Wednesday, 5 February 2014

ಪ್ರಧಾನಿ ಅಂಬಾನಿ, ಮುಖ್ಯಮಂತ್ರಿ ಮೂರ್ತಿ?

    ಮನ್‍ಮೋಹನ್ ಸಿಂಗ್, ಮೋದಿ, ಕೇಜ್ರಿವಾಲ್, ಮನೋಹರ್ ಪಾರಿಕ್ಕರ್.. ಎಂಬೆಲ್ಲ ಹೆಸರುಗಳನ್ನು ನಾರಾಯಣ ಮೂರ್ತಿ, ಅಝೀಮ್ ಪ್ರೇಮ್‍ಜಿ, ಮುಖೇಶ್ ಅಂಬಾನಿ, ಇಂದ್ರಾ ನೂಯಿ.. ಮುಂತಾದ ಹೆಸರುಗಳ ಜೊತೆ ಇಟ್ಟು ಈ ದೇಶದ ಮಂದಿ ಎಂದೂ ನೋಡುವುದಿಲ್ಲ. ಇದಕ್ಕೆ ಕಾರಣ- ಅಂಬಾನಿ, ಪ್ರೇಮ್‍ಜಿಗಳ ಮೇಲಿನ ದ್ವೇಷ ಅಲ್ಲ ಅಥವಾ ಮೋದಿ, ಕೇಜ್ರಿವಾಲ್, ಪಾರಿಕ್ಕರ್‍ಗಳು ಇವರಿಗಿಂತ ಹೆಚ್ಚು ಪ್ರತಿಭಾವಂತರು ಎಂದೂ ಅಲ್ಲ. ನಿಜವಾಗಿ, ರಾಜಕೀಯ ನಾಯಕರಿಗಿಂತ ಭಿನ್ನವಾದ ಒಂದು ಮುಖ ಟಾಟಾ, ಬಿರ್ಲಾದಂತಹ ಬೃಹತ್ ಕಂಪೆನಿಗಳ ಒಡೆಯರಿಗೆ ಇರುತ್ತದೆ. ಅವರು ಜನರಿಗೆ ನೇರವಾಗಿ ಉತ್ತರದಾಯಿಗಳಲ್ಲ. ಅವರನ್ನು ಜನರು ಚುನಾಯಿಸಿರುವುದಿಲ್ಲ. ರಿಲಯನ್ಸ್ ಕಂಪೆನಿಗೆ ಮುಖೇಶ್ ಅಂಬಾನಿ ರಾಜೀನಾಮೆ ನೀಡಬೇಕು ಎಂದೋ ವಿಪ್ರೊ  ಕಂಪೆನಿಯ ನಿರ್ಣಾಯಕ ಹುದ್ದೆಯಲ್ಲಿ ತಮ್ಮ ಮಗನನ್ನು ಕುಳ್ಳಿರಿಸಿ ಅಝೀಮ್ ಪ್ರೇಮ್‍ಜಿ ತಪ್ಪು ಮಾಡಿದ್ದಾರೆ ಎಂದೋ ಹೇಳಿಕೊಂಡು ಇಲ್ಲಿ ಯಾರೂ ಪ್ರತಿಭಟನೆ ನಡೆಸುವುದಿಲ್ಲ. ಎಲ್ಲ ಕಂಪೆನಿಗಳು ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆ ನಡೆಸಿ ತಮ್ಮ ಅಧ್ಯಕ್ಷರನ್ನು ನೇಮಿಸಿಕೊಳ್ಳಬೇಕು ಎಂದೂ ಒತ್ತಾಯಿಸುವುದಿಲ್ಲ. ಅಧ್ಯಕ್ಷರುಗಳ ಮೇಲೆ ಭ್ರಷ್ಟಾಚಾರವನ್ನು ಆರೋಪಿಸಿ ಅಣ್ಣಾ ಹಜಾರೆಯೋ ಹಿರೇಮಠರೋ ಧರಣಿ-ಪ್ರತಿಭಟನೆ ಹಮ್ಮಿಕೊಳ್ಳುವುದಿಲ್ಲ. ಯಾಕೆಂದರೆ, ಅವರು ಜನಪ್ರತಿನಿಧಿಗಳಲ್ಲ. ಮನಮೋಹನ್ ಸಿಂಗ್ ಅಥವಾ ಮೋದಿಯವರು ಹೇಗೆ ಜನರಿಗೆ ಉತ್ತರದಾಯಿಗಳೋ ಹಾಗೆ ಇವರಲ್ಲ. ಕೇಜ್ರಿವಾಲ್ ಒಂದು ಸುತ್ತೋಲೆ ಹೊರಡಿಸಿದರೆ ದೆಹಲಿಯ ಎಲ್ಲ ಅಧಿಕಾರಿಗಳೂ ಅದಕ್ಕೆ ಸ್ಪಂದಿಸುತ್ತಾರೆ. ವಿದ್ಯುತ್ ದರವನ್ನು ಇಳಿಸಿ ಆದೇಶ ಕೊಟ್ಟರೆ ಅಥವಾ ಉಚಿತ ನೀರಿನ ಆಜ್ಞೆ ಕೊಟ್ಟರೆ ಇಡೀ ರಾಜ್ಯ ಅದನ್ನು ಅನುಸರಿಸುತ್ತದೆ. ಮಾತ್ರವಲ್ಲ, ಅವರ ಈ ನಡೆಯನ್ನು ಪ್ರಶ್ನಿಸುವ, ಬೆಂಬಲಿಸುವ ಎರಡೂ ಅವಕಾಶಗಳನ್ನು ಜನರು ಬಳಸಿಕೊಳ್ಳುತ್ತಾರೆ. ಆದರೆ, ಅಂಬಾನಿಗೆ ಅಂಥದ್ದೊಂದು ಅವಕಾಶವೇ ಇರುವುದಿಲ್ಲ. ಅವರು ಸುತ್ತೋಲೆ ಹೊರಡಿಸಿದರೆ ಅದು ಕಂಪೆನಿಗೆ ಮಾತ್ರ ಸೀಮಿತವಾಗಿರುತ್ತದೆ. ಅವರ ಕಂಪೆನಿಯ ಲಾಭ-ನಷ್ಟಗಳು ಜನಸಾಮಾನ್ಯರ ಮೇಲೆ ಪ್ರಭಾವವನ್ನೂ ಬೀರುವುದಿಲ್ಲ. ಇಂಥ ಹತ್ತಾರು ವ್ಯತ್ಯಾಸಗಳು ಇರುವುದರಿಂದಲೇ ರಾಜಕಾರಣಿಗಳು ಜನರಿಗೆ ಹೆಚ್ಚು ಹತ್ತಿರವಾಗುತ್ತಾರೆ. ಕಂಪೆನಿಯೊಂದು ಓರ್ವ ವ್ಯಕ್ತಿಯ ಸೊತ್ತಾದರೆ ಸರಕಾರವು ಎಲ್ಲ ಜನರ ಸೊತ್ತು ಎಂಬ ನಂಬಿಕೆ ಪ್ರಜಾತಂತ್ರ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿದೆ. ಆದರೆ ದೆಹಲಿಯಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳು ಈ ನಂಬುಗೆಯು ಸುಳ್ಳು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ನಿರೂಪಿಸುತ್ತಿದೆ.
 ಅರವಿಂದ್ ಕೇಜ್ರಿವಾಲ್‍ರು ದೆಹಲಿಯ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಕೂಡಲೇ ವಿದ್ಯುತ್ ದರವನ್ನು ಅರ್ಧಕ್ಕೆ ಇಳಿಸಿದರು. ಮಾತ್ರವಲ್ಲ, ದೆಹಲಿಗೆ ವಿದ್ಯುತ್ ಪೂರೈಸುತ್ತಿರುವ ರಿಲಯನ್ಸ್ ವಿದ್ಯುತ್ ಕಂಪೆನಿಯ ಲೆಕ್ಕಪರಿಶೋಧನೆಗೆ ಆದೇಶ ನೀಡಿದರು. ಇದೀಗ ರಿಲಯನ್ಸ್ ಕಂಪೆನಿಯು ಸರಕಾರವನ್ನೇ ಬೆದರಿಸುವ ತಂತ್ರಕ್ಕಿಳಿದಿದೆ. ದೆಹಲಿಯನ್ನು ಪ್ರತಿದಿನ 10 ಗಂಟೆಗಳ ಕಾಲ ಕತ್ತಲಲ್ಲಿಡುವ ಬೆದರಿಕೆ ಹಾಕಿದೆ. ನಿಜವಾಗಿ, ಖಾಸಗಿ ಕಂಪೆನಿಗಳು ಹೇಗೆ ಸರಕಾರಗಳನ್ನು ಮುಷ್ಠಿಯಲ್ಲಿಟ್ಟುಕೊಳ್ಳುತ್ತವೆ ಅನ್ನುವುದಕ್ಕೆ ಉದಾಹರಣೆ ಇದು. ಒಂದು ಕಡೆ, ಖಾಸಗೀಕರಣದ ಕಡೆಗೆ ಸರಕಾರ ಇನ್ನಿಲ್ಲದ ಒಲವನ್ನು ವ್ಯಕ್ತಪಡಿಸುತ್ತಿದೆ. ನೀರು, ವಿದ್ಯುತ್, ವಿಮೆ.. ಮುಂತಾದ ಎಲ್ಲವನ್ನೂ ಖಾಸಗಿಯವರಿಗೆ ಬಿಟ್ಟು ಕೊಡಲು ಅಪಾರ ಉಮೇದು ತೋರಿಸುತ್ತಿದೆ. ಮಾತ್ರವಲ್ಲ, ಅದನ್ನು ಜನಪರ ನಿಲುವು ಎಂದೇ ಸಮರ್ಥಿಸುತ್ತಿದೆ. ಇಂಥ ಹೊತ್ತಲ್ಲೇ  ರಿಲಯನ್ಸ್ ತನ್ನ ಜನವಿರೋಧಿ ಮುಖವನ್ನು ಬಹಿರಂಗಪಡಿಸಿದೆ. ಅಂದ ಹಾಗೆ, ಖಾಸಗಿ ಕಂಪೆನಿಗಳು ಜನರ ಬವಣೆಗಳನ್ನು ಪರಿಗಣಿಸಬೇಕಿಲ್ಲ. ಯಾಕೆಂದರೆ, ಅದರ ಅಳಿವು-ಉಳಿವು ಜನರ ಓಟನ್ನು ಹೊಂದಿಕೊಂಡಿಲ್ಲವಲ್ಲ. ಈ ದೇಶದ ಪ್ರಮುಖ ಖಾತೆಗಳನ್ನು ಅದರಲ್ಲೂ ಹಣಕಾಸು, ಇಂಧನ, ಟೆಲಿಕಾಂ, ಕೃಷಿ, ಪರಿಸರ ಮುಂತಾದ ಖಾತೆಗಳನ್ನು ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸುವುದು ಪ್ರಧಾನಿ ಅಲ್ಲ, ಖಾಸಗಿ ಕಂಪೆನಿಗಳು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಜಯಂತಿ ನಟರಾಜನ್‍ರಿಂದ ಪರಿಸರ ಖಾತೆಯನ್ನು ಕಸಿದು ವೀರಪ್ಪ ಮೊಯಿಲಿಯವರಿಗೆ ನೀಡಲಾಯಿತು. ಪರಿಸರ ವಿರೋಧಿ ಎಂಬ ಕಾರಣಕ್ಕಾಗಿ ಜಯಂತಿ ನಟರಾಜನ್ ಅನುಮತಿ ನೀಡದೇ ಇದ್ದ ಐದಾರು ಬಹುಕೋಟಿ ಯೋಜನೆಗಳಿಗೆ ಮೊಯಿಲಿಯವರು ಕೇವಲ ಒಂದೇ ತಿಂಗಳೊಳಗೆ ಅನುಮತಿ ನೀಡಿಬಿಟ್ಟರು. ಟೆಲಿಕಾಂ ಖಾತೆಯನ್ನು ಯಾರಿಗೆ ನೀಡಬೇಕೆಂಬ ವಿಷಯದಲ್ಲಿ ಖಾಸಗಿ ಕಂಪೆನಿಗಳು ಎಷ್ಟು ಮುತುವರ್ಜಿ ವಹಿಸುತ್ತವೆ ಅನ್ನುವುದನ್ನು ನೀರಾ ರಾಡಿಯ ಹಗರಣ ಬೆಳಕಿಗೆ ತಂದಿದೆ. ಈ ದೇಶದಲ್ಲಿ ಪೆಟ್ರೋಲಿಯಂ ಕ್ಷೇತ್ರದಲ್ಲಿ ಕೋಟ್ಯಂತರ ರೂಪಾಯಿಗಳನ್ನು ಹೂಡಿರುವ ಮುಖೇಶ್ ಮತ್ತು ಅನಿಲ್ ಅಂಬಾನಿಗಳು ಆ ಖಾತೆಯ ಬಗ್ಗೆ ಇನ್ನಿಲ್ಲದ ಆಸಕ್ತಿ ಹೊಂದಿರುವುದು ಎಲ್ಲರಿಗೂ ಗೊತ್ತು. ರಿಲಯನ್ಸನ ಮಾತನ್ನು ಕೇಳದ ಸಚಿವರು ಹೆಚ್ಚು ಸಮಯ ಇಂಧನ ಖಾತೆಯಲ್ಲಿ ಉಳಿಯುವುದಿಲ್ಲ ಎಂಬುದಕ್ಕೆ ಮುರಳಿ ದೇವೋರಂಥ ಹಲವು ಉದಾಹರಣೆಗಳಿವೆ. ‘ಖಾಸಗಿ ಕಂಪೆನಿಗಳಿಂದ ತನಗೆ ಜೀವ ಬೆದರಿಕೆ ಇದೆ..’ ಎಂಬುದಾಗಿ ಕೆಲವು ಸಮಯಗಳ ಹಿಂದೆ ಇಂಧನ ಸಚಿವ ವೀರಪ್ಪ ಮೊಯಿಲಿಯವರೇ ಹೇಳಿದ್ದರು. ಈ ಹಿಂದೆ ಹಣಕಾಸು ಸಚಿವರಾಗಿದ್ದ ಪ್ರಣವ್ ಮುಖರ್ಜಿ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿ ಚಿದಂಬರಮ್‍ಗೆ ಹಣಕಾಸು ಖಾತೆಯನ್ನು ನೀಡಿರುವುದರ ಹಿಂದೆಯೂ ಪ್ರಮುಖ ಬಹುರಾಷ್ಟ್ರೀಯ ಮೊಬೈಲ್ ಕಂಪೆನಿಯೊಂದರ ಕೈವಾಡವಿದೆ ಎಂದು  ಹೇಳಲಾಗುತ್ತಿದೆ.
   ಪ್ರಜೆಗಳೇ ಆಡಳಿತ ನಡೆಸುವ ಒಂದು ಅದ್ಭುತ ವ್ಯವಸ್ಥೆಯೆಂದು ಪ್ರಜಾತಂತ್ರವನ್ನು ನಾವು ಕೊಂಡಾಡುತ್ತಿರುವಾಗಲೂ ಈ ವ್ಯವಸ್ಥೆಯನ್ನು ಖಾಸಗಿ ಕಂಪೆನಿಗಳು ಹೇಗೆ ಹೈಜಾಕ್ ಮಾಡಬಲ್ಲವು ಅನ್ನುವುದಕ್ಕೆ ದಿನೇ ದಿನೇ ಪುರಾವೆಗಳು ಸಿಗುತ್ತಲೇ ಇವೆ. ಇವತ್ತು ವಿದ್ಯುತ್‍ನ ಬಗ್ಗೆ, ಪೆಟ್ರೋಲ್-ಡೀಸೆಲ್, ಗ್ಯಾಸ್‍ನ ಬೆಲೆ ನಿಗದಿಪಡಿಸುವ ಕುರಿತಂತೆ ಒಂದು ಸರಕಾರ ಸ್ವತಂತ್ರವಾಗಿ ತೀರ್ಮಾನ ತೆಗೆದುಕೊಳ್ಳದಂಥ ಪರಿಸ್ಥಿತಿಯಿದೆ. ಇಷ್ಟು ಬೆಲೆ ನಿಗದಿಪಡಿಸಿ ಎಂದು ಖಾಸಗಿ ಕಂಪೆನಿಗಳು ಸರಕಾರಕ್ಕೆ ಆದೇಶಿಸುತ್ತಿವೆ. ಜನರು ಈ ಬಗ್ಗೆ ಕೆರಳದಂತೆ ಮಾಡಬೇಕಾದ ಉಪಾಯಗಳನ್ನೂ ಅವು ಹೇಳಿಕೊಡುತ್ತವೆ. ಮಾತ್ರವಲ್ಲ, ಪ್ರತಿವರ್ಷ ಪ್ರಮುಖ ರಾಜಕೀಯ ಪಕ್ಷಗಳಿಗೆ ಅವು ಕೋಟ್ಯಂತರ ರೂಪಾಯಿ ದೇಣಿಗೆಯನ್ನೂ ನೀಡುತ್ತಿವೆ. ಹೀಗಿರುವಾಗ ಅವು ತಮ್ಮ ದೇಣಿಗೆಗೆ ಸೂಕ್ತ ಪ್ರತಿಫಲವನ್ನು ಬಯಸದೇ ಇರುವುದಕ್ಕೆ ಸಾಧ್ಯವಿದೆಯೇ? ಹೀಗೆ ರಾಜಕೀಯ ಪಕ್ಷಗಳು ಮತ್ತು ಬೃಹತ್ ಕಂಪೆನಿಗಳು ಒಂದು ಬಗೆಯ ಒಳ ಒಪ್ಪಂದವನ್ನು ಮಾಡಿಕೊಂಡು ಮತದಾರರಿಗೆ ಮೋಸ ಮಾಡುತ್ತಿವೆ. ದೆಹಲಿಯಲ್ಲಿ ನಡೆದಿರುವುದೂ ಇದೇ. ಕೇಜ್ರಿವಾಲ್ ಇದನ್ನು ಪ್ರಶ್ನಿಸಿದ್ದಾರೆ. ತಕ್ಷಣ ರಿಲಯನ್ಸ್ ಕಂಪೆನಿಯು ಅವರನ್ನು ಕತ್ತಲಲ್ಲಿಡುವ ಬೆದರಿಕೆ ಹಾಕಿದೆ. ಈ ಮುಖಾಂತರ ಈ ದೇಶದಲ್ಲಿ ಆಡಳಿತ ನಡೆಸುತ್ತಿರುವುದು ಮುಖ್ಯಮಂತ್ರಿಯೋ ಪ್ರಧಾನಿಯೋ ಅಲ್ಲ, ಖಾಸಗಿ ಕಂಪೆನಿಗಳು ಎಂಬುದನ್ನು ಅದು ಪರೋಕ್ಷವಾಗಿ ಸಾರಿಬಿಟ್ಟಿದೆ. ಆದ್ದರಿಂದ ಈ ಪ್ರಕರಣವನ್ನು ನಾವೆಲ್ಲ ಗಂಭೀರವಾಗಿ ಪರಿಗಣಿಸಬೇಕು. ಖಾಸಗಿ ಕಂಪೆನಿಗಳಿಗೆ ಮಣಿಯುವುದಿಲ್ಲವೆಂಬ ಬಗ್ಗೆ ಮುಂದಿನ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳಿಂದ ಭರವಸೆಯನ್ನು ಪಡೆದುಕೊಳ್ಳಬೇಕು. ತಮ್ಮ ಬದ್ಧತೆ ಕಂಪೆನಿಗಲ್ಲ, ಜನರಿಗೆ ಎಂಬುದನ್ನು ಎಲ್ಲ ಪಕ್ಷಗಳೂ ಸಾರುವಂತೆ ಒತ್ತಡ ಹೇರಬೇಕು. ಇಲ್ಲದಿದ್ದರೆ ರಾಜಕೀಯ ಪಕ್ಷಗಳು ಮುಂದೊಂದು ದಿನ, ಚುನಾವಣೆಯಲ್ಲೇ ಸ್ಪರ್ಧಿಸದ ಅಂಬಾನಿಯನ್ನೋ ಟಾಟಾರನ್ನೋ ತಂದು ಪ್ರಧಾನಿ ಕುರ್ಚಿಯಲ್ಲಿ ಕೂರಿಸಿಯಾವು.

Wednesday, 29 January 2014

ಹುಲಿ, ಗೋವು, ಭಯೋತ್ಪಾದನೆ ಮತ್ತು ದಲಿತರು

 2000ದಲ್ಲಿ ನಡೆದ ದಲಿತ ಹತ್ಯಾಕಾಂಡದಲ್ಲಿ
ಕುಟುಂಬದ ನಾಲ್ವರನ್ನು ಕಳಕೊಂಡ
 ಗೋಪಿನಾಥನ್

  1. ಪಶ್ಚಿಮ ಬಂಗಾಲದ ಬೀರ್ಭಮ್ ಜಿಲ್ಲೆ, 2. ಕರ್ನಾಟಕದ ಕೋಲಾರ ಜಿಲ್ಲೆ , 3. ಸುಪ್ರೀಮ್ ಕೋರ್ಟು.. ಇವು ಮೂರೂ ಕಳೆದ ವಾರ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿ ಗಮನ ಸೆಳೆದುವು. ಮನುಷ್ಯರ ಪ್ರಾಣ, ಘನತೆಯ ಬಗ್ಗೆ ಸುಪ್ರೀಮ್ ಕೋರ್ಟು ಅತೀವ ಕಾಳಜಿಯನ್ನು ವ್ಯಕ್ತಪಡಿಸಿ, ಮರಣ ದಂಡನೆಯನ್ನು ಜೀವಾವಧಿಗೆ ಇಳಿಸಲು ತೀರ್ಮಾನಿಸಿದಾಗ ಮೇಲಿನೆರಡು ಜಿಲ್ಲೆಗಳು ಅದನ್ನು ಅಪಹಾಸ್ಯಗೊಳಿಸುವಂತೆ ವರ್ತಿಸಿದುವು. ಒಂದು ವೇಳೆ ಸಮಾನತೆ, ಮಾನವ ಘನತೆ, ದಲಿತ ಸಬಲೀಕರಣ.. ಮುಂತಾದುವುಗಳ ಬಗ್ಗೆ ಮಾಧ್ಯಮಗಳು ವ್ಯಕ್ತಪಡಿಸುತ್ತಿರುವ ಕಾಳಜಿ ಪ್ರಾಮಾಣಿಕವೇ ಆಗಿರುತ್ತಿದ್ದರೆ, ಮಿಕ್ಕೆಲ್ಲ ಸುದ್ದಿಗಳನ್ನು ತುಸು ಬದಿಗಿರಿಸಿ ಈ ಬಗ್ಗೆ ನಿರಂತರ ಸಾರ್ವಜನಿಕ ಜಾಗೃತಿಯನ್ನು ಮೂಡಿಸುವುದಕ್ಕೆ ಈ ಎರಡು ಪ್ರಕರಣಗಳು ಅರ್ಹವಾಗಿದ್ದುವು.
 ಬೀರ್ಭಮ್ ಜಿಲ್ಲೆಯ ಸುಬಲ್‍ಪುರ್ ಗ್ರಾಮದ ಬುಡಕಟ್ಟು ಜನಾಂಗದ ಯುವತಿಯೊಬ್ಬಳು ಅನ್ಯಜಾತಿಯ ಯುವಕನನ್ನು ಪ್ರೀತಿಸಿದಳು. ಈ ಪ್ರೀತಿಯನ್ನು ಗಂಭೀರ ಅಪರಾಧವೆಂದು ಪರಿಗಣಿಸಿದ ಖಾಪ್ ಪಂಚಾಯತ್, ಯುವಕನಿಗೆ ದಂಡ ವಿಧಿಸಿ ಬಿಟ್ಟು ಬಿಟ್ಟಿತಲ್ಲದೇ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಆದೇಶಿಸಿತು. ಒಂದು ರಾತ್ರಿಯಿಡೀ ಯುವತಿಯನ್ನು ಲೈಂಗಿಕವಾಗಿ ಹಿಂಸಿಸಲಾಯಿತು. ಕೋಲಾರ ಜಿಲ್ಲೆಯ ನಂಗಲಿ ಬಳಿಯ ಕಗ್ಗನ ಹಳ್ಳಿಯಲ್ಲಂತೂ ದಲಿತ ಕುಟುಂಬಗಳಿಗೆ ಮೇಲ್ವರ್ಗವು ಸಾಮೂಹಿಕ ಬಹಿಷ್ಕಾರವನ್ನು ಹೇರಿದೆ. ಹೊಟೇಲು, ಅಂಗಡಿಗಳು ಈ ಕುಟುಂಬಗಳೊಂದಿಗೆ ವ್ಯವಹರಿಸದಂತೆ ಧ್ವನಿವರ್ಧಕಗಳಲ್ಲಿ ಎಚ್ಚರಿಸಲಾಗಿದೆ. ಉಲ್ಲಂಘಿಸಿದವರಿಗೆ ನಿರ್ದಿಷ್ಟ ಪ್ರಮಾಣದ ದಂಡವನ್ನು ಘೋಷಿಸಲಾಗಿದೆ. ಊರ ಕೊಳವೆ ಬಾವಿಯಿಂದ ದಲಿತರು ನೀರು ಬಳಸದಂತೆ ತಡೆಯಲಾಗಿದೆ. ಸಂಕ್ರಾಂತಿ ಹಬ್ಬವನ್ನು ಮೇಲ್ವರ್ಗಕ್ಕಿಂತ ಮೊದಲೇ ಆಚರಿಸಿದುದು ಇದಕ್ಕೆ ಕಾರಣ ಎಂದು ದಲಿತರು ಹೇಳುತ್ತಿದ್ದಾರೆ..
 ಇಲ್ಲಿ ಗೋಹತ್ಯೆ ವಿರೋಧಿ ರಾಲಿಗಳನ್ನು ಏರ್ಪಡಿಸಿ ಆಗಾಗ ಜನರ ಗಮನ ಸೆಳೆಯುವ ಪ್ರಯತ್ನಗಳು ನಡೆಯುತ್ತಿರುತ್ತವೆ. ಭಿನ್ನ ಧರ್ಮದ ಯುವಕ-ಯುವತಿಯರು ಪರಸ್ಪರ ಮಾತಾಡುವುದನ್ನು ತಡೆಯಲು, ಅವರನ್ನು ಪತ್ತೆ ಹಚ್ಚಿ ಥಳಿಸಲು ಇಲ್ಲಿ ತಂಡಗಳೇ ರಚನೆಯಾಗಿವೆ. ‘ಹುಲಿಯನ್ನು ರಾಷ್ಟ್ರೀಯ ಪ್ರಾಣಿಯಾಗಿ ಮಾಡಿರುವುದೇ ಭಯೋತ್ಪಾದನೆ ಉಂಟಾಗಲು ಕಾರಣ..’ ಎಂದು ಪೇಜಾವರ ಶ್ರೀಗಳೇ ಹೇಳುತ್ತಿದ್ದಾರೆ. ‘ಸಾಧು ಪ್ರಾಣಿಯಾದ ಗೋವನ್ನು ಒಂದು ವೇಳೆ ರಾಷ್ಟ್ರ ಪ್ರಾಣಿಯಾಗಿ ಮಾಡಿರುತ್ತಿದ್ದರೆ ದೇಶ ಉಗ್ರವಾದದಿಂದ ಮುಕ್ತವಾಗಿರುತ್ತಿತ್ತು..’ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಇನ್ನೊಂದೆಡೆ ಉರುಳು ಸೇವೆ ನಡೆಯುತ್ತಿದೆ. ಪಂಕ್ತಿ ಬೇಧ ಜಾರಿಯಲ್ಲಿದೆ. ದಲಿತ ವರ್ಗವನ್ನು ಪ್ರತಿನಿಧಿಸುತ್ತಿರುವ ಅಂಬೇಡ್ಕರ್‍ರ ನೇತೃತ್ವದಲ್ಲಿ ರಚನೆಯಾದ ಸಂವಿಧಾನಕ್ಕೆ 67 ವರ್ಷಗಳು ತುಂಬಿದ ಈ ಹೊತ್ತಲ್ಲಿ ಕಾಣುತ್ತಿರುವ ವೈರುಧ್ಯಗಳಿವು. ಹುಟ್ಟಿನ ಆಧಾರದಲ್ಲಿ ಒಂದು ದೊಡ್ಡ ಸಮೂಹವನ್ನು ಭಯದ ಕೂಪಕ್ಕೆ ತಳ್ಳುವುದನ್ನು ಏನೆಂದು ಕರೆಯಬೇಕು? ಬಹಿಷ್ಕಾರದ ಭೀತಿಯಲ್ಲಿ ಬದುಕುವ ಒಂದು ಸಮೂಹದ ಪಾಲಿಗೆ ಯಾವುದು ಭಯೋತ್ಪಾದನೆಯಾಗಿರಬಹುದು? ಬಾಂಬು, ಬಂದೂಕುಗಳನ್ನು ಈ ವರೆಗೂ ನೋಡಿರದ ಈ ದೇಶದ ಅಸಂಖ್ಯ ಗ್ರಾಮಗಳ ಕೋಟ್ಯಂತರ ದಲಿತರು ಭಯೋತ್ಪಾದನೆಗೆ ಕೊಡುವ ವ್ಯಾಖ್ಯಾನ ಏನಿರಬಹುದು?
 ನಾವೆಲ್ಲ ಭಯೋತ್ಪಾದನೆಗೆ ಒಂದು ಸೀಮಿತ ಅರ್ಥವನ್ನು ಕೊಟ್ಟಿದ್ದೇವೆ. ಆ ಅರ್ಥದಂತೆ ಬಾಂಬು, ಬಂದೂಕುಗಳು ಮಾತ್ರ ಭಯೋತ್ಪಾದನೆಯ ಚೌಕಟ್ಟಿನೊಳಗೆ ಬರುತ್ತದೆ. ಮಾಧ್ಯಮಗಳ ಮುಖಪುಟದಲ್ಲಿ ಇಂಥ ಪ್ರಕರಣಗಳಿಗೆ ದಪ್ಪಕ್ಷರದ ಹೆಡ್‍ಲೈನ್‍ಗಳೂ ಸಿಗುತ್ತವೆ. ಅವು ತಪ್ಪು ಎಂದಲ್ಲ. ಮನುಷ್ಯರನ್ನು ಕೊಲ್ಲುವ, ಅವರನ್ನು ಭೀತಿಯಲ್ಲಿ ಕೆಡಹುವ ಯಾವ ಕೃತ್ಯಗಳೇ ಆಗಲಿ ಅದು ಖಂಡನಾರ್ಹ ಮತ್ತು ಅಂಥ ಪ್ರಕರಣಗಳು ಮಾಧ್ಯಮಗಳ ಮುಖಪುಟದಲ್ಲಿ ಪ್ರಮುಖ ಸುದ್ದಿಯಾಗಿ ಕಾಣಿಸಿಕೊಳ್ಳಬೇಕಾದದ್ದು ಅತ್ಯಂತ ಅಗತ್ಯ. ಆದರೆ, ಭಯೋತ್ಪಾದನೆಯ ವ್ಯಾಖ್ಯಾನವನ್ನು ನಾವು ಅಷ್ಟಕ್ಕೇ ಸೀಮಿತಗೊಳಿಸಿದರೆ ಸಾಕೇ? ಬಾಂಬು ಭಯೋತ್ಪಾದನೆಯ ವಿರುದ್ಧ ಜನರಲ್ಲಿ ಒಂದು ಬಗೆಯ ಪ್ರಜ್ಞೆಯನ್ನು ಬೆಳೆಸಲು ಸಾಧ್ಯವಾಗಿರುವಂತೆಯೇ ಹುಟ್ಟಿನ ಆಧಾರದಲ್ಲಿ ನಡೆಸಲಾಗುವ ಭಯೋತ್ಪಾದನೆಯ ಬಗ್ಗೆಯೂ ಸಮಾಜವನ್ನು ಜಾಗೃತಗೊಳಿಸುವ ಅಗತ್ಯವಿಲ್ಲವೇ? ನಮ್ಮಂತೆ ಕಣ್ಣು, ಕೈ, ಕಾಲು, ಕಿವಿ, ಮೂಗನ್ನು ಹೊಂದಿರುವ ಒಂದು ದೊಡ್ಡ ಸಮೂಹವನ್ನು ಬಹಿಷ್ಕಾರಕ್ಕೆ ಒಳಪಡಿಸುವುದನ್ನೇಕೆ ನಾವು ಬಾಂಬು ಭಯೋತ್ಪಾದನೆಯಷ್ಟೇ ಗಂಭೀರ ಪ್ರಕರಣವಾಗಿ ಪರಿಗಣಿಸುತ್ತಿಲ್ಲ? ಈ ಭಯೋತ್ಪಾದನೆಗೆ ಯಾವ ಪ್ರಾಣಿ ಕಾರಣ? ರಾಜ್ಯದಲ್ಲಿ ಮುಖ್ಯವಾಗಿ ನಮ್ಮ ಕರಾವಳಿ ಪ್ರದೇಶದಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗೆ ತಲುಪದಂತೆ ಬಲವಂತದಿಂದ ತಡೆಯುವ ಪ್ರಯತ್ನಗಳು ಆಗಾಗ ಸುದ್ದಿಯಾಗುತ್ತಲೇ ಇರುತ್ತವೆ. ಜಾನುವಾರುಗಳನ್ನು ಕೊಂಡೊಯ್ಯುವ ವಾಹನಗಳನ್ನು ಅಡ್ಡಗಟ್ಟಿ ಅದರಲ್ಲಿರುವವರನ್ನು ಥಳಿಸುವ ಪ್ರಕರಣಗಳು ನಡೆಯುತ್ತಿರುತ್ತವೆ. ಹೆಣ್ಣು-ಗಂಡು ಪರಸ್ಪರ ಮಾತಾಡುವುದನ್ನು ತಡೆಯುವುದಕ್ಕೆ ಇಲ್ಲಿ ತಂಡಗಳು ಕಾರ್ಯಾಚರಿಸುತ್ತಿವೆ. ಮಾತ್ರವಲ್ಲ, ತಮ್ಮೆಲ್ಲ ಕೃತ್ಯಗಳನ್ನು ಧರ್ಮರಕ್ಷಣೆ ಎಂದು ಅವು ಸಮರ್ಥಿಸಿಕೊಳ್ಳುತ್ತಲೂ ಇವೆ. ಹೋಮ್‍ಸ್ಟೇ, ಪಬ್ ದಾಳಿ, ಹಾಜಬ್ಬ ಬೆತ್ತಲೆ ಪ್ರಕರಣಗಳನ್ನೆಲ್ಲ ಧರ್ಮರಕ್ಷಣೆಯ ಹೆಸರಲ್ಲಿಯೇ ಇಲ್ಲಿ ಸಮರ್ಥಿಸಿಕೊಳ್ಳಲಾಗಿದೆ. ಅಷ್ಟಕ್ಕೂ, ಯುವತಿಯರು ಮತ್ತು ಜಾನುವಾರುಗಳ ಮೇಲೆ ತೋರುತ್ತಿರುವ ಈ ಮಟ್ಟದ ಪ್ರೀತಿಯ ಸಣ್ಣದೊಂದು ಅಂಶವನ್ನಾದರೂ ದಲಿತರ ಮೇಲೆ ತೋರುತ್ತಿದ್ದರೆ, ಈ ದೇಶದ ಪರಿಸ್ಥಿತಿ ಹೇಗಿರುತ್ತಿತ್ತು? ನಿಜವಾಗಿ, ಕೋಲಾರದ ನಂಗಲಿ ಗ್ರಾಮ ಕೇವಲ ಒಂದು ಉದಾಹರಣೆ ಅಷ್ಟೇ. ಇಂಥ ಪ್ರಕರಣಗಳು ಈ ದೇಶದಲ್ಲಿ ಆಗಾಗ ನಡೆಯುತ್ತಲೇ ಇವೆ. ಆದರೆ, ಧರ್ಮರಕ್ಷಣೆಯ ಹೆಸರಲ್ಲಿ ಜಾನುವಾರುಗಳನ್ನು ತಡೆಯುವ ಮತ್ತು ಯುವಕರನ್ನು ಥಳಿಸುವ ತಂಡಗಳು, ದಲಿತರನ್ನು ಬಹಿಷ್ಕರಿಸಿದವರನ್ನು ಥಳಿಸಿದ ಪ್ರಕರಣ ಈವರೆಗೂ ನಡೆದಿಲ್ಲ. ಯಾಕೆ ಹೀಗೆ? ಹೆಣ್ಣು-ಗಂಡು ಮಾತಾಡುವುದು ಒಂದು ಸಮೂಹವನ್ನೇ ಬಹಿಷ್ಕಾರಕ್ಕೆ ಒಳಪಡಿಸುವುದಕ್ಕಿಂತಲೂ ಭೀಕರ ಅಪರಾಧವೇ? ಅಥವಾ ದಲಿತರು ಧರ್ಮದ ಚೌಕಟ್ಟಿನೊಳಗೆ ಬರುವುದಿಲ್ಲವೇ? ಬಹಿಷ್ಕಾರದಂಥ ಭಯೋತ್ಪಾದನಾ ಕೃತ್ಯಗಳ ಕುರಿತಂತೆ ಥಳಿಸುವ ತಂಡಗಳು ತೋರುತ್ತಿರುವ ಮೌನ ಪ್ರತಿಕ್ರಿಯೆಯನ್ನು ನೋಡಿದರೆ, ಈ ಬಗ್ಗೆ ಸಾಕಷ್ಟು ಅನುಮಾನಗಳು ಮೂಡುತ್ತವೆ. ನಿಜವಾಗಿ, ಹೆಣ್ಣು-ಗಂಡು ಮಾತುಕತೆ, ಜಾನುವಾರು ಹತ್ಯೆ.. ಮುಂತಾದುವುಗಳಿಗಿಂತಲೂ ದಲಿತ ಬಹಿಷ್ಕಾರದಂಥ ಪ್ರಕರಣಗಳು ಅತೀ ಗಂಭೀರವಾದುದು. ಇಂಥ ಕೃತ್ಯಗಳು ಧರ್ಮದ  ನಿಜ ಸ್ವರೂಪವನ್ನೇ ಪ್ರಶ್ನಿಸುತ್ತವೆ. ಮನುಷ್ಯರು ಎಲ್ಲ ಪ್ರಾಣಿಗಳಿಗಿಂತಲೂ ಮಿಗಿಲು ಎಂದು ನಾವು ಒಪ್ಪುವುದಾದರೆ ಮೊಟ್ಟಮೊದಲು ಹುಟ್ಟಿನ ಆಧಾರದಲ್ಲಿ ಆಗುವ ಭಯೋತ್ಪಾದನೆಯ ಬಗ್ಗೆ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸಬೇಕಾಗುತ್ತದೆ. ಬಹಿಷ್ಕøತರ ಬೆಂಬಲಕ್ಕೆ ಧಾವಿಸಬೇಕಾಗುತ್ತದೆ. ಆ ಮೂಲಕ ಮನುಷ್ಯರೆಲ್ಲ ಸಮಾನ ಎಂದು ಸಾರಬೇಕಾಗುತ್ತದೆ. ಆದರೆ, ಜಾನುವಾರುಗಳ ಬಗ್ಗೆ ಮತ್ತು ಹೆಣ್ಣು-ಗಂಡು ಮಾತುಕತೆಯ ಬಗ್ಗೆ ಒಂದು ವರ್ಗದಿಂದ ವ್ಯಕ್ತವಾಗುತ್ತಿರುವ ಕಾಳಜಿಯು ದಲಿತರ ಬಗ್ಗೆ ಕಾಣಿಸುತ್ತಿಲ್ಲ. ನಿಜವಾಗಿ, ಧರ್ಮವನ್ನು ಪ್ರೀತಿಸುವುದೆಂದರೆ ಧರ್ಮದ ಹೆಸರಲ್ಲಿ ಅಸ್ತಿತ್ವದಲ್ಲಿರುವ ಅನಾಚಾರಗಳನ್ನು ವಿರೋಧಿಸುವುದು. ಅವುಗಳ ನಿರ್ಮೂಲನೆಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುವುದು. ಮಾತ್ರವಲ್ಲ, ನಿಷ್ಠಾವಂತ ಧರ್ಮಾನುಯಾಯಿಯಾಗಿ ಜೀವಿಸುವುದು. ಆದರೆ, ಇವತ್ತು ಇನ್ನೊಂದು ಧರ್ಮವನ್ನು ಮತ್ತು ಅದರ ಆಚರಣೆಗಳನ್ನು ಗೇಲಿ ಮಾಡುವುದೇ ಧರ್ಮಪ್ರೀತಿ ಆಗಿಬಿಟ್ಟಿದೆ. ದಲಿತ ಬಹಿಷ್ಕಾರದಂಥ ಮನುಷ್ಯ ವಿರೋಧಿ ಕೃತ್ಯಗಳನ್ನು ತಡೆಯುವ ಅಥವಾ ಅದನ್ನು ಪ್ರತಿಭಟಿಸುವ ಬಗ್ಗೆ ಇಲ್ಲದ ಉತ್ಸಾಹ ಹೆಣ್ಣು-ಗಂಡನ್ನು ಥಳಿಸುವಲ್ಲಿ, ಜಾನುವಾರುಗಳ ವಾಹನವನ್ನು ತಡೆದು ಹಲ್ಲೆಗೈಯುವಲ್ಲಿ ಕಾಣಿಸುತ್ತಿದೆ. ಪ್ರಾಣಿಗೆ ಇರುವ ಮಹತ್ವದ ಒಂದಂಶವನ್ನೂ ಮನುಷ್ಯರಿಗೆ ಕೊಡದೆಯೂ ಧರ್ಮಪ್ರೇಮಿಗಳಾಗಿ ಗುರುತಿಸಿಕೊಳ್ಳುವುದಕ್ಕೆ ಇವತ್ತು ಸಾಧ್ಯವಾಗುತ್ತಿದೆ. ಬಹುಶಃ ನಂಗಲಿ ಮತ್ತು ಸಬಲ್‍ಪುರದ ಘಟನೆಗಳು ಇಂಥ ಧರ್ಮಪ್ರೇಮವನ್ನು ಇವತ್ತು ಬಹಿರಂಗವಾಗಿಯೇ ಪ್ರಶ್ನಿಸುತ್ತಿದೆ. ದಲಿತರನ್ನು ಮನುಷ್ಯರಾಗಿ ಒಪ್ಪಲೂ ಸಿದ್ಧವಿಲ್ಲದ ಸಾಮಾಜಿಕ ಮನಸ್ಥಿತಿಗೆ ಎಲ್ಲರೆದುರೇ ಛೀಮಾರಿ ಹಾಕುತ್ತಿದೆ. ಹುಲಿಯನ್ನೂ ಗೋವನ್ನೂ ತುಲನೆ ಮಾಡಿ ಚರ್ಚಿಸುವುದಕ್ಕಿಂತ ಮೊದಲು ಮನುಷ್ಯರನ್ನು ಮನುಷ್ಯರಿಗೆ ತುಲನೆ ಮಾಡಿ ಚರ್ಚಿಸಿ ಎಂದು ಕರೆ ಕೊಡುತ್ತಿದೆ.

Wednesday, 22 January 2014

ಗಗನಕ್ಕೆ ಹಾರುವ ರಾಕೆಟ್ ಗಳೂ, ನಿದ್ದೆಗೆ ಜಾರುವ ಸುನಂದಾರೂ

ಈ ಸುದ್ದಿಗಳನ್ನು ಓದಿ
  1. ಕೇಂದ್ರ ಮಂತ್ರಿ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಅಸಹಜ ರೀತಿಯಲ್ಲಿ ಸಾವಿಗೀಡಾಗಿದ್ದಾರೆ. ಪಾಕಿಸ್ತಾನದ ಪತ್ರಕರ್ತೆಯೊಂದಿಗೆ ತರೂರ್ ಅವರಿಗಿರುವ ಗೆಳೆತನವನ್ನು ಪುಷ್ಕರ್ ಪ್ರಶ್ನಿಸಿರುವ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾದ ಮರುದಿನವೇ ಅವರ ಸಾವು ಸಂಭವಿಸಿದೆ.
  2. ಕುಡುಕರು ಮತ್ತು ವರದಕ್ಷಿಣೆ ಬಯಸುವವರ ವಿವಾಹ ನಡೆಸಿ ಕೊಡುವುದಿಲ್ಲವೆಂದು ಜಾರ್ಖಂಡ್, ಬಿಹಾರ ಮತ್ತು ಒಡಿಸ್ಸಾಗಳಲ್ಲಿ ಮುಸ್ಲಿಮರ ಚಟುವಟಿಕೆಗಳನ್ನು ನಿಯಂತ್ರಿಸುವ ಇಮಾರತೆ ಶರಿಯಾ ಎಂಬ ವಿದ್ವಾಂಸರ ಮಂಡಳಿಯು ಘೋಷಿಸಿದೆ.
  3. ದೆಹಲಿಯಲ್ಲಿ ಡೆನ್ಮಾರ್ಕ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ..
  ಕಳೆದ ಒಂದೇ ವಾರದಲ್ಲಿ ಪ್ರಕಟವಾದ ಈ ಮೂರು ಸುದ್ದಿಗಳನ್ನು ಬರೇ ವಾರ್ತೆಗಳಾಗಿಯಷ್ಟೇ ನಾವು ಪರಿಗಣಿಸಬೇಕಿಲ್ಲ. ಹಾಗೆ ಪರಿಗಣಿಸುವುದಕ್ಕೆ ನಮ್ಮ ಸುತ್ತಮುತ್ತಲಿನ ವಾತಾವರಣ ಅನುಮತಿಸುತ್ತಲೂ ಇಲ್ಲ. ಅಂದಹಾಗೆ, ಜನವರಿ 5ರಂದು ಶ್ರೀಹರಿ ಕೋಟಾದಿಂದ ಜಿಎಸ್‍ಎಲ್‍ವಿ-ಡಿ5 ರಾಕೆಟ್ ಯಶಸ್ವಿಯಾಗಿ ಗಗನಕ್ಕೆ ಹಾರಿದುದನ್ನು ಮಾಧ್ಯಮಗಳು ಪ್ರಮುಖ ಸುದ್ದಿಯಾಗಿಸಿ ಸಂಭ್ರಮಿಸಿದುವು. ಕ್ರಯೋಜನಿಕ್ ತಂತ್ರಜ್ಞಾನದಲ್ಲೂ ಭಾರತ ಸ್ವಾವಲಂಬಿಯಾಗಿರುವುದಕ್ಕೆ ದೇಶ ಹರ್ಷಪಟ್ಟಿತು. ವೈಜ್ಞಾನಿಕ ಕ್ಷೇತ್ರದಲ್ಲಿ ಈ ದೇಶ ವಿಶ್ವದ ಪ್ರಮುಖ 5 ರಾಷ್ಟ್ರಗಳಲ್ಲಿ ಒಂದಾಗಿರುವುದಕ್ಕಾಗಿ ವಿಜ್ಞಾನಿ ಸಮೂಹವನ್ನು ಕೊಂಡಾಡಲಾಯಿತು. ಇಷ್ಟಕ್ಕೂ ಕೇವಲ ರಾಕೆಟ್ ಉಡ್ಡಯನವೊಂದೇ ಅಲ್ಲ, ಇನ್ಫೋಸಿಸ್, ವಿಪ್ರೋಗಳಂಥ ಬೃಹತ್ ಕಂಪೆನಿಗಳು ವರ್ಷಂಪ್ರತಿ ಸಾಧಿಸುತ್ತಿರುವ ನಿವ್ವಳ ಲಾಭದ ಬಗ್ಗೆ ಮಾಧ್ಯಮಗಳಲ್ಲಿ ಕೊಂಡಾಟದ ಪದಗಳು ಪ್ರಕಟವಾಗುತ್ತಲೇ ಇವೆ. ಪೋಲಿಯೋ ಮುಕ್ತ ಭಾರತಕ್ಕಾಗಿ ಪ್ರಶಂಸೆಯ ಸುರಿಮಳೆಗಳು ಹರಿದು ಬರುತ್ತಿವೆ. ಭವಿಷ್ಯದಲ್ಲಿ ಭಾರತವು ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಮೂಡಿ ಬರಲಿದೆ ಎಂಬ ರೋಮಾಂಚನಕಾರಿ ಭವಿಷ್ಯಗಳನ್ನು ಹೇಳಲಾಗುತ್ತಿದೆ. ಇವಕ್ಕೆ ಪೂರಕವಾಗಿ ಚತುಷ್ಪಥ ರಸ್ತೆಗಳು, ಮಾಲ್‍ಗಳು, ಗಗನಚುಂಬಿ ಕಟ್ಟಡಗಳ ನಿರ್ಮಾಣವು ಬಿರುಸಿನಿಂದ ನಡೆಯುತ್ತಿವೆ. ಆದರೆ ಈ ಎಲ್ಲ ಸಮಭ್ರಮಗಳ ಇನ್ನೊಂದು ಮಗ್ಗುಲು ಅತ್ಯಂತ ದಾರುಣವಾದದ್ದು ಅನ್ನುವುದನ್ನು ಸುನಂದಾ, ಇಮಾರತೆ ಶರಿಯಾ ಅಥವಾ ಡೆನ್ಮಾರ್ಕ್‍ ನ  ಮಹಿಳೆ ಸಾರುತ್ತಿದ್ದಾರೆ. ಗುಂಡಿಗಳಿಲ್ಲದ ರಸ್ತೆಗಳು ನಿರ್ಮಾಣವಾಗುವುದಕ್ಕಿಂತಲೂ ವೇಗವಾಗಿ ದೇಹವಿಡೀ ಗಾಯಗಳೆಂಬ ಗುಂಡಿಗಳಿಂದ ಜರ್ಝರಿತರಾಗುವ ಹೆಣ್ಣು ಮಕ್ಕಳು ತಯಾರಾಗುತ್ತಿದ್ದಾರೆ. ಕ್ರಯೋಜನಿಕ್ ತಂತ್ರಜ್ಞಾನದ ಖುಷಿಯನ್ನು ಅನುಭವಿಸಲೂ ಸಾಧ್ಯವಾಗದಷ್ಟು ಅಗಾಧ ಪ್ರಮಾಣದಲ್ಲಿ ಕೌಟುಂಬಿಕ ವಾತಾವರಣಗಳು ಛಿದ್ರವಾಗುತ್ತಿವೆ. ಒಂದು ರಾಕೆಟ್ ಆಕಾಶಕ್ಕೆ ಹಾರುವಾಗ, ಅಸಂಖ್ಯ ಸುನಂದಾರು ಭೂಮಿಯೊಳಗೆ ಸೇರುತ್ತಿದ್ದಾರೆ. ಕ್ರಯೋಜನಿಕ್ ತಂತ್ರಜ್ಞಾನದಲ್ಲಿ ನಾವು ಸ್ವಾವಲಂಬನೆ ಹೊಂದಿದಂತೆಯೇ ವರದಕ್ಷಿಣೆ ಎಂಬ ಅತಿ ಹೀನ ಪದ್ಧತಿಯಲ್ಲೂ ಸ್ವಾವಲಂಬನೆ ಸಾಧಿಸಿದ್ದೇವೆ. ಪೋಲಿಯೋ ವೈಕಲ್ಯದಿಂದ ನಾವು ಮುಕ್ತ ಆಗಿರಬಹುದು. ಆದರೆ ಹೆಣ್ಣು ಮಕ್ಕಳನ್ನು ಮಾನಸಿಕವಾಗಿ ಎಂದೆಂದೂ ವೈಕಲ್ಯಕ್ಕೆ ದೂಡುವ 'ಅತ್ಯಾಚಾರ'ವೆಂಬ ವೈಕಲ್ಯವನ್ನು ನಾವು ಸಂಶೋಧಿಸಿ ಇಟ್ಟುಕೊಂಡಿದ್ದೇವೆ.
   ನಿಜವಾಗಿ, ಮೇಲೆ ಉಲ್ಲೇಖಿಸಲಾದ ಮೂರೂ ಪ್ರಕರಣಗಳಲ್ಲಿ ಒಂದು ಸಮಾನ ಬಿಂದುವಿದೆ. ಅದುವೇ ನೈತಿಕತೆ. ಕೌಟುಂಬಿಕ ಸಂಬಂಧಗಳು ಬಿರುಕು ಬಿಡುತ್ತಿರುವ, ಸಾಮಾಜಿಕ ನಿಯಮಗಳು ಸಡಿಲಗೊಳ್ಳುತ್ತಿರುವ ಮತ್ತು ಧಾರ್ಮಿಕ ಮೌಲ್ಯಗಳು ಪ್ರಾಶಸ್ತ್ಯ ಕಳೆದುಕೊಳ್ಳುತ್ತಿರುವ ಸೂಚನೆಗಳನ್ನು ಪ್ರತಿದಿನದ ಬೆಳವಣಿಗೆಗಳು ಮತ್ತೆ ಮತ್ತೆ ಸಾರಿ ಹೇಳುತ್ತಿವೆ. ಅಂದಹಾಗೆ, ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್, ಆಮ್ ಆದ್ಮಿ.. ಸಹಿತ ರಾಜಕೀಯ ಪಕ್ಷಗಳ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇರಬಹುದಾದರೂ ನೈತಿಕ ವಿಷಯದಲ್ಲಿ ಭಿನ್ನತೆಗಳಿರುವ ಸಾಧ್ಯತೆ ಇಲ್ಲ. ಕುಟುಂಬ, ಪತಿ-ಪತ್ನಿ, ಮಕ್ಕಳು ಮತ್ತು ಅಲ್ಲಿ ಪಾಲನೆಯಾಗಬೇಕಾದ ಮೌಲ್ಯಗಳ ವಿಷಯದಲ್ಲಿ ರಾಜಕಾರಣಿಗೂ ಸಾಮಾನ್ಯನಿಗೂ ನಡುವೆ ವ್ಯತ್ಯಾಸ ಇರುವುದಿಲ್ಲ. ಸಾಮಾನ್ಯನೊಬ್ಬ ತನ್ನ ಪತ್ನಿ ಮತ್ತು ಮಕ್ಕಳನ್ನು ಹೇಗೆ ಪ್ರೀತಿಸುತ್ತಾನೋ ಹಾಗೂ ಪತ್ನಿ ಮತ್ತು ಮಕ್ಕಳು ತನ್ನನ್ನು ಎಷ್ಟು ಪ್ರೀತಿಸಬೇಕೆಂದು ಆಸೆ ಪಡುತ್ತಾನೋ ಅಂಥದ್ದೇ ಆಸೆ ಮತ್ತು ನಿರೀಕ್ಷೆ ರಾಜಕಾರಣಿಯಲ್ಲೂ ಇರುತ್ತದೆ. ಕಾಲೇಜಿಗೆ ಹೋದ ತನ್ನ ಮಗಳ ಸುರಕ್ಷಿತತೆಯ ಬಗ್ಗೆ ಸಾಮಾನ್ಯ ಹೆತ್ತವರು ನಿತ್ಯ ಅನುಭವಿಸುವ ಒತ್ತಡದಷ್ಟು ಅಲ್ಲದಿದ್ದರೂ ಒಂದು ಹಂತದ ವರೆಗೆ ರಾಜಕಾರಣಿ ಹೆತ್ತವರೂ ಅನುಭವಿಸುತ್ತಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಈ ಹಿಂದೆ ಇಂಥದ್ದೇ ಆಂತಕವನ್ನು ವ್ಯಕ್ತಪಡಿಸಿದ್ದರು. ಆಧುನಿಕ ಸಂಸ್ಕøತಿಯ ಥಳಕು-ಬಳುಕಿನಲ್ಲಿ ಎಲ್ಲಿ ತನ್ನ ಮಕ್ಕಳು ಹೆಜ್ಜೆ ತಪ್ಪುತ್ತಾರೋ ಅನ್ನುವ ಭೀತಿ ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಾತ್ರ ಇರುವುದಲ್ಲ, ರಾಜಕಾರಣಿಗಳಂಥ ಶ್ರೀಮಂತ ಕುಟುಂಬಗಳಲ್ಲೂ ಇರುತ್ತದೆ. ಹಾಗಿದ್ದೂ, ನೈತಿಕತೆಯೇ ಈ ದೇಶದ ಅತಿದೊಡ್ಡ ಸಮಸ್ಯೆಯಾಗಿ ಇವತ್ತು ಗುರುತಿಸಿಕೊಳ್ಳುತ್ತಿರುವುದಕ್ಕೆ ಕಾರಣ ಏನು? ಧರ್ಮವನ್ನು ಅತೀ ಹೆಚ್ಚು ಅನುಸರಿಸುವವರುಳ್ಳ ದೇಶವೊಂದು ಧರ್ಮಬಾಹಿರ ಕೃತ್ಯಗಳಲ್ಲಿ ಹೆಚ್ಚೆಚ್ಚು ಸುದ್ದಿಯಾಗುತ್ತಿರುವುದು ಯಾವುದರ ಸೂಚನೆ? ವರದಕ್ಷಿಣೆ ಮತ್ತು ಮದ್ಯಪಾನವು ಮುಸ್ಲಿಮರ ಪಾಲಿಗೆ ಧಾರ್ಮಿಕವಾಗಿಯೇ ನಿಷಿದ್ಧ. ಪ್ರವಾದಿ ಮುಹಮ್ಮದ್ ಮತ್ತು ಪವಿತ್ರ ಕುರ್‍ಆನಿನ ಅನುಯಾಯಿ ಎಂದು ಗುರುತಿಸಿಕೊಳ್ಳುವ ಮತ್ತು ಮುಸ್ಲಿಮರ ಹೆಸರಿಟ್ಟ ವ್ಯಕ್ತಿ ಈ ನಿಯಮವನ್ನು ಪಾಲಿಸುವುದು ಕಡ್ಡಾಯ. ಮುಸ್ಲಿಮ್ ಕುಡುಕರು, ಮುಸ್ಲಿಮ್ ವರದಕ್ಷಿಣೆಕೋರರು ಎಂಬ ಪದಗಳೇ ಇಸ್ಲಾಮಿಗೆ ಅನ್ಯ. ಆದರೆ ಇವತ್ತು ಪರಿಸ್ಥಿತಿ ಎಷ್ಟು ಹದಗೆಟ್ಟಿದೆಯೆಂದರೆ, ಇವುಗಳ ವಿರುದ್ಧವೇ ಮುಸ್ಲಿಮ್ ವಿದ್ವಾಂಸರು ಫತ್ವಾ ಹೊರಡಿಸಬೇಕಾದ ಸ್ಥಿತಿ ಬಂದಿದೆ. ಅಷ್ಟಕ್ಕೂ, ಸುನಂದ ಅವರ ಅಸಹಜ ಸಾವು ಮುಂದಿನ ದಿನಗಳಲ್ಲಿ ಸಹಜ ಸಾವಾಗಿಯೋ ಆತ್ಮಹತ್ಯೆಯಾಗಿಯೋ ಗುರುತಿಸಿಕೊಳ್ಳಬಹುದು. ಈ ಸಾವಿನಲ್ಲಿ ತರೂರ್ ನಿರಪರಾಧಿ ಎಂದೂ ಘೋಷಿತವಾಗಬಹುದು. ಯಾಕೆಂದರೆ, ಸುನಂದ ಅನುಭವಿಸಿದ ಮಾನಸಿಕ ಒತ್ತಡವನ್ನು ದಾಖಲಿಸುವುದಕ್ಕೆ ನಮ್ಮಲ್ಲಿ ಯಾವುದೇ ತಂತ್ರಜ್ಞಾನಗಳು ಇಲ್ಲವಲ್ಲ. ಅಲ್ಲದೇ ಕೋರ್ಟು ದೈಹಿಕ ಗಾಯಗಳನ್ನು ಪರಿಗಣಿಸುತ್ತದೆಯೇ ಹೊರತು ಮಾನಸಿಕ ಗಾಯಗಳನ್ನು ಅಲ್ಲವಲ್ಲ. ಹಾಗಂತ, ಇದು ಓರ್ವ ಸುನಂದರ ಸಮಸ್ಯೆ ಮಾತ್ರವೇ ಅಲ್ಲ. ಈ ದೇಶದಲ್ಲಿ ಅಸಂಖ್ಯಾ ಕುಟುಂಬಗಳು ಅನುಭವಿಸುತ್ತಿರುವ ಸಮಸ್ಯೆಯ ಒಂದು ಮುಖವಷ್ಟೇ ಆಕೆ. ಪತಿಗೆ ಪತ್ನಿಯ ಮೇಲೆ ಮತ್ತು ಪತ್ನಿಗೆ ಪತಿಯ ಮೇಲೆ ಪರಸ್ಪರ ಪ್ರೀತಿಗಿಂತ ಅನುಮಾನಗಳೇ ಹೆಚ್ಚುತ್ತಿರುತ್ತಿರುವ ದಿನಗಳಿವು. ಮದುವೆ, ವಿಚ್ಛೇದನ, ವಿವಾಹೇತರ ಸಂಬಂಧ.. ಮುಂತಾದುವುಗಳೆಲ್ಲ 'ಸಹಜ' ಅನ್ನುವಷ್ಟರ ಮಟ್ಟಿಗೆ ಇವತ್ತು ಮಾಮೂಲು ಆಗತೊಡಗಿವೆ. ಇಂಥದ್ದೊಂದು ಸ್ಥಿತಿಯಲ್ಲಿ ನಾವು ಕೇವಲ ರಾಕೆಟ್ಟು, ಪೋಲಿಯೋ ಮುಕ್ತ ಭಾರತವನ್ನು ಕಲ್ಪಿಸಿಕೊಂಡು ಖುಷಿಪಟ್ಟರೆ ಏನು ಪ್ರಯೋಜನವಿದೆ? ಈ ಎಲ್ಲ ಖುಷಿಯನ್ನೂ ಮುಂದೊಂದು ದಿನ ವಿಷಾದವಾಗಿ ಪರಿವರ್ತಿಸಿಬಿಡಬಲ್ಲ ಸಮಸ್ಯೆಯ ಕುರಿತು ನಾವು ಎಷ್ಟಂಶ ಗಂಭೀರವಾಗಿದ್ದೇವೆ?
   ನೈತಿಕ ಮೌಲ್ಯಗಳು ಪಾತಾಳ ಕಂಡಿರುವ ದೇಶವೊಂದು ವೈಜ್ಞಾನಿಕವಾಗಿ ಎಷ್ಟೇ ಮುಂದುವರಿದಿದ್ದರೂ ಪ್ರಯೋಜನವಿಲ್ಲ. ಒಂದು ದೇಶದ ಭವಿಷ್ಯವು ಆ ದೇಶದ ಸಾಮಾಜಿಕ ಅಭಿರುಚಿಗಳನ್ನು ಹೊಂದಿಕೊಂಡಿದೆ. ನೈತಿಕತೆಗೆ ಯಾವ ಬೆಲೆಯನ್ನೂ ಕೊಡದ ಸಮಾಜವೊಂದು ನೆಮ್ಮದಿಯ ದೇಶ ನಿರ್ಮಾಣಕ್ಕೆ ಯಾವ ಕೊಡುಗೆಯನ್ನೂ ಕೊಡಲಾರದು. ನೆಮ್ಮದಿಗೂ ಪ್ರಗತಿಗೂ ನಡುವೆ ದೊಡ್ಡ ವ್ಯತ್ಯಾಸ ಇದೆ. ಒಂದು ಕುಟುಂಬ ಅಥವಾ ದೇಶ ಸಂಪದ್ಭರಿತವಾಗಿದೆಯೆಂದ ಮಾತ್ರಕ್ಕೆ ಆ ಕುಟುಂಬ ನೆಮ್ಮದಿಯಿಂದಿದೆ ಎಂದರ್ಥವೂ ಅಲ್ಲ. ನೆಮ್ಮದಿ ಬರೇ ಶ್ರೀಮಂತಿಕೆಯನ್ನು ಹೊಂದಿಕೊಂಡಿಲ್ಲ. ಅದು ಆ ಕುಟುಂಬ ಪಾಲಿಸುತ್ತಿರುವ ಮೌಲ್ಯಗಳನ್ನು ಹೊಂದಿಕೊಂಡಿದೆ. ಈ ದೇಶ ಸದ್ಯ ನೆಮ್ಮದಿಯಿಲ್ಲದ ಶ್ರೀಮಂತಿಕೆಯೆಡೆಗೆ ಧಾವಿಸುತ್ತಿದೆಯೇನೋ ಎಂದು ಅನುಮಾನಿಸುವುದಕ್ಕೆ ಪ್ರತಿನಿತ್ಯ ಉದಾಹರಣೆಗಳು ಸಿಗುತ್ತಲೇ ಇವೆ. ಸುನಂದಾ ಪುಷ್ಕರ್, ಡೆನ್ಮಾರ್ಕ್ ಮಹಿಳೆ ಮತ್ತು ಇಮಾರತೆ ಶರಿಯಾಗಳು ಇದನ್ನು ಮತ್ತೊಮ್ಮೆ ದೃಢಪಡಿಸಿವೆ.

Wednesday, 15 January 2014

ಮುಂಜಿ, ಬುರ್ಖಾ ಮತ್ತು ರಾಜಕೀಯ ಭ್ರಮೆ

    ಒಂದು ದೇಶದ ಪಾಲಿಗೆ ಚುನಾವಣೆಯೊಂದು ಅತಿ ಮಹತ್ವದ ಮತ್ತು ಬಹುನಿರೀಕ್ಷೆಯ ವಿಷಯವಾಗಬೇಕಾದದ್ದು ಯಾವ ಕಾರಣದಿಂದ? ನಾವು ಬಯಸಿದರೂ ಬಯಸದಿದ್ದರೂ 5 ವರ್ಷಕ್ಕೊಮ್ಮೆ ಚುನಾವಣೆ ಬಂದೇ ಬರುತ್ತದೆ. ಮತದಾನದ ದಿನದಂದು ಸರಕಾರಿ ರಜೆಯನ್ನು ಘೋಷಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಮತದಾನವಾಗುವಂತೆ ನೋಡಿಕೊಳ್ಳಲಾಗುತ್ತದೆ. ಮತದಾರರಿಗೆ ಸುಲಭವಾಗುವಂತೆ ಮತಗಟ್ಟೆಗಳನ್ನು ನಿರ್ಮಿಸಲಾಗುತ್ತದಲ್ಲದೇ ಮನೆ ಮನೆಗೆ ತೆರಳಿ 'ಮತದಾರ ಚೀಟಿ'ಯನ್ನೂ ವಿತರಿಸಲಾಗುತ್ತದೆ. ಹಾಗಂತ, ಓರ್ವ ಮತದಾರ ಮತದಾನವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಇವೆಲ್ಲ ಪ್ರಮುಖ ಕಾರಣಗಳಾಗಬೇಕೇ ಅಥವಾ ಆ ಚುನಾವಣೆಯಲ್ಲಿ ಚರ್ಚೆಗೀಡಾಗುವ ವಿಷಯಗಳು; ಅಭ್ಯರ್ಥಿ, ಪಕ್ಷ, ಪ್ರಣಾಳಿಕೆಗಳು ಮುಖ್ಯವಾಗಬೇಕೇ? ಇಂಥದ್ದೊಂದು ಅನುಮಾನ ಪ್ರತಿ ಚುನಾವಣೆಗಳ ಸಂದರ್ಭದಲ್ಲೂ ಮತದಾರರಿಗೆ ಎದುರಾಗುತ್ತಲೇ ಇರುತ್ತವೆ.
   ದೇರಳಕಟ್ಟೆ ಪ್ರಕರಣವು ದಕ್ಷಿಣ ಕನ್ನಡ ಜಿಲ್ಲೆಯ ಮತದಾರರ ಮುಂದೆ ಇಂಥದ್ದೊಂದು ಪ್ರಶ್ನೆಯನ್ನು ಹುಟ್ಟು ಹಾಕಿದೆ. ರೌಡಿಗಳ ಪಟ್ಟಿಯಲ್ಲಿರುವ ಕೆಲವು ಕ್ರಿಮಿನಲ್‍ಗಳು ಮಾಡಿರುವ ಖಂಡನೀಯ ಕೃತ್ಯವೊಂದನ್ನು ಎತ್ತಿಕೊಂಡು ಮುಸ್ಲಿಮರನ್ನು ನಿಂದಿಸುವ, ಅವರ ವಿರುದ್ಧ ಅವಹೇಳನಕಾರಿ ಭಾಷೆಯನ್ನು ಪ್ರಯೋಗಿಸುವ ಘಟನೆಗಳು ಇಲ್ಲಿ ನಡೆಯುತ್ತಿವೆ. ಮುಸ್ಲಿಮರ ಮುಂಜಿ ಕರ್ಮವನ್ನು, ಬುರ್ಖಾವನ್ನು ಬಹಿರಂಗ ವೇದಿಕೆಗಳಲ್ಲಿ ಹೀಯಾಳಿಸಲಾಗುತ್ತಿದೆ. ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ಈ ಎಲ್ಲ ಸಂದರ್ಭಗಳಲ್ಲಿ ಬಿಜೆಪಿಯ ನಾಯಕರು ಮತ್ತು ಜನಪ್ರತಿನಿಧಿಗಳು ಇಂಥ ಸಭೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಪ್ರತ್ಯಕ್ಷ  ಬೆಂಬಲವನ್ನೂ ಸಾರುತ್ತಿದ್ದಾರೆ. ನಿಜವಾಗಿ, ಚುನಾವಣೆಯಲ್ಲಿ ಗೆಲ್ಲಬೇಕಾದರೆ ಮುಸ್ಲಿಮರನ್ನು ನಿಂದಿಸಬೇಕು ಅನ್ನುವ ಭ್ರಮೆಯು ದಕ್ಷಿಣ ಕನ್ನಡದ ಬಿಜೆಪಿಯಲ್ಲಿ ಮತ್ತು ಅದರ ಬೆಂಬಲಿಗರಲ್ಲಿ ಮಾತ್ರ ಇರುವುದಲ್ಲ. ಅದೊಂದು ರಾಷ್ಟ್ರ ಮಟ್ಟದ ಭ್ರಮೆ. ಆ ಭ್ರಮೆ ಚುನಾವಣೆ ಹತ್ತಿರ ಬರುತ್ತಲೇ ಜಾಗೃತವಾಗುತ್ತದೆ. ಆಗ ಪ್ರತಿಯೊಂದು ಅಪರಾಧ ಕೃತ್ಯವನ್ನೂ ಹಿಂದೂ-ಮುಸ್ಲಿಮ್ ಎಂದು ವಿಭಜಿಸಲಾಗುತ್ತದೆ. 2002ರ ಗುಜರಾತ್ ಹತ್ಯಾಕಾಂಡದ ಬಳಿಕ ನಡೆದ ಚುನಾವಣೆಯ ಸಂದರ್ಭದಲ್ಲಿ ಮೆಹ್ಸಾನದಲ್ಲಿ ನಡೆದ ಸಭೆಯಲ್ಲಿ ಮೋದಿ ಭಾಷಣ ಆರಂಭಿಸಿದ್ದೇ, 'ಅಲೀಗಳು, ಮಲೀಗಳು, ಜಮಾಲಿಗಳು  ಮತ್ತು ಅವರ ಶಿಶು ಉತ್ಪಾದನಾ ಕಂಪೆನಿಗಳು..' (ದಿ ಹಿಂದೂ, 2013 ಡಿಸೆಂಬರ್ 31) ಎಂದೇ. ಉತ್ತರ ಪ್ರದೇಶದ ಮುಝಫ್ಫರ್ ನಗರದ ಗಲಭೆಯ ಆರೋಪಿಗಳಾಗಿರುವ ಬಿಜೆಪಿ ಶಾಸಕರಾದ ಸಂಗೀತ್ ಸೋಮ್, ಸುರೇಶ್ ರಾಣಾ, ಕನ್ವರ್ ಸೋಮ್ ಮತ್ತು ಇತರ 34 ಮಂದಿಯನ್ನು, ‘ಬಿಜೆಪಿ ರಾಜ್ಯ ಮಾನವ ಹಕ್ಕು ಘಟಕವು’ ಸನ್ಮಾನಿಸಿತ್ತು. ಸನ್ಮಾನದ ಎರಡು ದಿನಗಳ ಬಳಿಕ ಮೋದಿಯವರ ರಾಲಿಯಲ್ಲೂ ಈ ಶಾಸಕರನ್ನು ಬಹಿರಂಗವಾಗಿಯೇ ಸನ್ಮಾನಿಸಲಾಯಿತು. ಅಲ್ಲದೇ, ಮುಝಫ್ಫರ್ ನಗರದ ಗಲಭೆಯ ಬಗ್ಗೆ ಈ ವರೆಗೆ ಯಾವೊಂದು ಮಾತನ್ನೂ ಆಡಿಲ್ಲದ ಮೋದಿ, ಕೇಂದ್ರ ಸರಕಾರ ತರಲುದ್ದೇಶಿಸಿರುವ ಕೋಮುಗಲಭೆ ತಡೆ ವಿಧೇಯಕದ ವಿರುದ್ಧ ತೀವ್ರ ಪ್ರತಿಭಟನೆಯನ್ನು ಸಲ್ಲಿಸಿ ಕಳೆದ ತಿಂಗಳು ಪ್ರಧಾನಿಗೆ ಪತ್ರ (ದಿ ಹಿಂದೂ, 2013 ಡಿಸೆಂಬರ್ 27) ಬರೆದಿದ್ದರು. ಇವೆಲ್ಲ ಏನು? ಮುಸ್ಲಿಮರ ಕುರಿತಂತೆ ಅದು ಹೊಂದಿರುವ ದ್ವೇಷದ ಅಭಿಪ್ರಾಯಕ್ಕೆ ಸ್ಪಷ್ಟ ಪುರಾವೆಗಳಲ್ಲವೇ? ಒಂದು ದೇಶದ ಪ್ರಜೆಗಳ ಬಗ್ಗೆ ಈ ಮಟ್ಟದ ಅಭಿಪ್ರಾಯವಿರುವ ಪಕ್ಷವೊಂದು ದೇಶವನ್ನಾಳುವುದನ್ನು ಹೇಗೆ ಸಹಿಸಿಕೊಳ್ಳುವುದು?
   ನಿಜವಾಗಿ, ಧರ್ಮಕ್ಕೂ ಅಪರಾಧಕ್ಕೂ ಸಂಬಂಧವೇ ಇಲ್ಲ. ಆರೋಪಿಗಳ ಹೆಸರುಗಳು ಏನೇ ಆಗಿರಲಿ, ಅವರು ಬರೇ ಆರೋಪಿಗಳೇ ಹೊರತು ಯಾವ ಧರ್ಮದ ಪ್ರತಿನಿಧಿಗಳೂ ಅಲ್ಲ, ಆಗಬಾರದು ಕೂಡಾ. ಅಷ್ಟಕ್ಕೂ, ಮುಸ್ಲಿಮರನ್ನು ನಿಂದಿಸುವವರಿಗೆ, ಮುಸ್ಲಿಮ್ ದ್ವೇಷದ ಕಾರ್ಯಾಚರಣೆಗಳಲ್ಲಿ ಪಾಲುಗೊಂಡವರನ್ನು ಸನ್ಮಾನಿಸುವವರಿಗೆ ಇವೆಲ್ಲ ಗೊತ್ತಿಲ್ಲ ಎಂದಲ್ಲ, ಗೊತ್ತಿದೆ. ಹಾಗಿದ್ದೂ, ಅವರು ಮತ್ತೆ ಮತ್ತೆ ಯಾಕೆ ತಪ್ಪು ಮಾಡುತ್ತಿದ್ದಾರೆಂದರೆ, ಜನರ ಮುಂದಿಡುವುದಕ್ಕೆ ಅವರಲ್ಲಿ ಬೇರೆ ಯಾವುದೇ ಜನಪರ ಇಶ್ಶೂ ಇಲ್ಲ. ಅಲ್ಲದಿದ್ದರೆ, ದೇರಳಕಟ್ಟೆ ಪ್ರಕರಣವನ್ನು ಮುಂದಿಟ್ಟುಕೊಂಡು ಮುಸ್ಲಿಮರನ್ನು ಮತ್ತು ಅವರ ಆರಾಧನಾ ಕ್ರಮಗಳನ್ನು ನಿಂದಿಸುತ್ತಿರುವುದಾದರೂ ಯಾಕೆ? ಅಪರಾಧ ಕೃತ್ಯಗಳ ಹೊಣೆಯನ್ನು ಬಿಜೆಪಿ ಯಾಕೆ ಧರ್ಮದ ಮೇಲೆ ಹೊರಿಸುತ್ತಿದೆ? ಒಂದು ವೇಳೆ ಅಪರಾಧಗಳಿಗೆ ಧರ್ಮವೇ ಹೊಣೆ ಎಂದಾದರೆ, ಅದು ಮೊಟ್ಟಮೊದಲು ಹಿಂದೂ ಧರ್ಮವನ್ನೇ ದ್ವೇಷಿಸಬೇಕಾಗುತ್ತದೆ. ಯಾಕೆಂದರೆ, ಈ ದೇಶದಲ್ಲಿ ಪ್ರತಿನಿತ್ಯ ಹಿಂದೂ-ಮುಸ್ಲಿಮ್-ಜೈನ ಎಂಬ ಬೇಧವಿಲ್ಲದೇ ಎಲ್ಲ ಧರ್ಮಗಳ ಅನುಯಾಯಿಗಳೂ ಅಪರಾಧ ಕೃತ್ಯಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಆದರೆ ಇವರಲ್ಲಿ ಮುಸ್ಲಿಮರನ್ನು ಮಾತ್ರ ಹೆಕ್ಕಿಕೊಂಡು ಅವರ ಅಪರಾಧವನ್ನು ಮಾತ್ರ ಅತಿ ಗಂಭೀರವೆಂಬಂತೆ ಬಿಜೆಪಿ ಬಿಂಬಿಸುತ್ತಿರುವುದೇಕೆ? ಪ್ರೀತಿ, ಪ್ರೇಮ, ಪ್ರಣಯ, ಮೋಸ, ವಂಚನೆಗಳೆಲ್ಲ ಯಾವುದಾದರೊಂದು ಧರ್ಮದೊಂದಿಗೆ ಗುರುತಿಸಿಕೊಂಡವರಲ್ಲಿ ಮಾತ್ರ ಇರುವುದಲ್ಲವಲ್ಲ. ಈ ದೇಶಧ ಶೈಕ್ಷಣಿಕ ವ್ಯವಸ್ಥೆ, ಉದ್ಯೋಗ ರಂಗ, ಮಾರುಕಟ್ಟೆ, ಸಾಂಸ್ಕøತಿಕ ಕ್ಷೇತ್ರಗಳೆಲ್ಲ ಹಿಂದೂ-ಮುಸ್ಲಿಮ್ ಎಂದಾಗಲಿ ಹೆಣ್ಣು-ಗಂಡು ಎಂದಾಗಲಿ ವಿಭಜನೆಗೊಂಡಿಲ್ಲ. ಎಲ್ಲರೂ ಮುಕ್ತವಾಗಿ ಬೆರೆಯುವ ವಾತಾವರಣ ಇಲ್ಲಿದೆ. ಇಂಥ ಸಂದರ್ಭದಲ್ಲಿ ಹಿಂದೂ ಹುಡುಗಿ ಮುಸ್ಲಿಮ್ ಹುಡುಗನನ್ನು ಪ್ರೀತಿಸುವುದು ಅಥವಾ ಮುಸ್ಲಿಮ್ ಹುಡುಗಿ ಹಿಂದೂ ಹುಡುಗನ ಬಗ್ಗೆ ಆಕರ್ಷಿತಳಾಗುವುದು ಅದ್ಭುತವೇನೂ ಅಲ್ಲ. ಅದಕ್ಕೆ ಪಿತೂರಿ, ಷಡ್ಯಂತ್ರಗಳ ಅಗತ್ಯವೂ ಇಲ್ಲ. ಈ ದೇಶದ ಸಾಮಾಜಿಕ, ಶೈಕ್ಷಣಿಕ ವಾತಾವರಣವು ಹೆಣ್ಣು-ಗಂಡು ಪರಸ್ಪರ ಮಾತಾಡುವಷ್ಟು, ಬೆರೆಯುವಷ್ಟು ಮುಕ್ತವಾಗಿರುವಾಗ ವಯೋಸಹಜ ಆಕರ್ಷಣೆಗೆ ಧರ್ಮದ ಲೇಪ ಕೊಡಬೇಕಾದ ಅಗತ್ಯವೂ ಇಲ್ಲ. ಆದರೆ ಬಿಜೆಪಿ ಮತ್ತು ಅದರ ಬೆಂಬಲಿಗರು ಈ ಸಹಜ ಪ್ರಕ್ರಿಯೆಗಳಿಗೆ ಅಸಹಜ ರೂಪವನ್ನು ಕೊಡಲು ಪ್ರಯತ್ನಿಸುತ್ತಿದ್ದಾರೆ. ಈ ರಾಜ್ಯದಲ್ಲಿ ನಾಪತ್ತೆಯಾದ ಹೆಣ್ಣು ಮಕ್ಕಳ ಪಟ್ಟಿಯನ್ನು ಎತ್ತಿ ಹೇಳಿ, ಹೆತ್ತವರನ್ನು ಭೀತಿಗೆ ಒಳಪಡಿಸುತ್ತಿದ್ದಾರೆ. ಲವ್ ಜಿಹಾದ್.. ಮುಂತಾದ ಪದಗಳನ್ನು ಹರಿಯ ಬಿಡುತ್ತಿದ್ದಾರೆ. ನಿಜವಾಗಿ, ಹೆಣ್ಣು ಮಕ್ಕಳನ್ನು ಪ್ರೀತಿಯ ಬಲೆಗೆ ಒಡ್ಡಿ, ಅವರನ್ನು ಮತಾಂತರಗೊಳಿಸಿ, ಮುಸ್ಲಿಮರ ಸಂಖ್ಯೆಯನ್ನು ಹೆಚ್ಚುಗೊಳಿಸಲು ಆದೇಶವನ್ನು ಇಸ್ಲಾಮ್ ಎಂದೂ ನೀಡಿಲ್ಲ. ಧರ್ಮ ಅನ್ನುವುದು ಹೇಗಾದರೂ ಮಾಡಿ ಸಂಖ್ಯೆಯನ್ನು ಹೆಚ್ಚುಗೊಳಿಸುವ ಉದ್ದೇಶದಿಂದ ಅಸ್ತಿತ್ವದಲ್ಲಿ ಇರುವುದಲ್ಲ. ಮೋಸ, ವಂಚನೆಯಿಂದ ಯಾವ ಧರ್ಮವನ್ನೇ ಆಗಲಿ ಬಲಾಢ್ಯಗೊಳಿಸಲು ಸಾಧ್ಯವೇ? ಅಂಥದ್ದೊಂದು ಕಲ್ಪನೆಯನ್ನು ಇಸ್ಲಾಮ್ ಎಂದೂ ಪ್ರಸ್ತುತಪಡಿಸಿಯೇ ಇಲ್ಲ. ಆದರೆ, ಬಿಜೆಪಿ ಮತ್ತು ಬೆಂಬಲಿಗರು ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಮತ್ತೆ ಮತ್ತೆ ಸುಳ್ಳನ್ನು ಪ್ರಚಾರ ಮಾಡುತ್ತಲೇ ಇದ್ದಾರೆ. ಮುಸ್ಲಿಮರನ್ನು ನಿಂದಿಸುವುದಕ್ಕೆ ಅಪರಾಧ ಕೃತ್ಯಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುತ್ತಿದ್ದಾರೆ. ಜನರ ಮಧ್ಯೆ ಭಾವನಾತ್ಮಕ ಗಡಿಗಳನ್ನು ನಿರ್ಮಿಸುತ್ತಿದ್ದಾರೆ.
   ಏನೇ ಆಗಲಿ, ಈ ದೇಶದ ಚುನಾವಣೆಗಳು ಬ್ಲ್ಯಾಕ್‍ಮೇಲ್ ರಾಜಕೀಯಕ್ಕಿಂತ ಹೊರತಾದ ಕಾರಣಕ್ಕಾಗಿ ಚರ್ಚೆಯಲ್ಲಿರಬೇಕು. ಮುಸ್ಲಿಮರನ್ನು ನಿಂದಿಸುವುದರಿಂದ ಓಟು ಸಿಗುತ್ತದೆ ಎಂಬ ನಂಬುಗೆಯನ್ನು ಮತದಾರರು ಯಾವ ಕಾರಣಕ್ಕೂ ಬೆಂಬಲಿಸಬಾರದು. ಚುನಾವಣೆಗಳು ಜನಪರ ಇಶ್ಶೂಗಳ ಆಧಾರದಲ್ಲಿ ನಡೆಯಲಿ. ಉತ್ತಮ ಪ್ರಣಾಳಿಕೆ, ಉತ್ತಮ ಅಭ್ಯರ್ಥಿ
ಗಳು, ಮನುಷ್ಯ ಪ್ರೇಮಿ ವಿಚಾರಧಾರೆಗಳನ್ನು ಬೆಂಬಲಿಸುವ ರಾಜಕೀಯ ಮುತ್ಸದ್ದಿತನವು ಮತದಾರರಲ್ಲಿ ಬೆಳೆದು ಬರಲಿ. ಅಪರಾಧ ಕೃತ್ಯಗಳನ್ನು ಕೇವಲ ಅಪರಾಧ ಕೃತ್ಯಗಳಾಗಿಯೇ ನೋಡುವ ಮತ್ತು ಧರ್ಮವನ್ನು ಧರ್ಮವಾಗಿಯೇ ನೋಡುವ ವಾತಾವರಣ ದೇಶದೆಲ್ಲೆಡೆ ಕಾಣಿಸಿಕೊಳ್ಳಲಿ.

Wednesday, 1 January 2014

ಮೋದಿ ಎಂಬ ಗುಳ್ಳೆಯನ್ನು ಒಡೆದು ಹಾಕಿದ ಯಡಿಯೂರಪ್ಪ

    1. ಅರವಿಂದ್ ಕೇಜ್ರಿವಾಲ್
 2. ಯಡಿಯೂರಪ್ಪ
 ದೆಹಲಿ ಮತ್ತು ಬೆಂಗಳೂರಿನಲ್ಲಿ ಸದ್ಯ ಅತ್ಯಂತ ಹೆಚ್ಚು ಚರ್ಚೆಯಲ್ಲಿರುವ ಎರಡು ಹೆಸರುಗಳಿವು. ಈ ಹೆಸರುಗಳ ನಡುವೆ ಇರುವ ಸಮಾನ ಅಂಶ ಏನೆಂದರೆ, ವರ್ಷದ ಹಿಂದೆ ಇವರಿಬ್ಬರೂ ಹೊಸ ಪಕ್ಷವನ್ನು ಕಟ್ಟಿದರು. ಸಮಾನ ಅಂಶ ಬಹುತೇಕ ಇಲ್ಲಿಗೇ ಕೊನೆಗೊಳ್ಳುತ್ತದೆ. ಆದರೆ ವಿರುದ್ಧ ಅಂಶಗಳಂತೂ ಹತ್ತಾರು ಇವೆ. ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸುವುದೇ ಕೇಜ್ರಿವಾಲ್ ಪಕ್ಷದ ಮೂಲ ತಳಹದಿ. ಯಡಿಯೂರಪ್ಪರಾದರೋ ಭ್ರಷ್ಟಾಚಾರದ ಆರೋಪವನ್ನು ಹೊತ್ತುಕೊಂಡೇ ಪಕ್ಷ  ಕಟ್ಟಿದರು. ಜೈಲು ಸೇರಿದರು. ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ‘ಆಪರೇಶನ್ ಕಮಲ’ ನಡೆಸಿದರು. ದುಡ್ಡಿಗಾಗಿ ಬಳ್ಳಾರಿಯನ್ನೇ ಮಾರಿದರು. ಮಠ, ಮಂದಿರಗಳನ್ನು ಕೊಂಡುಕೊಂಡರು. ಇಲ್ಲೆಲ್ಲಾ ಕೇಜ್ರಿವಾಲ್ ಸಂಪೂರ್ಣ ತದ್ವಿರುದ್ಧ. ಅಧಿಕಾರಕ್ಕಾಗಿ ‘ಆಪರೇಶನ್’ ನಡೆಸಬೇಕಾದ ಸನ್ನಿವೇಶ ಸೃಷ್ಟಿಯಾಗಿದ್ದರೂ ಕೇಜ್ರಿವಾಲ್ ಅಂಥದ್ದೊಂದು ಪ್ರಯತ್ನವನ್ನೇ ಮಾಡಲಿಲ್ಲ. ಕಾಂಗ್ರೆಸ್ ಪಕ್ಷವು ಬೆಂಬಲ ನೀಡಲು ಮುಂದೆ ಬಂದಾಗಲೂ 18 ಷರತ್ತುಗಳನ್ನು ಒಡ್ಡಿದರು. ನಿಜವಾಗಿ ಷರತ್ತುಗಳನ್ನು ಒಡ್ಡಬೇಕಾಗಿದ್ದುದು ಕಾಂಗ್ರೆಸ್. ಯಾಕೆಂದರೆ, ಅದರ ಬೆಂಬಲವೇ ನಿರ್ಣಾಯಕ. ಸರಕಾರವನ್ನು ಬೀಳಿಸುವ ಅಥವಾ ಉಳಿಸುವ ಸಾಮರ್ಥ್ಯ  ಆ ಬೆಂಬಲಕ್ಕಿದೆ. ಆದರೆ, ಕೇಜ್ರಿವಾಲ್‍ರು ಈ ಸಾಂಪ್ರದಾಯಿಕ ರಾಜಕೀಯವನ್ನೇ ತಿರಸ್ಕರಿಸಿದರು. ಅಧಿಕಾರಕ್ಕಾಗಿ ಮೌಲ್ಯಗಳೊಂದಿಗೆ ರಾಜಿಯಾಗಲಾರೆ ಎಂದು ದಿಟ್ಟವಾಗಿ ಸಾರಿದರು. ದೆಹಲಿಯ ಮಂದಿ ಕೇಜ್ರಿವಾಲರಲ್ಲಿ ಇವತ್ತು ನಂಬಿಕೆ ಇಟ್ಟಿರುವುದಕ್ಕೆ ಅವರ ಇಂಥ ನಿಷ್ಠುರ ನಡೆಗಳೇ ಕಾರಣ. ಒಂದು ವೇಳೆ, ಯಡಿಯೂರಪ್ಪರ ಬಗ್ಗೆ ಈ ರಾಜ್ಯದ ಮಂದಿಗೆ ನಂಬಿಕೆ ಇದ್ದದ್ದೇ ಆಗಿದ್ದರೆ ಅವರ ಕೆಜೆಪಿಯನ್ನು ಅವರು ಪರ್ಯಾಯವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ಆಮ್ ಆದ್ಮಿ ಪರ್ಯಾಯವಾದಂತೆ ಕರ್ನಾಟಕದಲ್ಲೂ ಕೆಜೆಪಿ ಪರ್ಯಾಯವಾಗಬಹುದಿತ್ತು. ಅಲ್ಲದೇ, ಕೇಜ್ರಿವಾಲ್‍ಗೆ ಇಲ್ಲದ ಹಲವಾರು ಅನುಕೂಲಗಳೂ ಯಡಿಯೂರಪ್ಪರಿಗಿದ್ದುವು. ಅವರು ಮಾಜಿ ಮುಖ್ಯಮಂತ್ರಿ. ಅವರ ಜೊತೆಗೆ ಮಾಜಿ ಮಂತ್ರಿಗಳೂ ಇದ್ದರು. ಕಾರ್ಯಕರ್ತರ ಪಡೆಯೂ ಇತ್ತು. ಇಷ್ಟೆಲ್ಲ ಇದ್ದೂ ರಾಜ್ಯದ ಮಂದಿ ಅವರ ಮೇಲೆ ಭರವಸೆ ಇಡದೇ ಇದ್ದುದಕ್ಕೆ ಕಾರಣ ಏನು? ಭ್ರಷ್ಟಾಚಾರಿ ಎಂಬ ಹಣೆಪಟ್ಟಿಯ ಹೊರತಾದ ಬೇರೆ ಯಾವ ಕಾರಣಗಳನ್ನು ಇದಕ್ಕೆ ಕೊಡಬಹುದು? ಯಡಿಯೂರಪ್ಪ ಮತ್ತು ಅವರ ಬೆಂಬಲಿಗರು ಏನೇ ಸಮರ್ಥನೆ ಕೊಡಲಿ, ಈ ರಾಜ್ಯದ ಮಂದಿ ಯಡಿಯೂರಪ್ಪರಲ್ಲಿ ಓರ್ವ ಭ್ರಷ್ಟನನ್ನು ಕಂಡಿದ್ದಾರೆ. ಆ 'ಭ್ರಷ್ಟ'ನನ್ನು ಈ ರಾಜ್ಯದ ಮಂದಿ ಎಷ್ಟರ ಮಟ್ಟಿಗೆ ದ್ವೇಷಿಸಿದರೆಂದರೆ, ಅವರಿಗೆ ಎರಡಂಕಿಯ ಶಾಸಕರನ್ನೂ ಕೊಡಲಿಲ್ಲ. ಮಠ, ಮಂದಿರಗಳು ಬಹುತೇಕ ಯಡಿಯೂರಪ್ಪರ ಪರ ನಿಂತರೂ ಜನ ತಿರಸ್ಕರಿಸಿದರು. ಇಂಥ ಯಡಿಯೂರಪ್ಪರನ್ನು ಬಿಜೆಪಿ ಸೇರಿಸಿಕೊಳ್ಳುತ್ತಿದೆಯೆನ್ನುವುದು ಯಾವುದರ ಸೂಚನೆ? ಈ ಮೂಲಕ ಅದು ಈ ದೇಶದ ಮತದಾರರಿಗೆ ಯಾವ ಸಂದೇಶವನ್ನು ರವಾನಿಸಲು ಬಯಸುತ್ತಿದೆ? ಅಧಿಕಾರಕ್ಕಾಗಿ ಭ್ರಷ್ಟಾಚಾರದೊಂದಿಗೆ ರಾಜಿ ಮಾಡಿಕೊಳ್ಳಲೂ ಸಿದ್ಧ ಎಂಬ ಬಿಜೆಪಿಯ ಈ ನಿಲುವು ಮೋದಿಗೆ ಸಮ್ಮತವೇ? ‘ಮೋದಿಯನ್ನು ಪ್ರಧಾನಿ ಮಾಡುವುದಕ್ಕಾಗಿ ನಾನು ಬಿಜೆಪಿ ಸೇರುತ್ತಿದ್ದೇನೆ..’ ಅನ್ನುವ ಯಡಿಯೂರಪ್ಪ ಮತ್ತು ಕೇಂದ್ರ ಸರಕಾರದ ಭ್ರಷ್ಟಾಚಾರವನ್ನು ಖಂಡಿಸುತ್ತಾ ತಿರುಗುತ್ತಿರುವ ಮೋದಿ; ಯಾಕೆ ಈ ವೈರುಧ್ಯ? ತನ್ನ ಪಕ್ಷಕ್ಕೆ ಭ್ರಷ್ಟಾಚಾರಿಯನ್ನು ಆಹ್ವಾನಿಸುತ್ತಲೇ ಕೇಂದ್ರ ಸರಕಾರವನ್ನು ಖಂಡಿಸುವ ಮೋದಿಯವರು ಯಾರನ್ನು ವಂಚಿಸುತ್ತಿದ್ದಾರೆ?
 ಒಂದು ಪಕ್ಷದ ಪ್ರಮುಖ ಹುದ್ದೆಯಲ್ಲಿರುವ ವ್ಯಕ್ತಿ ಭ್ರಷ್ಟಾಚಾರಿಯಾಗುವುದಕ್ಕೂ ಭ್ರಷ್ಟಾಚಾರಿಯನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದಕ್ಕೂ ವ್ಯತ್ಯಾಸ ಇದೆ. ಲಕ್ಷಾಂತರ ಮಂದಿ ಕಾರ್ಯಕರ್ತರಿರುವ ಪಕ್ಷವೊಂದರಲ್ಲಿ ಎಲ್ಲರೂ ಪಕ್ಷದ ನೀತಿ, ಸಿದ್ಧಾಂತ, ಧೋರಣೆಗಳಿಗೆ ನೂರು ಶೇಕಡಾ ಬದ್ಧರಾಗಿ ಬದುಕುತ್ತಾರೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಪಕ್ಷದ ಧೋರಣೆಗಳಿಗೆ ವ್ಯತಿರಿಕ್ತವಾಗಿ ಓರ್ವ ಭ್ರಷ್ಟಾಚಾರಿಯಾಗಬಲ್ಲ. ಕೊಲೆಗಾರ, ಅತ್ಯಾಚಾರಿ.. ಏನೇನೋ ಆಗಬಲ್ಲ. ಆದರೆ ಪಕ್ಷಕ್ಕೆ ಇದು ಗೊತ್ತಾದ ಕೂಡಲೇ ಆತನನ್ನು ಪಕ್ಷದಿಂದ ಉಚ್ಛಾಟಿಸುವ ನಿಷ್ಠುರತೆಯನ್ನು ಪಕ್ಷ ಪ್ರದರ್ಶಿಸಬೇಕು. ಪಕ್ಷಕ್ಕೆ ಸಿದ್ಧಾಂತ ಮುಖ್ಯವೇ ಹೊರತು ವ್ಯಕ್ತಿಯಲ್ಲ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಸುವ  ವಿಧಾನ ಇದು. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಿಜೆಪಿಯು ಆ ಮೂಲಕ ಅವರ ಮೇಲಿನ ಭ್ರಷ್ಟಾಚಾರದ ಆರೋಪವನ್ನು ಒಂದು ಹಂತದವರೆಗೆ ಒಪ್ಪಿಕೊಂಡಿದೆ. ಯಡಿಯೂರಪ್ಪ ಕೆಜೆಪಿ ಕಟ್ಟಿದ ಬಳಿಕ ಬಿಜೆಪಿ ವರ್ತಿಸಿದ ರೀತಿಯನ್ನು ನೋಡಿದರೆ ಇದನ್ನು ಖಚಿತವಾಗಿ ಹೇಳಬಹುದು. ಮಾತ್ರವಲ್ಲ, ಆ ಆರೋಪದಿಂದ ಯಡಿಯೂರಪ್ಪ ಇನ್ನೂ ಮುಕ್ತರಾಗಿಲ್ಲ. ಹೀಗಿರುತ್ತಾ, ಅವರನ್ನು ಪಕ್ಷಕ್ಕೆ ಮತ್ತೆ ಸೇರ್ಪಡೆಗೊಳಿಸಿರುವುದಕ್ಕೆ ಬಿಜೆಪಿ ಯಾವ ಸಮರ್ಥನೆಯನ್ನು ಕೊಡಬಲ್ಲದು? ಬಿಜೆಪಿಗೆ ಅಂಥದ್ದೊಂದು ವ್ಯಕ್ತಿಯ ಅಗತ್ಯ ಏನಿತ್ತು? ಇವತ್ತು ಈ ದೇಶದಲ್ಲಿ ಭ್ರಷ್ಟಾಚಾರವನ್ನು ವಿರೋಧಿಸುವ ಕೋಟ್ಯಂತರ ಮಂದಿಯಿದ್ದಾರೆ. ವಿಶ್ವ ಪ್ರಸಿದ್ಧ ಆಪಲ್  ಕಂಪೆನಿಯಲ್ಲಿ ಒಂದು ಕೋಟಿ ರೂಪಾಯಿ ಸಂಬಳದ ಉದ್ಯೋಗವನ್ನು ಕೈ ಬಿಟ್ಟು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಮೊಮ್ಮಗ ಆದರ್ಶ್ ಶಾಸ್ತ್ರಿಯವರು ಅಮ್ ಆದ್ಮಿ ಪಕ್ಷವನ್ನು ಸೇರಲು ಮುಂದಾಗಿರುವುದಕ್ಕೆ ಭ್ರಷ್ಟಾಚಾರ ವಿರೋಧಿ ಆಕ್ರೋಶವೇ ಕಾರಣ. ಇಂಥ ಅಸಂಖ್ಯಾತ ಯುವಕ-ಯುವತಿಯರು ಇವತ್ತು ಹೊಸತೊಂದು ಭಾರತದ ಕನಸು ಕಾಣುತ್ತಿದ್ದಾರೆ. ಈ ಕನಸಿಗೆ ಮೋದಿ ಹೇಗೆ ನಾಯಕತ್ವ ನೀಡಬಲ್ಲರು? ಭ್ರಷ್ಟಾಚಾರಕ್ಕಾಗಿ 6 ಕೋಟಿ ಕನ್ನಡಿಗರೇ ತಿರಸ್ಕರಿಸಿದ ವ್ಯಕ್ತಿಯನ್ನು ಮೋದಿ ತನ್ನ ಗೆಲುವಿಗಾಗಿ ಆಶ್ರಯಿಸುತ್ತಾರೆಂದರೆ, ಅವರು ಕಟ್ಟುವ ಭಾರತವಾದರೂ ಯಾವುದು? ಆ ಭಾರತದಲ್ಲಿ ಭ್ರಷ್ಟಾಚಾರಕ್ಕೆ ಮತ್ತು ಭ್ರಷ್ಟಾಚಾರಿಗಳಿಗೆ ಯಾವ ಶಿಕ್ಷೆ ಇದ್ದೀತು?
 ಒಂದು ಪಕ್ಷ ಒಂದು ದೇಶವನ್ನು ಆಳುವುದಕ್ಕೆ ಅರ್ಹತೆ ಪಡೆಯಬೇಕಾದದ್ದು ಆ ಪಕ್ಷದಲ್ಲಿರುವ ದುಡ್ಡು, ನಾಯಕರುಗಳ ಸಂಖ್ಯೆ ಅಥವಾ ಆ ಪಕ್ಷಕ್ಕೆ ಆಗಿರುವ ವಯಸ್ಸಿನ ಆಧಾರದಲ್ಲಿ ಆಗಿರಬಾರದು. ಅದು ಆ ಪಕ್ಷದ ಧೋರಣೆಯನ್ನು ಹೊಂದಿಕೊಂಡಿರಬೇಕು. ಪಕ್ಷದ ನಾಯಕರು ತಪ್ಪನ್ನೆಸಗಿದಾಗ ಕೈಗೊಳ್ಳುವ ನಿಲುವುಗಳೇನು ಎಂಬುದನ್ನು ನೋಡಿಕೊಂಡಿರಬೇಕು. ವ್ಯಕ್ತಿ ಮತ್ತು ಸಿದ್ಧಾಂತದ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಅದು ಏನನ್ನು ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಆಧರಿಸಿರಬೇಕು. ಕಾಂಗ್ರೆಸ್ ಪಕ್ಷಕ್ಕೆ 125 ವರ್ಷಗಳಾಗಿವೆ ಎಂಬ ಏಕೈಕ ಕಾರಣಕ್ಕಾಗಿ ರಾಹುಲ್ ಗಾಂಧಿ ಪ್ರಧಾನಿಯಾಗುವುನ್ನು ಯಾರೂ ಒಪ್ಪುವುದಿಲ್ಲ, ಒಪ್ಪಬಾರದು. ನರೇಂದ್ರ ಮೋದಿಯವರು ಗುಜರಾತ್‍ನಲ್ಲಿ ಸತತ 3ನೇ ಬಾರಿ ಜನಾದೇಶ ಪಡೆದಿದ್ದಾರೆ ಎಂಬುದು ಕೂಡ ಅವರ ಪ್ರಧಾನಿ ಅಭ್ಯರ್ಥಿತನಕ್ಕೆ ಮಾನದಂಡ ಆಗುವುದಿಲ್ಲ, ಆಗಬಾರದು ಕೂಡ. ನಿರ್ಣಾಯಕ ಸಂದರ್ಭಗಳಲ್ಲಿ ಈ ಇಬ್ಬರ ಧೋರಣೆಗಳು ಏನೇನು ಎಂಬುದೇ ಇವರಿಬ್ಬರಲ್ಲಿ ಯಾರು ಉತ್ತಮ ಎಂದು ನಿರ್ಣಯಿಸುವುದಕ್ಕೆ ಸರಿಯಾದ ಮಾನದಂಡ. ರಾಹುಲ್ ಗಾಂಧಿ ಈ ನಿಟ್ಟಿನಲ್ಲಿ ನರೇಂದ್ರ ಮೋದಿಗಿಂತ ಮುಂದಿದ್ದಾರೆ. ಭ್ರಷ್ಟ ಸಂಸದರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬಾರದೆಂಬ ಸುಪ್ರೀಮ್ ಕೋರ್ಟಿನ ತೀರ್ಪಿನ ವಿರುದ್ಧ ಕೇಂದ್ರ ಸರಕಾರವು ಹೊರಡಿಸಿದ ಆಧ್ಯಾದೇಶವನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಎಲ್ಲರೆದುರೇ ಖಂಡಿಸಿದ್ದಾರೆ. ರಾಷ್ಟ್ರಪತಿಗಳ ಅಂಗೀಕಾರಕ್ಕಾಗಿ ಕಳುಹಿಸಲಾದ ಆ ಆಧ್ಯಾದೇಶವನ್ನು `ಕಸದ ಬುಟ್ಟಿಗೆ ಹಾಕಿ' ಎಂದು ನೇರವಾಗಿ ಹೇಳಿದ್ದಾರೆ. ಇದೀಗ, ಆದರ್ಶ್ ಸೊಸೈಟಿ ಹಗರಣದ ಕುರಿತಾದ ವರದಿಗೆ ಸಂಬಂಧಿಸಿಯೂ ಮಹಾರಾಷ್ಟ್ರದ ಕಾಂಗ್ರೆಸ್ ಸರಕಾರದ ನಿಲುವನ್ನು ಅವರು ಬಲವಾಗಿ ಖಂಡಿಸಿದ್ದಾರೆ. ಕಾಂಗ್ರೆಸ್ ಮುಖಂಡರು ಒಳಗೊಂಡಿರುವರೆನ್ನಲಾದ ಈ ಹಗರಣದ ವರದಿಯನ್ನು ತಿರಸ್ಕರಿಸುವ ಸರಕಾರದ ನಿರ್ಧಾರ ತಪ್ಪೆಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗಂತ, ಕಾಂಗ್ರೆಸ್ ಭ್ರಷ್ಟಮುಕ್ತವಾಗಿದೆ ಎಂದು ಇದರರ್ಥವಲ್ಲ. ಆದರೆ, ನಿರ್ಣಾಯಕ ಸಂದರ್ಭಗಳಲ್ಲಿ ಮುಲಾಜಿಲ್ಲದೇ ನಿಲುವು ವ್ಯಕ್ತಪಡಿಸುವ ಮತ್ತು ಭ್ರಷ್ಟಾಚಾರದೊಂದಿಗೆ ರಾಜಿಯಾಗದೇ ಇರುವ ಛಾತಿಯನ್ನು ರಾಹುಲ್ ಗಾಂಧಿ ತೋರಿಸಿದ್ದಾರೆ. ಇವರಿಗೆ ಹೋಲಿಸಿದರೆ ಮೋದಿ ತೀರಾ ಹಿಂದಿದ್ದಾರೆ. ಭ್ರಷ್ಟಾಚಾರ, ಜಾತ್ಯತೀತತೆ, ಗೋಧ್ರಾ ಹತ್ಯಾಕಾಂಡ.. ಸಹಿತ ಪ್ರತಿಯೊಂದರ ಬಗ್ಗೆಯೂ ಅವರಲ್ಲಿ ಆಳವಾದ ದ್ವಂದ್ವವಿದೆ. 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗೋಧ್ರಾ ಹತ್ಯಾಕಾಂಡದ ಬಗ್ಗೆ ಅವರು ತೋಡಿಕೊಂಡ ವ್ಯಾಕುಲತೆಯಲ್ಲೂ ಇದು ಎದ್ದು ಕಾಣುತ್ತದೆ. ನಿಜವಾಗಿ, ಇತರ ಪಕ್ಷಗಳನ್ನು ಮತ್ತು ಅದರ ತಪ್ಪುಗಳನ್ನು ಹೆಕ್ಕಿ ಹೆಕ್ಕಿ ಟೀಕೆಗೆ ಒಳಪಡಿಸುವುದು ಸುಲಭ. ಆದರೆ ತನ್ನದೇ ಪಕ್ಷದ ತಪ್ಪುಗಳನ್ನು ಪ್ರಶ್ನಿಸುವುದು ಕಷ್ಟ. ಮೋದಿ ಈ ವರೆಗೆ ಬಿಜೆಪಿಯ ಆಂತರಿಕ ಭ್ರಷ್ಟತನದ ಬಗ್ಗೆ ಒಂದೇ ಒಂದು ಮಾತನ್ನೂ ಆಡಿಲ್ಲ. ಸ್ವಿಸ್ ಬ್ಯಾಂಕ್, ಕಾಮನ್‍ವೆಲ್ತ್ ಅಥವಾ 2ಜಿ ಹಗರಣಗಳ ಬಗ್ಗೆ ಅವರು ಮಾತಾಡುವ ಧಾಟಿ, ಆವೇಶವನ್ನು ನೋಡಿದರೆ ಅವರು ಯಡಿಯೂರಪ್ಪರನ್ನು ಒಪ್ಪಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಆದರೆ ತನ್ನ ವಿರೋಧ ಏನಿದ್ದರೂ ಅದು ಕಾಂಗ್ರೆಸ್‍ನ ವಿರುದ್ಧ, ಭ್ರಷ್ಟಾಚಾರದ ವಿರುದ್ಧ ಅಲ್ಲ ಎಂಬುದನ್ನು ಯಡಿಯೂರಪ್ಪ ಪ್ರಕರಣದ ಮೂಲಕ ಅವರು ಸಾಬೀತುಪಡಿಸುತ್ತಿದ್ದಾರೆ.
   ಏನೇ ಆಗಲಿ, ಮೋದಿಯ ಸುತ್ತ ಬಿಜೆಪಿ ಮತ್ತು ಮಾಧ್ಯಮವು ಹರಡಿಬಿಟ್ಟಿರುವ ಭರವಸೆಯ ಗುಳ್ಳೆಯನ್ನು ಯಡಿಯೂರಪ್ಪ ಒಡೆದು ಹಾಕಿದ್ದಾರೆ. ನಿರ್ಣಾಯಕ ಸಂದರ್ಭಗಳಲ್ಲಿ ಮೋದಿ ಎಷ್ಟು ದುರ್ಬಲರು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಇಂಥ ನಾಯಕ ಈ ದೇಶವನ್ನು ಮುನ್ನಡೆಸಲು ಎಷ್ಟು ಸಮರ್ಥ ಎಂಬ ಬಹುಮುಖ್ಯ ಪ್ರಶ್ನೆಯನ್ನೂ ಅವರು ಜನರ ಮುಂದಿಟ್ಟಿದ್ದಾರೆ. ಈ ಕಾರಣಕ್ಕಾಗಿ ನಾವು ಯಡಿಯೂರಪ್ಪರನ್ನು ಅಭಿನಂದಿಸಬೇಕು.

Thursday, 19 December 2013

ಮಕ್ಕಳಿಲ್ಲದ, ಹೆತ್ತವರೂ ಆಗದ ಅವರು..

   ಕುಟುಂಬ ಎಂಬ ಪದಕ್ಕೆ ಡಿಕ್ಷನರಿಯಲ್ಲಿ, ‘ಮನೆಯೊಳಗಿರುವ ತಂದೆ-ತಾಯಿ, ಪತ್ನಿ-ಮಕ್ಕಳು ಮೊದಲಾದ ಎಲ್ಲ ಸಂಬಂಧಿಕರು..’ ಎಂಬ ಅರ್ಥ ಇದೆ. ಇಂಥ ಹಲವು ಕುಟುಂಬಗಳು ಒಟ್ಟು ಸೇರಿ ಸಮಾಜ ಅಸ್ತಿತ್ವಕ್ಕೆ ಬರುತ್ತದೆ. ಮದುವೆ, ಮುಂಜಿ, ಹೆರಿಗೆ, ಬಾಣಂತನಗಳು ಆ ಸಮಾಜದ ಭಾಗವಾಗುತ್ತದೆ. ಶಾಲೆ-ಕಾಲೇಜುಗಳು ಅಸ್ತಿತ್ವಕ್ಕೆ ಬರುತ್ತವೆ. ಗರ್ಭಿಣಿ ಪತ್ನಿಯನ್ನು ಪತಿ ನಿತ್ಯ ಕಣ್ತುಂಬಿಕೊಳ್ಳುತ್ತಾನೆ. ಆಕೆಯ ಹೊಟ್ಟೆಗೆ ತಲೆಯಿಟ್ಟು ಮಗುವಿನೊಂದಿಗೆ ಮಾತಾಡುತ್ತಾನೆ. ಮಗು ಹೆಣ್ಣೋ-ಗಂಡೋ ಎಂಬ ಚರ್ಚೆ-ತಮಾಷೆಗಳು ಅವರಿಬ್ಬರ ನಡುವೆ ನಡೆಯುತ್ತದೆ. ಆಕೆಯ ಸಂಕಟ, ಹೆರಿಗೆಯ ದಿನಾಂಕ, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳು, ಹೆರಿಗೆಗಾಗಿ ದಾಖಲಾಗಬೇಕಾದ ಆಸ್ಪತ್ರೆ.. ಎಲ್ಲವೂ ಮನೆಯಲ್ಲಿ ಚರ್ಚೆಗೊಳಗಾಗುತ್ತದೆ. ಅತ್ತೆ-ಮಾವ, ನಾದಿನಿ, ಮೈದುನ.. ಎಲ್ಲರ ಕುತೂಹಲ-ಕಾಳಜಿಯ ಕೇಂದ್ರವಾಗಿ ಗರ್ಭಿಣಿ ಮಾರ್ಪಡುತ್ತಾಳೆ. ಅತ್ತೆ ಮನೆಯಲ್ಲೂ, ತವರು ಮನೆಯಲ್ಲೂ ಆಕೆಯದೇ ಸುದ್ದಿ. ಇನ್ನು, ಪ್ರಸವವಾದರಂತೂ ಈ ಎರಡು ಕುಟುಂಬಗಳಲ್ಲಿ ಮಾತ್ರವಲ್ಲ, ಆ ಕುಟುಂಬಗಳೊಂದಿಗೆ ಸಂಬಂಧ ಹೊಂದಿರುವ ಎಲ್ಲ ಕುಟುಂಬಗಳೂ ಸಂತಸ ವ್ಯಕ್ತಪಡಿಸುತ್ತವೆ. ಶುಭಾಶಯ ಕೋರುವುದು, ಸಿಹಿ ಹಂಚುವುದು ನಡೆಯುತ್ತದೆ. ಬಳಿಕ ಮಗುವಿಗೆ ಹೆಸರಿಡುವ ಸಂಭ್ರಮ. ಮಗು ನಡೆದಂತೆ ಮನೆಯವರೂ ನಡೆಯುತ್ತಾರೆ. ಅದು ಮಾತಾಡಿದಂತೆ ಮನೆಯವರೂ ಮಾತಾಡುತ್ತಾರೆ. ಮನೆಯೊಳಗಿನ ಸಣ್ಣ ಪುಟ್ಟ ಮನಸ್ತಾಪಗಳನ್ನೆಲ್ಲ ಮಗು ತನ್ನ ಮುಗ್ಧತನದ ಮೂಲಕ ನಿವಾರಿಸಿ ಬಿಡುತ್ತದೆ. ಮಗು ಬೆಳೆದಂತೆ ಶಾಲೆಗೆ ಸೇರಿಸಲಾಗುತ್ತದೆ. ಮಗು ಶಾಲೆಯಲ್ಲಿ ಕಲಿತದ್ದನ್ನು, ಆಡಿದ್ದನ್ನು ಮನೆಯಲ್ಲಿ ಬಂದು ಹೇಳುವಾಗ, ಒಂದು ಬಗೆಯ ಕಲರವ ಮನೆಯಲ್ಲೂ ಕಾಣಿಸಿಕೊಳ್ಳುತ್ತದೆ. ಹೀಗೆ ಮಗು ಬೆಳೆಯುವುದು, ಉದ್ಯೋಗಿಯಾಗುವುದು, ಮದುವೆ ಮಾಡಿಕೊಳ್ಳುವುದು, ಮಕ್ಕಳಾಗುವುದು ಮತ್ತು ಅಜ್ಜ-ಅಜ್ಜಿಯಾಗಿ ಅಪ್ಪ-ಅಮ್ಮ ಪರಿವರ್ತಿತಗೊಳ್ಳುವುದು.. ಇಂಥ ಪ್ರಕ್ರಿಯೆಗಳು ಸಮಾಜದಲ್ಲಿ ನಿರಂತರ ನಡೆಯುತ್ತಿರುತ್ತದೆ. ಒಂದು ವೇಳೆ, ಇಂಥ ಪ್ರಕ್ರಿಯೆಗಳಿಗೆ ಅವಕಾಶ ಇಲ್ಲದೇ ಹೋದರೆ ಏನಾದೀತು? ಗಂಡು-ಗಂಡನ್ನೇ ವಿವಾಹವಾಗುವುದು ಅಥವಾ ಹೆಣ್ಣು-ಹೆಣ್ಣನ್ನೇ ವಿವಾಹವಾಗುವುದಾದರೆ ಈ ಸಮಾಜದ ಅಸ್ತಿತ್ವ ಎಲ್ಲಿಯ ವರೆಗೆ ಉಳಿದೀತು? ಗಂಡು-ಗಂಡಿನ ಅಥವಾ ಹೆಣ್ಣು-ಹೆಣ್ಣಿನ ಸಂಬಂಧದಿಂದ ಲೈಂಗಿಕ ಸುಖಗಳ ವಿನಿಮಯ ನಡೆಯಬಲ್ಲುದೇ ಹೊರತು ಮಾನವ ಜನಾಂಗದ ವಿಸ್ತರಣೆಯಲ್ಲವಲ್ಲ. ಅಲ್ಲಿ ಗರ್ಭಧಾರಣೆಯಿಲ್ಲ. ಪತಿ-ಪತ್ನಿ ಎಂಬ ಎರಡು ನೈಸರ್ಗಿಕ ಪ್ರಬೇಧಗಳಿಲ್ಲ. ಮಗುವಿನ ಜನನವಿಲ್ಲ. ಆದ್ದರಿಂದಲೇ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಎಂಬ ಅಪ್ಯಾಯಮಾನವಾದ ಗುರುತುಗಳಿಗೂ ಅವಕಾಶ ಇಲ್ಲ. ಇಬ್ಬರ ಸಂಬಂಧದೊಂದಿಗೆ ಪ್ರಾರಂಭವಾಗಿ ಅವರೊಂದಿಗೇ ಕೊನೆಗೊಳ್ಳುವ ಒಂದು ಜೀವನ ಕ್ರಮವು ಭವಿಷ್ಯದಲ್ಲಿ ಎಂಥ ವಾತಾವರಣವನ್ನು ಉಂಟು ಮಾಡೀತು? ಮಾನವ ಸಂತತಿಯ ವಿಸ್ತರಣೆ ಎಂಬುದು ಪ್ರಕೃತಿಯ ಸಹಜ ನಿಯಮ. ಮಾನವರಲ್ಲೂ ಪ್ರಾಣಿಗಳಲ್ಲೂ ಈ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುವುದರಿಂದಲೇ ನಾಡು ಮತ್ತು ಕಾಡಿನಲ್ಲಿ ಜೀವಂತಿಕೆ ತುಂಬಿಕೊಂಡಿದೆ. ಅಂದಹಾಗೆ, ಹುಲಿಯ ಸಂತತಿಯನ್ನು ಹೆಚ್ಚಿಸುವುದಕ್ಕಾಗಿ ನಮ್ಮ ವ್ಯವಸ್ಥೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂಬುದು ಆಗಾಗ ಸುದ್ದಿಗೊಳಗಾಗುತ್ತಿರುತ್ತವೆ. ಬೇರೆ ಬೇರೆ ತಳಿಯ ಹುಲಿ, ಸಿಂಹಗಳ ಸಂಖ್ಯೆಯನ್ನು ಎಣಿಸುವ ಮತ್ತು ಅದರ ವೃದ್ಧಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಒಂದು ವೇಳೆ, ಗಂಡು ಹುಲಿ ಹೆಣ್ಣಿನ ಬದಲು ಗಂಡನ್ನೇ ಆಯ್ಕೆ ಮಾಡಿಕೊಳ್ಳುವ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ. ಹುಲಿಗಳ ಸಂತತಿಯ ಗತಿ ಏನಾಗಬಹುದು? ಕೆಲವು ವರ್ಷಗಳಲ್ಲೇ ಹುಲಿ, ಸಿಂಹಗಳು ಇತಿಹಾಸದ ಪುಟ ಸೇರುವುದಕ್ಕೆ ಸಾಧ್ಯವಿದೆಯಲ್ಲವೇ? ಹೀಗಿರುವಾಗ, ಮಾನವ ಸಂತತಿಯನ್ನೇ ಬೆಳೆಸದ ಸಲಿಂಗ ರತಿಯನ್ನು ವೈಯಕ್ತಿಕ ಸ್ವಾತಂತ್ರ್ಯದ ನೆಪದಲ್ಲಿ ಬೆಂಬಲಿಸಿದರೆ ಭವಿಷ್ಯದ ಅನಾಹುತಕ್ಕೆ ಯಾರು ಹೊಣೆ ಹೊರಬೇಕು?
 ಗಂಡು-ಹೆಣ್ಣಿನ ನಡುವೆ ಪ್ರಕೃತಿ ಸಹಜವಾದ ಆಕರ್ಷಣೆಯಿದೆ. ಆ ಆಕರ್ಷಣೆಯು ಮಾನವ ಸಂತತಿಯ ವೃದ್ಧಿಗಷ್ಟೇ ಕಾರಣವಾಗುವುದಲ್ಲ, ಸಮಾಜದಲ್ಲಿ ಜವಾಬ್ದಾರಿಯ ಪ್ರಜ್ಞೆ, ಕರುಣೆ, ಅನುಕಂಪ, ಮಾನವೀಯತೆಯ ಪ್ರಜ್ಞೆಯನ್ನೂ ಅದು ಬೆಳೆಸುತ್ತದೆ. ದಾಂಪತ್ಯ ಎಂಬುದು ಬರೇ ದೈಹಿಕ ಸುಖಕ್ಕಷ್ಟೇ ಮೀಸಲಾದ ಸಂಬಂಧ ಅಲ್ಲ. ಅಲ್ಲಿ ಪರಸ್ಪರ ಜವಾಬ್ದಾರಿಯಿದೆ. ಕೊಡು-ಕೊಳ್ಳುವಿಕೆಯಿದೆ. ಪ್ರೀತಿ-ಅನುಕಂಪಗಳ ಒರತೆಯಿದೆ. ಪತಿ-ಪತ್ನಿಯರಾಗಿ, ಹೆತ್ತವರಾಗಿ, ಅಜ್ಜ-ಅಜ್ಜಿಯರಾಗಿ ದಂಪತಿಗಳು ಮಾರ್ಪಡುವ ಒಂದು ಅದ್ಭುತ ಪರಿಕಲ್ಪನೆಯನ್ನು ಸಲಿಂಗರತಿಯ ಜೋಡಿಗಳಿಂದ ನಿರೀಕ್ಷಿಸಲು ಸಾಧ್ಯವೇ? ಅಲ್ಲಿ ಹೊಣೆಗಾರಿಕೆಗಳು ಕಡಿಮೆ. ಲೈಂಗಿಕ ಸುಖಕ್ಕಿಂತ ಹೊರತಾದ ಇನ್ನಾವ ಉದ್ದೇಶಗಳೂ ಆ ಜೋಡಿಗಳ ನಡುವೆ ಇರುವ ಸಾಧ್ಯತೆ ಇಲ್ಲ. ಮಕ್ಕಳ ಜನನಕ್ಕೆ ಅವಕಾಶವೇ ಇಲ್ಲದಿರುವುದರಿಂದ ಸಾಮಾಜಿಕ ಜವಾಬ್ದಾರಿಗಳೂ ಇರುವುದಿಲ್ಲ. ಶಾಲೆಗಳ ಅಗತ್ಯವೂ ಇಲ್ಲ. ಒಂದು ಬಗೆಯ ಒಣ ವಾತಾವರಣವನ್ನು ಸೃಷ್ಟಿ ಮಾಡುವ ಈ ಮಾದರಿಯ ಜೀವನ ವಿಧಾನವನ್ನು ನಾವು ಬೆಂಬಲಿಸತೊಡಗಿದರೆ ಅದರಿಂದ ಸಮಾಜಕ್ಕಾಗುವ ಲಾಭವಾದರೂ ಏನು?
   ನಿಜವಾಗಿ, ಹೆಣ್ಣು-ಹೆಣ್ಣಿನಿಂದ ಮತ್ತು ಗಂಡು-ಗಂಡಿನಿಂದ ಆಕರ್ಷಣೆಗೆ ಒಳಗಾಗುವುದು ಮತ್ತ ದೈಹಿಕ ಸಂಬಂಧವನ್ನು ಬೆಳೆಸುವುದೆಲ್ಲ ಈ 21ನೇ ಶತಮಾನದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡ ಹೊಸ ಬೆಳವಣಿಗೆಯೇನಲ್ಲ. ಅನಾದಿ ಕಾಲದಿಂದಲೂ ಇಂಥ ಪ್ರಕ್ರಿಯೆಗಳೂ ನಡೆಯುತ್ತಲೇ ಬಂದಿದೆ. ಮಾತ್ರವಲ್ಲ, ಧರ್ಮ ಅದನ್ನು ಅಪರಾಧವೆಂದೇ ಪರಿಗಣಿಸಿದೆ (ಪವಿತ್ರ ಕುರಾನ್  29:28-29) ಇಷ್ಟಕ್ಕೂ, ಯಾವುದೇ ಒಂದು ಕ್ರಿಯೆಗೂ ಬಲವಾದ ಅಡಿಪಾಯ ಇರಲೇಬೇಕು. ನಿದ್ದೆಗೆ, ಊಟಕ್ಕೆ, ದುಡಿಮೆಗೆ, ಮದುವೆಗೆ.. ಹೀಗೆ ಎಲ್ಲದಕ್ಕೂ ಅದರದೇ ಆದ ಉದ್ದೇಶ, ಫಲಿತಾಂಶಗಳು ಇರುತ್ತವೆ. ನಿದ್ದೆ ಮಾಡುವುದರಿಂದ ಮರುದಿನದ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ. ಊಟ ಮಾಡದೇ ಇದ್ದರೆ ಮರುದಿನ ಹುರುಪಿನಿಂದ ಬದುಕಲು ಸಾಧ್ಯವಾಗುವುದಿಲ್ಲ. ದುಡಿಮೆಯ ಉದ್ದೇಶ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಬದುಕನ್ನು ಸಂತಸವಾಗಿಡುವುದೂ ಆಗಿರುತ್ತದೆ. ಕೇವಲ ದೈಹಿಕ ಸುಖವನ್ನು ಪಡಕೊಳ್ಳುವ ಉದ್ದೇಶಕ್ಕಿಂತಲೂ ಬದುಕಿನ ಸೌಂದರ್ಯ, ಸಂತಾನ ವೃದ್ಧಿಯ ಗುರುತರ ಹೊಣೆಗಾರಿಕೆಯೂ ಮದುವೆಗಿದೆ. ಒಂದು ರೀತಿಯಲ್ಲಿ ಪ್ರಕೃತಿಯ ನಿಯಮಗಳಲ್ಲಿ ಒಂದು ತತ್ವವಿದೆ. ಹೊಣೆಗಾರಿಕೆಯಿದೆ. ಆದರೆ ಗಂಡು-ಗಂಡು ಜೋಡಿಯಾಗಿ ದಂಪತಿಗಳಂತೆ ಬದುಕುವುದರ ಹಿಂದೆ ದೈಹಿಕ ಸುಖದ ವಿನಿಮಯದ ಹೊರತಾದ ಇನ್ನಾವ ತರ್ಕಗಳೂ ಕಾಣಿಸುತ್ತಿಲ್ಲ. ಆ ಸುಖವನ್ನು ಪಡಕೊಂಡ ಬಳಿಕ ಏನು ಎಂಬ ಪ್ರಶ್ನೆಗೆ ಯಾವ ಉತ್ತರವೂ ಲಭಿಸುತ್ತಿಲ್ಲ. ಒಂದು ವೇಳೆ ಅವರಿಬ್ಬರ ದೈಹಿಕ ಸೌಂದರ್ಯ ಕ್ಷೀಣಿಸಿದ ಮೇಲೆ ಆ ಸಂಬಂಧ ಎಲ್ಲಿಯ ವರೆಗೆ ಬಾಳಿಕೆ ಕಂಡೀತು? ಆಕರ್ಷಣೆ ಕಳಕೊಂಡ ಬಳಿಕ ಅವರಿಬ್ಬರೂ ಬೇರೆ ಬೇರೆಯಾದರೆ, ಅವರ ಹೊಣೆಗಾರಿಕೆಯನ್ನು ಯಾರು ಹೊರಬೇಕು? ಮಕ್ಕಳಿಲ್ಲದ, ಹೆತ್ತವರೂ ಆಗದ ಇವರಿಂದ ಸಮಾಜದ ಅಭಿವೃದ್ದಿsಗೆ ಯಾವ ಕೊಡುಗೆಯಿರುತ್ತದೆ? ಒಣಗಿದ ಗದ್ದೆಗಳು, ಮುಚ್ಚಿದ ಮನೆಗಳು, ಉದ್ಯೋಗಿಗಳಿಲ್ಲದ ಕಾರ್ಖಾನೆಗಳ ಒಂದು ಚಿತ್ರಣವನ್ನು ಕಲ್ಪಿಸಿಕೊಂಡರೇನೇ ಸಲಿಂಗ ರತಿಯ ಅನಾಹುತ ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಈ ಪ್ರಕ್ರಿಯೆಯನ್ನು ತಡೆಯುವ ಪ್ರಯತ್ನಗಳು ನಡೆಯಬೇಕಾಗಿದೆ. ಇದಕ್ಕೆ ಬೆಂಬಲ ಸಿಗದಂಥ ವಾತಾವರಣವನ್ನು ಸೃಷ್ಟಿ ಮಾಡಬೇಕಾಗಿದೆ. ಇಲ್ಲದೇ ಹೋದರೆ ಚೈತನ್ಯವನ್ನು ಕಳೆದುಕೊಂಡ ಒಣ ಮನುಷ್ಯರನ್ನಷ್ಟೇ ಭವಿಷ್ಯದಲ್ಲಿ ನೋಡಬೇಕಾದೀತು.   

Thursday, 12 December 2013

ಸ್ಥಿಮಿತ ಕಳಕೊಳ್ಳುವ ಹೆತ್ತವರು ಮತ್ತು ನಂಬಿಕೆ ಕಳಕೊಳ್ಳದ ಮಕ್ಕಳು

ರಮೇಶ್ ನಾಯ್ಕ
    ಈ ಸುದ್ದಿಗಳನ್ನು ಓದಿ
1. 14 ವರ್ಷದ ಮಗಳು ಅರುಷಿಯನ್ನು ಕೊಂದ ಅಪರಾಧಕ್ಕಾಗಿ ಆಕೆಯ ಹೆತ್ತವರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
2. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ತನ್ನ 10 ಮತ್ತು 14 ವರ್ಷದ ಮಕ್ಕಳನ್ನು ಕೊಂದ ಬ್ಯಾಂಕ್ ಮ್ಯಾನೇಜರ್ ರಮೇಶ್ ನಾಯ್ಕನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
3. ಮೂರನೇ ಹೆರಿಗೆಯಲ್ಲೂ ಅವಳಿ ಹೆಣ್ಣು ಮಕ್ಕಳಾದ ದುಃಖದಿಂದ ಬಡ ಕುಟುಂಬವೊಂದು ನವಜಾತ ಶಿಶುಗಳನ್ನು ಪರಭಾರೆ ಮಾಡಿ ಬಂಧನಕ್ಕೀಡಾಗಿದ್ದಾರೆ..
   ಕಳೆದೆರಡು ವಾರಗಳಲ್ಲಿ ಪ್ರಕಟವಾದ ಈ ಮೂರೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆ ಯಿದೆ. ಅದೇನೆಂದರೆ, ಈ ಮೂರರಲ್ಲೂ ಮಕ್ಕಳೇ ನಾಯಕರು. ಹೆತ್ತವರೇ ಖಳನಾಯಕರು. ನಿಜವಾಗಿ, ಇನ್ನೂ ಪ್ರೌಢಾವಸ್ಥೆಗೆ ತಲುಪದ ಪುಟ್ಟ ಮಕ್ಕಳು ಈ ಜಗತ್ತಿನಲ್ಲಿ ಖಳರಾದದ್ದು ಇಲ್ಲವೇ ಇಲ್ಲ. ಹಾಗಂತ ಖಳರಾಗುವುದಕ್ಕೆ ಬೇಕಾದ ಅವಕಾಶ ಅಥವಾ ಉಪಕರಣಗಳು ಅವರ ಮುಂದೆ ಇರಲಿಲ್ಲ ಎಂದಲ್ಲ. ಎಲ್ಲವೂ ಇತ್ತು. ಚೂರಿ, ಕತ್ತಿ, ಕಲ್ಲು.. ಮತ್ತಿತರ ಅಪಾಯಕಾರಿ ವಸ್ತುಗಳು ಮನೆಯಲ್ಲಿ ಮಕ್ಕಳ ಕೈಗೆಟಕುವ ರೀತಿಯಲ್ಲೇ ಇರುತ್ತದೆ. ಅಪ್ಪ ಸಿಟ್ಟಿನಿಂದ ಥಳಿಸಿದಾಗ ಮಕ್ಕಳು ಚೂರಿಯ ಮೂಲಕ ಪ್ರತಿಕ್ರಿಯಿಸುವುದಕ್ಕೆ ಅವಕಾಶ ಇರುತ್ತದೆ. ತಾಯಿಯ ಬೈಗುಳ, ಗದರಿಕೆಗೆ ಪ್ರತಿಕ್ರಿಯೆಯಾಗಿ ಮಕ್ಕಳು ಕಲ್ಲೆಸೆಯುವುದಕ್ಕೂ ಅವಕಾಶ ಇದೆ. ಅಲ್ಲದೇ ಅನೇಕ ಬಾರಿ ಹೆತ್ತವರು ಮಕ್ಕಳನ್ನು ತಪ್ಪಾಗಿಯೇ ದಂಡಿಸುತ್ತಾರೆ. ಆದರೆ ತಪ್ಪನ್ನು ಒಪ್ಪಿಕೊಳ್ಳುವುದು ಅವರಿಗೆ ಗೊತ್ತೇ ಹೊರತು, ದೊಡ್ಡವರಂತೆ ಅದನ್ನು ಜಾಣ್ಮೆಯಿಂದ ಸಮರ್ಥಿಸಿಕೊಳ್ಳುವುದು ಗೊತ್ತಿರುವುದಿಲ್ಲ. ತಮ್ಮ ಕೃತ್ಯವನ್ನು ಮನದಟ್ಟಾಗುವಂತೆ ವಿವರಿಸುವ ಕಲೆಯೂ ಅವರಿಗೆ ಕರಗತವಾಗಿರುವುದಿಲ್ಲ. ಆದರೂ, ಮಕ್ಕಳು ತಮ್ಮ ಹೆತ್ತವರನ್ನು ದ್ವೇಷಿಸುವುದಿಲ್ಲ. ಅಪಾಯಕಾರಿ ಅಸ್ತ್ರಗಳನ್ನು ಎತ್ತಿಕೊಂಡು ಹಗೆ ಸಾಧಿಸುವುದಿಲ್ಲ. ಯಾಕೆ ಹೀಗೆ ಅಂದರೆ, ಮಕ್ಕಳಿಗೆ ಹೆತ್ತವರ ಮೇಲೆ ಅಪಾರ ನಂಬಿಕೆಯಿರುತ್ತದೆ. ಹೆತ್ತವರು ಎಂದೂ ತಮ್ಮ ಜೊತೆಗಿರುತ್ತಾರೆ ಅನ್ನುವ ಭರವಸೆಯೊಂದಿಗೆ ಅವು ಬದುಕುತ್ತವೆ. ಹೀಗಿರುವಾಗ ಹೆತ್ತವರೇ ಮಕ್ಕಳ ಹಂತಕರಾಗುವುದನ್ನು ಹೇಗೆ ವ್ಯಾಖ್ಯಾನಿಸುವುದು? ಯಾರಾದರೂ ತಂಟೆ ಮಾಡಿದರೆ ಮಕ್ಕಳು ಓಡೋಡಿ ಬರುವುದು ಹೆತ್ತವರ ಬಳಿಗೆ. ಶಾಲೆಯಲ್ಲಿ ಶಿಕ್ಷಕರು ಗದರಿಸಿದರೆ, ಗೆಳೆಯರು ಜಗಳ ಕಾಯ್ದರೆ, ಟಿಫಿನ್ ತಿನ್ನಲಾಗದಿದ್ದರೆ.. ಎಲ್ಲವನ್ನೂ ಮಕ್ಕಳು ಹೆತ್ತವರ ಜೊತೆಯೇ ಹಂಚಿಕೊಳ್ಳುತ್ತಾರೆ. ಇಂಥದ್ದೊಂದು ಪ್ರೀತಿ, ನಂಬಿಕೆಯ ಸಂಬಂಧವೊಂದು ಬಿರುಕು ಬಿಡುತ್ತಿರುವುದೇಕೆ? ಇವತ್ತಿನ ದಿನಗಳಲ್ಲಿ ಇಂಥ ಪ್ರಕರಣಗಳು ತೀರಾ ಅಪರೂಪದ್ದಾಗಿಯೂ ಉಳಿದಿಲ್ಲ. ಯಾವ ಊರಲ್ಲೂ ಯಾವ ಸಂದರ್ಭದಲ್ಲೂ ಘಟಿಸಬಹುದಾದ ಮಾಮೂಲಿ ಪ್ರಕರಣದ ಸ್ಥಿತಿಗೆ ಇವು ತಲುಪಿ ಬಿಟ್ಟಿವೆ. ಕಚೇರಿಯಲ್ಲೋ ವ್ಯವಹಾರದಲ್ಲೋ ಆಗಿರುವ ಆಘಾತದ ಸಿಟ್ಟನ್ನು ಎಷ್ಟೋ ಹೆತ್ತವರು ತಮ್ಮ ಮಕ್ಕಳ ಮೇಲೆ ತೀರಿಸಿಕೊಳ್ಳುವುದಿದೆ. ಮಕ್ಕಳಿಗೆ ಅದನ್ನು ಪ್ರಶ್ನಿಸುವ ಸಾಮಥ್ರ್ಯ ಇಲ್ಲದಿರುವುದರಿಂದಷ್ಟೇ ಹೆಚ್ಚಿನವು ಸುದ್ದಿಗೊಳಗಾಗುವುದಿಲ್ಲ.
   ಕೌಟುಂಬಿಕ ಕಲಹಗಳು ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ದಿನಗಳಿವು. ದೊಡ್ಡ ಕುಟುಂಬಗಳು ಅಣು ಕುಟುಂಬಗಳಾಗಿ ಬದಲಾಗುತ್ತಿವೆ. ಒಂದು ಕಡೆ ಬದುಕು ತುಟ್ಟಿಯಾಗುತ್ತಿದ್ದರೆ ಇನ್ನೊಂದೆಡೆ ಆಧುನಿಕ ಜೀವನ ಕ್ರಮಗಳು ಬಲವಾಗಿ ಆಕರ್ಷಿಸುತ್ತಿವೆ. ಅವುಗಳ ಆಕರ್ಷಣೆಯಿಂದ ತಪ್ಪಿಸಿಕೊಂಡು ಬದುಕಲಾಗದಷ್ಟು ಅವು ಅನಿವಾರ್ಯ ಅನ್ನಿಸಿಕೊಳ್ಳುತ್ತಿವೆ. ಇವುಗಳ ನಡುವೆ ಸಮ ತೋಲನ ಕಾಯ್ದುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿಲ್ಲ. ಪತಿ-ಪತ್ನಿಯರ ನಡುವೆ ಜಗಳ, ವಿವಾಹ ವಿಚ್ಛೇದನ, ಅನಾಥ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿವೆ. ಪತಿ ಮತ್ತು ಪತ್ನಿಯ ಮೇಲೆ ಇವತ್ತಿನ ಜೀವನ ಕ್ರಮಗಳು ಹೆಚ್ಚುವರಿ ಹೊರೆಯನ್ನು ಹೊರಿಸುತ್ತಿರುವುದರಿಂದ ಮನಶ್ಶಾಂತಿ ಕಡಿಮೆಯಾಗುತ್ತಿದೆ. ತೀರಾ ಸಹನೆಯಿಂದ ಪ್ರತಿಕ್ರಿಯಿಸಬಹುದಾದ ಸಣ್ಣ ಪ್ರಕರಣಗಳೂ ರಾದ್ಧಾಂತಕ್ಕೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೆಮ್ಮದಿಯ ಮನೆಗಳನ್ನು ನಿರ್ಮಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕಿದೆ. ಒಂದು ಮನೆಯಲ್ಲಿ ಪತಿಯ ಜವಾಬ್ದಾರಿ, ಪತ್ನಿಯ ಹೊಣೆಗಾರಿಕೆ, ಮಕ್ಕಳ ತರಬೇತಿ, ಹಿರಿಯರ ಸ್ಥಾನ-ಮಾನ.. ಎಲ್ಲವುಗಳನ್ನೂ ಅವಲೋಕನಕ್ಕೆ ಒಳಪಡಿಸುವ ವಾತಾವರಣವನ್ನು ಬೆಳೆಸಬೇಕಿದೆ. ಯಾಕೆಂದರೆ, ಇವತ್ತು ಹೊಟ್ಟೆಗೆ ಮತ್ತು ಬಟ್ಟೆಗೆ ತೊಂದರೆ ಇಲ್ಲದ ಮನೆಗಳಿಂದಲೇ ಹೆಚ್ಚೆಚ್ಚು ಆಘಾತಕಾರಿ ಸುದ್ದಿಗಳು ಕೇಳಿಬರುತ್ತಿವೆ. ನೆಮ್ಮದಿ ಕಳಕೊಳ್ಳುತ್ತಿರುವ ಮನೆಗಳಲ್ಲಿ ಹೆಚ್ಚಿನವು ಮಧ್ಯಮ ಮತ್ತು ಶ್ರೀಮಂತವಾದವೇ. ಒಂದು ರೀತಿಯಲ್ಲಿ, ಟಿ.ವಿ. ಮತ್ತು ಇಂಟರ್‍ನೆಟ್‍ಗಳು ನವಪೀಳಿಗೆಯಲ್ಲಿ ಹೊಸ ಹೊಸ ಕನಸುಗಳನ್ನು ಬಿತ್ತುತ್ತಿವೆ. ಹೊಸ ಹೊಸ ವಿಚಾರಗಳನ್ನು ರೂಪಿಸುತ್ತಿವೆ. ಅವುಗಳಿಂದ ಪ್ರಭಾವಿತಗೊಳ್ಳುವ ಪೀಳಿಗೆಯು ತಪ್ಪು ಹೆಜ್ಜೆಯಿರಿಸುವುದಕ್ಕೂ ಅವಕಾಶ ಇದೆ. ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಮತ್ತು ತಿದ್ದಬೇಕಾದ ಹೆತ್ತವರು ಅದು ಬಿಟ್ಟು ಜೀವನ ಸೌಲಭ್ಯವನ್ನು ಹೆಚ್ಚಿಸುವ ಭರದಲ್ಲಿ ಬಿಝಿಯಾಗಿರುತ್ತಾರೆ. ಹೀಗೆ ತಾಳ ತಪ್ಪಿದ ವಾತಾವರಣದಲ್ಲಿ ಕೊನೆಗೆ ಅಸಹನೆ, ಆಕ್ರೋಶಗಳೇ ಮೇಲುಗೈ ಪಡೆಯುವ ಸಾಧ್ಯತೆಯೂ ಇರುತ್ತದೆ.
   ಮಕ್ಕಳು ಮತ್ತು ಹೆತ್ತವರು ಎರಡು ಬೇರೆ ಬೇರೆ ಧ್ರುವಗಳಲ್ಲ. ಪರಸ್ಪರ ಅವಲಂಬಿತರು. ಮಕ್ಕಳಿಲ್ಲದ ಬದುಕನ್ನು ನಿರೀಕ್ಷಿಸಲು ಹೇಗೆ ಒಂದು ಕುಟುಂಬಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಹೆತ್ತವರು ಇಲ್ಲದಿರುವ ಒಂದು ಬದುಕನ್ನು ನಿರೀಕ್ಷಿಸಲು ಮಕ್ಕಳಿಗೂ ಸಾಧ್ಯವಿಲ್ಲ. ಇಲ್ಲಿಯ ಸಂಬಂಧ ಭಾವಪೂರ್ಣವಾದದ್ದು. ಪರಸ್ಪರ ಭರವಸೆ, ನಂಬಿಕೆ, ಪ್ರೀತಿಯ ತಳಹದಿಯಲ್ಲಿ ಕಟ್ಟಲಾದದ್ದು. ಅಂಥ ಸಂಬಂಧಗಳು ಬಿರುಕು ಬಿಡದಂತೆ ಕಾಪಾಡಿಕೊಳ್ಳಬೇಕಾದ ಅಗತ್ಯ ಬಹಳವಿದೆ. ಹೆತ್ತವರನ್ನು ಹಂತಕರಂತೆ ಭೀತಿಯಿಂದ ನೋಡುವ ಮಕ್ಕಳು ಮತ್ತು ಮಕ್ಕಳನ್ನು ಕೊಲೆಗೆ ಅರ್ಹರೆಂಬಂತೆ ನೋಡುವ ಹೆತ್ತವರು ಸಮಾಜದಲ್ಲಿ ಬೆಳೆಯತೊಡಗಿದರೆ ಅದಕ್ಕಿಂತ ಭೀತಿಯ ಸನ್ನಿವೇಶ ಇನ್ನೊಂದಿಲ್ಲ. ಆದ್ದರಿಂದ ಬದುಕಿನ ಜಂಜಾಟದ ಮಧ್ಯೆಯೂ ಸ್ಥಿಮಿತವನ್ನು ಕಳಕೊಳ್ಳದ ಕುಟುಂಬಗಳು ನಿರ್ಮಾಣಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಮಕ್ಕಳು, ಹೆತ್ತವರು, ಹಿರಿಯರು ನೆಮ್ಮದಿಯಾಗಿ ಬದುಕುವ ‘ಮನೆಗಳ' ನಿರ್ಮಾಣಕ್ಕೆ ಒತ್ತು ಸಿಗಬೇಕಿದೆ. ಇಲ್ಲದಿದ್ದರೆ, ಹಂತಕ ಹೆತ್ತವರಂತೆ ಹಂತಕ ಮಕ್ಕಳೂ ಸೃಷ್ಟಿಯಾದಾರು
.