 ವರ್ಷಗಳಿಂದ ಆತ ಇದ್ದದ್ದೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ. ಆದರೆ, ಶರಣಾಗತ ಹೋರಾಟಗಾರರಿಗೆ ಕ್ಷಮೆ ಮತ್ತು ಪುನರ್ವಸತಿ ನೀಡಲಾಗುತ್ತದೆಂಬ ಕಾಶ್ಮೀರಿ ಸರಕಾರದ ವಾಗ್ದಾನವನ್ನು ನಂಬಿ, ಪತ್ನಿ-ಮಕ್ಕಳೊಂದಿಗೆ ಭಾರತಕ್ಕೆ ಬರುತ್ತಿದ್ದಾಗ ಈತನನ್ನು ಅಪಹರಿಸಿದ ದೆಹಲಿ ಪೊಲೀಸರು, ಬಳಿಕ ಸುಳ್ಳು ಕತೆ ಸೃಷ್ಟಿಸಿದ್ದರು ಎಂಬುದನ್ನಲ್ಲವೇ ಆತನ ಬಿಡುಗಡೆ ಸಾಬೀತುಪಡಿಸುತ್ತಿರುವುದು?
   ನಿಜವಾಗಿ, ಭಯೋತ್ಪಾದಕರ ಕುರಿತಂತೆ ನಡೆಸಲಾಗುವ ಸಿದ್ಧ ಮಾದರಿಯ (Stereo Typed ) ಚರ್ಚೆಗೆ ತಿರುವು ಕೊಟ್ಟ ಇತ್ತೀಚಿನ ಎರಡು ಸಂಕೇತಗಳಾಗಿ ಖಾಲಿದ್ ಮತ್ತು ಲಿಯಾಕತ್‍ರನ್ನು ಸ್ಮರಿಸಿಕೊಳ್ಳಬೇಕಾಗಿದೆ. ಒಂದು ವೇಳೆ, ಲಿಯಾಕತ್‍ನ ಪ್ರಕರಣವನ್ನು ದೆಹಲಿ ಪೊಲೀಸರ ಕೈಯಿಂದ ಕಿತ್ತು ಕೇಂದ್ರೀಯ ತನಿಖಾ ದಳಕ್ಕೆ ಕೇಂದ್ರ ಸರಕಾರವು ವಹಿಸದೇ ಇರುತ್ತಿದ್ದರೆ, ಒಂದು ದಿನ ಆತನೂ ಮಾರ್ಗ ಮಧ್ಯದಲ್ಲಿ ಸಾವಿಗೀಡಾಗುವ ಸರ್ವ ಸಾಧ್ಯತೆಯೂ ಇತ್ತು. ಇಲ್ಲದಿದ್ದರೆ, ನಾಗರಾಜ ಜಂಬಗಿ ಯಂತೆ, ಸಿದ್ದಿಕಿಯಂತೆ ಸಹಕೈದಿಗಳಿಂದ ಹಲ್ಲೆಗೀಡಾಗಿ ಜೈಲಿನಲ್ಲೇ ಕೊನೆಯುಸಿರೆಳೆಯುವುದಕ್ಕೂ ಸಾಧ್ಯವಿತ್ತು.  ಈ ಹಿನ್ನೆಲೆಯಲ್ಲಿ ಖಾಲಿದ್ ಎಂಬ ಶಂಕಿತನ ಸುತ್ತ ಹುಟ್ಟಿಕೊಂಡಿರುವ ಅನುಮಾನಗಳ ಪರದೆಯನ್ನು ಸರಿಸಲೇಬೇಕಾಗಿದೆ. ಆತನ ಸಾವು; ವ್ಯವಸ್ಥೆಯ ಭಯೋತ್ಪಾದನೆಯು ಬಹಿರಂಗಗೊಳ್ಳುವುದಕ್ಕೆ ಹೇತುವಾಗಬೇಕಾಗಿದೆ. ಶಂಕಿತ ಹಣೆಪಟ್ಟಿಯನ್ನು ಹಚ್ಚಿಕೊಂಡು ವಿಚಾರಣೆಯೂ ಇಲ್ಲದೇ ಜೈಲಿನಲ್ಲಿ ಕೊಳೆಯುತ್ತಿರುವ ಅಮಾಯಕರ ಕುರಿತಂತೆ ಗಂಭೀರ ಚರ್ಚೆಗೆ, ಅವರನ್ನು ಆಕಸ್ಮಿಕ ಸಾವಿನಿಂದ ತಡೆಯುವುದಕ್ಕೆ ಖಾಲಿದ್‍ನ ಸಾವು ಎಚ್ಚರಿಕೆಯಾಗಿ ಬಳಕೆಯಾಗಬೇಕಾಗಿದೆ. ನಿಜವಾಗಿ, ಓರ್ವ 'ಶಂಕಿತ'ನ ಸಾವು ನೂರಾರು ಶಂಕಿತರ ಮುಗ್ಧತೆಯನ್ನು ಸಾಬೀತುಪಡಿಸುವುದಕ್ಕೆ ನೆರವಾಗುವುದಾದರೆ ಮತ್ತು ಅವರನ್ನು ಶಂಕಿತಗೊಳಿಸಿದ ನಿಜವಾದ ಭಯೋತ್ಪಾದಕರ ಮುಖವನ್ನು ಈ ದೇಶಕ್ಕೆ ಪರಿಚಯಿಸುವುದಾದರೆ ಖಾಲಿದ್ ಸಾವಿನಲ್ಲೂ ಗೆದ್ದಿದ್ದಾನೆ ಎಂದೇ ಹೇಳಬೇಕು.

Monday, 13 May 2013

ಧೋನಿ, ತೆಂಡುಲ್ಕರ್‍ಗಳನ್ನು ಬೆತ್ತಲೆಗೊಳಿಸಿದ ಎಳಸು ಕ್ರಿಕೆಟಿಗ

   ಚಿಯರ್‍ ಗರ್ಲ್ಸ್ ಗಳು; ಬೌಂಡರಿ, ಸಿಕ್ಸರ್‍ಗಳು; ಧೋನಿ, ಕೋಹ್ಲಿಗಳೇ ಸುದ್ದಿ ಮಾಡುತ್ತಿರುವ ಐಪಿಎಲ್ ಕ್ರಿಕೆಟ್‍ಗೆ ಪರ್ವೇಝ್ ರಸೂಲ್ ಅನ್ನುವ ಅಪರಿಚಿತ ಯುವಕನೊಬ್ಬ ಪುಟ್ಟದೊಂದು ತಿರುವು ಕೊಟ್ಟಿದ್ದಾನೆ. ಸಮಾಜದ ಬಗ್ಗೆ ಕಳಕಳಿಯುಳ್ಳ ಯಾರಿಗೆ ಆಗಲಿ, ಈ ತಿರುವು ಬಹಳ ಮಹತ್ವಪೂರ್ಣವಾದದ್ದು. ಮುಂದಿನ ದಿನಗಳಲ್ಲಿ ಗಂಭೀರ ಚರ್ಚೆಯೊಂದರ ಹುಟ್ಟಿಗೆ ಕಾರಣವಾಗುವಷ್ಟು ಪ್ರಭಾವಶಾಲಿಯಾದದ್ದು. ಇಷ್ಟಕ್ಕೂ; ತೆಂಡುಲ್ಕರ್, ಸೆಹ್ವಾಗ್‍ರಂತೆ ಈತನೂ ಓರ್ವ ಕ್ರಿಕೆಟಿಗನೇ. ಆದರೆ, ಅವರಂತೆ ಕ್ರಿಕೆಟಿಗಾಗಿ ಮೌಲ್ಯವನ್ನು ಕೈ ಬಿಡಲು ತಾನು ಸಿದ್ಧವಿಲ್ಲ ಎಂದು ಘೋಷಿಸಿದ್ದಾನೆ. ಐಪಿಎಲ್ ಅಂಕಪಟ್ಟಿಯಲ್ಲಿ ತಳಮಟ್ಟದಲ್ಲಿರುವ ಪುಣೆ ವಾರಿಯರ್ಸ್ ತಂಡದ ಸದಸ್ಯನಾಗಿರುವ ಈತ, ‘ಮದ್ಯ ಕಂಪೆನಿಯ ಲೋಗೋ (ಚಿಹ್ನೆ) ಉಳ್ಳ ಜೆರ್ಸಿ(ಟೀಶರ್ಟ್)ಯನ್ನು ಧರಿಸಿ ಆಡಲಾರೆ, ಅದು ನನ್ನ ಧರ್ಮಕ್ಕೆ ವಿರುದ್ಧ’ ಅಂದಿದ್ದಾನೆ. ಮಾತ್ರವಲ್ಲ, ಲೋಗೋ ಗೋಚರಿಸದಂತೆ ಅದರ ಮೇಲೆ  ಪಟ್ಟಿಯನ್ನು ಅಂಟಿಸಿಯೇ ಮೈದಾನಕ್ಕೆ ಇಳಿದಿದ್ದಾನೆ. ಒಂದು ರೀತಿಯಲ್ಲಿ, ಇದು ಧೋನಿ, ಕೋಹ್ಲಿ, ತೆಂಡುಲ್ಕರ್‍ಗಳಿಗೆ ಈ ಎಳಸು ಕ್ರಿಕೆಟಿಗ ಕೊಟ್ಟ ಕಪಾಲಮೋಕ್ಷವೂ ಹೌದು.
   ಐಪಿಎಲ್‍ನ ಸುತ್ತ ಈಗಾಗಲೇ ಧಾರಾಳ ಚರ್ಚೆಗಳು ನಡೆದಿವೆ. ನವಜೋತ್ ಸಿಂಗ್ ಸಿದ್ದುರ ಮಂಗಚೇಷ್ಟೆಗಳು; ಗವಾಸ್ಕರ್, ಜಡೇಜಾರ ಗಿಲೀಟಿನ ಮಾತುಗಳು ಅತಿ ಅನ್ನಿಸುವಷ್ಟು ಟಿ.ವಿ.ಗಳಲ್ಲಿ ತುಂಬಿಕೊಂಡಿವೆ. ಆದರೆ ಇವರಾರೂ ಐಪಿಎಲ್ ಅನ್ನು ಆಳುವ ಮದ್ಯದ ಬಗ್ಗೆ, ಹರಿದಾಡುವ ದುಡ್ಡಿನ ಬಗ್ಗೆ ಈ ವರೆಗೂ ಮಾತಾಡಿಲ್ಲ. ಬಿಸಿಸಿಐಗೆ ಎದುರಾಗಿ ಐಸಿಎಲ್ ಅನ್ನು ಹುಟ್ಟು ಹಾಕಿ ಬಂಡಾಯ ಸಾರಿದ್ದ ಕಪಿಲ್ ದೇವ್‍ರಂಥ ಸ್ವಾಭಿಮಾನಿಯೇ ಇವತ್ತು ಕಾಂಚಾಣದೆದುರು ಕುಣಿಯುತ್ತಿ ದ್ದಾರೆ. ಇಂಥ ಹೊತ್ತಲ್ಲಿ ಸಚಿನ್, ಧೋನಿ, ಕೋಹ್ಲಿಗೆ ಹೋಲಿಸಿದರೆ ಏನೇನೂ ಅಲ್ಲದ, ಅವರ ಒಂದು ಶೇಕಡಾದಷ್ಟೂ 'ಬೆಲೆ' ಬಾಳದ ಯುವ ಕ್ರಿಕೆಟಿಗನೊಬ್ಬ ಕ್ರಿಕೆಟ್‍ನಲ್ಲೂ ಮೌಲ್ಯದ ಬಗ್ಗೆ ಮಾತಾಡುವುದೆಂದರೆ ಅದೇಕೆ ಸಣ್ಣ ಸಂಗತಿಯಾಗಬೇಕು? ಪುಣೆ ವಾರಿಯರ್ಸ್ ತಂಡ ರಸೂಲ್ ನನ್ನು ಖರೀದಿಸಿದ್ದು ಕೆಲವು ಲಕ್ಷಗಳಿಗೆ. ‘ಧೋನಿಗಳಿಗೆ’ ಹೋಲಿಸಿದರೆ ಈ ದುಡ್ಡು ತೀರಾ ಜುಜುಬಿ. ಅಷ್ಟಕ್ಕೂ, ಧೋನಿಯಂತೆ ರಸೂಲ್ ಪುಣೆ ವಾರಿಯರ್ಸ್ ನ  ಅನಿವಾರ್ಯ ಆಟಗಾರನೇನೂ ಅಲ್ಲ. ಆತ ಈ ವರೆಗೆ ಆಡಿದ್ದೇ ಒಂದು ಪಂದ್ಯ. (ಈವರೆಗೆ ಆಡಿಸದೇ ಇರುವುದಕ್ಕೆ ಆತನ ಮದ್ಯ ತಕರಾರು ಕಾರಣವಾಗಿರಬಹುದೇನೋ) ತಂಡದ ನಿಯಮ, ಉದ್ದೇಶ, ಒಪ್ಪಂದಗಳ ಬಗ್ಗೆ ತಕರಾರು ಎತ್ತಿ ದಕ್ಕಿಸಿಕೊಳ್ಳುವಷ್ಟು ಪ್ರಭಾವಶಾಲಿ ಆಟಗಾರನೂ ಆತನಲ್ಲ. ಆದರೂ ಆತ ತಂಡದ ಧೋರಣೆಯ ವಿರುದ್ಧ ಮಾತನಾಡಿದ್ದಾನೆಂದರೆ, ಅದನ್ನು ಅಭಿನಂದಿಸಲೇಬೇಕು. ನಿಜವಾಗಿ, ಇನ್ನೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯವನ್ನಾಡದ ಕ್ರಿಕೆಟಿಗನೊಬ್ಬ ಜಾಹೀರಾತುದಾರರ ವಿರುದ್ಧ ಮಾತಾಡುವುದೆಂದರೆ ಕೆರಿಯರ್‍ಗೇ ಧಕ್ಕೆ ತಂದಂತೆ. ಮದ್ಯ ಎಂಬುದು ಇವತ್ತು ಈ ದೇಶದ ಎಲ್ಲ ಕ್ಷೇತ್ರವನ್ನೂ ಆಳುವಷ್ಟು ಪ್ರಭಾವಶಾಲಿಯಾಗಿದೆ. ಬಿಸಿಸಿಐಯ ಪ್ರಮುಖ ಆದಾಯ ಮೂಲವೇ ಮದ್ಯದ ದುಡ್ಡು. ಐಪಿಎಲ್ ಅಂತೂ ಮದ್ಯದ ಜಾಹೀರಾತಿನಿಂದಲೇ ಬದುಕುತ್ತಿದೆ. ಹೀಗಿರುವಾಗ ಈಗಷ್ಟೇ ಕಣ್ಣು ಬಿಡುತ್ತಿರುವ ಕಾಶ್ಮೀರಿ ಕ್ರಿಕೆಟಿಗನೊಬ್ಬ 'ಮದ್ಯ'ದ ವಿರುದ್ಧ ಮಾತಾಡಿದರೆ ಆತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬಲ್ಲನೇ? ಆತನ ಬೌಲಿಂಗ್ ಶೈಲಿಯನ್ನೋ ಫಾರ್ಮನ್ನೋ ನೆಪವಾಗಿಸಿ ರಾಷ್ಟ್ರೀಯ ತಂಡದಿಂದ ದೂರ ಇಡಲು ಮದ್ಯ ಕಂಪೆನಿಗಳು ಸಂಚು ನಡೆಸಲಾರವೇ?
   ನಿಜವಾಗಿ, 'ಧರ್ಮ ಮನೆಯಲ್ಲಿರಲಿ' ಎಂದು ಪ್ರತಿಪಾದಿಸುವ ಸರ್ವರನ್ನೂ ರಸೂಲ್ ತನ್ನ ನಿಲುವಿನ ಮುಖಾಂತರ ತರಾಟೆಗೆ ಎತ್ತಿಕೊಂಡಿದ್ದಾನೆ. ಸಚಿನ್, ಧೋನಿಗಳೆಲ್ಲ ತಮ್ಮ ಧರ್ಮವನ್ನು ಮನೆಯಲ್ಲಿಟ್ಟಿರುವುದರಿಂದಲೇ ಅವರಿಗೆ ಮದ್ಯವನ್ನು ಪ್ರಚಾರ ಮಾಡಲು ಸಾಧ್ಯವಾಗುತ್ತಿರುವುದು. ಅಂದಹಾಗೆ, ಇವತ್ತು ಅತ್ಯಾಚಾರ, ಭ್ರಷ್ಟಾಚಾರ, ಹಿಂಸೆ, ಮೋಸಗಳೆಲ್ಲ ನಡೆಯುತ್ತಿರುವುದಕ್ಕೆ ಧರ್ಮ ವನ್ನು ಮನೆಯಲ್ಲಿಟ್ಟಿರುವುದೇ ಕಾರಣವಲ್ಲವೇ? ಒಂದು ವೇಳೆ ರಸೂಲ್ ತನ್ನ ಧರ್ಮವನ್ನು ಮನೆಯಲ್ಲೇ ಬಿಟ್ಟು ಬರುತ್ತಿದ್ದರೆ, ಆತನಿಗೆ ಮದ್ಯದ ವಿರುದ್ಧ ಮಾತೆತ್ತಲು ಸಾಧ್ಯವಿತ್ತೇ? ಧೋನಿ, ತೆಂಡುಲ್ಕರ್‍ಗಳೆಲ್ಲ ಇವತ್ತು ಮದ್ಯದ ವಿರುದ್ಧ ಮಾತಾಡದಂಥ ಸ್ಥಿತಿಯಲ್ಲಿರುವುದು, ಅವರು 'ಧರ್ಮ' ವನ್ನು ಮನೆಯಲ್ಲಿಟ್ಟು ಬಂದುದೇ ತಾನೇ. ಧರ್ಮವನ್ನು ಮನೆಯಲ್ಲಿ ಕಳಚಿಡದೇ ತನ್ನ ಜೊತೆಗೇ ಒಯ್ದ ರಸೂಲ್ ಎಂಬ ಮರಿ ಕ್ರಿಕೆಟಿಗನನ್ನು ಅವನ ಧರ್ಮವು ಮದ್ಯದ ವಿರುದ್ಧ; ತನ್ನ ಕೆರಿಯರ್, ದುಡ್ಡು, ಭವಿಷ್ಯವನ್ನು ಲೆಕ್ಕಿಸದೆಯೇ ಮಾತಾಡುವಂತೆ ಪ್ರಚೋದಿಸುವಾಗ, ಧರ್ಮವನ್ನು ಮನೆಯಲ್ಲಿಟ್ಟು ಬಂದ ಕೋಹ್ಲಿ, ತೆಂಡುಲ್ಕರ್‍ಗಳನ್ನು ಮದ್ಯ ಬಾಯಿ ಕಟ್ಟಿಸುತ್ತದೆ. ಇವೆರಡೂ ರವಾನಿಸುವ ಸಂದೇಶವಾದರೂ ಏನು? ಧರ್ಮವನ್ನು ಜೊತೆಗೊಯ್ದ ವ್ಯಕ್ತಿ ಕೆಡುಕಿನ ವಿರುದ್ಧ ಮುಲಾಜಿಲ್ಲದೇ ಮಾತಾಡುತ್ತಾನೆ ಎಂದಲ್ಲವೇ? ಇಷ್ಟಕ್ಕೂ ಈ ಕ್ರಿಕೆಟಿಗರಿಗೆ 'ಮದ್ಯ'ದಿಂದಾಗುವ ಹಾನಿಯ ಬಗ್ಗೆ ಗೊತ್ತಿಲ್ಲ ಎಂದಲ್ಲ. ಈ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಮದ್ಯಕ್ಕೆ ಪ್ರಮುಖ ಪಾತ್ರ ಇದೆ. ಆದರೆ, ಧರ್ಮ, ಮೌಲ್ಯಗಳನ್ನು ಕಟ್ಟಿಕೊಂಡು ತಾನೇಕೆ ದುಡ್ಡು ಕಳಕೊಳ್ಳಬೇಕು ಎಂಬ 'ಅಧರ್ಮ' ಅವರನ್ನೆಲ್ಲಾ ಕಟ್ಟಿಹಾಕುತ್ತಿದೆ. ಇಂಥ ಸಂದರ್ಭದಲ್ಲಿ ಜುಜುಬಿ ಕ್ರಿಕೆಟಿಗನೊಬ್ಬ ಧರ್ಮ ಕ್ಕಿಂತ ಕ್ರಿಕೆಟ್ ದೊಡ್ಡದಲ್ಲ ಎಂದು ಸಾರಿದ್ದು ಯಾಕೆ ಸಾರ್ವಜನಿಕ ಚರ್ಚೆಗೆ ಅಡಿಗಲ್ಲು ಹಾಕಬಾರದು? ಒಂದು ವೇಳೆ ರಸೂಲ್‍ನಂತೆ ತೆಂಡುಲ್ಕರೋ ಧೋನಿಯೋ ತಮ್ಮ ಧರ್ಮವನ್ನು ತಮ್ಮ ಜೊತೆಗೂ ಆಟದ ಮೈದಾನಕ್ಕೂ ತರುತ್ತಿದ್ದರೆ ಏನಾಗುತ್ತಿತ್ತು? ಮದ್ಯದ ವಿರುದ್ಧ ರಾಷ್ಟ್ರಮಟ್ಟದಲ್ಲೇ ಒಂದು ಚಳವಳಿ ಏರ್ಪಡುವುದಕ್ಕೆ ಕಾರಣವಾಗುತ್ತಿರಲಿಲ್ಲವೇ?
   ಪರ್ವೇಝ್ ರಸೂಲ್‍ನ ನಿಲುವು ಆತನ ಕೆರಿಯರ್‍ಗೆ ತೊಡಕಾಗುತ್ತದೋ ಇಲ್ಲವೋ, ಆದರೆ ಆತ ದುಡ್ಡಿಗಾಗಿ ಧರ್ಮವನ್ನು ಕೈಬಿಟ್ಟ ತೆಂಡುಲ್ಕರ್, ಝಹೀರ್‍ಗಳನ್ನೆಲ್ಲಾ ಸಾರ್ವಜನಿಕವಾಗಿ ಬೆತ್ತಲೆ ಗೊಳಿಸಿದ್ದಾನೆ. ಧರ್ಮವು ಜೊತೆಗಿದ್ದರೆ ಕೆಡುಕಿನ ವಿರುದ್ಧ ಮಾತಾಡುವುದಕ್ಕೆ ಧೈರ್ಯ ಬರುತ್ತದೆ ಎಂಬ ಸಂದೇಶ ರವಾನಿಸಿದ್ದಾನೆ. ಐಪಿಎಲ್‍ನಲ್ಲಿ ರನ್‍ಗಳ ರಾಶಿಯನ್ನೇ ಹರಿಸುತ್ತಿರುವ ಮತ್ತು ಟಿ.ವಿ.ಯಲ್ಲಿ ವಿದೂಷಕರಂತೆ ಆಡುತ್ತಿರುವ ಎಲ್ಲರೂ ರಸೂಲ್‍ನನ್ನು ಮಾದರಿಯಾಗಿ ಆಯ್ಕೆ ಮಾಡಬೇಕು. ಆಡಿದ ಪಂದ್ಯ ಒಂದೇ ಒಂದು ಆಗಿದ್ದರೂ ಒಂದುನೂರು ಪಂದ್ಯ ಆಡಿದವರಲ್ಲೂ ಇಲ್ಲದ ಮೌಲ್ಯವನ್ನು ಆತ ಪ್ರದರ್ಶಿಸಿದ್ದಾನೆ. ರಸೂಲ್‍ನಿಗೆ ಅಭಿನಂದನೆಗಳು.

Monday, 6 May 2013

ರಾಜಕಾರಣಿಗಳ ಎದುರು 'ಪಾಸ್' ಆಗುವ ವಿದ್ಯಾರ್ಥಿ

    ರಾಜಕಾರಣಿಗಳ ಫಲಿತಾಂಶಕ್ಕಿಂತ ಎರಡು ದಿನಗಳ ಮೊದಲೇ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಆದರೆ, ಪಾಸ್ ಮತ್ತು ಫೇಲನ್ನು ಜೀವನದ ಸೋಲು ಮತ್ತು ಗೆಲುವು ಎಂದು ನಂಬುವ ಮುಗ್ಧ ವಿದ್ಯಾರ್ಥಿಗಳಿಗೂ, ಸೋಲಿನಲ್ಲೂ ಎದುರಾಳಿಯ ಕೈವಾಡವನ್ನು ಶಂಕಿಸುವ ರಾಜಕಾರಣಿಗಳಿಗೂ ದೊಡ್ಡ ವ್ಯತ್ಯಾಸವಿದೆ. ಫೇಲ್ ಆದ ವಿದ್ಯಾರ್ಥಿಗಳು ಒಂದು ವಾರಗಳ ತನಕ ತಮ್ಮ ಆಪ್ತರು, ಕುಟುಂಬಿಕರು, ಗೆಳೆಯರಿಂದ ತಪ್ಪಿಸಿಕೊಂಡು ಬದುಕುತ್ತಾರೆ. ವಿಷಾದ, ಅಪರಾಧಿ ಭಾವವೊಂದು ಅವರ ಮುಖದಲ್ಲಿ ಸದಾ ಇದ್ದಿರುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಆತ್ಮಹತ್ಯೆಯಂಥ ಅತಿರೇಕಕ್ಕೆ ಹೋಗುವುದೂ ಇದೆ. ಇಷ್ಟಾದರೂ ಯಾವ ವಿದ್ಯಾರ್ಥಿಯೂ ತಮ್ಮ ಫೇಲ್‍ಗೆ ಸರಕಾರವನ್ನು ದೂರುವುದಿಲ್ಲ. ಸರಕಾರ ಕರೆಂಟ್ ಕೊಡದೇ ಕತ್ತಲಲ್ಲಿರಿಸಿದ್ದು ತಮ್ಮ ಪರೀಕ್ಷಾ ತಯಾರಿಗೆ ತೊಡಕಾಯಿತು ಅನ್ನುವುದಿಲ್ಲ. ಸೂಕ್ತ ಉಪನ್ಯಾಸಕರನ್ನು, ಮೂಲ ಸೌಕರ್ಯಗಳನ್ನು ಸರಕಾರ ಒದಗಿಸದಿರುವುದೇ ತಮ್ಮ ಫೇಲ್‍ಗೆ ಕಾರಣ ಅನ್ನುವುದಿಲ್ಲ. ಇಷ್ಟಕ್ಕೂ, ಎಲ್ಲ ವಿದ್ಯಾರ್ಥಿಗಳೂ ಚಿನ್ನದ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟುವುದಿಲ್ಲವಲ್ಲ. ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ಬಡತನ, ಶ್ರೀಮಂತಿಕೆ, ಪ್ರತಿಭೆ.. ಎಲ್ಲದರಲ್ಲೂ ವ್ಯತ್ಯಾಸ ಇದ್ದೇ ಇರುತ್ತದೆ. ತನ್ನ ಕುಟುಂಬ ತೀರಾ ದಾರಿದ್ರ್ಯದಲ್ಲಿ ಬದುಕುತ್ತಿದ್ದುದರಿಂದ ಪರೀಕ್ಷೆಗೆ ತಯಾರಿ ನಡೆಸಲು ಕಷ್ಟವಾಯಿತು ಎಂದು ಓರ್ವ ವಿದ್ಯಾರ್ಥಿ ಸಮರ್ಥಿಸಿಕೊಳ್ಳುವುದಕ್ಕೆ ಖಂಡಿತ ಅವಕಾಶವಿದೆ. ರಜೆಯ ದಿನಗಳಲ್ಲಿ ಅಥವಾ ಕೆಲವೊಮ್ಮೆ ರಜೆ ಮಾಡಿಯೇ ದುಡಿಯಬೇಕಾದ ಜರೂರತ್ತು ಅನೇಕ ವಿದ್ಯಾರ್ಥಿಗಳಿಗೆ ಇರುತ್ತದಲ್ಲವೇ? ಸರಕಾರ ತಮಗೆ ಸೂಕ್ತ ವ್ಯವಸ್ಥೆ ಮಾಡಿರುತ್ತಿದ್ದರೆ 'ಫೇಲ್' ಫಲಿತಾಂಶ ಬರುತ್ತಿರಲಿಲ್ಲವೆಂದು ಅವರಿಗೆ ವಾದಿಸಬಹುದಲ್ಲವೇ? ಆದರೂ ವಿದ್ಯಾರ್ಥಿಗಳಾರೂ ಹೀಗೆ ವಾದಿಸಿದ್ದು ಎಲ್ಲೂ ನಡೆದಿಲ್ಲ. ಆದರೆ ರಾಜಕಾರಣಿ ಹಾಗಲ್ಲ. ತನ್ನ ಫೇಲ್‍ಗೆ ತನ್ನನ್ನು ಹೊರತುಪಡಿಸಿ ಇತರೆಲ್ಲರನ್ನೂ ದೂರತೊಡಗುತ್ತಾನೆ. ತನ್ನ ಅಭಿವೃದ್ಧಿ ಯೋಜನೆಗಳು ಜನರಿಗೆ ಸರಿಯಾಗಿ ಮನವರಿಕೆ ಆಗಿಲ್ಲ ಅನ್ನುತ್ತಾನೆ. ಆಡಳಿತ ವಿರೋಧಿ ಅಲೆ ಅಥವಾ ಎದುರಾಳಿಯ ಪಿತೂರಿಯಿಂದಾಗಿ ತಾನು ಸೋಲಬೇಕಾಯಿತು ಅನ್ನುತ್ತಾನೆ. ಆತ ತಲೆ ತಗ್ಗಿಸುವುದಿಲ್ಲ. ತನ್ನ ಭ್ರಷ್ಟಾಚಾರ, ಜನವಿರೋಧಿ ನಿಲುವು.. ಇವಾವುದನ್ನೂ ಆತ ಕಾರಣವಾಗಿ ಒಪ್ಪಿಕೊಳ್ಳುವುದೇ ಇಲ್ಲ. ಫೇಲ್ ಆದರೂ ಪಾಸ್ ಆದವನಂತೆ ಫೋಸ್ ಕೊಡುತ್ತಾ, ಅವರಿವರನ್ನು ದೂರುತ್ತಾ ಮುಂದಿನ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಇಷ್ಟಕ್ಕೂ, ಚುನಾವಣೆಯಲ್ಲಿ ಫೇಲ್ ಆದ  ಯಾವ ರಾಜಕಾರಣಿಯೇ ಆಗಲಿ ಆತ್ಮಹತ್ಯೆ ಮಾಡಿಕೊಂಡದ್ದಿದೆಯೇ? ಊರು ಬಿಟ್ಟು ಹೋದದ್ದಿ ದೆಯೇ? ನಿಜವಾಗಿ, ಆತ್ಮಹತ್ಯೆ ಮಾಡಿಕೊಳ್ಳುವುದಾದರೆ ಅದಕ್ಕೆ ಅತ್ಯಂತ ಸೂಕ್ತ ವ್ಯಕ್ತಿಗಳು ರಾಜಕಾರಣಿಗಳೇ. ಯಾಕೆಂದರೆ, ಅವರು ಚುನಾವಣೆಯಲ್ಲಿ ಫೇಲ್ ಆಗುವುದಕ್ಕೆ ಸೂಕ್ತ ಸೌಲಭ್ಯಗಳ ಕೊರತೆ ಕಾರಣ ಆಗಿರುವುದಿಲ್ಲ. ಅವರಲ್ಲಿ ದುಡ್ಡೂ ಇರುತ್ತದೆ. ಶ್ರಮವನ್ನೂ ಹಾಕಿರುತ್ತಾರೆ. ಇಷ್ಟೆಲ್ಲ ಆಗಿಯೂ ಅವರು ಫೇಲ್ ಆಗುತ್ತಾರೆಂದಾದರೆ, ಅದಕ್ಕೆ ಸ್ವಯಂ ಅವರು ಕಾರಣರೇ ಹೊರತು ಇನ್ನಾರೂ ಅಲ್ಲ. ಆದರೆ ವಿದ್ಯಾರ್ಥಿಗಳು ಹಾಗಲ್ಲ. ಅವರಿಗೆ ದೂರಿಕೊಳ್ಳುವುದಕ್ಕೆ ನೂರೊಂದು ಕಾರಣಗಳಿರುತ್ತವೆ. ಹೀಗಿದ್ದೂ ರಾಜಕಾರಣಿಗಳ ಬದಲು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮುಂದಾಗುತ್ತಾರೆಂದರೆ, ಏನೆನ್ನಬೇಕು? ನಿಜವಾಗಿ, ತಮ್ಮ ಫೇಲ್‍ಗೆ ಕಾರಣವಾಗಿರುವ 'ಇತರ'ರನ್ನು ದೂರದೇ ಎಲ್ಲ ತಪ್ಪನ್ನೂ ತಮ್ಮ ಖಾತೆಗೇ ಸೇರಿಸುವ ವಿದ್ಯಾರ್ಥಿಗಳು ರಾಜಕಾರಣಿಗಳಿಗಿಂತ ಮೇಲು ಎಂದು ಅನಿಸುವುದಿಲ್ಲವೇ?
   ದುರಂತ ಏನೆಂದರೆ, ಫಲಿತಾಂಶಗಳು ಪ್ರಕಟವಾದ ಹೊತ್ತಿನಿಂದಲೇ ವಿದ್ಯಾರ್ಥಿಗಳ ಆತ್ಮಹತ್ಯೆಯ ಸುದ್ದಿಗಳೂ ಕೇಳಿ ಬರತೊಡಗುವುದು. ಅಂದಹಾಗೆ, ಪಾಸ್ ಮತ್ತು ಫೇಲ್ ಎಂಬುದು ಎರಡು ಪದಗುಚ್ಛಗಳೇ ಹೊರತು ಅವು ಬದುಕಿನ ಸೋಲು ಮತ್ತು ಗೆಲುವು ಖಂಡಿತ ಅಲ್ಲ. ಫೇಲ್ ಅನ್ನು ಪಾಸ್ ಆಗಿಸುವುದಕ್ಕೆ ಆ ಬಳಿಕವೂ ನೂರಾರು ಅವಕಾಶಗಳಿವೆ. ಪರೀಕ್ಷೆಯಲ್ಲಿ  ಪಾಸ್ ಆಗದೆಯೂ ಬದುಕಿನಲ್ಲಿ ಪಾಸ್ ಆದವರ ಅಸಂಖ್ಯ ಘಟನೆಗಳು ನಮ್ಮ ಸುತ್ತಮುತ್ತ ಧಾರಾಳ ಇವೆ. ಬದುಕಿನ ಅತಿದೊಡ್ಡ ಸೋಲು ಯಾವುದೆಂದರೆ, ಅದು ಆತ್ಮಹತ್ಯೆ. ಯಾಕೆಂದರೆ ಆತ್ಮಹತ್ಯೆಯ ಬಳಿಕ ಬದುಕಿನಲ್ಲಿ ಪಾಸ್ ಆಗುವುದಕ್ಕೆ ಅವಕಾಶವೇ ಸಿಗುವುದಿಲ್ಲ. ಆದ್ದರಿಂದಲೇ ಪವಿತ್ರ ಕುರ್‍ಆನ್ ಆತ್ಮಹತ್ಯೆಯನ್ನು ಧರ್ಮವಿರೋಧಿ ಕೃತ್ಯ ಎಂದು ಘೋಷಿಸಿದ್ದು (4:29). ಇಷ್ಟಕ್ಕೂ ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಉತ್ತಮ ಫಲಿತಾಂಶಕ್ಕಾಗಿ ಒತ್ತಡ ಹಾಕುವುದೆಲ್ಲ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಲ್ಲವಲ್ಲ. ತನ್ನ ಮಗು ಉತ್ತಮ ಅಂಕ ಪಡೆದು ಪಾಸ್ ಆಗಬೇಕು ಎಂದು ಎಲ್ಲ ಹೆತ್ತವರೂ ಆಸೆ ಪಡುತ್ತಾರೆ. ಅದನ್ನು ಅಪರಾಧ ಅನ್ನುವಂತಿಲ್ಲ. ಈ ದೇಶದ ಶೈಕ್ಷಣಿಕ ಪದ್ಧತಿ 'ಅಂಕ' ಆಧಾರಿತ ಆಗಿರುವಾಗ ಅವರಲ್ಲಿ ಬೇರೆ ಆಯ್ಕೆಗಳಾದರೂ ಯಾವುದಿರುತ್ತದೆ? ಆದರೆ, ಹೆತ್ತವರ ಈ ಬಯಕೆ, ಒತ್ತಡಗಳು ಮಗುವಿನ ಪುಟ್ಟ ಮೆದುಳು ಸಹಿಸಿಕೊಳ್ಳಲಾರದಷ್ಟು ಅತಿ ಆಗಬಾರದು. ಮಗುವಿನ ಸಾಮರ್ಥ್ಯ  ಏನು ಎಂಬುದನ್ನು ಅಧ್ಯಾಪಕರಲ್ಲಿ ಚರ್ಚಿಸಿ ಹೆತ್ತವರು ದೃಢಪಡಿಸಿಕೊಳ್ಳಬೇಕು. ಮುಖ್ಯವಾಗಿ, ಮಕ್ಕಳಲ್ಲಿ ಸುರಕ್ಷಿತತೆಯ ಭಾವವನ್ನು ಮೂಡಿಸುವುದು ಬಹಳ ಮುಖ್ಯ. ತಾನು ಹೆತ್ತವರ ನಿರೀಕ್ಷೆಯನ್ನು ಮುಟ್ಟದಿದ್ದರೂ ಅವರು ತನ್ನನ್ನು ಪ್ರೀತಿಸುತ್ತಾರೆ ಎಂಬ ನಂಬುಗೆ ಪ್ರತಿ ಮಗುವಿನಲ್ಲೂ ಹುಟ್ಟಿಸಬೇಕಾದದ್ದು ಎಲ್ಲ ಹೆತ್ತವರ ಜವಾಬ್ದಾರಿಯಾಗಿದೆ. ಯಾಕೆಂದರೆ, ಇವತ್ತಿನ ದಿನಗಳಲ್ಲಿ ಮಕ್ಕಳು ಹಲವು ಮೂಲಗಳಿಂದ ಪ್ರಭಾವಿತರಾಗಿರುತ್ತಾರೆ. ಅವರನ್ನು ಟಿ.ವಿ., ಇಂಟರ್‍ನೆಟ್ ಸಹಿತ ವಿವಿಧ ಮಾಧ್ಯಮಗಳು ಸುತ್ತುವರಿದಿರುತ್ತವೆ. ಅಲ್ಲಿಯ ಸಿಟ್ಟು, ಜಗಳ, ಕೊಲೆ, ಆತ್ಮ ಹತ್ಯೆಗಳೆಲ್ಲ ಒಂದು ಹಂತದವರೆಗೆ ಮಕ್ಕಳನ್ನೂ ಕಾಡಿರುತ್ತವೆ. ಇಂಥ ಸ್ಥಿತಿಯಲ್ಲಿ ಮಕ್ಕಳು ಅತಿರೇಕದ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಈ ಹಿಂದಿಗಿಂತಲೂ ಇವತ್ತು ಹೆಚ್ಚಿದೆ. ಆದ್ದರಿಂದ ಹೆತ್ತವರು ಮಕ್ಕಳನ್ನು 'ಅಂಕ'ಗಳ ಜಗತ್ತಿಗೆ ಸಿದ್ಧಪಡಿಸುವಾಗ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಮನೆಯ ಬಾಗಿಲು ಪಾಸ್ ಮತ್ತು ಫೇಲ್ ಆದ ಇಬ್ಬರಿಗೂ ಒಂದೇ ಬಗೆಯಲ್ಲಿ ತೆರೆದುಕೊಳ್ಳುತ್ತದೆ ಎಂಬ ಧೈರ್ಯವನ್ನು ಮಕ್ಕಳಿಗೆ ರವಾನಿಸಬೇಕು. ಫೇಲ್ ಆಗುವುದು ಯಾವ ರೀತಿಯಲ್ಲೂ ಅವಮಾನಕಾರಿಯಲ್ಲ ಎಂಬ ಸಂದೇಶವನ್ನು ಎಲ್ಲ ಮಕ್ಕಳಿಗೂ ಹೆತ್ತವರು ಮತ್ತು ಅಧ್ಯಾಪಕರು ನೀಡುತ್ತಿರಬೇಕು. ಫೇಲ್‍ಗೆ ಆತ್ಮಹತ್ಯೆ ಉತ್ತರವಲ್ಲ ಎಂಬ ಸ್ಲೋಗನ್ನು ಎಲ್ಲ ಶಾಲೆ ಮತ್ತು ಮನೆಗಳ ಧ್ಯೇಯ ವಾಕ್ಯ ಆಗಬೇಕು. ಇಲ್ಲದಿದ್ದರೆ, ನಾವು ಕೊಲೆಗಾರರಾಗುತ್ತೇವೆ.