Wednesday, 1 January 2014

ಮೋದಿ ಎಂಬ ಗುಳ್ಳೆಯನ್ನು ಒಡೆದು ಹಾಕಿದ ಯಡಿಯೂರಪ್ಪ

    1. ಅರವಿಂದ್ ಕೇಜ್ರಿವಾಲ್
 2. ಯಡಿಯೂರಪ್ಪ
 ದೆಹಲಿ ಮತ್ತು ಬೆಂಗಳೂರಿನಲ್ಲಿ ಸದ್ಯ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ಎರಡು ಹೆಸರುಗಳಿವು. ಈ ಹೆಸರುಗಳ ನಡುವೆ ಇರುವ ಸಮಾನ ಅಂಶ ಏನೆಂದರೆ, ವರ್ಷದ ಹಿಂದೆ ಇವರಿಬ್ಬರೂ ಹೊಸ ಪಕ್ಷವನ್ನು ಕಟ್ಟಿದರು. ಸಮಾನ ಅಂಶ ಬಹುತೇಕ ಇಲ್ಲಿಗೇ ಕೊನೆಗೊಳ್ಳುತ್ತದೆ. ಆದರೆ ವಿರುದ್ಧ ಅಂಶಗಳಂತೂ ಹತ್ತಾರು ಇವೆ. ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸುವುದೇ ಕೇಜ್ರಿವಾಲ್ ಪಕ್ಷದ ಮೂಲ ತಳಹದಿ. ಯಡಿಯೂರಪ್ಪರಾದರೋ ಭ್ರಷ್ಟಾಚಾರದ ಆರೋಪವನ್ನು ಹೊತ್ತುಕೊಂಡೇ ಪಕ್ಷ  ಕಟ್ಟಿದರು. ಜೈಲು ಸೇರಿದರು. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ‘ಆಪರೇಶನ್ ಕಮಲ’ ನಡೆಸಿದರು. ದುಡ್ಡಿಗಾಗಿ ಬಳ್ಳಾರಿಯನ್ನೇ ಮಾರಿದರು. ಮಠ, ಮಂದಿರಗಳನ್ನು ಕೊಂಡುಕೊಂಡರು. ಇಲ್ಲೆಲ್ಲಾ ಕೇಜ್ರಿವಾಲ್ ಸಂಪೂರ್ಣ ತದ್ವಿರುದ್ಧ. ಅಧಿಕಾರಕ್ಕಾಗಿ ‘ಆಪರೇಶನ್’ ನಡೆಸಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದರೂ ಕೇಜ್ರಿವಾಲ್ ಅಂಥದ್ದೊಂದು ಪ್ರಯತ್ನವನ್ನೇ ಮಾಡಲಿಲ್ಲ. ಕಾಂಗ್ರೆಸ್ ಪಕ್ಷವು ಬೆಂಬಲ ನೀಡಲು ಮುಂದೆ ಬಂದಾಗಲೂ 18 ಷರತ್ತುಗಳನ್ನು ಒಡ್ಡಿದರು. ನಿಜವಾಗಿ ಷರತ್ತುಗಳನ್ನು ಒಡ್ಡಬೇಕಾಗಿದ್ದುದು ಕಾಂಗ್ರೆಸ್. ಯಾಕೆಂದರೆ, ಅದರ ಬೆಂಬಲವೇ ನಿರ್ಣಾಯಕ. ಸರಕಾರವನ್ನು ಬೀಳಿಸುವ ಅಥವಾ ಉಳಿಸುವ ಸಾಮರ್ಥ್ಯ  ಆ ಬೆಂಬಲಕ್ಕಿದೆ. ಆದರೆ, ಕೇಜ್ರಿವಾಲ್‍ರು ಈ ಸಾಂಪ್ರದಾಯಿಕ ರಾಜಕೀಯವನ್ನೇ ತಿರಸ್ಕರಿಸಿದರು. ಅಧಿಕಾರಕ್ಕಾಗಿ ಮೌಲ್ಯಗಳೊಂದಿಗೆ ರಾಜಿಯಾಗಲಾರೆ ಎಂದು ದಿಟ್ಟವಾಗಿ ಸಾರಿದರು. ದೆಹಲಿಯ ಮಂದಿ ಕೇಜ್ರಿವಾಲರಲ್ಲಿ ಇವತ್ತು ನಂಬಿಕೆ ಇಟ್ಟಿರುವುದಕ್ಕೆ ಅವರ ಇಂಥ ನಿಷ್ಠುರ ನಡೆಗಳೇ ಕಾರಣ. ಒಂದು ವೇಳೆ, ಯಡಿಯೂರಪ್ಪರ ಬಗ್ಗೆ ಈ ರಾಜ್ಯದ ಮಂದಿಗೆ ನಂಬಿಕೆ ಇದ್ದದ್ದೇ ಆಗಿದ್ದರೆ ಅವರ ಕೆಜೆಪಿಯನ್ನು ಅವರು ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಆಮ್ ಆದ್ಮಿ ಪರ್ಯಾಯವಾದಂತೆ ಕರ್ನಾಟಕದಲ್ಲೂ ಕೆಜೆಪಿ ಪರ್ಯಾಯವಾಗಬಹುದಿತ್ತು. ಅಲ್ಲದೇ, ಕೇಜ್ರಿವಾಲ್‍ಗೆ ಇಲ್ಲದ ಹಲವಾರು ಅನುಕೂಲಗಳೂ ಯಡಿಯೂರಪ್ಪರಿಗಿದ್ದುವು. ಅವರು ಮಾಜಿ ಮುಖ್ಯಮಂತ್ರಿ. ಅವರ ಜೊತೆಗೆ ಮಾಜಿ ಮಂತ್ರಿಗಳೂ ಇದ್ದರು. ಕಾರ್ಯಕರ್ತರ ಪಡೆಯೂ ಇತ್ತು. ಇಷ್ಟೆಲ್ಲ ಇದ್ದೂ ರಾಜ್ಯದ ಮಂದಿ ಅವರ ಮೇಲೆ ಭರವಸೆ ಇಡದೇ ಇದ್ದುದಕ್ಕೆ ಕಾರಣ ಏನು? ಭ್ರಷ್ಟಾಚಾರಿ ಎಂಬ ಹಣೆಪಟ್ಟಿಯ ಹೊರತಾದ ಬೇರೆ ಯಾವ ಕಾರಣಗಳನ್ನು ಇದಕ್ಕೆ ಕೊಡಬಹುದು? ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಏನೇ ಸಮರ್ಥನೆ ಕೊಡಲಿ, ಈ ರಾಜ್ಯದ ಮಂದಿ ಯಡಿಯೂರಪ್ಪರಲ್ಲಿ ಓರ್ವ ಭ್ರಷ್ಟನನ್ನು ಕಂಡಿದ್ದಾರೆ. ಆ 'ಭ್ರಷ್ಟ'ನನ್ನು ಈ ರಾಜ್ಯದ ಮಂದಿ ಎಷ್ಟರ ಮಟ್ಟಿಗೆ ದ್ವೇಷಿಸಿದರೆಂದರೆ, ಅವರಿಗೆ ಎರಡಂಕಿಯ ಶಾಸಕರನ್ನೂ ಕೊಡಲಿಲ್ಲ. ಮಠ, ಮಂದಿರಗಳು ಬಹುತೇಕ ಯಡಿಯೂರಪ್ಪರ ಪರ ನಿಂತರೂ ಜನ ತಿರಸ್ಕರಿಸಿದರು. ಇಂಥ ಯಡಿಯೂರಪ್ಪರನ್ನು ಬಿಜೆಪಿ ಸೇರಿಸಿಕೊಳ್ಳುತ್ತಿದೆಯೆನ್ನುವುದು ಯಾವುದರ ಸೂಚನೆ? ಈ ಮೂಲಕ ಅದು ಈ ದೇಶದ ಮತದಾರರಿಗೆ ಯಾವ ಸಂದೇಶವನ್ನು ರವಾನಿಸಲು ಬಯಸುತ್ತಿದೆ? ಅಧಿಕಾರಕ್ಕಾಗಿ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಳ್ಳಲೂ ಸಿದ್ಧ ಎಂಬ ಬಿಜೆಪಿಯ ಈ ನಿಲುವು ಮೋದಿಗೆ ಸಮ್ಮತವೇ? ‘ಮೋದಿಯನ್ನು ಪ್ರಧಾನಿ ಮಾಡುವುದಕ್ಕಾಗಿ ನಾನು ಬಿಜೆಪಿ ಸೇರುತ್ತಿದ್ದೇನೆ..’ ಅನ್ನುವ ಯಡಿಯೂರಪ್ಪ ಮತ್ತು ಕೇಂದ್ರ ಸರಕಾರದ ಭ್ರಷ್ಟಾಚಾರವನ್ನು ಖಂಡಿಸುತ್ತಾ ತಿರುಗುತ್ತಿರುವ ಮೋದಿ; ಯಾಕೆ ಈ ವೈರುಧ್ಯ? ತನ್ನ ಪಕ್ಷಕ್ಕೆ ಭ್ರಷ್ಟಾಚಾರಿಯನ್ನು ಆಹ್ವಾನಿಸುತ್ತಲೇ ಕೇಂದ್ರ ಸರಕಾರವನ್ನು ಖಂಡಿಸುವ ಮೋದಿಯವರು ಯಾರನ್ನು ವಂಚಿಸುತ್ತಿದ್ದಾರೆ?
 ಒಂದು ಪಕ್ಷದ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿ ಭ್ರಷ್ಟಾಚಾರಿಯಾಗುವುದಕ್ಕೂ ಭ್ರಷ್ಟಾಚಾರಿಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದಕ್ಕೂ ವ್ಯತ್ಯಾಸ ಇದೆ. ಲಕ್ಷಾಂತರ ಮಂದಿ ಕಾರ್ಯಕರ್ತರಿರುವ ಪಕ್ಷವೊಂದರಲ್ಲಿ ಎಲ್ಲರೂ ಪಕ್ಷದ ನೀತಿ, ಸಿದ್ಧಾಂತ, ಧೋರಣೆಗಳಿಗೆ ನೂರು ಶೇಕಡಾ ಬದ್ಧರಾಗಿ ಬದುಕುತ್ತಾರೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಪಕ್ಷದ ಧೋರಣೆಗಳಿಗೆ ವ್ಯತಿರಿಕ್ತವಾಗಿ ಓರ್ವ ಭ್ರಷ್ಟಾಚಾರಿಯಾಗಬಲ್ಲ. ಕೊಲೆಗಾರ, ಅತ್ಯಾಚಾರಿ.. ಏನೇನೋ ಆಗಬಲ್ಲ. ಆದರೆ ಪಕ್ಷಕ್ಕೆ ಇದು ಗೊತ್ತಾದ ಕೂಡಲೇ ಆತನನ್ನು ಪಕ್ಷದಿಂದ ಉಚ್ಛಾಟಿಸುವ ನಿಷ್ಠುರತೆಯನ್ನು ಪಕ್ಷ ಪ್ರದರ್ಶಿಸಬೇಕು. ಪಕ್ಷಕ್ಕೆ ಸಿದ್ಧಾಂತ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಸುವ  ವಿಧಾನ ಇದು. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿಯು ಆ ಮೂಲಕ ಅವರ ಮೇಲಿನ ಭ್ರಷ್ಟಾಚಾರದ ಆರೋಪವನ್ನು ಒಂದು ಹಂತದವರೆಗೆ ಒಪ್ಪಿಕೊಂಡಿದೆ. ಯಡಿಯೂರಪ್ಪ ಕೆಜೆಪಿ ಕಟ್ಟಿದ ಬಳಿಕ ಬಿಜೆಪಿ ವರ್ತಿಸಿದ ರೀತಿಯನ್ನು ನೋಡಿದರೆ ಇದನ್ನು ಖಚಿತವಾಗಿ ಹೇಳಬಹುದು. ಮಾತ್ರವಲ್ಲ, ಆ ಆರೋಪದಿಂದ ಯಡಿಯೂರಪ್ಪ ಇನ್ನೂ ಮುಕ್ತರಾಗಿಲ್ಲ. ಹೀಗಿರುತ್ತಾ, ಅವರನ್ನು ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳಿಸಿರುವುದಕ್ಕೆ ಬಿಜೆಪಿ ಯಾವ ಸಮರ್ಥನೆಯನ್ನು ಕೊಡಬಲ್ಲದು? ಬಿಜೆಪಿಗೆ ಅಂಥದ್ದೊಂದು ವ್ಯಕ್ತಿಯ ಅಗತ್ಯ ಏನಿತ್ತು? ಇವತ್ತು ಈ ದೇಶದಲ್ಲಿ ಭ್ರಷ್ಟಾಚಾರವನ್ನು ವಿರೋಧಿಸುವ ಕೋಟ್ಯಂತರ ಮಂದಿಯಿದ್ದಾರೆ. ವಿಶ್ವ ಪ್ರಸಿದ್ಧ ಆಪಲ್  ಕಂಪೆನಿಯಲ್ಲಿ ಒಂದು ಕೋಟಿ ರೂಪಾಯಿ ಸಂಬಳದ ಉದ್ಯೋಗವನ್ನು ಕೈ ಬಿಟ್ಟು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಮೊಮ್ಮಗ ಆದರ್ಶ್ ಶಾಸ್ತ್ರಿಯವರು ಅಮ್ ಆದ್ಮಿ ಪಕ್ಷವನ್ನು ಸೇರಲು ಮುಂದಾಗಿರುವುದಕ್ಕೆ ಭ್ರಷ್ಟಾಚಾರ ವಿರೋಧಿ ಆಕ್ರೋಶವೇ ಕಾರಣ. ಇಂಥ ಅಸಂಖ್ಯಾತ ಯುವಕ-ಯುವತಿಯರು ಇವತ್ತು ಹೊಸತೊಂದು ಭಾರತದ ಕನಸು ಕಾಣುತ್ತಿದ್ದಾರೆ. ಈ ಕನಸಿಗೆ ಮೋದಿ ಹೇಗೆ ನಾಯಕತ್ವ ನೀಡಬಲ್ಲರು? ಭ್ರಷ್ಟಾಚಾರಕ್ಕಾಗಿ 6 ಕೋಟಿ ಕನ್ನಡಿಗರೇ ತಿರಸ್ಕರಿಸಿದ ವ್ಯಕ್ತಿಯನ್ನು ಮೋದಿ ತನ್ನ ಗೆಲುವಿಗಾಗಿ ಆಶ್ರಯಿಸುತ್ತಾರೆಂದರೆ, ಅವರು ಕಟ್ಟುವ ಭಾರತವಾದರೂ ಯಾವುದು? ಆ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಮತ್ತು ಭ್ರಷ್ಟಾಚಾರಿಗಳಿಗೆ ಯಾವ ಶಿಕ್ಷೆ ಇದ್ದೀತು?
 ಒಂದು ಪಕ್ಷ ಒಂದು ದೇಶವನ್ನು ಆಳುವುದಕ್ಕೆ ಅರ್ಹತೆ ಪಡೆಯಬೇಕಾದದ್ದು ಆ ಪಕ್ಷದಲ್ಲಿರುವ ದುಡ್ಡು, ನಾಯಕರುಗಳ ಸಂಖ್ಯೆ ಅಥವಾ ಆ ಪಕ್ಷಕ್ಕೆ ಆಗಿರುವ ವಯಸ್ಸಿನ ಆಧಾರದಲ್ಲಿ ಆಗಿರಬಾರದು. ಅದು ಆ ಪಕ್ಷದ ಧೋರಣೆಯನ್ನು ಹೊಂದಿಕೊಂಡಿರಬೇಕು. ಪಕ್ಷದ ನಾಯಕರು ತಪ್ಪನ್ನೆಸಗಿದಾಗ ಕೈಗೊಳ್ಳುವ ನಿಲುವುಗಳೇನು ಎಂಬುದನ್ನು ನೋಡಿಕೊಂಡಿರಬೇಕು. ವ್ಯಕ್ತಿ ಮತ್ತು ಸಿದ್ಧಾಂತದ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಅದು ಏನನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಆಧರಿಸಿರಬೇಕು. ಕಾಂಗ್ರೆಸ್ ಪಕ್ಷಕ್ಕೆ 125 ವರ್ಷಗಳಾಗಿವೆ ಎಂಬ ಏಕೈಕ ಕಾರಣಕ್ಕಾಗಿ ರಾಹುಲ್ ಗಾಂಧಿ ಪ್ರಧಾನಿಯಾಗುವುನ್ನು ಯಾರೂ ಒಪ್ಪುವುದಿಲ್ಲ, ಒಪ್ಪಬಾರದು. ನರೇಂದ್ರ ಮೋದಿಯವರು ಗುಜರಾತ್‍ನಲ್ಲಿ ಸತತ 3ನೇ ಬಾರಿ ಜನಾದೇಶ ಪಡೆದಿದ್ದಾರೆ ಎಂಬುದು ಕೂಡ ಅವರ ಪ್ರಧಾನಿ ಅಭ್ಯರ್ಥಿತನಕ್ಕೆ ಮಾನದಂಡ ಆಗುವುದಿಲ್ಲ, ಆಗಬಾರದು ಕೂಡ. ನಿರ್ಣಾಯಕ ಸಂದರ್ಭಗಳಲ್ಲಿ ಈ ಇಬ್ಬರ ಧೋರಣೆಗಳು ಏನೇನು ಎಂಬುದೇ ಇವರಿಬ್ಬರಲ್ಲಿ ಯಾರು ಉತ್ತಮ ಎಂದು ನಿರ್ಣಯಿಸುವುದಕ್ಕೆ ಸರಿಯಾದ ಮಾನದಂಡ. ರಾಹುಲ್ ಗಾಂಧಿ ಈ ನಿಟ್ಟಿನಲ್ಲಿ ನರೇಂದ್ರ ಮೋದಿಗಿಂತ ಮುಂದಿದ್ದಾರೆ. ಭ್ರಷ್ಟ ಸಂಸದರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂಬ ಸುಪ್ರೀಮ್ ಕೋರ್ಟಿನ ತೀರ್ಪಿನ ವಿರುದ್ಧ ಕೇಂದ್ರ ಸರಕಾರವು ಹೊರಡಿಸಿದ ಆಧ್ಯಾದೇಶವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಎಲ್ಲರೆದುರೇ ಖಂಡಿಸಿದ್ದಾರೆ. ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಳುಹಿಸಲಾದ ಆ ಆಧ್ಯಾದೇಶವನ್ನು `ಕಸದ ಬುಟ್ಟಿಗೆ ಹಾಕಿ' ಎಂದು ನೇರವಾಗಿ ಹೇಳಿದ್ದಾರೆ. ಇದೀಗ, ಆದರ್ಶ್ ಸೊಸೈಟಿ ಹಗರಣದ ಕುರಿತಾದ ವರದಿಗೆ ಸಂಬಂಧಿಸಿಯೂ ಮಹಾರಾಷ್ಟ್ರದ ಕಾಂಗ್ರೆಸ್ ಸರಕಾರದ ನಿಲುವನ್ನು ಅವರು ಬಲವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಒಳಗೊಂಡಿರುವರೆನ್ನಲಾದ ಈ ಹಗರಣದ ವರದಿಯನ್ನು ತಿರಸ್ಕರಿಸುವ ಸರಕಾರದ ನಿರ್ಧಾರ ತಪ್ಪೆಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ, ಕಾಂಗ್ರೆಸ್ ಭ್ರಷ್ಟಮುಕ್ತವಾಗಿದೆ ಎಂದು ಇದರರ್ಥವಲ್ಲ. ಆದರೆ, ನಿರ್ಣಾಯಕ ಸಂದರ್ಭಗಳಲ್ಲಿ ಮುಲಾಜಿಲ್ಲದೇ ನಿಲುವು ವ್ಯಕ್ತಪಡಿಸುವ ಮತ್ತು ಭ್ರಷ್ಟಾಚಾರದೊಂದಿಗೆ ರಾಜಿಯಾಗದೇ ಇರುವ ಛಾತಿಯನ್ನು ರಾಹುಲ್ ಗಾಂಧಿ ತೋರಿಸಿದ್ದಾರೆ. ಇವರಿಗೆ ಹೋಲಿಸಿದರೆ ಮೋದಿ ತೀರಾ ಹಿಂದಿದ್ದಾರೆ. ಭ್ರಷ್ಟಾಚಾರ, ಜಾತ್ಯತೀತತೆ, ಗೋಧ್ರಾ ಹತ್ಯಾಕಾಂಡ.. ಸಹಿತ ಪ್ರತಿಯೊಂದರ ಬಗ್ಗೆಯೂ ಅವರಲ್ಲಿ ಆಳವಾದ ದ್ವಂದ್ವವಿದೆ. 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೋಧ್ರಾ ಹತ್ಯಾಕಾಂಡದ ಬಗ್ಗೆ ಅವರು ತೋಡಿಕೊಂಡ ವ್ಯಾಕುಲತೆಯಲ್ಲೂ ಇದು ಎದ್ದು ಕಾಣುತ್ತದೆ. ನಿಜವಾಗಿ, ಇತರ ಪಕ್ಷಗಳನ್ನು ಮತ್ತು ಅದರ ತಪ್ಪುಗಳನ್ನು ಹೆಕ್ಕಿ ಹೆಕ್ಕಿ ಟೀಕೆಗೆ ಒಳಪಡಿಸುವುದು ಸುಲಭ. ಆದರೆ ತನ್ನದೇ ಪಕ್ಷದ ತಪ್ಪುಗಳನ್ನು ಪ್ರಶ್ನಿಸುವುದು ಕಷ್ಟ. ಮೋದಿ ಈ ವರೆಗೆ ಬಿಜೆಪಿಯ ಆಂತರಿಕ ಭ್ರಷ್ಟತನದ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಸ್ವಿಸ್ ಬ್ಯಾಂಕ್, ಕಾಮನ್‍ವೆಲ್ತ್ ಅಥವಾ 2ಜಿ ಹಗರಣಗಳ ಬಗ್ಗೆ ಅವರು ಮಾತಾಡುವ ಧಾಟಿ, ಆವೇಶವನ್ನು ನೋಡಿದರೆ ಅವರು ಯಡಿಯೂರಪ್ಪರನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ ತನ್ನ ವಿರೋಧ ಏನಿದ್ದರೂ ಅದು ಕಾಂಗ್ರೆಸ್‍ನ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಅಲ್ಲ ಎಂಬುದನ್ನು ಯಡಿಯೂರಪ್ಪ ಪ್ರಕರಣದ ಮೂಲಕ ಅವರು ಸಾಬೀತುಪಡಿಸುತ್ತಿದ್ದಾರೆ.
   ಏನೇ ಆಗಲಿ, ಮೋದಿಯ ಸುತ್ತ ಬಿಜೆಪಿ ಮತ್ತು ಮಾಧ್ಯಮವು ಹರಡಿಬಿಟ್ಟಿರುವ ಭರವಸೆಯ ಗುಳ್ಳೆಯನ್ನು ಯಡಿಯೂರಪ್ಪ ಒಡೆದು ಹಾಕಿದ್ದಾರೆ. ನಿರ್ಣಾಯಕ ಸಂದರ್ಭಗಳಲ್ಲಿ ಮೋದಿ ಎಷ್ಟು ದುರ್ಬಲರು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಇಂಥ ನಾಯಕ ಈ ದೇಶವನ್ನು ಮುನ್ನಡೆಸಲು ಎಷ್ಟು ಸಮರ್ಥ ಎಂಬ ಬಹುಮುಖ್ಯ ಪ್ರಶ್ನೆಯನ್ನೂ ಅವರು ಜನರ ಮುಂದಿಟ್ಟಿದ್ದಾರೆ. ಈ ಕಾರಣಕ್ಕಾಗಿ ನಾವು ಯಡಿಯೂರಪ್ಪರನ್ನು ಅಭಿನಂದಿಸಬೇಕು.

Thursday, 19 December 2013

ಮಕ್ಕಳಿಲ್ಲದ, ಹೆತ್ತವರೂ ಆಗದ ಅವರು..

   ಕುಟುಂಬ ಎಂಬ ಪದಕ್ಕೆ ಡಿಕ್ಷನರಿಯಲ್ಲಿ, ‘ಮನೆಯೊಳಗಿರುವ ತಂದೆ-ತಾಯಿ, ಪತ್ನಿ-ಮಕ್ಕಳು ಮೊದಲಾದ ಎಲ್ಲ ಸಂಬಂಧಿಕರು..’ ಎಂಬ ಅರ್ಥ ಇದೆ. ಇಂಥ ಹಲವು ಕುಟುಂಬಗಳು ಒಟ್ಟು ಸೇರಿ ಸಮಾಜ ಅಸ್ತಿತ್ವಕ್ಕೆ ಬರುತ್ತದೆ. ಮದುವೆ, ಮುಂಜಿ, ಹೆರಿಗೆ, ಬಾಣಂತನಗಳು ಆ ಸಮಾಜದ ಭಾಗವಾಗುತ್ತದೆ. ಶಾಲೆ-ಕಾಲೇಜುಗಳು ಅಸ್ತಿತ್ವಕ್ಕೆ ಬರುತ್ತವೆ. ಗರ್ಭಿಣಿ ಪತ್ನಿಯನ್ನು ಪತಿ ನಿತ್ಯ ಕಣ್ತುಂಬಿಕೊಳ್ಳುತ್ತಾನೆ. ಆಕೆಯ ಹೊಟ್ಟೆಗೆ ತಲೆಯಿಟ್ಟು ಮಗುವಿನೊಂದಿಗೆ ಮಾತಾಡುತ್ತಾನೆ. ಮಗು ಹೆಣ್ಣೋ-ಗಂಡೋ ಎಂಬ ಚರ್ಚೆ-ತಮಾಷೆಗಳು ಅವರಿಬ್ಬರ ನಡುವೆ ನಡೆಯುತ್ತದೆ. ಆಕೆಯ ಸಂಕಟ, ಹೆರಿಗೆಯ ದಿನಾಂಕ, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳು, ಹೆರಿಗೆಗಾಗಿ ದಾಖಲಾಗಬೇಕಾದ ಆಸ್ಪತ್ರೆ.. ಎಲ್ಲವೂ ಮನೆಯಲ್ಲಿ ಚರ್ಚೆಗೊಳಗಾಗುತ್ತದೆ. ಅತ್ತೆ-ಮಾವ, ನಾದಿನಿ, ಮೈದುನ.. ಎಲ್ಲರ ಕುತೂಹಲ-ಕಾಳಜಿಯ ಕೇಂದ್ರವಾಗಿ ಗರ್ಭಿಣಿ ಮಾರ್ಪಡುತ್ತಾಳೆ. ಅತ್ತೆ ಮನೆಯಲ್ಲೂ, ತವರು ಮನೆಯಲ್ಲೂ ಆಕೆಯದೇ ಸುದ್ದಿ. ಇನ್ನು, ಪ್ರಸವವಾದರಂತೂ ಈ ಎರಡು ಕುಟುಂಬಗಳಲ್ಲಿ ಮಾತ್ರವಲ್ಲ, ಆ ಕುಟುಂಬಗಳೊಂದಿಗೆ ಸಂಬಂಧ ಹೊಂದಿರುವ ಎಲ್ಲ ಕುಟುಂಬಗಳೂ ಸಂತಸ ವ್ಯಕ್ತಪಡಿಸುತ್ತವೆ. ಶುಭಾಶಯ ಕೋರುವುದು, ಸಿಹಿ ಹಂಚುವುದು ನಡೆಯುತ್ತದೆ. ಬಳಿಕ ಮಗುವಿಗೆ ಹೆಸರಿಡುವ ಸಂಭ್ರಮ. ಮಗು ನಡೆದಂತೆ ಮನೆಯವರೂ ನಡೆಯುತ್ತಾರೆ. ಅದು ಮಾತಾಡಿದಂತೆ ಮನೆಯವರೂ ಮಾತಾಡುತ್ತಾರೆ. ಮನೆಯೊಳಗಿನ ಸಣ್ಣ ಪುಟ್ಟ ಮನಸ್ತಾಪಗಳನ್ನೆಲ್ಲ ಮಗು ತನ್ನ ಮುಗ್ಧತನದ ಮೂಲಕ ನಿವಾರಿಸಿ ಬಿಡುತ್ತದೆ. ಮಗು ಬೆಳೆದಂತೆ ಶಾಲೆಗೆ ಸೇರಿಸಲಾಗುತ್ತದೆ. ಮಗು ಶಾಲೆಯಲ್ಲಿ ಕಲಿತದ್ದನ್ನು, ಆಡಿದ್ದನ್ನು ಮನೆಯಲ್ಲಿ ಬಂದು ಹೇಳುವಾಗ, ಒಂದು ಬಗೆಯ ಕಲರವ ಮನೆಯಲ್ಲೂ ಕಾಣಿಸಿಕೊಳ್ಳುತ್ತದೆ. ಹೀಗೆ ಮಗು ಬೆಳೆಯುವುದು, ಉದ್ಯೋಗಿಯಾಗುವುದು, ಮದುವೆ ಮಾಡಿಕೊಳ್ಳುವುದು, ಮಕ್ಕಳಾಗುವುದು ಮತ್ತು ಅಜ್ಜ-ಅಜ್ಜಿಯಾಗಿ ಅಪ್ಪ-ಅಮ್ಮ ಪರಿವರ್ತಿತಗೊಳ್ಳುವುದು.. ಇಂಥ ಪ್ರಕ್ರಿಯೆಗಳು ಸಮಾಜದಲ್ಲಿ ನಿರಂತರ ನಡೆಯುತ್ತಿರುತ್ತದೆ. ಒಂದು ವೇಳೆ, ಇಂಥ ಪ್ರಕ್ರಿಯೆಗಳಿಗೆ ಅವಕಾಶ ಇಲ್ಲದೇ ಹೋದರೆ ಏನಾದೀತು? ಗಂಡು-ಗಂಡನ್ನೇ ವಿವಾಹವಾಗುವುದು ಅಥವಾ ಹೆಣ್ಣು-ಹೆಣ್ಣನ್ನೇ ವಿವಾಹವಾಗುವುದಾದರೆ ಈ ಸಮಾಜದ ಅಸ್ತಿತ್ವ ಎಲ್ಲಿಯ ವರೆಗೆ ಉಳಿದೀತು? ಗಂಡು-ಗಂಡಿನ ಅಥವಾ ಹೆಣ್ಣು-ಹೆಣ್ಣಿನ ಸಂಬಂಧದಿಂದ ಲೈಂಗಿಕ ಸುಖಗಳ ವಿನಿಮಯ ನಡೆಯಬಲ್ಲುದೇ ಹೊರತು ಮಾನವ ಜನಾಂಗದ ವಿಸ್ತರಣೆಯಲ್ಲವಲ್ಲ. ಅಲ್ಲಿ ಗರ್ಭಧಾರಣೆಯಿಲ್ಲ. ಪತಿ-ಪತ್ನಿ ಎಂಬ ಎರಡು ನೈಸರ್ಗಿಕ ಪ್ರಬೇಧಗಳಿಲ್ಲ. ಮಗುವಿನ ಜನನವಿಲ್ಲ. ಆದ್ದರಿಂದಲೇ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಎಂಬ ಅಪ್ಯಾಯಮಾನವಾದ ಗುರುತುಗಳಿಗೂ ಅವಕಾಶ ಇಲ್ಲ. ಇಬ್ಬರ ಸಂಬಂಧದೊಂದಿಗೆ ಪ್ರಾರಂಭವಾಗಿ ಅವರೊಂದಿಗೇ ಕೊನೆಗೊಳ್ಳುವ ಒಂದು ಜೀವನ ಕ್ರಮವು ಭವಿಷ್ಯದಲ್ಲಿ ಎಂಥ ವಾತಾವರಣವನ್ನು ಉಂಟು ಮಾಡೀತು? ಮಾನವ ಸಂತತಿಯ ವಿಸ್ತರಣೆ ಎಂಬುದು ಪ್ರಕೃತಿಯ ಸಹಜ ನಿಯಮ. ಮಾನವರಲ್ಲೂ ಪ್ರಾಣಿಗಳಲ್ಲೂ ಈ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುವುದರಿಂದಲೇ ನಾಡು ಮತ್ತು ಕಾಡಿನಲ್ಲಿ ಜೀವಂತಿಕೆ ತುಂಬಿಕೊಂಡಿದೆ. ಅಂದಹಾಗೆ, ಹುಲಿಯ ಸಂತತಿಯನ್ನು ಹೆಚ್ಚಿಸುವುದಕ್ಕಾಗಿ ನಮ್ಮ ವ್ಯವಸ್ಥೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂಬುದು ಆಗಾಗ ಸುದ್ದಿಗೊಳಗಾಗುತ್ತಿರುತ್ತವೆ. ಬೇರೆ ಬೇರೆ ತಳಿಯ ಹುಲಿ, ಸಿಂಹಗಳ ಸಂಖ್ಯೆಯನ್ನು ಎಣಿಸುವ ಮತ್ತು ಅದರ ವೃದ್ಧಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಒಂದು ವೇಳೆ, ಗಂಡು ಹುಲಿ ಹೆಣ್ಣಿನ ಬದಲು ಗಂಡನ್ನೇ ಆಯ್ಕೆ ಮಾಡಿಕೊಳ್ಳುವ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ. ಹುಲಿಗಳ ಸಂತತಿಯ ಗತಿ ಏನಾಗಬಹುದು? ಕೆಲವು ವರ್ಷಗಳಲ್ಲೇ ಹುಲಿ, ಸಿಂಹಗಳು ಇತಿಹಾಸದ ಪುಟ ಸೇರುವುದಕ್ಕೆ ಸಾಧ್ಯವಿದೆಯಲ್ಲವೇ? ಹೀಗಿರುವಾಗ, ಮಾನವ ಸಂತತಿಯನ್ನೇ ಬೆಳೆಸದ ಸಲಿಂಗ ರತಿಯನ್ನು ವೈಯಕ್ತಿಕ ಸ್ವಾತಂತ್ರ್ಯದ ನೆಪದಲ್ಲಿ ಬೆಂಬಲಿಸಿದರೆ ಭವಿಷ್ಯದ ಅನಾಹುತಕ್ಕೆ ಯಾರು ಹೊಣೆ ಹೊರಬೇಕು?
 ಗಂಡು-ಹೆಣ್ಣಿನ ನಡುವೆ ಪ್ರಕೃತಿ ಸಹಜವಾದ ಆಕರ್ಷಣೆಯಿದೆ. ಆ ಆಕರ್ಷಣೆಯು ಮಾನವ ಸಂತತಿಯ ವೃದ್ಧಿಗಷ್ಟೇ ಕಾರಣವಾಗುವುದಲ್ಲ, ಸಮಾಜದಲ್ಲಿ ಜವಾಬ್ದಾರಿಯ ಪ್ರಜ್ಞೆ, ಕರುಣೆ, ಅನುಕಂಪ, ಮಾನವೀಯತೆಯ ಪ್ರಜ್ಞೆಯನ್ನೂ ಅದು ಬೆಳೆಸುತ್ತದೆ. ದಾಂಪತ್ಯ ಎಂಬುದು ಬರೇ ದೈಹಿಕ ಸುಖಕ್ಕಷ್ಟೇ ಮೀಸಲಾದ ಸಂಬಂಧ ಅಲ್ಲ. ಅಲ್ಲಿ ಪರಸ್ಪರ ಜವಾಬ್ದಾರಿಯಿದೆ. ಕೊಡು-ಕೊಳ್ಳುವಿಕೆಯಿದೆ. ಪ್ರೀತಿ-ಅನುಕಂಪಗಳ ಒರತೆಯಿದೆ. ಪತಿ-ಪತ್ನಿಯರಾಗಿ, ಹೆತ್ತವರಾಗಿ, ಅಜ್ಜ-ಅಜ್ಜಿಯರಾಗಿ ದಂಪತಿಗಳು ಮಾರ್ಪಡುವ ಒಂದು ಅದ್ಭುತ ಪರಿಕಲ್ಪನೆಯನ್ನು ಸಲಿಂಗರತಿಯ ಜೋಡಿಗಳಿಂದ ನಿರೀಕ್ಷಿಸಲು ಸಾಧ್ಯವೇ? ಅಲ್ಲಿ ಹೊಣೆಗಾರಿಕೆಗಳು ಕಡಿಮೆ. ಲೈಂಗಿಕ ಸುಖಕ್ಕಿಂತ ಹೊರತಾದ ಇನ್ನಾವ ಉದ್ದೇಶಗಳೂ ಆ ಜೋಡಿಗಳ ನಡುವೆ ಇರುವ ಸಾಧ್ಯತೆ ಇಲ್ಲ. ಮಕ್ಕಳ ಜನನಕ್ಕೆ ಅವಕಾಶವೇ ಇಲ್ಲದಿರುವುದರಿಂದ ಸಾಮಾಜಿಕ ಜವಾಬ್ದಾರಿಗಳೂ ಇರುವುದಿಲ್ಲ. ಶಾಲೆಗಳ ಅಗತ್ಯವೂ ಇಲ್ಲ. ಒಂದು ಬಗೆಯ ಒಣ ವಾತಾವರಣವನ್ನು ಸೃಷ್ಟಿ ಮಾಡುವ ಈ ಮಾದರಿಯ ಜೀವನ ವಿಧಾನವನ್ನು ನಾವು ಬೆಂಬಲಿಸತೊಡಗಿದರೆ ಅದರಿಂದ ಸಮಾಜಕ್ಕಾಗುವ ಲಾಭವಾದರೂ ಏನು?
   ನಿಜವಾಗಿ, ಹೆಣ್ಣು-ಹೆಣ್ಣಿನಿಂದ ಮತ್ತು ಗಂಡು-ಗಂಡಿನಿಂದ ಆಕರ್ಷಣೆಗೆ ಒಳಗಾಗುವುದು ಮತ್ತ ದೈಹಿಕ ಸಂಬಂಧವನ್ನು ಬೆಳೆಸುವುದೆಲ್ಲ ಈ 21ನೇ ಶತಮಾನದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡ ಹೊಸ ಬೆಳವಣಿಗೆಯೇನಲ್ಲ. ಅನಾದಿ ಕಾಲದಿಂದಲೂ ಇಂಥ ಪ್ರಕ್ರಿಯೆಗಳೂ ನಡೆಯುತ್ತಲೇ ಬಂದಿದೆ. ಮಾತ್ರವಲ್ಲ, ಧರ್ಮ ಅದನ್ನು ಅಪರಾಧವೆಂದೇ ಪರಿಗಣಿಸಿದೆ (ಪವಿತ್ರ ಕುರಾನ್  29:28-29) ಇಷ್ಟಕ್ಕೂ, ಯಾವುದೇ ಒಂದು ಕ್ರಿಯೆಗೂ ಬಲವಾದ ಅಡಿಪಾಯ ಇರಲೇಬೇಕು. ನಿದ್ದೆಗೆ, ಊಟಕ್ಕೆ, ದುಡಿಮೆಗೆ, ಮದುವೆಗೆ.. ಹೀಗೆ ಎಲ್ಲದಕ್ಕೂ ಅದರದೇ ಆದ ಉದ್ದೇಶ, ಫಲಿತಾಂಶಗಳು ಇರುತ್ತವೆ. ನಿದ್ದೆ ಮಾಡುವುದರಿಂದ ಮರುದಿನದ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ. ಊಟ ಮಾಡದೇ ಇದ್ದರೆ ಮರುದಿನ ಹುರುಪಿನಿಂದ ಬದುಕಲು ಸಾಧ್ಯವಾಗುವುದಿಲ್ಲ. ದುಡಿಮೆಯ ಉದ್ದೇಶ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಬದುಕನ್ನು ಸಂತಸವಾಗಿಡುವುದೂ ಆಗಿರುತ್ತದೆ. ಕೇವಲ ದೈಹಿಕ ಸುಖವನ್ನು ಪಡಕೊಳ್ಳುವ ಉದ್ದೇಶಕ್ಕಿಂತಲೂ ಬದುಕಿನ ಸೌಂದರ್ಯ, ಸಂತಾನ ವೃದ್ಧಿಯ ಗುರುತರ ಹೊಣೆಗಾರಿಕೆಯೂ ಮದುವೆಗಿದೆ. ಒಂದು ರೀತಿಯಲ್ಲಿ ಪ್ರಕೃತಿಯ ನಿಯಮಗಳಲ್ಲಿ ಒಂದು ತತ್ವವಿದೆ. ಹೊಣೆಗಾರಿಕೆಯಿದೆ. ಆದರೆ ಗಂಡು-ಗಂಡು ಜೋಡಿಯಾಗಿ ದಂಪತಿಗಳಂತೆ ಬದುಕುವುದರ ಹಿಂದೆ ದೈಹಿಕ ಸುಖದ ವಿನಿಮಯದ ಹೊರತಾದ ಇನ್ನಾವ ತರ್ಕಗಳೂ ಕಾಣಿಸುತ್ತಿಲ್ಲ. ಆ ಸುಖವನ್ನು ಪಡಕೊಂಡ ಬಳಿಕ ಏನು ಎಂಬ ಪ್ರಶ್ನೆಗೆ ಯಾವ ಉತ್ತರವೂ ಲಭಿಸುತ್ತಿಲ್ಲ. ಒಂದು ವೇಳೆ ಅವರಿಬ್ಬರ ದೈಹಿಕ ಸೌಂದರ್ಯ ಕ್ಷೀಣಿಸಿದ ಮೇಲೆ ಆ ಸಂಬಂಧ ಎಲ್ಲಿಯ ವರೆಗೆ ಬಾಳಿಕೆ ಕಂಡೀತು? ಆಕರ್ಷಣೆ ಕಳಕೊಂಡ ಬಳಿಕ ಅವರಿಬ್ಬರೂ ಬೇರೆ ಬೇರೆಯಾದರೆ, ಅವರ ಹೊಣೆಗಾರಿಕೆಯನ್ನು ಯಾರು ಹೊರಬೇಕು? ಮಕ್ಕಳಿಲ್ಲದ, ಹೆತ್ತವರೂ ಆಗದ ಇವರಿಂದ ಸಮಾಜದ ಅಭಿವೃದ್ದಿsಗೆ ಯಾವ ಕೊಡುಗೆಯಿರುತ್ತದೆ? ಒಣಗಿದ ಗದ್ದೆಗಳು, ಮುಚ್ಚಿದ ಮನೆಗಳು, ಉದ್ಯೋಗಿಗಳಿಲ್ಲದ ಕಾರ್ಖಾನೆಗಳ ಒಂದು ಚಿತ್ರಣವನ್ನು ಕಲ್ಪಿಸಿಕೊಂಡರೇನೇ ಸಲಿಂಗ ರತಿಯ ಅನಾಹುತ ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಈ ಪ್ರಕ್ರಿಯೆಯನ್ನು ತಡೆಯುವ ಪ್ರಯತ್ನಗಳು ನಡೆಯಬೇಕಾಗಿದೆ. ಇದಕ್ಕೆ ಬೆಂಬಲ ಸಿಗದಂಥ ವಾತಾವರಣವನ್ನು ಸೃಷ್ಟಿ ಮಾಡಬೇಕಾಗಿದೆ. ಇಲ್ಲದೇ ಹೋದರೆ ಚೈತನ್ಯವನ್ನು ಕಳೆದುಕೊಂಡ ಒಣ ಮನುಷ್ಯರನ್ನಷ್ಟೇ ಭವಿಷ್ಯದಲ್ಲಿ ನೋಡಬೇಕಾದೀತು.   

Thursday, 12 December 2013

ಸ್ಥಿಮಿತ ಕಳಕೊಳ್ಳುವ ಹೆತ್ತವರು ಮತ್ತು ನಂಬಿಕೆ ಕಳಕೊಳ್ಳದ ಮಕ್ಕಳು

ರಮೇಶ್ ನಾಯ್ಕ
    ಈ ಸುದ್ದಿಗಳನ್ನು ಓದಿ
1. 14 ವರ್ಷದ ಮಗಳು ಅರುಷಿಯನ್ನು ಕೊಂದ ಅಪರಾಧಕ್ಕಾಗಿ ಆಕೆಯ ಹೆತ್ತವರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
2. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ತನ್ನ 10 ಮತ್ತು 14 ವರ್ಷದ ಮಕ್ಕಳನ್ನು ಕೊಂದ ಬ್ಯಾಂಕ್ ಮ್ಯಾನೇಜರ್ ರಮೇಶ್ ನಾಯ್ಕನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
3. ಮೂರನೇ ಹೆರಿಗೆಯಲ್ಲೂ ಅವಳಿ ಹೆಣ್ಣು ಮಕ್ಕಳಾದ ದುಃಖದಿಂದ ಬಡ ಕುಟುಂಬವೊಂದು ನವಜಾತ ಶಿಶುಗಳನ್ನು ಪರಭಾರೆ ಮಾಡಿ ಬಂಧನಕ್ಕೀಡಾಗಿದ್ದಾರೆ..
   ಕಳೆದೆರಡು ವಾರಗಳಲ್ಲಿ ಪ್ರಕಟವಾದ ಈ ಮೂರೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆ ಯಿದೆ. ಅದೇನೆಂದರೆ, ಈ ಮೂರರಲ್ಲೂ ಮಕ್ಕಳೇ ನಾಯಕರು. ಹೆತ್ತವರೇ ಖಳನಾಯಕರು. ನಿಜವಾಗಿ, ಇನ್ನೂ ಪ್ರೌಢಾವಸ್ಥೆಗೆ ತಲುಪದ ಪುಟ್ಟ ಮಕ್ಕಳು ಈ ಜಗತ್ತಿನಲ್ಲಿ ಖಳರಾದದ್ದು ಇಲ್ಲವೇ ಇಲ್ಲ. ಹಾಗಂತ ಖಳರಾಗುವುದಕ್ಕೆ ಬೇಕಾದ ಅವಕಾಶ ಅಥವಾ ಉಪಕರಣಗಳು ಅವರ ಮುಂದೆ ಇರಲಿಲ್ಲ ಎಂದಲ್ಲ. ಎಲ್ಲವೂ ಇತ್ತು. ಚೂರಿ, ಕತ್ತಿ, ಕಲ್ಲು.. ಮತ್ತಿತರ ಅಪಾಯಕಾರಿ ವಸ್ತುಗಳು ಮನೆಯಲ್ಲಿ ಮಕ್ಕಳ ಕೈಗೆಟಕುವ ರೀತಿಯಲ್ಲೇ ಇರುತ್ತದೆ. ಅಪ್ಪ ಸಿಟ್ಟಿನಿಂದ ಥಳಿಸಿದಾಗ ಮಕ್ಕಳು ಚೂರಿಯ ಮೂಲಕ ಪ್ರತಿಕ್ರಿಯಿಸುವುದಕ್ಕೆ ಅವಕಾಶ ಇರುತ್ತದೆ. ತಾಯಿಯ ಬೈಗುಳ, ಗದರಿಕೆಗೆ ಪ್ರತಿಕ್ರಿಯೆಯಾಗಿ ಮಕ್ಕಳು ಕಲ್ಲೆಸೆಯುವುದಕ್ಕೂ ಅವಕಾಶ ಇದೆ. ಅಲ್ಲದೇ ಅನೇಕ ಬಾರಿ ಹೆತ್ತವರು ಮಕ್ಕಳನ್ನು ತಪ್ಪಾಗಿಯೇ ದಂಡಿಸುತ್ತಾರೆ. ಆದರೆ ತಪ್ಪನ್ನು ಒಪ್ಪಿಕೊಳ್ಳುವುದು ಅವರಿಗೆ ಗೊತ್ತೇ ಹೊರತು, ದೊಡ್ಡವರಂತೆ ಅದನ್ನು ಜಾಣ್ಮೆಯಿಂದ ಸಮರ್ಥಿಸಿಕೊಳ್ಳುವುದು ಗೊತ್ತಿರುವುದಿಲ್ಲ. ತಮ್ಮ ಕೃತ್ಯವನ್ನು ಮನದಟ್ಟಾಗುವಂತೆ ವಿವರಿಸುವ ಕಲೆಯೂ ಅವರಿಗೆ ಕರಗತವಾಗಿರುವುದಿಲ್ಲ. ಆದರೂ, ಮಕ್ಕಳು ತಮ್ಮ ಹೆತ್ತವರನ್ನು ದ್ವೇಷಿಸುವುದಿಲ್ಲ. ಅಪಾಯಕಾರಿ ಅಸ್ತ್ರಗಳನ್ನು ಎತ್ತಿಕೊಂಡು ಹಗೆ ಸಾಧಿಸುವುದಿಲ್ಲ. ಯಾಕೆ ಹೀಗೆ ಅಂದರೆ, ಮಕ್ಕಳಿಗೆ ಹೆತ್ತವರ ಮೇಲೆ ಅಪಾರ ನಂಬಿಕೆಯಿರುತ್ತದೆ. ಹೆತ್ತವರು ಎಂದೂ ತಮ್ಮ ಜೊತೆಗಿರುತ್ತಾರೆ ಅನ್ನುವ ಭರವಸೆಯೊಂದಿಗೆ ಅವು ಬದುಕುತ್ತವೆ. ಹೀಗಿರುವಾಗ ಹೆತ್ತವರೇ ಮಕ್ಕಳ ಹಂತಕರಾಗುವುದನ್ನು ಹೇಗೆ ವ್ಯಾಖ್ಯಾನಿಸುವುದು? ಯಾರಾದರೂ ತಂಟೆ ಮಾಡಿದರೆ ಮಕ್ಕಳು ಓಡೋಡಿ ಬರುವುದು ಹೆತ್ತವರ ಬಳಿಗೆ. ಶಾಲೆಯಲ್ಲಿ ಶಿಕ್ಷಕರು ಗದರಿಸಿದರೆ, ಗೆಳೆಯರು ಜಗಳ ಕಾಯ್ದರೆ, ಟಿಫಿನ್ ತಿನ್ನಲಾಗದಿದ್ದರೆ.. ಎಲ್ಲವನ್ನೂ ಮಕ್ಕಳು ಹೆತ್ತವರ ಜೊತೆಯೇ ಹಂಚಿಕೊಳ್ಳುತ್ತಾರೆ. ಇಂಥದ್ದೊಂದು ಪ್ರೀತಿ, ನಂಬಿಕೆಯ ಸಂಬಂಧವೊಂದು ಬಿರುಕು ಬಿಡುತ್ತಿರುವುದೇಕೆ? ಇವತ್ತಿನ ದಿನಗಳಲ್ಲಿ ಇಂಥ ಪ್ರಕರಣಗಳು ತೀರಾ ಅಪರೂಪದ್ದಾಗಿಯೂ ಉಳಿದಿಲ್ಲ. ಯಾವ ಊರಲ್ಲೂ ಯಾವ ಸಂದರ್ಭದಲ್ಲೂ ಘಟಿಸಬಹುದಾದ ಮಾಮೂಲಿ ಪ್ರಕರಣದ ಸ್ಥಿತಿಗೆ ಇವು ತಲುಪಿ ಬಿಟ್ಟಿವೆ. ಕಚೇರಿಯಲ್ಲೋ ವ್ಯವಹಾರದಲ್ಲೋ ಆಗಿರುವ ಆಘಾತದ ಸಿಟ್ಟನ್ನು ಎಷ್ಟೋ ಹೆತ್ತವರು ತಮ್ಮ ಮಕ್ಕಳ ಮೇಲೆ ತೀರಿಸಿಕೊಳ್ಳುವುದಿದೆ. ಮಕ್ಕಳಿಗೆ ಅದನ್ನು ಪ್ರಶ್ನಿಸುವ ಸಾಮಥ್ರ್ಯ ಇಲ್ಲದಿರುವುದರಿಂದಷ್ಟೇ ಹೆಚ್ಚಿನವು ಸುದ್ದಿಗೊಳಗಾಗುವುದಿಲ್ಲ.
   ಕೌಟುಂಬಿಕ ಕಲಹಗಳು ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ದಿನಗಳಿವು. ದೊಡ್ಡ ಕುಟುಂಬಗಳು ಅಣು ಕುಟುಂಬಗಳಾಗಿ ಬದಲಾಗುತ್ತಿವೆ. ಒಂದು ಕಡೆ ಬದುಕು ತುಟ್ಟಿಯಾಗುತ್ತಿದ್ದರೆ ಇನ್ನೊಂದೆಡೆ ಆಧುನಿಕ ಜೀವನ ಕ್ರಮಗಳು ಬಲವಾಗಿ ಆಕರ್ಷಿಸುತ್ತಿವೆ. ಅವುಗಳ ಆಕರ್ಷಣೆಯಿಂದ ತಪ್ಪಿಸಿಕೊಂಡು ಬದುಕಲಾಗದಷ್ಟು ಅವು ಅನಿವಾರ್ಯ ಅನ್ನಿಸಿಕೊಳ್ಳುತ್ತಿವೆ. ಇವುಗಳ ನಡುವೆ ಸಮ ತೋಲನ ಕಾಯ್ದುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿಲ್ಲ. ಪತಿ-ಪತ್ನಿಯರ ನಡುವೆ ಜಗಳ, ವಿವಾಹ ವಿಚ್ಛೇದನ, ಅನಾಥ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿವೆ. ಪತಿ ಮತ್ತು ಪತ್ನಿಯ ಮೇಲೆ ಇವತ್ತಿನ ಜೀವನ ಕ್ರಮಗಳು ಹೆಚ್ಚುವರಿ ಹೊರೆಯನ್ನು ಹೊರಿಸುತ್ತಿರುವುದರಿಂದ ಮನಶ್ಶಾಂತಿ ಕಡಿಮೆಯಾಗುತ್ತಿದೆ. ತೀರಾ ಸಹನೆಯಿಂದ ಪ್ರತಿಕ್ರಿಯಿಸಬಹುದಾದ ಸಣ್ಣ ಪ್ರಕರಣಗಳೂ ರಾದ್ಧಾಂತಕ್ಕೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೆಮ್ಮದಿಯ ಮನೆಗಳನ್ನು ನಿರ್ಮಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕಿದೆ. ಒಂದು ಮನೆಯಲ್ಲಿ ಪತಿಯ ಜವಾಬ್ದಾರಿ, ಪತ್ನಿಯ ಹೊಣೆಗಾರಿಕೆ, ಮಕ್ಕಳ ತರಬೇತಿ, ಹಿರಿಯರ ಸ್ಥಾನ-ಮಾನ.. ಎಲ್ಲವುಗಳನ್ನೂ ಅವಲೋಕನಕ್ಕೆ ಒಳಪಡಿಸುವ ವಾತಾವರಣವನ್ನು ಬೆಳೆಸಬೇಕಿದೆ. ಯಾಕೆಂದರೆ, ಇವತ್ತು ಹೊಟ್ಟೆಗೆ ಮತ್ತು ಬಟ್ಟೆಗೆ ತೊಂದರೆ ಇಲ್ಲದ ಮನೆಗಳಿಂದಲೇ ಹೆಚ್ಚೆಚ್ಚು ಆಘಾತಕಾರಿ ಸುದ್ದಿಗಳು ಕೇಳಿಬರುತ್ತಿವೆ. ನೆಮ್ಮದಿ ಕಳಕೊಳ್ಳುತ್ತಿರುವ ಮನೆಗಳಲ್ಲಿ ಹೆಚ್ಚಿನವು ಮಧ್ಯಮ ಮತ್ತು ಶ್ರೀಮಂತವಾದವೇ. ಒಂದು ರೀತಿಯಲ್ಲಿ, ಟಿ.ವಿ. ಮತ್ತು ಇಂಟರ್‍ನೆಟ್‍ಗಳು ನವಪೀಳಿಗೆಯಲ್ಲಿ ಹೊಸ ಹೊಸ ಕನಸುಗಳನ್ನು ಬಿತ್ತುತ್ತಿವೆ. ಹೊಸ ಹೊಸ ವಿಚಾರಗಳನ್ನು ರೂಪಿಸುತ್ತಿವೆ. ಅವುಗಳಿಂದ ಪ್ರಭಾವಿತಗೊಳ್ಳುವ ಪೀಳಿಗೆಯು ತಪ್ಪು ಹೆಜ್ಜೆಯಿರಿಸುವುದಕ್ಕೂ ಅವಕಾಶ ಇದೆ. ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಮತ್ತು ತಿದ್ದಬೇಕಾದ ಹೆತ್ತವರು ಅದು ಬಿಟ್ಟು ಜೀವನ ಸೌಲಭ್ಯವನ್ನು ಹೆಚ್ಚಿಸುವ ಭರದಲ್ಲಿ ಬಿಝಿಯಾಗಿರುತ್ತಾರೆ. ಹೀಗೆ ತಾಳ ತಪ್ಪಿದ ವಾತಾವರಣದಲ್ಲಿ ಕೊನೆಗೆ ಅಸಹನೆ, ಆಕ್ರೋಶಗಳೇ ಮೇಲುಗೈ ಪಡೆಯುವ ಸಾಧ್ಯತೆಯೂ ಇರುತ್ತದೆ.
   ಮಕ್ಕಳು ಮತ್ತು ಹೆತ್ತವರು ಎರಡು ಬೇರೆ ಬೇರೆ ಧ್ರುವಗಳಲ್ಲ. ಪರಸ್ಪರ ಅವಲಂಬಿತರು. ಮಕ್ಕಳಿಲ್ಲದ ಬದುಕನ್ನು ನಿರೀಕ್ಷಿಸಲು ಹೇಗೆ ಒಂದು ಕುಟುಂಬಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಹೆತ್ತವರು ಇಲ್ಲದಿರುವ ಒಂದು ಬದುಕನ್ನು ನಿರೀಕ್ಷಿಸಲು ಮಕ್ಕಳಿಗೂ ಸಾಧ್ಯವಿಲ್ಲ. ಇಲ್ಲಿಯ ಸಂಬಂಧ ಭಾವಪೂರ್ಣವಾದದ್ದು. ಪರಸ್ಪರ ಭರವಸೆ, ನಂಬಿಕೆ, ಪ್ರೀತಿಯ ತಳಹದಿಯಲ್ಲಿ ಕಟ್ಟಲಾದದ್ದು. ಅಂಥ ಸಂಬಂಧಗಳು ಬಿರುಕು ಬಿಡದಂತೆ ಕಾಪಾಡಿಕೊಳ್ಳಬೇಕಾದ ಅಗತ್ಯ ಬಹಳವಿದೆ. ಹೆತ್ತವರನ್ನು ಹಂತಕರಂತೆ ಭೀತಿಯಿಂದ ನೋಡುವ ಮಕ್ಕಳು ಮತ್ತು ಮಕ್ಕಳನ್ನು ಕೊಲೆಗೆ ಅರ್ಹರೆಂಬಂತೆ ನೋಡುವ ಹೆತ್ತವರು ಸಮಾಜದಲ್ಲಿ ಬೆಳೆಯತೊಡಗಿದರೆ ಅದಕ್ಕಿಂತ ಭೀತಿಯ ಸನ್ನಿವೇಶ ಇನ್ನೊಂದಿಲ್ಲ. ಆದ್ದರಿಂದ ಬದುಕಿನ ಜಂಜಾಟದ ಮಧ್ಯೆಯೂ ಸ್ಥಿಮಿತವನ್ನು ಕಳಕೊಳ್ಳದ ಕುಟುಂಬಗಳು ನಿರ್ಮಾಣಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಮಕ್ಕಳು, ಹೆತ್ತವರು, ಹಿರಿಯರು ನೆಮ್ಮದಿಯಾಗಿ ಬದುಕುವ ‘ಮನೆಗಳ' ನಿರ್ಮಾಣಕ್ಕೆ ಒತ್ತು ಸಿಗಬೇಕಿದೆ. ಇಲ್ಲದಿದ್ದರೆ, ಹಂತಕ ಹೆತ್ತವರಂತೆ ಹಂತಕ ಮಕ್ಕಳೂ ಸೃಷ್ಟಿಯಾದಾರು
.

Wednesday, 4 December 2013

ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಅನುಮಾನಗಳು

ಏ.ಕೆ. ಗಂಗೂಲಿ
ಪ್ರಕರಣವೊಂದರ ಸರಿ-ತಪ್ಪುಗಳನ್ನು ಚರ್ಚಿಸುವುದಕ್ಕಿಂತ ಮೊದಲು ನಾವು ತೆಗೆದುಕೊಳ್ಳಲೇ ಬೇಕಾದ ಎಚ್ಚರಿಕೆಗಳು ಯಾವುವು? ಯಾವುದೇ ಒಂದು ಪ್ರಕರಣಕ್ಕೆ ಹೊರಗೆ ಕಾಣುವ ಮುಖವಷ್ಟೇ ಇರಬೇಕೆಂದಿಲ್ಲವಲ್ಲ. ಕಾಣದ್ದೂ ಇರಬಹುದಲ್ಲವೇ? ಆ ಕಾಣದ ಮುಖವನ್ನು ಪತ್ತೆ ಹಚ್ಚದೆಯೇ ಅಥವಾ ಆ ಬಗ್ಗೆ ಅನುಮಾನಿಸದೆಯೇ ಖಚಿತ ಅಭಿಪ್ರಾಯ ವ್ಯಕ್ತಪಡಿಸುವ ವಿಧಾನವನ್ನು ಏನೆಂದು ಕರೆಯಬೇಕು? ಅದರಿಂದಾಗಿ ತೊಂದರೆಗೆ ಒಳಗಾಗಬಹುದಾದ ವ್ಯಕ್ತಿಗಳಿಗೆ ನಾವು ಯಾವ ಪರಿಹಾರ ಕೊಡಬಲ್ಲೆವು? ತರುಣ್ ತೇಜ್‍ಪಾಲ್ ಮತ್ತು ಸುಪ್ರೀಮ್ ಕೋರ್ಟಿನ ಮಾಜಿ ನ್ಯಾಯಾಧೀಶ ಏ.ಕೆ. ಗಂಗೂಲಿ ಅವರ ಮೇಲೆ ಕೇಳಿ ಬಂದ ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಆ ಬಗ್ಗೆ ಸುಪ್ರೀಮ್ ಕೋರ್ಟ್‍ನ ಮಾಜಿ ನ್ಯಾಯಾಧೀಶ ಅಲ್ತಮಷ್ ಕಬೀರ್ ಮತ್ತು ಮಾಜಿ ಅಟಾರ್ನಿ ಜನರಲ್ ಸೋಲಿ ಸೋರಾಬ್ಜಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಇಂಥದ್ದೊಂದು ಚರ್ಚೆಗೆ ವೇದಿಕೆ ಒದಗಿಸಿದೆ.
   ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಕೂಡಲೇ ಆ ಆರೋಪವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದೇ? ಆರೋಪ ಹೊರಿಸಿದವರನ್ನು ಮುಗ್ಧೆ, ಸಂತ್ರಸ್ತೆ ಮತ್ತು ಆರೋಪಕ್ಕೀಡಾದವರನ್ನು ಪರಮದುಷ್ಟ ಎಂದು ಹಣೆಪಟ್ಟಿ ಹಚ್ಚುವುದು ನೈತಿಕವಾಗಿ ಸರಿಯೇ? ಅಂಥ ಆರೋಪಗಳಲ್ಲೂ ದುರುದ್ದೇಶ ಇರಬಾರದು ಎಂದಿದೆಯೇ? ಹಾಗಂತ, ಲೈಂಗಿಕ ದೌರ್ಜನ್ಯದ ಬಗ್ಗೆ ಕೇಳಿ ಬರುತ್ತಿರುವ ಎಲ್ಲ ಪ್ರಕರಣಗಳೂ ಈ ಪಟ್ಟಿಯಲ್ಲಿ ಸೇರಿವೆ ಎಂದಲ್ಲ. ಲೈಂಗಿಕ ದೌರ್ಜನ್ಯ ಎಂಬುದೇ ಓರ್ವ ಹೆಣ್ಣಿನ ಮಟ್ಟಿಗೆ ಅತಿ ಹೀನ ಮತ್ತು ಸದಾ ಕಾಡುವ ಹಿಂಸೆಯಾಗಿರುತ್ತದೆ. ಒಂದು ವೇಳೆ ಆಕೆ ಅಂಥ ದೌರ್ಜನ್ಯವನ್ನು ಬಹಿರಂಗಪಡಿಸದೇ ಒಳಗೊಳಗೇ ಸಹಿಸಿಕೊಂಡು ಬದುಕಿದರೆ ಸಮಾಜಕ್ಕೆ ಗೊತ್ತಾಗದೇ ಇರಬಹುದು. ಆದರೆ ಆ ಕ್ರೌರ್ಯ ಆಕೆಯನ್ನು ಜೀವನಪೂರ್ತಿ ನೆರಳಾಗಿ ಕಾಡುತ್ತಿರುತ್ತದೆ. ಕೂತಲ್ಲಿ, ನಿಂತಲ್ಲಿ, ನಿದ್ದೆಯಲ್ಲಿ, ಒಂಟಿತನದ ಸಂದರ್ಭದಲ್ಲಿ ಅದು ಮತ್ತೆ ದೌರ್ಜನ್ಯ ನಡೆಸು ತ್ತಲೇ ಇರುತ್ತದೆ. ಅದು ಬಿಟ್ಟು, ಈ ಕ್ರೌರ್ಯವೆಸಗಿದ ವ್ಯಕ್ತಿಗೆ ಶಿಕ್ಷೆಯಾಗಬೇಕೆಂದು ಆಕೆ ತೀರ್ಮಾನಿಸಿದರೆ ಅಲ್ಲೂ ಸಮಸ್ಯೆ ಎದುರಾಗುತ್ತದೆ. ಆವರೆಗೆ ತನಗಷ್ಟೇ ಗೊತ್ತಿದ್ದ ಕ್ರೌರ್ಯವೊಂದು ಸಮಾಜದ ಪಾಲಾಗುತ್ತದೆ. ಮಾಧ್ಯಮಗಳು ಅದನ್ನು ಹೊತ್ತು ತಿರುಗುತ್ತವೆ. ಗೆಳತಿಯರು, ನೆರೆಕರೆಯವರು ವಿಚಿತ್ರವಾಗಿ ನೋಡತೊಡಗುತ್ತಾರೆ. ವಿವಾಹದ ಸಂದರ್ಭದಲ್ಲೂ ‘ಅತ್ಯಾಚಾರ ಸಂತ್ರಸ್ತೆ' ಎಂಬ ಐಡೆಂಟಿಟಿ ಹಲವು ಸಮಸ್ಯೆಗಳನ್ನು ತಂದೊಡ್ಡುವ ಅಪಾಯವಿರುತ್ತದೆ. ಹೀಗಿರುವಾಗ, ತನ್ನದೇ ಆದ ಮತ್ತು ತನಗಷ್ಟೇ ಗೊತ್ತಿರುವ ಒಂದು ಕ್ರೌರ್ಯವನ್ನು ತನಗೆ ಗುರುತು-ಪರಿಚಯವೇ ಇಲ್ಲದ ಇತರರಿಗೆ ತಿಳಿಸುವುದು ಮತ್ತು ಕೋರ್ಟಿನ ಮೊರೆ ಹೋಗುವುದೆಲ್ಲ ಸಣ್ಣ ಸಂಗತಿಯಲ್ಲ. ಅದಕ್ಕೆ ಅಪಾರ ಧೈರ್ಯ, ಛಲದ ಅಗತ್ಯವಿದೆ. ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಲೇ ಇಂಥ ದೌರ್ಜನ್ಯ ಆರೋಪಗಳಿಗೆ ಇರಬಹುದಾದ ಇನ್ನೊಂದು ಮುಖದ ಬಗ್ಗೆಯೂ ಅಷ್ಟೇ ಎಚ್ಚರಿಕೆಯಿಂದ ಚರ್ಚಿಸಬೇಕಾಗಿದೆ.
   ನಿಜವಾಗಿ, ಪ್ರಸಿದ್ಧಿಯ ತುತ್ತ ತುದಿಯಲ್ಲಿರುವವರನ್ನು ಒಂದೇ ಏಟಿಗೆ ಬೀಳಿಸುವ ಸಾಮರ್ಥ್ಯ  ಇರುವುದು ಲೈಂಗಿಕ ದೌರ್ಜನ್ಯದ ಆರೋಪಗಳಿಗೆ. ಅದು ವ್ಯಕ್ತಿಯನ್ನು ಜರ್ಝರಿತಗೊಳಿಸುತ್ತದೆ. ಸಮಾಜಕ್ಕೆ ಮುಖ ತೋರಿಸದಷ್ಟು ಕುಗ್ಗಿಸುತ್ತದೆ. ಮಾತ್ರವಲ್ಲ, ಮಾಧ್ಯಮಗಳು ಕೂಡ ಆರೋಪವನ್ನು ಖಚಿತಪಡಿಸಿಕೊಳ್ಳದೆಯೇ ತಕ್ಷಣ ಸುದ್ದಿಗೆ ಮಸಾಲೆ ಅರೆಯುತ್ತದೆ. ಗಂಗೂಲಿಯವರನ್ನೇ ಎತ್ತಿ ಕೊಳ್ಳೋಣ. ಪ್ರಕರಣಕ್ಕೆ ಒಂದು ವರ್ಷ ಸಂದಿದೆ. ಪ್ರಕರಣ ಇಷ್ಟು ತಡವಾಗಿ ಬೆಳಕಿಗೆ ಬರುವುದಕ್ಕೆ ಕಾರಣ ಏನು? ನಿರ್ಭಯಳ ಪರ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ದೌರ್ಜನ್ಯ ನಡೆದಿದೆ ಎಂದಾದರೆ ಅದನ್ನು ಬಹಿರಂಗಪಡಿಸುವುದಕ್ಕೆ ಆ ಸಂದರ್ಭಕ್ಕಿಂತ ಉತ್ತಮವಾದುದು ಇನ್ನಾವುದಿತ್ತು? ಕೇವಲ ಗಂಗೂಲಿಯವರ ಹುದ್ದೆ, ಪ್ರಭಾವಕ್ಕೆ ಮಣಿದು ಹೀಗೆ ತಡ ಮಾಡುವುದಕ್ಕೆ ಸಾಧ್ಯವಿದೆಯೇ? ಅಲ್ತಮಷ್ ಕಬೀರ್ ಕೂಡಾ ಈ ಆರೋಪದ ವಾಸ್ತವಾಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಂತ, ಗಂಗೂಲಿ ಇಲ್ಲಿ ಸಂಕೇತ ಮಾತ್ರ. ರಾಜಕೀಯ ಅಥವಾ ಇನ್ನಿತರ ದುರುದ್ದೇಶಗಳಿಂದ ಒಂದು ಸಾಮಾನ್ಯ ಪ್ರಕರಣವು ಅಸಾಮಾನ್ಯ ಪ್ರಕರಣವಾಗಿ ಬಿಡುವುದಕ್ಕೆ ಇವತ್ತು ಅವಕಾಶ ಇದೆ. ಸಹಮತದ ಸೆಕ್ಸ್‍ನಲ್ಲಿ ಏರ್ಪಟ್ಟ ಜೋಡಿಗಳು ಆ ಬಳಿಕ ವಿರಸದ ಕಾರಣದಿಂದಾಗಿ ಅತ್ಯಾಚಾರ ಮೊಕದ್ದಮೆ ಹೂಡಿದ್ದಿದೆ. ಸದ್ಯದ ದಿನಗಳು ಎಷ್ಟು ನಾಜೂಕಿನವು ಅಂದರೆ, ಯಾರನ್ನು ಬೇಕಾದರೂ ಖೆಡ್ಡಾಕ್ಕೆ ಬೀಳಿಸಬಹುದು ಎಂಬ ವಾತಾವರಣವಿದೆ. ಮದ್ಯ, ಮಾನಿನಿಯರ ಮುಖಾಂತರ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು ತೀರಾ ಕಷ್ಟದ್ದೆಂದು ಹೇಳುವಂತಿಲ್ಲ. ಅಷ್ಟಕ್ಕೂ, ತರುಣ್ ತೇಜ್‍ಪಾಲ್ ಪ್ರಕರಣ ದಲ್ಲಿ ಇಂಥದ್ದೊಂದು ಅನುಮಾನ ತಪ್ಪೇ ಎಂದು ಹೇಳುವಾಗಲೂ ‘ರಾಜಕೀಯ'ಕ್ಕೆ ಯಾವುದೂ ಅಸಾಧ್ಯವಲ್ಲ ಎಂಬುದು ಕೂಡಾ ಅಷ್ಟೇ ನಿಜವಾಗಿದೆ.
   ತೇಜ್‍ಪಾಲ್ ಮತ್ತು ಗಂಗೂಲಿ ಪ್ರಕರಣಗಳು ಹೇಗೆ ಕೊನೆ ಮುಟ್ಟುತ್ತೋ ಗೊತ್ತಿಲ್ಲ. ಆದರೆ, ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಪ್ರಸಿದ್ಧ ವ್ಯಕ್ತಿಗಳೇ. ಅಲ್ಲದೇ ಅವರ ಮೇಲೆ ಆರೋಪ ಹೊರಿಸಿದವರು ಹೊರಗಿನವರಲ್ಲ, ಜೊತೆಗೇ ಕೆಲಸ ಮಾಡುತ್ತಿರುವವರು. ಮೋದಿಯವರ ‘ಅಕ್ರಮ ಬೇಹುಗಾರಿಕೆ' ಪ್ರಕರಣವು ಬಹಿರಂಗವಾದ ಬೆನ್ನಿಗೇ ಈ ಎರಡೂ ಪ್ರಕರಣಗಳು ಬಹಿರಂಗಗೊಂಡಿವೆ ಎಂಬುದೂ ಬಹಳ ಮುಖ್ಯ. ಭಾವಿ ಪ್ರಧಾನಿ ಅಭ್ಯರ್ಥಿ ಒಳಗೊಂಡಿರುವ ಪ್ರಕರಣದ ಕಾವನ್ನು ತಗ್ಗಿಸುವುದಕ್ಕಾಗಿ ತೇಜ್‍ಪಾಲ್ ಪ್ರಕರಣವನ್ನು ಉಬ್ಬಿಸಲಾಯಿತೇ? ಅಕ್ರಮ ಬೇಹುಗಾರಿಕಾ ಪ್ರಕರಣದ ಯುವತಿಗೂ ಮೋದಿಯವರಿಗೂ ನಡುವೆ ಇದ್ದ ಸಂಬಂಧವೇನು ಎಂಬ ಬಗ್ಗೆ ಮಾಧ್ಯಮಗಳು ಕುತೂಹಲ ವ್ಯಕ್ತಪಡಿಸುವ ಹೊತ್ತಿನಲ್ಲೇ ತೇಜ್‍ಪಾಲ್ ಹೆಜ್ಜೆ ತಪ್ಪಿರುವ ಪ್ರಕರಣವು ಸುದ್ದಿ ಮಾಡಿರುವುದರಲ್ಲಿ ಯಾವ ಅನುಮಾನಕ್ಕೂ ಅವಕಾಶ ಇಲ್ಲವೇ? ಅವರನ್ನು ಬೇಕೆಂತಲೇ ಹೆಜ್ಜೆ ತಪ್ಪಿಸಲಾಯಿತೇ ಅಥವಾ ಹೆಜ್ಜೆ ತಪ್ಪಿದ ಅವರನ್ನು ಬಳಸಿಕೊಳ್ಳಲಾಯಿತೇ?
    ರಾಜಕೀಯ ವಾತಾವರಣವು ಅತಿಹೀನ ಸ್ಥಿತಿಗೆ ತಲುಪಿರುವ ಇಂದಿನ ದಿನಗಳಲ್ಲಿ ಯಾವುದನ್ನೂ ನೇರವಾಗಿ ನಂಬುವಂಥ ಸ್ಥಿತಿಯಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಈ ಸಾಲಿಗೆ ಸೇರುತ್ತಿರು ವುದು ವಿಷಾದನೀಯ. ಆದರೆ, ಹಾಗೆ ಅನುಮಾನಿಸುವುದಕ್ಕೆ ಸದ್ಯದ ದಿನಗಳು ಒತ್ತಾಯಿಸುತ್ತಿವೆ ಅನ್ನುವುದನ್ನು ತಿರಸ್ಕರಿಸುವಂತಿಲ್ಲ.

Monday, 25 November 2013

ಅಮಲೇರಿಸುವ ಮದ್ಯವೂ ಹೆಜ್ಜೆ ತಪ್ಪುವ ‘ತರುಣ’ರೂ

    ತೆಹಲ್ಕಾದ ತರುಣ್ ತೇಜ್‍ಪಾಲ್ ಇವತ್ತು ಮಾಧ್ಯಮಗಳನ್ನಿಡೀ ತುಂಬಿಕೊಂಡಿದ್ದಾರೆ. ಪತ್ರಕರ್ತರು ಅವರ ಮನೆಯ ಗೋಡೆಗೆ ಕ್ಯಾಮರಾಗಳನ್ನಿಟ್ಟು ಕಾಯುತ್ತಿದ್ದಾರೆ. ಅವರ ಬಾಲ್ಯ, ಯೌವನ, ಪತ್ರಿಕೋದ್ಯಮದಲ್ಲಿ ಅವರು ನಡೆಸಿದ ವಿನೂತನ ಪ್ರಯೋಗಗಳೆಲ್ಲ ಮಾಧ್ಯಮಗಳಲ್ಲಿ ವಿಸ್ತೃತವಾಗಿ ಚರ್ಚೆಗೆ ಒಳಪಡುತ್ತಿವೆ. ಆದರೆ, ಹೆಣ್ಣನ್ನು ಲೈಂಗಿಕ ದೌರ್ಜನ್ಯದಿಂದ ಮುಕ್ತಗೊಳಿಸುವುದಕ್ಕೆ ಈ ಚರ್ಚೆಗಳು ಎಷ್ಟರ ಮಟ್ಟಿಗೆ ನೆರವಾಗಬಲ್ಲುದು? ಯಾಕೆಂದರೆ, ‘ಮದ್ಯದ ಅಮಲಿನಲ್ಲಿ ನಾನು ಹೆಜ್ಜೆ ತಪ್ಪಿದೆ..' ಎಂದು ತೇಜ್‍ಪಾಲ್‍ರೇ ಹೇಳಿದ್ದಾರೆ. ಹಾಗಂತ, ಮದ್ಯದಿಂದಾಗಿ ಹೀಗೆ ಹೆಜ್ಜೆ ತಪ್ಪುವವರಲ್ಲಿ ತೇಜ್‍ಪಾಲ್ ಮೊದಲಿಗರೇನೂ ಅಲ್ಲ. ಕೊನೆಯವರಾಗುವ ಸಾಧ್ಯತೆಯೂ ಇಲ್ಲ. ಈ ದೇಶದಲ್ಲಿ ಪ್ರತಿದಿನ ಅಸಂಖ್ಯ ಮಂದಿ ಮದ್ಯದಿಂದಾಗಿ ಹೆಜ್ಜೆ ತಪ್ಪುತ್ತಿದ್ದಾರೆ. ಮಾತ್ರವಲ್ಲ, ಈ ತಪ್ಪಿದ ಹೆಜ್ಜೆಗಳಿಗೆ ಸಾವಿರಾರು ಹೆಣ್ಣು ಮಕ್ಕಳು ನಿತ್ಯ ಬಲಿಯಾಗುತ್ತಲೂ ಇದ್ದಾರೆ. ಹೀಗಿರುವಾಗ, ನಮ್ಮ ಚರ್ಚೆಯ ಕೇಂದ್ರ ಬಿಂದುವಾದರೂ ಯಾರಾಗಿರಬೇಕು; ತೇಜ್‍ಪಾಲೋ, ಮದ್ಯವೋ? ಯಾಕೆ ಯಾರೂ ಮದ್ಯದ ಬಗ್ಗೆ ಮಾತನ್ನೇ ಆಡುತ್ತಿಲ್ಲ? ಓರ್ವ ವ್ಯಕ್ತಿಯನ್ನು ಭೀಕರ ಅಪರಾಧ ಎಸಗುವಂತೆ ಮದ್ಯವು ಪ್ರೇರೇಪಿಸುತ್ತದೆಂದಾದರೆ ನಾವು ಮೊತ್ತಮೊದಲು ಶಿಕ್ಷೆಗೆ ಒಳ ಪಡಿಸಬೇಕಾದದ್ದು ಯಾರನ್ನು, ತೇಜ್‍ಪಾಲ್‍ರನ್ನೋ? ಒಂದು ಕ್ರೌರ್ಯದ ಪ್ರಮುಖ ರೂವಾರಿಯನ್ನು (ಮದ್ಯ) ಪ್ರೀತಿಸುತ್ತಾ ಅದರಿಂದ ಪ್ರಚೋದಿತರಾದವರನ್ನು ಗಂಭೀರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುವುದು ಯಾವ ನೀತಿ, ಯಾವ ಬಗೆಯ ಪ್ರಾಮಾಣಿಕತೆ?
   ಮದ್ಯಕ್ಕೂ ಲೈಂಗಿಕ ದೌರ್ಜನ್ಯಗಳಿಗೂ ಬಲವಾದ ನಂಟಿದೆ. ದೆಹಲಿಯ ನಿರ್ಭಯಳಿಂದ ಹಿಡಿದು ಉಡುಪಿಯ ನಿರ್ಭಯಳ ವರೆಗೆ ಈ ದೇಶದಲ್ಲಿ ಎಷ್ಟೆಲ್ಲ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬಂದಿವೆಯೋ ಅವೆಲ್ಲವುಗಳ ಜೊತೆ ಮದ್ಯಕ್ಕೆ ಸಂಬಂಧ ಇದೆ. ಒಂದು ಕಡೆ ಮಹಿಳೆಯರ ಸುರಕ್ಷಿತತೆ, ಸಬಲೀಕರಣದ ಬಗ್ಗೆ ನಾವೆಲ್ಲ ಭಾರೀ ಉತ್ಸಾಹದಿಂದ ಮಾತಾಡುತ್ತೇವೆ. ಮಾಧ್ಯಮಗಳು ಅಸಂಖ್ಯ ಪುಟಗಳನ್ನು ಇದಕ್ಕಾಗಿ ಖರ್ಚು ಮಾಡುತ್ತಿವೆ. ದೆಹಲಿಯಲ್ಲಿ ನಿರ್ಭಯಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಈ ದೇಶ ಒಂದಾಗಿ ಪ್ರತಿಭಟಿಸಿತ್ತು. ವಿದ್ಯಾರ್ಥಿಗಳಿಂದ ಹಿಡಿದು ಪತ್ರಕರ್ತರ ವರೆಗೆ ಎಲ್ಲರೂ ಅತ್ಯಾಚಾರ ಮುಕ್ತ ಭಾರತದ ಬಗ್ಗೆ ಮಾತಾಡಿದರು. ದುರಂತ ಏನೆಂದರೆ, ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರು ಪಾನಮತ್ತರಾಗಿದ್ದರು ಎಂಬುದು ಗೊತ್ತಿದ್ದು ಕೂಡ ಯಾರೂ ಪಾನ ನಿಷೇಧಕ್ಕೆ ಒತ್ತಾಯಿಸಿಯೇ ಇಲ್ಲ! ಯಾಕೆ ಹೀಗೆ? ಮದ್ಯ ಸೇವಿಸುವುದರಿಂದ ಹೆಜ್ಜೆ ತಪ್ಪುತ್ತದೆ ಮತ್ತು ಅದು ಮಾಡಬಾರದ ಕೃತ್ಯಗಳನ್ನು ಮಾಡುವಂತೆ ಪ್ರಚೋದಿಸುತ್ತದೆ ಎಂಬುದು ಕುಡಿಯುವವನಿಗೂ ಗೊತ್ತು, ಕುಡಿಸುವವನಿಗೂ ಗೊತ್ತು. ಹೀಗಿದ್ದೂ, ಮದ್ಯದ ಬಗ್ಗೆ ಮಾತಾಡದೇ ಅದು ಮಾಡಿಸುವ ಕ್ರೌರ್ಯಗಳ ಕುರಿತು ಮಾತ್ರ ಅಪಾರ ಆಕ್ರೋಶ ವ್ಯಕ್ತಪಡಿಸುವುದೇಕೆ?
   ಈ ದೇಶದಲ್ಲಿ ಕೋಟ್ಯಂತರ ಗುಡಿಸಲುಗಳು ಇವತ್ತು ಅತ್ಯಂತ ಆತಂಕದಲ್ಲಿ ದಿನದೂಡುತ್ತಿವೆ. ‘ಈ ದಿನ ಸಂಜೆಯಾಗದಿರಲಿ..’ ಎಂದು ಆಸೆಪಡುವ ಕೋಟ್ಯಂತರ ತಾಯಿ, ಮಕ್ಕಳು ಅಂಥ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸಂಜೆಯಾಗುವಾಗ ಗಂಡ ಕುಡಿದು ಬರುತ್ತಾನೆ. ಪತ್ನಿ, ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾನೆ. ಮನೆಯಲ್ಲಿರುವವರ ಹೊಟ್ಟೆಗೆ ಏನನ್ನೂ ಕೊಡದೇ ತನ್ನ ಹೊಟ್ಟೆಯನ್ನು ಮದ್ಯದಿಂದ ತುಂಬಿಸಿಕೊಂಡು ಬರುವ ಅಸಂಖ್ಯ ಯಜಮಾನರಿಂದ ಈ ದೇಶದ ಕೋಟ್ಯಂತರ ಗುಡಿಸಲುಗಳು ತುಂಬಿ ಹೋಗಿವೆ. ಆ ಗುಡಿಸಲುಗಳಿಗೆ ಬಾಯಿ ಇಲ್ಲ. ಪ್ರತಿಭಟಿಸುವ ಸಾಮರ್ಥ್ಯ  ಇಲ್ಲ. ಪೇಟೆಯ ನಿರ್ಭಯರಂತೆ ಮಾತಾಡುವ ಕಲೆ ಗೊತ್ತಿಲ್ಲ. ಒಂದು ವೇಳೆ ಇಂಥ ಗುಡಿಸಲುಗಳಿಗೆ ಮಾತಾಡುವ ಸಾಮರ್ಥ್ಯಇರುತ್ತಿದ್ದರೆ, ಅಸಂಖ್ಯ ತೇಜ್‍ಪಾಲ್‍ರ ಕತೆಗಳನ್ನು ಅವು ಸಾರಿ ಸಾರಿ ಹೇಳುತ್ತಿದ್ದುವು. ನಮ್ಮ ಪೊಲೀಸ್ ಠಾಣೆಗಳು ಕೇಸು ದಾಖಲಿಸಿ ದಾಖಲಿಸಿ ಸುಸ್ತಾಗುತ್ತಿದ್ದುವು. ಹೀಗಿರುವಾಗ, ತೇಜ್‍ಪಾಲ್‍ರನ್ನು ಜೈಲಿಗಟ್ಟುವುದರಿಂದ ಇಂಥ ಗುಡಿಸಲುಗಳ ಸಂಕಟಗಳು ಕೊನೆಯಾಗಬಲ್ಲುದೇ? ಹಾಗಂತ, ತೇಜ್‍ಪಾಲ್‍ರನ್ನು ಸಮರ್ಥಿಸುವುದು ಇಲ್ಲಿನ ಉದ್ದೇಶವಲ್ಲ. ಆದರೂ ತೇಜ್‍ಪಾಲ್ ಯಾರೆಂದೇ ಗೊತ್ತಿಲ್ಲದ ಆದರೆ ಮದ್ಯದಂಗಡಿಗಳು ಎಲ್ಲಿವೆಯೆಂದು ಖಚಿತವಾಗಿ ಗೊತ್ತಿರುವ ಮಂದಿ ಈ ದೇಶದಲ್ಲಿ ಅಸಂಖ್ಯ ಇದ್ದಾರಲ್ಲ, ಅವರೇಕೆ ನಮ್ಮ ಗಂಭೀರ ಚರ್ಚೆಯ ವ್ಯಾಪ್ತಿಗೆ ಒಳಪಡುತ್ತಿಲ್ಲ? ಅವರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುವ ತಾಯಿ, ಮಕ್ಕಳ ಬಗ್ಗೆಯೇಕೆ ನಾವು ಕಾಳಜಿ ತೋರುತ್ತಿಲ್ಲ?
   ನಿಜವಾಗಿ, ನಾವು ಇವತ್ತು ಗಂಭೀರ ಚರ್ಚೆಗೆ ಒಳಪಡಿಸಬೇಕಾದದ್ದು ಲೈಂಗಿಕ ದೌರ್ಜನ್ಯ ಎಸಗಿದ ತೇಜ್‍ಪಾಲ್‍ರನ್ನಲ್ಲ. ಅವರನ್ನು ಈ ಕೃತ್ಯಕ್ಕೆ ಪ್ರಚೋದಿಸಿದ ಮದ್ಯವನ್ನು. ಇವತ್ತು ಹೊಟ್ಟೆ ತುಂಬಿದವರ ಖಯಾಲಿಗಾಗಿ ಏರ್ಪಾಟಾಗುವ ಕಾರ್ಯಕ್ರಮಗಳಲ್ಲಿ ಮದ್ಯಕ್ಕೆ ಪ್ರಮುಖ ಸ್ಥಾನವಿದೆ. ಅಂಥ ಕಡೆ ತೇಜ್‍ಪಾಲ್‍ರಂಥ ಧಾರಾಳ ಮಂದಿ ಹೆಜ್ಜೆ ತಪ್ಪುತ್ತಿರುತ್ತಾರೆ. ಅವು ಕೆಲವೊಮ್ಮೆ ಸುದ್ದಿಯಾಗುವುದನ್ನು ಬಿಟ್ಟರೆ ಉಳಿದಂತೆ ಹೆಚ್ಚಿನವು ತಪ್ಪಿದ ಹೆಜ್ಜೆಗಳನ್ನು ಸಹಿಸಿಕೊಂಡು ಸುಮ್ಮ ನಾಗುತ್ತವೆ. ಆದ್ದರಿಂದ ತೇಜ್‍ಪಾಲ್‍ರನ್ನು ಶಿಕ್ಷಿಸುವುದರಿಂದ ಹೆಣ್ಣು ಮಕ್ಕಳು ಸುರಕ್ಷಿತರಾಗುತ್ತಾರೆ ಎಂದು ಖಂಡಿತ ಹೇಳುವಂತಿಲ್ಲ. ದೆಹಲಿಯ ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರು ಗಲ್ಲು ಶಿಕ್ಷೆಯ ಜಾರಿಯನ್ನು ಎದುರು ನೋಡುತ್ತಿದ್ದರೂ ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳಿಗೇನೂ ಕಡಿವಾಣ ಬಿದ್ದಿಲ್ಲವಲ್ಲವೇ? ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯಿದೆ ಎಂದು ಗೊತ್ತಿದ್ದೂ ಒಂದು ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಅನ್ನುವುದು ಏನನ್ನು ಸೂಚಿಸುತ್ತದೆ? ಶಿಕ್ಷೆಯನ್ನು ಪ್ರೀತಿಸುವ ಸಮಾಜವೊಂದು ಇರಲು ಸಾಧ್ಯವೇ? ಇಲ್ಲ ಎಂದಾದರೆ, ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದೇಕೆ? ಹೆಜ್ಜೆ ತಪ್ಪಿಸುವ ಮದ್ಯದ ಹೊರತಾಗಿ ಬೇರೆ ಯಾವ ಕಾರಣಗಳನ್ನು ನಾವು ಇದಕ್ಕೆ ಕೊಡಬಲ್ಲೆವು?
   ಆದ್ದರಿಂದ, ತೇಜ್‍ಪಾಲ್ ಪ್ರಕರಣವು ನಮ್ಮ ಚರ್ಚೆಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಒಂದು ನೆಪವಾಗಬೇಕಾಗಿದೆ. ಹೆಜ್ಜೆ ತಪ್ಪಿಸುವ ಮದ್ಯವು ನಮ್ಮ ಚರ್ಚೆಯ ವ್ಯಾಪ್ತಿಗೆ ಒಳಪಟ್ಟರೆ ಅದಕ್ಕಾಗಿ ಈ ದೇಶದ ಕೋಟ್ಯಂತರ ಗುಡಿಸಲುಗಳು ಸಂತಸಪಟ್ಟಾವು. ಒಂದು ರೀತಿಯಲ್ಲಿ, ಮದ್ಯವನ್ನು ಹೊರಗಿಟ್ಟು ಲೈಂಗಿಕ ದೌರ್ಜನ್ಯವನ್ನು ಚರ್ಚಿಸುವುದು ಅನಾಪೆsಲಿಸ್ ಸೊಳ್ಳೆಗಳನ್ನು ಹೊರಗಿಟ್ಟು ಮಲೇರಿಯಾ ರೋಗದ ಬಗ್ಗೆ ಚರ್ಚಿಸಿದಂತೆ. ಅದರಿಂದ ಯಾವ ಪ್ರಯೋಜನವೂ ಇಲ್ಲ.

Monday, 18 November 2013

ರನ್ನುಗಳ ರಾಶಿಯಲ್ಲಿ ಚರ್ಚೆಯಾಗದೇ ಉಳಿದ ಬಾಲ್ಯ

    ಕ್ರಿಕೆಟ್‍ಗೆ ವಿದಾಯ ಕೋರಿದ ಸಚಿನ್ ತೆಂಡುಲ್ಕರ್‍ರ ಸುತ್ತ ಟಿ.ವಿ. ಚಾನೆಲ್‍ಗಳು ಗಂಭೀರ ಚರ್ಚೆಯಲ್ಲಿ ಮುಳುಗಿದ್ದಾಗಲೇ ಅತ್ತ ಹೈದರಾಬಾದ್‍ನಲ್ಲಿ, ‘ಚಿಲ್ಡ್ರನ್ ಇನ್ ಮೀಡಿಯಾ: ರೈಟ್ಸ್ ಆಫ್ ಚೈಲ್ಡ್ ಆರ್ಟಿಸ್ಟ್' ಎಂಬ ವಿಷಯದ ಮೇಲೆ ಗೋಷ್ಠಿಯೊಂದು ನಡೆಯುತ್ತಿತ್ತು. ಗೋಷ್ಠಿಯ ಕೇಂದ್ರೀಯ ವಿಷಯದಲ್ಲಿ ಸಚಿನ್ ಇಲ್ಲದೇ ಇದ್ದರೂ ಸಚಿನ್ ಅಲ್ಲಿ ಪ್ರಸ್ತಾಪವಾದರು. ವಿಶ್ವನಾಥನ್ ಆನಂದ್ ಚರ್ಚೆಗೊಳಪಟ್ಟರು. ಖ್ಯಾತ ಚಿಂತಕ ಅಮೋಲ್ ಪಾಲೇಕರ್, ಬಬಿತಾ ಶರ್ಮಾ ಮತ್ತು ಡಾಕ್ಯುಮೆಂಟರಿ ನಿರ್ದೇಶಕಿ ಉಮಾ ಮಗಳ್... ಮುಂತಾದವರಿದ್ದ ಚರ್ಚೆಯು ಎಷ್ಟು ಆಸಕ್ತಿಕರವಾಗಿತ್ತೆಂದರೆ, ಸಚಿನ್‍ರ ಪ್ರಭಾವಳಿಯಲ್ಲಿ ಮಾಧ್ಯಮಗಳು ಹೇಗೆ ಬಹುಮುಖ್ಯ ವಿಚಾರವನ್ನು ಮರೆತುಬಿಟ್ಟಿವೆ ಎಂಬುದನ್ನು ಅವರು ಬಿಚ್ಚಿಟ್ಟರು. ಸಚಿನ್‍ರ ಶಿಕ್ಷಣ, ರಿಯಾಲಿಟಿ ಶೋಗಳಲ್ಲಿ ಬೊಂಬೆಗಳಂತೆ ಕಾಣುವ ಮಕ್ಕಳ ಮನಃಸ್ಥಿತಿ, ಸಿನಿಮಾದಲ್ಲಿರುವ ಬಾಲ ನಟರ ಮೇಲಿನ ಒತ್ತಡಗಳು.. ಎಲ್ಲವನ್ನೂ ಈ ಗೋಷ್ಠಿ ಅತ್ಯಂತ ಆಳವಾಗಿ ಚರ್ಚಿಸಿತು. ಒಂದು ವೇಳೆ; ರವಿಶಾಸ್ತ್ರಿ, ಗಂಗೂಲಿ, ಕಪಿಲ್, ಗವಾಸ್ಕರ್.. ಮುಂತಾದವರನ್ನು ಕೂರಿಸಿಕೊಂಡು ಟಿ.ವಿ. ಚಾನೆಲ್‍ಗಳು ‘ಸಚಿನ್ ವಿದಾಯ'ವನ್ನು ಚರ್ಚಿಸುವುದಕ್ಕಿಂತ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿರುತ್ತಿದ್ದರೆ, ಈ ದೇಶದ ಕೋಟ್ಯಂತರ ಮಕ್ಕಳು ಖಂಡಿತ ಸಂತಸಪಡುತ್ತಿದ್ದುವು.
   ಕ್ರಿಕೆಟ್‍ನಲ್ಲಿ ಸಚಿನ್ ರಾಶಿ ರಾಶಿ ರನ್ನುಗಳನ್ನು ಸಂಗ್ರಹಿಸಿರಬಹುದು. ಆದರೆ, ರನ್ನುಗಳ ಈ ಭರಾಟೆಯಲ್ಲಿ ಅವರಿಗೆ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಲೂ ಸಾಧ್ಯವಾಗಿಲ್ಲ. 19 ವರ್ಷದವರಿಗಿರುವ ಕ್ರಿಕೆಟ್ ತಂಡದ ನಾಯಕನಾಗಿದ್ದ ಉನ್ಮುಕ್ತ್ ಚಂದ್‍ಗೆ ಪಿಯು ಓದುವುದಕ್ಕೂ ಸಾಧ್ಯವಾಗುತ್ತಿಲ್ಲ. ಇನ್ನು, ಟಿ.ವಿ. ಚಾನೆಲ್‍ಗಳಲ್ಲಿ ಪ್ರದರ್ಶನದ ಬೊಂಬೆಗಳಾಗುತ್ತಿರುವ ಮಕ್ಕಳನ್ನು ನೋಡುವಾಗಲಂತೂ ದಿಗಿಲಾಗುತ್ತದೆ. ತಮ್ಮದಲ್ಲದ ಮಾತು, ವಯಸ್ಸನ್ನೂ ಮೀರಿದ ಪ್ರೌಢತೆ, ನಗು, ಹಾವ-ಭಾವಗಳನ್ನು ಆ ಮಕ್ಕಳು ಪ್ರದರ್ಶಿಸುತ್ತಿರುವುದು ಯಾರ ಒತ್ತಡದಿಂದ? ಯಾವುದೇ ಒಂದು ಮಗುವಿನ ವರ್ತನೆಗೂ ವಯಸ್ಸಿಗೂ ಖಂಡಿತ ಸಂಬಂಧವಿರುತ್ತದೆ. ನಿಜವಾಗಿ, 5 ವರ್ಷದ ಮಗು ಸಚಿನ್‍ನಂತೆ ಬ್ಯಾಟು ಬೀಸಬೇಕು ಎಂದು ಬಯಸುವುದು ಖಂಡಿತ ತಪ್ಪು. 10 ವರ್ಷದ ಹುಡುಗನಿಂದ ಮನ್‍ಮೋಹನ್ ಸಿಂಗ್‍ರ ಆರ್ಥಿಕ ನಡೆಗಳ ಬಗ್ಗೆ ವ್ಯಾಖ್ಯಾನವನ್ನು ಬಯಸುವುದಕ್ಕೆ ಯಾವ ಅರ್ಥವೂ ಇಲ್ಲ. ಪಿ.ಟಿ. ಉಷಾರ ಟ್ರ್ಯಾಕ್ ದಾಖಲೆಯನ್ನು ಪುಟಾಣಿಯೊಂದು ಅಳಿಸಿ ಹಾಕಬೇಕೆಂದು ಯಾರೂ ಬಯಸುತ್ತಿಲ್ಲ. ಯಾಕೆಂದರೆ, ಮಗು ಮಗುವೇ. ದೊಡ್ಡವರು ದೊಡ್ಡವರೇ. ಆದರೆ ನಾವೆಲ್ಲ ಸೇರಿಕೊಂಡು ಪುಟಾಣಿಗಳಿಂದ ಈ ‘ಮಗು’ತನವನ್ನು ಕಸಿದುಕೊಳ್ಳುತ್ತಿದ್ದೇವೆಯೇ ಎಂದು ಗಂಭೀರವಾಗಿ ಆಲೋಚಿಸಬೇಕಾಗಿದೆ. ಸಿನಿಮಾದಲ್ಲಿ ನಟಿಸುವ ಮಗುವನ್ನೇ ಎತ್ತಿಕೊಳ್ಳಿ. ಅದರ ಮುಂದೆ ಡಯಲಾಗ್‍ನ ಸಿದ್ಧ ಮಾದರಿಯೊಂದು ಇರುತ್ತದೆ. ಹಿರಿಯ ನಟರಂತೆ ಮಗುವಿಗೆ ಡಯಲಾಗನ್ನು ಹೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅದು ಮನನ ಮಾಡಲೇಬೇಕು. ಹೀಗೆ ಮನನ ಮಾಡಿದ್ದನ್ನು ಒಂದೇ ಬಾರಿ ಹೇಳಿ ಮುಗಿಸುವಂತಿಲ್ಲ. ಹೇಳುವ ರೀತಿ, ಆಂಗಿಕ ಅಭಿನಯ, ಭಾವಾಭಿವ್ಯಕ್ತತೆ.. ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಹೀಗೆ, ಮತ್ತೆ ಮತ್ತೆ ಅಭಿನಯಿಸಬೇಕಾದ ಮತ್ತು ನಿರ್ದೇಶಕರಿಂದಲೋ ಸಹ ನಟರಿಂದಲೋ ಬೈಸಿಕೊಳ್ಳಬೇಕಾದ ಒತ್ತಡದಲ್ಲಿ ಮಗು ಸಿಲುಕುತ್ತದೆ. ಎಲ್ಲೋ ತಮ್ಮದಲ್ಲದ ಊರಿನಲ್ಲಿ ಅಭಿನಯಕ್ಕಾಗಿ ಕಾಯುತ್ತಾ, ಮತ್ತೆ ಮತ್ತೆ ಅಭಿನಯಿಸುತ್ತಾ ಬೆಳೆಯುವ ಮಗುವಿನ ಮನಃಸ್ಥಿತಿ ಹೇಗಿರಬಹುದು? ಅದು ಎದುರಿಸುವ ಒತ್ತಡಗಳ ಪ್ರಮಾಣ ಎಷ್ಟಿರಬಹುದು?
   ಟಿ.ವಿ.ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಕ್ಕಳ ಪರಿಸ್ಥಿತಿಯಂತೂ ಇದಕ್ಕಿಂತಲೂ ಭೀಕರ. ಅವುಗಳ ಬಾಲ್ಯವನ್ನು ತಮ್ಮ ಜನಪ್ರಿಯತೆಗಾಗಿ ಚಾನೆಲ್‍ಗಳು ಕಸಿದುಕೊಳ್ಳುತ್ತವೆ. ಒಂದು ಮಗು ಹಾಡುವುದು ಬೇರೆ, ಆ ಹಾಡಿಗಾಗಿ ದಿನ, ವಾರಗಟ್ಟಲೆ ಒತ್ತಡಕ್ಕೆ ಸಿಲುಕಿಸುವುದು ಬೇರೆ. ಕೇವಲ ಇವಷ್ಟೇ ಅಲ್ಲ- ವೇದಿಕೆಯಲ್ಲಿ ಹೇಗೆಲ್ಲ ಮಾತಾಡಬೇಕು, ದೊಡ್ಡವರೊಂದಿಗೆ ಹೇಗೆ ಕಿಚಾಯಿಸಬೇಕು, ಎಲ್ಲರ ಗಮನ ಕೇಂದ್ರವಾಗಲು ಹೇಗೆ ಆಂಗಿಕ ಅಭಿನಯ ಮಾಡಬೇಕು.. ಎಲ್ಲವನ್ನೂ ಮಗು ದೊಡ್ಡವರಿಂದ ಹೇಳಿಸಿಕೊಳ್ಳುತ್ತದೆ. ಇದರ ಮಧ್ಯೆ ಹೆತ್ತವರು ಕ್ಷಣಕ್ಷಣಕ್ಕೂ ಮಗುವಿಗೆ ತನ್ನ ಜವಾಬ್ದಾರಿಯನ್ನು ನೆನಪಿಸುತ್ತಿರುತ್ತಾರೆ. ಹೀಗೆ, ತನ್ನ ವಯಸ್ಸಿನ ಮಕ್ಕಳ ಜೊತೆ ಸ್ವಚ್ಛಂದವಾಗಿ ಬಾಲ್ಯವನ್ನು ಕಳೆಯಬೇಕಾದ ಮಕ್ಕಳನ್ನು ಜಗಮಗಿಸುವ ವೇದಿಕೆಯಲ್ಲಿ, ಹಿರಿಯರೊಂದಿಗೆ ಮಾತುಕತೆಗೆ ಇಳಿಸಲಾಗುತ್ತದೆ. ಒಂದು ರೀತಿಯಲ್ಲಿ, ಇದು ಪ್ರಾಣಿಯನ್ನು ಕಸಾಯಿಖಾನೆಗೆ ಒಯ್ದಂತೆ. ಕಸಾಯಿಖಾನೆಯು ಪ್ರಾಣಿಯ ಆಯ್ಕೆ ಅಲ್ಲ. ಅದು ಆ ಪ್ರಾಣಿಯ ಮಾಲಿಕ ಮತ್ತು ಖರೀದಿದಾರರ ಆಯ್ಕೆ. ಅದು ಅವರ ಆಣತಿಯಂತೆ ವರ್ತಿಸಬೇಕಾಗುತ್ತದೆಯೇ ಹೊರತು ತನ್ನತನವನ್ನಲ್ಲ. ಟಿ.ವಿ. ಚಾನೆಲ್‍ಗಳು, ಚಿತ್ರರಂಗ ಮತ್ತು ಮಕ್ಕಳ ಹೆತ್ತವರು ಇವತ್ತು ಮಾಡುತ್ತಿರುವುದು ಇದನ್ನೇ. ಮಕ್ಕಳನ್ನು ಅವರ ಹೆತ್ತವರಿಂದ ಖರೀದಿಸಿ ಶೋಗಳೆಂಬ ಕಸಾಯಿಖಾನೆಗೆ ಚಾನೆಲ್‍ಗಳು ಮತ್ತು ಚಿತ್ರರಂಗವು ಯೋಗ್ಯಗೊಳಿಸುತ್ತವೆ. ಮಕ್ಕಳು ‘ಕಸಾಯಿ’ಗೆ ಸಂಪೂರ್ಣ ಯೋಗ್ಯವೆಂದು ಮನವರಿಕೆಯಾದ ಬಳಿಕ ವೇದಿಕೆಯೆಂಬ ಕಸಾಯಿಖಾನೆಯಲ್ಲಿ ತಂದು ನಿಲ್ಲಿಸುತ್ತದೆ. ಪ್ರೇಕ್ಷಕರೆಂಬ ಖರೀದಿದಾರರು ಆ ಕಸಾಯಿಖಾನೆಯ ಸುತ್ತ ನೆರೆದಿರುತ್ತಾರೆಂಬುದು ಇವುಗಳಿಗೆ ಚೆನ್ನಾಗಿ ಗೊತ್ತು. ಹೀಗೆ ಹೆತ್ತವರನ್ನು ಮರುಳುಗೊಳಿಸಿ ಟಿ.ವಿ. ಚಾನೆಲ್‍ಗಳು ಮಕ್ಕಳನ್ನು ಬಲಿಪ್ರಾಣಿಯಂತೆ ಬಳಸಿ ಬಿಸಾಕುತ್ತಿವೆ. ಆ ಬಳಿಕ ಆ ಮಕ್ಕಳ ಭವಿಷ್ಯ ಏನಾಗಿದೆ, ಅವು ರಿಯಾಲಿಟಿ ಶೋಗಳ ಒತ್ತಡಗಳಿಂದ ಹೇಗೆ ಹೊರಬಂದಿವೆ, ಟಿ.ವಿ.ಗಳಲ್ಲಿ ಪ್ರದರ್ಶಿಸಿದ ಪ್ರತಿಭೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿವೆ.. ಎಂಬುದನ್ನೆಲ್ಲಾ ಶೋ ಮುಗಿದ ಬಳಿಕ ಯಾರೂ ಕೆದಕುವುದಿಲ್ಲವಾದ್ದರಿಂದ ಅದೊಂದು ಚರ್ಚಿಸಲೇ ಬೇಕಾದ ಇಶ್ಶೂವಾಗಿಯೂ ಗುರುತಿಸಿಕೊಳ್ಳುವುದಿಲ್ಲ. ಆದ್ದರಿಂದ,  
   ಸಚಿನ್ ತೆಂಡುಲ್ಕರ್‍ರ ವಿದಾಯವು ಈ ನಿಟ್ಟಿನಲ್ಲಿ ಚರ್ಚೆಯೊಂದಕ್ಕೆ ಕಾರಣವಾಗಬೇಕಾಗಿದೆ. ಕ್ರಿಕೆಟ್‍ನ ಉನ್ನತ ಮೆಟ್ಟಲನ್ನು ಹತ್ತಿದರೂ ಹೈಸ್ಕೂಲ್ ಮೆಟ್ಟಲನ್ನೂ ಹತ್ತದ ಅವರು, ಪುಟ್ಟ ಮಕ್ಕಳಿಗೆ ‘ಬಾಲ್ಯ'ವನ್ನು ಒದಗಿಸುವಂತೆ ಒತ್ತಾಯಿಸುವುದಕ್ಕೆ ಪ್ರೇರಕವಾಗಬೇಕಾಗಿದೆ. ಹೆತ್ತವರ ವಿಪರೀತ ಕನಸಿಗೆ ಮಕ್ಕಳ ಬಾಲ್ಯ ಕಮರಿ ಹೋಗದಂತೆ ಎಚ್ಚರಿಕೆಯ ಸಂದೇಶವನ್ನು ಸಚಿನ್ ಬದುಕು ರವಾನಿಸಬೇಕಾಗಿದೆ.

Monday, 11 November 2013

ಯಾವುದು ನಂಬಿಕೆ, ಯಾವುದೆಲ್ಲ ಮೂಢನಂಬಿಕೆ?

    ಯಾವುದು ನಂಬಿಕೆ, ಯಾವುದೆಲ್ಲ ಮೂಢನಂಬಿಕೆ ಎಂದು ವಿಭಜಿಸುವುದಕ್ಕೆ ನಮ್ಮಲ್ಲಿರುವ ಮಾನದಂಡಗಳು ಯಾವುವು? ವಿಚಾರವಾದಿಗಳಿಗೆ ಮೂಢನಂಬಿಕೆಯಂತೆ ಕಾಣುವ ಆಚರಣೆಯೊಂದು ಆಸ್ತಿಕರಿಗೆ ನಂಬಿಕೆಯಾಗಿ ಕಾಣಬಹುದು. ಆಸ್ತಿಕರಿಗೆ ನಿಂದನೆಯಂತೆ ಕಾಣುವ ವಿಷಯವೊಂದು ನಾಸ್ತಿಕರಿಗೆ ಬಂಡಾಯ ಪ್ರವೃತ್ತಿಯಂತೆ ಗೋಚರಿಸಬಹುದು. ನಂಬಿಕೆಗೂ ಮೂಢನಂಬಿಕೆಗೂ ನಡುವೆ ಸಮಾಜ ಎಳೆದಿರುವ ಗೆರೆ ಬಹಳ ತೆಳುವಾದದ್ದು. ಒಂದು ಧರ್ಮ ನಂಬಿಕೆಯಾಗಿ ಒಪ್ಪಿಕೊಂಡಿರುವುದನ್ನು ಇನ್ನೊಂದು ಧರ್ಮ ಹಾಗೆಯೇ ಒಪ್ಪಿಕೊಳ್ಳಬೇಕೆಂದಿಲ್ಲ. ಇಸ್ಲಾಮ್ ಏಕದೇವವಾದವನ್ನು ಪ್ರತಿ ಪಾದಿಸುತ್ತದೆ. ವಿಗ್ರಹ ಆರಾಧನೆಯು ಇಸ್ಲಾಮಿನ ಮಟ್ಟಿಗೆ ಅನ್ಯವಾದದ್ದು. ಒಂದು ರೀತಿಯಲ್ಲಿ ಮೂಢ ಆರಾಧನೆ. ಸುನ್ನತಿ ಕರ್ಮವನ್ನು ಮುಸ್ಲಿಮರು ಬಹಳ ಶ್ರದ್ಧೆಯಿಂದ ಪಾಲಿಸುತ್ತಾರೆ. ಮುಸ್ಲಿಮೇತರರ ಮಟ್ಟಿಗೆ ಅದು ಅತಿರೇಕ ಮತ್ತು ಮೂಢ ಆಚರಣೆಯಾಗಿ ಕಾಣಬಹುದು. ಇವು ಒಂದೆರಡು ಉದಾಹರಣೆಗಳಷ್ಟೇ. ಇಂಥವುಗಳ ಪಟ್ಟಿ ಸಾಕಷ್ಟು ಉದ್ದವಿದೆ. ಹೀಗಿರುವಾಗ, ಸಿದ್ಧರಾಮಯ್ಯರು ಜಾರಿಗೆ ತರಲು ಹೊರಟಿರುವ ಮೂಢನಂಬಿಕೆ ತಡೆ ಮಸೂದೆಯನ್ನು ಒಂದೇ ಏಟಿಗೆ ಸ್ವಾಗತಾರ್ಹವೆಂತಲೋ ಖಂಡನಾರ್ಹವೆಂತಲೋ ಷರಾ ಬರೆದು ಬಿಡುವುದು ತಪ್ಪಾಗಬಹುದು. ಮುಖ್ಯವಾಗಿ, ಮಸೂದೆಯ ಅಂಶಗಳು ಇನ್ನೂ ಸಾರ್ವಜನಿಕವಾಗಿ ಬಿಡುಗಡೆಗೊಂಡಿಲ್ಲ. ಅದರಲ್ಲಿ ಏನೇನಿವೆ, ಯಾವುದನ್ನೆಲ್ಲ ಮೂಢನಂಬಿಕೆಯಾಗಿ ಪಟ್ಟಿ ಮಾಡಲಾಗಿದೆ, ಹಿಂದೂ ಧರ್ಮವನ್ನು ಮಾತ್ರ ಕೇಂದ್ರೀಕರಿಸಿ ಕರಡು ಪ್ರತಿಯನ್ನು ರಚಿಸಲಾಗಿದೆಯೇ.. ಮುಂತಾದ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯಬೇಕಾದರೆ ಮಸೂದೆಯು ಸಾರ್ವಜನಿಕವಾಗಿ ಬಹಿರಂಗಗೊಳ್ಳಬೇಕು. ದುರಂತ ಏನೆಂದರೆ, ಕೆಲವು ನಿರ್ದಿಷ್ಟ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳು ಕರಡು ಪ್ರತಿಯ ವಿರುದ್ಧ ಸಮರವನ್ನೇ ಸಾರಿಬಿಟ್ಟಿವೆ. ಮಸೂದೆಯನ್ನು ‘ಹಿಂದೂ ವಿರೋಧಿ' ಎಂಬಲ್ಲಿ ವರೆಗೆ ಅವು ತಂದು ಮುಟ್ಟಿಸಿವೆ. ‘ಮೂಢನಂಬಿಕೆ ವಿರೋಧಿ ಮಸೂದೆ’ಯನ್ನು ನಂಬಿಕೆ ವಿರೋಧಿ ಮಸೂದೆಯೆಂಬಂತೆ ತಪ್ಪಾಗಿ ಬಿಂಬಿಸುವ ಪ್ರಯತ್ನದಲ್ಲಿ ಅವು ತಮ್ಮನ್ನು 24 ಗಂಟೆಯೂ ತೊಡಗಿಸಿಕೊಂಡಿವೆ. ಇಷ್ಟಕ್ಕೂ, ಮಸೂದೆಯ ರಚನಾ ಮಂಡಳಿಯಲ್ಲಿ ಇರುವವರನ್ನು ನೋಡಿಕೊಂಡು ಒಟ್ಟು ಸಮೂದೆಯ ಭವಿಷ್ಯವನ್ನೇ ನಿರ್ಧರಿಸುವುದಕ್ಕೆ ಏನೆನ್ನಬೇಕು? ಮಸೂದೆಯೊಂದು ಸ್ವೀಕಾರಾರ್ಹವೋ ಅಲ್ಲವೋ ಎಂಬುದನ್ನು ನಿರ್ಧರಿಸುವುದಕ್ಕೆ ಮಸೂದೆಯಲ್ಲಿ ಅಡಕವಾಗಿರುವ ಅಂಶಗಳು ಮಾನದಂಡವಾಗಬೇಕೇ ಹೊರತು ಅದನ್ನು ರಚಿಸಿದವರು ಅಲ್ಲವಲ್ಲ. ಸದ್ಯ ಈ ಮಸೂದೆಯನ್ನು ವಿರೋಧಿಸುತ್ತಿರುವ ನಿರ್ದಿಷ್ಟ ವರ್ಗವೊಂದರ ಭಾಷೆ, ವಾದ ಮಂಡನೆ, ಆಕ್ರೋಶದ ಧಾಟಿಯನ್ನು ನೋಡುವಾಗ ಅವರ ಉದ್ದೇಶ ಶುದ್ಧಿಯ ಬಗ್ಗೆಯೇ  ಅನುಮಾನ ಉಂಟಾಗುತ್ತದೆ.
   ಹಾಗಂತ, ಎಲ್ಲ ಧರ್ಮಗಳೂ ವಿರೋಧಿಸುವ ಅನೇಕ ಮೂಢನಂಬಿಕೆಗಳು ಸಮಾಜದಲ್ಲಿವೆ. ಅವು ಧರ್ಮದ ಮೂಲದಿಂದ ಹುಟ್ಟಿಕೊಂಡದ್ದಲ್ಲ. ಧರ್ಮಕ್ಕೂ ಅವುಗಳಿಗೂ ಸಂಬಂಧವೂ ಇರುವುದಿಲ್ಲ. ಆದರೆ, ಅವು ಸಮಾಜದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ, ಧರ್ಮವನ್ನೂ ಮೀರಿ ಅವು ವರ್ಚಸ್ಸು ಬೆಳೆಸಿಕೊಂಡಿವೆ. ಮಸೀದಿ, ದೇವಾಲಯ, ಚರ್ಚುಗಳಲ್ಲಿ ಸೇರುವುದಕ್ಕಿಂತ ಅಧಿಕ ಮಂದಿ ಇವತ್ತು ಇಂಥ ಮೂಢನಂಬಿಕೆಗಳ ಸುತ್ತ ನೆರೆಯುವುದಿದೆ. ಅಲ್ಲಿ ಶೋಷಣೆಯೂ ನಡೆಯುತ್ತದೆ. ಅತ್ಯಾಚಾರ, ವಂಚನೆಯೂ ನಡೆಯುತ್ತದೆ. ಒಂದು ಸರಕಾರ ತರುವ ಕಾನೂನು ಇಂಥ ಧರ್ಮ ವಿರೋಧಿ ನಂಬಿಕೆಗಳ ವಿರುದ್ಧವೇ ಆಗಿದ್ದರೆ ಅದನ್ನು ಸ್ವಾಗತಿಸಲೇಬೇಕು. ಆದರೆ ಅದಕ್ಕಿಂತಲೂ ಮೊದಲು, ಕಾನೂನಿಗಿಂತ ಹೊರತಾದ ಜಾಗೃತಿ ಕಾರ್ಯಕ್ರಮಗಳ ಮೂಲಕ ಇವನ್ನು ಅಳಿಸಬಹುದೇ ಎಂದು ಯೋಚಿಸುವುದೂ ಬಹಳ ಅಗತ್ಯ. ಯಾಕೆಂದರೆ, ನಂಬಿಕೆಗಳೆಂಬುದು ಕ್ರಿಮಿನಲ್ ಕೃತ್ಯಗಳಂತೆ ಅಲ್ಲ. ಕಳ್ಳತನ, ಅತ್ಯಾಚಾರ, ಕೊಲೆ ಮುಂತಾದುವುಗಳ ಜೊತೆ ವ್ಯವಹರಿಸು ವಂತೆ ಸಾಮಾಜಿಕ ನಂಬಿಕೆಗಳೊಂದಿಗೆ ವ್ಯವಹರಿಸುವುದು ತಪ್ಪು. ನಿರ್ದಿಷ್ಟ ನಂಬಿಕೆಯೊಂದು ಧರ್ಮ ವಿರೋಧಿಯೇ ಆಗಿದ್ದರೂ ಅದನ್ನು ಆಚರಿಸುವವರು ಆ ಬಗ್ಗೆ ಗಾಢ ಅಭಿಮಾನವನ್ನು ಹೊಂದಿರುತ್ತಾರೆ. ತಮ್ಮ ನಂಬಿಕೆಯಲ್ಲಿ ದೃಢ ವಿಶ್ವಾಸವನ್ನು ಇಟ್ಟಿರುತ್ತಾರೆ. ಅವರನ್ನು ತಿದ್ದುವುದಕ್ಕೆ ಲಾಠಿ, ಖಾಕಿಯನ್ನು ಬಳಸುವುದರಿಂದ ಸಂಘರ್ಷದ ವಾತಾವರಣವನ್ನು ಹುಟ್ಟು ಹಾಕಿದಂತಾಗುತ್ತದೆಯೇ ಹೊರತು, ಅವರನ್ನು ತಿದ್ದಿದಂತಲ್ಲ. ನಂಬಿಕೆಗೂ ಕ್ರಿಮಿನಲ್ ಕೃತ್ಯಕ್ಕೂ ನಡುವೆ ಇರುವ ಈ ವ್ಯತ್ಯಾಸ ವನ್ನು ವ್ಯವಸ್ಥೆ ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದಲೇ, ಕಾನೂನು ಜಾರಿಗಿಂತಲೂ ಮೊದಲು ವ್ಯವಸ್ಥಿತ ಮತ್ತು ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮವೊಂದನ್ನು ಸರಕಾರ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸುವುದು. ಯಾಕೆಂದರೆ,      ಸಮಾಜ ಈ ವಂಚಕರನ್ನು ಮುಗ್ಧವಾಗಿ ಅನುಸರಿಸುತ್ತಿದೆ. ಅವರು ಹೇಳಿದಷ್ಟು ದುಡ್ಡು, ಹರಕೆ.. ಇನ್ನಿತರ ವಸ್ತುಗಳನ್ನು ಉದಾರವಾಗಿ ನೀಡುತ್ತಿದೆ. ಹೀಗಿರುವಾಗ, ಸರಕಾರವೇ, ‘ಮೂಢನಂಬಿಕೆ ವಿರೋಧಿ' ಅಭಿಯಾನವನ್ನು ಆರಂಭಿಸಿದರೆ ಒಳಿತಲ್ಲವೇ? ಯಾವುದೆಲ್ಲ ಮೂಢನಂಬಿಕೆ, ಧರ್ಮಕ್ಕೂ ಅದಕ್ಕೂ ಸಂಬಂಧಗಳೇನು, ಬೂದಿ ಬಾಬಾಗಳಿಗೆ ಧಾರ್ಮಿಕವಾಗಿ ಏನು ಸ್ಥಾನಮಾನವಿದೆ, ಧರ್ಮಗಳ ನಿಜವಾದ ಸಾರವೇನು.. ಎಂಬಿತ್ಯಾದಿ ವಿಷಯಗಳ ಸುತ್ತ ಎಲ್ಲ ಧರ್ಮದ ಪ್ರತಿನಿಧಿಗಳನ್ನು ಸೇರಿಸಿ ಸಮಾಜ ಶುದ್ಧಿ ಕಾರ್ಯಕ್ರಮವನ್ನು ಹಮ್ಮಿ ಕೊಂಡರೆ ಮೂಢನಂಬಿಕೆಯ ಜೊತೆ ಗುರುತಿಸಿಕೊಂಡ ಮುಗ್ಧರಲ್ಲಿ ದೊಡ್ಡದೊಂದು ವರ್ಗ ಆ ಬಗ್ಗೆ ಜಿಗುಪ್ಸೆ ತಾಳುವ ಸಾಧ್ಯತೆ ಇದೆ. ಅನೇಕ ಕಡೆ ಭಕ್ತರೇ ವಂಚಕರ ವಿರುದ್ಧ ಬಂಡೇಳಲೂ ಬಹುದು. ಇಂಥ ಪ್ರಯತ್ನಗಳು ವ್ಯಾಪಕ ಮಟ್ಟದಲ್ಲಿ ನಡೆದ ಬಳಿಕ ಕಾನೂನು ಜಾರಿಯ ಬಗ್ಗೆ ಚರ್ಚೆ, ಸಂವಾದಗಳು ನಡೆದರೆ ಅವು ಹೆಚ್ಚು ಅರ್ಥಪೂರ್ಣವಾಗುವುದಕ್ಕೆ ಅವಕಾಶಗಳಿವೆ.
   ಏನೇ ಆಗಲಿ, ಸಾಕಷ್ಟು ಅರ್ಥವ್ಯಾಪ್ತಿಯಿರುವ ನಂಬಿಕೆ-ಮೂಢನಂಬಿಕೆ ಎಂಬ ವಿಷಯಗಳ ಸುತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹುಟ್ಟು ಹಾಕಿರುವ ಚರ್ಚೆಯನ್ನು ಒಂದೇ ಏಟಿಗೆ ಧರ್ಮವಿರೋಧಿ ಎಂಬ ಹಣೆಪಟ್ಟಿ ಹಚ್ಚಿ ತಿರಸ್ಕರಿಸಬೇಕಿಲ್ಲ. ಸಮಾಜದಲ್ಲಿರುವ ಮತ್ತು ಸಕಲ ಧರ್ಮಗಳೂ ವಿರೋಧಿಸುವ ಮೂಢನಂಬಿಕೆಗಳ ಪಟ್ಟಿ ಮಾಡುವುದಕ್ಕೆ ಮತ್ತು ಅವುಗಳಿಂದಾಗುವ ಹಾನಿಯನ್ನು ತಿಳಿದುಕೊಳ್ಳುವುದಕ್ಕೆ ಈ ಚರ್ಚೆ ಖಂಡಿತ ಉಪಯುಕ್ತವಾಗಬಹುದು. ಅಂಥದ್ದೊಂದು ಚರ್ಚೆಗೆ ಸಿದ್ಧರಾಮಯ್ಯರ ಕರಡು ಮಸೂದೆ ಪ್ರೇರಕವಾಗಲಿ ಎಂದು ಹಾರೈಸೋಣ.