Monday, 8 July 2024

ಮುಹಮ್ಮದ್ ಸಿರಾಜ್ ನ 'ಅಲ್ಲಾಹ್' ಗೆ ವಿರೋಧ ಏಕೆ?





ಭಾರತದಲ್ಲಿ ಮುಸ್ಲಿಮ್ ದ್ವೇಷ ಎಷ್ಟು ಆಳವಾಗಿದೆ ಎಂಬುದಕ್ಕೆ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮುಹಮ್ಮದ್ ಸಿರಾಜ್ ಒಂದೊಳ್ಳೆಯ  ಉದಾಹರಣೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಸಾಧನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿರುವಾಗ ಕೆಲವರಿಗೆ ಸಿರಾಜ್‌ನಲ್ಲಿ ಇಸ್ಲಾಮ್  ಕಾಣಿಸಿದೆ. ವಿಶ್ವಕಪ್ಪನ್ನು ಎತ್ತಿ ಹಿಡಿದ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಸಿರಾಜ್, Thank you Almighty Allah ಎಂದು ಬರಕೊಂಡಿದ್ದರು. ಇದನ್ನೇ ಅಪರಾಧವಾಗಿ ಕಂಡಿರುವ ಅನೇಕರು ಸಿರಾಜ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇದು  ಭಾರತೀಯ ತಂಡದ ಗೆಲುವೇ ಹೊರತು ಅಲ್ಲಾಹನದ್ದಲ್ಲ’ ಎಂದು ಓರ್ವ ಬರೆದರೆ, ‘ಅಲ್ಲಾಹನಿಂದ ಇದು ಸಾಧ್ಯ ಎಂದಾಗಿದ್ದರೆ  ಪಾಕಿಸ್ತಾನ ವಿಶ್ವಕಪ್ ಗೆಲ್ಲುತ್ತಿತ್ತೇ ಹೊರತು ಭಾರತವಲ್ಲ’ ಎಂದು ಇನ್ನೋರ್ವ ಬರೆದಿದ್ದಾನೆ. ‘ಭಾರತ ವಿಶ್ವಕಪ್ ಗೆದ್ದಿರೋದಕ್ಕೆ ಅ
ಲ್ಲಾಹನೂ  ಕಾರಣವಲ್ಲ, ಮುಸ್ಲಿಮ್ ಆಟಗಾರನೂ ಕಾರಣವಲ್ಲ’ ಎಂದು ಇನ್ನೋರ್ವ ಬರೆದಿದ್ದಾನೆ. ಇಂಥ ದ್ವೇಷಪೂರಿತ ಇನ್ನಷ್ಟು ಪ್ರತಿಕ್ರಿಯೆಗಳು ಸಿರಾಜ್  ಇನ್‌ಸ್ಟಾಗ್ರಾಮ್ ನಲ್ಲಿದೆ..  ನಿಜವಾಗಿ,

ಅತೀವ ಆನಂದದ ವೇಳೆ ವ್ಯಕ್ತಪಡಿಸುವ ಭಾವನೆಗಳನ್ನು ಸನ್ನಿವೇಶದಿಂದ ಬೇರ್ಪಡಿಸಿ ಓದುವುದೇ ತಪ್ಪು. ಗೆದ್ದ ಖುಷಿಯಲ್ಲಿದ್ದ ಸಿರಾಜ್ ದೇವನನ್ನು ನೆನಪಿಸಿಕೊಂಡಿದ್ದಾರೆ. ಅವರು ತಮ್ಮ ಭಾಷೆಯಲ್ಲಿ ದೇವನನ್ನು ಅಲ್ಲಾಹ್ ಅನ್ನುತ್ತಾರೆ. ಹಾಗೆಯೇ, ವಿರಾಟ್ ಕೊಹ್ಲಿ ದೇವನನ್ನು ಗಾಡ್  ಅನ್ನುತ್ತಾರೆ. ಅದು ಅವರ ಭಾಷೆ. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ವಿರಾಟ್ ಕೋಹ್ಲಿ ತನ್ನ ಸಂತಸವನ್ನು ವ್ಯಕ್ತಪಡಿಸಿರುವುದು ಹೀಗೆ:

This was my last T20 World Cup; this is exactly what we wanted to achieve. One day you feel like you can't get a run, and this happens, God is great..

ಕೊಹ್ಲಿ ಮತ್ತು ಸಿರಾಜ್ ಇಬ್ಬರೂ ತಮ್ಮ ತಂಡದ ಸಾಧನೆಗಾಗಿ ದೇವನನ್ನು ಸ್ಮರಿಸಿದ್ದಾರೆ. ಆದರೆ ಯಾರೂ ಕೊಹ್ಲಿಯನ್ನು ಟ್ರೋಲ್ ಮಾಡಿಲ್ಲ.  ‘ಫೈನಲ್ ಪಂದ್ಯದಲ್ಲಿ 76 ರನ್ ಮಾಡಿರುವುದು ಕೊಹ್ಲಿ, ಹೀಗಿರುವಾಗ, ದೇವನೇಕೆ ದೊಡ್ಡವನಾಗಬೇಕು, ಆಡಿದ್ದು ದೇವನಾ..’ ಎಂದು ಯಾರೂ  ಪ್ರಶ್ನಿಸಿಲ್ಲ. ಆದರೆ ಸಿರಾಜ್ ಅದನ್ನೇ ತನ್ನ ಭಾಷೆಯಲ್ಲಿ ಹೇಳಿದಾಗ ಅದು ಮಹಾ ಅಪರಾಧವಾಗುತ್ತದೆ. ಮಾತ್ರವಲ್ಲ, ದೇವರು ಒಂದುವೇಳೆ ಗೆಲ್ಲಿಸುವುದಾದರೆ, ಪಾಕಿಸ್ತಾನವನ್ನು ಗೆಲ್ಲಿಸಬೇಕೇ ಹೊರತು ಭಾರತವನ್ನಲ್ಲ ಎಂಬ ಅತೀ ಕಳಪೆ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುತ್ತಾರೆ. ಅಲ್ಲಾಹ್  ಎಂದರೆ ಮುಸ್ಲಿಮರ ದೇವ ಮತ್ತು ಆತ ಮುಸ್ಲಿಮ್ ಪಕ್ಷಪಾತಿ ಎಂಬ ಅವರ ಅಪಕ್ವ ಆಲೋಚನೆಯೇ ಈ ರೀತಿಯ ಪ್ರತಿಕ್ರಿಯೆಗೆ ಮೂಲ  ಕಾರಣ.

ಈ ಬಾರಿ ಸಂಸತ್ ಸದಸ್ಯರ ಪ್ರಮಾಣ ವಚನದ ವೇಳೆ ಪ್ರಮುಖ ಕ್ರಿಕೆಟ್ ಆಟಗಾರ ಯೂಸುಫ್ ಪಠಾಣ್ ಅವರು ‘ಈಶ್ವರನ’ ಹೆಸರಲ್ಲಿ ಪ್ರತಿಜ್ಞೆ  ಸ್ವೀಕರಿಸಿದರು. ಹಾಗಂತ, ಯೂಸುಫ್ ಪಠಾಣ್ ಹಿಂದೂ ಅಲ್ಲ. ಅವರ ತಂದೆ ಓರ್ವ ಧರ್ಮಗುರು. ಧೋನಿ ನೇತೃತ್ವದ ತಂಡ 2007ರಲ್ಲಿ  ಟಿ20 ವಿಶ್ವಕಪ್ ಗೆದ್ದಾಗ ಅದರ ಭಾಗವಾಗಿದ್ದವರು ಇದೇ ಯೂಸುಫ್ ಪಠಾಣ್. ಧಾರ್ಮಿಕ ಕುಟುಂಬದಿಂದ  ಬಂದ ಮತ್ತು ಧರ್ಮವನ್ನು  ನಿಷ್ಠೆಯಿಂದ ಅನುಸರಿಸುವ ಯೂಸುಫ್ ಪಠಾಣ್, ಅಲ್ಲಾಹನನ್ನು ಈಶ್ವರ್ ಅಂದರು. ಸಿರಾಜ್ ನೇರವಾಗಿಯೇ ಅಲ್ಲಾಹ್ ಅಂದರು. ಎರಡರ  ಅರ್ಥವೂ ಭಿನ್ನವಾಗಿಲ್ಲ. ಅಲ್ಲದೆ, ಅಲ್ಲಾಹನನ್ನು ಈಶ್ವರ್ ಎಂದ ಯೂಸುಫ್ ಪಠಾಣ್‌ರನ್ನೂ ಮುಸ್ಲಿಮರು ಟೀಕಿಸಿಲ್ಲ, ಸಿರಾಜ್‌ನನ್ನೂ ಟೀಕಿಸಿಲ್ಲ.  ಯಾಕೆಂದರೆ, ಅಲ್ಲಾಹ್ ಎಂಬ ಪದದ ಅರ್ಥ ಏನು ಅನ್ನುವುದು ಅವರಿಗೆ ಗೊತ್ತಿದೆ. ಸರ್ವಶಕ್ತ, ಸೃಷ್ಟಿಕರ್ತ, ದೇವ ಎಂಬ ಅರ್ಥದಲ್ಲಿ  ಮುಸ್ಲಿಮರು ಅಲ್ಲಾಹ್ ಎಂಬ ಪದ ಬಳಸುತ್ತಾರೆ. ಅಲ್ಲಾಹ್ ಎಂದರೆ, ಮುಸ್ಲಿಮರ ದೇವ ಮತ್ತು ಈಶ್ವರ್ ಅಂದರೆ ಹಿಂದೂಗಳ ದೇವ ಎಂಬ  ಅರ್ಥ ಇಲ್ಲವೇ ಇಲ್ಲ. ಹಾಗಂತ, ಸಿರಾಜ್‌ನನ್ನು ಟೀಕಿಸಿದವರಿಗೆ ಈ ವ್ಯತ್ಯಾಸ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಈ ಟೀಕೆ ಈಗಾಗಲೇ ಈ ದೇಶದಲ್ಲಿ ಬೆಂಕಿ ಕೊಟ್ಟು ಹೊತ್ತಿಸಿ ಬಿಡಲಾಗಿರುವ ಮುಸ್ಲಿಮ್ ದ್ವೇಷಭಾವದ ಫಲಿತಾಂಶ ಎಂದು ಹೇಳುವುದೇ ಹೆಚ್ಚು ಸರಿ. ಯಾಕೆಂದರೆ,

ಈ ಬಗೆಯ ದ್ವೇಷಭಾವ ವ್ಯಕ್ತವಾಗಿರುವುದು ಇದೇ ಮೊದಲಲ್ಲ. 2021 ಅಕ್ಟೋಬರ್‌ನಲ್ಲೂ ಇಂಥದ್ದೇ  ಮುಸ್ಲಿಮ್ ದ್ವೇಷ ವ್ಯಕ್ತವಾಗಿತ್ತು. ಆಗ  ನಿಂದನೆಗೆ ಗುರಿಯಾದದ್ದು ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ  ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಶಮಿಯ ಬೌಲಿಂಗ್ ಉತ್ತಮವಾಗಿರಲಿಲ್ಲ. ಪಾಕ್ ತಂಡ ಹತ್ತು ವಿಕೆಟ್‌ಗಳಿಂದ ಆ ಪಂದ್ಯವನ್ನು  ಗೆದ್ದುಕೊಂಡಿತ್ತು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಶಮಿಯನ್ನು ತೀವ್ರವಾಗಿ ನಿಂದಿಸಲಾಯಿತು. ದ್ರೋಹಿ, ಪಾಕ್ ಬೆಂಬಲಿಗ, ಮ್ಯಾಚ್  ಫಿಕ್ಸಿಂಗ್ ಮಾಡಿದವ ಎಂದೆಲ್ಲಾ ಜರೆಯಲಾಯಿತು. ಹಾಗಂತ, ಆ ಪಂದ್ಯ ಸೋಲುವುದಕ್ಕೆ ಶಮಿ ಒಬ್ಬರೇ ಕಾರಣವಾಗಿರಲಿಲ್ಲ. ಬ್ಯಾಟುಗಾರರೂ  ಕಾರಣವಾಗಿದ್ದರು. ಇತರ ಬೌಲರ್‌ಗಳೂ ಕಾರಣವಾಗಿದ್ದರು. ಆದರೆ, ಅವೆಲ್ಲವನ್ನೂ ಅಡಗಿಸಿ ದುಬಾರಿ ಒಂದು ಓವರನ್ನೇ ಕಟಕಟೆಯಲ್ಲಿ ನಿಲ್ಲಿಸಿದುದೇಕೆ ಎಂಬ ಪ್ರಶ್ನೆಗೆ ಉತ್ತರ ಬೇರೇನೂ ಅಲ್ಲ- ಮುಸ್ಲಿಮ್ ದ್ವೇಷ. ನಿಜವಾಗಿ,

ಈ ದೇಶದಲ್ಲಿ ಮುಸ್ಲಿಮ್ ದ್ವೇಷ ಆಳವಾಗಿದೆ. ರಾಜಕೀಯ ಕಾರಣಕ್ಕಾಗಿ ಮಣ್ಣು, ನೀರು, ಗೊಬ್ಬರ ಹಾಕಿ ಬೆಳೆಸಲಾದ ಈ ದ್ವೇಷವೆಂಬ ಸಸಿ  ಇವತ್ತು ಬೆಳೆದು ಹೆಮ್ಮರವಾಗಿದೆ. ಪ್ರತಿಯೊಂದರಲ್ಲೂ ಮುಸ್ಲಿಮ್ ದ್ವೇಷಕ್ಕೆ ಕಾರಣವನ್ನು ಹುಡುಕುವ ಅಪಾಯಕಾರಿ ಗುಂಪು ತಯಾರಾಗಿದೆ.  ಅಂದಹಾಗೆ, ಇಂಥ ಗುಂಪಿನಲ್ಲಿರುವವರ ಸಂಖ್ಯೆ ಸಣ್ಣದು ಎಂದು ಹೇಳಿ ನಮಗೆ ತಿರಸ್ಕರಿಸಬಹುದು. ಆದರೆ, ಈ ಸಣ್ಣ ಗುಂಪು ಸಮಾಜದ  ಮೇಲೆ ಬೀರುತ್ತಿರುವ ಪರಿಣಾಮಗಳು ಸಣ್ಣದಲ್ಲ ಮತ್ತು ಇಂಥವರು ತೀರಾ ಜನಸಾಮಾನ್ಯರೂ ಅಲ್ಲ. ಸಿರಾಜ್ ವಿರುದ್ಧ ವೆರಿಫೈಡ್  ಖಾತೆಗಳಿಂದಲೇ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದೇ ಈ ಗುಂಪಿನ ಆಳ-ಅಗಲವನ್ನು ತಿಳಿಸುತ್ತದೆ. ಇಂಥ ಗುಂಪಿನ ಸಂಖ್ಯೆ ಎಷ್ಟೇ ಸಣ್ಣದಿರಲಿ,  ಅದು ತನ್ನ ದ್ವೇಷ ಭಾವವನ್ನು ಜನಸಾಮಾನ್ಯರ ಬಳಿಗೂ ತಲುಪಿಸುವಷ್ಟು ಪ್ರಭಾವಶಾಲಿಯಾಗಿದೆ. ದ್ವೇಷಕ್ಕೆ ಪೂರಕವಾದ ಏನೂ ಇಲ್ಲದಿದ್ದರೂ  ಅನಾವಶ್ಯಕವಾಗಿ ಅಂಥದ್ದೊಂದು  ಭಾವವನ್ನು ಸೃಷ್ಟಿಸಿ ಹಂಚುವುದು ಇಂಥ ಗುಂಪಿನ ಪೂರ್ಣಕಾಲಿಕ ಉದ್ಯೋಗ. ಮುಸ್ಲಿಮ್ ಜನಸಾಮಾ ನ್ಯರಿಂದ ಹಿಡಿದು ಸಿನಿಮಾ ರಂಗ, ಕ್ರೀಡಾ ರಂಗ, ಕಲಾರಂಗ, ಅಧಿಕಾರಿ ವರ್ಗ ಸಹಿತ ಎಲ್ಲರನ್ನೂ ಹಿಂದೂ ವಿರೋಧಿಗಳಂತೆ ಅಥವಾ  ಕರ್ಮಠರಂತೆ ಚಿತ್ರಿಸುವುದನ್ನು ಈ ಗುಂಪು ಮಾಡುತ್ತಾ ಬರುತ್ತಿದೆ. ಮಾತ್ರವಲ್ಲ, ಮುಸ್ಲಿಮರ ಜೊತೆ ಸ್ನೇಹಮಯ ಸಂಬಂಧವನ್ನು ಹೊಂದಿರುವ  ಮತ್ತು ಮುಸ್ಲಿಮ್ ದ್ವೇಷಭಾವವನ್ನು ಪ್ರಶ್ನಿಸುವ ಹಿಂದೂಗಳನ್ನೂ ಈ ಗುಂಪು ಟ್ರೋಲ್ ಮಾಡುತ್ತಿದೆ. ಈ ಗುಂಪಿಗೆ ಆಯಕಟ್ಟಿನ ಜಾಗದಲ್ಲಿರುವವರ ಬೆಂಬಲವೂ ಇದೆ. ರಾಜಕೀಯ ಆಶ್ರಯವೂ ಸಿಗುತ್ತಿದೆ. ಆದ್ದರಿಂದ,

ಗುಂಪು  ಸಣ್ಣದಾಗಿದ್ದರೂ ಅದು ಹುಟ್ಟು ಹಾಕುವ ಕಲ್ಪಿತ ಬರಹಗಳು ಮತ್ತು ಪ್ರತಿಕ್ರಿಯೆಗಳು ತಳಮಟ್ಟದ ಜನಸಾಮಾನ್ಯರನ್ನು ತಲುಪಬಲ್ಲಷ್ಟು  ಶಕ್ತಿಶಾಲಿಯಾಗಿದೆ. ಈ ಕಾರಣದಿಂದಲೇ ಸಿರಾಜ್‌ರ ವಿರುದ್ಧ ವ್ಯಕ್ತವಾಗಿರುವ ದ್ವೇಷಭಾವದ ಪ್ರತಿಕ್ರಿಯೆಗಳು ಮಹತ್ವ ಪಡೆಯುತ್ತವೆ. 11 ಮಂದಿಯ  ಸಾಂಘಿಕ ಆಟವಾಗಿ ಗುರುತಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಒಬ್ಬ ಮುಸ್ಲಿಮನ ಒಂದು ಬಾರಿಯ ಕಳಪೆ ಪ್ರದರ್ಶನವನ್ನು ಹೆಕ್ಕಿ ಜರೆಯುವುದೆಂದರೆ,  ಅದಕ್ಕೆ ಆಟದ ಮೇಲಿನ ಪ್ರೀತಿ ಕಾರಣ ಎಂದು ಹೇಳುವುದಕ್ಕಿಂತ ಆಟಗಾರನ ಧರ್ಮದ ಮೇಲಿನ ದ್ವೇಷವೇ ಕಾರಣ ಅನ್ನುವುದೇ ಸರಿ. ಇದಕ್ಕೆ  ಓರ್ವ ಸಿರಾಜ್ ಮಾತ್ರ ಉದಾಹರಣೆಯಲ್ಲ. ಮುಹಮ್ಮದ್ ಶಮಿಯನ್ನೂ ಹೀಗೆಯೇ ನಡೆಸಿಕೊಳ್ಳಲಾಗಿದೆ. ಮಾತ್ರವಲ್ಲ, ದೇಶದಾದ್ಯಂತ  ಮುಸ್ಲಿಮರ ಮೇಲೆ ಆಗುತ್ತಿರುವ ಅನ್ಯಾಯ-ದೌರ್ಜನ್ಯ ಮತ್ತು ಸುಳ್ಳು ಪ್ರಚಾರಗಳಲ್ಲೂ ಇದು ವ್ಯಕ್ತವಾಗುತ್ತಿದೆ. ನಿಜವಾಗಿ,

ಸಮಸ್ಯೆ ಸಿರಾಜ್‌ನ ಅಲ್ಲಾಹನದ್ದಲ್ಲ. ಈ ಅಲ್ಲಾಹನನ್ನು ದ್ವೇಷಿಸುತ್ತಿರುವ ನಿರ್ದಿಷ್ಟ ಮನಸ್ಥಿತಿಯದ್ದು. ಅಲ್ಲಾಹ್, ಈಶ್ವರ್, ಗಾಡ್ ಎಂಬುದೆಲ್ಲಾ  ದೇವನನ್ನು ಸಂಬೋಧಿಸುವ ವಿವಿಧ ಪದಗಳು ಎಂಬುದನ್ನು ಈ ಗುಂಪಿಗೆ ತಿಳಿಸಿಕೊಡಬೇಕಾದ ಅಗತ್ಯವೂ ಇಲ್ಲ. ಯಾಕೆಂದರೆ, ಗೊತ್ತಿದ್ದೇ  ಈ  ಗುಂಪು ಧರ್ಮ ದ್ವೇಷಕ್ಕೆ ಇಳಿದಿದೆ. ಒಂದುವೇಳೆ, ಅಲ್ಲಾಹ್ ಎಂಬ ಪದದ ಬದಲು ಈಶ್ವರ್ ಎಂದು ಸಿರಾಜ್ ಬರೆದುಕೊಂಡಿರುತ್ತಿದ್ದರೆ ಇದೇ  ಗುಂಪು ಸಿರಾಜ್‌ನನ್ನು ಹಾಡಿ ಹೊಗಳುತ್ತಿತ್ತು ಎಂಬುದಕ್ಕೆ ವಿಶೇಷ ಅಧ್ಯಯನವೇನೂ ಬೇಕಾಗಿಲ್ಲ.

ಮುಹರ‍್ರಮ್: ಇಸ್ಲಾಮೀ ಕ್ಯಾಲೆಂಡರ್‌ನ ಪ್ರಥಮ ತಿಂಗಳಾಗುವುದಕ್ಕೆ ಕಾರಣ ಏನು?





ಕ್ರಿ.ಶ. 622, ಮುರ‍್ರಮ್ 1ರಂದು ಪ್ರವಾದಿ(ಸ) ಮತ್ತು ಅವರ ಸಂಗಡಿಗ ಅಬೂಬಕರ್(ರ)ರು ಮಕ್ಕಾದಿಂದ ಮದೀನಾಕ್ಕೆ ಐತಿಹಾಸಿಕ ವಲಸೆ  (ಹಿಜ್‌ರಾ) ಆರಂಭಿಸಿದ್ದರು. ಬಳಿಕ ದ್ವಿತೀಯ ಖಲೀಫಾ ಉಮರ್(ರ)ರು ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿ ಮುಹರ‍್ರಮ್ ಅನ್ನೇ  ಆಯ್ಕೆ ಮಾಡಿಕೊಂಡರು. ಇಲ್ಲೊಂದು  ಪ್ರಶ್ನೆಯಿದೆ. ಯಾಕೆ ಪ್ರವಾದಿ(ಸ)ರ ಹಿಜ್‌ರಾ ದಿನಾಂಕವನ್ನೇ ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ  ತಿಂಗಳಾಗಿ ಆಯ್ಕೆ ಮಾಡಿಕೊಳ್ಳಲಾಯಿತು? 

ಇಸ್ಲಾಮೀ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾದ ಬದ್ರ್ ಹೋರಾಟ ನಡೆದಿರುವುದು  ರಮಝಾನ್ 17ರಂದು. ಇಸ್ಲಾಮೀ ಇತಿಹಾಸದ ಬಹುಮುಖ್ಯ ಮಗ್ಗುಲಾದ ಹುದೈಬಿಯಾ ಒಪ್ಪಂದ ನಡೆದಿರುವುದು ದುಲ್ ಕಅದ್ 6ರಂದು.  ಕ್ರಿ.ಶ. 630ರ ರಮಝಾನ್‌ನಲ್ಲಿ ಇಸ್ಲಾಮೀ ಇತಿಹಾಸದ ಮೈಲುಗಲ್ಲೆಂದೇ  ವಿಶ್ಲೇಷಿಸಲಾಗುವ ಮಕ್ಕಾ ವಿಜಯ ದೊರಕಿದೆ. ಇದಲ್ಲದೇ, ಇಸ್ಲಾಮೀ  ಇತಿಹಾಸದಲ್ಲಿ ಇಂಥ ಇನ್ನೂ ಒಂದಕ್ಕಿಂತ  ಹೆಚ್ಚು ಘಟನೆಗಳಿವೆ. ಆದರೆ, ಇವಾವುದನ್ನೂ ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಿಗೆ  ಆಧಾರವಾಗಿ ಖಲೀಫಾ ಉಮರ್(ರ) ಬಳಸಿಕೊಳ್ಳದಿರಲು ಕಾರಣವೇನು? ಬದ್ರ‍್ ನಲ್ಲಿ  ಇಲ್ಲದ ಏನನ್ನು ಅವರು ಹಿಜ್‌ರಾದಲ್ಲಿ ಕಂಡುಕೊಂಡರು?  ಮಕ್ಕಾ ವಿಜಯಕ್ಕಿಂತ ಹಿಜ್‌ರಾ ಮುಖ್ಯವಾಗುವುದಕ್ಕೆ ಕಾರಣ ಏನಿರಬಹುದು?

ನಿಜವಾಗಿ, ತನ್ನ 53ನೇ ಪ್ರಾಯದಲ್ಲಿ ಪ್ರವಾದಿ(ಸ) ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗಲು ತೀರ್ಮಾನಿಸುತ್ತಾರೆ. ಅದಾಗಲೇ ಮಕ್ಕಾದಲ್ಲಿದ್ದ  ಹೆಚ್ಚಿನ ಪ್ರವಾದಿ(ಸ) ಅನುಯಾಯಿಗಳು ಮದೀನಾಕ್ಕೆ ವಲಸೆ ಹೋಗಿದ್ದರು. ಉಳಿದವರೂ ಮಕ್ಕಾವನ್ನು ಬಿಡಲಿದ್ದಾರೆ ಎಂಬುದು ಪ್ರವಾದಿ  ವಿರೋಧಿಗಳಿಗೆ ದಿಟವಾಗಿತ್ತು. ಆದ್ದರಿಂದ, ಈ ವಲಸೆಯನ್ನು ತಡೆಯಬೇಕು ಮತ್ತು ಅದಕ್ಕಾಗಿ ಪ್ರವಾದಿಯನ್ನು(ಸ) ವಧಿಸಬೇಕು ಎಂಬ ಸಂಚನ್ನು ಅವರು ಹೂಡಿದರು. ಎಲ್ಲ ಬುಡಕಟ್ಟುಗಳಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಿ, ಗುಂಪು ರಚಿಸಿ  ಅರ್ಧರಾತ್ರಿ ಪ್ರವಾದಿ(ಸ) ಮನೆಯ ಸುತ್ತ ನಿಲ್ಲಿಸಿದರು.  ಪ್ರವಾದಿ(ಸ) ಹತ್ಯೆಯ ಬಳಿಕ ಸಂಭಾವ್ಯ ಪ್ರತೀಕಾರವನ್ನು ಈ ವಿರೋಧಿಗಳು ನಿರೀಕ್ಷಿಸಿದ್ದರು. ಆದರೆ ಮಕ್ಕಾದ ಎಲ್ಲ ಬುಡಕಟ್ಟುಗಳೂ ಜೊತೆ  ಸೇರಿ ಹತ್ಯೆ ನಡೆಸಿದರೆ ಪ್ರವಾದಿಯ ಹಾಶಿಮ್ ಮನೆತನಕ್ಕೆ ಈ ಎಲ್ಲ ಬುಡಕಟ್ಟುಗಳ ವಿರುದ್ಧ ಪ್ರತೀಕಾರ ತೀರಿಸಲು ಸಾಧ್ಯವಿಲ್ಲ ಎಂಬ ತಂತ್ರದ  ಭಾಗವಾಗಿಯೇ ಈ ವಿಶೇಷ ಗುಂಪನ್ನು ರಚಿಸಲಾಗಿತ್ತು. ಈ ಷಡ್ಯಂತ್ರವನ್ನು ಅಲ್ಲಾಹನು ಪ್ರವಾದಿಗೆ(ಸ) ತಿಳಿಸಿರುವುದನ್ನು ಪವಿತ್ರ ಕುರ್‌ಆನ್  (8:30) ಉಲ್ಲೇಖಿಸಿದೆ. ಪ್ರವಾದಿ ಹಿಡಿ ಮರಳನ್ನು ತೆಗೆದು ತನ್ನ ಮನೆ ಎದುರು ನಿಂತಿದ್ದ ಹತ್ಯೆಕೋರ ಗುಂಪಿನ ಮೇಲೆ ಎಸೆಯುತ್ತಾರೆ ಮತ್ತು  ಅವರ ಮುಂದೆಯೇ ಪ್ರವಾದಿ(ಸ) ಆ ರಾತ್ರಿ ಹೊರಟು ಹೋಗುತ್ತಾರೆ ಎಂಬುದು ಇಸ್ಲಾಮೀ ಇತಿಹಾಸದಲ್ಲಿ ದಾಖಲಾಗಿದೆ. ಅಲ್ಲದೇ, ವಲಸೆಯ  ಭಾಗವಾಗಿ ಪ್ರವಾದಿ(ಸ) ತನ್ನ ಸಂಗಾತಿ ಅಬೂಬಕರ್(ರ) ಜೊತೆ ತೂರ್ ಎಂಬ ಗುಹೆಯಲ್ಲಿ ಮೂರು ದಿನಗಳ ಕಾಲ ತಂಗಿದಾಗ ಗುಹೆಯ  ದ್ವಾರದಲ್ಲಿ ಪಾರಿವಾಳ ಗೂಡು ಕಟ್ಟಿ ಮೊಟ್ಟೆ ಇಡುವುದು, ಜೇಡ ಬಲೆ ಕಟ್ಟುವುದೂ ನಡೆಯುತ್ತದೆ. ಆ ಮೂಲಕ ಇವರನ್ನು ಹುಡುಕಿಕೊಂಡು  ಬಂದ ಶತ್ರುಗಳು ಈ ಗುಹೆಯಲ್ಲಿ ಅವರಿರಲು ಸಾಧ್ಯವಿಲ್ಲ ಎಂದು ತೀರ್ಮಾನಿಸುತ್ತಾರೆ. ಪ್ರವಾದಿಯನ್ನು ಹುಡುಕಿಕೊಂಡು ಬಂದ ಸುರಾಕಾ  ಎಂಬವನ ಕುದುರೆಯ ಕಾಲು ಮರಳಿನಲ್ಲಿ ಹೂತು ಹೋಗುವುದು ಮತ್ತು ವಲಸೆಯ ದಾರಿಯಾಗಿ ಪ್ರವಾದಿಯವರು(ಸ) ಉಮ್ಮು ಮುಆದ್‌ರ  ಮನೆಯಲ್ಲಿ ತಂಗುವುದು, ಅವರ ಸಣಕಲು ಆಡು ದಷ್ಟಪುಷ್ಟವಾಗಿ ಹಾಲು ನೀಡುವುದೂ ನಡೆಯುತ್ತದೆ. ಆದರೆ,
ಈ ಪವಾಡಗಳ ಆಚೆಗೆ, ಹಿಜ್‌ರಾ ಮುಖ್ಯವಾಗುವುದು ಪ್ರವಾದಿಯ(ಸ) ದೂರದೃಷ್ಟಿ, ಧೈರ್ಯ, ಪ್ರತಿತಂತ್ರ, ಆತ್ಮವಿಶ್ವಾಸ ಮತ್ತು ಪ್ರಾಯೋಗಿಕ  ವಿಧಾನಗಳಿಗಾಗಿ ಎಂದೇ ಹೇಳಬಹುದು. 

ತನ್ನ ಮನೆಯ ಸುತ್ತ ನಿಂತಿದ್ದ ಹತ್ಯೆಕೋರ ಗುಂಪಿನ ಕಡೆಗೆ ಮರಳನ್ನೆಸೆದು ಆ ಅರ್ಧರಾತ್ರಿ ಹೊರಟು  ಹೋಗುವ ಮೊದಲು ಪ್ರವಾದಿ(ಸ) ತನ್ನ ಜಾಗದಲ್ಲಿ ಆಪ್ತ ಅಲಿ(ರ)ರನ್ನು ಮಲಗಿಸಿದ್ದರು. ತನ್ನನ್ನು ಕೊಲ್ಲಲೆಂದು ಮನೆಯನ್ನು ಸುತ್ತುವರಿದು  ನಿಂತವರು ತಾನಿನ್ನೂ ಮನೆಯೊಳಗೆ ಮಲಗಿದ್ದೇನೆಂದು ಭಾವಿಸಲಿ ಎಂಬುದು ಅವರ ಉದ್ದೇಶವಾಗಿತ್ತು. ಅಲ್ಲಾಹನ ಸಹಾಯದ  ಹೊರತಾಗಿಯೂ ಪ್ರವಾದಿ(ಸ) ಇಂಥ ದ್ದೊಂದು ಪ್ರತಿತಂತ್ರವನ್ನು ಹೆಣೆದರು ಎಂಬುದು ಇಲ್ಲಿ ಬಹಳ ಮುಖ್ಯ. ಆ ಬಳಿಕ ಪ್ರವಾದಿ(ಸ)  ನೇರವಾಗಿ ಮದೀನಾದ ಕಡೆಗೆ ನಡೆಯಲಿಲ್ಲ. ಮದೀನಾಕ್ಕೆ ತೀರಾ ವಿರುದ್ಧ ದಾರಿಯಲ್ಲಿ ಸಾಗಿ ತೂರ್ ಎಂಬ ಗುಹೆಯ ಒಳಗೆ ಅಡಗಿಕೊಂಡರು.  ಬೆನ್ನಟ್ಟಿ ಬರುವ ಶತ್ರುಗಳ ದಾರಿ ತಪ್ಪಿಸುವುದೇ ಇದರ ಗುರಿಯಾಗಿತ್ತು. ಬಳಿಕ ಬೆನ್ನಟ್ಟಿ ಬಂದ ಶತ್ರುಗಳು ಈ ಗುಹೆಯ ಸಮೀಪಕ್ಕೆ ಬಂದುದು  ಮತ್ತು ಅವರ ಕಾಲ ಸಪ್ಪಳ ಕೇಳಿಸುವುದೂ ನಡೆಯಿತು. ಸಂಗಡಿಗ ಅಬೂಬಕರ್ ಆತಂಕಿತರಾದರು. ಶತ್ರುಗಳು ಇಣುಕಿ ನೋಡಿಬಿಟ್ಟರೆ ಎಂಬ  ಭಯವನ್ನು ಅವರು ತೋಡಿಕೊಂಡರು. ಆಗ, ‘ಭಯ ಪಡಬೇಡಿ, ಅಲ್ಲಾಹನು ನಮ್ಮ ಜೊತೆ ಇದ್ದಾನೆ’ (9:40) ಎಂದು ಪ್ರವಾದಿ(ಸ) ಸಾಂತ್ವನ ಪಡಿಸುವುದು ಕುರ್‌ಆನ್ ನಲ್ಲಿದೆ. ಶತ್ರುಗಳ ತಂತ್ರಕ್ಕೆ ಪ್ರತಿತಂತ್ರವನ್ನು ಹೆಣೆದ ಬಳಿಕ ಅಲ್ಲಾಹನ ಮೇಲೆ ಅಚಂಚಲ ಮತ್ತು ಕಲ್ಮಶವಿಲ್ಲದ ವಿಶ್ವಾಸ  ಇಟ್ಟುಕೊಳ್ಳಬೇಕು ಎಂಬ ಅತಿ ಪ್ರಬಲವಾದ ಸಂದೇಶವನ್ನು ಅವರು ನೀಡಿದರು. ಶತ್ರುಗಳು ಕೈಯಳತೆಯ ದೂರವಷ್ಟೇ ಇದ್ದಾಗ ಪ್ರವಾದಿ ಈ  ಆತ್ಮವಿಶ್ವಾಸದ ಮಾತನ್ನಾಡಿದ್ದರು ಎಂಬುದು ಇಲ್ಲಿ ಬಹಳ ಮುಖ್ಯ. ಅಲ್ಲಿಂದ ಪ್ರವಾದಿ(ಸ) ಮತ್ತು ಅಬೂಬಕರ್ ಹೊರಟು ಹೋಗುತ್ತಾರೆ. ಇತ್ತ  ಅವರನ್ನು ಹುಡುಕಿ ನಿರಾಶರಾದ ಶತ್ರುಗಳು ಅವರನ್ನು ಪತ್ತೆ ಹಚ್ಚುವವರಿಗೆ 100 ಒಂಟೆಗಳ ಇನಾಮು ಘೋಷಿಸುತ್ತಾರೆ. ಇದರಿಂದ ಪ್ರೇರಿತನಾದ  ಸುರಾಕಾ ಎಂಬ ಮರಳುಗಾಡಿನ ಚತುರ ವ್ಯಕ್ತಿ ಪ್ರವಾದಿ(ಸ)ರ ಬೆನ್ನಟ್ಟುತ್ತಾರೆ. ಮಾತ್ರವಲ್ಲ, ಪ್ರವಾದಿಯ ಹತ್ತಿರಕ್ಕೂ ತಲುಪುತ್ತಾರೆ. ಆದರೆ ಅವರ  ಕುದುರೆಯ ಕಾಲು ಮರಳಿನಲ್ಲಿ ಹೂತು ಹೋಗುತ್ತದೆ. ಆಗ ಪ್ರವಾದಿ(ಸ) ಈ ಸುರಾಕಾನಲ್ಲಿ ಹೀಗೆ ಹೇಳುತ್ತಾರೆ,

 ‘ಒಂದು ದಿನ ರೋಮ್‌ನ  ಚಕ್ರಾಧಿಪತಿ ಕಿಸ್ರಾನ ಕೈಬಳೆ ನಿನ್ನ ಕೈಗೆ ಬರಲಿದೆ.’ ಅಂದರೆ ನಿನ್ನ ಜೀವಂತ ಕಾಲದಲ್ಲೇ  ರೋಮ್ ಸಾಮ್ರಾಜ್ಯವು ಇಸ್ಲಾಮೀ ಸಾಮ್ರಾಜ್ಯದ ಅಧೀನಕ್ಕೆ ಒಳಪಡಲಿದೆ ಎಂದು ಅರ್ಥ. ಇದು ಆ ಬಳಿಕ ನಿಜವೂ ಆಯಿತು. ನಿಜವಾಗಿ,
ಸುರಾಕಾನಲ್ಲಿ ಇಂಥದ್ದೊಂದು  ಮಾತನ್ನು ಹೇಳುವಾಗ ಪ್ರವಾದಿಗೆ(ಸ) ಮಕ್ಕಾದಲ್ಲಿ ಅಸ್ತಿತ್ವವೇ ಇರಲಿಲ್ಲ. ಮದೀನಾ  ಹೇಗೆ ಸ್ವೀಕರಿಸುತ್ತದೆ  ಎಂಬುದೂ ಅವರಿಗೆ ದೃಢವಿರಲಿಲ್ಲ. ತನ್ನದೆಂದು ಹೇಳಿಕೊಳ್ಳುವ ಒಂದು ಊರೇ ಇಲ್ಲದ ಸಮಯದಲ್ಲೂ ಪ್ರವಾದಿ(ಸ) ಆಡಿರುವ ಈ  ಮಾತುಗಳು ಓರ್ವ ಸತ್ಯವಿಶ್ವಾಸಿಯಲ್ಲಿ ಇರಬೇಕಾದ ಆತ್ಮವಿಶ್ವಾಸ, ದೂರದೃಷ್ಟಿ ಮತ್ತು ಅಚಲ ದೇವವಿಶ್ವಾಸದ ಮಹತ್ವವನ್ನು ಹೇಳುತ್ತದೆ.  ಒಂದುರೀತಿಯಲ್ಲಿ,

ಅಲ್ಲಾಹನ ಮಾರ್ಗದರ್ಶನದ ಹೊರತಾಗಿಯೂ ಪ್ರವಾದಿ(ಸ) ಹಲವು ಪ್ರಾಯೋಗಿಕ ಮತ್ತು ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡರು.  ಸಾಂದರ್ಭಿಕ ತಂತ್ರಗಳನ್ನು ಹೆಣೆದರು. ಅತ್ಯಪೂರ್ವವಾದ ದೂರದೃಷ್ಟಿಯನ್ನೂ ಹೊಂದಿದ್ದರು. ಜೊತೆಗೇ ಅಲ್ಲಾಹನ ಮೇಲೆ ಅಚಂಚಲವಾದ  ವಿಶ್ವಾಸವನ್ನೂ ಇಟ್ಟಿದ್ದರು. ಓರ್ವ ನಾಯಕ ಹೇಗಿರಬೇಕು ಮತ್ತು ಅತ್ಯಂತ ಸವಾಲಿನ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳ ಮನಸ್ಥಿತಿ ಏನಿರಬೇಕು  ಎಂಬುದನ್ನು ಹಿಜ್‌ರಾ ಸ್ಪಷ್ಟಪಡಿಸುತ್ತದೆ. ಸುತ್ತುವರಿದಿರುವ ಶತ್ರುಗಳು ಇನ್ನೇನು ಗುರಿ ಸಾಧಿಸಿಯೇ ಬಿಡುತ್ತಾರೆ ಎಂಬಂತ  ಸ್ಥಿತಿಯಿದ್ದರೂ ಸ್ಥಿಮಿತ  ಕಳಕೊಳ್ಳದೇ ಪ್ರತಿತಂತ್ರವನ್ನು ಹೂಡುವುದು ಮತ್ತು ಅಲ್ಲಾಹನ ಮೇಲೆ ಅಣುವಿನಷ್ಟೂ ಕಲ್ಮಶವಿಲ್ಲದ ವಿಶ್ವಾಸವನ್ನು ಹೊಂದುವುದೇ ಮುಹರ‍್ರಮ್‌ನ  ಪಾಠ. ಬದ್ರ‍್ ನಲ್ಲಿ  ಪ್ರವಾದಿಯ ಜೊತೆ 313 ಮಂದಿ ಅನುಯಾಯಿಗಳು ಇದ್ದರು. ಹುದೈಬಿಯಾ ಒಪ್ಪಂದದ ವೇಳೆ 1400ರಷ್ಟು ಸಂಗಡಿಗರಿದ್ದರು.  ಮಕ್ಕಾ ವಿಜಯದ ಸಮಯದಲ್ಲಂತೂ ಈ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿತ್ತು. ಆದರೆ, ಮುಹರ‍್ರಂ 1ರಂದು ನಡೆದ ಹಿಜ್‌ರಾ ಹಾಗಲ್ಲ. ಪ್ರವಾದಿ  ಮುಹಮ್ಮದ್(ಸ) ಮತ್ತು ಅಬೂಬಕರ್(ರ) ಎಂಬ ಇಬ್ಬರ ಜೊತೆ ಮೂರನೆಯವನಾಗಿ ಇದ್ದುದು ಅಲ್ಲಾಹನು ಮಾತ್ರ. ಇನ್ನೊಂದು ಕಡೆ  ಮಕ್ಕಾದ ಅಷ್ಟೂ ಬುಡಕಟ್ಟುಗಳು ಕತ್ತಿ ಹಿರಿದು ನಿಂತಿದ್ದುವು. ಇದು ಇಸ್ಲಾಮಿನ ಪಾಲಿಗೆ ಪ್ರಪ್ರಥಮ ಅಳಿವು-ಉಳಿವಿನ ಸಂದರ್ಭವಾಗಿತ್ತು. ಈ  ಸಂದ ರ್ಭವನ್ನು ಪ್ರವಾದಿ(ಸ) ಹೇಗೆ ಎದುರಿಸುತ್ತಾರೆ ಎಂಬುದೂ ಐತಿಹಾಸಿಕವಾಗಿಯೂ ದಾಖಲಾಗುವುದಿತ್ತು. ಇಸ್ಲಾಮಿನ ಭವಿಷ್ಯವೂ ಪ್ರವಾದಿ  ಕೈಗೊಳ್ಳುವ ನಿರ್ಧಾರ ಮತ್ತು ತೋರುವ ಆತ್ಮವಿಶ್ವಾಸವನ್ನು ಹೊಂದಿಕೊಂಡಿತ್ತು. ಆ ಕಾರಣದಿಂದಲೇ ಮುಹರ‍್ರಂ ಒಂದರ ಹಿಜ್‌ರಾ  ಮುಖ್ಯವಾಗುತ್ತದೆ. ಬಹುಶಃ,

ಇತರೆಲ್ಲವುಗಳಿಗಿಂತ ಮುಹರ‍್ರಂ ಅನ್ನೇ ಖಲೀಫಾ ಉಮರ್ (ರ) ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿ ಆಯ್ಕೆ ಮಾಡಿರುವುದಕ್ಕೆ ಇವೆಲ್ಲ  ಕಾರಣವಾಗಿರಬಹುದು.

Friday, 21 June 2024

ಹಾಜಿ ಯಾರು?





ಹಾಜಿ ಯಾರು? ಈ ಪ್ರಶ್ನೆಗೆ ಉತ್ತರ ಸುಲಭ ಇದೆ. ಯಾರು ಹಜ್ಜ್ ನಿರ್ವಹಣೆಗಾಗಿ ಮಕ್ಕಾದಲ್ಲಿ ಸೇರುತ್ತಾರೋ ಅವರೇ ಹಾಜಿಗಳು. ಆದರೆ,  ಹಾಜಿ ಎಂದರೆ ಇಷ್ಟು ಮಾತ್ರವೇ? ಹೀಗೆ ಒಂದು ವಾಕ್ಯದಲ್ಲಿ ಹೇಳಿ ಮುಗಿಸಬಹುದಾದ ಒಂದು ಪರಿಕಲ್ಪನೆಯೇ ಹಾಜಿ? ಓರ್ವ ವ್ಯಕ್ತಿ  ಇರುವುದೆಲ್ಲವ ಬಿಟ್ಟು ಯಾಕೆ ಹಜ್ಜ್ ಗೆ  ಹೋಗಬೇಕು?

ಭಾರತದಿಂದ ಮಕ್ಕಾಕ್ಕೆ ಬಹಳ ದೂರವೇನೂ ಇಲ್ಲ. ವಿಮಾನದಲ್ಲಿ ಕುಳಿತು ಒಂದು ಪುಟ್ಟ ನಿದ್ದೆ  ಮಾಡಿ ಎಚ್ಚರಗೊಳ್ಳುವಷ್ಟೇ ದೂರ. ಆದರೆ ಈ  ಸಣ್ಣ ಪ್ರಯಾಣಕ್ಕೆ ಓರ್ವ ಹಾಜಿ ಮಾಡಿಕೊಳ್ಳುವ ತಯಾರಿಗಳು ಏನೇನು? ವರ್ಷಗಳ ಮೊದಲೇ ಇಂಥದ್ದೊಂದು  ಪ್ರಯಾಣದ ಕನಸು  ಕಾಣುತ್ತಾರೆ. ಅರ್ಜಿ ಹಾಕುವ ಪ್ರಕ್ರಿಯೆಯೂ ಆರಂಭಗೊಳ್ಳುತ್ತದೆ. ಒಮ್ಮೆ ಅರ್ಜಿ ಸ್ವೀಕೃತವಾಗಿ ಹಜ್ಜ್ ನಿರ್ವಹಿಸುವವರ ಪಟ್ಟಿಯಲ್ಲಿ ತನ್ನ ಹೆಸರೂ  ಬರಲಿ ಎಂದು ಆಶೆಯಿಂದ ಕಾಯುತ್ತಾರೆ. ಒಮ್ಮೆ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿತೆಂದರೆ ಅತೀವ ಖುಷಿ ಪಡುತ್ತಾರೆ. ಆಗಿನಿಂದಲೇ ಅವರ  ಮಕ್ಕಾ ಯಾತ್ರೆ ಮಾನಸಿಕವಾಗಿ ಆರಂಭಗೊಳ್ಳುತ್ತದೆ. ತಾನು ಯಾರೊಂದಿಗೆಲ್ಲ ಒರಟಾಗಿ ನಡಕೊಂಡಿದ್ದೇನೆ, ಯಾರಲ್ಲಿ ಸಾಲ ಮಾಡಿದ್ದೇನೆ,  ಯಾರ ಮನಸ್ಸನ್ನು ನೋಡಿಯಿಸಿದ್ದೇನೆ.. ಎಂದೆಲ್ಲ ಅವಲೋಕನ ನಡೆಯತೊಡಗುತ್ತದೆ. ಅಂಥವರನ್ನು ಖುದ್ದಾಗಿ ಕಂಡೋ ಇತರ ಸೌಲಭ್ಯಗಳ  ಮೂಲಕವೋ ಸಂಪರ್ಕಿಸಿಯೋ ಕ್ಷಮಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ಹಜ್ಜ್ ಗಾಗಿ  ತೆರಳುವ ದಿನಾಂಕ ಹತ್ತಿರ ಬರುತ್ತಿರುವಂತೆಯೇ ಮನಸ್ಸು  ಭಾರವಾಗತೊಡಗುತ್ತದೆ. ಸಾಲದಿಂದ ಮುಕ್ತವಾಗುವುದು ಮತ್ತು ತನ್ನ ಅನುಪಸ್ಥಿತಿಯಲ್ಲಿ ಮನೆ ನಿರ್ವಹಣೆಗಾಗಿ ಬೇಕಾದ ಏರ್ಪಾಡು  ಮಾಡುವುದೂ ನಡೆಯುತ್ತದೆ. ಹಜ್ಜ್ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ. ಆ ಮೂಲಕ ತನ್ನ ಈ ಇಡೀ ಪ್ರಕ್ರಿಯೆಯಲ್ಲಿ ಸಣ್ಣ  ದೋಷವೂ ಉಂಟಾಗಬಾರದೆಂಬ ಎಚ್ಚರಿಕೆ ವಹಿಸತೊಡಗುತ್ತಾರೆ. ಇವೆಲ್ಲ ಹಜ್ಜ್ ಗೆ  ತೆರಳುವುದಕ್ಕಿಂತ ಮೊದಲಿನ ಸಿದ್ಧತೆಗಳಾದರೆ ತೆರಳಿದ  ಬಳಿಕವಂತೂ ವ್ಯಕ್ತಿ ಸಂಪೂರ್ಣ ಬದಲಾಗುತ್ತಾರೆ. ಎಲ್ಲಿಯ ವರೆಗೆಂದರೆ, ತಾನು ಆವರೆಗೆ ಇಷ್ಟಪಟ್ಟು ಧರಿಸುತ್ತಿದ್ದ ಬಟ್ಟೆಗಳಿಂದಲೇ  ಮುಕ್ತವಾಗುವಷ್ಟು. ಹೊಲಿಗೆ ಇಲ್ಲದ ಎರಡು ತುಂಡು ಬಿಳಿ ಬಟ್ಟೆಯ ಹೊರತು ಪುರುಷನ ಮೈಮೇಲೆ ಇನ್ನಾವುದೂ ಇರುವುದಿಲ್ಲ.  ಒಂದುರೀತಿಯಲ್ಲಿ, ಐಡೆಂಟಿಟಿ ಇಲ್ಲದ ವ್ಯಕ್ತಿ. ಎರಡು ತುಂಡು ಬಟ್ಟೆ ಧರಿಸಿದ ಲಕ್ಷಾಂತರ ಜನರ ನಡುವೆ ಆತ ಒಂದು ಬಿಂದು ಮಾತ್ರ. ಸೌದಿಯ  ರಾಜಕುಮಾರನಾದರೂ ಇರಾನಿನ ಖೊಮೇನಿ ಆದರೂ ಅಥವಾ ದೆಹಲಿ ಶಾಹಿ ಇಮಾಮೇ ಆದರೂ ಎಲ್ಲರೂ ಒಂದು ಬಿಂದು ಮಾತ್ರ.  ನಿಜವಾಗಿ,

ಹಜ್ಜ್ ನಿರ್ವಹಣೆಗಾಗಿ ಭಾರತದಿಂದ ಮಕ್ಕಾಕ್ಕೆ ತೆರಳುವ ವ್ಯಕ್ತಿ ಈ ಪ್ರಯಾಣಕ್ಕಿಂತ ಮೊದಲು ಇದಕ್ಕಿಂತ ಸಾವಿರ ಕಿಲೋಮೀಟರ್ ದೂರದ  ರಾಷ್ಟ್ರಕ್ಕೆ ಪ್ರಯಾಣಿಸಿರಬಹುದು. ಆದರೆ, ಮಕ್ಕಾ ಪ್ರಯಾಣಕ್ಕಾಗಿ ಮಾಡಿದ ಸಿದ್ಧತೆಯ ಒಂದು ಶೇಕಡಾ ಸಿದ್ಧತೆಯನ್ನೂ ಅದಕ್ಕೆ ಮಾಡಿರುವ ಸಾಧ್ಯತೆ  ಕಡಿಮೆ. ಆದ್ದರಿಂದಲೇ, ಹಾಜಿ ಯಾರು ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಹಾಜಿ ಎಂಬುದು ಒಂದು ವಾಕ್ಯದಲ್ಲಿ ಮುಗಿಸುವ ವಿಷಯವಲ್ಲ.  ಅದೊಂದು ಮಾಡೆಲ್. ಹಜ್ಜ್ ನಿರ್ವಹಿಸುವ ವ್ಯಕ್ತಿಯ ಎಲ್ಲ ಪಾಪಗಳನ್ನೂ ಅಲ್ಲಾಹನು ಕ್ಷಮಿಸುತ್ತಾನೆ ಮತ್ತು ಆಗಷ್ಟೇ ಭೂಮಿಗೆ ಬಂದ ಶಿಶುವನಷ್ಟೇ ಅವರು ಶುಭ್ರವಾಗಿರುತ್ತಾರೆ ಎಂದು ಪ್ರವಾದಿ(ಸ) ಹೇಳಿದ್ದಾರೆ. ಆದ್ದರಿಂದ ಹಜ್ಜ್ ನಿರ್ವಹಣೆಗಾಗಿ ತೆರಳುವ ಹಾಜಿ ಮತ್ತು ಹಜ್ಜ್  ನಿರ್ವಹಿಸಿ ಮರಳುವ ಹಾಜಿ- ಇಬ್ಬರೂ ಒಂದೇ ಅಲ್ಲ. ತೆರಳುವ ಹಾಜಿ ತನ್ನ ಐಡೆಂಟಿಟಿಯಿಂದ  ಕಳಚಿಕೊಂಡಿರುವುದಿಲ್ಲ. ಆದರೆ, ಮರಳುವ  ಹಾಜಿಗೆ ಐಡೆಂಟಿಟಿಯನ್ನೇ ಕಳಚಿಕೊಂಡ ಮತ್ತು ಆ ಕ್ಷಣದ ರೋಮಾಂಚನ, ಭಾವುಕತೆ, ಒಂಟಿತನ ಮತ್ತು ಆಧ್ಯಾತ್ಮಿಕತೆಯ ಪರಾಕಾಷ್ಟೆಯ ಅನುಭವವಾಗಿರುತ್ತದೆ. ಅಲ್ಲದೇ, ಹೀಗೆ ತೆರಳುವುದು ಒಂದು ಬಾರಿ ಮಾತ್ರ ಕಡ್ಡಾಯ ಎಂಬುದೂ ಬಹಳ ಮುಖ್ಯ. ಹಾಗಂತ,

ಹಜ್ ನಿಂದ  ಮರಳಿದ ಬಳಿಕವೂ ಮತ್ತೊಂದು ಹಜ್ಜ್ ನಿರ್ವಹಿಸುವುದಕ್ಕೆ ಬೇಕಾಗುವಷ್ಟು ಅವರಲ್ಲಿ ಹಣ ಇರಬಹುದು, ಆರೋಗ್ಯವೂ  ಇರಬಹುದು. ಆದರೂ ಮತ್ತೊಂದು ಬಾರಿ ಹೋಗಿ ವಿನೀತವಾಗುವುದು ಅವರ ಮೇಲೆ ಕಡ್ಡಾಯವಲ್ಲ. ಅಂದರೆ, ಹಾಜಿಯ ಚಟುವಟಿಕೆಯ  ಕೇಂದ್ರ ಮಕ್ಕಾ ಅಲ್ಲ ಎಂದೇ ಇದರರ್ಥ. ಹಜ್ಜ್ ನಿರ್ವಹಿಸಿ ಸಕಲ ಆಧ್ಯಾತ್ಮಿಕ ಚೈತನ್ಯವನ್ನೂ ಪಡೆದು ಮರಳಿದ ಬಳಿಕ ಹಾಜಿ ತಾನಿರುವ ಪ್ರದೇಶವನ್ನು ಮಕ್ಕಾ ಮಾಡಬೇಕು ಅಥವಾ ಶಾಂತಿಯ ಕೇಂದ್ರ ಮಾಡಬೇಕು. ಲಕ್ಷಾಂತರ ಹೆಣ್ಣು ಮತ್ತು ಗಂಡು ಒಂದೇ ಕಡೆ ಸೇರಿಯೂ ಯಾವ  ಕೆಡುಕೂ ನಡೆಯದ, ಕಳ್ಳತನ, ಮೋಸ, ಅನ್ಯಾಯ, ಹಲ್ಲೆ, ಹತ್ಯೆಗಳಂತಹ ಸರ್ವ ಕೆಡುಕುಗಳಿಂದಲೂ ಮುಕ್ತವಾದ ಆ ಮಕ್ಕಾದ ವಾತಾವರಣವನ್ನು ತನ್ನೂರಲ್ಲೂ ‘ಹಾಜಿ’ ಸಾಧ್ಯವಾಗಿಸಬೇಕು. ಅದಕ್ಕಾಗಿ ಮುಂದಿನ ಜೀವನದಲ್ಲಿ ಸರ್ವಸಾಧ್ಯ ಪ್ರಯತ್ನ ನಡೆಸಬೇಕು.

ಇವರೇ ಹಾಜಿ.



7 ಲಕ್ಷ ಯಹೂದಿಯರನ್ನು ಅವಲಂಬಿಸಿದೆಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ?


ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಕುರಿತಂತೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆ ಮತ್ತು ಪರಾಮರ್ಶೆಗಳು ನಡೆಯುತ್ತಿವೆ. ಇಸ್ರೇಲ್ ಮತ್ತು  ಫೆಲೆಸ್ತೀನ್ ನಡುವಿನ ಸಂಘರ್ಷವನ್ನು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ  ಸ್ಥಾಪನೆಯಿಂದ ಮಾತ್ರ ಪರಿಹರಿಸಲು ಸಾಧ್ಯ ಎಂಬ ಅಭಿಪ್ರಾಯಕ್ಕೆ ದಿನೇ ದಿ ನೇ ಬಲ ಬರುತ್ತಿದೆ. ಫೆಲೆಸ್ತೀನನ್ನು ಸ್ವತಂತ್ರ ರಾಷ್ಟ್ರವಾಗಿ ಅಂಗೀಕರಿಸುವ ರಾಷ್ಟ್ರಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆಯಂತೆ  ಐರ್ಲ್ಯಾಂಡ್, ನಾರ್ವೆ ಮತ್ತು ಸ್ಪೈನ್‌ಗಳು ಫೆಲೆಸ್ತೀನ್‌ಗೆ ಸ್ವತಂತ್ರ ರಾಷ್ಟ್ರದ ಮಾನ್ಯತೆ ನೀಡಿವೆ. ಫೆಲೆಸ್ತೀನ್ ಎಂಬ ವಿಶಾಲ ಭೂಭಾಗದಲ್ಲಿ 1948ರಲ್ಲಿ  ಇಸ್ರೇಲ್ ಎಂಬ ಸ್ವತಂತ್ರ ರಾಷ್ಟ್ರ ಸ್ಥಾಪನೆಯಾಗುವಾಗ ಅದರ ವ್ಯಾಪ್ತಿ ತೀರಾ ಕಿರಿದಾಗಿತ್ತು ಮತ್ತು ಜನಸಂಖ್ಯೆಯೂ ಕಡಿಮೆ ಇತ್ತು. ಆದರೆ ಇವತ್ತು  ಇಡೀ ಫೆಲೆಸ್ತೀನನ್ನು ಇಸ್ರೇಲ್ ಆಳುತ್ತಿದೆ ಮತ್ತು ಜಗತ್ತಿನಾದ್ಯಂತ ಇರುವ ಯಹೂದಿಯರನ್ನು ತನ್ನಲ್ಲಿಗೆ ಕರೆಸಿಕೊಂಡು ಜನಸಂಖ್ಯೆಯನ್ನು ಅ ಪಾರ ಪ್ರಮಾಣದಲ್ಲಿ ವೃದ್ಧಿಸಿಕೊಂಡಿದೆ. ನಿಜವಾಗಿ,


ಇಸ್ರೇಲ್ ಮತ್ತು ಫೆಲೆಸ್ತೀನ್ ಎಂಬ ಎರಡು ರಾಷ್ಟ್ರಗಳ ಪರಿಕಲ್ಪನೆ 1948ರಿಂದ ಆರಂಭವಾದುದಲ್ಲ. ಫೆಲೆಸ್ತೀನನ್ನು ಆಳುತ್ತಿದ್ದ ಬ್ರಿಟಿಷರು  1936ರಲ್ಲೇ  ಈ ಕುರಿತಂತೆ ಲಾರ್ಡ್ ವಿಲಿಯಂ ರಾಬರ್ಟ್ ಪೀಲ್ ಎಂಬವರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿದ್ದರು. ಆ ಆಯೋಗವು  ಸ್ವತಂತ್ರ ಫೆಲೆಸ್ತೀನ್ ಮತ್ತು ಇಸ್ರೇಲ್ ರಾಷ್ಟ್ರದ ಸ್ಥಾಪನೆಯ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಪಶ್ಚಿಮ ದಂಡೆ, ಗಾಝಾ ಮತ್ತು ಸೆರೇವ್  ಮರುಭೂಮಿಯನ್ನು ಒಳಗೊಂಡ ಫೆಲೆಸ್ತೀನ್ ರಾಷ್ಟ್ರ ನಿರ್ಮಿಸುವುದು ಈ ಪ್ರಸ್ತಾವನೆಯಲ್ಲಿ ಸೇರಿತ್ತು. ಎರಡನೇ ವಿಶ್ವಯುದ್ಧದ ಬಳಿಕ ಫೆಲೆಸ್ತೀನ್  ವಿಷಯದಲ್ಲಿ ವಿಶೇಷ ಆಯೋಗವನ್ನು ವಿಶ್ವಸಂಸ್ಥೆ ರೂಪಿಸಿತು. ಇದೂ ಕೂಡಾ ಫೆಲೆಸ್ತೀನ್ ಭೂಭಾಗವನ್ನು ಎರಡಾಗಿ ವಿಂಗಡಿ ಸುವ ಉದ್ದೇಶವನ್ನೇ ಹೊಂದಿತ್ತು. ಈ ಆಯೋಗದ ಪ್ರಸ್ತಾವನೆಗೆ ಅರಬ್ ರಾಷ್ಟ್ರಗಳಷ್ಟೇ ಅಲ್ಲ, ಭಾರತವೂ ವಿರೋಧವನ್ನು ವ್ಯಕ್ತಪಡಿಸಿತ್ತು. ಈ ಪ್ರಸ್ತಾವನೆಯ  ಪ್ರಕಾರ ಒಟ್ಟು ಫೆಲೆಸ್ತೀನ್ ಭೂಭಾಗದ 32% ಭೂಮಿಯಲ್ಲಿ ಇಸ್ರೇಲ್ ರಾಷ್ಟ್ರ ಸ್ಥಾಪನೆಯಾಗಬೇಕಿತ್ತು. ಈ ನಡುವೆ 1948 ಮೇ 14ರಂದು  ಏಕಾಏಕಿ ಸ್ವತಂತ್ರ ಇಸ್ರೇಲ್ ರಾಷ್ಟ್ರ ಸ್ಥಾಪನೆಯ ಘೋಷಣೆಯಾಯಿತು. ಇದರ ವಿರುದ್ಧ ಅರಬ್ ರಾಷ್ಟ್ರಗಳು ಸಿಡಿದು ನಿಂತವು. 1949ರಲ್ಲಿ ಪ್ರಥಮ  ಇಸ್ರೇಲ್-ಅರಬ್ ಯುದ್ಧ ನಡೆಯಿತು ಮತ್ತು ಅಮೇರಿಕ ಮತ್ತು ಅದರ ಬೆಂಬಲಿಗರ ನೆರವಿನಿಂದ ಇಸ್ರೇಲ್ ಆ ಯುದ್ಧದಲ್ಲಿ ಜಯಶಾಲಿಯಾಯಿತು. ಮಾತ್ರವಲ್ಲ, ವಿಶ್ವಸಂಸ್ಥೆ ಪ್ರಸ್ತಾಪ ಮಾಡಿದ್ದ 32% ಭೂಮಿಯ ಬದಲಾಗಿ ಇನ್ನೂ 22% ಹೆಚ್ಚುವರಿ ಭೂಮಿಯನ್ನು ಅದು ವಶ ಪಡಿಸಿಕೊಂಡಿತು. 1967ರ ಎರಡನೇ ಇಸ್ರೇಲ್-ಅರಬ್ ಯುದ್ಧವಂತೂ ಫೆಲೆಸ್ತೀನ್‌ಗೆ ಇನ್ನಷ್ಟು ಹಾನಿಯನ್ನು ಉಂಟು ಮಾಡಿತು. ಆರು ದಿನಗಳ  ಕಾಲ ನಡೆದ ಈ ಯುದ್ಧದಲ್ಲಿ ಪಶ್ಚಿಮ ದಂಡೆ, ಪಶ್ಚಿಮ ಜೆರುಸಲೇಮ್, ಗಾಝಾ ಪಟ್ಟಿ ಮತ್ತು ಸಿರಿಯದ ವಶದಲ್ಲಿದ್ದ ಗೋಲಾನ್ ಬೆಟ್ಟವನ್ನೂ ವಶಪಡಿಸಿಕೊಂಡು ಇಸ್ರೇಲ್ ವಿಶಾಲ ರಾಷ್ಟ್ರವಾಗಿ ಮಾರ್ಪಟ್ಟಿತು. ಈ ಯುದ್ಧವನ್ನು ಗೆಲ್ಲಿಸಿಕೊಟ್ಟದ್ದೂ ಅಮೇರಿಕ ಮತ್ತು ಅದರ  ಮಿತ್ರ ರಾಷ್ಟ್ರಗಳೇ.

 1993 ಮತ್ತು 1995ರಲ್ಲಿ ಇಸ್ರೇಲ್ ಪ್ರಧಾನಿ ಇಝಾಕ್ ರಬಿನ್ ಮತ್ತು ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ್‌ನ ಮುಖ್ಯಸ್ಥ  ಯಾಸಿರ್ ಅರಫಾತ್‌ರ ನಡುವೆ ಐತಿಹಾಸಿಕ ಓಸ್ಲೋ ಒಪ್ಪಂದ ನಡೆಯಿತು. ಎರಡು ಸ್ವತಂತ್ರ ರಾಷ್ಟ್ರಗಳ ಸ್ಥಾಪನೆಯನ್ನು ಅನುಮೋದಿಸಿದ ಒಪ್ಪಂದ ಎಂಬ ನೆಲೆಯಲ್ಲಿ ಇದಕ್ಕೆ ಬಹಳ ಪ್ರಾಮುಖ್ಯತೆ ಲಭಿಸಿತು. ದುರಂತ ಏನೆಂದರೆ,

ಈ ಒಪ್ಪಂದವನ್ನು ಪ್ರಬಲವಾಗಿ ವಿರೋಧಿಸಿದ್ದು ಯಹೂದಿ ಉಗ್ರವಾದಿಗಳು. ಈ ಒಪ್ಪಂದಕ್ಕೆ ಸಹಿ ಹಾಕಿದ ಪ್ರಧಾನಿ ಇಝಾಕ್ ರಬಿನ್‌ರನ್ನು  1995ರಲ್ಲಿ ಈ ಉಗ್ರವಾದಿಗಳು ಹತ್ಯೆ ಮಾಡಿದರು. ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಅವರ ಲೇಬರ್ ಪಾರ್ಟಿಯನ್ನು ಇಸ್ರೇಲಿನ  ಮತದಾರರು ಸೋಲಿಸಿದರಲ್ಲದೇ ಬಲಪಂಥೀಯ ತೀವ್ರವಾದಿ ನಿಲುವಿನ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವನ್ನು ಗೆಲ್ಲಿಸಿದರು.  ಆದರೆ, ಓಸ್ಲೋ ಒಪ್ಪಂದಕ್ಕೆ ಸಹಿ ಹಾಕಿದ ಯಾಸಿರ್ ಅರಫಾತ್‌ರ ಬಗ್ಗೆ ಫೆಲೆಸ್ತೀನ್‌ನಲ್ಲಿ ವಿರೋಧ ಇತ್ತಾದರೂ ಮತ್ತು ವಿಶೇಷವಾಗಿ ಹಮಾಸ್  ಈ ಒಪ್ಪಂದವನ್ನು ತಿರಸ್ಕರಿಸಿತ್ತಾದರೂ ಅದು ಎಂದೂ ಯಾಸಿರ್ ಅರಫಾತ್‌ರನ್ನು ಹತ್ಯೆ ಮಾಡುವುದು ಬಿಡಿ, ಅವರಿಗೆ ಸಣ್ಣ ಮಟ್ಟದ ಹಲ್ಲೆ   ಮಾಡುವುದಕ್ಕೂ ಮುಂದಾಗಲಿಲ್ಲ. ಒಂದುರೀತಿಯಲ್ಲಿ, ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗಲೇಬಾರದೆಂಬ ಉಗ್ರ ನಿಲುವಿನ ಯಹೂದಿಗಳಿಗೆ  ಹೋಲಿಸಿದರೆ ಫೆಲೆಸ್ತೀನಿಯರು ಉದಾರವಾದಿಗಳಾಗಿದ್ದರು. 1967ಕ್ಕಿಂತ ಮೊದಲಿನ ಗಡಿ ರೇಖೆಯ ಆಧಾರದಲ್ಲಿ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ  ಸ್ಥಾಪನೆಗೆ ಅವರು ಸಿದ್ಧವಾಗಿದ್ದರು. ಆದರೆ ಇಸ್ರೇಲ್‌ನಲ್ಲಿ ಇಂಥ ವಾತಾವರಣವೇ ಇದ್ದಿರಲಿಲ್ಲ. ಫೆಲೆಸ್ತೀನ್ ಭೂಮಿಯಲ್ಲಿ ಇಸ್ರೇಲ್ ರಾಷ್ಟ್ರವೊಂದೇ  ಇರಬೇಕು ಮತ್ತು ಫೆಲೆಸ್ತೀನಿಯರು ತಮ್ಮಿಂದ ಆಳಿಸಿಕೊಂಡಿರಬೇಕು ಎಂಬ ಮನಸ್ಥಿತಿ ನೇತನ್ಯಾಹು ಮತ್ತು ಅವರನ್ನು ಬೆಂಬಲಿಸುವವರದ್ದಾಗಿದೆ.  ಆದ್ದರಿಂದ, ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿರುವುದು ಹಮಾಸೂ ಅಲ್ಲ ಅಥವಾ ಗಾಝಾದ ಸಶಸ್ತ್ರ  ಹೋರಾಟಗಾರರೂ  ಅಲ್ಲ, ತನ್ನ ಪಕ್ಕ ಇನ್ನೊಂದು ರಾಷ್ಟ್ರವನ್ನು ಇಸ್ರೇಲ್‌ನ ರಾಜಕೀಯ ನಾಯಕರು ಬಯಸುತ್ತಿಲ್ಲ. ಒಂದುವೇಳೆ, ಅವರು ಒಪ್ಪಿಕೊಂಡರೆ ಉಗ್ರವಾದಿಗಳ ಬೆದರಿಕೆಯಡಿ ಅವರು ಬದುಕಬೇಕಾಗುತ್ತದೆ. ಇನ್ನೊಂದು ಸಂಗತಿ ಏನೆಂದರೆ,

ಇಸ್ರೇಲ್‌ಗೆ ನಿರ್ದಿಷ್ಟ ಗಡಿಯೆಂಬುದೇ ಇಲ್ಲ. ಅದು ವಿಸ್ತರಣಾವಾದಿ ದೇಶ. 1948ರಲ್ಲಿ ಸ್ಥಾಪನೆಯಾಗುವಾಗಲೇ ಅದು ವಿಶ್ವಸಂಸ್ಥೆಯ ಭೂ ನಕ್ಷೆಯನ್ನು ಉಲ್ಲಂಘಿಸಿತ್ತು. ವಿಶ್ವಸಂಸ್ಥೆ ಹೇಳಿದುದಕ್ಕಿಂತ ಹೆಚ್ಚಿನ ಭೂಮಿಯನ್ನು ಆಗಲೇ ಅದು ವಶಪಡಿಸಿಕೊಂಡಿತ್ತು. 1967ರಲ್ಲಂತೂ ಫೆಲೆಸ್ತೀ ನಿನ ಐತಿಹಾಸಿಕ ಭೂಪ್ರದೇಶವನ್ನೆಲ್ಲ ವಶಪಡಿಸಿಕೊಂಡಿತು. 1970ರಿಂದ ಫೆಲೆಸ್ತೀನಿ ಭೂಭಾಗದಲ್ಲಿ ಅದು ಯಹೂದಿಯರಿಗಾಗಿ ಅಕ್ರಮ  ವಸತಿಯನ್ನು ನಿರ್ಮಿಸುತ್ತಲೇ ಬಂದಿದೆ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವು 1967ರ ಮೊದಲಿನ ಗಡಿ ಗುರುತಿನಂತೆ ಆಗಬೇಕು ಎಂದು ಫೆಲೆಸ್ತೀನಿಯರು ಆಗ್ರಹಿಸುತ್ತಿದ್ದರೂ ಇಸ್ರೇಲ್ ಅದಕ್ಕೆ ಒಪ್ಪಿಕೊಳ್ಳು ತ್ತಿಲ್ಲ. ಯಾಕೆಂದರೆ, 1970ರಿಂದ ಅದು ಫೆಲೆಸ್ತೀನ್ ಭೂಭಾಗವಾದ ಪಶ್ಚಿಮ ದಂಡೆ  ಮತ್ತು ಪಶ್ಚಿಮ ಜೆರುಸಲೇಮ್‌ನಲ್ಲಿ 7 ಲಕ್ಷ ಯಹೂದಿಯರನ್ನು ಅಕ್ರಮವಾಗಿ ತಂದು ಕೂರಿಸಿದೆ. ಒಂದುವೇಳೆ, 1967ರ ಮೊದಲಿನ ಸ್ಥಿತಿಗೆ  ಇಸ್ರೇಲ್ ಮರಳಬೇಕಾದರೆ ಮತ್ತು ಅದೇ ಗಡಿ ಗುರುತಿನೊಂದಿಗೆ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಒಪ್ಪಿಕೊಳ್ಳಬೇಕಾದರೆ ಈ 7 ಲಕ್ಷ ಯಹೂದಿಯರನ್ನು ಹೊರದಬ್ಬಬೇಕಾಗುತ್ತದೆ ಅಥವಾ 1967ರ ಮೊದಲಿದ್ದ ಇಸ್ರೇಲ್ ಎಂಬ ಭೂಭಾಗದೊಳಗೆ ಇವರನ್ನೆಲ್ಲಾ ಕರೆಸಿಕೊಳ್ಳಬೇಕಾಗುತ್ತದೆ.  ಆದರೆ, ಇದು ಸುಲಭ ಅಲ್ಲ. ಈ 7 ಲಕ್ಷ ಜನಸಂಖ್ಯೆ ಎಂಬುದು ಇಸ್ರೇಲ್ ರಾಜಕೀಯದ ಮಟ್ಟಿಗೆ ಅತ್ಯಂತ ಪ್ರಭಾವಶಾಲಿ ಸಂಖ್ಯೆಯಾಗಿದೆ.  ಇವರ ವಿರೋಧವನ್ನು ಕಟ್ಟಿಕೊಳ್ಳಲು ಇಸ್ರೇಲಿನ ಯಾವುದೇ ರಾಜಕೀಯ ಪಕ್ಷ ಸಿದ್ಧವಾಗಲಾರದು. ಹಾಗೆಯೇ,

1948ರಲ್ಲಿ ಇಸ್ರೇಲ್ ಸ್ಥಾಪನೆಯ ಸಂದರ್ಭದಲ್ಲಿ ಯಹೂದಿ ಸಶಸ್ತ್ರ  ದಳವು ವ್ಯಾಪಕ ಹಿಂಸಾಚಾರ ನಡೆಸಿತ್ತಲ್ಲದೇ, ಲಕ್ಷಾಂತರ ಫೆಲೆಸ್ತೀನಿಯರನ್ನು  ತಮ್ಮ ನೆಲದಿಂದ ಓಡಿಸಿ ವಿಶ್ವಸಂಸ್ಥೆ ನಿಗದಿಪಡಿಸಿದ ಭೂಮಿಗಿಂತಲೂ ನೂರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಹೀಗೆ ಸುಮಾರು  7 ಲಕ್ಷ ಫೆಲೆಸ್ತೀನಿಯರು ನಿರಾಶ್ರಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅವರೆಲ್ಲರಿಗೂ ಮರಳುವ ಅವಕಾಶ ಸಿಗಬೇಕು ಎಂಬುದು ಅಂತಾರಾಷ್ಟ್ರೀಯ  ಕಾನೂನು ಹೇಳುತ್ತದೆ. ಆದರೆ, ಫೆಲೆಸ್ತೀನಿ ನಿರಾಶ್ರಿತರು ತಾಯ್ನಾಡಿಗೆ ಮರಳುವುದಕ್ಕೆ ಇಸ್ರೇಲ್ ಒಪ್ಪಿಕೊಳ್ಳುತ್ತಿಲ್ಲ. ಹಾಗೆಯೇ, ಅಲ್ ಅಕ್ಸಾ  ಮಸೀದಿ ಒಳಗೊಂಡ ಜೆರುಸಲೇಮ್ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ದ ರಾಜಧಾನಿಯಾಗಬೇಕು ಎಂಬುದು ಫೆಲೆಸ್ತೀನಿಯರ ವಾದವಾಗಿದೆ. ಆದರೆ,  ಇಸ್ರೇಲ್ ಅದಕ್ಕೂ ಸಮ್ಮತಿಸುತ್ತಿಲ್ಲ.

2023 ನವೆಂಬರ್‌ನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕದಿಂದ ಗಾಝಾದಲ್ಲಿ ಆಗಿರುವ ಜೀವಹಾನಿ ಮತ್ತು ಆರ್ಥಿಕ ನಷ್ಟದ  ಚರ್ಚೆಗಳ ನಡುವೆಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಕುರಿತೂ ಬಲವಾದ ಕೂಗು ಕೇಳಿಬರುತ್ತಿದೆ. ಒಂದಲ್ಲ ಒಂದು ದಿನ ತಮ್ಮ ಕ ನಸಿನ ರಾಷ್ಟ್ರ ಸ್ಥಾಪನೆಯ ಬಗ್ಗೆ ಫೆಲೆಸ್ತೀನಿಯರು ಆಶಾವಾದಿಗಳಾಗಿದ್ದಾರೆ. ಅಮೇರಿಕ ಸಹಿತ ಬಲಾಢ್ಯ ರಾಷ್ಟ್ರಗಳೆಲ್ಲ ಇಸ್ರೇಲ್‌ನ ಬೆನ್ನಿಗಿದ್ದೂ  ಫೆಲೆಸ್ತೀನಿಯರು ತಮ್ಮ ಹೋರಾಟ ಮನೋಭಾವದಲ್ಲಿ ರಾಜಿ ಮಾಡಿಕೊಳ್ಳುತ್ತಿಲ್ಲ. ಜೊತೆಜೊತೆಗೇ ಫೆಲೆಸ್ತೀನ್ ಅಕ್ಕಪಕ್ಕದ ರಾಷ್ಟ್ರಗಳ ಸಹಿತ  ಅರಬ್ ರಾಷ್ಟ್ರಗಳ ಗಾಢ ಮೌನವೂ ಆಯಾ ರಾಷ್ಟ್ರಗಳ ನಾಗರಿಕರಲ್ಲಿ ಆಕ್ರೋಶವನ್ನು ಉಂಟು ಮಾಡುತ್ತಿದೆ. 2023 ನವೆಂಬರ್‌ನಲ್ಲಿ ಹಮಾಸ್  ನಡೆಸಿರುವ ದಾಳಿಯನ್ನು ಯಾರೂ ಬೆಂಬಲಿಸುತ್ತಿಲ್ಲವಾದರೂ ಆ ದಾಳಿಯು ಜಾಗತಿಕವಾಗಿಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣದ ಬಗ್ಗೆ  ಗಂಭೀರ ಚರ್ಚೆಯೊಂದಕ್ಕೆ ಕಾರಣವಾಗಿದೆ ಎಂಬುದಂತೂ  ಸ್ಪಷ್ಟ.

Monday, 3 June 2024

ಮರ್ದಕರೇ, ಮರ್ದಿತರ ಪ್ರಾರ್ಥನೆಯನ್ನು ಕಡೆಗಣಿಸದಿರಿ...

 




ಮರ್ದಿತರಿಗೂ ದೇವನಿಗೂ ನಡುವೆ ಪರದೆಗಳಿಲ್ಲ ಎಂಬುದು ಇಸ್ಲಾಮಿನ ನಿಲುವು. ಅಧಿಕಾರದ ಮದದಿಂದಲೋ ಧರ್ಮದ್ವೇಷದ ವ್ಯಸನದಿಂದಲೋ ಅಥವಾ ಹಣಬಲ, ತೋಳ್ಬಲ, ಜಾತಿಬಲದ ಮೇಲ್ಮೆಯಿಂದಲೋ ದುರ್ಬಲರ ಮೇಲೆ ಅನ್ಯಾಯ ಎಸಗುವವರನ್ನು ಎಚ್ಚರಿಸುವುದಕ್ಕಾಗಿಯೇ ಬಂದಿರುವ ಸೂಚನೆ ಇದು. ಮರ್ದಿತರು ದೇವನಲ್ಲಿ ಪ್ರಾರ್ಥಿಸಿದರೆ ತಕ್ಷಣ ಅವರ ಪ್ರಾರ್ಥನೆಯನ್ನು ದೇವನು ಆಲಿಸುತ್ತಾನೆ, ಅಲ್ಲಿ ಪರದೆಯೇ ಇರುವುದಿಲ್ಲ ಎಂಬುದಾಗಿ ಇಲ್ಲಿ ಮರ್ದಕರಿಗೆ ಎಚ್ಚರಿಕೆ ನೀಡಲಾಗಿದೆ. ಹಾಗಂತ, ಮರ್ದಿತರು ಎಂಬ ಪದಕ್ಕೆ  ಇಸ್ಲಾಮ್ ಯಾವುದೇ ಜಾತಿ, ಧರ್ಮ, ಭಾಷೆ, ಲಿಂಗವನ್ನು ಅಂಟಿಸಿಲ್ಲ. ಅದು ಧರ್ಮಾತೀತ, ದೇಶಾತೀತ, ಭಾಷಾತೀತ ಪದ. ಅನ್ಯಾಯಕ್ಕೆ  ಒಳಗಾಗುವ ಸರ್ವರೂ ಆ ಚೌಕಟ್ಟಿನೊಳಗೆ ಬರುತ್ತಾರೆ. ಇಂಥವರ ಸಂಖ್ಯೆಯೇ ಜಗತ್ತಿನಲ್ಲಿ ಅತ್ಯಧಿಕವಿದೆ ಎಂಬುದೂ ಗಮನಾರ್ಹ. ಇದೀಗ  ಇಂಥದ್ದೇ  ಒಂದು ಚರ್ಚೆಗೆ ಉಡುಪಿ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಚಾಲನೆ ನೀಡಿದ್ದಾರೆ. ಹಿಜಾಬ್ ವಿವಾದ ನನ್ನ ಸೃಷ್ಟಿಯಲ್ಲ  ಎಂದವರು ಹೇಳಿದ್ದಾರೆ. ಅದರಲ್ಲಿ ತನ್ನ ಪಾತ್ರವಿಲ್ಲ ಎಂಬಂತೆ ಹೇಳಿಕೆ ನೀಡಿದ್ದಾರೆ. ಆದರೆ,

ಹಿಜಾಬ್ ವಿವಾದದ ಸಮಯದಲ್ಲಿ ಉಡುಪಿಯ ಶಾಸಕರಾಗಿದ್ದವರು ಇದೇ ರಘುಪತಿ ಭಟ್. ಹಿಜಾಬ್ ವಿವಾದಕ್ಕೆ ಕಾರಣವಾದ ಉಡುಪಿ  ಮಹಿಳಾ ಕಾಲೇಜಿನ ಆಡಳಿತ ಸಮಿತಿಯ ಚೇರ್ಮನ್ಗಿ ಆಗಿದ್ದವರೂ ಇದೇ ರಘುಪತಿ ಭಟ್. ಹಿಜಾಬ್ ವಿವಾದ ಎಂಬ ಹೆಸರಲ್ಲಿ ಖಳರಂತೆ  ಬಿಂಬಿಸಲಾದ ಆ ಹೆಣ್ಮಕ್ಕಳು ಬುರ್ಖಾ ಹಾಕುತ್ತೇವೆಂದೋ ಮುಖ ಮುಚ್ಚುವ ನಕಾಬ್ ಧರಿಸುತ್ತೇವೆಂದೋ ಹೇಳಿರಲಿಲ್ಲ. ಸಮವಸ್ತ್ರದ  ಭಾಗವಾಗಿ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕುವುದಕ್ಕೆ ಅನುಮತಿ ಕೊಡಿ ಎಂದಷ್ಟೇ ವಿನಂತಿಸಿದ್ದರು. ‘ಸರಿ ಹಾಕ್ಕೊಳ್ಳಿ’ ಎಂದು ಹೇಳಿ  ಮುಗಿಸಬಹುದಾಗಿದ್ದ ತೀರಾತೀರಾ ಸಾಮಾನ್ಯ ಸಂಗತಿಯೊಂದು ರಾಜ್ಯದ ಶಾಲಾ-ಕಾಲೇಜುಗಳನ್ನೇ ಬಂದ್ ಮಾಡಿಡಬೇಕಾದಷ್ಟು ತೀವ್ರರೂಪಕ್ಕೆ  ಯಾಕೆ ಹೊರಳಿತು ಎಂಬುದನ್ನು ಅವರು ವಿವರಿಸಿಲ್ಲ. ‘ಹಿಜಾಬ್ ವಿವಾದ ತನ್ನ ಸೃಷ್ಟಿಯಲ್ಲ ಮತ್ತು ಅದರಲ್ಲಿ ತಾನಿಲ್ಲ’ ಎಂಬ ಅವರ ಮಾತು  ಇನ್ನಾರದೋ ಕಡೆಗೆ ಕೈ ತೋರಿಸುತ್ತದೆ. ಅವರು ಯಾರು? ಶಾಸಕನನ್ನೂ ಮೀರಿ ಅಲ್ಲಿ ಅಧಿಕಾರ ಚಲಾಯಿಸಿದವರು ಯಾರು? ಆ ಹೆಣ್ಮಕ್ಕಳ  ಬೇಡಿಕೆಯನ್ನು ತಿರಸ್ಕರಿಸುವುದರಿಂದ ಯಾರಿಗೆ ಲಾಭ ಇತ್ತು? ಆ ಲಾಭ ಏನು? ಶಾಸಕನಾಗಿಯೂ ರಘುಪತಿ ಭಟ್ ಇವೆಲ್ಲವನ್ನೂ ನೋಡಿ  ಸುಮ್ಮನಿರಲು ಕಾರಣವೇನು? ರಾಜಕೀಯ ಲೆಕ್ಕಾಚಾರವೇ? ಅಸಾಮರ್ಥ್ಯವೇ? ನಿಜವಾಗಿ,

ಹಿಜಾಬ್ ವಿವಾದದಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿರುವ ರಘುಪತಿ ಭಟ್ರು, ವಿವಾದದ ಸಮಯದಲ್ಲಿ ಶಾಸಕರಾಗಿ ಕರ್ತವ್ಯ ನಿಭಾಯಿಸಿರಲಿಲ್ಲ  ಎಂಬುದಕ್ಕೆ ಆಧಾರಗಳೇ ಬೇಕಿಲ್ಲ. ಆ ವಿವಾದವನ್ನು ಅಲ್ಲಿಗೇ ಮುಗಿಸುವ ಮತ್ತು ಆ ಹೆಣ್ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಲ್ಲುವ ಎಲ್ಲ ಅವಕಾಶಗಳೂ ಅವರಿಗಿದ್ದುವು. ಆದರೆ, ಅವರು ಹಾಗೆ ಮಾಡಲಿಲ್ಲ. ಅದಕ್ಕೆ ರಾಜಕೀಯ ಕಾರಣಗಳಿದ್ದುವು. ಅದನ್ನು ಎದುರಿಸಿ ನಿಲ್ಲುವ ನಿಷ್ಠುರತೆಯನ್ನು  ಅವರು ಪ್ರದರ್ಶಿಸಲಿಲ್ಲ. ಅದಕ್ಕೂ ರಾಜಕೀಯ ಲೆಕ್ಕಾಚಾರವೇ ಕಾರಣವಾಗಿತ್ತು. ಮುಂದಿನ ಚುನಾವಣೆಯಲ್ಲಿ ತನ್ನ ಗೆಲುವಿಗೆ ಈ ವಿವಾದ  ಮೆಟ್ಟಿಲಾದೀತು ಎಂದವರು ಭಾವಿಸಿರುವ ಸಾಧ್ಯತೆಯೂ ಇದೆ. ಅಥವಾ ಅವರನ್ನು ಹಾಗೆ ಮನವೊಲಿಸಿರಲೂ ಬಹುದು. ಅಥವಾ ಪಕ್ಷದ ಉನ್ನತ  ನಾಯಕರು ಅವರಿಗೆ ಅಂಥ ಆದೇಶ ನೀಡಿರಲೂ ಬಹುದು. ಆದರೆ, ಆ ಬಳಿಕದ ಪರಿಸ್ಥಿತಿ ಎಷ್ಟು ಬದಲಾಯಿತೆಂದರೆ, ಪಕ್ಷ ಅವರನ್ನೇ  ಕಡೆಗಣಿಸಿತು. ಅವರಿಗೆ ಪಕ್ಷ ವಿಧಾನಸಭಾ ಟಿಕೇಟನ್ನೇ ನಿರಾಕರಿಸಿತು. ಒಂದುಕಡೆ, ಅವರನ್ನು ಭರಪೂರ ಬಳಸಿಕೊಂಡ ಅವರ ಪಕ್ಷ ಇನ್ನೊಂದು  ಕಡೆ ಅವರನ್ನು ತಿಪ್ಪೆಗೆಸೆಯಿತು. ಆದರೆ, ಆಗಲೂ ಅವರು ಹಿಜಾಬ್‌ನಲ್ಲಿ ತನ್ನ ಪಾತ್ರವಿಲ್ಲ ಎಂಬ ಹೇಳಿಕೆಯನ್ನು ಕೊಡಲಿಲ್ಲ. ಯಾಕೆಂದರೆ,  ಹಿಜಾಬ್ ವಿವಾದದಲ್ಲಿ ಅವರನ್ನು ಪಕ್ಷ ಹೇಗೆ ದುರುಪ ಯೋಗಪಡಿಸಿಕೊಂಡಿತೋ ಈ ಟಿಕೆಟ್ ನಿರಾಕರಣೆಯ ಬಳಿಕವೂ ಅವರಿಗೆ ಉನ್ನತ  ಹುದ್ದೆಯ ಆಮಿಷ ವನ್ನು ಒಡ್ಡಿತು. ಅದನ್ನು ಅವರು ನಂಬಿದರು ಮತ್ತು ಹಿಜಾಬ್ ವಿವಾದದಲ್ಲಿ ಅವರ ಪಾತ್ರದ ಬಗ್ಗೆ ಇರುವ ಆರೋಪಗಳಿಗೆ  ಉತ್ತರಿಸುವುದರಿಂದ ನುಣುಚಿಕೊಂಡರು. ಇದಾಗಿ ಎರಡು ವರ್ಷಗಳ ಬಳಿಕ ಇದೀಗ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಪದವೀಧರ  ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಇದೀಗ ಅವರು  ಎರಡು ವರ್ಷಗಳ ಹಿಂದಿನ ವಿವಾದದ ಅಸಲಿ ಕತೆಯನ್ನು ಹೇಳಿಕೊಂಡಿದ್ದಾರೆ. ಒಂದುರೀತಿಯಲ್ಲಿ,

ಇದೊಂದು ಬಗೆಯ ಆತ್ಮಾವಲೋಕನ. ರಾಜಕೀಯದಲ್ಲಿ ಸಕ್ರಿಯರಾಗಿದ್ದೂ ಮತ್ತು ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಅನಿರೀಕ್ಷಿತವಾಗಿ ಟಿಕೆಟ್ ಕೈ  ತಪ್ಪುವುದು ಮತ್ತು ತನ್ನ ಸುತ್ತಲಿದ್ದವರೆಲ್ಲ ಮಾಯವಾಗಿ ತಾನು ಒಂಟಿಯಾಗುವುದನ್ನೆಲ್ಲ ಜೀರ್ಣಿಸಿಕೊಳ್ಳುವುದು ರಘುಪತಿ ಭಟ್ ಸಹಿತ ಯಾವ  ರಾಜಕಾರಣಿಗಳಿಗೂ ಸುಲಭ ಅಲ್ಲ. ಇಂಥ ಸ್ಥಿತಿ ಅವರನ್ನು ದಿನೇ ದಿನೇ ಸುಡುತ್ತಿರುತ್ತದೆ. ಇದೀಗ ಪಕ್ಷದಿಂದಲೇ ಉಚ್ಛಾಟಿಸಲಾದ  ಬಳಿಕವಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರಬಹುದು. ಹಾಗಂತ, ಇದು ರಘುಪತಿ ಭಟ್ ಒಬ್ಬರ ಸಮಸ್ಯೆಯಲ್ಲ. ಈಶ್ವರಪ್ಪ ಕೂಡ ಇವರದ್ದೇ   ಸ್ಥಿತಿಯಲ್ಲಿದ್ದಾರೆ. ಅವರನ್ನು ಪಕ್ಷದಿಂದ ಉಚ್ಛಾಟಿಸ ಲಾಗಿದೆ. ಅವರದ್ದು ಉರಿನಾಲಗೆ. ಮುಸ್ಲಿಮ್ ಸಮುದಾಯವನ್ನು ಮತ್ತು ಅವರ ಅಸ್ಮಿತೆಯ ನ್ನು ಸಂದರ್ಭ ಸೃಷ್ಟಿಸಿಕೊಂಡೇ ಪ್ರಶ್ನಿಸುತ್ತಿದ್ದವರು ಈಶ್ವರಪ್ಪ. ಬಹಿರಂಗ ಭಾಷಣದಲ್ಲಿ ಅವರು ಅದಾನನ್ನು ತಮಾಷೆ ಮಾಡಿದ್ದರು. ಮುಸ್ಲಿಮರನ್ನು  ವಿನಾ ಕಾರಣ ಆಡಿಕೊಳ್ಳುವುದು ಮತ್ತು ಸಭಿಕರಲ್ಲಿ ಆವೇಶವನ್ನು ಹುಟ್ಟಿಸುವುದು ಅವರ ಚಾಳಿಯಾಗಿತ್ತು. ಅವರಿಗೂ ಕಳೆದ ವಿಧಾನಸಭಾ ಚು ನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ಬಳಿಕ ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು ಮತ್ತು ಪಕ್ಷದಿಂದಲೇ  ಉಚ್ಚಾಟನೆಗೊಂಡರು. ಇದೀಗ ಅವರೂ ಒಂಟಿ. ರಸ್ತೆಗಿಳಿದರೆ ಸಾಕು ಅಭಿಮಾನಿಗಳ ದಂಡೇ ಸೇರುತ್ತಿದ್ದ ಅವರನ್ನು ಈಗ ಯಾರೂ ಹತ್ತಿರ  ಸೇರಿಸಿಕೊಳ್ಳುತ್ತಿಲ್ಲ. ಅವರ ಹೇಳಿಕೆಗಳಿಗೆ ಮಾಧ್ಯಮಗಳಲ್ಲಿ ಕವರೇಜೂ ಸಿಗುತ್ತಿಲ್ಲ. ಇಂಥ ದಯನೀಯ ಸ್ಥಿತಿಯನ್ನು ಇವತ್ತು ಎದುರಿಸುತ್ತಿರುವರಲ್ಲಿ  ಅನಂತ್ ಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್, ಸಿಟಿ ರವಿಯಂಥ ಹಲವು ರಾಜ್ಯ ನಾಯಕರಿದ್ದಾರೆ. ರಾಷ್ಟçಮಟ್ಟದಲ್ಲಿ ಇನ್ನೂ ಅ ನೇಕರಿದ್ದಾರೆ. ಕಾರಣವೇ ಇಲ್ಲದೇ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಮತ್ತು ಮುಸ್ಲಿಮರ ಆಚಾರ-ಸಂಸ್ಕೃತಿಯನ್ನು ವ್ಯಂಗ್ಯವಾಗಿ ಆಡಿಕೊಳ್ಳುವ  ಇವರೆಲ್ಲ ಇವತ್ತು ಬಹುತೇಕ ಒಂಟಿಯಾಗಿದ್ದಾರೆ. ಅಧಿಕಾರ ಬಲ ಇದ್ದಾಗ ಅಮಲೇರಿಸಿಕೊಂಡವರು ಅಧಿಕಾರ ನಷ್ಟವಾದಾಗ ಅದನ್ನು  ಜೀರ್ಣಿಸಿಕೊಳ್ಳಲೂ ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಅಂದಹಾಗೆ,

ಅನ್ಯಾಯಕ್ಕೆ ಒಳಗಾದವರು ಬೇರೆ ದಾರಿಯೇ  ಕಾಣದಾದಾಗ ಮತ್ತು ತಮಗಾರೂ ಇಲ್ಲ ಎಂಬ ಭಾವುಕತೆಗೆ ಒಳಗಾದಾಗ ಮಾಡುವ ಪ್ರಾರ್ಥನೆ  ಅತ್ಯಂತ ಅಪಾಯಕಾರಿ ಎಂಬುದು ಐತಿಹಾಸಿಕವಾಗಿ ಅನೇಕ ಬಾರಿ ರುಜುವಾತಾಗಿದೆ. ದೇವರು ಅಂಥ ಪ್ರಾರ್ಥನೆಯನ್ನು ಆಲಿಸುತ್ತಾನೆ  ಎಂಬುದು ಇಸ್ಲಾಮಿನ ಬೋಧನೆಯೂ ಆಗಿದೆ. ಸಂತ್ರಸ್ತರ ಪಾಲಿನ ಕೊನೆಯ ಆಯುಧವೇ ಪ್ರಾರ್ಥನೆ. ಹಾಗಂತ, ಅನ್ಯಾಯ ಎಸಗಿದವರು  ಮತ್ತು ಪರಮ ಕ್ರೂರಿಗಳು ಯಾವ ಶಿಕ್ಷೆಗೂ ಒಳಗಾಗದೇ ತುಂಬು ಬಾಳುವೆ ನಡೆಸಿ ಹೊರಟು ಹೋಗಿಲ್ಲವೇ ಎಂಬ ಪ್ರಶ್ನೆ ಇರಬಹುದು.  ಬಾಹ್ಯನೋಟಕ್ಕೆ ನಮಗೆ ಅವರು ಚೆನ್ನಾಗಿದ್ದಾರೆಂದು ಕಂಡರೂ ಆಂತರಿಕವಾಗಿ ಅವರ ಸ್ಥಿತಿ ಏನು ಅನ್ನುವುದು ನಮಗೆ ಗೊತ್ತಿರುವುದಿಲ್ಲ. ಅವರ  ಶಾರೀರಿಕ ಹಾಗೂ ಮಾನಸಿಕ ತೊಂದರೆಗಳು ಹೊರಜಗತ್ತಿಗೆ ಗೊತ್ತಾಗಬೇಕೆಂದೇನೂ ಇಲ್ಲ. ಅದರಾಚೆಗೆ, ಮರ್ದಕರನ್ನು ಪರಲೋಕದಲ್ಲಿ  ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ನೀಡಲಾಗುವುದು ಎಂಬ ಸಂದೇಶವನ್ನೂ ಇಸ್ಲಾಮ್ ನೀಡುತ್ತದೆ. ಇಹಲೋಕದಲ್ಲಿ ಮರ್ದಕರು ತಕ್ಕ ಶಿಕ್ಷೆ ಅನುಭವಿಸುತ್ತಾರೋ ಇಲ್ಲವೋ ಆದರೆ ಪರಲೋಕದಲ್ಲಂತೂ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾರರು ಎಂಬುದೇ ಇಸ್ಲಾಮಿನ ಪ್ರಬಲ ನಿಲುವು.  ಆದ್ದರಿಂದ, ‘ದುರ್ಬಲರ ಮೇಲೆ ಸವಾರಿ ಮಾಡದಿರಿ, ಅವರ ಪ್ರಾರ್ಥನೆಗೆ ಅಪಾರ ಶಕ್ತಿಯಿದೆ..’ ಎಂದು ಇಸ್ಲಾಮ್ ಹೇಳುತ್ತದೆ. ರಘುಪತಿ ಭಟ್  ಮತ್ತು ಇನ್ನಿತರರ ಇಂದಿನ ಸ್ಥಿತಿಯು ಮರ್ದಕರ ಕಣ್ಣು ತೆರೆಸಲು ಧಾರಾಳ ಸಾಕು. ಹಾಗಂತ,

‘ಮರ್ದಕರು’ ಎಂಬ ಗುಂಪು ರಾಜಕೀಯದಲ್ಲಿ ಮಾತ್ರ ಇರುವುದಲ್ಲ ಮತ್ತು ಅವರು ನಿರ್ದಿಷ್ಟ ಧರ್ಮ, ಲಿಂಗ, ದೇಶಕ್ಕೆ ಸೀಮಿತರೂ ಅಲ್ಲ.  ಮರ್ದಕರು ಮತ್ತು ಮರ್ದಿತರು ಎಂಬ ಈ ಎರಡು ಗುಂಪಿನಲ್ಲಿ ಬಾಹ್ಯನೋಟಕ್ಕೆ ಮರ್ದಕರೇ ಮೇಲುಗೈ ಪಡೆದಂತೆ ಕಾಣಿಸುತ್ತಾರೆ. ಆದರೆ  ಮರ್ದಿತರ ಪ್ರಾರ್ಥನೆಗೆ ಮರ್ದಕರನ್ನು ಪಶ್ಚಾತ್ತಾಪಕ್ಕೆ ದೂಡುವ ಸಾಮರ್ಥ್ಯವಿದೆ ಎಂಬುದನ್ನು ಮರೆಯಬಾರದು.

Thursday, 30 May 2024

598 ದಿನಗಳ ಕಾಲ ಜೈಲಲ್ಲಿದ್ದು ಹೊರಬಂದವರು ಎತ್ತಿರುವ ಪ್ರಶ್ನೆ...



ಉಗ್ರರೆಂಬ ಹಣೆಪಟ್ಟಿ ಹಚ್ಚಿಕೊಂಡು 598 ದಿನಗಳ ಕಾಲ ಜೈಲಲ್ಲಿದ್ದ 11 ಮಂದಿ ಮುಸ್ಲಿಮರು ಕಳೆದವಾರ ಬಿಡುಗಡೆಗೊಂಡಿದ್ದಾರೆ. ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳವು (ATS) ಸೆ. 26, 2022ರಂದು ಇವರನ್ನು ಬಂಧಿಸಿತ್ತು. ಅಲ್‌ಕಾಯ್ದಾ ಸಂಘಟನೆಯೊಂದಿಗೆ ಸಂಬಂಧ  ಹೊಂದಿದ್ದಾರೆಂದು ಎಟಿಎಸ್ ಆರೋಪಿಸಿತ್ತಲ್ಲದೇ, ಇವರಿಂದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಪುಸ್ತಿಕೆಗಳನ್ನು ವಶಪಡಿಸಿಕೊಂಡಿತ್ತು. ಆದರೆ, ಅಲಹಾಬಾದ್ ಹೈಕೋರ್ಟ್ ನ  ಲಕ್ನೋ ಪೀಠವು ಇವರಿಗೆ ಜಾಮೀನು ಮಂಜೂರು ಮಾಡಿದೆಯಲ್ಲದೇ, ಇವರ ಮೇಲಿನ ಆರೋಪಕ್ಕೆ ಪೂರಕ ಸಾಕ್ಷ್ಯಾಧಾರ ಗಳನ್ನು ಸಲ್ಲಿಸಲು ಎಟಿಎಸ್ ವಿಫಲವಾಗಿದೆ ಎಂದು ಹೇಳಿದೆ. ಹಾಗಂತ, ಇದು ಒಂಟಿ ಪ್ರಕರಣ ಅಲ್ಲ.

ದೆಹಲಿ ಕೇಂದ್ರಿತ ಸೆಂಟರ್ ಫಾರ್ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ (CSDS) ಅಧೀನದ ಲೋಕನೀತಿ ಸಂಸ್ಥೆಯು 2018ರಲ್ಲಿ ಬಿಡುಗಡೆಗೊಳಿಸಿದ ವರದಿಯು ಭಯೋತ್ಪಾದನೆಯ  ಹೆಸರಲ್ಲಿ ಮುಸ್ಲಿಮ್ ಸಮುದಾಯವನ್ನು ಬೇಟೆಯಾಡುತ್ತಿರುವ ಆಘಾತಕಾರಿ ಸಂಗತಿಯನ್ನು ವಿವರಿಸಿತ್ತು. ತಮ್ಮನ್ನು ಭಯೋತ್ಪಾದನೆಯ ಸುಳ್ಳು ಕೇಸಿನಲ್ಲಿ ಬಂಧಿಸಬಹುದು ಎಂದು 47% ಭಾರತೀಯ ಮುಸ್ಲಿಮರು ಭಯಪಡುತ್ತಾರೆ ಎಂದು ಆ ವರದಿಯಲ್ಲಿ ಹೇಳಲಾಗಿತ್ತು. 2006ರಿಂದ 2008ರ ನಡುವೆ ನಡೆದ ಸಮ್‌ಜೋತಾ ಎಕ್ಸ್ಪ್ರೆಸ್ ಸ್ಫೋಟ, ಅಜ್ಮೀರ್ ಶರೀಫ್ ಸ್ಫೋಟ, ಮಾಲೆಗಾಂವ್ ಮಸೀದಿ ಸ್ಫೋಟ, ಹೈದರಾಬಾದ್ ಮಕ್ಕಾ ಮಸೀದಿ ಸ್ಫೋಟ ಇತ್ಯಾದಿಗಳು ದೇಶವನ್ನು ನಡುಗಿಸಿದ್ದಷ್ಟೇ ಅಲ್ಲ, ಮುಸ್ಲಿಮ್ ಸಮುದಾಯದಲ್ಲೂ ಭೀತಿಯನ್ನು ಹುಟ್ಟು ಹಾಕಿತ್ತು. ಸ್ಫೋಟಗಳು ನಡೆದ ಬೆನ್ನಿಗೇ ಮುಸ್ಲಿಮ್ ಯುವಕರನ್ನು ಬಂಧಿಸುವುದು ಮತ್ತು ನಿಷೇಧಿತ ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಕಲ್ಪಿಸುವುದು ಮಾಮೂಲಾಯಿತು. ಮಕ್ಕಾ ಮಸೀದಿ ಸ್ಫೋಟದ ಬೆನ್ನಿಗೇ ಸುಮಾರು 200ರಷ್ಟು ಮಂದಿಯನ್ನು ವಶಕ್ಕೆ ಪಡೆಯಲಾಯಿತು. ಇದರಲ್ಲಿ ಹೆಚ್ಚಿನವರೂ ಮುಸ್ಲಿಮರು. ಸುಮಾರು 61 ಮುಸ್ಲಿಮ್ ಯುವಕರು ತೀವ್ರ ದೌರ್ಜನ್ಯಕ್ಕೆ ಒಳಗಾದರು. ಜೈಲು ಪಾಲಾದರು. ಭಯೋತ್ಪಾದಕರೆಂಬ ಹಣೆಪಟ್ಟಿಯನ್ನು ಹಚ್ಚಿಕೊಂಡರು. ತಾವು ನಮಾಝï ಮಾಡುವ ಮಸೀದಿಗೇ ಬಾಂಬಿಟ್ಟವರು ಎಂಬ ಅತಿಕ್ರೂರ ಆರೋಪವನ್ನು ಹೊತ್ತುಕೊಂಡರು. ಮಾಧ್ಯಮಗಳು ಅತಿರಂಜಿತ ಕತೆಗಳನ್ನು ಕಟ್ಟಿದುವು. ಕೊನೆಗೆ 2012ರಲ್ಲಿ ಆಂಧ್ರಪ್ರದೇಶ ಸರಕಾರವೇ ಇವರನ್ನು ನಿರಪರಾಧಿಗಳು ಎಂದಿತು. ಬಂಧನಕ್ಕೀಡಾಗಿ ಕಸ್ಟಡಿಯಲ್ಲಿ ಅತೀ ಹೀನ ದೌರ್ಜನ್ಯಕ್ಕೆ ತುತ್ತಾದ 15 ಮಂದಿ ಮುಸ್ಲಿಮ್ ಯುವಕರಿಗೆ ತಲಾ 3 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ನೀಡಿತು. ಹಾಗೆಯೇ, ಇತರ 46 ಮಂದಿ ಯುವಕರಿಗೆ ತಲಾ 20 ಸಾವಿರ ರೂಪಾಯಿಯನ್ನು ನೀಡಿ ಪಾಪಮುಕ್ತವಾಯಿತು. ಮಾಲೆಗಾಂವ್ ಮಸೀದಿ ಸ್ಫೋಟದ ನೆಪದಲ್ಲಿ ಮಹಾರಾಷ್ಟ್ರ  ಭಯೋತ್ಪಾದನಾ ನಿಗ್ರಹ ದಳವು 8 ಮಂದಿ ಮುಸ್ಲಿಮರನ್ನು 2006ರಲ್ಲಿ ಅಧಿಕೃತವಾಗಿ ಬಂಧಿಸಿತು. 5 ವರ್ಷಗಳನ್ನು ಜೈಲಲ್ಲಿ ಕಳೆದ ಬಳಿಕ 2011ರಲ್ಲಿ ಇವರೆಲ್ಲ ಜಾಮೀನಿನ ಮೂಲಕ ಹೊರಬಂದರು. 2013ರಲ್ಲಿ ಇವರ ವಿರುದ್ಧ ಚಾರ್ಜ್ ಶೀಟನ್ನು  ಸಲ್ಲಿಸಲಾಯಿತು. ಆದರೆ 2016ರಲ್ಲಿ ಇವರನ್ನೆಲ್ಲ ಮೊಕಾ ನ್ಯಾಯಾಲಯ ಆರೋಪದಿಂದ ಮುಕ್ತಗೊಳಿಸಿತು. ಇದಕ್ಕಿಂತಲೂ ಮೊದಲು 2001ರಲ್ಲಿ ಇವೆಲ್ಲಕ್ಕಿಂತಲೂ ಆಘಾತಕಾರಿಯಾದ ಬಂಧನ ನಡೆಯಿತು.

ಅಮೇರಿಕದ ಅವಳಿ ಗೋಪುರ ಉರುಳಿದ ತಿಂಗಳ ಬಳಿಕ ಗುಜರಾತ್‌ನ ಸೂರತ್‌ನಲ್ಲಿ ‘ಆಲ್ ಇಂಡಿಯಾ ಮೈನಾರಿಟಿ ಎಜುಕೇಶನ್ ಬೋರ್ಡ್’ ಮೂರು ದಿನಗಳ ಶೈಕ್ಷಣಿಕ ಸೆಮಿನಾರನ್ನು ಆಯೋಜಿಸಿತ್ತು. ದೇಶದ ವಿವಿಧೆಡೆಗಳಿಂದ ತಜ್ಞರು, ಆ್ಯಕ್ಟಿವಿಸ್ಟ್ ಗಳು, ಸಮುದಾಯ ನಾಯಕರು ಸೇರಿದಂತೆ ಸುಮಾರು 400 ಮಂದಿ ಇದರಲ್ಲಿ ಭಾಗವಹಿಸಿದ್ದರು. ಇವರಲ್ಲಿ ರಾಜಸ್ತಾನದ ನಾರಾಯಣ ವ್ಯಾಸ್ ಯುನಿವರ್ಸಿಟಿಯ ಸಹಾಯಕ ಪ್ರೊಫೆಸರ್ ಮುಹಮ್ಮದ್ ಅಬ್ದುಲ್ ಹೈ, ಸೂರತ್ ಮುನ್ಸಿಪಲ್ ಕಾರ್ಪೊರೇಶನ್ನಿನಲ್ಲಿ ಆರೋಗ್ಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಆಸಿಫ್ ಇಕ್ಬಾಲ್ ಕೂಡ ಸೇರಿದ್ದರು. ಪೊಲೀಸರು ಇವರನ್ನೂ ಸೇರಿದಂತೆ 127 ಮಂದಿಯನ್ನು ಸಿಮಿ ಕಾರ್ಯಕರ್ತರೆಂದು ಹೇಳಿ ಬಂಧಿಸಿದರು. ಕೊಡಬಾರದ ಹಿಂಸೆಯನ್ನು ಕೊಟ್ಟರು. ವರ್ಷಗಳ ಕಾಲ ಜೈಲಲ್ಲಿಟ್ಟರು. ಇದಾಗಿ 19 ವರ್ಷಗಳ ನಂತರ 2018ರಲ್ಲಿ ಸೂರತ್ ನ್ಯಾಯಾಲಯ ಇವರನ್ನೆಲ್ಲ ಆರೋಪಮುಕ್ತಗೊಳಿಸಿತು. ಆದರೆ, ಜೈಲು ಪಾಲಾದ ಸಮಯದಲ್ಲಿ ಮತ್ತು ಜಾಮೀನು ಮೂಲಕ ಬಿಡುಗಡೆಗೊಂಡ ನಂತರದಲ್ಲಿ ಇವರೆಲ್ಲ ಅನುಭವಿಸಿದ ನರಕಯಾತನೆ ಅತ್ಯಂತ ಆಘಾತಕಾರಿ. ಮುಹಮ್ಮದ್ ಅಬ್ದುಲ್ ಹೈಯವರು ಜಾಮೀನಿನಿಂದ ಹೊರಬಂದ ಬಳಿಕ ನಾರಾಯಣ್‌ವ್ಯಾಸ್ ಯುನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿ ಮುಂದುವರಿದರಾದರೂ ನಿಮಗೆ ಭಡ್ತಿ ಕೊಡುವುದಿಲ್ಲ ಎಂದು ಯುನಿವರ್ಸಿಟಿ ಹೇಳಿತು. ಹೀಗೆ ಯಾವ ಭಡ್ತಿಯೂ ಇಲ್ಲದೇ 2015ರಲ್ಲಿ ಅವರು ನಿವೃತ್ತರಾದರು. ಈ ನಡುವೆ ಜಾಮೀನಿನ ಮೇಲೆ ಹೊರಗಿದ್ದ ಸಮಯದುದ್ದಕ್ಕೂ ಅವರು ಅನುಭವಿಸಿದ ಎಡರು-ತೊಡರುಗಳು ಗುರುತರವಾದುದು. ಪ್ರತಿವಾರ ರಾಜಸ್ತಾನದ ಜೋಧ್‌ಪುರದಿಂದ 430 ಕಿ.ಮೀಟರ್ ದೂರದ ಸೂರತ್ ಪೊಲೀಸ್ ಠಾಣೆಗೆ ಬಂದು ಸಹಿ ಹಾಕಬೇಕಿತ್ತು. ತಿಂಗಳಲ್ಲಿ ಎರಡು ಬಾರಿ ಗುಜರಾತ್ ನಗರದ ಜ್ಯುಡೀಶಿಯಲ್ ಮ್ಯಾಜಿಸ್ಟ್ರೇಟ್ ಎದುರು ಹಾಜರಾಗಬೇಕಿತ್ತು. ಇಂಥ ಷರತ್ತು ಇವರೊಬ್ಬರಿಗಷ್ಟೇ ಅಲ್ಲ ಮತ್ತು 2018ರಲ್ಲಿ ಇವರೆಲ್ಲ ಆರೋಪಮುಕ್ತರಾಗುವವರೆಗೆ ಅನುಭವಿಸಿದ ಮಾನಸಿಕ ಮತ್ತು ಕೌಟುಂಬಿಕ ಸವಾಲುಗಳೂ ಅಷ್ಟಿಷ್ಟಲ್ಲ. ಹಾಗೆಯೇ, 2020 ಅಕ್ಟೋಬರ್‌ನಲ್ಲಿ ಬಂಧನಕ್ಕೀಡಾಗಿ ಸುಮಾರು ಎರಡೂವರೆ ವರ್ಷಗಳ ಕಾಲ ಜೈಲಲ್ಲಿದ್ದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಕತೆ ಬೇರೆಯಲ್ಲ.

ಹತ್ರಾಸ್ ಘಟನೆಯ ಬಗ್ಗೆ ವರದಿ ಮಾಡಲೆಂದು ಹೊರಟ ಸಿದ್ದೀಕ್ ಮತ್ತು ಇತರರನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿ ಯುಎಪಿಎ ಪ್ರಕರಣ ದಾಖಲಿಸಿದರು. 2022 ಸೆಪ್ಟೆಂಬರ್‌ನಲ್ಲಿ ಸುಪ್ರೀಮ್ ಕೋರ್ಟು ಸಿದ್ದೀಕ್ ಕಾಪ್ಪನ್‌ಗೆ ಜಾಮೀನು ನೀಡಿದರೂ ಬಿಡುಗಡೆಗೆ ಅಕ್ರಮ ಹಣ ವರ್ಗಾವಣೆ ಪ್ರಕರಣ ತಡೆಯಾಯಿತು. ಬಳಿಕ 2023 ಫೆಬ್ರವರಿಯಲ್ಲಿ ಜಾಮೀನು ಲಭ್ಯವಾಯಿತು. ಸತಾಯಿಸುವ ಉದ್ದೇಶದಿಂದಲೇ ಕಾಪ್ಪನ್ ಮೇಲೆ ಪ್ರಕರಣವನ್ನು ದಾಖಲಿಸಲಾಗಿದೆ ಎಂಬ ಅಭಿಪ್ರಾಯ ಅಂದೂ ಇಂದೂ ವ್ಯಾಪಕವಾಗಿಯೇ ಇದೆ. ಅಂದಹಾಗೆ,

ಸರಣಿ ಸ್ಫೋಟಗಳು, ಮುಸ್ಲಿಮ್ ಯುವಕರ ಸರಣಿ ಬಂಧನಗಳು ಹಾಗೂ ವರ್ಷಗಳ ಕಾಲ ಸತಾಯಿಸಿದ ಬಳಿಕ ಆಗುವ ಬಿಡುಗಡೆಗಳೆಲ್ಲ ಅನುಮಾನಗಳನ್ನಂತೂ ಹುಟ್ಟು ಹಾಕುತ್ತಿವೆ. ಮುಸ್ಲಿಮ್ ಸಮೂಹವನ್ನು ವ್ಯವಸ್ಥಿತವಾಗಿ ಗುರಿ ಮಾಡಲಾಗಿತ್ತೇ? ಮುಸ್ಲಿಮರೆಂದರೆ ಭಯೋತ್ಪಾದಕರು, ದೇಶ ದ್ರೋಹಿಗಳು, ರಕ್ತಪಿಪಾಸುಗಳು ಎಂಬ ಭಾವ ಮೂಡುವಂತೆ ಮಾಡುವ ಉದ್ದೇಶವನ್ನು ಹೊಂದಲಾಗಿತ್ತೇ? ಮುಸ್ಲಿಮರನ್ನು ಪಾಕಿಸ್ತಾನಿ ಹಿತೈಷಿಗಳಂತೆ ಬಿಂಬಿಸುವ ಪ್ರಯತ್ನಗಳು ನಡೆದಿದ್ದುವೇ? ಇಂಥ ಸಂಚಿನ ಅಗತ್ಯ ಯಾರಿಗಿತ್ತು, ಯಾಕಿತ್ತು? ಈ ದೇಶದಲ್ಲಿ ಬಾಂಬ್ ಸ್ಫೋಟ ಮತ್ತು ಜೀವಹಾನಿ ಆಗಿದ್ದಂತೂ ನಿಜ. ಅದನ್ನು ನಡೆಸಿರುವುದು ಯಾರೇ ಆಗಿದ್ದರೂ ಅವರು ಮಾನವ ದ್ರೋಹಿಗಳು, ದೇಶದ್ರೋಹಿಗಳು, ಧರ್ಮದ್ರೋಹಿಗಳು ಮತ್ತು ಈ ಜಗತ್ತಿನಲ್ಲಿ ಜೀವಿಸಿರಲು ಯಾವ ಕಾರಣಕ್ಕೂ ಅರ್ಹರಲ್ಲದವರು. ಈ ನಿಲುವಿನಲ್ಲಿ ಯಾವ ರಾಜಿಯೂ ಇಲ್ಲ. ಆದರೆ, ಬಾಂಬ್ ಸ್ಫೋಟಗೊಳ್ಳುವುದು ಮತ್ತು ಮುಸ್ಲಿಮ್ ಯುವಕರನ್ನು ಬಂಧಿಸುವುದು ಎಂಬುದರ ಹಿಂದೆ ಅಸಹಜವಾದುದು ಇತ್ತೇ? ಸಂಚುಗಳಿದ್ದುವೇ? ಮಾಲೆಗಾಂವ್ ಮತ್ತು ಮಕ್ಕಾ ಮಸೀದಿ ಸ್ಫೋಟದ ಆರೋಪದಿಂದ ಬಂಧಿತ ಮುಸ್ಲಿಮ್ ಯುವಕರು ಬಿಡುಗಡೆಯಾದರಲ್ಲ, ಹಾಗಿದ್ದರೆ ನಿಜವಾದ ಅಪರಾಧಿಗಳು ಯಾರು? ಅವರ ಉದ್ದೇಶ ಏನು? ಬಾಂಬ್ ಸ್ಫೋಟಗೊಂಡ ತಕ್ಷಣ ಪೊಲೀಸರು ಮುಸ್ಲಿಮ್ ಯುವಕರನ್ನೇ ಬಂಧಿಸಲು ಕಾರಣವೇನು? ಅನುಮಾನವೇ ಅಥವಾ ದುರುದ್ದೇಶವೇ? ಅಂದಹಾಗೆ,

ಮುಸ್ಲಿಮರೆಲ್ಲ ನೂರು ಶೇಕಡಾ ಪ್ರಾಮಾಣಿಕರು ಎಂದಲ್ಲ. ಅಪರಾಧ ಪ್ರವೃತ್ತಿ ಎಲ್ಲ ಸಮುದಾಯಗಳಂತೆ ಮುಸ್ಲಿಮ್ ಸಮುದಾಯದಲ್ಲೂ ಇದೆ. ಆದರೆ ಭಯೋತ್ಪಾದನೆಯ ಹೆಸರಲ್ಲಿ ಈವರೆಗೆ ಆಗಿರುವ ಬಂಧನಗಳು, ವೈಭವೀಕೃತ ಮಾಧ್ಯಮ ವರದಿಗಳು, ಟಿವಿ ತನಿಖಾ ವರದಿಗಳು ಮತ್ತು ಇನ್ನಿತರ ಬೆಳವಣಿಗಳೆಲ್ಲ ಒಂದು ಸಮುದಾಯವನ್ನು ಮಾತ್ರ ಗುರಿಯಾಗಿಸಿಕೊಂಡಿರುವುದು ಅನುಮಾನವನ್ನು ಹುಟ್ಟು ಹಾಕುತ್ತಿದೆ. ಬಂಧಿಸಿ ವರ್ಷಗಳ ಕಾಲ ಜೈಲಲ್ಲಿಡುವುದು ಮತ್ತು ಜಾಮೀನು ದೊರೆತು ವರ್ಷಗಳ ಬಳಿಕ ಆರೋಪಮುಕ್ತರಾಗುವುದು ಹಲವು ಪ್ರಶ್ನೆಗಳಿಗೂ ಕಾರಣವಾಗುತ್ತಿದೆ. ಬಂಧನಕ್ಕೀಡಾದವರು ಆರೋಪಮುಕ್ತರಾಗುವುದೆಂದರೆ, ಅಸಲಿಗೆ ಭಯೋತ್ಪಾದಕರು ಯಾರು ಎಂಬ ಪ್ರಶ್ನೆ ಮಹತ್ವವನ್ನು ಪಡೆಯುತ್ತದೆ. ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹನೆ ಇರಬೇಕೆಂಬುದರಲ್ಲಿ ಎರಡು ಮಾತಿಲ್ಲ. ಭಯೋತ್ಪಾದನೆ ಮಾನವ ವಿರೋಧಿ. ಅದರಾಚೆಗೆ, ಈ ಭಯೋತ್ಪಾದನೆಯ ಹೆಸರಲ್ಲಿ ಮುಸ್ಲಿಮ್ ಯುವಕರನ್ನು ಉದ್ದೇಶಪೂರ್ವಕ ಗುರಿ ಮಾಡಲಾಗಿದೆಯೇ ಎಂಬುದೂ ಮುಖ್ಯ. ಈ ಬಗ್ಗೆ ಪ್ರಾಮಾಣಿಕ ತನಿಖೆ ನಡೆಯಲಿ.

Monday, 13 May 2024

ಧರ್ಮದ್ವೇಷದ ಮನಸ್ಥಿತಿಯನ್ನು ಬೆತ್ತಲೆಗೊಳಿಸಿದ ಓಂಕಾರಪ್ಪ

 




ಧರ್ಮದ್ವೇಷದ  ಕರಾಳ ಮುಖವನ್ನು ಮೀನಾ ಎಂಬ ಅಪ್ರಾಪ್ತೆ ಸಮಾಜದ ಮುಂದಿಟ್ಟಿದ್ದಾಳೆ. ಇದಕ್ಕಾಗಿ ಆಕೆ ತನ್ನ ರುಂಡವನ್ನೇ ತ್ಯಾಗ  ಮಾಡಿದ್ದಾಳೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯಲ್ಲಿ ಬೆಳಿಗ್ಗೆ ಲವಲವಿಕೆಯಿಂದಿದ್ದ ಈಕೆಯನ್ನು ಸಂಜೆಯ ವೇಳೆ ಓಂಕಾರಪ್ಪ  ಎಂಬವ ರುಂಡ ಕಡಿದು ಹತ್ಯೆ ಮಾಡಿದ್ದಾನೆ. ಮದುವೆಗೆ ನಿರಾಕರಿಸಿದ್ದೇ  ಈ ಹತ್ಯೆಗೆ ಕಾರಣ. 18 ವರ್ಷಕ್ಕಿಂತ ಮೊದಲು ಮದುವೆಯಾಗುವುದು  ಕಾನೂನಿನ ಪ್ರಕಾರ ಅಪರಾಧ ಎಂಬುದನ್ನು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟ ಕಾರಣ ಮೀನಾ ಮತ್ತು ಓಂಕಾರಪ್ಪ ನಡುವಿನ ಮದುವೆ  ಸ್ಥಗಿತಗೊಂಡಿತ್ತು. ಇದೀಗ ಮೀನಾಳ ರುಂಡ ಪತ್ತೆಯಾಗಿದೆ. ಓಂಕಾರಪ್ಪನ ಬಂಧನವಾಗಿದೆ. ಆದರೆ,

ಈ ಪ್ರಕರಣ ನಡೆದ ಕೊಡಗಿನ ಸೋಮವಾರಪೇಟೆ ತಣ್ಣಗಿದೆ. ಸಾರ್ವಜನಿಕರ ಬಾಯಲ್ಲಿ ಈ ಕ್ರೌರ್ಯ ಚರ್ಚೆಯ ವಸ್ತುವಾಗಿದ್ದನ್ನು ಬಿಟ್ಟರೆ  ಉಳಿದಂತೆ ಹುಬ್ಬಳ್ಳಿಯ ನೇಹಾಳ ಹತ್ಯೆಗೆ ಸಿಕ್ಕ ಆಕ್ರೋಶದ ಒಂದು ಶೇಕಡಾ ಪ್ರತಿಕ್ರಿಯೆಯೂ ಈ ಹತ್ಯೆಗೆ ಸಿಕ್ಕಿಲ್ಲ. ಕ್ರೌರ್ಯದ ಪ್ರಮಾಣಕ್ಕೆ  ಹೋಲಿಸಿದರೆ ಈ ಎರಡೂ ಪ್ರಕರಣಗಳು ಒಂದನ್ನೊಂದು  ಮೀರಿಸುವಂಥವು. ಒಂದು ಹಂತದಲ್ಲಿ ಮೀನಾ ಹತ್ಯೆಯು ನೇಹಾ ಹತ್ಯೆಗಿಂತಲೂ  ಹೆಚ್ಚು ಭೀಕರ ಮತ್ತು ಭಯಾನಕವಾದುದು. ಓಂಕಾರಪ್ಪ ತನ್ನ ಪ್ರಿಯತಮೆಯ ರುಂಡವನ್ನೇ ಕತ್ತರಿಸಿದ್ದಾನೆ. ಫಯಾಝï ತನ್ನ ಪ್ರಿಯತಮೆಯನ್ನು  ಚೂರಿಯಿಂದ ಇರಿದು ಇರಿದು ಹತ್ಯೆ ಮಾಡಿದ್ದಾನೆ. ಹತ್ಯೆಗೆ ಇಬ್ಬರು ನೀಡಿರುವ ಕಾರಣಗಳೂ ಒಂದೇ- ಪ್ರೇಮ. ಆದರೆ,

ಈ ಎರಡೂ ಪ್ರಕರಣಗಳಿಗೆ ನಾಗರಿಕ ಸಮಾಜ ವ್ಯಕ್ತಪಡಿಸಿದ ಪ್ರತಿಕ್ರಿಯೆಯಲ್ಲಿ ಮಾತ್ರ ಭೂಮಿ-ಆಕಾಶದಷ್ಟು ವ್ಯತ್ಯಾಸವಿದೆ. ನೇಹ ಹತ್ಯೆಯ ಬೆನ್ನಿಗೇ ಟಿ.ವಿ. ಚಾನೆಲ್‌ಗಳು ಚುರುಕಾದವು. ಹತ್ಯೆ ನಡೆದ ಕಾಲೇಜು ಕ್ಯಾಂಪಸ್‌ನಲ್ಲಿ ನಿಂತು ಲೈವ್ ವರದಿಗಾರಿಕೆ ಮಾಡಿದುವು. ಕಾಲೇಜಿನ  ಅಧ್ಯಾಪಕರನ್ನು ಮಾತಾಡಿಸಿ ಅಭಿಪ್ರಾಯವನ್ನು ಪ್ರಸಾರ ಮಾಡಿದವು. ನೇಹಾ ಸಹಪಾಠಿಗಳ ಬಾಯಿಗೆ ಮೈಕ್ ಇಟ್ಟವು. ನಾಗರಿಕರನ್ನು ಮಾತಾಡಿಸಿ  ಅಭಿಪ್ರಾಯ ಪಡಕೊಂಡವು. ನೇಹಾ ತಾಯಿ ಮತ್ತು ತಂದೆ ಹಾಗೂ ಫಯಾಝï‌ನ ತಂದೆ ಮತ್ತು ತಾಯಿಯ ಅಭಿಪ್ರಾಯಗಳನ್ನು  ಸಮಾಜಕ್ಕೆ ತಲುಪಿಸಿದುವು. ಒಂದು ವಾರಕ್ಕಿಂತಲೂ ಅಧಿಕ ಸಮಯ ಈ ಹತ್ಯೆಯನ್ನು ರಾಜ್ಯದ ಅತಿ ಪ್ರಮುಖ ಚರ್ಚಾವಸ್ತುವಾಗಿ ಇವು  ಜೀವಂತ ಇಟ್ಟವು. ಚಾನೆಲ್‌ನಲ್ಲಿ ಸಂವಾದ, ಚರ್ಚೆ, ಸ್ಟೋರಿ ಇತ್ಯಾದಿಗಳನ್ನು ನಿರಂತರ ಪ್ರಸಾರ ಮಾಡಿ ಈ ಕ್ರೌರ್ಯದ ಕಾವು ಆರದಂತೆ  ನೋಡಿಕೊಂಡವು. ಕೇವಲ ಕನ್ನಡ ಚಾನೆಲ್‌ಗಳಷ್ಟೇ ಅಲ್ಲ, ರಾಷ್ಟ್ರ ಮಟ್ಟದ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‌ಗಳಲ್ಲೂ ನೇಹಾ ಹತ್ಯೆ ಸುದ್ದಿಗೆ  ಒಳಗಾಯಿತು. ಇದರ ಜೊತೆಜೊತೆಗೇ, ಬಿಜೆಪಿ ರಂಗಕ್ಕಿಳಿಯಿತು. ರಾಷ್ಟ್ರಾಧ್ಯಕ್ಷ ನಡ್ಡಾ ಅವರು ನೇರವಾಗಿ ದೆಹಲಿಯಿಂದ ಹುಬ್ಬಳ್ಳಿಗೆ ಬಂದರು.  ನೇಹಾ ಮನೆಗೆ ಭೇಟಿ ಕೊಟ್ಟದ್ದಲ್ಲದೇ ಮಾಧ್ಯಮಗಳಿಗೂ ಹೇಳಿಕೆಯನ್ನು ಕೊಟ್ಟರು. ಅಮಿತ್ ಶಾ ಅವರ ಚುನಾವಣಾ ರ‍್ಯಾಲಿಯಲ್ಲಿ ನೇಹಾ  ಹೆತ್ತವರರನ್ನು ತಂದು ಕೂರಿಸಿದರು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಫಯಾಝï‌ನನ್ನು ಗಲ್ಲಿಗೇರಿಸಿ ಎಂಬ ಕೂಗನ್ನು ಎಬ್ಬಿಸಿತು.  ನೇಹಾ ಓದಿನಲ್ಲಿ ಹೇಗಿದ್ದಳು, ಕ್ರೀಡೆಯಲ್ಲಿ ಎಷ್ಟು ಆಸಕ್ತಿ ಹೊಂದಿದ್ದಳು, ಭವಿಷ್ಯದಲ್ಲಿ ಏನಾಗಬೇಕೆಂಬ ಗುರಿ ಇಟ್ಟುಕೊಂಡಿದ್ದಳು ಎಂಬಲ್ಲಿಂದ   ತೊಡಗಿ ಫಯಾಝï ಎಂಥ ಕ್ರೂರಿಯಾಗಿದ್ದ, ಆತನ ಹಿನ್ನೆಲೆ ಏನು, ಆತ ಧರ್ಮಾಂಧನೇ, ಡ್ರಗ್ಸ್ ಚಟ ಹೊಂದಿದ್ದನೇ, ಕ್ರಿಮಿನಲ್ ಕೃತ್ಯಗಳ  ಪೂರ್ವ ಇತಿಹಾಸ ಆತನಿಗಿತ್ತೇ, ಕ್ರೌರ್ಯದ ಬಳಿಕ ಆತನ ಮುಖಭಾವದಲ್ಲಿ ಪಶ್ಚಾತ್ತಾಪ ಭಾವ ಇತ್ತೇ, ಆತ ಎಷ್ಟು ಸಮಯದಿಂದ ಈ ಹತ್ಯೆಗೆ  ಸಂಚು ನಡೆಸಿದ್ದ, ಹತ್ಯೆಗೆ ಬಳಸಿದ ಚೂರಿಯನ್ನು ಎಲ್ಲಿಂದ, ಯಾವಾಗ ಖರೀದಿಸಿದ್ದ, ಆತನ ಜೊತೆ ಆತನ ಹೆತ್ತವರು ಭಾಗಿಯಾಗಿದ್ದಾರಾ,  ತಂದೆಯನ್ನೇ ಆತ ಹತ್ಯೆ ಮಾಡಲು ಯತ್ನಿಸಿದ್ದನಾ... ಇತ್ಯಾದಿ ಇತ್ಯಾದಿ ಪ್ರಶ್ನೆಗಳೊಂದಿಗೆ ಮಾಧ್ಯಮಗಳು ತನಿಖೆಗಿಳಿದುವು. ಇದೇವೇಳೆ, ಸಿನಿಮಾ  ನಟ-ನಟಿಯರೂ ರಂಗಕ್ಕಿಳಿದರು. ಹೆಣ್ಮಕ್ಕಳ ಸುರಕ್ಷಿತತೆಯ ಕುರಿತು ಆತಂಕ ತೋಡಿಕೊಂಡರು. ಆದರೆ,

ಇವರೆಲ್ಲರ ಈ ಆಕ್ರೋಶ, ಪ್ರತಿಭಟನೆ, ಕಣ್ಣೀರು ಬರೇ ಬೂಟಾಟಿಕೆ ಎಂಬುದನ್ನು ಇದೀಗ ಈ ಓಂಕಾರಪ್ಪ ಸಾಬೀತುಪಡಿಸಿದ್ದಾನೆ. ಈತ ಮೀನಾಳ ರುಂಡ ಕಡಿದು ದಿನಗಳೇ ಕಳೆದಿವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಬಿಡಿ ಬಿಜೆಪಿಯ ಒಬ್ಬನೇ ಒಬ್ಬ ರಾಜ್ಯ ಮುಖಂಡ ಈ ಮೀನಾಳ ಮನೆಗೆ  ಭೇಟಿ ಕೊಟ್ಟಿಲ್ಲ. ಹೇಳಿಕೆ ನೀಡಿಲ್ಲ. ನೇಹಾಳ ಹತ್ಯೆಯನ್ನು ಖಂಡಿಸಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಬಿಜೆಪಿ, ಮೀನಾಳಿಗಾಗಿ ಕನಿಷ್ಠ  ಸೋಮವಾರಪೇಟೆಯಲ್ಲಾದರೂ ಒಂದು ಖಂಡನಾ ಮೆರವಣಿಗೆ ನಡೆಸಿಲ್ಲ. ಓಂಕಾರಪ್ಪನನ್ನು ನೇಣಿಗೇರಿಸಿ ಎಂದು ಕೂಗು ಹಾಕಿಲ್ಲ. ಅದರ  ವಿದ್ಯಾರ್ಥಿ ಘಟಕವಾದ ಎಬಿವಿಪಿಯೂ ಮೌನವಾಗಿದೆ. ನೇಹಾ ಹತ್ಯೆಯನ್ನು ಖಂಡಿಸಿ ಬೀದಿಗಿಳಿದಿದ್ದ ಮತ್ತು ಪ್ಲಕಾರ್ಡ್ ಹಿಡಿದು ಪ್ರತಿಭಟಿಸಿದ್ದ  ಎಬಿವಿಪಿಯು ಮೀನಾ ಹತ್ಯೆಯನ್ನು ಕಂಡೇ ಇಲ್ಲದಂತೆ ವರ್ತಿಸುತ್ತಿದೆ. ಸಿನಿಮಾ ನಟ-ನಟಿಯರೂ ಕಾಣೆಯಾಗಿದ್ದಾರೆ. ನೇಹಾಳ ಹತ್ಯೆಯಲ್ಲಿ  ಹೆಣ್ಣು ಮಕ್ಕಳ ಅಸುರಕ್ಷಿತತೆಯನ್ನು ಕಂಡಿದ್ದ ಅವರೆಲ್ಲ ಈಗ ಮೀನಾ ಹತ್ಯೆಗೆ ಒಂದಕ್ಷರ ಪ್ರತಿಕ್ರಿಯಿಸಲೂ ಪುರುಸೊತ್ತು ಇಲ್ಲದವರಂತೆ  ಬ್ಯುಝಿಯಾಗಿದ್ದಾರೆ. ಮಾಧ್ಯಮಗಳಂತೂ ಸೋಮವಾರಪೇಟೆಯನ್ನೇ ಮರೆತಿವೆ. ಓಂಕಾರಪ್ಪನ ವ್ಯಕ್ತಿತ್ವ, ರುಂಡ ಕತ್ತರಿಸುವುದಕ್ಕೆ ಬಳಸಿದ  ಮಚ್ಚುನ ಹಿನ್ನೆಲೆ, ಅದನ್ನು ತಯಾರಿಸಿದ ವ್ಯಕ್ತಿಯ ಪೂರ್ವಾಪರ, ಓಂಕಾರಪ್ಪನ ತಂದೆ-ತಾಯಿಯ ಅಭಿಪ್ರಾಯ, ಅವರ ವೃತ್ತಿ, ಈ ಹತ್ಯೆಗೆ ಓಂಕಾರಪ್ಪ  ನಡೆಸಿರುವ ಸಂಚು, ಈ ಹತ್ಯೆಯಲ್ಲಿ ಭಾಗಿಯಾಗಿರಬಹುದಾದ ಇನ್ನಿತರರ ಮಾಹಿತಿ, ಈತ ಕುಡುಕನೇ, ಡ್ರಗ್ಸ್ ಹಿನ್ನೆಲೆ ಇದೆಯೇ, ಮೀನಾಳ  ಮನೆಯಿಂದ ಆತ ಬಂದೂಕು ಏಕೆ ಅಪಹರಿಸಿದ, ಆತ ದರೋಡೆಕೋರನೇ, ಆತನ ವಿಚಾರಧಾರೆ ಏನು, ಆತ ಓದಿರುವ ಗ್ರಂಥ ಯಾವುದು,  ಆತ ಮಂದಿರಕ್ಕೆ ಹೋಗುತ್ತಿದ್ದನೇ, ಪ್ರಾರ್ಥನೆ ಮಾಡುತ್ತಿದ್ದನೇ, ಮನೆಯಲ್ಲಿ ದೇವರ ಮೂರ್ತಿಗಳು ಇವೆಯೇ, ಯಾವ ಧರ್ಮಗ್ರಂಥವನ್ನು ಆತ  ಅನುಸರಿಸುತ್ತಿದ್ದ, ಬಂಧನ ವೇಳೆ ಆತನ ಮುಖಭಾವ ಹೇಗಿತ್ತು, ಆತನಿಗೆ ಮೀನಾಳ ಕುಟುಂಬವನ್ನೇ ಹತ್ಯೆ ಮಾಡುವ ಉದ್ದೇಶ ಇತ್ತಾ, ಆತ  ಎಷ್ಟು ಓದಿದ್ದಾನೆ, ಸ್ವಂತ ಹೆತ್ತವರನ್ನೇ ಹತ್ಯೆ ಮಾಡಲು ಈ ಹಿಂದೆ ಪ್ರಯತ್ನಿಸಿದ್ದನಾ, ಈ ಮೀನಾ ಹೇಗಿದ್ದಳು, ಕಲಿಕೆಯಲ್ಲಿ ಎಷ್ಟು ಮುಂದಿದ್ದಳು,  ಕ್ರೀಡೆಯಲ್ಲಿ ಎಷ್ಟು ಚುರುಕಾಗಿದ್ದಳು, ಆಕೆಯ ಕನಸುಗಳೇನಿತ್ತು, ಎಸೆಸ್ಸೆಲ್ಸಿ ನಂತರ ಆಕೆ ವೈದ್ಯೆಯಾಗುವ ಹಂಬಲ ಹೊಂದಿದ್ದಳೇ, ಅದನ್ನು ಆಕೆ  ಯಾರೊಂದಿಗೆ ತೋಡಿಕೊಂಡಿದ್ದಳು, ಆಕೆಗೆ ಕಲಿಸಿದ ಶಿಕ್ಷಕರ ಅಭಿಪ್ರಾಯವೇನು, ಗೆಳತಿಯರು ಏನು ಹೇಳುತ್ತಾರೆ, ಪರೀಕ್ಷೆಯಲ್ಲಿ  ತೇರ್ಗಡೆಯಾದ ವಿಷಯವನ್ನು ಹಂಚುವುದಕ್ಕಾಗಿ ತಂದ ಲಾಡು ಹಾಗೆಯೇ ಅನಾಥವಾಗಿ ಬಿದ್ದಿದೆಯಾ... ಎಂಬಿತ್ಯಾದಿ ತನಿಖಾ ವರದಿಗಾರಿಕೆ  ಮಾಡಿ ಕ್ರೌರ್ಯವನ್ನು ಜೀವಂತವಾಗಿ ಇಡಬೇಕಿದ್ದ ಮಾಧ್ಯಮಗಳು ಸಂಪೂರ್ಣ ಮೌನವಾಗಿವೆ. ಮಾತ್ರವಲ್ಲ, ಒಂದು ಸಾಮಾನ್ಯ ಕ್ರಿಮಿನಲ್ ಕೃತ್ಯ  ಎಂಬ ಭಾವದಿಂದ ಈ ಕ್ರೌರ್ಯ ಮೇಲೆದ್ದೇ  ಇಲ್ಲ. ರಾಜಕಾರಣಿಗಳಿಗೂ ಸೆಲೆಬ್ರಿಟಿಗಳಿಗೂ ಮತ್ತು ಮಾಧ್ಯಮ ಮಂದಿಗೂ ಇದೊಂದು  ಚರ್ಚಿಸಬೇಕಾದ ಮತ್ತು ಪ್ರಶ್ನಿಸಬೇಕಾದ ಕೃತ್ಯ ಎಂದು ಅನಿಸಿಯೇ ಇಲ್ಲ. ನಿಜವಾಗಿ,

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಆಕ್ರೋಶದ ಹಿಂದೆ ಹತ್ಯೆಗಿಂತ ಹತ್ಯೆ ಮಾಡಿದವನ ಧರ್ಮವೇ ಕಾರಣವಾಗಿತ್ತು ಎಂಬುದನ್ನು ಇವೆಲ್ಲ  ಸಾಬೀತುಪಡಿಸುತ್ತದೆ. ಸಮಾಜದ ಮನಸ್ಥಿತಿ ಇಷ್ಟೊಂದು ಗಬ್ಬೆದ್ದು ಹೋಗಲು ಕಾರಣ ಏನು? ಹತ್ಯೆಯನ್ನು ಖಂಡಿಸುವುದಕ್ಕಿಂತ  ಮೊದಲು  ಹತ್ಯೆಗೈದವನ ಧರ್ಮ ನೋಡುವಂಥ ಹೀನಾಯ ಮತ್ತು ಕಡು ಕೆಟ್ಟ ಮನಸ್ಸನ್ನು ನಾವೇಕೆ ಹೊಂದಿದ್ದೇವೆ? ನಾವು ಕಳಕೊಂಡದ್ದು ಇಬ್ಬರು  ಹೆಣ್ಣು ಮಕ್ಕಳನ್ನು. ಇವರಿಗೆ ಬದುಕುವ ಪೂರ್ಣ ಹಕ್ಕನ್ನು ಖಾತರಿಪಡಿಸಬೇಕಿದ್ದುದು ಇಲ್ಲಿನ ವ್ಯವಸ್ಥೆ. ಸಮಾಜ ಪ್ರಶ್ನಿಸಬೇಕಾದದ್ದು ಮತ್ತು  ಪ್ರತಿಭಟಿಸಬೇಕಾದದ್ದು ಈ ಖಾತರಿಯಲ್ಲಿ ಲೋಪವಾಗಿರುವುದನ್ನು. ಆದರೆ, ಈ ವಿವೇಕವನ್ನು ಪ್ರದರ್ಶಿಸುವ ಬದಲು ಧರ್ಮವನ್ನು ನೋಡಿ  ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವ ವಾತಾವರಣ ಯಾಕೆ ನಿರ್ಮಾಣವಾಯಿತು? ರಾಜಕಾರಣಿಗಳ ಅಧಿಕಾರ ದಾಹದ ದಾಳವಾಗಿ  ನಾಗರಿಕ ಸಮಾಜ ಯಾಕೆ ಮಾರ್ಪಾಟಾಗಿದೆ? ನೇಹಾಳ ಹತ್ಯೆಯನ್ನು ತನಿಖಿಸುವುದಕ್ಕೆ ತ್ವರಿತಗತಿ ನ್ಯಾಯಾಲಯದ ಸ್ಥಾಪನೆಯಾಗುವುದಾದರೆ  ಅಂಥದ್ದೇ ನ್ಯಾಯ ಮೀನಾಳಿಗೂ ಸಿಗಬೇಡವೇ? ಫಯಾಝï‌ನನ್ನು ಗಲ್ಲಿಗೇರಿಸಲು ಸಮಾಜ ತೋರಿದ ಉತ್ಸಾಹವನ್ನು ಓಂಕಾರಪ್ಪನ  ವಿಷಯದಲ್ಲೂ ತೋರಬೇಡವೇ?

ಅಪರಾಧವನ್ನು ಧರ್ಮಾಧಾರಿತವಾಗಿ ವಿಭಜಿಸುವುದರಿಂದ ಅಂತಿಮವಾಗಿ ರಾಜಕೀಯ ಅಧಿಕಾರದಾಹಿಗಳಿಗೆ ಲಾಭವಾಗಬಹುದೇ ಹೊರತು  ಅಪರಾಧ ಕೃತ್ಯಗಳನ್ನು ಮಟ್ಟ ಹಾಕುವುದಕ್ಕೆ ಅದು ಯಾವ ಕೊಡುಗೆಯನ್ನೂ ನೀಡದು. ಹೆಣ್ಣು ಮಕ್ಕಳ ಪ್ರಾಣಕ್ಕೂ ಮಾನಕ್ಕೂ ಈ ವಿಭಜನೆಯಿಂದ ಯಾವ ರಕ್ಷಣೆಯನ್ನೂ ನೀಡಲಾಗದು.