Thursday, 9 August 2018

ಮಾನವ ದೇವನಾಗಲಾರ..

 
  ಮಾನವ ಯಾಕೆ ದೇವನಾಗಲಾರ ಮತ್ತು ದೇವನು ಮಾನವನಿಗಿಂತ ಹೇಗೆ ಭಿನ್ನ ಅನ್ನುವುದಕ್ಕೆ ಮತ್ತೊಂದು ಸಾಕ್ಷ್ಯ ಲಭ್ಯವಾಗಿದೆ. ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಯವರ ಅನುಮಾನಾಸ್ಪದ ಸಾವು- ಮಾನವ ಮತ್ತು ದೇವನ ನಡುವಿನ ಅಂತರ, ವ್ಯತ್ಯಾಸ ಮತ್ತು ವೈಶಿಷ್ಟ್ಯಗಳ ಕುರಿತಂತೆ ಈಗಾಗಲೇ ಇರುವ ಚರ್ಚೆಗೆ ಇನ್ನೊಂದಷ್ಟನ್ನು ಸೇರ್ಪಡೆಗೊಳಿಸಿದೆ. ಶಿರೂರು ಸ್ವಾಮೀಜಿಗಳು ತಮ್ಮನ್ನು ದೇವಮಾನವ ಎಂದು ಘೋಷಿಸಿಕೊಂಡಿಲ್ಲ, ನಿಜ. ಅವರು, ಮೈಲಿಗೆ ಭಾವವಿಲ್ಲದೇ ಜನರೊಂದಿಗೆ ಬೆರೆಯುತ್ತಿದ್ದವರು ಮತ್ತು ಮನುಷ್ಯ ಸಹಜ ಬಯಕೆಗಳನ್ನು ಮುಕ್ತವಾಗಿ ಸಮಾಜದೊಂದಿಗೆ ಹಂಚಿಕೊಂಡವರು ಎಂಬ ಶ್ಲಾಘನೆಯೂ ಇದೆ. ಆದರೆ, ಭಕ್ತ ಸಮೂಹ ಅವರನ್ನು ಇಷ್ಟೇ ಸಹಜವಾಗಿ ಸ್ವೀಕರಿಸಿಕೊಂಡಿದೆ ಎಂದು ಹೇಳುವ ಹಾಗಿಲ್ಲ. ಅವರ ಮೇಲಿನ ಪ್ರೀತಿಯು ಭಕ್ತಿಯಾಗಿ, ಆ ಭಕ್ತಿಯು ಆರಾಧನೆಯಾಗಿ ಮತ್ತು ಆ ಆರಾಧನೆಯು ಅವರಿಗೆ ಅತೀಂದ್ರಿಯ ಶಕ್ತಿ-ಸಾಮರ್ಥ್ಯ ವನ್ನು ಕೊಟ್ಟುಕೊಂಡು ದೇವ ಮಾನವನಂತೆ ಪೂಜೆಗೊಂಡಿರುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಈ ಊಹೆಗೆ ಆಧಾರ ಏನೆಂದರೆ, ಈ ದೇಶದಲ್ಲಿ ಈಗಾಗಲೇ ಇರುವ ದೇವ ಮಾನವರುಗಳು. ಸ್ವಘೋಷಿತ ದೇವ ಮಾನವರುಗಳ ದೊಡ್ಡದೊಂದು ಪಟ್ಟಿಯೇ ಈ ದೇಶದಲ್ಲಿದೆ. ಶಿರ್ಡಿಯ ಸತ್ಯ ಸಾಯಿ ಬಾಬರ ಸಾವು- ಮಾನವ ದೇವನಾಗಲಾರ ಎಂಬ ಸಂದೇಶವನ್ನು ಈ ಹಿಂದೆ ಬಹಳ ಬಲವಾಗಿ ಈ ದೇಶದಲ್ಲಿ ಸಾರಿತ್ತು. ದೇವನಿಗೆ ನಾವು ಕೆಲವು ಗುಣಗಳನ್ನು ಕೊಟ್ಟುಕೊಂಡಿದ್ದೇವೆ ಅಥವಾ ದೇವ ಎಂಬವ ಮಾನವ ದೌರ್ಬಲ್ಯಗಳಿಗಿಂತ ಅತೀತನಾದವ ಎಂಬ ನಂಬಿಕೆ ಸಾಮಾಜಿಕವಾಗಿ ಇದೆ. ಆದರೂ ದೇವಮಾನವರು ಮತ್ತೆ ಮತ್ತೆ ಉದ್ಭವವಾಗುತ್ತಲೇ ಇರುತ್ತಾರೆ. ಶೂನ್ಯದಿಂದ ವಿವಿಧ ವಸ್ತುಗಳನ್ನು ಸೃಷ್ಟಿಸುತ್ತಿರುವರೆಂಬ ನಂಬಿಕೆಯೊಂದು ಶಿರ್ಡಿ ಸತ್ಯ ಸಾಯಿಬಾಬರ ಸುತ್ತ ನಿರ್ಮಾಣವಾಗಿತ್ತು. ಅವರು ಪವಾಡ ಪುರುಷರಾಗಿ ಜನರ ಆದರ ಮತ್ತು ಪೂಜೆಗೆ ಒಳಗಾಗಿದ್ದರು. ಆದರೂ ಅವರಿಗೆ ಮೃತ್ಯುವನ್ನು ಜಯಿಸಲು ಸಾಧ್ಯವಾಗಲಿಲ್ಲ. ಅವರನ್ನು ದೇವರೆಂದು ಪೂಜಿಸುತ್ತಿದ್ದ ಜನರಂತೆಯೇ  ಸಾಯಿಬಾಬರಲ್ಲೂ ಮಾನವ ಸಹಜ ದೌರ್ಬಲ್ಯಗಳಿದ್ದುವು. ಅವರಿಗೆ ಕಾಯಿಲೆ ಬರುತ್ತಿತ್ತು. ನಿದ್ದೆ ಮಾಡುತ್ತಿದ್ದರು. ಹಸಿವು, ಬಾಯಾರಿಕೆ, ದಣಿವು, ಬೆವರು ಇತ್ಯಾದಿಗಳಿಂದ ಅವರು ಮುಕ್ತರಾಗಿರಲಿಲ್ಲ. ಅವರು ದೇಹವನ್ನು ಮುಚ್ಚುವುದಕ್ಕಾಗಿ ಉಡುಪು ಧರಿಸುತ್ತಿದ್ದರು. ಚಪ್ಪಲಿ ಧರಿಸುತ್ತಿದ್ದರು. ಅವರ ಕೂದಲು, ಉಗುರು ಬೆಳೆಯುತ್ತಿತ್ತು. ಒಂದು ರೀತಿಯಲ್ಲಿ, ಅವರಿಗೂ ಅವರನ್ನು ದೇವರೆಂದು ಪೂಜಿಸುವ ಭಕ್ತ ವೃಂದಕ್ಕೂ ಬಾಹ್ಯನೋಟಕ್ಕೆ ಯಾವ ವ್ಯತ್ಯಾಸವೂ ಇರಲಿಲ್ಲ. ಹಾಗಂತ, ಇದು ಸಾಯಿಬಾಬರಿಗೆ ಸಂಬಂಧಿಸಿ ಮಾತ್ರ ಹೇಳುವಂಥದ್ದಲ್ಲ. ಶಿರೂರು ಸ್ವಾಮಿಜಿಯವರಿಗೂ ಇದು ಅನ್ವಯ. ಪೇಜಾವರ ಸ್ವಾಮೀಜಿಗಳಿಗೂ ಇದು ಅನ್ವಯ ಮತ್ತು ಈ ದೇಶದಲ್ಲಿರುವ ಎಲ್ಲ ಮಠ-ಮಂದಿರ, ಚರ್ಚ್, ಮಸೀದಿಯೊಳಗಿನ ಸ್ವಾಮೀಜಿ, ಫಾದರ್, ಮೌಲಾನರಿಗೂ  ಅನ್ವಯ. ಹಾಗಿದ್ದರೆ ದೇವನೆಂದರೆ ಯಾರು? ಆತ ಹೇಗಿರಬೇಕು? ಮಾನವ ಸಹಜ ರೀತಿ-ನೀತಿಗಳಿಂದ ದೇವನೂ ಮುಕ್ತನಲ್ಲದಿದ್ದರೆ ಮತ್ತೆ ದೇವನಾದರೂ ಯಾಕೆ ಬೇಕು? ಸತ್ಯ ಸಾಯಿಬಾಬರಂಥ ದೇವ ಮಾನವರುಗಳ ಸಾವು ಈ ಬಗೆಯ ಪ್ರಶ್ನೆಯನ್ನು ಅವರ ಭಕ್ತ ವೃಂದದಲ್ಲಿ ಹುಟ್ಟಿಸಿರುವ ಸಾಧ್ಯತೆ ಖಂಡಿತ ಇದೆ.

ನಿಜವಾಗಿ, ದೇವನು ಮಾನವ ಆಗಿರುವುದಕ್ಕೆ ಸಾಧ್ಯವಿಲ್ಲ. ಮಾನವನಂತಿರುವವ ದೇವನಾಗಲಾರ. ಮಾನವನನ್ನು ಸೃಷ್ಟಿಸಿದವನೆಂದು ಹೇಳಲಾಗುವ ಮತ್ತು  ಜಗತ್ತಿನ ಸರ್ವ ಕ್ರಿಯೆ-ಪ್ರಕ್ರಿಯೆಗಳ ಮೇಲೂ ನಿಯಂತ್ರಣವನ್ನು ಹೊಂದಿರುವನೆಂದು ಅಂದುಕೊಳ್ಳಲಾಗುವ ದೇವನಿಗೆ ಸಾವು ಇರಬಾರದು. ನಿದ್ದೆ ಬಾದಿಸಬಾರದು. ಆತ ಕಾಯಿಲೆ ಬೀಳಬಾರದು. ದಣಿವು ಬಾಯಾರಿಕೆ, ಹಸಿವುಗಳು ಆತನಲ್ಲಿ ಕಾಣಿಸಬಾರದು. ಆತ ಸಾವಿಲ್ಲದ, ಪತ್ನಿ-ಮಕ್ಕಳು, ಕುಟುಂಬವನ್ನು ಹೊಂದಿಲ್ಲದ ಮತ್ತು ಮಾನವ ಸಹಜ ಬಯಕೆ-ಬೇಡಿಕೆಗಳನ್ನು ಮೀರಿ ನಿಂತ ವಿಶೇಷ ಶಕ್ತಿಯಾಗಿರಬೇಕು. ಇಂಥ ಶಕ್ತಿಗೆ ಮಾತ್ರ ಜಗತ್ತಿನ ಸರ್ವದರ ಮೇಲೆ ಸದಾ ಗಮನವಿಡುವುದಕ್ಕೆ ಮತ್ತು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ ಸಾಧ್ಯ. ದುರಂತ ಏನೆಂದರೆ, ತಮ್ಮನ್ನು ದೇವ ಮಾನವರೆಂದು ಕರೆಸಿಕೊಂಡಿರುವ ಯಾರಲ್ಲೂ ಈ ಸಾಮರ್ಥ್ಯ  ಇಲ್ಲವೇ ಇಲ್ಲ. ಅದರ ಬದಲು ಈ ದೇವ ಮಾನವರಲ್ಲಿ ಹೆಚ್ಚಿನವರು ದೇವನಿಗೆ ಸಹ್ಯವಲ್ಲದ ಮತ್ತು ದೇವನು ನಿಷೇಧಿಸಿರುವ ಹತ್ತು-ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಆರೋಪವನ್ನು ಹೊತ್ತುಕೊಂಡಿದ್ದಾರೆ. ಹಲವರು ಜೈಲಲ್ಲಿದ್ದಾರೆ. ಒಂದು ವೇಳೆ, ಮನುಷ್ಯರ ಪೈಕಿ ಕೆಲವರಲ್ಲಿ ದೇವರ ಸಾಮಥ್ರ್ಯ ಇದ್ದಿದ್ದೇ ಆಗಿದ್ದರೆ, ಅವರ ಮೇಲೆ ಆರೋಪಗಳು ಇರುವುದು ಬಿಡಿ, ಬರೇ ದೇವ ಗುಣಗಳನ್ನೇ ಅವರು ಪ್ರದರ್ಶಿಸಬೇಕಿತ್ತು. ಮುಪ್ಪಿಲ್ಲದ, ಸಾವಿಲ್ಲದ ಪವಾಡವನ್ನು ಅವರು ಪ್ರದರ್ಶಿಸಬೇಕಿತ್ತು. ಈ ಪವಾಡವನ್ನು ಈವರೆಗೂ ಯಾವ ದೇವ ಮಾನವರೂ ಪ್ರದರ್ಶಿಸಿಲ್ಲ ಅನ್ನುವುದೇ ಅವರ ಮಿತಿಯಲ್ಲಿ ಹೇಳುತ್ತದೆ.

ಅಂದಹಾಗೆ, ಮನುಷ್ಯನಿಗೂ ದೇವನಿಗೂ ನಡುವೆ ವ್ಯತ್ಯಾಸ ಇದೆ ಮತ್ತು ಇರಬೇಕು. ದೇವನ ಕುರಿತಂತೆ ಖಚಿತವಾದ ಪರಿಕಲ್ಪನೆ ಇರುವ ಸಮಾಜದಲ್ಲಿ ದೇವಮಾನವರಿಗೆ ಜಾಗ ಇರಲು ಸಾಧ್ಯವೇ ಇಲ್ಲ. ದೇವನ ಬಗ್ಗೆ ಸ್ಪಷ್ಟ ಪರಿಚಯ ಇಲ್ಲದ ಜನರು ಕೆಲವೊಮ್ಮೆ ತಮ್ಮಂತೆಯೇ ಇರುವ ಮನುಷ್ಯನನ್ನೇ ದೇವರನ್ನಾಗಿಸುತ್ತಾರೆ. ತಮ್ಮಲ್ಲಿಲ್ಲ ಯಾವುದೋ ಒಂದನ್ನು ಇನ್ನೊಬ್ಬರಲ್ಲಿ ಕಂಡಾಗ ಅದನ್ನು ಪವಾಡವೆಂಬಂತೆ ಭ್ರಮಿಸುತ್ತಾರೆ. ಸಾಮಾನ್ಯವಾಗಿ ಮನುಷ್ಯರ ನಡುವೆ ಪ್ರತಿಭೆಯ ಆಧಾರದಲ್ಲಿ ವ್ಯತ್ಯಾಸವಿದೆಯೇ ಹೊರತು ಸಮಾನತೆಯ ಆಧಾರದಲ್ಲಿ ವ್ಯತ್ಯಾಸ ಇಲ್ಲ. ಎಲ್ಲ ಮನುಷ್ಯರೂ ಸಮಾನರು. ಒಬ್ಬ ದೇವನಾಗುವುದು ಮತ್ತು ಇನ್ನೊಬ್ಬ ಭಕ್ತನಾಗುವುದು ದೇವನ ನಿಜ ಗುಣಕ್ಕೆ ವಿರುದ್ಧವಾದುದು. ಅಚ್ಚರಿ ಏನೆಂದರೆ, ಈ ದೇಶದಲ್ಲಿ ಅದ್ಭುತ ಪ್ರತಿಭೆಗಳನ್ನು ಪ್ರದರ್ಶಿಸಿದ ಅನೇಕರಿದ್ದಾರೆ. ಜುಜುಬಿ ಬಂಡವಾಳವನ್ನು ಹೂಡಿ ಕೋಟ್ಯಾಧಿಪತಿಯಾದವರಿದ್ದಾರೆ. ಬಡ ಗುಡಿಸಲಿನ ಮಗುವೊಂದು ಅಂತಾರಾಷ್ಟ್ರೀಯ ಮನ್ನಣೆ ಪಡೆದ ವೈದ್ಯ, ಅಥ್ಲೀಟ್, ಪಾಕ ಶಾಸ್ತ್ರ ಪ್ರವೀಣ ಆದದ್ದಿದೆ. ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ಮಾಡಿದ ಅನೇಕ ಪ್ರತಿಭಾವಂತರು ಈ ದೇಶದಲ್ಲಿದ್ದಾರೆ. ಆದರೆ, ಅವರಾರೂ ದೇವರಾಗಿಲ್ಲ ಅಥವಾ ಅವರನ್ನು ದೇವ ಮಾನವರೆಂದು ಪೂಜಿಸುವ ವಾತಾವರಣ ನಿರ್ಮಾಣವಾಗಿಲ್ಲ. ಅದರ ಬದಲು ಈ ಬಗೆಯ ಯಾವ ಪ್ರತಿಭೆಯನ್ನೂ ಪ್ರದರ್ಶಿಸದ ಅನೇಕರು ದೇವಮಾನವರಾಗಿ ಪೂಜೆಗೆ ಒಳಗಾದ ಮತ್ತು ಒಳಗಾಗುತ್ತಿರುವ ವಿಚಿತ್ರ ಸ್ಥಿತಿಯೊಂದು ನಮ್ಮ ನಡುವೆಯಿದೆ. ದೇವನ ಸ್ಪಷ್ಟ ಪರಿಚಯ ಇಲ್ಲದ ಮುಗ್ಧರೇ ಈ ಮಂದಿಯ ಬಂಡವಾಳ. ಅವರ ಮುಗ್ಧತನವು ಈ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ದುರುಪಯೋಗಕ್ಕೆ ಒಳಗಾಗುತ್ತಿದೆ. ಜನರು ಮತ್ತೆ ಮತ್ತೆ ವಂಚನೆಗೆ ಒಳಗಾಗುತ್ತಲೂ ಇದ್ದಾರೆ ಮತ್ತು ಹೊಸ ಹೊಸ ದೇವ ಮಾನವರು ಹುಟ್ಟುತ್ತಲೂ ಇದ್ದಾರೆ.

ಶಿರೂರು ಸ್ವಾಮೀಜಿಗಳು ತನ್ನನ್ನು ಸ್ವತಃ ದೇವ ಮಾನವರಾಗಿ ಘೋಷಿಸಿರಲಿಲ್ಲ ಎಂಬುದು ಸ್ಪಷ್ಟವೇ ಆಗಿದ್ದರೂ ಭಕ್ತ ವೃಂದರಿಂದ ಅವರಿಗೆ ಸಲ್ಲುತ್ತಿದ್ದ ಗೌರವಾದಾರಗಳಲ್ಲಿ ಪೂಜಾ ಭಾವವೂ ಇತ್ತು ಅನ್ನುವ ಅಭಿಪ್ರಾಯವೂ ಇದೆ. ಶಿರೂರು ಸ್ವಾಮೀಜಿಗಳು ಇದಕ್ಕೆ ಕಾರಣ ಅಲ್ಲದೇ ಇರಬಹುದು. ಆದರೆ, ಸಾಮಾಜಿಕವಾಗಿ ಇವತ್ತು ಇಂಥದ್ದೊಂದು ವಾತಾವರಣ ಬೆಳೆದು ನಿಂತಿದೆ. ಮನುಷ್ಯರನ್ನೇ ದೇವರೆಂದು ಪೂಜಿಸುವ ಮತ್ತು ಷರತ್ತುರಹಿತವಾಗಿ ಅವರನ್ನು ನಂಬುವ ಸ್ಥಿತಿಯೊಂದು ನಿರ್ಮಾಣವಾಗಿ ಬಿಟ್ಟಿದೆ. ಇದು ಅತ್ಯಂತ ಅಪಾಯಕಾರಿ ಸ್ಥಿತಿ. ಈ ಸ್ಥಿತಿಯಿಂದ ಸಮಾಜವನ್ನು ಮುಕ್ತಗೊಳಿಸಬೇಕಾದ ತುರ್ತು ಅಗತ್ಯ ಇದೆ. ನಿಜವಾದ ದೇವನನ್ನು ಜನರಿಗೆ ಪರಿಚಯಿಸುವುದೇ ಇದಕ್ಕಿರುವ ಉತ್ತಮ ಪರಿಹಾರ. ಶಿರೂರು ಸ್ವಾಮೀಜಿಯವರಾಗಲಿ, ಫಾದರ್ ಆಗಲಿ, ಮೌಲಾನವಾಗಲಿ ಯಾರೂ ದೇವರಾಗಲು ಸಾಧ್ಯವಿಲ್ಲ. ದೇವನು ಮಾನವನಲ್ಲ, ಮಾನವ ದೇವನೂ ಅಲ್ಲ. ದೇವ ಈ ಎರಡರ ಆಚೆಗಿದ್ದಾನೆ.

ಶಿರೂರು ಸ್ವಾಮಿಜಿಗಳ ಸಾವು ಈ ಸತ್ಯವನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ ಅಷ್ಟೇ.


ಮಲ ಪ್ರತಿಭಟನೆಯ ಔಚಿತ್ಯ ಮತ್ತು ಹಸಿವಿನ ಪ್ರಶ್ನೆ..

      ಕಳೆದವಾರ ಎರಡು ಹೃದಯ ವಿದ್ರಾವಕ ಘಟನೆಗಳು ನಡೆದುವು. ಎರಡರ ಕೇಂದ್ರ ಬಿಂದುವೂ ಹಸಿವೇ. ಒಂದು- ದೆಹಲಿಯಲ್ಲಿ ನಡೆದರೆ, ಇನ್ನೊಂದು ನಮ್ಮ ರಾಜ್ಯದ ಹುಬ್ಬಳಿಯಲ್ಲಿ ನಡೆಯಿತು. 8 ವರ್ಷದ ಮಾನ್ಸಿ, 4 ವರ್ಷದ ಶಿಖಾ ಮತ್ತು ಎರಡು ವರ್ಷದ ಪರೂಲ್ ಎಂಬ ಮೂವರು ಮಕ್ಕಳು ದೆಹಲಿಯಲ್ಲಿ ಹಸಿವಿನಿಂದ ಕಂಗೆಟ್ಟು ಸಾವಿಗೀಡಾದರು. ಅಪ್ಪ ಕುಡುಕ. ಅಮ್ಮ ಬುದ್ಧಿಮಾಂದ್ಯೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ಘಟನೆ ಎಂಬ ನೆಲೆಯಲ್ಲಿ ಇದಕ್ಕೆ ಮಾಧ್ಯಮಗಳು ಸಾಕಷ್ಟು ಜಾಗ ಕೊಟ್ಟವು. ಆದರೆ, ರಾಜ್ಯದ ಹುಬ್ಬಳ್ಳಿಯಲ್ಲಿ ನಡೆದ ಘಟನೆಗೆ ಈ ಭಾಗ್ಯ ಲಭಿಸಲಿಲ್ಲ. ಹುಬ್ಬಳಿ-ಧಾರಾವಾಡ ಮಹಾನಗರ ಪಾಲಿಕೆಯ ಕಚೇರಿ ಎದುರು ಸುಮಾರು ಒಂದು ಸಾವಿರದಷ್ಟು ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಇವರಲ್ಲಿ ಇಬ್ಬರು ಕಾರ್ಮಿಕರು ತಮ್ಮ ಮೈ ಮೇಲೆ ಮಲವನ್ನು ಸುರಿದು ಆಕ್ರೋಶ ವ್ಯಕ್ತಪಡಿಸಿದರು. ನಾಲ್ಕು ತಿಂಗಳಿನಿಂದ ಬಾಕಿ ಇರಿಸಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂಬ ಪ್ರಮುಖ ಬೇಡಿಕೆಯೊಂದಿಗೆ ಇನ್ನಿತರ ಕೆಲವು ಬೇಡಿಕೆಗಳನ್ನೂ ಅವರು ಮುಂದಿಟ್ಟರು. ಮೇಲಿನ ಈ ಎರಡೂ ಘಟನೆಗಳು ಮಾಧ್ಯಮಗಳಲ್ಲಿ ಒಂದೇ ದಿನ ಪ್ರಕಟವಾದುವು.
      ಬಾಹ್ಯ ನೋಟಕ್ಕೆ ಹಸಿವಿನಿಂದಾದ ಸಾವು ಮತ್ತು ಮಲ ಸುರಿದು ಮಾಡಿದ ಪ್ರತಿಭಟನೆ ಸಮಾನವಾಗಿ ಕಾಣುವುದಿಲ್ಲ. ಮಲವನ್ನು ಮೈ ಮೇಲೆ ಸುರಿದು ಪ್ರತಿಭಟಿಸುವುದು ಎಷ್ಟು ಸಮರ್ಥನೀಯ ಎಂಬ ಪ್ರಶ್ನೆಯೂ ಇದೆ. ನಿಜ, ಪ್ರತಿಭಟನೆ ಎಂಬುದೂ ಒಂದು ಮಾಧ್ಯಮ. ತಮ್ಮ ಬೇಡಿಕೆಗಳನ್ನೋ ತಮ್ಮ ಮೇಲಾದ ಅನ್ಯಾಯವನ್ನೋ ತೆರೆದಿಡುವುದಕ್ಕೆ ಈ ಮಾಧ್ಯಮವನ್ನು ಜನರು ಬಳಸಿಕೊಳ್ಳುತ್ತಾರೆ. ಪುರಾತನ ಕಾಲದಿಂದಲೂ ಇದು ನಡೆದು ಬಂದ ಕ್ರಮ. ಪುರಾತನ ಕಾಲದಲ್ಲಿ ಈಗಿನಂಥ ವ್ಯವಸ್ಥೆ ಇದ್ದಿರಲಿಲ್ಲ. ಮೇಲ್ವರ್ಗ-ಕೆಳವರ್ಗ, ಕರಿಯ-ಬಿಳಿಯ, ಮಾಲಿಕ-ಕಾರ್ಮಿಕ, ದಣಿ-ಒಕ್ಕಲು, ಯಜಮಾನ-ಗುಲಾಮ.. ಇತ್ಯಾದಿ ಭೇದಗಳಿಗೆ ತಕ್ಕಂತೆ ಪ್ರತಿಭಟನಾ ವಿಧಾನದಲ್ಲೂ ವ್ಯತ್ಯಾಸಗಳಿದ್ದುವು. ಯಜಮಾನನ ಎದುರು ಗುಲಾಮನೋರ್ವ ಧ್ವನಿ ಎತ್ತರಿಸಿ ಪ್ರತಿಭಟನೆ ಮಾಡುವುದು ಹಿಂದಿನ ಕಾಲದಲ್ಲಿ ಅತ್ಯಂತ ಅಪಾಯಕಾರಿ. ಆತನ ಜೀವಕ್ಕೇ ಕುತ್ತು ತಂದುಕೊಳ್ಳುವ ಪ್ರತಿಭಟನಾ ವಿಧಾನ ಅದು. ಆದ್ದರಿಂದ ಗುಲಾಮ ತನ್ನ ಪ್ರತಿಭಟನೆಯನ್ನು ಮೌನವಾಗಿಯೋ, ಕಣ್ಣೀರಿಳಿಸಿಯೋ ವ್ಯಕ್ತಪಡಿಸಿರಬಲ್ಲ. ಕೆಳವರ್ಗದ ವ್ಯಕ್ತಿಯೋರ್ವ ಮೇಲ್ವರ್ಗದ ವಿರುದ್ಧ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುವಾಗಲೂ ಇಂಥ ಸುರಕ್ಷತಾ ವಿಧಾನಕ್ಕೆ ಮೊರೆ ಹೋಗಿರಬಲ್ಲ. ಆದರೆ ಆಧುನಿಕ ಕಾಲದಲ್ಲಿ ಕಾರ್ಮಿಕರು, ಅಧಿಕಾರಿಗಳು ಎಲ್ಲರೂ ತಂತಮ್ಮ ಹಕ್ಕುಗಳ ರಕ್ಷಣೆಗಾಗಿ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ. ಸಂಘಟಿತವಾಗಿಯೇ ತಮ್ಮ ಬೇಡಿಕೆಗಳನ್ನು ವ್ಯವಸ್ಥೆಯ ಮುಂದಿಡುತ್ತಿದ್ದಾರೆ. ಇದು ಆಕ್ಷೇಪಾರ್ಹವೂ ಅಲ್ಲ. ಆದರೆ ಮೈ ಮೇಲೆ ಮಲ ಸುರಿದುಕೊಂಡು ಪ್ರತಿಭಟಿಸುವುದು ಒಂದು ರೀತಿಯಲ್ಲಿ ವಿಲಕ್ಷಣವಾದ ಮತ್ತು ವಿಪರೀತವಾದ ಕ್ರಮ ಎಂದೇ ಹೇಳಬೇಕು. ಕೆಲವೊಮ್ಮೆ ಪ್ರತಿಭಟನೆಗಳು ಸುದ್ದಿಗೀಡಾಗುವುದೇ ಅದರ ವಿಲಕ್ಷಣತೆಯಿಂದ. ಸಾಮಾನ್ಯ ಪ್ರತಿಭಟನೆಗೆ ಸಿಗುವ ಪ್ರಚಾರಕ್ಕಿಂತ ಹೆಚ್ಚಿನ ಪ್ರಚಾರವನ್ನು ಮಾಧ್ಯಮಗಳು ವಿಲಕ್ಷಣ  ಪ್ರತಿಭಟನೆಗಳಿಗೆ ನೀಡುತ್ತವೆ ಎಂಬ ನಂಬಿಕೆಯೂ ಮೈ ಮೇಲೆ ಮಲ ಸುರಿದವರಲ್ಲಿ ಇದ್ದಿರಬಹುದು. ಈ ಬಗೆಯ ಪ್ರತಿಭಟನೆಯನ್ನು ನಿರುತ್ತೇಜಿಸುತ್ತಲೇ ಆ ಪ್ರತಿಭಟನಾಕಾರರು ಎತ್ತಿರುವ ಪ್ರಶ್ನೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ಪೌರ ಕಾರ್ಮಿಕರೆಂದರೆ, ಅತ್ಯಂತ ಕಟ್ಟಕಡೆಯಲ್ಲಿ ನಿಲ್ಲುವ ಮನುಷ್ಯರು. ಅವರಿಗಿಂತ ಕೆಳಗೆ ಕಾರ್ಮಿಕ ವರ್ಗವೊಂದು ಇಲ್ಲ. ಆದರೆ ಇವರಿಗಿಂತ ಮೇಲೆ ಬೇರೆ ಬೇರೆ ಅಧಿಕಾರಿಗಳಿದ್ದಾರೆ. ಅವರೆಲ್ಲರ ವೇತನಗಳೂ ಪೌರ ಕಾರ್ಮಿಕರಿಗೆ ಹೋಲಿಸಿದರೆ ದುಪ್ಪಟ್ಟೋ ಮೂರ್ಪಟ್ಟೋ ಆಗಿರುತ್ತದೆ. ವಿಷಾದ ಏನೆಂದರೆ,

      ದುಬಾರಿ ವೇತನ ಪಡೆಯುವ ಅಧಿಕಾರಿಗಳಿಗೆ ಕ್ಲಪ್ತ ಸಮಯದಲ್ಲಿ ವೇತನ ಪಾವತಿಸುವ ನಮ್ಮ ವ್ಯವಸ್ಥೆಯು ಜುಜುಬಿ ವೇತನ ಪಡೆಯುವ ಪೌರ ಕಾರ್ಮಿಕರನ್ನು ಸತಾಯಿಸುತ್ತದೆ. ಉನ್ನತ ಅಧಿಕಾರಿಗಳಿಗೆ ಸಮಾಜದಲ್ಲಿ ವಿಶ್ವಾಸಾರ್ಹ ಗುರುತು ಇರುತ್ತದೆ. ಆ ಗುರುತೇ ಅವರಿಗೆ ಸಾಲವನ್ನೂ ಲಭ್ಯವಾಗಿಸುತ್ತದೆ. ಆಹಾರ ವಸ್ತುಗಳ ಖರೀದಿ ಸಹಿತ ಎಲ್ಲ ಸಂದರ್ಭಗಳಲ್ಲೂ ಈ ಗುರುತು ಅವರ ನೆರವಿಗೆ ಬರುತ್ತದೆ. ಆದರೆ ಪೌರ ಕಾರ್ಮಿಕರು ಹಾಗಲ್ಲ. ಜುಜುಬಿ ವೇತನವು ಅವರ ಮೊದಲ ಶತ್ರು. ಗುತ್ತಿಗೆ ಕಾರ್ಮಿಕರು ಎಂಬುದು ಇನ್ನೊಂದು ಶತ್ರು. ಈ ಗುರುತು ಅವರಿಗೆ ಸಾಲ ಲಭ್ಯವಾಗಿಸುವಾಗಲೂ ಅಡ್ಡ ಬರುತ್ತದೆ. ಆಹಾರ ವಸ್ತುಗಳ ಖರೀದಿಯ ವೇಳೆಯಲ್ಲೂ ಸಾಲ ಸಿಗದಂತೆ ತಡೆಯುತ್ತದೆ. ಆದ್ದರಿಂದ, ವ್ಯವಸ್ಥೆಯ ಪಟ್ಟಿಯಲ್ಲಿ ಕಟ್ಟಕಡೆಯ ಉದ್ಯೋಗಿಗಳಾಗಿ ಗುರುತಿಸಿಕೊಂಡಿರುವ ಕಾರ್ಮಿಕರಿಗೆ ಸಕಾಲದಲ್ಲಿ ವೇತನ ಪಾವತಿಸಬೇಕಾದ ಜರೂರತ್ತು ವ್ಯವಸ್ಥೆಯ ಮೇಲಿದೆ. ಮೈಮೇಲೆ ಮಲ ಸುರಿದ ಕ್ರಮವನ್ನು ಪ್ರಶ್ನಿಸುವ ಭರದಲ್ಲಿ ಅವರೆತ್ತಿದ ಪ್ರಶ್ನೆಯನ್ನು ನಾವು ಲಘುವಾಗಿಸಿ ಪರಿಗಣಿಸಬಾರದು. ಪ್ರತಿಭಟನಾ ವಿಧಾನ ಆಕ್ಷೇಪಾರ್ಹವೇ ಆಗಿರಬಹುದು. ಆದರೆ, ಅಂಥದ್ದೊಂದು  ಆಕ್ಷೇಪಾರ್ಹ ಪ್ರತಿಭಟನೆಗೆ ಅವರನ್ನು ಒತ್ತಾಯಿಸಿದ್ದು ನಮ್ಮ ವ್ಯವಸ್ಥೆಯೇ ಎಂಬುದು ನಮ್ಮ ಗಮನದಲ್ಲಿರಬೇಕು. ಸಾಮಾನ್ಯವಾಗಿ, ಪ್ರತಿಭಟನಾಕಾರರ ಇಂಥ ಅತಿರೇಕದ ವಿಧಾನವನ್ನೇ ಮುಖ್ಯವಾಗಿಸಿ ಅವರು ಎತ್ತಿರುವ ಪ್ರಶ್ನೆಯನ್ನು ವ್ಯವಸ್ಥೆ ನಗಣ್ಯವಾಗಿಸುವುದಿದೆ. ದೆಹಲಿಯಲ್ಲಿ, ಸಾವಿಗೀಡಾದ ಮೂರು ಮಕ್ಕಳ ಪ್ರಕರಣದಲ್ಲೂ ಇಂಥದ್ದೊಂದು ಅಡ್ಡ ಸಮರ್ಥನೆಯನ್ನು ಮಾಡಲಾಗುತ್ತಿದೆ. ಅಪ್ಪ ಕುಡುಕ ಮತ್ತು ಅಮ್ಮ ಮನೋರೋಗಿ ಅನ್ನುವುದು ಮೂರು ಮಕ್ಕಳ ಹಸಿವನ್ನು ಸಮರ್ಥಿಸಿಕೊಳ್ಳುವುದಕ್ಕೆ ಕಾರಣ ಆಗಬಹುದೇ? ಹಾಗಂತ, ಆ ಕುಟುಂಬ ನಿರ್ಜನ ಪ್ರದೇಶದಲ್ಲೋ  ಕಾಡಲ್ಲೋ ಇರಲಿಲ್ಲ. ಅಕ್ಕ-ಪಕ್ಕ ಮನೆಗಳಿದ್ದುವು. ಆ ಮನೆಗಳಿಗೆ ಆ ಮಕ್ಕಳ ಅಳು ಕೇಳಿಸಿಯೇ ಇರಲಿಲ್ಲ ಎಂದು ನಂಬುವುದು ದಡ್ಡತನವಾದೀತು. ನಿಜವಾಗಿ, ಜವಾಬ್ದಾರಿ ಎಂಬುದು ಸರಕಾರಕ್ಕೆ ಮಾತ್ರ ಇರುವುದಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಇರುತ್ತದೆ. ತನ್ನ ಅಕ್ಕ-ಪಕ್ಕದ ಮನೆಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಕಾಳಜಿ ಮತ್ತು ಕಳಕಳಿ ಇರಲೇಬೇಕು. ತಾನಾಯಿತು, ತನ್ನ ಮನೆಯಾಯಿತು ಅನ್ನುವ ರೀತಿಯಲ್ಲಿ ಬದುಕುವುದು ಜವಾಬ್ದಾರಿಯುತ ನಾಗರಿಕನ ಗುರುತಲ್ಲ. ತನ್ನ ಅಕ್ಕಪಕ್ಕದಲ್ಲಿ ಏನಾಗುತ್ತಿದೆ ಅನ್ನುವ ಬಗ್ಗೆ ಗಮನವಿಟ್ಟುಕೊಳ್ಳಬೇಕಾದ ಅಗತ್ಯ ಪ್ರತಿಯೊಬ್ಬ ನಾಗರಿಕನ ಮೇಲಿದೆ.
    ನಿಜವಾಗಿ, ದೌರ್ಜನ್ಯ, ಅನ್ಯಾಯ, ಅತ್ಯಾಚಾರ ಮತ್ತು ಹಸಿವುಗಳು ತುಂಬಿರುವ ಸಾಮಾಜಿಕ ವಾತಾವರಣದಲ್ಲಿ ನಾವು ಹೇಗೆ ಬದುಕಬೇಕು ಎಂಬುದನ್ನು ಪ್ರಾಣತ್ಯಾಗದ ಮೂಲಕ  ಆ ಮೂವರು ಕಂದಮ್ಮಗಳು ನಮ್ಮನ್ನು ಎಚ್ಚರಿಸಿ ಹೋಗಿವೆ. ನಿಮ್ಮ ಹೊಟ್ಟೆಯನ್ನಷ್ಟೇ ತಣಿಸಿದರೆ ಸಾಲದು, ಉಳಿದವರ ಹೊಟ್ಟೆಯ ಬಗೆಗೂ ಕಾಳಜಿ ವಹಿಸಿ ಎಂಬ ಮಾರ್ಮಿಕ ಸಂದೇಶವನ್ನು ಆ ಕಂದಮ್ಮಗಳು ಸಾರಿಹೋಗಿವೆ. ಹಸಿವು ಯಾರೊಬ್ಬನ ಸೊತ್ತೂ ಅಲ್ಲ. ಅದು ಎಲ್ಲರದು ಮತ್ತು ಎಲ್ಲರೂ ಹಸಿವಿನಿಂದ ಮುಕ್ತರಾಗಿ ಬದುಕಬೇಕಾದವರು. ಆದರೆ ಮಕ್ಕಳು ದೊಡ್ಡವರಷ್ಟು ಜಾಣರಲ್ಲವಲ್ಲ. ಅವುಗಳಿಗೆ ದೊಡ್ಡವರಂತೆ ಬೇಡಲು ಬರಲ್ಲ. ಗೊತ್ತಿರುವುದು ಅಳು ಒಂದೇ. ಆ ಮಕ್ಕಳು ಅಳುತ್ತಲೇ ಪ್ರಾಣ ಬಿಟ್ಟಿವೆ. ಆ ಅಳು ನಮ್ಮೊಳಗಿನ ನಿರ್ಲಕ್ಷ್ಯ ವೆಂಬ ಕ್ರೌರ್ಯಕ್ಕೆ ಬಿದ್ದ ಏಟು ಆಗಬೇಕು. ಆ ಮಕ್ಕಳಂಥ ಮಕ್ಕಳು ಪೌರ ಕಾರ್ಮಿಕರಿಗೂ ಇದ್ದಾವು. ನಮ್ಮ ಅಕ್ಕ-ಪಕ್ಕ ಕಟ್ಟಡ ಕಾಮಗಾರಿಗಾಗಿ ಬಂದ ಕುಟುಂಬಗಳಲ್ಲೂ ಇರಬಹುದು. ಅವು ಹಸಿವಿಗೆ ಬೀಳದಂತೆ ನೋಡಿಕೊಳ್ಳಬೇಕಾದುದು ವ್ಯವಸ್ಥೆಯ ಮತ್ತು ನಮ್ಮ ಆದ್ಯತೆಯಾಗಬೇಕು. ಹಸಿವು ರೋಗವಲ್ಲ. ಸಾವೂ ಅಲ್ಲ. ಆ ಮೂರು ಮಕ್ಕಳ ಸಾವಿಗೆ ಕಾರಣ ಹಸಿವಲ್ಲ, ನಾವು.

Tuesday, 26 June 2018

ಕರ್ಕರೆ ತಟ್ಟಿದ ಬಾಗಿಲಿನ ಮುಂದೆ ಬಿ.ಕೆ. ಸಿಂಗ್?

 
       ಗೌರಿ ಲಂಕೇಶ್ ಹತ್ಯೆಯಾದ ಸಂದರ್ಭದಲ್ಲಿ ಈ ದೇಶದಲ್ಲಿ ಅದರಲ್ಲೂ ಮುಖ್ಯವಾಗಿ ಕರ್ನಾಟಕದಲ್ಲಿ ಎರಡು ರೀತಿಯ ಚರ್ಚೆಗಳು ನಡೆದಿದ್ದುವು. ಬಿಜೆಪಿಯ ಪರ ಇರುವ ಮತ್ತು ಬಲಪಂಥೀಯ ವಿಚಾರಧಾರೆಯನ್ನು ಪ್ರತಿನಿಧಿಸುವ ಗುಂಪು ಈ ಹತ್ಯೆಯ ಹೊಣೆಯನ್ನು ನಕ್ಸಲೀಯರ ತಲೆಗೆ ಕಟ್ಟಿದ್ದರೆ ಇನ್ನೊಂದು ಗುಂಪು, ಈ ಹತ್ಯೆಗೆ ತೀವ್ರ ಬಲಪಂಥೀಯ ವಿಚಾರಧಾರೆಯೇ  ಕಾರಣ ಎಂದು ವಾದಿಸಿತ್ತು. ಈ ಚರ್ಚೆಯ ಸಮಯದಲ್ಲಿ ಯಾರಲ್ಲೂ ಖಚಿತ ಪುರಾವೆಗಳು ಇದ್ದಿರಲಿಲ್ಲವಾದದ್ದರಿಂದ ಅದನ್ನು ಒಪ್ಪುವ ಮತ್ತು ತಿರಸ್ಕರಿಸುವ ಸ್ವಾತಂತ್ರ್ಯ ಎಲ್ಲರೆದುರು ಮುಕ್ತವಾಗಿಯೇ ಇತ್ತು. ಆದರೆ, ಈಗ ಅಂಥ ಅವಕಾಶ ಬಹುತೇಕ ಕಮರಿ ಹೋಗಿದೆ. ಬಂಧಿತ ಪರಶುರಾಮ್ ವಾಗ್ಮೋರೆ ತುಳಿದ ಹಾದಿಯು ಬಲಪಂಥೀಯ ವಿಚಾರಧಾರೆಯ ವ್ಯಕ್ತಿಗಳು ಮತ್ತು ಸಂಘಟನೆಗಳ ಕಡೆಗಿದೆಯೇ ಹೊರತು ನಕ್ಸಲೀಯರ ಕಡೆಗಲ್ಲ. ಬಂಧಿತರ ಕುರಿತಂತೆ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳನ್ನು ನೋಡುವಾಗ, ಮಾಲೆಗಾಂವ್, ಸಂಜೋತಾ ಎಕ್ಸ್ ಪ್ರೆಸ್, ಮಕ್ಕಾ ಮಸೀದಿ ಸ್ಫೋಟಗಳ ಆರೋಪದಲ್ಲಿ ಹೇಮಂತ್ ಕರ್ಕರೆ ಬಂಧಿಸಿದ್ದ ಆರೋಪಿಗಳ ವಿಚಾರಧಾರೆಗೂ ಗೌರಿ ಪ್ರಕರಣದಲ್ಲಿ ಬಂಧಿತರಾದವರ ವಿಚಾರಧಾರೆಗೂ ವ್ಯತ್ಯಾಸಗಳು ಕಾಣಿಸುತ್ತಿಲ್ಲ. ಸಾದ್ವಿ ಪ್ರಜ್ಞಾಸಿಂಗ್ ಸಾಗಿದ ಹಾದಿ ಎಲ್ಲಿ ಕೊನೆಗೊಳ್ಳುತ್ತೋ ಬಹುತೇಕ ಅಲ್ಲಿಯೇ ಅಥವಾ ಅದರ ಆಸು-ಪಾಸಿನಲ್ಲೇ ವಾಗ್ಮೋರೆ ಮತ್ತಿತರ ಹಾದಿಯೂ ಕೊನೆಗೊಳ್ಳುತ್ತದೆ.  ಒಂದು ಕಡೆ- ಭಯೋತ್ಪಾದನೆ, ಉಗ್ರವಾದಿ ಚಿಂತನೆಯನ್ನು ಪ್ರಬಲವಾಗಿ ಖಂಡಿಸುತ್ತಲೇ ಇನ್ನೊಂದು ಕಡೆ ಅದನ್ನೇ ಪೋಷಿಸುವ ನೀತಿಯನ್ನು ಬಲಪಂಥೀಯ ಸಂಘಟನೆಗಳು ನಿರ್ವಹಿಸುತ್ತಿವೆಯೇ ಮತ್ತು ಬಿಜೆಪಿಯನ್ನು ಅದು ರಾಜಕೀಯ ರಕ್ಷಾ ಕವಚವಾಗಿ ಬಳಸಿಕೊಳ್ಳುತ್ತಿದೆಯೇ ಅನ್ನುವ ಅನುಮಾನ ಬಲವಾಗತೊಡಗಿದೆ. ಗೌರಿ ಹತ್ಯೆಯ ಬೆನ್ನಿಗೇ ಅದರ ಹೊಣೆಯನ್ನು ನಕ್ಸಲಿಸಂಗೆ ಜೋಡಿಸಿದಂತೆಯೇ  ಈ ದೇಶದಲ್ಲಿ ನಡೆದ ಹತ್ಯಾಕಾಂಡ, ಹತ್ಯೆ, ಹಲ್ಲೆಗಳಿಗೆ ಪದೇ ಪದೇ ಇಂಥದ್ದೇ ತಿರುವನ್ನು ಕೊಟ್ಟು ತನಿಖೆಯ ದಾರಿ ತಪ್ಪಿಸಲು ಶ್ರಮಿಸಿದ ಹಲವು ಉದಾಹರಣೆಗಳು ಬಿಜೆಪಿಯ ಮೇಲಿದೆ. ಇದಕ್ಕೆ ತೀರಾ ಇತ್ತೀಚಿನ ಸೇರ್ಪಡೆ ಎಂದರೆ ದನದ ವ್ಯಾಪಾರಿ ಹುಸೇನಬ್ಬರ ಹತ್ಯೆ. ಈ ಹತ್ಯೆಯ ಆಘಾತದಿಂದ ಜಿಲ್ಲೆ ಇನ್ನೂ ಹೊರಬರುವ ಮೊದಲೇ ಸಂಸದೆ ಶೋಭಾ ಕರಂದ್ಲಾಜೆಯವರು ಹುಸೇನಬ್ಬರ ಸಾವಿಗೆ ಹೃದಯಾಘಾತ ಕಾರಣವೆಂದು ಮಾಧ್ಯಮಗಳ ಮುಂದೆ ಘೋಷಿಸಿದ್ದರು. ಬಂಧಿತರ ಬಿಡುಗಡೆಗಾಗಿ ಪ್ರತಿಭಟನೆಯನ್ನೂ ನಡೆಸಿದ್ದರು. ಈ ಬಗೆಯ ವರ್ತನೆ ಬಿಜೆಪಿ ಮತ್ತು ಸಂಘಪರಿವಾರದಿಂದ ಈ ದೇಶದಲ್ಲಿ ಪದೇ ಪದೇ ನಡೆದಿದೆ. ಗುಜರಾತ್ ಹತ್ಯಾಕಾಂಡದ ಜೊತೆ ಜೊತೆಗೇ ಹತ್ತು ಹಲವು ವದಂತಿಗಳನ್ನು ಹರಿಬಿಡುವ ಮೂಲಕ ಸಮರ್ಥಿಸುವ ಶ್ರಮ ನಡೆಯಿತು. ಮುಝಫರ್ ನಗರ್ ಹತ್ಯಾಕಾಂಡಕ್ಕೆ ಪ್ರಚೋದನೆ ಒದಗಿಸಿದ್ದೇ ಬಿಜೆಪಿ ಸಂಸದರ ಒಂದು ತಪ್ಪಾದ ವೀಡಿಯೋ! ಅಖ್ಲಾಕ್ ಎಂಬ ವೃದ್ಧನನ್ನು, ಜುನೈದ್ ಎಂಬ ಯುವಕನನ್ನು ಅಥವಾ ಈ ದೇಶದಲ್ಲಿ ನಡೆದ ಹತ್ತು ಹಲವು ಹತ್ಯಾಕಾಂಡಗಳನ್ನು ಈ ವಿಚಾರಧಾರೆಯ ಮಂದಿ ಯಾವುದೋ ಒಂದು ಬಿಂದುವಿನಲ್ಲಿ ನಿಂತು ಸಮರ್ಥಿಸಿಕೊಂಡರು. ಅದಕ್ಕೆ ಪೂರಕವಾದ ತಿರುವುಗಳನ್ನು ಮಂಡಿಸಿ ಚರ್ಚೆಯ ದಿಕ್ಕು ತಪ್ಪಿಸಿದರು. ಇದೀಗ ಈ ಎಲ್ಲವುಗಳನ್ನು ಒಂದು ಕಡೆ ಹರಡಿಟ್ಟುಕೊಂಡು ತಳಸ್ಪರ್ಶಿ ಅಧ್ಯಯನ ನಡೆಸಬೇಕಿದೆ. ಮುಸ್ಲಿಮರು ಮತ್ತು ಬಲಫಂಥೀಯ ವಿಚಾರಧಾರೆಯನ್ನು ಪ್ರಶ್ನಿಸುವವರ ಹತ್ಯೆ ನಡೆದಾಗಲೆಲ್ಲ ಬಿಜೆಪಿ ತಕ್ಷಣ ರಂಗಪ್ರವೇಶಿಸುವುದು ಮತ್ತು ಆ ಹತ್ಯೆ-ಹತ್ಯಾಕಾಂಡಗಳಿಗೆ ವಿಚಿತ್ರ ತಿರುವನ್ನು ಕೊಟ್ಟು ಸಮರ್ಥಿಸುವುದರ ಹಿಂದೆ ಬರೇ ರಾಜಕೀಯ ಉದ್ದೇಶವಷ್ಟೇ ಇದೆಯೇ ಅಥವಾ ತನ್ನ ಬೆನ್ನೆಲುಬಾಗಿರುವ ಸಂಘಟನೆಗಳನ್ನು ಕಾನೂನಿನ ಕೈಗಳಿಂದ ರಕ್ಷಿಸುವ ಕಾನೂನು ವಿರೋಧಿ ಉದ್ದೇಶವೂ ಇರಬಹುದೇ? ಹುಸೇನಬ್ಬರು ಹತ್ಯೆಗೀಡಾದ ತಕ್ಷಣ ಅದನ್ನು ಹೃದಯಾಘಾತದ ಸಾವು ಎಂದು ಸಂಸದೆ ಹೇಳಲು ಏನು ಕಾರಣ? ಮರಣೋತ್ತರ ಪರೀಕ್ಷಾ ವರದಿ ಬರುವ ಮೊದಲೇ ಅವರು ಹಾಗೊಂದು ಹೇಳಿಕೆ ಕೊಟ್ಟರೇಕೆ? ಗೌರಿಹತ್ಯೆಗೀಡಾದ ತಕ್ಷಣ ಅದಕ್ಕೆ ನಕ್ಸಲಿಸಂನ್ನು ಜೋಡಿಸಿದವರ ಉದ್ದೇಶವೇನು? ಕ್ರೌರ್ಯದ ಕಾವನ್ನು ತಣಿಸುವುದು ಮತ್ತು ಜನರಲ್ಲಿ ಗೊಂದಲವನ್ನು ಹುಟ್ಟು ಹಾಕಿ, ಅಪರಾಧಿಗಳು ತಪ್ಪಿಸಿಕೊಳ್ಳುವಂತೆ ನೋಡಿಕೊಳ್ಳುವುದೇ ಈ ಬಗೆಯ ವರ್ತನೆಗಳ ಮೂಲ ಉದ್ದೇಶವಾಗಿದೆ ಎಂದೇ ಇದನ್ನು ಅರ್ಥೈಸಬೇಕಾಗುತ್ತದೆ. ಇಂಥ ವರ್ತನೆಗಳ ಕಾರಣದಿಂದಾಗಿಯೇ ಮಾಲೆಗಾಂವ್ ಮತ್ತು ಮಕ್ಕಾ ಮಸೀದಿ ಸ್ಫೋಟದ ಆರೋಪದಲ್ಲಿ ಅಮಾಯಕ ಮುಸ್ಲಿಮ್ ಯುವಕರ ಬಂಧನವಾಯಿತು. ವರ್ಷಗಟ್ಟಲೆ ಜೈಲಲ್ಲಿ ಕೊಳೆಯಿಸಿ ಕೊನೆಗೆ ಅವರನ್ನು ಬಿಡುಗಡೆಗೊಳಿಸಲಾಯಿತು. ಒಂದುವೇಳೆ, ಕರ್ಕರೆ ಅವರು ಸಾದ್ವಿ ಪ್ರಜ್ಞಾಸಿಂಗ್ ಗುಂಪನ್ನು ಬಂಧಿಸದೇ ಇರುತ್ತಿದ್ದರೆ, ಈ ಯುವಕರು ಈಗಲೂ ಜೈಲಲ್ಲೇ ಇದ್ದಿರಬೇಕಾದ ಸಾಧ್ಯತೆಯೇ ಹೆಚ್ಚು. ಯಾವಾಗ ಬಿಜೆಪಿ ಮತ್ತು ಅದರ ಬೆಂಬಲಿಗ ಪರಿವಾರದ ದಿಕ್ಕು ತಪ್ಪಿಸುವ ತಂತ್ರಕ್ಕೆ ಕರ್ಕರೆ ಸಡ್ಡು ಹೊಡೆದು ನಿಂತರೋ ಅನುಮಾನಾಸ್ಪದ ರೀತಿಯಲ್ಲಿ ಅವರ ಹತ್ಯೆಯಾಯಿತು. ಇದೀಗ ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ಸಿಟ್ ಮುಖ್ಯಸ್ಥ ಬಿ.ಕೆ. ಸಿಂಗ್‍ರ ಬಗೆಗೂ ಇಂಥದ್ದೇ ಭಯ ವ್ಯಕ್ತವಾಗುತ್ತಿದೆ. ಈ ಪ್ರಕರಣದಲ್ಲಿ ಬಂಧಿತರೆಲ್ಲರೂ ಬಲಪಂಥೀಯ ಸಂಘಟನೆಗಳ ಕಡೆ ಮುಖ ಮಾಡಿ ಕೂತಿದ್ದಾರೆ. ನಿಜವಾಗಿ, ಇದು ಈ ಬಗೆಯ ಒಂಟಿ ಪ್ರಕರಣವಲ್ಲ. ಈ ದೇಶದಲ್ಲಿ ನಡೆದ ಮುಸ್ಲಿಮ್ ವಿರೋಧೀ ಹತ್ಯಾಕಾಂಡ ಮತ್ತು ಹತ್ಯೆ ಹಾಗೂ ಬಲಪಂಥೀಯ ವಿಚಾರಧಾರೆಯನ್ನು ಪ್ರಶ್ನಿಸುವವರ ಮೇಲೆ ನಡೆದಿರುವ ದಾಳಿಗಳ ಆರೋಪಿಗಳೆಲ್ಲರೂ ಬಿಜೆಪಿ ಮತ್ತು ಸಂಘಪರಿವಾರದ ವಿಚಾರಧಾರೆಯನ್ನೇ ಪ್ರತಿನಿಧಿಸುತ್ತಾರೆ. ಚುನಾವಣೆಯ ಸಮಯದಲ್ಲಿ ಈ ಮಂದಿ ಬಿಜೆಪಿ ಪರ ಪ್ರಚಾರ ನಡೆಸುತ್ತಾರೆ. ಬಿಜೆಪಿ ಹೊರತು ಪಡಿಸಿ ಮಿಕ್ಕುಳಿದ ಎಲ್ಲ ಜಾತ್ಯತೀತ ಪಕ್ಷಗಳ ವಿರುದ್ಧವೇ ಮಾತಾಡುತ್ತಾರೆ. ಸಂವಿಧಾನದ ಜಾತ್ಯತೀತ ಸ್ವರೂಪವನ್ನು ಪ್ರಶ್ನಿಸುತ್ತಾರೆ. ಒಂದು ರೀತಿಯಲ್ಲಿ ಬಿಜೆಪಿ ಮತ್ತು ಸಂಘಪರಿವಾರ ಏನು ಹೇಳುತ್ತದೋ ಮತ್ತು ಯಾವ ವಿಚಾರಧಾರೆಯನ್ನು ಪ್ರತಿಪಾದಿಸುತ್ತದೋ ಅದನ್ನೇ ಉರ ಹೊಡೆಯುವ ಮಂದಿಯೇ ಈ ಎಲ್ಲ ಅಪರಾಧ ಕೃತ್ಯಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಒಂದು ವೇಳೆ, ಈ ಅಪರಾಧಿಗಳಿಗೂ ಬಿಜೆಪಿ ಮತ್ತು ಪರಿವಾರಕ್ಕೂ ಸಂಬಂಧವೇ ಇಲ್ಲವೆಂದಾದರೆ, ಈ ಮಂದಿಯ ಪರ ವಹಿಸಿಕೊಂಡಂತೆ ಬಿಜೆಪಿ ಮತ್ತು ಪರಿವಾರ ಮಾತಾಡುವುದೇಕೆ? ಅವರಿಗೆ ನೆರವಾಗುವ ರೀತಿಯಲ್ಲಿ ಹೇಳಿಕೆಗಳನ್ನು ಕೊಡುತ್ತಿರುವುದೇಕೆ? ಪಕ್ಷದ ಜೊತೆ ಗುರುತಿಸಿಕೊಳ್ಳಲು ಅಂಥವರಿಗೆ ಬಿಜೆಪಿ ಅವಕಾಶ ನೀಡುತ್ತಿರುವುದೇಕೆ?
     ಮಾಲೆಗಾಂವ್, ಮಕ್ಕಾ ಮಸೀದಿ ಮತ್ತು ಸಂಜೋತಾ ಎಕ್ಸ್ ಪ್ರೆಸ್ ಸ್ಫೋಟದ ಮೂಲವನ್ನು ಹುಡುಕುತ್ತಾ ಕರ್ಕರೆಯವರು ಎಲ್ಲಿಗೆ ಬಂದು ತಲುಪಿದ್ದರೋ ಬಹುತೇಕ ಅಲ್ಲಿಗೇ ಗೌರಿ ಲಂಕೇಶ್ ತನಿಖಾ ಸಂಸ್ಥೆ ಬಂದು ತಲುಪಿರುವಂತಿದೆ. ಐಜಿಪಿ ಬಿ.ಕೆ. ಸಿಂಗ್ ಅವರು ಕರ್ಕರೆಯವರು ತೆರೆಯಲು ಪ್ರಯತ್ನಿಸಿದ್ದ ಅದೇ ಬಾಗಿಲನ್ನು ತೆರೆಯುವ ಸಾಹಸಕ್ಕೆ ಮುಂದಾಗಿರುವಂತಿದೆ. ಇದೊಂದು ಸವಾಲು. ಈ ಸವಾಲನ್ನು ಎದುರಿಸುವ ಹಂತದಲ್ಲಿ ಕರ್ಕರೆ ಅನುಮಾನಸ್ಪದವಾಗಿ ಹತ್ಯೆಗೀಡಾದರು. ಆದ್ದರಿಂದ, ಬಿ.ಕೆ. ಸಿಂಗ್ ಅವರು ಆ ಬಾಗಿಲನ್ನು ತೆರೆಯಲು ಯಶಸ್ವಿಯಾಗುವರು ಎಂದು ಈಗಲೇ ಹೇಳುವಂತಿಲ್ಲ. ನಿಜವಾಗಿ, ವಾಗ್ಮೋರೆ ಬರೇ ವ್ಯಕ್ತಿಯಲ್ಲ, ಅದೊಂದು ವಿಚಾರಧಾರೆ. ಆ ವಿಚಾರಧಾರೆ ವಾಗ್ಮೋರೆಯಂಥ ಬಡಪಾಯಿ ಯುವಕನ ಕೈಗೂ ಬಂದೂಕು ಹಿಡಿಸುವಷ್ಟು ಪ್ರಭಾವಶಾಲಿ. ಪಾಕಿಸ್ತಾನದ ಧ್ವಜವನ್ನು ಭಾರತದಲ್ಲಿ ಹಾರಾಡಿಸುವಷ್ಟೂ ಅಪಾಯಕಾರಿ. ಧರ್ಮವು ಅಧರ್ಮವೆಂದು ಸಾರಿದ ಕೃತ್ಯವನ್ನೇ `ಧರ್ಮ ಸೇವೆ’ಯೆಂದು ನಂಬಿಸುವಷ್ಟು ಸಾಮರ್ಥ್ಯ  ಆ ವಿಚಾರಧಾರೆಗಿದೆ. ಈ ಅಮಲಿನಿಂದ ವಾಗ್ಮೋರೆಯಂಥ ಯುವಕರನ್ನು ಬಿಡಿಸಿ ಸಮಾಜದ ಮುಖ್ಯವಾಹಿನಿಯಲ್ಲಿ ಲೀನಗೊಳಿಸಲು ಬಂಧನ, ಶಿಕ್ಷೆಗಳಷ್ಟೇ ಸಾಲವು. ಆ ವಿಚಾರಧಾರೆ ಎಷ್ಟು ಅಪಾಯಕಾರಿ ಮತ್ತು ಅಧರ್ಮಕಾರಿ ಅನ್ನುವುದನ್ನು ಮಾಧ್ಯಮಗಳು ಪದೇ ಪದೇ ಸಮಾಜದ ಮುಂದಿಡಬೇಕು.  ಆ ವಿಚಾರಧಾರೆಗೆ ಆಕರ್ಷಿತರಾಗದಂತೆ ಧರ್ಮಗುರುಗಳು ಯುವಕರಿಗೆ ಮಾರ್ಗದರ್ಶನ ಮಾಡಬೇಕು. ಹತ್ಯೆ, ಹತ್ಯಾಕಾಂಡಗಳು ಧರ್ಮ ರಕ್ಷಣೆಯ ಪರಿಧಿಯೊಳಗೆ ಬರದಂತೆ ಮತ್ತು ಧರ್ಮ ದ್ರೋಹದ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವಂತೆ ಮಾಡುವ ಜಾಗೃತಿ ಕಾರ್ಯಕ್ರಮಗಳನ್ನು ಎಲ್ಲ ಧರ್ಮದವರೂ ಜೊತೆ ಸೇರಿ ಕೈಗೊಳ್ಳಬೇಕು.

Wednesday, 20 June 2018

ಟೋಪಿ-ಬುರ್ಖಾಧಾರಿಗಳನ್ನು ಬಹಿಷ್ಕರಿಸುವ ಶಾಸಕ ಮತ್ತು ಜನತಂತ್ರ

     ಕಾಂಗ್ರೆಸ್ ಪಕ್ಷದ ಶಾಸಕ, ಬಿಜೆಪಿ ಶಾಸಕ, ಕಮ್ಯುನಿಸ್ಟ್ ಪಕ್ಷದ ಶಾಸಕ, ಮುಸ್ಲಿಮ್ ಲೀಗ್ ಪಕ್ಷದ ಶಾಸಕ.. ಎಂದರೆ ಏನು? ಚುನಾವಣೆಯಲ್ಲಿ ಆ ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದವ ಎಂಬ ಗುರುತು ಚಿಹ್ನೆಯೋ ಅಥವಾ ಆ ಪಕ್ಷದವರಿಗೆ ಮಾತ್ರ ಸಂಬಂಧಿಸಿದವ ಎಂಬ ನಾಮ ಸೂಚಕವೋ? ಓರ್ವ ಶಾಸಕ ಅಥವಾ ಸಂಸದನ ಬಗ್ಗೆ ಈ ದೇಶದ ಸಂವಿಧಾನ ಏನು ಹೇಳುತ್ತದೆ? ಆತ/ಕೆ ಜನಪ್ರತಿನಿಧಿಯೋ ಅಥವಾ ಧರ್ಮ ಪ್ರತಿನಿಧಿಯೋ? ಒಂದು ಕ್ಷೇತ್ರದಿಂದ ಆರಿಸಿ ಬರುವ ವ್ಯಕ್ತಿಯ ಮೇಲೆ ಈ ದೇಶದ ಸಂವಿಧಾನ ಹೊರಿಸುವ ಜವಾಬ್ದಾರಿಗಳೇನು? ಆತ ನಿರ್ದಿಷ್ಟ ಧರ್ಮದ ಅನುಯಾಯಿಗಳಿಗೆ ಬಹಿಷ್ಕಾರ ಘೋಷಿಸಬಹುದೇ? ನಿರ್ದಿಷ್ಟ ಧರ್ಮದ ಅನುಯಾಯಿಗಳಿಗಾಗಿ ಮಾತ್ರ ತಾನಿದ್ದೇನೆ ಎಂದು ಹೇಳಬಹುದೇ? ಇದರ ಸಾಂವಿಧಾನಿಕ ವಿಧಿ ವಿಧಾನಗಳು ಏನೇನು?
    ಇದು, ವಿಜಯಪುರದ ನಗರ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರೊಬ್ಬರ ಸಮಸ್ಯೆಯಲ್ಲ. ಇಂಥ ಪ್ರಶ್ನೆಗಳನ್ನು ಹುಟ್ಟು ಹಾಕಿದವರಲ್ಲಿ ಅವರು ಮೊದಲಿಗರೂ ಅಲ್ಲ. “ಬುರ್ಖಾ ಮತ್ತು ಟೋಪಿಧಾರಿಗಳು ನನ್ನ ಕಚೇರಿಗೆ ಬರುವುದು ಬೇಡ. ನನಗೆ ಮತ ಹಾಕಿರುವುದು ಹಿಂದೂಗಳು. ಅವರಿಗಷ್ಟೇ ನಾನು ಕೆಲಸ ಮಾಡುವೆ. ಹಿಂದೂ ಸಮುದಾಯದವರನ್ನು ಬಿಟ್ಟು ಬೇರೆ ಯಾರಿಗೂ ಕೆಲಸ ಮಾಡಿಕೊಡದಂತೆ ಮಹಾನಗರ ಪಾಲಿಕೆ ಸದಸ್ಯರಿಗೆ ತಾಕೀತು ಮಾಡಿರುವೆ..’ ಎಂದು ಕಾರ್ಯಕ್ರಮವೊಂದರಲ್ಲಿ ಅವರು ನೀಡಿರುವ ಹೇಳಿಕೆಯು ದೊಡ್ಡ ಸುದ್ದಿಯಾಗದಿರುವುದಕ್ಕೆ ಕಾರಣ ಈ ವಾಸ್ತವವೇ. ಅವರದೇ ಪಕ್ಷದ ಸಂಸದ ಅನಂತ ಕುಮಾರ್ ಹೆಗಡೆಯವರು ಈ ಹಿಂದೆ ‘ಮುಸ್ಲಿಮರ ಮತವೇ ಬೇಡ’ ಎಂದು ಹೇಳಿಕೊಂಡಿದ್ದರು. ಅಲ್ಲದೇ ವಿವಿಧ ರಾಜ್ಯಗಳಲ್ಲಿರುವ ಬಿಜೆಪಿಯ ಸಂಸದರು ಮತ್ತು ಶಾಸಕರು ಮುಸ್ಲಿಮರನ್ನು ಅವಹೇಳನಗೊಳಿಸುವ ಮತ್ತು ಅಸ್ಪೃಶ್ಯರಂತೆ ಕಾಣುವ ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಬಸವನಗೌಡ ಪಾಟೀಲ್‍ರು ಅವೇ ಮನಸ್ಥಿತಿಯನ್ನು ತುಸು ನಿಷ್ಠುರವಾಗಿ ಮತ್ತು ಮುಲಾಜಿಲ್ಲದೇ ವ್ಯಕ್ತಪಡಿಸಿದ್ದಾರೆ ಎಂದಷ್ಟೇ ಹೇಳಬಹುದು. ಅಷ್ಟಕ್ಕೂ,
ಬಿಜೆಪಿಯು ಮುಸ್ಲಿಮರ ವಿರುದ್ಧ ಒಂದು ಬಗೆಯ ತಿರಸ್ಕಾರ ನೋಟವನ್ನು ಬೀರಲು ಕಾರಣವೇನು? ಟೋಪಿಧಾರಿಗಳು ಮತ್ತು ಬುರ್ಖಾಧಾರಿಗಳು ಎಂಬ ಪದಪ್ರಯೋಗ ಅಥವಾ ಮುಸ್ಲಿಮರ ಓಟು ಬೇಡ ಎಂಬ ಹೇಳಿಕೆಯು ಒಟ್ಟು ಮುಸ್ಲಿಮ್ ಸಮುದಾಯವನ್ನು ಸಂಬೋಧಿಸುತ್ತದೆಯೇ ಹೊರತು ನಿರ್ದಿಷ್ಟ ವ್ಯಕ್ತಿ-ಶಕ್ತಿಗಳನ್ನಲ್ಲ. ಮುಸ್ಲಿಮ್ ಸಮುದಾಯ ಬಿಜೆಪಿಗೆ ಏನು ತೊಂದರೆ ಮಾಡಿದೆ? ಮುಸ್ಲಿಮ್ ಸಮುದಾಯದ ರಾಜಕೀಯ ಒಲವು ಬಿಜೆಪಿಯ ಕಡೆಗಿಲ್ಲ ಅನ್ನುವುದು ಈ ಬಗೆಯ ಹೇಳಿಕೆಗೆ ಕಾರಣ ಎಂದಾದರೆ ಈ ಪಟ್ಟಿಯಲ್ಲಿ ಸೇರಬೇಕಾದ ಸಮುದಾಯಗಳು ಇನ್ನೂ ಇವೆಯಲ್ಲ- ಕ್ರೈಸ್ತರು, ದಲಿತರು, ಆದಿವಾಸಿಗಳು, ಸಿಕ್ಖರು, ಕುರುಬರು.. ಇವರ ಬಗ್ಗೆ ಬಿಜೆಪಿಯೇಕೆ ಇದೇ ಧಾಟಿಯಲ್ಲಿ ಮಾತಾಡುವುದಿಲ್ಲ? ಬಿಜೆಪಿಯತ್ತ ಒಲವು ತೋರಿಸದ ಹಲವು ಸಮುದಾಯಗಳು ಈ ದೇಶದಲ್ಲಿರುವಾಗ ಕೇವಲ ಮುಸ್ಲಿಮರೇ ಯಾಕೆ ಮತ್ತೆ ಮತ್ತೆ ಗುರಿಯಾಗುತ್ತಿದ್ದಾರೆ? ಒಂದು ವೇಳೆ, ಮುಸ್ಲಿಮ್ ಸಮುದಾಯದಲ್ಲಿ ಕ್ರಿಮಿನಲ್‍ಗಳಿದ್ದಾರೆ, ಭಯೋತ್ಪಾದಕರಿದ್ದಾರೆ, ದೇಶವಿರೋಧಿಗಳಿದ್ದಾರೆ.. ಮುಂತಾದುವುಗಳು ಇದಕ್ಕೆ ಕಾರಣವೆಂದಾದರೆ, ಯತ್ನಾಳ್ ಅವರು ಮೊದಲು ತಾನು ಪ್ರತಿನಿಧಿಸುವ ಸಮುದಾಯವನ್ನೇ ಬಹಿಷ್ಕರಿಸಬೇಕಾಗುತ್ತದೆ. ಯಾಕೆಂದರೆ, ಇಂಥವು ಯಾವುದಾದರೊಂದು ಧರ್ಮಕ್ಕೆ ಸೀಮಿತವಲ್ಲ. ಒಂದು ಧರ್ಮದ ಪ್ರತಿನಿಧಿಗಳಾಗಿ ಯಾರೂ ಇಂಥ ಕೆಲಸಗಳನ್ನು ಮಾಡುವುದೂ ಇಲ್ಲ. ಬಹಳ ಮಹತ್ವಪೂರ್ಣವಾದ ಈ ದೇಶದ ರಕ್ಪಣಾ ರಹಸ್ಯಗಳೂ ಸೇರಿ ದಾಖಲೆಗಳನ್ನು ಪಾಕಿಸ್ತಾನವೂ ಸೇರಿದಂತೆ ವಿದೇಶಿ ರಾಷ್ಟ್ರಗಳಿಗೆ ನೀಡಿದವರಲ್ಲಿ ಯತ್ನಾಳ್ ಅವರು ಪ್ರತಿನಿಧಿಸುವ ಸಮುದಾಯದವರು ಮುಂಚೂಣಿಯಲ್ಲಿದ್ದಾರೆ. ಭಯೋತ್ಪಾದನೆಯಾಗಲಿ, ಅತ್ಯಾಚಾರವಾಗಲಿ, ಕಳ್ಳತನವಾಗಲಿ ಅಥವಾ ಯಾವುದೇ ಸಮಾಜ ಘಾತುಕ ಕೃತ್ಯಗಳಾಗಲಿ ಎಲ್ಲದರಲ್ಲೂ ಎಲ್ಲ ಧರ್ಮದವರ ಪಾತ್ರವಿದೆ. ಹಾಗಂತ, ಆಯಾ ಧರ್ಮಗಳನ್ನೇ ಅವಕ್ಕೆ ಹೊಣೆಯೆಂದು ಹೇಳಬಹುದೇ? ನಿಜವಾಗಿ, ಸಮಾಜಘಾತುಕ ಕೃತ್ಯಗಳನ್ನು ವೈಯಕ್ತಿಕವಾಗಿ ನೋಡಬೇಕೇ ಹೊರತು ಧಾರ್ಮಿಕವಾಗಿಯಲ್ಲ. ಈ ದೇಶದಲ್ಲಿ ನಡೆದಿರುವ ಭ್ರಷ್ಟಾಚಾರ ಮತ್ತು ಹಗರಣಗಳನ್ನೊಮ್ಮೆ ಪರಿಗಣಿಸಿ ನೋಡಿ. ಅದರಲ್ಲಿ ಟೋಪಿವಾಲಾ ಮತ್ತು ಬುರ್ಖಾಧಾರಿಗಳು ಎಷ್ಟಿದ್ದಾರೆ? ಭ್ರಷ್ಟಾಚಾರಿಗಳ ಬಹುದೊಡ್ಡ ಪಟ್ಟಿಯೊಂದು ಈ ದೇಶದಲ್ಲಿದೆ. ಬ್ಯಾಂಕ್‍ಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿ ವಿದೇಶದಲ್ಲಿ ಆರಾಮವಾಗಿ ಕುಳಿತವರೂ ಇದ್ದಾರೆ. ಇವರಲ್ಲಿ ಯತ್ನಾಳ್ ಅವರ ಟೋಪಿ ಮತ್ತು ಬುರ್ಖಾಧಾರಿಗಳ ಪಾತ್ರ ಎಷ್ಟಿದೆ? ಈ ದೇಶದ ಹಿತ ಎಲ್ಲಕ್ಕಿಂತ ಮುಖ್ಯ ಎಂದು ಹೇಳುವ ಬಿಜೆಪಿಯು ಈ ದೇಶಕ್ಕೆ ಅಹಿತ ಮಾಡಿದವರನ್ನು (ಉದಾ: ರೆಡ್ಡಿಗಳು) ಜೊತೆಯಿರಿಸಿಕೊಂಡೇ ಮತ್ತು ಇಂಥ ಅಹಿತವೆಸಗಿದ ಅಸಂಖ್ಯ ಮಂದಿ ಪ್ರತಿನಿಧಿಸುವ ಧರ್ಮವನ್ನು ತಿರಸ್ಕಾರಯೋಗ್ಯ ಎಂದು ಪರಿಗಣಿಸದೆಯೇ ಬರೇ ಮುಸ್ಲಿಮರನ್ನು ಮಾತ್ರ ಆ ಪಟ್ಟಿಯಲ್ಲಿಟ್ಟಿರುವುದು ಯಾಕಾಗಿ? ಈ ದೇಶಕ್ಕೆ ಅಹಿತ ಎಸಗಿದವರ ಹೆಸರುಗಳನ್ನು ಪ್ರಾಮಾಣಿಕವಾಗಿ ಪಟ್ಟಿ ಮಾಡಿದರೆ ಮುಸ್ಲಿಮ್ ಹೆಸರುಗಳು ಅದರಲ್ಲಿ ಅತ್ಯಂತ ಕೊನೆಯಲ್ಲಷ್ಟೇ ಸ್ಥಾನ ಪಡೆದಾವು. ಯಾಕೆಂದರೆ, ದೇಶದಲ್ಲಿ ಮುಸ್ಲಿಮರ ಒಟ್ಟು ಸಂಖ್ಯೆಯೇ ತೀರಾ ಅತ್ಯಲ್ಪ. ಅದರಲ್ಲೂ ರಾಜಕೀಯವಾಗಿ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಅವರು ಈ ದೇಶದ ಇತರ ಸಮುದಾಯಗಳಿಗೆ ಸ್ಪರ್ಧೆ ನೀಡಲಾಗದಷ್ಟು ದುರ್ಬಲರು. ಸರಕಾರದ ಆಯಕಟ್ಟಿನ ಜಾಗಗಳನ್ನು ಬಿಡಿ, ಸಾಮಾನ್ಯ ಉದ್ಯೋಗಿಗಳಾಗಿಯೂ ಅವರ ಪಾಲು ತೀರಾ ತೀರಾ ಕಡಿಮೆ. ಇದೊಂದು ವಾಸ್ತವ. ಹೀಗಿದ್ದೂ, ಬಿಜೆಪಿಯು ಮುಸ್ಲಿಮರನ್ನೇ ಗುರಿ ಮಾಡಿಕೊಂಡಿರುವುದರ ಉದ್ದೇಶವೇನು? ಒಂದು ವೇಳೆ, ಬಿಜೆಪಿಗೂ ಇಂಥ ಹೇಳಿಕೆಗಳಿಗೂ ಸಂಬಂಧವಿಲ್ಲ ಎಂದಾದರೆ, ಕನಿಷ್ಠ ಅದನ್ನು ರಾಜ್ಯ ನಾಯಕರು ಅಥವಾ ರಾಷ್ಟ್ರ ನಾಯಕರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ವ್ಯಕ್ತಪಡಿಸಬೇಕಾಗಿತ್ತು. ಅಂಥ ಹೇಳಿಕೆಗಳನ್ನು ಕೊಡುವವರನ್ನು ಪಕ್ಷದಿಂದ ಹೊರಗಿಟ್ಟು ಶಿಸ್ತಿನ ಪಾಠ ಕಲಿಸಬೇಕಾಗಿತ್ತು. ಆದರೆ ಬಿಜೆಪಿ ಅವಾವುದನ್ನೂ ಮಾಡುತ್ತಿಲ್ಲ. ಮಾತ್ರವಲ್ಲ, ಇಂಥ ಸಂದರ್ಭಗಳಲ್ಲೆಲ್ಲ ಗಾಢ ಮೌನಕ್ಕೆ ಜಾರುವುದನ್ನು ಅದು ರೂಢಿ ಮಾಡಿಕೊಂಡಿದೆ. ಈ ಮೌನವನ್ನು ಆ ಪಕ್ಷದ ಸಮ್ಮತಿಯೆಂದು ತಿಳಿದುಕೊಳ್ಳಬೇಕೋ ಅಥವಾ ಉದ್ದೇಶಪೂರ್ವಕ ಕಿವುಡುತನವೆಂದೋ?
     ಭಾರತೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶಾಸಕ ಅಥವಾ ಸಂಸದ ಜನಪ್ರತಿನಿಧಿಯಾಗುತ್ತಾನೆಯೇ ಹೊರತು ಧರ್ಮಪ್ರತಿನಿಧಿಯಲ್ಲ. ಚುನಾವಣೆಯಲ್ಲಿ ಸ್ಪರ್ಧಿಸುವವರೆಗೆ ಮಾತ್ರ ಆತ ನಿರ್ದಿಷ್ಟ ಪಕ್ಷದ ಅಭ್ಯರ್ಥಿ. ಗೆದ್ದ ಬಳಿಕ ಆತ ಆ ಕ್ಷೇತ್ರದ ಅಷ್ಟೂ ಜನರ ಪ್ರತಿನಿಧಿ. ಆ ಕ್ಷೇತ್ರದಲ್ಲಿ ತನಗೆ ಮತ ಚಲಾಯಿಸಿದವರನ್ನೂ ಚಲಾಯಿಸದವರನ್ನೂ ಸಮಾನ ರೀತಿಯಲ್ಲಿ ನೋಡಬೇಕಾದ ಹೊಣೆಗಾರಿಕೆಯನ್ನು ಆ ಗೆಲುವು ಆತನ ಮೇಲಿರಿಸುತ್ತದೆ. ಇದಕ್ಕಿರುವ ಇನ್ನೊಂದು ಆಧಾರ ಏನೆಂದರೆ, ಗೌಪ್ಯ ಮತದಾನ. ತನಗೆ ಮತ ಚಲಾಯಿಸಿದವರು ಯಾರು ಎಂಬ ವಿವರ ಅಭ್ಯರ್ಥಿಗಳ ಸಹಿತ ಯಾವ ಪಕ್ಷಕ್ಕೂ ಗೊತ್ತಾಗದಿರಲಿ ಅನ್ನುವ ಉದ್ದೇಶ ಗೌಪ್ಯ ಮತದಾನಕ್ಕಿದೆ. ಇಷ್ಟೆಲ್ಲ ಇದ್ದೂ ಯತ್ನಾಳ್ ಅವರು ಮುಸ್ಲಿಮರನ್ನು ತಿರಸ್ಕರಿಸಿ ಮಾತಾಡುತ್ತಾರೆಂದರೆ ಮತ್ತು ಅವರ ಪಕ್ಷವು ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲವೆಂದರೆ, ಅದು ದೇಶದ ಸಂವಿಧಾನ ಮತ್ತು ವೈವಿಧ್ಯ ಪರಂಪರೆಗೆ ಎಸಗುವ ದ್ರೋಹ. ಅಂದಹಾಗೆ,
    ಧರ್ಮಗಳು ರಾಜಕೀಯ ಲೆಕ್ಕಾಚಾರಕ್ಕಿಂತ ಹೊರಗಿನವು. ಒಂದು ನಿರ್ದಿಷ್ಟ ಧರ್ಮದ ಅನುಯಾಯಿಗಳಿನ್ನು ತಿರಸ್ಕಾರ ಯೋಗ್ಯರು ಎಂದು ಹೇಳುವುದರಿಂದ ಯತ್ನಾಳ್‍ರಿಗೆ ರಾಜಕೀಯ ಲಾಭ ಇದ್ದಿರಬಹುದಾದರೂ ಈ ಲಾಭದ ಅವಧಿ ದೀರ್ಘಕಾಲ ಇರಲಾರದು. ಯಾಕೆಂದರೆ, ವಿನಾ ಕಾರಣ ಒಂದು ಸಮುದಾಯವನ್ನು ಗುರಿಯಾಗಿಸುವುದು ಧರ್ಮವಿರೋಧಿ ಮತ್ತು ಪ್ರಕೃತಿ ವಿರೋಧಿಯಾಗುತ್ತದೆ. ಕೊನೆಗೆ ಪ್ರಕೃತಿಯೇ ಅಂಥವರನ್ನು ತಿರಸ್ಕರಿಸಿಬಿಡುತ್ತದೆ.


Tuesday, 12 June 2018

ಎಂಡೋ ಸಂತ್ರಸ್ತರ ಕೂಗು: ಕಿವುಡಾಗಿರುವ ಸರಕಾರ ಮತ್ತು ಪ್ರತಿಷ್ಠಿತ ನ್ಯೂಸ್ ಚಾನೆಲ್

    
ತಮಿಳುನಾಡಿನ ತೂತುಕುಡಿಗೂ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಪ್ರದೇಶಕ್ಕೂ ನಡುವೆ ಸಾಂಸ್ಕøತಿಕ, ಭಾಷಿಕ ಮತ್ತು ¸ ಸಮಾಜಿಕವಾಗಿ ಯಾವ ಸಂಬಂಧವೂ ಇಲ್ಲ. ಎರಡೂ ಪ್ರದೇಶಗಳ ಜನರ ಭಾಷೆ ಬೇರೆ. ಆಹಾರ ಬೇರೆ. ರೀತಿ-ರಿವಾಜುಗಳು ಬೇರೆ. ಆದರೆ ಬಹುತೇಕ ದೂರುಗಳು ಒಂದೇ. ತೂತುಕುಡಿಯ ಜನರು ಭವಿಷ್ಯದಲ್ಲಿ ಎದುರಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಭಯಪಟ್ಟಿದ್ದರೆ, ಕೊಕ್ಕಡ ಪ್ರದೇಶದ ಜನರು ಆರೋಗ್ಯವನ್ನು ಕೆಡಿಸಿಕೊಂಡು ಹತಾಶರಾಗಿದ್ದಾರೆ . ತೂತುಕುಡಿಯಲ್ಲಿರುವ ಜಿಂದಾಲ್ ಒಡೆತನದ ತಾಮ್ರದ ಕಾರ್ಖಾನೆಯಿಂದ ಹೊರಬಿಡಲಾಗುವ ರಾಸಾಯನಿಕಗಳು ಅಲ್ಲಿಯ ಜನರ ಆತಂಕಕ್ಕೆ ಕಾರಣವಾಗಿದ್ದರೆ, ಕೊಕ್ಕಡದಲ್ಲಿ ಎಂಡೋಸಲ್ಫಾನ್ ಎಂಬ ರಾಸಾಯನಿಕವು 3762ಕ್ಕಿಂತಲೂ ಅಧಿಕ ಮಂದಿಯ ಆರೋಗ್ಯವನ್ನೇ ಕೆಡಿಸಿಬಿಟ್ಟಿದೆ. ವರ್ಷದ ಹಿಂದೆ ಎಂಡೋಸಲ್ಫಾನ್ ಸಂತ್ರಸ್ತರ ಪ್ರತಿಭಟನೆಯನ್ನು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಭಾಗಿಯಾದ ಸಂತ್ರಸ್ತರನ್ನು ಕಂಡು ನಾಡಿನ ಜನರು ಬಾವುಕರಾಗಿದ್ದರು. ರಾಸಾಯನಿಕವೊಂದು ಜನರನ್ನು ಈ ಮಟ್ಟದಲ್ಲಿ ಜೀವಚ್ಛವವಾಗಿಸಿಬಿಡಬಹುದೇ ಅನ್ನುವ ಆತಂಕಬೆರೆತ ಪ್ರಶ್ನೆಯೊಂದನ್ನು ಆ ಸಂದರ್ಭದಲ್ಲಿ ಎತ್ತಲಾಗಿತ್ತು. ಕೊಕ್ಕಡವೂ ಸೇರಿದಂತೆ ಆಸು-ಪಾಸು ಪ್ರದೇಶಗಳಲ್ಲಿ ವಿಶಾಲವಾಗಿ ಹರಡಿರುವ ಗೇರು ಮರಗಳಿಗೆ ಸರಕಾರಿ ಗೇರು ನಿಗಮವು ಹೆಲಿಕಾಫ್ಟರ್ ಮೂಲಕ ದಶಕಗಳ ಹಿಂದೆ ಸಿಂಪಡಿಸಿದ ಎಂಡೋಸಲ್ಫಾನ್ ಎಂಬ ರಾಸಾಯನಿಕವು ಆ ಬಳಿಕ ಒಂದು ತಲೆಮಾರನ್ನೇ ಅಂಗವೈಕಲ್ಯಕ್ಕೆ ದೂಡಿತು. ಕೈ-ಕಾಲು, ಕಣ್ಣು, ಮೂಗು, ಬಾಯಿ, ತಲೆ ಇತ್ಯಾದಿ ದೇಹದ ಯಾವ ಅಂಗಾಂಗಗಳೂ ಸ್ವಸ್ಥವಾಗಿಲ್ಲದ ಮತ್ತು ತೆವಳಿಕೊಂಡೋ ಅಥವಾ ಶಾಶ್ವತವಾಗಿ ಮಲಗಿಕೊಂಡೋ ಇರುವ ಸ್ಥಿತಿಯ ದೊಡ್ಡ ಮಟ್ಟದ ಸಂತ್ರಸ್ತರ ಗುಂಪನ್ನು ಅದು ಹುಟ್ಟು ಹಾಕಿತು.
ಎಂಡೋ ವಿರೋಧಿ ಹೋರಾಟ ಸಮಿತಿಯನ್ನು ಕಟ್ಟಿಕೊಂಡು ಸಂತ್ರಸ್ತರ ಕಲ್ಯಾಣಕ್ಕಾಗಿ ಹೋರಾಡುತ್ತಿರುವ ಶ್ರೀಧರ್ ಗೌಡ ಎಂಬವರೂ ಸ್ವತಃ ಎಂಡೋಸಲ್ಫಾನ್‍ನ ಸಂತ್ರಸ್ತರಾಗಿದ್ದಾರೆ. ವಿಶೇಷ ಏನೆಂದರೆ, ಪ್ರತಿಭಟನೆಯ ಕಾರಣಕ್ಕಾಗಿ ತೂತುಕುಡಿಯು ಸುದ್ದಿಯಲಿ ್ಲರುವ ಈ ಸಂದರ್ಭದಲ್ಲಿಯೇ ಎಂಡೋಸಲ್ಫಾನ್ ಸಂತ್ರಸ್ತರೂ ಕಾಕತಾಳೀಯವೆಂಬಂತೆ ಸುದ್ದಿಯಲ್ಲಿದ್ದಾರೆ. ಎಂಡೋ ಸಂತ್ರಸ್ತರಿಗೆ ಸಂಬಂಧಿಸಿ ಸುಮಾರು 8 ತಿಂಗಳ ಹಿಂದೆ ರಾಜ್ಯ ಸರಕಾರದ ನೇತೃತ್ವದಲ್ಲಿ ಒಪ್ಪಂದವೊಂದಕ್ಕೆ ಸಹಿ ಹಾಕಲಾಗಿತ್ತು. ಸರಕಾರವನ್ನು ಹೊರತುಪಡಿಸಿ ಒಪ್ಪಂದದಲ್ಲಿ ಪಾಲ್ಗೊಂಡ ಇನ್ನೆರಡು ಸಂಸ್ಥೆಗಳೆಂದರೆ, ಸಾನಿಧ್ಯ ಎಂಬ ಸೇವಾ ಸಂಸ್ಥೆ ಮತ್ತು ಇನ್ನೊಂದು ಕನ್ನಡದ ನ್ಯೂಸ್ ಚಾನೆಲ್. ಒಪ್ಪಂದದ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆ ಯ ಉಜಿರೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗೆ ಪಾಲನಾ ಕೇಂದ್ರವೊಂದನ್ನು ಸರಕಾರ ನಿರ್ಮಿಸಿ ಕೊಡಬೇಕು. ಸಾನಿಧ್ಯ ಸೇವಾ ಸಂಸ್ಥೆಯು ಈ ಪಾಲನಾ ಕೇಂದ್ರಕ್ಕೆ ಸಿಬ್ಬಂದಿಗಳ ವ್ಯವಸ್ಥೆ ಮಾಡುವುದು, ಫಿಸಿಯೋ ಥೆರಪಿ ಮತ್ತು ಸಂತ್ರಸ್ತರಿಗೆ ಸೂಕ್ತ ತರಬೇತಿಯ ವ್ಯವಸ್ಥೆ ಮಾಡುವ ಹೊಣೆಯನ್ನು ವಹಿಸಿಕೊಂಡಿತ್ತು. ಟಿ.ವಿ. ಚಾನೆಲ್ ಈ ಸಂತ್ರಸ್ತರ ಪಾಲನೆಗಾಗಿ 1 ಕೋಟಿ ರೂಪಾಯಿಯನ್ನು ನೀಡುವ ವಾಗ್ದಾನವನ್ನು ನೀಡಿತ್ತು. ಎಂಡೋಪೀಡಿತರಿಗಾಗಿ 2012ರಲ್ಲಿ ಕೈಗೊಂಡ ಅಭಿಯಾನದಲ್ಲಿ ಈ ಮೊತ್ತವನ್ನು ¸ ಸಂಗ್ರಹಿಸಲಾಗಿತ್ತು. ವಿಷಾದ ಏನೆಂದರೆ, ಒಪ್ಪಂದದ ಆಚೆಗೆ ಯಾವ ಬೆಳವಣಿಗೆಗಳೂ ಆಗಿಲ್ಲ. 40 ಸಂತ್ರಸ್ತರ ಪಾಲಿಗೆ ಅಭಯ ಕೇಂದ್ರವಾಗ¨ ಬೇಕಿದ್ದ ಪಾಲನಾ ಕೇಂದ್ರಕ್ಕೆ ಕಟ್ಟಡವೇ ಇನ್ನೂ ಸಿದ್ಧಗೊಂಡಿಲ್ಲ. ಜಿಲ್ಲಾ ಆರೋಗ್ಯ ಅಧಿಕಾರಿಯವರು ಕಟ್ಟಡ ಸಿದ್ಧಗೊಂಡಿದೆ ಮತ್ತು ಚಾನೆಲ್ ಸಹಕರಿಸುತ್ತಿಲ್ಲ ಎನ್ನುವಾಗ ಎಂಡೋ ವಿರೋಧಿ ಹೋರಾಟ ಸಮಿತಿಯ ಶ್ರೀಧರ್ ಗೌಡರು ಸರಕಾರ ಮತ್ತು ಚಾನೆಲ್ ಎರಡನ್ನೂ ವಿಳಂಬಕ್ಕೆ ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಇದು ಎಂಡೋ ಸಂತ್ರಸ್ತರ ಸದ್ಯದ ಸ್ಥಿತಿಗತಿ. ಸುಮಾರು ಎರಡು ದಶಕಗಳ ಹಿಂದೆ ಗೇರು ಕೃಷಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಸರಕಾರ ಸಿಂಪಡಿಸಿದ ರಾಸಾಯನಿಕವೊಂದು ಎರಡು ದಶಕಗಳ ಬಳಿಕವೂ ಜನರನ್ನು ಬಿಡದೇ ಕಾಡುತ್ತಿರುವ ಈ ಬಿಂದುವಿನಲ್ಲಿ ನಿಂತು, ಒಮ್ಮೆ ತೂತುಕುಡಿಯನ್ನೂ ಇನ್ನೊಮ್ಮೆ ನಮ್ಮ ವ್ಯವಸ್ಥೆಯನ್ನೂ ಎದುರಿಟ್ಟು ನೋಡಿ. ಎಂಡೋಸಲ್ಫಾನನ್ನು ಸಿಂಪಡಿಸಲು ಅನುಮತಿ ನೀಡಿದ ಸರಕಾರ ಈಗಿಲ್ಲ. ಆಗಿನ ಮುಖ್ಯಮಂತ್ರಿಯಿಂದ ಹಿಡಿದು ಸಚಿವ ಸಂಪುಟದವರೆಗೆ ಯಾರೂ ಇವತ್ತು ಅದೇ ಹುದ್ದೆಯಲ್ಲಿಲ್ಲ. ಗೇರು ನಿಗಮದ ಅಧಿಕಾರಿ ಬದಲಾಗಿದ್ದಾರೆ. ಎಂಡೋಸಲ್ಫಾನ್ ಸಿಂಪಡಿಸಲು ಬಳಸಲಾದ ಹೆಲಿಕಾಫ್ಟರ್ ಸೇವೆಯಿಂದ ನಿವೃತ್ತವಾಗಿದೆ. ಒಂದು ರೀತಿಯಲ್ಲಿ, ಎಂಡೋ ಸಂತ್ರಸ್ತರ ಸ್ಥಿತಿಗೆ ನೇರ ಕಾರಣರಾದವರೆಲ್ಲ ತೆರೆಮರೆಗೆ ಸರಿದು ಅದಕ್ಕೆ ನೇರ ಹೊಣೆಗಾರರಲ್ಲದವರು ಇವತ್ತು ಅಧಿಕಾರ ಕೇಂದ್ರದಲ್ಲಿದ್ದಾರೆ. ಆದ್ದರಿಂದ, ಎಂಡೋ ಸಿಂಪಡಿಸಲು ಅನುಮತಿ ನೀಡಿದ ಅಧಿಕಾರಿಗಳಲ್ಲಿರಬ ಹುದಾದ ಅಪರಾಧಿ ಭಾವವು ಇವರಲ್ಲಿರುವುದಕ್ಕೆ ಸಾಧ್ಯವಿಲ್ಲ. ಈಗಿನ ಅಧಿಕಾರಿಗಳು ಮತ್ತು ಆಡಳಿತಗಾರರಿಗೆ ಇದೊಂದು ಕಾನೂನುನಾತ್ಮಕ ಸಂಗತಿಯೇ ಹೊರತು ಭಾವನಾತ್ಮಕವಾದುದಲ್ಲ. ನ್ಯಾಯವನ್ನು ಆಗ್ರಹಿಸಿ ಧರಣಿ ಕೂರುವ ಸಂತ್ರಸ್ತರನ್ನು ಆ ಕ್ಷಣಕ್ಕೆ ಅಲ್ಲಿಂದ ತೆರವುಗೊಳಿಸುವುದಷ್ಟೇ ಇವರ ಮುಖ್ಯ ಗುರಿ. ಸಂತ್ರಸ್ತರಿಗೆ ಕಟ್ಟಡ ನಿರ್ಮಿಸಿಕೊಡುವ ವಾಗ್ದಾನವನ್ನು 8 ತಿಂಗಳ ಬಳಿಕವೂ ಸರಕಾರ ಪೂರೈಸದಿರುವುದು, ವಾಗ್ದಾನಿತ ಮೊತ್ತವನ್ನು ಟಿವಿ ಚಾನೆಲ್ ನೀಡದೇ ಇರುವುದು ಮತ್ತು ಅಧಿಕಾರಿಗಳು ಇತರರತ್ತ ಬೆರಳು ತೋರಿಸಿ ಜಾರಿಕೊಳ್ಳುತ್ತಿರುವುದೆಲ್ಲ ಇದನ್ನೇ ಸೂಚಿಸುತ್ತದೆ.
     ನಿಜವಾಗಿ, ಎಂಡೋಸಲ್ಫಾನ್ ಸಂತ್ರಸ್ತರು ನಮ್ಮೊಳಗನ್ನು ತಟ್ಟಬೇಕಾದುದು ಅವರ ಅಸಹಾಯಕ ಸ್ಥಿತಿಯ ಕಾರಣಕ್ಕಾಗಿ ಮಾತ್ರ ಅಲ್ಲ. ಆ ¸ ಸಂತ್ರಸ್ತರು ನಮ್ಮ ಪಾಲಿಗೆ ಬರೇ ಭಾವುಕ ರೂಪಗಳಾಗಬೇಕಾದವರೂ ಅಲ್ಲ. ಅವರು ಒಂದು ಎಚ್ಚರಿಕೆ. ನಮ್ಮ ಸರಕಾರಗಳ ಮೇಲೆ ನಾವು ಎಲ್ಲಿಯವರೆಗೆ ಮತ್ತು ಎಷ್ಟರವರೆಗೆ ವಿಶ್ವಾಸವನ್ನು ಇಡಬಹುದು ಎಂಬುದನ್ನು ಸಾರುವ ಸೂಚನಾ ಫಲಕ. ನಮ್ಮ ಪ್ರತಿನಿಧಿಗಳು ಷರತ್ತು ರಹಿತ ವಿಶ್ವಾಸಕ್ಕೆ ಯೋಗ್ಯರಲ್ಲ ಎಂಬುದನ್ನು ಗಟ್ಟಿಯಾಗಿ ಹೇಳುವ ತೋರುಗಲ್ಲೂ ಹೌದು. ಈ ಹಿನ್ನೆಲೆಯಲ್ಲಿಯೇ ನಾವು ತೂತುಕುಡಿ ಪ್ರತಿಭಟನೆಯನ್ನು ವಿಶ್ಲೇಷಿಸಬೇಕಾಗಿದೆ. ಜನರಿಂದ ಆಯ್ಕೆಯಾದವರು ಜನರ ಹಿತಕ್ಕೆ ವಿರುದ್ಧವಾಗಿ ಯಾವ ನಿರ್ಧಾರವನ್ನೂ ಕೈಗೊಳ್ಳಲಾರರು ಎಂದು ಮುಗ್ಧವಾಗಿ ನಂಬುವು ಕಾಲ ಇದಲ್ಲ. ಒಂದು ವೇಳೆ, ಇದು ನಿಜವೇ ಆಗಿದ್ದಿದ್ದರೆ ಎಂಡೋಸಲ್ಫಾನ್ ಸಿಂಪಡಿಸುವುದಕ್ಕಿಂತ ಮೊದಲೇ ಅದರ ಸಾಧಕ-ಬಾಧಕಗಳ ಕುರಿತು ನಮ್ಮ ಜನಪ್ರತಿನಿಧಿಗಳು ಅವಲೋಕನ ನಡೆಸುತ್ತಿದ್ದರು. ಗೇರು ಕೃಷಿಯ ಅಭಿವೃದ್ಧಿಗಿಂತ ಜನಹಿತ ಮುಖ್ಯವೆಂದು ಅವರು ತೀರ್ಮಾನಿಸುತ್ತಿದ್ದರು. ಆದರೆ ಇಂಥದ್ದೊಂದು ಅವಲೋಕನ ನಡೆಯುವುದು ಬಿಡಿ, ಎಂಡೋಸಲ್ಫಾನನ್ನು ಜನ ವಿರೋಧಿ ಎಂದು ಒಪ್ಪಿಕೊಳ್ಳುವುದಕ್ಕೂ ಆರಂಭದಲ್ಲಿ ಅವರು ತಯಾರಾಗಲೇ ಇಲ್ಲ. ಸಾಮಾನ್ಯವಾಗಿ, ಜನಪ್ರತಿನಿಧಿಗಳು ಕೊಕ್ಕಡದಂಥ ಅರಣ್ಯ ಪ್ರದೇಶಗಳಲ್ಲಿ ಮನೆ ಮಾಡಿ ವಾಸಿಸುವುದಿಲ್ಲ. ಅಲ್ಲದೇ ನೀತಿ- ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಭೆ ಸೇರುವುದೂ ನಗರಗಳಲ್ಲಿರುವ ಕಛೇರಿಗಳಲ್ಲಿ. ಅಲ್ಲಿ ಕೂತು ಅವರು ಹಳ್ಳಿಗಾಡಿನ ಮೇಲೆ ಕಾರ್ಖಾನೆಗಳನ್ನು ಹೇರುತ್ತಾರೆ. ತೂತುಕುಡಿಯಲ್ಲಿ ಆಗಿರುವುದೂ ಇದುವೇ. ಆದ್ದರಿಂದ, ನಗರ ಕೇಂದ್ರಿತ ಮತ್ತು ಕಾಪೆರ್Çರೇಟ್ ಪ್ರಭಾವಿತ ಚಿಂತನೆಗಳನ್ನೇ ಸಾರ್ವಕಾಲಿಕ ಸತ್ಯವೆಂಬಂತೆ ನಂಬುವುದರಿಂದ ನಮ್ಮ ಜನಪ್ರತಿನಿಧಿಗಳು ಅರ್ಥಾತ್ ಸರಕಾರ ಹೊರಬರಬೇಕು. ಯಾವುದೇ ಅಭಿವೃದ್ಧಿ ಯೋಜನೆಗಳ ಮೊದಲು ಜನಹಿತದ ಪರಾಮಾರ್ಶೆ ನಡೆಸಬೇಕು. ತೂತುಕುಡಿಯು ಇಂಥದ್ದೊಂದು ಸಂದೇಶವನ್ನು ಮತ್ತೊಮ್ಮೆ ನಮ್ಮನ್ನಾಳುವವರಿಗೆ ಬ ಲವಾಗಿಯೇ ಮುಟ್ಟಿಸಿದೆ. ಒಂದು ವೇಳೆ, ಇಂಥ ಪರಾಮಾರ್ಶೆ ನಡೆಯದೇ ಹೋದರೆ ಏನಾಗಬಹುದೆಂಬುದಕ್ಕೆ ಎಂಡೋಸಲ್ಫಾನ್ ಸಂತ್ರಸ್ತರು ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ. ಉಜಿರೆಯಲ್ಲಿ ಇನ್ನೂ ಪ್ರಾರಂಭವಾಗದ ಎಂಡೋ ಪಾಲನಾ ಕೇಂದ್ರವು ಈ ಹಿನ್ನೆಲೆಯಲ್ಲಿ ಒಂದು ನಿಮಿತ್ತ ಮಾತ್ರ.

ಒಕ್ಕಲಿಗ+ಕುರುಬ+ಅಹಿಂದ ಸಮುದಾಯದ ಒಗ್ಗಟ್ಟಿಗೆ ವೇದಿಕೆ ಒದಗಿಸಿದರೇ ಯಡಿಯೂರಪ್ಪ?

     

       ರಾಜ್ಯ ವಿಧಾನಸಭೆಗೆ ನಡೆದ ಚುನಾವಣೆ ಮತ್ತು ಬಳಿಕದ ಬೆಳವಣಿಗೆಗಳು ಕಾಂಗ್ರೆಸ್‍ಗೆ ಅಂಟಿದ್ದ ‘ಅಧಿಕಾರ ದುರುಪಯೋಗ’ ಎಂಬ ಕಳಂಕವನ್ನು ಬಿಜೆಪಿಯ ಹಣೆಗೂ ಹಚ್ಚುವಲ್ಲಿ ಯಶಸ್ವಿಯಾಗಿದೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಮತ್ತು ನರಸಿಂಹರಾವ್‍ರ ಆಡಳಿತ ಕಾಲದಲ್ಲಿ ಕಾಂಗ್ರೆಸ್ ಅಧಿಕಾರ ದುರುಪಯೋಗ ನಡೆಸಿದ್ದನ್ನು ಬಿಜೆಪಿ ಈವರೆಗೂ ಹೇಳುತ್ತಾ ತಿರುಗುತ್ತಿತ್ತು. ಆದರೆ, ರಾಜ್ಯದಲ್ಲಿ ಯಾವಾಗ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರೋ ಆಗಲೇ ಬಿಜೆಪಿಯ ಅಧಿಕಾರ ದುರುಪಯೋಗದ ಒಂದೊಂದೇ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಒಳಗಾದುವು. ಈ ವರ್ಷದ ಆರಂಭದಲ್ಲಿ ಗೋವಾದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷವಾದ ಬಿಜೆಪಿಗೆ ಲಭ್ಯವಾದುದು ಬರೇ 13 ಸ್ಥಾನಗಳು. ಕಾಂಗ್ರೆಸ್‍ಗೆ 17 ಸ್ಥಾನಗಳು ಸಿಕ್ಕಿದ್ದುವು. ಕರ್ನಾಟಕದ ಮಾದರಿಯನ್ನು ಅನುಸರಿಸುವುದಾದರೆ ಗೋವಾದ ರಾಜ್ಯಪಾಲರು ಕಾಂಗ್ರೆಸ್ ಪಕ್ಷವನ್ನು ಸರಕಾರ ರಚಿಸುವಂತೆ ಆಹ್ವಾನಿಸಬೇಕಿತ್ತು. ಆದರೆ ಚುನಾವಣಾ ಫಲಿತಾಂಶದ ಬಳಿಕ ಮೈತ್ರಿಕೂಟ ರಚಿಸಿಕೊಂಡ ಬಿಜೆಪಿಗೆ ರಾಜ್ಯಪಾಲರು ಸರಕಾರ ರಚಿಸಲು ಆಹ್ವಾನ ನೀಡಿದರು. ಮೇಘಾಲಯದಲ್ಲಿ ಬಿಜೆಪಿ ನಡೆಸಿದ ಅಧಿಕಾರ ದುರುಪಯೋಗವಂತೂ ಅತ್ಯಂತ ಆಘಾತಕಾರಿ. ಬರೇ ಎರಡು ಸ್ಥಾನಗಳನ್ನಷ್ಟೇ ಗೆದ್ದಿದ್ದ ಬಿಜೆಪಿ ಅಲ್ಲಿ ಸರಕಾರ ರಚಿಸಿತು. ಇಲ್ಲೂ ಕೂಡಾ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿ ಮಾಡಿಕೊಂಡ ಮೈತ್ರಿಕೂಟವನ್ನು ರಾಜ್ಯಪಾಲರು ಪುರಸ್ಕರಿಸಿದರು. 21 ಸ್ಥಾನಗಳನ್ನು ಗೆದ್ದುಕೊಂಡ ಕಾಂಗ್ರೆಸ್ ಇಲ್ಲಿ ಅತಿದೊಡ್ಡ ಪಕ್ಷವಾಗಿದ್ದರೂ ರಾಜ್ಯಪಾಲರು ಕಾಂಗ್ರೆಸನ್ನು ಕಡೆಗಣಿಸಿದರು. ಇದರ ಜೊತೆಗೇ ಮಣಿಪುರವನ್ನೂ ಪರಿಗಣಿಸುವುದಾದರೆ ಕೇವಲ ನಾಲ್ಕೇ ವರ್ಷಗಳ ಅವಧಿಯಲ್ಲಿ ಬಿಜೆಪಿ ನಡೆಸಿದ ಅಧಿಕಾರ ದುರುಪಯೋಗದ ವೃತ್ತಾಂತ ಎಷ್ಟು ದೊಡ್ಡದು ಅನ್ನುವುದು ಮನವರಿಕೆಯಾಗುತ್ತದೆ. ಮಣಿಪುರದಲ್ಲಿ ಇವತ್ತು ಅಧಿಕಾರ ನಡೆಸುತ್ತಿರುವುದು ಬಿಜೆಪಿ. ಆದರೆ, 28 ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಇಲ್ಲಿ ಏಕೈಕ ದೊಡ್ಡ ಪಕ್ಷ. ಬಿಜೆಪಿಗೆ ಲಭ್ಯವಾಗಿರುವುದು 21 ಸ್ಥಾನಗಳು. ಆದರೆ ರಾಜ್ಯಪಾಲರು ದೊಡ್ಡ ಪಕ್ಷವಾದ ಕಾಂಗ್ರೆಸ್‍ನ ಬದಲು ಬಿಜೆಪಿಯನ್ನು ಸರಕಾರ ರಚಿಸುವಂತೆ ಆಹ್ವಾನಿಸಿದರು. ನಿಜವಾಗಿ, ಗೋವಾ, ಮಣಿಪುರ, ಮೇಘಾಲಯ ಮತ್ತು ಬಿಹಾರ ಈ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿ ನಡೆಸಿದ ಅಧಿಕಾರ ದುರುಪಯೋಗವನ್ನು ದೊಡ್ಡಮಟ್ಟದ ಚರ್ಚೆಯಾಗುವಂತೆ ಮಾರ್ಪಡಿಸಿದ್ದು ಕರ್ನಾಟಕದ ಬೆಳವಣಿಗೆ. ಒಂದು ವೇಳೆ, ಮೇಲಿನ ನಾಲ್ಕೂ ರಾಜ್ಯಗಳ ಮಾದರಿಯನ್ನೇ ಕರ್ನಾಟಕದಲ್ಲೂ ರಾಜ್ಯಪಾಲರು ಮಾನ್ಯ ಮಾಡಿರುತ್ತಿದ್ದರೆ ಬಿಜೆಪಿಯ ಪಾಲಿಗೆ ಇವತ್ತು ಎರಡು ರೀತಿಯ ಲಾಭಗಳಿದ್ದುವು. ಒಂದು- ಗೋವಾ, ಮಣಿಪುರ, ಮೇಘಾಲಯಗಳಲ್ಲಿ ಸರಕಾರ ರಚಿಸಿದ ಕ್ರಮವು ಅಧಿಕಾರ ದುರುಪಯೋಗವಾಗಿ ಗುರುತಿಸಿಕೊಳ್ಳುತ್ತಿರಲಿಲ್ಲ ಮತ್ತು ಅದು ಮಹತ್ವಪೂರ್ಣ ಸುದ್ದಿಯಾಗಿ ಚರ್ಚೆಗೊಳಗಾಗುತ್ತಿರಲಿಲ್ಲ. ಎರಡು- ಯಡಿಯೂರಪ್ಪರು ಸರಕಾರ ರಚಿಸುವುದಕ್ಕೆ ಮುಂದಾಗದೇ ಇರುತ್ತಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್‍ಗಳ ಮೈತ್ರಿಕೂಟ ಈಗಿನಷ್ಟು ಬಲಿಷ್ಠವಾಗುತ್ತಿರಲಿಲ್ಲ. ಯಾವಾಗ ಬಿಜೆಪಿ ರಾಜ್ಯದಲ್ಲಿ ರಾಜ್ಯಪಾಲರನ್ನು ದುರುಪಯೋಗಪಡಿಸಿಕೊಂಡಿತೋ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಸಂಬಂಧ ಬಲಿಷ್ಠವಾಗುತ್ತಾ ಹೋಯಿತು. ಮೋದಿ ಮತ್ತು ಅಮಿತ್‍ಷಾರ ಪ್ರತಿ ಹೇಳಿಕೆ ಮತ್ತು ನಡವಳಿಕೆಗಳು ಈ ಮೈತ್ರಿಕೂಟಕ್ಕೆ ಬಲವನ್ನು ತುಂಬುತ್ತಾಹೋಯಿತು. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದು ಆರಂಭದಲ್ಲಿ ದೇವೇಗೌಡ-ಪರಿವಾರದ ಬಯಕೆ ಮಾತ್ರವೇ ಆಗಿದ್ದರೆ, ಯಡಿಯೂರಪ್ಪರ ಪ್ರಮಾಣ ವಚನದ ಬಳಿಕ ಅದು ಕಾಂಗ್ರೆಸ್ ಮತ್ತು ಒಕ್ಕಲಿಗ ಸಮುದಾಯದ ಪ್ರತಿಷ್ಠೆಯಾಗಿ ಬದಲಾಯಿತು. ಎರಡೂವರೆ ದಿನಗಳು ಸಿಕ್ಕಿಯೂ ಜೆಡಿಎಸ್-ಕಾಂಗ್ರೆಸ್‍ನ ಒಬ್ಬನೇ ಒಬ್ಬ ಶಾಸಕನನ್ನೂ ತನ್ನೆಡೆಗೆ ಸೆಳೆಯಲು ಬಿಜೆಪಿ ವಿಫಲವಾದುದಕ್ಕೆ ಈ ಪ್ರತಿಷ್ಠೆಯ ಪ್ರಜ್ಞೆಯೇ ಬಹುಮುಖ್ಯ ಕಾರಣ. ಒಂದು ವೇಳೆ, ಬಿಜೆಪಿ ಸರಕಾರ ರಚಿಸುವ ಇಂಗಿತ ವ್ಯಕ್ತಪಡಿಸದೇ ಇರುತ್ತಿದ್ದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಮೈತ್ರಿಕೂಟ ತಕ್ಷಣದ ತೇಪೆಯಾಗಿರುತ್ತಿತ್ತೇ ಹೊರತು ಶಾಸಕರಲ್ಲಿ ಈ ಮಟ್ಟದ ಪP್ಷÀನಿಷ್ಠೆಯನ್ನು ಕಂಡುಕೊಳ್ಳಲು ಸಾಧ್ಯವಿರಲಿಲ್ಲ. ಬಹಳ ಬೇಗನೇ ದುರ್ಬಲವಾಗಿ ಬಿಡಬಹುದಾಗಿದ್ದ ಮೈತ್ರಿಕೂಟವೊಂದನ್ನು ಮೋದಿ ಮತ್ತು ಅಮಿತ್‍ಶಾ ಬಳಗ ತಮ್ಮ ಕೈಯಾರೆ ಬಲಿಷ್ಠಗೊಳಿಸಿದರು. ಮಾತ್ರವಲ್ಲ, ತಮ್ಮ ಈ ವರೆಗಿನ ಅಧಿಕಾರ ದುರುಪಯೋಗವು ರಾಷ್ಟ್ರೀಯ ಚರ್ಚೆಗೊಳಗಾಗುವಂತೆ ನೋಡಿಕೊಂಡಿದರು.
ಅಂದಹಾಗೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರದ ಆಯುಷ್ಯ ಎಷ್ಟು ದಿನಗಳವರೆಗಿದೆ ಎಂದು ಹೇಳುವುದಕ್ಕೆ ಸದ್ಯ ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಪದ ಈ ಹಿಂದಿನ ವರ್ತನೆಯನ್ನು ಪರಿಗಣಿಸುವುದಾದರೆ, 5 ವರ್ಷಗಳ ಪೂರ್ಣಾವಧಿಗೆ ಈ ಮೈತ್ರಿಕೂಟ ಬಾಳುವುದನ್ನು ನಿರೀಕ್ಷಿಸಲಾಗದು. ಮೈತ್ರಿಕೂಟ ಸರಕಾರದ ಬಹುದೊಡ್ಡ ಸಮಸ್ಯೆಯೇ ಭಿನ್ನಾಭಿಪ್ರಾಯ. ಚುನಾವಣೆಯಲ್ಲಿ ಪರಸ್ಪರ ವೈರಿಗಳಂತೆ ಸೆಣಸಿದ ಎರಡು ಪಕ್ಷಗಳು ಆ ಬಳಿಕ ಮಿತ್ರರಾಗಿ ಬಾಳುವುದು ಸುಲಭವಲ್ಲ. ಅಲ್ಲದೇ ಶಾಸಕರಷ್ಟೇ ಮಿತ್ರರಾದರೆ ಸಾಲುವುದಿಲ್ಲ. ಎರಡೂ ಪಕ್ಪಗಳ ಕಾರ್ಯಕರ್ತರನ್ನೂ ಈ ಮಿತ್ರತ್ವದಲ್ಲಿ ಬಂಧಿಸಬೇಕು. ಸೈದ್ಧಾಂತಿಕ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಅಧಿಕಾರ ಹಂಚಿಕೆಯಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕಾಗುತ್ತದೆ. ಇದು ಹೇಳಿದಷ್ಟು ಸುಲಭವಲ್ಲ. ಅತೃಪ್ತಿ, ಅಸಮಾಧಾನ, ಬಂಡಾಯಗಳಿಗೆ ಸದಾ ಬಾಗಿಲು ತೆರೆದೇ ಇರುವುದು ಮೈತ್ರಿಕೂಟ ಸರಕಾರದ ಬಹುದೊಡ್ಡ ದೌರ್ಬಲ್ಯ. ಅಲ್ಲದೇ, ರಾಜ್ಯದಲ್ಲಿ ಅಧಿಕಾರ ವಂಚಿತ ಬಿಜೆಪಿಯೂ ಇನ್ನೊಂದು ಕಡೆ ಇದೆ. ಅದು ಅತೃಪ್ತ ಶಾಸಕರನ್ನು ತನ್ನೆಡೆಗೆ ಸೆಳೆಯುವುದಕ್ಕೆ ಸಕಲ ಪ್ರಯತ್ನವನ್ನೂ ಖಂಡಿತ ಮಾಡಲಿದೆ. ಬಿಜೆಪಿಯ ಅಧಿಕಾರ ದುರುಪಯೋಗವನ್ನು ತಡೆಯಲು ನಿರೀಕ್ಷೆಗಿಂತಲೂ ಮೀರಿ ಒಂದಾದ ಈ ಎರಡೂ ಪಕ್ಷಗಳ ಶಾಸಕರು ಮುಂದೆಯೂ ಇದೇ ಬದ್ಧತೆಯನ್ನು ತೋರ್ಪಡಿಸುವರು ಎಂದು ನಿರೀಕ್ಷಿಸುವ ಹಾಗಿಲ್ಲ. ಆದರೂ, ಕರ್ನಾಟಕದಲ್ಲಿ ಬಿಜೆಪಿಯ ನಡವಳಿಕೆಯು ಮುಂದಿನ ದಿನಗಳಲ್ಲಿ ಹೊಸ ಜಾತಿ ಸಮೀಕರಣವೊಂದನ್ನು ಹುಟ್ಟು ಹಾಕುವ ಎಲ್ಲ ಸಾಧ್ಯತೆಯನ್ನೂ ತೆರೆದಿಟ್ಟಿದೆ. ಬಹುಮತವಿದ್ದೂ ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿಯಾಗದಂತೆ ತಡೆದ ಬಿಜೆಪಿಯ ಕ್ರಮವು ಮುಂದಿನ ದಿನಗಳಲ್ಲಿ ಒಕ್ಕಲಿಗ ಸ್ವಾಭಿಮಾನವನ್ನು ಕೆಣಕಿದ ಪ್ರಸಂಗವಾಗಿ ಗುರುತಿಸಿಕೊಳ್ಳಲೂ ಬಹುದು. ಲಿಂಗಾಯತ ಯಡಿಯೂರಪ್ಪರು ಒಕ್ಕಲಿಗ ಕುಮಾರಸ್ವಾಮಿಗೆ ಮೋಸ ಮಾಡಿದರು ಎಂಬ ಭಾವನೆಯೊಂದು ಆ ಸಮುದಾಯದಲ್ಲಿ ಬೆಳೆದುಬಿಟ್ಟರೆ ಅದು ಮುಂದಿನ ದಿನಗಳಲ್ಲಿ ಜೆಡಿಎಸ್‍ನ ಒಕ್ಕಲಿಗ ಮತ್ತು ಕಾಂಗ್ರೆಸ್‍ನ ಅಹಿಂದ-ಕುರುಬ ಸಮುದಾಯದ ಒಗ್ಗಟ್ಟಿಗೆ ಕಾರಣವಾಗಲೂಬಹುದು. ಹೀಗಾದರೆ ಬಿಜೆಪಿಯು ಕೇವಲ ಲಿಂಗಾಯತ ಸಮುದಾಯವೊಂದನ್ನೇ ಆಶ್ರಯಿಸಬೇಕಾಗಬಹುದು. ಬಿಜೆಪಿಯು ಒಕ್ಕಲಿಗ, ಕುರುಬ ಮತ್ತು ಅಹಿಂದ ವರ್ಗಕ್ಕೆ ಮೋಸ ಮಾಡಿದೆ ಎಂಬ ಘೋಷಣೆಯೊಂದಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗಳು ಜನರ ಬಳಿಗೆ ಒಟ್ಟಾಗಿ ತೆರಳಿದರೆ ಅದು ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾಗಲೂಬಹುದು.
    ಒಂದು ರೀತಿಯಲ್ಲಿ, ಯಡಿಯೂರಪ್ಪರನ್ನು ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸಿದ್ದು, ಅವರು ಪ್ರಮಾಣ ವಚನ ಸ್ವೀಕರಿಸಿದ್ದು ಮತ್ತು ಬರೇ ಎರಡೂವರೆ ದಿನಗಳೊಳಗೆ ರಾಜೀನಾಮೆ ನೀಡಿದ್ದು ಎಲ್ಲವೂ ರಾಜಕೀಯವಾಗಿ ಬಿಜೆಪಿಗೆ ಬಹುದೊಡ್ಡ ಹಿನ್ನಡೆಯಾಗಿಯೇ ಕಾಣಿಸುತ್ತದೆ. ಮೋದಿ-ಅಮಿತ್‍ಶಾ ಬಳಗವು ಅಜೇಯವಲ್ಲ ಎಂಬುದು ಗುಜರಾತ್‍ನಲ್ಲಿ ಸಾಬೀತಾದ ಬಳಿಕದ ಬೆಳವಣಿಗೆ ಎಂಬ ನಿಟ್ಟಿನಲ್ಲೂ ಕರ್ನಾಟಕವು ಮುಖ್ಯವಾಗುತ್ತದೆ. ಮೋದಿ ಮತ್ತು ಶಾರನ್ನು ಮಣಿಸಬಹುದು ಎಂಬುದು ಕರ್ನಾಟಕದಲ್ಲಿ ಸಾಬೀತಾಗಿದೆ. ಇದು ಕಾಂಗ್ರೆಸ್‍ನ ಆತ್ಮವಿಶ್ವಾಸವನ್ನು ಮಾತ್ರ ಹೆಚ್ಚಿಸಿರುವುದಲ್ಲ. ರಾಷ್ಟ್ರಮಟ್ಟದಲ್ಲಿ ಹಲವು ಪ್ರಾದೇಶಿಕ ಪಕ್ಷಗಳಲ್ಲೂ ಧೈರ್ಯವನ್ನು ಹುಟ್ಟಿಸಿದೆ. ರಜನಿಕಾಂತ್, ಕಮಲ್ ಹಾಸನ್, ಚಂದ್ರಬಾಬು ನಾಯ್ಡು, ಚಂದ್ರಶೇಖರ್ ರಾವ್, ಮಮತಾ ಬ್ಯಾನರ್ಜಿ, ಮಾಯಾವತಿ, ಅಖಿಲೇಶ್ ಸಹಿತ ವಿವಿಧ ನಾಯಕರು ಕರ್ನಾಟಕದ ಮೈತ್ರಿಕೂಟವನ್ನು ಬೆಂಬಲಿಸಿದ್ದು ಬದಲಾದ ಈ ರಾಜಕೀಯ ವಾತಾವರಣವನ್ನು ಸ್ಪಷ್ಟಪಡಿಸುತ್ತದೆ. ಬಹುಶಃ, 2019ರ ಲೋಕಸಭಾ ಚುನಾವಣೆಯ ವೇಳೆ ಮೋದಿಯವರು ಕಠಿಣ ಸವಾಲನ್ನು ಎದುರಿಸಬೇಕಾದೀತು ಎಂಬುದನ್ನು ಈ ಎಲ್ಲ ಬೆಳವಣಿಗೆಗಳು ಸೂಚಿಸುತ್ತವೆ.

ಎರಡನೇ ಬಾರಿ ಬೆತ್ತಲೆಯಾದ ಉಡುಪಿ

 
  ಉಡುಪಿ ಜಿಲ್ಲೆ  ಮತ್ತೊಮ್ಮೆ ಬೆತ್ತಲಾಗಿದೆ. ದನದ ವ್ಯಾಪಾರ ಮಾಡುತ್ತಿದ್ದ ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗನನ್ನು 2005, ಎಪ್ರಿಲ್‍ನಲ್ಲಿ ನಡುಬೀದಿಯಲ್ಲಿ ಬೆತ್ತಲೆಗೊಳಿಸಿ ಪೆರೇಡ್ ನಡೆಸಿ ರಾಷ್ಟ್ರಮಟ್ಟದಲ್ಲಿ ಅವಮಾನಕ್ಕೆ ಗುರಿಯಾಗಿದ್ದ ಜಿಲ್ಲೆಯು ಇದೀಗ ಎರಡನೇ ಬಾರಿ ಅವಮಾನದಿಂದ ತಲೆ ತಗ್ಗಿಸಿ ನಿಂತಿದೆ. ಈ ಅವಮಾನಕ್ಕೆ ಮುಖ್ಯ ಕಾರಣ ಪೊಲೀಸ್ ವ್ಯವಸ್ಥೆ. 62 ವರ್ಷದ ಹುಸೇನಬ್ಬ ಎಂಬ ದನದ ವ್ಯಾಪಾರಿಯನ್ನು ಹತ್ಯೆಗೈಯಲು ಸಂಘಪರಿವಾರದ ದುಷ್ಕರ್ಮಿಗಳೊಂದಿಗೆ ಸಹಕರಿಸಿ, ಕೊನೆಗೆ ಪ್ರಕರಣವನ್ನು ಮುಚ್ಚಿ ಹಾಕಲು ಶ್ರಮಿಸಿದ ಆರೋಪ ಹಿರಿಯಡ್ಕ ಪೊಲೀಸ್ ಠಾಣೆಯ ಎಸ್‍ಐ ಡಿ.ಎನ್. ಕುಮಾರ್, ಹೆಡ್ ಕಾನ್‍ಸ್ಟೇಬಲ್ ಮೋಹನ್ ಕೊತ್ವಾಲ್ ಮತ್ತು ಪೊಲೀಸ್ ಪೇದೆ ಗೋಪಾಲ್‍ರ ಮೇಲಿದೆ. ಒಂದು ವೇಳೆ, ಉಡುಪಿ ಜಿಲ್ಲಾ ಎಸ್.ಪಿ. ಲಕ್ಷ್ಮಣ್ ನಿಂಬರಗಿಯವರು ತನಿಖೆಯನ್ನು ಕೈಗೆತ್ತಿಕೊಳ್ಳದೇ ಇರುತ್ತಿದ್ದರೆ ಈ ಮೂವರು ಬಂಧನಕ್ಕೊಳಗಾಗುವ ಸಾಧ್ಯತೆ ತೀರಾ ಕಡಿಮೆಯಿತ್ತು ಮತ್ತು ಸಂಘಪರಿವಾರದ ದುಷ್ಕರ್ಮಿಗಳು ಬಂಧನದಿಂದ ತಪ್ಪಿಸಿಕೊಂಡು ಇನ್ನೊಂದು ಹತ್ಯೆಗೆ ಸ್ಕೆಚ್ ಹಾಕುತ್ತಿದ್ದರು. ಇಲ್ಲಿ ಗಮನಿಸಬೇಕಾದ ಬಹುಮುಖ್ಯ ಅಂಶವೊಂದಿದೆ. ಅದುವೇ ಜಿಲ್ಲಾ  ಎಸ್.ಪಿ. ಲಕ್ಷ್ಮಣ್ ನಿಂಬರಗಿ. ಅವರ ಮುಂದೆ ಎರಡು ಅವಕಾಶಗಳಿದ್ದುವು. ಒಂದು- ಹಿರಿಯಡ್ಕ ಪೊಲೀಸು ಠಾಣೆಯ ಎಸ್‍ಐ ಡಿ.ಎನ್. ಕುಮಾರ್ ದಾಖಲಿಸಿರುವಂತೆ ಹುಸೇನಬ್ಬರ ಸಾವನ್ನು ಅಸಹಜವೆಂದು ಪರಿಗಣಿಸಿ ಅವರದೇ ನೇತೃತ್ವದಲ್ಲಿ ತನಿಖೆಯನ್ನು ಮುಂದುವರಿಸುವಂತೆ ಹೇಳುವುದು. ಇನ್ನೊಂದು- ಸ್ವತಃ ಆ ಪ್ರಕರಣದ ತನಿಖೆಯ ನೇತೃತ್ವವನ್ನು ವಹಿಸಿಕೊಳ್ಳುವುದು. ಮೊದಲನೆಯದು ತೀರಾ ಸುಲಭ ಮತ್ತು ಸಹಜ ಆಯ್ಕೆ. ಎರಡನೆಯದು ತೀರಾ ಕಠಿಣ ಮತ್ತು ಸವಾಲಿನದ್ದು. ಲಕ್ಷ್ಮಣ್ ನಿಂಬರಗಿಯವರು ಎರಡನೆಯದನ್ನು ಆಯ್ಕೆ ಮಾಡಿಕೊಂಡರು. ಮಾತ್ರವಲ್ಲ, ತಾನು ಆಗಾಗ ಭೇಟಿಯಾಗುತ್ತಲೇ ಇರುವ ತನ್ನ ಕೈ ಕೆಳಗಿನ ಎಸ್‍ಐ ಡಿ.ಎನ್. ಕುಮಾರ್ ಸಹಿತ ಪೊಲೀಸ್ ಅಧಿಕಾರಿಗಳಿಗೇ ಮುಖಾಮುಖಿಯಾದರು. ಇದೊಂದು ಕಠಿಣ ಸವಾಲು. ತನ್ನ ಸಹೋದ್ಯೋಗಿಗಳನ್ನೇ ಅನುಮಾನದ ಮೊನೆಯನ್ನಿಟ್ಟು ವಿಚಾರಿಸುವುದು ಸುಲಭದ ಸವಾಲಲ್ಲ. ಅಪರಿಚಿತರನ್ನು ವಿಚಾರಣೆಗೆ ಒಳಪಡಿಸುವುದಕ್ಕೂ ಸಹೋದ್ಯೋಗಿಗಳನ್ನೇ ವಿಚಾರಣೆಗೆ ಒಳಪಡಿಸುವುದಕ್ಕೂ ಸಾಕಷ್ಟು ಅಂತರವಿದೆ. ಇಂಥ ಸಂದರ್ಭದಲ್ಲಿ ಸ್ನೇಹ, ಪ್ರೀತಿ, ಉಪಕಾರ ಭಾವ ಇತ್ಯಾದಿ ಇತ್ಯಾದಿಗಳು ಸಹಜವಾಗಿ ಅಡ್ಡ ಬರುತ್ತವೆ. ಇಂಥ ಮುಲಾಜುಗಳನ್ನು ಮೀರಿ ನ್ಯಾಯದ ಪರ ನಿಲ್ಲುವುದಕ್ಕೆ ಅಸಾಧಾರಣ ಧೈರ್ಯ ಬೇಕಾಗುತ್ತದೆ. ಲಕ್ಷ್ಮಣ್ ನಿಂಬರಗಿಯವರು ಗೌರವಾರ್ಹರಾಗುವುದು ಈ ಕಾರಣಕ್ಕೆ. ಅವರು ತನಿಖೆಯನ್ನು ಕೈಗೆತ್ತಿಕೊಂಡ ಬಳಿಕ ಹುಸೇನಬ್ಬರ ಹತ್ಯೆಗೆ ದುಷ್ಕರ್ಮಿಗಳೊಂದಿಗೆ ಪೊಲೀಸರೇ ಕೈ ಜೋಡಿಸಿರುವುದು ಪತ್ತೆಯಾಯಿತು. ಅವರು ಅದನ್ನು ಪತ್ರಿಕಾಗೋಷ್ಠಿ ಕರೆದು ಎಲ್ಲರೆದುರು ಹೇಳುವ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದರು. ತನ್ನದೇ ಸಹೋದ್ಯೋಗಿಗಳನ್ನು ಬಂಧಿಸಿದರು. ನಿಜವಾಗಿ, ಉಡುಪಿಯು ಅವಮಾನಕ್ಕೆ ಒಳಗಾಗುವುದು ಇದು ಮೊದಲಲ್ಲ. 2005 ಎಪ್ರಿಲ್‍ನಲ್ಲಿ ಹಾಜಬ್ಬ-ಹಸನಬ್ಬ ಎಂಬ ತಂದೆ-ಮಗನನ್ನು ನಡುಬೀದಿಯಲ್ಲಿ ಬೆತ್ತಲೆಗೊಳಿಸಿ ಪೆರೇಡ್ ನಡೆಸಿದ ಪ್ರಕರಣ ನಡೆದಿತ್ತು. ಬಹುಶಃ ದನಸಾಗಾಟದ ಹೆಸರಲ್ಲಿ ಜಿಲ್ಲೆಯಲ್ಲಿ ನಡೆದ ಮೊದಲ ವಿಕೃತಿ ಇದು. ವಿಧಾನಸಭೆಯಲ್ಲೂ ಈ ವಿಕೃತಿ ಚರ್ಚೆಗೀಡಾಗಿತ್ತು. ಬೆತ್ತಲೆಗೊಂಡ ತಂದೆ ಮತ್ತು ಮಗನನ್ನು ಮಾಧ್ಯಮಗಳು ಮುಖಪುಟದಲ್ಲಿಟ್ಟು ಗೌರವಿಸಿದ್ದುವು. ವಿಷಾದ ಏನೆಂದರೆ, 2008ರ ಜುಲೈನಲ್ಲಿ ಈ ಪ್ರಕರಣದ ಎಲ್ಲ 13 ಆರೋಪಿಗಳನ್ನೂ ತ್ವರಿತಗತಿ ನ್ಯಾಯಾಲಯವು ಬಿಡುಗಡೆಗೊಳಿಸಿತ್ತು. ಸಾಕ್ಷ್ಯಾಧಾರದ ಕೊರತೆಯನ್ನು ಇದಕ್ಕೆ ಕಾರಣವಾಗಿ ನೀಡಲಾಗಿತ್ತು. ಬೆತ್ತಲೆ ಚಿತ್ರದ ನೆಗೆಟಿವ್ ಅನ್ನು ಕೋರ್ಟಿಗೆ ಸಲ್ಲಿಸಲು ಇಲಾಖೆ ವಿಫಲವಾಗಿರುವುದು ಅತಿದೊಡ್ಡ ವೈಫಲ್ಯವಾಗಿ ಎತ್ತಿ ಹೇಳಲಾಗಿತ್ತು. ಇದಕ್ಕಿಂತಲೂ ಅಚ್ಚರಿ ಏನೆಂದರೆ, ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಕೃತ್ಯದ ಪ್ರಮುಖ ರೂವಾರಿಯೆಂದು ಹೆಸರಿಸಲಾಗಿದ್ದ ಆರೋಪಿ ಯಶ್ಪಾಲ್ ಸುವರ್ಣನನ್ನು ಆಗಿನ ಬಿಜೆಪಿ-ಜೆಡಿಎಸ್ ಸರಕಾರವು ಜಿಲ್ಲಾ ಪಟ್ಟಣ ಪಂಚಾಯತ್‍ನ ಸದಸ್ಯನಾಗಿ ನೇಮಕ ಮಾಡಿ ಗೌರವಿಸಿತ್ತು. ಮಾತ್ರವಲ್ಲ, ದೋಷಮುಕ್ತಗೊಂಡ ಆರೋಪಿಗಳನ್ನು ಕೋರ್ಟ್ ಆವರಣದಿಂದ ಗಾಂಧಿ ಚೌಕದವರೆಗೆ ಹಿಂದೂ ಯುವಸೇನೆಯ ಕಾರ್ಯಕರ್ತರು ಮೆರವಣಿಗೆಯಲ್ಲಿ ಕೊಂಡೊಯ್ದು ಸಂಭ್ರಮ ವ್ಯಕ್ತಪಡಿಸಿದ್ದರು. ಅಂದಹಾಗೆ,
     ಶೈಕ್ಪಣಿಕ ಸಾಧನೆಯಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಸದಾ ಮುಂಚೂಣಿಯಲ್ಲಿರುತ್ತವೆ. ಮೊದಲ ಎರಡ್ಮೂರು ಸ್ಥಾನಗಳಲ್ಲಿ ಗುರುತಿಸಿಕೊಂಡಿರುವ ಜಿಲ್ಲೆಗಳಿವು. ಶೈಕ್ಷಣಿಕವಾಗಿ ಇಷ್ಟೊಂದು ಅಭಿವೃದ್ಧಿ ಹೊಂದಿರುವ ಜಿಲ್ಲೆಯು ವೈಚಾರಿಕವಾಗಿ ಈ ಬಗೆಯ ಕಟು ಬರ್ಬರತೆಯನ್ನು ಪ್ರದರ್ಶಿಸುತ್ತಿರುವುದು ಯಾಕಾಗಿ? ಇದಕ್ಕೆ ದನದ ಮೇಲಿನ ಪ್ರೀತಿ ಕಾರಣವೋ ಅಥವಾ ಮುಸ್ಲಿಮರ ಮೇಲಿನ ದ್ವೇಷ ಕಾರಣವೋ? ನಿರ್ದಿಷ್ಟವಾಗಿ ಮುಸ್ಲಿಮರನ್ನೇ ಯಾಕೆ ದ್ವೇಷಿಸಬೇಕು? ಹಾಗೆ ದ್ವೇಷಿಸಬೇಕೆಂದು ಹೇಳಿ ಕೊಡುವವರು ಯಾರು? ಅವರ ಉದ್ದೇಶವೇನು? ಮುಸ್ಲಿಮರು ದನ ಸಾಗಾಟದಲ್ಲಿ ಭಾಗಿಯಾಗುತ್ತಾರೆ ಅನ್ನುವುದು ಅವರನ್ನು ದ್ವೇಷಿಸುವುದಕ್ಕೆ ಮುಖ್ಯ ಕಾರಣವೇ? ಹಾಗಿದ್ದರೆ ಈ ದ್ವೇಷ ಮುಸ್ಲಿಮರಿಗಿಂತಲೂ ಹೆಚ್ಚು ಈ ವ್ಯವಸ್ಥೆಯ ಮೇಲೆ ಆಗಬೇಕಲ್ಲವೇ? ಮುಸ್ಲಿಮ್ ವ್ಯಾಪಾರಿಗಳಿಗೆ ದನಮಾರಾಟ ಮಾಡುವುದು ಮುಸ್ಲಿಮರಲ್ಲ. ಕಸಾಯಿಖಾನೆಗಳನ್ನು ಏಲಂ ಮಾಡಿ ಹಂಚುವುದು ಮುಸ್ಲಿಮರಲ್ಲ. ಬೃಹತ್ ಕಸಾಯಿಖಾನೆಗಳನ್ನು ಸ್ಥಾಪಿಸಿ ದನದ ಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವುದೂ ಮುಸ್ಲಿಮರಲ್ಲ. ಈ ಎಲ್ಲ ಪ್ರಕ್ರಿಯೆಗಳಲ್ಲಿ ಮುಸ್ಲಿಮರ ಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ. ಆದರೆ ದನ ಮಾರಾಟ ಮಾಡುವ ಮಾಲಿಕನನ್ನಾಗಲಿ, ಕಸಾಯಿಖಾನೆಗೆ ಪರವಾನಿಗೆ ಕೊಡುವ ಮತ್ತು ಏಲಂ ಮಾಡಿ ಹಂಚುವ ಅಧಿಕಾರಿಗಳನ್ನಾಗಲಿ ಮತ್ತು ವಿದೇಶಕ್ಕೆ ದನದ ಮಾಂಸವನ್ನು ರಫ್ತು ಮಾಡಲು ಕಾನೂನು-ಕಾಯ್ದೆಗಳನ್ನು ರೂಪಿಸುವ ಜನಪ್ರತಿನಿಧಿಗಳನ್ನಾಗಲಿ ಸ್ವಲ್ಪವೂ ದ್ವೇಷಿಸದೇ ಮತ್ತು ಅವರ ವಿರುದ್ಧ ಮಾತನ್ನೇ ಆಡದೇ ಕೇವಲ ದನವನ್ನು ಸಾಗಾಟ ಮಾಡುವಂಥ ಜುಜುಬಿ ಹೊಟ್ಟೆಪಾಡಿನ ಕೆಲಸದಲ್ಲಿ ತೊಡಗಿರುವ ಬಡಪಾಯಿ ಮುಸ್ಲಿಮರ ಮೇಲೆ ಈ ಪರಿಯ ದ್ವೇಷವೇಕೆ? ಈ ದ್ವೇಷವನ್ನು ದನದ ಮೇಲಿನ ಪ್ರೀತಿಯಿಂದ ಹುಟ್ಟಿಕೊಂಡಿರುವ ದ್ವೇಷ ಎಂದು ಹೇಗೆ ಹೇಳುವುದು? ಯಾಕೆ ದನವನ್ನು ಮಾರಾಟ ಮಾಡುವವರ
ಹತ್ಯೆ ನಡೆಯುವುದಿಲ್ಲ? ಕಸಾಯಿಖಾನೆಯನ್ನು ನಿರ್ವಹಿಸುವವರು ಮತ್ತು ಏಲಂ ಮಾಡುವವರ ಹತ್ಯೆ ನಡೆಯುವುದಿಲ್ಲ? ವಿದೇಶಕ್ಕೆ ಮಾಂಸ ರಫ್ತು ಮಾಡಲು ಅವಕಾಶ ತೆರೆದಿಟ್ಟಿರುವ ಜನಪ್ರತಿನಿಧಿಗಳ ಮೇಲೆ ಯಾಕೆ ದ್ವೇಷ ಸಾಧಿಸುವುದಿಲ್ಲ? ಇದೇನನ್ನು ಸೂಚಿಸುತ್ತದೆ? ನಿಜಕ್ಕೂ, ಮುಸ್ಲಿಮರನ್ನು ಹುಡುಕಿ ಹುಡುಕಿ ಥಳಿಸುವ ಗುಂಪನ್ನು ಆಳುತ್ತಿರುವುದು ಯಾವ ವಿಚಾರಧಾರೆ? ಆ ಗುಂಪಿಗೆ ಯಾವ ವಿಷವನ್ನು ಚುಚ್ಚಲಾಗಿದೆ? ಅಂದಹಾಗೆ,
     ಮುಸ್ಲಿಮರನ್ನು ಥಳಿಸಿ ಕೊಲ್ಲುವುದರಿಂದ ಅಥವಾ ಬೆತ್ತಲೆಗೊಳಿಸಿ ಅವಮಾನಿಸುವುದರಿಂದ ಗೋವುಗಳ ರಕ್ಪಣೆ ಸಾಧ್ಯವೇ? ಗೋವುಗಳ ಅಸುರಕ್ಷಿತತೆಗೆ ಮುಸ್ಲಿಮರು ನಿಜವಾಗಿಯೂ ಅಡ್ಡಿಯೇ? ಈ ದೇಶದ 70% ಮಂದಿ ಮಾಂಸಪ್ರಿಯರು ಎಂಬ ಕಟು ಸತ್ಯ ಎದುರಿಗಿದ್ದೂ ಮತ್ತು ಗೋಹತ್ಯೆ ನಿಷೇಧದ ಬಗ್ಗೆ ಮಾತಾಡುವ ಬಿಜೆಪಿಯೇ ಗೋಮಾಂಸವನ್ನು ಸಹಜ ಆಹಾರವೆಂದು ಒಪ್ಪಿಕೊಂಡು ವಿದೇಶಕ್ಕೆ ರಫ್ತು ಮಾಡುತ್ತಿರುವುದರ ಹೊರತಾಗಿಯೂ ದನಸಾಗಾಟದ ವಾಹನವನ್ನು ತಡೆದು ಥಳಿಸುವುದನ್ನು ಗೋಸಂರಕ್ಪಣೆಯ ಭಾಗವೆಂದು ನಂಬುವವರಿದ್ದಾರೆಂಬುದನ್ನು ಒಪ್ಪಿಕೊಳ್ಳಬಹುದೇ? ನಿಜಕ್ಕೂ ಇವರ ಉದ್ದೇಶ ಗೋಸಂರಕ್ಪಣೆಯೋ ಅಥವಾ ಮುಸ್ಲಿಮ್ ದ್ವೇಷವೋ? ವಾಹನಗಳಲ್ಲಿ ಸಾಗಾಟವಾಗುವ ಜುಜುಬಿ ಸಂಖ್ಯೆಯ ಜಾನುವಾರುಗಳನ್ನು ತಡೆಯುವುದರಿಂದ ಗೋಸಂಕುಲಗಳ ರಕ್ಪಣೆಯಾಗುತ್ತದೆಂಬ ಮುಗ್ಧ ಭಾವನೆ ಈ ದುಷ್ಕರ್ಮಿಗಳದ್ದೇ? ಯಾರು ಈ ಕ್ರೌರ್ಯದ ಹಿಂದಿದ್ದಾರೆ? ಅವರನ್ನೇಕೆ ಈ ಸಮಾಜ ಇನ್ನೂ ಗೌರವಿಸುತ್ತಿದೆ?
     ಲಕ್ಷ್ಮ ಣ್ ನಿಂಬರಗಿಯವರನ್ನು ಶ್ಲಾಘಿಸುತ್ತಲೇ ಗೋಸಂರಕ್ಪಣೆಯ ಹೆಸರಲ್ಲಿ ನಡೆಯುತ್ತಿರುವ ಏಕಮುಖ ಕ್ರೌರ್ಯದ ಅಪಾಯಗಳನ್ನು ಸಮಾಜದ ಎದೆಗೆ ಮುಟ್ಟಿಸಬೇಕಾಗಿದೆ.