Monday, 8 August 2016

ಮಕ್ವಾನ ಹಿಂತಿರುಗಿಸಿದ ದಲಿತ ಪ್ರಶಸ್ತಿ ಮತ್ತು ವಿಲ್ಸನ್ ರ ಮ್ಯಾಗ್ಸೇಸೆ

      ಸಫಾಯಿ ಕರ್ಮಚಾರಿ ಆಂದೋಲನ್ ಎಂಬ ಸಂಘವನ್ನು ಕಟ್ಟಿಕೊಂಡು ಮಲ ಹೊರುವ ಪದ್ಧತಿಯ ವಿರುದ್ಧ ಹೋರಾಟ ನಡೆಸಿದ್ದಕ್ಕಾಗಿ ಬೆಂಜವಾಡ ವಿಲ್ಸನ್ ಅವರು ಮ್ಯಾಗ್ಸೇಸೆ ಪುರಸ್ಕಾರಕ್ಕೆ ಆಯ್ಕೆಯಾಗಿರುವ ಸುದ್ದಿಯು ಪತ್ರಿಕೆಗಳಲ್ಲಿ ಪ್ರಕಟವಾಗುವುದಕ್ಕಿಂತ ಒಂದು ದಿನ ಮೊದಲು ಗುಜರಾತ್‍ನ ಪ್ರಮುಖ ಸಾಹಿತಿ ಅಮೃತ್‍ಲಾಲ್ ಮಕ್ವಾನಾ ಅವರು ತಮಗೆ ಗುಜರಾತ್ ಸರಕಾರ ನೀಡಿರುವ ಸಾಹಿತ್ಯ ಪ್ರಶಸ್ತಿ ಮತ್ತು 25 ಸಾವಿರ ರೂಪಾಯಿ ಮೊತ್ತವನ್ನು ಸರಕಾರಕ್ಕೆ ಹಿಂತಿರುಗಿಸಿದರು. ವಿಶೇಷ ಏನೆಂದರೆ, ವಿಲ್ಸನ್ ಮತ್ತು ಮಕ್ವಾನ ಇಬ್ಬರೂ ದಲಿತರು. ಅಷ್ಟು ಮಾತ್ರವಲ್ಲ, ಇವರಿಬ್ಬರೂ ದಲಿತ ಸಬಲೀಕರಣವನ್ನೇ ಗುರಿಯಾಗಿಸಿಕೊಂಡವರು. 2014ರಲ್ಲಿ ಗುಜರಾತ್ ಸರಕಾರವು ಉತ್ತಮ ದಲಿತ ಸಾಹಿತ್ಯ ಪುರಸ್ಕಾರಕ್ಕೆ ಮಕ್ವಾನರನ್ನು ಆಯ್ಕೆ ಮಾಡಿರುವುದಕ್ಕೆ, ರಾಜ್ಯದ ದಲಿತರ ಸಂಕಷ್ಟಭರಿತ ಜೀವನದ ಮೇಲೆ ಅವರು ಬರೆದ ಸಾಹಿತ್ಯ ಕೃತಿಯೇ ಪ್ರಮುಖ ಕಾರಣವಾಗಿತ್ತು. ಆದರೆ ಇದೀಗ ಅವರ ಆ ಕೃತಿಯನ್ನೇ ಅಣಕಿಸುವಂತೆ, ಗುಜರಾತ್‍ನಲ್ಲಿ ದಲಿತರ ಮೇಲೆ ಹಲ್ಲೆ ನಡೆದಿದೆ. ಹಾಗಂತ, ಸತ್ತ ದನದ ಚರ್ಮ ಸುಲಿದ ಕಾರಣಕ್ಕಾಗಿ ಉನಾದಲ್ಲಿ ದಲಿತ ಯುವಕರ ಮೇಲೆ ನಡೆದ ಹಲ್ಲೆ ಕೇವಲ ಮಕ್ವಾನರನ್ನು ಮಾತ್ರ ಕೆರಳಿಸಿದ್ದಲ್ಲ. ಗುಜರಾತ್‍ನಾದ್ಯಂತ ದಲಿತರನ್ನು ಬೀದಿಗಿಳಿಯುವಂತೆ ಮಾಡಿದೆ. ಸತ್ತ ದನಗಳು ಚರ್ಮ ಸುಲಿಸಿಕೊಳ್ಳದೇ ಗುಜರಾತ್‍ನಾದ್ಯಂತ ದಫನಕ್ಕೆ ಒಳಗಾಗುತ್ತಿವೆ. ದಲಿತರ ಅಸಹಕಾರದಿಂದಾಗಿ ಸುರೇಂದ್ರ ನಗರ್ ಜಿಲ್ಲೆಯೊಂದರಲ್ಲೇ ಒಂದೇ ದಿನ ಸುಮಾರು 80 ದನಗಳನ್ನು ಚರ್ಮ ಸಮೇತ ವ್ಯವಸ್ಥೆಯೇ ದಫನ ಮಾಡಬೇಕಾಗಿ ಬಂದಿದೆ. ನಿಜವಾಗಿ, ಈ ದೇಶದಲ್ಲಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ದಲಿತರು ಓರ್ವರೇ ಅಲ್ಲ. ಬಹುಶಃ, ಮುಸ್ಲಿಮರು ಈ ದೌರ್ಜನ್ಯದ ಪಟ್ಟಿಯಲ್ಲಿ ಮುಂಚೂಣಿಯಲ್ಲಿರುವ ಸಾಧ್ಯತೆಯೇ ಹೆಚ್ಚು. ಉನಾ ಘಟನೆಯ ವಾರದ ಬಳಿಕ ಮಧ್ಯಪ್ರದೇಶದಲ್ಲಿ ಇದೇ ದನದ ನೆಪದಲ್ಲಿ ಇಬ್ಬರು ಮುಸ್ಲಿಮ್ ಮಹಿಳೆಯರನ್ನು ಸಾರ್ವಜನಿಕವಾಗಿಯೇ ಥಳಿಸಲಾಯಿತು. ಇದಕ್ಕಿಂತಲೂ ಆಘಾತಕಾರಿ ಸಂಗತಿ ಏನೆಂದರೆ, ಅರೆಬಿಕ್ ಭಾಷೆ ಕಲಿಸುವುದನ್ನು ವಿರೋಧಿಸಿ ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸಂತ ಥಾಮಸ್ ಪ್ರಾಥಮಿಕ್ ಶಾಲೆಯ ಮೇಲೆ ದಾಳಿ ನಡೆಯಿತು. ತರಗತಿಗೆ ನುಗ್ಗಿ ಕೋಲಾಹಲ ಸೃಷ್ಟಿಸಲಾಯಿತು. ಇಷ್ಟಕ್ಕೂ, ಮುಸ್ಲಿಮರು ಮತ್ತು ದಲಿತರನ್ನು ಗುರಿಯಾಗಿಸಿ ಹೀಗೆ ಹತ್ಯೆ ಮತ್ತು ಹಲ್ಲೆಗಳಲ್ಲಿ ತೊಡಗಿರುವುದು ಒಂದೇ ಗುಂಪು. ಈ ಗುಂಪಿಗೂ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷಕ್ಕೂ ನೇರಾತಿನೇರ ಸಂಬಂಧ ಇದೆ. ಬಿಜೆಪಿ ತಳಮಟ್ಟದಲ್ಲಿ ಆಶ್ರಯಿಸಿಕೊಂಡಿರುವುದೇ ಈ ಗುಂಪನ್ನು. ಅದು ಈ ಗೂಂಡಾ ಗುಂಪನ್ನು ಬೆಂಬಲಿಸುತ್ತದೆ. ಜೈಲಿನಿಂದ ಬಿಡಿಸಿ ತರುತ್ತದೆ. ನ್ಯಾಯಾಲಯಗಳಲ್ಲಿ ಅವರ ಪರವಾಗಿ ವಾದಿಸುವುದಕ್ಕೆ ಸೂಕ್ತ ವ್ಯವಸ್ಥೆ ಮಾಡುತ್ತದೆ. ಇವೆಲ್ಲ ಸೂಚಿಸುವುದೇನನ್ನು? ಒಂದು ಕಡೆ ದಲಿತ-ಅಲ್ಪಸಂಖ್ಯಾತರ ಕಲ್ಯಾಣದ ಬಗ್ಗೆ ಮಾತಾಡುತ್ತಲೇ ಇನ್ನೊಂದು ಕಡೆ ಅವರ ಮೇಲಿನ ಹಲ್ಲೆಕೋರರನ್ನು ರಕ್ಷಿಸುವುದು ಯಾವುದರ ಪ್ರತೀಕ? ನಿಜವಾಗಿ, ಮಕ್ವಾನರು ತನ್ನ ಪುರಸ್ಕಾರವನ್ನು ವ್ಯವಸ್ಥೆಯ ಮುಖಕ್ಕೆ ಎಸೆದಿರುವುದಕ್ಕೆ ಬರೇ ಉನಾ ಘಟನೆ ಒಂದೇ ಕಾರಣ ಇಲ್ಲ. ಗುಜರಾತ್‍ನಲ್ಲಿ ಈ ಹಿಂದೆ ನಡೆದ ದಲಿತ ಹಲ್ಲೆ ಪ್ರಕರಣವನ್ನೂ ಅವರು ಉಲ್ಲೇಖಿಸಿದ್ದಾರೆ. ವಿಲ್ಸನ್ ತನ್ನ ಮ್ಯಾಗ್ಸೇಸೆ ಪುರಸ್ಕಾರವನ್ನು ಇಡಬೇಕಾದ ಭಾರತವೆಂಬ ಕಪಾಟು ಮನುಷ್ಯ ವಿರೋಧಿಗಳಿಂದ ಹೀಗೆ ತುಂಬಿ ಹೋಗಿದೆ ಎಂಬುದನ್ನು ಮಕ್ವಾನ ಈ ಮೂಲಕ ನೆನಪಿಸಿದ್ದಾರೆ.
      ನಿಜವಾಗಿ, ವಿಲ್ಸನ್ ಮತ್ತು ಮಕ್ವಾನ ಈ ದೇಶದ ಎರಡು ಸ್ಥಿತಿಗಳ ಪ್ರತೀಕವಾಗಿದ್ದಾರೆ. ಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾಗಿಯೂ ಅದನ್ನು ಸಂಪೂರ್ಣವಾಗಿ ಅನುಭವಿಸಲು ಸಾಧ್ಯವಿಲ್ಲದ ದುರಂತ ಸ್ಥಿತಿ ಈ ಇಬ್ಬರದು. ಮ್ಯಾಗ್ಸೇಸೆ ಪುರಸ್ಕಾರಕ್ಕೆ ವಿಲ್ಸನ್ ಆಯ್ಕೆಯಾಗಿದ್ದರೂ ಅವರ ಸಮುದಾಯ ಮಲ ಎತ್ತುವ ದೌರ್ಜನ್ಯದಿಂದ ಇನ್ನೂ ಮುಕ್ತವಾಗಿಲ್ಲ. ಅತ್ಯುತ್ತಮ ದಲಿತ ಪುರಸ್ಕಾರ ಪಡೆದ ಹೊರತೂ ಮಕ್ವಾನರ ಸಮುದಾಯ ಸತ್ತ ಪ್ರಾಣಿಯ ಚರ್ಮ ಸುಲಿಯುವ ವೃತ್ತಿಯಿಂದ ಹೊರಬಂದಿಲ್ಲ. ಈ ಎರಡೂ ವೃತ್ತಿಗಳು ತಲೆತಲಾಂತರದಿಂದ ಈ ಸಮುದಾಯದಲ್ಲೇ ಯಾಕೆ ಗಿರಕಿ ಹೊಡೆಯುತ್ತಿದೆ ಎಂಬ ಪತ್ತೆ ಕಾರ್ಯದಲ್ಲಿ ಒಂದೊಮ್ಮೆ ತೊಡಗಿದ್ದೇ ಆದರೆ, ಅಂತಿಮವಾಗಿ ನಾವು ತಲುಪುವುದು - ದಲಿತರು ಮತ್ತು ಮುಸ್ಲಿಮರ ಮೇಲೆ ಹಲ್ಲೆ ನಡೆಸುವವರನ್ನು ರಾಜಕೀಯವಾಗಿ ಸಾಕುವವರ ಅಂಗಳಕ್ಕೆ. ಮುಸ್ಲಿಮರೆಲ್ಲ ಮಾಂಸೋದ್ಯಮದಲ್ಲಿ ತೊಡಗುವುದನ್ನು ಈ ಮಂದಿ ಬಯಸುತ್ತಾರೆ. ದಲಿತರು ಮಲ ಎತ್ತುವ, ಚರ್ಮ ಸುಲಿಯುವ ಅಧಮ ಮನಸ್ಥಿತಿಯಲ್ಲೇ ಬೆಳೆಯುವುದನ್ನು ಅವರು ಇಷ್ಟಪಡುತ್ತಾರೆ. ಈ ವಾತಾವರಣವನ್ನು ಉಳಿಸಿ, ಕಾಪಾಡಲಿಕ್ಕಾಗಿ ಶ್ರಮಿಸುತ್ತಾರೆ. ಮುಸ್ಲಿಮರು ಮತ್ತು ದಲಿತರು ಉನ್ನತ ಶಿಕ್ಷಣ ಪಡೆಯುವುದನ್ನು ಬೇರೆ ಬೇರೆ ವಿಧಾನಗಳ ಮೂಲಕ ತಡೆಯುತ್ತಿರುತ್ತಾರೆ. ಸ್ಕಾರ್ಫ್‍ನ ನೆಪದಲ್ಲಿ ಒಂದು ಕಡೆ ಮುಸ್ಲಿಮ್ ಹೆಣ್ಮಕ್ಕಳ ಶಿಕ್ಷಣಕ್ಕೆ ತಡೆ ಒಡ್ಡುವಾಗ ಇನ್ನೊಂದು ಕಡೆ ನಿತ್ಯ ಕಿರುಕುಳ ಮತ್ತು ಅವಮಾನದಿಂದ ಬೇಯಿಸಿ ದಲಿತರನ್ನು ‘ವೇಮುಲ’ ಮತ್ತು ‘ಅಶ್ವತಿ’ಗೊಳಿಸಲಾಗುತ್ತದೆ. ಈ ಎರಡೂ ಸಮುದಾಯ ಇದ್ದ ಸ್ಥಿತಿಯಲ್ಲೇ ಉಳಿಯಬೇಕೆಂಬುದು ಅವರ ತಂತ್ರ. ಅವರು ಅಧಿಕಾರ ಪಡೆಯಬೇಕಾದರೆ ಹಿಂದುಳಿದ ಮುಸ್ಲಿಮರು ಇರಲೇಬೇಕು. ಈ ಹಿಂದುಳಿದವರ ಮೇಲೆ ಹಲ್ಲೆ, ದೌರ್ಜನ್ಯಗಳನ್ನು ಆಗಾಗ ನಡೆಸುತ್ತಾ, ಅವರನ್ನು ಸಂತ್ರಸ್ತ ಮನಸ್ಥಿತಿಯಲ್ಲೇ ಉಳಿಸಿಕೊಳ್ಳುತ್ತಾ, ಅದನ್ನೇ ತಮ್ಮ ಪಾಲಿನ ಸಾಧನೆಯಾಗಿ ಮತ್ತು ಈ ಸಾಧನೆಯನ್ನು ಧಾರ್ಮಿಕವಾಗಿ ಮತ್ತು ರಾಜಕೀಯವಾಗಿ ನಗದೀಕರಿಸಿಕೊಳ್ಳುವ ಅವಕಾಶ ಇರಬೇಕು. ಅಂದಹಾಗೆ, ಇಂಥ ಹೀನಕೃತ್ಯಕ್ಕೆ ಸ್ಥಿತಿವಂತ ಸಮುದಾಯ ಯಾವ ಕೊಡುಗೆಯನ್ನು ಖಂಡಿತ ನೀಡಲಾರದು. ಆದ್ದರಿಂದಲೇ, ‘ಹಿಂದುಳಿದ’ ಒಂದು ಸಮುದಾಯ ಸದಾ ಅಸ್ತಿತ್ವದಲ್ಲಿ ಇರಬೇಕಾಗುತ್ತದೆ. ದಲಿತರನ್ನು ತಲೆತಲಾಂತರದಿಂದಲೇ ಹಿಂದುಳಿದ ಮನಸ್ಥಿತಿಯಲ್ಲಿ ಉಳಿಸಿಕೊಂಡು ಬರಲಾಗಿರುವುದರಿಂದ ಅವರನ್ನು ಅದೇ ಸ್ಥಿತಿಯಲ್ಲಿ ಮತ್ತು ಅದೇ ವೃತ್ತಿಯಲ್ಲಿ ಉಳಿಸಿಕೊಳ್ಳುವುದು ಪ್ರಾಯೋಗಿಕವಾಗಿ ಹೆಚ್ಚು ಸುಲಭ. ಹೀಗೆ ಎರಡು ‘ಹಿಂದುಳಿದ’ ಸಮುದಾಯವನ್ನು ಉಳಿಸಿಕೊಂಡು ಮತ್ತು ಬಳಸಿಕೊಂಡು ಒಂದು ರಾಜಕೀಯ ಸಿದ್ಧಾಂತ ಅಧಿಕಾರದ ರುಚಿಯನ್ನು ಅನುಭವಿಸುತ್ತಿದೆ. ಅಷ್ಟಕ್ಕೂ, ಅರೆಬಿಕ್ ಅನ್ನು ಒಂದು ಭಾಷೆಯಾಗಿ ಶಾಲೆಯಲ್ಲಿ ಕಲಿಸಬಾರದೆಂದು ಆಗ್ರಹಿಸಿ ಈ ದೇಶದ ಇನ್ನೆಲ್ಲೂ ಈ ವರೆಗೂ ದಾಳಿ ನಡೆದಿಲ್ಲ. ದಕ್ಷಿಣ ಕನ್ನಡದಲ್ಲಿ ಇದೀಗ ಅರೆಬಿಕ್‍ನ ಹೆಸರಲ್ಲಿ ಮೊಟ್ಟಮೊದಲ ದಾಳಿ ನಡೆದಿದೆ. ಬಹುಶಃ, ಮುಸ್ಲಿಮರನ್ನು ಸದಾ ಅಪರಾಧಿಗಳ ಸ್ಥಾನದಲ್ಲಿ ಕೂರಿಸುವುದಕ್ಕೆ ವಿಷಯಗಳ ಕೊರತೆಯೇನೂ ಇಲ್ಲ ಎಂಬುದನ್ನು ಸಾರಿದ ವಿಕ್ಷಣ ಸಂದರ್ಭವೂ ಇದುವೇ. ಈ ವರೆಗೆ ಗೋವು, ಮದ್ರಸ, ಭಯೋತ್ಪಾದನೆ, ಸ್ಕಾರ್ಫ್...  ಮುಂತಾದುವುಗಳನ್ನು ಈ ಉದ್ದೇಶಕ್ಕಾಗಿ ಬಳಸಲಾಗುತ್ತಿತ್ತು. ಇದೀಗ ಅರೆಬಿಕ್. ಹಾಗಂತ ಅರೆಬಿಕ್ ಎಂಬುದು ಫ್ರೆಂಚ್, ಜರ್ಮನ್, ಇಂಗ್ಲಿಷ್‍ನಂತೆ ಕೇವಲ ಒಂದು ಸಂವಹನ ಮಾಧ್ಯಮವೇ ಹೊರತು ಬೇರೇನೂ ಅಲ್ಲ. ದಾಳಿಗೊಳಗಾದ ಶಾಲೆಯಲ್ಲಿ ಅರೆಬಿಕ್‍ನಂತೆಯೇ ಫ್ರೆಂಚ್ ಮತ್ತು ಇಂಗ್ಲಿಷನ್ನೂ ಕಲಿಸಲಾಗುತ್ತಿತ್ತು. ದಾಳಿಕೋರರ ಉದ್ದೇಶವೇನು ಎಂಬುದನ್ನು ಇದುವೇ ಸ್ಪಷ್ಟಪಡಿಸುತ್ತದೆ. ಅವರು ಅರೆಬಿಕ್‍ನ ವಿರೋಧಿಗಳಲ್ಲ. ಅವರು ಮುಸ್ಲಿಮರ ವಿರೋಧಿಗಳು. ಯಾವುದಾದರೊಂದು ರೀತಿಯಲ್ಲಿ ಮುಸ್ಲಿಮರನ್ನು ತಪ್ಪಿತಸ್ಥರಂತೆ ಮತ್ತು ತಿರಸ್ಕೃತ ಸಮುದಾಯದಂತೆ ನಡೆಸಿಕೊಳ್ಳುತ್ತಾ ಸಂತ್ರಸ್ತ ವಾತಾವರಣವೊಂದು ಈ ಸಮುದಾಯದಲ್ಲಿ ನೆಲೆಸಿರಬೇಕೆಂಬುದು ಅವರ ಮುಖ್ಯ ಗುರಿ. ದಲಿತರು ಮಲದ ಗುಂಡಿ ಮತ್ತು ಚರ್ಮದ ಕೊಟ್ಟಿಗೆಯಲ್ಲೇ ಜೀವ ತೇದು ತೇದು ಕೊನೆಯುಸಿರೆಳೆಯಬೇಕೆಂಬುದೂ ಅವರದೇ ಮಹದಾಸೆ. ನಿಜವಾಗಿ, ಅವರ ರಾಜಕೀಯ ಸಿದ್ಧಾಂತದ ಅಳಿವು-ಉಳಿವು ಈ ಮಂದಿಯನ್ನೇ ಆಶ್ರಯಿಸಿದೆ. ಸಂತ್ರಸ್ತ ಮನಸ್ಥಿತಿ ಮತ್ತು ಹಿಂದುಳಿಯುವಿಕೆ, ಎರಡೂ ಈ ರಾಜಕೀಯದ ಮೂಲ ತಾಯಿ ಬೇರು. ಇವರಿಬ್ಬರನ್ನೂ ಪರಸ್ಪರ ಎತ್ತಿ ಕಟ್ಟುವುದು ಮತ್ತು ಇಬ್ಬರ ಮೇಲೂ ಒಂದೇ ಬಗೆಯ ಹಲ್ಲೆಗಳಾಗುವುದು ಈ ರಾಜಕೀಯ ಚದುರಂಗದಾಟದ ಜಾಣ ನಡೆಯಾಗಿದೆ. ಉತ್ತರ ಪ್ರದೇಶದ ಅಖ್ಲಾಕ್ ಕುಟುಂಬದ ಮೇಲೂ ಮತ್ತು ಗುಜರಾತ್‍ನ ಉನಾದಲ್ಲಿ ದಲಿತ ಯುವಕರ ಮೇಲೂ ನಡೆದಿರುವ ಹಲ್ಲೆ ಇದನ್ನೇ ಸೂಚಿಸುತ್ತದೆ. ಎರಡರ ಕಾರಣವೂ ಒಂದೇ. ಆದರೆ, ಹಲ್ಲೆಗೊಳಗಾಗಿರುವವರು ಮಾತ್ರ ಬೇರೆ ಬೇರೆ. ದಲಿತರು ಮತ್ತು ಮುಸ್ಲಿಮರನ್ನು ಈ ರಾಜಕೀಯ ಸಿದ್ಧಾಂತ ಒಂದೇ ತಕ್ಕಡಿಯಲ್ಲಿಟ್ಟಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಪುರಾವೆಗಳ ಅಗತ್ಯ ಇಲ್ಲ. ಅಂದಹಾಗೆ,
       ವಿಲ್ಸನ್‍ರ ಮ್ಯಾಗ್ಸೇಸೆ ಸಾಧನೆಯನ್ನು ಪೂರ್ಣ ಪ್ರಮಾಣದಲ್ಲಿ ಆನಂದಿಸುವ ಸ್ಥಿತಿಯಲ್ಲಿ ಈ ದೇಶ ಇಲ್ಲ ಎಂಬುದನ್ನು ಮಕ್ವಾನ್‍ರು ತನ್ನ ಪ್ರಶಸ್ತಿ ಹಿಂದಿರುಗಿಸುವಿಕೆಯ ಮೂಲಕ ಸೂಚ್ಯವಾಗಿ ತಿಳಿಸಿದ್ದಾರೆ. ಆದ್ದರಿಂದ ಮಲದ ವಿರುದ್ಧ ಜಾಗೃತಿ ಮೂಡಿಸಿದ ವಿಲ್ಸನ್‍ರು ಮಲಿನ ಮನಸ್ಸುಗಳ ಬಗ್ಗೆಯೂ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಗಲಿ ಎಂದಷ್ಟೇ ಈ ಸಂದರ್ಭದಲ್ಲಿ ಹಾರೈಸಬಹುದು.


Wednesday, 27 July 2016

ಗೋರಕ್ಷಣೆ: ಸರಕಾರ ಹೊರಗುತ್ತಿಗೆ ಕೊಟ್ಟಿದೆಯೇ?

       ಗೋರಕ್ಷಣೆ, ಗೋರಕ್ಷಣಾ ದಳ್, ಗೋರಕ್ಷಕರು.. ಮುಂತಾದುವುಗಳ ಸಾಮಾಜಿಕ ನೆಲೆ-ಬೆಲೆ ಏನು? ಇವಕ್ಕೆ ಸಾಮಾಜಿಕ ಮಾನ್ಯತೆ ಇದೆಯೇ? ಈ ಗುಂಪು ಯಾವ ಸಮಾಜ ಮತ್ತು ಯಾವ ಸಮುದಾಯದ ಪ್ರತಿನಿಧಿ? ಸಾಮಾನ್ಯವಾಗಿ ಯಾವುದೇ ಒಂದು ಕೃತ್ಯಕ್ಕೆ ಎರಡು ಮುಖಗಳಿರುತ್ತವೆ. ಒಂದು ಸಂವಿಧಾನಬದ್ಧವಾದರೆ ಇನ್ನೊಂದು ವಿರುದ್ಧ. ವೀರಪ್ಪನ್‍ನನ್ನು ಈ ನೆಲೆಯಲ್ಲಿ ನಾವು ಎತ್ತಿಕೊಳ್ಳಬಹುದು. ಅವನ ಚಟುವಟಿಕೆ ಕಾನೂನಿನ ದೃಷ್ಟಿಯಲ್ಲಿ ಅಪ್ಪಟ ಕ್ರೌರ್ಯ. ಸಂವಿಧಾನ ವಿರೋಧಿ. ನ್ಯಾಯ ವಿರೋಧಿ. ಹಾಗಂತ, ವೀರಪ್ಪನ್‍ಗೂ ಸಮಾಜಕ್ಕೂ ನಡುವಿನ ನಂಟು ಸಂಪೂರ್ಣ ಕಡಿದು ಹೋಗಿರಲಿಲ್ಲ. ಅಂಥದ್ದೊಂದು ಅನುಕಂಪದ ವಾತಾವರಣ ವೀರಪ್ಪನ್‍ನ ಜೊತೆಗಿತ್ತು. ಸಂದರ್ಭಾನುಸಾರ ಆತ ಒದಗಿಸುತ್ತಿರಬಹುದಾದ ನೆರವು, ಆತನ ಬಗ್ಗೆ ಎಲ್ಲೋ ಹೇಗೋ ಹುಟ್ಟಿಕೊಂಡು ಬೆಳೆದಿರಬಹುದಾದ ಅತಿಮಾನುಷ ಕಲ್ಪನೆಯ ಪ್ರಭಾವ, ತಪ್ಪು ಮಾಹಿತಿ, ಭಯ.. ಮುಂತಾದುವುಗಳ ಪಾತ್ರವೂ ಈ ಅನುಕಂಪದ ಹಿಂದಿರಬಹುದು. ಆದರೆ ಇವಾವುವೂ ಅವರ ಈ ಅನುಕಂಪವನ್ನು ನ್ಯಾಯಯುತಗೊಳಿಸಲು ಸಕಾರವೆನಿಸುವುದಿಲ್ಲ. ಸದ್ಯ ನಾವು ವೀರಪ್ಪನ್‍ನನ್ನು ದೃಶ್ಯದಿಂದ ಹೊರಗಿಟ್ಟು ಆ ಜಾಗದಲ್ಲಿ ಗೋರಕ್ಷಕ್ ದಳ್‍ನಂತಹ ಸ್ವಘೋಷಿತ ಗೋರಕ್ಷಕರನ್ನು ತಂದು ಕೂರಿಸಿದರೆ, ನಮ್ಮಲ್ಲಿ ಮೂಡಬಹುದಾದ ಅಭಿಪ್ರಾಯಗಳೇನು? ಈ ಮಂದಿಗೆ ಸಮಾಜದಿಂದ ಅನುಕಂಪ ಲಭ್ಯವಾಗುತ್ತಿದೆಯೇ? ಇವರ ಕೃತ್ಯಗಳು ಸಮಾಜದ ಭಾವನೆಯನ್ನು ಪ್ರತಿನಿಧಿಸುತ್ತವೆಯೇ? ಇವರನ್ನು ಬೆಂಬಲಿಸುವ ಮಂದಿಯ ಸಂಖ್ಯೆ ಎಷ್ಟು? ಅವರ ಸ್ಥಾನ-ಮಾನಗಳು ಏನೇನು?
     ಗೋರಕ್ಷಣೆಯ ನೆಪದಲ್ಲಿ ಇವತ್ತು ನಡೆಯುತ್ತಿರುವ ಹಲ್ಲೆ-ದರೋಡೆ-ಹತ್ಯೆಗಳು ರಾಷ್ಟ್ರೀಯ ಸಮಸ್ಯೆಯಾಗಿ ಮಾರ್ಪಟ್ಟಿವೆ.  ಗೋಮಾಂಸವನ್ನು ಸಾಗಿಸುತ್ತಿದ್ದಾರೆ ಎಂಬ ನೆಪದಲ್ಲಿ ಮಧ್ಯಪ್ರದೇಶದಲ್ಲಿ  ಇಬ್ಬರು ಮುಸ್ಲಿಂ ಮಹಿಳೆಯರನ್ನು ಥಳಿಸಿದ ಮತ್ತು ಗುಜರಾತ್‍ನಲ್ಲಿ ದಲಿತರ ಮೇಲೆ ನಡೆಸಲಾ
ದ ಹಲ್ಲೆಗಿಂತ ಎರಡ್ಮೂರು ವಾರಗಳ ಹಿಂದೆ ದೆಹಲಿಯಲ್ಲಿ ಗೋಸಾಗಾಟದ ಆರೋಪದಲ್ಲಿ ಇಬ್ಬರಿಗೆ ಬಲವಂತದಿಂದ ಸೆಗಣಿ, ಗೋಮೂತ್ರವನ್ನು ಕುಡಿಸಿ, ಅದನ್ನು ಚಿತ್ರೀಕರಿಸಿ ಹರಿಯಬಿಡಲಾಗಿತ್ತು. ಇಂಥದ್ದು ಪದೇ ಪದೇ ನಡೆಯುತ್ತಿದೆ ಮತ್ತು ಹೆಚ್ಚಿನ ಪ್ರಕರಣಗಳು ಪ್ರತಿಭಟನೆಗಳ ಹಂಗೂ ಇಲ್ಲದೆ ಸತ್ತು ಹೋಗುತ್ತಿವೆ. ನಿಜವಾಗಿ, ಸೂಕ್ತ ಪರವಾನಿಗೆ ಇಲ್ಲದೇ ದನದ ಮಾಂಸ ಎಂದಲ್ಲ, ಮರ ಸಾಗಾಟ ಕೂಡ ಅಪರಾಧವೇ. ಕೋಳಿ, ಆಡು, ಅಕ್ಕಿ.. ಸಾಗಾಟವೂ ಅಪರಾಧವೇ. ಆದರೆ, ಈ ಅಕ್ರಮ ಚಟುವಟಿಕೆಗಳನ್ನು ತಡೆಯುವ ನ್ಯಾಯಯುತ ದಾರಿ ಯಾವುದು? ಅಕ್ರಮವಾಗಿ ಸಾಗಾಟ ಮಾಡುವ ಯಾವುದೇ ವ್ಯಕ್ತಿ, ಅದನ್ನು ಕದ್ದು ಮುಚ್ಚಿ ಮಾಡುತ್ತಾನೆ. ಸಮಾಜದ ಕಣ್ಣಿನಿಂದ ತಪ್ಪಿಸಿಕೊಂಡು ತನ್ನ ಕೃತ್ಯವನ್ನು ಎಸಗುತ್ತಾನೆ. ಅದಕ್ಕಿರುವ ಕಾರಣ ಏನೆಂದರೆ, ಅದು ಕಾನೂನು ವಿರೋಧಿ ಎಂಬ ಸ್ಪಷ್ಟ ಅರಿವು. ಆದ್ದರಿಂದಲೇ, ಆತ ತನ್ನ ಈ ಅಕ್ರಮ ಕೃತ್ಯಕ್ಕಾಗಿ ತಂಡ ಕಟ್ಟುವ ಸಂದರ್ಭ ಒದಗಿದರೂ ಧರ್ಮಸೂಚಕ ಹೆಸರನ್ನೋ ನಂಟನ್ನೋ ಜೋಡಿಸದೆಯೇ ತಂಡ ರೂಪಿಸುತ್ತಾನೆ. ಆದರೆ ಗೋವಿನ ರಕ್ಷಣೆಯ ಹೆಸರಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಗುರುತಿಸಿಕೊಳ್ಳುವುದೇ ನಿರ್ದಿಷ್ಟ ಧರ್ಮದ ಐಡೆಂಟಿಟಿಯೊಂದಿಗೆ. ಗೋಮಾಂಸವನ್ನು ಅಕ್ರಮವಾಗಿ ಸಾಗಿಸುವುದು ಹೇಗೆ ಕಾನೂನು ವಿರೋಧಿಯೋ ಹಾಗೆಯೇ ಅದನ್ನು ತಡೆಯುವ ನೆಪದಲ್ಲಿ ನಡೆಯುವ ಸರ್ವ ಕ್ರೌರ್ಯಗಳೂ ಕಾನೂನು ವಿರೋಧಿಯೇ. ಸಾಂವಿಧಾನಿಕವಾಗಿ ಈ ಎರಡಕ್ಕೂ ಮಾನ್ಯತೆಯಿಲ್ಲ. ಆದರೆ ಇವತ್ತಿನ ಪರಿಸ್ಥಿತಿ ಎಷ್ಟು ವಿಡಂಬನೆಯಿಂದ ಕೂಡಿದೆಯೆಂದರೆ, ಸತ್ತ ದನದ ಚರ್ಮವನ್ನು ಸಕ್ರಮವಾಗಿಯೇ ಸುಲಿದವರು ಅಥವಾ ಮಾಂಸ ಸಾಗಾಟ ಮಾಡಿದವರು ಮತ್ತು ಆಹಾರವಾಗಿ ಬಳಸಿದವರು ಕಾನೂನು ಭಂಜಕರಂತೆ ಥಳಿತಕ್ಕೆ ಒಳಗಾಗುತ್ತಾರೆ. ಅದೇ ವೇಳೆ ನಿಜಕ್ಕೂ ಕಾನೂನು ಭಂಜನೆಯಲ್ಲಿ ಭಾಗಿಯಾದವರು ಕಾನೂನು ಪೋಷಕರಂತೆ ಧ್ವನಿ ಎತ್ತರಿಸಿ ಮಾತಾಡುತ್ತಾರೆ. ಮಾತ್ರವಲ್ಲ, ಈ ಅಕ್ರಮ ಚಟುವಟಿಕೆಗೆ ಧರ್ಮಸೂಚಕ ಹೆಸರಿನ ತಂಡವನ್ನು ಕಟ್ಟಿಕೊಳ್ಳುತ್ತಾರೆ. ಆದ್ದರಿಂದಲೇ, ಕೆಲವು ಪ್ರಶ್ನೆಗಳನ್ನು ಸಮಾಜದ ಮುಂದೆ ಇಡಬೇಕಾದ ಅನಿವಾರ್ಯತೆ ಇದೆ. ಭೂಗತವಾಗಿ ಮಾಡುವ ಕೃತ್ಯಗಳನ್ನು ಬಹಿರಂಗವಾಗಿ ಮಾಡುವುದಕ್ಕೆ ಇರುವ ಪರವಾನಿಗೆಯಾಗಿ ‘ಧರ್ಮ’ ಬಳಕೆಯಾಗುತ್ತಿದೆಯೇ? ಗೋರಕ್ಷಕ್ ದಳ್ ಮಾಡುತ್ತಿರುವ ಕೃತ್ಯಗಳು ಯಾವ ನೆಲೆಯಲ್ಲೂ ಕಾನೂನುಬದ್ಧವೂ ಅಲ್ಲ, ಧರ್ಮಬದ್ಧವೂ ಅಲ್ಲ. ಅತ್ಯಂತ ಅಮಾನುಷವಾಗಿ ಅದು ವರ್ತಿಸುತ್ತದೆ. ಸೆಗಣಿ ತಿನ್ನಿಸುವ, ಥಳಿಸಿ ಕೊಲ್ಲುವ ಮತ್ತು ಬೆತ್ತಲೆ ಮಾಡುವ ಚಟುವಟಿಕೆಗಳಾವುವೂ ಧರ್ಮಬದ್ಧವಾಗಿರಲು ಸಾಧ್ಯವಿಲ್ಲ. ಯಾವುದೇ ಕ್ರಮವು ಧರ್ಮಸಮ್ಮತ ಅಥವಾ ಧರ್ಮವಿರೋಧಿಯಾಗಲು ಕೆಲವು ನಿಯಮ-ನಡಾವಳಿಗಳಿವೆ. ಹಾಗಿದ್ದೂ, ಗೋರಕ್ಷಕ್ ದಳ್‍ನಂತಹ ಅಕ್ರಮ ತಂಡಗಳು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮುಖ್ಯವಾಹಿನಿಯಲ್ಲೇ ಇನ್ನೂ ಅಸ್ತಿತ್ವ ಉಳಿಸಿಕೊಳ್ಳಲು ಕಾರಣವೇನು? ಅದರ ಚಟುವಟಿಕೆಗಳೆಲ್ಲವೂ ಭೂಗತವಾಗಿ ಮಾಡುವುದಕ್ಕಷ್ಟೇ ಅರ್ಹವಾಗಿದ್ದರೂ ಅದು ರಕ್ಷಕ ಗುರುತಿನೊಂದಿಗೆ ಉಳಿದುಕೊಂಡಿರುವುದರ ಹಿನ್ನೆಲೆ ಏನು?
     ನಿಜವಾಗಿ, ಅಕ್ರಮ ಎಂಬ ಪದ ಸರ್ವ ಬಗೆಯ ಅಕ್ರಮ ಚಟುವಟಿಕೆಗಳನ್ನೂ ಪ್ರತಿನಿಧಿಸುತ್ತದೆ. ಅಕ್ರಮವಾಗಿ ತಿನ್ನುವುದು, ಕುಡಿಯುವುದು, ಕಡಿಯುವುದು, ಸಾಗಿಸುವುದು ಹೇಗೆ ಅಪರಾಧವೋ ಅದನ್ನು ಅಕ್ರಮ ರೀತಿಯಲ್ಲಿ ತಡೆಯುವುದೂ ಅಪರಾಧವೇ. ಆದ್ದರಿಂದಲೇ, ಗೋರಕ್ಷಣೆಯ ಹೆಸರಲ್ಲಿ ಹುಟ್ಟಿಕೊಂಡಿರುವ ರಕ್ಷಕ ತಂಡ ನಿಷೇಧಕ್ಕೆ ಒಳಗಾಗಬೇಕಾದ ತುರ್ತು ಅಗತ್ಯವಿದೆ. ನಿಜವಾಗಿ, ರಕ್ಷಣೆ ಅಥವಾ ನಿರ್ಮೂಲನೆಯು ಸರಕಾರದ್ದೇ ಜವಾಬ್ದಾರಿಯಾಗಿರುತ್ತದೆ. ಅದನ್ನು ಯಾವುದೇ ಖಾಸಗಿ ತಂಡವೊಂದು ಗುತ್ತಿಗೆ ಪಡಕೊಳ್ಳುವುದೇ ಸಂವಿಧಾನ ವಿರೋಧಿ. ಮನುಷ್ಯರ ಕ್ಷೇಮಾಭಿವೃದ್ಧಿಯ ಜವಾಬ್ದಾರಿ ಹೇಗೆ ಸರಕಾರದ್ದೋ ಹಾಗೆಯೇ ಪ್ರಾಣಿ-ಪಕ್ಷಿ, ಸಸ್ಯ ಸಂಕುಲಗಳ ಕ್ಷೇಮಾಭಿವೃದ್ಧಿಯ ಜವಾಬ್ದಾರಿಯೂ ಸರಕಾರದ್ದೇ. ಸರಕಾರದ ಹೊರತಾದ ಗುಂಪೊಂದು ಇವುಗಳಲ್ಲಿ ಮಧ್ಯ ಪ್ರವೇಶಿಸುವುದೆಂದರೆ, ಅದು ಸರಕಾರದ ದೌರ್ಬಲ್ಯ ಮತ್ತು ವೈಫಲ್ಯವನ್ನು ಸಾರಿದಂತೆ.ಆದ್ದರಿಂದ,  ಒಂದೋ ಸರಕಾರ ಗೋರಕ್ಷಕ್ ದಳ್‍ನಂತಹ ಖಾಸಗಿ ಗುತ್ತಿಗೆ ಕಂಪೆನಿಗಳನ್ನು ನಿಷೇಧಿಸಿ ತನ್ನ ಇರುವಿಕೆಯನ್ನು ಸ್ಪಷ್ಟಪಡಿಸಬೇಕು ಅಥವಾ ಗೋರಕ್ಷಣೆಯ ಹೊಣೆಗಾರಿಕೆಯನ್ನು ಸದ್ಯ ಗೋರಕ್ಷಣ್ ದಳದಂತಹ ಖಾಸಗಿ ತಂಡಗಳಿಗೆ ವಹಿಸಿಕೊಟ್ಟಿರುವೆ ಎಂದು ಬಹಿರಂಗವಾಗಿ ಸಾರಬೇಕು. ಒಂದು ವೇಳೆ, ಸರಕಾರಿ ವ್ಯವಸ್ಥೆಯಲ್ಲಿ ಇಂಥ
ಹೊರಗುತ್ತಿಗೆಗೆ  ಅವಕಾಶ ಇದೆಯೆಂದಾದರೆ- ಹಾಲು, ಮೊಸರು, ಕೋಳಿ, ಮೀನು, ಆಡು, ಲಿಂಬೆ, ಮಾವು, ಹಲಸು.. ಮುಂತಾದವುಗಳ ರಕ್ಷಣೆಯ ಹೆಸರಲ್ಲೂ ತಂಡಗಳನ್ನು ಕಟ್ಟಿಕೊಳ್ಳುವುದಕ್ಕೆ ಅವಕಾಶ ಇರಬೇಕಾಗುತ್ತದೆ.  ಹಾಗಾದರೆ, ಗೋರಕ್ಷಣ್ ದಳದಂತೆಯೇ ಗೋಹಾಲು ರಕ್ಷಕ ದಳ, ಮೊಸರು ರಕ್ಷಕ ದಳ, ಮೀನು ರಕ್ಷಕ ದಳ..ಗಳ ಕಾರ್ಯಾಚರಣೆಗೂ ಅವಕಾಶ ಮಾಡಿಕೊಡಬೇಕಾಗುತ್ತದೆ. ಮಾತ್ರವಲ್ಲ, ‘ಗೋವು ಮಾತ್ರವಲ್ಲ, ಅದರ ಹಾಲೂ ಪವಿತ್ರವಾಗಿದ್ದು, ಕರುವಿನ ಹೊರತು ಇನ್ನಾರೂ ಅದನ್ನು ಕುಡಿಯಬಾರದು..’ ಎಂದು ವಾದಿಸಿಕೊಂಡು ಹಾಲು ರಕ್ಷಕ್ ದಳ ಹಾದಿ-ಬೀದಿಯಲ್ಲಿ ಥಳಿಸುವುದನ್ನೂ ಸಹಿಸಿಕೊಳ್ಳಬೇಕಾಗುತ್ತದೆ.   
        ಏನೇ ಆಗಲಿ, ಗೋರಕ್ಷಣೆಯ ಹೆಸರಲ್ಲಿ ಕಾರ್ಯಾಚರಿಸುತ್ತಿರುವ ಗೋರಕ್ಷಣ್ ದಳದಂತಹ ತಂಡಗಳು ಎಲ್ಲ ರೀತಿಯಲ್ಲೂ ನಿಷೇಧಕ್ಕೆ ಅರ್ಹವಾಗಿವೆ. ಅಕ್ರಮ ಚಟುವಟಿಕೆಯನ್ನು ತಡೆಯಬೇಕಾದುದು ಸರಕಾರವೇ ಹೊರತು ಖಾಸಗಿ ತಂಡಗಳಲ್ಲ. ಈ ಬಗ್ಗೆ ಸರಕಾರ ಬಿಗು ನಿಲುವು ತಳೆದರೆ, ಹಾದಿ-ಬೀದಿಯಲ್ಲಿ ಯಾರೂ ಬೆತ್ತಲಾಗಲಾರರು.


Saturday, 23 July 2016

ಗಣಪತಿ: ಬಿಜೆಪಿಯ ದ್ವಂದ್ವ ಮತ್ತು ಕೆಲವು ಅನುಮಾನಗಳು

       ಕೇಂದ್ರ ಸಚಿವರಾದ ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿಯವರ ಸರಣಿ ಮಧ್ಯ ಪ್ರವೇಶಕ್ಕೆ ತತ್ತರಿಸಿ ಆತ್ಮಹತ್ಯೆ ಮಾಡಿಕೊಂಡ ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ವೇಮುಲನ ಪರ ಯಾವ ಹೇಳಿಕೆಯನ್ನೂ ಕೊಡದ ಮತ್ತು ಧರಣಿಯನ್ನೂ ನಡೆಸದ ಬಿಜೆಪಿಯು ಸದ್ಯ ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆಯ ಕುರಿತಂತೆ ತೀವ್ರ ಸಂತಾಪ ಮತ್ತು ಸಂಕಟವನ್ನು ವ್ಯಕ್ತಪಡಿಸುತ್ತಿದೆ. ಆಹೋರಾತ್ರಿ ಪ್ರತಿಭಟನೆಯನ್ನು ನಡೆಸಿದೆ. ಪಾರ್ಲಿಮೆಂಟ್‍ನಲ್ಲಿ ಈ ಆತ್ಮಹತ್ಯೆಯನ್ನು ಪ್ರಸ್ತಾಪಿಸುವುದಾಗಿ ಅದರ ಸಂಸದರೋರ್ವರು ಘೋಷಿಸಿದ್ದಾರೆ. ನಿಜವಾಗಿ, ಆರೇಳು ತಿಂಗಳ ನಡುವೆ ನಡೆದ ಈ ಎರಡು ಆತ್ಮಹತ್ಯೆಗಳಲ್ಲಿ ಕೆಲವು ಹೋಲಿಕೆಗಳಿವೆ. ವೇಮುಲ ತನ್ನ ಆತ್ಮಹತ್ಯೆಗೆ ನೇರ ಕಾರಣವಾಗಿ ಯಾರನ್ನೂ ಬೊಟ್ಟು ಮಾಡದಿದ್ದರೂ ಬಂಡಾರು ದತ್ತಾತ್ರೇಯ ಮತ್ತು ಸ್ಮೃತಿ ಇರಾನಿಯವರ ಪಾತ್ರ ಅದರಲ್ಲಿ ಅತ್ಯಂತ ಸ್ಪಷ್ಟವಾಗಿತ್ತು. ವೇಮುಲನ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಸದ ಬಂಡಾರು ದತ್ತಾತ್ರೇಯರು ಕೇಂದ್ರ ಮಾನವ ಸಂಪನ್ಮೂಲ ಖಾತೆಯ ಸಚಿವೆ ಸ್ಮøತಿ ಇರಾನಿ ಮತ್ತು ಕುಲಪತಿಯವರ ಮೇಲೆ ಒತ್ತಡವನ್ನು ಹೇರಿದ್ದರು. ಅದರಂತೆ, ಸ್ಮೃತಿ ಇರಾನಿಯವರು ಐದು ಪತ್ರಗಳನ್ನು ಒಂದರ ಮೇಲೊಂದರಂತೆ ವಿಶ್ವವಿದ್ಯಾನಿಲಯದ ಕುಲಪತಿಯವರಿಗೆ ರವಾನಿಸಿದ್ದರು. ಈ ಒತ್ತಡಗಳ ಪರಿಣಾಮದಿಂದಾಗಿಯೇ ವೇಮುಲ 15 ದಿನಗಳ ಕಾಲ ಬಯಲಿನಲ್ಲಿ ರಾತ್ರಿ ಮಲಗಬೇಕಾಯಿತು. ಹಾಸ್ಟೆಲ್ ಸೌಲಭ್ಯವನ್ನೂ ನಿರಾಕರಿಸಲಾಯಿತು. ಇಷ್ಟೆಲ್ಲಾ ನಡೆದೂ ವೇಮುಲನ ಆತ್ಮಹತ್ಯೆಯ ಬಗ್ಗೆ ಬಿಜೆಪಿ ಪ್ರದರ್ಶಿಸಿದ್ದು ಅತ್ಯಂತ ಉಡಾಫೆಯ ನಿಲುವು. ಅದು ಈ ಪತ್ರಗಳು ಮತ್ತು ಒತ್ತಡಗಳ ಕುರಿತಂತೆ ತನಿಖೆ ನಡೆಸುವ ಬದಲು ವೇಮುಲ ದಲಿತನೋ ದಲಿತೇತರನೋ ಎಂಬ ಬಗ್ಗೆ ತೀವ್ರ ಕುತೂಹಲವನ್ನು ವ್ಯಕ್ತಪಡಿಸಿತು. ತನಿಖೆಗೆ ಆದೇಶಿಸಿತು. ಬಿಜೆಪಿಯ ಯಾವೊಬ್ಬ ಸಂಸದನೂ ಈ ಆತ್ಮಹತ್ಯೆಯನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲಿಲ್ಲ. ರಜೆಯ ಮೇಲೆ ತೆರಳಿದ ಉಪಕುಲಪತಿಯವರನ್ನು ಮತ್ತೆ ಅದೇ ಸ್ಥಾನದಲ್ಲಿ ಕೂರಿಸುವ ದಾಷ್ಟ್ರ್ಯತನದ ಹೊರತು ಇನ್ನಾವುದನ್ನೂ ಬಿಜೆಪಿ ಈವರೆಗೂ ಪ್ರದರ್ಶಿಸಿಲ್ಲ. ಹಾಗಂತ, ಡಿವೈಎಸ್ಪಿ ಗಣಪತಿಯವರ ಆತ್ಮಹತ್ಯೆಯನ್ನು ಎತ್ತಿಕೊಂಡು ಹೋರಾಟಕ್ಕಿಳಿದಿರುವ ರಾಜ್ಯ ಬಿಜೆಪಿ ನಾಯಕರಿಗೆ ಇದನ್ನು ಮತ್ತು ನೆನಪಿಸಬೇಕಾದ ಅಗತ್ಯವಿಲ್ಲ. ಹಾಗೆ ನೋಡಿದರೆ, ಗಣಪತಿಯವರ ಆತ್ಮಹತ್ಯೆಗಿಂತ ವೇಮುಲನ ಆತ್ಮಹತ್ಯೆಯೇ ಹೆಚ್ಚು ಕಳವಳಕ್ಕೆ ಅರ್ಹವಾದವು. ಗಣಪತಿಯವರಲ್ಲಿ ಜೀವನಾನುಭವವಿದೆ. ವಯಸ್ಸಿನ ಬೆಂಬಲವೂ ಇದೆ. ಅಲ್ಲದೇ ಅವರು ಹೊರಿಸಿರುವ ಆರೋಪಗಳಲ್ಲಿ ಅಸ್ಪಷ್ಟತೆಯಿದೆ. ನಡತೆಯ ಕಾರಣಕ್ಕಾಗಿ ಅಮಾನತು ಶಿಕ್ಷೆಗೂ ಅವರು ಒಳಗಾಗಿದ್ದಾರೆ. ಕೆ.ಜೆ. ಜಾರ್ಜ್‍ರ ಮೇಲೆ ಅವರು ಹೊರಿಸಿದ ಆರೋಪದಲ್ಲಿ ಎಷ್ಟೇ ಹುರುಳಿದ್ದರೂ ಅದು ನಡೆದು ಎರಡು ವರ್ಷಗಳೇ ಸಂದಿವೆ. ಒಂದು ವೇಳೆ, ವೇಮುಲನನ್ನು ಗಣಪತಿಯವರ ಬಳಿ ತಂದಿಟ್ಟು ನೋಡಿದರೆ, ಇಂಥ ಯಾವ ಕಪ್ಪು ಚುಕ್ಕೆಗಳೂ ವೇಮುಲನಲ್ಲಿ ಕಾಣಿಸುವುದಿಲ್ಲ. ಆತನಲ್ಲಿ ಜೀವನಾನುಭವ ಇಲ್ಲ. ಇನ್ನೂ ಎಳೆಯ. ಅಲ್ಲದೇ ದಮನಿತ ಹಿನ್ನೆಲೆಯನ್ನು ಹೊಂದಿರುವ ಯುವಕ. ಆದರೆ ಬಿಜೆಪಿ ಈ ಎರಡು ಆತ್ಮಹತ್ಯೆಗಳಿಗೆ ಪ್ರತಿಕ್ರಿಯಿಸಿದ ರೀತಿಯನ್ನು ನೋಡಿದರೆ, ಅದರ ಅಸಲು ಮುಖ ಬಹಿರಂಗವಾಗುತ್ತದೆ. ವೇಮುಲನ ಜಾತಿಯನ್ನು ತನಿಖಿಸಲು ಹೊರಟ ಬಿಜೆಪಿ, ಗಣಪತಿಯವರ ಆತ್ಮಹತ್ಯೆಯಲ್ಲಿ ಮಾತ್ರ ಜಾರ್ಜ್‍ರ ರಾಜೀನಾಮೆಯನ್ನು ಬಯಸಿದೆ.
      ಅಷ್ಟಕ್ಕೂ, ಡಿವೈಎಸ್ಪಿ ಹುದ್ದೆಯಲ್ಲಿರುವ ಓರ್ವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂದರೆ ಏನು? ಅದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡರು ಎಂದು ಹೇಳುವಷ್ಟು ಸಾಮಾನ್ಯ ವಿಷಯವೇ? ಇಂಥ ಉನ್ನತ ಹುz್ದÉಯಲ್ಲಿರುವವರ ಮಟ್ಟಿಗೆ ರಾಜಕೀಯ ಒತ್ತಡಗಳು ಹೊಸತಲ್ಲವಲ್ಲ. ಗೂಂಡಾಗಳನ್ನೋ ಸಮಾಜಘಾತುಕರನ್ನೋ ಕೋಮುವಾದಿಗಳನ್ನೋ ಅವರು ಸದಾ ಎದುರಿಸಬೇಕಾಗುತ್ತಲೇ ಇರಬಹುದು. ಲಾಬಿ, ಸುಳ್ಳಾರೋಪಗಳಿಗೆ ಗುರಿಯಾಗುತ್ತಿರಬಹುದು. ಈ ಹುದ್ದೆಗೇರುವ ಪ್ರತಿಯೋರ್ವ ಅಧಿಕಾರಿಗೂ ಇದು ಚೆನ್ನಾಗಿಯೇ ಗೊತ್ತಿರುತ್ತದೆ. ಆದ್ದರಿಂದಲೇ ಗಣಪತಿಯವರ ಆತ್ಮಹತ್ಯೆಯನ್ನು ಬರೇ `ಜಾರ್ಜ್' ಮೂಲಕವೇ ನೋಡುವುದು ಅತಾರ್ಕಿಕವೆನಿಸುತ್ತದೆ. ಹುದ್ದೆಯೇತರ ಕಾರಣಗಳ ಕುರಿತೂ ನಾವೂ ದೃಷ್ಟಿ ಹರಿಸಬೇಕಾಗುತ್ತದೆ. ಆದರೆ ಬಿಜೆಪಿ ಇದನ್ನು ಬಯಸುತ್ತಿಲ್ಲ. ರಾಜಕೀಯ ಒತ್ತಡಗಳಿಗೆ ಆತ್ಮಹತ್ಯೆಯೇ ಪರಿಹಾರ ಎಂಬ ರೀತಿಯಲ್ಲಿ ಅದು ಗಣಪತಿ ಆತ್ಮಹತ್ಯೆಯನ್ನು ವೈಭವೀಕರಣಕ್ಕೆ ಒಳಪಡಿಸುತ್ತಿದೆ.
       ಸಾಮಾನ್ಯವಾಗಿ, ಕೌಟುಂಬಿಕ ಜಗಳದಲ್ಲಿ  ಭಾಗಿಯಾದವರು, ಕುಡುಕರು, ಪ್ರೇಮಿಗಳು ಅನುತೀರ್ಣಗೊಂಡ ವಿದ್ಯಾರ್ಥಿಗಳು... ಮುಂತಾದವರಲ್ಲೇ ಆತ್ಮಹತ್ಯೆ ಒಂದು ಆಯ್ಕೆಯಾಗಿರುವುದು ಕಾಣಸಿಗುತ್ತದೆ. ತಕ್ಷಣದ ಆವೇಶ, ಸಿಟ್ಟು, ವಿಷಾದ, ಭಾವುಕತೆಗಳೇ ಇದಕ್ಕೆ ಪ್ರಚೋದನೆ ನೀಡಿರುತ್ತದೆ. ವರ್ಷಂಪ್ರತಿ ಆಗುವ ಆತ್ಮಹತ್ಯೆಗಳ ಕಾರಣಗಳನ್ನು ಗಂಭೀರವಾಗಿ ಪರಿಶೀಲಿಸಿದರೆ, ಅವುಗಳಲ್ಲಿ 99% ವನ್ನೂ ತಡೆಯಬಹುದಿತ್ತು ಎಂದು ಅನಿಸುವಷ್ಟು ಕಾರಣಗಳು ದುರ್ಬಲವೂ ಆಗಿರುತ್ತದೆ. ಆದ್ದರಿಂದಲೇ ಗಣಪತಿ, ಕಲ್ಲಪ್ಪ, ಡಿ.ಕೆ. ರವಿ ಮುಂತಾದವರ ಆತ್ಯಹತ್ಯೆಗಳನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಹೋಗುವುದು. ಒತ್ತಡಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡರು ಎಂಬ ಒಂದು ವಾಕ್ಯದ ಕಾರಣದಾಚೆಗೆ ಕಾರಣಗಳ ಹುಡುಕಾಟ ನಡೆಯುವುದು. ಅಂದಹಾಗೆ, ಪ್ರೇಮಿಗಳಿಗೂ ಡಿ.ಕೆ. ರವಿಯವರಿಗೂ ವ್ಯತ್ಯಾಸ ಇದೆಯಲ್ಲವೇ? ಅನುತ್ತೀರ್ಣಗೊಂಡ ವಿದ್ಯಾರ್ಥಿಗೂ ಗಣಪತಿಯವರಿಗೂ ಹೋಲಿಕೆ ಅಸಾಧ್ಯವಲ್ಲವೇ? ಡಿವೈಎಸ್ಪಿ, ಜಿಲ್ಲಾಧಿಕಾರಿ ಮುಂತಾದ ಹುದ್ದೆಗಳಷ್ಟೇ ಉನ್ನತವಲ್ಲ, ಅದನ್ನು ಅಲಂಕರಿಸುವ ವ್ಯಕ್ತಿಗಳೂ ಮಾನಸಿವಾಗಿ ಮತ್ತು ವೈಚಾರಿಕವಾಗಿ ಉನ್ನತರಾಗಿಯೇ ಇರುತ್ತಾರೆ ಮತ್ತು ಇರಬೇಕು ಕೂಡ. ಯಾವುದೇ ಬೆಳವಣಿಗೆಯನ್ನೂ ಧೃತಿಗೆಡದೇ ಎದುರಿಸುವ ಸಾಮಥ್ರ್ಯ ಈ ಹುದ್ದೆಯಲ್ಲಿರುವವರಿಗೆ
ಕರಗತವಾಗಿರುತ್ತದೆ. ಒತ್ತಡಗಳನ್ನು ಎದುರಿಸಿದ ಅನುಭವದೊಂದಿಗೆ ಅವರು ಆ ಹುದ್ದೆಯನ್ನು ಪಡೆದಿರುತ್ತಾರೆ. ಹೀಗಿರುವಾಗ, ಎರಡು ವರ್ಷಗಳ ಹಿಂದೆ `ಜಾರ್ಜ್'ರಿಂದ ಒತ್ತಡಕ್ಕೊಳಗಾದ ಘಟನೆಯು ಎರಡು ವರ್ಷಗಳ ಬಳಿಕ ಇವತ್ತು ಗಣಪತಿಯವರನ್ನು ಆತ್ಮಹತ್ಯೆಗೆ ದೂಡುವುದೆಂದರೇನು? ಇದು ಸಾಧ್ಯ ಮತ್ತು ಇದುವೇ ಪರಮ ಸತ್ಯ ಎಂದಾದರೆ, ಈ ರಾಜ್ಯದ ಪ್ರತಿ ಅಧಿಕಾರಿಯ ಸುತ್ತಲೂ ಕಾವಲು ಏರ್ಪಡಿಸುವ ಅನಿವಾರ್ಯತೆ ಎದುರಾಗದೇ? ಯಾಕೆಂದರೆ, ಸರಕಾರಿ ಅಧಿಕಾರಿಗಳೆಂದ ಮೇಲೆ ಒತ್ತಡ ಮಾಮುಲು. ಅದಕ್ಕೆ ಕಾಂಗ್ರೆಸ್-ಬಿಜೆಪಿ ಸರಕಾರ ಎಂಬ ವ್ಯತ್ಯಾಸವೇನೂ ಇಲ್ಲ. ‘ರಾಜಕಾರಣಿಯ ಬಳಿಯಲ್ಲಿ ತನ್ನ ಮನೆಯವರ ದೂರವಾಣಿ ಸಂಖ್ಯೆ ಇಲ್ಲದಿರಬಹುದು ಆದರೆ, ಅಧಿಕಾರಿಗಳ ಸಂಖ್ಯೆ ಇರುತ್ತದೆ..’ ಎಂದು ತಮಾಷೆ ಮಾಡುವಷ್ಟು ಇದು ಬಹಿರಂಗ ಸತ್ಯ. ಅಧಿಕಾರಿಗಳ ಸಹಕಾರ ಇಲ್ಲದೇ ಯಾವ ರಾಜಕಾರಣಿಯೂ ಜನಪ್ರಿಯ ಆಗಲಾರ. ಕೆಲವೊಮ್ಮೆ ಈ ಸಂಬಂಧ ಕೆಡುತ್ತದೆ. ಒತ್ತಡ ತಂತ್ರಗಳ ಪ್ರಯೋಗವಾಗುತ್ತದೆ. ಎಲ್ಲ ಪಕ್ಷಗಳ ಎಲ್ಲ ರಾಜಕಾರಣಿಗಳಿಗೂ ಇದು ಗೊತ್ತಿರುವಂಥದ್ದೇ. ಹೀಗಿರುವಾಗ ಇವು ಆತ್ಮಹತ್ಯೆಗೆ ಕಾರಣವಾಗುವುದೆಂಬುದನ್ನು ಎಲ್ಲಿಯವರೆಗೆ ಒಪ್ಪಿಕೊಳ್ಳಬಹುದು? ಅಥವಾ ಇದರಾಚೆಗಿರುವ ಕಾರಣಗಳನ್ನು ಹುಡುಕದಂತೆ ತಡೆಯುವುದಕ್ಕಾಗಿ `ಒತ್ತಡ'ವನ್ನು ಮುಖ್ಯ ಕಾರಣವಾಗಿ ಬಿಂಬಿಸಲಾಗುತ್ತಿದೆಯೇ? ಡಿ..ಕೆ. ರವಿಯವರ ಆತ್ಮಹತ್ಯೆಯನ್ನು ಆರಂಭದಲ್ಲಿ ಬಿಂಬಿಸಲಾದದ್ದು ಇದೇ ರೀತಿಯಲ್ಲಿ. ಸರಕಾರವೇ ಅವರ ಹತ್ಯೆ ನಡೆಸಿತು ಎಂದೇ ವಾದಿಸಲಾಗಿತ್ತು. ಅಂತಿಮವಾಗಿ ವೈಯಕ್ತಿಕ ಕಾರಣಗಳೇ ಆತ್ಮಹತ್ಯೆಯ ಹಿಂದಿದೆ ಎಂಬುದು ಬಹುತೇಕ ದೃಢವಾಯಿತು. ಗಣಪತಿಯವರ ಆತ್ಮಹತ್ಯೆಯೂ ಇದೇ ರೀತಿಯದ್ದೇ? ಜಾರ್ಜ್ ಅದರ ಒಂದು ತೋರುಮುಖವಷ್ಟೇ ಅಗಿದ್ದಾರೆಯೇ? ಅಸಲು ಮುಖ ಬೇರೆಯೇ ಇರಬಹುದೇ?




Thursday, 21 July 2016

ಚರ್ಚೆಗೀಡಾಗಬೇಕಿದ್ದ ಐಸಿಸ್, ಚರ್ಚೆಗೊಳಗಾಗುತ್ತಿರುವ ಕುರ್‍ಆನ್?

        ಅತ್ಯಂತ ಅವಾಸ್ತವಿಕ, ಅಧಾರ್ಮಿಕ, ಅತಾರ್ಕಿಕ ಮತ್ತು ಪೈಶಾಚಿಕ ವಿಚಾರಗಳನ್ನು ಪ್ರತಿನಿಧಿಸುವ ಒಂದು ಮನುಷ್ಯ ವಿರೋಧಿ ಗುಂಪಿನ ಸುತ್ತ ಈ ದೇಶದಲ್ಲಿ ಬಿರುಸಿನ ಚರ್ಚೆಯೊಂದು ಆರಂಭವಾಗಿದೆ. ಈ ಚರ್ಚೆಗೆ ವೇಗವನ್ನು ತಂದುಕೊಟ್ಟದ್ದು ಬಾಂಗ್ಲಾದ ಪ್ರಧಾನಿ ಹಸೀನಾ ಅವರ ಪಕ್ಷದ ನಾಯಕ ಇಮ್ತಿಯಾಜ್  ಖಾನ್ ಬಬೂತ ಅವರ ಪುತ್ರನಾಗಿರುವ ಮತ್ತು ಮಲೇಶ್ಯಾದ ಮೊನಾಷ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಿರುವ ರೋಹನ್ ಇಮ್ತಿಯಾಜ್, ಹಿಂದಿ ಚಿತ್ರನಟಿ ಶ್ರದ್ಧಾ ಕಪೂರ್‍ರ ಕೈ ಕುಲುಕಿ ಆ ಖುಷಿಯ ಕ್ಷಣವನ್ನು ತನ್ನ ಫೇಸ್‍ಬುಕ್ ಪುಟದಲ್ಲಿ ಚಿತ್ರ ಸಮೇತ ಹಂಚಿಕೊಂಡಿದ್ದ ನಿಬ್ರಸ್ ಇಸ್ಲಾಮ್ ಮತ್ತು ಇತರ ಮೂವರು ಪದವೀಧರ ಯುವಕರು. ಢಾಕಾದ ಹೋಲಿ ಆರ್ಟಿಸನ್ ಬೇಕರಿಯ ಮೇಲೆ ನಡೆದ ದಾಳಿಯ ಮರುದಿನವೇ ಅದರಲ್ಲಿ ಭಾಗಿಯಾದ ಈ ಐವರು ಯುವಕರ ಪೋಟೋವನ್ನು ಐಸಿಸ್ ಬಿಡುಗಡೆಗೊಳಿಸಿತ್ತು. ನಿಜವಾಗಿ, ಯಾವುದೇ ಚರ್ಚೆಯ ದಿಕ್ಕು-ದೆಸೆಯನ್ನು ನಿರ್ಧರಿಸಬೇಕಾದ ಮತ್ತು ಚರ್ಚೆಯ ಸ್ವರೂಪವನ್ನು ಸ್ಪಷ್ಟಪಡಿಸಿಕೊಳ್ಳಬಹುದಾದ ಸಂದರ್ಭ ಇದು. ಆದರೆ ಢಾಕಾದ ಆ ಐವರು ಬಂದೂಕುಧಾರಿಗಳ ಹಿನ್ನೆಲೆಯನ್ನು ಮತ್ತು ಐಸಿಸ್‍ಗೂ ಅವರಿಗೂ ನಡುವೆ ಇರಬಹುದಾದ ಶಂಕಿತ ಸಂಬಂಧದ ಕುತೂಹಲವನ್ನು ಅಲ್ಲಿಗೇ ಕೈಬಿಟ್ಟು ಈ ದೇಶದಲ್ಲಿ ಸದ್ಯ ಚರ್ಚೆಗಳು ಮುಂದೆ ಸಾಗುತ್ತಿವೆ. ‘ಮುಲ್ಲಾ ಇಸ್ಲಾಮ್-ಅಲ್ಲಾ ಇಸ್ಲಾಮ್’, ‘ಪ್ರವಾದಿ ಮುಹಮ್ಮದ್(ಸ)’, ‘ಪವಿತ್ರ ಕುರ್‍ಆನ್‍ನಲ್ಲಿ ಕಿತ್ತು ಹಾಕಬೇಕಾದ ಭಾಗಗಳು’, ‘ಹತ್ಯಾಕಾಂಡಕ್ಕೆ ಪ್ರಚೋದಕವಾಗುವ ಸೂಕ್ತಗಳು’, ‘ಪೊಲಿಟಿಕಲ್ ಇಸ್ಲಾಮ್’.. ಮುಂತಾದುವುಗಳೇ ಚರ್ಚೆಗಳ ಕೇಂದ್ರ ಬಿಂದುವಾಗಿಬಿಟ್ಟಿದೆ. ಈ ಚರ್ಚೆಯಲ್ಲಿ ಶ್ರದ್ಧಾ ಕಪೂರ್ ಮಾಯವಾಗಿ ಬಿಟ್ಟಿದ್ದಾರೆ. ಆ ಭಯೋತ್ಪಾದಕರು ಕಲಿತ ಸೆಕ್ಯುಲರ್ ವಿಶ್ವವಿದ್ಯಾಲಯಗಳು ಕಣ್ಮರೆಯಾಗಿವೆ. ಅವರ ಸೆಕ್ಯುಲರ್ ಮನೋಭಾವದ ಹೆತ್ತವರು ಕೂಡಾ ಚರ್ಚೆಯ ವ್ಯಾಪ್ತಿಯೊಳಗೆ ಸೇರಿಕೊಳ್ಳುತ್ತಿಲ್ಲ. ಇಡೀ ಚರ್ಚೆಯಲ್ಲಿ ಒಂದು ಬಗೆಯ ಸೆಲೆಕ್ಟಿವ್‍ನೆಸ್ ಕಾಣಿಸುತ್ತಿದೆ. ನಿಜವಾಗಿ, ಇಡೀ ಚರ್ಚೆಯ ಕೇಂದ್ರ ಬಿಂದುವಾಗಬೇಕಾದದ್ದು ಐಸಿಸ್. ಐಸಿಸ್‍ನ ಹುಟ್ಟು ಎಲ್ಲಿ, ಅದರ ಸಂಸ್ಥಾಪಕ ಯಾರು, ಆತ ಎಲ್ಲಿ ಓದಿದವ, ಎಷ್ಟು ದೊಡ್ಡ ಮೌಲ್ವಿ, ಆತನಿಗೂ ಇಸ್ಲಾಮ್‍ಗೂ ಏನು ಮತ್ತು ಎತ್ತಣ ಸಂಬಂಧ, ಐಸಿಸ್‍ಗೆ ಇಷ್ಟು ವ್ಯಾಪಕ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳು ಹರಿದುಬರುತ್ತಿರುವುದು ಎಲ್ಲಿಂದ ಮತ್ತು ಅದರ ದುಡ್ಡಿನ ಮೂಲ ಯಾವುದು, ಅವರಿಂದ ಪೆಟ್ರೋಲನ್ನು ಖರೀದಿಸುತ್ತಿರುವವರು ಯಾರು ಮತ್ತು ಅವರು ಯಾವ ಕಂಪೆನಿಗೆ ಸೇರಿದವರು, ಅವರಿಗೂ ಜಾಗತಿಕ ಪೆಟ್ರೋ ಮಾರುಕಟ್ಟೆಗೂ ಇರುವ ಸಂಬಂಧ ಏನು, ತಂತ್ರಜ್ಞರು ಯಾರು.. ಎಂಬಲ್ಲಿಂದ ಹಿಡಿದು, ಐಸಿಸ್‍ನ ಹುಟ್ಟಿಗೆ, ಬೆಳವಣಿಗೆಗೆ ಮತ್ತು ಕ್ರೌರ್ಯಕ್ಕೆ ಬೆಂಬಲವಾಗಿ ನಿಂತವರು ಯಾರು ಮತ್ತು ಅವರಿಗೂ ಇಸ್ಲಾಮ್‍ಗೂ ಯಾವ ರೀತಿಯ ಸಂಬಂಧ ಇದೆ.. ಎಂಬಲ್ಲಿ ವರೆಗೆ ವಿಸ್ತೃತ ಚರ್ಚೆ ನಡೆಯಬೇಕಾದುದು ಎಲ್ಲ ರೀತಿಯಲ್ಲಿ ನ್ಯಾಯಯುತವಾಗಿತ್ತು. ಆದರೆ ಇವತ್ತು ಐಸಿಸ್ ಬಹುತೇಕ ಚರ್ಚೆಯಲ್ಲಿ ನಾಪತ್ತೆಯಾಗಿದೆ. ಚರ್ಚೆಯ ಮಧ್ಯೆ ಅಲ್ಲೊಮ್ಮೆ ಇಲ್ಲೊಮ್ಮೆ ಉಲ್ಲೇಖಕ್ಕೆ ಒಳಗಾಗುವುದನ್ನು ಬಿಟ್ಟರೆ ಉಳಿದಂತೆ ಐಸಿಸ್ ಯಾವ ಧರ್ಮವನ್ನು ಪ್ರತಿನಿಧಿಸುವುದಿಲ್ಲವೋ ಆ ಧರ್ಮವನ್ನೇ ಐಸಿಸ್‍ನ ಕೃತ್ಯಗಳಿಗೆ ಹೊಣೆಯೆಂಬಂತೆ ಬಿಂಬಿಸಿ ಚರ್ಚೆಗೊಳಪಡಿಸಲಾಗುತ್ತಿದೆ. ಈ ಚರ್ಚೆಗಳ ಮಧ್ಯೆ ಮಧ್ಯೆ ಕೇರಳದಲ್ಲಿ ಒಂದು ಜಡನ್ ಮಂದಿಯಿಂದ ಐಸಿಸ್‍ಗೆ ಸೇರ್ಪಡೆ, ಬಂಗಾಳದಲ್ಲಿ ಐಸಿಸ್ ವ್ಯಕ್ತಿಯ ಬಂಧನ, ಐಸಿಸ್ ಸೇರ್ಪಡೆಯನ್ನು ವಿರೋಧಿಸಿದ ತಾಯಿಯನ್ನೇ ಕೊಂದ ಸೌದಿ ಯುವಕ.. ಎಂಬಿತ್ಯಾದಿ ಬ್ರೇಕಿಂಗ್ ಸುದ್ದಿಗಳನ್ನು ಉಲ್ಲೇಖಿಸಲಾಗುತ್ತಿದೆ. ಅಷ್ಟಕ್ಕೂ, ಕೊಲೆಗಡುಕರು ಪವಿತ್ರ ಕುರ್‍ಆನ್ ಓದುತ್ತಾರೆಂಬುದು ಅಥವಾ ಅಲ್ಲಾಹು ಅಕ್ಬರ್, ಜಿಹಾದ್.. ಮುಂತಾದ ಪದಗಳನ್ನು ಉಚ್ಚರಿಸುತ್ತಾರೆಂಬುದು ಅವರನ್ನು ಇಸ್ಲಾಮ್‍ನ ಪ್ರತಿನಿಧಿಗಳಾಗಿಸಬಲ್ಲುದೇ? ಐಸಿಸ್ ಅನ್ನು ನೋಡಿಕೊಂಡು ಪವಿತ್ರ ಕುರ್‍ಆನಿನ ಮೇಲೆ ಆರೋಪ ಹೊರಿಸುವುದೆಂದರೆ, ಅಶ್ವತಿಗೆ ಫಿನಾಯಿಲ್ ಕುಡಿಸಿದ ವಿದ್ಯಾರ್ಥಿನಿಯರನ್ನು ನೋಡಿ ನರ್ಸಿಂಗ್ ಪಠ್ಯಗಳ ಮೇಲೆ ಆರೋಪ ಹೊರಿಸಿದಷ್ಟೇ ಹಾಸ್ಯಾಸ್ಪದವಾಗುವುದಿಲ್ಲವೇ?
  ಅಷ್ಟಕ್ಕೂ, ಪವಿತ್ರ ಕುರ್‍ಆನಿನ ಸೂಕ್ತಗಳು ಎಷ್ಟು ಶಾಂತಿಪೂರ್ಣ ಮತ್ತು ಮನುಷ್ಯ ಪ್ರೇಮಿ ಎಂಬುದಕ್ಕೆ ಧಾರಾಳ ಉದಾಹರಣೆಗಳನ್ನು ಇಲ್ಲಿ ನೀಡಬಹುದು. ಆದರೆ ಸದ್ಯದ ಅಗತ್ಯ ಈ ಸೂಕ್ತಗಳ ಉಲ್ಲೇಖ ಅಲ್ಲ. ಈಗಿನ ತುರ್ತು ಅಗತ್ಯ ಏನೆಂದರೆ, ಈ ಸೂಕ್ತಗಳಿಗೆ ತೀರಾ ವಿರುದ್ಧವಾಗಿ ವರ್ತಿಸುವ ಐಸಿಸ್‍ನ ಬಗ್ಗೆ ಅತ್ಯಂತ ಪ್ರಾಮಾಣಿಕ ವಿಶ್ಲೇಷಣೆ ನಡೆಸುವುದು. ಅದರ ಸ್ಥಾಪಕನ ಕುರ್‍ಆನ್ ಪಾಂಡಿತ್ಯವನ್ನೊಮ್ಮೆ ತಲಾಶೆಗೆ ಒಳಪಡಿಸುವುದು. ಆತನ ತೆಕ್ಕೆಗೆ ಬೀಳುವ ಅಥವಾ ಬೀಳಿಸುತ್ತಿರುವವರ ಸಂಪರ್ಕ ಜಾಲವನ್ನು ಪತ್ತೆ ಹಚ್ಚುವುದು. ಇಂಥ ಪ್ರಯತ್ನಗಳಾಗಿಬಿಟ್ಟರೆ ಐಸಿಸ್‍ಗೂ ಇಸ್ಲಾಮ್‍ಗೂ ನಡುವೆ ಇರುವ ಸಂಬಂಧ ಏನು ಎಂಬುದು ಸ್ಪಷ್ಟವಾಗುತ್ತದೆ. ಆದರೆ, ಯಾವ ಚರ್ಚೆಯೂ ಈ ಬಗೆಯ ತಿರುವನ್ನು ಪಡಕೊಳ್ಳುವುದೇ ಇಲ್ಲ. ಹಾಗಂತ, ಐಸಿಸ್ ಎಂಬುದು ಭೂಲೋಕದ ಹೊರಗೆ ಅಸ್ತಿತ್ವದಲ್ಲಿರುವ ಜೀವಿಗಳ ಹೆಸರೇನೂ ಅಲ್ಲವಲ್ಲ, 160 ಕೋಟಿ ಮುಸ್ಲಿಮರಿರುವ ಈ ಜಗತ್ತಿನಲ್ಲಿ ಸುಮಾರು ಸಾವಿರ ಸಂಖ್ಯೆಯಲ್ಲಿರುವ ಒಂದು ಗುಂಪಿನ ಕ್ರೌರ್ಯವನ್ನು ಎತ್ತಿಕೊಂಡು, ಈ 160 ಕೋಟಿ ಮಂದಿ ಅನುಸರಿಸುವ ಧರ್ಮಗ್ರಂಥವೇ ಇದಕ್ಕೆ ಕಾರಣ ಅನ್ನುವುದು ಮತ್ತು ಅದನ್ನು ತಿದ್ದಬೇಕು ಅನ್ನುವುದು ಯಾವ ಬಗೆಯ ಪ್ರಗತಿಪರತೆ? ನಿಜವಾಗಿ, ತಪಾಸಣೆಗೆ ಒಳಪಡಿಸಬೇಕಾದುದು ಈ ಸಾವಿರ ಸಂಖ್ಯೆಯಲ್ಲಿರುವ ಮಂದಿಯನ್ನು. ಅವರಿಗೆ ಹಣಕಾಸು ನೆರವು ನೀಡುತ್ತಿರುವವರನ್ನು. ಅವರನ್ನು ಈ ಕೃತ್ಯದಲ್ಲಿ ಭಾಗಿಯಾಗಿಸುವವರನ್ನು ಮತ್ತು ಈ ಕೊಲೆಗಡುಕರ ಧಾರ್ಮಿಕ ಜ್ಞಾನವನ್ನು.
  ಸಾಮಾನ್ಯವಾಗಿ ಐಸಿಸ್, ಅಲ್‍ಖಾಯ್ದಾ, ತಾಲಿಬಾನ್, ಅಲ್‍ಶಬಾಬ್ ಮುಂತಾದುವುಗಳ ಹುಟ್ಟಿಗೂ ಅಮೇರಿಕ, ಫ್ರಾನ್ಸ್, ರಶ್ಯಾ.. ಮುಂತಾದ ರಾಷ್ಟ್ರಗಳ ಅತಿಕ್ರಮಣಕ್ಕೂ ಸಂಬಂಧವನ್ನು ಕಲ್ಪಿಸಲಾಗುತ್ತದೆ. ಸದ್ದಾಮ್‍ರನ್ನು ಪದಚ್ಯುತಗೊಳಿಸಿದ ಬಳಿಕ ಐಸಿಸ್ ಹುಟ್ಟಿಕೊಂಡಿತು. ಅಫಘಾನಿಸ್ತಾನದಲ್ಲಿ ಅಮೇರಿಕ ಮತ್ತು ರಶ್ಯಾದ ಅತಿಕ್ರಮಣಗಳು ಅಲ್‍ಖಾಯ್ದಾ, ತಾಲಿಬಾನ್‍ಗಳನ್ನು ಹುಟ್ಟುಹಾಕಿತು. ಒಂದು ರೀತಿಯಲ್ಲಿ, ಈ ಗುಂಪುಗಳ ಹುಟ್ಟಿಗೆ ಸ್ಥಳೀಯ ರಾಜಕೀಯ ಕಾರಣಗಳಿವೆಯೇ ಹೊರತು ಧರ್ಮಕ್ಕೂ ಅವಕ್ಕೂ ಸಂಬಂಧ ಇರುವ ಯಾವ ಕುರುಹುಗಳೂ ಕಾಣಿಸುತ್ತಿಲ್ಲ. ತಮ್ಮ ಗುಂಪಿನ ಬೆಳವಣಿಗೆಗಾಗಿ ಆ ಬಳಿಕ ಧರ್ಮದ
ಹೆಸರನ್ನೋ ಪದಗಳನ್ನೋ ಅವು ಬಳಸಿಕೊಂಡಿರಬಹುದು. ಅಷ್ಟೇ ಅಲ್ಲ, ತಮ್ಮ ಹುಟ್ಟಿಗೆ ಕಾರಣರಾದವರನ್ನೇ ಆ ಬಳಿಕ ಅವು ತಮ್ಮ ಪೋಷಕರಾಗಿ ಸ್ವೀಕರಿಸಿರಲೂಬಹುದು. ಜನರನ್ನು ಸೆಳೆಯಲು ರಾಜಕಾರಣಿಗಳು ಯಾವೆಲ್ಲ ಕಸರತ್ತುಗಳನ್ನು ನಡೆಸಬಹುದೋ ಆ ಎಲ್ಲ ಕಸರತ್ತುಗಳನ್ನು ಈ ಗುಂಪುಗಳೂ ಇದೀಗ ಮಾಡುತ್ತಿರಬಹುದು. ತಮ್ಮ ಗುಂಪಿಗೆ ಜನರನ್ನು ಒದಗಿಸುವ ಸಾಮರ್ಥ್ಯ ಎಲ್ಲಿಯವರೆಗೆ ಅಲ್ಲಾಹು ಅಕ್ಬರ್, ಜಿಹಾದ್ ಮುಂತಾದ ಪದಗಳಿಗೆ ಇವೆಯೋ ಅಲ್ಲಿಯ ವರೆಗೆ ಆ ಪದಗಳ ದುರ್ಬಳಕೆ ಮಾಡುತ್ತಿರಬಹುದು. ಒಂದೊಮ್ಮೆ ಈ ಪದಗಳಿಂದ ಬೇಳೆ ಬೇಯುತ್ತಿಲ್ಲ ಎಂಬುದು ಮನದಟ್ಟಾದರೆ, ಬೇರೆ ಬೆಲೆಬಾಳುವ ಪದಗಳ ಮೊರೆ ಹೋಗಬಹುದು. ಹಾಗಂತ, ಈ ವಿಶಾಲ ಜಗತ್ತಿನಲ್ಲಿ  ಪದಗಳಿಗೆ ಕೊರತೆಯೇನೂ ಇಲ್ಲವಲ್ಲ.
  ಅಂದಹಾಗೆ, ಈ ದೇಶದಲ್ಲಿ ಸದ್ಯ ನಡೆಯುತ್ತಿರುವ ಚರ್ಚೆಯ ದಿಕ್ಕು ತಪ್ಪಿದೆ. ನಿಜವಾಗಿಯೂ ಚರ್ಚೆಗೀಡಾಗಬೇಕಾದವರು ಚರ್ಚೆಯಿಂದ ತಪ್ಪಿಸಿಕೊಂಡಿದ್ದಾರೆ. ಒಂದು ವೇಳೆ, ಅವರನ್ನು ಚರ್ಚೆಯ ವ್ಯಾಪ್ತಿಗೆ ಒಳಪಡಿಸಿದರೆ ಮತ್ತು ಅವರೇ ಚರ್ಚೆಯ ಕೇಂದ್ರಬಿಂದುವಾದರೆ ಪವಿತ್ರ ಕುರ್‍ಆನ್ ಏನು ಮತ್ತು ಅವರು ಏನು ಎಂಬುದು ಸ್ಪಷ್ಟವಾಗುತ್ತದೆ. ಅಲ್ಲಿಯ ವರೆಗೆ ಗೊಂದಲಗಳು, ವದಂತಿಗಳು ಮತ್ತು ಸುಳ್ಳುಗಳಿಗಷ್ಟೇ ಜಯ ಸಿಗಬಹುದು.

ನಮ್ಮ ಸಂವೇದನೆ ಮತ್ತು ಒಂದು ಮೃತದೇಹ

      ಚೆನ್ನೈನ ನುಂಗಬಾಕ್ಕಂ ರೈಲ್ವೆ ನಿಲ್ದಾಣದಲ್ಲಿ ನೂರಾರು ಮಂದಿಯ ಎದುರೇ  ವಾರಗಳ  ಸ್ವಾತಿ ಎಂಬ ತರುಣಿಯನ್ನು ಕಡಿದು ಹತ್ಯೆ ನಡೆಸಲಾದ ಘಟನೆ ದೇಶದಾದ್ಯಂತ ಚರ್ಚೆಯಲ್ಲಿರುವ ಈ ಸಂದರ್ಭದಲ್ಲೇ,  ನಮ್ಮ ರಾಜ್ಯದ ತಜ್ಞರ ಸಮಿತಿಯೊಂದು ದಂಗುಬಡಿಸುವ ಕೆಲವು ಮಾಹಿತಿಗಳನ್ನು ಬಿಡುಗಡೆಗೊಳಿಸಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಉಗ್ರಪ್ಪರ ನೇತೃತ್ವದಲ್ಲಿ ರಚಿಸಲಾದ ರಾಜ್ಯ ಸಮಿತಿಯನ್ನು ಹೊರಗೆಡಹಿದೆ. ಅಂದಹಾಗೆ,   ನುಂಗಬಾಕ್ಕಂ ಘಟನೆಗೂ ತಜ್ಞರ  ಮಾಹಿತಿಗೂ ನಡುವೆ ಬಾಹ್ಯನೋಟಕ್ಕೆ ಹೋಲಿಕೆ ಅಸಂಬದ್ಧ ಅನಿಸಬಹುದು. ತಜ್ಞರ ಸಮಿತಿಯ ಮಾಹಿತಿಯೊಂದಿಗೆ ಹತ್ಯೆಯೊಂದನ್ನು ಹೋಲಿಸುವುದು ಅಪ್ರಸ್ತುತ ಎಂದೂ ಹೇಳಬಹುದು. ಆದರೆ, ಆಂತರಿಕವಾಗಿ ಇವೆರಡರ ನಡುವೆ ಎಷ್ಟು ಹತ್ತಿರದ ಹೋಲಿಕೆ ಇದೆಯೆಂದರೆ, ನಮ್ಮ ಸಂವೇದನಾರಹಿತ ಮನಸ್ಥಿತಿಗೆ ಇವು ತಾಜಾ ಉದಾಹರಣೆಯಾಗಿ ಎದುರು ನಿಲ್ಲುತ್ತದೆ. ಅಷ್ಟಕ್ಕೂ, ನುಂಗಬಾಕ್ಕಂ ಘಟನೆ ಓರ್ವ ಯುವತಿಯ ಹತ್ಯೆಯ ಕಾರಣಕ್ಕಾಗಿ ದೇಶದ ಗಮನ ಸೆಳೆದದ್ದಲ್ಲ. ಹತ್ಯೆ, ಅತ್ಯಾಚಾರ, ಲೈಂಗಿಕ ಹಲ್ಲೆ .. ಮುಂತಾದುವುಗಳೆಲ್ಲ ‘ಸಾಮಾನ್ಯ’ ಪಟ್ಟಿಗೆ ಸೇರಿರುವ ಈ ದಿನಗಳಲ್ಲಿ ‘ಸ್ವಾತಿ’ಯ ಹತ್ಯೆ ಅಸಾಮಾನ್ಯವಾದುದೇನೂ ಆಗಿರಲಿಲ್ಲ. ರಾಷ್ಟ್ರಮಟ್ಟದಲ್ಲಿ ಚರ್ಚೆಗೊಳಗಾಗಬೇಕಾದ ಪ್ರಭಾವಿ ವ್ಯಕ್ತಿತ್ವವೂ ಆಕೆಯದ್ದಲ್ಲ. ಇನ್ಫೋಸಿಸ್ ಉದ್ಯೋಗಿ ಎಂಬುದನ್ನು ಬಿಟ್ಟರೆ ಉಳಿದಂತೆ ಆಕೆ ಸಾಮಾನ್ಯ ತರುಣಿ. ಹೀಗಿದ್ದೂ, ಈ ಹತ್ಯೆ ಯಾಕೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೊಳಗಾಯಿತೆಂದರೆ, ನುಂಗಬಾಕ್ಕಂ ರೈಲ್ವೆ ನಿಲ್ದಾಣದಲ್ಲಿ ಸೇರಿದ್ದ ನೂರಕ್ಕಿಂತಲೂ ಅಧಿಕ ಮಂದಿಯ ಸಂವೇದನಾ ರಹಿತ ವರ್ತನೆಯಿಂದ. ಎಲ್ಲರ ಎದುರೇ ಮಾತ್ರವಲ್ಲ, ಎಲ್ಲರ ನಡುವೆಯೇ ಹತ್ಯೆಯೊಂದು ನಡೆದಾಗಲೂ ಜನರು ತಡೆಯುವುದು ಬಿಡಿ, ಕನಿಷ್ಠ ಯುವತಿಯನ್ನು ಆಸ್ಪತ್ರೆಗೆ ದಾಖಲಿಸುವ ಯತ್ನವನ್ನೂ ಮಾಡುವುದಿಲ್ಲ ಎಂದರೆ ಏನರ್ಥ? ಎರಡು ಗಂಟೆಗಳ ಕಾಲ ಆ ತರುಣಿಯ ಮೃತದೇಹ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದುಕೊಂಡಿತ್ತು ಅಂದರೆ ಏನೆನ್ನಬೇಕು? ಏಕವ್ಯಕ್ತಿಯಿಂದ ಇಂಥದ್ದೊಂದು ಹತ್ಯೆ ನಡೆಯುವಾಗಲೂ ನೂರಾರು ಮಂದಿಯ ಗುಂಪು ಮೌನವಾಗಿ ವೀಕ್ಷಿಸಿದ್ದು ಏನನ್ನು ಸೂಚಿಸುತ್ತದೆ? ಇದು ಸ್ವರಕ್ಷಣಾ ತಂತ್ರವೇ, ನಮಗೇಕೆ ಉಸಾಬರಿ ಎಂಬ ಉಡಾಫೆಯೇ ಅಥವಾ ಸಂವೇದನೆಯ ಮಟ್ಟ ಕುಸಿಯುತ್ತಿರುವುದರ ಸೂಚನೆಯೇ? ಅಂದಹಾಗೆ, ರಾಜ್ಯ ತಜ್ಞರ ಸಮಿತಿ ಬಿಡುಗಡೆಗೊಳಿಸಿರುವ ವರದಿಯಲ್ಲೂ ಅತ್ಯಂತ ದಟ್ಟವಾಗಿ ಎದುರಾಗುವುದು ಈ ಸಂವೇದನಾ ರಹಿತ ನಿಷ್ಕರುಣ ನೀತಿಯೇ. ಮಹಿಳೆಯರ ಮೇಲೆ ರಾಜ್ಯದಲ್ಲಿ ನಡೆದಿರುವ ಅತ್ಯಾಚಾರ, ಚುಡಾವಣೆ ಸಹಿತ ಲೈಂಗಿಕ ಹಲ್ಲೆ ಪ್ರಕರಣಗಳಲ್ಲಿ ಶಿಕ್ಷೆಯ ಪ್ರಮಾಣ ಎಷ್ಟು ಕನಿಷ್ಠತಮ ಅಂದರೆ ಬರೇ 3%. ಅದೇ ವೇಳೆ ಸರಕಾರದಿಂದ ಪರಿಹಾರ ಪಡೆದ ಸಂತ್ರಸ್ತ ಸಂಖ್ಯೆ ಬರೇ 5% ಎಂಬುದನ್ನು ಇದರ ಜೊತೆಗಿಟ್ಟು ನೋಡಿದರೆ, ಒಟ್ಟಾರೆ ಪರಿಸ್ಥಿತಿ ಎಷ್ಟು ಕರಾಳವಾದುದು ಎಂಬುದು ಸ್ಪಷ್ಟವಾಗುತ್ತದೆ.  ಮಹಿಳೆಯರ ಕುರಿತಂತೆ ಭಾರತೀಯ ಸಂಸ್ಕ್ರತಿಯಲ್ಲಿ ಏನೆಲ್ಲ ಗೌರವಾರ್ಹ ಪದಗಳಿವೆಯೋ ಅವೆಲ್ಲವನ್ನೂ ತಮಾಷೆ ಮಾಡುವ ರೀತಿಯಲ್ಲಿ ದೇಶದಲ್ಲಿ ಘಟನೆಗಳು ಪ್ರತಿನಿತ್ಯ ನಡೆಯುತ್ತಿವೆ. ನಿರ್ಭಯ ಪ್ರಕರಣದ ಬಳಿಕ ‘ಲೈಂಗಿಕ ಹಲ್ಲೆಗಳು ತೀವ್ರ ಚರ್ಚೆಗೆ ಒಳಗಾದುವು. ನಿರ್ಭಯ ನಿಧಿ ಸ್ಥಾಪನೆಯಾಯಿತು. ಕಾನೂನುಗಳಲ್ಲಿ ಮಾರ್ಪಾಡುಗಳನ್ನು ಮಾಡಲಾಯಿತು. ಅತ್ಯಾಚಾರಕ್ಕೆ, ಹತ್ಯೆಗೆ, ಲೈಂಗಿಕ ಚುಡಾವಣೆಗೆ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಯಿತು. ಹಾಗಂತ, ಇವೆಲ್ಲ ಯಾವ ಪ್ರಯೋಜನಕ್ಕೂ ಬಂದಿಲ್ಲ ಎಂದು ಅರ್ಥವಲ್ಲ. ಆದರೆ, ಹೆಣ್ಣಿಗೆ ಈ ಮಣ್ಣನ್ನು ಸುರಕ್ಷಿತಗೊಳಿಸಲು ಇವುಗಳಿಗೆ ಇನ್ನೂ ಸಾಧ್ಯವಾಗಿಲ್ಲ. ನಿರ್ಭಯಳ ಮೇಲಿನ ಕ್ರೌರ್ಯವನ್ನೂ ಮೀರಿಸುವ ಕ್ರೌರ್ಯಕ್ಕೆ ಇತ್ತೀಚೆಗೆ ಕೇರಳದ ಜಿಶಾ ಎಂಬ ಯುವತಿ ತುತ್ತಾದಳು. ಅಷ್ಟಕ್ಕೂ, ಹೆಣ್ಣನ್ನು ಅಂಜತಾ, ಎಲ್ಲೋರಾ, ಮೊಹಂಜದಾರೋ ಶಿಲ್ಪ ಕಲೆಗಳ ಪಡಿಯಚ್ಚುಗಳಾಗಿ ನೋಡುವ ಮತ್ತು ವಿಕೃತವಾಗಿ ಅನುಭವಿಸುವ ವಾತಾವರಣವೇಕೆ ಬಲ ಪಡೆಯುತ್ತಿದೆ? ಪುರುಷರನ್ನು ಅದಕ್ಕೆ ಪ್ರಚೋದಿಸುವ ಅಂಶ ಯಾವುದು? ಮಾದಕ ದ್ರವ್ಯವೇ, ಮದ್ಯವೇ, ಅಶ್ಲೀಲ ವೆಬ್‍ಸೈಟುಗಳೇ? ಅಂದಹಾಗೆ, ಲೈಂಗಿಕ ಹಲ್ಲೆಯಲ್ಲಿ ಭಾಗಿಯಾಗುವವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂಬೊಂದು ಆಗ್ರಹ ಆಗಾಗ ಮೊಳಗುತ್ತಿರುತ್ತದೆ. ಅದರಂತೆ, ನಿರ್ಭಯ ಘಟನೆಯ ಬಳಿಕ ಕೆಲವೊಂದು ಪ್ರಕರಣಗಳಲ್ಲಿ ಮರಣದಂಡನೆಯನ್ನು ವಿಧಿಸಿದ್ದೂ ನಡೆಯಿತು. ಹಾಗಿದ್ದೂ, ಲೈಂಗಿಕ ಹಲ್ಲೆಗಳಲ್ಲಿ ಭಾರೀ ಬದಲಾವಣೆಯೇನೂ ಕಾಣಿಸುತ್ತಿಲ್ಲ. ರಾಜ್ಯದ ತಜ್ಞರು ಬಿಡುಗಡೆಗೊಳಿಸಿದ ಮಾಹಿತಿಯನ್ನು ನೋಡುವಾಗಲಂತೂ ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಎದುರಾಗುತ್ತವೆ. ನಗರಗಳ ಹೊರಗೆ ನಡೆಯುವ ಲೈಂಗಿಕ ಹಲ್ಲೆಗಳಿಗೂ ನಗರಗಳಲ್ಲಿ ನಡೆಯುವ ಹಲ್ಲೆಗಳಿಗೂ ನಡುವೆ ವ್ಯತ್ಯಾಸಗಳಿವೆಯೇ? ಆರ್ಥಿಕ ಸಾಮಾಜಿಕ ಆಯಾಮಗಳನ್ನು ಅವು ಹೊಂದಿದೆಯೇ? ನಿರ್ಭಯ, ಜಿಶಾ, ಸ್ವಾತಿ... ಮುಂತಾದ ಕೆಲವೇ ಕೆಲವು ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುವಾಗ, ನಗರಗಳ ಹೊರಭಾಗದಲ್ಲಿ ನಡೆಯುವ ಲೈಂಗಿಕ ಹಲ್ಲೆಗಳು ಸುದ್ದಿಗೂ ಅನರ್ಹವಾಗುವಷ್ಟು ಅಗ್ಗವಾಗುತ್ತಿರುವುದೇಕೆ? ಒಂದು ವೇಳೆ, ನಗರಗಳಲ್ಲಿ ನಡೆಯುವ ಲೈಂಗಿಕ ಹಲ್ಲೆಗಳ ಬಗ್ಗೆ ಮಾಧ್ಯಮಗಳು ಕೊಡುವ ಗಮನವನ್ನು ಇತರ ಕಡೆಗಳ ಹಲ್ಲೆಗಳಿಗೂ ನೀಡಿದರೆ ಶಿಕ್ಷಾ ಪ್ರಮಾಣದಲ್ಲಿ ಕಳವಳಕಾರಿ ಕುಸಿತ ಕಾಣಿಸುತ್ತಿತ್ತೇ? ಇಡೀ ದೇಶದಲ್ಲಿ ಪ್ರತಿ 100 ಲೈಂಗಿಕ ಹಲ್ಲೆ ಪ್ರಕರಣಗಳಲ್ಲಿ ಕೇವಲ 2.8% ಮಂದಿಗೆ ಮಾತ್ರ ಶಿಕ್ಷೆಯಾಗುತ್ತದೆಂಬುದು ಏನನ್ನು ಸೂಚಿಸುತ್ತದೆ?
  ನಿಜವಾಗಿ, ಹೆಣ್ಣಿನ ಮೇಲಿನ ಗೌರವ ನಾಲಗೆಯಿಂದ ವ್ಯಕ್ತವಾಗಬೇಕಾದದ್ದಲ್ಲ. ಅದು ವರ್ತನೆಯಿಂದ ಮತ್ತು ವ್ಯಕ್ತಿತ್ವದಿಂದ ವ್ಯಕ್ತವಾಗಬೇಕು. ಲೈಂಗಿಕ ಸಂತ್ರಸ್ತೆಯೊಂದಿಗೆ ರಾಜಸ್ತಾನದ ಮಹಿಳಾ ಆಯೋಗದ ಅಧ್ಯಕ್ಷೆ ಸೆಲ್ಫಿ ಕ್ಲಿಕ್ಕಿಸಿದುದೇ ಇಂಥ ಸಂತ್ರಸ್ತರ ಬಗ್ಗೆ ಸಾಮಾಜಿಕವಾಗಿ ಇರುವ ಉಡಾಫೆ ಮನೋಭಾವವನ್ನು ಸ್ಪಷ್ಟಪಡಿಸುತ್ತದೆ. ಈ ದೇಶದಲ್ಲಿ ಹೆಣ್ಣು ದೇವದಾಸಿಯಾಗಿ, ಸತಿ ಹೋಗುವವಳಾಗಿ, ವೈಧವ್ಯದ ಶೋಕತಪ್ತ ಜೀವಿಯಾಗಿ.. ಹೀಗೆ ಬೇರೆ ಬೇರೆ ಶೋಷಿತ ಪಾತ್ರವನ್ನು ನಿಭಾಯಿಸುತ್ತಾ ಬಂದಿದ್ದಾಳೆ.
ಸ್ವಾತಿ
ಶೋಷಣೆಯನ್ನೇ ಗೌರವವೆಂದೂ ಶೋಷಕರನ್ನೇ ಹಿತೈಷಿಗಳೆಂದೂ ನಂಬಿ ಬದುಕಿದ್ದಾಳೆ. ಆದ್ದರಿಂದಲೇ, ಅನೇಕ ಬಾರಿ ಆಕೆ ಅವಮಾನವನ್ನೂ ಸಹಿಸಿಕೊಳ್ಳುತ್ತಾಳೆ. ಲೈಂಗಿಕ ಹಿಂಸಾಚಾರವನ್ನೂ ಅಡಗಿಸಿಡುತ್ತಾಳೆ. ಅಲ್ಲದೇ, ಸಮಾಜದ ನಿಲುವೂ ಅನೇಕ ಬಾರಿ ಉಡಾಫೆತನದ್ದಾಗುವುದಕ್ಕೆ ಪರಂಪರಾಗತ ಜೀವನ ಕ್ರಮದ ಪ್ರಭಾವವೂ ಇರುತ್ತದೆ. ಹೆಣ್ಣನ್ನು ದ್ವಿತೀಯ ದರ್ಜೆಯಲ್ಲಿಟ್ಟು ನೋಡುತ್ತಾ ಬಂದ ಪರಂಪರೆಯು ಸಾಮಾನ್ಯವಾಗಿ ಹೆಣ್ಣಿನ ಮೇಲಿನ ಅನ್ಯಾಯವನ್ನು ಗಂಡಿನ ಮೇಲಾದ ಅನ್ಯಾಯದಷ್ಟು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇರುವುದಿಲ್ಲ. ‘ಹೆಣ್ಣು ಅಂದರೆ ಇಷ್ಟೇ...’ ಎಂಬೊಂದು ಪರಂಪರಾಗತ ಭಾವನೆಯು ಆಕೆಗೆ ಸಿಗಬೇಕಾದ ಅಗತ್ಯ ಗೌರವವನ್ನೂ ಅನೇಕ ಬಾರಿ ತಪ್ಪಿಸಿ ಬಿಡುತ್ತದೆ. ಆಕೆಯ ಕುರಿತಾದ ನಿರ್ಲಕ್ಷ್ಯದ ನಿಲುವು ಹಲ್ಲೆಯ ಸಂದರ್ಭದಲ್ಲೂ ಸಂವೇದನಾ ರಹಿತಗೊಳಿಸುವಂತೆ ಮಾಡುವುದಕ್ಕೆ ಸಾಧ್ಯವಿದೆ. ಬಹುಶಃ, ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷಾ ಪ್ರಮಾಣ ಇಷ್ಟು ಕಡಿಮೆ ಆಗಿರುವುದಕ್ಕೆ ಇದೂ ಒಂದು ಕಾರಣ ಇರಬಹುದು. ಕೇಸು ದಾಖಲಿಸದಂತೆ ಅಥವಾ ದಾಖಲಿಸಿದರೂ ನ್ಯಾಯಾಲಯಕ್ಕೆ ಹಾಜರಾಗಿ ಸಾಕ್ಷಯ ನುಡಿಯದಂತೆ ಸಂತ್ರಸ್ತೆಯ ಮೇಲೆ ಪುರುಷರ ಒತ್ತಡ ಇದರ ಹಿಂದೆ ಕೆಲಸ ಮಾಡಿರಬಹುದು.
        ಏನೇ ಆಗಲಿ, ಸ್ವಾತಿ ಎಂಬ ತರುಣಿ ಹಾಗೂ ರಾಜ್ಯದ ತಜ್ಞರ ಸಮಿತಿಯು ನಮ್ಮ ಸಂವೇದನಾರಹಿತ ಮನಸ್ಥಿತಿಗೆ ಕನ್ನಡಿ ಹಿಡಿದಿದೆ. ಈ ಕನ್ನಡಿಯಲ್ಲಿ ನಾವೆಲ್ಲ ನಮ್ಮ ಮುಖವನ್ನು ಮತ್ತೆ ಮತ್ತೆ ನೋಡಬೇಕು. ನಮ್ಮೊಳಗೆ ಸತ್ತು ಹೋದ ಸಂವೇದನೆಗೆ ಮತ್ತೆ ಜೀವ ತುಂಬಬೇಕು. ಇಲ್ಲದಿದ್ದರೆ, ಹತ್ಯೆ ಬಿಡಿ, ನೂರಾರು ಮಂದಿಯ ಎದುರೇ ಅತ್ಯಾಚಾರವೂ ನಡೆಯಬಹುದು.


Monday, 4 July 2016

ಕುದಿಯುವ ಜೋಡಿಗಳು ಮತ್ತು ನಿಡುಸುಯ್ಯುವ ರಸ್ತೆಗಳು

      ವಿವಾಹ ವಿಚ್ಛೇದನ ಮತ್ತು ರಸ್ತೆ ಅಪಘಾತ ಎಂಬೆರಡು ಪದಗಳಿಗೆ ಪಾರಂಪಾರಿಕ ನಂಟೇನೂ ಇಲ್ಲ. ಅಲ್ಲದೇ ಇವೆರಡೂ ಪದಗಳು ಪ್ರತಿನಿಧಿಸುವ ಕ್ಷೇತ್ರಗಳೇ ಬೇರೆ ಮತ್ತು ಇವು ಸಾಮಾಜಿಕವಾಗಿ ಬೀರುವ ಪರಿಣಾಮಗಳೇ ಬೇರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇವೆರಡೂ ಎಷ್ಟು ಹತ್ತಿರದ ಸಂಬಂಧವನ್ನು ಹೊಂದಿವೆಯೆಂದರೆ, ಇವು ಒಂದೇ ಮನೆಯ ಸದಸ್ಯರೋ ಎಂದು ಅನುಮಾನಿಸುವಷ್ಟೂ ನಿಕಟವಾಗಿವೆ. ಮಾಧ್ಯಮಗಳ ಒಂದು ಪುಟದಲ್ಲಿ ಅಪಘಾತದ ಸುದ್ದಿಯಿದ್ದರೆ ಇನ್ನೊಂದು ಪುಟದಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಹಾಕಿದ ಅಥವಾ ವಿವಾಹ ವಿಚ್ಛೇದನ ಪಡಕೊಂಡ ಸುದ್ದಿಯಿರುತ್ತದೆ. ಸದ್ಯ ಟೊಮೆಟೊ, ಬೇಳೆಕಾಳುಗಳ ಬೆಲೆ ಏರಿಕೆಗಳಿಗಿಂತಲೂ ವೇಗವಾಗಿ ಇವೆರಡರ ಅಂಕಿ-ಸಂಖ್ಯೆಗಳಲ್ಲಿ ತೀವ್ರ ಏರಿಕೆಯಾಗುತ್ತಿದೆ. ಅತ್ಯಂತ ಹೆಚ್ಚು ಪ್ರಗತಿ ದರವನ್ನು ದಾಖಲಿಸುತ್ತಿರುವ ಎರಡು ಕ್ಷೇತ್ರಗಳಿವು. 2015ರಲ್ಲಿ ಒಟ್ಟು 1,46,133 ಮಂದಿ ರಸ್ತೆ ಅಪಘಾತದಿಂದಾಗಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸರಕಾರದ ರಸ್ತೆ ಸಾರಿಗೆ ಮಂತ್ರಾಲಯ ಬಿಡುಗಡೆಗೊಳಿಸಿದ ವಿವರಗಳೇ ಹೇಳುತ್ತವೆ. 2014ರಲ್ಲಿ ಈ ಸಾವುಗಳ ಸಂಖ್ಯೆ 1,39,671. ಅಂದರೆ, ಒಂದೇ ವರ್ಷದಲ್ಲಿ 1462 ಮಂದಿ ಈ ಸಾವಿನ ಪಟ್ಟಿಗೆ ಹೆಚ್ಚುವರಿಯಾಗಿ ಸೇರ್ಪಡೆಗೊಂಡಿದ್ದಾ ರೆ. ಪ್ರತಿದಿನ ಸುಮಾರು 400ರಷ್ಟು ಮಂದಿ ಅಪಘಾತಗಳಿಂದ ಸಾವನ್ನಪ್ಪುತ್ತಿದ್ದಾರೆ. ಪ್ರತಿ 10ರಲ್ಲಿ 8 ಅಪಘಾತಗಳಿಗೆ ಚಾಲಕರೇ ಕಾರಣ ಎಂದು ವರದಿ ಹೇಳುತ್ತಿದೆ. ಇದರಲ್ಲಿ 62% ಅಪಘಾತಗಳಿಗೆ ಅತೀ ವೇಗವೇ ಕಾರಣವಾಗಿದೆ. ಹಾಗಂತ, ಈ ರಸ್ತೆ ಅಪಘಾತಕ್ಕೆ ಹೋಲಿಸಿದರೆ ಕೌಟುಂಬಿಕ ಅಪಘಾತ(ವಿಚ್ಛೇದನ)ಗಳ ವಿವರ ಕಡಿಮೆ ಆಘಾತಕಾರಿಯೇನೂ ಅಲ್ಲ. ಕೇವಲ ಕೇರಳ ರಾಜ್ಯವೊಂದರಲ್ಲಿಯೇ ವರ್ಷಕ್ಕೆ 47,525 ವಿಚ್ಛೇದನಗಳು ನಡೆಯುತ್ತಿವೆ ಎಂದು ಸ್ವತಃ ಕೇಂದ್ರ ಸರಕಾರವೇ ಲೋಕಸಭೆಗೆ ಮಾಹಿತಿ ನೀಡಿದೆ. ಅಲ್ಲಿ ಪ್ರತಿ ಗಂಟೆಗೆ 5 ವಿಚ್ಛೇದನ ಪ್ರಕರಣಗಳು ನಡೆಯುತ್ತವೆ. ದಿನಕ್ಕೆ 130 ವಿಚ್ಛೇದನ ಪ್ರಕರಣಗಳು!
  ಅಷ್ಟಕ್ಕೂ, ವಿವಾಹವಾಗುವುದೇ ವಿಚ್ಛೇದನ ಪಡಕೊಳ್ಳುವುದಕ್ಕೆ ಎಂಬ ರೀತಿಯ ವಾತಾವರಣ ನಿರ್ಮಾಣಗೊಂಡಿರುವುದಕ್ಕೆ ಏನು ಕಾರಣ? ನರಮೇಧವೇ ರಸ್ತೆಗಳ ಪ್ರಮುಖ ಉದ್ದೇಶವಾಗಿರುವುದೇಕೆ? ಕಳೆದವಾರ ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ 8 ಪುಟ್ಟ ಶಾಲಾ ಮಕ್ಕಳ ‘ರಸ್ತೆಮೇಧ’ ನಡೆಯಿತು. ರಸ್ತೆಗಂಟಿದ ರಕ್ತದ ಕಲೆಗಳು, ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಟಿಫಿನು, ಬ್ಯಾಗುಗಳ ಬರೇ ಚಿತ್ರವನ್ನು ನೋಡಿದವರ ಕಣ್ಣುಗಳೂ ಆದ್ರ್ರವಾದುವು. ಹಾಗಂತ, ರಸ್ತೆಯನ್ನು ಶಿಕ್ಷಿಸಲು ಸಾಧ್ಯವಿಲ್ಲವಲ್ಲ. ಆದ್ದರಿಂದಲೇ, ಕುಂದಾಪುರದ ನಾಗರಿಕರು ಒಂದು ದಿನ ಬಂದ್ ಆಚರಿಸುವ ಮೂಲಕ ಸ್ವಯಂ ತಮ್ಮನ್ನೇ ಶಿಕ್ಷಿಸಿಕೊಂಡರು. ಈಗ ಎಲ್ಲವೂ ಸಹಜವಾಗಿದೆ. ರಸ್ತೆ ಇದ್ದಲ್ಲಿಯೇ ಇದೆ ಮತ್ತು ಇದ್ದಂತೆಯೇ ಇದೆ. ಮಕ್ಕಳು ಶಾಲೆಗೆ ಹೋಗತೊಡಗಿದ್ದಾರೆ. ವಾಹನಗಳ ವೇಗವೂ ಏರತೊಡಗಿದೆ. ಮಕ್ಕಳನ್ನು ಕಳಕೊಂಡ ಹೆತ್ತವರಿಗೆ ಸಕಲ ಸಂಕಟವನ್ನೂ ವರ್ಗಾಯಿಸಿ ಎಲ್ಲರೂ ಮುಂದೆ ಸಾಗುತ್ತಿದ್ದಾರೆ. ಒಂದು ರೀತಿಯಲ್ಲಿ ಅಪಘಾತ ಮತ್ತು ವಿಚ್ಛೇದನಗಳ ನಡುವೆ ಇರುವ ದೊಡ್ಡ ಸಾಮ್ಯತೆ ಇದು. ಎರಡರಲ್ಲೂ ಅತೀವ ವೇದನೆಯಿದೆ. ಅಷ್ಟೇ ದೂರುಗಳೂ ಇವೆ. ಇವೆರಡೂ ಮನೆಯ ಸಂತಸವನ್ನು ಕಿತ್ತುಕೊಳ್ಳುತ್ತದೆ. ಒಂದಷ್ಟು ಮಂದಿಯನ್ನು ಅನಾಥರಾಗಿಸುತ್ತದೆ. ಆಸ್ಪತ್ರೆ-ಕೋರ್ಟು ಎಂದೆಲ್ಲಾ ಅಲೆದಾಡಿಸುತ್ತದೆ. ದುಡ್ಡಿನ ಜೊತೆಗೆ ನೆಮ್ಮದಿಯನ್ನೂ ಕಿತ್ತುಕೊಳ್ಳುತ್ತದೆ.
  ಭಾರತದಲ್ಲಿ ಮದುವೆಯನ್ನು ಜನ್ಮಾಂತರಗಳ ಸಂಬಂಧವಾಗಿ ಗೌರವಿಸಲಾಗುತ್ತದೆ. ಮದುವೆ ಬರೇ ಹೆಣ್ಣು-ಗಂಡಿನ ನಡುವಿನ ಖಾಸಗಿ ವ್ಯವಹಾರವಲ್ಲ. ಅದಕ್ಕೊಂದು ಸಾಮಾಜಿಕ ಆಯಾಮವಿದೆ. ಗಂಡು-ಹೆಣ್ಣಿಗೆ ಒಂದಷ್ಟು ಜವಾಬ್ದಾರಿಯನ್ನು ಅದು ವಹಿಸಿಕೊಡುತ್ತದೆ. ಅಪರಿಚಿತರಾಗಿರುವ ಎರಡು ಕುಟುಂಬಗಳನ್ನು ಪರಿಚಿತ ಮತ್ತು ಅನ್ಯೋನ್ಯಗೊಳಿಸುತ್ತದೆ. ಪರಸ್ಪರರಿಗಾಗಿ ಮರುಗುವ ಮತ್ತು ಸ್ಪಂದಿಸುವ ಸನ್ನಿವೇಶವನ್ನು ನಿರ್ಮಿಸುತ್ತದೆ. ಮದುವೆಯು ತನ್ನ ಒಡಲಲ್ಲಿ ಹುದುಗಿಸಿರುವ ಸಾಮಾಜಿಕ ಅಗತ್ಯಗಳನ್ನು ಪಟ್ಟಿ ಮಾಡುವುದಾದರೆ ಅದರಲ್ಲಿ ಹೆಣ್ಣು-ಗಂಡಿನ ದೈಹಿಕ ಆಕರ್ಷಣೆಗೆ ಮೊದಲ ಸ್ಥಾನ ಸಿಗುವ ಸಾಧ್ಯತೆಯೇನೂ ಇಲ್ಲ. ಪ್ರಾಯ ಸಹಜವಾದ ಆಕರ್ಷಣೆ ಎಂಬ ಕವಚದೊಳಗೆ ಹತ್ತಾರು ಜವಾಬ್ದಾರಿಗಳನ್ನು ತುಂಬಿ ಪ್ರಕೃತಿ ಹೆಣ್ಣು-ಗಂಡನ್ನು ಒಂದಾಗಿಸುತ್ತದೆ. ಆದರೆ ಇವತ್ತಿನ ಆಧುನಿಕ ಜೀವನ ಕ್ರಮಗಳು ಈ ಸೂತ್ರವನ್ನು ನಿರ್ಲಕ್ಷಿಸಲು ಪ್ರಚೋದಿಸುತ್ತಿವೆಯೇನೋ ಎಂಬ ಅನುಮಾನ ಮೂಡುತ್ತಿದೆ. ಇಲ್ಲಿ ಜವಾಬ್ದಾರಿಗಿಂತ ದೈಹಿಕ ಆಕರ್ಷಣೆಯೇ ಪ್ರಾಮುಖ್ಯತೆಯನ್ನು ಪಡೆಯುತ್ತಿರುವಂತೆ ತೋರುತ್ತಿದೆ. 2005ರಿಂದ 2010ರ ವರೆಗೆ ಕೌಟುಂಬಿಕ ನ್ಯಾಯಾಲಯಗಳು ವಿಚ್ಛೇದನ ಅರ್ಜಿಗಳನ್ನು ತುರ್ತಾಗಿ ಬಗೆಹರಿಸುತ್ತಿರಲಿಲ್ಲ. ಮನವೊಲಿಸುವಿಕೆ, ಆಪ್ತ ಸಮಾಲೋಚನೆ ಮುಂತಾದುವುಗಳ ಮೂಲಕ ಪರಸ್ಪರರನ್ನು ಹತ್ತಿರ ತರಿಸುವ ಪ್ರಯತ್ನಗಳಿಗೆ ಆದ್ಯತೆಯನ್ನು ನೀಡುತ್ತಿತ್ತು. ಆದರೆ ಇವತ್ತು ಹೀಗೆ ಕಾಯುವ ಸಹನೆಯನ್ನು ಪತಿ-ಪತ್ನಿ ತೋರುತ್ತಿಲ್ಲ ಎಂಬ ದೂರಿದೆ. ತಾಳ್ಮೆಯೇ ಇಲ್ಲದ ಮತ್ತು ಕಾಯುವಿಕೆಗೆ ಒಪ್ಪದ ಎರಡು ಸಿಡಿಯುವ ಜೀವಗಳನ್ನು ಹೆಚ್ಚಿನ ಕುಟುಂಬ ನ್ಯಾಯಾಲಯಗಳು
ಎದುರಿಸಬೇಕಾಗುತ್ತವೆ. ಇವತ್ತೇ, ಈಗಲೇ ವಿಚ್ಛೇದನ ಬೇಕೆಂದು ಆಗ್ರಹಿಸಿ ನ್ಯಾಯಾಲಯಗಳ ಬಾಗಿಲು ತಟ್ಟುವ ಪ್ರಕರಣಗಳು ಅಧಿಕವಾಗುತ್ತಿರುವುದರಿಂದ ಒಂದೇ ಸಮನೆ ವಿಚ್ಛೇದನ ತೀರ್ಪುಗಳು ಹೊರಬೀಳುತ್ತಿವೆ ಎಂಬ ವಾದವೂ ಇದೆ. ಗಂಡು-ಹೆಣ್ಣು ಇಬ್ಬರೂ ದುಡಿಯಬೇಕಾದ ಒತ್ತಡ, ಮನೆ ನಿರ್ವಹಣೆಯಲ್ಲಿ ತಲೆದೋರುವ ಭಿನ್ನಾಭಿಪ್ರಾಯ, ವಾಟ್ಸ್ಯಾಪ್‍ನಂತಹ ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದಾಗಿ ಉಂಟಾಗುವ ಮನಸ್ತಾಪ, ಅಹಂ, ಸ್ವತಂತ್ರವಾಗಿ ಜೀವಿಸಲು ಧೈರ್ಯ ತುಂಬುವ ಉದ್ಯೋಗ ಭದ್ರತೆ.. ಇತ್ಯಾದಿ ಅನೇಕಾರು ಅಂಶಗಳು ಹೆಣ್ಣು-ಗಂಡನ್ನು ಪ್ರತ್ಯೇಕಿಸುವಲ್ಲಿ ಇವತ್ತು ಪ್ರಮುಖ ಪಾತ್ರ ವಹಿಸುತ್ತಿವೆ. ಇಂಥ ಸಂದರ್ಭಗಳಲ್ಲಿ ಅತ್ಯಂತ ಸಂಕಷ್ಟಕ್ಕೆ ಸಿಲುಕುವುದು ಮಕ್ಕಳು. ಅವರು ಈ ಜಗಳದಲ್ಲಿ ಬಹುತೇಕ ಕಾಲ್ಚೆಂಡು ಆಗುವುದೇ ಹೆಚ್ಚು. ವರ್ಷಂಪ್ರತಿ ಆಗುವ ಲಕ್ಷಾಂತರ ವಿಚ್ಛೇದನ ಪ್ರಕರಣಗಳಲ್ಲಿ ಸೃಷ್ಟಿಯಾಗುವ ಇಂಥ ಕಾಲ್ಚೆಂಡು ಮಕ್ಕಳ ಸಂಖ್ಯೆಯನ್ನೊಮ್ಮೆ ಊಹಿಸಿ. ಒಂದೋ ತಾಯಿಯ ಬಳಿ ಅಥವಾ ತಂದೆಯ ಬಳಿ ಅವರು ಇರಬೇಕಾಗುತ್ತದೆ. ತಂದೆ ಕರೆದಾಗ ಅತ್ತ ಹೋಗಬೇಕು. ನಿಗದಿತ ಅವಧಿಯೊಳಗೆ ತಾಯಿ ಬಳಿ ಬರಬೇಕು. ಇಂಥ ವಾತಾವರಣ ಮಗುವನ್ನು ಹೇಗೆ ತಯಾರುಗೊಳಿಸಬಹುದು? ಮಗುವಿನ ಮೇಲೆ ಅದು ಬೀರಬಹುದಾದ ಪರಿಣಾಮಗಳು ಏನೇನು?  
        ವಿಚ್ಛೇದನ ಮತ್ತು ಅಪಘಾತಗಳೆರಡೂ ಅಂತಿಮವಾಗಿ ಉಳಿಸಿ ಹೋಗುವುದು ಕೆಲವು ಕಹಿ ಸ್ಮರಣೆಗಳನ್ನು. ಆರೋಗ್ಯಪೂರ್ಣ ಸಮಾಜದ ದೃಷ್ಟಿಯಿಂದ ನೋಡುವುದಾದರೆ ಇವೆರಡೂ ಅತ್ಯಂತ ಅನಪೇಕ್ಷಿತ ಮತ್ತು ಬಹುತೇಕ ಮಾನವ ನಿರ್ಮಿತ ಸುದ್ದಿಗಳು. ರಸ್ತೆ ಹೇಗೆ ಮನುಷ್ಯರಿಗಾಗಿ ನಿರ್ಮಾಣಗೊಂಡಿದೆಯೋ ಹಾಗೆಯೇ ಮದುವೆ ಕೂಡ ಮನುಷ್ಯರ ಹಿತದೃಷ್ಟಿಯಿಂದಲೇ ರೂಪು ಪಡೆದಿದೆ. ಆದರೆ ಇವತ್ತು ಇವೆರಡೂ ಮನುಷ್ಯರ ನೆಮ್ಮದಿಗೆ ಭಂಗ ತರುವ ಕ್ಷೇತ್ರಗಳಾಗಿ ಮಾರ್ಪಟ್ಟು ಬಿಟ್ಟಿವೆ. ಮನುಷ್ಯರೇ ತಮ್ಮಂತಹ ಇತರರ ‘ರಸ್ತೆಮೇಧ’ ನಡೆಸುತ್ತಿದ್ದಾರೆ. ಮನುಷ್ಯರೇ ತಮ್ಮ ನಡುವಿನ ಮನಸ್ತಾಪಕ್ಕೆ ಮಕ್ಕಳನ್ನು ಬಲಿ ಕೊಡುತ್ತಿದ್ದಾರೆ. ಮನುಷ್ಯ ರಸ್ತೆಯಲ್ಲಿ ಮಾಡುವ ಬೇಜವಾಬ್ದಾರಿಗೆ ಜೀವಗಳೇ ಹರಣವಾದರೆ ವೈವಾಹಿಕ ಜೀವನದಲ್ಲಿ ಮಾಡುವ ತಪ್ಪುಗಳಿಗೆ ಒಂದು ಪೀಳಿಗೆಯ ಭವಿಷ್ಯವೇ ಕಮರಿ ಹೋಗುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮನುಷ್ಯರೇ ಹುಟ್ಟು ಹಾಕಿರುವ ಮತ್ತು ಮಾನವ ನಿರ್ಮಿತ ಕಾರಣಗಳೇ ಅಧಿಕವಾಗಿರುವ ಈ ಎರಡೂ ಅಪಘಾತಗಳನ್ನು ತಡೆಗಟ್ಟುವ ಶ್ರಮ ತೀವ್ರಗತಿಯಲ್ಲಿ ನಡೆಯಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮದುವೆಗೂ ಮತ್ತು ವಾಹನ ಸಂಚಾರಕ್ಕೂ ಜನರು ಹಿಂದೇಟು ಹಾಕುವಂತಹ ಸನ್ನಿವೇಶ ನಿರ್ಮಾಣವಾಗಬಹುದು ಅಥವಾ ಈಗಿನ ಪ್ರಮಾಣಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ರಸ್ತೆ ಮತ್ತು ಮದುವೆ ಅಪಘಾತಗಳು ನಡೆಯಬಹುದು. ಉತ್ತಮ ಸಮಾಜದ ದೃಷ್ಟಿಯಿಂದ ಇವೆರಡೂ ಅಪಾಯಕಾರಿ.



Thursday, 23 June 2016

ಚೂರಿಯನ್ನು ಜೇಬೊಳಗಿಟ್ಟವರು ಮತ್ತು ಪದೇ ಪದೇ ಇರಿತಕ್ಕೊಳಗಾಗುವವರು..


     ಕಳೆದವಾರ ಫ್ರಾನ್ಸ್ ನ ನೇತೃತ್ವದಲ್ಲಿ 29 ರಾಷ್ಟ್ರಗಳು ಒಟ್ಟು ಸೇರಿ ನಡೆಸಿದ ಸಭೆಯ ಬಗ್ಗೆ ಫೆಲೆಸ್ತೀನ್ ವ್ಯಕ್ತಪಡಿಸಿರುವ ನಿರಾಶಾಜನಕ ಪ್ರತಿಕ್ರಿಯೆಯೇ ಅದರ ಸದ್ಯದ ಸ್ಥಿತಿ-ಗತಿಯನ್ನು ಹೇಳುತ್ತದೆ. ಫೆಲೆಸ್ತೀನಿಯರು ಯಾರ ಮೇಲೂ ನಂಬಿಕೆ ಇಡದಷ್ಟು ವಿಶ್ವಾಸ ದ್ರೋಹಕ್ಕೆ ಒಳಗಾಗಿದ್ದಾರೆ. ಗೆಳೆಯರ ವೇಷ ತೊಟ್ಟವರಲ್ಲಿ ಹೆಚ್ಚಿನವರೂ ಇರಿದಿದ್ದಾರೆ. ‘ಶಾಂತಿ ಮಾತುಕತೆ’, ‘ಶಾಂತಿ ಸಭೆ’, ‘ಶಾಂತಿ ಒಪ್ಪಂದ’.. ಮುಂತಾದುವುಗಳೆಲ್ಲ ಅವರನ್ನು ಎಷ್ಟರ ಮಟ್ಟಿಗೆ ಸಿನಿಕತನಕ್ಕೆ ತಳ್ಳಿಬಿಟ್ಟಿದೆಯೆಂದರೆ, ಇವೆಲ್ಲ ಫೆಲೆಸ್ತೀನನ್ನು ಇಂಚಿಂಚಾಗಿ ಇಸ್ರೇಲಿಗೆ ಒಪ್ಪಿಸಿಬಿಡುವ ಪ್ರಕ್ರಿಯೆಯ ಜಾಣ ನಡೆ ಎಂದೇ ಅಂದುಕೊಳ್ಳುವಷ್ಟು. ಆದ್ದರಿಂದಲೇ, ಕಳೆದ ವಾರ ಫ್ರಾನ್ಸ್ ನೇತೃತ್ವದಲ್ಲಿ ನಡೆದ 29 ರಾಷ್ಟ್ರಗಳ ಸಭೆಯಲ್ಲಿ ಫೆಲೆಸ್ತೀನ್ ಭಾಗಿಯಾಗಿಲ್ಲ. ಫೆಲೆಸ್ತೀನ್‍ಗೆ ಸ್ವತಂತ್ರ ರಾಷ್ಟ್ರದ ಸ್ಥಾನಮಾನ ನೀಡುವುದು, ಇಸ್ರೇಲ್ ಮತ್ತು ಫೆಲೆಸ್ತೀನ್ ರಾಷ್ಟ್ರಗಳಿಗೆ ಜೆರುಸಲೇಮ್ ಅನ್ನೇ ರಾಜಧಾನಿಯಾಗಿಸುವುದು ಹಾಗೂ ಈ ವರ್ಷದ ಕೊನೆಯಲ್ಲಿ ಇನ್ನೊಂದು ಸಭೆಯನ್ನು ಏರ್ಪಡಿಸುವ ಗುರಿಯೊಂದಿಗೆ ಸಭೆ ಮುಕ್ತಾಯವನ್ನು ಕಂಡಿದೆ.
      ನಿಜವಾಗಿ, ಫೆಲೆಸ್ತೀನ್‍ನ ಪಾಲಿಗೆ ಸಭೆ ಮತ್ತು ಮಾತುಕತೆ ಹೊಸತಲ್ಲ. ಇಸ್ರೇಲ್ ಸ್ಥಾಪಿತಗೊಂಡಂದಿನಿಂದಲೇ ಈ ಪ್ರಕ್ರಿಯೆ ಆರಂಭವಾಗಿದೆ. ಪ್ರತಿ ಬಾರಿಯೂ ಸಭೆಯ ಮೊದಲು ಅಪಾರ ನಿರೀಕ್ಷೆಯನ್ನು ವ್ಯಕ್ತಪಡಿಸುವುದು ಮತ್ತು ಸಭೆಯ ಬಳಿಕ ಆ ನಿರೀಕ್ಷೆಯ ವ್ಯಾಪ್ತಿಯು ಕಿರಿದಾಗುತ್ತಾ ಹೋಗುವುದು ಫೆಲೆಸ್ತೀನ್‍ಗೆ ಅಭ್ಯಾಸವಾಗಿಬಿಟ್ಟಿದೆ. ಫೆಲೆಸ್ತೀನ್ ಮತ್ತು ಇಸ್ರೇಲ್‍ಗಳ ನಡುವೆ ಮಧ್ಯಸ್ಥಿಕೆದಾರರ ಮೂಲಕ ಅನೇಕ ಬಾರಿ ಮಾತುಕತೆ ನಡೆದಿದೆ. ಹೆಚ್ಚಿನ ಬಾರಿ ಮಧ್ಯಸ್ಥಿಕೆದಾರನೇ ಮನುಷ್ಯ ವೇಷದ ತೋಳ ಆಗಿದ್ದನ್ನೂ ಅದು ಗುರುತಿಸಿದೆ. ಯಾಸಿರ್ ಅರಾಫಾತ್‍ರು ಇಂಥ ತೋಳಗಳಿಂದ ಸಾಕಷ್ಟು ಅವಮಾನವನ್ನು ಎದುರಿಸಿದರು. ಸದ್ಯ 81 ವರ್ಷದ ಅಬ್ಬಾಸ್ ಇದ್ದಾರೆ. ‘ಇಸ್ರೇಲನ್ನು ಯಹೂದಿ ರಾಷ್ಟ್ರವೆಂದೂ ಮತ್ತು ಯಹೂದಿಗಳ ಮಾತೃಭೂಮಿ’ಯೆಂದೂ ಒಪ್ಪುವ ಫೆಲೆಸ್ತೀನ್ ಸರಕಾರದೊಂದಿಗೆ ಮಾತ್ರ ನೇರ ಮಾತುಕತೆ ಎಂದು ಇಸ್ರೇಲ್ ಪ್ರಧಾನಿ ನೇತನ್ಯಾಹು ಹೇಳುತ್ತಿದ್ದಾರೆ. ನಿಜವಾಗಿ, ಫೆಲೆಸ್ತೀನ್‍ನೊಂದಿಗೆ ನೇರ ಮಾತುಕತೆ ಎಂಬುದೇ ಬೃಹತ್ ನಾಟಕ. ಇಸ್ರೇಲ್, ಬಲಿಷ್ಠ ರಾಷ್ಟ್ರ. ಇಡೀ ಪಶ್ಚಿಮೇಶ್ಯದಲ್ಲೇ  ಅಣ್ವಸ್ತ್ರ ಹೊಂದಿರುವ ಮತ್ತು ಅಮೇರಿಕ ಹಾಗೂ ಯುರೋಪಿಯನ್ ರಾಷ್ಟ್ರಗಳ ಕೃಪಾಶೀರ್ವಾದ ಇರುವ ರಾಷ್ಟ್ರ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ರೇಲನ್ನು ಖಂಡಿಸುವ ಯಾವ ನಿರ್ಣಯವನ್ನೂ ಅಂಗೀಕರಿಸಲು ಅಮೇರಿಕ ಈ ವರೆಗೆ ಅವಕಾಶ ಕೊಟ್ಟಿಲ್ಲ. ಡಜನ್‍ಗಟ್ಟಲೆ ವೀಟೋಗಳನ್ನು ಅದು ಇಸ್ರೇಲ್‍ನ ಕ್ರೌರ್ಯವನ್ನು ಮನ್ನಿಸುವುದಕ್ಕಾಗಿಯೇ ಚಲಾಯಿಸಿದೆ. ಶಾಂತಿ ಪ್ರಕ್ರಿಯೆಗೆ ಮರು ಚಾಲನೆ ಕೊಡಲು ಹೊರಟಿರುವ ಫ್ರಾನ್ಸ್ ಕೂಡಾ ಈ ವಿಷಯದಲ್ಲಿ ಹಿಂದೆಯೇನೂ ಅಲ್ಲ. ಕಳೆದ ಜನವರಿಯಲ್ಲಿ ಅದರ ವಿದೇಶಾಂಗ ಸಚಿವ ಲೆಫ್ಟಿನೆಂಟ್ ಪ್ಯಾರಿಸ್ ಅವರು ಫೆಲೆಸ್ತೀನಿಯರಿಗೆ ಬೆಂಬಲವಾಗಿ ಹೇಳಿಕೆಯೊಂದನ್ನು ಕೊಟ್ಟರು. ಫೆಲೆಸ್ತೀನನ್ನು ಸ್ವತಂತ್ರ ರಾಷ್ಟ್ರವಾಗಿ ಫ್ರಾನ್ಸ್ ಪರಿಗಣಿಸುತ್ತದೆಂದು ಅವರು ಅಭಿಪ್ರಾಯ ಪಟ್ಟರು. ಈ ಹೇಳಿಕೆಯ ಬಳಿಕ ಅವರನ್ನು ಆ ಸ್ಥಾನದಿಂದ ಕಿತ್ತು ಹಾಕಲಾಯಿತು. ಆ ಬಳಿಕ ಈವರೆಗೆ ಸ್ವತಂತ್ರ ಫೆಲೆಸ್ತೀನ್‍ನ ಬಗ್ಗೆ ಫ್ರಾನ್ಸ್ ಈ ವರೆಗೆ ಹೇಳಿಕೆಯನ್ನೇ ಕೊಟ್ಟಿಲ್ಲ. ಇಷ್ಟೆಲ್ಲ ಅನುಕೂಲ ಇರುವ ಇಸ್ರೇಲ್ ಒಂದು ಕಡೆಯಾದರೆ, ಇನ್ನೊಂದು ಕಡೆ ರಾಷ್ಟ್ರದ ಸ್ಥಾನಮಾನವೂ ಇಲ್ಲದ ದುರ್ಬಲ ಫೆಲೆಸ್ತೀನ್. ಇಸ್ರೇಲ್ ಅನುಮತಿಸಿದರೆ ಮಾತ್ರ ಫೆಲೆಸ್ತೀನ್‍ಗೆ ವಿದ್ಯುತ್ ಇದೆ. ಇಸ್ರೇಲ್ ಒಪ್ಪಿದರೆ ಮಾತ್ರ ಆಹಾರ-ಸಾಮಗ್ರಿಗಳಿವೆ. ಪ್ರತಿಯೊಂದಕ್ಕೂ ಇಸ್ರೇಲ್‍ನ ಕೃಪೆಯನ್ನು ಅವಲಂಬಿಸಿಕೊಂಡಿರುವ ಫೆಲೆಸ್ತೀನ್ ಯಾವ ನೆಲೆಯಲ್ಲೂ ಇಸ್ರೇಲ್‍ಗೆ ಹೋಲಿಕೆಗೇ ಅರ್ಹವಲ್ಲ. ಇಂಥವರ ಮಧ್ಯೆ ನೇರ ಮಾತುಕತೆ ಅಂದರೇನು? ಅಂಥ ನೇರ ಮಾತುಕತೆಯಿಂದ ಆಗುವ ಪರಿಣಾಮಗಳು ಏನೇನು? ಅಲ್ಲಿಯ ನಿರ್ಣಯದಲ್ಲಿ ಯಾರ ಪ್ರಾಬಲ್ಯ ಇರಬಹುದು?
      ಇಸ್ರೇಲ್‍ನ ಮೇಲೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಅನೇಕ ಬಾರಿ ನಿಯಮ ಉಲ್ಲಂಘನೆಗಳ ಪ್ರಸ್ತಾಪ ಆಗಿದೆ. ಆದರೆ ಎಲ್ಲ ಸಂದರ್ಭಗಳಲ್ಲೂ ಅಮೇರಿಕದ ವೀಟೋ ಅದನ್ನು ರಕ್ಷಿಸುತ್ತಾ ಬಂದಿದೆ. ಗಾಝಾದಲ್ಲಿ ಯುದ್ಧಾಪರಾಧಗಳನ್ನು ಎಸಗಿದ ಗಂಭೀರ ಆರೋಪ ಅದರ ಮೇಲಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ವಿಧೇಯಕವನ್ನು ಪದೇ ಪದೇ ಉಲ್ಲಂಘಿಸಿ ಪಶ್ಚಿತ ದಂಡೆಯಲ್ಲಿ ಫೆಲೆಸ್ತೀನಿನ ಭೂಮಿಯನ್ನು ಅತಿಕ್ರಮಿಸುತ್ತಿರುವ ಆರೋಪವೂ ಇದೆ. ವಲಸಿಗ ಯಹೂದಿಯರಿಗಾಗಿ ವಸತಿಯನ್ನು ನಿರ್ಮಿಸುತ್ತಲೂ ಇದೆ. ಅಮೇರಿಕ ಸಹಿತ ಅದರ ಬೆಂಬಲಿಗ ರಾಷ್ಟ್ರಗಳ ವಿರೋಧದ ನಡುವೆಯೂ ಈ ವಸತಿ ನಿರ್ಮಾಣದಿಂದ ಅದು ಈಗಲೂ ಹಿಂದೆ ಸರಿದಿಲ್ಲ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿಯಮಾನುಸಾರ ಇಸ್ರೇಲ್ ‘ಶಿಕ್ಷಾರ್ಹ’ ಅಪರಾಧಗಳನ್ನು ಎಸಗಿದೆ. ಹೀಗಿದ್ದೂ, ಇರಾನ್‍ನ ಮೇಲೆ ಮುಗಿಬಿದ್ದ ರಾಷ್ಟ್ರಗಳಾವುವೂ ಇಸ್ರೇಲ್‍ನ ಮೇಲೆ ಮುಗಿಬೀಳುತ್ತಿಲ್ಲವೇಕೆ? ಇರಾನ್‍ನ ಮೇಲೆ ಅಮೇರಿಕದ ನೇತೃತ್ವದಲ್ಲಿ ಹೇರಲಾದ ಒತ್ತಡಗಳ ಒಂದು ಶೇಕಡಾದಷ್ಟಾದರೂ ಇಸ್ರೇಲ್‍ನ ಮೇಲೆ ಹೇರಲು ಜಾಗತಿಕ ರಾಷ್ಟ್ರಗಳು ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ವಿಫಲವಾದುದೇಕೆ? ವಿಶ್ವ ರಾಷ್ಟ್ರಗಳ ಒತ್ತಡ ಇರಾನ್‍ನ ಮೇಲೆ ಎಷ್ಟರ ಮಟ್ಟಿಗೆ ಇತ್ತೆಂದರೆ, ತನ್ನ ಉದ್ದೇಶಿತ  ಪರಮಾಣು ಚಟುವಟಿಕೆಯಲ್ಲಿ ಮೃದು ಧೋರಣೆಯನ್ನು ತಾಳಲೇಬೇಕಾದ ಅನಿವಾರ್ಯತೆಯೊಂದು ಅದಕ್ಕೆ ಎದುರಾಯಿತು. ತಾನು ವಿಶ್ವ ಭೂಪಟದಲ್ಲಿ ಒಂಟಿಯಾಗುವೆನೇ ಎಂದು ಭಯಪಡುವಷ್ಟು ಈ ಒತ್ತಡ ಇರಾನನ್ನು ಕಾಡಿತು. ವಿಶೇಷ ಏನೆಂದರೆ, ಈ ಒತ್ತಡ ಕಾರ್ಯಕ್ರಮದಲ್ಲಿ ಇರಾನ್‍ನ ಬೆಂಬಲಿಗ ರಾಷ್ಟ್ರಗಳಾದ ಚೀನಾ ಮತ್ತು ರಶ್ಯಾಗಳೇ ಅಮೇರಿಕದ ಜೊತೆ ಕೈ ಜೋಡಿಸಿದುವು. ಅಷ್ಟಕ್ಕೂ, ಇರಾನ್ ಅಣ್ವಸ್ತ್ರವನ್ನು ಉತ್ಪಾದಿಸಿಯೇ ಇರಲಿಲ್ಲ. ಅಣ್ವಸ್ತ್ರ ತಯಾರಿಸುವುದಕ್ಕೆ ಬೇಕಾಗುವ ಪ್ರಮಾಣದಲ್ಲಿ ರಾಸಾಯನಿಕಗಳನ್ನು ಅದು ಅಭಿವೃದ್ಧಿಗೊಳಿಸುತ್ತಿದೆ ಎಂಬ ಆರೋಪವಷ್ಟೇ ಅದರ ಮೇಲಿತ್ತು. ಈ ನಡುವೆ ಇಸ್ರೇಲ್ ಅಭಿವೃದ್ಧಿಪಡಿಸಿರುವ ವೈರಸ್‍ಗಳು ಇರಾನ್‍ನ ಕೆಲವೊಂದು ಸೆಂಟ್ರಿಪ್ಯೂಜ್‍ಗಳನ್ನು ನಾಶ ಮಾಡುವಲ್ಲೂ ಯಶಸ್ವಿಯಾಗಿತ್ತು. ಇನ್ನೂ ಅಭಿವೃದ್ಧಿಪಡಿಸದ ಅಣ್ವಸ್ತ್ರದ ಹೆಸರಲ್ಲಿ ಇರಾನ್‍ನ ಮೇಲೆ ಒತ್ತಡ ಹೇರಲು ಮತ್ತು ಅದು ತನ್ನ ನೀತಿಯಲ್ಲಿ ಮೃದು ಧೋರಣೆಯನ್ನು ತಾಳುವಂತೆ ಮಾಡಲು ವಿಶ್ವ ರಾಷ್ಟ್ರಗಳಿಗೆ ಸಾಧ್ಯವಾಗುವುದಾದರೆ ಮತ್ತೇಕೆ ಫೆಲೆಸ್ತೀನಿನ ವಿಷಯದಲ್ಲಿ ಅದು ಸದಾ ಅಸಹಾಯಕತೆಯನ್ನು ಪ್ರದರ್ಶಿಸುತ್ತಿದೆ? ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಧೇಯಕವನ್ನು ಇಸ್ರೇಲ್ ಉಲ್ಲಂಘಿಸಿದಷ್ಟು ಸಂಖ್ಯೆಯಲ್ಲಿ ವಿಶ್ವದ ಇನ್ನಾವ ರಾಷ್ಟ್ರವೂ ಉಲ್ಲಂಘಿಸಿಲ್ಲ. ಪಶ್ಚಿಮೇಶ್ಯದಲ್ಲಿ ಅಣ್ವಸ್ತ್ರವನ್ನು ಕಾನೂನುಬಾಹಿರವಾಗಿ ಸಂಗ್ರಹಿಸಿಟ್ಟಿರುವ ಏಕೈಕ ರಾಷ್ಟ್ರ ಅದೊಂದೇ. ಸಮೂಹನಾಶಕ ಅಸ್ತ್ರದ ಹೆಸರಲ್ಲಿ ಇರಾಕ್‍ನ ಮೇಲೆ ದಾಳಿ ನಡೆಸಿದ ಅಮೇರಿಕನ್ ನೇತೃತ್ವದ ವಿಶ್ವ ರಾಷ್ಟ್ರಗಳಿಗೆ ಇಸ್ರೇಲ್‍ನ ಮೇಲೆ ಕನಿಷ್ಠ ನಿರ್ಬಂಧವನ್ನೂ ಹೇರಲು ಅಸಾಧ್ಯವಾಗಿರುವುದು ಯಾಕೆ? ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಎಷ್ಟೇ ಎಚ್ಚರಿಕೆಯನ್ನು ಕೊಡಲಿ, ಅದಕ್ಕೆ ಕಿಮ್ಮತ್ತಿನ ಬೆಲೆಯನ್ನೂ ನೀಡದ ರಾಷ್ಟ್ರವೊಂದಿದ್ದರೆ ಅದು ಇಸ್ರೇಲೇ ಹೊರತು ಸಿರಿಯಾವೋ ಅಫಘಾನೋ ಇರಾನೋ ಅಲ್ಲ. ಆದರೆ ಇಸ್ರೇಲ್ ಹೊರತುಪಡಿಸಿದ ಉಳಿದೆಲ್ಲ ರಾಷ್ಟ್ರಗಳ ಮೇಲೆ ಮತ್ತೆ ಮತ್ತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡ ಉದಾಹರಣೆಗಳಷ್ಟೇ ಸಿಗುತ್ತಿರುವುದೇಕೆ?. ಇಷ್ಟೆಲ್ಲ ನಗ್ನ ಸತ್ಯಗಳಿದ್ದೂ ಅವೇ ಹಳಸಲು ಶಾಂತಿ ಮಾತುಕತೆಗಳೇಕೆ? ಇವು ಯಾರನ್ನು ಸಂತೃಪ್ತಿಪಡಿಸಲು? ನಿಜಕ್ಕೂ ಇಂಥ ಪ್ರಕ್ರಿಯೆಗಳ ಹಿಂದಿರುವುದು ಸಮಸ್ಯೆಯನ್ನು ಬಗೆಹರಿಸುವ ಕಾಳಜಿಯೋ ಅಥವಾ ಇಸ್ರೇಲ್‍ನ ನಿಯಮ ಉಲ್ಲಂಘನೆಗಳು ಚರ್ಚೆಗೆ ಬರದಂತೆ ತಡೆಯುವುದೋ? ರಾಜಿ ಪಂಚಾಯಿತಿಕೆಯ ನೇತೃತ್ವವನ್ನು ಒಮ್ಮೆ ಅಮೇರಿಕ ವಹಿಸಿಕೊಂಡರೆ ಇನ್ನೊಮ್ಮೆ ಜರ್ಮನಿ, ಫ್ರಾನ್ಸ್ ಮತ್ತಿತರ ರಾಷ್ಟ್ರಗಳು ವಹಿಸಿಕೊಳ್ಳುತ್ತವೆ. ಪ್ರತಿ ಬಾರಿಯೂ ಫೆಲೆಸ್ತೀನ್ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವಾಗ ಇಸ್ರೇಲ್ ಅಕ್ರಮ ವಸತಿ ನಿರ್ಮಾಣವನ್ನು ವಿಸ್ತರಿಸುವ ಮೂಲಕ ತಿರುಗೇಟು ನೀಡುತ್ತಲೇ ಬಂದಿದೆ. ಎಲ್ಲಿಯ ವರೆಗೆ ಈ ನಾಟಕ? ಅಂದಹಾಗೆ,
       ವಿಶ್ವರಾಷ್ಟ್ರಗಳು ಫೆಲೆಸ್ತೀನ್‍ಗೆ ಇರಿದೂ ಇರಿದೂ ಸದ್ಯ ಇರಿಯಲು ಜಾಗವೇ ಇಲ್ಲದಷ್ಟು ಗಾಯಗಳನ್ನು ಈಗಾಗಲೇ ಮಾಡಿಟ್ಟಿದೆ. ಈ ಇರಿತದ ನೋವನ್ನು ಅನುಭವಿಸಿ ಅನುಭವಿಸಿ ದಡ್ಡುಗಟ್ಟಿದ ಫೆಲೆಸ್ತೀನಿಗರ ದೇಹ ಸದ್ಯ ಮುಲಾಮನ್ನೂ ಚೂರಿಯೆಂದೇ ನಂಬುವಲ್ಲಿಗೆ ತಲುಪಿಬಿಟ್ಟಿದೆ. ಆದ್ದರಿಂದಲೇ, ಅದು ಕಳೆದವಾರ ನಡೆದ ಫ್ರಾನ್ಸ್ ನೇತೃತ್ವದ ಸಭೆಯಲ್ಲಿ ಭಾಗವಹಿಸಿಲ್ಲ. ಬಹುಶಃ ಅಲ್ಲಿ ಸೇರಿರುವ 29 ರಾಷ್ಟ್ರಗಳು ಅದರ ಪಾಲಿಗೆ 29 ಚೂರಿಗಳಾಗಿ ಕಾಣಿಸಿರುವ ಸಾಧ್ಯತೆ ಇದೆ. ಫೆಲೆಸ್ತೀನ್‍ಗಾಗಿರುವ ಇರಿತದ ಗಾಯಗಳನ್ನು ಎಣಿಸಿದರೆ ಅದರ ಈ ಗ್ರಹಿಕೆಯನ್ನು ಪ್ರಮಾದವೆನ್ನಲು ಸಾಧ್ಯವಿಲ್ಲ.