Tuesday, 23 July 2013

ಬಾಂಬ್ ಹುಡುಕುವ ನಾವು ಮತ್ತು ಪ್ರತಿಭಟಿಸುವ ಅವರು

   ಕಾಶ್ಮೀರವನ್ನು ಭಾರತದ ಭಾಗವೆಂದು ಸಾಧಿಸಿ ತೋರಿಸುವುದಕ್ಕಾಗಿ ಐತಿಹಾಸಿಕ ದಾಖಲೆ, ಅಂಕಿ-ಅಂಶಗಳನ್ನು ಈ ದೇಶದಲ್ಲಿ ಧಾರಾಳ ಪ್ರಮಾಣದಲ್ಲಿ ಮಂಡಿಸಲಾಗಿದೆ. ಕಾಶ್ಮೀರಿಗಳ ಕುರಿತಂತೆ, ಅವರ ನೋವು, ಸಂಕಟಗಳ ಕುರಿತಂತೆ ಚರ್ಚಿಸಿದುದಕ್ಕಿಂತ ಹೆಚ್ಚು, ಕಾಶ್ಮೀರ ಎಂಬ ಕಲ್ಲು-ಮಣ್ಣಿನ ಭೂಮಿಯ ಬಗ್ಗೆ ಅತೀವ ಕಾಳಜಿಯಿಂದ ಮಾತಾಡಿದವರೂ ಇಲ್ಲಿದ್ದಾರೆ. ಅವರಿಗೆ ಕಾಶ್ಮೀರ ಬೇಕೇ ಹೊರತು ಕಾಶ್ಮೀರಿಗಳಲ್ಲ. ಕಾಶ್ಮೀರಿಗಳೆಲ್ಲ ಒಂದೋ ಉಗ್ರವಾದಿಗಳು ಇಲ್ಲವೇ ಅವರ ಬೆಂಬಲಿಗರು ಎಂಬ ಧಾಟಿಯಲ್ಲೇ ಅವರು ಮಾತಾಡುತ್ತಾರೆ. ಕಾಶ್ಮೀರಿಗಳು ಪ್ರತಿಭಟಿಸಿದರೆ ಈ ಮಂದಿ ಪ್ರತಿಭಟನಾಕಾರರನ್ನೇ ಟೀಕಿಸುತ್ತಾರೆ. ಸದ್ಯ ಕಾಶ್ಮೀರದಲ್ಲಿ ಕಾಣಿಸಿಕೊಂಡಿರುವ ಪ್ರತಿಭಟನೆಯ ಬಗ್ಗೆಯೂ ದೇಶದ ಒಂದು ವರ್ಗ ಇಂಥ ನಕಾರಾತ್ಮಕ ಧಾಟಿಯಲ್ಲೇ ಮಾತಾಡುತ್ತಿದೆ.
   ದಿ ಹಿಂದೂ ಪತ್ರಿಕೆಯಲ್ಲಿ ಜೂನ್ 30ರಂದು ‘ನೈಟ್ ಆಫ್ ಹಾರರ್’ ಎಂಬೊಂದು ಲೇಖನವನ್ನು ಹರ್ಷಮಂದರ್ ಬರೆದಿದ್ದರು. ಕಾಶ್ಮೀರಿಗಳನ್ನು ಭಯೋತ್ಪಾದಕರಂತೆ ಮತ್ತು ಅಲ್ಲಿಯ ಭದ್ರತಾ ಪಡೆಗಳನ್ನು ನೂರು ಶೇಕಡಾ ಸಭ್ಯರಂತೆ ಬಿಂಬಿಸುವವರೆಲ್ಲ ಒಮ್ಮೆ ಆ ಲೇಖನವನ್ನು ಓದಬೇಕು. 1991 ಫೆಬ್ರವರಿ 23ರ ರಾತ್ರಿ ಕುಪ್ವಾರ ಜಿಲ್ಲೆಯ ಕುನನ್ ಪೋಶ್‍ಪೋರಾ ಗ್ರಾಮಕ್ಕೆ ಸೇನೆ ನುಗ್ಗುತ್ತದೆ. ಭಯೋತ್ಪಾದಕರು ಅಡಗಿಕೊಂಡಿದ್ದಾರೆಂಬ ನೆಪವೊಡ್ಡಿ ಮನೆ ಮನೆ ತಪಾಸಿಸುತ್ತದೆ. ಮಕ್ಕಳ ಎದುರೇ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತದೆ. ಪುರುಷರನ್ನು ಭೀಕರ ಹಿಂಸೆಗೆ ಗುರಿಪಡಿಸುತ್ತದೆ. ಎಲ್ಲಿಯವರೆಗೆಂದರೆ ಆ ಗ್ರಾಮದ ಮಹಿಳೆಯರು ಎರಡ್ಮೂರು ದಿನಗಳ ವರೆಗೆ ದೂರು ಕೊಡುವುದಕ್ಕೂ ಹಿಂಜರಿಯುತ್ತಾರೆ. ಕೊನೆಗೆ ರಾಜ್ಯ ಮಾನವ ಹಕ್ಕು ಆಯೋಗವು ಸಂತ್ರಸ್ತರ ದೂರನ್ನು ಆಲಿಸಲು ಮುಂದಾಗುತ್ತದಲ್ಲದೇ 2011 ಅಕ್ಟೋಬರ್ 16ರಂದು ವರದಿಯನ್ನು ಮಂಡಿಸುತ್ತದೆ. ಯೋಧರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವುದಾಗಿ ಅದು ದಾಖಲೆ ಸಮೇತ ಸಾಬೀತುಪಡಿಸುತ್ತದೆ. ಆದ್ದರಿಂದ ಸಂತ್ರಸ್ತ ಮಹಿಳೆಯರಿಗೆ 3 ಲಕ್ಷ ಪರಿಹಾರ ನೀಡಬೇಕು ಮತ್ತು ಯೋಧರ ವಿರುದ್ಧ ಹೂಡಲಾಗಿರುವ ಕ್ರಿಮಿನಲ್ ಮೊಕದ್ದಮೆಯ ತನಿಖೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸುತ್ತದೆ. ಹಿರಿಯ ಪತ್ರಕರ್ತೆ ಸೀಮಾ ಮುಸ್ತಫಾ, ಜಾನ್ ದಯಾಳ್, ಸೆಹ್ಬಾ ಫಾರೂಖಿ, ಇ.ಎನ್. ರಾಮ್ ಮೋಹನ್, ಬಾಲಚಂದ್ರ, ಮುಹಮ್ಮದ್ ಸಲೀಮ್.. ಮತ್ತಿತರ ಮಾನವ ಹಕ್ಕು ಕಾರ್ಯಕರ್ತರು 2013 ಜೂನ್‍ನಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಮಾತುಗಳನ್ನು ಆಲಿಸಿದ್ದರು. ಘಟನೆ ನಡೆದು 22 ವರ್ಷಗಳಾಗಿದ್ದರೂ ಸಂತ್ರಸ್ತ ಮಹಿಳೆಯರು ಅಂದಿನ ಭೀತಿಯಿಂದ ಹೊರಬಂದಿಲ್ಲ ಎಂದೂ ಹೇಳಿದ್ದರು. ನಿಜವಾಗಿ, ಕಾಶ್ಮೀರದಲ್ಲಿ ಈಗ ಉದ್ಭವಿಸಿರುವ ಆತಂಕಕಾರಿ ಪರಿಸ್ಥಿತಿಯನ್ನು ಇಂಥ ಹಿನ್ನೆಲೆಗಳ ಜೊತೆಗಿಟ್ಟು ನೋಡಬೇಕಾದ ಅಗತ್ಯ ಇದೆ. 2009ರಲ್ಲಿ ಬೆಂಗಳೂರಿನಲ್ಲಿ ಸಿ.ಕೆ. ನಾಯ್ಡು ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿತ್ತು. ಕಾಶ್ಮೀರ ತಂಡವನ್ನು ಪ್ರತಿನಿಧಿಸಿದ್ದ ಪರ್ವೇಝ್ ರಸೂಲ್ ಎಂಬ ಯುವ ಕ್ರಿಕೆಟಿಗನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡರು. ಆತ ತನ್ನ ಬ್ಯಾಗ್‍ನಲ್ಲಿ ಬ್ಯಾಟು, ಪ್ಯಾಡು, ಬಾಲ್‍ಗಳ ಬದಲು ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದಾನೆ ಎಂಬುದಾಗಿ ಪೊಲೀಸರು ಅನುಮಾನಿಸಿದ್ದರು. ಆ ಯುವಕ ಇವತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ಅಷ್ಟಕ್ಕೂ, ಓರ್ವ ಕ್ರಿಕೆಟಿಗನ ಮೇಲೆಯೇ ಪೊಲೀಸರ ನಡವಳಿಕೆ ಈ ಮಟ್ಟದಲ್ಲಿದೆಯೆಂದ ಮೇಲೆ ಸಾಮಾನ್ಯ ಯುವಕರನ್ನು ಭದ್ರತಾ ಪಡೆಗಳು ಹೇಗೆ ನಡೆಸಿಕೊಂಡಾವು? ಕಾಶ್ಮೀರಿಗಳ ಪ್ರತಿಭಟನೆ, ಕಲ್ಲೆಸೆತಗಳನ್ನು ಟೀಕಿಸುವವರೆಲ್ಲ ಅದರ ಇನ್ನೊಂದು ಮುಖವನ್ನು ಎಷ್ಟರ ಮಟ್ಟಿಗೆ ಅರ್ಥೈಸಲು ಪ್ರಯತ್ನಿಸಿದ್ದಾರೆ? ಕಾಶ್ಮೀರವು ಭಾರತದ ಭಾಗವಾಗುವುದಕ್ಕಿಂತ ಮೊದಲು ಕಾಶ್ಮೀರಿಗಳನ್ನು ಭಾರತದ ಭಾಗವಾಗುವಂತೆ ಮಾಡುವುದಕ್ಕೆ ಸರ್ಕಾರಗಳು, ಭದ್ರತಾ ಪಡೆಗಳು ಯಾವ ಮಟ್ಟದಲ್ಲಿ ಶ್ರಮಿಸಿವೆ? ಕಾಶ್ಮೀರ ಅಂದರೆ ಬರೇ ಪ್ರವಾಸಿಗರನ್ನು ಸೆಳೆಯುವ, ಆಪಲ್ ಬೆಳೆಯುವ ಭೂಮಿಯಷ್ಟೇ ಅಲ್ಲವಲ್ಲ. ಕಾಶ್ಮೀರ ಭಾರತದ ಭಾಗವಾಗುವುದೆಂದರೆ ಕಾಶ್ಮೀರಿಗಳೂ ಭಾರತದ ಭಾಗವಾಗುವುದೆಂದರ್ಥ. ಆದರೆ ಇಂಥದ್ದೊಂದು ಇನ್‍ಕ್ಲೂಸಿವ್ ಧೋರಣೆಯನ್ನು ತಳೆಯಲು ನಮಗೆ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ? ಕಾಶ್ಮೀರದ ಪ್ರತ್ಯೇಕತಾ ಹೋರಾಟದ ಬಗ್ಗೆ, ಪಂಡಿತರ ವಲಸೆಯ ಕುರಿತು ಸರಿ-ತಪ್ಪುಗಳ ಚರ್ಚೆ ನಡೆಸುವುದು ಸುಲಭ. ಕಾಶ್ಮೀರಿಗಳ ಮೇಲಿನ ದೌರ್ಜನ್ಯವನ್ನು ಎತ್ತಿ ಹೇಳಿದಾಗಲೆಲ್ಲ, ಪಂಡಿತರ ಸ್ಥಿತಿಯನ್ನು ಉಲ್ಲೇಖಿಸಿ ಎದುರುತ್ತರ ಕೊಡುವುದು ಈ ದೇಶದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ನಿಜವಾಗಿ, ಇಂಥ ಜಿದ್ದಾಜಿದ್ದಿಗಳೇ ಕಾಶ್ಮೀರವನ್ನು ಇವತ್ತು ಈ ಹಂತಕ್ಕೆ ತಲುಪಿಸಿರುವುದು. ಪ್ರತ್ಯೇಕತಾ ಹೋರಾಟ, ಅದಕ್ಕೆ ಬೆಂಬಲವಾಗಿ ನಿಂತ ವಿದೇಶಿ ಶಕ್ತಿಗಳು, ಅದರಿಂದಾಗಿ ಕಣಿವೆಯಲ್ಲಾದ ರಕ್ತಪಾತಗಳು ಮತ್ತು ಜಗ್ಮೋಹನ್ ಎಂಬ ರಾಜ್ಯಪಾಲರ ಪಕ್ಷಪಾತಿ ನಿಲುವುಗಳು.. ಎಲ್ಲವೂ ಚರಿತ್ರೆಗೆ ಸೇರಿ ಹೋಗಿವೆ. ಇವತ್ತು ಕಾಶ್ಮೀರವನ್ನು ಪ್ರತಿ ನಿಧಿಸುತ್ತಿರುವುದು ಒಂದಾನೊಂದು ಕಾಲದ ಮಂದಿಯಲ್ಲ. ಯುವ ಸಮೂಹ. ಅವರನ್ನು ವಿಶ್ವಾಸದಿಂದ ನಡೆಸಿಕೊಳ್ಳುವ ಬದಲು ಪ್ರತ್ಯೇಕತಾವಾದಿಗಳಂತೆ ನಡೆಸಿಕೊಂಡರೆ ಕಣಿವೆ ಶಾಂತವಾಗುವುದಾದರೂ ಹೇಗೆ? ಕಾಶ್ಮೀರದಲ್ಲಿ ಮಾನವ ಹಕ್ಕುಗಳಿಗೆ ಭಾರೀ ತೂಕವೇನೂ ಇಲ್ಲ. ಹಕ್ಕುಗಳ ಬಗ್ಗೆ ತೀವ್ರ ನಿರಾಶೆಗೊಂಡ ಒಂದು ದೊಡ್ಡ ಸಮೂಹವೇ ಅಲ್ಲಿ ನಿರ್ಮಾಣವಾಗಿದೆ. ಕಾಶ್ಮೀರವು ಇವತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಬೇಕಾದರೆ ನಾಲ್ಕೈದು ಮಂದಿಯ ಸಾವಾದರೂ ಸಂಭವಿಸಬೇಕು ಎಂಬಂಥ ವಾತಾವರಣವಿದೆ. ಇಂಥ ಸ್ಥಿತಿಯಲ್ಲಿ ಕಾಶ್ಮೀರವನ್ನು ಭಾರತದ ಭಾಗ ಎಂದು ಡಂಗುರ ಸಾರುವುದರಿಂದ ಏನು ಲಾಭವಿದೆ? ಕಾಶ್ಮೀರಿಗಳನ್ನು ವಿಶ್ವಾಸದಿಂದ ನಡೆಸಿಕೊಳ್ಳದ ಹೊರತು ಅವರನ್ನು ಭಾಗವಾಗಿಸುವುದಾದರೂ ಹೇಗೆ?
   ಕಾಶ್ಮೀರದ ಯುವ ಸಮೂಹದ ಆಗ್ರಹಗಳಿಗೆ ಕಿವಿಯಾಗುವ ಮತ್ತು ಅವರಲ್ಲಿ ಭರವಸೆ ತುಂಬುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕಿದೆ. ಕಾಶ್ಮೀರಿಗಳೆಂದರೆ ಭಯೋತ್ಪಾದಕರಲ್ಲ, ನಮ್ಮ ಸಹೋದರರು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕಿದೆ. ಕ್ರಿಕೆಟ್ ಆಟಗಾರನ ಬ್ಯಾಗ್‍ನಲ್ಲಿ ಬಾಂಬು ಹುಡುಕುವ, ಪ್ರತಿ ಮನೆಯಲ್ಲೂ ಭಯೋತ್ಪಾದಕನನ್ನು ಕಾಣುವ, ಕಾಶ್ಮೀರ ಎಂಬ ಭೂಮಿಯನ್ನು ಮಾತ್ರ ಪ್ರೀತಿಸುವ ನಮ್ಮ ಸಣ್ಣ ಮನಸನ್ನೂ ತುಸು ವಿಶಾಲಗೊಳಿಸಬೇಕಿದೆ.

Monday, 15 July 2013

ಮನುಷ್ಯರಾಗಿರುವುದಷ್ಟೇ ಅರ್ಹತೆಯಲ್ಲ..

   ಓರ್ವ ಪ್ರಧಾನಿ ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು ಏನೆಲ್ಲ ಎಂಬ ಚರ್ಚೆಯು ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿಯ ಒಂದು ವರ್ಗ ಬಿಂಬಿಸಿದಂದಿನಿಂದಲೇ ಆರಂಭವಾಗಿದೆ. ಮಾತ್ರವಲ್ಲ, ಆ ಚರ್ಚೆಯಲ್ಲಿ ಮೋದಿ ಮತ್ತೆ ಮತ್ತೆ ತನ್ನ ಅನರ್ಹತೆಯನ್ನು ಸಾರುತ್ತಲೂ ಇದ್ದಾರೆ. ಅವರೊಳಗೆ ಒಂದು ಬಗೆಯ ಗೊಂದಲ ಇದೆ. ತನ್ನ ಅಭಿಮಾನಿ ವಲಯವನ್ನೂ ಮೀರಿ ಗುರುತಿಸಿಕೊಳ್ಳುವ ಹಂಬಲ ಕೆಲವೊಮ್ಮೆ ಅವರ ಮಾತಿನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವೊಮ್ಮೆ, ಎಲ್ಲಿ ತನ್ನ ಅಭಿಮಾನಿ ವಲಯ ಮುನಿಸಿಕೊಳ್ಳುವುದೋ ಎಂಬ ಭೀತಿ ಕಾಣಿಸುತ್ತದೆ. ಸದ್ಭಾವನಾ ಯಾತ್ರೆ, 2002ರ ಗುಜರಾತ್ ನರಮೇಧಕ್ಕೆ ವಿಷಾದ, ನಾಯಿಮರಿ, ಹಿಂದೂ ರಾಷ್ಟ್ರವಾದಿ.. ಇವೆಲ್ಲ ಅವರೊಳಗಿನ ಗೊಂದಲಕ್ಕೆ ಪುರಾವೆಗಳು. 120 ಕೋಟಿ ಭಾರತೀಯರಿಗೆ ನಾಯಕತ್ವ ನೀಡಬೇಕಾದ ವ್ಯಕ್ತಿಯೊಬ್ಬರಿಗೆ ಇರಬೇಕಾದ ಮೊಟ್ಟಮೊದಲ ಅರ್ಹತೆ ಏನೆಂದರೆ, ಈ ದೇಶ ಮತ್ತು ಇಲ್ಲಿರುವ ಜನರ ಕುರಿತಂತೆ ಗೊಂದಲರಹಿತ ನಿಲುವು. ಈ ದೇಶದಲ್ಲಿರುವುದು ಮೋದಿಯ ಅಭಿಮಾನಿಗಳು ಮಾತ್ರ ಅಲ್ಲ. ಅವರನ್ನು ಅನುಮಾನಿಸುವ, ಭೀತಿಯಿಂದ ನೋಡುವ, ಖಂಡಿಸುವ ಮಂದಿ ಕೂಡ ಧಾರಾಳ ಇದ್ದಾರೆ. ಅವರೆಲ್ಲರನ್ನೂ ಸಮಚಿತ್ತದಿಂದ ನಿಭಾಯಿಸುವ ಹೊಣೆಗಾರಿಕೆ ನಾಯಕನ ಮೇಲಿರುತ್ತದೆ. ಮೋದಿಗೆ ಇದು ಸಾಧ್ಯವಾಗಿದೆಯೇ? ಈ ದೇಶದ 20 ಕೋಟಿಯಷ್ಟಿರುವ ದೊಡ್ಡದೊಂದು ಜನಸಮೂಹವನ್ನು ಕಾರಿನ ಚಕ್ರದಡಿಗೆ ಸಿಲುಕುವ ಬಡಪಾಯಿ ನಾಯಿಮರಿಗೆ ಅವರು ಹೋಲಿಸುತ್ತಾರೆ. ಗುಜರಾತ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅವರಾಡಿದ ಈ ಮಾತಿನಿಂದ ರವಾನೆಯಾಗುವ ಸೂಚನೆಯಾದರೂ ಏನು? ನಾಯಿ ಮರಿಯನ್ನು ಯಾವ ಚಾಲಕ ಕೂಡ ಉದ್ದೇಶಪೂರ್ವಕವಾಗಿ ಚಕ್ರದಡಿ ಸಿಲುಕಿಸುವುದಿಲ್ಲ. ಅನೇಕ ಬಾರಿ ಪ್ರಾಣಿಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಚಾಲಕನೇ ಅಪಾಯಕ್ಕೆ ಸಿಲುಕುವುದಿದೆ. ಆದರೆ ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ನಿರ್ವಹಿಸಿದ ಪಾತ್ರ ಈ ರೀತಿಯದ್ದೇ? ಉದ್ದೇಶಪೂರ್ವಕ ಪಾತ್ರ ಇದ್ದಿರಲಿಲ್ಲವೇ? ಅಂಥದ್ದೊಂದು ಹತ್ಯಾಕಾಂಡದ ಉದ್ದೇಶದಿಂದಲೇ ಅವರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮೊದಲೇ ಆಯಕಟ್ಟಿನ ಜಾಗಕ್ಕೆ ನೇಮಿಸಿರುವುದು ಸುಳ್ಳೇ? ಗುಜರಾತ್‍ನ ಹತ್ತಾರು ಪೊಲೀಸ್ ಅಧಿಕಾರಿಗಳು ಹತ್ಯಾಕಾಂಡದ ಆರೋಪ ಹೊತ್ತು ತಿರುಗುತ್ತಿರುವುದು ಏನನ್ನು ಸೂಚಿಸುತ್ತದೆ? ಇವೆಲ್ಲ ಮೋದಿಯ ಗಮನಕ್ಕೆ ಬಂದೇ ಇಲ್ಲ ಅನ್ನುವುದಾದರೆ ಅಂಥ ನಾಯಕನೊಬ್ಬ ಈ ದೇಶವನ್ನು ಮುನ್ನಡೆಸುವುದಾದರೂ ಹೇಗೆ? ಕೇವಲ 6 ಕೋಟಿ ಜನಸಂಖ್ಯೆ ಇರುವ ರಾಜ್ಯವೊಂದರ ಆಡಳಿತ ವ್ಯವಸ್ಥೆ, ಅಧಿಕಾರಿ ವರ್ಗಗಳ ಮೇಲೆ ನಿಯಂತ್ರಣ ಇಡಲಾಗದ ವ್ಯಕ್ತಿ 120 ಕೋಟಿ ಜನಸಂಖ್ಯೆ ಇರುವ ರಾಷ್ಟ್ರವೊಂದರ ಮೇಲೆ ಹೇಗೆ ತಾನೇ ನಿಯಂತ್ರಣ ಇಟ್ಟುಕೊಳ್ಳಬಲ್ಲ? ಗುಜರಾತ್ ಹತ್ಯಾಕಾಂಡದಲ್ಲಿ ತಾನು ನಿಷ್ಕಳಂಕ ಅಂತ ಮೋದಿ ಹೇಳುತ್ತಲೇ ಬಂದಿದ್ದಾರೆ. ಆದ್ದರಿಂದಲೇ ತಾನು ಕ್ಷಮೆ ಯಾಚಿಸಲ್ಲ ಎಂದೂ ಹೇಳುತ್ತಿದ್ದಾರೆ. ಹಾಗಾದರೆ, 1984ರ ಸಿಕ್ಖ್ ಹತ್ಯಾಕಾಂಡದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ? ಸೋನಿಯಾ ಕಾಂಗ್ರೆಸ್‍ನ ನಾಯಕಿಯಾಗಿದ್ದರೆ? ಆದರೂ ಅವರು ಕ್ಷಮೆ ಯಾಚಿಸಿಲ್ಲವೇ? ಎಲ್ಲೋ ಒಂದು ಕಡೆ ರೈಲು ಅಪಘಾತಕ್ಕೀಡಾದಾಗ, ಲಾಲ್ ಬಹದ್ದೂರ್ ಶಾಸ್ತ್ರಿಯವರು ರೈಲ್ವೆ ಖಾತೆಗೆ ರಾಜೀನಾಮೆ ನೀಡಿದರಲ್ಲ, ಯಾಕೆ? ಅವರೇನು ಅಪಘಾತಕ್ಕೀಡಾದ ರೈಲಿನ ಚಾಲಕರಾಗಿದ್ದರೆ? ಕಲ್ಲಿದ್ದಲು ಹಗರಣ, ಟೆಲಿಕಾಂ, ಕಾಮನ್ವೆಲ್ತ್ ಹಗರಣದ ಹೊಣೆ ಹೊತ್ತುಕೊಂಡು ಪ್ರಧಾನಿ ಮನಮೋಹನ್ ಸಿಂಗ್‍ರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ಹಲವು ಬಾರಿ ಆಗ್ರಹಿಸಿದೆ. ಉತ್ತರಾಖಂಡದ ಪ್ರವಾಹ ನಿರ್ವಹಣೆಯಲ್ಲಿ ಅಲ್ಲಿನ ಕಾಂಗ್ರೆಸ್ ಮುಖ್ಯಮಂತ್ರಿ ಬಹುಗುಣ ವಿಫಲರಾಗಿದ್ದಾರೆಂದು ಆರೋಪಿಸಿ ಇದೇ ಬಿಜೆಪಿ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಇಲ್ಲೆಲ್ಲಾ ಪರಿಗಣನೆಗೆ ಬರುವ ನಿಯಮ ಮೋದಿ ವಿಷಯದಲ್ಲಿ ಮಾತ್ರ ಅಳವಡಿಕೆ ಆಗುತ್ತಿಲ್ಲವೇಕೆ?
   ನಿಜವಾಗಿ, ಮೋದಿ ಈಗಾಗಲೇ ಒಂದು ನಿರ್ದಿಷ್ಟ ಇಮೇಜನ್ನು ಬೆಳೆಸಿಕೊಂಡಿದ್ದಾರೆ. ಒಂದು ವೇಳೆ ಗುಜರಾತ್ ಹತ್ಯಾಕಾಂಡಕ್ಕಾಗಿ ಕ್ಷಮೆ ಯಾಚಿಸಿದರೆ, ಆ ಇಮೇಜ್‍ಗೆ ಧಕ್ಕೆ ಬರಬಹುದೆಂಬ ಭೀತಿ ಅವರಲ್ಲಿ ಮತ್ತು ಅವರನ್ನು ಉಬ್ಬಿಸುತ್ತಿರುವವರಲ್ಲಿ ಇದೆ. ಬಾಬರಿ ಮಸೀದಿಯ ಧ್ವಂಸಕ್ಕೆ ವಿಷಾದಿಸಿದ ಮತ್ತು ಜಿನ್ನಾರನ್ನು ಹೊಗಳಿದ ಅಡ್ವಾಣಿಯಂತೆ ತಾನೂ ಕಳೆದುಹೋಗುವೆನೆಂಬ ಭಯ ಅವರನ್ನು ಕಾಡುತ್ತಿದೆ. ಆದ್ದರಿಂದಲೇ ಕ್ಷಮೆ ಯಾಚನೆಯ ವಿಚಾರ ಪ್ರಸ್ತಾಪವಾದಾಗಲೆಲ್ಲ ಅವರು ನಾಯಿ ಮರಿಯಂಥ ಕತೆಯನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸರ್ವರನ್ನೂ ಮೆಚ್ಚಿಸಿಕೊಳ್ಳುವುದಕ್ಕಾಗಿ ಸದ್ಭಾವನಾ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಮತ್ತೊಮ್ಮೆ ತಾನು ಹಿಂದೂ ರಾಷ್ಟ್ರವಾದಿ ಅನ್ನುತ್ತಾರೆ. ಒಂದು ರೀತಿಯಲ್ಲಿ ಅವರನ್ನು ಅಸ್ತಿತ್ವ ಭಯ ಕಾಡುತ್ತಿದೆ. ಅಷ್ಟಕ್ಕೂ, ಮುಸ್ಲಿಮ್ ರಾಷ್ಟ್ರವಾದಿ, ಕ್ರೈಸ್ತ ರಾಷ್ಟ್ರವಾದಿ, ಸಿಕ್ಖ್ ರಾಷ್ಟ್ರವಾದಿ.. ಎಂದೆಲ್ಲಾ ರಾಷ್ಟ್ರವಾದದಲ್ಲಿ ವಿಭಜನೆಯಿದೆಯೇ? ನಾಳೆ, ರಾಜ್ಯದ ಆರೋಗ್ಯ ಮಂತ್ರಿ ಯು.ಟಿ. ಕಾದರ್ ಅವರು,  ತಾನು ಮುಸ್ಲಿಮ್ ರಾಷ್ಟ್ರವಾದಿ ಅಂದರೆ ಬಿಜೆಪಿ ಏನಂದೀತು? ಗೃಹ ಸಚಿವ ಜಾರ್ಜ್‍ ರು,  ತಾನು ಕ್ರೈಸ್ತ ರಾಷ್ಟ್ರವಾದಿ ಅಂದರೆ ಇದೇ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾರದೇ? ಹಿಂದೂ ರಾಷ್ಟ್ರವಾದವನ್ನು ಮುಂದಿಡುವ ಮೋದಿಯಂತೆಯೇ ದಲಿತ್ ರಾಷ್ಟ್ರದ, ಸಿಕ್ಖ್ ರಾಷ್ಟ್ರದ ವಾದವನ್ನು ಮುಂದಿಡುವವರು ತಯಾರಾಗಬಹುದಲ್ಲವೇ? ಮೋದಿಗೆ ಇರುವಷ್ಟೇ ಹಕ್ಕು, ಅರ್ಹತೆ, ಸ್ವಾತಂತ್ರ್ಯ ಈ ದೇಶದ ಇತರೆಲ್ಲ ಪ್ರಜೆಗಳಿಗೂ ಇದೆಯಲ್ಲವೇ? ಅವರಂತೆಯೇ ಇತರರೂ ಮಾತಾಡಲು, ಹಕ್ಕು ಪ್ರತಿಪಾದಿಸಲು ಪ್ರಾರಂಭಿಸಿದರೆ ಈ ದೇಶ ಎತ್ತ ಸಾಗೀತು?
   ಮೋದಿಯ ಮಾತು, ಆವೇಶ, ಹಾವಭಾವ, ಆಂಗಿಕ ಸನ್ನೆಗಳೆಲ್ಲ ಅವರೊಳಗೆ ಓರ್ವ ಅಪಾಯಕಾರಿ ಖಳನಾಯಕ ಇರುವುದನ್ನು ಚೆನ್ನಾಗಿ ಬಿಂಬಿಸುತ್ತದೆ. ಆ ಖಳನಾಯಕನೇ 2002ರ ಹತ್ಯಾ ಕಾಂಡದ ಸಂದರ್ಭದಲ್ಲಿ ಗುಜರಾತ್‍ಗೆ ನೇತೃತ್ವ ನೀಡಿದ್ದು. ಅಂಥ ವ್ಯಕ್ತಿಯೊಬ್ಬ ಈ ದೇಶಕ್ಕೆ ನೇತೃತ್ವ ಕೊಡಲು ಯಾವ ರೀತಿಯಿಂದಲೂ ಸೂಕ್ತರಲ್ಲ. 120 ಕೋಟಿ ಭಾರತೀಯರನ್ನು ಸಮಾನವಾಗಿ ಕಾಣುವ ಮತ್ತು ನಾಯಿ ಮರಿಗಳಂತೆ ಕಾಣದಿರುವ ಆರೋಗ್ಯಪೂರ್ಣ ಮನಸ್ಸು ಆ ನಾಯಕನಿಗಿರಬೇಕು. ಬರೇ ಮನುಷ್ಯರಾಗಿರುವುದಷ್ಟೇ ಪ್ರಧಾನಿ ಹುದ್ದೆಗಿರುವ ಅರ್ಹತೆಯಲ್ಲ. ಎಲ್ಲ ಅಂಗಗಳೂ ಸ್ವಸ್ಥ ಮತ್ತು ನಿರ್ಮಲವಾಗಿರಬೇಕಾದುದೂ  ಅಗತ್ಯ. ಆದರೆ ಮೋದಿ ಬರೇ ಮನುಷ್ಯರಷ್ಟೇ ಆಗಿದ್ದಾರೆ. ಉಳಿದ ಯಾವ ಅರ್ಹತೆಗಳೂ ಅವರಲ್ಲಿ ಕಾಣಿಸುತ್ತಿಲ್ಲ.

Monday, 8 July 2013

ಬುದ್ಧಗಯಾದ ಬಾಂಬ್!

   ಯಾವುದೇ ಒಂದು ಬಾಂಬ್ ಸ್ಫೋಟವನ್ನು ಖಂಡಿಸುವುದಕ್ಕೆ- ಸ್ಫೋಟ ನಡೆದ ಜಾಗ, ಸಾವಿಗೀಡಾದವರ ಸಂಖ್ಯೆ, ಅವರ ಧರ್ಮಗಳನ್ನು ಪರಿಗಣಿಸುವುದು ಮನುಷ್ಯ ವಿರೋಧಿ ಕ್ರಮ ಎಂದು ಬಲವಾಗಿ ಸಾರುತ್ತಲೇ ನಾವೆಲ್ಲ ಬುದ್ಧಗಯಾದ ಬಾಂಬ್ ಸ್ಫೋಟವನ್ನು ಖಂಡಿಸಬೇಕಾಗಿದೆ. ಬಾಂಬಿಟ್ಟವರು ಯಾವ ಸಂಘಟನೆಗೇ ಸೇರಿರಲಿ ಮತ್ತು ಅವರ ಹೆಸರ ಏನೇ ಆಗಿರಲಿ, ನಾವು ಖಂಡನೆಗೆ ಬಳಸುವ ಭಾಷೆ, ಹೇಳುವ ಧಾಟಿ ಮತ್ತು ಮಾಡುವ ಪ್ರತಿಭಟನೆಗಳಲ್ಲಿ ಯಾವ ರಾಜಿಯನ್ನೂ ಮಾಡದಿರೋಣ. ಈ ಹಿಂದೆ ಮಾಲೆಗಾಂವ್, ಮಕ್ಕಾ ಮಸೀದಿ, ಸಂಜೋತಾ ಎಕ್ಸ್‍ಪ್ರೆಸ್ ಸ್ಫೋಟಗಳ ಸಂದರ್ಭದಲ್ಲಿ ಮಾಧ್ಯಮಗಳು ಅತಿ ಗಂಭೀರ ತಪ್ಪುಗಳನ್ನು ಎಸಗಿದ್ದುವು. ಸ್ಫೋಟಿಸಿದವರು ಪತ್ರಿಕಾ ಕಚೇರಿಗಳಲ್ಲೇ ಅವಿತು ಕೂತಿದ್ದಾರೋ ಎಂದು ಓದುಗರು ಅನುಮಾನಿಸುವಷ್ಟು ಖಚಿತವಾಗಿ ಆರೋಪಿಗಳ ಹೆಸರನ್ನೂ ಸಂಘಟನೆಯನ್ನೂ ಅವು ಹೆಸರಿಸಿದ್ದುವು. ಮಾಧ್ಯಮಗಳು ಮಾಡಿದ ಈ ಪ್ರಮಾದ ಸಮಾಜದ ಮೇಲೆ ಯಾವ ಮಟ್ಟಿನ ಅಡ್ಡ ಪರಿಣಾಮ ಬೀರಿತೆಂದರೆ, ಒಂದು ಸಮುದಾಯವನ್ನೇ ಟೆರರಿಸ್ಟ್ ಗಳಾಗಿ ಕಾಣುವಷ್ಟು. ಅನೇಕಾರು ಯುವಕರು ಹಲವು ವರ್ಷಗಳ ವರೆಗೆ ಅನ್ಯಾಯವಾಗಿ ಜೈಲಲ್ಲಿ ಕೊಳೆಯುವಷ್ಟು. ಆದರೆ ಆ ಬಳಿಕ ಅಸೀಮಾನಂದ, ಸ್ವಾಮಿ ದಯಾನಂದ, ಸಾಧ್ವಿ ಪ್ರಜ್ಞಾ ಸಿಂಗ್, ಕರ್ನಲ್ ಪುರೋಹಿತರೆಲ್ಲ ಮಾಧ್ಯಮಗಳ ಈ ಪ್ರಮಾದವನ್ನು ಬಹಿರಂಗಕ್ಕೆ ತಂದರೂ ನಿರೀಕ್ಷಿತ ಮಟ್ಟದಲ್ಲಿ ಮಾಧ್ಯಮಗಳು ಆತ್ಮಾವಲೋಕನಕ್ಕೆ ಇಳಿದದ್ದು ಕಡಿಮೆ. ಆದ್ದರಿಂದಲೇ ಬುದ್ಧಗಯಾ ಸ್ಫೋಟದ ಕುರಿತಂತೆ ಮಾಧ್ಯಮಗಳು ಮಾಡಿರುವ ಪ್ರಥಮ ವರದಿ ಮತ್ತು ವಿಶ್ಲೇಷಣೆಯ ಬಗ್ಗೆ ವಿಷಾದ ಮೂಡುವುದು.
   ಬಾಂಬ್ ಸ್ಫೋಟಕ್ಕೆ ಈಡಾದ ಮಹಾಬೋಧಿ ಮಂದಿರವಷ್ಟೇ ಬುದ್ಧಗಯಾದಲ್ಲಿ ಇರುವುದಲ್ಲ. ಅದು 12 ಎಕ್ರೆ ಪ್ರದೇಶಗಳ ವಿಶಾಲ ಆವರಣ. ಬೌದ್ಧರ ಇನ್ನೂ ಐದಾರು ಮಂದಿರಗಳು ಈ ಬುದ್ಧಗಯಾ ಆವರಣದಲ್ಲಿವೆ. ಅಕ್ಟೋಬರ್ ಮತ್ತು ಮಾರ್ಚ್ ಗಳ ಮಧ್ಯೆ ಲಕ್ಷಾಂತರ ಮಂದಿ ಈ ಮಂದಿರಗಳಿಗೆ ಭೇಟಿ ಕೊಡುತ್ತಾರೆ. ಬೋಧಿವೃಕ್ಷದ ಬಳಿ ಮಹಾಬೋಧಿ ಮಂದಿರವನ್ನು ರಾಜ ಅಶೋಕ ಕಟ್ಟಿದ್ದರೂ ಬೌದ್ಧ ಧರ್ಮದ ವಿರುದ್ಧ ಶಂಕರಾಚಾರ್ಯರ ನೇತೃತ್ವದಲ್ಲಿ ನಡೆದ ಆಂದೋಲನದಿಂದಾಗಿ ಅದು ಪಾಳು ಬಿದ್ದಿತು. ಬೌದ್ಧರು ಚೆಲ್ಲಾಪಿಲ್ಲಿಯಾದರು. 1861ರಲ್ಲಿ ಬ್ರಿಟಿಷ್ ಪುರಾತತ್ವ ಇಲಾಖೆಯು ಮಹಾಬೋಧಿ ಆವರಣದಲ್ಲಿ ನಡೆಸಿದ ಉತ್ಖನನದ ಬಳಿಕ ಮಂದಿರ ಮತ್ತೆ ಚಲಾವಣೆಗೆ ಬಂತು. ಆದರೆ ಬೌದ್ಧ ನಿರ್ಮೂಲನ ಚಳವಳಿಯಿಂದ ಪ್ರಭಾವಿತರಾದ ಕೆಲವರು ಈ ಬೌದ್ಧ ಮಂದಿರ ಆವರಣದಲ್ಲಿ ಶಿವ ದೇವಾಲಯವನ್ನು ಸ್ಥಾಪಿಸಿದರು. 1949ರಲ್ಲಿ ಬಿಹಾರ ಸರಕಾರವು ಬುದ್ಧಗಯಾ ಟೆಂಪಲ್ ಕಾಯ್ದೆಯನ್ನು ಜಾರಿಗೆ ತಂದು ಮಂದಿರದ ಆವರಣವನ್ನು ವಶಕ್ಕೆ ತೆಗೆದುಕೊಂಡಾಗ ಹಿಂದೂಗಳು ತಗಾದೆ ತೆಗೆದಿದ್ದರು. ಮಂದಿರ ವ್ಯವಹಾರದಲ್ಲಿ ತಮಗೂ ಹಕ್ಕಿದೆಯೆಂದು ವಾದಿಸಿದ್ದರು. ಆದ್ದರಿಂದ ಸರಕಾರವು ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ 5 ಮಂದಿ ಹಿಂದೂಗಳು ಮತ್ತು 4 ಮಂದಿ ಬೌದ್ಧರನ್ನೊಳಗೊಂಡ ಸಮಿತಿಯನ್ನು ರಚಿಸಿ ಬುದ್ಧಗಯಾ ಆವರಣದ ವ್ಯವಹಾರವನ್ನು ಅದರ ಕೈಗೆ ಒಪ್ಪಿಸಿತು. ಆದರೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗವು ಮಂದಿರ ಆವರಣದ ನಿರ್ವಹಣೆಯ ಹೊಣೆಯನ್ನು ಬೌದ್ಧರಿಗೆ ನೀಡಬೇಕೆಂದು ಶಿಫಾರಸು ಮಾಡಿತು. ಇದನ್ನು ಹಿಂದೂಗಳು ವಿರೋಧಿಸಿದರು. ಬೌದ್ಧರು ಬೆಂಬಲಿಸಿದರು. ಈ ವಿವಾದ ಇನ್ನೂ ಬಗೆಹರಿದಿಲ್ಲ.
   ನಿಜವಾಗಿ, ಬುದ್ಧಗಯಾದ ಬಾಂಬ್ ಸ್ಫೋಟವನ್ನು ಯಾರು ನಡೆಸಿರಬಹುದು ಎಂದು ಖಚಿತವಾಗಿ ಹೇಳುವುದಕ್ಕಿಂತ ಮೊದಲು ಇಂಥ ಸಾಧ್ಯತೆಗಳ ಸುತ್ತವೂ ಗಮನ ಹರಿಸಬೇಕಿದೆ. ಉಗ್ರರು ಬಾಂಬ್ ಸ್ಫೋಟಿಸಿದ್ದು ಬೆಳಗ್ಗಿನ ಪ್ರಾರ್ಥನೆ ಮುಗಿದು ಸುಮಾರು ನೂರರಷ್ಟಿದ್ದ ಭಕ್ತರು ಬಹುತೇಕ ಚದುರಿದ ಬಳಿಕ. ಹಾಗಾದರೆ ಉಗ್ರರ ಉದ್ದೇಶವೇನು? ಮಾಧ್ಯಮಗಳು ಹೇಳುವಂತೆ, ರೋಹಿಂಗ್ಯನ್ ಮುಸ್ಲಿಮರ ಮೇಲಿನ ದಾಳಿಗೆ ಪ್ರತೀಕಾರವಾಗಿ ಈ ಸ್ಫೋಟ ನಡೆದಿದೆಯೆಂದಾದರೆ ಅಕ್ಟೋಬರ್ ಮತ್ತು ಮಾರ್ಚ್ ತಿಂಗಳುಗಳ  ಮಧ್ಯೆ ಸ್ಫೋಟ ನಡೆಯಬೇಕಿತ್ತು. ಯಾಕೆಂದರೆ ಬೌದ್ಧರು ಸಾವಿರಾರು ಸಂಖ್ಯೆಯಲ್ಲಿ ಸೇರುವುದು ಈ ತಿಂಗಳಲ್ಲೇ. ಹೀಗಿರುವಾಗ ಈ ಬಾಂಬುಗಳಿಗೆ ರೋಹಿಂಗ್ಯನ್ ಬಣ್ಣವನ್ನು ಬಳಿದು, ಹಿಂದೂ-ಬೌದ್ಧಮಯಗೊಳಿಸುವುದಾದರೂ ಏಕೆ? ರೋಹಿಂಗ್ಯನ್ ಹೊರತಾದ ಇತರ ಸಾಧ್ಯತೆಗಳ ಬಗ್ಗೆಯೇಕೆ ಮಾಧ್ಯಮಗಳು ಚರ್ಚಿಸುತ್ತಿಲ್ಲ? ಅಂದಹಾಗೆ, ಮಾಧ್ಯಮಗಳು ಹೇಳುತ್ತಿರುವ ಇಂಡಿಯನ್ ಮುಜಾಹಿದೀನ್ ಅಂತೂ ಮನುಷ್ಯರನ್ನು ಕೊಲ್ಲುವಲ್ಲಿ ಸಾಕಷ್ಟು ಅನುಭವ ಇರುವ ಸಂಘಟನೆಯಾಗಿ ಈ ದೇಶದಲ್ಲಿ ಗುರುತಿಸಿಕೊಂಡಿದೆ. ಅಂಥ ಚತುರ ಸಂಘಟನೆಯೊಂದು ಬುದ್ಧಗಯಾದಲ್ಲಿ ಯಾರಿಗೂ ತೊಂದರೆ ಉಂಟು ಮಾಡಲಾರದ ಬಾಂಬು ಸ್ಫೋಟವೊಂದನ್ನು ನಡೆಸಿದೆಯೆಂದು ನಂಬುವುದಾದರೂ ಹೇಗೆ? ಅದು ಮನುಷ್ಯರ ಬಗ್ಗೆ ಈ ಮಟ್ಟದ ಕರುಣೆಯನ್ನು ಯಾವಾಗಿನಿಂದ ಬೆಳೆಸಿಕೊಂಡಿದೆ?
   ಒಂದು ರೀತಿಯಲ್ಲಿ, ಇಂಡಿಯನ್ ಮುಜಾಹಿದೀನ್ ಎಂಬ- ಹೆಸರು, ವಿಳಾಸ ಗೊತ್ತಿಲ್ಲದ ಸಂಘಟನೆಯ ಮೇಲೆ ಈ ವರೆಗೆ ಇರುವ ಆರೋಪಗಳಿಗೆ ಹೋಲಿಸಿದರೆ ಬುದ್ಧಗಯಾದಲ್ಲಿ ನಡೆದ ಸ್ಪೋಟ ಯಾವ ರೀತಿಯಲ್ಲೂ  ತಾಳೆಯಾಗುತ್ತಿಲ್ಲ. ಸ್ಫೋಟದ ಸಮಯ ಮತ್ತು ಹಾನಿಯನ್ನು ಪರಿಗಣಿಸಿದರೆ ಈ ಬಾಂಬುಗಳಿಗೆ ಮಾಧ್ಯಮಗಳು ಹೇಳದಂಥ ಇನ್ನಾವುದೋ ಉದ್ದೇಶ ಇರುವಂತಿದೆ. ಆದರೆ ಅದನ್ನು ಪತ್ತೆ ಹಚ್ಚುವುದಕ್ಕೆ ಇಲ್ಲಿನ ರಾಜಕೀಯ ಪಕ್ಷಗಳು ತನಿಖಾ ಸಂಸ್ಥೆಗಳಿಗೆ ಎಷ್ಟಂಶ ಸ್ವಾತಂತ್ರ್ಯವನ್ನು ಕೊಡಬಲ್ಲವು? ಬಿಜೆಪಿ ಈಗಾಗಲೇ ಬಿಹಾರ್ ಬಂದ್ ನಡೆಸಿದೆ. ನಿತೀಶ್ ಕುಮಾರ್‍ರ ವೈಫಲ್ಯಕ್ಕೆ ಪುರಾವೆಯಾಗಿ ಈ ಸ್ಫೋಟವನ್ನು ಬಿಂಬಿಸಲು ಅವರ ವಿರೋಧಿಗಳು ಪ್ರಯತ್ನಿಸುತ್ತಿದ್ದಾರೆ. ಇಂಥ ಹೊತ್ತಲ್ಲಿ ಬುದ್ಧಗಯಾವನ್ನು ಬೆದರಿಸಿದ ನಿಜವಾದ ಅಪರಾಧಿಗಳು ಶಿಕ್ಷೆಗೊಳಪಟ್ಟಾರೆಂದು ಹೇಗೆ ನಂಬುವುದು? ವಿರೋಧಿಗಳ ಬಾಯಿ ಮುಚ್ಚಿಸಬೇಕಾದರೆ ನಿತೀಶ್ ಕುಮಾರ್‍ರಿಗೆ ತಕ್ಷಣ ಕೆಲವು ಭಯೋತ್ಪಾದಕರ ಅಗತ್ಯವಿದೆ. ಬಿಜೆಪಿಗಂತೂ ಆ ಭಯೋತ್ಪಾದಕರು ಮುಸ್ಲಿಮರೇ ಆಗಿರಬೇಕೆಂಬ ಹಠವಿದೆ. ಈ ಹಠ ಮತ್ತು ಅಗತ್ಯಗಳ ನಡುವೆ ನಿಜವಾದ ಉಗ್ರರು ತಪ್ಪಿಸಿಕೊಳ್ಳುವ ಸಾಧ್ಯತೆ ಖಂಡಿತ ಇದೆ. ಯಾರನ್ನಾದರೂ ಎನ್‍ಕೌಂಟರ್‍ನಲ್ಲಿ ಸಾಯಿಸಿ ಅವರಿಗೆ ಬುದ್ಧಗಯಾದ ಬಾಂಬನ್ನು ಅಂಟಿಸಿಬಿಡುವುದಕ್ಕೂ ಅವಕಾಶ ಇದೆ. ಆದ್ದರಿಂದ ರಾಜಕೀಯ ಲಾಭ-ನಷ್ಟಗಳಿಗೆ ಸಿಲುಕದೇ ಬುದ್ಧಗಯಾ ತನಿಖೆಗೆ ಒಳಪಡಲಿ. ಅಪರಾಧಿಗಳು ತಮ್ಮ ‘ಧರ್ಮ'ದ ಕಾರಣಕ್ಕಾಗಿ ಯಾರ ಕೃಪೆಗೂ ಒಳಗಾಗದಿರಲಿ.

Monday, 24 June 2013

ಸ್ವರ್ಗ-ನರಕದ ಚರ್ಚೆಯಲ್ಲಿ ಗೆಲ್ಲುತ್ತಿರುವ ಶೋಷಕರು

ನೇತ್ರಾವತಿಯಲ್ಲಿ ತಾಯಿ, ಮಕ್ಕಳ ಆತ್ಮಹತ್ಯೆ
   ಅತ್ಯಾಚಾರದ ಸುತ್ತ ಮಾಧ್ಯಮಗಳು ನಡೆಸುತ್ತಿರುವ ಚರ್ಚೆ ಮತ್ತು ಸಾರ್ವಜನಿಕರಲ್ಲಿ ಆ ಬಗ್ಗೆ ಇರುವ ಕುತೂಹಲಕ್ಕೆ ಹೋಲಿಸಿದರೆ, ಆತ್ಮಹತ್ಯೆ ಏನೇನೂ ಅಲ್ಲ.  ಆತ್ಮಹತ್ಯೆಯ  ಸುತ್ತ ವಿಚಾರ ಗೋಷ್ಠಿಗಳಾಗುವುದು ತೀರಾ ಕಡಿಮೆ. ಆತ್ಮಹತ್ಯೆಯನ್ನು ಖಂಡಿಸಿ ಎಲ್ಲೂ ಪ್ರತಿಭಟನೆಗಳಾಗುವುದಿಲ್ಲ. ಮಾಧ್ಯಮಗಳು ಕೂಡ
ಆತ್ಮಹತ್ಯೆಯನ್ನು ತೀರಾ ಒಳಪುಟದ ನಿಧನ ಕಾಲಮ್‍ನ ಬಳಿ ಪ್ರಕಟಿಸಿ ಸುಮ್ಮನಾಗುತ್ತವೆ. ಒಂದು ವೇಳೆ ಆತ್ಮಹತ್ಯೆಗೆ ಬ್ರೇಕಿಂಗ್ ನ್ಯೂಸ್‍ನ ಗೌರವ ಸಿಗಬೇಕೆಂದರೆ ಜಿಯಾ ಖಾನ್‍ಳಂಥ ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಳ್ಳಬೇಕು. ದುರಂತ ಏನೆಂದರೆ, ಆತ್ಮಹತ್ಯೆಯ ಕುರಿತಂತೆ ಇವತ್ತು ಸಾರ್ವಜನಿಕವಾಗಿ ನೆಲೆಗೊಂಡಿರುವ ಈ ನಿರ್ಲಕ್ಷ್ಯದ  ಮನಃಸ್ಥಿತಿಯೇ ಒಂದು ಹಂತದ ವರೆಗೆ ಆತ್ಮಹತ್ಯೆಗೆ ಪ್ರಚೋದಕವಾಗುತ್ತಿದೆ.
  1.  ತನ್ನಿಬ್ಬರು ಮಕ್ಕಳೊಂದಿಗೆ ತಾಯಿಯೋರ್ವರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
  2.  74 ವರ್ಷದ ನಿವೃತ್ತ ಶಿಕ್ಷಕ ಮತ್ತು ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಐವರು ಪುತ್ರಿಯರು ಮತ್ತು ಓರ್ವ ಪುತ್ರ ಇದ್ದಾರೆ.
  3.  ತಮ್ಮ ಶವಸಂಸ್ಕಾರಕ್ಕಾಗಿ ಎಲ್ಲಾ ಏರ್ಪಾಟುಗಳನ್ನು ಮಾಡಿಟ್ಟು ವೃದ್ಧ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಏಕೈಕ ಮಗನು ತಮ್ಮನ್ನು ನಿರ್ಲಕ್ಷಿಸಿದುದೇ ಇದಕ್ಕೆ ಕಾರಣ..
   ಕಳೆದೊಂದು ವಾರದಲ್ಲಿ ಪ್ರಕಟವಾದ ಮಾಧ್ಯಮ ಸುದ್ದಿಗಳಿವು. ಇಂಥ ಸುದ್ದಿಗಳು ಇವತ್ತು ಎಷ್ಟು ಸಾಮಾನ್ಯ ಅಂದರೆ, ಇವಕ್ಕೆ ಯಾವ ಊರಿನ ಹೆಸರು ಕೊಟ್ಟರೂ ಅಚ್ಚರಿ ಆಗುವುದಿಲ್ಲ. ಯಾಕೆಂದರೆ ಎಲ್ಲ ಊರುಗಳಲ್ಲೂ ಇವತ್ತು ಆತ್ಮಹತ್ಯೆಗಳು ಮಾಮೂಲಿ ಅನ್ನಿಸತೊಡಗಿವೆ. ಮಾತ್ರವಲ್ಲ, ಆ ಕುರಿತಂತೆ ಹುಟ್ಟಿಕೊಳ್ಳುವ ಹೆಚ್ಚಿನ ಚರ್ಚೆಗಳು ಆತ್ಮಹತ್ಯೆ ಮಾಡಿಕೊಂಡವರನ್ನೇ ಅಪರಾಧಿಗಳೆಂದು ಬಿಂಬಿಸಿ ಕೊನೆಗೊಳ್ಳುತ್ತಲೂ ಇವೆ. ನಿಜವಾಗಿ ಅತ್ಯಾಚಾರದ ಕುರಿತಂತೆ ನಾವೆಷ್ಟು ಗಂಭೀರವಾಗುತ್ತೇವೋ ಆತ್ಮಹತ್ಯೆಯ ಕುರಿತಂತೆಯೂ ಅಷ್ಟೇ ಗಂಭೀರತೆ ಪ್ರದರ್ಶಿಸಬೇಕಾಗಿದೆ. ಅತ್ಯಾಚಾರಕ್ಕೆ ಹತ್ತು-ಹಲವು ಕಾರಣಗಳು ಇರುವಂತೆಯೇ ಆತ್ಮಹತ್ಯೆಗೂ ಅಂಥ ಕಾರಣಗಳು ಇವೆ. ಆದ್ದರಿಂದ ಆತ್ಮಹತ್ಯೆಗೈದವರನ್ನು ನರಕಕ್ಕೋ ಸ್ವರ್ಗಕ್ಕೋ ಅಟ್ಟಿ ಸುಮ್ಮನಾಗುವುದು, ಈ ಎಲ್ಲ ಕಾರಣಗಳನ್ನೂ ನಿರ್ಲಕ್ಷಿಸಿದಂತಾಗುತ್ತದೆ.
   ಈ ಜಗತ್ತಿನಲ್ಲಿ ಯಾರೂ ಸಂತಸವನ್ನು ತಡಕೊಳ್ಳಲಾಗದೇ ಆತ್ಮಹತ್ಯೆ ಮಾಡಿಕೊಂಡದ್ದಿಲ್ಲ. ನದಿಗೆ ಹಾರುವ ತಾಯಿ, ನೇಣು ಹಾಕಿಕೊಳ್ಳುವ ಯುವತಿ, ಬದುಕು ಕೊನೆಗೊಳಿಸುವ ವೃದ್ಧ ಹೆತ್ತವರು.. ಎಲ್ಲರಲ್ಲೂ ಒಂದೊಂದು ಬಗೆಯ ಕಾರಣಗಳಿವೆ. ಇಷ್ಟಕ್ಕೂ, ಯುವತಿ ಧರಿಸಿದ ಉಡುಪನ್ನು ತೋರಿಸಿ ಅತ್ಯಾಚಾರವನ್ನು ಸಮರ್ಥಿಸಿದರೆ ಏನಾದೀತು? ಯುವತಿ ರಾತ್ರಿ ಒಂಟಿಯಾಗಿ ಹೋದುದನ್ನೇ ಅತ್ಯಾಚಾರಕ್ಕೆ ಕಾರಣವೆಂದು ಹೇಳಿ ಆಕೆಯನ್ನೇ ಅಪರಾಧಿಯಾಗಿ ಬಿಂಬಿಸುವ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ. ನಿಜವಾಗಿ, ಆತ್ಮಹತ್ಯೆಯನ್ನೇ ಅಪರಾಧಿಯೆಂದು ದೂರಿದಂತೆಯೇ ಇದು. ಅಸಮರ್ಪಕ ಬಟ್ಟೆ ಧರಿಸುವುದು, ಒಂಟಿಯಾಗಿ ಹೋಗುವುದೆಲ್ಲ ಅತ್ಯಾಚಾರಕ್ಕಿರುವ ಹಲವು ದೊಡ್ಡ ಕಾರಣಗಳ ಪೈಕಿ ಸಣ್ಣದೊಂದು ಅಂಶವೇ ಹೊರತು ಅವೇ ಮುಖ್ಯ ಕಾರಣಗಳಲ್ಲ. ಹಾಗೆಯೇ ಆತ್ಮಹತ್ಯೆ ಕೂಡ. ದಿನನಿತ್ಯದ ಬದುಕಿನಲ್ಲಿ ಆತ್ಮಹತ್ಯೆಗೆ ನೂರಾರು ಅಂಶಗಳು ಪ್ರಚೋದಕವಾಗಿರುತ್ತವೆ. ಆ ಹಂತದಲ್ಲಿ ಸರಿಯೋ ತಪ್ಪೋ ಎಂದು ಆಲೋಚಿಸುವುದಕ್ಕೂ ಅವಕಾಶವಿಲ್ಲದಷ್ಟು ಆ ಕಾರಣಗಳು ಬಲವಾಗಿರುತ್ತವೆ. ಆತ್ಮಹತ್ಯೆಯನ್ನು ತಪ್ಪು ಅನ್ನುವುದು ಸುಲಭ. ಆದರೆ ಅಂಥದ್ದೊಂದು ಪರಿಸ್ಥಿತಿಯನ್ನು ಓರ್ವ ತಾಯಿಗೋ ಹೆತ್ತವರಿಗೋ ತಂದಿಟ್ಟವರ ಬಗ್ಗೆ ಈ ಸಮಾಜದ ಅಭಿಪ್ರಾಯವೇನು? ಆತ್ಮಹತ್ಯೆಯನ್ನೇ ಅಪರಾಧಿ ಎಂದು ಬಿಂಬಿಸಿದ ಕೂಡಲೇ ಅದಕ್ಕೆ ಪ್ರಚೋದನೆ ಕೊಟ್ಟವರು ಅರ್ಧದಷ್ಟು ಗೆದ್ದಿರುತ್ತಾರೆ. ಆತ್ಮಹತ್ಯೆಗಿರುವ ಶಿಕ್ಷೆ, ಪಾಪಗಳಲ್ಲಿ ಅದಕ್ಕಿರುವ ಸ್ಥಾನ-ಮಾನಗಳ ಸುತ್ತ ಚರ್ಚೆ ಸಾಗಿದಂತೆಯೇ ಅವರ ಇಮೇಜು ಉತ್ತಮಗೊಳ್ಳುತ್ತಾ ಹೋಗು ತ್ತದೆ. ಆತ್ಮಹತ್ಯೆಯಲ್ಲಿ ತಮ್ಮ ಪಾತ್ರವು ಚರ್ಚೆಯಾಗದಂತೆ ನೋಡಿಕೊಳ್ಳುವುದಕ್ಕೆ ಅವರಿಗೆ ಅಂಥದ್ದೊಂದು ಚರ್ಚೆಯ ಅಗತ್ಯವೂ ಇರುತ್ತದೆ. ನಿಧಾನವಾಗಿ ಅವರು ತಮ್ಮನ್ನು ಪರಮ ಪ್ರಾಮಾಣಿಕರಂತೆ ಮತ್ತು ಆತ್ಮಹತ್ಯೆ ಮಾಡಿದವರನ್ನೇ ಪರಮ ಪಾಪಿಗಳಂತೆ ಬಿಂಬಿಸಿ ಬದುಕುವುದಕ್ಕೆ ಈ ಚರ್ಚೆಗಳು ಅವಕಾಶ ಮಾಡಿಕೊಡುತ್ತವೆ.
   ಅಂದಹಾಗೆ, ಇಂಥದ್ದೊಂದು ಅವಕಾಶ ಆತ್ಮಹತ್ಯೆಗೆ ಪ್ರಚೋದಿಸಿದವರಿಗೆ ಮಾತ್ರ ಇರುವುದಲ್ಲ. ಅತ್ಯಾಚಾರಿ ಮತ್ತು ಅಂಥ ಮನಃಸ್ಥಿತಿಯಿರುವವರೂ ಇಂಥ ಚರ್ಚೆಗಳಿಂದ ಲಾಭ ಪಡಕೊಳ್ಳುವುದಿದೆ. ಅತ್ಯಾಚಾರಕ್ಕೀಡಾದ ಯುವತಿಯ ಉಡುಪು, ವರ್ತನೆಗಳನ್ನೇ ಪ್ರಮುಖ ಅಪರಾಧದಂತೆ ಬಿಂಬಿಸಿ ನಡೆಯುವ ಚರ್ಚೆಗಳು ನಿಧಾನವಾಗಿ 'ಅತ್ಯಾಚಾರ'ವೆಂಬ ಕ್ರೌರ್ಯದ ತೂಕವನ್ನು ಕಡಿಮೆಗೊಳಿಸುತ್ತಾ ಸಾಗುತ್ತದೆ. ನಿಜವಾಗಿ, ಇವತ್ತು ಅಪರಾಧ ಪ್ರವೃತ್ತಿಗಳು ಹೆಚ್ಚಾಗುವುದಕ್ಕೆ ಕಾರಣ, ಸಾರ್ವಜನಿಕವಾಗಿ ನೆಲೆಗೊಂಡಿರುವ ಇಂಥ ಮನಃಸ್ಥಿತಿಗಳೇ. ಆದ್ದರಿಂದ ಆತ್ಮಹತ್ಯೆ ಮತ್ತು ಅತ್ಯಾಚಾರಗಳ ಸುತ್ತ ಏರ್ಪಡುವ ಚರ್ಚೆಗಳಿಂದ ಅಪರಾಧಿಗಳಿಗೆ ಲಾಭವಾಗದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯ ಇದೆ. ಆತ್ಮಹತ್ಯೆ ಸರಿಯೋ ತಪ್ಪೋ ಅನ್ನುವುದಕ್ಕಿಂತ ವೃದ್ಧರನ್ನು, ತಾಯಂದಿರನ್ನು ಅಂಥ ಕೃತ್ಯಕ್ಕೆ ದೂಡುವ ಪಾಪಿಗಳ ಸುತ್ತ ಗಂಭೀರ ಚರ್ಚೆಗಳು ನಡೆಯಬೇಕಿದೆ. ಒಂದು ಮನೆಯ ಸೊಸೆ ಆತ್ಮಹತ್ಯೆ ಮಾಡಿ ಕೊಳ್ಳುವುದೆಂದರೆ, ಅದನ್ನು ಆ ಮನೆಗೆ ಮಾತ್ರ ಸೀಮಿತಗೊಳಿಸಿ ನೋಡಬೇಕಾದ ಅಗತ್ಯವಿಲ್ಲ. ಆ ಸೊಸೆಗಿಂತ ಕಠಿಣ ಸಮಸ್ಯೆಗಳನ್ನು ಎದುರಿಸುತ್ತಿರುವ ಆದರೆ ಆತ್ಮಹತ್ಯೆಗೆ ಧೈರ್ಯವಿಲ್ಲದ ಅಸಂಖ್ಯ ಸೊಸೆಯಂದಿರ ಬಗ್ಗೆ ಆಲೋಚಿಸುವುದಕ್ಕೆ ಅಂಥ ಪ್ರಕರಣಗಳು ಪ್ರಚೋದಕವಾಗಬೇಕು. ಆತ್ಮಹತ್ಯೆಗೆ ಪ್ರಚೋದಕವಾಗುವ  ಶೋಷಕರ ಬಗ್ಗೆ ಅಥವಾ ಅತ್ಯಾಚಾರಿಗಳ ಕ್ರೂರ ಮನಃಸ್ಥಿತಿಯ ಬಗ್ಗೆ ಒತ್ತು ಕೊಟ್ಟು ಮಾತಾಡದೇ ಆತ್ಮಹತ್ಯೆಯನ್ನು ಮಹಾ ಪಾಪವೆಂದೋ ಉಡುಪನ್ನು ಮಹಾ ಅಪರಾಧಿಯೆಂದೋ ಸಾರುವುದು ಅಂತಿಮವಾಗಿ ಶೋಷಕರಿಗೆ ಸಮಾಧಾನ ತಂದುಕೊಡಬಲ್ಲುದೇ ಹೊರತು ಅವರಲ್ಲಿ ಪರಿವರ್ತನೆಯನ್ನಲ್ಲ. ಆದ್ದರಿಂದ ಆತ್ಮಹತ್ಯೆ, ಅತ್ಯಾಚಾರಗಳ ಸುತ್ತ ನಡೆಯುವ ನಮ್ಮ ಚರ್ಚೆಗಳೆಲ್ಲ ಶೋಷಿತರಲ್ಲಿ ಧೈರ್ಯ ತುಂಬುವಂತಿರಲಿ. ಶೋಷಕರಲ್ಲಿ ಭೀತಿ ಮೂಡಿಸುವಂತಿರಲಿ.

Wednesday, 19 June 2013

ಹೇಮಾವತಿಯ ಮನೆಯಿಂದ ಜಿಯಾಖಾನ್ ಳ ಮನೆಯವರೆಗೆ

   ಮನೆ, ಶಾಲೆ, ಹಾಸ್ಟೆಲ್ಲು, ಆಸ್ಪತ್ರೆ, ವೃದ್ಧಾಶ್ರಮ, ಹೊಟೇಲು, ಕಚೇರಿ.. ಹೀಗೆ ಗುರುತಿಸಿಕೊಳ್ಳುವ ಅಸಂಖ್ಯ ಕಟ್ಟಡಗಳು ನಮ್ಮ ಸುತ್ತು-ಮುತ್ತು ಇವೆ. ಈ ಕಟ್ಟಡಗಳ ವಿಶೇಷತೆ ಏನೆಂದರೆ, ಇವೆಲ್ಲ ಒಂದೇ ಬಗೆಯ ವಸ್ತುಗಳಿಂದ ನಿರ್ಮಾಣಗೊಂಡಿರುವುದು. ಶಾಲೆಯನ್ನು ಕಟ್ಟುವುದಕ್ಕೆ ಕಲ್ಲು, ಸಿಮೆಂಟು, ಹೈಗೆ, ಕಬ್ಬಿಣದಂಥ ವಸ್ತುಗಳನ್ನು ಹೇಗೆ ಬಳಸಲಾಗುತ್ತದೋ ಹಾಗೆಯೇ ಮನೆಯನ್ನು ಕಟ್ಟುವುದಕ್ಕೂ ಇವೇ ವಸ್ತುಗಳನ್ನು ಬಳಸಲಾಗುತ್ತದೆ. ಇವಷ್ಟೇ ಅಲ್ಲ, ವೃದ್ಧಾಶ್ರಮ ಎಂದು ಬೋರ್ಡು ತಗುಲಿಸಿಕೊಂಡ, ಆಸ್ಪತ್ರೆಯಾಗಿ, ಹೊಟೇಲಾಗಿ ಗುರುತಿಸಿಕೊಳ್ಳುವ ಎಲ್ಲವನ್ನೂ ನಿರ್ಮಿಸಿರುವುದು ಇವೇ ವಸ್ತುಗಳಿಂದ. ಹಾಗಿದ್ದರೂ ಕೆಲವು ಕಟ್ಟಡಗಳು ಮನೆಯಾಗಿ, ಕೆಲವು ಕಚೇರಿಗಳಾಗಿ, ಕೆಲವು ಇನ್ನೇನೋ ಆಗಿ ಯಾಕೆ ಗುರುತಿಸಿಕೊಳ್ಳುತ್ತವೆ? ಅದಕ್ಕಿರುವ ಕಾರಣಗಳು ಏನು? ಕಟ್ಟಡದ ಆಕೃತಿಯೇ? ಕಿಟಕಿ, ಬಾಗಿಲುಗಳ ಸಂಖ್ಯೆಯೇ? ಒಂದು ಕಟ್ಟಡದ ಎದುರು 'ಆಸ್ಪತ್ರೆ' ಎಂದು ಬೋರ್ಡು ತಗುಲಿಸಿದ ಮಾತ್ರಕ್ಕೇ ಅದು ಆಸ್ಪತ್ರೆಯಾಗಿ ಬಿಡಲು ಸಾಧ್ಯವಿಲ್ಲವಲ್ಲ. ಮನೆ ಎಂಬ ಬೋರ್ಡಿನಿಂದಾಗಿ ಮನೆಯಾಗುವುದು, ವೃದ್ಧಾಶ್ರಮ ಎಂಬ ಫಲಕದಿಂದಾಗಿ ವೃದ್ಧಾಶ್ರಮವಾಗುವುದು, ಹೊಟೇಲು ಎಂಬ ಗುರುತು ಚಿಹ್ನೆಯಿಂದಾಗಿ ಹೊಟೇಲು ಆಗುವುದೆಲ್ಲ ಸಾಧ್ಯವೇ? ಇಲ್ಲ ಎಂದಾದರೆ ಒಂದು ಕಟ್ಟಡದ ಮನೆಯಾಗಿ ಗುರುತಿಸಿಕೊಳ್ಳುವುದಕ್ಕೆ ಇರುವ ಅರ್ಹತೆಗಳೇನು?
    ನಿಜವಾಗಿ, ಇಂಥ ಪ್ರಶ್ನೆಗಳು ನಮ್ಮನ್ನು ಎದುರುಗೊಂಡಾಗಲೇ ನಾವು ಏನು ಮತ್ತು ನಮ್ಮ ವರ್ತನೆಗಳು ಹೇಗಿರಬೇಕು ಎಂಬುದಕ್ಕೆ ಉತ್ತರ ಸಿಗುವುದು. ಇವತ್ತಿನ ದಿನಗಳಲ್ಲಿ ಮನೆಗಳು ಮತ್ತೆ ಮತ್ತೆ ಚರ್ಚೆಗಳಗಾಗುತ್ತಲೇ ಇವೆ. ನಾಲ್ಕು ವರ್ಷಗಳಿಂದ ಗೃಹಬಂಧನದಲ್ಲಿದ್ದ ಬೆಂಗಳೂರಿನ ಹೇಮಾವತಿಯ ಮನೆಯಿಂದ ಹಿಡಿದು ಚಿತ್ರ ನಟಿ ಜಿಯಾಖಾನ್‍ಳ ಮನೆಯ ವರೆಗೆ ಅಸಂಖ್ಯ ಮನೆಗಳು ಸುದ್ದಿಯಲ್ಲಿವೆ. ಮನೆ ಅಂದ ಕೂಡಲೇ ನಮ್ಮ ಮುಂದೆ ಕೆಲವು ಸಿದ್ಧ ಮಾದರಿಗಳು ಮೂಡಿ ಬರುತ್ತವೆ. ಹಿರಿಯರು, ಕಿರಿಯರು, ಮಕ್ಕಳು ಮುಂತಾಗಿ ಪರಸ್ಪರ ಕರುಳಬಳ್ಳಿ ಸಂಬಂಧ ಇರುವ ಒಂದು ಗುಂಪು. ಆ ಗುಂಪಿನ ಮಧ್ಯೆ ಭಾವನಾತ್ಮಕ ಸಂಬಂಧ ಇರುತ್ತದೆ. ಮಗು ಎಡವಿ ಬಿದ್ದಾಗ ಎತ್ತಿಕೊಳ್ಳುವುದಕ್ಕೆ ಆ ಮಗುವಿನ ತಾಯಿಯಷ್ಟೇ ವೇಗವಾಗಿ ಅಜ್ಜನೋ ಅಜ್ಜಿಯೋ ತಮ್ಮನೋ ಬಂದಿರುತ್ತಾರೆ. ಒಬ್ಬರ ನೋವನ್ನು ಇನ್ನೊಬ್ಬರು ಅಷ್ಟೇ ತೀವ್ರವಾಗಿ ಅನುಭವಿಸುವ ಸಂಬಂಧವೊಂದು ಮನೆಯೊಳಗೆ ನೆಲೆಸಿರುತ್ತದೆ. ತಂದೆ ಅಸೌಖ್ಯದಿಂದ ಮಲಗಿದ್ದರೆ ಮನೆಯ ಇತರ ಸದಸ್ಯರ ಮಾತು-ಕೃತಿಗಳಲ್ಲಿ ಅದು ಪ್ರಕಟವಾಗುತ್ತಿರುತ್ತದೆ. ಮನೆಯಲ್ಲಿ ಮಗನಿಗೋ ಮಗಳಿಗೋ ಮದುವೆಯ ಬಗ್ಗೆ ಚರ್ಚೆಗಳಾಗುತ್ತವೆ. ಸೂಕ್ತ ಸಂಬಂಧಕ್ಕಾಗಿ ಹುಡುಕಾಟ ನಡೆಯುತ್ತದೆ. ಶಾಲೆಗೆ ಹೋಗುವ ಮಕ್ಕಳ ಹೋಮ್ ವರ್ಕ್, ಟಿಫಿನ್ ಬಾಕ್ಸ್, ಶಾಲಾ ಬಸ್ಸಿನ ಬಗ್ಗೆ ಕೇವಲ ಆ ಮಕ್ಕಳ ಹೆತ್ತವರು ಮಾತ್ರ ಕಾಳಜಿ ತೋರುವುದಲ್ಲ, ಮನೆಯ ಇತರ ಸದಸ್ಯರೂ ಆ ಬಗ್ಗೆ ಎಚ್ಚರಿಸುತ್ತಿರುತ್ತಾರೆ. ಬಟ್ಟೆ ಹೊಲಿಸುವಾಗ, ಟೂರ್ ಹೋಗುವಾಗ, ಆಹಾರ ತಯಾರಿಸುವಾಗ.. ಮನೆಯ ಎಲ್ಲರ ಅಭಿರುಚಿಗಳನ್ನು ಪರಿಗಣಿಸಲಾಗುತ್ತದೆ. ಒಂದು ರೀತಿಯಲ್ಲಿ, ಇವು ಮತ್ತು ಇಂಥ ಇನ್ನೂ ಅನೇಕ ಗುರುತುಗಳು ಒಂದು ಕಟ್ಟಡವನ್ನು ಮನೆಯಾಗಿಸುತ್ತದೆಯೇ ಹೊರತು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ 'ನಿಲಯ' ಎಂದು ಚಂದದ ಬೋರ್ಡು ತೂಗು ಹಾಕುವುದರಿಂದಲ್ಲ. ಕಟ್ಟಡವೊಂದು ಹೊಟೇಲ್ ಆಗುವುದಕ್ಕೂ ಕೆಲವು ಮುಖ್ಯ ಗುರುತುಗಳಿರಬೇಕು. ವಿವಿಧ ಬಟ್ಟೆಗಳನ್ನು ಧರಿಸಿದ, ವಿವಿಧ ಅಂತಸ್ತಿನ ನೂರಾರು ಮಂದಿ ಒಂದೇ ಟೇಬಲಿನಲ್ಲಿ ಪರಸ್ಪರ ಎದುರು-ಬದುರು ಕೂತಿದ್ದರೂ ಮಾತಾಡದೇ, ಭಾವನೆಗಳನ್ನು ಹಂಚಿಕೊಳ್ಳದೇ ಹೋಗುವ ತಾಣ ಅದು. ಓರ್ವ ಅತಿ ದುಬಾರಿ ಆಹಾರವನ್ನು ತಿನ್ನುವಾಗ, ಆತನ ಎದುರೇ ಕೂತವ ಸಾದಾ ಉಪ್ಪಿಟ್ಟು ತಿಂದು ಎದ್ದೇಳುತ್ತಾನೆ. ಹಾಗಂತ, ದುಬಾರಿ ಮನುಷ್ಯ ಈ ಉಪ್ಪಿಟ್ಟು ಮನುಷ್ಯನಿಗೆ ತನ್ನದನ್ನು ಹಂಚುವುದಿಲ್ಲ. ಉಪ್ಪಿಟ್ಟಿನ ಬಿಲ್ ಅನ್ನೂ ಪಾವತಿಸುವುದಿಲ್ಲ. ಒಟ್ಟಿಗೆ ಇದ್ದೂ ಒಂಟಿಯಾಗಿರುವ, ಗುಂಪಿನಲ್ಲಿದ್ದೂ ಪರಸ್ಪರ ಕಾಳಜಿ ತೋರದ ಒಂದು ಕಟ್ಟಡವಾಗಿದೆ ಹೊಟೇಲು. ವೃದ್ಧಾಶ್ರಮ, ಶಾಲೆ, ಕಚೇರಿಗಳಿಗೂ ಕೂಡ ಅವುಗಳದ್ದೇ ಆದ ಭಿನ್ನ ಭಿನ್ನ ಗುರುತುಗಳಿವೆ..
   ದುರಂತ ಏನೆಂದರೆ, ಇವತ್ತಿನ ಮನೆಗಳು 'ಮನೆ'ಯಾಗಿ ಗುರುತಿಸಿಕೊಳ್ಳುವಲ್ಲಿ ತೀವ್ರ ವೈಫಲ್ಯವನ್ನು ಕಾಣುತ್ತಿವೆ ಅನ್ನುವುದು. ಎಷ್ಟೋ ಮನೆಗಳ ಒಳಗಿನ ವಾತಾವರಣ ಹೇಗಿದೆ ಎಂದರೆ, ಅವು ಮನೆಗಳಾಗಿರದೇ ವೃದ್ಧಾಶ್ರಮಗಳೋ, ಜೈಲುಗಳೋ, ಹೊಟೇಲುಗಳೋ ಆಗಿ ಮಾರ್ಪಟ್ಟಿವೆ. ಒಂದೇ ಮನೆಯಲ್ಲಿದ್ದರೂ ಅಣ್ಣ-ತಮ್ಮಂದಿರು, ಅತ್ತೆ-ಸೊಸೆಯಂದಿರು ಪರಸ್ಪರ ಮಾತಾಡುತ್ತಿಲ್ಲ. ಒಂದೇ ಮನೆಯಲ್ಲಿ ಒಂದಕ್ಕಿಂತ ಹೆಚ್ಚು ಒಲೆಗಳು ಉರಿಯುತ್ತವೆ. ಹೆತ್ತವರನ್ನು ಮಾತಾಡಿಸದ, ಕಾಳಜಿ ತೋರದ ಮಕ್ಕಳಿದ್ದಾರೆ. ಪತ್ನಿಯ ಮೇಲೆ ದೌರ್ಜನ್ಯ ಎಸಗುವ ಪತಿಯಿದ್ದಾನೆ. ವರದಕ್ಷಿಣೆಗಾಗಿಯೋ ಇನ್ನಿತರ ಬೇಡಿಕೆಗಳನ್ನು ಮುಂದಿಟ್ಟೋ ಹೆಣ್ಣು ಮಗಳನ್ನು ಶೋಷಿಸುವ ಮನುಷ್ಯರಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮಕ್ಕಳಿದ್ದಾರೆ.. ಹೀಗೆ ಹೊರಗೆ ಮನೆ ಎಂದು ಗುರುತಿಸಿಕೊಳ್ಳುವ ಆದರೆ ಆಂತರಿಕವಾಗಿ, ಹೊಟೇಲೋ, ಜೈಲೋ, ಆಸ್ಪತ್ರೆಯೋ ಆಗಿ ಮಾರ್ಪಟ್ಟಿರುವ ಅಸಂಖ್ಯ ಕಟ್ಟಡಗಳ ಮಧ್ಯೆ ನಾವೆಲ್ಲ ಬದುಕುತ್ತಿದ್ದೇವೆ. ಆದ್ದರಿಂದಲೇ, ಮನೆಗಳನ್ನು ನಿಜ ಅರ್ಥದಲ್ಲಿ ಮನೆಗಳಾಗಿಸುವ ಜಾಗೃತಿ ಕಾರ್ಯಕ್ರಮವೊಂದರ ಅಗತ್ಯ ತಲೆದೋರಿರುವುದು. ಮನೆ ನೆಮ್ಮದಿಯಾಗಿದ್ದರೆ ಸಮಾಜ ನೆಮ್ಮದಿಯಾಗಿರುತ್ತದೆ. ಅಂಗಳ ಸ್ವಚ್ಛವಾಗಿದ್ದರೆ ಪರಿಸರ ಸ್ವಚ್ಛವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಮನೆಗಳನ್ನು ನೆಮ್ಮದಿಯ ಕೇಂದ್ರವಾಗಿಸುವ ಪ್ರಯತ್ನಗಳಲ್ಲಿ ಎಲ್ಲರೂ ಗಂಭೀರವಾಗಿ ತೊಡಗಿಸಿಕೊಳ್ಳಬೇಕು. ಇವತ್ತು ಟಿ.ವಿ.ಗಳು, ಇಂಟರ್‍ನೆಟ್‍ಗಳೆಲ್ಲಾ ನಮ್ಮ ನಮ್ಮ ಬದುಕುವ ವಿಧಾನವನ್ನೇ ಬದಲಿಸಿವೆ.  ಒಬ್ಬರನ್ನೊಬ್ಬರು ಮೀರಿ ಹೋಗುವ, ಮೌಲ್ಯಗಳನ್ನು ಲೆಕ್ಕಿಸದ, ಸ್ವತಂತ್ರ ಮನಸ್ಥಿತಿಯ ಪೀಳಿಗೆಯನ್ನು ಇವು ನಿತ್ಯ ಬೆಳೆಸುತ್ತಿವೆ. ಇಂಥ ಹೊತ್ತಲ್ಲಿ ಮನೆಯನ್ನು 'ಮನೆ'ಯಾಗಿಯೇ ಉಳಿಸಿಕೊಳ್ಳುವ ಮೂಲಕ ಸಮಾಜದ ನೆಮ್ಮದಿಯನ್ನು ಕಾಪಾಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಎಲ್ಲರೂ ವಹಿಸಿಕೊಳ್ಳಬೇಕು.
ಅಂದಹಾಗೆ

ಪ್ರೀತಿ, ಕರುಣೆ, ನೈತಿಕತೆಯಂಥ ಮೌಲ್ಯಗಳ ಕಾರಣಕ್ಕಾಗಿ ಎಲ್ಲ ಮನೆಗಳೂ ಸುದ್ದಿಗೀಡಾಗಲಿ. ಹೇಮಾವತಿ, ಜಿಯಾಖಾನ್‍ಳಂಥವರಿಗಾಗಿ ಯಾವ ಮನೆಗಳೂ ಸುದ್ದಿಗೀಡಾಗದಿರಲಿ.

Monday, 10 June 2013

ಜಿಯಾಗ್ರಫಿ ಚಾನೆಲ್‍ನ ಪ್ರಾಣಿ ಮತ್ತು ಅದನ್ನು ಸೆರೆ ಹಿಡಿಯುವ ಮನುಷ್ಯ

ಅನಂತರಾಮ ಶೆಟ್ಟಿ
    ಕಳೆದವಾರ ಕನ್ನಡಿಗರ ಮಧ್ಯೆ ಅತ್ಯಂತ ಹೆಚ್ಚು ಚರ್ಚೆಗೆ ಒಳಗಾಗಿರುವ ವಿಷಯ ಮನುಷ್ಯತ್ವ . ರಾಜಕೀಯ, ಕ್ರಿಕೆಟ್ಟು, ಗುಟ್ಕಾ.. ಸಹಿತ ಹತ್ತು-ಹಲವು ವಿಷಯಗಳ ಮಧ್ಯೆಯೂ ಮನುಷ್ಯತ್ವವನ್ನು ಪ್ರಧಾನ ಚರ್ಚಾ ವಸ್ತುವಾಗಿ ಮುನ್ನಲೆಗೆ ತಂದ ಕೀರ್ತಿ 35 ವರ್ಷದ ಹೇಮಾವತಿ, 93ರ ಅನಂತರಾಮ ಶೆಟ್ಟಿ, 48ರ ಹನುಮಂತಪ್ಪ.. ಮತ್ತಿತರರಿಗೆ ಸಲ್ಲಬೇಕು. ಇಷ್ಟಕ್ಕೂ, 'ಮನುಷ್ಯತ್ವವನ್ನು ಚರ್ಚಾವಸ್ತುವಾಗಿ ಆಯ್ಕೆ ಮಾಡಿಕೊಳ್ಳಿ' ಎಂದು ಇವರೇನೂ ಪ್ರತಿಭಟನೆ ಮಾಡಿಲ್ಲ. ಹೇಳಿಕೆಯನ್ನೂ ಕೊಟ್ಟಿಲ್ಲ. ಮನುಷ್ಯತ್ವವೇ ಇಲ್ಲದವರ ಕೈಯಲ್ಲಿ ಸಿಲುಕಿ ಪಡಬಾರದ ಕಷ್ಟವನ್ನು ಅನುಭವಿಸುತ್ತಾ ಇವರೆಲ್ಲ ಮನುಷ್ಯತ್ವವನ್ನು ಚರ್ಚೆಯ ವಸ್ತುವಾಗಿ ತೇಲಿಸಿಬಿಟ್ಟರು. ಕೈ ಕಾಲಿಗೆ ಸರಪಳಿ ಬಿಗಿದ, ದನದ ಕೊಟ್ಟಿಗೆಯಲ್ಲಿ ಮಲಗಿಸಿದ, ವರ್ಷಗಟ್ಟಲೆ ಸ್ನಾನವನ್ನೇ ಮಾಡಿಸದ, ವಾರಗಟ್ಟಲೆ ಉಪವಾಸ ಕೆಡವಿದ, ನಾಯಿಗೂಡಿನಲ್ಲಿ ಕೂರಿಸಿ ಬೀಗ ಹಾಕಿದ.. ಅನೇಕ ಪ್ರಕರಣಗಳು ಇವರ ಮುಖಾಂತರ ಬೆಳಕಿಗೆ ಬಂದುವು. ನಗ್ನ ಶಿಕ್ಷೆಗೆ ಒಳಗಾಗಿದ್ದ ಬೆಂಗಳೂರಿನ ಹೇಮಾವತಿ, ಸರಪಳಿ ಶಿಕ್ಷೆಗೆ ಗುರಿಯಾಗಿದ್ದ ಅನಂತರಾಮ ಶೆಟ್ಟಿ, ಕೊಟ್ಟಿಗೆಯಲ್ಲಿದ್ದ ಹನುಮಂತಪ್ಪರು,  ಮೋದಿ-ಅಡ್ವಾಣಿಯವರನ್ನು ಪಕ್ಕಕ್ಕೆ ಸರಿಸುವಷ್ಟು ಜನರ ಮಧ್ಯೆ ಚರ್ಚೆಗೊಳಗಾದರು.
   ಅಂದಹಾಗೆ;  ಹುಲಿ, ಸಿಂಹ, ಚಿರತೆ.. ಮುಂತಾದುವುಗಳನ್ನು ಅಪಾಯಕಾರಿ ಪ್ರಾಣಿಗಳು ಎಂದು ನಾವು ಈಗಾಗಲೇ ಸಾರಿಬಿಟ್ಟಿದ್ದೇವೆ. ಪ್ರಾಣಿ ಸಂಗ್ರಹಾಲಯದಲ್ಲಿ ಇವುಗಳನ್ನು ಕಂಡ ಕೂಡಲೇ ನಮ್ಮ ಮಕ್ಕಳು ಅಂಜುತ್ತವೆ. ಇದಕ್ಕೆ ಕಾರಣ, ಮಕ್ಕಳು ಆ ಪ್ರಾಣಿಗಳ ಅಪಾಯಕಾರಿ ವರ್ತನೆಯನ್ನು ನೋಡಿರುವುದಲ್ಲ. ಮಕ್ಕಳಿಗೆ ಅದನ್ನು ಅಪಾಯಕಾರಿಗಳು ಎಂದು ನಾವೇ ಕಲಿಸಿಕೊಟ್ಟಿದ್ದೇವೆ. ಅದಕ್ಕೆ ಪೂರಕವಾಗಿ, ಎನಿಮಲ್ ಪ್ಲಾನೆಟ್‍ನಲ್ಲಿ ಅಥವಾ ನ್ಯಾಷನಲ್ ಜಿಯಾಗ್ರಫಿ ಚಾನೆಲ್‍ನಲ್ಲಿ, ಒಂದು ಪ್ರಾಣಿ ಇನ್ನೊಂದು ಪ್ರಾಣಿಯನ್ನು ಅಟ್ಟಾಡಿಸಿಕೊಂಡು ಬೇಟೆಯಾಡುವ, ಕೊಂದು ತಿನ್ನುವ ದೃಶ್ಯ ಗಳೂ ಪ್ರಸಾರ ಆಗುತ್ತಾ ಇರುತ್ತವೆ. ಪ್ರಾಣಿಗಳು ಇಡೀ ದಿನ ಪರಸ್ಪರ ಕೊಂದು ತಿನ್ನುವುದನ್ನೇ ಮಾಡುತ್ತಿರುತ್ತವೆ ಎಂದು ಮಕ್ಕಳು ನಂಬುವಷ್ಟು ಈ ಪ್ರಸಾರಗಳು ಏಕಮುಖವಾಗಿರುತ್ತವೆ. ಅಂದಹಾಗೆ, ಇಂಥ ದೃಶ್ಯಗಳನ್ನು ಸೆರೆ ಹಿಡಿದು ಪ್ರಸಾರ ಮಾಡುವುದು ಪ್ರಾಣಿಗಳೇನೂ ಅಲ್ಲವಲ್ಲ. ಒಂದು ವೇಳೆ, ಮನುಷ್ಯರು ಎಸಗುವ ಕ್ರೌರ್ಯ, ಕೊಲೆಪಾತಕಗಳನ್ನು ಸೆರೆಹಿಡಿದು ಪ್ರಸಾರ ಮಾಡುವ ಸಾಮರ್ಥ್ಯ ಪ್ರಾಣಿಗಳಿಗಿರುತ್ತಿದ್ದರೆ, ಜಗತ್ತಿನಲ್ಲಿ ಮನುಷ್ಯರ ಇಮೇಜು ಹೇಗಿರುತ್ತಿತ್ತು? ಚಾನೆಲ್‍ಗಳಲ್ಲಿ ಅಂಥ ದೃಶ್ಯಗಳನ್ನು ನೋಡುವ ಅವಕಾಶ ಮಕ್ಕಳಿಗೆ ಸಿಗುತ್ತಿದ್ದರೆ, ಅವರು ಯಾರನ್ನು ಅಪಾಯಕಾರಿ ಪಟ್ಟಿಯಲ್ಲಿ ಸೇರಿಸುತ್ತಿದ್ದರು? ಪ್ರಾಣಿಗಳಂತೆ ಮನುಷ್ಯರನ್ನೂ ಪ್ರಾಣಿ ಸಂಗ್ರಹಾಲಯಗಳಲ್ಲಿ ಯಾಕೆ ಕೂಡಿ ಹಾಕಿಲ್ಲ ಎಂದು ಅವು ತಲೆ ಕೆಡಿಸುವ ಸಾಧ್ಯತೆ ಇತ್ತೇ, ಇಲ್ಲವೇ?
   ನಿಜವಾಗಿ, ಈ ಜಗತ್ತಿನಲ್ಲಿ ಮನುಷ್ಯರ ಪಾಲಿಗೆ ಅತಿದೊಡ್ಡ ಶತ್ರು ಮನುಷ್ಯರೇ. ಇರಾಕಿನ ಮಕ್ಕಳಲ್ಲಿ; ಫೆಲೆಸ್ತೀನ್, ಅಫಘನ್ನಿನ ಮಕ್ಕಳಲ್ಲಿ ನಿಮ್ಮ ಶತ್ರುಗಳು ಯಾರು ಎಂದು ಪ್ರಶ್ನಿಸಿದರೆ ಅವರು ಪ್ರಾಣಿಗಳನ್ನು ತೋರಿಸುವುದಕ್ಕೆ ಸಾಧ್ಯವೇ ಇಲ್ಲ. ಅಮೇರಿಕ-ಇಸ್ರೇಲ್‍ಗಳೇ ಅವರ ಪಾಲಿನ ಶತ್ರುಗಳು. ಈ ಎರಡು ರಾಷ್ಟ್ರಗಳು ಜಗತ್ತಿನ ಇತರ ಮನುಷ್ಯರ ಪಾಲಿಗೆ ಎಷ್ಟು ಅಪಾಯಕಾರಿಗಳಾಗಿವೆಯೆಂದರೆ, ಅಪಾಯಕಾರಿಯೆಂದು ಹಣೆಪಟ್ಟಿ ಹಚ್ಚಿಕೊಂಡ ಜಗತ್ತಿನೆಲ್ಲಾ ಪ್ರಾಣಿಗಳು ಜೊತೆ ಸೇರಿದರೂ ಹತ್ಯೆ ಮಾಡಲು ಸಾಧ್ಯವಾಗದಷ್ಟು ಸಂಖ್ಯೆಯ ಮನುಷ್ಯರನ್ನು ಅವು ಹತ್ಯೆ ಮಾಡಿವೆ. ಅಂದಹಾಗೆ, ಅಮೇರಿಕದಿಂದ ಹಿಡಿದು ಹೇಮಾವತಿಯ ಹೆತ್ತವರ ವರೆಗೆ, ಇಸ್ರೇಲ್‍ನಿಂದ ಹಿಡಿದು ಅನಂತರಾಮ ಶೆಟ್ಟಿಯವರ ಮಕ್ಕಳ ವರೆಗೆ, ಕ್ರೌರ್ಯದ ರೂಪದಲ್ಲಿ ವ್ಯತ್ಯಾಸಗಳಿವೆಯೇ ಹೊರತು ಕ್ರೌರ್ಯದ ಭಾವನೆಯಲ್ಲಿ ಅಲ್ಲ. ಅಮೇರಿಕ ಒಂದು ರಾಷ್ಟ್ರವಾಗಿ ಬಾಂಬನ್ನು ಎತ್ತಿಕೊಳ್ಳುವಾಗ ಅನಂತರಾಮ ಶೆಟ್ಟಿಯವರ ಮಕ್ಕಳು ತಮ್ಮ ಇತಿ-ಮಿತಿಯೊಳಗೆ ಸರಪಳಿಯನ್ನು ಎತ್ತಿಕೊಳ್ಳುತ್ತಾರೆ. ಫೆಲೆಸ್ತೀನಿಯರನ್ನು ಇಸ್ರೇಲ್ ದಿಗ್ಬಂಧನಕ್ಕೆ ಒಳಪಡಿಸಿದಂತೆಯೇ ಹೇಮಾವತಿಯ ಹೆತ್ತವರು ಸಣ್ಣ ಮಟ್ಟದಲ್ಲಿ ಅದನ್ನೇ ಮಾಡುತ್ತಾರೆ.
   ಜಗತ್ತು ಹೆಚ್ಚೆಚ್ಚು ಆಧುನಿಕಗೊಂಡಂತೆಯೇ, ಮಾನವೀಯತೆಯ ಮಟ್ಟ ಕುಸಿಯುತ್ತಿರುವುದೇಕೆ ಎಂಬ ಬಗ್ಗೆ ಗಂಭೀರ ಚರ್ಚೆಯೊಂದು ನಡೆಯಬೇಕಾದ ಅಗತ್ಯವನ್ನು ಈ ಪ್ರಕರಣಗಳು ಎತ್ತಿ ಹೇಳುತ್ತಿವೆ. ನಿಜವಾಗಿ, ಮನುಷ್ಯರನ್ನು ಇನ್ನಷ್ಟು ಹತ್ತಿರಕ್ಕೆ, ಆಪ್ತ ವಲಯಕ್ಕೆ ಕೊಂಡೊಯ್ದಿದ್ದು ಆಧುನಿಕ ಆವಿಷ್ಕಾರಗಳೇ. ತಾಯಿಯನ್ನು ಅತ್ಯಂತ ಹೃದ್ಯವಾಗಿ ಕಟ್ಟಿಕೊಡುವುದಕ್ಕೆ ಇಂದಿನ ಸಿನಿಮಾ, ಡಾಕ್ಯುಮೆಂಟರಿಗಳಿಗೆ ಸಾಧ್ಯವಾಗುತ್ತಿದೆ. ಮಕ್ಕಳನ್ನು ಬೆಳೆಸುವುದಕ್ಕೆ ಹೆತ್ತವರು ಯಾವ ರೀತಿಯಲ್ಲಿ ಶ್ರಮ ವಹಿಸುತ್ತಾರೆ ಅನ್ನುವುದನ್ನು ಅತ್ಯಂತ ಆಪ್ತವಾಗಿ, ನೈಜವಾಗಿ ಇಂದಿನ ತಂತ್ರಜ್ಞಾನಗಳು ಹೇಳಿ ಕೊಡುತ್ತಿವೆ. ಮಕ್ಕಳನ್ನು ಹೇಗೆ ಬೆಳೆಸಬೇಕು; ರೋಗಿಗಳನ್ನು ಹೇಗೆ ನೋಡಿಕೊಳ್ಳಬೇಕು; ಬದುಕು ಎಷ್ಟು ಅನಿಶ್ಚಿತ; ಸಂಪತ್ತು-ಆಯುಷ್ಯ.. ಎಲ್ಲವೂ ಹೇಗೆ ನಶ್ವರ ಎಂಬುದನ್ನೆಲ್ಲಾ ಇವತ್ತಿನ ವಿವಿಧ ಸಿನಿಮಾಗಳು, ಕಾದಂಬರಿಗಳು ಬಾರಿ ಬಾರಿಗೂ ಹೇಳುತ್ತಿವೆ. ಹಿಂದಿನವರಿಗೆ ಹೋಲಿಸಿದರೆ, ಇಂದಿನ ಪೀಳಿಗೆ ಅಪಾರ ಮಾಹಿತಿಯುಳ್ಳವು. ಇಷ್ಟೆಲ್ಲಾ ಇದ್ದೂ ಹೆತ್ತವರನ್ನೇ ಸರಪಳಿ ಬಿಗಿದು ಕಟ್ಟಿ ಹಾಕುವುದೆಂದರೆ, ಏನು ಕಾರಣ? ಮಗಳನ್ನೇ ಕೂಡಿ ಹಾಕುವ ಹೆತ್ತವರಿದ್ದಾರೆಂದರೆ ಏನೆನ್ನಬೇಕು?
   ಆಧುನಿಕ ಆವಿಷ್ಕಾರಗಳು ಮನುಷ್ಯರಲ್ಲಿ ಮಾನವೀಯತೆಯನ್ನು ತುಂಬಲು ಎಷ್ಟರ ಮಟ್ಟಿಗೆ ಸಫಲವಾಗಿವೆ ಎಂಬ ಪ್ರಶ್ನೆಗೆ ಅಮೇರಿಕದಿಂದ ಹಿಡಿದು ಬೆಂಗಳೂರಿನ ಅನಂತರಾಮ ಶೆಟ್ಟಿಯವರ ಮಕ್ಕಳ ವರೆಗೆ ನಕಾರಾತ್ಮಕ ಉತ್ತರಗಳಷ್ಟೇ ದೊರಕುತ್ತಿವೆ. ಆದ್ದರಿಂದ, ಆಧುನಿಕತೆ ಮತ್ತು ಧಾರ್ಮಿಕತೆಯ ನಡುವೆ ಇವತ್ತು ತುರ್ತಾಗಿ ಸಮನ್ವಯತೆ ಸಾಧ್ಯವಾಗಬೇಕಾಗಿದೆ.  ಧರ್ಮದ ಮೌಲ್ಯಗಳನ್ನು ಪಕ್ಕಕ್ಕಿಡುವ ಜೀವನ ಪದ್ಧತಿಗಳು ಅಂತಿಮವಾಗಿ ಅನಂತರಾಮ ಶೆಟ್ಟಿಯಂಥ ಅಪ್ಪಂದಿರನ್ನು, ಹೇಮಾವತಿಯಂಥ ಮಕ್ಕಳನ್ನು ಸೃಷ್ಟಿಸುವುದಕ್ಕೆ ಕಾರಣವಾಗುತ್ತಿದೆಯೇನೋ ಎಂಬ ಅನುಮಾನ ಮೂಡುತ್ತಿದೆ. ಹೆತ್ತವರನ್ನು, ಮಕ್ಕಳನ್ನು, ಹಿರಿಯರನ್ನು, ರೋಗಿಗಳನ್ನು ಹೇಗೆ ನೋಡಬೇಕೆಂದು ಧರ್ಮ ಕಲಿಸಬಲ್ಲುದೇ ಹೊರತು ವಿಜ್ಞಾನಿಗಳ ಬಾಂಬ್ ಅಲ್ಲ. ಆದ್ದರಿಂದ ಧರ್ಮದಂತೆ ಬದುಕುವ, ಇಲ್ಲಿನ ಪ್ರತಿಯೊಂದು ಕರ್ಮಗಳ ಬಗ್ಗೆಯೂ ಪರಲೋಕದಲ್ಲಿ ವಿಚಾರಣೆಯಿದೆ ಮತ್ತು ಶಿಕ್ಷೆ-ಪುರಸ್ಕಾರಗಳೂ ಲಭಿಸಲಿವೆ ಎಂದು ಬಲವಾಗಿ ನಂಬುವ ಜೀವನ ಕ್ರಮದ ಕಡೆಗೆ ಎಲ್ಲರೂ ಮರಳಬೇಕಾದ ಅಗತ್ಯ ಇದೆ. ಇಲ್ಲದಿದ್ದರೆ ಅನಂತರಾಮ ಶೆಟ್ಟಿಯಂಥವರ ಸಂಖ್ಯೆ ಹೆಚ್ಚಾದೀತು.

Wednesday, 5 June 2013

ಇದು ಹೆಗ್ಗಳಿಕೆಯಲ್ಲ, ಅವಮಾನ

   ಬಿಜೆಪಿಯಿಂದ ರಾಮ್ ಜೇಠ್ಮಲಾನಿಯ ಉಚ್ಛಾಟನೆ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್‍ರ ಪರ ಅಡ್ವಾಣಿಯವರು ವಕಾಲತ್ತು ವಹಿಸಿರುವುದು ಬಿಜೆಪಿಯನ್ನು ಮತ್ತೆ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಪಡಿಸಿದೆ. ಮೋದಿ          v/s ಚೌಹಾನ್ ಅನ್ನುವ ಶೀರ್ಷಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗತೊಡಗಿವೆ. ಲೋಕಸಭಾ ಚುನಾವಣೆಗೆ ಇನ್ನಿರುವುದು
ಒಂದೇ ವರ್ಷ. ಈ ಹಂತದಲ್ಲಿ ಬಿಜೆಪಿಯು ಒಳಜಗಳ, ದ್ವಂದ್ವ, ಕಾಲೆಳೆಯುವಿಕೆಗಾಗಿ ಸುದ್ದಿಗೀಡಾಗುತ್ತಿರುವುದನ್ನು ಅದರ ಬೆಂಬಲಿಗರು ಹತಾಶೆಯಿಂದ ನೋಡುತ್ತಿದ್ದಾರೆ. ನಿಜವಾಗಿ, ಬಿಜೆಪಿಯೊಳಗಿನ ದ್ವಂದ್ವ ಪ್ರಕಟವಾಗುತ್ತಿರುವುದು ಇದು ಮೊದಲೇನೂ ಅಲ್ಲ. ಒಂದು ವೇಳೆ ಆ ಪಕ್ಷಕ್ಕೆ ಪಾರದರ್ಶಕ ಪ್ರಣಾಳಿಕೆ, ನಿರ್ದಿಷ್ಟ ನಿಲುವು, ತತ್ವ ಇರುತ್ತಿದ್ದರೆ ಅದು ಈ ದೇಶದ ದೊಡ್ಡದೊಂದು ಜನಸಮೂಹದ ಪಾಲಿಗೆ ‘ಅಸ್ಪೃಶ್ಯ' ಅನ್ನಿಸಿಕೊಳ್ಳುತ್ತಿರಲಿಲ್ಲ. ಒಂದೆಡೆ, ಬಾಬರಿ ಮಸೀದಿಯನ್ನು ಉರುಳಿಸುವ ಉದ್ದೇಶವನ್ನಿಟ್ಟುಕೊಂಡೇ ಅಡ್ವಾಣಿ ರಥಯಾತ್ರೆ ನಡೆಸುತ್ತಾರೆ. ಇನ್ನೊಂದೆಡೆ, ಉರುಳಿದ ಬಾಬರಿಗಾಗಿ ವಿಷಾದ ವ್ಯಕ್ತಪಡಿಸುತ್ತಾರೆ. ಒಂದೆಡೆ, ಶಂಕಿತ ಭಯೋತ್ಪಾದಕಿ ಪ್ರಜ್ಞಾ ಸಿಂಗ್‍ಳ ಪರ ಪ್ರಭಾವ ಬೀರುವುದಕ್ಕಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ರನ್ನು ಭೇಟಿಯಾಗುತ್ತಾರೆ. ಇನ್ನೊಂದೆಡೆ, ತಾವು ಮಾಡದ ಕೃತ್ಯಕ್ಕಾಗಿ ಐದಾರು ವರ್ಷ ಜೈಲಲ್ಲಿದ್ದು ಬಿಡುಗಡೆಗೊಂಡ ಮಕ್ಕಾ ಮಸೀದಿ ಬಾಂಬ್ ಸ್ಫೋಟದ ‘ಶಂಕಿತ' ಮುಸ್ಲಿಮ್ ಯುವಕರ ಬಗ್ಗೆ ಸಣ್ಣದೊಂದು ಹೇಳಿಕೆಯನ್ನೂ ಹೊರಡಿಸುವುದಿಲ್ಲ. ಇದು ದ್ವಂದ್ವದ ಚಿಕ್ಕದೊಂದು ತುಣುಕು ಅಷ್ಟೇ. ಬಿಜೆಪಿಯ ಉದ್ದಕ್ಕೂ ಇಂಥ ದ್ವಂದ್ವಗಳ ದೊಡ್ಡದೊಂದು ಮೂಟೆಯೇ ಇದೆ.
   ‘ತಾನು ಮುಸ್ಲಿಮರ ವಿರೋಧಿಯಲ್ಲ’ ಎಂದು ನಂಬಿಸುವುದಕ್ಕೆ ಬಿಜೆಪಿ ಆಗಾಗ ಕಸರತ್ತುಗಳನ್ನು ನಡೆಸುವುದಿದೆ. ‘ತನ್ನ ವಿರೋಧ ದೇಶವಿರೋಧಿಗಳ ಬಗ್ಗೆ ಮಾತ್ರ’ ಎಂಬ ಸಮಜಾಯಿಷಿಕೆಯನ್ನೂ ಅದು ಕೊಡುವುದಿದೆ. ಅಷ್ಟಕ್ಕೂ, ‘ದೇಶವಿರೋಧಿಗಳು ಮುಸ್ಲಿಮರಲ್ಲಿ ಮಾತ್ರ ಇರಲು ಸಾಧ್ಯ’ ಎಂಬ ಸೂಕ್ಷ್ಮ ಸಂದೇಶ ಈ ಹೇಳಿಕೆಯಲ್ಲಿದೆ ಎಂಬ ಸತ್ಯ ಬಿಜೆಪಿಗೆ ಗೊತ್ತಿಲ್ಲ ಎಂದಲ್ಲ. ಮುಸ್ಲಿಮರ ಬಗ್ಗೆ; ಅವರ ಆಚಾರ, ದೇಶಪ್ರೇಮ, ತತ್ವನಿಷ್ಠೆಯ ಬಗ್ಗೆ ಅದು ಮಾತಾಡುವುದೇ ದ್ವಂದ್ವದೊಂದಿಗೆ. ಗುಜರಾತ್ ಹತ್ಯಾಕಾಂಡವನ್ನು ಮುಂದಿಟ್ಟುಕೊಂಡು ಯಾರಾದರೂ ಬಿಜೆಪಿಯ ‘ಮುಸ್ಲಿಮ್ ನೀತಿಯನ್ನು' ಪ್ರಶ್ನಿಸಿದರೆ ಅದು, ಬಿಹಾರದಲ್ಲಿ 1964ರಲ್ಲಿ ನಡೆದ ಹತ್ಯಾಕಾಂಡ, 1980ರಲ್ಲಿ ಉತ್ತರ ಪ್ರದೇಶದ ಮೊರಾದಾಬಾದ್‍ನಲ್ಲಿ, 1969ರಲ್ಲಿ ಅಹ್ಮದಾಬಾದ್‍ನಲ್ಲಿ, 1983ರಲ್ಲಿ ಅಸ್ಸಾಮ್‍ನ ನೆಲ್ಲಿಯಲ್ಲಿ, 1989ರಲ್ಲಿ ಬಿಹಾರದ ಭಾಗಲ್ಪುರದಲ್ಲಿ, 1993ರಲ್ಲಿ ಮುಂಬೈಯಲ್ಲಿ.. ನಡೆದ ಹತ್ಯಾ ಕಾಂಡವನ್ನು ಪ್ರಸ್ತಾಪಿಸುತ್ತದೆ. ಇಲ್ಲೆಲ್ಲಾ ಮುಸ್ಲಿಮರು ಗುಜರಾತ್‍ಗಿಂತ ಹೆಚ್ಚಿನ ಪ್ರಮಾಣಧಲ್ಲಿ ಹತ್ಯೆ ಗೀಡಾಗಿದ್ದಾರೆ. ಅಲ್ಲದೇ ಈ ಸಂದರ್ಭಗಳಲ್ಲೆಲ್ಲಾ ಅಲ್ಲಿ ಅಧಿಕಾರದಲ್ಲಿದ್ದುದು ಬಿಜೆಪಿಯಲ್ಲ, ಕಾಂಗ್ರೆಸ್. ಹೀಗಿರುವಾಗ ಗುಜರಾತ್‍ನ ಏಕೈಕ ಘಟನೆಗಾಗಿ ಬಿಜೆಪಿಯನ್ನು ಮುಸ್ಲಿಮ್ ವಿರೋಧಿಯಾಗಿ ಬಿಂಬಿಸುವುದೇಕೆ ಎಂಬ ಮುಗ್ಧ ಪ್ರಶ್ನೆಯನ್ನೂ ಅದು ಎಸೆಯುವುದಿದೆ.
   ನಿಜವಾಗಿ, ಬಿಜೆಪಿಯನ್ನು ಅಳೆಯಬೇಕಾದದ್ದು ಅದು ಎಷ್ಟು ಮಂದಿ ಮುಸ್ಲಿಮರನ್ನು ಕೊಂದಿದೆ ಎಂಬುದರಿಂದಲ್ಲ ಬದಲು ಮುಸ್ಲಿಮರ ಕುರಿತಂತೆ ಅದರ ನಿಲುವು ಏನು ಎಂಬುದರಿಂದ. ಕಾಂಗ್ರೆಸ್‍ನ ಅಧಿಕಾರದ ಅವಧಿಯಲ್ಲಿ ಮುಸ್ಲಿಮರ ಹತ್ಯಾಕಾಂಡಗಳಾಗಿರಬಹುದು. ಆದರೆ ಈ ಎಲ್ಲ ಸಂದರ್ಭಗಳಲ್ಲಿ ಕಾಂಗ್ರೆಸ್‍ನ ವರ್ತನೆ ಬಿಜೆಪಿಯಂತೆ ಖಂಡಿತ ಇರಲಿಲ್ಲ. ಅದು ‘ಕ್ರಿಯೆಗೆ ಪ್ರತಿಕ್ರಿಯೆ' ಎಂಬ ನುಡಿಗಟ್ಟನ್ನು ಬಳಸಿರಲಿಲ್ಲ. ಮುಸ್ಲಿಮರಲ್ಲಿ ವಿಶ್ವಾಸ ತುಂಬುವ, ಆದ ತಪ್ಪಿಗೆ ವಿಷಾದ ಸೂಚಿಸುವ ಪ್ರಯತ್ನಗಳನ್ನು ಅದು ಮಾಡುತ್ತಾ ಬಂದಿದೆ. ಅಂದಹಾಗೆ, ಇವು ಪರಿಹಾರ ಅಲ್ಲದೇ ಇರಬಹುದು. ಆದರೆ, ಹತಾಶೆಯ ಸಂದೇಶವನ್ನಂತೂ ಅದು ರವಾನಿಸಿಲ್ಲ. ಅದರ ಹೇಳಿಕೆಗಳು, ಕ್ರಮಗಳೆಲ್ಲ ಒಂದು ಹಂತದ ವರೆಗೆ ಆ ಪಕ್ಷವನ್ನು ಮುಸ್ಲಿಮರು ಮುನಿಸಿನೊಂದಿಗೆ ಒಪ್ಪಿಕೊಳ್ಳುವಂತೆ ಮಾಡುವಷ್ಟು ಉತ್ತಮವಾಗಿತ್ತು. ಇದಕ್ಕೆ ಹೋಲಿಸಿದರೆ, ಬಿಜೆಪಿಯ ವರ್ತನೆ ಅತ್ಯಂತ ಆಘಾತಕಾರಿಯಾದದು. ಅದು ಮುಸ್ಲಿಮರ ಬಗ್ಗೆ ರವಾನಿಸುವ ಸಂದೇಶಗಳೆಲ್ಲ ಯಾವ ಮಟ್ಟದಲ್ಲಿರುತ್ತದೆಂದರೆ ಅದರ ಉದ್ದೇಶ ಶುದ್ಧಿಯ ಬಗ್ಗೆಯೇ ಅನುಮಾನಿಸುವಷ್ಟು. ಕಾಂಗ್ರೆಸ್ ಎಂದಲ್ಲ, ಯಾವ ಪಕ್ಷವೇ ಆಗಲಿ ಮುಸ್ಲಿಮರ ಕಲ್ಯಾಣಕ್ಕಾಗಿ ಎಲ್ಲಾದರೂ ಯೋಜನೆಗಳನ್ನು ಪ್ರಕಟಿಸಿದರೆ ತಕ್ಷಣ ತುಷ್ಟೀಕರಣ ಎಂಬ ಪದ ಬಳಸಿ ಮೊದಲಾಗಿ ಖಂಡಿಸುವುದು ಬಿಜೆಪಿಯೇ. ಅಲ್ಪಸಂಖ್ಯಾತ ವಿವಿಯನ್ನು ‘ಮುಸ್ಲಿಮ್ ವಿವಿ' ಎಂದು ಅಪಪ್ರಚಾರ ಮಾಡುತ್ತಿರುವುದೂ ಬಿಜೆಪಿಯೇ. ಮುಸ್ಲಿಮರನ್ನು ಹಣಿಯುವುದಕ್ಕಾಗಿ ಭಯೋತ್ಪಾದನೆಯನ್ನು, ಗೋವನ್ನು, ಸಮಾನ ಸಿವಿಲ್ ಕೋಡನ್ನು ಬಳಸುತ್ತಿರುವುದೂ ಬಿಜೆಪಿಯೇ. ಮುಸ್ಲಿಮರಿಗೆ ಸಂಬಂಧಿಸಿದ ಯಾವುದೇ ವಿಚಾರವಿರಲಿ, ಬಿಜೆಪಿಯ ನಿಲುವು ಯಾವಾಗಲೂ ಏಕಮುಖವಾಗಿರುತ್ತದೆ. ಅದರ ಬೆಂಬಲಿಗರ ಭಾಷಣ, ಘೋಷಣೆ, ಕಾರ್ಯಕ್ರಮಗಳೆಲ್ಲ ಮುಸ್ಲಿಮ್ ದ್ವೇಷದಿಂದ ತುಂಬಿರುತ್ತದೆ. ಇಷ್ಟೆಲ್ಲಾ ಇದ್ದೂ ಬಿಜೆಪಿ ತನ್ನನ್ನು ತಾನು ಸಭ್ಯ ಎಂದು ಘೋಷಿಸಿ ಕೊಂಡರೆ ಯಾರಾದರೂ ನಂಬಿಯಾರೇ? ಬಿಜೆಪಿ ಮತ್ತು ಇತರ ಪಕ್ಷಗಳ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ, ಮುಸ್ಲಿಮರಿಗೆ ಇತರ ಪಕ್ಷಗಳನ್ನು ಆಯ್ಕೆ ಮಾಡಿಕೊಳ್ಳದೇ ಬೇರೆ ಅವಕಾಶವೇ ಇಲ್ಲದಂಥ ಇಮೇಜನ್ನು ಬಿಜೆಪಿ ಸೃಷ್ಟಿಸಿ ಬಿಟ್ಟಿದೆ. ಹೀಗಿರುವಾಗ, ಮುಸ್ಲಿಮರು ತನ್ನಲ್ಲಿ ನಂಬಿಕೆ ಇಡಬೇಕು ಎಂದು ಅದು ಬಯಸುವುದಾದರೂ ಹೇಗೆ?
   ಮುಸ್ಲಿಮರು ದೂರ ನಿಂತಿರುವುದು ಬಿಜೆಪಿಯಿಂದಲ್ಲ, ಅದರ ಮನುಷ್ಯ ವಿರೋಧಿ ನಿಲುವುಗಳಿಂದ. ಅದು ಒಂದೊಮ್ಮೆ ತನ್ನ ನಿಲುವನ್ನು ಬದಲಿಸಿಕೊಂಡರೆ, ಮನುಷ್ಯ ವಿರೋಧಿಗಳನ್ನು ದೂರ ಇಟ್ಟರೆ, ಸರ್ವರನ್ನೂ ಸಮಾನ ರೀತಿಯಲ್ಲಿ ಕಾಣುವ ಹೊಸ ಅಜೆಂಡಾವನ್ನು ರೂಪಿಸಿದರೆ, ಧರ್ಮದ ಆಧಾರದಲ್ಲಿ ಜನರನ್ನು ವಿಂಗಡಿಸುವ ಕೆಲಸವನ್ನು ಕೈಬಿಟ್ಟರೆ, ಮುಸ್ಲಿಮರನ್ನು ಒಳಗೊಳಿಸುವ ರಾಜಕೀಯ ನೀತಿಯನ್ನು ರೂಪಿಸಿದರೆ.. ಖಂಡಿತ ಮುಂದೊಂದು ದಿನ ಮುಸ್ಲಿಮರು ಬಿಜೆಪಿಯ ಬಗ್ಗೆ ನಿರೀಕ್ಷೆಯೊಂದಿಗೆ ಮಾತಾಡುವ ಸಂದರ್ಭವೂ ಬರಬಹುದು. ಈ ದೇಶದ ಹೆಚ್ಚಿನೆಲ್ಲಾ ರಾಜಕೀಯ ಪಕ್ಷಗಳಲ್ಲೂ ಮುಸ್ಲಿಮರು ಗುರುತಿಸಿಕೊಂಡಿದ್ದಾರೆ. ಆದರೆ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಗೆ ಯಾಕೆ ಅವರ ಒಲವನ್ನು ಗಳಿಸಲಾಗಿಲ್ಲ ಅನ್ನುವ ಬಗ್ಗೆ ಅದು ಆತ್ಮಾವಲೋಕನ ನಡೆಸಲಿ. ಮೋದಿ v/s ಚೌಹಾನ್‍ಗಿಂತ ಗಂಭೀರವಾದ ವಿಚಾರ ಇದು. ರಾಷ್ಟ್ರೀಯ ಪಕ್ಷವೊಂದಕ್ಕೆ 20 ಕೋಟಿಯಷ್ಟು ಸಂಖ್ಯೆಯ ಒಂದು ದೊಡ್ಡ ಸಮುದಾಯದ ನಂಬಿಕೆಯನ್ನು ಗಳಿಸಲಾಗುತ್ತಿಲ್ಲ ಅನ್ನುವುದು ಹೆಗ್ಗಳಿಕೆಯಲ್ಲ, ಅವಮಾನ.