Wednesday, 4 December 2013

ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಅನುಮಾನಗಳು

ಏ.ಕೆ. ಗಂಗೂಲಿ
ಪ್ರಕರಣವೊಂದರ ಸರಿ-ತಪ್ಪುಗಳನ್ನು ಚರ್ಚಿಸುವುದಕ್ಕಿಂತ ಮೊದಲು ನಾವು ತೆಗೆದುಕೊಳ್ಳಲೇ ಬೇಕಾದ ಎಚ್ಚರಿಕೆಗಳು ಯಾವುವು? ಯಾವುದೇ ಒಂದು ಪ್ರಕರಣಕ್ಕೆ ಹೊರಗೆ ಕಾಣುವ ಮುಖವಷ್ಟೇ ಇರಬೇಕೆಂದಿಲ್ಲವಲ್ಲ. ಕಾಣದ್ದೂ ಇರಬಹುದಲ್ಲವೇ? ಆ ಕಾಣದ ಮುಖವನ್ನು ಪತ್ತೆ ಹಚ್ಚದೆಯೇ ಅಥವಾ ಆ ಬಗ್ಗೆ ಅನುಮಾನಿಸದೆಯೇ ಖಚಿತ ಅಭಿಪ್ರಾಯ ವ್ಯಕ್ತಪಡಿಸುವ ವಿಧಾನವನ್ನು ಏನೆಂದು ಕರೆಯಬೇಕು? ಅದರಿಂದಾಗಿ ತೊಂದರೆಗೆ ಒಳಗಾಗಬಹುದಾದ ವ್ಯಕ್ತಿಗಳಿಗೆ ನಾವು ಯಾವ ಪರಿಹಾರ ಕೊಡಬಲ್ಲೆವು? ತರುಣ್ ತೇಜ್‍ಪಾಲ್ ಮತ್ತು ಸುಪ್ರೀಮ್ ಕೋರ್ಟಿನ ಮಾಜಿ ನ್ಯಾಯಾಧೀಶ ಏ.ಕೆ. ಗಂಗೂಲಿ ಅವರ ಮೇಲೆ ಕೇಳಿ ಬಂದ ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಆ ಬಗ್ಗೆ ಸುಪ್ರೀಮ್ ಕೋರ್ಟ್‍ನ ಮಾಜಿ ನ್ಯಾಯಾಧೀಶ ಅಲ್ತಮಷ್ ಕಬೀರ್ ಮತ್ತು ಮಾಜಿ ಅಟಾರ್ನಿ ಜನರಲ್ ಸೋಲಿ ಸೋರಾಬ್ಜಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಇಂಥದ್ದೊಂದು ಚರ್ಚೆಗೆ ವೇದಿಕೆ ಒದಗಿಸಿದೆ.
   ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಕೂಡಲೇ ಆ ಆರೋಪವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದೇ? ಆರೋಪ ಹೊರಿಸಿದವರನ್ನು ಮುಗ್ಧೆ, ಸಂತ್ರಸ್ತೆ ಮತ್ತು ಆರೋಪಕ್ಕೀಡಾದವರನ್ನು ಪರಮದುಷ್ಟ ಎಂದು ಹಣೆಪಟ್ಟಿ ಹಚ್ಚುವುದು ನೈತಿಕವಾಗಿ ಸರಿಯೇ? ಅಂಥ ಆರೋಪಗಳಲ್ಲೂ ದುರುದ್ದೇಶ ಇರಬಾರದು ಎಂದಿದೆಯೇ? ಹಾಗಂತ, ಲೈಂಗಿಕ ದೌರ್ಜನ್ಯದ ಬಗ್ಗೆ ಕೇಳಿ ಬರುತ್ತಿರುವ ಎಲ್ಲ ಪ್ರಕರಣಗಳೂ ಈ ಪಟ್ಟಿಯಲ್ಲಿ ಸೇರಿವೆ ಎಂದಲ್ಲ. ಲೈಂಗಿಕ ದೌರ್ಜನ್ಯ ಎಂಬುದೇ ಓರ್ವ ಹೆಣ್ಣಿನ ಮಟ್ಟಿಗೆ ಅತಿ ಹೀನ ಮತ್ತು ಸದಾ ಕಾಡುವ ಹಿಂಸೆಯಾಗಿರುತ್ತದೆ. ಒಂದು ವೇಳೆ ಆಕೆ ಅಂಥ ದೌರ್ಜನ್ಯವನ್ನು ಬಹಿರಂಗಪಡಿಸದೇ ಒಳಗೊಳಗೇ ಸಹಿಸಿಕೊಂಡು ಬದುಕಿದರೆ ಸಮಾಜಕ್ಕೆ ಗೊತ್ತಾಗದೇ ಇರಬಹುದು. ಆದರೆ ಆ ಕ್ರೌರ್ಯ ಆಕೆಯನ್ನು ಜೀವನಪೂರ್ತಿ ನೆರಳಾಗಿ ಕಾಡುತ್ತಿರುತ್ತದೆ. ಕೂತಲ್ಲಿ, ನಿಂತಲ್ಲಿ, ನಿದ್ದೆಯಲ್ಲಿ, ಒಂಟಿತನದ ಸಂದರ್ಭದಲ್ಲಿ ಅದು ಮತ್ತೆ ದೌರ್ಜನ್ಯ ನಡೆಸು ತ್ತಲೇ ಇರುತ್ತದೆ. ಅದು ಬಿಟ್ಟು, ಈ ಕ್ರೌರ್ಯವೆಸಗಿದ ವ್ಯಕ್ತಿಗೆ ಶಿಕ್ಷೆಯಾಗಬೇಕೆಂದು ಆಕೆ ತೀರ್ಮಾನಿಸಿದರೆ ಅಲ್ಲೂ ಸಮಸ್ಯೆ ಎದುರಾಗುತ್ತದೆ. ಆವರೆಗೆ ತನಗಷ್ಟೇ ಗೊತ್ತಿದ್ದ ಕ್ರೌರ್ಯವೊಂದು ಸಮಾಜದ ಪಾಲಾಗುತ್ತದೆ. ಮಾಧ್ಯಮಗಳು ಅದನ್ನು ಹೊತ್ತು ತಿರುಗುತ್ತವೆ. ಗೆಳತಿಯರು, ನೆರೆಕರೆಯವರು ವಿಚಿತ್ರವಾಗಿ ನೋಡತೊಡಗುತ್ತಾರೆ. ವಿವಾಹದ ಸಂದರ್ಭದಲ್ಲೂ ‘ಅತ್ಯಾಚಾರ ಸಂತ್ರಸ್ತೆ' ಎಂಬ ಐಡೆಂಟಿಟಿ ಹಲವು ಸಮಸ್ಯೆಗಳನ್ನು ತಂದೊಡ್ಡುವ ಅಪಾಯವಿರುತ್ತದೆ. ಹೀಗಿರುವಾಗ, ತನ್ನದೇ ಆದ ಮತ್ತು ತನಗಷ್ಟೇ ಗೊತ್ತಿರುವ ಒಂದು ಕ್ರೌರ್ಯವನ್ನು ತನಗೆ ಗುರುತು-ಪರಿಚಯವೇ ಇಲ್ಲದ ಇತರರಿಗೆ ತಿಳಿಸುವುದು ಮತ್ತು ಕೋರ್ಟಿನ ಮೊರೆ ಹೋಗುವುದೆಲ್ಲ ಸಣ್ಣ ಸಂಗತಿಯಲ್ಲ. ಅದಕ್ಕೆ ಅಪಾರ ಧೈರ್ಯ, ಛಲದ ಅಗತ್ಯವಿದೆ. ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಲೇ ಇಂಥ ದೌರ್ಜನ್ಯ ಆರೋಪಗಳಿಗೆ ಇರಬಹುದಾದ ಇನ್ನೊಂದು ಮುಖದ ಬಗ್ಗೆಯೂ ಅಷ್ಟೇ ಎಚ್ಚರಿಕೆಯಿಂದ ಚರ್ಚಿಸಬೇಕಾಗಿದೆ.
   ನಿಜವಾಗಿ, ಪ್ರಸಿದ್ಧಿಯ ತುತ್ತ ತುದಿಯಲ್ಲಿರುವವರನ್ನು ಒಂದೇ ಏಟಿಗೆ ಬೀಳಿಸುವ ಸಾಮರ್ಥ್ಯ  ಇರುವುದು ಲೈಂಗಿಕ ದೌರ್ಜನ್ಯದ ಆರೋಪಗಳಿಗೆ. ಅದು ವ್ಯಕ್ತಿಯನ್ನು ಜರ್ಝರಿತಗೊಳಿಸುತ್ತದೆ. ಸಮಾಜಕ್ಕೆ ಮುಖ ತೋರಿಸದಷ್ಟು ಕುಗ್ಗಿಸುತ್ತದೆ. ಮಾತ್ರವಲ್ಲ, ಮಾಧ್ಯಮಗಳು ಕೂಡ ಆರೋಪವನ್ನು ಖಚಿತಪಡಿಸಿಕೊಳ್ಳದೆಯೇ ತಕ್ಷಣ ಸುದ್ದಿಗೆ ಮಸಾಲೆ ಅರೆಯುತ್ತದೆ. ಗಂಗೂಲಿಯವರನ್ನೇ ಎತ್ತಿ ಕೊಳ್ಳೋಣ. ಪ್ರಕರಣಕ್ಕೆ ಒಂದು ವರ್ಷ ಸಂದಿದೆ. ಪ್ರಕರಣ ಇಷ್ಟು ತಡವಾಗಿ ಬೆಳಕಿಗೆ ಬರುವುದಕ್ಕೆ ಕಾರಣ ಏನು? ನಿರ್ಭಯಳ ಪರ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ದೌರ್ಜನ್ಯ ನಡೆದಿದೆ ಎಂದಾದರೆ ಅದನ್ನು ಬಹಿರಂಗಪಡಿಸುವುದಕ್ಕೆ ಆ ಸಂದರ್ಭಕ್ಕಿಂತ ಉತ್ತಮವಾದುದು ಇನ್ನಾವುದಿತ್ತು? ಕೇವಲ ಗಂಗೂಲಿಯವರ ಹುದ್ದೆ, ಪ್ರಭಾವಕ್ಕೆ ಮಣಿದು ಹೀಗೆ ತಡ ಮಾಡುವುದಕ್ಕೆ ಸಾಧ್ಯವಿದೆಯೇ? ಅಲ್ತಮಷ್ ಕಬೀರ್ ಕೂಡಾ ಈ ಆರೋಪದ ವಾಸ್ತವಾಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಂತ, ಗಂಗೂಲಿ ಇಲ್ಲಿ ಸಂಕೇತ ಮಾತ್ರ. ರಾಜಕೀಯ ಅಥವಾ ಇನ್ನಿತರ ದುರುದ್ದೇಶಗಳಿಂದ ಒಂದು ಸಾಮಾನ್ಯ ಪ್ರಕರಣವು ಅಸಾಮಾನ್ಯ ಪ್ರಕರಣವಾಗಿ ಬಿಡುವುದಕ್ಕೆ ಇವತ್ತು ಅವಕಾಶ ಇದೆ. ಸಹಮತದ ಸೆಕ್ಸ್‍ನಲ್ಲಿ ಏರ್ಪಟ್ಟ ಜೋಡಿಗಳು ಆ ಬಳಿಕ ವಿರಸದ ಕಾರಣದಿಂದಾಗಿ ಅತ್ಯಾಚಾರ ಮೊಕದ್ದಮೆ ಹೂಡಿದ್ದಿದೆ. ಸದ್ಯದ ದಿನಗಳು ಎಷ್ಟು ನಾಜೂಕಿನವು ಅಂದರೆ, ಯಾರನ್ನು ಬೇಕಾದರೂ ಖೆಡ್ಡಾಕ್ಕೆ ಬೀಳಿಸಬಹುದು ಎಂಬ ವಾತಾವರಣವಿದೆ. ಮದ್ಯ, ಮಾನಿನಿಯರ ಮುಖಾಂತರ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು ತೀರಾ ಕಷ್ಟದ್ದೆಂದು ಹೇಳುವಂತಿಲ್ಲ. ಅಷ್ಟಕ್ಕೂ, ತರುಣ್ ತೇಜ್‍ಪಾಲ್ ಪ್ರಕರಣ ದಲ್ಲಿ ಇಂಥದ್ದೊಂದು ಅನುಮಾನ ತಪ್ಪೇ ಎಂದು ಹೇಳುವಾಗಲೂ ‘ರಾಜಕೀಯ'ಕ್ಕೆ ಯಾವುದೂ ಅಸಾಧ್ಯವಲ್ಲ ಎಂಬುದು ಕೂಡಾ ಅಷ್ಟೇ ನಿಜವಾಗಿದೆ.
   ತೇಜ್‍ಪಾಲ್ ಮತ್ತು ಗಂಗೂಲಿ ಪ್ರಕರಣಗಳು ಹೇಗೆ ಕೊನೆ ಮುಟ್ಟುತ್ತೋ ಗೊತ್ತಿಲ್ಲ. ಆದರೆ, ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಪ್ರಸಿದ್ಧ ವ್ಯಕ್ತಿಗಳೇ. ಅಲ್ಲದೇ ಅವರ ಮೇಲೆ ಆರೋಪ ಹೊರಿಸಿದವರು ಹೊರಗಿನವರಲ್ಲ, ಜೊತೆಗೇ ಕೆಲಸ ಮಾಡುತ್ತಿರುವವರು. ಮೋದಿಯವರ ‘ಅಕ್ರಮ ಬೇಹುಗಾರಿಕೆ' ಪ್ರಕರಣವು ಬಹಿರಂಗವಾದ ಬೆನ್ನಿಗೇ ಈ ಎರಡೂ ಪ್ರಕರಣಗಳು ಬಹಿರಂಗಗೊಂಡಿವೆ ಎಂಬುದೂ ಬಹಳ ಮುಖ್ಯ. ಭಾವಿ ಪ್ರಧಾನಿ ಅಭ್ಯರ್ಥಿ ಒಳಗೊಂಡಿರುವ ಪ್ರಕರಣದ ಕಾವನ್ನು ತಗ್ಗಿಸುವುದಕ್ಕಾಗಿ ತೇಜ್‍ಪಾಲ್ ಪ್ರಕರಣವನ್ನು ಉಬ್ಬಿಸಲಾಯಿತೇ? ಅಕ್ರಮ ಬೇಹುಗಾರಿಕಾ ಪ್ರಕರಣದ ಯುವತಿಗೂ ಮೋದಿಯವರಿಗೂ ನಡುವೆ ಇದ್ದ ಸಂಬಂಧವೇನು ಎಂಬ ಬಗ್ಗೆ ಮಾಧ್ಯಮಗಳು ಕುತೂಹಲ ವ್ಯಕ್ತಪಡಿಸುವ ಹೊತ್ತಿನಲ್ಲೇ ತೇಜ್‍ಪಾಲ್ ಹೆಜ್ಜೆ ತಪ್ಪಿರುವ ಪ್ರಕರಣವು ಸುದ್ದಿ ಮಾಡಿರುವುದರಲ್ಲಿ ಯಾವ ಅನುಮಾನಕ್ಕೂ ಅವಕಾಶ ಇಲ್ಲವೇ? ಅವರನ್ನು ಬೇಕೆಂತಲೇ ಹೆಜ್ಜೆ ತಪ್ಪಿಸಲಾಯಿತೇ ಅಥವಾ ಹೆಜ್ಜೆ ತಪ್ಪಿದ ಅವರನ್ನು ಬಳಸಿಕೊಳ್ಳಲಾಯಿತೇ?
    ರಾಜಕೀಯ ವಾತಾವರಣವು ಅತಿಹೀನ ಸ್ಥಿತಿಗೆ ತಲುಪಿರುವ ಇಂದಿನ ದಿನಗಳಲ್ಲಿ ಯಾವುದನ್ನೂ ನೇರವಾಗಿ ನಂಬುವಂಥ ಸ್ಥಿತಿಯಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಈ ಸಾಲಿಗೆ ಸೇರುತ್ತಿರು ವುದು ವಿಷಾದನೀಯ. ಆದರೆ, ಹಾಗೆ ಅನುಮಾನಿಸುವುದಕ್ಕೆ ಸದ್ಯದ ದಿನಗಳು ಒತ್ತಾಯಿಸುತ್ತಿವೆ ಅನ್ನುವುದನ್ನು ತಿರಸ್ಕರಿಸುವಂತಿಲ್ಲ.

Monday, 25 November 2013

ಅಮಲೇರಿಸುವ ಮದ್ಯವೂ ಹೆಜ್ಜೆ ತಪ್ಪುವ ‘ತರುಣ’ರೂ

    ತೆಹಲ್ಕಾದ ತರುಣ್ ತೇಜ್‍ಪಾಲ್ ಇವತ್ತು ಮಾಧ್ಯಮಗಳನ್ನಿಡೀ ತುಂಬಿಕೊಂಡಿದ್ದಾರೆ. ಪತ್ರಕರ್ತರು ಅವರ ಮನೆಯ ಗೋಡೆಗೆ ಕ್ಯಾಮರಾಗಳನ್ನಿಟ್ಟು ಕಾಯುತ್ತಿದ್ದಾರೆ. ಅವರ ಬಾಲ್ಯ, ಯೌವನ, ಪತ್ರಿಕೋದ್ಯಮದಲ್ಲಿ ಅವರು ನಡೆಸಿದ ವಿನೂತನ ಪ್ರಯೋಗಗಳೆಲ್ಲ ಮಾಧ್ಯಮಗಳಲ್ಲಿ ವಿಸ್ತೃತವಾಗಿ ಚರ್ಚೆಗೆ ಒಳಪಡುತ್ತಿವೆ. ಆದರೆ, ಹೆಣ್ಣನ್ನು ಲೈಂಗಿಕ ದೌರ್ಜನ್ಯದಿಂದ ಮುಕ್ತಗೊಳಿಸುವುದಕ್ಕೆ ಈ ಚರ್ಚೆಗಳು ಎಷ್ಟರ ಮಟ್ಟಿಗೆ ನೆರವಾಗಬಲ್ಲುದು? ಯಾಕೆಂದರೆ, ‘ಮದ್ಯದ ಅಮಲಿನಲ್ಲಿ ನಾನು ಹೆಜ್ಜೆ ತಪ್ಪಿದೆ..' ಎಂದು ತೇಜ್‍ಪಾಲ್‍ರೇ ಹೇಳಿದ್ದಾರೆ. ಹಾಗಂತ, ಮದ್ಯದಿಂದಾಗಿ ಹೀಗೆ ಹೆಜ್ಜೆ ತಪ್ಪುವವರಲ್ಲಿ ತೇಜ್‍ಪಾಲ್ ಮೊದಲಿಗರೇನೂ ಅಲ್ಲ. ಕೊನೆಯವರಾಗುವ ಸಾಧ್ಯತೆಯೂ ಇಲ್ಲ. ಈ ದೇಶದಲ್ಲಿ ಪ್ರತಿದಿನ ಅಸಂಖ್ಯ ಮಂದಿ ಮದ್ಯದಿಂದಾಗಿ ಹೆಜ್ಜೆ ತಪ್ಪುತ್ತಿದ್ದಾರೆ. ಮಾತ್ರವಲ್ಲ, ಈ ತಪ್ಪಿದ ಹೆಜ್ಜೆಗಳಿಗೆ ಸಾವಿರಾರು ಹೆಣ್ಣು ಮಕ್ಕಳು ನಿತ್ಯ ಬಲಿಯಾಗುತ್ತಲೂ ಇದ್ದಾರೆ. ಹೀಗಿರುವಾಗ, ನಮ್ಮ ಚರ್ಚೆಯ ಕೇಂದ್ರ ಬಿಂದುವಾದರೂ ಯಾರಾಗಿರಬೇಕು; ತೇಜ್‍ಪಾಲೋ, ಮದ್ಯವೋ? ಯಾಕೆ ಯಾರೂ ಮದ್ಯದ ಬಗ್ಗೆ ಮಾತನ್ನೇ ಆಡುತ್ತಿಲ್ಲ? ಓರ್ವ ವ್ಯಕ್ತಿಯನ್ನು ಭೀಕರ ಅಪರಾಧ ಎಸಗುವಂತೆ ಮದ್ಯವು ಪ್ರೇರೇಪಿಸುತ್ತದೆಂದಾದರೆ ನಾವು ಮೊತ್ತಮೊದಲು ಶಿಕ್ಷೆಗೆ ಒಳ ಪಡಿಸಬೇಕಾದದ್ದು ಯಾರನ್ನು, ತೇಜ್‍ಪಾಲ್‍ರನ್ನೋ? ಒಂದು ಕ್ರೌರ್ಯದ ಪ್ರಮುಖ ರೂವಾರಿಯನ್ನು (ಮದ್ಯ) ಪ್ರೀತಿಸುತ್ತಾ ಅದರಿಂದ ಪ್ರಚೋದಿತರಾದವರನ್ನು ಗಂಭೀರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುವುದು ಯಾವ ನೀತಿ, ಯಾವ ಬಗೆಯ ಪ್ರಾಮಾಣಿಕತೆ?
   ಮದ್ಯಕ್ಕೂ ಲೈಂಗಿಕ ದೌರ್ಜನ್ಯಗಳಿಗೂ ಬಲವಾದ ನಂಟಿದೆ. ದೆಹಲಿಯ ನಿರ್ಭಯಳಿಂದ ಹಿಡಿದು ಉಡುಪಿಯ ನಿರ್ಭಯಳ ವರೆಗೆ ಈ ದೇಶದಲ್ಲಿ ಎಷ್ಟೆಲ್ಲ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬಂದಿವೆಯೋ ಅವೆಲ್ಲವುಗಳ ಜೊತೆ ಮದ್ಯಕ್ಕೆ ಸಂಬಂಧ ಇದೆ. ಒಂದು ಕಡೆ ಮಹಿಳೆಯರ ಸುರಕ್ಷಿತತೆ, ಸಬಲೀಕರಣದ ಬಗ್ಗೆ ನಾವೆಲ್ಲ ಭಾರೀ ಉತ್ಸಾಹದಿಂದ ಮಾತಾಡುತ್ತೇವೆ. ಮಾಧ್ಯಮಗಳು ಅಸಂಖ್ಯ ಪುಟಗಳನ್ನು ಇದಕ್ಕಾಗಿ ಖರ್ಚು ಮಾಡುತ್ತಿವೆ. ದೆಹಲಿಯಲ್ಲಿ ನಿರ್ಭಯಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಈ ದೇಶ ಒಂದಾಗಿ ಪ್ರತಿಭಟಿಸಿತ್ತು. ವಿದ್ಯಾರ್ಥಿಗಳಿಂದ ಹಿಡಿದು ಪತ್ರಕರ್ತರ ವರೆಗೆ ಎಲ್ಲರೂ ಅತ್ಯಾಚಾರ ಮುಕ್ತ ಭಾರತದ ಬಗ್ಗೆ ಮಾತಾಡಿದರು. ದುರಂತ ಏನೆಂದರೆ, ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರು ಪಾನಮತ್ತರಾಗಿದ್ದರು ಎಂಬುದು ಗೊತ್ತಿದ್ದು ಕೂಡ ಯಾರೂ ಪಾನ ನಿಷೇಧಕ್ಕೆ ಒತ್ತಾಯಿಸಿಯೇ ಇಲ್ಲ! ಯಾಕೆ ಹೀಗೆ? ಮದ್ಯ ಸೇವಿಸುವುದರಿಂದ ಹೆಜ್ಜೆ ತಪ್ಪುತ್ತದೆ ಮತ್ತು ಅದು ಮಾಡಬಾರದ ಕೃತ್ಯಗಳನ್ನು ಮಾಡುವಂತೆ ಪ್ರಚೋದಿಸುತ್ತದೆ ಎಂಬುದು ಕುಡಿಯುವವನಿಗೂ ಗೊತ್ತು, ಕುಡಿಸುವವನಿಗೂ ಗೊತ್ತು. ಹೀಗಿದ್ದೂ, ಮದ್ಯದ ಬಗ್ಗೆ ಮಾತಾಡದೇ ಅದು ಮಾಡಿಸುವ ಕ್ರೌರ್ಯಗಳ ಕುರಿತು ಮಾತ್ರ ಅಪಾರ ಆಕ್ರೋಶ ವ್ಯಕ್ತಪಡಿಸುವುದೇಕೆ?
   ಈ ದೇಶದಲ್ಲಿ ಕೋಟ್ಯಂತರ ಗುಡಿಸಲುಗಳು ಇವತ್ತು ಅತ್ಯಂತ ಆತಂಕದಲ್ಲಿ ದಿನದೂಡುತ್ತಿವೆ. ‘ಈ ದಿನ ಸಂಜೆಯಾಗದಿರಲಿ..’ ಎಂದು ಆಸೆಪಡುವ ಕೋಟ್ಯಂತರ ತಾಯಿ, ಮಕ್ಕಳು ಅಂಥ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸಂಜೆಯಾಗುವಾಗ ಗಂಡ ಕುಡಿದು ಬರುತ್ತಾನೆ. ಪತ್ನಿ, ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾನೆ. ಮನೆಯಲ್ಲಿರುವವರ ಹೊಟ್ಟೆಗೆ ಏನನ್ನೂ ಕೊಡದೇ ತನ್ನ ಹೊಟ್ಟೆಯನ್ನು ಮದ್ಯದಿಂದ ತುಂಬಿಸಿಕೊಂಡು ಬರುವ ಅಸಂಖ್ಯ ಯಜಮಾನರಿಂದ ಈ ದೇಶದ ಕೋಟ್ಯಂತರ ಗುಡಿಸಲುಗಳು ತುಂಬಿ ಹೋಗಿವೆ. ಆ ಗುಡಿಸಲುಗಳಿಗೆ ಬಾಯಿ ಇಲ್ಲ. ಪ್ರತಿಭಟಿಸುವ ಸಾಮರ್ಥ್ಯ  ಇಲ್ಲ. ಪೇಟೆಯ ನಿರ್ಭಯರಂತೆ ಮಾತಾಡುವ ಕಲೆ ಗೊತ್ತಿಲ್ಲ. ಒಂದು ವೇಳೆ ಇಂಥ ಗುಡಿಸಲುಗಳಿಗೆ ಮಾತಾಡುವ ಸಾಮರ್ಥ್ಯಇರುತ್ತಿದ್ದರೆ, ಅಸಂಖ್ಯ ತೇಜ್‍ಪಾಲ್‍ರ ಕತೆಗಳನ್ನು ಅವು ಸಾರಿ ಸಾರಿ ಹೇಳುತ್ತಿದ್ದುವು. ನಮ್ಮ ಪೊಲೀಸ್ ಠಾಣೆಗಳು ಕೇಸು ದಾಖಲಿಸಿ ದಾಖಲಿಸಿ ಸುಸ್ತಾಗುತ್ತಿದ್ದುವು. ಹೀಗಿರುವಾಗ, ತೇಜ್‍ಪಾಲ್‍ರನ್ನು ಜೈಲಿಗಟ್ಟುವುದರಿಂದ ಇಂಥ ಗುಡಿಸಲುಗಳ ಸಂಕಟಗಳು ಕೊನೆಯಾಗಬಲ್ಲುದೇ? ಹಾಗಂತ, ತೇಜ್‍ಪಾಲ್‍ರನ್ನು ಸಮರ್ಥಿಸುವುದು ಇಲ್ಲಿನ ಉದ್ದೇಶವಲ್ಲ. ಆದರೂ ತೇಜ್‍ಪಾಲ್ ಯಾರೆಂದೇ ಗೊತ್ತಿಲ್ಲದ ಆದರೆ ಮದ್ಯದಂಗಡಿಗಳು ಎಲ್ಲಿವೆಯೆಂದು ಖಚಿತವಾಗಿ ಗೊತ್ತಿರುವ ಮಂದಿ ಈ ದೇಶದಲ್ಲಿ ಅಸಂಖ್ಯ ಇದ್ದಾರಲ್ಲ, ಅವರೇಕೆ ನಮ್ಮ ಗಂಭೀರ ಚರ್ಚೆಯ ವ್ಯಾಪ್ತಿಗೆ ಒಳಪಡುತ್ತಿಲ್ಲ? ಅವರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುವ ತಾಯಿ, ಮಕ್ಕಳ ಬಗ್ಗೆಯೇಕೆ ನಾವು ಕಾಳಜಿ ತೋರುತ್ತಿಲ್ಲ?
   ನಿಜವಾಗಿ, ನಾವು ಇವತ್ತು ಗಂಭೀರ ಚರ್ಚೆಗೆ ಒಳಪಡಿಸಬೇಕಾದದ್ದು ಲೈಂಗಿಕ ದೌರ್ಜನ್ಯ ಎಸಗಿದ ತೇಜ್‍ಪಾಲ್‍ರನ್ನಲ್ಲ. ಅವರನ್ನು ಈ ಕೃತ್ಯಕ್ಕೆ ಪ್ರಚೋದಿಸಿದ ಮದ್ಯವನ್ನು. ಇವತ್ತು ಹೊಟ್ಟೆ ತುಂಬಿದವರ ಖಯಾಲಿಗಾಗಿ ಏರ್ಪಾಟಾಗುವ ಕಾರ್ಯಕ್ರಮಗಳಲ್ಲಿ ಮದ್ಯಕ್ಕೆ ಪ್ರಮುಖ ಸ್ಥಾನವಿದೆ. ಅಂಥ ಕಡೆ ತೇಜ್‍ಪಾಲ್‍ರಂಥ ಧಾರಾಳ ಮಂದಿ ಹೆಜ್ಜೆ ತಪ್ಪುತ್ತಿರುತ್ತಾರೆ. ಅವು ಕೆಲವೊಮ್ಮೆ ಸುದ್ದಿಯಾಗುವುದನ್ನು ಬಿಟ್ಟರೆ ಉಳಿದಂತೆ ಹೆಚ್ಚಿನವು ತಪ್ಪಿದ ಹೆಜ್ಜೆಗಳನ್ನು ಸಹಿಸಿಕೊಂಡು ಸುಮ್ಮ ನಾಗುತ್ತವೆ. ಆದ್ದರಿಂದ ತೇಜ್‍ಪಾಲ್‍ರನ್ನು ಶಿಕ್ಷಿಸುವುದರಿಂದ ಹೆಣ್ಣು ಮಕ್ಕಳು ಸುರಕ್ಷಿತರಾಗುತ್ತಾರೆ ಎಂದು ಖಂಡಿತ ಹೇಳುವಂತಿಲ್ಲ. ದೆಹಲಿಯ ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರು ಗಲ್ಲು ಶಿಕ್ಷೆಯ ಜಾರಿಯನ್ನು ಎದುರು ನೋಡುತ್ತಿದ್ದರೂ ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳಿಗೇನೂ ಕಡಿವಾಣ ಬಿದ್ದಿಲ್ಲವಲ್ಲವೇ? ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯಿದೆ ಎಂದು ಗೊತ್ತಿದ್ದೂ ಒಂದು ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಅನ್ನುವುದು ಏನನ್ನು ಸೂಚಿಸುತ್ತದೆ? ಶಿಕ್ಷೆಯನ್ನು ಪ್ರೀತಿಸುವ ಸಮಾಜವೊಂದು ಇರಲು ಸಾಧ್ಯವೇ? ಇಲ್ಲ ಎಂದಾದರೆ, ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದೇಕೆ? ಹೆಜ್ಜೆ ತಪ್ಪಿಸುವ ಮದ್ಯದ ಹೊರತಾಗಿ ಬೇರೆ ಯಾವ ಕಾರಣಗಳನ್ನು ನಾವು ಇದಕ್ಕೆ ಕೊಡಬಲ್ಲೆವು?
   ಆದ್ದರಿಂದ, ತೇಜ್‍ಪಾಲ್ ಪ್ರಕರಣವು ನಮ್ಮ ಚರ್ಚೆಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಒಂದು ನೆಪವಾಗಬೇಕಾಗಿದೆ. ಹೆಜ್ಜೆ ತಪ್ಪಿಸುವ ಮದ್ಯವು ನಮ್ಮ ಚರ್ಚೆಯ ವ್ಯಾಪ್ತಿಗೆ ಒಳಪಟ್ಟರೆ ಅದಕ್ಕಾಗಿ ಈ ದೇಶದ ಕೋಟ್ಯಂತರ ಗುಡಿಸಲುಗಳು ಸಂತಸಪಟ್ಟಾವು. ಒಂದು ರೀತಿಯಲ್ಲಿ, ಮದ್ಯವನ್ನು ಹೊರಗಿಟ್ಟು ಲೈಂಗಿಕ ದೌರ್ಜನ್ಯವನ್ನು ಚರ್ಚಿಸುವುದು ಅನಾಪೆsಲಿಸ್ ಸೊಳ್ಳೆಗಳನ್ನು ಹೊರಗಿಟ್ಟು ಮಲೇರಿಯಾ ರೋಗದ ಬಗ್ಗೆ ಚರ್ಚಿಸಿದಂತೆ. ಅದರಿಂದ ಯಾವ ಪ್ರಯೋಜನವೂ ಇಲ್ಲ.

Monday, 18 November 2013

ರನ್ನುಗಳ ರಾಶಿಯಲ್ಲಿ ಚರ್ಚೆಯಾಗದೇ ಉಳಿದ ಬಾಲ್ಯ

    ಕ್ರಿಕೆಟ್‍ಗೆ ವಿದಾಯ ಕೋರಿದ ಸಚಿನ್ ತೆಂಡುಲ್ಕರ್‍ರ ಸುತ್ತ ಟಿ.ವಿ. ಚಾನೆಲ್‍ಗಳು ಗಂಭೀರ ಚರ್ಚೆಯಲ್ಲಿ ಮುಳುಗಿದ್ದಾಗಲೇ ಅತ್ತ ಹೈದರಾಬಾದ್‍ನಲ್ಲಿ, ‘ಚಿಲ್ಡ್ರನ್ ಇನ್ ಮೀಡಿಯಾ: ರೈಟ್ಸ್ ಆಫ್ ಚೈಲ್ಡ್ ಆರ್ಟಿಸ್ಟ್' ಎಂಬ ವಿಷಯದ ಮೇಲೆ ಗೋಷ್ಠಿಯೊಂದು ನಡೆಯುತ್ತಿತ್ತು. ಗೋಷ್ಠಿಯ ಕೇಂದ್ರೀಯ ವಿಷಯದಲ್ಲಿ ಸಚಿನ್ ಇಲ್ಲದೇ ಇದ್ದರೂ ಸಚಿನ್ ಅಲ್ಲಿ ಪ್ರಸ್ತಾಪವಾದರು. ವಿಶ್ವನಾಥನ್ ಆನಂದ್ ಚರ್ಚೆಗೊಳಪಟ್ಟರು. ಖ್ಯಾತ ಚಿಂತಕ ಅಮೋಲ್ ಪಾಲೇಕರ್, ಬಬಿತಾ ಶರ್ಮಾ ಮತ್ತು ಡಾಕ್ಯುಮೆಂಟರಿ ನಿರ್ದೇಶಕಿ ಉಮಾ ಮಗಳ್... ಮುಂತಾದವರಿದ್ದ ಚರ್ಚೆಯು ಎಷ್ಟು ಆಸಕ್ತಿಕರವಾಗಿತ್ತೆಂದರೆ, ಸಚಿನ್‍ರ ಪ್ರಭಾವಳಿಯಲ್ಲಿ ಮಾಧ್ಯಮಗಳು ಹೇಗೆ ಬಹುಮುಖ್ಯ ವಿಚಾರವನ್ನು ಮರೆತುಬಿಟ್ಟಿವೆ ಎಂಬುದನ್ನು ಅವರು ಬಿಚ್ಚಿಟ್ಟರು. ಸಚಿನ್‍ರ ಶಿಕ್ಷಣ, ರಿಯಾಲಿಟಿ ಶೋಗಳಲ್ಲಿ ಬೊಂಬೆಗಳಂತೆ ಕಾಣುವ ಮಕ್ಕಳ ಮನಃಸ್ಥಿತಿ, ಸಿನಿಮಾದಲ್ಲಿರುವ ಬಾಲ ನಟರ ಮೇಲಿನ ಒತ್ತಡಗಳು.. ಎಲ್ಲವನ್ನೂ ಈ ಗೋಷ್ಠಿ ಅತ್ಯಂತ ಆಳವಾಗಿ ಚರ್ಚಿಸಿತು. ಒಂದು ವೇಳೆ; ರವಿಶಾಸ್ತ್ರಿ, ಗಂಗೂಲಿ, ಕಪಿಲ್, ಗವಾಸ್ಕರ್.. ಮುಂತಾದವರನ್ನು ಕೂರಿಸಿಕೊಂಡು ಟಿ.ವಿ. ಚಾನೆಲ್‍ಗಳು ‘ಸಚಿನ್ ವಿದಾಯ'ವನ್ನು ಚರ್ಚಿಸುವುದಕ್ಕಿಂತ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿರುತ್ತಿದ್ದರೆ, ಈ ದೇಶದ ಕೋಟ್ಯಂತರ ಮಕ್ಕಳು ಖಂಡಿತ ಸಂತಸಪಡುತ್ತಿದ್ದುವು.
   ಕ್ರಿಕೆಟ್‍ನಲ್ಲಿ ಸಚಿನ್ ರಾಶಿ ರಾಶಿ ರನ್ನುಗಳನ್ನು ಸಂಗ್ರಹಿಸಿರಬಹುದು. ಆದರೆ, ರನ್ನುಗಳ ಈ ಭರಾಟೆಯಲ್ಲಿ ಅವರಿಗೆ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಲೂ ಸಾಧ್ಯವಾಗಿಲ್ಲ. 19 ವರ್ಷದವರಿಗಿರುವ ಕ್ರಿಕೆಟ್ ತಂಡದ ನಾಯಕನಾಗಿದ್ದ ಉನ್ಮುಕ್ತ್ ಚಂದ್‍ಗೆ ಪಿಯು ಓದುವುದಕ್ಕೂ ಸಾಧ್ಯವಾಗುತ್ತಿಲ್ಲ. ಇನ್ನು, ಟಿ.ವಿ. ಚಾನೆಲ್‍ಗಳಲ್ಲಿ ಪ್ರದರ್ಶನದ ಬೊಂಬೆಗಳಾಗುತ್ತಿರುವ ಮಕ್ಕಳನ್ನು ನೋಡುವಾಗಲಂತೂ ದಿಗಿಲಾಗುತ್ತದೆ. ತಮ್ಮದಲ್ಲದ ಮಾತು, ವಯಸ್ಸನ್ನೂ ಮೀರಿದ ಪ್ರೌಢತೆ, ನಗು, ಹಾವ-ಭಾವಗಳನ್ನು ಆ ಮಕ್ಕಳು ಪ್ರದರ್ಶಿಸುತ್ತಿರುವುದು ಯಾರ ಒತ್ತಡದಿಂದ? ಯಾವುದೇ ಒಂದು ಮಗುವಿನ ವರ್ತನೆಗೂ ವಯಸ್ಸಿಗೂ ಖಂಡಿತ ಸಂಬಂಧವಿರುತ್ತದೆ. ನಿಜವಾಗಿ, 5 ವರ್ಷದ ಮಗು ಸಚಿನ್‍ನಂತೆ ಬ್ಯಾಟು ಬೀಸಬೇಕು ಎಂದು ಬಯಸುವುದು ಖಂಡಿತ ತಪ್ಪು. 10 ವರ್ಷದ ಹುಡುಗನಿಂದ ಮನ್‍ಮೋಹನ್ ಸಿಂಗ್‍ರ ಆರ್ಥಿಕ ನಡೆಗಳ ಬಗ್ಗೆ ವ್ಯಾಖ್ಯಾನವನ್ನು ಬಯಸುವುದಕ್ಕೆ ಯಾವ ಅರ್ಥವೂ ಇಲ್ಲ. ಪಿ.ಟಿ. ಉಷಾರ ಟ್ರ್ಯಾಕ್ ದಾಖಲೆಯನ್ನು ಪುಟಾಣಿಯೊಂದು ಅಳಿಸಿ ಹಾಕಬೇಕೆಂದು ಯಾರೂ ಬಯಸುತ್ತಿಲ್ಲ. ಯಾಕೆಂದರೆ, ಮಗು ಮಗುವೇ. ದೊಡ್ಡವರು ದೊಡ್ಡವರೇ. ಆದರೆ ನಾವೆಲ್ಲ ಸೇರಿಕೊಂಡು ಪುಟಾಣಿಗಳಿಂದ ಈ ‘ಮಗು’ತನವನ್ನು ಕಸಿದುಕೊಳ್ಳುತ್ತಿದ್ದೇವೆಯೇ ಎಂದು ಗಂಭೀರವಾಗಿ ಆಲೋಚಿಸಬೇಕಾಗಿದೆ. ಸಿನಿಮಾದಲ್ಲಿ ನಟಿಸುವ ಮಗುವನ್ನೇ ಎತ್ತಿಕೊಳ್ಳಿ. ಅದರ ಮುಂದೆ ಡಯಲಾಗ್‍ನ ಸಿದ್ಧ ಮಾದರಿಯೊಂದು ಇರುತ್ತದೆ. ಹಿರಿಯ ನಟರಂತೆ ಮಗುವಿಗೆ ಡಯಲಾಗನ್ನು ಹೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅದು ಮನನ ಮಾಡಲೇಬೇಕು. ಹೀಗೆ ಮನನ ಮಾಡಿದ್ದನ್ನು ಒಂದೇ ಬಾರಿ ಹೇಳಿ ಮುಗಿಸುವಂತಿಲ್ಲ. ಹೇಳುವ ರೀತಿ, ಆಂಗಿಕ ಅಭಿನಯ, ಭಾವಾಭಿವ್ಯಕ್ತತೆ.. ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಹೀಗೆ, ಮತ್ತೆ ಮತ್ತೆ ಅಭಿನಯಿಸಬೇಕಾದ ಮತ್ತು ನಿರ್ದೇಶಕರಿಂದಲೋ ಸಹ ನಟರಿಂದಲೋ ಬೈಸಿಕೊಳ್ಳಬೇಕಾದ ಒತ್ತಡದಲ್ಲಿ ಮಗು ಸಿಲುಕುತ್ತದೆ. ಎಲ್ಲೋ ತಮ್ಮದಲ್ಲದ ಊರಿನಲ್ಲಿ ಅಭಿನಯಕ್ಕಾಗಿ ಕಾಯುತ್ತಾ, ಮತ್ತೆ ಮತ್ತೆ ಅಭಿನಯಿಸುತ್ತಾ ಬೆಳೆಯುವ ಮಗುವಿನ ಮನಃಸ್ಥಿತಿ ಹೇಗಿರಬಹುದು? ಅದು ಎದುರಿಸುವ ಒತ್ತಡಗಳ ಪ್ರಮಾಣ ಎಷ್ಟಿರಬಹುದು?
   ಟಿ.ವಿ.ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಕ್ಕಳ ಪರಿಸ್ಥಿತಿಯಂತೂ ಇದಕ್ಕಿಂತಲೂ ಭೀಕರ. ಅವುಗಳ ಬಾಲ್ಯವನ್ನು ತಮ್ಮ ಜನಪ್ರಿಯತೆಗಾಗಿ ಚಾನೆಲ್‍ಗಳು ಕಸಿದುಕೊಳ್ಳುತ್ತವೆ. ಒಂದು ಮಗು ಹಾಡುವುದು ಬೇರೆ, ಆ ಹಾಡಿಗಾಗಿ ದಿನ, ವಾರಗಟ್ಟಲೆ ಒತ್ತಡಕ್ಕೆ ಸಿಲುಕಿಸುವುದು ಬೇರೆ. ಕೇವಲ ಇವಷ್ಟೇ ಅಲ್ಲ- ವೇದಿಕೆಯಲ್ಲಿ ಹೇಗೆಲ್ಲ ಮಾತಾಡಬೇಕು, ದೊಡ್ಡವರೊಂದಿಗೆ ಹೇಗೆ ಕಿಚಾಯಿಸಬೇಕು, ಎಲ್ಲರ ಗಮನ ಕೇಂದ್ರವಾಗಲು ಹೇಗೆ ಆಂಗಿಕ ಅಭಿನಯ ಮಾಡಬೇಕು.. ಎಲ್ಲವನ್ನೂ ಮಗು ದೊಡ್ಡವರಿಂದ ಹೇಳಿಸಿಕೊಳ್ಳುತ್ತದೆ. ಇದರ ಮಧ್ಯೆ ಹೆತ್ತವರು ಕ್ಷಣಕ್ಷಣಕ್ಕೂ ಮಗುವಿಗೆ ತನ್ನ ಜವಾಬ್ದಾರಿಯನ್ನು ನೆನಪಿಸುತ್ತಿರುತ್ತಾರೆ. ಹೀಗೆ, ತನ್ನ ವಯಸ್ಸಿನ ಮಕ್ಕಳ ಜೊತೆ ಸ್ವಚ್ಛಂದವಾಗಿ ಬಾಲ್ಯವನ್ನು ಕಳೆಯಬೇಕಾದ ಮಕ್ಕಳನ್ನು ಜಗಮಗಿಸುವ ವೇದಿಕೆಯಲ್ಲಿ, ಹಿರಿಯರೊಂದಿಗೆ ಮಾತುಕತೆಗೆ ಇಳಿಸಲಾಗುತ್ತದೆ. ಒಂದು ರೀತಿಯಲ್ಲಿ, ಇದು ಪ್ರಾಣಿಯನ್ನು ಕಸಾಯಿಖಾನೆಗೆ ಒಯ್ದಂತೆ. ಕಸಾಯಿಖಾನೆಯು ಪ್ರಾಣಿಯ ಆಯ್ಕೆ ಅಲ್ಲ. ಅದು ಆ ಪ್ರಾಣಿಯ ಮಾಲಿಕ ಮತ್ತು ಖರೀದಿದಾರರ ಆಯ್ಕೆ. ಅದು ಅವರ ಆಣತಿಯಂತೆ ವರ್ತಿಸಬೇಕಾಗುತ್ತದೆಯೇ ಹೊರತು ತನ್ನತನವನ್ನಲ್ಲ. ಟಿ.ವಿ. ಚಾನೆಲ್‍ಗಳು, ಚಿತ್ರರಂಗ ಮತ್ತು ಮಕ್ಕಳ ಹೆತ್ತವರು ಇವತ್ತು ಮಾಡುತ್ತಿರುವುದು ಇದನ್ನೇ. ಮಕ್ಕಳನ್ನು ಅವರ ಹೆತ್ತವರಿಂದ ಖರೀದಿಸಿ ಶೋಗಳೆಂಬ ಕಸಾಯಿಖಾನೆಗೆ ಚಾನೆಲ್‍ಗಳು ಮತ್ತು ಚಿತ್ರರಂಗವು ಯೋಗ್ಯಗೊಳಿಸುತ್ತವೆ. ಮಕ್ಕಳು ‘ಕಸಾಯಿ’ಗೆ ಸಂಪೂರ್ಣ ಯೋಗ್ಯವೆಂದು ಮನವರಿಕೆಯಾದ ಬಳಿಕ ವೇದಿಕೆಯೆಂಬ ಕಸಾಯಿಖಾನೆಯಲ್ಲಿ ತಂದು ನಿಲ್ಲಿಸುತ್ತದೆ. ಪ್ರೇಕ್ಷಕರೆಂಬ ಖರೀದಿದಾರರು ಆ ಕಸಾಯಿಖಾನೆಯ ಸುತ್ತ ನೆರೆದಿರುತ್ತಾರೆಂಬುದು ಇವುಗಳಿಗೆ ಚೆನ್ನಾಗಿ ಗೊತ್ತು. ಹೀಗೆ ಹೆತ್ತವರನ್ನು ಮರುಳುಗೊಳಿಸಿ ಟಿ.ವಿ. ಚಾನೆಲ್‍ಗಳು ಮಕ್ಕಳನ್ನು ಬಲಿಪ್ರಾಣಿಯಂತೆ ಬಳಸಿ ಬಿಸಾಕುತ್ತಿವೆ. ಆ ಬಳಿಕ ಆ ಮಕ್ಕಳ ಭವಿಷ್ಯ ಏನಾಗಿದೆ, ಅವು ರಿಯಾಲಿಟಿ ಶೋಗಳ ಒತ್ತಡಗಳಿಂದ ಹೇಗೆ ಹೊರಬಂದಿವೆ, ಟಿ.ವಿ.ಗಳಲ್ಲಿ ಪ್ರದರ್ಶಿಸಿದ ಪ್ರತಿಭೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿವೆ.. ಎಂಬುದನ್ನೆಲ್ಲಾ ಶೋ ಮುಗಿದ ಬಳಿಕ ಯಾರೂ ಕೆದಕುವುದಿಲ್ಲವಾದ್ದರಿಂದ ಅದೊಂದು ಚರ್ಚಿಸಲೇ ಬೇಕಾದ ಇಶ್ಶೂವಾಗಿಯೂ ಗುರುತಿಸಿಕೊಳ್ಳುವುದಿಲ್ಲ. ಆದ್ದರಿಂದ,  
   ಸಚಿನ್ ತೆಂಡುಲ್ಕರ್‍ರ ವಿದಾಯವು ಈ ನಿಟ್ಟಿನಲ್ಲಿ ಚರ್ಚೆಯೊಂದಕ್ಕೆ ಕಾರಣವಾಗಬೇಕಾಗಿದೆ. ಕ್ರಿಕೆಟ್‍ನ ಉನ್ನತ ಮೆಟ್ಟಲನ್ನು ಹತ್ತಿದರೂ ಹೈಸ್ಕೂಲ್ ಮೆಟ್ಟಲನ್ನೂ ಹತ್ತದ ಅವರು, ಪುಟ್ಟ ಮಕ್ಕಳಿಗೆ ‘ಬಾಲ್ಯ'ವನ್ನು ಒದಗಿಸುವಂತೆ ಒತ್ತಾಯಿಸುವುದಕ್ಕೆ ಪ್ರೇರಕವಾಗಬೇಕಾಗಿದೆ. ಹೆತ್ತವರ ವಿಪರೀತ ಕನಸಿಗೆ ಮಕ್ಕಳ ಬಾಲ್ಯ ಕಮರಿ ಹೋಗದಂತೆ ಎಚ್ಚರಿಕೆಯ ಸಂದೇಶವನ್ನು ಸಚಿನ್ ಬದುಕು ರವಾನಿಸಬೇಕಾಗಿದೆ.

Monday, 11 November 2013

ಯಾವುದು ನಂಬಿಕೆ, ಯಾವುದೆಲ್ಲ ಮೂಢನಂಬಿಕೆ?

    ಯಾವುದು ನಂಬಿಕೆ, ಯಾವುದೆಲ್ಲ ಮೂಢನಂಬಿಕೆ ಎಂದು ವಿಭಜಿಸುವುದಕ್ಕೆ ನಮ್ಮಲ್ಲಿರುವ ಮಾನದಂಡಗಳು ಯಾವುವು? ವಿಚಾರವಾದಿಗಳಿಗೆ ಮೂಢನಂಬಿಕೆಯಂತೆ ಕಾಣುವ ಆಚರಣೆಯೊಂದು ಆಸ್ತಿಕರಿಗೆ ನಂಬಿಕೆಯಾಗಿ ಕಾಣಬಹುದು. ಆಸ್ತಿಕರಿಗೆ ನಿಂದನೆಯಂತೆ ಕಾಣುವ ವಿಷಯವೊಂದು ನಾಸ್ತಿಕರಿಗೆ ಬಂಡಾಯ ಪ್ರವೃತ್ತಿಯಂತೆ ಗೋಚರಿಸಬಹುದು. ನಂಬಿಕೆಗೂ ಮೂಢನಂಬಿಕೆಗೂ ನಡುವೆ ಸಮಾಜ ಎಳೆದಿರುವ ಗೆರೆ ಬಹಳ ತೆಳುವಾದದ್ದು. ಒಂದು ಧರ್ಮ ನಂಬಿಕೆಯಾಗಿ ಒಪ್ಪಿಕೊಂಡಿರುವುದನ್ನು ಇನ್ನೊಂದು ಧರ್ಮ ಹಾಗೆಯೇ ಒಪ್ಪಿಕೊಳ್ಳಬೇಕೆಂದಿಲ್ಲ. ಇಸ್ಲಾಮ್ ಏಕದೇವವಾದವನ್ನು ಪ್ರತಿ ಪಾದಿಸುತ್ತದೆ. ವಿಗ್ರಹ ಆರಾಧನೆಯು ಇಸ್ಲಾಮಿನ ಮಟ್ಟಿಗೆ ಅನ್ಯವಾದದ್ದು. ಒಂದು ರೀತಿಯಲ್ಲಿ ಮೂಢ ಆರಾಧನೆ. ಸುನ್ನತಿ ಕರ್ಮವನ್ನು ಮುಸ್ಲಿಮರು ಬಹಳ ಶ್ರದ್ಧೆಯಿಂದ ಪಾಲಿಸುತ್ತಾರೆ. ಮುಸ್ಲಿಮೇತರರ ಮಟ್ಟಿಗೆ ಅದು ಅತಿರೇಕ ಮತ್ತು ಮೂಢ ಆಚರಣೆಯಾಗಿ ಕಾಣಬಹುದು. ಇವು ಒಂದೆರಡು ಉದಾಹರಣೆಗಳಷ್ಟೇ. ಇಂಥವುಗಳ ಪಟ್ಟಿ ಸಾಕಷ್ಟು ಉದ್ದವಿದೆ. ಹೀಗಿರುವಾಗ, ಸಿದ್ಧರಾಮಯ್ಯರು ಜಾರಿಗೆ ತರಲು ಹೊರಟಿರುವ ಮೂಢನಂಬಿಕೆ ತಡೆ ಮಸೂದೆಯನ್ನು ಒಂದೇ ಏಟಿಗೆ ಸ್ವಾಗತಾರ್ಹವೆಂತಲೋ ಖಂಡನಾರ್ಹವೆಂತಲೋ ಷರಾ ಬರೆದು ಬಿಡುವುದು ತಪ್ಪಾಗಬಹುದು. ಮುಖ್ಯವಾಗಿ, ಮಸೂದೆಯ ಅಂಶಗಳು ಇನ್ನೂ ಸಾರ್ವಜನಿಕವಾಗಿ ಬಿಡುಗಡೆಗೊಂಡಿಲ್ಲ. ಅದರಲ್ಲಿ ಏನೇನಿವೆ, ಯಾವುದನ್ನೆಲ್ಲ ಮೂಢನಂಬಿಕೆಯಾಗಿ ಪಟ್ಟಿ ಮಾಡಲಾಗಿದೆ, ಹಿಂದೂ ಧರ್ಮವನ್ನು ಮಾತ್ರ ಕೇಂದ್ರೀಕರಿಸಿ ಕರಡು ಪ್ರತಿಯನ್ನು ರಚಿಸಲಾಗಿದೆಯೇ.. ಮುಂತಾದ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯಬೇಕಾದರೆ ಮಸೂದೆಯು ಸಾರ್ವಜನಿಕವಾಗಿ ಬಹಿರಂಗಗೊಳ್ಳಬೇಕು. ದುರಂತ ಏನೆಂದರೆ, ಕೆಲವು ನಿರ್ದಿಷ್ಟ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳು ಕರಡು ಪ್ರತಿಯ ವಿರುದ್ಧ ಸಮರವನ್ನೇ ಸಾರಿಬಿಟ್ಟಿವೆ. ಮಸೂದೆಯನ್ನು ‘ಹಿಂದೂ ವಿರೋಧಿ' ಎಂಬಲ್ಲಿ ವರೆಗೆ ಅವು ತಂದು ಮುಟ್ಟಿಸಿವೆ. ‘ಮೂಢನಂಬಿಕೆ ವಿರೋಧಿ ಮಸೂದೆ’ಯನ್ನು ನಂಬಿಕೆ ವಿರೋಧಿ ಮಸೂದೆಯೆಂಬಂತೆ ತಪ್ಪಾಗಿ ಬಿಂಬಿಸುವ ಪ್ರಯತ್ನದಲ್ಲಿ ಅವು ತಮ್ಮನ್ನು 24 ಗಂಟೆಯೂ ತೊಡಗಿಸಿಕೊಂಡಿವೆ. ಇಷ್ಟಕ್ಕೂ, ಮಸೂದೆಯ ರಚನಾ ಮಂಡಳಿಯಲ್ಲಿ ಇರುವವರನ್ನು ನೋಡಿಕೊಂಡು ಒಟ್ಟು ಸಮೂದೆಯ ಭವಿಷ್ಯವನ್ನೇ ನಿರ್ಧರಿಸುವುದಕ್ಕೆ ಏನೆನ್ನಬೇಕು? ಮಸೂದೆಯೊಂದು ಸ್ವೀಕಾರಾರ್ಹವೋ ಅಲ್ಲವೋ ಎಂಬುದನ್ನು ನಿರ್ಧರಿಸುವುದಕ್ಕೆ ಮಸೂದೆಯಲ್ಲಿ ಅಡಕವಾಗಿರುವ ಅಂಶಗಳು ಮಾನದಂಡವಾಗಬೇಕೇ ಹೊರತು ಅದನ್ನು ರಚಿಸಿದವರು ಅಲ್ಲವಲ್ಲ. ಸದ್ಯ ಈ ಮಸೂದೆಯನ್ನು ವಿರೋಧಿಸುತ್ತಿರುವ ನಿರ್ದಿಷ್ಟ ವರ್ಗವೊಂದರ ಭಾಷೆ, ವಾದ ಮಂಡನೆ, ಆಕ್ರೋಶದ ಧಾಟಿಯನ್ನು ನೋಡುವಾಗ ಅವರ ಉದ್ದೇಶ ಶುದ್ಧಿಯ ಬಗ್ಗೆಯೇ  ಅನುಮಾನ ಉಂಟಾಗುತ್ತದೆ.
   ಹಾಗಂತ, ಎಲ್ಲ ಧರ್ಮಗಳೂ ವಿರೋಧಿಸುವ ಅನೇಕ ಮೂಢನಂಬಿಕೆಗಳು ಸಮಾಜದಲ್ಲಿವೆ. ಅವು ಧರ್ಮದ ಮೂಲದಿಂದ ಹುಟ್ಟಿಕೊಂಡದ್ದಲ್ಲ. ಧರ್ಮಕ್ಕೂ ಅವುಗಳಿಗೂ ಸಂಬಂಧವೂ ಇರುವುದಿಲ್ಲ. ಆದರೆ, ಅವು ಸಮಾಜದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ, ಧರ್ಮವನ್ನೂ ಮೀರಿ ಅವು ವರ್ಚಸ್ಸು ಬೆಳೆಸಿಕೊಂಡಿವೆ. ಮಸೀದಿ, ದೇವಾಲಯ, ಚರ್ಚುಗಳಲ್ಲಿ ಸೇರುವುದಕ್ಕಿಂತ ಅಧಿಕ ಮಂದಿ ಇವತ್ತು ಇಂಥ ಮೂಢನಂಬಿಕೆಗಳ ಸುತ್ತ ನೆರೆಯುವುದಿದೆ. ಅಲ್ಲಿ ಶೋಷಣೆಯೂ ನಡೆಯುತ್ತದೆ. ಅತ್ಯಾಚಾರ, ವಂಚನೆಯೂ ನಡೆಯುತ್ತದೆ. ಒಂದು ಸರಕಾರ ತರುವ ಕಾನೂನು ಇಂಥ ಧರ್ಮ ವಿರೋಧಿ ನಂಬಿಕೆಗಳ ವಿರುದ್ಧವೇ ಆಗಿದ್ದರೆ ಅದನ್ನು ಸ್ವಾಗತಿಸಲೇಬೇಕು. ಆದರೆ ಅದಕ್ಕಿಂತಲೂ ಮೊದಲು, ಕಾನೂನಿಗಿಂತ ಹೊರತಾದ ಜಾಗೃತಿ ಕಾರ್ಯಕ್ರಮಗಳ ಮೂಲಕ ಇವನ್ನು ಅಳಿಸಬಹುದೇ ಎಂದು ಯೋಚಿಸುವುದೂ ಬಹಳ ಅಗತ್ಯ. ಯಾಕೆಂದರೆ, ನಂಬಿಕೆಗಳೆಂಬುದು ಕ್ರಿಮಿನಲ್ ಕೃತ್ಯಗಳಂತೆ ಅಲ್ಲ. ಕಳ್ಳತನ, ಅತ್ಯಾಚಾರ, ಕೊಲೆ ಮುಂತಾದುವುಗಳ ಜೊತೆ ವ್ಯವಹರಿಸು ವಂತೆ ಸಾಮಾಜಿಕ ನಂಬಿಕೆಗಳೊಂದಿಗೆ ವ್ಯವಹರಿಸುವುದು ತಪ್ಪು. ನಿರ್ದಿಷ್ಟ ನಂಬಿಕೆಯೊಂದು ಧರ್ಮ ವಿರೋಧಿಯೇ ಆಗಿದ್ದರೂ ಅದನ್ನು ಆಚರಿಸುವವರು ಆ ಬಗ್ಗೆ ಗಾಢ ಅಭಿಮಾನವನ್ನು ಹೊಂದಿರುತ್ತಾರೆ. ತಮ್ಮ ನಂಬಿಕೆಯಲ್ಲಿ ದೃಢ ವಿಶ್ವಾಸವನ್ನು ಇಟ್ಟಿರುತ್ತಾರೆ. ಅವರನ್ನು ತಿದ್ದುವುದಕ್ಕೆ ಲಾಠಿ, ಖಾಕಿಯನ್ನು ಬಳಸುವುದರಿಂದ ಸಂಘರ್ಷದ ವಾತಾವರಣವನ್ನು ಹುಟ್ಟು ಹಾಕಿದಂತಾಗುತ್ತದೆಯೇ ಹೊರತು, ಅವರನ್ನು ತಿದ್ದಿದಂತಲ್ಲ. ನಂಬಿಕೆಗೂ ಕ್ರಿಮಿನಲ್ ಕೃತ್ಯಕ್ಕೂ ನಡುವೆ ಇರುವ ಈ ವ್ಯತ್ಯಾಸ ವನ್ನು ವ್ಯವಸ್ಥೆ ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದಲೇ, ಕಾನೂನು ಜಾರಿಗಿಂತಲೂ ಮೊದಲು ವ್ಯವಸ್ಥಿತ ಮತ್ತು ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮವೊಂದನ್ನು ಸರಕಾರ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸುವುದು. ಯಾಕೆಂದರೆ,      ಸಮಾಜ ಈ ವಂಚಕರನ್ನು ಮುಗ್ಧವಾಗಿ ಅನುಸರಿಸುತ್ತಿದೆ. ಅವರು ಹೇಳಿದಷ್ಟು ದುಡ್ಡು, ಹರಕೆ.. ಇನ್ನಿತರ ವಸ್ತುಗಳನ್ನು ಉದಾರವಾಗಿ ನೀಡುತ್ತಿದೆ. ಹೀಗಿರುವಾಗ, ಸರಕಾರವೇ, ‘ಮೂಢನಂಬಿಕೆ ವಿರೋಧಿ' ಅಭಿಯಾನವನ್ನು ಆರಂಭಿಸಿದರೆ ಒಳಿತಲ್ಲವೇ? ಯಾವುದೆಲ್ಲ ಮೂಢನಂಬಿಕೆ, ಧರ್ಮಕ್ಕೂ ಅದಕ್ಕೂ ಸಂಬಂಧಗಳೇನು, ಬೂದಿ ಬಾಬಾಗಳಿಗೆ ಧಾರ್ಮಿಕವಾಗಿ ಏನು ಸ್ಥಾನಮಾನವಿದೆ, ಧರ್ಮಗಳ ನಿಜವಾದ ಸಾರವೇನು.. ಎಂಬಿತ್ಯಾದಿ ವಿಷಯಗಳ ಸುತ್ತ ಎಲ್ಲ ಧರ್ಮದ ಪ್ರತಿನಿಧಿಗಳನ್ನು ಸೇರಿಸಿ ಸಮಾಜ ಶುದ್ಧಿ ಕಾರ್ಯಕ್ರಮವನ್ನು ಹಮ್ಮಿ ಕೊಂಡರೆ ಮೂಢನಂಬಿಕೆಯ ಜೊತೆ ಗುರುತಿಸಿಕೊಂಡ ಮುಗ್ಧರಲ್ಲಿ ದೊಡ್ಡದೊಂದು ವರ್ಗ ಆ ಬಗ್ಗೆ ಜಿಗುಪ್ಸೆ ತಾಳುವ ಸಾಧ್ಯತೆ ಇದೆ. ಅನೇಕ ಕಡೆ ಭಕ್ತರೇ ವಂಚಕರ ವಿರುದ್ಧ ಬಂಡೇಳಲೂ ಬಹುದು. ಇಂಥ ಪ್ರಯತ್ನಗಳು ವ್ಯಾಪಕ ಮಟ್ಟದಲ್ಲಿ ನಡೆದ ಬಳಿಕ ಕಾನೂನು ಜಾರಿಯ ಬಗ್ಗೆ ಚರ್ಚೆ, ಸಂವಾದಗಳು ನಡೆದರೆ ಅವು ಹೆಚ್ಚು ಅರ್ಥಪೂರ್ಣವಾಗುವುದಕ್ಕೆ ಅವಕಾಶಗಳಿವೆ.
   ಏನೇ ಆಗಲಿ, ಸಾಕಷ್ಟು ಅರ್ಥವ್ಯಾಪ್ತಿಯಿರುವ ನಂಬಿಕೆ-ಮೂಢನಂಬಿಕೆ ಎಂಬ ವಿಷಯಗಳ ಸುತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹುಟ್ಟು ಹಾಕಿರುವ ಚರ್ಚೆಯನ್ನು ಒಂದೇ ಏಟಿಗೆ ಧರ್ಮವಿರೋಧಿ ಎಂಬ ಹಣೆಪಟ್ಟಿ ಹಚ್ಚಿ ತಿರಸ್ಕರಿಸಬೇಕಿಲ್ಲ. ಸಮಾಜದಲ್ಲಿರುವ ಮತ್ತು ಸಕಲ ಧರ್ಮಗಳೂ ವಿರೋಧಿಸುವ ಮೂಢನಂಬಿಕೆಗಳ ಪಟ್ಟಿ ಮಾಡುವುದಕ್ಕೆ ಮತ್ತು ಅವುಗಳಿಂದಾಗುವ ಹಾನಿಯನ್ನು ತಿಳಿದುಕೊಳ್ಳುವುದಕ್ಕೆ ಈ ಚರ್ಚೆ ಖಂಡಿತ ಉಪಯುಕ್ತವಾಗಬಹುದು. ಅಂಥದ್ದೊಂದು ಚರ್ಚೆಗೆ ಸಿದ್ಧರಾಮಯ್ಯರ ಕರಡು ಮಸೂದೆ ಪ್ರೇರಕವಾಗಲಿ ಎಂದು ಹಾರೈಸೋಣ.

Wednesday, 23 October 2013

ಕಾರು ಎಂಬ ಸೌoದರ್ಯ ಮತ್ತು ಸೈಕಲ್ ಎಂಬ ಕುರೂಪ


ಈ ಸುದ್ದಿಗಳನ್ನು ಓದಿ
  1. 174 ದೊಡ್ಡ ಮತ್ತು ಸಣ್ಣ ರಸ್ತೆಗಳಲ್ಲಿ ಸೈಕಲ್ ಸಂಚಾರವನ್ನು ನಿಷೇಧಿಸುವ ಪಶ್ಚಿಮ ಬಂಗಾಲ ಸರಕಾರದ ತೀರ್ಮಾನದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.
  2. ಕಳೆದ 10 ವರ್ಷಗಳಲ್ಲಿ ಸ್ಲಮ್ ನಿವಾಸಿಗಳ ಸಂಖ್ಯೆಯಲ್ಲಿ 25% ಹೆಚ್ಚಳವಾಗಿದ್ದು, ಸ್ಲಮ್ ಮುಕ್ತ ನಗರ ನಿರ್ಮಾಣಕ್ಕೆ ಹಿನ್ನಡೆಯಾಗಿದೆ.
  ಮಾಧ್ಯಮಗಳಲ್ಲಿ ಕಳೆದ ವಾರ ಪ್ರಕಟವಾದ ಈ ಎರಡೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆಯಿದೆ. ಅದೇನೆಂದರೆ, ಇವೆರಡೂ ಜನಸಾಮಾನ್ಯರಿಗೆ ಸಂಬಂಧಿಸಿದವು. ಸೈಕಲ್ ಶ್ರೀಮಂತರ ಸಂಕೇತ ಅಲ್ಲ. ಅದು ಬಡವರಷ್ಟೇ ತೆಳ್ಳಗೆ. ತೂಕವೂ ಕಡಿಮೆ. ಆಧುನಿಕ ಕಾರುಗಳ ಯಾವ ಥಳಕು-ಬಳುಕೂ ಜನಸಾಮಾನ್ಯರ ಸೈಕಲ್‍ಗಳಿಗಿಲ್ಲ. ಕೂಲಿ ಕಾರ್ಮಿಕರ ನರಗಳಂತೆ ಅದರ ಚಕ್ರದ ಸರಿಗೆಗಳು ಎದ್ದು ಕಾಣುತ್ತವೆ. ಮಳೆಗೆ ಒದ್ದೆಯಾಗದೇ ಬಿಸಿಲಿಗೆ ಬೆವರದೇ ಇರುವ ವ್ಯವಸ್ಥೆ ಶ್ರೀಮಂತರ ವಾಹನಗಳಲ್ಲಿರುವಾಗ ಸೈಕಲ್‍ನಲ್ಲಿ ಅಂಥ ವ್ಯವಸ್ಥೆಯೇ ಇಲ್ಲ. ಭೂಮಿಯಿಂದ ಅಗೆದು ತೆಗೆದ ತೈಲವನ್ನು ಸೈಕಲ್ ಸ್ವೀಕರಿಸುವುದಿಲ್ಲ. ಶ್ರೀಮಂತರು ಆಧುನಿಕ ಕಾರುಗಳಲ್ಲಿ ಆರಾಮವಾಗಿ ಪ್ರಯಾಣಿಸುವಾಗ, ಬಡವರು ಸೈಕಲನ್ನು ತುಳಿದುಕೊಂಡೋ ದೂಡಿಕೊಂಡೋ ಸಂಚರಿಸುತ್ತಾರೆ. ಕಾರು, ರಿಕ್ಷಾ, ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳಿರುವಂತೆ ಸೈಕಲ್‍ಗೆಂದೇ ಅಂಥ ಪಾರ್ಕಿಂಗ್‍ಗಳಿರುವುದು ತೀರಾ ಕಡಿಮೆ. ಒಂದು ರೀತಿಯಲ್ಲಿ, ಸೈಕಲ್ ಮತ್ತು ಅದರಲ್ಲಿ ಸಂಚರಿಸುವವರ ಈ ಕೊರತೆಗಳನ್ನು ಆಧುನಿಕ ಆಲೋಚನೆಗಳು ಇವತ್ತು ದೌರ್ಬಲ್ಯ ಎಂದು ತೀರ್ಮಾನಿಸುವ ಹಂತಕ್ಕೆ ತಲುಪಿಬಿಟ್ಟಿವೆ. ನಗರ ಸುಂದರವಾಗಿ ಕಾಣಿಸಬೇಕಾದರೆ ಸೈಕಲ್‍ಗಳು ಇಲ್ಲವಾಗಬೇಕು, ತಳ್ಳುಗಾಡಿಗಳು ತೊಲಗಬೇಕು, ಕೈಗಾಡಿಗಳು ಕಾಣಿಸಿಕೊಳ್ಳಬಾರದು.. ಎಂದೆಲ್ಲಾ ಅವು ಅಂದುಕೊಂಡಿವೆ. ಅದಕ್ಕೆ ಪೂರಕವಾಗಿ ಕಾನೂನು ರೂಪಿಸುವಂತೆ ಅವು ಸರಕಾರಗಳ ಮೇಲೆ ಒತ್ತಡ ಹೇರುತ್ತಿವೆ.
  ದುರಂತ ಏನೆಂದರೆ, ಉತ್ತರ ಪ್ರದೇಶದ ದೌಂಡಿಯಾ ಖೇರಾ ಗ್ರಾಮದಲ್ಲಿ ನಡೆಯುತ್ತಿರುವ ನಿಧಿ ಶೋಧವು ಹುಟ್ಟು ಹಾಕಿರುವ ಕುತೂಹಲ. ಮಾಧ್ಯಮಗಳಲ್ಲಿ ಪ್ರತಿದಿನದ ಚಟುವಟಿಕೆಗಳು ವರದಿಯಾಗುತ್ತಿವೆ. ಎಷ್ಟು ಅಗಲ, ಉದ್ದದಲ್ಲಿ, ಎಷ್ಟು ಸೆಂಟಿ ವಿೂಟರ್ ಜಾಗವನ್ನು ಅಗೆಯಲಾಯಿತು ಎಂಬೆಲ್ಲಾ ಮಾಹಿತಿಗಳನ್ನು ಅವು ಭಾರೀ ಆಸಕ್ತಿಯಿಂದ ಪ್ರಕಟಿಸುತ್ತಿವೆ. ನಿಜವಾಗಿ, ಇನ್ನೂ ಖಚಿತವಲ್ಲದ ನಿಧಿಯ ಬಗ್ಗೆ ನಮ್ಮ ವ್ಯವಸ್ಥೆ ತೋರ್ಪಡಿಸುತ್ತಿರುವ ಆಸಕ್ತಿಯ ಸಣ್ಣ ಪ್ರಮಾಣವನ್ನಾದರೂ ಬಡವರ ಬಗ್ಗೆ ತೋರಿಸುತ್ತಿದ್ದರೆ, ಸೈಕಲ್ ಇವತ್ತು ನಿಷೇಧಕ್ಕೆ ಅರ್ಹವಾಗುವಷ್ಟು ಅಪಾಯಕಾರಿ ವಾಹನ ಆಗುತ್ತಿರಲಿಲ್ಲ. ಕನಿಷ್ಠ, ಪರ್ಯಾಯ ರಸ್ತೆಯ ವ್ಯವಸ್ಥೆಯನ್ನೇ ಮಾಡದೆ ಸೈಕಲನ್ನು ನಿಷೇಧಿಸಲಾಗುತ್ತದೆಂದರೆ, ಅದನ್ನು ‘ಬಡವರಿಗೆ ನಿಷೇಧ’ ಎಂದಲ್ಲದೇ ಬೇರೇನೆಂದು ವ್ಯಾಖ್ಯಾನಿಸಲು ಸಾಧ್ಯ? ಹಾಗಾದರೆ, ಜಾಗದ ದುರುಪಯೋಗ ಎಂದು ವಾದಿಸಿ ಶ್ರೀಮಂತರ ಬೃಹತ್ ಬಂಗಲೆಗಳನ್ನು ನಮ್ಮ ವ್ಯವಸ್ಥೆ ನಿಷೇಧಿಸಬಲ್ಲುದೇ? ತಾನು, ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಿಗಾಗಿ ಮುಖೇಶ್ ಅಂಬಾನಿ ಕಟ್ಟಿದ 27 ಅಂತಸ್ತಿನ ಮನೆಯ ಬಗ್ಗೆ ವ್ಯವಸ್ಥೆಯ ನಿಲುವೇನು? ಆ ದುಡ್ಡಿನಲ್ಲಿ ಸ್ಲಂನಲ್ಲಿ ಜೀವಿಸುವ ಅನೇಕಾರು ಮಂದಿಗೆ ಮನೆಗಳನ್ನು ನಿರ್ಮಿಸಿಕೊಡಬಹುದಿತ್ತು ಎಂದು ಅದು ಹೇಳುತ್ತದೆಯೇ? 5 ಮಂದಿಯ ಕುಟುಂಬವು 10ಕ್ಕಿಂತಲೂ ಹೆಚ್ಚು ಆಧುನಿಕ ವಾಹನಗಳನ್ನು ಪೇರಿಸಿಕೊಟ್ಟುಕೊಂಡು ಬದುಕುತ್ತಿರುವುದು ನಮ್ಮ ವ್ಯವಸ್ಥೆಗೇಕೆ ಅಸಂಗತ ಅನ್ನಿಸುತ್ತಿಲ್ಲ? ವಾಹನ ದಟ್ಟಣೆಗೆ, ತೈಲದ ದುರ್ಬಲಕೆಗೆ ಇಂಥ ಐಶಾರಾಮದ ಬದುಕು ಕಾರಣ ಎಂದು ಹೇಳಿ ಅವನ್ನು ನಿಷೇಧಿಸುವುದಕ್ಕೇಕೆ ಮುಂದಾಗುತ್ತಿಲ್ಲ? ಒಂದು ಕಡೆ, ನಮ್ಮ ವ್ಯವಸ್ಥೆ ಓರ್ವ ಸಾಧುವಿನ ಕನಸನ್ನು ಬೆನ್ನಟ್ಟಿಕೊಂಡು ಬುಲ್ಡೋಜರ್‍ನೊಂದಿಗೆ ಅಗೆಯಲು ಪ್ರಾರಂಭಿಸುತ್ತದೆ. ಇನ್ನೊಂದು ಕಡೆ, ಇದೇ ವ್ಯವಸ್ಥೆ ಇದೇ ಬುಲ್ಡೋಜರನ್ನು ಸ್ಲಂಗಳ ಧ್ವಂಸಕ್ಕಾಗಿ ಕಳುಹಿಸುತ್ತದೆ. ನಮ್ಮ ವ್ಯವಸ್ಥೆಗೆ ದುಡ್ಡು, ಶ್ರೀಮಂತರು ಅಗತ್ಯವೇ ಹೊರತು ಬಡವರು, ಸೈಕಲ್‍ಗಳು ಅಲ್ಲ ಎಂಬುದನ್ನಲ್ಲವೇ ಇವು ಸಮರ್ಥಿಸುತ್ತಿರುವುದು?
  ನಿಜವಾಗಿ, ಸ್ಲಮ್‍ಗಳ ಸಂಖ್ಯೆ ವರ್ಷಂಪ್ರತಿ ಹೆಚ್ಚಳವಾಗುತ್ತಿದೆಯೆಂದರೆ ನಮ್ಮನ್ನಾಳುವವರ ಆಲೋಚನೆಗಳು ದಿನೇ ದಿನೇ ಶ್ರೀಮಂತರಿಂದ ಪ್ರಭಾವಿತಗೊಳ್ಳುತ್ತಿವೆ ಎಂದೇ ಅರ್ಥ. ಅವರು ಬೇಕೆಂದ ಕಡೆ ನಮ್ಮ ವ್ಯವಸ್ಥೆ ಭೂಮಿಯನ್ನು ಒದಗಿಸುತ್ತದೆ. ಅವರಿಗೆ ಸಬ್ಸಿಡಿ ದರದಲ್ಲಿ ಸಾಲ ಕೊಡುತ್ತದೆ. ಒಂದು ಹಂತದ ವರೆಗೆ ಉಚಿತವಾಗಿ ನೀರು, ವಿದ್ಯುತ್ ಒದಗಿಸುತ್ತದೆ. ಅವರ ಕೈಯಲ್ಲಿ ಈ ದೇಶದ ಭವಿಷ್ಯವಿದೆ ಎಂದು ನಮ್ಮನ್ನಾಳುವವರು ತೀರ್ಮಾನಿಸಿರುವುದರಿಂದ ಅವರಿಗಾಗಿ ಈ 'ಸೈಕಲ್ ಮನುಷ್ಯರನ್ನು' ಒಕ್ಕಲೆಬ್ಬಿಸಬೇಕಾಗುತ್ತದೆ. ತಮ್ಮದೇ ಆದ ತುಂಡು ಭೂಮಿ, ಕೆಲಸಗಳನ್ನು ತೊರೆದು ಈ ಮಂದಿ ಎಲ್ಲೆಲ್ಲಿಗೋ ಹೋಗಬೇಕಾಗುತ್ತದೆ. ಅನೇಕ ಬಾರಿ ಪರಿಹಾರದ ಹೆಸರಲ್ಲಿ ಅವರ ಕೈಗೆ ಬರುವ ದುಡ್ಡು ಹೊಸತೊಂದು ಮನೆ ಖರೀದಿಸುವುದಕ್ಕೋ ವ್ಯಾಪಾರ ಆರಂಭಿಸುವುದಕ್ಕೋ ಸಾಲುವುದಿಲ್ಲ. ಪ್ರತಿಭಟನೆ, ಅದು-ಇದು ಎಂದು ಅತ್ತಿತ್ತ ಓಡಾಡಿಯೇ ದುಡ್ಡಿನ ದೊಡ್ಡದೊಂದು ಪಾಲು ಅದಾಗಲೇ ಮುಗಿದಿರುತ್ತದೆ. ಇಂಥವರು ಕೊನೆಗೆ ಸ್ಲಮ್‍ಗಳಂಥ ಪ್ರದೇಶಗಳಲ್ಲಿ ಬಿಡಾರ ಹೂಡುವ ಅನಿವಾರ್ಯತೆ ತಲೆದೋರುತ್ತದೆ. ಸರಿಯಾದ ಉದ್ಯೋಗವಾಗಲಿ, ಮನೆಯಾಗಲಿ ಇಲ್ಲದೇ ಅಪರಿಚಿತ ಪ್ರದೇಶದಲ್ಲಿ ಬದುಕುವ ಓರ್ವ ಬಡವನನ್ನು ಊಹಿಸಿ.. ಆತನನ್ನು ಮತ್ತು ಅಂಥ ಅಸಂಖ್ಯ ಸಂತ್ರಸ್ತರನ್ನು ನಗರದ ಸೌಂದರ್ಯಕ್ಕೆ ಕಳಂಕ ಎಂದು ನಾವು ತೀರ್ಮಾನಿಸುವಾಗ ಅಂಥದ್ದೊಂದು ಪರಿಸ್ಥಿತಿಯನ್ನು ನಿರ್ಮಿಸಿದವರ ಬಗ್ಗೆ ನಮ್ಮಲ್ಲೇಕೆ ಆಕ್ರೋಶ ವ್ಯಕ್ತವಾಗುತ್ತಿಲ್ಲ? ಅಭಿವೃದ್ಧಿ ಎಂಬುದು ಬಡವನ ಮನೆ, ಗದ್ದೆ, ಸೈಕಲನ್ನು ಧ್ವಂಸ ಮಾಡಿ ಸಾಧಿಸುವಂಥದ್ದೇ? ಸ್ಲಮ್ ಮುಕ್ತ ನಗರ, ಸೈಕಲು ಮುಕ್ತ ರಸ್ತೆ ಎಂಬೆಲ್ಲ ಪ್ರಾಸಬದ್ಧ ವಾಕ್ಯಗಳನ್ನು ರಚಿಸುವುದು ಸುಲಭ. ಅದು ಕೇಳಲೂ ಇಂಪಾಗಿರುತ್ತದೆ. ಆದರೆ, ಎಲ್ಲ ಅಭಿವೃದ್ಧಿ ಮತ್ತು ಸೌಂದರ್ಯದ ಕಲ್ಪನೆ ಬಡವರನ್ನು ಗುರಿಯಾಗಿಸಿಕೊಂಡೇ ಯಾಕೆ ಬರುತ್ತವೆ? ಬಡತನ ಎಂಬುದು ಖಂಡಿತ ಕುರೂಪದ ಹೆಸರಲ್ಲ. ಅದನ್ನು ನಮ್ಮ ವ್ಯವಸ್ಥೆ ಕುರೂಪ ಎಂದು ಭಾವಿಸುತ್ತದಾದರೆ ಆ ಕುರೂಪತನದ ಹೊಣೆಯನ್ನು ವ್ಯವಸ್ಥೆಯೇ ವಹಿಸಿಕೊಳ್ಳಬೇಕು. ಆ ಕುರೂಪತನವನ್ನು ಸೌಂದರ್ಯವಾಗಿ ಮಾರ್ಪಡಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಬೇಕು. ಅದು ಬಿಟ್ಟು, ಬಡವರ ಅಸ್ತಿತ್ವ, ಸಂಕೇತಗಳನ್ನೇ ನಿಷೇಧಿಸುವುದು ವ್ಯವಸ್ಥೆಯ ಕುರೂಪತನವನ್ನಷ್ಟೇ ತೋರಿಸುತ್ತದೆ.
  ನಿಜವಾಗಿ, ಶ್ರೀಮಂತರು ಮತ್ತು ಬಡವರು ಒಂದು ವ್ಯವಸ್ಥೆಯ ಎರಡು ಕಣ್ಣುಗಳೇ ಹೊರತು ಅದರಲ್ಲಿ ಒಂದನ್ನು ಸುಂದರ ಮತ್ತು ಇನ್ನೊಂದನ್ನು ಕುರೂಪ ಎಂದು ವಿಭಜಿಸುವುದೇ ತಪ್ಪು. ಒಂದು ಪ್ರದೇಶದ ಶ್ರೀಮಂತರು ಒಟ್ಟು ಸೇರಿ ತಮ್ಮ ಪ್ರದೇಶದ ಬಡವರ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಂತಹ ಪ್ರಯತ್ನಗಳು ನಡೆದರೆ ಶ್ರೀಮಂತರನ್ನು ಬಡವರು ಅಸೂಯೆಯಿಂದ ನೋಡುವ ಸಂದರ್ಭಗಳು ಕೊನೆಗೊಂಡೀತು. ಮನಸ್ಸು ಮಾಡಿದರೆ ಬಡವರನ್ನು ಸಬಲರನ್ನಾಗಿಸುವುದಕ್ಕೆ ಹತ್ತು-ಹಲವು ಅವಕಾಶಗಳು ಖಂಡಿತ ಇವೆ. ವರ್ಷಕ್ಕೊಮ್ಮೆ ತಮ್ಮ ಲಾಭದ ಒಂದಂಶವನ್ನು ಒಟ್ಟು ಸೇರಿಸಿ ತಮ್ಮ ಪ್ರದೇಶದ ಬಡವನನ್ನು ಸಬಲನನ್ನಾಗಿಸುವುದಕ್ಕೆ ಶ್ರೀಮಂತರು ವಿನಿಯೋಗಿಸಬಹುದು. ಆತ ಆ ದುಡ್ಡನ್ನು ವ್ಯಾಪಾರದಲ್ಲೋ ಇನ್ನಿತರ ಮಾರ್ಗದಲ್ಲೋ ಹೂಡಿ ಸಬಲನಾಗುವಂತೆ ನೋಡಿಕೊಳ್ಳಬಹುದು. ಇಂಥ ಕ್ರಮಕ್ಕೆ ಯಾರಾದರೂ ಚಾಲನೆ ಕೊಟ್ಟರೆ ಖಂಡಿತ ಮುಂದೊಂದು ದಿನ ಅದು ಚಳವಳಿಯಾಗಿ ಮಾರ್ಪಾಡಬಹುದಲ್ಲದೇ ಶ್ರೀಮಂತರನ್ನು ಅಭಿಮಾನದಿಂದ ನೋಡುವ ವರ್ಗವೊಂದು ಬೆಳೆದು ಬಂದೀತು. ಆದ್ದರಿಂದ, ಸೈಕಲ್ ಇಲ್ಲದ ರಸ್ತೆ ಮತ್ತು ಸ್ಲಂಗಳಿಲ್ಲದ ಪಟ್ಟಣವನ್ನು ನಿರ್ಮಿಸಲು ಹೊರಟಿರುವ ವ್ಯವಸ್ಥೆಯು, `ಸೈಕಲ್‍ಗಳನ್ನೂ' `ಸ್ಲಂಗಳನ್ನೂ' ಸುಂದರಗೊಳಿಸಲು ಪ್ರಯತ್ನಿಸಬೇಕಾಗಿದೆ. ಸ್ಲಂಗಳಲ್ಲಿ ವಾಸಿಸುವವರು ಮತ್ತು ಸೈಕಲ್‍ನಲ್ಲಿ ಪ್ರಯಾಣಿಸುವವರು ದ್ವಿತೀಯ ದರ್ಜೆಯ ನಾಗರಿಕರಲ್ಲ ಎಂದು ಸಾರಬೇಕಾಗಿದೆ.

Thursday, 17 October 2013

 ಇಂಥ ಗೆಲುವನ್ನು ಈ ಮಗು ಮತ್ತೆ ಮತ್ತೆ ದಾಖಲಿಸುತ್ತಲೇ ಇರಲಿ..

   ನಾರ್ವೆಯ ನೋಬೆಲ್ ಶಾಂತಿ ಪ್ರತಿಷ್ಠಾನವು ಮಲಾಲ ಎಂಬ ಮಗುವನ್ನು ರಣಹದ್ದುಗಳ ಕೈಯಿಂದ ಒಂದು ವರ್ಷದ ಮಟ್ಟಿಗಾದರೂ ರಕ್ಷಿಸಿದೆ. ಮಲಾಲ ಯಾರು, ಆಕೆ ಎಲ್ಲಿದ್ದಾಳೆ, ಯಾವ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾಳೆ.. ಎಂಬುದೆಲ್ಲಾ ಶಾಲೆಯ ಮೆಟ್ಟಲು ಹತ್ತದ ಜನಸಾಮಾನ್ಯರಿಗೂ ಇವತ್ತು ಗೊತ್ತು. ಹಾಗಂತ, ಮಲಾಲ ಅಪಾರ ಪ್ರತಿಭಾವಂತೆ ಏನಲ್ಲ. ಸಣ್ಣ ಪ್ರಾಯದಲ್ಲೇ ಅಸಾಮಾನ್ಯ ಸಾಧನೆ ಮಾಡಿದ ಗುರುತೂ ಆಕೆಗಿಲ್ಲ. ಪಾಕ್ ಮತ್ತು ಅಫಘಾನಿಸ್ತಾನದ ಗಡಿಭಾಗದಲ್ಲಿ ತಣ್ಣಗೆ ಕಲಿಯುತ್ತಿದ್ದ ಈ ಮಗುವಿನ ಮೇಲೆ ಆದ ಗುಂಡಿನ ದಾಳಿಯು ಆಕೆಯನ್ನು ಪ್ರಸಿದ್ಧಿಗೆ ಒಯ್ದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿಸುವಷ್ಟು, ವೈಟ್ ಹೌಸ್‍ಗೆ ಭೇಟಿ ಕೊಡಿಸುವಷ್ಟು, ಜಾಗತಿಕ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುವಷ್ಟು ಆಕೆಯನ್ನು ಅದು ಎತ್ತರಕ್ಕೆ ಏರಿಸಿದೆ. ಪಾಶ್ಚಾತ್ಯ ಯುದ್ಧದಾಹಿ ರಾಷ್ಟ್ರಗಳು ತಮ್ಮ ಮಾತುಗಳನ್ನು ಈ ಮಗುವಿನ ಬಾಯಿಯಲ್ಲಿ ಇವತ್ತು ಹೇಳಿಸುತ್ತಿವೆ. ಜಗತ್ತಿನ ಸಕಲ ಆಗು-ಹೋಗುಗಳ ಬಗ್ಗೆಯೂ ಹೇಳಿಕೆ ಕೊಡುವಂಥ ಸ್ಥಿತಿಗೆ ಅವು ಆ ಮಗುವನ್ನು ನೂಕಿಬಿಟ್ಟಿವೆ. ಪಾಕ್‍ನ ಬೆನಝೀರ್ ಆಗಬೇಕು ಎಂದು ಒಮ್ಮೆ ಆ ಮಗು ಹೇಳಿದರೆ, ಇನ್ನೊಮ್ಮೆ ಪಾಕ್-ಅಫಘನ್ನಿನ ಮಹಿಳೆಯರ ಬಗ್ಗೆ ಮಾತಾಡುತ್ತದೆ. ಮಕ್ಕಳ ಹಕ್ಕು, ಶಿಕ್ಷಣದ ಅಗತ್ಯ, ಮಹಿಳಾ ಸಬಲೀಕರಣ.. ಎಂದೆಲ್ಲಾ ತನ್ನ ವಯಸ್ಸಿಗೆ ವಿೂರಿದ ಮಾತುಗಳನ್ನು ಆ ಮಗು ಹೇಳುತ್ತಿದೆ. ಇಂಥ ಹೊತ್ತಲ್ಲೇ ಆಕೆಯ ಹೆಸರು ನೋಬೆಲ್ ಶಾಂತಿ ಪ್ರಶಸ್ತಿಯ ಪಟ್ಟಿಗೂ ಸೇರ್ಪಡೆಗೊಂಡಿತು. ರಶ್ಯಾದ ಅಧ್ಯಕ್ಷ  ಪುಟಿನ್ ಮತ್ತು ರಾಸಾಯನಿಕ ಅಸ್ತ್ರ ತಡೆ ಸಂಸ್ಥೆ (ಓ.ಪಿ.ಸಿ.ಡಬ್ಲ್ಯು)ಯು ಪ್ರಶಸ್ತಿಯ ಪಟ್ಟಿಯಲ್ಲಿದ್ದರೂ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೊಳಗಾದದ್ದು ಈ ಮಗುವೇ. ಅಷ್ಟಕ್ಕೂ, ನೋಬೆಲ್ ಪ್ರಶಸ್ತಿಯನ್ನು ನೀಡುವುದಕ್ಕೆ ಪರಿಗಣಿಸಲಾಗುವ ಅರ್ಹತೆಗಳೇನು, ಮಲಾಲ ಆ ಪ್ರಶಸ್ತಿಗೆ ಎಷ್ಟು ಅರ್ಹ, ಆಕೆಯ ಯಾವ ಸಾಧನೆಯನ್ನು ಪ್ರಶಸ್ತಿ ಪ್ರತಿಷ್ಠಾನವು ಪರಿಗಣಿಸಬೇಕು.. ಎಂಬೆಲ್ಲ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಮಾಧ್ಯಮಗಳು ಶ್ರಮಿಸಿದ್ದು ತೀರಾ ಕಡಿಮೆ.  ಇದೀಗ ರಾಸಾಯನಿಕ ಅಸ್ತ್ರ ತಡೆ ಸಂಸ್ಥೆಯನ್ನು ನೋಬೆಲ್ ಪ್ರತಿಷ್ಠಾನವು ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಮೂಲಕ ಅದು ಮಾಡಿದ ಅತಿ ದೊಡ್ಡ ಸಾಧನೆಯೇನೆಂದರೆ, ಮಲಾಲಳನ್ನು ರಕ್ಷಿಸಿದ್ದು. ಒಂದು ವೇಳೆ ಶಾಂತಿ ಪ್ರಶಸ್ತಿಗೆ ಮಲಾಲ ಆಯ್ಕೆಯಾಗುತ್ತಿದ್ದರೆ ಆ ಪ್ರಶಸ್ತಿಯ ಮೌಲ್ಯವಷ್ಟೇ ಅಲ್ಲ, ಆ ಮಗುವಿನ ಆಯುಷ್ಯವೂ ಕುಸಿಯುವ ಸಾಧ್ಯತೆಯಿತ್ತು. ಯಾಕೆಂದರೆ, ಆಕೆಯನ್ನು ಸಾಕುತ್ತಿರುವ ರಾಷ್ಟ್ರಗಳಿಗೆ ಆ ಮಗು ಒಂದು ಆಯುಧ. ಆ ಆಯುಧವನ್ನು ಬಳಸಿಕೊಂಡು ಕಳೆದೊಂದು ವರ್ಷದಲ್ಲಿ ಅವು ಪಾಕ್ ಮತ್ತು ಅಫಘಾನ್‍ಗಳ ಮೇಲೆ ಅನೇಕಾರು ಡ್ರೋನ್‍ಗಳನ್ನು ಎಸೆದಿವೆ. ಈ ಮಗುವಿನ ಬೆನ್ನ ಹಿಂದೆ ಕೂತು ಅವು ತಾಲಿಬಾನ್‍ಗಳ ವಿರುದ್ಧ ಬಂದೂಕು ಸಿಡಿಸಿವೆ. ಈ ಎರಡು ರಾಷ್ಟ್ರಗಳಲ್ಲಿ ತಮ್ಮ ಸೈನಿಕರು ಎಸಗಿರುವ ಮತ್ತು ಎಸಗುತ್ತಿರುವ ಮನುಷ್ಯ ವಿರೋಧಿ ಕೃತ್ಯಗಳನ್ನೆಲ್ಲ ಸಮರ್ಥಿಸಿಕೊಳ್ಳಲು ಅವರಿಗೆ ಈ ಮಗು ಬೇಕೇ ಬೇಕು. ಅಫಘನ್ನಿನಲ್ಲೋ ಪಾಕ್‍ನಲ್ಲೋ ಸ್ಫೋಟಗಳು ನಡೆದಾಗಲೆಲ್ಲ ಅವು ಈ ಮಗುವಿನಲ್ಲಿ ಹೇಳಿಕೆಯನ್ನು ಹೊರಡಿಸುತ್ತವೆ. ಆ ಮಗು ಹೇಳಿಕೆ ಕೊಡುವುದು ಶಿಕ್ಷಣದ ಬಗ್ಗೆಯಾದರೂ ಪತ್ರಿಕೆಗಳು ಅದನ್ನು ಪ್ರಕಟಿಸುವಾಗ  ‘ತಾಲಿಬಾನ್ ಗುಂಡನ್ನು’ ಸಹಜವಾಗಿ ಪ್ರಸ್ತಾಪಿಸುತ್ತವೆ. ಟಿ.ವಿ. ಆ್ಯಂಕರ್‍ಗಳು, ‘ಗುಂಡು ಪ್ರಕರಣವನ್ನು’ ಉಲ್ಲೇಖಿಸದೆ ಮತ್ತು ಆಕೆಯನ್ನು ಚಿಕಿತ್ಸೆಗೆ ತುರ್ತಾಗಿ ಇಂಗ್ಲೆಂಡಿಗೆ ಹೊತ್ತೊಯ್ದ ದೃಶ್ಯವನ್ನು ತೋರಿಸದೆ ಸುದ್ದಿಯನ್ನು ಮುಗಿಸುವುದಿಲ್ಲ. ಹೀಗಿರುವಾಗ, ಈ ಮಗುವಿಗೆ ನೋಬೆಲ್ ಬರುತ್ತಿದ್ದರೆ ಪ್ರಚಾರದ ಅಬ್ಬರದಲ್ಲಿ ಅದು ಖಂಡಿತ ಕಳೆದು ಹೋಗುತ್ತಿತ್ತು. ನಿರೀಕ್ಷೆಯ ಭಾರವನ್ನು ಹೊತ್ತುಕೊಳ್ಳಲಾಗದೇ ಮಗು ಕುಸಿದು ಹೋಗುವ ಸಾಧ್ಯತೆಯೂ ಇತ್ತು. ಅಲ್ಲದೆ, ಪ್ರಶಸ್ತಿಯ ಭಾರವನ್ನು ತಡೆಯಲಾಗದೇ ಮಗು ಬಾಡಿ ಹೋಗಿ ಚಲಾವಣೆಗೊಳ್ಳದ ನಾಣ್ಯದಂತಾಗಿದ್ದರೆ ಈ ಯುದ್ಧದಾಹಿಗಳು ತಾವೇ ಗುಂಡು ಪ್ರಕರಣವೊಂದನ್ನು ಸೃಷ್ಟಿಸಿ ಅದನ್ನು ತಾಲಿಬಾನ್‍ಗಳ ತಲೆಗೆ ಕಟ್ಟಿ ಮಗುವನ್ನು ಬಲಿ ಕೊಡುವುದಕ್ಕೂ ಹೇಸುತ್ತಿರಲಿಲ್ಲ.
 ನಿಜವಾಗಿ, ಮಲಾಲ ಎಂಬ ಮಗುವನ್ನು ಪಾಶ್ಚಾತ್ಯ ಯುದ್ಧದಾಹಿಗಳಿಂದ ತುರ್ತಾಗಿ ರಕ್ಷಿಸಬೇಕಾದ ಅಗತ್ಯವಿದೆ. ಆಕೆಯ ಮೇಲೆ ನಡೆದ ಗುಂಡಿನ ದಾಳಿಗಿಂತ ವರ್ಷಗಳ ಮೊದಲೇ ಆ್ಯಡಮ್ ಗಿಲ್ಲಿಕ್ ಎಂಬ ಪತ್ರಕರ್ತ ಮಾರುವೇಷದಲ್ಲಿ ಈ ಕುಟುಂಬವನ್ನು ಸಂಪರ್ಕಿಸಿ ಚಿತ್ರಿಸಿದ ಡಾಕ್ಯುಮೆಂಟರಿಯನ್ನು ನೋಡುವಾಗ ಇಡೀ ಗುಂಡು ಪ್ರಕರಣದ ಬಗ್ಗೆಯೇ ಅನುಮಾನ ಮೂಡುತ್ತದೆ. ತಮ್ಮ ಯೋಜನೆಗಳನ್ನು ಜಾರಿಗೊಳಿಸಲಿಕ್ಕಾಗಿ ಈ ಮಗುವನ್ನು ಬಳಸಿಕೊಳ್ಳಲು ಬೃಹತ್ ರಾಷ್ಟ್ರಗಳು ಮುಂಚಿತವಾಗಿಯೇ ತೀರ್ಮಾನಿಸಿದ್ದುವೇ ಎಂದು ಸಂಶಯವಾಗುತ್ತದೆ. ಬಹುಶಃ, ಆ ಮಗುವಿಗೆ ಈ ವಾಸ್ತವ ಗೊತ್ತಿರಬೇಕೆಂದೇನೂ ಇಲ್ಲ. ತನ್ನ ಪ್ರಾಯೋಜಕರು ಏನೆಂದು ಹೇಳಿಕೊಡುತ್ತಿದ್ದಾರೋ ಅದನ್ನೇ ನಂಬುವಂಥ ವಯಸ್ಸು ಅದು. ತನ್ನ ಮೇಲೆ ತಾಲಿಬಾನ್ ದಾಳಿ ನಡೆಸಿದೆ ಎಂದು ಆ ಮಗು ಬಲವಾಗಿ ನಂಬಿದೆ. ಜಗತ್ತನ್ನೂ ಹಾಗೆಯೇ ನಂಬಿಸಲಾಗಿದೆ. ಅದುವೇ ನಿಜ ಎಂದು ನಾವು ಗಟ್ಟಿಯಾಗಿ ಹೇಳುವಾಗಲೂ ಅನುಮಾನದ ಪುಟ್ಟದೊಂದು ಗೆರೆ ನಮ್ಮಂಥ ಅಸಂಖ್ಯ ಮಂದಿಯ ಎದೆಯಲ್ಲಿ ಹಾದುಹೋಗುತ್ತಿರುವುದು ಸುಳ್ಳೇನೂ ಅಲ್ಲ. ಆಕೆಯನ್ನು ಯಾರು ಇವತ್ತು ಸಾಕುತ್ತಿದ್ದಾರೋ ಅವರು ಈ ಹಿಂದೆ ಮಾಡಿರುವ ವಂಚನೆಗಳನ್ನು ಸ್ಮರಿಸುವಾಗ ಮಲಾಲ ಗುಂಡು ಪ್ರಕರಣವು ಈ ವಂಚನೆಯ ಮುಂದುವರಿದ ಭಾಗವಾಗಿರಬಹುದೇ ಎಂಬ ಸಂಶಯ ಬಂದೇ ಬರುತ್ತದೆ. 1953ರಲ್ಲಿ ಇರಾನಿನ ಪ್ರಜಾತಂತ್ರ ಸರಕಾರವನ್ನು ಉರುಳಿಸುವಲ್ಲಿ ಮತ್ತು ಅಮೇರಿಕನ್ ಪರವಾಗಿದ್ದ ಶಾ ಪಹ್ಲವಿ ಎಂಬವರನ್ನು ರಾಜನಾಗಿ ನೇಮಕ ಮಾಡುವಲ್ಲಿ ಪರದೆಯ ಹಿಂದೆ ಕೆಲಸ ಮಾಡಿದ್ದು ಅಮೇರಿಕವೇ ಎಂದು ಎರಡು ತಿಂಗಳ ಹಿಂದೆ ಅದುವೇ ಒಪ್ಪಿಕೊಂಡಿತ್ತು. ಅಮೇರಿಕವನ್ನು ವಿರೋಧಿಸುತ್ತಿರುವ ಲ್ಯಾಟಿನ್ ಅಮೇರಿಕದ ರಾಷ್ಟ್ರಗಳ ಅಧ್ಯಕ್ಷರುಗಳಿಗೆ ಅದು ಕ್ಯಾನ್ಸರ್ ವೈರಸನ್ನು ಚುಚ್ಚುತ್ತಿದೆ ಎಂಬ ಅನುಮಾನ ಅಲ್ಲಿಯ ಜನರಲ್ಲಿ ಇವತ್ತು ವ್ಯಾಪಕವಾಗಿದೆ. ಹ್ಯೂಗೋ ಚಾವೇಝ್‍ರ ಸಾವು ಈ ಅನುಮಾನವನ್ನು ಇನ್ನಷ್ಟು ಬಲಪಡಿಸಿದೆ. ಕಳೆದ ವಾರವಷ್ಟೇ ಅರ್ಜಂಟೀನಾದ ಅಧ್ಯಕ್ಷೆ ಕ್ರಿಸ್ಟಿನಾ ಕಿರ್ಚನರ್ ಅವರ ಮೆದುಳಿನಲ್ಲಿದ್ದ ಕ್ಯಾನ್ಸರ್‍ಕಾರಕ ಗಡ್ಡೆಯನ್ನು ತೆಗೆದು ಹಾಕಲಾಗಿದೆ. ಹೀಗಿರುವಾಗ, ಮಲಾಲಳನ್ನು 'ತಾಲಿಬಾನ್ ಸಂತ್ರಸ್ತೆ' ಎಂದು ಬಿಂಬಿಸಲು ಅಮೇರಿಕಕ್ಕೆ ಅಸಾಧ್ಯವೆಂದು ಹೇಗೆ ನಂಬುವುದು? ಮಗುವನ್ನು ಮುಂದಿಟ್ಟುಕೊಂಡು ತಮ್ಮ ಯುದ್ಧದಾಹಿ ಕಾರ್ಯಾಚರಣೆಯನ್ನು ಮುಂದುವರಿಸಲು ಈ ಶಕ್ತಿಗಳು ಪ್ರಯತ್ನಿಸಲಾರವು ಎಂದು ಅನುಮಾನಿಸದಿರುವುದು ಹೇಗೆ?
   ಏನೇ ಆಗಲಿ, ಗುಂಡು ಪ್ರಕರಣದಿಂದ ಜರ್ಝರಿತವಾಗಿರುವ ಮಗುವನ್ನು ನೋಬೆಲ್ ಮೂಲಕ ಗಲ್ಲಿಗೇರಿಸುವ ಯುದ್ಧದಾಹಿಗಳ ತಂತ್ರವನ್ನು ವಿಫಲಗೊಳಿಸಿದ್ದಕ್ಕಾಗಿ ನಾವೆಲ್ಲ ನೋಬೆಲ್ ಶಾಂತಿ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ನೋಬೆಲ್‍ನ ಹಿನ್ನೆಲೆ, ಅದರ ಮೌಲ್ಯ, ಉದ್ದೇಶ, ಇತಿಹಾಸ.. ಮುಂತಾದುವುಗಳನ್ನೆಲ್ಲ ಅರಗಿಸಿಕೊಳ್ಳುವಷ್ಟು ಪ್ರಬುದ್ಧವಲ್ಲದ ಮಗುವಿನ ಕುತ್ತಿಗೆಗೆ ಅದನ್ನು ನೇತು ಹಾಕುವುದರಿಂದ ಮಗು ಶಾಶ್ವತವಾಗಿ ಬಾಡಿ ಹೋಗುವ ಅವಕಾಶ ಖಂಡಿತ ಇತ್ತು. ಆ ಬಳಿಕ ಅಂಥ ಮಗುವನ್ನು ಸಾಕುವ ಔದಾರ್ಯವನ್ನು ಪಾಶ್ಚಾತ್ಯ ಪೋಷಕರು ತೋರ್ಪಡಿಸುವ ಸಾಧ್ಯತೆಯೂ ಇರಲಿಲ್ಲ.ಇದೀಗ ಮಗು ಗೆದ್ದಿದೆ. ಮಾತ್ರವಲ್ಲ, ಆ ಮಗುವನ್ನು ಬಳಸಿಕೊಂಡು ತನ್ನ ಮನುಷ್ಯ ವಿರೋಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವವರ ತಂತ್ರ ತಾತ್ಕಾಲಿಕವಾಗಿ ವಿಫಲವಾಗಿದೆ. ಈ ವೈಫಲ್ಯ ಇನ್ನೂ ಮುಂದುವರಿಯಲಿ ಮತ್ತು ಈ ಮಗು ಇವರ ವಿರುದ್ಧ ಮತ್ತೆ ಮತ್ತೆ ಇಂಥ ಗೆಲುವನ್ನು ದಾಖಲಿಸುತ್ತಲೇ ಇರಲಿ ಎಂದೇ ಹಾರೈಸೋಣ.

Monday, 7 October 2013

ನಮ್ಮ ಮುಖವಾಡದ ಬದುಕಿಗೆ ಕೀಟನಾಶಕ ಎಸೆದ ದಂಪತಿಗಳು..

   ಲಿಂಗಪ್ಪ ಗೌಡ ಮತ್ತು ತಿಮ್ಮಕ್ಕ ಎಂಬೆರಡು ಹೆಸರುಗಳು ಮೋದಿ, ರಾಹುಲ್, ಲಾಲೂ, ಸೋನಿಯಾ.. ಮುಂತಾದ ಹೆಸರುಗಳ ಮುಂದೆ ಏನೇನೂ ಅಲ್ಲ ಎಂಬ ಏಕೈಕ ಕಾರಣಕ್ಕಾಗಿ ಈ ಇಬ್ಬರ ದೂರುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಲಿಂಗಪ್ಪರದು ಸರಿಸುಮಾರು ಮೋದಿಯ ವಯಸ್ಸು - 65. ತಿಮ್ಮಕ್ಕರದು ಸೋನಿಯಾರ ವಯಸ್ಸು - 60. ಈ ಎರಡು ಸಾಮ್ಯತೆಗಳನ್ನು ಬಿಟ್ಟರೆ ಉಳಿದಂತೆ ಮೋದಿ ಮತ್ತು ಸೋನಿಯಾರೊಂದಿಗೆ ಹೋಲಿಸಿಕೊಳ್ಳುವುದಕ್ಕೆ ಈ ಇಬ್ಬರಲ್ಲಿ ಯಾವುದೂ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್‍ರ ಊರಾದ ಸುಳ್ಯದಲ್ಲಿ ವಾಸಿಸುತ್ತಿರುವ ಈ ದಂಪತಿಗಳಿಗೆ ಮಕ್ಕಳಿಲ್ಲ. ಇವರನ್ನು ಯಾವ ಕುಟುಂಬಗಳು ಆರೈಕೆ ಮಾಡಬೇಕಿತ್ತೋ, ಅವೇ ತಿರಸ್ಕರಿಸಿವೆ. ದೊಡ್ಡಿಯಲ್ಲಿ ಕೂಡಿಟ್ಟು, ಉಪವಾಸ ಕೂರಿಸಿವೆ. ಕೊನೆಗೆ ನೆರೆಯವರೊಂದಿಗೆ ಸಾಲ ಪಡೆದು ಕೀಟನಾಶಕ ಖರೀದಿಸಿ ತಂದು, ಸೇವಿಸಿ ಈ ಹಿರಿ ಜೀವಗಳು ಕಳೆದ ವಾರ ಆತ್ಮಹತ್ಯೆಗೆ ಯತ್ನಿಸಿವೆ.
   ನಿಜವಾಗಿ, ಲಿಂಗಪ್ಪ ಮತ್ತು ತಿಮ್ಮಕ್ಕರನ್ನು ಇಬ್ಬರು ವ್ಯಕ್ತಿಗಳಾಗಿಯಷ್ಟೇ ನಾವು ಪರಿಗಣಿಸಬೇಕಾದ್ದಲ್ಲ. ಇವರು ಅಸಂಖ್ಯ ವ್ಯಕ್ತಿಗಳ ಎರಡು ಜೀವಂತ ಪ್ರತಿನಿಧಿಗಳು ಮಾತ್ರ. ಇವರ ದೌರ್ಬಲ್ಯ ಯಾವುದೆಂದರೆ ಪ್ರಾಯ. ಹಾಗಂತ, ಪ್ರಾಯ ಎಂಬುದು ಕೆಲವೇ ಕೆಲವು ನಿರ್ದಿಷ್ಟ ಜಾತಿ, ಧರ್ಮ, ಭಾಷೆಯ ಮಂದಿಯನ್ನು ಹುಡುಕಿಕೊಂಡು ಬರುವ ಕಾಯಿಲೆ ಏನಲ್ಲ. ಮುಪ್ಪು ಎಂಬುದು ಬದುಕಿನ ಸಹಜ ಪ್ರಕ್ರಿಯೆ. ವೃದ್ಧರಿಗೆ ಹಿಂಸೆ ಕೊಡುವವರು ಒಂದು ಕಾಲದಲ್ಲಿ ಖಂಡಿತ ವೃದ್ಧಾಪ್ಯಕ್ಕೆ ತಲುಪುತ್ತಾರೆ. ಇವು ಅವರಿಗೂ ಗೊತ್ತು. ಹಾಗಿದ್ದೂ ನಮ್ಮ ನಡುವಿನ ಈ ‘ಅನುಭವಿಗಳನ್ನು' ಆತ್ಮಹತ್ಯೆಗೆ ಪ್ರಚೋದಿಸುವಷ್ಟು ನಾವು ಕ್ರೂರರಾಗುತ್ತೇವಲ್ಲ, ಯಾಕೆ? ಯಾವುದು ನಮ್ಮನ್ನು ಇಂಥ ವರ್ತನೆಗೆ ಪ್ರೇರೇಪಿಸುತ್ತಿವೆ? ಆಧುನಿಕತೆಯೇ, ಓದೇ, ಜೀವನ ಕ್ರಮಗಳೇ..? ಇಷ್ಟಕ್ಕೂ, ಲಿಂಗಪ್ಪರನ್ನೋ ತಿಮ್ಮಕ್ಕರನ್ನೋ ಎತ್ತಿಕೊಂಡು ಗಂಭೀರ ಚರ್ಚೆಯೊಂದು ಆರಂಭವಾಗುವಂತಹ ವಾತಾವರಣ ನಮ್ಮ ಸುತ್ತ-ಮುತ್ತ ಇವತ್ತು ಕಾಣಿಸುತ್ತಾ ಇಲ್ಲ. ಯಾಕೆಂದರೆ, ವೃದ್ಧರಿಗೆ ಪ್ರತಿಭಟನೆ ಮಾಡುವಷ್ಟು ಆರೋಗ್ಯ ಇಲ್ಲ. ಪತ್ರಿಕಾಗೋಷ್ಠಿ ಕರೆಯುವ ಸಾಮರ್ಥ್ಯ  ಇಲ್ಲ. ತಮ್ಮಂತೆ ಸಂಕಟಪಡುವ ವೃದ್ಧರನ್ನೆಲ್ಲಾ ಒಟ್ಟು ಸೇರಿಸುವ ಸಂಪರ್ಕ ಜಾಲವೂ ಅವರಲ್ಲಿಲ್ಲ. ಒಂದು ವೇಳೆ, ಇಂಥ ಸಾಮರ್ಥ್ಯ ಬಂದರೂ ಅವರು ಪ್ರತಿಭಟಿಸುವುದಾದರೂ ಯಾರ ವಿರುದ್ಧ? ಮಕ್ಕಳು ಎಷ್ಟೇ ಹಿಂಸೆ ಕೊಟ್ಟರೂ ಅವರನ್ನು ಸಾರ್ವಜನಿಕವಾಗಿ ದೂರಿಕೊಳ್ಳುವುದಕ್ಕೆ ಯಾವ ಹೆತ್ತವರು ಇಷ್ಟಪಡುತ್ತಾರೆ? ತಮ್ಮ ಮಕ್ಕಳು ಸಮಾಜದಲ್ಲಿ ಸದಾ ಘನತೆಯಿಂದ ಬಾಳಬೇಕೆಂಬುದನ್ನು ಬಯಸಿಯೇ ಅವರು ಹಗಲಿರುಳು ದುಡಿದಿರುತ್ತಾರಲ್ಲವೇ? ಇಂಥವರು ವೃದ್ಧಾಪ್ಯಕ್ಕೆ ತಲುಪಿದ ಕೂಡಲೇ ನಮಗೆ ‘ಅನಗತ್ಯ'ವಾಗಿ ಕಾಣಿಸುವುದು ಯಾವ ಮನಸ್ಥಿತಿ? ‘ನಿರ್ಭಯ'ಳ ಪರವಾಗಿ ವಾರಗಟ್ಟಲೆ ಪ್ರತಿಭಟನೆ ಮಾಡುವ ನಾವು ಲಿಂಗಪ್ಪರನ್ನು ಸೃಷ್ಟಿಸುವ ಮನಸ್ಥಿತಿಯ ವಿರುದ್ಧವೇಕೆ ಗಂಭೀರವಾಗಿ ಧ್ವನಿಯೆತ್ತುತ್ತಿಲ್ಲ? ನಿಜವಾಗಿ, ಅತ್ಯಾಚಾರದ ವಿರುದ್ಧ ವೇದಿಕೆಯೇರಿಯೋ ಪತ್ರಿಕೆಗಳಲ್ಲಿ ಬರೆದೋ ಆಕ್ರೋಶ ವ್ಯಕ್ತಪಡಿಸುವುದು ಸುಲಭ. ಅತ್ಯಾಚಾರವೆಂಬುದು ಇವತ್ತು ಪಾರ್ಲಿಮೆಂಟಿನಿಂದ ಹಿಡಿದು ಕ್ಲಾಸ್‍ರೂಮ್‍ಗಳ ವರೆಗೆ ಭಾರೀ ಬೆಲೆಬಾಳುವ ವಿಷಯ. ದೇಶದ ಯಾವುದಾದರೊಂದು ಮೂಲೆಯಲ್ಲಿ ಅದರ ವಿರುದ್ಧ ಪ್ರತಿದಿನವೆಂಬಂತೆ ಪ್ರತಿಭಟನೆಗಳಾಗುತ್ತಲೇ ಇವೆ. ಆದರೆ ಔಷಧಗಳಿಂದ ದಿನದೂಡುತ್ತಿರುವ ಮತ್ತು ದೈಹಿಕ ಆಕರ್ಷಣೆ ಕಳಕೊಂಡಿರುವ ಒಂದು ಬೃಹತ್ ವರ್ಗ ಅತ್ಯಾಚಾರಕ್ಕೆ (ಆಚಾರವನ್ನು ವಿೂರಿದ ನಡವಳಿಕೆ) ಒಳಗಾಗುತ್ತಿದ್ದರೂ ಅವರನ್ನು ರಾಜಕೀಯ ವಾಗಿಯೋ ಶೈಕ್ಷಣಿಕವಾಗಿಯೋ ಯಾರೂ ಪ್ರತಿನಿಧಿಸುತ್ತಿಲ್ಲ. ಅವರ ಸಂಕಟಗಳು ಮನೆಯ ನಾಲ್ಕು ಗೋಡೆಗಳಿಂದ ಹೊರಗೆ ಒಂದು ಇಶ್ಶೂವಾಗಿ ಗುರುತಿಸಿಕೊಳ್ಳುತ್ತಲೂ ಇಲ್ಲ. ಅವರು ಲಿಂಗಪ್ಪರಂತೆ ಏನಾದರೂ ಎಡವಟ್ಟು ಮಾಡಿಕೊಂಡರೂ ಅದು ಆಯಾ ಊರಿನ ಒಂದು ದಿನದ ಸುದ್ದಿಯಾಗಿ ಬಿಡುತ್ತದೆಯೇ ಹೊರತು ಸರ್ವ ಊರಿನ ಬಹುದಿನಗಳ ಇಶ್ಶೂವಾಗಿ ಬದಲಾಗುವುದಿಲ್ಲ.
   ಹಿರಿಯರನ್ನು ಆತ್ಮಹತ್ಯೆಗೆ ದೂಡುವಷ್ಟು ಒಂದು ಸಮಾಜದಲ್ಲಿ ನೈತಿಕ ಮೌಲ್ಯ ಕುಸಿದಿದೆಯೆಂಬುದು ಖಂಡಿತ ಆಘಾತಕಾರಿಯಾದದ್ದು. ಹಿರಿಯರು ಯುವ ಸಮೂಹದಂತೆ ಅಲ್ಲ. ಅವರಲ್ಲಿ ಅನುಭವದ ಕಣಜವೇ ಇರುತ್ತದೆ. ಆದ್ದರಿಂದಲೇ, ಪುಟ್ಟದೊಂದು ಸಮಸ್ಯೆ ಎದುರಾದರೂ ಹಿಂದು-ಮುಂದು ನೋಡದೇ ಆತ್ಮಹತ್ಯೆಗೆ ಯತ್ನಿಸುವ ಯುವ ಸಮೂಹದೊಂದಿಗೆ ಲಿಂಗಪ್ಪರ ಆತ್ಮಹತ್ಯೆಯನ್ನು ಹೋಲಿಸುವಂತಿಲ್ಲ. ನಿಜವಾಗಿ, ಹಿರಿಯರ ಜಗತ್ತಿನಿಂದ ಬರುವ ದೂರುಗಳು ಹೆಚ್ಚು ತೂಕದ್ದಾಗಿ ಕಾಣಿಸುವುದು ಈ ಕಾರಣದಿಂದಲೇ. ಅತ್ಯಾಚಾರಕ್ಕೆ ಕಾರಣವಾಗಿರುವ ವಿವಿಧ ಮಗ್ಗುಲುಗಳ ಬಗ್ಗೆ ನಾವು ಹೇಗೆ ಚರ್ಚಿಸುತ್ತೇವೆಯೋ ಅದೇ ರೀತಿಯಲ್ಲಿ ಹಿರಿಯರ ಸಮಸ್ಯೆಗಳು ಮತ್ತು ಅದರ ಪರಿಹಾರಗಳ ಸುತ್ತ ಚರ್ಚಿಸುವ ಅಗತ್ಯ ಇದೆ. ಹಿರಿಯರೆಂದರೆ, ಕೀಟನಾಶ ಸೇವಿಸಿಯೋ ಭಿಕ್ಷೆ ಬೇಡಿಯೋ ಗಮನ ಸೆಳೆಯಬೇಕಾದ ವ್ಯಕ್ತಿತ್ವಗಳಲ್ಲ. ಅವರು ಮನೆಯ ಕಿರೀಟಗಳು. ಆ ಕಿರೀಟಗಳನ್ನು ಅನಗತ್ಯವೆಂದು ಸಾರಿ ಬೀದಿಗೆ ಅಟ್ಟುವವರು ನಿಜವಾಗಿ ಕಿರೀಟದ ಮಹತ್ವ ಅರಿಯದವರಾಗಿದ್ದಾರೆ. ಅಂಥವರಿಗೆ ಹಿರಿಯರೆಂಬ ಕಿರೀಟದ ಮೌಲ್ಯವನ್ನು ಮತ್ತೆ ಮತ್ತೆ ಮನವರಿಕೆ ಮಾಡಿಸುತ್ತಲೇ ಇರಬೇಕಾದ ಹೊಣೆಗಾರಿಕೆ-ಅತ್ಯಾಚಾರ, ಮೋದಿ, ರಾಹುಲ್, ಲಾಲೂ.. ಎಂದೆಲ್ಲಾ ದಿನವಿಡೀ ಸಮಯ ಕಳೆಯವ ನಮ್ಮೆಲ್ಲರ ಮೇಲಿದೆ. ವೃದ್ಧರಾದ ಹೆತ್ತವರ ಬಗ್ಗೆ ಛೆ ಎಂಬ ಪದ ಕೂಡ ಬಳಸಬಾರದು ಎಂದು ಪವಿತ್ರ ಕುರ್‍ಆನ್ (17:23) ಎಚ್ಚರಿಸಿದೆ. ಹೆತ್ತವರ ಕೋಪಕ್ಕೆ ಗುರಿಯಾದ ಮಕ್ಕಳು ಎಷ್ಟೇ ಧರ್ಮಿಷ್ಟರಾಗಿದ್ದರೂ ಸ್ವರ್ಗ ಪ್ರವೇಶಿಸುವುದಿಲ್ಲ' ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. 
   ವೃದ್ಧಾಶ್ರಮಗಳು ಜನಪ್ರಿಯತೆ ಗಳಿಸುತ್ತಿರುವ ಇಂದಿನ ದಿನಗಳಲ್ಲಿ ಹಿರಿಯರು ದಿನೇ ದಿನೇ ಗೌರವ ಕಳಕೊಳ್ಳತೊಡಗಿದ್ದಾರೆ. ಅವರನ್ನು ‘ಭಾರ'ವಾಗಿ ನೋಡುವ ಆಧುನಿಕ ಪೀಳಿಗೆಗಳು ಬೆಳೆದು ಬರುತ್ತಿವೆ. ಇಂಥ ಹೊತ್ತಲ್ಲಿ, ಲಿಂಗಪ್ಪ ಮತ್ತು ತಿಮ್ಮಕ್ಕ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಆತ್ಮಹತ್ಯೆಯನ್ನು ಇಬ್ಬರು ಕೈಲಾಗದವರ ದಡ್ಡ ಪ್ರಯತ್ನ ಎಂದು ನಾವು ತಳ್ಳಿ ಹಾಕದೇ ನಮ್ಮ ಮೌಲ್ಯ ವಿರೋಧಿ ಮುಖವಾಡದ ಬದುಕಿಗೆ ಅವರು ಸಲ್ಲಿಸಿದ ಪ್ರತಿಭಟನೆ ಎಂದೇ ಪರಿಗಣಿಸಬೇಕಾಗಿದೆ. ಮಾತ್ರವಲ್ಲ, ನಮ್ಮ ನಮ್ಮ ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ, ಆರೈಕೆ ಮಾಡುವ ಮೂಲಕ ಈ ಪ್ರತಿಭಟನೆಗೆ ಉತ್ತರವನ್ನು ನೀಡಬೇಕಾಗಿದೆ.