Friday, 5 February 2016

ಫ್ರೀಜರ್ ನಲ್ಲಿರುವ ಮಾಂಸದ ಜಾತಿ ಯಾವುದು?

       ದಾದ್ರಿಯ ಮುಹಮ್ಮದ್ ಅಖ್ಲಾಕ್ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ರೋಹಿತ್ ವೇಮುಲರು ಈ ದೇಶದಲ್ಲಿ ಅಸ್ತಿತ್ವದಲ್ಲಿರುವ ಎರಡು ಬಗೆಯ ವಿಚಾರಧಾರೆಯನ್ನು ಮುಖಾಮುಖಿಗೊಳಿಸಿ ಹೊರಟು ಹೋಗಿದ್ದಾರೆ. ಈ ಮುಖಾಮುಖಿಯನ್ನು ಮನುಷ್ಯಪರ ಮತ್ತು ಮನುಷ್ಯ ವಿರೋಧಿ ವಿಚಾರಧಾರೆಗಳ ಮುಖಾಮುಖಿ ಎಂದೂ ವ್ಯಾಖ್ಯಾನಿಸಬಹುದು. ರೋಹಿತ್ ವೇಮುಲನ ಆತ್ಮಹತ್ಯೆಗಿಂತ ಮೊದಲು ದಾದ್ರಿಯಲ್ಲಿ ಮುಹಮ್ಮದ್ ಅಖ್ಲಾಕ್‍ರನ್ನು ಥಳಿಸಿ ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ದೇಶದ ಒಂದು ವರ್ಗ ವ್ಯಕ್ತಪಡಿಸಿದ ಪ್ರತಿಕ್ರಿಯೆಯನ್ನು ರೋಹಿತ್ ವೇಮುಲನ ಅತ್ಮಹತ್ಯೆಗೆ ಅದೇ ಗುಂಪು ವ್ಯಕ್ತಪಡಿಸಿದ ಪ್ರತಿಕ್ರಿಯೆಯೊಂದಿಗೆ ಹೋಲಿಸಿ ನೋಡಿದರೆ, ಈ ಗುಂಪಿನ ವಿಚಾರಧಾರೆ ಎಷ್ಟು ಅಪಾಯಕಾರಿ ಅನ್ನುವುದು ಸ್ಪಷ್ಟವಾಗುತ್ತದೆ. ಅಖ್ಲಾಕ್ ಹತ್ಯೆಯ ವಿರುದ್ಧ ದೇಶಾದ್ಯಂತ ಖಂಡನೆ ವ್ಯಕ್ತವಾಗುತ್ತಿರುವಾಗ ಈ ವಿಚಾರಧಾರೆಯ ಮಂದಿ ಆ ಹತ್ಯೆಯನ್ನು ಗೋಹತ್ಯೆಗೆ ಸ್ಥಳೀಯರ ಪ್ರತಿಕ್ರಿಯೆ ಎಂದು ವ್ಯಾಖ್ಯಾನಿಸ ತೊಡಗಿದರು. ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷಿದ್ಧವಾಗಿರುವುದರಿಂದ ಈ ಹತ್ಯೆ ಸಮರ್ಥನೀಯ ಎಂಬ ರೀತಿಯಲ್ಲಿ ಮಾತಾಡತೊಡಗಿದರು. ಇದಕ್ಕೆ ಪೂರಕವಾಗಿ ಕರುವೊಂದು ನಾಪತ್ತೆಯಾಗಿರುವ ಮತ್ತು ರುಂಡ ಪತ್ತೆಯಾಗಿರುವ ವದಂತಿಗಳನ್ನು ಹಬ್ಬಿಸಿದರು. ಅಖ್ಲಾಕ್‍ನನ್ನು ಹತ್ಯೆ ಮಾಡಿದ್ದು ಸರಿ ಎಂದು ವಾದಿಸುವ ವಾತಾವರಣವೊಂದನ್ನು ಅವರು ಹುಟ್ಟು ಹಾಕಿದರು. ಅದಕ್ಕೆ ತಕ್ಕುದಾದ ಸಮರ್ಥನೆಗಳನ್ನು ಉತ್ಪಾದಿಸಿ ಹಂಚತೊಡಗಿದರು. ಇದು ಉತ್ತರ ಪ್ರದೇಶ ಸರಕಾರದ ಮೇಲೆ ಎಷ್ಟರ ಮಟ್ಟಿಗೆ ಒತ್ತಡ ಹೇರಿತೆಂದರೆ, ಅಖ್ಲಾಕ್‍ನ ಮನೆಯ ಫ್ರೀಜರ್‍ನಲ್ಲಿದ್ದ ಮಾಂಸ ದನದ್ದೋ ಅಲ್ಲ ಆಡಿನದ್ದೋ ಎಂಬುದರ ಪರೀಕ್ಷೆಗೆ ಅದು ಮುಂದಾಯಿತು. ಒಂದು ರೀತಿಯಲ್ಲಿ, ಬಲಪಂಥೀಯ ವಿಚಾರಧಾರೆಗೆ ಸಿಕ್ಕ ಗೆಲುವು ಇದು. ಫಾರೆನ್ಸಿಕ್ ಪರೀಕ್ಷೆಯಲ್ಲಿ ಮಾಂಸ ಗೋವಿನದ್ದು ಎಂದು ಸಾಬೀತಾದರೆ, ಇನ್ನಷ್ಟು ತಾರಕ ದನಿಯಲ್ಲಿ ಆ ಹತ್ಯೆಯನ್ನು ಸಮರ್ಥಿಸಿಕೊಳ್ಳಬಹುದು. ಕುಸಿಯುತ್ತಿರುವ ಗೋವುಗಳ ಸಂಖ್ಯೆಯ ಕೃತಕ ಅಂಕಿ-ಅಂಶಗಳನ್ನು ಕೊಟ್ಟು ಇದಕ್ಕೆಲ್ಲಾ ಮುಸ್ಲಿಮರ ಗೋಮಾಂಸ ಪ್ರೇಮವೇ ಕಾರಣ ಎಂದು ಹೇಳಬಹುದು. ಗೋರಕ್ಷಣೆಯ ಹೆಸರಲ್ಲಿ ಉತ್ತರ ಪ್ರದೇಶದಾದ್ಯಂತ ಅಭಿಯಾನ ಕೈಗೊಳ್ಳಬಹುದು. ಗೋಹತ್ಯೆಗೆ ಪ್ರತಿಹತ್ಯೆಯೇ ಪರಿಹಾರ ಎಂದೂ ಘೋಷಿಸಬಹುದು. ಒಂದು ವೇಳೆ, ಆ ಮಾಂಸ ಗೋವಿನದ್ದಲ್ಲ ಎಂದು ಸಾಬೀತಾಯಿತು ಅಂತಿಟ್ಟುಕೊಳ್ಳಿ. ಆಗಲೂ ಹಿಂಜರಿಯಬೇಕಿಲ್ಲ. ಫಾರೆನ್ಸಿಕ್ ಪರೀಕ್ಷೆಯ ವಿಶ್ವಾಸಾರ್ಹತೆಯನ್ನೇ ಆಗ ಪ್ರಶ್ನಿಸಿದರಾಯಿತು. ಪರೀಕ್ಷಾ ವರದಿಯನ್ನು ಸಮಾಜವಾದಿ ಪಕ್ಷವು ತಿರುಚಿದೆ ಎಂದು ಆರೋಪಿಸಿದರಾಯಿತು. ಮುಸ್ಲಿಮರನ್ನು ಓಲೈಸುವುದಕ್ಕಾಗಿ ಸಮಾಜವಾದಿ ಪಕ್ಷವು ಗೋವನ್ನು ಆಡನ್ನಾಗಿ ಪರಿವರ್ತಿಸಿದೆ ಎಂದು  ಹೇಳಿದರಾಯಿತು. ಒಟ್ಟಿನಲ್ಲಿ, ಫಲಿತಾಂಶ ಏನೇ ಬಂದರೂ ಲಾಭ ಮಾತ್ರ ಹತ್ಯೆ ನಡೆಸಿದವರಿಗೇ ಸಿಗುತ್ತದೆ. ಅಂತಿಮವಾಗಿ ನಡೆದದ್ದೂ ಇದುವೇ. ಇಡೀ ಪರೀಕ್ಷಾ ಫಲಿತಾಂಶವನ್ನೇ ಆ ವಿಚಾರಧಾರೆಯ ಮಂದಿ ತಿರಸ್ಕರಿಸಿದರು. ಇದರ ನಡುವೆಯೇ ಘಟನೆಗೆ ಅಖ್ಲಾಕ್‍ರ ಮಗನ ಪ್ರೇಮ ಪ್ರಕರಣವೇ ಕಾರಣ ಎಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಪತ್ರಿಕಾಗೋಷ್ಠಿ ಕರೆದು ಹೇಳಿಕೊಂಡಿತು. ಹಿಂದೂ ಹುಡುಗಿಯನ್ನು ಆತ ಪ್ರೀತಿಸುತ್ತಿದ್ದ ಎಂದು ಹೇಳಿ ಅದು ಆ ಹತ್ಯೆಯನ್ನು ಸಮರ್ಥಿಸಿಕೊಂಡಿತು. ಹೀಗೆ ಕ್ರೌರ್ಯವೊಂದರ ಸುತ್ತ ವಿವಿಧ ಬಗೆಯ ಅನುಮಾನಗಳನ್ನು ಸೃಷ್ಟಿಸಿ ಕೊನೆಗೆ ಆ ಕ್ರೌರ್ಯದ ಬದಲು ಅನುಮಾನಗಳ ಸುತ್ತವೇ ಸಮಾಜ ಚರ್ಚಿಸುವಂತೆ ಮಾಡುವ ಕಲೆ ಅದಕ್ಕೆ ಕರಗತವಾಗಿದೆ. ವೇಮುಲನ ವಿಷಯದಲ್ಲೂ ಇದೇ ತಂತ್ರವನ್ನು ಪ್ರಯೋಗಿಸಲಾಗಿದೆ. ಆತನ ಆತ್ಮಹತ್ಯೆಗೆ ಯಾರು ಮತ್ತು ಯಾವುದೆಲ್ಲ ಕಾರಣ ಎಂಬುದು ಚರ್ಚೆಯಾಗಬೇಕಾದ ಈ ಹೊತ್ತಿನಲ್ಲಿ ಆತ ದಲಿತನೋ ಅಲ್ಲ ಹಿಂದುಳಿದ ವರ್ಗದವನೋ ಎಂಬೊಂದು ಚರ್ಚೆಯನ್ನು ಈ ವಿಚಾರಧಾರೆ ಹುಟ್ಟು ಹಾಕಿದೆ. ಮಾತ್ರವಲ್ಲ, ಆತ ದಲಿತನೇ ಅಲ್ಲ ಎಂದೂ ಅದು ಘೋಷಿಸಿದೆ. ಸ್ಮೃತಿ ಇರಾನಿ, ಸುಶ್ಮಾ ಸ್ವರಾಜ್‍ರಿಂದ ಹಿಡಿದು ಹೈದರಾಬಾದ್ ವಿಶ್ವವಿದ್ಯಾನಿಲಯದ ABVPಯ ಅಧ್ಯಕ್ಷನವರೆಗೆ ವೇಮುಲನ ಜಾತಿಯ ಬಗ್ಗೆ ವಿವಿಧ ಬಗೆಯ ಹೇಳಿಕೆಗಳು ಹೊರಬೀಳುತ್ತಿವೆ. ಒಂದು ವೇಳೆ ಈ ತಂತ್ರದಲ್ಲಿ ಈ ಮಂದಿ ಯಶಸ್ವಿಯಾದರೆ ಬಳಿಕ ವೇಮುಲನನ್ನೇ ಅಪರಾಧಿ ಸ್ಥಾನದಲ್ಲಿ ಕೂರಿಸಬಹುದು. ಈ ವರೆಗೆ ನಡೆದ ಎಲ್ಲ ಹೋರಾಟಗಳನ್ನೂ ಅವರು ಗೇಲಿ ಮಾಡಬಹುದು. ಸುಳ್ಳು ದಾಖಲೆ ಸೃಷ್ಟಿಸಿ ದಲಿತ ಸೌಲಭ್ಯಗಳನ್ನು ಕಸಿದ ವಂಚಕನಂತೆ ವೇಮುಲನನ್ನು ಬಿಂಬಿಸಬಹುದು.
  ನಿಜವಾಗಿ, ಈ ರೀತಿ ಸತ್ಯವನ್ನು ತಿರುಚುವುದು ಹತ್ಯೆಗಿಂತಲೂ ಕ್ರೂರವಾದುದು. ಅಷ್ಟಕ್ಕೂ, ಅಖ್ಲಾಕ್‍ನ ಮನೆಯಲ್ಲಿದ್ದುದು ಗೋಮಾಂಸವೆಂದೇ ಇಟ್ಟುಕೊಳ್ಳೋಣ. ಅದಕ್ಕೆ ಹತ್ಯೆ ಉತ್ತರವೇ? ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ಬೆಂಬಲ ನೀಡುವ ಈ ಬಗೆಯ ಹೇಳಿಕೆಗಳಿಂದ ಏನನ್ನು ನಿರೀಕ್ಷಿಸಬಹುದು? ವೇಮುಲನಿಗೆ ಸಂಬಂಧಿಸಿಯೂ ನಾವು ಇವೇ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ. ಆತ ದಲಿತನಲ್ಲದೇ ಇರಬಹುದು, ಹಿಂದುಳಿದ ವರ್ಗಕ್ಕೇ ಸೇರಿರಬಹುದು. ಹಾಗಂತ, ಆ ಆತ್ಮಹತ್ಯೆ ಕ್ಷುಲ್ಲಕವೇ? ಹಿಂದುಳಿದ ವರ್ಗದ ಹುಡುಗನನ್ನು ಬಯಲಲ್ಲಿ ಮಲಗಿಸುವುದು ಸಮರ್ಥನೀಯವೇ? ಆತನಿಗೆ ಸಲ್ಲಬೇಕಾದ ವೇತನವನ್ನು ತಡೆಹಿಡಿಯುವುದು ಮತ್ತು ಆತನ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸ್ಮೃತಿ ಇರಾನಿಯವರ ಇಲಾಖೆಯಿಂದ ಮೇಲಿಂದ ಮೇಲೆ ಪತ್ರ ರವಾನೆಯಾಗುವುದು ಸಮ್ಮತವೇ? ಹಿಂದುಳಿದ ವರ್ಗದ ವಿದ್ಯಾರ್ಥಿಯನ್ನು ದೇಶದ್ರೋಹಿ ಎಂದು ಕರೆದು ಹಿಂಸಿಸಬಹುದೇ? ಅಷ್ಟಕ್ಕೂ, ಹೈದರಾಬಾದ್ ವಿಶ್ವವಿದ್ಯಾನಿಲಯದಲ್ಲಿ ವೇಮುಲನ ಗುರುತು ಹೇಗಿತ್ತು? ಅಲ್ಲಿನ ಕುಲಪತಿಗಳು, ಪ್ರೊಫೆಸರ್‍ಗಳು ಮತ್ತು ಇತರ ವಿದ್ಯಾರ್ಥಿಗಳೆಲ್ಲ ವೇಮುಲನನ್ನು ಏನೆಂದು ಪರಿಗಣಿಸಿದ್ದರು, ದಲಿತ ಎಂದೇ ಅಲ್ಲವೇ? ಆತನು ಪರಿಚಯಿಸಿಕೊಂಡದ್ದೂ ಹಾಗೆಯೇ ತಾನೇ? ಹೀಗಿರುವಾಗ, ಆತ ವಿಶ್ವವಿದ್ಯಾನಿಲಯದಲ್ಲಿ ನಡೆಯುವ ದಲಿತ ದೌರ್ಜನ್ಯದ ಪ್ರತಿನಿಧಿಯಾಗಿದ್ದಾನೆ ಎಂದು ಒಪ್ಪಿಕೊಳ್ಳುವುದಕ್ಕೆ ಯಾಕೆ ಈ ಮಂದಿ ಹಿಂದೇಟು ಹಾಕಬೇಕು? ವಿಶ್ವವಿದ್ಯಾನಿಲಯವು ಆತನನ್ನು ಗುರುತಿಸಿರುವುದು ದಲಿತನಾಗಿಯೇ. ಆದ್ದರಿಂದ  ದಲಿತನೋರ್ವ ಎದುರಿಸಬಹುದಾದ ಸಕಲ ಸವಾಲುಗಳನ್ನೂ ಆತ ಎದುರಿಸಬೇಕಾದುದು ಸಹಜ. 2007 ರಿಂದ 13ರ ಮಧ್ಯೆ ಹೈದರಾಬಾದ್‍ನ ವಿವಿಧ ವಿಶ್ವವಿದ್ಯಾನಿಲಯಗಳಲ್ಲಿ 11 ಮಂದಿ ದಲಿತ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಏನೆಲ್ಲ ಜಾತಿ ಸಂಬಂಧಿ ಕಾರಣಗಳಿದ್ದುವೋ ಅವೆಲ್ಲವೂ ವೇಮುಲ ಆತ್ಮಹತ್ಯೆಯ ಹಿಂದೆಯೂ ಇರುವುದಕ್ಕೆ ಎಲ್ಲ ಸಾಧ್ಯತೆಯೂ ಇದೆ. 2013ರಲ್ಲಿ ಅಂಧ್ರಪ್ರದೇಶದ ಹೈಕೋರ್ಟ್ ಈ ಆತ್ಮಹತ್ಯೆಗಳ ಬಗ್ಗೆ ಸ್ವಪ್ರೇರಿತ ದೂರನ್ನೂ ದಾಖಲಿಸಿಕೊಂಡಿತ್ತು. ಶಿಕ್ಷಣ ತಜ್ಞ ಅನೂಪ್ ಸಿಂಗ್ ಅವರ ಅಧ್ಯಯನ, ಸ್ಯಾಮ್ಸನ್ ಓವಿಚೇಗನ್ ಅವರು 2013ರಲ್ಲಿ ನಡೆಸಿದ ಅಧ್ಯಯನ ಮತ್ತು 2010ರಲ್ಲಿ ಮೇರಿ ಥಾರ್ನ್‍ಟೋನ್ ಅವರು ನಡೆಸಿದ ಅಧ್ಯಯನಗಳೆಲ್ಲ ಭಾರತೀಯ ವಿಶ್ವವಿದ್ಯಾನಿಲಯಗಳಲ್ಲಿ ದಲಿತರ ಮೇಲಾಗುತ್ತಿರುವ ತಾರತಮ್ಯ ನೀತಿಯನ್ನು ವಿವರವಾಗಿ ವಿಶ್ಲೇಷಿಸಿದ್ದುವು. 5-6 ತಿಂಗಳಿನಿಂದ ವೇತನವಿಲ್ಲದೇ, ಲೈಬ್ರರಿ, ಹಾಸ್ಟೆಲ್‍ಗಳಿಗೆ ಪ್ರವೇಶಿಸಲಾಗದೇ ಮತ್ತು ಆ ಕಾರಣಗಳಿಂದಾಗಿ ಅಧ್ಯಯನಕ್ಕೆ ಪುಸ್ತಕಗಳನ್ನು ಪಡೆಯಲಾಗದೇ ಒದ್ದಾಡುತ್ತಿರುವ ವೇಮುಲು ಸಹಿತ ಐವರು ಯುವಕರ ಬಗ್ಗೆ ಒಂದೇ ಒಂದು ಗೆರೆಯ ಕಾಳಜಿಯ ಮಾತನ್ನೂ ಆಡದೇ, `ಅವರ ವಿರುದ್ಧ ಏನು ಕ್ರಮ ಕೈಗೊಂಡಿರಿ' ಎಂದು ವಿಶ್ವವಿದ್ಯಾನಿಲಯದ ಉಪಕುಲಪತಿಯವರನ್ನು ಮಾನವ ಸಂಪನ್ಮೂಲ ಇಲಾಖೆಯು ಪ್ರಶ್ನಿಸಿ ಐದೈದು ಬಾರಿ ಪತ್ರ ಕಳುಹಿಸುತ್ತದಲ್ಲ, ಇದಕ್ಕೆ ಏನೆನ್ನಬೇಕು? ಇದರಲ್ಲಿ ಅಸಹಜವಾದುದು ಏನೂ ಇಲ್ಲವೇ? ಹಾಗಂತ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳ ಮಧ್ಯೆ ಘರ್ಷಣೆ ಹೊಸತೇನೂ ಅಲ್ಲ. ಆದ್ದರಿಂದ, ವೇಮುಲ
ತೊಡಗಿಸಿಕೊಂಡಿರುವ ಅಂಬೇಡ್ಕರ್ ಸ್ಟೂಡೆಂಟ್ಸ್ ಅಸೋಸಿಯೇಶನ್ (ASA) ಎಂಬ ವಿದ್ಯಾರ್ಥಿ ಸಂಘಟನೆಯು ABVP ಯ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದೆ ಎಂಬ ಆರೋಪವನ್ನು ಅಭೂತಪೂರ್ವ ಘಟನೆಯಾಗಿ ನೋಡಬೇಕಾಗಿಯೂ ಇಲ್ಲ. ಈ ಘಟನೆಗಿಂತ ಮೊದಲು ದೆಹಲಿ ವಿಶ್ವವಿದ್ಯಾನಿಲಯದಲ್ಲಿ ABVP  ವಿದ್ಯಾರ್ಥಿಗಳು `ಮುಝಫ್ಫರ್ ನಗರ್ ಅಭೀ ಬಾಕಿ ಹೆ' ಎಂಬ ಡಾಕ್ಯುಮೆಂಟರಿ ಪ್ರದರ್ಶನವನ್ನು ತಡೆಯುವ ನೆಪದಲ್ಲಿ ದಾಂಧಲೆ ನಡೆಸಿದ್ದರು. ಜಮ್ಮು ಕಾಶ್ಮೀರದಲ್ಲಂತೂ ABVP  ವಿದ್ಯಾರ್ಥಿಗಳು ನಡೆಸಿದ ದಾಂಧಲೆ ಮತ್ತು ಹಲ್ಲೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಕಳೆದ ವಾರ ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸ ನೀಡಲು ಹೋದ ದಿ ಹಿಂದೂ ಪತ್ರಿಕೆಯ ಮಾಜಿ ಸಂಪಾದಕ ಮತ್ತು ಖ್ಯಾತ ಪತ್ರಕರ್ತ ಸಿದ್ಧಾರ್ಥ್ ವರದರಾಜನ್‍ರನ್ನು ಇದೇ ಸಂಘಟನೆಯ ವಿದ್ಯಾರ್ಥಿಗಳು ಉಪಕುಲಪತಿಯವರ ಕಚೇರಿಯಲ್ಲಿ ಬಂಧನಕ್ಕೆ ಒಳಪಡಿಸಿದ್ದರು. ಹಾಗಂತ, ಸ್ಮೃತಿ ಇರಾನಿಯವರ ಮಾನವ ಸಂಪನ್ಮೂಲ ಇಲಾಖೆಯಿಂದ ಸಂಬಂದಿತ ವಿಶ್ವ ವಿದ್ಯಾನಿಲಯಗಳಿಗೆ ಈ ಬಗ್ಗೆ ಎಷ್ಟು ಪತ್ರಗಳು ಹೋಗಿವೆ? ಈ ವಿದ್ಯಾರ್ಥಿಗಳಲ್ಲಿ ದೇಶದ್ರೋಹವನ್ನು ಶಂಕಿಸಿ ‘ಬಂಡಾರು ದತ್ತಾತ್ರೇಯರು' ಎಷ್ಟು ಪತ್ರಗಳನ್ನು ಸ್ಮೃತಿ ಇರಾನಿಯವರಿಗೆ ಕಳುಹಿಸಿದ್ದಾರೆ?
     ಅಖ್ಲಾಕ್ ಮತ್ತು ವೇಮುಲರಿಬ್ಬರೂ ಸೇರಿ ಬಲಪಂಥೀಯ ವಿಚಾರಧಾರೆಯ ಕ್ರೌರ್ಯ ಮನಃಸ್ಥಿತಿ ಮತ್ತು ಆ ಕ್ರೌರ್ಯವನ್ನು ಸಮರ್ಥಿಸಿಕೊಳ್ಳುವ ಕ್ರೂರ ಸುಳ್ಳುಗಳನ್ನು ದೇಶದ ಮುಂದೆ ಅನಾವರಣಗೊಳಿಸಿದ್ದಾರೆ. ಅವರಿಬ್ಬರ ಪ್ರಾಣತ್ಯಾಗವು ಈ ವಿಚಾರಧಾರೆಯನ್ನು ಶಾಶ್ವತವಾಗಿ ಇಲ್ಲವಾಗಿಸಲು ಯಶಸ್ವಿಯಾಗಲಿ.

Thursday, 28 January 2016

ಪಂಡಿತರ ಸಮಸ್ಯೆ ಮತ್ತು ಓಂಕಾರ್ ರಾಜ್‍ದಾನ್ ರ ಮೂರಂತಸ್ತಿನ ಮನೆ

ಓಂಕಾರ್ ರಾಜ್ದಾನ್ ಕಾಶ್ಮೀರಿಗಳೊಂದಿಗೆ
       ಕಾಶ್ಮೀರವನ್ನು ಹಿಂದೂ-ಮುಸ್ಲಿಮ್ ಎಂಬ ಪ್ರತ್ಯೇಕ ಕಾಲನಿಗಳಾಗಿ ಒಡೆಯುವ ಪ್ರಧಾನಿ ಮೋದಿಯವರ ನಿಲುವನ್ನು ಕಾಶ್ಮೀರದ ಪಂಡಿತ ಕುಟುಂಬವೊಂದು ಬಲವಾಗಿ ಆಕ್ಷೇಪಿಸಿದೆ. ಮಾತ್ರವಲ್ಲ, ಪ್ರಸ್ತಾವಿತ ಹಿಂದೂ ಕಾಲನಿಯ ಬದಲು ಮುಸ್ಲಿಮರೇ ಅಧಿಕವಿರುವ ಹುಮ್‍ಹಮಾ ಪ್ರದೇಶದಲ್ಲಿ ಈ ಕುಟುಂಬವು ಮೂರಂತಸ್ತಿನ ಮನೆಯನ್ನು ಕಟ್ಟಿದೆ. ಮನೆಗೆ `ಬೆಳಕಿನ ಹುಟ್ಟು' ಎಂಬ ಚಂದದ ಹೆಸರನ್ನೂ ಕೊಟ್ಟಿದೆ. ಅಲ್ಲೇ ವಾಸಿಸತೊಡಗಿದೆ. 1990ರಲ್ಲಿ ಕಾಶ್ಮೀರದಿಂದ ವಲಸೆ ಹೋದ ಕುಟುಂಬಗಳಲ್ಲಿ ಈ ಓಂಕಾರ್ ರಾಜದಾನ್ ಕುಟುಂಬವೂ ಒಂದು. ಅಂದಹಾಗೆ, ಜಗ್ಮೋಹನ್‍ರು ರಾಜ್ಯಪಾಲರಾಗಿದ್ದ ಕಾಲದಲ್ಲಿ ನಡೆದ ಈ ವಲಸೆಯ ಸರಿ-ತಪ್ಪುಗಳ ಕುರಿತಂತೆ ಈ ದೇಶದಲ್ಲಿ ಅನೇಕಾರು ಬಾರಿ ಚರ್ಚೆಗಳಾಗಿವೆ. ಜಗ್ಮೋಹನ್‍ರ ಬಲಪಂಥೀಯ ವಿಚಾರಧಾರೆಯು ಆ ಇಡೀ ವಲಸೆ ಪ್ರಕ್ರಿಯೆಯ ಹಿಂದೆ ಕೆಲಸ ಮಾಡಿರುವ ಬಗ್ಗೆ ಅನೇಕ ಬಾರಿ ಅನುಮಾನ ಪಡಲಾಗಿದೆ. ಜಗ್ಮೋಹನ್ ಕಾಶ್ಮೀರವನ್ನು ಬೆಂಕಿಯ ಕುಲುವೆಯಾಗಿಸಿದರು. ತನ್ನ ಅಪರಿಪಕ್ವ ನೀತಿಗಳ ಮೂಲಕ ಉಗ್ರವಾದಕ್ಕೆ ಪೋಷಣೆ ನೀಡಿದರು.(ಇದೀಗ  ಮೋದಿ ಸರಕಾರವು ಜಗಮೋಹನ್ ರಿಗೆ ಪದ್ಮಶ್ರೀ ಕೊಟ್ಟು ಸನ್ಮಾನಿಸಿದೆ) ದೇಶ ವಿಭಜನೆಯ ಸಮಯದಲ್ಲಿ ಇಡೀ ದೇಶದಲ್ಲಿಯೇ ಅಲ್ಪಸಂಖ್ಯಾತರ ವಿರುದ್ಧ ದಾಳಿಗಳು ನಡೆಯುತ್ತಿದ್ದಾಗ ಕಾಶ್ಮೀರದ ಅಲ್ಪಸಂಖ್ಯಾತ ಪಂಡಿತ ಸಮುದಾಯದ ಮೇಲೆ ಒಂದೇ ಒಂದು ದಾಳಿ ನಡೆದಿರಲಿಲ್ಲ. ಹಿಂದೂ-ಮುಸ್ಲಿಮ್ ಎಂಬುದು ಕಾಶ್ಮೀರವನ್ನು ವಿಭಜಿಸುವ ಬದಲು ಜೋಡಿಸುವ ಸೇತುವೆಯಾಗಿತ್ತು. ಕಾಶ್ಮೀರದ ಪ್ರತ್ಯೇಕತಾವಾದಿ ಹೋರಾಟದ ಅಪದ್ಧಗಳೇನೇ ಇರಲಿ, ಅದು ಕಾಶ್ಮೀರಿ ಪಂಡಿತರ ವಿರೋಧಿ ಆಗಿರಲಿಲ್ಲ. ಬಹುಶಃ ಅದನ್ನು ಪಂಡಿತ ವಿರೋಧಿಯಾಗಿ ಚಿತ್ರೀಕರಿಸಿದ್ದು ಮತ್ತು ಪಂಡಿತ ವಿರೋಧಿಯಾಗುವಂತೆ ಷಡ್ಯಂತ್ರ ರೂಪಿಸಿದ್ದು ರಾಜಕೀಯವೇ ಇರಬೇಕು. ಆ ಇಡೀ ಹೋರಾಟವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ  ಹುನ್ನಾರವೊಂದಕ್ಕೆ ಕಾಶ್ಮೀರದ ಹೊರಗೆ ಸ್ಕ್ರಿಪ್ಟ್ ಅನ್ನು ರಚಿಸಲಾಯಿತು. ಪ್ರತ್ಯೇಕತಾವಾದಿಗಳನ್ನು ಉದ್ರೇಕಿಸುವ ಮತ್ತು ಇಡೀ ಮುಸ್ಲಿಮ್ ಸಮುದಾಯವನ್ನು ಪ್ರತ್ಯೇಕತಾವಾದದ ಹೆಸರಲ್ಲಿ ಹೀನಾಯವಾಗಿ ನಡೆಸಿಕೊಳ್ಳುವ ಷಡ್ಯಂತ್ರಗಳು ನಡೆದುವು. ಕಾಶ್ಮೀರ ಎಂದೂ ಪ್ರತ್ಯೇಕತಾವಾದಿಗಳ ಮುಷ್ಠಿಯಲ್ಲಿರಲಿಲ್ಲ. ದೇಶದ ಇತರೆಲ್ಲ ಕಡೆ ಇರುವಂತಹ ಅಸಹನೆಯ ಸಣ್ಣ ಗುಂಪೊಂದು ಪ್ರತ್ಯೇಕತೆಯ ಹಾಡು ಹಾಡುತ್ತಿತ್ತು. ಪಾಕಿಸ್ತಾನ ಆ ಹಾಡಿಗೆ ತಾಳ ಹಾಕುತ್ತಿತ್ತು. ಅದನ್ನು ಬಿಟ್ಟರೆ ರಾಜಕೀಯವಾಗಿ ಯಾವ ಬಲವೂ ಇಲ್ಲದ ಮತ್ತು ಕನಿಷ್ಠ ಪಂಚಾಯತಿ ಚುನಾವಣೆಯಲ್ಲಿ ಒಂದು ಸೀಟನ್ನೂ ಗೆಲ್ಲಲಾಗದಷ್ಟು ಆ ಹೋರಾಟ ಬಲಹೀನವಾಗಿತ್ತು. ಒಂದು ರೀತಿಯಲ್ಲಿ, ಈ ದುರ್ಬಲ ಶಿಶುವನ್ನು ಪೋಷಿಸಿದ್ದೇ ಬಲಪಂಥೀಯ ವಿಚಾರಧಾರೆಯ ರಾಜಕೀಯ ನಾಯಕರು. ರಾಜಕೀಯ ಹಿತಾಸಕ್ತಿಯೊಂದೇ ಅವರ ಮುಂದಿದ್ದುದಲ್ಲ, ಕಾಶ್ಮೀರಿ ಮುಸ್ಲಿಮರನ್ನು ಪಾಕ್ ಪ್ರೇಮಿಗಳೆಂದೂ ಹಿಂದೂ ವಿರೋಧಿಗಳೆಂದೂ ಮುದ್ರೆ ಹಾಕುವುದು ಅವರಿಗೆ ಬೇಕಾಗಿತ್ತು. ಇಡೀ ದೇಶದಲ್ಲಿಯೇ ಮುಸ್ಲಿಮರು ಬಹುಸಂಖ್ಯಾತರಾಗಿರುವುದು ಕಾಶ್ಮೀರದಲ್ಲಿ. ಹಿಂದುಗಳು ಅಲ್ಪಸಂಖ್ಯಾತರಾಗಿರುವುದೂ ಅಲ್ಲೇ. ಈ ಎರಡೂ ಸಮುದಾಯ ಅನ್ಯೋನ್ಯತೆಯಿಂದ ಬದುಕುವುದು ಮುಸ್ಲಿಮ್ ವಿರೋಧಿಗಳನ್ನು ಕಳವಳಕ್ಕೆ ಈಡಾಗಿಸಿತ್ತು. ಬಹುಶಃ, ಜಗ್ಮೋಹನ್‍ರು ಆ ವಿಚಾರಧಾರೆಯ ಪ್ರತಿನಿಧಿಯಾಗಿ ಕಾಶ್ಮೀರಕ್ಕೆ ಪ್ರವೇಶಿಸಿದ್ದಾರೆಂದೇ ಹೇಳಬೇಕು. ಅವರಿಂದಾಗಿ, ಇಡೀ ಕಾಶ್ಮೀರದ ನಕ್ಷೆಯೇ ಬದಲಾಯಿತು. ಪ್ರತ್ಯೇಕತಾವಾದವು ಹಿಂದೂ ವಿರೋಧಿಯಾಗಿ ಮಾರ್ಪಡಲು ಬೇಕಾದ ತಂತ್ರಗಳನ್ನು ಹೆಣೆಯಲಾಯಿತು. ಅದು ಫಲಿಸಲು ಪ್ರಾರಂಭವಾದದ್ದೇ ತಡ ಇಡೀ ಕಾಶ್ಮೀರಿ ಮುಸ್ಲಿಮರು ಹಿಂದೂ ವಿರೋಧಿಗಳಂತೆ ಮತ್ತು ಇಡೀ ಹಿಂದೂ ಪಂಡಿತರನ್ನು ಸಂತ್ರಸ್ತರಂತೆ ಬಿಂಬಿಸಲಾಯಿತು. ಬಿಸಿ ರಕ್ತದ ಪ್ರತ್ಯೇಕತಾವಾದಿಗಳನ್ನು ಹಾಗೆ ಆಲೋಚಿಸುವಂತೆ ಮಾಡುವುದಕ್ಕೆ ಗಡಿಯ ಒಳಗಿನ ಮತ್ತು ಹೊರಗಿನ ರಾಜಕೀಯವು ಶಕ್ತಿ ಮೀರಿ ಪ್ರಯತ್ನಿಸಿತು. ಅದು
      
ಯಶಸ್ವಿಯಾಗುತ್ತಿದ್ದಂತೆಯೇ ಪಂಡಿತರ ಸಾಮೂಹಿಕ ವಲಸೆ ಆರಂಭವಾಯಿತು. ಮನೆ-ಮಾರುಗಳನ್ನು ಬಿಟ್ಟು ಒಂದು ಸಮುದಾಯವು ದಿಲ್ಲಿ ಮುಂತಾದ ಅಪರಿಚಿತ ಪ್ರದೇಶದಲ್ಲಿ ವಾಸಿಸಲೇ ಬೇಕಾದ ಅನಿವಾರ್ಯತೆ ಎದುರಾಯಿತು. ಮಾತ್ರವಲ್ಲ ಬಲಪಂಥೀಯ ರಾಜಕೀಯ ಪಕ್ಷ ಮತ್ತು ಅದರ ಬೆಂಬಲಿಗರು ಈ ಹಿಂದೂ ಸಂತ್ರಸ್ತತತೆಯನ್ನು ಎತ್ತಿಕೊಂಡು ಹಿಂದೂ ಧ್ರುವೀಕರಣಕ್ಕೆ ಶ್ರಮಿಸತೊಡಗಿದರು. ಆಗಾಗ ಪಂಡಿತರ ಹೆಸರಲ್ಲಿ ಉಗ್ರ ಭಾಷಣ ಮಾಡುವ ಮತ್ತು ಅವರ ಹೆಸರಲ್ಲಿ ವಿಷಾದ ಗೀತೆಯನ್ನು ರಚಿಸುವ ಸಂದರ್ಭಗಳು ಸೃಷ್ಟಿಯಾದುವು. ಪ್ರತ್ಯೇಕತಾವಾದವೂ ಇದಕ್ಕಿಂತ ಭಿನ್ನವಲ್ಲ. ಕೇಂದ್ರ ಸರಕಾರವನ್ನು ಕಾಶ್ಮೀರ ವಿರೋಧಿ ಎಂದು ಅದು ಬಿಂಬಿಸುತ್ತಿದ್ದುದಲ್ಲದೇ ತಮ್ಮ ವಾದಕ್ಕೆ ಪುರಾವೆಯಾಗಿ ವ್ಯವಸ್ಥೆಯಿಂದ ಆಗಿರಬಹುದಾದ ಬಿಡಿ ಘಟನೆಗಳಿಗೆ ಉತ್ಪ್ರೇಕ್ಷಿತ ವ್ಯಾಖ್ಯಾನವನ್ನು ಕೊಟ್ಟಿತು. ಇದರಿಂದ ಅತ್ಯಂತ ಸಂಕಟ ಪಟ್ಟದ್ದು ಕಾಶ್ಮೀರ. ಕಾಶ್ಮೀರಿಗಳ ಪ್ರತಿ ಮನೆಗೂ ಅನುಮತಿಯಿಲ್ಲದೇ ಪ್ರವೇಶಿಸುವ ಮುಕ್ತ ಸ್ವಾತಂತ್ರ್ಯವನ್ನು ಭದ್ರತಾ ಪಡೆಗಳಿಗೆ ಈ ವಾತಾವರಣ ಒದಗಿಸಿಕೊಟ್ಟಿತು. ಕಾಶ್ಮೀರಿಗಳನ್ನು ಒಂದೋ ಭಯೋತ್ಪಾದಕರು ಇಲ್ಲವೇ ಭಯೋತ್ಪಾದಕರ ಸಿಂಫಥೈಸರ್‍ಗಳು ಎಂದು ಸಗಟು ರೂಪದಲ್ಲಿ ಮುದ್ರೆ ಒತ್ತುವುದಕ್ಕೆ ಇದು ಅವಕಾಶ ಒದಗಿಸಿತು. ಭಯೋತ್ಪಾದನೆಯನ್ನು ದಮನಿಸುವ ಹೆಸರಲ್ಲಿ ಕಾಶ್ಮೀರದಲ್ಲಿ ಆಗಿರುವ ಹತ್ಯೆಗಳು, ಅಪಹರಣಗಳು, ನಾಪತ್ತೆ ಪ್ರಕರಣಗಳನ್ನು ಲೆಕ್ಕ ಹಾಕಿದರೆ ಮತ್ತು ಕಾಶ್ಮೀರ ಹೊರಗೆ ಈ ಘಟನೆಗಳಿಗೆ ಸ್ಥಳೀಯ ಮಟ್ಟದ ಕಳ್ಳತನದ ಪ್ರಕರಣದಷ್ಟೂ ಮಾಧ್ಯಮ ಕವರೇಜ್ ಸಿಗದೇ ಇರುವುದಕ್ಕೆ ಕಾಶ್ಮೀರದ ಕುರಿತಂತೆ ಸಾರ್ವತ್ರಿಕವಾಗಿರುವ ಈ ನೆಗೆಟಿವ್ ನಿಲುವೇ ಕಾರಣವೆನ್ನಬೇಕು. ಈ ನಿಲುವನ್ನು ಈ ದೇಶದಲ್ಲಿ ಎರಡು ದಶಕಗಳಿಂದ ಬಿತ್ತಿ ಬೆಳೆಸಲಾಯಿತು. ಇವತ್ತು ಬಿಜೆಪಿಗೆ ಕಾಶ್ಮೀರವು ಮತ ಧ್ರುವೀಕರಣಕ್ಕೆ ಉಪಕರಣವಾಗಿದೆ. ಬಿಜೆಪಿಯ ಬೆಂಬಲಿಗ ಪರಿವಾರಕ್ಕೆ ಹಿಂದೂ ಧ್ರುವೀಕರಣ ಮತ್ತು ಮುಸ್ಲಿಮ್ ದ್ವೇಷ ವಾತಾವರಣ ಬೆಳೆಸುವುದಕ್ಕೆ ವಸ್ತುವಾಗಿದೆ. ಮುಸ್ಲಿಮರನ್ನು ಹಿಂದೂ ವಿರೋಧಿಗಳು ಎಂದು ಬಿಂಬಿಸುವುದಕ್ಕೂ ಅವರೆಲ್ಲ ಕಾಶ್ಮೀರವನ್ನು ಮತ್ತು ಪಂಡಿತರನ್ನು ಎತ್ತಿ ತೋರಿಸುತ್ತಿದ್ದಾರೆ. ಈ ವಿಭಜನಾ ರಾಜಕೀಯ ಒಂದು ಹಂತದವರೆಗೆ ಯಶಸ್ವಿಯಾಗುತ್ತಿರುವುದರಿಂದಲೇ ಕಾಶ್ಮೀರದಲ್ಲಿ ಹಿಂದೂ-ಮುಸ್ಲಿಮ್ ಪ್ರತ್ಯೇಕ ಕಾಲನಿಗಳನ್ನು ನಿರ್ಮಿಸುವ ಬಗ್ಗೆ ಮೋದಿಯವರು ಮಾತಾಡಿದ್ದು. ಆ ಮೂಲಕ ಹಿಂದೆ ಆಗಿರುವ ಗಾಯವನ್ನು ಮತ್ತು ಆ ಗಾಯವು ಹುಟ್ಟು ಹಾಕಿರಬಹುದಾದ ನಕಾರಾತ್ಮಕ ಭಾವನೆಯನ್ನು ಶಾಶ್ವತವಾಗಿ ಉಳಿಸಿಕೊಳ್ಳುವ ತಂತ್ರ ಹೆಣೆದದ್ದು. ಓಂಕಾರ್ ರಾಜ್‍ದಾನ್ ಪ್ರಶ್ನಿಸಿರುವುದೇ ಇದನ್ನು. ಕಾಶ್ಮೀರದ ಹಳೆ ಪಟ್ಟಣದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಮತ್ತು ಉತ್ತರ ಭಾಗದಲ್ಲಿರುವ ಖೀರ್ ಭವಾನಿ ದೇವಸ್ಥಾನಕ್ಕೆ ಸದಾ ಭೇಟಿಕೊಡುತ್ತಿರುವ ಓಂಕಾರ್‍ರ ಮನೆಯ ಅಕ್ಕ-ಪಕ್ಕ ಇರುವವರೆಲ್ಲ ಮುಸ್ಲಿಮರೇ. ಅವರು ದೆಹಲಿಗೆ ಹೋಗುವಾಗ ಮನೆಯ ಬೀಗದ ಕೈಯನ್ನು ಪಕ್ಕದ ಮುಸ್ಲಿಮ್ ಎಲೆಕ್ಟ್ರೀಶಿಯನ್ ವ್ಯಕ್ತಿಯೊಬ್ಬರಲ್ಲಿ ಕೊಟ್ಟು ಹೋಗುತ್ತಾರೆ.
         ಪಂಡಿತರು ಕಾಶ್ಮೀರಕ್ಕೆ ಮರಳುವ ವಿಷಯದ ಮೇಲೆ ಕಳೆದವಾರ ಮಾಧ್ಯಮಗಳಲ್ಲಿ ಚರ್ಚೆಗಳಾಗಿತ್ತು. ದೆಹಲಿ ಮುಂತಾದ ಪಟ್ಟಣಗಳಲ್ಲಿ ನೆಲೆಸಿರುವ ಮತ್ತು ಉದ್ಯೋಗ ಮಾಡುತ್ತಿರುವ ಕಾಶ್ಮೀರಿ ಪಂಡಿತರ ಹೊಸ ತಲೆಮಾರು ಮತ್ತೆ ಕಾಶ್ಮೀರಕ್ಕೆ ಮರಳಲು ನಿರಾಸಕ್ತಿ ತೋರುತ್ತಿರುವುದೂ ವ್ಯಕ್ತವಾಗಿತ್ತು. ಕಾಶ್ಮೀರದಲ್ಲಿ ತಮ್ಮ ಮನೆ, ಭೂಮಿಯನ್ನು ಪಂಡಿತ ಕುಟುಂಬವು ಈಗಾಗಲೇ ಮಾರಿರುವುದಾಗಿಯೂ ಸುದ್ದಿಗಳು ಪ್ರಕಟವಾಗಿದ್ದುವು. ಇಂಥ ಸ್ಥಿತಿಯಲ್ಲಿ ಓಂಕಾರ್ ರಾಜದಾನ್‍ರ ಮೂರಂತಸ್ತಿನ ಮನೆ ಮತ್ತು ಅವರ ಕಾಶ್ಮೀರಿ ನಿಲುವು ಮುಖ್ಯವಾಗುತ್ತದೆ. ಪಂಡಿತರಿಗೆ ಪ್ರತ್ಯೇಕ ಕಾಲನಿ ಮಾಡುವ ಮೋದಿಯವರಿಗೆ ಮತ್ತು ಪಂಡಿತರಿಗೆ ಮರಳಲು ಕಾಶ್ಮೀರಿಗಳು ಅವಕಾಶ ಕೊಡುತ್ತಿಲ್ಲ ಎಂದು ಪ್ರಚಾರ ಮಾಡುತ್ತಿರುವವರಿಗೆ ಇದರಲ್ಲಿ ದೊಡ್ಡ ಪಾಠವಿದೆ



Thursday, 21 January 2016

ಅವರನ್ನು ಉಗ್ರರಾಗಿಸಿ 9 ವರ್ಷ ಕೊಳೆಯಿಸಿದರಲ್ಲ, ಅವರಿಗೆ ಯಾವ ಶಿಕ್ಷೆಯಿದೆ ಸ್ವಾಮಿ?

       ಕಳೆದವಾರ ಬಿಡುಗಡೆಗೊಂಡ ನೌಶಾದ್, ಅಲಿ ಅಕ್ಬರ್ ಹುಸೈನ್, ಅಝೀಝುರ್ರಹ್ಮಾನ್ ಸರ್ದಾರ್ ಮತ್ತು ಶೈಖ್ ಮುಖ್ತಾರ್ ಹುಸೈನ್ ಎಂಬ ನಾಲ್ವರು ಯುವಕರು ಈ ದೇಶದ ಮುಂದೆ ಕೆಲವು ಪ್ರಶ್ನೆಗಳನ್ನಿಟ್ಟಿದ್ದಾರೆ. ಹಾಗಂತ ಈ ಪ್ರಶ್ನೆಗಳು ಹೊಚ್ಚ ಹೊಸತೇನೂ ಅಲ್ಲ. ಈ ಹಿಂದೆಯೂ ಇಂಥ ಪ್ರಶ್ನೆಗಳು ಹುಟ್ಟಿಕೊಂಡಿದ್ದುವು. ಮಾತ್ರವಲ್ಲ, ಕೆಲವರು ಇಂಥ ಪ್ರಶ್ನೆಗಳನ್ನೇ ದೇಶದ್ರೋಹಿಯಾಗಿ ಪರಿವರ್ತಿಸಿ ಆನಂದಪಟ್ಟದ್ದೂ ಇದೆ. ಓರ್ವನ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸುವುದಕ್ಕೆ ಇರುವ ಮಾನದಂಡಗಳು ಏನು? ಧರ್ಮವೇ, ಧಾರ್ಮಿಕತನವೇ, ವೇಷ-ಭೂಷಣಗಳೇ, ವೃತ್ತಿಯೇ? ಯಾಕೆ ಇಂಥ ಪ್ರಶ್ನೆಗಳು ಮತ್ತೆ ಮತ್ತೆ ಮುಖ್ಯವಾಗುತ್ತವೆಂದರೆ, ಈ ಮೇಲಿನ ನಾಲ್ವರು ಯುವಕರೂ ಭಯೋತ್ಪಾದನೆಯ ಆರೋಪದಲ್ಲಿ ತಮ್ಮ ಅಮೂಲ್ಯ 9 ವರ್ಷಗಳನ್ನು ಜೈಲಿನಲ್ಲಿ ಕಳೆದವರು. ಇವರಲ್ಲಿ ನೌಶಾದ್ ಎಂಬವನು ಮದ್ರಸ ಅಧ್ಯಾಪಕ. ಇವನ ತಂದೆಯಾದರೋ ಭಾರತೀಯ ವಾಯುದಳದ ನಿವೃತ್ತ ಯೋಧ. ಉತ್ತರ ಪ್ರದೇಶದ ಪೊಲೀಸರು 2007ರಲ್ಲಿ ಇವರನ್ನು ಭಯೋತ್ಪಾದನೆಯ ಆರೋಪದಲ್ಲಿ ಬಂಧಿಸಿದ್ದರು. ಹುಜಿ(ಹರ್ಕತುಲ್ ಜಿಹಾದುಲ್ ಇಸ್ಲಾಮ್)ಯಿಂದ ತರಬೇತಿ ಪಡೆದಿರುವ ಮತ್ತು ರಾಜ್ಯದಾದ್ಯಂತ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಸಂಚು ಹೂಡಿರುವ ಉಗ್ರರು ಎಂದು ಪೊಲೀಸರು ಬಹಿರಂಗವಾಗಿಯೇ ಆರೋಪಿಸಿದ್ದರು. ಇವರ ವಿರುದ್ಧ ದೇಶದ್ರೋಹ, ಸಮುದಾಯಗಳ ನಡುವೆ ಶತ್ರುತ್ವಕ್ಕೆ ಉತ್ತೇಜನ ಮತ್ತು ಹಿಂಸಾಚಾರದಂಥ ಗಂಭೀರ ಪರಿಚ್ಛೇದದಡಿ ಕೇಸುಗಳನ್ನು ದಾಖಲಿಸಿದ್ದರು. ಅದರಲ್ಲೂ 2008 ಆಗಸ್ಟ್ 12 ರಂದು ಇವರನ್ನು ಉತ್ತರ ಪ್ರದೇಶದ ನ್ಯಾಯಾಲಯಕ್ಕೆ ಹಾಜರುಗೊಳಿಸುವಾಗ ದೊಡ್ಡದೊಂದು ಕೋಲಾಹಲವೇ ಎದ್ದಿತ್ತು. ಇವರ ಪರವಾಗಿ ನ್ಯಾಯಾಲಯದಲ್ಲಿ ಹಾಜರಾದ ನ್ಯಾಯವಾದಿ ಮುಹಮ್ಮದ್ ಶುಹೈಬ್‍ರ ಮೇಲೆ ಇತರ ನ್ಯಾಯವಾದಿಗಳು ನ್ಯಾಯಾಲಯದಲ್ಲೇ ಹಲ್ಲೆ ನಡೆಸಿದ್ದರು. ಇದೀಗ ವಿಶೇಷ ನ್ಯಾಯಾಲಯ ಈ ಯುವಕರನ್ನು ನಿರಪರಾಧಿಗಳೆಂದು ಘೋಷಿಸಿ ಬಿಡುಗಡೆಗೊಳಿಸಿದೆ. ಹಾಗಂತ, ಈ ಯುವಕರಿಗೆ ನ್ಯಾಯ ಲಭ್ಯವಾಗಿದೆಯೇ? ಈ ಬಿಡುಗಡೆಯನ್ನೇ ನಾವು ನ್ಯಾಯಕ್ಕೆ ಸಂದ ಜಯ ಎಂದು ಹೇಳುವುದಾದರೆ ಕಳೆದು ಹೋದ 9 ವರ್ಷಗಳು ಮತ್ತು ಅದು ಕೊಟ್ಟಿರಬಹುದಾದ ಹಿಂಸೆಗಳನ್ನು ಏನೆಂದು ವ್ಯಾಖ್ಯಾನಿಸಬೇಕು? ಕಳೆದ 2007ರಿಂದ ಮೊನ್ನೆ ಬಿಡುಗಡೆಗೊಳ್ಳುವವರೆಗೆ ಇವರು ಶಂಕಿತ ಭಯೋತ್ಪಾದಕರಾಗಿದ್ದರು. ಪಾಕಿಸ್ತಾನದ ಹುಜಿಯೊಂದಿಗೆ ಸೇರಿಕೊಂಡು ಬಾಂಬ್‍ಸ್ಫೋಟದ ಸಂಚು ನಡೆಸಿದ ದೇಶದ್ರೋಹಿಗಳಾಗಿದ್ದರು. ಇಂಥ ಭಯಂಕರ ಬಿರುದುಗಳನ್ನು ಸರಿಸುಮಾರು ಒಂದು ದಶಕಗಳ ಕಾಲ ಮೈಮೇಲೆ ಅಂಟಿಸಿಕೊಂಡವರು ಇದೀಗ ಬಿಡುಗಡೆಗೊಂಡ ಕೂಡಲೇ ಅವೆಲ್ಲದರಿಂದ ಮುಕ್ತರಾಗುತ್ತಾರೆಯೇ? ಸಮಾಜ ಅವರನ್ನು ಸಹಜವಾಗಿ ಸ್ವೀಕರಿಸಬಹುದೇ? ಅವರಿಗೆ ಉದ್ಯೋಗ, ಸಾಮಾಜಿಕ ಮನ್ನಣೆಗಳು ಲಭ್ಯವಾಗಬಹುದೇ? ಸಭೆ, ಸಮಾರಂಭ, ಸಂತೋಷ ಕೂಟಗಳು ಅವರನ್ನು ಹೇಗೆ ನಡೆಸಿಕೊಂಡಾವು? ಅವರ ಕೌಟುಂಬಿಕ ಜೀವನದ ಮೇಲೆ ಬಿದ್ದಿರಬಹುದಾದ ಹೊಡೆತಗಳೇನು? ತಂದೆ-ತಾಯಿ, ಪತ್ನಿ-ಮಕ್ಕಳು, ಗೆಳೆಯ, ಕುಟುಂಬಿಕರು ಸಹಿತ ಒಂದು ದೊಡ್ಡ ಗುಂಪಿನ ಮೇಲೆ ಕಳೆದ 9 ವರ್ಷಗಳಲ್ಲಿ ಆಗಿರುವ ಗಾಯಗಳಿವೆಯಲ್ಲ, ಅವು ಇವರ ಬಿಡುಗಡೆಯ ತಕ್ಷಣ ಒಣಗಿ ಹೋಗುವುದೇ? ಮುಂದೆ ಎಲ್ಲಾದರೂ ಬಾಂಬ್ ಸ್ಫೋಟಗೊಂಡರೆ ಅಥವಾ ಸ್ಫೋಟವಾಗದ ಬಾಂಬು, ಜಿಲೆಟಿನ್ ಕಡ್ಡಿಗಳು ಪತ್ತೆಯಾದರೆ ಇವರು ಸುರಕ್ಷಿತರೇ? 2007ರಲ್ಲಿ ಇವರ ಮೇಲೆ ಭಯೋತ್ಪಾದನೆಯ ಆರೋಪ ಹೊರಿಸಿದವರು ಮತ್ತೊಮ್ಮೆ ಇವರನ್ನು ಗುರಿ ಮಾಡಲಾರರು ಎಂದು ಹೇಗೆ ಹೇಳುವುದು? ಮತ್ತೆ ಮತ್ತೆ ಅನುಮಾನ, ಬಂಧನ, ಆರೋಪ ಪಟ್ಟಿ... ಮುಂತಾದುವು ಇವರ ಬೆನ್ನ ಹಿಂದೆ ಕಾದು ಕುಳಿತಿರುವಾಗ ಈ ಬಿಡುಗಡೆಯನ್ನು `ನ್ಯಾಯಕ್ಕೆ ಸಂದ ಜಯ' ಎಂದು ಎಷ್ಟರ ಮಟ್ಟಿಗೆ ವ್ಯಾಖ್ಯಾನಿಸಬಹುದು? ಅಷ್ಟಕ್ಕೂ, ಇವರನ್ನು `ಹುಜಿ'ಯ ಸದಸ್ಯರೆಂದು ಕರೆದು ಆರೋಪ ಪಟ್ಟಿ ಸಲ್ಲಿಸಿದ ಪೆÇಲೀಸರು ಇವತ್ತು ಒಂದೋ ಭಡ್ತಿ ಹೊಂದಿ ಉನ್ನತ ಅಧಿಕಾರಿ ಆಗಿರಬಹುದು ಅಥವಾ ನಿವೃತ್ತರಾಗಿರಬಹುದು ಅಥವಾ ಅದೇ ಹುದ್ದೆಯಲ್ಲಿರಬಹುದು. ಅಲ್ಲದೇ, ಈ ಬಿಡುಗಡೆಯನ್ನು ಅವರು ತಮಗಾದ ಮುಖಭಂಗ ಎಂದು ಅಂದುಕೊಳ್ಳಲೂಬಹುದು. ಹಾಗೇನಾದರೂ ಆದದ್ದೇ ಆದಲ್ಲಿ ಅದು ಅತ್ಯಂತ ಅಪಾಯಕಾರಿ. ಇವರು ಮತ್ತೊಮ್ಮೆ ಉಗ್ರರಾಗುವುದಕ್ಕೆ ಸರ್ವ ಅವಕಾಶಗಳನ್ನು ಈ `ಮುಖಭಂಗ' ಮನಃಸ್ಥಿತಿಯು ತೆರೆದಿಡುತ್ತದೆ. ಹೀಗಿರುತ್ತಾ, ಈ ಬಿಡುಗಡೆಯನ್ನು ಆನಂದಿಸುವುದು ಹೇಗೆ? ನಿಜವಾಗಿ, ಈ ನಾಲ್ವರು ನಿರಪರಾಧಿಗಳೆಂದಾದರೆ ಅಪರಾಧಿಗಳು ಯಾರು ಎಂಬ ಪ್ರಶ್ನೆ ಸಹಜವಾಗಿಯೇ ಉದ್ಭವಿಸುತ್ತದೆ. ಈ ಪ್ರಶ್ನೆಗೆ ಉತ್ತರಿಸಬೇಕಾದದ್ದು ಪೊಲೀಸರು. ಯಾಕೆಂದರೆ ಇವರನ್ನು ಬಂಧಿಸಿದ್ದು ಅವರೇ. ಆರೋಪ ಪಟ್ಟಿ ಸಲ್ಲಿಸಿದ್ದೂ ಅವರೇ. ಹುಜಿಯ ಸದಸ್ಯರೆಂದೂ ಭಯೋತ್ಪಾದಕರೆಂದೂ ಬಹಿರಂಗವಾಗಿ ಘೋಷಿಸಿದ್ದೂ ಅವರೇ. ಇದೀಗ ನ್ಯಾಯಾಲಯವು ಇವರ ಆರೋಪ ಪಟ್ಟಿಯನ್ನೇ ತಿರಸ್ಕರಿಸಿರುವುದರಿಂದ ಮತ್ತೆ ಪ್ರಶ್ನೆಗಳು ಅವರ ಬಳಿಗೇ ಮರಳುತ್ತವೆ. ಈ ಯುವಕರನ್ನು ಬಂಧಿಸುವ ಸಂದರ್ಭದಲ್ಲಿ ಈ ಪೊಲೀಸರು ಪ್ರಾಮಾಣಿಕರಾಗಿದ್ದರೇ? ಅವರ ಮೇಲೆ ಒತ್ತಡಗಳಿದ್ದುವೇ? ಪೂರ್ವಗ್ರಹಗಳು ಅವರನ್ನು ಸುತ್ತುವರಿದಿದ್ದುವೇ? ಮಾಧ್ಯಮಗಳ ‘ಶಂಕಿತ ಮುಸ್ಲಿಮ್’ ಕಾಯಿಲೆಯು ಅವರ ಮೇಲೂ ಪ್ರಭಾವ ಬೀರಿದ್ದುವೆ?
        9 ವರ್ಷಗಳ ಅಮೂಲ್ಯ ಯೌವನವನ್ನು ಕಂಬಿಗಳ ಹಿಂದೆ ನಿಷ್ಪ್ರಯೋಜಕವಾಗಿ ಕಳೆದ ನಾಲ್ವರು ಯುವಕರು `ನಿರಪರಾಧಿಗಳು' ಎಂಬ ಗುರುತಿನೊಂದಿಗೆ ಸಮಾಜಕ್ಕೆ ಮರಳುವುದನ್ನು ನಾವು ಸಾಮಾನ್ಯವಾಗಿ ನ್ಯಾಯಕ್ಕೆ ಸಂದ ಜಯ ಎಂದು ಘೋಷಿಸಿ ಬಿಡುವುದಿದೆ. ನ್ಯಾಯ ವ್ಯವಸ್ಥೆಯ ಇತಿ-ಮಿತಿಗಳನ್ನು ಪರಿಗಣಿಸಿದರೆ ಇಂಥದ್ದೊಂದು ಘೋಷಣೆ ಸಮರ್ಥನಿಯವೇ ಆಗಿರಬಹುದು. ಆದರೆ ನಿಜಕ್ಕೂ ಹೀಗೆ ಘೋಷಿಸಿ ಬಿಡುವ ಸ್ಥಿತಿಯಲ್ಲಿ ನಾವಿದ್ದೇವೆಯೇ? ಕಳೆದು ಹೋದ 9 ವರ್ಷಗಳನ್ನು ಮತ್ತು ಅದರ ಮೌಲ್ಯವನ್ನು ಲೆಕ್ಕ ಹಾಕುವಾಗ ಕಾಣಿಸುವ ನ್ಯಾಯದೊಳಗಿನ ಅನ್ಯಾಯಕ್ಕೆ ಏನೆನ್ನಬೇಕು? ನಿಜವಾಗಿ, ತಮ್ಮ ಬಿಡುಗಡೆಯನ್ನು `ನ್ಯಾಯದ ಗೆಲುವು' ಎಂದು ಘೋಷಿಸಿ ಸಂಭ್ರಮಿಸಬೇಕಾದದ್ದು ಆ ಯುವಕರು. ಆದರೆ, ಅವರು ಆ ಸ್ಥಿತಿಯಲ್ಲಿದ್ದಾರೆಯೇ? ಯಾಕೆಂದರೆ, `ಉಗ್ರ'ನಾಗುವುದು ಸಾಮಾನ್ಯ ಅಡಿಕೆ ಕಳ್ಳ, ಕಿಸೆಗಳ್ಳ, ಮನೆಕಳ್ಳತನದಂತೆ ಅಲ್ಲವಲ್ಲ. `ಉಗ್ರ' ಎಂಬ ಪದಕ್ಕೆ `ಅಸಾಮಾನ್ಯ' ಅರ್ಥಗಳಿವೆ. ಆ ಪದಕ್ಕೆ ಕೋರೆಹಲ್ಲು, ಉಗುರು, ಬಾಹುಗಳನ್ನು ಜೋಡಿಸಲಾಗಿದೆ. ಅಲ್ಲದೇ, ಈ ದೇಶದಲ್ಲಿ ಮತ್ತು ಜಾಗತಿಕವಾಗಿಯೂ ಉಗ್ರರ ರಕ್ತದಾಹಿ ಚಟುವಟಿಕೆಗಳು ಮಾಧ್ಯಮಗಳಲ್ಲಿ ಪ್ರತಿದಿನವೆಂಬಂತೆ ಸುದ್ದಿಯಾಗುತ್ತಿವೆ. ಆದ್ದರಿಂದ ಸಮಾಜವು ಉಗ್ರರನ್ನು ಇತರ ಅಪರಾಧಿಗಳಿಂದ ಬೇರ್ಪಡಿಸಿ ನೋಡುವುದು ಅಸಹಜವೇನಲ್ಲ. ನ್ಯಾಯಾಲಯವು ಒಂದೊಮ್ಮೆ ನಿರಪರಾಧಿಗಳೆಂದು ಘೋಷಿಸಿದರೂ ವರ್ಷಗಳ ಕಾಲ ಅಪರಾಧಿಯೆಂದು ನಂಬಿದ್ದ ಮತ್ತು ಆ ಹಿನ್ನೆಲೆಯಲ್ಲಿ ಖಚಿತ ಅಭಿಪ್ರಾಯವನ್ನು ರೂಪಿಸಿಕೊಂಡಿದ್ದ ಸಮಾಜವು ಅಷ್ಟು ಸುಲಭದಲ್ಲಿ ತನ್ನ ನಿಲುವನ್ನು ಬಿಟ್ಟುಕೊಡಲು ಸಿದ್ಧವಾಗುವುದಿಲ್ಲ. ಸಮಾಜ ಅವರನ್ನು ಮುಂದೆಯೂ ಒಂದು ಹಂತದವರೆಗೆ ಶಂಕಿತವಾಗಿಯೇ ನೋಡುವುದಕ್ಕೆ ಅವಕಾಶ ಇದೆ. ಈ ಶಂಕಿತ ಭಾವನೆಯು ಅವರ ಉದ್ಯೋಗ, ಮದುವೆ, ಮಕ್ಕಳ ಶಾಲಾ ಸೇರ್ಪಡೆ ಇತ್ಯಾದಿಗಳ ಸಂದರ್ಭದಲ್ಲಿ ಕಾಣಿಸಿಕೊಳ್ಳಬಹುದು. ಅವರನ್ನು ಮತ್ತೆ ಮತ್ತೆ ಘಾಸಿಗೊಳಿಸುವ ಸಂದರ್ಭಗಳು ಸೃಷ್ಟಿಯಾಗಬಹುದು. ಸಾಮಾಜಿಕ ಅವಮಾನಗಳು ಎದುರಾಗಬಹುದು. ಬಿಡುಗಡೆಯ ಬಳಿಕ ಎದುರಾಗುವ ಇಂಥ ಸಮಸ್ಯೆಗಳಿಂದ ಅವರು ಮಾನಸಿಕವಾಗಿ ಕುಗ್ಗಿ ಹೋಗಬಹುದು. ಅಪಾಯಕಾರಿ ಹೆಜ್ಜೆಗೂ ಅವು ಕಾರಣವಾಗಬಹುದು. ಆದ್ದರಿಂದಲೇ, `ನ್ಯಾಯಕ್ಕೆ ಸಂದ ಜಯ'ದ ಒಳ-ಹೊರಗನ್ನು ಆಳ ವಿಶ್ಲೇಷಣೆಗೆ ಒಳಪಡಿಸಬೇಕಾಗಿದೆ. ನಿರಪರಾಧಿ ಯುವಕರನ್ನು ಉಗ್ರರಾಗಿಸುವ ಪೊಲೀಸರನ್ನು ಶಿಕ್ಷೆಗೊಳಪಡಿಸುವ ನ್ಯಾಯಾಲಯವು ಕಟು ಸಂದೇಶವನ್ನು ರವಾನಿಸಬೇಕಿದೆ. ಭಯೋತ್ಪಾದಕರಲ್ಲದವರನ್ನು ಭಯೋತ್ಪಾದಕರೆಂದು ಬಿಂಬಿಸುವುದೂ ಭಯೋತ್ಪಾದನೆಯಾಗುತ್ತದೆ ಎಂದು ನ್ಯಾಯಾಲಯ ಸಾರಬೇಕಿದೆ. ಇಲ್ಲದಿದ್ದರೆ ನ್ಯಾಯಕ್ಕೆ ಅರ್ಧ ಜಯವಷ್ಟೇ ಸಲ್ಲಬಹುದು.

Friday, 15 January 2016

ವಿಜ್ಞಾನದ ರಾಪರ್‍ನಲ್ಲಿ ಮತ್ತೇರಿಸುವ ಸಿದ್ಧಾಂತ


      ಮೈಸೂರಿನಲ್ಲಿ ಕಳೆದವಾರ ನಡೆದಿದ್ದ `ಭಾರತೀಯ ವಿಜ್ಞಾನ ಕಾಂಗ್ರೆಸ್' ಸಭೆ ಮುಗಿದ ಮರುದಿನ ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್‍ನಿಗೆ ಸಂಬಂಧಿಸಿದ ಪುಸ್ತಕವೊಂದು ಬಿಡುಗಡೆಯಾಯಿತು. ಹಿಟ್ಲರ್ ಸಾವಿಗೀಡಾಗಿ 70 ವರ್ಷಗಳು ಸಂದ ಬಳಿಕ ಆತನಿಗೆ ಸಂಬಂಧಿಸಿ ಬಿಡುಗಡೆಯಾದ ಪ್ರಭಾವಶಾಲಿ ಪುಸ್ತಕ ಎಂಬ ಕಾರಣಕ್ಕಾಗಿ ಜಾಗತಿಕವಾಗಿಯೇ ಅದು ಸುದ್ದಿಗೀಡಾಯಿತು. ಹಿಟ್ಲರ್‍ನ ಕುಖ್ಯಾತ ರಾಜಕೀಯ ಪ್ರಣಾಳಿಕೆಯನ್ನು ವಿವರಿಸುವ ಪುಸ್ತಕ (ಮೈನ್‍ಕ್ಯಾಂಪ್) ಇದು. ಇದರಲ್ಲಿ ಆತನ ಪ್ರಣಾಳಿಕೆಯನ್ನು ನಮೂದಿಸುವುದರ ಜೊತೆಗೇ ಆ ಪ್ರಣಾಳಿಕೆಯ ಪೊಳ್ಳುತನ, ಅರ್ಧಸತ್ಯ ಮತ್ತು ಸುಳ್ಳು ಮಾಹಿತಿಗಳನ್ನು ವಿವರಿಸುವ ಟಿಪ್ಪಣಿಗಳೂ ಇದ್ದುವು. ಇದೇ ವೇಳೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಕಂಡು ಹುಡುಕುವುದಕ್ಕೆ ವೇದಿಕೆಯಾಗಬೇಕಿದ್ದ ‘ವಿಜ್ಞಾನ ಕಾಂಗ್ರೆಸ್’ ಆ ವಿಷಯದಲ್ಲಿ ಸಂಪೂರ್ಣ ಎಡವುತ್ತಿದೆ ಎಂಬ ಟೀಕೆಗಳು ವ್ಯಕ್ತವಾದವು. ಸಂಘಪರಿವಾರದ ಕಾರ್ಯಸೂಚಿಯನ್ನು ಮಂಡಿಸುವ ಅವೈಜ್ಞಾನಿಕ ಮತ್ತು ಹಾಸ್ಯಾಸ್ಪದ ಸಭೆಗಳಾಗಿ ಅದು ಬದಲಾಗುತ್ತಿದೆ ಎಂಬ ಆರೋಪಗಳು ಬಂದುವು. ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ವಿ. ರಾಮಕೃಷ್ಣನ್ ಅಂತೂ `ಭಾರತೀಯ ವಿಜ್ಞಾನ ಕಾಂಗ್ರೆಸ್' ಅನ್ನು ಸರ್ಕಸ್ ಎಂದು ಕುಟುಕಿದರು. ‘ಇನ್ನೆಂದೂ ಆ ಸಭೆಯಲ್ಲಿ ಭಾಗಿವಹಿಸಲಾರೆ’ ಎಂದು ಘೋಷಿಸಿದರು. ಮೈಸೂರಿನ ಸಭೆಯಲ್ಲಿ, ‘ಶಂಖ ಊದುವುದರಿಂದ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಹೇಗೆ ಪಡೆಯಬಹುದು’ ಎಂಬ ಬಗ್ಗೆ ಪ್ರಬಂಧ ಮಂಡಿಸಲಾಗಿತ್ತು. ಇನ್ನೊಂದು ಪ್ರಬಂಧ, ‘ಶಿವನನ್ನು ಅಪ್ರತಿಮ ಪರಿಸರವಾದಿ’ಯೆಂದಿತು. ಕಳೆದ ವರ್ಷ ಮುಂಬೈನಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್‍ನ ಸಭೆಯಂತೂ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಒಳಗಾಗಿತ್ತು. ‘ಸಂಸ್ಕ್ರತದ ಮೂಲಕ ಪುರಾತನ ವಿಜ್ಞಾನ’ ಎಂಬ ಪ್ರಬಂಧದಲ್ಲಿ. ‘ವೇದ ಕಾಲದಲ್ಲಿಯೇ ಭಾರತೀಯರು ವಿಮಾನವನ್ನು ಸಂಶೋಧಿಸಿ ಹಾರಿಸಿದ್ದರು’ ಎಂದು ವಾದಿಸಲಾಗಿತ್ತು.
      ನಿಜವಾಗಿ, ಜರ್ಮನಿಯಲ್ಲಿ ಫ್ಯಾಸಿಸ್ಟ್ ಮತ್ತು ಮನುಷ್ಯ ವಿರೋಧಿ ಸಿದ್ಧಾಂತದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿರುವಾಗ ಇತ್ತ ಭಾರತದಲ್ಲಿ ಐತಿಹ್ಯ, ಪುರಾಣಗಳನ್ನು ವಿಜ್ಞಾನದ ರಾಪರ್‍ನಲ್ಲಿ ಕಟ್ಟಿಕೊಡುವ ಪ್ರಯತ್ನಗಳು ನಡೆಯುತ್ತಿವೆ. ಅಂದಹಾಗೆ, ಹಿಟ್ಲರ್‍ನ ಸಿದ್ಧಾಂತದಿಂದ ಸಂತ್ರಸ್ತರಾದದ್ದು ಯಹೂದಿಗಳು ಮಾತ್ರವಲ್ಲ, ಸ್ವತಃ ಆತನ ಬೆಂಬಲಿಗರೇ ಅದರ ಬಲಿಪಶುಗಳಾದರು. ಹಿಟ್ಲರ್ ತನ್ನ ಕಾರ್ಯಸೂಚಿಯನ್ನು ಪ್ರಚಾರ ಮಾಡುವುದಕ್ಕೆ ಲಭ್ಯವಿರುವ ಸಕಲ ಮಾಧ್ಯಮಗಳನ್ನೂ ಬಳಸಿಕೊಂಡ. ಅದಕ್ಕಾಗಿ ವೇದಿಕೆಗಳನ್ನು ಸೃಷ್ಟಿಸಿದ. ಆತನ ಪ್ರಣಾಳಿಕೆಯನ್ನು ಪ್ರಶ್ನಿಸಬಹುದಾದ ಎಲ್ಲವನ್ನೂ ನಾಶಪಡಿಸಿದ. ವಿಜ್ಞಾನ, ಕಲೆ, ಸಾಹಿತ್ಯ, ಖಗೋಳಶಾಸ್ತ್ರ ಸಹಿತ ಅಸಂಖ್ಯಾತ ಕೃತಿಗಳನ್ನು ಸುಟ್ಟು ಹಾಕಿ ಜನರು ಬೌದ್ಧಿಕವಾಗಿ ಬೆಳೆಯದಂತೆ ನೋಡಿಕೊಂಡ. ಶಾಲೆ, ಕಾಲೇಜು, ಸಾಹಿತ್ಯ ಗೋಷ್ಠಿಗಳು, ವೈಜ್ಞಾನಿಕ ಸಭೆಗಳು ಎಲ್ಲದರಲ್ಲೂ ಹಿಟ್ಲರ್‍ನ ಪ್ರಭಾವವಿತ್ತು. ಆತನ ಸಿದ್ಧಾಂತವನ್ನು ಬೆಂಬಲಿಸುವ, ಅದನ್ನು ಅತಿಶಯವಾಗಿ ಹೊಗಳುವ ಮತ್ತು ಅದುವೇ ಶ್ರೇಷ್ಠ ಎಂದು ವಾದಿಸುವ ವಾತಾವರಣವನ್ನು ಎಲ್ಲ ಕಡೆ ಬೆಳೆಸಿದ. ಭ್ರಮೆಯನ್ನು ಸೃಷ್ಟಿಸಿ ಅದನ್ನು ಎಲ್ಲ ಕಡೆ ಹಂಚಿದ. ಅದರ ಪರಿಣಾಮ ಎಷ್ಟು ಭೀಕರವಾಗಿತ್ತೆಂದರೆ, ಸಮಾಜದ ಆಲೋಚನಾ ರೀತಿಯೇ ಒಂದು ಹಂತದ ವರೆಗೆ ಬದಲಾಯಿತು. ‘ನಾವು’ ಮತ್ತು ‘ಅವರು’ ಅನ್ನುವ ವಿಭಜನೆಗೆ ಅದು ಪ್ರೇರಣೆ ನೀಡಿತು. `ಅವರು' ನಮ್ಮ ಜೊತೆ ಬದುಕಲು ಅನರ್ಹರು ಮತ್ತು ಸಾವಿಗೆ ಅರ್ಹರು ಎಂದು ಭಾವಿಸುವ ಗುಂಪನ್ನು ಅದು ತಯಾರುಗೊಳಿಸಿತು. ಅಂತಿಮವಾಗಿ ಆ ವಿಚಾರಧಾರೆ `ಅವರಿಗೆ' ಮಾತ್ರ ಮಾರಕವಾದದ್ದಲ್ಲ. `ಇವರನ್ನೂ' ಅದು ಆಹುತಿ ಪಡೆಯಿತು. ಎರಡನೇ ವಿಶ್ವ ಯುದ್ಧವು ಜರ್ಮನಿ, ಜಪಾನ್ ಸಹಿತ ವಿವಿಧ ರಾಷ್ಟ್ರಗಳ ಮೇಲೆ ಮಾಡಿರುವ ಅನಾಹುತಗಳನ್ನು ನೋಡಿದರೆ ಹಿಟ್ಲರ್‍ನ ವಿಚಾರಧಾರೆ ಎಷ್ಟು ಅನಾಹುತಕಾರಿ ಎಂಬುದು ಸ್ಪಷ್ಟವಾಗುತ್ತದೆ. ಇವತ್ತು ಪುನಃ ಜರ್ಮನಿಯಲ್ಲಿ ಆ ವಿಷಕಾರಿ ಸಿದ್ಧಾಂತ ನಿಧಾನಕ್ಕೆ ರೆಕ್ಕೆ ಬಿಚ್ಚಿಕೊಳ್ಳುತ್ತಿದೆ ಎಂಬ ಸುದ್ದಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಆ ಪುಸ್ತಕ ಬಿಡುಗಡೆ ಮಹತ್ವ ಪಡೆಯುತ್ತದೆ. ಹಿಟ್ಲರ್ ವಿಚಾರಧಾರೆ ಮತ್ತೊಮ್ಮೆ ಜನಪ್ರಿಯವಾಗದಿರಲಿ ಎಂಬ ಕಳಕಳಿಯೊಂದೇ ಆ ಪುಸ್ತಕ ಬಿಡುಗಡೆಯ ಹಿನ್ನೆಲೆಯಲ್ಲಿದೆ ಎಂದೇ ಹೇಳಬೇಕಾಗುತ್ತದೆ. ಆದ್ದರಿಂದಲೇ ಆ ಪುಸ್ತಕಕ್ಕೆ ಜರ್ಮನಿಯು ನಿಷೇಧವನ್ನು ಹೇರಿಲ್ಲ. ಆದರೆ, ಭಾರತದಲ್ಲಿ ಅದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿವೆ. ಕಲೆ, ಸಾಹಿತ್ಯ, ಶಿಕ್ಷಣ, ಸಿನಿಮಾ, ವಿಜ್ಞಾನ ಸಹಿತ ಎಲ್ಲದರಲ್ಲೂ ನಿರ್ದಿಷ್ಟ ವಿಚಾರಧಾರೆಯಲ್ಲಿ ತುರುಕುವ ಉಮೇದು ಕಾಣಿಸುತ್ತಿದೆ. ಅದರಲ್ಲೂ ಭಾರತೀಯ ವಿಜ್ಞಾನ ಕಾಂಗ್ರೆಸ್‍ಗೆ 103 ವರ್ಷಗಳ ಭವ್ಯ ಇತಿಹಾಸವಿದೆ. ಅದು  ಪುರಾಣ, ಐತಿಹ್ಯಗಳನ್ನು ಚರ್ಚಿಸುವ ವೇದಿಕೆಯಿಲ್ಲ. ಆಚಾರ್ಯ ಪಿ.ಸಿ.ರೇ, ಸರ್ ಜೆ.ಸಿ. ಬೋಸ್, ಸಿ.ವಿ. ರಾಮನ್, ಹೋಮಿ ಜಹಾಂಗೀರ್ ಬಾಬಾ, ಎಂ.ಎಸ್. ಸ್ವಾಮಿನಾಥನ್, ಡಾ| ಕಸ್ತೂರಿ ರಂಗನ್‍ರಂಥ ಪ್ರಭಾವಿ ವಿಜ್ಞಾನಿಗಳು ಈ ಕಾಂಗ್ರೆಸ್‍ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ವೈಜ್ಞಾನಿಕವಾಗಿ ಈ ದೇಶವನ್ನು ಬೆಳೆಸುವ ಪ್ರಯತ್ನ ನಡೆಸಿದ್ದಾರೆ. ಅವರು ಐಹಿಹ್ಯಗಳಿಗೆ ವಿಜ್ಞಾನದ ಲೇಪವನ್ನು ತೊಡಿಸುವುದಕ್ಕೆ ಅವಕಾಶ ಕೊಟ್ಟಿಲ್ಲ. ಕಲ್ಪಿತ ಮತ್ತು ಭ್ರಮಾಧೀತ ವಿಚಾರಧಾರೆಯನ್ನು ವಿಜ್ಞಾನದೊಳಕ್ಕೆ ತರಲು ಅವಕಾಶ ಮಾಡಿಕೊಟ್ಟಿಲ್ಲ. ಬಹುಶಃ ಇವತ್ತು ಈ ದೇಶವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಗತ್ತಿನ ಪ್ರಮುಖ 5 ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದರೆ ಅದಕ್ಕೆ ಅವರ ನಿಲುವುಗಳೇ ಕಾರಣವಾಗಿದ್ದವು. ದುರಂತ ಏನೆಂದರೆ, ಇವತ್ತು ರಾಹು-ಕೇತುಗಳು, ಶುಭ-ಅಶುಭಗಳು ಸಂಶೋಧನಾ ಕೊಠಡಿಯೊಳಗೂ ನುಸುಳಿ ಬಿಟ್ಟಿವೆ. ಶುಭ ಘಳಿಗೆಯನ್ನು ನೋಡಿ ಉಪಗ್ರಹವನ್ನು ಉಡಾಯಿಸುವ ಚಿಂತಾಜನಕ ಸ್ಥಿತಿಗೆ ವೈಜ್ಞಾನಿಕ ಮನೋಭಾವ ಕುಸಿದು ಹೋಗುತ್ತಿದೆ. ನಿರ್ದಿಷ್ಟ ವಿಚಾರಾಧಾರೆಯನ್ನು ವಿಜ್ಞಾನದ ಹೆಸರಲ್ಲಿ ಒಪ್ಪಿಸುವ ತಂತ್ರಗಳು ಕಾಣಿಸುತ್ತಿವೆ. ಇದರ ಅಂತಿಮ ಫಲಿತಾಂಶ ಏನಾಗುತ್ತದೆಂದರೆ, ಐತಿಹ್ಯವೇ ವಿಜ್ಞಾನವಾಗಿ ಬಿಡುತ್ತದೆ. ಐತಿಹ್ಯವನ್ನು ವಿಜ್ಞಾನವೆಂದು ವಿಜ್ಞಾನಿಗಳೇ ವಾದಿಸತೊಡಗುವ ಸಂದರ್ಭಗಳು ಸೃಷ್ಟಿಯಾಗ ತೊಡಗುತ್ತವೆ. ಅದೇ ರೀತಿ, ಕಲೆ, ಸಾಹಿತ್ಯ, ಸಂಗೀತ, ಸಿನಿಮಾ ಸಹಿತ ಸರ್ವ ಕ್ಷೇತ್ರಗಳ ಮೇಲೂ ಈ ಐತಿಹ್ಯಾಧಾರಿತ ವಿಚಾರಧಾರೆಗಳು ಪ್ರಾಬಲ್ಯ ಪಡೆಯುತ್ತಾ, ಅದುವೇ `ಶ್ರೇಷ್ಠ'ವೆಂಬ ಭ್ರಮೆಯೊಂದು ಉತ್ಪತ್ತಿಯಾಗುತ್ತದೆ. ಅಂದಹಾಗೆ, ಐತಿಹ್ಯಗಳಿಗೆ ಯಥಾಸ್ಥಿತಿ ಎಂಬುದಿಲ್ಲ. ಅದನ್ನು ಸಂದರ್ಭಕ್ಕೆ ತಕ್ಕಂತೆ ಉತ್ಪಾದಿಸಬಹುದು. ನೀರಿನಿಂದ ಕಾರನ್ನು ಓಡಿಸುವ ತಂತ್ರಜ್ಞಾನವನ್ನು ಯುರೋಪಿನ ವಿಜ್ಞಾನಿಗಳು ಸಂಶೋಧಿಸಿದರೆ ಈ ಐತಿಹ್ಯವು ಅದನ್ನೂ
ವಿ. ರಾಮಕೃಷ್ಣನ್
ತನ್ನದಾಗಿಸಿಕೊಳ್ಳಬಹುದು. ಎಷ್ಟೋ ಸಾವಿರ ವರ್ಷಗಳ ಹಿಂದೆ ಇಂತಿಂಥ ಯುಗದಲ್ಲಿ ಅದರ ಸಂಶೋಧನೆ ನಡೆದಿತ್ತು ಎಂದು ಹೇಳಬಹುದು. ಯಾಕೆಂದರೆ, ಹಾಗೆ ಹೇಳುವುದಕ್ಕೆ ಪುರಾವೆಗಳ ಅಗತ್ಯವಿರುವುದಿಲ್ಲ. ಈ ಬಗೆಯ ‘ನಾಗರಿಕ ಶ್ರೇಷ್ಠತೆ’, ಸಂಸ್ಕøತಿ ಶ್ರೇಷ್ಠತೆಯ ಅಮಲನ್ನು ತುಂಬಿಸಿಯೇ ಹಿಟ್ಲರ್ ಒಂದು ಸಮಾಜವನ್ನೇ ನಿರ್ಮೂಲನ ಮಾಡಿದ್ದು. ಆರ್ಯ ಸಂಸ್ಕ್ರತಿಯನ್ನು ಸರ್ವಶ್ರೇಷ್ಠವೆಂದು ಬಿಂಬಿಸಿ ಅನಾರ್ಯರನ್ನು ಕಾಲಕಸವಾಗಿ ಕಂಡಿದ್ದು. ಭಾರತೀಯ ವಿಜ್ಞಾನ ಕಾಂಗ್ರೆಸ್‍ನಲ್ಲಿ ಮಂಡಿತವಾದ ಪ್ರಬಂಧಗಳಲ್ಲಿ ಮತ್ತು ಅದು ಪ್ರತಿಪಾದಿಸುವ ಸಂಗತಿಗಳಲ್ಲಿ ಈ `ಶ್ರೇಷ್ಠತೆ'ಯ ರೋಗ ಲಕ್ಷಣಗಳೇ ಕಾಣಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗ ಪರಿವಾರವು ಈ ಮೊದಲು ಪ್ರತಿಪಾದಿಸಿದ್ದ ಮತ್ತು ಈಗ ಪ್ರತಿಪಾದಿಸುತ್ತಿರುವ ವಿಚಾರಗಳನ್ನೇ ವಿಜ್ಞಾನವೆಂದು ವಿಜ್ಞಾನ ಕಾಂಗ್ರೆಸ್‍ನಲ್ಲೂ ಹೇಳಲಾಗುತ್ತಿದೆ. ಈ ಬೆಳವಣಿಗೆ ಅಪಾಯಕಾರಿ. ಹಿಟ್ಲರ್‍ನ ವಿಚಾರಧಾರೆಯನ್ನು ಪ್ರಶ್ನಿಸುವ ಮತ್ತು ಅದರ ಸುಳ್ಳುಗಳನ್ನು ಜನರ ಮುಂದಿಡುವ ಪ್ರಯತ್ನಗಳು ಜರ್ಮನಿಯಲ್ಲಿ ನಡೆಯುತ್ತಿರುವಾಗ ನಮ್ಮಲ್ಲಿ ಅದನ್ನೇ ಪ್ರೋತ್ಸಾಹಿಸಿ ಸರ್ವಮಾನ್ಯಗೊಳಿಸುವ ಬೆಳವಣಿಗೆಗಳು ನಡೆಯುತ್ತಿರುವುದು ಖಂಡನಾರ್ಹ.

ಕಲ್ಲುಗಳ ಮರೆಯಲ್ಲಿ 'ಮಾತು ಮುರಿದವರ' ಆಟ

       ಅಯೋಧ್ಯೆಯಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರಸಿದ್ಧ ಇತಿಹಾಸಕಾರರಾದ ಇರ್ಫಾನ್ ಹಬೀಬ್, ಆದಿತ್ಯ ಮುಖರ್ಜಿ, ಶಿರಿನ್ ಮೂಸವಿ, ಸಾಹು ಇಂದುಬಂಗ ಮುಂತಾದವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯ ಬೆಳವಣಿಗೆಯು ಇನ್ನೊಂದು ಬಾರಿ `ಕಾನೂನಿನ ಹತ್ಯೆ' ನಡೆಯುವ ಸೂಚನೆಯನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯ ಮರುದಿನವೇ, ‘ತಮಗೂ ಅಯೋಧ್ಯೆಯಲ್ಲಿನ ಬೆಳವಣಿಗೆಗೂ ಸಂಬಂಧ ಇಲ್ಲ’ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಆದರೆ ಬಿಜೆಪಿ ಹೇಳಿಕೆಯನ್ನು ಅಷ್ಟು ಸುಲಭವಾಗಿ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಯಾಕೆಂದರೆ, ರಾಮಮಂದಿರಕ್ಕೆ ಸಂಬಂಧಿಸಿ `ಮಾತು ಮುರಿದ' (ಮುಚ್ಚಳಿಕೆ ಉಲ್ಲಂಘಿಸಿದ)ಇತಿಹಾಸವೊಂದು ಬಿಜೆಪಿಗಿದೆ. ಅಲ್ಲದೆ, 2017ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆದ್ದರಿಂದಲೇ, ಅಯೋಧ್ಯೆಯ ರಾಮ್ ಸೇವಕ್ ಪುರಮ್‍ನಲ್ಲಿ ತಂದಿರಿಸಲಾಗುತ್ತಿರುವ ಕಲ್ಲುಗಳನ್ನು ಅನುಮಾನದಿಂದ ನೋಡಬೇಕಾಗುತ್ತದೆ. ರಾಮಮಂದಿರವನ್ನು ಮತ್ತೊಮ್ಮೆ ಚುನಾವಣಾ ಇಶ್ಯೂ ಆಗಿಸುವ ಸಂಚೊಂದು ಇದರ ಹಿಂದೆ ಅಡಗಿರುವಂತೆ ತೋರುತ್ತಿದೆ. ಈಗಾಗಲೇ ಮಹಂತ ನೃತ್ಯ ಗೋಪಾಲ್‍ದಾಸ್ ಅವರು ಈ ಕಲ್ಲುಗಳಿಗೆ ಶಿಲಾಪೂಜೆ ನೆರವೇರಿಸಿದ್ದಾರೆ. ಲಾರಿಗಳಲ್ಲಿ ಕಲ್ಲುಗಳನ್ನು ತಂದು ಅಲ್ಲಿ ಸುರಿಯಲಾಗುತ್ತಿದೆ. ಅಂದಹಾಗೆ, ಬಿಜೆಪಿ ಈ ಬೆಳವಣಿಗೆಯಿಂದ ಅಂತರ ಕಾಯ್ದುಕೊಂಡಷ್ಟೂ ಅದರ ಪಾತ್ರದ ಬಗ್ಗೆ ಅನುಮಾನಗಳು ಬಲಗೊಳ್ಳುತ್ತಲೇ ಹೋಗುತ್ತವೆ. ನಿಜವಾಗಿ, ಈ ದೇಶದಲ್ಲಿ ಬಾಬರಿ ಮಸೀದಿ ವಿವಾದವನ್ನು ರಾಜಕೀಯವಾಗಿ ಬಳಸಿಕೊಂಡದ್ದು ಬಿಜೆಪಿ. ಅಡ್ವಾಣಿ ರಥಯಾತ್ರೆ ನಡೆಸಿದರು. 1992ರಲ್ಲಿ ಬಾಬರಿ ಮಸೀದಿಯನ್ನು ಉರುಳಿಸುವುದಕ್ಕೆ ಅವರು ಒಂದು ಹಂತದವರೆಗೆ ನೇತೃತ್ವ ನೀಡಿದರು. ಈ ವಿವಾದವನ್ನು ಬಳಸಿಕೊಂಡು ದೇಶದೆಲ್ಲೆಡೆ ಭಾವನಾತ್ಮಕ ವಾತಾವರಣವೊಂದನ್ನು ನಿರ್ಮಿಸಲು ಬಿಜೆಪಿ ಆವತ್ತು ಭಾಗಶಃ ಯಶಸ್ವಿಯಾಗಿತ್ತು. ಬಾಬರಿ ಮಸೀದಿಯನ್ನು ಎತ್ತಿಕೊಂಡು ಭಾರತೀಯರನ್ನು ಹಿಂದೂಗಳು ಮತ್ತು ಮುಸ್ಲಿಮರು ಎಂದು ಬಿಜೆಪಿ ವಿಭಜಿಸಿ ಬಿಟ್ಟಿತು. ಇಟ್ಟಿಗೆಗಳ ಸಂಗ್ರಹವಾಯಿತು. ಮನೆ ಮನೆಗೆ ತೆರಳುವ ಅಭಿಯಾನಗಳು ನಡೆದುವು. ಒಂದು ಕಡೆ, ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಇನ್ನೊಂದು ಕಡೆ ನ್ಯಾಯಾಲಯವು ವಿವಾದಿತ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡಬೇಕೆಂದು ಆದೇಶಿಸಿತು. ಬಾಬರಿ ಮಸೀದಿಗೆ ಯಾವ ಹಾನಿಯೂ ತಟ್ಟುವುದಿಲ್ಲವೆಂಬ ಬಗ್ಗೆ ಅದು ಸಂಬಂಧಿತರಿಂದ ಮುಚ್ಚಳಿಕೆಯನ್ನು ಪಡೆದುಕೊಂಡಿತು. ಹೀಗೆ, ಬಿಜೆಪಿಯ ರಾಮಮಂದಿರ ಚಳವಳಿ ಮತ್ತು ಕೋರ್ಟಿನ ನಿಲುವುಗಳು 1992 ಡಿ. 6ರಂದು ಮುಖಾಮುಖಿಯಾಗಿ ಮುಚ್ಚಳಿಕೆಯನ್ನೇ ಉಲ್ಲಂಘಿಸುವ ಮೂಲಕ ಕೊನೆಗೊಂಡಿತು. ಅಂದಿನಿಂದ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಒಳಗಾಗುತ್ತಲೇ ಇದೆ. ರಾಮಮಂದಿರ ಚಳವಳಿಯ ರೂವಾರಿಗಳು ಯಾರು, ಬಾಬರಿ ಮಸೀದಿಯನ್ನು ಉರುಳಿಸುವಲ್ಲಿ ಯಾರ್ಯಾರು ಯಾವ್ಯಾವ ಪಾತ್ರವನ್ನು ನಿಭಾಯಿಸಿದ್ದಾರೆ, ಕಾನೂನನ್ನೇ ಕೊಲೆಗೈಯುವ ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದೆಲ್ಲ ಸ್ಪಟಿಕದಷ್ಟೇ ಸ್ಪಷ್ಟವಾಗಿದ್ದರೂ ಈ ವರೆಗೆ ಯಾರೊಬ್ಬರನ್ನು ಮುಟ್ಟಲೂ ನ್ಯಾಯಾಲಯಕ್ಕೆ ಸಾಧ್ಯವಾಗಿಲ್ಲ. ವಿಚಾರಣೆಯಂತೂ ಇನ್ನೂ ಪ್ರಾಥಮಿಕ ಹಂತವನ್ನೇ ದಾಟದಷ್ಟು ದಾರುಣ ಸ್ಥಿತಿಯಲ್ಲಿದೆ. ಹೀಗಿರುತ್ತಾ, ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋ ಮಾಂಸದ ನೆಪದಲ್ಲಿ ಅಖ್ಲಾಕ್‍ನನ್ನು ಥಳಿಸಿ ಕೊಲೆಗೈದ ಘಟನೆಯ ಮುಖ್ಯ ಆರೋಪಿ ವಿಶಾಲ್ ರಾಣಾನ ತಂದೆ ಸಂಜಯ್ ರಾಣಾ ಕಳೆದ ವಾರ ಮಾತಾಡಿದ್ದಾರೆ. 1990ರ ಕರಸೇವೆಯಲ್ಲಿ ತಾನು ಭಾಗಿಯಾಗಿದ್ದೆ ಎಂದು ಈ ಬಿಜೆಪಿ ನಾಯಕ ಹೇಳಿಕೊಂಡಿದ್ದಾರೆ. ತಾನು ಒಂದು ವಾರ ಜೈಲಲ್ಲಿದ್ದುದನ್ನೂ ಪೆÇಲೀಸರ ದೌರ್ಜನ್ಯಗಳನ್ನೂ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಕಲ್ಲುಗಳು ಸಂಗ್ರಹವಾಗುತ್ತಿರುವ ಈ ಹೊತ್ತಿನಲ್ಲಿ  ‘ಕರಸೇವಕರು’ ತಮ್ಮ ಹಳೆಯ ದಿನಗಳನ್ನು ಮಾಧ್ಯಮಗಳ ಮೂಲಕ ಮೆಲುಕು ಹಾಕುವುದು ಏನನ್ನು ಸೂಚಿಸುತ್ತಿದೆ? ಮಗ-ಗೋ ಮಾಂಸದ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಂಡವನಾದರೆ ಅಪ್ಪ- ರಾಮಮಂದಿರದ ಹೆಸರಲ್ಲಿ ಕಾನೂನನ್ನು ಉಲ್ಲಂಘಿಸಿದವ. ವಿಶೇಷವೇನೆಂದರೆ ಈ ಎರಡಕ್ಕೂ ಒಂದು ಭಾವನಾತ್ಮಕ ಮುಖವಿದೆ. ಇಬ್ಬರೂ ಕಾನೂನನ್ನು ಉಲ್ಲಂಘಿಸಿದ್ದರೂ ಮತ್ತು ಎರಡೂ ಶಿಕ್ಷಾರ್ಹ ಅಪರಾಧವೇ ಆಗಿದ್ದರೂ ಅದನ್ನೇ ಹೆಮ್ಮೆಯೆಂದು ಕೊಂಡಾಡುವ ವೈಪರೀತ್ಯವೊಂದು ಈ ದೇಶದಲ್ಲಿ ನಡೆಯುತ್ತಿದೆ. ಬಾಬರಿ ಮಸೀದಿಯನ್ನು ಉರುಳಿಸಿದಾಗಲೂ ಈ ವೈಪರೀತ್ಯ ಕಂಡುಬಂದಿತ್ತು. ಅದರಲ್ಲಿ ಭಾಗಿಯಾದವರನ್ನು ಧರ್ಮ ರಕ್ಷಕರಂತೆ ಬಿಂಬಿಸಲಾಗಿತ್ತು. ದಾದ್ರಿ ಘಟನೆಯಲ್ಲೂ ಇಂತಹದ್ದೊಂದು ಅಸಂಬದ್ಧ ನಡೆಯಿತು. ಕೊಲೆಗಾರರನ್ನೇ ಮೆಚ್ಚಿಕೊಳ್ಳುವ ಭಾವನಾತ್ಮಕ ಧ್ರುವೀಕರಣ ಸೃಷ್ಟಿಯಾಯಿತು. ಆದ್ದರಿಂದಲೇ ಅಯೋಧ್ಯೆಯಲ್ಲಿ ಕಲ್ಲುಗಳು ದಾಸ್ತಾನುಗೊಳ್ಳುತ್ತಿರುವುದನ್ನೂ ಸಂಜಯ್ ರಾಣಾ ತನ್ನನ್ನು ಕರಸೇವಕ ಎಂದು ಸ್ಮರಿಸಿಕೊಳ್ಳುತ್ತಿರುವುದನ್ನೂ ಪರಸ್ಪರ ಹೋಲಿಸಿಕೊಂಡು ನೋಡಬೇಕಾಗುತ್ತದೆ. ಉತ್ತರ ಪ್ರದೇಶದ ವಿಧಾನ ಸಭೆಗೆ ಚುನಾವಣೆ ನಡೆಯಲು ಒಂದು ವರ್ಷ ಉಳಿದಿರುವಾಗ ಹಳೆಯ ಕರಸೇವಕರು ಮಾತಾಡ ತೊಡಗಿದ್ದಾರೆ. ಈ ಮಾತುಗಾರಿಕೆ ಸಂಜಯ್ ರಾಣಾರಿಗೆ ಮಾತ್ರ ಸೀಮಿತಗೊಳ್ಳುತ್ತದೆ ಎಂದು ಭಾವಿಸಬೇಕಾಗಿಲ್ಲ. ಉತ್ತರ ಪ್ರದೇಶದಲ್ಲಿ ರಾಮಮಂದಿರ ವಿಷಯವು ಫಲ ನೀಡಬಹುದೆಂದು ಬಿಜೆಪಿ ಮತ್ತು ಅದರ ಪರಿವಾರಕ್ಕೆ ಸ್ಪಷ್ಟವಾದರೆ ಅಂದಿನ ಅನುಭಗಳನ್ನು ಹಂಚಿಕೊಳ್ಳುವ ‘ಕರಸೇವಾ ಸ್ಮರಣೆಗಳು’ ಮುಂದಿನ ದಿನಗಳಲ್ಲಿ ಧಾರಾಳ ಬರಬಹುದು. ಜನರನ್ನು ಭಾವನಾತ್ಮಕವಾಗಿ ಮಣಿಸುವ ಶ್ರಮಗಳು ನಡೆಯಬಹುದು. ಅದರ ಭಾಗವಾಗಿಯೇ ಇದೀಗ ಕರ ಸೇವಕ್ ಪುರಂನಲ್ಲಿ ಕಲ್ಲುಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಮಾತ್ರವಲ್ಲ, ಈ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುವಂತೆಯೂ ನೋಡಿಕೊಳ್ಳಲಾಗುತ್ತಿದೆ. ಇದರಿಂದ ಆಗುವ ಲಾಭ ಏನೆಂದರೆ, ತಾವು ರಾಮಮಂದಿರವನ್ನು ಮರೆತಿಲ್ಲ ಎಂಬ ಸೂಚನೆಯನ್ನು ಜನರಿಗೆ ಕೊಡತ್ತಲಿರುವುದು. ಅದಕ್ಕಾಗಿ ಭಾರೀ ತಯಾರಿಯಲ್ಲಿದ್ದೇವೆ ಎಂಬ ಸಂದೇಶವನ್ನು ರವಾನಿಸುತ್ತಲಿರುವುದು. ಇದು ಜನರನ್ನು ಸೆಳೆಯುವ ಸೂಚನೆ ಕೊಟ್ಟರೆ ಸ್ವತಃ ಬಿಜೆಪಿಯೇ ಇದನ್ನು ಚುನಾವಣಾ ಇಶ್ಯೂ ಆಗುವಂತೆ ನೋಡಿಕೊಳ್ಳಬಹುದು. ಹಾಗಂತ, ಬಿಜೆಪಿ ಜನರಿಗೆ ಮೋಸ ಮಾಡಿಲ್ಲವೆಂದು ಚುನಾವಣೆಯ ಸಂದರ್ಭದಲ್ಲಿ ವಾದಿಸಬೇಕಾದರೆ ಕಲ್ಲುಗಳಾದರೂ ಇರಬೇಕಾದ ಅಗತ್ಯವಿದೆ. ಒಂದು ವೇಳೆ, ಜನರ ಮೇಲೆ ಈ ‘ಕಲ್ಲು ದಾಸ್ತಾನು’ ಮತ್ತು ‘ಕರಸೇವಾ ಸ್ಮರಣೆಗಳು’ ಪರಿಣಾಮ ಬೀರದಿದ್ದರೆ ಈ ಬೆಳವಣಿಗೆಯಿಂದ ಬಿಜೆಪಿ ಅಂತರವನ್ನು ಕಾಯ್ದುಕೊಳ್ಳಬಹುದು. ಬಹುಶಃ, ಇಂಥದ್ದೊಂದು ತಂತ್ರದ ಭಾಗವಾಗಿಯೇ ಅಯೋಧ್ಯೆಯಲ್ಲಿ ಕಲ್ಲುಗಳ ದಾಸ್ತಾನು ಆಗುತ್ತಿದೆ ಎನ್ನಬೇಕಾಗುತ್ತದೆ.
       ಅಷ್ಟಕ್ಕೂ, ಬಾಬರಿ ಮಸೀದಿಗೆ ಇರುವ ಪುರಾತನ ಹಿನ್ನಲೆ ಮತ್ತು ಅದನ್ನು ಸುತ್ತಿಕೊಂಡಿರುವ ವಿವಾದಗಳೇನೇ ಇರಲಿ, ಎಲ್ಲವೂ ಕಾನೂನಿನ ಮೂಲಕ ಇತ್ಯರ್ಥಗೊಳ್ಳಬೇಕೇ ಹೊರತು ಭುಜಬಲದಿಂದಲ್ಲ. ರಾಮಮಂದಿರ ಚಳವಳಿಯು ಬಿಜೆಪಿಗೆ ಒಂದು ಹಂತದವರೆಗೆ ರಾಜಕೀಯವಾಗಿ ಲಾಭ ತಂದುಕೊಟ್ಟಿರಬಹುದು. ಆದರೆ ಆ ಚಳವಳಿಯಿಂದಾಗಿ ಆದ ಜೀವಹಾನಿ, ನ್ಯಾಯಹಾನಿಯು ಬಿಜೆಪಿಯ ಮೇಲೆ ಅಳಿಸಲಾಗದ ಕಳಂಕವನ್ನು ಉಂಟುಮಾಡಿದೆÉ. ಆ ಕಳಂಕ ಶಾಶ್ವತವಾದುದು. ತಾತ್ಕಾಲಿಕವಾದ ಅಧಿಕಾರಕ್ಕಾಗಿ ಶಾಶ್ವತವಾದ ಕಳಂಕವನ್ನು ಮೆತ್ತಿಕೊಂಡ ಬಿಜೆಪಿ ಮತ್ತೆ ಅದೇ ತಪ್ಪನ್ನು ಮಾಡುತ್ತದೆಂದಾದರೆ ಅದಕ್ಕೆ ಇತಿಹಾಸದ ಅರಿವಿಲ್ಲ ಎನ್ನಬೇಕಾಗುತ್ತದೆ. ಮಾತ್ರವಲ್ಲ, ಮಂದಿರಕ್ಕಾಗಿ ದಾಸ್ತಾನು ಮಾಡಲಾಗುತ್ತಿರುವ ಕಲ್ಲುಗಳನ್ನೇ ಜನರು ಮುಂದೊಂದು ದಿನ ಬಿಜೆಪಿಗೆ ಪಾಠ ಕಲಿಸಲಿಕ್ಕಾಗಿ ಎತ್ತಿಕೊಳ್ಳಲೂಬಹುದು ಎಂದೇ ಹೇಳಬೇಕಾಗುತ್ತದೆ.


Friday, 1 January 2016

ಅಡಗಿಕೊಳ್ಳಬೇಕಾದುದು ಹೆಣ್ಣಲ್ಲ, ಅತ್ಯಾಚಾರಿ ...

         ದೆಹಲಿಯ ಜಂತರ್ ಮಂತರ್‍ನಲ್ಲಿ ಕಳೆದ ವಾರ ನಡೆದ ‘ನಿರ್ಭಯ ಚೇತನ್ ದಿವಸ್' ಸಭೆಯು ಕೆಲವು ಕಾರಣಗಳಿಗಾಗಿ ಮಹತ್ವಪೂರ್ಣವಾದುದು. 2015ಕ್ಕೆ ವಿಶಿಷ್ಟ ರೀತಿಯಲ್ಲಿ ತೆರೆ ಎಳೆಯಲಾದ ಸಂದರ್ಭವಾಗಿ ಆ ಸಭೆಯನ್ನು ನಾವು ಪರಿಗಣಿಸಬಹುದಾಗಿದೆ. ಈ ಸಭೆಯಲ್ಲಿ ‘ನಿರ್ಭಯ'ಳ ತಾಯಿ ಆಶಾ ದೇವಿಯವರು ತನ್ನ ಮಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದರು. ಮಾತ್ರವಲ್ಲ, ಮಾಧ್ಯಮಗಳು ಜ್ಯೋತಿಸಿಂಗ್ ಎಂಬ ಹೆಸರಿನಿಂದಲೇ ತನ್ನ ಮಗಳನ್ನು ಗುರುತಿಸಬೇಕೆಂದು ಕರೆಕೊಟ್ಟರು. ಆದರೆ ಭಾರತೀಯ ದಂಡಸಂಹಿತೆ 228Aಯ ಪ್ರಕಾರ, ಅತ್ಯಾಚಾರಕ್ಕೀಡಾದ ಸಂತ್ರಸ್ತೆಯ ಹೆಸರನ್ನು ಪ್ರಕಟಿಸುವುದು ಕ್ರಿಮಿನಲ್ ಅಪರಾಧ. ಆದರೂ ದಂಡಸಂಹಿತೆ 228A(2)(C)ಯಲ್ಲಿರುವ  ಕೆಲವು ರಿಯಾಯಿತಿಗಳನ್ನು ಬಳಸಿಕೊಂಡು ಹೆಸರನ್ನು ಪ್ರಕಟಿಸಬಹುದಾದರೂ ಪತ್ರಿಕೆಗಳು ಈ ಮೊದಲಿನ ನಿರ್ಧಾರಕ್ಕೇ ಅಂಟಿಕೊಂಡವು. ‘ನಿರ್ಭಯ'ಳ ನಿಜ ಹೆಸರನ್ನು ಪ್ರಕಟಿಸಬಾರದಾಗಿ ತೀರ್ಮಾನಿಸಿದವು. ಇದು ಪರ-ವಿರುದ್ಧ ಚರ್ಚೆಗೆ ವೇದಿಕೆ ಒದಗಿಸಿತು. ಹೈದರಾಬಾದ್‍ನ ನಲ್ಸರ್ ವಿಶ್ವವಿದ್ಯಾಲಯದ  ಆನಂದಿತಾ ಮುಖರ್ಜಿ ಪತ್ರಿಕೆಗಳ ಈ ನಿಲುವನ್ನು ಪ್ರತಿಭಟಿಸಿದರು. ಈ ಕುರಿತಂತೆ ತನ್ನ ಅಸಮಾಧಾನವನ್ನು ಸೂಚಿಸಿ ದಿ ಹಿಂದೂ ಪತ್ರಿಕೆಗೆ ಖಾರ ಪತ್ರವನ್ನೂ ಬರೆದಳು. ವಿಶೇಷ ಏನೆಂದರೆ, ಕೆಲವು ತಿಂಗಳುಗಳ ಹಿಂದಷ್ಟೇ ತಟಸ್ಥ ಲಿಂಗ (Gender Neutrality) ಸರ್ಟಿಫಿಕೇಟ್‍ಗೆ ಆಗ್ರಹಿಸಿ ಕೋರ್ಟಿನಿಂದ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಅದನ್ನು ಆಕೆ ಪಡೆದುಕೊಂಡಿದ್ದರು. Mr, Ms  ಎಂಬ ಗೌರವ ಸೂಚಕ ಪದಗಳಂತೆಯೇ ತನ್ನ ಹೆಸರಿನ ಮೊದಲು Mx  ಸೇರಿಸಿಕೊಳ್ಳುವುದಕ್ಕೆ ಕೋರ್ಟು ಆಕೆಗೆ ಅನುಮತಿಯನ್ನು ನೀಡಿತ್ತು.
         
       Mx ಗಾಗಿ ಆನಂದಿತಾ ಮುಖರ್ಜಿಯ ಹೋರಾಟವೇನೇ ಇರಲಿ, ಅದರಲ್ಲೊಂದು ಧೈರ್ಯ ಇದೆ. ಆ ಧೈರ್ಯದ ಮುಂದುವರಿದ ಭಾಗವಾಗಿ ನಾವು ಆಶಾದೇವಿಯ ಹೇಳಿಕೆಯನ್ನು ಪರಿಗಣಿಸಬಹುದಾಗಿದೆ. ನಿಜವಾಗಿ, ಈ ದೇಶದಲ್ಲಿ ಹೆಣ್ಣಿನ ಕುರಿತಂತೆ ಮೈಲಿಗೆಯ ಹತ್ತು-ಹಲವು ಕತೆಗಳಿವೆ. ಹೆಜ್ಜೆ ಹೆಜ್ಜೆಗೂ ನಿರ್ಬಂಧಗಳಿವೆ. ಕಟ್ಟುಪಾಡುಗಳಿವೆ. ಅನಾದಿ ಕಾಲದಿಂದಲೂ ಹೆಣ್ಣನ್ನು ದಮನಿಸುವ ಪರಂಪರೆಯೊಂದು ಈ ದೇಶಕ್ಕಿದೆ. ಈ ಪರಂಪರೆ ಎಷ್ಟು ಪರಿಚಿತ ಮತ್ತು ಸಹಜ ಅನ್ನಿಸಿಕೊಂಡಿದೆ ಯೆಂದರೆ, ಆಕೆ ಪತಿಯ ಚಿತೆಗೂ ಹಾರಬಲ್ಲಳು. ಕೆರೆಗೂ ಹಾರವಾಗಬಲ್ಲಳು. ದೇವದಾಸಿಯಾಗಬಲ್ಲಳು. ಅಮಂಗಲೆ ಅನ್ನಿಸಿಕೊಳ್ಳಬಲ್ಲಳು. ಮುಟ್ಟಾಗಿ ಊರ ಹೊರಗೆ ಬದುಕಬಲ್ಲಳು. ವೈಧವ್ಯದ ಪರಮ ಕ್ರೂರ ಬದುಕಿಗೆ ಒಗ್ಗಿಕೊಳ್ಳಬಲ್ಲಳು. ಅಂತಪುರದಲ್ಲಿ ಸಖಿಯಾಗಬಲ್ಲಳು. ಎಲ್ಲವನ್ನೂ ಸಹಿಸಿಕೊಳ್ಳುತ್ತಾ ಎಲ್ಲೂ ಪ್ರತಿಭಟಿಸದೆಯೇ ಕಳೆದು ಹೋಗುವ ಪರಮ ಸಭ್ಯ ಪಾತ್ರವಾಗಿಯೇ ಮಹಿಳೆ ಇತಿಹಾಸ ದುದ್ದಕ್ಕೂ ಈ ದೇಶದಲ್ಲಿ ಗುರುತಿಸಿಕೊಂಡಿದ್ದಾಳೆ. ಇವತ್ತಿಗೂ ಮಹಿಳೆಯ ಆ ಪಾತ್ರದಲ್ಲಿ ಅಭೂತ ಪೂರ್ವವೆನ್ನಬಹುದಾದ ಬದಲಾವಣೆಯೇನೂ ಆಗಿಲ್ಲ. ವರದಕ್ಷಿಣೆಯ ಹೆಸರಲ್ಲಿ ಆಕೆಯನ್ನು ಸತಾ ಯಿಸಲಾಗುತ್ತದೆ. ಮರ್ಯಾದೆಗೇಡು ಹತ್ಯೆಯಲ್ಲಿ ಆಕೆಯೇ ಮೊದಲು ಗುರಿಯಾಗುತ್ತಾಳೆ. ಆಕೆಯನ್ನು ಭ್ರೂಣಧಲ್ಲೇ ಮುಗಿಸಿಬಿಡುವ ಘಟನೆಗಳಂತೂ ಧಾರಾಳವಾಗಿ ನಡೆಯುತ್ತಿವೆ. ಇದರ ಜೊತೆಗೇ ಅತ್ಯಾಚಾರ ಪ್ರಕರಣಗಳನ್ನು ಸೇರಿಸಿದರೆ ಹೆಣ್ಣು ಮತ್ತಷ್ಟು ದುರ್ಬಲವಾಗಿ ಕಾಣುತ್ತಾಳೆ. ಆದ್ದರಿಂದಲೇ ಆಶಾದೇವಿಯ ಹೇಳಿಕೆಯನ್ನು ಸಮಾಜ ವರ್ಷದ ಹೇಳಿಕೆಯಾಗಿ ಪರಿಗಣಿಸಬೇಕೆಂದು ಅನಿಸುವುದು. ಅಂದಹಾಗೆ, ಅತ್ಯಾಚಾರವೆಂಬುದು ವರದಕ್ಷಿಣೆ, ಲಿಂಗ ತಾರತಮ್ಯ, ಮರ್ಯಾದೆಗೇಡು ಹತ್ಯೆ ಮುಂತಾದುವುಗಳಂತೆ ಅಲ್ಲವಲ್ಲ. ಇವುಗಳಿಗಾದರೋ ಆಯ್ಕೆಯ ಅವಕಾಶಗಳಿವೆ. ವರದಕ್ಷಿಣೆಯ ಮದುವೆಯನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅವಕಾಶವೊಂದು ಹೆಣ್ಣಿನ ಮುಂದಿರುತ್ತದೆ. ಅನೇಕ ಸಂದರ್ಭಗಳಲ್ಲಿ ಈ ಅವಕಾಶಕ್ಕೆ ಮಿತಿ ಇರಬಹುದಾದರೂ ಆಯ್ಕೆಯ ಸ್ವಾತಂತ್ರ್ಯವನ್ನಂತೂ ನಿರಾಕರಿಸಲು ಸಾಧ್ಯವಿಲ್ಲ. ಮರ್ಯಾದೆಗೇಡು ಹತ್ಯೆಯ ವಿಷಯವೂ ಇಷ್ಟೇ. ಇಲ್ಲೂ, ಮನೆಯವರಿಗೆ ಇಷ್ಟವಿಲ್ಲದ ಯುವಕನನ್ನು ಪ್ರೀತಿಸುವ ಅಥವಾ ಪ್ರೀತಿಸದೇ ಇರುವ ಅವಕಾಶವೊಂದು ಹೆಣ್ಣಿಗಿರುತ್ತದೆ. ಲಿಂಗ ತಾರತಮ್ಯವನ್ನು ಕೂಡ ಪ್ರಶ್ನಿಸುವುದಕ್ಕೆ ಅವಕಾಶ ಇದೆ. ಹೆಣ್ಣು ಧೈರ್ಯ ತಂದುಕೊಂಡರೆ ಈ ಬಗ್ಗೆ ನೆರವಾಗುವುದಕ್ಕೆ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಿವೆ. ಆದರೆ ಅತ್ಯಾಚಾರ ಹೀಗಲ್ಲ. ಹೆಣ್ಣಿನ ಅಸಹಾಯಕತೆಯನ್ನೇ ಗುರಿಯಾಗಿಟ್ಟುಕೊಂಡು ಮಾಡುವ ಹೇಯ ಕ್ರೌರ್ಯ ಅದು. ಅತ್ಯಾಚಾರದಲ್ಲಿ ಹೆಣ್ಣಿಗೆ ಆಯ್ಕೆಗಳಿರುವುದಿಲ್ಲ. ನಿಜವಾಗಿ, ಅತ್ಯಾಚಾರಕ್ಕಿಂತಲೂ ಭಯಾನಕ ಏನೆಂದರೆ, ಅತ್ಯಾಚಾರದ ಬಳಿಕದ ಜೀವನ. ಅತ್ಯಾಚಾರಿ ತನ್ನ ಕೃತ್ಯದ ಬಳಿಕ ‘ಏನೂ ಆಗಿಲ್ಲ ವೆಂಬಂತೆ' ಹೊರಟು ಹೋಗುವಾಗ ಸಂತ್ರಸ್ತೆಯು ಅಪರಾಧಿಯಂತೆ ಎಲ್ಲವನ್ನೂ ನುಂಗಿಕೊಂಡು ಬದುಕುವುದಕ್ಕೆ ಹೆಚ್ಚಿನ ಬಾರಿ ತೀರ್ಮಾನಿಸುತ್ತಾಳೆ. ಒಡಲೊಳಗೆ ಅತ್ಯಾಚಾರವೆಂಬ ಬೆಂಕಿಯ ಉರಿಯನ್ನು ಸಹಿಸಿಕೊಳ್ಳುತ್ತಲೇ ಹೊರಗೆ ಅದರ ಕಾವು ಕಾಣದಂತೆ ಅದುಮಿಡಲು ಪ್ರಯತ್ನಿಸುತ್ತಾಳೆ. ಇದಕ್ಕೆ ಕಾರಣ ಏನೆಂದರೆ, ‘ಅತ್ಯಾಚಾರದ ಸಂತ್ರಸ್ತೆ' ಎಂಬ ಹಣೆಪಟ್ಟಿಯನ್ನು ಸಮಾಜ ಇಷ್ಟಪಡದೇ ಇರುವುದು. ಅದು ಭವಿಷ್ಯದಲ್ಲಿ ಆ ಹೆಣ್ಣು ಮಗಳ ಮದುವೆಯನ್ನು, ಸಾಮಾಜಿಕ ಮನ್ನಣೆಯನ್ನು, ಕುಟುಂಬದ ಮರ್ಯಾದೆಯನ್ನು ನಾಶ ಮಾಡಬಹುದಾದ ಹಣೆಪಟ್ಟಿ. ಸಮಾಜದಲ್ಲಿ ಇತರರಂತೆ ಬದುಕುವ ಸ್ವಾತಂತ್ರ್ಯವನ್ನು ಆ ಹಣೆಪಟ್ಟಿ ನಿರಾಕರಿಸುತ್ತದೆ. ಅದು ಆಕೆಯನ್ನು ಪ್ರತಿದಿನವೂ ಇರಿಯಬಹುದು. ವ್ಯಂಗ್ಯಕ್ಕೆ ಒಳಗಾಗಿಸಬಹುದು. ಊರು ಬಿಡುವಂತೆ ಬಲವಂತಪಡಿಸಬಹುದು. ಇವು ಮತ್ತು ಇಂತಹ ಹತ್ತಾರು ಸವಾಲುಗಳನ್ನು ಸಂತ್ರಸ್ತೆ ಎದುರಿಸಬಹುದಾದ ಅಪಾಯ ಇರುವುದರಿಂದಲೇ ಭಾರತೀಯ ದಂಡ ಸಂಹಿತೆಯಲ್ಲಿ ಸಂತ್ರಸ್ತೆಯ ಹೆಸರನ್ನು ಗೌಪ್ಯವಾಗಿಡುವ ತೀರ್ಮಾನ ಮಾಡಿರಬೇಕು. ಅಂದಹಾಗೆ, ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಪ್ರತಿದಿನ ನಡೆಯುತ್ತಿದ್ದರೂ ಅವುಗಳಲ್ಲಿ ಸುದ್ದಿಯಾಗುವುದು ಕೆಲವೇ ಕೆಲವು. ಹೆಚ್ಚಿನ ಸುದ್ದಿಗಳು ಮನೆತನದ ಗೌರವ, ಹೆಣ್ಣು ಮಗಳ ಭವಿಷ್ಯ ಅಥವಾ ಅತ್ಯಾಚಾರಿಗಳ ಬೆದರಿಕೆಗಳಿಂದಾಗಿ ಸತ್ತು ಹೋಗುತ್ತವೆ. ಇನ್ನು, ಸುದ್ದಿಯಾಗುವ ಪ್ರಕರಣಗಳಲ್ಲೂ ಸಂತ್ರಸ್ತೆಯ ಹೆಸರು ಪ್ರಕಟವಾಗದಂತೆ ಎಚ್ಚರ ವಹಿಸಲಾಗುತ್ತದೆ. ಹಾಗಂತ, ಈ ಎಚ್ಚರಿಕೆಗೆ ಭಾರತೀಯ ದಂಡಸಂಹಿತೆಯೊಂದೇ ಕಾರಣ ಎಂದು ಹೇಳುವಂತಿಲ್ಲ. ದೇಶದ ಸಾಮಾಜಿಕ ರೀತಿ-ನೀತಿಗಳೇ ಹಾಗಿವೆ. ‘ಅತ್ಯಾಚಾರದ ಸಂತ್ರಸ್ತೆ'ಯನ್ನು ಒಂದು ಬಗೆಯ ಅಸ್ಪೃಶ್ಯ ದೃಷ್ಟಿಕೋನದಲ್ಲಿ ನೋಡುವ ಮನಸ್ಥಿತಿ ಇಲ್ಲಿ ಈಗಲೂ ಇದೆ. ಯುವಕ-ಯುವತಿಯರಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಹೆಣ್ಣನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವಾತಾವರಣ ಇದೆ. ಇಂಥ ಸ್ಥಿತಿಯಲ್ಲಿ ಆಶಾದೇವಿಯವರ ಹೇಳಿಕೆಯನ್ನು ನಾವು ವಿಶ್ಲೇಷಿಸಬೇಕಾಗಿದೆ. ಸಂತ್ರಸ್ತೆಯನ್ನು ಅಡಗಿಸುವ ಬದಲು ಸಮಾಜದ ಮುಂದೆ ನಿಲ್ಲಿಸುವ ಮತ್ತು ಆ ಮೂಲಕ ಅತ್ಯಾಚಾರಿಗಳು ನಾಚಿಕೊಳ್ಳುವಂತೆ ಮಾಡುವ ಧೈರ್ಯದ ಹೇಳಿಕೆ ಅದು. ಅತ್ಯಾಚಾರವು ಗಂಡಿಗೆ ಅವಮಾನವೇ ಹೊರತು ಹೆಣ್ಣಿಗಲ್ಲ ಎಂದು ಬಲವಾಗಿ ಸಾರಿದ ಸಂದರ್ಭವಿದು. ಆದ್ದರಿಂದಲೇ, ಈ ಹೇಳಿಕೆಯನ್ನು ವರ್ಷದ ಹೇಳಿಕೆಯಾಗಿ ಗೌರವಿಸಬೇಕಾಗಿದೆ.
      ಏನೇ ಆಗಲಿ, ತನ್ನ ದೈಹಿಕ ರಚನೆಗೆ ನೊಂದುಕೊಳ್ಳದೇ, ಅದನ್ನು ಪ್ರಕೃತಿಯ ಕೊಡುಗೆಯಾಗಿ ಸ್ವೀಕರಿಸಿಕೊಂಡು ಸಮಾಜದ ಮುಂದೆ ಬಹಿರಂಗವಾಗಿ ಸಾರಿದ Mx ಆನಂದಿತಾ ಮುಖರ್ಜಿಯ ಧೈರ್ಯ ಒಂದು ಕಡೆಯಾದರೆ, ಆಶಾದೇವಿಯ ಧೈರ್ಯ ಇನ್ನೊಂದು ಕಡೆ. 2015ರ ಕೊನೆಯಲ್ಲಿ ಕಾಣಿಸಿಕೊಂಡ ಈ ಎರಡು ಧೈರ್ಯಗಳನ್ನು ನಾವು ಮೆಚ್ಚಿಕೊಳ್ಳಬೇಕು. 2016ನೇ ಇಸವಿಯು ಹೆಣ್ಣನ್ನು ಸುರಕ್ಷಿತವಾಗಿಡಲು ಈ ಧೈರ್ಯ ಪ್ರಚೋದಕವಾಗಬೇಕು. ಹಾಗಾಗಲಿ ಎಂದು ಹಾರೈಸೋಣ.

Thursday, 24 December 2015

ಸಮಸ್ಯೆ ವಯಸ್ಸಿನದ್ದೋ ವಾತಾವರಣದ್ದೋ?

      ಅಪ್ರಾಪ್ತ ವಯಸ್ಸಿನ ಅಪರಾಧಿಗಳನ್ನು ಹೇಗೆ ನಡೆಸಿಕೊಳ್ಳಬೇಕು? ಅತ್ಯಾಚಾರದಲ್ಲಿ ಭಾಗಿಯಾದ ಪ್ರಾಪ್ತ ವಯಸ್ಕರಿಗೆ ಮರಣದಂಡನೆ ವಿಧಿಸುವಾಗ, ಅದೇ ಅತ್ಯಾಚಾರದಲ್ಲಿ ಭಾಗಿಯಾದವನನ್ನು ಅಪ್ರಾಪ್ತನೆಂಬ ನೆಲೆಯಲ್ಲಿ ಬಿಡುಗಡೆಗೊಳಿಸುವುದು ಎಷ್ಟು ಸಮರ್ಥನೀಯ? ಅದು ತಪ್ಪು ಸಂದೇಶವನ್ನು ರವಾನಿಸದೆ? ಅಪ್ರಾಪ್ತರಲ್ಲಿ ಹುಂಬ ಧೈರ್ಯವನ್ನು ತುಂಬದೇ? ಹಾಗಂತ, ಇದಕ್ಕೆ ಪರಿಹಾರ ಏನು? ಅಪ್ರಾಪ್ತ ವಯಸ್ಸಿನ ಮಿತಿಯನ್ನು ಈಗಿನ 18ರಿಂದ 16ಕ್ಕೋ 14ಕ್ಕೊ ಇಳಿಸುವುದು ಸೂಕ್ತವೇ? ಹಾಗೆ ಮಾಡುವುದರಿಂದ ಹಸುಳೆಗಳನ್ನು ಪ್ರೌಢರೊಂದಿಗೆ ಸಮಗೊಳಿಸಿದಂತಾಗದೆ? 16 ವರ್ಷದ ಎಳೆಯನೂ 50 ವರ್ಷದ ಪ್ರೌಢನೂ ಒಂದೇ ರೀತಿಯೇ? ತಿಳುವಳಿಕೆ, ಬುದ್ಧಿಮತ್ತೆ, ಸರಿ-ತಪ್ಪುಗಳ ಪ್ರಜ್ಞೆ ಎಲ್ಲದರಲ್ಲೂ ಇವರ ಮಧ್ಯೆ ಆಳ ವ್ಯತ್ಯಾಸ ಇರುವಾಗ ಇವರನ್ನು ಒಂದೇ ಕ್ರಿಮಿನಲ್ ನ್ಯಾಯ ಪ್ರಕ್ರಿಯೆಯೊಳಗೆ ತರುವುದು, ಒಟ್ಟಿಗೆ ಕಟಕಟೆಯಲ್ಲಿ ನಿಲ್ಲಿಸುವುದು ಮತ್ತು ಸಮಾನ ಜೈಲಿನಲ್ಲಿಡುವುದು ಸಮರ್ಥನೀಯವೇ? ಎಳೆಯನ ಮಟ್ಟಿಗೆ ಇದು ತಿದ್ದಿಕೊಳ್ಳುವುದಕ್ಕೆ ಅವಕಾಶವನ್ನೇ ನೀಡದ ಏಕಮುಖ ಕ್ರೌರ್ಯವಾಗಬಹುದೇ... ಇತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ದೆಹಲಿಯ ಇಂಡಿಯಾ ಗೇಟ್ ಮತ್ತೊಮ್ಮೆ ವೇದಿಕೆ ಒದಗಿಸಿದೆ. `ನಿರ್ಭಯ' ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ 2012ರಲ್ಲಿ ಇಂಡಿಯಾ ಗೇಟ್‍ನಲ್ಲಿ ಪ್ರತಿಭಟನೆ ಆರಂಭಗೊಂಡಿತ್ತು. ಆ ಪ್ರತಿಭಟನೆ ಆ ಬಳಿಕ ಎಷ್ಟು ತೀವ್ರತೆಯನ್ನು ಪಡಕೊಂಡಿತ್ತೆಂದರೆ, ದೇಶವನ್ನು ಒಂದು ಚಳವಳಿಯಾಗಿ ಆವರಿಸಿಬಿಟ್ಟಿತು. ಸರಕಾರವೇ ಪ್ರತಿಭಟನೆಗೆ ಶರಣಾಗಿ, ಅತ್ಯಾಚಾರ ವಿರೋಧಿ ಕಾನೂನನ್ನು ರೂಪಿಸುವಷ್ಟು ಅದು ಪರಿಣಾಮಕಾರಿಯಾಯಿತು. ಇದೀಗ ಮತ್ತೊಮ್ಮೆ ಇಂಡಿಯಾ ಗೇಟ್ ಸದ್ದು ಮಾಡಿದೆ. ಆ ಪ್ರಕರಣದ ಬಾಲಾಪರಾಧಿ ಜೈಲಿನಿಂದ ಹೊರಬಂದಿರುವುದನ್ನು ಪ್ರತಿಭಟಿಸಿ ಜನರು ಇಂಡಿಯಾ ಗೇಟ್‍ನ ಬಳಿ ನೆರೆದಿದ್ದಾರೆ. ನಿರ್ಭಯಾಳ ತಾಯಿ ಆಶಾದೇವಿ ಮತ್ತು ತಂದೆ ಬದ್ರಿ ಸಿಂಗ್ ಪ್ರತಿಭಟನೆಯಲ್ಲಿ ಪಾಲುಗೊಂಡಿದ್ದಾರೆ. ಆತನನ್ನು ಬಿಡುಗಡೆಗೊಳಿಸಬಾರದೆಂದು ಅವರೆಲ್ಲ ಒತ್ತಾಯಿಸುತ್ತಿದ್ದಾರೆ. ಒಂದು ರೀತಿಯಲ್ಲಿ, ಇದು ಭಾರತೀಯ ನ್ಯಾಯ ಪ್ರಕ್ರಿಯೆ ಮತ್ತು ಜನರ ಭಾವನೆಗಳ ನಡುವಿನ ಸಂಘರ್ಷದಂತೆ ತೋರುತ್ತಿದೆ. ನ್ಯಾಯ ಸಂಹಿತೆಯ ಪ್ರಕಾರ ಬಾಲಾಪರಾಧಿಗೆ 3 ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಿಲ್ಲ. ನಿರ್ಭಯಾಳ ಮೇಲೆ ಅತ್ಯಾಚಾರ ನಡೆಸುವಾಗ ಆತನಿಗೆ 18 ವರ್ಷ ತುಂಬಿರಲಿಲ್ಲ ಎಂಬುದೇ ಆತನ ಬಿಡುಗಡೆಗಿರುವ ಏಕೈಕ ಸಬೂಬು. ಈ ಸಬೂಬನ್ನು ಹೊರಗಿಟ್ಟು ನೋಡಿದರೆ, ಎಲ್ಲ ರೀತಿಯಲ್ಲೂ ಆತ ಪರಮ ಕ್ರೂರಿಯೇ. ಮರಣದಂಡನೆಗೆ ಒಳಗಾದ ಇತರ ಮೂವರಿಗಿಂತ ಹೆಚ್ಚು ಕ್ರೌರ್ಯವನ್ನು ಮೆರೆದಿದ್ದು ಈತನೇ ಎಂದು ಹೇಳಲಾಗುತ್ತದೆ. ವಯಸ್ಸಿನ ಹೊರತಾಗಿ ಆತನ ಮೇಲೆ ಕರುಣೆ ತೋರುವುದಕ್ಕೆ ಇನ್ನಾವ ಕಾರಣಗಳೂ ಇಲ್ಲ. ಇಂಡಿಯಾ ಗೇಟ್‍ನಲ್ಲಿ ನೆರೆದಿರುವವರ ವಾದವೂ ಇದುವೇ. ಒಂದು ಕಡೆ ಕಾನೂನು ಇನ್ನೊಂದು ಕಡೆ ಜನರ ಭಾವನೆ.. ಇವುಗಳ ನಡುವೆ ಬಾಲಾಪರಾಧಿ ಸಿಲುಕಿಕೊಂಡಿದ್ದಾನೆ.
   ನಿಜವಾಗಿ, ಅಪ್ರಾಪ್ತರನ್ನು ಮತ್ತು ಪ್ರಾಪ್ತ ವಯಸ್ಕರನ್ನು ಸಮಾನ ತಕ್ಕಡಿಯಲ್ಲಿಡುವುದೇ ತಪ್ಪು. ಇಬ್ಬರ ನಡುವೆ ಬೌದ್ಧಿಕ ಬೆಳವಣಿಗೆ, ಕಾನೂನಿನ ಅರಿವು, ತನ್ನ ಕೃತ್ಯದ ಪರಿಣಾಮದ ತಿಳುವಳಿಕೆ ಇತ್ಯಾದಿಗಳ ವಿಷಯದಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಪ್ರಾಪ್ತನ ಅರಿವಿನ ಮಟ್ಟವನ್ನು ಅಪ್ರಾಪ್ತ ಹೊಂದಿರುವುದಿಲ್ಲ. ಮಗುವಿನ ಕೈಗೆ ವಾಚ್ ಕೊಟ್ಟರೆ ಉಪಯೋಗದ ಹೊರತಾದ ಎಲ್ಲವನ್ನೂ ಅದು ಮಾಡುತ್ತದೆ. ಮಗುವಿನ ಮಟ್ಟಿಗೆ ಅದು ಒಂದು ಆಟದ ಸಾಮಾನು. ಅದನ್ನು ಒಡೆದೂ ಬಿಡಬಹುದು. ಎತ್ತಿ ಎಸೆದು ಬಿಡಲೂ ಬಹುದು. ಆದರೆ ಮಗುತನ ದಾಟಿ ಬಂದ ಮಕ್ಕಳು ವಾಚ್ ಅನ್ನು ನೋಡುವ ವಿಧಾನವೇ ಬೇರೆ. ಅದು ಅವರ ಪಾಲಿಗೆ ಫ್ಯಾಶನ್. ಗೆಳೆಯರೆದುರು ಆಗಾಗ ಟೈಮ್ ನೋಡುವ ನೆಪದಲ್ಲಿ ಪ್ರದರ್ಶಿಸುವ ಹೆಚ್ಚುಗಾರಿಕೆ. ಒಂದು ವೇಳೆ, ಮಗುವನ್ನು ಮತ್ತು ಮಕ್ಕಳನ್ನು ಒಂದೇ ತಟ್ಟೆಯಲ್ಲಿ ಇಟ್ಟು ನೋಡಿದರೆ ಏನಾಗಬಹುದು? ಬಹುಶಃ, ಹದಿಹರೆಯದವರು ಮತ್ತು ವಯಸ್ಕರನ್ನು ಈ ಮಾನದಂಡವನ್ನಿಟ್ಟುಕೊಂಡು ತೂಗಿದರೆ ಉತ್ತಮವೇನೋ ಅನಿಸುತ್ತದೆ. ಹಾಗಂತ, ಅತ್ಯಾಚಾರದಲ್ಲಿ ಭಾಗಿಯಾಗುವ ಅಪ್ರಾಪ್ತರು ವಾಚ್ ಪುಡಿ ಮಾಡುವ ಮಗುವಿನಷ್ಟೇ ಮುಗ್ಧರು ಎಂದು ಇದರರ್ಥವಲ್ಲ. ಹದಿಹರೆಯದವರಿಗೆ ಅತ್ಯಾಚಾರವು ತಪ್ಪು ಮತ್ತು ಅದಕ್ಕೆ ಶಿಕ್ಷೆ ಇದೆ ಎಂಬುದು ಗೊತ್ತಿರಲೂ ಬಹುದು. ಆದರೂ, ಅವರನ್ನು ವಯಸ್ಕರಿಗೆ ಸಮಾನವಾಗಿ ನೋಡುವುದು ಅಪ್ರಬುದ್ಧ ಮತ್ತು ದುಡುಕುತನದಂತೆ ತೋರುತ್ತದೆ.
      ನಿಜವಾಗಿ, ಆಧುನಿಕ ತಂತ್ರಜ್ಞಾನಗಳು ತೀರಾ ಬೆಳೆದಿರುವ ಮತ್ತು ಮೊಬೈಲ್‍ನಲ್ಲಿ `ಸರ್ವವೂ' ಲಭ್ಯವಾಗುತ್ತಿರುವ ಇಂದಿನ ದಿನಗಳು ಹದಿಹರೆಯವನ್ನು ಅಪಾಯಕಾರಿಯಾಗುವಂತೆ ತಯಾರುಗೊಳಿಸುತ್ತಿದೆ. 10 ವರ್ಷಗಳ ಹಿಂದಿನ ಹದಿಹರೆಯಕ್ಕೂ ಇವತ್ತಿನ ಹದಿಹರೆಯಕ್ಕೂ ಬೌದ್ಧಿಕವಾಗಿಯೂ ಭೌತಿಕವಾಗಿಯೂ ಧಾರಾಳ ಅಂತರಗಳಿವೆ. ಇವತ್ತು ಅಪ್ರಾಪ್ತನು/ಳು ಪ್ರಾಪ್ತ ವಯಸ್ಕನಷ್ಟು ಪ್ರಬುದ್ಧವಾಗಿ ಮಾತಾಡುತ್ತಾನೆ/ಳೆ. ಯಾವುದೇ ವಿಷಯದ ಮೇಲೆ ಪ್ರಾಪ್ತ ವಯಸ್ಕನಿಗೆ ಸರಿಸಮವಾದ ಮಾಹಿತಿಯನ್ನು ಪಡೆಯುವ ಎಲ್ಲ ಸೌಲಭ್ಯಗಳೂ ಇವತ್ತು ಅಪ್ರಾಪ್ತರಿಗಿವೆ. ಒಂದು ರೀತಿಯಲ್ಲಿ, ಇವತ್ತಿನ ತಂತ್ರಜ್ಞಾನಗಳು ಅಪ್ರಾಪ್ತರನ್ನು ಅಕಾಲಿಕ ಪ್ರಾಪ್ತ ವಯಸ್ಕರನ್ನಾಗಿ ಮಾಡುತ್ತಿವೆ. ಅವರು ಯಾವ ವಿಷಯದ ಮೇಲೆ ಕುತೂಹಲ ವ್ಯಕ್ತಪಡಿಸುತ್ತಾರೋ ಆ ಕುತೂಹಲವನ್ನು ತಣಿಸುವುದಕ್ಕೆ ಬೆರಳ ತುದಿಯಲ್ಲೇ ಅವಕಾಶವನ್ನು ಒದಗಿಸುತ್ತಿದೆ. 20 ವರ್ಷಗಳ ಹಿಂದೆ ಆಗಿದ್ದರೆ ನೀಲಿ ಚಿತ್ರವನ್ನು ವೀಕ್ಷಿಸುವುದಕ್ಕೆ ಚಿತ್ರ ಮಂದಿರಕ್ಕೆ ಹೋಗಬೇಕಿತ್ತು. ಅದೂ ಕದ್ದು ಮುಚ್ಚಿ- ರಾತ್ರಿಯ ವೇಳೆ ಹೋಗುವವರೇ ಹೆಚ್ಚಿದ್ದರು. ಇದೊಂದೇ ಅಲ್ಲ, `ತಪ್ಪು' ಎಂದು ಸಮಾಜ ಯಾವುದರ ಮೇಲೆಲ್ಲ ಮುದ್ರೆ ಹಾಕಿತ್ತೋ ಅವೆಲ್ಲವೂ ಸುಲಭವಾಗಿ ಲಭ್ಯವಾಗದಂಥ ವಾತಾವರಣ ಆಗೆಲ್ಲ ಇತ್ತು. ಆದರೆ ಇವತ್ತು ಆ ಬೇಲಿಯೇ ಕಿತ್ತು ಹೋಗಿದೆ. ಬೇಲಿಯೇ ಇಲ್ಲದ ವಿಶಾಲ ಜಗತ್ತೊಂದು ಇವತ್ತು ಪ್ರಾಪ್ತರು-ಅಪ್ರಾಪ್ತರು ಎಂಬ ಬೇಧವಿಲ್ಲದೇ ಎಲ್ಲರೆದುರೂ ತೆರೆದುಕೊಂಡಿದೆ. ಕೆಟ್ಟದ್ದನ್ನು ಇವತ್ತು ಕದ್ದು-ಮುಚ್ಚಿ-ರಾತ್ರಿ ವೇಳೆ ನೋಡಬೇಕಾದ ಅಗತ್ಯವಿಲ್ಲ. ಎಲ್ಲವನ್ನೂ ಮೊಬೈಲ್ ಒದಗಿಸುತ್ತದೆ. ಅಪ್ರಾಪ್ತರಲ್ಲಿ ಪ್ರೌಢತನವನ್ನು ಹುಟ್ಟಿಸುವುದಕ್ಕೆ ಬೇಕಾದ ಎಲ್ಲವೂ ಇವತ್ತು ಮೊಬೈಲ್‍ನಲ್ಲಿ ಸುಲಭದಲ್ಲೇ ದಕ್ಕುತ್ತಿದೆ. ಇಂಥ ಸ್ಥಿತಿಯಲ್ಲಿ, ಅಪ್ರಾಪ್ತ ವಯಸ್ಸಿನ ಮಿತಿಯನ್ನು ತಗ್ಗಿಸುವುದೋ ಅಥವಾ ಅವರು ಭಾಗಿಯಾದ ಅತ್ಯಾಚಾರದಂಥ ಹೀನ ಕೃತ್ಯಗಳನ್ನು ಪ್ರಾಪ್ತ ವಯಸ್ಕರ

ಪರಿಚ್ಛೇದದಡಿಯಲ್ಲಿ ತಂದು ವಿಚಾರಣೆಗೆ ಒಳಪಡಿಸುವುದೋ ಸಮಸ್ಯೆಗೆ ಉತ್ತರವಾಗುವ ಸಾಧ್ಯತೆಯಿಲ್ಲ. ಇದರ ಬದಲು ಎಳೆ ಮನಸ್ಸನ್ನು ಚಂಚಲಗೊಳಿಸುವವುಗಳ ಅಧ್ಯಯನ ನಡೆಸಬೇಕು. ಆಧುನಿಕ ತಂತ್ರಜ್ಞಾನಗಳನ್ನು ಹೇಗೆ ಮತ್ತು ಯಾಕಾಗಿ ಬಳಸಬೇಕೆಂಬ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಎಳೆ ಮನಸ್ಸಿಗೆ ತಿಳಿಸಿಕೊಡಬೇಕು. ಇತರರನ್ನು ಹೇಗೆ ಕಾಣಬೇಕು ಮತ್ತು ಗೌರವಿಸಬೇಕು ಎಂಬುದನ್ನು ಆಗಾಗ ಹೇಳಿಕೊಡುತ್ತಲಿರಬೇಕು. ಇವು ಮತ್ತು ಇಂತಹ ಇನ್ನಿತರ ತಿದ್ದುವ ವಿಧಾನಗಳು ‘ಅಪ್ರಾಪ್ತ ಅಪರಾಧ’ವನ್ನು ತಡೆಗಟ್ಟುವುದಕ್ಕೆ ಪರಿಹಾರ ಆಗಬಹುದೇ ಹೊರತು ವಯಸ್ಸಿನ ಮಿತಿಯನ್ನು ಇಳಿಸುವುದಲ್ಲ. ಒಂದು ವೇಳೆ, ಇವತ್ತು ವಯಸ್ಸಿನ ಮಿತಿಯನ್ನು 16ಕ್ಕೆ ಇಳಿಸಿದರೆ ಇನ್ನೈದು ವರ್ಷಗಳಲ್ಲಿ ಅದನ್ನು 14ಕ್ಕೆ ಇಳಿಸಬೇಕಾದ ಅಗತ್ಯವೂ ಕಂಡುಬರಬಹುದು. ಸಮಸ್ಯೆಯಿರುವುದು ವಯಸ್ಸಿನಲ್ಲಲ್ಲ, ಆ ವಯಸ್ಸಿಗೆ ನಾವೇನನ್ನು ತುಂಬಿಸುತ್ತಿದ್ದೇವೆ ಎಂಬುದರಲ್ಲಿ. ನಿರ್ಭಯ ಪ್ರಕರಣದ ಬಾಲಾಪರಾಧಿಯನ್ನು ನಾವು ಈ ಮಾನದಂಡದಿಂದಲೇ ವಿಶ್ಲೇಷಿಸಬೇಕಾಗಿದೆ.