Friday, 15 January 2016

ವಿಜ್ಞಾನದ ರಾಪರ್‍ನಲ್ಲಿ ಮತ್ತೇರಿಸುವ ಸಿದ್ಧಾಂತ


      ಮೈಸೂರಿನಲ್ಲಿ ಕಳೆದವಾರ ನಡೆದಿದ್ದ `ಭಾರತೀಯ ವಿಜ್ಞಾನ ಕಾಂಗ್ರೆಸ್' ಸಭೆ ಮುಗಿದ ಮರುದಿನ ಜರ್ಮನಿಯಲ್ಲಿ ಅಡಾಲ್ಫ್ ಹಿಟ್ಲರ್‍ನಿಗೆ ಸಂಬಂಧಿಸಿದ ಪುಸ್ತಕವೊಂದು ಬಿಡುಗಡೆಯಾಯಿತು. ಹಿಟ್ಲರ್ ಸಾವಿಗೀಡಾಗಿ 70 ವರ್ಷಗಳು ಸಂದ ಬಳಿಕ ಆತನಿಗೆ ಸಂಬಂಧಿಸಿ ಬಿಡುಗಡೆಯಾದ ಪ್ರಭಾವಶಾಲಿ ಪುಸ್ತಕ ಎಂಬ ಕಾರಣಕ್ಕಾಗಿ ಜಾಗತಿಕವಾಗಿಯೇ ಅದು ಸುದ್ದಿಗೀಡಾಯಿತು. ಹಿಟ್ಲರ್‍ನ ಕುಖ್ಯಾತ ರಾಜಕೀಯ ಪ್ರಣಾಳಿಕೆಯನ್ನು ವಿವರಿಸುವ ಪುಸ್ತಕ (ಮೈನ್‍ಕ್ಯಾಂಪ್) ಇದು. ಇದರಲ್ಲಿ ಆತನ ಪ್ರಣಾಳಿಕೆಯನ್ನು ನಮೂದಿಸುವುದರ ಜೊತೆಗೇ ಆ ಪ್ರಣಾಳಿಕೆಯ ಪೊಳ್ಳುತನ, ಅರ್ಧಸತ್ಯ ಮತ್ತು ಸುಳ್ಳು ಮಾಹಿತಿಗಳನ್ನು ವಿವರಿಸುವ ಟಿಪ್ಪಣಿಗಳೂ ಇದ್ದುವು. ಇದೇ ವೇಳೆ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಕಂಡು ಹುಡುಕುವುದಕ್ಕೆ ವೇದಿಕೆಯಾಗಬೇಕಿದ್ದ ‘ವಿಜ್ಞಾನ ಕಾಂಗ್ರೆಸ್’ ಆ ವಿಷಯದಲ್ಲಿ ಸಂಪೂರ್ಣ ಎಡವುತ್ತಿದೆ ಎಂಬ ಟೀಕೆಗಳು ವ್ಯಕ್ತವಾದವು. ಸಂಘಪರಿವಾರದ ಕಾರ್ಯಸೂಚಿಯನ್ನು ಮಂಡಿಸುವ ಅವೈಜ್ಞಾನಿಕ ಮತ್ತು ಹಾಸ್ಯಾಸ್ಪದ ಸಭೆಗಳಾಗಿ ಅದು ಬದಲಾಗುತ್ತಿದೆ ಎಂಬ ಆರೋಪಗಳು ಬಂದುವು. ನೋಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ವಿ. ರಾಮಕೃಷ್ಣನ್ ಅಂತೂ `ಭಾರತೀಯ ವಿಜ್ಞಾನ ಕಾಂಗ್ರೆಸ್' ಅನ್ನು ಸರ್ಕಸ್ ಎಂದು ಕುಟುಕಿದರು. ‘ಇನ್ನೆಂದೂ ಆ ಸಭೆಯಲ್ಲಿ ಭಾಗಿವಹಿಸಲಾರೆ’ ಎಂದು ಘೋಷಿಸಿದರು. ಮೈಸೂರಿನ ಸಭೆಯಲ್ಲಿ, ‘ಶಂಖ ಊದುವುದರಿಂದ ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಹೇಗೆ ಪಡೆಯಬಹುದು’ ಎಂಬ ಬಗ್ಗೆ ಪ್ರಬಂಧ ಮಂಡಿಸಲಾಗಿತ್ತು. ಇನ್ನೊಂದು ಪ್ರಬಂಧ, ‘ಶಿವನನ್ನು ಅಪ್ರತಿಮ ಪರಿಸರವಾದಿ’ಯೆಂದಿತು. ಕಳೆದ ವರ್ಷ ಮುಂಬೈನಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್‍ನ ಸಭೆಯಂತೂ ಸಾರ್ವಜನಿಕವಾಗಿ ತೀವ್ರ ಚರ್ಚೆಗೆ ಒಳಗಾಗಿತ್ತು. ‘ಸಂಸ್ಕ್ರತದ ಮೂಲಕ ಪುರಾತನ ವಿಜ್ಞಾನ’ ಎಂಬ ಪ್ರಬಂಧದಲ್ಲಿ. ‘ವೇದ ಕಾಲದಲ್ಲಿಯೇ ಭಾರತೀಯರು ವಿಮಾನವನ್ನು ಸಂಶೋಧಿಸಿ ಹಾರಿಸಿದ್ದರು’ ಎಂದು ವಾದಿಸಲಾಗಿತ್ತು.
      ನಿಜವಾಗಿ, ಜರ್ಮನಿಯಲ್ಲಿ ಫ್ಯಾಸಿಸ್ಟ್ ಮತ್ತು ಮನುಷ್ಯ ವಿರೋಧಿ ಸಿದ್ಧಾಂತದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ನಡೆಯುತ್ತಿರುವಾಗ ಇತ್ತ ಭಾರತದಲ್ಲಿ ಐತಿಹ್ಯ, ಪುರಾಣಗಳನ್ನು ವಿಜ್ಞಾನದ ರಾಪರ್‍ನಲ್ಲಿ ಕಟ್ಟಿಕೊಡುವ ಪ್ರಯತ್ನಗಳು ನಡೆಯುತ್ತಿವೆ. ಅಂದಹಾಗೆ, ಹಿಟ್ಲರ್‍ನ ಸಿದ್ಧಾಂತದಿಂದ ಸಂತ್ರಸ್ತರಾದದ್ದು ಯಹೂದಿಗಳು ಮಾತ್ರವಲ್ಲ, ಸ್ವತಃ ಆತನ ಬೆಂಬಲಿಗರೇ ಅದರ ಬಲಿಪಶುಗಳಾದರು. ಹಿಟ್ಲರ್ ತನ್ನ ಕಾರ್ಯಸೂಚಿಯನ್ನು ಪ್ರಚಾರ ಮಾಡುವುದಕ್ಕೆ ಲಭ್ಯವಿರುವ ಸಕಲ ಮಾಧ್ಯಮಗಳನ್ನೂ ಬಳಸಿಕೊಂಡ. ಅದಕ್ಕಾಗಿ ವೇದಿಕೆಗಳನ್ನು ಸೃಷ್ಟಿಸಿದ. ಆತನ ಪ್ರಣಾಳಿಕೆಯನ್ನು ಪ್ರಶ್ನಿಸಬಹುದಾದ ಎಲ್ಲವನ್ನೂ ನಾಶಪಡಿಸಿದ. ವಿಜ್ಞಾನ, ಕಲೆ, ಸಾಹಿತ್ಯ, ಖಗೋಳಶಾಸ್ತ್ರ ಸಹಿತ ಅಸಂಖ್ಯಾತ ಕೃತಿಗಳನ್ನು ಸುಟ್ಟು ಹಾಕಿ ಜನರು ಬೌದ್ಧಿಕವಾಗಿ ಬೆಳೆಯದಂತೆ ನೋಡಿಕೊಂಡ. ಶಾಲೆ, ಕಾಲೇಜು, ಸಾಹಿತ್ಯ ಗೋಷ್ಠಿಗಳು, ವೈಜ್ಞಾನಿಕ ಸಭೆಗಳು ಎಲ್ಲದರಲ್ಲೂ ಹಿಟ್ಲರ್‍ನ ಪ್ರಭಾವವಿತ್ತು. ಆತನ ಸಿದ್ಧಾಂತವನ್ನು ಬೆಂಬಲಿಸುವ, ಅದನ್ನು ಅತಿಶಯವಾಗಿ ಹೊಗಳುವ ಮತ್ತು ಅದುವೇ ಶ್ರೇಷ್ಠ ಎಂದು ವಾದಿಸುವ ವಾತಾವರಣವನ್ನು ಎಲ್ಲ ಕಡೆ ಬೆಳೆಸಿದ. ಭ್ರಮೆಯನ್ನು ಸೃಷ್ಟಿಸಿ ಅದನ್ನು ಎಲ್ಲ ಕಡೆ ಹಂಚಿದ. ಅದರ ಪರಿಣಾಮ ಎಷ್ಟು ಭೀಕರವಾಗಿತ್ತೆಂದರೆ, ಸಮಾಜದ ಆಲೋಚನಾ ರೀತಿಯೇ ಒಂದು ಹಂತದ ವರೆಗೆ ಬದಲಾಯಿತು. ‘ನಾವು’ ಮತ್ತು ‘ಅವರು’ ಅನ್ನುವ ವಿಭಜನೆಗೆ ಅದು ಪ್ರೇರಣೆ ನೀಡಿತು. `ಅವರು' ನಮ್ಮ ಜೊತೆ ಬದುಕಲು ಅನರ್ಹರು ಮತ್ತು ಸಾವಿಗೆ ಅರ್ಹರು ಎಂದು ಭಾವಿಸುವ ಗುಂಪನ್ನು ಅದು ತಯಾರುಗೊಳಿಸಿತು. ಅಂತಿಮವಾಗಿ ಆ ವಿಚಾರಧಾರೆ `ಅವರಿಗೆ' ಮಾತ್ರ ಮಾರಕವಾದದ್ದಲ್ಲ. `ಇವರನ್ನೂ' ಅದು ಆಹುತಿ ಪಡೆಯಿತು. ಎರಡನೇ ವಿಶ್ವ ಯುದ್ಧವು ಜರ್ಮನಿ, ಜಪಾನ್ ಸಹಿತ ವಿವಿಧ ರಾಷ್ಟ್ರಗಳ ಮೇಲೆ ಮಾಡಿರುವ ಅನಾಹುತಗಳನ್ನು ನೋಡಿದರೆ ಹಿಟ್ಲರ್‍ನ ವಿಚಾರಧಾರೆ ಎಷ್ಟು ಅನಾಹುತಕಾರಿ ಎಂಬುದು ಸ್ಪಷ್ಟವಾಗುತ್ತದೆ. ಇವತ್ತು ಪುನಃ ಜರ್ಮನಿಯಲ್ಲಿ ಆ ವಿಷಕಾರಿ ಸಿದ್ಧಾಂತ ನಿಧಾನಕ್ಕೆ ರೆಕ್ಕೆ ಬಿಚ್ಚಿಕೊಳ್ಳುತ್ತಿದೆ ಎಂಬ ಸುದ್ದಿ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಆ ಪುಸ್ತಕ ಬಿಡುಗಡೆ ಮಹತ್ವ ಪಡೆಯುತ್ತದೆ. ಹಿಟ್ಲರ್ ವಿಚಾರಧಾರೆ ಮತ್ತೊಮ್ಮೆ ಜನಪ್ರಿಯವಾಗದಿರಲಿ ಎಂಬ ಕಳಕಳಿಯೊಂದೇ ಆ ಪುಸ್ತಕ ಬಿಡುಗಡೆಯ ಹಿನ್ನೆಲೆಯಲ್ಲಿದೆ ಎಂದೇ ಹೇಳಬೇಕಾಗುತ್ತದೆ. ಆದ್ದರಿಂದಲೇ ಆ ಪುಸ್ತಕಕ್ಕೆ ಜರ್ಮನಿಯು ನಿಷೇಧವನ್ನು ಹೇರಿಲ್ಲ. ಆದರೆ, ಭಾರತದಲ್ಲಿ ಅದಕ್ಕೆ ತದ್ವಿರುದ್ಧವಾದ ಬೆಳವಣಿಗೆಗಳು ನಡೆಯುತ್ತಿವೆ. ಕಲೆ, ಸಾಹಿತ್ಯ, ಶಿಕ್ಷಣ, ಸಿನಿಮಾ, ವಿಜ್ಞಾನ ಸಹಿತ ಎಲ್ಲದರಲ್ಲೂ ನಿರ್ದಿಷ್ಟ ವಿಚಾರಧಾರೆಯಲ್ಲಿ ತುರುಕುವ ಉಮೇದು ಕಾಣಿಸುತ್ತಿದೆ. ಅದರಲ್ಲೂ ಭಾರತೀಯ ವಿಜ್ಞಾನ ಕಾಂಗ್ರೆಸ್‍ಗೆ 103 ವರ್ಷಗಳ ಭವ್ಯ ಇತಿಹಾಸವಿದೆ. ಅದು  ಪುರಾಣ, ಐತಿಹ್ಯಗಳನ್ನು ಚರ್ಚಿಸುವ ವೇದಿಕೆಯಿಲ್ಲ. ಆಚಾರ್ಯ ಪಿ.ಸಿ.ರೇ, ಸರ್ ಜೆ.ಸಿ. ಬೋಸ್, ಸಿ.ವಿ. ರಾಮನ್, ಹೋಮಿ ಜಹಾಂಗೀರ್ ಬಾಬಾ, ಎಂ.ಎಸ್. ಸ್ವಾಮಿನಾಥನ್, ಡಾ| ಕಸ್ತೂರಿ ರಂಗನ್‍ರಂಥ ಪ್ರಭಾವಿ ವಿಜ್ಞಾನಿಗಳು ಈ ಕಾಂಗ್ರೆಸ್‍ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ವೈಜ್ಞಾನಿಕವಾಗಿ ಈ ದೇಶವನ್ನು ಬೆಳೆಸುವ ಪ್ರಯತ್ನ ನಡೆಸಿದ್ದಾರೆ. ಅವರು ಐಹಿಹ್ಯಗಳಿಗೆ ವಿಜ್ಞಾನದ ಲೇಪವನ್ನು ತೊಡಿಸುವುದಕ್ಕೆ ಅವಕಾಶ ಕೊಟ್ಟಿಲ್ಲ. ಕಲ್ಪಿತ ಮತ್ತು ಭ್ರಮಾಧೀತ ವಿಚಾರಧಾರೆಯನ್ನು ವಿಜ್ಞಾನದೊಳಕ್ಕೆ ತರಲು ಅವಕಾಶ ಮಾಡಿಕೊಟ್ಟಿಲ್ಲ. ಬಹುಶಃ ಇವತ್ತು ಈ ದೇಶವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಜಗತ್ತಿನ ಪ್ರಮುಖ 5 ರಾಷ್ಟ್ರಗಳಲ್ಲಿ ಒಂದಾಗಿ ಗುರುತಿಸಿಕೊಂಡಿದ್ದರೆ ಅದಕ್ಕೆ ಅವರ ನಿಲುವುಗಳೇ ಕಾರಣವಾಗಿದ್ದವು. ದುರಂತ ಏನೆಂದರೆ, ಇವತ್ತು ರಾಹು-ಕೇತುಗಳು, ಶುಭ-ಅಶುಭಗಳು ಸಂಶೋಧನಾ ಕೊಠಡಿಯೊಳಗೂ ನುಸುಳಿ ಬಿಟ್ಟಿವೆ. ಶುಭ ಘಳಿಗೆಯನ್ನು ನೋಡಿ ಉಪಗ್ರಹವನ್ನು ಉಡಾಯಿಸುವ ಚಿಂತಾಜನಕ ಸ್ಥಿತಿಗೆ ವೈಜ್ಞಾನಿಕ ಮನೋಭಾವ ಕುಸಿದು ಹೋಗುತ್ತಿದೆ. ನಿರ್ದಿಷ್ಟ ವಿಚಾರಾಧಾರೆಯನ್ನು ವಿಜ್ಞಾನದ ಹೆಸರಲ್ಲಿ ಒಪ್ಪಿಸುವ ತಂತ್ರಗಳು ಕಾಣಿಸುತ್ತಿವೆ. ಇದರ ಅಂತಿಮ ಫಲಿತಾಂಶ ಏನಾಗುತ್ತದೆಂದರೆ, ಐತಿಹ್ಯವೇ ವಿಜ್ಞಾನವಾಗಿ ಬಿಡುತ್ತದೆ. ಐತಿಹ್ಯವನ್ನು ವಿಜ್ಞಾನವೆಂದು ವಿಜ್ಞಾನಿಗಳೇ ವಾದಿಸತೊಡಗುವ ಸಂದರ್ಭಗಳು ಸೃಷ್ಟಿಯಾಗ ತೊಡಗುತ್ತವೆ. ಅದೇ ರೀತಿ, ಕಲೆ, ಸಾಹಿತ್ಯ, ಸಂಗೀತ, ಸಿನಿಮಾ ಸಹಿತ ಸರ್ವ ಕ್ಷೇತ್ರಗಳ ಮೇಲೂ ಈ ಐತಿಹ್ಯಾಧಾರಿತ ವಿಚಾರಧಾರೆಗಳು ಪ್ರಾಬಲ್ಯ ಪಡೆಯುತ್ತಾ, ಅದುವೇ `ಶ್ರೇಷ್ಠ'ವೆಂಬ ಭ್ರಮೆಯೊಂದು ಉತ್ಪತ್ತಿಯಾಗುತ್ತದೆ. ಅಂದಹಾಗೆ, ಐತಿಹ್ಯಗಳಿಗೆ ಯಥಾಸ್ಥಿತಿ ಎಂಬುದಿಲ್ಲ. ಅದನ್ನು ಸಂದರ್ಭಕ್ಕೆ ತಕ್ಕಂತೆ ಉತ್ಪಾದಿಸಬಹುದು. ನೀರಿನಿಂದ ಕಾರನ್ನು ಓಡಿಸುವ ತಂತ್ರಜ್ಞಾನವನ್ನು ಯುರೋಪಿನ ವಿಜ್ಞಾನಿಗಳು ಸಂಶೋಧಿಸಿದರೆ ಈ ಐತಿಹ್ಯವು ಅದನ್ನೂ
ವಿ. ರಾಮಕೃಷ್ಣನ್
ತನ್ನದಾಗಿಸಿಕೊಳ್ಳಬಹುದು. ಎಷ್ಟೋ ಸಾವಿರ ವರ್ಷಗಳ ಹಿಂದೆ ಇಂತಿಂಥ ಯುಗದಲ್ಲಿ ಅದರ ಸಂಶೋಧನೆ ನಡೆದಿತ್ತು ಎಂದು ಹೇಳಬಹುದು. ಯಾಕೆಂದರೆ, ಹಾಗೆ ಹೇಳುವುದಕ್ಕೆ ಪುರಾವೆಗಳ ಅಗತ್ಯವಿರುವುದಿಲ್ಲ. ಈ ಬಗೆಯ ‘ನಾಗರಿಕ ಶ್ರೇಷ್ಠತೆ’, ಸಂಸ್ಕøತಿ ಶ್ರೇಷ್ಠತೆಯ ಅಮಲನ್ನು ತುಂಬಿಸಿಯೇ ಹಿಟ್ಲರ್ ಒಂದು ಸಮಾಜವನ್ನೇ ನಿರ್ಮೂಲನ ಮಾಡಿದ್ದು. ಆರ್ಯ ಸಂಸ್ಕ್ರತಿಯನ್ನು ಸರ್ವಶ್ರೇಷ್ಠವೆಂದು ಬಿಂಬಿಸಿ ಅನಾರ್ಯರನ್ನು ಕಾಲಕಸವಾಗಿ ಕಂಡಿದ್ದು. ಭಾರತೀಯ ವಿಜ್ಞಾನ ಕಾಂಗ್ರೆಸ್‍ನಲ್ಲಿ ಮಂಡಿತವಾದ ಪ್ರಬಂಧಗಳಲ್ಲಿ ಮತ್ತು ಅದು ಪ್ರತಿಪಾದಿಸುವ ಸಂಗತಿಗಳಲ್ಲಿ ಈ `ಶ್ರೇಷ್ಠತೆ'ಯ ರೋಗ ಲಕ್ಷಣಗಳೇ ಕಾಣಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗ ಪರಿವಾರವು ಈ ಮೊದಲು ಪ್ರತಿಪಾದಿಸಿದ್ದ ಮತ್ತು ಈಗ ಪ್ರತಿಪಾದಿಸುತ್ತಿರುವ ವಿಚಾರಗಳನ್ನೇ ವಿಜ್ಞಾನವೆಂದು ವಿಜ್ಞಾನ ಕಾಂಗ್ರೆಸ್‍ನಲ್ಲೂ ಹೇಳಲಾಗುತ್ತಿದೆ. ಈ ಬೆಳವಣಿಗೆ ಅಪಾಯಕಾರಿ. ಹಿಟ್ಲರ್‍ನ ವಿಚಾರಧಾರೆಯನ್ನು ಪ್ರಶ್ನಿಸುವ ಮತ್ತು ಅದರ ಸುಳ್ಳುಗಳನ್ನು ಜನರ ಮುಂದಿಡುವ ಪ್ರಯತ್ನಗಳು ಜರ್ಮನಿಯಲ್ಲಿ ನಡೆಯುತ್ತಿರುವಾಗ ನಮ್ಮಲ್ಲಿ ಅದನ್ನೇ ಪ್ರೋತ್ಸಾಹಿಸಿ ಸರ್ವಮಾನ್ಯಗೊಳಿಸುವ ಬೆಳವಣಿಗೆಗಳು ನಡೆಯುತ್ತಿರುವುದು ಖಂಡನಾರ್ಹ.

ಕಲ್ಲುಗಳ ಮರೆಯಲ್ಲಿ 'ಮಾತು ಮುರಿದವರ' ಆಟ

       ಅಯೋಧ್ಯೆಯಲ್ಲಿ ಸದ್ಯ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಪ್ರಸಿದ್ಧ ಇತಿಹಾಸಕಾರರಾದ ಇರ್ಫಾನ್ ಹಬೀಬ್, ಆದಿತ್ಯ ಮುಖರ್ಜಿ, ಶಿರಿನ್ ಮೂಸವಿ, ಸಾಹು ಇಂದುಬಂಗ ಮುಂತಾದವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯ ಬೆಳವಣಿಗೆಯು ಇನ್ನೊಂದು ಬಾರಿ `ಕಾನೂನಿನ ಹತ್ಯೆ' ನಡೆಯುವ ಸೂಚನೆಯನ್ನು ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಹೇಳಿಕೆಯ ಮರುದಿನವೇ, ‘ತಮಗೂ ಅಯೋಧ್ಯೆಯಲ್ಲಿನ ಬೆಳವಣಿಗೆಗೂ ಸಂಬಂಧ ಇಲ್ಲ’ ಎಂದು ಬಿಜೆಪಿ ಸ್ಪಷ್ಟಪಡಿಸಿದೆ. ಆದರೆ ಬಿಜೆಪಿ ಹೇಳಿಕೆಯನ್ನು ಅಷ್ಟು ಸುಲಭವಾಗಿ ನಂಬುವ ಸ್ಥಿತಿಯಲ್ಲಿ ಯಾರೂ ಇಲ್ಲ. ಯಾಕೆಂದರೆ, ರಾಮಮಂದಿರಕ್ಕೆ ಸಂಬಂಧಿಸಿ `ಮಾತು ಮುರಿದ' (ಮುಚ್ಚಳಿಕೆ ಉಲ್ಲಂಘಿಸಿದ)ಇತಿಹಾಸವೊಂದು ಬಿಜೆಪಿಗಿದೆ. ಅಲ್ಲದೆ, 2017ರಲ್ಲಿ ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆದ್ದರಿಂದಲೇ, ಅಯೋಧ್ಯೆಯ ರಾಮ್ ಸೇವಕ್ ಪುರಮ್‍ನಲ್ಲಿ ತಂದಿರಿಸಲಾಗುತ್ತಿರುವ ಕಲ್ಲುಗಳನ್ನು ಅನುಮಾನದಿಂದ ನೋಡಬೇಕಾಗುತ್ತದೆ. ರಾಮಮಂದಿರವನ್ನು ಮತ್ತೊಮ್ಮೆ ಚುನಾವಣಾ ಇಶ್ಯೂ ಆಗಿಸುವ ಸಂಚೊಂದು ಇದರ ಹಿಂದೆ ಅಡಗಿರುವಂತೆ ತೋರುತ್ತಿದೆ. ಈಗಾಗಲೇ ಮಹಂತ ನೃತ್ಯ ಗೋಪಾಲ್‍ದಾಸ್ ಅವರು ಈ ಕಲ್ಲುಗಳಿಗೆ ಶಿಲಾಪೂಜೆ ನೆರವೇರಿಸಿದ್ದಾರೆ. ಲಾರಿಗಳಲ್ಲಿ ಕಲ್ಲುಗಳನ್ನು ತಂದು ಅಲ್ಲಿ ಸುರಿಯಲಾಗುತ್ತಿದೆ. ಅಂದಹಾಗೆ, ಬಿಜೆಪಿ ಈ ಬೆಳವಣಿಗೆಯಿಂದ ಅಂತರ ಕಾಯ್ದುಕೊಂಡಷ್ಟೂ ಅದರ ಪಾತ್ರದ ಬಗ್ಗೆ ಅನುಮಾನಗಳು ಬಲಗೊಳ್ಳುತ್ತಲೇ ಹೋಗುತ್ತವೆ. ನಿಜವಾಗಿ, ಈ ದೇಶದಲ್ಲಿ ಬಾಬರಿ ಮಸೀದಿ ವಿವಾದವನ್ನು ರಾಜಕೀಯವಾಗಿ ಬಳಸಿಕೊಂಡದ್ದು ಬಿಜೆಪಿ. ಅಡ್ವಾಣಿ ರಥಯಾತ್ರೆ ನಡೆಸಿದರು. 1992ರಲ್ಲಿ ಬಾಬರಿ ಮಸೀದಿಯನ್ನು ಉರುಳಿಸುವುದಕ್ಕೆ ಅವರು ಒಂದು ಹಂತದವರೆಗೆ ನೇತೃತ್ವ ನೀಡಿದರು. ಈ ವಿವಾದವನ್ನು ಬಳಸಿಕೊಂಡು ದೇಶದೆಲ್ಲೆಡೆ ಭಾವನಾತ್ಮಕ ವಾತಾವರಣವೊಂದನ್ನು ನಿರ್ಮಿಸಲು ಬಿಜೆಪಿ ಆವತ್ತು ಭಾಗಶಃ ಯಶಸ್ವಿಯಾಗಿತ್ತು. ಬಾಬರಿ ಮಸೀದಿಯನ್ನು ಎತ್ತಿಕೊಂಡು ಭಾರತೀಯರನ್ನು ಹಿಂದೂಗಳು ಮತ್ತು ಮುಸ್ಲಿಮರು ಎಂದು ಬಿಜೆಪಿ ವಿಭಜಿಸಿ ಬಿಟ್ಟಿತು. ಇಟ್ಟಿಗೆಗಳ ಸಂಗ್ರಹವಾಯಿತು. ಮನೆ ಮನೆಗೆ ತೆರಳುವ ಅಭಿಯಾನಗಳು ನಡೆದುವು. ಒಂದು ಕಡೆ, ಈ ಎಲ್ಲ ಬೆಳವಣಿಗೆಗಳು ನಡೆಯುತ್ತಿರುವಾಗಲೇ ಇನ್ನೊಂದು ಕಡೆ ನ್ಯಾಯಾಲಯವು ವಿವಾದಿತ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡಬೇಕೆಂದು ಆದೇಶಿಸಿತು. ಬಾಬರಿ ಮಸೀದಿಗೆ ಯಾವ ಹಾನಿಯೂ ತಟ್ಟುವುದಿಲ್ಲವೆಂಬ ಬಗ್ಗೆ ಅದು ಸಂಬಂಧಿತರಿಂದ ಮುಚ್ಚಳಿಕೆಯನ್ನು ಪಡೆದುಕೊಂಡಿತು. ಹೀಗೆ, ಬಿಜೆಪಿಯ ರಾಮಮಂದಿರ ಚಳವಳಿ ಮತ್ತು ಕೋರ್ಟಿನ ನಿಲುವುಗಳು 1992 ಡಿ. 6ರಂದು ಮುಖಾಮುಖಿಯಾಗಿ ಮುಚ್ಚಳಿಕೆಯನ್ನೇ ಉಲ್ಲಂಘಿಸುವ ಮೂಲಕ ಕೊನೆಗೊಂಡಿತು. ಅಂದಿನಿಂದ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆಗೆ ಒಳಗಾಗುತ್ತಲೇ ಇದೆ. ರಾಮಮಂದಿರ ಚಳವಳಿಯ ರೂವಾರಿಗಳು ಯಾರು, ಬಾಬರಿ ಮಸೀದಿಯನ್ನು ಉರುಳಿಸುವಲ್ಲಿ ಯಾರ್ಯಾರು ಯಾವ್ಯಾವ ಪಾತ್ರವನ್ನು ನಿಭಾಯಿಸಿದ್ದಾರೆ, ಕಾನೂನನ್ನೇ ಕೊಲೆಗೈಯುವ ಕೃತ್ಯದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದೆಲ್ಲ ಸ್ಪಟಿಕದಷ್ಟೇ ಸ್ಪಷ್ಟವಾಗಿದ್ದರೂ ಈ ವರೆಗೆ ಯಾರೊಬ್ಬರನ್ನು ಮುಟ್ಟಲೂ ನ್ಯಾಯಾಲಯಕ್ಕೆ ಸಾಧ್ಯವಾಗಿಲ್ಲ. ವಿಚಾರಣೆಯಂತೂ ಇನ್ನೂ ಪ್ರಾಥಮಿಕ ಹಂತವನ್ನೇ ದಾಟದಷ್ಟು ದಾರುಣ ಸ್ಥಿತಿಯಲ್ಲಿದೆ. ಹೀಗಿರುತ್ತಾ, ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋ ಮಾಂಸದ ನೆಪದಲ್ಲಿ ಅಖ್ಲಾಕ್‍ನನ್ನು ಥಳಿಸಿ ಕೊಲೆಗೈದ ಘಟನೆಯ ಮುಖ್ಯ ಆರೋಪಿ ವಿಶಾಲ್ ರಾಣಾನ ತಂದೆ ಸಂಜಯ್ ರಾಣಾ ಕಳೆದ ವಾರ ಮಾತಾಡಿದ್ದಾರೆ. 1990ರ ಕರಸೇವೆಯಲ್ಲಿ ತಾನು ಭಾಗಿಯಾಗಿದ್ದೆ ಎಂದು ಈ ಬಿಜೆಪಿ ನಾಯಕ ಹೇಳಿಕೊಂಡಿದ್ದಾರೆ. ತಾನು ಒಂದು ವಾರ ಜೈಲಲ್ಲಿದ್ದುದನ್ನೂ ಪೆÇಲೀಸರ ದೌರ್ಜನ್ಯಗಳನ್ನೂ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಕಲ್ಲುಗಳು ಸಂಗ್ರಹವಾಗುತ್ತಿರುವ ಈ ಹೊತ್ತಿನಲ್ಲಿ  ‘ಕರಸೇವಕರು’ ತಮ್ಮ ಹಳೆಯ ದಿನಗಳನ್ನು ಮಾಧ್ಯಮಗಳ ಮೂಲಕ ಮೆಲುಕು ಹಾಕುವುದು ಏನನ್ನು ಸೂಚಿಸುತ್ತಿದೆ? ಮಗ-ಗೋ ಮಾಂಸದ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಂಡವನಾದರೆ ಅಪ್ಪ- ರಾಮಮಂದಿರದ ಹೆಸರಲ್ಲಿ ಕಾನೂನನ್ನು ಉಲ್ಲಂಘಿಸಿದವ. ವಿಶೇಷವೇನೆಂದರೆ ಈ ಎರಡಕ್ಕೂ ಒಂದು ಭಾವನಾತ್ಮಕ ಮುಖವಿದೆ. ಇಬ್ಬರೂ ಕಾನೂನನ್ನು ಉಲ್ಲಂಘಿಸಿದ್ದರೂ ಮತ್ತು ಎರಡೂ ಶಿಕ್ಷಾರ್ಹ ಅಪರಾಧವೇ ಆಗಿದ್ದರೂ ಅದನ್ನೇ ಹೆಮ್ಮೆಯೆಂದು ಕೊಂಡಾಡುವ ವೈಪರೀತ್ಯವೊಂದು ಈ ದೇಶದಲ್ಲಿ ನಡೆಯುತ್ತಿದೆ. ಬಾಬರಿ ಮಸೀದಿಯನ್ನು ಉರುಳಿಸಿದಾಗಲೂ ಈ ವೈಪರೀತ್ಯ ಕಂಡುಬಂದಿತ್ತು. ಅದರಲ್ಲಿ ಭಾಗಿಯಾದವರನ್ನು ಧರ್ಮ ರಕ್ಷಕರಂತೆ ಬಿಂಬಿಸಲಾಗಿತ್ತು. ದಾದ್ರಿ ಘಟನೆಯಲ್ಲೂ ಇಂತಹದ್ದೊಂದು ಅಸಂಬದ್ಧ ನಡೆಯಿತು. ಕೊಲೆಗಾರರನ್ನೇ ಮೆಚ್ಚಿಕೊಳ್ಳುವ ಭಾವನಾತ್ಮಕ ಧ್ರುವೀಕರಣ ಸೃಷ್ಟಿಯಾಯಿತು. ಆದ್ದರಿಂದಲೇ ಅಯೋಧ್ಯೆಯಲ್ಲಿ ಕಲ್ಲುಗಳು ದಾಸ್ತಾನುಗೊಳ್ಳುತ್ತಿರುವುದನ್ನೂ ಸಂಜಯ್ ರಾಣಾ ತನ್ನನ್ನು ಕರಸೇವಕ ಎಂದು ಸ್ಮರಿಸಿಕೊಳ್ಳುತ್ತಿರುವುದನ್ನೂ ಪರಸ್ಪರ ಹೋಲಿಸಿಕೊಂಡು ನೋಡಬೇಕಾಗುತ್ತದೆ. ಉತ್ತರ ಪ್ರದೇಶದ ವಿಧಾನ ಸಭೆಗೆ ಚುನಾವಣೆ ನಡೆಯಲು ಒಂದು ವರ್ಷ ಉಳಿದಿರುವಾಗ ಹಳೆಯ ಕರಸೇವಕರು ಮಾತಾಡ ತೊಡಗಿದ್ದಾರೆ. ಈ ಮಾತುಗಾರಿಕೆ ಸಂಜಯ್ ರಾಣಾರಿಗೆ ಮಾತ್ರ ಸೀಮಿತಗೊಳ್ಳುತ್ತದೆ ಎಂದು ಭಾವಿಸಬೇಕಾಗಿಲ್ಲ. ಉತ್ತರ ಪ್ರದೇಶದಲ್ಲಿ ರಾಮಮಂದಿರ ವಿಷಯವು ಫಲ ನೀಡಬಹುದೆಂದು ಬಿಜೆಪಿ ಮತ್ತು ಅದರ ಪರಿವಾರಕ್ಕೆ ಸ್ಪಷ್ಟವಾದರೆ ಅಂದಿನ ಅನುಭಗಳನ್ನು ಹಂಚಿಕೊಳ್ಳುವ ‘ಕರಸೇವಾ ಸ್ಮರಣೆಗಳು’ ಮುಂದಿನ ದಿನಗಳಲ್ಲಿ ಧಾರಾಳ ಬರಬಹುದು. ಜನರನ್ನು ಭಾವನಾತ್ಮಕವಾಗಿ ಮಣಿಸುವ ಶ್ರಮಗಳು ನಡೆಯಬಹುದು. ಅದರ ಭಾಗವಾಗಿಯೇ ಇದೀಗ ಕರ ಸೇವಕ್ ಪುರಂನಲ್ಲಿ ಕಲ್ಲುಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಮಾತ್ರವಲ್ಲ, ಈ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುವಂತೆಯೂ ನೋಡಿಕೊಳ್ಳಲಾಗುತ್ತಿದೆ. ಇದರಿಂದ ಆಗುವ ಲಾಭ ಏನೆಂದರೆ, ತಾವು ರಾಮಮಂದಿರವನ್ನು ಮರೆತಿಲ್ಲ ಎಂಬ ಸೂಚನೆಯನ್ನು ಜನರಿಗೆ ಕೊಡತ್ತಲಿರುವುದು. ಅದಕ್ಕಾಗಿ ಭಾರೀ ತಯಾರಿಯಲ್ಲಿದ್ದೇವೆ ಎಂಬ ಸಂದೇಶವನ್ನು ರವಾನಿಸುತ್ತಲಿರುವುದು. ಇದು ಜನರನ್ನು ಸೆಳೆಯುವ ಸೂಚನೆ ಕೊಟ್ಟರೆ ಸ್ವತಃ ಬಿಜೆಪಿಯೇ ಇದನ್ನು ಚುನಾವಣಾ ಇಶ್ಯೂ ಆಗುವಂತೆ ನೋಡಿಕೊಳ್ಳಬಹುದು. ಹಾಗಂತ, ಬಿಜೆಪಿ ಜನರಿಗೆ ಮೋಸ ಮಾಡಿಲ್ಲವೆಂದು ಚುನಾವಣೆಯ ಸಂದರ್ಭದಲ್ಲಿ ವಾದಿಸಬೇಕಾದರೆ ಕಲ್ಲುಗಳಾದರೂ ಇರಬೇಕಾದ ಅಗತ್ಯವಿದೆ. ಒಂದು ವೇಳೆ, ಜನರ ಮೇಲೆ ಈ ‘ಕಲ್ಲು ದಾಸ್ತಾನು’ ಮತ್ತು ‘ಕರಸೇವಾ ಸ್ಮರಣೆಗಳು’ ಪರಿಣಾಮ ಬೀರದಿದ್ದರೆ ಈ ಬೆಳವಣಿಗೆಯಿಂದ ಬಿಜೆಪಿ ಅಂತರವನ್ನು ಕಾಯ್ದುಕೊಳ್ಳಬಹುದು. ಬಹುಶಃ, ಇಂಥದ್ದೊಂದು ತಂತ್ರದ ಭಾಗವಾಗಿಯೇ ಅಯೋಧ್ಯೆಯಲ್ಲಿ ಕಲ್ಲುಗಳ ದಾಸ್ತಾನು ಆಗುತ್ತಿದೆ ಎನ್ನಬೇಕಾಗುತ್ತದೆ.
       ಅಷ್ಟಕ್ಕೂ, ಬಾಬರಿ ಮಸೀದಿಗೆ ಇರುವ ಪುರಾತನ ಹಿನ್ನಲೆ ಮತ್ತು ಅದನ್ನು ಸುತ್ತಿಕೊಂಡಿರುವ ವಿವಾದಗಳೇನೇ ಇರಲಿ, ಎಲ್ಲವೂ ಕಾನೂನಿನ ಮೂಲಕ ಇತ್ಯರ್ಥಗೊಳ್ಳಬೇಕೇ ಹೊರತು ಭುಜಬಲದಿಂದಲ್ಲ. ರಾಮಮಂದಿರ ಚಳವಳಿಯು ಬಿಜೆಪಿಗೆ ಒಂದು ಹಂತದವರೆಗೆ ರಾಜಕೀಯವಾಗಿ ಲಾಭ ತಂದುಕೊಟ್ಟಿರಬಹುದು. ಆದರೆ ಆ ಚಳವಳಿಯಿಂದಾಗಿ ಆದ ಜೀವಹಾನಿ, ನ್ಯಾಯಹಾನಿಯು ಬಿಜೆಪಿಯ ಮೇಲೆ ಅಳಿಸಲಾಗದ ಕಳಂಕವನ್ನು ಉಂಟುಮಾಡಿದೆÉ. ಆ ಕಳಂಕ ಶಾಶ್ವತವಾದುದು. ತಾತ್ಕಾಲಿಕವಾದ ಅಧಿಕಾರಕ್ಕಾಗಿ ಶಾಶ್ವತವಾದ ಕಳಂಕವನ್ನು ಮೆತ್ತಿಕೊಂಡ ಬಿಜೆಪಿ ಮತ್ತೆ ಅದೇ ತಪ್ಪನ್ನು ಮಾಡುತ್ತದೆಂದಾದರೆ ಅದಕ್ಕೆ ಇತಿಹಾಸದ ಅರಿವಿಲ್ಲ ಎನ್ನಬೇಕಾಗುತ್ತದೆ. ಮಾತ್ರವಲ್ಲ, ಮಂದಿರಕ್ಕಾಗಿ ದಾಸ್ತಾನು ಮಾಡಲಾಗುತ್ತಿರುವ ಕಲ್ಲುಗಳನ್ನೇ ಜನರು ಮುಂದೊಂದು ದಿನ ಬಿಜೆಪಿಗೆ ಪಾಠ ಕಲಿಸಲಿಕ್ಕಾಗಿ ಎತ್ತಿಕೊಳ್ಳಲೂಬಹುದು ಎಂದೇ ಹೇಳಬೇಕಾಗುತ್ತದೆ.


Friday, 1 January 2016

ಅಡಗಿಕೊಳ್ಳಬೇಕಾದುದು ಹೆಣ್ಣಲ್ಲ, ಅತ್ಯಾಚಾರಿ ...

         ದೆಹಲಿಯ ಜಂತರ್ ಮಂತರ್‍ನಲ್ಲಿ ಕಳೆದ ವಾರ ನಡೆದ ‘ನಿರ್ಭಯ ಚೇತನ್ ದಿವಸ್' ಸಭೆಯು ಕೆಲವು ಕಾರಣಗಳಿಗಾಗಿ ಮಹತ್ವಪೂರ್ಣವಾದುದು. 2015ಕ್ಕೆ ವಿಶಿಷ್ಟ ರೀತಿಯಲ್ಲಿ ತೆರೆ ಎಳೆಯಲಾದ ಸಂದರ್ಭವಾಗಿ ಆ ಸಭೆಯನ್ನು ನಾವು ಪರಿಗಣಿಸಬಹುದಾಗಿದೆ. ಈ ಸಭೆಯಲ್ಲಿ ‘ನಿರ್ಭಯ'ಳ ತಾಯಿ ಆಶಾ ದೇವಿಯವರು ತನ್ನ ಮಗಳ ಹೆಸರನ್ನು ಅಧಿಕೃತವಾಗಿ ಘೋಷಿಸಿದರು. ಮಾತ್ರವಲ್ಲ, ಮಾಧ್ಯಮಗಳು ಜ್ಯೋತಿಸಿಂಗ್ ಎಂಬ ಹೆಸರಿನಿಂದಲೇ ತನ್ನ ಮಗಳನ್ನು ಗುರುತಿಸಬೇಕೆಂದು ಕರೆಕೊಟ್ಟರು. ಆದರೆ ಭಾರತೀಯ ದಂಡಸಂಹಿತೆ 228Aಯ ಪ್ರಕಾರ, ಅತ್ಯಾಚಾರಕ್ಕೀಡಾದ ಸಂತ್ರಸ್ತೆಯ ಹೆಸರನ್ನು ಪ್ರಕಟಿಸುವುದು ಕ್ರಿಮಿನಲ್ ಅಪರಾಧ. ಆದರೂ ದಂಡಸಂಹಿತೆ 228A(2)(C)ಯಲ್ಲಿರುವ  ಕೆಲವು ರಿಯಾಯಿತಿಗಳನ್ನು ಬಳಸಿಕೊಂಡು ಹೆಸರನ್ನು ಪ್ರಕಟಿಸಬಹುದಾದರೂ ಪತ್ರಿಕೆಗಳು ಈ ಮೊದಲಿನ ನಿರ್ಧಾರಕ್ಕೇ ಅಂಟಿಕೊಂಡವು. ‘ನಿರ್ಭಯ'ಳ ನಿಜ ಹೆಸರನ್ನು ಪ್ರಕಟಿಸಬಾರದಾಗಿ ತೀರ್ಮಾನಿಸಿದವು. ಇದು ಪರ-ವಿರುದ್ಧ ಚರ್ಚೆಗೆ ವೇದಿಕೆ ಒದಗಿಸಿತು. ಹೈದರಾಬಾದ್‍ನ ನಲ್ಸರ್ ವಿಶ್ವವಿದ್ಯಾಲಯದ  ಆನಂದಿತಾ ಮುಖರ್ಜಿ ಪತ್ರಿಕೆಗಳ ಈ ನಿಲುವನ್ನು ಪ್ರತಿಭಟಿಸಿದರು. ಈ ಕುರಿತಂತೆ ತನ್ನ ಅಸಮಾಧಾನವನ್ನು ಸೂಚಿಸಿ ದಿ ಹಿಂದೂ ಪತ್ರಿಕೆಗೆ ಖಾರ ಪತ್ರವನ್ನೂ ಬರೆದಳು. ವಿಶೇಷ ಏನೆಂದರೆ, ಕೆಲವು ತಿಂಗಳುಗಳ ಹಿಂದಷ್ಟೇ ತಟಸ್ಥ ಲಿಂಗ (Gender Neutrality) ಸರ್ಟಿಫಿಕೇಟ್‍ಗೆ ಆಗ್ರಹಿಸಿ ಕೋರ್ಟಿನಿಂದ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಅದನ್ನು ಆಕೆ ಪಡೆದುಕೊಂಡಿದ್ದರು. Mr, Ms  ಎಂಬ ಗೌರವ ಸೂಚಕ ಪದಗಳಂತೆಯೇ ತನ್ನ ಹೆಸರಿನ ಮೊದಲು Mx  ಸೇರಿಸಿಕೊಳ್ಳುವುದಕ್ಕೆ ಕೋರ್ಟು ಆಕೆಗೆ ಅನುಮತಿಯನ್ನು ನೀಡಿತ್ತು.
         
       Mx ಗಾಗಿ ಆನಂದಿತಾ ಮುಖರ್ಜಿಯ ಹೋರಾಟವೇನೇ ಇರಲಿ, ಅದರಲ್ಲೊಂದು ಧೈರ್ಯ ಇದೆ. ಆ ಧೈರ್ಯದ ಮುಂದುವರಿದ ಭಾಗವಾಗಿ ನಾವು ಆಶಾದೇವಿಯ ಹೇಳಿಕೆಯನ್ನು ಪರಿಗಣಿಸಬಹುದಾಗಿದೆ. ನಿಜವಾಗಿ, ಈ ದೇಶದಲ್ಲಿ ಹೆಣ್ಣಿನ ಕುರಿತಂತೆ ಮೈಲಿಗೆಯ ಹತ್ತು-ಹಲವು ಕತೆಗಳಿವೆ. ಹೆಜ್ಜೆ ಹೆಜ್ಜೆಗೂ ನಿರ್ಬಂಧಗಳಿವೆ. ಕಟ್ಟುಪಾಡುಗಳಿವೆ. ಅನಾದಿ ಕಾಲದಿಂದಲೂ ಹೆಣ್ಣನ್ನು ದಮನಿಸುವ ಪರಂಪರೆಯೊಂದು ಈ ದೇಶಕ್ಕಿದೆ. ಈ ಪರಂಪರೆ ಎಷ್ಟು ಪರಿಚಿತ ಮತ್ತು ಸಹಜ ಅನ್ನಿಸಿಕೊಂಡಿದೆ ಯೆಂದರೆ, ಆಕೆ ಪತಿಯ ಚಿತೆಗೂ ಹಾರಬಲ್ಲಳು. ಕೆರೆಗೂ ಹಾರವಾಗಬಲ್ಲಳು. ದೇವದಾಸಿಯಾಗಬಲ್ಲಳು. ಅಮಂಗಲೆ ಅನ್ನಿಸಿಕೊಳ್ಳಬಲ್ಲಳು. ಮುಟ್ಟಾಗಿ ಊರ ಹೊರಗೆ ಬದುಕಬಲ್ಲಳು. ವೈಧವ್ಯದ ಪರಮ ಕ್ರೂರ ಬದುಕಿಗೆ ಒಗ್ಗಿಕೊಳ್ಳಬಲ್ಲಳು. ಅಂತಪುರದಲ್ಲಿ ಸಖಿಯಾಗಬಲ್ಲಳು. ಎಲ್ಲವನ್ನೂ ಸಹಿಸಿಕೊಳ್ಳುತ್ತಾ ಎಲ್ಲೂ ಪ್ರತಿಭಟಿಸದೆಯೇ ಕಳೆದು ಹೋಗುವ ಪರಮ ಸಭ್ಯ ಪಾತ್ರವಾಗಿಯೇ ಮಹಿಳೆ ಇತಿಹಾಸ ದುದ್ದಕ್ಕೂ ಈ ದೇಶದಲ್ಲಿ ಗುರುತಿಸಿಕೊಂಡಿದ್ದಾಳೆ. ಇವತ್ತಿಗೂ ಮಹಿಳೆಯ ಆ ಪಾತ್ರದಲ್ಲಿ ಅಭೂತ ಪೂರ್ವವೆನ್ನಬಹುದಾದ ಬದಲಾವಣೆಯೇನೂ ಆಗಿಲ್ಲ. ವರದಕ್ಷಿಣೆಯ ಹೆಸರಲ್ಲಿ ಆಕೆಯನ್ನು ಸತಾ ಯಿಸಲಾಗುತ್ತದೆ. ಮರ್ಯಾದೆಗೇಡು ಹತ್ಯೆಯಲ್ಲಿ ಆಕೆಯೇ ಮೊದಲು ಗುರಿಯಾಗುತ್ತಾಳೆ. ಆಕೆಯನ್ನು ಭ್ರೂಣಧಲ್ಲೇ ಮುಗಿಸಿಬಿಡುವ ಘಟನೆಗಳಂತೂ ಧಾರಾಳವಾಗಿ ನಡೆಯುತ್ತಿವೆ. ಇದರ ಜೊತೆಗೇ ಅತ್ಯಾಚಾರ ಪ್ರಕರಣಗಳನ್ನು ಸೇರಿಸಿದರೆ ಹೆಣ್ಣು ಮತ್ತಷ್ಟು ದುರ್ಬಲವಾಗಿ ಕಾಣುತ್ತಾಳೆ. ಆದ್ದರಿಂದಲೇ ಆಶಾದೇವಿಯ ಹೇಳಿಕೆಯನ್ನು ಸಮಾಜ ವರ್ಷದ ಹೇಳಿಕೆಯಾಗಿ ಪರಿಗಣಿಸಬೇಕೆಂದು ಅನಿಸುವುದು. ಅಂದಹಾಗೆ, ಅತ್ಯಾಚಾರವೆಂಬುದು ವರದಕ್ಷಿಣೆ, ಲಿಂಗ ತಾರತಮ್ಯ, ಮರ್ಯಾದೆಗೇಡು ಹತ್ಯೆ ಮುಂತಾದುವುಗಳಂತೆ ಅಲ್ಲವಲ್ಲ. ಇವುಗಳಿಗಾದರೋ ಆಯ್ಕೆಯ ಅವಕಾಶಗಳಿವೆ. ವರದಕ್ಷಿಣೆಯ ಮದುವೆಯನ್ನು ಒಪ್ಪಿಕೊಳ್ಳುವ ಅಥವಾ ತಿರಸ್ಕರಿಸುವ ಅವಕಾಶವೊಂದು ಹೆಣ್ಣಿನ ಮುಂದಿರುತ್ತದೆ. ಅನೇಕ ಸಂದರ್ಭಗಳಲ್ಲಿ ಈ ಅವಕಾಶಕ್ಕೆ ಮಿತಿ ಇರಬಹುದಾದರೂ ಆಯ್ಕೆಯ ಸ್ವಾತಂತ್ರ್ಯವನ್ನಂತೂ ನಿರಾಕರಿಸಲು ಸಾಧ್ಯವಿಲ್ಲ. ಮರ್ಯಾದೆಗೇಡು ಹತ್ಯೆಯ ವಿಷಯವೂ ಇಷ್ಟೇ. ಇಲ್ಲೂ, ಮನೆಯವರಿಗೆ ಇಷ್ಟವಿಲ್ಲದ ಯುವಕನನ್ನು ಪ್ರೀತಿಸುವ ಅಥವಾ ಪ್ರೀತಿಸದೇ ಇರುವ ಅವಕಾಶವೊಂದು ಹೆಣ್ಣಿಗಿರುತ್ತದೆ. ಲಿಂಗ ತಾರತಮ್ಯವನ್ನು ಕೂಡ ಪ್ರಶ್ನಿಸುವುದಕ್ಕೆ ಅವಕಾಶ ಇದೆ. ಹೆಣ್ಣು ಧೈರ್ಯ ತಂದುಕೊಂಡರೆ ಈ ಬಗ್ಗೆ ನೆರವಾಗುವುದಕ್ಕೆ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳಿವೆ. ಆದರೆ ಅತ್ಯಾಚಾರ ಹೀಗಲ್ಲ. ಹೆಣ್ಣಿನ ಅಸಹಾಯಕತೆಯನ್ನೇ ಗುರಿಯಾಗಿಟ್ಟುಕೊಂಡು ಮಾಡುವ ಹೇಯ ಕ್ರೌರ್ಯ ಅದು. ಅತ್ಯಾಚಾರದಲ್ಲಿ ಹೆಣ್ಣಿಗೆ ಆಯ್ಕೆಗಳಿರುವುದಿಲ್ಲ. ನಿಜವಾಗಿ, ಅತ್ಯಾಚಾರಕ್ಕಿಂತಲೂ ಭಯಾನಕ ಏನೆಂದರೆ, ಅತ್ಯಾಚಾರದ ಬಳಿಕದ ಜೀವನ. ಅತ್ಯಾಚಾರಿ ತನ್ನ ಕೃತ್ಯದ ಬಳಿಕ ‘ಏನೂ ಆಗಿಲ್ಲ ವೆಂಬಂತೆ' ಹೊರಟು ಹೋಗುವಾಗ ಸಂತ್ರಸ್ತೆಯು ಅಪರಾಧಿಯಂತೆ ಎಲ್ಲವನ್ನೂ ನುಂಗಿಕೊಂಡು ಬದುಕುವುದಕ್ಕೆ ಹೆಚ್ಚಿನ ಬಾರಿ ತೀರ್ಮಾನಿಸುತ್ತಾಳೆ. ಒಡಲೊಳಗೆ ಅತ್ಯಾಚಾರವೆಂಬ ಬೆಂಕಿಯ ಉರಿಯನ್ನು ಸಹಿಸಿಕೊಳ್ಳುತ್ತಲೇ ಹೊರಗೆ ಅದರ ಕಾವು ಕಾಣದಂತೆ ಅದುಮಿಡಲು ಪ್ರಯತ್ನಿಸುತ್ತಾಳೆ. ಇದಕ್ಕೆ ಕಾರಣ ಏನೆಂದರೆ, ‘ಅತ್ಯಾಚಾರದ ಸಂತ್ರಸ್ತೆ' ಎಂಬ ಹಣೆಪಟ್ಟಿಯನ್ನು ಸಮಾಜ ಇಷ್ಟಪಡದೇ ಇರುವುದು. ಅದು ಭವಿಷ್ಯದಲ್ಲಿ ಆ ಹೆಣ್ಣು ಮಗಳ ಮದುವೆಯನ್ನು, ಸಾಮಾಜಿಕ ಮನ್ನಣೆಯನ್ನು, ಕುಟುಂಬದ ಮರ್ಯಾದೆಯನ್ನು ನಾಶ ಮಾಡಬಹುದಾದ ಹಣೆಪಟ್ಟಿ. ಸಮಾಜದಲ್ಲಿ ಇತರರಂತೆ ಬದುಕುವ ಸ್ವಾತಂತ್ರ್ಯವನ್ನು ಆ ಹಣೆಪಟ್ಟಿ ನಿರಾಕರಿಸುತ್ತದೆ. ಅದು ಆಕೆಯನ್ನು ಪ್ರತಿದಿನವೂ ಇರಿಯಬಹುದು. ವ್ಯಂಗ್ಯಕ್ಕೆ ಒಳಗಾಗಿಸಬಹುದು. ಊರು ಬಿಡುವಂತೆ ಬಲವಂತಪಡಿಸಬಹುದು. ಇವು ಮತ್ತು ಇಂತಹ ಹತ್ತಾರು ಸವಾಲುಗಳನ್ನು ಸಂತ್ರಸ್ತೆ ಎದುರಿಸಬಹುದಾದ ಅಪಾಯ ಇರುವುದರಿಂದಲೇ ಭಾರತೀಯ ದಂಡ ಸಂಹಿತೆಯಲ್ಲಿ ಸಂತ್ರಸ್ತೆಯ ಹೆಸರನ್ನು ಗೌಪ್ಯವಾಗಿಡುವ ತೀರ್ಮಾನ ಮಾಡಿರಬೇಕು. ಅಂದಹಾಗೆ, ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಪ್ರತಿದಿನ ನಡೆಯುತ್ತಿದ್ದರೂ ಅವುಗಳಲ್ಲಿ ಸುದ್ದಿಯಾಗುವುದು ಕೆಲವೇ ಕೆಲವು. ಹೆಚ್ಚಿನ ಸುದ್ದಿಗಳು ಮನೆತನದ ಗೌರವ, ಹೆಣ್ಣು ಮಗಳ ಭವಿಷ್ಯ ಅಥವಾ ಅತ್ಯಾಚಾರಿಗಳ ಬೆದರಿಕೆಗಳಿಂದಾಗಿ ಸತ್ತು ಹೋಗುತ್ತವೆ. ಇನ್ನು, ಸುದ್ದಿಯಾಗುವ ಪ್ರಕರಣಗಳಲ್ಲೂ ಸಂತ್ರಸ್ತೆಯ ಹೆಸರು ಪ್ರಕಟವಾಗದಂತೆ ಎಚ್ಚರ ವಹಿಸಲಾಗುತ್ತದೆ. ಹಾಗಂತ, ಈ ಎಚ್ಚರಿಕೆಗೆ ಭಾರತೀಯ ದಂಡಸಂಹಿತೆಯೊಂದೇ ಕಾರಣ ಎಂದು ಹೇಳುವಂತಿಲ್ಲ. ದೇಶದ ಸಾಮಾಜಿಕ ರೀತಿ-ನೀತಿಗಳೇ ಹಾಗಿವೆ. ‘ಅತ್ಯಾಚಾರದ ಸಂತ್ರಸ್ತೆ'ಯನ್ನು ಒಂದು ಬಗೆಯ ಅಸ್ಪೃಶ್ಯ ದೃಷ್ಟಿಕೋನದಲ್ಲಿ ನೋಡುವ ಮನಸ್ಥಿತಿ ಇಲ್ಲಿ ಈಗಲೂ ಇದೆ. ಯುವಕ-ಯುವತಿಯರಿಗೆ ಸಂಬಂಧಿಸಿದ ಯಾವುದೇ ವಿಷಯದಲ್ಲಿ ಹೆಣ್ಣನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ವಾತಾವರಣ ಇದೆ. ಇಂಥ ಸ್ಥಿತಿಯಲ್ಲಿ ಆಶಾದೇವಿಯವರ ಹೇಳಿಕೆಯನ್ನು ನಾವು ವಿಶ್ಲೇಷಿಸಬೇಕಾಗಿದೆ. ಸಂತ್ರಸ್ತೆಯನ್ನು ಅಡಗಿಸುವ ಬದಲು ಸಮಾಜದ ಮುಂದೆ ನಿಲ್ಲಿಸುವ ಮತ್ತು ಆ ಮೂಲಕ ಅತ್ಯಾಚಾರಿಗಳು ನಾಚಿಕೊಳ್ಳುವಂತೆ ಮಾಡುವ ಧೈರ್ಯದ ಹೇಳಿಕೆ ಅದು. ಅತ್ಯಾಚಾರವು ಗಂಡಿಗೆ ಅವಮಾನವೇ ಹೊರತು ಹೆಣ್ಣಿಗಲ್ಲ ಎಂದು ಬಲವಾಗಿ ಸಾರಿದ ಸಂದರ್ಭವಿದು. ಆದ್ದರಿಂದಲೇ, ಈ ಹೇಳಿಕೆಯನ್ನು ವರ್ಷದ ಹೇಳಿಕೆಯಾಗಿ ಗೌರವಿಸಬೇಕಾಗಿದೆ.
      ಏನೇ ಆಗಲಿ, ತನ್ನ ದೈಹಿಕ ರಚನೆಗೆ ನೊಂದುಕೊಳ್ಳದೇ, ಅದನ್ನು ಪ್ರಕೃತಿಯ ಕೊಡುಗೆಯಾಗಿ ಸ್ವೀಕರಿಸಿಕೊಂಡು ಸಮಾಜದ ಮುಂದೆ ಬಹಿರಂಗವಾಗಿ ಸಾರಿದ Mx ಆನಂದಿತಾ ಮುಖರ್ಜಿಯ ಧೈರ್ಯ ಒಂದು ಕಡೆಯಾದರೆ, ಆಶಾದೇವಿಯ ಧೈರ್ಯ ಇನ್ನೊಂದು ಕಡೆ. 2015ರ ಕೊನೆಯಲ್ಲಿ ಕಾಣಿಸಿಕೊಂಡ ಈ ಎರಡು ಧೈರ್ಯಗಳನ್ನು ನಾವು ಮೆಚ್ಚಿಕೊಳ್ಳಬೇಕು. 2016ನೇ ಇಸವಿಯು ಹೆಣ್ಣನ್ನು ಸುರಕ್ಷಿತವಾಗಿಡಲು ಈ ಧೈರ್ಯ ಪ್ರಚೋದಕವಾಗಬೇಕು. ಹಾಗಾಗಲಿ ಎಂದು ಹಾರೈಸೋಣ.

Thursday, 24 December 2015

ಸಮಸ್ಯೆ ವಯಸ್ಸಿನದ್ದೋ ವಾತಾವರಣದ್ದೋ?

      ಅಪ್ರಾಪ್ತ ವಯಸ್ಸಿನ ಅಪರಾಧಿಗಳನ್ನು ಹೇಗೆ ನಡೆಸಿಕೊಳ್ಳಬೇಕು? ಅತ್ಯಾಚಾರದಲ್ಲಿ ಭಾಗಿಯಾದ ಪ್ರಾಪ್ತ ವಯಸ್ಕರಿಗೆ ಮರಣದಂಡನೆ ವಿಧಿಸುವಾಗ, ಅದೇ ಅತ್ಯಾಚಾರದಲ್ಲಿ ಭಾಗಿಯಾದವನನ್ನು ಅಪ್ರಾಪ್ತನೆಂಬ ನೆಲೆಯಲ್ಲಿ ಬಿಡುಗಡೆಗೊಳಿಸುವುದು ಎಷ್ಟು ಸಮರ್ಥನೀಯ? ಅದು ತಪ್ಪು ಸಂದೇಶವನ್ನು ರವಾನಿಸದೆ? ಅಪ್ರಾಪ್ತರಲ್ಲಿ ಹುಂಬ ಧೈರ್ಯವನ್ನು ತುಂಬದೇ? ಹಾಗಂತ, ಇದಕ್ಕೆ ಪರಿಹಾರ ಏನು? ಅಪ್ರಾಪ್ತ ವಯಸ್ಸಿನ ಮಿತಿಯನ್ನು ಈಗಿನ 18ರಿಂದ 16ಕ್ಕೋ 14ಕ್ಕೊ ಇಳಿಸುವುದು ಸೂಕ್ತವೇ? ಹಾಗೆ ಮಾಡುವುದರಿಂದ ಹಸುಳೆಗಳನ್ನು ಪ್ರೌಢರೊಂದಿಗೆ ಸಮಗೊಳಿಸಿದಂತಾಗದೆ? 16 ವರ್ಷದ ಎಳೆಯನೂ 50 ವರ್ಷದ ಪ್ರೌಢನೂ ಒಂದೇ ರೀತಿಯೇ? ತಿಳುವಳಿಕೆ, ಬುದ್ಧಿಮತ್ತೆ, ಸರಿ-ತಪ್ಪುಗಳ ಪ್ರಜ್ಞೆ ಎಲ್ಲದರಲ್ಲೂ ಇವರ ಮಧ್ಯೆ ಆಳ ವ್ಯತ್ಯಾಸ ಇರುವಾಗ ಇವರನ್ನು ಒಂದೇ ಕ್ರಿಮಿನಲ್ ನ್ಯಾಯ ಪ್ರಕ್ರಿಯೆಯೊಳಗೆ ತರುವುದು, ಒಟ್ಟಿಗೆ ಕಟಕಟೆಯಲ್ಲಿ ನಿಲ್ಲಿಸುವುದು ಮತ್ತು ಸಮಾನ ಜೈಲಿನಲ್ಲಿಡುವುದು ಸಮರ್ಥನೀಯವೇ? ಎಳೆಯನ ಮಟ್ಟಿಗೆ ಇದು ತಿದ್ದಿಕೊಳ್ಳುವುದಕ್ಕೆ ಅವಕಾಶವನ್ನೇ ನೀಡದ ಏಕಮುಖ ಕ್ರೌರ್ಯವಾಗಬಹುದೇ... ಇತ್ಯಾದಿ ಹತ್ತು ಹಲವು ಪ್ರಶ್ನೆಗಳಿಗೆ ದೆಹಲಿಯ ಇಂಡಿಯಾ ಗೇಟ್ ಮತ್ತೊಮ್ಮೆ ವೇದಿಕೆ ಒದಗಿಸಿದೆ. `ನಿರ್ಭಯ' ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ 2012ರಲ್ಲಿ ಇಂಡಿಯಾ ಗೇಟ್‍ನಲ್ಲಿ ಪ್ರತಿಭಟನೆ ಆರಂಭಗೊಂಡಿತ್ತು. ಆ ಪ್ರತಿಭಟನೆ ಆ ಬಳಿಕ ಎಷ್ಟು ತೀವ್ರತೆಯನ್ನು ಪಡಕೊಂಡಿತ್ತೆಂದರೆ, ದೇಶವನ್ನು ಒಂದು ಚಳವಳಿಯಾಗಿ ಆವರಿಸಿಬಿಟ್ಟಿತು. ಸರಕಾರವೇ ಪ್ರತಿಭಟನೆಗೆ ಶರಣಾಗಿ, ಅತ್ಯಾಚಾರ ವಿರೋಧಿ ಕಾನೂನನ್ನು ರೂಪಿಸುವಷ್ಟು ಅದು ಪರಿಣಾಮಕಾರಿಯಾಯಿತು. ಇದೀಗ ಮತ್ತೊಮ್ಮೆ ಇಂಡಿಯಾ ಗೇಟ್ ಸದ್ದು ಮಾಡಿದೆ. ಆ ಪ್ರಕರಣದ ಬಾಲಾಪರಾಧಿ ಜೈಲಿನಿಂದ ಹೊರಬಂದಿರುವುದನ್ನು ಪ್ರತಿಭಟಿಸಿ ಜನರು ಇಂಡಿಯಾ ಗೇಟ್‍ನ ಬಳಿ ನೆರೆದಿದ್ದಾರೆ. ನಿರ್ಭಯಾಳ ತಾಯಿ ಆಶಾದೇವಿ ಮತ್ತು ತಂದೆ ಬದ್ರಿ ಸಿಂಗ್ ಪ್ರತಿಭಟನೆಯಲ್ಲಿ ಪಾಲುಗೊಂಡಿದ್ದಾರೆ. ಆತನನ್ನು ಬಿಡುಗಡೆಗೊಳಿಸಬಾರದೆಂದು ಅವರೆಲ್ಲ ಒತ್ತಾಯಿಸುತ್ತಿದ್ದಾರೆ. ಒಂದು ರೀತಿಯಲ್ಲಿ, ಇದು ಭಾರತೀಯ ನ್ಯಾಯ ಪ್ರಕ್ರಿಯೆ ಮತ್ತು ಜನರ ಭಾವನೆಗಳ ನಡುವಿನ ಸಂಘರ್ಷದಂತೆ ತೋರುತ್ತಿದೆ. ನ್ಯಾಯ ಸಂಹಿತೆಯ ಪ್ರಕಾರ ಬಾಲಾಪರಾಧಿಗೆ 3 ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಿಲ್ಲ. ನಿರ್ಭಯಾಳ ಮೇಲೆ ಅತ್ಯಾಚಾರ ನಡೆಸುವಾಗ ಆತನಿಗೆ 18 ವರ್ಷ ತುಂಬಿರಲಿಲ್ಲ ಎಂಬುದೇ ಆತನ ಬಿಡುಗಡೆಗಿರುವ ಏಕೈಕ ಸಬೂಬು. ಈ ಸಬೂಬನ್ನು ಹೊರಗಿಟ್ಟು ನೋಡಿದರೆ, ಎಲ್ಲ ರೀತಿಯಲ್ಲೂ ಆತ ಪರಮ ಕ್ರೂರಿಯೇ. ಮರಣದಂಡನೆಗೆ ಒಳಗಾದ ಇತರ ಮೂವರಿಗಿಂತ ಹೆಚ್ಚು ಕ್ರೌರ್ಯವನ್ನು ಮೆರೆದಿದ್ದು ಈತನೇ ಎಂದು ಹೇಳಲಾಗುತ್ತದೆ. ವಯಸ್ಸಿನ ಹೊರತಾಗಿ ಆತನ ಮೇಲೆ ಕರುಣೆ ತೋರುವುದಕ್ಕೆ ಇನ್ನಾವ ಕಾರಣಗಳೂ ಇಲ್ಲ. ಇಂಡಿಯಾ ಗೇಟ್‍ನಲ್ಲಿ ನೆರೆದಿರುವವರ ವಾದವೂ ಇದುವೇ. ಒಂದು ಕಡೆ ಕಾನೂನು ಇನ್ನೊಂದು ಕಡೆ ಜನರ ಭಾವನೆ.. ಇವುಗಳ ನಡುವೆ ಬಾಲಾಪರಾಧಿ ಸಿಲುಕಿಕೊಂಡಿದ್ದಾನೆ.
   ನಿಜವಾಗಿ, ಅಪ್ರಾಪ್ತರನ್ನು ಮತ್ತು ಪ್ರಾಪ್ತ ವಯಸ್ಕರನ್ನು ಸಮಾನ ತಕ್ಕಡಿಯಲ್ಲಿಡುವುದೇ ತಪ್ಪು. ಇಬ್ಬರ ನಡುವೆ ಬೌದ್ಧಿಕ ಬೆಳವಣಿಗೆ, ಕಾನೂನಿನ ಅರಿವು, ತನ್ನ ಕೃತ್ಯದ ಪರಿಣಾಮದ ತಿಳುವಳಿಕೆ ಇತ್ಯಾದಿಗಳ ವಿಷಯದಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಪ್ರಾಪ್ತನ ಅರಿವಿನ ಮಟ್ಟವನ್ನು ಅಪ್ರಾಪ್ತ ಹೊಂದಿರುವುದಿಲ್ಲ. ಮಗುವಿನ ಕೈಗೆ ವಾಚ್ ಕೊಟ್ಟರೆ ಉಪಯೋಗದ ಹೊರತಾದ ಎಲ್ಲವನ್ನೂ ಅದು ಮಾಡುತ್ತದೆ. ಮಗುವಿನ ಮಟ್ಟಿಗೆ ಅದು ಒಂದು ಆಟದ ಸಾಮಾನು. ಅದನ್ನು ಒಡೆದೂ ಬಿಡಬಹುದು. ಎತ್ತಿ ಎಸೆದು ಬಿಡಲೂ ಬಹುದು. ಆದರೆ ಮಗುತನ ದಾಟಿ ಬಂದ ಮಕ್ಕಳು ವಾಚ್ ಅನ್ನು ನೋಡುವ ವಿಧಾನವೇ ಬೇರೆ. ಅದು ಅವರ ಪಾಲಿಗೆ ಫ್ಯಾಶನ್. ಗೆಳೆಯರೆದುರು ಆಗಾಗ ಟೈಮ್ ನೋಡುವ ನೆಪದಲ್ಲಿ ಪ್ರದರ್ಶಿಸುವ ಹೆಚ್ಚುಗಾರಿಕೆ. ಒಂದು ವೇಳೆ, ಮಗುವನ್ನು ಮತ್ತು ಮಕ್ಕಳನ್ನು ಒಂದೇ ತಟ್ಟೆಯಲ್ಲಿ ಇಟ್ಟು ನೋಡಿದರೆ ಏನಾಗಬಹುದು? ಬಹುಶಃ, ಹದಿಹರೆಯದವರು ಮತ್ತು ವಯಸ್ಕರನ್ನು ಈ ಮಾನದಂಡವನ್ನಿಟ್ಟುಕೊಂಡು ತೂಗಿದರೆ ಉತ್ತಮವೇನೋ ಅನಿಸುತ್ತದೆ. ಹಾಗಂತ, ಅತ್ಯಾಚಾರದಲ್ಲಿ ಭಾಗಿಯಾಗುವ ಅಪ್ರಾಪ್ತರು ವಾಚ್ ಪುಡಿ ಮಾಡುವ ಮಗುವಿನಷ್ಟೇ ಮುಗ್ಧರು ಎಂದು ಇದರರ್ಥವಲ್ಲ. ಹದಿಹರೆಯದವರಿಗೆ ಅತ್ಯಾಚಾರವು ತಪ್ಪು ಮತ್ತು ಅದಕ್ಕೆ ಶಿಕ್ಷೆ ಇದೆ ಎಂಬುದು ಗೊತ್ತಿರಲೂ ಬಹುದು. ಆದರೂ, ಅವರನ್ನು ವಯಸ್ಕರಿಗೆ ಸಮಾನವಾಗಿ ನೋಡುವುದು ಅಪ್ರಬುದ್ಧ ಮತ್ತು ದುಡುಕುತನದಂತೆ ತೋರುತ್ತದೆ.
      ನಿಜವಾಗಿ, ಆಧುನಿಕ ತಂತ್ರಜ್ಞಾನಗಳು ತೀರಾ ಬೆಳೆದಿರುವ ಮತ್ತು ಮೊಬೈಲ್‍ನಲ್ಲಿ `ಸರ್ವವೂ' ಲಭ್ಯವಾಗುತ್ತಿರುವ ಇಂದಿನ ದಿನಗಳು ಹದಿಹರೆಯವನ್ನು ಅಪಾಯಕಾರಿಯಾಗುವಂತೆ ತಯಾರುಗೊಳಿಸುತ್ತಿದೆ. 10 ವರ್ಷಗಳ ಹಿಂದಿನ ಹದಿಹರೆಯಕ್ಕೂ ಇವತ್ತಿನ ಹದಿಹರೆಯಕ್ಕೂ ಬೌದ್ಧಿಕವಾಗಿಯೂ ಭೌತಿಕವಾಗಿಯೂ ಧಾರಾಳ ಅಂತರಗಳಿವೆ. ಇವತ್ತು ಅಪ್ರಾಪ್ತನು/ಳು ಪ್ರಾಪ್ತ ವಯಸ್ಕನಷ್ಟು ಪ್ರಬುದ್ಧವಾಗಿ ಮಾತಾಡುತ್ತಾನೆ/ಳೆ. ಯಾವುದೇ ವಿಷಯದ ಮೇಲೆ ಪ್ರಾಪ್ತ ವಯಸ್ಕನಿಗೆ ಸರಿಸಮವಾದ ಮಾಹಿತಿಯನ್ನು ಪಡೆಯುವ ಎಲ್ಲ ಸೌಲಭ್ಯಗಳೂ ಇವತ್ತು ಅಪ್ರಾಪ್ತರಿಗಿವೆ. ಒಂದು ರೀತಿಯಲ್ಲಿ, ಇವತ್ತಿನ ತಂತ್ರಜ್ಞಾನಗಳು ಅಪ್ರಾಪ್ತರನ್ನು ಅಕಾಲಿಕ ಪ್ರಾಪ್ತ ವಯಸ್ಕರನ್ನಾಗಿ ಮಾಡುತ್ತಿವೆ. ಅವರು ಯಾವ ವಿಷಯದ ಮೇಲೆ ಕುತೂಹಲ ವ್ಯಕ್ತಪಡಿಸುತ್ತಾರೋ ಆ ಕುತೂಹಲವನ್ನು ತಣಿಸುವುದಕ್ಕೆ ಬೆರಳ ತುದಿಯಲ್ಲೇ ಅವಕಾಶವನ್ನು ಒದಗಿಸುತ್ತಿದೆ. 20 ವರ್ಷಗಳ ಹಿಂದೆ ಆಗಿದ್ದರೆ ನೀಲಿ ಚಿತ್ರವನ್ನು ವೀಕ್ಷಿಸುವುದಕ್ಕೆ ಚಿತ್ರ ಮಂದಿರಕ್ಕೆ ಹೋಗಬೇಕಿತ್ತು. ಅದೂ ಕದ್ದು ಮುಚ್ಚಿ- ರಾತ್ರಿಯ ವೇಳೆ ಹೋಗುವವರೇ ಹೆಚ್ಚಿದ್ದರು. ಇದೊಂದೇ ಅಲ್ಲ, `ತಪ್ಪು' ಎಂದು ಸಮಾಜ ಯಾವುದರ ಮೇಲೆಲ್ಲ ಮುದ್ರೆ ಹಾಕಿತ್ತೋ ಅವೆಲ್ಲವೂ ಸುಲಭವಾಗಿ ಲಭ್ಯವಾಗದಂಥ ವಾತಾವರಣ ಆಗೆಲ್ಲ ಇತ್ತು. ಆದರೆ ಇವತ್ತು ಆ ಬೇಲಿಯೇ ಕಿತ್ತು ಹೋಗಿದೆ. ಬೇಲಿಯೇ ಇಲ್ಲದ ವಿಶಾಲ ಜಗತ್ತೊಂದು ಇವತ್ತು ಪ್ರಾಪ್ತರು-ಅಪ್ರಾಪ್ತರು ಎಂಬ ಬೇಧವಿಲ್ಲದೇ ಎಲ್ಲರೆದುರೂ ತೆರೆದುಕೊಂಡಿದೆ. ಕೆಟ್ಟದ್ದನ್ನು ಇವತ್ತು ಕದ್ದು-ಮುಚ್ಚಿ-ರಾತ್ರಿ ವೇಳೆ ನೋಡಬೇಕಾದ ಅಗತ್ಯವಿಲ್ಲ. ಎಲ್ಲವನ್ನೂ ಮೊಬೈಲ್ ಒದಗಿಸುತ್ತದೆ. ಅಪ್ರಾಪ್ತರಲ್ಲಿ ಪ್ರೌಢತನವನ್ನು ಹುಟ್ಟಿಸುವುದಕ್ಕೆ ಬೇಕಾದ ಎಲ್ಲವೂ ಇವತ್ತು ಮೊಬೈಲ್‍ನಲ್ಲಿ ಸುಲಭದಲ್ಲೇ ದಕ್ಕುತ್ತಿದೆ. ಇಂಥ ಸ್ಥಿತಿಯಲ್ಲಿ, ಅಪ್ರಾಪ್ತ ವಯಸ್ಸಿನ ಮಿತಿಯನ್ನು ತಗ್ಗಿಸುವುದೋ ಅಥವಾ ಅವರು ಭಾಗಿಯಾದ ಅತ್ಯಾಚಾರದಂಥ ಹೀನ ಕೃತ್ಯಗಳನ್ನು ಪ್ರಾಪ್ತ ವಯಸ್ಕರ

ಪರಿಚ್ಛೇದದಡಿಯಲ್ಲಿ ತಂದು ವಿಚಾರಣೆಗೆ ಒಳಪಡಿಸುವುದೋ ಸಮಸ್ಯೆಗೆ ಉತ್ತರವಾಗುವ ಸಾಧ್ಯತೆಯಿಲ್ಲ. ಇದರ ಬದಲು ಎಳೆ ಮನಸ್ಸನ್ನು ಚಂಚಲಗೊಳಿಸುವವುಗಳ ಅಧ್ಯಯನ ನಡೆಸಬೇಕು. ಆಧುನಿಕ ತಂತ್ರಜ್ಞಾನಗಳನ್ನು ಹೇಗೆ ಮತ್ತು ಯಾಕಾಗಿ ಬಳಸಬೇಕೆಂಬ ಬಗ್ಗೆ ಮನಮುಟ್ಟುವ ರೀತಿಯಲ್ಲಿ ಎಳೆ ಮನಸ್ಸಿಗೆ ತಿಳಿಸಿಕೊಡಬೇಕು. ಇತರರನ್ನು ಹೇಗೆ ಕಾಣಬೇಕು ಮತ್ತು ಗೌರವಿಸಬೇಕು ಎಂಬುದನ್ನು ಆಗಾಗ ಹೇಳಿಕೊಡುತ್ತಲಿರಬೇಕು. ಇವು ಮತ್ತು ಇಂತಹ ಇನ್ನಿತರ ತಿದ್ದುವ ವಿಧಾನಗಳು ‘ಅಪ್ರಾಪ್ತ ಅಪರಾಧ’ವನ್ನು ತಡೆಗಟ್ಟುವುದಕ್ಕೆ ಪರಿಹಾರ ಆಗಬಹುದೇ ಹೊರತು ವಯಸ್ಸಿನ ಮಿತಿಯನ್ನು ಇಳಿಸುವುದಲ್ಲ. ಒಂದು ವೇಳೆ, ಇವತ್ತು ವಯಸ್ಸಿನ ಮಿತಿಯನ್ನು 16ಕ್ಕೆ ಇಳಿಸಿದರೆ ಇನ್ನೈದು ವರ್ಷಗಳಲ್ಲಿ ಅದನ್ನು 14ಕ್ಕೆ ಇಳಿಸಬೇಕಾದ ಅಗತ್ಯವೂ ಕಂಡುಬರಬಹುದು. ಸಮಸ್ಯೆಯಿರುವುದು ವಯಸ್ಸಿನಲ್ಲಲ್ಲ, ಆ ವಯಸ್ಸಿಗೆ ನಾವೇನನ್ನು ತುಂಬಿಸುತ್ತಿದ್ದೇವೆ ಎಂಬುದರಲ್ಲಿ. ನಿರ್ಭಯ ಪ್ರಕರಣದ ಬಾಲಾಪರಾಧಿಯನ್ನು ನಾವು ಈ ಮಾನದಂಡದಿಂದಲೇ ವಿಶ್ಲೇಷಿಸಬೇಕಾಗಿದೆ.

Tuesday, 15 December 2015

ಹೆಣ್ಣು-ಗಂಡು ಮತ್ತು ಸಮಾನತೆ

    
ಜಾತ್ಯತೀತತೆ (Secularism) ಮತ್ತು ಲಿಂಗ ಸಮಾನತೆ (Gender Equality) ಎಂಬೆರಡು ಪದಗಳು ದೇಶ, ಕಾಲ, ಸಂಸ್ಕ್ರಿತಿಗಳಿಗೆ ಹೊಂದಿಕೊಂಡು ಭಿನ್ನಭಿನ್ನ ರೀತಿಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗಿವೆ. ಜಾತ್ಯತೀತತೆಗೆ ಯುರೋಪಿಯನ್ ರಾಷ್ಟ್ರಗಳು ಕೊಟ್ಟಿರುವ ಅರ್ಥವನ್ನು ಭಾರತೀಯ ಉಪಭೂಖಂಡದ ರಾಷ್ಟ್ರಗಳು ಒಪ್ಪಿಕೊಂಡಿಲ್ಲ. ಅವು ಈ ಪದವನ್ನು ತನ್ನದೇ ಆದ ಪರಿಭಾಷೆಯಲ್ಲಿ ಓದುತ್ತಿವೆ. ಯುರೋಪಿಯನ್ ಪ್ರಣೀತ ಲಿಂಗ ಸಮಾನತೆಯೂ ಇದಕ್ಕಿಂತ ಭಿನ್ನವಲ್ಲ. ಅದು ಕೂಡ ಪ್ರಶ್ನೆ, ಟೀಕೆ, ವ್ಯಂಗ್ಯಕ್ಕೆ ಈಡಾಗಿದೆ. ಹೆಣ್ಣು-ಗಂಡು ಸಮಾನರೆಂದಾದರೆ ರಿಲೇ, ಟೆನ್ನಿಸ್, ಬಾಕ್ಸಿಂಗ್, ಕ್ರಿಕೆಟ್ ಮುಂತಾದ ಕ್ಷೇತ್ರಗಳೇಕೆ ಇವರನ್ನು ಅಸಮಾನವಾಗಿ ನೋಡುತ್ತಿವೆ ಎಂದು ಪ್ರಶ್ನಿಸುವವರಿದ್ದಾರೆ. ಟೆನ್ನಿಸ್‍ನಲ್ಲಿ ಪುರುಷನು 5 ಸೆಟ್‍ಗಳಲ್ಲಿ 5 ಗಂಟೆಗಳಷ್ಟು ದೀರ್ಘ ಕಾಲ ಆಡಬಲ್ಲ. ಆದರೆ ಮಹಿಳಾ ಟೆನ್ನಿಸ್‍ಗಿರುವುದೇ 3 ಸೆಟ್. ಹೆಚ್ಚೆಂದರೆ ಒಂದೂವರೆ ಎರಡು ಗಂಟೆಗಳ ಒಳಗೆ ಸೋಲು-ಗೆಲುವು ನಿರ್ಣಯವಾಗುತ್ತದೆ. 100 ವಿೂಟರ್ ಓಟದಲ್ಲಿ ಉಸೇನ್ ಬೋಲ್ಟ್ ನ ಸಾಧನೆಯನ್ನು ಯಾವ ಮಹಿಳಾ ಓಟಗಾರ್ತಿಗೂ ಸರಿಗಟ್ಟಲು ಸಾಧ್ಯವಾಗಿಲ್ಲ. ಬೋಲ್ಟ್ ಆ ದೂರವನ್ನು 9.57 ಸೆಕೆಂಡ್‍ಗಳಲ್ಲಿ ಓಡಿ ಮುಗಿಸಿದರೆ ಮಹಿಳಾ ಓಟಗಾರ್ತಿಯು 10 ಸೆಕೆಂಡ್‍ಗಳಿಗಿಂತ ಹೆಚ್ಚಿನ ಅವಧಿಯಲ್ಲಿ ಕ್ರಮಿಸಿರುವುದೇ ಈ ವರೆಗಿನ ದಾಖಲೆ. ಕ್ರಿಕೆಟ್ ಆಗಲಿ, ಟೆನಿಸ್, ಫುಟ್ಬಾಲ್, ರೇಸ್ ಸಹಿತ ಹತ್ತಾರು ಕ್ರೀಡಾ ಪ್ರಕಾರಗಳಲ್ಲಿ ಪುರುಷ ಕ್ರೀಡೆಯೇ ಹೆಚ್ಚು ಆಕರ್ಷಕ ಮತ್ತು ಜನಪ್ರಿಯ. ಲಿಂಗ ಸಮಾನತೆಯ ಬಗ್ಗೆ ಧಾರಾಳ ಮಾತಾಡುವ ಸಿನಿಮಾ ಕ್ಷೇತ್ರವಂತೂ ಅಸಮಾನತೆಯನ್ನೇ ಪ್ರತಿದಿನವೂ ಪೋಷಿಸುತ್ತಾ ಬರುತ್ತಿದೆ. ಶಾರುಖ್, ಅವಿೂರ್, ಬಚ್ಚನ್‍ಗಳು ಇಳಿಪ್ರಾಯದಲ್ಲೂ ಹೀರೋಗಳಾಗಿಯೇ ಮೆರೆಯುತ್ತಿದ್ದಾರೆ.  ಡಾ| ರಾಜ್‍ಕುಮಾರ್‍,ವಿಷ್ಣುವರ್ಧನ್ ರು ಕೊನೆವರೆಗೂ ಹೀರೋಗಳಾಗಿಯೇ ಪಾತ್ರ ನಿರ್ವಹಿಸಿದರು. ಆದರೆ ಇವರೆಲ್ಲರ ಯೌವನ ಕಾಲದಲ್ಲಿ ಇವರ ಜೊತೆ ಹೀರೋಯಿನ್‍ಗಳಾದವರು ಕೆಲ ವರ್ಷಗಳಲ್ಲೇ ಆ ಪಾತ್ರದಿಂದ ಕೆಳಗಿಳಿಯಬೇಕಾಯಿತು. ಆ ಬಳಿಕ ಇವರು ಈ ಹೀರೋಗಳ ಅತ್ತೆ, ತಾಯಿ, ಚಿಕ್ಕಮ್ಮ ಮುಂತಾದ ಪಾತ್ರಕ್ಕೆ ಸೀಮಿತಗೊಳ್ಳಬೇಕಾಯಿತು. ಯುರೋಪಿಯನ್ ಪ್ರಣೀತ ಲಿಂಗ ಸಮಾನತೆಯು ಸಂಘರ್ಷಕ್ಕೆ ಒಳಗಾಗುವುದು ಇಲ್ಲಿ ಮತ್ತು ಇಂತಹ ಅನೇಕಾರು ವಿಷಯಗಳಲ್ಲಿ. ನಿಜವಾಗಿ, ಹೆಣ್ಣು-ಗಂಡಿನ ನಡುವೆ ಪ್ರಾಕೃತಿಕವಾಗಿಯೇ ಕೆಲವು ವೈಶಿಷ್ಟ್ಯಗಳಿವೆ. ದುರಂತ ಏನೆಂದರೆ, ಆಧುನಿಕ ಜಗತ್ತಿನ ಲಿಂಗ ಸಮಾನತೆಯ ಕೂಗಿನಲ್ಲಿ ಈ ವೈಶಿಷ್ಟ್ಯತೆಯನ್ನೇ ನಿರ್ಲಕ್ಷಿಸುವ ಮತ್ತು ತಿರಸ್ಕರಿಸುವ ಆವೇಶ ಕಾಣಿಸುತ್ತದೆ. ಪುರುಷರನ್ನು ದ್ವೇಷಿಸುವುದೇ ಫೆಮಿನಿಸಂ ಆಗಿರಬೇಕು ಎಂದು ಅಂದುಕೊಳ್ಳುವಷ್ಟರ ಮಟ್ಟಿಗೆ ಲಿಂಗ ಸಮಾನತೆಯ ಹೋರಾಟವು ವೈರುಧ್ಯಗಳಿಂದ ಕೂಡಿವೆ. ಅಂದಹಾಗೆ, ಇಸ್ಲಾಮ್ ಲಿಂಗ ಸಮಾನತೆಯ ಕುರಿತಂತೆ ಈ ವೈರುಧ್ಯಗಳಾಚೆಗೆ ಸುಧಾರಿತ ವಿಧಾನವನ್ನು ಪ್ರಸ್ತುತಪಡಿಸುತ್ತದೆ. ಪ್ರಾಕೃತಿಕ ವೈಶಿಷ್ಟ್ಯವನ್ನು ಮಾನ್ಯ ಮಾಡುತ್ತಲೇ ಹೆಣ್ಣು-ಗಂಡಿನ ನಡುವೆ ಸಮಾನ ನ್ಯಾಯವನ್ನು ಅದು ಎತ್ತಿ ಹಿಡಿಯುತ್ತದೆ. ಆದ್ದರಿಂದಲೇ, ಹೆಣ್ಣಿಗೆ ಗಂಡಿಗಿಂತ ಹೆಚ್ಚು ಆಸ್ತಿ, ತಾಯಿಗೆ-ತಂದೆಗಿಂತ ಮೂರು ಪಟ್ಟು ಹೆಚ್ಚು ಸ್ಥಾನಮಾನ, ಹೆಣ್ಣಿಗೆ ವಿವಾಹ ಧನ ಇತ್ಯಾದಿ ವಿಶೇಷ ಪರಿಗಣನೆಯನ್ನು ನೀಡಿದೆ. ತಾಯಿ, ತಂಗಿ, ಪತ್ನಿ, ಸಹೋದರಿ, ಮಗಳು.. ಮುಂತಾದುವುಗಳನ್ನು ಇಸ್ಲಾಮ್ ಪ್ರಕೃತಿ ಸಹಜ ಪಾತ್ರಗಳಾಗಿ ಕಾಣುತ್ತದೆಯೇ ಹೊರತು ಅವುಗಳನ್ನು ಬಲಹೀನವಾಗಿಯೋ ಅಬಲೆಯಾಗಿಯೋ ಅಲ್ಲ ಅಥವಾ ಅವುಗಳು ಪತಿ, ತಂದೆ, ಅಣ್ಣ-ತಮ್ಮ ಮುಂತಾದ ಪಾತ್ರಗಳ ಗುಲಾಮವಾಗಿಯೂ ಅಲ್ಲ. ಅವರ ನಡುವಿನ ಸಮಾನತೆಯನ್ನು ಪವಿತ್ರ ಕುರ್‍ಆನ್ ವಿವಿಧ ಕಡೆ (3:195, 4:124, 16:97, 40:40) ಪ್ರಸ್ತಾಪಿಸುತ್ತದೆ. ನಿಜವಾಗಿ,
    ಇವತ್ತು, ಲಿಂಗ ಸಮಾನತೆ (Gender Equality) ಎಂಬ ಪದಕ್ಕೆ ಹೆಚ್ಚು ಸಂತುಲಿತ ಮತ್ತು ಪ್ರಕೃತಿ ಸಹಜವಾದ ಪರ್ಯಾಯ ಪದವನ್ನು ಹುಡುಕಬೇಕಾಗಿದೆ. ಜೊತೆಗೆ, ಪ್ರಕೃತಿ ಸಹಜ ವೈಶಿಷ್ಟ್ಯವನ್ನು ಹೆಣ್ಣಿನ ‘ದ್ವಿತೀಯ ದರ್ಜೆ’ಗೆ ಪುರಾವೆಯಾಗಿ ಮಂಡಿಸುವುದನ್ನು ಖಂಡಿಸಬೇಕಾಗಿದೆ.

Friday, 11 December 2015

ಹಾರೆ, ಪಿಕ್ಕಾಸು, ಗುದ್ದಲಿಗಳನ್ನು ಎತ್ತಿಕೊಳ್ಳುವ ಮೊದಲು...

       ಕಳೆದವಾರ ಎರಡು ಮಸೀದಿಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾದುವು. ಒಂದು; ಡಿ. 6ರ ಬಾಬರಿ ಮಸೀದಿಯಾದರೆ ಇನ್ನೊಂದು, ನಿರಾಶ್ರಿತರಿಗೆ ಆಶ್ರಯ ಒದಗಿಸಿದ ಚೆನ್ನೈಯ ಮಸೀದಿ. ಪ್ರವಾಹ ಪೀಡಿತರನ್ನು ತನ್ನೊಳಗೆ ತುಂಬಿಸಿಕೊಂಡು ಭಕ್ತರನ್ನು ಹೊರಗೆ ನಿಲ್ಲಿಸಿದ ಚೆನ್ನೈಯ ಮಸೀದಿಯ ಕುರಿತಂತೆ ಟು ಸರ್ಕಲ್ ಡಾಟ್ ನೆಟ್, ರೆಡಿಫ್ ಡಾಟ್ ಕಾಮ್ ಸಹಿತ ವಿವಿಧ ಇಂಟರ್‍ನೆಟ್ ಪತ್ರಿಕೆಗಳು ಸಚಿತ್ರವಾಗಿ ವರದಿ ಮಾಡಿವೆ. ನೆರೆಪೀಡಿತರು, ಮಸೀದಿಯ ಸಭಾಂಗಣದಲ್ಲಿ ನಿಂತು ಆಹಾರ ಪಡೆಯುತ್ತಿರುವ ದೃಶ್ಯಗಳು ಅತ್ಯಂತ ಭಾವನಾತ್ಮಕ. ಅಲ್ಲಿ ಮನುಷ್ಯರು ಮಾತ್ರ ಇದ್ದರು. ಹಿಂದೂ-ಮುಸ್ಲಿಮ್-ಕ್ರೈಸ್ತ ಇತ್ಯಾದಿಯಾಗಿ ವಿಭಜಿಸಲು ಸಾಧ್ಯವೇ ಆಗದಷ್ಟು ಸಮಾನಾಂಶಗಳು ಅವರೆಲ್ಲರಲ್ಲೂ ಇದ್ದುವು. ಸಾರಿ ಉಟ್ಟ ಮತ್ತು ಶಿರವಸ್ತ್ರ ಧರಿಸದ ಮಹಿಳೆಯರು; ಪಂಚೆ ಉಟ್ಟ ಪುರುಷರು, ಲಂಗ-ಧಾವಣಿಯಲ್ಲಿ ಯುವತಿಯರು.. ಹೀಗೆ ಮನುಷ್ಯರೆಲ್ಲ ಮಸೀದಿಯಲ್ಲಿದ್ದರು. ತಂತಮ್ಮ ಬದುಕನ್ನು ಕಟ್ಟಿಕೊಳ್ಳುವ ತುರ್ತಿನ ಹೊರತಾದ ಇನ್ನಾವುದೂ ಅವರಲ್ಲಿ ಕಂಡುಬರುತ್ತಿರಲಿಲ್ಲ. ಇದೇ ವೇಳೆ, ಚೆನ್ನೈಯ ಮಳೆಯಿಂದ ಯಾವ ತೊಂದರೆಗೂ ಒಳಗಾಗದ ಭಾರತದ ಇತರ ಭಾಗಗಳಲ್ಲಿ ಸಂತೋಷ ಕೂಟಗಳು ಏರ್ಪಾಡಾಗಿದ್ದುವು. ಆ ಸಂತೋಷ ಕೂಟಗಳಿಗೆ ‘ವಿಜಯ ದಿವಸ’ ಎಂಬ ಹೆಸರನ್ನೂ ಕೊಡಲಾಗಿತ್ತು. 1992ರಲ್ಲಿ ಅಯೋಧ್ಯೆಯಲ್ಲಿ ಮಸೀದಿಯೊಂದನ್ನು ಉರುಳಿಸಿದುದೇ ಈ ಸಂತೋಷ ಕೂಟಕ್ಕೆ ಮುಖ್ಯ ಕಾರಣವಾಗಿತ್ತು. ಆ ಧ್ವಂಸ ಕೃತ್ಯವನ್ನು ಈ ಕೂಟಗಳಲ್ಲಿ ಮೆಚ್ಚಿಕೊಳ್ಳಲಾಯಿತು. ಅದಕ್ಕಾಗಿ ಹೆಮ್ಮೆ ಪಡಲಾಯಿತು. ಏನೆನ್ನಬೇಕು ಈ ವೈರುಧ್ಯಕ್ಕೆ? ನಿರಾಶ್ರಿತರಿಗೆ ಮಸೀದಿಯು ಸಮಸ್ಯೆಯಾಗಲಿಲ್ಲ. ಮಸೀದಿಗೂ ಅವರು ಸಮಸ್ಯೆಯಾಗಲಿಲ್ಲ. ನಿರಾಶ್ರಿತರ ಧರ್ಮ, ಜಾತಿ, ವರ್ಣ, ರಾಜಕೀಯ ಒಲವು, ಆಹಾರ ಕ್ರಮ.. ಯಾವುದನ್ನೂ ಪ್ರಶ್ನಿಸದೇ ಮಸೀದಿಯು ಎಲ್ಲರನ್ನೂ ತಬ್ಬಿಕೊಂಡಿತು. ಮನುಷ್ಯರು ಎಂಬ ಏಕ ಹೆಸರಿನ ಹೊರತಾದ ಇನ್ನಾವ ಗುರುತೂ ಅವರಿಗಿರಲಿಲ್ಲ. ಈ ನಿರಾಶ್ರಿತರಿಗೆ ಹಾರೆ, ಪಿಕ್ಕಾಸು, ಗುದ್ದಲಿಯನ್ನು ಕೊಟ್ಟು - ‘ಈ ಮಸೀದಿಯನ್ನು ಉರುಳಿಸಿ’ ಎಂದು ಆಜ್ಞಾಪಿಸಿದರೆ ಅವರ ಉತ್ತರ ಏನಿರಬಹುದು? ಆಜ್ಞಾಪಿಸಿದವರನ್ನು ಧರ್ಮದ್ರೋಹಿಗಳು ಎಂದು ಅವರು ಕರೆಯಲಾರರೇ? ಖಂಡಿಸಲಾರರೇ? ಉರುಳಿಸಬೇಕಾದದ್ದು ಮನದೊಳಗಿನ ದ್ವೇಷದ ಗೋಡೆಯನ್ನೇ ಹೊರತು ಮಸೀದಿಯನ್ನೋ ಮಂದಿರವನ್ನೋ ಅಲ್ಲ ಎಂದು ಸಾರಲಾರರೇ?  ಅಷ್ಟಕ್ಕೂ, ಒಬ್ಬರ ಆರಾಧ್ಯ ಕೇಂದ್ರವನ್ನು ಉರುಳಿಸುವುದು ಸಂತಸಕ್ಕೆ ಕಾರಣವಾಗುವುದಾದರೆ ಆ ಸಂತಸ ಹುಟ್ಟು ಪಡೆದದ್ದು ಎಲ್ಲಿ? ಅದರ ನಿರ್ಮಾತೃಗಳು ಯಾರು? ವಿಷಾದ ಪಡಬೇಕಾದ ಕೃತ್ಯವೊಂದನ್ನು ಸಂತಸ ಪಡುವ ಕೃತ್ಯವಾಗಿ ಮಾರ್ಪಡಿಸಲು ಅವರು ಯಶಸ್ವಿಯಾಗಿದ್ದು ಹೇಗೆ? ಇದಕ್ಕಾಗಿ ಅವರು ಹಂಚಿರಬಹುದಾದ ವಿಷದ ಪ್ರಮಾಣ ಎಷ್ಟು?
  ಅಂದಹಾಗೆ, ಮಂದಿರ, ಮಸೀದಿ, ಚರ್ಚ್ ಸಹಿತ ಧಾರ್ಮಿಕ ಕೇಂದ್ರಗಳು ಪ್ರಕೃತಿ ವಿರೋಧಿ ಬೇಲಿಗಳನ್ನು ಕಟ್ಟಿಕೊಂಡು ಸ್ವಯಂ ಬಂಧನಕ್ಕೆ ಒಳಗಾದಂತೆ ಗೋಚರಿಸುತ್ತಿರುವ ಇಂದಿನ ದಿನಗಳಲ್ಲಿ ಚೆನ್ನೈಯ ಮಳೆ ಮತ್ತು ಮಸೀದಿ ನಮ್ಮೊಳಗನ್ನು ಗಾಢವಾಗಿ ತಟ್ಟಬೇಕಿದೆ. ಮಳೆಯಿಂದಾಗಿ ಚೆನ್ನೈ ನದಿಯಂತೆ ತೇಲುತ್ತಿರುವ ಸಂದರ್ಭದಲ್ಲಿಯೇ ಮಹಾರಾಷ್ಟ್ರದಲ್ಲಿ ಶುದ್ಧೀಕರಣವೊಂದು ನಡೆಯಿತು. ಮಹಿಳೆಯೋರ್ವರು ಶನಿ ದೇಗುಲದೊಳಕ್ಕೆ ತೆರಳಿ ಪೂಜೆಗೈದುದೇ ಈ ಶುದ್ಧೀಕರಣಕ್ಕೆ ಕಾರಣವಾಗಿತ್ತು. ಮಹಿಳೆ ದೇಗುಲ ಪ್ರವೇಶಿಸಿದುದನ್ನು ಅಶುದ್ಧ ಕಾರ್ಯವೆಂದು ಸಾರಲಾಯಿತಲ್ಲದೇ ಅದಕ್ಕೆ ಪ್ರಾಯಶ್ಚಿತ್ತವಾಗಿ ಶುದ್ಧೀಕರಣ ನಡೆಸಲಾಯಿತು. ಈ ಶುದ್ಧೀಕರಣದ ಎರಡು ದಿನಗಳ ಬಳಿಕ ಉತ್ತರ ಪ್ರದೇಶದ ದಾದ್ರಿಯಲ್ಲೂ ಶುದ್ಧೀಕರಣ ನಡೆಯಿತು. ಮುಹಮ್ಮದ್ ಅಖ್ಲಾಕ್‍ನನ್ನು ಥಳಿಸಿ ಕೊಂದ ಬಿಶಾರ ಗ್ರಾಮದಲ್ಲಿ ಗೋಮುತ್ರವನ್ನು ಸಿಂಪಡಿಸಿ ಶುದ್ಧೀಕರಣ ನಡೆಸಲಾಯಿತು. ಅಖ್ಲಾಕ್‍ನು ಗೋವನ್ನು ಕೊಂದುದರಿಂದ ಗ್ರಾಮವು ಅಶುದ್ಧವಾಗಿದೆ ಎಂದು ಶುದ್ಧೀಕರಣ ನಡೆಸಿದವರು ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು. ಬಹುಶಃ ಧ್ವಂಸ ಮತ್ತು ಶುದ್ಧೀಕರಣಗಳು ಲಜ್ಜೆಯಿಲ್ಲದೇ ಸಮರ್ಥನೆಗೊಳಗಾಗುತ್ತಿರುವ ಈ ದಿನಗಳಲ್ಲಿ ಧಾರ್ಮಿಕ ಕೇಂದ್ರಗಳು ಹಾಗೂ ಧಾರ್ಮಿಕ ನಿಲುವುಗಳು ಮರು ವ್ಯಾಖ್ಯಾನಕ್ಕೆ ಒಳಗಾಗಬೇಕಾದ ಅಗತ್ಯವಿದೆ. ಈ ಕುರಿತಂತೆ ಚೆನ್ನೈಯ ಮಸೀದಿ ಅತ್ಯಂತ ಪರಿಣಾಮಕಾರಿ ಮಾದರಿಯನ್ನು ದೇಶದ ಮುಂದಿಟ್ಟಿದೆ. ನಿಜವಾಗಿ, ಅನುಮಾನದ ದೊಡ್ಡದೊಂದು ಹುತ್ತವನ್ನು ಬಿಗಿದುಕೊಂಡಿರುವ ಜಾಗಗಳಾಗಿ ಧಾರ್ಮಿಕ ಕೇಂದ್ರಗಳು ಈ ದೇಶದಲ್ಲಿ ಗುರುತಿಸಿಕೊಂಡಿವೆ. ಮಸೀದಿ, ಮದ್ರಸಗಳು; ಚರ್ಚ್-ಮಂದಿರಗಳು ಈ ದೇಶದ ಎಲ್ಲರಿಗೂ ಸರಿಯಾಗಿ ಇನ್ನೂ ತೆರೆದುಕೊಂಡಿಲ್ಲ. ಮಸೀದಿ ಅಥವಾ ಮಂದಿರದ ಅನುಯಾಯಿಗಳಿಗೇ ಅನೇಕ ಬಾರಿ ಅವುಗಳ ಅಗತ್ಯ, ಕಾರ್ಯಕ್ಷೇತ್ರ, ಅವುಗಳ ಹೊಣೆಗಾರಿಕೆಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯೂ ಇಲ್ಲ. ಮಸೀದಿಗೋ ಮಂದಿರಕ್ಕೋ ಕಲ್ಲೆಸೆಯುವುದು ಅಥವಾ ಹಂದಿಯದ್ದೋ ದನದ್ದೋ ತಲೆಯನ್ನು ಅವುಗಳ ಎದುರು ಬಿಸಾಡುವುದು ಮತ್ತು ಅದಕ್ಕೆ ಉನ್ಮಾದಗೊಳ್ಳುವುದೆಲ್ಲ ಈ ತಿಳುವಳಿಕೆಯ ಕೊರತೆಯಿಂದಲೇ. ದೇವನನ್ನು ಧ್ಯಾನಿಸುವ ಕೇಂದ್ರವೊಂದು ಹಿಂದೂವನ್ನೋ ಕ್ರೈಸ್ತರನ್ನೋ ದ್ವೇಷಿಸುವುದಕ್ಕೆ ಸಾಧ್ಯವೇ ಇಲ್ಲ. ದೇವನು ನಿರ್ದಿಷ್ಟ ಮನುಷ್ಯರ ಮಧ್ಯೆ ಹಂಚಿಹೋಗಿಲ್ಲ. ಆತ ಎಲ್ಲರ ದೇವ ಎಂದಾದರೆ ಮತ್ತು ನಾಮಗಳು ಮಾತ್ರ ಭಿನ್ನ ಅನ್ನುವುದಾದರೆ, ಮಸೀದಿಯನ್ನು ಧ್ವಂಸಗೊಳಿಸುವುದರಿಂದ ಸಂತಸ ಪಡುವುದಕ್ಕಾದರೂ ಏನಿದೆ? ದೇವಾಲಯಕ್ಕೆ ಕಲ್ಲೆಸೆದು ಜಂಭ ಕೊಚ್ಚಿಕೊಳ್ಳುವುದರಲ್ಲಿ ಏನರ್ಥವಿದೆ? ದುರಂತ ಏನೆಂದರೆ, ಇವತ್ತು ಭಕ್ತರಿಗಿಂತ ಭಕ್ತಿಯ ಕೇಂದ್ರಗಳೇ ಹೆಚ್ಚು ಸುದ್ದಿಗೊಳಗಾಗುತ್ತಿವೆ. ಮನುಷ್ಯರಿಗೆ ನೆಮ್ಮದಿ ನೀಡಬೇಕಾದ ಕೇಂದ್ರಗಳು ನೆಮ್ಮದಿ ರಹಿತವಾದ ಆಘಾತಕಾರಿ ಸುದ್ದಿಗಳನ್ನು ಹೊರತರುತ್ತಿವೆ. ಬಹಿಷ್ಕಾರ, ಹಾದರ, ಶುದ್ಧೀಕರಣ, ಅಸ್ಪೃಶ್ಯತೆಗಳಿಂದಾಗಿ ಧಾರ್ಮಿಕ ಕೇಂದ್ರಗಳೂ ವ್ಯಾವಹಾರಿಕ ಕಟ್ಟಡಗಳೆಂಬಂತೆ ವರ್ತಿಸತೊಡಗಿವೆ. ಇಂಥ ಸ್ಥಿತಿಯಲ್ಲಿ ಚೆನ್ನೈಯ ಮಸೀದಿಯನ್ನು
ಮುಂದಿಟ್ಟುಕೊಂಡು ಮಾಧ್ಯಮಗಳು ಗಂಭೀರ ಚರ್ಚೆಯೊಂದನ್ನು ಹಮ್ಮಿಕೊಳ್ಳಬೇಕಾಗಿದೆ. ಮಸೀದಿಯನ್ನು ಉರುಳಿಸಿ ಸಂತಸಪಡುವ ಮಂದಿಯ ಎದುರು ಜನರಿಗೆ ಆಶ್ರಯ ನೀಡಿದ ಮಸೀದಿಯನ್ನು ತಂದು ನಿಲ್ಲಿಸಬೇಕಾಗಿದೆ.
           ಒಂದು ರೀತಿಯಲ್ಲಿ ದೇವಾಲಯ ಮತ್ತು ಮಸೀದಿಯನ್ನು ಪರಮ ವೈರಿಗಳಂತೆ ಎದುರು-ಬದುರಾಗಿ ನಿಲ್ಲಿಸುವ ಶ್ರಮವು ಸ್ವಾತಂತ್ರ್ಯ ಪೂರ್ವದಿಂದಲೇ ಈ ದೇಶದಲ್ಲಿ ನಡೆಯುತ್ತಿದೆ. 80ರ ದಶಕದ ಬಳಿಕ ಈ ಪ್ರಯತ್ನ ಎಷ್ಟು ಪ್ರಾಬಲ್ಯ ಪಡೆಯಿತೆಂದರೆ, ಮಸೀದಿಯನ್ನು ಭಯಾನಕವಾಗಿ, ಹಿಂದೂ ವಿರೋಧಿಯಾಗಿ, ಷಡ್ಯಂತ್ರದ ತಾಣವಾಗಿ ವ್ಯಾಖ್ಯಾನಿಸುವಷ್ಟು. ಮದರಗಳನ್ನು ಭಯೋತ್ಪಾದಕ ಕೇಂದ್ರವಾಗಿ ಬಿಂಬಿಸಲಾದದ್ದೂ ಆ ಬಳಿಕವೇ. 1992ರಲ್ಲಿ ಬಾಬರಿ ಮಸೀದಿಯನ್ನು ಉರುಳಿಸಲಾಯಿತು. ಈ ಧ್ವಂಸ ಕೃತ್ಯಕ್ಕಿಂತಲೂ ಭೀಕರ ಏನೆಂದರೆ, ಆ ಕೃತ್ಯವನ್ನು ಎಲ್ಲರೆದುರೇ ಧ್ವಂಸಕರು ಸಮರ್ಥಿಸಿಕೊಂಡದ್ದು. ಇದಾಗಿ 23 ವರ್ಷಗಳ ಬಳಿಕ ಚೆನ್ನೈಯ ಮಸೀದಿಯು ಉರುಳಿಸಿದವರನ್ನೂ ಉರುಳಿದವರನ್ನೂ ಸಮಾನವಾಗಿ ತನ್ನೊಳಗೆ ಸೇರಿಸಿಕೊಂಡಿದೆ. ಆ ಮೂಲಕ 23 ವರ್ಷಗಳ ಹಿಂದೆ ಧ್ವಂಸಗೊಳಿಸಿದವರ ಕಾರ್ಯಶುದ್ಧತೆಯನ್ನು ಪ್ರಶ್ನಿಸಿದೆ. ಈಗ ಉತ್ತರಿಸಬೇಕಾದವರು ಬಾಬರಿಯನ್ನು ಉರುಳಿಸಿ ಸಿಹಿ ಹಂಚಿಕೊಂಡವರು. ವಿಜಯೋತ್ಸವ ಆಚರಿಸಿದವರು. ಮಸೀದಿಯನ್ನು ಉರುಳಿಸುವುದಕ್ಕಾಗಿ ಷಡ್ಯಂತ್ರ ರಚಿಸಿದವರು. ಆದರೆ ಅವರು ಈ ಕುರಿತಂತೆ ಮಾತನ್ನೇ ಆಡುತ್ತಿಲ್ಲ. ಚೆನ್ನೈಯ ಮಸೀದಿಯಲ್ಲಿ ನೀವೇಕೆ ತಂಗಿದಿರಿ ಎಂದು ತಂಗಿದವರನ್ನು ಪ್ರಶ್ನಿಸುತ್ತಿಲ್ಲ. ಅಂಥದ್ದೊಂದು ಘಟನೆ ನಡೆದೇ ಇಲ್ಲವೋ ಎಂಬಂತೆ ಅವರೆಲ್ಲ ವಿಜಯ ದಿವಸದಲ್ಲಿ ಮಗ್ನರಾಗಿದ್ದಾರೆ. ನಿಜವಾಗಿ, ಚೆನ್ನೈ ಮಳೆಯಲ್ಲಿ ಸಿಕ್ಕ ಹಲವಾರು ಪಾಠಗಳಲ್ಲಿ ಮನುಷ್ಯ ಪ್ರೇಮದ ಈ ಪಾಠವೂ ಒಂದು. ನಾವು-ಅವರು, ಮ್ಲೇಚ್ಛರು-ಶ್ರೇಷ್ಠರು ಎಂದೆಲ್ಲಾ ವಿಭಜಿಸಿಕೊಂಡು ಬದುಕುತ್ತಿರುವವರಿಗೆ ಮಳೆ ಅನೇಕಾರು ಪಾಠಗಳನ್ನು ಹೇಳಿದೆ. ಎಲ್ಲರೂ ಸಮಾನರು ಮತ್ತು ಪರಸ್ಪರ ಕೊಡು-ಕೊಳ್ಳುವಿಕೆಯೊಂದಿಗೆ ಬದುಕಬೇಕಾದವರು ಎಂಬುದೇ ಮಳೆ ಸಾರಿದ ಪ್ರಮುಖ ಸಂದೇಶ. ಧ್ವಂಸಕೋರರಿಗೆ ಇದು ಅರ್ಥವಾಗಲಿ.


Thursday, 3 December 2015

ಅಸಹಿಷ್ಣುತೆಯ ಚರ್ಚೆ ಮತ್ತು ಮದ್ಯ

      ಅಸಹಿಷ್ಣುತೆಯ ಸುತ್ತ ‘ಉಗ್ರರೂಪ'ದ ಚರ್ಚೆಯೊಂದು ನಡೆಯುತ್ತಿರುವ ಹೊತ್ತಿನಲ್ಲಿಯೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‍ರು ಈ ಚರ್ಚೆಯ ವ್ಯಾಪ್ತಿಯನ್ನು ಒಂದಷ್ಟು ಹಿಗ್ಗಿಸಿದ್ದಾರೆ. ನಿಜಕ್ಕೂ ಅಸಹಿಷ್ಣುತೆ ಎಲ್ಲಿದೆ, ಯಾವ ರೂಪದಲ್ಲಿದೆ, ಅಸಹಿಷ್ಣುತೆಯ ನಿಜ ಸಂತ್ರಸ್ತರು ಹೇಗಿದ್ದಾರೆ, ಅವರಿಗೆ ರಾಜಕೀಯ ಪ್ರಾತಿನಿಧ್ಯ ಎಷ್ಟಿದೆ, ಅಸಹಿಷ್ಣುತೆಯಿಂದ ಅವರು ಅನುಭವಿಸಿದ ನೋವು-ಕಣ್ಣೀರುಗಳನ್ನು ಮುಖ್ಯ ವಾಹಿನಿಯ ಮಾಧ್ಯಮ ಮತ್ತು ‘ದೇಶಭಕ್ತಿ'ಯ ಗುಂಪು ಎಷ್ಟಂಶ ಗಂಭೀರವಾಗಿ ಪರಿಗಣಿಸಿವೆ, ಈ ದೇಶದಿಂದ ತೊಲಗಬೇಕಾದವರ ಪಟ್ಟಿಯೊಂದನ್ನು ಈ ಮಂದಿ ತಯಾರಿಸುವುದಾದರೆ ಆ ಪಟ್ಟಿಯ ಮುಂಚೂಣಿಯಲ್ಲಿ ಯಾರ ಹೆಸರಿರಬಹುದು.. ಇವು ಮತ್ತು ಇಂಥ ಅನೇಕಾರು ಪ್ರಶ್ನೆಗಳಿಗೆ ಉತ್ತರವಾಗಬಹುದಾದ ಒಂದು ಗುಂಪಿನ ಬಗ್ಗೆ ನಿತೀಶ್ ಕುಮಾರ್ ದೇಶದ ಗಮನ ಸೆಳೆದಿದ್ದಾರೆ. ಅವರೇ ಮಹಿಳೆಯರು. ಇವರು ‘ಮದ್ಯ' ಎಂಬ ಪರಮ ಅಸಹಿಷ್ಣುತೆಯಿಂದ ಪಡುತ್ತಿರುವ ಪಾಡನ್ನು ನಿತೀಶ್ ಕುಮಾರ್ ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂದಿನ ವರ್ಷದ ಎಪ್ರಿಲ್‍ನಿಂದ ಈ ಅಸಹಿಷ್ಣುತೆಗೆ ಸಂಪೂರ್ಣ ನಿಷೇಧ ವಿಧಿಸುವುದಾಗಿ ಘೋಷಿಸಿದ್ದಾರೆ.
  ಸಹಿಷ್ಣು ಮತ್ತು ಅಸಹಿಷ್ಣು ಎಂಬೆರಡು ಪದಗಳನ್ನು ಅವಿೂರ್ ಖಾನ್, ಶಾರುಖ್ ಖಾನ್ ಮತ್ತು ಪ್ರಶಸ್ತಿ ವಾಪಸು ಮಾಡಿದ ಸಾಹಿತಿಗಳಿಗೆ ಸೀಮಿತಗೊಳಿಸಿ ಈ ದೇಶದಲ್ಲಿ ಚರ್ಚೆಯೊಂದು ಆರಂಭವಾಗಿ ಬಹುತೇಕ ಮುಕ್ತಾಯದ ಹಂತದಲ್ಲಿದೆ. ಪ್ರಧಾನಿ ಮೋದಿಯವರ ಬೆಂಬಲಿಗರ ‘ದೇಶಭಕ್ತಿ'ಗೆ ಇರುವ ಮಿತಿಗಳಷ್ಟೇ ಈ ಅಸಹಿಷ್ಣುತೆಯ ಚರ್ಚೆಗೂ ನಾವೆಲ್ಲ ಗೊತ್ತಿದ್ದೋ ಗೊತ್ತಿಲ್ಲದೆಯೋ ಮಿತಿಗಳನ್ನು ಹೇರಿಕೊಂಡು ಚರ್ಚೆಯಲ್ಲಿ ಭಾಗವಹಿಸುತ್ತಿದ್ದೇವೆ. ಆದರೆ, ಈ ಚರ್ಚೆಯ ಅಂತಿಮ ಹಂತದಲ್ಲಿ ಪ್ರವೇಶಿಸಿದ ನಿತೀಶ್ ಕುಮಾರ್ ಅವರು ಇಡೀ ಚರ್ಚೆಯನ್ನು ಇನ್ನೊಂದು ಮಗ್ಗುಲಿಗೆ ಕೊಂಡೊಯ್ಯಲು ಶ್ರಮಿಸಿದ್ದಾರೆ. ಈ ಮಗ್ಗುಲು ಮಹಿಳೆಯರದ್ದು. ಬಿಹಾರದಲ್ಲಿ ಈ ಬಾರಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಮಹಿಳೆಯರು. ಅದಕ್ಕೆ ನಿತೀಶ್ ಅವರ ‘ಮದ್ಯಪಾನ ನಿಷೇಧ' ಭರವಸೆಯೂ ಒಂದು ಕಾರಣವಾಗಿರಬಹುದು. ಅವಿೂರ್ ಖಾನ್‍ರ ‘ಅಸಹಿಷ್ಣು' ಹೇಳಿಕೆಯನ್ನು ಎತ್ತಿಕೊಂಡು ವಾರಗಟ್ಟಲೆ ಚರ್ಚಿಸಿದ ನಾವೆಲ್ಲ, ನಿತೀಶ್‍ರ ಹೇಳಿಕೆಯನ್ನು ಸ್ಪರ್ಷಿಸಲೇ ಇಲ್ಲ. 4 ಸಾವಿರ ಕೋಟಿ ರೂಪಾಯಿ ಆದಾಯ ತರುತ್ತಿದ್ದ ಮದ್ಯವನ್ನು ಬಿಹಾರದಂಥ ಹಿಂದುಳಿದ ಮತ್ತು ದಲಿತರೇ ಹೆಚ್ಚಿರುವ ರಾಜ್ಯವೊಂದರಲ್ಲಿ ನಿಷೇಧಕ್ಕೆ ಒಳಪಡಿಸುವುದು ತೀರಾ ಸವಾಲಿನದ್ದು. ಹೆಚ್ಚಿನೆಲ್ಲ ಸರಕಾರಗಳ ದೊಡ್ಡ ಆದಾಯ ಮೂಲವೇ ಮದ್ಯ. ಅಸಹಿಷ್ಣು ಹೇಳಿಕೆಯನ್ನು ದೇಶಕ್ಕಾದ ಅವಮಾನ ಎಂದು ವ್ಯಾಖ್ಯಾನಿಸಿದ ಬಿಜೆಪಿ, ನಿಜವಾಗಿ ಈ ಘೋಷಣೆಯನ್ನು ಶ್ಲಾಘಿಸಬೇಕಿತ್ತು. ಮದ್ಯಪಾನವನ್ನು ದೇಶದಾದ್ಯಂತ ಚರ್ಚಾ ವಿಷಯವನ್ನಾಗಿ ಮಾರ್ಪಡಿಸಬೇಕಿತ್ತು. ಯಾಕೆಂದರೆ, ಮದ್ಯವು ಈ ದೇಶದ ಗೌರವವನ್ನು ಅಂತಾರಾಷ್ಟ್ರೀಯವಾಗಿ ಹರಾಜಿಗಿಟ್ಟಿದೆ. ದೆಹಲಿಯಲ್ಲಿ 2012ರಲ್ಲಿ ನಡೆದ ಅತ್ಯಾಚಾರ ಪ್ರಕರಣವು ಭಾರತದ ಗೌರವಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಡಿದಷ್ಟು ಚ್ಯುತಿಯನ್ನು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಇನ್ನಾವುದೂ ತಂದಿರಲಿಲ್ಲ. ಅವಿೂರ್, ಶಾರುಖ್‍ರ ಹೇಳಿಕೆಗಳು ಅಥವಾ ಸಾಹಿತಿಗಳ ಪ್ರತಿಭಟನೆಗಳು ಆ ಪ್ರಕರಣದ ಎದುರು ತೀರಾ ತೀರಾ ಜುಜುಬಿ. ಭಾರತದಲ್ಲಿ ಹೆಣ್ಣು ಮಕ್ಕಳು ಎಷ್ಟು ಅಸುರಕ್ಷಿತ ಎಂಬುದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಿಸುವುದಕ್ಕೆ ಆ ಘಟನೆ ಕಾರಣವಾಗಿತ್ತು. ನಿಜವಾಗಿ, ಮದ್ಯಪಾನಿಗಳಿಗೆ ಬಲಿಯಾದವರ ಪಟ್ಟಿಯಲ್ಲಿ ದೆಹಲಿಯ ನಿರ್ಭಯ ಮೊದಲಿಗಳೂ ಅಲ್ಲ, ಕೊನೆಯವಳೂ ಆಗುವುದಿಲ್ಲ. ಆ ಘಟನೆಯಲ್ಲಿ ಅತ್ಯಾಚಾರವೇ ಪ್ರಮುಖ ಚರ್ಚಾ ವಿಷಯ ಆಗಿದ್ದರೂ ಆ ಅತ್ಯಾಚಾರದ ಹಿಂದೆ ಮದ್ಯಪಾನದ ಅಮಲು ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಕೂಡ ಅಷ್ಟೇ ನಿಜ. ಒಂದು ರೀತಿಯಲ್ಲಿ ನಿರ್ಭಯ ಪ್ರಕರಣದ ಚರ್ಚೆಯು ತೆರೆದುಕೊಳ್ಳಬೇಕಾದ ಮತ್ತೊಂದು ಮಗ್ಗುಲು ಇದಾಗಿತ್ತು. ದುರಂತ ಏನೆಂದರೆ, ಇಡೀ ಚರ್ಚೆ ಅತ್ಯಾಚಾರದ ಸುತ್ತ ಗಿರಕಿ ಹೊಡೆಯಿತೇ ಹೊರತು ಮದ್ಯಪಾನವನ್ನು ಬಹುತೇಕ ಸ್ಪರ್ಶಿಸಲೇ ಇಲ್ಲ. ‘ಮದ್ಯಪಾನದ ಹೊರತಾಗಿ ನಿರ್ಭಯಳ ಮೇಲೆ ಅತ್ಯಾಚಾರ ಮಾಡುವ ಧೈರ್ಯವನ್ನು ಆ ಆರೋಪಿಗಳು ತೋರುತ್ತಿದ್ದರೇ’ ಎಂಬ ಅಂಶವೂ ಚರ್ಚೆಗೊಳಗಾಗಲಿಲ್ಲ. ಮದ್ಯಪಾನದ ಬಗ್ಗೆ ಉದ್ದೇಶಪೂರ್ವಕವಾಗಿಯೇ ಅವಗಣನೆ ನಡೆಯುತ್ತಿದೆಯೇ ಎಂದು ಅನುಮಾನಿಸುವಷ್ಟು ಮದ್ಯವನ್ನು ಚರ್ಚಾವ್ಯಾಪ್ತಿಯಿಂದ ಹೊರಗಿಡಲಾಯಿತು. ಒಂದು ವೇಳೆ, ನಿರ್ಭಯ ಅತ್ಯಾಚಾರದ ಜೊತೆಜೊತೆಗೇ ಅದರಲ್ಲಿ ಮದ್ಯಪಾನದ ಪಾತ್ರದ ಬಗ್ಗೆಯೂ ಗಂಭೀರ ಚರ್ಚೆಯಾಗುತ್ತಿದ್ದರೆ, ಅದು ಬೀರಬಹುದಾದ ಪರಿಣಾಮಗಳು ಏನಾಗಿರುತ್ತಿದ್ದುವು? ದೆಹಲಿಯಲ್ಲಿ ನಿರ್ಭಯ ಎದುರಿಸಿದ ಹೃದಯವಿದ್ರಾವಕ ಪರಿಸ್ಥಿತಿಯ ಬೇರೆ ಬೇರೆ ರೂಪಗಳನ್ನು ದೆಹಲಿಯಿಂದ ಹೊರಗಿರುವ ವಿಶಾಲ ಭಾರತದ ನಗರ ಮತ್ತು ಹಳ್ಳಿಗಳ ಅಸಂಖ್ಯಾತ ‘ನಿರ್ಭಯರು' ಆವತ್ತೂ ಇವತ್ತೂ ಎದುರಿಸುತ್ತಲೇ ಇದ್ದಾರೆ. ಗಂಡ, ಮಾವ, ತಂದೆ, ಅಣ್ಣ ಮತ್ತಿತರರ ರೂಪದಲ್ಲಿ ಈ ‘ನಿರ್ಭಯರು' ದಿನಂಪ್ರತಿ ಹಿಂಸೆಯನ್ನು ಅನುಭವಿಸುತ್ತಲೇ ಇದ್ದಾರೆ. ಕೋಟ್ಯಂತರ ಮನೆಗಳು ಇವತ್ತು ಕೇವಲ ಮದ್ಯದಿಂದಾಗಿ ಮಸಣದಂತೆ ಬದುಕುತ್ತಿವೆ. ನಿತ್ಯ ಹಿಂಸೆ-ಜಗಳಗಳಿಗೆ ಅದು ಕಾರಣವಾಗುತ್ತಿದೆ. ಕುಡುಕ ಪತಿಯಿಂದ ಪತ್ನಿಯ ಕೊಲೆ, ಪತ್ನಿ ಆತ್ಮಹತ್ಯೆ, ಕುಡುಕ ತಂದೆಯಿಂದ ಮಗಳ ಮೇಲೆ ಅತ್ಯಾಚಾರ, ಕುಡಿದು ಅತ್ಯಾಚಾರಗೈದ ಯುವಕರು.. ಇಂಥ ಶೀರ್ಷಿಕೆಯಲ್ಲಿ ಪತ್ರಿಕೆಗಳಲ್ಲಿ ಸುದ್ದಿ ಪ್ರಕಟವಾಗದ ದಿನಗಳೇ ಇಲ್ಲವೆಂಬಷ್ಟು ಅದು ಮಾಮೂಲಿಯಾಗಿದೆ. ಒಂದು ವೇಳೆ, ನಿರ್ಭಯ ಪ್ರಕರಣದ ಚರ್ಚೆಯನ್ನು ಮದ್ಯಪಾನದ ಮೇಲೆ ಕೇಂದ್ರೀಕರಿಸಿ ಮಾಡಿರುತ್ತಿದ್ದರೆ ಅದು ಈ ದೇಶದ ಪ್ರಜ್ಞೆಯನ್ನೇ ಕಲಕಿ ಬಿಡುವಷ್ಟು ಪರಿಣಾಮಕಾರಿಯಾಗುತ್ತಿತ್ತು. ಅಸಂಖ್ಯಾತ ನಿರ್ಭಯರ ಕರುಳು ಮಿಡಿಯುವ ಕತೆಗಳನ್ನು ಆ ಚರ್ಚೆ ಮುನ್ನೆಲೆಗೆ ತರುತ್ತಿತ್ತು. ಇನ್ನಷ್ಟು ನಿರ್ಭಯರನ್ನು ಅತ್ಯಾಚಾರದಿಂದ, ನೇಣಿನಿಂದ ಅಥವಾ ದೌರ್ಜನ್ಯದಿಂದ ಮುಕ್ತಗೊಳಿಸಲು ಯಶಸ್ವಿಯಾಗುತ್ತಿತ್ತು. ಆದರೆ, ನಿರ್ಭಯ ಚರ್ಚೆಯು ಅಂತಿಮವಾಗಿ ದುರ್ಬಲ ಕಾನೂನುಗಳನ್ನೇ ಅಪರಾಧಿ ಎಂದು ಸಾರಿಬಿಟ್ಟಿತು. ಅದಕ್ಕಾಗಿ ನಮ್ಮನ್ನಾಳುವವರು ಕೆಲವು ಕಾನೂನುಗಳನ್ನು ರಚಿಸಿ ಸಮಾಜದ ಆಕ್ರೋಶವನ್ನು ತಣಿಸಲೆತ್ನಿಸಿದರು. ನಿರ್ಭಯ ನಿಧಿಯನ್ನು ಸ್ಥಾಪಿಸಿದರು. ಆದರೆ, ಇದರಿಂದ ನಿರ್ಭಯರ ಸಂಖ್ಯೆಯಲ್ಲೇನೂ ಕಡಿಮೆ ಆಗಲಿಲ್ಲ.
  ನಿಜವಾಗಿ, ಕಾನೂನಿನ ಸಕಲ ಭಯವನ್ನೂ ಕಿತ್ತು ಹಾಕುವ ಸಾಮರ್ಥ್ಯವೊಂದು ಮದ್ಯದಲ್ಲಿದೆ. ಆ ಕ್ಷಣದಲ್ಲಿ ಅದು ಎಲ್ಲವನ್ನೂ ಮರೆಸುತ್ತದೆ. ಇಷ್ಟ ಬಂದದ್ದನ್ನು ಮಾಡುವಂತೆ ಪ್ರೇರೇಪಿಸುತ್ತದೆ. ‘ನಿರ್ಭಯ' ಪ್ರಕರಣದ ಬಳಿಕ ಈ ದೇಶದಲ್ಲಿ ನಡೆದ ಅಸಂಖ್ಯ ಅತ್ಯಾಚಾರ-ಹಿಂಸೆಯ ಘಟನೆಗಳೇ ಇದಕ್ಕೆ ಸ್ಪಷ್ಟ ಪುರಾವೆ. ಆದ್ದರಿಂದಲೇ, ನಿತೀಶ್ ಕುಮಾರ್‍ರ ಘೋಷಣೆಯನ್ನು ಅಸಹಿಷ್ಣು ಚರ್ಚೆಗೆ ಹೊಸತೊಂದು ತಿರುವಾಗಿ ಪರಿಗಣಿಸಲು ಮಾಧ್ಯಮಗಳು ಮತ್ತು ಮುಖ್ಯವಾಹಿನಿಯ ಪ್ರಮುಖರಿಗೆ ಸಾಧ್ಯ ಆಗಬೇಕಿತ್ತು. ‘ಅಸಹಿಷ್ಣು' ಹೇಳಿಕೆಯನ್ನು ದೇಶಕ್ಕಾದ ಅವಮಾನ ಎಂದು ವ್ಯಾಖ್ಯಾನಿಸುವವರಿಗೂ ಇದರಲ್ಲಿ ಪಾಲುಗೊಳ್ಳಬಹುದಿತ್ತು. ಅಷ್ಟಕ್ಕೂ, ಮದ್ಯ ಎಂಬ ಅಸಹಿಷ್ಣುವಿನಿಂದ ಪ್ರತಿದಿನ ಈ ದೇಶದ ಅಸಂಖ್ಯ ಮಂದಿ ಕಿರುಕುಳ, ಹಿಂಸೆ, ಅವಮಾನ ಮತ್ತು ಮಾನಭಯವನ್ನು ಎದುರಿಸುತ್ತಿದ್ದರೂ ಅದು ಅಸಹಿಷ್ಣು ಪಟ್ಟಿಯಲ್ಲಿ ಸೇರದಿರುವುದು ಮತ್ತು ದೇಶದ ಗೌರವಕ್ಕೆ ಧಕ್ಕೆ ಎನಿಸದಿರುವುದು ಯಾವ ಕಾರಣದಿಂದ? ಮದ್ಯಪಾನದ ಬಗ್ಗೆ ಈ ಮಟ್ಟಿನ ಸಹಿಷ್ಣುತೆ ಏಕೆ? ಇದರ ಅಸಹಿಷ್ಣುತೆಗೆ ಅತ್ಯಂತ ಹೆಚ್ಚು ಗುರಿಯಾಗುವುದು ಮಹಿಳೆಯರೇ ಎಂಬುದು ಗೊತ್ತಿದ್ದೂ ಈ ಸಹಿಷ್ಣುತೆ ಯಾಕಾಗಿ?
  ನಿತೀಶ್ ಕುಮಾರ್‍ರ ಮದ್ಯಪಾನ ನಿಷೇಧ ಘೋಷಣೆಯು ಸಹಿಷ್ಣು ಭಾರತವನ್ನು ಕಟ್ಟುವಲ್ಲಿ ಮೈಲುಗಲ್ಲಾಗಲಿ.