Tuesday, 20 June 2023

ಸೌಜನ್ಯ ಪ್ರಕರಣ: ಸಂತೋಷ್ ಅಲ್ಲದಿದ್ದರೆ ಇನ್ನಾರು?


 

2012 ಅಕ್ಟೋಬರ್ 10ರಂದು ಶವವಾಗಿ ಪತ್ತೆಯಾದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ತೀರ್ಪು ಹೊರಬಿದ್ದಿದೆ. ಪ್ರಕರಣ ನಡೆದು 11 ವರ್ಷಗಳ ಬಳಿಕ ಹೊರಬಿದ್ದ ಈ ತೀರ್ಪನ್ನು ಸೌಜನ್ಯ ಕುಟುಂಬ ಸ್ವಾಗತಿಸಿದೆ. ಅಚ್ಚರಿ ಏನೆಂದರೆ, ಈ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಏಕೈಕ ಆರೋಪಿಯಾಗಿ 10 ವರ್ಷಗಳ ಕಾಲ ಜೈಲಲ್ಲಿದ್ದ ಸಂತೋಷ್ ರಾವ್ ಎಂಬವರನ್ನು ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದುದಕ್ಕೆ ಈ ಕುಟುಂಬದಿಂದ ಯಾವ ಆಕ್ಷೇಪವೇ ವ್ಯಕ್ತವಾಗಿಲ್ಲ. ಮಾತ್ರವಲ್ಲ, ಆತನ ಬಂಧನವನ್ನೇ ಈ ಕುಟುಂಬ ವಿರೋಧಿಸುತ್ತಾ ಬಂದಿತ್ತು. ಸೌಜನ್ಯಳನ್ನು ಹತ್ಯೆ ಮಾಡಿದವ ಈತನಲ್ಲ ಮತ್ತು ನಿಜ ಅಪರಾಧಿಗಳನ್ನು ರಕ್ಷಿಸುವುದಕ್ಕಾಗಿ ಈ ಬಡಪಾಯಿಯನ್ನು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಈ ಕುಟುಂಬ ವಾದಿಸುತ್ತಲೇ ಬಂದಿತ್ತು. ಇದೀಗ ಸಿಬಿಐ ಕೂಡ ಸಂತೋಷ್ ರಾವ್‌ರನ್ನು ಆರೋಪ ಮುಕ್ತಗೊಳಿಸಿರುವುದರಿಂದ ಸೌಜನ್ಯಳನ್ನು ಕೊಂದವರಾರು ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.

2012 ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಸೌಜನ್ಯ ಮನೆಗೆ ಬರದೇ ಇದ್ದಾಗ ಆಕೆಗಾಗಿ ಊರಿಗೆ ಊರೇ ಹುಡುಕಾಡಿತ್ತು. ಸುಮಾರು 2000 ಮಂದಿ ಮಧ್ಯರಾತ್ರಿ 2 ಗಂಟೆಯವರೆಗೆ ಈ ಹುಡುಕಾಟದಲ್ಲಿ ಭಾಗಿಯಾಗಿದ್ದರು. ಅಲ್ಲದೇ ಮಳೆಯೂ ಸುರಿಯುತ್ತಿತ್ತು. ಸೌಜನ್ಯಳ ಮಾಹಿತಿ ಸಿಗದೇ ನಿರಾಶರಾಗಿ ಮರಳಿದ ಕುಟುಂಬಕ್ಕೆ ಮರುದಿನ ಬೆಳಿಗ್ಗೆ ಆಘಾತಕಾರಿ ಸುದ್ದಿ ಸಿಕ್ಕಿತ್ತು. ಮೊದಲ ದಿನ ಮಧ್ಯರಾತ್ರಿವರೆಗೆ ಅವರೆಲ್ಲ ಎಲ್ಲಿ ಹುಡುಕಾಡಿದ್ದರೋ ಅದೇ ಸ್ಥಳದಲ್ಲಿ ಸೌಜನ್ಯ ಶವವಾಗಿ ಮಲಗಿದ್ದಳು. ಆಕೆಯ ಕೈ ಕಟ್ಟಿದ ಸ್ಥಿತಿಯಲ್ಲಿತ್ತು. ದೇಹದಲ್ಲಿ ಹಿಂಸೆಯ ಕುರುಹುಗಳಿದ್ದುವು. ವಿಚಿತ್ರ ಏನೆಂದರೆ, ಆಕೆಯ ಬಟ್ಟೆಯಾಗಲಿ ಬ್ಯಾಗ್ ಆಗಲಿ ಅಥವಾ ಬ್ಯಾಗಿನೊಳಗಿದ್ದ ಪುಸ್ತಕಗಳಾಗಲಿ ಒದ್ದೆಯಾಗಿರಲಿಲ್ಲ. ಆದ್ದರಿಂದ ಇದು ಅಪಹರಣ, ಅತ್ಯಾಚಾರ ಮತ್ತು ಹತ್ಯೆ ಪ್ರಕರಣವೆಂದು ಊರಿಗೆ ಊರೇ ಅಭಿಪ್ರಾಯಪಟ್ಟಿತ್ತು. ಆದ್ದರಿಂದ ಈ ಕೃತ್ಯದಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಭಾಗಿಯಾಗಿದ್ದಾರೆ ಎಂಬ ಅನುಮಾನ ಎಲ್ಲರಲ್ಲಿತ್ತು. ಆದರೆ ದಿನಗಳ ಬಳಿಕ ಸಂತೋಷ್ ರಾವ್ ಎಂಬಾತನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆಗಲೇ ಈ ಸೌಜನ್ಯ ಕುಟುಂಬ ಆತ ನಿರಪರಾಧಿ ಎಂದು ಹೇಳಿತ್ತು. ಹಾಗೆಯೇ, 2017ರಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಬಿ.ಎಸ್. ರೇಖಾ ಅವರು ಸಿಬಿಐ ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೇ,

‘ಪೊಲೀಸರು ಸೌಜನ್ಯಳ ರಕ್ತದ ಮಾದರಿ ಮತ್ತು ಆರೋಪಿಯ ಬಟ್ಟೆಯ ಸಾಕ್ಷ್ಯ ಮಾದರಿಯನ್ನು ಸಂಗ್ರಹಿಸಲು ವಿಫಲರಾಗಿದ್ದಾರೆ’ ಎಂದು ಡಿಎನ್‌ಎ ತಜ್ಞ ಡಾ| ವಿನೋದ್ ಜೆ. ಲಕ್ಕಪ್ಪ ವಿಚಾರಣೆಯ ವೇಳೆ ಹೇಳಿದ್ದರು. ಸಿಬಿಐ ಅಧಿಕಾರಿಗಳು ತನಿಖೆಯ ವಿಷಯದಲ್ಲಿ ಗಂಭೀರವಾಗಿಲ್ಲ ಎಂಬ ರೀತಿಯಲ್ಲಿ ನ್ಯಾಯಾಧೀಶೆ ಅಂದು ಅಸಮಾಧಾನ ವ್ಯಕ್ತಪಡಿಸಿದ್ದರು. ನಿಜವಾಗಿ,

ಉತ್ತರ ಪ್ರದೇಶದ ಹತ್ರಾಸ್‌ನಂತೆ ಸೌಜನ್ಯ ಪ್ರಕರಣ ಕೂಡ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆದಿತ್ತು. ಸರಣಿ ಹೋರಾಟಗಳು ನಡೆದಿದ್ದವು. ಕೇಮಾರು ಶ್ರೀ ಈಶವಿಠಲ ಸ್ವಾಮೀಜಿಯೇ ಈ ಹೋರಾಟದ ಮುಂಚೂಣಿಯಲ್ಲಿದ್ದರು. ಸೌಜನ್ಯಳ ತಾಯಿ ಕುಸುಮಾವತಿ ಮತ್ತು ತಂದೆ ಚಂದಪ್ಪ ಗೌಡ ಪ್ರತೀ ಹೋರಾಟ-ಧರಣಿ-ಹಕ್ಕೊತ್ತಾಯದಲ್ಲೂ ಭಾಗಿಯಾಗಿದ್ದರು. ಈ ಹೋರಾಟದ ಮುಂಚೂಣಿಯಲ್ಲಿದ್ದ ಯಾರಿಗೂ ಸಂತೋಷ್ ರಾವ್‌ನ ಮೇಲೆ ಅನುಮಾನ ಇರಲಿಲ್ಲ. ಆತನನ್ನು ಸಿಲುಕಿಸಲಾಗಿದೆ ಎಂದೇ ಅವರು ಹೇಳುತ್ತಿದ್ದರು. ಆತ ಮಾನಸಿಕ ಅಸ್ವಸ್ಥ ಎಂಬ ಅಭಿಪ್ರಾಯವೂ ಊರವರದ್ದಾಗಿತ್ತು. ಒಂದಕ್ಕಿಂತ ಹೆಚ್ಚು ಮಂದಿ ಸೇರಿಕೊಂಡು ಮಾಡಿರುವ ಕೃತ್ಯ ಎಂಬುದು ಆಕೆಯ ಒದ್ದೆಯಾಗದ ಬಟ್ಟೆ, ಶಾಲಾ ಬ್ಯಾಗು, ಪುಸ್ತಕಗಳು ಹೇಳುತ್ತಿವೆಯಾದರೂ ಸಂತೋಷ್ ರಾವ್‌ನನ್ನು ಮಾತ್ರ ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ತನಿಖೆ ನಡೆಸಲು ಕಾರಣವೇನು ಎಂಬ ಪ್ರಶ್ನೆಯನ್ನು 2012ರಿಂದ ಇಂದಿನವರೆಗೆ ಸೌಜನ್ಯ ಕುಟುಂಬ ಮತ್ತು ಹೋರಾಟಗಾರರು ಪ್ರಶ್ನಿಸುತ್ತಾ ಬಂದಿದ್ದಾರೆ. ಇದೀಗ ಅನುಮಾನ ನಿಜವಾಗಿದೆ. ಸಂತೋಷ್ ರಾವ್‌ನನ್ನು 10 ವರ್ಷ ಜೈಲಲ್ಲಿಟ್ಟ ಇದೇ ನ್ಯಾಯಾಲಯ ಆತ ನಿರ್ದೋಷಿ ಎಂದು ಹೇಳಿ ಕೈ ತೊಳೆದುಕೊಂಡಿದೆ. ಹಾಗಿದ್ದರೆ, ಸಂತೋಷ್ ರಾವ್‌ಗೆ ಕಳೆದು ಹೋದ 10 ವರ್ಷವನ್ನು ಮರಳಿಸುವವರು ಯಾರು ಎಂಬ ಪ್ರಶ್ನೆಯ ಜೊತೆಗೇ ಸೌಜನ್ಯಳನ್ನು ಹತ್ಯೆಗೈದವರು ಯಾರು ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ.

ಸೌಜನ್ಯ ಕುಟುಂಬ 2023 ಜನವರಿಯಲ್ಲಿ ಹೊಸ ಮನೆಯನ್ನು ನಿರ್ಮಿಸಿತ್ತು. ಮನೆಯ ಹೆಸರೇ ಸೌಜನ್ಯ. ಸೌಜನ್ಯ ಸಮಾಧಿಯಾದ ಸ್ಥಳದಲ್ಲೇ ಈ ಕುಟುಂಬ ಒಂದು ಗಿಡವನ್ನೂ ನೆಟ್ಟಿದೆ. ಅದೀಗ ಮರವಾಗಿದೆ. ಸೌಜನ್ಯಳನ್ನು ಸ್ಮರಿಸದ ಒಂದೇ ಒಂದು ದಿನ ನಮ್ಮ ಮನೆಯಲ್ಲಿಲ್ಲ ಎಂದು ತಾಯಿ ಹೇಳುತ್ತಾರೆ. ಸೌಜನ್ಯ ಕಾಣೆಯಾದ 2012 ಅಕ್ಟೋಬರ್ 9ರಂದು ಬೆಳಿಗ್ಗೆ ನಾನು ಅಡುಗೆಕೋಣೆಯಲ್ಲಿದ್ದೆ. ಕಾಲೇಜಿಗೆ ಹೊರಟು ಹೋಗುವಾಗ ಮಗಳಿಗೆ ಜಾಗ್ರತೆ ಎಂದು ಹೇಳುವುದಕ್ಕೂ ನನಗಾಗಿರಲಿಲ್ಲ… ಎಂದು ಆ ತಾಯಿ ಈ 11 ವರ್ಷಗಳ ಬಳಿಕವೂ ದುಃಖಿಸುತ್ತಾರೆ. ಸೌಜನ್ಯ ಹುಟ್ಟಿದ ದಿನವಾದ ಅಕ್ಟೋಬರ್ 18ರಂದು ಆಕೆಯ ಸಮಾಧಿ ಬಳಿ ಭಜನೆ ಮಾಡಲಾಗಿದೆ… ಒಂದು ರೀತಿಯಲ್ಲಿ,

ಮಕ್ಕಳು ಮತ್ತು ಹೆತ್ತವರ ನಡುವಿನ ಸಂಬಂಧದ ಆಳ ಇದು. ಹೆಣ್ಣು ಮಗಳೊಬ್ಬಳು ಅತ್ಯಾಚಾರಕ್ಕೊಳಗಾಗಿ ಕ್ರೂರವಾಗಿ ಹತ್ಯೆಗೀಡಾದುದನ್ನು ಸಮಾಜ ನಿಧಾನಕ್ಕೆ ಮರೆಯಬಹುದು. ಆದರೆ, ಹೆತ್ತವರು ಮರೆಯಲಾರರು. ಅಷ್ಟಕ್ಕೂ, ಸೌಜನ್ಯ ಎಂದಲ್ಲ, 2020ರಲ್ಲಿ ನಡೆದ ಹತ್ರಾಸ್ ಪ್ರಕರಣವನ್ನೂ ಪ್ರಭುತ್ವ ದಿಕ್ಕು ತಪ್ಪಿಸಲು ಶತಾಯ ಗತಾಯ ಯತ್ನಿಸಿತ್ತು. ಆ ಹೆಣ್ಣು ಮಗಳ ಶವವನ್ನು ರಾತೋರಾತ್ರಿ ಕದ್ದು ಮುಚ್ಚಿ ದಹಿಸಲಾಗಿತ್ತು. ಕುಟುಂಬವನ್ನು ಅಕ್ಷರಶಃ ಹೊರಜಗತ್ತಿನಿಂದ ಬೇರ್ಪಡಿಸಿ ಇಡಲಾಗಿತ್ತು. ತಮ್ಮ ಹೇಳಿಕೆಯನ್ನು ಹಿಂಪಡೆಯುವಂತೆ ಕುಟುಂಬದ ಮೇಲೆ ಅಧಿಕಾರಿಗಳೇ ಒತ್ತಡ ಹೇರಿದುದನ್ನು ಸೋರಿಕೆಯಾದ ವೀಡಿಯೋಗಳೇ ಬಹಿರಂಗಪಡಿಸಿದ್ದುವು. ಇದಕ್ಕೆ ಕಾರಣ- ಆರೋಪಿಗಳೆಲ್ಲ ಮೇಲ್ಜಾತಿ ಯುವಕರು. ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿದ ಯುವತಿ ದಲಿತ ಸಮುದಾಯದವಳು. ಪ್ರಕರಣ ದಾಖಲಿಸಿದುದಕ್ಕಾಗಿ ಆ ದಲಿತ ಕುಟುಂಬಕ್ಕೆ ಮೇಲ್ಜಾತಿ ಸಮುದಾಯ ಬಹಿಷ್ಕಾರ ವನ್ನು ಹೇರಿತ್ತು. ಪೊಲೀಸ್ ತನಿಖೆಯ ವಿಷಯದಲ್ಲೂ ಸಾಕಷ್ಟು ಆರೋಪಗಳಿದ್ದುವು. ಎಫ್‌ಐಆರ್ ದಾಖಲಿಸುವಲ್ಲೂ ವಿಳಂಬವಾಗಿತ್ತು. ಅಂತಿಮವಾಗಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ದರು. ಇವರಲ್ಲಿ ಮೂವರನ್ನು 2023ರಲ್ಲಿ ಕೋರ್ಟು ಖುಲಾಸೆಗೊಳಿಸಿ ಸಂದೀಪ್ ಸಿಸೋಡಿಯಾ ಎಂಬ ಓರ್ವನನ್ನು ಮಾತ್ರ ಅಪರಾಧಿ ಎಂದು ಘೋಷಿಸಿದೆ.

ಅತ್ಯಾಚಾರ ಎಂಬುದು ಕಳ್ಳತನ, ದರೋಡೆ, ಭ್ರಷ್ಟಾಚಾರದಂಥಲ್ಲ. ಅದರಲ್ಲಿ ಪುರುಷ ಅಹಂಕಾರ ಮಾತ್ರ ಇರುವುದಲ್ಲ, ಸಮಾಜ ನೈತಿಕವಾಗಿ ಎಷ್ಟು ಪತನಗೊಂಡಿದೆ ಎಂಬುದರ ಸೂಚನೆಯೂ ಇರುತ್ತದೆ. ಅತ್ಯಾಚಾರಗೈದವ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಬಲಾಢ್ಯನಾಗಿದ್ದರೆ ಕಾನೂನಿನ ಬಲೆಯೊಳಗೆ ಸಿಲುಕದಂತೆ ರಕ್ಷಿಸಿಕೊಳ್ಳುವುದಕ್ಕೆ ಆತನಿಗೆ ನೂರು ದಾರಿಗಳಿವೆ. ದುಬಾರಿ ಶುಲ್ಕ ತೆತ್ತು ನ್ಯಾಯವಾದಿಯನ್ನು ನೇಮಿಸಿಕೊಳ್ಳುವಲ್ಲಿಂದ ಹಿಡಿದು ಪೊಲೀಸರನ್ನು ಬಳಸಿಕೊಂಡು ತನಿಖೆ ಯನ್ನೇ ದಿಕ್ಕು ತಪ್ಪಿಸುವ ಮತ್ತು ಸಾಕ್ಷ್ಯವನ್ನೇ ನಾಶ ಮಾಡುವಲ್ಲಿ ವರೆಗೆ ಸಕಲ ಅವಕಾಶಗಳೂ ಆತನಿಗಾಗಿ ತೆರೆದಿರುತ್ತವೆ. ಇದಕ್ಕೆ ತಾಜಾ ಪುರಾವೆ ಬೇಕೆಂದರೆ, ದೆಹಲಿಯಲ್ಲಿ ನಡೆಯುತ್ತಿದ್ದ ಕುಸ್ತಿಪಟು ಗಳ ಪ್ರತಿಭಟನೆಯನ್ನು ಎತ್ತಿಕೊಳ್ಳಬಹುದು. ಪೋಕ್ಸೋ ಪ್ರಕರಣ ದಾಖಲಿಸಿದರೂ ಆರೋಪಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. 7 ಮಂದಿ ಕುಸ್ತಿ ತಾರೆಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿಯೂ ಆರೋಪಿಯ ಕೂದಲೂ ಕೊಂಕಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಪೋಕ್ಸೋ ಪ್ರಕರಣವನ್ನೇ ಹಿಂಪಡೆದು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದರು. ಒಂದುವೇಳೆ, ಓರ್ವ ಬಡಪಾಯಿ ಆರೋಪಿಯಾಗಿರುತ್ತಿದ್ದರೆ? ಪೋಕ್ಸೋ ಪ್ರಕರಣ ದಾಖಲಾದ ಕ್ಷಣದಲ್ಲೇ ಆತನನ್ನು ಕೈಕೋಲ ತೊಡಿಸಿ ಮುಖಕ್ಕೆ ಕಪ್ಪು ಬಟ್ಟೆ ತೊಡಿಸಿ ಜೈಲಿಗೆ ಹಾಕಲಾಗುತ್ತಿತ್ತು. ಅಂದಹಾಗೆ,

ಈ ರೀತಿಯ ಆಕ್ರೋಶವೇ ಸೌಜನ್ಯ ಹೆತ್ತವರಲ್ಲೂ ಇದೆ. ಸೌಜನ್ಯ ಇಲ್ಲ ಎಂಬುದಕ್ಕಿಂತ ಆಕೆಯನ್ನು ಅತ್ಯಂತ ಕ್ರೂರವಾಗಿ ತಮ್ಮಿಂದ ಕಸಿದುಕೊಳ್ಳಲಾಗಿದೆ ಎಂಬ ನೋವು ಅವರನ್ನು ಇಂಚಿಂಚೂ ಕಾಡುತ್ತಿದೆ. ಸೌಜನ್ಯಳನ್ನು ಸ್ಮರಿಸಿಕೊಳ್ಳುವಾಗ 2012ರಲ್ಲಿ ಅವರು ಹೇಗೆ ಭಾವುಕರಾಗುತ್ತಿದ್ದರೋ ಈ 11 ವರ್ಷಗಳ ಬಳಿಕವೂ ಅದೇ ಭಾವದಲ್ಲಿದ್ದಾರೆ. 2012ರಲ್ಲಿ ಅವರು ಯಾರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರೋ ಈಗಲೂ ಅದೇ ಅನುಮಾನವನ್ನು ಪುನರಾವರ್ತಿಸುತ್ತಿದ್ದಾರೆ. ಆದ್ದರಿಂದ ಸೌಜನ್ಯ ಪ್ರಕರಣದ ಮರು ತನಿಖೆಯಾಗಬೇಕು. ಸಂತೋಷ್ ರಾವ್ ಅಲ್ಲದಿದ್ದರೆ ಇನ್ನಾರು ಎಂದು ಪ್ರಶ್ನಿಸುವ ಹಕ್ಕು ಆಕೆಯ ಕುಟುಂಬಕ್ಕಿದೆ. ಸರಕಾರ ಉತ್ತರಿಸಲಿ.

ಆರೆಸ್ಸೆಸ್ ಸಂವಾದ: ಜಮಾಅತೆ ಇಸ್ಲಾಮಿಯ ನಿಲುವೇನು?

 



ಸನ್ಮಾರ್ಗ ವಿಶೇಷ ಸಂಪಾದಕೀಯ 

‘RSS makes fresh minority outreach, key leaders meet Muslim representatives - ಮುಸ್ಲಿಮ್ ಪ್ರತಿನಿಧಿಗಳನ್ನು ಭೇಟಿಯಾದ ಆರೆಸ್ಸೆಸ್ ನಾಯಕರು -’ ಎಂಬ ಶೀರ್ಷಿಕೆಯಲ್ಲಿ ದಿ ಹಿಂದೂ ಪತ್ರಿಕೆ 2023 ಜನವರಿ 26ರಂದು ಮೂರು ಕಾಲಮ್‌ನಲ್ಲಿ ಸಾಕಷ್ಟು ಮಹತ್ವ ಕೊಟ್ಟೇ ಮತ್ತು ವಿವರವಾಗಿಯೇ ಸುದ್ದಿಯನ್ನು ಪ್ರಕಟಿಸಿತ್ತು. ದೆಹಲಿ ಕೇಂದ್ರಿತ ಮುಖ್ಯವಾಹಿನಿಯ ಇನ್ನಿತರ ಟೈಮ್ಸ್ ಆಫ್  ಇಂಡಿಯಾ ಸಹಿತ  ಹಿಂದಿ ಮತ್ತು ಇಂಗ್ಲಿಷ್ ಪತ್ರಿಕೆಗಳೂ ಈ ಸುದ್ದಿಯನ್ನು ಪ್ರಕಟಿಸಿದ್ದುವು. ಜಾಮಿಯಾ ಮಿಲ್ಲಿಯಾ ವಿವಿಯ ಮಾಜಿ ಉಪಕುಲಪತಿ ಮತ್ತು ದೆಹಲಿಯ ಮಾಜಿ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಅವರ ದೆಹಲಿ ನಿವಾಸದಲ್ಲಿ ನಡೆದ ಈ ಸಭೆಯಲ್ಲಿ ಆರೆಸ್ಸೆಸ್ ಕಡೆಯಿಂದ ಇಂದ್ರೇಶ್ ಕುಮಾರ್ ಮತ್ತು ರಾಮ್ ಲಾಲ್ ಕೃಷ್ಣಕುಮಾರ್ ಭಾಗವಹಿಸಿದ್ದರೆ, ಮುಸ್ಲಿಮ್ ಮುಖಂಡರಾಗಿ ಜಮಾಅತೆ ಇಸ್ಲಾಮೀ ಹಿಂದ್ ಅಖಿಲ ಭಾರತ ಕಾರ್ಯದರ್ಶಿ ಮಲಿಕ್ ಮುಅತಸಿಮ್ ಖಾನ್, ಜಮೀಅತೆ ಉಲಮಾಯೆ ಹಿಂದ್‌ನ ಮುಖಂಡರಾದ ಮೌಲಾನಾ ನಿಯಾಜ್  ಅಹ್ಮದ್ ಫಾರೂಖಿ, ಮೌಲಾನಾ ಫಝಲರ‍್ರಹ್ಮಾನ್ ಮತ್ತು ಅರ್ಶದ್ ಮದನಿ, ಅಜ್ಮೀರ್ ದರ್ಗಾದ ಸಲ್ಮಾನ್ ಚಿಶ್ತಿ ಮತ್ತಿತರರು ಭಾಗವಹಿಸಿದ್ದರು. ಅಲ್ಲದೇ, 

2022 ಆಗಸ್ಟ್ ನಲ್ಲಿ  ಮುಸ್ಲಿಮ್ ಮುಖಂಡರೊಂದಿಗೆ  ಆರೆಸ್ಸೆಸ್ ಇಂಥದ್ದೇ  ಸಭೆಯನ್ನು ನಡೆಸಿತ್ತು. ಅದರಲ್ಲಿ ಭಾಗಿಯಾಗಿದ್ದ ಮಾಜಿ ಚುನಾವಣಾ ಆಯುಕ್ತ ಎಸ್.ವೈ. ಖುರೇಶಿ, ಪತ್ರಕರ್ತ ಶಾಹಿದ್ ಸಿದ್ದೀಕಿ ಮತ್ತಿತರ ಮುಖಂಡರೂ  ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಭೆಯ ಬೆನ್ನಿಗೇ ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರತಿನಿಧಿ ಮಲಿಕ್ ಮುಅತಸಿಮ್ ಖಾನ್‌ರು ಸಭೆಯ ವಿವರಗಳನ್ನು ವೀಡಿಯೋ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಇದಾಗಿ,

ಮೂರೂವರೆ ವಾರಗಳ ಬಳಿಕ ಜಮಾಅತೆ ಇಸ್ಲಾಮೀ ಹಿಂದನ್ನು ಕಟಕಟೆಯಲ್ಲಿ ನಿಲ್ಲಿಸುವ,  ಕದ್ದು ಮುಚ್ಚಿ ಮಾಡಿದ ಸಭೆ ಅನ್ನುವ ಮತ್ತು ಸಮುದಾಯ ದ್ರೋಹಿಯಂತೆ ಬಿಂಬಿಸುವ ಚರ್ಚೆಗಳು ಮುಖ್ಯವಾಗಿ ಕೇರಳ ಮತ್ತು ಕರ್ನಾಟಕದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಫೇಸ್‌ಬುಕ್ ಹೇಳಿಕೆಯನ್ನು ಕೂಡಾ ಹಂಚಿಕೊಳ್ಳಲಾಗುತ್ತಿದೆ. ಸಭೆಯ ವಿವರವನ್ನು ಜಮಾಅತೆ ಇಸ್ಲಾಮೀ ಹಿಂದ್ ಬಹಿರಂಗಪಡಿಸಬೇಕು ಮತ್ತು ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಹಕ್ಕನ್ನು ಜಮಾಅತ್‌ಗೆ ಕೊಟ್ಟವರು ಯಾರು ಎಂಬುದು ಪಿಣರಾಯಿ ಅವರ ಪ್ರಶ್ನೆ. ತಮಾಷೆ ಏನೆಂದರೆ,

ಪಿಣರಾಯಿ ವಿಜಯನ್‌ರಿಂದ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳುವವರ ವರೆಗೆ, ಯಾರೂ ಕೂಡಾ ಆ ಸಭೆಯಲ್ಲಿ ಭಾಗಿಯಾದ ಇತರ ಮುಸ್ಲಿಮ್ ಸಂಘಟನೆಗಳು ಮತ್ತು ಮುಖಂಡರ ಬಗ್ಗೆ ಒಂದು ಗೆರೆಯ ಉಲ್ಲೇಖವನ್ನೂ ಮಾಡುತ್ತಿಲ್ಲ.

1919ರಲ್ಲಿ ಸ್ಥಾಪನೆಯಾದ ಮತ್ತು ಭಾರತೀಯ ಮುಸ್ಲಿಮರ ವಿಷಯದಲ್ಲಿ ಸದಾ ಧ್ವನಿಯೆತ್ತುತ್ತಿರುವ ಜಮೀಯತೆ ಉಲಮಾಯೆ ಹಿಂದ್‌ನ ಮೂವರು ಉನ್ನತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಒಂದು ಕೋಟಿಗಿಂತಲೂ ಅಧಿಕ ಸದಸ್ಯರಿರುವ ಮತ್ತು ಅದಕ್ಕಿಂತಲೂ ಹೆಚ್ಚು ಅನುಯಾಯಿಗಳಿರುವ ದೇವಬಂದಿ ಪರಂಪರೆಯ ಈ ವಿದ್ವಾಂಸರ ವೇದಿಕೆಗೆ ದೇಶಾದ್ಯಂತ ಬಲವಾದ ಹಿಡಿತ ಇದೆ ಮತ್ತು ಈ ಸಂಘಟನೆಯನ್ನು ಹೊರಗಿಟ್ಟು ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿಸಿ ಯಾವುದೇ ನಿರ್ಧಾರವನ್ನು ಕೈಗೊಳ್ಳಲಾಗದಷ್ಟು ಇದು ವರ್ಚಸ್ಸನ್ನು ಹೊಂದಿದೆ. ಮುಸ್ಲಿಮ್ ಸಂಘಟನೆ ಗಳಲ್ಲೇ  ಅತ್ಯಂತ ಸಶಕ್ತ ಮತ್ತು ಪರಿಣಾಮಕಾರಿ ಲೀಗಲ್ ಸೆಲ್ ಅನ್ನು ಹೊಂದಿರುವ ಸಂಘಟನೆ ಇದು. ಭಯೋತ್ಪಾದನೆಯ ಹೆಸರಲ್ಲಿ ಬಂಧನಕ್ಕೀಡಾಗುತ್ತಿರುವ ದುರ್ಬಲ ಮುಸ್ಲಿಮ್ ಆರೋಪಿಗಳು ಮತ್ತು ಅವರ ಕುಟುಂಬಕ್ಕೆ ಕಾನೂನಾತ್ಮಕವಾಗಿ ನೆರವಾಗುತ್ತಿರುವ ಸಂಘಟನೆಯೂ ಇದುವೇ. ಟಾಡಾ, ಯುಎಪಿಎ ಕಾಯ್ದೆಯಡಿ ಬಂಧನಕ್ಕೀಡಾದ ಸುಮಾರು 175ಕ್ಕಿಂತಲೂ ಅಧಿಕ ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸುವಲ್ಲಿ ಈ ಜಮೀಅತೆ ಉಲೆಮಾಯೆ ಹಿಂದ್ ಯಶಸ್ವಿಯಾಗಿದೆ. ಇದರ ಹೊರತಾಗಿ ಈ ದೇಶದ ಪ್ರಮುಖ ದರ್ಗಾವಾದ ಅಜ್ಮೀರ್ ಶರೀಫ್‌ನ ಹೊಣೆಗಾರರೂ ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಎಲ್ಲ ವಿವರವನ್ನು ಜನವರಿ 26ರ ದಿ ಹಿಂದೂ ಮತ್ತು ಇತರ ಪತ್ರಿಕೆಗಳೂ ಪ್ರಕಟಿಸಿವೆ. ಹಾಗಿದ್ದೂ ಇವೆಲ್ಲವುಗಳನ್ನು ಅಡಗಿಸಿಟ್ಟು ಕೇವಲ ಜಮಾಅತೆ ಇಸ್ಲಾಮಿಯನ್ನು ಮಾತ್ರ ಪ್ರಶ್ನೆಯ ಮೊನೆಯಲ್ಲಿ ನಿಲ್ಲಿಸುವುದರ ಉದ್ದೇಶವೇನು? ಅಜ್ಮೀರ್ ಚಿಶ್ತಿಯನ್ನು ಯಾಕೆ ಇವರು ಪ್ರಶ್ನಿಸುತ್ತಿಲ್ಲ? ಜಮೀಅತೆ ಉಲೆಮಾಯೆ ಹಿಂದನ್ನು ಯಾಕೆ ಪ್ರಶ್ನಿಸುತ್ತಿಲ್ಲ? ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವುದಕ್ಕೆ ಜಮೀಅತೆ ಉಲೆಮಾಯೆ ಹಿಂದ್‌ಗೆ ಏನರ್ಹತೆಯಿದೆ, ಚಿಶ್ತಿಗೆ ಏನು ಹಕ್ಕು ಇದೆ ಎಂದೇಕೆ ಯಾರೂ ಪ್ರಶ್ನಿಸುತ್ತಿಲ್ಲ? ಸತ್ಯವನ್ನು ಅಡಗಿಸುತ್ತಿರುವವರು ಯಾರು? ಸಭೆಯ ಬಗ್ಗೆ ಸುಳ್ಳುಮಿಶ್ರಿತ ಮತ್ತು ಅನುಮಾನಿತ ಸುದ್ದಿಯನ್ನು ಹರಡಿ ಸಮುದಾಯ ದ್ರೋಹಿಯಂತೆ ವರ್ತಿಸುತ್ತಿರುವವರು ಯಾರು? ಈ ಸಭೆಯ ಬಳಿಕ ಜಮಾಅತೆ ಇಸ್ಲಾಮೀ ಹಿಂದ್‌ನ ಪ್ರತಿನಿಧಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡ  ಬಳಿಕವೂ ಮತ್ತು ಮಾಧ್ಯಮಗಳು ಸುದ್ದಿ ಪ್ರಕಟಿಸಿದ ಹೊರತಾಗಿಯೂ ಜಮಾಅತ್ ರಹಸ್ಯವಾಗಿ ಸಭೆ ನಡೆಸಿದೆ ಮತ್ತು ಆರೆಸ್ಸೆಸ್ ಪ್ರಭಾವದಿಂದಾಗಿಯೇ ಮಾಧ್ಯಮಗಳು ಈ ಸುದ್ದಿಯನ್ನು ಪ್ರಕಟಿಸಿಲ್ಲ ಎಂದೆಲ್ಲ ಹೇಳುವುದರಲ್ಲಿ ದುರುದ್ದೇಶವಲ್ಲದೇ ಇನ್ನೇನಿದೆ? ಅಂದಹಾಗೆ,

ಜಮಾಅತೆ ಇಸ್ಲಾಮೀ ಹಿಂದ್ ಸಂವಾದದಲ್ಲಿ ನಂಬಿಕೆಯಿರಿಸಿರುವ ಆಂದೋಲನ. ಅದು ವಿಚಾರಗಳನ್ನು ವಿರೋಧಿಸುತ್ತದೆಯೇ ಹೊರತು ಅದನ್ನು ಪ್ರತಿಪಾದಿಸುವ ವ್ಯಕ್ತಿಗಳನ್ನಲ್ಲ. ಸಮಸ್ಯೆಯ ಪರಿಹಾರಕ್ಕೆ ಇರುವ ಹಲವು ದಾರಿಗಳಲ್ಲಿ ಸಂವಾದವೂ ಒಂದು ಎಂದು ಜಮಾಅತ್ ಬಲವಾಗಿ ನಂಬಿದೆ.

ಈ ಜಗತ್ತಿನ ಫ್ಯಾಸಿಸ್ಟ್ ಗಳ  ಗುರುವಾಗಿರುವ ಫರೋವನ ಬಳಿಗೆ ಪ್ರವಾದಿ ಮೂಸಾ(ಅ)ರನ್ನು ಕಳುಹಿಸಿದ ಅಲ್ಲಾಹನ ಗ್ರಂಥದ ಮೇಲೆ ಅದು ಅಚಂಚಲ ವಿಶ್ವಾಸವನ್ನು ಇರಿಸಿದೆ. ಆ ಫ್ಯಾಸಿಸ್ಟ್ ನ ಜೊತೆ ನಿರರ್ಗಳವಾಗಿ ಮಾತಾಡುವಂತಾಗಲು ತನ್ನ ನಾಲಗೆಯ ತೊಡಕನ್ನು ನೀಗಿಸು...’ ಎಂದಷ್ಟೇ ಮೂಸಾ(ಅ) ಅಲ್ಲಾಹನಲ್ಲಿ ಪ್ರಾರ್ಥಿಸಿದ್ದರು. ಫರೋವನ ಶಿಷ್ಯನಂತಿದ್ದ 6ನೇ ಶತಮಾನದ ಫ್ಯಾಸಿಸ್ಟ್ ನಾಯಕ ಅಬೂಜಹಲ್‌ನ ಬಳಿಗೆ ಪ್ರವಾದಿ ಮುಹಮ್ಮದರು(ಸ) ನೂರಾರು ಬಾರಿ ಹೋಗಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಜಮಾಅತ್ ಈ ಪರಂಪರೆಯನ್ನು ಮುಂದುವರಿಸಲು ಬಯಸುತ್ತದೆ ಮತ್ತು ಸಂವಾದದ ಬಾಗಿಲು ಯಾರಿಗೂ ಯಾವತ್ತೂ ಮುಚ್ಚಿಕೊಳ್ಳಬಾರದೆಂದು ದೃಢವಾಗಿ ಪ್ರತಿಪಾದಿಸುತ್ತದೆ. ಈ ಕಾರಣದಿಂದಾಗಿಯೇ ಜಮಾಅತ್ ಆರೆಸ್ಸೆಸ್ ಕರೆದ ಸಭೆಯಲ್ಲಿ ಭಾಗಿಯಾಗಿದೆ ಮತ್ತು ಅದನ್ನು ಬಹಿರಂಗವಾಗಿಯೇ ಹೇಳಿಕೊಂಡಿದೆ. ಮುಂದೆಯೂ ಸಂವಾದದ ಸಂದರ್ಭ ಎದುರಾದಾಗಲೆಲ್ಲ ಪರಿಸ್ಥಿತಿಯನ್ನು ಅನುಸರಿಸಿಕೊಂಡು ಸಮುದಾಯದ ಹಿತದೃಷ್ಟಿಯಿಂದ ಆರೆಸ್ಸೆಸ್ ಸಹಿತ ಎಲ್ಲರ ಜೊತೆಗೂ ಸಂವಾದ ನಡೆಸಲು ಜಮಾಅತ್ ಸಿದ್ಧವಾಗಿದೆ. ಯಾವುದೇ ವ್ಯಕ್ತಿ, ಸಂಘಟನೆ ಅಥವಾ ಪಕ್ಷದ ಜೊತೆ ಸಂವಾದ ನಡೆಸುವುದನ್ನು ಜಮಾಅತೆ ಇಸ್ಲಾಮೀ ಹಿಂದ್ ಅಪರಾಧವಾಗಿ ಎಂದೂ ಪರಿಗಣಿಸಿಲ್ಲ. ಸಮುದಾಯದ ಹಿತದೃಷ್ಟಿಯಿಂದ ಸಂದರ್ಭಾನುಸಾರ ಯಾವುದು ಸೂಕ್ತವೋ ಆ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಅದು ಹಿಂಜರಿಯುವುದೂ ಇಲ್ಲ. ಅಷ್ಟಕ್ಕೂ,

ಜಮಾಅತ್ ಏಕವ್ಯಕ್ತಿ ಆಂದೋಲನವಲ್ಲ. ಅದು ಶೂರಾ ಅಥವಾ ಪಾರ್ಲಿಮೆಂಟರಿ ವ್ಯವಸ್ಥೆಯನ್ನು ಅವಲಂಬಿಸಿಕೊಂಡಿದೆ. ಇಂಥ ಪಾರ್ಲಿಮೆಂಟ್ ವ್ಯವಸ್ಥೆ ಸ್ಥಳೀಯ ಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದ  ವರೆಗೆ ಅತ್ಯಂತ ಕ್ರಮಬದ್ಧವಾಗಿ ನಡೆಯುತ್ತಲೂ ಇದೆ. ಕೇಂದ್ರ ಪಾರ್ಲಿಮೆಂಟ್‌ಗೆ ಮತದಾನದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಿ ಕಳುಹಿಸಲಾಗುತ್ತದೆ. ಆರೆಸ್ಸೆಸ್ ಕರೆದ ಸಭೆಯಲ್ಲಿ ಭಾಗವಹಿಸುವುದೂ ಸೇರಿದಂತೆ ಈ ಪಾರ್ಲಿಮೆಂಟ್‌ನಲ್ಲಿ ಚರ್ಚಿಸಿಯೇ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ. ಇದು ಜಮಾಅತೆ ಇಸ್ಲಾಮೀ ಹಿಂದ್ ತನ್ನ ಕಾರ್ಯಚಟುವಟಿಕೆಗೆ ಆಯ್ದುಕೊಂಡಿರುವ ದಾರಿ. ಹಾಗಂತ,
ತಾನು ಪ್ರತಿಪಾದಿಸುತ್ತಿರುವ ಪರಿಹಾರ ಕ್ರಮವೇ ಅಂತಿಮ ಮತ್ತು ಅದಕ್ಕಿಂತ ಭಿನ್ನ ರೀತಿಯ ಪರಿಹಾರ ಮಾರ್ಗವನ್ನು ಪ್ರತಿಪಾದಿಸುವವರೆಲ್ಲ ಸಮುದಾಯ ದ್ರೋಹಿಗಳು ಎಂದು ಜಮಾಅತೆ ಇಸ್ಲಾಮೀ ಹಿಂದ್ ಎಂದೂ ಘೋಷಿಸಿಲ್ಲ. ಮುಸ್ಲಿಮ್ ಸಮುದಾಯ ಸದ್ಯ ಎದುರಿಸುತ್ತಿರುವ ಸವಾಲುಗಳು ಮತ್ತು ಆತಂಕಗಳ ನಿವಾರಣೆಯಲ್ಲಿ ಒಂದಕ್ಕಿಂತ  ಹೆಚ್ಚು ಪರಿಹಾರ ದಾರಿಗಳು ಇರಬಹುದು ಎಂಬುದರಲ್ಲಿ ಜಮಾಅತ್‌ಗೆ ಆಕ್ಷೇಪವೂ ಇಲ್ಲ. ತನ್ನ ನಿಲುವಿನೊಂದಿಗೆ ಯಾರಿಗೆಲ್ಲ ಸಹಮತ ಇದೆಯೋ ಅವರನ್ನು ಸೇರಿಸಿಕೊಂಡು ಸಮಾಜ ಮತ್ತು ಸಮುದಾಯದ ಒಳಿತಿಗಾಗಿ ಕೆಲಸ ಮಾಡುವುದೇ ಜಮಾಅತ್‌ನ ಗುರಿ. ಹಾಗಂತ,

ತನ್ನ ಜೊತೆ ಸೇರುವಂತೆ ಮತ್ತು ತನ್ನ ನಿಲುವನ್ನೇ ಪ್ರತಿಪಾದಿಸುವಂತೆ ಯಾರನ್ನೂ ಯಾವ ಸಂಘಟನೆಯನ್ನೂ ಅದು ಬಲವಂತಪಡಿಸುತ್ತಿಲ್ಲ. ತಾನು ನೆಚ್ಚಿಕೊಂಡ ಆದರ್ಶದಂತೆ ಯೋಜನೆಗಳನ್ನು ರೂಪಿಸಿಕೊಂಡು ಕೆಲಸ ಮಾಡುತ್ತಾ ಮತ್ತು ಭಿನ್ನ ನಿಲುವುಗಳನ್ನು ಭಿನ್ನಮತದ ಜೊತೆಗೇ ಗೌರವಿಸುವುದನ್ನೇ ಅದು ಧೋರಣೆಯಾಗಿ ಪಾಲಿಸಿಕೊಂಡೂ ಬಂದಿದೆ, ಮುಂದೆಯೂ ಹಾಗೆಯೇ.  ಅಂದಹಾಗೆ,

ಕಳೆದ 75 ವರ್ಷಗಳ ದೀರ್ಘ ಅನುಭವದಲ್ಲಿ ಈ ಸಮಾಜ ಮತ್ತು ಈ ಸಮುದಾಯ ಏನು ಎಂಬುದನ್ನು ಜಮಾಅತ್ ಚೆನ್ನಾಗಿಯೇ ಅರಿತಿದೆ ಮತ್ತು ಪರಿಹಾರ ದಾರಿಗಳ ಬಗ್ಗೆಯೂ ಅದಕ್ಕೆ ಸ್ಪಷ್ಟತೆಯಿದೆ. ಹಾಗೆಯೇ, ಸತ್ಯವನ್ನು ಅಡಗಿಸುವ ಮತ್ತು ಸುಳ್ಳನ್ನು ವಿಜೃಂಭಿಸಿ ಹೇಳುವ ಸಂಚುಗಳೂ  ಹಿಂದೆ ನಡೆದಿದೆ. ಅಲ್ಲಾಹನ ಅನುಗ್ರಹದಿಂದ ಅವನ್ನು ಯಶಸ್ವಿಯಾಗಿ ಎದುರಿಸಿದ ಇತಿಹಾಸವೂ ಜಮಾಅತ್‌ಗಿದೆ. ಆರೆಸ್ಸೆಸ್ ಜೊತೆಗಿನ ಸಂವಾದವನ್ನೂ ಜಮಾಅತ್ ಸಕಾರಾತ್ಮಕವಾಗಿಯೇ ಪರಿಗಣಿಸುತ್ತದೆ ಮತ್ತು ದುರುದ್ದೇಶ ರಹಿತ ಅಭಿಪ್ರಾಯಗಳನ್ನು ಅಷ್ಟೇ ಸಕಾರಾತ್ಮಕವಾಗಿ ಸ್ವೀಕರಿಸುತ್ತದೆ.

Saturday, 8 October 2022

ಸಲ್ಲಲ್ಲಾಹು ಅಲೈಹಿ ವ ಸಲ್ಲಮ್




ಯಾವುದೇ ಜೀವಂತ ಸಿದ್ಧಾಂತದ ಲಕ್ಷಣ ಏನೆಂದರೆ, ಸದಾ ಚರ್ಚೆಯಲ್ಲಿರುವುದು. ಪ್ರತಿದಿನ ಆ ಸಿದ್ಧಾಂತದ ಸುತ್ತ ಚರ್ಚೆಗಳನ್ನು  ನಡೆಸುವ ವಾತಾವರಣ ನಾಗರಿಕ ಸಮಾಜದಲ್ಲಿ ಅಸ್ತಿತ್ವದಲ್ಲಿರುವುದು. 

ಮೃತ ಸಿದ್ಧಾಂತಕ್ಕೆ ಈ ಲಕ್ಷಣ ಇರುವುದಿಲ್ಲ. ಆ ಸಿದ್ಧಾಂತಕ್ಕೂ ಅದರ  ಅನುಯಾಯಿಗಳೆಂದು ಹೇಳಿಕೊಳ್ಳುವವರಿಗೂ ಬಹುತೇಕ ಸಂಪರ್ಕ ಕಡಿದು ಹೋಗಿರುತ್ತದೆ. ಅವರು ತನ್ನಿಚ್ಛೆಯನ್ನು ಅ ನುಸರಿಸುತ್ತಿರುತ್ತಾರೆ. ಸಿದ್ಧಾಂತದಲ್ಲಿ ತಮಗೆ ಅನುಕೂಲಕರವೆಂದು ಅನಿಸಿದ್ದನ್ನು ಮಾತ್ರ ಪಾಲಿಸುತ್ತಾ, ಉಳಿದವುಗಳನ್ನು ತಿರಸ್ಕರಿಸುತ್ತಾ  ಬದುಕುತ್ತಿರುತ್ತಾರೆ. ಇಂಥ ಸನ್ನಿವೇಶದಲ್ಲಿ ಸಿದ್ಧಾಂತಕ್ಕಿಂತ  ಅದರ ಅನುಯಾಯಿಗಳ ನಡವಳಿಕೆಗಳೇ ಚರ್ಚೆಗೊಳಗಾಗುವುದು ಹೆಚ್ಚು.  ಹೀಗೆ ತಾವು ನಿರ್ದಿಷ್ಟ ಸಿದ್ಧಾಂತವನ್ನು ಅನುಸರಿಸುವವರು ಎಂದು ಹೇಳಿಕೊಳ್ಳುತ್ತಲೇ ಆ ಸಿದ್ಧಾಂತದ ಬಹು ಅಂಶವನ್ನು ಕೈಬಿಟ್ಟು  ಬದುಕುತ್ತಿರುವವರು ಒಂದು ಕಡೆಯಾದರೆ, ತಮ್ಮ ಸಿದ್ಧಾಂತವೇ ಪರಮ ಸತ್ಯ ಮತ್ತು ಅದರ ಅನುಸರಣೆಯೇ ಇಹ-ಪರ ಯಶಸ್ಸಿನ  ಹಾದಿ ಎಂದು ನಂಬಿ ಬದುಕುತ್ತಿರುವವರು ಇನ್ನೊಂದು ಕಡೆ. ಪ್ರವಾದಿ ಮುಹಮ್ಮದ್(ಸ-ಸಲ್ಲಲ್ಲಾಹು ಅಲೈಹಿ ವ ಸಲ್ಲಮ್- ಅವರ  ಮೇಲೆ ಅಲ್ಲಾಹನ ಕರುಣೆ ಇರಲಿ) ಮತ್ತು ಅವರ ಅನುಯಾಯಿಗಳು ಈ ಎರಡನೇ ಗುಂಪಿನಲ್ಲಿದ್ದಾರೆ.

63 ವರ್ಷಗಳ ವರೆಗೆ ಬದುಕಿದ ಪ್ರವಾದಿ(ಸ), ಎಲ್ಲೂ ತನ್ನ ಚಿತ್ರವನ್ನು ಬಿಡಿಸಲು ಅನುಮತಿಸಿಲ್ಲ. ಎಲ್ಲಿ ಆರಾಧನೆಗೆ ಒಳಪಡುತ್ತೇನೋ  ಎಂಬ ಭೀತಿಯೇ ಇದಕ್ಕೆ ಕಾರಣ ಇರಬೇಕು. ಹೀಗೆ ತನ್ನ ಚಿತ್ರವನ್ನು ಬಿಡಿಸಲು ಒಪ್ಪದ ಪ್ರವಾದಿಯ ಚಿತ್ರವನ್ನು ಅವರು ಕಾಲವಾಗಿ  1500 ವರ್ಷಗಳೇ ಸಂದ ಬಳಿಕವೂ ಅವರ ಅನುಯಾಯಿಗಳು ಅವರ ಚಿತ್ರವನ್ನು ಬಿಡಿಸದೇ ಅನುಸರಿಸುತ್ತಿದ್ದಾರೆ. ಅವರು ಕಲಿಸಿದ  ನಮಾಝï, ಉಪವಾಸ, ಹಜ್ಜ್, ಝಕಾತ್ ಇತ್ಯಾದಿ ಮೂಲಭೂತ ಆರಾಧನಾ ರೀತಿಯನ್ನು ಅವರು ಕಲಿಸಿದಂತೆಯೇ ಇವತ್ತೂ ಅ ನುಸರಿಸುತ್ತಿದ್ದಾರೆ. ಅವರು ಕರಿಯ ಮತ್ತು ಬಿಳಿಯರನ್ನು, ಶ್ರೀಮಂತ ಮತ್ತು ಬಡವರನ್ನು, ರಾಜ ಮತ್ತು ಪ್ರಜೆಯನ್ನು, ಗುರು ಮತ್ತು  ಶಿಷ್ಯನನ್ನು, ವಿದ್ವಾಂಸ ಮತ್ತು ಸಾಮಾನ್ಯನನ್ನು ಭುಜಕ್ಕೆ ಭುಜ ತಾಗಿಸಿ ನಮಾಝï‌ನಲ್ಲಿ ಸರತಿಯಲ್ಲಿ ನಿಲ್ಲಬೇಕೆಂದು ಕಲಿಸಿದ್ದನ್ನು ಅವರ  ಅನುಯಾಯಿಗಳು ಇವತ್ತಿಗೂ ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆ. ಅವರು ಕಲಿಸಿದ ಅದೇ ರೀತಿಯಲ್ಲಿ ಉಪವಾಸವನ್ನು  ಆಚರಿಸುತ್ತಿದ್ದಾರೆ. ಚಾಂದ್ರಮಾನ ಕ್ಯಾಲೆಂಡರಿನ 9ನೇ ತಿಂಗಳಾದ ರಮಝಾನಿನಲ್ಲಿಯೇ ಮತ್ತು ಅದೂ ಮುಂಜಾನೆಯಿಂದ ಮುಸ್ಸಂಜೆಯ  ವರೆಗೆ ಈಗಲೂ ಅವರು ಉಪವಾಸ ಆಚರಿಸುತ್ತಿದ್ದಾರೆ. ಹಜ್ಜ್ ಕರ್ಮವನ್ನು ಕೂಡ ಚಾಂದ್ರಮಾನ ಕ್ಯಾಲೆಂಡರಿನ 12ನೇ ತಿಂಗಳಲ್ಲೇ   ನಿರ್ವಹಿಸುತ್ತಾರೆ ಮತ್ತು ಪ್ರವಾಹ, ಸಾಂಕ್ರಾಮಿಕ ರೋಗ, ಆರ್ಥಿಕ ಹಿಂಜರಿತ, ಯುದ್ಧ ಇತ್ಯಾದಿ ಸಹಜ ಕಾರಣಗಳನ್ನು ಮುಂದೊಡ್ಡಿ  10ನೇ ತಿಂಗಳಲ್ಲೋ  ಅಥವಾ 5ನೇ ತಿಂಗಳಲ್ಲೋ  ಹಜ್ಜ್ ನಿರ್ವಹಿಸುವುದಿಲ್ಲ. ಉಪವಾಸಕ್ಕೆ ಸಂಬಂಧಿಸಿಯೂ ಇವೇ ಮಾತುಗಳು ಅನ್ವಯಿಸುತ್ತವೆ. ಆವರೆಗೆ ಮಕ್ಕಾದ ಕಾಬಾ ಭವನಕ್ಕೆ ಪ್ರವೇಶ ನಿಷಿದ್ಧಗೊಂಡಿದ್ದ ಕರಿಯರನ್ನು ಸಮಾನತೆಯ ದಾರದಲ್ಲಿ ಪೋಣಿಸುವ  ಕ್ರಾಂತಿಕಾರಿ ಘೋಷಣೆಯ ದ್ಯೋತಕವಾಗಿ ಅವರು ಬಿಲಾಲ್ ಎಂಬ ಆಫ್ರಿಕನ್ ನೀಗ್ರೋವನ್ನು ಕಾಬಾ ಭವನದ ಮೇಲ್ಛಾವಣಿಗೆ ಹತ್ತಿಸಿ  ಪ್ರಾರ್ಥನಾ ಕರೆಯನ್ನು ಮೊಳಗಿಸಿದರು. ಅರಬರಿಗೆ ಅರಬೇತರರಿಗಿಂತ, ಬಿಳಿಯರಿಗೆ ಕರಿಯರಿಗಿಂತ, ವಿದ್ವಾಂಸರಿಗೆ ಸಾಮಾನ್ಯರಿಗಿಂತ,  ಶ್ರೀಮಂತರಿಗೆ ಬಡವರಿಗಿಂತ ಮನುಷ್ಯರೆಂಬ ನೆಲೆಯಲ್ಲಿ ಯಾವುದೇ ಮೇಲ್ಮೆಯಾಗಲಿ, ಹೆಚ್ಚುಗಾರಿಕೆಯಾಗಲಿ ಇಲ್ಲ ಎಂದು ಸಾರಿದರು.  ಇವತ್ತಿಗೂ ಈ ಸಮಾನತೆಯ ಸಿದ್ಧಾಂತವನ್ನು ಚಾಚೂ ತಪ್ಪದೇ ಮುಸ್ಲಿಮರು ಪಾಲಿಸುತ್ತಿದ್ದಾರೆ. ಹೆಣ್ಣಿಗೆ ಆಸ್ತಿಯಲ್ಲಿ ಪಾಲು, ವಧುವಿಗೆ  ವಿವಾಹ ಧನ, ವಿಧವೆಗೆ ವಿವಾಹ, ಹೆಣ್ಣು-ಗಂಡಿಗಿಬ್ಬರಿಗೂ ವಿಚ್ಛೇದನ ಸ್ವಾತಂತ್ರ‍್ಯ, ಹೆತ್ತವರನ್ನು ಆರೈಕೆ ಮಾಡುವ ಮಕ್ಕಳಿಗೆ ಸ್ವರ್ಗವಿದೆ  ಎಂಬ ಬೋಧನೆಯ ಅನುಸರಣೆ, ಮದ್ಯಪಾನ ಮತ್ತು ಬಡ್ಡಿಯ ಬಗ್ಗೆ ತಿರಸ್ಕಾರ.. ಇತ್ಯಾದಿ ಪ್ರವಾದಿ ಮೌಲ್ಯಗಳನ್ನು 1500 ವರ್ಷಗಳ  ಬಳಿಕ ಇವತ್ತೂ ಮುಸ್ಲಿಮರು ಸಣ್ಣ-ಪುಟ್ಟ ಲೋಪಗಳ ಹೊರತಾಗಿಯೂ ನಿಷ್ಠೆಯಿಂದ ಪಾಲಿಸುತ್ತಿದ್ದಾರೆ. ನಿಜವಾಗಿ,

ಸಿದ್ಧಾಂತಕ್ಕೆ ಬದ್ಧವಾದ ಮತ್ತು ಪ್ರವಾದಿಗೆ ನಿಷ್ಠವಾದ ಇಂಥದ್ದೊಂದು  ಅನುಯಾಯಿ ವರ್ಗ ಈ ಜಗತ್ತಿನ ಇನ್ನಾವ ಸಿದ್ಧಾಂತಕ್ಕಾಗಲಿ,  ವ್ಯಕ್ತಿಗಳಿಗಾಗಲಿ ಇಲ್ಲ. ಈ ಜಗತ್ತಿನಲ್ಲಿ ಪ್ರವಾದಿ ಮುಹಮ್ಮದರ(ಸ) ಹೊರತಾಗಿ ಅನೇಕ ಸಮಾಜ ಸುಧಾರಕರು, ಮಹಾನ್ ವ್ಯಕ್ತಿಗಳು  ಬಂದು ಹೋಗಿದ್ದಾರೆ. ಅವರೆಲ್ಲರನ್ನೂ ಪ್ರೀತಿಸುವ ಮತ್ತು ಸ್ಮರಿಸುವ ವ್ಯಕ್ತಿಗಳು ಇವತ್ತಿಗೂ ಇದ್ದಾರೆ. ಆದರೆ, ಅವರು ಮಂಡಿಸಿದ  ವಿಚಾರಧಾರೆಯನ್ನು ಅನುಸರಿಸುವ ವಿಷಯಕ್ಕೆ ಬಂದರೆ, ಇವರಲ್ಲಿ ಹೆಚ್ಚಿನವರು ಅನುತ್ತೀರ್ಣರಾಗುತ್ತಾರೆ. ಆದ್ದರಿಂದಲೇ,

ಪ್ರವಾದಿ(ಸ) ಮುಖ್ಯವಾಗುತ್ತಾರೆ. ಅವರು ಮತ್ತು ಅವರು ಮಂಡಿಸಿದ ವಿಚಾರಧಾರೆಗಳು ಈ ಸಮಾಜದಲ್ಲಿ ಪ್ರತಿನಿತ್ಯ ವಿಮರ್ಶೆ, ಟೀಕೆ,  ಪ್ರಶ್ನೆ, ಮೆಚ್ಚುವಿಕೆಗೆ ಪಾತ್ರವಾಗುತ್ತಿರುವುದೇ ಅದು ಜೀವಂತ ಸಿದ್ಧಾಂತ ಎಂಬುದಕ್ಕೆ ಸಾಕ್ಷಿ. ಸಲ್ಲಲ್ಲಾಹು ಅಲೈಹಿ ವ ಸಲ್ಲಮ್.

Tuesday, 27 September 2022

ಮುಟ್ಟಿಸಿಕೊಳ್ಳದ ಕಾಯಿಲೆಗೆ ಸಮಾನತೆಯ ಔಷಧ ನೀಡಿ ಯಶಸ್ವಿಯಾದ ಪ್ರವಾದಿ(ಸ)



ಕಾಳಾರಾಮ್ ದೇಗುಳ ಪ್ರವೇಶಕ್ಕಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ನಡೆಸಿದ ಚಳುವಳಿ ಮತ್ತು ಚೌದಾಬಿ ಕೆರೆಯ ನೀರಿನ ಸ್ಪರ್ಶಕ್ಕಾಗಿ  ನಡೆಸಿದ ಆಂದೋಲನಕ್ಕೆ ದಶಕಗಳೇ ಕಳೆದಿದ್ದರೂ ಈ ದೇಶದ ಮಲಿನ ಮನಸ್ಸುಗಳು ಇನ್ನೂ ಶುದ್ಧವಾಗಿಲ್ಲ ಎಂಬುದಕ್ಕೆ ಪ್ರತಿದಿ ನವೆಂಬಂತೆ  ಸಾಕ್ಷ್ಯಗಳು ಲಭ್ಯವಾಗುತ್ತಲೇ ಇವೆ. 

ಕಳೆದವಾರ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯ 10ನೇ  ತರಗತಿಯ ದಲಿತ ಬಾಲಕ ಚೇತನ್ ಇದಕ್ಕೆ ಹಸಿಹಸಿ ಸಾಕ್ಷ್ಯವನ್ನು ನೀಡಿದ. ಸೆಪ್ಟೆಂಬರ್ 8ರಂದು ರಾತ್ರಿ ಗ್ರಾಮ ದೇವತೆ ಬೂತ್ಯಾಮ್ಮ  ದೇವಿಯ ಉತ್ಸವದಲ್ಲಿ ದೇವರನ್ನು ಹೊತ್ತುಕೊಂಡು ಹೋಗುವಾಗ ಗುಜ್ಜುಕೋಲು ನೆಲಕ್ಕೆ ಬಿದ್ದಿದ್ದು, ಅದನ್ನು ಗಮನಿಸಿದ ಚೇತನ್,  ತಕ್ಷಣ ಆ ಕೋಲನ್ನು ಎತ್ತಿ ಕೊಟ್ಟಿದ್ದಾನೆ. ಆದರೆ ಮೇಲ್ಜಾತಿಯ ಮಂದಿ ಅದನ್ನು ಕಂಡು ಕೆಂಡವಾದರು. ನ್ಯಾಯ ಪಂಚಾಯಿತಿ ಸೇರಿದರು.  ಬೂತ್ಯಾಮ್ಮ ದೇವಿಗೆ ದಲಿತ ಬಾಲಕನಿಂದ ಮೈಲಿಗೆಯಾಗಿದೆ ಎಂಬ ತೀರ್ಮಾನಕ್ಕೆ ಬಂದರು. ಕೋಲು ಮುಟ್ಟಿ ದೇವಿಗೆ ಮೈಲಿಗೆ  ಮಾಡಿದ ಅಪರಾಧಕ್ಕಾಗಿ ಅಕ್ಟೋಬರ್ 1ರ ಒಳಗೆ 60 ಸಾವಿರ ರೂಪಾಯಿ ದಂಡ ಪಾವತಿಸಬೇಕು ಎಂದು ಫರ್ಮಾನು  ಹೊರಡಿಸಿದರು. ತಪ್ಪಿದರೆ ಕುಟುಂಬಕ್ಕೆ ಬಹಿಷ್ಕಾರ ಹಾಕಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಿದರು. ವಿಷಾದ ಏನೆಂದರೆ,

ದಂಡದ ಮೊತ್ತವನ್ನು ಸಂಗ್ರಹಿಸಲು ಚೇತನ್‌ನ ತಾಯಿ ಇದ್ದ ಬದ್ದ ಪ್ರಯತ್ನವನ್ನೆಲ್ಲ ಮಾಡಿದ್ದಾರೆ. ಮನೆಗೆಲಸ ಮಾಡಿ ದಿನದನ್ನ ಉಣ್ಣುವ  ಈ ತಾಯಿ, ಸವರ್ಣೀಯರ ಈ ನ್ಯಾಯ ಪಂಚಾತಿಕೆಗೆ ಬೆದರಿದ್ದಾರೆ. ಬಹಿಷ್ಕಾರ ಹಾಕಿದರೆ ಏನು ಮಾಡುವುದು ಎಂಬ ಭೀತಿಗೆ  ಒಳಗಾಗಿದ್ದಾರೆ. ಪೊಲೀಸರಿಗೆ ದೂರು ಕೊಡುವ ಬದಲು ದಂಡದ ಮೊತ್ತವನ್ನು 5 ಸಾವಿರಕ್ಕೆ ಇಳಿಸಿ ಎಂದು ಸವರ್ಣೀಯರ ಮುಂದೆ  ಅಂಗಲಾಚಿದ್ದಾರೆ. ಆದರೆ, ಅವರ ಮನಸ್ಸು ಕರಗಿಲ್ಲ. ಸೆ. 8ರಂದು ನಡೆದ ಈ ಘಟನೆ 12 ದಿನಗಳ ಬಳಿಕ ಪೊಲೀಸು ಠಾಣೆಯ  ಮೆಟ್ಟಿಲೇರಿದೆ ಎಂಬುದೇ ಆ ತಾಯಿ ಎದುರಿಸಿರಬಹುದಾದ ಮಾನಸಿಕ ಮತ್ತು ಬಾಹ್ಯ ಒತ್ತಡಕ್ಕೆ ಕನ್ನಡಿ ಹಿಡಿಯುತ್ತದೆ. ಅದೂ  ಅಂಬೇಡ್ಕರ್ ಸೇವಾ ಸಮಿತಿಯ ಗಮನಕ್ಕೆ ಈ ಘಟನೆ ಬಾರದೇ ಇರುತ್ತಿದ್ದರೆ, ಇವತ್ತಿಗೂ ಆ ತಾಯಿ ಒಳಗೊಳಗೇ ಕರಗುತ್ತಾ  ಕಾಣೆಯಾಗುತ್ತಿದ್ದರೋ ಏನೋ? ಸೇವಾ ಸಮಿತಿ ತಕ್ಷಣ ಕಾರ್ಯಪ್ರವೃತ್ತವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುತ್ತದೆ. ಆ  ಬಳಿಕ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಗೀಡಾಗುತ್ತದೆ. ಅಷ್ಟಕ್ಕೂ,

ಆರೋಪಿಗಳಾರೂ ಕಾನೂನು, ಕಾಯ್ದೆ, ಸಂವಿಧಾನದ ಗಂಧಗಾಳಿ ಇಲ್ಲದವರಲ್ಲ. ಗ್ರಾಮ ಪಂಚಾಯತ್‌ನ ಮಾಜಿ ಸದಸ್ಯ ನಾರಾಯಣ  ಸ್ವಾಮಿ ಕೂಡಾ 8 ಮಂದಿ ಆರೋಪಿಗಳಲ್ಲಿ ಓರ್ವ. ಅರ್ಚಕ ಮೋಹನ್ ರಾವ್ ಕೂಡಾ ಆರೋಪಿಗಳಲ್ಲಿ ಓರ್ವ. ಅಂದಹಾಗೆ,

ಈ ಪ್ರಕರಣ ಬೆಳಕಿಗೆ ಬಂದ ಬಳಿಕ ಕೆಲವು ಒಳ್ಳೆಯ ಬೆಳವಣಿಗೆಗಳಾಗಿವೆ. ವಿವಿಧ ಸಂಘಟನೆಗಳಿಂದ  ‘ಮುಳ್ಳೇರ ಹಳ್ಳಿ ಚಲೋ’ ಎಂಬ  ಹೆಸರಿನಲ್ಲಿ ಬೃಹತ್ ಜಾಥಾ ನಡೆದಿದೆ. ಸುಮಾರು 3 ಸಾವಿರಕ್ಕಿಂತಲೂ ಅಧಿಕ ಮಂದಿ ಈ ಜಾಥಾದಲ್ಲಿ ಭಾಗಿಯಾದರಲ್ಲದೇ, ದಲಿತ  ಸಂಘಟನೆಯ ಸದಸ್ಯರು ಭೂತ್ಯಾಮ್ಮ ದೇವಿಯ ಮಂದಿರದ ಎದುರು ಧರಣಿ ನಡೆಸಿದರು. ಬಳಿಕ ದೇಗುಲದಿಂದ ಗುಜ್ಜಕೋಲು  ಹೊರತಂದರು ಮತ್ತು ದೇಗುಲದ ಮೇಲೆ ಧ್ವಜ ಕಟ್ಟಿದರು. ಇದೇವೇಳೆ, ಸರ್ಕಾರ ಕೂಡಾ ಸಕಾರಾತ್ಮಕವಾಗಿಯೇ ಸ್ಪಂದಿಸಿತು. ಅರಣ್ಯ  ಇಲಾಖೆಗೆ ಸೇರಿದ ಜಾಗದಲ್ಲಿ ಮನೆ ಮಾಡಿಕೊಂಡಿರುವ ಈ ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾಡಳಿತ ತಕ್ಷಣವೇ ಹಕ್ಕು ಪತ್ರ ನೀಡಿ ಧೈರ್ಯ  ತುಂಬಿತು. ಜಿಲ್ಲಾಧಿಕಾರಿ ವೆಂಕಟರಾಜು ಅವರು ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 25 ಸಾವಿರ ರೂಪಾಯಿ ಪರಿಹಾರ  ವಿತರಿಸಿದರು. ಸಂಸದ ಮುನಿಸ್ವಾಮಿ 50 ಸಾವಿರ ರೂಪಾಯಿಯ ಚೆಕ್ ನೀಡಿದರು. ನಿಜವಾಗಿ,

ಈ ಬಾಲಕ ಚೇತನ್ ಅಥವಾ ಅವನ ತಾಯಿ ಶೋಭಾ- ಅಸ್ಪೃಶ್ಯ ಆಚರಣೆಗೆ ಒಳಗಾದವರಲ್ಲಿ ಮೊದಲಿಗರಲ್ಲ. 43 ವರ್ಷಗಳ ಹಿಂದೆ  ಇದೇ ಗ್ರಾಮದ ಪಕ್ಕದ ಹುಣಸಿಕೋಟೆಯಲ್ಲಿ ಇಂಥದ್ದೇ  ಪ್ರಕರಣ ನಡೆದಿತ್ತು. ಆಗ ವಿಧಾನಸೌಧ ಚಲೋ ರ‍್ಯಾಲಿ ನಡೆಸಿ ಸಾರ್ವಜನಿಕ  ಗಮನ ಸೆಳೆಯಲಾಗಿತ್ತು. ಆದರೆ, ಮಲಿನ ಮನಸ್ಸುಗಳು ಇನ್ನು ಉಳಿದುಕೊಂಡಿವೆ. ಈ ದೇಶದಲ್ಲಿ 9,315ರಷ್ಟು ಜಾತಿಗಳಿವೆ ಎಂಬ ವರ ದಿಯಿದೆ. ಅದರಲ್ಲೂ 1,600ರಷ್ಟು ಉಪಜಾತಿಗಳು ಪರಿಶಿಷ್ಟರಲ್ಲೇ  ಇವೆ. ಪರಿಶಿಷ್ಟರೊಳಗಿನ ಈ ಉಪಜಾತಿಗಳಲ್ಲೂ ಮೇಲು ಮತ್ತು ಕೀಳು  ಜಾತಿಗಳಿವೆ. ಇದೊಂದು ಸಾಮಾಜಿಕ ಪಿಡುಗು. ಇದು ಧರ್ಮದ ಪೋಷಾಕು ತೊಟ್ಟಿರುವುದರಿಂದ ಸಂತ್ರಸ್ತರಲ್ಲಿ ಪ್ರಶ್ನೆ ಮಾಡುವ  ಧೈರ್ಯವೂ ಕಡಿಮೆ. ಮೇಲು-ಕೀಳು ಎಂಬುದು ಧಾರ್ಮಿಕ ಕಟ್ಟಳೆಯಾಗಿದ್ದು, ಅದನ್ನು ಉಲ್ಲಂಘಿಸುವುದು ಅಪರಾಧ ಎಂಬ ಭಾವ  ಸಾರ್ವಜನಿಕರಲ್ಲಿದೆ. ದರೋಡೆ, ಹತ್ಯೆ, ಕಳ್ಳತನ, ಅತ್ಯಾಚಾರ, ವಂಚನೆ ಇತ್ಯಾದಿಗಳಂತೆ ಇಂಥ ಅಸ್ಪೃಶ್ಯ ಆಚರಣೆಗಳು ಅಪರಾಧವಾಗಿ  ಗುರುತಿಗೆ ಒಳಗಾಗಿಲ್ಲ. ಆದ್ದರಿಂದಲೇ,
ಈ ಉಳ್ಳೇರಹಳ್ಳಿ ಪ್ರಕರಣ ಕೂಡ ಬೆಳಕಿಗೆ ಬರಲು 12 ದಿನಗಳನ್ನೇ ತೆಗೆದುಕೊಂಡಿತು. ಸಾಮಾನ್ಯವಾಗಿ,

 ಇಂಥ ಹೆಚ್ಚಿನ ಪ್ರಕರಣಗಳು  ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವುದೂ ಇಲ್ಲ. ರಾಜಿ ಸಂಧಾನದಲ್ಲೇ  ಹೆಚ್ಚಿನವು ಕೊನೆಗೊಳ್ಳುತ್ತದೆ. ಸಂತ್ರಸ್ತರು ಬಹುತೇಕ ಬಡ ಜ ನರೇ ಆಗಿರುವುದರಿಂದ ಮತ್ತು ತಾರತಮ್ಯ ಮಾಡುವವರು ಪ್ರಬಲರು ಮತ್ತು ಪ್ರಭಾವಿಗಳಾಗಿರುವುದರಿಂದ ಅವರನ್ನು ಎದುರಿಸಿಕೊಂಡು  ಊರಲ್ಲಿ ಬದುಕುವುದಕ್ಕೆ ಇಂಥ ದುರ್ಬಲ ಕುಟುಂಬಗಳಿಗೆ ಸಾಧ್ಯವಿರುವುದಿಲ್ಲ. ಆದ್ದರಿಂದ, ಅವರು ಎಲ್ಲ ತಾರತಮ್ಯವನ್ನು ಅವುಡುಗಚ್ಚಿ  ಸಹಿಸಿಕೊಂಡು ಬದುಕಬೇಕಾಗುತ್ತದೆ. ಊರಿನ ವಾತಾವರಣ ಹದಗೆಡುವುದು ಬೇಡ ಎಂದು ಹೇಳಿ ಕಾನೂನು ಪಾಲಿಸಬೇಕಾದವರೇ  ಸಂತ್ರಸ್ತರನ್ನು ಸುಮ್ಮನಾಗಿಸುವುದೂ ಇದೆ. ಈ ಮೂಲಕ ತಾರತಮ್ಯಕ್ಕೆ ಒಳಗಾಗುವುದಷ್ಟೇ ಅಲ್ಲ, ಊರ ಗೌರವವನ್ನು ಕಾಪಾಡುವ  ಹೊಣೆಗಾರಿಕೆಯನ್ನೂ ಈ ಸಂತ್ರಸ್ತರ ಮೇಲೆಯೇ ಹೊರಿಸಲಾಗುತ್ತದೆ. ಅಂದಹಾಗೆ,

ದೇಶ ದಲಿತರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದಕ್ಕೆ 2022 ಜುಲೈಯಲ್ಲಿ ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ಅಜಯ್  ಕುಮಾರ್ ಮಿಶ್ರಾ ಅವರು ಲೋಕಸಭೆಯ ಮುಂದಿಟ್ಟ ಅಂಕಿಅAಶಗಳೇ ಧಾರಾಳ ಸಾಕು. ಪರಿಶಿಷ್ಟ ಜಾತಿಗೆ ಸೇರಿದವರ ಮೇಲೆ  2018ರಲ್ಲಿ 42,793 ಹಲ್ಲೆ  ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ ಆ ಸಂಖ್ಯೆ 50 ಸಾವಿರವನ್ನೂ ಮೀರಿದೆ. ಅದೇವೇಳೆ, ಪರಿಶಿಷ್ಟ  ಪಂಗಡಗಳ ಮೇಲೆ 2018ರಲ್ಲಿ 6,528ರಷ್ಟು ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, 2020ರಲ್ಲಿ ಅದು 8,272ಕ್ಕೆ ಏರಿದೆ. ಈ  ವಿವರಗಳ ಪ್ರಕಾರ, ಪರಿಶಿಷ್ಟ ಜಾತಿಯ ಮಂದಿಯ ಮೇಲೆ ಈ ದೇಶದಲ್ಲಿ ಪ್ರತಿ 10 ನಿಮಿಷಕ್ಕೊಮ್ಮೆ ದೌರ್ಜನ್ಯ ನಡೆಯುತ್ತಿದೆ. ಪರಿಶಿಷ್ಟ  ಪಂಗಡಗಳ ಮೇಲಿನ ಹಲ್ಲೆಯಲ್ಲೂ ಏರಿಕೆಯಾಗುತ್ತಲೇ ಇವೆ. ಹಾಗಂತ, ಇವೆಲ್ಲ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾದ ಅಧಿಕೃತ  ಪ್ರಕರಣಗಳು ಅಷ್ಟೇ. ಇನ್ನು, ರಾಜಿ ಸಂಧಾನದಲ್ಲಿ ಮುಗಿಯುವ, ದಂಡ ಪಾವತಿಸಿ ಕೊನೆಗೊಳ್ಳುವ ಮತ್ತು ದೌರ್ಜನ್ಯಕ್ಕೆ ಒಳಗಾದರೂ  ಪೊಲೀಸರಿಗೆ ದೂರು ಕೊಡದೇ ಸತ್ತು ಹೋಗುವ ಪ್ರಕರಣಗಳನ್ನು ಪರಿಗಣಿಸಿದರೆ ಪ್ರತಿ ಸೆಕೆಂಡಿಗೊಂದು  ದೌರ್ಜನ್ಯ ಮತ್ತು ತಾರತಮ್ಯದ  ಲೆಕ್ಕ ಸಿಗಬಹುದೇ ಏನೋ?

ದೇಶ ಸ್ವತಂತ್ರಗೊಂಡು  75 ವರ್ಷಗಳಾದ ಬಳಿಕದ ಸ್ಥಿತಿ ಇದು. ನಿಜವಾಗಿ, ಇದು ಜನರ ಮನಸ್ಸಿನ ಕಾಯಿಲೆ. ಕೇವಲ ಕಾನೂನೊಂದೇ  ಈ ಕಾಯಿಲೆಗೆ ಔಷಧವಾಗಲು ಸಾಧ್ಯವಿಲ್ಲ. ಈಗ ಆಗಬೇಕಾಗಿರುವುದು ಮನಸ್ಸಿಗೆ ಔಷಧ ಕೊಡುವ ಪ್ರಯತ್ನ. ಮಾನವರೆಲ್ಲರೂ ಸಮಾ ನರು ಎಂಬ ಭಾವವನ್ನು ಪ್ರಾಯೋಗಿಕವಾಗಿ ಜಾರಿಗೆ ತರುವುದಕ್ಕೆ ಎಲ್ಲ ಮಠ-ಮಂದಿರಗಳೂ ಸ್ವಾಮೀಜಿ-ಧರ್ಮಗುರುಗಳೂ ಸಂಕಲ್ಪ  ಮಾಡಬೇಕು. ಹಾಗಂತ, ಇಂಥ ಪರಿವರ್ತನೆ ರಾತ್ರಿ-ಬೆಳಗಾಗುವುದರೊಳಗೆ ಸಾಧ್ಯವಾಗುವಂಥದ್ದಲ್ಲ. ಆದರೆ ಅಸಾಧ್ಯವೂ ಅಲ್ಲ. ಪ್ರವಾದಿ  ಮುಹಮ್ಮದರು ಕೇವಲ 23 ವರ್ಷಗಳೊಳಗೆ ಇಂಥದ್ದೊಂದು ಕ್ರಾಂತಿಯನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದ್ದಾರೆ. ಸಮಾಜದ  ಎಲ್ಲರನ್ನೂ ಮನುಷ್ಯರು ಮತ್ತು ಒಂದೇ ತಂದೆ-ತಾಯಿಯ ಮಕ್ಕಳು ಎಂಬ ಪಟ್ಟಿಗೆ ಸೇರಿಸಿ ಎಲ್ಲರೊಂದಿಗೆ ಬೆರೆಯುವ, ಎಲ್ಲರೊಂದಿಗೆ  ವಿವಾಹ ಸಂಬಂಧ  ಏರ್ಪಡಿಸುವ, ಜೊತೆಗೇ ಊಟ ಮಾಡುವ, ಒಟ್ಟಿಗೆ ಮಸೀದಿಯಲ್ಲಿ ಅಂತರವಿಲ್ಲದೇ ಪ್ರಾರ್ಥನೆಗೆ ನಿಲ್ಲುವ ಮತ್ತು  ನಮಾಝï‌ಗೆ ನೇತೃತ್ವ ನೀಡುವಲ್ಲಿಂದ ಹಿಡಿದು ಮಸೀದಿ ಧರ್ಮ ಗುರುವಾಗುವ ವರೆಗೆ ಎಲ್ಲವನ್ನೂ ಎಲ್ಲರಿಗೂ ಮುಕ್ತವಾಗಿಸಿ ಸಮಾನತೆಯನ್ನು ಸಾಧ್ಯವಾಗಿಸಿದ್ದಾರೆ. ಅಂದಹಾಗೆ,

ಅಸಮಾನತೆಯೇ ಮೈವೆತ್ತ ಮಕ್ಕಾದ ಸಾಮಾಜಿಕ ಬದುಕಿನಲ್ಲಿ ಅವರು ತಂದ ಪರಿವರ್ತನೆ ಭಾರತದ ಪ್ರಸಕ್ತ ಪರಿಸ್ಥಿತಿಯ ಹಿನ್ನೆಲೆಯಲ್ಲಿ  ಅಧ್ಯಯನಯೋಗ್ಯ.

Thursday, 22 September 2022

ಆಸಕ್ತಿ ಕಳಕೊಂಡ ಪೆನ್ನು-ಕ್ಯಾಮರಾಗಳಿಗೆ ಪಾಠ ಮಾಡಿದ ಪಿಯುಸಿಎಲ್




ಹಿಜಾಬ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ನಲ್ಲಿ ವಾದ-ಪ್ರತಿವಾದಗಳು ನಡೆಯು ತ್ತಿರುವುದರ ನಡುವೆಯೇ ಪ್ರಮುಖ  ಸರಕಾರೇತರ ಸಂಸ್ಥೆಯಾದ ಪಿಯುಸಿಎಲ್ (ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್) ಅಧ್ಯಯನ ವರದಿಯೊಂದನ್ನು  ಬಿಡುಗಡೆಗೊಳಿಸಿದೆ. 

2021 ಡಿಸೆಂಬರ್ ಕೊನೆಯಲ್ಲಿ ಉಡುಪಿಯ ಹೆಣ್ಣು ಮಕ್ಕಳ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ  ಈ ಹಿಜಾಬ್ ಪ್ರಕರಣವು 2022 ಫೆಬ್ರವರಿ 5ರಂದು ಹಿಜಾಬ್ ನಿಷೇಧಿಸಿ ರಾಜ್ಯ ಸರ್ಕಾರ ಹೊರಡಿಸಿದ ಆದೇಶದ ಮೂಲಕ  ಬಿಗಡಾಯಿಸಿತು. ಉಡುಪಿಯ 6 ಮಂದಿ ವಿದ್ಯಾರ್ಥಿನಿ ಯರಿಗೆ ಸೀಮಿತವಾಗಿದ್ದ ಹಿಜಾಬ್ ಪ್ರಕರಣವು ರಾಜ್ಯವ್ಯಾಪಿಗೊಳ್ಳುವುದನ್ನು ರಾಜ್ಯ  ಸರ್ಕಾರ ಬಯಸಿತ್ತೇ ಎಂಬ ಅನುಮಾನವನ್ನು ಫೆಬ್ರವರಿ 5ರಂದು ಹೊರಡಿಸಿದ ಸುತ್ತೋಲೆ ಮತ್ತು ಅದಕ್ಕಿಂತ ಮೊದಲು ನಡೆದ ವಿವಿಧ  ಬೆಳವಣಿಗೆಗಳು ಹುಟ್ಟು ಹಾಕಿದ್ದುವು. ಅಂದಹಾಗೆ,

ಉಡುಪಿಯ ವಿದ್ಯಾರ್ಥಿನಿಯರು ಮತ್ತು ಆಡಳಿತ ಮಂಡಳಿಯ ನಡುವಿನ ತೀರಾ ಸ್ಥಳೀಯ ಎಂಬAಥ ಪ್ರಕರಣವೊಂದು ರಾಜ್ಯವ್ಯಾಪಿ  ಶಾಲೆ-ಕಾಲೇಜುಗಳ ಸಮಸ್ಯೆಯಾಗಿ ವಿಸ್ತರಣೆಯಾದುದರಲ್ಲಿ ಯಾವ ಸಂಚೂ ಇಲ್ಲವೇ? ಈ ಪ್ರಕರಣ ಹೆಣ್ಣು ಮಕ್ಕಳಿಗೆ ಸಂಬಂಧಿಸಿದ್ದು.  ಹೀಗಿದ್ದೂ ರಾಜ್ಯದ ಉಳಿದ ಕಾಲೇಜುಗಳಲ್ಲಿ ಗಂಡು ಮಕ್ಕಳು ಕೇಸರಿ ಶಾಲು ಧರಿಸಿ ಬಂದುದೇಕೆ? ಅವರಿಗೂ ಈ ಹಿಜಾಬ್‌ಗೂ ಏನು  ಸಂಬಂಧ? ಅವರೆಲ್ಲ ಸ್ವಯಂಪ್ರೇರಿತರಾಗಿ ಹೀಗೆ ಕೇಸರಿ ಶಾಲನ್ನು ಕುತ್ತಿಗೆಗೆ ಹಾಕಿಕೊಂಡರೇ ಅಥವಾ ಅದರ ಹಿಂದೆ ಷಡ್ಯಂತ್ರವೇ ನಾದರೂ ಇತ್ತೇ? ಇದ್ದರೆ ಆ ಷಡ್ಯಂತ್ರ ಹೆಣೆದವರು ಯಾರು, ಅವರ ಉದ್ದೇಶವೇನು? ಆವರೆಗೆ ಹಿಜಾಬ್ ಧರಿಸಿ ಬರುತ್ತಿದ್ದ  ವಿದ್ಯಾರ್ಥಿನಿಯರನ್ನು ಏಕಾಏಕಿ ತಡೆದು, ಗೇಟು ಮುಚ್ಚಿ ಹೊರ ಹಾಕಿರುವುದಕ್ಕೆ ಬರೇ ಪ್ರಾಂಶುಪಾಲರು ಮಾತ್ರ ಹೊಣೆಯೇ ಅಥವಾ  ಅವರನ್ನು ನಿರ್ಬಂಧಿಸಲಾಯಿತೇ, ವಿದ್ಯಾರ್ಥಿನಿಯರ ಶಿಕ್ಷಣಕ್ಕಿಂತ ರಾಜಕೀಯ ಲಾಭ-ನಷ್ಟಗಳಿಗೆ ರಾಜ್ಯ ಸರ್ಕಾರ ಆದ್ಯತೆ ನೀಡಿತೇ  ಎಂಬಿತ್ಯಾದಿ ಪ್ರಶ್ನೆಗಳು ಈ ಪ್ರಕರಣದ ಜೊತೆಜೊತೆಗೇ ಹುಟ್ಟಿಕೊಂಡವು. 2022 ಮಾರ್ಚ್ 25ರಂದು ರಾಜ್ಯ ಹೈಕೋರ್ಟ್ ಹಿಜಾಬ್  ನಿರ್ಬಂಧಿಸಿ ತೀರ್ಪು ನೀಡುವುದರೊಂದಿಗೆ ಆವರೆಗೆ ಹಿಜಾಬ್ ಧರಿಸಿ ಶಾಲೆ-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿನಿಯರನ್ನು  ಆಯ್ಕೆಯ ಕಗ್ಗಂಟಿಗೆ ನೂಕಿತು. ನಿಜವಾಗಿ,

ಹಿಜಾಬ್‌ಗೂ ಮುಸ್ಲಿಮ್ ಹೆಣ್ಣು ಮಕ್ಕಳಿಗೂ ಬಾಲ್ಯದಿಂದಲೇ ನಂಟಿದೆ. ಮನೆಯ ಒಳಗೂ ಹೊರಗೂ ಹಿಜಾಬ್ ಅವರ ಸಂಗಾತಿ.  ಅಲ್ಲದೇ, ಹಿಜಾಬ್ ನಿರ್ಬಂಧಿಸಿ ಫೆಬ್ರವರಿ 5ರಂದು ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮುಂಚಿನ ದಿನದ ವರೆಗೂ ಹೆಣ್ಣು ಮಕ್ಕಳು  ಹಿಜಾಬ್ ಧರಿಸಿಯೇ ಶಾಲಾ-ಕಾಲೇಜುಗಳಿಗೆ ತೆರಳುತ್ತಿದ್ದರು. ಬಹುತೇಕ ಯಾವ ಶಾಲಾ-ಕಾಲೇಜುಗಳಲ್ಲೂ ಅದಕ್ಕೆ ನಿರ್ಬಂಧ ಇರಲಿಲ್ಲ.  ಆದರೆ ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಮತ್ತು ಮಾರ್ಚ್ 25ರಂದು ಈ ಆದೇಶವನ್ನು ಎತ್ತಿ ಹಿಡಿದು ರಾಜ್ಯ ಹೈಕೋರ್ಟ್  ನೀಡಿದ ತೀರ್ಪು- ಇವೆರಡೂ ಅವರ ಸಹಜ ಕಲಿಕಾ ಬದುಕನ್ನೇ ಅಲ್ಲೋಲ ಕಲ್ಲೋಲಗೊಳಿಸಿತು. ಒಂದೋ ಹಿಜಾಬ್ ಕಳಚಿಟ್ಟು  ಶಾಲಾ-ಕಾಲೇಜುಗಳಿಗೆ ತೆರಳಬೇಕು ಇಲ್ಲವೇ ಶಿಕ್ಷಣವನ್ನೇ ಕೊನೆಗೊಳಿಸಬೇಕು ಅಥವಾ ಹಿಜಾಬ್‌ಗೆ ಅನುಮತಿ ಇರುವ ಖಾಸಗಿ  ಶಾಲೆಗಳಿಗೆ ಸೇರ್ಪಡೆಗೊಳ್ಳಬೇಕು ಎಂಬ ಸೀಮಿತ ಆಯ್ಕೆಯನ್ನು ಅವರ ಮುಂದಿಟ್ಟಿತು. ಇದೊಂದು ರೀತಿಯಲ್ಲಿ ಕತ್ತಿಯ ಅಲುಗಿನ  ಮೇಲಿನ ನಡಿಗೆಯಂಥ ಸ್ಥಿತಿ. ಶಿಕ್ಷಣ ಬೇಕೆಂದರೆ ಕತ್ತಿಯ ಅಲುಗಿನ ಮೇಲೆ ನಡೆಯಲೇಬೇಕು ಮತ್ತು ಗಾಯವನ್ನು ಸಹಿಸಿಕೊಳ್ಳಲೇಬೇಕು  ಎಂಬ ಒತ್ತಡ ಸ್ಥಿತಿ. ಹಿಜಾಬನ್ನು ಕಳಚಿಡುವುದೆಂದರೆ, ಭಾವನಾತ್ಮಕವಾಗಿ ಆಳ ಇರಿತಕ್ಕೆ ಒಳಗಾಗುವುದೆಂದೇ ಅರ್ಥ. ಈ ಇರಿತವನ್ನು  ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದಾದರೆ ಕತ್ತಿಯ ಅಲುಗಿನ ಮೇಲೆ ನಡೆಯಲೇಬಾರದು ಅಥವಾ ಶಿಕ್ಷಣವನ್ನು ಅರ್ಧದಲ್ಲೇ   ಮೊಟಕುಗೊಳಿಸಬೇಕು. ಆದರೆ,

ಮಾರ್ಚ್ 25ರ ಬಳಿಕ ಇಂಥದ್ದೊಂದು  ಇಕ್ಕಟ್ಟಿಗೆ ಸಿಲುಕಿದ ಹಿಜಾಬ್‌ಧಾರಿ ವಿದ್ಯಾರ್ಥಿನಿಯರು ಸದ್ಯ ಹೇಗಿದ್ದಾರೆ ಮತ್ತು ಅವರ ಶೈಕ್ಷಣಿಕ  ಬದುಕು ಏನಾಗಿದೆ ಎಂಬ ಅಧ್ಯಯನಾತ್ಮಕ ವರದಿ ಬಹುತೇಕ ಬಿಡುಗಡೆಯಾದದ್ದೇ  ಇಲ್ಲ. ಹಿಜಾಬ್ ಪ್ರಕರಣ ಕಾವೇರಿದ್ದ ಸಮಯದಲ್ಲಿ  ಚುರುಕಾಗಿದ್ದ ಮಾಧ್ಯಮ ಕ್ಯಾಮರಾ ಮತ್ತು ಪೆನ್ನುಗಳು ಮಾರ್ಚ್ 25ರ ಬಳಿಕ ನಿಧಾನಕ್ಕೆ ತಮ್ಮ ದಿಕ್ಕನ್ನು ಬದಲಿಸಿದುವು. ಹಿಜಾಬ್  ನಿರ್ಬಂಧಿಸಿ ಹೊರಡಿಸಲಾದ ತೀರ್ಪು ವಿದ್ಯಾರ್ಥಿನಿಯರ ಮೇಲೆ, ಅವರ ಶೈಕ್ಷಣಿಕ ಬದುಕಿನ ಮೇಲೆ ಯಾವ ಪರಿಣಾಮವನ್ನು ಬೀರಿದೆ  ಎಂಬ ಬಗ್ಗೆ ಕುತೂಹಲವನ್ನು ಉಳಿಸಿಕೊಳ್ಳಬೇಕಿದ್ದ ಮತ್ತು ವರದಿಯನ್ನು ತಯಾರಿಸಬೇಕಿದ್ದ ಮಾಧ್ಯಮಗಳು ಯಾಕೋ ಏನೋ  ಆಸಕ್ತಿಯನ್ನು ಕಳಕೊಂಡವು. ಇಂಥ ಅಸಮಾಧಾನಗಳ ಸಂದರ್ಭದಲ್ಲೇ  ಪಿಯುಸಿಎಲ್ ಮಧ್ಯಂತರ ವರದಿಯನ್ನು ಬಿಡುಗಡೆಗೊಳಿಸಿದೆ.  ಹಾಸನ ನಗರ, ಮಂಗಳೂರು ನಗರ, ಉಳ್ಳಾಲ, ಉಡುಪಿಯ ಹೂಡೆ, ಉಡುಪಿ ಪಟ್ಟಣ ಹಾಗೂ ರಾಯಚೂರು ಪಟ್ಟಣಗಳಲ್ಲಿ ಮೂರು  ತಿಂಗಳ ಕಾಲ ಅಧ್ಯಯನ ನಡೆಸಿದ ಐಶ್ವರ್ಯ ರವಿಕುಮಾರ್, ಕಿಶೋರ್ ಗೋವಿಂದ, ರಾಮದಾಸ್ ರಾವ್, ನ್ಯಾಯವಾದಿ ಪ್ರಕಾಶ್  ರವಿಶಂಕರ್, ಪಿಯುಸಿಎಲ್ ರಾಜ್ಯ ಜಂಟಿ ಕಾರ್ಯದರ್ಶಿ ಶಶಾಂಕ್ ಮತ್ತು ಪತ್ರಕರ್ತೆ ಸ್ವಾತಿ ಶುಕ್ಲಾ ಅವರಿದ್ದ ಅಧ್ಯಯನ ತಂಡವು ಕೆಲವು  ಮಹತ್ವಪೂರ್ಣ ಮಾಹಿತಿಗಳನ್ನು ಕಲೆ ಹಾಕಿದೆ. ಮುಖ್ಯವಾಗಿ ,

ವಿದ್ಯಾರ್ಥಿನಿಯರ ಹೊರತಾಗಿ ಕಾಲೇಜು ಆಡಳಿತ ಮಂಡಳಿ ಸದಸ್ಯರು,  ಸಂಬAಧಿತ ಸರ್ಕಾರಿ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಮತ್ತು ಮುಸ್ಲಿಮ್ ಜನಸಾಮಾನ್ಯರನ್ನು ಭೇಟಿಯಾಗಿ, ಅವರ  ಮಾತುಗಳಿಗೆ ಕಿವಿಯಾಗಿದೆ. ಮುಸ್ಲಿಮ್ ವಿದ್ಯಾರ್ಥಿನಿಯರ ಜೊತೆಗೆ ವಿದ್ಯಾರ್ಥಿಗಳೂ ಸಾಮಾಜಿಕ ಪ್ರತ್ಯೇಕತೆಯನ್ನು ಅನುಭವಿಸುತ್ತಿದ್ದು,  ಇತರ ಸಮುದಾಯದ ವಿದ್ಯಾರ್ಥಿಗಳ ಜೊತೆಗಿನ ಸ್ನೇಹ ಮತ್ತು ಸಂಪರ್ಕವನ್ನು ಕಳಕೊಳ್ಳುತ್ತಿದ್ದಾರೆ, ಹಾಗೆಯೇ ಈ ಸ್ಥಿತಿಯು ಅವರಲ್ಲಿ  ಖಿನ್ನತೆಯ ಭಾವವನ್ನು ಮೂಡಿಸುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹಿಜಾಬ್ ಮತ್ತು ಶಿಕ್ಷಣವನ್ನು ಎರಡಾಗಿ  ವಿಭಜಿಸಿರುವುದನ್ನು ಕೃತಕ ಸೃಷ್ಟಿ ಎಂದಿರುವ ವರದಿಯು ಇದು ವಿದ್ಯಾರ್ಥಿನಿಯರ ಕನಸನ್ನೇ ಚಿವುಟಿ ಹಾಕಿದೆ ಮತ್ತು ಮುಸ್ಲಿಮ್  ವಿದ್ಯಾರ್ಥಿನಿಯರ ಶೈಕ್ಷಣಿಕ ಬದುಕನ್ನು ಮೊಟಕುಗೊಳ್ಳುವಂತೆ ಮಾಡಿದೆ ಎಂದೂ ವರದಿಯಲ್ಲಿ ಹೇಳಲಾಗಿದೆ. ಆದ್ದರಿಂದ, 

ಹಿಜಾಬನ್ನು  ನಿರ್ಬಂಧಿಸಿ ರಾಜ್ಯ ಸರ್ಕಾರ ಫೆಬ್ರವರಿ 5ರಂದು ಹೊರಡಿಸಿರುವ ಆದೇಶವನ್ನು ಹಿಂಪಡೆಯಬೇಕು ಮತ್ತು ವಿದ್ಯಾರ್ಥಿನಿಯರು ಹಾಗೂ  ಅವರ ಕುಟುಂಬ ಅನುಭವಿಸಿರುವ ನಷ್ಟಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಪರಿಹಾರ ನೀಡುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ  ನಿರ್ದೇಶಿಸಬೇಕು ಎಂದೂ ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ. ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಅಲ್ಪಸಂಖ್ಯಾತ  ಆಯೋಗವು ವಿದ್ಯಾರ್ಥಿನಿಯರ ಮೂಲಭೂತ ಹಕ್ಕುಗಳ ಉಲ್ಲಂಘನೆಗಾಗಿ ಕಾಲೇಜು ಪ್ರಾಂಶುಪಾಲರು ಮತ್ತು ಕಾಲೇಜು ಅಭಿವೃದ್ಧಿ  ಸಮಿತಿಗಳ ವಿರುದ್ಧ ಸ್ವಯಂಪ್ರೇರಿತ ದೂರುಗಳನ್ನು ದಾಖಲಿಸಬೇಕು ಹಾಗೂ ಈಗಿನ ಕಾಲೇಜು ಅಭಿವೃದ್ಧಿ ಮಂಡಳಿಯನ್ನು ರದ್ದು  ಮಾಡಿ, ಎಲ್ಲ ಸಮುದಾಯಗಳ ಸದಸ್ಯರು, ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ನಾಗರಿಕ ಸಮಾಜದ ಸದಸ್ಯರು ಮತ್ತು  ಮಹಿಳೆಯರೂ ಸೇರಿದಂತೆ ಎಲ್ಲರ ಪ್ರಾತಿನಿಧ್ಯವನ್ನು ಹೊಂದಿರುವ ಹೊಸ ಸಮಿತಿಯನ್ನು ರಚಿಸಬೇಕು ಎಂದೂ ವರದಿಯಲ್ಲಿ ಸಲಹೆ  ನೀಡಲಾಗಿದೆ. ಅಂದಹಾಗೆ,
ಇದು ಮಧ್ಯಂತರ ವರದಿಯಾಗಿದ್ದು, ಪೂರ್ಣ ಪ್ರಮಾಣದ ವರದಿಯಲ್ಲಿ ಇನ್ನಷ್ಟು ಮಾಹಿತಿ ಮತ್ತು ಸಲಹೆಗಳಿರಬಹುದಾದ ಸಾಧ್ಯತೆ  ಇದೆಯಾದರೂ, ಒಂದು ಗಂಭೀರ ಪ್ರಕರಣದ ಮೇಲೆ ಅಧ್ಯಯನ ನಡೆಸಲು ಮುಂದಾದ ಪಿಯುಸಿಎಲ್‌ಗೆ ಕೃತಜ್ಞತೆಯನ್ನು ಸಲ್ಲಿಸಬೇಕು.  ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುವ ಉದ್ದೇಶದಿಂದ 1976ರಲ್ಲಿ ಹುಟ್ಟಿಕೊಂಡ ಸಂಸ್ಥೆಯೊAದು ಇಷ್ಟು ದೀರ್ಘಾವಧಿಯ  ಬಳಿಕವೂ ತನ್ನ ಉದ್ದೇಶಿತ ನಿಲುವಿನಲ್ಲಿ ಅಚಲವಾಗಿದೆ ಎಂಬುದನ್ನು ಈ ಅಧ್ಯಯನ ಸಾಬೀತುಪಡಿಸಿದೆ. ಅಷ್ಟಕ್ಕೂ,

ಹಿಜಾಬ್- ಸರ್ಕಾರಕ್ಕೆ ಒಂದು ತುಂಡು ಬಟ್ಟೆಯಾಗಿ ಕಾಣಿಸಿರಬಹುದು ಮತ್ತು ಅದನ್ನು ವಿದ್ಯಾರ್ಥಿನಿಯರ ತಲೆಯಿಂದ ಕಳಚುವುದರಿಂದ  ರಾಜಕೀಯವಾಗಿ ಸಿಗುವ ಲಾಭವನ್ನು ಲೆಕ್ಕ ಹಾಕಿರಬಹುದು. ಆದರೆ ಮುಸ್ಲಿಮ್ ಸಮಾಜ ಎಂದೂ ಕೂಡ ಹಿಜಾಬನ್ನು ಒಂದು  ಬಟ್ಟೆಯಾಗಿ ಪರಿಗಣಿಸಿಲ್ಲ ಮತ್ತು ಅದನ್ನು ಧರಿಸದಂತೆ ನಿರ್ಬಂಧಿಸುವ ಸರ್ಕಾರ ಸುತ್ತೋಲೆಯನ್ನು ಇತರೆಲ್ಲ ಸುತ್ತೋಲೆಗಳಂತೆ  ಪರಿಗಣಿಸುವ ಸ್ಥಿತಿಯಲ್ಲೂ ಇಲ್ಲ. ಅಂದಹಾಗೆ, ‘ಯುನಿಫಾರ್ಮ್ ನ  ಭಾಗವಾಗಿ ವಿದ್ಯಾರ್ಥಿನಿಯರ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ  ಹಾಕಿಕೊಳ್ಳುವುದಕ್ಕೆ ಅಭ್ಯಂತರವಿಲ್ಲ..’ ಎಂಬ ಒಂದು ಗೆರೆಯ ಸುತ್ತೋಲೆಯನ್ನು ಹೊರಡಿಸುವುದರಿಂದ ಈ ಸರ್ಕಾರ  ಕಳಕೊಳ್ಳುವಂಥz್ದÉÃನೂ ಇರಲಿಲ್ಲ. ಆದರೆ ಸರ್ಕಾರ ಹಠಕ್ಕೆ ಬಿತ್ತು. ವಿದ್ಯಾರ್ಥಿನಿಯರ ಭವಿಷ್ಯಕ್ಕಿಂತ ತನ್ನ ಅಧಿಕಾರದ ಭವಿಷ್ಯಕ್ಕೆ ಆದ್ಯತೆ  ನೀಡಿತು. ಮಾತ್ರವಲ್ಲ, ಹಿಜಾಬನ್ನು ಹಿಂದೂ-ಮುಸ್ಲಿಮ್ ನಡುವಿನ ಸಮಸ್ಯೆ ಎಂಬAತೆ ಬಿಂಬಿಸಿ ಸಾಮಾಜಿಕ ವಿಭಜನೆಗೂ ವೇದಿಕೆ ಕ ಲ್ಪಿಸಿತು.

ಸುಪ್ರೀಮ್ ಕೋರ್ಟಿನ ತೀರ್ಪು ಏನೇ ಬರಲಿ, ಪಿಯುಸಿಎಲ್ ಪ್ರಯತ್ನ ಶ್ಲಾಘನೀಯ.

ಅಪರಾಧಿ `ಅಲ್ಲಾಹು’ ಆಗಿರುತ್ತಿದ್ದರೆ ಅವರಿಗೂ ಪರಿಹಾರ ಸಿಕ್ಕಿರುತ್ತಿತ್ತೋ ಏನೋ?




ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ವಿತರಿಸಿರುವಂತೆ ಮೃತ ಮಸೂದ್ ಮತ್ತು ಫಾಝಿಲ್ ಕುಟುಂಬಕ್ಕೂ ರಾಜ್ಯ ಸರಕಾರ  ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿ ಮುಸ್ಲಿಮ್ ಐಕ್ಯತಾ ವೇದಿಕೆಯು ಕಳೆದವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ  ನಡೆಸುತ್ತಿದ್ದ ವೇಳೆಯಲ್ಲೇ , ರಾಜ್ಯ ಹೈಕೋರ್ಟ್ನಲ್ಲಿ ಅರ್ಜಿಯೊಂದರ ವಿಚಾರಣೆ ನಡೆಯುತ್ತಿತ್ತು. ಇದು ಕೂಡಾ ಪರಿಹಾರಕ್ಕೆ ಸಂಬಂಧಿಸಿದ ಪ್ರಕರಣ. ಕೊರೋನಾದಿಂದ ಸಾವಿಗೀಡಾದ ಸಾರಿಗೆ ನೌಕರರಿಗೆ ತಲಾ 30 ಲಕ್ಷ ರೂ. ಪರಿಹಾರ ನೀಡುವುದಾಗಿ 2021 ಫೆಬ್ರವರಿ  10ರಂದು ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿತ್ತು. ಆದರೆ, ನುಡಿದಂತೆ ಸಾರಿಗೆ ಇಲಾಖೆ ನಡಕೊಂಡಿಲ್ಲ. 2020 ಮಾರ್ಚ್ನಿಂದ  2021 ಜೂನ್‌ವರೆಗೆ ರಾಜ್ಯದ 4 ಸಾರಿಗೆ ನಿಗಮಗಳಿಗೆ ಸೇರಿದ 351 ಮಂದಿ ನೌಕರರು ಕೊರೋನಾಕ್ಕೆ ಬಲಿಯಾಗಿದ್ದರೂ ಈವರೆಗೆ  ಬರೇ 11 ಮಂದಿ ನೌಕರರ ಕುಟುಂಬಗಳಿಗೆ ಮಾತ್ರವೇ ಪರಿಹಾರ ವಿತರಿಸಲಾಗಿದೆ ಎಂದು ಅರ್ಜಿದಾರರಾದ ತಾಹಿರ್ ಹುಸೈನ್ ಮತ್ತು  ಅಝೀಝï ಪಾಶಾ ಅವರು ಹೈಕೋರ್ಟ್ನಲ್ಲಿ ಅರಿಕೆ ಮಾಡಿಕೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ಪ್ರತಿವಾ ದಿಗಳಾದ ರಾಜ್ಯ ಸಾರಿಗೆ ಇಲಾಖೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ವಾಯುವ್ಯ ರಸ್ತೆ ಸಾರಿಗೆ ನಿಗಮಕ್ಕೆ ವಿವರ ಕೋರಿ  ನೋಟೀಸು ಜಾರಿ ಮಾಡಿದೆ. ಅಂದಹಾಗೆ,

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಒಂದು ವಾರದೊಳಗೆ 25 ಲಕ್ಷ ರೂಪಾಯಿ ಪರಿಹಾರ ವಿತರಿಸಿದ ರಾಜ್ಯ ಸರಕಾರ, ಮೃತ ಸಾರಿಗೆ  ನೌಕರರ ಕುಟುಂಬಕ್ಕೆ ಪರಿಹಾರ ವಿತರಣೆಯಾಗುವಂತೆ ನೋಡಿಕೊಳ್ಳುವುದಕ್ಕೆ ಯಾಕೆ ವಿಫಲವಾಗಿದೆ ಎಂಬ ಪ್ರಶ್ನೆಗೆ ಉತ್ತರ ಕಷ್ಟದ್ದೇನೂ  ಅಲ್ಲ. 2020 ಮಾರ್ಚ್ನಿಂದ 2021 ಜೂನ್ ವರೆಗಿನ ಅವಧಿಯಲ್ಲಿ 351 ಮಂದಿ ಸಾರಿಗೆ ನೌಕರರು ಕೊರೋನಾದಿಂದಾಗಿ ಮೃತ ಪಟ್ಟಿದ್ದಾರೆ ಎಂಬುದು, ಸರ್ಕಾರವೇ ಮಾಹಿತಿ ಹಕ್ಕು ಕಾಯ್ದೆಯಡಿ ಒದಗಿಸಿರುವ ವಿವರ. ಇಷ್ಟಿದ್ದೂ, ಈ ಒಂದು ವರ್ಷದ ಅವಧಿಯಲ್ಲಿ  ಬರೇ 11 ಮಂದಿಗೆ ಮಾತ್ರ ಪರಿಹಾರ ವಿತರಿಸಿ ಉಳಿದವರನ್ನು ನಿರ್ಲಕ್ಷಿಸಲು ಕಾರಣವೇನು? ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಒಂದೇ  ವಾರದಲ್ಲಿ ಪರಿಹಾರ ವಿತರಿಸಲು ಸಮರ್ಥವಾಗಿರುವ ಸರ್ಕಾರಕ್ಕೆ, ಮಸೂದ್ ಮತ್ತು ಫಾಝಿಲ್‌ಗೆ ಪರಿಹಾರ ವಿತರಿಸುವುದು ಬಿಡಿ, ಕ ನಿಷ್ಠ ಘೋಷಿಸಲೂ ಸಾಧ್ಯವಾಗಿಲ್ಲವೇಕೆ? ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿಯ ಗ್ರಾಮ ಪಂಚಾಯತ್ ಸದಸ್ಯನಿಂದ ಹಿಡಿದು  ಮುಖ್ಯಮಂತ್ರಿ ವರೆಗೆ ಮತ್ತು ದ.ಕ. ಜಿಲ್ಲೆಗೆ ಸಂಬಂಧವೇ ಇಲ್ಲದ ತೇಜಸ್ವಿ ಸೂರ್ಯ, ಪ್ರತಾಪ್ ಸಿಂಹರೂ ಸೇರಿ ಎಲ್ಲರೂ ಜಿದ್ದಿಗೆ  ಬಿದ್ದವರಂತೆ ಭೇಟಿ ಕೊಟ್ಟಿರುವಾಗ, ಅಲ್ಲೇ  ಪಕ್ಕದಲ್ಲಿರುವ ಮಸೂದ್ ಮನೆಗೆ ಮತ್ತು ಇದೇ ಪ್ರವೀಣ್ ನೆಟ್ಟಾರು ಮನೆಯಿಂದ 30  ಕಿಲೋಮೀಟರ್ ದೂರದಲ್ಲಿರುವ ಫಾಝಿಲ್ ಮನೆಗೆ ಇವರಲ್ಲಿ ಒಬ್ಬರೇ ಒಬ್ಬ ಜನಪ್ರತಿನಿಧಿ ಭೇಟಿ ಕೊಡದಿರುವುದಕ್ಕೆ ಕಾರಣಗಳೇನು?  ನಿಜವಾಗಿ,

ಸರಕಾರ, ಹೇಗೆ ಸಂತ್ರಸ್ತರಿಗೆ ವಿತರಿಸಬೇಕಾದ ಪರಿಹಾರದ ಮೊತ್ತದಲ್ಲೂ ರಾಜಕೀಯ ಲಾಭ-ನಷ್ಟವನ್ನು ಲೆಕ್ಕ ಹಾಕುತ್ತದೆ ಎಂಬುದಕ್ಕೆ  ಮೃತ ಸಾರಿಗೆ ನೌಕರರು ಮತ್ತು ಪ್ರವೀಣ್ ನೆಟ್ಟಾರು ಪ್ರಕರಣ ಉತ್ತರವನ್ನು ಹೇಳುತ್ತದೆ. ಸಾರಿಗೆ ನೌಕರರು ರಾಜಕೀಯ  ಕಾರ್ಯಕರ್ತರಲ್ಲ. ಅವರ ಸಾವು ಮತ್ತು ಉಳಿವು ಸರ್ಕಾರದ ವರ್ಚಸ್ಸಿನ ಮೇಲೆ ಯಾವುದೇ ಪರಿಣಾಮ ಬೀರುವ ಸಾಧ್ಯತೆಗಳು ಕಡಿಮೆ.  ಅಲ್ಲದೇ, ಕೊರೋನಾದಿಂದಾಗುವ ಸಾವಿಗೆ ಸಾಮುದಾಯಿಕ ಭಾವನೆಗಳನ್ನು ಕೆರಳಿಸುವ ಸಾಮರ್ಥ್ಯ ಇಲ್ಲ. ಅಂಥ ಸಾವುಗಳನ್ನು  ವ್ಯಕ್ತಿಗತವಾಗಿ ನೋಡಲಾಗುತ್ತದೆಯಾದ್ದರಿಂದ ಸಂತ್ರಸ್ತ ಕುಟುಂಬಕ್ಕೆ ಪರಿಹಾರ ವಿತರಿಸುವುದರಿಂದ ಸಾಮಾಜಿಕ ಭಾವನೆಯಲ್ಲಿ ಭಾರೀ  ಬದಲಾವಣೆ ತರಬಹುದಾದ ಸ್ಥಿತಿ ಇಲ್ಲ. ಹಾಗಂತ,

ಒಟ್ಟು 351 ಮಂದಿಯಲ್ಲಿ ಪರಿಹಾರ ಲಭಿಸಿದ 11 ಮಂದಿ ಮಾತ್ರ ಹಿಂದೂಗಳು, ಉಳಿದವರೆಲ್ಲ ಮಸೂದ್ ಮತ್ತು ಫಾಝಿಲ್  ಸಮುದಾಯಕ್ಕೆ ಸೇರಿದವರು ಎಂದು ಇದರರ್ಥವಲ್ಲ. ಮೃತಪಟ್ಟವರ ಪೈಕಿ ಶೇ. 99 ಮಂದಿ ಕೂಡ ಫಾಝಿಲ್ ಮತ್ತು ಮಸೂದ್ ಪ್ರತಿ ನಿಧಿಸುವ ಸಮುದಾಯಕ್ಕೆ ಸೇರಿದವರಲ್ಲ. ಒಂದುವೇಳೆ, ಹಿಂದೂಗಳ ಹಿತರಕ್ಷಣೆಯೇ ಬೊಮ್ಮಾಯಿ ಸರ್ಕಾರದ ಪರಮ ಗುರಿ  ಎಂದಾಗಿರುತ್ತಿದ್ದರೆ, ಇಷ್ಟರಲ್ಲಾಗಲೇ ಮೃತ ಸಾರಿಗೆ ನೌಕರರ ಕುಟುಂಬಗಳೂ ತಲಾ 30 ಲಕ್ಷ  ರೂಪಾಯಿ ಪರಿಹಾರವನ್ನು ಪಡೆ ದಿರಬೇಕಿತ್ತು. ಆದರೆ ಅದಾಗಿಲ್ಲ. ಮಾತ್ರವಲ್ಲ, ಅದೇ ಸಂತ್ರಸ್ತ ಕುಟುಂಬಗಳು ನ್ಯಾಯಕ್ಕಾಗಿ ಅಲೆಯುವಂತಾಗಿದೆ. ರಾಜ್ಯ ಸರಕಾರ ಹೇಗೆ  ತಾನು ಹಿಂದೂಗಳ ಸಂರಕ್ಷಕ ಎಂಬ ರೀತಿಯಲ್ಲಿ ಪೋಸು ಕೊಟ್ಟು ಓಟು ರಾಜಕೀಯದಲ್ಲಿ ಬ್ಯುಸಿಯಾಗಿದೆ ಎಂಬುದಕ್ಕೆ ಇದು ಸ್ಪಷ್ಟ  ಉದಾಹರಣೆ. ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಮತ್ತು ಪರಿಹಾರ ನೀಡುವ ಮೂಲಕ ಸಾಂತ್ವನ ಒದಗಿಸುವುದು ಈ ಸರ್ಕಾರದ  ಉದ್ದೇಶ ಅಲ್ಲ. ನಿಜವಾಗಿ,

ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಪರಿಹಾರ ವಿತರಿಸಿದ್ದರೆ ಅದಕ್ಕೆ ಕಾರಣ ಅವರ ಬಗೆಗಿನ ಕಾಳಜಿ ಅಲ್ಲ, ರಾಜಕೀಯ ದುರುದ್ದೇಶ.  ಮಸೂದ್ ಮತ್ತು ಫಾಝಿಲ್ ಕುಟುಂಬಗಳನ್ನು ನಿರ್ಲಕ್ಷಿಸಿ ಪ್ರವೀಣ್ ಕುಟುಂಬವನ್ನು ಮಾತ್ರ ಆದರಿಸುವುದರಿಂದ ತನ್ನ ‘ಹಿಂದೂ  ಸಂರಕ್ಷಕ’ ಎಂಬ ವರ್ಚಸ್ಸಿಗೆ ಬಲ ಬಂದೀತು ಎಂಬ ನಂಬಿಕೆ ಅದಕ್ಕಿದೆ. ಮುಸ್ಲಿಮರನ್ನು ನಿರ್ಲಕ್ಷಿಸುವುದೇ ಹಿಂದೂಗಳ ಪರ  ನಿಂತಿರುವುದಕ್ಕೆ ಪುರಾವೆ ಎಂಬAತೆ ಬಿಂಬಿಸುವುದು ಅದರ ಉದ್ದೇಶ. ಹಿಂದೂ ಮುಸ್ಲಿಮರನ್ನು ಭಾವನಾತ್ಮಕವಾಗಿ ವಿಭಜಿಸುವುದು ಮತ್ತು  ಹಿಂದೂಗಳ ಪರ ನಿಲ್ಲುವುದು- ಇವೇ ಬಿಜೆಪಿಯ ರಾಜಕೀಯ ತಂತ್ರ. ಕೊರೋನಾದಿಂದ ಮೃತಪಟ್ಟ ಸಾರಿಗೆ ನೌಕರರ ವಿಷಯದಲ್ಲಿ ಈ  ಭಾವನಾತ್ಮಕ ವಿಭಜನೆ ಸಾಧ್ಯವಿಲ್ಲ. ಯಾಕೆಂದರೆ, ಕೊರೋನಾಕ್ಕೆ ‘ಅಲ್ಲಾಹುವೇ’ ಕಾರಣ ಎಂಬುದು ಈವರೆಗೂ ಸಾಬೀತಾಗಿಲ್ಲ.  ಒಂದುವೇಳೆ, ಇಂಥದ್ದೊಂದು  ಪ್ರಚಾರ ನಿಜಕ್ಕೂ ಯಶಸ್ವಿಯಾಗಿರುತ್ತಿದ್ದರೆ ಮೃತಪಟ್ಟ ಎಲ್ಲ ಹಿಂದೂ ಸಾರಿಗೆ ನೌಕರರಿಗೂ ಈಗಾಗಲೇ  ಪರಿಹಾರ ವಿತರಣೆಯಾಗಿರುತ್ತಿತ್ತೋ ಏನೋ?

ಮುಸ್ಲಿಮ್ ಐಕ್ಯತಾ ವೇದಿಕೆಯ ಅಡಿಯಲ್ಲಿ ಮಂಗಳೂರಿನಲ್ಲಿ ನಡೆದ ಪ್ರತಿಭಟನೆಯು ‘ಮುಸ್ಲಿಮ್ ಸಮುದಾಯದ ಪ್ರತಿಭಟನೆ’ ಎಂಬ  ಚೌಕಟ್ಟನ್ನು ಮೀರಿ ಚರ್ಚೆಗೊಳಗಾಗಬೇಕಾದಷ್ಟು ಮಹತ್ವಪೂರ್ಣವಾದುದು. ಹತ್ಯೆಗೀಡಾದ ಮಸೂದ್ ಮತ್ತು ಫಾಝಿಲ್ ಇಬ್ಬರ  ಮೇಲೂ ಯಾವ ಅಪರಾಧ ಪ್ರಕರಣಗಳೂ ದಾಖಲಾಗಿಲ್ಲ. ಯಾರೊಂದಿಗೂ ಜಗಳವಾಡಿದ, ಯಾವುದಾದರೂ ಪ್ರಕರಣದಲ್ಲಿ ಪೊ ಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿರುವ ಕಪ್ಪು ಚುಕ್ಕೆಯೂ ಅವರ ಮೇಲಿಲ್ಲ. ತಮ್ಮಷ್ಟಕ್ಕೇ ದುಡಿದು ಕುಟುಂಬವನ್ನು ಸಾಕುತ್ತಿದ್ದ ಈ  ಇಬ್ಬರು ಯುವಕರನ್ನು ಕೋಮುದ್ವೇಷದ ಹೊರತು ಹತ್ಯೆ ಮಾಡುವುದಕ್ಕೆ ಬೇರಾವ ಕಾರಣಗಳೂ ಇಲ್ಲ. ಮುಸ್ಲಿಮ್ ಎಂಬುದರ  ಹೊರತಾಗಿ ಅವರ ಹತ್ಯೆಗೆ ಇರಬಹುದಾದ ಇನ್ನಾವ ಕಾರಣಗಳನ್ನೂ ಪೊಲೀಸರು ಬಹಿರಂಗಪಡಿಸಿಲ್ಲ. ಮಸೂದ್ ಹತ್ಯೆಯ ನಂತರ  ಪ್ರವೀಣ್ ನೆಟ್ಟಾರು ಹತ್ಯೆ ನಡೆದಿದೆ. ಆ ಬಳಿಕ ಫಾಝಿಲ್ ಹತ್ಯೆ ನಡೆದಿದೆ. ಈ ಮೂರೂ ಹತ್ಯೆಗಳಿಗೆ ಧರ್ಮದ ಹೊರತಾದ ಇನ್ನಾವ  ಕಾರಣಗಳೂ ಇಲ್ಲದೇ ಇರುವುದರಿಂದ ಈ ಮೂರೂ ಹತ್ಯೆಗಳನ್ನು ಸಮಾನವಾಗಿ ಕಾಣಬೇಕಾದುದು ರಾಜಧರ್ಮವನ್ನು ಪಾಲಿಸುವ  ಯಾವುದೇ ಸರ್ಕಾರದ ಪರಮ ಕರ್ತವ್ಯ. ಆದರೆ,

ಬೊಮ್ಮಾಯಿ ಸರ್ಕಾರ ಹಾಗೆ ನಡಕೊಂಡಿಲ್ಲ. ಪ್ರವೀಣ್ ನೆಟ್ಟಾರು ಪ್ರಕರಣವನ್ನು ಎನ್‌ಐಎ ತನಿಖೆಗೆ ವಹಿಸಿಕೊಟ್ಟ ಸರ್ಕಾರ ಉಳಿದೆರಡು  ಪ್ರಕರಣ ತನಿಖೆಯನ್ನು ಮಾತ್ರ ತನ್ನ ಬಳಿಯೇ ಇಟ್ಟುಕೊಂಡಿತು. ಎನ್‌ಐಎಗೆ ವಹಿಸಲಾಗುವ ಪ್ರಕರಣಗಳಲ್ಲಿ ಆರೋಪಿಗಳು ಸುಲಭವಾಗಿ  ಜಾಮೀನು ಪಡೆದು ಹೊರಬರುವುದಕ್ಕೆ ಸಾಧ್ಯವಿಲ್ಲ. ಜಾಮೀನಿಗಾಗಿ ವರ್ಷಗಟ್ಟಲೆ ಕಾಯಬೇಕಾಗುತ್ತದೆ. ಆದರೆ, ಎನ್‌ಐಎ ಹೊರತಾದ  ತನಿಖೆಗಳಲ್ಲಿ ಜಾಮೀನು ಪ್ರಕ್ರಿಯೆ ಇಷ್ಟು ಕಠಿಣವಾಗಿಲ್ಲ. ಆದ್ದರಿಂದಲೇ, ಫಾಝಿಲ್ ಹತ್ಯೆ ಪ್ರಕರಣದ ಆರೋಪಿ ಈಗಾಗಲೇ ಜಾಮೀನು  ಪಡೆದು ಹೊರಬಂದಿದ್ದಾನೆ. ಇದರಾಚೆಗೆ ಹೇಳುವುದಕ್ಕೇನಿದೆ? ಅಂದಹಾಗೆ,

ನರಗುಂದದ ಸಮೀರ್, ಶಿವಮೊಗ್ಗದ ಹರ್ಷ ಮತ್ತು ದಕ್ಷಿಣ ಕನ್ನಡದ ಈ ಮೂರು ಪ್ರಕರಣಗಳ ವಿಷಯದಲ್ಲಿ ಬೊಮ್ಮಾಯಿ ಸರ್ಕಾರ  ನಿಷ್ಪಕ್ಷಪಾತವಾಗಿ ವರ್ತಿಸಿಲ್ಲ ಎಂದು ಬಿಜೆಪಿ ಬೆಂಬಲಿಗರೇ ಪರಸ್ಪರ ಹೇಳಿಕೊಳ್ಳುವಷ್ಟು ಸರ್ಕಾರದ ವರ್ಚಸ್ಸು ಕುಸಿದಿದೆ. ಹೀಗೆ ಬಹಿರಂಗ  ಅನ್ಯಾಯ ಮಾಡುವುದರಿಂದ ಯಾವುದೇ ಸರ್ಕಾರದ ಓಟಿನ ಪ್ರಮಾಣದಲ್ಲಿ ವೃದ್ಧಿಯಾಗುತ್ತದೆ ಎಂದಾದರೆ, ಆ ಓಟು ಹಾಕುವವರ  ನ್ಯಾಯ ಪ್ರಜ್ಞೆಯ ಬಗ್ಗೆಯೂ ವಿಷಾದವಾಗುತ್ತದೆ. ಧರ್ಮ ಯಾವುದೇ ಇರಲಿ, ನ್ಯಾಯ ಸರ್ವರ ಪಾಲಿಗೂ ಸಮಾನ. ಅನ್ಯಾಯವೂ  ಹಾಗೆಯೇ. ಮುಸ್ಲಿಮರಿಗೆ ಅನ್ಯಾಯ ಮಾಡುವುದರಿಂದ ಹಿಂದೂಗಳಿಗೆ ತೃಪ್ತಿಯಾಗುವುದು ಮತ್ತು ಹಿಂದೂಗಳಿಗೆ ಅ ನ್ಯಾಯವಾಗುವುದರಿಂದ ಮುಸ್ಲಿಮರಿಗೆ ತೃಪ್ತಿಯಾಗುವುದು- ಇವೆರಡೂ ಧರ್ಮವಿರೋಧಿ ಭಾವನೆಗಳು. ಅನ್ಯಾಯ ಫಾಝಿಲ್‌ಗಾದರೂ  ನೆಟ್ಟಾರುಗಾದರೂ ಸಮೀರ್‌ಗಾದರೂ ಹರ್ಶನಿಗಾದರೂ ಅನ್ಯಾಯವೇ. ಇವುಗಳಲ್ಲಿ ಒಂದಕ್ಕೆ ದುಃಖಿಸಿ ಇನ್ನೊಂದಕ್ಕೆ ಸಂಭ್ರಮಪಡುವುದು  ಧರ್ಮ ಮತ್ತು ಅದು ಬೋಧಿಸುವ ನ್ಯಾಯ ನೀತಿಯನ್ನೇ ಹತ್ಯೆಗೈದಂತೆ.

Thursday, 8 September 2022

ಇಸ್ಲಾಮೀ ಚಿಂತನೆಗೆ ಬೌದ್ಧಿಕ ವಲಯದಲ್ಲಿ ಅಂಗೀಕಾರ ಒದಗಿಸಿಕೊಟ್ಟ ಮೌಲಾನಾ




ಖ್ಯಾತ-ಕುಖ್ಯಾತ ಈ ಎರಡೂ ಪದಗಳ ನಡುವೆ ಒಂದೇ ಒಂದೇ ಅಕ್ಷರದ ವ್ಯತ್ಯಾಸವಷ್ಟೇ ಇದೆ. ಆದರೆ, ಅರ್ಥದ ಮಟ್ಟಿಗೆ ಹೇಳುವುದಾದರೆ, ಇವುಗಳ ನಡುವಿನ ವ್ಯತ್ಯಾಸ ಅಗಾಧವಾದುದು. ಖ್ಯಾತ ವಿದ್ವಾಂಸ, ಖ್ಯಾತ ವೈದ್ಯ, ಖ್ಯಾತ ವಿಜ್ಞಾನಿ, ಖ್ಯಾತ ಸಾಹಿತಿ- ಹೀಗೆ ಗುರುತಿಗೀಡಾದ ಹಲವರು ನಮ್ಮ ನಡುವೆ ಇದ್ದಾರೆ. ಇವರೆಲ್ಲ ರಾತ್ರಿ ಬೆಳಗಾಗುವುದರೊಳಗೆ ಖ್ಯಾತರಾದುದಲ್ಲ. ಅದರ ಹಿಂದೆ ಪರಿಶ್ರಮ, ಸಾಮಾಜಿಕ ಕೊಡುಗೆ, ಸಕಾರಾತ್ಮಕ ಚಿಂತನೆ ಮತ್ತು ಸಾಧನೆಗಳ ಬೆವರು ಇರುತ್ತದೆ. ಇಂಥ ಖ್ಯಾತರಲ್ಲಿ ಒಬ್ಬರು- ಕಳೆದವಾರ ನಿಧನರಾದ ಮೌಲಾನಾ ಜಲಾಲುದ್ದೀನ್ ಉಮರಿ. ಹಾಗಂತ, 2007ರಿಂದ 2019ರ ವರೆಗೆ ಅವರು ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು ಎಂಬುದು ಅವರ ಹೆಸರಿನ ಮೊದಲು ಖ್ಯಾತ ಎಂಬ ಪದವನ್ನು ಸೇರಿಸುವುದಕ್ಕೆ ಕಾರಣ ಅಲ್ಲ. ಸಂಘಟನೆಗಳ ಅಧ್ಯಕ್ಷತೆಯನ್ನು ಹಲವು ದಶಕಗಳ ಕಾಲ ಅಲಂಕರಿಸಿರುವ ಮಂದಿ ನಮ್ಮ ನಡುವೆ ಇದ್ದಾರೆ. ಅವರೆಲ್ಲ ಖ್ಯಾತನಾಮರ ಪಟ್ಟಿಯಲ್ಲಿ ಸೇರಿಕೊಂಡಿಲ್ಲ. ಯಾಕೆಂದರೆ, ಅವರೆಲ್ಲ ಜಲಾಲುದ್ದೀನ್ ಉಮರಿ ಅಲ್ಲ.

87 ವರ್ಷಗಳ ತುಂಬು ಜೀವನವನ್ನು ಸವೆಸಿ ಅವರು ಆಗಸ್ಟ್ 26ರಂದು ರಾತ್ರಿ 9 ಗಂಟೆಗೆ ಇಹಲೋಕಕ್ಕೆ ವಿದಾಯ ಕೋರಿದಾಗ ಅವರಿಗಾಗಿ ಮಿಡಿದ ಹೃದಯಗಳು ಅಸಂಖ್ಯ. ದೇಶದ ಬಡವರು ಮತ್ತು ದುರ್ಬಲರ ಏಳಿಗೆಗಾಗಿ ‘ವಿಝನ್ 2016’ ಎಂಬ ಅಭೂತಪೂರ್ವ ಯೋಜನೆಯನ್ನು ಜಮಾಅತೆ ಇಸ್ಲಾಮೀ ಹಿಂದ್ ರೂಪಿಸಿದಾಗ, ಅದರ ಭಾಗವಾಗಿದ್ದವರು ಇದೇ ಜಲಾಲುದ್ದೀನ್ ಉಮರಿ. ಒಂದು ಸರ್ಕಾರ ಮಾತ್ರ ಮಾಡಬಹುದಾದ ಬಹುಕೋಟಿ ರೂಪಾಯಿಗಳ ಬೃಹತ್ ಕಲ್ಯಾಣ ಯೋಜನೆ ಇದು. ಅತೀ ಹಿಂದುಳಿದ ಪ್ರದೇಶಗಳನ್ನು ಗುರುತಿಸಿ, ಅಲ್ಲಿನ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸುವುದು ಈ ಯೋಜನೆಯ ಉದ್ದೇಶ. ಶಾಲೆ, ಆಸ್ಪತ್ರೆ, ಮನೆ ನಿರ್ಮಾಣ, ಮೂಲಭೂತ ಸೌಲಭ್ಯಗಳ ಒದಗಣೆ, ರೋಗಿಗಳಿಗೆ ನೆರವು, ಚಿಕಿತ್ಸೆ ಸಹಿತ ಒಂದು ಸರ್ಕಾರ ಮಾತ್ರ ಮಾಡಬಹುದಾದ ಯೋಜನೆಯನ್ನು ಒಂದು ಸಂಘಟನೆ ಕೂಡಾ ಮಾಡಬಹುದು ಎಂಬುದನ್ನು ರೂಪಿಸಿದವರಲ್ಲಿ ಇವರೂ ಒಬ್ಬರು. ಈ ಯೋಜನೆ ಕಾರ್ಯಗತಗೊಳ್ಳುವಾಗ ಇವರು ಜಮಾಅತ್‌ನ ಉಪಾಧ್ಯಕ್ಷರಾಗಿದ್ದರು. ಇವರು ಅಧ್ಯಕ್ಷರಾದ ಬಳಿಕ ಈ ಯೋಜನೆಯ ಅವಧಿಯನ್ನು ಇನ್ನಷ್ಟು ವಿಸ್ತರಿಸಲಾಯಿತು. ಮುಖ್ಯವಾಗಿ, ಉತ್ತರ ಭಾರತದ ಅತೀ ಹಿಂದುಳಿದ ಹಳ್ಳಿ ಮತ್ತು ಗ್ರಾಮಗಳು ಈ ಯೋಜನೆಯ ಪ್ರಯೋಜನವನ್ನು ಪಡಕೊಂಡವು. ಅಂದಹಾಗೆ,

ಯಾವುದೇ ವಿಷಯದ ಮೇಲೆ ಇಸ್ಲಾಮೀ ದೃಷ್ಟಿಕೋನಕ್ಕೆ ಸಂಬAಧಿಸಿ ವಿಶ್ಲೇಷಣೆ ನಡೆಸುವಲ್ಲಿ ಮೌಲಾನಾ ಉಮರಿ ನಿಪುಣರು. ಸಂದರ್ಭಾನುಸಾರ ಅವರು ಮಾಧ್ಯಮಗಳ ಮುಂದೆ ನಿಖರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದರು. ಐಸಿಸ್‌ನ ಬಗ್ಗೆ ಕಾವೇರಿದ ಚರ್ಚೆ ನಡೆಯುತ್ತಿದ್ದ ವೇಳೆ ಮುಖ್ಯವಾಹಿನಿಯ ಆಂಗ್ಲ ಮಾಧ್ಯಮಗಳು ಅವರನ್ನು ಸಂಪರ್ಕಿಸಿದ್ದುವು. ಸಾಮಾನ್ಯವಾಗಿ, ಮೌಲಾನಾರ ಬಗ್ಗೆ ಮಾಧ್ಯಮಗಳಲ್ಲಿ ಒಂದು ಬಗೆಯ ಕೀಳರಿಮೆ ಇರುತ್ತದೆ. ಭೌತಿಕ ಶಿಕ್ಷಣವನ್ನು ಪಡೆಯದ ಮತ್ತು ಬರೇ ಧಾರ್ಮಿಕ ಶಿಕ್ಷಣವನ್ನಷ್ಟೇ ಕಲಿತಿರುವವರೆಂಬ ಉಡಾಫೆ ಭಾವವೂ ಅವರ ಪ್ರಶ್ನಾವಳಿಯಲ್ಲಿ ಗೋಚರಿಸುತ್ತಿರುತ್ತದೆ. ಆದರೆ ಮೌಲಾನಾರು ಜಾಮಿಯಾ ದಾರುಸ್ಸಲಾಮ್‌ನಿಂದ ಫಾಝಿಲ್ ಪದವಿ ಪಡೆದವರು ಮಾತ್ರವಲ್ಲ, ಅಲಿಘರ್ ವಿವಿಯಿಂದ ಬಿಎ ಪದವಿಯನ್ನೂ ಪಡೆದವರು ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಿಪುಣರಾಗಿದ್ದಾರೆ ಎಂಬುದು ಗೊತ್ತಾಗಿ ಪತ್ರಕರ್ತರ ಪ್ರಶ್ನೆಯ ವರಸೆಯೇ ಬದಲಾಗಿತ್ತು. ಮೌಲಾನಾ ಅವರು ಮದ್ರಾಸ್ ವಿವಿಯಿಂದ ಪರ್ಷಿಯನ್ ಭಾಷೆಯಲ್ಲಿ ಮುನ್ಶಿ ಫಾಝಿಲ್ ಪದವಿಯನ್ನು ಕೂಡಾ ಪಡೆದವರಾಗಿದ್ದರು. ಆದ್ದರಿಂದಲೇ,

ಇಸ್ಲಾಮೀ ರಾಷ್ಟ್ರವನ್ನು ಕಟ್ಟುವ ಮೂಲಕ ನಾವು ಸ್ವರ್ಗ ಪ್ರವೇಶಿಸಬಹುದು ಎಂದು ಐಸಿಸ್‌ನ ಮಂದಿ ಭಾವಿಸುತ್ತಾರೆ. ಆದರೆ, ಹತ್ಯೆಗೈದು, ದೌರ್ಜನ್ಯವೆಸಗಿ ಮತ್ತು ಹಿಂಸೆಗೀಡುಮಾಡಿ ಓರ್ವ ಹೇಗೆ ತಾನೇ ಸ್ವರ್ಗ ಪ್ರವೇಶಿಸಲು ಸಾಧ್ಯ? ಹಿಂಸೆಯ ವಿರುದ್ಧ ಮಕ್ಕಳನ್ನು ತರಬೇತುಗೊಳಿಸುವುದು ಎಲ್ಲ ಹೆತ್ತವರ ಕರ್ತವ್ಯವಾಗಿದೆ ಮತ್ತು ಆ ಮೂಲಕ ಇಸ್ಲಾಮ್ ತೋರಿಸಿದ ಸನ್ಮಾರ್ಗದ ಕಡೆಗೆ ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ...’ ಎಂದವರು ಮಾಧ್ಯಮಗಳ ಮುಂದೆ ಅಭಿಪ್ರಾಯಪಟ್ಟಿದ್ದರು. ಐಸಿಸನ್ನು ಸಮರ್ಥಿಸುವ ಸಣ್ಣ ಎಳೆಯೇನಾದರೂ ಸಿಗುತ್ತದೆಯೇ ಎಂದು ಕಾದುಕೊಂಡವರನ್ನು ಗಾಢ ನಿರಾಶೆಗೆ ತಳ್ಳಿದ ಹೇಳಿಕೆ ಅದಾಗಿತ್ತು. ಇದೇವೇಳೆ, ಜಮಾಅತೆ ಇಸ್ಲಾಮೀ ಜಮ್ಮು-ಕಾಶ್ಮೀರಕ್ಕೆ ಕೇಂದ್ರ ಸರ್ಕಾರ ನಿಷೇಧ ವಿಧಿಸಿದ ಸಂದರ್ಭದಲ್ಲಿ ಅದರ ಕಮಾಂಡರ್ ಇನ್ ಚೀಫ್ ಎಂದು ಜಲಾಲುದ್ದೀನ್ ಉಮರಿಯವರನ್ನು ತನ್ನ ಸುದ್ದಿ ಪ್ರಸಾರದ ನಡುವೆ ಅರ್ನಾಬ್ ಗೋಸ್ವಾಮಿಯ ರಿಪಬ್ಲಿಕ್ ಟಿ.ವಿ. ಬಿಂಬಿಸಿತ್ತು. ಬಳಿಕ ಅದು ನಿಶ್ಶರ್ಥವಾಗಿ ಮೌಲಾನಾರ ಕ್ಷಮೆಯನ್ನೂ ಯಾಚಿಸಿತ್ತು. ಯಾಕೆಂದರೆ ಮೌಲಾನಾ ಉಮರಿ ನಾಲ್ಕು ಗೋಡೆಯೊಳಗಿನ ಅಧ್ಯಕ್ಷ ಆಗಿರಲಿಲ್ಲ. ಬಹುತ್ವದ ಭಾರತದಲ್ಲಿ ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಒಂದಕ್ಕಿಂತ ಹೆಚ್ಚು ಸಂಶೋಧನಾತ್ಮಕ ಲೇಖನಗಳನ್ನು ಬರೆದು ಬೌದ್ಧಿಕ ವಲಯ ತಲೆದೂಗುವಂತೆ ಮಾಡಿದವರು ಅವರು. ವೈಚಾರಿಕವಾಗಿ ಅವರು ಅತ್ಯಂತ ಬಲಿಷ್ಠರಾಗಿದ್ದರು. ಇಸ್ಲಾಮನ್ನು ಅತ್ಯಂತ ಸಮಗ್ರವಾಗಿ ಯಾವುದೇ ಅಪವಾದಗಳಿಗೆ ಎಡೆಯಾಗದಂತೆ ಪ್ರಬಲ ಪುರಾವೆಯೊಂದಿಗೆ ಬೌದ್ಧಿಕ ವಲಯದಲ್ಲಿ ಮಂಡಿಸುವ ಸಾಮರ್ಥ್ಯ ಅವರಲ್ಲಿತ್ತು. ಸಾಹಿತ್ಯ ಕ್ಷೇತ್ರ ಅವರ ಇಷ್ಟದ ಮಗ್ಗುಲಾದುದರಿಂದ ಭಾಷಣಗಳಿಗೆ ಹೊರತಾಗಿ ತನ್ನ ಚಿಂತನೆಯನ್ನು ಸಾಮಾನ್ಯ ಜನರಿಗೆ ತಲುಪಿಸುವಲ್ಲಿ ಅವರು ಯಶಸ್ಸು ಕಂಡರು. ಅವರು ಬರೆದಿರುವ ಸುಮಾರು 40ಕ್ಕಿಂತಲೂ ಅಧಿಕ ಪುಸ್ತಕಗಳಲ್ಲಿ ಯಾವುದು ಕೂಡಾ ಇಸ್ಲಾಮ್ ಮುಸ್ಲಿಮ್ ಎಂಬ ಪರಿಧಿಯನ್ನು ಬಿಟ್ಟು ಹೊರ ಹೋಗಿಯೇ ಇರಲಿಲ್ಲ. ಏನನ್ನು ಬರೆಯುವುದಿದ್ದರೂ ಅದರ ಜೊತೆ ಇಸ್ಲಾಮೀ ದೃಷ್ಟಿಕೋನವನ್ನು ದಾಖಲಿಸುವುದು ಅವರ ರೂಢಿಯಾಗಿತ್ತು. ಪಂಡಿತ ವಲಯದಲ್ಲಿ ಹೆಚ್ಚು ವಿಶ್ಲೇಷಣೆಗೆ ಒಳಪಡುವ ಸಂಶೋಧನಾತ್ಮಕ ಬರಹಗಳನ್ನು ಅವರು ಆಸಕ್ತಿಯಿಂದ ಬರೆದುದಷ್ಟೇ ಅಲ್ಲ, ಆ ಎಲ್ಲ ಬರಹಗಳೂ ಇಸ್ಲಾಮನ್ನು ಕೇಂದ್ರೀಕರಿಸಿ ಇದ್ದುವು ಎಂಬುದು ಗಮನಾರ್ಹ. ಅಂದಹಾಗೆ,

ಮೌಲಾನಾ ಉಮರಿಯವರು ವಿದ್ಯಾರ್ಥಿ ಕಾಲದಿಂದಲೇ ಜಮಾಅತ್‌ನೊಂದಿಗೆ ಸಂಬಂಧ ಇಟ್ಟು ಕೊಂಡೇ ಬೆಳೆದವರು. ತನ್ನ ಪ್ರತಿಭೆ ಮತ್ತು ಆಸಕ್ತಿಯ ಕಾರಣದಿಂದಾಗಿ ಬಹಳ ಬೇಗ ಮುಂಚೂಣಿಗೂ ತಲುಪಿದರು. ಜಮಾಅತ್‌ನ ಅಲೀಘರ್ ನಗರಾಧ್ಯಕ್ಷರಾಗಿ ಅವರು ಬಹಳ ಬೇಗ ಆಯ್ಕೆಯಾದರು. ಆದರೆ, ಅವರ ಆಸಕ್ತಿ ಸಂಶೋಧನಾ ಕ್ಷೇತ್ರದ ಮೇಲಿತ್ತು. ಆದ್ದರಿಂದಲೇ, ಜಮಾಅತ್‌ನ ಸಂಶೋಧನಾ ವಿಭಾಗವಾದ ಇಸ್ಲಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಭಾಗವಾದರು. ‘ತಹ್ಕಿಕಾತೆ ಇಸ್ಲಾಮೀ’ ಎಂಬ ರಿಸರ್ಚ್ ತ್ರೈಮಾಸಿಕದ ಸಂಪಾದಕರೂ ಆದರು. ಆ ಬಳಿಕ ಜಮಾಅತ್‌ನ ಮುಖವಾಣಿ ಝಿಂದಗಿ-ಏ-ನೌ ಎಂಬ ಮಾಸಿಕದ ಸಂಪಾದಕರಾದರು. ಬಳಿಕ ಜಮಾಅತೆ ಇಸ್ಲಾಮೀ ಹಿಂದ್‌ನ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನಿರಂತರ 16 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಬಳಿಕ 2007ರಿಂದ 2019ರ ವರೆಗೆ ಜಮಾಅತ್‌ನ ಅಧ್ಯಕ್ಷರಾಗಿಯೂ ಹೊಣೆಗಾರಿಕೆ ನಿಭಾಯಿಸಿದರು. ಈ ನಡುವೆ ಅವರು ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ನ ಸ್ಥಾಪಕ ಸದಸ್ಯರೂ ಉಪಾಧ್ಯಕ್ಷರೂ ಆಗಿದ್ದರು. ತ್ರಿವಳಿ ತಲಾಕ್‌ನ ಚರ್ಚೆಯ ವೇಳೆ ಅತ್ಯಂತ ತಾರ್ಕಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಇದೇ ಮೌಲಾನಾ. ಕೇಂದ್ರ ಸರ್ಕಾರದ ಉದ್ದೇಶ ಶುದ್ಧಿಯನ್ನು ಪ್ರಶ್ನಿಸಿ ಪ್ರಶ್ನೆಗಳನ್ನೆತ್ತಿದವರೂ ಇದೇ ಮೌಲಾನಾ. ಅವರ ಇನ್ನೊಂದು ಬಹುಮುಖ್ಯ ಸಾಧನೆ ಏನೆಂದರೆ, ಭಿನ್ನ ವಿಚಾರಧಾರೆಯ ಉಲೆಮಾಗಳೊಂದಿಗೆ ಸೌಹಾರ್ದ ಸಂಬಂಧವನ್ನು ಬೆಳೆಸಿಕೊಂಡದ್ದು. ಜಮಾಅತ್‌ಗಿಂತ ಹೊರತಾದ ವಿವಿಧ ಧಾರ್ಮಿಕ ಸಂಘಟನೆಗಳ ಉಲೆಮಾಗಳು ಮೌಲಾನಾರೊಂದಿಗೆ ಆಪ್ತ ಸಂಬಂಧವನ್ನು ಹೊಂದಿದ್ದರು. ಬಹುತ್ವದ ಸಮಾಜದಲ್ಲಿ ಮುಸ್ಲಿಮರು ಹೇಗಿರಬೇಕು ಮತ್ತು ಇಸ್ಲಾಮಿನ ಪ್ರಚಾರದ ಸ್ವರೂಪ ಏನಿರಬೇಕು ಎಂಬ ಬಗ್ಗೆ ಅತ್ಯಂತ ನಿಖರ ಮತ್ತು ಸಂತುಲಿತ ನಿಲುವನ್ನು ಸಂದರ್ಭಾನುಸಾರ ವ್ಯಕ್ತಪಡಿಸುತ್ತಲೇ ಬಂದವರು ಮೌಲಾನಾ ಉಮರಿ. ನಿಜವಾಗಿ,
ಏಕಕಾಲದಲ್ಲಿ ಉತ್ತಮ ನಾಯಕ, ಶಿಕ್ಷಣ ತಜ್ಞ, ಸಾಹಿತಿ, ಚಿಂತಕ, ಸಂಶೋಧಕ ಇತ್ಯಾದಿ ಗುಣಗಳನ್ನು ಓರ್ವರು ರೂಢಿಸಿಕೊಳ್ಳುವುದು ಸುಲಭ ಅಲ್ಲ. ಅಪಾರ ಪರಿಶ್ರಮ, ನಿರಂತರ ಅಧ್ಯಯನ, ಚಿಂತಕರೊಂದಿಗೆ ಸಂವಾದ, ಸಂಶೋಧನೆ, ಸಕಾರಾತ್ಮಕ ದೃಷ್ಟಿಕೋನ ಮತ್ತು ಅಲ್ಲಾಹನ ಅನುಗ್ರಹ- ಇವೆಲ್ಲವೂ ಜೊತೆಗೂಡಿದಾಗ ಸಿಗುವ ಫಲಿತಾಂಶವೇ ಮೌಲಾನಾ ಜಲಾಲುದ್ದೀನ್ ಉಮರಿ. ಮೃದು ಮಾತಿನ, ಗಂಭೀರ ನಡವಳಿಕೆಯ ಮೌಲಾನಾರು ಬಹುತ್ವದ ಭಾರತಕ್ಕೆ ತನ್ನ ವಿಚಾರಗಳಿಂದ ಮೆರುಗನ್ನು ನೀಡಿದ್ದಾರೆ. ‘ಮೌಲಾನಾರೆಂದರೆ, ಕರ್ಮಶಾಸ್ತ್ರ ಭಿನ್ನಾಭಿಪ್ರಾಯಗಳನ್ನು ಉಬ್ಬಿಸಿ ಜಿದ್ದಾಜಿದ್ದಿನಲ್ಲಿ ತೊಡಗಿರುವವರು...’ ಎಂಬ ಸಾಮಾನ್ಯ ನಿಲುವಿಗೆ ಅಪವಾದವಾಗಿದ್ದರು ಮೌಲಾನಾ ಉಮರಿ. ಅವರು ಇಸ್ಲಾಮಿಕ್ ರಿಸರ್ಚ್ ಇನ್ಸ್ಟಿಟ್ಯೂಟ್‌ನ ಅಧ್ಯಕ್ಷರಾಗಿದ್ದಾಗ ಇಂಥ ಕರ್ಮಶಾಸ್ತ್ರ ಭಿನ್ನತೆಗಳನ್ನು ತಗ್ಗಿಸುವ ದೃಷ್ಟಿಯಿಂದಲೇ ರಿಸರ್ಚ್ ತಂಡವನ್ನು ರೂಪಿಸಿದ್ದರು. ಅವರು ತಮ್ಮ ಬರಹದಲ್ಲಿ ಕರ್ಮಶಾಸ್ತ್ರ  ಭಿನ್ನತೆಗೆ ಮಹತ್ವ ಕಲ್ಪಿಸುತ್ತಲೇ ಇರಲಿಲ್ಲ. ಎಲ್ಲ ವಿಚಾರಧಾರೆಯ ಉಲೆಮಾಗಳನ್ನು ಜೊತೆ ಸೇರಿಸಿಕೊಂಡು ಬಹುತ್ವದ ಭಾರತದಲ್ಲಿ ಮುಸ್ಲಿಮರು ನಿರ್ಭಯದಿಂದ ಬದುಕುವುದಕ್ಕೆ ಮತ್ತು ದೇಶದ ಜನರಿಗೆ ಇಸ್ಲಾಮನ್ನು ಪರಿಚಯಿಸುವುದಕ್ಕೆ ಅವರು ಶಕ್ತಿ ಮೀರಿ ಶ್ರಮಿಸಿದರು.

ಅವರನ್ನು ಸೃಷ್ಟಿಕರ್ತನು ಪ್ರೀತಿಸಲಿ.