Tuesday, 16 September 2025

ಬಾನು ಮುಶ್ತಾಕ್‌ರನ್ನು ಬಿಜೆಪಿ ವಿರೋಧಿಸಿರುವುದಕ್ಕೆ ಧರ್ಮ ಕಾರಣವೇ?


ಸನ್ಮಾರ್ಗ ಸಂಪಾದಕೀಯ 

ನಾಡಹಬ್ಬ ದಸರಾವನ್ನು ಸಾಹಿತಿ ಬಾನು ಮುಶ್ತಾಕ್ ಅವರು ಉದ್ಘಾಟಿಸುವುದು ಸರಿಯೋ ತಪ್ಪೋ ಎಂಬ ಚರ್ಚೆಯೊಂದನ್ನು ಬಿಜೆಪಿ ಕನ್ನಡಿಗರ ಮೇಲೆ ಎತ್ತಿ ಹಾಕಿದೆ. ಮಾಜಿ ಸಂಸದ ಪ್ರತಾಪಸಿಂಹ, ಶಾಸಕ ಯತ್ನಾಳ್ ಅವರು ಬಹಿರಂಗವಾಗಿಯೇ ಬಾನು ಮುಶ್ತಾಕ್ ಅವರ ಉದ್ಘಾಟನೆಯನ್ನು ವಿರೋಧಿಸಿದ್ದಾರೆ. ಬಾನು ಮುಶ್ತಾಕ್ ಅವರ ಧಾರ್ಮಿಕ ನಂಬಿಕೆಯೇ  ಈ ವಿರೋಧಕ್ಕೆ ಕಾರಣ ಎಂದೂ ಹೇಳಿದ್ದಾರೆ. ಬಾನು ಮುಶ್ತಾಕ್ ಅವರ ಧರ್ಮ ಈ ಉದ್ಘಾಟನಾ ವಿಧಾನವನ್ನು ಒಪ್ಪುವುದಿಲ್ಲ ಎಂಬುದು ಈ ಇಬ್ಬರ ವಾದ. ನಿಜವಾಗಿ,

ಈ ಪ್ರತಾಪಸಿಂಹ ಆಗಲಿ, ಯತ್ನಾಳ್ ಆಗಲಿ ನಿನ್ನೆ ಮೊನ್ನೆ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದವರಲ್ಲ. 2017ರಲ್ಲಿ ಈ ದಸರಾವನ್ನು ಉದ್ಘಾಟಿಸಿದ್ದು ಕವಿ ನಿಸಾರ್ ಅಹ್ಮದ್. ಆಗ ಪ್ರತಾಪಸಿಂಹ ಸಂಸದರಾಗಿದ್ದರು. ಯತ್ನಾಳ್ ಶಾಸಕರಾಗಿದ್ದರು. ಕೇಂದ್ರದಲ್ಲಿ ಬಿಜೆಪಿ ಸರಕಾರವಿದ್ದರೆ ರಾಜ್ಯದಲ್ಲಿ ಪ್ರಧಾನ ವಿರೋಧ ಪಕ್ಷವಾಗಿ ಬಿಜೆಪಿ ಚಟುವಟಿಕೆಯಲ್ಲಿತ್ತು. ಅಂದೂ ಮುಖ್ಯಮಂತ್ರಿಯಾಗಿದ್ದುದು ಸಿದ್ದರಾಮಯ್ಯ. ಇಂದೂ ಮುಖ್ಯಮಂತ್ರಿಯಾಗಿರುವುದು ಸಿದ್ದರಾಮಯ್ಯರೇ. ಆದರೆ,

2017ರಲ್ಲಿ ನಿಸಾರ್ ಅಹ್ಮದ್‌ರ ಧರ್ಮವನ್ನು ಉಲ್ಲೇಖಿಸಿ ಯಾವ ವಿರೋಧವನ್ನೂ ವ್ಯಕ್ತಪಡಿಸದ ಬಿಜೆಪಿ, 2025ರಲ್ಲಿ ಬಾನು ಮುಶ್ತಾಕ್‌ಗೆ ಧರ್ಮದ ಆಧಾರದಲ್ಲಿ ವಿರೋಧ ವ್ಯಕ್ತಪಡಿಸಲು ಕಾರಣವೇನು? ನಿಸಾರ್ ಅಹ್ಮದ್‌ರಿಗೆ ಹೋಲಿಸಿದರೆ ಬಾನು ಮುಶ್ತಾಕ್ ಅವರ ಆಯ್ಕೆಗೆ ಇನ್ನೂ ಹೆಚ್ಚು ತೂಕವಿದೆ. ಇವರು ಬೂಕರ್ ಪ್ರಶಸ್ತಿ ವಿಜೇತ ಮೊದಲ ಕನ್ನಡ ಸಾಹಿತಿ. ಅರ್ಹತೆ ಮತ್ತು ಆಯ್ಕೆಗೆ ಸಂಬಂಧಿಸಿ ಒಂದಿನಿತೂ ಅನುಮಾನ ಇಲ್ಲದಷ್ಟು ಸೂಕ್ತ ವ್ಯಕ್ತಿತ್ವ ಬಾನು ಮುಶ್ತಾಕ್‌ರದ್ದು. ಇಷ್ಟಿದ್ದೂ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದೇಕೆ? ಬಾನು ಮುಶ್ತಾಕ್‌ರ ಧರ್ಮವನ್ನು ಎತ್ತಿಕೊಂಡು ಮತ್ತು ಅವರ ಧರ್ಮದಲ್ಲಿರುವ ಏಕದೇವಾರಾಧನೆಯನ್ನು ಮುಂದು ಮಾಡಿಕೊಂಡು ಬಿಜೆಪಿ ವ್ಯಕ್ತಪಡಿಸುತ್ತಿರುವ ಈ ವಿರೋಧದ ಹಿಂದೆ ನಿಜಕ್ಕೂ ಕೆಲಸ ಮಾಡುತ್ತಿರುವುದು ಅವರ ಧರ್ಮವೋ ಅಥವಾ ಅವರ ನಿಲುವುಗಳೋ?

ಬಾನು ಮುಶ್ತಾಕ್ ಅಂದರೆ ಬಿಜೆಪಿಗೆ ಬಿಸಿ ತುಪ್ಪ. ಯಾಕೆಂದರೆ, ಬಾನು ಮುಶ್ತಾಕ್ ಬರೇ ಓರ್ವ ಸಾಹಿತಿಯಲ್ಲ. ಅವರು ವಕೀಲರು. ಅದಕ್ಕಿಂತಲೂ ಮುಖ್ಯವಾಗಿ ತಾಯಿ ಹೃದಯದ ಹೋರಾಟಗಾರರು. ಬಿಜೆಪಿಯ ಕೋಮುವಾದವನ್ನು ಸದಾ ಎದುರಿಸುತ್ತಲೇ ಬಂದ ಲಂಕೇಶ್ ಅವರ ಶೋಧನೆಯೇ ಈ ಬಾನು ಮುಶ್ತಾಕ್. ಲಂಕೇಶ್ ಪತ್ರಿಕೆಯಲ್ಲಿ ವರದಿಗಾರರಾಗಿ ಇವರು ಬರಹ ಜಗತ್ತಿನಲ್ಲಿ ಗುರುತಿಸಿಕೊಂಡರು. ಅವರು ಬರೇ ತನ್ನನ್ನು ಬರಹಕ್ಕೆ ಮತ್ತು ವಕೀಲಗಾರಿಕೆಗೆ ಮಾತ್ರ ಸೀಮಿತಗೊಳಿಸಲಿಲ್ಲ. ಚಳವಳಿಗಳಲ್ಲೂ ಸಕ್ರಿಯವಾಗಿ ಭಾಗಿಯಾದರು. ಅದರಲ್ಲಿ ಬಾಬಾ ಬುಡನ್‌ಗಿರಿ ಚಳವಳಿಯೂ ಒಂದು.

ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡನ್‌ಗಿರಿಯನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲು ಹೊರಟ ಕೋಮುವಾದಿಗಳ ವಿರುದ್ಧ 2000 ಇಸವಿಯಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆ ಹೋರಾಟವನ್ನು ಹುಟ್ಟು ಹಾಕಿತ್ತು. ಬುಡನ್‌ಗಿರಿಗೆ ಭೇಟಿ ನೀಡುವುದರಿಂದ ಮುಸ್ಲಿಮರನ್ನು ಕೋಮುವಾದಿಗಳು ತಡೆದಿದ್ದರು. ‘ದತ್ತಪೀಠವನ್ನು ಸಂಪೂರ್ಣವಾಗಿ ಹಿಂದೂಗಳಿಗೆ ಹಸ್ತಾಂತರಿಸಬೇಕು, ಅಲ್ಲಿನ ಗೋರಿಗಳನ್ನು ಸ್ಥಳಾಂತರಿಸಬೇಕು, ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು, ದತ್ತಾತ್ರೇಯ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಬೇಕು...’ ಇತ್ಯಾದಿ ಬೇಡಿಕೆಯೊಂದಿಗೆ ಸಂಘಪರಿವಾರ ಬಲವಂತದ ಹೋರಾಟಕ್ಕೆ ಮುಂದಾದಾಗ ಅದಕ್ಕೆ ವಿರೋಧವನ್ನು ಒಡ್ಡಿ ಕೋಮು ಸೌಹಾರ್ದ ವೇದಿಕೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿತು. 1999ರ ವರೆಗೆ ಸಹಜವಾಗಿದ್ದ ಮತ್ತು ಶಾಂತವಾಗಿದ್ದ ಬಾಬಾ ಬುಡನ್‌ಗಿರಿಯನ್ನು ದಿಢೀರ್ ಆಗಿ ಅಶಾಂತಿಯ ತಾಣವಾಗಿಸಿದುದರ ಹಿಂದೆ ರಾಜಕೀಯ ಕಾರಣ ಇದೆ ಎಂಬುದನ್ನು ಅರಿತುಕೊಂಡ ಕೋಮುಸೌಹಾರ್ದ ವೇದಿಕೆಯು ಬುಡನ್‌ಗಿರಿಯಲ್ಲಿ 1975ಕ್ಕಿಂತ ಮೊದಲಿದ್ದ ಪದ್ಧತಿಗಳನ್ನೇ ಮುಂದುವರಿಸಬೇಕು ಮತ್ತು ದರ್ಗಾದಲ್ಲಿ ಕೋಮುವಾದಿಗಳ ಆಚರಣೆಗಳನ್ನು ತಡೆಯಬೇಕು ಎಂದು ಆಗ್ರಹಿಸಿ ಬೀದಿಗಿಳಿಯಿತು. ಅದರಲ್ಲಿ ಭಾಗಿಯಾದವರೇ ಈ ಬಾನು ಮುಶ್ತಾಕ್.

ಶಿವಮೊಗ್ಗದವರಾದ ಮತ್ತು ಹೋರಾಟ ಮನೋಭಾವದ ಬಾನು ಮುಶ್ತಾಕ್‌ರು ವಕೀಲ ವೃತ್ತಿಯ ಅನುಭವದೊಂದಿಗೆ ಹೋರಾಟಕ್ಕೆ ಮಹತ್ವದ ಕೊಡುಗೆಯನ್ನು ಸಲ್ಲಿಸಿದರು. ಕೋಮುವಾದಿ ಚಟುವಟಿಕೆಗಳಿಗೆ ವಿರೋಧವನ್ನು ವ್ಯಕ್ತಪಡಿಸಿದರು. ಮುಸ್ಲಿಮ್ ಸಮುದಾಯದಲ್ಲಿದ್ದ ಮಡಿವಂತರು ಮಹಿಳೆಗೆ ಮಸೀದಿ ಪ್ರವೇಶವನ್ನು ನಿರಾಕರಿಸಿದಾಗ ಅವರು ಹೇಗೆ ವಿರೋಧಿಸಿ ಹೋರಾಟಕ್ಕಿಳಿದಿದ್ದರೋ ಅದೇ ರೀತಿಯ ಮನೋಭಾವವನ್ನು ಅವರು ಇಲ್ಲೂ ಪ್ರದರ್ಶಿಸಿದರು. ಈ ಕಾರಣದಿಂದಲೇ ಕೋಮುವಾದಿಗಳಿಗೆ ಬಾನು ಮುಶ್ತಾಕ್ ನುಂಗಲಾರದ ತುತ್ತಾಗಿ ಬಿಟ್ಟರು. ಬರೇ ಕತೆ, ಕವನ, ಬರಹಕ್ಕೆ ಸೀಮಿತವಾಗದೇ ನಾಡಿನ ಸಮಸ್ಯೆಗಳಿಗೆ ದನಿಯಾಗುವ ಬಾನು ಮುಶ್ತಾಕ್ ಅವರಿಗೆ ಬೇಕಾಗಿರಲಿಲ್ಲ. ಧರ್ಮದ್ವೇಷವನ್ನು ಪ್ರಶ್ನಿಸುವ ಬಾನು ಅವರಿಗೆ ಬೇಕಾಗಿರಲಿಲ್ಲ. ಆದ್ದರಿಂದಲೇ, ಬಾನು ಮುಶ್ತಾಕ್‌ರನ್ನು ಗಡಿಯಲ್ಲಿಟ್ಟೇ ಅವರು ನೋಡತೊಡಗಿದರು. ಆದರೆ,

ಬಾನು ಮುಶ್ತಾಕ್ ಇವುಗಳಿಗೆ ತಲೆ ಕೆಡಿಸಿಕೊಳ್ಳಲಿಲ್ಲ. ಮುಸ್ಲಿಮ್ ದ್ವೇಷಿ ಮತ್ತು ಕೋಮುವಾದಿ ವಿಚಾರಧಾರೆಯನ್ನು ಪ್ರಶ್ನಿಸುವುದನ್ನು ಮುಂದುವರಿಸುತ್ತಲೇ ಬಂದ ಬಾನು ಮುಶ್ತಾಕ್ ಅವರು ಹಿಜಾಬ್ ವಿವಾದದ ಸಂದರ್ಭದಲ್ಲಿ ಮತ್ತೆ ತನ್ನ ಖಚಿತ ನಿಲುವಿನ ಮೂಲಕ ಬಿಜೆಪಿಯ ಕೆಂಗಣ್ಣಿಗೆ ಗುರಿಯಾದರು. ಶಾಲೆಗಳಲ್ಲಿ ಹಿಜಾಬ್ ಧರಿಸುವ ಹೆಣ್ಣು ಮಕ್ಕಳ ಹಕ್ಕನ್ನು ಅವರು ಬೆಂಬಲಿಸಿದರು. ಸಾಮಾನ್ಯವಾಗಿ,

ಸರಕಾರದ ನಿರ್ಧಾರಕ್ಕೆ ವಿರುದ್ಧವಾಗಿ ಸಾಹಿತಿಗಳು ಧ್ವನಿಯೆತ್ತುವುದು ಕಡಿಮೆ ಎಂಬ ಮಾತಿದೆ. ಅದರಲ್ಲೂ ಬಿಜೆಪಿ ಸರಕಾರದ ಅವಧಿಯಲ್ಲಂತೂ ಇಂಥ ನಡವಳಿಕೆ ಹೆಚ್ಚು. ಮನ್‌ಮೋಹನ್ ಸಿಂಗ್ ಸರಕಾರವಿದ್ದಾಗ ಸಿನಿಮಾ ತಾರೆಯರಿಂದ ಹಿಡಿದು ಸಾಹಿತಿಗಳ ವರೆಗೆ ಎಲ್ಲರೂ ಸರಕಾರದ ನೀತಿ-ಧೋರಣೆಗಳನ್ನು ಬಹಿರಂಗವಾಗಿಯೇ ಪ್ರಶ್ನಿಸುತ್ತಿದ್ದರು. ಸೋಶಿಯಲ್ ಮೀಡಿಯಾಗಳಲ್ಲಿ ತಮ್ಮ ನಿಲುವನ್ನು ಸ್ವಚ್ಛಂದವಾಗಿ ವ್ಯಕ್ತಪಡಿಸುತ್ತಿದ್ದರು. ಆದರೆ, ಮೋದಿ ಸರಕಾರದ ಕಳೆದ 11 ವರ್ಷಗಳ ಅವಧಿಯಲ್ಲಿ ಈ ಪ್ರಕ್ರಿಯೆಯೇ ನಿಂತು ಹೋಗಿದೆ. ಆದರೆ, ಬಾನು ಮುಶ್ತಾಕ್ ಹಾಗಿಲ್ಲ. ರಾಜ್ಯದಲ್ಲಿ ಬಿಜೆಪಿ ಸರಕಾರ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿದಾಗ ಬಾನು ಮುಶ್ತಾಕ್ ತನ್ನ ನಿಲುವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು. ‘ಹಿಂದೆ ಸರಿದ ಮುಸ್ಲಿಮ್ ಹುಡುಗಿಯರ ಶಿಕ್ಷಣ’ ಎಂಬ ಶೀರ್ಷಿಕೆಯಲ್ಲಿ ಪ್ರಜಾವಾಣಿ ಪತ್ರಿಕೆಯಲ್ಲಿ 2022 ಫೆಬ್ರವರಿ 26ರಂದು ದೀರ್ಘ ಲೇಖನ ಬರೆದರು. ಹಿಜಾಬ್ ನಿಷೇಧದ ರಾಜಕೀಯ ಒಳಸುಳಿಗಳನ್ನು ಅತ್ಯಂತ ಸೂಕ್ಷ್ಮವಾಗಿ ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸಿದ್ದ ಅವರು, ಇದರಿಂದಾಗಿ ಮುಸ್ಲಿಮ್ ಹೆಣ್ಣು ಮಕ್ಕಳ ಶಿಕ್ಷಣದ ಮೇಲಾಗುವ ದುಷ್ಪರಿಣಾಮದ ಬಗ್ಗೆ ಎಚ್ಚರಿಸಿ ಆತಂಕವನ್ನೂ ವ್ಯಕ್ತಪಡಿಸಿದ್ದರು. ನಿಜವಾಗಿ,

ಬಿಜೆಪಿಗೆ ತಕರಾರಿರುವುದೇ ಇಲ್ಲಿ. ತನಗೆ ವಿನೀತವಾಗಿರದ ಬಾನು ಮುಶ್ತಾಕ್‌ರ ಮೇಲೆ ಬಿಜೆಪಿಗೆ ದ್ವೇಷವಿದೆ. ಅದರಲ್ಲೂ ತನ್ನ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ಅವರ ಬಂಡಾಯ ಮತ್ತು ಧರ್ಮದ್ವೇಷ ವಿರೋಧಿ ನೀತಿಯ ಬಗ್ಗೆ ಆಕ್ರೋಶವಿದೆ. ಬೂಕರ್ ಪ್ರಶಸ್ತಿ ಪಡೆದಾಗಲೂ ಬಾನು ಮುಶ್ತಾಕ್‌ರನ್ನು ಬಿಜೆಪಿ ಪೂರ್ಣ ಮನಸ್ಸಿನಿಂದ ಅಭಿನಂದಿಸದೇ ಇರಲೂ ಇದುವೇ ಕಾರಣ. ಇಡೀ ರಾಜ್ಯವೇ ಬಾನು ಮುಶ್ತಾಕ್‌ರನ್ನು ಬೂಕರ್ ಮುಶ್ತಾಕ್ ಎಂದು ಸಂಭ್ರಮಿಸುತ್ತಿದ್ದಾಗಲೂ ಬಿಜೆಪಿ ಮನೆಯನ್ನು ಮೌನ ಹೊದ್ದುಕೊಂಡಿತ್ತು. ಇದೀಗ ಬಿಜೆಪಿ ತನ್ನ ಅಸಲು ಮುಖವನ್ನು ಬಹಿರಂಗಕ್ಕೆ ತಂದಿದೆ. ಧರ್ಮದ ನೆಪವನ್ನು ಮುಂದಿಟ್ಟುಕೊಂಡು  ನಾಡಹಬ್ಬವನ್ನು ಉದ್ಘಾಟಿಸುವುದಕ್ಕೆ ವಿರೋಧವನ್ನು ವ್ಯಕ್ತಪಡಿಸುತ್ತಿದೆ. ಒಂದುವೇಳೆ,

ದಸರಾ ಉದ್ಘಾಟಿಸುವುದಕ್ಕೆ ತನ್ನ ಧಾರ್ಮಿಕ ವಿಶ್ವಾಸ ಅಡ್ಡಿ ಬರುತ್ತದೆಂದಾದರೆ ಅದನ್ನು ಹೇಳಬೇಕಾಗಿರುವುದು ಬಾನು ಮುಶ್ತಾಕ್‌ರೇ ಹೊರತು ಬಿಜೆಪಿ ಅಲ್ಲ. ಆದರೆ ಬಾನು ಮುಶ್ತಾಕ್ ದಸರಾ ಉದ್ಘಾಟನೆಗೆ ಒಪ್ಪಿಕೊಂಡಿದ್ದಾರೆ. ತನ್ನನ್ನು ಆಯ್ಕೆ ಮಾಡಿರುವುದಕ್ಕೆ ಮುಖ್ಯಮಂತ್ರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಹೀಗಿರುವಾಗ, ಬಿಜೆಪಿಗೇನು ತೊಂದರೆ? ಬಾನು ಮುಶ್ತಾಕ್‌ರಿಗೇ ಇಲ್ಲದ ವಿರೋಧವನ್ನು ಬಿಜೆಪಿ ಹುಡುಕುತ್ತಿರುವುದೇಕೆ? ತನ್ನ ನಂಬಿಕೆಗೆ ಚ್ಯುತಿ ಬಾರದಂತೆ ನಾಡಹಬ್ಬವನ್ನು ಹೇಗೆ ಉದ್ಘಾಟಿಸಬೇಕು ಎಂಬುದನ್ನು ಬಾನು ಮುಶ್ತಾಕ್‌ರಿಗೆ ಬಿಜೆಪಿ ಹೇಳಿಕೊಡಬೇಕಾಗಿಲ್ಲ. ಅದನ್ನು ಅವರೇ ನಿರ್ಧರಿಸಿಕೊಳ್ಳಲಿ.

Monday, 11 August 2025

ಧರ್ಮಸ್ಥಳ: ಮುಸ್ಲಿಮರೇ ಪ್ರಚೋದನೆಗೆ ಮರುಳಾಗಬೇಡಿ





ಕಳೆದೆರಡು ತಿಂಗಳುಗಳಿಂದ  ತಣ್ಣಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ಧರ್ಮಸ್ಥಳದ ನೆಪದಲ್ಲಿ ಮತ್ತೆ ಬೆಂಕಿ ಹಚ್ಚುವ ಸಂಚುಗಳು ನಡೆಯತೊಡಗಿವೆ. ಇದಕ್ಕೆ ಬಿಜೆಪಿಯೇ ಚಾಲನೆಯನ್ನು ಕೊಟ್ಟಿದೆ.

ಧರ್ಮಸ್ಥಳ ಪ್ರಕರಣದ ಹಿಂದೆ ಮುಸ್ಲಿಮರಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ. ಬಿಜೆಪಿಯ ಇನ್ನೋರ್ವ ನಾಯಕ ಅಶ್ವತ್ಥ ನಾರಾಯಣ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ‘ನಿಷೇಧಿತ ಪಿಎಫ್‌ಐ ಸಂಘಟನೆ ಇದರ ಹಿಂದಿದೆ’ ಎಂದು ಹೇಳಿದ್ದಾರೆ. ಇದಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಮುಸ್ಲಿಮರನ್ನು ಕೇಂದ್ರೀಕರಿಸಿ ಧರ್ಮಸ್ಥಳ ‘ಶವ’ ಪ್ರಕರಣಕ್ಕೆ ಮುಸ್ಲಿಮ್ ಬಣ್ಣವನ್ನು ಕೊಡುವ ಪ್ರಯತ್ನಗಳು ದೊಡ್ಡಮಟ್ಟದಲ್ಲಿ ನಡೆಯುತ್ತಿದೆ. ‘ಅಜ್ಞಾತ ದೂರುದಾರನ ಹಿಂದೆ ಮುಸ್ಲಿಮರಿದ್ದಾರೆ’, ‘ಧರ್ಮಸ್ಥಳ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳುವ ಸಂಚು ನಡೆಸಿದ್ದಾರೆ’, ‘ಧರ್ಮಸ್ಥಳ ಕ್ಷೇತ್ರವೊಂದನ್ನು ಬಿಟ್ಟರೆ ಉಳಿದಂತೆ ಅದರ ಸುತ್ತಮುತ್ತಲೆಲ್ಲ ಮಸೀದಿಗಳು ಮಾತ್ರ ಇವೆ..’ ಎಂಬೆಲ್ಲಾ ಅಭಿಪ್ರಾಯಗಳನ್ನು ಹಂಚಿಕೊಳ್ಳುವವರು ಭಾರೀ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ನಡುವೆಯೇ,

ಇನ್ನಿಬ್ಬರು ನಾಯಕರೂ ಧರ್ಮಸ್ಥಳ ಪ್ರಕರಣವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದಕ್ಕೆ ಉತ್ತೇಜನ ನೀಡಿದ್ದಾರೆ. ಅವರಲ್ಲಿ ಓರ್ವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ‘ಅನ್ಯಧರ್ಮದ ಜಾಗದಲ್ಲಿ ಶವ ಹೂತಿದ್ದೇವೆ ಎಂದು ಯಾರಾದರೂ ದೂರು ಕೊಟ್ಟರೆ ಧರ್ಮಸ್ಥಳ ಮಾದರಿಯ ಕಾರ್ಯಾಚರಣೆ ಮಾಡುತ್ತೀರಾ..’ ಎಂದು ರಾಜ್ಯ ಸರಕಾರವನ್ನು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿಯವರೂ ಇಂಥದ್ದೇ  ಮಾತನ್ನಾಡಿದ್ದಾರೆ. ‘ಮಸೀದಿಯಲ್ಲಿ ಶವಗಳನ್ನು ಹೂತಿಡಲ್ವಾ..’ ಎಂದವರು ಪ್ರಶ್ನಿಸಿದ್ದಾರೆ. ಈ ಮೂಲಕ ಸ್ಮಶಾನವೇ ಅಲ್ಲದ ಜಾಗಗಳಲ್ಲಿ ಶವಗಳನ್ನು ಹೂತಿಡಲಾಗಿದೆ ಎಂಬ ಆರೋಪವಿರುವ ಧರ್ಮಸ್ಥಳ ಪ್ರಕರಣವನ್ನು ಮಸೀದಿ ವಠಾರದ ದಫನ ಭೂಮಿಗೆ ಹೋಲಿಸಿದ್ದಾರೆ. ಮಸೀದಿ ಪಕ್ಕದ ದಫನ ಭೂಮಿಯನ್ನು ಅವರು ಅಕ್ರಮ ಎಂದು ಪರೋಕ್ಷವಾಗಿ ಬಿಂಬಿಸುವುದಕ್ಕೆ ಯತ್ನಿಸಿದ್ದಾರೆ. ಅಂದಹಾಗೆ,

ಮುಸ್ಲಿಮರಿಗೂ ಧರ್ಮಸ್ಥಳ ಪ್ರಕರಣಕ್ಕೂ ಏನು ಸಂಬಂಧ ಇದೆ? 13 ವರ್ಷಗಳ ಹಿಂದೆ ಸೌಜನ್ಯ ಕಾಣೆಯಾದಂದಿನಿಂದ  ಈ ಅಜ್ಞಾತ ದೂರುದಾರನ ವರೆಗೆ ಯಾವುದರಲ್ಲೂ ಮುಸ್ಲಿಮರು ಕಾಣಿಸಿಕೊಂಡೇ ಇಲ್ಲ. ಸೌಜನ್ಯ ಪರ ಹೋರಾಟಗಾರರ ಗುಂಪಿನಲ್ಲೂ ಮತ್ತು ಈ ಹೋರಾಟಗಾರರನ್ನು ಪ್ರಶ್ನಿಸುತ್ತಾ ಹುಟ್ಟಿಕೊಂಡ ಗುಂಪಿನಲ್ಲೂ ಇರುವವರೆಲ್ಲಾ  ಹಿಂದೂಗಳೇ. ಧರ್ಮಸ್ಥಳ ಹೋರಾಟದಲ್ಲಿ ಕಾಣಿಸಿಕೊಂಡ ಎರಡೂ ಗುಂಪುಗಳ ಮುಂಚೂಣಿ ನಾಯಕರಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೆ ಎಲ್ಲರೂ ಹಿಂದೂ ಸಮುದಾಯಕ್ಕೆ ಸೇರಿದವರೇ ಆಗಿದ್ದಾರೆ. ಮುಸ್ಲಿಮ್ ಸಮುದಾಯದ ಯಾವೊಬ್ಬ ಮೌಲ್ವಿಯೂ ಈ ವಿಷಯದಲ್ಲಿ ಹೇಳಿಕೆಯನ್ನು ಕೊಟ್ಟಿಲ್ಲ. ಮುಸ್ಲಿಮ್ ಸಮುದಾಯದ ಅಧಿಕೃತ ಧ್ವನಿ ಎಂದು ಗುರುತಿಸಲಾಗುವ ಖಾಝಿಯವರೂ ಈ ಬಗ್ಗೆ ಏನನ್ನೂ ಹೇಳಿಲ್ಲ. ಮುಸ್ಲಿಮ್ ಸಮುದಾಯದ ಪ್ರಮುಖ ಧಾರ್ಮಿಕ ಸಂಘಟನೆಗಳ ಯಾವೊಬ್ಬ ನಾಯಕರೂ ಈ ವಿಷಯದಲ್ಲಿ ಮಧ್ಯಪ್ರವೇಶಿಸಿಲ್ಲ. ವಿದ್ವಾಂಸರಾಗಲಿ, ಪಂಡಿತರಾಗಲಿ ಧರ್ಮಸ್ಥಳಕ್ಕೆ ಸಂಬಂಧಿಸಿ ಯಾವ ಮಾತನ್ನೂ ಆಡಿಲ್ಲ. ಅಜ್ಞಾತ ದೂರುದಾರನ ಪರ ವಹಿಸುವುದಾಗಲಿ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಿಲ್ಲುವುದಾಗಲಿ ಮಾಡಿಯೇ ಇಲ್ಲ. ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿರುವ ಹೆಣ್ಣು ಮಕ್ಕಳ ಪೈಕಿ ಯಾರೂ ಮುಸ್ಲಿಮರಿಲ್ಲ. ಅಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾರೆ ಎಂದು ಆರೋಪಿಸಲಾಗುತ್ತಿರುವವರಲ್ಲೂ ಮುಸ್ಲಿಮರಿಲ್ಲ. ಈ ಇಡೀ ಪ್ರಕರಣ ಮುಸ್ಲಿಮರಿಂದ ಮುಕ್ತವಾಗಿದೆ. ಮುಸ್ಲಿಮರ ಭಾಗೀದಾರಿಕೆಯಿಂದಲೂ ಮುಕ್ತವಾಗಿದೆ. ಇಷ್ಟೆಲ್ಲಾ ಇದ್ದೂ,

ಪದೇಪದೇ ಮುಸ್ಲಿಮರನ್ನು ಈ ವಿಷಯಕ್ಕೆ ಸಂಬಂಧಿಸಿ ಎಳೆದು ತರುತ್ತಿರುವುದೇಕೆ? ಮುಸ್ಲಿಮರನ್ನು ಸಂಚುಕೋರರಂತೆ  ಬಿಂಬಿಸಿ ಹಿಂದೂಗಳನ್ನು ಪ್ರಚೋದಿಸುವುದು ಇದರ ಹಿಂದಿರುವ ಉದ್ದೇಶವೇ? ತಣ್ಣಗಿರುವ ಜಿಲ್ಲೆಗೆ ಮತ್ತೆ ಬೆಂಕಿಯನ್ನು ಕೊಟ್ಟು ಕಾರ್ಯಕರ್ತರನ್ನು ಮತ್ತೆ ಧರ್ಮದ ಅಮಲಿನಲ್ಲಿ ಬೀದಿಗಿಳಿಸುವ ತಂತ್ರವೇ? ಅಥವಾ ಹೇಗಾದರೂ ಮಾಡಿ ಮುಸ್ಲಿಮರನ್ನು ಪ್ರಚೋದಿಸಿ ಅನಗತ್ಯ ಹೇಳಿಕೆಯನ್ನು ಕೊಡುವಂತೆ ಪ್ರೇರೇಪಿಸಿ ಬಲೆಗೆ ಬೀಳಿಸುವ ಕುತಂತ್ರವೇ? ನಿಜವಾಗಿ,

ಈ ದೇಶದಲ್ಲಿ ಹಿಂದೂಗಳಿಗೂ ಮತ್ತು ಮುಸ್ಲಿಮರಿಗೂ ಇರೋದು ಒಂದೇ ಸಂವಿಧಾನ. ಈ ಸಂವಿಧಾನ ನ್ಯಾಯವನ್ನು ಹಿಂದೂ-ಮುಸ್ಲಿಮ್ ಎಂದು ವರ್ಗೀಕರಿಸಿಲ್ಲ. ಹಿಂದೂಗಳಿಗೆ ಅನ್ಯಾಯವಾದಾಗ ಮುಸ್ಲಿಮರು ಮಾತಾಡಬಾರದು ಮತ್ತು ಮುಸ್ಲಿಮರಿಗೆ ಅನ್ಯಾಯವಾದಾಗ ಹಿಂದೂಗಳು ಮಾತಾಡಬಾರದು ಎಂದೂ ಅದು ಹೇಳಿಲ್ಲ. ಅನ್ಯಾಯದ ವಿರುದ್ಧ ಹಿಂದೂ-ಮುಸ್ಲಿಮ್ ಇಬ್ಬರೂ ಜೊತೆಗೂಡಿ ಹೋರಾಡಬೇಕಾದುದು ಸಾಂವಿಧಾನಿಕ ಅಗತ್ಯ. ಆದರೆ ಸಂವಿಧಾನ ಜಾರಿಯಾಗಿ 7 ದಶಕಗಳೇ ಕಳೆದ ಬಳಿಕದ ಭಾರತದ ಪರಿಸ್ಥಿತಿ ಹೇಗಿದೆಯೆಂದರೆ, ಹಿಂದೂಗಳ ವಿಷಯದಲ್ಲಿ ಮುಸ್ಲಿಮರು ಮಾತಾಡಬಾರದು ಎಂಬಲ್ಲಿಗೆ ತಲುಪಿದೆ. ಮುಸ್ಲಿಮರನ್ನು ಬೈದರೆ ಓಟು ಸಿಗುತ್ತದೆ ಎಂಬ ಸ್ಥಿತಿಗೆ ಬಂದು ನಿಂತಿದೆ. ಮುಸ್ಲಿಮರನ್ನು ಅಪರಾಧಿಗಳಂತೆ, ಹಿಂದೂ ವಿರೋಧಿಗಳಂತೆ, ದೇಶದ್ರೋಹಿಗಳಂತೆ, ಭಯೋತ್ಪಾದಕರಂತೆ.. ಬಿಂಬಿಸಿದರೆ ಹಿಂದೂಗಳು ತೃಪ್ತರಾಗುತ್ತಾರೆ ಎಂಬಂಥ  ವಾತಾವರಣವನ್ನು ಸೃಷ್ಟಿ ಮಾಡಲಾಗಿದೆ. ಇದು ಸಂವಿಧಾನದ ಬಯಕೆ ಅಲ್ಲವಾದರೂ ಪರಿಸ್ಥಿತಿ ಆ ಮಟ್ಟಕ್ಕೆ ಕೆಟ್ಟು ಹೋಗಿರುವುದರಿಂದ ಮುಸ್ಲಿಮರು ಪ್ರತಿಕ್ರಿಯಿಸುವಾಗ ಜಾಗರೂಕತೆಯನ್ನು ಪಾಲಿಸುವ ಅನಿವಾರ್ಯತೆ ಇದೆ. ಧರ್ಮಸ್ಥಳ ವಿಷಯಕ್ಕೂ ಈ ಎಚ್ಚರಿಕೆ ಅನ್ವಯವಾಗುತ್ತದೆ.

ಮುಸ್ಲಿಮರನ್ನು ಪ್ರಚೋದಿಸಿ ಧರ್ಮಸ್ಥಳ ಪ್ರಕರಣದಲ್ಲಿ ಭಾಗಿಯಾಗುವಂತೆ ಮಾಡುವ ಹುನ್ನಾರವೊಂದು ನಡೆಯುತ್ತಿದೆ. ಒಂದುವೇಳೆ, ಪ್ರಚೋದನೆಗೆ ಬಲಿಯಾಗಿ ಮುಸ್ಲಿಮ್ ಸಮುದಾಯದ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರು ಭಾಗಿಯಾದರೆ ಆ ಬಳಿಕ ಈ ಇಡೀ ಪ್ರಕರಣವನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಮುಖ್ಯ ವಿಷಯದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ಸರಿಸುವ ದುರುದ್ದೇಶವೂ ಇದರ ಹಿಂದಿರಬಹುದು. ಮತ್ತೆ ದಕ್ಷಿಣ ಕನ್ನಡವನ್ನು ಧರ್ಮದ್ವೇಷದ ಸಂಘರ್ಷಕ್ಕೆ ದೂಡುವುದೂ ಇದರ ಹಿಂದಿನ ಉದ್ದೇಶವಾಗಿರಬಹುದು. ಅಂದಹಾಗೆ,

ಧರ್ಮಸ್ಥಳದ ಬಗ್ಗೆ ಅಜ್ಞಾತ ದೂರುದಾರ ನೀಡಿರುವ ದೂರಿನ ಮೇಲೆ ಸಿಟ್ ರಚಿಸಿರುವುದು ಸರಕಾರ. ಶವಗಳಿಗೆ ಹುಡುಕಾಡುತ್ತಿರುವುದೂ ಸರಕಾರವೇ ರಚಿಸಿದ ಪ್ರಮುಖ ಪೊಲೀಸ್ ಅಧಿಕಾರಿಗಳು ಮತ್ತು ಅವರ ತಂಡ. ಈ ಸರಕಾರವೂ ಅಷ್ಟೇ, ಸ್ವಯಂ ಘೋಷಿತ ಅಲ್ಲ. ನಾವೇ ಚುನಾಯಿಸಿದ ಸರಕಾರ. ಹೀಗಿರುತ್ತಾ, ಅಜ್ಞಾತ ದೂರುದಾರನನ್ನು, ಆತ ತೋರಿಸಿರುವ ಜಾಗಗಳನ್ನು ಮತ್ತು ಅದರ ಮೇಲೆ ತನಿಖೆಗಿಳಿದಿರುವ ಪೊಲೀಸ್ ಅಧಿಕಾರಿಗಳನ್ನು ನೆಪ ಮಾಡಿಕೊಂಡು ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವುದಕ್ಕೆ ಯಾವ ಅರ್ಥವೂ ಇಲ್ಲ. ಸದ್ಯ ನಾಗರಿಕರಾದ ನಾವು ಮಾಡಬಹುದಾದದ್ದು ಏನೆಂದರೆ,
ತನಿಖೆಯ ಫಲಿತಾಂಶಕ್ಕಾಗಿ ಕಾಯುವುದು. ದೂರುದಾರ ಸುಳ್ಳು ಹೇಳಿದ್ದರೆ ಆತನಿಗೆ ಶಿಕ್ಷೆಯಾಗಲಿ. ಆತನ ದೂರಿನಲ್ಲಿ ನಿಜ ಇದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಈ ಬಗ್ಗೆ ಸ್ಪಷ್ಟವಾಗಬೇಕಾದರೆ ತನಿಖೆ ಮುಕ್ತಾಯಗೊಳ್ಳಬೇಕು. ಅದು ಬಿಟ್ಟು ತನಿಖಾ ಹಂತದಲ್ಲೇ  ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಇಡೀ ತನಿಖಾ ಪ್ರಕ್ರಿಯೆಯನ್ನೇ ಬುಡಮೇಲುಗೊಳಿಸುವ ರೀತಿಯ ಹೇಳಿಕೆಗಳು ಸಮಾಜದ ಶಾಂತಿ-ಸುವ್ಯವಸ್ಥೆಯ ಮೇಲೆ ಪರಿಣಾಮ ಉಂಟು ಮಾಡಬಲ್ಲುದು. ಜನಸಾಮಾನ್ಯರು ಇಂಥ ಅಪಪ್ರಚಾರಗಳಿಂದ ಪ್ರಭಾವಿತರಾಗಿ ಮುಸ್ಲಿಮರನ್ನು ತಪ್ಪಿತಸ್ಥರಂತೆ ಮತ್ತು ಸಂಚುಕೋರರಂತೆ  ಕಾಣಲು ಪ್ರಾರಂಭಿಸಬಹುದು. ಅಲ್ಲದೇ, ಇದು ಅಪಪ್ರಚಾರ ಮಾಡುವವರ ಉದ್ದೇಶವೂ ಆಗಿರಬಹುದು. ಆದ್ದರಿಂದ,

 ಸರಕಾರ ಈ ಬಗ್ಗೆ ಜಾಗೃತವಾಗಬೇಕು. ಅಪಪ್ರಚಾರದಲ್ಲಿ ತೊಡಗಿರುವವರ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಬೇಕು. ಮುಖ್ಯವಾಗಿ ಸೋಶಿಯಲ್ ಮೀಡಿಯಾದ ಮೇಲೆ ಹದ್ದಿನ ಕಣ್ಣಿಡಬೇಕು. ಪ್ರಚೋದನಾತ್ಮಕ ಬರಹ ಮತ್ತು ವೀಡಿಯೋಗಳನ್ನು ಪತ್ತೆ ಹಚ್ಚಿ, ಅದರ ಹಿಂದಿರುವವರಿಗೆ ಕಾನೂನಿನ ಪಾಠ ಮಾಡಬೇಕು.

Saturday, 9 August 2025

ಕಲಬುರಗಿಯ ಗೋರಿ, ಛತ್ತೀಸ್‌ಗಢದ ನನ್‌ಗಳು ಮತ್ತು ಕುಕ್ಕರಿನಲ್ಲಿರುವ ಜನಸಾಮಾನ್ಯರು





ಸುಳ್ಳುಗಳನ್ನು ಹೇಗೆ ಉತ್ಪಾದಿಸಲಾಗುತ್ತದೆ ಮತ್ತು ದ್ವೇಷವನ್ನು ಹರಡುವುದಕ್ಕೆ ಈ ಸುಳ್ಳುಗಳನ್ನು ಹೇಗೆ ಬಳಸಲಾಗುತ್ತದೆ ಎಂಬುದಕ್ಕೆ ನಮ್ಮದೇ ರಾಜ್ಯದ ಕಲಬುರಗಿ ಮತ್ತು ಛತ್ತೀಸ್‌ಗಢದ ಘಟನೆಗಳನ್ನು ತಾಜಾ ಉದಾಹರಣೆಯಾಗಿ ಎತ್ತಿಕೊಳ್ಳಬಹುದು.

‘ಕಲಬುರಗಿಯ ಅಳಂದ ತಾಲೂಕಿನ ಕಡಗಂಚಿ ಗ್ರಾಮದಲ್ಲಿರುವ ಕರ್ನಾಟಕ ಕೇಂದ್ರೀಯ ವಿವಿ ಕ್ಯಾಂಪಸ್‌ನಲ್ಲಿ ರಾತೋರಾತ್ರಿ ಅಕ್ರಮವಾಗಿ ಗೋರಿಗಳ ನಿರ್ಮಾಣ ಮಾಡಲಾಗಿದೆ, ಕಾಂಪೌಂಡ್  ಕಟ್ಟಲಾಗುತ್ತಾ ಇದೆ ಮತ್ತು ಬಣ್ಣವನ್ನೂ ಬಳಿಯಲಾಗುತ್ತಾ ಇದೆ..’ ಎಂಬಂತಹ ಸುದ್ದಿಗಳು ಕನ್ನಡದ ಪ್ರಮುಖ ಟಿವಿ ಚಾನೆಲ್‌ಗಳಲ್ಲಿ ದಿನದ ಹಿಂದೆ ಪ್ರಸಾರವಾಗಿತ್ತು. ವಕ್ಫ್ನ ಹೆಸರಲ್ಲಿ ಈಗಾಗಲೇ ಮುಸ್ಲಿಮ್ ದ್ವೇಷಿ ವಾತಾವರಣವನ್ನು ಸೃಷ್ಟಿ ಮಾಡಲು ಮಾಧ್ಯಮಗಳು ಯಶಸ್ವಿಯಾಗಿರುವುದರಿಂದ ಈ ‘ಗೋರಿ’ಯು ಈಗಾಗಲೇ ಆಗಿರುವ ಗಾಯಕ್ಕೆ ಉಪ್ಪು ಸವರಿದಂತಾಗುವುದು ಸಹಜ. ವಕ್ಫ್ ಎಂದರೆ ಹಿಂದೂಗಳ ಭೂಮಿಯನ್ನು ಕಬಳಿಸುವುದರ ಹೆಸರು ಎಂದು ನಂಬಿರುವವರಿಗೆ ಈ ‘ಗೋರಿ’ ಸುದ್ದಿ ಅವರ ನಂಬಿಕೆಗೆ ಇನ್ನಷ್ಟು ಪುಷ್ಠಿಯನ್ನು ಕೊಡುವ ಕೆಲಸ ಮಾಡುತ್ತದೆ. ಅಂದಹಾಗೆ,

650 ಎಕರೆಗಿಂತಲೂ ವಿಸ್ತಾರ ಪ್ರದೇಶವನ್ನು ಹೊಂದಿರುವ ವಿವಿ ಕ್ಯಾಂಪಸ್‌ನಲ್ಲಿ ಗೋರಿಗಳಿಲ್ಲವೇ ಎಂಬ ಪ್ರಶ್ನೆಗೆ, ಇದೆ ಎಂಬುದೇ ಸರಿಯಾದ ಉತ್ತರ. ಕೇವಲ ಗೋರಿಗಳು ಮಾತ್ರವಲ್ಲ, ದೇವಸ್ಥಾನಗಳೂ ಇವೆ. ಇಲ್ಲಿ ಬಂದೇ ನವಾಝï ದರ್ಗಾ ಮತ್ತು ಗೈಬ್‌ಪೀರ್ ದರ್ಗಾಗಳು ಇರುವಂತೆಯೇ, ಬೀರಲಿಂಗೇಶ್ವರ ದೇವಸ್ಥಾನ ಮತ್ತು ಲಕ್ಷ್ಮೀ ದೇವಸ್ಥಾನಗಳೂ ಇವೆ. ಮಾತ್ರವಲ್ಲ, ಈ ಎರಡೂ ಗೋರಿಗಳು ರಾತೋರಾತ್ರಿ ಹುಟ್ಟಿಕೊಂಡವುಗಳಲ್ಲ. ಇವುಗಳಿಗೆ ನೂರಾರು ವರ್ಷಗಳ ಇತಿಹಾಸ ಇದೆ. ದೇವಸ್ಥಾನಗಳಿಗೂ ಇಂಥz್ದೆÃ ಪುರಾತನ ಹಿನ್ನೆಲೆ ಇದೆ ಎಂಬುದೇ ನಿಜ.

ಛತ್ತೀಸ್‌ಗಢ ಪ್ರಕರಣವಂತೂ ಇದಕ್ಕಿಂತಲೂ ಘೋರವಾಗಿದೆ. ಜಾರ್ಖಂಡಿನ ಮೂರು ಬುಡಕಟ್ಟು ಯುವತಿಯರು ಮತ್ತು ಓರ್ವ ಯುವಕನೊಂದಿಗೆ ಛತ್ತೀಸ್‌ಗಢದ ರೈಲ್ವೇ ನಿಲ್ದಾಣಕ್ಕೆ ಬಂದ ಕ್ರೈಸ್ತ ಭಗಿನಿಯರಾದ ವಂದನಾ ಫ್ರಾನ್ಸಿಸ್ ಮತ್ತು ಸಿಸ್ಟರ್ ಪ್ರೀತಿ ಅವರನ್ನು ರೈಲ್ವೇ ಅಧಿಕಾರಿ ನೋಡುತ್ತಾರೆ. ಇದನ್ನು ಮತಾಂತರದ ಹುನ್ನಾರ ಎಂದು ಅಂದುಕೊAಡ ಅವರು ನೇರ ಸಂಘಪರಿವಾರಕ್ಕೆ ಮಾಹಿತಿ ಕೊಡುತ್ತಾರೆ. ಅದರ ಸ್ಥಳೀಯ ನಾಯಕ ಜ್ಯೋತಿ ಶರ್ಮಾ ತನ್ನ ತಂಡದೊಂದಿಗೆ ಬರುತ್ತಾನೆ. ಪೊಲೀಸರ ಎದುರೇ ಆತ ಆ ಬುಡಕಟ್ಟು ವ್ಯಕ್ತಿಗಳ ಮೇಲೆ ಏರಿ ಹೋಗುತ್ತಾನೆ. ಆತನ ಆದೇಶದಂತೆ ಪೊಲೀಸರು ಮತಾಂತರ ಮತ್ತು ಮಾನವ ಕಳ್ಳಸಾಗಾಣಿಕೆಯ ಕೇಸು ದಾಖಲಿಸುತ್ತಾರೆ. ಜಾಮೀನು ಪಡೆದುಕೊಂಡು ಜೈಲಿನಿಂದ ಹೊರಬಂದಿರುವ ಇವರುಗಳು ಇದೀಗ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಆಘಾತಕಾರಿ ಸಂಗತಿಗಳಿವೆ. ತಮ್ಮ ಮೇಲಾದ ದೌರ್ಜನ್ಯವನ್ನು ವಿವರಿಸಿ ಈ ಯುವತಿಯರು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದಾರೆ. ಜ್ಯೋತಿ ಶರ್ಮಾನ ಸೂಚನೆಯಂತೆ ಪೊಲೀಸರು ಕಸ್ಟಡಿಯಲ್ಲಿಟ್ಟು ತಮ್ಮನ್ನು ಥಳಿಸಿದ್ದಾರೆ, ತನ್ನ ಬೆಂಬಲಿಗರಿಂದ  ಅತ್ಯಾಚಾರ ಮಾಡಿಸುವುದಾಗಿ ಆತ ಬೆದರಿಸಿದ್ದಾನೆ. ಆತನ ವಿರುದ್ಧ ನಾವು ಕೊಟ್ಟ ದೂರನ್ನೂ ಪೊಲೀಸರು ದಾಖಲಿಸಿಲ್ಲ, ನಾವು ಮತಾಂತರವಾಗಿಲ್ಲ, ಇದು ಮಾನವ ಕಳ್ಳಸಾಗಾಣಿಕೆಯೂ ಅಲ್ಲ... ಎಂದೆಲ್ಲಾ  ಅವರು ಕ್ಯಾಮರಾಗಳ ಮುಂದೆಯೇ ಮತ್ತು ಅಷ್ಟೂ ಪತ್ರಕರ್ತರ ಎದುರೇ ಹೇಳಿದ್ದಾರೆ.

ಈ ಎರಡೂ ಘಟನೆಗಳಲ್ಲಿ ಕೆಲವು ಮೂಲಭೂತ ಪ್ರಶ್ನೆಗಳಿವೆ. ರೈಲ್ವೇ ಅಧಿಕಾರಿಗೆ ಅನುಮಾನ ಬಂದರೆ ಆತ ಮೊದಲು ತಿಳಿಸಬೇಕಾದದ್ದು ಯಾರಿಗೆ? ಪೊಲೀಸರಿಗೋ ಅಲ್ಲ, ಸಂಘಪರಿವಾರಕ್ಕೋ? ಒಂದುವೇಳೆ, ರಾತೋರಾತ್ರಿ ಅಕ್ರಮವಾಗಿ ಗೋರಿ ಕಟ್ಟಲಾಗುತ್ತಿದೆ ಎಂಬ ಸುದ್ದಿ ಓರ್ವ ಪತ್ರಕರ್ತನಿಗೆ ಸಿಕ್ಕರೆ ಮೊದಲಾಗಿ ಆತ ಮಾಡಬೇಕಾದದ್ದೇನು? ಮಾಧ್ಯಮ ಮುಖ್ಯಸ್ಥರಿಗೆ ತಿಳಿಸುವುದು. ಆ ಮುಖ್ಯಸ್ಥ ಮಾಡಬೇಕಾದದ್ದೇನು? ಹಿಂದೆ ಮುಂದೆ ನೋಡದೇ ಬ್ರೇಕಿಂಗ್ ನ್ಯೂಸ್ ಕೊಡೋದೋ ಅಥವಾ ಸತ್ಯ ಏನೆಂದು ಸ್ಪಷ್ಟಪಡಿಸಿ ಮಾಹಿತಿ ಕೊಡುವಂತೆ ಪತ್ರಕರ್ತನಿಗೆ ಸೂಚಿಸುವುದೋ? ಆದರೆ ಈ ವಿವೇಚನೆಯೇ ಇವತ್ತು ಮಾಧ್ಯಮ ಹೊಣೆಗಾರರಿಂದಲೂ ಮತ್ತು ಸರಕಾರಿ ಅಧಿಕಾರಿಗಳಿಂದಲೂ ಕಾಣೆಯಾಗುತ್ತಿದೆ ಎಂಬುದನ್ನೇ ಈ ಎರಡೂ ಘಟನೆಗಳು ಎತ್ತಿ ಹೇಳುತ್ತಿವೆ. ಹಾಗಂತ,

ಇದೊAದು ಪ್ರಮಾದ, ಗೊತ್ತಿಲ್ಲದೇ ಆಗಿರುವಂಥ ಸಹಜ ತಪ್ಪುಗಳು ಎಂದೆಲ್ಲಾ ಸಮರ್ಥಿಸುವ ಹಾಗಿಲ್ಲ. ತಾನು ಯಾರಿಗೆ ದೂರು ಕೊಡಬೇಕು ಎಂಬುದು ಓರ್ವ ರೈಲ್ವೇ ಅಧಿಕಾರಿಗೆ ಗೊತ್ತೇ ಇರುತ್ತದೆ. ತನಗೆ ಸಿಕ್ಕ ಸುದ್ದಿಯನ್ನು ನಿಕಷಕ್ಕೆ ಒಡ್ಡಿ ಪ್ರಸಾರ ಮಾಡಬೇಕು ಎಂಬ ವಿವೇಕ ಪತ್ರಿಕಾ ಮುಖ್ಯಸ್ಥನಿಗೂ ಇರುತ್ತದೆ. ಹಾಗಿದ್ದರೆ ಮತ್ತೇಕೆ ಈ ಬಗೆಯ ನಿರ್ಲಕ್ಷ್ಯಗಳು ನಡೆಯುತ್ತಿವೆ ಎಂಬ ಪ್ರಶ್ನೆ ಇರಬಹುದು. ನಿಜವಾಗಿ, ಇವು ನಿರ್ಲಕ್ಷ್ಯವೂ ಅಲ್ಲ, ಅವಿವೇಕವೂ ಅಲ್ಲ. ಪ್ರಮಾದವೂ ಅಲ್ಲ. ಉದ್ದೇಶಪೂರ್ವಕವಾಗಿಯೇ ಇಂಥವುಗಳು ನಡೆಯುತ್ತಿವೆ ಎಂದೇ ಹೇಳಬೇಕಾಗಿದೆ. ಇದೊಂದು ಸಂಚು. ಯೋಜನಾಬದ್ಧವಾಗಿಯೇ ನಡೆಯುತ್ತಿರುವ ಸಂಚು.

ಮುಸ್ಲಿಮರನ್ನು ಖಳರಂತೆ, ಹಿಂದೂ ವಿರೋಧಿಗಳಂತೆ, ಜನಸಂಖ್ಯಾ ಸ್ಫೋಟ ಮಾಡುವವರಂತೆ, ಹಿಂದೂಗಳ ಭೂಮಿಯನ್ನು ಕಬಳಿಸುವವರಂತೆ, ದೇಶದ್ರೋಹಿಗಳಂತೆ, ಪಾಕಿಸ್ತಾನ ಪ್ರೇಮಿಗಳಂತೆ.. ಇತ್ಯಾದಿ ಇತ್ಯಾದಿಯಾಗಿ ದಿನಾ ಸುದ್ದಿಗಳನ್ನು ಉತ್ಪಾದಿಸುವುದನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡಿರುವ ಒಂದು ಬೃಹತ್ ಜಾಲ ಈ ದೇಶದಲ್ಲಿದೆ. ಮುಸ್ಲಿಮ್ ಯುವಕ ಹಿಂದೂ ಯುವತಿಯನ್ನು ಪ್ರೀತಿಸಿದರೆ ಅದನ್ನು ಲವ್ ಜಿಹಾದ್ ಅನ್ನುವ ಈ ಗುಂಪು, ಮುಸ್ಲಿಮ್ ಯುವತಿ ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದರೆ ಸೌಹಾರ್ದ ಎಂದು ಸುದ್ದಿ ಮಾಡುತ್ತವೆ. ಜಾನುವಾರು ಸಾಗಾಟದಲ್ಲಿ ಮುಸ್ಲಿಮ್ ವ್ಯಕ್ತಿ ಇದ್ದರೆ ತಕ್ಷಣ ಅದನ್ನು ‘ಅಕ್ರಮ ಗೋಸಾಗಾಟ’ ಎಂದು ಸುದ್ದಿ ಬರುತ್ತದೆ. ಮುಸ್ಲಿಮ್ ವ್ಯಕ್ತಿಯೋರ್ವ ತಪ್ಪು ಮಾಡುವುದನ್ನು ‘ಧರ್ಮ ಕಲಿಸಿದ ಅಪರಾಧ’ ಎಂದು ಹೇಳುತ್ತಲೇ ಅದೇ ತಪ್ಪನ್ನು ಹಿಂದೂ ವ್ಯಕ್ತಿ ಮಾಡಿದರೆ ಅದನ್ನು ವೈಯಕ್ತಿಕ ತಪ್ಪು ಎಂದು ಸದ್ದಿಲ್ಲದೇ ಸರಿಸಿ ಬಿಡುತ್ತವೆ. ಯಾವುದೇ ಅಪರಾಧ ಕೃತ್ಯಕ್ಕೂ ಧರ್ಮದ ಬಣ್ಣ ಕೊಡುವುದು ಮತ್ತು ಇಸ್ಲಾಮನ್ನು ಕಟಕಟೆಯಲ್ಲಿ ನಿಲ್ಲಿಸುವುದು ಈ ಗುಂಪಿನ ತಂತ್ರವಾಗಿದೆ. ಇಸ್ಲಾಮಿನ ಕುರಿತಂತೆ ಭೀತಿಯನ್ನು ಅಥವಾ ಫೋಬಿಯಾವನ್ನು ಹಬ್ಬಿಸುವುದು ಮತ್ತು ಸಾರ್ವಜನಿಕರಲ್ಲಿ ಮುಸ್ಲಿಮರ ಬಗ್ಗೆ ಅಸಹನೆಯನ್ನು ಸೃಷ್ಟಿಸುವುದಕ್ಕೂ ಈ ಗುಂಪು ಹೇಸುತ್ತಿಲ್ಲ. ಇಂಥ ಸುಳ್ಳುಗಳನ್ನು ದಿನಾ ಓದುತ್ತಾ ಮತ್ತು ವೀಕ್ಷಿಸುತ್ತಾ ಬರುವ ಜನಸಾಮಾನ್ಯರಿಗೆ ನಿಧಾನವಾಗಿ ಇದು ನಿಜ ಇರಬಹುದು ಎಂದೇ ಅನಿಸತೊಡಗುತ್ತದೆ. ಮುಸ್ಲಿಮರೇ ದೇಶದ ಬಹುದೊಡ್ಡ ಸಮಸ್ಯೆ ಎಂದು ಅವರು ಅಂದುಕೊಳ್ಳತೊಡಗುತ್ತಾರೆ. ಹೀಗೆ ಜನಸಾಮಾನ್ಯರು ಭಾವಿಸತೊಡಗಿದ ದಿನದಿಂದ ರಾಜಕಾರಣಿಗಳು ಸುರಕ್ಷಿತರಾಗುತ್ತಾರೆ. ಈ ಜನಸಾಮಾನ್ಯರಿಗೆ ಅವರ ಭ್ರಷ್ಟಾಚಾರಕ್ಕಿಂತ ಮುಸ್ಲಿಮರೇ ಮುಖ್ಯವಾಗುತ್ತಾರೆ. ಅಭಿವೃದ್ಧಿಗಿಂತಲೂ ಮುಸ್ಲಿಮ್ ಇಶ್ಯುಗಳೇ ಜನಸಾಮಾನ್ಯರಿಗೆ ಮುಖ್ಯವಾಗುತ್ತದೆ. ಮುಸ್ಲಿಮರ ಬಗ್ಗೆ ಹೀಗೆ ಸುಳ್ಳು ಸುಳ್ಳೇ ಬಿತ್ತಲಾದ ಭೀತಿಯು ಇದರ ಹಿಂದಿರುವ ರಾಜಕೀಯ ಶಕ್ತಿಗಳಿಗೆ ಮತ ಚಲಾಯಿಸಲೇಬೇಕಾದ ಒತ್ತಡವನ್ನು ಜನಸಾಮಾನ್ಯರ ಮೇಲೆ ಹಾಕುತ್ತಲೇ ಇರುತ್ತದೆ. ಇವರು ಮತ ಚಲಾಯಿಸುತ್ತಾ ಹೋಗುತ್ತಾರೆ. ಮತ ಪಡೆದವರು ಮುಸ್ಲಿಮ್ ಭೀತಿಯನ್ನು ಮಾಧ್ಯಮಗಳ ಮೂಲಕ ಹಂಚುತ್ತಲೇ ಇರುತ್ತಾರೆ.

ಕಲಬುರಗಿಯ ಗೋರಿಗಳಾಗಲಿ ಛತ್ತೀಸ್‌ಗಢದ ನನ್ ಪ್ರಕರಣವಾಗಲಿ ಈ ಎರಡನ್ನೂ ನೋಡಬೇಕಾದದ್ದು ಕಾನೂನಿನ ದೃಷ್ಟಿಯಿಂದಲೇ ಹೊರತು ಮುಸ್ಲಿಮ್ ಮತ್ತು ಕ್ರೈಸ್ತ ಎಂಬ ಕನ್ನಡಿಯಲ್ಲಲ್ಲ. ಓರ್ವ ಪತ್ರಕರ್ತ ಮತ್ತು ಅಧಿಕಾರಿ ಈ ದೃಷ್ಟಿಯಿಂದ ನೋಡಲು ಪ್ರಾರಂಭಿಸಿದರೆ ಗೋರಿ ಬ್ರೇಕಿಂಗ್ ನ್ಯೂಸ್ ಆಗುವುದಕ್ಕೆ ಸಾಧ್ಯವೇ ಇಲ್ಲ. ಯಾಕೆಂದರೆ, ಅದೊಂದು ಸುದ್ದಿಯೇ ಅಲ್ಲ. ನೂರಾರು ವರ್ಷಗಳಿಂದ ಅಲ್ಲಿರುವ ಗೋರಿಗಳ ಬಗ್ಗೆ ಯಾರು ಸುಳ್ಳುಗಳನ್ನು ಹರಡಿದ್ದಾರೋ ಅವರನ್ನೇ ಪತ್ರಕರ್ತ ಹುಡುಕಿಕೊಂಡು ಹೋಗುತ್ತಾನೆ. ಅವರನ್ನೇ ಸಮಾಜದ ಮುಂದೆ ಬ್ರೇಕ್ ಮಾಡುತ್ತಾನೆ. ರೈಲ್ವೇ ಅಧಿಕಾರಿಯೂ ಇಂಥದ್ದೇ  ವಿವೇಚನೆಯನ್ನು ಪ್ರದರ್ಶಿಸುತ್ತಾನೆ. ತನ್ನ ಅನುಮಾನವನ್ನು ಪೊಲೀಸರಿಗೆ ತಿಳಿಸಿ ಕಾನೂನು ಸುವ್ಯವಸ್ಥೆ ಕಾಪಾಡುತ್ತಾನೆ. ಸಾರ್ವಜನಿಕರನ್ನು ಅನಗತ್ಯ ಆತಂಕಕ್ಕೆ ತಳ್ಳದೇ ಕಾನೂನಿನಡಿ ಪರಿಹಾರ ಕಂಡುಕೊಳ್ಳುತ್ತಾನೆ. ಆದರೆ, ಫೋಬಿಯಾದ ಈ ಕಾಲದಲ್ಲಿ ಮಾಧ್ಯಮಗಳೂ ವಿವೇಚನೆಯನ್ನು ಕಳಕೊಂಡು ಬಿಟ್ಟಿವೆ. ಅಧಿಕಾರಿಗಳೂ ಸೂಕ್ಷ್ಮತೆಯನ್ನು ಕಳಕೊಳ್ಳುತ್ತಿದ್ದಾರೆ. ಜನಸಾಮಾನ್ಯರಂತೂ ಸತ್ಯ-ಸುಳ್ಳಿನ ಕುಕ್ಕರಿನಲ್ಲಿ ದಿನಾ ಬೇಯುತ್ತಿದ್ದಾರೆ.

Monday, 28 July 2025

ಗಾಝಾ ನರಮೇಧಕ್ಕೆ ಪ್ರತಿಭಟನೆ ವ್ಯಕ್ತಪಡಿಸಬಾರದೇ?



ಸನ್ಮಾರ್ಗ ಸಂಪಾದಕೀಯ 

ಜುಲೈ 25ರಂದು ಬಾಂಬೆ ಹೈಕೋರ್ಟು ವ್ಯಕ್ತಪಡಿಸಿದ ಪರಾಮರ್ಶೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಪರಾಮರ್ಶೆಗೆ ಕಾರಣವಾದ ಘಟನೆ ಹೀಗಿದೆ-

ಗಾಝಾದಲ್ಲಿ ನಡೆಯುತ್ತಿರುವ ಜನಾಂಗ ನಿರ್ಮೂಲನೆಯ ವಿರುದ್ಧ ಪ್ರತಿಭಟನೆ ನಡೆಸಲು ಆಲ್ ಇಂಡಿಯಾ ಪೀಸ್ ಆಂಡ್ ಸಾಲಿಡಾರಿಟಿ ಫೌಂಡೇಶನ್ (AIPSF) ಎಂಬ ಸಂಘಟನೆಯು ಜೂನ್ 13ರಂದು ಮುಂಬೈಯ ಆಝಾದ್ ಪೊಲೀಸ್ ಠಾಣೆಯಿಂದ ಅನುಮತಿಯನ್ನು ಕೋರಿತ್ತು. ಗಾಝಾದಲ್ಲಿ ನಡೆಯುತ್ತಿರುವ ಜನಾಂಗ ಹತ್ಯೆ ಕೊನೆಗೊಳ್ಳಬೇಕು ಮತ್ತು ಕದನ ವಿರಾಮ ಏರ್ಪಡಬೇಕು ಎಂಬ ಆಗ್ರಹದೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಕೋರಿಕೆ ಪತ್ರದಲ್ಲಿ ಪೊಲೀಸರಿಗೆ ತಿಳಿಸಿತ್ತು. ಇದಾಗಿ ನಾಲ್ಕು ದಿನಗಳ ಬಳಿಕ ಜೂನ್ 17ರಂದು ಅನುಮತಿ ನಿರಾಕರಿಸಿ ಪೊಲೀಸರು ಸೂಚನೆ ಹೊರಡಿಸಿದರು. ಆಝಾದ್ ಮೈದಾನದಲ್ಲಿ ಅಂಥ ದ್ದೊಂದು ಪ್ರತಿಭಟನೆಯು ಕಾನೂನು ಸುವ್ಯವಸ್ಥೆಗೆ ತೊಂದರೆಯನ್ನು ಉಂಟು ಮಾಡಬಹುದು ಎಂದು ಅವರು ಕಾರಣವನ್ನು ನೀಡಿದರು. ಇದನ್ನು ಪ್ರಶ್ನಿಸಿ ಸಿಪಿಐಎಂ ಪಕ್ಷವು ಬಾಂಬೆ ಹೈಕೋರ್ಟಿನ ಬಾಗಿಲು ಬಡಿಯಿತು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಾಧೀಶರಾದ ರವೀಂದ್ರ ಘುಗೆ ಮತ್ತು ಗೌತಮ್ ಅಂಖದ್ ಅವರು ವ್ಯಕ್ತಪಡಿಸಿದ ಅಭಿಪ್ರಾಯವೇ ಈಗ ಪ್ರಶ್ನೆಗೆ ಮತ್ತು ಟೀಕೆಗೆ ಒಳಗಾಗಿದೆ.

"ನಮ್ಮ ದೇಶದಲ್ಲೇ  ಬೇಕಾದಷ್ಟು ಸಮಸ್ಯೆಗಳಿವೆ, ಆದರೆ ನಮ್ಮ ದೇಶದ ಸಮಸ್ಯೆಗಳನ್ನು ನಿರ್ಲಕ್ಷಿಸಿ ನೀವು ಗಾಝಾ ಮತ್ತು ಫೆಲೆಸ್ತೀನ್ ಕಡೆ ನೋಡುತ್ತಿದ್ದೀರಿ, ಇದು ಸಂಕುಚಿತ ದೃಷ್ಟಿಕೋನ. ನೀವು ನಿಮ್ಮ ದೇಶದೊಳಗೆ ನೋಡಿ. ದೇಶಪ್ರೇಮಿಗಳಾಗಿ. ಈ ದೇಶದ ನಾಗರಿಕರಿಗಾಗಿ ಕೆಲಸ ಮಾಡಿ ದೇಶಪ್ರೇಮವನ್ನು ಪ್ರಕಟಿಸಿ. ಆದರೆ ನೀವು ಇದರ ಬದಲು ಸಾವಿರಾರು ಮೈಲು ದೂರ ಇರುವ ಫೆಲೆಸ್ತೀನ್ ಮತ್ತು ಗಾಝಾದ ಬಗ್ಗೆ ಗಮನ ಹರಿಸಿದ್ದೀರಿ. ಫೆಲೆಸ್ತೀನ್ ಪರ ನಿಲ್ಲಬೇಕೋ ಇಸ್ರೇಲ್ ಪರ ನಿಲ್ಲಬೇಕೋ ಎಂಬುದು ಭಾರತ ಸರಕಾರದ ಕೆಲಸ. ಇಂಥ ಸ್ಥಿತಿಯಲ್ಲಿ, ಭಾರತ ಸರಕಾರವು ಈ ಎರಡರಲ್ಲಿ ಯಾವುದಾದರೊಂದು ರಾಷ್ಟ್ರದ ಪರ ನಿಲುವು ತೆಗೆದುಕೊಳ್ಳಬೇಕಾದಂಥ ಪರಿಸ್ಥಿತಿಯನ್ನು ನೀವೇಕೆ ನಿರ್ಮಿಸುತ್ತಿದ್ದೀರಿ? ಇದು ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮ ಬೀರಬಹುದು ಎಂಬುದು ನಿಮಗೆ ಗೊತ್ತಿರಲಿ..’ ಎಂದು ಸಿಪಿಎಂ ಪಕ್ಷದ ನ್ಯಾಯವಾದಿ ಮಿಹಿರ್ ದೇಸಾಯಿ ಅವರಿಗೆ ನ್ಯಾಯಾಧೀಶರು ಹೇಳಿದ್ದಾರೆ. ಅಂದಹಾಗೆ,

ಅಭಿಪ್ರಾಯ ಸ್ವಾತಂತ್ರ‍್ಯ ಮತ್ತು ಪ್ರಜಾತಂತ್ರವನ್ನು ಅತಿಶ್ರೇಷ್ಠವೆಂದು ಬಗೆಯುವ ಸಂವಿಧಾನ ಈ ದೇಶದಲ್ಲಿದೆ. ನ್ಯಾಯಾಲಯ ಅದರ ಅಧೀನದಲ್ಲೇ  ಕೆಲಸ ಮಾಡುತ್ತದೆ. ಈ ದೇಶದಲ್ಲಿ ಪೊಲೀಸರು ಸ್ವತಂತ್ರರಲ್ಲ. ಅದನ್ನು ಸರಕಾರ ನಿಯಂತ್ರಿಸುತ್ತದೆ. ಸರಕಾರ ಯಾವ ಪಕ್ಷದ್ದೋ  ಆ ಪಕ್ಷದ ನಿಲುವುಗಳನ್ನೇ ಪೊಲೀಸರು ವ್ಯಕ್ತಪಡಿಸುತ್ತಾರೆ. ಇಂಥ ಸ್ಥಿತಿಯಲ್ಲಿ, ಪಕ್ಷಾತೀತ ನ್ಯಾಯವನ್ನು ನಾಗರಿಕರು ನಿರೀಕ್ಷಿಸಬೇಕಾದದ್ದು ನ್ಯಾಯಾಲಯಗಳಿಂದ ಮಾತ್ರ. ಆದರೆ ಬಾಂಬೇ ನ್ಯಾಯಾಲಯದ ಪರಾಮರ್ಶೆಯು ಈ ನಿರೀಕ್ಷೆಗೆ ತಕ್ಕುದಾಗಿಲ್ಲ ಮತ್ತು ದೇಶ ಒಪ್ಪಿಕೊಂಡಿರುವ ಪರಂಪರಾಗತ ವಿದೇಶಾಂಗ ನೀತಿಗೂ ಹೊಂದಿಕೊಳ್ಳುತ್ತಿಲ್ಲ.

ಫೆಲೆಸ್ತೀನನ್ನು ಒಂದು ರಾಷ್ಟ್ರವೆಂದು ತನ್ನ ವಿದೇಶಾಂಗ ನೀತಿಯಾಗಿಯೇ ಒಪ್ಪಿ ಘೋಷಿಸಿದ ರಾಷ್ಟ್ರ ಭಾರತ. ಫೆಲೆಸ್ತೀನಿ ಜನತೆಯನ್ನು ಪ್ರತಿನಿಧಿಸುವ ಅಧಿಕೃತ ಸಂಘಟನೆ ಎಂದು ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ(PLO)ನ್ನು 1974ರಲ್ಲೇ  ಅಂಗೀಕರಿಸಿದ ರಾಷ್ಟ್ರವೂ ಭಾರತವೇ. ಆ ಕಾಲದಲ್ಲಿ ಅರಬ್ ರಾಷ್ಟ್ರಗಳನ್ನು ಬಿಟ್ಟರೆ ಪಿಎಲ್‌ಓವನ್ನು ಹೀಗೆ ಘಂಟಾಘೋಷವಾಗಿ ಅಂಗೀಕರಿಸಿದ ಮೊತ್ತಮೊದಲ ಅರಬೇತರ ರಾಷ್ಟçವಾಗಿ ಪ್ರಶಂಸೆಗೆ ಒಳಗಾಗಿರುವುದೂ ಭಾರತವೇ. ಫೆಲೆಸ್ತೀನನ್ನು ಒಂದು ರಾಷ್ಟ್ರವೆಂದು 1988ರಲ್ಲೇ  ಭಾರತ ಅಂಗೀಕರಿಸಿದೆ. 2024ರ ಮೋದಿ ಸರಕಾರದ ಅವಧಿಯಲ್ಲಿ ಭಾರತ ಇನ್ನೂ ಒಂದು ಹೆಜ್ಜೆಯನ್ನು ಮುಂದಿಟ್ಟಿತು. ಫೆಲೆಸ್ತೀನಿಯರಿಗೆ ತಮ್ಮದೇ ದೇಶವನ್ನು ಹೊಂದುವ ಮತ್ತು ಸ್ವನಿರ್ಧಾರವನ್ನು ಹೊಂದುವ ಹಕ್ಕೂ ಇದೆ ಎಂದು ವಿಶ್ವಸಂಸ್ಥೆಯಲ್ಲಿ ಮಾನವ ಹಕ್ಕು ಆಯೋಗದ ಮಂಡಿಸಿದ ಪ್ರಸ್ತಾಪದ ಪರ ಭಾರತ ಮತವನ್ನೂ ಚಲಾಯಿಸಿತು. ಅಲ್ಲದೇ, 1948ರ ನರಮೇಧ ವಿರೋಧಿ ನಿರ್ಣಯಕ್ಕೆ ಸಹಿ ಹಾಕಿದ ದೇಶವೂ ಭಾರತವೇ. ಜೊತೆಗೇ, ಗಾಝಾದಲ್ಲಿ ನಡೆಯುತ್ತಿರುವ ನರಮೇಧಕ್ಕೆ ಭಾರತ ಸರಕಾರ ಈಗಾಗಲೇ ವಿರೋಧವನ್ನೂ ವ್ಯಕ್ತಪಡಿಸಿದೆ. ಮಹಾತ್ಮಾ ಗಾಂಧಿಯಿಂದ ಹಿಡಿದು ಪ್ರಧಾನಿ ಇಂದಿರಾ ಗಾಂಧಿ, ವಾಜಪೇಯಿ ಮತ್ತು ನರೇಂದ್ರ ಮೋದಿಯವರ ವರೆಗೆ ಫೆಲೆಸ್ತೀನ್ ವಿಷಯದಲ್ಲಿ ಭಾರತದ ನಿಲುವು ಬದಲಾಗಿಲ್ಲ. ದಕ್ಷಿಣ ಆಫ್ರಿಕಾದ ವರ್ಣಬೇಧ ನೀತಿಯ ವಿರುದ್ಧ ಭಾರತ ಹೇಗೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಧ್ವನಿ ಎತ್ತುತ್ತಾ ಬಂದಿತ್ತೋ ಅದೇರೀತಿಯಲ್ಲಿ ಫೆಲೆಸ್ತೀನ್ ಪರ ನಿಲುವನ್ನೂ ಭಾರತ ತನ್ನ ವಿದೇಶಾಂಗ ನೀತಿಯಾಗಿಯೇ ಘೋಷಿಸುತ್ತಾ ಬಂದಿದೆ. ಬ್ರಿಟಿಷ್ ಸಾಮ್ರಾಜ್ಯಶಾಹಿತ್ವದಿಂದ 200 ವರ್ಷಗಳ ಕಾಲ ಎದುರಿಸಿದ ದೌರ್ಜನ್ಯದ ಸ್ವಯಂ ಅನುಭವವೇ ಇವತ್ತು ಇಸ್ರೇಲ್‌ನ ಹಿಡಿತದಲ್ಲಿರುವ ಫೆಲೆಸ್ತೀನಿಯರ ನೋವುಗಳನ್ನು ತಿಳಿದುಕೊಳ್ಳಲು ಭಾರತಕ್ಕೆ ಧಾರಾಳ ಸಾಕು. ಸಾಮ್ರಾಜ್ಯಶಾಹಿತ್ವದ ಪ್ರಬಲ ವಿರೋಧಿಯಾಗಿ ಭಾರತ ಮಾರ್ಪಟ್ಟಿರುವುದು ಮತ್ತು ಅದನ್ನೇ ತನ್ನ ವಿದೇಶಾಂಗ ನೀತಿಯಾಗಿ 1947ರಿಂದಲೇ ಪಾಲಿಸುತ್ತಿರುವುದೂ ಈ ಕಾರಣದಿಂದಲೇ. ಆದರೆ,

ಬಾಂಬೆ ಹೈಕೋರ್ಟಿನ ಪರಾಮರ್ಶೆ ಈ ಕುರಿತಂತೆ ತೀರಾ ನಿರಾಶೆಯನ್ನು ಉಂಟು ಮಾಡುವಂಥದ್ದಾಗಿದೆ. ಕೇಂದ್ರ ಸರಕಾರದ ವಿದೇಶಾಂಗ ನೀತಿಯೂ ಸೇರಿದಂತೆ ಯಾವುದೇ ನಿರ್ಧಾರವನ್ನು ಪ್ರಶ್ನಿಸುವ ಮತ್ತು ಬೆಂಬಲಿಸುವ ಸ್ವಾತಂತ್ರ‍್ಯವನ್ನು ಈ ದೇಶದ ಸಂವಿಧಾನವೇ ನಾಗರಿಕರಿಗೆ ನೀಡುತ್ತದೆ. ಸರಕಾರ ಪ್ರಶ್ನಾತೀತವಲ್ಲ. ಅಲ್ಲದೇ ಗಾಝಾ ವಿಷಯದಲ್ಲಿ ಕೇಂದ್ರ ಸರಕಾರದ ನಿಲುವು ಗಾಝಾದ ವಿರುದ್ಧವೂ ಇಲ್ಲ. ಗಾಝಾಕ್ಕೆ ಔಷಧ ಮತ್ತು ಇನ್ನಿತರ ನೆರವುಗಳನ್ನು ಭಾರತ ಸರಕಾರವೇ ರವಾನಿಸಿದೆ. ಭಾರತೀಯರು ಸ್ವಯಂಪ್ರೇರಿತವಾಗಿ ಗಾಝಾಕ್ಕೆ ನೆರವಾಗುವುದನ್ನು ಸರಕಾರ ನಿಷೇಧಿಸಿಯೂ ಇಲ್ಲ. ಒಂದುವೇಳೆ, ಗಾಝಾದ ನರಮೇಧವನ್ನು ಪ್ರತಿಭಟಿಸುವುದು ದೇಶದ ವಿದೇಶಾಂಗ ನೀತಿಯ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದಾಗಿದ್ದರೆ ಗಾಝಾಕ್ಕೆ ನೆರವಾಗುವ ಮೂಲಕ ಕೇಂದ್ರ ಸರಕಾರವೇ ಅದನ್ನು ಉಲ್ಲಂಘಿಸಿದೆ ಎಂದೇ ಹೇಳಬೇಕಾಗುತ್ತದೆ. ಅಂದಹಾಗೆ,

ಯಾವುದೇ ದೇಶದ ನಾಗರಿಕರು ಒಂದುಕಡೆ ಸೇರಿ ವ್ಯಕ್ತಪಡಿಸುವ ಅಭಿಪ್ರಾಯವು ಅಲ್ಲಿನ ಸರಕಾರದ ಅಭಿಪ್ರಾಯವಾಗಬೇಕೆಂದಿಲ್ಲ. ಸರಕಾರದ ಅಭಿಪ್ರಾಯವನ್ನು ಒಪ್ಪುವ ಮತ್ತು ಒಪ್ಪದೇ ಇರುವ ಸ್ವಾತಂತ್ರ‍್ಯಕ್ಕೆ ಆ ದೇಶದಲ್ಲಿ ಮನ್ನಣೆ ಇದೆ ಎಂಬುದೇ ಅದರ ಅರ್ಥ. ಅಮೇರಿಕದ ಅಧ್ಯಕ್ಷ ಟ್ರಂಪ್ ಅವರು ನೇತನ್ಯಾಹು ಪರ ಬಲವಾಗಿ ನಿಂತಿರುವಾಗ ಅಲ್ಲಿನ ನಾಗರಿಕರು ಟ್ರಂಪ್ ವಿರುದ್ಧ ನಿಂತಿದ್ದಾರೆ. ಗಾಝಾದ ನರಮೇಧದ ವಿರುದ್ಧ ರ‍್ಯಾಲಿ ನಡೆಸುತ್ತಿದ್ದಾರೆ. ಪ್ರತಿದಿನವೆಂಬಂತೆ  ಪ್ರತಿಭಟಿಸುತ್ತಿದ್ದಾರೆ. ಯುರೋಪಿನ ಅನೇಕ ರಾಷ್ಟçಗಳಲ್ಲಿ ಆ ರಾಷ್ಟ್ರಗಳ ಅಧಿಕೃತ ವಿದೇಶಾಂಗ ನೀತಿಯ ವಿರುದ್ಧ ಇವತ್ತೂ ಪ್ರತಿಭಟನೆಗಳಾಗುತ್ತಿವೆ. ಇಸ್ರೇಲ್ ನರಮೇಧವನ್ನು ಖಂಡಿಸಿ ಮತ್ತು ಗಾಝಾದ ಜನರ ಪರವಾಗಿ ಅಲ್ಲೆಲ್ಲಾ  ಜನರು ಬೀದಿಗಿಳಿದಿದ್ದಾರೆ. ಇದು ಆ ದೇಶಗಳಲ್ಲಿರುವ ಪ್ರಜಾತಂತ್ರವನ್ನು ಮತ್ತು ನಾಗರಿಕ ಸ್ವಾತಂತ್ರ‍್ಯಕ್ಕಿರುವ ಮಹತ್ವವನ್ನು ಹೇಳುತ್ತದೆ. ಆದರೆ,

ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ವಿದೇಶಾಂಗ ನೀತಿ ತೀರಾ ಸ್ಪಷ್ಟವಿದೆ. ಅದು ಸ್ವತಂತ್ರ ಫೆಲೆಸ್ತೀನ್ ರಾಷ್ಟçದ ಪರ ಮತ್ತು ಸಾಮ್ರಾಜ್ಯಶಾಹಿತ್ವದ ವಿರುದ್ಧವಿದೆ. ಅಲ್ಲದೇ, ವಸುದೈವ ಕುಟುಂಬಕಂ  ಎಂಬ ಉದಾತ್ತ ಪರಿಕಲ್ಪನೆಯಲ್ಲಿ ವಿಶ್ವಾಸ ಇಟ್ಟ ಮತ್ತು ಅದನ್ನು ಪ್ರತಿಪಾದಿಸುವ ರಾಷ್ಟç ನಮ್ಮದು. ಜಗತ್ತಿನ ಎಲ್ಲರೂ ಒಂದು ಕುಟುಂಬವಾಗಿದ್ದಾರೆ ಎಂಬ ನೀತಿಯಲ್ಲಿ ಇಸ್ರೇಲೂ ಬರುತ್ತದೆ, ಫೆಲೆಸ್ತೀನೂ ಬರುತ್ತದೆ. ಈ ಕುಟುಂಬದಲ್ಲಿ ಓರ್ವನ ಮೇಲೆ ದೌರ್ಜನ್ಯವಾಗುತ್ತಿದೆ ಎಂದಾದರೆ ಕುಟುಂಬದ ಸದಸ್ಯನಾಗಿ ಅದನ್ನು ಪ್ರಶ್ನಿಸಬೇಕಾದ ಹೊಣೆಗಾರಿಕೆ ನಮಗಿದೆ. ಆ ದೌರ್ಜನ್ಯವನ್ನು ಬಲವಂತದಿಂದ  ತಡೆಯುವ ಸಾಮರ್ಥ್ಯವಿದ್ದರೆ ಅದನ್ನು ತಡೆಯಬೇಕು. ಒಂದುವೇಳೆ, ಆ ಅವಕಾಶ ಇಲ್ಲವೆಂದಾದರೆ ಅದನ್ನು ಪ್ರಶ್ನಿಸುವ ಸ್ವಾತಂತ್ರ‍್ಯವನ್ನು ಬಳಸಿಕೊಳ್ಳಬೇಕು. ಆ ಮೂಲಕ ದೌರ್ಜನ್ಯ ನಡೆಸುವ ವ್ಯಕ್ತಿಯ ವಿರುದ್ಧ ಉಳಿದ ಸದಸ್ಯರನ್ನು ಒಟ್ಟುಗೂಡಿಸಬೇಕು. ದೌರ್ಜನ್ಯಕೋರನನ್ನು ಶಿಕ್ಷಿಸುವ ಮತ್ತು ಸಂತ್ರಸ್ತನನ್ನು ರಕ್ಷಿಸುವ ಪ್ರಯತ್ನವನ್ನು ಮಾಡಬೇಕು. ಸದ್ಯ ಫೆಲೆಸ್ತೀನ್ ದೌರ್ಜನ್ಯವನ್ನು ಎದುರಿಸುತ್ತಿದೆ. ಇಸ್ರೇಲ್ ಅಪರಾಧಿ ಸ್ಥಾನದಲ್ಲಿದೆ. ಇದನ್ನು ಪ್ರಶ್ನಿಸುವುದನ್ನು ದೇಶಪ್ರೇಮದ ಕೊರತೆ ಎಂಬಂತೆ  ನ್ಯಾಯಾಲಯವೇ ಹೇಳುವುದು ದುರದೃಷ್ಟಕರ.

Saturday, 12 July 2025

ಇಸ್ರೇಲ್-ಇರಾನ್ ಯುದ್ಧದಲ್ಲಿ ಕಾಣಿಸಿ ಕೊಂಡ ಈ ಕ್ಯಾಥರಿನ್ ಯಾರು?




1. ಎಲಿ ಕೋಹೆನ್

2. ಕ್ಯಾಥರಿನ್

ಜಗತ್ತನ್ನೇ ತಬ್ಬಿಬ್ಬುಗೊಳಿಸಿದ ಅತ್ಯಂತ ಶಕ್ತಿಶಾಲಿ ಗೂಢಚರ ಈ ಎಲಿ ಕೋಹೆನ್. ಇಸ್ರೇಲ್‌ನ ಯಹೂದಿ ವ್ಯಕ್ತಿಯಾದ ಈತನನ್ನು 1965ರಲ್ಲಿ ಸಿರಿಯಾ ಗಲ್ಲಿಗೇರಿಸಿತು. ಆದರೆ, ಅದಕ್ಕಿಂತ ಮೊದಲೇ ಸಿರಿಯಾಕ್ಕೆ ಏನೆಲ್ಲ ಅನಾಹುತಗಳನ್ನು ಮಾಡಿ ಬಿಡಬಹುದೋಅವೆಲ್ಲವನ್ನೂ ಈತ ಮಾಡಿಬಿಟ್ಟಿದ್ದ.

1967ರ ಅರಬ್-ಇಸ್ರೇಲ್ ಯುದ್ಧದ ಸಮಯದಲ್ಲಿ ಸಿರಿಯಾದ ಭಾಗವಾಗಿದ್ದ ಗೋಲಾನ್ ಬೆಟ್ಟವನ್ನು ಕೇವಲ ಎರಡೇ ದಿನಗಳೊ ಳಗೆ ಇಸ್ರೇಲ್ ವಶಪಡಿಸಿಕೊಂಡಿದ್ದರೆ ಅದರ ಸಂಪೂರ್ಣ ಯಶಸ್ಸು ಈ ಎಲಿ ಕೋಹೆನ್‌ಗೆ ಸಲ್ಲಬೇಕು. ಸಿರಿಯಾದ ನಾಗರಿಕನೇ ಅಲ್ಲದ ಈತ ಇಡೀ ವ್ಯವಸ್ಥೆಯನ್ನೇ ಮರುಳುಗೊಳಿಸಿ ಸಿರಿಯಾದ ರP್ಷÀಣಾ ಸಚಿವನಾಗುವ ಹಂತಕ್ಕೆ ಬೆಳೆದ ರೀತಿಯೇ ರೋಚಕ.

1924ರಲ್ಲಿ ಈಜಿಪ್ಟ್ ನ   ಯಹೂದಿ ಕುಟುಂಬದಲ್ಲಿ ಹುಟ್ಟಿದ ಈತ ಆರಂಭದಲ್ಲಿ ರಬ್ಬಿ (ಯಹೂದಿ ಧರ್ಮಗುರು)ಯಾಗಲು ಬಯಸಿದ್ದ. ಅದಕ್ಕಾಗಿ ಅಲೆಕ್ಸಾಂಡ್ರಿಯಾದ ಮುಖ್ಯ ರಬ್ಬಿಯಿಂದ ತರಬೇತಿಯನ್ನೂ ಪಡೆದಿದ್ದ. ಆಗಿನ್ನೂ ಇಸ್ರೇಲ್ ರಾಷ್ಟ್ರ  ಸ್ಥಾಪನೆ ಯಾಗಿರಲಿಲ್ಲ. ಆದರೆ ಇಸ್ರೇಲ್ ರಾಷ್ಟç ಸ್ಥಾಪನೆಗೆ ಬೇಕಾದ ತಯಾರಿಗಳು ಗುಪ್ತವಾಗಿ ನಡೆಯುತ್ತಿದ್ದುವು. ಆಗ ಈಜಿಪ್ಟ್ ನಲ್ಲಿ  ಧಾರಾಳ ಸಂಖ್ಯೆಯಲ್ಲಿ ಯಹೂದಿಯರಿದ್ದರು. ಅವರನ್ನು ಗುಪ್ತವಾಗಿ ಭೇಟಿಯಾಗುವುದು ಮತ್ತು ಸಂಭಾವ್ಯ ಇಸ್ರೇಲ್ ರಾಷ್ಟ್ರದೊಳಗೆ ಕಳುಹಿಸುವುದಕ್ಕೆ ನೇತೃತ್ವವನ್ನು ನೀಡಿದ್ದ. ಕೈರೋ ಯುನಿವರ್ಸಿಟಿಯಲ್ಲಿ ಕಲಿಯುತ್ತಿದ್ದಾಗಲೇ ಆತ ಇಸ್ರೇಲಿ ರಾಷ್ಟçದ ಪ್ರಬಲ ಬೆಂಬಲಿಗನಾಗಿ ಪರಿವರ್ತಿತವಾಗಿದ್ದ. ಅರೇಬಿಕ್, ಹಿಬ್ರೂ, ಇಂಗ್ಲಿಷ್, ಫ್ರೆಂಚ್, ಸ್ಪಾನಿಶ್ ಭಾಷೆಗಳಲ್ಲಿ ನಿರರ್ಗಳವಾಗಿ ಸಂವಾದ ನಡೆಸುವ ಸಾಮರ್ಥ್ಯವೂ ಈತನಿಗಿತ್ತು.

1949ರಲ್ಲಿ ಈ ಕೋಹೆನ್‌ನ ಹೆತ್ತವರು ಮತ್ತು ಅವನ ಮೂವರು ಸಹೋದರರು ಇಸ್ರೇಲ್‌ಗೆ ವಲಸೆ ಹೋದರು. ಆದರೆ ತನ್ನ ಡಿಗ್ರಿ ಪೂರ್ತಿಗೊಳಿಸುವ ಉದ್ದೇಶದಿಂದ ಈತ ಈಜಿಪ್ಟ್ ನಲ್ಲೇ  ಉಳಿದ. 1952ರಲ್ಲಿ ಮಿಲಿಟರಿ ಮುಖಂಡರಾದ ಮುಹಮ್ಮದ್ ನಜೀಬ್  ಮತ್ತು ಜಮಾಲ್ ಅಬ್ದುಲ್ ನಾಸಿರ್ ನೇತೃತ್ವದಲ್ಲಿ ದೊರೆ ಫಾರೂಖ್‌ರ ವಿರುದ್ಧ ಬಂಡಾಯ ಕಾಣಿಸಿಕೊಂಡಿತು. ಈ ಬಂಡಾಯಕ್ಕೆ ಬೆಂಬಲ ಸಾರಿದ ಆರೋಪದಲ್ಲಿ ಈಜಿಪ್ಟ್ ಅಧಿಕಾರಿಗಳು ಈ ಕೋಹೆನ್‌ನನ್ನು ಬಂಧಿಸಿ ವಿಚಾರಣೆ ನಡೆಸಿ ದ್ದರು. ಆದರೆ ಪೂರಕ ಸಾಕ್ಷ್ಯ  ಸಿಗದ ಕಾರಣ ಬಿಟ್ಟುಬಿಟ್ಟಿದ್ದರು. ಈ ನಡುವೆ 1954ರಲ್ಲಿ ‘ಲ್ಯಾವನ್ ಅಫೇರ್’ ಎಂಬ ಹೆಸರಲ್ಲಿ ಗುರುತಿಸಿಕೊಂಡಿರುವ ಕುಖ್ಯಾತ ಕಾರ್ಯಾಚರಣೆಗೆ ಇಸ್ರೇಲ್ ಗುಪ್ತಚರ ಸಂಸ್ಥೆ ಮೊಸಾದ್ ಮುಂದಾಯಿತು. ಈಜಿಪ್ಟ್, ಬ್ರಿಟಿಷ್ ಮತ್ತು ಅಮೇರಿಕನ್ನರ ಮಾಲಕತ್ವದಲ್ಲಿರುವ ಸಿನಿಮಾ ಮಂದಿರಗಳು, ಲೈಬ್ರರಿ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಬಾಂಬಿಟ್ಟು ನಾಗರಿಕರನ್ನು ಹತ್ಯೆ ಮಾಡುವುದುಮತ್ತು ಇದರ ಹೊಣೆಯನ್ನು ಮುಸ್ಲಿಮ್ ಬ್ರದರ್‌ಹುಡ್ ಮೇಲೆ ಆರೋಪಿಸುವುದು ಈ ಕಾರ್ಯಾಚರಣೆಯ ಗುರಿಯಾಗಿತ್ತು. ಇದಕ್ಕಾಗಿ ಈಜಿಪ್ಟ್ ನಲ್ಲಿರುವ   ಯಹೂದಿಯರನ್ನು ತಯಾರುಗೊಳಿಸಲಾಯಿತು. ಯೋಜನೆಯಂತೆ ಬಾಂಬನ್ನೂ ಇಡಲಾಯಿತು. ಆದರೆ, ಕಾರ್ಯತಂತ್ರದಲ್ಲಿ ಆದ ಸಣ್ಣ ಎಡವಟ್ಟಿನಿಂದಾಗಿ ಈ ಎಲ್ಲ ಕಚೇರಿಗಳೂ ಬಾಗಿಲು ಮುಚ್ಚಿದ ಬಳಿಕ ಈ ಬಾಂಬ್‌ಗಳು ಸ್ಫೋಟಗೊಂಡವು. ಅದರಿಂದಾಗಿ ಭಾರೀ ಅನಾಹುತ ತಪ್ಪಿ ಹೋಯಿತು. ಈ ಕಾರ್ಯಾಚರಣೆಯ ಆರೋಪದಲ್ಲಿ ಇಬ್ಬರು ಯಹೂದಿಯರನ್ನು ಈಜಿಪ್ಟ್ ಸರಕಾರ ಗಲ್ಲಿಗೇರಿಸಿತಾದರೂ ಈ ಕೋಹೆನ್ ಶಿಕ್ಷೆಯಿಂದ ತಪ್ಪಿಸಿಕೊಂಡ. ಆತನನ್ನು ಅಪರಾಧಿ ಎಂದು ಸಾರುವುದಕ್ಕೆ ಬೇಕಾದ ದಾಖಲೆ ಸಿಗದೇ ಇರುವುದು ಇದಕ್ಕೆ ಕಾರಣವಾಗಿತ್ತು. 1956ರಲ್ಲಿ ನಡೆದ ಎರಡನೇ ಇಸ್ರೇಲ್-ಅರಬ್ ಯುದ್ಧದ ಬಳಿಕ ಈತನನ್ನು ಈಜಿಪ್ಟ್ ಬಲವಂತದಿಂದ  ಇಸ್ರೇಲ್‌ಗೆ ಗಡೀಪಾರು ಮಾಡಿತು. ಇಲ್ಲಿಂದ ಈತನ ಎರಡನೇ ಹಂತದ ಮತ್ತು ಅತ್ಯಂತ ಅಪಾಯ ಕಾರಿಯಾದ ಕಾರ್ಯಾಚರಣೆ ಆರಂಭಗೊಂಡಿತು. ಇಸ್ರೇಲ್‌ಗೆ ಬಂದವನೇ ಮೊಸಾದ್‌ನಲ್ಲಿ ಈತ ತರಬೇತಿಗೆ ಸೇರಿಕೊಂಡ.

 ಅಂದಹಾಗೆ,

ಅರಬ್ ರಾಷ್ಟ್ರಗಳೊಂದಿಗೆ ಎರಡೆರಡು ಯುದ್ಧಗಳನ್ನು ನಡೆ ಸಿದ್ದ ಇಸ್ರೇಲ್‌ಗೆ ತಾನು ಯಾವತ್ತೂ ಅಸುರಕ್ಷಿತ ರಾಷ್ಟ್ರ  ಅನ್ನು ವುದು ತಿಳಿದಿತ್ತು. ಅರಬ್ ರಾಷ್ಟ್ರಗಳು ಜೊತೆ ಸೇರಿ ತನ್ನ ವಿರುದ್ಧ ಮೂರನೇ ಯುದ್ಧ ನಡೆಸುವುದನ್ನು ಅದು ನಿರೀಕ್ಷಿಸಿಯೇ ಇತ್ತು. ಫೆಲೆಸ್ತೀನಿಯರನ್ನು ಒಕ್ಕಲೆಬ್ಬಿಸುವುದು ಮತ್ತು ಅಲ್ಲಿನ ಭೂಭಾಗವನ್ನು ಕಬಳಿಸುತ್ತಾ ಗಡಿ ವಿಸ್ತರಣೆಯಲ್ಲಿ ತೊಡಗುವುದನ್ನು ಅರಬ್ ಜನತೆ ಒಪ್ಪಲ್ಲ ಎಂದೂ ಇಸ್ರೇಲ್‌ಗೆ ತಿಳಿದಿತ್ತು. ಈ ಎಲ್ಲ ದೂರ ದೃಷ್ಟಿಯನ್ನು ಇಟ್ಟುಕೊಂಡೇ ಅದು ಕಾರ್ಯತಂತ್ರಗಳನ್ನು ರೂಪಿಸುತ್ತಿತ್ತು. ಇದರ ಭಾಗವಾಗಿಯೇ ಈ ಕೋಹೆನ್‌ನನ್ನು ಗೂಢಚರನಾಗಿ ಸಿರಿಯಾಕ್ಕೆ ಕಳುಹಿಸಲು ತೀರ್ಮಾನಿಸಿತು. ಅರ್ಜೆಂಟೀನಾದಿಂದ  ಮರಳುತ್ತಿರುವ ಸಿರಿಯಾದ ಬ್ಯುಸಿನೆಸ್‌ಮ್ಯಾನ್ ಎಂಬ ನಕಲಿ ದಾಖಲೆಯನ್ನು ಮೊಸಾದ್ ಈತನಿಗಾಗಿ ಸೃಷ್ಟಿಸಿತು. ಈತನ ಹೆಸರನ್ನು ಕಮಾಲ್ ಅಮೀನ್ ಥಾಬೆಟ್ ಎಂದು ಮರುನಾಮ ಕರಣ ಮಾಡಿತು. ಈತ ಅರ್ಜೆಂಟೀನಾದಲ್ಲಿದ್ದ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ 1961ರಲ್ಲಿ ಅರ್ಜೆಂಟೀನಾಕ್ಕೂ ಕಳುಹಿಸಿಕೊಟ್ಟಿತು. 

ಹೀಗೆ,

1962ರಲ್ಲಿ ಸಿರಿಯಾ ಪ್ರವೇಶಿಸಿದ ಈತ, ಅಲ್ಲಿನ ರಾಜಕಾರಣಿ ಗಳು, ರಾಯಭಾರ ಕಚೇರಿಗಳು, ಗುಪ್ತಚರ ಸಂಸ್ಥೆಯ ಕಚೇರಿ, ಸರಕಾರಿ ಕಟ್ಟಡಗಳು ಇರುವ ಮೆಹ್ದಿ ಇಬ್ನು ಸ್ಟ್ರೀಟ್‌ನಲ್ಲಿ ಮನೆ ಯನ್ನೂ ಮಾಡಿಕೊಂಡ. ಈ ಮನೆ ಮಾಡಿರುವುದೂ ತಂತ್ರದ ಭಾಗವಾಗಿತ್ತು. ಈಜಿಪ್ಟ್ನ ಉನ್ನತ ಅಧಿಕಾರಿಗಳು, ರಾಜಕಾರಣಿಗಳು, ಗುಪ್ತಚರ ಸಂಸ್ಥೆಯ ಅಧಿಕಾರಿಗಳ ಜೊತೆ ಗೆಳೆತನ ಬೆಳೆಸಿ ಅವರಿಂದ ಮಾಹಿತಿಗಳನ್ನು ಪಡೆದು ಇಸ್ರೇಲ್‌ಗೆ ರವಾನಿಸುವುದು ಇದರ ಹಿಂದಿನ ಉದ್ದೇಶವಾಗಿತ್ತು.

ಮಾತ್ರವಲ್ಲ, ಆತ ಇದರಲ್ಲಿ ಯಶಸ್ಸನ್ನೂ ಸಾಧಿಸಿದ.

ಸಿರಿಯಾದ ರಾಜಕಾರಣಿಗಳು ಮತ್ತು ಉನ್ನತ ಅಧಿಕಾರಿಗಳ ಜೊತೆ ಬಹಳ ಬೇಗ ಗೆಳೆತನ ಬೆಳೆಸಿಕೊಂಡ ಈತ, ತನ್ನ ಅದ್ದೂರಿ ಮನೆಯಲ್ಲಿ ಅವರಿಗಾಗಿ ಪಾರ್ಟಿಯನ್ನೂ ಮಾಡತೊಡಗಿದ. ಮದ್ಯ ಮತ್ತು ಮಾನಿನಿಯರನ್ನೂ ಒದಗಿಸತೊಡಗಿದ. ಅವರನ್ನು ಅಮಲಿನಲ್ಲಿ ತೂಗಾಡುವಂತೆ ಮಾಡಿ ಸರಕಾರಿ ಗೌಪ್ಯ ಮಾಹಿತಿ ಗಳನ್ನು ಸಂಗ್ರಹಿಸತೊಡಗಿದ. ಸರಕಾರಿ ಅಧಿಕಾರಿಗಳಿಗೆ ಲಂಚ ನೀಡಿ ಗುಪ್ತ ದಾಖಲೆಗಳನ್ನು ಸಂಗ್ರಹಿಸತೊಡಗಿದ. ಈತ ಎಲ್ಲಿಯ ವರೆಗೆ ಸಿರಿಯನ್ ಪ್ರಭುತ್ವಕ್ಕೆ ಹತ್ತಿರವಾದನೆಂದರೆ, ರಕ್ಷಣಾ ಸಚಿವನಾಗಿ ಈತನನ್ನು ಸಂಪುಟಕ್ಕೆ ಸೇರಿಸುವುದಕ್ಕೂ ಸಂಪುಟದಲ್ಲಿ ಚರ್ಚೆ ನಡೆಯಿತು. ಹೀಗೆ 1962ರಿಂದ 65ರ ನಡುವೆ ಸಾವಿರಾರು ರಹಸ್ಯ ಮಾಹಿತಿಯನ್ನು ಈತ ಇಸ್ರೇಲ್‌ಗೆ ರವಾನಿಸಿದ. ಮುಖ್ಯ ವಾಗಿ, ರೇಡಿಯೋ, ರಹಸ್ಯ ಪತ್ರಗಳು ಮತ್ತು ರಹಸ್ಯ ಭೇಟಿ ಮೂಲಕ ಈ ಎಲ್ಲ ಮಾಹಿತಿಯನ್ನು ಇಸ್ರೇಲ್‌ಗೆ ತಲುಪಿಸುತ್ತಿದ್ದ. ಈತನ ಅತಿ ಮಹತ್ವಪೂರ್ಣ ಯಶಸ್ಸು ಏನೆಂದರೆ, ಗೋಲಾನ್ ಬೆಟ್ಟಕ್ಕೆ ಭೇಟಿ ಕೊಟ್ಟಿರುವುದು. ಒಟ್ಟು 3 ಬಾರಿ ಆತ ಈ ಬೆಟ್ಟಕ್ಕೆ ಭೇಟಿ ಕೊಟ್ಟಿದ್ದ. ಅಲ್ಲಿ ಬಿಸಿಲಿಗೆ ಬೇಯುತ್ತಿರುವ ಸಿರಿಯನ್ ಸೈನಿಕರ ಬಗ್ಗೆ ಮರುಕಪಟ್ಟು ಅವರಿಗೆ ನೆರಳು ಒದಗಿಸುವ ಉದ್ದೇಶದಿಂದ ಸಸಿಗಳನ್ನು ನೆಟ್ಟಿದ್ದ. ಇದು ಸೈನಿಕರ ಮನವನ್ನೂ ಗೆದ್ದಿತ್ತು. 

ಆದರೆ,

1967ರ ಮೂರನೇ ಇಸ್ರೇಲ್-ಅರಬ್ ಯುದ್ಧದ ಸಮಯದಲ್ಲಿ ಕೇವಲ ಎರಡೇ ದಿನಗಳಲ್ಲಿ ಇಸ್ರೇಲ್ ಈ ಗೋಲಾನ್ ಬೆಟ್ಟವನ್ನು ಸಿರಿಯಾದಿಂದ ವಶಪಡಿಸಿಕೊಳ್ಳುವುದಕ್ಕೆ ಈ ಮರಗಳೇ ನೆರವಾಗಿತ್ತು ಎಂದು ಹೇಳಲಾಗುತ್ತಿದೆ. ಆ ಮರಗಳಿಗೆ ಹಾಕಲಾಗಿದ್ದ ಗುರುತು ಗಳು ಇಸ್ರೇಲ್ ಕಾರ್ಯಾಚರಣೆಗೆ ನೆರವನ್ನೂ ಒದಗಿಸಿತ್ತು ಅನ್ನುವುದು ಆ ಬಳಿಕ ಬಹಿರಂಗವಾಗಿತ್ತು. ಆದರೆ, 1963ರಲ್ಲಿ ಸಿರಿಯಾದಲ್ಲಿ ಸೈನಿಕ ಬಂಡಾಯ ಉಂಟಾಯಿತು. ಸಿರಿಯಾದ ಗುಪ್ತಚರ ಸಂಸ್ಥೆಯ ಹೊಸ ಮುಖ್ಯಸ್ಥರಾಗಿ ನೇಮಕ ವಾದ ಅಹ್ಮದ್ ಸುಯಿದಾನಿಯು ಈ ಎಲಿ ಕೋಹೆನ್ ಜೊತೆ ಸಂಬಂಧವನ್ನು ಇಟ್ಟುಕೊಳ್ಳಲಿಲ್ಲ. ಇದರಿಂದ ಕೋಹೆನ್‌ಗೂ ಭಯವಾಯಿತು. ಎಲ್ಲಿ ತನ್ನ ಗೂಢಚಾರಿಕೆ ಬಹಿರಂಗವಾಗುತ್ತೋ ಎಂಬ ಅನುಮಾನದಿಂದ 1964ರಲ್ಲಿ ಆತ ಇಸ್ರೇಲ್‌ಗೆ ಪ್ರಯಾಣಿಸಿದ ಮತ್ತು ಸಿರಿಯಾಕ್ಕೆ ಮರಳುವುದಿಲ್ಲವೆಂದೂ ತೀರ್ಮಾನಿಸಿದ್ದ. ಆದರೆ, ಮೊಸಾದ್‌ನ ಒತ್ತಡಕ್ಕೆ ಮಣಿದು ಕೊನೆಯ ಬಾರಿ ಎಂಬಂತೆ  ಸಿರಿಯಕ್ಕೆ ಮರಳಿದ. 

ಅದುವೇ ಆತನ ಅಂತ್ಯಕ್ಕೂ ಕಾರಣವಾಯಿತು.

ತಮ್ಮ ದೇಶದ ರಹಸ್ಯ ಮಾಹಿತಿಗಳು ಸೋರಿಕೆಯಾಗುತ್ತಿವೆ ಎಂಬ ಅನುಮಾನವನ್ನು ಹೊಂದಿದ್ದ ಸಿರಿಯನ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಅಹ್ಮದ್ ಸುಯಿದಾನಿಯು, ಇದನ್ನು ಪತ್ತೆ ಹಚ್ಚುವುದಕ್ಕಾಗಿ ರಶ್ಯದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ತಂತ್ರಜ್ಞ ರನ್ನು ಬಳಸಿದರು. ಆಗ ಅವರಿಗೆ ರೇಡಿಯೋ ತರಂಗಾಂತರಗಳ ಮೂಲಕ ಮಾಹಿತಿ ರವಾನೆಯಾಗುತ್ತಿರುವುದು ಗೊತ್ತಾಯಿತು. ಅದರ ಜಾಡು ಹಿಡಿದು ಹೋದ ಅವರು ತಲುಪಿದ್ದು ಇದೇ ಕೋಹೆನ್ ಇದ್ದ ಅಪಾರ್ಟ್ಮೆಂಟ್‌ಗೆ. ಜುಲೈ 24, 1965ರಂದು ಅವರು ಕೋಹೆನ್ಮ ನೆ ಬಾಗಿಲು ತಟ್ಟುವಾಗ, ಆತ ರೇಡಿಯೇ ಮೂಲಕ ರಹಸ್ಯ ಮಾಹಿತಿಯನ್ನು ಇಸ್ರೇಲ್‌ಗೆ ರವಾನಿಸುತ್ತಿದ್ದ.

ಮಿಲಿಟರಿ ನ್ಯಾಯಾಲಯ ಈ ಕೋಹೆನ್‌ಗೆ ಮರಣದಂಡನೆ ಶಿಕ್ಷೆ ವಿಧಿಸಿತು.

ಈ ಶಿಕ್ಷೆಯನ್ನು ಜಾರಿಗೊಳಿಸದಂತೆ ತಡೆಯುವುದಕ್ಕಾಗಿ ಇಸ್ರೇಲ್ ಇನ್ನಿಲ್ಲದಂತೆ ಪ್ರಯತ್ನಿಸಿತು. ಈತನಿಗೆ ಮರಣ ದಂಡನೆ ಯಿಂದ ರಿಯಾಯಿತಿ ಕೊಡುವಂತೆ ಒತ್ತಾಯಿಸಿ ಇಸ್ರೇಲ್ ವಿದೇಶಾಂಗ ಸಚಿವ ಗೋಲ್ಡನ್ ಮೇರ್ ನೇತೃತ್ವದಲ್ಲಿ ಅಭಿಯಾನವೇ ನಡೆಯಿತು. ಪೋಪ್ ಜಾನ್ ಪೌಲ್‌ರಿಂದ ಹಿಡಿದು ಬೆಲ್ಜಿಯಂ, ಕೆನಡಾ, ಫ್ರಾನ್ಸ್ ಗಳು  ಮರಣ ದಂಡನೆ ನೀಡದಂತೆ ಸಿರಿಯನ್ ಆಡಳಿತದ ಮೇಲೆ ಒತ್ತಡ ಹೇರಿದುವು. ಸಿರಿಯನ್ ಸರಕಾರಕ್ಕೆ ಆತನ ಪತ್ನಿ ನಾದಿಯಾ ಭಾವನಾತ್ಮಕ ಪತ್ರ ಬರೆದರು. ಆದರೆ,

ಸಿರಿಯಾ ಮಣಿಯಲಿಲ್ಲ.

1965 ಮೇ 18ರಂದು ಡಮಾಸ್ಕಸ್‌ನ ಮರ್ಜಾ ವೃತ್ತದಲ್ಲಿ ಸಾರ್ವಜನಿಕವಾಗಿ ಈ ಕೋಹೆನ್‌ನನ್ನು ನೇಣಿಗೇರಿಸಲಾಯಿತು. ಈತನನ್ನು ಇಸ್ರೇಲ್ ರಾಷ್ಟ್ರೀಯ ಹೀರೋವಾಗಿ ಗೌರವಿಸಿತು. ಗೋಲಾನ್ ಬೆಟ್ಟದಲ್ಲಿರುವ ಇಲ್ಲಿಹಾದ್ ಯಹೂದಿ ವಸತಿಗಳಿಗೆ ಈತನ ಹೆಸರನ್ನು ಇಟ್ಟಿತು. ಅಲ್ಲದೇ ಇಸ್ರೇಲ್‌ನ ಅನೇಕ ರಸ್ತೆಗಳು ಮತ್ತು ಕೆಲವು ಪ್ರದೇಶಗಳನ್ನು ಈತನ ಹೆಸರಿನಿಂದ ಕರೆಯಲಾಗುತ್ತಿದೆ. ಅಂದಹಾಗೆ,

ಈ ಎಲ್ಲವನ್ನೂ ಈಗ ಇಲ್ಲಿ ಹಂಚಿಕೊಳ್ಳುವುದಕ್ಕೆ ಒಂದು ಕಾರಣವಿದೆ. ಅದುವೇ ಕ್ಯಾಥರಿನ್.

ಈಕೆ ಓರ್ವ ಯಮನ್ ಮುಸ್ಲಿಮನನ್ನು ಮದುವೆಯಾಗಿ ಫ್ರೆಂಚ್ ಪಾಸ್‌ಪೋರ್ಟ್ನೊಂದಿಗೆ ಇರಾನ್ ಪ್ರವೇಶಿಸಿದಳು. ಪಾಸ್‌ಪೋರ್ಟ್ನಲ್ಲಿ ಕ್ಯಾಥರಿನ್ ಪೆರಸ್ ಶಕ್ದಂ ಎಂಬ ಹೆಸರಿತ್ತು. ಇಸ್ರೇಲ್ ನಾಗರಿಕರಿಗೆ ಇರಾನ್ ಪ್ರವೇಶಕ್ಕೆ ನಿಷೇಧವಿದೆ ಅನ್ನುವುದು ಇಲ್ಲಿ ಗಮನಾರ್ಹ. ಈ ಕ್ಯಾಥರಿನ್ ಬುದ್ಧಿವಂತೆ. ನಿರರ್ಗಳವಾಗಿ ಮಾತಾಡಬಲ್ಲವಳು. ಈಕೆ ಶ್ರದ್ಧಾವಂತ ಮುಸ್ಲಿಮಳಂತೆ ತನ್ನನ್ನು ಬಿಂಬಿಸಿಕೊಂಡಳು. ಕ್ರಾಂತಿಯ ಭಾಷೆಯಲ್ಲಿ ಇಸ್ಲಾಮೀ ಆದರ್ಶವನ್ನು ಆಕರ್ಷಕವಾಗಿ ವ್ಯಕ್ತಪಡಿಸತೊಡಗಿದಳು. ಬಹಳ ಬೇಗ ಇರಾನ್ ನಲ್ಲಿ ಈಕೆಗೊಂದು ಐಡೆಂಟಿಟಿ ಪ್ರಾಪ್ತವಾಯಿತು. ವಿದೇಶಿಯರು ಅದರಲ್ಲೂ ಮಹಿಳೆಯರು ಪ್ರವೇಶಿಸಲೂ ಸಾಧ್ಯವಿಲ್ಲದಂಥ ಹಲವು ಪ್ರದೇಶಗಳಿಗೆ ಈಕೆ ಭೇಟಿ ನೀಡಿದಳು. ಇರಾನಿನ ಟಿವಿಯಲ್ಲಿ ಕಾರ್ಯಕ್ರಮವನ್ನು ನೀಡಿದಳು. ಸರ್ವೋಚ್ಛ ಧಾರ್ಮಿಕ ನಾಯಕ ಅಲಿ ಖಾಮಿನೈ  ಅವರ ಇಂಗ್ಲಿಷ್ ವೆಬ್ ಸೈಟ್‌ನಲ್ಲಿ ಲೇಖನವನ್ನೂ ಬರೆಯುವಷ್ಟರ ಮಟ್ಟಿಗೆ ಈಕೆ ಎತ್ತರಕ್ಕೆ ಬೆಳೆದಳು. 2017ರಲ್ಲಿ ಇಬ್ರಾಹೀಮ್ ರಈಸಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದಾಗ ಅವರ ಪರವಾಗಿ ಚುನಾವಣಾ ಪ್ರಚಾರ ಮಾಡಿದಳು. ಅವರು ಆ ಬಳಿಕ ಅಧ್ಯಕ್ಷ ರಾಗಿಯೂ ಆಯ್ಕೆಯಾದರು. ಈಕೆ ಈ ಎಲ್ಲ ಪ್ರಭಾವವನ್ನು ಬಳಸಿ ಇರಾನಿನ ಉನ್ನತ ಸೇನಾ ನಾಯಕರು ಮತ್ತು ರಾಜಕಾರಣಿಗಳನ್ನು ಭೇಟಿಯಾಗಿರುವ ಮತ್ತು ಅವರೊಂದಿಗೆ ಹತ್ತಿರದ ಸಂಬಂಧವನ್ನು ಬೆಳೆಸಿಕೊಂಡಿರುವ ಸಾಧ್ಯತೆ ಇದೆ ಎಂದು ಇರಾನಿನ ಮಾಜಿ ಅಧ್ಯಕ್ಷ  ಅಹ್ಮದಿ ನೆಜಾದ್ ಕೂಡಾ ಹೇಳಿದ್ದಾರೆ.

ಸದ್ಯ ಈಕೆ ಇರಾನಿನಿಂದ ತಪ್ಪಿಸಿಕೊಂಡಿದ್ದಾದ್ದಾಳೆ ಎಂಬ ವರದಿಯೂ ಇದೆ. ಈಕೆ ಇಸ್ರೇಲ್‌ನ ಗೂಢಚಾರಿಣಿ ಎಂದು ಇರಾನಿನ ಮಾಧ್ಯಮಗಳೂ ಬರೆದಿವೆ. ತಿಂಗಳುಗಳ ಹಿಂದೆ ಇಸ್ರೇಲ್‌ನ ವಾಯಿಸ್ ಆಫ್ ಇಸ್ರೇಲ್ ಪತ್ರಿಕೆಯಲ್ಲಿ ಈಕೆ ಲೇಖನ ಬರೆದಿರುವುದೂ ಇದೀಗ ಪತ್ತೆಯಾಗಿದೆ. ಅಂದಹಾಗೆ,

ಜೂನ್ 13ರಂದು ಇರಾನ್ ಮೇಲೆ ನಡೆಸಿದ ದಾಳಿಯಲ್ಲಿ ಹಲವು ಅಣು ವಿಜ್ಞಾನಿಗಳು ಮತ್ತು ಸೇನಾ ಮುಖಂಡರನ್ನು ಹತ್ಯೆ ಮಾಡಲು  ಇಸ್ರೇಲ್ ಯಶಸ್ವಿಯಾದದ್ದು ಹೇಗೆ ಎಂಬ ಪ್ರಶ್ನೆಯ ಬೆನ್ನು ಬಿದ್ದು ಹೋದಾಗ ಸಿಕ್ಕವರೇ ಈ ಕ್ಯಾಥರಿನ್. ಮತ್ತಷ್ಟು ಒಳಹೊಕ್ಕು ಹುಡುಕಿದಾಗ ಈ ಎಲಿ ಕೋಹೆನ್ ಪತ್ತೆಯಾದ.

ಕೈಕೈ ಹಿಸುಕಿಕೊಳ್ಳುವ ಸಂಕಟ ಇರಾನಿನದು.

Thursday, 26 June 2025

11 ವರ್ಷಗಳ ಮೋದಿ ಆಡಳಿತಕ್ಕೆ ಕನ್ನಡಿ ಹಿಡಿದ ಟ್ರಂಪ್ ಮತ್ತು ಎಪಿಸಿಆರ್




ಒಂದೇ ವಾರದೊಳಗೆ ಒಂದು ವರದಿ, ಒಂದು ತನಿಖಾ ವರದಿ ಮತ್ತು ಒಂದು ಹೇಳಿಕೆ ಬಿಡುಗಡೆಗೊಂಡಿದೆ. ಪ್ರಧಾನಿ ನರೇಂದ್ರ ಮೋದಿಯವರ ೧೧ ವರ್ಷಗಳ ಆಡಳಿತವನ್ನು ಅವಲೋಕನಕ್ಕೆ ಒಡ್ಡಬಹುದಾದ ಅತ್ಯಂತ ಮಹತ್ವದ ಬೆಳವಣಿಗೆಯಾಗಿ ಇದನ್ನು ಪರಿಗಣಿಸಬಹುದಾಗಿದೆ.

1. ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ದುಡ್ಡು ಹಿಂದಿನ ವರ್ಷಗಳಿಗಿಂತ 3 ಪಟ್ಟು ಹೆಚ್ಚಳವಾಗಿದೆ. ೨೦೨೩ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರು 9771 ಕೋಟಿ ರೂಪಾಯಿಯನ್ನು ಠೇವಣಿಯಾಗಿ ಇಟ್ಟಿದ್ದರು. 2024ರಲ್ಲಿ ಇದು 37600 ಕೋಟಿ ರೂಪಾಯಿಯಾಗಿ ಏರಿಕೆಯಾಗಿದೆ.

2. ಎ.ಪಿ.ಸಿ.ಆರ್. ಅಥವಾ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಸಿವಿಲ್ ರೈಟ್ಸ್ ಮತ್ತು ಕ್ವಿಲ್ ಫೌಂಡೇಶನ್ ಜಂಟಿಯಾಗಿ ಸಂಗ್ರಹಿಸಿದ ವರದಿಯ ಪ್ರಕಾರ, 2024 ಜೂನ್ 7ರಿಂದ 2025 ಜೂನ್ 7 ವರೆಗಿನ ಈ ಒಂದು ವರ್ಷದಲ್ಲಿ ದೇಶದಲ್ಲಿ 947 ರಷ್ಟು ದ್ವೇಷಾಧಾರಿತ ಘಟನೆಗಳು ನಡೆದಿವೆ. ಇದರಲ್ಲಿ 602ರಷ್ಟು ಅಪರಾಧ ಪ್ರಕರಣಗಳಾದರೆ ೩೪೫ ದ್ವೇಷಭಾಷಣಗಳು ನಡೆದಿವೆ.

3. ಭಾರತದಲ್ಲಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಮತ್ತು ಅಪರಾಧ ಪ್ರಕರಣಗಳು ಹೆಚ್ಚಾಗುತ್ತಾ ಇದೆ. ಅದರಲ್ಲೂ ಲೈಂಗಿಕ ದೌರ್ಜನ್ಯಗಳು ಆತಂಕಕಾರಿ ಮಟ್ಟಕ್ಕೆ ಏರಿದೆ. ಆದ್ದರಿಂದ ಮಹಿಳೆಯರು ಒಂಟಿಯಾಗಿ ಪ್ರಯಾಣಿಸಬಾರದು. ಪ್ರವಾಸದ ಸಮಯದಲ್ಲಿ ಎಲ್ಲರೂ ಜಾಗರೂಕರಾಗಿ ಇರಬೇಕು ಎಂದು ಅಮೇರಿಕ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.

ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣವನ್ನು ಭಾರತಕ್ಕೆ ಮರಳಿ ತರುತ್ತೇನೆ ಎಂಬ ವಾಗ್ದಾನದೊಂದಿಗೆ ನರೇಂದ್ರ ಮೋದಿಯವರು 2014ರ ಚುನಾವಣೆಯನ್ನು ಎದುರಿಸಿದ್ದರು. ದೇಶದ ಪ್ರತಿ ರಸ್ತೆಯನ್ನೂ ಚಿನ್ನದ ರಸ್ತೆಯಾಗಿ ಮಾರ್ಪಡಿಸುವಷ್ಟು ದುಡ್ಡು ಸ್ವಿಸ್ ಬ್ಯಾಂಕ್‌ನಲ್ಲಿದೆ ಎಂದು ಅವರ ಬೆಂಬಲಿಗರು ಭಾಷಣ ಮಾಡಿದ್ದರು. ದೇಶ ಮೋದಿಯ ಕೈಗೆ ಚುಕ್ಕಾಣಿಯನ್ನು ಕೊಟ್ಟಿತು. ಕಪ್ಪು ಹಣವನ್ನು ಸ್ವಿಸ್ ಬ್ಯಾಂಕ್‌ ನಿಂದ  ತಂದು ಭಾರತದ ಪ್ರತಿ ನಾಗರಿಕರಿಗೂ ಹಂಚುತ್ತಾರೆ ಎಂಬ ನಿರೀಕ್ಷೆಯಿಂದ ಕಾಯತೊಡಗಿತು. ಮುಂದಿನ 2 ವರ್ಷಗಳ ವರೆಗೆ ಮೌನವಾದ ಅವರು 2016ರಲ್ಲಿ ಮತ್ತೊಮ್ಮೆ ಕಪ್ಪು ಹಣದ ಬಗ್ಗೆ ಮಾತನಾಡಿದರು. ನೋಟ್ ಬ್ಯಾನ್ ಮಾಡುವ ಮೂಲಕ ದೇಶದೊಳಗಿರುವ ಎಲ್ಲ ಕಪ್ಪು ಹಣವನ್ನೂ ನಿರ್ನಾಮ ಮಾಡುತ್ತಿರುವುದಾಗಿ ಘೋಷಿಸಿದರು. ಇದೀಗ 11 ವರ್ಷಗಳೇ ಕಳೆದು ಹೋಗಿವೆ. 2010ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿದ್ದುದು ಬರೇ 8500  ಕೋಟಿ ರೂಪಾಯಿ. ಆದರೆ ಈಗ ಅದು 37600  ಕೋಟಿ ರೂಪಾಯಿಯಾಗಿ ಏರಿಕೆಯಾಗಿದೆ. ಇನ್ನೊಂದು ಕಡೆ ಬ್ಯಾನ್ ಮಾಡಲಾದ ನೋಟುಗಳ ಪೈಕಿ 99% ನೋಟುಗಳೂ ಮರಳಿ ಬ್ಯಾಂಕ್‌ಗೆ ಸೇರಿವೆ ಎಂದು ಆರ್‌ಬಿಐ ವರದಿಗಳೇ ಹೇಳುತ್ತವೆ. ಅಂದರೆ ನೋಟ್ ಬ್ಯಾನ್‌ನಿಂದ ಯಾವ ಪ್ರಯೋಜನವೂ ಆಗಿಲ್ಲ ಎಂದೇ ಅರ್ಥ. ಹಾಗಿದ್ದರೆ,

ಕಪ್ಪು ಹಣದ ಹೆಸರಲ್ಲಿ ದೇಶದ ನಾಗರಿಕರನ್ನು ನರೇಂದ್ರ ಮೋದಿ ವಂಚಿಸಿದ್ದಾರೆ ಎಂದೇ ಅರ್ಥವಲ್ಲವೇ? ಮನ್‌ಮೋಹನ್ ಸಿಂಗ್ ಅವಧಿಯಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ 8500 ಕೋಟಿಯಷ್ಟಿದ್ದ ದುಡ್ಡು ಈ 11  ವರ್ಷಗಳ ಅವಧಿಯಲ್ಲಿ 37600  ಕೋಟಿ ರೂಪಾಯಿಯಷ್ಟು ಏರಿಕೆಯಾಗಿದೆ ಎಂದಾದರೆ ಅದಕ್ಕೆ ಯಾರು ಹೊಣೆ? ಕನಿಷ್ಠ ಸ್ವಿಸ್ ಬ್ಯಾಂಕ್‌ನಿAದ ಹಣವನ್ನು ಹಿಂದಕ್ಕೆ ತರುವುದು ಬಿಡಿ, ಅಲ್ಲಿ ಭಾರತೀಯರು ಹಣ ಠೇವಣಿಯಾಗಿ ಇರಿಸದಂತೆ ಈ 11 ವರ್ಷಗಳಲ್ಲಿ ತಡೆಯಲೂ ನರೇಂದ್ರ ಮೋದಿಗೆ ಆಗಿಲ್ಲ ಎಂದಾದರೆ ಇವರು ದುರ್ಬಲರು ಎಂದೇ ಅರ್ಥ ಅಲ್ಲವೇ? ಕಪ್ಪು ಹಣದ ಹೆಸರಲ್ಲಿ ಈ ದೇಶದ ನಾಗರಿಕರನ್ನು ವಂಚಿಸಿದ ಮೋದಿಯವರು ಭಾರತೀಯರ ಕ್ಷಮೆ ಯಾಚಿಸಬೇಡವೇ? ಇದೇವೇಳೆ,

ತನ್ನ ನಾಗರಿಕರಿಗೆ ಅಮೇರಿಕ ನೀಡಿರುವ ಸೂಚನೆಯು ನರೇಂದ್ರ ಮೋದಿ ಸರಕಾರದ 11 ವರ್ಷಗಳ ಆಡಳಿತಕ್ಕೆ ನೀಡಿರುವ ಸರ್ಟಿಫಿಕೇಟ್ ಎಂದೇ ಹೇಳಬಹುದು. ಭಾರತದಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದು ಅಪಾಯಕಾರಿ, ಇಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳು ಆತಂಕಕಾರಿ ಮಟ್ಟದಲ್ಲಿದೆ ಎಂದು ಅದು ಬಹಿರಂಗ ಘೋಷಣೆ ಮಾಡಿದೆ. ಒಂದುಕಡೆ ನರೇಂದ್ರ ಮೋದಿ ಬೆಂಬಲಿಗರು ಇಸ್ರೇಲ್ ಮತ್ತು ಅಮೇರಿಕವನ್ನು ಬೆಂಬಲಿಸುತ್ತಾ ಮತ್ತು ಇರಾನನ್ನು ನಾಶವಾಗಬೇಕಾದ ರಾಷ್ಟ್ರ  ಎನ್ನುತ್ತಾ ವಾದಿಸುತ್ತಿರುವಾಗಲೇ ಅಮೇರಿಕದಿಂದ ಈ ಸರ್ಟಿಫಿಕೇಟ್ ಲಭ್ಯವಾಗಿದೆ. ಮಹಿಳೆಯರಿಗೆ ಸುರಕ್ಷಿತತೆಯನ್ನು ಖಾತರಿಪಡಿಸದ ಆಡಳಿತ ಮೋದಿಯವರದ್ದು ಎಂದು ಅಮೇರಿಕ ಪರೋಕ್ಷವಾಗಿ ಹೇಳಿಕೆ ನೀಡಿದಂತಾಗಿದೆ. ಇದೇ ಸಂದರ್ಭದಲ್ಲಿ,

ಎಪಿಸಿಆರ್ ಮತ್ತು ಕ್ವಿಲ್ ಫೌಂಡೇಶನ್ ಜಂಟಿಯಾಗಿ ಬಿಡುಗಡೆಗೊಳಿಸಿರುವ ವರದಿಯಲ್ಲೂ ಆತಂಕಕಾರಿ ಸಂಗತಿಗಳಿವೆ. ಕೇವಲ ಒಂದೇ ವರ್ಷದೊಳಗೆ ದ್ವೇಷಾಧಾರಿತ 947 ರಷ್ಟು ಪ್ರಕರಣಗಳು ಈ ದೇಶದಲ್ಲಿ ನಡೆದಿವೆ ಎಂಬುದು ನಿಜಕ್ಕೂ ಆಘಾತಕಾರಿ ಬೆಳವಣಿಗೆ. ಮುಸ್ಲಿಮ್ ದ್ವೇಷವನ್ನೇ ರಾಜಕೀಯ ಅಧಿಕಾರದ ಮೆಟ್ಟಿಲನ್ನಾಗಿ ಮಾಡಿಕೊಂಡಿರುವ ಬಿಜೆಪಿಯು ಈ ದೇಶಕ್ಕೆ ನೀಡಿರುವ ಕೊಡುಗೆ ಇದು ಎಂದೇ ಹೇಳಬೇಕು. ಅತ್ಯಾಚಾರಗಳಾಗಲಿ, ಅಪರಾಧ ಪ್ರಕರಣಗಳಾಗಲಿ ಎಲ್ಲವೂ ದ್ವೇಷ ಪ್ರಚಾರದ ಫಲಿತಾಂಶಗಳಾಗಿವೆ. ಮುಸ್ಲಿಮರನ್ನು ಹಿಂದೂ ಧರ್ಮದ ಶತ್ರುಗಳಂತೆ ಬಿಂಬಿಸುವುದರಿಂದ  ಬಿಜೆಪಿ ರಾಜಕೀಯ ಲಾಭವನ್ನೇನೋ ಪಡೆಯುತ್ತಿದೆ. ಆದರೆ, ಬಿಜೆಪಿಯ ಪ್ರಚೋದನೆಯಿಂದ ಪ್ರೇರಣೆ ಪಡೆದ ಬಿಸಿರಕ್ತದ ಯುವ ತಲೆಮಾರು ಮುಸ್ಲಿಮರ ಮೇಲೆ ಹಲ್ಲೆ ನಡೆಸಿ ಯಶಸ್ವಿಯಾದ ಧೈರ್ಯದಿಂದ ಇನ್ನಿತರ ಕ್ರಿಮಿನಲ್ ಕೃತ್ಯಗಳಿಗೂ ಧೈರ್ಯ ತೋರುತ್ತಾರೆ. ಆರಂಭದಲ್ಲಿ ಇಂಥ ಯುವಕರ ಗುರಿ ಮುಸ್ಲಿಮರೇ ಆಗಿದ್ದರೂ ಆ ಬಳಿಕ ಅವರು ತಮ್ಮ ಗಮನವನ್ನು ಇನ್ನಿತರ ಕಡೆಗಳಿಗೂ ಹರಿಸುತ್ತಾರೆ. ರಾಜಕಾರಣಿಗಳ ಪ್ರಭಾವ ಬಳಸಿ ಮುಸ್ಲಿಮ್ ಹಿಂಸೆಯ ಆರೋಪದಿಂದ ಸುಲಭದಲ್ಲೇ  ಹೊರಬರುವ ಸನ್ನಿವೇಶವು ಅವರನ್ನು ಹಫ್ತಾ ವಸೂಲಿ, ಬೆದರಿಕೆ, ಸುಪಾರಿ ಹತ್ಯೆಗಳಂಥ ಕ್ರಿಮಿನಲ್ ಕೃತ್ಯಗಳಲ್ಲೂ ಭಾಗಿಯಾಗುವಂತೆ ಮಾಡುತ್ತಿದೆ. ನಿಧಾನಕ್ಕೆ ಇಂಥವರು ಆಯಾ ಊರಿನ ಡಾನ್‌ಗಳಂತೆ ವರ್ತಿಸತೊಡಗುತ್ತಾರೆ. ಅಪರಾಧ ಕೃತ್ಯಗಳಲ್ಲಿ ಸಹಜವೆಂಬAತೆ ಭಾಗಿಯಾಗತೊಡಗುತ್ತಾರೆ. ಹೆಣ್ಣಿನ ಅಪಹರಣ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರಗಳಂಥ ಕೃತ್ಯಗಳಲ್ಲೂ ಇವರು ಭಾಗಿಯಾಗುತ್ತಾರೆ. ಅಂದಹಾಗೆ,

ನಿರ್ದಿಷ್ಟ ಉದ್ಯೋಗ ಇಲ್ಲದ ಇವರಿಗೆ ಆದಾಯ ಮೂಲವಾಗಿ ಇವುಗಳಲ್ಲಿ ಭಾಗಿಯಾಗಲೇಬೇಕಾದ ಅನಿವಾರ್ಯತೆಯೂ ಎದುರಾಗುತ್ತದೆ. ಇಂಥವರನ್ನೇ ಈ ದ್ವೇಷ ರಾಜಕೀಯದ ಮಂದಿ ತಮ್ಮ ಲಾಭಕ್ಕಾಗಿ ಆಗಾಗ್ಗೆ ಬಳಸಿಕೊಳ್ಳುತ್ತಾ ಇರುತ್ತಾರೆ. ಮಾತ್ರವಲ್ಲ, ಇವರನ್ನು ಸಾಕುವುದು ಕಷ್ಟ ಎಂದು ಅನಿಸಿದಾಗ ಕೈ ಕೊಡುತ್ತಾರೆ. ನಿಜವಾಗಿ,

ಒಂಟಿ ಮಹಿಳೆಯರು ಪ್ರಯಾಣಿಸಲಾಗದ ದೇಶ ಎಂದು ಟ್ರಂಪ್ ಸರಕಾರ ಭಾರತವನ್ನು ಅವಮಾನಿಸಿರುವುದರ ಸಂಪೂರ್ಣ ಹೊಣೆಯನ್ನು ಮೋದಿ ಸರಕಾರವೇ ಹೊತ್ತುಕೊಳ್ಳಬೇಕು. ಹೆಣ್ಣನ್ನು ದೇವತೆ ಎಂದು ಗುರುತಿಸುವ ದೇಶದಲ್ಲಿ ಹೆಣ್ಣು ಸುರಕ್ಷಿತವಲ್ಲ ಎಂದು ಟ್ರಂಪ್ ಸರಕಾರ ಘೋಷಿಸಿರುವುದು 140 ಕೋಟಿ ಭಾರತೀಯರಿಗೆ ಮಾಡಲಾದ ಅವಮಾನ. ಇಂಥದ್ದೊಂದು  ಅವಮಾನಕರ ಪರಿಸ್ಥಿತಿ ದೇಶದಲ್ಲಿ ಯಾಕಿದೆ ಎಂಬುದನ್ನು ದೇಶದ ನಾಗರಿಕರು ಅವಲೋಕನ ನಡೆಸಬೇಕು. ಬಿಜೆಪಿ ತನ್ನ ರಾಜಕೀಯ ಅಧಿಕಾರಕ್ಕೆ ನೆಟ್ಟು ಬೆಳೆಸಿದ ಮುಸ್ಲಿಮ್ ದ್ವೇಷಕ್ಕೆ ಇದರಲ್ಲಿ ಎಷ್ಟು ಪಾತ್ರ ಇದೆ ಎಂಬುದಾಗಿಯೂ ವಿಶ್ಲೇಷಣೆ ನಡೆಸಬೇಕು.

ನೀವು ಒಂದು ಬಾರಿ ಜನರಿಗೆ ದ್ವೇಷಿಸಲು ಕಲಿಸಿದರೆ ಆ ಬಳಿಕ ಅವರು ನೀವು ಸೂಚಿಸಿದವರನ್ನೇ ದ್ವೇಷಿಸುವುದಲ್ಲ, ನೀವು ಪ್ರೀತಿಸಬೇಕು ಎಂದವರನ್ನೂ ದ್ವೇಷಿಸತೊಡಗುತ್ತಾರೆ. ದ್ವೇಷ ಎಂಬುದು ಜನರನ್ನು ಕ್ರಿಮಿನಲ್ ಕೃತ್ಯದತ್ತ ಕೊಂಡೊಯ್ಯುವ ಅಫೀಮು. ಒಮ್ಮೆ ಈ ಅಫೀಮನ್ನು ತಿನ್ನಿಸಿದರೆ ಆ ಬಳಿಕ ಅದರ ಅಡ್ಡಪರಿಣಾಮದಿಂದ ಹೆಣ್ಣೂ ಸುರಕ್ಷಿತಳಲ್ಲ. ದೇಶವೂ ಸುರಕ್ಷಿತವಲ್ಲ. ಎಪಿಸಿಆರ್ ವರದಿಗೆ ಮತ್ತು ಅಮೇರಿಕದ ಘೋಷಣೆಗೆ ಈ ಅಫೀಮು ತಿಂದವರು ಮತ್ತು ತಿನ್ನಿಸಿದವರೇ ನೇರ ಹೊಣೆ.

Wednesday, 18 June 2025

ಶರೀಫ್ ಸಾಬ್‌ರನ್ನು ಸ್ಮರಿಸುತ್ತಾ...




ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯ ಘಟಕದ ಸಲಹಾ ಸಮಿತಿಯ ಸದಸ್ಯರಾಗಿ, ಸನ್ಮಾರ್ಗ, ಅನುಪಮ ಮತ್ತು ಶಾಂತಿ ಪ್ರಕಾಶನಗಳ ಸ್ಥಾಪನೆಯಲ್ಲಿ ಬಹುಮುಖ್ಯ ಪಾತ್ರಧಾರಿಯಾಗಿ, ಹಿರಾ ಸಹಿತ ವಿವಿಧ ಶಿಕ್ಷಣ ಸಂಸ್ಥೆಗಳ ರೂವಾರಿಯಾಗಿ, ಜಮಾಅತ್ ಮಂಗಳೂರು ಸ್ಥಾನೀಯ ಘಟಕವನ್ನು 2 ದಶಕಗಳ ಕಾಲ ಮುನ್ನಡೆಸಿ, ಬಡ್ಡಿರಹಿತ ಬ್ಯಾಂಕಿಂಗ್  ವ್ಯವಸ್ಥೆಯಾದ ಕಾರುಣ್ಯದ ಬೆನ್ನೆಲುಬಾಗಿ ಮತ್ತು ಹತ್ತು ಹಲವು ಬಡವರು ಮತ್ತು ದುರ್ಬಲರಿಗೆ ಆಸರೆಯಾಗಿದ್ದ ಶರೀಫ್ ಸಾಬ್ ಅವರು ಪತ್ರಕರ್ತರೂ ಆಗಿರಲಿಲ್ಲ. ಪದವಿಗಳ ಮೇಲೆ ಪದವಿಗಳನ್ನು ಪಡೆದ ಶಿಕ್ಷಣ ತಜ್ಞರೂ ಆಗಿರಲಿಲ್ಲ. ಹಲವು ಕೃತಿಗಳನ್ನು ರಚಿಸಿದ ಸಾಹಿತಿಯೂ ಆಗಿರಲಿಲ್ಲ. ಬಿರುದಾಂಕಿತ ಆರ್ಥಿಕ ತಜ್ಞರೂ ಆಗಿರಲಿಲ್ಲ. ಆದ್ದರಿಂದಲೇ ಅವರ ಸಾಧನೆ ಮಹತ್ವದ್ದಾಗುತ್ತದೆ. 85 ವರ್ಷಗಳ ತುಂಬು ಜೀವನವನ್ನು ಸವೆಸಿ ಅವರು ಇಹಲೋಕಕ್ಕೆ ವಿದಾಯ ಕೋರಿ ಹೊರಟು ಹೋಗುವಾಗ ಈ ಮೇಲೆ ಉಲ್ಲೇಖಿತವಾದವುಗಳ ಹೊರತಾಗಿ ಅವರ ಖಾತೆಗೆ ಸೇರಿಸುವುದಕ್ಕೆ ಇನ್ನೂ ಅನೇಕ ಸಂಗತಿಗಳಿವೆ.

ಒಮ್ಮೆ ಅವರು ಸನ್ಮಾರ್ಗ ಕಚೇರಿಯಾದ ಹಿದಾಯತ್ ಸೆಂಟರ್‌ನ ಕೂಗಳತೆಯ ದೂರದಲ್ಲಿರುವ ಕಚ್ಚೀ ಮೇಮನ್ ಮಸೀದಿಯಲ್ಲಿ ನಮಾಜ್  ನಿರ್ವಹಿಸಿ ಕಚೇರಿಗೆ ಬಂದು ಸಿಬಂದಿಯನ್ನು ಕರೆದರು. ನಾನು ಮಸೀದಿ ಪಕ್ಕದ ಬಾಂಬೆ ಹೊಟೇಲ್‌ಗೆ ಹೋಗಿದ್ದೆ. ಹೊರ ಬರುವಾಗ ಒಬ್ಬರು ಹೊಟೇಲ್ ಹೊರಗಡೆ ನಿಂತಿದ್ರು. ಹಸಿವಾಗ್ತಾ ಇದೆ ಎಂದರು. ನಾನು ಅನುಮಾನದಿಂದ ಸೀದಾ ಬಂದೆ. ಆದರೆ, ನನಗೀಗ ಆ ವ್ಯಕ್ತಿಯ ಹಸಿವು ನಿಜವೂ ಆಗಿರಬಹುದು ಎಂದು ಅನಿಸ್ತಾ ಇದೆ. ಆದ್ದರಿಂದ ನೀವೊಂದು ಕೆಲಸ ಮಾಡಬೇಕು. ಆ ವ್ಯಕ್ತಿಗೆ ಊಟ ಕೊಟ್ಟು ಮತ್ತು ಕಿಸೆಗೊಂದಿಷ್ಟು ಹಣ ಹಾಕಿ ಬರಬೇಕು ಎಂದು ಹೇಳಿ ದುಡ್ಡು ಕೊಟ್ಟರು. ವ್ಯಕ್ತಿ ಇಂತಿಂಥ  ಬಣ್ಣದ ಶರ್ಟ್ ಮತ್ತು ಲುಂಗಿ ಉಟ್ಟಿದ್ದಾರೆ ಎಂದೂ ಹೇಳಿದರು. ನಿಜವಾಗಿ,

ಹಸಿದವರಿಗೆ ಉಣಿಸುವವರಿಗೇನೂ ನಮ್ಮಲ್ಲಿ ಕಡಿಮೆ ಇಲ್ಲ. ಆದರೆ ಹಸಿದವನನ್ನು ಆ ಹೊಟೇಲ್‌ನಿಂದ ಕಚೇರಿಯವರೆಗೆ ಮನಸೊಳಗೆ ತುಂಬಿಕೊಂಡು  ಪಾಪಭಾವದಿಂದ ತಳಮಳಗೊಳ್ಳುವವರು ಕಡಿಮೆ. ಇದಕ್ಕೆ ತಾಯಿ ಹೃದಯ ಅನ್ನುತ್ತೇವೆ. ಆ ವ್ಯಕ್ತಿಗೆ ಇವರು ಉಣಿಸದೇ ಇರುತ್ತಿದ್ದರೆ ಅಪರಾಧಿಯೇನೂ ಆಗುತ್ತಿರಲಿಲ್ಲ. ಯಾಕೆಂದರೆ, ಹೀಗೆ ಹಸಿವು ಎಂದು ಹೇಳಿ ಯಾಮಾರಿಸುವವರೇ ಇವತ್ತು ಹೆಚ್ಚಿದ್ದಾರೆ ಮತ್ತು ಆ ವ್ಯಕ್ತಿ ಶರೀಫ್ ಸಾಬ್‌ರಿಗೆ ಪರಿಚಿತರೂ ಅಲ್ಲ. ಕುಟುಂಬಸ್ತರೂ ಅಲ್ಲ. ಆದ್ದರಿಂದ ಆ ವ್ಯಕ್ತಿಯನ್ನು ಅಲ್ಲೇ  ಮರೆತು ಮುಂದೆ ಹೋಗಬಹುದಿತ್ತು. ಆದರೆ ತಾಯಿ ಮನಸ್ಸು ಅದನ್ನು ಒಪ್ಪಿಕೊಳ್ಳಲಿಲ್ಲ. ಅಂದಹಾಗೆ,

ಸನ್ಮಾರ್ಗ ಟ್ರಸ್ಟ್ ಗೆ  ದೀರ್ಘಕಾಲ ಚೇರ್ಮನ್ ಆಗಿದ್ದವರು ಶರೀಫ್ ಸಾಬ್. 1978 ಎಪ್ರಿಲ್ 23ರಂದು ಸನ್ಮಾರ್ಗ ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಗೊಳ್ಳುವಾಗ ಇಬ್ರಾಹೀಮ್ ಸಈದ್ ಸಂಪಾದಕರಾಗಿದ್ದರೆ, ಈ ಶರೀಫ್ ಸಾಬ್ ಅದರ ಬೆವರಾಗಿದ್ದರು. ಮುಸ್ಲಿಮರಲ್ಲಿ ಮುಖ್ಯವಾಗಿ ಕರಾವಳಿಯ ಮುಸ್ಲಿಮರಲ್ಲಿ ಕನ್ನಡ ಎಂಬುದು ‘ಅನ್ಯ’ ಭಾಷೆಯಾಗಿ ಮತ್ತು ಒಂದು ರೀತಿಯಲ್ಲಿ ಅಲಿಖಿತ ಬಹಿಷ್ಕಾರಕ್ಕೆ ಒಳಗಾದ ಭಾಷೆಯಾಗಿ ಮಾರ್ಪಟ್ಟಿದ್ದ ವೇಳೆ ಅದೇ ಕನ್ನಡದಲ್ಲಿ ಪತ್ರಿಕೆಯನ್ನು ಪ್ರಾರಂಭಿಸುವುದೆಂದರೆ ಆಕಾಶಕ್ಕೆ ಏಣಿ ಇಟ್ಟಷ್ಟೇ ಸವಾಲಿನದ್ದು. ಒಂದು ಕಡೆ ಆರ್ಥಿಕ ಸವಾಲು ಎದುರಿದ್ದರೆ, ಕನ್ನಡದ ಬಗ್ಗೆ ಮುಸ್ಲಿಮರಲ್ಲಿರುವ ನಕಾರಾತ್ಮಕ ಭಾವ ಇನ್ನೊಂದು ಕಡೆಯಿತ್ತು. ಇದರ ಜೊತೆಗೆ ಕರಾವಳಿಯಿಂದ ಹೊರಬಂದು ರಾಜ್ಯದಾದ್ಯಂತ ಕನ್ನಡಿಗರಿಗೆ ಈ ಪತ್ರಿಕೆಯನ್ನು ತಲುಪಿಸಬೇಕಿತ್ತು. ಇಸ್ಲಾಮ್ ಮತ್ತು ಮುಸ್ಲಿಮರ ಬಗ್ಗೆ ಜನರಲ್ಲಿದ್ದ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಅವರಲ್ಲಿರುವ ತಪ್ಪು ಭಾವನೆಗಳನ್ನು ಹೋಗಲಾಡಿಸುವುದು ಪತ್ರಿಕೆಯ ಗುರಿಯಾಗಿತ್ತು. ಇದರ ಜೊತೆಗೇ ಇಸ್ಲಾಮ್‌ನ ಹೆಸರಲ್ಲಿ ನಡೆಯುತ್ತಿದ್ದ ಹತ್ತು-ಹಲವು ತಪ್ಪು ಆಚರಣೆಗಳನ್ನು ತಿದ್ದುವುದೂ ಪತ್ರಿಕೆಯ ಉದ್ದೇಶವಾಗಿತ್ತು. ಆದರೆ,

ಶರೀಫ್ ಸಾಬ್‌ರ ನೇತೃತ್ವದಲ್ಲಿದ್ದ ಉತ್ಸಾಹಿ ತಂಡ ಬರಹದ ಹೊಣೆಯನ್ನು ಸಂಪಾದಕೀಯ ಮಂಡಳಿಗೆ ವಹಿಸಿಕೊಟ್ಟು ಪತ್ರಿಕೆಯ ಪ್ರಸಾರ ಮತ್ತು ಆರ್ಥಿಕ ಹೊಣೆಗಾರಿಕೆಯನ್ನು ಸ್ವಯಂ ವಹಿಸಿಕೊಂಡಿತು. ಈ ಪತ್ರಿಕೆಯನ್ನು ರಾಜ್ಯದ ಮೂಲೆಮೂಲೆಗೂ ತಲುಪಿಸುವುದಕ್ಕಾಗಿ ಊರೂರು ಸುತ್ತಿತು. ಒಂದು ಕಡೆ ಆರ್ಥಿಕ ಸಂಕಷ್ಟ ಎದುರಾಗದಂತೆ ನೋಡಿಕೊಳ್ಳುವುದು ಮತ್ತು ಇನ್ನೊಂದು ಕಡೆ ಪತ್ರಿಕೆ ನಿರಂತರ ಪ್ರಕಟವಾಗುವಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಿತು. ಸನ್ಮಾರ್ಗ ಕಳೆದ 48 ವರ್ಷಗಳಿಂದ ನಿರಂತರವಾಗಿ ಪ್ರಕಟವಾಗುತ್ತಾ ಬಂದಿದ್ದರೆ ಅದರ ಹಿಂದೆ ಶರೀಫ್ ಸಾಬ್‌ರ ದೂರದೃಷ್ಟಿ, ಬುದ್ಧಿವಂತಿಕೆ, ತಂತ್ರಗಾರಿಕೆ ಮತ್ತು ಪ್ರಾಮಾಣಿಕತೆಗೆ ಬಹುದೊಡ್ಡ ಪಾತ್ರವಿದೆ. ಅವರು ಹಿದಾಯತ್ ಸೆಂಟರನ್ನು ಅತಿಯಾಗಿ ಪ್ರೀತಿಸಿದ್ದರು. ವೇತನ ಆಗಿದೆಯೇ ಎಂದು ಸಿಬಂದಿಗಳಲ್ಲಿ ವಿಚಾರಿಸುವುದು ರೂಢಿಯಾಗಿತ್ತು. ಯಾವುದೇ ಸಂಸ್ಥೆ ನಿಂತ ನೀರಾಗಬಾರದು ಎಂಬುದು ಅವರ ನೀತಿಯಾಗಿತ್ತು. ಆದ್ದರಿಂದಲೇ,

ಆಧುನಿಕ ತಂತ್ರಜ್ಞಾನಗಳನ್ನು ಬಳಸುವಲ್ಲೂ ಮತ್ತು ಅದರ ಉಪಯೋಗದಿಂದ ಸಂಸ್ಥೆಯನ್ನು ವಿಸ್ತರಿಸುವಲ್ಲೂ ಅವರು ಮುಂಚೂಣಿ ವಕ್ತಾರರಾದರು. ಶಾಂತಿ ಪ್ರಕಾಶನದ ಪುಸ್ತಕಗಳನ್ನು ಊರೂರು ತಲುಪಿಸುವುದಕ್ಕಾಗಿ ಮೊಬೈಲ್ ಪುಸ್ತಕಾಲಯದ ಪರ ನಿಂತರು. ಸಣ್ಣದೊಂದು ಕಚೇರಿಗೆ ಸೀಮಿತಗೊಂಡಿದ್ದ ಬಡ್ಡಿರಹಿತ ಬ್ಯಾಂಕಿಂಗ್  ವ್ಯವಸ್ಥೆಗೆ ವಿಸ್ಟ್ರತ ರೂಪವನ್ನು ಕೊಟ್ಟು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಆಕರ್ಷಿಸುವುದರ ಪರ ನಿಂತರು. ಸಣ್ಣ ಕಟ್ಟಡದಲ್ಲಿ ಆರಂಭವಾಗಿದ್ದ ಹಿರಾ ಕಾಲೇಜನ್ನು ದ.ಕ. ಜಿಲ್ಲೆಯಲ್ಲೇ  ಮಹತ್ವದ ಹಿರಾ ಸಮೂಹ ಶಿಕ್ಷಣ ಸಂಸ್ಥೆಯಾಗಿ ಮಾರ್ಪಡಿಸುವಲ್ಲಿ ಅವರ ದೂರದೃಷ್ಟಿ ಮತ್ತು ತಂತ್ರಗಾರಿಕೆಯ ಪಾತ್ರ ಬಹಳ ಹಿರಿದು. 

2019ರವರೆಗೆ ಬರೇ ಮುದ್ರಣ ಮಾಧ್ಯಮವಾಗಿಯಷ್ಟೇ ಗುರುತಿಸಿಕೊಂಡಿದ್ದ ಸನ್ಮಾರ್ಗವನ್ನು ಡಿಜಿಟಲ್ ಯುಗಕ್ಕೆ ಪರಿವರ್ತಿಸುವಲ್ಲೂ ಶರೀಫ್ ಸಾಬ್ ಮುಂಚೂಣಿ ಪಾತ್ರ ನಿರ್ವಹಿಸಿದರು. 2019ರಲ್ಲಿ ಸನ್ಮಾರ್ಗ ವೆಬ್‌ಪೋರ್ಟಲ್ ಪ್ರಾರಂಭಿಸಿದ್ದಲ್ಲದೇ, 2020ರಲ್ಲಿ ಸನ್ಮಾರ್ಗ ನ್ಯೂಸ್ ಚಾನೆಲನ್ನೂ ಆರಂಭಿಸಲಾಯಿತು. ಎರಡು ವರ್ಷಗಳಲ್ಲಿ ತೆಗೆದುಕೊಳ್ಳಲಾದ ಈ ಎರಡು ಮಹತ್ವದ ನಿರ್ಧಾರಗಳ ಹಿಂದೆ ಶರೀಫ್ ಸಾಬ್ ಇದ್ದರು. ನಿರಂತರ ಸಲಹೆ ಮತ್ತು ಮಾರ್ಗದರ್ಶನಗಳ ಮೂಲಕ ಈ ಎರಡನ್ನೂ ಬೆಳೆಸುವಲ್ಲಿ ಅವರು ಕೊಡುಗೆಯನ್ನು ನೀಡಿದರು. ಇದರ ಜೊತೆಗೇ ಜಿಲ್ಲೆಯಲ್ಲಿ ಹತ್ತಕ್ಕಿಂತಲೂ ಅಧಿಕ ಶಿಕ್ಷಣ ಸಂಸ್ಥೆಗಳ ಪ್ರಾರಂಭಕ್ಕೂ ಮತ್ತು ಯಶಸ್ವಿ ನಿರ್ವಹಣೆಗೂ ಮಾರ್ಗದರ್ಶಕರಾದರು. ಅಂದಹಾಗೆ,

ಮುಹಮ್ಮದ್ ಷರೀಫ್  ಎಂಬ ಸಾಮಾನ್ಯ ವ್ಯಕ್ತಿ ಈ ಮಟ್ಟದಲ್ಲಿ ಅಸಾಮಾನ್ಯ ವ್ಯಕ್ತಿಯಾಗಿ ಬೆಳೆದಿರುವುದರ ಹಿಂದೆ ಅವರ ಓದಿನ ಪಾತ್ರ ಇದೆ. ಬಡತನ ಕಲಿಸಿದ ಪಾಠ ಇದೆ. ಉದ್ಯಮಕ್ಕೆ ಕೈ ಹಾಕುವ ಮೂಲಕ ಪಡೆದ ಸಾಹಸ ಪ್ರವೃತ್ತಿಯ ಅನುಭವವಿದೆ. ಮಗನನ್ನೇ ಕಳೆದುಕೊಳ್ಳುವಷ್ಟು ಅತೀವ ದುಃಖದ ಮತ್ತು ಮಕ್ಕಳು ಸ್ಥಿತಿವಂತರಾಗಿ ಪಡೆದ ಸುಖದ ಅನುಭವವೂ ಇದೆ. ಅವರು ಬಡತನದಲ್ಲಿ ಪಡೆದ ಪಾಠ ಅವರನ್ನು ಎಷ್ಟು ಉದಾರಿಯಾಗಿಸಿತೆಂದರೆ, ಬಳಿಕ ಅವರಿಂದ ಆರ್ಥಿಕ ಲಾಭ ಪಡೆದವರ ಸಂಖ್ಯೆ ಸಾಕಷ್ಟಿದೆ. ಅವರು ಕಿರಿಯರೊಂದಿಗೆ ಕಿರಿಯರಾಗಿ ಅಭಿಪ್ರಾಯಗಳನ್ನು ಆಲಿಸುತ್ತಿದ್ದರು. ಹಿರಿಯ ಗುಂಪಿನಲ್ಲಿ ಅಷ್ಟೇ ಗಂಭೀರವಾಗಿಯೂ ನಡಕೊಳ್ಳುತ್ತಿದ್ದರು ಮತ್ತು ವ್ಯಕ್ತವಾದ ಅಭಿಪ್ರಾಯಗಳಲ್ಲಿ ಅತ್ಯುತ್ತಮವಾದುದನ್ನು ಹೆಕ್ಕಿಕೊಳ್ಳುವ ಮತ್ತು ಅದರ ಜಾರಿಗಾಗಿ ಕೊನೆತನಕವೂ ಶ್ರಮಪಡುವ ವಿಶೇಷ ಪ್ರತಿಭೆ ಅವರಲ್ಲಿತ್ತು. ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ ನ  ಚೇರ್ಮನ್ ಆಗಿದ್ದ ಕಾಲದಲ್ಲೂ ಮತ್ತು ಆ ಬಳಿಕವೂ ತನ್ನ ನಿಲುವನ್ನು ಸಂಪಾದಕೀಯ ಮಂಡಳಿಯ ಮೇಲೆ ಹೇರಿದವರಲ್ಲ. ಅದೇವೇಳೆ, ಸನ್ಮಾರ್ಗದ ಮೇಲೆ ಪ್ರಕರಣಗಳು ದಾಖಲಾದಾಗ ವಕೀಲರನ್ನು ನಿಯುಕ್ತಿಗೊಳಿಸುವುದರಿಂದ ಹಿಡಿದು ನ್ಯಾಯಾಲಯದ ವರೆಗೆ ಪ್ರತಿ ಹಂತದಲ್ಲೂ ಸಂಪಾದಕೀಯ ಮಂಡಳಿಯ ಜೊತೆಗೇ ಇದ್ದರು.

 ಅವರೋರ್ವ ಅತ್ಯುತ್ತಮ ನಾಯಕ, ಅತ್ಯುತ್ತಮ ಸಂಘಟಕ, ಅತ್ಯುತ್ತಮ ಪ್ರತಿಭಾ ಪೋಷಕರಾಗಿದ್ದರು. 85 ವರ್ಷಗಳ ತುಂಬು ಜೀವನವನ್ನು ನಡೆಸಿ ವಿದಾಯ ಕೋರಿದಾಗ ನೆನಪಿಸಿಕೊಳ್ಳುವುದಕ್ಕೆ ಅವರು ಧಾರಾಳ ಒಳಿತುಗಳನ್ನು ಉಳಿಸಿ ಹೋಗಿದ್ದಾರೆ.  ಅಲ್ಲಾಹನು ಶರೀಫ್ ಸಾಬ್‌ರಿಗೆ ಸ್ವರ್ಗವನ್ನು ದಯಪಾಲಿಸಲಿ. ಆಮೀನ್.