Thursday, 17 July 2014

ಸರೋಜ, ಮುರುಗೇಸನ್, ಸೆಲ್ವಿ ಮತ್ತು ನಾವು

    ಕಳೆದ ಜೂನ್ 28ರಂದು ಚೆನ್ನೈನ ವಡಗಿರಿಯಲ್ಲಿ 11 ಅಂತಸ್ತುಗಳ ನಿರ್ಮಾಣ ಕಟ್ಟಡವೊಂದು ಕುಸಿದು ಬಿದ್ದು 61 ಮಂದಿ ಸಾವಿಗೀಡಾದ ಘಟನೆಯ ಸುತ್ತ ತಮಿಳುನಾಡು ಗಂಭೀರ ಚರ್ಚೆಯಲ್ಲಿ ತೊಡಗಿದ್ದಾಗಲೇ ಬೇಬಿ ಸರೋಜ ಅನ್ನುವ 75 ವರ್ಷದ ಅಜ್ಜಿ ಆ ಚರ್ಚೆಯ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸಿದರು. ನಿಜವಾಗಿ, ವಡಗಿರಿಯಲ್ಲಿ ಕಟ್ಟದ ಕುಸಿದ ಅದೇ ಸಂದರ್ಭದಲ್ಲೇ ದೆಹಲಿಯಲ್ಲೂ 4 ಅಂತಸ್ತುಗಳ ಕಟ್ಟಡ ಕುಸಿದಿತ್ತು. 11 ಮಂದಿ ಸಾವಿಗೀಡಾಗಿದ್ದರು. ಆದ್ದರಿಂದಲೇ, ಈ ಎರಡು ದುರಂತಗಳು ಮತ್ತು ಆಯಾ ಸರಕಾರಗಳು ಕೈಗೊಂಡ ಕ್ರಮಗಳನ್ನು ತುಲನೆ ಮಾಡಿ ಮಾಧ್ಯಮಗಳು ಚರ್ಚಿಸಿದುವು. ದೆಹಲಿಯಲ್ಲಿ ಜನರು ಪ್ರತಿಭಟನೆ ನಡೆಸುವವರೆಗೆ ವ್ಯವಸ್ಥೆ ಮೌನವಾಗಿತ್ತು. ಆ ಬಳಿಕ ಮುಖ್ಯ ಇಂಜಿನಿಯರ್‍ನನ್ನು ಅಮಾನತು ಮಾಡಿತು. ಆದರೆ, ತಮಿಳುನಾಡು ಶೀಘ್ರ ಎಚ್ಚೆತ್ತುಕೊಂಡಿತು. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಆಯೋಗವನ್ನು ರಚಿಸಿ ತನಿಖೆಗೆ ಆದೇಶಿಸಿತು. ಕಟ್ಟಡದ ಮಾಲಕ, ಇಂಜಿನಿಯರ್, ವಿನ್ಯಾಸಕಾರರೂ ಸೇರಿ 6 ಮಂದಿಯನ್ನು ಬಂಧಿಸಿತು. ಆದರೆ ಅಜ್ಜಿ ಯಾವಾಗ ಚರ್ಚೆಯ ವ್ಯಾಪ್ತಿಯೊಳಗೆ ಪ್ರವೇಶಿಸಿದರೋ ದುರಂತಗಳಿಗಿರುವ ಇನ್ನಷ್ಟು ಮುಖಗಳೂ ಅನಾವರಣಗೊಂಡವು. ಸಾವಿಗೀಡಾದವರಲ್ಲಿ ಅಜ್ಜಿಯ ಮಗ ಮುರುಗೇಸನ್ ಕೂಡ ಒಬ್ಬನಾಗಿದ್ದ. ಸೊಸೆ ಸೆಲ್ವಿಯಂತೂ ಗಂಡನನ್ನೂ ಅತ್ತೆಯನ್ನೂ ತ್ಯಜಿಸಿ 6 ವರ್ಷಗಳ ಹಿಂದೆಯೇ ತವರು ಮನೆ ಸೇರಿದ್ದಳು. ಅಜ್ಜಿಯನ್ನು ನೋಡಿಕೊಳ್ಳುತ್ತಿದ್ದುದು ಮಗನೇ. ಆದರೆ ದುರಂತವು ಅಜ್ಜಿಯನ್ನು ಒಂಟಿಯಾಗಿಸಿತು. ಆದ್ದರಿಂದ ತನ್ನ ಸೊಸೆಗೆ ರಾಜ್ಯ ಸರಕಾರವು ಕೊಟ್ಟಿರುವ 7 ಲಕ್ಷ  ರೂಪಾಯಿ ಪರಿಹಾರ ಧನವನ್ನು ತನಗೆ ನೀಡುವಂತೆ ಆದೇಶಿಸಬೇಕೆಂದು ಆಕೆ ಹೈಕೋರ್ಟ್ ಮೆಟ್ಟಲೇರಿದ್ದರು.
 ನಿಜವಾಗಿ, ಸರೋಜ, ಸೆಲ್ವಿ ಮತ್ತು ಮುರುಗೇಸನ್ ಎಂಬುದು ಮೂರು ವ್ಯಕ್ತಿತ್ವಗಳಷ್ಟೇ ಅಲ್ಲ, ಈ ಸಮಾಜದ ದುರಂತ ಕಥನಗಳ ವಿವಿಧ ಪಾತ್ರಧಾರಿಗಳು ಕೂಡ. ಈ ಸಮಾಜದಲ್ಲಿ ಮುರುಗೇಸನ್‍ರಂತಹ ಮಕ್ಕಳು ಇರುವಂತೆಯೇ ಸೆಲ್ವಿಯಂಥ ಸೊಸೆಯಂದಿರೂ ಇದ್ದಾರೆ. ಇಳಿ ಪ್ರಾಯದಲ್ಲಿ ಆಸರೆಗಾಗಿ ಅಲೆಯುವ ಸರೋಜರಂಥ ತಾಯಂದಿರೂ ಇದ್ದಾರೆ. ಇದಕ್ಕೆ ವ್ಯತಿರಿಕ್ತ ಪಾತ್ರಗಳೂ ಇವೆ. ಒಳ್ಳೆಯ ಸೆಲ್ವಿ, ನೆಮ್ಮದಿಯಿಂದಿರುವ ಸರೋಜ ಮತ್ತು ಪೀಡಿಸುವ ಮುರುಗೇಸನ್‍ರೂ ಸಮಾಜದಲ್ಲಿದ್ದಾರೆ. ಒಂದು ರೀತಿಯಲ್ಲಿ, ಚೆನ್ನೈನಲ್ಲಿ ಕುಸಿದು ಬಿದ್ದದ್ದು ಒಂದು ಕಟ್ಟವಾದರೂ ಅವರ ಅವಶೇಷಗಳಡಿಯಲ್ಲಿ ದೊರಕಿರುವುದು 61 ಶವಗಳಷ್ಟೇ ಅಲ್ಲ, ಅನೇಕಾರು ಮಂದಿಯ ಜೀವನ ಕಥನಗಳೂ ಕೂಡ. ಬಿರುಕು ಬಿಡುತ್ತಿರುವ ಕೌಟುಂಬಿಕ ಸಂಬಂಧಗಳ ದೊಡ್ಡದೊಂದು ಕತೆಯೇ ಆ ಅವಶೇಷಗಳ ಅಡಿಯಲ್ಲಿ ಹೂತು ಹೋಗಿರಬಹುದು. ನೆಮ್ಮದಿಯಿಂದಿದ್ದ ಕುಟುಂಬವೊಂದರ ಸುಂದರ ಕತೆ ಸಮಾಧಿಯಾಗಿರಬಹುದು. ಸಂಜೆ ಚಾಕಲೇಟು ತರುವ ಅಪ್ಪನನ್ನು ಕಾದು ಕುಳಿತ ಮಗಳ ಹೃದಯ ವಿದ್ರಾವಕ ಕಣ್ಣೀರು ಸಮಾಧಿಯಾಗಿರಬಹುದು. ಅಂದಹಾಗೆ, ದುರಂತದ ತೀವ್ರತೆ ಕೇವಲ ಮೃತದೇಹಗಳನ್ನು ಎಣಿಸುವುದರಲ್ಲಷ್ಟೇ ಇರುವುದಲ್ಲ. ಮೃತದೇಹಗಳೆಂಬುದು ಒಂದು ಸಂಕೇತ ಮಾತ್ರ. ಆ ಸಂಕೇತದ ಹಿಂದೆ ಕತೆ, ಉಪಕತೆಗಳಿರುತ್ತವೆ. ಆ  ದುರಂತವನ್ನೂ ವಿೂರಿದ ದುರಂತ ಸಂಗತಿಗಳು ಆ ಸಂಕೇತಗಳ ಜೊತೆಗಿರುತ್ತವೆ. ಆದ್ದರಿಂದಲೇ, ದುರಂತಗಳು ಸಮಾಜವನ್ನು ಭಾವುಕಗೊಳಿಸುವುದು. ಮೃತಪಟ್ಟವರಿಗಾಗಿ ದುಃಖಿಸುತ್ತಲೇ ಅವರನ್ನು ಆಶ್ರಯಿಸಿದವರಿಗಾಗಿ ಕಣ್ಣೀರಾಗುವುದು.  
   ಇವತ್ತಿನ ಆಧುನಿಕ ಸಮಾಜದಲ್ಲಿ  ಸರೋಜ ಒಂಟಿಯಲ್ಲ. ಇಂಥ ಅಸಂಖ್ಯ ಸರೋಜರೂ ಸಮಾಜದ ಭಾಗವಾಗಿ ಬದುಕುತ್ತಿದ್ದಾರೆ. ದುಡಿದೂ ದುಡಿದೂ ತಾಯಿಯನ್ನು ಸಾಕುವ ಮಗ ಮತ್ತು ಮಗನ ಆಶ್ರಯದಲ್ಲಿ ನೆಮ್ಮದಿಯಾಗಿರುವ ತಾಯಿ ಇಂಥ ಸುಂದರ ದೃಶ್ಯಗಳು ಕಡಿಮೆಯಾಗತೊಡಗಿವೆ. ಕೌಟುಂಬಿಕ ಸಂಬಂಧಗಳು ಬಿರುಕು ಬಿಡುತ್ತಿರುವ ಪ್ರಕರಣಗಳು ಸಾಮಾನ್ಯ ಅನ್ನಿಸುವಷ್ಟು ವ್ಯಾಪಕಗೊಳ್ಳುತ್ತಿವೆ. ದಪ್ಪಗಿರುವ ಪತ್ನಿಗೆ ವಿಚ್ಛೇದನ ಕೋರುವ ಪತಿ, ಒಡವೆಗಾಗಿ ಅಜ್ಜಿಯನ್ನೇ ಕೊಲೆಗೈಯುವ ಮೊಮ್ಮಕ್ಕಳು, ಆಸ್ತಿಯ ಜಗಳದಲ್ಲಿ ಹೆತ್ತವರನ್ನೇ ಕಡೆಗಣಿಸುವ ಮಕ್ಕಳು... ಇಂಥವು ನಿತ್ಯ ಎಂಬಂತೆ ವರದಿಯಾಗುತ್ತಿವೆ. ಆಧುನಿಕ ಜೀವನ ಪದ್ಧತಿಗಳು, ಸೌಲಭ್ಯಗಳು ಜನರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನೂ ಬೀರುತ್ತಿವೆ. ಅವಿಭಕ್ತ ಕುಟುಂಬಗಳು ವಿಭಜನೆಗೊಂಡು ಅಣು ಕುಟುಂಬಗಳು ಆದದ್ದಷ್ಟೇ ಅಲ್ಲ, ಅಣು ಕುಟುಂಬಗಳೂ ನಿದ್ದೆ, ನೆಮ್ಮದಿ, ಸುಖ ಇಲ್ಲದ ತಾಣಗಳಾಗಿ ಬದಲಾಗುತ್ತಿವೆ. ವಿಚ್ಛೇದನವನ್ನು ಪಾಪ ಎಂದು ಬಲವಾಗಿ ನಂಬಿಕೊಂಡಿದ್ದ ಕಾಲ ಬದಲಾಗಿ ದೈಹಿಕ ಆಕಾರವೂ ವಿಚ್ಛೇದನಕ್ಕೆ ಕಾರಣ ಆಗುವಷ್ಟು ಸಹಜ ಅನ್ನಿಸಿಕೊಂಡುಬಿಟ್ಟಿದೆ. ಪತಿ-ಪತ್ನಿ ಸಂಬಂಧ ದೈಹಿಕ ಆಕರ್ಷಣೆಗಿಂತ ಅಚೆ, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಸಂಬಂಧಗಳಾಗಿ ಮಾರ್ಪಡುತ್ತಿಲ್ಲ. ಆಧುನಿಕ ಜಗತ್ತಿನಲ್ಲಿ ಭ್ರಮೆಗಳ ಹಿಂದೆ ನಾವೆಷ್ಟು ವೇಗವಾಗಿ ಸಾಗುತ್ತಿದ್ದೇವೆ ಎಂದರೆ ಆ ವೇಗಕ್ಕೆ ಹೊಂದಿಕೊಳ್ಳಲು ಹೆತ್ತವರಿಗೆ ಸಾಧ್ಯವಾಗುತ್ತಿಲ್ಲ. ಪತಿ, ಪತ್ನಿ ಮತ್ತು ಮಕ್ಕಳು ಮಾತ್ರ ಹೊಂದಿಕೊಳ್ಳಬಲ್ಲ ವೇಗದೊಂದಿಗೆ ಆಧುನಿಕ ಜಗತ್ತಿನ ಯುವ ಪೀಳಿಗೆಗಳು ಬದುಕುನ್ನು ಸಾಗಿಸುತ್ತಿವೆ. ಈ ವೇಗ ಅಥವಾ ಜೀವನ ಕ್ರಮಗಳು ಹೆತ್ತವರನ್ನು ನಿರಾಶೆಗೆ ತಳ್ಳಬಹುದು  ಅನ್ನುವ ಆಲೋಚನೆಯನ್ನೂ ಅವರು ಮಾಡುತ್ತಿಲ್ಲ. ಅತ್ತ ತಾನು, ಪತ್ನಿ, ಮಕ್ಕಳು ಎಂಬ ಪುಟ್ಟ ದೋಣಿಯಲ್ಲಿ ಜೀವನದ ಖುಷಿಯನ್ನು ಹುಡುಕುತ್ತಾ ಸಾಗುವಾಗ, ಇತ್ತ ಸರೋಜರಂಥ ಹೆತ್ತವರು ಆ ದೋಣಿಯಲ್ಲಿ ಜಾಗ ಸಿಗಬಹುದೇ ಎಂದು ಆತಂಕದಿಂದ ಕಾಯುತ್ತಿರುತ್ತಾರೆ. ಆದ್ದರಿಂದ, ಚೆನ್ನೈನ ದುರಂತವು ಕೇವಲ ಮೃತಪಟ್ಟವರ ಸಂಖ್ಯೆ, ಕಟ್ಟಡ ನಿರ್ಮಾಣದಲ್ಲಾದ ಲೋಪ-ದೋಷಗಳು ಮತ್ತು ಕಾರ್ಮಿಕರ ಜೀವದ ಬಗ್ಗೆ ತೋರಲಾದ ನಿರ್ಲಕ್ಷ್ಯತೆಯ ಸುತ್ತ ಚರ್ಚಿಸುವುದಕ್ಕಷ್ಟೇ ಸೀಮಿತವಾಗಬಾರದು. ಆ ಚರ್ಚೆಯಲ್ಲಿ ಸರೋಜ, ಸೆಲ್ವಿ ಮತ್ತು ಮುರುಗೇಸನ್‍ರೂ ಒಳಗೊಳ್ಳಬೇಕು. ಆ ಮುಖಾಂತರ ಈ ಸಮಾಜದಲ್ಲಿರುವ ಇಂತಹ ಅಸಂಖ್ಯ  ಮಂದಿಯ ಬಗ್ಗೆ ಕಣ್ಣು ತೆರೆಸುವ ಗಂಭೀರ ಸಂವಾದಗಳು ನಡೆಯಬೇಕು. 75ರ ಅಜ್ಜಿ ಪರಿಹಾರದ ಹಣವನ್ನು ಯಾಚಿಸಿ ಕೋರ್ಟಿಗೆ ಅಲೆಯುವುದು ಬರೇ ಸುದ್ದಿಯಷ್ಟೇ ಅಲ್ಲ, ಅದು ದುರಂತ ಪ್ರಕರಣದ ಇನ್ನೊಂದು ದುರಂತ ಮುಖ. ಇಂಥ ಮುಖಗಳು ಮತ್ತು ಅವು ಸಾರುವ ದುಃಖದಾಯಕ ಕತೆಗಳು ಈ ದೇಶದ ಮನೆಗಳಲ್ಲಿ ಧಾರಾಳ ಸಂಖ್ಯೆಯಲ್ಲಿವೆ. ಅವುಗಳಲ್ಲಿ ಸರೋಜಾರಿಗಿಂತ ಕ್ರೂರವಾದ ಕತೆಗಳೂ ಅಸಂಖ್ಯ ಇರಬಹುದು. ಅಂಥ ಕತೆಗಳು ಧಾರಾವಾಹಿಗಳಂತೆ ಇನ್ನಷ್ಟು ಬೆಳೆಯಬಾರದು. ಕೌಟುಂಬಿಕ ಸಂಬಂಧಗಳು ಸುದೃಢಗೊಳ್ಳುವ ಮತ್ತು ಹೆಚ್ಚು ಮಾನವೀಯಗೊಳ್ಳಬೇಕಾದ ತುರ್ತು ಸಂದರ್ಭದಲ್ಲಿ ನಾವಿದ್ದೇವೆ. ದುಡ್ಡು, ಸಂಪತ್ತು, ಸೌಲಭ್ಯಗಳೆಲ್ಲ ನೆಮ್ಮದಿಯ ಸಂಕೇತಗಳೇನೂ ಅಲ್ಲ. ನೆಮ್ಮದಿಯು ಈ ಎಲ್ಲ ಸೌಲಭ್ಯಗಳಾಚೆಗೆ ಮಾನವೀಯ ಸಂಬಂಧಗಳಲ್ಲಿದೆ. ಆ ಸಂಬಂಧಗಳನ್ನು ಬಲಪಡಿಸದ ಹೊರತು ಕಟ್ಟಡಗಳನ್ನು ಬಲಪಡಿಸುವುದರಿಂದ ಸರೋಜರಂಥ ತಾಯಂದಿರ ನೋವುಗಳಿಗೆ ಮುಲಾಮು ಹಚ್ಚಲು ಸಾಧ್ಯವಿಲ್ಲ. ಮಾತ್ರವಲ್ಲ, ಅವರಂಥವರ ಗಾಯ ಒಣಗದ ಹೊರತು ಕಟ್ಟಡಗಳು ಎಷ್ಟೇ ಗಟ್ಟಿಯಾದರೂ ಅವು ನೆಮ್ಮದಿ ನೀಡಲು ಸಾಧ್ಯವಿಲ್ಲ.

Tuesday, 8 July 2014

ಪ್ರತಿ ಮನೆಯಲ್ಲೂ `ಮಾರ್ನಿಂಗ್ ಗ್ಲೋರಿ'ಗಳು ಅರಳಲಿ

   ವೃದ್ಧಾಪ್ಯಕ್ಕೆ ಕಾರಣವಾಗುವ ಜೀನನ್ನು ಪತ್ತೆ ಹಚ್ಚಿರುವುದಾಗಿ ಜಪಾನಿನ ಕೃಷಿ ಮತ್ತು ಆಹಾರ ಸಂಶೋಧನಾ ಸಂಸ್ಥೆಯ ಸಂಶೋಧಕರು ಬಹಿರಂಗಪಡಿಸಿದ ಸುದ್ದಿಯು ಮಾಧ್ಯಮಗಳಲ್ಲಿ ಪ್ರಕಟವಾದ (ಜುಲೈ 6) ಮರುದಿನವೇ, ‘ವಧುಗಳ ಕೊರತೆಯನ್ನು ಎದುರಿಸುತ್ತಿರುವ ಹರ್ಯಾಣಕ್ಕೆ ಬಿಹಾರದಿಂದ ವಧುಗಳನ್ನು ಕರೆ ತರುವ ವ್ಯವಸ್ಥೆ ಮಾಡುವೆನೆಂದು’ ಹರ್ಯಾಣದ ಬಿಜೆಪಿ ನಾಯಕ ಓ.ಪಿ. ಧನ್ಕರ್ ಹೇಳಿರುವ ಮಾತೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.ಹರ್ಯಾಣದ ಬಿಜೆಪಿ ನಾಯಕ ಸುಶೀಲ್ ಮೋದಿಯವರೊಂದಿಗೆ ತನಗಿರುವ ಉತ್ತಮ ಭಾಂದವ್ಯವನ್ನು  ಬಳಸಿಕೊಂಡು ಈ ಭರವಸೆಯನ್ನು ನಾನು ಕಾರ್ಯಗತಗೊಳಿಸಬಲ್ಲೆನೆಂದು ಅವರು ಜನರಿಗೆ ಭರವಸೆ ನೀಡಿದ್ದಾರೆ.  ಹೊರನೋಟಕ್ಕೆ ಭಾರತದ ಹರ್ಯಾಣಕ್ಕೂ ಜಪಾನಿನ ಸಂಶೋಧನೆಗೂ ಯಾವ ಸಂಬಂಧವೂ ಇಲ್ಲ. ಮಾರ್ನಿಂಗ್ ಗ್ಲೋರಿ ಎಂಬ ಹೂವಿನ ಮೇಲೆ ಅಲ್ಲಿನ ವಿಜ್ಞಾನಿಗಳು ನಡೆಸಿದ ಪ್ರಯೋಗ ಮತ್ತು ಹೂವಿನ ವೃದ್ಧಾಪ್ಯವನ್ನು ಮುಂದೂಡಲು ಅವರು ಯಶಸ್ವಿಯಾಗಿರುವುದು ಸರ್ವತ್ರ ಶ್ಲಾಘನೆಗೆ ಒಳಗಾಗಿರುವ ಸಂದರ್ಭದಲ್ಲೇ ಹರ್ಯಾಣದಲ್ಲಿ ವಧುಗಳಿಗಿರುವ ಕೊರತೆಯು ಮತ್ತೊಮ್ಮೆ ಸುದ್ದಿಗೆ ಒಳಗಾಗಿದೆ. ನಿಜವಾಗಿ, ಜಪಾನಿನಲ್ಲಿ ಕೈಗೊಳ್ಳಲಾದ ಸಂಶೋಧನೆ ಸಹಜ ವೃದ್ಧಾಪ್ಯಕ್ಕೆ ಸಂಬಂಧಿಸಿದ್ದು. ಮಾರ್ನಿಂಗ್ ಗ್ಲೋರಿ ಎಂಬ ಹೂವಿನ ಮೇಲಿನ ಸಂಶೋಧನೆಯು ಮುಂದೊಂದು ದಿನ ಮನುಷ್ಯರ ಸಹಜ ವೃದ್ಧಾಪ್ಯವನ್ನು ಮುಂದೂಡುವ ಸಂಶೋಧನೆಗೆ ನೆರವಾಗಬಲ್ಲುದು ಎಂಬ ನಿರೀಕ್ಷೆ ವಿಜ್ಞಾನಿಗಳದು. ಆದರೆ ಹರ್ಯಾಣದ ಸಮಸ್ಯೆ ಸಹಜವಾದುದಲ್ಲ. ಹೆಣ್ಣು-ಗಂಡಿನ ನಡುವಿನ ಅನುಪಾತದಲ್ಲಿ ಒಂದು ಹಂತದ ವರೆಗೆ ಪ್ರಕೃತಿಯೇ ಸಮತೋಲನವನ್ನು ಕಾಪಾಡುತ್ತದೆ. ಹರ್ಯಾಣದಲ್ಲಿ ಆ ಸಮತೋಲನ ಕೆಟ್ಟಿದೆ ಎಂದರೆ ಅದಕ್ಕೆ ಕಾರಣ ಪ್ರಕೃತಿಯಲ್ಲ, ಮನುಷ್ಯ. ಹರ್ಯಾಣದಲ್ಲಿ ಹೆಣ್ಣು-ಗಂಡಿನ ಅನುಪಾತ ಇಡೀ ದೇಶದಲ್ಲಿಯೇ ಅತ್ಯಂತ ಕೆಳಮಟ್ಟದಲ್ಲಿದೆ. ಗಂಡನ್ನೇ ಬಯಸುವ ಮತ್ತು ಹೆಣ್ಣನ್ನು ಬಯಸದಿರುವ ವಾತಾವರಣ ಅಲ್ಲಿಯದು. ಇದರಿಂದಾಗಿ ಅಲ್ಲಿನ ಯುವಕರು ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದು ಅಪಹರಣ, ಲೈಂಗಿಕ ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತಿದೆ. ಯುವಕರನ್ನು ಅಸಹಿಷ್ಣುತೆಗೆ ದೂಡುತ್ತಿದೆ. ಮಾನಸಿಕ ಒತ್ತಡಗಳ ಪರಿಣಾಮವು ದೇಹದ ಮೇಲೂ ಆಗುತ್ತಿದೆ. ಇದಕ್ಕೆ ಜಪಾನಿನ ಸಂಶೋಧನೆ ಪರಿಹಾರ ಆಗಲಾರದು. ಅಷ್ಟಕ್ಕೂ, ಒಂದು ಪ್ರದೇಶದಲ್ಲಿ ಕಾಣಿಸಿಕೊಳ್ಳುವ ಇಂಥ ಪ್ರಾಕೃತಿಕ ಅಸಮತೋಲನಗಳು ಕೇವಲ ಆ ಪ್ರದೇಶದ ಸಮಸ್ಯೆಯಾಗಿಯಷ್ಟೇ ಉಳಿಯುವುದಿಲ್ಲ. ಅದರ ಪರಿಣಾಮವು ಪಕ್ಕದ ಪ್ರದೇಶಗಳ ಮೇಲೂ ಉಂಟಾಗುತ್ತದೆ. ಬಿಹಾರದಿಂದ ಹರ್ಯಾಣಕ್ಕೆ ವಧುಗಳನ್ನು ತರುವುದೆಂದರೆ, ಕಾರನ್ನೋ ಬಸ್ಸನ್ನೋ ತಿರುಗಿಸಿದಂತೆ ಅಲ್ಲವಲ್ಲ. ಯುವತಿಯೊಬ್ಬಳು ಹರ್ಯಾಣದ ಸೊಸೆಯಾಗುವುದು ಕೆಲವಾರು ಹಂತಗಳ ಪ್ರಕ್ರಿಯೆ. ಅಲ್ಲಿ ಮಧ್ಯವರ್ತಿಗಳ ಪ್ರವೇಶವಾಗಬಹುದು. ಮಾರಾಟ-ಚೌಕಾಶಿ, ಅಪಹರಣಗಳು, ಕೊಲೆಗಳೂ ನಡೆಯಬಹುದು. ದುರಂತ ಏನೆಂದರೆ, ಮನುಷ್ಯ ಸಹಜ ವೃದ್ಧಾಪ್ಯವನ್ನು ಮುಂದೂಡುವ ಬಗ್ಗೆ ಜಪಾನಿನ ಮಂದಿ ಆಲೋಚಿಸುತ್ತಿರುವಾಗ ಪ್ರಕೃತಿ ವಿರೋಧಿ ನಡವಳಿಕೆಗಳ ಕಾರಣದಿಂದಾಗಿ ಉದ್ಭವಿಸಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಪ್ರಯತ್ನದಲ್ಲಿ ನಾವಿದ್ದೇವೆ. ಮಾರ್ನಿಂಗ್ ಗ್ಲೋರಿ ಎಂಬುದು ಸುಂದರವಾದ ಹೂವಿನ ತಳಿಯ ಹೆಸರು. ಆದರೆ ಹೆಣ್ಣು ಪ್ರಕೃತಿ ಒದಗಿಸಿರುವ ಬರೇ ಹೂವು ಅಷ್ಟೇ ಅಲ್ಲ, ಅದ್ಭುತ ಸಂಪತ್ತು. ಈ ಸಂಪತ್ತಿನ ಮೌಲ್ಯವನ್ನು ತಿಳಿಯಲಾರದ ನಾವು ಕೈಯಾರೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದೇವೆ.
 ಹೆಣ್ಣನ್ನು ವರ್ಣಿಸುವುದಕ್ಕೆ ಅದ್ಭುತ ಪದಗಳನ್ನು ಸಂಶೋಧಿಸಿ ಬಳಸಲಾಗುತ್ತಿರುವ ಈ ದೇಶದಲ್ಲಿಯೇ ಹೆಣ್ಣು ಅತ್ಯಂತ ಅವಮಾನಕರ ರೀತಿಯಲ್ಲಿ ಬದುಕುತ್ತಿದ್ದಾಳೆ.  ಈ ದೇಶದಲ್ಲಿ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ಪಟ್ಟಣಗಳು ಯಾವುವು ಎಂಬ ವಿಷಯದ ಮೇಲೆ ಸವಿೂಕ್ಷೆ ನಡೆಸುವಷ್ಟರ ಮಟ್ಟಿಗೆ ಹೆಣ್ಣಿನ ಪರಿಸ್ಥಿತಿ ಹದಗೆಟ್ಟಿದೆ. ಕಳೆದ ವಾರ ಇಂಥದ್ದೊಂದು ಸವಿೂಕ್ಷಾ ವರದಿ ಬಿಡುಗಡೆಯಾಯಿತು. ಇಂಥ ಅಸುರಕ್ಷಿತ ಪ್ರಮುಖ 58 ಪಟ್ಟಣಗಳನ್ನು ಪಟ್ಟಿ ಮಾಡಲಾಯಿತಲ್ಲದೇ ದೆಹಲಿ ಅದರಲ್ಲಿ ಪ್ರಥಮ ಸ್ಥಾನ ಪಡೆಯಿತು. ಮುಂಬೈಗೆ ದ್ವಿತೀಯ. ಬೆಂಗಳೂರಿಗೆ ತೃತೀಯ. 2013ರಲ್ಲಿ ದೆಹಲಿಯಲ್ಲಿ 11,449 ಮಹಿಳಾ ದೌರ್ಜನ್ಯ ಪ್ರಕರಣಗಳು ಅಧಿಕೃತವಾಗಿ ನಡೆದಿವೆಯಂತೆ. ಬೆಂಗಳೂರಿನಲ್ಲಿ 2608. ಈ ಪಟ್ಟಿ ತುಂಬಾ ಉದ್ದ ಇದೆ. ವಿಷಾದವೇನೆಂದರೆ, ಮಹಿಳೆಯನ್ನು ವಿವಿಧ ಗೌರವಾರ್ಹ ಪದಗಳಿಂದ ಬಣ್ಣಿಸುವ ದೇಶದಲ್ಲೇ ‘ಮಹಿಳಾ ದೌರ್ಜನ್ಯ' ಎಂಬ ವಿಷಯದಲ್ಲಿ ಸವಿೂಕ್ಷೆ ಕೈಗೊಳ್ಳಲಾಗುತ್ತದೆ, ಸೆಮಿನಾರ್‍ಗಳು ನಡೆಯುತ್ತವೆ, ಹೆಣ್ಣು ಮಕ್ಕಳನ್ನು ಉಳಿಸಿ, ಗೌರವಿಸಿ ಎಂಬ ಹೆಸರಲ್ಲಿ ಜಾಗೃತಿ ಕಾರ್ಯಕ್ರಮಗಳು ಏರ್ಪಡುತ್ತವೆ ಎಂಬುದು. ಯಾಕಿಂಥ ವಿರೋಧಾಭಾಸ?
   ನಿಜವಾಗಿ, ಜಪಾನಿನ ವಿಜ್ಞಾನಿಗಳು ‘ಮಾರ್ನಿಂಗ್ ಗ್ಲೋರಿ'ಯ ಮೇಲೆ ನಡೆಸಿದ ಸಂಶೋಧನೆಯು ಇನ್ನೊಂದು ಕಾರಣಕ್ಕಾಗಿ ಈ ದೇಶದಲ್ಲೂ ಚರ್ಚೆಗೊಳಗಾಗಬೇಕಾದ ಅಗತ್ಯವಿದೆ. ಮಾರ್ನಿಂಗ್ ಗ್ಲೋರಿ ಹೂವುಗಳ ಆಯುಷ್ಯ ಹೆಚ್ಚಲಿ ಬಿಡಲಿ, ಆದರೆ ಈ ದೇಶದ ಹೆಣ್ಣು ಎಂಬ ಹೂವುಗಳ ಆಯುಷ್ಯ ಮತ್ತು ಗೌರವ ಹೆಚ್ಚಬೇಕಾಗಿದೆ. ಈ ದೇಶಕ್ಕೆ ವೃದ್ಧಾಪ್ಯ ಸಮಸ್ಯೆಯಾಗಿಲ್ಲ. ಆದರೆ ಹೆಣ್ಣು ಸಮಸ್ಯೆಯಾಗಿ ಬಿಟ್ಟಿದ್ದಾಳೆ. ನದಿ ನೀರನ್ನು ತಿರುಗಿಸುವಂತೆ ಆಕೆಯನ್ನು ಬಿಹಾರದಿಂದ ಹರ್ಯಾಣಕ್ಕೆ ತಿರುಗಿಸುವಷ್ಟು ಆಕೆ ಅಸುರಕ್ಷಿತವಾಗಿದ್ದಾಳೆ. ಆ ಅಸುರಕ್ಷಿತತೆಯನ್ನು ಸುರಕ್ಷಿತತೆಯನ್ನಾಗಿ ಪರಿವರ್ತಿಸುವ ಬಗ್ಗೆ ನಮ್ಮಲ್ಲಿ ಗಂಭೀರ ಚರ್ಚೆಗಳು ನಡೆಯಬೇಕು. ಅವರನ್ನು ಅಸುರಕ್ಷಿತಗೊಳಿಸುವ ಪುರುಷ ಜೀನನ್ನು ಪತ್ತೆ ಹಚ್ಚಿ ಅದರ ನಿರ್ಮೂಲನೆಗೆ ಪ್ರಯತ್ನಗಳು ನಡೆಯಬೇಕು. ಹರ್ಯಾಣದಲ್ಲಿ ಇವತ್ತು ಯಾವ ಹೆತ್ತವರು ತಮ್ಮ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಹುಡುಕಾಟದಲ್ಲಿ ತೊಡಗಿರುವರೋ ಒಂದೊಮ್ಮೆ ಅವರೇ ಹೆಣ್ಣು ಮಕ್ಕಳ ಕೊಲೆಗಾರರೂ ಆಗಿರಬಹುದು. ತಮ್ಮ ಮನೆಯಲ್ಲಿ ಬೆಳಕಾಗಿ ಮಿಂಚಬೇಕಾದ ಹೆಣ್ಣು ಮಗುವನ್ನು ಅವರು ಹತ್ಯೆ ನಡೆಸಿದ ಅಪರಾಧಿಗಳೂ ಆಗಿರಬಹುದು. ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ ಎಂಬ ಸಿದ್ಧಾಂತವನ್ನು ಬಲವಾಗಿ ನಂಬಿರುವವರೂ ಇವರಲ್ಲಿರಬಹುದು. ಇವೆಲ್ಲಕ್ಕೂ ಬಿಹಾರದ ಹೆಣ್ಣು ಪರಿಹಾರ ಅಲ್ಲ. ಬಿಹಾರವೇನೂ ಹೆಣ್ಣು ಮಕ್ಕಳನ್ನು ಉತ್ಪಾದಿಸುವ ಕಾರ್ಖಾನೆ ಅಲ್ಲವಲ್ಲ. ನಾಳೆ ಈ ಸಮಸ್ಯೆ ಬಿಹಾರವನ್ನೂ ಕಾಡಬಹುದು. ಆಗ ಹೆಣ್ಣು ಅಕ್ಷರಶಃ ಮಾರಾಟದ ಸರಕಾಗಬಹುದು. ಬಡವರು ತಮ್ಮ ಮಕ್ಕಳನ್ನು ಮಾರಾಟ ಮಾಡುವ ಮತ್ತು ಉಳ್ಳವರು ಅವರನ್ನು ಖರೀದಿಸಿ ಗುಲಾಮರಂತೆ ನೋಡಿಕೊಳ್ಳುವ ಸಂದರ್ಭಗಳೂ ನಿರ್ಮಾಣವಾಗಬಹುದು. ಖರೀದಿಸುವ ಸಾಮರ್ಥ್ಯ

ಮಾರ್ನಿಂಗ್ ಗ್ಲೋರಿ ಫ್ಲವರ್
ಇಲ್ಲದವರು ಅತ್ಯಾಚಾರಕ್ಕೆ ಮುಂದಾಗಬಹುದು. ಲೈಂಗಿಕ ದಾಹವನ್ನು ತಣಿಸುವುದಕ್ಕಾಗಿ ಯುವಕರು ಅಸುರಕ್ಷಿತ ಮಾರ್ಗಗಳನ್ನು ಅವಲಂಬಿಸಲೂ ಬಹುದು. ಹೆಣ್ಣನ್ನು ಅಗೌವಿಸುವ ಸಮಾಜದಲ್ಲಿ ಹುಟ್ಟಿಕೊಳ್ಳುವ ಅಪಾಯಕಾರಿ ರೋಗಗಳು ಇವೆಲ್ಲ. ಆದ್ದರಿಂದ, ಈ ರೋಗಗಳಿಗೆ ಮದ್ದನ್ನು ಈ ಸಮಾಜವೇ ಅರೆಯಬೇಕು. ರೋಗ ಮೂಲವನ್ನು ಹುಡುಕಬೇಕು. ಹರ್ಯಾಣದ ಮಂದಿ ಹೆಣ್ಣು ಮಕ್ಕಳನ್ನು ಪ್ರೀತಿಸುವ ಮನಸ್ಥಿತಿಗೆ ಮರಳಬೇಕು. ಹೆಣ್ಣನ್ನು ಪ್ರೀತಿಸುವ ಮತ್ತು ಗೌರವಿಸುವ ಸಮಾಜದಲ್ಲಿ ಮಾತ್ರ ನೈತಿಕ ಶಿಷ್ಟಾಚಾರಗಳು ಕಾಣಿಸಿಕೊಳ್ಳಲು ಸಾಧ್ಯ. ಹೆಣ್ಣು ಪ್ರತಿ ಹೆತ್ತವರ ಹೃದಯದ ಹೂವಾಗಬೇಕು. ಈ ಹೂವಿನ ಅರಳುವಿಕೆಗೆ ಕಾಯುವ, ಸುವಾಸನೆಯಿಂದ ತನ್ಮಯಗೊಳ್ಳುವ ಹೆತ್ತವರು ಹೆಚ್ಚಾಗಬೇಕು. ಇದೇನು ಅಸಾಧ್ಯವಲ್ಲ. ಅಸಾಧ್ಯದಂತೆ ಕಾಣಿಸಿದ್ದ ವೃದ್ಧಾಪ್ಯದ ಜೀನನ್ನೇ ಪತ್ತೆ ಹಚ್ಚಲು ಮತ್ತು ಆ ಮೂಲಕ ಮಾರ್ನಿಂಗ್ ಗ್ಲೋರಿ ಹೂವು ಉದುರದಂತೆ ಕಾಪಾಡಲು ಈ ಜಗತ್ತಿನಲ್ಲಿ ಸಾಧ್ಯ ಎಂದಾದರೆ, ಹೆಣ್ಣನ್ನು ಗೌರವಿಸುವುದು ಯಾಕೆ ಅಸಾಧ್ಯವಾಗಬೇಕು? ಆಕೆಯನ್ನು ಮನೆಯ ಹೂವಾಗಿ ಬೆಳೆಸುವುದು ಯಾಕೆ ದುಸ್ತರ ಅನ್ನಿಸಿಕೊಳ್ಳಬೇಕು? ಆದ್ದರಿಂದ, ಹರ್ಯಾಣದ ವಧು ಪ್ರಕರಣವು ಹೆಣ್ಣಿನ ಕುರಿತಾದ ಸಮಾಜದ ದೃಷ್ಟಿಕೋನವನ್ನು ಬದಲಾಯಿಸುವುದಕ್ಕೆ ಪ್ರೇರಕವಾಗಲಿ. ಹೆಣ್ಣು ಮಕ್ಕಳು ಪ್ರತಿ ಮನೆ, ಮನದಲ್ಲೂ ಮಾರ್ನಿಂಗ್ ಗ್ಲೋರಿ ಹೂವಿನಂತೆ ಸದಾ ಅರಳುತ್ತಿರಲಿ.

Tuesday, 1 July 2014

ವೈದ್ಯರ ದಿನಕ್ಕೆ ಕತ್ತರಿಯನ್ನು ಉಡುಗೊರೆ ಕೊಟ್ಟ ಹಫ್ಸಾ

   ಇತರೆಲ್ಲ ಕ್ಷೇತ್ರಗಳಿಗೆ ಹೋಲಿಸಿದರೆ ವೈದ್ಯ ಕ್ಷೇತ್ರಕ್ಕೆ ಸಮಾಜದಲ್ಲಿ ವಿಶೇಷವಾದ ಮನ್ನಣೆಯಿದೆ. ಇದಕ್ಕೆ; ವೈದ್ಯರು ಪ್ರಯಾಣಿಸುವ ಕಾರು, ಅವರು ಧರಿಸುವ ಬಿಳಿಕೋಟು, ಸ್ಟೆತೋಸ್ಕೋಪ್‍ಗಳು ಕಾರಣವಲ್ಲ. ದುಬಾರಿ ವಾಹನದಲ್ಲಿ ಪ್ರಯಾಣಿಸುವವರು, ಅದ್ದೂರಿ ಉಡುಪು ಧರಿಸುವವರು, ಲಕ್ಷಾಂತರ ದುಡ್ಡಿರುವವರು ಸಮಾಜದಲ್ಲಿ ಅನೇಕರಿದ್ದಾರೆ. ಆದರೆ ಅವರಾರಿಗೂ ಸಿಗದ ಗೌರವ ಮತ್ತು ಕೃತಜ್ಞತಾಭಾವವೊಂದನ್ನು ವೈದ್ಯಲೋಕ ಈಗಲೂ ಪಡಕೊಳ್ಳುತ್ತಿದೆ. ಈ ಸಮಾಜದ ಪಾಲಿಗೆ ತೀರಾ ಅಪರಿಚಿತವಾಗಿರುವ ವ್ಯಕ್ತಿಯಿಂದ ಹಿಡಿದು ರಿಲಯನ್ಸ್ ನ ಅಂಬಾನಿಯ ವರೆಗೆ, ಎಲ್ಲರ ಮೇಲೂ ವೈದ್ಯರಿಗೆ ಒಂದು ಮಿತಿಯಲ್ಲಿ ಹಿಡಿತವಿದೆ. ಕೂಲಿ ಮಾಡುವ ಅನಕ್ಷರಸ್ಥ ವ್ಯಕ್ತಿ ತನ್ನ ಪತ್ನಿಯನ್ನೋ ಮಗನನ್ನೋ ವೈದ್ಯರ ಕೈಗೆ ಒಪ್ಪಿಸಿದ ಬಳಿಕ ನಿರಾಳವಾಗುತ್ತಾನೆ. ಆ ವರೆಗೆ ಆತನನ್ನು ಆವರಿಸಿದ್ದ ಆತಂಕಗಳನ್ನು ವೈದ್ಯರ ನಾಲ್ಕು ಭರವಸೆಯ ಮಾತುಗಳು ತೊಲಗಿಸಿಬಿಡುತ್ತವೆ. ತನ್ನವರ ಕಾಯಿಲೆಯನ್ನು ಗುಣಪಡಿಸುವಲ್ಲಿ ಈ ವೈದ್ಯ ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ ಎಂಬ ತುಂಬು ಭರವಸೆಯೊಂದಿಗೆ ಆತ ಆಸ್ಪತ್ರೆಯ ಹೊರಗೆ ಕಾಯುತ್ತಿರುತ್ತಾನೆ. ದಿನಸಿ ಅಂಗಡಿಯಲ್ಲಿ ಅಥವಾ ವಾರದ ಸಂತೆಯಲ್ಲಿ ವ್ಯಾಪಾರಿಗಳೊಂದಿಗೆ ಚೌಕಾಸಿ ಮಾಡಿಯೇ ಆಹಾರ ವಸ್ತುಗಳನ್ನು ಖರೀದಿಸುವವನು ಕೂಡ, ಮೆಡಿಕಲ್ ಶಾಪ್‍ಗಳಲ್ಲಿ ಚೌಕಾಸಿಗಿಳಿಯುವುದಿಲ್ಲ. ಸಕ್ಕರೆ ಮುಗಿದಿದೆ ಎಂದೋ ಹೆಸ್ರುಬೇಳೆ ತನ್ನಿ ಎಂದೋ ಪತ್ನಿ ಹೇಳಿದರೆ  ಸಿಡಿಮಿಡಿಗೊಂಡು ಮಾರುಕಟ್ಟೆಗೆ ಹೋಗುವವನೂ ವೈದ್ಯರ ಔಷಧ ಚೀಟಿಗೆ ಸಿಡಿಮಿಡಿಗೊಳ್ಳುವುದಿಲ್ಲ. ಯಾಕೆಂದರೆ, ಸಮಾಜದಿಂದ ವೈದ್ಯ ಕ್ಷೇತ್ರ ಬಹುತೇಕ ಅಪರಿಚಿತವಾಗಿಯೇ ಉಳಿದಿದೆ. ಅಲ್ಲಿನ ಭಾಷೆ, ತುರ್ತು, ಉಡುಪು.. ಎಲ್ಲವುಗಳ ಬಗ್ಗೆಯೂ ಸಮಾಜದಲ್ಲೊಂದು ಕುತೂಹಲವಿದೆ. ಬಹುಶಃ ಸಮಾಜದ ಈ ಅಜ್ಞಾನ ಮತ್ತು ಕುತೂಹಲಗಳು ಅನೇಕ ಬಾರಿ ವೈದ್ಯಕೀಯ ಕ್ಷೇತ್ರವು ನಿರ್ಲಜ್ಜೆಯಿಂದ ವರ್ತಿಸುವುದಕ್ಕೆ ಕಾರಣವೂ ಆಗಿದೆ. ಕಳೆದವಾರ ಮಂಗಳೂರಿನಲ್ಲಿ ನಡೆದ ಪ್ರಕರಣವೊಂದು ಇದನ್ನು ಮತ್ತಷ್ಟು ಖಚಿತಪಡಿಸಿದೆ.
 2010 ಫೆ. 22ರಂದು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಗರ್ಭಕೋಶದ ಗಡ್ಡೆ ಶಸ್ತ್ರಚಿಕಿತ್ಸೆಗೆ ಒಳಗಾದ ಹಫ್ಸಾ ಎಂಬ ಮಹಿಳೆಯೋರ್ವರು ಅದೇ ಮಾರ್ಚ್ 11ರಂದು ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದರು. ಆದರೆ ಆ ಬಳಿಕವೂ ಆಪರೇಶನ್ ನಡೆದ ಜಾಗದಲ್ಲಿ ನೋವು ಕಾಣಿಸುತ್ತಿದ್ದುದರಿಂದ ಹಲವು ಬಾರಿ ಆಸ್ಪತ್ರೆಗೆ ಭೇಟಿಯನ್ನೂ ನೀಡಿದ್ದರು. ಕಳೆದ ವಾರ ಎಕ್ಸ್ ರೇ ಮತ್ತು ಸ್ಕ್ಯಾನ್ ನಡೆಸಿದಾಗ ಹೊಟ್ಟೆಯ ಒಳಗಡೆ ಶಸ್ತ್ರಚಿಕಿತ್ಸೆಗೆ ಉಪಯೋಗಿಸುವ ಕತ್ತರಿ ಪತ್ತೆಯಾಯಿತು ಮಾತ್ರವಲ್ಲ, ಇನ್ನೊಂದು ಶಸ್ತ್ರ ಚಿಕಿತ್ಸೆಯ ಮೂಲಕ ಅದನ್ನು ಹೊರತೆಗೆಯಲಾಯಿತು.
   ಅಷ್ಟಕ್ಕೂ, ಕಳೆದ ನಾಲ್ಕು ವರ್ಷಗಳಿಂದ ಕತ್ತರಿಯನ್ನು ಹೊಟ್ಟೆಯಲ್ಲಿಟ್ಟುಕೊಂಡು ಬದುಕಿದ ಆ ಮಹಿಳೆಯನ್ನೊಮ್ಮೆ ಊಹಿಸಿ. ಆಕೆ ಅನುಭವಿಸಿದ ಸಂಕಟಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಕೊಡಲು ಏನು ಪರಿಹಾರವಿದೆ? ಆಪರೇಶನ್ ಎಂಬ ಪ್ರಕ್ರಿಯೆಯೇ ತೀರಾ ಸೂಕ್ಷ್ಮವಾದದ್ದು. ಮೈಯೆಲ್ಲಾ ಕಣ್ಣಾಗಿ ನಡೆಸುವಂಥದ್ದು. ಆ ಸಂದರ್ಭದಲ್ಲಿ ವೈದ್ಯ ಬರೇ ಬಿಳಿಕೋಟು, ಕೆಲವು ಉಪಕರಣಗಳನ್ನು ಹೊಂದಿರುವ ಮನುಷ್ಯನಷ್ಟೇ ಆಗಿರುವುದಿಲ್ಲ. ಆಗ ರೋಗಿಯು ಆತನ ಮೇಲೆ ಪರಕಾಯ ಪ್ರವೇಶ ಮಾಡಿರುತ್ತಾನೆ/ಳೆ. ರೋಗಿಯ ಸಂಕಟ ವೈದ್ಯನ ಸಂಕಟವೂ ಆಗಿರುತ್ತದೆ. ರೋಗಿಯ ಭಾವನೆ ವೈದ್ಯನ ಭಾವನೆಯೂ ಆಗಿರುತ್ತದೆ. ತನ್ನೆದುರು ಶಸ್ತ್ರಚಿಕಿತ್ಸೆಗಾಗಿ ಮಲಗಿದ ವ್ಯಕ್ತಿಯ ಮಕ್ಕಳು ತನ್ನದೇ ಮಕ್ಕಳಾಗಿ ವೈದ್ಯನ ಮುಂದೆ ಸುಳಿಯುತ್ತಾರೆ. ರೋಗಿ ಧನಿಕನೋ ಬಡವನೋ ಎಂಬ ಆಲೋಚನೆಗಿಂತ ಆಚೆ, ಈತನನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಪ್ರಜ್ಞೆ ಆತನನ್ನು ಮತ್ತೆ ಮತ್ತೆ ಕಾಡುತ್ತಿರುತ್ತದೆ. ಶಸ್ತ್ರಚಿಕಿತ್ಸೆ ವಿಫಲವಾದರೂ ಸಫಲವಾದರೂ ಆ ಎರಡೂ ಸಂದರ್ಭಗಳ ಸಂಕಟ ಅಥವಾ ಖುಷಿಯನ್ನು ರೋಗಿಯಂತೆಯೇ ವೈದ್ಯನೂ ಅನುಭವಿಸುತ್ತಾನೆ.. ಇಂಥ ಹತ್ತು-ಹಲವು ಕರುಣಾಮಯಿ ಕಲ್ಪನೆಗಳೊಂದಿಗೆ ಸಮಾಜ ಇವತ್ತೂ ವೈದ್ಯ ಕ್ಷೇತ್ರವನ್ನು ಆರಾಧನಾ ಭಾವದಿಂದ ನೋಡುತ್ತಿದೆ. ಅಷ್ಟಕ್ಕೂ, ಇಂಥವರು ಇಲ್ಲ ಎಂದಲ್ಲ. ಅವರ ಸಂಖ್ಯೆ ಎಷ್ಟಿದೆ ಎಂಬುದಷ್ಟೇ ಮುಖ್ಯ. ದುರಂತ ಏನೆಂದರೆ, ವೈದ್ಯಕೀಯ ಕ್ಷೇತ್ರದ ಈ ಸುಂದರ ಮುಖಕ್ಕೆ ಕೆಲವು ವೈದ್ಯರು ಇವತ್ತು ಕುರೂಪದ ಬಣ್ಣ ಬಳಿಯುತ್ತಿದ್ದಾರೆ. ಸಮಾಜ ಈ ಕ್ಷೇತ್ರದ ಮೇಲೆ ಏನೆಲ್ಲ ಭರವಸೆಗಳನ್ನು ಇಟ್ಟಿದೆಯೋ ಅವೆಲ್ಲಕ್ಕೂ ನಿರ್ದಯೆಯಿಂದ ಕತ್ತರಿ ಪ್ರಯೋಗಿಸುವ ಸಾಹಕ್ಕೆ ಇಳಿದಿದ್ದಾರೆ. ಬರೇ ದುಡ್ಡೊಂದನ್ನೇ ಧ್ಯೇಯವಾಗಿಸಿಕೊಂಡ ಮತ್ತು ಅದರಾಚೆಗೆ ಬಿಳಿ ಕೋಟಿಗೂ ಇನ್ನಿತರ ಕೋಟುಗಳಿಗೂ ಯಾವುದೇ ವ್ಯತ್ಯಾಸ ಇಲ್ಲವೆಂಬಂತೆ ನಡಕೊಳ್ಳುವ ವೈದ್ಯರುಗಳೂ ತಯಾರಾಗುತ್ತಿದ್ದಾರೆ. ಮನುಷ್ಯ ಹಸಿವಿನಿಂದ ಇರಬಲ್ಲ, ಆದರೆ ಕಾಯಿಲೆಯನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲವಲ್ಲ. ಇದು ವೈದ್ಯಕೀಯ ಕ್ಷೇತ್ರಕ್ಕೂ ಗೊತ್ತು. ಹೊಟ್ಟೆಯ ಹಸಿವಿಗೆ ಖರ್ಚು ಮಾಡಲು ಹಿಂದು-ಮುಂದು ನೋಡುವ ಕುಟುಂಬವೂ ಕಾಯಿಲೆಯಿಂದ ಗುಣಮುಖಗೊಳ್ಳುವುದಕ್ಕಾಗಿ ಇರುವುದೆಲ್ಲವನ್ನೂ ಖರ್ಚು ಮಾಡಲು ಮುಂದಾಗುತ್ತದೆ. ಆರೋಗ್ಯಕ್ಕೆ ಸಮಾಜ ಕೊಡುತ್ತಿರುವ ಈ ಪ್ರಾಶಸ್ತ್ಯ ಇತರೆಲ್ಲರಿಗಿಂತ ಹೆಚ್ಚು ಮನದಟ್ಟಾಗಿರುವುದು ವೈದ್ಯಕೀಯ ಕ್ಷೇತ್ರಕ್ಕೇ. ಅಲ್ಲದೇ ಈ ಕ್ಷೇತ್ರವು ‘ಸಾಲ ಕೊಡುವುದಿಲ್ಲ' ಎಂಬ ಬೋರ್ಡನ್ನೂ ನೇತುಹಾಕಿಕೊಂಡಿದೆ. ಸಾಮಾನ್ಯ ಬಡವನೊಬ್ಬ ದಿನಸಿ ಅಂಗಡಿಯಲ್ಲಿ ಸಾಲ ಮಾಡುವಂತೆ ಆಸ್ಪತ್ರೆಗಳಲ್ಲಿ ಸಾಲ ಮಾಡುವಂತಿಲ್ಲ. ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರಿಗೆ ‘ಮುಂದಿನ ತಿಂಗಳು ದುಡ್ಡು ಪಾವತಿಸುವೆ' ಎಂದು ಹೇಳುವಂತಿಲ್ಲ. ಎಲ್ಲಿಂದಲೋ ಕಾಡಿ-ಬೇಡಿಯೋ ಏನನ್ನಾದರೂ ಅಡವಿಟ್ಟೋ ಆಸ್ಪತ್ರೆಗಳಿಗೆ ದುಡ್ಡು ಪಾವತಿಸಿ ಮರಳುವ ಕಾಯಿಲೆ ಪೀಡಿತರು ಆ ಸಂದರ್ಭದಲ್ಲೂ ಖುಷಿ ವ್ಯಕ್ತಪಡಿಸುವುದಕ್ಕೆ ಕಾರಣ ಏನೆಂದರೆ ತಾವು ಕಾಯಿಲೆಯಿಂದ ಮುಕ್ತವಾಗಿದ್ದೇವೆ ಎಂಬುದು ಮಾತ್ರ. ಸಾಲ ಕೊಡದಿದ್ದರೂ ವೈದ್ಯರಿಗೆ ಅವರು ನಮ್ರತೆಯಿಂದ ಕೃತಜ್ಞತೆ ಅರ್ಪಿಸುತ್ತಾರೆ.  ನಿಜವಾಗಿ, ಇಂಥ ಭಾವುಕ ಕ್ಷಣಗಳನ್ನು ಕಳೆದವಾರ ನಡೆದಂಥ ‘ಕತ್ತರಿ' ಪ್ರಕರಣಗಳು ಮತ್ತೆ ಮತ್ತೆ ಪ್ರಶ್ನೆಗೊಡ್ಡುತ್ತಲೇ ಹೋಗುತ್ತಿವೆ. ವೈದ್ಯಲೋಕದ ಎಡವಟ್ಟಿನಿಂದ ಬದುಕನ್ನೇ ಕಳಕೊಂಡ ಅಥವಾ ಕಾಯಿಲೆ ಉಲ್ಬಣಗೊಂಡ ಘಟನೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ. ಆದ್ದರಿಂದ, ಇಂಥ ಪ್ರಕರಣಗಳನ್ನು ‘ವೈದ್ಯರ ನಿರ್ಲಕ್ಷ್ಯ' ಎಂಬ ಪುಟ್ಟ ಪದದೊಳಗೆ ಅಡಗಿಸಿಟ್ಟು ಸುಮ್ಮನಾಗುವುದಕ್ಕೆ ಬಿಡಬಾರದು. ವೈದ್ಯಕೀಯ ಕ್ಷೇತ್ರದ ಪ್ರಮಾದ ಇತರ ಕ್ಷೇತ್ರಗಳ ಪ್ರಮಾದದಂತೆ ಖಂಡಿತ ಅಲ್ಲ. ವೈದ್ಯನ ತಪ್ಪು ಒಂದಿಡೀ ಕುಟುಂಬವನ್ನೇ ಬೀದಿಪಾಲು ಮಾಡುವುದಕ್ಕೂ ಸಾಧ್ಯವಿದೆ. `ಹಫ್ಸಾ' ಅದಕ್ಕೆ ಇತ್ತೀಚಿನ ಉದಾಹರಣೆ ಅಷ್ಟೇ. ಆಕೆಯ ಹೊಟ್ಟೆಯೊಳಗಿನಿಂದ ಕತ್ತರಿಯನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರ ತೆಗೆದ ಸುದ್ದಿಯನ್ನು ಮಾಧ್ಯಮಗಳು '
ವೈದ್ಯರ ದಿನ'ವಾದ ಜುಲೈ 1ರಂದೇ ಪ್ರಕಟಿಸಿವೆ. ಬಹುಶಃ ಬೇಜವಾಬ್ದಾರಿ ವೈದ್ಯ ಲೋಕಕ್ಕೆ ಓರ್ವ ರೋಗಿ ಕೊಡಬಹುದಾದ ಅತ್ಯುತ್ತಮ ಉಡುಗೊರೆ ಇದು. ಆದ್ದರಿಂದ, ಈ ಕತ್ತರಿಯ ನಕಲೊಂದನ್ನು ಎಲ್ಲ ವೈದ್ಯರೂ ತಮ್ಮ ಬಳಿ ಸದಾ ಇಟ್ಟುಕೊಳ್ಳಬೇಕು. ಒತ್ತಡಗಳ ಸಂದರ್ಭಗಳಲ್ಲಿ ಆಗಬಹುದಾದ ಎಡವಟ್ಟುಗಳಿಂದ ಪಾರಾಗಲು ಹಫ್ಸಾಳ ಈ `ಕತ್ತರಿ' ಎಚ್ಚರಿಕೆಯ ಗಂಟೆಯಾಗಬೇಕು. ಇನ್ನಾವ ರೋಗಿಯನ್ನೂ `ಹಫ್ಸಾ' ಮಾಡಲಾರನೆಂಬ ಪ್ರತಿಜ್ಞೆಯನ್ನು ಎಲ್ಲ ವೈದ್ಯರೂ ಕೈಗೊಳ್ಳಬೇಕು.

Monday, 23 June 2014

ಹಿರಾದ `ಓದ’ನ್ನು ಸಮಾಜಕ್ಕೂ ಕೇಳಿಸೋಣ

   ಹಿರಾ ಗುಹೆಯಲ್ಲಿ ತಂಗಿ ಮಾನವ ಸಂಸ್ಕರಣೆಯ ಮೊಟ್ಟ ಮೊದಲ ಪಾಠವನ್ನು ಕೇಳಿಸಿಕೊಂಡ ನಂತರ ಪ್ರವಾದಿ ಮುಹಮ್ಮದ್(ಸ) ಮತ್ತೆಂದೂ ‘ಹಿರಾ’ದಲ್ಲಿ ತಂಗಲಿಲ್ಲ. ಬಳಿಕ ಅವರು ಸಮಾಜದ ಕಡೆಗೆ ನಡೆದರು. ನಿಜವಾಗಿ, ಅಂದಿನ ಸಮಾಜದಲ್ಲಿದ್ದ ಗದ್ದಲ, ಗೊಂದಲ, ಹಿಂಸೆ, ಅಸಮಾನತೆ, ಅನ್ಯಾಯಗಳನ್ನು ಪರಿಗಣಿಸಿದರೆ, ಹಿರಾ ಗುಹೆಯು ಪ್ರವಾದಿಯವರಿಗೆ(ಸ) ಮತ್ತೆ ಮತ್ತೆ ತಂಗಲೇಬೇಕಾದ ಮತ್ತು ಶಾಶ್ವತ ವಾಸಸ್ಥಳವನ್ನಾಗಿ ಮಾಡಿಕೊಳ್ಳಲೇ ಬೇಕಾದಷ್ಟು ಯೋಗ್ಯ ನೆಲೆಯಾಗಿತ್ತು. ಯಾಕೆಂದರೆ, ಹಿರಾದಲ್ಲಿ ಅಶಾಂತಿ ಇರಲಿಲ್ಲ. ರಕ್ತದಾಹ ಇರಲಿಲ್ಲ. ಮನುಷ್ಯರಲ್ಲಿಯೇ ಕೆಲವರು ಉಚ್ಛರು, ಕೆಲವರು ಮ್ಲೇಚ್ಛರು; ಕೆಲವು ಯಜಮಾನರು, ಅಸಂಖ್ಯ ದಾಸರು; ಗಂಡು ಶ್ರೇಷ್ಠ, ಹೆಣ್ಣು ಕನಿಷ್ಠ... ಮುಂತಾದ ಪ್ರಕೃತಿ ವಿರೋಧಿ ವಿಭಜನೆಗಳಿರಲಿಲ್ಲ. ಆದರೂ ಪ್ರವಾದಿ(ಸ) ಸಮಾಜವನ್ನೇ ಆಯ್ಕೆ ಮಾಡಿಕೊಂಡರು. ಯಾಕೆಂದರೆ, ಅವರು ಗುಹೆಯಲ್ಲಿ ಯಾವ ಪಾಠಗಳನ್ನು ಕೇಳಿಸಿಕೊಂಡಿದ್ದರೋ ಅದು ಯಾವ ಕಾರಣಕ್ಕೂ ಅಲ್ಲಿಗೆ ಅಗತ್ಯವಿರಲಿಲ್ಲ, ಗಾಢ ಮೌನ, ನೀರವತೆ, ಏಕತಾನತೆಯ ಗುಹೆಯಲ್ಲಿ, ‘ಓದಿರಿ, ನಿಮ್ಮನ್ನು ಸೃಷ್ಟಿಸಿದ ನಿಮ್ಮ ಪ್ರಭುವಿನ ನಾಮದೊಂದಿಗೆ..’ ಎಂದು ಹೇಳುವುದರಿಂದ ಆಗುವ ಪ್ರಯೋಜನವಾದರೂ ಏನು? ಅವರು `ಓದ'ಬೇಕಾದದ್ದು ಸಮಾಜದ ಮುಂದೆ. ಯಾಕೆಂದರೆ, ಆ ಸಮಾಜವು ನಿಜವಾದ `ಓದ'ನ್ನು, ಓದಿನ ಮರ್ಮವನ್ನು ಸಂಪೂರ್ಣ ಮರೆತಿತ್ತು. ಆದ್ದರಿಂದಲೇ, ಪ್ರವಾದಿಯವರು(ಸ) ಓದಲೇಬೇಕಾದ ಜಾಗಕ್ಕೆ ಹಿರಾ ಗುಹೆಯಿಂದ ಮರಳಿದರು. ಹಾಗೆ ಮರಳುವಾಗ ಆ ಮರಳುವ ಜಾಗ ಎಷ್ಟು ಅಪಾಯಕಾರಿ ಎಂಬುದು ಅವರಿಗೆ ಖಂಡಿತ ಗೊತ್ತಿತ್ತು. ಅವರು ಏನನ್ನು ಓದಲು ಹೊರಟಿದ್ದರೋ ಅದನ್ನು ಆ ಸಮಾಜ ಒಕ್ಕೊರಳಿನಿಂದ ಚಪ್ಪಾಳೆ ತಟ್ಟಿ ಸ್ವಾಗತಿಸುತ್ತದೆ ಎಂದು ನಂಬುವಷ್ಟು ಮುಗ್ಧರೂ ಅವರಾಗಿರಲಿಲ್ಲ. ಒಂದು ವೇಳೆ ಹಿರಾದಲ್ಲಿ ಅವರು ಏನನ್ನು ಕೇಳಿಸಿಕೊಂಡಿದ್ದರೋ ಅದನ್ನು ಸಮಾಜದ ಮುಂದೆ ಹೇಳದೇ ಹಿರಾ ಗುಹೆಯಲ್ಲೇ ಬಿಟ್ಟು ಬರುತ್ತಿದ್ದರೆ ಆ ಸಮಾಜ ಪ್ರವಾದಿಯವರ(ಸ) ಮೇಲೆ ಕಲ್ಲೆಸೆಯುತ್ತಲೂ ಇರಲಿಲ್ಲ. ಯುದ್ಧಕ್ಕೆ ನಿಲ್ಲುತ್ತಲೂ ಇರಲಿಲ್ಲ. ಆದರೆ ಪ್ರವಾದಿ ಹಿರಾ ಎಂಬ ಸುರಕ್ಷಿತ ಪ್ರದೇಶಕ್ಕಿಂತ ಸಮಾಜ ಎಂಬ ಅಸುರಕ್ಷಿತ ಪ್ರದೇಶವನ್ನೇ ಆಯ್ಕೆ ಮಾಡಿಕೊಂಡರು. ಸವಾಲಿಗೆ ಮುಖಾಮುಖಿಯಾದರು. ಅನ್ಯಾಯ, ಅಕ್ರಮ, ಗೊಂದಲ, ರಕ್ತಪಾತ, ಅಶಾಂತಿಗಳಿಗೆ ಈ `ಓದ'ನ್ನು ಪರಿಹಾರವಾಗಿ ಸೂಚಿಸಿದರು. ಅಂತಿಮವಾಗಿ ಆ `ಓದು' ಆ ಸಮಾಜದ ಮೇಲೆ ಯಾವ ಮಟ್ಟಿನ ಪ್ರಭಾವ ಬೀರಿತೆಂದರೆ, ಹೆಣ್ಣನ್ನು ದ್ವೇಷಿಸುತ್ತಿದ್ದ ಅದೇ ಮಂದಿ ಹೆಣ್ಣು ಮಗುವಿಗಾಗಿ ಪ್ರಾರ್ಥಿಸುವಷ್ಟು. ಶ್ರೇಣೀಕೃತ ವ್ಯವಸ್ಥೆಯನ್ನು ಸಹಜ ಧರ್ಮವಾಗಿ ಪ್ರತಿಪಾದಿಸುತ್ತಿದ್ದವರೇ ಮ್ಲೇಚ್ಛನ ಜೊತೆ ಒಂದೇ ಬಟ್ಟಲಲ್ಲಿ ಊಟ ಮಾಡುವಷ್ಟು.  
   ರಮಝಾನ್ ಎಂಬುದು ಅದೇ `ಓದಿನ' ಪುಟ್ಟದೊಂದು ಬೀಜ. ಈ ಬೀಜ ಪ್ರತಿಯೋರ್ವ ಉಪವಾಸಿಗನ ಅಂತರಂಗದಲ್ಲೂ ಮೊಳಕೆಯೊಡೆಯಬೇಕು. ಅಂದು `ಹಿರಾಗುಹೆ ಮತ್ತು ಆ ಸಮಾಜದ ಮಧ್ಯೆ' ಎಷ್ಟು ವ್ಯತ್ಯಾಸಗಳಿದ್ದುವೋ ಅಷ್ಟೇ ವ್ಯತ್ಯಾಸ ಆ ‘ಓದು’ ಮತ್ತು ಇವತ್ತಿನ ಸಮಾಜದ ಮಧ್ಯೆ ಇವತ್ತೂ ಇದೆ. ಆದ್ದರಿಂದಲೇ, ಆ ‘ಓದ’ನ್ನು ಮಸೀದಿ ಎಂಬ ಗುಹೆಯಿಂದ ಹೊರಗೆ ತರಬೇಕು. ಅದನ್ನು ಸಮಾಜದೊಂದಿಗೆ ಮುಖಾಮುಖಿಯಾಗಿಸಬೇಕು. ಅದು ಸಾಧ್ಯವಾದರೆ ಖಂಡಿತ ಮುಂದೆ ಈ ಸಮಾಜವೇ ಆ ‘ಓದನ್ನು’ ಪ್ರೀತಿಸಬಹುದು. ಬಹುಶಃ, ರಮಝಾನ್ ಇವತ್ತಿನ ದಿನಗಳಲ್ಲಿ ನೀಡುವ ಮತ್ತು ನೀಡಬೇಕಾದ ಪ್ರಬಲ ಸಂದೇಶ ಇದು. ರಮಝಾನ್ ಒಂದು ಭರವಸೆ. ಈ ಭರವಸೆ ಪ್ರತಿ ಉಪವಾಸಿಗರನ್ನೂ ಎಚ್ಚರಗೊಳಿಸಿದರೆ ಆ ಬಳಿಕ ಸಮಾಜದಲ್ಲಿ ‘ಅಸುರಕ್ಷಿತ’ ಪ್ರದೇಶ ಇರುವುದಕ್ಕೆ ಸಾಧ್ಯವೇ ಇಲ್ಲ. ನಾವು ಹಿರಾದ ಕಡೆಗಲ್ಲ, ಸಮಾಜದ ಕಡೆಗೆ ಮುಖ ಮಾಡೋಣ. ಭರವಸೆಯೆಂಬ ರಮಝಾನ್ ಸಸಿಯನ್ನು ಪ್ರತಿಯೋರ್ವರ ಅಂತರಂಗದಲ್ಲೂ ನೆಡೋಣ. ಹಿರಾದ ‘ಓದ’ನ್ನು ಸಮಾಜಕ್ಕೂ ಕೇಳಿಸೋಣ.

Friday, 20 June 2014

ಮನೆ ಉರುಳಿಸುವ ಮಳೆಯೂ ಮನೆ ಕಟ್ಟುವ ನಾವೂ..

    ಮರ, ಗಿಡ, ಕಲ್ಲು, ಪ್ರಾಣಿ, ಪಕ್ಷಿ.. ಮುಂತಾದುವುಗಳ ಮೇಲೆ ಆರೋಪ ಹೊರಿಸುವುದು ಯಾಕೆ ಸುಲಭ ಅಂದರೆ, ಅವು ತಿರುಗಿ ಉತ್ತರ ಕೊಡುವುದಿಲ್ಲ. ಮಾನನಷ್ಟ ಮೊಕದ್ದಮೆ ಹೂಡುವುದಿಲ್ಲ. ಆರೋಪಿಸುವವರ ಬಣ್ಣ ಬಯಲು ಮಾಡುವ ಸಾಮರ್ಥ್ಯವೂ ಇರುವುದಿಲ್ಲ. ಆದ್ದರಿಂದಲೇ ಅನೇಕ ಬಾರಿ ಮನುಷ್ಯರಾದ ನಾವು ಮಳೆಯ ಮೇಲೆ, ಅಣೆಕಟ್ಟು, ತಂಬಾಕಿನ ಮೇಲೆ ಆರೋಪ ಹೊರಿಸಿ ಸುಮ್ಮನಾಗುತ್ತೇವೆ. ಕಳೆದ ವಾರ ತಂಬಾಕು ಕಂಪೆನಿಗಳನ್ನು ತರಾಟೆಗೆತ್ತಿಕೊಳ್ಳುವ ವರದಿಯೊಂದು ಬಿಡುಗಡೆಯಾಯಿತು. ತಂಬಾಕು ಕಂಪೆನಿಗಳ ಜಾಣ್ಮೆ, ಪ್ರಚಾರ ವೈಖರಿಯಿಂದಾಗಿ ಈ ದೇಶದ 15ರಿಂದ 24 ವರ್ಷದೊಳಗಿನ 27% ಮಂದಿ ತಂಬಾಕಿನ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಳಲಾಯಿತು. ತಂಬಾಕು ಸಂಬಂಧಿ ಕಾಯಿಲೆಗಾಗಿ 2011ರಲ್ಲಿ ಒಂದು ಲಕ್ಷ  ಕೋಟಿ ರೂಪಾಯಿ ವೆಚ್ಚವಾಗಿದ್ದು, ವಿಶ್ವದಲ್ಲಿಯೇ ಎರಡನೇ ಅತಿ ದೊಡ್ಡ ತಂಬಾಕು ಗ್ರಾಹಕರಿರುವ ದೇಶವಾಗಿ ಭಾರತ ಗುರುತಿಗೀಡಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ. ಇನ್ನು, ಮಳೆಗಾಲದಲ್ಲಿ ಆಗುವ ಸಾವು, ಹಾನಿ, ಅನಾಹುತಗಳ ಎಲ್ಲ ಜವಾಬ್ದಾರಿಯನ್ನೂ ಮಳೆ ಎಂಬ ಬಾಯಿ ಬಾರದ ಕೈಗೂ ಸಿಗದ ಆರೋಪಿಯ ಮೇಲೆ ಹೊರಿಸುವ ಪ್ರಯತ್ನಗಳು ಈಗಾಗಲೇ ಆರಂಭವಾಗಿವೆ. ಮುಂದಿನ ದಿನಗಳಲ್ಲಿ, ‘ಮಳೆಯ ಆರ್ಭಟಕ್ಕೆ ಕುಸಿದು ಬಿದ್ದ ಮನೆಗಳು, ಜಲಾವೃತಗೊಂಡ ನಗರ, ಮಳೆ ನೀರಿಗೆ ಕೊಚ್ಚಿ ಹೋದ ರಸ್ತೆಗಳು..’ ಮುಂತಾದ ಬಹುವಿಧ ಶೀರ್ಷಿಕೆಗಳಲ್ಲಿ ಮಾಧ್ಯಮಗಳಲ್ಲಿ ವರದಿಗಳು ಖಂಡಿತ ಪ್ರಕಟವಾಗಲಿವೆ. ಅಧಿಕಾರಿಗಳು ಭೇಟಿ ಕೊಟ್ಟ ಸುದ್ದಿಗಳು ಚಿತ್ರ ಸಮೇತ ಪ್ರಕಟವಾಗಲಿವೆ. ಮಳೆಯಿಂದಾಗಿ ನದಿ-ತೊರೆಗಳನ್ನು ದಾಟಲಾಗದೆ ತೂಗು ಸೇತುವೆಯ ಮೂಲಕವೋ ಕಡಿದಾದ ದಾರಿಗಳ ಮೂಲಕವೋ ತೆರಳಬೇಕಾದ ಶಾಲಾ ಮಕ್ಕಳ ಸಂಕಟಗಳನ್ನು ಮುಂದಿನ ದಿನಗಳಲ್ಲಿ ನಾವು ಓದಲಿದ್ದೇವೆ. ಕೊನೆಗೆ, 'ಈ ವರ್ಷ ಎಷ್ಟು ಸೆಂಟಿವಿೂಟರ್ ಮಳೆಯಾಗಿದೆ ಮತ್ತು ಅದರಿಂದ ಆಗಿರುವ ಹಾನಿಗಳೆಷ್ಟು' ಎಂಬ ಅಂಕಿ-ಅಂಶಗಳನ್ನು ಅಧಿಕಾರಿಗಳು ಬಿಡುಗಡೆಗೊಳಿಸುವ ಮೂಲಕ ಈ ವಿಷಯಕ್ಕೆ ಮುಕ್ತಾಯವನ್ನು ಘೋಷಿಸಲಾಗುತ್ತದೆ.
 ನಿಜವಾಗಿ, ಮಳೆ ಸ್ವಯಂ ಕ್ರೂರಿಯೇನೂ ಅಲ್ಲ. ಒಂದು ವೇಳೆ ಅದು ಕ್ರೂರಿಯೇ ಆಗಿರುತ್ತಿದ್ದರೆ, ಅದರ ಆಗಮನಕ್ಕಾಗಿ ಜನರು ಕಾಯುತ್ತಿರಲಿಲ್ಲ. ಮಳೆಯನ್ನು ಅತ್ಯಂತ ಹೆಚ್ಚು ಪ್ರೀತಿಸುವುದು ಮಕ್ಕಳು. ಮಳೆ ಹನಿಯಲು ಪ್ರಾರಂಭಿಸಿತೆಂದರೆ, ಮಕ್ಕಳು ಅಂಗಳದಲ್ಲಿ ಕುಣಿಯತೊಡಗುತ್ತಾರೆ. ತಮ್ಮಿಷ್ಟದ ಆಟ ಆಡುತ್ತಾರೆ. ಒದ್ದೆ ಮಾಡುವುದು ಮಳೆಯ ಗುಣಲಕ್ಷಣ. ಸಾಮಾನ್ಯವಾಗಿ ನೀರಿನಲ್ಲಿ ಒದ್ದೆಯಾಗುವುದನ್ನು ಮಕ್ಕಳು ಇಷ್ಟಪಡುವುದಿಲ್ಲ. ಆದರೆ, ಮಳೆಯಲ್ಲಿ ಒದ್ದೆಯಾಗುವುದು ಮಕ್ಕಳಿಗೆ ಅತ್ಯಂತ ಇಷ್ಟ. ಮಳೆ ಬಂತೆಂದರೆ ರೈತ ಖುಷಿಯಾಗುತ್ತಾನೆ. ಭೂಮಿ ಹಸಿರಾಗುತ್ತದೆ. ನೀರಿನ ಹಾಹಾಕಾರವೂ ಮಾಯವಾಗುತ್ತದೆ. ಅಷ್ಟಕ್ಕೂ, ಮಳೆಯೇನೂ ಸೂಚನೆ ಕೊಡದೇನೇ ದಿಢೀರ್ ಆಗಿ ಭೂಮಿಗೆ ಅಪ್ಪಳಿಸುವುದಿಲ್ಲವಲ್ಲ. ಮಳೆ ಆಗಮನದ ಬಗ್ಗೆ ಮಾಧ್ಯಮಗಳಲ್ಲಿ ತಿಂಗಳುಗಳ ಮೊದಲೇ ಸೂಚನೆ ಸಿಗುತ್ತದೆ. ಈ ಬಾರಿ ಮಳೆಯ ಪ್ರಮಾಣ ಎಷ್ಟಿರಬಹುದು ಎಂಬ ಬಗ್ಗೆ ಮೊದಲೇ ವರದಿಗಳು ಬರುತ್ತವೆ. ಹೀಗಿದ್ದೂ, ಒಂದು ನಿಶ್ಚಿತ ಅವಧಿಯಲ್ಲಿ ಮತ್ತು ನಿಶ್ಚಿತ ಪ್ರಮಾಣದಲ್ಲಿ ಸುರಿಯುವ ಮಳೆಯನ್ನೇ ಅಂತಿಮವಾಗಿ ನಾವೇಕೆ ಆರೋಪಿ ಸ್ಥಾನದಲ್ಲಿ ಕೂರಿಸಬೇಕು? ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ನಾವೇನು ವ್ಯವಸ್ಥೆ ಮಾಡಿದ್ದೇವೆ? ತೋಡುಗಳನ್ನು ಮುಚ್ಚಿ, ಅದರ ಮೇಲೆ ಕಾಂಕ್ರೀಟು ಕಟ್ಟಡಗಳನ್ನು ಕಟ್ಟಿರುವ ನಮಗೆ ಮಳೆಯನ್ನು ದೂರುವುದಕ್ಕೆ ಎಷ್ಟು ಅರ್ಹತೆಯಿದೆ? ನಗರಗಳು ಜಲಾವೃತವಾಗುವುದು ಮಳೆಯಿಂದಲೋ ಅಥವಾ ನಮ್ಮ ಧನದಾಹಿ ಜೀವನ ರೀತಿಯಿಂದಲೋ ಎಂದೊಮ್ಮೆ ನಾವು ಸ್ವಯಂ ಅವಲೋಕಿಸಿದರೇನು? ಮಳೆ ಹರಿದು ಹೋಗಬೇಕಾದಲ್ಲೆಲ್ಲಾ ಮನೆ, ಕಟ್ಟಡಗಳನ್ನು ಕಟ್ಟಿ ನೀರನ್ನು ತಡೆಗಟ್ಟುವವರು ನಾವೇ. ಆ ಬಳಿಕ ಮಳೆಯಿಂದಾಗಿ ಮನೆ ಕುಸಿತ, ನಗರ ಜಲಾವೃತ ಎಂದು ಆರೋಪಿಸುವವರೂ ನಾವೇ. ಹಾಗಂತ, ತೋಡುಗಳಿಗೆ ಸೇತುವೆ ನಿರ್ಮಿಸಿ ಕೊಡಬೇಕಾದುದು ಮಳೆ ಅಲ್ಲವಲ್ಲ. ವರ್ಷದ ಮೂರು ತಿಂಗಳಲ್ಲಷ್ಟೇ ಸುರಿದು ಹೊರಟು ಹೋಗುವ ಮಳೆ ಉಳಿದ 9 ತಿಂಗಳ ವರೆಗೆ ಮೌನವಾಗುತ್ತದೆ. ಆ ಸಂದರ್ಭದಲ್ಲಿ ಸೇತುವೆ ನಿರ್ಮಿಸಲು ಅಥವಾ ದುರ್ಬಲ ಗುಡಿಸಲುಗಳನ್ನು ದುರಸ್ತಿಗೊಳಿಸಲು ಮುಂದಾಗಬೇಕಾದುದು ಇಲ್ಲಿನ ವ್ಯವಸ್ಥೆ. ಆದರೆ ಅದನ್ನು ಮಾಡದ ವ್ಯವಸ್ಥೆ ತನ್ನ ಈ ವೈಫಲ್ಯವನ್ನು ಮಳೆಯ ಮೇಲೆ ಹೊರಿಸುವುದು ಎಷ್ಟು ಸಮರ್ಥನೀಯ? ಇದು ಕೇವಲ ಮಳೆಗೆ ಮಾತ್ರ ಸೀಮಿತವಲ್ಲ. ತಂಬಾಕು ಮಾರಾಟವು ವ್ಯಾಪಕವಾಗುತ್ತಿರುವುದಕ್ಕೆ ಕಂಪೆನಿಗಳ ಮಾರಾಟ ವಿಧಾನವೇ ಕಾರಣ ಎಂದೂ ಹೇಳಲಾಗುತ್ತಿದೆ. ಅದು ಗ್ರಾಹಕರನ್ನು ಸೆಳೆಯುವುದಕ್ಕೆ ಅಗ್ಗದ ಮತ್ತು ಭ್ರಮೆಯ ವಿಧಾನಗಳನ್ನು ಬಳಸುತ್ತಿದೆಯಂತೆ. ನಯವಾದ ಸುಳ್ಳನ್ನು ತನ್ನ ಮಾರಾಟ ತಂತ್ರವಾಗಿ ಉಪಯೋಗಿಸುತ್ತಿದೆಯಂತೆ. ಅಂದಹಾಗೆ, ಯಾವ ಕಂಪೆನಿಯೂ ಸರ್ವತಂತ್ರ ಸ್ವತಂತ್ರ ಅಲ್ಲವಲ್ಲ. ಅದಕ್ಕೆ  ಸರಕಾರ ಪರವಾನಿಗೆ ಕೊಡಬೇಕು. ಪರವಾನಿಗೆ ಕೊಡುವುದಕ್ಕಿಂತ ಮೊದಲು ಆ ಉತ್ಪನ್ನ ಮಾರಾಟ ಯೋಗ್ಯವೇ ಎಂಬುದು ಖಚಿತಗೊಳ್ಳಬೇಕು. ಗ್ರಾಹಕರನ್ನು ಅನಾರೋಗ್ಯಕ್ಕೆ ದೂಡುವ ಯಾವ ಅಂಶವಿದ್ದರೂ ಅದನ್ನು ತಡೆಯುವ ಎಲ್ಲ ಸ್ವಾತಂತ್ರ್ಯವೂ ವ್ಯವಸ್ಥೆಗಿದೆ. ಇಷ್ಟಿದ್ದೂ ನಾವು ಕಂಪೆನಿಗಳನ್ನು ದೂರುತ್ತೇವಲ್ಲ..
 ಏನೇ ಆಗಲಿ, ಈ ಮಳೆ, ಮರ, ಕಲ್ಲುಗಳನ್ನು ಆರೋಪಿ ಸ್ಥಾನದಲ್ಲಿ ಕೂರಿಸುವ ಮೂಲಕ ಒಂದೊಮ್ಮೆ ನಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕಬಹುದಾದರೂ ಅವು ನಮ್ಮನ್ನೆಂದೂ ಕ್ಷಮಿಸದು. ಒಂದು ವೇಳೆ ಅವು ಮಾತನಾಡುವ ಸಾಮರ್ಥ್ಯ 
ಗಳಿಸಿಕೊಂಡಿರುತ್ತಿದ್ದರೆ ಇಷ್ಟರಲ್ಲೇ ಅವು ನಮ್ಮನ್ನು ಕಂಬಿಯೆಣಿಸುವಂತೆ ಮಾಡಿ ಬಿಡುತ್ತಿತ್ತೋ ಏನೋ. ಆದ್ದರಿಂದ, ಮಳೆಯನ್ನು ದೂರದಿರೋಣ. ನಮ್ಮ ತಪ್ಪುಗಳನ್ನು ತಿದ್ದಿಕೊಳ್ಳೋಣ.

Tuesday, 10 June 2014

ಮಿರ್ಝಾ ಎತ್ತಿರುವ ಪ್ರಶ್ನೆಗಳು ಮತ್ತು ಅನಾಥ ಗುರುತಚೀಟಿ

ಮಿರ್ಜಾ
   ಇನ್ನೂ ದೃಢಪಟ್ಟಿಲ್ಲದ ಆರೋಪವೊಂದರ ಹೆಸರಿನಲ್ಲಿ ಮಹಾರಾಷ್ಟ್ರದ ಪುಣೆಯ ಶೇಖ್ ಮುಹ್ಸಿನ್ ಸಾದಿಕ್ ಎಂಬ ಟೆಕ್ಕಿಯನ್ನು (ಕಂಪ್ಯೂಟರ್ ಎಂಜಿನಿಯರ್) ಹಿಂದೂ ರಾಷ್ಟ್ರ ಸೇನೆಯ ಕಾರ್ಯಕರ್ತರು ಕೊಲೆಗೈದ ಮರುದಿನವೇ ಇತ್ತ ಬೆಂಗಳೂರಿನಲ್ಲಿ ಎಜಾಝ್ ಅಹ್ಮದ್ ಮಿರ್ಝಾ ಎಂಬ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್.ಐ.ಎ.) ನಿರಪರಾಧಿ ಎಂದು ಘೋಷಿಸಿದೆ. ಹಾಗಂತ, ಈ ಎರಡೂ ಪ್ರಕರಣಗಳು ಪರಸ್ಪರ ಸಂಬಂಧ ಹೊಂದಿವೆ ಎಂದಲ್ಲ. ರಾಜ್ಯದ ಪತ್ರಕರ್ತರು ಮತ್ತು ರಾಜಕಾರಣಿಗಳ ಹತ್ಯೆಗೆ ಸಂಚು ನಡೆಸಿದ್ದಾರೆಂದು ಆರೋಪಿಸಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಪತ್ರಕರ್ತ ಮುತೀಉರ್ರಹ್ಮಾನ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿ.ಆರ್.ಡಿ.ಓ.) ಕಿರಿಯ ಸಂಶೋಧಕ ಎಜಾಝ್ ಮಿರ್ಝಾ ಸೇರಿದಂತೆ 15 ಮಂದಿಯನ್ನು 2012 ಆಗಸ್ಟ್ 29ರಂದು ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ಆ ಬಳಿಕ ಮಾಧ್ಯಮಗಳಲ್ಲಿ ಭಯೋತ್ಪಾದನೆಯ ಹತ್ತು-ಹಲವು ಚಿತ್ರಕತೆಗಳು ಪ್ರಕಟವಾದುವು. ಪತ್ರಕರ್ತ ಮುತೀಉರ್ರಹ್ಮಾನ್ ಸಿದ್ದೀಕಿಯು ಇಡೀ ಭಯೋತ್ಪಾದಕ ಸಂಚಿನ ರೂವಾರಿ ಎಂದು ಕೆಲವು ಪತ್ರಿಕೆಗಳು ಬರೆದುವು. ಕೃಷ್ಣರಾಜ ಸಾಗರ ಅಣೆಕಟ್ಟನ್ನು ಸ್ಫೋಟಿಸುವ ಸಂಚನ್ನು ಈತ ಹೆಣೆದಿದ್ದ ಅಂದುವು. ಪತ್ರಕರ್ತ, ಸಂಶೋಧಕನ ವೇಷದಲ್ಲಿ ಭಯೋತ್ಪಾದಕರು ಹೇಗೆ ವ್ಯವಸ್ಥೆಯೊಳಗೆ ನುಸುಳಿಕೊಳ್ಳುತ್ತಾರೆ ಎಂಬ ಸಂಶೋಧನಾತ್ಮಕ ವರದಿಯನ್ನು ಭೀತಿಯ ಪದಗಳಲ್ಲಿ ಮಂಡಿಸಿದುವು. ಮಾಧ್ಯಮ ಭಯೋತ್ಪಾದನೆಯ ಪ್ರಭಾವ ಎಷ್ಟಿತ್ತೆಂದರೆ ಸ್ವತಃ ಡೆಕ್ಕನ್ ಹೆರಾಲ್ಡ್ ಪತ್ರಿಕೆಯೇ ಒಂದು ಹಂತದ ವರೆಗೆ ತಬ್ಬಿಬ್ಬಾಯಿತು. ಇದಾಗಿ ಆರು ತಿಂಗಳುಗಳ ಬಳಿಕ ಮುತೀಉರ್ರಹ್ಮಾನ್‍ನನ್ನು ಎನ್.ಐ.ಏ. ನಿರಪರಾಧಿಯೆಂದು ಘೋಷಿಸಿತು. ಇದೀಗ ಮಿರ್ಝಾನನ್ನು ಅದು ನಿರಪರಾಧಿಯೆಂದು ಸಾರಿದೆ. ಇದೇ ಸಂದರ್ಭದಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಸಾದಿಕ್‍ನನ್ನು ಬರ್ಬರವಾಗಿ ಕೊಲೆಗೈಯಲಾಗಿದೆ. ಶಿವಾಜಿ ಮತ್ತು ಬಾಳಾಠಾಕ್ರೆಯ ವಿರುದ್ಧ ಫೇಸ್‍ಬುಕ್‍ನಲ್ಲಿ ಅಸಭ್ಯ ಸ್ಟೇಟಸ್ ಹಾಕಿದ್ದಾನೆ ಎಂಬುದು ಈತನ ಮೇಲಿನ ಆರೋಪ. ಆದರೆ, ಕಿಡಿಗೇಡಿಗಳು ಆತನ ಹೆಸರಿನಲ್ಲಿ ನಕಲಿ ಖಾತೆಯನ್ನು ತೆರೆದು ಈ ಸ್ಟೇಟಸ್ ಅನ್ನು ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಏನೇ ಆದರೂ, ಇದರ ಸತ್ಯಾಂಶ ಹೊರಬರುವ ಮೊದಲೇ ಆತನನ್ನು ಕೊಲೆ ಮಾಡಲಾಗಿದೆ.
 ಅಂದ ಹಾಗೆ, ಇಲ್ಲಿರುವ ಎರಡೂ ಘಟನೆಗಳಲ್ಲೂ ಒಂದು ಪ್ರಮುಖ ಸಾಮ್ಯತೆಯಿದೆ. ಅದುವೇ ಶಂಕೆ. ಏಜಾಝ್ ಮಿರ್ಝಾ ಅಥವಾ ಮುತೀಉರ್ರಹ್ಮಾನ್‍ನ ಬಂಧನದಲ್ಲೂ ಈ ಶಂಕೆಯೇ ಪ್ರಧಾನ ಪಾತ್ರ ವಹಿಸಿತ್ತು. ಇವರ ಬಂಧನಕ್ಕೆ ಪೂರಕವಾಗಿ ಪೊಲೀಸರು ಸಮಾಜದ ಮುಂದೆ ಯಾವ ಸಾಕ್ಷ್ಯವನ್ನೂ ಮಂಡಿಸಿರಲಿಲ್ಲ. ಪತ್ರಿಕಾಗೋಷ್ಠಿ ಕರೆದು ಒಂದೆರಡು ಆರೋಪಗಳನ್ನು ಹೊರಿಸಿದ್ದರೇ ಹೊರತು ಆ ಆರೋಪ ಹುಟ್ಟು ಹಾಕುವ ಹತ್ತು-ಹಲವು ಪ್ರಶ್ನೆಗಳಿಗೆ ಆವತ್ತಾಗಲಿ ಆ ಬಳಿಕವಾಗಲಿ ಉತ್ತರಿಸುವ ಪ್ರಯತ್ನವನ್ನೇ ಮಾಡಿಲ್ಲ. ಆ ನಂತರ ಮಾಧ್ಯಮಗಳಲ್ಲಿ ಪ್ರಕಟವಾದದ್ದೆಲ್ಲ ಶಂಕಿತ ಬರಹಗಳೇ. ಇದೀಗ ಪುಣೆಯ ಟೆಕ್ಕಿಯ ಹತ್ಯೆಗೂ ಇಂಥದ್ದೇ ಶಂಕೆ ಕಾರಣವಾಗಿದೆ. ಆತನ ಮೇಲೆ ಶಂಕೆ ವ್ಯಕ್ತಪಡಿಸಲಾಗಿತ್ತೇ ಹೊರತು ಆತನೇ ತಪ್ಪಿತಸ್ಥ ಎಂದು ಖಚಿತವಾಗಿ ಪೊಲೀಸರೂ ಹೇಳಿರಲಿಲ್ಲ. ಆದರೆ ಈ ದೇಶದಲ್ಲಿ ಮುಸ್ಲಿಮ್ ವ್ಯಕ್ತಿಯೋರ್ವ ಶಂಕೆಗೆ ಗುರಿಯಾಗುವುದು ಎಷ್ಟು ಅಪಾಯಕಾರಿ ಎಂಬುದು ಸಾದಿಕ್‍ನ ಮೂಲಕ ಮತ್ತೊಮ್ಮೆ ಸ್ಪಷ್ಟವಾಗಿದೆ. ನಿಜವಾಗಿ, ಸಾದಿಕ್‍ನ ಮೇಲೆ ತಕ್ಷಣಕ್ಕೆ ಶಂಕೆ ವ್ಯಕ್ತಪಡಿಸುವುದಕ್ಕೆ ಸಣ್ಣದೊಂದು ಆಧಾರವಾದರೂ ಇತ್ತು. ಆದರೆ ಹೆಚ್ಚಿನ ಬಾರಿ ಮುಸ್ಲಿಮ್ ಯುವಕರು ಶಂಕಿತಗೊಳ್ಳುವುದಕ್ಕೆ ಇಷ್ಟು ಆಧಾರಗಳೂ ಇರುವುದಿಲ್ಲ. ಈ ದೇಶದ ಉದ್ದಗಲದಿಂದ ಭಯೋತ್ಪಾದನೆ ಮತ್ತು ಶಂಕೆಯ ಹೆಸರಲ್ಲಿ ಅನೇಕ ಮುಸ್ಲಿಮ್ ಯುವಕರನ್ನು ಬಂಧಿಸಲಾಗಿದೆ. ಅನೇಕ ಬಾರಿ ಅವರ ಬಗ್ಗೆ ಅನುಮಾನ ಪಡುವುದಕ್ಕೆ ಇರುವ ಏಕೈಕ ಕಾರಣ ಅವರ ಮುಸ್ಲಿಮ್ ಐಡೆಂಟಿಟಿ. ಮುಸ್ಲಿಮ್ ಹೆಸರು ಮತ್ತು ಚಹರೆಯನ್ನು ಹೊಂದಿರುವ ವ್ಯಕ್ತಿಯ ಮೇಲೆ ಅನುಮಾನ ಬರುವುದು ಸಹಜ ಎಂಬ ವಾತಾವರಣವನ್ನು ಈ ದೇಶದಲ್ಲಿ ವ್ಯವಸ್ಥಿತವಾಗಿ ಹುಟ್ಟು ಹಾಕಲಾಗಿದೆ. ಆದ್ದರಿಂದಲೇ ಮಿರ್ಝಾ, ಮುತೀಅïರನ್ನು ಪೊಲೀಸರು ಭಯೋತ್ಪಾದಕರೆಂದು ಕರೆದಾಗ ಅದನ್ನು ಸಮರ್ಥಿಸುವಂತೆ ಮಾಧ್ಯಮ ಕ್ಷೇತ್ರದ ಕೆಲವರು ವರ್ತಿಸಿದ್ದು. ಈ ಬಂಧಿತರಲ್ಲಿ ಭಯೋತ್ಪಾದನೆಯ ರೋಗಾಣುಗಳು ಇವೆಯೇ ಎಂಬ ಪತ್ತೆದಾರಿಕೆಯಲ್ಲಿ ತೊಡಗಿದ್ದು.
 ಭಯೋತ್ಪಾದಕನೆಂಬ ಗುರುತು ಚೀಟಿಯನ್ನು ಎರಡು ವರ್ಷಗಳ ವರೆಗೆ ಕೊರಳಿಗೆ ತೂಗು ಹಾಕಿಕೊಂಡ ಮಿರ್ಝಾನಿಗೆ ಇದೀಗ ನಿರಪರಾಧಿ ಎಂಬ ಗುರುತು ಚೀಟಿ ಲಭ್ಯವಾಗಿದೆ. ಹಾಗಂತ, ಆತ ಆ ಭಯೋತ್ಪಾದಕ ಗುರುತು ಚೀಟಿಯನ್ನು ಕೇಳಿ ಪಡೆದಿರಲಿಲ್ಲ ಅಥವಾ ಸ್ವಯಂ ಸಂಪಾದಿಸಿಯೂ ಇರಲಿಲ್ಲ. ಅದನ್ನು ಸ್ಥಾಪಿತ ಹಿತಾಸಕ್ತಿಗಳು ಬಲವಂತವಾಗಿ ಆತನ ಕೊರಳಿಗೆ ನೇತು ಹಾಕಿದ್ದುವು. ಆತ ಧರಿಸಲು ಒಪ್ಪದೇ ಇದ್ದಾಗ ಆತನ ಮೇಲೆ ಹಿಂಸೆ ಎಸಗಲಾಯಿತು. ಖಾಲಿ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಾಯಿಸಲಾಯಿತು. ನ್ಯಾಯಾಧೀಶರ ಮುಂದೆ ಈ ಗುರುತು ಚೀಟಿಯನ್ನು ಸಮರ್ಥಿಸಿಕೊಳ್ಳುವಂತೆ ಬೆದರಿಕೆ ಹಾಕಲಾಯಿತು. ಅದೇ ವೇಳೆ, ನಾಗರಿಕ ಜಗತ್ತು ಮತ್ತು ಆ ಜಗತ್ತಿನಲ್ಲಿ ಪ್ರಾಬಲ್ಯ ಸ್ಥಾಪಿಸಿರುವ ಮಾಧ್ಯಮದ ಮಂದಿಯೂ ಆತನ ಆ ಗುರುತು ಚೀಟಿಯನ್ನು ಅಸಲಿ ಎಂದೇ ಕರೆದರು. ಆ ಗುರುತು ಚೀಟಿ ಇಡೀ ರಾಜ್ಯವನ್ನೇ ಧ್ವಂಸಗೊಳಿಸುವಷ್ಟು ಭೀಕರ ರೂಪದ್ದು ಅಂದರು. ಆತನೊಂದಿಗೆ ಸಲುಗೆಯಿಂದಿದ್ದ ಗೆಳೆಯರೇ ಆ ಗುರುತನ್ನು ಕಂಡು ಭಯಪಟ್ಟರು. ಮನೆ ಸ್ಮಶಾನವಾಯಿತು. ಡಿಆರ್‍ಡಿಓ ಅಂತೂ ಆತನನ್ನು ಕೆಲಸದಿಂದಲೇ ವಜಾಗೊಳಿಸಿತು. ಹೀಗೆ ಪಡಬಾರದ ಸಂಕಟವನ್ನು ಅನುಭವಿಸಿದ ಆತನಿಗೆ ಇದೀಗ 'ನಿರಪರಾಧಿ' ಎಂಬ ಗುರುತು ಚೀಟಿಯನ್ನು ನೀಡಲಾಗಿದೆ. ಆದರೆ, ಇದನ್ನು ಧರಿಸುವ ಮೊದಲು ಈ ಮೊದಲಿನ ಗುರುತು ಚೀಟಿಯ ಇತ್ಯರ್ಥ  ಆಗಬೇಕಾಗಿದೆ. ಅದನ್ನು ಧರಿಸಬೇಕಾದವರು ಯಾರೆಲ್ಲ? ಅವರೇಕೆ ಇದೀಗ ಅದನ್ನು ಧರಿಸಿಕೊಳ್ಳುವ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ? ಎರಡು ವರ್ಷಗಳ ವರೆಗೆ ಧರಿಸಿಕೊಂಡು ಓಡಾಡಿದ ಆತನ ಗುರುತು ಚೀಟಿಯನ್ನು ಕನಿಷ್ಠ ಎರಡು ದಿನಗಳ ಮಟ್ಟಿಗಾದರೂ ಧರಿಸಿಕೊಂಡು ಓಡಾಡಲು ಇವರು ಮುಂದೆ ಬರುತ್ತಿಲ್ಲವೇಕೆ? ಮಿರ್ಝಾ ನಿರಪರಾಧಿ ಎಂದಾದರೆ, ಆತನನ್ನು ಭಯೋತ್ಪಾದಕನೆಂದು ಕರೆದವರು ಏನಾಗಬೇಕು? ಅವರ ಕೊರಳಿಗೆ ಈ ಸಮಾಜ ಯಾವ ಗುರುತನ್ನು ನೇತು ಹಾಕಬೇಕು?
  
ಸಾದಿಕ್

ಏನೇ ಆದರೂ, ಮಿರ್ಝಾ ಆಗಲಿ, ಸಾದಿಕ್ ಆಗಲಿ  ಸಮಾಜವೆಂಬ ನಾವೇ ಹುಟ್ಟು ಹಾಕಿರುವ ಭ್ರಮೆಯೊಂದರ ಬಲಿಪಶುಗಳು. ಅವರು ಶಂಕಿತರಾದದ್ದು ತಮ್ಮ ಕೃತ್ಯಗಳಿಂದಲ್ಲ, ನಮ್ಮ ಭ್ರಮೆಗಳಿಂದ. ಈ ಭ್ರಮೆಯು ಸಾದಿಕ್‍ನ ಜೀವ ತೆಗೆದರೆ, ಮಿರ್ಝಾನ ಅತ್ಯಮೂಲ್ಯ ಸಂತಸವನ್ನೂ ಆಯುಷ್ಯವನ್ನೂ ಕಸಿದುಕೊಂಡಿದೆ. ಮಾತ್ರವಲ್ಲ, ಇಂಥ ಅನೇಕಾರು ಮಿರ್ಝಾರ ಬದುಕನ್ನು ಅದು ಇವತ್ತೂ ಕಸಿದುಕೊಳ್ಳುತ್ತಲೂ ಇವೆ. ಒಂದು ವೇಳೆ ಸಾದಿಕ್‍ನ ಮೇಲಿದ್ದ ಶಂಕೆ ನಿಜವೇ ಆಗಿರುತ್ತಿದ್ದರೂ ಆತನಿಗೆ ಕೆಲವು ತಿಂಗಳುಗಳ ಶಿಕ್ಷೆಯಷ್ಟೇ ಆಗುತ್ತಿತ್ತು. ಆದರೆ ನಾವು ಬಿತ್ತಿರುವ ಭ್ರಮೆಯು ಯಾವ ಪ್ರಮಾಣದಲ್ಲಿದೆಯೆಂದರೆ, ಕೊಲೆಯೇ ನಡೆಸುವಷ್ಟು ಮತ್ತು ಅದನ್ನು ನಿರ್ಲಜ್ಜವಾಗಿ ಸಮರ್ಥಿಸುವಷ್ಟು. ಇವತ್ತು ನಿರಪರಾಧಿ ಮಿರ್ಝಾ ಎತ್ತಿರುವ ಪ್ರಶ್ನೆಯನ್ನು ನಾಳೆ ಸಾದಿಕ್‍ನೂ ಎತ್ತಬಹುದು. ಆದರೆ ಉತ್ತರಿಸುವವರು ಯಾರು?

Saturday, 7 June 2014

ಮಹೇಶ್ವರಿ, ಶಿಲ್ಪ, ಶ್ರೀನಿವಾಸ ಮತ್ತು ನಾವು

   ಪ್ರೀತಿ, ಪ್ರೇಮಗಳ ಕಾರಣದಿಂದಾಗಿ ಈ ದೇಶದಲ್ಲಿ ಆಗುತ್ತಿರುವ ಹತ್ಯೆ ಮತ್ತು ಆತ್ಮಹತ್ಯೆಗಳ ಸಂಖ್ಯೆ ಸಣ್ಣದೇನೂ ಅಲ್ಲ. ಪತ್ರಿಕೆಗಳು ಇಂಥ ಸುದ್ದಿಗಳನ್ನು ಪ್ರತಿದಿನ ಹೊತ್ತುಕೊಂಡೇ ಬರುತ್ತವೆ. ಅವು ಇವತ್ತು ಎಷ್ಟು ಮಾಮೂಲಿ ಆಗಿಬಿಟ್ಟಿವೆ ಎಂದರೆ ಹೆಚ್ಚಿನ ಬಾರಿ ಅವು ಓದುಗರ ಗಮನವನ್ನೇ ಸೆಳೆಯುತ್ತಿಲ್ಲ. ಪತ್ರಿಕೆಗಳ ಒಳಪುಟಗಳಲ್ಲಿ ಪ್ರಕಟವಾಗುವಷ್ಟು ಸಹಜ ಅನ್ನಿಸಿಕೊಂಡಿರುವ ಇಂಥ ಪ್ರಕರಣಗಳು ಓದುಗರಲ್ಲಿ ಅಪಾರ ಕುತೂಹಲವನ್ನು ಇವತ್ತು ಉಳಿಸಿಕೊಂಡೂ ಇಲ್ಲ. ಓಡಿಹೋದ ಅಥವಾ ಆತ್ಮಹತ್ಯೆ ಮಾಡಿಕೊಂಡ ಯುವ ಜೋಡಿಯನ್ನು ಅಪರಾಧಿ ಸ್ಥಾನದಲ್ಲಿ ಕೂರಿಸಿ, ಅವರ ನಿರ್ಧಾರಕ್ಕೆ ನಾಲ್ಕು ಬೈಗುಳಗಳನ್ನು ಬೈಯ್ದು ನಾವೆಲ್ಲ ಸುಮ್ಮನಾಗುತ್ತೇವೆ. ಪ್ರೀತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಹೆತ್ತವರನ್ನೇ ತೊರೆಯುವ ಹದಿಹರೆಯದ ಆವೇಶವನ್ನು ಖಂಡಿಸುತ್ತೇವೆ. ನಿಜವಾಗಿ, ಪರಸ್ಪರ ಪ್ರೀತಿಸುವ ಯುವ ಜೋಡಿಯೊಂದು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೋ ಪರಾರಿಯಾಗುವುದಕ್ಕೋ ನಿರ್ಧರಿಸುವುದರಲ್ಲಿ ಆ ಜೋಡಿಯ ಪಾತ್ರ ಮಾತ್ರ ಇರುವುದಲ್ಲ. ಅವರಿಗಿಂತ ದೊಡ್ಡ ಪಾತ್ರವನ್ನು ಈ ಸಮಾಜ ನಿರ್ವಹಿಸುತ್ತದೆ. ಆದರೆ ಅದನ್ನು ಗುರುತಿಸಿ, ಸಮಾಜವನ್ನು ತರಾಟೆಗೆ ತೆಗೆದುಕೊಳ್ಳುವುದಕ್ಕೆ ಹದಿಹರೆಯಕ್ಕೆ ಸಾಧ್ಯವಾಗುವುದಿಲ್ಲ. ತಮ್ಮ ಪ್ರೇಮವು ಗಲ್ಲು ಶಿಕ್ಷೆಗೆ ಅರ್ಹವಾದ ಅಪರಾಧ ಎಂಬ ತಪ್ಪಿತಸ್ಥ ಭಾವನೆಯಲ್ಲಿ ಇಂಥ ಜೋಡಿಗಳು ಹೆಚ್ಚಿನ ಬಾರಿ ಕುಗ್ಗಿ ಹೋಗುವುದೇ ಹೆಚ್ಚು. ಹೀಗೆ ಸಮಾಜವನ್ನು ಎದುರಿಸುವ ಸಾಮರ್ಥ್ಯವಿಲ್ಲದೇ ಓಡಿ ಹೋಗುವ ಅಥವಾ ಸಾವಿಗೆ ಶರಣಾಗುವ ಯುವ ಜೋಡಿಗಳ ಪ್ರಕರಣಗಳು ಇವತ್ತಿನ ದಿನಗಳಲ್ಲಿ ಮತ್ತೆ ಮತ್ತೆ ಸುದ್ದಿಯಾಗುತ್ತಿವೆ.
 ಬಳ್ಳಾರಿಯ ಸಿರಗುಪ್ಪ ತಾಲೂಕಿನ ಹನುಮಂತ ಮತ್ತು ಮಹೇಶ್ವರಿ ಎಂಬ ಯುವ ಜೋಡಿಯನ್ನು ಕಳೆದ ವಾರ ಕೊಲೆ ಮಾಡಲಾಗಿದೆ. ಆಕೆ ಹನುಮಂತನನ್ನು ಪ್ರೀತಿಸುತ್ತಿದ್ದಳು. ಆದರೆ ಆಕೆಯ ಇಚ್ಛೆಗೆ ವಿರುದ್ಧವಾಗಿ ಮನೆಯವರು ಶ್ರೀನಿವಾಸ ಎಂಬವನಿಗೆ ಮದುವೆ ಮಾಡಿಕೊಟ್ಟರು. ಈ ಮದುವೆಯನ್ನು ಒಪ್ಪಿಕೊಳ್ಳದೇ ಆಕೆ ಹನುಮಂತನೊಂದಿಗೆ ಹೊರಟು ಹೋದಾಗ ಶ್ರೀನಿವಾಸನು ಅವಮಾನ ತಡೆಯಲಾರದೇ ಅವರಿಬ್ಬರನ್ನು ಊರ ಹೊರಗೆಯೇ ಹತ್ಯೆ ಮಾಡಿಸಿದ್ದಾನೆ. ಈ ಪ್ರಕರಣಕ್ಕಿಂತ ಒಂದು ತಿಂಗಳು ಮೊದಲಷ್ಟೇ ಮೈಸೂರಿನ ಶಿಲ್ಪಾ ನಾಯಕ್‍ಳನ್ನು ಕೊಲೆ ಮಾಡಲಾಗಿತ್ತು. ಅಭಿಷೇಕ್ ಎಂಬ ದಲಿತನನ್ನು ಪ್ರೀತಿಸಿ ವಿವಾಹವಾದದ್ದೇ ಈ ಹತ್ಯೆಗೆ ಕಾರಣವಾಗಿತ್ತು. ಸಾಮಾನ್ಯವಾಗಿ, ಇಂಥ ಪ್ರೇಮ ಪ್ರಕರಣಗಳು ಹತ್ಯೆ, ಆತ್ಮಹತ್ಯೆ, ಪರಾರಿಗಳ ಮೂಲಕ ಕೆಲವೊಮ್ಮೆ ಸುದ್ದಿಯಾದರೆ ಇನ್ನೂ ಹಲವು ಸುದ್ದಿಯಾಗದೇ ಸತ್ತು ಹೋಗುತ್ತವೆ. ಇವತ್ತು ಓರ್ವ ಹೆಣ್ಣು ಮಗಳನ್ನು ಕೊಲೆಗೈದ ಕ್ರಿಮಿನಲ್ ಅಪರಾಧದೊಂದಿಗೆ ಶ್ರೀನಿವಾಸ ತನ್ನ ‘ಮಧುಚಂದ್ರ’ದ ಬದುಕನ್ನು ಆರಂಭಿಸಿದ್ದಾನೆ. ಆದರೆ ಅಂಥದ್ದೊಂದು ಭೀಕರ ಕೃತ್ಯ ನಡೆಸುವಲ್ಲಿ ಆತನಿಗೆ ಪ್ರಚೋದನೆ ಕೊಟ್ಟದ್ದಾದರೂ ಯಾವುದು? ಮಹೇಶ್ವರಿಯ ನಿರ್ಧಾರವನ್ನು ಖಂಡಿಸುವಾಗಲೂ, ಅದರ ಜೊತೆಗೆ ಹತ್ತು-ಹಲವು ಪ್ರಶ್ನೆಗಳು ಎದುರಾಗುತ್ತವೆ. ಸಾಕಿ-ಸಲಹಿದ ಹೆತ್ತವರನ್ನೇ ತೊರೆದು ಹೋಗುವಷ್ಟು ಆಕೆಯ ಹೃದಯವನ್ನು ಕಟುವಾಗಿಸಿದ್ದು ಯಾವುದು? ಶ್ರೀನಿವಾಸನಾಗಲಿ, ಮಹೇಶ್ವರಿಯಾಗಲಿ ಈ ಹಿಂದೆ ಕ್ರಿಮಿನಲ್ ಕೃತ್ಯಗಳಲ್ಲೇನೂ ಭಾಗಿಯಾಗಿರಲಿಲ್ಲ. ವಿವಾಹ ಬಂಧನದೊಂದಿಗೆ ಜೀವನದ ಹೊಸ ಮಜಲನ್ನು ತುಳಿಯಬೇಕಾದ ಯುವ ಸಮೂಹವನ್ನು ಅರ್ಥೈಸಿಕೊಳ್ಳುವಲ್ಲಿ ಹೆತ್ತವರು ಎಡವುತ್ತಿದ್ದಾರೆಯೇ? ಈ ಎಡವಿಕೆಗೆ ಕಾರಣವೇನು? ಪ್ರಿಯಕರನ ಮಾತು ಕೇಳಿ ಗಂಡನನ್ನೇ ನಿರ್ಲಕ್ಷಿಸಿದಳು ಅಥವಾ ಹೆತ್ತವರನ್ನೇ ತೊರೆದಳು ಅನ್ನುವ ಒಂದು ವಾಕ್ಯದಲ್ಲಿ ಮುಕ್ತಾಯಗೊಳಿಸುವುದಕ್ಕೆ ಇಂಥ ಪ್ರಕರಣಗಳು ಅರ್ಹವೇ?
 ಯುವಕ ಮತ್ತು ಯುವತಿಯ ಮಧ್ಯೆ ಪ್ರೇಮಾಂಕುರವಾಗುವುದಕ್ಕೆ ಕಾರಣ ಅವರಿಬ್ಬರು ಮಾತ್ರ ಖಂಡಿತ ಅಲ್ಲ. ಅಂಥದ್ದೊಂದು ವಾತಾವರಣವನ್ನು ಹಿರಿಯರಾದ ನಾವೆಲ್ಲ ನಿರ್ಮಿಸಿಕೊಟ್ಟಿದ್ದೇವೆ. ನಮ್ಮ ಸಿನಿಮಾಗಳು ತಯಾರಾಗುವುದೇ ಪ್ರೀತಿ-ಪ್ರೇಮಗಳ ಸುತ್ತ. ತನ್ನ ಪ್ರೇಮವನ್ನು ಗೆಲ್ಲುವುದಕ್ಕಾಗಿ ಹೀರೋ ಯಾರ ಹತ್ಯೆ ಮಾಡುವುದಕ್ಕೂ ಹೇಸುವುದಿಲ್ಲ. ಈ ಪ್ರೇಮ ವ್ಯವಹಾರಕ್ಕೆ ಹೀರೋಯಿನ್‍ಳ ತಂದೆ ವಿರುದ್ಧ ಎಂದಾದರೆ ಆತನನ್ನು ಖಳನಂತೆ ಬಿಂಬಿಸಲಾಗುತ್ತದೆಯೇ ಹೊರತು ಆ ಅಪ್ಪನ ಅನುಮತಿ ಇಲ್ಲದೇ ಪ್ರೀತಿಸಿದ ಹೀರೋ ಹೀರೋಯಿನ್‍ಗಳನ್ನಲ್ಲ. ಆ ಅಪ್ಪನಿಗೆ ಹೀರೋನಿಂದ ಬೀಳುವ ಪ್ರತಿ ಹೊಡೆತಕ್ಕೂ ಸಿನಿಮಾ ಮಂದಿರಗಳಲ್ಲಿ ಶಿಳ್ಳೆ ಬೀಳುತ್ತದೆ. ಹೀರೋ ಎಲ್ಲರನ್ನೂ ಚೆಂಡಾಡುವುದು, ಅಂತಿಮವಾಗಿ ಹೋರೋಯಿನ್‍ಳ ಅಪ್ಪ ಆ ಪ್ರೀತಿಗೆ ಹಸಿರು ನಿಶಾನೆ ತೋರುವುದು ಅಥವಾ ಹೀರೋ-ಹೀರೋಯಿನ್ ಊರು ಬಿಟ್ಟು ಹೋಗುವುದು, ಸಾಯುವುದು.. ಹೀಗೆ ಸಾಗುತ್ತವೆ ಹೆಚ್ಚಿನ ಸಿನಿಮಾಗಳು. ಇನ್ನು, ಟಿ.ವಿ.ಗಳಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಸ್ಥಿತಿಯೂ ಭಿನ್ನವಲ್ಲ. ರಿಯಾಲಿಟಿ ಶೋಗಳ ಪಾಡಂತೂ ಇದಕ್ಕಿಂತಲೂ ಕರಾಳ. ಪ್ರೇಮ ಕತೆಯಿಲ್ಲದ ಒಂದೇ ಒಂದು ಧಾರಾವಾಹಿ ಈ ದೇಶದಲ್ಲಿ ಪ್ರಸಾರವಾಗಿರುವ ಸಾಧ್ಯತೆ ಇಲ್ಲ. ಹಾಗಂತ ಇವುಗಳನ್ನು ನಿರ್ಮಿಸುವುದು ಈ ಹದಿಹರೆಯದ ಯುವಕ-ಯುವತಿಯರು ಅಲ್ಲವಲ್ಲ. ಹೀಗಿರುವಾಗ ಅವರು ಕೈಗೊಳ್ಳುವ ತಪ್ಪು ನಿರ್ಧಾರಕ್ಕೆ ಅವರೊಬ್ಬರನ್ನೇ ದೂಷಿಸುವುದು ಎಷ್ಟು ಸರಿ? ತಮಾಷೆ ಏನೆಂದರೆ, ಇಂಥ ಸಿನಿಮಾಗಳನ್ನು ತಯಾರಿಸಿ ಸಮಾಜಕ್ಕೆ ಅರ್ಪಿಸುವವರಿಗೆ ರಾಷ್ಟ್ರಪ್ರಶಸ್ತಿ ಸಿಗುತ್ತದೆ. ಅತ್ಯುತ್ತಮ ಚಿತ್ರಕತೆ ಎಂದು ಕೊಂಡಾಡಲಾಗುತ್ತದೆ. ಸಮಾಜವನ್ನು ತಪ್ಪು ದಾರಿಗೆಳೆಯುವ ಪಾತ್ರ ನಿರ್ವಹಿಸಿದ್ದಕ್ಕಾಗಿ ಅತ್ಯುತ್ತಮ ನಟ, ನಟಿ, ನಿರ್ದೇಶಕ ಪ್ರಶಸ್ತಿಗಳೂ ಒಲಿಯುತ್ತವೆ. ಒಂದು ಕಡೆ ಸಿನಿಮಾಗಳ ಪಾತ್ರವನ್ನೇ ನಿಜ ಜೀವನದಲ್ಲಿ ನಿರ್ವಹಿಸಿದ್ದಕ್ಕಾಗಿ ಸರಕಾರ ಕೇಸು ದಾಖಲಿಸುವಾಗ ಇನ್ನೊಂದು ಕಡೆ ಅದೇ ಸರಕಾರ ಅಂಥ ಸಿನಿಮಾಗಳನ್ನು ನಿರ್ಮಿಸಿದ್ದಕ್ಕಾಗಿ ಬಹುಮಾನ ಕೊಟ್ಟು ಪುರಸ್ಕರಿಸುತ್ತದೆ. ಯಾಕಿಂಥ ದ್ವಂದ್ವಗಳು?
 ಕೇವಲ ಸಿನಿಮಾಗಳು, ಧಾರಾವಾಹಿಗಳು ಎಂದಲ್ಲ. ನಮ್ಮ ಒಟ್ಟು ಬದುಕುವ ವಿಧಾನವೇ ಆಧುನಿಕತೆಯ ಕೈಯಲ್ಲಿ ಹೈಜಾಕ್ ಆಗಿಬಿಟ್ಟಿದೆ. ಶಾಲೆ, ಕಾಲೇಜು, ಮಾರುಕಟ್ಟೆ, ಮದುವೆ, ಕ್ರೀಡೆ.. ಎಲ್ಲದರಲ್ಲೂ ಅತಿ ಅನ್ನುವಷ್ಟು ಮುಕ್ತತೆ ಇದೆ. ಗಂಡು ಮಕ್ಕಳಿಗೆ ಮಾತ್ರವಾಗಿದ್ದ ಕಾಲೇಜುಗಳು ಇವತ್ತಿನ ದಿನಗಳಲ್ಲಿ ಹೆಣ್ಣು ಮಕ್ಕಳನ್ನೂ ಸೇರಿಸಿಕೊಳ್ಳುತ್ತಿವೆ. ಕೇವಲ ಗಂಡು  ಮಕ್ಕಳೇ ಇರುವ ಅಥವಾ ಹೆಣ್ಣು ಮಕ್ಕಳೇ ಇರುವ ಕಾಲೇಜುಗಳಿಗೆ ಸೇರ್ಪಡೆಗೊಳ್ಳಲು ಮಕ್ಕಳು ಹಿಂಜರಿಯುತ್ತಿದ್ದಾರೆ ಎಂಬ ಸಬೂಬನ್ನು ಕಾಲೇಜು ಆಡಳಿತ ಮಂಡಳಿಗೇ ಇವತ್ತು ನೀಡತೊಡಗಿವೆ. ಒಂದು ರೀತಿಯಲ್ಲಿ, ಹೆಣ್ಣು-ಗಂಡು ನಡುವಿನ ಸಹಜ ಅಂತರವು ಕಡಿಮೆಯಾಗುತ್ತಾ ಬರುತ್ತಿದೆ. ಹೀಗಿರುವಾಗ, ಪರಸ್ಪರ ಆಕರ್ಷಣೆಗೆ ಒಳಗಾಗುವ ಯುವಕ ಮತ್ತು ಯುವತಿಯನ್ನು ಮಾತ್ರವೇ ಅಪರಾಧಿಯಾಗಿ ಬಿಂಬಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಈ ಆಕರ್ಷಣೆಯು ಈ ಮಟ್ಟಕ್ಕೆ ಬೆಳೆಯುವುದರಲ್ಲಿ ನಮ್ಮೆಲ್ಲರ ಪಾತ್ರ ಇದೆ.. ಮಹೇಶ್ವರಿ ಆಗಲಿ, ಶಿಲ್ಪಾ ನಾಯಕ್ ಆಗಲಿ ನಮ್ಮದೇ ಉತ್ಪನ್ನಗಳು. ಈ ಸಮಾಜದ ಆಗು-ಹೋಗುಗಳು, ಅಭಿರುಚಿಗಳು, ಸಿನಿಮಾಗಳು.. ಮುಂತಾದುವುಗಳನ್ನು ನೋಡಿಕೊಂಡೇ ಅವರು ಬೆಳೆದಿದ್ದಾರೆ. ಶ್ರೀನಿವಾಸ ಕೂಡಾ ಈ ಸಮಾಜದ ಮಗುವೇ. ಆತ ಇವತ್ತು ಖಳನಾಯಕನಾಗಿ ಗುರುತಿಸಿಕೊಳ್ಳುತ್ತಿದ್ದರೂ ಆತನೊಳಗೆ ಅಂಥದ್ದೊಂದು ಕ್ರೌರ್ಯವನ್ನು ತುಂಬಿರುವುದು ಈ ಸಮಾಜದ ದ್ವಂದ್ವಗಳೇ. ಇಂಥ ಕಟು ಸತ್ಯಗಳನ್ನು ಒಪ್ಪಿಕೊಳ್ಳದ ಹೊರತು ಬರೇ ಕೇಸು ಜಡಿಯುವುದರಿಂದಲೋ ಶಾಪ ಹಾಕುವುದರಿಂದಲೋ ಸಮಸ್ಯೆಗೆ ಪರಿಹಾರ ಸಿಗಲಾರದು. ಹದಿಹರೆಯ ಎಂಬುದು ಕುತೂಹಲದ ವಯಸ್ಸು. ಈ ಕುತೂಹಲವನ್ನು ನೈತಿಕ ಪಾಠಗಳ ಮೂಲಕ ತಣಿಸುವ, ಅದಕ್ಕೆ ಪೂರಕವಾದ ವಾತಾವರಣವನ್ನು ಬೆಳೆಸುವ ಜವಾಬ್ದಾರಿ ಎಲ್ಲ ಹಿರಿಯರ ಮೇಲಿದೆ. ಹದಿಹರೆಯದವರ ಆಲೋಚನೆಯನ್ನು ಸಮಾಜಮುಖಿಗೊಳಿಸಬೇಕು. ಅದಕ್ಕೆ ಯೋಗ್ಯವಾದ ತಾಣಗಳಾಗಿ ಶಾಲೆ, ಕಾಲೇಜುಗಳನ್ನು ಮಾರ್ಪಡಿಸಬೇಕು. ಯುವ ಸಮೂಹದ ಮನಸ್ಸನ್ನು ಪ್ರಚೋದಿಸುವ ಯಾವುದೂ ಸಿನಿಮಾ, ಧಾರಾವಾಹಿಗಳ ಹೆಸರಲ್ಲಿ ಬಿಡುಗಡೆಗೊಳ್ಳದಂತೆ ನೋಡಿಕೊಳ್ಳಬೇಕು. ಅವರು ತಮ್ಮ ಎಲ್ಲವನ್ನೂ ತಾಯಿಯಲ್ಲೋ ತಂದೆಯಲ್ಲೋ ಅಥವಾ ಹಿರಿಯರಲ್ಲೋ ಹಂಚಿಕೊಳ್ಳುವಂತಹ ಮುಕ್ತ ವಾತಾವರಣವನ್ನು ಮನೆಯಲ್ಲಿ ಬೆಳೆಸಬೇಕು. ಆಗಾಗ ಹಿತ ವಚನಗಳನ್ನು ಹೇಳುತ್ತಾ ಧಾರ್ಮಿಕ ಮೌಲ್ಯಗಳನ್ನು ನೆನಪಿಸುತ್ತಾ ತಿದ್ದುವ ಪ್ರಯತ್ನ ಮಾಡುತ್ತಲಿರಬೇಕು. ನಾವು ನಿಮ್ಮ ಹಿತಾಕಾಂಕ್ಷಿಗಳು ಎಂಬ ಸೂಚನೆಯೊಂದು ಪ್ರತಿ ಸಂದರ್ಭದಲ್ಲೂ ಹೆತ್ತವರಿಂದ ಅವರಿಗೆ ದಾಟುತ್ತಲಿರಬೇಕು.
 ಏನೇ ಆಗಲಿ, ಯುವ ಸಮೂಹಕ್ಕೆ ಮನರಂಜನೆಯ ಹೆಸರಲ್ಲಿ ಹಿರಿಯರಾದ ನಾವು ಕೊಡುತ್ತಿರುವುದು ವಿಷವನ್ನೇ. ಆ ವಿಷದ ಪ್ರಭಾವಕ್ಕೆ ಮಕ್ಕಳು ಒಳಗಾದರೆ ಅದಕ್ಕಾಗಿ ಕೇಸು ಜಡಿಯಬೇಕಾದುದು ಅವರ ಮೇಲಷ್ಟೇ ಅಲ್ಲ. ಅದನ್ನು ಕೊಟ್ಟವರ ಮೇಲೂ ಕೇಸು ಹಾಕಬೇಕು. ಆಗ ಮಾತ್ರ ವಿಷ ತಯಾರಿಸುವವರು ಎಚ್ಚೆತ್ತುಕೊಳ್ಳುತ್ತಾರೆ.