Wednesday, 20 June 2018

ಟೋಪಿ-ಬುರ್ಖಾಧಾರಿಗಳನ್ನು ಬಹಿಷ್ಕರಿಸುವ ಶಾಸಕ ಮತ್ತು ಜನತಂತ್ರ

     ಕಾಂಗ್ರೆಸ್ ಪಕ್ಷದ ಶಾಸಕ, ಬಿಜೆಪಿ ಶಾಸಕ, ಕಮ್ಯುನಿಸ್ಟ್ ಪಕ್ಷದ ಶಾಸಕ, ಮುಸ್ಲಿಮ್ ಲೀಗ್ ಪಕ್ಷದ ಶಾಸಕ.. ಎಂದರೆ ಏನು? ಚುನಾವಣೆಯಲ್ಲಿ ಆ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದವ ಎಂಬ ಗುರುತು ಚಿಹ್ನೆಯೋ ಅಥವಾ ಆ ಪಕ್ಷದವರಿಗೆ ಮಾತ್ರ ಸಂಬಂಧಿಸಿದವ ಎಂಬ ನಾಮ ಸೂಚಕವೋ? ಓರ್ವ ಶಾಸಕ ಅಥವಾ ಸಂಸದನ ಬಗ್ಗೆ ಈ ದೇಶದ ಸಂವಿಧಾನ ಏನು ಹೇಳುತ್ತದೆ? ಆತ/ಕೆ ಜನಪ್ರತಿನಿಧಿಯೋ ಅಥವಾ ಧರ್ಮ ಪ್ರತಿನಿಧಿಯೋ? ಒಂದು ಕ್ಷೇತ್ರದಿಂದ ಆರಿಸಿ ಬರುವ ವ್ಯಕ್ತಿಯ ಮೇಲೆ ಈ ದೇಶದ ಸಂವಿಧಾನ ಹೊರಿಸುವ ಜವಾಬ್ದಾರಿಗಳೇನು? ಆತ ನಿರ್ದಿಷ್ಟ ಧರ್ಮದ ಅನುಯಾಯಿಗಳಿಗೆ ಬಹಿಷ್ಕಾರ ಘೋಷಿಸಬಹುದೇ? ನಿರ್ದಿಷ್ಟ ಧರ್ಮದ ಅನುಯಾಯಿಗಳಿಗಾಗಿ ಮಾತ್ರ ತಾನಿದ್ದೇನೆ ಎಂದು ಹೇಳಬಹುದೇ? ಇದರ ಸಾಂವಿಧಾನಿಕ ವಿಧಿ ವಿಧಾನಗಳು ಏನೇನು?
    ಇದು, ವಿಜಯಪುರದ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೊಬ್ಬರ ಸಮಸ್ಯೆಯಲ್ಲ. ಇಂಥ ಪ್ರಶ್ನೆಗಳನ್ನು ಹುಟ್ಟು ಹಾಕಿದವರಲ್ಲಿ ಅವರು ಮೊದಲಿಗರೂ ಅಲ್ಲ. “ಬುರ್ಖಾ ಮತ್ತು ಟೋಪಿಧಾರಿಗಳು ನನ್ನ ಕಚೇರಿಗೆ ಬರುವುದು ಬೇಡ. ನನಗೆ ಮತ ಹಾಕಿರುವುದು ಹಿಂದೂಗಳು. ಅವರಿಗಷ್ಟೇ ನಾನು ಕೆಲಸ ಮಾಡುವೆ. ಹಿಂದೂ ಸಮುದಾಯದವರನ್ನು ಬಿಟ್ಟು ಬೇರೆ ಯಾರಿಗೂ ಕೆಲಸ ಮಾಡಿಕೊಡದಂತೆ ಮಹಾನಗರ ಪಾಲಿಕೆ ಸದಸ್ಯರಿಗೆ ತಾಕೀತು ಮಾಡಿರುವೆ..’ ಎಂದು ಕಾರ್ಯಕ್ರಮವೊಂದರಲ್ಲಿ ಅವರು ನೀಡಿರುವ ಹೇಳಿಕೆಯು ದೊಡ್ಡ ಸುದ್ದಿಯಾಗದಿರುವುದಕ್ಕೆ ಕಾರಣ ಈ ವಾಸ್ತವವೇ. ಅವರದೇ ಪಕ್ಷದ ಸಂಸದ ಅನಂತ ಕುಮಾರ್ ಹೆಗಡೆಯವರು ಈ ಹಿಂದೆ ‘ಮುಸ್ಲಿಮರ ಮತವೇ ಬೇಡ’ ಎಂದು ಹೇಳಿಕೊಂಡಿದ್ದರು. ಅಲ್ಲದೇ ವಿವಿಧ ರಾಜ್ಯಗಳಲ್ಲಿರುವ ಬಿಜೆಪಿಯ ಸಂಸದರು ಮತ್ತು ಶಾಸಕರು ಮುಸ್ಲಿಮರನ್ನು ಅವಹೇಳನಗೊಳಿಸುವ ಮತ್ತು ಅಸ್ಪೃಶ್ಯರಂತೆ ಕಾಣುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಬಸವನಗೌಡ ಪಾಟೀಲ್‍ರು ಅವೇ ಮನಸ್ಥಿತಿಯನ್ನು ತುಸು ನಿಷ್ಠುರವಾಗಿ ಮತ್ತು ಮುಲಾಜಿಲ್ಲದೇ ವ್ಯಕ್ತಪಡಿಸಿದ್ದಾರೆ ಎಂದಷ್ಟೇ ಹೇಳಬಹುದು. ಅಷ್ಟಕ್ಕೂ,
ಬಿಜೆಪಿಯು ಮುಸ್ಲಿಮರ ವಿರುದ್ಧ ಒಂದು ಬಗೆಯ ತಿರಸ್ಕಾರ ನೋಟವನ್ನು ಬೀರಲು ಕಾರಣವೇನು? ಟೋಪಿಧಾರಿಗಳು ಮತ್ತು ಬುರ್ಖಾಧಾರಿಗಳು ಎಂಬ ಪದಪ್ರಯೋಗ ಅಥವಾ ಮುಸ್ಲಿಮರ ಓಟು ಬೇಡ ಎಂಬ ಹೇಳಿಕೆಯು ಒಟ್ಟು ಮುಸ್ಲಿಮ್ ಸಮುದಾಯವನ್ನು ಸಂಬೋಧಿಸುತ್ತದೆಯೇ ಹೊರತು ನಿರ್ದಿಷ್ಟ ವ್ಯಕ್ತಿ-ಶಕ್ತಿಗಳನ್ನಲ್ಲ. ಮುಸ್ಲಿಮ್ ಸಮುದಾಯ ಬಿಜೆಪಿಗೆ ಏನು ತೊಂದರೆ ಮಾಡಿದೆ? ಮುಸ್ಲಿಮ್ ಸಮುದಾಯದ ರಾಜಕೀಯ ಒಲವು ಬಿಜೆಪಿಯ ಕಡೆಗಿಲ್ಲ ಅನ್ನುವುದು ಈ ಬಗೆಯ ಹೇಳಿಕೆಗೆ ಕಾರಣ ಎಂದಾದರೆ ಈ ಪಟ್ಟಿಯಲ್ಲಿ ಸೇರಬೇಕಾದ ಸಮುದಾಯಗಳು ಇನ್ನೂ ಇವೆಯಲ್ಲ- ಕ್ರೈಸ್ತರು, ದಲಿತರು, ಆದಿವಾಸಿಗಳು, ಸಿಕ್ಖರು, ಕುರುಬರು.. ಇವರ ಬಗ್ಗೆ ಬಿಜೆಪಿಯೇಕೆ ಇದೇ ಧಾಟಿಯಲ್ಲಿ ಮಾತಾಡುವುದಿಲ್ಲ? ಬಿಜೆಪಿಯತ್ತ ಒಲವು ತೋರಿಸದ ಹಲವು ಸಮುದಾಯಗಳು ಈ ದೇಶದಲ್ಲಿರುವಾಗ ಕೇವಲ ಮುಸ್ಲಿಮರೇ ಯಾಕೆ ಮತ್ತೆ ಮತ್ತೆ ಗುರಿಯಾಗುತ್ತಿದ್ದಾರೆ? ಒಂದು ವೇಳೆ, ಮುಸ್ಲಿಮ್ ಸಮುದಾಯದಲ್ಲಿ ಕ್ರಿಮಿನಲ್‍ಗಳಿದ್ದಾರೆ, ಭಯೋತ್ಪಾದಕರಿದ್ದಾರೆ, ದೇಶವಿರೋಧಿಗಳಿದ್ದಾರೆ.. ಮುಂತಾದುವುಗಳು ಇದಕ್ಕೆ ಕಾರಣವೆಂದಾದರೆ, ಯತ್ನಾಳ್ ಅವರು ಮೊದಲು ತಾನು ಪ್ರತಿನಿಧಿಸುವ ಸಮುದಾಯವನ್ನೇ ಬಹಿಷ್ಕರಿಸಬೇಕಾಗುತ್ತದೆ. ಯಾಕೆಂದರೆ, ಇಂಥವು ಯಾವುದಾದರೊಂದು ಧರ್ಮಕ್ಕೆ ಸೀಮಿತವಲ್ಲ. ಒಂದು ಧರ್ಮದ ಪ್ರತಿನಿಧಿಗಳಾಗಿ ಯಾರೂ ಇಂಥ ಕೆಲಸಗಳನ್ನು ಮಾಡುವುದೂ ಇಲ್ಲ. ಬಹಳ ಮಹತ್ವಪೂರ್ಣವಾದ ಈ ದೇಶದ ರಕ್ಪಣಾ ರಹಸ್ಯಗಳೂ ಸೇರಿ ದಾಖಲೆಗಳನ್ನು ಪಾಕಿಸ್ತಾನವೂ ಸೇರಿದಂತೆ ವಿದೇಶಿ ರಾಷ್ಟ್ರಗಳಿಗೆ ನೀಡಿದವರಲ್ಲಿ ಯತ್ನಾಳ್ ಅವರು ಪ್ರತಿನಿಧಿಸುವ ಸಮುದಾಯದವರು ಮುಂಚೂಣಿಯಲ್ಲಿದ್ದಾರೆ. ಭಯೋತ್ಪಾದನೆಯಾಗಲಿ, ಅತ್ಯಾಚಾರವಾಗಲಿ, ಕಳ್ಳತನವಾಗಲಿ ಅಥವಾ ಯಾವುದೇ ಸಮಾಜ ಘಾತುಕ ಕೃತ್ಯಗಳಾಗಲಿ ಎಲ್ಲದರಲ್ಲೂ ಎಲ್ಲ ಧರ್ಮದವರ ಪಾತ್ರವಿದೆ. ಹಾಗಂತ, ಆಯಾ ಧರ್ಮಗಳನ್ನೇ ಅವಕ್ಕೆ ಹೊಣೆಯೆಂದು ಹೇಳಬಹುದೇ? ನಿಜವಾಗಿ, ಸಮಾಜಘಾತುಕ ಕೃತ್ಯಗಳನ್ನು ವೈಯಕ್ತಿಕವಾಗಿ ನೋಡಬೇಕೇ ಹೊರತು ಧಾರ್ಮಿಕವಾಗಿಯಲ್ಲ. ಈ ದೇಶದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಹಗರಣಗಳನ್ನೊಮ್ಮೆ ಪರಿಗಣಿಸಿ ನೋಡಿ. ಅದರಲ್ಲಿ ಟೋಪಿವಾಲಾ ಮತ್ತು ಬುರ್ಖಾಧಾರಿಗಳು ಎಷ್ಟಿದ್ದಾರೆ? ಭ್ರಷ್ಟಾಚಾರಿಗಳ ಬಹುದೊಡ್ಡ ಪಟ್ಟಿಯೊಂದು ಈ ದೇಶದಲ್ಲಿದೆ. ಬ್ಯಾಂಕ್‍ಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿ ವಿದೇಶದಲ್ಲಿ ಆರಾಮವಾಗಿ ಕುಳಿತವರೂ ಇದ್ದಾರೆ. ಇವರಲ್ಲಿ ಯತ್ನಾಳ್ ಅವರ ಟೋಪಿ ಮತ್ತು ಬುರ್ಖಾಧಾರಿಗಳ ಪಾತ್ರ ಎಷ್ಟಿದೆ? ಈ ದೇಶದ ಹಿತ ಎಲ್ಲಕ್ಕಿಂತ ಮುಖ್ಯ ಎಂದು ಹೇಳುವ ಬಿಜೆಪಿಯು ಈ ದೇಶಕ್ಕೆ ಅಹಿತ ಮಾಡಿದವರನ್ನು (ಉದಾ: ರೆಡ್ಡಿಗಳು) ಜೊತೆಯಿರಿಸಿಕೊಂಡೇ ಮತ್ತು ಇಂಥ ಅಹಿತವೆಸಗಿದ ಅಸಂಖ್ಯ ಮಂದಿ ಪ್ರತಿನಿಧಿಸುವ ಧರ್ಮವನ್ನು ತಿರಸ್ಕಾರಯೋಗ್ಯ ಎಂದು ಪರಿಗಣಿಸದೆಯೇ ಬರೇ ಮುಸ್ಲಿಮರನ್ನು ಮಾತ್ರ ಆ ಪಟ್ಟಿಯಲ್ಲಿಟ್ಟಿರುವುದು ಯಾಕಾಗಿ? ಈ ದೇಶಕ್ಕೆ ಅಹಿತ ಎಸಗಿದವರ ಹೆಸರುಗಳನ್ನು ಪ್ರಾಮಾಣಿಕವಾಗಿ ಪಟ್ಟಿ ಮಾಡಿದರೆ ಮುಸ್ಲಿಮ್ ಹೆಸರುಗಳು ಅದರಲ್ಲಿ ಅತ್ಯಂತ ಕೊನೆಯಲ್ಲಷ್ಟೇ ಸ್ಥಾನ ಪಡೆದಾವು. ಯಾಕೆಂದರೆ, ದೇಶದಲ್ಲಿ ಮುಸ್ಲಿಮರ ಒಟ್ಟು ಸಂಖ್ಯೆಯೇ ತೀರಾ ಅತ್ಯಲ್ಪ. ಅದರಲ್ಲೂ ರಾಜಕೀಯವಾಗಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅವರು ಈ ದೇಶದ ಇತರ ಸಮುದಾಯಗಳಿಗೆ ಸ್ಪರ್ಧೆ ನೀಡಲಾಗದಷ್ಟು ದುರ್ಬಲರು. ಸರಕಾರದ ಆಯಕಟ್ಟಿನ ಜಾಗಗಳನ್ನು ಬಿಡಿ, ಸಾಮಾನ್ಯ ಉದ್ಯೋಗಿಗಳಾಗಿಯೂ ಅವರ ಪಾಲು ತೀರಾ ತೀರಾ ಕಡಿಮೆ. ಇದೊಂದು ವಾಸ್ತವ. ಹೀಗಿದ್ದೂ, ಬಿಜೆಪಿಯು ಮುಸ್ಲಿಮರನ್ನೇ ಗುರಿ ಮಾಡಿಕೊಂಡಿರುವುದರ ಉದ್ದೇಶವೇನು? ಒಂದು ವೇಳೆ, ಬಿಜೆಪಿಗೂ ಇಂಥ ಹೇಳಿಕೆಗಳಿಗೂ ಸಂಬಂಧವಿಲ್ಲ ಎಂದಾದರೆ, ಕನಿಷ್ಠ ಅದನ್ನು ರಾಜ್ಯ ನಾಯಕರು ಅಥವಾ ರಾಷ್ಟ್ರ ನಾಯಕರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ವ್ಯಕ್ತಪಡಿಸಬೇಕಾಗಿತ್ತು. ಅಂಥ ಹೇಳಿಕೆಗಳನ್ನು ಕೊಡುವವರನ್ನು ಪಕ್ಷದಿಂದ ಹೊರಗಿಟ್ಟು ಶಿಸ್ತಿನ ಪಾಠ ಕಲಿಸಬೇಕಾಗಿತ್ತು. ಆದರೆ ಬಿಜೆಪಿ ಅವಾವುದನ್ನೂ ಮಾಡುತ್ತಿಲ್ಲ. ಮಾತ್ರವಲ್ಲ, ಇಂಥ ಸಂದರ್ಭಗಳಲ್ಲೆಲ್ಲ ಗಾಢ ಮೌನಕ್ಕೆ ಜಾರುವುದನ್ನು ಅದು ರೂಢಿ ಮಾಡಿಕೊಂಡಿದೆ. ಈ ಮೌನವನ್ನು ಆ ಪಕ್ಷದ ಸಮ್ಮತಿಯೆಂದು ತಿಳಿದುಕೊಳ್ಳಬೇಕೋ ಅಥವಾ ಉದ್ದೇಶಪೂರ್ವಕ ಕಿವುಡುತನವೆಂದೋ?
     ಭಾರತೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕ ಅಥವಾ ಸಂಸದ ಜನಪ್ರತಿನಿಧಿಯಾಗುತ್ತಾನೆಯೇ ಹೊರತು ಧರ್ಮಪ್ರತಿನಿಧಿಯಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವವರೆಗೆ ಮಾತ್ರ ಆತ ನಿರ್ದಿಷ್ಟ ಪಕ್ಷದ ಅಭ್ಯರ್ಥಿ. ಗೆದ್ದ ಬಳಿಕ ಆತ ಆ ಕ್ಷೇತ್ರದ ಅಷ್ಟೂ ಜನರ ಪ್ರತಿನಿಧಿ. ಆ ಕ್ಷೇತ್ರದಲ್ಲಿ ತನಗೆ ಮತ ಚಲಾಯಿಸಿದವರನ್ನೂ ಚಲಾಯಿಸದವರನ್ನೂ ಸಮಾನ ರೀತಿಯಲ್ಲಿ ನೋಡಬೇಕಾದ ಹೊಣೆಗಾರಿಕೆಯನ್ನು ಆ ಗೆಲುವು ಆತನ ಮೇಲಿರಿಸುತ್ತದೆ. ಇದಕ್ಕಿರುವ ಇನ್ನೊಂದು ಆಧಾರ ಏನೆಂದರೆ, ಗೌಪ್ಯ ಮತದಾನ. ತನಗೆ ಮತ ಚಲಾಯಿಸಿದವರು ಯಾರು ಎಂಬ ವಿವರ ಅಭ್ಯರ್ಥಿಗಳ ಸಹಿತ ಯಾವ ಪಕ್ಷಕ್ಕೂ ಗೊತ್ತಾಗದಿರಲಿ ಅನ್ನುವ ಉದ್ದೇಶ ಗೌಪ್ಯ ಮತದಾನಕ್ಕಿದೆ. ಇಷ್ಟೆಲ್ಲ ಇದ್ದೂ ಯತ್ನಾಳ್ ಅವರು ಮುಸ್ಲಿಮರನ್ನು ತಿರಸ್ಕರಿಸಿ ಮಾತಾಡುತ್ತಾರೆಂದರೆ ಮತ್ತು ಅವರ ಪಕ್ಷವು ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೆಂದರೆ, ಅದು ದೇಶದ ಸಂವಿಧಾನ ಮತ್ತು ವೈವಿಧ್ಯ ಪರಂಪರೆಗೆ ಎಸಗುವ ದ್ರೋಹ. ಅಂದಹಾಗೆ,
    ಧರ್ಮಗಳು ರಾಜಕೀಯ ಲೆಕ್ಕಾಚಾರಕ್ಕಿಂತ ಹೊರಗಿನವು. ಒಂದು ನಿರ್ದಿಷ್ಟ ಧರ್ಮದ ಅನುಯಾಯಿಗಳಿನ್ನು ತಿರಸ್ಕಾರ ಯೋಗ್ಯರು ಎಂದು ಹೇಳುವುದರಿಂದ ಯತ್ನಾಳ್‍ರಿಗೆ ರಾಜಕೀಯ ಲಾಭ ಇದ್ದಿರಬಹುದಾದರೂ ಈ ಲಾಭದ ಅವಧಿ ದೀರ್ಘಕಾಲ ಇರಲಾರದು. ಯಾಕೆಂದರೆ, ವಿನಾ ಕಾರಣ ಒಂದು ಸಮುದಾಯವನ್ನು ಗುರಿಯಾಗಿಸುವುದು ಧರ್ಮವಿರೋಧಿ ಮತ್ತು ಪ್ರಕೃತಿ ವಿರೋಧಿಯಾಗುತ್ತದೆ. ಕೊನೆಗೆ ಪ್ರಕೃತಿಯೇ ಅಂಥವರನ್ನು ತಿರಸ್ಕರಿಸಿಬಿಡುತ್ತದೆ.


Tuesday, 12 June 2018

ಎಂಡೋ ಸಂತ್ರಸ್ತರ ಕೂಗು: ಕಿವುಡಾಗಿರುವ ಸರಕಾರ ಮತ್ತು ಪ್ರತಿಷ್ಠಿತ ನ್ಯೂಸ್ ಚಾನೆಲ್

    
ತಮಿಳುನಾಡಿನ ತೂತುಕುಡಿಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಪ್ರದೇಶಕ್ಕೂ ನಡುವೆ ಸಾಂಸ್ಕøತಿಕ, ಭಾಷಿಕ ಮತ್ತು ¸ ಸಮಾಜಿಕವಾಗಿ ಯಾವ ಸಂಬಂಧವೂ ಇಲ್ಲ. ಎರಡೂ ಪ್ರದೇಶಗಳ ಜನರ ಭಾಷೆ ಬೇರೆ. ಆಹಾರ ಬೇರೆ. ರೀತಿ-ರಿವಾಜುಗಳು ಬೇರೆ. ಆದರೆ ಬಹುತೇಕ ದೂರುಗಳು ಒಂದೇ. ತೂತುಕುಡಿಯ ಜನರು ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಭಯಪಟ್ಟಿದ್ದರೆ, ಕೊಕ್ಕಡ ಪ್ರದೇಶದ ಜನರು ಆರೋಗ್ಯವನ್ನು ಕೆಡಿಸಿಕೊಂಡು ಹತಾಶರಾಗಿದ್ದಾರೆ . ತೂತುಕುಡಿಯಲ್ಲಿರುವ ಜಿಂದಾಲ್ ಒಡೆತನದ ತಾಮ್ರದ ಕಾರ್ಖಾನೆಯಿಂದ ಹೊರಬಿಡಲಾಗುವ ರಾಸಾಯನಿಕಗಳು ಅಲ್ಲಿಯ ಜನರ ಆತಂಕಕ್ಕೆ ಕಾರಣವಾಗಿದ್ದರೆ, ಕೊಕ್ಕಡದಲ್ಲಿ ಎಂಡೋಸಲ್ಫಾನ್ ಎಂಬ ರಾಸಾಯನಿಕವು 3762ಕ್ಕಿಂತಲೂ ಅಧಿಕ ಮಂದಿಯ ಆರೋಗ್ಯವನ್ನೇ ಕೆಡಿಸಿಬಿಟ್ಟಿದೆ. ವರ್ಷದ ಹಿಂದೆ ಎಂಡೋಸಲ್ಫಾನ್ ಸಂತ್ರಸ್ತರ ಪ್ರತಿಭಟನೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಭಾಗಿಯಾದ ಸಂತ್ರಸ್ತರನ್ನು ಕಂಡು ನಾಡಿನ ಜನರು ಬಾವುಕರಾಗಿದ್ದರು. ರಾಸಾಯನಿಕವೊಂದು ಜನರನ್ನು ಈ ಮಟ್ಟದಲ್ಲಿ ಜೀವಚ್ಛವವಾಗಿಸಿಬಿಡಬಹುದೇ ಅನ್ನುವ ಆತಂಕಬೆರೆತ ಪ್ರಶ್ನೆಯೊಂದನ್ನು ಆ ಸಂದರ್ಭದಲ್ಲಿ ಎತ್ತಲಾಗಿತ್ತು. ಕೊಕ್ಕಡವೂ ಸೇರಿದಂತೆ ಆಸು-ಪಾಸು ಪ್ರದೇಶಗಳಲ್ಲಿ ವಿಶಾಲವಾಗಿ ಹರಡಿರುವ ಗೇರು ಮರಗಳಿಗೆ ಸರಕಾರಿ ಗೇರು ನಿಗಮವು ಹೆಲಿಕಾಫ್ಟರ್ ಮೂಲಕ ದಶಕಗಳ ಹಿಂದೆ ಸಿಂಪಡಿಸಿದ ಎಂಡೋಸಲ್ಫಾನ್ ಎಂಬ ರಾಸಾಯನಿಕವು ಆ ಬಳಿಕ ಒಂದು ತಲೆಮಾರನ್ನೇ ಅಂಗವೈಕಲ್ಯಕ್ಕೆ ದೂಡಿತು. ಕೈ-ಕಾಲು, ಕಣ್ಣು, ಮೂಗು, ಬಾಯಿ, ತಲೆ ಇತ್ಯಾದಿ ದೇಹದ ಯಾವ ಅಂಗಾಂಗಗಳೂ ಸ್ವಸ್ಥವಾಗಿಲ್ಲದ ಮತ್ತು ತೆವಳಿಕೊಂಡೋ ಅಥವಾ ಶಾಶ್ವತವಾಗಿ ಮಲಗಿಕೊಂಡೋ ಇರುವ ಸ್ಥಿತಿಯ ದೊಡ್ಡ ಮಟ್ಟದ ಸಂತ್ರಸ್ತರ ಗುಂಪನ್ನು ಅದು ಹುಟ್ಟು ಹಾಕಿತು.
ಎಂಡೋ ವಿರೋಧಿ ಹೋರಾಟ ಸಮಿತಿಯನ್ನು ಕಟ್ಟಿಕೊಂಡು ಸಂತ್ರಸ್ತರ ಕಲ್ಯಾಣಕ್ಕಾಗಿ ಹೋರಾಡುತ್ತಿರುವ ಶ್ರೀಧರ್ ಗೌಡ ಎಂಬವರೂ ಸ್ವತಃ ಎಂಡೋಸಲ್ಫಾನ್‍ನ ಸಂತ್ರಸ್ತರಾಗಿದ್ದಾರೆ. ವಿಶೇಷ ಏನೆಂದರೆ, ಪ್ರತಿಭಟನೆಯ ಕಾರಣಕ್ಕಾಗಿ ತೂತುಕುಡಿಯು ಸುದ್ದಿಯಲಿ ್ಲರುವ ಈ ಸಂದರ್ಭದಲ್ಲಿಯೇ ಎಂಡೋಸಲ್ಫಾನ್ ಸಂತ್ರಸ್ತರೂ ಕಾಕತಾಳೀಯವೆಂಬಂತೆ ಸುದ್ದಿಯಲ್ಲಿದ್ದಾರೆ. ಎಂಡೋ ಸಂತ್ರಸ್ತರಿಗೆ ಸಂಬಂಧಿಸಿ ಸುಮಾರು 8 ತಿಂಗಳ ಹಿಂದೆ ರಾಜ್ಯ ಸರಕಾರದ ನೇತೃತ್ವದಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಸರಕಾರವನ್ನು ಹೊರತುಪಡಿಸಿ ಒಪ್ಪಂದದಲ್ಲಿ ಪಾಲ್ಗೊಂಡ ಇನ್ನೆರಡು ಸಂಸ್ಥೆಗಳೆಂದರೆ, ಸಾನಿಧ್ಯ ಎಂಬ ಸೇವಾ ಸಂಸ್ಥೆ ಮತ್ತು ಇನ್ನೊಂದು ಕನ್ನಡದ ನ್ಯೂಸ್ ಚಾನೆಲ್. ಒಪ್ಪಂದದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆ ಯ ಉಜಿರೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಪಾಲನಾ ಕೇಂದ್ರವೊಂದನ್ನು ಸರಕಾರ ನಿರ್ಮಿಸಿ ಕೊಡಬೇಕು. ಸಾನಿಧ್ಯ ಸೇವಾ ಸಂಸ್ಥೆಯು ಈ ಪಾಲನಾ ಕೇಂದ್ರಕ್ಕೆ ಸಿಬ್ಬಂದಿಗಳ ವ್ಯವಸ್ಥೆ ಮಾಡುವುದು, ಫಿಸಿಯೋ ಥೆರಪಿ ಮತ್ತು ಸಂತ್ರಸ್ತರಿಗೆ ಸೂಕ್ತ ತರಬೇತಿಯ ವ್ಯವಸ್ಥೆ ಮಾಡುವ ಹೊಣೆಯನ್ನು ವಹಿಸಿಕೊಂಡಿತ್ತು. ಟಿ.ವಿ. ಚಾನೆಲ್ ಈ ಸಂತ್ರಸ್ತರ ಪಾಲನೆಗಾಗಿ 1 ಕೋಟಿ ರೂಪಾಯಿಯನ್ನು ನೀಡುವ ವಾಗ್ದಾನವನ್ನು ನೀಡಿತ್ತು. ಎಂಡೋಪೀಡಿತರಿಗಾಗಿ 2012ರಲ್ಲಿ ಕೈಗೊಂಡ ಅಭಿಯಾನದಲ್ಲಿ ಈ ಮೊತ್ತವನ್ನು ¸ ಸಂಗ್ರಹಿಸಲಾಗಿತ್ತು. ವಿಷಾದ ಏನೆಂದರೆ, ಒಪ್ಪಂದದ ಆಚೆಗೆ ಯಾವ ಬೆಳವಣಿಗೆಗಳೂ ಆಗಿಲ್ಲ. 40 ಸಂತ್ರಸ್ತರ ಪಾಲಿಗೆ ಅಭಯ ಕೇಂದ್ರವಾಗ¨ ಬೇಕಿದ್ದ ಪಾಲನಾ ಕೇಂದ್ರಕ್ಕೆ ಕಟ್ಟಡವೇ ಇನ್ನೂ ಸಿದ್ಧಗೊಂಡಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿಯವರು ಕಟ್ಟಡ ಸಿದ್ಧಗೊಂಡಿದೆ ಮತ್ತು ಚಾನೆಲ್ ಸಹಕರಿಸುತ್ತಿಲ್ಲ ಎನ್ನುವಾಗ ಎಂಡೋ ವಿರೋಧಿ ಹೋರಾಟ ಸಮಿತಿಯ ಶ್ರೀಧರ್ ಗೌಡರು ಸರಕಾರ ಮತ್ತು ಚಾನೆಲ್ ಎರಡನ್ನೂ ವಿಳಂಬಕ್ಕೆ ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಇದು ಎಂಡೋ ಸಂತ್ರಸ್ತರ ಸದ್ಯದ ಸ್ಥಿತಿಗತಿ. ಸುಮಾರು ಎರಡು ದಶಕಗಳ ಹಿಂದೆ ಗೇರು ಕೃಷಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸರಕಾರ ಸಿಂಪಡಿಸಿದ ರಾಸಾಯನಿಕವೊಂದು ಎರಡು ದಶಕಗಳ ಬಳಿಕವೂ ಜನರನ್ನು ಬಿಡದೇ ಕಾಡುತ್ತಿರುವ ಈ ಬಿಂದುವಿನಲ್ಲಿ ನಿಂತು, ಒಮ್ಮೆ ತೂತುಕುಡಿಯನ್ನೂ ಇನ್ನೊಮ್ಮೆ ನಮ್ಮ ವ್ಯವಸ್ಥೆಯನ್ನೂ ಎದುರಿಟ್ಟು ನೋಡಿ. ಎಂಡೋಸಲ್ಫಾನನ್ನು ಸಿಂಪಡಿಸಲು ಅನುಮತಿ ನೀಡಿದ ಸರಕಾರ ಈಗಿಲ್ಲ. ಆಗಿನ ಮುಖ್ಯಮಂತ್ರಿಯಿಂದ ಹಿಡಿದು ಸಚಿವ ಸಂಪುಟದವರೆಗೆ ಯಾರೂ ಇವತ್ತು ಅದೇ ಹುದ್ದೆಯಲ್ಲಿಲ್ಲ. ಗೇರು ನಿಗಮದ ಅಧಿಕಾರಿ ಬದಲಾಗಿದ್ದಾರೆ. ಎಂಡೋಸಲ್ಫಾನ್ ಸಿಂಪಡಿಸಲು ಬಳಸಲಾದ ಹೆಲಿಕಾಫ್ಟರ್ ಸೇವೆಯಿಂದ ನಿವೃತ್ತವಾಗಿದೆ. ಒಂದು ರೀತಿಯಲ್ಲಿ, ಎಂಡೋ ಸಂತ್ರಸ್ತರ ಸ್ಥಿತಿಗೆ ನೇರ ಕಾರಣರಾದವರೆಲ್ಲ ತೆರೆಮರೆಗೆ ಸರಿದು ಅದಕ್ಕೆ ನೇರ ಹೊಣೆಗಾರರಲ್ಲದವರು ಇವತ್ತು ಅಧಿಕಾರ ಕೇಂದ್ರದಲ್ಲಿದ್ದಾರೆ. ಆದ್ದರಿಂದ, ಎಂಡೋ ಸಿಂಪಡಿಸಲು ಅನುಮತಿ ನೀಡಿದ ಅಧಿಕಾರಿಗಳಲ್ಲಿರಬ ಹುದಾದ ಅಪರಾಧಿ ಭಾವವು ಇವರಲ್ಲಿರುವುದಕ್ಕೆ ಸಾಧ್ಯವಿಲ್ಲ. ಈಗಿನ ಅಧಿಕಾರಿಗಳು ಮತ್ತು ಆಡಳಿತಗಾರರಿಗೆ ಇದೊಂದು ಕಾನೂನುನಾತ್ಮಕ ಸಂಗತಿಯೇ ಹೊರತು ಭಾವನಾತ್ಮಕವಾದುದಲ್ಲ. ನ್ಯಾಯವನ್ನು ಆಗ್ರಹಿಸಿ ಧರಣಿ ಕೂರುವ ಸಂತ್ರಸ್ತರನ್ನು ಆ ಕ್ಷಣಕ್ಕೆ ಅಲ್ಲಿಂದ ತೆರವುಗೊಳಿಸುವುದಷ್ಟೇ ಇವರ ಮುಖ್ಯ ಗುರಿ. ಸಂತ್ರಸ್ತರಿಗೆ ಕಟ್ಟಡ ನಿರ್ಮಿಸಿಕೊಡುವ ವಾಗ್ದಾನವನ್ನು 8 ತಿಂಗಳ ಬಳಿಕವೂ ಸರಕಾರ ಪೂರೈಸದಿರುವುದು, ವಾಗ್ದಾನಿತ ಮೊತ್ತವನ್ನು ಟಿವಿ ಚಾನೆಲ್ ನೀಡದೇ ಇರುವುದು ಮತ್ತು ಅಧಿಕಾರಿಗಳು ಇತರರತ್ತ ಬೆರಳು ತೋರಿಸಿ ಜಾರಿಕೊಳ್ಳುತ್ತಿರುವುದೆಲ್ಲ ಇದನ್ನೇ ಸೂಚಿಸುತ್ತದೆ.
     ನಿಜವಾಗಿ, ಎಂಡೋಸಲ್ಫಾನ್ ಸಂತ್ರಸ್ತರು ನಮ್ಮೊಳಗನ್ನು ತಟ್ಟಬೇಕಾದುದು ಅವರ ಅಸಹಾಯಕ ಸ್ಥಿತಿಯ ಕಾರಣಕ್ಕಾಗಿ ಮಾತ್ರ ಅಲ್ಲ. ಆ ¸ ಸಂತ್ರಸ್ತರು ನಮ್ಮ ಪಾಲಿಗೆ ಬರೇ ಭಾವುಕ ರೂಪಗಳಾಗಬೇಕಾದವರೂ ಅಲ್ಲ. ಅವರು ಒಂದು ಎಚ್ಚರಿಕೆ. ನಮ್ಮ ಸರಕಾರಗಳ ಮೇಲೆ ನಾವು ಎಲ್ಲಿಯವರೆಗೆ ಮತ್ತು ಎಷ್ಟರವರೆಗೆ ವಿಶ್ವಾಸವನ್ನು ಇಡಬಹುದು ಎಂಬುದನ್ನು ಸಾರುವ ಸೂಚನಾ ಫಲಕ. ನಮ್ಮ ಪ್ರತಿನಿಧಿಗಳು ಷರತ್ತು ರಹಿತ ವಿಶ್ವಾಸಕ್ಕೆ ಯೋಗ್ಯರಲ್ಲ ಎಂಬುದನ್ನು ಗಟ್ಟಿಯಾಗಿ ಹೇಳುವ ತೋರುಗಲ್ಲೂ ಹೌದು. ಈ ಹಿನ್ನೆಲೆಯಲ್ಲಿಯೇ ನಾವು ತೂತುಕುಡಿ ಪ್ರತಿಭಟನೆಯನ್ನು ವಿಶ್ಲೇಷಿಸಬೇಕಾಗಿದೆ. ಜನರಿಂದ ಆಯ್ಕೆಯಾದವರು ಜನರ ಹಿತಕ್ಕೆ ವಿರುದ್ಧವಾಗಿ ಯಾವ ನಿರ್ಧಾರವನ್ನೂ ಕೈಗೊಳ್ಳಲಾರರು ಎಂದು ಮುಗ್ಧವಾಗಿ ನಂಬುವು ಕಾಲ ಇದಲ್ಲ. ಒಂದು ವೇಳೆ, ಇದು ನಿಜವೇ ಆಗಿದ್ದಿದ್ದರೆ ಎಂಡೋಸಲ್ಫಾನ್ ಸಿಂಪಡಿಸುವುದಕ್ಕಿಂತ ಮೊದಲೇ ಅದರ ಸಾಧಕ-ಬಾಧಕಗಳ ಕುರಿತು ನಮ್ಮ ಜನಪ್ರತಿನಿಧಿಗಳು ಅವಲೋಕನ ನಡೆಸುತ್ತಿದ್ದರು. ಗೇರು ಕೃಷಿಯ ಅಭಿವೃದ್ಧಿಗಿಂತ ಜನಹಿತ ಮುಖ್ಯವೆಂದು ಅವರು ತೀರ್ಮಾನಿಸುತ್ತಿದ್ದರು. ಆದರೆ ಇಂಥದ್ದೊಂದು ಅವಲೋಕನ ನಡೆಯುವುದು ಬಿಡಿ, ಎಂಡೋಸಲ್ಫಾನನ್ನು ಜನ ವಿರೋಧಿ ಎಂದು ಒಪ್ಪಿಕೊಳ್ಳುವುದಕ್ಕೂ ಆರಂಭದಲ್ಲಿ ಅವರು ತಯಾರಾಗಲೇ ಇಲ್ಲ. ಸಾಮಾನ್ಯವಾಗಿ, ಜನಪ್ರತಿನಿಧಿಗಳು ಕೊಕ್ಕಡದಂಥ ಅರಣ್ಯ ಪ್ರದೇಶಗಳಲ್ಲಿ ಮನೆ ಮಾಡಿ ವಾಸಿಸುವುದಿಲ್ಲ. ಅಲ್ಲದೇ ನೀತಿ- ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಭೆ ಸೇರುವುದೂ ನಗರಗಳಲ್ಲಿರುವ ಕಛೇರಿಗಳಲ್ಲಿ. ಅಲ್ಲಿ ಕೂತು ಅವರು ಹಳ್ಳಿಗಾಡಿನ ಮೇಲೆ ಕಾರ್ಖಾನೆಗಳನ್ನು ಹೇರುತ್ತಾರೆ. ತೂತುಕುಡಿಯಲ್ಲಿ ಆಗಿರುವುದೂ ಇದುವೇ. ಆದ್ದರಿಂದ, ನಗರ ಕೇಂದ್ರಿತ ಮತ್ತು ಕಾಪೆರ್Çರೇಟ್ ಪ್ರಭಾವಿತ ಚಿಂತನೆಗಳನ್ನೇ ಸಾರ್ವಕಾಲಿಕ ಸತ್ಯವೆಂಬಂತೆ ನಂಬುವುದರಿಂದ ನಮ್ಮ ಜನಪ್ರತಿನಿಧಿಗಳು ಅರ್ಥಾತ್ ಸರಕಾರ ಹೊರಬರಬೇಕು. ಯಾವುದೇ ಅಭಿವೃದ್ಧಿ ಯೋಜನೆಗಳ ಮೊದಲು ಜನಹಿತದ ಪರಾಮಾರ್ಶೆ ನಡೆಸಬೇಕು. ತೂತುಕುಡಿಯು ಇಂಥದ್ದೊಂದು ಸಂದೇಶವನ್ನು ಮತ್ತೊಮ್ಮೆ ನಮ್ಮನ್ನಾಳುವವರಿಗೆ ಬ ಲವಾಗಿಯೇ ಮುಟ್ಟಿಸಿದೆ. ಒಂದು ವೇಳೆ, ಇಂಥ ಪರಾಮಾರ್ಶೆ ನಡೆಯದೇ ಹೋದರೆ ಏನಾಗಬಹುದೆಂಬುದಕ್ಕೆ ಎಂಡೋಸಲ್ಫಾನ್ ಸಂತ್ರಸ್ತರು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಉಜಿರೆಯಲ್ಲಿ ಇನ್ನೂ ಪ್ರಾರಂಭವಾಗದ ಎಂಡೋ ಪಾಲನಾ ಕೇಂದ್ರವು ಈ ಹಿನ್ನೆಲೆಯಲ್ಲಿ ಒಂದು ನಿಮಿತ್ತ ಮಾತ್ರ.

ಒಕ್ಕಲಿಗ+ಕುರುಬ+ಅಹಿಂದ ಸಮುದಾಯದ ಒಗ್ಗಟ್ಟಿಗೆ ವೇದಿಕೆ ಒದಗಿಸಿದರೇ ಯಡಿಯೂರಪ್ಪ?

     

       ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಮತ್ತು ಬಳಿಕದ ಬೆಳವಣಿಗೆಗಳು ಕಾಂಗ್ರೆಸ್‍ಗೆ ಅಂಟಿದ್ದ ‘ಅಧಿಕಾರ ದುರುಪಯೋಗ’ ಎಂಬ ಕಳಂಕವನ್ನು ಬಿಜೆಪಿಯ ಹಣೆಗೂ ಹಚ್ಚುವಲ್ಲಿ ಯಶಸ್ವಿಯಾಗಿದೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ನರಸಿಂಹರಾವ್‍ರ ಆಡಳಿತ ಕಾಲದಲ್ಲಿ ಕಾಂಗ್ರೆಸ್ ಅಧಿಕಾರ ದುರುಪಯೋಗ ನಡೆಸಿದ್ದನ್ನು ಬಿಜೆಪಿ ಈವರೆಗೂ ಹೇಳುತ್ತಾ ತಿರುಗುತ್ತಿತ್ತು. ಆದರೆ, ರಾಜ್ಯದಲ್ಲಿ ಯಾವಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೋ ಆಗಲೇ ಬಿಜೆಪಿಯ ಅಧಿಕಾರ ದುರುಪಯೋಗದ ಒಂದೊಂದೇ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾದುವು. ಈ ವರ್ಷದ ಆರಂಭದಲ್ಲಿ ಗೋವಾದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷವಾದ ಬಿಜೆಪಿಗೆ ಲಭ್ಯವಾದುದು ಬರೇ 13 ಸ್ಥಾನಗಳು. ಕಾಂಗ್ರೆಸ್‍ಗೆ 17 ಸ್ಥಾನಗಳು ಸಿಕ್ಕಿದ್ದುವು. ಕರ್ನಾಟಕದ ಮಾದರಿಯನ್ನು ಅನುಸರಿಸುವುದಾದರೆ ಗೋವಾದ ರಾಜ್ಯಪಾಲರು ಕಾಂಗ್ರೆಸ್ ಪಕ್ಷವನ್ನು ಸರಕಾರ ರಚಿಸುವಂತೆ ಆಹ್ವಾನಿಸಬೇಕಿತ್ತು. ಆದರೆ ಚುನಾವಣಾ ಫಲಿತಾಂಶದ ಬಳಿಕ ಮೈತ್ರಿಕೂಟ ರಚಿಸಿಕೊಂಡ ಬಿಜೆಪಿಗೆ ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನ ನೀಡಿದರು. ಮೇಘಾಲಯದಲ್ಲಿ ಬಿಜೆಪಿ ನಡೆಸಿದ ಅಧಿಕಾರ ದುರುಪಯೋಗವಂತೂ ಅತ್ಯಂತ ಆಘಾತಕಾರಿ. ಬರೇ ಎರಡು ಸ್ಥಾನಗಳನ್ನಷ್ಟೇ ಗೆದ್ದಿದ್ದ ಬಿಜೆಪಿ ಅಲ್ಲಿ ಸರಕಾರ ರಚಿಸಿತು. ಇಲ್ಲೂ ಕೂಡಾ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮಾಡಿಕೊಂಡ ಮೈತ್ರಿಕೂಟವನ್ನು ರಾಜ್ಯಪಾಲರು ಪುರಸ್ಕರಿಸಿದರು. 21 ಸ್ಥಾನಗಳನ್ನು ಗೆದ್ದುಕೊಂಡ ಕಾಂಗ್ರೆಸ್ ಇಲ್ಲಿ ಅತಿದೊಡ್ಡ ಪಕ್ಷವಾಗಿದ್ದರೂ ರಾಜ್ಯಪಾಲರು ಕಾಂಗ್ರೆಸನ್ನು ಕಡೆಗಣಿಸಿದರು. ಇದರ ಜೊತೆಗೇ ಮಣಿಪುರವನ್ನೂ ಪರಿಗಣಿಸುವುದಾದರೆ ಕೇವಲ ನಾಲ್ಕೇ ವರ್ಷಗಳ ಅವಧಿಯಲ್ಲಿ ಬಿಜೆಪಿ ನಡೆಸಿದ ಅಧಿಕಾರ ದುರುಪಯೋಗದ ವೃತ್ತಾಂತ ಎಷ್ಟು ದೊಡ್ಡದು ಅನ್ನುವುದು ಮನವರಿಕೆಯಾಗುತ್ತದೆ. ಮಣಿಪುರದಲ್ಲಿ ಇವತ್ತು ಅಧಿಕಾರ ನಡೆಸುತ್ತಿರುವುದು ಬಿಜೆಪಿ. ಆದರೆ, 28 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಇಲ್ಲಿ ಏಕೈಕ ದೊಡ್ಡ ಪಕ್ಷ. ಬಿಜೆಪಿಗೆ ಲಭ್ಯವಾಗಿರುವುದು 21 ಸ್ಥಾನಗಳು. ಆದರೆ ರಾಜ್ಯಪಾಲರು ದೊಡ್ಡ ಪಕ್ಷವಾದ ಕಾಂಗ್ರೆಸ್‍ನ ಬದಲು ಬಿಜೆಪಿಯನ್ನು ಸರಕಾರ ರಚಿಸುವಂತೆ ಆಹ್ವಾನಿಸಿದರು. ನಿಜವಾಗಿ, ಗೋವಾ, ಮಣಿಪುರ, ಮೇಘಾಲಯ ಮತ್ತು ಬಿಹಾರ ಈ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ನಡೆಸಿದ ಅಧಿಕಾರ ದುರುಪಯೋಗವನ್ನು ದೊಡ್ಡಮಟ್ಟದ ಚರ್ಚೆಯಾಗುವಂತೆ ಮಾರ್ಪಡಿಸಿದ್ದು ಕರ್ನಾಟಕದ ಬೆಳವಣಿಗೆ. ಒಂದು ವೇಳೆ, ಮೇಲಿನ ನಾಲ್ಕೂ ರಾಜ್ಯಗಳ ಮಾದರಿಯನ್ನೇ ಕರ್ನಾಟಕದಲ್ಲೂ ರಾಜ್ಯಪಾಲರು ಮಾನ್ಯ ಮಾಡಿರುತ್ತಿದ್ದರೆ ಬಿಜೆಪಿಯ ಪಾಲಿಗೆ ಇವತ್ತು ಎರಡು ರೀತಿಯ ಲಾಭಗಳಿದ್ದುವು. ಒಂದು- ಗೋವಾ, ಮಣಿಪುರ, ಮೇಘಾಲಯಗಳಲ್ಲಿ ಸರಕಾರ ರಚಿಸಿದ ಕ್ರಮವು ಅಧಿಕಾರ ದುರುಪಯೋಗವಾಗಿ ಗುರುತಿಸಿಕೊಳ್ಳುತ್ತಿರಲಿಲ್ಲ ಮತ್ತು ಅದು ಮಹತ್ವಪೂರ್ಣ ಸುದ್ದಿಯಾಗಿ ಚರ್ಚೆಗೊಳಗಾಗುತ್ತಿರಲಿಲ್ಲ. ಎರಡು- ಯಡಿಯೂರಪ್ಪರು ಸರಕಾರ ರಚಿಸುವುದಕ್ಕೆ ಮುಂದಾಗದೇ ಇರುತ್ತಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್‍ಗಳ ಮೈತ್ರಿಕೂಟ ಈಗಿನಷ್ಟು ಬಲಿಷ್ಠವಾಗುತ್ತಿರಲಿಲ್ಲ. ಯಾವಾಗ ಬಿಜೆಪಿ ರಾಜ್ಯದಲ್ಲಿ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡಿತೋ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ಬಲಿಷ್ಠವಾಗುತ್ತಾ ಹೋಯಿತು. ಮೋದಿ ಮತ್ತು ಅಮಿತ್‍ಷಾರ ಪ್ರತಿ ಹೇಳಿಕೆ ಮತ್ತು ನಡವಳಿಕೆಗಳು ಈ ಮೈತ್ರಿಕೂಟಕ್ಕೆ ಬಲವನ್ನು ತುಂಬುತ್ತಾಹೋಯಿತು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಆರಂಭದಲ್ಲಿ ದೇವೇಗೌಡ-ಪರಿವಾರದ ಬಯಕೆ ಮಾತ್ರವೇ ಆಗಿದ್ದರೆ, ಯಡಿಯೂರಪ್ಪರ ಪ್ರಮಾಣ ವಚನದ ಬಳಿಕ ಅದು ಕಾಂಗ್ರೆಸ್ ಮತ್ತು ಒಕ್ಕಲಿಗ ಸಮುದಾಯದ ಪ್ರತಿಷ್ಠೆಯಾಗಿ ಬದಲಾಯಿತು. ಎರಡೂವರೆ ದಿನಗಳು ಸಿಕ್ಕಿಯೂ ಜೆಡಿಎಸ್-ಕಾಂಗ್ರೆಸ್‍ನ ಒಬ್ಬನೇ ಒಬ್ಬ ಶಾಸಕನನ್ನೂ ತನ್ನೆಡೆಗೆ ಸೆಳೆಯಲು ಬಿಜೆಪಿ ವಿಫಲವಾದುದಕ್ಕೆ ಈ ಪ್ರತಿಷ್ಠೆಯ ಪ್ರಜ್ಞೆಯೇ ಬಹುಮುಖ್ಯ ಕಾರಣ. ಒಂದು ವೇಳೆ, ಬಿಜೆಪಿ ಸರಕಾರ ರಚಿಸುವ ಇಂಗಿತ ವ್ಯಕ್ತಪಡಿಸದೇ ಇರುತ್ತಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿಕೂಟ ತಕ್ಷಣದ ತೇಪೆಯಾಗಿರುತ್ತಿತ್ತೇ ಹೊರತು ಶಾಸಕರಲ್ಲಿ ಈ ಮಟ್ಟದ ಪP್ಷÀನಿಷ್ಠೆಯನ್ನು ಕಂಡುಕೊಳ್ಳಲು ಸಾಧ್ಯವಿರಲಿಲ್ಲ. ಬಹಳ ಬೇಗನೇ ದುರ್ಬಲವಾಗಿ ಬಿಡಬಹುದಾಗಿದ್ದ ಮೈತ್ರಿಕೂಟವೊಂದನ್ನು ಮೋದಿ ಮತ್ತು ಅಮಿತ್‍ಶಾ ಬಳಗ ತಮ್ಮ ಕೈಯಾರೆ ಬಲಿಷ್ಠಗೊಳಿಸಿದರು. ಮಾತ್ರವಲ್ಲ, ತಮ್ಮ ಈ ವರೆಗಿನ ಅಧಿಕಾರ ದುರುಪಯೋಗವು ರಾಷ್ಟ್ರೀಯ ಚರ್ಚೆಗೊಳಗಾಗುವಂತೆ ನೋಡಿಕೊಂಡಿದರು.
ಅಂದಹಾಗೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ಆಯುಷ್ಯ ಎಷ್ಟು ದಿನಗಳವರೆಗಿದೆ ಎಂದು ಹೇಳುವುದಕ್ಕೆ ಸದ್ಯ ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಪದ ಈ ಹಿಂದಿನ ವರ್ತನೆಯನ್ನು ಪರಿಗಣಿಸುವುದಾದರೆ, 5 ವರ್ಷಗಳ ಪೂರ್ಣಾವಧಿಗೆ ಈ ಮೈತ್ರಿಕೂಟ ಬಾಳುವುದನ್ನು ನಿರೀಕ್ಷಿಸಲಾಗದು. ಮೈತ್ರಿಕೂಟ ಸರಕಾರದ ಬಹುದೊಡ್ಡ ಸಮಸ್ಯೆಯೇ ಭಿನ್ನಾಭಿಪ್ರಾಯ. ಚುನಾವಣೆಯಲ್ಲಿ ಪರಸ್ಪರ ವೈರಿಗಳಂತೆ ಸೆಣಸಿದ ಎರಡು ಪಕ್ಷಗಳು ಆ ಬಳಿಕ ಮಿತ್ರರಾಗಿ ಬಾಳುವುದು ಸುಲಭವಲ್ಲ. ಅಲ್ಲದೇ ಶಾಸಕರಷ್ಟೇ ಮಿತ್ರರಾದರೆ ಸಾಲುವುದಿಲ್ಲ. ಎರಡೂ ಪಕ್ಪಗಳ ಕಾರ್ಯಕರ್ತರನ್ನೂ ಈ ಮಿತ್ರತ್ವದಲ್ಲಿ ಬಂಧಿಸಬೇಕು. ಸೈದ್ಧಾಂತಿಕ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅಧಿಕಾರ ಹಂಚಿಕೆಯಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ. ಇದು ಹೇಳಿದಷ್ಟು ಸುಲಭವಲ್ಲ. ಅತೃಪ್ತಿ, ಅಸಮಾಧಾನ, ಬಂಡಾಯಗಳಿಗೆ ಸದಾ ಬಾಗಿಲು ತೆರೆದೇ ಇರುವುದು ಮೈತ್ರಿಕೂಟ ಸರಕಾರದ ಬಹುದೊಡ್ಡ ದೌರ್ಬಲ್ಯ. ಅಲ್ಲದೇ, ರಾಜ್ಯದಲ್ಲಿ ಅಧಿಕಾರ ವಂಚಿತ ಬಿಜೆಪಿಯೂ ಇನ್ನೊಂದು ಕಡೆ ಇದೆ. ಅದು ಅತೃಪ್ತ ಶಾಸಕರನ್ನು ತನ್ನೆಡೆಗೆ ಸೆಳೆಯುವುದಕ್ಕೆ ಸಕಲ ಪ್ರಯತ್ನವನ್ನೂ ಖಂಡಿತ ಮಾಡಲಿದೆ. ಬಿಜೆಪಿಯ ಅಧಿಕಾರ ದುರುಪಯೋಗವನ್ನು ತಡೆಯಲು ನಿರೀಕ್ಷೆಗಿಂತಲೂ ಮೀರಿ ಒಂದಾದ ಈ ಎರಡೂ ಪಕ್ಷಗಳ ಶಾಸಕರು ಮುಂದೆಯೂ ಇದೇ ಬದ್ಧತೆಯನ್ನು ತೋರ್ಪಡಿಸುವರು ಎಂದು ನಿರೀಕ್ಷಿಸುವ ಹಾಗಿಲ್ಲ. ಆದರೂ, ಕರ್ನಾಟಕದಲ್ಲಿ ಬಿಜೆಪಿಯ ನಡವಳಿಕೆಯು ಮುಂದಿನ ದಿನಗಳಲ್ಲಿ ಹೊಸ ಜಾತಿ ಸಮೀಕರಣವೊಂದನ್ನು ಹುಟ್ಟು ಹಾಕುವ ಎಲ್ಲ ಸಾಧ್ಯತೆಯನ್ನೂ ತೆರೆದಿಟ್ಟಿದೆ. ಬಹುಮತವಿದ್ದೂ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗದಂತೆ ತಡೆದ ಬಿಜೆಪಿಯ ಕ್ರಮವು ಮುಂದಿನ ದಿನಗಳಲ್ಲಿ ಒಕ್ಕಲಿಗ ಸ್ವಾಭಿಮಾನವನ್ನು ಕೆಣಕಿದ ಪ್ರಸಂಗವಾಗಿ ಗುರುತಿಸಿಕೊಳ್ಳಲೂ ಬಹುದು. ಲಿಂಗಾಯತ ಯಡಿಯೂರಪ್ಪರು ಒಕ್ಕಲಿಗ ಕುಮಾರಸ್ವಾಮಿಗೆ ಮೋಸ ಮಾಡಿದರು ಎಂಬ ಭಾವನೆಯೊಂದು ಆ ಸಮುದಾಯದಲ್ಲಿ ಬೆಳೆದುಬಿಟ್ಟರೆ ಅದು ಮುಂದಿನ ದಿನಗಳಲ್ಲಿ ಜೆಡಿಎಸ್‍ನ ಒಕ್ಕಲಿಗ ಮತ್ತು ಕಾಂಗ್ರೆಸ್‍ನ ಅಹಿಂದ-ಕುರುಬ ಸಮುದಾಯದ ಒಗ್ಗಟ್ಟಿಗೆ ಕಾರಣವಾಗಲೂಬಹುದು. ಹೀಗಾದರೆ ಬಿಜೆಪಿಯು ಕೇವಲ ಲಿಂಗಾಯತ ಸಮುದಾಯವೊಂದನ್ನೇ ಆಶ್ರಯಿಸಬೇಕಾಗಬಹುದು. ಬಿಜೆಪಿಯು ಒಕ್ಕಲಿಗ, ಕುರುಬ ಮತ್ತು ಅಹಿಂದ ವರ್ಗಕ್ಕೆ ಮೋಸ ಮಾಡಿದೆ ಎಂಬ ಘೋಷಣೆಯೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗಳು ಜನರ ಬಳಿಗೆ ಒಟ್ಟಾಗಿ ತೆರಳಿದರೆ ಅದು ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾಗಲೂಬಹುದು.
    ಒಂದು ರೀತಿಯಲ್ಲಿ, ಯಡಿಯೂರಪ್ಪರನ್ನು ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸಿದ್ದು, ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಮತ್ತು ಬರೇ ಎರಡೂವರೆ ದಿನಗಳೊಳಗೆ ರಾಜೀನಾಮೆ ನೀಡಿದ್ದು ಎಲ್ಲವೂ ರಾಜಕೀಯವಾಗಿ ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಗಿಯೇ ಕಾಣಿಸುತ್ತದೆ. ಮೋದಿ-ಅಮಿತ್‍ಶಾ ಬಳಗವು ಅಜೇಯವಲ್ಲ ಎಂಬುದು ಗುಜರಾತ್‍ನಲ್ಲಿ ಸಾಬೀತಾದ ಬಳಿಕದ ಬೆಳವಣಿಗೆ ಎಂಬ ನಿಟ್ಟಿನಲ್ಲೂ ಕರ್ನಾಟಕವು ಮುಖ್ಯವಾಗುತ್ತದೆ. ಮೋದಿ ಮತ್ತು ಶಾರನ್ನು ಮಣಿಸಬಹುದು ಎಂಬುದು ಕರ್ನಾಟಕದಲ್ಲಿ ಸಾಬೀತಾಗಿದೆ. ಇದು ಕಾಂಗ್ರೆಸ್‍ನ ಆತ್ಮವಿಶ್ವಾಸವನ್ನು ಮಾತ್ರ ಹೆಚ್ಚಿಸಿರುವುದಲ್ಲ. ರಾಷ್ಟ್ರಮಟ್ಟದಲ್ಲಿ ಹಲವು ಪ್ರಾದೇಶಿಕ ಪಕ್ಷಗಳಲ್ಲೂ ಧೈರ್ಯವನ್ನು ಹುಟ್ಟಿಸಿದೆ. ರಜನಿಕಾಂತ್, ಕಮಲ್ ಹಾಸನ್, ಚಂದ್ರಬಾಬು ನಾಯ್ಡು, ಚಂದ್ರಶೇಖರ್ ರಾವ್, ಮಮತಾ ಬ್ಯಾನರ್ಜಿ, ಮಾಯಾವತಿ, ಅಖಿಲೇಶ್ ಸಹಿತ ವಿವಿಧ ನಾಯಕರು ಕರ್ನಾಟಕದ ಮೈತ್ರಿಕೂಟವನ್ನು ಬೆಂಬಲಿಸಿದ್ದು ಬದಲಾದ ಈ ರಾಜಕೀಯ ವಾತಾವರಣವನ್ನು ಸ್ಪಷ್ಟಪಡಿಸುತ್ತದೆ. ಬಹುಶಃ, 2019ರ ಲೋಕಸಭಾ ಚುನಾವಣೆಯ ವೇಳೆ ಮೋದಿಯವರು ಕಠಿಣ ಸವಾಲನ್ನು ಎದುರಿಸಬೇಕಾದೀತು ಎಂಬುದನ್ನು ಈ ಎಲ್ಲ ಬೆಳವಣಿಗೆಗಳು ಸೂಚಿಸುತ್ತವೆ.

ಎರಡನೇ ಬಾರಿ ಬೆತ್ತಲೆಯಾದ ಉಡುಪಿ

 
  ಉಡುಪಿ ಜಿಲ್ಲೆ  ಮತ್ತೊಮ್ಮೆ ಬೆತ್ತಲಾಗಿದೆ. ದನದ ವ್ಯಾಪಾರ ಮಾಡುತ್ತಿದ್ದ ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗನನ್ನು 2005, ಎಪ್ರಿಲ್‍ನಲ್ಲಿ ನಡುಬೀದಿಯಲ್ಲಿ ಬೆತ್ತಲೆಗೊಳಿಸಿ ಪೆರೇಡ್ ನಡೆಸಿ ರಾಷ್ಟ್ರಮಟ್ಟದಲ್ಲಿ ಅವಮಾನಕ್ಕೆ ಗುರಿಯಾಗಿದ್ದ ಜಿಲ್ಲೆಯು ಇದೀಗ ಎರಡನೇ ಬಾರಿ ಅವಮಾನದಿಂದ ತಲೆ ತಗ್ಗಿಸಿ ನಿಂತಿದೆ. ಈ ಅವಮಾನಕ್ಕೆ ಮುಖ್ಯ ಕಾರಣ ಪೊಲೀಸ್ ವ್ಯವಸ್ಥೆ. 62 ವರ್ಷದ ಹುಸೇನಬ್ಬ ಎಂಬ ದನದ ವ್ಯಾಪಾರಿಯನ್ನು ಹತ್ಯೆಗೈಯಲು ಸಂಘಪರಿವಾರದ ದುಷ್ಕರ್ಮಿಗಳೊಂದಿಗೆ ಸಹಕರಿಸಿ, ಕೊನೆಗೆ ಪ್ರಕರಣವನ್ನು ಮುಚ್ಚಿ ಹಾಕಲು ಶ್ರಮಿಸಿದ ಆರೋಪ ಹಿರಿಯಡ್ಕ ಪೊಲೀಸ್ ಠಾಣೆಯ ಎಸ್‍ಐ ಡಿ.ಎನ್. ಕುಮಾರ್, ಹೆಡ್ ಕಾನ್‍ಸ್ಟೇಬಲ್ ಮೋಹನ್ ಕೊತ್ವಾಲ್ ಮತ್ತು ಪೊಲೀಸ್ ಪೇದೆ ಗೋಪಾಲ್‍ರ ಮೇಲಿದೆ. ಒಂದು ವೇಳೆ, ಉಡುಪಿ ಜಿಲ್ಲಾ ಎಸ್.ಪಿ. ಲಕ್ಷ್ಮಣ್ ನಿಂಬರಗಿಯವರು ತನಿಖೆಯನ್ನು ಕೈಗೆತ್ತಿಕೊಳ್ಳದೇ ಇರುತ್ತಿದ್ದರೆ ಈ ಮೂವರು ಬಂಧನಕ್ಕೊಳಗಾಗುವ ಸಾಧ್ಯತೆ ತೀರಾ ಕಡಿಮೆಯಿತ್ತು ಮತ್ತು ಸಂಘಪರಿವಾರದ ದುಷ್ಕರ್ಮಿಗಳು ಬಂಧನದಿಂದ ತಪ್ಪಿಸಿಕೊಂಡು ಇನ್ನೊಂದು ಹತ್ಯೆಗೆ ಸ್ಕೆಚ್ ಹಾಕುತ್ತಿದ್ದರು. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೊಂದಿದೆ. ಅದುವೇ ಜಿಲ್ಲಾ  ಎಸ್.ಪಿ. ಲಕ್ಷ್ಮಣ್ ನಿಂಬರಗಿ. ಅವರ ಮುಂದೆ ಎರಡು ಅವಕಾಶಗಳಿದ್ದುವು. ಒಂದು- ಹಿರಿಯಡ್ಕ ಪೊಲೀಸು ಠಾಣೆಯ ಎಸ್‍ಐ ಡಿ.ಎನ್. ಕುಮಾರ್ ದಾಖಲಿಸಿರುವಂತೆ ಹುಸೇನಬ್ಬರ ಸಾವನ್ನು ಅಸಹಜವೆಂದು ಪರಿಗಣಿಸಿ ಅವರದೇ ನೇತೃತ್ವದಲ್ಲಿ ತನಿಖೆಯನ್ನು ಮುಂದುವರಿಸುವಂತೆ ಹೇಳುವುದು. ಇನ್ನೊಂದು- ಸ್ವತಃ ಆ ಪ್ರಕರಣದ ತನಿಖೆಯ ನೇತೃತ್ವವನ್ನು ವಹಿಸಿಕೊಳ್ಳುವುದು. ಮೊದಲನೆಯದು ತೀರಾ ಸುಲಭ ಮತ್ತು ಸಹಜ ಆಯ್ಕೆ. ಎರಡನೆಯದು ತೀರಾ ಕಠಿಣ ಮತ್ತು ಸವಾಲಿನದ್ದು. ಲಕ್ಷ್ಮಣ್ ನಿಂಬರಗಿಯವರು ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಮಾತ್ರವಲ್ಲ, ತಾನು ಆಗಾಗ ಭೇಟಿಯಾಗುತ್ತಲೇ ಇರುವ ತನ್ನ ಕೈ ಕೆಳಗಿನ ಎಸ್‍ಐ ಡಿ.ಎನ್. ಕುಮಾರ್ ಸಹಿತ ಪೊಲೀಸ್ ಅಧಿಕಾರಿಗಳಿಗೇ ಮುಖಾಮುಖಿಯಾದರು. ಇದೊಂದು ಕಠಿಣ ಸವಾಲು. ತನ್ನ ಸಹೋದ್ಯೋಗಿಗಳನ್ನೇ ಅನುಮಾನದ ಮೊನೆಯನ್ನಿಟ್ಟು ವಿಚಾರಿಸುವುದು ಸುಲಭದ ಸವಾಲಲ್ಲ. ಅಪರಿಚಿತರನ್ನು ವಿಚಾರಣೆಗೆ ಒಳಪಡಿಸುವುದಕ್ಕೂ ಸಹೋದ್ಯೋಗಿಗಳನ್ನೇ ವಿಚಾರಣೆಗೆ ಒಳಪಡಿಸುವುದಕ್ಕೂ ಸಾಕಷ್ಟು ಅಂತರವಿದೆ. ಇಂಥ ಸಂದರ್ಭದಲ್ಲಿ ಸ್ನೇಹ, ಪ್ರೀತಿ, ಉಪಕಾರ ಭಾವ ಇತ್ಯಾದಿ ಇತ್ಯಾದಿಗಳು ಸಹಜವಾಗಿ ಅಡ್ಡ ಬರುತ್ತವೆ. ಇಂಥ ಮುಲಾಜುಗಳನ್ನು ಮೀರಿ ನ್ಯಾಯದ ಪರ ನಿಲ್ಲುವುದಕ್ಕೆ ಅಸಾಧಾರಣ ಧೈರ್ಯ ಬೇಕಾಗುತ್ತದೆ. ಲಕ್ಷ್ಮಣ್ ನಿಂಬರಗಿಯವರು ಗೌರವಾರ್ಹರಾಗುವುದು ಈ ಕಾರಣಕ್ಕೆ. ಅವರು ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಹುಸೇನಬ್ಬರ ಹತ್ಯೆಗೆ ದುಷ್ಕರ್ಮಿಗಳೊಂದಿಗೆ ಪೊಲೀಸರೇ ಕೈ ಜೋಡಿಸಿರುವುದು ಪತ್ತೆಯಾಯಿತು. ಅವರು ಅದನ್ನು ಪತ್ರಿಕಾಗೋಷ್ಠಿ ಕರೆದು ಎಲ್ಲರೆದುರು ಹೇಳುವ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದರು. ತನ್ನದೇ ಸಹೋದ್ಯೋಗಿಗಳನ್ನು ಬಂಧಿಸಿದರು. ನಿಜವಾಗಿ, ಉಡುಪಿಯು ಅವಮಾನಕ್ಕೆ ಒಳಗಾಗುವುದು ಇದು ಮೊದಲಲ್ಲ. 2005 ಎಪ್ರಿಲ್‍ನಲ್ಲಿ ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗನನ್ನು ನಡುಬೀದಿಯಲ್ಲಿ ಬೆತ್ತಲೆಗೊಳಿಸಿ ಪೆರೇಡ್ ನಡೆಸಿದ ಪ್ರಕರಣ ನಡೆದಿತ್ತು. ಬಹುಶಃ ದನಸಾಗಾಟದ ಹೆಸರಲ್ಲಿ ಜಿಲ್ಲೆಯಲ್ಲಿ ನಡೆದ ಮೊದಲ ವಿಕೃತಿ ಇದು. ವಿಧಾನಸಭೆಯಲ್ಲೂ ಈ ವಿಕೃತಿ ಚರ್ಚೆಗೀಡಾಗಿತ್ತು. ಬೆತ್ತಲೆಗೊಂಡ ತಂದೆ ಮತ್ತು ಮಗನನ್ನು ಮಾಧ್ಯಮಗಳು ಮುಖಪುಟದಲ್ಲಿಟ್ಟು ಗೌರವಿಸಿದ್ದುವು. ವಿಷಾದ ಏನೆಂದರೆ, 2008ರ ಜುಲೈನಲ್ಲಿ ಈ ಪ್ರಕರಣದ ಎಲ್ಲ 13 ಆರೋಪಿಗಳನ್ನೂ ತ್ವರಿತಗತಿ ನ್ಯಾಯಾಲಯವು ಬಿಡುಗಡೆಗೊಳಿಸಿತ್ತು. ಸಾಕ್ಷ್ಯಾಧಾರದ ಕೊರತೆಯನ್ನು ಇದಕ್ಕೆ ಕಾರಣವಾಗಿ ನೀಡಲಾಗಿತ್ತು. ಬೆತ್ತಲೆ ಚಿತ್ರದ ನೆಗೆಟಿವ್ ಅನ್ನು ಕೋರ್ಟಿಗೆ ಸಲ್ಲಿಸಲು ಇಲಾಖೆ ವಿಫಲವಾಗಿರುವುದು ಅತಿದೊಡ್ಡ ವೈಫಲ್ಯವಾಗಿ ಎತ್ತಿ ಹೇಳಲಾಗಿತ್ತು. ಇದಕ್ಕಿಂತಲೂ ಅಚ್ಚರಿ ಏನೆಂದರೆ, ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಕೃತ್ಯದ ಪ್ರಮುಖ ರೂವಾರಿಯೆಂದು ಹೆಸರಿಸಲಾಗಿದ್ದ ಆರೋಪಿ ಯಶ್ಪಾಲ್ ಸುವರ್ಣನನ್ನು ಆಗಿನ ಬಿಜೆಪಿ-ಜೆಡಿಎಸ್ ಸರಕಾರವು ಜಿಲ್ಲಾ ಪಟ್ಟಣ ಪಂಚಾಯತ್‍ನ ಸದಸ್ಯನಾಗಿ ನೇಮಕ ಮಾಡಿ ಗೌರವಿಸಿತ್ತು. ಮಾತ್ರವಲ್ಲ, ದೋಷಮುಕ್ತಗೊಂಡ ಆರೋಪಿಗಳನ್ನು ಕೋರ್ಟ್ ಆವರಣದಿಂದ ಗಾಂಧಿ ಚೌಕದವರೆಗೆ ಹಿಂದೂ ಯುವಸೇನೆಯ ಕಾರ್ಯಕರ್ತರು ಮೆರವಣಿಗೆಯಲ್ಲಿ ಕೊಂಡೊಯ್ದು ಸಂಭ್ರಮ ವ್ಯಕ್ತಪಡಿಸಿದ್ದರು. ಅಂದಹಾಗೆ,
     ಶೈಕ್ಪಣಿಕ ಸಾಧನೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಸದಾ ಮುಂಚೂಣಿಯಲ್ಲಿರುತ್ತವೆ. ಮೊದಲ ಎರಡ್ಮೂರು ಸ್ಥಾನಗಳಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಗಳಿವು. ಶೈಕ್ಷಣಿಕವಾಗಿ ಇಷ್ಟೊಂದು ಅಭಿವೃದ್ಧಿ ಹೊಂದಿರುವ ಜಿಲ್ಲೆಯು ವೈಚಾರಿಕವಾಗಿ ಈ ಬಗೆಯ ಕಟು ಬರ್ಬರತೆಯನ್ನು ಪ್ರದರ್ಶಿಸುತ್ತಿರುವುದು ಯಾಕಾಗಿ? ಇದಕ್ಕೆ ದನದ ಮೇಲಿನ ಪ್ರೀತಿ ಕಾರಣವೋ ಅಥವಾ ಮುಸ್ಲಿಮರ ಮೇಲಿನ ದ್ವೇಷ ಕಾರಣವೋ? ನಿರ್ದಿಷ್ಟವಾಗಿ ಮುಸ್ಲಿಮರನ್ನೇ ಯಾಕೆ ದ್ವೇಷಿಸಬೇಕು? ಹಾಗೆ ದ್ವೇಷಿಸಬೇಕೆಂದು ಹೇಳಿ ಕೊಡುವವರು ಯಾರು? ಅವರ ಉದ್ದೇಶವೇನು? ಮುಸ್ಲಿಮರು ದನ ಸಾಗಾಟದಲ್ಲಿ ಭಾಗಿಯಾಗುತ್ತಾರೆ ಅನ್ನುವುದು ಅವರನ್ನು ದ್ವೇಷಿಸುವುದಕ್ಕೆ ಮುಖ್ಯ ಕಾರಣವೇ? ಹಾಗಿದ್ದರೆ ಈ ದ್ವೇಷ ಮುಸ್ಲಿಮರಿಗಿಂತಲೂ ಹೆಚ್ಚು ಈ ವ್ಯವಸ್ಥೆಯ ಮೇಲೆ ಆಗಬೇಕಲ್ಲವೇ? ಮುಸ್ಲಿಮ್ ವ್ಯಾಪಾರಿಗಳಿಗೆ ದನಮಾರಾಟ ಮಾಡುವುದು ಮುಸ್ಲಿಮರಲ್ಲ. ಕಸಾಯಿಖಾನೆಗಳನ್ನು ಏಲಂ ಮಾಡಿ ಹಂಚುವುದು ಮುಸ್ಲಿಮರಲ್ಲ. ಬೃಹತ್ ಕಸಾಯಿಖಾನೆಗಳನ್ನು ಸ್ಥಾಪಿಸಿ ದನದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವುದೂ ಮುಸ್ಲಿಮರಲ್ಲ. ಈ ಎಲ್ಲ ಪ್ರಕ್ರಿಯೆಗಳಲ್ಲಿ ಮುಸ್ಲಿಮರ ಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ. ಆದರೆ ದನ ಮಾರಾಟ ಮಾಡುವ ಮಾಲಿಕನನ್ನಾಗಲಿ, ಕಸಾಯಿಖಾನೆಗೆ ಪರವಾನಿಗೆ ಕೊಡುವ ಮತ್ತು ಏಲಂ ಮಾಡಿ ಹಂಚುವ ಅಧಿಕಾರಿಗಳನ್ನಾಗಲಿ ಮತ್ತು ವಿದೇಶಕ್ಕೆ ದನದ ಮಾಂಸವನ್ನು ರಫ್ತು ಮಾಡಲು ಕಾನೂನು-ಕಾಯ್ದೆಗಳನ್ನು ರೂಪಿಸುವ ಜನಪ್ರತಿನಿಧಿಗಳನ್ನಾಗಲಿ ಸ್ವಲ್ಪವೂ ದ್ವೇಷಿಸದೇ ಮತ್ತು ಅವರ ವಿರುದ್ಧ ಮಾತನ್ನೇ ಆಡದೇ ಕೇವಲ ದನವನ್ನು ಸಾಗಾಟ ಮಾಡುವಂಥ ಜುಜುಬಿ ಹೊಟ್ಟೆಪಾಡಿನ ಕೆಲಸದಲ್ಲಿ ತೊಡಗಿರುವ ಬಡಪಾಯಿ ಮುಸ್ಲಿಮರ ಮೇಲೆ ಈ ಪರಿಯ ದ್ವೇಷವೇಕೆ? ಈ ದ್ವೇಷವನ್ನು ದನದ ಮೇಲಿನ ಪ್ರೀತಿಯಿಂದ ಹುಟ್ಟಿಕೊಂಡಿರುವ ದ್ವೇಷ ಎಂದು ಹೇಗೆ ಹೇಳುವುದು? ಯಾಕೆ ದನವನ್ನು ಮಾರಾಟ ಮಾಡುವವರ
ಹತ್ಯೆ ನಡೆಯುವುದಿಲ್ಲ? ಕಸಾಯಿಖಾನೆಯನ್ನು ನಿರ್ವಹಿಸುವವರು ಮತ್ತು ಏಲಂ ಮಾಡುವವರ ಹತ್ಯೆ ನಡೆಯುವುದಿಲ್ಲ? ವಿದೇಶಕ್ಕೆ ಮಾಂಸ ರಫ್ತು ಮಾಡಲು ಅವಕಾಶ ತೆರೆದಿಟ್ಟಿರುವ ಜನಪ್ರತಿನಿಧಿಗಳ ಮೇಲೆ ಯಾಕೆ ದ್ವೇಷ ಸಾಧಿಸುವುದಿಲ್ಲ? ಇದೇನನ್ನು ಸೂಚಿಸುತ್ತದೆ? ನಿಜಕ್ಕೂ, ಮುಸ್ಲಿಮರನ್ನು ಹುಡುಕಿ ಹುಡುಕಿ ಥಳಿಸುವ ಗುಂಪನ್ನು ಆಳುತ್ತಿರುವುದು ಯಾವ ವಿಚಾರಧಾರೆ? ಆ ಗುಂಪಿಗೆ ಯಾವ ವಿಷವನ್ನು ಚುಚ್ಚಲಾಗಿದೆ? ಅಂದಹಾಗೆ,
     ಮುಸ್ಲಿಮರನ್ನು ಥಳಿಸಿ ಕೊಲ್ಲುವುದರಿಂದ ಅಥವಾ ಬೆತ್ತಲೆಗೊಳಿಸಿ ಅವಮಾನಿಸುವುದರಿಂದ ಗೋವುಗಳ ರಕ್ಪಣೆ ಸಾಧ್ಯವೇ? ಗೋವುಗಳ ಅಸುರಕ್ಷಿತತೆಗೆ ಮುಸ್ಲಿಮರು ನಿಜವಾಗಿಯೂ ಅಡ್ಡಿಯೇ? ಈ ದೇಶದ 70% ಮಂದಿ ಮಾಂಸಪ್ರಿಯರು ಎಂಬ ಕಟು ಸತ್ಯ ಎದುರಿಗಿದ್ದೂ ಮತ್ತು ಗೋಹತ್ಯೆ ನಿಷೇಧದ ಬಗ್ಗೆ ಮಾತಾಡುವ ಬಿಜೆಪಿಯೇ ಗೋಮಾಂಸವನ್ನು ಸಹಜ ಆಹಾರವೆಂದು ಒಪ್ಪಿಕೊಂಡು ವಿದೇಶಕ್ಕೆ ರಫ್ತು ಮಾಡುತ್ತಿರುವುದರ ಹೊರತಾಗಿಯೂ ದನಸಾಗಾಟದ ವಾಹನವನ್ನು ತಡೆದು ಥಳಿಸುವುದನ್ನು ಗೋಸಂರಕ್ಪಣೆಯ ಭಾಗವೆಂದು ನಂಬುವವರಿದ್ದಾರೆಂಬುದನ್ನು ಒಪ್ಪಿಕೊಳ್ಳಬಹುದೇ? ನಿಜಕ್ಕೂ ಇವರ ಉದ್ದೇಶ ಗೋಸಂರಕ್ಪಣೆಯೋ ಅಥವಾ ಮುಸ್ಲಿಮ್ ದ್ವೇಷವೋ? ವಾಹನಗಳಲ್ಲಿ ಸಾಗಾಟವಾಗುವ ಜುಜುಬಿ ಸಂಖ್ಯೆಯ ಜಾನುವಾರುಗಳನ್ನು ತಡೆಯುವುದರಿಂದ ಗೋಸಂಕುಲಗಳ ರಕ್ಪಣೆಯಾಗುತ್ತದೆಂಬ ಮುಗ್ಧ ಭಾವನೆ ಈ ದುಷ್ಕರ್ಮಿಗಳದ್ದೇ? ಯಾರು ಈ ಕ್ರೌರ್ಯದ ಹಿಂದಿದ್ದಾರೆ? ಅವರನ್ನೇಕೆ ಈ ಸಮಾಜ ಇನ್ನೂ ಗೌರವಿಸುತ್ತಿದೆ?
     ಲಕ್ಷ್ಮ ಣ್ ನಿಂಬರಗಿಯವರನ್ನು ಶ್ಲಾಘಿಸುತ್ತಲೇ ಗೋಸಂರಕ್ಪಣೆಯ ಹೆಸರಲ್ಲಿ ನಡೆಯುತ್ತಿರುವ ಏಕಮುಖ ಕ್ರೌರ್ಯದ ಅಪಾಯಗಳನ್ನು ಸಮಾಜದ ಎದೆಗೆ ಮುಟ್ಟಿಸಬೇಕಾಗಿದೆ.


Thursday, 17 May 2018

ಶ್ರೀಜಿತ್ ಕಳೆದ 770 ದಿನಗಳು ಮತ್ತು…



   `ಏಕ ವ್ಯಕ್ತಿ ಪ್ರತಿಭಟನೆ’ಯಾಗಿ ಗುರುತಿಸಿಕೊಂಡು ಕೇರಳದ ಹೊರಗೂ ಗಮನ ಸೆಳೆದಿದ್ದ ಶ್ರೀಜಿತ್ ಎಂಬ ಯುವಕನ ಸತ್ಯಾಗ್ರಹಕ್ಕೆ ಕೊನೆಗೂ ಜಯಲಭಿಸಿದೆ. ಆದರೆ ಈ ಜಯವನ್ನು ಆಚರಿಸಬೇಕಿರುವ ಶ್ರೀಜಿತ್ ಕಳೆದ 770 ದಿನಗಳ ಸತ್ಯಾಗ್ರಹದಿಂದ ಬಸವಳಿದಿದ್ದಾನೆ. ದೇಹ ಕೃಶವಾಗಿದೆ. ಕೆನ್ನೆ ಗುಳಿ ಬಿದ್ದಿದೆ. ತನ್ನ ಬೇಡಿಕೆಯನ್ನು ಈಡೇರಿಸಿ ಕೇಂದ್ರ ಸರಕಾರ ಕಳುಹಿಸಿದ ಪತ್ರವನ್ನು ಕೇರಳ ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯಿಂದ ಪಡಕೊಂಡು ನಕ್ಕಾಗಲೂ ಕಳೆಗುಂದಿದ ವಾತಾವರಣವೊಂದು ಅಲ್ಲಿತ್ತು. ಇದಕ್ಕಾಗಿ 770 ದಿನಗಳ ವರೆಗೆ ಯಾಕೆ ಸತಾಯಿಸಿದಿರಿ ಅನ್ನುವ ಪ್ರಶ್ನೆಯೊಂದನ್ನು ಶ್ರೀಜಿತ್ ಮೌನವಾಗಿ ಈ ವ್ಯವಸ್ಥೆಯ ಮುಂದಿಟ್ಟಿದ್ದ. ಹಾಗಂತ, ಶ್ರೀಜಿತ್ ಈ ವ್ಯವಸ್ಥೆಯ ಮುಂದಿಟ್ಟಿದ್ದ ಬೇಡಿಕೆ ಸ್ವಹಿತಾಸಕ್ತಿಯದ್ದೋ ಆರ್ಥಿಕವಾಗಿ ಲಾಭಕರವಾದದ್ದೋ ಆಗಿರಲಿಲ್ಲ. ಕೇರಳ ಪೋಲೀಸ್ ಕಂಪ್ಲೆಂಟ್ ಅಥಾರಿಟಿಯು (ಕೆಪಿಸಿಎ) ಗಂಭೀರ ದೋಷಾರೋಪಣೆ ಹೊರಿಸಿದ ಪ್ರಕರಣವೊಂದರ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂಬುದು ಆತನ ಬೇಡಿಕೆಯಾಗಿತ್ತು. 2014 ಮೇ 21ರಂದು ಶ್ರೀಜಿತ್‍ನ ಅಣ್ಣ ಶ್ರೀವಿಜಿಯ ಸಾವು ಸಂಭವಿಸುತ್ತದೆ. ಪೋಲೀಸ್ ಕಸ್ಟಡಿಯಲ್ಲಿದ್ದಾಗಲೇ ನಡೆದ ಈ ಸಾವಿಗೆ ವಿಷ ¸ ಸೇವನೆಯೇ ಕಾರಣ ಎಂದು ಇಲಾಖೆ ಸ್ಪಷ್ಟಣೆಯನ್ನು ನೀಡುತ್ತದೆ. ಲುಂಗಿಯಲ್ಲಿ ಆತ ವಿಷ ಪದಾರ್ಥವನ್ನು ಅಡಗಿಸಿಟ್ಟಿದ್ದ ಎಂಬ ¸ ಸಮರ್ಥನೆಯನ್ನೂ ಕೊಡುತ್ತದೆ. ಮೊಬೈಲ್ ಕಳ್ಳತನದ ಸಾಮಾನ್ಯ ಆರೋಪವನ್ನು ಹೊತ್ತುಕೊಂಡ ವ್ಯಕ್ತಿಯೋರ್ವ ವಿಷ ಸೇವನೆ ಯಂಥ ಅ ಸಾಮಾನ್ಯ ಕ್ರಮಕ್ಕೆ ಧೈರ್ಯ ಮಾಡಬಲ್ಲನೇ, ಅದಕ್ಕಾಗಿ ವಿಷ ಸಂಗ್ರಹಿಸಿ ಇಟ್ಟುಕೊಳ್ಳಬಲ್ಲನೇ ಅನ್ನುವ ಪ್ರಶ್ನೆ ಶ್ರೀಜಿತ್‍ನಂತೆಯೇ ಹಲವರನ್ನು ಆ ಸಂದರ್ಭದಲ್ಲಿ ಕಾಡಿತ್ತು. ಆದರೆ ಪೋಲೀಸ್ ತನಿಖೆಯಲ್ಲಿ ಈ ಪ್ರಶ್ನೆಗೆ ಯಾವ ಮಹತ್ವವೂ ಲಭಿಸಿರಲಿಲ್ಲ. ‘ಸ್ವಯಂಪ್ರೇರಿತವಾಗಿ ವಿಷ ¸ ಸೇವಿಸಿರು ವುದೇ ಸಾವಿಗೆ ಕಾರಣ’ ಎಂದು ಅದು ಷರಾ ಬರೆದಿತ್ತು. ಅಲ್ಲದೇ, ಆತನದ್ದೆಂದು ಹೇಳಲಾದ ಡೆತ್ ನೋಟನ್ನು ಪೋಲೀಸ್ ತನ ಖೆಯಲ್ಲಿ ಪುರಾವೆಯಾಗಿ ಎತ್ತಿ ಹೇಳಲಾಗಿತ್ತು. ಒಂದು ರೀತಿಯಲ್ಲಿ, ಆತ್ಮಹತ್ಯೆ ಪ್ರಕರಣವಾಗಿ ಬಹುತೇಕ ಮುಗಿದು ಹೋಗಿದ್ದ ಪ್ರಕರಣಕ್ಕೆ ಮತ್ತೆ ಜೀವ ತುಂಬಿದ್ದು 2016ರಲ್ಲಿ ನಡೆದ ಕೇರಳ ಪೋಲೀಸ್ ಕಂಪ್ಲೇಂಟ್ ಅಥಾರಿಟಿಯ (ಕೆ.ಪಿ.ಸಿ.ಎ.) ತನಿಖೆ. ಅದು ಶ್ರೀವಿಜಿಯ ಸಾವನ್ನು ಕಸ್ಟಡಿ ಸಾವು ಎಂದು ಘೋಷಿಸಿತು. ಪಾರಶ್ಶಾಲ ಪೋಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಗೋಪಕುಮಾರ್ ಮತ್ತು ಎಎಸ್‍ಐ ಪಿಲಿಪ್ಪೋಸ್ ಎಂಬಿಬ್ಬರು ಶ್ರೀವಿಜಿಗೆ ಚಿತ್ರಹಿಂಸೆಯನ್ನು ನೀಡಿ, ಬಲವಂತದಿಂದ ವಿಷ ತಿನ್ನಿಸಿರುವರೆಂದು ಅದು ಕಂಡುಕೊಂಡಿತ್ತು.
ಅಲ್ಲದೇ ಡೆತ್ ನೋಟ್‍ನ ಬಗ್ಗೆ ಫಾರೆನ್ಸಿಕ್ ಇಲಾಖೆಯ ವರದಿಯ ಪ್ರಾಮಾಣಿಕತೆಯ ಮೇಲೂ ಅದು ಅನುಮಾನವನ್ನು ವ್ಯಕ್ತಪಡಿಸಿತು. ಹೈಕೋರ್ಟ್‍ನ ಮಾಜಿ ನ್ಯಾಯಾಧೀಶರಾಗಿದ್ದ ನಾರಾಯಣ ಕುರುಪ್ ಅವರ ನೇತೃತ್ವದಲ್ಲಿ ನಡೆದ ಈ ಕೆಪಿಸಿಎಯ ತನಿಖೆಯ ಫಲಿತಾಂಶವು ಶ್ರೀಜಿತ್ ಕುಟುಂಬ ವನ್ನು ಆಘಾತಕ್ಕೆ ಒಳಪಡಿಸಿತು. ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಕುಟುಂಬ ಆಗ್ರಹಿಸಿತು. ತಿರುವನಂತಪುರದಲ್ಲಿರುವ ಸರಕಾರದ ಮುಖ್ಯ ಕಾರ್ಯದರ್ಶಿಯವರ ಕಚೇರಿಯ ಮುಂದೆ ಅಂದಿನಿಂದ ಶ್ರೀಜಿತ್ ಸತ್ಯಾಗ್ರಹಕ್ಕೆ ಕುಳಿತುಕೊಂಡ. ಆತ ಇವತ್ತು ಈ ವ್ಯವಸ್ಧೆಯ ಮೇಲೆ ಎಷ್ಟು ಭರವಸೆರಹಿತವಾಗಿ ಬದುಕುತ್ತಿರುವನೆಂದರೆ, ತನ್ನ ಬೇಡಿಕೆಯನ್ನು ಒಪ್ಪಿಕೊಂಡು ಕೇಂದ್ರ ಸರಕಾರ ಹೊರಡಿಸಿದ ದೃಢೀಕರಣ ಪತ್ರವನ್ನೂ ನಂಬುತ್ತಿಲ್ಲ. ಸಿಬಿಐಯು ತನಿಖೆ ಆರಂಭಿಸಿದ ಬಳಿಕವೇ ತಾನು ಸತ್ಯಾಗ್ರಹದಿಂದ ವಿರಮಿಸುವೆನೆಂದು ಆತ ಹೇಳಿ ಕೊಂಡಿದ್ದಾನೆ.
ನಿಜವಾಗಿ, ಶ್ರೀಜಿತ್ ಈ ದೇಶದ ಎದುರು ಕೆಲವು ಪ್ರಶ್ನೆಗಳನ್ನು ಇಟ್ಟಿದ್ದಾನೆ. ಈ ಪ್ರಶ್ನೆಗಳಿಗೆ ಈ ದೇಶ ಮುಖಾಮುಖಿಯಾಗದೇ ಹೋದರೆ ಅದು ಈ ದೇಶದ ವ್ಯವಸ್ಥೆಯನ್ನು ಇನ್ನಷ್ಟು ನಿರಂಕುಷತೆಯೆಡೆಗೆ ಕೊಂಡೊಯ್ಯಬಹುದು. ಈ ದೇಶದಲ್ಲಿ ಪ್ರತಿನಿತ್ಯ ಬಂಧನ, ವಿಚಾರಣೆ, ಬಿಡುಗಡೆ, ಸಾವು.. ಇತ್ಯಾದಿಗಳು ನಡೆಯುತ್ತಲೇ ಇರುತ್ತವೆ. 120 ಕೋಟಿಯಷ್ಟು ಜನಸಂಖ್ಯೆಯಿರುವ ದೇಶವೊಂದರಲ್ಲಿ ಇವೆಲ್ಲ ಸಹಜ ಎಂದು ನಾವು ಸಮರ್ಥಿಸಿಕೊಳ್ಳಬಹುದಾದರೂ ಇವುಗಳಲ್ಲಿ ಅಸಹಜವಾದುದೂ ಇರುತ್ತದೆ ಅನ್ನುವುದನ್ನು ಶ್ರೀಜಿತ್ ದೇಶದ ಮುಂದಿ ಟ್ಟಿದ್ದಾನೆ.ಪೋಲೀಸರು ಬಂಧಿಸುವ ವ್ಯಕ್ತಿ ನಿಜಕ್ಕೂ ಬಂಧನಕ್ಕೆ ಅರ್ಹನಾಗಿಯೇ ಇರಬೇಕೆಂದಿಲ್ಲ. ಪೋಲೀಸ್ ಇಲಾಖೆಯಲ್ಲಿರುವ ಕೆಲವರ ಸ್ವಾಹಿತಾಸಕ್ತಿಯ ಕಾರಣಕ್ಕಾಗಿ ಆತನ ಬಂಧನವಾಗಿರಬಹುದು. ಇನ್ನಾರನ್ನೋ ತೃಪ್ತಿಪಡಿಸುವುದಕ್ಕಾಗಿ ಆತನನ್ನು ‘ಫಿಕ್ಸ್’ ಮಾಡಿರಬಹುದು. ಅಂದಹಾಗೆ, ಶ್ರೀವಿಜಿ ಮೊಬೈಲ್ ಕದ್ದಿರಲೇ ಇಲ್ಲ ಎಂದೂ ಹೇಳಲಾಗುತ್ತದೆ. ಪ್ರೇಮ ಪ್ರಕರಣದ ಹಿನ್ನೆಲೆಯಲ್ಲಿ ಆತನ ಮೇಲೆ ಪ್ರಕರಣವನ್ನು ಫಿಕ್ಸ್ ಮಾಡಿ ಹತ್ಯೆ ಮಾಡಲಾಗಿದೆ ಎಂಬ ಆರೋಪವೂ ಇದೆ. ದುರಂತ ಏನೆಂದರೆ, ಹೀಗೆ ಅನ್ಯಾಯಕ್ಕೊಳಗಾದವರಲ್ಲಿ ಶ್ರೀವಿಜಿ ಮೊದಲಿಗನೇನಲ್ಲ. ಭಯೋತ್ಪಾದನೆಯ ಹೆಸರಲ್ಲಿ ಹತ್ತು-ಹದಿನೈದು ವರ್ಷಗಳ ಕಾಲ ಜೈಲಲ್ಲಿದ್ದು ಬಿಡುಗಡೆಗೊಂಡವರಿದ್ದಾರೆ. ವರ್ಷಗಟ್ಟಲೆ ಹಿಂಸೆ ಅನುಭವಿಸಿದವರಿದ್ದಾರೆ. ಪತ್ರಕರ್ತರು, ಪ್ರೊಫೆಸರ್‍ಗಳು, ವಿದ್ಯಾರ್ಥಿಗಳೂ ಸೇರಿದಂತೆ ದೊಡ್ಡದೊಂದು ಗುಂಪು ಈ ಬಗೆಯ ಹಿಂಸೆಗೆ ಬಲಿಯಾಗಿದೆ. ಯೌವನವನ್ನು ಜೈಲಲ್ಲಿ ಕಳೆದು ಕೊನೆಗೆ ನಿರಪರಾಧಿಯಾಗಿ ಬಿಡುಗಡೆಗೊಳ್ಳುವಾಗ ಅವರು ಸಂತಸಪಡುವುದ ಕ್ಕಿಂತ ದುಃಖಿಸುವುದೇ ಹೆಚ್ಚು. ಶ್ರೀಜಿತ್‍ನಂತೆ ಅವರಲ್ಲೂ ಅನೇಕಾರು ಪ್ರಶ್ನೆಗಳಿರುತ್ತವೆ. ತಮ್ಮನ್ನು ಭಯೋತ್ಪಾದ ಕರಾಗಿ ಗುರುತಿಸಲು ಮತ್ತು ಎಫ್‍ಐಆರ್ ದಾಖಲಿಸಲು ಇದ್ದ ಕಾರಣಗಳೇನು? ಧರ್ಮವೇ, ವೇಷಭೂಷಣಗಳೇ, ಭಾಷೆಯೇ? ಯಾರ ಪಿತೂರಿಯು ಇದರ ಹಿಂದೆ ಕೆಲಸ ಮಾಡಿದೆ? ನಿರಪರಾಧಿಯೋರ್ವನನ್ನು ಹೀಗೆ ಜೈಲಲ್ಲಿಟ್ಟು ವರ್ಷಗಟ್ಟಲೆ ಕೊಳೆಯಿಸಿ ಕೊನೆಗೆ ಏನೂ ಆಗಿಲ್ಲವೆಂಬಂತೆ ಬಿಡುಗಡೆಗೊಳಿಸುವುದೆಂದರೆ ಏನರ್ಥ? ಪರಿಹಾರವೇನು? ಯಾಕೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮನುಷ್ಯ ಇಷ್ಟು ಅಗ್ಗವಾಗುತ್ತಾನೆ?
ಶ್ರೀವಿಜಿಯ ಸಾವು ಶ್ರೀಜಿತ್‍ನಂಥ ಛಲಗಾರ ತಮ್ಮನನ್ನು ಈ ಸಮಾಜಕ್ಕೆ ಪರಿಚಯಿಸಿದ್ದಷ್ಟೇ ಅಲ್ಲ, ನಮ್ಮ ವ್ಯವಸ್ಥೆ ಹೊದ್ದುಕೊಂಡಿರುವ ಚರ್ಮ ಎಷ್ಟು ದಪ್ಪಗಿನದು ಎಂಬುದನ್ನೂ ಪರಿಚಯಿಸಿದೆ. ಹತ್ಯೆ ಎಂದು ಹೇಳಲಾದ ಒಂದು ಸಾವಿನ ಸುತ್ತ ತನಿಖೆ ನಡೆಸುವಂತೆ ಈ ವ್ಯವಸ್ಥೆಯನ್ನು ಒಪ್ಪಿಸಬೇಕಾದರೆ 770 ದಿನಗಳ ವರೆಗೆ ಸತ್ಯಾಗ್ರಹ ನಡೆಸಬೇಕು ಅನ್ನುವುದೇ ದೊಡ್ಡ ವ್ಯಂಗ್ಯ. 770 ದಿನಗಳ ಸತ್ಯಾಗ್ರಹದ ಬಳಿಕ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಬದಲು ಆರಂಭದಲ್ಲೇ ಒಪ್ಪಿಸಲು ತೀರ್ಮಾನಿಸಿರುತ್ತಿದ್ದರೆ ಶ್ರೀಜಿತ್ ಕೃಶನಾಗುತ್ತಿದ್ದನೇ? ಪಡಬಾರದ ಹಿಂಸೆ ಅನುಭವಿಸುತ್ತಿದ್ದನೇ?
ಏನೇ ಆಗಲಿ, ಪಟ್ಟು ಬಿಡದೇ ಹೋರಾಡಿದ ಶ್ರೀಜಿತ್‍ಗೆ ಅಭಿನಂದನೆಯನ್ನು ಸಲ್ಲಿಸಬೇಕು. ಆತ ನಿರಪರಾಧಿಗಳ ಸಂಕಟಕ್ಕೆ ಮತ್ತೊಮ್ಮೆ ದನಿ ಯಾಗಿದ್ದಾನೆ. ವ್ಯವಸ್ಥೆಯನ್ನು ಪೋರೆದಿರುವ ಅಪ್ರಾಮಾಣಿಕತೆಗೆ ಹೊಡೆತ ನೀಡಿದ್ದಾನೆ. ಆತನಿಗೆ ಅಭಿನಂದನೆಗಳು.

ಒಳಗಿನ ಹೊಗೆ, ಹೊರಗಿನ ಧಗೆಯಲ್ಲಿ ಬೇಯುತ್ತಿರುವ ಬಿಜೆಪಿ..



      2019ರ ಲೋಕಸಭಾ ಚುನಾವಣೆಯು ಬಿಜೆಪಿಯ ಪಾಲಿಗೆ 2014ರಷ್ಟು ಸುಲಭವಾಗಿರುವುದಿಲ್ಲ ಅನ್ನುವುದನ್ನು ದೇಶದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ದಿನೇ ದಿನೇ ಖಚಿತಪಡಿಸತೊಡಗಿವೆ. 2014ರಲ್ಲಿ ಬಿಜೆಪಿಯನ್ನು ಏಕಕಂಠದಿಂದ ಬೆಂಬಲಿಸಿದ್ದ ದಲಿತರೇ 2019ರಲ್ಲಿ ಬಿಜೆಪಿಯ ಸೋಲನ್ನು ಬರೆಯಲಿದ್ದಾರೆ ಎಂಬುದೂ ದೃಢವಾಗತೊಡಗಿದೆ. ಈ ದೇಶದಲ್ಲಿ ಸುಮಾರು 30 ಕೋಟಿಯಷ್ಟು ದಲಿತರಿದ್ದಾರೆ. 66 ದಲಿತ ಮೀಸಲು ಲೋಕಸಭಾ ಕ್ಷೇತ್ರಗಳಿವೆ. ಮಾತ್ರವಲ್ಲ, 2014ರಲ್ಲಿ ಈ 66ರಲ್ಲಿ 40 ಸ್ಥಾನಗಳನ್ನು ಗೆದ್ದಿದ್ದು ಬಿಜೆಪಿಯೇ. ಆದರೆ, ಬಿಜೆಪಿಯನ್ನು ದಲಿತ ಸಮೂಹವು ಇಷ್ಟು ಪ್ರಬಲವಾಗಿ ಬೆಂಬಲಿಸಿದ ಹೊರತಾಗಿಯೂ ಕೇಂದ್ರ ಸಚಿವ ಸಂಪುಟದಲ್ಲಿ ದಲಿತರಿಗೆ ಅರ್ಹಪಾಲು ಸಿಕ್ಕಿಲ್ಲ ಅನ್ನುವ ಅಸಮಾಧಾನ ಬಿಜೆಪಿಯ ದಲಿತ ಪ್ರತಿನಿಧಿಗಳಲ್ಲಿ ಆರಂಭದಲ್ಲೇ ಇತ್ತು. ಪಾಸ್ವಾನ್, ಅಟವಳೆ, ಗೆಹ್ಲೋಟ್, ಜಿಗಜಿಣಗಿಯಂಥ ದಲಿತ ಪ್ರತಿನಿಧಿಗಳಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕರೂ ಅದು ನಾಮ್‍ಕಾವಾಸ್ತೆ ಅನ್ನುವುದು ಸ್ವತಃ ಅವರಿಗೂ ಗೊತ್ತಿತ್ತು. ಈ ಅಸಮಾಧಾನವನ್ನು ಅವರು ಬಹಿರಂಗ ವೇದಿಕೆಗಳಲ್ಲಿ ವ್ಯಕ್ತಪಡಿಸದಿದ್ದರೂ ಆಂತರಿಕವಾಗಿ ಪರಸ್ಪರ ಹಂಚಿಕೊಳ್ಳುತ್ತಿದ್ದರು ಎಂಬುದು ಬಹಿರಂಗ ರಹಸ್ಯ. ಈ ನಡುವೆ, 2014ರ ಬಳಿಕ ದಲಿತರ ಮೇಲೆ ಅನ್ಯಾಯ, ದೌರ್ಜನ್ಯ, ದಬ್ಬಾಳಿಕೆ ಪ್ರಕರಣಗಳಲ್ಲಿ ಮಹತ್ವದ ಏರಿಕೆಗಳೂ ಕಾಣಿಸಿಕೊಂಡವು. ಈ ಏರಿಕೆ ಬಿಜೆಪಿಯ ದಲಿತ ಸಂಸದರಿಗೆ ಮತ್ತು ದಲಿತ ಮುಖಂಡರಿಗೆ ಗೊತ್ತಿರಲಿಲ್ಲ ಎಂದಲ್ಲ. ಅವರನ್ನು ಒಳಗೊಳಗೇ ಈ ಬೆಳವಣಿಗೆಗಳು ಇರಿಯುತ್ತಿದ್ದುವು. ಅದಕ್ಕಿಂತಲೂ ಮುಖ್ಯವಾಗಿ, ದಲಿತ ಸಮೂಹದಲ್ಲಿ ಬಿಜೆಪಿಯ ಮೇಲಿನ ಆಕರ್ಷಣೆಯನ್ನು ಇವು ನಿಧಾನಕ್ಕೆ ಕಡಿಮೆಗೊಳಿಸತೊಡಗಿದ್ದುವು. ಆದರೆ, ಇದು ಪ್ರಥಮವಾಗಿ ದೊಡ್ಡ ಮಟ್ಟದಲ್ಲಿ ಪ್ರಕಟವಾದದ್ದು 2016ರಲ್ಲಿ ನಡೆದ ವೇಮುಲಆತ್ಮಹತ್ಯೆ ಪ್ರಕರಣ ಮತ್ತು ಗುಜರಾತ್‍ನ ಊನಾದಲ್ಲಿ ನಡೆದ ದಲಿತ ಯುವಕರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ. ಇವೆರಡೂ ಘಟನೆಗಳು ಬಿಜೆಪಿಯ ಘೋಷಿತ ‘ದಲಿತ ಪರ’ ನೀತಿಯನ್ನು ಅಲುಗಾಡಿಸಿದುವು. ‘ಬಿಜೆಪಿಯು ದಲಿತ ವಿರೋಧಿ’ ಎಂಬ ಭಾವನೆಯನ್ನು ದಲಿತರಲ್ಲಿ ದೃಢಗೊಳಿಸುವುದಕ್ಕೆ ಊನಾದ ನಾಲ್ವರು ಯುವಕರ ದೀನಸ್ಥಿತಿ ದೊಡ್ಡ ಪಾತ್ರವನ್ನು ನಿರ್ವಹಿಸಿತು. ಆ ಬಳಿಕ, ಮಹಾರಾಷ್ಟ್ರದ ಭೀಮಾ-ಕೋರೆಗಾಂವ್‍ನಲ್ಲಿ ನಡೆದ ಘಟನೆಯಂತೂ ದಲಿತರಲ್ಲಿ ಭಾರೀ ಆಕ್ರೋಶವನ್ನು ಹುಟ್ಟು ಹಾಕಿತು. ‘ಮೇಲ್ಜಾತಿಯ ವಿರುದ್ಧ ದಲಿತರ ವಿಜಯ’ ಎಂಬುದಾಗಿ ಗುರುತಿಸಿಕೊಂಡಿರುವ ಭೀಮಾ-ಕೋರೆಗಾಂವ್ ಘಟನೆಯ 200ನೇ ವಿಜಯೋತ್ಸವದಲ್ಲಿ ಭಾಗವಹಿಸಿದ ದಲಿತರ ಮೇಲೆ ಮೇಲ್ಜಾತಿಯ ಮಂದಿ ಹಲ್ಲೇ ನಡೆಸಿದರು. ಇಡೀ ಕಾರ್ಯಕ್ರಮ ಅಸ್ತವ್ಯಸ್ತವಾಯಿತು.
     ಇದರ ಬಳಿಕ ಉತ್ತರ ಪ್ರದೇಶದ ಶಹರಾಣ್‍ಪುರದಲ್ಲಿ ಅಂಬೇಡ್ಕರ್ ಜನ್ಮಶತಮಾನೋತ್ಸವದ ಪ್ರಯುಕ್ತ ದಲಿತರು ಹಮ್ಮಿಕೊಂಡ ಮೆರವಣಿಗೆಯು ದಲಿತರು ಮತ್ತು ರಾಜಪೂತ್ ಸಮುದಾಯದ ನಡುವಿನ ಘರ್ಷಣೆಯಾಗಿ ಮುಕ್ತಾಯವನ್ನು ಕಂಡಿತು. ಸುಮಾರು 25ಕ್ಕಿಂತಲೂ ಅಧಿಕ ದಲಿತರ ಮನೆಗಳು ಬೆಂಕಿಗೆ ಆಹುತಿಯಾದುವು. ಅಪಾರ ನಾಶ-ನಷ್ಟವೂ ಸಂಭವಿಸಿತು. ಈ ಅಸಮಾಧಾನದ ಬೆನ್ನಿಗೇ ಇದೀಗ ಸುಪ್ರೀಮ್ ಕೋರ್ಟು ಎಸ್‍ಸಿ-ಎಸ್‍ಟಿ ಕಾಯ್ದೆಗೆ ಸಂಬಂಧಿಸಿ ನೀಡಿರುವ ತೀರ್ಪು ಬೆಂಕಿಗೆ ತುಪ್ಪವನ್ನು ಸುರಿದಂತಾಗಿದೆ. ಎಸ್‍ಸಿ-ಎಸ್‍ಟಿ ಕಾಯ್ದೆಯು ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ಸರಕಾರವು ಸುಪ್ರೀಮ್ ಕೋರ್ಟಿನಲ್ಲಿ ವಾದಿಸಿತ್ತು. ಈ ವಾದದ ಆಧಾರದಲ್ಲಿಯೇ ಈ ಕಾಯ್ದೆಯನ್ನು ದುರ್ಬಲಗೊಳಿಸಬಹುದಾದ ರೀತಿಯ ತೀರ್ಪನ್ನು ಸುಪ್ರೀಮ್ ಕೋರ್ಟು ನೀಡಿತ್ತು. ‘ಈ ಕಾಯ್ದೆಯ ಅಡಿಯಲ್ಲಿ ದಲಿತರು ದೂರು ದಾಖಲಿಸಿದರೆ, ತಕ್ಷಣ ಎಫ್‍ಐಆರ್ ಮಾಡಬಾರದು ಮತ್ತು ಯಾರನ್ನೂ ಬಂಧಿಸಬಾರದು’ ಎಂದು ಸುಪ್ರೀಮ್ ಕೋರ್ಟು ತೀರ್ಪು ನೀಡಿದ್ದರೆ ಮತ್ತು ದೂರಿನ ಮೇಲೆ ತನಿಖೆ ನಡೆಸಿದ ವರದಿ ಬಂದ ಬಳಿಕವೇ ಎಫ್‍ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಆದೇಶಿಸಿದ್ದರೆ ಅದಕ್ಕೆ ಕಾಯ್ದೆ ದುರ್ಬಳಕೆಯಾಗುತ್ತಿದೆ ಎಂದು ಕೇಂದ್ರ ವ್ಯಕ್ತಪಡಿಸಿದ ಅಭಿಪ್ರಾಯವೇ ಮೂಲ ಕಾರಣ. ಆದರೆ ತೀರ್ಪಿನ ವಿರುದ್ಧ ದಲಿತರು ಪ್ರತಿಭಟನೆಗಿಳಿದಾಗ ತೀರ್ಪು ಮರು ಪರಿಶೀಲಿಸುವಂತೆ ಕೇಂದ್ರ ಮನವಿ ಮಾಡಿಕೊಂಡಿತು. ಕೇಂದ್ರದ ಈ ನಡೆಗೆ ಸುಪ್ರೀಮ್ ಕೋರ್ಟು ಅಸಮಾಧಾನವನ್ನೂ ವ್ಯಕ್ತಪಡಿಸಿತು. ‘ನಿಮ್ಮ ಅಭಿಪ್ರಾಯದ ಆಧಾರದಲ್ಲಿಯೇ’ ತೀರ್ಪು ನೀಡಿರುವುದಾಗಿಯೂ ಅದು ಸಮರ್ಥಿಸಿಕೊಂಡಿತು. ಒಂದು ರೀತಿಯಲ್ಲಿ,
     ಕಳೆದ ನಾಲ್ಕು ವರ್ಷಗಳಿಂದ ದಲಿತರಲ್ಲಿ ಸಂಗ್ರವಾಗುತ್ತಿದ್ದ ಅಸಮಾಧಾನದ ಹೊಗೆಯು ಎಸ್‍ಸಿ-ಎಸ್‍ಟಿ ಕಾಯ್ದೆಯ ಹೆಸರಲ್ಲಿ ಆಕ್ರೋಶವಾಗಿ ಹೊರಹೊಮ್ಮಿದೆ ಎಂದೇ ಹೇಳಬೇಕಾಗುತ್ತದೆ. ದಲಿತರ ಈ ಪ್ರತಿಭಟನೆಯನ್ನು ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರಗಳು ನಿರ್ವಹಿಸಿದ ರೀತಿಯೂ ಇಲ್ಲಿ ಗಮನಾರ್ಹ. ಉತ್ತರ ಪ್ರದೇಶದ ಬುಂದೇಲ್‍ಖಂಡ್ ಪ್ರದೇಶವು ದಲಿತರ ಪ್ರಾಬಲ್ಯಕ್ಕಾಗಿಯೇ ಗುರುತಿಸಿಕೊಂಡಿದೆ. ಮಾಯಾವತಿಯವರ ಪಕ್ಷದ ಭದ್ರ ಕೋಟೆಯಾಗಿಯೂ ಇದನ್ನು ಪರಿಗಣಿಸಲಾಗುತ್ತದೆ. ಆದರೆ, 2017ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿನ ಎಲ್ಲ 19 ಕ್ಷೇತ್ರಗಳನ್ನೂ ಬಿಜೆಪಿಯೇ ಬುಟ್ಟಿಗೆ ಹಾಕಿಕೊಂಡಿತ್ತು. ಅಚ್ಚರಿಯ ವಿಷಯ ಏನೆಂದರೆ, ಎಸ್‍ಸಿ-ಎಸ್‍ಟಿ ತೀರ್ಪು ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಅತ್ಯಂತ ಹೆಚ್ಚು ನಾಶ-ನಷ್ಟ ಅನುಭವಿಸಿದ್ದು ಇದೇ ಬುಂದೇಲ್‍ಖಂಡ್. ದಲಿತರ ಮೇಲೆ ಯೋಗಿ ಸರಕಾರ ನಿರ್ದಯವಾಗಿ ನಡೆದುಕೊಂಡಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಸಂಸದರೇ ಅಸಮಾಧಾನ ಹೊರಹಾಕುವಷ್ಟು ಈ ದೌರ್ಜನ್ಯ ಚರ್ಚೆಗೆ ಒಳಗಾಗಿದೆ. ಕಳೆದ 4 ವರ್ಷಗಳಲ್ಲಿ ದಲಿತರಿಗೆ ಬಿಜೆಪಿ ಏನ್ನು ಮಾಡಿಲ್ಲ ಎಂದು ಬಿಜೆಪಿ ಸಂಸದ ಯಶ್ವಂತ್ ಸಿಂಗ್ ಬಹಿರಂಗ ಹೇಳಿಕೆ ನೀಡಿದ್ದು ಈ ದೌರ್ಜನ್ಯದ ಬಳಿಕ. ಇವರಲ್ಲದೇ ಸಾವಿತ್ರಿಭಾೈ ಫುಲೆ, ಚೋಟೇಲಾಲ್ ಕಾರ್‍ವಾನ್ ಮತ್ತು ಅಶೋಕ್ ಕುಮಾರ್ ದೋಹ್ರಿ ಎಂಬ ಮೂವರು ಬಿಜೆಪಿ ದಲಿತ ಸಂಸದರೂ ವಾರಗಳ ಹಿಂದೆ ಬಿಜೆಪಿಯನ್ನು ಟೀಕಿಸಿದ್ದಾರೆ. ಸಂವಿಧಾನದ ಕುರಿತು, ದಲಿತ ಸಬಲೀಕರಣದ ಕುರಿತು ಸ್ವಪಕ್ಷದ ನಿಲುವನ್ನು ಪ್ರಶ್ನಿಸಿದ್ದಾರೆ. ಹೀಗೆ ದಿನೇ ದಿನೇ ಒಳಗಿನಿಂದಲೇ ಏಳುತ್ತಿರುವ ಈ ಬಂಡಾಯದ ಧ್ವನಿಗೆ ಸ್ವತಃ ಬಿಜೆಪಿಯೂ ಭಯಪಡತೊಡಗಿದೆ. 50% ದಲಿತರು ವಾಸಿಸುತ್ತಿರುವ ಗ್ರಾಮಗಳಲ್ಲಿ ಬಿಜೆಪಿಯ ಹಾಲಿ ಸಂಸದ ಅಥವಾ ಸಚಿವರು ಒಂದು ದಿನ ವಾಸ್ತವ್ಯ ಹೂಡಬೇಕೆಂದು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಆದೇಶಿಸಿರುವುದಕ್ಕೆ ಮುಖ್ಯ ಕಾರಣ ಈ ಭಯವೇ.     
        2014ರಲ್ಲಿ ಬಿಜೆಪಿಯ ಮುಂದೆ ಮನಮೋಹನ್ ಸಿಂಗ್ ಇದ್ದರು. ಭ್ರಷ್ಟಾಚಾರವೂ ಇತ್ತು. ಅಲ್ಲದೇ ಪಾಕಿಸ್ತಾನವೂ ಇತ್ತು. ಆದರೆ 2019ರಲ್ಲಿ ಬರೇ ಪಾಕಿಸ್ತಾನ ಮಾತ್ರವೇ ಉಳಿದಿರುತ್ತದೆ. ಅದೂ ಕೂಡ ನರೇಂದ್ರ ಮೋದಿಯವರಿಂದ ಏನೇನೂ ಮಾಡಲಾಗದ ಮತ್ತು ಮನಮೋಹನ್ ಸಿಂಗ್ ಅವಧಿಯಲ್ಲಿ ಹೇಗಿತ್ತೋ ಹಾಗೆಯೇ ಇರುವ ಪಾಕಿಸ್ತಾನ. ಆದ್ದರಿಂದ, 2019ರಲ್ಲಿ ಪಾಕಿಸ್ತಾನದ ಹೆಸರೆತ್ತುವುದಕ್ಕೆ ಬಿಜೆಪಿ ಹಿಂಜರಿಯುವ ಸಾಧ್ಯತೆಯೇ ಹೆಚ್ಚು. ಉಳಿದಂತೆ, ಬಿಜೆಪಿ ಇರುವ ಅವಕಾಶ ಏನೆಂದರೆ, ತನ್ನ ಸಾಧನೆಗಳನ್ನು ಹೇಳಿಕೊಂಡು ಜನರನ್ನು ಒಲಿಸುವುದು. ಇದಂತೂ ಬಿಜೆಪಿಯ ಪಾಲಿಗೆ ದೊಡ್ಡ ಸವಾಲು. ಸಾಧನೆಗಿಂತ ಸಮಸ್ಯೆಯನ್ನೇ ಅದು ಈ ದೇಶದ ಜನರಿಗೆ ಈವರೆಗೆ ನೀಡುತ್ತಾ ಬಂದಿದೆ. ವರ್ಷದಿಂದ ವರ್ಷಕ್ಕೆ ಕುಸಿಯುತ್ತಾ ಬಂದ ಮೋದಿ ಸರಕಾರದ ವರ್ಚಸ್ಸು, ಇನ್ನೊಂದು ವರ್ಷದಲ್ಲಿ ಹೆಚ್ಚಬಹುದಾದ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ. ಈಗಿನ ಸ್ಥಿತಿಯನ್ನು ಆಧಾರವಾಗಿಟ್ಟುಕೊಂಡು ಹೇಳುವುದಾದರೆ, ಮುಂದಿನ ಪ್ರತಿ ದಿನಗಳೂ ಬಿಜೆಪಿಯ ಜನಪ್ರಿಯತೆಯನ್ನು ಇನ್ನಷ್ಟು ಕಡಿಮೆಗೊಳಿಸುತ್ತಲೇ ಹೋಗುವ ಸಂಭವವೇ ಹೆಚ್ಚು. ಬಹುಶಃ, ಬಿಜೆಪಿ 2019ರ ಬದಲು 2018ರ ಕೊನೆಯಲ್ಲೇ ಲೋಕಸಭಾ ಚುನಾವಣೆ ಘೋಷಿಸಿದರೂ ಅಚ್ಚರಿಯಿಲ್ಲ.

ಬಿಜೆಪಿಯ ಸೋಲನ್ನು ಆಸಿಫಾ ಬರೆಯುವಳೇನೋ

 
 
    ಕಳೆದ ಫೆಬ್ರವರಿಯಲ್ಲಿ ಜಮ್ಮುವಿನ ಕಥುವಾ ಜಿಲ್ಲೆಯಲ್ಲಿ ಹಿಂದೂ ಏಕ್ತಾ ಮಂಚ್ ನಡೆಸಿದ ರ್ಯಾಲಿಗೂ ಇದೇ ಎಪ್ರಿಲ್‍ನಲ್ಲಿ ಜಾರ್ಖಂಡ್‍ನ  ರಾಮ್‍ಘರ್ ನಲ್ಲಿ ಬಿಜೆಪಿ ನಡೆಸಿದ ರಾಲಿಗೂ (ಟೈಮ್ ಆಫ್ ಇಂಡಿಯಾ, ಎಪ್ರಿಲ್ 11) ಒಂದಕ್ಕಿಂತ ಹೆಚ್ಚು ಸಾಮ್ಯತೆಗಳಿವೆ. 8ರ ಹರೆಯದ  ಬಾಲೆಯನ್ನು ಹುರಿದು ಮುಕ್ಕಿದ ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಕಥುವಾದಲ್ಲಿ ರಾಲಿ ನಡೆದಿದ್ದರೆ, ಗೋಮಾಂಸ ಸಾಗಿಸುತ್ತಿದ್ದಾರೆಂದು ಆರೋಪಿಸಿ ಅಲೀಮುದ್ದೀನ್ ಅನ್ಸಾರಿಯನ್ನು 2017 ಜೂನ್ 9 ರಂದು ಥಳಿಸಿ ಕೊಂದವರನ್ನು ಅಮಾಯಕರೆಂದು  ವಾದಿಸಿ ರಾಮ್‍ಘರ್ ನಲ್ಲಿ ರಾಲಿ ನಡೆಸಲಾಯಿತು.
ರಾಮ್ ಘರ್ ನ ರಾಲಿಗೆ ನೇತೃತ್ವ ನೀಡಿದ ಬಿಜೆಪಿಯ ಮಾಜಿ ಶಾಸಕ ಶಂಕರ್ ಚೌಧರಿಯವರು, ರಾಳಿಗಿಂತ ಮೊದಲು ದುರ್ಗಾ ದೇವಾಲಯದಲ್ಲಿ ತಲೆ ಬೋಳಿಸಿದರು. ಪೊಲೀಸ್ ಕಸ್ಟಡಿಯಲ್ಲಿ ಅಲೀಮುದ್ದೀನ್ ಸಾವಿಗೀಡಾಗಿದ್ದಾನೆಯೇ ಹೊರತು ಗುಂಪು ಆತನನ್ನು ಥಳಿಸಿಯೇ ಇಲ್ಲ ಎಂದು ವಾದಿಸಿದರು. ಬಿಜೆಪಿಯ ಜಿಲ್ಲಾ ಮಾಧ್ಯಮ ಮುಖ್ಯಸ್ಥ ನಿತ್ಯಾನಂದ್ ಮಹತೋ ಸೇರಿದಂತೆ 11 ಮಂದಿಗೆ ತ್ವರಿತಗತಿ ನ್ಯಾಯಾಲಯವು ಇತ್ತೀಚೆಗೆ ಜೀವಾವಧಿ ಶಿಕ್ಷೆ ವಿಧಿಸಿರುವುದನ್ನು ಅವರು  ಪ್ರಶ್ನಿಸಿದರು. ಇಡೀ ರಾಲಿಯಲ್ಲಿ ಭಾರತದ ರಾಷ್ಟ್ರ ಧ್ವಜ, ಭಾರತ್ ಮಾತಾಕಿ ಜೈ ಮತ್ತು ಕೇಸರಿ ಧ್ವಜಗಳು ರಾರಾಜಿಸಿದುವು. ಅಂದಹಾಗೆ,  ಕಥುವಾದಲ್ಲಿ ಹಿಂದೂ ಏಕ್ತಾ ಮಂಚ್ ಎಂಬ ವೇದಿಕೆಯಡಿ ನಡೆಸಲಾದ ರಾಲಿಯಲ್ಲಿ ಬಿಜೆಪಿಯ ಇಬ್ಬರು ಸಚಿವರು ಭಾಗವಹಿಸಿದರು. ¨ ಭಾರತದ ರಾಷ್ಟ್ರ ಧ್ವಜ, ಭಾರತ್ ಮಾತಾಕಿ ಜೈಗಳು ಈ ರಾಲಿಯಲ್ಲೂ ಕಾಣಿಸಿದುವು. ವಿಷಾದ ಏನೆಂದರೆ, ಎರಡೂ ರಾಲಿಗಳನ್ನು ಸಂಘಟಿಸಿದ್ದು ಬಿಜೆಪಿ ಮತ್ತು ಈ ರಾಲಿಗಳಲ್ಲಿ ಅಸಿಫಾ ಮತ್ತು ಅಲೀಮುದ್ದೀನ್ ಅನ್ಸಾರಿಯನ್ನು  ಹತ್ಯೆಗೈದವರನ್ನು ಬಿಡುಗಡೆಗೊಳಿಸಿ ಎಂದು ಆಗ್ರಹಿಸ ಲಾಯಿತು. ಏನಿದರ ಅರ್ಥ? ಬಿಜೆಪಿಯ ರಾಷ್ಟ್ರವಾದಿ ಸಿದ್ಧಾಂತವು ಮುಸ್ಲಿಮ್  ವಿರೋಧಿ ಆಧಾರದಡಿಯಲ್ಲಿ ರಚಿತವಾಗಿದೆಯೇ? ಮುಸ್ಲಿಮರ ವಿರುದ್ಧ ಮಾಡುವ ಯಾವುದೇ ಕ್ರೌರ್ಯವು ಸಹ್ಯ ಎಂದು ಅದು  ಪ್ರತಿಪಾದಿಸುತ್ತಿದೆಯೇ? ಅಲೀಮುದ್ದೀನ್ ಅನ್ಸಾರಿಯನ್ನು ನಡು ಬೀದಿಯಲ್ಲಿಟ್ಟು ಥಳಿಸಿದ ವಿಡಿಯೋ ಈ ದೇಶದ ಕೋಟ್ಯಾಂತರ ಮಂದಿಯ  ಮೊಬೈಲ್‍ನಲ್ಲಿ ಇವತ್ತಿಗೂ ಇದೆ. ಆತ ಗೋ ಮಾಂಸ ಸಾಗಿಸುತ್ತಿದ್ದನೋ ಇಲ್ಲವೋ ಅನ್ನುವುದು ನಂತರದ ವಿಚಾರ. ಬೇಡ, ಗೋ ಮಾಂಸ  ಸಾಗಿಸುತ್ತಿದ್ದನೆಂದೇ ಇಟ್ಟುಕೊಳ್ಳೋಣ. ಅದನ್ನು ಪ್ರಶ್ನಿಸುವ ವಿಧಾನ ಯಾವುದು? ಪ್ರಶ್ನಿಸಬೇಕಾದವರು ಯಾರು? ಖಾಸಗಿ ಗುಂಪಿಗೆ ವ್ಯಕ್ತಿಯ  ಮೇಲೆ ಕೈ ಮಾಡುವ ಅಧಿಕಾರವನ್ನು ಈ ದೇಶದ ಕಾನೂನ ನೀಡಿಯೇ ಇಲ್ಲ. ಆದರೆ ಬಿಜೆಪಿ ಪದೇ ಪದೇ ಈ ಬಹುಮುಖ್ಯ ಪ್ರಶ್ನೆಯಿಂದ  ತಪ್ಪಿಸಿಕೊಳ್ಳುತ್ತಿರುವುದು ಯಾಕಾಗಿ? ಸಂತ್ರಸ್ತರು ಮುಸ್ಲಿಮರಾದರೆ ಅದನ್ನು ಸಂಭ್ರಮಿಸುವ ಮತ್ತು ಆರೋಪಿಗಳ ಪರವೇ ರಾಲಿ ನಡೆಸುವ  ಹಂತಕ್ಕೆ ಬಿಜೆಪಿ ಮುಟ್ಟಿರುವುದು ಏತಕ್ಕೆ? ದೇಶವನ್ನು ಆಳುತ್ತಿರುವ ಪಕ್ಷವೊಂದು ಈ ರೀತಿಯಾಗಿ ವರ್ತಿಸುತ್ತಿರುವುದಕ್ಕೆ ರಾಜಕೀಯ  ಕಾರಣವೇ? 8ರ ಹರೆಯದ ಬಾಲೆಯನ್ನು ಹುರಿದು ಮುಕ್ಕಿದವರ ಪರ ರಾಲಿ ನಡೆಸಿದರೆ ಬಿಜೆಪಿಗೆ ಓಟು ಸಿಗುತ್ತದೆಯೇ? ಮುಸ್ಲಿಮರ  ವಿರುದ್ಧ ಹಲ್ಲೆ ಹತ್ಯೆ, ಅತ್ಯಾಚಾರ ನಡೆಸುವುದರಿಂದ ಬಿಜೆಪಿಯ ಓಟುಗಳ ಸಂಖ್ಯೆಯಲ್ಲಿ ಏರಿಕೆ ಉಂಟಾಗುತ್ತ ದೆಂದಾದರೆ, ಆ ಓಟು  ಹಾಕುವವರು ಯಾರು? ಅವರ ಮನಃಸ್ಥಿತಿ ಏನು?
ನಿಜ; ಅತ್ಯಾಚಾರ, ಹತ್ಯೆ, ಹಲ್ಲೆ ಇತ್ಯಾದಿಗಳು ಪ್ರಧಾನಿ ನರೇಂದ್ರ ಮೋದಿಯರ ಅಧಿಕಾರಾವಧಿಯಲ್ಲಿ ಆರಂಭವಾದದ್ದಲ್ಲ ಮತ್ತು ಅವರು  ಅಧಿಕಾರದಿಂದ ಕೆಳಗಿಳಿದ ಕೂಡಲೇ ಇವೆಲ್ಲ ದಿಢೀರಾಗಿ ಕೊನೆ ಗೊಳ್ಳುತ್ತದೆಂದು ಭಾವಿಸಬೇಕಾಗಿಯೂ ಇಲ್ಲ. ಆದರೆ, ಒ೦ದು ಸರಕಾರದ  ಯೋಗ್ಯತೆ ಗೊತ್ತಾಗುವುದು- ಈ ಎಲ್ಲ ಸಂದರ್ಭಗಳಲ್ಲಿ ಅದರ ಪ್ರತಿಕ್ರಿಯೆ ಏನಾಗಿರುತ್ತದೆ ಎಂಬುದರ ಆಧಾರದಲ್ಲಿ. ಅಸಿಫಾಳನ್ನು ಹುರಿದು  ಮುಕ್ಕಿದ್ದು ಜನವರಿಯಲ್ಲಿ. ಆರೋಪಿಗಳನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿ ಹಿಂದೂ ಏಕ್ತಾ ಮಂಚ್ ರಾಲಿ ನಡೆಸಿದ್ದು ಫೆಬ್ರವರಿಯಲ್ಲಿ.  ಬಿಜೆಪಿಯ ಇಬ್ಬರು ಸಚಿವರು ಇದೇ ರಾಲಿಯಲ್ಲಿ ಭಾಗವಹಿಸಿದ್ದರು. ಒಂದು ವೇಳೆ, ಬಿಜೆಪಿಗೆ ಈ ಬಗ್ಗೆ ಅತೃಪ್ತಿ ಇದ್ದಿದ್ದೇ ಆಗಿದ್ದರೆ, ತಕ್ಷಣಕ್ಕೆ  ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಮುಖ್ಯಮಂತ್ರಿ ಮೆಹಬೂಬ ಮುಫ್ತಿಯವರಿಗೆ ಸೂಚನೆ ಕೊಡಬಹುದಿತ್ತು. ದುರಂತ  ಏನೆಂದರೆ, ಈ ಘಟನೆ ನಡೆದು ಎರಡು ತಿಂಗಳವರೆಗೆ ಬಿಜೆಪಿ ಮೌನ ಪಾಲಿಸಿತು. ಯಾವಾಗ ದೇಶಾದ್ಯಂತ ಈ ಬಗ್ಗೆ ಆಕ್ರೋಶ  ವ್ಯಕ್ತವಾಯಿತೋ ಆ ಬಳಿಕ ಅನಿವಾರ್ಯವೆಂಬಂತೆ ಆ ಸಚಿವರ ರಾಜಿನಾಮೆ ಪಡಕೊಳ್ಳಲು ಪಕ್ಷ ತೀರ್ಮಾನಿಸಿತು. ಇದರರ್ಥವೇನು?  ಒಂದು ಜವಾಬ್ದಾರಿಯುತ ಪಕ್ಷ ನಡಕೊಳ್ಳಬೇಕಾದ ರೀತಿಯೇ ಇದು? ಫೆಬ್ರವರಿಯಿಂದ ಎಪ್ರಿಲ್ ವರೆಗಿನ ಈ ಎರಡು ತಿಂಗಳ ಅವಧಿಯಲ್ಲಿ  ಬಿಜೆಪಿ ಯಾಕೆ ಈ ಇಬ್ಬರು ಸಚಿವರ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ? ಒಂದುವೇಳೆ, ಬಾಲೆಯನ್ನು ಹತೈಗೈದ ಕೃತ್ಯಕ್ಕೆ ರಾಷ್ಟ್ರೀಯ ವಾಗಿ ಪ್ರತಿಭಟನೆ ವ್ಯಕ್ತವಾಗದೆ ಇರುತ್ತಿದ್ದರೆ ಇನ್ನೂ ಆ ಸಚಿವರಿಬ್ಬರನ್ನು ಬಿಜೆಪಿ ಅಧಿಕಾರದಲ್ಲಿ ಮುಂದುವರಿಸುತ್ತಿತ್ತಲ್ಲವೇ?
     ಜಮ್ಮುವಿನ ಕಥುವಾ ಮತ್ತು ಜಾರ್ಖಂಡ್‍ನ ರಾಮ್ ಘರ್ ನಲ್ಲಿ ನಡೆದ ರಾಲಿಗಳು ಈ ದೇಶಕ್ಕೆ ಒಂದು ಸ್ಪಷ್ಟ ಸಂದೇಶವನ್ನು ರವಾನಿಸಿದೆ.  ಅದು ಏನೆಂದರೆ, ಸಂತ್ರಸ್ತರು ಮುಸ್ಲಿಮರಾಗಿದ್ದರೆ ಮತ್ತು ಆರೋಪಿಗಳು ಮುಸ್ಲಿಮೇತರರಾಗಿದ್ದರೆ ಬಿಜೆಪಿ ಆರೋಪಿಗಳ ಪರ ನಿಲ್ಲುತ್ತದೆ.  ಆರೋಪಿಗಳನ್ನು ರಕ್ಷಿಸುವುದಕ್ಕಾಗಿ ಅದರ ಸಚಿವರೇ ರಾಲಿ ನಡೆಸುತ್ತಾರೆ. ಪಕ್ಷದ ನಾಯಕರು ತಲೆ ಬೋಳಿಸುತ್ತಾರೆ. ಆಸಿಫಾ ಮತ್ತು ಅಲೀಮುದ್ದೀನ್ ಅನ್ಸಾರಿ ಇಬ್ಬರೂ ಇದಕ್ಕೆ ಅತ್ಯಂತ ತಾಜಾ ಉದಾಹರಣೆಗಳು. ಬಿಜೆಪಿಗೂ ಬಿಜೆಪಿಯೇತರ ಪಕ್ಷಗಳಿಗೂ ನಡುವೆ ಇರುವ ದೊಡ್ಡ  ವ್ಯತ್ಯಾಸ ಇದು. ದೇಶಾದ್ಯಂತ ಇವತ್ತು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದರೆ ಅದಕ್ಕೆ ಅದರ ಈ ವಿಭಜನವಾದಿ ರಾಜಕೀಯ  ಸಿದ್ಧಾಂತವೇ ಪ್ರಮುಖ ಕಾರಣ. ಒಂದು ರಾಷ್ಟ್ರೀಯ ಪಕ್ಷವಾಗಿ ಇರಬೇಕಾದ ವಿಶಾಲ ಧೋರಣೆ ಮತ್ತು ಸಮತಾಭಾವ ಬಿಜೆಪಿಯಲ್ಲಿ ಕಾಣಿಸುತ್ತಿಲ್ಲ. ಅದು ಪ್ರತಿಪಾದಿಸುವ ಭಾರತ ತೀರಾ ಚಿಕ್ಕದು. ಆ ಭಾರತದಲ್ಲಿ ಎಲ್ಲರೂ ಸಮಾನರಲ್ಲ. ಈ ಭಾರತದಲ್ಲಿ ಅಪರಾಧವೊಂದು ಅಪರಾಧವಾಗಿ ಪರಿಗಣಿತವಾಗುವುದಕ್ಕೂ ಕೆಲವಾರು ಮಿತಿಗಳಿವೆ. ಅತ್ಯಾಚಾರವನ್ನು ಶಿಕ್ಷಾರ್ಹ ಕ್ರೌರ್ಯವೆಂದು ಪರಿಗಣಿಸಬೇಕೋ  ಬೇಡವೋ ಅನ್ನುವುದು ಅತ್ಯಾಚಾರಕ್ಕೊಳಗಾದವರ ಧರ್ಮ ಮತ್ತು  ಅತ್ಯಾಚಾರಗೈದವರ ಧರ್ಮವನ್ನು ನೋಡಿ ತೀರ್ಮಾನಿಸಲಾಗುತ್ತದೆ. ಸದ್ಯದ ಬಿಜೆಪಿ ಇದು. ಕಥುವಾದ ಕುರಿತಂತೆ ಅದರ ವರ್ತನೆ ಇದಕ್ಕೆ  ಪುರಾವೆಯಾಗಿ ದೇಶದ ಮುಂದಿದೆ. ರಾಮ್ ಘರ್ ನಲ್ಲಿ ನಡೆದ ರಾಲಿಯೂ ಇದರ ಬೆನ್ನಿಗಿದೆ. ಬಹುಶಃ, 2019ರ ಲೋಕಸಭಾ  ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಆಸಿಫಾ ಬರೆಯುವಳೇನೋ?