Friday, 21 July 2017

ಗೋ ಹಿಂಸೆಗೆ ರೂಪಕವಾಗಬಹುದಾದ ಹಿಟ್ಲರ್ ನ ಕುಂಚ

      ನಾಲ್ಕು ದಿನಗಳ ನಡುವೆ ಲಂಡನ್‍ನಲ್ಲಿ ಎರಡು ಬೆಳವಣಿಗೆಗಳು ನಡೆದುವು. ಜಗತ್ತಿನ ಅತಿ ದೊಡ್ಡ ಭಯೋತ್ಪಾದಕನಾಗಿ ಮತ್ತು ಹಿಂಸಾಪ್ರೇಮಿಯಾಗಿ ಗುರುತಿಸಿಕೊಂಡಿರುವ ಜರ್ಮನಿಯ ಅಡಾಲ್ಫ್ ಹಿಟ್ಲರ್‍ನ 5 ವರ್ಣ ಚಿತ್ರಗಳನ್ನು ಹರಾಜು ಹಾಕುವ ಬಗ್ಗೆ ಲಂಡನಿನ ಮುಲ್ಲೋಕ್ ಏಲಂ ಹೌಸ್ ನೀಡಿದ ಪ್ರಕಟಣೆ ಇದರಲ್ಲಿ ಒಂದಾದರೆ, ಈ ಪ್ರಕಟನೆಯ ನಾಲ್ಕು ದಿನಗಳ ಮೊದಲು ಇದೇ ಲಂಡನ್ ನಗರವು ಪ್ರತಿಭಟನೆಯೊಂದಕ್ಕೆ ಸಾಕ್ಷ್ಯ ವಹಿಸಿದ್ದು ಇನ್ನೊಂದು.  ಹಾಗಂತ, ಆ ಪ್ರತಿಭಟನೆಗೂ ಲಂಡನ್‍ಗೂ ಯಾವ ಸಂಬಂಧವೂ ಇರಲಿಲ್ಲ. ಜುನೈದ್ ಖಾನ್, ಪೆಹ್ಲೂ ಖಾನ್ ಎಂಬೆರಡು ಹೆಸರಿನ ಪರಿಚಯ ಈ ನಗರಕ್ಕೆ ಗೊತ್ತಿರುವ ಸಾಧ್ಯತೆ ಶೂನ್ಯವೆಂದೇ ಹೇಳಬಹುದು. ಯಾಕೆಂದರೆ ಇವರಿಬ್ಬರು ಭಾರತದ ಹರ್ಯಾಣಕ್ಕೆ ಸೇರಿದವರು. ಪೆಹ್ಲೂ ಖಾನ್‍ರನ್ನು ಗೋರಕ್ಷಕರೆಂದು ಕರೆಸಿಕೊಂಡಿರುವ ದುಷ್ಕರ್ಮಿಗಳ ಗುಂಪು ರಾಜಸ್ಥಾನದಲ್ಲಿ ಥಳಿಸಿ ಕೊಂದಿದ್ದರೆ, 16 ವರ್ಷದ ಜುನೈದ್ ಖಾನ್‍ನನ್ನು `ಮಾಂಸ ಸೇವಕ' ಎಂಬ ಕಾರಣಕೊಟ್ಟು ದೆಹಲಿಯಲ್ಲಿ ರೈಲಿನಲ್ಲಿ ಹತ್ಯೆ ಮಾಡಲಾಗಿತ್ತು. ಗೋವಿನ ಹೆಸರಲ್ಲಿ ದೇಶದಲ್ಲಿ ನಡೆಯುತ್ತಿರುವ ಕ್ರೌರ್ಯಗಳನ್ನು ಮತ್ತು ಈ ಎರಡು ಹತ್ಯೆಗಳನ್ನು ಖಂಡಿಸಿ ಕಳೆದವಾರ ಒಂದೇ ದಿನ ಒಟ್ಟು 16 ನಗರಗಳಲ್ಲಿ ಪ್ರತಿಭಟನೆಗಳು ನಡೆದುವು. ದೆಹಲಿ, ಮುಂಬೈ, ಲಕ್ನೋ, ಬೆಂಗಳೂರು, ಲಂಡನ್, ಟೊರೆಂಟೊ ಮತ್ತು ಕರಾಚಿಗಳು ಇವುಗಳಲ್ಲಿ ಕೆಲವು. ದೆಹಲಿಯ ಜಂತರ್ ಮಂತರ್‍ನಲ್ಲಿ ನಡೆದ ಪ್ರತಿಭಟನೆಯಲ್ಲಿ ಜುನೈದ್ ಮತ್ತು ಪೆಹ್ಲೂ ಖಾನ್‍ರ ಕುಟುಂಬಗಳು ಭಾಗವಹಿಸಿದುವು. `ಸ್ವರ್ಗದಿಂದ- ಜುನೈದ್ ತನ್ನ ತಾಯಿಗೆ'- ಎಂಬ ಶೀರ್ಷಿಕೆಯ ಕವನವನ್ನು ಜುನೈದ್‍ನ ಚಿಕ್ಕಪ್ಪನ ಮಗ ವಾಚಿಸಿದ. `ಅಮ್ಮಾ, ನೀನು ಈದ್‍ನ ಖರೀದಿಗೆ ನನ್ನನ್ನು ದೆಹಲಿಗೆ ಕಳುಹಿಸಿದೆ. ಆದರೆ ನಾನು ಸ್ವರ್ಗ ಸೇರಿಕೊಂಡೆ. ಹಿಂದೂ ಮತ್ತು ಮುಸ್ಲಿಮರು ಪರಸ್ಪರ ಸಹೋದರರೆಂದು ನೀನು ನನಗೆ ಕಲಿಸಿರುವುದು ಸುಳ್ಳಮ್ಮಾ. ನನ್ನನ್ನು ಸಾಯುವಂತೆ ಹೊಡೆಯುಲಾಗುತ್ತಿದ್ದರೂ ಎಲ್ಲರೂ ಬರೇ ವೀಕ್ಷಿಸಿದರು. ವೀಡಿಯೋ ಮಾಡಿದರು. ತಮ್ಮ ಕಣ್ಣೆದುರೇ ತಮ್ಮ ಸಹೋದರನನ್ನು ಸಾಯಲು ಯಾರು ಬಿಡುತ್ತಾರಮ್ಮಾ...' ಈ ಹಾಡಿಗೆ ಪ್ರತಿಭಟನಾಕಾರರ ಕಣ್ಣುಗಳು ಹನಿಯಾದುವು. ಇದರ ನಾಲ್ಕು ದಿನಗಳ ಬಳಿಕ ಹಿಟ್ಲರ್‍ನ ಐದು ವರ್ಣ ಚಿತ್ರಗಳನ್ನು ತಲಾ 5 ಲಕ್ಷ ರೂಪಾಯಿ ಮೊತ್ತಕ್ಕೆ ಹರಾಜು ಕೋರುವ ಪ್ರಕಟಣೆ ಹೊರಬಿತ್ತು. ಹಿಟ್ಲರ್‍ನು ವರ್ಣಚಿತ್ರ ಕಲಾವಿದ ಆಗಿದ್ದ. ಈ ವರ್ಣ ಚಿತ್ರಗಳ ಪೈಕಿ ನಾಲ್ಕರಲ್ಲೂ ಆತನ ಸಹಿ ಇದೆ. ಗಡಿಯಾರದ ಚಿತ್ರ, ತಾನು ಹುಟ್ಟಿದೂರಾದ ಆಸ್ಟ್ರೀಯಾದ ನಗರದ ಗೇಟ್‍ನ ವರ್ಣಚಿತ್ರವೂ ಇದರಲ್ಲಿ ಸೇರಿದೆ. ನಿಜವಾಗಿ, ನ್ಯೂಯಾರ್ಕ್ ಪೋಸ್ಟ್ ಪತ್ರಿಕೆಯು ಪ್ರಕಟಿಸಿರುವ ಈ ಸುದ್ದಿ ಮುಖ್ಯವಾಗುವುದು ಎರಡು ಕಾರಣಗಳಿಗಾಗಿ. ಒಂದು- ಕ್ರೌರ್ಯವನ್ನು ಪ್ರತಿಭಟಸಿ ಸಭೆ ನಡೆಸಲಾದ ಲಂಡನ್‍ನಿಂದಲೇ ಈ ವರ್ಣಚಿತ್ರಗಳ ಏಲಂನ ಸುದ್ದಿಯೂ ಪ್ರಕಟವಾಗಿದೆ ಎಂಬುದಾದರೆ, ಭಾರತದ ಈ ದುಷ್ಕರ್ಮಿಗಳೂ ಹಿಟ್ಲರ್‍ನ `ಹಿಂಸಾ ಪ್ರೇಮಿ' ಮನಃಸ್ಥಿತಿಯನ್ನು ಬಹಳವಾಗಿ ಪ್ರತಿನಿಧಿಸುತ್ತಿದ್ದಾರೆಂಬುದು ಇನ್ನೊಂದು ಹಿಟ್ಲರ್ ಒಂದು ಕಡೆ ಕ್ರೌರ್ಯ ಎಸಗುವುದಕ್ಕೇ ಜನಿಸಿರುವವನಂತೆ ವರ್ತಿಸುತ್ತಿದ್ದರೂ ಇನ್ನೊಂದು ಕಡೆ ಕಲಾವಿದನ ಮನಸ್ಸನ್ನೂ ಹೊಂದಿದ್ದ. ಆದರೆ ಆತನೊಳಗಿರುವ ಕಲಾವಿದನ ಮನಸ್ಸನ್ನು ಆತ ಪೋಷಿಸುವ ಕೆಲಸವನ್ನು ಮಾಡಲಿಲ್ಲ. ಅದರ ಬದಲು ಹಿಂಸಕ ಮನಸ್ಸನ್ನು ಪೋಷಿಸಿದ. ಇವತ್ತು ಲಂಡನ್‍ನಲ್ಲಿ ಏಲಂಗೆ ಇಡಲಾಗಿರುವ ವರ್ಣಚಿತ್ರಗಳ ಬಗ್ಗೆ ಯಾರಾದರೂ ಆಸಕ್ತಿ ವಹಿಸುವುದಾದರೆ, ಮತ್ತು ಆ ಏಲಂಗೆ ವ್ಯಾಪಕ ಪ್ರಚಾರ ಲಭ್ಯವಾಗುವುದಾದರೆ, ಅದು ಕಲಾವಿದ ಹಿಟ್ಲರ್‍ನಿಂದಾಗಿ ಅಲ್ಲ. ಹಿಂಸಾಪ್ರೇಮಿ ಹಿಟ್ಲರ್‍ನಿಂದಾಗಿ. ಆ ವರ್ಣಚಿತ್ರಗಳು ಆತನ ಕ್ರೌರ್ಯವನ್ನು ಮತ್ತೊಮ್ಮೆ ನೆನಪಿಸುತ್ತದೆ. ಕಲಾವಿದನಾಗಿರಬೇಕಾಗಿದ್ದ ಈತ ಯಾಕಾಗಿ ನರಮೇಧಿಯಾದ ಎಂದು ಆ ವರ್ಣಚಿತ್ರಗಳನ್ನು ವೀಕ್ಷಿಸಿದ ಪ್ರತಿಯೊಬ್ಬರೂ ಪ್ರಶ್ನಿಸಬಹುದು. ಆ ವರ್ಣಚಿತ್ರಗಳಲ್ಲಿ ಕ್ರೌರ್ಯದ ಅಂಶವಿದೆಯೇ ಎಂದು ಪರೀಕ್ಷಿಸಬಹುದು. ಸದ್ಯ, ನಮ್ಮ ದೇಶದಲ್ಲಿ ಬಹುತೇಕ ಹಿಟ್ಲರ್‍ನ ಮನಃಸ್ಥಿತಯನ್ನೇ ಹೋಲುವ ಒಂದು ಗುಂಪು ಇದೆ. ಹಿಟ್ಲರ್ ಪ್ರಶ್ನಾತೀತನಾಗಿದ್ದ. ಆದರೆ ಈ ಮಂದಿ ಆ ಮಟ್ಟಕ್ಕೆ ತಲುಪಿಲ್ಲ ಎಂಬುದನ್ನು ಬಿಟ್ಟರೆ ಉಳಿದಂತೆ ಇವರ ಮಾತು, ವರ್ತನೆ, ದೇಹ ಭಾಷೆಗಳು ಹಿಟ್ಲರ್‍ನನ್ನೇ ಹೋಲುತ್ತಿವೆ. ಹಿಟ್ಲರ್‍ನ ಕೈಯಲ್ಲಿ ಕುಂಚ ಇತ್ತು. ಆದರೆ ಆ ಕುಂಚ ಎಷ್ಟು ದುರ್ಬಲ ಆಗಿತ್ತು ಅಂದರೆ, ತನ್ನೊಳಗಿನ ಕ್ರೌರ್ಯವನ್ನು ಬಿಡಿಸುವ ಧೈರ್ಯ ತೋರದಷ್ಟು. ಸಾಮೂಹಿಕ ನರಮೇಧಗಳು ಆತನ ಕುಂಚದಲ್ಲಿ ಚಿತ್ರಗಳಾಗಿ ಪಡಿಮಾಡಿಲ್ಲ. ದ್ವೇಷದ ಭಾಷಣಗಳು ವರ್ಣಚಿತ್ರಗಳಾಗಿಲ್ಲ. ಆರ್ಯಶ್ರೇಷ್ಠತೆಯ ಅಮಲಿಗೆ ಸಿಲುಕಿ ನಜ್ಜು ಗುಜ್ಜಾದ ಮಹಿಳೆ, ಮಕ್ಕಳು, ವೃದ್ಧರನ್ನು ಆ ಕುಂಚ ಸ್ಪರ್ಶಿಸಿಲ್ಲ. ಇದು ಹಿಟ್ಲರ್‍ನೊಳಗಿನ ಕಲಾವಿದನ ಅಸಹಾಯಕತೆಯನ್ನಷ್ಟೇ ದಾಖಲಿಸುವುದಿಲ್ಲ, ಆ ಕಲಾವಿದ ಆತನೊಳಗೆ ನಿಜಕ್ಕೂ ಇದ್ದನೋ ಅಥವಾ ತನ್ನ ಕ್ರೌರ್ಯದ ಮುಖವನ್ನು ಅಡಗಿಸುವ ಉದ್ದೇಶದಿಂದ ಕುಂಚವನ್ನು ದುರುಪಯೋಗಿಸಿದನೋ ಅನ್ನುವ ಅನುಮಾನವನ್ನು ಹುಟ್ಟು ಹಾಕುತ್ತದೆ. ಹಿಟ್ಲರ್ ಕ್ರೂರಿಯಲ್ಲ, ಆತನೊಳಗೆ ಓರ್ವ ಕಲಾವಿದನಿದ್ದ ಎಂದು ಜಗತ್ತು ನಂಬಲಿ ಎಂಬ ಕಾರಣಕ್ಕಾಗಿ ಆತ ಕುಂಚ ಪ್ರೇಮಿಯಂತೆ ನಟಿಸಿದನೋ ಎಂದು ಸಂದೇಹಪಡುವುದಕ್ಕೆ ಆತನ ವ್ಯಕ್ತಿತ್ವ ಅವಕಾಶವನ್ನು ಕೊಡುತ್ತದೆ. ನಿಜವಾಗಿ ಹಿಟ್ಲರ್‍ನ ಕೈಯಲ್ಲಿ ಕುಂಚ ಇರುವಂತೆಯೇ ನಮ್ಮ ದೇಶದ ದುಷ್ಕರ್ಮಿಗಳ ಬಾಯಲ್ಲಿ ಗೋವು ಇದೆ. ಆದರೆ ಈ ಗೋವು ಎಷ್ಟು ದುರ್ಬಲ ಅಂದರೆ, ಪ್ರತಿದಿನ ಬೃಹತ್ ಕಂಪೆನಿಗಳಲ್ಲಿ ಹತ್ಯೆಯಾಗುವ ಮತ್ತು ವಿದೇಶಗಳಿಗೆ ಮಾಂಸವಾಗಿ ರವಾನೆಯಾಗುವ ಗೋವುಗಳ ಬಗ್ಗೆ ಒಂದೇ ಒಂದು ಮಾತನ್ನೂ ಆಡದಷ್ಟು. ಪ್ರತಿದಿನ ಈ ದೇಶದ ಹಾದಿ-ಬೀದಿಗಳಲ್ಲಿ, ಗೋಶಾಲೆಗಳಲ್ಲಿ ಹಸಿವಿನಿಂದ ಸಾಯುವ ಗೋವುಗಳ ಬಗ್ಗೆ ಒಂದು ತುಂಡು ಹೇಳಿಕೆಯನ್ನೂ ಕೊಡದಷ್ಟು. ಕನಿಷ್ಠ ತಂತಮ್ಮ ಮನೆಯಲ್ಲಿ ಒಂದು ಗೋವನ್ನೂ ಸಾಕದಷ್ಟು. ಆದ್ದರಿಂದ ಇವರ ಬಾಯಲ್ಲಿರುವ ಗೋವು ಹಿಟ್ಲರ್‍ನ ಕೈಯಲ್ಲಿದ್ದ ಕುಂಚದಂತೆ ಕಾಣಿಸುತ್ತದೆ. ಹಿಟ್ಲರ್ ತನ್ನ ಹಿಂಸಕ ಮನಸ್ಸು ಚರ್ಚೆಗೊಳಗಾಗದಂತೆ ನೋಡಿಕೊಳ್ಳುವುದಕ್ಕಾಗಿ ಕುಂಚ ಬಳಸಿದ್ದರೆ ಈ ದುಷ್ಕರ್ಮಿಗಳು ತಮ್ಮ ಕೊಲೆಗಾರ ಮನಸ್ಸನ್ನು ಅಡಗಿಸುವುದಕ್ಕಾಗಿ ಗೋವನ್ನು ಬಳಸುತ್ತಿದ್ದಾರೆ. ಗೋವು ಅವರ ಮನಸ್ಸಲಿಲ್ಲ. ಗೋವನ್ನು ಪುಕ್ಕಟೆಯಾಗಿ ಕೊಟ್ಟರೂ ಸಾಕುವ ಉಮೇದು ಅವರಲ್ಲಿರುವುದಕ್ಕೆ ಸಾಧ್ಯವೂ ಇಲ್ಲ. ಅವರ ದುಷ್ಕೃತ್ಯಗಳು ಗೋವಿನ ಸಂರಕ್ಷಣೆಗಾಗಿಯೂ ಅಲ್ಲ. ಅವರೊಳಗೊಂದು ವಿಕೃತ ಭಾವವಿದೆ. ದ್ವೇಷವಿದೆ. ಈ ದ್ವೇಷ ಗೋವಿನ ಮೇಲಿನ ಪ್ರೇಮದಿಂದಾಗಿ ಹುಟ್ಟಿಕೊಂಡದ್ದಲ್ಲ. ಒಂದುವೇಳೆ ಗೋವಿನ ಮೇಲಿನ ಪ್ರೇಮವೇ ಅವರ ದುಷ್ಕೃತ್ಯಗಳಿಗೆ ಕಾರಣವೆಂದಾದರೆ, ಅವರ ಪ್ರತಿ ಗುರಿಯೂ ಮುಸ್ಲಿಮರೇ ಆಗಿರುವುದಕ್ಕೆ ಸಾಧ್ಯವೇ ಇಲ್ಲ. ಅವರು ನಿರ್ದಿಷ್ಟ ಧರ್ಮದ ಅನುಯಾಯಿಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಗೋಮಾಂಸ ಸೇವಕರು ಈ ದೇಶದಲ್ಲಿ ಮುಸ್ಲಿಮರಿಗಿಂತ ಮುಸ್ಲಿಮೇತರರೇ ಹೆಚ್ಚಿದ್ದರೂ ಅವರು ಕೈಗೆ ಪ್ರತಿಬಾರಿಯೂ ಜುನೈದ್‍ಗಳೂ, ಪೆಹ್ಲೂ ಖಾನ್‍ರೇ ಸಿಗುತ್ತಾರೆ.
     ನಿಜವಾಗಿ, ಹಿಟ್ಲರ್‍ನ ಕೈಯಲ್ಲಿದ್ದ ಕುಂಚದಂತೆ ಈ ದೇಶದಲ್ಲಿ ಥಳಿಸಿ ಕೊಲ್ಲುವವರ ಬಾಯಲ್ಲಿ ಗೋವು ಇದೆ. ಉಳಿದಂತೆ ಕುಂಚ ಹಿಡಿದ ಕೈ ಮತ್ತು ಗೋವಿನ ಸ್ಮರಣೆ ಮಾಡುವ ಬಾಯಿ ಎರಡರ ಮನಸ್ಸೂ ಒಂದೇ. ಅದೇನೆಂದರೆ, ನಿರ್ದಿಷ್ಟ ಧರ್ಮದ ಜನರನ್ನು ಬೇಟೆಯಾಡುವುದು. ಲಂಡನ್‍ನಲ್ಲಿ ಹರಾಜಿಗಿಟ್ಟಿರುವ ವರ್ಣ ಚಿತ್ರಗಳು ಈ ಹಿನ್ನೆಲೆಯಲ್ಲಿ ಬಹಳ ಮುಖ್ಯವಾಗುತ್ತದೆ. ಅದೊಂದು ರೂಪಕ. ಈ ರೂಪಕವು ನಮ್ಮ ನಡುವಿನ ಗೋರಕ್ಷಕರಿಗೆ ಚೆನ್ನಾಗಿಯೇ ಒಪ್ಪುತ್ತದೆ.

ದ.ಕ. ಜಿಲ್ಲೆಯ ಅಶಾಂತಿಗೆ ಪರಿಹಾರ ಹೇಗೆ?

      ದ.ಕ. ಜಿಲ್ಲೆಯ ಕುರಿತಂತೆ ಜಿಲ್ಲೆಯ ಹೊರಗೆ ಕೆಲವು ಮೆಚ್ಚುಗೆಯ ಮಾತುಗಳು ಚಾಲ್ತಿಯಲ್ಲಿವೆ. ಇಲ್ಲಿ ಗುಣಮಟ್ಟದ ಶಿಕ್ಷಣ ಕೇಂದ್ರಗಳಿವೆ, ಉನ್ನತ ದರ್ಜೆಯ ಹಲವು ಆಸ್ಪತ್ರೆಗಳಿವೆ, ಜನರ ಜೀವನ ಮಟ್ಟವೂ ಸಾಕಷ್ಟು ಉತ್ತಮವಾಗಿದೆ, ಜಿಲ್ಲೆಯ ಜನರು ಬುದ್ಧಿವಂತರಿದ್ದಾರೆ.. ಇತ್ಯಾದಿ ಇತ್ಯಾದಿ. ಹಾಗಂತ, ಇವನ್ನೆಲ್ಲ ತಿರಸ್ಕರಿಸಬೇಕಿಲ್ಲ. ಇದರ ಜೊತೆಗೇ ಇಲ್ಲಿ ಸುಡುವ ಬಿಸಿಲಿದೆ, ಧಾರಾಕಾರ ಮಳೆಯಿದೆ, ಬೆಂಗಳೂರಿಗೆ ಸರಿಗಟ್ಟುವಷ್ಟು ಎರಡು ಬೃಹತ್ ಮಾಲ್‍ಗಳಿವೆ, ಬಹುತೇಕ ಎಲ್ಲ ದೈನಿಕಗಳ ಬ್ಯೂರೋಗಳಿವೆ, ಟಿವಿ ಚಾನೆಲ್‍ಗಳ ಕಚೇರಿಗಳಿವೆ, ಇತರೆಲ್ಲ ಜಿಲ್ಲೆಗಳಿಗಿಂತ ಹೆಚ್ಚು ಸಂಘ ಸಂಸ್ಥೆಗಳಿವೆ, ಜಿಲ್ಲೆಯ ಮಂದಿ ಕನಿಷ್ಠ 5 ಭಾಷೆಯಲ್ಲಿ ಸಂವಹನ ನಡೆಸುವಷ್ಟು ಸಮರ್ಥರಿದ್ದಾರೆ.. ಇತ್ಯಾದಿಗಳೂ ನಿಜವೇ. ಈ ಮೆಚ್ಚುಗೆ ಮತ್ತು ವಿಶೇಷತೆಗಳ ಆಚೆಗೆ ಜಿಲ್ಲೆಯನ್ನು ಕಾಡುವ ಕೆಲವು ಪ್ರಶ್ನೆಗಳಿವೆ. ಇಲ್ಲಿ ಯಾಕಿಷ್ಟು ರಕ್ತದಾಹ? ಇಲ್ಲಿನ ಹಿಂದುಗಳು ಮುಸ್ಲಿಮರನ್ನು ಸಹಿಸುವುದಿಲ್ಲವೇ ಅಥವಾ ಮುಸ್ಲಿಮರು ಹಿಂದೂಗಳನ್ನು ದ್ವೇಷಿಸುತ್ತಾರಾ? ಇಲ್ಲಿನ ವ್ಯಾಪಾರ-ವಹಿವಾಟುಗಳು ಹೇಗಿವೆ? ವಿಶೇಷ ಏನೆಂದರೆ, ಸದ್ಯ ಜಿಲ್ಲೆಯಲ್ಲಿ ಆಗಿರುವ ಎರಡು ಹತ್ಯೆ ಮತ್ತು ಹಲವು ಇರಿತ ಪ್ರಕರಣಗಳಿಗೆ ಮೂಲ ಕಾರಣವೆಂದು ನಂಬಲಾಗಿರುವ ಘಟನೆ ಚುಡಾವಣೆಯದ್ದಲ್ಲ. ‘ಗೋ ಸಾಗಾಟ ಮತ್ತು ಥಳಿತ’ ಎಂಬ ಪಟ್ಟಿಗೆ ಸೇರಿದ್ದೂ ಅಲ್ಲ. `ಲವ್ ಜಿಹಾದ್’ ಎಂಬ ಅತಿ ವಿಶೇಷ ಕೆಟಗರಿಯಲ್ಲೂ ಇದಕ್ಕೆ ಸ್ಥಾನವಿಲ್ಲ. ಕಲ್ಲಡ್ಕ ಎಂಬ ಅತಿ ಸಣ್ಣ ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಮರಿಬ್ಬರ ನಡುವೆ ನಡೆದ ಘಟನೆಯನ್ನೇ ಇದಕ್ಕೆ ಕಾರಣವಾಗಿ ಕೊಡಲಾಗುತ್ತಿದೆ. ಅವರಿಬ್ಬರೂ ಅಷ್ಟು ಪ್ರಭಾವಿಗಳೇ? ಜಿಲ್ಲೆ ಅಷ್ಟೂ ಸೆನ್ಸಿಟಿವ್ ಆಗಿದೆಯೇ? ಆ ಒಂದು ಘಟನೆಯನ್ನು ವಾರಗಳ ತನಕ ತಲೆಯಲ್ಲಿ ಹೊತ್ತು ತಿರುಗುವಷ್ಟು ಮತ್ತು ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡು ಹತ್ಯೆ, ಹಲ್ಲೆಗಳಲ್ಲಿ ಏರ್ಪಡುವಷ್ಟು ಜಿಲ್ಲೆ ಬೌದ್ಧಿಕ ದಾರಿದ್ರ್ಯಕ್ಕೆ ಒಳಪಟ್ಟಿದೆಯೇ? ಒಂದು ವೇಳೆ, ಯಾರಾದರೂ ಈ ಕಾರಣಕ್ಕಾಗಿ ಜಿಲ್ಲೆಯಲ್ಲಿ ಅಧ್ಯಯನ ನಡೆಸಲು ಮುಂದಾಗುವುದಾದರೆ, ಅವರಿಗೆ ಅಚ್ಚರಿಯಾಗುವ ಸಾಧ್ಯತೆಯೇ ಹೆಚ್ಚು. ಜಿಲ್ಲೆ ಹಿಂದೂ-ಮುಸ್ಲಿಮ್ ಆಗಿ ವಿಭಜನೆಗೊಂಡಿಲ್ಲ. ವ್ಯಾಪಾರ-ವಹಿವಾಟುಗಳು ನಾವು-ಅವರಾಗಿ ಮಾರ್ಪಾಟಾಗಿಲ್ಲ. ಅದೇ ಮೀನು ಮಾರುಕಟ್ಟೆ, ಅದೇ ಧಕ್ಕೆ. ತರಕಾರಿ ಮಾರುವವರಲ್ಲಿ ಅವರೂ-ಇವರೂ ಇದ್ದಾರೆ. ದಿನಸಿ ಅಂಗಡಿಗಳ ಗಿರಾಕಿಗಳಲ್ಲಿ ಅವರೂ ಇದ್ದಾರೆ, ಇವರೂ ಇದ್ದಾರೆ. ಮೀನು ಹಿಡಿಯುವವರಲ್ಲೂ ಅವರು ಇದ್ದಾರೆ. ಮಾರುವವರಲ್ಲೂ ಅವರು ಇದ್ದಾರೆ. ಇವರೂ ಇದ್ದಾರೆ. ತರಕಾರಿಯನ್ನು ಬೆಳೆದು ಮಾರುಕಟ್ಟೆಗೆ ತರುವವರು, ಮಾರುವವರು ಮತ್ತು ಅದನ್ನು ಖರೀದಿಸುವವರು ಹಿಂದೂ-ಮುಸ್ಲಿಮ್ ಆಗಿ ಬೇರ್ಪಟ್ಟಿಲ್ಲ. ಮಂಗಳೂರಿನ ಕೇಂದ್ರ ಮಾರುಕಟ್ಟೆ ಮತ್ತು ಜಿಲ್ಲೆಯ ಇತರ ಭಾಗಗಳಲ್ಲಿರುವ ಸಣ್ಣ ಪುಟ್ಟ ಮಾರುಕಟ್ಟೆಗಳು ಈಗಲೂ ಮನುಷ್ಯರಲ್ಲಿಯೇ ಇವೆ. ಅವರ್ಯಾರೂ ಧರ್ಮದ ಕಾರಣಕ್ಕಾಗಿ ಭಾರೀ ಸಂಖ್ಯೆಯಲ್ಲಿ ಅಂಗಡಿಗಳನ್ನು ಬದಲಿಸಿಕೊಂಡಿಲ್ಲ. ಇಲ್ಲಿ ಸಾಲಗಳ ವಹಿವಾಟೂ ಈ ಹಿಂದಿನಂತೆಯೇ ನಡೆಯುತ್ತಿದೆ. ಹೊಟೇಲುಗಳಲ್ಲಿ ಅವೇ ತಮಾಷೆಯ ಮಾತುಗಳು ವಿನಿಮಯವಾಗುತ್ತಿವೆ. ಕೆಲವು ಕಡೆ ಒಂದಷ್ಟು ವ್ಯತಿರಿಕ್ತ ಬೆಳವಣಿಗೆಗಳಾಗಿವೆಯಾದರೂ ಉದ್ದೇಶಪೂರ್ವಕವಾಗಿ ಹಿಂದೂ ಕಾಲನಿ ಮತ್ತು ಮುಸ್ಲಿಮ್ ಕಾಲನಿಗಳು ತಲೆಯೆತ್ತಿಲ್ಲ. ಆದರೂ ಜಿಲ್ಲೆಯ ಜನರು ತಮ್ಮ ಮಾತುಕತೆಗೆ ಒಂದು ಅಘೋಷಿತ ಮಿತಿಯನ್ನು ಅಳವಡಿಸಿಕೊಂಡಿರುವುದು ಅನೇಕ ಸಂದರ್ಭಗಳಲ್ಲಿ ವ್ಯಕ್ತವಾಗುತ್ತಲೇ ಇವೆ. ಅದು ರಾಜಕೀಯ. ಮಾತುಕತೆಗಳ ನಡುವೆ ರಾಜಕೀಯ ನುಸುಳದಂತೆ ಬಲವಂತದ ಎಚ್ಚರಿಕೆ ವಹಿಸಲಾಗುತ್ತಿದೆ. ಈ ಹಿಂದೆ ಈ ಮಡಿವಂತಿಕೆ ಇರಲಿಲ್ಲ. ಬಹುಶಃ ಜಿಲ್ಲೆಯ ರಕ್ತದಾಹಕ್ಕೆ ಕಾರಣಗಳು ಇಲ್ಲೇ ಇರುವ ಸಾಧ್ಯತೆಯೇ ಹೆಚ್ಚು. ಜನರು ಯಾವುದರ ಬಗ್ಗೆ ಮಾತಾಡಲು ಹೆಚ್ಚು ಭಯಪಡುತ್ತಾರೋ ಅದಕ್ಕೆ ಮುಖ್ಯವಾಗಿ ಎರಡು ಕಾರಣಗಳಿರುತ್ತವೆ. ಒಂದೋ ಅವರಿಗೆ ಆ ಬಗ್ಗೆ ಜ್ಞಾನವಿಲ್ಲ ಅಥವಾ ಹಾಗೇ ಮಾತಾಡುವುದರಿಂದ ಅಪಾಯ ಇದೆ. ಸದ್ಯ ಈ ಎರಡನೇ ಕಾರಣವೇ ಒಟ್ಟು ಬೆಳವಣಿಗೆಯ ಮೂಲವೆನ್ನಬಹುದು. ಈ ಸಂಭಾವ್ಯ ಅಪಾಯವನ್ನು ಪರಿಗಣಿಸಿಯೇ ಜನಸಾಮಾನ್ಯರು ತಮ್ಮ ಮಾತುಕತೆಗಳ ವೇಳೆ ರಾಜಕೀಯವನ್ನು ದೂರ ಇಡುತ್ತಿದ್ದಾರೆ. ಜಿಲ್ಲೆಯ ಆರೋಗ್ಯದ ಬಗ್ಗೆ ಕಾಳಜಿ ಇರುವವರು ಹೆಚ್ಚು ಒತ್ತು ಕೊಡಬೇಕಾದ ಜಾಗ ಇದು. ಮೂಲ ಕಾರಣ ಏನೆಂದು ಸ್ಪಷ್ಟವಾದರೆ ಆ ಬಳಿಕ ಪರಿಹಾರದ ದಾರಿಗಳನ್ನು ಕಂಡುಕೊಳ್ಳುವುದು ಸುಲಭವಾಗುತ್ತದೆ. ಆದ್ದರಿಂದ, ಸದ್ಯ ರಾಜಕೀಯ ಉದ್ದೇಶ ಇಲ್ಲದ ಜಿಲ್ಲೆಯ ಎಲ್ಲ ಸಂಘಸಂಸ್ಥೆಗಳು ಒಟ್ಟು ಸೇರಬಹುದಾದ ಸಂದರ್ಭವೊಂದನ್ನು ತುರ್ತಾಗಿ ಸೃಷ್ಟಿಸಿಕೊಳ್ಳಬೇಕು. ಹಿಂದೂ ಮತ್ತು ಮುಸ್ಲಿಮ್ ಸಂಘಸಂಸ್ಥೆಗಳು ಈ ವಿಷಯದಲ್ಲಿ ಮಡಿವಂತಿಕೆ ತೋರದೇ ಒಂದೇ ಕಡೆ ಸೇರಬೇಕು. ಸಮಿತಿ ರಚಿಸಬೇಕು. ಪ್ರಥಮವಾಗಿ- ಸೂಕ್ಷ್ಮವೆಂದು ನಂಬಲಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಅಲ್ಲಿಯ ಸಂಘಸಂಸ್ಥೆಗಳನ್ನು ಜೊತೆ ಸೇರಿಸಿಕೊಂಡು ಪ್ರತಿ ಮನೆ ಮನೆಯ ಬಾಗಿಲಿಗೂ ಹೋಗಬೇಕು. ಅವರೊಂದಿಗೆ ಮಾತಾಡಬೇಕು. ರಾಜಕೀಯದ ಒಳ ಉದ್ದೇಶಗಳನ್ನು ಯಾವ ಮುಲಾಜೂ ಇಲ್ಲದೇ ಮಾತಾಡುವಷ್ಟು ರಾಜಕೀಯೇತರ ಧ್ವನಿಯಾಗಿ ಈ ಸಮಿತಿಗಳು ಹೊರ ಹೊಮ್ಮಬೇಕು. ಪ್ರತಿ ಮನೆಯ ಸಮಸ್ಯೆಗಳಿಗೆ ಕಿವಿಯಾಗಬೇಕು. ಈ ಸಮಸ್ಯೆಗಳು ಪರಿಹಾರವಾಗಬೇಕಾದರೆ ಜಿಲ್ಲೆಯಲ್ಲಿ ಶಾಂತಿ ಇರಬೇಕಾದುದು ಎಷ್ಟು ಅಗತ್ಯ ಎಂಬುದನ್ನು ಮನವರಿಕೆ ಮಾಡಿಸಬೇಕು. ಎರಡನೆಯದಾಗಿ, ಇರಿತದಲ್ಲಿ ಭಾಗಿಯಾದ ಆರೋಪಿಗಳ ಮನೆಗಳಿಗೆ ಭೇಟಿ ಕೊಡಬೇಕು. ಆ ಮನೆಯವರಿಗೆ ವಾಸ್ತವವನ್ನು ತಿಳಿ ಹೇಳಬೇಕು. ಸಾಧ್ಯವಾದರೆ, ಆರೋಪಿಗಳನ್ನು ಭೇಟಿಯಾಗುವುದು ಬಹಳ ಬಹಳ ಪ್ರಯೋಜನಕಾರಿ. ಅವರನ್ನು ಭೇಟಿಯಾಗುವುದರಿಂದ ಆಗುವ ಇನ್ನೊಂದು ಲಾಭ ಏನೆಂದರೆ, ಅವರ ವಿಚಾರಧಾರೆಗಳೇನು ಎಂಬುದು ಗೊತ್ತಾಗುತ್ತದೆ. ಇನ್ನಷ್ಟು ಯುವಕರು ಅಂಥ ವಿಚಾರಧಾರೆಯೊಂದಿಗೆ ಬೆಳೆಯದಂತೆ ನೋಡಿಕೊಳ್ಳುವುದಕ್ಕೆ ರೂಪು-ರೇಷೆಯನ್ನು ಸಿದ್ಧಪಡಿಸುವುದಕ್ಕೆ ಅವಕಾಶವಾಗುತ್ತದೆ. ಇದೇ ವೇಳೆ, ಆರೋಪಿಗಳ ಮನೆಗೆ ನೀಡುವ ಭೇಟಿಯನ್ನು ಚಿತ್ರೀಕರಿಸಿಕೊಳ್ಳುವುದು ಬಹಳ ಅಗತ್ಯ. ಅವರ ಹೆತ್ತವರು, ಒಡಹುಟ್ಟಿದವರು ಮತ್ತಿತರರ ಮಾತುಗಳನ್ನು ಸಮಾಜದ ಮುಂದೆ ಇಡುವುದರಿಂದ ಸಾಕಷ್ಟು ಪ್ರಯೋಜನ ಇದೆ. ಸಾಧ್ಯವಾದರೆ ದೃಶ್ಯ ಮಾಧ್ಯಮಗಳೂ ಸೇರಿದಂತೆ ಎಲ್ಲ ಮಾಧ್ಯಮಗಳಲ್ಲಿ ಬಿತ್ತರಿಸುವುದಕ್ಕೆ ಅದರಿಂದ ಅನುಕೂಲವಾಗುತ್ತದೆ. ಜಿಲ್ಲೆಯ ಜನರನ್ನು ಅಂಥ ವೀಡಿಯೋಗಳು ಖಂಡಿತ ಪ್ರಭಾವಿತಗೊಳಿಸಬಹುದು. ವಾಟ್ಸ್ಯಾಪ್ ಮಾಧ್ಯಮವನ್ನೂ ಇದರ ಪ್ರಸಾರಕ್ಕಾಗಿ ಬಳಸಿಕೊಳ್ಳಬಹುದು. ಸಂತ್ರಸ್ತರು ಮತ್ತು ಆರೋಪಿ ಕುಟುಂಬಗಳ ಪ್ರತಿ ಮಾತು-ತುಡಿಗಳು ಸಮಾಜಕ್ಕೆ ಬಹಳ ದೊಡ್ಡ ಸಂದೇಶವನ್ನು ನೀಡಬಲ್ಲುದು.
     ಆರೋಗ್ಯ ಮತ್ತು ಅನಾರೋಗ್ಯಗಳ ನಡುವೆ ಆಯ್ಕೆಯ ಪ್ರಶ್ನೆ ಬಂದರೆ ಯಾರೇ ಆಗಲಿ ಆರೋಗ್ಯವನ್ನೇ ಇಷ್ಟಪಡುತ್ತಾರೆ. ದ.ಕ. ಜಿಲ್ಲೆಯ ಮಂದಿ ಕೂಡ ಇದಕ್ಕೆ ಹೊರತಾಗಿಲ್ಲ. ಅನಾರೋಗ್ಯ ಪೀಡಿತ ಜಿಲ್ಲೆಯಿಂದ ಯಾರಿಗೂ ಸುಖ ಇಲ್ಲ. ಮಕ್ಕಳೂ ಸುಖವಾಗಿರಲ್ಲ. ಇದನ್ನು ಜನರಿಗೆ ಮನಮುಟ್ಟುವಂತೆ ಹೇಳುವ ಪ್ರಯತ್ನ ನಡೆಯಬೇಕಾಗಿದೆ. ಜಿಲ್ಲೆಯ ಸಂಘ ಸಂಸ್ಥೆಗಳು ತುರ್ತಾಗಿ ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳಬೇಕಿದೆ.

Thursday, 6 July 2017

.ತುಮಕೂರಿನ 37 ಹಸುಗಳು ಮತ್ತು ಗೋರಕ್ಷಣೆ

      ಕಳೆದವಾರ ತುಮಕೂರಿನಲ್ಲಿ ನಡೆದ ರೈತ ಪ್ರತಿಭಟನೆಯು ಸ್ವಘೋಷಿತ ಗೋರಕ್ಷಕರ ಕುರಿತಂತೆ ಮತ್ತೊಂದು ಸುತ್ತಿನ ಚರ್ಚೆಗೆ ವೇದಿಕೆಯನ್ನು ಒದಗಿಸಿದೆ. ತಮಿಳುನಾಡಿನ ಈರೋಡ್‍ನಿಂದ ಹೈನುಗಾರಿಕೆಗೆಂದು 37 ಜರ್ಸಿ ಹಸುಗಳು ಮತ್ತು ಎರಡು  ಎಮ್ಮೆಗಳನ್ನು ಖರೀದಿಸಿ ಬೆಳಗಾವಿಗೆ ತರುತ್ತಿದ್ದ ವೇಳೆ ಮೇ 24ರಂದು ತುಮಕೂರಿನಲ್ಲಿ ಸ್ವಘೋಷಿತ ಗೋರಕ್ಷಕರು ದಾಳಿ ನಡೆಸಿದರು. ಸುಮಾರು 200ರಷ್ಟಿದ್ದ ಗೋರಕ್ಷಕರು ರೈತರನ್ನು ಮತ್ತು ಲಾರಿ ಚಾಲಕರನ್ನು ಥಳಿಸಿದರು. ಪೊಲೀಸರು ರೈತರ ಮೇಲೆ ಮೊಕದ್ದಮೆ ದಾಖಲಿಸಿದರು. ಎಮ್ಮೆ ಮತ್ತು ಹಸುಗಳನ್ನು ಗುಬ್ಬಿ ತಾಲೂಕಿನಲ್ಲಿರುವ ಧ್ಯಾನ್ ಫೌಂಡೇಶನ್ ಗೋರಕ್ಷಕ್ ಟ್ರಸ್ಟ್‍ಗೆ ಹಸ್ತಾಂತರಿಸಿದರು. ರೈತರು ಕಂಗಾಲಾದರು. ತಲಾ 50 ಸಾವಿರ ರೂಪಾಯಿಯನ್ನು ತೆತ್ತು 37 ಹಸು ಮತ್ತು ಎರಡು ಎಮ್ಮೆಗಳನ್ನು ಖರೀದಿಸಿದ್ದ ರೈತರು, ಅದಕ್ಕಾಗಿ ಸಂಸ್ಥೆಗಳಿಂದ ಸಾಲಗಳನ್ನೂ ಪಡೆದಿದ್ದರು. ಅಲ್ಲದೇ 37 ಹಸುಗಳೂ ಗರ್ಭ ಧರಿಸಿದ್ದುವು. ಕಳೆದ ಜೂನ್ 5ರಂದು ತುಮಕೂರಿನ ಜೆಎಂಎಫ್‍ಸಿ ನ್ಯಾಯಾಲಯವು, ಮುಟ್ಟುಗೋಲು ಹಾಕಲಾದ ಜಾನುವಾರುಗಳನ್ನು ರೈತರಿಗೆ ಹಿಂದಿರುಗಿಸಬೇಕೆಂದು ಆದೇಶಿಸಿತು. ಮಾತ್ರವಲ್ಲ, ತಲಾ 50 ರೂಪಾಯಿಯಂತೆ 39 ಜಾನುವಾರುಗಳಿಗೂ ಪ್ರತಿದಿನದ ನಿರ್ವಹಣಾ ವೆಚ್ಚವಾಗಿ ಪಾವತಿಸಬೇಕೆಂದೂ ರೈತರಿಗೆ ನಿರ್ದೇಶಿಸಿತು. ಆದರೆ ಧ್ಯಾನ್ ಟ್ರಸ್ಟ್ ಜಾನುವಾರುಗಳನ್ನು ಹಿಂದಿರುಗಿಸಲು ಒಪ್ಪುತ್ತಿಲ್ಲ. ತಲಾ 1.7 ಲಕ್ಷ ರೂಪಾಯಿಯಂತೆ 39 ಜಾನುವಾರಿಗಳಿಗೆ ಪಾವತಿಸಿದರೆ ಮಾತ್ರ ಬಿಟ್ಟು ಕೊಡುವುದಾಗಿ ಅದು ಹೇಳಿಕೊಂಡಿದೆ.
      ಇಲ್ಲಿ ಕೆಲವು ಪ್ರಶ್ನೆಗಳಿವೆ. ನಿಜಕ್ಕೂ ಗೋರಕ್ಷಕರೆಂದರೆ ಯಾರು? ಅವರ ನಿಯಂತ್ರಣ ಯಾರ ಕೈಯಲ್ಲಿದೆ?  ಇತ್ತೀಚೆಗಷ್ಟೇ ತಮಿಳುನಾಡು ಸರಕಾರದ ಆದೇಶದಂತೆ ರಾಜಸ್ಥಾನದಿಂದ ಖರೀದಿಸಿ ತರಲಾಗುತ್ತಿದ್ದ ಜಾನುವಾರುಗಳನ್ನು ತಡೆಹಿಡಿದ ಘಟನೆ ರಾಜಸ್ಥಾನದಲ್ಲೇ ನಡೆಯಿತು. ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಲಾಯಿತು. ಮಾಂಸ ಸಾಗಿಸುತ್ತಿರುವರೆಂಬ ಆರೋಪದಲ್ಲಿ ಯುವಕನನ್ನು ಇರಿದು ಕೊಂದ ಘಟನೆ ಕಳೆದವಾರ ದೆಹಲಿಯಲ್ಲಿ ನಡೆದಿದೆ. ಪೆಹ್ಲೂಖಾನ್, ಅಖ್ಲಾಕ್ ಹತ್ಯಾ ಘಟನೆಗಳು ಜನರ ನೆನಪಿನಿಂದ ಮಾಸುವ ಮೊದಲೇ ಅಂಥದ್ದೇ ಸರಣಿ ಕ್ರೌರ್ಯಗಳು ನಡೆಯುತ್ತಿರುವುದು ಏನನ್ನು ಸೂಚಿಸುತ್ತದೆ? ಹಾಗಂತ, ಗೋರಕ್ಷಣೆಯ ಹೆಸರಲ್ಲಿ ಥಳಿಸುವ ಗುಂಪಿನ ಮನಸ್ಥಿತಿ ಎಷ್ಟು ಭೀಭತ್ಸಕರ ಎನ್ನುವುದಕ್ಕೆ ಪುರಾವೆಯಾಗಿ ನಿರ್ದಿಷ್ಟ ಘಟನೆಗಳನ್ನು ಉಲ್ಲೇಕಿಸಿ ಸಮರ್ಥಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ಪ್ರತಿ ಘಟನೆಯೂ ಅದಕ್ಕೆ ಸಾಕ್ಷಿಯೇ. ಪ್ರತಿ ಹಿಂಸಾತ್ಮಕ ಘಟನೆಯನ್ನೂ ಚಿತ್ರೀಕರಿಸುವುದು ಮತ್ತು ಸಾಮಾಜಿಕ ಜಾಲತಾಣಗಳಿಗೆ ರವಾನಿಸಿ ತೃಪ್ತಿಪಡುವುದರಲ್ಲಿಯೇ ಆ ಮನಸ್ಥಿತಿ ಎಷ್ಟು ಭೀಕರ ಎಂಬುದನ್ನು ಸಾರಿ ಹೇಳುತ್ತದೆ. ಸಾಮಾನ್ಯವಾಗಿ, ಅತ್ಯಾಚಾರ ಪ್ರಕರಣಗಳಲ್ಲಿ ಇಂಥ ಚಿತ್ರೀಕರಣಗಳು ನಡೆಯುವುದಿದೆ. ಸಂತ್ರಸ್ತೆಯನ್ನು ಬೆದರಿಸುವುದಕ್ಕೆ ಅಂಥ ಚಿತ್ರೀಕರಣಗಳನ್ನು ಬಳಸಲಾಗುತ್ತದೆ. ಆದರೆ ಸಾಮಾಜಿಕ ಜಾಲತಾಣಗಳಿಗೆ ಅಂಥ ಚಿತ್ರೀಕರಣವನ್ನು ರವಾನಿಸಲು ಅಂಥವರು ಧೈರ್ಯ ತೋರುವುದು ತೀರಾ ತೀರಾ ಕಡಿಮೆ. ಒಂದು ಕಡೆ ಶಿಕ್ಷೆಯ ಭೀತಿಯಿದ್ದರೆ ಇನ್ನೊಂದು ಕಡೆ ಸಹಜ ಅಳುಕು ಇರುತ್ತದೆ. ತಾವು ಅಪರಾಧ ಎಸಗಿದ್ದೇವೆ ಎಂಬ ತಪ್ಪಿತಸ್ಥ ಭಾವ. ನಿಜವಾಗಿ ಗೋರಕ್ಷಕರ ಕ್ರೌರ್ಯ ಅತ್ಯಾಚಾರಕ್ಕಿಂತ ತೀರಾ ಭಿನ್ನವೇನೂ ಅಲ್ಲ. ಅತ್ಯಾಚಾರವು ಓರ್ವ ಹೆಣ್ಣು ಮಗಳನ್ನು ದೈಹಿಕವಾಗಿ ಹಿಂಸಿಸುವುದಕ್ಕಿಂತ ಹೆಚ್ಚು ಮಾನಸಿಕವಾಗಿ ಇರಿಯುತ್ತದೆ. ಸದಾ ಬದುಕಿನುದ್ದಕ್ಕೂ ಅದು ಕಾಡುತ್ತಲೂ ಇರುತ್ತದೆ. ಸಾಮಾಜಿಕವಾಗಿಯೂ ಅದು ಅಡ್ಡ ಪರಿಣಾಮವನ್ನು ಬೀರುತ್ತದೆ. ‘ಅತ್ಯಾಚಾರದ ಸಂತ್ರಸ್ತೆ’ ಎಂಬುದು ಈ ದೇಶದಲ್ಲಿ ಗೌರವದ ಪದವಾಗಿಯೇನೂ ಉಳಿದಿಲ್ಲ. ಮದುವೆ ಸಂದರ್ಭದಲ್ಲಿ ಅದು ತೊಂದರೆ ಕೊಡಬಹುದು. ಸಮಾರಂಭಗಳಲ್ಲಿ ಅದು ಮುಜುಗರಕ್ಕೆ ಒಳಪಡಿಸಬಹುದು. ಅನುಕಂಪ, ತ್ಚು ತ್ಚು ತ್ಚು ಮಾತುಗಳ ಮೂಲಕ ಮತ್ತೆ ಮತ್ತೆ ಕಂಡ ಕಂಡವರಿಂದ ಸಂತ್ರಸ್ತೆಯಾಗುತ್ತಲೇ ಇರುವ ಸನ್ನಿವೇಶಕ್ಕೂ ದೂಡಬಹುದು. ಗೋರಕರಿಂದ ಥಳಿತಕ್ಕೆ ಒಳಗಾಗುವವರ ಪರಿಸ್ಥಿತಿಯೂ ಬಹುತೇಕ ಹೀಗೆಯೇ. ಆವರೆಗೆ ಅತ್ಯಂತ ಪ್ರಾಮಾಣಿಕ ರೈತ, ಹೈನುದ್ಯಮಿ, ವ್ಯಾಪಾರಿಯಾಗಿ ಗುರುತಿಸಿಕೊಂಡಿದ್ದವ ಒಂದು ಬೆಳಗಾತ ದಿಢೀರನೇ ಕಳ್ಳನಾಗಿ ಬಿಡುತ್ತಾನೆ. ಥಳಿಕ್ಕೆ ಒಳಗಾಗುತ್ತಾನೆ. ಅಟ್ಟಾಡಿಸಿ ಹೊಡೆಯುವ, ಬಡಿಯುವ ವೀಡಿಯೋಗಳು ಆತನ ಪತ್ನಿ, ಮಕ್ಕಳಿಂದ ಹಿಡಿದು ಎಲ್ಲರಿಗೂ ಲಭ್ಯವಾಗುತ್ತದೆ. ಮೊಬೈಲ್‍ನಿಂದ ಮೊಬೈಲ್‍ಗೆ ಮತ್ತೆ ಮತ್ತೆ ರವಾನೆಯಾಗುತ್ತಲೂ ಇರುತ್ತದೆ. ಓರ್ವ ವ್ಯಕ್ತಿ ಥಳಿತದ ನೋವಿಗಿಂತಲೂ ಹೆಚ್ಚು ನೋವು ಅನುಭವಿಸುವ ಸಂದರ್ಭ ಇದು. ಒಂದು ಕಡೆ ಸಾರ್ವಜನಿಕವಾಗಿ ತನ್ನ ಪ್ರಾಮಾಣಿಕತೆಗೆ ಬಿದ್ದಿರುವ ಏಟು ಮತ್ತು ಇನ್ನೊಂದು ಕಡೆ ಮನೆಯಲ್ಲಿ ಇದ್ದಿರಬಹುದಾದ ಅಪ್ಪ ಅಥವಾ ಅಣ್ಣ ಎಂಬ ವರ್ಚಸ್ವೀ ವ್ಯಕ್ತಿತ್ವಕ್ಕೆ ನಡುಬೀದಿಯಲ್ಲಿ ಆಗುತ್ತಿರುವ ಅವಮಾನ.. ಇವೆರಡೂ ಸದಾಕಾಲ ಆತನನ್ನು ಖಂಡಿತ ಕಾಡುತ್ತಿರುತ್ತದೆ. ಅಂದಹಾಗೆ, ಅತ್ಯಾಚಾರದ ಸಂತ್ರಸ್ತೆಯ ಹೆಸರನ್ನು ಗೌಪ್ಯವಾಗಿ ಇಡುವ ವ್ಯವಸ್ಥೆಯಾದರೂ ಇದೆ. ಆದರೆ ಗೋರಕ್ಷಕರ ಥಳಿತಕ್ಕೆ ಒಳಗಾಗುವ ವ್ಯಕ್ತಿಯ ಮಟ್ಟಿಗೆ ಹೆಸರು ಮಾತ್ರವಲ್ಲ, ವೀಡಿಯೋಗಳು ಜೊತೆಜೊತೆಗೇ ಬಹಿರಂಗವಾಗುವ ಸ್ಥಿತಿ ಇದೆ. ವ್ಯಕ್ತಿ ಎಷ್ಟೇ ಪ್ರಾಮಾಣಿಕನಾಗಿರಲಿ, ತನಗಾಗಿರುವ ಅವಮಾನ ಮತ್ತು ತನ್ನ ಅಸಹಾಯಕ ವರ್ತನೆಯನ್ನು ತನ್ನ ಪತ್ನಿ, ಮಕ್ಕಳು, ಕುಟುಂಬ ಅಥವಾ ಸಮಾಜ ವೀಕ್ಷಿಸುವುದನ್ನು
ಇಷ್ಟಪಡುವುದಿಲ್ಲ. ಆದ್ದರಿಂದಲೇ ಅತ್ಯಾಚಾರದ ಸಂತ್ರಸ್ತೆಯಂತೆ ‘ಗೋರಕ್ಷಕ ಸಂತ್ರಸ್ತ’ರನ್ನೂ ಯಾಕೆ ಪರಿಗಣಿಸಬಾರದು ಎಂಬ ಪ್ರಶ್ನೆ ಹುಟ್ಟಿಕೊಳ್ಳುವುದು? ಗೋರಕ್ಷಕರ ಕ್ರೌರ್ಯ ಯಾವ ನೆಲೆಯಲ್ಲೂ ಅತ್ಯಾಚಾರಿಗಳ ಕ್ರೌರ್ಯಕ್ಕಿಂತ ಕಡಿಮೆಯದಲ್ಲ. ಈ ಗೋರಕ್ಷಕರಿಗೆ ಯಾವ ನೀತಿ ನಿಯಮಗಳೂ ಇಲ್ಲ. ಅಕ್ರಮ ಮತ್ತು ಸಕ್ರಮ ಸಾಗಾಟಗಳ ಬಗ್ಗೆ ಕನಿಷ್ಠ ಮಾಹಿತಿಯೂ ಇರುವುದಿಲ್ಲ. ಅವರದು ವಿಕೃತ ಮನಸ್ಥಿತಿ. ಆ ಮನಸ್ಥಿತಿಯ ಸ್ವಭಾವ ಏನೆಂದರೆ, ಇತರರನ್ನು ಹಿಂಸಿಸಿ ಆನಂದ ಪಡುವುದು. ಆಕಳನ್ನು ಸ್ವತಃ ಅದರ ಮಾಲಿಕನೇ ಗದ್ದೆಗೆ ಅಟ್ಟಿಕೊಂಡು ಹೋದರೂ ಥಳಿಸುವಷ್ಟು ಈ ಮನಸ್ಥಿತಿ ವಿಕೃತವಾದುದು. ದುರಂತ ಏನೆಂದರೆ, ಈ ಮನಸ್ಥಿತಿಯ ಅಟ್ಟಹಾಸ ದಿನೇ ದಿನೇ ಪ್ರಬಲಗೊಳ್ಳುತ್ತಿದ್ದರೂ ಸಮಾಜ ಎಚ್ಚೆತ್ತುಕೊಳ್ಳುತ್ತಿಲ್ಲ. ನಿರ್ಭಯ ಪ್ರಕರಣದಲ್ಲಿ ಈ ದೇಶ ತೋರಿದ ಒಗ್ಗಟ್ಟನ್ನು ಈ ಕ್ರೌರ್ಯ ಮತ್ತೆ ಮತ್ತೆ ಬಯಸುತ್ತಿದ್ದರೂ ದೊಡ್ಡ ಮಟ್ಟದಲ್ಲಿ ಅಂಥದ್ದೊಂದು ಜಾಗೃತಿ ಇನ್ನೂ ರೂಪುಪಡೆದಿಲ್ಲ. ಉನಾ ಪ್ರಕರಣದಲ್ಲಿ ಈ ಜಾಗೃತಿ ಪ್ರಜ್ಞೆ ಅಲ್ಪ ಮಟ್ಟದಲ್ಲಿ ಕಾಣಿಸಿಕೊಂಡದ್ದನ್ನು ಬಿಟ್ಟರೆ ಉಳಿದಂತೆ ಸಮಾಜ ವೀಕ್ಷಕನ ಪಾತ್ರ ನಿರ್ವಹಿಸಿದ್ದೇ ಹೆಚ್ಚು. ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶವಿಲ್ಲದ ದೇಶವೊಂದರಲ್ಲಿ ಪ್ರಾಮಾಣಿಕರನ್ನೂ ರೈತರನ್ನೂ ಕಳ್ಳರ ಪಟ್ಟಿಗೆ ಸೇರಿಸುವ ಕ್ರೌರ್ಯವೊಂದು ಸಮಾಜದ ಮೌನ ಸಮ್ಮತಿಯೊಂದಿಗೆ ನಡೆಯುತ್ತಿರುವುದು ಅತ್ಯಂತ ಅಪಾಯಕಾರಿಯಾದುದು. ಇದರ ವಿರುದ್ಧ ಸಮಾಜ ಪ್ರತಿ ಚಳವಳಿ ನಡೆಸಬೇಕು. ಗೋರಕ್ಷಕರ ವೇಷದಲ್ಲಿರುವ ಕ್ರಿಮಿನಲ್‍ಗಳನ್ನು ‘ಅತ್ಯಾಚಾರಿ’ಗಳಂತೆ ನಡೆಸಿಕೊಳ್ಳಬೇಕು. ಅವರಿಗೆ ಸಾರ್ವಜನಿಕವಾಗಿ ಮಾನ್ಯತೆ ಲಭ್ಯವಾಗದಂತೆ ನೋಡಿಕೊಳ್ಳಬೇಕು. ಕಾನೂನುಬಾಹಿರವಾಗಿ ಗೋಹತ್ಯೆ ನಡೆಸುವವರಿಗೆ ಶಿಕ್ಷೆ ವಿಧಿಸುವ ನಿಯಮಗಳನ್ನು ರೂಪಿಸಿರುವ ಮಾದರಿಯಲ್ಲೇ ಗೋರಕ್ಷಣೆಯ ಹೆಸರಲ್ಲಿ ಬೀದಿ ನ್ಯಾಯ ನೀಡುವವರ ವಿರುದ್ಧವೂ ಕಠಿಣ ನಿಯಮಗಳನ್ನು ರಚಿಸಬೇಕು. ಅಕ್ರಮ ಮತ್ತು ಸಕ್ರಮವನ್ನು ಪತ್ತೆ ಹಚ್ಚುವುದು ಸರಕಾರದ ಕರ್ತವ್ಯ. ಆ ಕೆಲಸವನ್ನು ಸರಕಾರ ನಿರ್ವಹಿಸಲಿ. ಸ್ವಘೋಷಿತ ರಕ್ಷಕರಿಗೆ ಅತ್ಯಾಚಾರಿಗಳ ಸ್ಥಾನ-ಮಾನ ಸಿಗಲಿ. ತುಮಕೂರು ಪ್ರಕರಣವು ಇಂಥದ್ದೊಂದು ಒತ್ತಾಯಕ್ಕೆ ಮತ್ತೊಮ್ಮೆ ಅವಕಾಶವನ್ನು ಒದಗಿಸಿದೆ.

Friday, 30 June 2017

ಪೇಜಾವರ ಶ್ರೀ ಇಫ್ತಾರ್ ಕೂಟ: ಪರ- ವಿರೋಧಗಳ ಆಚೆ..

      ಸೌಹಾರ್ದತೆಯ ಕುರಿತಂತೆ ವಿವಿಧ ಅಭಿಪ್ರಾಯಗಳು ಸಮಾಜದಲ್ಲಿವೆ. ವಿಗ್ರಹವನ್ನು ಪೂಜಿಸದ ಮತ್ತು ವಿಗ್ರಹಾರಾಧನೆಯನ್ನು ಒಪ್ಪದ ವ್ಯಕ್ತಿಯೋರ್ವ ವಿಗ್ರಹಕ್ಕೆ ಪೂಜೆ ಸಲ್ಲಿಸುವುದನ್ನು ‘ಸೌಹಾರ್ದತೆ’ಯಾಗಿ ಕಾಣುವವರಿದ್ದಾರೆ. ಮುಸ್ಲಿಮ್ ಜೋಡಿಯೊಂದು ಹಿಂದೂ ವಿಧಿ-ವಿಧಾನದಂತೆ ಮದುವೆಯಾಗುವುದು, ಆರತಿ ಎತ್ತುವುದನ್ನು ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿ ಪರಿಗಣಿಸುವವರಿದ್ದಾರೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಗಣೇಶನಿಗೆ ಪೂಜೆ ಸಲ್ಲಿಸುವ ಮುಸ್ಲಿಮರ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗುವುದಿದೆ. ಶ್ರೀ ಕೃಷ್ಣ ಜನ್ಮಾಷ್ಟಮಿಯಲ್ಲೂ ಇಂಥ ಘಟನೆಗಳು ಸುದ್ದಿಯಲ್ಲಿರುತ್ತವೆ. ಹಾಗಂತ, ಇದು ಸರ್ವರೂ ಒಪ್ಪುವ ಮಾದರಿ ಎಂದು ಹೇಳುವಂತಿಲ್ಲ. ಇದನ್ನು ಧಾರ್ಮಿಕ ಭ್ರಷ್ಟತನವಾಗಿ ಕಾಣುವವರೂ ಇದ್ದಾರೆ. ಪ್ರತಿ ಧರ್ಮಕ್ಕೂ ಅದರದ್ದೇ  ಆದ ಆಚರಣಾ ವಿಧಾನಗಳಿವೆ. ನಿಯಮ ಸಂಹಿತೆಗಳಿವೆ. ಯಾವುದು ಪೂಜೆ, ಯಾಕೆ ಪೂಜೆ, ಹೇಗೆ ಪೂಜೆ, ಯಾವುದು ಪೂಜೆಯಲ್ಲ.. ಇತ್ಯಾದಿ ಇತ್ಯಾದಿಗಳ ಬಗ್ಗೆ ಪ್ರತಿ ಧರ್ಮದಲ್ಲೂ ಸ್ಪಷ್ಟವಾದ ಉಲ್ಲೇಖಗಳಿವೆ. ಹೀಗಿರುವಾಗ, ವಿಗ್ರಹ ಪೂಜೆಯನ್ನೇ ಮಾಡದ ವ್ಯಕ್ತಿ ಸೌಹಾರ್ದತೆಯ ಹೆಸರಲ್ಲಿ ವಿಗ್ರಹ ಪೂಜೆ ಮಾಡುವುದೆಂದರೆ ಒಂದೋ ಆತ ಆತ್ಮವಂಚನೆ ಮಾಡಿಕೊಳ್ಳುತ್ತಾನೆ ಅಥವಾ ತನ್ನ ಧರ್ಮದ ನಿಲುವುಗಳು ಅಪರಿಪೂರ್ಣ ಎಂದು ಸಾರುತ್ತಾನೆ. ಸೌಹಾರ್ದತೆ ಎಂಬುದು ತನ್ನ ಧರ್ಮದ ಮೌಲ್ಯಗಳನ್ನು ಭ್ರಷ್ಟಗೊಳಿಸಿಕೊಂಡು ಮಾಡುವ ಕರ್ಮದ ಹೆಸರೇ ಅನ್ನುವ ಪ್ರಶ್ನೆಯೂ ಇಲ್ಲಿ ಹುಟ್ಟಿಕೊಳ್ಳುತ್ತದೆ. ಓರ್ವ ವ್ಯಕ್ತಿ ತನ್ನ ಧರ್ಮಕ್ಕೆ ನಿಷ್ಠನಾಗಿದ್ದುಕೊಂಡೇ ಸೌಹಾರ್ದಮಯಿ ಆಗಲು ಸಾಧ್ಯವಿಲ್ಲವೇ? ಇದೆ ಎಂದಾದರೆ ಅದರ ಮಾದರಿಗಳು ಯಾವುವು? ಮುಸ್ಲಿಮರು ಮತ್ತು ಹಿಂದೂಗಳು ಬಹುದೊಡ್ಡ ಸಂಖ್ಯೆಯಲ್ಲಿರುವ ಭಾರತದಲ್ಲಿ ಇರಬೇಕಾದ ಸೌಹಾರ್ದತೆಯ ಪರಿಕಲ್ಪನೆಗಳು ಏನೇನು ಎಂದು ಮುಂತಾದ ಪ್ರಶ್ನೆಗಳಿಗೆ ಪುಟ್ಟದೊಂದು ಉತ್ತರವನ್ನು ಕೇರಳದ ತಿರುವನಂತಪುರಂ ಜಿಲ್ಲೆಯ ಪುನ್ನತ್ತಲದಲ್ಲಿರುವ ಶ್ರೀ ನರಸಿಂಹ ಮೂರ್ತಿ ದೇವಳದಲ್ಲಿ ಮತ್ತು ಉಡುಪಿಯ ಪೇಜಾವರ ಮಠದಲ್ಲಿ ನಡೆದ ಇಫ್ತಾರ್ ಕೂಟಗಳು ನೀಡಿವೆ.
 ಮೂರು ವಾರಗಳ ಹಿಂದೆ ಶ್ರೀ ನರಸಿಂಹ ಮೂರ್ತಿ ದೇವಳದಲ್ಲಿ ಏರ್ಪಡಿಸಲಾದ ಇಫ್ತಾರ್ ಕೂಟದಲ್ಲಿ (ಉಪವಾಸ ತೊರೆಯುವ ಕಾರ್ಯಕ್ರಮ) ಸುಮಾರು 500ರಷ್ಟು ಮಂದಿ ಭಾಗವಹಿಸಿದ್ದರು. ಕಳೆದ ವಾರ ಪೇಜಾವರ ಮಠದಲ್ಲಿ ನಡೆದ ಇಫ್ತಾರ್ ಕೂಟದಲ್ಲೂ ನೂರಾರು ಮಂದಿ ಭಾಗವಹಿಸಿದರು. ದೇವಳ  ಮತ್ತು ಮಠದ  ಸಂಪ್ರದಾಯದಂತೆ ಎಲ್ಲೂ ಮಾಂಸಾಹಾರದ ಬಳಕೆ ಮಾಡಿರಲಿಲ್ಲ. ಎಲ್ಲವೂ ಶಾಖಾಹಾರ. ಹಾಗಂತ ಮುಸ್ಲಿಮರು ಮಾಂಸಾಹಾರ ಸೇವಿಸುತ್ತಾರೆ ಎಂಬ ಕಾರಣ ಕೊಟ್ಟು ತನ್ನ ಶಾಖಾಹಾರ ಸಂಪ್ರದಾಯದಲ್ಲಿ ಇವು ರಾಜಿ ಮಾಡಿಕೊಳ್ಳಬಹುದಿತ್ತು ಮತ್ತು ಮಾಂಸಾಹಾರವನ್ನು ಬಡಿಸಬಹುದಿತ್ತು. ಮಾತ್ರವಲ್ಲ, ಸೌಹಾರ್ದತೆಯ ಹೆಸರಲ್ಲಿ ಅದನ್ನು ಸಮರ್ಥಿಸುವುದಕ್ಕೂ ಅವಕಾಶ ಇತ್ತು. ಆದರೆ, ತನ್ನ ಧರ್ಮದ ನಿಯಮಗಳನ್ನು ಪಾಲಿಸಿಕೊಂಡೇ ಸೌಹಾರ್ದಯುತವಾಗಿ ಬದುಕಬಹುದು ಮತ್ತು ಎಲ್ಲರನ್ನೂ ಒಗ್ಗೂಡಿಸಬಲ್ಲ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಬಹುದು ಎಂಬುದನ್ನು ದೇವಳ ಮತ್ತು ಮಠ ಸಾರಿ ಹೇಳಿದೆ. ಸದ್ಯ ನಮ್ಮ ನಡುವೆ ಅಭಾವ ಇರುವುದು ಇಂಥ ಸಭೆಗಳನ್ನು ಏರ್ಪಡಿಸುವ ವಿಷಯದಲ್ಲೇ.  ಧರ್ಮದ ಕುರಿತಂತೆ ಸಾಮಾಜಿಕವಾಗಿ ಎರಡು ವಿಭಿನ್ನ ನಿಲುವುಗಳಿವೆ. ಒಂದು ಅತ್ಯಂತ ಉದಾರಿ ನಿಲುವಾದರೆ ಇನ್ನೊಂದು ಅತ್ಯಂತ ಕರ್ಮಠ ನಿಲುವು. ಇವುಗಳ ನಡುವೆ ಒಂದು ಸಂತುಲಿತ ದಾರಿಯನ್ನು ಹುಡುಕಬೇಕಾದ ಅಗತ್ಯ ಬಹಳವೇ ಇದೆ.
     ನಿಜವಾಗಿ, ಈ ದೇಶದಲ್ಲಿ ಶಾಲೆ-ಆಸ್ಪತ್ರೆಗಳಿಗಿಂತ ಹೆಚ್ಚು ಮಸೀದಿ-ಮಂದಿರಗಳಿವೆ. ಮಾತ್ರವಲ್ಲ, ಅವು ಸಮಾಜದಲ್ಲಿ ಎಷ್ಟು ಗೌರವಪೂರ್ಣ ಸ್ಥಾನವನ್ನು ಪಡಕೊಂಡಿವೆ ಎಂದರೆ, ಓರ್ವರು ಎಸೆದ ಕಲ್ಲು ಗುರಿ ತಪ್ಪಿ ಇವುಗಳ ಮೇಲೆ ಬಿದ್ದರೂ ಸಮಾಜದಲ್ಲಿ ತಳಮಳ ಉಂಟಾಗುತ್ತದೆ. ಹಂದಿಯದ್ದೋ ದನದ್ದೋ ಅಥವಾ ಇನ್ನಾವುದಾದರೂ ಪ್ರಾಣಿಯದ್ದೋ ತಲೆಗಳು ಯಾಕೆ ಮಸೀದಿ-ಮಂದಿರದ ಮುಂದೆ ಕಾಣಿಸಿಕೊಳ್ಳುತ್ತದೆಂದರೆ, ಈ ಕ್ಷೇತ್ರಗಳು ಅಷ್ಟು ಪ್ರಭಾವಶಾಲಿ ಎಂಬುದರಿಂದ. ಅದರಿಂದ ಸಮಾಜ ಉದ್ವಿಗ್ನಗೊಳ್ಳುತ್ತದೆ. ಘರ್ಷಣೆಯ ಹಂತಕ್ಕೆ ಜಾರುತ್ತದೆ. ಹಾಗಂತ, ಒಂದು ಮನೆಯ ಎದುರು ಇಂಥ ತಲೆಗಳನ್ನು ಹಾಕಿದರೆ ಇಂಥದ್ದೊಂದು ಪ್ರತಿಕ್ರಿಯೆ ಸಿಗಬಹುದೇ? ಮನೆಯಲ್ಲಿರುವವರು ಎಷ್ಟೇ ನಿಷ್ಠಾವಂತ ಧರ್ಮಿಷ್ಠರೇ ಆಗಿರಲಿ, ಮಸೀದಿ ಅಥವಾ ಮಂದಿರದೆದುರು ಹಾಕಿದ ತಲೆಯಷ್ಟು ಸುದ್ದಿಯನ್ನು ಈ ತಲೆ ಮಾಡಲಾರದು. ಧಾರ್ಮಿಕ ಕೇಂದ್ರಗಳು ಭಾರತದಲ್ಲಿ ಪಡೆದುಕೊಂಡಿರುವ ಸ್ಥಾನಮಾನವಿದು. ಸದ್ಯ ಈ ಗೌರವಾರ್ಹ ಕ್ಷೇತ್ರಗಳ ಸದುಪಯೋಗವನ್ನು ಪಡಕೊಳ್ಳುವ ಪ್ರಯತ್ನಗಳು ಗಂಭೀರವಾಗಿ ನಡೆಯಬೇಕಾಗಿದೆ. ವಿವಿಧ ಧರ್ಮೀಯರನ್ನು ಒಟ್ಟುಗೂಡಿಸುವ ತಾಣಗಳನ್ನಾಗಿ ಈ ದೇಶದ ಪ್ರತಿ ಹಳ್ಳಿ-ಗ್ರಾಮ-ಪಟ್ಟಣಗಳಲ್ಲಿರುವ ಮಸೀದಿಗಳು ಮತ್ತು ಮಠ, ಮಂದಿರ, ದೇವಸ್ಥಾನ, ದೈವಸ್ಥಾನಗಳನ್ನು ಮಾಡುವ ರೂಪು-ರೇಷೆಗಳನ್ನು ತಯಾರಿಸಬೇಕಾಗಿದೆ. ಪರಸ್ಪರ ಮಾತಾಡಿದಷ್ಟೂ ಅನುಮಾನಗಳು ಕರಗುತ್ತವೆ. ಬೆರೆತಷ್ಟೂ ಗೆಳೆತನದಲ್ಲಿ ವೃದ್ಧಿಯಾಗುತ್ತದೆ. ಇವತ್ತಿನ ಬಹುದೊಡ್ಡ ಕೊರತೆ ಏನೆಂದರೆ, ವಿವಿಧ ಧರ್ಮೀಯರು ಬೆರೆಯಬಹುದಾದ ಸಂದರ್ಭಗಳು ಕಡಿಮೆಯಾಗುತ್ತಾ ಹೋಗುತ್ತಿರುವುದು. ಹಿಂದೂ ಮಹಿಳೆಯರು ಮತ್ತು ಮುಸ್ಲಿಮ್ ಮಹಿಳೆಯರು ನೂರಾರು ಸಂಖ್ಯೆಯಲ್ಲಿ ಒಂದೇ ಕಡೆ ಬೆರೆಯುವ ಮತ್ತು ಪರಸ್ಪರ ಮುಖ ಕೊಟ್ಟು ಮಾತಾಡಿಕೊಳ್ಳುವ ಸಂದರ್ಭವನ್ನೊಮ್ಮೆ ಊಹಿಸಿ. ಪುರುಷರಿಗೂ ಇದು ಅನ್ವಯಿಸುತ್ತದೆ. ಅದರ ಪರಿಣಾಮ ಏನಾಗಬಹುದು? ದ್ವೇಷಿಸುವುದಕ್ಕೆ ಕಾರಣಗಳೇ ಸಿಗದಿರಬಹುದು. ಯಾರೋ ಹೇಳಿರುವುದರ ಮೇಲೆ ಅಭಿಪ್ರಾಯವನ್ನು ರೂಪಿಸಿಕೊಂಡ ವ್ಯಕ್ತಿ ತಾನೆಷ್ಟು ಮೂರ್ಖ ಎಂದು ತಿದ್ದಿಕೊಳ್ಳಬಹುದು. ಹಾಗಿದ್ದೂ ಇಂಥ ಸಂದರ್ಭಗಳನ್ನು ಸೃಷ್ಟಿಸಿಕೊಳ್ಳಲು ಯಾಕೆ ಗಂಭೀರ ಪ್ರಯತ್ನಗಳು ನಡೆಯುತ್ತಿಲ್ಲ? ಎಲ್ಲೆಲ್ಲ ಮಸೀದಿ ಮತ್ತು ಮಂದಿರಗಳಿವೆಯೋ ಅಲ್ಲೆಲ್ಲ ಚೌತಿ, ಕೃಷ್ಣಾಷ್ಟಮಿ, ಉಪವಾಸ, ಈದ್‍ಗಳಂಥ ಸಂದರ್ಭಗಳನ್ನು ನೆಪ ಮಾಡಿಕೊಂಡು ಪರಸ್ಪರರನ್ನು ಒಟ್ಟು ಸೇರಿಸುವ ಸಭೆಗಳೇಕೆ ನಡೆಯಬಾರದು? ಧಾರ್ಮಿಕ ಕ್ಷೇತ್ರವೊಂದರಲ್ಲಿ ನಡೆಯುವ ಇಫ್ತಾರ್ ಕೂಟಕ್ಕೂ ಭವ್ಯ ಕಲಾಭವನದಲ್ಲಿ ನಡೆಯುವ ಇಫ್ತಾರ್ ಕೂಟಕ್ಕೂ ನಡುವೆ ಧಾರಾಳ ವ್ಯತ್ಯಾಸ ಇದೆ. ಧಾರ್ಮಿಕ ಕ್ಷೇತ್ರಕ್ಕೆ ಬರುವಾಗ ಎಲ್ಲರೂ ಅವರವರ ಧರ್ಮಕ್ಕೆ ನಿಷ್ಠಾವಂತರಾಗಿರುತ್ತಾರೆ. ಭಯ-ಭಕ್ತಿಗಳಿರುತ್ತವೆ. ತನ್ನ ಧರ್ಮಕ್ಕೆ ನಿಷ್ಠನಾಗಿದ್ದುಕೊಂಡೇ ಇನ್ನೊಂದು ಧರ್ಮದ ಶ್ರದ್ಧಾಕೇಂದ್ರದಲ್ಲಿ ತುಸು ಸಮಯವನ್ನು ಕಳೆಯುವುದು ಮತ್ತು ಆ ಧರ್ಮದ ಅನುಯಾಯಿಗಳೊಂದಿಗೆ ಬೆರೆಯುವುದು ಬಹುದೊಡ್ಡ ಪರಿವರ್ತನೆಗೆ ಕಾರಣವಾಗಬಹುದು. ಎರಡೂ ಧರ್ಮಗಳ ಮಂದಿ ಮತ್ತೆ ಮತ್ತೆ ಒಂದು ಸೇರುವ ಸಂದರ್ಭಗಳು ಸೃಷ್ಟಿಯಾಗುವುದರಿಂದ ಅನುಮಾನಗಳಷ್ಟೇ ಹೊರಟು ಹೋಗುವುದಲ್ಲ, ಅನುಮಾನವನ್ನು ಉಳಿಸಿ ಬೆಳೆಸಬೇಕೆಂದು ಬಯಸುವವರೂ ಹೊರಟು ಹೋಗುತ್ತಾರೆ.
     ಸೌಹಾರ್ದತೆ ಎಂಬುದು ಧರ್ಮಭ್ರಷ್ಟವಾಗಿ ಮಾಡಬೇಕಾದ ಒಂದು ಆಚರಣೆ ಅಲ್ಲ. ಧರ್ಮಿಷ್ಟರಾಗಿದ್ದುಕೊಂಡೇ ಪ್ರಸ್ತುತ ಮತ್ತು ಪ್ರಾಯೋಗಿಕಗೊಳ್ಳಬೇಕಾದ ಮೌಲ್ಯ ಅದು. ಹಾಗಂತ, ಇದು ಅಸಾಧ್ಯವೂ ಅಲ್ಲ. ಆದರೆ ನಾವೆಲ್ಲ ಸೇರಿಕೊಂಡು ಅದನ್ನು
ಶ್ರೀ ನರಸಿಂಹ ಮೂರ್ತಿ ದೇವಳ
ಅಸಾಧ್ಯವೋ ಎಂದು ಭಾವಿಸುವಂತಹ ಸ್ಥಿತಿಗೆ ತಂದು ಮುಟ್ಟಿಸಿದ್ದೇವೆ. ಮಸೀದಿ ಮತ್ತು ಮಂದಿರಗಳು ಬಹುತೇಕ ಸಮಯ ಖಾಲಿ ಬಿದ್ದಿದ್ದರೂ ಮತ್ತು ಇವುಗಳ ಹೊರಗಿನ ಪ್ರಪಂಚ ಧರ್ಮದ ಹೆಸರಿನ ಜಗಳದಲ್ಲಿ ಬ್ಯುಝಿಯಾಗಿದ್ದರೂ ಇವನ್ನು ಬಳಸಿಕೊಳ್ಳುವ ಸಂದರ್ಭಗಳು ಸೃಷ್ಟಿಯಾಗುತ್ತಿಲ್ಲ. ಪುನ್ನತ್ತಲದಲ್ಲಿರುವ ಶ್ರೀ ನರಸಿಂಹ ಮೂರ್ತಿ ದೇವಳದಲ್ಲಿ ಮತ್ತು ಉಡುಪಿಯ ಪೇಜಾವರ ಮಠದಲ್ಲಿ ನಡೆದ ಇಫ್ತಾರ್ ಕೂಟಗಳು  ಈ ನೆಲೆಯಲ್ಲಿ ಅತ್ಯಂತ ಮಹತ್ವಪೂರ್ಣ. ಹಿಂದೂ-ಮುಸ್ಲಿಮರನ್ನು ಒಟ್ಟು ಸೇರಿಸುವ ಇಂಥ ಪ್ರಯತ್ನಗಳು ಮಸೀದಿ ಮತ್ತು ಮಂದಿರಗಳಲ್ಲಿ ಮತ್ತೆ ಮತ್ತೆ ನಡೆಯಲಿ. ಜನರ ನಡುವೆ ಸಂಬಂಧಗಳು ಗಟ್ಟಿಯಾಗಲಿ. ಆ ಮೂಲಕ ಸೌಹಾರ್ದತೆ ನೆಲೆಗೊಳ್ಳಲಿ.



Tuesday, 27 June 2017

ಕಲ್ಲಡ್ಕ: ಭಟ್ ಬಂಧನವನ್ನು ಬಯಸುತ್ತಿರುವ ಬಿಜೆಪಿ

        ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಕೋಮು ಘರ್ಷಣೆಗೆ ಇರುವ ಕಾರಣಗಳು ಮತ್ತು ಪರಿಹಾರಗಳ ಬಗ್ಗೆ ಸಾರ್ವಜನಿಕರಲ್ಲಿ ವಿವಿಧ ಅಭಿಪ್ರಾಯಗಳಿವೆ. ಆದ್ದರಿಂದಲೇ, ಪ್ರಭಾಕರ ಭಟ್ಟರ ಬಂಧನವೇ ಸೂಕ್ತ ಪರಿಹಾರ ಎಂಬ ಅಭಿಪ್ರಾಯದ ಆಚೆಗೂ ಈ ಚರ್ಚೆಯನ್ನು ವಿಸ್ತರಿಸಿ ನೋಡಬೇಕಾದ ಅಗತ್ಯವೂ ಇದೆ. ಕಲ್ಲಡ್ಕದ ಅಶಾಂತಿಯಲ್ಲಿ ಪ್ರಭಾಕರ ಭಟ್ ಕೇಂದ್ರ ಬಿಂದು ಆಗಿರಬಹುದು. ಆದರೆ ಅವರ ಬಂಧನವನ್ನು ಬಯಸುತ್ತಿರುವವರ ಪಟ್ಟಿಯಲ್ಲಿ ಶಾಂತಿ ಪ್ರಿಯರು ಮಾತ್ರವೇ ಇದ್ದಾರೆಯೇ ಅಥವಾ ಅಶಾಂತಿಯ ವಾಹಕರ ಮುಖ್ಯ ಉದ್ದೇಶವೂ ಇದುವೇ ಆಗಿರಬಹುದೇ? 1990ರ ಕೊನೆಯಲ್ಲಿ ರಥಯಾತ್ರೆಯನ್ನು ಕೈಗೊಂಡ ಅಡ್ವಾಣಿಯವರಿಗೆ, ಈ ರಥಯಾತ್ರೆಗೆ ಯಾವ ರಾಜ್ಯದಲ್ಲಿ ವಿಘ್ನ ಎದುರಾಗಬಹುದು ಅನ್ನುವ ಪೂರ್ವ ಸೂಚನೆ ಖಂಡಿತ ಇತ್ತು. ವಿಘ್ನ ಎದುರಾಗುವ ರಾಜ್ಯದಲ್ಲಿ ರಥಯಾತ್ರೆಯನ್ನು ಕೈಗೊಳ್ಳಲೇಬೇಕಾದ ಅನಿವಾರ್ಯತೆಯೂ ಅವರ ಮುಂದಿತ್ತು. ಬರೇ ರಥಯಾತ್ರೆಯೊಂದು ಈ ದೇಶದ ಜನಸಾಮಾನ್ಯರ ಗಮನ ಸೆಳೆಯಲು ಸಾಧ್ಯವಿಲ್ಲ. ರಾಮಚಂದ್ರಾಪುರ ಮಠದ ಗೋಯಾತ್ರೆಯಷ್ಟೇ ಅದರ ವ್ಯಾಪ್ತಿ ಸೀಮಿತ. ಬಿಹಾರದ ಮುಖ್ಯಮತ್ರಿಯಾಗಿದ್ದ ಲಾಲೂ ಪ್ರಸಾದ್ ಯಾದವ್‍ರು ಅಡ್ವಾಣಿಯವರ ರಥಯಾತ್ರೆಯನ್ನು ತಡೆಹಿಡಿದಾಗ ಅತ್ಯಂತ ಹೆಚ್ಚು ಸಂತಸ ಪಟ್ಟವರಲ್ಲಿ ಅಡ್ವಾಣಿಯವರು ಮೊದಲಿಗರಾಗಿರುವ ಸಾಧ್ಯತೆಯೇ ಹೆಚ್ಚು. ಆ ತಡೆಯು ರಥಯಾತ್ರೆಗೆ ಭಾರೀ ಜನಪ್ರಿಯತೆಯನ್ನು ತಂದು ಕೊಟ್ಟಿತು. ಬಿಜೆಪಿಯ ಮತದಾರರ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಹೆಚ್ಚಳಕ್ಕೂ ಅದು ಕಾರಣವಾಯಿತು. ಸದ್ಯ ಬಾಬರಿ ಮಸೀದಿಯನ್ನು ಉರುಳಿಸಿದ ಸಂಚಿನಲ್ಲಿ ಆರೋಪಿಯೆಂದು ಸಿಬಿಐ ಹೆಸರಿಸಿರುವ ಅಡ್ವಾಣಿಯವರು 2019ರ ಲೋಕಸಭಾ ಚುನಾವಣೆಯ ವೇಳೆ ಬಂಧನಕ್ಕೆ ಒಳಗಾಗುವುದನ್ನು ಸ್ವತಃ ಬಿಜೆಪಿಯೇ ಇವತ್ತು ಎದುರು ನೋಡುತ್ತಿದೆ. ಹಾಗೇನಾದರೂ ಆದರೆ ಬಳಿಕ ಲೋಕಸಭಾ ಚುನಾವಣೆಗೆ ಬಿಜೆಪಿಗೆ ಇಶ್ಯೂಗಳ ಅಗತ್ಯ ಇಲ್ಲ. ಅಡ್ವಾಣಿಯೇ ಇಶ್ಯೂ.
       ಸದ್ಯ ಕರ್ನಾಟಕದಲ್ಲಿ ಬಿಜೆಪಿಯು ನಿರ್ವಾತ ಸ್ಥಿತಿಯಲ್ಲಿದೆ. ಪಕ್ಷವನ್ನು ಮಂದಿನ ಚುನಾವಣೆಯಲ್ಲಿ ಎದ್ದು ನಿಲ್ಲಿಸಬಲ್ಲ ವರ್ಚಸ್ವಿ ನಾಯಕರಾಗಲೀ, ಪ್ರಬಲ ಇಶ್ಯೂವಾಗಲೀ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ 7ರಲ್ಲೂ ಕಾಂಗ್ರೆಸ್‍ನ ಪ್ರತಿನಿಧಿಗಳೇ ಇದ್ದಾರೆ. ಇವುಗಳನ್ನು ಮರಳಿ ಪಡೆಯಬೇಕಾದರೆ ಯಡಿಯೂರಪ್ಪರನ್ನೋ ಜಗದೀಶ್ ಶೆಟ್ಟರನ್ನೋ ಜಿಲ್ಲೆಗೆ ಕರೆಸಿ ಭಾಷಣ ಮಾಡಿಸುವುದರಿಂದ ಸಾಧ್ಯವಿಲ್ಲ ಎಂಬುದು ಇಡೀ ಜಿಲ್ಲೆಗೇ ಗೊತ್ತು. ಜಿಲ್ಲೆಯ ದೇರಳಕಟ್ಟೆ ಎಂಬಲ್ಲಿ ಕಾರ್ತಿಕ್ ರಾಜ್ ಹತ್ಯಾ ಪ್ರಕರಣಕ್ಕೆ ಸಂಬಂಧಿಸಿ ಯಡಿಯೂರಪ್ಪ ಕೊಟ್ಟಿರುವ ಹೇಳಿಕೆಯ ಮುಜುಗರದಿಂದ ಬಿಜೆಪಿ ಇನ್ನೂ ಹೊರಬಂದಿಲ್ಲ. ಆದ್ದರಿಂದ ಬಿಜೆಪಿಗೆ ತಕ್ಪಣಕ್ಕೊಂದು ಗ್ಲುಕೋಸ್ ಬೇಕಾಗಿದೆ. ಪ್ರಭಾಕರ ಭಟ್ಟರ ಬಂಧನದಿಂದ ಈ ಗ್ಲೂಕೋಸ್ ಲಭ್ಯವಾಗುವ ಸಾಧ್ಯತೆ ಇದೆ ಎಂದು ಬಿಜೆಪಿಯ ಚಿಂತಕ ಚಾವಡಿ ಗಂಭೀರವಾಗಿಯೇ ಭಾವಿಸಿದೆ. ಈ ಭಾವನೆಗೆ ಇರುವ ಇನ್ನೊಂದು ಕಾರಣ, ಪ್ರಭಾಕರ ಭಟ್ಟರಿಗೆ ಇರುವ ‘ಹಿಂದೂ ಧರ್ಮ ರಕ್ಷಕ’ ಎಂಬ ಇಮೇಜ್. ಅವರ ಬಂಧನವಾದರೆ ಅವರು ಬಿಡುಗಡೆಗೊಳ್ಳುವ ವರೆಗೆ ಧರಣಿ, ಸತ್ಯಾಗ್ರಹ, ಪ್ರತಿಭಟನೆಗಳನ್ನು ಸರಣಿ ಕ್ರಮದಲ್ಲಿ ಹಮ್ಮಿಕೊಳ್ಳಬಹುದು. ಅಮಿತ್ ಶಾರಿಂದ ಹಿಡಿದು ಸಾಕ್ಷಿ ಮಹಾರಾಜ್‍ರ ವರೆಗೆ ಪ್ರಖರ ನಾಲಗೆಯ ನಾಯಕರನ್ನು ಜಿಲ್ಲೆಗೆ ಕರೆತರಬಹುದು ಮತ್ತು ಅವರಿಂದ ಉಗ್ರ ಭಾಷಣ ಮಾಡಿಸಬಹುದು. ಕಾರಣವಿಲ್ಲದೇ ಉಗ್ರ ಭಾಷಣ ಮಾಡುವುದಕ್ಕೂ ಬಂಧನದ ಹಿನ್ನೆಲೆಯಲ್ಲಿ ಭಾಷಣ ಮಾಡುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಭಾಷಣವನ್ನು ಉಗ್ರತನದಿಂದ ಅತ್ಯುಗ್ರತನಕ್ಕೆ ಒಯ್ಯಲು ಇಂಥ ಸಂದರ್ಭಗಳ ಹೊರತು ಅಸಾಧ್ಯ. ಆದ್ದರಿಂದಲೇ ಕಲ್ಲಡ್ಕವನ್ನು ಮತ್ತೆ ಮತ್ತೆ ಕುಲುಮೆ ಮಾಡಲಾಗುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ಮೇಲೆ ಒತ್ತಡಗಳು ಹೆಚ್ಚಾದಂತೆಲ್ಲ ಭಟ್ಟರ ಪಾಳಯಕ್ಕೆ ಎರಡು ರೀತಿಯಲ್ಲಿ ಲಾಭಗಳಿವೆ. ಒಂದು ರಮಾನಾಥ ರೈ ನಾಲಾಯಕ್ಕು ಅನ್ನುವ ಸಂದೇಶ ಜಿಲ್ಲೆಯಾದ್ಯಂತ ರವಾನೆಯಾಗುವುದು ಅಥವಾ ಹಾಗೇ ರವಾನೆಯಾಗುವಂತೆ ನೋಡಿಕೊಳ್ಳುವುದು. ಇನ್ನೊಂದು, ಈ ಸಂದೇಶಕ್ಕೆ ಕುದಿಗೊಂಡು ಸ್ವತಃ ರಮಾನಾಥ ರೈಯವರೇ ದುಡುಕಿನ ಕ್ರಮಕ್ಕೆ ಮುಂದಾಗುವುದು. ಈ ಎರಡೂ ಭಟ್ಟರ ಪಾಲಿಗೆ ಅನುಕೂಲಕರವೇ. ಇದೀಗ ಈ ಎರಡೂ ಉದ್ದೇಶಗಳು ಬಹುತೇಕ ಈಡೇರುತ್ತಿರುವ ಸ್ಥಿತಿಯಿದೆ. ಕಲ್ಲಡ್ಕ ಭಟ್ಟರನ್ನು ಕ್ರಿಮಿನಲ್ ಮೊಕದ್ದಮೆ ಹೂಡಿ ಬಂಧಿಸುವಂತೆ ಜಿಲ್ಲಾ ಎಸ್ಪಿ ಭೂಷಣ್ ಕುಮಾರ್ ಬೊರಸೆಯವರಿಗೆ ರೈಯವರು ನಿರ್ದೇಶನ ನೀಡುವ ವೀಡಿಯೋವೊಂದು ಬಿಡುಗಡೆಗೊಂಡಿದೆ. ತಕ್ಷಣ ಯಡಿಯೂರಪ್ಪರಿಂದ ಹಿಡಿದು ತಳಮಟ್ಟದ ನಾಯಕರ ವರೆಗೆ ಎಲ್ಲರೂ ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಒಂದು ಬಗೆಯ ಪ್ರತಿಭಟನಾ ಸಿದ್ಧತೆಗಳೂ ನಡೆಯುತ್ತಿವೆ. ನಿಜವಾಗಿ, ಇದು ಬಿಜೆಪಿಯ ಒಳತಂತ್ರ. ಪ್ರಭಾಕರ ಭಟ್ಟರನ್ನು ಬಂಧಿಸುವುದೆಂದರೆ ಜಿಲ್ಲೆಯ ನಾಡಿ-ಮಿಡಿತವನ್ನು ಒಂದಷ್ಟು ಅವಧಿಗೆ ಬಲವಂತದಿಂದಲಾದರೂ ಸ್ಥಬ್ಧಗೊಳಿಸುವುದು ಎಂದರ್ಥ. ಅವರ ಬಂಧನದ ಹೆಸರಲ್ಲಿ ಜಿಲ್ಲೆಯನ್ನು ಮತ್ತೆ ಅಶಾಂತಿಗೆ ತಳ್ಳಬಹುದು. ಅಲ್ಲಲ್ಲಿ ಇರಿತ, ಕಲ್ಲು ತೂರಾಟ, ಹತ್ಯಾ ಯತ್ನಗಳೂ ನಡೆಯಬಹುದು. ಇವಕ್ಕೆಲ್ಲ ಜಿಲ್ಲಾ ಉಸ್ತುವಾರಿ ಸಚಿವರ ಅಲ್ಪಸಂಖ್ಯಾತ ತುಷ್ಟೀಕರಣವೇ ಕಾರಣ ಎಂದೂ ಸಮರ್ಥಿಸಿಕೊಳ್ಳಬಹುದು.
      ನಿಜವಾಗಿ, ಕಲ್ಲಡ್ಕವನ್ನು ಮತ್ತು ಆ ಮೂಲಕ ಜಿಲ್ಲೆಯನ್ನು ಗಲಭೆ ರಹಿತ ಪ್ರದೇಶವನ್ನಾಗಿ ಮಾಡುವುದಕ್ಕೆ ಆವೇಶದ ಹೇಳಿಕೆ ಮತ್ತು ದುಡುಕಿನ ನಿರ್ಧಾರಗಳು ಪರಿಹಾರ ಅಲ್ಲ. ಕಲ್ಲಡ್ಕದ ಘರ್ಷಣೆಗೆ ಬಿಜೆಪಿ ಒಂದು ಪರಿಹಾರವನ್ನು ತಯಾರಿಸಿ ಇಟ್ಟಿದೆ. ಆಗಾಗ ಘರ್ಷಣೆಗಳು ಆಗುತ್ತಿರಬೇಕು ಮತ್ತು ಅಂತಿಮವಾಗಿ ತಾವು ರೂಪಿಸಿರುವ ಪರಿಹಾರವನ್ನೇ ಉಸ್ತುವಾರಿ ಸಚಿವರು ಪರಿಹಾರವಾಗಿ ಆಯ್ದುಕೊಳ್ಳಬೇಕು ಎಂದೂ ಅದು ನಿರೀಕ್ಷಿಸುತ್ತಿದೆ. ಅದುವೇ ಭಟ್ಟರ ಬಂಧನ. ಈ ಖೆಡ್ಡಾಕ್ಕೆ ಉಸ್ತುವಾರಿ ಸಚಿವರು ಬಿದ್ದರೆ ಬಳಿಕ ಇಡೀ ಜಿಲ್ಲೆಯನ್ನೇ ತಮ್ಮ ಖೆಡ್ಡಾಕ್ಕೆ ಬೀಳಿಸಬಹುದು ಎಂಬುದು ಅವರ ಲೆಕ್ಕಾಚಾರ. ಆದ್ದರಿಂದ ಜಿಲ್ಲೆಯ ಆರೋಗ್ಯದ ದೃಷ್ಟಿಯಿಂದ ಹೊಸ ರಣತಂತ್ರವನ್ನು ರೂಪಿಸಬೇಕಾಗಿದೆ. ಗಲಭೆ ಹುಟ್ಟುಹಾಕುವವರ ಮಾಹಿತಿ ಕಲೆ ಹಾಕುವ ಪ್ರಬಲ ತಂಡವೊಂದನ್ನು ಸರಕಾರ ರೂಪಿಸಬೇಕಾಗಿದೆ. ಈ ತಂಡ ಅತ್ಯಂತ ರಹಸ್ಯವಾಗಿ ತನ್ನ ಚಟುವಟಿಕೆಯಲ್ಲಿ ತೊಡಗಬೇಕು ಮತ್ತು ಗಲಭೆಗಿಂತ ಮೊದಲೇ ಅಂಥವರನ್ನು ವಶಕ್ಕೆ ಪಡೆದು ಸರಿಪಡಿಸುವ ಕೆಲಸಗಳಾಗಬೇಕು. ಗಲಭೆ ಹುಟ್ಟುಹಾಕುವವರ ಮೇಲೆ ಕಠಿಣ ಪರಿಚ್ಛೇದಗಳಡಿಯಲ್ಲಿ ಮೊಕದ್ದಮೆ ದಾಖಲಿಸುವಂತಾಗಬೇಕು. ಗೂಂಡಾ ಕಾಯ್ದೆಯನ್ನು ಹೇರಿ ಗಡೀಪಾರು ಮಾಡುವುದಕ್ಕೂ ಹಿಂಜರಿಕೆ ತೋರಬಾರದು. ಅದೇ ವೇಳೆ, ‘ಮೆದುಳು ತೊಳೆಯಲಾದ’ ಯುವಕರ ಸಂಭಾವ್ಯ ಪಟ್ಟಿಯನ್ನು ತಯಾರಿಸಿ ಅವರ ಹೆತ್ತವರೊಂದಿಗೆ ಮಾತುಕತೆ ನಡೆಸಬೇಕಲ್ಲದೇ, ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ರವಾನಿಸಬೇಕು. ಒಂದು ಕಡೆ ಗಲಭೆಯನ್ನು ಹುಟ್ಟುಹಾಕುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತಲೇ ಇನ್ನೊಂದು ಕಡೆ ‘ತೊಳೆದ ಮೆದುಳಿನ’ ಯುವಕರಲ್ಲಿ ಕಾನೂನಿನ ಭಯ ಮತ್ತು ಅವರ ಹೆತ್ತವರಿಗೆ ಎಚ್ಚರಿಕೆ ರವಾನಿಸುವ ಎರಡೂ ಕ್ರಮಗಳು ಜೊತೆ ಜೊತೆಯಾಗಿ ನಡೆಯಬೇಕು. ಬದ್ಧತೆಯಿಂದ ದುಡಿಯುವ ಅಧಿಕಾರಿಗಳಿಂದ ಇದು ಖಂಡಿತ ಸಾಧ್ಯ. ಹೀಗಾದರೆ ಬಿಜೆಪಿಯ ಷಡ್ಯಂತ್ರಕ್ಕೆ ಸೋಲಾಗುತ್ತದೆ. ಭಟ್ಟರೂ ಸೋಲುತ್ತಾರೆ. ಆದರೆ ಕಲ್ಲಡ್ಕ ಗೆಲ್ಲುತ್ತದೆ. ಜಿಲ್ಲೆಯೂ ಗೆಲ್ಲುತ್ತದೆ.

‘ಚರ್ಚ್‍ನಲ್ಲಿ ರೋಬೋಟ್’ ಮತ್ತು ಧರ್ಮ

     ಜರ್ಮನಿಯ ಕ್ರೈಸ್ತ ಧರ್ಮದ ಪ್ರೊಟೆಸ್ಟೆಂಟ್ ವಿಭಾಗವು ಹೊಸ ಪ್ರಯೋಗವೊಂದಕ್ಕೆ ಚಾಲನೆ ನೀಡಿದೆ. ಚರ್ಚ್‍ನಲ್ಲಿ ಫಾಸ್ಟರ್ ಬದಲು ರೋಬೋಟ್‍ನ ಮೂಲಕ ಆಶೀರ್ವಾದ ಕೊಡಿಸುವ ಪ್ರಯತ್ನ ನಡೆಸಿದೆ. ಜರ್ಮನಿಯ ವಿಟ್ಟನ್‍ಬರ್ಗ್ ಪಟ್ಟಣದಲ್ಲಿರುವ ಚರ್ಚ್‍ನಲ್ಲಿ ‘ಬ್ಲೆಸ್ಸಿಂಗ್ ಯು-2’ ಎಂಬ ಹೆಸರಿನ ಈ ರೋಬೋಟ್ ಚಟುವಟಿಕೆ ಪ್ರಾರಂಭಿಸಿದೆ. ಟಚ್ ಸ್ಕ್ರೀನ್ ಸೌಲಭ್ಯ ಇರುವ ಲೋಹದ ಪೆಟ್ಟಿಗೆ. ಅದಕ್ಕೆ ಎರಡು ಕೈ, ತಲೆ, ಕಣ್ಣುಗಳು ಮತ್ತು ಡಿಜಿಟಲ್ ಬಾಯಿ. ಅದನ್ನು ಮುಟ್ಟಿದ ಕೂಡಲೇ ನಿಮಗೆ ಯಾವ ಧ್ವನಿಯಲ್ಲಿ ಆಶೀರ್ವಾದ ಬೇಕು ಎಂದು ಅದು ಪ್ರಶ್ನಿಸುತ್ತದೆ. ಹೆಣ್ಣಿನದ್ದೋ ಗಂಡಿನದ್ದೋ? ಆ ಬಳಿಕ ಮಂದಹಾಸ ಬೀರಿ ಕೈ ಎತ್ತಿ, ‘ದೇವನು ರಕ್ಷಿಸಲಿ ಮತ್ತು ಆಶೀರ್ವದಿಸಲಿ’ ಎಂದು ಹರಸುತ್ತದೆ. ಕೆಲವು ಬೈಬಲ್ ವಾಕ್ಯಗಳನ್ನು ಉಚ್ಚರಿಸುತ್ತದೆ. ಸ್ವಯಂ ಚಾಲಿತವಾಗಿ ಕೆಲಸ ಮಾಡುವ ಈ ರೋಬೋಟ್, ಕೈ ಎತ್ತುವಾಗ ಬೆಳಕು ಕಾಣಿಸಿಕೊಳ್ಳುತ್ತದೆ. ಪ್ರೊಟೆಸ್ಟೆಂಟ್ ಪಂಥದ ಸುಧಾರಕರಾದ ಮಾರ್ಟಿನ್ ಲೂಥರ್ ಅವರ ‘ದಿ ನೈಂಟಿಫೈವ್ ಥೀಸಿಸ್’ಗೆ 500 ವರ್ಷಗಳು ಸಂದ ನೆನಪಿನಲ್ಲಿ ಈ ರೋಬೋಟ್ ಫಾಸ್ಪರ್ ಅನ್ನು ಸ್ಥಾಪಿಸಲಾಗಿದೆ. ಭಕ್ತರಲ್ಲೂ ಮಿಶ್ರ ಅಭಿಪ್ರಾಯಗಳು ವ್ಯಕ್ತವಾಗಿವೆ. ಒಂದು ಕಡೆ, ಚರ್ಚ್‍ಗೆ ಬರುವ ಭಕ್ತರ ಸಂಖ್ಯೆ ಹೆಚ್ಚಿದೆ ಎಂದು ಅದರ ವಕ್ತಾರ ಸೆಬಾಸ್ಟಿಯನ್ ಗೆಹ್ರಾನ್ ಹೇಳುವಾಗ ಇನ್ನೊಂದು ಕಡೆ, ಭಕ್ತರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಫಾಸ್ಪರ್‍ಗೆ ರೋಬೋಟ್ ಬದಲಿಯಾಗದು ಮತ್ತು ರೋಬೋಟ್ ಕೊಡುವ ಆಶೀರ್ವಾದವು ಮನುಷ್ಯರು ಕೊಡುವ ಆಶೀರ್ವಾದದಂತೆ ಪ್ರಭಾವಿಯಾಗದು ಎಂದವರು ಹೇಳಿದ್ದಾರೆ.
     ಮನುಷ್ಯ ಮತ್ತು ಯಂತ್ರ - ಇವೆರಡೂ ವೈರಿಯಲ್ಲ. ಮನುಷ್ಯ ಇಲ್ಲದಿರುತ್ತಿದ್ದರೆ ಯಂತ್ರವೇ ಇರುತ್ತಿರಲಿಲ್ಲ. ಮನುಷ್ಯ ವಿಕಾಸ ಜೀವಿ. ಪ್ರತಿ ಕ್ಪಣ ಆತ ವಿಕಾಸವಾಗುತ್ತಾ ಇರುತ್ತಾನೆ. ನಿನ್ನೆ ಇದ್ದಂತೆ ಆತ ಇವತ್ತು ಇರಬೇಕಿಲ್ಲ. ನಿನ್ನೆ ಸಾಮಾನ್ಯ ವ್ಯಕ್ತಿಯಾಗಿದ್ದ ಆತ ನಾಳೆ ಸಂಶೋಧಕನಾಗಿ ಗುರುತಿಸಬಲ್ಲ. ಎವರೆಸ್ಟ್ ಪರ್ವವನ್ನೋ ಕ್ಯಾನ್ಸರ್‍ಗೆ ಹೊಸ ಔಷಧವನ್ನೋ ಹೊಸ ಮಾದರಿಯ ವಾಹನವನ್ನೋ ಸಂಶೋಧಿಸಿ ಸುದ್ದಿ ಮಾಡಬಲ್ಲ. 50 ವರ್ಷಗಳ ಹಿಂದೆ ಊಹಿಸಿಯೂ ಇರದ ಅನೇಕಾರು ಸೌಲಭ್ಯಗಳು ಇವತ್ತಿನ ಪೀಳಿಗೆಗೆ ಲಭ್ಯವಾಗಿವೆ. ಹಗ್ಗದ ಮೂಲಕ ಬಾವಿಯಿಂದ ನೀರೆತ್ತುವ ಕ್ರಮ ಇವತ್ತಿನ ಪಟ್ಟಣದಲ್ಲಿರುವ ಆಧುನಿಕ ತಲೆಮಾರಿಗೆ ಬಹುತೇಕ ಗೊತ್ತೇ ಇರಲಾರದು. ಟೆಲಿಗ್ರಾಂ ಎಂಬ ವ್ಯವಸ್ಥೆ ಇವತ್ತಿನ ಮೊಬೈಲ್ ಪೀಳಿಗೆಗೆ ಹೇಳಿದರೂ ಅರ್ಥವಾಗದಷ್ಟು ಹಳತಾಗಿದೆ. ಹಸುವಿನಿಂದ ಹಾಲು ಕರೆಯುವುದಕ್ಕೂ ಇವತ್ತು ಯಂತ್ರ ಬಂದಿದೆ. ಅಡಿಕೆ ಮರದಿಂದ ಅಡಿಕೆ ಕೀಳುವುದಕ್ಕೂ ಯಂತ್ರ ಬಂದಿದೆ. ಸಂವಹನ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯಂತೂ ಅತೀ ವೇಗದ್ದು ಮತ್ತು ಅಪೂರ್ವವಾದದ್ದು. ಇದರ ಜೊತೆಗೇ ಒಂದು ಅಪಾಯದ ಸೂಚನೆಯನ್ನೂ ವಿಟ್ಟನ್‍ಬರ್ಗ್‍ನ ಚರ್ಚ್‍ನಲ್ಲಿ ಸ್ಥಾಪಿಸಲಾಗಿರುವ ರೋಬೋಟ್ ಜಗತ್ತಿಗೆ ರವಾನಿಸುತ್ತಿದೆ. ಮನುಷ್ಯ ತಾನೇ ನಿರ್ಮಿಸಿದ ಯಂತ್ರವನ್ನು ಅವಲಂಬಿಸಿ ಕೊನೆಗೆ ಯಂತ್ರವನ್ನೇ ಸರ್ವಸ್ವ ಎಂದು ನಂಬುವ ಸ್ಥಿತಿಗೆ ತಲುಪುತ್ತಿದ್ದಾನೆಯೇ? ಆತನ ಆಲೋಚನೆಗಳು ಯಂತ್ರದಂತೆಯೇ ಜಡವಾಗತೊಡಗಿದೆಯೇ? ಮನುಷ್ಯ ಮತ್ತು ಯಂತ್ರದ ನಡುವೆ ಇರುವ ವ್ಯತ್ಯಾಸವನ್ನು ಗುರುತಿಸುವಲ್ಲಿ ಆತ ಎಡವುತ್ತಿದ್ದಾನೆಯೇ?
    ಅಷ್ಟಕ್ಕೂ, ಇನ್ನು ನೂರು ವರ್ಷ ಸಂದರೂ ‘ಬ್ಲೆಸ್ ಯು-2’ ಎಂಬ ರೋಬೋಟ್ ತನ್ನ ಧ್ವನಿ, ಮಾತು, ನಗು, ಬೆಳಕು.. ಯಾವುದರಲ್ಲೂ ಸ್ವಯಂ ಪ್ರೇರಿತವಾಗಿ ಯಾವ ಬದಲಾವಣೆ ಮಾಡಿಕೊಳ್ಳದು. ಯಾಕೆಂದರೆ ಅದಕ್ಕೆ ವಿಕಾಸವಾಗುವ ಸಾಮಥ್ರ್ಯ ಇಲ್ಲ. ಮನುಷ್ಯ ಅದಕ್ಕೆ ವಿಕಾಸ ಗುಣವನ್ನು ತುಂಬಿದಾಗಲೇ ಅದು ಆ ಗುಣವನ್ನು ಪ್ರದರ್ಶಿಸಬಲ್ಲದು. ದುರಂತ ಏನೆಂದರೆ, ಯಂತ್ರವನ್ನು ಸಂಶೋಧಿಸಿದ ಮನುಷ್ಯನೇ ಯಂತ್ರವನ್ನು ಆರಾಧಿಸುವ ಅಥವಾ ಅತಿಯಾಗಿ ಅವಲಂಬಿಸುವ ಹಂತಕ್ಕೆ ತಲುಪಿಬಿಟ್ಟಿz್ದÁನೆ. ವಿದ್ಯುತ್ ಇಲ್ಲ ಅಂದರೆ ಮನೆಯಲ್ಲಿ ಅಕ್ಕಿ ಇದ್ದೂ ಬೇಳೆ ಕಾಲು ಇದ್ದೂ ನೀರು ಇದ್ದೂ ಮತ್ತು ಮೆಣಸು ಸಹಿತ ಪದಾರ್ಥ ಸಂಬಂಧಿ ವಸ್ತುಗಳೂ ಇದ್ದೂ ಹಸಿವಿನಿಂದಿರಬೇಕಾದ ಸ್ಥಿತಿ ಇವತ್ತಿನದು. ಇದರ ಇನ್ನೊಂದು ಮುಖವಾಗಿ ನಾವು ‘ಬ್ಲೆಸ್ ಯು-2’ ರೋಬೋಟನ್ನು ಎತ್ತಿಕೊಳ್ಳಬಹುದು. ಧರ್ಮ, ಅದು ಪ್ರತಿಪಾದಿಸುವ ಮೌಲ್ಯಗಳು ಮತ್ತು ಮನುಷ್ಯ ಅದರಿಂದ ಪಡೆಯುವ ಹಿತಾನುಭವವನ್ನು ಅಗ್ಗವಾಗಿ ಕಾಣುವುದರ ಪ್ರತೀಕ ಆ ರೋಬೋಟ್. ಪಾಸ್ಟರ್ ಕೊಡುವ ಆಶೀರ್ವಾದಕ್ಕೂ ರೋಬೋಟ್ ಕೊಡುವ ಆಶೀರ್ವಾದಕ್ಕೂ ನಡುವೆ ಇರುವ ವ್ಯತ್ಯಾಸಗಳು ಅನೇಕ. ಮನುಷ್ಯ ಭಾವುಕ ಜೀವಿ. ಆತ ಇತರರ ಭಾವನೆಗಳಿಗೆ ಸ್ಪಂದಿಸಬಲ್ಲ. ತನ್ನ ಮುಂದಿರುವವರ ಮಾತುಗಳಲ್ಲಿ ನೋವನ್ನೋ ಹರ್ಷವನ್ನೋ ಗುರುತಿಸಬಲ್ಲ. ಅದಕ್ಕೆ ಪರಿಹಾರವನ್ನೂ ಒದಗಿಸಬಲ್ಲ. ಧರ್ಮವೆಂಬುದು ಇನ್ನೊಬ್ಬರಿಗೆ ಸ್ಪಂದಿಸುವ, ಮೌಲ್ಯಯುತ ಬದುಕನ್ನು ಪ್ರತಿಪಾದಿಸುವ ಮತ್ತು ಕಾಲದ ಬದಲಾವಣೆಯನ್ನು ಗುರುತಿಸಿ ಮಾತಾಡುವ ಜಂಗಮ ಸ್ವರೂಪಿಯೇ ಹೊರತು ಸ್ಥಾವರವಲ್ಲ. ರೋಬೋಟ್ ಎಂಬುದು ಸ್ಥಾವರ. ಅದಕ್ಕೆ ತನ್ನ ಮುಂದಿರುವುದು ಹೆಣ್ಣೋ ಗಂಡೋ ಎಂಬುದು ತಿಳಿಸಿದರಷ್ಟೇ ಗೊತ್ತಾಗುತ್ತದೆ. ಅವರ ಭಾವನೆಗಳೇನು ಎಂಬುದೂ ತಿಳಿಸಿದರಷ್ಟೇ ಗೊತ್ತಾಗುತ್ತದೆ. ಎಲ್ಲವೂ ತಿಳಿಸಿದರೆ ಮಾತ್ರ ಗೊತ್ತಾಗುವ ಮತ್ತು ಸ್ವಯಂ ಕಲಿಯಲೋ ಕಲಿಸಲೋ ಓದಲೋ ಬಾರದ, ಜಡ ಸ್ವರೂಪಿಯದು. ಆದ್ದರಿಂದ, ಧರ್ಮದ ಸಂಕೇತಗಳನ್ನು ಯಂತ್ರಕ್ಕೆ ಕಟ್ಟಿ ಹಾಕುವುದೆಂದರೆ, ಧರ್ಮವನ್ನು ಸ್ಥಾವರಗೊಳಿಸುವುದು ಎಂದರ್ಥ. ಒಂದು ಧರ್ಮ ಆಕರ್ಷಣೀಯ ಆಗುವುದು ಅದನ್ನು ಅನುಸರಿಸುವವರ ಬದುಕನ್ನು ನೋಡಿಕೊಂಡು. ಅವರು ಮೌಲ್ಯವಂತರಾದರೆ ಆ ಧರ್ಮವೂ ಮೌಲ್ಯವಂತವಾಗುತ್ತದೆ. ಪಾಸ್ಟರ್, ಮೌಲ್ವಿ, ಸ್ವಾಮೀಜಿ.. ಮುಂತಾದುವುಗಳೆಲ್ಲ ಬರೇ ಹೆಸರುಗಳಲ್ಲ. ಅವು ಧಾರ್ಮಿಕ ಮೌಲ್ಯಗಳ ಪ್ರತೀಕಗಳೂ ಹೌದು. ಆದ್ದರಿಂದಲೇ, ಓರ್ವ ಸ್ವಾಮೀಜಿಯೋ ಮೌಲ್ವಿಯೋ ಭ್ರಷ್ಟತನವೆಸಗಿದರೆ ಸಾಮಾನ್ಯರ ಭ್ರಷ್ಟತನಕ್ಕಿಂತ ಹೆಚ್ಚು ಅದು ಸುದ್ದಿಗೀಡಾಗುವುದು. ಅದು ಆ ಸ್ಥಾನದ ಗೌರವ. ರೋಬೋಟ್ ಆ ಸ್ಥಾನವನ್ನು ತುಂಬಲಾರದು. ಮೌಖಿಕವಾಗಿ ಅದು ಮೌಲ್ಯವನ್ನು ಪ್ರತಿಪಾದಿಸಬಹುದೇ ಹೊರತು ಪ್ರಾಯೋಗಿಕವಾಗಿ ಅದು ಯಾವ ಮೌಲ್ಯವನ್ನೂ ಅನುಸರಿಸಿ ಮಾದರಿಯಾಗದು. ಹೀಗಿದ್ದೂ, ವಿಟ್ಟನ್‍ಬರ್ಗ್ ಚರ್ಚ್‍ನಲ್ಲಿರುವ ರೋಬೋಟ್‍ನಿಂದ ಜನರು ಆಕರ್ಷಿತರಾಗುತ್ತಿದ್ದಾರೆ ಎಂಬುದು ಮನುಷ್ಯ ಧಾರ್ಮಿಕವಾಗಿ ನಿಷ್ಕಾಳಜಿಯ ಧೋರಣೆಯನ್ನು ಹೊಂದುತ್ತಿದ್ದಾನೆ ಅನ್ನುವುದನ್ನೇ ಸೂಚಿಸುತ್ತದೆ.
     ಯಂತ್ರಗಳಿಗೆ ಅವುಗಳದ್ದೇ  ಆದ ಅನೇಕಾರು ಮಿತಿಗಳಿವೆ. ಅವುಗಳಿಗೆ ಹೋಲಿಸಿದರೆ ಮನುಷ್ಯ ಎಲ್ಲ ಮಿತಿಗಳನ್ನೂ ಒಂದು ಹಂತದ ವರೆಗೆ ಮೀರಿ ಬದುಕಬಲ್ಲಷ್ಟು ಸಮರ್ಥ. ಆದರೆ ಅದೇ ವೇಳೆ ಕೆಲವೊಮ್ಮೆ ಯಂತ್ರವೇ ಪರಮೋಚ್ಚ ಎಂದು ಭಾವಿಸಿ ಬದುಕುವಷ್ಟು ದಡ್ಡ. ಯಂತ್ರವನ್ನು ಪಾಸ್ಟರ್‍ಗೆ ಬದಲಾಗಿ ಸ್ಥಾಪಿಸಲಾದ ಘಟನೆ ಇದಕ್ಕೊಂದು ಉದಾಹರಣೆ. ಮುಂದೊಂದು ದಿನ ಪೂಜೆ, ಪುನಸ್ಕಾರ, ವಿವಿಧ ಧಾರ್ಮಿಕ ಆಚರಣೆಗಳನ್ನು ನಿರ್ವಹಿಸುವ ಯಂತ್ರಗಳ ಸಂಶೋಧನೆಯೂ ನಡೆಯಬಹುದು. ಪೂಜಾರಿಯೋ ಮೌಲ್ವಿಯೋ ಬೇಕಾಗಿಲ್ಲ ಎಂಬ ಸ್ಥಿತಿಯೂ ಉಂಟಾಗಬಹುದು. ಇದರ ಪರಿಣಾಮ ಏನೆಂದರೆ, ಮನುಷ್ಯರು ಯಂತ್ರಗಳಾಗುವುದು. ಧರ್ಮ ಯಂತ್ರದಂತೆ ಜಡವಾಗುವುದು. ಬ್ಲೆಸ್ ಯು-2 ರೋಬೋಟ್ ಇದನ್ನೇ ಹೇಳುತ್ತದೆ.


Thursday, 15 June 2017

ಉಝ್ಮಾ ತೆರೆದಿಟ್ಟ ದೇಶಭಕ್ತರ ಹಿಪಾಕ್ರಸಿ

     ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಅವರು ಕಳೆದವಾರ ಪಾಕಿಸ್ತಾನವನ್ನು ಹೊಗಳಿದರು. ಪಾಕಿಸ್ತಾನಕ್ಕೆ ಕೃತಜ್ಞತೆ
ಸಲ್ಲಿಸಿದರು. ಅಲ್ಲಿರುವವರ ಮಾನವೀಯ ಗುಣಗಳನ್ನು ಶ್ಲಾಘಿಸಿದರು. ಒಂದು ವೇಳೆ ಪಾಕಿಸ್ತಾನದ ಆಂತರಿಕ ಸಚಿವಾಲಯ, ವಿದೇಶಾಂಗ ಸಚಿವರು, ನ್ಯಾಯಾಂಗ ಮತ್ತು ನ್ಯಾಯವಾದಿಗಳು ಸಹಕರಿಸದೇ ಇರುತ್ತಿದ್ದರೆ ಉಝ್ಮಾ ಭಾರತಕ್ಕೆ ಮರಳುವುದು ಕಷ್ಟವಿತ್ತು ಎಂದು ಹೇಳಿದರು. ಆದರೆ ಈ ವರೆಗೆ ಯಾರೂ ಸುಶ್ಮಾರನ್ನು ಪಾಕಿಸ್ತಾನಕ್ಕೆ ಅಟ್ಟುವ ಹೇಳಿಕೆಯನ್ನು ಕೊಟ್ಟಿಲ್ಲ. ‘ಪಾಕಿಸ್ತಾನ ನರಕವಲ್ಲ’ ಎಂದು ಈ ಹಿಂದೆ ನಟಿ ರಮ್ಯಾ ನೀಡಿದ ಹೇಳಿಕೆಗಾಗಿ ಅವರ ಮೇಲೆ ಮೊಟ್ಟೆ, ಟೊಮೆಟೋ ಎಸೆದು ಅವಮಾನಿಸಿದ ಬಿಜೆಪಿ ಕಾರ್ಯಕರ್ತರೆಲ್ಲ ಸದ್ಯ ಮೌನವಾಗಿದ್ದಾರೆ.
       ಪಾಕಿಸ್ತಾನವನ್ನು ನರಕವಾಗಿ ಮತ್ತು ಪಾಕಿಸ್ತಾನದಲ್ಲಿರುವವರನ್ನು ಭಾರತ ವಿರೋಧಿಗಳನ್ನಾಗಿ ಬಿಂಬಿಸುವವರು ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಸಕ್ರಿಯರಾಗಿದ್ದಾರೆ. ಕೆಲವು ಮಾಧ್ಯಮ ಕೇಂದ್ರಗಳಂತೂ ಈ ನಕಾರಾತ್ಮಕ ಪ್ರಚಾರದ ನೊಗವನ್ನು ಹಿಡಿದುಕೊಂಡಂತೆ ವರ್ತಿಸುತ್ತಿವೆ. ವೀಸಾ ಅವಧಿ ಮೀರಿಯೂ ಈ ದೇಶದಲ್ಲೇ ಉಳಿದುಕೊಂಡ ಪಾಕಿಸ್ತಾನಿಯರ ಬಂಧನವನ್ನು ಉಗ್ರವಾದಿಗಳ ಬಂಧನವೆಂಬಂತೆ ಅವು ಸುದ್ದಿ ಮಾಡುತ್ತಿವೆ. ಪಾಕಿಸ್ತಾನಿ ಸಂಗೀತಗಾರರನ್ನು, ಚಿತ್ರತಾರೆಯರು, ಕ್ರೀಡಾಪಟುಗಳನ್ನು ಭಾರತಕ್ಕೆ ಬರದಂತೆ ತಡೆಯುವುದೂ ನಡೆಯುತ್ತಿದೆ. ದೇಶಪ್ರೇಮವೆಂದರೆ ಪಾಕಿಸ್ತಾನವನ್ನು ತೆಗಳುವುದು ಎಂಬಂತಾಗಿದೆ. ‘ಭಾರತದ ಓರ್ವ ಯೋಧನ ತಲೆಗೆ ಪಾಕ್‍ನ 10 ಯೋಧರ ತಲೆಯನ್ನು ಕತ್ತರಿಸಬೇಕು’ ಎಂಬ ಘೋಷಣೆಯೊಂದಿಗೆ ಚುನಾವಣಾ ಅಖಾಡಕ್ಕಿಳಿದ ಪಕ್ಷವು ಇವತ್ತು ಅಧಿಕಾರದಲ್ಲಿರುವುದರಿಂದ ಇಂಥ ಉದ್ರಿಕ್ತತೆಯನ್ನು ಅನಿರೀಕ್ಷಿತ ಎಂದು ಹೇಳುವಂತಿಲ್ಲ. ಸದ್ಯಕ್ಕಂತೂ ಭಾರತ-ಪಾಕ್‍ಗಳ ನಡುವೆ ಸಂಬಂಧ ತೀರಾ ಹಳಸಿದೆ. ಕುಲ್‍ಭೂಷಣ್ ಯಾದವ್ ಪ್ರಕರಣ ಮತ್ತು ಕಾಶ್ಮೀರದ ಉದ್ವಿಘ್ನ ಸ್ಥಿತಿಯಿಂದಾಗಿ ಎರಡೂ ದೇಶಗಳು ಮುಖ ಕೊಟ್ಟು ಮಾತಾಡಲಾಗದಂಥ ಸ್ಥಿತಿಯಿದೆ. ಇಂಥ ಸಂದರ್ಭದಲ್ಲೂ ಸುಶ್ಮಾ ಸ್ವರಾಜ್ ಪಾಕಿಸ್ತಾನವನ್ನು ಹೊಗಳುವುದೆಂದರೇನು? ಕಡು ವೈರಿ ರಾಷ್ಟ್ರವಾದ ಪಾಕಿಸ್ತಾನವನ್ನು ಮಾನವೀಯ ಗುಣಗಳುಳ್ಳ ರಾಷ್ಟ್ರವಾಗಿ ಪರಿಗಣಿಸುವುದೆಂದರೇನು? ಇಷ್ಟಿದ್ದೂ ಯಾಕೆ ಯಾವ ದೇಶಪ್ರೇಮಿಯೂ ಸುಶ್ಮಾರಿಗೆ ಪಾಕ್ ಟಿಕೆಟ್ ರವಾನಿಸುವ ಪ್ರಯತ್ನ ಮಾಡಿಲ್ಲ?
    ಮಲೇಶ್ಯದಲ್ಲಿ ಉದ್ಯೋಗದಲ್ಲಿದ್ದ ದೆಹಲಿಯ ಉಝ್ಮಾ ಎಂಬ ಯುವತಿಗೆ ಅಲ್ಲೇ ಉದ್ಯೋಗದಲ್ಲಿದ್ದ ಪಾಕಿಸ್ತಾನದ ತಾಹಿರ್ ಅಲಿಯ ಪರಿಚಯವಾಗುತ್ತದೆ. ಸ್ನೇಹಿತರಾಗುತ್ತಾರೆ. ಆತನನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ತೆರಳಿದ ಆಕೆ ಭ್ರಮನಿರಸನಗೊಂಡು ಭಾರತೀಯ ರಾಯಭಾರ ಕಚೇರಿಯಲ್ಲಿ ಆಶ್ರಯ ಪಡೆಯುತ್ತಾಳೆ. ಭಾರತಕ್ಕೆ ಮರಳಿ ಕಳುಹಿಸಿ ಕೊಡುವಂತೆ ವಿನಂತಿಸುತ್ತಾಳೆ. ಇಡೀ ಘಟನೆ ನಡೆದಿರುವುದು ಪಾಕಿಸ್ತಾನದಲ್ಲಿ. ಕುಲ್‍ಭೂಷಣ್ ಯಾದವ್ ಪ್ರಕರಣದಲ್ಲಿ ಭಾರತ ಈಗಾಗಲೇ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ದೂರು ಸಲ್ಲಿಸುವ ಮೂಲಕ ಪಾಕಿಸ್ತಾನದ ನ್ಯಾಯ ಪ್ರಕ್ರಿಯೆಯನ್ನು ಪ್ರಶ್ನಿಸಿದೆ. ಇನ್ನೊಂದೆಡೆ ಸರ್ಜಿಕಲ್ ಸ್ಟ್ರೈಕ್‍ನ ವೀಡಿಯೋಗಳನ್ನು ಬಿಡುಗಡೆಗೊಳಿಸಿದೆ. ಪಾಕಿಸ್ತಾನವನ್ನು ಒಂಟಿ ಮಾಡುವ ಪ್ರಯತ್ನದಲ್ಲೂ ಸಕ್ರಿಯವಾಗಿದೆ. ಹೀಗಿರುತ್ತಾ, ಉಝ್ಮಾ ಪ್ರಕರಣವನ್ನು ಮಾನವೀಯ ನೆಲೆಯಲ್ಲಿ ನೋಡಬೇಕಾದ ಯಾವ ದರ್ದೂ ಪಾಕಿಸ್ತಾನಕ್ಕಿರಲಿಲ್ಲ. ತಾಹಿರ್ ಅಲಿ ವಾದಿಸಿದ್ದೂ ಅದೇ ರೀತಿಯಲ್ಲಿ. ಇದು ಪಾಕಿಸ್ತಾನದ ಪ್ರತಿಷ್ಠೆಯ ಪ್ರಶ್ನೆಯೆಂದು ಆತ ನ್ಯಾಯಾಲಯದಲ್ಲಿ ಹೇಳಿಕೊಂಡಿದ್ದ. ಆಗ ಅದನ್ನು ಖಂಡಿಸಿದ್ದು ಹೈಕೋರ್ಟ್‍ನ ನ್ಯಾಯಾಧೀಶ ಮುಹ್ಸಿನ್ ಅಖ್ತರ್ ಕಯಾನಿ ಅವರೇ. ಭಾರತ-ಪಾಕ್‍ಗಳ ಮಟ್ಟಿಗೆ ಯಾಕೆ ಈ ಪ್ರಕರಣ ಪ್ರತಿಷ್ಠೆಯದ್ದಾಗಬೇಕು ಎಂದವರು ಮರು ಪ್ರಶ್ನಿಸಿದರು. ಉಝ್ಮಾಳ ಜೊತೆ ಖಾಸಗಿ ಮಾತುಕತೆಗೆ ಅವಕಾಶ ಮಾಡಿಕೊಡಬೇಕೆಂಬ ತಾಹಿರ್ ಅಲಿಯ ವಿನಂತಿಯನ್ನೂ ಅವರು ತಿರಸ್ಕರಿಸಿದರು. ಎಲ್ಲಿಯವರೆಗೆಂದರೆ, ಉಝ್ಮಾಳ ಪರ ವಕೀಲರಾದ ಶಾ ನವಾಝ್‍ರು ತಂದೆಯಂತೆ ವಾದಿಸಿದರು ಎಂದು ಸ್ವತಃ ಸುಶ್ಮಾ ಸ್ವರಾಜ್‍ರೇ ಕೊಂಡಾಡಿದ್ದಾರೆ. ಆದ್ದರಿಂದ, ಪಾಕಿಸ್ತಾನದಲ್ಲಿ ಭಾರತ ವಿರೋಧಿ ಗಿಡಗಳಷ್ಟೇ ಬೆಳೆಯುತ್ತಿವೆ ಎಂದು ನಂಬಿಕೊಂಡವರು ಮತ್ತು ಆ ರೀತಿಯಲ್ಲಿ ಪ್ರಚಾರ ಮಾಡುವವರೆಲ್ಲ ಉಝ್ಮಾ ಪ್ರಕರಣವನ್ನು ಎದುರಿಟ್ಟುಕೊಂಡು ಆತ್ಮಾವಲೋಕನಕ್ಕೆ ಇಳಿಯಬೇಕು. ಪಾಕ್‍ನ ಕಣ ಕಣದಲ್ಲೂ ಭಾರತ ವಿರೋಧಿ ಭಾವನೆ ನೆಲೆ ನಿಂತಿರುತ್ತಿದ್ದರೆ ಉಝ್ಮಾ ಅಷ್ಟು ಸುಲಭದಲ್ಲಿ ಎರಡ್ಮೂರು ವಾರಗಳೊಳಗೆ ಭಾರತದ ಪಾಲಾಗಲು ಸಾಧ್ಯವೇ ಇರಲಿಲ್ಲ. ಅದನ್ನು ಸುಶ್ಮಾ ಸ್ವರಾಜ್‍ರೂ ಒಪ್ಪಿಕೊಂಡಿದ್ದಾರೆ. ಇವೇನನ್ನು ಸೂಚಿಸುತ್ತದೆ?
     ನಿಜವಾಗಿ ಎಲ್ಲ ರಾಷ್ಟ್ರಗಳಿಗೂ ತನ್ನ ಗಡಿಯ ಪಕ್ಕ ಜಗಳಗಂಟ ರಾಷ್ಟ್ರವೊಂದು ಇರಲೇ ಬೇಕಾಗಿದೆ. ತೈವಾನ್-ಜಪಾನ್‍ಗಳಿಗೆ ಚೀನಾ ಇರುವಂತೆ, ನೇಪಾಳಕ್ಕೆ ಭಾರತ ಇರುವಂತೆ, ಅಮೇರಿಕಕ್ಕೆ ದಕ್ಷಿಣ ಅಮೇರಿಕಾದ ಕಮ್ಯುನಿಸ್ಟ್ ರಾಷ್ಟ್ರಗಳು ಇರುವಂತೆ, ಇರಾಕ್‍ಗೆ ಇರಾನ್ ಇರುವಂತೆ, ಟರ್ಕಿಗೆ ಸಿರಿಯಾ ಇರುವಂತೆ, ಸುಡಾನ್‍ಗೆ ದಕ್ಷಿಣ ಸುಡಾನ್ ಇರುವಂತೆ, ರಶ್ಯಾಕ್ಕೆ ಹಳೆ ಸೋವಿಯಾತ್ ಯುನಿಯನ್‍ನ ರಾಷ್ಟ್ರಗಳಿರುವಂತೆ, ಯುಗೋಸ್ಲಾವಿಯಕ್ಕೆ ಹರ್ಝಾಗೋವಿನ ಇರುವಂತೆ ಪಾಕಿಸ್ತಾನಕ್ಕೂ ಭಾರತ ಇರಲೇಬೇಕಾಗಿದೆ. ಗಡಿಯಲ್ಲಿ ಜಗಳ ಇದ್ದರೆ ಗಡಿಯ ಒಳಗಡೆ ಇರುವ ಜನರನ್ನು ದೇಶಪ್ರೇಮದ ಹೆಸರಲ್ಲಿ ಒಗ್ಗೂಡಿಸುವುದು ಸುಲಭ. ಸರಕಾರ ಎಡವಟ್ಟು ಮಾಡಿಕೊಂಡಾಗಲೆಲ್ಲ ಗಡಿಯಲ್ಲಿ ಉದ್ವಿಘ್ನ ಸ್ಥಿತಿಯನ್ನು ನಿರ್ಮಿಸಿದರೆ ಸಾಕಾಗುತ್ತದೆ. ಆಗ ಗಡಿಯ ಒಳಗೆ ನಡೆಯುತ್ತಿದ್ದ ಚರ್ಚೆಗಳೆಲ್ಲ ಸ್ತಬ್ದಗೊಂಡು ಗಡಿಯೇ ಮುಖ್ಯ ಚರ್ಚಾ ವಿಷಯವಾಗುತ್ತದೆ. ನೋಟು ನಿಷೇಧದ ವಿರುದ್ಧ ತೀವ್ರ ಮಟ್ಟದ ಪ್ರತಿಕ್ರಿಯೆಗಳು ಕಾಣಿಸಿಕೊಂಡಾಗ ಕೇಂದ್ರ ಸರಕಾರ ತೋರಿಸಿದ್ದು ಪಾಕಿಸ್ತಾನವನ್ನು. ಅಲ್ಲಿಂದ ಭಾರೀ ಪ್ರಮಾಣದಲ್ಲಿ ನಕಲಿ ನೋಟುಗಳು ಬರುತ್ತಿರುವುದಕ್ಕೆ ಪ್ರತಿಯಾಗಿ ಕೈಗೊಂಡ ದೇಶಪ್ರೇಮಿ ನಿರ್ಧಾರ ಇದು ಎಂದು ಅದು ಹೇಳಿಕೊಂಡಿತು. ನೋಟು ನಿಷೇಧದಿಂದಾಗಿ ಭಯೋತ್ಪಾದಕರ ನುಸುಳುವಿಕೆ ಕಡಿಮೆಯಾಗಿದೆ ಮತ್ತು ಕಾಶ್ಮೀರದಲ್ಲಿ ಕಲ್ಲೆಸೆತಗಳು ನಿಂತಿವೆ ಎಂದೂ ಅದು ವಾದಿಸಿತು. ಆದರೆ ಕಾಶ್ಮೀರದಲ್ಲಿನ ಸದ್ಯದ ಬೆಳವಣಿಗೆಗಳು ನೋಟು ನಿಷೇಧದ ಒಟ್ಟು ನಿರ್ಧಾರವನ್ನೇ ಅಪಹಾಸ್ಯ ಮಾಡುವಷ್ಟು ಅಪಾಯಕಾರಿ ಮಟ್ಟದಲ್ಲಿದೆ. ಹಾಗಾದರೆ ನೋಟು ನಿಷೇಧದ ಸಂದರ್ಭದಲ್ಲಿ ಕೇಂದ್ರ ಸರಕಾರ ನೀಡಿದ ಸಮರ್ಥನೆಯನ್ನು ಏನೆಂದು ಪರಿಗಣಿಸಬೇಕು? ನೋಟು ನಿಷೇಧಕ್ಕೂ ಕಲ್ಲೆಸತಕ್ಕೂ ಸಂಬಂಧಗಳಿದ್ದುದು ನಿಜವೊ ಅಥವಾ ಅವರ ಗುರಿ ಇನ್ನೇನೋ ಆಗಿತ್ತೋ?
     ಅಗತ್ಯ ಬಂದಾಗ ಅಮೆರಿಕ ಯಾವುದಾದರೂ ತೃತೀಯ ರಾಷ್ಟ್ರಗಳ ಮೇಲೆ ದಾಳಿ ಮಾಡುತ್ತದೆ, ದಲಾಯಿಲಾಮ ಮತ್ತು ಅರುಣಾಚಲದ ನೆಪದಲ್ಲಿ ಚೀನಾ ತಗಾದೆ ಎತ್ತುತ್ತದೆ, ಫೆಲೆಸ್ತೀನ್‍ನ ಮೇಲೆ ಇಸ್ರೇಲ್ ಸವಾರಿ ಮಾಡುತ್ತದೆ, ವಿನಾಕಾರಣ ಸೌದಿ ಮತ್ತು ಇರಾನ್‍ಗಳು ಪರಸ್ಪರ ರೇಗಾಡುತ್ತವೆ, ದಕ್ಷಿಣ ಕೊರಿಯ ಮತ್ತು ಉತ್ತರ ಕೊರಿಯಾಗಳು ಯುದ್ಧದಾಹದಿಂದ ಬಳಲುತ್ತಿರುವಂತೆ ಆಡುತ್ತವೆ.. ಬಹುಶಃ ಭಾರತ-ಪಾಕ್‍ಗಳ ನಡುವಿನ ಜಗಳದ ಹಿಂದೆಯೂ ದೇಶಹಿತಕ್ಕಿಂತ ಹೊರತಾದ ಇಂಥ ಅನೇಕಾರು ಕಾರಣಗಳಿವೆ. ಸುಶ್ಮಾ ಆ ಕಾರಣಗಳನ್ನು ಚರ್ಚಿಸುವುದಕ್ಕೆ ವೇದಿಕೆಯೊಂದನ್ನು ನಿರ್ಮಿಸಿದ್ದಾರೆ. ಉಝ್ಮಾ ಅದಕ್ಕೊಂದು ನಿಮಿತ್ತ ಮಾತ್ರ.