Wednesday, 26 February 2014

'ಮತ್ತು' ಬರಿಸುವ ಚಹಾ ಮತ್ತು ಓಟು

   ಚಾಯ್ ಪೆ ಚರ್ಚಾ, ರಾಗಾ ಹಾಲು, ಮೆಹೆಂದಿ ಲಗಾವೋ... ಮುಂತಾದ ಹೊಸ ಹೊಸ ಪದಗುಚ್ಛಗಳು ಮಾಧ್ಯಮಗಳಲ್ಲಿ ಇವತ್ತು ಹೆಚ್ಚೆಚ್ಚು ಸುದ್ದಿ ಮಾಡುತ್ತಿವೆ. ಹೊಟೇಲು, ಬಸ್ಸು ನಿಲ್ದಾಣ, ಅಲ್ಲಿ-ಇಲ್ಲಿ ಇವು ತಮಾಷೆ ಮತ್ತು ಬಿಸಿಬಿಸಿ ಚರ್ಚೆಗೂ ಒಳಗಾಗುತ್ತಿದೆ. ಚಹಾ ಮಾರಾಟ ಮಾಡಿ ಬೆಳೆದ ಮೋದಿಯವರನ್ನು ಕಾಂಗ್ರೆಸ್‍ನ ಮಣಿಶಂಕರ್ ಅಯ್ಯರ್ ವ್ಯಂಗ್ಯವಾಡಿದ್ದೇ ಚಾಯ್ ಪೆ ಚರ್ಚಾ ಪದಗುಚ್ಛ ಹುಟ್ಟಿಕೊಳ್ಳಲು ಕಾರಣ. ಅಯ್ಯರ್‍ರ ವ್ಯಂಗ್ಯವನ್ನೇ ನೆಪವಾಗಿಟ್ಟುಕೊಂಡು ಈ ದೇಶದ 300 ನಗರಗಳ 1000 ಕೇಂದ್ರಗಳಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸುವ ಯೋಜನೆಯನ್ನು ಮೋದಿ ಹಮ್ಮಿಕೊಂಡರು. ಡಿಜಿಟಲ್ ತಂತ್ರಜ್ಞಾನವನ್ನು ಬಳಸಿ ಮಾಡಲಾಗುವ ಈ ಸಂವಾದಕ್ಕೆ ಸ್ವತಃ ಮೋದಿಯೇ ಚಾಲನೆ ಕೊಟ್ಟರು. ಇದರ ಬೆನ್ನಿಗೇ ರಾಗಾ (ರಾಹುಲ್ ಗಾಂಧಿ) ಹಾಲು ಹುಟ್ಟಿಕೊಂಡಿತು. ಚಹಾವು ಆರೋಗ್ಯಕ್ಕೆ ಹಾನಿಕರವಾಗಿದ್ದು ಅದಕ್ಕಿಂತ ಹಾಲು ಉತ್ತಮ ಎಂದು ಹೇಳುತ್ತಾ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ರಾಗಾ ಹಾಲು ಮಾರಾಟ ಆರಂಭಿಸಿದರು. ಆ ಬಳಿಕ ಮೆಹಂದಿ ಲಗಾವೋ (ಮೆಹಂದಿ ಹಚ್ಚಿ) ಎಂಬ ಅಭಿಯಾನವನ್ನು ಜಾರ್ಖಂಡ್‍ನ ಬಿಜೆಪಿ ಮಹಿಳಾ ವಿಭಾಗವು ಹಮ್ಮಿಕೊಂಡಿತು. ಪ್ರತಿ ಮನೆಗೂ ಭೇಟಿ ಕೊಟ್ಟು ಮಹಿಳೆಯರ ಕೈಗಳಿಗೆ ಮೆಹಂದಿಯಲ್ಲಿ ತಾವರೆಯನ್ನು ಬಿಡಿಸುವ ಅಭಿಯಾನ ಇದು. ಇದೀಗ ಬಿಹಾರದಲ್ಲಿ ಲಾಲೂ ದುಕಾನ್ (ಅಂಗಡಿ) ಪ್ರಾರಂಭವಾಗಿದೆ. ಅಷ್ಟಕ್ಕೂ ಇಂಥ ಅಭಿಯಾನಗಳು ಇಲ್ಲಿಗೇ ಕೊನೆಗೊಳ್ಳುವ ಸಾಧ್ಯತೆ ಇಲ್ಲ. ಎದುರಾಳಿಗಳು ಹೊರಿಸುವ ಆರೋಪಗಳ ಗುಣಮಟ್ಟವನ್ನು ಹೊಂದಿಕೊಂಡು ಹೊಸಹೊಸ ಪದಗುಚ್ಛಗಳು ಮುಂದಿನ ದಿನಗಳಲ್ಲಿ ಹುಟ್ಟಿಕೊಳ್ಳುವ ಸಾಧ್ಯತೆಯೂ ಇದೆ.
 ನಿಜವಾಗಿ, ಚುನಾವಣಾ ಸಮಯದಲ್ಲಿ ರಾಜಕೀಯ ಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ಹೊಸತೇನೂ ಅಲ್ಲ. ಅಲ್ಲದೆ, ಈ ಸಂದರ್ಭದಲ್ಲಿ ಮಾಡಲಾಗುವ ಆರೋಪಗಳನ್ನು ಜನರು ಗಂಭೀರವಾಗಿ ಪರಿಗಣಿಸುವುದೂ ಇಲ್ಲ. ವೇದಿಕೆಯಲ್ಲಿ ಹುಟ್ಟಿಕೊಂಡು ವೇದಿಕೆಯಲ್ಲೇ ಸಾವಿಗೀಡಾಗುವ ಇಂಥ ಆರೋಪಗಳು ಆ ದಿನದ ಮನರಂಜನೆಯಾಗಿ ಗುರುತಿಗೀಡಾಗುವುದೇ ಹೆಚ್ಚು. ಆದರೆ ಚಾಯ್ ಪೇ ಚರ್ಚಾ ಎಂಬ ಪದಗುಚ್ಛ ಮತ್ತು ಅದು ಚುನಾವಣಾ ಕಾರ್ಯತಂತ್ರವಾಗಿ ಬದಲಾಗಿರುವುದನ್ನು ನೋಡಿದರೆ, ಅಚ್ಚರಿ ಮತ್ತು ಆಘಾತವಾಗುತ್ತದೆ. ಯಾಕೆಂದರೆ, ಚುನಾವಣೆಗಳು ನಡೆಯಬೇಕಾದದ್ದು ಇಶ್ಶೂಗಳ ಆಧಾರದ ಮೇಲೆಯೇ ಹೊರತು ಗಿಮಿಕ್‍ಗಳ ಮೇಲಲ್ಲ. ಜನರ ಗಮನವನ್ನು ಸೆಳೆಯುವುದಕ್ಕಾಗಿ ರಾಜಕೀಯ ಪಕ್ಷಗಳು ಚಹಾ, ಕಾಫಿ, ಹಾಲು, ಮೆಹಂದಿಗಳ ಮೊರೆ ಹೋಗಲು ಪ್ರಾರಂಭಿಸಿದರೆ, ಅದರ ಪರಿಣಾಮ ಏನಾದೀತು? ಅದು ಯಾವ ಫಲಿತಾಂಶಕ್ಕೆ ಕಾರಣವಾದೀತು? ಈ ದೇಶ ಇವತ್ತು ಎದುರಿಸುತ್ತಿರುವುದು ಚಹಾದ್ದೋ ಹಾಲಿನದ್ದೋ ಸಮಸ್ಯೆಯನ್ನು ಅಲ್ಲವಲ್ಲ. ಭ್ರಷ್ಟಾಚಾರ, ಮಂದ ಪ್ರಗತಿ, ಕೋಮುವಾದ, ಭಯೋತ್ಪಾದನೆ, ಔದ್ಯೋಗಿಕ ಸಮಸ್ಯೆಗಳಿಂದ ಸುತ್ತುವರಿದಿರುವ ದೇಶವೊಂದರಲ್ಲಿ ಹಾಲು ಚುನಾವಣಾ ಇಶ್ಶೂ ಆಗುವುದಕ್ಕೆ ಏನೆನ್ನಬೇಕು? ಮೆಹಂದಿಯ ಮೂಲಕ ಅಧಿಕಾರ ಪಡೆಯಲು ಪ್ರಯತ್ನಿಸುವುದನ್ನು ಹೇಗೆ ಸಮರ್ಥಿಸಿಕೊಳ್ಳಬಹುದು? ಚುನಾವಣೆಯು ಒಂದು ದೇಶದ ಪಾಲಿಗೆ ಮಹತ್ವಪೂರ್ಣ ಆಗಬೇಕಾದದ್ದು ಅಲ್ಲಿ ಚರ್ಚೆಗೀಡಾಗುವ ಇಶ್ಶೂಗಳು ಏನೇನು ಎಂಬುದರ ಆಧಾರದ ಮೇಲೆ. ಕೋಮುವಾದ ಯಾವುದೇ ದೇಶದ ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಮತೋಲನವನ್ನೇ ಕೆಡಿಸಿಬಿಡುತ್ತದೆ. ಒಂದು ದೇಶದ ಪ್ರಗತಿಯನ್ನು ತಡೆಗಟ್ಟಬೇಕಾದರೆ ಕೋಮುಗಲಭೆ ಮತ್ತು ಭ್ರಷ್ಟಾಚಾರವನ್ನು ಆ ದೇಶದಲ್ಲಿ ಪೋಷಿಸಿದರೆ ಧಾರಾಳ ಸಾಕು. ಜೊತೆಗೇ ಬೆಲೆಯೇರಿಕೆ, ನಿರುದ್ಯೋಗ, ಅಸಮಾನತೆ, ಭಯೋತ್ಪಾದನೆಗಳು.. ಒಂದು ದೇಶದ ಜನರ ಜೀವನ ಪ್ರೀತಿಯನ್ನೇ ಕಸಿದುಕೊಳ್ಳುತ್ತವೆ. ಇಂಥ ಸ್ಥಿತಿಯಲ್ಲಿ, ಜನರು ರಾಜಕೀಯ ಪಕ್ಷಗಳಿಂದ ಜವಾಬ್ದಾರಿಯುತ ನಿಲುವನ್ನು ಬಯಸುತ್ತಾರೆ. ಇಂಥ ಸಮಸ್ಯೆಗಳಿಂದ ದೇಶವನ್ನು ಮುಕ್ತಗೊಳಿಸುವುದಕ್ಕೆ ಪ್ರಮುಖ ರಾಜಕೀಯ ಪಕ್ಷಗಳು ಯಾವ ಪರಿಹಾರ ಮಾರ್ಗವನ್ನು ಸೂಚಿಸುತ್ತವೆ ಎಂದು ನಿರೀಕ್ಷೆಯಿಂದ ಕಾಯುತ್ತಾರೆ. ಈ ಎಲ್ಲ ವಿಷಯಗಳ ಮೇಲೆ ರಾಜಕೀಯ ಪಕ್ಷಗಳು ಒಂದೊಳ್ಳೆಯ ಚರ್ಚೆಯನ್ನು ತಮ್ಮ ಚುನಾವಣಾ ವೇದಿಕೆಗಳ ಮೂಲಕ ನಡೆಸುವುದನ್ನು ಅವರು ಕಾಯುತ್ತಿರುತ್ತಾರೆ. ಅಮೇರಿಕದಲ್ಲಿ ಅಧ್ಯಕ್ಷ  ಸ್ಥಾನದ ಅಭ್ಯರ್ಥಿಗಳ ಮಧ್ಯೆ ನೇರ ಟಿ.ವಿ. ಚರ್ಚೆಗಳು ನಡೆಯುತ್ತವೆ. ಆ ದೇಶದ ಪ್ರಮುಖ ಸಮಸ್ಯೆಗಳ ಕುರಿತಂತೆ ಅವರು ನಡೆಸುವ ಸಂವಾದವನ್ನು ಮತದಾರರು ಆಸಕ್ತಿಯಿಂದ ವೀಕ್ಷಿಸಿ, ಯಾರು ದೇಶವನ್ನು ಸಮರ್ಥವಾಗಿ ಮುನ್ನಡೆಸಲು ಯೋಗ್ಯರು ಎಂದು ತೀರ್ಮಾನಿಸುತ್ತಾರೆ. ಹಾಗಂತ, ಈ ದೇಶವು ಅಮೇರಿಕನ್ ಮಾದರಿಗಿಂತ ಭಿನ್ನ ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ, ನಿಜ. ಆದರೆ ಅದರರ್ಥ ಜನರಿಗೆ ಯಾವ ಲಾಭವನ್ನೂ ನೀಡದ ಚಹಾವೋ ಕಾಫಿಯೋ ಚರ್ಚೆಗೀಡಾಗಬೇಕು ಎಂದಲ್ಲವಲ್ಲ. ಚಾಯ್ ಪೆ ಚರ್ಚಾ ಅಭಿಯಾನದಿಂದ ನಮಗೆ ಮೋದಿಯ ಆರ್ಥಿಕ ನಿಲುವನ್ನೋ ವಿದೇಶಾಂಗ ನೀತಿಯನ್ನೋ ತಿಳಿಯಲು ಸಾಧ್ಯವೇ? ಎಲ್ಲೋ ಕುಳಿತ ಮೋದಿಯೊಂದಿಗೆ ಸಾರ್ವಜನಿಕರು ಚಾಯ್ ಪೆ ಚರ್ಚಾ ಕಾರ್ಯಕ್ರಮದಲ್ಲಿ ಮಾತಾಡುವುದು ಬರೇ ಕ್ರೇಜ್‍ಗಾಗಿ. ಅಲ್ಲಿ ದೇಶದ ಪ್ರಮುಖ ಇಶ್ಶೂಗಳಾಗಲಿ, ಪ್ರಗತಿಯ ಸಂಗತಿಗಳಾಗಲಿ ಗಂಭೀರ ಚರ್ಚೆಗೆ ಒಳಗಾಗಲು ಸಾಧ್ಯವೇ ಇಲ್ಲ. ತಾವರೆಯ ಮೆಹಂದಿ ಹಚ್ಚಿಕೊಂಡ ಮಹಿಳೆಯರು ಮೋದಿಗೆ ಓಟು ಹಾಕಲು ತೀರ್ಮಾನಿಸಿದರೆ ಅದಕ್ಕೆ ಆ ಕ್ಷಣದ ಪುಳಕ ಕಾರಣವೇ ಹೊರತು ಮೋದಿಯ ಯೋಗ್ಯತೆ ಅಲ್ಲ. ಹಾಲಿನಲ್ಲಿ ಓಟು ಹುಡುಕುತ್ತಿರುವ ರಾಹುಲ್ ಗಾಂಧಿಯ ಸ್ಥಿತಿಯೂ ಹೀಗೆಯೇ.
 ಅಸೋಸಿಯೇಟೆಡ್ ಪ್ರೆಸ್ (A P) ಕಳೆದ ವಾರ ಒಂದು ಸುದ್ದಿಯನ್ನು ಭಾರೀ ಮಹತ್ವ ಕೊಟ್ಟು ಪ್ರಕಟಿಸಿತ್ತು. ಇರಾನಿನ ನೂತನ ಅಧ್ಯಕ್ಷ  ಹಸನ್ ರೂಹಾನಿಯವರು ಕಳೆದ ವಾರ ತಮ್ಮ ಸಚಿವ ಸಂಪುಟದ ಮೊದಲ ಸಭೆ ನಡೆಸಿದರು. ಅದರಲ್ಲಿ ಅವರು ವಿಶ್ವದಲ್ಲಿಯೇ ಅತಿದೊಡ್ಡ ಅರೋಮಿಹ್ ಸರೋವರವನ್ನು ಉಳಿಸಿಕೊಳ್ಳುವ ಬಗ್ಗೆ ನಿರ್ಣಯವನ್ನು ಕೈಗೊಂಡರು. ಸರೋವರವು ಮತ್ತೆ ಹಿಂದಿನ ವೈಭವಕ್ಕೆ ಮರಳುವುದಕ್ಕಾಗಿ ತಜ್ಞರು ನೀಡಿದ ಸಲಹೆಗಳನ್ನು ಸಂಪುಟದ ಮುಂದಿಟ್ಟು ಅನುಮೋದಿಸಿಕೊಂಡರು. ವಾತಾವರಣದ ಏರುಪೇರು, ನದಿಗಳ ತಪ್ಪು ಬಳಕೆ, ತಪ್ಪು ನೀರಾವರಿಯಿಂದಾಗಿ ಸರೋವರದ 80% ಭಾಗ ಬಂಜರಾಗಿರುವುದನ್ನು ಅವರು ಸಂಪುಟದ ಮುಂದಿಟ್ಟರು. ನಿಜವಾಗಿ, ತನ್ನ ಪರಮಾಣು ವಿವಾದವನ್ನು ಸರಿಪಡಿಸಿಕೊಳ್ಳುವಂತೆ ಜಾಗತಿಕ ರಾಷ್ಟ್ರಗಳು ಒತ್ತಡ ಹಾಕುತ್ತಿರುವ ಸಂದರ್ಭದಲ್ಲಿ ಅದಕ್ಕಿಂತ ತನ್ನ ಜೀವದ್ರವವಾದ ಸರೋವರವನ್ನು ಉಳಿಸಿಕೊಳ್ಳುವುದಕ್ಕೆ ರೂಹಾನಿ ಆದ್ಯತೆ ಕೊಟ್ಟಿರುವುದನ್ನು ಅಸೋಸಿಯೇಟೆಡ್ ಪ್ರೆಸ್ ವಿಶೇಷ ಒತ್ತು ಕೊಟ್ಟು ಉಲ್ಲೇಖಿಸಿತ್ತು. ಒಂದು ರೀತಿಯಲ್ಲಿ, ಓರ್ವ ಪ್ರಬುದ್ಧ ಮತ್ತು ದೂರದೃಷ್ಟಿಯುಳ್ಳ ನಾಯಕ ತೆಗೆದುಕೊಳ್ಳಬಹುದಾದ ನಿರ್ಧಾರ ಇದು. ಒಂದು ವೇಳೆ ಪರಮಾಣು ವಿವಾದದ ಕುರಿತಂತೆ ಭಾವನಾತ್ಮಕ ನಿರ್ಣಯವೊಂದನ್ನು ಸಂಪುಟ ಸಭೆಯಲ್ಲಿ ರೂಹಾನಿ ಅಂಗೀಕರಿಸಿದ್ದಿದ್ದರೆ ಇರಾನಿನ ನಾಗರಿಕರು ಮೆಚ್ಚಿಕೊಳ್ಳುವುದಕ್ಕೆ ಸಾಧ್ಯವಿತ್ತು. ರಾಜಕೀಯವಾಗಿ ಲಾಭ ತಂದುಕೊಡುವುದಕ್ಕೂ ಅವಕಾಶವಿತ್ತು. ಆದರೆ ರೂಹಾನಿ ತಾತ್ಕಾಲಿಕ ಲಾಭವನ್ನೋ ಗಿಮಿಕ್ ನೀತಿಯನ್ನೋ ಆಯ್ಕೆ ಮಾಡಿಕೊಳ್ಳಲಿಲ್ಲ.
   ಏನೇ ಆಗಲಿ, ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಮೇಲೆ ಚುನಾವಣೆಗಳು ನಡೆಯಬೇಕೇ ಹೊರತು ಚಹಾ, ಕಾಫಿ, ಹಾಲು, ಮೆಹಂದಿಗಳ ಮೇಲೆ ಅಲ್ಲ. ಇವು ದೇಶದ ನಿಜವಾದ ವಿಷಯಗಳನ್ನು ಮರೆಸುವುದಕ್ಕೆ ರಾಜಕೀಯ ಪಕ್ಷಗಳು ಹೊರತಂದಿರುವ ನಕಲಿ ವಿಷಯಗಳು. ನಾವು ಇವುಗಳ ಆಕರ್ಷಣೆಯಿಂದ ಹೊರಬಂದು ಪ್ರಬುದ್ಧತೆಯನ್ನು ಮೆರೆಯಬೇಕಾಗಿದೆ. ಇಲ್ಲದಿದ್ದರೆ ನಾಳೆ `ಮತ್ತು' ಬರಿಸುವ ಚಹಾವನ್ನೋ ಹಾಲನ್ನೋ ಕೊಟ್ಟು ಅವರು ಓಟು ಕಸಿದುಕೊಂಡಾರು.

Wednesday, 19 February 2014

  ನಾಲ್ಕು ದಿನ ಸುದ್ದಿಗೀಡಾಗಿ ಮರೆತು ಹೋಗುವ ಕರೀಮ್ ಖಾನ್‍ಗಳು

   ಡ್ರೋನ್ ದಾಳಿಯಲ್ಲಿ ಮಗ ಝೆನುಲ್ಲಾ ಮತ್ತು ತಮ್ಮ ಆಸಿಫ್ ಇಕ್ಬಾಲ್‍ನನ್ನು ಕಳಕೊಂಡಿರುವ ಪಾಕಿಸ್ತಾನ ಕರೀಮ್ ಖಾನ್ ಎನ್ನುವ ವ್ಯಕ್ತಿ, ಫೆ. 15ರಂದು ವಿದೇಶಕ್ಕೆ ತೆರಳಬೇಕಿತ್ತು. ಅಲ್ಲಿ ಬ್ರಿಟನ್, ಡಚ್, ಜರ್ಮನಿಯ ಪಾರ್ಲಿಮೆಂಟ್ ಸದಸ್ಯರನ್ನು ಭೇಟಿಯಾಗಿ ಡ್ರೋನ್ ಕುರಿತಾದ ತನ್ನ ಅನುಭವವನ್ನು ಹಂಚಿಕೊಳ್ಳಬೇಕಿತ್ತು. ಅದಕ್ಕಾಗಿ ವೇದಿಕೆಯೂ ಸಿದ್ಧವಾಗಿತ್ತು. ಆದರೆ ಫೆ. 5ರಂದು ಅವರನ್ನು ಅಪಹರಿಸಲಾಗುತ್ತದೆ. ಡ್ರೋನ್ ದಾಳಿಯ ವಿರುದ್ಧ ಪಾಕಿಸ್ತಾನದ ಹೈಕೋರ್ಟ್‍ನಲ್ಲಿ ದಾವೆ ಹೂಡಿದ್ದ ಮತ್ತು ಡ್ರೋನ್ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ ಅವರ ಅಪಹರಣವು ಪಾಕ್‍ನಲ್ಲಿ ತೀವ್ರ ಕುತೂಹಲ ಕೆರಳಿಸುತ್ತದೆ. ಪಾಕ್‍ನ ಮಾನವ ಹಕ್ಕುಗಳ ಸಂಸ್ಥೆಯು ಲಾಹೋರ್ ಹೈಕೋರ್ಟ್‍ನಲ್ಲಿ ಈ ಬಗ್ಗೆ ದಾವೆ ಹೂಡುತ್ತದೆ. ಕರೀಮ್ ಖಾನ್‍ರನ್ನು ಪತ್ತೆ ಹಚ್ಚುವಂತೆ ನವಾಝ್ ಷರೀಫ್ ಸರಕಾರದ ಮೇಲೆ ಯುರೋಪಿಯನ್ ಯೂನಿಯನ್‍ನ ಹಲವು ಪಾರ್ಲಿಮೆಂಟ್ ಸದಸ್ಯರು ಒತ್ತಡ ಹಾಕುತ್ತಾರೆ. ಒಂದು ವಾರದೊಳಗೆ ಅವರನ್ನು ಕೋರ್ಟಿನಲ್ಲಿ ಹಾಜರುಗೊಳಿಸುವಂತೆ ಪೊಲೀಸರಿಗೆ ಕೋರ್ಟು ಆದೇಶಿಸುತ್ತದೆ. ಕೊನೆಗೂ ಫೆ. 14ರಂದು ಕರೀಮ್ ಖಾನ್ ಬಿಡುಗಡೆಗಳ್ಳುತ್ತಾರೆ. ಪೊಲೀಸ್ ಸಮವಸ್ತ್ರದಲ್ಲಿದ್ದವರು ತನ್ನನ್ನು ಅಪಹರಿಸಿದ್ದು ಮತ್ತು ಯುರೋಪಿನ ಸಂಸತ್ ಸದಸ್ಯರ ಮುಂದೆ ತಾನು ಹೇಳಲಿರುವ ವಿಷಯಗಳ ಬಗ್ಗೆ ವಿಚಾರಿಸಿದ್ದು.. ಎಲ್ಲವನ್ನೂ ಹೇಳಿಕೊಳ್ಳುತ್ತಾರೆ.
 ನಿಜವಾಗಿ, ಕರೀಮ್ ಖಾನ್ ಅನ್ನುವ ಹೆಸರನ್ನು ನಾವು ಪಾಕಿಸ್ತಾನಕ್ಕೆ ಮಾತ್ರ ಸೀಮಿತಗೊಳಿಸಿ ನೋಡಬೇಕಾದ ಅಗತ್ಯ ಇಲ್ಲ. ಜಗತ್ತಿನ ಯಾವ ದೇಶದಲ್ಲೂ ನಡೆಯಬಹುದಾದ ಘಟನೆ ಇದು. ಮಾಹಿತಿ ಹಕ್ಕು ಕಾರ್ಯಕರ್ತರು ನಮ್ಮ ದೇಶದಲ್ಲಿ ಪಡುತ್ತಿರುವ ಪಾಡು ಮತ್ತು ಎದುರಿಸುತ್ತಿರುವ ಸವಾಲುಗಳನ್ನೊಮ್ಮೆ ಕಲ್ಪಿಸಿಕೊಳ್ಳಿ. ಕೆಲವರು ಕಾರ್ಯಕರ್ತರು ಈಗಾಗಲೇ ಹತ್ಯೆಗೀಡಾಗಿದ್ದಾರೆ. ಅನೇಕಾರು ಮಂದಿ ಜೀವ ಬೆದರಿಕೆಗೆ ಒಳಗಾಗಿದ್ದಾರೆ. ಮರಳು ಮಾಫಿಯಾ, ತೈಲ ಮಾಫಿಯಾದಂಥ ಹೊಸ ಹೊಸ ಪದಗುಚ್ಛಗಳನ್ನು ನಾವು ಆಗಾಗ ಆಲಿಸುತ್ತಿರುತ್ತೇವೆ. ಬಲಾಢ್ಯ ಶಕ್ತಿಗಳ ವಿರುದ್ಧದ ಹೋರಾಟದಲ್ಲಿ ಎದುರಾಗಬಹುದಾದ ಅಪಾಯಗಳು ಇವು. ಅನೇಕ ಬಾರಿ ಅಪಘಾತಗಳು ನಿಜವಾಗಿ ಅಪಘಾತಗಳೇ ಆಗಿರುವುದಿಲ್ಲ. ಹೊರನೋಟಕ್ಕೆ ಸಹಜ ಸಾವಿನಂತೆ ಕಾಣುವ ಸಾವು ಸಹಜ ಸಾವೇ ಆಗಿರುವುದಿಲ್ಲ. ಎಲ್ಲದರ ಹಿಂದೆಯೂ ಕಾಣದ ಕೈಗಳು ಕೆಲಸ ಮಾಡಿರುತ್ತವೆ. ಕರೀಮ್ ಖಾನ್‍ರ ಪ್ರಕರಣವನ್ನೇ ಎತ್ತಿಕೊಳ್ಳಿ. ಡ್ರೋನ್‍ನ ವಿರುದ್ಧ ಪ್ರಬಲ ದನಿಯಲ್ಲಿ ಮಾತಾಡುತ್ತಲೇ ನವಾಝ್ ಷರೀಫ್ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಡ್ರೋನ್, ಭಯೋತ್ಪಾದನೆಯನ್ನು ನಾಶ ಮಾಡುವುದರ ಬದಲು ಸೃಷ್ಟಿ ಮಾಡುತ್ತಿದೆ ಎಂದು ಆರೋಪಿಸಿತ್ತು. ಒಂದು ರೀತಿಯಲ್ಲಿ, ಪಾಕಿಸ್ತಾನದಲ್ಲಿ ಆಗಾಗ ಸ್ಫೋಟಗೊಳ್ಳುವ ಬಾಂಬುಗಳ ಬಗ್ಗೆ ಮಾಧ್ಯಮಗಳಲ್ಲಿ ಯಾವ ಬಗೆಯ ಚರ್ಚೆಯಾಗುತ್ತದೋ ಅದರ ಅರ್ಧ ಭಾಗದಷ್ಟೂ ಡ್ರೋನ್‍ನ ಬಗ್ಗೆ ಮತ್ತು ಅದು ಉಂಟು ಮಾಡುವ ನಾಶದ ಬಗ್ಗೆ ಚರ್ಚೆಯಾಗುತ್ತಿಲ್ಲ. ಕಳೆದೈದು ವರ್ಷಗಳಲ್ಲಿ ಅಮೇರಿಕ ಹಾರಿಸಿದ ಡ್ರೋನ್ ಗಳಿಗೆ ಸಾವಿಗೀಡಾದ ಅಮಾಯಕ ನಾಗರಿಕರ ಸಂಖ್ಯೆಯನ್ನು ನೋಡಿದರೂ ಸಾಕು, ಕರೀಮ್ ಖಾನ್ ಯಾಕೆ ಅಪಹರಣಗೊಳ್ಳುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ. ಆದರೆ ಬಾಂಬ್ ಸ್ಫೋಟಗಳನ್ನು ಮನುಷ್ಯ ವಿರೋಧಿಯಾಗಿಯೂ ಡ್ರೋನ್ ದಾಳಿಯನ್ನು ಭಯೋತ್ಪಾದನಾ ವಿರೋಧಿಯಾಗಿಯೂ ಬಿಂಬಿಸುವಲ್ಲಿ ಯಶಸ್ವಿಯಾಗಿರುವ ಬಲಾಢ್ಯ ಶಕ್ತಿಗಳು, ಕರೀಮ್ ಖಾನ್‍ರಂಥವರನ್ನು ಸಹಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ರಿಲಯನ್ಸ್ ವಿರುದ್ಧ ಮಾತಾಡಿರುವುದಕ್ಕೆ ತಾನು ಅಧಿಕಾರ ಕಳಕೊಳ್ಳಬೇಕಾಯಿತು ಎಂದು ಅರವಿಂದ್ ಕೇಜ್ರಿವಾಲ್ ಹೇಳಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
 ಒಂದು ವೇಳೆ, ಬ್ರಿಟನ್‍ನ ಮಾಜಿ ರಕ್ಷಣಾ ಸಚಿವ ಟೋಮ್ ವಾಟ್ಸನ್ ಸಹಿತ ಜರ್ಮನಿ, ಡಚ್ ಇನ್ನಿತರ ಯುರೋಪಿಯನ್ ರಾಷ್ಟ್ರಗಳ ಪ್ರಮುಖ ಸಂಸದರು ಕರೀಮ್ ಖಾನ್‍ರ ಪರ ದನಿ ಎತ್ತದೇ ಇರುತ್ತಿದ್ದರೆ ಆ ವ್ಯಕ್ತಿಯ ಸ್ಥಿತಿ ಏನಾಗುತ್ತಿತ್ತು? ಹಾಗಂತ, ಪ್ರಕರಣ ಪಾಕಿಸ್ತಾನದಲ್ಲಿ ನಡೆದಿದೆಯೆಂದು ನಾವು ಸುಮ್ಮನಿರಬೇಕಿಲ್ಲ. ಬಹುರಾಷ್ಟ್ರೀಯ ಕಂಪೆನಿಗಳ ಜನವಿರೋಧಿ ಯೋಜನೆ ಗಳ ವಿರುದ್ಧ ನಮ್ಮ ದೇಶದಲ್ಲಿ ನಡೆದಿರುವ ಪ್ರತಿಭಟನೆಗಳನ್ನು ನಾವು ಅವಲೋಕನಕ್ಕೆ ಒಳಪಡಿಸುವುದಾದರೆ ಪಾಕ್‍ನ ಕರೀಮ್ ಖಾನ್ ನಮ್ಮವರೂ ಆಗಿಬಿಡುತ್ತಾರೆ. ಅಲ್ಲಿ ಕರೀಮ್ ಖಾನ್‍ರನ್ನು ಅಪಹರಿಸಿದಂತೆ ಇಲ್ಲಿ ಪ್ರತಿಭಟನೆಗಳನ್ನೇ ಬಗ್ಗುಬಡಿಯಲಾಗಿದೆ ಅಥವಾ ದಿಕ್ಕು ತಪ್ಪಿಸಲಾಗಿದೆ. ಭೋಪಾಲ್ ಅನಿಲ ದುರಂತದಿಂದ ಹಿಡಿದು ಇತ್ತೀಚಿನ ವಿಶೇಷ ಆರ್ಥಿಕ ವಲಯದವರೆಗೆ ಹೆಚ್ಚಿನ ಹೋರಾಟಗಳೆಲ್ಲ ವೈಫಲ್ಯಗಳಲ್ಲೇ ಅಂತ್ಯ ಕಂಡಿವೆ. ಕುಡಂಕುಲಂ ಅಣು ಯೋಜನೆಯ ವಿರುದ್ಧ ನಡೆದ ಹೋರಾಟವನ್ನು ವ್ಯವಸ್ಥೆ ಹೇಗೆ ಬಗ್ಗುಬಡಿಯಿತೆಂಬುದು ನಮಗೆ ಗೊತ್ತು. ಆ ಹೋರಾಟದ ನೇತೃತ್ವ ವಹಿಸಿದವರಿಗೆ ವಿದೇಶಿ ನೆರವಿನ ಆರೋಪವನ್ನು ಹೊರಿಸಿ ಪ್ರತಿಭಟನೆಯನ್ನೇ ಹತ್ತಿಕ್ಕಲಾಯಿತು. ನಿಜವಾಗಿ, ಬಲಾಢ್ಯ ಶಕ್ತಿಗಳು ಯಾವುದೇ ಯೋಜನೆಯ ನೀಲನಕ್ಷೆ ಮಾಡುವಾಗಲೇ ಅದರ ವಿರುದ್ಧ ನಡೆಯಬಹುದಾದ ಪ್ರತಿಭಟನೆ ಮತ್ತು ಹತ್ತಿಕ್ಕಬಹುದಾದ ಉಪಾಯಗಳನ್ನು ಲೆಕ್ಕ ಹಾಕಿರುತ್ತವೆ. ಎಷ್ಟು ವರ್ಷಗಳ ವರೆಗೆ ಪ್ರತಿಭಟನೆ ನಡೆಯಬಹುದು ಮತ್ತು ಅದಕ್ಕಾಗಿ ಮಾಡಿ ಕೊಳ್ಳಬೇಕಾದ ತಯಾರಿಗಳ ಬಗ್ಗೆಯೂ ಯೋಜನೆ ಹಾಕಿಕೊಂಡಿರುತ್ತವೆ. ಹೀಗೆ ಜನಪರ ಹೋರಾಟಗಳನ್ನು ಹಂತ ಹಂತವಾಗಿ ದುರ್ಬಲಗೊಳಿಸುತ್ತಾ ಅವು ಸಾಗುತ್ತವೆ. ರಾಜೀವ್ ಗಾಂಧಿಯವರ ಕಾಲದಲ್ಲಿ ಸಹಿ ಹಾಕಲಾದ ಕುಡಂಕುಲಂ ಯೋಜನೆ ಸಾಗಿ ಬಂದ ದಾರಿಯೇ ಇದನ್ನು ಸ್ಪಷ್ಟಪಡಿಸಬಲ್ಲುದು.  
   ಏನೇ ಆಗಲಿ, ಬಲಾಢ್ಯ ಶಕ್ತಿಗಳ ವಿರುದ್ಧ ದನಿ ಎತ್ತಿದರೆ ಏನಾಗಬಹುದು ಅನ್ನುವುದಕ್ಕೆ ಕರೀಮ್ ಖಾನ್ ಒಂದು ಉತ್ತಮ ಉದಾಹರಣೆ. ಇದು ಪಾಕಿಸ್ತಾನದಲ್ಲಿ ಮಾತ್ರ ನಡೆಯುತ್ತಿರುವುದಲ್ಲ. ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಇಂಥ ಕರೀಮ್ ಖಾನ್‍ಗಳು ಸೃಷ್ಟಿಯಾಗುತ್ತಲೇ ಇದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರಾಗಿ, ಮರಳು ಮಾಫಿಯಾವನ್ನು ಎದುರಿಸುವವರಾಗಿ, ಜನಪರ ಹೋರಾಟಗಾರರಾಗಿ ಅವರು ಕಾಣಿಸಿಕೊಳ್ಳುತ್ತಿರುತ್ತಾರೆ. ಒಂದು ದಿನ ಅವರು ಕರೀಮ್ ಖಾನ್‍ರಂತೆ ಅಪಹರಣಕ್ಕೋ ಹತ್ಯೆಗೋ ಈಡಾಗುತ್ತಾರೆ. ನಾಲ್ಕು ದಿನ ಇಡೀ ಪ್ರಕರಣ ಸುದ್ದಿಗೀಡಾಗುತ್ತದೆ. ಬಳಿಕ ಸದ್ದಿಲ್ಲದೇ ಸರಿದು ಹೋಗುತ್ತದೆ. ನಿಜವಾಗಿ, ಕರೀಮ್ ಖಾನ್ ಅಂಥದ್ದೊಂದು ಸಾಧ್ಯತೆಯನ್ನು ಮತ್ತೊಮ್ಮೆ ನೆನಪಿಸಿದರು ಅಷ್ಟೇ.

Wednesday, 12 February 2014

ಬಾವಿಕಟ್ಟೆಯಲ್ಲಿ ಕುಳಿತು ಓದುವ ಮಗು

    1. ಈಜಲು ತೆರಳಿದ ವಿದ್ಯಾರ್ಥಿ ನಾಪತ್ತೆ.
 2. ಬಾವಿಗೆ ಪಂಪ್ ಅಳವಡಿಸುವ ಸಂದರ್ಭ ಬಾವಿಗೆ ಬಿದ್ದು ಕಾರ್ಮಿಕ ಸಾವು.
 3. ವಿದ್ಯುತ್ ಶಾಕ್ ತಗುಲಿ ಕಾರ್ಮಿಕ ಮೃತ್ಯು.
 4. ವಾಹನ ಅಪಘಾತದಲ್ಲಿ ಮೃತಪಟ್ಟ ಮಕ್ಕಳು..
 ಇಂಥ ಸುದ್ದಿಗಳು ಪತ್ರಿಕೆಗಳಲ್ಲಿ ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ. ಮಾತ್ರವಲ್ಲ, ಇಂಥ ಸುದ್ದಿಗಳನ್ನು ಪ್ರಕಟಿಸಲಿಕ್ಕೆಂದೇ ಪತ್ರಿಕೆಗಳು ಪ್ರತ್ಯೇಕ ಪುಟಗಳನ್ನೂ ಮೀಸಲಿಟ್ಟಿರುತ್ತವೆ. ಇಂಥ ಪುಟಗಳಲ್ಲಿ ಒಂದು ದಿನ ಕಾಣಿಸಿಕೊಂಡು ಆ ಬಳಿಕ ಶಾಶ್ವತವಾಗಿ ಕಣ್ಮರೆಯಾಗುವ ಇಂಥ ಜೀವಗಳು ಸಾರ್ವಜನಿಕ ಚರ್ಚೆಗೆ ಒಳಗಾಗುವುದು ತೀರಾ ಕಡಿಮೆ. ನಾವು ಪತ್ರಿಕೆಗಳನ್ನು ಎತ್ತಿಕೊಂಡರೆ ಅಥವಾ ಟಿ.ವಿ. ಚಾನೆಲ್‍ಗಳನ್ನು ತಿರುಗಿಸಿದರೆ ಅಲ್ಲೆಲ್ಲಾ ಕೇಜ್ರಿವಾಲ್, ಮೋದಿ, ರಾಹುಲ್‍ಗಳೇ ತುಂಬಿರುತ್ತಾರೆ. ಅವರ ಭಾಷಣಗಳು, ಆ ಭಾಷಣಗಳ ಮೇಲಿನ ಚಾವಡಿ ಚರ್ಚೆಗಳು ಮತ್ತು ವಿಶ್ಲೇಷನಾತ್ಮಕ ಬರಹಗಳು ಅವನ್ನು ಆಕ್ರಮಿಸಿಕೊಂಡಿರುತ್ತವೆ. ನರೇಂದ್ರ ಮೋದಿಯ ಯೋಗ್ಯತೆ ಏನೆಂಬುದನ್ನು ಹೇಳುವುದು ರಾಹುಲ್ ಗಾಂಧಿ. ರಾಹುಲ್ ಗಾಂಧಿ ಎಷ್ಟು ಅಪಕ್ವ ಎಂದು ಬಣ್ಣಿಸುವುದು ನರೇಂದ್ರ ಮೋದಿ. ಕೇಜ್ರಿವಾಲ್ ಯಾಕೆ ಅಸೂಕ್ತ ಎಂದು ವಿವರಿಸುವುದು ಅರುಣ್ ಜೇಟ್ಲಿ.. ಹೀಗೆ ತಮ್ಮನ್ನು ಬಿಟ್ಟು ಇತರೆಲ್ಲರ ಯೋಗ್ಯತೆ, ಅರ್ಹತೆಗಳನ್ನು ಪಟ್ಟಿ ಮಾಡುತ್ತಾ ತಿರುಗುತ್ತಿರುವ ಈ ಮಂದಿ, ಮಾಧ್ಯಮಗಳ ಮುಖಪುಟದಲ್ಲಿ ಸದಾ ಠಿಕಾಣಿ ಹೂಡಿರುತ್ತಾರೆ. ಈ ಕಾರಣದಿಂದಲೋ ಏನೋ ನಮ್ಮ ಚರ್ಚೆಗಳೂ ಇವರ ಸುತ್ತಲೇ ಸುತ್ತುತ್ತಿರುತ್ತವೆ. ಪ್ರತಿದಿನ ಮೂರೋ ನಾಲ್ಕೋ ರೂಪಾಯಿಯನ್ನು ತೆತ್ತು ಖರೀದಿಸುವ ಪತ್ರಿಕೆಯೊಂದು ನಮ್ಮ ಇಡೀ ದಿನದ ಚರ್ಚಾ ವಿಷಯವನ್ನು ನಿರ್ಧರಿಸಿಬಿಡುತ್ತದೆ ಅಂದರೆ ಏನೆನ್ನಬೇಕು? ದಿನದ 24 ಗಂಟೆಗಳಲ್ಲಿ ಹೆಚ್ಚಿನ ಸಮಯವನ್ನು ನಾವು ರಾಜಕೀಯ ಮಾತುಕತೆಗಳಿಗಾಗಿಯೇ ಮೀಸಲಿಟ್ಟಿರುವುದಕ್ಕೆ ಮಾಧ್ಯಮಗಳ ಹೊರತು ಬೇರೆ ಯಾವುದು ಕಾರಣ ಆಗಿರಬಹುದು? ಅಷ್ಟಕ್ಕೂ, ರಾಜಕಾರಣಿಗಳು, ಕ್ರೀಡಾಪಟುಗಳು ಮತ್ತು ಸಿನಿಮಾ ತಾರೆಯರನ್ನು ಕುತೂಹಲದ ವರ್ಗವಾಗಿ ಬಿಂಬಿಸಿದ್ದು ಯಾರು? ಈ ವರ್ಗದಲ್ಲಿ ಯಾರು, ಏನು ಮಾತಾಡಿ ಸುದ್ದಿಯಾಗುತ್ತದಲ್ಲ ಮತ್ತು ಅದನ್ನು ಓದುವುದಕ್ಕೆ ಜನಸಾಮಾನ್ಯರು ಆಸಕ್ತಿ ತೋರುತ್ತಾರಲ್ಲ, ಯಾಕೆ? ಇವರ ಸುತ್ತ ಇಂಥದ್ದೊಂದು ಪ್ರಭಾವಳಿಯನ್ನು ಯಾರು ಹುಟ್ಟು ಹಾಕಿದ್ದಾರೆ? ಒಂದು ವೇಳೆ, ಈ ಮೂರು ವರ್ಗಕ್ಕೆ ಸಂಬಂಧಿಸಿದ ಸುದ್ದಿಯನ್ನು ಪತ್ರಿಕೆಗಳಿಂದ ತೆಗೆದು ಹಾಕಿದರೆ, ಪತ್ರಿಕೆಗಳ ಬಹುತೇಕ ಎಲ್ಲ ಪುಟಗಳೂ ಖಾಲಿಯಾಗಿ ಕಾಣಿಸಬಹುದು. ಹಾಗಂತ, ಮಾಧ್ಯಮಗಳು ಜನಸಾಮಾನ್ಯರನ್ನು ಸಂಪೂರ್ಣ ನಿರ್ಲಕ್ಷಿಸಿವೆ ಎಂದಲ್ಲ. ಆ ಮಂದಿಯ ಸುತ್ತ ಅಂಥದ್ದೊಂದು ಕುತೂಹಲ ಸಾರ್ವಜನಿಕವಾಗಿಯೇ ಇವತ್ತು ಹುಟ್ಟಿಕೊಂಡು ಬಿಟ್ಟಿದೆ. ಇಂಥದ್ದೊಂದು ಕ್ರೇಜ್ ಅನ್ನು ಅವರ ಸುತ್ತ ಯಾರು ಹರಡಿ ಬಿಟ್ಟರೋ, ಯಾವಾಗ ಅದರ ಆರಂಭ ಆಯಿತೋ ಗೊತ್ತಿಲ್ಲ. ಆದರೆ ಇವತ್ತು ಅವರು ನಮ್ಮ ಚರ್ಚೆಯ ಅನಿವಾರ್ಯ ಭಾಗವಾಗಿ ಬಿಟ್ಟಿದ್ದಾರೆ. ಅವರು ಆಡಿದ ಮಾತಿಗೆ, ನೋಡಿದ ನೋಟಕ್ಕೆ, ನಡೆದ ದಾರಿಗೆ ನೂರು ಅರ್ಥಗಳನ್ನು ಕಲ್ಪಿಸಿ ವಿಶ್ಲೇಷಿಸಬೇಕಾದ ಅನಿವಾರ್ಯತೆಗೆ ಮಾಧ್ಯಮಗಳು ತಲುಪಿಬಿಟ್ಟಿವೆ. ಇವುಗಳ ನಡುವೆ, ನಿಜವಾಗಿಯೂ ಚರ್ಚಿಸಲೇಬೇಕಾದ ಜನಸಾಮಾನ್ಯರ ನೂರಾರು ಸಂಗತಿಗಳು ಚರ್ಚೆಗೆ ಒಳಗಾಗದೆಯೇ ಸತ್ತು ಹೋಗುತ್ತಿವೆ. ಅವು ಮೋದಿ, ರಾಹುಲ್, ಕೇಜ್ರಿವಾಲ್‍ರ ಆರೋಪ-ಪ್ರತ್ಯಾರೋಪಗಳಿಗಿಂತ ಮಹತ್ವಪೂರ್ಣ ಸಂಗತಿಗಳಾಗಿದ್ದರೂ ಮಾಧ್ಯಮಗಳು ಜನಸಾಮಾನ್ಯರನ್ನು ಮುಖಪುಟಕ್ಕೆ ಪರಿಗಣಿಸುವುದಿಲ್ಲ. ಮಾಧ್ಯಮಗಳು ಯಾವುದಕ್ಕೆ ಮಹತ್ವ ಕೊಡುವುದಿಲ್ಲವೋ ಅವಕ್ಕೆ ಓದುಗರೂ ಮಹತ್ವ ಕೊಡುವುದಿಲ್ಲವಾದ್ದರಿಂದ ಸಹಜವಾಗಿ ಜನಸಾಮಾನ್ಯರಿಗೆ ಸಂಬಂಧಿಸಿದ ಸುದ್ದಿಗಳು ಅವರ ಕುಟುಂಬ ಮತ್ತು ಆಯಾ ಪ್ರದೇಶಕ್ಕಷ್ಟೇ ಸೀಮಿತವಾಗಿ ಬಿಡುತ್ತದೆ. ಆ ಮೂಲಕ ಒಂದಿಡೀ ಸಮಾಜವನ್ನು ಜಾಗೃತಗೊಳಿಸಬಲ್ಲಂಥ ಅವಕಾಶವೂ ಕೈತಪ್ಪಿ ಹೋಗುತ್ತದೆ. ಮೊನ್ನೆ ಸಾವಿಗೀಡಾದ ವಿದ್ಯಾರ್ಥಿನಿಯೋರ್ವಳು ಮಾಧ್ಯಮಗಳ ಇಂಥ ಧೋರಣೆಯನ್ನು ಮತ್ತೊಮ್ಮೆ ಪ್ರಶ್ನೆಗೀಡು ಮಾಡಿದ್ದಾಳೆ.
 ಬಾವಿಕಟ್ಟೆಯಲ್ಲಿ ಕೂತು ಪರೀಕ್ಷೆಗೆ ಓದುತ್ತಿದ್ದ ಉಡುಪಿಯ ಉದ್ಯಾವರ ಸಮೀಪದ ಬೋಳಾರಗುಡ್ಡೆಯ ಸನಾ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ತಾಯಿ ಚಹಾ ಕುಡಿಯಲೆಂದು ಕರೆಯುತ್ತಾರೆ. ಆಕೆ ಬಾವಿಕಟ್ಟೆಗೆ ಹಾಕಿರುವ ಹಗ್ಗದ ಮೇಲೆ ಬಲ ಹಾಕಿ ಮೇಲೇಳಲು ಪ್ರಯತ್ನಿಸುತ್ತಾಳೆ. ಆದರೆ ಆಯ ತಪ್ಪಿದ ಆಕೆ ಬಾವಿಗೆ ಬಿದ್ದು ಸಾವಿಗೀಡಾಗಿದ್ದಾಳೆ.
 ನಿಜವಾಗಿ, ಇಂಥ ಅನಿರೀಕ್ಷಿತ ಸಾವುಗಳು ಇವತ್ತು ಯಾವುದಾದರೊಂದು ಪ್ರದೇಶಕ್ಕೆ ಸೀಮಿತವಾಗಿ ಉಳಿದಿಲ್ಲ. ಪತ್ರಿಕೆಗಳ ಒಳಪುಟಗಳನ್ನು ನೋಡಿದರೆ ನಮ್ಮನ್ನು ಒಂದು ಕ್ಷಣ ಆಘಾತಕ್ಕೆ ಒಳಪಡಿಸುವ, ‘ಛೆ' ಎಂಬ ಉದ್ಗಾರಕ್ಕೆ ಬಲವಂತಪಡಿಸುವ ಸುದ್ದಿಗಳು ಹತ್ತಾರು ಇರುತ್ತವೆ. ಆದರೆ ಅವುಗಳು ಪತ್ರಿಕೆಗಳ ಒಳಪುಟಗಳಲ್ಲಿ ಪ್ರಕಟ ಆಗುವುದರಿಂದ ಓದುಗರ ಗಮನವನ್ನು ಸೆಳೆಯುವುದಕ್ಕೆ ಯಶಸ್ವಿಯಾಗುತ್ತಿಲ್ಲ. ಅಲ್ಲದೇ ಒಳಪುಟಗಳೆಂದರೆ ಮುಖಪುಟಗಳಂತೆ ಅಲ್ಲವಲ್ಲ. ಅದು ಜಿಲ್ಲೆಯಿಂದ ಜಿಲ್ಲೆಗೆ ಬದಲಾಗುತ್ತಿರುತ್ತದೆ. ಒಂದು ವೇಳೆ ಸನಾ ನಮ್ಮ ಮಾಧ್ಯಮಗಳ ಪಾಲಿಗೆ ಬ್ರೇಕಿಂಗ್ ನ್ಯೂಸ್ ಆಗಿರುತ್ತಿದ್ದರೆ ಸಾರ್ವಜನಿಕರನ್ನು ಅದು ಹೇಗೆ ತಟ್ಟುತ್ತಿತ್ತು? ಯಾವ ಬಗೆಯ ಚರ್ಚೆಗೆ ಅದು ಕಾರಣವಾಗುತ್ತಿತ್ತು? ತನ್ನ ಮಗು ತನ್ನ ಕಣ್ಣೆದುರೇ ಬಾವಿಗೆ ಬೀಳುವುದನ್ನು ಓರ್ವ ತಾಯಿ ಹೇಗೆ ಸಹಿಸಬಲ್ಲಳು ಎಂಬ ಭಾವನಾತ್ಮಕ ವಿಷಯವಷ್ಟೇ ಅಲ್ಲಿ  ಚರ್ಚೆಗೆ ಒಳಗಾಗುತ್ತಿದ್ದುದಲ್ಲ. ಮಗುವನ್ನು ಆ ಸ್ಥಿತಿಗೆ ದೂಡಿದ ಪರೀಕ್ಷೆ ಮತ್ತು ಅದರ ಒತ್ತಡಗಳೂ ಚರ್ಚೆಗೊಳಗಾಗುತ್ತಿತ್ತಲ್ಲವೇ? ಪರೀಕ್ಷೆ ಯಾವಾಗಲೂ ವಿದ್ಯಾರ್ಥಿಗಳನ್ನು ಒತ್ತಡಕ್ಕೆ ಸಿಲುಕಿಸಿರುತ್ತದೆ. ಆ ಸಂದರ್ಭದಲ್ಲಿ ಅವರ ಮನಸು, ದೇಹ ಸಹಜ ಆಗಿರುವುದಿಲ್ಲ. ಹಾಗಂತ, ಇಂದಿನ ದಿನಗಳಲ್ಲಿ ಪರೀಕ್ಷೆ ಎಂದರೆ ಬರೇ ಪಾಸು-ಫೇಲು ಮಾತ್ರ ಅಲ್ಲವಲ್ಲ. ಶಿಕ್ಷಕರು ಮತ್ತು ಮನೆಯವರ ಒತ್ತಡ, ಗೆಳೆಯರ ನಡುವಿನ ಸ್ಪರ್ಧೆ.. ಹೀಗೆ ಎಲ್ಲವೂ ಒಟ್ಟಾಗಿರುವ ವಾತಾವರಣವದು. ಒಂದು ರೀತಿಯಲ್ಲಿ, ವಿದ್ಯಾರ್ಥಿಗಳು ಒತ್ತಡ ಎಂಬ ಪ್ರೆಶರ್ ಕುಕ್ಕರ್‍ನಲ್ಲಿ ಕುಳಿತಿರುತ್ತಾರೆ. ಹೆಚ್ಚು ಅಂಕ ಪಡೆಯಬೇಕು, ಇಷ್ಟು ಅಂಕ ಪಡೆದರೆ ಇಂತಿಂಥ ಕಾಲೇಜಿನಲ್ಲಿ ಇಂತಿಂಥ ಕೋರ್ಸ್‍ಗೆ ಸೇರ್ಪಡೆ ಆಗಬಹುದು ಎಂಬೆಲ್ಲ ಲೆಕ್ಕಾಚಾರಗಳನ್ನು ಹಾಕಿರುತ್ತಾರೆ. ಅದಕ್ಕೆ ಪೂರಕವಾಗಿ ಹೆತ್ತವರು ಆಗಾಗ ತಮ್ಮ ಕುಟುಂಬದಲ್ಲಿ ಉನ್ನತ ಉದ್ಯೋಗದಲ್ಲಿರುವ ಬುದ್ಧಿವಂತ ಮಕ್ಕಳ ಕತೆಗಳನ್ನು ಹೇಳುತ್ತಿರುತ್ತಾರೆ. ಹೀಗೆ ತಮ್ಮ ಹೆತ್ತವರದ್ದೋ ಶಿಕ್ಷಕರದ್ದೋ ಗುರಿಗಳನ್ನು ಪೂರ್ತಿ ಮಾಡುವುದಕ್ಕಾಗಿ ಕನಸುಗಳೊಂದಿಗೆ ಬದುಕುವ ಮಕ್ಕಳು ಪರೀಕ್ಷೆ ತಯಾರಿಯ ಸಂದರ್ಭದಲ್ಲಂತೂ ವಿಪರೀತ ಒತ್ತಡಕ್ಕೆ ಒಳಗಾಗುತ್ತಾರೆ. ಈ ಒತ್ತಡದಲ್ಲಿ ತಾವು ಪರೀಕ್ಷೆಗೆ ತಯಾರಿ ನಡೆಸುವುದಕ್ಕಾಗಿ ಆಯ್ಕೆ ಮಾಡಿಕೊಳ್ಳುವ ಸ್ಥಳ, ಆಹಾರ, ಬಟ್ಟೆಗಳ ಬಗ್ಗೆಯೂ ಅವರು ಗಂಭೀರವಾಗಿರುವುದಿಲ್ಲ. ಆದ್ದರಿಂದಲೇ ಕೆಲವೊಮ್ಮೆ ಆಘಾತಕಾರಿ ಘಟನೆಗಳು ನಡೆದು ಬಿಡುತ್ತವೆ. ಸನಾ ಅದರ ಒಂದು ಉದಾಹರಣೆ ಅಷ್ಟೇ.
   ಮಕ್ಕಳು ಯಾವುದೇ ಹೆತ್ತವರ ಪಾಲಿಗೆ ದೊಡ್ಡದೊಂದು ಭರವಸೆಯಾಗಿದ್ದಾರೆ. ಅಂಥ ಮಕ್ಕಳನ್ನು ಕಣ್ಣೆದುರೇ ಕಳಕೊಳ್ಳುವುದು ಯಾವ ಹೆತ್ತವರಿಗೇ ಆಗಲಿ ಸಹಿಸಲಸಾಧ್ಯವಾದ ನೋವು ಕೊಡಬಲ್ಲುದು. ಆದರೆ ಅದರಾಚೆಗೆ ಇನ್ನೊಂದು ಗಂಭೀರ ಸಂಗತಿಯಿದೆ. ಅದೇನೆಂದರೆ, ಪರೀಕ್ಷಾ ತಯಾರಿಯ ವೇಳೆ ಮಕ್ಕಳ ಬಗ್ಗೆ ಪೋಷಕರು ಗಂಭೀರ ಎಚ್ಚರಿಕೆಯನ್ನು ವಹಿಸಿಕೊಳ್ಳಬೇಕು  ಎಂಬುದು. ಅವರ ಚಟುವಟಿಕೆಯನ್ನು ಹೆತ್ತವರು ಗಮನಿಸುತ್ತಿರಬೇಕು. ಒತ್ತಡ ರಹಿತ ವಾತಾವರಣವನ್ನು ಮನೆಯಲ್ಲಿ ನಿರ್ಮಿಸಬೇಕು. ಪರೀಕ್ಷೆಯಲ್ಲಿ ಮಗು ಇವತ್ತು ಫೇಲ್ ಆದರೆ ನಾಳೆ ಪಾಸ್ ಆಗಬಹುದು. ಆದರೆ ಮಗುವನ್ನೇ ಕಳಕೊಂಡರೆ ಆ ಅವಕಾಶವೇ ಇರುವುದಿಲ್ಲವಲ್ಲ.

Wednesday, 5 February 2014

ಪ್ರಧಾನಿ ಅಂಬಾನಿ, ಮುಖ್ಯಮಂತ್ರಿ ಮೂರ್ತಿ?

    ಮನ್‍ಮೋಹನ್ ಸಿಂಗ್, ಮೋದಿ, ಕೇಜ್ರಿವಾಲ್, ಮನೋಹರ್ ಪಾರಿಕ್ಕರ್.. ಎಂಬೆಲ್ಲ ಹೆಸರುಗಳನ್ನು ನಾರಾಯಣ ಮೂರ್ತಿ, ಅಝೀಮ್ ಪ್ರೇಮ್‍ಜಿ, ಮುಖೇಶ್ ಅಂಬಾನಿ, ಇಂದ್ರಾ ನೂಯಿ.. ಮುಂತಾದ ಹೆಸರುಗಳ ಜೊತೆ ಇಟ್ಟು ಈ ದೇಶದ ಮಂದಿ ಎಂದೂ ನೋಡುವುದಿಲ್ಲ. ಇದಕ್ಕೆ ಕಾರಣ- ಅಂಬಾನಿ, ಪ್ರೇಮ್‍ಜಿಗಳ ಮೇಲಿನ ದ್ವೇಷ ಅಲ್ಲ ಅಥವಾ ಮೋದಿ, ಕೇಜ್ರಿವಾಲ್, ಪಾರಿಕ್ಕರ್‍ಗಳು ಇವರಿಗಿಂತ ಹೆಚ್ಚು ಪ್ರತಿಭಾವಂತರು ಎಂದೂ ಅಲ್ಲ. ನಿಜವಾಗಿ, ರಾಜಕೀಯ ನಾಯಕರಿಗಿಂತ ಭಿನ್ನವಾದ ಒಂದು ಮುಖ ಟಾಟಾ, ಬಿರ್ಲಾದಂತಹ ಬೃಹತ್ ಕಂಪೆನಿಗಳ ಒಡೆಯರಿಗೆ ಇರುತ್ತದೆ. ಅವರು ಜನರಿಗೆ ನೇರವಾಗಿ ಉತ್ತರದಾಯಿಗಳಲ್ಲ. ಅವರನ್ನು ಜನರು ಚುನಾಯಿಸಿರುವುದಿಲ್ಲ. ರಿಲಯನ್ಸ್ ಕಂಪೆನಿಗೆ ಮುಖೇಶ್ ಅಂಬಾನಿ ರಾಜೀನಾಮೆ ನೀಡಬೇಕು ಎಂದೋ ವಿಪ್ರೊ  ಕಂಪೆನಿಯ ನಿರ್ಣಾಯಕ ಹುದ್ದೆಯಲ್ಲಿ ತಮ್ಮ ಮಗನನ್ನು ಕುಳ್ಳಿರಿಸಿ ಅಝೀಮ್ ಪ್ರೇಮ್‍ಜಿ ತಪ್ಪು ಮಾಡಿದ್ದಾರೆ ಎಂದೋ ಹೇಳಿಕೊಂಡು ಇಲ್ಲಿ ಯಾರೂ ಪ್ರತಿಭಟನೆ ನಡೆಸುವುದಿಲ್ಲ. ಎಲ್ಲ ಕಂಪೆನಿಗಳು ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಿ ತಮ್ಮ ಅಧ್ಯಕ್ಷರನ್ನು ನೇಮಿಸಿಕೊಳ್ಳಬೇಕು ಎಂದೂ ಒತ್ತಾಯಿಸುವುದಿಲ್ಲ. ಅಧ್ಯಕ್ಷರುಗಳ ಮೇಲೆ ಭ್ರಷ್ಟಾಚಾರವನ್ನು ಆರೋಪಿಸಿ ಅಣ್ಣಾ ಹಜಾರೆಯೋ ಹಿರೇಮಠರೋ ಧರಣಿ-ಪ್ರತಿಭಟನೆ ಹಮ್ಮಿಕೊಳ್ಳುವುದಿಲ್ಲ. ಯಾಕೆಂದರೆ, ಅವರು ಜನಪ್ರತಿನಿಧಿಗಳಲ್ಲ. ಮನಮೋಹನ್ ಸಿಂಗ್ ಅಥವಾ ಮೋದಿಯವರು ಹೇಗೆ ಜನರಿಗೆ ಉತ್ತರದಾಯಿಗಳೋ ಹಾಗೆ ಇವರಲ್ಲ. ಕೇಜ್ರಿವಾಲ್ ಒಂದು ಸುತ್ತೋಲೆ ಹೊರಡಿಸಿದರೆ ದೆಹಲಿಯ ಎಲ್ಲ ಅಧಿಕಾರಿಗಳೂ ಅದಕ್ಕೆ ಸ್ಪಂದಿಸುತ್ತಾರೆ. ವಿದ್ಯುತ್ ದರವನ್ನು ಇಳಿಸಿ ಆದೇಶ ಕೊಟ್ಟರೆ ಅಥವಾ ಉಚಿತ ನೀರಿನ ಆಜ್ಞೆ ಕೊಟ್ಟರೆ ಇಡೀ ರಾಜ್ಯ ಅದನ್ನು ಅನುಸರಿಸುತ್ತದೆ. ಮಾತ್ರವಲ್ಲ, ಅವರ ಈ ನಡೆಯನ್ನು ಪ್ರಶ್ನಿಸುವ, ಬೆಂಬಲಿಸುವ ಎರಡೂ ಅವಕಾಶಗಳನ್ನು ಜನರು ಬಳಸಿಕೊಳ್ಳುತ್ತಾರೆ. ಆದರೆ, ಅಂಬಾನಿಗೆ ಅಂಥದ್ದೊಂದು ಅವಕಾಶವೇ ಇರುವುದಿಲ್ಲ. ಅವರು ಸುತ್ತೋಲೆ ಹೊರಡಿಸಿದರೆ ಅದು ಕಂಪೆನಿಗೆ ಮಾತ್ರ ಸೀಮಿತವಾಗಿರುತ್ತದೆ. ಅವರ ಕಂಪೆನಿಯ ಲಾಭ-ನಷ್ಟಗಳು ಜನಸಾಮಾನ್ಯರ ಮೇಲೆ ಪ್ರಭಾವವನ್ನೂ ಬೀರುವುದಿಲ್ಲ. ಇಂಥ ಹತ್ತಾರು ವ್ಯತ್ಯಾಸಗಳು ಇರುವುದರಿಂದಲೇ ರಾಜಕಾರಣಿಗಳು ಜನರಿಗೆ ಹೆಚ್ಚು ಹತ್ತಿರವಾಗುತ್ತಾರೆ. ಕಂಪೆನಿಯೊಂದು ಓರ್ವ ವ್ಯಕ್ತಿಯ ಸೊತ್ತಾದರೆ ಸರಕಾರವು ಎಲ್ಲ ಜನರ ಸೊತ್ತು ಎಂಬ ನಂಬಿಕೆ ಪ್ರಜಾತಂತ್ರ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಆದರೆ ದೆಹಲಿಯಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ಈ ನಂಬುಗೆಯು ಸುಳ್ಳು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ನಿರೂಪಿಸುತ್ತಿದೆ.
 ಅರವಿಂದ್ ಕೇಜ್ರಿವಾಲ್‍ರು ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೂಡಲೇ ವಿದ್ಯುತ್ ದರವನ್ನು ಅರ್ಧಕ್ಕೆ ಇಳಿಸಿದರು. ಮಾತ್ರವಲ್ಲ, ದೆಹಲಿಗೆ ವಿದ್ಯುತ್ ಪೂರೈಸುತ್ತಿರುವ ರಿಲಯನ್ಸ್ ವಿದ್ಯುತ್ ಕಂಪೆನಿಯ ಲೆಕ್ಕಪರಿಶೋಧನೆಗೆ ಆದೇಶ ನೀಡಿದರು. ಇದೀಗ ರಿಲಯನ್ಸ್ ಕಂಪೆನಿಯು ಸರಕಾರವನ್ನೇ ಬೆದರಿಸುವ ತಂತ್ರಕ್ಕಿಳಿದಿದೆ. ದೆಹಲಿಯನ್ನು ಪ್ರತಿದಿನ 10 ಗಂಟೆಗಳ ಕಾಲ ಕತ್ತಲಲ್ಲಿಡುವ ಬೆದರಿಕೆ ಹಾಕಿದೆ. ನಿಜವಾಗಿ, ಖಾಸಗಿ ಕಂಪೆನಿಗಳು ಹೇಗೆ ಸರಕಾರಗಳನ್ನು ಮುಷ್ಠಿಯಲ್ಲಿಟ್ಟುಕೊಳ್ಳುತ್ತವೆ ಅನ್ನುವುದಕ್ಕೆ ಉದಾಹರಣೆ ಇದು. ಒಂದು ಕಡೆ, ಖಾಸಗೀಕರಣದ ಕಡೆಗೆ ಸರಕಾರ ಇನ್ನಿಲ್ಲದ ಒಲವನ್ನು ವ್ಯಕ್ತಪಡಿಸುತ್ತಿದೆ. ನೀರು, ವಿದ್ಯುತ್, ವಿಮೆ.. ಮುಂತಾದ ಎಲ್ಲವನ್ನೂ ಖಾಸಗಿಯವರಿಗೆ ಬಿಟ್ಟು ಕೊಡಲು ಅಪಾರ ಉಮೇದು ತೋರಿಸುತ್ತಿದೆ. ಮಾತ್ರವಲ್ಲ, ಅದನ್ನು ಜನಪರ ನಿಲುವು ಎಂದೇ ಸಮರ್ಥಿಸುತ್ತಿದೆ. ಇಂಥ ಹೊತ್ತಲ್ಲೇ  ರಿಲಯನ್ಸ್ ತನ್ನ ಜನವಿರೋಧಿ ಮುಖವನ್ನು ಬಹಿರಂಗಪಡಿಸಿದೆ. ಅಂದ ಹಾಗೆ, ಖಾಸಗಿ ಕಂಪೆನಿಗಳು ಜನರ ಬವಣೆಗಳನ್ನು ಪರಿಗಣಿಸಬೇಕಿಲ್ಲ. ಯಾಕೆಂದರೆ, ಅದರ ಅಳಿವು-ಉಳಿವು ಜನರ ಓಟನ್ನು ಹೊಂದಿಕೊಂಡಿಲ್ಲವಲ್ಲ. ಈ ದೇಶದ ಪ್ರಮುಖ ಖಾತೆಗಳನ್ನು ಅದರಲ್ಲೂ ಹಣಕಾಸು, ಇಂಧನ, ಟೆಲಿಕಾಂ, ಕೃಷಿ, ಪರಿಸರ ಮುಂತಾದ ಖಾತೆಗಳನ್ನು ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸುವುದು ಪ್ರಧಾನಿ ಅಲ್ಲ, ಖಾಸಗಿ ಕಂಪೆನಿಗಳು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಜಯಂತಿ ನಟರಾಜನ್‍ರಿಂದ ಪರಿಸರ ಖಾತೆಯನ್ನು ಕಸಿದು ವೀರಪ್ಪ ಮೊಯಿಲಿಯವರಿಗೆ ನೀಡಲಾಯಿತು. ಪರಿಸರ ವಿರೋಧಿ ಎಂಬ ಕಾರಣಕ್ಕಾಗಿ ಜಯಂತಿ ನಟರಾಜನ್ ಅನುಮತಿ ನೀಡದೇ ಇದ್ದ ಐದಾರು ಬಹುಕೋಟಿ ಯೋಜನೆಗಳಿಗೆ ಮೊಯಿಲಿಯವರು ಕೇವಲ ಒಂದೇ ತಿಂಗಳೊಳಗೆ ಅನುಮತಿ ನೀಡಿಬಿಟ್ಟರು. ಟೆಲಿಕಾಂ ಖಾತೆಯನ್ನು ಯಾರಿಗೆ ನೀಡಬೇಕೆಂಬ ವಿಷಯದಲ್ಲಿ ಖಾಸಗಿ ಕಂಪೆನಿಗಳು ಎಷ್ಟು ಮುತುವರ್ಜಿ ವಹಿಸುತ್ತವೆ ಅನ್ನುವುದನ್ನು ನೀರಾ ರಾಡಿಯ ಹಗರಣ ಬೆಳಕಿಗೆ ತಂದಿದೆ. ಈ ದೇಶದಲ್ಲಿ ಪೆಟ್ರೋಲಿಯಂ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಹೂಡಿರುವ ಮುಖೇಶ್ ಮತ್ತು ಅನಿಲ್ ಅಂಬಾನಿಗಳು ಆ ಖಾತೆಯ ಬಗ್ಗೆ ಇನ್ನಿಲ್ಲದ ಆಸಕ್ತಿ ಹೊಂದಿರುವುದು ಎಲ್ಲರಿಗೂ ಗೊತ್ತು. ರಿಲಯನ್ಸನ ಮಾತನ್ನು ಕೇಳದ ಸಚಿವರು ಹೆಚ್ಚು ಸಮಯ ಇಂಧನ ಖಾತೆಯಲ್ಲಿ ಉಳಿಯುವುದಿಲ್ಲ ಎಂಬುದಕ್ಕೆ ಮುರಳಿ ದೇವೋರಂಥ ಹಲವು ಉದಾಹರಣೆಗಳಿವೆ. ‘ಖಾಸಗಿ ಕಂಪೆನಿಗಳಿಂದ ತನಗೆ ಜೀವ ಬೆದರಿಕೆ ಇದೆ..’ ಎಂಬುದಾಗಿ ಕೆಲವು ಸಮಯಗಳ ಹಿಂದೆ ಇಂಧನ ಸಚಿವ ವೀರಪ್ಪ ಮೊಯಿಲಿಯವರೇ ಹೇಳಿದ್ದರು. ಈ ಹಿಂದೆ ಹಣಕಾಸು ಸಚಿವರಾಗಿದ್ದ ಪ್ರಣವ್ ಮುಖರ್ಜಿ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಚಿದಂಬರಮ್‍ಗೆ ಹಣಕಾಸು ಖಾತೆಯನ್ನು ನೀಡಿರುವುದರ ಹಿಂದೆಯೂ ಪ್ರಮುಖ ಬಹುರಾಷ್ಟ್ರೀಯ ಮೊಬೈಲ್ ಕಂಪೆನಿಯೊಂದರ ಕೈವಾಡವಿದೆ ಎಂದು  ಹೇಳಲಾಗುತ್ತಿದೆ.
   ಪ್ರಜೆಗಳೇ ಆಡಳಿತ ನಡೆಸುವ ಒಂದು ಅದ್ಭುತ ವ್ಯವಸ್ಥೆಯೆಂದು ಪ್ರಜಾತಂತ್ರವನ್ನು ನಾವು ಕೊಂಡಾಡುತ್ತಿರುವಾಗಲೂ ಈ ವ್ಯವಸ್ಥೆಯನ್ನು ಖಾಸಗಿ ಕಂಪೆನಿಗಳು ಹೇಗೆ ಹೈಜಾಕ್ ಮಾಡಬಲ್ಲವು ಅನ್ನುವುದಕ್ಕೆ ದಿನೇ ದಿನೇ ಪುರಾವೆಗಳು ಸಿಗುತ್ತಲೇ ಇವೆ. ಇವತ್ತು ವಿದ್ಯುತ್‍ನ ಬಗ್ಗೆ, ಪೆಟ್ರೋಲ್-ಡೀಸೆಲ್, ಗ್ಯಾಸ್‍ನ ಬೆಲೆ ನಿಗದಿಪಡಿಸುವ ಕುರಿತಂತೆ ಒಂದು ಸರಕಾರ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳದಂಥ ಪರಿಸ್ಥಿತಿಯಿದೆ. ಇಷ್ಟು ಬೆಲೆ ನಿಗದಿಪಡಿಸಿ ಎಂದು ಖಾಸಗಿ ಕಂಪೆನಿಗಳು ಸರಕಾರಕ್ಕೆ ಆದೇಶಿಸುತ್ತಿವೆ. ಜನರು ಈ ಬಗ್ಗೆ ಕೆರಳದಂತೆ ಮಾಡಬೇಕಾದ ಉಪಾಯಗಳನ್ನೂ ಅವು ಹೇಳಿಕೊಡುತ್ತವೆ. ಮಾತ್ರವಲ್ಲ, ಪ್ರತಿವರ್ಷ ಪ್ರಮುಖ ರಾಜಕೀಯ ಪಕ್ಷಗಳಿಗೆ ಅವು ಕೋಟ್ಯಂತರ ರೂಪಾಯಿ ದೇಣಿಗೆಯನ್ನೂ ನೀಡುತ್ತಿವೆ. ಹೀಗಿರುವಾಗ ಅವು ತಮ್ಮ ದೇಣಿಗೆಗೆ ಸೂಕ್ತ ಪ್ರತಿಫಲವನ್ನು ಬಯಸದೇ ಇರುವುದಕ್ಕೆ ಸಾಧ್ಯವಿದೆಯೇ? ಹೀಗೆ ರಾಜಕೀಯ ಪಕ್ಷಗಳು ಮತ್ತು ಬೃಹತ್ ಕಂಪೆನಿಗಳು ಒಂದು ಬಗೆಯ ಒಳ ಒಪ್ಪಂದವನ್ನು ಮಾಡಿಕೊಂಡು ಮತದಾರರಿಗೆ ಮೋಸ ಮಾಡುತ್ತಿವೆ. ದೆಹಲಿಯಲ್ಲಿ ನಡೆದಿರುವುದೂ ಇದೇ. ಕೇಜ್ರಿವಾಲ್ ಇದನ್ನು ಪ್ರಶ್ನಿಸಿದ್ದಾರೆ. ತಕ್ಷಣ ರಿಲಯನ್ಸ್ ಕಂಪೆನಿಯು ಅವರನ್ನು ಕತ್ತಲಲ್ಲಿಡುವ ಬೆದರಿಕೆ ಹಾಕಿದೆ. ಈ ಮುಖಾಂತರ ಈ ದೇಶದಲ್ಲಿ ಆಡಳಿತ ನಡೆಸುತ್ತಿರುವುದು ಮುಖ್ಯಮಂತ್ರಿಯೋ ಪ್ರಧಾನಿಯೋ ಅಲ್ಲ, ಖಾಸಗಿ ಕಂಪೆನಿಗಳು ಎಂಬುದನ್ನು ಅದು ಪರೋಕ್ಷವಾಗಿ ಸಾರಿಬಿಟ್ಟಿದೆ. ಆದ್ದರಿಂದ ಈ ಪ್ರಕರಣವನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಬೇಕು. ಖಾಸಗಿ ಕಂಪೆನಿಗಳಿಗೆ ಮಣಿಯುವುದಿಲ್ಲವೆಂಬ ಬಗ್ಗೆ ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಂದ ಭರವಸೆಯನ್ನು ಪಡೆದುಕೊಳ್ಳಬೇಕು. ತಮ್ಮ ಬದ್ಧತೆ ಕಂಪೆನಿಗಲ್ಲ, ಜನರಿಗೆ ಎಂಬುದನ್ನು ಎಲ್ಲ ಪಕ್ಷಗಳೂ ಸಾರುವಂತೆ ಒತ್ತಡ ಹೇರಬೇಕು. ಇಲ್ಲದಿದ್ದರೆ ರಾಜಕೀಯ ಪಕ್ಷಗಳು ಮುಂದೊಂದು ದಿನ, ಚುನಾವಣೆಯಲ್ಲೇ ಸ್ಪರ್ಧಿಸದ ಅಂಬಾನಿಯನ್ನೋ ಟಾಟಾರನ್ನೋ ತಂದು ಪ್ರಧಾನಿ ಕುರ್ಚಿಯಲ್ಲಿ ಕೂರಿಸಿಯಾವು.

Wednesday, 29 January 2014

ಹುಲಿ, ಗೋವು, ಭಯೋತ್ಪಾದನೆ ಮತ್ತು ದಲಿತರು

 2000ದಲ್ಲಿ ನಡೆದ ದಲಿತ ಹತ್ಯಾಕಾಂಡದಲ್ಲಿ
ಕುಟುಂಬದ ನಾಲ್ವರನ್ನು ಕಳಕೊಂಡ
 ಗೋಪಿನಾಥನ್

  1. ಪಶ್ಚಿಮ ಬಂಗಾಲದ ಬೀರ್ಭಮ್ ಜಿಲ್ಲೆ, 2. ಕರ್ನಾಟಕದ ಕೋಲಾರ ಜಿಲ್ಲೆ , 3. ಸುಪ್ರೀಮ್ ಕೋರ್ಟು.. ಇವು ಮೂರೂ ಕಳೆದ ವಾರ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಗಮನ ಸೆಳೆದುವು. ಮನುಷ್ಯರ ಪ್ರಾಣ, ಘನತೆಯ ಬಗ್ಗೆ ಸುಪ್ರೀಮ್ ಕೋರ್ಟು ಅತೀವ ಕಾಳಜಿಯನ್ನು ವ್ಯಕ್ತಪಡಿಸಿ, ಮರಣ ದಂಡನೆಯನ್ನು ಜೀವಾವಧಿಗೆ ಇಳಿಸಲು ತೀರ್ಮಾನಿಸಿದಾಗ ಮೇಲಿನೆರಡು ಜಿಲ್ಲೆಗಳು ಅದನ್ನು ಅಪಹಾಸ್ಯಗೊಳಿಸುವಂತೆ ವರ್ತಿಸಿದುವು. ಒಂದು ವೇಳೆ ಸಮಾನತೆ, ಮಾನವ ಘನತೆ, ದಲಿತ ಸಬಲೀಕರಣ.. ಮುಂತಾದುವುಗಳ ಬಗ್ಗೆ ಮಾಧ್ಯಮಗಳು ವ್ಯಕ್ತಪಡಿಸುತ್ತಿರುವ ಕಾಳಜಿ ಪ್ರಾಮಾಣಿಕವೇ ಆಗಿರುತ್ತಿದ್ದರೆ, ಮಿಕ್ಕೆಲ್ಲ ಸುದ್ದಿಗಳನ್ನು ತುಸು ಬದಿಗಿರಿಸಿ ಈ ಬಗ್ಗೆ ನಿರಂತರ ಸಾರ್ವಜನಿಕ ಜಾಗೃತಿಯನ್ನು ಮೂಡಿಸುವುದಕ್ಕೆ ಈ ಎರಡು ಪ್ರಕರಣಗಳು ಅರ್ಹವಾಗಿದ್ದುವು.
 ಬೀರ್ಭಮ್ ಜಿಲ್ಲೆಯ ಸುಬಲ್‍ಪುರ್ ಗ್ರಾಮದ ಬುಡಕಟ್ಟು ಜನಾಂಗದ ಯುವತಿಯೊಬ್ಬಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿದಳು. ಈ ಪ್ರೀತಿಯನ್ನು ಗಂಭೀರ ಅಪರಾಧವೆಂದು ಪರಿಗಣಿಸಿದ ಖಾಪ್ ಪಂಚಾಯತ್, ಯುವಕನಿಗೆ ದಂಡ ವಿಧಿಸಿ ಬಿಟ್ಟು ಬಿಟ್ಟಿತಲ್ಲದೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಆದೇಶಿಸಿತು. ಒಂದು ರಾತ್ರಿಯಿಡೀ ಯುವತಿಯನ್ನು ಲೈಂಗಿಕವಾಗಿ ಹಿಂಸಿಸಲಾಯಿತು. ಕೋಲಾರ ಜಿಲ್ಲೆಯ ನಂಗಲಿ ಬಳಿಯ ಕಗ್ಗನ ಹಳ್ಳಿಯಲ್ಲಂತೂ ದಲಿತ ಕುಟುಂಬಗಳಿಗೆ ಮೇಲ್ವರ್ಗವು ಸಾಮೂಹಿಕ ಬಹಿಷ್ಕಾರವನ್ನು ಹೇರಿದೆ. ಹೊಟೇಲು, ಅಂಗಡಿಗಳು ಈ ಕುಟುಂಬಗಳೊಂದಿಗೆ ವ್ಯವಹರಿಸದಂತೆ ಧ್ವನಿವರ್ಧಕಗಳಲ್ಲಿ ಎಚ್ಚರಿಸಲಾಗಿದೆ. ಉಲ್ಲಂಘಿಸಿದವರಿಗೆ ನಿರ್ದಿಷ್ಟ ಪ್ರಮಾಣದ ದಂಡವನ್ನು ಘೋಷಿಸಲಾಗಿದೆ. ಊರ ಕೊಳವೆ ಬಾವಿಯಿಂದ ದಲಿತರು ನೀರು ಬಳಸದಂತೆ ತಡೆಯಲಾಗಿದೆ. ಸಂಕ್ರಾಂತಿ ಹಬ್ಬವನ್ನು ಮೇಲ್ವರ್ಗಕ್ಕಿಂತ ಮೊದಲೇ ಆಚರಿಸಿದುದು ಇದಕ್ಕೆ ಕಾರಣ ಎಂದು ದಲಿತರು ಹೇಳುತ್ತಿದ್ದಾರೆ..
 ಇಲ್ಲಿ ಗೋಹತ್ಯೆ ವಿರೋಧಿ ರಾಲಿಗಳನ್ನು ಏರ್ಪಡಿಸಿ ಆಗಾಗ ಜನರ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಭಿನ್ನ ಧರ್ಮದ ಯುವಕ-ಯುವತಿಯರು ಪರಸ್ಪರ ಮಾತಾಡುವುದನ್ನು ತಡೆಯಲು, ಅವರನ್ನು ಪತ್ತೆ ಹಚ್ಚಿ ಥಳಿಸಲು ಇಲ್ಲಿ ತಂಡಗಳೇ ರಚನೆಯಾಗಿವೆ. ‘ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಮಾಡಿರುವುದೇ ಭಯೋತ್ಪಾದನೆ ಉಂಟಾಗಲು ಕಾರಣ..’ ಎಂದು ಪೇಜಾವರ ಶ್ರೀಗಳೇ ಹೇಳುತ್ತಿದ್ದಾರೆ. ‘ಸಾಧು ಪ್ರಾಣಿಯಾದ ಗೋವನ್ನು ಒಂದು ವೇಳೆ ರಾಷ್ಟ್ರ ಪ್ರಾಣಿಯಾಗಿ ಮಾಡಿರುತ್ತಿದ್ದರೆ ದೇಶ ಉಗ್ರವಾದದಿಂದ ಮುಕ್ತವಾಗಿರುತ್ತಿತ್ತು..’ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಉರುಳು ಸೇವೆ ನಡೆಯುತ್ತಿದೆ. ಪಂಕ್ತಿ ಬೇಧ ಜಾರಿಯಲ್ಲಿದೆ. ದಲಿತ ವರ್ಗವನ್ನು ಪ್ರತಿನಿಧಿಸುತ್ತಿರುವ ಅಂಬೇಡ್ಕರ್‍ರ ನೇತೃತ್ವದಲ್ಲಿ ರಚನೆಯಾದ ಸಂವಿಧಾನಕ್ಕೆ 67 ವರ್ಷಗಳು ತುಂಬಿದ ಈ ಹೊತ್ತಲ್ಲಿ ಕಾಣುತ್ತಿರುವ ವೈರುಧ್ಯಗಳಿವು. ಹುಟ್ಟಿನ ಆಧಾರದಲ್ಲಿ ಒಂದು ದೊಡ್ಡ ಸಮೂಹವನ್ನು ಭಯದ ಕೂಪಕ್ಕೆ ತಳ್ಳುವುದನ್ನು ಏನೆಂದು ಕರೆಯಬೇಕು? ಬಹಿಷ್ಕಾರದ ಭೀತಿಯಲ್ಲಿ ಬದುಕುವ ಒಂದು ಸಮೂಹದ ಪಾಲಿಗೆ ಯಾವುದು ಭಯೋತ್ಪಾದನೆಯಾಗಿರಬಹುದು? ಬಾಂಬು, ಬಂದೂಕುಗಳನ್ನು ಈ ವರೆಗೂ ನೋಡಿರದ ಈ ದೇಶದ ಅಸಂಖ್ಯ ಗ್ರಾಮಗಳ ಕೋಟ್ಯಂತರ ದಲಿತರು ಭಯೋತ್ಪಾದನೆಗೆ ಕೊಡುವ ವ್ಯಾಖ್ಯಾನ ಏನಿರಬಹುದು?
 ನಾವೆಲ್ಲ ಭಯೋತ್ಪಾದನೆಗೆ ಒಂದು ಸೀಮಿತ ಅರ್ಥವನ್ನು ಕೊಟ್ಟಿದ್ದೇವೆ. ಆ ಅರ್ಥದಂತೆ ಬಾಂಬು, ಬಂದೂಕುಗಳು ಮಾತ್ರ ಭಯೋತ್ಪಾದನೆಯ ಚೌಕಟ್ಟಿನೊಳಗೆ ಬರುತ್ತದೆ. ಮಾಧ್ಯಮಗಳ ಮುಖಪುಟದಲ್ಲಿ ಇಂಥ ಪ್ರಕರಣಗಳಿಗೆ ದಪ್ಪಕ್ಷರದ ಹೆಡ್‍ಲೈನ್‍ಗಳೂ ಸಿಗುತ್ತವೆ. ಅವು ತಪ್ಪು ಎಂದಲ್ಲ. ಮನುಷ್ಯರನ್ನು ಕೊಲ್ಲುವ, ಅವರನ್ನು ಭೀತಿಯಲ್ಲಿ ಕೆಡಹುವ ಯಾವ ಕೃತ್ಯಗಳೇ ಆಗಲಿ ಅದು ಖಂಡನಾರ್ಹ ಮತ್ತು ಅಂಥ ಪ್ರಕರಣಗಳು ಮಾಧ್ಯಮಗಳ ಮುಖಪುಟದಲ್ಲಿ ಪ್ರಮುಖ ಸುದ್ದಿಯಾಗಿ ಕಾಣಿಸಿಕೊಳ್ಳಬೇಕಾದದ್ದು ಅತ್ಯಂತ ಅಗತ್ಯ. ಆದರೆ, ಭಯೋತ್ಪಾದನೆಯ ವ್ಯಾಖ್ಯಾನವನ್ನು ನಾವು ಅಷ್ಟಕ್ಕೇ ಸೀಮಿತಗೊಳಿಸಿದರೆ ಸಾಕೇ? ಬಾಂಬು ಭಯೋತ್ಪಾದನೆಯ ವಿರುದ್ಧ ಜನರಲ್ಲಿ ಒಂದು ಬಗೆಯ ಪ್ರಜ್ಞೆಯನ್ನು ಬೆಳೆಸಲು ಸಾಧ್ಯವಾಗಿರುವಂತೆಯೇ ಹುಟ್ಟಿನ ಆಧಾರದಲ್ಲಿ ನಡೆಸಲಾಗುವ ಭಯೋತ್ಪಾದನೆಯ ಬಗ್ಗೆಯೂ ಸಮಾಜವನ್ನು ಜಾಗೃತಗೊಳಿಸುವ ಅಗತ್ಯವಿಲ್ಲವೇ? ನಮ್ಮಂತೆ ಕಣ್ಣು, ಕೈ, ಕಾಲು, ಕಿವಿ, ಮೂಗನ್ನು ಹೊಂದಿರುವ ಒಂದು ದೊಡ್ಡ ಸಮೂಹವನ್ನು ಬಹಿಷ್ಕಾರಕ್ಕೆ ಒಳಪಡಿಸುವುದನ್ನೇಕೆ ನಾವು ಬಾಂಬು ಭಯೋತ್ಪಾದನೆಯಷ್ಟೇ ಗಂಭೀರ ಪ್ರಕರಣವಾಗಿ ಪರಿಗಣಿಸುತ್ತಿಲ್ಲ? ಈ ಭಯೋತ್ಪಾದನೆಗೆ ಯಾವ ಪ್ರಾಣಿ ಕಾರಣ? ರಾಜ್ಯದಲ್ಲಿ ಮುಖ್ಯವಾಗಿ ನಮ್ಮ ಕರಾವಳಿ ಪ್ರದೇಶದಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗೆ ತಲುಪದಂತೆ ಬಲವಂತದಿಂದ ತಡೆಯುವ ಪ್ರಯತ್ನಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಜಾನುವಾರುಗಳನ್ನು ಕೊಂಡೊಯ್ಯುವ ವಾಹನಗಳನ್ನು ಅಡ್ಡಗಟ್ಟಿ ಅದರಲ್ಲಿರುವವರನ್ನು ಥಳಿಸುವ ಪ್ರಕರಣಗಳು ನಡೆಯುತ್ತಿರುತ್ತವೆ. ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನು ತಡೆಯುವುದಕ್ಕೆ ಇಲ್ಲಿ ತಂಡಗಳು ಕಾರ್ಯಾಚರಿಸುತ್ತಿವೆ. ಮಾತ್ರವಲ್ಲ, ತಮ್ಮೆಲ್ಲ ಕೃತ್ಯಗಳನ್ನು ಧರ್ಮರಕ್ಷಣೆ ಎಂದು ಅವು ಸಮರ್ಥಿಸಿಕೊಳ್ಳುತ್ತಲೂ ಇವೆ. ಹೋಮ್‍ಸ್ಟೇ, ಪಬ್ ದಾಳಿ, ಹಾಜಬ್ಬ ಬೆತ್ತಲೆ ಪ್ರಕರಣಗಳನ್ನೆಲ್ಲ ಧರ್ಮರಕ್ಷಣೆಯ ಹೆಸರಲ್ಲಿಯೇ ಇಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಅಷ್ಟಕ್ಕೂ, ಯುವತಿಯರು ಮತ್ತು ಜಾನುವಾರುಗಳ ಮೇಲೆ ತೋರುತ್ತಿರುವ ಈ ಮಟ್ಟದ ಪ್ರೀತಿಯ ಸಣ್ಣದೊಂದು ಅಂಶವನ್ನಾದರೂ ದಲಿತರ ಮೇಲೆ ತೋರುತ್ತಿದ್ದರೆ, ಈ ದೇಶದ ಪರಿಸ್ಥಿತಿ ಹೇಗಿರುತ್ತಿತ್ತು? ನಿಜವಾಗಿ, ಕೋಲಾರದ ನಂಗಲಿ ಗ್ರಾಮ ಕೇವಲ ಒಂದು ಉದಾಹರಣೆ ಅಷ್ಟೇ. ಇಂಥ ಪ್ರಕರಣಗಳು ಈ ದೇಶದಲ್ಲಿ ಆಗಾಗ ನಡೆಯುತ್ತಲೇ ಇವೆ. ಆದರೆ, ಧರ್ಮರಕ್ಷಣೆಯ ಹೆಸರಲ್ಲಿ ಜಾನುವಾರುಗಳನ್ನು ತಡೆಯುವ ಮತ್ತು ಯುವಕರನ್ನು ಥಳಿಸುವ ತಂಡಗಳು, ದಲಿತರನ್ನು ಬಹಿಷ್ಕರಿಸಿದವರನ್ನು ಥಳಿಸಿದ ಪ್ರಕರಣ ಈವರೆಗೂ ನಡೆದಿಲ್ಲ. ಯಾಕೆ ಹೀಗೆ? ಹೆಣ್ಣು-ಗಂಡು ಮಾತಾಡುವುದು ಒಂದು ಸಮೂಹವನ್ನೇ ಬಹಿಷ್ಕಾರಕ್ಕೆ ಒಳಪಡಿಸುವುದಕ್ಕಿಂತಲೂ ಭೀಕರ ಅಪರಾಧವೇ? ಅಥವಾ ದಲಿತರು ಧರ್ಮದ ಚೌಕಟ್ಟಿನೊಳಗೆ ಬರುವುದಿಲ್ಲವೇ? ಬಹಿಷ್ಕಾರದಂಥ ಭಯೋತ್ಪಾದನಾ ಕೃತ್ಯಗಳ ಕುರಿತಂತೆ ಥಳಿಸುವ ತಂಡಗಳು ತೋರುತ್ತಿರುವ ಮೌನ ಪ್ರತಿಕ್ರಿಯೆಯನ್ನು ನೋಡಿದರೆ, ಈ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತವೆ. ನಿಜವಾಗಿ, ಹೆಣ್ಣು-ಗಂಡು ಮಾತುಕತೆ, ಜಾನುವಾರು ಹತ್ಯೆ.. ಮುಂತಾದುವುಗಳಿಗಿಂತಲೂ ದಲಿತ ಬಹಿಷ್ಕಾರದಂಥ ಪ್ರಕರಣಗಳು ಅತೀ ಗಂಭೀರವಾದುದು. ಇಂಥ ಕೃತ್ಯಗಳು ಧರ್ಮದ  ನಿಜ ಸ್ವರೂಪವನ್ನೇ ಪ್ರಶ್ನಿಸುತ್ತವೆ. ಮನುಷ್ಯರು ಎಲ್ಲ ಪ್ರಾಣಿಗಳಿಗಿಂತಲೂ ಮಿಗಿಲು ಎಂದು ನಾವು ಒಪ್ಪುವುದಾದರೆ ಮೊಟ್ಟಮೊದಲು ಹುಟ್ಟಿನ ಆಧಾರದಲ್ಲಿ ಆಗುವ ಭಯೋತ್ಪಾದನೆಯ ಬಗ್ಗೆ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸಬೇಕಾಗುತ್ತದೆ. ಬಹಿಷ್ಕøತರ ಬೆಂಬಲಕ್ಕೆ ಧಾವಿಸಬೇಕಾಗುತ್ತದೆ. ಆ ಮೂಲಕ ಮನುಷ್ಯರೆಲ್ಲ ಸಮಾನ ಎಂದು ಸಾರಬೇಕಾಗುತ್ತದೆ. ಆದರೆ, ಜಾನುವಾರುಗಳ ಬಗ್ಗೆ ಮತ್ತು ಹೆಣ್ಣು-ಗಂಡು ಮಾತುಕತೆಯ ಬಗ್ಗೆ ಒಂದು ವರ್ಗದಿಂದ ವ್ಯಕ್ತವಾಗುತ್ತಿರುವ ಕಾಳಜಿಯು ದಲಿತರ ಬಗ್ಗೆ ಕಾಣಿಸುತ್ತಿಲ್ಲ. ನಿಜವಾಗಿ, ಧರ್ಮವನ್ನು ಪ್ರೀತಿಸುವುದೆಂದರೆ ಧರ್ಮದ ಹೆಸರಲ್ಲಿ ಅಸ್ತಿತ್ವದಲ್ಲಿರುವ ಅನಾಚಾರಗಳನ್ನು ವಿರೋಧಿಸುವುದು. ಅವುಗಳ ನಿರ್ಮೂಲನೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದು. ಮಾತ್ರವಲ್ಲ, ನಿಷ್ಠಾವಂತ ಧರ್ಮಾನುಯಾಯಿಯಾಗಿ ಜೀವಿಸುವುದು. ಆದರೆ, ಇವತ್ತು ಇನ್ನೊಂದು ಧರ್ಮವನ್ನು ಮತ್ತು ಅದರ ಆಚರಣೆಗಳನ್ನು ಗೇಲಿ ಮಾಡುವುದೇ ಧರ್ಮಪ್ರೀತಿ ಆಗಿಬಿಟ್ಟಿದೆ. ದಲಿತ ಬಹಿಷ್ಕಾರದಂಥ ಮನುಷ್ಯ ವಿರೋಧಿ ಕೃತ್ಯಗಳನ್ನು ತಡೆಯುವ ಅಥವಾ ಅದನ್ನು ಪ್ರತಿಭಟಿಸುವ ಬಗ್ಗೆ ಇಲ್ಲದ ಉತ್ಸಾಹ ಹೆಣ್ಣು-ಗಂಡನ್ನು ಥಳಿಸುವಲ್ಲಿ, ಜಾನುವಾರುಗಳ ವಾಹನವನ್ನು ತಡೆದು ಹಲ್ಲೆಗೈಯುವಲ್ಲಿ ಕಾಣಿಸುತ್ತಿದೆ. ಪ್ರಾಣಿಗೆ ಇರುವ ಮಹತ್ವದ ಒಂದಂಶವನ್ನೂ ಮನುಷ್ಯರಿಗೆ ಕೊಡದೆಯೂ ಧರ್ಮಪ್ರೇಮಿಗಳಾಗಿ ಗುರುತಿಸಿಕೊಳ್ಳುವುದಕ್ಕೆ ಇವತ್ತು ಸಾಧ್ಯವಾಗುತ್ತಿದೆ. ಬಹುಶಃ ನಂಗಲಿ ಮತ್ತು ಸಬಲ್‍ಪುರದ ಘಟನೆಗಳು ಇಂಥ ಧರ್ಮಪ್ರೇಮವನ್ನು ಇವತ್ತು ಬಹಿರಂಗವಾಗಿಯೇ ಪ್ರಶ್ನಿಸುತ್ತಿದೆ. ದಲಿತರನ್ನು ಮನುಷ್ಯರಾಗಿ ಒಪ್ಪಲೂ ಸಿದ್ಧವಿಲ್ಲದ ಸಾಮಾಜಿಕ ಮನಸ್ಥಿತಿಗೆ ಎಲ್ಲರೆದುರೇ ಛೀಮಾರಿ ಹಾಕುತ್ತಿದೆ. ಹುಲಿಯನ್ನೂ ಗೋವನ್ನೂ ತುಲನೆ ಮಾಡಿ ಚರ್ಚಿಸುವುದಕ್ಕಿಂತ ಮೊದಲು ಮನುಷ್ಯರನ್ನು ಮನುಷ್ಯರಿಗೆ ತುಲನೆ ಮಾಡಿ ಚರ್ಚಿಸಿ ಎಂದು ಕರೆ ಕೊಡುತ್ತಿದೆ.

Wednesday, 22 January 2014

ಗಗನಕ್ಕೆ ಹಾರುವ ರಾಕೆಟ್ ಗಳೂ, ನಿದ್ದೆಗೆ ಜಾರುವ ಸುನಂದಾರೂ

ಈ ಸುದ್ದಿಗಳನ್ನು ಓದಿ
  1. ಕೇಂದ್ರ ಮಂತ್ರಿ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅಸಹಜ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಪಾಕಿಸ್ತಾನದ ಪತ್ರಕರ್ತೆಯೊಂದಿಗೆ ತರೂರ್ ಅವರಿಗಿರುವ ಗೆಳೆತನವನ್ನು ಪುಷ್ಕರ್ ಪ್ರಶ್ನಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಮರುದಿನವೇ ಅವರ ಸಾವು ಸಂಭವಿಸಿದೆ.
  2. ಕುಡುಕರು ಮತ್ತು ವರದಕ್ಷಿಣೆ ಬಯಸುವವರ ವಿವಾಹ ನಡೆಸಿ ಕೊಡುವುದಿಲ್ಲವೆಂದು ಜಾರ್ಖಂಡ್, ಬಿಹಾರ ಮತ್ತು ಒಡಿಸ್ಸಾಗಳಲ್ಲಿ ಮುಸ್ಲಿಮರ ಚಟುವಟಿಕೆಗಳನ್ನು ನಿಯಂತ್ರಿಸುವ ಇಮಾರತೆ ಶರಿಯಾ ಎಂಬ ವಿದ್ವಾಂಸರ ಮಂಡಳಿಯು ಘೋಷಿಸಿದೆ.
  3. ದೆಹಲಿಯಲ್ಲಿ ಡೆನ್ಮಾರ್ಕ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ..
  ಕಳೆದ ಒಂದೇ ವಾರದಲ್ಲಿ ಪ್ರಕಟವಾದ ಈ ಮೂರು ಸುದ್ದಿಗಳನ್ನು ಬರೇ ವಾರ್ತೆಗಳಾಗಿಯಷ್ಟೇ ನಾವು ಪರಿಗಣಿಸಬೇಕಿಲ್ಲ. ಹಾಗೆ ಪರಿಗಣಿಸುವುದಕ್ಕೆ ನಮ್ಮ ಸುತ್ತಮುತ್ತಲಿನ ವಾತಾವರಣ ಅನುಮತಿಸುತ್ತಲೂ ಇಲ್ಲ. ಅಂದಹಾಗೆ, ಜನವರಿ 5ರಂದು ಶ್ರೀಹರಿ ಕೋಟಾದಿಂದ ಜಿಎಸ್‍ಎಲ್‍ವಿ-ಡಿ5 ರಾಕೆಟ್ ಯಶಸ್ವಿಯಾಗಿ ಗಗನಕ್ಕೆ ಹಾರಿದುದನ್ನು ಮಾಧ್ಯಮಗಳು ಪ್ರಮುಖ ಸುದ್ದಿಯಾಗಿಸಿ ಸಂಭ್ರಮಿಸಿದುವು. ಕ್ರಯೋಜನಿಕ್ ತಂತ್ರಜ್ಞಾನದಲ್ಲೂ ಭಾರತ ಸ್ವಾವಲಂಬಿಯಾಗಿರುವುದಕ್ಕೆ ದೇಶ ಹರ್ಷಪಟ್ಟಿತು. ವೈಜ್ಞಾನಿಕ ಕ್ಷೇತ್ರದಲ್ಲಿ ಈ ದೇಶ ವಿಶ್ವದ ಪ್ರಮುಖ 5 ರಾಷ್ಟ್ರಗಳಲ್ಲಿ ಒಂದಾಗಿರುವುದಕ್ಕಾಗಿ ವಿಜ್ಞಾನಿ ಸಮೂಹವನ್ನು ಕೊಂಡಾಡಲಾಯಿತು. ಇಷ್ಟಕ್ಕೂ ಕೇವಲ ರಾಕೆಟ್ ಉಡ್ಡಯನವೊಂದೇ ಅಲ್ಲ, ಇನ್ಫೋಸಿಸ್, ವಿಪ್ರೋಗಳಂಥ ಬೃಹತ್ ಕಂಪೆನಿಗಳು ವರ್ಷಂಪ್ರತಿ ಸಾಧಿಸುತ್ತಿರುವ ನಿವ್ವಳ ಲಾಭದ ಬಗ್ಗೆ ಮಾಧ್ಯಮಗಳಲ್ಲಿ ಕೊಂಡಾಟದ ಪದಗಳು ಪ್ರಕಟವಾಗುತ್ತಲೇ ಇವೆ. ಪೋಲಿಯೋ ಮುಕ್ತ ಭಾರತಕ್ಕಾಗಿ ಪ್ರಶಂಸೆಯ ಸುರಿಮಳೆಗಳು ಹರಿದು ಬರುತ್ತಿವೆ. ಭವಿಷ್ಯದಲ್ಲಿ ಭಾರತವು ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಮೂಡಿ ಬರಲಿದೆ ಎಂಬ ರೋಮಾಂಚನಕಾರಿ ಭವಿಷ್ಯಗಳನ್ನು ಹೇಳಲಾಗುತ್ತಿದೆ. ಇವಕ್ಕೆ ಪೂರಕವಾಗಿ ಚತುಷ್ಪಥ ರಸ್ತೆಗಳು, ಮಾಲ್‍ಗಳು, ಗಗನಚುಂಬಿ ಕಟ್ಟಡಗಳ ನಿರ್ಮಾಣವು ಬಿರುಸಿನಿಂದ ನಡೆಯುತ್ತಿವೆ. ಆದರೆ ಈ ಎಲ್ಲ ಸಮಭ್ರಮಗಳ ಇನ್ನೊಂದು ಮಗ್ಗುಲು ಅತ್ಯಂತ ದಾರುಣವಾದದ್ದು ಅನ್ನುವುದನ್ನು ಸುನಂದಾ, ಇಮಾರತೆ ಶರಿಯಾ ಅಥವಾ ಡೆನ್ಮಾರ್ಕ್‍ ನ  ಮಹಿಳೆ ಸಾರುತ್ತಿದ್ದಾರೆ. ಗುಂಡಿಗಳಿಲ್ಲದ ರಸ್ತೆಗಳು ನಿರ್ಮಾಣವಾಗುವುದಕ್ಕಿಂತಲೂ ವೇಗವಾಗಿ ದೇಹವಿಡೀ ಗಾಯಗಳೆಂಬ ಗುಂಡಿಗಳಿಂದ ಜರ್ಝರಿತರಾಗುವ ಹೆಣ್ಣು ಮಕ್ಕಳು ತಯಾರಾಗುತ್ತಿದ್ದಾರೆ. ಕ್ರಯೋಜನಿಕ್ ತಂತ್ರಜ್ಞಾನದ ಖುಷಿಯನ್ನು ಅನುಭವಿಸಲೂ ಸಾಧ್ಯವಾಗದಷ್ಟು ಅಗಾಧ ಪ್ರಮಾಣದಲ್ಲಿ ಕೌಟುಂಬಿಕ ವಾತಾವರಣಗಳು ಛಿದ್ರವಾಗುತ್ತಿವೆ. ಒಂದು ರಾಕೆಟ್ ಆಕಾಶಕ್ಕೆ ಹಾರುವಾಗ, ಅಸಂಖ್ಯ ಸುನಂದಾರು ಭೂಮಿಯೊಳಗೆ ಸೇರುತ್ತಿದ್ದಾರೆ. ಕ್ರಯೋಜನಿಕ್ ತಂತ್ರಜ್ಞಾನದಲ್ಲಿ ನಾವು ಸ್ವಾವಲಂಬನೆ ಹೊಂದಿದಂತೆಯೇ ವರದಕ್ಷಿಣೆ ಎಂಬ ಅತಿ ಹೀನ ಪದ್ಧತಿಯಲ್ಲೂ ಸ್ವಾವಲಂಬನೆ ಸಾಧಿಸಿದ್ದೇವೆ. ಪೋಲಿಯೋ ವೈಕಲ್ಯದಿಂದ ನಾವು ಮುಕ್ತ ಆಗಿರಬಹುದು. ಆದರೆ ಹೆಣ್ಣು ಮಕ್ಕಳನ್ನು ಮಾನಸಿಕವಾಗಿ ಎಂದೆಂದೂ ವೈಕಲ್ಯಕ್ಕೆ ದೂಡುವ 'ಅತ್ಯಾಚಾರ'ವೆಂಬ ವೈಕಲ್ಯವನ್ನು ನಾವು ಸಂಶೋಧಿಸಿ ಇಟ್ಟುಕೊಂಡಿದ್ದೇವೆ.
   ನಿಜವಾಗಿ, ಮೇಲೆ ಉಲ್ಲೇಖಿಸಲಾದ ಮೂರೂ ಪ್ರಕರಣಗಳಲ್ಲಿ ಒಂದು ಸಮಾನ ಬಿಂದುವಿದೆ. ಅದುವೇ ನೈತಿಕತೆ. ಕೌಟುಂಬಿಕ ಸಂಬಂಧಗಳು ಬಿರುಕು ಬಿಡುತ್ತಿರುವ, ಸಾಮಾಜಿಕ ನಿಯಮಗಳು ಸಡಿಲಗೊಳ್ಳುತ್ತಿರುವ ಮತ್ತು ಧಾರ್ಮಿಕ ಮೌಲ್ಯಗಳು ಪ್ರಾಶಸ್ತ್ಯ ಕಳೆದುಕೊಳ್ಳುತ್ತಿರುವ ಸೂಚನೆಗಳನ್ನು ಪ್ರತಿದಿನದ ಬೆಳವಣಿಗೆಗಳು ಮತ್ತೆ ಮತ್ತೆ ಸಾರಿ ಹೇಳುತ್ತಿವೆ. ಅಂದಹಾಗೆ, ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್, ಆಮ್ ಆದ್ಮಿ.. ಸಹಿತ ರಾಜಕೀಯ ಪಕ್ಷಗಳ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರಬಹುದಾದರೂ ನೈತಿಕ ವಿಷಯದಲ್ಲಿ ಭಿನ್ನತೆಗಳಿರುವ ಸಾಧ್ಯತೆ ಇಲ್ಲ. ಕುಟುಂಬ, ಪತಿ-ಪತ್ನಿ, ಮಕ್ಕಳು ಮತ್ತು ಅಲ್ಲಿ ಪಾಲನೆಯಾಗಬೇಕಾದ ಮೌಲ್ಯಗಳ ವಿಷಯದಲ್ಲಿ ರಾಜಕಾರಣಿಗೂ ಸಾಮಾನ್ಯನಿಗೂ ನಡುವೆ ವ್ಯತ್ಯಾಸ ಇರುವುದಿಲ್ಲ. ಸಾಮಾನ್ಯನೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಹೇಗೆ ಪ್ರೀತಿಸುತ್ತಾನೋ ಹಾಗೂ ಪತ್ನಿ ಮತ್ತು ಮಕ್ಕಳು ತನ್ನನ್ನು ಎಷ್ಟು ಪ್ರೀತಿಸಬೇಕೆಂದು ಆಸೆ ಪಡುತ್ತಾನೋ ಅಂಥದ್ದೇ ಆಸೆ ಮತ್ತು ನಿರೀಕ್ಷೆ ರಾಜಕಾರಣಿಯಲ್ಲೂ ಇರುತ್ತದೆ. ಕಾಲೇಜಿಗೆ ಹೋದ ತನ್ನ ಮಗಳ ಸುರಕ್ಷಿತತೆಯ ಬಗ್ಗೆ ಸಾಮಾನ್ಯ ಹೆತ್ತವರು ನಿತ್ಯ ಅನುಭವಿಸುವ ಒತ್ತಡದಷ್ಟು ಅಲ್ಲದಿದ್ದರೂ ಒಂದು ಹಂತದ ವರೆಗೆ ರಾಜಕಾರಣಿ ಹೆತ್ತವರೂ ಅನುಭವಿಸುತ್ತಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಈ ಹಿಂದೆ ಇಂಥದ್ದೇ ಆಂತಕವನ್ನು ವ್ಯಕ್ತಪಡಿಸಿದ್ದರು. ಆಧುನಿಕ ಸಂಸ್ಕøತಿಯ ಥಳಕು-ಬಳುಕಿನಲ್ಲಿ ಎಲ್ಲಿ ತನ್ನ ಮಕ್ಕಳು ಹೆಜ್ಜೆ ತಪ್ಪುತ್ತಾರೋ ಅನ್ನುವ ಭೀತಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಾತ್ರ ಇರುವುದಲ್ಲ, ರಾಜಕಾರಣಿಗಳಂಥ ಶ್ರೀಮಂತ ಕುಟುಂಬಗಳಲ್ಲೂ ಇರುತ್ತದೆ. ಹಾಗಿದ್ದೂ, ನೈತಿಕತೆಯೇ ಈ ದೇಶದ ಅತಿದೊಡ್ಡ ಸಮಸ್ಯೆಯಾಗಿ ಇವತ್ತು ಗುರುತಿಸಿಕೊಳ್ಳುತ್ತಿರುವುದಕ್ಕೆ ಕಾರಣ ಏನು? ಧರ್ಮವನ್ನು ಅತೀ ಹೆಚ್ಚು ಅನುಸರಿಸುವವರುಳ್ಳ ದೇಶವೊಂದು ಧರ್ಮಬಾಹಿರ ಕೃತ್ಯಗಳಲ್ಲಿ ಹೆಚ್ಚೆಚ್ಚು ಸುದ್ದಿಯಾಗುತ್ತಿರುವುದು ಯಾವುದರ ಸೂಚನೆ? ವರದಕ್ಷಿಣೆ ಮತ್ತು ಮದ್ಯಪಾನವು ಮುಸ್ಲಿಮರ ಪಾಲಿಗೆ ಧಾರ್ಮಿಕವಾಗಿಯೇ ನಿಷಿದ್ಧ. ಪ್ರವಾದಿ ಮುಹಮ್ಮದ್ ಮತ್ತು ಪವಿತ್ರ ಕುರ್‍ಆನಿನ ಅನುಯಾಯಿ ಎಂದು ಗುರುತಿಸಿಕೊಳ್ಳುವ ಮತ್ತು ಮುಸ್ಲಿಮರ ಹೆಸರಿಟ್ಟ ವ್ಯಕ್ತಿ ಈ ನಿಯಮವನ್ನು ಪಾಲಿಸುವುದು ಕಡ್ಡಾಯ. ಮುಸ್ಲಿಮ್ ಕುಡುಕರು, ಮುಸ್ಲಿಮ್ ವರದಕ್ಷಿಣೆಕೋರರು ಎಂಬ ಪದಗಳೇ ಇಸ್ಲಾಮಿಗೆ ಅನ್ಯ. ಆದರೆ ಇವತ್ತು ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಇವುಗಳ ವಿರುದ್ಧವೇ ಮುಸ್ಲಿಮ್ ವಿದ್ವಾಂಸರು ಫತ್ವಾ ಹೊರಡಿಸಬೇಕಾದ ಸ್ಥಿತಿ ಬಂದಿದೆ. ಅಷ್ಟಕ್ಕೂ, ಸುನಂದ ಅವರ ಅಸಹಜ ಸಾವು ಮುಂದಿನ ದಿನಗಳಲ್ಲಿ ಸಹಜ ಸಾವಾಗಿಯೋ ಆತ್ಮಹತ್ಯೆಯಾಗಿಯೋ ಗುರುತಿಸಿಕೊಳ್ಳಬಹುದು. ಈ ಸಾವಿನಲ್ಲಿ ತರೂರ್ ನಿರಪರಾಧಿ ಎಂದೂ ಘೋಷಿತವಾಗಬಹುದು. ಯಾಕೆಂದರೆ, ಸುನಂದ ಅನುಭವಿಸಿದ ಮಾನಸಿಕ ಒತ್ತಡವನ್ನು ದಾಖಲಿಸುವುದಕ್ಕೆ ನಮ್ಮಲ್ಲಿ ಯಾವುದೇ ತಂತ್ರಜ್ಞಾನಗಳು ಇಲ್ಲವಲ್ಲ. ಅಲ್ಲದೇ ಕೋರ್ಟು ದೈಹಿಕ ಗಾಯಗಳನ್ನು ಪರಿಗಣಿಸುತ್ತದೆಯೇ ಹೊರತು ಮಾನಸಿಕ ಗಾಯಗಳನ್ನು ಅಲ್ಲವಲ್ಲ. ಹಾಗಂತ, ಇದು ಓರ್ವ ಸುನಂದರ ಸಮಸ್ಯೆ ಮಾತ್ರವೇ ಅಲ್ಲ. ಈ ದೇಶದಲ್ಲಿ ಅಸಂಖ್ಯಾ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಯ ಒಂದು ಮುಖವಷ್ಟೇ ಆಕೆ. ಪತಿಗೆ ಪತ್ನಿಯ ಮೇಲೆ ಮತ್ತು ಪತ್ನಿಗೆ ಪತಿಯ ಮೇಲೆ ಪರಸ್ಪರ ಪ್ರೀತಿಗಿಂತ ಅನುಮಾನಗಳೇ ಹೆಚ್ಚುತ್ತಿರುತ್ತಿರುವ ದಿನಗಳಿವು. ಮದುವೆ, ವಿಚ್ಛೇದನ, ವಿವಾಹೇತರ ಸಂಬಂಧ.. ಮುಂತಾದುವುಗಳೆಲ್ಲ 'ಸಹಜ' ಅನ್ನುವಷ್ಟರ ಮಟ್ಟಿಗೆ ಇವತ್ತು ಮಾಮೂಲು ಆಗತೊಡಗಿವೆ. ಇಂಥದ್ದೊಂದು ಸ್ಥಿತಿಯಲ್ಲಿ ನಾವು ಕೇವಲ ರಾಕೆಟ್ಟು, ಪೋಲಿಯೋ ಮುಕ್ತ ಭಾರತವನ್ನು ಕಲ್ಪಿಸಿಕೊಂಡು ಖುಷಿಪಟ್ಟರೆ ಏನು ಪ್ರಯೋಜನವಿದೆ? ಈ ಎಲ್ಲ ಖುಷಿಯನ್ನೂ ಮುಂದೊಂದು ದಿನ ವಿಷಾದವಾಗಿ ಪರಿವರ್ತಿಸಿಬಿಡಬಲ್ಲ ಸಮಸ್ಯೆಯ ಕುರಿತು ನಾವು ಎಷ್ಟಂಶ ಗಂಭೀರವಾಗಿದ್ದೇವೆ?
   ನೈತಿಕ ಮೌಲ್ಯಗಳು ಪಾತಾಳ ಕಂಡಿರುವ ದೇಶವೊಂದು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಪ್ರಯೋಜನವಿಲ್ಲ. ಒಂದು ದೇಶದ ಭವಿಷ್ಯವು ಆ ದೇಶದ ಸಾಮಾಜಿಕ ಅಭಿರುಚಿಗಳನ್ನು ಹೊಂದಿಕೊಂಡಿದೆ. ನೈತಿಕತೆಗೆ ಯಾವ ಬೆಲೆಯನ್ನೂ ಕೊಡದ ಸಮಾಜವೊಂದು ನೆಮ್ಮದಿಯ ದೇಶ ನಿರ್ಮಾಣಕ್ಕೆ ಯಾವ ಕೊಡುಗೆಯನ್ನೂ ಕೊಡಲಾರದು. ನೆಮ್ಮದಿಗೂ ಪ್ರಗತಿಗೂ ನಡುವೆ ದೊಡ್ಡ ವ್ಯತ್ಯಾಸ ಇದೆ. ಒಂದು ಕುಟುಂಬ ಅಥವಾ ದೇಶ ಸಂಪದ್ಭರಿತವಾಗಿದೆಯೆಂದ ಮಾತ್ರಕ್ಕೆ ಆ ಕುಟುಂಬ ನೆಮ್ಮದಿಯಿಂದಿದೆ ಎಂದರ್ಥವೂ ಅಲ್ಲ. ನೆಮ್ಮದಿ ಬರೇ ಶ್ರೀಮಂತಿಕೆಯನ್ನು ಹೊಂದಿಕೊಂಡಿಲ್ಲ. ಅದು ಆ ಕುಟುಂಬ ಪಾಲಿಸುತ್ತಿರುವ ಮೌಲ್ಯಗಳನ್ನು ಹೊಂದಿಕೊಂಡಿದೆ. ಈ ದೇಶ ಸದ್ಯ ನೆಮ್ಮದಿಯಿಲ್ಲದ ಶ್ರೀಮಂತಿಕೆಯೆಡೆಗೆ ಧಾವಿಸುತ್ತಿದೆಯೇನೋ ಎಂದು ಅನುಮಾನಿಸುವುದಕ್ಕೆ ಪ್ರತಿನಿತ್ಯ ಉದಾಹರಣೆಗಳು ಸಿಗುತ್ತಲೇ ಇವೆ. ಸುನಂದಾ ಪುಷ್ಕರ್, ಡೆನ್ಮಾರ್ಕ್ ಮಹಿಳೆ ಮತ್ತು ಇಮಾರತೆ ಶರಿಯಾಗಳು ಇದನ್ನು ಮತ್ತೊಮ್ಮೆ ದೃಢಪಡಿಸಿವೆ.

Wednesday, 15 January 2014

ಮುಂಜಿ, ಬುರ್ಖಾ ಮತ್ತು ರಾಜಕೀಯ ಭ್ರಮೆ

    ಒಂದು ದೇಶದ ಪಾಲಿಗೆ ಚುನಾವಣೆಯೊಂದು ಅತಿ ಮಹತ್ವದ ಮತ್ತು ಬಹುನಿರೀಕ್ಷೆಯ ವಿಷಯವಾಗಬೇಕಾದದ್ದು ಯಾವ ಕಾರಣದಿಂದ? ನಾವು ಬಯಸಿದರೂ ಬಯಸದಿದ್ದರೂ 5 ವರ್ಷಕ್ಕೊಮ್ಮೆ ಚುನಾವಣೆ ಬಂದೇ ಬರುತ್ತದೆ. ಮತದಾನದ ದಿನದಂದು ಸರಕಾರಿ ರಜೆಯನ್ನು ಘೋಷಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವಂತೆ ನೋಡಿಕೊಳ್ಳಲಾಗುತ್ತದೆ. ಮತದಾರರಿಗೆ ಸುಲಭವಾಗುವಂತೆ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತದಲ್ಲದೇ ಮನೆ ಮನೆಗೆ ತೆರಳಿ 'ಮತದಾರ ಚೀಟಿ'ಯನ್ನೂ ವಿತರಿಸಲಾಗುತ್ತದೆ. ಹಾಗಂತ, ಓರ್ವ ಮತದಾರ ಮತದಾನವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಇವೆಲ್ಲ ಪ್ರಮುಖ ಕಾರಣಗಳಾಗಬೇಕೇ ಅಥವಾ ಆ ಚುನಾವಣೆಯಲ್ಲಿ ಚರ್ಚೆಗೀಡಾಗುವ ವಿಷಯಗಳು; ಅಭ್ಯರ್ಥಿ, ಪಕ್ಷ, ಪ್ರಣಾಳಿಕೆಗಳು ಮುಖ್ಯವಾಗಬೇಕೇ? ಇಂಥದ್ದೊಂದು ಅನುಮಾನ ಪ್ರತಿ ಚುನಾವಣೆಗಳ ಸಂದರ್ಭದಲ್ಲೂ ಮತದಾರರಿಗೆ ಎದುರಾಗುತ್ತಲೇ ಇರುತ್ತವೆ.
   ದೇರಳಕಟ್ಟೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ಮುಂದೆ ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ. ರೌಡಿಗಳ ಪಟ್ಟಿಯಲ್ಲಿರುವ ಕೆಲವು ಕ್ರಿಮಿನಲ್‍ಗಳು ಮಾಡಿರುವ ಖಂಡನೀಯ ಕೃತ್ಯವೊಂದನ್ನು ಎತ್ತಿಕೊಂಡು ಮುಸ್ಲಿಮರನ್ನು ನಿಂದಿಸುವ, ಅವರ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಪ್ರಯೋಗಿಸುವ ಘಟನೆಗಳು ಇಲ್ಲಿ ನಡೆಯುತ್ತಿವೆ. ಮುಸ್ಲಿಮರ ಮುಂಜಿ ಕರ್ಮವನ್ನು, ಬುರ್ಖಾವನ್ನು ಬಹಿರಂಗ ವೇದಿಕೆಗಳಲ್ಲಿ ಹೀಯಾಳಿಸಲಾಗುತ್ತಿದೆ. ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಎಲ್ಲ ಸಂದರ್ಭಗಳಲ್ಲಿ ಬಿಜೆಪಿಯ ನಾಯಕರು ಮತ್ತು ಜನಪ್ರತಿನಿಧಿಗಳು ಇಂಥ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತ್ಯಕ್ಷ  ಬೆಂಬಲವನ್ನೂ ಸಾರುತ್ತಿದ್ದಾರೆ. ನಿಜವಾಗಿ, ಚುನಾವಣೆಯಲ್ಲಿ ಗೆಲ್ಲಬೇಕಾದರೆ ಮುಸ್ಲಿಮರನ್ನು ನಿಂದಿಸಬೇಕು ಅನ್ನುವ ಭ್ರಮೆಯು ದಕ್ಷಿಣ ಕನ್ನಡದ ಬಿಜೆಪಿಯಲ್ಲಿ ಮತ್ತು ಅದರ ಬೆಂಬಲಿಗರಲ್ಲಿ ಮಾತ್ರ ಇರುವುದಲ್ಲ. ಅದೊಂದು ರಾಷ್ಟ್ರ ಮಟ್ಟದ ಭ್ರಮೆ. ಆ ಭ್ರಮೆ ಚುನಾವಣೆ ಹತ್ತಿರ ಬರುತ್ತಲೇ ಜಾಗೃತವಾಗುತ್ತದೆ. ಆಗ ಪ್ರತಿಯೊಂದು ಅಪರಾಧ ಕೃತ್ಯವನ್ನೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸಲಾಗುತ್ತದೆ. 2002ರ ಗುಜರಾತ್ ಹತ್ಯಾಕಾಂಡದ ಬಳಿಕ ನಡೆದ ಚುನಾವಣೆಯ ಸಂದರ್ಭದಲ್ಲಿ ಮೆಹ್ಸಾನದಲ್ಲಿ ನಡೆದ ಸಭೆಯಲ್ಲಿ ಮೋದಿ ಭಾಷಣ ಆರಂಭಿಸಿದ್ದೇ, 'ಅಲೀಗಳು, ಮಲೀಗಳು, ಜಮಾಲಿಗಳು  ಮತ್ತು ಅವರ ಶಿಶು ಉತ್ಪಾದನಾ ಕಂಪೆನಿಗಳು..' (ದಿ ಹಿಂದೂ, 2013 ಡಿಸೆಂಬರ್ 31) ಎಂದೇ. ಉತ್ತರ ಪ್ರದೇಶದ ಮುಝಫ್ಫರ್ ನಗರದ ಗಲಭೆಯ ಆರೋಪಿಗಳಾಗಿರುವ ಬಿಜೆಪಿ ಶಾಸಕರಾದ ಸಂಗೀತ್ ಸೋಮ್, ಸುರೇಶ್ ರಾಣಾ, ಕನ್ವರ್ ಸೋಮ್ ಮತ್ತು ಇತರ 34 ಮಂದಿಯನ್ನು, ‘ಬಿಜೆಪಿ ರಾಜ್ಯ ಮಾನವ ಹಕ್ಕು ಘಟಕವು’ ಸನ್ಮಾನಿಸಿತ್ತು. ಸನ್ಮಾನದ ಎರಡು ದಿನಗಳ ಬಳಿಕ ಮೋದಿಯವರ ರಾಲಿಯಲ್ಲೂ ಈ ಶಾಸಕರನ್ನು ಬಹಿರಂಗವಾಗಿಯೇ ಸನ್ಮಾನಿಸಲಾಯಿತು. ಅಲ್ಲದೇ, ಮುಝಫ್ಫರ್ ನಗರದ ಗಲಭೆಯ ಬಗ್ಗೆ ಈ ವರೆಗೆ ಯಾವೊಂದು ಮಾತನ್ನೂ ಆಡಿಲ್ಲದ ಮೋದಿ, ಕೇಂದ್ರ ಸರಕಾರ ತರಲುದ್ದೇಶಿಸಿರುವ ಕೋಮುಗಲಭೆ ತಡೆ ವಿಧೇಯಕದ ವಿರುದ್ಧ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿ ಕಳೆದ ತಿಂಗಳು ಪ್ರಧಾನಿಗೆ ಪತ್ರ (ದಿ ಹಿಂದೂ, 2013 ಡಿಸೆಂಬರ್ 27) ಬರೆದಿದ್ದರು. ಇವೆಲ್ಲ ಏನು? ಮುಸ್ಲಿಮರ ಕುರಿತಂತೆ ಅದು ಹೊಂದಿರುವ ದ್ವೇಷದ ಅಭಿಪ್ರಾಯಕ್ಕೆ ಸ್ಪಷ್ಟ ಪುರಾವೆಗಳಲ್ಲವೇ? ಒಂದು ದೇಶದ ಪ್ರಜೆಗಳ ಬಗ್ಗೆ ಈ ಮಟ್ಟದ ಅಭಿಪ್ರಾಯವಿರುವ ಪಕ್ಷವೊಂದು ದೇಶವನ್ನಾಳುವುದನ್ನು ಹೇಗೆ ಸಹಿಸಿಕೊಳ್ಳುವುದು?
   ನಿಜವಾಗಿ, ಧರ್ಮಕ್ಕೂ ಅಪರಾಧಕ್ಕೂ ಸಂಬಂಧವೇ ಇಲ್ಲ. ಆರೋಪಿಗಳ ಹೆಸರುಗಳು ಏನೇ ಆಗಿರಲಿ, ಅವರು ಬರೇ ಆರೋಪಿಗಳೇ ಹೊರತು ಯಾವ ಧರ್ಮದ ಪ್ರತಿನಿಧಿಗಳೂ ಅಲ್ಲ, ಆಗಬಾರದು ಕೂಡಾ. ಅಷ್ಟಕ್ಕೂ, ಮುಸ್ಲಿಮರನ್ನು ನಿಂದಿಸುವವರಿಗೆ, ಮುಸ್ಲಿಮ್ ದ್ವೇಷದ ಕಾರ್ಯಾಚರಣೆಗಳಲ್ಲಿ ಪಾಲುಗೊಂಡವರನ್ನು ಸನ್ಮಾನಿಸುವವರಿಗೆ ಇವೆಲ್ಲ ಗೊತ್ತಿಲ್ಲ ಎಂದಲ್ಲ, ಗೊತ್ತಿದೆ. ಹಾಗಿದ್ದೂ, ಅವರು ಮತ್ತೆ ಮತ್ತೆ ಯಾಕೆ ತಪ್ಪು ಮಾಡುತ್ತಿದ್ದಾರೆಂದರೆ, ಜನರ ಮುಂದಿಡುವುದಕ್ಕೆ ಅವರಲ್ಲಿ ಬೇರೆ ಯಾವುದೇ ಜನಪರ ಇಶ್ಶೂ ಇಲ್ಲ. ಅಲ್ಲದಿದ್ದರೆ, ದೇರಳಕಟ್ಟೆ ಪ್ರಕರಣವನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ಮತ್ತು ಅವರ ಆರಾಧನಾ ಕ್ರಮಗಳನ್ನು ನಿಂದಿಸುತ್ತಿರುವುದಾದರೂ ಯಾಕೆ? ಅಪರಾಧ ಕೃತ್ಯಗಳ ಹೊಣೆಯನ್ನು ಬಿಜೆಪಿ ಯಾಕೆ ಧರ್ಮದ ಮೇಲೆ ಹೊರಿಸುತ್ತಿದೆ? ಒಂದು ವೇಳೆ ಅಪರಾಧಗಳಿಗೆ ಧರ್ಮವೇ ಹೊಣೆ ಎಂದಾದರೆ, ಅದು ಮೊಟ್ಟಮೊದಲು ಹಿಂದೂ ಧರ್ಮವನ್ನೇ ದ್ವೇಷಿಸಬೇಕಾಗುತ್ತದೆ. ಯಾಕೆಂದರೆ, ಈ ದೇಶದಲ್ಲಿ ಪ್ರತಿನಿತ್ಯ ಹಿಂದೂ-ಮುಸ್ಲಿಮ್-ಜೈನ ಎಂಬ ಬೇಧವಿಲ್ಲದೇ ಎಲ್ಲ ಧರ್ಮಗಳ ಅನುಯಾಯಿಗಳೂ ಅಪರಾಧ ಕೃತ್ಯಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಇವರಲ್ಲಿ ಮುಸ್ಲಿಮರನ್ನು ಮಾತ್ರ ಹೆಕ್ಕಿಕೊಂಡು ಅವರ ಅಪರಾಧವನ್ನು ಮಾತ್ರ ಅತಿ ಗಂಭೀರವೆಂಬಂತೆ ಬಿಜೆಪಿ ಬಿಂಬಿಸುತ್ತಿರುವುದೇಕೆ? ಪ್ರೀತಿ, ಪ್ರೇಮ, ಪ್ರಣಯ, ಮೋಸ, ವಂಚನೆಗಳೆಲ್ಲ ಯಾವುದಾದರೊಂದು ಧರ್ಮದೊಂದಿಗೆ ಗುರುತಿಸಿಕೊಂಡವರಲ್ಲಿ ಮಾತ್ರ ಇರುವುದಲ್ಲವಲ್ಲ. ಈ ದೇಶಧ ಶೈಕ್ಷಣಿಕ ವ್ಯವಸ್ಥೆ, ಉದ್ಯೋಗ ರಂಗ, ಮಾರುಕಟ್ಟೆ, ಸಾಂಸ್ಕøತಿಕ ಕ್ಷೇತ್ರಗಳೆಲ್ಲ ಹಿಂದೂ-ಮುಸ್ಲಿಮ್ ಎಂದಾಗಲಿ ಹೆಣ್ಣು-ಗಂಡು ಎಂದಾಗಲಿ ವಿಭಜನೆಗೊಂಡಿಲ್ಲ. ಎಲ್ಲರೂ ಮುಕ್ತವಾಗಿ ಬೆರೆಯುವ ವಾತಾವರಣ ಇಲ್ಲಿದೆ. ಇಂಥ ಸಂದರ್ಭದಲ್ಲಿ ಹಿಂದೂ ಹುಡುಗಿ ಮುಸ್ಲಿಮ್ ಹುಡುಗನನ್ನು ಪ್ರೀತಿಸುವುದು ಅಥವಾ ಮುಸ್ಲಿಮ್ ಹುಡುಗಿ ಹಿಂದೂ ಹುಡುಗನ ಬಗ್ಗೆ ಆಕರ್ಷಿತಳಾಗುವುದು ಅದ್ಭುತವೇನೂ ಅಲ್ಲ. ಅದಕ್ಕೆ ಪಿತೂರಿ, ಷಡ್ಯಂತ್ರಗಳ ಅಗತ್ಯವೂ ಇಲ್ಲ. ಈ ದೇಶದ ಸಾಮಾಜಿಕ, ಶೈಕ್ಷಣಿಕ ವಾತಾವರಣವು ಹೆಣ್ಣು-ಗಂಡು ಪರಸ್ಪರ ಮಾತಾಡುವಷ್ಟು, ಬೆರೆಯುವಷ್ಟು ಮುಕ್ತವಾಗಿರುವಾಗ ವಯೋಸಹಜ ಆಕರ್ಷಣೆಗೆ ಧರ್ಮದ ಲೇಪ ಕೊಡಬೇಕಾದ ಅಗತ್ಯವೂ ಇಲ್ಲ. ಆದರೆ ಬಿಜೆಪಿ ಮತ್ತು ಅದರ ಬೆಂಬಲಿಗರು ಈ ಸಹಜ ಪ್ರಕ್ರಿಯೆಗಳಿಗೆ ಅಸಹಜ ರೂಪವನ್ನು ಕೊಡಲು ಪ್ರಯತ್ನಿಸುತ್ತಿದ್ದಾರೆ. ಈ ರಾಜ್ಯದಲ್ಲಿ ನಾಪತ್ತೆಯಾದ ಹೆಣ್ಣು ಮಕ್ಕಳ ಪಟ್ಟಿಯನ್ನು ಎತ್ತಿ ಹೇಳಿ, ಹೆತ್ತವರನ್ನು ಭೀತಿಗೆ ಒಳಪಡಿಸುತ್ತಿದ್ದಾರೆ. ಲವ್ ಜಿಹಾದ್.. ಮುಂತಾದ ಪದಗಳನ್ನು ಹರಿಯ ಬಿಡುತ್ತಿದ್ದಾರೆ. ನಿಜವಾಗಿ, ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಗೆ ಒಡ್ಡಿ, ಅವರನ್ನು ಮತಾಂತರಗೊಳಿಸಿ, ಮುಸ್ಲಿಮರ ಸಂಖ್ಯೆಯನ್ನು ಹೆಚ್ಚುಗೊಳಿಸಲು ಆದೇಶವನ್ನು ಇಸ್ಲಾಮ್ ಎಂದೂ ನೀಡಿಲ್ಲ. ಧರ್ಮ ಅನ್ನುವುದು ಹೇಗಾದರೂ ಮಾಡಿ ಸಂಖ್ಯೆಯನ್ನು ಹೆಚ್ಚುಗೊಳಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿ ಇರುವುದಲ್ಲ. ಮೋಸ, ವಂಚನೆಯಿಂದ ಯಾವ ಧರ್ಮವನ್ನೇ ಆಗಲಿ ಬಲಾಢ್ಯಗೊಳಿಸಲು ಸಾಧ್ಯವೇ? ಅಂಥದ್ದೊಂದು ಕಲ್ಪನೆಯನ್ನು ಇಸ್ಲಾಮ್ ಎಂದೂ ಪ್ರಸ್ತುತಪಡಿಸಿಯೇ ಇಲ್ಲ. ಆದರೆ, ಬಿಜೆಪಿ ಮತ್ತು ಬೆಂಬಲಿಗರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಮತ್ತೆ ಮತ್ತೆ ಸುಳ್ಳನ್ನು ಪ್ರಚಾರ ಮಾಡುತ್ತಲೇ ಇದ್ದಾರೆ. ಮುಸ್ಲಿಮರನ್ನು ನಿಂದಿಸುವುದಕ್ಕೆ ಅಪರಾಧ ಕೃತ್ಯಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುತ್ತಿದ್ದಾರೆ. ಜನರ ಮಧ್ಯೆ ಭಾವನಾತ್ಮಕ ಗಡಿಗಳನ್ನು ನಿರ್ಮಿಸುತ್ತಿದ್ದಾರೆ.
   ಏನೇ ಆಗಲಿ, ಈ ದೇಶದ ಚುನಾವಣೆಗಳು ಬ್ಲ್ಯಾಕ್‍ಮೇಲ್ ರಾಜಕೀಯಕ್ಕಿಂತ ಹೊರತಾದ ಕಾರಣಕ್ಕಾಗಿ ಚರ್ಚೆಯಲ್ಲಿರಬೇಕು. ಮುಸ್ಲಿಮರನ್ನು ನಿಂದಿಸುವುದರಿಂದ ಓಟು ಸಿಗುತ್ತದೆ ಎಂಬ ನಂಬುಗೆಯನ್ನು ಮತದಾರರು ಯಾವ ಕಾರಣಕ್ಕೂ ಬೆಂಬಲಿಸಬಾರದು. ಚುನಾವಣೆಗಳು ಜನಪರ ಇಶ್ಶೂಗಳ ಆಧಾರದಲ್ಲಿ ನಡೆಯಲಿ. ಉತ್ತಮ ಪ್ರಣಾಳಿಕೆ, ಉತ್ತಮ ಅಭ್ಯರ್ಥಿ
ಗಳು, ಮನುಷ್ಯ ಪ್ರೇಮಿ ವಿಚಾರಧಾರೆಗಳನ್ನು ಬೆಂಬಲಿಸುವ ರಾಜಕೀಯ ಮುತ್ಸದ್ದಿತನವು ಮತದಾರರಲ್ಲಿ ಬೆಳೆದು ಬರಲಿ. ಅಪರಾಧ ಕೃತ್ಯಗಳನ್ನು ಕೇವಲ ಅಪರಾಧ ಕೃತ್ಯಗಳಾಗಿಯೇ ನೋಡುವ ಮತ್ತು ಧರ್ಮವನ್ನು ಧರ್ಮವಾಗಿಯೇ ನೋಡುವ ವಾತಾವರಣ ದೇಶದೆಲ್ಲೆಡೆ ಕಾಣಿಸಿಕೊಳ್ಳಲಿ.