Monday, 3 January 2022

ಜನಸಂಖ್ಯೆ: ಆತಂಕಪಡಬೇಕಿರುವುದು ಏರುವುದಕ್ಕೋ ಇಳಿಯುವುದಕ್ಕೋ?




ದೇಶದಲ್ಲಿ ಜನಸಂಖ್ಯೆಯನ್ನು ನಿಯಂತ್ರಿಸುವುದಕ್ಕಾಗಿ ಕಾಯಿದೆಯನ್ನು ಜಾರಿಗೊಳಿಸಬೇಕು ಎಂಬ ವಾದ ಆಗಾಗ ಕೇಳಿ ಬರುವುದಿದೆ. ಇಂಥ ವಾದವನ್ನು ಮುಂದಿಡುವವರಲ್ಲಿ ಬಿಜೆಪಿ ಮತ್ತು ಅದರ ಬೆಂಬಲಿಗರು ಮುಂಚೂಣಿಯಲ್ಲಿದ್ದಾರೆ. ಮುಂದಿನ ಐವತ್ತೋ ನೂರೋ ವರ್ಷಗಳಾಗುವಾಗ ಮುಸ್ಲಿಮರ ಜನಸಂಖ್ಯೆ ಹಿಂದೂಗಳಿಗಿಂತಲೂ ಅಧಿಕವಾಗಲಿದೆ ಎಂಬ ಭೀತಿಯನ್ನೂ ಇವರಲ್ಲಿ ಕೆಲವರು ಹರಡುತ್ತಿರುತ್ತಾರೆ ಆದರೆ,

ಹೀಗಾಗುವುದು ಸಾಧ್ಯವೇ, ದೇಶದ ಈಗಿನ ಜನನ ಅನುಪಾತ ಹೇಗಿದೆ ಎಂಬ ಬಗ್ಗೆ ಇಂಥವರು ಮಾಹಿತಿ ಹಂಚಿಕೊಳ್ಳುವುದಿಲ್ಲ. ಕಳೆದ ತಿಂಗಳು ಬಿಡುಗಡೆಗೊಂಡ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ವರದಿಯು ಇಂಥ ಭೀತಿಗೆ ಆಧಾರವಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಿದೆ. ಈ ವರದಿಯ ಪ್ರಕಾರ, ದೇಶದಲ್ಲಿ ಮೊದಲ ಬಾರಿ ಜನನ ದರ ಅನುಪಾತವು ಸಹಜ ದರಕ್ಕಿಂತಲೂ ಕೆಳಗಿಳಿದಿದೆ. ಸಾಮಾನ್ಯವಾಗಿ ಒಂದು ದಂಪತಿಯು ಎರಡು ಮಕ್ಕಳಿಗೆ ಸಮ ಎಂದು ಲೆಕ್ಕ ಹಾಕಲಾಗುತ್ತದೆ. ಒಂದುವೇಳೆ, ದಂಪತಿಯೊಂದು  ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ ಅದು ಕ್ಷಿಪ್ರ ಜನಸಂಖ್ಯಾ ಬೆಳವಣಿಗೆಗೆ ಕಾರಣವಾಗಲಿದೆ ಎಂಬುದು ಲೆಕ್ಕಾಚಾರ. ವಿಶ್ವಸಂಸ್ಥೆಯ ಲೆಕ್ಕಾಚಾರದಂತೆ ಸಹಜ ಜನನ ಪ್ರಮಾಣ ದರ 2:1. ಆದರೆ,

2021, ನವೆಂಬರ್‌ನಲ್ಲಿ ಬಿಡುಗಡೆಗೊಂಡ ಸಮೀಕ್ಷಾ ವರದಿಯ ಪ್ರಕಾರ, ಈ ದೇಶ ಕ್ಷಿಪ್ರವಾಗಿ ಈ ಸಹಜ ಜನನ ಪ್ರಮಾಣ ದರಕ್ಕಿಂತಲೂ ಕೆಳಗಿಳಿಯುತ್ತಿದೆ. ಸಿಕ್ಕಿಮ್‌ನಲ್ಲಿ ಈ ಜನನ ದರ 1:1 ಆಗಿದೆ. ಇದು ದೇಶದಲ್ಲೇ  ಅತ್ಯಂತ ಕಡಿಮೆ. 1950ರಲ್ಲಿ ಈ ದೇಶದ ಜನನ ದರವು 5:90 ಆಗಿತ್ತು. ಅಂದರೆ, ಒಂದು ದಂಪತಿಗೆ ಸರಾಸರಿ 6 ಮಕ್ಕಳಿದ್ದರು. ಅಂದಿನಿಂದ ಈ 2021ರ ವರೆಗೆ ದೇಶದ ಜನನಾನುಪಾತವನ್ನು ವಿಶ್ಲೇಷಿಸಿದರೆ, ಜನಸಂಖ್ಯಾ ನಿಯಂತ್ರಣ ಕಾಯ್ದೆಯ ಅಗತ್ಯ ಇದೆಯೋ ಇಲ್ಲವೋ ಎಂಬುದು ಸ್ಪಷ್ಟವಾಗುತ್ತದೆ. ಸಿಕ್ಕಿಮ್‌ನಲ್ಲಿ ಇವತ್ತು ಸರಾಸರಿ ಒಂದು ದಂಪತಿಗೆ ಒಂದು ಮಗುವಷ್ಟೇ ಇದ್ದರೆ, ಲಡಾಕ್, ಗೋವಾ, ಅಂಡಮಾನ್-ನಿಕೋಬಾರ್, ಲಕ್ಷದ್ವೀಪ ಮತ್ತು ಜಮ್ಮು-ಕಾಶ್ಮೀರಗಳಲ್ಲಿ ಈ ದರವು ಸರಾಸರಿ ಒಂದೂವರೆ ಮಗುವಾಗಿರುತ್ತದೆ. ಮಹಾರಾಷ್ಟ್ರ  ಮತ್ತು ರಾಜಸ್ಥಾನಗಳಲ್ಲಿ ಸರಾಸರಿ ಒಂದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದೇಶದ ಒಟ್ಟು ಸರಾಸರಿ ಒಂದು ದಂಪತಿಗೆ ಎರಡು ಮಕ್ಕಳೆಂಬಂತೆ  ಇದ್ದಾರೆ. ಇದು ವಿಶ್ವಸಂಸ್ಥೆಯ ಆರೋಗ್ಯಕರ ಜನನ ಪ್ರಮಾಣ ದರಕ್ಕಿಂತಲೂ ಕಡಿಮೆ. ಅಂದಹಾಗೆ,

ಲ್ಯಾನ್ಸೆಟ್ ಪತ್ರಿಕೆಯು ನಡೆಸಿದ ಅಧ್ಯಯನವು ಇನ್ನೊಂದು ಸತ್ಯದತ್ತಲೂ ನಮ್ಮ ಗಮನ ಸೆಳೆಯುತ್ತದೆ. ಈಗಿನ ಜನನ ಪ್ರಮಾಣದ ಆಧಾರದಲ್ಲಿ ಹೇಳುವುದಾದರೆ ಮುಂದಿನ 80 ವರ್ಷಗಳ ಬಳಿಕ ದೇಶದ ಜನಸಂಖ್ಯೆ 100 ಕೋಟಿಗೆ ಇಳಿಯಲಿದೆ. ಮಾತ್ರವಲ್ಲ, 80 ವರ್ಷಗಳ ಬಳಿಕ ದೇಶದ ಜನನ ದರವು ಒಂದು ದಂಪತಿಗೆ ಒಂದು ಮಗು ಎಂಬಲ್ಲಿಗೆ ಬಂದು ನಿಲ್ಲಲಿದೆ ಎಂದೂ ಅದು ಹೇಳಿದೆ. ಅಷ್ಟಕ್ಕೂ,

1950ರಲ್ಲಿ ಒಂದು ದಂಪತಿಗೆ 6 ಮಕ್ಕಳು ಎಂಬಲ್ಲಿಂದ  ಈ 2021ಕ್ಕಾಗುವಾಗ ಒಂದು ದಂಪತಿಗೆ ಎರಡು ಮಕ್ಕಳು ಎಂಬಲ್ಲಿಗೆ ದೇಶದ ಜನನ ಅನುಪಾತ ಇಳಿದಿರುವುದಕ್ಕೆ ಕಾರಣ ಏನು? 2005-06ರ ವರ್ಷದಲ್ಲಿ ದೇಶದ ಜನನ ದರ 2:7 ಇದ್ದರೆ 2015-16ರ ಅವಧಿಯಲ್ಲಿ 2:2ಕ್ಕೆ ಇಳಿದಿತ್ತು. ಇದೀಗ 2:0 ಅನುಪಾತಕ್ಕೆ ಇಳಿದಿದೆ. ಸದ್ಯ ಬಿಹಾರದಲ್ಲಿ ಒಂದು ದಂಪತಿಗೆ 3 ಮಕ್ಕಳು ಎಂಬ ಅನುಪಾತ ಇದ್ದರೆ, ಮೇಘಾಲಯ 2:9, ಉತ್ತರ ಪ್ರದೇಶ 2:7, ಜಾರ್ಖಂಡ್‌ನಲ್ಲಿ 2:4 ಮತ್ತು ಮಣಿಪುರದಲ್ಲಿ 2:2 ಎಂಬ ಸ್ಥಿತಿ ಇದೆ. ಈ ರಾಜ್ಯಗಳನ್ನು ಪಕ್ಕಕ್ಕಿಟ್ಟರೆ ಈ ದೇಶದ ಜನನ ದರ ಪ್ರಮಾಣ ಒಂದು ದಂಪತಿಗೆ ಒಂದೂವರೆ ಮಗು ಎಂಬಲ್ಲಿಗೆ ಬಂದು ನಿಲ್ಲುತ್ತದೆ. 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನನ ಅನುಪಾತವು 1:1ರಿಂದ 1:9 ಮಾತ್ರ ಇದೆ ಎಂಬುದು ಇಲ್ಲಿ ಗಮನಾರ್ಹ. ಒಂದುರೀತಿಯಲ್ಲಿ,

ಜನನ ಪ್ರಮಾಣಕ್ಕೂ ಜನರ ಜೀವನ ಮಟ್ಟಕ್ಕೂ ಅಬೇಧ್ಯ ಸಂಬAಧ ಇದೆ ಎಂಬುದನ್ನು 1950ರ ಬಳಿಕದಿಂದ ಈವರೆಗಿನ ಜನನ ದರದ ಅಂಕಿಅಂಶ ಗಳು ಸಾರಿ ಹೇಳುತ್ತಿವೆ. 1950ರಲ್ಲಿದ್ದ ಭಾರತ ಈಗಿಲ್ಲ. ಹಸಿವು, ಬಡತನ, ಅಪೌಷ್ಟಿಕತೆ, ಅನಾರೋಗ್ಯ, ಅನಕ್ಷರತೆ ಇವುಗಳನ್ನೇ ಹೊದ್ದು ಮಲಗಿದ್ದ 1950ರ ಭಾರತಕ್ಕೆ ಹೋಲಿಸಿದರೆ 2021ರ ಭಾರತ ಸಾಕಷ್ಟು ಬದಲಾವಣೆಯಾಗಿದೆ. ಅಪೌಷ್ಟಿಕತೆಯ ನಿವಾರಣೆಯಲ್ಲಿ ಭಾರೀ ಪ್ರಗತಿ ಸಾಧ್ಯವಾಗಿದೆ. ಅನಕ್ಷರತೆಗೆ ಕಡಿವಾಣ ಬಿದ್ದಿದೆ. ಹಸಿವನ್ನು ನಿವಾರಿಸುವುದಕ್ಕಾಗಿ ಉಚಿತ ಪಡಿತರ ವಿತರಣೆಯಂಥ ಕಾರ್ಯಕ್ರಮಗಳು ದೊಡ್ಡಮಟ್ಟದ ಪರಿಣಾಮ ಬೀರುತ್ತಿವೆ. ಜನರ ಜೀವನ ಮಟ್ಟದ ಮೇಲೆ ನಿಧಾನಗತಿಯಲ್ಲಿ ಆಗುತ್ತಾ ಬಂದ ಪ್ರಗತಿಯ ಈ ಪರಿಣಾಮವು ಜನನ ಅನುಪಾತದ ಮೇಲೂ ಪ್ರಭಾವ ಬೀರುತ್ತಲೂ ಇದೆ. ಈ ಬದಲಾವಣೆ ಎಷ್ಟು ಕ್ಷಿಪ್ರಗತಿಯಲ್ಲಿ ಸಾಗುತ್ತಾ ಬಂದಿದೆ. ಎಷ್ಟೆಂದರೆ, ಕೇವಲ 70 ವರ್ಷಗಳೊಳಗೆ ಒಂದು ದಂಪತಿಗೆ 6 ಮಕ್ಕಳಿದ್ದಲ್ಲಿಂದ ಒಂದು ದಂಪತಿಗೆ 2 ಮಕ್ಕಳು ಎಂಬಲ್ಲಿವರೆಗೆ. ಹಾಗಂತ,

ಈ ಬದಲಾವಣೆಗೆ ಯಾವುದೇ ಕಾಯ್ದೆಯು ಕಾರಣವಲ್ಲ. ಜನನ ನಿಯಂತ್ರಣಕ್ಕಾಗಿ ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್ಖಂಡ್‌ಗಳಲ್ಲಿ ‘ಮಿಶನ್ ಪರಿವಾರ್ ವಿಕಾಸ್’ ಎಂಬಂಥ  ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದ್ದರೂ ಅದೂ ಕಾಯ್ದೆಯಲ್ಲ. ಜನರು ಸ್ವಯಂ ಪ್ರೇರಿತವಾಗಿ ಜನನ ನಿಯಂತ್ರಣ ಮಾಡಿಕೊಳ್ಳುವಂತೆ ಒಲಿಸುವುದೇ ಇದರ ಉದ್ದೇಶ. ಜನನ ನಿಯಂತ್ರಣಕ್ಕೆ ಸಂಬಂಧಿಸಿ ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳು ಜಾರಿಯಾಗಿರಬಹುದಾದರೂ ಅವು ಯಾವುವೂ ಕಾಯಿದೆಯಾಗಿ ಗುರುತಿಸಿಕೊಂಡಿಲ್ಲ. ಅವೆಲ್ಲವೂ ಜನಜಾಗೃತಿಯ ಭಾಗವಾಗಿಯಷ್ಟೇ ಇದೆ. ಕಳೆದ 70 ವರ್ಷಗಳಲ್ಲಿ ಯಾವ ಕಾಯಿದೆಯನ್ನೂ ರೂಪಿಸದೆಯೇ ಜನಸಂಖ್ಯಾ ದರವನ್ನು 6 ಮಕ್ಕಳಿಂದ 2 ಮಕ್ಕಳಿಗೆ ಇಳಿಸಲು ಈ ದೇಶಕ್ಕೆ ಸಾಧ್ಯವಾಗಿದೆಯೆಂದಾದರೆ, ಮತ್ತೇಕೆ ಕಾಯಿದೆಯ ಮಾತು? ಜನಸಂಖ್ಯಾ ನಿಯಂತ್ರಣ ಕಾಯ್ದೆ ಎಂಬ ಗುಮ್ಮನನ್ನು ತೋರಿಸುತ್ತಿರುವುದರ ಹಿಂದಿನ ಉದ್ದೇಶವೇನು? ನಿಜವಾಗಿ,

ಜನನವನ್ನು ಕಾನೂನಿನ ಮೂಲಕ ಬಲವಂತದಿಂದ  ತಡೆಯಲು ಹೊರಟ ಚೀನಾ ಇವತ್ತು ಕಂಗಾಲಾಗಿ ಕುಳಿತಿದೆ. ಎಲ್ಲಿಯವರೆಗೆಂದರೆ, ಒಂದೇ ಮಗು ಎಂಬ ನೀತಿಯನ್ನು ರದ್ದುಪಡಿಸಿ, ಮೂರು ಮಕ್ಕಳಿಗೂ ಅವಕಾಶ ಕೊಡುವಷ್ಟು ಉದಾರ ನೀತಿಗೆ ಅದು ಜೋತು ಬಿದ್ದಿದೆ. ಜಪಾನ್, ರಷ್ಯಾ, ಆಸ್ಟ್ರೆಲಿಯಾ ಸಹಿತ ಮುಂದುವರಿದಿರುವ ಸಾಕಷ್ಟು ರಾಷ್ಟ್ರಗಳು ಮಕ್ಕಳನ್ನು ಹೆಚ್ಚಿಸುವಂತೆ ತನ್ನ ನಾಗರಿಕರ ಮೇಲೆ ಒತ್ತಡ ಹೇರತೊಡಗಿವೆ. ಮಗು ಹೆರುವ ಹೆತ್ತವರಿಗೆ ಭಾರೀ ಮೊತ್ತದ ಬಹುಮಾನವನ್ನೂ ಘೋಷಿಸಿವೆ. ಭಾರತ ಸದ್ಯ ಆ ಒತ್ತಡದ ಸ್ಥಿತಿಯಲ್ಲಿಲ್ಲ. ಆದರೆ, ಜನನ ನಿಯಂತ್ರಣ ಕಾಯ್ದೆ ಜಾರಿಯಾದರೆ ಕ್ರಮೇಣ ಜನರಿಗೆ ಆ ನಿಯಂತ್ರಣ ಅಭ್ಯಾಸವಾಗುತ್ತದೆ. ಮುಂದೆ ಜನನಾನುಪಾತ ಅಪಾಯಕಾರಿ ಮಟ್ಟಕ್ಕೆ ಇಳಿದರೂ ಜನರು ಹೆಚ್ಚು ಮಕ್ಕಳನ್ನು ಹೆರುವುದಕ್ಕೆ ಹಿಂಜರಿಯುವ ಸಾಧ್ಯತೆ ಚೀನಾದಂತೆ ಇಲ್ಲೂ ತಲೆದೋರಬಹುದು. ಜನಸಂಖ್ಯೆಯನ್ನು ಹೊರೆ ಎಂದು ತಿಳಿದುಕೊಳ್ಳುವ ಯಾವುದೇ ದೇಶ, ಕ್ರಮೇಣ ವೃದ್ಧರನ್ನು ಹೊಂದಿದ ದೇಶವಾಗಿ ಮಾರ್ಪಾಡಬಲ್ಲುದು ಎಂಬುದಕ್ಕೆ ಈಗಿನ ಜಾಗತಿಕ ಬೆಳವಣಿಗೆಗಳಲ್ಲೇ  ಉತ್ತರ ಇದೆ. ಅಂದಹಾಗೆ,

ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರವು ಜನಸಂಖ್ಯಾ ನಿಯಂತ್ರಣದ ಬಗ್ಗೆ ಮಾತಾಡುತ್ತಿರುವುದಕ್ಕೆ ಕಾರಣ, ಜನಸಂಖ್ಯೆಯಲ್ಲ. ಅದು ಶುದ್ಧ ರಾಜಕೀಯದ ಬೇಡಿಕೆ. ಮುಸ್ಲಿಮರು ಬಹುಸಂಖ್ಯಾತರಾಗಲಿದ್ದಾರೆ ಎಂಬ ಅವರ ಹೇಳಿಕೆಗಳೇ ಇದಕ್ಕೆ ಪರಮ ಆಧಾರ. ಅವರಿಗೆ ಮುಸ್ಲಿಮ್ ಎಂಬುದು ರಾಜಕೀಯ ಆಯುಧ. ಈ ಆಯುಧವನ್ನು ಝಳಪಿಸಿದರೆ ಓಟುಗಳು ಉದುರುತ್ತವೆ ಎಂಬ ನಂಬಿಕೆ ಅವರಲ್ಲಿದೆ. ಆದ್ದರಿಂದ ಮುಸ್ಲಿಮರನ್ನು ಭೂತದಂತೆ ಬಿಂಬಿಸುವ ಅನಿವಾರ್ಯತೆ ಅವರಿಗಿದೆ. ನಿಜವಾಗಿ,

ಜನಸಂಖ್ಯೆಯ ಹೆಚ್ಚಳಕ್ಕೂ ಧರ್ಮಕ್ಕೂ ಸಂಬಂಧ  ಇಲ್ಲ. ನಗರ ಪ್ರದೇಶದ ನಿವಾಸಿಗಳಲ್ಲಿ ಜನಸಂಖ್ಯಾ ದರವು ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಗ್ರಾಮೀಣ ಪ್ರದೇಶದಲ್ಲಿ ಇದು ಹೆಚ್ಚಿದೆ. ಇದರಲ್ಲಿ ಹಿಂದೂ ಮುಸ್ಲಿಮ್ ಎಂಬ ಬೇಧವೂ ಇಲ್ಲ. ಜನರ ಜೀವನ ಮಟ್ಟವೇ ಜನನ ಪ್ರಮಾಣ ಏರಿಳಿತಕ್ಕಿರುವ ಬಹುಮುಖ್ಯ ಕಾರಣ. ಆದರೆ, ಬಿಜೆಪಿ ಮತ್ತು ಪರಿವಾರ ಈ ಕಟು ಸತ್ಯವನ್ನು ಅಡಗಿಸಿ ಸುಳ್ಳು ಹೇಳುತ್ತಿದೆ. ಅಷ್ಟೇ.

Saturday, 18 December 2021

ಎಪಿಸಿಆರ್ ವರದಿ ಮತ್ತು ಕಟಕಟೆಯಲ್ಲಿರುವ ಕ್ರೈಸ್ತ, ಮುಸ್ಲಿಮರು




ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಅಥವಾ ಎಪಿಸಿಆರ್ ನೇತೃತ್ವದ ಸರಕಾರೇತರ ಸಂಸ್ಥೆಯು ಇನ್ನೆರಡು  ಸಂಸ್ಥೆಗಳ ಸಹಕಾರದೊಂದಿಗೆ ಸತ್ಯಶೋಧನಾ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ‘ಭಾರತದಲ್ಲಿ ದಾಳಿಗೊಳಗಾದ ಕ್ರೈಸ್ತರು ’  ಎಂಬುದು ವರದಿಯ ಶೀರ್ಷಿಕೆ. ಇದರಲ್ಲಿ ರಾಜ್ಯಕ್ಕೆ ಸಂಬಂಧಿಸಿ ಆರು ಚರ್ಚ್ ಗಳ  ಉಲ್ಲೇಖ ಇದೆ. ಕಳೆದ ಎರಡು ತಿಂಗಳಲ್ಲಿ 5  ಚರ್ಚ್ ಗಳ  ಮೇಲೆ ದಾಳಿ ನಡೆದಿರುವುದನ್ನು ಈ ವರದಿಯಲ್ಲಿ ಎತ್ತಿ ಹೇಳಲಾಗಿದೆ. ಜನವರಿ 3ರಂದು ಕೊಪ್ಪಳದಲ್ಲಿ, ಅಕ್ಟೋಬರ್  10ರಂದು ಉಡುಪಿ ಮತ್ತು ಉತ್ತರ ಕರ್ನಾಟಕದ ಹಳಿಯಾಳದಲ್ಲಿ, ನವೆಂಬರ್ 10ರಂದು ಬೆಳಗಾವಿಯಲ್ಲಿ, ನವೆಂಬರ್ 14ರಂದು  ಬೆಂಗಳೂರಿನ ರಾಜನಕುಂಟೆಯಲ್ಲಿ ಮತ್ತು ಇದೇ ದಿನ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಹಾಗೂ ನವೆಂಬರ್ 29ರಂದು ಹಾಸ ನದ ಬೇಲೂರಿನಲ್ಲಿ ಕ್ರೈಸ್ತ ವಿರೋಧಿ ಘಟನೆಗಳು ನಡೆದಿವೆ. ಕ್ರೈಸ್ತರ ಪ್ರಾರ್ಥನಾ ಚಟುವಟಿಕೆಗಳಿಗೆ ಅಡ್ಡಿಪಡಿಸುವ, ಪಾದ್ರಿಗಳ ಮೇಲೆ ಹಲ್ಲೆ  ನಡೆಸುವ ಹಾಗೂ ಚರ್ಚ್ ಗಳಿಗೆ  ಹಾನಿಯೆಸಗುವ ಪ್ರಕರಣಗಳು ನಡೆದಿರುವುದನ್ನು ವರದಿಯಲ್ಲಿ ಆಧಾರ ಸಮೇತ ಉಲ್ಲೇಖಿಸಲಾಗಿದೆ.  ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮತ್ತು 
ಯುನೈಟೆಡ್ ಅಗೈನ್ಸ್ಟ್ ಹೇಟ್ ಎಂಬೆರಡು ಸಂಸ್ಥೆಗಳೂ ಈ ವರದಿಯನ್ನು ತಯಾರಿಸುವಲ್ಲಿ  ನೆರವಾಗಿವೆ. ಹಾಗಂತ,

ಎಪಿಸಿಆರ್ ನೇತೃತ್ವದಲ್ಲಿ ತಯಾರಿಸಲಾದ ಈ ವರದಿಯನ್ನು ಓದಿ ರಾಜ್ಯ ಸರಕಾರ ಇಲ್ಲವೇ ರಾಜ್ಯದ ನಾಗರಿಕರು ಬೆಚ್ಚಿ ಬೀಳುತ್ತಾರೆ  ಎಂದು ನಿರೀಕ್ಷಿಸುವ ಸನ್ನಿವೇಶವೇನೂ ಈಗಿಲ್ಲ. ಈಗಾಗಲೇ ಈ ದೇಶದ ಮುಸ್ಲಿಮರು ಇದಕ್ಕಿಂತಲೂ ಕ್ರೂರವಾದ ದೌರ್ಜನ್ಯ ಮತ್ತು  ಹಿಂಸೆಗಳಿಗೆ ನಿತ್ಯ ತುತ್ತಾಗುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡುತ್ತಲೇ ಇವೆ. ಪ್ರತಿ ಶುಕ್ರವಾರ ಮುಸ್ಲಿಮರ ಜುಮಾ ನಮಾಜ್ ಗೆ  ಅಡ್ಡಿಪಡಿಸುವ ವರದಿ ಹರ್ಯಾಣದಿಂದ ವರದಿಯಾಗುತ್ತಿದೆ. ತೆರೆದ ಬಯಲಲ್ಲಿ ನಮಾಜ್  ಮಾಡುವುದಕ್ಕೆ ಸರಕಾರ ಅನುಮತಿಸಿರುವ  ಹೊರತಾಗಿಯೂ ಸಂಘಪರಿವಾರ ಅಡ್ಡಿಪಡಿಸುತ್ತಿದೆ. ಮುಸ್ಲಿಮರನ್ನು ಥಳಿಸುವ, ಅವರ ಗಡ್ಡ ಬೋಳಿಸುವ ಮತ್ತು ವಿವಿಧ ದೌರ್ಜನ್ಯ,  ಅವಮಾನಗಳಿಗೆ ತುತ್ತಾಗಿಸುವ ಕೃತ್ಯಗಳು ಅಲ್ಲಲ್ಲಿ ಪ್ರತಿನಿತ್ಯವೆಂಬಂತೆ  ನಡೆಯುತ್ತಿವೆ. ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷಭಾಷಣ  ಮಾಡಲಾಗುತ್ತಿದೆ. ಮುಸ್ಲಿಮರ ವಿರುದ್ಧ ಹಿಂಸೆಗೆ ಅಕಾರಣವಾಗಿ ಪ್ರಚೋದಿಸಲಾಗುತ್ತಿದೆ. ಅಂದಹಾಗೆ,

ಮುಸ್ಲಿಮರ ಮೇಲೆ ನಡೆದಿರುವ ದೌರ್ಜನ್ಯಗಳ ಮೊತ್ತಕ್ಕೆ ಹೋಲಿಸಿದರೆ ಕ್ರೈಸ್ತರ ಮೇಲೆ ನಡೆದಿರುವ ದೌರ್ಜನ್ಯಗಳು ಕಡಿಮೆ. ಹಾಗಂತ,  ಇದಕ್ಕೆ ಕ್ರೈಸ್ತರ ಮೇಲೆ ಈ ದುಷ್ಕರ್ಮಿಗಳಿಗಿರುವ ಪ್ರೇಮಭಾವ ಕಾರಣ ಅಲ್ಲ. ಕ್ರೈಸ್ತರು ಮತ್ತು ಮುಸ್ಲಿಮರು ಈ ದುಷ್ಕರ್ಮಿಗಳ ಪಾಲಿಗೆ  ಸಮಾನ ಗುರಿ. ಈ ದುಷ್ಕರ್ಮಿಗಳು ಬೆಂಬಲಿಸುವ ಅಥವಾ ಈ ದುಷ್ಕರ್ಮಿಗಳನ್ನು ಸಾಕುವ ರಾಜಕೀಯ ಪಕ್ಷದ ಪಾಲಿಗೆ ಇವರೇ  ಆಮ್ಲಜನಕ. ಯಾವಾಗ ಈ ದುಷ್ಕರ್ಮಿಗಳೆಂಬ ಆಮ್ಲಜನಕದ ನಳಿಗೆಯ ಸಂಪರ್ಕವನ್ನು ಆ ರಾಜಕೀಯ ಪಕ್ಷದಿಂದ  ತಪ್ಪಿಸಿಬಿಡಲಾಗುತ್ತೋ ಆಗಲೇ ಆ ಪಕ್ಷದ ಆಯುಷ್ಯ ಕೊನೆಗೊಳ್ಳುತ್ತದೆ. ಇದು ಈ ದುಷ್ಕರ್ಮಿಗಳಿಗೂ ಗೊತ್ತು. ಆ ರಾಜಕೀಯ ಪಕ್ಷಕ್ಕೂ  ಗೊತ್ತು. ಆದ್ದರಿಂದ,

ಈ ದೌರ್ಜನ್ಯಕೋರರನ್ನು ಸದಾ ಬ್ಯುಝಿಯಾಗಿಡಬೇಕಾದ ಒತ್ತಡವೊಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೇಲಿದೆ. ಪ್ರತಿದಿನ ಏ ನಾದರೊಂದು ಗುರಿಯನ್ನು ಈ ದೌರ್ಜನ್ಯಕೋರರಿಗೆ ನೀಡದಿದ್ದರೆ ತಮ್ಮ ಅಸ್ತಿತ್ವ ಕಷ್ಟಸಾಧ್ಯ ಎಂಬ ಅರಿವೂ ಅದಕ್ಕಿದೆ. ಆದ್ದರಿಂದಲೇ,  ಮುಸ್ಲಿಮ್ ದ್ವೇಷದ ಕಟ್ಟುಕತೆಗಳನ್ನು ತಯಾರಿಸಿ ಈ ಗುಂಪಿಗೆ ಹಂಚುತ್ತಾರೆ. ಎಂದೋ ಕಳೆದು ಹೋದ ರಾಜರ ಹೆಸರಿನಿಂದ ತೊಡಗಿ  ಈಗಿನ ಮುಸ್ಲಿಮರ ವರೆಗೆ ಸುಳ್ಳುಗಳನ್ನು ಪೋಣಿಸಿ ಸಮಾಜಕ್ಕೆ ಹಂಚುತ್ತಿರುತ್ತಾರೆ. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು  ಇಂಥ ಅಸಂಖ್ಯ ಸುಳ್ಳುಗಳಲ್ಲಿ ಒಂದಾದರೆ ಇನ್ನೊಂದು, ಕ್ರೈಸ್ತರು ಮತಾಂತರ ಮಾಡುತ್ತಾರೆ ಎನ್ನುವುದು. ಮುಸ್ಲಿಮರನ್ನು ಗುರಿಯಾಗಿಸಿ  ಆಗಾಗ ಸಮಾನ ನಾಗರಿಕ ಸಂಹಿತೆಯ ಜಪ ಮಾಡುವ ಈ ರಾಜಕೀಯ ಪಕ್ಷವು ಕ್ರೈಸ್ತರನ್ನು ನೋಡಿಕೊಂಡು ‘ಮತಾಂತರ ನಿಷೇಧ  ಕಾಯ್ದೆ’ಯ ಬಗ್ಗೆ ಮಾತಾಡುತ್ತಿರುತ್ತದೆ. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಬಿಜೆಪಿ ಸಂಸದರೊಬ್ಬರು ಸಮಾನ ನಾಗರಿಕ ಸಂಹಿತೆ  ಮಸೂದೆಯನ್ನು ಖಾಸಗಿಯಾಗಿ ಮಂಡಿಸಿದ್ದಾರೆ. ತನ್ನ ಬೆಂಬಲಿಗ ಪರಿವಾರವನ್ನು ಸಂತಸಪಡಿಸುವುದು ಮತ್ತು ಸಾರ್ವಜನಿಕವಾಗಿ ಹಿಂದೂ-ಮುಸ್ಲಿಮ್ ಚರ್ಚೆಯೊಂದಿಗೆ ಧಾರ್ಮಿಕ ವಿಭಜನೆಯನ್ನು ಊರ್ಜಿತದಲ್ಲಿಡುವುದೇ ಇದರ ಉದ್ದೇಶ. ಇದು ಸರಕಾರ  ಮಂಡಿಸಿದ ಮಸೂದೆ ಅಲ್ಲ ಮತ್ತು ಇಂಥ ಮಸೂದೆಯನ್ನು ಯಾರಿಗೆ ಬೇಕಾದರೂ ಮಂಡಿಸಬಹುದು ಎಂಬುದು ಮಂಡಿಸಿದವರಿಗೂ  ಗೊತ್ತು. ಸರ್ಕಾರಕ್ಕೂ ಗೊತ್ತು. ಆದರೆ, ಸರಕಾರ ಶೀಘ್ರವೇ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಿದೆ ಎಂದು  ತನ್ನ ಬೆಂಬಲಿಗ ಪರಿವಾರದ ಮೂಲಕ ಸಾರ್ವಜನಿಕವಾಗಿ ಆಡಿಕೊಳ್ಳುವುದಕ್ಕೆ ಆಧಾರವನ್ನು ಕೊಡುವುದು ಇದರ ಉದ್ದೇಶ.

ಸಿಎಎ ಕಾಯ್ದೆಯ ವ್ಯಾಪ್ತಿಯಿಂದ ಮುಸ್ಲಿಮರನ್ನು ಹೊರಗಿರಿಸಿ ಕ್ರೈಸ್ತರನ್ನು ಸೇರಿಸಿಕೊಳ್ಳಲಾಯಿತು. ಡಿಸೆಂಬರ್ 31, 2014ಕ್ಕಿಂತ  ಮೊದಲು ಪಾಕ್, ಬಾಂಗ್ಲಾ ಮತ್ತು ಅಫಘಾನ್‌ನಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲದ ಉಳಿದೆಲ್ಲ ಧರ್ಮೀಯರಿಗೂ ಪೌರತ್ವ ಕೊಡುವ  ಈ ಕಾಯ್ದೆಯನ್ನು ಸಂವಿಧಾನ ಪ್ರೇಮಿಗಳು ವಿರೋಧಿಸಬಹುದು ಎಂಬುದು ಆಡಳಿತಗಾರರಿಗೆ ತಿಳಿದಿಲ್ಲ ಎಂದು ಹೇಳುವ ಹಾಗಿಲ್ಲ. ಈ  ಕಾನೂನಿನ ವಿರುದ್ಧ ದೇಶದಲ್ಲಿ ಪ್ರತಿಭಟನೆ ಏಳಬೇಕು ಮತ್ತು ಆ ಇಡೀ ಪ್ರತಿಭಟನೆಯನ್ನು ಮುಸ್ಲಿಮ್ ಓಲೈಕೆಯಾಗಿ ಪ್ರತಿಬಿಂಬಿಸಬೇಕು  ಎಂಬುದು ಆಡಳಿತಗಾರರ ಹುನ್ನಾರವಾಗಿರಬಹುದು. ಇದೀಗ ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ  ಕಾಯ್ದೆಯೂ ಇಂಥದ್ದೇ  ಒಂದು ಹುನ್ನಾರ. ಈ ಕಾಯ್ದೆಯನ್ನು ತರುತ್ತೇವೆ ಎಂದು ಹೇಳುವ ಮೊದಲು ರಾಜ್ಯದ ಹಲವು ಕಡೆ ಕ್ರೈಸ್ತ  ಪ್ರಾರ್ಥನಾ ಮಂದಿರಗಳ ಮೇಲೆ ಮತ್ತು ಪಾದ್ರಿಗಳ ಮೇಲೆ ದಾಳಿ ನಡೆಸಲಾಯಿತು. ಶಾಸಕ ಗೂಳಿಹಟ್ಟಿ ಶೇಖರ್ ಅವರು ವಿಧಾ ನಸಭೆಯಲ್ಲಿ ತನ್ನ ತಾಯಿಯ ಮತಾಂತರವನ್ನು ಹೇಳಿಕೊಂಡರು. ಅದರ ಬೆನ್ನಿಗೇ ಕ್ರೈಸ್ತರು ಮತಾಂತರ ಮಾಡುತ್ತಿದ್ದಾರೆ ಎಂಬ  ಹೇಳಿಕೆಗಳನ್ನು ಹಲವು ನಾಯಕರು ಬೆನ್ನುಬೆನ್ನಿಗೇ ನೀಡತೊಡಗಿದರು. ಆ ಮೂಲಕ ರಾಜ್ಯದ ಗಮನವನ್ನು ಮುಸ್ಲಿಮರಿಂದ ಕ್ರೈಸ್ತರ  ಕಡೆಗೆ ತಿರುಗಿಸುವ ಪ್ರಯತ್ನ ನಡೆಸಲಾಯಿತು. ಹಾಗಂತ,

ಇದು ಮೊದಲ ಘಟನೆ ಅಲ್ಲ. ಒಂದೋ ಮುಸ್ಲಿಮರು ಅಥವಾ ಕ್ರೈಸ್ತರು ರಾಜ್ಯದಲ್ಲಿ ಸದಾ ದೂಷಣೆಗೆ ಒಳಗಾಗುತ್ತಿರಬೇಕು ಮತ್ತು  ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ದಂಡಿಸುತ್ತಿರಬೇಕು ಎಂದು ಆಡಳಿತದಲ್ಲಿರುವವರು ತೀರ್ಮಾನಿಸಿದ್ದಾರೆ. ಹಾಗೆ ಮಾಡದಿದ್ದರೆ ತಮ್ಮ  ಬೆಂಬಲಿಗ ಪರಿವಾರದಲ್ಲಿ ಉತ್ಸಾಹ ಕುಗ್ಗುತ್ತದೆ. ಹಾಗೇನಾದರೂ ಆದರೆ ಸರ್ಕಾರದ ಆಡಳಿತ ವೈಫಲ್ಯವನ್ನು ಜನರು ಚರ್ಚಿಸುವುದಕ್ಕೆ  ಪ್ರಾರಂಭಿಸುತ್ತಾರೆ. ಅಂಥ ಬೆಳವಣಿಗೆಯೇನಾದರೂ ಯಶಸ್ವಿಯಾಗಿಬಿಟ್ಟರೆ ಹಿಂದೂ-ಮುಸ್ಲಿಮ್-ಕ್ರೈಸ್ತರೆಲ್ಲ ಒಟ್ಟಾಗುವ ಸನ್ನಿವೇಶ  ನಿರ್ಮಾಣವಾಗಬಹುದು ಮತ್ತು ಅದು ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂಬ ಭೀತಿ ಸರ್ಕಾರಕ್ಕಿದೆ. ನಿಜವಾಗಿ,

ಎಪಿಸಿಆರ್ ಬಿಡುಗಡೆಗೊಳಿಸಿರುವ ವರದಿಯು ಈ ದೇಶದ ನಾಗರಿಕ ಸಮೂಹವೊಂದಕ್ಕೆ ಸಂಬಂಧಿಸಿದ್ದು. ಆದ್ದರಿಂದ ಅದನ್ನು ಕ್ರೆÊಸ್ತ  ಸಮುದಾಯಕ್ಕೆ ಸಂಬಂಧಿಸಿದ ವರದಿ ಎಂದು ಪ್ರತ್ಯೇಕಿಸುವುದು ಮತ್ತು ಅದನ್ನು ಕ್ರೈಸ್ತರು ನೋಡಿಕೊಳ್ಳಲಿ ಎಂದು ಉಳಿದವರು ಸುಮ್ಮ ನಿದ್ದು ಬಿಡುವುದು ಅತ್ಯಂತ ಅಪಾಯಕಾರಿ. ಈ ದೇಶದ ನಾಗರಿಕರ ಸಮಸ್ಯೆಗಳು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಹಣೆಪಟ್ಟಿಯನ್ನು  ಅಂಟಿಸಿಕೊಂಡು ಗುರುತಿಗೀಡಾಗಬೇಕು ಎಂಬುದು ಈ ಸಮಸ್ಯೆಗೆ ಕಾರಣರಾದವರ ಬಯಕೆ. ಅವರ ಯಶಸ್ಸು ಇರುವುದೇ ಇದರಲ್ಲಿ.  ಯಾವಾಗ ಕ್ರೈಸ್ತರ ಮೇಲಿನ ದಾಳಿಗಳನ್ನು ಕ್ರೈಸ್ತರಿಗೆ ಮತ್ತು ಮುಸ್ಲಿಮರ ಮೇಲಿನ ದಾಳಿಗಳನ್ನು ಮುಸ್ಲಿಮರಿಗೆ ನಾವು  ಸೀಮಿತಗೊಳಿಸಿಬಿಡುತ್ತೇವೋ ಅಲ್ಲಿವರೆಗೆ ಆ ದೌರ್ಜನ್ಯಕೋರರು ಯಶಸ್ವಿಯಾಗುತ್ತಲೇ ಹೋಗುತ್ತಾರೆ. ಆದ್ದರಿಂದ ಎಪಿಸಿಆರ್‌ನ ವರ ದಿಯು 6 ಕೋಟಿ ಕನ್ನಡಿಗರ ಧ್ವನಿಯಾಗಬೇಕು. ತಮ್ಮ ಮೇಲೆ ನಡೆದ ದೌರ್ಜನ್ಯ ಎಂಬಂತೆ  ಅವರೆಲ್ಲ ಅಂದುಕೊಳ್ಳಬೇಕು ಮತ್ತು  ಸರ್ಕಾರದ ವಿಭಜಿಸಿ ಆಳುವ ತಂತ್ರವನ್ನು ಸೋಲಿಸಬೇಕು.

ನಾಗಬನ: ದುರ್ಜನರಲ್ಲಿರುವ ಸೌಹಾರ್ದ ಸಜ್ಜನರಲ್ಲೇಕಿಲ್ಲ?




ಅಕ್ಷರ ಸಂತ ಹಾಜಬ್ಬ ಮಂಗಳೂರಿನಿಂದ  ದೆಹಲಿಗೆ ತೆರಳಿ ಪದ್ಮಶ್ರೀ ಪ್ರಶಸ್ತಿಯನ್ನು ಪಡಕೊಂಡುದುದಕ್ಕೆ ರೋಮಾಂಚನಗೊಂಡು   ಸಂಭ್ರಮಿಸಿದ ದಕ್ಷಿಣ ಕನ್ನಡಕ್ಕೆ, ಈ ಖುಷಿಯ ಬಳಿಕದ ದಿನಗಳೇನೂ ನೆಮ್ಮದಿದಾಯಕವಾಗಿರಲಿಲ್ಲ. ಹಾಗಂತ,

ಹಾಜಬ್ಬ ದೆಹಲಿಗೆ ಹೋಗುವುದಕ್ಕಿಂತ ಮೊದಲೂ ಈ ಜಿಲ್ಲೆಯ ಸ್ಥಿತಿಯೇನೂ ಉತ್ತಮವಾಗಿರಲಿಲ್ಲ. ಒಂದು ತಿಂಗಳ ಒಳಗೆ ಒಂದು  ಡಝನ್‌ನಷ್ಟು ಅನೈತಿಕ ಪೊಲೀಸ್‌ಗಿರಿಗೆ ಸಾಕ್ಷ್ಯ  ವಹಿಸಿದ ಈ ಜಿಲ್ಲೆ, ಹಾಜಬ್ಬ ಪದ್ಮಶ್ರೀ ಪಡೆದ ಬಳಿಕ ನಡೆದ ನಾಗಬನ ಧ್ವಂಸ ಘಟನೆಯು ಹಾಜಬ್ಬರನ್ನು ಮರೆತು ಈ ಜಿಲ್ಲೆ ಆತಂಕವನ್ನು ಹೊದ್ದುಕೊಳ್ಳುವಂತೆ ಮಾಡಿತು. ಜಿಲ್ಲೆಯ ಕೂಳೂರಿನಲ್ಲಿ ನಾಗಬನ  ಧ್ವಂಸಗೊಳಿಸಲಾದರೆ, ಕೋಡಿಕಲ್ ಎಂಬಲ್ಲಿ ನಾಗಬನದ ಕಲ್ಲು ಕಿತ್ತೆಸೆದ ಪ್ರಕರಣ ನಡೆಯಿತು. ಈ ಎರಡೂ ಘಟನೆಗಳು ಹಿಂದೂ  ಸಮುದಾಯಕ್ಕೆ ಸಂಬಂಧಿಸಿದವುಗಳಾಗಿರುವುದರಿಂದ  ಮುಸ್ಲಿಮ್ ಸಮುದಾಯವನ್ನು ಸಂದೇಹಿಸುವ ಮತ್ತು ಪರೋಕ್ಷ  ವಾಗ್ದಾಳಿಗಳನ್ನು  ನಡೆಸುವ ರೂಪದಲ್ಲೇ  ಹೇಳಿಕೆಗಳು ಬರತೊಡಗಿದುವು. ಘಟನೆಯನ್ನು ಖಂಡಿಸಿ ಸ್ಥಳೀಯವಾಗಿ ಬಂದ್ ಕೂಡಾ ನಡೆಯಿತು. ಪ್ರತಿಭಟನೆಗಳೂ ನಡೆದುವು. ಇದೀಗ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ವಿಶೇಷ ಏನೆಂದರೆ,

ಬಂಧಿತರಲ್ಲಿ ನಾಲ್ಕು ಮಂದಿ ಹಿಂದೂಗಳಾದರೆ ಮೂವರು ಮುಸ್ಲಿಮರು ಮತ್ತು ಓರ್ವ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸಿದ್ದಾನೆ.  ಅಂದಹಾಗೆ, ಅಪರಾಧ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರ ಈ ಧಾರ್ಮಿಕ ಸೌಹಾರ್ದವನ್ನು ಅನೇಕರು ವ್ಯಂಗ್ಯದಿಂದ ಇರಿದರು. ಇದಾಗಿ  ಮರ‍್ನಾಲ್ಕು ದಿನಗಳ ಬಳಿಕ 9 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದರು. ಇವರೆಲ್ಲರ ಮೇಲೆ ರ‍್ಯಾಗಿಂಗ್ ಆರೋಪವಿತ್ತು.  ಇಬ್ಬರು ಕಿರಿಯ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಲವಂತವಾಗಿ ತಮ್ಮ ಕೊಠಡಿಗೆ ಕರೆದೊಯ್ದು ಅವರಲ್ಲಿ ಹಾಡು ಹಾಡಿಸಿ, ಗಡ್ಡ  ಬೋಳಿಸಿ, ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿದ ಆರೋಪ ಇವರ ಮೇಲಿದೆ. ಇಲ್ಲೂ ನಾಗಬನ ಧ್ವಂಸ ಘಟನೆಯಲ್ಲಿ ಮೆರೆದ  ಅದೇ ಸೌಹಾರ್ದವಿದೆ. ಬಂಧಿತರಲ್ಲಿ ಮುಸ್ಲಿಮರೂ ಇದ್ದಾರೆ, ಕ್ರೈಸ್ತ ಮತ್ತು ಹಿಂದೂಗಳೂ ಇದ್ದಾರೆ. ನಿಜವಾಗಿ,

ಕೆಡುಕನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿ, ಆರೋಪ-ಪ್ರತ್ಯಾರೋಪ ಹೊರಿಸುವ ಸರ್ವರೂ ಆತ್ಮಾವಲೋಕನ ನಡೆಸಬೇಕಾದ  ಘಟನೆಗಳಿವು. ನಾಗಬನ ಹಿಂದೂಗಳ ಪಾಲಿಗೆ ಕಾರಣಿಕದ ಸ್ಥಳಗಳು. ಆದರೆ ಇವನ್ನು ಧ್ವಂಸಗೊಳಿಸುವಲ್ಲಿ ಹಿಂದೂ-ಮುಸ್ಲಿಮ್-ಕ್ರೈಸ್ತ  ನಾಮಧೇಯವುಳ್ಳ ಎಲ್ಲರೂ ಸೇರಿದ್ದಾರೆ. ರ‍್ಯಾಗಿಂಗ್‌ಗೆ ಒಳಗಾಗಿರುವುದು ಇಬ್ಬರು ಹಿಂದೂ ವಿದ್ಯಾರ್ಥಿಗಳು. ಆದರೆ ಇವರ ಮೇಲೆ  ರ‍್ಯಾಗಿಂಗ್ ನಡೆಸಿರುವ ಆರೋಪಿಗಳಲ್ಲಿ ಹಿಂದೂ-ಮುಸ್ಲಿಮ್-ಕ್ರೈಸ್ತ ಎಲ್ಲರೂ ಇದ್ದಾರೆ. ಒಂದು ರೀತಿಯಲ್ಲಿ,

ರೊಚ್ಚಿಗೇಳುವ ಸಮಾಜಕ್ಕೆ ಇದೊಂದು ಪಾಠ. ನಾಗಬನ ಧ್ವಂಸಗೊಳಿಸಿದ ಮತ್ತು ರ‍್ಯಾಗಿಂಗ್ ನಡೆಸಿದ ಅಷ್ಟೂ ಆರೋಪಿಗಳಲ್ಲಿ ಒಂದು  ಸಮಾನ ಅಂಶವಿದೆ. ಅದುವೇ ಮಾದಕ ವಸ್ತು ಸೇವನೆ ಮತ್ತು ಮದ್ಯಪಾನ. ಆದರೆ ಮಸೀದಿ ಮೇಲೆ ದಾಳಿಯಾದಾಗ ಹಿಂದೂಗಳ ಬಗ್ಗೆ  ಅನುಮಾನ ಪಡುವ ಮತ್ತು ಮಂದಿರದ ಮೇಲೆ ದಾಳಿಯಾದಾಗ ಮುಸ್ಲಿಮರ ಬಗ್ಗೆ ಸಂದೇಹ ಪಡುವ ಸಮಾಜ, ಇಷ್ಟೇ ತೀವ್ರತೆಯಿಂದ  ಗಾಂಜಾ ಮತ್ತು ಮದ್ಯದ ವಿರುದ್ಧ ಚಳವಳಿ ನಡೆಸುವುದಕ್ಕೆ ಮುಂದಾಗುವುದೇ ಇಲ್ಲ. ಅಂದಹಾಗೆ, ಈ ಎರಡು ಪ್ರಕರಣಗಳಿಗೆ ಸಂಬAಧಿಸಿ  ಮಾತ್ರವೇ ಗಾಂಜಾ ಮತ್ತು ಮದ್ಯವು ಅಪರಾಧಿ ಸ್ಥಾನದಲ್ಲಿ ನಿಂತಿರುವುದಲ್ಲ. ಈ ದೇಶದಲ್ಲಿ ನಡೆಯುವ ಹೆಚ್ಚಿನೆಲ್ಲ ಅತ್ಯಾಚಾರ, ಹತ್ಯೆ,  ಧರ್ಮದ್ವೇಷದ ಕೃತ್ಯಗಳ ಹಿಂದಿನ ಬಲುದೊಡ್ಡ ಚಾಲಕ ಶಕ್ತಿ ಈ ಮದ್ಯ ಮತ್ತು ಮಾದಕ ವಸ್ತುಗಳೇ. ಅತ್ಯಾಚಾರ ಪ್ರಕರಣಗಳಲ್ಲಂತೂ  ಸಾಲು ಸಾಲಾಗಿ ಈ ಸತ್ಯ ಮತ್ತೆ ಮತ್ತೆ ಸಾಬೀತುಗೊಳ್ಳುತ್ತಲೇ ಇದೆ. ದೇಶದಲ್ಲಿ ನಿರ್ಭಯ ಪ್ರಕರಣದಿಂದ ಹಿಡಿದು ಹೈದರಾಬಾದ್‌ನ ದಿಶಾಳ ವರೆಗೆ ಮತ್ತು ಮೈಸೂರಿನ ಚಾಮುಂಡೇಶ್ವರಿ ಅತ್ಯಾಚಾರ ಪ್ರಕರಣದಿಂದ ಹಿಡಿದು ಮಂಗಳೂರಿನ ಉಳಾಯಿಬೆಟ್ಟುವಿನಲ್ಲಿ 8  ವರ್ಷದ ಬಾಲೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವಲ್ಲಿ ವರೆಗೆ ಮದ್ಯವೇ ಪ್ರಧಾನ ಆರೋಪಿ. ಅಷ್ಟಕ್ಕೂ,

ತನಗೆ ಸಂಬಂಧವೇ ಇಲ್ಲದ, ಪರಿಚಿತರೇ ಅಲ್ಲದ ಮತ್ತು ಯಾವ ದ್ವೇಷವನ್ನೂ ಹೊಂದಿಲ್ಲದ ವ್ಯಕ್ತಿಯನ್ನು ಇನ್ನೋರ್ವ ವ್ಯಕ್ತಿ ವಿನಾ  ಕಾರಣ ಹತ್ಯೆ ಮಾಡುವುದಕ್ಕೆ ಏನು ಪ್ರಚೋದನೆ? ಅಂಥದ್ದೊಂದು ಧೈರ್ಯ ಅವರಲ್ಲಿ ಮೂಡುವುದಾದರೂ ಹೇಗೆ? ಎಂಟೋ ಐದೋ  ಮೂರೋ ವರ್ಷದ ಬಾಲೆಯನ್ನು ಅತ್ಯಾಚಾರ ಮಾಡಿ ಕೊಲೆಗೈಯಲು ಸಹಜ ಸ್ಥಿತಿಯಲ್ಲಿರುವ ಓರ್ವ ವ್ಯಕ್ತಿಗೆ ಸಾಧ್ಯವೇ? ದೈಹಿಕ  ಕಾಮನೆ ಅರಳುವುದಕ್ಕೂ ಒಂದು ಕಾರಣ ಇದೆ. ಯಾವ ದೃಷ್ಟಿಕೋನದಿಂದ ವಿಶ್ಲೇಷಿಸಿದರೂ ಮಕ್ಕಳು ಈ ಕಾರಣದ ಚೌಕಟ್ಟಿನೊಳಗೆ  ಬರುವುದಕ್ಕೆ ಸಾಧ್ಯವೇ ಇಲ್ಲ. ಹಾಗಿದ್ದರೂ ಹಸುಳೆಗಳ ಮೇಲೆ ಅತ್ಯಾಚಾರ ಏಕಾಗುತ್ತದೆ? ಎಲ್ಲೋ  ನಡೆದುಕೊಂಡು ಹೋಗುತ್ತಿರುವ  ವ್ಯಕ್ತಿಯನ್ನು ಅವರಿಗೆ ಪರಿಚಯವೇ ಇಲ್ಲದ ವ್ಯಕ್ತಿಗಳೇಕೆ ಥಳಿಸುತ್ತಾರೆ? ಅವರಿಬ್ಬರ ಧರ್ಮ ಬೇರೆ ಬೇರೆಯಾಗಿರುವುದು ಇದಕ್ಕೆ  ಕಾರಣವೇ? ಹಸುಳೆಗಳ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿಯೂ ಇಂಥದ್ದೇ  ಪ್ರಶ್ನೆಗಳಿವೆ. ಲೈಂಗಿಕ ಆಕರ್ಷಣೆಗೆ ಈಡು ಮಾಡುವ  ಯಾವ ದೈಹಿಕ ಬೆಳವಣಿಗೆಗಳು ಮಕ್ಕಳಲ್ಲಿದ್ದುವು? ಆಟವಾಡುವ ಹಸುಳೆಗಳ ಮೇಲಿನ ಅತ್ಯಾಚಾರಕ್ಕೆ ಏನು ಕಾರಣ? ನಿಜವಾಗಿ,

ಅಪರಾಧಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಕ್ಕಿಂತ ಮೊದಲು ನಾವೆಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ  ಸಂಗತಿಗಳಿವು. ನಿಜವಾದ ಧರ್ಮಾನುಯಾಯಿ ಕೆಡುಕಿನಲ್ಲಿ ಭಾಗಿಯಾಗಲಾರ. ನಾಗಬನವಾಗಲಿ, ಮಂದಿರವಾಗಲಿ ಅಥವಾ ಹಿಂದೂ  ಆಚಾರ-ಸಂಪ್ರದಾಯಗಳಾಗಲಿ, ಓರ್ವ ಮುಸ್ಲಿಮನ ಪಾಲಿಗೆ ಗೌರವಾರ್ಹವೇ ಹೊರತು ಇನ್ನಾವುದೂ ಆಗಿರಲು ಸಾಧ್ಯವೇ ಇಲ್ಲ.  ಮಸೀದಿ, ಚರ್ಚ್ಗಳ ಕುರಿತು ಹಿಂದೂಗಳ ನಿಲುವೂ ಇದಕ್ಕಿಂತ ಭಿನ್ನವಲ್ಲ. ಹತ್ಯೆ, ಅತ್ಯಾಚಾರ, ಸುಳ್ಳು ಪ್ರಚಾರ, ದ್ವೇಷದ ಹಂಚುವಿಕೆ

ಇತ್ಯಾದಿಗಳೆಲ್ಲ ಸರ್ವರ ಪಾಲಿಗೂ ಕೆಡುಕುಗಳೇ ಹೊರತು ಒಳಿತುಗಳಲ್ಲ. ಇಷ್ಟಿದ್ದೂ ಮಂದಿರ, ಮಸೀದಿ, ಇಗರ್ಜಿಗಳು ಅಪವಿತ್ರಕ್ಕೋ  ಹಾನಿಗೋ ಒಳಗಾಗುತ್ತಲೇ ಇರುತ್ತದೆ. ಅತ್ಯಾಚಾರಗಳೂ ನಡೆಯುತ್ತಲಿರುತ್ತದೆ. ಧರ್ಮದ ಹೆಸರಿನಲ್ಲಿ ಹಗೆ, ಹಲ್ಲೆ, ಹತ್ಯೆಗಳನ್ನೂ  ನಡೆಸಲಾಗುತ್ತದೆ. ಹೀಗೆ ದುಷ್ಕೃತ್ಯಗಳಲ್ಲಿ ಭಾಗಿಯಾಗುವವರು ಮನುಷ್ಯರೇ ಆಗಿರುವುದರಿಂದ ಮತ್ತು ಅವರಿಗೊಂದು ಹೆಸರಿರುವುದರಿಂದ  ತಕ್ಷಣಕ್ಕೆ ಆ ಹೆಸರು ಯಾವ ಧರ್ಮದ ಜೊತೆ ಗುರುತಿಸಿಕೊಂಡಿರುತ್ತೋ ಆ ಧರ್ಮವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ.  ಅಸಲಿಗೆ ಆ ಧರ್ಮಕ್ಕೂ ಆತನ ಹೆಸರಿಗೂ ಹೆಸರಿನ ಹೊರತಾಗಿ ಯಾವ ಸಂಬಂಧವೂ ಇರುವುದಿಲ್ಲ. ಹೆಚ್ಚಿನ ಬಾರಿ ಮಾದಕ ವಸ್ತು  ಮತ್ತು ಮದ್ಯದ ಜೊತೆಗೆ ಅವರಿಗಿರುವಷ್ಟು ನಂಟು ಅವರು ಗುರುತಿಸಿಕೊಂಡಿರುವ ಧರ್ಮದ ಜೊತೆಗಿರುವುದಿಲ್ಲ. ಒಂದುವೇಳೆ,

ಮದ್ಯವನ್ನು ಅವರಿಗೆ ಅಲಭ್ಯಗೊಳಿಸಿದರೆ, ಅವರು ಅಂಥ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಯೇ ಇಲ್ಲ. ಆದರೆ, ಮಂದಿರ,  ಮಸೀದಿ, ಚರ್ಚ್ಗಳ ಕುರಿತಂತೆ ಅಪಾರ ಕಾಳಜಿ ತೋರುವ ಸಮಾಜವು ಅಪರಾಧ ಕೃತ್ಯಗಳಿಗೆ ಮೂಲ ಪ್ರೇರಣೆಯಾಗಿರುವ ಈ ಮದ್ಯ  ಮತ್ತು ಮಾದಕ ವಸ್ತುಗಳ ಕುರಿತಂತೆ ಆತಂಕ ಪಡುವುದಿಲ್ಲ. ಒಂದುವೇಳೆ ಆರೋಪಿಯ ಹೆಸರನ್ನು ನೋಡಿಕೊಂಡು ಅಪರಾಧಗಳನ್ನು  ಹಿಂದೂ-ಮುಸ್ಲಿಮ್ ಖಾತೆಗೆ ವರ್ಗಾಯಿಸುವುದಕ್ಕಿಂತ ಮದ್ಯ ಮತ್ತು ಮಾದಕ ವಸ್ತು ಎಂಬ ಏಕಖಾತೆಗೆ ವರ್ಗಾಯಿಸತೊಡಗಿದರೆ ಫ ಲಿತಾಂಶ ಇದಕ್ಕಿಂತ ಖಂಡಿತ ಉತ್ತಮವಾಗಬಹುದು. ಎಲ್ಲರೂ ತಮ್ಮ ಪಾಲಿನ ಸಮಾನ ಶತ್ರುವಾಗಿ ಮದ್ಯ ಮತ್ತು ಮಾದಕ ವಸ್ತುಗಳನ್ನು  ಯಾವಾಗ ಪರಿಗಣಿಸುತ್ತಾರೋ ಆಗ ಅಪರಾಧ ಕೃತ್ಯಗಳಲ್ಲಿ ಖಂಡಿತ ಇಳಿಮುಖವಾಗಲು ಪ್ರಾರಂಭವಾಗುತ್ತದೆ. ಅಮಲು ಪದಾರ್ಥಗಳು  ಅಲಭ್ಯವಾಗುವಂತಹ ಗ್ರಾಮ, ಪಟ್ಟಣ, ಜಿಲ್ಲೆಗಳನ್ನು ಕಟ್ಟುವ ಪ್ರಯತ್ನ ಸಾಗಿದರೆ ನಿಧಾನಕ್ಕೆ ಆರೋಗ್ಯಪೂರ್ಣ ಸಮಾಜ ತನ್ನಿಂತಾನೇ  ನಿರ್ಮಾಣವಾಗಬಲ್ಲುದು.
ಈಗ ಅಪರಾಧಿಗಳ ನಡುವೆ ಧಾರ್ಮಿಕ ಸೌಹಾರ್ದವಿದೆ. ಎಲ್ಲಿವರೆಗೆ ಅಮಲು ಪದಾರ್ಥಗಳು ಲಭ್ಯವಿರುತ್ತದೋ ಅಲ್ಲಿವರೆಗೆ ಈ  ಸೌಹಾರ್ದಕ್ಕೆ ಯಾವ ಅಡ್ಡಿಯೂ ಎದುರಾಗಲಾರದು. ಯಾವಾಗ ಇವು ಅಲಭ್ಯಗೊಳ್ಳುತ್ತೋ ಆಗ ಅವರ ನಡುವಿನ ಸೌಹಾರ್ದಕ್ಕೆ ಭಂಗ  ಬರಬಹುದಲ್ಲದೇ, ಸಾಮಾಜಿಕವಾಗಿ ಧಾರ್ಮಿಕ ಸೌಹಾರ್ದ ನೆಲೆಗೊಳ್ಳಬಹುದು.

 ನಾಗಬನ ಮತ್ತು ರ‍್ಯಾಗಿಂಗ್ ಪ್ರಕರಣಗಳು ಸ್ಪಷ್ಟಪಡಿಸುವುದು ಇದನ್ನೇ.

Tuesday, 30 November 2021

ಬೇಲಿಯೇ ಎದ್ದು ಹೊಲ ಮೇಯ್ದರೆ ನಂಬುವುದಾದರೂ ಯಾರನ್ನು?




ಪತ್ರಕರ್ತರ ಮೇಲೆ ಆಗಾಗ ಕೇಳಿ ಬರುತ್ತಿರುವ ಕೋಮು ಪಕ್ಷಪಾತದ ಆರೋಪಗಳಲ್ಲಿ ಹುರುಳಿದೆ ಮತ್ತು ಪತ್ರಕರ್ತ ಅಪ್ಪಟ  ಸಮಾಜದ್ರೋಹಿಯೂ ಆಗಬಲ್ಲ ಎಂಬುದನ್ನು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್  ಸಾಬೀತುಪಡಿಸಿದ್ದಾರೆ. ಇಲ್ಲಿನ ಶನಿವಾರಸಂತೆ ಗ್ರಾಮದಲ್ಲಿ ಮುಸ್ಲಿಮ್ ಮಹಿಳೆಯರು ಪ್ರತಿಭಟನೆಯ ವೇಳೆ ಪೊಲೀಸ್ ಠಾಣೆಯ  ಮುಂದೆ ಕೂಗಿದ ‘ಅಂಬೇಡ್ಕರ್ ಝಿಂದಾಬಾದ್’ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ವೀಡಿಯೋ  ಹಂಚಿಕೊಂಡು  ಕೊಡಗು ಜಿಲ್ಲೆಯನ್ನು ಉದ್ವಿಘ್ನತೆಗೆ ತಳ್ಳಿದ ಮೂವರು ಆರೋಪಿಗಳಲ್ಲಿ ಈತನೂ ಓರ್ವನಾಗಿದ್ದಾನೆ. ತೀರಾ  ಖಾಸಗಿಯಾದ ಘರ್ಷಣೆ ಪ್ರಕರಣವೊಂದಕ್ಕೆ ಸಂಘಪರಿವಾರವು ಹಿಂದೂ-ಮುಸ್ಲಿಮ್ ಬಣ್ಣವನ್ನು ಕೊಟ್ಟಿದೆ. ಸುಖಾಂತ್ಯಗೊಂಡಿದ್ದ  ಪ್ರಕರಣವನ್ನು ರಾಜಕೀಯ ಒತ್ತಡದ ಮೇರೆಗೆ ಪೊಲೀಸರು ಮರು ಜೀವಂತಗೊಳಿಸಿದ್ದಾರೆ. ಟಿಂಬರ್ ಉದ್ಯಮಿ ವಝೀರ್ ಪಾಶಾ  ಕುಟುಂಬದ ಸದಸ್ಯರನ್ನು ಬಂಧಿಸಿದ್ದಾರೆ. ಕೇಸು ಜಡಿದಿದ್ದಾರೆ. ಅದೇವೇಳೆ,


ವಝೀರ್ ಪಾಶಾ ಕಡೆಯಿಂದ ನೀಡಲಾದ ದೂರನ್ನು ತಕ್ಷಣಕ್ಕೆ ಸ್ವೀಕರಿಸಲು ಪೊಲೀಸ್ ಇಲಾಖೆ ಸಿದ್ಧವಾಗಿಲ್ಲ. ಈ ಬಗ್ಗೆ 
ಎಸ್ಪಿ ಕಚೇರಿಗೆ  ದೂರು ನೀಡಿ, ಬಳಿಕ ಮುಸ್ಲಿಮ್ ಮಹಿಳೆಯರು ಅನ್ಯಾಯದ ವಿರುದ್ಧ ಠಾಣೆಯ ಎದುರು ಪ್ರತಿಭಟಿಸಿದ್ದಾರೆ. ಆ ಸಂದರ್ಭದಲ್ಲಿ  ಅಂಬೇಡ್ಕರ್ ಝಿಂದಾಬಾದ್ ಎಂದೂ ಕೂಗಿದ್ದಾರೆ. ಇಡೀ ಪ್ರತಿಭಟನೆ ಪೊಲೀಸರ ಕ್ಯಾಮರಾದಲ್ಲೂ ಸೆರೆಯಾಗಿದೆ. ಇದಾದ ಬಳಿಕ  ಇವರ ದೂರನ್ನೂ ಸ್ವೀಕರಿಸಲಾಗಿದೆ. ಈ ನಡುವೆ ಪತ್ರಕರ್ತ ಹರೀಶ್, ಶನಿವಾರ ಸಂತೆ ಗ್ರಾಮ ಪಂಚಾಯತ್ ಸದಸ್ಯ ಮತ್ತು ಸಂಘ ಪರಿವಾರ ಕಾರ್ಯಕರ್ತ ರಘು ಮತ್ತು ಗಿರೀಶ್ ಎಂಬವರು ಸೇರಿ ಗಂಭೀರ ಸಂಚೊoದನ್ನು ಹೆಣೆದಿದ್ದಾರೆ. ಅಂಬೇಡ್ಕರ್  ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದಾರೆ.  ಇದರಿಂದಾಗಿ ಸೋಮವಾರಪೇಟೆ ಉದ್ವಿಘ್ನಗೊಂಡಿದೆ. ನವೆಂಬರ್ 15ರಂದು ಶನಿವಾರಸಂತೆ ಬಂದ್‌ಗೂ ಸಂಘಪರಿವಾರ ಕರೆ ನೀಡಿದೆ.  ಪ್ರತಿಭಟನಾ ನಿರತ ಮುಸ್ಲಿಮ್ ಮಹಿಳೆಯರನ್ನು ದೇಶದ್ರೋಹಿಗಳಂತೆ ಬಿಂಬಿಸುವ ಶ್ರಮಗಳು ಈ ಅವಧಿಯಲ್ಲಿ ಸಾಕಷ್ಟು ನಡೆದಿದೆ. ಇ ದೀಗ ಪಾಕಿಸ್ತಾನ್ ಝಿಂದಾಬಾದ್ ಎಂದು ಕೂಗಿರುವುದು ಪ್ರತಿಭಟನಾ ನಿರತ ಮುಸ್ಲಿಮ್ ಮಹಿಳೆಯರಲ್ಲ, ಈ ಮೇಲಿನ ಮೂವರು  ಎಂದು ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಪ್ರತಿಭಟನಾಕಾರರು ಪಾಕಿಸ್ತಾನ್ ಝಿಂದಾಬಾದ್ ಕೂಗಿಲ್ಲ ಎಂದು ಖುದ್ದು ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಪರಶಿವ ಮೂರ್ತಿಯವರೇ ಹೇಳಿದ್ದಾರೆ.

ದೃಶ್ಯ ಮತ್ತು ಮುದ್ರಣ ಮಾಧ್ಯಮ ರಂಗವು ಬಹುತೇಕ ವಿಶ್ವಾಸಾರ್ಹತೆಯನ್ನು ಕಳಕೊಂಡಿರುವ ಈ ಹೊತ್ತಿನಲ್ಲಿ ಪತ್ರಕರ್ತ ಹರೀಶ್ ನಮ್ಮ  ಮುಂದಿದ್ದಾರೆ. ಅಷ್ಟಕ್ಕೂ, 

ತಪ್ಪಾದ ಸುದ್ದಿ ಮೂಲವನ್ನು ಆಧರಿಸಿ ಓರ್ವ ಪತ್ರಕರ್ತ ವರದಿ ತಯಾರಿಸುವುದು ಮತ್ತು ತಾನು ತಪ್ಪೆಸಗಿದ್ದೇನೆ  ಎಂದು ಗೊತ್ತಾದಾಗ ಅದೇ ಸ್ಫೂರ್ತಿಯಿಂದ ತಿದ್ದಿಕೊಳ್ಳುವುದು.. ಇವೆಲ್ಲ ಅಸಹಜ ಅಲ್ಲ. ಪತ್ರಕರ್ತರೂ ಮನುಷ್ಯರಾಗಿರುವುದರಿಂದ  ಪ್ರಮಾದಗಳೇ ಸಂಭವಿಸಲ್ಲ ಎಂದು ಹೇಳಲಾಗದು. ಆದರೆ ಸಂಚು ಹಾಗಲ್ಲ. ಅದು ಪ್ರಮಾದವಲ್ಲ. ಅದು ಉದ್ದೇಶಪೂರ್ವಕ. ಹರೀಶ್  ಭಾಗಿಯಾಗಿರುವುದು ಈ ಅಪಾಯಕಾರಿ ಸಂಚಿನ ಪ್ರಕರಣದಲ್ಲಿ. ಅಂಬೇಡ್ಕರ್ ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್  ಝಿಂದಾಬಾದ್ ಎಂದು ತಿರುಚುವುದಾದರೆ ಅದರ ಹಿಂದೆ ಉದ್ದೇಶಪೂರ್ವಕ ಸಂಚಿದೆ. ಪ್ರತಿಭಟನಾಕಾರರನ್ನು ದೇಶದ್ರೋಹಿಗಳಂತೆ  ಮತ್ತು ಸಾರ್ವಜನಿಕರನ್ನು ಪ್ರತಿಭಟನಾಕಾರರ ವಿರುದ್ಧ ತಿರುಗಿ ಬೀಳುವಂತೆ ಮಾಡುವ ಹುನ್ನಾರ ಇದೆ. ಒಂದುವೇಳೆ, ಅಂಬೇಡ್ಕರ್  ಝಿಂದಾಬಾದ್ ಘೋಷಣೆಯನ್ನು ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳದೇ  ಇರುತ್ತಿದ್ದರೆ ಸಂಘಪರಿವಾರ ಶನಿವಾರಸಂತೆ ಬಂದ್‌ಗೆ ಕರೆ ಕೊಡುವುದಕ್ಕೆ ಕಾರಣಗಳೂ ಇರಲಿಲ್ಲ ಮತ್ತು ಸಮಾಜ ಉದ್ವಿಘ್ನ ಸ್ಥಿತಿಗೆ  ತಲುಪುವುದಕ್ಕೂ ಸಾಧ್ಯವಿರಲಿಲ್ಲ. ಅಂದಹಾಗೆ,

ಪತ್ರಕರ್ತ ಹರೀಶ್ ಸಾರ್ವಜನಿಕವಾಗಿ ಬೆತ್ತಲಾಗಿದ್ದಾರೆ, ಪತ್ರಿಕಾ ಧರ್ಮಕ್ಕೆ ದ್ರೋಹವೆಸಗಿದ್ದಾರೆ. ಈ ಘಟನೆ ಪತ್ರಕರ್ತರ ಪಾಲಿಗೆ ಕ ಪ್ಪುಚುಕ್ಕೆ... ಇತ್ಯಾದಿ ಪದಗಳನ್ನೆಲ್ಲಾ ನಾವು ಬಳಸಬಹುದಾದರೂ ವಾಸ್ತವದಲ್ಲಿ ಈ ಪದಗಳೆಲ್ಲ ಈಗಾಗಲೇ ಹಳಸಲಾಗಿವೆ. ಮಾಧ್ಯಮ  ಕ್ಷೇತ್ರವನ್ನು ಇವತ್ತು ಯಾರೂ ಪವಿತ್ರವಾಗಿ ನೋಡುತ್ತಿಲ್ಲ. ಒಂದು ಪಕ್ಷದ, ಒಂದು ಸಿದ್ಧಾಂತದ ಮತ್ತು ನಿರ್ದಿಷ್ಟ ಧರ್ಮದ ವಕ್ತಾರರಾಗಿ  ಬಹಳಷ್ಟು ಪತ್ರಕರ್ತರು ಬದಲಾಗಿರುವುದನ್ನು ಸಂದರ್ಭ ಮತ್ತು ಸನ್ನಿವೇಶಗಳು ಆಗಾಗ ಸಾಬೀತುಪಡಿಸುತ್ತಲೇ ಇವೆ. ಕೊರೋನಾ  ಕಾಲವು ಅನೇಕ ಪತ್ರಕರ್ತರ ಮುಖವಾಡವನ್ನು ಬಹಿರಂಗಪಡಿಸಿತ್ತು. ತಬ್ಲೀಗ್ ವೈರಸ್, ಕೊರೋನಾ ಜಿಹಾದ್ ಮತ್ತಿತರ ಪದಗಳನ್ನು  ಠಂಕಿಸಿ ನಾಗರಿಕರ ಬಾಯಿಗೆ ತುರುಕಿದ್ದು ಇವೇ ಮಾಧ್ಯಮ. ತಬ್ಲೀಗಿ ಜಮಾಅತ್ ಸದಸ್ಯರನ್ನು ನೆಪಮಾಡಿಕೊಂಡು ಇಡೀ ಮುಸ್ಲಿಮ್  ಸಮುದಾಯವನ್ನು ಸಂದೇಹವನ್ನು ಮೊನೆಯಲ್ಲಿ ನಿಲ್ಲಿಸಿದ್ದೂ ಇವೇ ಮಾಧ್ಯಮ. ಮುಸ್ಲಿಮ್ ಸಂಘಟನೆಗಳ ಹಸಿರು ಧ್ವಜವನ್ನು  ಪಾಕಿಸ್ತಾನದ ಧ್ವಜವೆಂದು ಸುಳ್ಳು ಪ್ರಚಾರ ಮಾಡಿರುವುದೂ ಇವೇ ಮಾಧ್ಯಮ. ಗುಜರಾತ್ ಹತ್ಯಾಕಾಂಡವೂ ಸೇರಿದಂತೆ ಬಹುತೇಕ  ಮುಸ್ಲಿಮ್ ವಿರೋಧಿ ದಂಗೆಗಳಲ್ಲಿ ಮಾಧ್ಯಮಗಳ ಕರಾಳ ಪಾತ್ರವನ್ನು ಆಯಾ ಸಂದರ್ಭದ ಸತ್ಯಶೋಧನಾ ವರದಿಗಳು ಬಹಿರಂಗ ಪಡಿಸುತ್ತಲೇ ಬಂದಿವೆ. ಈ ಮಾಧ್ಯಮ ಪಕ್ಷಪಾತಿ ಧೋರಣೆಗೆ ಇತ್ತೀಚಿನ ಉದಾಹರಣೆ ಬೇಕೆಂದರೆ, 

ಅದು ರೈತ ಪ್ರತಿಭಟನೆ ಮತ್ತು ಎ ನ್‌ಆರ್‌ಸಿ ವಿರೋಧಿ ಹೋರಾಟ. ಈ ಎರಡನ್ನೂ ಜಾರಿಗೆ ಮಾಡಲು ಹೊರಟಿರುವುದು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಮತ್ತು ಈ  ಎರಡರಲ್ಲೂ ಮುಖ್ಯವಾಹಿನಿ ಮಾಧ್ಯಮಗಳ ಪಾತ್ರವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಅವು ಮಾಧ್ಯಮ ಧರ್ಮಕ್ಕೆ ಮಾಡಿರುವ ಅಪಚಾರಗಳ ಪ್ರಮಾಣ ಎಷ್ಟು ಅಗಾಧವಾದುದು ಎಂಬುದು ಸ್ಪಷ್ಟವಾಗುತ್ತದೆ. ಎನ್‌ಆರ್‌ಸಿ ವಿರೋಧಿ ಪ್ರತಿಭಟನೆಯ ವೇಳೆ, ಮಾಧ್ಯ ಮದ  ಒಂದು ವಿಭಾಗವು ಸಂಪೂರ್ಣವಾಗಿ ಪ್ರತಿಭಟನಾಕಾರರ ವಿರುದ್ಧ ನಿಂತುವು. ಎಷ್ಟರ ಮಟ್ಟಿಗೆ ಎಂದರೆ, ಪ್ರತಿಭಟನೆಯನ್ನು ಮಟ್ಟ ಹಾಕಲು  ಪ್ರಭುತ್ವ ಏನೆಲ್ಲ ಕಾನೂನು ವಿರೋಧಿ ಬಲಪ್ರಯೋಗಗಳನ್ನು ಮಾಡಿತೋ ಅವೆಲ್ಲವನ್ನೂ ಬಲವಾಗಿ ಸಮರ್ಥಿಸಿದುವು ಮತ್ತು ಆ  ಸಮರ್ಥನೆಗೆ ಪೂರಕವಾಗಿ ಸನ್ನಿವೇಶಗಳನ್ನೇ ತಿರುಚುವ ದುಸ್ಸಾಹಸಕ್ಕೂ ಇಳಿದುವು. ಮಂಗಳೂರು ಗೋಲಿಬಾರ್ ಪ್ರಕರಣ ಇದಕ್ಕೆ  ಅತ್ಯುತ್ತಮ ಪುರಾವೆ. ಎನ್‌ಆರ್‌ಸಿ ಪ್ರತಿಭಟನಾಕಾರರನ್ನು ದೇಶದ್ರೋಹಿಗಳಂತೆ, ಮುಸ್ಲಿಮರಂತೆ ಅಥವಾ ಮುಸ್ಲಿಮ್ ಬೆಂಬಲಿಗರಂತೆ   ಹಾಗೂ ಹಿಂದೂ ವಿರೋಧಿಗಳಂತೆ ಬಿಂಬಿಸುವಲ್ಲಿ ಅವು ಶಕ್ತಿ ಮೀರಿ ಯತ್ನಿಸಿದುವು. ಶಾಹೀನ್‌ಬಾಗ್‌ನಲ್ಲಿ ದರಣಿ ಕುಳಿತ ಮಹಿಳೆಯರನ್ನು ಹೀನಾಯವಾಗಿ ಬಿಂಬಿಸಲಾಯಿತು. ಅವರ ವಿರುದ್ಧ ಸಮಾಜವನ್ನು ಎತ್ತಿ ಕಟ್ಟಲಾಯಿತು. ಬಳಿಕ ಇದೇ ಶಾಹೀನ್‌ಬಾಗ್‌ನ  ಮಾದರಿಯಲ್ಲಿ ರೈತರೂ ದೆಹಲಿಯಲ್ಲಿ ಪ್ರತಿಭಟನಾ ಧರಣಿ ಕುಳಿತರು. ಶಾಹೀನ್‌ಬಾಗ್‌ನಷ್ಟು ತೀವ್ರವಾಗಿ ಅಲ್ಲದಿದ್ದರೂ ಇವರನ್ನೂ ಖಾಲಿಸ್ತಾನಿಗಳಂತೆ, ದಲ್ಲಾಳಿಗಳಂತೆ ಮತ್ತು ರೈತ ವಿರೋಧಿಗಳಂತೆ ಬಿಂಬಿಸುವಲ್ಲಿ ಪ್ರಭುತ್ವದ ಜೊತೆ ಮುಖ್ಯವಾಹಿನಿ ಮಾಧ್ಯಮಗಳ ಒಂದು  ಗುಂಪು ಶಕ್ತಿ ಮೀರಿ ಪ್ರಯತ್ನಿಸಿದುವು. ಅವರ ವಿರುದ್ಧ ವಿವಿಧ ಸುಳ್ಳುಗಳನ್ನು ಹಬ್ಬಿಸಿದುವು. ಆದರೆ,

 ಶಾಹೀನ್‌ಬಾಗ್ ಪ್ರತಿಭಟನಾಕಾರರಿಗೂ  ಪ್ರತಿಭಟನಾ ನಿರತ ರೈತರಿಗೂ ನಡುವೆ ಇರುವ ವ್ಯತ್ಯಾಸ ಏನೆಂದರೆ, ರೈತರು ಮಾಧ್ಯಮಗಳ ಈ ಪ್ರಭುತ್ವ ಪರ ಧೋರಣೆಯನ್ನು  ಆರಂಭದಲ್ಲೇ  ಮನಗಂಡು ಪರ್ಯಾಯ ಮಾಧ್ಯಮವನ್ನೇ ಸೃಷ್ಟಿಸಿಕೊಂಡರು. ಸಾಮಾಜಿಕ ಜಾಲತಾಣಗಳನ್ನು ಸಮರ್ಥವಾಗಿ  ಬಳಸಿಕೊಂಡರಲ್ಲದೇ, ಪ್ರತಿಭಟನೆಯ ಬಗ್ಗೆ ನಾಗರಿಕರಿಗೆ ಮನವರಿಕೆ ಮಾಡಿಸಲು ಪತ್ರಿಕೆಗಳನ್ನೂ ಪ್ರಕಟಿಸಿದರು. ತಮ್ಮದೇ ಯೂಟ್ಯೂಬ್  ಚಾನೆಲನ್ನು ಹುಟ್ಟು ಹಾಕಿ ತಮ್ಮೆಲ್ಲ ಚಟುವಟಿಕೆಗಳನ್ನು ಜನರ ಬಳಿ ತಲುಪಿಸಿದರು. ಶಾಹೀನ್‌ಬಾಗ್ ಪ್ರತಿಭಟನೆ ವಿಫಲಗೊಂಡಿರುವುದು  ಇಲ್ಲೇ. ನಿಜವಾಗಿ,

ಮಾಧ್ಯಮ ಕ್ಷೇತ್ರಕ್ಕೆ ಈಗಾಗಲೇ ಮೆತ್ತಿಕೊಂಡಿರುವ ಕಳಂಕಕ್ಕೆ ಪತ್ರಕರ್ತ ಹರೀಶ್ ಇನ್ನೊಂದು ಸೇರ್ಪಡೆ ಅಷ್ಟೇ. ಆತನ ಕೃತ್ಯದಿಂದ ಇಡೀ  ಮಾಧ್ಯಮ ರಂಗವೇ ಹುಬ್ಬೇರುತ್ತದೆ ಮತ್ತು ಅವಮಾನದಿಂದ ತಲೆ ತಗ್ಗಿಸುತ್ತದೆ ಎಂದೆಲ್ಲಾ ಯಾರೂ ಭಾವಿಸಬೇಕಿಲ್ಲ. ಅದೆಲ್ಲ ಒಂದಾನೊಂದು ಕಾಲದ ಸ್ಥಿತಿ. ಈಗ ಮಾಧ್ಯಮ ರಂಗದ ವಾತಾವರಣವೇ ಬದಲಾಗಿದೆ. ಎಷ್ಟು ಬದಲಾಗಿದೆಯೆಂದರೆ, ಅಂಬೇಡ್ಕರ್  ಝಿಂದಾಬಾದನ್ನೇ ಪಾಕಿಸ್ತಾನ್ ಝಿಂದಾಬಾದ್ ಎಂದು ತಿರುಚುವಷ್ಟು ಮತ್ತು ಅದನ್ನು ಜನರ ನಡುವೆ ಹಂಚಿ ಗಲಭೆಗೆ ಪ್ರಚೋದಿಸುವಷ್ಟು. ಸತ್ಯ ಚಿರಾಯುವಾಗಲಿ ಎಂದಷ್ಟೇ ಪ್ರಾರ್ಥಿಸೋಣ.

Saturday, 27 November 2021

ತಬ್ಲೀಗ್: ಮನಸ್ಸು ಮಾಡಿರುತ್ತಿದ್ದರೆ ನೂರಾರು ಮಾನನಷ್ಟ ಮೊಕದ್ದಮೆ ದಾಖಲಾಗಿರುತ್ತಿತ್ತು..




ತಬ್ಲೀಗಿ ಜಮಾಅತ್ ಕಾರ್ಯಕರ್ತರನ್ನು ಹೀನಾಯವಾಗಿ ನಿಂದಿಸಿದ ಮತ್ತು ಕೊರೋನಾ ವೈರಸ್ ವಾಹಕರೆಂದು ಕರೆದು ಅವಮಾ ನಿಸಿದವರನ್ನು ಆತ್ಮಾವಲೋಕನಕ್ಕೆ ತಳ್ಳುವ ಬೆಳವಣಿಗೆಯೊಂದು ಕಳೆದವಾರ ನಡೆದಿದೆ. ಇದಕ್ಕೆ ಕಾರಣವಾಗಿರುವುದು ದೆಹಲಿ  ಹೈಕೋರ್ಟಿನ ನ್ಯಾಯಾಧೀಶರಾದ ಮುಕ್ತಾ ಗುಪ್ತಾ.


ದೆಹಲಿಯ ನಿಝಾಮುದ್ದೀನ್ ಮರ್ಕಜ್ ನಲ್ಲಿ ಕಳೆದ 2020 ಮಾರ್ಚ್ 9 ಮತ್ತು 10ರಂದು ಸಮಾವೇಶಕ್ಕೆ  ವಿದೇಶಿಯರು ಆಗಮಿಸಿದ್ದರು. ಮಾರ್ಚ್ 25ರಂದು ಕೊರೋನಾ ತಡೆಯಲು ದೇಶದಾದ್ಯಂತ  ಲಾಕ್‌ಡೌನ್ ಘೋಷಿಸಲಾಯಿತು ಮತ್ತು  ಕೊರೋನಾ ಹರಡುವುದಕ್ಕೆ ಈ ವಿದೇಶೀಯರು ಕಾರಣ ಎಂದು ಬಳಿಕ ವ್ಯಾಪಕವಾಗಿ ಅಪಪ್ರಚಾರ ಮಾಡಲಾಯಿತು. ಇದರನ್ವಯ  ಪೊಲೀಸರು ವಿದೇಶಿಯರ ಮೇಲೆ ಎಫ್‌ಐಆರ್ ದಾಖಲಿಸಿದ್ದರು. ಅವರಿಗೆ ಯಾರು ಆಶ್ರಯ ನೀಡಿದ್ದರೋ ಅವರ ಮೇಲೂ ಎ ಫ್‌ಐಆರ್ ದಾಖಲಿಸಿದ್ದರು. ಇದೀಗ ಹೈಕೋರ್ಟು ಪೊಲೀಸರ ಈ ಕ್ರಮವನ್ನೇ ತರಾಟೆಗೆ ತೆಗೆದುಕೊಂಡಿದೆ. ದೇಶದಾದ್ಯಂತ ಲಾಕ್‌ಡೌನ್  ಘೋಷಿಸಿರುವಾಗ ಇವರು ಹೋಗುವುದಾದರೆ ಹೇಗೆ? ಅವರಿಗೆ ಆಶ್ರಯ ಕೊಡದಿದ್ದರೆ ಅವರು ಇರುವುದಾದರೂ ಎಲ್ಲಿ? ಎಫ್‌ಐಆರ್  ದಾಖಲಿಸುವಂತಹ ಯಾವ ತಪ್ಪನ್ನು ಅವರು ಮಾಡಿದ್ದಾರೆ ಎಂದು ನ್ಯಾಯಾಧೀಶೆ ಪ್ರಶ್ನಿಸಿದ್ದಾರೆ. ಹಾಗಂತ, ಇದು ಮೊದಲ ಪ್ರಕರಣ  ಅಲ್ಲ.

2020 ಡಿಸೆಂಬರ್ 15ರಂದು ದೆಹಲಿ ಹೈಕೋರ್ಟು 36 ವಿದೇಶಿ ತಬ್ಲೀಗಿ ಸದಸ್ಯರನ್ನು ದೋಷಮುಕ್ತಗೊಳಿಸಿತ್ತು. ನಿಝಾಮುದ್ದೀನ್  ಮರ್ಕಝï ಸಭೆಯಲ್ಲಿ ಭಾಗವಹಿಸುವುದಕ್ಕಾಗಿ 14 ದೇಶಗಳಿಂದ ಭಾರತಕ್ಕೆ ಬಂದಿದ್ದ ಇವರ ಮೇಲೆ ಭಾರತೀಯ ದಂಡಸಂಹಿತೆಯ  188, 219, ವಿಪತ್ತು ನಿರ್ವಹಣಾ ಕಾಯ್ದೆ 2005ರ 51ನೇ ಸೆಕ್ಷನ್ ಅನ್ವಯ ಕೇಸು ದಾಖಲಿಸಲಾಗಿತ್ತು. ಜೊತೆಗೇ ಇನ್ನೂ 6 ರಾಷ್ಟ್ರಗಳ 8  ಮಂದಿ ತಬ್ಲೀಗಿಗಳ ವಿರುದ್ಧವೂ ಕೇಸು ದಾಖಲಿಸಲಾಗಿತ್ತು. ಈ ಎಲ್ಲ ಪ್ರಕರಣಗಳಿಂದಲೂ ಅರೆದು ನ್ಯಾಯಾಧೀಶ ಅರುಣ್ ಕುಮಾರ್  ಗಾರ್ಗ್ ಇವರನ್ನು ದೋಷಮುಕ್ತಗೊಳಿಸಿದ್ದರು. ಇದಕ್ಕಿಂತ ಮೊದಲು ಇನ್ನೊಂದು ತೀರ್ಪೂ ಬಂದಿತ್ತು. ಈ ತೀರ್ಪನ್ನು 2020 ಆಗಸ್ಟ್  22ರಂದು ನೀಡಲಾಗಿತ್ತು. ಬಾಂಬೆ ಹೈಕೋರ್ಟ್ ನ  ಔರಂಗಾಬಾದ್ ಪೀಠದ ಜಸ್ಟಿಸ್ ವಿ.ವಿ. ನಲಪಾಡ್ ಮತ್ತು ಎಂ.ಜಿ. ಸೇವಿಲಿಕಾರ್‌ರನ್ನೊಳಗೊಂಡ ಪೀಠವು ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ‘ಸಾಂಕ್ರಾಮಿಕ ರೋಗಗಳು ಬಂದಾಗ ಮತ್ತು ಅದನ್ನು  ಸಮರ್ಪಕವಾಗಿ ನಿರ್ವಹಿಸಲು ವಿಫಲವಾದಾಗ ತಮ್ಮ ವೈಫಲ್ಯವನ್ನು ಮರೆಮಾಚುವುದಕ್ಕಾಗಿ ಸರ್ಕಾರ ಕುತ್ತಿಗೆಯನ್ನು ಹುಡುಕುತ್ತದೆ.  ವಿದೇಶಿ ತಬ್ಲೀಗಿಗಳು ಅಂಥ ಬಲಿಪಶುಗಳು...’ ಎಂದು ಖಾರವಾಗಿ ಹೇಳಿತ್ತು ಮತ್ತು 29 ವಿದೇಶಿ ತಬ್ಲೀಗಿಗಳ ಮೇಲಿನ ಎಫ್‌ಐಆರನ್ನು  ರದ್ದುಗೊಳಿಸಿತ್ತು. 58 ಪುಟಗಳಲ್ಲಿ ನೀಡಿದ ಆ ತೀರ್ಪು ಸರ್ವರ ಅಧ್ಯಯನಕ್ಕೆ ಯೋಗ್ಯವಾಗಿರುವಂಥದ್ದು. ಅಂದಹಾಗೆ,

ತಬ್ಲೀಗಿಗಳಿಗೆ ಸಂಬಂಧಿಸಿ ಕಳೆದವಾರ ದೆಹಲಿ ಹೈಕೋರ್ಟು ನೀಡಿದ ತೀರ್ಪು ಮತ್ತು ಈ ಹಿಂದಿನ ತೀರ್ಪುಗಳನ್ನು ನಾವು ಪೊಲೀಸರಿಗೆ  ಕೋರ್ಟಿನಿಂದ ಸಿಕ್ಕ ಚಾಟಿಯೇಟು ಎಂಬ ರೀತಿಯಲ್ಲಿ ಮಾತ್ರ ಚರ್ಚಿಸುವುದು ಸತ್ಯಕ್ಕೆ ಎಸಗುವ ಬಹುದೊಡ್ಡ ಅಪಚಾರವಾದೀತು.  ಸ್ವದೇಶಿ ಮತ್ತು ವಿದೇಶಿ ತಬ್ಲೀಗಿಗಳನ್ನು ಅಪರಾಧಿಗಳೆಂದು ಮೊಟ್ಟಮೊದಲು ಬಿಂಬಿಸಿದ್ದು ಟಿ.ವಿ. ಮಾಧ್ಯಮಗಳು ಮತ್ತು ಮುದ್ರಣ  ಮಾಧ್ಯಮಗಳು. ಜೊತೆಗೇ ರಾಜಕಾರಣಿಗಳು. ಈ ದೇಶದಲ್ಲಿ ಕೊರೋನಾ ಲಾಕ್‌ಡೌನ್ ಘೋಷಿಸುವುದಕ್ಕಿಂತ ಮೂರು ವಾರಗಳ  ಮೊದಲೇ ದೆಹಲಿಯ ನಿಝಾಮುದ್ದೀನ್ ಮರ್ಕಜ್ ನಲ್ಲಿ ಅಂತಾರಾಷ್ಟ್ರೀಯ ಸಮಾವೇಶ ಏರ್ಪಡಿಸಲಾಗಿತ್ತು. ವಿದೇಶಿಯರೂ ಸೇರಿದಂತೆ  ದೊಡ್ಡ ಸಂಖ್ಯೆಯಲ್ಲಿ ತಬ್ಲೀಗಿ ಕಾರ್ಯಕರ್ತರು ಅದರಲ್ಲಿ ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸಿದ ವಿದೇಶೀಯರಾಗಲಿ  ಸ್ವದೇಶೀಯರಾಗಲಿ ಯಾರೂ ಕೂಡಾ ಕಾನೂನು ಉಲ್ಲಂಘಿಸಿ ಅಲ್ಲಿಗೆ ತಲುಪಿರಲಿಲ್ಲ. ವಿಮಾನ ನಿಲ್ದಾಣಗಳ ಎಲ್ಲ ಕಾನೂನು  ಪ್ರಕ್ರಿಯೆಗಳನ್ನು ಮುಗಿಸಿಯೇ ಎಲ್ಲ ವಿದೇಶೀಯರೂ ನಿಝಾಮುದ್ದೀನ್ ಮರ್ಕಜ್ ಗೆ ತಲುಪಿದ್ದರು. ಅಲ್ಲದೇ, ಆಗ ಲಾಕ್‌ಡೌನ್  ಘೋಷಿಸುವ ಯಾವ ಸೂಚನೆಯನ್ನೂ ಕೇಂದ್ರ ಸರ್ಕಾರ ನೀಡಿಯೂ ಇರಲಿಲ್ಲ. ಕೊರೋನಾ ನಿಯಮಗಳೂ ಆ ಸಂದರ್ಭದಲ್ಲಿ  ಜಾರಿಯಲ್ಲಿರಲಿಲ್ಲ. ಹೀಗಿರುತ್ತಾ ಮಾರ್ಚ್ 25ರಂದು ಕೇಂದ್ರ ಸರ್ಕಾರ ದಿಢೀರ್ ಲಾಕ್‌ಡೌನ್ ಘೋಷಿಸಿತು. ಈ ದಿಢೀರ್ ಕ್ರಮವು  ನಿಝಾಮುದ್ದೀನ್‌ನಲ್ಲಿ ಸೇರಿದ್ದ ಸಾವಿರಕ್ಕಿಂತಲೂ ಅಧಿಕ ತಬ್ಲೀಗಿಗಳಿಗಾಗಲಿ ಜಮ್ಮುವಿನ ವೈಷ್ಣೋವಿ ಮಂದಿರದಲ್ಲಿ ಸೇರಿಕೊಂಡಿದ್ದ  600ಕ್ಕಿಂತಲೂ ಅಧಿಕ ಭಕ್ತಾದಿಗಳಿಗಾಗಲಿ ಅಥವಾ ಮಹಾರಾಷ್ಟ್ರದ ಗುರುದ್ವಾರದಲ್ಲಿ ಸೇರಿಕೊಂಡಿದ್ದ 3000ರಷ್ಟು ಯಾತ್ರಾರ್ಥಿಗಳಿಗಾಗಲಿ  ಆಘಾತಕಾರಿಯದ್ದಾಗಿತ್ತು. ನೆಲ, ಜಲ ಮತ್ತು ವಾಯು ಮಾರ್ಗಗಳನ್ನು ದಿಢೀರ್ ಸ್ಥಗಿತಗೊಳಿಸಿದುದರಿಂದ ಇವರಾರೂ ಇರುವಲ್ಲಿಂದ  ಬೇರೆಡೆಗೆ ಹೋಗುವಂತಿರಲಿಲ್ಲ. ಹಾಗೆಯೇ ಈ ಲಾಕ್‌ಡೌನ್‌ನ ಅಂತ್ಯ ಯಾವಾಗ ಎಂಬ ಖಚಿತತೆ ಯಾರಲ್ಲೂ ಇರಲಿಲ್ಲ. ಆದರೆ,

ಕೊರೋನಾ ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗತೊಡಗಿದಂತೆಯೇ ಮತ್ತು ದಿಢೀರ್ ಲಾಕ್‌ಡೌನ್‌ನಿಂದಾಗಿ ಎಲ್ಲೆಡೆ ಸಮಸ್ಯೆಗಳ  ಮಹಾಪೂರವೇ ಎದುರಾಗತೊಡಗಿದಂತೆಯೇ ಕೇಂದ್ರ ಸರ್ಕಾರದ ಬೆಂಬಲಿಗ ಟಿ.ವಿ. ಮಾಧ್ಯಮಗಳು ತಬ್ಲೀಗಿಗಳತ್ತ ದೃಷ್ಟಿ ನೆಟ್ಟವು.  ವೈಷ್ಣೋವಿ ಮಂದಿರ ಮತ್ತು ಗುರುದ್ವಾರಗಳಲ್ಲಿ ಸಿಲುಕಿಕೊಂಡ ಯಾತ್ರಾರ್ಥಿಗಳ ಬಗ್ಗೆ ಒಂದೇ ಒಂದು ಗೆರೆಯ ಫ್ಲ್ಯಾಶ್ ನ್ಯೂಸನ್ನೂ  ಪ್ರಸಾರ ಮಾಡದ ಇವು, ತಬ್ಲೀಗಿಗಳನ್ನು ಅವುಗಳಿಂದ ಪ್ರತ್ಯೇಕಿಸಿ ಬಡಿಯತೊಡಗಿದುವು. ಚಿತ್ರ-ವಿಚಿತ್ರ ಕತೆ ಕಟ್ಟತೊಡಗಿದುವು. ದಿನದ  ಹೆಚ್ಚಿನ ಸಮಯ ಟೊಪ್ಪಿ, ಗಡ್ಡ, ಪೈಜಾಮ-ಕುರ್ತಾವನ್ನು ತೋರಿಸುವುದಕ್ಕೆ ಮೀಸಲಿಟ್ಟವು. ದೇಶಕ್ಕೆ ಕೊರೋನಾ ಬಂದಿರುವುದೇ  ಇವರಿಂದ ಎಂಬಂತೆ  ಬಿಂಬಿಸಿ, ಅಸಹ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು. ಯಾವ್ಯಾವುದೋ ರಾಷ್ಟ್ರದ ಮತ್ತು ಯಾವ್ಯಾವುದೋ  ಕಾರ್ಯಕ್ರಮದ ಏನೇನೋ ವೀಡಿಯೋ ತುಣುಕುಗಳನ್ನು ತಬ್ಲೀಗಿಗಳಿಗೆ ಜೋಡಿಸಿ ಅವು ಪ್ರಸಾರ ಮಾಡಿದುವು ಮತ್ತು ಸೋಷಿಯಲ್  ಮೀಡಿಯಾಗಳು ಇವನ್ನು ಎತ್ತಿಕೊಂಡು ಸಂಭ್ರಮಿಸಿದುವು. ವಿಷಾದ ಏನೆಂದರೆ,

ನ್ಯಾಯಾಲಯಗಳು ಒಂದರ ಮೇಲೆ ಒಂದರಂತೆ  ತೀರ್ಪು ನೀಡುತ್ತಿರುವಾಗಲೂ ಈ ಟಿ.ವಿ. ಚಾನೆಲ್‌ಗಳಾಗಲಿ, ಪತ್ರಿಕೆಗಳಾಗಲಿ ಅಥವಾ  ರಾಜಕಾರಣಿಗಳಾಗಲಿ ಎಲ್ಲೂ ಪಶ್ಚಾತ್ತಾಪದ ಭಾವನೆಯನ್ನು ವ್ಯಕ್ತಪಡಿಸಿಲ್ಲ. ತಬ್ಲೀಗಿಗಳನ್ನು ಖಳನಾಯಕರಾಗಿಸುವಲ್ಲಿ ರಾಜಕಾರಣಿಗಳ  ಪಾತ್ರವೇನೂ ಕಡಿಮೆಯಿರಲಿಲ್ಲ. ಪೈಪೋಟಿಗೆ ಬಿದ್ದು ಈ ರಾಜಕಾರಣಿಗಳು ತಬ್ಲೀಗಿಗಳ ವಿರುದ್ಧ ಹೇಳಿಕೆಯನ್ನು ಕೊಟ್ಟಿದ್ದರು. ಆದ್ದರಿಂದ,

ಜನಪ್ರತಿನಿಧಿಗಳೆಂಬ  ನೆಲೆಯಲ್ಲಿ ತಮ್ಮ ಈ ಹಿಂದಿನ ವರ್ತನೆಗೆ ಕ್ಷಮೆ ಯಾಚಿಸಬೇಕಾದುದು ಅವರ ಹೊಣೆಗಾರಿಕೆ. ಮಾಧ್ಯಮಗಳದ್ದೂ  ಅಷ್ಟೇ. ಜಿದ್ದಿಗೆ ಬಿದ್ದು ತಬ್ಲೀಗಿಗಳ ವಿರುದ್ಧ ಕಾರ್ಯಕ್ರಮ ಪ್ರಸಾರ ಮಾಡಿದ ಯಾವ ಚಾನೆಲ್ಲೂ ಈ ವರೆಗೆ ತಮ್ಮ ಈ ವರ್ತನೆಗಾಗಿ  ವಿಷಾದ ಸೂಚಿಸಿಲ್ಲ. ಜನಪ್ರಿಯ ಸುದ್ದಿಗಳನ್ನು ಕೊಡುವ ತುರ್ತಿನಲ್ಲಿ ಸುದ್ದಿಯ ಸ್ಪಷ್ಟತೆಗೆ ಮಹತ್ವ ಕೊಡುವಲ್ಲಿ ನಾವು ಎಡವಿದ್ದೇವೆ ಎಂಬ  ಪುಟ್ಟ ಹೇಳಿಕೆಯನ್ನು ಅವು ಇನ್ನೂ ಕೊಟ್ಟಿಲ್ಲ. ಪತ್ರಿಕೆಗಳೂ ಇದರಲ್ಲಿ ಸಮಾನ ದೋಷಿ. ವಿಶೇಷ ಏನೆಂದರೆ,

ಅಂದಿನಿಂದ  ಇಂದಿನವರೆಗೆ ತಬ್ಲೀಗಿಗಳು ಕಾಯ್ದುಕೊಂಡು ಬಂದ ಸಂಯಮ. ಅವರು ಮನಸ್ಸು ಮಾಡಿರುತ್ತಿದ್ದರೆ ದೇಶದಾದ್ಯಂತ  ನೂರಾರು ಮಾನ ನಷ್ಟ ಮೊಕದ್ದಮೆಗಳನ್ನು ಮಾಧ್ಯಮಗಳು ಮತ್ತು ರಾಜಕಾರಣಿಗಳ ವಿರುದ್ಧ ದಾಖಲಿಸಬಹುದಿತ್ತು. ಪತ್ರಿಕಾಗೋಷ್ಠಿ  ಕರೆದು ತಮ್ಮ ಮೇಲಾದ ಅನ್ಯಾಯವನ್ನು ದಾಖಲೆ ಸಹಿತ ಸಮಾಜದ ಮುಂದಿಡಬಹುದಿತ್ತು. ಯಾವ ಟಿ.ವಿ., ಯಾವ ಪತ್ರಿಕೆ ಮತ್ತು  ಯಾವ ರಾಜಕಾರಣಿ ಯಾವ್ಯಾವ ಸಮಯದಲ್ಲಿ ಏನೇನು ಹೇಳಿಕೆ ಕೊಟ್ಟಿದ್ದಾರೆ, ಯಾವ್ಯಾವ ಕಾರ್ಯಕ್ರಮಗಳನ್ನು ಟಿ.ವಿ. ಚಾನೆಲ್‌ಗಳು  ಪ್ರಸಾರ ಮಾಡಿವೆ ಮತ್ತು ಪತ್ರಿಕೆಗಳಲ್ಲಿ ಏನೇನು ವರದಿಗಳು ಬಂದಿವೆ ಎಂಬುದನ್ನು ಇಂಚಿಂಚಾಗಿ ಹೇಳಿಕೊಳ್ಳಬಹುದಿತ್ತು. ಆದರೆ, ತಬ್ಲೀಗಿ  ಕಾರ್ಯಕರ್ತರು ಈ ಒಂದೂ ಮುಕ್ಕಾಲು ವರ್ಷಗಳಲ್ಲಿ ಸಂಯಮದಿಂದ  ವರ್ತಿಸಿದ್ದಾರೆ. ಸದ್ದಿಲ್ಲದೇ ಪ್ಲಾಸ್ಮಾ ದಾನ ಮಾಡಿದ್ದಾರೆ.  ಲಾಕ್‌ಡೌನ್ ಸಮಯದಲ್ಲಿ ವಲಸೆ ಕಾರ್ಮಿಕರೂ ಸೇರಿದಂತೆ ಎಲ್ಲರಿಗೂ ಆಹಾರ ಕಿಟ್‌ಗಳನ್ನು ಹಂಚಿದ್ದಾರೆ. ರಕ್ತದಾನ ಮಾಡಿದ್ದಾರೆ.  ನಿಜವಾಗಿ,

ಈ ದೇಶದ ಇತಿಹಾಸದಲ್ಲಿ ದಪ್ಪಕ್ಷರಗಳಿಂದ ಬರೆದಿಡಬೇಕಾದ ಬೆಳವಣಿಗೆ ಇದು. ಅವರು ಲಾಕ್‌ಡೌನ್ ಮೊದಲೂ ತಣ್ಣಗಿದ್ದರು. ಇಷ್ಟೆಲ್ಲಾ  ಅನ್ಯಾಯ, ನಿಂದನೆ, ಅವಮಾನಗಳ ಬಳಿಕವೂ ತಣ್ಣಗೇ ಇದ್ದಾರೆ.

Thursday, 18 November 2021

ಕಳಚಬೇಕಾದುದು ದೇಹದ ಹೊರಗಿನ ಬುರ್ಖಾವನ್ನಲ್ಲ...



ಸನ್ಮಾರ್ಗ ಸಂಪಾದಕೀಯ 
ಮುಂಬೈಯ ಎಸ್.ಬಿ.ಐ. ಶಾಖೆಯು ಬ್ಯಾಂಕ್ ಆವರಣದಲ್ಲಿ ಅಂಟಿಸಿರುವ ನೋಟೀಸೊಂದು ವಿವಾದಕ್ಕೆ ಕಾರಣವಾಗಿದೆ. ಬುರ್ಖಾ  ಮತ್ತು ಸ್ಕಾರ್ಫ್ ಧರಿಸಿ ಬ್ಯಾಂಕ್ ಪ್ರವೇಶಿಸುವುದಕ್ಕೆ ಆ ನೋಟೀಸಿನಲ್ಲಿ ನಿಷೇಧ ಹೇರಲಾಗಿತ್ತು. ಮುಸ್ಲಿಮ್ ಬಾಹುಳ್ಯ ಪ್ರದೇಶವಾದ  ನೆಹರೂ ನಗರದ ಬ್ಯಾಂಕ್ ಗ್ರಾಹಕರು ಈ ನೋಟೀಸಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ  ಪ್ರತಿಭಟನೆಯನ್ನೂ ವ್ಯಕ್ತಪಡಿಸಿದರು. ಬಳಿಕ ನವೆಂಬರ್ 3ರಂದು ಬ್ಯಾಂಕ್ ತನ್ನ ಈ ನೋಟೀಸನ್ನು ಹಿಂಪಡೆಯಿತು. ಹಾಗಂತ, ಇದು  ಮೊದಲ ಪ್ರಕರಣ ಅಲ್ಲ.


2019 ಮೇನಲ್ಲಿ ಬ್ಯಾಂಕ್ ಆಫ್ ಬರೋಡಾದ ಸೂರತ್ ಶಾಖೆಯೂ ಇಂಥದ್ದೇ ಒಂದು ನೋಟೀಸನ್ನು ತನ್ನ ಮುಖ್ಯ ಪ್ರವೇಶ  ದ್ವಾರದಲ್ಲಿ ಅಂಟಿಸಿತ್ತು. ಹೆಲ್ಮೆಟ್ ಮತ್ತು ಬುರ್ಖಾವನ್ನು ಕಳಚಿ ಬ್ಯಾಂಕ್ ಪ್ರವೇಶಿಸಿ ಎಂದು ಆ ನೋಟೀಸಿನಲ್ಲಿ ಹೇಳಲಾಗಿತ್ತು. ಕಾ ಪಾಬಿಡಾ ಚೆಕ್ಲಾ ಎಂಬ ಮುಸ್ಲಿಮ್ ಬಾಹುಳ್ಯ ಪ್ರದೇಶದಲ್ಲಿ ಈ ನೋಟೀಸನ್ನು ಪ್ರದರ್ಶಿಸಲಾಗಿತ್ತು. ಗ್ರಾಹಕರು ಪ್ರತಿಭಟಿಸಿದರು. ಬಳಿಕ  ಬುರ್ಖಾವನ್ನು ಕೈಬಿಟ್ಟು ಆ ಜಾಗದಲ್ಲಿ ನಕಾಬನ್ನು (ಮಾಸ್ಕ್) ಸೇರಿಸಲಾಗಿತ್ತು. ಇದರ ಜೊತೆಗೇ ಇತ್ತೀಚೆಗೆ ನಿಧನರಾದ ನಟ ಪುನೀತ್  ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರದ ಕುರಿತಂತೆ ಟಿ.ವಿ. ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದ ಲೈವ್ ವಿವರಗಳನ್ನೂ ಎತ್ತಿಕೊಳ್ಳಬಹುದು.  ವೈದಿಕ ಆಚರಣೆಯಿಲ್ಲದೆ ಮತ್ತು ಪುರೋಹಿತರಿಲ್ಲದೇ ಅಂತ್ಯಸಂಸ್ಕಾರ ನಡೆಯುತ್ತಿರುವುದಕ್ಕೆ ಟಿ.ವಿ. ನಿರೂಪಕ ಅಚ್ಚರಿ ವ್ಯಕ್ತ ಪಡಿಸಿದ್ದೂ ಆ  ಬಳಿಕ ಚರ್ಚೆಗೆ ಒಳಗಾಗಿತ್ತು. ಅಂದರೆ, 
ಪುರೋಹಿತರು, ಹೋಮ, ಹವನ, ದರ್ಬೆ ಕಟ್ಟುವುದು, ಕಳಶ ಪ್ರದರ್ಶನ ಇತ್ಯಾದಿಗಳಿಲ್ಲದ  ಅಂತ್ಯಸಂಸ್ಕಾರ ಅಸಾಧ್ಯ ಮತ್ತು ಅವುಗಳು ಪ್ರತಿ ಅಂತ್ಯಸಂಸ್ಕಾರದಲ್ಲೂ ಕಡ್ಡಾಯ ಎಂಬಂಥ  ಭಾವ ಅದು. ನಿಜವಾಗಿ

 ಈಡಿಗ, ದ್ರಾವಿಡ  ಸಂಸ್ಕೃತಿಯಲ್ಲಿ ಅಂತ್ಯಸಂಸ್ಕಾರ ನಡೆಸುವುದು ಪುರೋಹಿತರಲ್ಲ. ಪುನೀತ್ ರಾಜ್‌ಕುಮಾರ್ ಕುಟುಂಬ ನಡಕೊಂಡದ್ದೂ ಹೀಗೆಯೇ.  ಆದರೆ,

ಇವತ್ತಿನ ಭಾರತದ ಆಲೋಚನಾ ಕ್ರಮ ನಿಧಾನಕ್ಕೆ ಹೇಗೆ ಬೆಳೆಯುತ್ತಾ ಇದೆಯೆಂದರೆ, ಎಲ್ಲವೂ ಮತ್ತು ಎಲ್ಲರೂ ಒಂದೇ ರೀತಿಯಲ್ಲಿ  ಇರಬೇಕು ಎಂಬಂತೆ. ಆಹಾರ, ಬಟ್ಟೆ, ಆಚರಣೆ, ಭಾಷೆ ಇತ್ಯಾದಿ ಎಲ್ಲವೂ ಏಕಪ್ರಕಾರವಾಗಿರುವುದೇ ಭಾರತೀಯತೆ ಎಂದು ನಂಬಿಸುವ  ಶ್ರಮ ನಡೆಯುತ್ತಿದೆ. ಅದರಲ್ಲೂ ಮುಸ್ಲಿಮರ ಪ್ರತಿಯೊಂದು ನಡೆ-ನುಡಿಗಳನ್ನೂ ಪ್ರಶ್ನಿಸುವ ಮತ್ತು ಅನ್ಯರಂತೆ ನಡೆಸಿಕೊಳ್ಳುವ ಕ್ರಮ  ಚಾಲ್ತಿಯಲ್ಲಿದೆ. ನಿಜವಾಗಿ, 

ಸಮಸ್ಯೆ ಇರುವುದು ಬುರ್ಖಾದಲ್ಲಲ್ಲ- ಬುರ್ಖಾದೊಳಗಿನ ಮನುಷ್ಯರನ್ನು ಓದುವುದರಲ್ಲಿ ಮತ್ತು  ಅರ್ಥೈಸುವುದರಲ್ಲಿ. ನಕಾಬ್ ಧರಿಸಿ ಬ್ಯಾಂಕ್ ಪ್ರವೇಶಿಸಬೇಡಿ ಎಂದು ಹೇಳುವ ಅವೇ ಬ್ಯಾಂಕುಗಳು ಕೊರೋನಾ ಮಾಸ್ಕ್ ಧರಿಸದೇ ಒಳ ಪ್ರವೇಶಿಸುವುದನ್ನು ಅಪರಾಧವಾಗಿ ಕಾಣುತ್ತವೆ. ಮಾಸ್ಕ್ ಧರಿಸದವರಿಗೆ ಸೇವೆ ಒದಗಿಸುವುದಕ್ಕೂ ಅವು ನಿರಾಕರಿಸುತ್ತವೆ. ಸಾಮಾನ್ಯವಾಗಿ  ನಕಾಬ್ ಮತ್ತು ಮಾಸ್ಕ್ನ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಮೂಗು ಮತ್ತು ಬಾಯಿಯನ್ನು ಮುಚ್ಚುವ ನಕಾಬ್‌ನಿಂದ ಯಾರಿಗೆ  ತೊಂದರೆಯಾಗುತ್ತೋ ಅವರಿಗೆ ಕೊರೋನಾ ಮಾಸ್ಕ್ ನಿಂದಲೂ  ತೊಂದರೆಯಾಗಬೇಕು. ಗುರುತು ಪತ್ತೆಹಚ್ಚುವಿಕೆಗೆ ತೊಂದರೆ ಎನ್ನುತ್ತಾ  ಕೊಡುವ ಎಲ್ಲ ಕಾರಣಗಳೂ ನಕಾಬ್‌ನಂತೆಯೇ ಮಾಸ್ಕ್ ಗೂ  ಅನ್ವಯಿಸುತ್ತದೆ. ಕೊರೋನಾದ ಈ ಎರಡು ವರ್ಷಗಳಲ್ಲಿ ಮಾಸ್ಕ್  ಧರಿಸಿದ್ದಕ್ಕಾಗಿ ಯಾವ ಬ್ಯಾಂಕ್‌ಗಳೂ ಯಾವುದೇ ವ್ಯಕ್ತಿಯನ್ನೂ ಆಕ್ಷೇಪಿಸಿಲ್ಲ. ಗುರುತು ಪತ್ತೆ ಹಚ್ಚುವಿಕೆಗೆ ಅಡ್ಡಿ ಎಂದು ಹೇಳಿ ಮಾಸ್ಕ್  ಧರಿಸದಂತೆ ನೋಟೀಸು ಅಂಟಿಸಿಲ್ಲ. ಹೀಗಿರುವಾಗ, ಕಳೆದ ಎರಡು ವರ್ಷಗಳಿಂದ ಮಾಸ್ಕ್ ನಿಂದಾಗದ  ತೊಂದರೆಯು ಆಗಾಗ  ನಕಾಬ್‌ನಿಂದ ಮತ್ತು ಬುರ್ಖಾದಿಂದ ಮಾತ್ರ ಯಾಕಾಗುತ್ತಿದೆ? ನಿಜಕ್ಕೂ ಸಮಸ್ಯೆಯಿರುವುದು ನಕಾಬ್ ಮತ್ತು ಬುರ್ಖಾದಲ್ಲೋ  ಅಥವಾ  ಅದನ್ನು ನೋಡುವ ಕಣ್ಣು ಮತ್ತು ಮನಸ್ಸುಗಳಲ್ಲೋ?

ಈ ದೇಶದ ಹೆಚ್ಚುಗಾರಿಕೆಯೇ ಸಾಂಸ್ಕೃತಿಕ ವೈವಿಧ್ಯತೆ. ಬಹುಸಂಸ್ಕೃತಿಯ ನಾಡು ಎಂಬ ಮಾತಿನಲ್ಲಿಯೇ ಇದು ಸ್ಪಷ್ಟವಿದೆ. ರೊಟ್ಟಿ, ಚಟ್ನಿ,  ಸಾಂಬಾರು, ಉಪ್ಪಿಟ್ಟು, ಶಾವಿಗೆ, ಜೋಳದ ರೊಟ್ಟಿ, ಪೊಂಗಲ್, ಸಾರು, ಹುಳಿ, ಗೊಜ್ಜು, ಅನ್ನ, ಮುದ್ದೆ, ಹಪ್ಪಳ, ಚಿತ್ರಾನ್ನ, ಮೊಸರನ್ನ,  ತುಪ್ಪದನ್ನ ದಂತೆಯೇ ಮೀನು, ಮಾಂಸ ಪದಾರ್ಥಗಳೂ, ಬಿರಿಯಾನಿ ಊಟಗಳೂ ಇಲ್ಲಿವೆ. ಉಡುಗೆಯಲ್ಲೂ ಈ ವೈವಿಧ್ಯತೆಗಳಿವೆ.  ಕೇರಳದಲ್ಲಿ ಒಂದು ಬಗೆಯಾದರೆ ಬಿಹಾರದಲ್ಲಿ ಇನ್ನೊಂದು ಬಗೆ. ಬುಡಕಟ್ಟುಗಳದ್ದು ಬೇರೆಯದೇ ರೀತಿ. ಆದಿವಾಸಿಗಳು ಮತ್ತು ವಿವಿಧ  ಜಾತಿ ಗೋತ್ರಗಳದ್ದು ಇನ್ನೊಂದು ರೀತಿ. ಸಾವಿಗೆ ವ್ಯಕ್ತಪಡಿಸುವ ದುಃಖದಲ್ಲೂ ತರಹೇವಾರಿ. ಸಾವಿನ ಮನೆಯಲ್ಲಿ ಮೌನವಾಗಿ ಅಳುವವರೂ ಅಟ್ಟಹಾಸದಿಂದ ಕೂಗುವವರೂ ಇರುವಂತೆಯೇ ನೃತ್ಯ ಮಾಡುತ್ತಾ ದುಃಖ ವ್ಯಕ್ತಪಡಿಸುವ ಇರುಳರ್ ಎಂಬ ಬುಡಕಟ್ಟುಗಳೂ  ಇವೆ. ಹಾಗೆಯೇ ಮೃತದೇಹವನ್ನು ಹೂಳುವ ಮತ್ತು ಅಗ್ನಿಗರ್ಪಿಸುವ ಸಂಪ್ರದಾಯಗಳೂ ಇವೆ. ಹಾಗಂತ,

ಇವೆಲ್ಲ ಇತ್ತೀಚೆಗೆ ನುಸುಳಿಕೊಂಡ ಹೊಸ ಕ್ರಮಗಳೇನೂ ಅಲ್ಲ. ತಲೆತಲಾಂತರದಿಂದ  ಇಂಥ ವೈವಿಧ್ಯಮಯ ಆಚರಣೆಗಳು ಈ ದೇಶದ  ಮಣ್ಣಿನಲ್ಲಿ ಬೆರೆತುಕೊಂಡಿವೆ. ಆದರೆ, ಮುಸ್ಲಿಮರ ಬುರ್ಖಾ, ಕುರ್‌ಆನ್, ನಮಾಝï, ಅದಾನ್‌ಗಳನ್ನೆಲ್ಲ ಸಮಸ್ಯೆ ಎಂಬಂತೆ   ಬಿಂಬಿಸುತ್ತಿರುವುದಕ್ಕೆ ಇಷ್ಟು ದೀರ್ಘ ಇತಿಹಾಸವಿಲ್ಲ. ಮಾತ್ರವಲ್ಲ, ‘ಬುರ್ಖಾ ಧರಿಸಿ ಬ್ಯಾಂಕ್ ಪ್ರವೇಶಿಸಬೇಡಿ’ ಎಂದು ಬೋರ್ಡ್ ತಗುಲಿಸಿದವರೊಂದಿಗೆ ಬುರ್ಖಾದ ಬಗ್ಗೆಯೋ ಅಥವಾ ನಕಾಬ್‌ಗೂ ಬುರ್ಖಾಕ್ಕೂ ನಡುವೆ ಇರುವ ವ್ಯತ್ಯಾಸದ ಕುರಿತೋ ಪ್ರಶ್ನಿಸಿದರೆ,  ಸಮರ್ಪಕ ಉತ್ತರ ಲಭಿಸೀತೆಂದು ನಿರೀಕ್ಷಿಸುವ ಹಾಗೂ ಇಲ್ಲ. ಬುರ್ಖಾ ಯಾಕೆ ಬೇಡ ಎಂದರೆ ಅದನ್ನು ಮುಸ್ಲಿಮ್ ಮಹಿಳೆಯರು  ಧರಿಸುತ್ತಾರೆ ಎಂಬುದೊಂದೇ  ಈ ವಿರೋಧಕ್ಕೆ ಬಹುಮುಖ್ಯ ಕಾರಣ. ಉಳಿದೆಲ್ಲವೂ ತಮ್ಮ ಅಸಹನೆಯನ್ನು ಅಡಗಿಸುವುದಕ್ಕಾಗಿ ಮುಂದಿಡುತ್ತಿರುವ ಕೃತಕ ನೆವನಗಳು ಮಾತ್ರ. ಇದೊಂದು ರಾಜಕೀಯ ಷಡ್ಯಂತ್ರ. ಮುಸ್ಲಿಮರ ಪ್ರತಿಯೊಂದನ್ನೂ ಗುರಿ ಮಾಡುವುದು ಮತ್ತು  ಅವರನ್ನು ಹಿಂದೂಗಳ ಶತ್ರುಗಳಂತೆ ಬಿಂಬಿಸುವುದು. ಮುಸ್ಲಿಮರ ಆಹಾರ, ಆಚಾರ, ವಿಚಾರ, ಉಡುಗೆ, ಆರಾಧನೆ, ಸಂಪ್ರದಾಯ...  ಹೀಗೆ ಎಲ್ಲವನ್ನೂ ಹಿಂದೂ ವಿರೋಧಿಯಾಗಿ ಬಿಂಬಿಸುತ್ತಾ ಅವಕ್ಕೆಲ್ಲಾ ಸುಳ್ಳು ವ್ಯಾಖ್ಯಾನಗಳನ್ನು ತೇಲಿ ಬಿಡುವುದು. ಇದು ಇವತ್ತಿನ ದಿನಗಳಲ್ಲಿ ಬಹಳ ವ್ಯವಸ್ಥಿತವಾಗಿ ಮತ್ತು ಯೋಜಿತವಾಗಿ ನಡೆಯುತ್ತಿದೆ. ಜೊತೆಗೇ, ಅತ್ಯಂತ ವಿದ್ಯಾವಂತರೂ ಇಂಥ ಪ್ರಚಾರಗಳಿಗೆ ಬಲಿಯಾಗುತ್ತಿದ್ದಾರೆ. ಮಾತ್ರವಲ್ಲ, ಹೊಸ ತಲೆಮಾರುಗಳಿಗೆ ನಿರ್ದಿಷ್ಟವಾದ ಸ್ಟೀರಿಯೋಟೈಪ್ಡ್ ವಿಚಾರಗಳನ್ನೇ ತುಂಬಿಸಲಾಗುತ್ತಿದೆ. ಪುನೀತ್  ರಾಜ್‌ಕುಮಾರ್ ಅವರ ಅಂತ್ಯಸಂಸ್ಕಾರದ ವಿಷಯವಾಗಿ ಟಿ.ವಿ. ಚಾನೆಲ್‌ನ ನಿರೂಪಕನಲ್ಲಿ ಕಂಡುಬಂದ  ಅಚ್ಚರಿಗೆ ಕಾರಣ ಇದುವೇ.  ವೈದಿಕರಿಲ್ಲದೇ ಅಂತ್ಯಸಂಸ್ಕಾರ ನಡೆಯಲ್ಲ, ಹೋಮ-ಹವನಗಳಿಲ್ಲದೇ ಕುಟುಂಬಸ್ಥರೇ ಅಂತ್ಯಸಂಸ್ಕಾರ ನಡೆಸುವುದು ಅಸಾಧ್ಯ ಎಂಬ  ಭಾವ ಅವರಲ್ಲಿರುವುದು ಈ ಸ್ಟೀರಿಯೋಟೈಪ್ಡ್ ಮನಸ್ಥಿತಿಯನ್ನು ಸಾಬೀತುಪಡಿಸುತ್ತದೆ. ನಿಜವಾಗಿ,

ಈ ದೇಶದ ಸಮಸ್ಯೆ ಬುರ್ಖಾನೂ ಅಲ್ಲ, ನಮಾಝೂ ಅಲ್ಲ. ಅಥವಾ ಕುರ್‌ಆನ್, ಅದಾನ್, ಆಹಾರ ಕ್ರಮಗಳೂ ಅಲ್ಲ. ಸಮಸ್ಯೆ  ಇರುವುದು ಇವೆಲ್ಲವನ್ನೂ ನೋಡುವ ಹೃದಯಗಳಲ್ಲಿ. ಮುಸ್ಲಿಮರನ್ನು ಅನ್ಯರೆಂದು ಬಿಂಬಿಸಿ ನಡೆಸಲಾಗುತ್ತಿರುವ ಪ್ರಚಾರ ಅಭಿಯಾನದ  ಫಲಿತಾಂಶವೇ ಬ್ಯಾಂಕ್‌ನ ಎದುರು ಅಂಟಿಸಲಾದ ನೋಟೀಸು. ಹಾಗಂತ, ನೀವು ಬುರ್ಖಾ ಕಳಚಿ ಹೋದರೂ ಸಮಸ್ಯೆ  ಬಗೆಹರಿಯುತ್ತದೆ ಎಂದು ಹೇಳುವಂತಿಲ್ಲ. ‘ನಿಮ್ಮ ಹೆಸರೇ ಅರ್ಥವಾಗುತ್ತಿಲ್ಲ, ಅರಬಿ  ಮೂಲದ ಹೆಸರಿನ ಬದಲು ಭಾರತೀಯ  ಮೂಲದ ಹೆಸರನ್ನು ಇಟ್ಟುಕೊಳ್ಳಿ..’ ಎಂದು ಆ ಬಳಿಕ ಆ ಬ್ಯಾಂಕು ತಕರಾರು ತೆಗೆಯಬಹುದು. ಕಾರಣಗಳನ್ನು ಹುಡುಕುವವರಿಗೆ  ಕಾರಣ ಸಿಕ್ಕೇ ಸಿಗುತ್ತದೆ. ಅಂದಹಾಗೆ,

ಮಾಸ್ಕ್ ನಿಂದಾಗದ ತೊಂದರೆ, ಬುರ್ಖಾ ಮತ್ತು ನಕಾಬ್‌ನಿಂದಾಗುತ್ತದೆ ಎಂದು ವಾದಿಸುವುದರಲ್ಲೇ  ಅದಕ್ಕಿರುವ ನಿಜವಾದ ಕಾರಣಗಳು  ಅರ್ಥವಾಗುತ್ತವೆ. ಆದ್ದರಿಂದ ಕಳಚಬೇಕಾಗಿರುವುದು ಮನಸ್ಸಿನ ಪರದೆಯನ್ನೇ ಹೊರತು ದೇಹದ ಪರದೆಯನ್ನಲ್ಲ.

Tuesday, 9 November 2021

ಮಂಗಳೂರು ಗೋಲೀಬಾರ್: ಸರ್ಕಾರದಿಂದ ಸತ್ಯದ ಅಣಕ




2019, ಡಿಸೆಂಬರ್ 19ರಂದು ದ.ಕ. ಜಿಲ್ಲೆಯ ಮಂಗಳೂರಿನಲ್ಲಿ ನಡೆದ ಗೋಲಿಬಾರ್; ಒಂದಕ್ಕಿಂತ ಹೆಚ್ಚು ಕಾರಣಗಳಿಗಾಗಿ  ರಾಷ್ಟ್ರ ಮಟ್ಟದಲ್ಲಿ ಸುದ್ದಿಗೊಳಗಾಗಿತ್ತು. ಅಂದಹಾಗೆ, ಗೋಲಿಬಾರ್ ಅದಕ್ಕಿಂತ ಮೊದಲೂ ನಡೆದಿದೆ ಮತ್ತು ಆ ಬಳಿಕವೂ ನಡೆದಿದೆ. ಆದರೆ,  ಈ ಗೋಲಿಬಾರ್ ಇವೆಲ್ಲವುಗಳಿಗಿಂತ ಭಿನ್ನವಾಗಿತ್ತು. ಈ ಗೋಲಿಬಾರ್‌ನ ಹಿಂದೆ-ಮುಂದೆ  ಹಲವು ಬೆಳವಣಿಗೆಗಳೂ ನಡೆದುವು.


ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯುತ್ತಿದ್ದರೂ ದ.ಕ. ಜಿಲ್ಲೆಯಲ್ಲಿ ಡಿಸೆಂಬರ್ 19ರ ವರೆಗೆ  ಪ್ರತಿಭಟನೆಗಳು ನಡೆದಿರಲಿಲ್ಲ. ಆದ್ದರಿಂದ, ಈ ಕಾಯ್ದೆಯ ವಿರುದ್ಧ ಪ್ರತಿಭಟನೆಯನ್ನು ವ್ಯಕ್ತಪಡಿಸಬೇಕು ಎಂಬ ಮನಸ್ಸುಳ್ಳವರು  ಜಿಲ್ಲೆಯಾದ್ಯಂತ ಧಾರಾಳ ಇದ್ದರು. ಇದಕ್ಕೆ ಪೂರಕವಾಗಿ ಜಿಲ್ಲಾಡಳಿತಕ್ಕೆ ಸಂಘಟನೆಯೊಂದು  ಮನವಿಯನ್ನೂ ಮಾಡಿಕೊಂಡಿತ್ತು ಮತ್ತು  ಡಿಸೆಂಬರ್ 19ರಂದು ಪ್ರತಿಭಟನೆಗೆ ಅನುಮತಿಯನ್ನೂ ಪಡೆದುಕೊಂಡಿತ್ತು. ಆದರೆ,

ಡಿಸೆಂಬರ್ 18ರ ಸಂಜೆ ದಿಢೀರ್ ಬೆಳವಣಿಗೆಗಳು ಉಂಟಾದುವು. ಪ್ರತಿಭಟನೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸಲಾದ  ಮಾಹಿತಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಿತ್ತರವಾಯಿತು. ಇದನ್ನು ನಂಬಿದವರು ಮತ್ತು ನಂಬದವರು ಇದ್ದಂತೆಯೇ  ತಿಳಿದವರು ಮತ್ತು ತಿಳಿಯದವರೂ ಇದ್ದರು. ತಿಳಿದವರಿಗೂ ಈ ರದ್ದುಪಡಿಸುವಿಕೆಗೆ ನಿರ್ದಿಷ್ಟ ಕಾರಣ ಏನು ಎಂಬ ಬಗ್ಗೆಯೂ  ಸ್ಪಷ್ಟತೆಯಿರಲಿಲ್ಲ. ನಿಜವಾಗಿ, ಅಸ್ಪಷ್ಟತೆ ಯಾವಾಗಲೂ ಅಪಾಯಕಾರಿ. ಅವು ಅನೇಕ ಅಪಾಯಗಳ ತಾಯಿ. ಕಲ್ಪಿತ ಸುದ್ದಿಗಳು ಮತ್ತು  ವದಂತಿಗಳನ್ನು ಇಂಥ ಸಂದರ್ಭಗಳು ಹುಟ್ಟುಹಾಕುತ್ತವೆ. ಆ ಬಳಿಕ ವದಂತಿಗಳೇ ಮೇಲುಗೈ ಸಾಧಿಸಿ ವಾಸ್ತವ ಮರೆಗೆ ಸರಿಯುವುದೂ  ಇದೆ. ಡಿಸೆಂಬರ್ 18ರಂದು ಸಂಜೆಯ ವೇಳೆ ಉಂಟಾದ ಈ ದಿಢೀರ್ ಬೆಳವಣಿಗೆಯನ್ನು ನಿಭಾಯಿಸುವುದಕ್ಕೆ ಜಿಲ್ಲಾಡಳಿತ ಪ್ರಾಮಾಣಿಕ  ಪ್ರಯತ್ನ ಮಾಡಿರುತ್ತಿದ್ದರೆ ಡಿಸೆಂಬರ್ 19ರ ಘಟನೆಯನ್ನು ತಪ್ಪಿಸಬಹುದಿತ್ತೇನೋ. ಒಂದುಕಡೆ,

ಪೌರತ್ವ ಕಾಯ್ದೆಯನ್ನು ವಿರೋಧಿಸಬೇಕೆಂಬ ಸಾರ್ವಜನಿಕ ತುಡಿತ ಮತ್ತು ಇನ್ನೊಂದು ಕಡೆ ಪ್ರತಿಭಟನೆಗೆ ನೀಡಲಾದ ಅನುಮತಿಯನ್ನು  ಕೊನೆಕ್ಷಣದಲ್ಲಿ ದಿಢೀರ್ ರದ್ದುಪಡಿಸಲಾದುದು- ಇವೆರಡಕ್ಕೂ ಡಿಸೆಂಬರ್ 19ರ ವಿಷಾದಕರ ಘಟನೆಯಲ್ಲಿ ಪಾತ್ರವಿದೆ. ಸುಲಭವಾಗಿ  ನಿಭಾಯಿಸಬಹುದಾಗಿದ್ದ ಸ್ಥಿತಿಯನ್ನು ಪೊಲೀಸರು ಅತ್ಯಂತ ಕೆಟ್ಟದಾಗಿ ನಿರ್ವಹಿಸಿದರು. ಡಿಸೆಂಬರ್ 19ರಂದು ಮಧ್ಯಾಹ್ನ ಸಣ್ಣ  ಸಂಖ್ಯೆಯಲ್ಲಿ ಗುಂಪುಗೂಡಿದ್ದವರನ್ನು ಲಾಠಿಯಿಲ್ಲದೇ ಚದುರಿಸುವುದಕ್ಕೆ ಖಂಡಿತ ಸಾಧ್ಯವಿತ್ತು. ಅದಕ್ಕೆ ಬೇಕಿದ್ದುದು ಸಹನೆ ಮತ್ತು  ಚಾಕಚಕ್ಯತೆ. ಹೇಳಬೇಕಾದುದನ್ನು ಹೇಳುವುದಕ್ಕೆ ಆ ಸಣ್ಣ ಗುಂಪಿಗೆ ಅನುಮತಿ ನೀಡಿರುತ್ತಿದ್ದರೆ ಅದು ಅಲ್ಲಿಗೇ ಮುಗಿದು ಹೋಗುತ್ತಿತ್ತು.  ಆದರೆ,

ಪೊಲೀಸರು ಪೂರ್ವಾಗ್ರಹ ಪೀಡಿತರಂತೆ ವರ್ತಿಸಿದುದಕ್ಕೆ ಆ ಬಳಿಕ ಬಿಡುಗಡೆಗೊಂಡ ವೀಡಿಯೋಗಳು ಮತ್ತು ಮಾಧ್ಯಮ ವರದಿಗಳು  ಕೂಡ ಸಾಕ್ಷಿಯಾಗಿವೆ. ಪೊಲೀಸರು ಮನಬಂದಂತೆ ಲಾಠಿಚಾರ್ಜ್ ಮಾಡಿದರು. ಬಳಿಕ ಗುಂಪು ಚದುರಿತಲ್ಲದೇ ವಿವಿಧ ಜಾಗಗಳಲ್ಲಿ  ಜಮೆಯಾಗತೊಡಗಿತು. ಈ ಗುಂಪು ಮತ್ತು ಪೊಲೀಸರ ನಡುವೆ ಪರಸ್ಪರ ಕಲ್ಲೆಸೆತಗಳ ವಿನಿಮಯವೂ ನಡೆಯಿತು. ಕೊನೆಗೆ ಗೋಲಿಬಾರ್ ನಡೆಸಲಾಯಿತು. ಈ ಗೋಲಿಬಾರ್‌ಗಿಂತ ಮೊದಲು, ‘ಪ್ರತಿಭಟನಾಕಾರರಲ್ಲಿ ಇಬ್ಬರನ್ನು ಗುಂಡಿಟ್ಟು ಸಾಯಿಸು...’ ಎಂದು ಪೊಲೀಸ್ ಅಧಿಕಾರಿಯೋರ್ವರು ಇನ್ನೋರ್ವರಿಗೆ ಸೂಚಿಸುವ ವೀಡಿಯೋ ಕೂಡ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಗೀಡಾಯಿತು. ಗೋಲಿಬಾರ್‌ಗೆ ಇಬ್ಬರು ಬಲಿಯೂ ಆದರು. ಆ ಬಳಿಕ ಮುಖ್ಯಮಂತ್ರಿ ಯಡಿಯೂರಪ್ಪ ಇಬ್ಬರಿಗೂ ತಲಾ 10 ಲಕ್ಷ ರೂಪಾಯಿ  ಪರಿಹಾರವನ್ನು ಘೋಷಿಸಿದರು. ದಿನಗಳ ಬಳಿಕ ಆ ಘೋಷಣೆಯಿಂದ ಹಿಂದೆ ಸರಿದರು. ಇದೀಗ,

ಈ ಕುರಿತಾಗಿ ನಡೆಸಲಾದ ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ರಾಜ್ಯ ಸರಕಾರವು ಹೈಕೋರ್ಟ್ ಗೆ  ಸಲ್ಲಿಸಿದೆ.  ಮಾತ್ರವಲ್ಲ, ಗೋಲಿಬಾರ್ ಪ್ರಕರಣದಲ್ಲಿ ಪೊಲೀಸರು ತಪ್ಪು ಮಾಡಿಲ್ಲ ಎಂದೂ ಸಮರ್ಥಿಸಿಕೊಂಡಿದೆ. ಮ್ಯಾಜಿಸ್ಟ್ರೇಟ್ ತನಿಖಾ ವರದಿಯನ್ನು ರಾಜ್ಯ ಸರಕಾರ ಪೂರ್ಣ ಪ್ರಮಾಣದಲ್ಲಿ ಒಪ್ಪಿಕೊಳ್ಳುತ್ತದೆ ಎಂದೂ ಹೈಕೋರ್ಟ್ ಗೆ  ತಿಳಿಸಿದೆ. ಅಂದಹಾಗೆ,

ಆ ಇಡೀ ಘಟನೆಗೆ ಎರಡು ವರ್ಷಗಳು ತುಂಬುತ್ತಾ ಬಂದಿವೆ. ಘಟನೆ ನಡೆದಾಗಿನ ಸಾರ್ವಜನಿಕ ಆಕ್ರೋಶ, ಚರ್ಚೆ, ಹೇಳಿಕೆಗಳ ಭರಾಟೆ  ಇವತ್ತು ಕಡಿಮೆಯಾಗಿವೆ. ಪೊಲೀಸರ ವರ್ಗಾವಣೆಯಾಗಿದೆ. ಮೃತ ಜಲೀಲ್ ಮತ್ತು ನೌಶೀನ್ ಕುಟುಂಬವನ್ನು ಹೊರತುಪಡಿಸಿ  ಉಳಿದವರು ಈ ಘಟನೆಯನ್ನು ಇವತ್ತು ದಿನಾ ಸ್ಮರಿಸಿಕೊಳ್ಳುವ ಸ್ಥಿತಿಯಲ್ಲೂ ಇಲ್ಲ. ಆದ್ದರಿಂದ ಆ ಇಡೀ ಘಟನೆಯ ಸುತ್ತ ಮರು  ಅವಲೋಕನವೊಂದಕ್ಕೆ ಇದು ಸೂಕ್ತ ಸಮಯ. ಪ್ರತಿಭಟನಾ ಸಮಯದಲ್ಲಿ ಇರಬೇಕಾದ ಎಚ್ಚರಿಕೆಗಳೇನು ಎಂಬಲ್ಲಿಂದ  ತೊಡಗಿ  ಅತಿಸೂಕ್ಷ್ಮ  ಸಂದರ್ಭಗಳನ್ನು ಹೇಗೆ ನಿಭಾಯಿಸಬೇಕು ಎಂಬಲ್ಲಿವರೆಗೆ ಸಾರ್ವಜನಿಕರು ಮತ್ತು ಪೊಲೀಸ್ ಇಲಾಖೆ ಯಾವ  ಪೂರ್ವಾಗ್ರಹವೂ ಇಲ್ಲದೇ ಆಲೋಚಿಸುವ ಅಗತ್ಯ ಇದೆ. ಅದರಲ್ಲೂ ಪೊಲೀಸ್ ಇಲಾಖೆಯ ಪಾತ್ರ ಈ ವಿಷಯದಲ್ಲಿ ಬಹಳ ಮಹತ್ವ ಪೂರ್ಣವಾದುದು. ಸಾರ್ವಜನಿಕರೆಂದ ಮೇಲೆ ಅಲ್ಲಿ ಏಕಪ್ರಕಾರದ ಜನರಿರುವುದಿಲ್ಲ. ಪ್ರತಿಭಟನೆಯೆಂದರೇನೆಂದೇ  ಗೊತ್ತಿಲ್ಲದವರು,  ಗೊತ್ತಿರುವವರು, ಶಿಕ್ಷಿತರು, ಅಶಿಕ್ಷಿತರು ಎಲ್ಲರೂ ಇರುವ ಒಂದು ಗುಂಪಾಗಿ ಸಾರ್ವಜನಿಕರನ್ನು ಪರಿಗಣಿಸಬೇಕು. ಪ್ರತಿಭಟನೆಗೆ  ಕುತೂಹಲದಿಂದ ಬರುವವರಿರುತ್ತಾರೆ. ದಾರಿಹೋಕರೂ ಒಂದುಕ್ಷಣ ಇಣುಕಿ ಹೋಗುವುದಿದೆ. ಪ್ರತಿಭಟನೆಯ ಇತಿ-ಮಿತಿಗಳ ಬಗ್ಗೆ  ಸ್ಪಷ್ಟತೆ ಇಲ್ಲದವರೂ ಸಾರ್ವಜನಿಕರಲ್ಲಿ ಇರುವವರಿರುತ್ತಾರೆ. ಆದರೆ,

ಪೊಲೀಸ್ ಇಲಾಖೆ ಹಾಗಲ್ಲ. ಅದು ಶಿಸ್ತುಬದ್ಧ ತಂಡ. ಅದಕ್ಕೆ ಪ್ರತಿಭಟನೆ ಏನೆಂದೂ ಗೊತ್ತಿರುತ್ತದೆ ಮತ್ತು ಕರ್ಫ್ಯೂ ಅಂದರೇನೆಂದೂ  ತಿಳಿದಿರುತ್ತದೆ. ಮಾತ್ರವಲ್ಲ, ಯಾವುದೇ ಸಂದರ್ಭದಲ್ಲೂ ಅತ್ಯಂತ ನ್ಯಾಯಯುತ ನಿಲುವನ್ನು ಮಾತ್ರ ಹೊಂದುವ ಮತ್ತು ಯಾವ  ಸಂದರ್ಭದಲ್ಲೂ ಪೂರ್ವಾಗ್ರಹ ಪೀಡಿತವಾಗಿ ವರ್ತಿಸದಿರುವ ತರಬೇತಿಯನ್ನೂ ಪಡೆದಿರುತ್ತದೆ. ಆದ್ದರಿಂದಲೇ, ಪೊಲೀಸರು ಸಾರ್ವಜನಿಕರಿಗಿಂತ ಹೆಚ್ಚು ಉತ್ತರದಾಯಿಗಳಾಗಿರುತ್ತಾರೆ. ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸುವ ಮತ್ತು ಸಾರ್ವಜನಿಕರಿಗೆ  ತೊಂದರೆಯಾಗದಂತೆ  ಜಾಣತನದಿಂದ ನಿಭಾಯಿಸುವ ಬುದ್ಧಿವಂತಿಕೆಯನ್ನು ಅವರು ಪ್ರದರ್ಶಿಸಬೇಕಾಗುತ್ತದೆ. ಸಾರ್ವಜನಿಕರು  ಕಲ್ಲೆಸೆದುದಕ್ಕೆ ನಾವೂ ಕಲ್ಲೆಸೆದೆವು, ಅವರು ಬೈದುದಕ್ಕೆ ನಾವೂ ಬೈದೆವು, ಅವರು ರಸ್ತೆ ತಡೆ ನಡೆಸಿದುದಕ್ಕೆ ನಾವೂ ನಡೆಸಿದೆವು ಎನ್ನುವುದಾದರೆ ಇವರಿಬ್ಬರ ನಡುವೆ ಯಾವ ವ್ಯತ್ಯಾಸವೂ ಇಲ್ಲ ಎಂದಾಗುತ್ತದೆ. ದುರಂತ ಏನೆಂದರೆ,

ಮಂಗಳೂರು ಗೋಲೀಬಾರ್ ಘಟನೆಯಲ್ಲಿ ಪೊಲೀಸರಿಂದ ಈ ತಪ್ಪು ಸಂಭವಿಸಿದೆ. ಅವರ ವರ್ತನೆ ಸಾರ್ವಜನಿಕರ ಮಟ್ಟಕ್ಕಿಂತಲೂ  ಕೆಳಗಿತ್ತು. ಪೊಲೀಸರು ಕಲ್ಲೆಸೆದರು. ಅನ್ಯಾಯವಾಗಿ ಲಾಠಿ ಬೀಸಿದರು. ಅಟ್ಟಾಡಿಸಿ ಹೊಡೆದರು. ಅಂತಿಮವಾಗಿ ಗುಂಡು ಹಾರಿಸಿ ಇಬ್ಬರನ್ನು ಸಾಯಿಸುವಂತೆ ಮಾತುಗಳನ್ನೂ ಆಡಿಕೊಂಡರು. ಇವೆಲ್ಲವೂ ವೀಡಿಯೋಗಳಲ್ಲಿ ಸೆರೆಯಾಗಿರುವ ಮಾಹಿತಿಗಳು. ಇನ್ನು, ಹೀಗೆ  ಸೆರೆಯಾಗದಿರುವ ವರ್ತನೆಗಳು ಏನೇನಿವೆಯೋ ಗೊತ್ತಿಲ್ಲ. ಅಂದಹಾಗೆ,

ಈಗಾಗಲೇ ಸಾರ್ವಜನಿಕವಾಗಿ ಯಾವೆಲ್ಲ ಮಾಹಿತಿಗಳು ಮತ್ತು ವರದಿಗಳು ಲಭ್ಯವಿವೆಯೋ ಅವುಗಳ ಆಧಾರದಲ್ಲಿ ಹೇಳುವುದಾದರೆ,  ಮಂಗಳೂರು ಗೋಲೀಬಾರ್ ಪ್ರಕರಣದಲ್ಲಿ ಪೊಲೀಸರ ಕಡೆಯಿಂದ ಗಂಭೀರ ತಪ್ಪುಗಳಾಗಿವೆ. ಆ ತಪ್ಪುಗಳ ಎದುರು ಸಾರ್ವಜನಿಕರ  ತಪ್ಪುಗಳು ಅತ್ಯಂತ ಕ್ಷುಲ್ಲಕ. ಗುಂಡು ಹಾರಿಸಿ ಕೊಲ್ಲುವಂತೆ ಕರ್ತವ್ಯನಿರತ ಅಧಿಕಾರಿಯೇ ಹೇಳುತ್ತಾರೆಂದರೆ, ಅದರಾಚೆಗೆ  ಹೇಳುವುದಕ್ಕಾದರೂ ಏನಿದೆ? ಡಿಸೆಂಬರ್ 18ರಿಂದ ಡಿಸೆಂಬರ್ 19ರ ವರೆಗಿನ ಈ 24 ಗಂಟೆಗಳ ಅವಧಿಯಲ್ಲಿ ಮಂಗಳೂರು ಪೊಲೀಸರು ನಡಕೊಂಡ ರೀತಿಯನ್ನು ಯಾವ ರೀತಿಯಲ್ಲೂ ಸಮರ್ಥಿಸಲು ಸಾಧ್ಯವಿಲ್ಲ. ಗಾಯಾಳುಗಳನ್ನು ದಾಖಲಿಸಲಾದ ಆಸ್ಪತ್ರೆಯ  ಐಸಿಯು ಕೊಠಡಿಯೊಳಕ್ಕೂ ನುಗ್ಗಿ ದಾಂಧಲೆ ನಡೆಸಿದ ಸಿಸಿಟಿವಿ ದೃಶ್ಯಗಳೇ ಪೊಲೀಸರನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಧಾರಾಳ  ಸಾಕು. ಇಷ್ಟಿದ್ದೂ ಪೊಲೀಸರು ತಪ್ಪಿತಸ್ಥರ಼ಲ್ಲ ಎಂದು ಮ್ಯಾಜಿಸ್ಟ್ರೇಟ್ ವರದಿ ಹೇಳುತ್ತದೆಂದಾದರೆ ಮತ್ತು ಸರ್ಕಾರ ಅದನ್ನು  ಒಪ್ಪಿಕೊಳ್ಳುತ್ತದೆಂದಾದರೆ ಅದು ಸತ್ಯದ ಅಣಕ. ಅಂದಿನ ದಿನಗಳಿಗೆ ಸಾಕ್ಷಿಯಾದ ಯಾರೂ ಪೊಲೀಸರನ್ನು ಮುಗ್ಧರು ಎಂದು  ಹೇಳಲಾರರು.