Thursday, 28 April 2016

ನಿಜಕ್ಕೂ ಧರಣಿ ಕೂರಬೇಕಾದ್ದು ಯಾರ ಮನೆಯ ಮುಂದೆ?

ವಿಜಯಂತಿ ದೇವಿ ಮತ್ತು ಜೈಗೋವಿಂದ್ ಸಿಂಗ್‍
     ಬಿಹಾರದಲ್ಲಿ ಕಳೆದವಾರ ಅಪರೂಪದ ವಿವಾಹವೊಂದು ಜರುಗಿತು. Bihar's bottles disappear and they wed again after 16 years  ಎಂಬ ಶೀರ್ಷಿಕೆಯಲ್ಲಿ ದಿ ಹಿಂದೂ ಪತ್ರಿಕೆಯು ಸವಿಸ್ತಾರವಾಗಿ ಚಿತ್ರ ಸಮೇತ ಈ ವಿವಾಹದ ಬಗ್ಗೆ ವರದಿ ಮಾಡಿದೆ. 17 ವರ್ಷದ ಗುಡ್ಡಿ ಕುಮಾರಿ ಎಂಬ ಹುಡುಗಿ ಈ ಮದುವೆಯ ಆಮಂತ್ರಣ ಪತ್ರಿಕೆಯನ್ನು ಖುದ್ದಾಗಿ ಮನೆ ಮನೆಗೆ ಹಂಚಿದ್ದಳು. ಗುಡ್ಡಿಗೆ 1 ವರ್ಷವಾಗಿದ್ದಾಗ ಆಕೆಯ ಹೆತ್ತವರಾದ ವಿಜಯಂತಿ ದೇವಿ ಮತ್ತು ಜೈಗೋವಿಂದ್ ಸಿಂಗ್‍ರು ಪರಸ್ಪರ ಬೇರ್ಪಟ್ಟಿದ್ದರು. ಈ ಅಗಲುವಿಕೆಗೆ ಮದ್ಯಪಾನವೇ ಮುಖ್ಯ ಕಾರಣವಾಗಿತ್ತು. ಜೈಗೋವಿಂದ್ ಸಿಂಗ್‍ರು ಮದ್ಯಪಾನವನ್ನು ಚಟವಾಗಿಸಿಕೊಂಡಿದ್ದರು. ಕುಟುಂಬವನ್ನು ಅದು ತೀವ್ರವಾಗಿ ಬಾಧಿಸಿತು. ವಿಜಯಂತಿ ಕಾದಳು. ಮದ್ಯಪಾನವನ್ನು ಬಿಟ್ಟು ಬಿಡುವಂತೆ ಗಂಡನಲ್ಲಿ ವಿನಂತಿಸಿದಳು. ವಿವಿಧ ರೀತಿಯಲ್ಲಿ ಪ್ರಯತ್ನಿಸಿ ನೋಡಿದಳು. ಕೊನೆಗೆ ಗಂಡ ಬದಲಾಗಲಾರ ಎಂದು ಸ್ಪಷ್ಟವಾದಾಗ ಗಂಡನಿಂದಲೇ ದೂರವಾದಳು. ಇದೀಗ ಅವರು ಮತ್ತೆ ಮರು ಮದುವೆಯಾಗಿ ಒಂದಾಗಿದ್ದಾರೆ. ಬಿಹಾರ ಸರಕಾರವು ಎಪ್ರಿಲ್ 5ರಿಂದ ಜಾರಿಗೊಳಿಸಿದ ಸಂಪೂರ್ಣ ಪಾನ ನಿಷೇಧವು ಅವರಿಬ್ಬರನ್ನು ಮದುವೆ ಮಂಟಪದಲ್ಲಿ ಸಾರ್ವಜನಿಕರ ಮುಂದೆ ಮತ್ತೆ ಅದ್ದೂರಿಯಾಗಿ ಜೋಡಿಸಿದೆ. ತಾನಿನ್ನು ಕುಡಿಯಲಾರೆ ಎಂದು ಗೋವಿಂದ್ ಸಿಂಗ್ ಶಪಥ ತೊಟ್ಟಿದ್ದಾರೆ. ನಿಜವಾಗಿ, ಮಂಡ್ಯದ ಶಕೀಲ್ ಮತ್ತು ಆಶಿತಾರ ಪ್ರೇಮ ವಿವಾಹಕ್ಕಿಂತ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಬೇಕಿದ್ದ ವಿವಾಹ ಇದು. ಹರೆಯದ ಗಂಡು ಮತ್ತು ಹೆಣ್ಣು ಪರಸ್ಪರ ಆಕರ್ಷಣೆಗೆ ಒಳಗಾಗುವುದು ಮತ್ತು ಧರ್ಮದ ಹಂಗಿಲ್ಲದೇ ವೈವಾಹಿಕ ಸಂಬಂಧದಲ್ಲಿ ಏರ್ಪಡುವುದಕ್ಕೆ ತೀರ್ಮಾನಿಸುವುದೆಲ್ಲ ಭಾರತದ ಸದ್ಯದ ಸಾಮಾಜಿಕ ವಾತಾವರಣದಲ್ಲಿ ಅಸಹಜವೂ ಅಲ್ಲ, ಅತಿರೇಕದ್ದೂ ಅಲ್ಲ. ಪ್ರೇಮ ವಿವಾಹಕ್ಕೆ ಅವುಗಳದ್ದೇ ಆದ ಇತಿ ಮತ್ತು ಮಿತಿಗಳಿವೆ. ವೈವಾಹಿಕ ಜೀವನದ ಬಗ್ಗೆ ಕನಸುಗಳನ್ನಷ್ಟೇ ಕಟ್ಟಿಕೊಂಡಿರುವ ಮತ್ತು ಪ್ರಾಯೋಗಿಕವಾಗಿ ಏನೇನೂ ಅನುಭವವಿಲ್ಲದ ಜೋಡಿಯೊಂದರ ವಿವಾಹಕ್ಕೆ ಹೋಲಿಸಿದರೆ, ವಿಜಯಂತಿ ಮತ್ತು ಜೈಗೋವಿಂದ್ ಸಿಂಗ್‍ರ ಮರುವಿವಾಹ ಹೆಚ್ಚು ಪ್ರಸ್ತುತವಾದುದು. ಇವರಲ್ಲಿ ಜೀವನಾನುಭವವಿದೆ. ಸಾಮಾಜಿಕ ಕಟ್ಟುಪಾಡುಗಳ ಅರಿವಿದೆ. ದಾಂಪತ್ಯ ಸಂಬಂಧದ ಕುರುಹಾಗಿ ಒಂದು ಮಗು ಇದೆ. ವೈವಾಹಿಕ ಅನುಭವವಿದೆ. ಹೀಗೆ ದಾಂಪತ್ಯ ಸಂಬಂಧದಲ್ಲಿ ಅನುಭವವಿರುವ ಜೋಡಿಯೊಂದು ಮದ್ಯಪಾನದ ಕಾರಣಕ್ಕಾಗಿ ಬೇರ್ಪಡುವುದು ಮತ್ತು ಅದನ್ನು ತ್ಯಜಿಸಿದ ಕಾರಣಕ್ಕಾಗಿ ಮತ್ತೆ ಒಂದಾಗುವುದೆಂದರೆ ಅದು ಹರೆಯದ ಆಕರ್ಷಣೆಗಿಂತ ಗಂಭೀರವಾದುದು. ಮದ್ಯ ಕೇಂದ್ರಿತ ಭಾರತೀಯ ಸಾಮಾಜಿಕ ಜೀವನ ಕ್ರಮದ ಸರಿ-ತಪ್ಪುಗಳನ್ನು ವಿಮರ್ಶೆಗೆ ಒಡ್ಡುವಂತಹದ್ದು. ಅಷ್ಟಕ್ಕೂ, ಮದ್ಯಪಾನದ ಕಾರಣಕ್ಕಾಗಿ ಬೇರ್ಪಟ್ಟ ದಂಪತಿಗಳಲ್ಲಿ ವಿಜಯಂತಿ ಮತ್ತು ಜೈಗೋವಿಂದ್‍ರು ಮೊದಲಿಗರೇನೂ ಅಲ್ಲ. ಬಹುಶಃ, ವಿಜಯಂತಿಗೆ ತನ್ನ ಮಗುವಿನೊಂದಿಗೆ ಪ್ರತ್ಯೇಕ ಜೀವನ ನಡೆಸುವ ಅವಕಾಶವಾದರೂ ಸಿಕ್ಕಿದೆ. ಈ ಅವಕಾಶವೂ ದಕ್ಕದ ಕೋಟ್ಯಂತರ ವಿಜಯಂತಿಯರು ಈ ದೇಶದಲ್ಲಿದ್ದಾರೆ. ಸಂಜೆಯಾಗುತ್ತಲೇ ಈ ವಿಜಯಂತಿಯರ ಎದೆಬಡಿತ ವೇಗವನ್ನು ಪಡಕೊಳ್ಳತೊಡಗುತ್ತದೆ. ಮಕ್ಕಳು ಒಳಕೋಣೆಯ ಬಾಗಿಲ ಸಂದನ್ನು ಆಶ್ರಯಿಸತೊಡಗುತ್ತಾರೆ. ಗಂಡನೆಂಬ ಜೈಗೋವಿಂದರು ಯಾವಾಗ ತಮ್ಮ ಮೇಲೆ ಪ್ರತಾಪವನ್ನು ತೋರಿಸುವರೋ ಎಂಬ ಭೀತಿ ಇಡೀ ಮನೆಯನ್ನು ಆವರಿಸಿರುತ್ತದೆ. ಒಂದು ಕಡೆ ಕಂಠಪೂರ್ತಿ ನಶೆ ಏರಿಸಿ ಬರುವ ಗಂಡ, ಇನ್ನೊಂದು ಕಡೆ ಆ ನಶೆಯ ಸರ್ವ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾದ ಅನಿವಾರ್ಯತೆಯಲ್ಲಿ ಪತ್ನಿ ಮತ್ತು ಮಕ್ಕಳು. ಇಂಥದ್ದೊಂದು ಒತ್ತಡದಲ್ಲಿ ಈ ದೇಶದ ಕೋಟ್ಯಂತರ ಗುಡಿಸಲುಗಳು ಪ್ರತಿನಿತ್ಯ ನರಳುತ್ತಿರುವಾಗ ನಾವು ಯಾವುದಕ್ಕಾಗಿ ಧರಣಿ ಕೂರಬೇಕು? ಯಾವ ವಿಷಯವನ್ನು ಎತ್ತಿಕೊಂಡು ಪ್ರತಿಭಟನೆ ಮಾಡಬೇಕು? ಮಂಡ್ಯದಲ್ಲಿ ಆಶಿತಾಳ ಮನೆಯ ಮುಂದೆ ಧರಣಿ ಕೂತವರು ಮತ್ತು ಆಕೆಯ ಮದುವೆಯನ್ನು ಹಿಂದೂ ಧರ್ಮಕ್ಕಾಗುವ ಅವಮಾನವೆಂದು ವ್ಯಾಖ್ಯಾನಿಸಿ ಬಂದ್‍ಗೆ ಕರೆಕೊಟ್ಟವರೆಲ್ಲ ಯಾಕೆ ಈ ವಿಷಯವಾಗಿ ಪ್ರತಿಭಟನೆ ಕೈಗೊಳ್ಳುತ್ತಿಲ್ಲ? ಹಿಂದೂ ಧರ್ಮದ ಸೌಂದರ್ಯವನ್ನು ನಾಶ ಮಾಡುವ ಖಾತೆಯೆಂದು ಸಾರಿ ಅಬಕಾರಿ ಖಾತೆಯ ಸಚಿವರ ಮನೆ ಮುಂದೆ ಧರಣಿಯನ್ನೇಕೆ ಏರ್ಪಡಿಸುತ್ತಿಲ್ಲ? ಒಮ್ಮೆ, ಆಶಿತಾ ಮತ್ತು ಶಕೀಲ್ ಜೋಡಿಯನ್ನು ಹಾಗೂ ದಮಯಂತಿ ಮತ್ತು ಜೈಗೋವಿಂದ್ ಸಿಂಗ್ ಜೋಡಿಯನ್ನು ಮುಖಾಮುಖಿಗೊಳಿಸಿ ಪ್ರಶ್ನಿಸಿಕೊಳ್ಳಿ. ಸಾಮಾಜಿಕವಾಗಿ ಯಾವುದು ಆತಂಕಕಾರಿ? ಶಕೀಲ್-ಆಶಿತಾರ ಮಾದರಿಯು ಈ ದೇಶದಲ್ಲಿ ಸಮೂಹ
ಶಕೀಲ್ ಮತ್ತು ಆಶಿತಾ
ಸನ್ನಿಯಾಗಿ ಮಾರ್ಪಡಬಹುದು ಮತ್ತು ಧರ್ಮಗಳೆಲ್ಲ ಛಿನ್ನ-ಭಿನ್ನವಾಗಿ ನಾಶವಾಗಬಹುದು ಎಂದು ಸ್ವತಃ ಈ ಮದುವೆಯ ವಿರುದ್ಧ ಬಂದ್‍ಗೆ ಕರೆ ಕೊಟ್ಟವರೇ ವಾದಿಸಲಾರರು. ಯಾಕೆಂದರೆ ಪ್ರೀತಿ-ಪ್ರೇಮಕ್ಕೆ ಅದರದ್ದೇ ಆದ ಇತಿ-ಮಿತಿಗಳಿವೆ. ಪ್ರೇಮ ವಿವಾಹದಿಂದಾಗಿ ಧರ್ಮವೊಂದು ನಾಶವಾಗಿ ಬಿಡುತ್ತದೆ ಎಂದು ಹೇಳುವುದು ಅತ್ಯಂತ ಅವೈಜ್ಞಾನಿಕ ಮತ್ತು ಅವಿವೇಕತನದ್ದು. ಹರೆಯದ ಆಕರ್ಷಣೆಯ ಮೇಲೆ ಯಾವ ಧರ್ಮವೂ ಅವಲಂಬಿತವಾಗಿಲ್ಲ. ಧರ್ಮವೊಂದು ಅಪಾಯಕ್ಕೆ ಸಿಲುಕಿಕೊಳ್ಳುವ ಸಂದರ್ಭ ಯಾವುದೆಂದರೆ, ಧರ್ಮದ  ಮೂಲಭೂತ ಪ್ರತಿಪಾದನೆಗಳು ವ್ಯಾಪಕ ಮಟ್ಟದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗುವಾಗ. ಕುಡಿತ ಈ ದೇಶದಲ್ಲಿ ಇವತ್ತು ಮಾಡುತ್ತಿರುವುದು ಈ ನಾಶವನ್ನೇ. ಕುಡಿತದ ಅಮಲು ಹರೆಯದ ಆಕರ್ಷಣೆಯ ‘ಅಮಲಿ'ನಷ್ಟು ಅಲ್ಪಕಾಲಿಕವಲ್ಲ. ಹರೆಯದ ಅಮಲಿನಲ್ಲಿ ಸಿಲುಕಿ ವೈವಾಹಿಕ ಸಂಬಂಧದಲ್ಲಿ ಏರ್ಪಡುವವರನ್ನು ಬಳಿಕ ಜವಾಬ್ದಾರಿಯು ಕಟ್ಟಿ ನಿಲ್ಲಿಸುತ್ತದೆ. ಮಕ್ಕಳು, ಕುಟುಂಬ, ಗೌರವಾನ್ವಿತ ಜೀವನ ಮುಂತಾದದ ಗುರಿಗಳು ಈ ಸಂಬಂಧವನ್ನು ಮತ್ತಷ್ಟು ಭದ್ರಪಡಿಸುತ್ತಾ ಸಾಗುತ್ತದೆ. ಇದಕ್ಕೆ ಹೋಲಿಸಿದರೆ ಕುಡಿತದ ಅಮಲು ಇದಕ್ಕೆ ತೀರಾ ವಿರುದ್ಧವಾದುದು. ಅದು ವೈವಾಹಿಕ ಜೀವನದ ಸೌಂದರ್ಯವನ್ನೇ ಕೆಡಿಸುತ್ತದೆ. ಬೇಜವಾಬ್ದಾರಿತನವನ್ನು ಬೆಳೆಸುತ್ತದೆ. ಮಕ್ಕಳನ್ನು ಅನಾಥಗೊಳಿಸುತ್ತದೆ. ಅನಾರೋಗ್ಯಕ್ಕೆ, ವೈಧವ್ಯದ ಬದುಕಿಗೆ ದಾರಿ ತೆರೆಯುತ್ತದೆ. ನಿಜವಾಗಿ, ಸುಖೀ ಕುಟುಂಬ ಎಂಬುದು ಯಾವುದೇ ಧರ್ಮದ ಮೂಲಭೂತ ಬೇಡಿಕೆ. ಮೌಲ್ಯಗಳಿಂದ ತುಂಬಿ ತುಳುಕುವ ಕುಟುಂಬಗಳೇ ಧರ್ಮದ ನಿಜ ಮಾದರಿಗಳು. ಆದರೆ ಕುಡಿತ ಈ ಮೂಲಭೂತ ಅಂಶವನ್ನೇ ನಾಶ ಮಾಡುತ್ತದೆ. ಅದು ಸ್ವತಃ ಕುಡುಕನನ್ನು ಮಾತ್ರವಲ್ಲ, ಮಕ್ಕಳು, ಮಡದಿ, ಕುಟುಂಬ, ಸಮಾಜ ಸಹಿತ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿಬಿಡುವಷ್ಟು ಅಪಾಯಕಾರಿ ಸಾಮರ್ಥ್ಯವನ್ನು ಪಡೆದಿದೆ.  
        ದುರಂತ ಏನೆಂದರೆ, ಧರ್ಮರಕ್ಷಣೆಯ ಹೆಸರಲ್ಲಿ ಬೀದಿಗಿಳಿಯುವವರೆಲ್ಲ ಧರ್ಮದ ಪಾಲಿಗೆ ನಿಜಕ್ಕೂ ಅಪಾಯಕಾರಿಯಾಗಿರುವ ಕುಡಿತದ ಬಗ್ಗೆ ಗಾಢ ನಿರ್ಲಕ್ಷ್ಯವನ್ನು ತೋರುತ್ತಿದ್ದಾರೆ. ಆಶಿತಾ ಮತ್ತು ಶಕೀಲ್‍ರ ಮದುವೆಯ ವಿಷಯದಲ್ಲಿ ಪ್ರತಿಭಟನೆ ವ್ಯಕ್ತಪಡಿಸಲು ತೋರಿದ ಆಸಕ್ತಿಯ ಹತ್ತು ಶೇಕಡಾದಷ್ಟಾದರೂ ಈ ಕುಡಿತದ ವಿಷಯದಲ್ಲಿ ತೋರಿಸಿರುತ್ತಿದ್ದರೆ ಎಷ್ಟು ವಿಜಯವಂತಿಯರು ಖುಷಿಪಡುತ್ತಿದ್ದರು? ಗುಡ್ಡಿ ಕುಮಾರಿಯಂಥ ಎಷ್ಟು ಹೆಣ್ಣು ಮಕ್ಕಳ ಬದುಕು ಸುಂದರಗೊಳ್ಳುತ್ತಿತ್ತು? ಪಾನ ನಿಷೇಧ ಘೋಷಿಸಲಾದ ಈ ಸಣ್ಣ ಅವಧಿಯಲ್ಲೇ ಬಿಹಾರದಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳು ಕಡಿಮೆಯಾಗಿವೆ ಎಂದು ಅಲ್ಲಿನ ಸರಕಾರವೇ ಹೇಳಿಕೊಂಡಿದೆ. ಮದುವೆ ಸಮಾರಂಭಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿವೆ. ನಶೆಯೇರಿಸಿ ಮತ್ತು ಸಮಯ ಪ್ರಜ್ಞೆಯಿಲ್ಲದೇ ಬರುತ್ತಿದ್ದ ವರನ ಕಡೆಯವರ ಹುಚ್ಚಾಟಗಳೂ ಕಡಿಮೆಯಾಗಿವೆ. ಸಾಮಾನ್ಯವೆಂಬಂತಿದ್ದ ‘ಮದುವೆ ಪಾರ್ಟಿ ಘರ್ಷಣೆ'ಗಳು ಇಲ್ಲವಾಗುತ್ತಿವೆ. ಆದ್ದರಿಂದ, ಈ ಎಲ್ಲ ಸಕಾರಾತ್ಮಕ ಬೆಳವಣಿಗೆಗಳ ಸಂಕೇತವಾಗಿ ವಿಜಯವಂತಿ ಮತ್ತು ಜೈಗೋವಿಂದ್ ಸಿಂಗ್‍ರ ಮರು ಮದುವೆಯನ್ನು ನಾವು ಗುರುತಿಸಬಹುದು. ಆದರೆ ಶಕೀಲ್-ಆಶಿತಾರ ಬೆನ್ನು ಬಿದ್ದವರು ಇದರಲ್ಲಿ ಈವರೆಗೆ ಯಾವ ಆಸಕ್ತಿಯನ್ನೂ ತೋರಿಸಿಲ್ಲ. ಯಾಕೆಂದರೆ ಅವರ ಜೊತೆ ಧರ್ಮವಿಲ್ಲ.


Thursday, 31 March 2016

 ಹ್ಯಾಪಿ ಗುಡ್‍ಫ್ರೈಡೇ?

  ದುಃಖಿಸಬೇಕಾದ ಕಡೆ ಸುಖಿಸುವ ಮತ್ತು ಗೌರವಿಸಬೇಕಾದ ಕಡೆ ದಮನಿಸುವ ಹೊಸ ಪರಂಪರೆಯನ್ನು ಬಿಜೆಪಿ ಮತ್ತು ಪರಿವಾರ ಹುಟ್ಟು ಹಾಕಿದೆ. ಈ ಹಿಂದೆ ತೀರಾ ಸಣ್ಣ ಮಟ್ಟದಲ್ಲಿ ಮತ್ತು ಕದ್ದು ಮುಚ್ಚಿ ಮಾಡಲಾಗುತ್ತಿದ್ದ ಈ ವಿಕೃತಿಯನ್ನು ಇವತ್ತು ಅದ್ದೂರಿಯಾಗಿ ನಿರ್ವಹಿಸಲಾಗುತ್ತಿದೆ. ಸಾಹಿತಿ ಅನಂತಮೂರ್ತಿಯವರ ಸಾವಿಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ ವಿಕೃತಿಗೆ ದೇಶ ಸಾಕ್ಷಿಯಾಗಿತ್ತು. ಗಣರಾಜ್ಯೋತ್ಸವ ದಿನವನ್ನು ಕರಾಳ ದಿನವನ್ನಾಗಿಯೂ ಗಾಂಧೀಜಿಯವರ ಹತ್ಯೆಯನ್ನು ಸಂಭ್ರಮದ ದಿನವನ್ನಾಗಿಯೂ ಇತ್ತೀಚೆಗಷ್ಟೇ ಇಲ್ಲಿ ಆಚರಿಸಲಾಯಿತು. ವಿಕೃತಿಯ ಈ ಪಟ್ಟಿ ತೀರಾ ದೊಡ್ಡದು. ಕಳೆದವಾರ ಕ್ರೈಸ್ತ ಬಂಧುಗಳು ಗುಡ್‍ಫ್ರೈಡೇಯನ್ನು ಆಚರಿಸಿದರು. ಯೇಸುಕ್ರಿಸ್ತರನ್ನು ಶಿಲುಬೆಗೇರಿಸಿದ ಶೋಕತಪ್ತ ದಿನವಾಗಿ ಗುಡ್‍ಫ್ರೈಡೇ ಗುರುತಿಸಿಕೊಂಡಿದೆ. ಆದರೆ ಪ್ರಧಾನಿ ಮೋದಿಯವರ ಸಚಿವ ಸಂಪುಟದ ಮೂವರು ಹಿರಿಯ ಸಚಿವರು ತಮ್ಮ ಖುಷಿಯನ್ನು ಟ್ವೀಟರ್‍ನ ಮೂಲಕ ಹಂಚಿಕೊಂಡರು. ಹ್ಯಾಪಿ ಗುಡ್‍ಫ್ರೈಡೇ ಎಂದು ಗೆಳೆಯರಿಗೆ ಶುಭಾಶಯ ಕೋರಿದರು. ರೈಲ್ವೆ ಸಚಿವ ಸುರೇಶ್ ಪ್ರಭು, ಸಂಸ್ಕ್ರತಿ ಸಚಿವ ಮಹೇಶ್ ಶರ್ಮಾ, ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್.. ಹೀಗೆ ಖುಷಿಪಟ್ಟವರಲ್ಲಿ ಪ್ರಮುಖರು. ಸಚಿವರುಗಳಿಗಾದ ಈ ಸಂತಸ ಸುದ್ದಿಯಾಗುತ್ತಿದ್ದಂತೆಯೇ ಹಿರಿಯ ಕ್ಯಾಥೋಲಿಕ್ ಧರ್ಮಗುರು ಪೌಲ್ ಟೆಲಿಕಟ್ಟ್ ಆಘಾತ ವ್ಯಕ್ತಪಡಿಸಿದರು. ದುಃಖಿಸಬೇಕಾದ ಕಡೆ ಸುಖಿಸಿದವರ ತಿಳುವಳಿಕೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಈ ಸಚಿವರುಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆಗಳೂ ವ್ಯಕ್ತವಾದುವು. ಅಷ್ಟಕ್ಕೂ, ಗುಡ್‍ಫ್ರೈಡೇಯ ಹಿನ್ನೆಲೆ ಮತ್ತು ಮಹತ್ವದ ಅರಿವಿನ ಕೊರತೆಯೇ ಈ ಟ್ವೀಟ್‍ಗಳಿಗೆ ಕಾರಣ ಎಂದು ಈ ಸಚಿವರುಗಳನ್ನು ಒಂದೊಮ್ಮೆ ಸಮರ್ಥಿಸಿಕೊಳ್ಳಬಹುದಾದರೂ ಇವರು ಪ್ರತಿನಿಧಿಸುವ ಪಕ್ಷ ಮತ್ತು ಅದರ ಬೆಂಬಲಿಗರು ಈ ಹಿಂದೆ ನಡೆಸಿರುವ ಮತ್ತು ಈಗ ನಡೆಸುತ್ತಿರುವ ವಿಕೃತಿಗಳನ್ನು ಪರಿಗಣಿಸಿದರೆ ಇದನ್ನು ಅಷ್ಟು ಸರಳವಾಗಿ ನೋಡುವಂತಿಲ್ಲ. ಪ್ರಮಾದ, ಎಡವಟ್ಟು ಮುಂತಾದ ಸಾಧು ಪದಗಳನ್ನು ಬಳಸಿ ಇದನ್ನು ಲಘೂಕರಿಸುವಂತೆಯೂ ಇಲ್ಲ. ವಿಕೃತಿಯು ಅಭ್ಯಾಸವಾಗಿ ಬಿಟ್ಟರೆ ಕ್ರಮೇಣ ಅದು ಮನಸ್ಥಿತಿಯಾಗಿ ಬದಲಾಗಿ ಬಿಡುತ್ತದೆ. ಆ ಬಳಿಕ ತನಗೆ ಒಪ್ಪಿತವಲ್ಲದ ಎಲ್ಲವನ್ನೂ ಬಲವಂತದಿಂದ ದಮನಿಸುವ ಪ್ರವೃತ್ತಿ ಬೆಳೆಯುತ್ತದೆ. ಜೆ.ಎನ್.ಯು. ಪ್ರಕರಣ ಇದಕ್ಕೆ ಅತ್ಯುತ್ತಮ ಉದಾಹರಣೆ. 120 ಕೋಟಿಗಿಂತಲೂ ಅಧಿಕ ಜನರಿರುವ ದೇಶವೊಂದರಲ್ಲಿ ವೈಚಾರಿಕ ಭಿನ್ನಾಭಿಪ್ರಾಯ ಇರುವುದು ಅಸಹಜವೂ ಅಲ್ಲ, ಅಪರಾಧವೂ ಅಲ್ಲ. ವೇಮುಲ, ಕನ್ಹಯ್ಯ, ಉಮರ್ ಖಾಲಿದ್ ಮುಂತಾದವರು ಪ್ರತಿಪಾದಿಸುವ ಸಿದ್ಧಾಂತವನ್ನು ಉಳಿದೆಲ್ಲ ಭಾರತೀಯರು ಒಪ್ಪಿಕೊಳ್ಳಬೇಕೆಂದು ಯಾರೂ ಬಲವಂತಪಡಿಸುತ್ತಲೂ ಇಲ್ಲ. ಆದರೆ ಸಂವಿಧಾನಬದ್ಧ ಎಲ್ಲ ವಿಚಾರಧಾರೆಗೂ ಸಮಾನ ಗೌರವ ಮತ್ತು ಸ್ಪೇಸ್ ನೀಡಬೇಕಾದುದು ಎಲ್ಲರ ಕರ್ತವ್ಯ. ಆದರೆ ಬಿಜೆಪಿ ಮತ್ತು ಬಳಗ ಈ ಸ್ಪೇಸ್ ಅನ್ನೇ ಜನರಿಂದ ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಭಾರತ್ ಮಾತಾಕಿ ಜೈ, ದೇಶಪ್ರೇಮ-ದೇಶದ್ರೋಹ, ಗೋಮಾಂಸ, ವಂದೇಮಾತರಂ.. ಮುಂತಾದ ವಿಷಯಗಳಲ್ಲಿ ಅದು ತನ್ನ ವಿಚಾರಧಾರೆಯನ್ನು ಈ ದೇಶದ ಮುಂದೆ ವ್ಯಕ್ತಪಡಿಸಿದ್ದಷ್ಟೇ ಅಲ್ಲ, ಅದನ್ನು ಒಪ್ಪದವರನ್ನು ನಿರ್ದಯವಾಗಿ ದಮನಿಸುವ ಕ್ರೌರ್ಯವನ್ನು ಮೆರೆದಿದೆ. ಕನ್ಹಯ್ಯ, ಉಮರ್ ಖಾಲಿದ್, ಅನಿರ್ಬನ್‍ರನ್ನು ಅದು ದೇಶದ್ರೋಹದ ಹೆಸರಲ್ಲಿ ಜೈಲಿಗಟ್ಟಿತು. ಎಸ್.ಎ.ಆರ್. ಗೀಲಾನಿಯನ್ನೂ ಕಂಬಿಯೊಳಕ್ಕೆ ನೂಕಿತು. ಹಾಗಂತ, ನಿಜಕ್ಕೂ ಅವರದ್ದು ದೇಶದ್ರೋಹಿ ಕೃತ್ಯವೇ, ದೇಶದ್ರೋಹಕ್ಕಿರುವ ಮಾನದಂಡಗಳು ಏನೆಲ್ಲ.. ಎಂಬ ಬಹುಮುಖ್ಯ ಪ್ರಶ್ನೆಗೆ ಅದು ಎಲ್ಲೂ ಮುಖಾಮುಖಿಯಾಗದೇ ಭಾವನಾತ್ಮಕ ಉತ್ತರಗಳನ್ನು ಕೊಡತೊಡಗಿತು. ಇವರೆಲ್ಲ ಜೈಲಿಗೆ ಹೋದಷ್ಟೇ ಶೀಘ್ರವಾಗಿ ಹೊರಗೂ ಬಂದರು. ಇದೇ ವೇಳೆ, ಶ್ರೀಶ್ರೀ ರವಿಶಂಕರ್ ಅವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಿಸಿದರು. ಬಿಜೆಪಿಗೆ ನಿಜಕ್ಕೂ ತಾನು ಪ್ರತಿಪಾದಿಸುವ ‘ದೇಶಪ್ರೇಮಿ' ವಿಚಾರಧಾರೆಯ ಬಗ್ಗೆ ಕಳಕಳಿ ಇದ್ದಿದ್ದೇ ಆಗಿದ್ದರೆ ಮತ್ತು ದೇಶದ್ರೋಹಕ್ಕೆ ನಿರ್ದಿಷ್ಟ ವ್ಯಾಖ್ಯಾನಗಳನ್ನು ಅದು ಹೊಂದಿದ್ದೇ ಆಗಿದ್ದರೆ, ಜೈಲಿನಿಂದ ಹೊರಬಂದ ಕನ್ಹಯ್ಯನನ್ನೂ ಜೈಲಿಗೇ ಹೋಗದ ರವಿಶಂಕರ್‍ರನ್ನೂ ಸೈದ್ಧಾಂತಿಕವಾಗಿ ಮುಖಾಮುಖಿಗೊಳಿಸಿ ವಿಶ್ಲೇಷಿಸಬೇಕಿತ್ತು. ಕನ್ಹಯ್ಯ ಗುಂಪಿನ ಮೇಲೆ ಕೈಗೊಂಡ ಉಗ್ರ ಕ್ರಮಗಳನ್ನು ಯಾಕೆ ರವಿಶಂಕರ್ ಮೇಲೆ ಕೈಗೊಂಡಿಲ್ಲವೆಂಬುದಕ್ಕೆ ಸೈದ್ಧಾಂತಿಕ ಉತ್ತರಗಳನ್ನು ನೀಡಬೇಕಿತ್ತು. ಒಂದು ವೇಳೆ, ಇಂಥ ಚರ್ಚೆಗಳಿಗೆ ಪ್ರಾಮಾಣಿಕವಾಗಿ ಅದು ತೆರೆದುಕೊಳ್ಳುತ್ತಿದ್ದರೆ, ದೇಶದ್ರೋಹ ಒಂದೇ ಅಲ್ಲ, ಆಹಾರ, ಸಂಸ್ಕ್ರತಿ ಸಹಿತ ಎಲ್ಲವನ್ನೂ ಸಂವಿಧಾನದ ಆಧಾರದಲ್ಲಿ ಚರ್ಚಿಸುವುದಕ್ಕೆ ಅವಕಾಶ ಸಿಗುತ್ತಿತ್ತು. ಆದರೆ ಬಿಜೆಪಿ ಇಂಥ ಸಂದರ್ಭಗಳಲ್ಲಿ ಅತ್ಯಂತ ಬೇಜವಾಬ್ದಾರಿ ನಿಲುವುಗಳನ್ನೇ ಪ್ರದರ್ಶಿಸಿದೆ. ಅಂದಹಾಗೆ, ಗೋಸಾಗಾಟ, ಗೋಮಾಂಸ ಸೇವನೆ.. ಮುಂತಾದುವುಗಳ ಹೆಸರಲ್ಲಿ ಈ ದೇಶದಲ್ಲಾಗುತ್ತಿರುವ ಯಾವ ಹಲ್ಲೆ, ಹತ್ಯೆಗೂ ಅದು ಖಂಡನೆಯ ಪ್ರತಿಕ್ರಿಯೆ ವ್ಯಕ್ತಪಡಿಸುವುದಿಲ್ಲ. ಅದರ ಬದಲು ಅದು ಹಲ್ಲೆಕೋರರನ್ನೇ ಬೆಂಬಲಿಸುವ ಧಾಟಿಯಲ್ಲಿ ಮಾತಾಡುತ್ತದೆ. ಅನೈತಿಕ ಪೊಲೀಸ್‍ಗಿರಿಯ ಸಂದರ್ಭದಲ್ಲೂ ಅದರ ನಿಲುವು ಇದಕ್ಕಿಂತ ಭಿನ್ನವಾಗಿಲ್ಲ. ತನ್ನ ನಿಲುವನ್ನು ಬಲವಂತದಿಂದ ಜಾರಿಗೊಳಿಸುವ ಮತ್ತು ತನ್ನ ನಿಲುವಿಗೆ ಸಡ್ಡು ಹೊಡೆಯುವಂತಹ ಪ್ರಕರಣಗಳನ್ನು ನಿರ್ದಯೆಯಿಂದ ದಮನಿಸುವ ಕೆಟ್ಟ ಗುಣವೊಂದು ಅದರಲ್ಲಿದೆ. ಅದು ವೈಚಾರಿಕ ಭಿನ್ನಾಭಿಪ್ರಾಯವನ್ನು ಸಹಿಸುತ್ತಿಲ್ಲ. ದೇಶದ ಬಹುಸಂಸ್ಕ್ರತಿಯ ಬಗ್ಗೆ ಅಥವಾ ಹಿಂದೂ ಧರ್ಮದ ಸಹಿಷ್ಣುತೆಯ ಬಗ್ಗೆ ಅದು ಭಾಷಣ ಮಾಡುವುದಕ್ಕೂ ಕಾರ್ಯತಃ ಅದು ನಡಕೊಳ್ಳುವುದಕ್ಕೂ ಇರುವ ಅಂತರ ಬಹಳ ದೊಡ್ಡದು. ಇದನ್ನು ನಾವು ಕೇವಲ ದ್ವಂದ್ವ ಎಂಬ ಸಾಧು ಪದದ ಮೂಲಕ ಕರೆದು ಸುಮ್ಮನಾಗುವಂತಿಲ್ಲ. ದ್ವಂದ್ವ ನಿಲುವಿನಲ್ಲಿ ಅಸಹಿಷ್ಣುತೆಗಿಂತಲೂ ಪಲಾಯನವಾದದ ವಾಸನೆಯೇ ಹೆಚ್ಚಿರುತ್ತದೆ. ಆ ಸಂದರ್ಭದ ಇಕ್ಕಟ್ಟನ್ನು ತಪ್ಪಿಸಿಕೊಳ್ಳುವುದಕ್ಕಾಗಿ ತನ್ನದೇ ಹಿಂದಿನ ಧೋರಣೆಯನ್ನು ತ್ಯಜಿಸುವ ವಿಧಾನ ಅದು. ಬಿಜೆಪಿ ಪ್ರದರ್ಶಿಸುತ್ತಿರುವುದು ಈ ಸಂದರ್ಭ ಸಾಧಕತನ ನಿಲುವನ್ನಲ್ಲ. ಈ ನಿಲುವಿನಲ್ಲಿ ಪಲಾಯನವಾದವೂ ಇಲ್ಲ. ಅದು ಗೊತ್ತಿದ್ದೇ ಮತ್ತು ಖಚಿತತೆಯೊಂದಿಗೆಯೇ ಇಂಥ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ. ಭಿನ್ನ ವಿಚಾರಧಾರೆ ಎಂಬೊಂದು ನೆಲೆಗಟ್ಟನ್ನೇ ಬುಡಸಮೇತ ಕೀಳುವ ಅತ್ಯಂತ ಅಸಹಿಷ್ಣು ನೀತಿಯಿದು. ಈ ನೀತಿ ಎಷ್ಟು ಅಪಾಯಕಾರಿಯೆಂದರೆ ಅದು ತನ್ನನ್ನು ಸಮರ್ಥಿಸಿಕೊಳ್ಳುವುದಷ್ಟೇ ಅಲ್ಲ, ಆ ಸಮರ್ಥನೆಗೆ ಪೂರಕವಾಗಿ ಯಾವ ವಿಕೃತಿಗೂ ಮುಂದಾಗುತ್ತದೆ. ಸಂವಿಧಾನವನ್ನು ಬೇಕಾದಾಗ ಬೇಕಾದಂತೆ ಉಪಯೋಗಿಸುತ್ತದೆ. ತನ್ನ ವಿಚಾರಧಾರೆಗೆ ಸಂವಿಧಾನ ವಿರುದ್ಧವೆಂದಾದರೆ ಸಂವಿಧಾನದ ಹೆಸರೆತ್ತದೆಯೇ ದೇಶ, ಸಂಸ್ಕ್ರತಿ, ಪರಂಪರೆ, ಧರ್ಮ.. ಎಂಬಿತ್ಯಾದಿ ಪವಿತ್ರ ಪದಗಳನ್ನು ಬೇಕಾಬಿಟ್ಟಿಯಾಗಿ ಬಳಸಿ ಸಂವಿಧಾನ ಚರ್ಚೆಗೆ ಒಳಗಾಗದಂತೆ ಅಥವಾ ಇವೆಲ್ಲವೂ ಸಂವಿಧಾನದ ಹೊರಗೆ ಇತ್ಯರ್ಥವಾಗಬೇಕಾದ ವಿಷಯಗಳೆಂಬಂತೆ ಭ್ರಮೆ ಮೂಡಿಸುತ್ತದೆ. ಕನ್ಹಯ್ಯ ಮತ್ತು ಬಳಗವನ್ನು ಇವತ್ತು ಅದು ಬೇಟೆಯಾಡುತ್ತಿರುವುದು ಇದೇ ‘ಭ್ರಮಾ’ ಸಂವಿಧಾನದ ಆಧಾರದಲ್ಲಿ. ಈಗಾಗಲೇ ಇದರ ಅಪಾಯಕ್ಕೆ ಶಾರುಖ್, ಅಮೀರ್, ರಾಜ್‍ದೀಪ್ ಸರ್‍ದೇಸಾಯಿ, ಬರ್ಖಾದತ್.. ಮುಂತಾದ ಅನೇಕರು ಗುರಿಯಾಗಿದ್ದಾರೆ. ‘ತಾನೇ ಸರಿ ಇತರೆಲ್ಲರೂ ತಪ್ಪು' ಎಂಬ ಮನಸ್ಥಿತಿ ನಿಜಕ್ಕೂ ಅತ್ಯಂತ ಅಪಾಯಕಾರಿ. ವಿಕೃತಿಯೇ ವಿಚಾರಧಾರೆಯಾದರೆ, ಶೋಕಕ್ಕೂ ಸುಖಪಡಲಾಗುತ್ತದೆ. ಕ್ರೌರ್ಯವನ್ನೂ ಗೌರವಿಸಲಾಗುತ್ತದೆ. ಗುಡ್‍ಫ್ರೈಡೇಯಂದು ಸಂತಸ ಹಂಚಿಕೊಂಡಿರುವುದರಲ್ಲಿ ಪರೋಕ್ಷ
ವಾಗಿ ವ್ಯಕ್ತವಾಗುವುದೂ ಇದುವೇ.

Wednesday, 23 March 2016

ನಕಾರಾತ್ಮಕತೆಯ ಪ್ರಾಬಲ್ಯ ಮತ್ತು ಒಂದು ಸಂಶೋಧನೆ

       ಕಳೆದವಾರ ಎರಡು ಪ್ರಮುಖ ಘಟನೆಗಳು ಜರುಗಿದುವು. ಇವುಗಳಲ್ಲಿ ಒಂದು ಘಟನೆಗೆ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲು ಸಾಧ್ಯವಾದರೆ, ಇನ್ನೊಂದು ಘಟನೆ ಹತ್ತಾರು ಸುದ್ದಿಗಳ ಮಧ್ಯೆ ಕೇವಲ ಒಂದು ಸುದ್ದಿಯಾಗುವ ಭಾಗ್ಯವನ್ನಷ್ಟೇ ಕಂಡು ಸತ್ತು ಹೋಯಿತು. ಮಾರ್ಚ್ 15ರಂದು ರಾಜಸ್ಥಾನದ ಮೇವಾರ್ ವಿಶ್ವವಿದ್ಯಾನಿಲಯದಲ್ಲಿ 4 ಮಂದಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಬಲಪಂಥೀಯ ದುಷ್ಕರ್ಮಿಗಳಿಂದ ಹಲ್ಲೆ ನಡೆಯಿತು. ಇವರು ತಮ್ಮ ಹಾಸ್ಟೆಲ್ ಕೊಠಡಿಯಲ್ಲಿ ಗೋಮಾಂಸವನ್ನು ಬೇಯಿಸುತ್ತಿದ್ದರು ಎಂಬುದು ಈ ಹಲ್ಲೆಗೆ ಕಾರಣವನ್ನಾಗಿ ಕೊಡಲಾಯಿತು. ಪೊಲೀಸರು ಹಲ್ಲೆಗೊಳಗಾದ ವಿದ್ಯಾರ್ಥಿಗಳನ್ನೇ ಬಂಧಿಸಿದರು. ಮರುದಿನ ಅವರಿಗೆ ಜಾಮೀನು ನೀಡುವಾಗ, 'ಆರು ತಿಂಗಳುಗಳ ಕಾಲ ನಿಮ್ಮ ಮೇಲೆ ನಿಗಾ ಇಡಲಾಗುವುದು' ಎಂದು ಕೋರ್ಟು ಎಚ್ಚರಿಸಿತು. ಇದರ ಜೊತೆಜೊತೆಗೇ ಅಲ್ಲಿನ ಪ್ರಾಣಿ ಸಾಕಾಣಿಕಾ ಇಲಾಖೆಯಿಂದ ಹೊರಬಿದ್ದ ಸಂಶೋಧನಾ ವರದಿಯು ಆ ಇಡೀ ಘಟನೆಯು ಪೂರ್ವಗ್ರಹ ಪೀಡಿತವಾದುದು ಎಂಬುದಾಗಿ ಸಾರಿತು. ‘ಅವರು ಬೇಯಿಸುತ್ತಿದ್ದುದು ಗೋಮಾಂಸವಲ್ಲ, ಆಡಿನ ಮಾಂಸ’ ಎಂಬುದಾಗಿ ಅದು ಮಾಂಸ ಪರೀಕ್ಷೆಯ ಬಳಿಕ ಘೋಷಿಸಿತು. ಈ ಎಲ್ಲವೂ ರಾಷ್ಟ್ರಮಟ್ಟದಲ್ಲಿ ಸುದ್ದಿಗೀಡಾಯಿತು. ಟಿ.ವಿ. ಚಾನೆಲ್‍ಗಳು ಈ ಸುದ್ದಿಯನ್ನಾಧರಿಸಿ ಚರ್ಚೆಗಳನ್ನು ಏರ್ಪಡಿಸಿದುವು. ಪತ್ರಿಕೆಗಳಲ್ಲೂ ಸಾಕಷ್ಟು ಕವರೇಜ್ ಲಭ್ಯವಾದುವು. ಇದಾಗಿ ಮೂರು ದಿನಗಳ ಬಳಿಕ ಮಾರ್ಚ್ 20ರಂದು ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯದ ಮೂವರು ವಿದ್ಯಾರ್ಥಿಗಳು ತಮ್ಮ ವಿಶೇಷ ಪ್ರತಿಭೆಯನ್ನು ಪ್ರದರ್ಶಿಸಿದರು. ರಾಷ್ಟ್ರಪತಿ ಭವನ ಇದಕ್ಕೆ ಸಾಕ್ಷಿಯಾಯಿತು. ವಿಶ್ವವಿದ್ಯಾನಿಲಯಗಳಲ್ಲಿ ಆಗಿರಬಹುದಾದ ಹೊಸ ಸಂಶೋಧನೆಗಳನ್ನು ಪ್ರದರ್ಶಿಸಲು ರಾಷ್ಟ್ರಪತಿ ಭವನವು ಆಹ್ವಾನಿಸಿತ್ತು. ಅದರಂತೆ 114 ಸಂಶೋಧನೆಗಳ ಪಟ್ಟಿಯಲ್ಲಿ 6ನ್ನು ಮಾತ್ರ ಆಯ್ಕೆ ಮಾಡಲಾಗಿತ್ತು. ಐಐಟಿ ಕಾನ್ಪುರ, ಜಮ್ಮು ಕೇಂದ್ರೀಯ ವಿಶ್ವ ವಿದ್ಯಾನಿಲಯ, ಐಐಟಿ ಮದ್ರಾಸ್, ಎನ್ಐಟಿ ತಿರುಚಿನಾಪಳ್ಳಿ, ಐಐಟಿ ದೆಹಲಿ ಮತ್ತು ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯಗಳು ಈ ಪ್ರದರ್ಶನಕ್ಕೆ ಆಯ್ಕೆಯಾದುವು. ಜಾಮಿಯಾದ ಹುಮಾ ಪರ್ವೇಝï, ಫೈಝ ಜಮಾಲ್ ಮತ್ತು ಫರಾಜ್  ಖಾನ್ ಎಂಬೀ ವಿದ್ಯಾರ್ಥಿಗಳು 'ಇನ್ನೋಕಾರ್ಟ್' ಎಂಬ ಪರಿಸರ ಸ್ನೇಹಿ ತಳ್ಳುಗಾಡಿಯನ್ನು ಪ್ರದರ್ಶಿಸಿ ವಿಶೇಷ ಗೌರವಕ್ಕೆ ಪಾತ್ರರಾದರು. ಇದು ಆಹಾರ ಮಾರಾಟ ಮಾಡುವ ತಳ್ಳುಗಾಡಿ. ಇದರಲ್ಲಿ ಸೂಕ್ತ ದಾಸ್ತಾನು ವ್ಯವಸ್ಥೆಯಿದೆ. ಮೇಲೆ ಮುಚ್ಚಿಗೆಯ ವ್ಯವಸ್ಥೆ ಇದೆ. ಒಣ ಮತ್ತು ಹಸಿ ತ್ಯಾಜ್ಯವನ್ನು ಸಂಗ್ರಹಿಸಿಡಲು ಎರಡು ಪ್ರತ್ಯೇಕ ವಿಭಾಗಗಳ ಜೊತೆಗೇ ಮುಚ್ಚಿಗೆಯ ಮೇಲೆ ಸೌರ ವಿದ್ಯುತ್ ಉತ್ಪಾದಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ‘ಇನ್ನೋಕಾರ್ಟ್’ ಭಾರತದ ಬೀದಿ ಆಹಾರ ಮಾರಾಟ ಪದ್ಧತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಬಲ್ಲುದು ಎಂಬ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದೆ. ವಿವಿಯ ಆವರಣದ ರಸ್ತೆಗಳಲ್ಲಿರುವ ಕ್ಯಾಂಟೀನಿನ ಆಹಾರ ಪದಾರ್ಥಗಳ ಮಾರಾಟದಲ್ಲಿ ತೊಡಗಿಸಿ ಈ ತಳ್ಳುಗಾಡಿಯನ್ನು ಪರೀಕ್ಷಿಸುತ್ತೇವೆ ಮತ್ತು ಪೇಟೆಂಟ್‍ಗಾಗಿ ಅರ್ಜಿ ಹಾಕುತ್ತೇವೆ ಎಂದು ಈ ಉತ್ಸಾಹಿ ಮಕ್ಕಳು ಹೇಳಿಕೊಂಡಿದ್ದಾರೆ. ಆದರೆ ಈ ಸಂಶೋಧನೆಯ ಬಗ್ಗೆ ಮಾಧ್ಯಮಗಳು ಬಹುತೇಕ ಶೂನ್ಯ ಕುತೂಹಲವನ್ನು ವ್ಯಕ್ತಪಡಿಸಿದುವು. ತೀರಾ ಸಣ್ಣ ಸುದ್ದಿಯ ಗೌರವವನ್ನಷ್ಟೇ ಅವು ಇದಕ್ಕೆ ಕೊಟ್ಟವು. ಕೆಲವು ಪತ್ರಿಕೆಗಳಂತೂ ಇದಕ್ಕೆ ಸುದ್ದಿಯಾಗುವ ಭಾಗ್ಯವನ್ನೂ ಕರುಣಿಸಲಿಲ್ಲ. ಅಷ್ಟಕ್ಕೂ, ಮಾಧ್ಯಮಗಳ ಮಟ್ಟಿಗೆ ಈ ಸಂಶೋಧನೆಯಲ್ಲಿ ಸೆನ್ಸೇಷನಲ್ ಅನ್ನುವುದು ಏನೂ ಇಲ್ಲ. ಒಂದು ತಳ್ಳುಗಾಡಿ, ಮೂವರು ಮುಸ್ಲಿಮ್ ವಿದ್ಯಾರ್ಥಿಗಳು ಮತ್ತು ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾನಿಲಯ.. ಇಷ್ಟನ್ನು ಬಿಟ್ಟರೆ ಉಳಿದಂತೆ ಈ ಸುದ್ದಿ ಗೊಂಚಲಿನಲ್ಲಿ ಭಾರತ್ ಮಾತಾಕಿ ಜೈ, ಪಾಕಿಸ್ತಾನ್ ಜಿಂದಾಬಾದ್, ಖಾಕಿ ಚಡ್ಡಿ-ಕಂದು ಪ್ಯಾಂಟು, ದೇಶದ್ರೋಹ-ದೇಶಪ್ರೇಮ, ಗೋಮಾಂಸ.. ಮುಂತಾದುವುಗಳಲ್ಲಿರುವ ಆಕರ್ಷಣೆಯೇನೂ ಈ ಸಂಶೋಧನೆಯಲ್ಲಿಲ್ಲವಲ್ಲ.
  ನಿಜವಾಗಿ, ವಿವಾದಾತ್ಮಕವಲ್ಲದ ಮತ್ತು ಸಕಾರಾತ್ಮಕವಾದ ಸುದ್ದಿಗಳಿಗೆ ಪ್ರಾಮುಖ್ಯತೆಯನ್ನು ಕೊಡುವುದು ಮತ್ತು ಅವುಗಳ ಮೇಲೆ ಚರ್ಚೆ-ಸಂವಾದಗಳನ್ನು ಏರ್ಪಾಡು ಮಾಡುವುದು ದಡ್ಡತನ ಎಂದು ಕರೆಸಿಕೊಳ್ಳುವಷ್ಟು ಇವತ್ತು ಅಪ್ರಸ್ತುತ ಅನಿಸಿಕೊಳ್ಳುತ್ತಿದೆ. ರಾಷ್ಟ್ರಮಟ್ಟದಲ್ಲಿ ಇವತ್ತು ಸುದ್ದಿಯೊಂದು ಗಮನ ಸೆಳೆಯಬೇಕಾದರೆ ಅದು ಮುಸ್ಲಿಮರಿಗೆ ಸಂಬಂಧಿಸಿರಬೇಕು ಮತ್ತು ಸಂಘಪರಿವಾರ ಅದರಲ್ಲಿ ಭಾಗಿಯಾಗಿರಬೇಕು ಎಂಬ ಅಲಿಖಿತ ನಿಯಮ ಗೊತ್ತಿದ್ದೋ  ಗೊತ್ತಿಲ್ಲದೆಯೋ ಜಾರಿಯಲ್ಲಿದೆ. ಗೋಸಾಗಾಟ, ಗೋಮಾಂಸ, ದೇಶದ್ರೋಹ, ಭಯೋತ್ಪಾದನೆ ಮುಂತಾದುವುಗಳೇ ಈ ದೇಶದಲ್ಲಿ ಇವತ್ತು ಸದಾ ಬ್ರೇಕಿಂಗ್ ನ್ಯೂಸ್. ಇಲ್ಲೆಲ್ಲಾ  ಮುಸ್ಲಿಮರ ಪಾತ್ರ ಯಾವಾಗಲೂ ನಕಾರಾತ್ಮಕ. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸಿ ಅವರನ್ನು ಹಲ್ಲೆಗೋ ಹತ್ಯೆಗೋ ಒಳಪಡಿಸುವುದು ಬಲಪಂಥೀಯ ದುಷ್ಕರ್ಮಿಗಳ ತಂತ್ರಗಾರಿಕೆ. ಈ ವಿಷಯವನ್ನೆತ್ತಿಕೊಂಡು ಮಾಧ್ಯಮಗಳು ಆ ಬಳಿಕ ಚರ್ಚೆಯನ್ನೇರ್ಪಡಿಸುತ್ತವೆ. ಜಾತ್ಯತೀತವಾದಿಗಳು ಈ ಚರ್ಚೆಯಲ್ಲಿ ಭಾಗವಹಿಸುತ್ತಾರೆ. ದುಷ್ಕರ್ಮಿಗಳು ಹಸಿ ಹಸಿ ಸುಳ್ಳನ್ನು ಹೇಳಲು ಈ ಚರ್ಚಾ ವೇದಿಕೆಯನ್ನು ದುರುಪಯೋಗಿಸುತ್ತಾರೆ. ಕೊನೆಗೆ ಕೋಣ ಸಾಗಾಟವು ಗೋಸಾಗಾಟವಾಗಿ ಪರಿವರ್ತನೆಯಾಗುತ್ತದೆ. ಆಡಿನ ಮಾಂಸವು ಗೋಮಾಂಸವಾಗುತ್ತದೆ. ಹಸಿರು ಧ್ವಜವು ಪಾಕಿಸ್ತಾನದ ಧ್ವಜವಾಗಿ ಮಾರ್ಪಡುತ್ತದೆ. ಥಳಿತಕ್ಕೊಳಗಾದವರು ಅಪರಾಧಿಗಳಾಗಿಯೂ ಥಳಿಸಿದವರು ನ್ಯಾಯವಂತರಾಗಿಯೂ ಬಿಂಬಿತರಾಗುತ್ತಾರೆ. ಒಂದು ಬಗೆಯ ಕೋಮುಧ್ರುವೀಕರಣಕ್ಕೆ ಇಂಥ ಚರ್ಚೆಗಳು ಬಹುತೇಕ ಬಾರಿ ವೇದಿಕೆಯಾಗುತ್ತಿವೆಯೇ ಹೊರತು, ಸಕಾರಾತ್ಮಕ ಫಲಿತಾಂಶಗಳನ್ನು ತರುವಲ್ಲಿ ವಿಫಲವಾಗುತ್ತಿವೆಯೇನೋ ಎಂದು ಅನಿಸುತ್ತಿದೆ. ಬಹುಶಃ ಸಕಾರಾತ್ಮಕ ಸುದ್ದಿಗಳ ಮೇಲಿನ ಚರ್ಚೆಯನ್ನು ತಡೆಯುವುದಕ್ಕಾಗಿ ಉದ್ದೇಶಪೂರ್ವಕವಾಗಿಯೇ ಬಲಪಂಥೀಯರು ಇಂಥ ಘಟನೆಗಳನ್ನು ಹುಟ್ಟು ಹಾಕುತ್ತಿದ್ದಾರೋ ಎಂಬ ಅನುಮಾನವೂ ಮೂಡುತ್ತಿದೆ. ಹೀಗೆ ಮುಸ್ಲಿಮರೆಂದರೆ ನಕಾರಾತ್ಮಕತೆ, ನಕಾರಾತ್ಮಕತೆಯೆಂದರೆ ಮುಸ್ಲಿಮರು ಎಂಬೊಂದು ವಾತಾವರಣದ ಸೃಷ್ಟಿಗೆ ಒಂದು ಗುಂಪು ತೀವ್ರ ಪರಿಶ್ರಮ ನಡೆಸುತ್ತಿರುವುದರ ಮಧ್ಯೆ, ಸಕಾರಾತ್ಮಕವಾದುದನ್ನು ಚರ್ಚೆಗೆ ಎತ್ತಿಕೊಳ್ಳಬೇಕಾದ ತುರ್ತೊಂದು ಸಮಾಜದ ಮೇಲಿದೆ. ಒಂದು ಕಡೆ ಮೋದಿ ಸರಕಾರವು ಜಾಮಿಯಾ ಮಿಲ್ಲಿಯ ಮತ್ತು ಅಲೀಘಡ ವಿವಿಯ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕಿತ್ತುಕೊಳ್ಳಲು ಯತ್ನಿಸುತ್ತಿದೆ. ಈ ಕುರಿತಂತೆ ಸುಪ್ರೀಮ್ ಕೋರ್ಟಿನಲ್ಲಿಯೇ ತನ್ನ ಇಂಗಿತವನ್ನು ಅದು ವ್ಯಕ್ತಪಡಿಸಿದೆ. ಇನ್ನೊಂದು ಕಡೆ ಜಾಮಿಯಾದ ಮೂವರು ಮುಸ್ಲಿಮ್ ವಿದ್ಯಾರ್ಥಿಗಳು ದೇಶವೇ ಹೆಮ್ಮೆ ಪಡಬಹುದಾದ ಸಂಶೋಧನೆಯೊಂದನ್ನು ನಡೆಸಿದ್ದಾರೆ. ಈ ಸುದ್ದಿ ಯಾಕೆ ಮಹತ್ವಪೂರ್ಣ ಎಂದರೆ, ಮುಸ್ಲಿಮ್ ಎಂಬ ಐಡೆಂಟಿಟಿಯನ್ನೇ ದೇಶದ್ರೋಹವಾಗಿಯೋ ಅಸಹಿಷ್ಣುವಾಗಿಯೋ ಅಥವಾ ಅನುಮಾನಿತವಾಗಿಯೋ ಕಾಣಲಾಗುತ್ತಿರುವ ಈ ಹೊತ್ತಿನಲ್ಲಿ ಈ ಸಾಧನೆಯನ್ನು ಮಾಡಲಾಗಿದೆ ಎಂಬುದರಿಂದಾಗಿ. ಸಹಜ ವಾತಾವರಣದಲ್ಲಿ ಮಾಡುವ ಸಂಶೋಧನೆಗೂ ತೀರಾ ಕಲುಷಿತಗೊಂಡಿರುವ ವಾತಾವರಣದಲ್ಲಿ ಮಾಡುವ ಸಂಶೋಧನೆಗೂ ತುಂಬಾ ವ್ಯತ್ಯಾಸ ಇದೆ. ಆದ್ದರಿಂದಲೇ ಈ ಸಂಶೋಧನೆಯು ಪ್ರಾಮುಖ್ಯತೆಯನ್ನು ಪಡೆಯಬೇಕಿತ್ತು ಎಂದು ಮಾತ್ರವಲ್ಲ, ಮಾಧ್ಯಮಗಳು ಈ ಸುದ್ದಿಯ ಹಿನ್ನೆಲೆಯಲ್ಲಿ ಸಕಾರಾತ್ಮಕ ಚರ್ಚೆಯೊಂದನ್ನು ಹುಟ್ಟುಹಾಕುವುದಕ್ಕೂ ಪ್ರಯತ್ನಿಸಬೇಕಾಗಿತ್ತು ಎಂದು ಅನಿಸುವುದು. ಇಂದಿನ ಮುಸ್ಲಿಮ್ ಪ್ರತಿಕೂಲ ಪರಿಸ್ಥಿತಿಯಲ್ಲಿ ‘ಇನ್ನೋಕಾರ್ಟ್' ಸುದ್ದಿಯು ಚರ್ಚೆಗೆ ಒಳಗಾಗುತ್ತಿದ್ದರೆ ಅದು ಸಕಾರಾತ್ಮಕ ವಾತಾವರಣಕ್ಕೆ ಕಾರಣವಾಗುವುದಕ್ಕೂ ಅವಕಾಶ ಇತ್ತು. ಅಲ್ಲದೇ ಬಲಪಂಥೀಯರ ಉದ್ದೇಶವನ್ನು ವಿಫಲಗೊಳಿಸುವುದಕ್ಕೂ ಅದು ನೆರವಾಗುತ್ತಿತ್ತು. ದುರಂತ ಏನೆಂದರೆ, ಇವತ್ತು ವಿಷಯವೊಂದು ಚರ್ಚಾಸ್ಪದವಾಗಬೇಕಾದರೆ ಅದರಲ್ಲಿ ನಕಾರಾತ್ಮಕತೆ ಇರಲೇಬೇಕು ಎಂಬ ನಿಯಮವಿದೆ. ಆದ್ದರಿಂದ, ಇದನ್ನು ಮೀರುವ ಸಾಹಸ ಮಾಡಲೇಬೇಕಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಸಮಾಜ ನಕಾರಾತ್ಮಕ ರೋಗಕ್ಕೆ ತುತ್ತಾಗುವ ಸಾಧ್ಯತೆ ಇಲ್ಲದಿಲ್ಲ.

Wednesday, 16 March 2016

ಬದಲಾಗಬೇಕಾದ್ದು ಬಾಹ್ಯವಲ್ಲ, ಅಂತರಂಗ...

        ಶಿಶುವೊಂದು ಬೆಳೆಯುತ್ತಾ ಹೋದಂತೆ ಪ್ಯಾಂಪರ್ಸ್‍ನಿಂದ ಅಂಡರ್‍ವೇರ್‍ಗೆ, ಅಂಡರ್‍ವೇರ್‍ನಿಂದ ಚಡ್ಡಿಗೆ, ಚಡ್ಡಿಯಿಂದ ಪ್ಯಾಂಟ್, ಚೂಡಿದಾರ್, ಲಂಗಧಾವಣಿ, ಸೀರೆ ಅಥವಾ ಲುಂಗಿ ಇತ್ಯಾದಿ ಇತ್ಯಾದಿಗಳಿಗೆ ತನ್ನ ಉಡುಪನ್ನು ಬದಲಾಯಿಸುತ್ತಾ ಹೋಗುವುದು ಸಹಜ. ಆದ್ದರಿಂದಲೇ ಈ ಪ್ರಕ್ರಿಯೆಗೆ ಸಮಾಜ ಆಶ್ಚರ್ಯ ಪಟ್ಟದ್ದೂ ಇಲ್ಲ, ಆತಂಕದಿಂದ ನೋಡಿದ್ದೂ ಇಲ್ಲ. ಆದರೆ, ಚಡ್ಡಿಯನ್ನೋ ಪ್ಯಾಂಟನ್ನೋ ಧರಿಸಿ ಓಡಾಡಬೇಕಾದ ಪ್ರಾಯದ ಹುಡುಗನೋರ್ವ ಪ್ಯಾಂಪರ್ಸ್‍ಗೇ ಜೋತುಬಿದ್ದರೆ ಮತ್ತು ಹಠ ಹಿಡಿದು ಅದನ್ನೇ ಧರಿಸಿ ಓಡಾಡತೊಡಗಿದರೆ ಅದು ಅಸಹಜವಾಗಿ ಕಾಣುತ್ತದೆ. ಮಧ್ಯ ವಯಸ್ಕನೋರ್ವ ಚಡ್ಡಿಯನ್ನೇ ಶಾಶ್ವತ ಉಡುಪಾಗಿ ಆಯ್ಕೆ ಮಾಡಿಕೊಂಡಾಗಲೂ ಇಂಥದ್ದೊಂದು ಕುತೂಹಲ ಹುಟ್ಟುವುದಿದೆ. ಹಾಗಂತ, ಮಧ್ಯವಯಸ್ಕನ ಈ ಉಡುಪು ತಮಾಷೆ, ವ್ಯಂಗ್ಯ, ಅಪಹಾಸ್ಯಕ್ಕೆ ಒಳಗಾಗಬೇಕಾದ ಅಗತ್ಯ ಖಂಡಿತ ಅಲ್ಲ. ಆಯ್ಕೆಯ ಸ್ವಾತಂತ್ರ್ಯ ಇರುವಲ್ಲಿ ಅದನ್ನು ಗೌರವಿಸಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ. ಈ ಎಚ್ಚರಿಕೆ ಜಾಗೃತವಾಗಿರುವುದರಿಂದಲೇ ಆರೆಸ್ಸೆಸ್ ಕಳೆದ 90 ವರ್ಷಗಳಿಂದ ಸಮವಸ್ತ್ರವಾಗಿ ಪಾಲಿಸುತ್ತಾ ಬಂದಿರುವ ಖಾಕಿ ಚಡ್ಡಿಯನ್ನು ಬಹುಸಂಖ್ಯಾತ ಸಮಾಜ ತಮಾಷೆಗೆ ಬಳಸಿಕೊಂಡಿಲ್ಲ. ಕೆಲವರು ಆರೆಸ್ಸೆಸ್ಸನ್ನು ಗುರುತಿಸುವುದಕ್ಕೆ ಚಡ್ಡಿಯನ್ನು ಸಂಕೇತ ನಾಮವಾಗಿ ಬಳಕೆ ಮಾಡಿದ್ದರೂ ಚಡ್ಡಿಯ ಕಾರಣಕ್ಕಾಗಿಯೇ ಆರೆಸ್ಸೆಸ್ ಟೀಕೆಗೆ ಒಳಗಾಗಿದ್ದು ತೀರಾ ತೀರಾ ಕಡಿಮೆ. ಸಮವಸ್ತ್ರವು ಧರ್ಮ ಇಲ್ಲವೇ ಸಂಘಟನೆಗೆ ಸಂಬಂಧಿಸಿ ತೀರಾ ಖಾಸಗಿಯಾದದ್ದು. ಒಂದು ಸಂಘಟನೆ ಸಮವಸ್ತ್ರವಾಗಿ ಯಾವ ಉಡುಪನ್ನು, ಯಾವ ಬಣ್ಣವನ್ನು ಮತ್ತು ಯಾವ ಶೈಲಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೊರಗಿನಿಂದ ನಿರ್ದೇಶಿಸುವುದು ಅವುಗಳ ಆಂತರಿಕ ವಿಷಯದಲ್ಲಿ ಮಧ್ಯ ಪ್ರವೇಶಿಸಿದಂತೆ. ಉಡುಪಿನ ಉದ್ದಳತೆಯ ಬಗ್ಗೆ ಭಿನ್ನಾಭಿಪ್ರಾಯಗಳೇನೇ ಇದ್ದರೂ ಅವನ್ನು ವ್ಯಕ್ತಪಡಿಸುವುದಕ್ಕೆ ಒಂದು ಚೌಕಟ್ಟನ್ನು ಸಮಾಜ ಸದಾ ಪಾಲಿಸುತ್ತಲೇ ಬಂದಿದೆ. ಈ ಆಧಾರದಲ್ಲಿ ಹೇಳುವುದಾದರೆ, ಖಾಕಿ ಚಡ್ಡಿಯಿಂದ ಕಂದು ಬಣ್ಣದ ಪ್ಯಾಂಟ್‍ಗೆ ಆರೆಸ್ಸೆಸ್ ತನ್ನ ಸಮವಸ್ತ್ರವನ್ನು ಬದಲಿಸುವುದು ಪಕ್ಕಾ ಆಂತರಿಕ ವಿಷಯ. ಸಾರ್ವಜನಿಕವಾಗಿ ಚರ್ಚಿಸಬೇಕಾದಷ್ಟು ಮಹತ್ವಪೂರ್ಣವಲ್ಲದ್ದು ಎಂದೂ ಹೇಳಬಹುದು. ಆದರೆ ಆರೆಸ್ಸೆಸ್‍ನ ಮಟ್ಟಿಗೆ ಇಷ್ಟನ್ನೇ ಹೇಳಿ ಪೂರ್ಣ ವಿರಾಮ ಹಾಕಬಹುದೇ? ಕಳೆದ 90 ವರ್ಷಗಳಿಂದ ಅದು ಈ ದೇಶದಲ್ಲಿ ಹೇಗೆಲ್ಲ ಗುರುತಿಗೀಡಾಗಿದೆ? ದೇಶದ ಸಾಂಸ್ಕೃತಿಕ, ರಾಜಕೀಯ, ಧಾರ್ಮಿಕ ಮತ್ತಿತರ ವಿಷಯಗಳಲ್ಲಿ ಅದು ಯಾವೆಲ್ಲ ಪಾತ್ರವನ್ನು ನಿಭಾಯಿಸಿದೆ? ಸಾವರ್ಕರ್, ಗೋಲ್ವಾಲ್ಕರ್, ಹೆಗ್ಡೇವಾರ್‍ಗಳಿಂದ ಹಿಡಿದು ಈಗಿನ ಭಾಗವತ್‍ವರೆಗೆ ಅವರು ವ್ಯಕ್ತಪಡಿಸುತ್ತಾ ಬಂದ ಅಭಿಪ್ರಾಯ, ಸಿದ್ಧಾಂತ, ವಿಚಾರಗಳು ಏನು? ಇತರೆಲ್ಲ ಸಂಘಟನೆಗಳಂತೆ ಆರೆಸ್ಸೆಸ್ಸನ್ನೂ ಸಾಮಾನ್ಯ ಸಂಘಟನೆಯಾಗಿ ಕಾಣಬಹುದೇ?
  ಮುಹಮ್ಮದ್ ಅಲಿ ಜಿನ್ನಾಗಿಂತ ಮೊದಲೇ ದ್ವಿ ರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ್ದು ಆರೆಸ್ಸೆಸ್. ಈ ಕುರಿತಂತೆ ದೇಶದಲ್ಲಿ ಧಾರಾಳ ಚರ್ಚೆಗಳು ಈಗಾಗಲೇ ನಡೆದಿವೆ. ಬ್ರಿಟಿಷರೊಂದಿಗೆ ಕೈ ಜೋಡಿಸಿದ ಆರೋಪ ಸಾವರ್ಕರ್ ಮೇಲಿದೆ. ಹಿಟ್ಲರ್ ಮತ್ತು ಮುಸ್ಸೋಲಿನಿಯಿಂದ ಆರೆಸ್ಸೆಸ್ ಪ್ರಭಾವಿತವಾಗಿರುವುದನ್ನು ಮತ್ತು ಅವರದೇ ಜನಾಂಗೀಯ ಸಿದ್ಧಾಂತವನ್ನು ಅದು ಭಾರತಕ್ಕೆ ಹೊಂದಿಸಿಕೊಂಡು ಪ್ರತಿಪಾದಿಸುತ್ತಿರುವುದನ್ನು ಸಾಬೀತುಪಡಿಸುವುದಕ್ಕೆ ಪುರಾವೆಗಳ ಅಗತ್ಯವೇ ಇಲ್ಲದಷ್ಟು ಇವತ್ತು ಸ್ಪಷ್ಟವಾಗಿದೆ. ಇದರ ನಾಯಕರು ಇಟಲಿಗೆ ತೆರಲಿ ಮುಸೋಲಿನಿಯೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಆತನ ಮನುಷ್ಯ ವಿರೋಧಿ ವಿಚಾರಧಾರೆಯನ್ನು ಕಡ ತಂದು ತಮ್ಮ ಸಿದ್ಧಾಂತದಲ್ಲಿ ಅಳವಡಿಸಿಕೊಂಡಿದ್ದಾರೆ. ಗಾಂಧೀಜಿಯವರನ್ನು ಕೊಂದ ಆರೋಪವನ್ನು ಹೊತ್ತುಕೊಂಡಿರುವುದೂ ಇದೇ ಆರೆಸ್ಸೆಸ್. ಆ ಕಾರಣಕ್ಕಾಗಿಯೇ ಅದು ನಿಷೇಧಕ್ಕೂ ಒಳಪಟ್ಟಿತು. ಆರೆಸ್ಸೆಸ್‍ನ ಸ್ವಾತಂತ್ರ್ಯಪೂರ್ವ ಇತಿಹಾಸವೇ ಇಷ್ಟು ಉಜ್ವಲವಾಗಿರುವಾಗ ಇನ್ನು ಸ್ವಾತಂತ್ರ್ಯಾನಂತರದ ಇತಿಹಾಸವನ್ನು ವಿವರವಾಗಿ ಮಂಡಿಸಬೇಕಿಲ್ಲವಲ್ಲ. ಲಕ್ಷಕ್ಕಿಂತಲೂ ಅಧಿಕ ಶಾಖೆಗಳಿರುವ ಮತ್ತು 60ಕ್ಕಿಂತಲೂ ಅಧಿಕ ಉಪ ಸಂಘಟನೆಗಳನ್ನು ಹೊಂದಿರುವ ಆರೆಸ್ಸೆಸ್, ಹಿಂದೂ ರಾಷ್ಟ್ರ ಕಲ್ಪನೆಯೊಂದಿಗೆ ಹುಟ್ಟಿಕೊಂಡಿದೆ. ಈ ರಾಷ್ಟ್ರ ಕಲ್ಪನೆ ಎಷ್ಟು ಅಪಾಯಕಾರಿಯೆಂದರೆ, ಈ ಹಿಂದೂ ರಾಷ್ಟ್ರದಲ್ಲಿ ಸರ್ವರೂ ಸಮಾನರಲ್ಲ. ಮುಸ್ಲಿಮರು, ಕ್ರೈಸ್ತರೆಲ್ಲ ಇಲ್ಲಿ ದ್ವಿತೀಯ ದರ್ಜೆಯ ನಾಗರಿಕರು. ಆರ್ಯ ಜನಾಂಗೀಯ ಮೇಲ್ಮೆಯನ್ನು ಬಹಿರಂಗವಾಗಿ ಇವತ್ತು ಅದು ಪ್ರತಿಪಾದಿಸದಿದ್ದರೂ ಆಂತರಿಕವಾಗಿ ಅದರ ನಡೆ-ನುಡಿಗಳು ಅದನ್ನೇ ಬಿಂಬಿಸುತ್ತವೆ ಎಂದು ಹೇಳಲಾಗುತ್ತದೆ. ಈ ದೇಶದ ದಲಿತ, ಕೊರಗ, ದುರ್ಬಲ, ಆದಿವಾಸಿ ಜನಾಂಗಗಳ ಆರಾಧನಾ ಪದ್ಧತಿಯನ್ನು ಮತ್ತು ಆರಾಧ್ಯರನ್ನು ಅನಾಮತ್ತಾಗಿ ಆಪೋಶನ ಪಡಕೊಂಡ ಮತ್ತು ಪಡಕೊಳ್ಳುತ್ತಿರುವ ಆರೋಪವೂ ಆರೆಸ್ಸೆಸ್‍ನ ಮೇಲಿದೆ. ವರ್ಣಾಶ್ರಮವನ್ನು ವೃತ್ತಿಸೂಚಕವೆಂದು ವ್ಯಾಖ್ಯಾನಿಸುತ್ತಾ ಯಾರಿಗೆ ಬೇಕಾದರೂ ಬ್ರಾಹ್ಮಣನಾಗಬಹುದು ಎಂದು ಅದು ಸಮರ್ಥಿಸಿಕೊಳ್ಳುತ್ತದೆ. ಆದರೆ ಅದರ ಲಕ್ಷಾಂತರ ಶಾಖೆಗಳಲ್ಲಿ ಒಬ್ಬನೇ ಒಬ್ಬ ದಲಿತನನ್ನಾದರೂ ಬ್ರಾಹ್ಮಣನಾಗಿ ಪರಿವರ್ತಿಸಲಾಗಿದೆಯೇ ಎಂಬ ಪ್ರಗತಿಪರರ ಪ್ರಶ್ನೆಗೆ ಈ ವರೆಗೂ ಅದರಿಂದ ಸಮರ್ಪಕ ಉತ್ತರ ಬಂದೇ ಇಲ್ಲ. ನಾಲ್ಕೈದು ತಿಂಗಳ ಹಿಂದಷ್ಟೇ ಅದು ಮೀಸಲಾತಿಯ ವಿರುದ್ಧ ಮಾತಾಡಿತ್ತು. ದಲಿತ ಸಮುದಾಯದ ಆಹಾರ ಪದ್ಧತಿಯನ್ನು ದೈವವಿರೋಧಿಯಾಗಿ ಬಣ್ಣಿಸಿ ನಿಷೇಧ ಹೇರಲು ಒತ್ತಾಯಿಸುತ್ತಿರುವುದೂ ಈ ಸಂಘಟನೆಯೇ. ಈ ದೇಶದಲ್ಲಿ ನಡೆದ ಹೆಚ್ಚಿನೆಲ್ಲ ಹತ್ಯಾಕಾಂಡಗಳ ಕುರಿತಂತೆ ಆರೆಸ್ಸೆಸ್ಸನ್ನು ಆರೋಪಿ ದೃಷ್ಟಿಯಿಂದಲೇ ನೋಡಲಾಗುತ್ತಿದೆ. ಅದರ ಗರಡಿಯಲ್ಲಿ ಪಳಗಿದ ರಾಜಕೀಯ ಅಥವಾ ಸಾಮಾಜಿಕ ನಾಯಕರು ಪ್ರತಿ ಸಂದರ್ಭದಲ್ಲೂ ಹಿಂದೂ ಮತ್ತು ಮುಸ್ಲಿಮರನ್ನು ವಿಭಜಿಸಿಯೇ ಮಾತಾಡುತ್ತಾರೆ. ಮುಸ್ಲಿಮರನ್ನು ತುಚ್ಛೀಕರಿಸುತ್ತಾರೆ. ಸಮ್ಜೋತಾ ಎಕ್ಸ್ ಪ್ರೆಸ್, ಮಕ್ಕಾ, ಮಾಲೆಗಾಂವ್ ಮುಂತಾದ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವವರಿಗೂ ಆರೆಸ್ಸೆಸ್‍ಗೂ ನಂಟಿದೆ ಎಂದು ಅನೇಕ ಬಾರಿ ಈ ದೇಶದ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ. ಒಂದು ರೀತಿಯಲ್ಲಿ, ಆರೆಸ್ಸೆಸ್ ತನ್ನ ಹುಟ್ಟಿನಿಂದ ಈವತ್ತಿನವರೆಗೂ ಇಬ್ಬಗೆಯ ನೀತಿಯನ್ನು ಅಳವಡಿಸುತ್ತಲೇ ಬಂದಿದೆ. ಕನ್ಹಯ್ಯಾ ಕುಮಾರ್‍ನನ್ನು ದೇಶದ್ರೋಹಿ ಎಂದು ಕರೆದಿರುವ ಇದೇ ಸಂಘಟನೆ ಶ್ರೀಶ್ರೀ ರವಿಶಂಕರ್ ಅವರ 'ಪಾಕಿಸ್ತಾನ್ ಜಿಂದಾಬಾದ್'ಗೆ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ. ಅದು ನ್ಯಾಯವನ್ನು ಪ್ರತಿಪಾದಿಸುವ ಪ್ರತಿ ಸಂದರ್ಭದಲ್ಲೂ ತನ್ನವರು ಮತ್ತು ಇತರರು ಎಂಬ ಮಾನದಂಡವನ್ನು ಸದಾ ಪಾಲಿಸುತ್ತಲೇ ಬಂದಿವೆ.
ಅದು ಪ್ರತಿಪಾದಿಸುವ ದೇಶಪ್ರೇಮ, ಸಂಸ್ಕೃತಿ, ಧರ್ಮ, ನಾಗರಿಕತೆ, ಸ್ವಾತಂತ್ರ್ಯ ಮುಂತಾದ ಎಲ್ಲದಕ್ಕೂ ನಾವು ಕಲ್ಪಿಸಿಕೊಂಡಿರುವ ಮತ್ತು ಸಂವಿಧಾನ ಕೊಡಮಾಡಿರುವ ಅರ್ಥಕ್ಕಿಂತ ಭಿನ್ನವಾದದ್ದೊಂದು ಆಯಾಮವಿದೆ. ಬಾಹ್ಯನೋಟಕ್ಕೆ ಅದು ಭಾರತೀಯ ಸಂಸ್ಕೃತಿ ಎಂದು ಹೇಳುತ್ತಿದ್ದರೂ ಆಂತರಿಕವಾಗಿ ಆ ಸಂಸ್ಕೃತಿ ಪೂರ್ಣವಾಗಿ ಆರ್ಯನ್ ಸಂಸ್ಕೃತಿಯ ಕುರಿತಾಗಿರುವುದಾಗಿ ಅದರ ಒಳಹೊಕ್ಕು ಹೊರಬಂದ ನಾಯಕರು ಬಹಿರಂಗಪಡಿಸುತ್ತಿರುತ್ತಾರೆ. ಆರೆಸ್ಸೆಸ್‍ನ ಈ ಒಳಗೊಂದು ಹೊರಗೊಂದು ನೀತಿಯೇ ಅದರ ಮೇಲೆ ಸಾರ್ವಜನಿಕ ಗುಮಾನಿಯನ್ನು ಹೆಚ್ಚಿಸಿದೆಯೆಂದು ಖಂಡಿತ ಹೇಳಬಹುದು. ಆರೆಸ್ಸೆಸ್ ತೀರಾ ಸಾಧುವಲ್ಲ. ಅದು ಸರ್ವ ಸಮಾನತೆಯ ಪ್ರತಿಪಾದಕವೂ ಅಲ್ಲ. ಅದು ಸಾಂಸ್ಕೃತಿಕ ಸಂಘಟನೆಯೂ ಅಲ್ಲ. ಕಳೆದ 90 ವರ್ಷಗಳಲ್ಲಿ ಅದರ ಮೇಲೆ ಕೇಳಿ ಬಂದಿರುವ ದೂರು ಹಾಗೂ ಅದರ ಕಾರ್ಯಕರ್ತರು ಮತ್ತು ನಾಯಕರ ನಡವಳಿಕೆಗಳು ಅದು ಖಾಕಿ ಚಡ್ಡಿಯಿಂದ ಕಂದು ಬಣ್ಣಕ್ಕೆ ಸಮವಸ್ತ್ರ ಬದಲಿಸಿದಷ್ಟು ಅಹಿಂಸಾತ್ಮಕವಾದುದಲ್ಲ. ಪ್ರತಿ ಹೆಜ್ಜೆಯಲ್ಲೂ ಅದರ ಉದ್ದೇಶ ಶುದ್ಧಿಯನ್ನು ಪ್ರಶ್ನಿಸುವ ಗುರುತುಗಳಿವೆ. ಆದ್ದರಿಂದ ಆರೆಸ್ಸೆಸ್ ಖಾಕಿಯಿಂದ ಕಂದುಬಣ್ಣಕ್ಕೆ ತಿರುಗುವುದರಿಂದ ಈ ಎಲ್ಲ ಕಳಂಕಗಳು ಕಳೆದು ಹೋಗುವುದಿಲ್ಲ. ತನ್ನ ಧೋರಣೆ ಮತ್ತು ಮನುಷ್ಯ ವಿರೋಧಿ ವಿಚಾರಧಾರೆಯನ್ನು ಕೈಬಿಡದ ಹೊರತು ಉಡುಪಿನ ಬಣ್ಣ ಮತ್ತು ಉದ್ದಳತೆಯಲ್ಲಿ ರಾಜಿ ಮಾಡಿಕೊಳ್ಳುವುದರಿಂದ ಯಾವ ಪ್ರಯೋಜನವೂ ಇಲ್ಲ. ಸಂಘಟನೆಯ ಧೋರಣೆ ಬದಲಾಗದಿದ್ದರೆ ಚಡ್ಡಿಯೋ ಪ್ಯಾಂಟೋ ಖಾಕಿಯೋ ಕಂದೋ ಯಾವ ಬಣ್ಣವಾದರೇನು? ಅದರಿಂದ ಈ ದೇಶಕ್ಕೆ ಆಗುವ ಲಾಭವೇನು? ಮೊದಲು ಅದರ ಧೋರಣೆ ಬದಲಾಗಲಿ. ಬಳಿಕ ‘ಬಣ್ಣ'ವನ್ನು ಬದಲಾಯಿಸಿಕೊಳ್ಳಲಿ.

Friday, 4 March 2016

ನಾಶವಾಗಬೇಕಾದದ್ದು ಧರ್ಮವೋ?

       ಸಂಸದರೋರ್ವರ ಮತಿಗೆಟ್ಟ ಹೇಳಿಕೆಯನ್ನು ಸಂಪಾದಕೀಯಕ್ಕೆ  ವಸ್ತುವಾಗಿ ಆಯ್ಕೆ ಮಾಡಿಕೊಳ್ಳುವುದು ಉಚಿತವೋ ಅಥವಾ ಹಾಗೆ ಮಾಡುವುದು ಸಂಪಾದಕೀಯದ
ಘನತೆಗೆ ಕಳಂಕವೋ ಎಂಬ ಬಗ್ಗೆ ಒಂದಕ್ಕಿಂತ ಹೆಚ್ಚು ಬಾರಿ ಆಲೋಚಿಸಿ ಕೊನೆಗೆ ಅವರೆತ್ತಿದ ವಿಷಯವು ಅವರ ಸಡಿಲ ನಾಲಗೆಯಷ್ಟು ಹಗುರವಲ್ಲವಾದುದರಿಂದ ಆ ಬಗ್ಗೆ ಪ್ರತಿಕ್ರಿಯಿಸಲೇಬೇಕಾದ ಅಗತ್ಯ ತಲೆದೋರಿತು. ಭಯೋತ್ಪಾದನೆಗೂ ಧರ್ಮಕ್ಕೂ ನಂಟಿದೆಯೇ? ಇದ್ದರೆ ಆ ನಂಟು ಯಾವ ಬಗೆಯದು? ಅಂಥದ್ದೊಂದು ನಂಟನ್ನು ಏರ್ಪಡಿಸಿದವರು ಯಾರು? ಧಾರ್ಮಿಕ ವಿದ್ವಾಂಸರೇ, ಧರ್ಮಗ್ರಂಥಗಳೇ ಅಥವಾ ಸ್ವತಃ ಭಯೋತ್ಪಾದಕರೇ? ಅಷ್ಟಕ್ಕೂ, ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆಯವರು ಭಯೋತ್ಪಾದನೆಯನ್ನು ನೋಡುವ ಬಗೆ ಹೇಗೆ? ಬಾಂಬ್ ಸ್ಫೋಟ, ಹತ್ಯೆ, ಅತ್ಯಾಚಾರ, ಹಿಂಸೆ.. ಇತ್ಯಾದಿ ಇತ್ಯಾದಿಗಳನ್ನೇ ಅವರು ಭಯೋತ್ಪಾದನೆ ಅನ್ನುತ್ತಾರಾದರೆ, ಇವೇನು ಇವತ್ತು ಯಾವುದಾದರೊಂದು ನಿರ್ದಿಷ್ಟ ಧರ್ಮದ ಸೊತ್ತಾಗಿಯಷ್ಟೇ ಉಳಿದಿದೆಯೇ? ಹಿಂಸೆ, ಅತ್ಯಾಚಾರ, ಹತ್ಯೆ ಯಾವ ಧರ್ಮದ ಗುರುತು? ಇಸ್ಲಾಮ್‍ನದ್ದೇ, ಹಿಂದೂ ಧರ್ಮದ್ದೇ ಅಥವಾ ಕ್ರೈಸ್ತ-ಬೌದ್ಧ, ಯಹೂದಿ ಧರ್ಮದ್ದೇ? ಮೀಸಲಾತಿಯನ್ನು ಆಗ್ರಹಿಸಿ ಜಾಟ್ ಸಮುದಾಯದವರು ಕಳೆದ ವಾರ ಹರ್ಯಾಣದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ 17 ಸಾವಿರ ಮರಗಳ ಮಾರಣ ಹೋಮ ನಡೆದಿದೆ ಎಂದು ಜಿಂದ್, ಬಿವಾನಿ, ಹಿಸ್ಸಾರ್, ಜಜ್ಜಾರ್, ಸೋನಿಪತ್‍ನ ಅರಣ್ಯಾಧಿಕಾರಿಗಳು ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿದ್ದುವು. ಮರಗಳನ್ನು ಕಡಿದು ರಸ್ತೆಗೆ ಹಾಕಲಾಗಿತ್ತು. ಇದಕ್ಕಿಂತಲೂ ಭೀಭತ್ಸಕರ ಸಂಗತಿ ಏನೆಂದರೆ, ಹೀಗೆ ರಸ್ತೆಯಲ್ಲಿ ಸಿಕ್ಕಿ ಹಾಕಿಕೊಂಡ ವಾಹನಗಳಿಂದ ಅನೇಕ ಮಹಿಳೆಯರನ್ನು ಪಕ್ಕದ ಹೊಲಗಳಿಗೆ ಎತ್ತಿಕೊಂಡು ಹೋಗಿ ಅತ್ಯಾಚಾರ ನಡೆಸಲಾಗಿದೆ ಎಂಬುದು. ಅನಂತ ಕುಮಾರ್ ಹೆಗಡೆಯವರ ಪ್ರಕಾರ ಇದು ಯಾವ ಕೆಟಗರಿಯಲ್ಲಿ ಬರುತ್ತದೆ? ಈ ಕೃತ್ಯವನ್ನು ಎಸಗಿದವರ ಧರ್ಮವನ್ನು ನೋಡಿಕೊಂಡು, ‘ಆ ಧರ್ಮದ ನಾಶವೇ ಇಂಥ ಕೃತ್ಯಗಳಿಗಿರುವ ಪರಿಹಾರ’ ಎಂದು ಹೇಳಬಹುದೇ? ಹೆಗಡೆ ಅವರ ಜಾತಿಯನ್ನು ನೇಪಾಳದಲ್ಲಿ ಪ್ರತಿನಿಧಿಸುವ ‘ಮಾಧೇಶಿ’ಗಳು ಎರಡು ತಿಂಗಳುಗಳ ಕಾಲ ಭಾರತ-ನೇಪಾಳದ ಗಡಿಯಲ್ಲಿ ರಸ್ತೆ ತಡೆ ನಿರ್ಮಿಸಿದ್ದರು. ಭಾರತದಿಂದ ನೇಪಾಳಕ್ಕೆ ಆಹಾರ, ತೈಲ ಸಹಿತ ದಿನ ಬಳಕೆಯ ಪ್ರತಿಯೊಂದು ವಸ್ತುವೂ ಸರಬರಾಜಾಗುವ ಏಕೈಕ ರಸ್ತೆಯನ್ನು ಮುಚ್ಚಿದ್ದರು. ಇದರಿಂದಾಗಿ ನೇಪಾಳದ ಮಾರುಕಟ್ಟೆ ಬಹುತೇಕ ಹದಗೆಟ್ಟಿತ್ತು. ನೇಪಾಳೀಯರು ಆಹಾರ ಮತ್ತಿತರ ವಸ್ತುಗಳ ತೀವ್ರ ಕೊರತೆಯನ್ನು ಎದುರಿಸಿದರು. ಅಲ್ಲಿನ ಜನರು ಪ್ರಸಕ್ತ ಸಂವಿಧಾನಕ್ಕೆ ಬೆಂಬಲ ಸೂಚಿಸಿದುದೇ ಈ ಪ್ರತಿಭಟನೆಗೆ ಕಾರಣವಾಗಿತ್ತು. ನರೇಂದ್ರ ಮೋದಿ ಸರಕಾರದ ಪರೋಕ್ಷ ಬೆಂಬಲದಿಂದಾಗಿಯೇ ಇಷ್ಟು ದೀರ್ಘ ಅವಧಿಯ ರಸ್ತೆ ತಡೆ ನಿರ್ಮಿಸಲು ಮಾಧೇಶಿಗಳಿಗೆ ಸಾಧ್ಯವಾಗಿದೆ ಎಂದು ನೇಪಾಳ ಸರಕಾರವೇ ಆರೋಪಿಸಿತ್ತು. ಇದರ ದೃಢೀಕರಣವೆಂಬಂತೆ ಮಾಧೇಶಿ ನಾಯಕರು ಭಾರತಕ್ಕೆ ಬಂದು ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್‍ರನ್ನು ಭೇಟಿಯಾದರು. ಒಂದು ಜನತೆಯ ಮೇಲೆ ಎರಡು ತಿಂಗಳ ಕಾಲ ಆಹಾರ ಭಯೋತ್ಪಾದನೆಯನ್ನು ಹೇರಿದ ಬಗ್ಗೆ ಅನಂತ ಕುಮಾರ್ ಅವರ ನಿಲುವೇನು? ಈ ಕೃತ್ಯ ಅವರ ಪ್ರಕಾರ ಯಾವ ವಿಭಾಗದಲ್ಲಿ ಬರುತ್ತದೆ? ಮಾಧೇಶಿಗಳ ಧರ್ಮವನ್ನು ನೋಡಿಕೊಂಡು, ‘ಆ ಧರ್ಮದ ನಾಶವೇ ಇಂಥ ಭಯೋತ್ಪಾದನೆಗಿರುವ ಪರಿಹಾರ’ ಎಂದು ಹೇಳುತ್ತಾರಾ? ದಾದ್ರಿ, ಮುಝಫ್ಫರ್ ನಗರ್, ಗುಜರಾತ್‍ಗಳಲ್ಲಿ ನಡೆದಿರುವುದೇನೆಂಬುದು ಹೆಗಡೆಯವರಿಗೆ ಚೆನ್ನಾಗಿ ಗೊತ್ತು. ಅಲ್ಲಿ ಯಾವ ಬಗೆಯ ಭಯದ ವಾತಾವರಣವನ್ನು ಹುಟ್ಟು ಹಾಕಲಾಗಿತ್ತು ಮತ್ತು ಅದರ ರೂವಾರಿಗಳು ಯಾರು ಎಂಬುದನ್ನು ವಿವರಿಸಬೇಕಾದ ಅಗತ್ಯವೂ ಇಲ್ಲ. ಮಾಯಾ ಕೊಡ್ನಾನಿ, ಬಾಬು ಭಜರಂಗಿ ಸಹಿತ ಗುಜರಾತ್  ಭಯೋತ್ಪಾದನಾ ಕೃತ್ಯಗಳಲ್ಲಿ ಪಾಲುದಾರರಾದ ದೊಡ್ಡದೊಂದು ಗುಂಪು ಇವತ್ತು ಯಾವ್ಯಾವ ಜೈಲುಗಳಲ್ಲಿವೆ ಮತ್ತು ಇವರ ಬಗ್ಗೆ ನ್ಯಾಯಾಲಯಗಳು ಏನೇನು ಹೇಳಿವೆ ಎಂಬುದನ್ನೂ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸಾದ್ವಿ ಪ್ರಜ್ಞಾಸಿಂಗ್, ಪುರೋಹಿತ್, ಆಸೀಮಾನಂದರುಗಳು ಕಳೆದ ನಾಲ್ಕೈದು ವರ್ಷಗಳಿಂದ ಆರೋಪವನ್ನು ಹೊತ್ತು ಜೈಲಲ್ಲಿದ್ದಾರೆ ಎಂಬುದನ್ನು ಹೆಗಡೆಯವರು ಚೆನ್ನಾಗಿಯೇ ಬಲ್ಲರು. ಇಷ್ಟಿದ್ದೂ ಹೆಗಡೆಯವರು ತೀರಾ ಅಜ್ಞಾನಿಯಂತೆ ಮತ್ತು ಎಲ್‍ಕೆಜಿ ಮಗುವಿನಂತೆ ಮಾತಾಡಿರುವುದಕ್ಕೆ ಕಾರಣ ಏನು? ಸಿರಿಯಾ, ಇರಾಕ್, ಯಮನ್ ಮತ್ತಿತರ ಕಡೆ ನಡೆಯುತ್ತಿರುವ ಹಿಂಸೆ, ಹತ್ಯೆ, ಸಾಮೂಹಿಕ ವಲಸೆಗಳನ್ನು ನೋಡಿ ಹೆಗಡೆಯವರು ಈ ನಿರ್ಧಾರಕ್ಕೆ ಬಂದಿರುವರಾದರೆ, ತಮ್ಮ ಅರಿವಿನ ಮಟ್ಟವನ್ನು ಹೆಚ್ಚಿಸಿಕೊಳ್ಳಬೇಕಾದ ಅಗತ್ಯವಿದೆಯೆಂದು ಅವರಿಗೆ ಹೇಳಬೇಕಾಗುತ್ತದೆ. ಅರಬ್ ವಲಯದ ಹಿಂಸಾಚಾರಗಳಿಗೆ ಭೌಗೋಳಿಕವಾದ ಕಾರಣ ಇದೆ. ರಾಜ ಪ್ರಭುತ್ವದ ವಿರುದ್ಧ ಸಿಡಿದೆದ್ದ ಪ್ರಜಾ ಚಳವಳಿಯು ಕ್ರಮೇಣ ಹಳಿತಪ್ಪಿ ವಿಧ್ವಂಸಕ ಶಕ್ತಿಗಳು ಆಪೋಶನ ಪಡೆದುದರ ಫಲಿತಾಂಶ ಅದು. ಅಲ್ಲಿನ ಸಂಘರ್ಷವೇ ಗೋಜಲುಗಳ ಗುಢಾಣ. ಯಾರು ಸಾಚಾ ಯಾರು ನಕಲಿ ಎಂಬುದನ್ನು ತಕ್ಷಣಕ್ಕೆ ತೀರ್ಮಾನಿಸದಷ್ಟು ಆ ‘ರಣಾಂಗಣ’ ಮನುಷ್ಯ ವಿರೋಧಿಯಾಗಿ ಬಿಟ್ಟಿದೆ. ಬಾಹ್ಯನೋಟಕ್ಕೆ, ರಶ್ಯಾವು ಅಸದ್‍ರ ಪರ ಮತ್ತು ಐಸಿಸ್‍ನ ವಿರುದ್ಧ ಹೋರಾಡುತ್ತಿದೆ. ಅಮೇರಿಕವಾದರೋ ಅಸದ್‍ರ ವಿರುದ್ಧ ಮತ್ತು ಐಸಿಸ್‍ನೊಂದಿಗೆ ಮೃದುವಾಗಿ ವರ್ತಿಸುತ್ತಿದೆ. ಸಂಪೂರ್ಣ ಆಂತರಿಕವಾಗಿರುವ ಯಮನ್ ಸಂಘರ್ಷದಲ್ಲಿ ಸೌದಿ ಒಂದು ಪಕ್ಷವನ್ನು ಬೆಂಬಲಿಸುತ್ತಿದೆ. ಅಷ್ಟಕ್ಕೂ ಐಸಿಸ್‍ಗೆ, ಯಮನ್‍ನ ಆಡಳಿತ ವಿರೋಧಿ ಗುಂಪಿಗೆ, ಕುರ್ದ್‍ಗಳಿಗೆ, ಶಿಯಾ-ಸುನ್ನಿ ಜಗಳಕೋರರಿಗೆ ಶಸ್ತ್ರಾಸ್ತ್ರ ಸರಬರಾಜು ಎಲ್ಲಿಂದ? ಅವರ ಆದಾಯ ಮೂಲ ಯಾವುದು? ಒಂದು ರಾಷ್ಟ್ರಕ್ಕೇ ಸವಾಲು ಒಡ್ಡಬಹುದಾದಷ್ಟು ಆಧುನಿಕ ಶಸ್ತ್ರಾಗಳು ಈ ಸಾಮಾನ್ಯ ಜನರ ಗುಂಪಿಗೆ ಸರಬರಾಜು ಮಾಡುತ್ತಿರುವವರು ಯಾರು, ಅವರ ಉದ್ದೇಶವೇನು ಎಂಬುದನ್ನೆಲ್ಲ ಸಂಸದರಾಗಿರುವ ಅನಂತ ಹೆಗಡೆಯವರಿಗೆ ವಿವರಿಸಬೇಕಿಲ್ಲ. ಅರಬ್ ವಲಯ ಸಂಘರ್ಷ ಪೀಡಿತವಾಗಿರುವಷ್ಟೂ ದಿನ ಅಮೆರಿಕ ಸಹಿತ ಯುರೋಪಿಯನ್ ರಾಷ್ಟ್ರಗಳು ಸುಖವಾಗಿರುತ್ತವೆ. ಅವುಗಳ ಅರ್ಥವ್ಯವಸ್ಥೆ ಸುಸ್ಥಿತಿಯಲ್ಲಿರುತ್ತದೆ. ಶಸ್ತ್ರಾಸ್ತ್ರಗಳ ಉತ್ಪಾದನೆ ಮತ್ತು ಮಾರಾಟ ಭರ್ಜರಿಯಾಗಿ ನಡೆಯುತ್ತಿರುತ್ತದೆ. ಬಹುಶಃ ಇಸ್ರೇಲ್‍ನ್ನು ಅರಬ್ ಜಗತ್ತಿನ ನಡುವೆ ಹುಟ್ಟು ಹಾಕಿರುವುದರ ಹಿಂದಿನ ಉದ್ದೇಶ ಇದುವೇ ಇರಬೇಕು. ಎಲ್ಲಿಯವರೆಗೆ ಇಸ್ರೇಲ್‍ನ ಅಸ್ತಿತ್ವ ಇರುತ್ತದೋ ಅಲ್ಲಿಯವರೆಗೆ ಅರಬ್ ಜಗತ್ತಿನಲ್ಲಿ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ. ಇಸ್ರೇಲ್ ಪರ, ವಿರುದ್ಧ ಮತ್ತು ತಟಸ್ಥ ಎಂಬುದಾಗಿ ಅರಬ್ ಜಗತ್ತು ವಿಭಜನೆಗೊಳ್ಳುವುದು ಮತ್ತು ಆ ಕಾರಣದಿಂದಾಗಿಯೇ ಪರಸ್ಪರ ಸದಾ ಸಂದೇಹದಿಂದಲೇ ಬದುಕುವುದು ಅನಿವಾರ್ಯವಾಗುತ್ತದೆ. ಈ ವಾತಾವರಣವು ಶಸ್ತ್ರಾಸ್ತ್ರ ಖರೀದಿಗೆ ಪೈಪೋಟಿಯನ್ನು ಪ್ರಚೋದಿಸುತ್ತದೆ. ಈ ವಾತಾವರಣವನ್ನು ಒಪ್ಪದ ಮಂದಿ ಪ್ರತಿಭಟನೆಗಿಳಿಯುತ್ತಾರೆ. ಈ ಪ್ರತಿಭಟನೆಯನ್ನು ಇನ್ನಾರೋ ಹೈಜಾಕ್ ಮಾಡುತ್ತಾರೆ. ಅವರ ಕೈಗೆ ಆಧುನಿಕ ಶಸ್ತ್ರಾಸ್ತ್ರಗಳು ಬರುತ್ತವೆ. ಅಂದಹಾಗೆ, ಈ ಪ್ರಕ್ರಿಯೆಯನ್ನು ನಾವು ಅರಬ್ ಜಗತ್ತಿಗೆ ಮಾತ್ರ ಸೀಮಿತಗೊಳಿಸಬೇಕಿಲ್ಲ. ಮುಂದೊಂದು ದಿನ ಭಾರತೀಯ ಉಪಭೂಖಂಡದಲ್ಲೂ ಇಸ್ರೇಲ್‍ನಂಥ ಖೊಟ್ಟಿ ರಾಷ್ಟ್ರವೊಂದನ್ನು ಅಮೇರಿಕ ಸಹಿತ ಬಲಾಢ್ಯ ರಾಷ್ಟ್ರಗಳು ಹುಟ್ಟು ಹಾಕಬಹುದು. ಪಾಕ್‍ನ ಭಾಗವಾಗಿರುವ ಬಲೂಚಿಸ್ತಾನ ಮತ್ತು ಅದರ ವಶದಲ್ಲಿರುವ ಕಾಶ್ಮೀರವನ್ನು ಒಟ್ಟು ಸೇರಿಸಿ ಪ್ರತ್ಯೇಕ ರಾಷ್ಟ್ರ ಕಟ್ಟುವ ಯೋಜನೆ ರೂಪಿಸಬಹುದು. ಈ ಎರಡೂ ಪ್ರದೇಶಗಳು ಚೀನಾದ ಗಡಿಯನ್ನು ಹಂಚಿಕೊಂಡಿದ್ದು, ಇಂಥದ್ದೊಂದು ರಾಷ್ಟ್ರ ಅಸ್ತಿತ್ವಕ್ಕೆ ಬಂದರೆ ಭಾರತಕ್ಕೆ ಚೀನಾದ ಭೀತಿ ಕಡಿಮೆಯಾಗುತ್ತದೆ, ಚೀನಾದೊಂದಿಗೆ ಗಡಿ ಹಂಚುವಿಕೆಯೂ ತಪ್ಪುತ್ತದೆ ಎಂದು ಅದು ನಂಬಿಸಬಹುದು. ಆ ಬಳಿಕ ಈ ‘ಕೂಸ’ನ್ನು ಇಟ್ಟುಕೊಂಡು ಭಾರತ-ಪಾಕ್-ಚೀನಾಗಳ ಮಧ್ಯೆ ಸಂದೇಹವನ್ನು ಹುಟ್ಟಿಸಿ ಶಸ್ತ್ರಾಸ್ತ್ರ ಮಾರಾಟಕ್ಕೆ ಚಾಲನೆ ಕೊಡಬಹುದು. ಬಹುಶಃ ಇಂಥದ್ದೊಂದು ಸಮೀಕರಣವನ್ನು ಅನಂತ ಹೆಗಡೆಯವರು ಮಾಡಿರುವರೋ ಇಲ್ಲವೋ ಆದರೆ, ಇದು ಅಸಂಭವವಲ್ಲ. ಜಾಗತಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ನೋಡುವುದಾದರೆ ಇಂಥದ್ದೊಂದು ಸಂಭವನೀಯತೆಯನ್ನು ಉಡಾಫೆಯಿಂದ ನಿರ್ಲಕ್ಷಿಸಬೇಕಾಗಿಯೂ ಇಲ್ಲ. ಒಂದು ವೇಳೆ, ಆ ಸಂದರ್ಭದಲ್ಲಿ ಇಲ್ಲಿ ಹುಟ್ಟಿಕೊಳ್ಳಬಹುದಾದ ಪ್ರತಿಭಟನೆ ಮತ್ತು ಆ ಪ್ರತಿಭಟನೆಯನ್ನು ಶಸ್ತ್ರಾಸ್ತ್ರ ವ್ಯಾಪಾರಿಗಳು ಹೈಜಾಕ್ ಮಾಡಿ ಹಿಂಸಾತ್ಮಕಗೊಳಿಸಿದರೆ ಏನಾಗಬಹುದು? ಆ ಖರೀದಿಗೊಂಡ ಪ್ರತಿಭಟನಾಕಾರರ ಉಡುಪು, ಧಾರ್ಮಿಕ ಚಿಹ್ನೆ, ಭಾಷೆಯನ್ನು ನೋಡಿಕೊಂಡು ಅವರ ಧರ್ಮದ ಮೇಲೆ ಆ ಹಿಂಸೆಯ ಆರೋಪವನ್ನು ಹೊರಿಸಬಹುದೇ? ಅವರ ಧರ್ಮವೇ ಅದಕ್ಕೆ ಕಾರಣ ಎಂದು ಹೇಳಬಹುದೇ?
        ಹಿಂಸಾನಿರತರು ಪೈಜಾಮ, ಗಡ್ಡ ಧರಿಸಿದ್ದಾರೆಂದೂ ಅಲ್ಲಾಹು ಅಕ್ಬರ್ ಹೇಳುತ್ತಾರೆಂದೂ ವಾದಿಸಿ, ಅವರ ಕೃತ್ಯಗಳಿಗೆ ಇಸ್ಲಾಮೇ ಕಾರಣ ಎಂದು ಹೇಳುವುದು ಅತ್ಯಂತ ಬೇಜವಾಬ್ದಾರಿ ನಿಲುವಾಗುತ್ತದೆ. ಅತ್ಯಾಚಾರ ನಡೆಸುವ ಮತ್ತು ಭ್ರೂಣವನ್ನು ಕತ್ತಿಯ ಮೊನೆಗೆ ಸಿಕ್ಕಿಸಿ ಸಂಭ್ರಮಿಸುವ ವ್ಯಕ್ತಿ ‘ಹರಹರ ಮಹಾದೇವ್’ ಎಂದು ಘೋಷಿಸುವುದರಿಂದ ಅದು ಹಿಂದೂ ಧರ್ಮದ ಕೃತ್ಯವಾಗುತ್ತದೆಯೇ? ಆ ಕಾರಣಕ್ಕಾಗಿ ಹಿಂದೂ ಧರ್ಮವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬಹುದೇ?  ಆದ್ದರಿಂದ ಅನಂತ ಕುಮಾರ್ ಹೆಗಡೆಯವರ ಮಾತು ಅತ್ಯಂತ ಖಂಡನೀಯ. ಓರ್ವ ಸಂಸದರಾಗಿ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದು. ನಿಜವಾಗಿ, ನಾಶ ಮಾಡಬೇಕಾದದ್ದು ಧರ್ಮವನ್ನಲ್ಲ, ಧರ್ಮಾಂಧತೆಯನ್ನು. ಈ ಧರ್ಮಾಂಧತೆ ಎಲ್ಲ ಧರ್ಮಾನುಯಾಯಿಗಳಲ್ಲೂ ಇವೆ. ‘ಹೆಗಡೆ’ ತನ್ನ ಬಣ್ಣದ ಕನ್ನಡಕವನ್ನು ಕಳಚಿಟ್ಟು ನೋಡಲಿ.

Thursday, 25 February 2016

‘ಕಾವಲುನಾಯಿ’ಯನ್ನು ಗಲ್ಲಿಗೇರಿಸುವ ‘ಸುದ್ದಿಮನೆ’ಗಳು

ವಿಶ್ವ ದೀಪಕ್
      ‘ಕಾವಲು ನಾಯಿ’ ಎಂಬ ಗೌರವಾರ್ಹ ಪದದ ಸಕಲ ಗೌರವವನ್ನೂ ಕಿತ್ತೊಗೆದು, ತಮಾಷೆ ಮತ್ತು ವ್ಯಂಗ್ಯದ ಪ್ರತಿರೂಪವಾಗಿ ಅದನ್ನು ಮಾಧ್ಯಮಗಳು ಕುಲಗೆಡಿಸಿ ಈಗಾಗಲೇ ವರ್ಷಗಳೇ ಕಳೆದಿವೆ. ‘ಮಾಧ್ಯಮ ಪ್ರಜಾತಂತ್ರದ ನಾಲ್ಕನೇ ಆಧಾರ ಸ್ತಂಭ, ಅವು ಕಾವಲುನಾಯಿಯ ಪಾತ್ರವನ್ನು ನಿಭಾಯಿಸಬೇಕು..’ ಎಂದು ಯಾರಾದರೂ ವೇದಿಕೆಯಿಂದ ಇವತ್ತು ಕರೆ ಕೊಟ್ಟರೆ ಚಪ್ಪಾಳೆಯ ಬದಲು ವ್ಯಂಗ್ಯ ಭರಿತ ನಗುವೇ ಪ್ರತಿಕ್ರಿಯೆಯಾಗುವ ಪರಿಸ್ಥಿತಿಯಿದೆ. ನಾಯಿ ತನ್ನ ಜನ್ಮಜಾತ ಗುಣವನ್ನು ಕಳಕೊಂಡಿದೆ (ಕೆಲವೊಂದು ಅಪವಾದಗಳನ್ನು ಹೊರತುಪಡಿಸಿ). ಮಾತ್ರವಲ್ಲ, ತನ್ನ ಗುರುತಿಗೆ ತಕ್ಕುದಲ್ಲದ ಗುಣವನ್ನು ಬೆಳೆಸಿಕೊಳ್ಳುತ್ತಲೂ ಇದೆ. ಇದೀಗ ಝೀ ನ್ಯೂಸ್ ಚಾನೆಲ್‍ನ ನಿರ್ಮಾಪಕ ವಿಶ್ವ ದೀಪಕ್ ಅವರು ‘ಕಾವಲು ನಾಯಿ’ಯ ಈ ದೌರ್ಬಲ್ಯವನ್ನು ಪ್ರತಿಭಟಿಸಿ ತನ್ನ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಹಾಗಂತ, ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳಲ್ಲಿ ರಾಜೀನಾಮೆ ಮತ್ತು ಸೇರ್ಪಡೆಗಳು ಹೊಸತಲ್ಲವಾದರೂ ವಿಶ್ವ ದೀಪಕ್‍ನ ಪ್ರಕರಣ ಅವುಗಳಿಗಿಂತ ತೀರಾ ಭಿನ್ನ. ಅವರು ವೇತನವನ್ನು ತನ್ನ ರಾಜೀನಾಮೆಗೆ ಕಾರಣವಾಗಿ ಕೊಟ್ಟಿಲ್ಲ. ವೃತ್ತಿ ತಾರತಮ್ಯ, ವರ್ಣ ತಾರತಮ್ಯ ಮತ್ತು ಶೋಷಣೆಗಳಂತಹ ಸಹಜ ಕಾರಣಗಳನ್ನು ಅವರು ಪಟ್ಟಿ ಮಾಡಿಲ್ಲ. ಅವರು ವೃತ್ತಿ ಮೌಲ್ಯವನ್ನು ಕಾರಣವಾಗಿ ಕೊಟ್ಟಿದ್ದಾರೆ. ಝೀ ನ್ಯೂಸ್ ಚಾನೆಲ್‍ನ ಸುದ್ದಿ ಮನೆಯಲ್ಲಿ (Newsroom) ‘ಕಾವಲು ನಾಯಿಯ ದಫನವಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ತಾಜಾ ಉದಾಹರಣೆಯಾಗಿ ಜವಾಹರ್‍ಲಾಲ್ ನೆಹರೂ ವಿಶ್ವವಿದ್ಯಾಲಯದ (JNU) ಪ್ರಕರಣವನ್ನು ಉಲ್ಲೇಖಿಸಿದ್ದಾರೆ. ಆ ಇಡೀ ಪ್ರಕರಣವನ್ನು ಝೀ ನ್ಯೂಸ್ ಚಾನೆಲ್ ಅತ್ಯಂತ ಪಕ್ಷಪಾತಿಯಾಗಿ ಮತ್ತು ABVP ಪರವಾಗಿ ನಿರ್ಲಜ್ಜೆಯಿಂದ ತಿರುಚಿ ಪ್ರಸಾರ ಮಾಡಿದೆ ಎಂದು ಅವರು ಆರೋಪಿಸಿದ್ದಾರೆ. ಇಂಥದ್ದೊಂದು ಚಾನೆಲ್‍ನ ಭಾಗವಾಗಲು ತನ್ನ ವೃತ್ತಿ ಧರ್ಮ ಒಪ್ಪುತ್ತಿಲ್ಲ ಎಂದು ಚಾನೆಲ್‍ನ ಮುಖ್ಯ ನಿರೂಪಕ ರೋಹಿತ್ ಸರ್ದಾನರಿಗೆ ಬರೆದ ರಾಜೀನಾಮೆ ಪತ್ರದಲ್ಲಿ ಅವರು ಹೇಳಿಕೊಂಡಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿ ಪದ ಸ್ವೀಕರಿಸಿದ ಬಳಿಕ ತನ್ನ ಚಾನೆಲ್ ಹೇಗೆ ಮೋದಿ ಮೇನಿಯಾದಿಂದ ಪ್ರಭಾವಿತವಾಯಿತು ಮತ್ತು ಮೋದಿಯವರ ರಾಯಭಾರಿಯಂತೆ ಹೇಗೆ ಕೆಲಸ ಮಾಡಿತು ಎಂಬುದನ್ನೂ ಆತ ವಿವರಿಸಿದ್ದಾರೆ. ನಿಜವಾಗಿ, ವಿಶ್ವ ದೀಪಕ್‍ರ ಆರೋಪವನ್ನು ಇಂಚಿಂಚಾಗಿ ಸಾಬೀತುಪಡಿಸುವುದಕ್ಕೆ JNU ಪ್ರಕರಣವೊಂದೇ ಧಾರಾಳ ಸಾಕು. ದೆಹಲಿಯ ಪೊಲೀಸರು ಕನ್ಹರ್ಯ ಕುಮಾರ್ ವಿರುದ್ಧ FIR (ಪ್ರಥಮ ಮಾಹಿತಿ ವರದಿ) ಸಿದ್ಧಪಡಿಸಿದುದೇ ಝೀ ನ್ಯೂಸ್ ಚಾನೆಲ್‍ನ ವರದಿಯನ್ನು ಆಧರಿಸಿ! ಝೀ ನ್ಯೂಸ್ ಪ್ರಸಾರ ಮಾಡಿದ ವೀಡಿಯೋ ಕ್ಲಿಪ್ ಅನ್ನು FIRನಲ್ಲಿ ಪುರಾವೆಯಾಗಿ ಮಂಡಿಸಲಾಗಿದೆ! ಅಷ್ಟಕ್ಕೂ, ಒಂದು ನಿರ್ದಿಷ್ಟ ಟಿ.ವಿ. ಚಾನೆಲ್ ಅನ್ನು ದೆಹಲಿ ಪೊಲೀಸರು ಈ ಮಟ್ಟದಲ್ಲಿ ಆಶ್ರಯಿಸಿಕೊಂಡದ್ದೇಕೆ? JNU ವಿದ್ಯಾರ್ಥಿಗಳ ಪ್ರತಿಭಟನೆಯ ವೇಳೆ ದೆಹಲಿ ಪೊಲೀಸ್ ಇಲಾಖೆಯ ಸಾಕಷ್ಟು ಪೊಲೀಸರು ಮತ್ತು ಕಾನ್‍ಸ್ಟೇಬಲ್‍ಗಳು ಸ್ಥಳದಲ್ಲಿ ಉಪಸ್ಥಿತರಿದ್ದರು. ಅಲ್ಲಿಯ ಭಾಷಣ ಮತ್ತು ಘೋಷಣೆಗಳಿಗೆ ಅವರು ದೃಕ್‍ಸಾಕ್ಷಿಯೂ ಆಗಿದ್ದರು. ಹೀಗಿದ್ದೂ FIR ಸಿದ್ಧಪಡಿಸಲು ಝೀ ನ್ಯೂಸ್ ಚಾನೆಲ್ ಪ್ರಸಾರ ಮಾಡಿದ ಸುದ್ದಿಯನ್ನು ಪೊಲೀಸರು ಆಧಾರವಾಗಿ ಪರಿಗಣಿಸಿದ್ದೇಕೆ? ಕಾನ್‍ಸ್ಟೇಬಲ್‍ಗಳ ಮತ್ತು ಪೊಲೀಸರ ಬದಲು ಚಾನೆಲ್ ಅನ್ನು ನಂಬಲರ್ಹ ಸಾಕ್ಷವಾಗಿ ಅವರು ಗುರುತಿಸಿದ್ದೇಕೆ? ವಿಶ್ವ ದೀಪಕ್ ವ್ಯಕ್ತಪಡಿಸಿದ ಅನುಮಾನವೂ ಇದುವೇ. ಝೀ ನ್ಯೂಸ್ ಚಾನೆಲ್ ಮತ್ತು ಉನ್ನತ ಪೊಲೀಸ್ ಅಧಿಕಾರಿಗಳ ಮಧ್ಯೆ ಪೂರ್ವ ನಿರ್ಧರಿತ ತಿಳುವಳಿಕೆ ನಡೆದಿರಬಹುದೇ? ಆ ಪ್ರತಿಭಟನಾ ಸಭೆಯನ್ನು ‘ದೇಶ ವಿರೋಧಿ’ಯಾಗಿಸುವ ಹುನ್ನಾರವೊಂದಕ್ಕೆ ತೆರೆಮರೆಯಲ್ಲಿ ಸಂಚು ಏರ್ಪಟ್ಟಿರಬಹುದೇ? ನರೇಂದ್ರ ಮೋದಿಯವರು ಪ್ರಧಾನಿಯಾದಂದಿನಿಂದ ತಾನಿರುವ ‘ಸುದ್ದಿಮನೆ’ಯು ಕಾವಲು ನಾಯಿ ಹೊಣೆಗಾರಿಕೆಯಿಂದ ಹೊರಬಂದು ಮೋದಿಯ ‘ಕಾವಲು’ ಕಾಯುವ ಹೊಣೆಗಾರಿಕೆ ವಹಿಸಿಕೊಂಡದ್ದನ್ನು ನೋಡುತ್ತ ಬಂದಿರುವ ವಿಶ್ವ ದೀಪಕ್‍ನ ಈ ಅನುಮಾನ ತೀರಾ ಗಂಭೀರವಾದದ್ದು.
  ಅಂದಹಾಗೆ, ಪ್ರಜಾತಂತ್ರವನ್ನು ರಾಜಕಾರಣಿಗಳ ಕೈಗೆ ಒಪ್ಪಿಸಿ ಬಿಟ್ಟು ಸುಮ್ಮನಾದರೆ ಏನೆಲ್ಲ ಅನಾಹುತಗಳಾಗಬಹುದು ಎಂಬುದಕ್ಕೆ ತುರ್ತುಸ್ಥಿತಿಯೂ ಸೇರಿದಂತೆ ಸ್ವತಂತ್ರ ಭಾರತದಲ್ಲಿ ಅನೇಕಾರು ಉದಾಹರಣೆಗಳಿವೆ. ಹತ್ತಾರು ಹತ್ಯಾಕಾಂಡಗಳು, ಕೋಮುಗಲಭೆಗಳು ಮತ್ತು ಅದರ ನಂತರದ ಬೆಳವಣಿಗೆಗಳು ಮತ್ತೆ ಮತ್ತೆ ರಾಜಕಾರಣದ ಅಪಾಯವನ್ನು ವಿವರಿಸುತ್ತಲೇ ಇದೆ. ಇಂಥ ಸಂದರ್ಭಗಳಲ್ಲೆಲ್ಲ ನಾಗರಿಕರು ಭರವಸೆಯಾಗಿ ಆಯ್ಕೆ ಮಾಡಿಕೊಳ್ಳುವುದು ಮಾಧ್ಯಮವನ್ನು. ಅದು ಸತ್ಯ ಸುದ್ದಿಯನ್ನು ಒದಗಿಸಲಿ ಎಂದು ಜನರು ಕಾಯುತ್ತಾರೆ. ಪ್ರಭುತ್ವದ ಸುಳ್ಳುಗಳನ್ನು ಬೆತ್ತಲೆ ಮಾಡಲಿ ಎಂದು ಹಾರೈಸುತ್ತಾರೆ. ಅಷ್ಟಕ್ಕೂ, ಪ್ರಭುತ್ವಕ್ಕೆ ಹೋಲಿಸಿದರೆ ಪತ್ರಕರ್ತರು ತೀರಾ ದುರ್ಬಲರು. ಅವರಿಗೆ ಕಾವಲು ಭಟರಿಲ್ಲ. ಪೆನ್ನು, ಕ್ಯಾಮರಾಗಳೇ ಅವರ ಆಯುಧ. ಪ್ರಭುತ್ವದ ಬಂದೂಕಿನ ಎದುರು ಈ ಆಯುಧಗಳು ಏನೇನೂ ಅಲ್ಲ ಎಂಬುದು ಎಲ್ಲರಿಗೂ ಗೊತ್ತು. ಆದರೂ ಪೆನ್ನು ಮತ್ತು ಕ್ಯಾಮರಾಗಳು ಈ ದೇಶದಲ್ಲಿ ಬಂದೂಕುಗಳನ್ನು ಅನೇಕಾರು ಬಾರಿ ಮೆಟ್ಟಿ ನಿಂತಿವೆ. ಈ ಬಂದೂಕುಗಳ ಕಣ್ತಪ್ಪಿಸಿ ಪ್ರಭುತ್ವವನ್ನು ಬೆತ್ತಲೆಗೊಳಿಸುವ ಶ್ರಮ ನಡೆಸಿವೆ ಮತ್ತು ಯಶಸ್ವಿಯಾಗಿವೆ. ಆದ್ದರಿಂದಲೇ ಇವತ್ತೂ ಜನರು ರಾಜಕಾರಣಿಗಳಿಗಿಂತ ಪತ್ರಕರ್ತರನ್ನು ಹೆಚ್ಚು ನಂಬುತ್ತಾರೆ. JNU ಪ್ರಕರಣದಲ್ಲಿ BJP ಮತ್ತು ABVPಗಳು ನೀಡುತ್ತಿರುವ ಹೇಳಿಕೆಗಳು ಮತ್ತು ಉದುರಿಸುತ್ತಿರುವ ‘ದೇಶಪ್ರೇಮ’ದ ಅಣಿಮುತ್ತುಗಳನ್ನೆಲ್ಲ ಜಾಲಾಡಿ, ಒಂದೊಂದನ್ನೇ ಒಡೆದು, ಕಾಳೆಷ್ಟು-ಜೊಳ್ಳೆಷ್ಟು ಎಂದು ಪ್ರತ್ಯೇಕಿಸಿ ದೇಶವನ್ನು ಜಾಗೃತಗೊಳಿಸಿದ್ದು ಮಾಧ್ಯಮವೇ. ಮಾಧ್ಯಮ ಎಚ್ಚರಿಕೆ ಇಲ್ಲದೇ ಇರುತ್ತಿದ್ದರೆ ಇವತ್ತು ಉಮರ್ ಖಾಲಿದ್ ಪಾಕಿಸ್ತಾನಿ ಟೆರರಿಸ್ಟ್ ಆಗಿರುತ್ತಿದ್ದ. ಶೆಹ್ಲಾ ಮಾನವ ಬಾಂಬ್ ಆಗಿರುತ್ತಿದ್ದಳು. ಕನ್ಹಯ್ಯನನ್ನು ಅಫ್ಝಲ್ ಗುರುವಿನ ಸ್ಥಾನದಲ್ಲಿ ಕೂರಿಸಿ ‘ಯಾವಾಗ ಗಲ್ಲು’ ಎಂದು ರಾಜಕಾರಣಿಗಳು ಪ್ರಶ್ನಿಸುತ್ತಿದ್ದರು. ಆದರೆ BJP ಮತ್ತು ಅದರ ಬೆಂಬಲಿಗರ ಹುಸಿ ದೇಶಪ್ರೇಮ ಬಣ್ಣವನ್ನು ಮಾಧ್ಯಮದ ಒಂದು ಗುಂಪು ಪರಿಣಾಮಕಾರಿಯಾಗಿಯೇ ಬಯಲಿಗೆಳೆಯುತ್ತಿದೆ. ವಿದ್ಯಾರ್ಥಿಗಳ ಮೇಲೆ ಹೊರಿಸಲಾಗುತ್ತಿರುವ ಪ್ರತಿ ಆರೋಪಗಳನ್ನೂ ಅಧಿಕಾರಯುತವಾಗಿ ಪ್ರಶ್ನಿಸುತ್ತಿದೆ. ಈ ಬೆಳವಣಿಗೆಯನ್ನು ಖುಷಿಯಿಂದ ವೀಕ್ಷಿಸುತ್ತಿರುವ ಈ ಸಂದರ್ಭದಲ್ಲಿಯೇ ಮಾಧ್ಯಮಗಳ ಕೆಲವು ಸುದ್ದಿ ಮನೆಗಳು ಹೇಗೆ ಪ್ರಭುತ್ವದ ತುತ್ತೂರಿಗಳಾಗಿ ವರ್ತಿಸುತ್ತಿವೆ ಎಂಬುದರತ್ತ ವಿಶ್ವ ದೀಪಕ್ ಬೆಳಕು ಚೆಲ್ಲಿದ್ದಾರೆ. ಸುದ್ದಿ ಮನೆಯೊಳಗಿದ್ದು ಅಲ್ಲಿನ ಪ್ರತಿಯೊಂದು ಚಟುವಟಿಕೆಯನ್ನು ಹತ್ತಿರದಿಂದ ನೋಡುತ್ತಾ ಬೆಳೆದವರಾದ ಕಾರಣ ವಿಶ್ವದೀಪಕ್‍ರ ಮಾತನ್ನು ಮಾಧ್ಯಮ ಜಗತ್ತು ಮತ್ತು ಓದುಗ ವಲಯ ಗಂಭೀರವಾಗಿ ಸ್ವೀಕರಿಸಬೇಕಿದೆ. ನೀವು ವೀಕ್ಷಿಸುತ್ತಿರುವ ಮತ್ತು ಓದುತ್ತಿರುವ ಸುದ್ದಿಗಳು ಅಥವಾ ವೀಡಿಯೋಗಳು ಸಂಪೂರ್ಣ ಪಾರದರ್ಶಕವಾಗಿರಬೇಕಿಲ್ಲ ಎಂದವರು ಮುನ್ನೆಚ್ಚರಿಕೆ ನೀಡಿದ್ದಾರೆ. ಇದು ತೀರಾ ಕ್ಷುಲ್ಲಕವಲ್ಲ. ಮಾಧ್ಯಮ ರಂಗವು ಆಳುವವರ ‘ಹೊಗಳುಭಟ’ವಾಗಿ ಪರಿವರ್ತನೆಗೊಳ್ಳುತ್ತಿದೆ ಎಂಬುದು ಪ್ರಜಾತಂತ್ರದ ಪಾಲಿಗೆ ಅಪಾಯದ ಮುನ್ಸೂಚನೆ. ಗುಜರಾತ್ ಹತ್ಯಾಕಾಂಡದ ಸಂದರ್ಭದಲ್ಲಿ ಅಲ್ಲಿನ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳ ಮೇಲೆ ಇಂಥ ಆರೋಪ ಜೋರಾಗಿಯೇ ಕೇಳಿ ಬಂದಿತ್ತು. ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾವು ಈ ಆರೋಪವನ್ನು ದೃಢೀಕರಿಸುವಷ್ಟು ಅಲ್ಲಿನ ಮಾಧ್ಯಮ ರಂಗದ ಕಾರ್ಯನಿರ್ವಹಣೆ ಚಿಂತಾಜನಕವಾಗಿತ್ತು.
  ಪ್ರಭುತ್ವದ ಓಲೈಕೆಯಲ್ಲಿ ಸುದ್ದಿ ಮನೆಯೊಂದು ನಿರತವಾಗುತ್ತದೆಂದರೆ ಸತ್ಯದ ದಫನವಾಗಲು ಪ್ರಾರಂಭವಾಗಿದೆ ಎಂದರ್ಥ. ಈಗಾಗಲೇ ಕೆಲವು ನಿರ್ದಿಷ್ಟ ‘ಸುದ್ದಿ ಮನೆ’ಗಳು ಈ ದಫನ ಕಾರ್ಯವನ್ನು ಯಶಸ್ವಿಯಾಗಿ ಮುಗಿಸಿವೆ. ಅವುಗಳಿಗೆ ಈಗಿನ ಪ್ರಭುತ್ವ ಹೇಳುತ್ತಿರುವುದೆಲ್ಲ ಪರಮ ಪವಿತ್ರ ಸುದ್ದಿಗಳಾಗುತ್ತಿವೆ. ಅದಕ್ಕಾಗಿ ಅವು ಪುರಾವೆಗಳನ್ನು ಉತ್ಪಾದಿಸುತ್ತಿವೆ. ವಿಶ್ವದೀಪಕ್ ಈ ಬೆಳವಣಿಗೆಯನ್ನೇ ಪ್ರಶ್ನಿಸಿದ್ದಾರೆ. ಅವರ ಈ ಬಂಡಾಯವು ಸುದ್ದಿಮನೆಗಳನ್ನು ಸ್ವಚ್ಛಗೊಳಿಸುವಲ್ಲಿ ಅಥವಾ ದಫನ ಕಾರ್ಯದಲ್ಲಿ ನಿರತವಾಗಿರುವ ಸುದ್ದಿ ಮನೆಗಳನ್ನು ಎಚ್ಚರಗೊಳಿಸುವಲ್ಲಿ ಯಶಸ್ವಿಯಾಗಲಿ ಎಂದು ಹಾರೈಸೋಣ.

Thursday, 18 February 2016

ಹೆಡ್ಲಿ ವಿಚಾರಣೆ ಮತ್ತು ಕಾಡುವ ಸಂದೇಹಗಳು

       ಡೇವಿಡ್ ಹೆಡ್ಲಿ ಎಂಬುದು ಅಮೇರಿಕದ ಇನ್ನೊಂದು ಹೆಸರೋ ಎಂದು ಸಂದೇಹಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ. 2008 ನವೆಂಬರ್ 26ರಂದು (26/11) ಮುಂಬೈಯ ಮೇಲೆ ನಡೆದ ಭಯೋತ್ಪಾದನಾ ದಾಳಿಯ ಅತಿ ಪ್ರಮುಖ ಆರೋಪಿಯಾಗಿದ್ದಾನೆ ಹೆಡ್ಲಿ. ಆತ ಸದ್ಯ ಅಮೇರಿಕದ ಜೈಲಲ್ಲಿದ್ದಾನೆ. ಅಲ್ಲಿಂದಲೇ ವೀಡಿಯೋ ಕಾನ್ಫರೆನ್ಸ್ ಮೂಲಕ ಮುಂಬೈಯ ಟಾಡಾ ಹೈಕೋರ್ಟ್‍ನ ವಿಚಾರಣೆಗೆ ಒಳಗಾಗಿದ್ದಾನೆ. ದಂಗುಬಡಿಸುವ ಸಾಕ್ಷ್ಯಗಳನ್ನು ನೀಡಿದ್ದಾನೆ. ಆ ಸಾಕ್ಷ್ಯಗಳು ಎಷ್ಟು ಪ್ರಬಲವಾಗಿವೆ ಎಂದರೆ, ಯಾರೇ ಆಗಲಿ ಪಾಕಿಸ್ತಾನದೊಂದಿಗೆ ಸಂಬಂಧ ಸ್ಥಾಪಿಸುವ ಮೊದಲು ಎರಡೆರಡು ಬಾರಿ ಆಲೋಚಿಸುವಷ್ಟು. ಮುಂಬೈ ದಾಳಿಯನ್ನು ಪ್ರಾಯೋಜಿಸಿದ್ದೇ ಪಾಕಿಸ್ತಾನ ಎಂದಾತ ಹೇಳಿದ್ದಾನೆ. ಐಎಸ್‍ಐ, ಲಖ್ವಿ, ಹಫೀಝï, ಸಾಜಿದ್ ಮೀರ್, ಲಷ್ಕರೆ ತ್ವಯ್ಯಿಬ.. ಮುಂತಾದುವುಗಳ ಜೊತೆಗೆ ತನಗಿದ್ದ ನಿಕಟ ಸಂಬಂಧ ಮತ್ತು ಇವರಿಗೂ ಪಾಕ್ ಆಡಳಿತಕ್ಕೂ ನಡುವೆ ಇದ್ದ ನಂಟನ್ನು ವಿವರಿಸಿದ್ದಾನೆ. ಹೀಗೆ, 160 ಮಂದಿಯನ್ನು ಬಲಿ ಪಡೆದ ಭಯಾನಕ ಭಯೋತ್ಪಾದನಾ ಕೃತ್ಯವೊಂದರ ಮೂಲವು ಪಾಕಿಸ್ತಾನದಲ್ಲಿದೆ ಎಂದು ಅಮೇರಿಕನ್ ಜೈಲಲ್ಲಿರುವ ಅಮೇರಿಕನ್ ಪ್ರಜೆಯೊಬ್ಬ ಸಾಕ್ಷ್ಯ ನುಡಿದ ಬೆನ್ನಿಗೇ ಅಮೇರಿಕವು ಪರಮಾಣು ಸಿಡಿತಲೆಗಳನ್ನು ಹೊತ್ತೊಯ್ಯಬಲ್ಲ ಯಂತ್ರಗಳೂ ಸೇರಿದಂತೆ 700 ಮಿಲಿಯನ್ ಡಾಲರ್ ಮೌಲ್ಯದ ಯುದ್ಧೋಪಕರಣಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಸಿದ್ಧವಾಗಿದೆ. ಇದರಲ್ಲಿ ಎಫ್-16 ಮಾದರಿಯ ಯುದ್ಧ ವಿಮಾನಗಳೂ ಸೇರಿವೆ. ಏನಿದರ ಅರ್ಥ? ಉತ್ತರ ಕೊರಿಯಾ, ಇರಾನ್, ಕ್ಯೂಬಾ, ವೆನೆಝುವೇಲಾಗಳು ಒಂದಲ್ಲ ಒಂದು ರೀತಿಯಲ್ಲಿ ಅಮೇರಿಕದ ದಿಗ್ಬಂಧನಗಳಿಗೆ ಒಳಗಾಗುತ್ತಿರುವ ಈ ದಿನಗಳಲ್ಲಿ ಪಾಕಿಸ್ತಾನವು ಪುರಸ್ಕಾರಕ್ಕೆ ಒಳಗಾಗುವುದು ಯಾವುದರ ಕಾರಣದಿಂದ? ಭಾರತದ ವಿದೇಶಾಂಗ ನೀತಿಯ ವೈಫಲ್ಯಕ್ಕೆ ಇದರಲ್ಲಿ ಎಷ್ಟಂಶ ಪಾಲಿದೆ? ಕಾಂಗ್ರೆಸ್ ಸರಕಾರದ ಮೃದು ನೀತಿಯಿಂದಾಗಿ ಪಾಕ್ ಕೊಬ್ಬಿದೆ ಎಂದು ಹೇಳುತ್ತಿದ್ದ ಬಿಜೆಪಿಯು ಇದೀಗ ಅಧಿಕಾರದಲ್ಲಿದ್ದೂ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಅಮೇರಿಕಕ್ಕೆ ಭೇಟಿ ಕೊಟ್ಟೂ ಅಮೇರಿಕದ ಈ ಧೋರಣೆಗೆ ಕಾರಣಗಳೇನು? ಬಿಜೆಪಿ ಕೂಡ ಅದೇ ಕಾಂಗ್ರೆಸ್‍ನ ವಿದೇಶಾಂಗ ನೀತಿಯನ್ನೇ ಅನುಸರಿಸುತ್ತಿದೆಯೇ ಅಥವಾ ಕಾಂಗ್ರೆಸ್‍ನ ವಿದೇಶಾಂಗ ನೀತಿಯಷ್ಟೂ ಪ್ರಭಾವ ಬೀರಲು ಬಿಜೆಪಿ ವಿಫಲವಾಗಿದೆಯೇ? ನರೇಂದ್ರ ಮೋದಿಯವರ ವಿದೇಶ ಪ್ರವಾಸವು ಒಂದು ‘ಜಾಲಿ ಟ್ರಿಪ್’ ಆಗುವುದಕ್ಕಷ್ಟೇ ಸೀಮಿತವಾಗಿದೆಯೇ? ಅಮೇರಿಕವೇಕೆ ಹೆಡ್ಲಿಯ ಸಾಕ್ಷ್ಯಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ? ಭಾರತೀಯ ಮುಖ್ಯಧಾರೆಯ ಪತ್ರಿಕೆಗಳಲ್ಲಿ ಸುಮಾರು ಒಂದು ವಾರಗಳ ತನಕ ಹೆಡ್ಲಿಯ ಸಾಕ್ಷ್ಯಗಳು ಮುಖಪುಟದಲ್ಲಿ ಪ್ರಧಾನ ಸುದ್ದಿಯಾಗಿ ಪ್ರಕಟವಾಗಿವೆ. ಆಂಗ್ಲಭಾಷೆಯ ಟಿ.ವಿ. ಮಾಧ್ಯಮಗಳು ಪ್ರೈಮ್ ಟೈಮ್‍ನಲ್ಲಿ ಈ ಸಾಕ್ಷ್ಯಗಳನ್ನೆತ್ತಿಕೊಂಡು ಒಂದಕ್ಕಿಂತ ಹೆಚ್ಚು ಬಾರಿ ಚರ್ಚಿಸಿವೆ. ಇವೆಲ್ಲ ಭಾರತದಲ್ಲಿರುವ ಅಮೇರಿಕನ್ ರಾಜತಾಂತ್ರಿಕರಿಗೆ ಮತ್ತು ಅವರ ಮೂಲಕ ಅಮೇರಿಕನ್ ಆಡಳಿತಕ್ಕೆ ತಲುಪದಿರುವುದಕ್ಕೆ ಸಾಧ್ಯವೇ ಇಲ್ಲ. ‘ಅಮೇರಿಕದ ಔಷಧ ಜಾರಿ ಸಂಸ್ಥೆಯ ಅಧಿಕಾರಿ’ ಎಂಬ ಮುಖವಾಡದಲ್ಲಿ ಹೆಡ್ಲಿಯು ಭಾರತಕ್ಕೆ ಏಳೆಂಟು ಬಾರಿ ಬಂದಿದ್ದ. ಆದರೆ ಹಾಗೆ ಬಂದ ಆತ ಮುಂಬೈ ದಾಳಿಗೆ ಬೇಕಾದ ತಯಾರಿಗಳನ್ನು ನಡೆಸಿದ್ದ. ಮಾಹಿತಿಗಳನ್ನು ಸಂಗ್ರಹಿಸಿದ್ದ. ನಕಾಶೆಗಳನ್ನು ತಯಾರಿಸಿದ್ದ. ಅಲ್ಲದೇ ಮುಂಬೈ ದಾಳಿಯ ಬಳಿಕವೂ ಆತ ಭಾರತಕ್ಕೆ ಭೇಟಿ ಕೊಟ್ಟಿದ್ದಾನೆ. ಇವೆಲ್ಲವೂ ಇದೀಗ ವಿಚಾರಣೆಯ ವೇಳೆ ಬಹಿರಂಗವಾಗಿದೆ. ಹಾಗಂತ, ಅಮೇರಿಕಕ್ಕೆ ಇವೆಲ್ಲವೂ ಗೊತ್ತಿರಲಿಲ್ಲವೇ? ತನ್ನ ಪ್ರಜೆಯೊಬ್ಬ ‘Drug Enforcement Administration Informer’ ಆಗಿ ಭಾರತಕ್ಕೆ ಪದೇ ಪದೇ ತೆರಳಿ ಏನೇನು ಮಾಡುತ್ತಿದ್ದಾನೆ ಎಂಬುದನ್ನು ತಿಳಿಯಲಾರದಷ್ಟು ಅಮೇರಿಕ ದುರ್ಬಲವಾಗಿತ್ತೇ? ಲಾಡೆನ್, ಅವ್ಲಾಕಿ, ಸದ್ದಾಮ್ ಹುಸೇನ್‍ರನ್ನು ಪತ್ತೆ ಹಚ್ಚುವಷ್ಟು ಅಥವಾ ಇರಾನಿನ ಅತಿ ರಹಸ್ಯ ಅಣುಸ್ಥಾವರಗಳಲ್ಲಿ ಏನೇನು ನಡೆಯುತ್ತಿವೆ ಮತ್ತು ಎಷ್ಟು ಪ್ರಮಾಣದಲ್ಲಿ ಯುರೇನಿಯಂ ಸಂವರ್ಧನೆಯ ಕಾರ್ಯ ನಡೆದಿದೆ ಎಂದೆಲ್ಲಾ ತಿಳಿದುಕೊಳ್ಳುವಷ್ಟು ಸಮರ್ಥವಾಗಿರುವ ರಾಷ್ಟ್ರವೊಂದಕ್ಕೆ ಹೆಡ್ಲಿ ಪದೇ ಪದೇ ಭಾರತ ಮತ್ತು ಪಾಕಿಸ್ತಾನಕ್ಕೆ ಯಾಕೆ ಹೋಗುತ್ತಿದ್ದಾನೆ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವೇ? ಅಮೇರಿಕದ ಬಗ್ಗೆ ಹೀಗೆ ಹೇಳುವುದು ಇವತ್ತಿನ ದಿನಗಳಲ್ಲಿ ಹಾಸ್ಯಾಸ್ಪದವಾದೀತು. ಒಂದೋ ಅಮೇರಿಕ ಈ ಎಲ್ಲವನ್ನೂ ಹೆಡ್ಲಿಯಿಂದ ಗೊತ್ತಿದ್ದೇ ಮಾಡಿಸಿದೆ ಅಥವಾ ವೀಡಿಯೋ ಕಾನ್ಫರೆನ್ಸ್ ನ ಮೂಲಕ ಇದೀಗ ವೈಭವೀಕೃತ ಸುಳ್ಳುಗಳನ್ನು ಹಂಚಲಾಗುತ್ತಿದೆ.
  ನಿಜವಾಗಿ, ಪಾಕಿಸ್ತಾನ ಎಂಬುದು ಭಾರತೀಯರಿಗೆ ಒಂದು ರಾಷ್ಟ್ರದ ಹೆಸರಾಗಿಯಷ್ಟೇ ಉಳಿದುಕೊಂಡಿಲ್ಲ ಎಂಬುದು ಅಮೇರಿಕಕ್ಕೆ ಚೆನ್ನಾಗಿ ಗೊತ್ತು. ಭಾರತೀಯ ಚುನಾವಣಾ ಕ್ಷೇತ್ರದ ಫಲಿತಾಂಶವನ್ನು ನಿರ್ಣಯಿಸುವ ಸಾಮರ್ಥ್ಯ ಪಾಕಿಸ್ತಾನ ಎಂಬ ಹೆಸರಿಗಿದೆ. ನರೇಂದ್ರ ಮೋದಿಯವರಂತೂ ‘ಪಾಕಿಸ್ತಾನ್’ನಿಂದ ಧಾರಾಳ ಫಸಲನ್ನು ಕೊಯ್ದಿದ್ದಾರೆ. ‘ಮಿಯಾಂ ಮುಷರ್ರಫ್’ ಎಂಬ ಪದಪುಂಜವನ್ನು ಅವರು ಉತ್ಪಾದಿಸಿದ್ದಾರೆ. ಗಡಿಯಲ್ಲಿ ಯೋಧರೋರ್ವರ ತಲೆ ಉರುಳಿಸಲಾದ ಘಟನೆಯನ್ನು ಮೋದಿಯವರ ಪಕ್ಷ ರಾಜಕೀಯ ಲಾಭಕ್ಕೆ ಎತ್ತಿಕೊಂಡಿತ್ತು. ಮುಂಬೈ ದಾಳಿಗೆ ಅತ್ಯಂತ ಪ್ರಚೋದನಾತ್ಮಕ ಶೈಲಿಯಲ್ಲಿ ಅದು ಪ್ರತಿಕ್ರಿಯಿಸಿತ್ತು. ಕಾಂಗ್ರೆಸ್ ಸರಕಾರವನ್ನು ‘ಷಂಡ’ ಎಂದು ಜರೆಯಲು ಆ ಘಟನೆಯನ್ನು ಅದು ಬಳಸಿಕೊಂಡಿತ್ತು. ಇಂಥ ಪಕ್ಷವೇ ಅಧಿಕಾರಕ್ಕೇರುವುದೆಂದರೆ ಒಂದು ರೀತಿಯಲ್ಲಿ ಕೆಂಡದ ಮೇಲೆ ಕಾಲಿಟ್ಟಂತೆ. ನಿರೀಕ್ಷೆಗಳ ಭಾರವೊಂದು ಆ ಸರಕಾರದ ಮೇಲಿರುತ್ತದೆ. ಈ ಕಾರಣದಿಂದಲೇ ಈಗಿನ ಬೆಳವಣಿಗೆಗಳ ಬಗ್ಗೆ ಅನುಮಾನ ಪಡಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೇರಿಕನ್ ಆಡಳಿತದ ಮಧ್ಯೆ ಸಹಕಾರದ ಮಾತುಕತೆಗಳೇನಾದರೂ ನಡೆದಿರಬಹುದೇ? ಮುಂಬೈ ದಾಳಿಯಲ್ಲಿ ಪಾಕ್ ಕೈವಾಡದ ಕುರಿತು ಅಮೇರಿಕದಲ್ಲಿದ್ದುಕೊಂಡೇ ಹೆಡ್ಲಿಯಿಂದ ಸಾಕ್ಷ್ಯಗಳನ್ನು ಹೇಳಿಸುವುದು ಮತ್ತು ಅದಕ್ಕೆ ಬದಲಾಗಿ ಭಾರತವು ಹೆಡ್ಲಿಗೆ ಕ್ಷಮಾದಾನ ನೀಡಿ ಆತನ ಗಡೀಪಾರಿಗೆ ಒತ್ತಾಯಿಸದಿರುವುದೂ ಈ ತಿಳುವಳಿಕೆಯಲ್ಲಿ ಸೇರಿರಬಹುದೇ? ಯಾಕೆಂದರೆ, ಹೀಗೆ ಮಾಡುವುದರಿಂದ ಅಮೇರಿಕಕ್ಕೆ ಎರಡು ರೀತಿಯ ಲಾಭಗಳಿವೆ ಮತ್ತು ನರೇಂದ್ರ ಮೋದಿಯವರಿಗೆ ಒಂದು ಲಾಭವಿದೆ. ಮೋದಿಯವರ ಲಾಭ ಏನೆಂದರೆ, ಅಮೇರಿಕದಲ್ಲಿರುವ ಮುಂಬೈ ದಾಳಿಯ ಆರೋಪಿಯನ್ನೇ ವಿಚಾರಣೆಗೊಳಪಡಿಸಿದ ಚಾಣಾಕ್ಷ ಎಂಬ ಇಮೇಜ್ ಅನ್ನು ಬೆಳೆಸಿಕೊಳ್ಳಬಹುದು. ಪಾಕಿಸ್ತಾನದ ವಿರುದ್ಧ ಭಾರತದಲ್ಲಿ ಮತ್ತೊಮ್ಮೆ ಭಾವನಾತ್ಮಕ ವಾತಾವರಣವನ್ನು ಉಂಟು ಮಾಡಬಹುದು. ಹಫೀಝï ಸಈದ್, ಲಕ್ವಿ, ಹಾಮಿದ್ ಮೀರ್ ಸಹಿತ ಎಲ್ಲ ಆರೋಪಿಗಳನ್ನೂ ಭಾರತಕ್ಕೆ ಹಸ್ತಾಂತರಿಸಿ ಎಂದು ಪಾಕ್‍ಗೆ ಕರೆ ಕೊಡುತ್ತಾ ಭಾರತೀಯರ ‘ದೇಶಪ್ರೇಮ’ವನ್ನು ಬಡಿದೆಬ್ಬಿಸಬಹುದು. ಹಾಗಂತ, ಅಮೇರಿಕ ಬಯಸುವುದೂ ಇದೇ ವಾತಾವರಣವನ್ನು. ಹೆಡ್ಲಿಯಿಂದ ಸಾಕ್ಷ್ಯ ನುಡಿಸಿದರೆ ಒಂದು ಕಡೆ ಭಾರತದಲ್ಲಿ ಪಾಕ್ ವಿರೋಧಿ ಆವೇಶಗಳು ಕಾಣಿಸಿಕೊಳ್ಳುವಾಗ ಇನ್ನೊಂದು ಕಡೆ ಪಾಕ್‍ನ ಮೇಲೆಯೂ ಇದು ಒತ್ತಡವನ್ನು ಹೇರುತ್ತದೆ. ಭಾರತ ಎಲ್ಲಾದರೂ ಕಾಲು ಕೆರೆದು ಜಗಳಕ್ಕಿಳಿದರೆ ಎಂಬ ಅನುಮಾನವನ್ನು ಹುಟ್ಟಿಸುತ್ತದೆ. ಮೊದಲೇ ನರೇಂದ್ರ ಮೋದಿಯವರು ಪಾಕ್ ವಿರೋಧಿಯಾಗಿ ಗುರುತಿಸಿಕೊಂಡವರು. ಈ ಸಾಕ್ಷ್ಯದ ಕಾರಣದಿಂದಾಗಿ ಅವರು, ಅವರ ಪಕ್ಷ ಮತ್ತು ಮಾಧ್ಯಮಗಳು ಕೂಡ ಪಾಕ್‍ನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬಹುದು. ಅಂಥ ಸಂದರ್ಭದಲ್ಲಿ ಪಾಕ್ ಸ್ವರಕ್ಷಣೆಯ ಬಗ್ಗೆ ಹೆಚ್ಚೆಚ್ಚು ಚಿಂತಿಸಬಹುದು. ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿ ಅಮೇರಿಕದೊಂದಿಗೆ ಈ ಹಿಂದೆ ನಡೆಸಲಾದ ಒಪ್ಪಂದಗಳನ್ನು ಕಾರ್ಯರೂಪಕ್ಕೆ ತರಲು ಅಥವಾ ತುರ್ತಾಗಿ ಶಸ್ತ್ರಾಸ್ತ್ರಗಳನ್ನು ತರಿಸಿಕೊಳ್ಳುವ ಒಡಂಬಡಿಕೆಯನ್ನು ಮಾಡಿಕೊಳ್ಳಲು ಅದು ಮುಂದಾಗಬಹುದು. ಬಹುಶಃ ಹೆಡ್ಲಿಯ ಸಾಕ್ಷ್ಯ ಮತ್ತು ಅದರ ಬೆನ್ನಿಗೇ ಪಾಕಿಸ್ತಾನಕ್ಕೆ ಅಮೇರಿಕದಿಂದ ಯುದ್ಧೋಪಕರಣಗಳ ಮಾರಾಟದ ಹಿಂದೆ ಇಂಥದ್ದೊಂದು ತಂತ್ರ ಇದ್ದಿರಬಹುದೇ? ಹೆಡ್ಲಿಯನ್ನು ಮುಂದಿಟ್ಟು ಭಾರತ ಮತ್ತು ಪಾಕ್‍ಗಳೆರಡನ್ನೂ ಪ್ರಚೋದಿಸಿ ಪಾಕ್‍ಗೆ ಯುದ್ಧಾಸ್ತ್ರಗಳನ್ನು ಮಾರುವ ಹಾಗೂ ಭಾರತದಲ್ಲಿ ನರೇಂದ್ರ ಮೋದಿಯವರ ವರ್ಚಸ್ಸಿಗೆ ಧಕ್ಕೆಯಾಗದಂತೆ ಕಾಪಾಡುವ ಹುನ್ನಾರ ಇದರ ಹಿಂದಿರಬಹುದೇ? ಅಮೇರಿಕದ ನರಿಬುದ್ಧಿಯ ಪರಿಚಯ ಇರುವ ಯಾರೂ ಇಂಥದ್ದೊಂದು ಸಾಧ್ಯತೆಯನ್ನು ತಿರಸ್ಕರಿಸಲಾರರು.