Wednesday, 21 October 2015

ಮಾಂಸವು ಆಹಾರವಾಗಿ ಇದ್ದರೂ ಇಲ್ಲದಿದ್ದರೂ..

     ಛತ್ತೀಸ್‍ಗಢವು ಭಾರತದ ಭಾಗವೋ ಅಥವಾ ಪ್ರತ್ಯೇಕ ರಾಷ್ಟ್ರವೋ ಎಂದು ಪ್ರಶ್ನಿಸಬೇಕಾದಂಥ ಆತಂಕಕಾರಿ ಬೆಳವಣಿಗೆಯೊಂದು ಸೃಷ್ಟಿಯಾಗಿದೆ. ಅಲ್ಲಿನ ಹೈಕೋರ್ಟಿಗೂ ಇಂಥದ್ದೇ ಅನುಭವವಾಗಿದೆ. ಛತ್ತೀಸ್‍ಗಢದ ಬಸ್ತಾರ್ ಜಿಲ್ಲೆಯ ಸುಮಾರು 50 ಗ್ರಾಮಗಳು ಹಿಂದೂ ಅಲ್ಲದವರ ಪ್ರಾರ್ಥನೆ, ಭಾಷಣ ಮತ್ತು ಧರ್ಮ ಪ್ರಚಾರಗಳಿಗೆ ನಿಷೇಧವನ್ನು ಹೇರಿವೆ. ಈ ಗ್ರಾಮಗಳಲ್ಲಿ ಹಿಂದೂ ಅಲ್ಲದವರಿಗೆ ಕೂಲಿಯಾಳುಗಳು ಸಿಗುವುದಿಲ್ಲ. ಕಟ್ಟಡ ಕಾಮಗಾರಿಗಳ ನಿರ್ಮಾಣಕ್ಕೆ ತಡೆ ಒಡ್ಡಲಾಗುತ್ತದೆ. ಕುಡಿಯುವ ನೀರು, ಆಹಾರ ಖರೀದಿಗೂ ಅಘೋಷಿತ ಬಹಿಷ್ಕಾರವಿದೆ. ಛತ್ತೀಸ್‍ಗಢದ ಕ್ರೈಸ್ತ ಸಂಘಟನೆ ಮತ್ತು ಇತರ ಸಾಮಾಜಿಕ ಕಾರ್ಯಕರ್ತರು ಈ ಸಂಗತಿಯನ್ನು ಹೈಕೋರ್ಟ್‍ನ ಮುಂದಿಟ್ಟಾಗ ಅದು ಪರಿಸ್ಥಿತಿಗೆ ಅಸಹನೆ ವ್ಯಕ್ತಪಡಿಸಿದೆ. ಸರಕಾರದಿಂದ ವರದಿಯನ್ನೂ ಅಪೇಕ್ಷಿಸಿದೆ. ನಿಜವಾಗಿ, ಈ ಬಹಿಷ್ಕಾರದ ಹಿಂದೆ ಒಂದು ಕತೆಯಿದೆ. ಈ ಕತೆ ಸಂಪೂರ್ಣವಾಗಿ ಸಂಘಪರಿವಾರದಿಂದ ರಚಿತವಾದುದು. ಸಂಘಪರಿವಾರದ ಸಲಹೆಯಂತೆ ಈ ಬಹಿಷ್ಕಾರವನ್ನು ಹೇರಲಾಗಿದೆ ಎಂದು ಅದರ ಬಸ್ತಾರ್ ಜಿಲ್ಲಾಧ್ಯಕ್ಷ ಸುರೇಶ್ ಯಾದವ್ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಒಂದು ಕಡೆ, ಗೋವಿನ ಹೆಸರಲ್ಲಿ ಥಳಿಸಿ ಕೊಲ್ಲಲಾಗುತ್ತಿದ್ದರೆ ಇನ್ನೊಂದೆಡೆ ಈ ಥಳಿಸಿ ಕೊಲ್ಲುವವರ ಮುಖವಾಣಿಯಾದ ಪಾಂಚಜನ್ಯ ಪತ್ರಿಕೆಯು, ‘ಗೋಹತ್ಯೆ ಮಾಡುವವರನ್ನು ಹತ್ಯೆ ನಡೆಸಬೇಕು’ ಎಂದು ಕರೆ ಕೊಡುತ್ತದೆ. ಮಗದೊಂದೆಡೆ, ಗುಜರಾತ್‍ನಲ್ಲಿ ಗಾರ್ಬಾ ನೃತ್ಯಕ್ಕೆ ಮುಸ್ಲಿಮರಿಗೆ ಬಹಿಷ್ಕಾರ ಹಾಕಲಾಗುತ್ತದೆ. ಅಷ್ಟಕ್ಕೂ, ಥಳಿತ, ಹತ್ಯೆ, ಬಹಿಷ್ಕಾರ, ದ್ವೇಷ ಭಾಷಣಗಳೇ ಇತ್ತೀಚೆಗೆ ಪ್ರತಿದಿನದ ಸುದ್ದಿಗಳಾಗಿರುವುದಕ್ಕೆ ಕಾರಣಗಳೇನು? ಈ ಎಲ್ಲದರಲ್ಲೂ ಬಿಜೆಪಿ ಮತ್ತು ಅದರ ಬೆಂಬಲಿಗ ಗುಂಪು ಆರೋಪಿ ಸ್ಥಾನದಲ್ಲಿರುವುದರಿಂದ ಈ ಪ್ರಶ್ನೆಗೆ ಮತ್ತಷ್ಟು ಬಲ ಬರುತ್ತದೆ. ಅಭಿವೃದ್ಧಿಯ ಹೆಸರಲ್ಲಿ ಚುನಾವಣೆಯನ್ನು ಎದುರಿಸಿದ ನರೇಂದ್ರ ಮೋದಿಯವರು ಇಂಥದ್ದೊಂದು ಸನ್ನಿವೇಶವನ್ನು ಬಯಸಿದ್ದರೇ? ಅಭಿವೃದ್ಧಿ ಅವರ ನಿಜವಾದ ಗುರಿ ಆಗಿರಲಿಲ್ಲವೇ? ಒಂದು ಕಡೆ ಗೋವಿನ ಹೆಸರಲ್ಲಿ ಥಳಿಸಿ ಕೊಲ್ಲುವಾಗ ಇನ್ನೊಂದು ಕಡೆ ಪ್ರತಿದಿನ ಟನ್ನುಗಟ್ಟಲೆ ಮಾಂಸವು ವಿದೇಶಕ್ಕೆ ರಫ್ತಾಗುತ್ತಾ ಇದೆ. ಆದರೆ ವಿದೇಶಕ್ಕೆ ಗೋಮಾಂಸ ರಫ್ತು ಮಾಡುವ ಬೃಹತ್ ಕಂಪೆನಿಗಳ ವಿರುದ್ಧ ಥಳಿಸಿ ಕೊಲ್ಲುವ ಮಂದಿ ಯಾವ ಪ್ರತಿಭಟನೆಯನ್ನೂ ಮಾಡುತ್ತಿಲ್ಲ. ಅಲ್ಲಿಗೆ ಗೋವುಗಳನ್ನು ಸಾಗಿಸುವ ವಾಹನಗಳ ಮೇಲೆ ದಾಳಿ ನಡೆಸುತ್ತಿಲ್ಲ. ಅದರ ಮಾಲಿಕರು, ವ್ಯವಸ್ಥಾಪಕರು, ಕೆಲಸಗಾರರ ವಿರುದ್ಧ ಮೊಕದ್ದಮೆ ಹೂಡುತ್ತಿಲ್ಲ. ಮಾಂಸೋದ್ಯಮದಲ್ಲಿ ತೊಡಗಿರುವ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪ್ರಧಾನಿಯವರಿಗೆ ಸಂಪೂರ್ಣ ಅಧಿಕಾರ ಇದ್ದರೂ ಅದಕ್ಕಾಗಿ ಈ ಮಂದಿ ಒತ್ತಾಯಿಸುತ್ತಿಲ್ಲ. ಈ ದ್ವಂದ್ವಕ್ಕೆ ಏನೆನ್ನಬೇಕು?
  ಬಹಿಷ್ಕಾರ ಎಂಬ ಪದಕ್ಕೆ ಈ ದೇಶದಲ್ಲಿ ಪ್ರಾಚೀನ ಇತಿಹಾಸ ಇದೆ. ಈ ಪದದ ತೀವ್ರತೆಯನ್ನು ಮೊಟ್ಟಮೊದಲು ಅನುಭವಿಸಿದವರು ದಲಿತರು. ಅಂಬೇಡ್ಕರ್‍ರಿಗೂ ಇದರ ಬಿಸಿ ತಟ್ಟಿದೆ. ಸಾರ್ವಜನಿಕ ಬಾವಿಯಿಂದ, ಅಂಗಡಿಯಿಂದ, ದೇವಸ್ಥಾನಗಳಿಂದ, ಸಾರ್ವಜನಿಕ ಸ್ಥಳಗಳಿಂದ ಬಹಿಷ್ಕೃತಗೊಂಡೇ ಶತಮಾನವನ್ನು ಅವರು ಕಳೆದಿದ್ದಾರೆ. ಅದರ ಪರಿಣಾಮ ಎಷ್ಟು ಭೀಕರ ಪ್ರಮಾಣದಲ್ಲಿ ಆಗಿದೆಯೆಂಬುದು ಇವತ್ತಿಗೂ ಸರಕಾರಿ ಕಚೇರಿಗಳು, ಮಾಧ್ಯಮದ ಆಯಕಟ್ಟಿನ ಜಾಗಗಳು, ಪೊಲೀಸ್ ಇಲಾಖೆ, ಪ್ರಭುತ್ವ, ರಾಜಕೀಯ ಪಕ್ಷಗಳ ಪ್ರಮುಖ ಸ್ಥಾನಗಳಲ್ಲಿ ಯಾರಿದ್ದಾರೆಂಬುದನ್ನು ಪರಿಶೀಲಿಸಿದರೆ ಸ್ಪಷ್ಟವಾಗುತ್ತದೆ. ಸ್ವಾತಂತ್ರ್ಯಾನಂತರ ದಲಿತ ವರ್ಗಕ್ಕೆ ವಿೂಸಲಾತಿಯನ್ನು ಒದಗಿಸಿದ್ದರೂ ಅವರು ವ್ಯವಸ್ಥೆಯ ಆಯಕಟ್ಟಿನ ಜಾಗಕ್ಕೆ ತಲುಪಬೇಕಾದಷ್ಟು ಪ್ರಮಾಣದಲ್ಲಿ ತಲುಪಿಲ್ಲ. ರಾಜಕೀಯದಲ್ಲಿ ಅವರು ತಮ್ಮ ಸಂಖ್ಯೆಗೆ ಅನುಗುಣವಾಗಿ ಬಲಶಾಲಿಯಾಗಿಲ್ಲ. ಮಾಧ್ಯಮಗಳ ನೀತಿ ನಿರೂಪಣಾ ಹಂತಕ್ಕೆ ಅವರಿನ್ನೂ ಏರಿಲ್ಲ. ದಲಿತ ಸಬಲೀಕರಣಕ್ಕಾಗಿ ಸರಕಾರ ಸರಣಿ ಕಾನೂನುಗಳನ್ನು ರಚಿಸಿದ ಬಳಿಕವೂ ಇವತ್ತೂ ದಲಿತರೆಂಬ ಕಾರಣಕ್ಕಾಗಿ ಅವರ ಮೇಲೆ ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದೀಗ, ದಲಿತರನ್ನು ಬಹಿಷ್ಕಾರದ ಮೂಲಕ ಸತಾಯಿಸಿದ ಅದೇ ಗುಂಪು ಬಹಿಷ್ಕಾರದ ಹೊಸ ನಮೂನೆಯನ್ನು ಪ್ರಸ್ತುತಪಡಿಸುತ್ತಿದೆ. ಆದಿವಾಸಿ-ಹಿಂದುಳಿದ ಮಂದಿಯೇ ಹೆಚ್ಚಿರುವ ಬಸ್ತಾರ್‍ನಂತಹ ಜಿಲ್ಲೆಯಿಂದಲೇ ಈ ಬಹಿಷ್ಕಾರವನ್ನು ಜಾರಿಗೊಳಿಸುವ ಅತ್ಯಂತ ಬುದ್ದಿsವಂತಿಕೆಯನ್ನು ಅದು ಪ್ರದರ್ಶಿಸುತ್ತಲೂ ಇದೆ. ಈ ಬಹಿಷ್ಕಾರ ದಲಿತ ಬಹಿಷ್ಕಾರಕ್ಕಿಂತ ಹೆಚ್ಚು ಭಯಾನಕವಾದುದು. ಗೋವಿನ ಹೆಸರಲ್ಲಿ, ಮತಾಂತರ, ಸಂಸ್ಕೃತಿ, ವಿದೇಶಿ ಮೂಲದ ಹೆಸರಲ್ಲಿ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ಭಾರತೀಯತೆಯಿಂದ ಪ್ರತ್ಯೇಕಿಸಿ ಹೇಳುವುದು ಸುಲಭ ಮತ್ತು ಹೆಚ್ಚು ಭಾವನಾತ್ಮಕ. ‘ನಮ್ಮ ಪೂಜಾರ್ಹ ಪ್ರಾಣಿಯನ್ನು ಅವರು ಬೇಕೆಂದೇ ಅವಮಾನಿಸುತ್ತಾರೆ’ ಎಂದು ಹೇಳುವಾಗ ಅಲ್ಲೊಂದು ಭಾವುಕತೆ ಸೃಷ್ಟಿಯಾಗುತ್ತದೆ. ‘ಅವರಿಂದಾಗಿ ನಮ್ಮ ಸಂಸ್ಕøತಿ ಹಾಳಾಗಿದೆ, ನಮ್ಮ ಆಹಾರದಲ್ಲಿ ಧರ್ಮ ವಿರೋಧಿ ಅಂಶಗಳು ಸೇರಿಕೊಂಡಿವೆ..’ ಎಂದೆಲ್ಲಾ ಹೇಳುವಾಗ ಒಂದರ ವೈಭವೀಕರಣ ಮತ್ತು ಇನ್ನೊಂದರ ಅಸಹ್ಯೀಕರಣ ಕೂಡ ನಡೆಯುತ್ತದೆ. ಈ ಅಸಹ್ಯೀಕರಣವೇ ಅಂತಿಮವಾಗಿ ಸಮಾಜವನ್ನು ನಾವು ಮತ್ತು ಅವರು ಎಂದು ವಿಭಜಿಸುವುದಕ್ಕೆ ನೀಲನಕ್ಷೆಯನ್ನು ಒದಗಿಸುತ್ತದೆ. ದಲಿತರನ್ನು ಈ ದೇಶದಲ್ಲಿ ಬಹಿಷ್ಕಾರಕ್ಕೆ ತುತ್ತಾಗಿಸಿದ್ದು ಅವರ ಆಹಾರ, ಸಂಸ್ಕೃತಿ, ವರ್ಣ, ವೇಷ-ಭೂಷಣಗಳನ್ನು ಅಸಹ್ಯಗೊಳಿಸುವ ಮೂಲಕವೇ ಆಗಿತ್ತು. ಅವರನ್ನು ಸಂಸ್ಕೃತಿಹೀನರಂತೆ ಕಾಣಲಾಯಿತು. ಪದೇ ಪದೇ ಅವರ ವರ್ಣವನ್ನು ಹೀನೈಸಲಾಯಿತು. ಅವರ ಆಹಾರ ಪದ್ಧತಿಯನ್ನು ತುಚ್ಛೀಕರಿಸಲಾಯಿತು. ಹೀಗೆ ನಿಧಾನವಾಗಿ ಅವರು ಸಮಾಜದ ಮುಖ್ಯ ಧಾರೆಯಿಂದ ಕಳೆದುಹೋಗುತ್ತಾ ಆತ್ಮವಿಶ್ವಾಸವನ್ನು ಕಳಕೊಳ್ಳತೊಡಗಿದರು. ಇದೀಗ ಅದೇ ಮಾದರಿಯ ಪ್ರಯೋಗವನ್ನು ದೇಶದಾದ್ಯಂತ ಜಾರಿಗೊಳಿಸುವ ಪ್ರಯತ್ನವೊಂದು ನಡೆಯುತ್ತಿರುವಂತೆ ತೋರುತ್ತಿದೆ. ನಾವು ಮತ್ತು ಅವರು ಎಂಬೊಂದು ವಿಭಜನೆ. ಅವರು ಗೋವು ತಿನ್ನುವವರು, ಮತಾಂತರ ಮಾಡುವವರು, ಹೆಣ್ಣು ಮಕ್ಕಳನ್ನು ದುರುಪಯೋಗಿಸುವವರು.. ಎಂದೆಲ್ಲಾ ಹೇಳುತ್ತಾ ‘ಅವರಿಂದ' ಮುಕ್ತವಾದ ಪ್ರದೇಶಗಳನ್ನು ಹುಟ್ಟು ಹಾಕುವುದು. ಅವರಿಲ್ಲದ ಸಮಾಜವನ್ನು ಕಟ್ಟಿಕೊಳ್ಳುವುದು. ಬಸ್ತಾರ್ ಇದರ ಮುನ್ಸೂಚನೆ ಎಂದೇ ಹೇಳಬೇಕಾಗುತ್ತದೆ.
  ಅಷ್ಟಕ್ಕೂ, ಈ ದೇಶದಲ್ಲಿ ಮಾಂಸಾಹಾರವನ್ನು ಪ್ರಾರಂಭಿಸಿದ್ದು ಮುಸ್ಲಿಮರೂ ಅಲ್ಲ, ಅದನ್ನು ವಿದೇಶಕ್ಕೆ ರಫ್ತು ಮಾಡುವಲ್ಲಿ ಅವರ ಕೈವಾಡವೂ ಇಲ್ಲ. ಈ ದೇಶದ ಒಟ್ಟು ಕಸಾಯಿಖಾನೆಗಳಲ್ಲಿ ಆಗುತ್ತಿರುವ ಮಾಂಸಕ್ಕಿಂತ ಹೆಚ್ಚು ಮಾಂಸವು ವಿದೇಶಕ್ಕೆ ರಫ್ತಾಗುತ್ತಿರುವುದನ್ನು ಮುಚ್ಚಿಟ್ಟು ಇವತ್ತು ಗೋಹತ್ಯೆಯನ್ನು ಮುಸ್ಲಿಮರ ತಲೆಗೆ ಕಟ್ಟಲಾಗುತ್ತಿದೆ. ಅವರನ್ನು ಭಯೋತ್ಪಾದಕರಂತೆ ಮತ್ತು ಅಸಹಿಷ್ಣುಗಳಂತೆ ಬಿಂಬಿಸಲಾಗುತ್ತಾ ಇದೆ. ಆದರೆ ಇದು ವಾಸ್ತವ ಅಲ್ಲ. ಈ ಪ್ರಚಾರದ ಹಿಂದೆ ಮುಸ್ಲಿಮರನ್ನು ಮತ್ತು ಕ್ರೈಸ್ತರನ್ನು ದಲಿತೀಕರಣಗೊಳಿಸುವ ಸಂಚೊಂದು ನಡೆಯುತ್ತಿರುವಂತೆ ತೋರುತ್ತಿದೆ. ಒಂದು ಕಡೆ ಅಭಿವೃದ್ಧಿಯ ಬಗ್ಗೆ ಮಾತಾಡುತ್ತಲೇ ಇನ್ನೊಂದೆಡೆ ನಡೆಯುತ್ತಿರುವ ಈ ಸಂಚನ್ನು ಭಾರತೀಯರು ವಿಫಲಗೊಳಿಸಬೇಕು. ಈ ದೇಶ ಎಲ್ಲರದು. ಎಲ್ಲರೂ ಜೊತೆಯಾಗಿ ಬಾಳುವ ತಾರತಮ್ಯ ರಹಿತ ಭಾರತ ನಮ್ಮ ಗುರಿಯಾಗಬೇಕು. ಮಾಂಸವು ಆಹಾರವಾಗಿ ಇದ್ದರೂ ಇಲ್ಲದಿದ್ದರೂ..

Wednesday, 14 October 2015

ಅಖ್ಲಾಕ್‍ ನ ಮಾಂಸ, ಕಲ್ಬುರ್ಗಿ ವೈಚಾರಿಕತೆ ಮತ್ತು ಪ್ರಶಸ್ತಿಗಳ ಪ್ರತಿಭಟನೆ

      ಹಿಂಸೆ ಮತ್ತು ಪಾರಿತೋಷಕ ಜೊತೆಜೊತೆಗೇ ಸಾಗಲು ಸಾಧ್ಯವಿಲ್ಲ ಎಂಬ ಪ್ರತಿಭಟನಾ ಸಂದೇಶವೊಂದು ಸಾಹಿತ್ಯ
ವಲಯದಿಂದ ರವಾನೆಯಾಗಿದೆ. ಈ ಪ್ರತಿಭಟನೆಗೆ ನೇತೃತ್ವ ನೀಡಿರುವವರು 88 ವರ್ಷದ ಸಾಹಿತಿ ನಯನತಾರಾ ಸೆಹಗಲ್. ಅವರು ತಮಗೆ ಸಂದಿರುವ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಯನ್ನು ಹಿಂತಿರುಗಿಸಿದ್ದಾರೆ. 1975ರಲ್ಲಿ ಇಂದಿರಾಗಾಂಧಿಯವರು ತುರ್ತು ಪರಿಸ್ಥಿತಿಯನ್ನು ಹೇರಿದಾಗ ಅದನ್ನು ಖಂಡಿಸಿ ಪ್ರತಿಭಟಿಸಿದವರು ಸೆಹಗಲ್. ಆಗ ಅವರ ಜೊತೆಗೆ ಅರುಣ್ ಶೌರಿ, ಕುಲದೀಪ್ ನಯ್ಯರ್, ರಜನಿ ಕೊಟಾರಿ, ಜಾರ್ಜ್ ಫರ್ನಾಂಡಿಸ್ ಮುಂತಾದವರು ಸೇರಿಕೊಂಡಿದ್ದರು. ಅವತ್ತು ಬಿಜೆಪಿಯ ಮಂದಿ ಸೆಹಗಲ್‍ರನ್ನು ಎಷ್ಟು ಮೆಚ್ಚಿಕೊಂಡಿದ್ದರೆಂದರೆ ಅವರನ್ನು ಮಾದರಿ ಸಾಹಿತಿಯೆಂದು ಘೋಷಿಸಿದ್ದರು. ಅದೇ ಸೆಹಗಲ್‍ರು ಇವತ್ತು ನರೇಂದ್ರ ಮೋದಿಯವರ ವಿರುದ್ಧ ದನಿಯೆತ್ತಿದ್ದಾರೆ. ಅವರ ಮೌನವನ್ನು ಪ್ರಶ್ನಿಸಿದ್ದಾರೆ. ಗೋವಿನ ಹೆಸರಲ್ಲಿ ನಡೆಯುತ್ತಿರುವ ಕ್ರೌರ್ಯ ಮತ್ತು ಪ್ರಗತಿಪರರ ಮೇಲಿನ ದಾಳಿಗೆ ಅವರು ತಮ್ಮ ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಹಾಗಂತ, ಈ ಪ್ರತಿಭಟನೆಯಲ್ಲಿ ಸೆಹಗಲ್ ಒಂಟಿಯಲ್ಲ. ಚಂಪಾ, ಕುಂವೀ, ಅರವಿಂದ ಮಾಲಗತ್ತಿ, ಅಮನ್ ಸೇಥಿ, ಅಶೋಕ್ ವಾಜಪೇಯಿ, ರಹಮತ್ ತರೀಕೆರೆ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಸಾಹಿತಿಗಳು ತಮ್ಮ ಪ್ರಶಸ್ತಿಗಳನ್ನು ವಾಪಸು ಮಾಡಿಯೋ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಯೋ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಹೀಗಿರುವಾಗಲೇ ಸಾಹಿತಿ ಸುಧೀಂದ್ರ ಕುಲಕರ್ಣಿಯವರಿಗೆ ಮಸಿ ಬಳಿಯಲಾಗಿದೆ. ಪಾಕ್ ಗಾಯಕ ಗುಲಾಮ್ ಅಲಿಯವರ ಕಾರ್ಯಕ್ರಮವನ್ನು ಶಿವಸೇನೆಯ ಒತ್ತಡದ ಮೇರೆಗೆ ರದ್ದುಗೊಳಿಸಲಾಗಿದೆ. ಒಂದು ರೀತಿಯಲ್ಲಿ, ‘ದ್ವಿತೀಯ ತುರ್ತು ಪರಿಸ್ಥಿತಿಯೊಂದು’ ಭಾಗಶಃ ಜಾರಿಯಲ್ಲಿರುವಂತೆ ತೋರುತ್ತಿದೆ. ನರೇಂದ್ರ ಮೋದಿ ನೇತೃತ್ವದ ಸರಕಾರದ ಬಗ್ಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಏನೆಲ್ಲ ಅನುಮಾನ ಪಡಲಾಗಿತ್ತೋ ಅವೆಲ್ಲವನ್ನೂ ನಿಜಗೊಳಿಸುವ ತುರ್ತೊಂದು ಇವತ್ತು ಎಲ್ಲೆಡೆಯೂ ಕಾಣಿಸುತ್ತಿದೆ. ಬಿಜೆಪಿ ಮತ್ತು ಅದರ ಬೆಂಬಲಿಗ ವಲಯವು ಹಿಂದೆಂದಿಗಿಂತಲೂ ಹೆಚ್ಚು ಆವೇಶಭರಿತವಾಗಿ ಮಾತಾಡುತ್ತಿದೆ. ಈ ಗುಂಪು ತಮಗೆ ವಿರುದ್ಧವಾದ ಯಾವುದನ್ನು ಸಹಿಸುತ್ತಿಲ್ಲ. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಬೆಲೆಯನ್ನೇ ನೀಡುತ್ತಿಲ್ಲ. ತಮ್ಮ ಅಭಿಪ್ರಾಯಕ್ಕೆ ವಿರುದ್ಧವಾದುದನ್ನೆಲ್ಲ ದೇಶವಿರೋಧಿ ಮತ್ತು ಧರ್ಮ ವಿರೋಧಿಯಂತೆ ಚಿತ್ರೀಕರಿಸುತ್ತಿದೆ. ಅಖ್ಲಾಕ್‍ನ ಸಾವನ್ನೂ ಸಮರ್ಥಿಸುವಷ್ಟರ ಮಟ್ಟಿಗೆ ಈ ಗುಂಪು ಸಂವೇದನಾರಹಿತವಾಗಿ ವರ್ತಿಸುತ್ತಿದೆ. ಈ ಎಲ್ಲ ಸಂದರ್ಭಗಳಲ್ಲಿ ಮಾತಾಡಬೇಕಿದ್ದ ಪ್ರಧಾನಿಯವರು ದೀರ್ಘ ಮೌನಕ್ಕೆ ಜಾರಿದ್ದಾರೆ. ಅಡ್ಡಾದಿಡ್ಡಿಯಾಗಿ ಮಾತಾಡುತ್ತಿರುವ ತನ್ನ ಸಂಪುಟ ಸಹೋದ್ಯೋಗಿಗಳನ್ನು ಮತ್ತು ಕಾರ್ಯಕರ್ತ ಪಡೆಯನ್ನು ತರಾಟೆಗೆತ್ತಿಕೊಳ್ಳುವ ಯಾವ ಪ್ರಯತ್ನವನ್ನೂ ಅವರು ಮಾಡುತ್ತಿಲ್ಲ. ದುರಂತ ಏನೆಂದರೆ, 1975ರಲ್ಲಿ ಸೆಹಗಲ್‍ರನ್ನು ಬೆಂಬಲಿಸಿದ್ದ ಅದೇ ಬಿಜೆಪಿ ಈ 2015ರಲ್ಲಿ ಅವರನ್ನು ವಿರೋಧಿಯಂತೆ ಕಾಣುತ್ತಿದೆ. ಅವರ ನಿಲುವನ್ನು ಗೇಲಿ ಮಾಡುತ್ತಿದೆ. ಆದ್ದರಿಂದಲೇ, ಸದ್ಯದ ವಾತಾವರಣವನ್ನು ನಾವು `ತುರ್ತು ಸ್ಥಿತಿ ಮರಳುವ' ಸೂಚನೆಯೆಂದೇ ಪರಿಗಣಿಸಬೇಕಾಗಿದೆ.
ಸೆಹಗಲ್

 ಅಷ್ಟಕ್ಕೂ, ಅಸಹಿಷ್ಣು ಭಾಷೆಯಲ್ಲಿ ಮಾತಾಡುತ್ತಿರುವ ಗುಂಪಿನ ಎದುರು ಸೆಹಗಲ್‍ರ ಗುಂಪು ಸಂಖ್ಯೆಯಲ್ಲಿ ತೀರ ಸಣ್ಣದು. ಅಸಹಿಷ್ಣು ಗುಂಪಿನ ಭಾಷೆಗೆ ವ್ಯಾಕರಣ ಇಲ್ಲ. ಪದ ಬಳಕೆಯಲ್ಲಿ ವಿವೇಚನೆಯಿಲ್ಲ. ದೇಹ ಭಾಷೆಯಲ್ಲಿ ಪ್ರೀತಿಯಿಲ್ಲ. ಆ ಗುಂಪು ಸಂದರ್ಭಕ್ಕೆ ತಕ್ಕಂತೆ ಅಸ್ತ್ರವನ್ನೂ ಎತ್ತಿಕೊಳ್ಳಬಲ್ಲುದು. ರಕ್ತವನ್ನೂ ಹರಿಸಬಲ್ಲುದು. ಅದು ದೇಶದ ಸಂವಿಧಾನವನ್ನು ಗೌರವಿಸುತ್ತಿಲ್ಲ. ಧಾರ್ಮಿಕ ವೈವಿಧ್ಯತೆಯನ್ನು ಇಷ್ಟಪಡುತ್ತಿಲ್ಲ. ಮನುಷ್ಯರನ್ನು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂದು ಮುಂತಾಗಿ ಅದು ವಿಭಜಿಸುತ್ತಿದೆಯಲ್ಲದೇ ದ್ವೇಷವನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ನೆಚ್ಚಿಕೊಂಡಿದೆ. ಇದಕ್ಕೆ ಹೋಲಿಸಿದರೆ ಸೆಹಗಲ್‍ರ ಗುಂಪು ತೀರಾ ಅಲ್ಪಸಂಖ್ಯಾಕ. ಅದರ ಮುಂದಿರುವ ಆಯ್ಕೆಗಳೂ ಅಷ್ಟೇ ಅಲ್ಪಸಂಖ್ಯಾಕ. ಈ ಗುಂಪಿನ ಅಸ್ತ್ರವೆಂದರೆ ಪೆನ್ನು ಮಾತ್ರ. ಅದು ಬಳಸುವ ಭಾಷೆಯಲ್ಲಿ ವ್ಯಾಕರಣ ಇದೆ. ಪದ ಸೌಂದರ್ಯವಿದೆ. ದೇಹಭಾಷೆಯಲ್ಲಿ ಆಕರ್ಷಣೆಯಿದೆ. ಸಂದರ್ಭಕ್ಕೆ ತಕ್ಕಂತೆ ಅಸ್ತ್ರವನ್ನು ಎತ್ತಿಕೊಳ್ಳುವ ಮತ್ತು ದ್ವೇಷ ಕಾರುವ ಗುಣ ಈ ಗುಂಪಿಗೆ ಸಿದ್ಧಿಸಿಲ್ಲ. ಈ ಗುಂಪು ಹಿಂಸೆಗೆ ಕರೆ ಕೊಡುವುದಿಲ್ಲ. ಮನುಷ್ಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಿಲ್ಲ. ಆದ್ದರಿಂದಲೇ ದಾಬೋಲ್ಕರ್, ಪನ್ಸಾರೆ, ಕಲ್ಬುರ್ಗಿಯವರ ಹತ್ಯೆ ನಡೆದ ಬಳಿಕವೂ ಈ ಗುಂಪು ಯಾರನ್ನೂ ಥಳಿಸಿ ಕೊಂದಿಲ್ಲ. ನಿಜವಾಗಿ, ಸಾಹಿತ್ಯ ವಲಯದ ಈ ಸಾತ್ವಿಕತೆಯು ಇವತ್ತು ಅಖ್ಲಾಕ್‍ನನ್ನು ಕೊಂದ ಮತ್ತು ಕಲ್ಬುರ್ಗಿಯಂತಹವರ ಕೊಲೆಯನ್ನು ಸಮರ್ಥಿಸುತ್ತಿರುವ ಗುಂಪಿನಿಂದ ಪ್ರಬಲ ಸವಾಲನ್ನು ಎದುರಿಸುತ್ತಿದೆ. ಈ ಸವಾಲು ಮಾನದ್ದು, ಪ್ರಾಣದ್ದು ಮತ್ತು ವೈಯಕ್ತಿಕ ಸ್ವಾತಂತ್ರ್ಯದ್ದು. ಈ ಸವಾಲನ್ನು ಮೆಟ್ಟಿ ನಿಲ್ಲಲು ಸಾಹಿತ್ಯ ವಲಯಕ್ಕೆ ಸಾಧ್ಯವಾಗದೇ ಹೋದರೆ, ಆ ಬಳಿಕ ಸಾಹಿತ್ಯವೆಂಬುದು ಈ ಗುಂಪಿನ ಕರಪತ್ರವಾಗಿ ಬಿಡುವ ಅಪಾಯವಿದೆ. ಈ ಗುಂಪು ಪ್ರಬಲವಾಗಿ ಬಿಟ್ಟರೆ ಅಥವಾ ಈ ಗುಂಪಿನ ಬೆದರಿಕೆಗೆ ಸಾಮಾಜಿಕ ಮನ್ನಣೆ ದೊರಕಿಬಿಟ್ಟರೆ ಅದರಿಂದಾಗಿ ಕಳೆದು ಹೋಗುವುದು ಸಾಹಿತಿಗಳಷ್ಟೇ ಅಲ್ಲ, ಸಾಹಿತ್ಯವೂ ಕೂಡ. ಆ ಬಳಿಕ ಕುಂವೀ ಏನನ್ನು ಬರೆಯಬೇಕೆಂದು ಈ ಗುಂಪು ನಿರ್ಧರಿಸುತ್ತದೆ. ಸೆಹಗಲ್‍ರು ಪ್ರಶಸ್ತಿ ವಾಪಸು ಮಾಡಬೇಕೋ ಬೇಡವೋ ಎಂಬುದು ಈ ಗುಂಪಿನ ಅಭಿಪ್ರಾಯದ ಆಧಾರದಲ್ಲಿ ನಿರ್ಧರಿತವಾಗುತ್ತದೆ. ಚಂಪಾ ಅವರು ಏನು ಮಾತಾಡಬೇಕೆಂಬುದನ್ನು ಅದು ನಿರ್ಧರಿಸುತ್ತದೆ. ಸರ್ವಾಧಿಕಾರಿಗಳ ಆಡಳಿತದಲ್ಲಿ ಉದ್ದಕ್ಕೂ ನಡೆದಿರುವುದು ಇದುವೇ. ತನ್ನ ವಿರೋಧಿಗಳ ಲಕ್ಷಾಂತರ ಪುಸ್ತಕಗಳನ್ನು ಸುಡುವ ಮೂಲಕವೇ ಹಿಟ್ಲರ್ ತನ್ನ ಆಡಳಿತಕ್ಕೆ ಚಾಲನೆ ಕೊಟ್ಟಿದ್ದ. ತನ್ನ ನಿರ್ದೇಶನವನ್ನು ಒಪ್ಪದ ಸಾಹಿತಿಗಳನ್ನು ಆತ ಒಂದೋ ಬಲವಂತದಿಂದ ಒಪ್ಪಿಸುತ್ತಿದ್ದ ಅಥವಾ ಕಲ್ಬುರ್ಗಿಯವರಂತೆ ನಡೆಸಿಕೊಳ್ಳುತ್ತಿದ್ದ. ಅಂದಹಾಗೆ,
      ಕಲ್ಬುರ್ಗಿ ಮತ್ತು ಅಖ್ಲಾಕ್‍ರ ಮಧ್ಯೆ ಖಂಡಿತ ವ್ಯತ್ಯಾಸಗಳಿವೆ. ಮಾತ್ರವಲ್ಲ, ಆ ವ್ಯತ್ಯಾಸಕ್ಕೆ ತಕ್ಕಂತೆಯೇ ಅವರನ್ನು ಹತ್ಯೆ ಗೈಯಲಾಗಿದೆ. ಆತಂಕ ಏನೆಂದರೆ, ಈ ಎರಡೂ ಹತ್ಯೆಗಳನ್ನು ಸಮರ್ಥಿಸುತ್ತಿರುವುದು ಒಂದೇ ಗುಂಪು. ಕಲ್ಬುರ್ಗಿಯವರ ಹತ್ಯೆಯನ್ನು ಸಮರ್ಥಿಸುವುದಕ್ಕೆ ಅವರ ನಿಲುವುಗಳನ್ನು  ಈ ಗುಂಪು ಕಾರಣವಾಗಿ ನೀಡುವಾಗ ಅಖ್ಲಾಕ್‍ನ ಹತ್ಯೆಗೆ ದನವನ್ನು ಕಾರಣವಾಗಿ ನೀಡುತ್ತಿದೆ. ಅಲ್ಲದೇ ಇಂಥ ಕೃತ್ಯಗಳಿಗೆ ‘ಹತ್ಯೆಯೇ ಸರಿ’ ಎಂಬ ಪರೋಕ್ಷ ಸೂಚನೆಯನ್ನು ಈ ಗುಂಪು ರವಾನಿಸಲು ಪ್ರಯತ್ನಿಸುತ್ತಿದೆ. ಆ ಮೂಲಕ ಕ್ರೌರ್ಯವೊಂದಕ್ಕೆ ಸಾಮಾಜಿಕ ಮನ್ನಣೆಯನ್ನು ದೊರಕಿಸಿಕೊಳ್ಳುವ ಯತ್ನವನ್ನೂ ಮಾಡುತ್ತಿದೆ. ನಿಜವಾಗಿ, ಅತ್ಯಂತ ಅಪಾಯಕಾರಿ ಸನ್ನಿವೇಶ ಇದು. ಅಖ್ಲಾಕ್‍ರು ಕಾನೂನುಬಾಹಿರ ಆಹಾರವನ್ನು ಸೇವಿಸಿದ್ದರೆ ಅಥವಾ ಸಂಗ್ರಹಿಸಿದ್ದರೆ ಅದನ್ನು ಪ್ರಶ್ನಿಸಬೇಕಾದದ್ದು ಈ ನೆಲದ ನ್ಯಾಯಾಂಗ ವ್ಯವಸ್ಥೆ. ಕಲ್ಬುರ್ಗಿಯವರಿಗೂ ಇದೇ ಮಾನದಂಡ ಅನ್ವಯಿಸುತ್ತದೆ. ಆದರೆ, ಅಖ್ಲಾಕ್‍ನ ಮಾಂಸ ಮತ್ತು ಕಲ್ಬುರ್ಗಿಯವರ ವೈಚಾರಿಕತೆಯನ್ನು ಈ ಗುಂಪು ಅಪರಾಧವಾಗಿ ತೋರಿಸುತ್ತಿದೆಯೇ ಹೊರತು ಅದನ್ನು ತೀರ್ಮಾನಿಸಬೇಕಾದವರು ಯಾರು ಎಂಬ ಮೂಲಭೂತ ಪ್ರಶ್ನೆಗೆ ಉತ್ತರಿಸುತ್ತಲೇ ಇಲ್ಲ. ಆದ್ದರಿಂದ ಈ ಗುಂಪಿನ ಸವಾಲನ್ನು ಸಾಹಿತ್ಯ ವಲಯ ಎದುರಿಸಲೇಬೇಕು. ಈ ಗುಂಪು ಪರ್ಯಾಯ ಸಂವಿಧಾನ ಆಗದಂತೆ ನೋಡಿಕೊಳ್ಳಬೇಕು. ಈ ಹಿನ್ನೆಲೆಯಲ್ಲಿ ಸಾಹಿತಿಗಳ ಪ್ರತಿಭಟನೆಯು ಅತ್ಯಂತ ಯೋಗ್ಯ ಮತ್ತು ಸ್ವಾಗತಾರ್ಹ. ಈ ಪ್ರತಿಭಟನೆಗೆ ಗೆಲುವಾಗಲಿ.




Tuesday, 13 October 2015

ಈ-ಮೇಲ್‍ನ ಜಾಡು ಹಿಡಿದು ವಿಶ್ಲೇಷಣೆ ನಡೆಸುವ ದೇಶದಲ್ಲಿ..

ಡಾ| ಅಥವಳೆ
       ಎಂ.ಎಂ. ಕಲಬುರ್ಗಿಯವರ ಹತ್ಯೆಯೊಂದಿಗೆ ‘ಸನಾತನ ಸಂಸ್ಥಾ' ಎಂಬ ಸಂಘಟನೆಯ ಸುತ್ತ ಚರ್ಚೆಯೊಂದು ಆರಂಭಗೊಂಡಿದೆ. ವಿಚಾರವಾದಿಗಳಾದ ಕಲಬುರ್ಗಿ ಮತ್ತು ಪನ್ಸಾರೆಯವರ ಹತ್ಯೆಯಲ್ಲಿ ಸಾಕಷ್ಟು ಸಾಮ್ಯತೆಗಳಿದ್ದುವು. ಮೋಟರ್ ಸೈಕಲ್‍ನಲ್ಲಿ ಬಂದ ಮುಸುಕುಧಾರಿಗಳು ಅವರಿಬ್ಬರನ್ನೂ ಗುಂಡಿಟ್ಟು ಹತ್ಯೆ ಮಾಡಿದ್ದರು. ಇದೀಗ ಪನ್ಸಾರೆಯವರ ಹತ್ಯೆಯ ಆರೋಪದಲ್ಲಿ ಸನಾತನ ಸಂಸ್ಥಾದ ಪೂರ್ಣಕಾಲಿಕ ಕಾರ್ಯಕರ್ತ ಸವಿೂರ್ ಗಾಯಕ್ವಾಡ್ ಸಹಿತ ಕೆಲವರನ್ನು ಬಂಧಿಸಲಾಗಿದೆ. ಹಲವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ‘ಸವಿೂರ್ ಗಾಯಕ್ವಾಡ್‍ನನ್ನು ಕಳೆದ ವಾರ ಥಾಣೆಯ ಕೋರ್ಟಿಗೆ ಹಾಜರುಪಡಿಸಿದಾಗ 31 ವಕೀಲರು ಆತನ ಪರ ವಾದಿಸಲು ಕೋರ್ಟಿನಲ್ಲಿ ಸೇರಿದ್ದರು. ಆತನಲ್ಲಿ 31 ಸಿಮ್ ಕಾರ್ಡ್‍ಗಳು ಲಭಿಸಿವೆ. ದಂಪತಿಗಳಾದ ಡಾ| ಜಯಂತ್ ಮತ್ತು ಕುಂದಾ ಅಥವಳೆಯವರು ಸ್ಥಾಪಿಸಿದ ಈ ಸಂಘಟನೆಯ ಗುರಿ ಹಿಂದೂ ರಾಷ್ಟ್ರದ ಸ್ಥಾಪನೆ. 2016ರಿಂದ 2018ರ ನಡುವೆ ಮೂರನೇ ವಿಶ್ವಯುದ್ಧ ನಡೆಯುತ್ತದೆ ಮತ್ತು ‘ಸಮಾಜ ವಿರೋಧಿಗಳ’ ಅಂತ್ಯಕ್ಕೆ ಇದು ಮುಹೂರ್ತವಾಗುತ್ತದೆ ಎಂದೆಲ್ಲಾ ಅದು ತನ್ನ ಮುಖವಾಣಿ ಸನಾತನ ಪ್ರಭಾತ್‍ನಲ್ಲಿ ಹೇಳಿಕೊಂಡದ್ದಿದೆ. 2019ರಿಂದ 2022ರ ವರೆಗೆ ದೇವರ ಆಡಳಿತ ಪ್ರಾರಂಭವಾಗಲಿದ್ದು, 2023ರಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ ಎಂದೂ ಅದು ನಿರೀಕ್ಷೆ ಇಟ್ಟುಕೊಂಡಿದೆ. ಅದರ ವೈರಿಗಳ ಪಟ್ಟಿ ಬಹಳ ದೊಡ್ಡದು. ಅದರಲ್ಲಿ ವಿಚಾರವಾದಿಗಳಿದ್ದಾರೆ, ರಾಜಕೀಯ ಪಕ್ಷಗಳಿವೆ. ಮುಸ್ಲಿಮರು, ಕ್ರೈಸ್ತರಿದ್ದಾರೆ. ಥಾಣೆ ಮತ್ತು ಮಾರ್ಗೋವಾದಲ್ಲಿ ಬಾಂಬ್ ಸ್ಫೋಟಿಸಿದ ಆರೋಪಗಳೂ ಈ ಸಂಘಟನೆಯ ಮೇಲಿದೆ’ (ದಿ ಹಿಂದೂ ಸೆ. 27). ಬಹುಶಃ, ಒಂದು ಸಂಘಟನೆಯ ಬಗ್ಗೆ ನಮ್ಮ ಸರಕಾರ ಮತ್ತು ಅಧಿಕಾರಿಗಳು ಕುತೂಹಲಗೊಳ್ಳುವುದಕ್ಕೆ ಈ ಸಂಘಟನೆ 1995ರಿಂದ ಸಾಗಿ ಬಂದ ಹಾದಿ ಹಾಗೂ ನಿಗೂಢ ಚಟುವಟಿಕೆಗಳು ಧಾರಾಳ ಸಾಕು. ಅದಕ್ಕೆ ಚುನಾವಣಾ ರಾಜಕೀಯದಲ್ಲಿ ವಿಶ್ವಾಸವಿಲ್ಲ. ಚುನಾವಣೆಯಲ್ಲಿ ಭಾಗವಹಿಸದೆಯೇ ಯುದ್ಧದ ಮೂಲಕ ಸಾಮ್ರಾಜ್ಯ ಕಟ್ಟಿದ ಶಿವಾಜಿಯಂತೆ ತನ್ನ ಕನಸಿನ ರಾಷ್ಟ್ರ ಸ್ಥಾಪನೆಯ ಉದ್ದೇಶ ಅದರದ್ದು. ನಿಜವಾಗಿ, ಬಾಂಬ್ ತಯಾರಿ, ಸ್ಫೋಟ, ಹತ್ಯೆ.. ಮುಂತಾದುವುಗಳೆಲ್ಲ ಪ್ರಜಾತಂತ್ರದಲ್ಲಿ ನಂಬಿಕೆಯಿಲ್ಲದವರ ಅಸ್ತ್ರ. ಜನರ ವಿಶ್ವಾಸವನ್ನು ಗಳಿಸಿಕೊಂಡು ಪ್ರಜಾತಂತ್ರದ ಮೂಲಕ ತಮ್ಮ ಗುರಿಯೆಡೆಗೆ ಸಾಗುವುದನ್ನು ಒಪ್ಪಿಕೊಳ್ಳದವರೇ ಬಾಂಬ್ ಎತ್ತಿಕೊಳ್ಳುತ್ತಾರೆ. ಬಂದೂಕು ಬಳಸುತ್ತಾರೆ. ಅಂದಹಾಗೆ, ಈ ದೇಶದಲ್ಲಿ ಹತ್ತಾರು ಸ್ಫೋಟಗಳು ನಡೆದಿವೆ. ಹತ್ಯಾಕಾಂಡ, ವಿಧ್ವಂಸಕಾರಿ ಕೃತ್ಯಗಳು ಘಟಿಸಿವೆ. ಈ ಎಲ್ಲ ಸಂದರ್ಭಗಳಲ್ಲಿ ಈ ದೇಶದ ಮಾಧ್ಯಮಗಳು ಮತ್ತು ರಾಜಕಾರಣಿಗಳು ಮಾತಾಡಿದ್ದಾರೆ. ಅವರ ಪ್ರತಿಕ್ರಿಯೆ ಎಷ್ಟು ತೀವ್ರವಾಗಿತ್ತೆಂದರೆ, ಅನಾಮಿಕ ಮೂಲದಿಂದ ಬರುವ ಈಮೇಲ್‍ಗೂ ಅಪಾರ ಮಹತ್ವ ಲಭ್ಯವಾಗುತ್ತಿತ್ತು. ಆ ಈಮೇಲ್ ಅನ್ನು ಎತ್ತಿಕೊಂಡು ಅದನ್ನು ಕಳುಹಿಸಿರಬಹುದಾದ ವ್ಯಕ್ತಿ, ಸಂಘಟನೆ, ಕಂಪ್ಯೂಟರ್ ಮತ್ತಿತರ ಸರ್ವವನ್ನೂ ವಿಶ್ಲೇಷಿಸಲಾಗುತ್ತಿತ್ತು. ಆ ಈಮೇಲ್ ಅನ್ನು ಕಳುಹಿಸಿದವರ ಉದ್ದೇಶ, ಅದಕ್ಕೆ ಪ್ರಚೋದನೆ ನೀಡಿರುವ ಸಾಹಿತ್ಯ, ಅವರು ಪಡೆದಿರುವ ತರಬೇತಿ, ಅವರ ಸಂಖ್ಯೆ, ಹಣಕಾಸು ವಹಿವಾಟು.. ಸಹಿತ ಎಲ್ಲವನ್ನೂ ಮೂಲಗಳನ್ನು ಉದ್ಧರಿಸಿ ಈ ದೇಶದಲ್ಲಿ ಚರ್ಚಿಸಲಾಗುತ್ತಿತ್ತು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಂತೂ ಭಯೋತ್ಪಾದನೆಯ ಬಗ್ಗೆ ಲೆಕ್ಕವಿಲ್ಲದಷ್ಟು ಬಾರಿ ಮಾತಾಡಿದೆ. ಭಯೋತ್ಪಾದನೆಯನ್ನು ನಿರ್ದಿಷ್ಟ ಧರ್ಮಕ್ಕೆ ಹೋಲಿಸಿ ಹೇಳಿಕೆ ಕೊಟ್ಟಿದೆ. ಜಾನುವಾರು ಮಾಂಸದ ಸೇವನೆಯು ಭಯೋತ್ಪಾದನೆಗೆ ಇಂಬು ನೀಡುತ್ತದೆ ಎಂಬ ರೀತಿಯಲ್ಲಿ ಅದರ ನಾಯಕರು ಮತ್ತು ಬೆಂಬಲಿಗರು ಮಾತಾಡಿದ್ದಾರೆ. ಆದರೆ ಸನಾತನ ಸಂಸ್ಥಾದ ಕುರಿತಂತೆ ಈ ಮಂದಿ ಈ ವರೆಗೆ ನೇರವಾಗಿ ಏನನ್ನೂ ಹೇಳಿಲ್ಲ. ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಬಗ್ಗೆ ಬಲವಾದ ಅನುಮಾನಗಳಿದ್ದಾಗ್ಯೂ ಅದರ ನಿಷೇಧದ ಬಗ್ಗೆ ಮಾತಾಡುತ್ತಿಲ್ಲ. ಕೇಂದ್ರ ಸರಕಾರ ಈಗಾಗಲೇ ಸರಕಾರೇತರ ಸಂಸ್ಥೆಗಳಾದ ಗ್ರೀನ್‍ಪೀಸ್ ಮತ್ತು ತೀಸ್ತಾ ಸೆಟಲ್ವಾಡ್‍ರ ಸಂಸ್ಥೆಯ ಮೇಲೆ ಬಹುತೇಕ ನಿಷೇಧವನ್ನು ಹೇರಿದೆ. ಅವುಗಳ ಚಟುವಟಿಕೆಗಳನ್ನು ಪ್ರತಿಬಂಧಿಸಲಾಗಿದೆ. ಬಾಂಬ್ ಭಯೋತ್ಪಾದನೆಯಲ್ಲಿ ಭಾಗವಹಿಸದ ಈ ಸಂಸ್ಥೆಗಳ ಮೇಲೆ ಸರಕಾರಕ್ಕೆ ಈ ಮಟ್ಟದ ಭಯ ಇದೆಯೆಂದಾದರೆ, ಸನಾತನ ಸಂಸ್ಥಾದ ಕುರಿತಂತೆ ಯಾಕೆ ಯಾವ ಭಯವೂ ಆಗುತ್ತಿಲ್ಲ? ಅದರ ಉದ್ದೇಶದ ಬಗ್ಗೆ ಸರಕಾರದ ನಿಲುವೇನು?
   ಸಾಮಾನ್ಯವಾಗಿ ಭಯೋತ್ಪಾದನೆ ಅಥವಾ ದೇಶ ವಿರೋಧಿ ಚಟುವಟಿಕೆಗಳು ಎಂದ ಕೂಡಲೇ ಇಂಡಿಯನ್ ಮುಜಾಹಿದೀನ್, ಲಷ್ಕರೆ ತ್ವಯ್ಯಿಬ, ಐಸಿಸ್ ಮುಂತಾದ ಹೆಸರುಗಳೇ ಪ್ರತ್ಯಕ್ಷಗೊಳ್ಳುವಂತಹ ವಾತಾವರಣವೊಂದು ಈ ದೇಶದಲ್ಲಿದೆ. ಸಂವಿಧಾನ ವಿರೋಧಿಯಾಗಿ ಆಲೋಚಿಸುವುದಕ್ಕೆ ಇಂಥ ನಿರ್ದಿಷ್ಟ ತಂಡಗಳಿಗಷ್ಟೇ ಸಾಧ್ಯ ಎಂಬ ಭಾವನೆಯನ್ನು ಇಲ್ಲಿ ವ್ಯವಸ್ಥಿತವಾಗಿ ನೆಟ್ಟು ಬೆಳೆಸಲಾಗಿದೆ. ಅದರಲ್ಲಿ ರಾಜಕಾರಣಿಗಳ ಪಾತ್ರವಿದೆ. ಅಧಿಕಾರಿಗಳು ಮತ್ತು ಸಂಘಟನೆಗಳ ಪಾತ್ರವೂ ಇವೆ. ಈ ದೇಶದ ಎಲ್ಲಾದರೂ ಬಾಂಬ್ ಸ್ಫೋಟಗೊಂಡ ತಕ್ಷ

ಣ ಯಾವುದಾದರೂ ಪತ್ರಿಕಾ ಕಚೇರಿಗೆ ಈಮೇಲ್‍ಗಳು ಬರುತ್ತವೆ. ದೂರವಾಣಿ ಕರೆಗಳೂ ಬರುವುದಿದೆ. ಹಾಗೆ ಬಂದ ಕರೆಗಳೋ ಈಮೇಲ್‍ಗಳೋ ಅಥವಾ ಇನ್ನಿತರ ಯಾವುದಾದರೂ ಕುರುಹುಗಳ ಹೆಸರಲ್ಲೋ ನಿರ್ದಿಷ್ಟ ಮಂದಿಯನ್ನು ಹುಡುಕುವ ಪ್ರಯತ್ನಗಳು ನಡೆಯುತ್ತವೆ. ರಾಜಕಾರಣಿಗಳಿಂದ ಹೇಳಿಕೆಗಳ ಮಹಾಪೂರ ಹರಿಯತೊಡಗುತ್ತವೆ. ಆದರೆ, ಕಳೆದ 20 ವರ್ಷಗಳಿಂದ ಈ ದೇಶದಲ್ಲಿ ಸಂವಿಧಾನ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಸಂಸ್ಥೆಯೊಂದರ ಕುರಿತು ಮಾಧ್ಯಮಗಳು ಮಾತಾಡಿದ್ದು ಶೂನ್ಯ ಎಂಬಷ್ಟು ಕಡಿಮೆ. ಈ ಸಂಘಟನೆಯ ಬಗ್ಗೆ ತನಿಖಾ ಬರಹಗಳು ಈ ವರೆಗೂ ಸರಿಯಾದ ರೀತಿಯಲ್ಲಿ ಪ್ರಕಟವಾಗಿಲ್ಲ. ನಮ್ಮ ರಾಜಕಾರಣಿಗಳಂತೂ ಸನಾತನ ಸಂಸ್ಥಾ ಎಂಬ ಸಂಘಟನೆ ಅಸ್ತಿತ್ವದಲ್ಲಿ ಇದೆಯೆಂದೇ ಒಪ್ಪಿಕೊಳ್ಳದಷ್ಟು ಈ ವಿಷಯದಲ್ಲಿ ಮೌನ ಪಾಲಿಸಿದ್ದಾರೆ. ಯಾಕೆ ಹೀಗೆ? ಸಂವಿಧಾನ ವಿರೋಧಿ ಚಿಂತನೆ ಯಾರಿಂದಲೇ ಬರಲಿ, ಆ ಬಗ್ಗೆ ಪ್ರತಿಕ್ರಿಯಿಸಬೇಕಾದದ್ದು ಮತ್ತು ಅದನ್ನು ಬಲವಾಗಿ ಖಂಡಿಸಬೇಕಾದದ್ದು ಎಲ್ಲರ ಕರ್ತವ್ಯ. ಸನಾತನ ಸಂಸ್ಥಾದ ಆಲೋಚನೆಯೇ ಸಂವಿಧಾನ ವಿರೋಧಿ. ಅದು ಈ ದೇಶದ ಸಂವಿಧಾನವನ್ನು ರದ್ದುಗೊಳಿಸಬಯಸುತ್ತದೆ. ಪ್ರಜಾತಂತ್ರದ ಬದಲು ಚುನಾವಣೆಗಳೇ ಇಲ್ಲದ ಸರ್ವಾಧಿಕಾರ ಆಡಳಿತವನ್ನು ಪ್ರತಿಪಾದಿಸುತ್ತದೆ. ತನ್ನ ನಿಲುವನ್ನು ಪ್ರಶ್ನಿಸುವವರನ್ನು ಅದು ಸಮಾಜ ವಿರೋಧಿಗಳೆಂದು ವರ್ಗೀಕರಿಸುತ್ತದೆ. ಒಂದು ಬಗೆಯ ಭ್ರಮೆಯ ಸುತ್ತ ಅದರ ಕಾರ್ಯಚಟುವಟಿಕೆ ಕೇಂದ್ರೀಕೃತವಾಗಿರುವಂತೆ ಗೋಚರಿಸುತ್ತಿದೆ. ಹೀಗಿರುವಾಗ, 2023ರ ಗುರಿಯನ್ನು ಯಶಸ್ವಿಯಾಗಿ ತಲುಪುವುದಕ್ಕಾಗಿ ಅದು ಯೋಜನೆಗಳನ್ನು ಹಾಕಿಕೊಂಡಿರುವುದಂತೂ ಖಂಡಿತ. ಆ ಯೋಜನೆಗಳು ಯಾವುವು, ಅದರ ಜಾರಿಯ ಹಂತಗಳು ಹೇಗೆ, ಅದು ತನ್ನ ಗುರಿಯ ಈಡೇರಿಕೆಗಾಗಿ ಯಾರ ವಿರುದ್ಧ ಮತ್ತು ಯಾವುದರ ವಿರುದ್ಧ ಯುದ್ಧ ಸಾರುತ್ತದೆ.. ಇವೆಲ್ಲ ಬಹಿರಂಗವಾಗಬೇಕಿದೆ. ಕಲಬುಗಿರ್ಯವರ ಹತ್ಯೆಯು ಆ 2023ರ ನೀಲನಕ್ಷೆಯ ಭಾಗವೇ ಎಂಬುದೂ ಸ್ಪಷ್ಟವಾಗಬೇಕಿದೆ.

Saturday, 26 September 2015

ಪ್ರಧಾನಿಯವರೇ, ಆಂಡರ್ಸನ್‍ಗಾಗಿ ಮಾತೆತ್ತಿದ ನೀವು ರಾಯಭಾರಿಯನ್ನು ಕಳುಹಿಸಿಕೊಟ್ಟದ್ದೇಕೆ?

     ಕೇಂದ್ರ ಸರಕಾರದ ಕಾರ್ಯಶುದ್ಧಿಯ ಮೇಲೆ ದೊಡ್ಡದೊಂದು ಪ್ರಶ್ನಾರ್ಥಕ ಚಿಹ್ನೆಯನ್ನು ಮೂಡಿಸಿ ಸೌದಿ ರಾಜತಾಂತ್ರಿಕ ಅಧಿಕಾರಿಯೋರ್ವರು ಭಾರತ ಬಿಟ್ಟು ಹೊರಟು ಹೋಗಿದ್ದಾರೆ. ಗುರ್ಗಾಂವ್‍ನಲ್ಲಿರುವ ಸೌದಿ ರಾಜತಾಂತ್ರಿಕ ಕಚೇರಿಯಲ್ಲಿ ಕೆಲಸಕ್ಕಿದ್ದ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯವೆಸಗಿದ ಆರೋಪವು ಮಜೀದ್ ಹಸನ್ ಅಶೂರ್ ಎಂಬ ಈ ಅಧಿಕಾರಿಯ ಮೇಲಿದೆ. ವೈದ್ಯಕೀಯ ಪರೀಕ್ಷೆಯಲ್ಲಿ ಈ ಆರೋಪಗಳು ಸಾಬೀತುಗೊಂಡಿರುವ ವರದಿಯೂ ಬಂದಿದೆ. ಇಷ್ಟಿದ್ದೂ, ಯಾವೊಂದು ತನಿಖೆಗೂ ಒಳಪಡಿಸದೇ ಈ ಅಧಿಕಾರಿಯನ್ನು ದೇಶಬಿಟ್ಟು ತೆರಳಲು ಕೇಂದ್ರ ಸರಕಾರ ಅನುವು ಮಾಡಿಕೊಟ್ಟದ್ದು ಹೇಗೆ ಮತ್ತು ಯಾಕೆ? ಭಾರತ ಮತ್ತು ಸೌದಿ ಸರಕಾರಗಳ ನಡುವೆ ಈ ಕುರಿತಂತೆ ಮಾತುಕತೆಗಳು ನಡೆದಿವೆಯೇ? ಅದರ ವಿವರಗಳು ಏನೆಲ್ಲ? ಗೃಹಸಚಿವಾಲಯ ಯಾಕೆ ಯಾವ ಮಾಹಿತಿಯನ್ನೂ ಸಾರ್ವಜನಿಕರಿಗೆ ಬಿಟ್ಟುಕೊಡುತ್ತಿಲ್ಲ? ಆರ್ಥಿಕ ಲೆಕ್ಕಾಚಾರಗಳು ಇದರ ಹಿಂದೆ ಕೆಲಸ ಮಾಡಿವೆಯೇ? ಜಿನೇವಾ ಒಡಂಬಡಿಕೆಯ ಕಟ್ಟಳೆಗಳೇನೇ ಇರಲಿ, ಮಹಿಳೆಯರ ಬಗ್ಗೆ ಅಪಾರ ಕಕ್ಕುಲಾತಿಯನ್ನು ತೋರ್ಪಡಿಸುವ ಸರಕಾರವೊಂದು ಈ ಮಟ್ಟದಲ್ಲಿ ತಗ್ಗಿ-ಬಗ್ಗಿ ನಡೆದದ್ದೇಕೆ? ಕೇರಳದ ಮೀನುಗಾರರನ್ನು ಹತ್ಯೆಗೈದ ಇಟಲಿಯ ನಾವಿಕರ ವಿಷಯದಲ್ಲಿ ಮನಮೋಹನ್ ಸಿಂಗ್ ಸರಕಾರವನ್ನು ಈ ಹಿಂದೆ ಬಿಜೆಪಿ ತೀವ್ರ ತರಾಟೆಗೆ ಎತ್ತಿಕೊಂಡಿತ್ತು. ಆ ನಾವಿಕರನ್ನು ಇಟಲಿಗೆ ಬಿಟ್ಟು ಕೊಡಬಾರದೆಂದು ಪ್ರಬಲವಾಗಿ ವಾದಿಸಿತ್ತು. ಮನಮೋಹನ್ ಸಿಂಗ್ ಸರಕಾರವು ಈ ಕುರಿತಂತೆ ಮೃದು ನೀತಿಯನ್ನು ಹೊಂದಿದೆ ಎಂದು ಬಾರಿಬಾರಿಗೂ ಟೀಕಿಸಿತ್ತು. ಭೋಪಾಲ್ ಅನಿಲ ದುರಂತದ ಆರೋಪಿ ವಾರೆನ್ ಆಂಡರ್ಸನ್‍ನನ್ನು ಯಾವ ತನಿಖೆಗೂ ಒಳಪಡಿಸದೇ ಅಮೇರಿಕಕ್ಕೆ ತೆರಳಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಪಕ್ಷವನ್ನು ಅದು ಈಗಲೂ ಟೀಕಿಸುತ್ತಿದೆ. ಪಾಕಿಸ್ತಾನವು ಭಾರತೀಯ ಸೈನಿಕರ ಒಂದು ತಲೆಯನ್ನು ಉರುಳಿಸಿದರೆ ಪಾಕ್‍ನ ಹತ್ತು ತಲೆಯನ್ನು ಉರುಳಿಸುವೆವು ಎಂದು ಸಾರಿದ ಮತ್ತು ಸಾರುತ್ತಿರುವ ಪಕ್ಷ ಬಿಜೆಪಿ. ಇಂಥ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾಂಗ್ರೆಸ್‍ನಂತೆಯೇ ಆಡುತ್ತಿರುವುದೇಕೆ? ಅತ್ಯಾಚಾರದ ವಿರುದ್ಧ ಈ ದೇಶದಲ್ಲಿ 3 ವರ್ಷಗಳ ಹಿಂದೆ ದೊಡ್ಡದೊಂದು ಚಳವಳಿ ನಡೆದಿದೆ. ಆ ಚಳವಳಿ ಎಷ್ಟು ಪ್ರಭಾವಶಾಲಿಯಾಗಿತ್ತೆಂದರೆ, ಅತ್ಯಾಚಾರದ ವಿರುದ್ಧ ಪ್ರಬಲ ಕಾನೂನನ್ನೇ ರಚಿಸುವಷ್ಟು. ಆ ಬಳಿಕ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗಳ ಸರಣಿ ಘೋಷಣೆಗಳು ನ್ಯಾಯಾಲಯಗಳಿಂದ ಪ್ರಕಟವಾದುವು. ಬಿಜೆಪಿಯನ್ನು ಬೆಂಬಲಿಸುವ ಸಂಘಪರಿವಾರವಂತೂ ಅತ್ಯಾಚಾರ ಬಿಡಿ, ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನೇ ಅಪರಾಧ ಎಂದು ಹೇಳುವಷ್ಟು ನಿಷ್ಠುರತೆಯನ್ನು ಪ್ರದರ್ಶಿಸುತ್ತಿದೆ. ಹೆಣ್ಣನ್ನು ರಕ್ಷಿಸುವ ಹೆಸರಲ್ಲಿ ಥಳಿತ, ಹಲ್ಲೆ, ಹತ್ಯೆಗಳಂತಹ ಕೃತ್ಯಕ್ಕೂ ಕೈ ಹಾಕುತ್ತಿದೆ. ಹೀಗಿರುವಾಗ, ಕೇಂದ್ರ ಸರಕಾರದ ಈ ನಡೆಗೆ ಏನೆನ್ನಬೇಕು? ಹಾಗಾದರೆ ಹೆಣ್ಣಿನ ಬಗ್ಗೆ ಬಿಜೆಪಿ ಮತ್ತು ಅದರ ಪರಿವಾರಗಳು ವ್ಯಕ್ತಪಡಿಸುತ್ತಿರುವ ಗೌರವಾದರದ ಮಾತುಗಳು ನಕಲಿಯೇ? ಕನಿಷ್ಠ ಅಮೇರಿಕದಲ್ಲಿ ಭಾರತದ ರಾಜತಾಂತ್ರಿಕೆಯಾಗಿದ್ದ ದೇವಯಾನಿ ಖೋಬ್ರಗದೆಯವರ ಬಗ್ಗೆ ಅಮೇರಿಕ ವರ್ಷಗಳ ಹಿಂದೆ ನಡೆದುಕೊಂಡಷ್ಟಾದರೂ ನಿಷ್ಠುರತೆಯನ್ನು ಭಾರತಕ್ಕೆ ತೋರಬಹುದಿಲ್ಲವೇ? ರಾಯಭಾರ ಕಚೇರಿಯ ಅಧಿಕಾರಿಯಾಗಿದ್ದರೂ ಖೋಬ್ರಗದೆಯವರನ್ನು ಅಮೇರಿಕ ಸುಲಭದಲ್ಲಿ ಬಿಟ್ಟುಕೊಡಲಿಲ್ಲ. ಜಿನೇವಾ ಒಡಂಬಡಿಕೆಯಲ್ಲಿ ಅಷ್ಟರ ಮಟ್ಟಿಗೆ ಅವಕಾಶ ಇದೆಯೆಂದಾದರೆ ಮೋದಿಯವರು ಅದನ್ನೇಕೆ ಬಳಸಿಕೊಳ್ಳಲಿಲ್ಲ? ಹಾಗಂತ, ಇದನ್ನು ಕೇಂದ್ರದ ರಾಜತಾಂತ್ರಿಕ ವೈಫಲ್ಯ ಎಂಬ ಷರಾದೊಂದಿಗೆ ಮುಚ್ಚಿಹಾಕಬಹುದು. ದಿ ಹಿಂದೂ ಸಹಿತ ಹೆಚ್ಚಿನೆಲ್ಲಾ ಪತ್ರಿಕೆಗಳು ತಮ್ಮ ಸಂಪಾದಕೀಯಕ್ಕೆ ಕೊಟ್ಟ ಶೀರ್ಷಿಕೆಯೂ ಇದುವೇ. ಆದರೆ ವಾರನ್ ಆಂಡರ್ಸನ್‍, ಇಟಲಿಯ ನಾವಿಕರು ಅಥವಾ ಖೋಬ್ರಗದೆಯ ವಿಷಯದಲ್ಲಿ ಧಾರಾಳ ಮಾತಾಡಿದ್ದ ಬಿಜೆಪಿಯು ಸೌದಿ ಅಧಿಕಾರಿಯ ಕುರಿತಂತೆ ಒಂದು ವಾಕ್ಯದ ಸ್ಪಷ್ಟೀಕರಣವನ್ನೂ ಕೊಡದಷ್ಟು ಮೌನಿಯಾಗಿರುವುದೇಕೆ? ಈ ಮೌನದ ಹಿಂದಿರುವುದು ಅಸಹಾಯಕೆಯೋ ಅನಿವಾರ್ಯತೆಯೋ?
  ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮನಮೋಹನ್ ಸಿಂಗ್‍ರನ್ನು ದುರ್ಬಲ ಪ್ರಧಾನಿ ಎಂದು ಕರೆದಿದ್ದ ಬಿಜೆಪಿಯು ಆಗ ಸ್ವಯಂ ತನಗೆ ತಾನೇ ಪೌರುಷದ ಇಮೇಜನ್ನು ಕೊಟ್ಟುಕೊಂಡಿತ್ತು. ಭಾರತದ ಒಂದು ತಲೆಗೆ ಪಾಕಿಸ್ತಾನದ ಹತ್ತು ತಲೆಗಳ ಸ್ಲೋಗನ್ ಉದುರಿದ್ದೂ ಆವಾಗಲೇ. ಮನಮೋಹನ್ ಸಿಂಗ್‍ರ ಮೃದುತನದ ಎದುರು ಮೋದಿಯವರು ಖಡಕ್ ವ್ಯಕ್ತಿಯಾಗಿ ಕಂಗೊಳಿಸಿದ್ದರು. ಅವರು ಸಕಲ ಸಮಸ್ಯೆಗಳಿಗೂ ಪರಿಹಾರವಾಗಿ ಕಂಡರು. ಅವರ ಮಾತುಗಾರಿಕೆ, ಬಾಡಿ ಲಾಂಗ್ವೇಜ್, ಪ್ರಾಸಬದ್ಧ ಪದಗಳು ಮತ್ತು ಮಾತಿನ ಅಬ್ಬರಗಳೆಲ್ಲ ನಿಷ್ಠುರತೆಯ ಸಂಕೇತಗಳಾಗಿ ಕಂಡವು. ಮುಸ್ಲಿಮ್ ಧರ್ಮಗುರುಗಳು ನೀಡಿದ ಟೋಪಿಯನ್ನು ನಿರಾಕರಿಸಿದ್ದು, ‘ಹಮ್ ಪಾಂಚ್, ಹಮಾರೆ ಪಚ್ಚೀಸ್’ ಎಂದು ಹೇಳಿದ್ದು, ತಾನು ‘ಸ್ವಯಂ ಸೇವಕ' ಎಂದು ಬಹಿರಂಗವಾಗಿಯೇ ಘೋಷಿಸಿದ್ದು.. ಎಲ್ಲವೂ ಅವರ ಸುತ್ತ ನಿಷ್ಠುರತೆಯ ಪ್ರಭಾವಳಿಯೊಂದನ್ನು ಸೃಷ್ಟಿಸಿತ್ತು. ‘ಮೋದಿಯವರು ಪ್ರಧಾನಿಯಾದರೆ ಪಾಕ್‍ಗೆ ಅಣುಬಾಂಬ್ ಹಾಕುತ್ತಾರೆ..' ಎಂದು ಅವರ ಅನುಯಾಯಿಗಳು ಹೇಳುವಷ್ಟು ಅವರ ಗಡಸು ಇಮೇಜು ಜನಪ್ರಿಯವಾಯಿತು. ಆದರೆ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯಾದ ಬಳಿಕ ಪೌರುಷದ ಪ್ರಭಾವಳಿ ನಿಧಾನಕ್ಕೆ ದೂರ ಸರಿಯುತ್ತಿದೆ. ಅವರು ಇನ್ನೋರ್ವ ಮನಮೋಹನ್ ಸಿಂಗ್ ಆಗುತ್ತಿದ್ದಾರೆಯೇ ಹೊರತು ನಿಷ್ಠುರ ನರೇಂದ್ರ ಮೋದಿಯಲ್ಲ ಎಂಬುದು ದಿನೇ ದಿನೇ ಸ್ಪಷ್ಟವಾಗುತ್ತಿದೆ. ಅವರು ಪ್ರಧಾನಿಯಾದ ಒಂದು ವರ್ಷದಲ್ಲಿ ಪಾಕ್‍ನಿಂದ ಗಡಿ ಉಲ್ಲಂಘನೆಯ ಪ್ರಕರಣಗಳು ಈ ಹಿಂದೆಂದೂ ಆಗದಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿದೆ. ಪಾಕ್ ಸೈನಿಕರ ಗುಂಡಿನ ದಾಳಿಯಿಂದ ಭಾರತೀಯ ಸೈನಿಕರು ಆಗಾಗ ಸಾವನ್ನಪ್ಪುತ್ತಲೂ ಇದ್ದಾರೆ. ಮಾಧ್ಯಮಗಳು ಈ ಕುರಿತಂತೆ ಅಂಕಿ-ಅಂಶಗಳನ್ನೂ ಬಹಿರಂಗಪಡಿಸುತ್ತಲೂ ಇದೆ. ಆದರೆ ಮನಮೋಹನ್ ಸಿಂಗ್‍ರನ್ನು ಇದೇ ಗಡಿ ಪ್ರಶ್ನೆಯನ್ನು ಮುಂದಿಟ್ಟು ನಿಷ್ಕ್ರಿಯ ಸರಕಾರ ಎಂದು ಕರೆದಿದ್ದ ಬಿಜೆಪಿಯು ಇದೀಗ ಅದೇ ನಿಷ್ಕ್ರಿಯ ಪ್ರತಿಕ್ರಿಯೆಯನ್ನಷ್ಟೇ ತೋರುತ್ತಿದೆ. ಪೌರುಷದ ಮಾತುಗಳಾಚೆಗೆ ಪ್ರಾಯೋಗಿಕವಾಗಿ ಅದು ಏನನ್ನೂ ಮಾಡುತ್ತಿಲ್ಲ. ಸೌದಿ ರಾಜತಾಂತ್ರಿಕ ಪ್ರಕರಣವು ಇದಕ್ಕೆ ಇನ್ನೊಂದು ಉದಾಹರಣೆ ಅಷ್ಟೇ.
  ಹಾಗಂತ, ಸಾಮಾನ್ಯ ನಾಗರಿಕರನ್ನು ಹಿಡಿದು ಜೈಲಿಗಟ್ಟುವಂತೆ ರಾಯಭಾರ ಕಚೇರಿಯ ಅಧಿಕಾರಿಗಳನ್ನು ಶಿಕ್ಷಿಸಲು ಸಾಧ್ಯವಿಲ್ಲ ನಿಜ. ಜಿನೇವಾ ಒಡಂಬಡಿಕೆಯ ಪ್ರಕಾರವೇ ‘ರಾಜತಾಂತ್ರಿಕ' ಪ್ರಕರಣ ಗಳನ್ನು ಇತ್ಯರ್ಥಪಡಿಸಬೇಕಾಗುತ್ತದೆ. ಆದರೆ ಕದ್ದು ಮುಚ್ಚಿ ವಿಮಾನದಲ್ಲಿ ಕಳುಹಿಸಿಕೊಡುವಷ್ಟು ಜಿನೇವಾ ಒಡಂಬಡಿಕೆ ಕ್ರೂರವೇ? ಹಾಗಿದ್ದರೆ ದೇವಯಾನಿ ಖೋಬ್ರಗದೆ ಪ್ರಕರಣದಲ್ಲಿ ಅಮೇರಿಕ ಅಷ್ಟು ನಿಷ್ಠುರವಾಗಿ ನಡೆದುಕೊಂಡದ್ದು ಹೇಗೆ? ಅವರನ್ನು ಅಮೇರಿಕದ ಪೊಲೀಸರು ಕೈಕೋಳ ತೊಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತನಿಖೆಗೂ ಒಳಪಡಿಸಿದ್ದರು. ಆದರೆ ಮೋದಿಯವರ ಸರಕಾರವು ಕನಿಷ್ಠ ತನಿಖೆಗೂ ಒಳಪಡಿಸದೇ ರಹಸ್ಯವಾಗಿ ಸೌದಿ ರಾಜತಾಂತ್ರಿಕರನ್ನು ಕಳುಹಿಸಿಕೊಟ್ಟಿದೆ. ಇದು ಯಾವುದರ ಸೂಚನೆ? ಮೋದಿಯವರು ಮಾತಿನಲ್ಲಿ ಮಾತ್ರ ನಿಷ್ಠುರವೇ, ಕೃತಿಯಲ್ಲಿ ಅವರೂ ಮನಮೋಹನ್ ಸಿಂಗೇ ಆಗಿರುವರೇ?

Tuesday, 15 September 2015

ವರ್ತಮಾನದ ತಲ್ಲಣಗಳು ಮತ್ತು ಹಾಜಿ..

     ವರ್ತಮಾನದ ತಲ್ಲಣಗಳ ನಡುವಿನಿಂದ ಮಕ್ಕಾಕ್ಕೆ ಹೊರಟು ಹೋಗುವ ಹಾಜಿ ಅಲ್ಲಿ  ಮುಖಾಮುಖಿಗೊಳ್ಳುವುದು ಯಾರನ್ನು, ಯಾವುದನ್ನು ಮತ್ತು ಯಾತಕ್ಕಾಗಿ? ಸಫಾ-ಮರ್ವಾ, ಅರಫಾ, ಹಜರುಲ್ ಅಸ್ವದ್, ಜಮರಾತ್, ಮುಝ್ದಲಿಫಾ.. ಇತ್ಯಾದಿಗಳನ್ನು ಹಾಜಿ ಮಕ್ಕಾದಲ್ಲಿ ಮುಖಾಮುಖಿಯಾಗುತ್ತಾನೆ/ಳೆ. ಆತ ಅಲ್ಲಿ ಕಣ್ಣೀರಾಗಬಲ್ಲ, ಪ್ರಾರ್ಥಿಸಬಲ್ಲ, ತನ್ಮಯತೆಯಿಂದ ಜಗವನ್ನೇ ಮರೆಯಬಲ್ಲ. ಅಷ್ಟಕ್ಕೂ, ಈ ಬಗೆಯ ಭಾವತೀವ್ರತೆಯನ್ನು ಹಾಜಿಯೊಳಗೆ ಹುಟ್ಟುಹಾಕಲು ಈ ಸಂಕೇತಗಳಿಗೆ ಹೇಗೆ ಸಾಧ್ಯವಾಗುತ್ತದೆ? ಒಂದು ವೇಳೆ, ಈ ಸಂಕೇತಗಳಗೆ ಭೂತಕಾಲವೊಂದು ಇಲ್ಲ ಎಂದಿಟ್ಟುಕೊಳ್ಳಿ. ಹಾಗಾದರೆ, ಜಮರಾತ್ ಅನ್ನು, ಸಫಾ-ಮರ್ವಾವನ್ನು, ಮುಝ್ದಲಿಫಾವನ್ನು.. ಆತ/ಕೆ ಯಾವ ರೀತಿಯಲ್ಲಿ ಮುಖಾಮುಖಿಯಾಗಬಹುದು? ನಿಜವಾಗಿ, ಭೂತಕಾಲವೊಂದು ಇಲ್ಲದೇ ಇರುತ್ತಿದ್ದರೆ ಸಫಾ-ಮರ್ವಾಕ್ಕೆ ಈ ವರ್ತಮಾನ ಕಾಲದಲ್ಲಿ ಯಾವ ಮಹತ್ವವೂ ಲಭಿಸುತ್ತಿರಲಿಲ್ಲ. ಜಮಾರಾತ್‍ಗೂ ಮುಝ್ದಲಿಫಾಕ್ಕೂ ಅರಫಾ ಮೈದಾನಕ್ಕೂ ಒಂದು ಭೂತಕಾಲವಿದೆ. ಈ ಭೂತಕಾಲದಿಂದಾಗಿಯೇ ಈ ವರ್ತಮಾನದಲ್ಲೂ ಇವುಗಳು ಮತ್ತು ಇಬ್ರಾಹೀಮ್(ಅ), ಇಸ್ಮಾಈಲ್(ಅ), ಹಾಜಿರಾ.. ನಮ್ಮನ್ನು ಕಾಡುವುದು. ಗತ ಇತಿಹಾಸವನ್ನು ಪಕ್ಕಕ್ಕಿಟ್ಟು ನೋಡಿದರೆ ನಮ್ರೂದ್ ಎಂಬುದು ಈ ವರ್ತಮಾನದಲ್ಲಿ ಬರೇ ಒಂದು ಹೆಸರು ಮಾತ್ರ. ಆದರೆ ನಮ್ರೂದ್‍ಗೊಂದು ಇತಿಹಾಸವಿದೆ. ಆ ಇತಿಹಾಸವೇ ಇವತ್ತು ನಮ್ರೂದ್‍ನನ್ನು ಪ್ರಸ್ತುತಗೊಳಿಸುತ್ತದೆ. ಬಹುಶಃ, ಈ ಮೇಲೆ ಉಲ್ಲೇಖಿಸಲಾದ ಸಂಕೇತಗಳನ್ನು ಮುಖಾಮುಖಿಗೊಳ್ಳುವಾಗ ಹಾಜಿಯು ಭಾವುಕವಾಗುವುದಿದ್ದರೆ, ಅವುಗಳ ಗತ ಇತಿಹಾಸವನ್ನು ಸ್ಮರಿಸಿಯೇ ಹೊರತು ವರ್ತಮಾನದ ಬರೇ ಸ್ಥಳಗಳಾಗಿ ಅಲ್ಲ. ಇಂಥ ಬೆಟ್ಟಗಳು, ಮೈದಾನಗಳು ಜಗತ್ತಿನಲ್ಲಿ ನೂರಾರು ಇವೆ. ಇಬ್ರಾಹೀಮ್, ಇಸ್ಮಾಈಲ್, ಹಾಜಿರಾ.. ಮುಂತಾದ ಹೆಸರುಗಳು ಜಗತ್ತಿನಲ್ಲಿ ಕೋಟ್ಯಂತರ ಇರಬಹುದು. ಆದರೆ ಅವಾವುವೂ ಹಾಜಿಯನ್ನು ಭಾವುಕಗೊಳಿಸುವುದೋ ಉನ್ಮಾದಗೊಳಿಸುವುದೋ ಮಾಡುತ್ತಿಲ್ಲ. ನಿಜವಾಗಿ, ಹಾಜಿ ವರ್ತಮಾನದಲ್ಲಷ್ಟೇ ಬದುಕುತ್ತಿಲ್ಲ. ಆತನ ಎದುರು ಭೂತ(ಗತ)ಕಾಲವೊಂದಿದೆ. ಆ ಕಾಲದ ದಟ್ಟ ಪ್ರಭಾವವೇ ಈ ವರ್ತಮಾನದಲ್ಲೂ ಆತನನ್ನು ಹಾಜಿಯನ್ನಾಗಿಸುತ್ತದೆ. ಗತದ ಸ್ಮರಣೆಯು ಆತ/ಕೆಯನ್ನು ತಲ್ಲಣಗೊಳಿಸುತ್ತದೆ. ಜಮಾರಾತ್‍ನಲ್ಲಿ ಕಂಭಗಳಿಗೆ ಕಲ್ಲೆಸೆಯುವ ಹಾಜಿಯನ್ನು ಗತ ಇತಿಹಾಸ ಗೊತ್ತಿಲ್ಲದ ಪ್ರವಾಸಿಯೋರ್ವ ನೋಡಿದರೆ ಅಚ್ಚರಿ ಪಡಬಲ್ಲ. ಯಾಕೆಂದರೆ, ಬರೇ ವರ್ತಮಾನದಲ್ಲಷ್ಟೇ ಬದುಕುವ ವ್ಯಕ್ತಿಗೆ ಅದು ಬರೇ ಕಂಬ ಮಾತ್ರ. ಆದರೆ ಹಾಜಿ ಗತ ಕಾಲದಲ್ಲೂ ಬದುಕುತ್ತಾನೆ. ಆದ್ದರಿಂದಲೇ ಆತ ಎಸೆಯುವುದು ಕಲ್ಲುಗಳನ್ನಲ್ಲ, ಆತನ ಗುರಿಯಲ್ಲಿರುವುದು ಕಂಬಗಳೂ ಅಲ್ಲ. ಹೀಗೆ ಹಾಜಿಯು ವರ್ತಮಾನ ಮತ್ತು ಭೂತಕಾಲವನ್ನು ಸಮನ್ವಯಗೊಳಿಸಿದ ಒಂದು ಅಪೂರ್ವ ಮಾದರಿಯಾಗಿ ಕಾಣಿಸಿಕೊಳ್ಳುತ್ತಾನೆ. ಆದರೆ, ಹಾಜಿ ಇಲ್ಲಿ ಉತ್ತರಿಸಬೇಕಾದ ಒಂದು ಪ್ರಶ್ನೆಯಿದೆ. ಈ ಸಮನ್ವಯತೆ ಕೇವಲ ಹಜ್ಜ್ ಗೆ ಮಾತ್ರ ಯಾಕೆ ಸೀಮಿತಗೊಳ್ಳಬೇಕು? ಬದುಕಿನ ಇತರ ಸಂದರ್ಭಗಳಲ್ಲೂ ಯಾಕೆ ಅದು ಕಾಣಿಸಿಕೊಳ್ಳಬಾರದು? ಅಂದಹಾಗೆ, ಹಾಜಿ ಬದುಕುವ ಈ ವರ್ತಮಾನ ಕಾಲದಲ್ಲಿ ನೂರಾರು ತಲ್ಲಣಗಳಿವೆ. ಬಡ್ಡಿಯಿದೆ, ವರದಕ್ಷಿಣೆಯಿದೆ, ವಂಚನೆಯಿದೆ, ಕೋಮುವಾದ, ಅನೈತಿಕತೆ, ಅಪನಂಬಿಕೆ, ಅನಾಚಾರ, ಅನೈಕ್ಯತೆ, ಶೋಷಣೆ.. ಇದೆ. ಹಸಿವು, ಕಣ್ಣೀರು ಇದೆ. ನಿಜವಾಗಿ, ಇವು ಮತ್ತು ಇನ್ನಿತರ ವರ್ತಮಾನದ ತಲ್ಲಣಗಳು ಹಾಜಿಯನ್ನು ತಟ್ಟಲೇ ಬೇಕು. ಸಫಾ-ಮರ್ವಾಗಳು ಅವುಗಳ ಗತ ಇತಿಹಾಸದಿಂದಾಗಿ ಹಾಜಿಯನ್ನು ಭಾವುಕಗೊಳಿಸುವುದಾದರೆ, ವರ್ತಮಾನದ ಈ ತಲ್ಲಣಗಳನ್ನು ಕೂಡ ಹಾಜಿಯು ಇತಿಹಾಸದ ಬೆಳಕಿನಲ್ಲಿ ಇಟ್ಟು ನೋಡಬೇಕು. ಹಾಗಾದಾಗ ಸಮಾಜದ ಬಡ್ಡಿಯಾಧಾರಿತ ಬದುಕು ಹಾಜಿಯೊಳಗೆ ತಲ್ಲಣಗಳನ್ನು ಹುಟ್ಟಿಸಬಹುದು. ಹಸಿವು, ಸೋರುವ ಮಾಡು, ವರದಕ್ಷಿಣೆ, ವಂಚನೆ.. ಎಲ್ಲವೂ ಹಾಜಿಯನ್ನು ಭಿನ್ನ ಭಾವದಲ್ಲಿ ತಟ್ಟಬಹುದು. ಇಬ್ರಾಹೀಮರ(ಅ) ಆಲೋಚನೆಗಳನ್ನು ಸಮಾಜಕ್ಕೆ ತಿಳಿಸಲು ಮತ್ತು ಅವರು ಕಟ್ಟಬಯಸಿದ ಸಮಾಜವನ್ನು ಸ್ಥಾಪಿಸಲು ಹಾಜಿ ಪಣತೊಡಬಹುದು.
     ಓರ್ವ ವ್ಯಕ್ತಿ ಹಜ್ಜ್ ಗೆ ಕಡ್ಡಾಯವಾಗಿ ತೆರಳಬೇಕಾದುದು ಒಮ್ಮೆ ಮಾತ್ರ. ಹಾಗಂತ, ಆ ಬಳಿಕವೂ ಆತನಲ್ಲಿ ದುಡ್ಡು, ಆರೋಗ್ಯ, ಪ್ರತಿಭೆ ಎಲ್ಲವೂ ಇರಬಹುದು. ಆದರೂ ಆತ ಕಡ್ಡಾಯವಾಗಿ ಮತ್ತೊಮ್ಮೆ ಮಕ್ಕಾಕ್ಕೆ ತೆರಳಬೇಕಿಲ್ಲ. ಇದುವೇ ಓರ್ವ ಹಾಜಿಯ ಗುರಿಯನ್ನು ಸ್ಪಷ್ಟಪಡಿಸುತ್ತದೆ. ಹಾಜಿಯ ಚಟುವಟಿಕೆಯ ಕೇಂದ್ರ ಮಕ್ಕಾ ಅಲ್ಲ, ಆತನ ಊರು. ಆ ಊರನ್ನು ಮಕ್ಕಾ (ಶಾಂತಿಯ ಕೇಂದ್ರ) ಆಗಿಸುವುದೇ ಹಾಜಿಯ ಗುರಿ. ಅದಕ್ಕಾಗಿ ಪ್ರತಿಜ್ಞೆ ಕೈಗೊಳ್ಳುವ ಸಂದರ್ಭವೇ ಹಜ್ಜ್ ಯಾತ್ರೆ. ಒಂದು ವೇಳೆ, ಈ ಅರ್ಥದಲ್ಲಿ ನಮ್ಮ ಹಜ್ಜ್ ನಿರ್ವಹಣೆಯಾಗುವುದಾದರೆ ಒಂದು ದಿನ ಜಗತ್ತೇ `ಶಾಂತಿಯ ಕೇಂದ್ರ' ಆಗಬಹುದು. ಹಾಗಾಗಲಿ ಎಂದು ಹಾರೈಸೋಣ.

Tuesday, 8 September 2015

‘ದೊಡ್ಡವರ’ ಹೃದಯ ಹೀನತೆಯನ್ನು ಪ್ರತಿಭಟಿಸಿ ಹೊರಟು ಹೋದ ಮಗು

ಅಯ್ಲಾನ್ ಕುರ್ದಿ
     ನಿಲೋಫರ್ ಡೆಮಿಕ್ ಎಂಬ ಪತ್ರಕರ್ತ ಕ್ಲಿಕ್ಕಿಸಿದ ಪೋಟೋವೊಂದು ಜಗತ್ತಿನ ಕಣ್ಣನ್ನೇ ಮಂಜಾಗಿಸಿದೆ. ಕೆಂಪು ಟೀ ಶರ್ಟ್, ನೀಲಿ ಚಡ್ಡಿ, ಶೂಸ್ ಧರಿಸಿರುವ 3 ವರ್ಷದ ಪುಟ್ಟ ಮಗುವೊಂದು ಟರ್ಕಿಯ ಬೋರ್ಡಮ್ ಸಮುದ್ರ ದಂಡೆಯಲ್ಲಿ ಬೋರಲಾಗಿ ಬಿದ್ದಿರುವ ಪೋಟೋವನ್ನು ನೋಡಿ ಫ್ರಾನ್ಸಿನ ಅಧ್ಯಕ್ಷ ಫ್ರಾಂಕೊಯಿಸ್ ಹಾಲೆಂಡ್‍ರು ಟರ್ಕಿಯ ಅಧ್ಯಕ್ಷ ಉರ್ದುಗಾನ್‍ರಿಗೆ ದೂರವಾಣಿ ಕರೆ ಮಾಡಿದ್ದಾರೆ. ಆ ಪೋಟೋವು ನಿರಾಶ್ರಿತರ ಬಗ್ಗೆ ಜಗತ್ತಿನ ಹೊಣೆಗಾರಿಕೆಯನ್ನು ನೆನಪಿಸಿತು ಎಂದು ಹೇಳಿದ್ದಾರೆ. ಬ್ರಿಟನ್ನಿನ ಪ್ರಧಾನಿ ಡೇವಿಡ್ ಕ್ಯಾಮರೂನ್, ಐರಿಶ್ ಪ್ರಧಾನಿ ಎಂಡಾ ಕೆನ್ನಿ ಸಹಿತ ಎಲ್ಲರೂ ಸಹಿತ ಆ ಪೋಟೋಗೆ ಮರುಗಿದ್ದಾರೆ. ನಿರಾಶ್ರಿತರಿಗಾಗಿ ತನ್ನ ಎರಡನೇ ಮನೆಯನ್ನೇ ಬಿಟ್ಟು ಕೊಡುವುದಾಗಿ ಐರಿಶ್ ಪ್ರಧಾನಿಯವರು ಹೇಳಿಕೊಂಡಿದ್ದಾರೆ. ದಿ ಸ್ಪೆಕ್ಟೇಟರ್, ದಿ ಗಾರ್ಡಿಯನ್ ಸಹಿತ ಜಗತ್ತಿನ ಪ್ರಸಿದ್ಧ ಪತ್ರಿಕೆಗಳಿಂದ ಹಿಡಿದು ಸ್ಥಳೀಯ ಪತ್ರಿಕೆಗಳ ವರೆಗೆ ಎಲ್ಲವೂ ಅಯ್ಲಾನ್ ಕುರ್ದಿ ಎಂಬ ಆ ಮಗುವಿನ ಬಗ್ಗೆ ಬರೆದಿವೆ. ‘ಮೈಗ್ರಾಂಟ್ ಆಫ್‍ಶೋರ್ ಏಡ್ ಸ್ಟೇಷನ್’ (Migrant Offshore Aid Station) ಎಂಬ ಹೆಸರಲ್ಲಿ ನಿರಾಶ್ರಿತರಿಗೆ ನೆರವು ಸಂಗ್ರಹಿಸುವ ಪ್ರಯತ್ನಕ್ಕೆ ಈ ಪೋಟೋ ಕಾರಣವಾಗಿದೆ. ಒಂದು ರೀತಿಯಲ್ಲಿ, 2014ರಲ್ಲಿ ಪ್ರಕಟವಾಗಿದ್ದ ಪುಟ್ಟ ಫೆಲೆಸ್ತೀನಿ ಬಾಲಕನ ಪೋಟೋದ ಬಳಿಕ ಜಗತ್ತನ್ನು ತೀವ್ರವಾಗಿ ಕಾಡಿದ ಪೋಟೋ ಇದು. ಗುಂಡಿನ ದಾಳಿಯಿಂದ ತೂತು ತೂತಾಗಿದ್ದ ಕಪ್ಪು ಬೋರ್ಡಿನಲ್ಲಿಫೆಲೆಸ್ತೀನಿನ ಆ ಬಾಲಕ ತದೇಕಚಿತ್ತದಿಂದ ಏನನ್ನೋ ಬರೆಯುತ್ತಿದ್ದ ದೃಶ್ಯ ಅದು. ಇಸ್ರೇಲ್‍ನ ದಾಳಿಯಿಂದ ಜರ್ಝರಿತಗೊಂಡ ಗಾಝಾದ ಬಗ್ಗೆ ಜಗತ್ತಿನ ಗಮನ ಸೆಳೆಯುವುದಕ್ಕೆ ಅಂದು ಆ ಬಾಲಕ ಕಾರಣವಾಗಿದ್ದರೆ ಇಂದು ಈ ಮಗು ಸಿರಿಯನ್ ನಿರಾಶ್ರಿತರ ಬಗ್ಗೆ ಜಾಗತಿಕ ಚರ್ಚೆ ನಡೆಯುವುದಕ್ಕೆ ಕಾರಣವಾಗಿದೆ. ಎರಡನೇ ಜಾಗತಿಕ ಯುದ್ಧದ ಬಳಿಕ ಜಗತ್ತು ಎದುರಿಸುತ್ತಿರುವ ಅತಿ ದೊಡ್ಡ ವಲಸೆ ಸಮಸ್ಯೆ ಇದು. ತಮ್ಮ ಗಡಿಗಳಲ್ಲಿ ತುಂಬಿಕೊಂಡಿರುವ ನಿರಾಶ್ರಿತರನ್ನು ಒಳಗೆ ಸೇರಿಸಲು ನಿರಾಕರಿಸುತ್ತಿದ್ದ ಹಂಗರಿ, ಬ್ರಿಟನ್, ಇಟಲಿ, ಪೋರ್ಚುಗೀಸ್, ಸ್ಪೈನ್‍ಗಳು ಈ ಮಗುವನ್ನು ನೋಡಿ ಬೆಚ್ಚಿ ಬಿದ್ದಿವೆ. ಮಾತ್ರವಲ್ಲ, ಈ ಎಲ್ಲ ರಾಷ್ಟ್ರಗಳು ನಿರಾಶ್ರಿತರಿಗೆ ತಂತಮ್ಮ ಗಡಿಯನ್ನು ತೆರೆದು ಬಿಡುವಷ್ಟು ಆ ಪೋಟೋ ಒತ್ತಡವನ್ನು ಹೇರಿದೆ. ನಿಜವಾಗಿ, ನಮ್ಮ ಕಣ್ಣನ್ನು ಮಂಜಾಗಿಸಬೇಕಾದ ಮತ್ತು ಹೃದಯವನ್ನು ಗಾಢವಾಗಿ ತಟ್ಟಬೇಕಾದ ಪೋಟೋ ಅದು. ದೊಡ್ಡವರ ಅಹಂಕಾರ, ಸ್ವಾರ್ಥಗಳಿಗೆ ಎಂದೂ ಬಲಿಯಾಗುವುದು ಮಕ್ಕಳೇ. ಕತ್ತಿ, ಚೂರಿ, ಬಾಂಬು, ಬಂದೂಕು.. ಎಲ್ಲವೂ ದೊಡ್ಡವರ ಅಸ್ತ್ರಗಳು. ಅದನ್ನು ಮಕ್ಕಳು ತಯಾರಿಸಿರುವುದಿಲ್ಲ. ಬಳಸುವುದೂ ಇಲ್ಲ. ದುರಂತ ಏನೆಂದರೆ, ಅಧಿಕಾರಕ್ಕೋ ಸಂಪತ್ತಿಗೋ ಅಥವಾ ಇನ್ನಾವುದಾದರೂ ಸ್ವಾರ್ಥ ಉದ್ದೇಶಕ್ಕೋ 'ದೊಡ್ಡವರು' ಈ ಅಸ್ತ್ರಗಳನ್ನೆಲ್ಲ ಹಿಡಿದು ಕಾದಾಡುವಾಗ ಮಕ್ಕಳು ಅದರ ಎಲ್ಲ ನೋವುಗಳನ್ನೂ ಅನುಭವಿಸುತ್ತಾ ಬದುಕಬೇಕಾಗುತ್ತದೆ. ಏನೆನ್ನಬೇಕು ಇದಕ್ಕೆ? ದೊಡ್ಡವರ ಉದ್ದೇಶಕ್ಕಾಗಿ ಮಕ್ಕಳನ್ನು ಬಲಿ ನೀಡುವುದು ಎಷ್ಟು ಸರಿ? ಮಕ್ಕಳಿಗೆ ಅಧಿಕಾರ ಬೇಕಿಲ್ಲ, ಸಂಪತ್ತು ಬೇಕಿಲ್ಲ, ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವೂ ಅವಕ್ಕಿಲ್ಲ. ಅವುಗಳಿಗೆ ಬಾಲ್ಯವಷ್ಟೇ ಬೇಕು. ಅಮ್ಮ-ಅಪ್ಪನ ಬೆಚ್ಚನೆಯ ಪ್ರೀತಿ ಬೇಕು. ಶಾಲೆ ಬೇಕು, ಅಕ್ಷರ ಬೇಕು. ಅಪಾಯ ಮುಕ್ತ ಬಯಲು ಬೇಕು. ಆದರೆ ಇವೆಲ್ಲವನ್ನೂ ನಿರಾಕರಿಸಿದ ದೊಡ್ಡವರ ವರ್ತನೆಗೆ ಮುನಿಸಿಕೊಂಡು ಸಮುದ್ರ ದಂಡೆಯಲ್ಲಿ ಆ ಮಗು ಬೋರಲಾಗಿ ಮಲಗಿರುವಂತೆ ಅನಿಸುತ್ತಿದೆ. ಮರಳಿನಲ್ಲಿ ಆಟವಾಡಲು ಬಿಡದ ಹೆತ್ತವರೊಂದಿಗೆ ಮುನಿಸಿಕೊಳ್ಳುವಂತಹ ಹಠ. ಅಷ್ಟಕ್ಕೂ, ಪುಟ್ಟ ಅಯ್ಲಾನ್ ಕುರ್ದಿ ತನ್ನ ಹುಟ್ಟೂರು ಸಿರಿಯಾದಿಂದ ಟರ್ಕಿಗೆ ವಲಸೆ ಹೋಗಬೇಕೆಂದು ಬಯಸಿರುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ‘ದೊಡ್ಡವರು’ ಸಿರಿಯಾದಲ್ಲಿ ಅಂಥದ್ದೊಂದು ವಾತಾವರಣವನ್ನು ನಿರ್ಮಿಸಿದ್ದರು. ಆದ್ದರಿಂದಲೇ, ಆತನ ತಂದೆ ಮತ್ತು ತಾಯಿ ಆತನನ್ನೂ ಆತನ ಅಣ್ಣ 5 ವರ್ಷದ ಗಾಲಿಬ್‍ನನ್ನೂ ಎತ್ತಿಕೊಂಡು ವರ್ಷಗಳ ಹಿಂದೆ ಸಿರಿಯದಿಂದ ಟರ್ಕಿಗೆ ಆಗಮಿಸಿದ್ದರು. ಅಲ್ಲಿ ಅಯ್ಲಾನ್ ಸುಖವಾಗಿರಲಿಲ್ಲ. ಎಲ್ಲೆಲ್ಲೂ ನಿರಾಶ್ರಿತರು. ಕೊನೆಗೆ ಅಲ್ಲಿಂದ 3 ಮೈಲುಗಳಷ್ಟು ದೂರ ಇರುವ ಗ್ರೀಸ್‍ಗೆ ತೆರಳಿ ಅಲ್ಲಿಂದ ಕೆನಡದಲ್ಲಿರುವ ಸಂಬಂಧಿಕರನ್ನು ಸೇರಲು  ಮಗುವಿನ ಹೆತ್ತವರು ತೀರ್ಮಾನಿಸಿದರು. ಪಾಸ್‍ಪೋರ್ಟ್, ನಿರ್ಗಮನ ವಿಸಾ ಮತ್ತು ದುಡ್ಡು ಇಲ್ಲದ ಕುಟುಂಬವು ವಿಮಾನ ಹತ್ತುವುದು ಸಾಧ್ಯವಿರಲಿಲ್ಲ. ಹಾಗಂತ, ಇದು ಕೇವಲ ಈ ಕುಟುಂಬವೊಂದರ ಸಮಸ್ಯೆ ಅಲ್ಲ, ಸಂಘರ್ಷ ಪೀಡಿತ ಪಶ್ಚಿಮೇಶ್ಯಾದ ಲಕ್ಷಾಂತರ ಕುಟುಂಬಗಳು ಇವೇ ಸಮಸ್ಯೆಯನ್ನು ಎದುರಿಸುತ್ತಿವೆ. ಆದ್ದರಿಂದಲೇ, ಕಳೆದ ವಾರ ಅಯ್ಲಾನ್‍ನ ಹೆತ್ತವರು 3 ಮೈಲಿನ ಸಮುದ್ರ ಪ್ರಯಾಣಕ್ಕಾಗಿ ರಬ್ಬರ್ ದೋಣಿಯನ್ನು ಏರಿದರು. 8 ಮಂದಿ ಪ್ರಯಾಣಿಸಬಹುದಾದ ದೋಣಿಯಲ್ಲಿ 15 ಮಂದಿ ಇದ್ದುದರಿಂದಲೇ ಏನೋ ಸಮುದ್ರದಲೆಗೆ ದೋಣಿ ಮಗುಚಿ ಬಿತ್ತು. ಅಯ್ಲಾನ್‍ನ ತಂದೆಯ ಹೊರತು ಉಳಿದವರೆಲ್ಲರೂ ಸಾವಿಗೀಡಾದರು. ಅದೇ ದಿನ ಆ ಮಗುವಿನ ಮೃತದೇಹ ಬೋರ್ಡಮ್ ಸಮುದ್ರ ಕಿನಾರೆಯಲ್ಲಿ ಬೋರಲಾಗಿ ಬಿದ್ದಿರುವ ರೀತಿಯಲ್ಲಿ ಪತ್ತೆಯಾಯಿತು.
ಫೆಲೆಸ್ತೀನಿನ  ಬಾಲಕ
    ಅಷ್ಟಕ್ಕೂ, ಸಂಘರ್ಷ ಪೀಡಿತ ಪಶ್ಚಿಮೇಶ್ಯಕ್ಕೆ ಈ ಸಾವು ಹೊಸತಲ್ಲ. ಹೀಗೆ ಅನಧಿಕೃತವಾಗಿ ಸಮುದ್ರ ಮಾರ್ಗವಾಗಿ ಪ್ರಯಾಣಿಸಿದ 26 ಸಾವಿರಕ್ಕಿಂತಲೂ ಅಧಿಕ ನಿರಾಶ್ರಿತರು ಈಗಾಗಲೇ ಸಾವಿಗೀಡಾಗಿದ್ದಾರೆ. ಇದರಲ್ಲಿ ದೊಡ್ಡದೊಂದು ಭಾಗ ಮಕ್ಕಳದ್ದು. ಸಿರಿಯದಲ್ಲಿ ಪ್ರತಿ 4ರಲ್ಲಿ ಒಂದು ಶಾಲೆ ನಿರಾಶ್ರಿತರ ಶಿಬಿರವಾಗಿ ಮಾರ್ಪಟ್ಟಿವೆ. ಇರಾಕ್‍ನಲ್ಲಿ 3 ಮಿಲಿಯನ್ ಜನರು ಶಾಲೆಗಳಲ್ಲಿ ನಿರಾಶ್ರಿತರಾಗಿ ಉಳಿದುಕೊಂಡಿದ್ದಾರೆ. ಸಿರಿಯ, ಇರಾಕ್, ಯಮನ್, ಲಿಬಿಯಗಳಲ್ಲಿ 13.4 ಮಿಲಿಯನ್ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ. 8,850 ಶಾಲೆಗಳು ಉಪಯೋಗಶೂನ್ಯವಾಗಿ ಭಣಗುಟ್ಟುತ್ತಿದೆ. ಲಿಬಿಯದ ಶೇ. 73 ಶಾಲೆಗಳಲ್ಲಿ ತರಗತಿಗಳೇ ನಡೆಯುತ್ತಿಲ್ಲ. ಸಿರಿಯದ ಸುಮಾರು 56 ಸಾವಿರ ಶಿಕ್ಷಕರು ಮತ್ತು ಅಧಿಕಾರಿಗಳು ಕೆಲಸ ತೊರೆದಿದ್ದಾರೆ... ಮಕ್ಕಳ ಜಗತ್ತಿನ ಪುಟ್ಟ ಚಿತ್ರಣ ಇದು. ದೊಡ್ಡವರೇಕೆ ಇಷ್ಟು ಕ್ರೂರಿಗಳಾಗುತ್ತಿದ್ದಾರೆ? ಹೃದಯವೇ ಇಲ್ಲದಂತೆ ಮತ್ತು ಸಂವೇದನೆಯೇ ಸತ್ತಂತೆ ವರ್ತಿಸುತ್ತಿದ್ದಾರೆ? ಶಾಲೆ ಮಕ್ಕಳದ್ದು. ಬಯಲು ಮಕ್ಕಳದ್ದು. ಬಾಲ್ಯವೂ ಮಕ್ಕಳದ್ದೇ. ಅದನ್ನು ಆ ಮಕ್ಕಳಿಗೆ ಒದಗಿಸಬೇಕಾದ ದೊಡ್ಡವರು ಬಾಂಬು, ಬಂದೂಕುಗಳ ಮೂಲಕ ಅವನ್ನು ನಿರಾಕರಿಸುತ್ತಿರುವುದಕ್ಕೆ ಏನೆನ್ನಬೇಕು? ಅಂದಹಾಗೆ, ಜಗತ್ತಿನ ಸರ್ವ ಆಂತರಿಕ ಸಮಸ್ಯೆಗಳಲ್ಲೂ ಸುದ್ದಿಗೀಡಾಗದೇ ಇರುವುದು ಮಕ್ಕಳು ಮಾತ್ರ. ಯಾಕೆಂದರೆ, ಅವಕ್ಕೆ ಪ್ರತಿಭಟಿಸಲು ಬರುವುದಿಲ್ಲ. ಹುದುಗಿಸಿಟ್ಟ ಬಾಂಬುಗಳ ಪರಿಜ್ಞಾನ ಇರುವುದಿಲ್ಲ. ಐಸಿಸ್‍ನ ಉದ್ದೇಶ, ಅಮೇರಿಕದ ಗುರಿ, ಇಸ್ರೇಲ್ ಬಯಕೆ ಅಥವಾ ಇನ್ನಾರೋ ದೊಡ್ಡವರ ಹುನ್ನಾರಗಳು ಅರ್ಥವಾಗಿರುವುದಿಲ್ಲ. ಹೆತ್ತವರು ಓಡುವಾಗ ಅವೂ ಓಡುತ್ತವೆ. ಅವರು ಅಳುವಾಗ ಅವೂ ಅಳುತ್ತವೆ. ಹಸಿವಾದರೂ ಅಮ್ಮ ಯಾಕೆ ಊಟ ಕೊಡಲ್ಲ ಎಂದು ಕೊರಗುತ್ತವೆ. ಹೀಗೆ ಇತರರನ್ನೇ ಆಶ್ರಯಿಸಿ ಬದುಕುವ ಪೀಳಿಗೆ ಅದು. ಆದ್ದರಿಂದಲೇ, ಅಪ್ಪನೊಂದಿಗೆ ಅಯ್ಲಾನ್ ಕುರ್ದಿ ರಬ್ಬರ್ ದೋಣಿ ಏರಿದ್ದಾನೆ. ಒಂದು ರೀತಿಯಲ್ಲಿ, ದೊಡ್ಡವರೆಲ್ಲ ಸೇರಿ ಮಾಡಿದ ಅಮಾನುಷ ಹತ್ಯೆ ಇದು. ನಿರಾಶ್ರಿತರಾಗಿ ಬದುಕುವುದು, ದೋಣಿ ಏರುವುದು, ಗ್ರೀಸ್‍ಗೆ ತೆರಳುವುದೆಲ್ಲ ಆ ಮಗುವಿನ ಅನಿವಾರ್ಯತೆಗಳಲ್ಲವಲ್ಲ. ಅದನ್ನು ಅನಿವಾರ್ಯಗೊಳಿಸಿದ್ದು ಸಿರಿಯ, ಐಸಿಸ್, ಅಮೇರಿಕ... ಮುಂತಾದ ದೊಡ್ಡವರು. ಆದ್ದರಿಂದ ಈ ಸಾವಿನ ಹೊಣೆಯನ್ನು ಅವರೆಲ್ಲ ಹೊತ್ತುಕೊಳ್ಳಲಿ. ಇನ್ನಾದರೂ ಈ ಜಗತ್ತನ್ನು ಮಕ್ಕಳಿಂದ  ಕಸಿಯದಿರಲಿ.

Tuesday, 1 September 2015

ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಉಳಿಸಿಕೊಳ್ಳುತ್ತಲೇ ಕಲಬುರ್ಗಿಯವರ ಹತ್ಯೆಯನ್ನು ಖಂಡಿಸೋಣ

    ವೈಚಾರಿಕ ಭಿನ್ನಾಭಿಪ್ರಾಯಗಳ ನೆಲೆ-ಬೆಲೆ ಮತ್ತು ಭವಿಷ್ಯವನ್ನು ಡಾ| ಕಲಬುರ್ಗಿಯವರ ಸಾವು ಮತ್ತೊಮ್ಮೆ ಪ್ರಶ್ನಾರ್ಹಗೊಳಿಸಿದೆ. ಈ ಪ್ರಶ್ನೆ ಮೊದಲಾಗಿ ಕಾಣಿಸಿಕೊಂಡದ್ದು ಅನಂತಮೂರ್ತಿಯವರ ಸಾವಿನೊಂದಿಗೆ. ಅವರ ಸಾವನ್ನು ಇಲ್ಲಿಯ ಒಂದು ವರ್ಗ ಪಟಾಕಿ ಸಿಡಿಸಿ ಸಂಭ್ರಮಿಸಿತ್ತು. ಅವರ ಸಾವಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂತೋಷ ವ್ಯಕ್ತಪಡಿಸಲಾಗಿತ್ತು. ಇದೀಗ ಕಲಬುರ್ಗಿಯವರನ್ನೂ ಅದೇ ರೀತಿಯಲ್ಲಿ ಸ್ವಾಗತಿಸಲಾಗಿದೆ. ವಿಶೇಷ ಏನೆಂದರೆ, ಅನಂತಮೂರ್ತಿಯವರ ಸಾವು ಸಹಜವಾಗಿದ್ದರೆ ಕಲಬುರ್ಗಿಯವರದ್ದು ಅಸಹಜ ಮತ್ತು ಅಮಾನುಷ. ಅವರಿಗೆ ಗುಂಡಿಕ್ಕಿದವರು ಯಾರು ಮತ್ತು ಅದಕ್ಕೆ ಕಾರಣಗಳೇನು ಎಂಬುದು ಇನ್ನೂ ಗೊತ್ತಾಗುವ ಮೊದಲೇ ಈ ಸಂಭ್ರಮಾಚರಣೆ ನಡೆದಿದೆ. ಆದ್ದರಿಂದಲೇ ಈ ಬೆಳವಣಿಗೆಯನ್ನು ನಾವು ಆತಂಕದಿಂದಲೇ ನೋಡಬೇಕಾಗುತ್ತದೆ. ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಪ್ರಗತಿಪರ ಬ್ಲಾಗರುಗಳ (ಬರಹಗಾರರು) ಹತ್ಯೆ ನಡೆದಾಗ ‘ಶಂಕಿತ ಮುಸ್ಲಿಮ್ ಮೂಲಭೂತವಾದಿಗಳಿಂದ' ಎಂಬ ವಾಕ್ಯದ ಜೊತೆಗೇ ಆ ಸುದ್ದಿಯನ್ನು ಹೆಚ್ಚಿನ ಮಾಧ್ಯಮಗಳು ಪ್ರಕಟಿಸಿದ್ದುವು. ಕಲಬುರ್ಗಿಯವರ ಹತ್ಯೆಗೆ ಸಂಬಂಧಿಸಿ ಅಂತಹ ಯಾವ ‘ಶಂಕಿತ ಮೂಲಭೂತವಾದಿ’ ಪದಗಳೂ ಕನ್ನಡ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿಲ್ಲ. ಅವರ ಹತ್ಯೆಯನ್ನು ಬೆಂಬಲಿಸಿ ಬಹಿರಂಗವಾಗಿಯೇ ಸಂತಸ ಹಂಚಿಕೊಂಡ ಘಟನೆಗಳು ಜರುಗಿದ ಹೊರತಾಗಿಯೂ ಹೀಗಾಗಿದೆ ಎಂಬುದು ಸ್ಪಷ್ಟ. ಹಾಗಂತ, ಇದು ಆರೋಪ ಅಲ್ಲ. ಮಾಧ್ಯಮಗಳ ಈ ಸಹನೆಯನ್ನು ನಾವು ಸದುದ್ದೇಶದಿಂದಲೇ ಸ್ವೀಕರಿಸೋಣ. ಹತ್ಯೆಕೋರರನ್ನೂ ಮತ್ತು ಹತ್ಯೆಗೆ ಸಂತೋಷ ವ್ಯಕ್ತಪಡಿಸಿದವರನ್ನೂ ಪ್ರತ್ಯೇಕವಾಗಿಯೇ ನೋಡುವ ಮಾಧ್ಯಮ ಎಚ್ಚರವನ್ನು ಗೌರವಿಸೋಣ ಮತ್ತು ಈ ಎಚ್ಚರ ಸದಾ ಇರುತ್ತದೆ ಎಂದು ನಿರೀಕ್ಷಿಸೋಣ.
   ಅಷ್ಟಕ್ಕೂ, ಕಲಬುರ್ಗಿಯವರ ಸಾವು ಮತ್ತು ಬದುಕನ್ನು ನಾವು ಈ ವಿಘ್ನ ಸಂತೋಷಿಗಳ ಗುಂಪಿನಿಂದ ಹೊರಗಿಟ್ಟು ನೋಡಬೇಕಾಗಿದೆ. ಅವರು ಬದುಕಿರುವಷ್ಟೂ ದಿನ ಪ್ರಶ್ನೆಗಳೊಂದಿಗೇ ಬದುಕಿದರು. ಆ ಪ್ರಶ್ನೆಗಳು ಎಷ್ಟು ಪ್ರಖರವಾಗಿದ್ದುವು ಎಂಬುದನ್ನು ನೂರಕ್ಕಿಂತಲೂ ಅಧಿಕಾರವಾಗಿರುವ ಅವರ ಸಾಹಿತ್ಯ ಕೃತಿಗಳೇ ಹೇಳುತ್ತವೆ. ಈ ಸಾಹಿತ್ಯ ಭಂಡಾರದಲ್ಲಿ ಇರುವುದೆಲ್ಲ ಸಂಶೋಧನಾತ್ಮಕ ಬರಹಗಳು ಮತ್ತು ಸಂಪಾದನೆಗಳೇ. ಬಹುಶಃ, ಅವರು ಕಾದಂಬರಿಯನ್ನು ಬರೆದೇ ಇಲ್ಲ. ಒಂದು ಕವನ, ಒಂದು ನಾಟಕ, ಒಂದು ಸಣ್ಣಾಟವನ್ನು ಬಿಟ್ಟರೆ ಉಳಿದಂತೆ ಕಲಬುರ್ಗಿಯವರ ಜೋಳಿಗೆಯ ತುಂಬ ಸಂಶೋಧನಾತ್ಮಕ ಬರಹಗಳೇ ತುಂಬಿಕೊಂಡಿದ್ದುವು. ಅವರೋರ್ವ ಪ್ರಶ್ನೆಗಳ ಸರದಾರ. ಅವರು ಮೂರ್ತಿಪೂಜೆಯನ್ನು ಪ್ರಶ್ನಿಸಿದರು. ನಾಗರ ಕಲ್ಲಿನ ಸುತ್ತ ಹರಡಿರುವ ಭಯವನ್ನು ದುರ್ಬಲಗೊಳಿಸಿದರು. ಚನ್ನ ಬಸವಣ್ಣನ ಹುಟ್ಟಿನ ಬಗ್ಗೆ ಬರೆದು ವೀರಶೈವರಿಂದ ವಿರೋಧ ಕಟ್ಟಿಕೊಂಡರು. ಹಿಂದೂ ಧರ್ಮದ ಅಸ್ತಿತ್ವವನ್ನೇ ಪ್ರಶ್ನೆಗೀಡು ಮಾಡಿದರು. ಭಗವದ್ಗೀತೆಯನ್ನು ಧರ್ಮಗ್ರಂಥವೇ ಅಲ್ಲ ಎಂದರು. ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವೆಂದು ಹೇಳಿದ ಅವರು, ವೀರಶೈವ ಧರ್ಮವನ್ನು ಧರ್ಮವೆಂದು ಒಪ್ಪಿಕೊಳ್ಳಲೇ ಇಲ್ಲ. ಅದೊಂದು ಆಚರಣೆ ಎಂದರು. ಸ್ಪಷ್ಟ ಮತ್ತು ನಂಬಲರ್ಹ ಇತಿಹಾಸವಿಲ್ಲದ ರೇಣುಕಾಚಾರ್ಯರು ಅದರ ಸ್ಥಾಪಕರೆನ್ನುವುದಕ್ಕೆ ಪುರಾವೆಯಿಲ್ಲ ಎಂದರು. ಅವರು ಪ್ರಶ್ನೆಯೊಂದಿಗೆ ಬೆಳೆದರು. 80ರ ದಶಕದಲ್ಲೇ ಅವರ ಮೇಲೆ ದಾಳಿಗಳಾಗಿದ್ದುವು. ಬೆದರಿಕೆಗಳಿದ್ದುವು. ಪೊಲೀಸರ ರಕ್ಷಣೆಯಲ್ಲೇ ಅವರು ಪಾಠ ಮಾಡಿದ್ದಿದೆ. ಕಳೆದ ವರ್ಷ ಅವರು ತೀವ್ರ ವಿವಾದಕ್ಕೆ ಒಳಗಾಗಿದ್ದರು. ನಾಗರಕಲ್ಲಿಗೆ ಮೂತ್ರ ವಿಸರ್ಜಿಸುವ ಬಗ್ಗೆ ಅವರು ವ್ಯಕ್ತಪಡಿಸಿದ ಅಭಿಪ್ರಾಯವು ಒಂದು ವರ್ಗದ ತೀವ್ರ ಸಿಟ್ಟಿಗೆ ಕಾರಣವಾಗಿತ್ತು. ಅವರಿಗೆ ಸರಕಾರ ರಕ್ಷಣೆಯನ್ನೂ ಒದಗಿಸಿತ್ತು. ಇತ್ತೀಚೆಗಷ್ಟೇ ಅವರ ಕೋರಿಕೆಯ ಮೇರೆಗೆ ಸರಕಾರ ಭದ್ರತೆಯನ್ನು ಹಿಂದಕ್ಕೆ ಪಡೆದಿತ್ತು. ಅವರು ಸ್ವತಂತ್ರವಾಗಿಯೇ ಬದುಕಿದರು. ಸ್ವತಂತ್ರವಾಗಿಯೇ ಆಲೋಚಿಸಿದರು. ಸ್ವತಂತ್ರವಾಗಿಯೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಹೊರಟು ಹೋಗುವಾಗಲೂ ಭದ್ರತಾ ಪಡೆಗಳಿಂದ ಮುಕ್ತವಾಗಿ ಸ್ವಂತಿಕೆಯೊಂದಿಗೇ ಹೊರಟು ಹೋದರು.
  ನಿಜವಾಗಿ, ವೈಚಾರಿಕತೆ ಮತ್ತು ಸಾಂಪ್ರದಾಯಿಕತೆಯ ಮಧ್ಯೆ ಘರ್ಷಣೆ ಮೊದಲಿನಿಂದಲೂ ನಡೆಯುತ್ತಲೇ ಇದೆ. ವೈಚಾರಿಕತೆಯನ್ನು ಎದುರಿಸುವುದು ಹೇಗೆ ಎಂಬ ಬಗ್ಗೆ ಸಮಾಜದಲ್ಲಿ ಒಂದು ಬಗೆಯ ಗೊಂದಲ ಇದೆ. ಸಹನೆ, ಅಸಹನೆ, ಸ್ಪಷ್ಟ-ಅಸ್ಪಷ್ಟ ಅಭಿಪ್ರಾಯಗಳಿವೆ. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ಹಿಂಸಾತ್ಮಕ ಪ್ರತಿಕ್ರಿಯೆಯೇ ಉತ್ತರವೆಂದು ವಾದಿಸುವ ಒಂದು ಗುಂಪೂ ಇವತ್ತಿನ ಸಮಾಜದಲ್ಲಿದೆ. ರುಶ್ದಿ, ತಸ್ಲೀಮಾ ಮುಂತಾದವರು ‘ಹೀರೋ'ಗಳಾದದ್ದು ಸಮಾಜದ ಈ ವೈಫಲ್ಯಗಳಿಂದಲೇ. ಕ್ರುದ್ಧಗೊಂಡ ಸಮಾಜದ ಅಪ್ರಬುದ್ಧ ಪ್ರತಿಕ್ರಿಯೆಗಳು ಅನೇಕ ಕೃತಿಗಳನ್ನು ವಿಶ್ವಮಾನ್ಯ ಮಾಡಿವೆ. ಅವುಗಳಿಗೆ ಪ್ರಸಿದ್ಧಿಯನ್ನೂ ತಂದುಕೊಟ್ಟಿವೆ. ಅಂದಹಾಗೆ, ವೈಚಾರಿಕತೆ, ಪ್ರಗತಿಪರ ಚಿಂತನೆ ಎಂಬುದೆಲ್ಲ ಯಾವ ಸಮಾಜದ ವೈರಿಯೂ ಅಲ್ಲ. ಸಮಾಜ ಎಂದ ಮೇಲೆ ಅಲ್ಲಿ ಒಂದಕ್ಕಿಂತ ಹೆಚ್ಚು ಅಭಿಪ್ರಾಯಗಳಿರಲೇಬೇಕು. ಹತ್ತು ಮಂದಿಯ ಗುಂಪನ್ನೇ ಎತ್ತಿಕೊಳ್ಳಿ. ಹತ್ತು ಮಂದಿಯೂ ಒಂದೇ ರೀತಿಯಲ್ಲಿರುವುದಕ್ಕೆ ಸಾಧ್ಯವೇ ಇಲ್ಲ. ರೂಪ, ಎತ್ತರ, ಉದ್ದ, ಅಗಲ, ಬಣ್ಣ, ನಗು, ಮಾತು, ಪ್ರತಿಭೆ, ಹವ್ಯಾಸ, ಅಭಿರುಚಿ.. ಎಲ್ಲದರಲ್ಲೂ ಹತ್ತು ಮಂದಿಯ ಮಧ್ಯೆಯೂ ವ್ಯತ್ಯಾಸ ಇರುತ್ತದೆ. ಪ್ರತಿಯೊಬ್ಬರಿಗೂ ಅವರವರದ್ದೇ ಆದ ಐಡೆಂಟಿಟಿಯಿರುತ್ತದೆ. ಅಂದಹಾಗೆ, ಒಂದೇ ಮನೆಯ ಒಂದೇ ರಕ್ತವನ್ನು ಹಂಚಿಕೊಂಡವರಲ್ಲೂ ಒಂದೇ ಅಭಿಪ್ರಾಯವನ್ನು ಕಾಣಲು ಸಾಧ್ಯವಿಲ್ಲದಿರುವಾಗ, ಸಮಾಜದಲ್ಲಿ ಅದು ಕಾಣಿಸಿಕೊಳ್ಳುವುದು ಹೇಗೆ? ಅನಂತಮೂರ್ತಿಯವರಿಗೆ ಧರ್ಮದ ಕುರಿತಂತೆ ಅವರದ್ದೇ ಆದ ಅಭಿಪ್ರಾಯಗಳಿವೆ. ನರೇಂದ್ರ ದಾಬೋಲ್ಕರ್‍ರಿಗೆ ಮೂಢನಂಬಿಕೆಗಳ ಬಗ್ಗೆ ತನ್ನದೇ ಆದ ನಿಲುವುಗಳಿವೆ. ಕಲಬುರ್ಗಿಯವರಾಗಲಿ, ತಸ್ಲೀಮಾ ಆಗಲಿ ಎಲ್ಲರಿಗೂ ಧರ್ಮ, ಸಂಸ್ಕ್ರಿತಿ, ಪುರಾಣ, ಇತಿಹಾಸ.. ಎಲ್ಲವುಗಳ ಬಗ್ಗೆಯೂ ಅವರವರದೇ ಆದ ಅಭಿಪ್ರಾಯಗಳಿರುವುದಕ್ಕೆ ಖಂಡಿತ ಸಾಧ್ಯವಿದೆ. ಆ ಅಭಿಪ್ರಾಯವನ್ನು ಪ್ರಶ್ನಿಸುವುದಕ್ಕೆ ಸಂಪ್ರದಾಯವಾದಿ ಸಮಾಜ ಯಾವುದನ್ನು ಆಯುಧವಾಗಿ ಎತ್ತಿಕೊಳ್ಳಬೇಕು ಎಂಬುದೇ ಇಲ್ಲಿನ ಮುಖ್ಯ ಪ್ರಶ್ನೆ. ಬಂದೂಕಂತೂ ಮನುಷ್ಯ ವಿರೋಧಿ. ತಲವಾರು, ಬಾಂಬು, ಕತ್ತಿ, ದೊಣ್ಣೆ ಮುಂತಾದ ಹಿಂಸಾ ಪ್ರತೀಕಗಳೆಲ್ಲ ವೈಚಾರಿಕ ಹೋರಾಟಕ್ಕೆ ಸೂಕ್ತ ಅಸ್ತ್ರಗಳಲ್ಲ. ಅವು ಜೀವಭಂಜಕ, ಕ್ರೌರ್ಯದ ಪ್ರತೀಕ ಮಾತ್ರವಲ್ಲ, ವೈಚಾರಿಕತೆಯನ್ನು ವೈಚಾರಿಕತೆಯಿಂದಲೇ ಎದುರಿಸಲಾಗದವರ ಅಸ್ತ್ರ. ಪ್ರಶ್ನೆ ಪತ್ರಿಕೆಗೆ ಉತ್ತರ ಪತ್ರಿಕೆಗಳ ಮೂಲಕ ಹೇಗೆ ಉತ್ತರಿಸಲಾಗುವುದೋ ಹಾಗೆಯೇ ವೈಚಾರಿಕತೆಯನ್ನು ವಿಚಾರಗಳ ಮೂಲಕವೇ ಎದುರಿಸಬೇಕು. ಹಾಡಿಗೆ ಹಾಡುಗಳ ಮೂಲಕ, ಲೇಖನಕ್ಕೆ ಲೇಖನಗಳ ಮೂಲಕ, ಭಾಷಣಕ್ಕೆ ಭಾಷಣಗಳ ಮೂಲಕ, ಸಾಕ್ಷ್ಯ ಚಿತ್ರಕ್ಕೆ ಸಾಕ್ಷ್ಯ ಚಿತ್ರಗಳ ಮೂಲಕ, ಸಿನಿಮಾಕ್ಕೆ ಸಿನಿಮಾಗಳ ಮೂಲಕ.. ಹೀಗೆ ಪ್ರತಿಯೊಂದನ್ನೂ ಅತ್ಯಂತ ಸಭ್ಯ ಮತ್ತು ಕಾನೂನುಬದ್ಧ ದಾರಿಗಳ ಮೂಲಕ ಎದುರಿಸಬೇಕೇ ಹೊರತು ಅಸ್ತ್ರಗಳಿಂದ ಅಲ್ಲ. ಬಂದೂಕಿಗೆ ಆತ್ಮವಿಲ್ಲ. ಜೀವವೂ ಇಲ್ಲ. ಒಂದು ವೇಳೆ ಇಂಥ ಜೀವರಹಿತ ಅಸ್ತ್ರಗಳು ಜೀವಂತ ವ್ಯಕ್ತಿಯನ್ನು ಬಲಿ ಪಡೆಯಬಹುದಾದರೂ ಆತನ ಅಭಿಪ್ರಾಯವನ್ನು ಬಲಿ ಪಡೆಯುವುದಕ್ಕೆ ಸಾಧ್ಯವೇ ಇಲ್ಲ. ಕಲಬುರ್ಗಿಯವರ ಮೇಲೆ ಗುಂಡು ಹಾರಿಸಿದವರು ಈ ಸತ್ಯವನ್ನು ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆಂದೇ ಹೇಳಬೇಕಾಗಿದೆ.
  ಏನೇ ಆಗಲಿ, ವೈಚಾರಿಕ ಭಿನ್ನಾಭಿಪ್ರಾಯಗಳಿಗೆ ಹಿಂಸೆ ಎಂದೂ ಉತ್ತರವಲ್ಲ, ಆಗಬಾರದು ಕೂಡ. ಆದ್ದರಿಂದಲೇ, ಕಲಬುರ್ಗಿಯವರೊಂದಿಗೆ ವೈಚಾರಿಕ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಳ್ಳುತ್ತಲೇ ಅವರ ಹತ್ಯೆಯನ್ನು ಪ್ರಬಲ ದನಿಯಲ್ಲಿ ಖಂಡಿಸುವುದಕ್ಕೆ ಸಮಾಜಕ್ಕೆ ಸಾಧ್ಯವಾಗಬೇಕಿದೆ.