Tuesday, 28 May 2013

ನಮ್ಮ ವೈಫಲ್ಯಗಳನ್ನು ಅಡಗಿಸುವುದಕ್ಕಾಗಿ ಅತಿಥಿಯನ್ನು ದೂರದಿರೋಣ

   ಬಾಯಿ ಬಾರದ, ದಾವೆ ಹೂಡುವ ಸಾಮರ್ಥ್ಯವೂ ಇಲ್ಲದ ಮಳೆಯ ಮೇಲೆ ಆರೋಪಗಳನ್ನು ಹೊರಿಸಿ, ತಮ್ಮೆಲ್ಲ ವೈಫಲ್ಯಗಳಿಂದ ನುಣುಚಿಕೊಳ್ಳಲು ವ್ಯವಸ್ಥೆ ಸಜ್ಜಾಗುತ್ತಿರುವಂತೆ ಕಾಣುತ್ತಿದೆ. ‘ಮಳೆಗೆ, ಚಳಿಗೆ ಮತ್ತು ಬಿಸಿಲಿಗೆ ಇಂತಿಷ್ಟು ಮಂದಿ ಸಾವಿಗೀಡಾದರು’ ಎಂಬ ಪದವನ್ನು ನಾವು ಈಗಾಗಲೇ ಸಂಶೋಧಿಸಿ ಇಟ್ಟಿದ್ದೇವೆ. ಇಂಥ ಪದಗಳನ್ನು ಅತ್ಯಂತ ಹೆಚ್ಚು ಬಳಕೆ ಮಾಡುವುದು ವ್ಯವಸ್ಥೆ. ಜನರು ನೀರಿನಲ್ಲಿ ಕೊಚ್ಚಿ ಹೋದರೆ, ಗುಡಿಸಲು ಕುಸಿದು ಬಿದ್ದರೆ ಇಲ್ಲವೇ ಒಂದು ಪ್ರದೇಶವೇ ನೀರಿನಿಂದ ಆವೃತ್ತವಾದರೆ ತಕ್ಷಣ ಸಚಿವರು ಮಳೆಯನ್ನು ಅಪರಾಧಿಯೆಂದು ಘೋಷಿಸುತ್ತಾರೆ. ಅಷ್ಟಕ್ಕೂ, ಮಳೆಯೇನೂ ಸರದಿ ತಪ್ಪಿಸಿ ಸೆಖೆಗಾಲದಲ್ಲೋ ಚಳಿಗಾಲದಲ್ಲೋ ಬರುವುದಿಲ್ಲವಲ್ಲ. ಅದು ಬರುವುದಕ್ಕಿಂತ ತಿಂಗಳುಗಳ ಮೊದಲೇ ಸೂಚನೆ ಕೊಡುತ್ತದೆ. ಒಂದೆರಡೆ ಬಾರಿ ಸುರಿದು, ಅವ್ಯವಸ್ಥೆಗಳ ಕಡೆಗೆ ಬೊಟ್ಟು ಮಾಡಿ ಕೆಲವು ದಿನಗಳ ವರೆಗೆ ಕಾಯುತ್ತದೆ. ಒಂದು ರೀತಿಯಲ್ಲಿ, ಚರಂಡಿಯನ್ನು ದುರಸ್ತಿಗೊಳಿಸುವುದಕ್ಕೆ, ರಸ್ತೆಗಳನ್ನು ತೋಡುಗಳಾಗುವುದರಿಂದ ತಪ್ಪಿಸುವುದಕ್ಕೆ, ಉರುಳಿ ಬೀಳಬಹುದಾದ ಮರಗಳನ್ನು ತೆರವುಗೊಳಿಸುವುದಕ್ಕೆ ರವಾನೆಯಾಗುವ ಕೊನೆಯ ಸೂಚನೆ ಅದು. ಎಷ್ಟೋ ವಿದ್ಯುತ್ ಕಂಭಗಳು ಉರುಳಿ ಬೀಳುವುದು ಮಳೆಗಾಲದಲ್ಲೇ. ವಿದ್ಯುತ್ ತಂತಿಗಳೂ ಮಳೆಗಾಲದಲ್ಲಿ ಕಡಿದು ಬೀಳುವುದಿದೆ.  ರಸ್ತೆಗಳಂತೂ ಹೊಂಡಗಳ ರೂಪ ಪಡೆಯುತ್ತವೆ. ಇನ್ನು, ಕಾಯಿಲೆಗಳ ಬಗ್ಗೆ ಹೇಳುವಂತೆಯೇ ಇಲ್ಲ. ಡೆಂಗ್ಯೂ ಈಗಾಗಲೇ ಕೆಲವು ಜೀವಗಳನ್ನು ಬಲಿ ಪಡೆದಿದೆ. ಕಳೆದ ವರ್ಷ 3824 ಮಂದಿಯನ್ನು ಈ ಡೆಂಗ್ಯೂ ಕಾಡಿತ್ತು. ಅಲ್ಲದೆ, ಮಲೇರಿಯ ಮತ್ತಿತರ ಕಾಯಿಲೆಗಳು ಕಾಣಿಸಿಕೊಳ್ಳುವುದೂ ಈ  ಮಳೆಗಾಲದಲ್ಲೇ. ದುರಂತ ಏನೆಂದರೆ, ಮಳೆ ರವಾನಿಸುವ ಯಾವ ಸೂಚನೆಯನ್ನೂ ಗಂಭೀರವಾಗಿ ಎತ್ತಿಕೊಳ್ಳದೇ, ಅದು ಹರಿದು ಹೋಗುವಲ್ಲೆಲ್ಲಾ ಅಡೆ-ತಡೆಗಳನ್ನು ನಿರ್ಮಿಸಿ, ಕಾಯಿಲೆಗಳಿಗೆ ಪೂರಕವಾದ ಪರಿಸರವನ್ನು ಸೃಷ್ಟಿ ಮಾಡಿ, ಕೊನೆಗೆ ಮಳೆಯನ್ನೇ ನಾವು ಅಪರಾಧಿಯೆಂದು ದೂಷಿಸುತ್ತೇವೆ.
   ಈ ಭೂಮಿಯ ಮೇಲೆ ಸುರಿಯುವುದರಿಂದ ಮಳೆಗೆ ಭಾರೀ ಲಾಭ ಇದೆ ಎಂದು ಈ ವರೆಗೆ ಯಾರೂ ವಾದಿಸಿಲ್ಲ. ಯಾಕೆಂದರೆ, ಮಳೆಯ ಅಗತ್ಯ ಮನುಷ್ಯನಿಗಿದೆಯೇ ಹೊರತು ಮನುಷ್ಯನ ಅಗತ್ಯ ಮಳೆಗಲ್ಲ. ನೀರಿಲ್ಲದೇ ಮನುಷ್ಯ ಬದುಕಲಾರ. ಮಳೆ ಸುರಿದು ಭೂಮಿ ಹಸನಾಗದೇ ಬೆಳೆಗಳೂ ಉತ್ಪತ್ತಿಯಾಗವು. ಹೀಗೆ ಮಳೆಯನ್ನು ಅವಲಂಬಿಸಿಕೊಂಡ ಮನುಷ್ಯ ಮತ್ತು ಭೂಮಿ ಅಂತಿಮವಾಗಿ, ಮಳೆಯನ್ನೇ ಆರೋಪಿ ಸ್ಥಾನದಲ್ಲಿ ಕೂರಿಸುವುದಕ್ಕೆ ಏನೆನ್ನಬೇಕು? ಒಂದು ವೇಳೆ, ಹಾನಿ ಮಾಡುವುದು ಮಳೆಯ ಉದ್ದೇಶವೇ ಆಗಿದ್ದರೆ, ಅದು ಪೂರ್ಣ ವೇಗದಲ್ಲಿ ಸುರಿದರೂ ಧಾರಾಳ ಸಾಕಿತ್ತು. ಮಳೆ ಭೂಮಿಯ ಮೇಲೆ 1200 ಮೀಟರ್ ಎತ್ತರದಿಂದ ಸುರಿಯುತ್ತದೆ. ನಿಜವಾಗಿ, ಒಂದು ಮಳೆ ಬಿಂದುವಿನಷ್ಟೇ ಭಾರದ ಕಲ್ಲೋ ಅಥವಾ ಇನ್ನಾವುದಾದರೂ ವಸ್ತೋ ಅಷ್ಟೇ ಎತ್ತರದಿಂದ ಭೂಮಿಗೆ ಬೀಳುವುದಾದರೆ ಅದರ ವೇಗ ಗಂಟೆಗೆ 558 ಕಿಲೋ ಮೀಟರ್ ಆಗಿರುತ್ತದೆ. ಇಷ್ಟು ವೇಗದಿಂದ ಮಳೆ ಬಂದು ಭೂಮಿಗೆ ಬಿದ್ದರೆ ಖಂಡಿತ ಬೆಳೆಗಳು ನಾಶವಾದೀತು. ಮನುಷ್ಯರಿಗೆ ಗಂಭೀರ ಗಾಯಗಳಾದಾವು. ಮನೆಗಳಿಗೂ ಹಾನಿಯಾದೀತು. ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಳ್ಳದೇ ಯಾವೊಬ್ಬ ಮನುಷ್ಯನಿಗೂ ಮನೆಯಿಂದ ಹೊರಬರಲು ಸಾಧ್ಯವಿಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಆದ್ದರಿಂದಲೇ, ಮಳೆ ಭೂಮಿಗೆ 8-10 ಕಿಲೋ ಮೀಟರ್ ವೇಗದಲ್ಲಷ್ಟೇ ಬೀಳುತ್ತದೆ. ಅದಕ್ಕೊಂದು ನಿಯಂತ್ರಣವನ್ನು ಮತ್ತು ನಿಶ್ಚಿತ ಪ್ರಮಾಣವನ್ನು ಪ್ರಕೃತಿಯೇ (ಪವಿತ್ರ ಕುರ್‍ಆನ್: 43: 11) ಅಳವಡಿಸಿಬಿಟ್ಟಿದೆ. ಈ ಕಾರಣದಿಂದಲೇ ಮಳೆ ಸುರಿದ ಕೂಡಲೇ ಒಣಗಿದ ಭೂಮಿ ಮತ್ತೆ ಜೀವ ಪಡೆಯುವುದು ಮತ್ತು ಹಚ್ಚಹಸಿರಾಗುವುದು (ಪವಿತ್ರ ಕುರ್‍ಆನ್: 22: 63, 30: 24). ಆದರೆ ನಮ್ಮ ಸ್ಥಿತಿ ಹೇಗಿದೆಯೆಂದರೆ, ಮಳೆಗಾಲ ಮುಗಿದ ಬಳಿಕ, ಮಳೆ ನೀರು ಹರಿದು ಹೋಗುವ ತೋಡು, ಚರಂಡಿಗಳನ್ನೆಲ್ಲ ಎಷ್ಟು ಸಾಧ್ಯವೋ ಅಷ್ಟು ಕೆಡಿಸಿ ಬಿಡುತ್ತೇವೆ. ಅವುಗಳನ್ನೇ ಒತ್ತುವರಿ ಮಾಡಿಕೊಂಡು ಕಟ್ಟಡ ಕಟ್ಟುತ್ತೇವೆ. ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸುಟು, ಸೊಳ್ಳೆಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತೇವೆ. ದುರ್ಬಲ ಗುಡಿಸಲುಗಳಲ್ಲಿ ಬದುಕುವ ಬಡವರಿಗೆ ಸೂಕ್ತ ಸೂರಿನ ವ್ಯವಸ್ಥೆ ಮಾಡುವ ಹೊಣೆಗಾರಿಕೆ ಸರಕಾರದ್ದಾದರೂ ಅದು ನುಣುಚಿಕೊಳ್ಳುತ್ತದೆ. ಅಂದಹಾಗೆ, ಮರಗಳು, ವಿದ್ಯುತ್ ತಂತಿಗಳು, ರಸ್ತೆಗಳು.. ಇವೆಲ್ಲದರ ರಕ್ಷಣೆ ಯನ್ನು ಮಳೆ ವಹಿಸಿಕೊಂಡಿಲ್ಲವಲ್ಲ. ರಸ್ತೆಯನ್ನು ಸಂಚಾರಕ್ಕೆ ಯೋಗ್ಯವಾಗಿ ಮಾಡಿಡಬೇಕಾದ ಹೊಣೆಯಾದರೂ ಯಾರದ್ದು, ಮಳೆಯದ್ದೇ? ಉರುಳಿ ಬೀಳಬಹುದಾದ ಮರಗಳನ್ನು ಕತ್ತರಿಸುವ ಕೆಲಸವನ್ನು ಮಳೆಗೆ ವಹಿಸಿಕೊಡಲಾಗಿದೆಯೇ?
   ನಿಜವಾಗಿ, ಮಳೆಗಾಲದಲ್ಲಿ ಮಳೆಯ ಮೇಲೆ ಏನೆಲ್ಲ ಆರೋಪಗಳನ್ನು ಹೊರಿಸಲಾಗುತ್ತದೋ ಆ ಎಲ್ಲ ಆರೋಪಗಳ ಹಿಂದೆ ಆರೋಪಿಸುವವರದ್ದೇ  ದೊಡ್ಡ ಪಾತ್ರವಿದೆ. ತಮ್ಮ ಅಪರಾಧವನ್ನು ಮುಚ್ಚಿಡುವುದಕ್ಕಾಗಿಯೇ ಮಳೆಯನ್ನು ಅವರು ಕಟಕಟೆಯಲ್ಲಿ ನಿಲ್ಲಿಸುತ್ತಿದ್ದಾರೆ. ಒಂದು ವೇಳೆ ಮಳೆ ರವಾನಿಸುವ ಸೂಚನೆಗೆ ಅವರೆಲ್ಲ ತುಸು ಸ್ಪಂದಿಸಿರುತ್ತಿದ್ದರೂ, 'ಮಳೆಯಿಂದಾಗಿ ಹಾನಿ, ಮಳೆಯಿಂದಾಗಿ ಸಾವು..' ಎಂಬೆಲ್ಲ ಸಂದರ್ಭಗಳು ಸೃಷ್ಟಿಯಾಗದಂತೆ ನೋಡಿಕೊಳ್ಳಬಹುದಿತ್ತು. ಮಳೆಯನ್ನು ಪ್ರೀತಿಯಿಂದ ಸ್ವಾಗತಿಸುವಂಥ ವಾತಾವರಣವನ್ನು ನಿರ್ಮಿಸಬಹುದಿತ್ತು. ಮಳೆಯೆಂಬುದು ಭೂಮಿಯ ಪಾಲಿಗೆ ಎರಡ್ಮೂರು ತಿಂಗಳ ಅತಿಥಿ. ಮನುಷ್ಯರ ಒಟ್ಟು ಬದುಕಿನ ವಿಧಾನವನ್ನೇ ಬದಲಿಸುವ, ರಮ್ಯ ಭಾವನೆಗಳನ್ನು ಹುಟ್ಟು ಹಾಕುವ, ಪರಿಸರವನ್ನು ಹಚ್ಚಹಸಿರಾಗಿಸುವ ಈ ಅತಿಥಿ, ಯಾವತ್ತೂ ಮನುಷ್ಯ ವಿರೋಧಿ ಆಗಿರಲು ಸಾಧ್ಯವೇ ಇಲ್ಲ. ಮಳೆಯ ಸುತ್ತ ಸಾವಿರಾರು ಕತೆ, ಕವನ, ಕಾದಂಬರಿಗಳು ನಿರ್ಮಾಣವಾಗಿವೆ. ಬಾಲ್ಯದಲ್ಲಿ ಕಾಗದದ ದೋಣಿಯನ್ನು ನೀರಿನಲ್ಲಿ ಹರಿಸಿ ಖುಷಿಪಟ್ಟವರೇ ನಾವೆಲ್ಲ. ಮಕ್ಕಳ ಪಾಲಿಗೆ ಈಗಲೂ ಕೂಡ ಮಳೆಯೆಂದರೆ ಖುಷಿಯೇ. ಅದು ಅವರ ಪಾಲಿನ ಆತ್ಮೀಯ ಅತಿಥಿ. ಆದರೆ ಮನುಷ್ಯ ಬೆಳೆಯುತ್ತಾ ಎಷ್ಟು ಬದಲಾದನೆಂದರೆ ತನ್ನೆಲ್ಲ ವೈಫಲ್ಯಗಳನ್ನು ದುರ್ಬಲರ ಮೇಲೆ ಹೊರಿಸತೊಡಗಿದ. ಆಡಳಿತದ ಮಂದಿ ಇವತ್ತು ಮಳೆಯನ್ನು ದೂರುವುದು ಈ ಆಧಾರದಲ್ಲೇ. ಒಂದು ವೇಳೆ ಮಳೆಗಾಲದಲ್ಲಿ ಸಾವಿಗೀಡಾಗುವವರು, ಕಾಯಿಲೆ ಬೀಳುವವರೆಲ್ಲ  ಮಳೆಯಂತೆ ಬಾಯಿ ಬಾರದವರು ಆಗಿರುತ್ತಿದ್ದರೆ, ಅವರನ್ನೂ ಈ ವ್ಯವಸ್ಥೆ ಆರೋಪಿ ಸ್ಥಾನದಲ್ಲಿ ಕೂರಿಸುತ್ತಿತ್ತೋ ಏನೋ? ಆದ್ದರಿಂದ ಮಳೆಯನ್ನು ದೂರುವುದಕ್ಕಿಂತ ನಮ್ಮ ನಮ್ಮ ದುರಾಸೆಯನ್ನು ದೂರೋಣ. ತಪ್ಪುಗಳನ್ನು ತಿದ್ದಿಕೊಂಡು ಸೂಕ್ತ ತಯಾರಿಯೊಂದಿಗೆ ಅತಿಥಿಯನ್ನು ಸ್ವಾಗತಿಸೋಣ.

Monday, 20 May 2013

ಮಾರ್ಗ ಮಧ್ಯೆ ಸಾವಿಗೀಡಾಗುವ ‘ಶಂಕಿತರು’?

ಖಾಲಿದ್ ಮುಜಾಹಿದ್
    ಭಯೋತ್ಪಾದಕರ ಬಗ್ಗೆ; ಅವರ ಉಡುಪು, ಅಡಗುತಾಣ, ಸಂಚುಗಳ ಕುರಿತಂತೆ ಖಾಲಿದ್ ಮುಜಾಹಿದ್ ಮತ್ತು ಲಿಯಾಕತ್ ಷಾ ಎಂಬಿಬ್ಬರು ವ್ಯಕ್ತಿಗಳು ಈ ದೇಶದ ಮುಂದೆ ಕೆಲವು ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ಆದರೆ,  ಈ ಪ್ರಯತ್ನದಲ್ಲಿ ಖಾಲಿದ್ ಮೃತಪಟ್ಟು ಲಿಯಾಕತ್  ಷಾ ಸುರಕ್ಷಿತವಾಗಿ ಮನೆ ತಲುಪಿದ್ದಾನೆ. ಪ್ರಕರಣ ಎಷ್ಟು ಗಂಭೀರವಾದುದೆಂದರೆ, ಮೇ 20ರಂದು ದಿ ಹಿಂದೂ ಇವರ ಮೇಲೆ ಸಂಪಾದಕೀಯ ಬರೆದಿದೆ. ಉತ್ತರ ಪ್ರದೇಶ ಸರಕಾರವು ಖಾಲಿದ್‍ನ ಸಾವಿನ ತನಿಖೆಯನ್ನು ಸಿಬಿಐಗೆ ವಹಿಸಿಕೊಟ್ಟಿದೆ. ಪೊಲೀಸರು ಮತ್ತು ಹಿರಿಯ ಅಧಿಕಾರಿಗಳ ಸಹಿತ 42 ಮಂದಿಯ ವಿರುದ್ಧ, ಕೊಲೆ, ಕೊಲೆ ಸಂಚುಗಳ ಆರೋಪ ಪಟ್ಟಿಯನ್ನು (FIR) ದಾಖಲಿಸಲಾಗಿದೆ.
   2007ರಲ್ಲಿ ಉತ್ತರ ಪ್ರದೇಶದ ಗೋರಖ್‍ಪುರ್, ಲಕ್ನೋ, ಫೈಝಾಬಾದ್ ಕೋರ್ಟ್ ಆವರಣದಲ್ಲಿ ಸರಣಿ ಬಾಂಬ್ ಸ್ಫೋಟಗಳು ನಡೆದಿದ್ದುವು. 2007 ಡಿಸೆಂಬರ್ 20ರಂದು ಉತ್ತರ ಪ್ರದೇಶದ ವಿಶೇಷ ಪೊಲೀಸ್ ದಳದ ಅಧಿಕಾರಿಗಳು ಖಾಲಿದ್ ಮುಜಾಹಿದ್‍ನನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿ, ಬರಬಂಕಿ ರೈಲ್ವೆ ನಿಲ್ದಾಣದ ಬಳಿ ಸ್ಫೋಟಕಗಳೊಂದಿಗೆ ಈತನನ್ನು ಬಂಧಿಸಿರುವುದಾಗಿ ಹೇಳಿಕೊಂಡಿದ್ದರು. ಆದರೆ ಖಾಲಿದ್‍ನ ಕುಟುಂಬ ಆರಂಭದಿಂದಲೂ ಇದನ್ನು ಕಟ್ಟುಕತೆ ಅಂದಿತ್ತು. ಖಾಲಿದ್ ಒಳಸಂಚಿಗೆ ಬಲಿಯಾಗಿದ್ದಾನೆ ಎಂದು ವಾದಿಸಿತ್ತು. ಆದ್ದರಿಂದಲೇ, ಮಾಯಾವತಿಯವರ ಸರಕಾರವು ಪ್ರಕರಣವನ್ನು ತನಿಖಿಸುವುದಕ್ಕಾಗಿ ನಿಮೇಶ್ ಆಯೋಗವನ್ನು ರಚಿಸಿತ್ತು. ಅದು, ಖಾಲಿದ್‍ನ ಮೇಲೆ ಹೊರಿಸಲಾಗಿರುವ ಆರೋಪಗಳು ಸುಳ್ಳಾಗಿದ್ದು, ಆತನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಎಂದು ಬಲವಾಗಿ ವಾದಿಸಿತು. ಇದನ್ನನುಸರಿಸಿಯೇ ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್‍ರು, ಖಾಲಿದ್‍ನನ್ನು ಆರೋಪಮುಕ್ತಗೊಳಿಸಿ ಬಿಡುಗಡೆಗೊಳಿಸುವಂತೆ ಫೈಝಾಬಾದ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ, ಮೇ 10ರಂದು ನ್ಯಾಯಾಲಯ ಈ ಮನವಿಯನ್ನು ತಿರಸ್ಕರಿಸಿತ್ತು. ಇದರ ವಿರುದ್ಧ ಹೈಕೋರ್ಟ್ ಮೆಟ್ಟಲೇರಲು ಸರಕಾರ ತೀರ್ಮಾನಿಸಿರುವಂತೆಯೇ, ಮೊನ್ನೆ  ಮೇ 18ರಂದು ಫೈಝಾಬಾದ್ ನ್ಯಾಯಾಲಯದಿಂದ ಲಕ್ನೋ ಜೈಲಿಗೆ ಪೊಲೀಸರ ಜೊತೆ ಸಾಗುವಾಗ ದಾರಿ ಮಧ್ಯೆ ಆತ ಮೃತಪಟ್ಟಿದ್ದಾನೆ.
   ಭಯೋತ್ಪಾದನೆಯು ಈ ದೇಶದಲ್ಲಿ ಅಸಂಖ್ಯ ಬಾರಿ ಚರ್ಚೆಗೊಳಗಾಗಿದೆ. 10 ವರ್ಷಗಳ ಹಿಂದೆ ಈ ಚರ್ಚೆಯ ಧಾಟಿ, ಆರೋಪಗಳ ಗುರಿ ಹೇಗಿತ್ತೋ ಹಾಗೆ ಇವತ್ತಿಲ್ಲ. ಅಷ್ಟಕ್ಕೂ, ಇದಕ್ಕೆ ಸ್ಫೋಟ ಪ್ರಕರಣಗಳಲ್ಲಿ ಆಗಿರುವ ವ್ಯತ್ಯಾಸ ಕಾರಣ ಅಲ್ಲ. 10 ವರ್ಷಗಳ ಹಿಂದೆ ಭಯೋತ್ಪಾದನಾ ಕೃತ್ಯಕ್ಕೆ (ನಿಜವಾಗಿ ಬಾಂಬ್ ಸ್ಫೋಟವೊಂದೇ ಭಯೋತ್ಪಾದನೆ ಅಲ್ಲ) ಯಾವೆಲ್ಲ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತೋ ಬಹುತೇಕ ಅವುಗಳನ್ನೇ ಇವತ್ತೂ ಬಳಸಲಾಗುತ್ತಿದೆ. ಅವತ್ತೂ ಶಂಕಿತರಾಗಿ ಪ್ರದರ್ಶನಗೊಳ್ಳುತ್ತಿದ್ದುದು ಮನುಷ್ಯರೇ. ಇವತ್ತೂ ಮನುಷ್ಯರೇ. ಆದರೆ ಬರಬರುತ್ತಾ, ಬಾಂಬ್ ಸ್ಫೋಟಗಳು ಅನುಮಾನ ತರಿಸತೊಡಗಿದುವು. ಮುಸ್ಲಿಮ್ ಹೆಸರುಳ್ಳ, ಗಡ್ಡ, ಟೋಪಿ, ಪೈಜಾಮ ಧರಿಸಿದ ವ್ಯಕ್ತಿಗಳಿಗೆ ಮಾತ್ರ ಬಾಂಬ್ ಸ್ಫೋಟಿಸಲು ಸಾಧ್ಯ ಎಂದು ಬಲವಾಗಿ ನಂಬಿದ್ದ ಮುಗ್ಧ ಭಾರತೀಯರನ್ನು ಸಾಧ್ವಿಗಳು, ಪುರೋಹಿತ್‍ಗಳು ಬೆಚ್ಚಿ ಬೀಳಿಸಿದರು. ಆ ಬಳಿಕ ಭಡ್ತಿಗಾಗಿ, ಪರಮ ವೀರ ಚಕ್ರಕ್ಕಾಗಿ ಪೊಲೀಸರು ಹೇಗೆ ನಕಲಿ ಭಯೋತ್ಪಾದಕರನ್ನು ಸೃಷ್ಟಿಸುತ್ತಾರೆ ಅನ್ನುವುದು ಇಶ್ರತ್ ಜಹಾನ್ ಘಟನೆಯ ಸಹಿತ ಕೆಲವಾರು ಪ್ರಕರಣಗಳು ಮನದಟ್ಟು ಮಾಡಿದುವು. ಖಾಲಿದ್ ಮುಜಾಹಿದ್‍ನ ಸುತ್ತ ಹಬ್ಬಿರುವುದೂ ಇಂಥ ಅನುಮಾನಗಳೇ. ರಾಜ್ಯ ಸರಕಾರ ಹೈಕೋರ್ಟ್ ಮೆಟ್ಟಲೇರಿ ಆತನನ್ನು ಬಿಡುಗಡೆಗೊಳಿಸಿಕೊಂಡರೆ ಮುಂದೆ ಆತ ಪೊಲೀಸ್ ಭಯೋತ್ಪಾದನೆಗೆ  ಪ್ರಬಲ ಸಾಕ್ಷಿಯಾಗಬಹುದು ಎಂಬುದನ್ನು ಮನಗಂಡೇ ಆತನನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇಲ್ಲದಿದ್ದರೆ, ಆರೋಗ್ಯವಂಥ ಯುವಕನೊಬ್ಬ ಕೋರ್ಟು ಮತ್ತು ಜೈಲಿನ ನಡುವಿನ ಹಾದಿಯ ಮಧ್ಯೆ ಸಾವಿಗೀಡಾಗುವುದೆಂದರೇನು? ಕಳೆದ ಮಾರ್ಚ್ 20ರಂದು ನೇಪಾಳದ ಗಡಿಯಿಂದ ಲಿಯಾಕತ್ ಷಾನನ್ನು ಬಂಧಿಸಿದ ದೆಹಲಿ ಪೊಲೀಸರು ಹೇಳಿದ್ದೂ ಭಯೋತ್ಪಾದಕ ಕಥೆಯನ್ನೇ ಅಲ್ಲವೇ? ಹೋಳಿಯ ಸಂದರ್ಭದಲ್ಲಿ ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಲು ಆತ ಸಂಚು ನಡೆಸಿದ್ದ ಎಂಬ ದೆಹಲಿ ಪೊಲೀಸರ ಆರೋಪ ನಿಜವೇ ಆಗಿದ್ದರೆ, ಕೇಂದ್ರ ತನಿಖಾ ತಂಡ ಆತನನ್ನು ನಿರ್ದೋಷಿ ಎಂದದ್ದೇಕೆ? ಜಾಮೀನಿನಲ್ಲಿ ಕೋರ್ಟು ಕಳೆದ ವಾರ ಬಿಡುಗಡೆಗೊಳಿಸಿದ್ದೇಕೆ? ಅಂದಹಾಗೆ, ಆತ ಕಾಶ್ಮೀರದ ಪ್ರತ್ಯೇಕತಾ ಹೋರಾಟಗಾರ ಎಂಬುದು ನಿಜ. ಕಳೆದ 15 ವರ್ಷಗಳಿಂದ ಆತ ಇದ್ದದ್ದೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ. ಆದರೆ, ಶರಣಾಗತ ಹೋರಾಟಗಾರರಿಗೆ ಕ್ಷಮೆ ಮತ್ತು ಪುನರ್ವಸತಿ ನೀಡಲಾಗುತ್ತದೆಂಬ ಕಾಶ್ಮೀರಿ ಸರಕಾರದ ವಾಗ್ದಾನವನ್ನು ನಂಬಿ, ಪತ್ನಿ-ಮಕ್ಕಳೊಂದಿಗೆ ಭಾರತಕ್ಕೆ ಬರುತ್ತಿದ್ದಾಗ ಈತನನ್ನು ಅಪಹರಿಸಿದ ದೆಹಲಿ ಪೊಲೀಸರು, ಬಳಿಕ ಸುಳ್ಳು ಕತೆ ಸೃಷ್ಟಿಸಿದ್ದರು ಎಂಬುದನ್ನಲ್ಲವೇ ಆತನ ಬಿಡುಗಡೆ ಸಾಬೀತುಪಡಿಸುತ್ತಿರುವುದು?
   ನಿಜವಾಗಿ, ಭಯೋತ್ಪಾದಕರ ಕುರಿತಂತೆ ನಡೆಸಲಾಗುವ ಸಿದ್ಧ ಮಾದರಿಯ (Stereo Typed ) ಚರ್ಚೆಗೆ ತಿರುವು ಕೊಟ್ಟ ಇತ್ತೀಚಿನ ಎರಡು ಸಂಕೇತಗಳಾಗಿ ಖಾಲಿದ್ ಮತ್ತು ಲಿಯಾಕತ್‍ರನ್ನು ಸ್ಮರಿಸಿಕೊಳ್ಳಬೇಕಾಗಿದೆ. ಒಂದು ವೇಳೆ, ಲಿಯಾಕತ್‍ನ ಪ್ರಕರಣವನ್ನು ದೆಹಲಿ ಪೊಲೀಸರ ಕೈಯಿಂದ ಕಿತ್ತು ಕೇಂದ್ರೀಯ ತನಿಖಾ ದಳಕ್ಕೆ ಕೇಂದ್ರ ಸರಕಾರವು ವಹಿಸದೇ ಇರುತ್ತಿದ್ದರೆ, ಒಂದು ದಿನ ಆತನೂ ಮಾರ್ಗ ಮಧ್ಯದಲ್ಲಿ ಸಾವಿಗೀಡಾಗುವ ಸರ್ವ ಸಾಧ್ಯತೆಯೂ ಇತ್ತು. ಇಲ್ಲದಿದ್ದರೆ, ನಾಗರಾಜ ಜಂಬಗಿ ಯಂತೆ, ಸಿದ್ದಿಕಿಯಂತೆ ಸಹಕೈದಿಗಳಿಂದ ಹಲ್ಲೆಗೀಡಾಗಿ ಜೈಲಿನಲ್ಲೇ ಕೊನೆಯುಸಿರೆಳೆಯುವುದಕ್ಕೂ ಸಾಧ್ಯವಿತ್ತು.  ಈ ಹಿನ್ನೆಲೆಯಲ್ಲಿ ಖಾಲಿದ್ ಎಂಬ ಶಂಕಿತನ ಸುತ್ತ ಹುಟ್ಟಿಕೊಂಡಿರುವ ಅನುಮಾನಗಳ ಪರದೆಯನ್ನು ಸರಿಸಲೇಬೇಕಾಗಿದೆ. ಆತನ ಸಾವು; ವ್ಯವಸ್ಥೆಯ ಭಯೋತ್ಪಾದನೆಯು ಬಹಿರಂಗಗೊಳ್ಳುವುದಕ್ಕೆ ಹೇತುವಾಗಬೇಕಾಗಿದೆ. ಶಂಕಿತ ಹಣೆಪಟ್ಟಿಯನ್ನು ಹಚ್ಚಿಕೊಂಡು ವಿಚಾರಣೆಯೂ ಇಲ್ಲದೇ ಜೈಲಿನಲ್ಲಿ ಕೊಳೆಯುತ್ತಿರುವ ಅಮಾಯಕರ ಕುರಿತಂತೆ ಗಂಭೀರ ಚರ್ಚೆಗೆ, ಅವರನ್ನು ಆಕಸ್ಮಿಕ ಸಾವಿನಿಂದ ತಡೆಯುವುದಕ್ಕೆ ಖಾಲಿದ್‍ನ ಸಾವು ಎಚ್ಚರಿಕೆಯಾಗಿ ಬಳಕೆಯಾಗಬೇಕಾಗಿದೆ. ನಿಜವಾಗಿ, ಓರ್ವ 'ಶಂಕಿತ'ನ ಸಾವು ನೂರಾರು ಶಂಕಿತರ ಮುಗ್ಧತೆಯನ್ನು ಸಾಬೀತುಪಡಿಸುವುದಕ್ಕೆ ನೆರವಾಗುವುದಾದರೆ ಮತ್ತು ಅವರನ್ನು ಶಂಕಿತಗೊಳಿಸಿದ ನಿಜವಾದ ಭಯೋತ್ಪಾದಕರ ಮುಖವನ್ನು ಈ ದೇಶಕ್ಕೆ ಪರಿಚಯಿಸುವುದಾದರೆ ಖಾಲಿದ್ ಸಾವಿನಲ್ಲೂ ಗೆದ್ದಿದ್ದಾನೆ ಎಂದೇ ಹೇಳಬೇಕು.

Monday, 13 May 2013

ಧೋನಿ, ತೆಂಡುಲ್ಕರ್‍ಗಳನ್ನು ಬೆತ್ತಲೆಗೊಳಿಸಿದ ಎಳಸು ಕ್ರಿಕೆಟಿಗ

   ಚಿಯರ್‍ ಗರ್ಲ್ಸ್ ಗಳು; ಬೌಂಡರಿ, ಸಿಕ್ಸರ್‍ಗಳು; ಧೋನಿ, ಕೋಹ್ಲಿಗಳೇ ಸುದ್ದಿ ಮಾಡುತ್ತಿರುವ ಐಪಿಎಲ್ ಕ್ರಿಕೆಟ್‍ಗೆ ಪರ್ವೇಝ್ ರಸೂಲ್ ಅನ್ನುವ ಅಪರಿಚಿತ ಯುವಕನೊಬ್ಬ ಪುಟ್ಟದೊಂದು ತಿರುವು ಕೊಟ್ಟಿದ್ದಾನೆ. ಸಮಾಜದ ಬಗ್ಗೆ ಕಳಕಳಿಯುಳ್ಳ ಯಾರಿಗೆ ಆಗಲಿ, ಈ ತಿರುವು ಬಹಳ ಮಹತ್ವಪೂರ್ಣವಾದದ್ದು. ಮುಂದಿನ ದಿನಗಳಲ್ಲಿ ಗಂಭೀರ ಚರ್ಚೆಯೊಂದರ ಹುಟ್ಟಿಗೆ ಕಾರಣವಾಗುವಷ್ಟು ಪ್ರಭಾವಶಾಲಿಯಾದದ್ದು. ಇಷ್ಟಕ್ಕೂ; ತೆಂಡುಲ್ಕರ್, ಸೆಹ್ವಾಗ್‍ರಂತೆ ಈತನೂ ಓರ್ವ ಕ್ರಿಕೆಟಿಗನೇ. ಆದರೆ, ಅವರಂತೆ ಕ್ರಿಕೆಟಿಗಾಗಿ ಮೌಲ್ಯವನ್ನು ಕೈ ಬಿಡಲು ತಾನು ಸಿದ್ಧವಿಲ್ಲ ಎಂದು ಘೋಷಿಸಿದ್ದಾನೆ. ಐಪಿಎಲ್ ಅಂಕಪಟ್ಟಿಯಲ್ಲಿ ತಳಮಟ್ಟದಲ್ಲಿರುವ ಪುಣೆ ವಾರಿಯರ್ಸ್ ತಂಡದ ಸದಸ್ಯನಾಗಿರುವ ಈತ, ‘ಮದ್ಯ ಕಂಪೆನಿಯ ಲೋಗೋ (ಚಿಹ್ನೆ) ಉಳ್ಳ ಜೆರ್ಸಿ(ಟೀಶರ್ಟ್)ಯನ್ನು ಧರಿಸಿ ಆಡಲಾರೆ, ಅದು ನನ್ನ ಧರ್ಮಕ್ಕೆ ವಿರುದ್ಧ’ ಅಂದಿದ್ದಾನೆ. ಮಾತ್ರವಲ್ಲ, ಲೋಗೋ ಗೋಚರಿಸದಂತೆ ಅದರ ಮೇಲೆ  ಪಟ್ಟಿಯನ್ನು ಅಂಟಿಸಿಯೇ ಮೈದಾನಕ್ಕೆ ಇಳಿದಿದ್ದಾನೆ. ಒಂದು ರೀತಿಯಲ್ಲಿ, ಇದು ಧೋನಿ, ಕೋಹ್ಲಿ, ತೆಂಡುಲ್ಕರ್‍ಗಳಿಗೆ ಈ ಎಳಸು ಕ್ರಿಕೆಟಿಗ ಕೊಟ್ಟ ಕಪಾಲಮೋಕ್ಷವೂ ಹೌದು.
   ಐಪಿಎಲ್‍ನ ಸುತ್ತ ಈಗಾಗಲೇ ಧಾರಾಳ ಚರ್ಚೆಗಳು ನಡೆದಿವೆ. ನವಜೋತ್ ಸಿಂಗ್ ಸಿದ್ದುರ ಮಂಗಚೇಷ್ಟೆಗಳು; ಗವಾಸ್ಕರ್, ಜಡೇಜಾರ ಗಿಲೀಟಿನ ಮಾತುಗಳು ಅತಿ ಅನ್ನಿಸುವಷ್ಟು ಟಿ.ವಿ.ಗಳಲ್ಲಿ ತುಂಬಿಕೊಂಡಿವೆ. ಆದರೆ ಇವರಾರೂ ಐಪಿಎಲ್ ಅನ್ನು ಆಳುವ ಮದ್ಯದ ಬಗ್ಗೆ, ಹರಿದಾಡುವ ದುಡ್ಡಿನ ಬಗ್ಗೆ ಈ ವರೆಗೂ ಮಾತಾಡಿಲ್ಲ. ಬಿಸಿಸಿಐಗೆ ಎದುರಾಗಿ ಐಸಿಎಲ್ ಅನ್ನು ಹುಟ್ಟು ಹಾಕಿ ಬಂಡಾಯ ಸಾರಿದ್ದ ಕಪಿಲ್ ದೇವ್‍ರಂಥ ಸ್ವಾಭಿಮಾನಿಯೇ ಇವತ್ತು ಕಾಂಚಾಣದೆದುರು ಕುಣಿಯುತ್ತಿ ದ್ದಾರೆ. ಇಂಥ ಹೊತ್ತಲ್ಲಿ ಸಚಿನ್, ಧೋನಿ, ಕೋಹ್ಲಿಗೆ ಹೋಲಿಸಿದರೆ ಏನೇನೂ ಅಲ್ಲದ, ಅವರ ಒಂದು ಶೇಕಡಾದಷ್ಟೂ 'ಬೆಲೆ' ಬಾಳದ ಯುವ ಕ್ರಿಕೆಟಿಗನೊಬ್ಬ ಕ್ರಿಕೆಟ್‍ನಲ್ಲೂ ಮೌಲ್ಯದ ಬಗ್ಗೆ ಮಾತಾಡುವುದೆಂದರೆ ಅದೇಕೆ ಸಣ್ಣ ಸಂಗತಿಯಾಗಬೇಕು? ಪುಣೆ ವಾರಿಯರ್ಸ್ ತಂಡ ರಸೂಲ್ ನನ್ನು ಖರೀದಿಸಿದ್ದು ಕೆಲವು ಲಕ್ಷಗಳಿಗೆ. ‘ಧೋನಿಗಳಿಗೆ’ ಹೋಲಿಸಿದರೆ ಈ ದುಡ್ಡು ತೀರಾ ಜುಜುಬಿ. ಅಷ್ಟಕ್ಕೂ, ಧೋನಿಯಂತೆ ರಸೂಲ್ ಪುಣೆ ವಾರಿಯರ್ಸ್ ನ  ಅನಿವಾರ್ಯ ಆಟಗಾರನೇನೂ ಅಲ್ಲ. ಆತ ಈ ವರೆಗೆ ಆಡಿದ್ದೇ ಒಂದು ಪಂದ್ಯ. (ಈವರೆಗೆ ಆಡಿಸದೇ ಇರುವುದಕ್ಕೆ ಆತನ ಮದ್ಯ ತಕರಾರು ಕಾರಣವಾಗಿರಬಹುದೇನೋ) ತಂಡದ ನಿಯಮ, ಉದ್ದೇಶ, ಒಪ್ಪಂದಗಳ ಬಗ್ಗೆ ತಕರಾರು ಎತ್ತಿ ದಕ್ಕಿಸಿಕೊಳ್ಳುವಷ್ಟು ಪ್ರಭಾವಶಾಲಿ ಆಟಗಾರನೂ ಆತನಲ್ಲ. ಆದರೂ ಆತ ತಂಡದ ಧೋರಣೆಯ ವಿರುದ್ಧ ಮಾತನಾಡಿದ್ದಾನೆಂದರೆ, ಅದನ್ನು ಅಭಿನಂದಿಸಲೇಬೇಕು. ನಿಜವಾಗಿ, ಇನ್ನೂ ಅಂತಾರಾಷ್ಟ್ರೀಯ ಮಟ್ಟದ ಪಂದ್ಯವನ್ನಾಡದ ಕ್ರಿಕೆಟಿಗನೊಬ್ಬ ಜಾಹೀರಾತುದಾರರ ವಿರುದ್ಧ ಮಾತಾಡುವುದೆಂದರೆ ಕೆರಿಯರ್‍ಗೇ ಧಕ್ಕೆ ತಂದಂತೆ. ಮದ್ಯ ಎಂಬುದು ಇವತ್ತು ಈ ದೇಶದ ಎಲ್ಲ ಕ್ಷೇತ್ರವನ್ನೂ ಆಳುವಷ್ಟು ಪ್ರಭಾವಶಾಲಿಯಾಗಿದೆ. ಬಿಸಿಸಿಐಯ ಪ್ರಮುಖ ಆದಾಯ ಮೂಲವೇ ಮದ್ಯದ ದುಡ್ಡು. ಐಪಿಎಲ್ ಅಂತೂ ಮದ್ಯದ ಜಾಹೀರಾತಿನಿಂದಲೇ ಬದುಕುತ್ತಿದೆ. ಹೀಗಿರುವಾಗ ಈಗಷ್ಟೇ ಕಣ್ಣು ಬಿಡುತ್ತಿರುವ ಕಾಶ್ಮೀರಿ ಕ್ರಿಕೆಟಿಗನೊಬ್ಬ 'ಮದ್ಯ'ದ ವಿರುದ್ಧ ಮಾತಾಡಿದರೆ ಆತ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಬಲ್ಲನೇ? ಆತನ ಬೌಲಿಂಗ್ ಶೈಲಿಯನ್ನೋ ಫಾರ್ಮನ್ನೋ ನೆಪವಾಗಿಸಿ ರಾಷ್ಟ್ರೀಯ ತಂಡದಿಂದ ದೂರ ಇಡಲು ಮದ್ಯ ಕಂಪೆನಿಗಳು ಸಂಚು ನಡೆಸಲಾರವೇ?
   ನಿಜವಾಗಿ, 'ಧರ್ಮ ಮನೆಯಲ್ಲಿರಲಿ' ಎಂದು ಪ್ರತಿಪಾದಿಸುವ ಸರ್ವರನ್ನೂ ರಸೂಲ್ ತನ್ನ ನಿಲುವಿನ ಮುಖಾಂತರ ತರಾಟೆಗೆ ಎತ್ತಿಕೊಂಡಿದ್ದಾನೆ. ಸಚಿನ್, ಧೋನಿಗಳೆಲ್ಲ ತಮ್ಮ ಧರ್ಮವನ್ನು ಮನೆಯಲ್ಲಿಟ್ಟಿರುವುದರಿಂದಲೇ ಅವರಿಗೆ ಮದ್ಯವನ್ನು ಪ್ರಚಾರ ಮಾಡಲು ಸಾಧ್ಯವಾಗುತ್ತಿರುವುದು. ಅಂದಹಾಗೆ, ಇವತ್ತು ಅತ್ಯಾಚಾರ, ಭ್ರಷ್ಟಾಚಾರ, ಹಿಂಸೆ, ಮೋಸಗಳೆಲ್ಲ ನಡೆಯುತ್ತಿರುವುದಕ್ಕೆ ಧರ್ಮ ವನ್ನು ಮನೆಯಲ್ಲಿಟ್ಟಿರುವುದೇ ಕಾರಣವಲ್ಲವೇ? ಒಂದು ವೇಳೆ ರಸೂಲ್ ತನ್ನ ಧರ್ಮವನ್ನು ಮನೆಯಲ್ಲೇ ಬಿಟ್ಟು ಬರುತ್ತಿದ್ದರೆ, ಆತನಿಗೆ ಮದ್ಯದ ವಿರುದ್ಧ ಮಾತೆತ್ತಲು ಸಾಧ್ಯವಿತ್ತೇ? ಧೋನಿ, ತೆಂಡುಲ್ಕರ್‍ಗಳೆಲ್ಲ ಇವತ್ತು ಮದ್ಯದ ವಿರುದ್ಧ ಮಾತಾಡದಂಥ ಸ್ಥಿತಿಯಲ್ಲಿರುವುದು, ಅವರು 'ಧರ್ಮ' ವನ್ನು ಮನೆಯಲ್ಲಿಟ್ಟು ಬಂದುದೇ ತಾನೇ. ಧರ್ಮವನ್ನು ಮನೆಯಲ್ಲಿ ಕಳಚಿಡದೇ ತನ್ನ ಜೊತೆಗೇ ಒಯ್ದ ರಸೂಲ್ ಎಂಬ ಮರಿ ಕ್ರಿಕೆಟಿಗನನ್ನು ಅವನ ಧರ್ಮವು ಮದ್ಯದ ವಿರುದ್ಧ; ತನ್ನ ಕೆರಿಯರ್, ದುಡ್ಡು, ಭವಿಷ್ಯವನ್ನು ಲೆಕ್ಕಿಸದೆಯೇ ಮಾತಾಡುವಂತೆ ಪ್ರಚೋದಿಸುವಾಗ, ಧರ್ಮವನ್ನು ಮನೆಯಲ್ಲಿಟ್ಟು ಬಂದ ಕೋಹ್ಲಿ, ತೆಂಡುಲ್ಕರ್‍ಗಳನ್ನು ಮದ್ಯ ಬಾಯಿ ಕಟ್ಟಿಸುತ್ತದೆ. ಇವೆರಡೂ ರವಾನಿಸುವ ಸಂದೇಶವಾದರೂ ಏನು? ಧರ್ಮವನ್ನು ಜೊತೆಗೊಯ್ದ ವ್ಯಕ್ತಿ ಕೆಡುಕಿನ ವಿರುದ್ಧ ಮುಲಾಜಿಲ್ಲದೇ ಮಾತಾಡುತ್ತಾನೆ ಎಂದಲ್ಲವೇ? ಇಷ್ಟಕ್ಕೂ ಈ ಕ್ರಿಕೆಟಿಗರಿಗೆ 'ಮದ್ಯ'ದಿಂದಾಗುವ ಹಾನಿಯ ಬಗ್ಗೆ ಗೊತ್ತಿಲ್ಲ ಎಂದಲ್ಲ. ಈ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳಲ್ಲಿ ಮದ್ಯಕ್ಕೆ ಪ್ರಮುಖ ಪಾತ್ರ ಇದೆ. ಆದರೆ, ಧರ್ಮ, ಮೌಲ್ಯಗಳನ್ನು ಕಟ್ಟಿಕೊಂಡು ತಾನೇಕೆ ದುಡ್ಡು ಕಳಕೊಳ್ಳಬೇಕು ಎಂಬ 'ಅಧರ್ಮ' ಅವರನ್ನೆಲ್ಲಾ ಕಟ್ಟಿಹಾಕುತ್ತಿದೆ. ಇಂಥ ಸಂದರ್ಭದಲ್ಲಿ ಜುಜುಬಿ ಕ್ರಿಕೆಟಿಗನೊಬ್ಬ ಧರ್ಮ ಕ್ಕಿಂತ ಕ್ರಿಕೆಟ್ ದೊಡ್ಡದಲ್ಲ ಎಂದು ಸಾರಿದ್ದು ಯಾಕೆ ಸಾರ್ವಜನಿಕ ಚರ್ಚೆಗೆ ಅಡಿಗಲ್ಲು ಹಾಕಬಾರದು? ಒಂದು ವೇಳೆ ರಸೂಲ್‍ನಂತೆ ತೆಂಡುಲ್ಕರೋ ಧೋನಿಯೋ ತಮ್ಮ ಧರ್ಮವನ್ನು ತಮ್ಮ ಜೊತೆಗೂ ಆಟದ ಮೈದಾನಕ್ಕೂ ತರುತ್ತಿದ್ದರೆ ಏನಾಗುತ್ತಿತ್ತು? ಮದ್ಯದ ವಿರುದ್ಧ ರಾಷ್ಟ್ರಮಟ್ಟದಲ್ಲೇ ಒಂದು ಚಳವಳಿ ಏರ್ಪಡುವುದಕ್ಕೆ ಕಾರಣವಾಗುತ್ತಿರಲಿಲ್ಲವೇ?
   ಪರ್ವೇಝ್ ರಸೂಲ್‍ನ ನಿಲುವು ಆತನ ಕೆರಿಯರ್‍ಗೆ ತೊಡಕಾಗುತ್ತದೋ ಇಲ್ಲವೋ, ಆದರೆ ಆತ ದುಡ್ಡಿಗಾಗಿ ಧರ್ಮವನ್ನು ಕೈಬಿಟ್ಟ ತೆಂಡುಲ್ಕರ್, ಝಹೀರ್‍ಗಳನ್ನೆಲ್ಲಾ ಸಾರ್ವಜನಿಕವಾಗಿ ಬೆತ್ತಲೆ ಗೊಳಿಸಿದ್ದಾನೆ. ಧರ್ಮವು ಜೊತೆಗಿದ್ದರೆ ಕೆಡುಕಿನ ವಿರುದ್ಧ ಮಾತಾಡುವುದಕ್ಕೆ ಧೈರ್ಯ ಬರುತ್ತದೆ ಎಂಬ ಸಂದೇಶ ರವಾನಿಸಿದ್ದಾನೆ. ಐಪಿಎಲ್‍ನಲ್ಲಿ ರನ್‍ಗಳ ರಾಶಿಯನ್ನೇ ಹರಿಸುತ್ತಿರುವ ಮತ್ತು ಟಿ.ವಿ.ಯಲ್ಲಿ ವಿದೂಷಕರಂತೆ ಆಡುತ್ತಿರುವ ಎಲ್ಲರೂ ರಸೂಲ್‍ನನ್ನು ಮಾದರಿಯಾಗಿ ಆಯ್ಕೆ ಮಾಡಬೇಕು. ಆಡಿದ ಪಂದ್ಯ ಒಂದೇ ಒಂದು ಆಗಿದ್ದರೂ ಒಂದುನೂರು ಪಂದ್ಯ ಆಡಿದವರಲ್ಲೂ ಇಲ್ಲದ ಮೌಲ್ಯವನ್ನು ಆತ ಪ್ರದರ್ಶಿಸಿದ್ದಾನೆ. ರಸೂಲ್‍ನಿಗೆ ಅಭಿನಂದನೆಗಳು.

Monday, 6 May 2013

ರಾಜಕಾರಣಿಗಳ ಎದುರು 'ಪಾಸ್' ಆಗುವ ವಿದ್ಯಾರ್ಥಿ

    ರಾಜಕಾರಣಿಗಳ ಫಲಿತಾಂಶಕ್ಕಿಂತ ಎರಡು ದಿನಗಳ ಮೊದಲೇ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಆದರೆ, ಪಾಸ್ ಮತ್ತು ಫೇಲನ್ನು ಜೀವನದ ಸೋಲು ಮತ್ತು ಗೆಲುವು ಎಂದು ನಂಬುವ ಮುಗ್ಧ ವಿದ್ಯಾರ್ಥಿಗಳಿಗೂ, ಸೋಲಿನಲ್ಲೂ ಎದುರಾಳಿಯ ಕೈವಾಡವನ್ನು ಶಂಕಿಸುವ ರಾಜಕಾರಣಿಗಳಿಗೂ ದೊಡ್ಡ ವ್ಯತ್ಯಾಸವಿದೆ. ಫೇಲ್ ಆದ ವಿದ್ಯಾರ್ಥಿಗಳು ಒಂದು ವಾರಗಳ ತನಕ ತಮ್ಮ ಆಪ್ತರು, ಕುಟುಂಬಿಕರು, ಗೆಳೆಯರಿಂದ ತಪ್ಪಿಸಿಕೊಂಡು ಬದುಕುತ್ತಾರೆ. ವಿಷಾದ, ಅಪರಾಧಿ ಭಾವವೊಂದು ಅವರ ಮುಖದಲ್ಲಿ ಸದಾ ಇದ್ದಿರುತ್ತದೆ. ಕೆಲವು ವಿದ್ಯಾರ್ಥಿಗಳಂತೂ ಆತ್ಮಹತ್ಯೆಯಂಥ ಅತಿರೇಕಕ್ಕೆ ಹೋಗುವುದೂ ಇದೆ. ಇಷ್ಟಾದರೂ ಯಾವ ವಿದ್ಯಾರ್ಥಿಯೂ ತಮ್ಮ ಫೇಲ್‍ಗೆ ಸರಕಾರವನ್ನು ದೂರುವುದಿಲ್ಲ. ಸರಕಾರ ಕರೆಂಟ್ ಕೊಡದೇ ಕತ್ತಲಲ್ಲಿರಿಸಿದ್ದು ತಮ್ಮ ಪರೀಕ್ಷಾ ತಯಾರಿಗೆ ತೊಡಕಾಯಿತು ಅನ್ನುವುದಿಲ್ಲ. ಸೂಕ್ತ ಉಪನ್ಯಾಸಕರನ್ನು, ಮೂಲ ಸೌಕರ್ಯಗಳನ್ನು ಸರಕಾರ ಒದಗಿಸದಿರುವುದೇ ತಮ್ಮ ಫೇಲ್‍ಗೆ ಕಾರಣ ಅನ್ನುವುದಿಲ್ಲ. ಇಷ್ಟಕ್ಕೂ, ಎಲ್ಲ ವಿದ್ಯಾರ್ಥಿಗಳೂ ಚಿನ್ನದ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟುವುದಿಲ್ಲವಲ್ಲ. ವಿದ್ಯಾರ್ಥಿಯಿಂದ ವಿದ್ಯಾರ್ಥಿಗೆ ಬಡತನ, ಶ್ರೀಮಂತಿಕೆ, ಪ್ರತಿಭೆ.. ಎಲ್ಲದರಲ್ಲೂ ವ್ಯತ್ಯಾಸ ಇದ್ದೇ ಇರುತ್ತದೆ. ತನ್ನ ಕುಟುಂಬ ತೀರಾ ದಾರಿದ್ರ್ಯದಲ್ಲಿ ಬದುಕುತ್ತಿದ್ದುದರಿಂದ ಪರೀಕ್ಷೆಗೆ ತಯಾರಿ ನಡೆಸಲು ಕಷ್ಟವಾಯಿತು ಎಂದು ಓರ್ವ ವಿದ್ಯಾರ್ಥಿ ಸಮರ್ಥಿಸಿಕೊಳ್ಳುವುದಕ್ಕೆ ಖಂಡಿತ ಅವಕಾಶವಿದೆ. ರಜೆಯ ದಿನಗಳಲ್ಲಿ ಅಥವಾ ಕೆಲವೊಮ್ಮೆ ರಜೆ ಮಾಡಿಯೇ ದುಡಿಯಬೇಕಾದ ಜರೂರತ್ತು ಅನೇಕ ವಿದ್ಯಾರ್ಥಿಗಳಿಗೆ ಇರುತ್ತದಲ್ಲವೇ? ಸರಕಾರ ತಮಗೆ ಸೂಕ್ತ ವ್ಯವಸ್ಥೆ ಮಾಡಿರುತ್ತಿದ್ದರೆ 'ಫೇಲ್' ಫಲಿತಾಂಶ ಬರುತ್ತಿರಲಿಲ್ಲವೆಂದು ಅವರಿಗೆ ವಾದಿಸಬಹುದಲ್ಲವೇ? ಆದರೂ ವಿದ್ಯಾರ್ಥಿಗಳಾರೂ ಹೀಗೆ ವಾದಿಸಿದ್ದು ಎಲ್ಲೂ ನಡೆದಿಲ್ಲ. ಆದರೆ ರಾಜಕಾರಣಿ ಹಾಗಲ್ಲ. ತನ್ನ ಫೇಲ್‍ಗೆ ತನ್ನನ್ನು ಹೊರತುಪಡಿಸಿ ಇತರೆಲ್ಲರನ್ನೂ ದೂರತೊಡಗುತ್ತಾನೆ. ತನ್ನ ಅಭಿವೃದ್ಧಿ ಯೋಜನೆಗಳು ಜನರಿಗೆ ಸರಿಯಾಗಿ ಮನವರಿಕೆ ಆಗಿಲ್ಲ ಅನ್ನುತ್ತಾನೆ. ಆಡಳಿತ ವಿರೋಧಿ ಅಲೆ ಅಥವಾ ಎದುರಾಳಿಯ ಪಿತೂರಿಯಿಂದಾಗಿ ತಾನು ಸೋಲಬೇಕಾಯಿತು ಅನ್ನುತ್ತಾನೆ. ಆತ ತಲೆ ತಗ್ಗಿಸುವುದಿಲ್ಲ. ತನ್ನ ಭ್ರಷ್ಟಾಚಾರ, ಜನವಿರೋಧಿ ನಿಲುವು.. ಇವಾವುದನ್ನೂ ಆತ ಕಾರಣವಾಗಿ ಒಪ್ಪಿಕೊಳ್ಳುವುದೇ ಇಲ್ಲ. ಫೇಲ್ ಆದರೂ ಪಾಸ್ ಆದವನಂತೆ ಫೋಸ್ ಕೊಡುತ್ತಾ, ಅವರಿವರನ್ನು ದೂರುತ್ತಾ ಮುಂದಿನ ಪರೀಕ್ಷೆಗೆ ಸಿದ್ಧನಾಗುತ್ತಾನೆ. ಇಷ್ಟಕ್ಕೂ, ಚುನಾವಣೆಯಲ್ಲಿ ಫೇಲ್ ಆದ  ಯಾವ ರಾಜಕಾರಣಿಯೇ ಆಗಲಿ ಆತ್ಮಹತ್ಯೆ ಮಾಡಿಕೊಂಡದ್ದಿದೆಯೇ? ಊರು ಬಿಟ್ಟು ಹೋದದ್ದಿ ದೆಯೇ? ನಿಜವಾಗಿ, ಆತ್ಮಹತ್ಯೆ ಮಾಡಿಕೊಳ್ಳುವುದಾದರೆ ಅದಕ್ಕೆ ಅತ್ಯಂತ ಸೂಕ್ತ ವ್ಯಕ್ತಿಗಳು ರಾಜಕಾರಣಿಗಳೇ. ಯಾಕೆಂದರೆ, ಅವರು ಚುನಾವಣೆಯಲ್ಲಿ ಫೇಲ್ ಆಗುವುದಕ್ಕೆ ಸೂಕ್ತ ಸೌಲಭ್ಯಗಳ ಕೊರತೆ ಕಾರಣ ಆಗಿರುವುದಿಲ್ಲ. ಅವರಲ್ಲಿ ದುಡ್ಡೂ ಇರುತ್ತದೆ. ಶ್ರಮವನ್ನೂ ಹಾಕಿರುತ್ತಾರೆ. ಇಷ್ಟೆಲ್ಲ ಆಗಿಯೂ ಅವರು ಫೇಲ್ ಆಗುತ್ತಾರೆಂದಾದರೆ, ಅದಕ್ಕೆ ಸ್ವಯಂ ಅವರು ಕಾರಣರೇ ಹೊರತು ಇನ್ನಾರೂ ಅಲ್ಲ. ಆದರೆ ವಿದ್ಯಾರ್ಥಿಗಳು ಹಾಗಲ್ಲ. ಅವರಿಗೆ ದೂರಿಕೊಳ್ಳುವುದಕ್ಕೆ ನೂರೊಂದು ಕಾರಣಗಳಿರುತ್ತವೆ. ಹೀಗಿದ್ದೂ ರಾಜಕಾರಣಿಗಳ ಬದಲು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಮುಂದಾಗುತ್ತಾರೆಂದರೆ, ಏನೆನ್ನಬೇಕು? ನಿಜವಾಗಿ, ತಮ್ಮ ಫೇಲ್‍ಗೆ ಕಾರಣವಾಗಿರುವ 'ಇತರ'ರನ್ನು ದೂರದೇ ಎಲ್ಲ ತಪ್ಪನ್ನೂ ತಮ್ಮ ಖಾತೆಗೇ ಸೇರಿಸುವ ವಿದ್ಯಾರ್ಥಿಗಳು ರಾಜಕಾರಣಿಗಳಿಗಿಂತ ಮೇಲು ಎಂದು ಅನಿಸುವುದಿಲ್ಲವೇ?
   ದುರಂತ ಏನೆಂದರೆ, ಫಲಿತಾಂಶಗಳು ಪ್ರಕಟವಾದ ಹೊತ್ತಿನಿಂದಲೇ ವಿದ್ಯಾರ್ಥಿಗಳ ಆತ್ಮಹತ್ಯೆಯ ಸುದ್ದಿಗಳೂ ಕೇಳಿ ಬರತೊಡಗುವುದು. ಅಂದಹಾಗೆ, ಪಾಸ್ ಮತ್ತು ಫೇಲ್ ಎಂಬುದು ಎರಡು ಪದಗುಚ್ಛಗಳೇ ಹೊರತು ಅವು ಬದುಕಿನ ಸೋಲು ಮತ್ತು ಗೆಲುವು ಖಂಡಿತ ಅಲ್ಲ. ಫೇಲ್ ಅನ್ನು ಪಾಸ್ ಆಗಿಸುವುದಕ್ಕೆ ಆ ಬಳಿಕವೂ ನೂರಾರು ಅವಕಾಶಗಳಿವೆ. ಪರೀಕ್ಷೆಯಲ್ಲಿ  ಪಾಸ್ ಆಗದೆಯೂ ಬದುಕಿನಲ್ಲಿ ಪಾಸ್ ಆದವರ ಅಸಂಖ್ಯ ಘಟನೆಗಳು ನಮ್ಮ ಸುತ್ತಮುತ್ತ ಧಾರಾಳ ಇವೆ. ಬದುಕಿನ ಅತಿದೊಡ್ಡ ಸೋಲು ಯಾವುದೆಂದರೆ, ಅದು ಆತ್ಮಹತ್ಯೆ. ಯಾಕೆಂದರೆ ಆತ್ಮಹತ್ಯೆಯ ಬಳಿಕ ಬದುಕಿನಲ್ಲಿ ಪಾಸ್ ಆಗುವುದಕ್ಕೆ ಅವಕಾಶವೇ ಸಿಗುವುದಿಲ್ಲ. ಆದ್ದರಿಂದಲೇ ಪವಿತ್ರ ಕುರ್‍ಆನ್ ಆತ್ಮಹತ್ಯೆಯನ್ನು ಧರ್ಮವಿರೋಧಿ ಕೃತ್ಯ ಎಂದು ಘೋಷಿಸಿದ್ದು (4:29). ಇಷ್ಟಕ್ಕೂ ಹೆತ್ತವರು ಮಕ್ಕಳನ್ನು ಶಾಲೆಗೆ ಕಳುಹಿಸುವುದು, ಉತ್ತಮ ಫಲಿತಾಂಶಕ್ಕಾಗಿ ಒತ್ತಡ ಹಾಕುವುದೆಲ್ಲ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದಲ್ಲವಲ್ಲ. ತನ್ನ ಮಗು ಉತ್ತಮ ಅಂಕ ಪಡೆದು ಪಾಸ್ ಆಗಬೇಕು ಎಂದು ಎಲ್ಲ ಹೆತ್ತವರೂ ಆಸೆ ಪಡುತ್ತಾರೆ. ಅದನ್ನು ಅಪರಾಧ ಅನ್ನುವಂತಿಲ್ಲ. ಈ ದೇಶದ ಶೈಕ್ಷಣಿಕ ಪದ್ಧತಿ 'ಅಂಕ' ಆಧಾರಿತ ಆಗಿರುವಾಗ ಅವರಲ್ಲಿ ಬೇರೆ ಆಯ್ಕೆಗಳಾದರೂ ಯಾವುದಿರುತ್ತದೆ? ಆದರೆ, ಹೆತ್ತವರ ಈ ಬಯಕೆ, ಒತ್ತಡಗಳು ಮಗುವಿನ ಪುಟ್ಟ ಮೆದುಳು ಸಹಿಸಿಕೊಳ್ಳಲಾರದಷ್ಟು ಅತಿ ಆಗಬಾರದು. ಮಗುವಿನ ಸಾಮರ್ಥ್ಯ  ಏನು ಎಂಬುದನ್ನು ಅಧ್ಯಾಪಕರಲ್ಲಿ ಚರ್ಚಿಸಿ ಹೆತ್ತವರು ದೃಢಪಡಿಸಿಕೊಳ್ಳಬೇಕು. ಮುಖ್ಯವಾಗಿ, ಮಕ್ಕಳಲ್ಲಿ ಸುರಕ್ಷಿತತೆಯ ಭಾವವನ್ನು ಮೂಡಿಸುವುದು ಬಹಳ ಮುಖ್ಯ. ತಾನು ಹೆತ್ತವರ ನಿರೀಕ್ಷೆಯನ್ನು ಮುಟ್ಟದಿದ್ದರೂ ಅವರು ತನ್ನನ್ನು ಪ್ರೀತಿಸುತ್ತಾರೆ ಎಂಬ ನಂಬುಗೆ ಪ್ರತಿ ಮಗುವಿನಲ್ಲೂ ಹುಟ್ಟಿಸಬೇಕಾದದ್ದು ಎಲ್ಲ ಹೆತ್ತವರ ಜವಾಬ್ದಾರಿಯಾಗಿದೆ. ಯಾಕೆಂದರೆ, ಇವತ್ತಿನ ದಿನಗಳಲ್ಲಿ ಮಕ್ಕಳು ಹಲವು ಮೂಲಗಳಿಂದ ಪ್ರಭಾವಿತರಾಗಿರುತ್ತಾರೆ. ಅವರನ್ನು ಟಿ.ವಿ., ಇಂಟರ್‍ನೆಟ್ ಸಹಿತ ವಿವಿಧ ಮಾಧ್ಯಮಗಳು ಸುತ್ತುವರಿದಿರುತ್ತವೆ. ಅಲ್ಲಿಯ ಸಿಟ್ಟು, ಜಗಳ, ಕೊಲೆ, ಆತ್ಮ ಹತ್ಯೆಗಳೆಲ್ಲ ಒಂದು ಹಂತದವರೆಗೆ ಮಕ್ಕಳನ್ನೂ ಕಾಡಿರುತ್ತವೆ. ಇಂಥ ಸ್ಥಿತಿಯಲ್ಲಿ ಮಕ್ಕಳು ಅತಿರೇಕದ ನಿರ್ಧಾರವನ್ನು ಕೈಗೊಳ್ಳುವ ಸಾಧ್ಯತೆ ಈ ಹಿಂದಿಗಿಂತಲೂ ಇವತ್ತು ಹೆಚ್ಚಿದೆ. ಆದ್ದರಿಂದ ಹೆತ್ತವರು ಮಕ್ಕಳನ್ನು 'ಅಂಕ'ಗಳ ಜಗತ್ತಿಗೆ ಸಿದ್ಧಪಡಿಸುವಾಗ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಳ್ಳಬೇಕು. ಮನೆಯ ಬಾಗಿಲು ಪಾಸ್ ಮತ್ತು ಫೇಲ್ ಆದ ಇಬ್ಬರಿಗೂ ಒಂದೇ ಬಗೆಯಲ್ಲಿ ತೆರೆದುಕೊಳ್ಳುತ್ತದೆ ಎಂಬ ಧೈರ್ಯವನ್ನು ಮಕ್ಕಳಿಗೆ ರವಾನಿಸಬೇಕು. ಫೇಲ್ ಆಗುವುದು ಯಾವ ರೀತಿಯಲ್ಲೂ ಅವಮಾನಕಾರಿಯಲ್ಲ ಎಂಬ ಸಂದೇಶವನ್ನು ಎಲ್ಲ ಮಕ್ಕಳಿಗೂ ಹೆತ್ತವರು ಮತ್ತು ಅಧ್ಯಾಪಕರು ನೀಡುತ್ತಿರಬೇಕು. ಫೇಲ್‍ಗೆ ಆತ್ಮಹತ್ಯೆ ಉತ್ತರವಲ್ಲ ಎಂಬ ಸ್ಲೋಗನ್ನು ಎಲ್ಲ ಶಾಲೆ ಮತ್ತು ಮನೆಗಳ ಧ್ಯೇಯ ವಾಕ್ಯ ಆಗಬೇಕು. ಇಲ್ಲದಿದ್ದರೆ, ನಾವು ಕೊಲೆಗಾರರಾಗುತ್ತೇವೆ.

Monday, 29 April 2013

ಅನಿವಾರ್ಯ ಸಂದರ್ಭಗಳಲ್ಲಿ ಸದ್ದು ಮಾಡುವ ‘ಇಟ್ಟಿಗೆಗಳು’


   ಪಾಕಿಸ್ತಾನದ  ಜಿನ್ನಾ ಆಸ್ಪತ್ರೆಯಲ್ಲಿ ಕೋಮಾ ಸ್ಥಿತಿಯಲ್ಲಿ ಮಲಗಿರುವ ಸರಬ್ಜಿತ್ ಸಿಂಗ್‍ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಕ್ಕೆ ಒಂದೊಳ್ಳೆಯ ರೂಪಕದಂತಿದ್ದಾನೆ. ಹಾಗೆಯೇ,  ಇಟ್ಟಿಗೆಯಿಂದ ಆತನ ತಲೆ ಒಡೆದ ಅಫ್ತಾಬ್ ಮತ್ತು ಮುದಸ್ಸರ್ ಎಂಬಿಬ್ಬರು ಕೈದಿಗಳು, ಪತಿಯನ್ನು ನೋಡಿ ಕಣ್ಣೀರಿಳಿಸುತ್ತಿರುವ ಪತ್ನಿ, ಮಕ್ಕಳು ಮತ್ತು ತುಟಿ ಸೇವೆ ಮಾಡುತ್ತಿರುವ ಎರಡೂ ಸರಕಾರಗಳು- ಇವರೆಲ್ಲ ಈ ರೂಪಕದ ವಿವಿಧ ಪಾತ್ರಗಳಂತೆ ಕಾಣಿಸುತ್ತಿದ್ದಾರೆ. ನಿಜವಾಗಿ ಅಫ್ತಾಬ್ ಮತ್ತು ಮುದಸ್ಸರ್ ಎಂಬುದು ಬರೇ ಎರಡು ಹೆಸರುಗಳಷ್ಟೇ ಅಲ್ಲ. ಅದೊಂದು ಮನಸ್ಥಿತಿ. ಅಂಥ ಮನ ಸ್ಥಿತಿಯ ಮಂದಿ ಉಭಯ ದೇಶಗಳಲ್ಲಿ ಧಾರಾಳ ಇದ್ದಾರೆ. ಅವರಲ್ಲಿ ವಿಚಿತ್ರವಾದ ಆವೇಶವೊಂದಿದೆ. ಅದೇನೆಂದರೆ, ತನ್ನ ದೇಶದ ಎಲ್ಲ ಸಮಸ್ಯೆಗಳಿಗೂ ಪಾಕಿಸ್ತಾನ ಅಥವಾ ಭಾರತವೇ ಕಾರಣ ಎಂಬುದು. ಭಾರತದಲ್ಲಿ ಎಲ್ಲಾದರೂ ಬಾಂಬ್ ಸ್ಫೋಟಿಸಿ ಬಿಟ್ಟರೆ ತಕ್ಷಣ ಈ ಮನಸ್ಥಿತಿಯ ಮಂದಿ ಪಾಕ್‍ನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾರೆ. ಸ್ಫೋಟಕ್ಕೆ ಕಾರಣವೆಂದು ಪಾಕ್ ಮೂಲದ ವಿವಿಧ ಸಂಘಟನೆಗಳ ಹೆಸರನ್ನು ಮಾಧ್ಯಮಗಳ ಮೂಲಕ ತೇಲಿಬಿಡಲಾಗುತ್ತದೆ. ಮುದಸ್ಸರ್ ಮತ್ತು ಅಫ್ತಾಬ್‍ರು ಇಟ್ಟಿಗೆಗಳಿಂದ ಸರಬ್ಜಿತ್‍ನ ಮೇಲೆ ದಾಳಿ ಮಾಡಿದ್ದರೆ, ಈ ಮಂದಿ ಬಾಂಬ್‍ಗಳ ಮೂಲಕ ಪಾಕ್‍ನ ಮೇಲೆ ದಾಳಿ ಮಾಡಿ ಎಂದು ಒತ್ತಾಯಿಸುತ್ತಾರೆ. ಪಾಕ್‍ನ ಜೊತೆಗಿರುವ ಕ್ರೀಡಾ, ರಾಜಕೀಯ, ವ್ಯಾವಹಾರಿಕ ಸಂಬಂಧಗಳನ್ನು ರದ್ದುಪಡಿಸುವಂತೆ ಪ್ರತಿಭಟನೆಗಳು ಏರ್ಪಡುತ್ತವೆ. ಇಂಥದ್ದೇ ಅತಿರೇಕಗಳು  ಪಾಕ್‍ನಲ್ಲೂ ನಡೆಯುತ್ತವೆ. ಇಷ್ಟಕ್ಕೂ, ಇಟ್ಟಿಗೆಗಳನ್ನು ಹಿಡಿಯುವ, ಆವೇಶಗೊಳ್ಳುವ ಮಂದಿಗೆ ವಾಸ್ತವ ಪರಿಸ್ಥಿತಿಯ ಅರಿವಿದೆ ಎಂದಲ್ಲ. ಮುದಸ್ಸರ್ ಮತ್ತು ಅಫ್ತಾಬ್‍ನ ಮಟ್ಟಿಗೆ ಸರಬ್ಜಿತ್ ಸಿಂಗ್ ಓರ್ವ ಭಯೋತ್ಪಾದಕ. ಅಷ್ಟಕ್ಕೂ  ಅವರಿಬ್ಬರಿಗೆ ಸರಬ್ಜಿತ್‍ನ ಬಗ್ಗೆ, ಆತನ ಮೇಲಿರುವ ಆರೋಪಗಳ ಸತ್ಯಾಸತ್ಯತೆಯ ಬಗ್ಗೆ ಗೊತ್ತಿದೆ ಎಂದಲ್ಲ. ಅವರಿಬ್ಬರಿಗೆ ಮತ್ತು ಅಂಥ ಕೋಟ್ಯಂತರ ಮಂದಿಗೆ, ಸರಬ್ಜಿತ್‍ನನ್ನು ಭಯೋತ್ಪಾದಕ ಎಂದು ವ್ಯವಸ್ಥೆಯೇ ಪರಿಚಯಿಸಿಕೊಟ್ಟಿದೆ. ಆದರೆ, ಈ ವ್ಯವಸ್ಥೆ ಎಷ್ಟು ನಂಬಿಕೆಗೆ ಅರ್ಹ, ಇದರ ಹಿಂದೆ ರಾಜಕೀಯ ದುರುದ್ದೇಶಗಳು ಇದ್ದಿರಲಾರದೇ.. ಎಂಬುದನ್ನೆಲ್ಲ ಈ 'ಇಟ್ಟಿಗೆ'ಗಳು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. 'ಇಟ್ಟಿಗೆ'ಗಳ ಈ ದೌರ್ಬಲ್ಯವು ವ್ಯವಸ್ಥೆಗೂ ಚೆನ್ನಾಗಿ ಗೊತ್ತು. ಆದ್ದರಿಂದಲೇ ಸರಕಾರವೊಂದು ಇಕ್ಕಟ್ಟಿನಲ್ಲಿ ಸಿಲುಕಿದರೆ, ಹಗರಣಗಳಲ್ಲಿ ಸಿಲುಕಿಕೊಂಡರೆ ಉಭಯ ರಾಷ್ಟ್ರಗಳಲ್ಲಿ ಎಲ್ಲಾದರೂ ಬಾಂಬ್ ಸ್ಫೋಟಗೊಳ್ಳುವುದಿದೆ. ತಕ್ಷಣ ಉಭಯ ರಾಷ್ಟ್ರಗಳ ಗಡಿಯಲ್ಲಿ ಉದ್ವಿಘ್ನತೆ ಕಾಣಿಸಿಕೊಳ್ಳುತ್ತದೆ. ಗಡಿಯ ಎರಡೂ ಕಡೆ 'ಸರಬ್ಜಿತ್‍ಗಳ' ಬಂಧನವಾಗುತ್ತದೆ. ಆ ಬಳಿಕ ಹಗರಣಗಳು ಮಾಧ್ಯಮಗಳಿಂದ ಮಾಯವಾಗಿ ಸರಬ್ಜಿತ್‍ಗಳು ಚರ್ಚೆಗೆ ಒಳಗಾಗುತ್ತಾರೆ. ದುರಂತ ಏನೆಂದರೆ, ದೇಶಪ್ರೇಮವೆಂದರೆ ಇನ್ನೊಂದು ರಾಷ್ಟ್ರವನ್ನು ಮತ್ತು ಅಲ್ಲಿನ ಪ್ರಜೆಗಳನ್ನು ವಿರೋಧಿಸುವುದು ಎಂದೇ ನಂಬಿರುವ ಈ 'ಇಟ್ಟಿಗೆ'ಗಳಿಗೆ ಇವು ಅರ್ಥವಾಗುವುದಿಲ್ಲ. ಆದ್ದರಿಂದಲೇ ಭಾರತದ ಯಾವುದೇ ಒಂದು ನಗರದಲ್ಲಿ ಕಡ್ಲೆಪುರಿ ಮಾರಿ ಜೀವನ ಸಾಗಿಸುವ ಬಡ ಪಾಕಿಸ್ತಾನಿಯನ್ನೂ ಈ 'ಮಂದಿ' ಭಯೋತ್ಪಾದಕನಂತೆ ನೋಡುವುದು. ಲಷ್ಕರೆ ತ್ವಯ್ಯಿಬದ್ದೋ ಐಎಸ್‍ಐ ನದ್ದೋ  ಏಜೆಂಟ್ ಎಂದು ಹುಯಿಲೆಬ್ಬಿಸುವುದು. ಹೀಗೆ ದಿಕ್ಕು ತಪ್ಪಿದ ಮನಸ್ಥಿತಿಗೆ ಬಲಿಯಾಗಿ ಉಭಯ ದೇಶಗಳ ಜೈಲುಗಳಲ್ಲಿ ನೂರಾರು ಮಂದಿ ಇವತ್ತೂ ಕೊಳೆಯುತ್ತಿದ್ದಾರೆ. ಅಲ್ಲದೇ, ಅಂಥವರ ಮೇಲೆ ಆರೋಪ ಹೊರಿಸುವುದಕ್ಕೆ ಪೋಲೀಸರಿಗೂ ಕಷ್ಟವಿಲ್ಲ. ಕಡ್ಲೆಪುರಿ ಮಾರುತ್ತಾ ಈತ ಐಎಸ್‍ಐಗೆ ಕೆಲಸ ಮಾಡುತ್ತಿದ್ದ ಅಂದರೂ ನಂಬುವಂಥ ವಾತಾವರಣವನ್ನು ಉಭಯ ದೇಶಗಳಲ್ಲೂ ಇವತ್ತು ನಿರ್ಮಿಸಿ ಬಿಡಲಾಗಿದೆ. ಬಳಿಕ, ಜೈಲುಗಳಲ್ಲಿ ಅವರು ಸರಬ್ಜಿತ್‍ನಂತೆ ಕೋಮಾವಸ್ಥೆಯಲ್ಲಿ ಬದುಕಬೇಕಾಗುತ್ತದೆ. ಇಂಥ ಸ್ಥಿತಿಯಲ್ಲಿ ಅವರ ಪತ್ನಿ ಮಕ್ಕಳಾದರೂ ಏನು ಮಾಡಿಯಾರು? ಕಣ್ಣೀರಲ್ಲದೇ ಬೇರೆ ಯಾವ ಮಾರ್ಗಗಳು ಅವರ ಬಳಿಯಿರುತ್ತವೆ? ಭಾರತ ಮತ್ತು ಪಾಕ್‍ಗಳ ಜೈಲಲ್ಲಿರುವ ನೂರಾರು ಸರಬ್ಜಿತ್‍ಗಳ ಸದ್ಯದ ಪರಿಸ್ಥಿತಿ ಇದು. ಅಷ್ಟಕ್ಕೂ, ಅಕ್ಕಪಕ್ಕದ ಎರಡು ರಾಷ್ಟ್ರಗಳ ರಾಜಕೀಯ ಭಿನ್ನಾಭಿಪ್ರಾಯಗಳಿಗೆ ಸರಬ್ಜಿತ್‍ನಂಥವರು ಮತ್ತೆ ಮತ್ತೆ ಬಲಿಯಾಗುತ್ತಿರುವುದನ್ನು ನಾವು ಎಷ್ಟರ ವರೆಗೆ ಸಹಿಸಿಕೊಳ್ಳಬೇಕು? ಪಾಕ್ ಹೇಳುವಂತೆ, ಒಂದು ವೇಳೆ ಸರಬ್ಜಿತ್ ಅಲ್ಲಿ ಬಾಂಬ್ ಸ್ಫೋಟಿಸಿದ್ದರೂ ಅದು ಆತನದೇ ಆಯ್ಕೆಯಾಗಿರಲಿಲ್ಲ ಎಂಬುದು ಎಲ್ಲರಿಗೂ ಗೊತ್ತು. ಭಾರತೀಯ ವ್ಯವಸ್ಥೆ ಆತನನ್ನು ಆ ಕೃತ್ಯಕ್ಕೆ ದಾಳವಾಗಿ ಬಳಸಿಕೊಂಡಿತ್ತು. ತಮ್ಮ ರಾಜಕೀಯ ದುರುದ್ದೇಶವನ್ನು ಈಡೇರಿಸಿಕೊಳ್ಳುವುದಕ್ಕಾಗಿ ವ್ಯವಸ್ಥೆ ಅಮಾಯಕರನ್ನು ಅಪರಾಧಿಗಳನ್ನಾಗಿ ಮಾರ್ಪಡಿಸುತ್ತಿವೆ ಎಂದಲ್ಲವೇ ಇದರರ್ಥ? ಇದು ಬರೇ ಸರಬ್ಜಿತ್‍ಗೆ ಮಾತ್ರ ಸೀಮಿತ ಅಲ್ಲ. ಕಸಬ್ ಕೂಡ ಇಂಥದ್ದೊಂದು ದುರುದ್ದೇಶದ ಬಲಿಪಶುವೇ? ಆದ್ದರಿಂದ ಸರಬ್ಜಿತ್‍ನ ಸದ್ಯದ ಕೋಮಾಸ್ಥಿತಿಗೆ ಆ ಇಬ್ಬರು ಕೈದಿಗಳಷ್ಟೇ ಕಾರಣ ಅನ್ನುವುದು ತಪ್ಪು. ಅವರು ಗೋಡೆಯೊಂದರ ಬರೇ ಎರಡು ಇಟ್ಟಿಗೆಗಳು ಮಾತ್ರ. ಇಂಥ ಸಾವಿರಾರು ಇಟ್ಟಿಗೆಗಳನ್ನು ಬಳಸಿ ವ್ಯವಸ್ಥೆಯು ಸುಳ್ಳಿನ ದೊಡ್ಡದೊಂದು ಬಂಗಲೆಯನ್ನೇ ಕಟ್ಟಿಬಿಟ್ಟಿದೆ. ಉಭಯ ರಾಷ್ಟ್ರಗಳ ಮಧ್ಯೆ ಸಂಬಂಧ ಬಿಗಡಾಯಿಸುವುದಕ್ಕೆ, ಸ್ಫೋಟ ಕೃತ್ಯ ಗಳನ್ನು ನಡೆಸುವುದಕ್ಕೆ, ಪ್ರತಿಭಟನೆ, ಮುರ್ದಾಬಾದ್ ಘೋಷಿಸುವುದಕ್ಕೆ.. ಸಿದ್ಧರಿರುವ ವ್ಯಕ್ತಿಗಳನ್ನು ಆ ಬಂಗಲೆಯೊಳಗೆ ತಯಾರಿಸಲಾಗುತ್ತದೆ. ಕೊನೆಗೆ ಬಂಗಲೆಯಿಂದ ಕೆಲವೊಂದು ‘ಇಟ್ಟಿಗೆಗಳು’ ಹೊರಬಿದ್ದು ಅನಿವಾರ್ಯ ಸಂದರ್ಭಗಳಲ್ಲಿ ಸದ್ದು ಮಾಡುತ್ತವೆ. ಆ ಸದ್ದು ಉಭಯ ರಾಷ್ಟ್ರಗಳ ಸಂಬಂಧವನ್ನು ಉದ್ವಿಘ್ನಗೊಳಿಸುತ್ತವೆ. ಕೊನೆಗೆ ಆ ಇಟ್ಟಿಗೆಗಳನ್ನು ಆ ರಾಷ್ಟ್ರ ಈ ರಾಷ್ಟ್ರಕ್ಕೆ ಎಸೆಯುವುದೂ ಈ ರಾಷ್ಟ್ರ ಆ ರಾಷ್ಟ್ರಕ್ಕೆ ಎಸೆಯುವುದೂ ನಡೆದು ಅಂತಿಮವಾಗಿ, ಇಟ್ಟಿಗೆಗಳು ಒಂಟಿಯಾಗಿ ಬಿಡುತ್ತವೆ. ಕೊನೆಗೆ ಯಾವುದೋ ಒಂದು ಹಂತದಲ್ಲಿ ಅವು ಕೋಮಾ ಸ್ಥಿತಿಗೆ ತಲುಪಿಬಿಡುತ್ತವೆ.  
   ಏನೇ ಆಗಲಿ, ಸರಬ್ಜಿತ್‍ನಂಥ ಸ್ಥಿತಿ ಇನ್ನಾರಿಗೂ ಬರದಂತೆ ಆಗಬೇಕಾದರೆ ಉಭಯ ದೇಶಗಳ ರಾಜಕೀಯ ಆಲೋಚನೆಗಳು ಶುದ್ಧವಾಗಬೇಕು. ಉದ್ವಿಘ್ನ ವಾತಾವರಣವನ್ನು ಸೃಷ್ಟಿಸಿ ಲಾಭ ದೋಚುವ ರಾಜಕೀಯವು ಅಂತ್ಯ ಕಾಣಬೇಕು. ಇಲ್ಲದಿದ್ದರೆ ಅಫ್ತಾಬ್, ಮುದಸ್ಸರ್‍ನಂಥ ಇಟ್ಟಿಗೆಗಳು, ಸರಬ್ಜಿತ್‍ನಂಥ ಕೈದಿಗಳು ಮತ್ತು ಕಣ್ಣೀರಿಳಿಸುವ ಪತ್ನಿ, ಮಕ್ಕಳು ಸದಾ ಸೃಷ್ಟಿಯಾಗುತ್ತಲೇ ಇರುತ್ತಾರೆ.

Wednesday, 24 April 2013

ಅಡ್ವಾಣಿ, ಸುಷ್ಮಾ, ರಾಹುಲ್‍ಗೆ ಮತ ಮಾರದಿರೋಣ


   ಗಗನಚುಂಬಿ ಕಟ್ಟಡಗಳು, ಮೆಟ್ರೋ ರೈಲು, ಆಧುನಿಕ ವಿಮಾನ ಯಾನ ಸೌಲಭ್ಯಗಳು, ಅಣ್ವಸ್ತ್ರಗಳಿರುವ; ಬಾಹ್ಯಾಕಾಶ ಯಾನಕ್ಕೆ ಸಿದ್ಧತೆ ನಡೆಸಿರುವ, ಮಾಹಿತಿ ತಂತ್ರಜ್ಞಾನದಲ್ಲಿ ಅಗ್ರ ಸ್ಥಾನದಲ್ಲಿರುವ ಮತ್ತು ಜಗತ್ತಿಗೇ ಸಡ್ಡು ಹೊಡೆಯುವಷ್ಟು ಶ್ರೀಮಂತರಿರುವ ದೇಶವೊಂದರಲ್ಲಿ 1 ರೂ.ಗೆ 30 ಕೆ.ಜಿ. ಅಕ್ಕಿ, 24 ಗಂಟೆ ನಿರಂತರ ವಿದ್ಯುತ್, ಶಾಲೆಗಳಿಗೆ ಇಂಟರ್‍ನೆಟ್ ಸವ್ಳಭ್ಯ, ದ್ವಿಪಥ ರಸ್ತೆ.. ಮುಂತಾದ ಭರವಸೆಗಳನ್ನು ರಾಜಕೀಯ ಪಕ್ಷಗಳು ತಮ್ಮ ಚುನಾವಣಾ ಪ್ರಣಾಳಿಕೆಯಾಗಿ ಜನರ ಮುಂದಿಡುತ್ತದೆಂದರೆ ಏನರ್ಥ, ಇದು ಅಸಂಬದ್ಧವಲ್ಲವೇ.. ಎಂಬೆಲ್ಲ ಅನುಮಾನ ಮೂಡುವುದು ಸಹಜ. ನಿಜವಾಗಿ, ಈ ದೇಶದ ರಾಜಕೀಯ ಪಕ್ಷಗಳಿಗೆ ಜನರ ನಾಡಿ-ಮಿಡಿತಗಳು ಚೆನ್ನಾಗಿ ಗೊತ್ತು. ಗಗನಚುಂಬಿ ಕಟ್ಟಡಗಳ ಆಚೆ, ಚತುಷ್ಪಥ ರಸ್ತೆಗಳ ಅಕ್ಕ-ಪಕ್ಕ, ಐಟಿ-ಬಿಟಿ ಅಬ್ಬರಗಳ ತುಸು ದೂರ ಕೋಟ್ಯಂತರ ಕಡು ಬಡವರಿದ್ದಾರೆ ಎಂಬುದೂ ಗೊತ್ತು. ಅವುಗಳು ಹೊರಡಿಸುವ  ಚುನಾವಣಾ ಪ್ರಣಾಳಿಕೆಗಳೇ ಇದನ್ನು ಸಾಬೀತುಪಡಿಸುತ್ತವೆ. ಹಾಗಿದ್ದ ಮೇಲೆ ಯಾಕೆ ಕೊಳೆಗೇರಿಗಳು ಅಭಿವೃದ್ಧಿ ಯಾಗುತ್ತಿಲ್ಲ? 40 ಕೋಟಿ ಕಡು ಬಡವರ (ವಿಶ್ವಬ್ಯಾಂಕ್ ವರದಿ) ಸಂಖ್ಯೆಯಲ್ಲಿ ವರ್ಷಂಪ್ರತಿ ಯಾಕೆ ಏರಿಕೆಯಾಗುತ್ತಿದೆ?
   ಒಂದು ದೇಶದ ಅಭಿವೃದ್ಧಿಗೆ ಅಲ್ಲಿನ ರಾಜಕೀಯ ಪಕ್ಷಗಳ ನಿಲುವು ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಅವು ದೇಶದ ಸಮಸ್ಯೆಗಳನ್ನು ಹೇಗೆ ಮತ್ತು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿವೆ ಎಂಬುದರ ಆಧಾರದಲ್ಲಿ ಅಭಿವೃದ್ಧಿಯ ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಹೇಳುವುದಾದರೆ, ಈ ದೇಶದ ರಾಜಕೀಯ ಪಕ್ಷಗಳು ಪಾಸ್ ಆಗಿವೆ. ಈ ದೇಶದಲ್ಲಿ ಎಷ್ಟು ಕಡು ಬಡವರಿದ್ದಾರೆ, ವಿದ್ಯುತ್, ರಸ್ತೆ, ನೀರು, ಶಾಲೆ, ಆಸ್ಪತ್ರೆ, ಶೌಚಾಲಯ.. ಇಲ್ಲದ ಎಷ್ಟು ಹಳ್ಳಿಗಳಿವೆ ಎಂಬುದನ್ನೆಲ್ಲ   ಅವುಗಳ ಪ್ರಣಾಳಿಕೆಗಳು ಚೆನ್ನಾಗಿಯೇ ವಿವರಿಸುತ್ತವೆ. ಆದ್ದರಿಂದ ಈ ಪ್ರದೇಶಗಳು 5 ವರ್ಷಗಳ ಆಡಳಿತದ ಬಳಿಕವೂ ಅಭಿವೃದ್ಧಿ ಹೊಂದಿಲ್ಲ ಎಂದಾದರೆ ಅದರರ್ಥ, ಅಲ್ಲಿನ ಜನ ಪ್ರತಿನಿಧಿಗಳಿಗೆ ಆ ಬಗ್ಗೆ ಅರಿವಿಲ್ಲ ಎಂದಲ್ಲ, ಅವರು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದಾರೆ ಎಂದರ್ಥ. ಹೀಗಿರುವಾಗ ಇಂಥ ಜನಪ್ರತಿನಿಧಿಗಳಿಗೆ ಇಲ್ಲವೇ ಪಕ್ಷಕ್ಕೆ ನಾವು ಯಾಕೆ ಮತ್ತೆ ಓಟು ಹಾಕಬೇಕು ಎಂದು ಮತ ಚಲಾಯಿಸುವ ಮುನ್ನ ಪ್ರತಿಯೊಬ್ಬರೂ ಸ್ವಯಂ ಪ್ರಶ್ನಿಸಿಕೊಳ್ಳಬೇಕು.
   ಪ್ರಜಾಪ್ರಭುತ್ವಕ್ಕೆ ಈ ದೇಶದ ಸಂವಿಧಾನ ಕೊಡುವ ವ್ಯಾಖ್ಯಾನಗಳೇನೇ ಇರಲಿ, ಹೆಂಡಕ್ಕೆ, ಸೀರೆಗೆ, ಅಕ್ಕಿಗೆ, ಕೋಮು ಆಧಾರಿತ ರಾಜಕೀಯ ಸಿದ್ಧಾಂತಕ್ಕೆ ಓಟು ಸಿಗುವ ವರೆಗೆ ಪ್ರಜಾಪ್ರಭುತ್ವವು ಅಪಹಾಸ್ಯಕ್ಕೆ ಒಳಗಾಗುತ್ತಲೇ ಇರುತ್ತದೆ. ಒಂದು ಓಟು ಒಂದು ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸುವಷ್ಟು ತೂಕಭರಿತವಾಗುವುದು, ಆ ಓಟು ಹಾಕುವ ವ್ಯಕ್ತಿ ಪ್ರಜ್ಞಾವಂತನಾಗಿರುವಾಗ ಮಾತ್ರ. ಸದ್ಯ ಈ ದೇಶದಲ್ಲಿ ಇಂಥದ್ದೊಂದು ಪ್ರಜ್ಞಾವಂತ ಮತದಾರ ವರ್ಗ ಎಷ್ಟು ಶೇಕಡಾ ಇದೆ ಎಂಬುದು ಎಲ್ಲ ರಾಜಕೀಯ ಪಕ್ಷಗಳಿಗೂ ಗೊತ್ತು. ಆದ್ದರಿಂದಲೇ ರಮ್ಯ, ರಕ್ಷಿತಾ, ದರ್ಶನ್ ರಂಥ ಸಿನಿಮಾ ತಾರೆಯರು ಚುನಾವಣಾ ಪ್ರಚಾರಕ್ಕೆ ಇಳಿದಿರುವುದು. ತಮ್ಮ  ಎಲ್ಲ ವೈಫಲ್ಯಗಳನ್ನೂ ಕೆಲವು ತಾರೆಯರು ಮುಚ್ಚಿ ಬಿಡುತ್ತಾರೆ ಎಂಬ ನಂಬುಗೆ ರಾಜಕೀಯ ಪಕ್ಷಗಳಲ್ಲಿ ಈಗಲೂ ಇವೆ. ಅಷ್ಟಕ್ಕೂ ಅಡ್ವಾಣಿ, ಸುಶ್ಮಾ ಸ್ವರಾಜ್, ರಾಜನಾಥ್ ಸಿಂಗ್‍ರಂಥ ನಾಯಕರು ದೆಹಲಿಯಿಂದ ರಾಜ್ಯಕ್ಕೆ ಬಂದಿರುವುದರ ಉದ್ದೇಶವಾದರೂ ಏನು? ಅವರನ್ನು ನೋಡಿ ರಾಜ್ಯದ ಮತದಾರರು ಬಿಜೆಪಿ ದುರಾಡಳಿತವನ್ನು ಮರೆಯಲಿ ಎಂದೇ ಅಲ್ಲವೇ? ಹಾಗಂತ, ಕಳೆದ 5 ವರ್ಷಗಳಲ್ಲಿ ಮೂವರು ಮುಖ್ಯಮಂತ್ರಿಗಳ ಮೂಲಕ ವಿಫಲ ಆಡಳಿತವನ್ನು ನಡೆಸಿದ ನಾಯಕರು ಯಾರೂ ದೆಹಲಿಯವರಲ್ಲವಲ್ಲ. ಯಡಿಯೂರಪ್ಪ, ಹಾಲಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜನಾರ್ಧನ ರೆಡ್ಡಿ.. ಮುಂತಾದ ಹತ್ತು-ಹಲವು ಭ್ರಷ್ಟ ನಾಯಕರು  ಕನ್ನಡಿಗರಾಗಿದ್ದರಲ್ಲವೇ?  5 ವರ್ಷಗಳ ಹಿಂದೆ ಅವರನ್ನೆಲ್ಲ ರಾಜ್ಯ ವಿಧಾನಸಭೆಗೆ ಮತದಾರರು ಆರಿಸಿ ಕಳುಹಿಸಿದ್ದು ಅಡ್ವಾಣಿಯನ್ನೋ ರಾಜನಾಥ್‍ರನ್ನೋ ನೋಡಿಯೂ ಅಲ್ಲವಲ್ಲ. ಹೀಗಿರುವಾಗ, ಈಗ ಮತದಾರರ ಮುಂದೆ ಮಾತಾಡಬೇಕಾದದ್ದು ಯಾರು, ರಾಜ್ಯ ನಾಯಕರಲ್ಲವೇ? ಆದರೆ  ಅವರು ಹಾಗೆ ಮಾಡದೆ ದೆಹಲಿಯಿಂದ ನಾಯಕರನ್ನು ಆಮದು ಮಾಡಿಕೊಳ್ಳುತ್ತಾರೆಂದರೆ, ಅದರರ್ಥ, ಜನರನ್ನು ಎದುರಿಸುವ ಧೈರ್ಯ ಇಲ್ಲ ಎಂದೇ ಅಲ್ಲವೇ? ತಮ್ಮ ವೈಫಲ್ಯವನ್ನು ಅಡ್ವಾಣಿಯ ಬಲದಿಂದಲೋ ಸುಷ್ಮಾರ ಮಾತಿನಿಂದಲೋ ಅಡಗಿಸಿಡಬಹುದು ಎಂಬ ನಂಬಿಕೆಯಿಂದಲ್ಲವೇ? ನಿಜವಾಗಿ, ಬಿಜೆಪಿ ಎಂದಲ್ಲ, ಯಾವ ಪಕ್ಷವೂ ಸ್ಥಳೀಯ ಅಭ್ಯರ್ಥಿಗಳ ಮೂಲಕವೇ ಓಟು ಕೇಳಬೇಕು. ಯಾರ್ಯಾರದ್ದೋ ವರ್ಚಸ್ಸು, ಮಾತಿನ ಬಲ, ವ್ಯಕ್ತಿತ್ವವನ್ನು ಪ್ರದರ್ಶಿಸಿ ಮತ ಯಾಚಿಸುವುದು ಒಂದು ರೀತಿಯಲ್ಲಿ ಜನರನ್ನು ವಂಚಿಸಿದಂತೆ. ಒಂದು ಪ್ರದೇಶದ ಸಮಸ್ಯೆ, ಸಂಕಟಗಳು ಚೆನ್ನಾಗಿ ಗೊತ್ತಿರುವುದು ಆಯಾ ಪ್ರದೇಶದ ಅಭ್ಯರ್ಥಿಗೇ ಹೊರತು ಆಮದಿತ ನಾಯಕರಿಗಲ್ಲ.  ದೆಹಲಿಯಿಂದ ಬರುವ ಸೋನಿಯಾಗೆ, ರಾಹುಲ್‍ಗೆ ಒಂದು ವಿಧಾನ ಸಭಾ ಕ್ಷೇತ್ರದಲ್ಲಿ ಎಷ್ಟು ಶಾಲೆ, ಆಸ್ಪತ್ರೆ, ಶೌಚಾಲಯಗಳಿವೆ ಎಂಬುದು ಗೊತ್ತಿರುತ್ತದೆಯೇ? ಅವರು ನಾಲ್ಕು ಮರುಳು ಮಾತುಗಳನ್ನು ಆಡಿ, ಕೈ ಎತ್ತಿ ಹೊರಟು ಹೋಗುತ್ತಾರೆ. ನಿಜವಾಗಿ, ಇಂಥ ಆಮದು ನಾಯಕರಿಗೆ ಜನರು ಮರುಳಾಗುವುದರಿಂದಲೇ, ಸಮಸ್ಯೆಗಳು ಸಮಸ್ಯೆಗಳಾಗಿಯೇ ಉಳಿಯುವುದು. ಅತ್ಯಂತ ಅನರ್ಹ ಅಭ್ಯರ್ಥಿ ಕೂಡ ಗೆದ್ದ ಬರುವುದು. ಆದ್ದರಿಂದ ಈ ಬಾರಿಯ ಚುನಾವಣೆಯು ಆಮದು ನಾಯಕರ ವರ್ಚಸ್ಸಿನಲ್ಲಿ ಕೊಚ್ಚಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಮತದಾರರು ಹೊತ್ತುಕೊಳ್ಳಬೇಕಾಗಿದೆ. ತನ್ನ ಪ್ರಾಮಾಣಿಕತೆ, ಜನಪರ ಕಾಳಜಿ, ಮೌಲ್ಯ ಬದ್ಧತೆಯನ್ನು ಆಧಾರವಾಗಿಸಿಯೇ ಓರ್ವ ಅಭ್ಯರ್ಥಿ ಓಟು ಕೇಳಬೇಕೇ ಹೊರತು ಅಡ್ವಾಣಿಯನ್ನೋ ಮೋದಿಯನ್ನೋ ರಾಹುಲ್‍ರನ್ನೋ ತೋರಿಸಿ ಅಲ್ಲ. ಅವರಿಂದ ಕ್ಷೇತ್ರದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವೂ ಇಲ್ಲ. ಆದ್ದರಿಂದ ರಾಜ್ಯದ ಮತದಾರರು ಈ ಬಾರಿ ಪಕ್ವ ನಿರ್ಧಾರವನ್ನು ತಳೆಯ ಬೇಕಾಗಿದೆ. ಭ್ರಷ್ಟಾಚಾರ, ಕೋಮುವಾದ, ಜಾತಿವಾದ, ಅನೈತಿಕತೆಗಳ ವಕ್ತಾರರನ್ನು ಮುಲಾಜಿಲ್ಲದೇ ಸೋಲಿಸಬೇಕಾಗಿದೆ. ಈ ರಾಜ್ಯಕ್ಕೆ ಇವತ್ತು ಬೇಕಾಗಿರುವುದು ಜಾತಿ, ಕೋಮುಗಳ ಆಧಾರದಲ್ಲಿ ಆಡಳಿತ ನಡೆಸದ, ಬಡವರು-ದುರ್ಬಲರನ್ನು ಅವರ ಧರ್ಮ ನೋಡದೇ ಮೇಲೆತ್ತಲು ಯತ್ನಿಸುವ ಪ್ರಾಮಾಣಿಕ ಜನಪ್ರತಿನಿಧಿಗಳು. ಕಳೆದ 5 ವರ್ಷಗಳು ಈ ನಿಟ್ಟಿನಲ್ಲಿ ಸಂಪೂರ್ಣ ವೈಫಲ್ಯವನ್ನು ಕಂಡಿವೆ. ಮುಂದಿನ 5 ವರ್ಷಗಳು ಹಾಗಾಗದಂತೆ ಎಚ್ಚರಿಕೆ ವಹಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ.

Tuesday, 16 April 2013

ಕುಸುಮ ಎಂಬ ತಾಯಿಯೂ ಐವರು ಮಕ್ಕಳೂ


ಹೆಸರು: ಕುಸುಮ
ಪ್ರಾಯ: 80
ವಾಸ್ತವ್ಯ: ಉಡುಪಿ ಜಿಲ್ಲೆಯ ಪಡುಬಿದ್ರೆ ಸಮೀಪದ ಇನ್ನಾ ಬಸ್‍ಸ್ಟ್ಯಾಂಡ್‍ನಲ್ಲಿ..
   ವಿಧವೆಯಾಗಿರುವ ಕುಸುಮರಿಗೆ ಐವರು ಪುತ್ರರು ಮತ್ತು ಓರ್ವ ಪುತ್ರಿಯಿದ್ದಾರೆ. ಹಿರಿಯ ಪುತ್ರ ತಕ್ಕಮಟ್ಟಿನ ಶ್ರೀಮಂತರಾಗಿದ್ದು, ಉಳಿದವರು ದುಡಿಯುತ್ತಿದ್ದಾರೆ. ಮಕ್ಕಳೊಂದಿಗೆ ಸರದಿಯಂತೆ ಬದುಕುತ್ತಿದ್ದ ಈ ತಾಯಿ ಇತ್ತೀಚೆಗೆ ಜಾರಿ ಬಿದ್ದು ಸೊಂಟ ಮುರಿದುಕೊಂಡಿದ್ದಾರೆ. ನಡೆಯಲು ಕಷ್ಟಪಡುವಂತಾಗಿದೆ. ಹೀಗಿರುತ್ತಾ, ಮಕ್ಕಳು ಈ ತಾಯಿಯನ್ನು ಅಟೋ ರಿಕ್ಷಾದಲ್ಲಿ ಕೂರಿಸಿ ಬಸ್ ಸ್ಟ್ಯಾಂಡ್‍ನ ಬಳಿ ಇಳಿಸಿ ಹೋಗಿದ್ದಾರೆ. ಶೌಚಕ್ಕೆ ಹೋಗಲಾಗದೇ, ಊಟದ ವ್ಯವಸ್ಥೆಯಿಲ್ಲದೇ ಈ ತಾಯಿ ಕಣ್ಣೀರಿಳಿಸುತ್ತಿದ್ದಾರೆ..
    ಜೆಡಿಎಸ್ ಮತ್ತು ಕೆಜೆಪಿ ಪಕ್ಷಗಳ ಚುನಾವಣಾ ಪ್ರಣಾಳಿಕೆಯನ್ನು ಮುಖಪುಟದಲ್ಲಿ ತುಂಬಿಕೊಂಡು ಬಂದ ಎಪ್ರಿಲ್ 14ರ ಪತ್ರಿಕೆಯಲ್ಲಿ ಕಾಣಿಸಿಕೊಂಡ ಸುದ್ದಿ ಇದು. ಸುದ್ದಿಯನ್ನು ಓದುವಾಗ ಎದೆ ಭಾರವಾಗುತ್ತದೆ. ವೃದ್ಧ ತಂದೆ-ತಾಯಿಗೆ ಪ್ರತಿ ತಿಂಗಳು 15 ಸಾವಿರ ರೂಪಾಯಿ ಮಾಸಾಶನ ನೀಡುವಂತೆ ದೆಹಲಿ ಹೈಕೋರ್ಟು ಪುತ್ರನಿಗೆ ಆದೇಶಿಸಿದ್ದು ಇದಕ್ಕಿಂತ ಮೂರು ದಿನಗಳ ಮೊದಲಷ್ಟೇ ವರದಿಯಾಗಿತ್ತು. ಹೆತ್ತವರನ್ನು ಚೆನ್ನಾಗಿ ನೋಡಿಕೊಳ್ಳಿ ಅಂತ ಒಂದು ಕೋರ್ಟು ಆದೇಶಿಸುವಷ್ಟು ಕೌಟುಂಬಿಕ ಮೌಲ್ಯಗಳು ಪತನವಾಗಿವೆ ಎಂದರೆ, ಉಳಿದಂತೆ ಹೇಳುವುದಕ್ಕಾದರೂ ಏನಿದೆ? ಮಕ್ಕಳು ಮತ್ತು ಹೆತ್ತವರ ನಡುವಿನ ಸಂಬಂಧಗಳ ಪಾವಿತ್ರ್ಯತೆಯು ದಿನೇ ದಿನೇ ಕುಸಿಯುತ್ತಿರುವುದಕ್ಕೆ ಏನು ಕಾರಣ? ಆಧುನಿಕತೆಯೇ, ವೈಜ್ಞಾನಿಕ ಪ್ರಗತಿಯೇ ಅಥವಾ ಧಾರ್ಮಿಕ ಮೌಲ್ಯಗಳ ನಿರ್ಲಕ್ಷ್ಯವೇ?
   ಹೆತ್ತವರನ್ನು ಹತ್ತು-ಹಲವು ಬಗೆಯಲ್ಲಿ ವರ್ಣಿಸುವ, ಗೌರವಿಸುವ ದೇಶ ಇದು. ಆದರೂ ಪ್ರತಿದಿನ ಅವರ ಸಂಕಷ್ಟದ ಸುದ್ದಿಗಳು ಹೆಚ್ಚುತ್ತಲೇ ಇವೆ. ನಿಜವಾಗಿ, ಹೆತ್ತವರು ಎಂಬ ನಾಲ್ಕಕ್ಷರಕ್ಕೆ, ‘ಹುಟ್ಟಿಸಿದವರು’ ಎಂಬ ಏಕ ಮಾತ್ರ ಅರ್ಥವಷ್ಟೇ ಇರುವುದಲ್ಲ. ಅದರರ್ಥ ತುಂಬಾ ವಿಶಾಲವಾದದ್ದು. ಹುಟ್ಟಿದಂದಿನಿಂದ ಹಿಡಿದು ದೊಡ್ಡವರಾಗುವ ತನಕ ಹೆತ್ತವರನ್ನು ಬಿಟ್ಟು ಬೇರೊಂದು ಜಗತ್ತು ಮಗುವಿಗಿರುವುದಿಲ್ಲ. ಈ ಭೂಮಿಗೆ ಬರುವುದಕ್ಕಿಂತ ಮೊದಲು ಮಗು ತಾಯಿಯ ಹೊಟ್ಟೆ ಯನ್ನು ಮನೆ ಮಾಡಿಕೊಂಡಿರುತ್ತದೆ. ಆ ಸಂದರ್ಭದಲ್ಲಿ ಮಗುವಿಗೆ ಸ್ವಸಾಮರ್ಥ್ಯವಿರುವುದಿಲ್ಲ. ಅದು ಕುಸುಮರಷ್ಟೇ ದುರ್ಬಲ. ಒಂದು ವೇಳೆ, ತಾಯಿ ಮನಸ್ಸು ಮಾಡಿದರೆ ಯಾವ ಕ್ಷಣದಲ್ಲಿ ಬೇಕಾದರೂ ಆ ಮನೆಯಿಂದ ಅದನ್ನು ಹೊರಗಟ್ಟುವುದಕ್ಕೆ ಸಾಧ್ಯವಿದೆ. ಆದರೆ ಮಗುವನ್ನು ತಾಯಿ ಹೊಟ್ಟೆಯೆಂಬ ತನ್ನ ಮನೆಯಲ್ಲೇ  ಉಳಿಸಿಕೊಳ್ಳುವುದಲ್ಲದೇ ಅದಕ್ಕಾಗಿ ಹತ್ತು-ಹಲವು ಸಂಕಷ್ಟಗಳನ್ನು ಅನುಭವಿಸುತ್ತಾಳೆ. ದೈಹಿಕ, ಮಾನಸಿಕ ಏರುಪೇರುಗಳು ಅವಳಲ್ಲಿ ಉಂಟಾಗುತ್ತವೆ. ತಿನ್ನಲಾಗದೇ, ವಾಂತಿ ಮಾಡುತ್ತಾ, ನಿತ್ರಾಣವನ್ನು ಸಹಿಸುತ್ತಾ ಒಂಬತ್ತು ತಿಂಗಳ ಕಾಲ ಮಗುವನ್ನು ಮನೆಯಲ್ಲಿಟ್ಟು ಪೋಷಿಸುತ್ತಾಳೆ. ಇಷ್ಟಕ್ಕೂ, ತನ್ನೆಲ್ಲಾ ಸಮಸ್ಯೆಗಳಿಗೆ ತನ್ನ ಮನೆ ಸೇರಿರುವ ಈ ಮಗುವೇ ಕಾರಣ ಎಂದು ಸಿಟ್ಟಾಗಿ, ಮಗುವನ್ನು ಮನೆಯಿಂದ ಹೊರದಬ್ಬಲು ತಾಯಿ ತೀರ್ಮಾನಿಸಿರುತ್ತಿದ್ದರೆ ಏನಾಗುತ್ತಿತ್ತು? ಕುಸುಮರ ಐವರು ಗಂಡು ಮಕ್ಕಳಗೆ ಈ ಜಗತ್ತನ್ನು ನೋಡುವ ಭಾಗ್ಯ ಸಿಗುತ್ತಿತ್ತೇ? ಆದರೆ ಯಾವ ತಾಯಿಯೂ ತನ್ನ ಮನೆ ಸೇರಿರುವ ಶಿಶುವನ್ನು ಸಂಕಷ್ಟ ಎಂದು ಪರಿಗಣಿಸುವುದೇ ಇಲ್ಲ. ಇನ್ನು, ಮನೆಯಿಂದ ಭೂಮಿಗೆ ಬಂದ ಶಿಶುವನ್ನು ತಾಯಿ ನೋಡುವುದೂ ಅಕ್ಕರೆಯಿಂದಲೇ. ಬಿದ್ದ ಮಗುವನ್ನು ಎಬ್ಬಿಸುವುದು, ಗಾಯಕ್ಕೆ ಚಿಕಿತ್ಸೆ ಮಾಡಿಸುವುದು, ತಾವು ಉಣ್ಣದೇ ಮಗುವಿಗೆ ಉಣಿಸುವುದು.. ಹೀಗೆ ಹೆತ್ತವರು ಎಂಬ ಎರಡು ಜೀವಗಳು ಒಂದು ಮಗುವಿನ ಬದುಕಿನಲ್ಲಿ ದೊಡ್ಡದೊಂದು ತ್ಯಾಗವನ್ನು ಮಾಡಿರುತ್ತವೆ. ಆದ್ದರಿಂದಲೇ ಪವಿತ್ರ ಕುರ್‍ಆನ್, ‘ತಾಯಿಯು ನಿತ್ರಾಣದ ಮೇಲೆ ನಿತ್ರಾಣವನ್ನು ಸಹಿಸಿ ನಿಮ್ಮನ್ನು ತನ್ನ ಗರ್ಭದಲ್ಲಿರಿಸಿದಳು. ಆದ್ದರಿಂದ ಆಕೆಗೆ ಕೃತಜ್ಞತೆ ಸಲ್ಲಿಸಿ ಎಂದು ಮಕ್ಕಳೊಂದಿಗೆ ಹೇಳಿದ್ದು. ಹೆತ್ತವರ ಹಕ್ಕುಗಳನ್ನು ತಿಳಿದುಕೊಳ್ಳಿ (31:14) ಎಂದು ಆದೇಶಿಸಿದ್ದು. ವೃದ್ಧರಾಗಿರುವ ಹೆತ್ತವರನ್ನು ಬಸ್ ಸ್ಟ್ಯಾಂಡ್‍ಗಳಲ್ಲಿ ಬಿಟ್ಟು ಬಿಡುವುದು ಬಿಡಿ, ‘ಛೆ’ ಎಂಬ ಪದವನ್ನು ಕೂಡ ಅವರ ವಿರುದ್ಧ ಬಳಸಬಾರದು (17: 23) ಎಂದು ತಾಕೀತು ಮಾಡಿದ್ದು. ಹೆತ್ತವರ ಸಿಟ್ಟಿಗೆ, ಅವರ ಕಣ್ಣೀರಿಗೆ ಕಾರಣವಾಗುವ ಮಕ್ಕಳು ಅವರು ಎಷ್ಟೇ ದೊಡ್ಡ ಧರ್ಮಿಷ್ಟರಾಗಿದ್ದರೂ ನಮಾಝ್, ಉಪವಾಸ, ಹಜ್ಜ್ ಮಾಡುವ ಮುಲ್ಲಾ ಆಗಿದ್ದರೂ ಸ್ವರ್ಗ ಪ್ರವೇಶಿಸುವುದಿಲ್ಲ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದು.
   ಭ್ರಷ್ಟಾಚಾರ, ಅತ್ಯಾಚಾರ, ಅಶ್ಲೀಲತೆಗಳ ಕುರಿತಂತೆ ಸಾಕಷ್ಟು ಚರ್ಚೆಗಳಾಗುತ್ತಿರುವ ಸಂದರ್ಭ ಇವತ್ತಿನದು. ಭ್ರಷ್ಟಾಚಾರ, ಅತ್ಯಾಚಾರಕ್ಕೆಲ್ಲ ಪ್ರಬಲ ಕಾನೂನುಗಳ ರಚನೆಯು ಬಿರುಸುಗೊಂಡ ದಿನಗಳಿವು. ಆದರೂ ಭ್ರಷ್ಟಾಚಾರದ ನಿರ್ಮೂಲನೆಯ ಬಗ್ಗೆ ಸಾರ್ವಜನಿಕರಲ್ಲಿ ಯಾವ ನಿರೀಕ್ಷೆಯೂ ಕಾಣಿಸುತ್ತಿಲ್ಲ. ಅತ್ಯಾಚಾರ ಪ್ರಕರಣಗಳಲ್ಲಿ ಇಳಿಕೆಯೂ ಆಗುತ್ತಿಲ್ಲ. ಒಂದು ರೀತಿಯಲ್ಲಿ, ಕಾನೂನುಗಳೂ ಅಪರಾಧಗಳೂ ಹೆಚ್ಚುತ್ತಿರುವ ಈ ಕಾಲದಲ್ಲಿ, ಹೆತ್ತವರೂ ಸಮಸ್ಯೆಯ ಭಾಗವಾಗುತ್ತಿದ್ದಾರೆ. ಮಕ್ಕಳು, ಮೊಮ್ಮಕ್ಕಳ ಜೊತೆ ತಮ್ಮ ದಿನವನ್ನು ಕಳೆಯಬೇಕಾಗಿದ್ದ ವೃದ್ಧ ಹೆತ್ತವರು ಬಸ್ ಸ್ಟ್ಯಾಂಡ್ ಗಳಲ್ಲೋ ಬೀದಿ, ಆಶ್ರಮಗಳಲ್ಲೋ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದಲೇ, ಈ ಬಗ್ಗೆ ಸಾರ್ವಜನಿಕವಾಗಿ ಗಂಭೀರ ಚರ್ಚೆಯೊಂದು ನಡೆಯಬೇಕಾಗಿದೆ. ವೃದ್ಧರಿಗೆ ಮಾಸಾಶನವನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿ ರಾಜಕೀಯ ಪಕ್ಷಗಳು ತೆಪ್ಪಗಾಗುವಂತೆ ನಾವು ವೃದ್ಧರನ್ನು ಬಸ್‍ಸ್ಟ್ಯಾಂಡ್‍ಗಳಲ್ಲಿ ನೋಡಿ ಸುಮ್ಮನಾಗಬಾರದು. ಸಭೆ, ವಿಚಾರಗೋಷ್ಠಿ, ಸಂವಾದಗಳನ್ನು ಏರ್ಪಡಿಸಿ, ಹೆತ್ತವರಿಗೂ ಮತ್ತು ಆಧ್ಯಾತ್ಮಿಕತೆಗೂ ನಡುವೆ ಇರುವ ಸಂಬಂಧ, ಅವರ ತ್ಯಾಗ-ಪರಿಶ್ರಮಗಳು ಸಾರ್ವಜನಿಕ ಚರ್ಚೆಯಾಗುವಂತೆ ನೋಡಿಕೊಳ್ಳಬೇಕು. ಇಷ್ಟಕ್ಕೂ, ಹೆತ್ತವರನ್ನು ಆದರಿಸುವಂತೆ ಮಾಡಲು ಕೋರ್ಟಿನ ಆದೇಶದಿಂದ ಸಾಧ್ಯವೇ? ಮಕ್ಕಳು ಹೆತ್ತವರನ್ನು ಆರೈಕೆ ಮಾಡಬೇಕಾದದ್ದು ಮನಸಂತೃಪ್ತಿಯಿಂದ. ಇವರನ್ನು ಆರೈಕೆ ಮಾಡಿದರೆ ತನಗೆ ಸ್ವರ್ಗ ಸಿಗುತ್ತದೆ ಎಂಬ ಆಧ್ಯಾತ್ಮಿಕ ಪ್ರಜ್ಞೆಯಿಂದ. ಅವರು ಕಣ್ಣೀರಾದರೆ ತನಗೆ ನರಕ ಶತಃಸಿದ್ಧ ಎಂಬ ಭೀತಿಯಿಂದ. ಈ ಆಧ್ಯಾತ್ಮಿಕ ಪ್ರಜ್ಞೆ ಸಮಾಜದಲ್ಲಿ ಬೆಳೆದು ಬರದ ಹೊರತು ಹೆತ್ತವರು ನೆಮ್ಮದಿಯಾಗಿರಲು ಸಾಧ್ಯವಿಲ್ಲ.