Wednesday, 28 October 2020
ಇಂಥ ಪೋಸ್ಟರನ್ನು ಮಸೀದಿ, ಮದ್ರಸಗಳ ಎದುರು ತೂಗು ಹಾಕೋಣ..
Monday, 19 October 2020
ಒಂದಾನೊಂದು ಕಾಲದಲ್ಲಿ ಕಾವಲುನಾಯಿ ಇತ್ತು..
ಸನ್ಮಾರ್ಗ ಸಂಪಾದಕೀಯ
ಮಾಧ್ಯಮಗಳಿಗೆ ಸಂಬಂಧಿಸಿ ಕಳೆದವಾರ ಎರಡು ಪ್ರಮುಖ ಬೆಳವಣಿಗೆಗಳು ನಡೆದಿವೆ. ಒಂದು- ತಬ್ಲೀಗಿ ಜಮಾಅತ್ಗೆ ಸಂಬಂಧಿಸಿದ್ದರೆ, ಇನ್ನೊಂದು- ಟಿಆರ್ಪಿಗೆ ಸಂಬಂಧಿಸಿದ್ದು. ಈ ಎರಡರ ಕೇಂದ್ರ ಬಿಂದುವೂ ಮಾಧ್ಯಮವೇ.ಪ್ರಜಾತಂತ್ರದ ಕಾವಲುನಾಯಿ ಎಂಬ ಗೌರವದಿಂದ ಆಡಳಿತಗಾರರ ಸಾಕು ನಾಯಿ ಎಂಬ ಅವಮಾನದೆಡೆಗೆ ಭಾರತೀಯ ಮಾಧ್ಯಮಗಳು ಸಾಗಿರುವುದು ಅತ್ಯಂತ ವಿಷಾದಕರ, ಆಘಾತಕಾರಿ ಮತ್ತು ದುಃಖಕರ ಸಂಗತಿ. ಜನಾಕ್ರೋಶವೇ ಇದನ್ನು ಬದಲಾಯಿಸುವುದಕ್ಕಿರುವ ಸೂಕ್ತ ದಾರಿ.
Saturday, 17 October 2020
ದಣಿಗಳ ಬೆನ್ನು ಮಾಲೀಶು ಮಾಡುವ ಕಾನೂನು
Thursday, 1 October 2020
ಇದರಾಚೆಗೆ ಏನೂ ಹೇಳಬೇಕಿಲ್ಲ
ಯಾವುದೇ ಹೋರಾಟವನ್ನು ದಮನಿಸುವುದಕ್ಕೆ ಪ್ರಭುತ್ವ ಸಾಮಾನ್ಯವಾಗಿ ಎರಡು ತಂತ್ರಗಳನ್ನು ಹೆಣೆಯುತ್ತದೆ.
Thursday, 10 September 2020
ಅವಮಾನಿತನಾಗಬೇಕಾದವ ಆರಾಮವಾಗಿ ಇರುವಂಥ ಸ್ಥಿತಿ ಏಕೆ ನಿರ್ಮಾಣವಾಯಿತು?
ಬೆಂಗಳೂರು ಮತ್ತು ಶೃಂಗೇರಿಯಲ್ಲಿ ಎರಡು ದಿನಗಳ ಅಂತರದಲ್ಲಿ ಎರಡು ಘಟನೆಗಳು ನಡೆದಿವೆ. ಈ ಎರಡೂ ಘಟನೆಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸಿದ ಪ್ರತಿಕ್ರಿಯೆ ಏಕಪ್ರಕಾರವಾಗಿರಲಿಲ್ಲ. ಬೆಂಗಳೂರು ಮತ್ತು ಶೃಂಗೇರಿ ಘಟನೆಗಳಿಗೆ ಮೂಲ ಕಾರಣ ನವೀನ್ ಮತ್ತು ಮಿಲಿಂದ್. ಪ್ರವಾದಿ ಮುಹಮ್ಮದ್ರನ್ನು(ಸ) ಅವಮಾನಿಸಿ ಸಾಮಾಜಿಕ ಜಾಲತಾಣದಲ್ಲಿ ನವೀನ್ ಒಂದು ಪೋಸ್ಟ್ ಹಾಕುತ್ತಾನೆ. ನಡೆದಿರುವುದು ಇಷ್ಟೇ. ಆದರೆ ಆ ಬಳಿಕದಿಂದ ಇವತ್ತಿನ ವರೆಗೆ ಚರ್ಚೆಯಲ್ಲಿರುವುದು ನವೀನನಲ್ಲ, ಮುಸ್ಲಿಮ್ ಸಮುದಾಯ. ಪೊಲೀಸರು ಬಂಧಿಸುತ್ತಿರುವುದು ಮುಸ್ಲಿಮರನ್ನು. ಸರಕಾರವು ಆಸ್ತಿ ಜಪ್ತಿ ಮಾಡಲು ಹೊರಟಿರುವುದು ಮುಸ್ಲಿಮರದ್ದು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಖಳನಾಯಕರಂತೆ ಬಿಂಬಿಸುತ್ತಿರುವುದೂ ಮುಸ್ಲಿಮರನ್ನು. ಒಂದೇ ಒಂದು ಪೋಸ್ಟ್ ಒಂಡಿದೀ ಸಮುದಾಯವನ್ನು ತಲೆ ತಗ್ಗಿಸುವಂತೆ ಮಾಡಿದ್ದರೆ ಅದರ ಹೊಣೆಯನ್ನು ಯಾರು ಹೊರಬೇಕು? ನಿಜವಾಗಿ ತಲೆ ತಗ್ಗಿಸಬೇಕಾದದ್ದು ನವೀನ್. ಕ್ಷಮೆ ಕೇಳಬೇಕಾದದ್ದೂ ಆತನೇ. ಆದರೆ ಪರಿಸ್ಥಿತಿ ತದ್ವಿರುದ್ಧವಾಗಿರುವುದಕ್ಕೆ ಯಾರು ಕಾರಣ? ಇದನ್ನು ಸರಿಪಡಿಸುವುದು ಹೇಗೆ?
ಶೃಂಗೇರಿಯಲ್ಲಿ ಶಂಕಾರಾಚಾರ್ಯರ ಪುತ್ಥಳಿಗೆ ಹಸಿರು ಧ್ವಜವನ್ನು ಹಾಕಲಾದ ಘಟನೆ ಬೆಳಕಿಗೆ ಬಂದ ತಕ್ಷಣ ಅದನ್ನು ಮುಸ್ಲಿಮರ ತಲೆಗೆ ಕಟ್ಟುವ ಪ್ರಯತ್ನವನ್ನು ಅಲ್ಲಿನ ಮಾಜಿ ಶಾಸಕರೇ ಮಾಡಿದ್ದಾರೆ. ಪೋಲೀಸರನ್ನು ಬೀದಿಯಲ್ಲಿ ನಿಲ್ಲಿಸಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಮಿಲಿಂದ್ನ ಬಂಧನವಾಗಿದೆ. ನಿಜವಾಗಿ, ಮಿಲಿಂದ್ನ ಬಂಧನದ ಬಳಿಕ ಮುಸ್ಲಿಮರ ಪ್ರತಿಕ್ರಿಯೆ ಏನು ಅನ್ನುವುದು ಬಹಳ ಮುಖ್ಯವಾಗಿತ್ತು. ಆ ಪ್ರತಿಕ್ರಿಯೆಯೇ ಮುಸ್ಲಿಮರನ್ನು ಅಳೆಯುವ ಮಾನದಂಡವಾಗಿತ್ತು. ಬೆಂಗಳೂರಿನಲ್ಲಿ ಕಾನೂನುಬಾಹಿರವಾಗಿ ನಡೆದುಕೊಂಡ ಮುಸ್ಲಿಮ್ ಯುವಕರ ವರ್ತನೆಯು ಶೃಂಗೇರಿ ಘಟನೆಯ ಸಂದರ್ಭದಲ್ಲಿ ಹಸಿಹಸಿಯಾಗಿತ್ತು. ಅಲ್ಲದೇ, ಮುಸ್ಲಿಮರೇ ಅಪರಾಧಿಗಳು ಎಂದು ಮಾಜಿ ಶಾಸಕರು ಮತ್ತು ಅವರ ಬೆಂಬಲಿಗರು ಷರಾ ಬರೆದು, ಬೆದರಿಕೆಯನ್ನೂ ಹಾಕಿದ್ದರು. ಆದರೆ, ಶೃಂಗೇರಿಯ ಮುಸ್ಲಿಮರು ಎಷ್ಟು ಬುದ್ಧಿವಂತಿಕೆಯಿಂದ ವರ್ತಿಸಿದರೆಂದರೆ, ಇವತ್ತಿಗೂ ಅಲ್ಲಿ ಮಿಲಿಂದ್ ಖಳನಾಯಕನೇ ಹೊರತು ಮುಸ್ಲಿಮರಲ್ಲ. ಒಂದು ಪತ್ರಿಕಾಗೋಷ್ಠಿಯನ್ನು ಕರೆದು ಮುಸ್ಲಿಮರು ಹೇಳಬೇಕಾದುದನ್ನೆಲ್ಲ ಹೇಳಿದರು. ಅಲ್ಲಿಗೆ ಮಾಜಿ ಶಾಸಕರ ಬಣ್ಣ ಬಯಲಾಯಿತು. ಇದು ಶಾಸಕರಿಗೆ ಮಾತ್ರ ಸಂಬಂಧಿಸಿದ ಸಂಗತಿ ಅಲ್ಲ. ಅವರನ್ನು ಬೆಂಬಲಿಸುವವರು, ಅವರ ಪರವಾಗಿ ನಿಲುವುಳ್ಳವರು ಮತ್ತು ಅವರು ಪ್ರತಿನಿಧಿಸುವ ಪಕ್ಷದ ಹಿತೈಷಿಗಳು... ಎಲ್ಲರ ಪಾಲಿಗೂ ಮುಜುಗರ ತಂದಿಕ್ಕಿದ ಪ್ರಕರಣ. ಆರೋಪಿ ಯಾರು ಎಂಬುದು ಬಯಲಾಗುವ ಮೊದಲೇ ಆರೋಪಿ ಇಂಥವನೇ ಮತ್ತು ಇಂತಿಂಥ ಧರ್ಮಕ್ಕೆ ಸೇರಿದವನೇ ಎಂದು ಕಡ್ಡಿ ಮುರಿದಂತೆ ಹೇಳುವುದು ಎಷ್ಟು ಸಮರ್ಥನೀಯ ಎಂಬ ಅವಲೋಕನಕ್ಕೆ ಅವರೆಲ್ಲರನ್ನೂ ಖಂಡಿತ ಈ ಪ್ರಕರಣ ಒಳಪಡಿಸಿರಬಹುದು. ರಾಜಕೀಯಕ್ಕಾಗಿ ಸಮಾಜದ ಆರೋಗ್ಯವನ್ನು ಕೆಡಿಸುವುದನ್ನು ನಾವೇಕೆ ಬೆಂಬಲಿಸಬೇಕು ಎಂಬ ಪ್ರಶ್ನೆ ಅವರೊಳಗೆ ಮೂಡಿರಬಹುದು. ಇಂಥದ್ದೊಂದು ಮುಜುಗರ ಅವರಲ್ಲಿ ಉಂಟಾಗಿದ್ದರೆ ಅದಕ್ಕೆ ಕಾರಣ ಮಿಲಿಂದ್ ಅಲ್ಲ, ಮುಸ್ಲಿಮರು. ಮಿಲಿಂದ್ ಅಥವಾ ನವೀನ್ ಒಂದು ದಾಳ ಮಾತ್ರ. ಇಂಥವರ ಸಂಖ್ಯೆ ಸಾಕಷ್ಟಿರಬಹುದು. ಇವರನ್ನು ಹೀರೋ ಮಾಡಬೇಕೇ ಅಥವಾ ಖಳರನ್ನಾಗಿ ಪರಿವರ್ತಿಸಬೇಕೇ ಎಂಬುದು ಪ್ರತಿಕ್ರಿಯಿಸುವವರ ಬುದ್ಧಿವಂತಿಕೆಯನ್ನು ಹೊಂದಿಕೊಂಡಿದೆ.
ನವೀನ್ ಅನ್ನುವ ಏಕ ವ್ಯಕ್ತಿ ನಾಲ್ವರು ಯುವಕರ ಸಾವಿಗೆ, ನೂರಾರು ಮಂದಿಯ ಬಂಧನಕ್ಕೆ ಮತ್ತು ಕೋಟ್ಯಂತರ ರೂಪಾಯಿಯ ಆಸ್ತಿ ಜಪ್ತಿಯ ಭೀತಿಯನ್ನು ತಂದೊಡ್ಡುವುದಕ್ಕೆ ಹೇಗೆ ಸಫಲನಾದ? ಇವತ್ತು ನವೀನ್ ಸುದ್ದಿಯು ಕೇಂದ್ರವಲ್ಲ. ಆತನ ಆಸ್ತಿಯ ಜಪ್ತಿಯೂ ಆಗಲ್ಲ. ಪುಟ್ಟದೊಂದು ಮೊತ್ರವನ್ನು ಪಾವತಿಸಿ ಆತ ಜಾಮೀನು ಪಡೆದು ಹೊರಬರಬಲ್ಲ. ಇಷ್ಟೇ ಸರಳವಾಗಿ ಜೈಲಿಗೆ ಹೋದ ಮುಸ್ಲಿಮ್ ಯುವಕರ ಬಗ್ಗೆ ಹೇಳುವುದಕ್ಕೆ ಸಾಧ್ಯವೇ? ಆ ಅರೆಕ್ಷಣದ ಆವೇಶಕ್ಕೆ ತೆರಬೇಕಾದ ಮೊತ್ತ ಎಷ್ಟು? ಬಂಧಿತ ಒಬ್ಬೊಬ್ಬ ವ್ಯಕ್ತಿಗೂ ಖರ್ಚು ಮಾಡಬೇಕಾದ ಹಣವೆಷ್ಟು? ಜೈಲಲ್ಲಿರುವವರ ಕುಟುಂಬ-ಪತ್ನಿ-ಮಕ್ಕಳು ಅನುಭವಿಸುತ್ತಿರುವ ಸಂಕಟಗಳ ಭಾರ ಎಷ್ಟು? ಈ ಬಂಧಿತರಿಗಾಗಿ ಖರ್ಚಾಗುವ ಲಕ್ಷಾಂತರ ರೂಪಾಯಿಗಳು, ಕಾನೂನು ಪ್ರಕ್ರಿಯೆ, ಕೋರ್ಟು-ಕಚೇರಿಯೆಂದು ವ್ಯಯವಾಗುವ ಮಾನವ ಶ್ರಮಗಳನ್ನು ಒಟ್ಟು ಸೇರಿಸಿದರೆ ಅದರ ಪ್ರಮಾಣ ಎಷ್ಟಾಗಬಹುದು? ಇವೆಲ್ಲ ಅನಿವಾರ್ಯವಾಗಿತ್ತೇ? ಪ್ರವಾದಿಯನ್ನು ಓರ್ವ ಅವಮಾನಿಸಿದರೆ, ಅದರ ಪರಿಣಾಮವನ್ನು ಎದುರಿಸಬೇಕಾಗಿರುವುದು ಅವಮಾನಿಸಿದವನೇ ಹೊರತು ಅವಮಾನಕ್ಕೊಳಗಾದವರಲ್ಲ. ಆದರೆ, ಪದೇ ಪದೇ ಈ ಸರಳ ಸತ್ಯಕ್ಕೆ ಸೋಲಾಗುತ್ತಿದೆ. ನಿಂದಿಸಿದವರು ಆರಾಮವಾಗಿಯೂ ಆರಾಮವಾಗಿ ಇರಬೇಕಾದವರು ಅವಮಾನಿತರಾಗಿಯೂ ಮತ್ತೆ ಮತ್ತೆ ಗುರುತಿಗೀಡಾಗುತ್ತಿದ್ದಾರೆ. ಇದೊಂದು ವೈಫಲ್ಯ ಮತ್ತು ಯಾವುದೇ ವೈಫಲ್ಯ ದೀರ್ಘಕಾಲ ವೈಫಲ್ಯವಾಗಿಯೇ ಮುಂದುವರಿಯುವುದು ಆ ಸಮುದಾಯದ ಪಾಲಿಗೆ ಅತ್ಯಂತ ಅಪಾಯಕಾರಿ. ಸದ್ಯ ಇಂಥದ್ದೊಂದು ನಿರ್ಣಾಯಕ ಸ್ಥಿತಿಯಲ್ಲಿ ಮುಸ್ಲಿಮ್ ಸಮುದಾಯ ಇದೆ. ಈ ಸಮುದಾಯವನ್ನು ಪ್ರಚೋದಿಸಿ, ಗಲಭೆಗೆ ಹಚ್ಚುವುದು ಸುಲಭ ಎಂಬ ಭಾವನೆ ಸಮಾಜಘಾತುಕ ಶಕ್ತಿಗಳಲ್ಲಿ ಬಲವಾಗತೊಡಗಿದೆ. ಶೃಂಗೇರಿ ಘಟನೆಯ ಹಿಂದೆ ಈ ಧೈರ್ಯವೇ ಕೆಲಸ ಮಾಡಿರುವಂತಿದೆ. ಮುಸ್ಲಿಮರನ್ನು ಪ್ರಚೋದಿಸುವುದು, ಬೀದಿಗಿಳಿಸುವುದು ಮತ್ತು ಒರಟಾಗಿ ವರ್ತಿಸುವಂತೆ ಬಲವಂತಪಡಿಸುವುದು ಈ ಸಮಾಜ ದ್ರೋಹಿ ಶಕ್ತಿಗಳ ಆರಂಭಿಕ ಹಂತ. ಅದರಲ್ಲಿ ಅವರು ಯಶಸ್ವಿಯಾಗತೊಡಗಿದಂತೆಯೇ ಎರಡನೇ ಹಂತ ಜಾರಿಗೆ ಬರುತ್ತದೆ. ಮುಸ್ಲಿಮರು ಹೀಗೆಯೇ ಎಂದು ಪದೇಪದೇ ಸಮಾಜಕ್ಕೆ ಸಂದೇಶವನ್ನು ಕೊಡುವುದು, ಮುಸ್ಲಿಮರು ಒರಟರು, ಅವರು ಕಾನೂನನ್ನು ಪಾಲಿಸದವರು ಎಂಬ ಭಾವ ಸಾರ್ವತ್ರಿಕವಾಗುವಂತೆ ನೋಡಿಕೊಳ್ಳುವುದು. ಇದು ಯಶಸ್ವಿಯಾಯಿತೆಂದರೆ, ಆ ಬಳಿಕದ ಮೂರನೇ ಹಂತವನ್ನು ಜಾರಿಗೊಳಿಸುವುದು ಸುಲಭ. ನವೀನ್ ಮತ್ತು ಮಿಲಿಂದ್ ಆ ಮೂರನೇ ಹಂತದ ದಾಳಗಳು.
ಸದ್ಯ ಮುಸ್ಲಿಮ್ ಸಮುದಾಯದ ಜವಾಬ್ದಾರಿ ಏನೆಂದರೆ, ಸಮಾಜ ಘಾತುಕ ಶಕ್ತಿಗಳ ತಂತ್ರಕ್ಕೆ ಪ್ರತಿ ತಂತ್ರವನ್ನು ಹೆಣೆಯುವುದು. ಶೃಂಗೇರಿಯ ಮುಸ್ಲಿಮರು ಮಾಡಿರುವಂತೆ ಅತ್ಯಂತ ಬುದ್ಧಿವಂತಿಕೆಯಿಂದ ನಡೆದುಕೊಳ್ಳುವುದು. ಯಾವುದೇ ಸಂದರ್ಭದಲ್ಲೂ ಆವೇಶಕ್ಕೋ ಪ್ರಚೋದನೆಗೋ ಒಳಗಾಗದೆಯೇ ಪ್ರತಿಕ್ರಿಯಿಸಲು ಕಲಿಯುವುದು. ಹಾಗಂತ, ಇವೇನೂ ಬಹಳ ಸವಾಲಿನ ಕೆಲಸ ಅಲ್ಲ. ಈ ಸಮುದಾಯಕ್ಕೆ ಗಲ್ಲಿಗೊಂದರಂತೆ ಮಸೀದಿಗಳಿವೆ. ಸಮುದಾಯಕ್ಕೆ ಮಾರ್ಗದರ್ಶನ ನೀಡಲು ಧಾರ್ಮಿಕ, ಸಾಮಾಜಿಕ ಮುಖಂಡರಿದ್ದಾರೆ. ಸಂಘಟನೆಗಳಿವೆ. ಪ್ರತಿ ಶುಕ್ರವಾರ ಮಸೀದಿಗಳು ಸಮುದಾಯವನ್ನು ತಿದ್ದುವ ಕೇಂದ್ರವಾಗಿ ಬದಲಾಗಬೇಕು. ಧಾರ್ಮಿಕ ಸಂಘಟನೆಗಳು ಮುಸ್ಲಿಮ್ ಸಮುದಾಯದ ಗಲ್ಲಿಗಲ್ಲಿಗೆ ತೆರಳಿ ಅಲ್ಲಿಯ ಸಮಸ್ಯೆಗಳಿಗೆ ಕಣ್ಣಾಗುವ ಮತ್ತು ಗಾಂಜಾದಂಥ ವ್ಯಸನಗಳಿಗೆ ತುತ್ತಾಗಿರುವ ಯುವಕರನ್ನು ಸರಿದಾರಿಗೆ ತರುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಮುಸ್ಲಿಮ್ ಸಮುದಾಯದ ಕೇರಿಗಳು ಮೂಲಭೂತ ಸೌಲಭ್ಯಗಳನ್ನು ಹೊಂದುವಂತೆ ಮಾಡುವುದಕ್ಕೆ ಸಕಲ ಪ್ರಯತ್ನವನ್ನೂ ಮಾಡಬೇಕು. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ಮಾಡುವ ದೀರ್ಘಕಾಲಿಕ ಯೋಜನೆಗಳನ್ನು ಹಮ್ಮಿಕೊಳ್ಳಬೇಕು. ಆರೋಗ್ಯ ಕೇಂದ್ರಗಳ ಸ್ಥಾಪನೆಗೆ, ಕೌಶಲ್ಯ ಅಭಿವೃದ್ಧಿಯಂತಹ ಯೋಜನೆಗಳಿಗೆ ಕಾಳಜಿ ತೋರಬೇಕು. ಆಯಾ ಪ್ರದೇಶಕ್ಕೆ ತಕ್ಕಂತೆ ಅತ್ಯಂತ ಪರಿಣಾಮಕಾರಿ ನೀಲನಕಾಶೆಯನ್ನು ತಯಾರಿಸಿ ಮುಂದಡಿಯಿಟ್ಟರೆ ಯಶಸ್ಸು ಅಸಾಧ್ಯವಿಲ್ಲ. ಒಂದುವೇಳೆ, ಇಂಥ ದೂರದೃಷ್ಟಿಯಿಂದ ಸಮುದಾಯ ಸಂಘಟನೆಗಳು, ನಾಯಕರು ಮ್ತು ಧಾರ್ಮಿಕ ಮುಖಂಡರು ಕಾರ್ಯಪ್ರವೃತ್ತವಾದರೆ ಓರ್ವ ನವೀನ್ ಬಿಡಿ, ನೂರಾರು ನವೀನ್ರೂ ಈ ಸಮುದಾಯಕ್ಕೆ ಸವಾಲು ಆಗಲಾರರು. ಅವರಿಗೆ ಯಶಸ್ಸು ಸಿಗಲಾರದು. ಪ್ರವಾದಿಯನ್ನು ನಿಂದಿಸಿದರೆ ಅದಕ್ಕೆ ಪ್ರತಿಯಾಗಿ ಪ್ರವಾದಿ ಸಂದೇಶವನ್ನು ಸಾರುವ ಲಕ್ಷಾಂತರ ಯುವಕರು ತಯಾರಾಗಬಹುದು. ಅವರನ್ನು ಕಂಡು ನವೀನ್ ಮತ್ತು ಅವನ ಹಿಂದಿರುವಂಥ ಸಮಾಜ ಘಾತುಕರು ಅವಮಾನದಿಂದ ತಲೆ ತಗ್ಗಿಸುವಂಥ ಪರಿಸ್ಥಿತಿ ನಿರ್ಮಾಣವಾಗಬಹುದು. ಇದು ಇಂದಿನ ತುರ್ತು ಅಗತ್ಯ.
Wednesday, 19 August 2020
ಹಾಗೇನಾದರೂ ಆಗಿಬಿಟ್ಟರೆ ಅವರು ಹೂಡಿರುವ ಕೋಟ್ಯಂತರ ರೂಪಾಯಿಯ ಪಾಡೇನು?
ಕೊರೋನಾ ಏನು, ಅದರಿಂದ ಹಾನಿ ಎಷ್ಟು ಮತ್ತು ನಾಗರಿಕರು ಏನೆಲ್ಲ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬ ನಂಬಲರ್ಹ ಹಾಗೂ ಅಧಿಕೃತ ಮಾಹಿತಿಗಳಿಗಿಂತ ನೂರು ಪಟ್ಟು ಹೆಚ್ಚು ನಂಬಲನರ್ಹ ಮತ್ತು ಅನಧಿಕೃತ ಮಾಹಿತಿಗಳು ಸಾರ್ವಜನಿಕವಾಗಿ ಇವತ್ತು ಲಭ್ಯವಿವೆ. ಕೊರೋನಾ ಸುತ್ತ ಹುಟ್ಟು ಹಾಕಲಾಗಿರುವ ಭಯವೇ ರೋಗಿಗಳ ಪಾಲಿಗೆ ರೋಗಕ್ಕಿಂತ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ ಎಂಬ ಮಾತು ತಜ್ಞರಿಂದಲೇ ಕೇಳಿ ಬರುತ್ತಿದೆ. ಕೊರೋನಾ ಇವತ್ತು ಬಿಂಬಿಸಲಾಗುತ್ತಿರುವಷ್ಟು ಅಪಾಯಕಾರಿಯೇ, ಔಷಧಕ್ಕೆ ಬಗ್ಗದಷ್ಟು ಮಾರಣಾಂತಿಕವೇ ಅಥವಾ ಅದನ್ನು ಅಗತ್ಯಕ್ಕಿಂತ ಹೆಚ್ಚು ಉಬ್ಬಿಸಲಾಗುತ್ತಿದೆಯೇ ಎಂಬಲ್ಲಿಂದ ಹಿಡಿದು, ಕೊರೋನಾದ ನೆಪದಲ್ಲಿ ಮೆಡಿಕಲ್ ಮಾಫಿಯಾ ಸಕ್ರಿಯವಾಗಿದೆಯೇ ಎಂಬಲ್ಲಿ ವರೆಗೆ ಸಾರ್ವಜನಿಕ ಚರ್ಚೆಗಳೂ ಅಲ್ಲಲ್ಲಿ ನಡೆಯತೊಡಗಿವೆ. ಹಾಗಂತ,
ಇಂಥ ಬೆಳವಣಿಗೆಗಳು ಶೂನ್ಯದಿಂದ ಹುಟ್ಟಿಕೊಂಡಿರುವುದಲ್ಲ. ದೇಶದಾದ್ಯಂತದ ವಿವಿಧ ಪ್ರಕರಣಗಳು ಇಂಥ ಅನುಮಾನಗಳಿಗೆ ಪ್ರೇರಣೆಯನ್ನು ಒದಗಿಸುತ್ತಿವೆ.
ಕೊರೋನಾ ಪುರಾತನ ಕಾಲದ ಕಾಯಿಲೆಯಲ್ಲ. 2019 ಡಿಸೆಂಬರ್ನಲ್ಲಿ ಚೀನಾ ಈ ಕಾಯಿಲೆಯ ಉಪಸ್ಥಿತಿಯ ಕುರಿತಂತೆ ಅಧಿಕೃತವಾಗಿ ಘೋಷಿಸುವಾಗ ಈ ಜಗತ್ತಿನ 600 ಕೋಟಿ ಜನಸಂಖ್ಯೆಯನ್ನು ಒಂದೇ ಬಾರಿ ಸಾಯಿಸಿ ಬಿಡಬಹುದಾದಷ್ಟು ಅಣುಬಾಂಬುಗಳನ್ನು ಕೇವಲ ಒಂದೇ ರಾಷ್ಟ್ರ ತನ್ನ ಗೋದಾಮಿನಲ್ಲಿ ಪೇರಿಸಿಟ್ಟಿರುವ ವಾಸ್ತವ ಕೂಡ ಈ ಜಗತ್ತಿಗೆ ಗೊತ್ತಿತ್ತು. ಮಾನವ ಹತ್ಯೆಯ ಹೊರತಾಗಿ ಈ ಅಣುಬಾಂಬುಗಳಿಗೆ ಬೇರೆ ಯಾವ ಉದ್ದೇಶವೂ ಇಲ್ಲ. ಈ ಅಣುಬಾಂಬಿಗೆ ಬಲಿಯಾಗುವವರು ಸಾಯಿಸಲೇಬೇಕಾದ ಅಪರಾಧಿಗಳೂ ಅಲ್ಲ. ಯಾರದೋ ಹುಚ್ಚಿಗೆ, ತಪ್ಪಿಗೆ ಅಥವಾ ಅಹಂಕಾರಕ್ಕೆ ಪ್ರತಿಯಾಗಿ ಈ ಅಣುಬಾಂಬುಗಳು ಇನ್ನಾರನ್ನೋ ಸಾಯಿಸುತ್ತವೆ. ಕೊರೋನಾವೂ ಅಷ್ಟೇ. ಯಾವುದೋ ಪ್ರಯೋಗಾಲಯದ ತಪ್ಪಿನಿಂದಲೋ ಅಥವಾ ಪ್ರಕೃತಿ ಸಹಜವಾಗಿಯೋ ಹುಟ್ಟಿಕೊಂಡ ಕೊರೋನಾವು ಇವತ್ತು ಅಪರಾಧಿ, ನಿರಪರಾಧಿ ಎಂಬ ವರ್ಗೀಕರಣವನ್ನೇ ಮಾಡದೇ ಸರ್ವರನ್ನೂ ಕಾಡತೊಡಗಿದೆ. ದುರಂತ ಏನೆಂದರೆ,
ಜಗತ್ತಿನ ಅಷ್ಟೂ ಮಂದಿಯನ್ನು ಸಾಯಿಸಿಬಿಡಬಹುದಾದಷ್ಟು ಬಾಂಬುಗಳನ್ನು ತಯಾರಿಸಿಟ್ಟುಕೊಂಡಿರುವ ಜಗತ್ತೇ ಯಕಶ್ಚಿತ್ ಒಂದು ಜ್ವರಕ್ಕೆ ಮಂಡಿಯೂರಿ ಬಿಟ್ಟಿರುವುದು.
ಇದು ಪುರಾತನ ಕಾಲವಲ್ಲ. ಚೀನಾದ ಯಾವುದೋ ಭೂಗರ್ಭದಲ್ಲಿ ನಡೆಯುವ ಸಂಶೋಧನೆಯನ್ನು ಅಲ್ಲಿಂದ ಲಕ್ಷಾಂತರ ಕಿಲೋಮೀಟರ್ ದೂರದ ಇನ್ನಾವುದೋ ಪ್ರದೇಶದಲ್ಲಿ ನಿಂತು ಗ್ರಹಿಸಬಹುದಾದ ಕಾಲ. ಕೊರೋನಾ 20ನೇ ಶತಮಾನದ ಕಾಯಿಲೆ. ಸ್ಪ್ಯಾನಿಷ್ ಫ್ಲೂ, ಪ್ಲೇಗ್ಗಳ ಕಾಲಕ್ಕೆ ಹೋಲಿಸಿದರೆ, ಕೊರೋನಾದ ಕಾಲ ಅತ್ಯಂತ ಆಧುನಿಕವಾದುದು. ಕೊರೋನಾ ಕಾಯಿಲೆಯ ಲಕ್ಷಣಗಳು ಏನೇನು ಮತ್ತು ಯಾವೆಲ್ಲ ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸಿದರೆ ಅದನ್ನು ಅನ್ಯಗೊಳಿಸಬಹುದು ಎಂಬ ಮಾಹಿತಿಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಜನರಿಗೆ ತಲುಪಿಸಬಹುದಾದಷ್ಟು ತಂತ್ರಜ್ಞಾನಗಳು ಆವಿಷ್ಕಾರಗೊಂಡಿರುವ ಕಾಲ. ಸ್ಪ್ಯಾನಿಷ್ ಫ್ಲೂ, ಪ್ಲೇಗ್ನಂಥ ಸಾಂಕ್ರಾಮಿಕ ರೋಗಗಳು ಈ ಜಗತ್ತಿನ ಮೇಲೆ ದಾಳಿ ಮಾಡಿದ ಕಾಲದಲ್ಲಿ ಈ ಅವಕಾಶಗಳು ಇರಲಿಲ್ಲ. ಒಂದು ಪ್ರದೇಶಕ್ಕೆ ಪ್ಲೇಗ್ ಬಂದಿದೆಯೆಂಬುದು ಇನ್ನೊಂದು ಪ್ರದೇಶಕ್ಕೆ ತಿಳಿಯುವುದಕ್ಕೆ ಬೇಕಾದ ವ್ಯವಸ್ಥೆಯಿರಲಿಲ್ಲ. ಪ್ಲೇಗ್ನ ಲಕ್ಷಣಗಳೇನು ಮತ್ತು ಅದಕ್ಕಿರುವ ಔಷಧಿಗಳೇನು ಎಂಬಂತಹ ಬಹುಮುಖ್ಯ ಮಾಹಿತಿಗಳೂ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗುವ ದಾರಿಗಳಿರಲಿಲ್ಲ. ಆದರೆ ಕೊರೋನಾ ಹಾಗಲ್ಲ. ಕೊರೋನಾ ವೈರಸ್ನ ಚಿತ್ರದಿಂದ ಹಿಡಿದು ಚಿಕಿತ್ಸೆ ಪಡೆಯುತ್ತಿರುವವರ ವರೆಗೆ ಮತ್ತು ಪಿಪಿಇ ಕಿಟ್ ಧರಿಸಿದ ಶುಶ್ರೂಕರಿಂದ ಆರಂಭವಾಗಿ ಮನೆ ಮದ್ದುಗಳ ಪಟ್ಟಿಯ ವರೆಗೆ ಪ್ರತಿಯೊಂದೂ ಜನರ ಬೆರಳಿಗೆ ದಕ್ಕುವ ಸ್ಥಿತಿಯಿದೆ. ಹೀಗಿದ್ದೂ ಕೊರೋನಾ ಕುರಿತು ಸತ್ಯಕ್ಕಿಂತ ಭೀತಿಯೇ ಮತ್ತು ಅವಾಸ್ತವವೇ ಮೇಲುಗೈ ಪಡೆದಿರಲು ಕಾರಣವೇನು? ಮೃತದೇಹದೊಂದಿಗೆ ಅತ್ಯಂತ ಅನಾಗರಿಕವಾಗಿ ನಡೆದುಕೊಳ್ಳುತ್ತಿರುವ ಪ್ರಕರಣಗಳ ಹಿನ್ನೆಲೆಯೇನು? ಅಂದಹಾಗೆ,
ಕೊರೋನಾ ಪೀಡಿತರನ್ನು ಮತ್ತು ಕೊರೋನಾದಿಂದಾಗಿ ಸಾವಿಗೀಡಾದವರನ್ನು ಪ್ರಾಣಿಗಳಿಗಿಂತ ಕೀಳಾಗಿ ನಡೆಸಿಕೊಳ್ಳುತ್ತಿರುವುದು ಜನಸಾಮಾನ್ಯರಲ್ಲ. ಪಿಪಿಇ ಕಿಟ್ ಧರಿಸಿರುವ ಮತ್ತು ಕೊರೋನಾದ ಬಗ್ಗೆ ಅತ್ಯಂತ ಹೆಚ್ಚು ಮಾಹಿತಿ ಇರುವವರೇ ಇದರಲ್ಲಿ ಮುಂಚೂಣಿಯಲ್ಲಿದ್ದಾರೆ. ಇದೊಂದು ಒಗಟು. ಈ ಒಗಟನ್ನು ಬಿಡಿಸುವುದು ಹೇಗೆ? ಜನರನ್ನು ಎಜುಕೇಟ್ ಮಾಡಬೇಕಾಕಿದ್ದ ತಂತ್ರಜ್ಞಾನಗಳು, ಅದಕ್ಕಿಂತಲೂ ಹೆಚ್ಚಾಗಿ ಭೀತಿಗೆ ಮತ್ತು ಅಸತ್ಯಗಳ ಪ್ರಸಾರಕ್ಕೆ ಬಳಕೆಯಾಗುತ್ತಿವೆಯೇ ಎಂಬುದನ್ನು ಈ ದುರಿತ ಕಾಲದಲ್ಲಿ ವಿಶ್ಲೇಷಿಸಬೇಕಿದೆ. ಅದೇವೇಳೆ,
ಸಾರ್ವಜನಿಕವಾಗಿ ಇರುವ ಭೀತಿಗೂ ಕೊರೋನಾಕ್ಕೂ ನಡುವೆ ಏನು ಸಂಬಂಧ ಮತ್ತು ಎಷ್ಟು ವಾಸ್ತವ ಅನ್ನುವ ಚರ್ಚೆ-ಸಂವಾದಗಳು ಆರಂಭಗೊಂಡಿರುವುದು ಸ್ವಾಗತಾರ್ಹ. ಇದು ಮುಂದುವರಿಯಬೇಕು. ಕೊರೋನಾ ಪ್ರಕೃತಿ ಸಹಜವೋ ಅಥವಾ ಮಾನವ ಎಡವಟ್ಟೋ ಅನ್ನುವ ಸಂದೇಹದಂತೆಯೇ ಕೊರೋನಾ ಕಾಲದ ಬೆಳವಣಿಗೆಗಳ ಸುತ್ತಲೂ ಸಂದೇಹವೊಂದನ್ನು ಇಟ್ಟುಕೊಳ್ಳುವುದು ಮತ್ತು ಸೂಕ್ಷ್ಮವಾಗಿ ಅವಲೋಕಿಸಿಕೊಳ್ಳುವುದು ಅತ್ಯಂತ ಅಗತ್ಯ. ಈ ಕಾಯಿಲೆಯು ಸಾಮುದಾಯಿಕ ಹರಡುವಿಕೆಯನ್ನು ಪ್ರಾರಂಭಿಸಿದೆ. ಹಾಗೆಯೇ ಅತ್ಯಂತ ದುಬಾರಿ ಯಂತ್ರಗಳು ಆಸ್ಪತ್ರೆಗಳ ಕೋಣೆ ಸೇರಿಕೊಳ್ಳತೊಡಗಿವೆ. ಕೊರೋನಾ ಪರೀಕ್ಷೆಯ ದೃಷ್ಟಿಯಿಂದ ಅವುಗಳು ಎಷ್ಟು ಅಗತ್ಯವೋ ಆ ಯಂತ್ರಕ್ಕೆ ಸುರಿದಿರಬಹುದಾದ ಮೊತ್ತವನ್ನು ರೋಗಿಗಳಿಂದ ಭರಿಸಿಕೊಳ್ಳಬೇಕಾದುದೂ ಆಸ್ಪತ್ರೆಗಳ ಅಗತ್ಯ. ನಿಜವಾಗಿ,
ಈ ಜಗತ್ತಿನ ಎಲ್ಲ ಕಾಯಿಲೆಗಳೂ ಮಾನವ ದ್ರೋಹಿಯಾದುದು ಆ ಕಾಯಿಲೆಗಳಿಗಿಂತ ಹೆಚ್ಚಾಗಿ ಆ ಕಾಯಿಲೆಯ ಹೆಸರಲ್ಲಿ ನಡೆಯುವ ಪರೀಕ್ಷೆಗಳು, ಔಷಧಗಳು ಮತ್ತು ಅದಕ್ಕೆ ತಗಲುವ ದುಬಾರಿ ವೆಚ್ಚಗಳಿಂದಾಗಿದೆ. ಕೊರೋನಾಕ್ಕೆ ಮದ್ದು ಕಂಡು ಹಿಡಿಯುವ ಪೈಪೋಟಿ ಇವತ್ತು ಜಾಗತಿಕ ರಾಷ್ಟ್ರಗಳಲ್ಲಿ ಕಾಣಿಸಿಕೊಂಡಿದೆ. ಇದೊಂದು ಬಹು ದುಬಾರಿ ಪ್ರಕ್ರಿಯೆ. ಸಂಶೋಧನೆಗೆಂದು ಕೋಟಿ ಕೋಟಿ ರೂಪಾಯಿಯನ್ನು ಖರ್ಚು ಮಾಡಬೇಕಾಗುತ್ತದೆ. ಸಂಶೋಧಿತ ಔಷಧವನ್ನು ಜನರ ಮೇಲೆ ಪ್ರಯೋಗಿಸುವುದು, ಔಷಧ ಪರಿಣಾಮಕಾರಿಯೆಂದು ದೃಢಪಡಿಸಿಕೊಳ್ಳುವುದು ಹಾಗೂ ಔಷಧ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆಗೊಳಿಸುವುದು-ಇತ್ಯಾದಿ ಪ್ರಕ್ರಿಯೆಗಳಿಗೆ ದೀರ್ಘ ಸಮಯ ಹಿಡಿಯುತ್ತದೆ. ಇದು ಕೇವಲ ಕೊರೋನಾಕ್ಕೆ ಸಂಬಂಧಿಸಿ ಮಾತ್ರ ಇರುವ ಸಮಸ್ಯೆಯಲ್ಲ. ಯಾವುದೇ ಕಾಯಿಲೆಗೆ ಸಂಬಂಧಿಸಿದ ಔಷಧವೂ ಇಂಥ ಪ್ರಕ್ರಿಯೆಗಳಿಗೆ ತನ್ನನ್ನು ಒಡ್ಡಿಕೊಳ್ಳಲೇಬೇಕು. ಒಂದುವೇಳೆ,
ಇಂಥ ಸಂಶೋಧನಾ ಪ್ರಕ್ರಿಯೆಗಳು ನಡೆಯುವ ಸಂದರ್ಭದಲ್ಲೇ ಆ ಕಾಯಿಲೆಯು ಪ್ರಾಕೃತಿಕ ಕಾರಣದಿಂದಲೋ ಅಥವಾ ನಾಟಿ ಔಷಧಗಳಿಗೆ ಶರಣಾಗಿಯೋ ಕಾಣೆಯಾದರೆ, ಈ ಸಂಶೋಧನೆಗೆ ಸುರಿದ ಕೋಟಿಗಟ್ಟಲೆ ರೂಪಾಯಿಗಳ ಪಾಡೇನು? ಇದು ಕೊರೋನಾಕ್ಕೆ ಸಂಬಂಧಿಸಿ ಮಾತ್ರ ಉದ್ಭವವಾಗಿರುವ ಪ್ರಶ್ನೆಯಲ್ಲ. ಯಾವುದೇ ಕಾಯಿಲೆಗೆ ಸಂಬಂಧಿಸಿ ಮಾಡಲಾಗುವ ಸಂಶೋಧನೆಯೂ ಇಂಥz್ದÉೂಂದು ಅಪಾಯವನ್ನು ಎದುರಿಸಿಯೇ ಇರುತ್ತದೆ. ಇಂಥ ಸಂದರ್ಭದಲ್ಲಿ ಒಂದೋ ಈ ಔಷಧ ಸಂಶೋಧನಾ ನಿರತ ರಾಷ್ಟ್ರಗಳು ಆ ಕಾಯಿಲೆಯನ್ನು ಮತ್ತಷ್ಟು ಅವಧಿ ವರೆಗೆ ಜೀವಂತವಾಗಿರುವಂತೆ ನೋಡಿಕೊಳ್ಳಬೇಕು ಅಥವಾ ತಾವು ಸಂಶೋಧನೆಗೆಂದು ಹೂಡಿಕೆ ಮಾಡಿರುವ ಹಣದ ಬಗ್ಗೆ ಚಿಂತೆ ಬಿಡಬೇಕು. ಆದ್ದರಿಂದಲೇ, ಇವತ್ತು ಅಸ್ತಿತ್ವದಲ್ಲಿರುವ ಕಾಯಿಲೆಗಳ ಬಗ್ಗೆ ಅ ನುಮಾನ ಮೂಡುವುದು. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುವುದು ಮತ್ತು ಹಳೆ ಕಾಯಿಲೆಗಳು ಮತ್ತಷ್ಟು ವೃದ್ಧಿಗೊಂಡು ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗುತ್ತಿರುವುದ ನ್ನು ಸಂದೇಹದಿಂದ ನೋಡುವುದು. ಇವೆಲ್ಲ ಸಹಜವೇ, ಅಸಹಜವೇ? ಔಷಧ ಮಾಫಿಯಾ ಇದರ ಹಿಂದಿರಬಹುದೇ? ಕೊರೋನಾದ ಸುತ್ತ ನಡೆಯುತ್ತಿರುವ ಬೆಳವಣಿಗೆಯನ್ನು ಇದೇ ಕನ್ನಡಕವನ್ನಿಟ್ಟು ನೋಡಬಹುದೇ?
ಚರ್ಚೆಗಳು ನಡೆಯಲಿ.
Friday, 10 July 2020
ಆಕ್ಸಿಜನ್ ಸೆಂಟರ್ ಆದ ಮಸೀದಿ, ಕ್ವಾರಂಟೈನ್ ಕೇಂದ್ರವಾದ ಹಜ್ ಭವನ: ಸುಳ್ಳೇ ಒಮ್ಮೆ ಶರಣಾಗು
ಕೊರೋನಾದಿಂದ ಈ ದೇಶ ಕಲಿತ ಅತಿದೊಡ್ಡ ಪಾಠ ಏನೆಂದರೆ, ಸುಳ್ಳಿಗೆ ದೀರ್ಘಾಯುಷ್ಯ ಇಲ್ಲ ಅನ್ನುವುದನ್ನು. ಇದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಎರಡು ಪ್ರಕರಣಗಳೇ ಧಾರಾಳ ಸಾಕು.
1. ಬಾಬಾ ರಾಮ್ದೇವ್.
2. ಮುಸ್ಲಿಮರು.
ಒಂದಷ್ಟು ನಿಗೂಢತೆಗಳನ್ನು ತನ್ನ ಸುತ್ತ ಉಳಿಸಿಕೊಂಡೇ ಪ್ರವರ್ಧಮಾನಕ್ಕೆ ಬಂದ ಬಾಬಾ ರಾಮ್ದೇವ್ರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿದ್ದು ಕೊರೋನಾ. ಕೊರೋನಾಕ್ಕೆ ಔಷಧಿ ಸಂಶೋ ಧಿಸಿದ್ದೇವೆ ಎಂದು ಪತ್ರಿಕಾಗೋಷ್ಠಿ ಕರೆದು ಘೋಷಿಸಿದ್ದಲ್ಲದೇ, ಔಷಧಿಯನ್ನೂ ಬಿಡುಗಡೆಗೊಳಿಸಿದ ಬಳಿಕ ಉಂಟಾದ ತಲ್ಲಣದಲ್ಲಿ ಪತಂಜಲಿ ಕಂಪೆನಿಯ ಮುಖ್ಯಸ್ಥರ ಸಹಿತ ಐದಾರು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ನೆಗಡಿ, ಜ್ವರದಂತಹ ಸಾಮಾನ್ಯ ಕಾಯಿಲೆಗೆ ಸಂಬಂಧಿಸಿದ ಔಷಧಿಯನ್ನು ಕೊರೋನಾ ಔಷಧಿ ಎಂದು ಸಾರಿರುವುದಕ್ಕೆ ಸರಕಾರದ ವತಿಯಿಂದಲೇ ವಿರೋಧ ವ್ಯಕ್ತವಾಗಿದೆ. ಅನುಮತಿ ಪಡೆಯದೇ ಔಷಧ ಬಿಡುಗಡೆಗೊಳಿಸಿದ ಆರೋಪದೊಂದಿಗೆ, ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆಳೆದ ಕಳಂಕವನ್ನೂ ಪತಂಜಲಿ ಸಂಸ್ಥೆ ಇದೀಗ ಹೊತ್ತುಕೊಂಡಿದೆ. ನಿಜವಾಗಿ,
ಭಯದಲ್ಲಿರುವ ಜನರನ್ನು ಸುಳ್ಳಿನಿಂದ ಖರೀದಿಸುವ ಪ್ರಯತ್ನಕ್ಕೆ ಸದಾ ಯಶಸ್ಸು ಲಭ್ಯವಾಗದು ಎಂಬುದನ್ನು ಪತಂಜಲಿಯನ್ನು ಪೋಷಿಸುತ್ತಾ ಬಂದ ಸರಕಾರವೇ ಅನೌಪಚಾರಿಕವಾಗಿ ಘೋಷಿಸುವಂತಾದುದು ಸತ್ಯಕ್ಕೆ ಸಿಕ್ಕ ಬಲುದೊಡ್ಡ ಗೆಲುವು. ಈ ಬೆಳವಣಿಗೆಗಿಂತ ತುಸು ಮೊದಲೇ, ಇನ್ನೊಂದು ಸುಳ್ಳಿನ ತಲೆಗೂ ಕೊರೋನಾ ಬಲವಾದ ಏಟನ್ನು ಕೊಟ್ಟಿದೆ ಮತ್ತು ಈಗಲೂ ಕೊಡುತ್ತಿದೆ. ಪತಂಜಲಿಗೆ ಹೋಲಿಸಿದರೆ ಕೊರೋನಾ ನೀಡಿರುವ ಈ ಏಟು ಅತ್ಯಂತ ಪ್ರಬಲವಾದುದು ಮತ್ತು ಸಮಾಜದ ಕಣ್ಣು ತೆರೆಸುವಂಥದ್ದು.
ಸುಳ್ಳುಗಳನ್ನು ತಯಾರಿಸುವುದಕ್ಕೆಂದೇ ಕಾರ್ಖಾನೆಗಳನ್ನು ಸ್ಥಾಪಿಸಿ, ಕೋರೆಹಲ್ಲು-ವಿಕಾರ ಉಗುರುಗಳುಳ್ಳ ಭೀತಿಕಾರಕ ಸುಳ್ಳುಗಳನ್ನು ಉತ್ಪಾದಿಸಿ ಅದಕ್ಕೊಂದು ನಿರ್ದಿಷ್ಟ ರೂಪವನ್ನು ಕೊಟ್ಟು ಹಂಚುವ ಪ್ರಕ್ರಿಯೆ ಕೊರೋನಾ ಪೂರ್ವದಲ್ಲೇ ಈ ದೇಶದಲ್ಲಿ ಚಾಲ್ತಿಯಲ್ಲಿತ್ತು. ಈ ಎಲ್ಲ ಸುಳ್ಳುಗಳೂ ಗುರಿಯಾಗಿಸಿಕೊಂಡಿದ್ದುದು ಮುಸ್ಲಿಮರನ್ನು. ಕ್ರಮೇಣ ಎಂಥ ಹೀನಾಯ ಮತ್ತು ನಗೆಪಾಟಲು ಸುಳ್ಳುಗಳಿಗೂ ನಿಧಾನಕ್ಕೆ ಮಾರುಕಟ್ಟೆ ಲಭ್ಯವಾಗತೊಡಗಿತು. ಮುಸ್ಲಿಮರನ್ನು ಖಳರಂತೆ ಬಿಂಬಿಸುವ ಯಾವ ನಕಲಿ ಸರಕಿಗೂ ಬೆಲೆ ಬರತೊಡಗಿತು. ಚುನಾವಣೆಯಲ್ಲೂ ಅದುವೇ ನಿರ್ಣಾಯಕ ಪಾತ್ರ ವಹಿಸತೊಡಗಿತು. ಆದ್ದರಿಂದಲೇ,
ಈ ಸುಳ್ಳಿನ ಉತ್ಪಾದಕರು ಕೊರೋನಾ ಕಾಲದಲ್ಲೂ ಚುರುಕಾದರು. ಕೊರೋನಾ ಪೂರ್ವದಲ್ಲಿ ಸುಳ್ಳಿಗೆ ಸಿಕ್ಕ ಯಶಸ್ಸಿನಿಂದ ಉತ್ತೇಜಿತರಾಗಿ ಕೊರೋನಾ ಭಾರತದಲ್ಲೂ ಇದೇ ತಂತ್ರವನ್ನು ಮುಂದುವರಿಸುವುದಕ್ಕೆ ನಿರ್ಧರಿಸಿದರು. ಮಾರ್ಚ್ 24ರಂದು ದೇಶದಾದ್ಯಂತ ಲಾಕ್ಡೌನ್ ಘೋಷಿಸುವಾಗ ಕೊರೋನಾ ಒಂದು ವೈರಸ್ಗೆ ಅಷ್ಟೇ ಆಗಿತ್ತು. ಕೋವಿಡ್-19 ಎಂಬ ಹೆಸರಲ್ಲಿ ಗುರುತಿಸಿಕೊಂಡಿದ್ದ ಈ ವೈರಸ್ ಎಪ್ರಿಲ್ 1ರಂದು ತಬ್ಲೀಗಿ ವೈರಸ್ ಎಂದು ನಾಮಕಾರಣ ಮಾಡುವ ಮೂಲಕ ಸುಳ್ಳಿನ ಕಾರ್ಖಾನೆಗಳು ರಂಗಕ್ಕಿಳಿದುವು. ರಾಶಿ ರಾಶಿ ಸುಳ್ಳುಗಳು ಉತ್ಪಾದನೆಯಾದುವು. ಕೊರೋನಾಕ್ಕೆ ಮುಸ್ಲಿಮ್ ವೇಶವನ್ನು ತೊಡಿಸಿ ದೇಶದಾದ್ಯಂತ ಮೆರವಣಿಗೆ ನಡೆಸಲಾಯಿತು. ಅದರಿಂದ ಪ್ರಭಾವಿತರಾದ ಜನರು ಮುಸ್ಲಿಮರನ್ನು ತಪ್ಪಿತಸ್ಥರಂತೆ ಕಂಡದ್ದೂ ಇದೆ. ಹಲ್ಲೆ ನಡೆಸಿದ್ದೂ ಇದೆ. ಪೊಲೀಸರೂ ಇಂಥ ಸುಳ್ಳುಗಳಿಂದ ಪ್ರಭಾವಿತರಾಗಿ ಅಮಾನುಷವಾಗಿ ನಡಕೊಂಡದ್ದೂ ಇದೆ. ಆದರೆ ಸುಳ್ಳಿಗೆ ಆಯುಷ್ಯ ತೀರಾ ಕಡಿಮೆ ಎಂಬುದನ್ನು ಕೊರೋನಾ ಭಾರತದ ಈ ನಾಲ್ಕು ತಿಂಗಳುಗಳೇ ಮತ್ತೊಮ್ಮೆ ಸಾಬೀತುಪಡಿಸಿದೆ.
ಕಳೆದವಾರ ಮಹಾರಾಷ್ಟ್ರದ ಭೀವಂಡಿಯಲ್ಲಿರುವ ಮಕ್ಕಾ ಮಸೀದಿಯು ತನ್ನ ಅಭೂತಪೂರ್ವ ನಿರ್ಧಾರಕ್ಕಾಗಿ ದೇಶದಾದ್ಯಂತ ಸುದ್ದಿಗೀಡಾಯಿತು. ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಅಧೀನದಲ್ಲಿರುವ ಈ ಮಸೀದಿಯನ್ನು ಆಕ್ಸಿಜನ್ ಸೆಂಟರ್ ಆಗಿ ಬದಲಾಯಿಸಿರುವುದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಯಿತು. ಕೊರೋನಾ ಪೀಡಿತರಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುವುದಕ್ಕಾಗಿ ಈ ಏರ್ಪಾಡು ಮಾಡಿರುವುದನ್ನು ಸುಳ್ಳಿನಿಂದ ಪ್ರಭಾವಿತರಾದವರೂ ಮೆಚ್ಚಿಕೊಂಡರು. ಹಾಗೆಯೇ, ಸೋಂಕಿನಿಂದ ಗುಣಮುಖರಾದ ತಬ್ಲೀಗಿ ಸಂಘಟನೆಯ ಸದಸ್ಯರು ಸೋಂಕಿನಿಂದ ನರಳುತ್ತಿರುವ ಭಾರತೀಯರನ್ನು ಉಳಿಸಿಕೊಳ್ಳುವುದಕ್ಕಾಗಿ ತಮ್ಮ ಪ್ಲಾಸ್ಮಾವನ್ನು ನೀಡಲು ಮುಂದೆ ಬಂದಾಗ, ತಬ್ಲೀಗಿ ವೈರಸ್ ಎಂದು ಅಣಕಿಸಿದವರೇ ಮೌನವಾದರು. ಕೊರೋನಾ ಶಂಕಿತ ಆದರೆ, ರೋಗ ಲಕ್ಷಣಗಳಿಲ್ಲದ ಬೆಂಗಳೂರಿನ ಮಂದಿಯನ್ನು ಇವತ್ತು ಕ್ವಾರಂಟೈನ್ಗೆ ಒಳಪಡಿಸಲಾಗುತ್ತಿರುವುದು ಹಜ್ಜ್ ಭವನದಲ್ಲಿ.
ಈ ದೇಶದ ಅನೇಕ ಮಸೀದಿಗಳು, ಮದ್ರಸಗಳು, ಬೀದರ್ ನ ಶಾಹೀನ್ನಂಥ ಮುಸ್ಲಿಮ್ ಒಡೆತನದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು-ಕ್ವಾರಂಟೈನ್ ಕೇಂದ್ರಗಳಾಗಿ ಬದಲಾಗಿವೆ. ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹವನ್ನು ಸ್ವೀಕರಿಸಲು ರುದ್ರಭೂಮಿಗಳು ವಿಫಲವಾದಾಗ ಅವನ್ನು ಸ್ವೀಕರಿಸುವುದಕ್ಕೆ ಕಬರಸ್ತಾನಗಳು ಮುಂದೆ ಬಂದಿವೆ. ಕೊರೋನಾ ಪೀಡಿತ ವ್ಯಕ್ತಿಯ ಶವದಫನಕ್ಕೆ ಈ ದೇಶದ ಯಾವ ಕಬರಸ್ತಾನದಲ್ಲೂ ವಿರೋಧ ವ್ಯಕ್ತವಾಗಿಲ್ಲ. ವಿಶೇಷ ಏನೆಂದರೆ, ಕೊರೋನಾದಿಂದಾಗಿ ಸಾವಿಗೀಡಾದ ವ್ಯಕ್ತಿಯ ಅಂತ್ಯಸಂಸ್ಕಾರ ನಡೆಸುವುದಕ್ಕೆಂದೇ ಮುಸ್ಲಿಮ್ ಸಮುದಾಯದ ಸಂಘಟನೆಗಳು ತರಬೇತುಗೊಂಡ ತಂಡವನ್ನೇ ರಚಿಸಿವೆ. ಕೊರೋನಾ ಪೀಡಿತ ವ್ಯಕ್ತಿಯ ಮೃತದೇಹವನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವುದು ಬಿಡಿ, ತಮ್ಮ ವ್ಯಾಪ್ತಿಯಲ್ಲಿ ಶವ ಸಂಸ್ಕಾರಕ್ಕೇ ಭಯಪಟ್ಟು ವಿರೋಧ ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಮುಸ್ಲಿಮ್ ಸಮುದಾಯವು ಆ ಇಡೀ ಪ್ರಕ್ರಿಯೆಯನ್ನು ಅತ್ಯಂತ ಸುಲಲಿತವಾಗಿ ನಿರ್ವಹಿಸುತ್ತಿದೆ. ಮೃತದೇಹದ ಗೌರವಕ್ಕೆ ಒಂದಿಷ್ಟೂ ಚ್ಯುತಿ ಬರದಂತೆಯೇ ಸಕಲ ಮರ್ಯಾದೆಗಳೊಂದಿಗೆ ಶವಸಂಸ್ಕಾರ ನಡೆಸುತ್ತಿದೆ.
ಇದೇವೇಳೆ, ಕೊರೋನಾದಿಂದ ಸಂಕಷ್ಟಕ್ಕೊಳ್ಳಗಾದವರ ಸೇವೆಯಲ್ಲಿ ಮುಸ್ಲಿಮ್ ಸಮುದಾಯ ತೊಡಗಿಸಿಕೊಂಡ ರೀತಿಗೆ ಈ ದೇಶದ ಸುಳ್ಳಿನ ಕಾರ್ಖಾನೆಗಳೇ ಬೆರಗಾಗಿವೆ. ಅತ್ಯಂತ ಬಡ ಸಮುದಾಯವೊಂದು ಆರ್ಥಿಕವಾಗಿ ಸಬಲ ಸಮುದಾಯವನ್ನೇ ಮೀರಿಸುವ ರೀತಿಯಲ್ಲಿ ಸೇವಾತತ್ಪರವಾದುದನ್ನು ಯಾವ ಸುಳ್ಳಿಗೂ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ.
ಅಂದಹಾಗೆ,
ಮುಸ್ಲಿಮರನ್ನು ಖಳರಂತೆ ಮತ್ತು ದೇಶದ್ರೋಹಿಗಳಂತೆ ಬಿಂಬಿಸುವ ಸುಳ್ಳಿನ ಕತೆಗಳನ್ನು ಉತ್ಪಾದಿಸುವವರಿಗೆ ನಿಜ ಏನೆಂದು ಗೊತ್ತಿತ್ತು. ಮಾತ್ರವಲ, ನಿಜ ಏನೆಂದು ಹೇಳಿದರೆ, ತಮ್ಮ ಅಸ್ತಿತ್ವಕ್ಕೆ ಕುತ್ತು ಬರುವುದೆಂಬುದೂ ಗೊತ್ತಿತ್ತು. ಆದ್ದರಿಂದಲೇ ಸುಳ್ಳು ಚಿರಕಾಲ ಉಳಿಯಲಿ ಎಂಬ ಮಹದಾಸೆಯೊಂದಿಗೆ ನಿರಂತರ ಸುಳ್ಳಿನ ಕಾರ್ಖಾನೆಯಲ್ಲಿ ಸುದ್ದಿಗಳನ್ನು ಉತ್ಪಾದಿಸಿದರು. ಹಂಚಿಕೊಂಡರು. ಆದರೆ,
ಇದೀಗ ಆ ಸುಳ್ಳು ಸುದ್ದಿಗಳ ಪ್ರಭಾವದಿಂದ ಭಾರತೀಯರು ಹೊರ ಬರುವುದಕ್ಕೆ ಪೂರಕವಾದ ಸನ್ನಿವೇಶ ದೇಶದಲ್ಲಿ ನಿರ್ಮಾಣವಾಗುತ್ತಿದೆ. ಸುಳ್ಳುಗಳು ಬೆತ್ತಲಾಗತೊಡಗಿವೆ. ಬಾಬಾ ರಾಮ್ದೇವ್ರ ಪತಂಜಲಿ ಸಂಸ್ಥೆಯು ಇದರ ಉದ್ಘಾಟನೆ ಮಾಡಿರುವಂತಿದೆ. ಈ ಪತಂಜಲಿ ಸಂಸ್ಥೆಯ ಸುತ್ತ ಭಾವನಾತ್ಮಕ ಭ್ರಮೆಯೊಂದನ್ನು ತೇಲಿಬಿಡುವಲ್ಲಿ ಮುಂಚೂಣಿಯಲ್ಲಿ ನಿಂತಿದ್ದುದು ಇವೇ ಸುಳ್ಳಿನ ಕಾರ್ಖಾನೆಗಳು. ಪತಂಜಲಿ ಸಂಸ್ಥೆಯ ಉತ್ಪನ್ನಗಳನ್ನು ಇವೇ ಸುಳ್ಳಿನ ಕಾರ್ಖಾನೆಯಲ್ಲಿ ಉತ್ಪಾದಿತ ಸುದ್ದಿಗಳು ಮಾರುಕಟ್ಟೆ ಮಾಡುತ್ತಿದ್ದುವು. ಅಲ್ಲಿ ತಯಾರಾದ ಔಷಧಗಳನ್ನು ಬಳಸಿ ನಿರಾಶೆಗೊಂಡವರ ಅಭಿ ಪ್ರಾಯಗಳಿಗೆ ವೇದಿಕೆ ಸಿಗದಂತೆ ಮತ್ತು ಸಿಕ್ಕರೂ ಅವುಗಳ ತಲೆಗೆ ಹೊಡೆದಂತೆ ಸುಳ್ಳುಗಳನ್ನು ಸೃಷ್ಟಿಸಿ ಆ ಅಭಿಪ್ರಾಯಗಳನ್ನೇ ದೇಶದ್ರೋಹಿಯಾಗಿಸುವಂತೆ ಮಾಡುವಲ್ಲಿ ಅವು ಶ್ರಮ ವಹಿಸುತ್ತಿದ್ದುವು. ಇದೀಗ ಕೊರೋನಾ ಈ ಎಲ್ಲವನ್ನೂ ಬಯಲಿಗೆ ತಂದಿದೆ. ನಿಜ ಏನು ಎಂಬುದನ್ನು ಘಂಟಾಘೋಷವಾಗಿ ಸಾರಿದೆ.
ಪತಂಜಲಿ ಸಂಸ್ಥೆಯನ್ನು ಪೋಷಿಸಿ ಬೆಳೆಸುತ್ತಿರುವ ಸರಕಾರವೇ ಪತಂಜಲಿ ಹೊರ ತಂದಿರುವ ಔಷಧಿಯನ್ನು ಒಪ್ಪದಿರುವ ಸ್ಥಿತಿ ಒಂದೆಡೆಯಾದರೆ, ಮುಸ್ಲಿಮರನ್ನು ಹೀನಾಯವಾಗಿ ಕಂಡವರೇ ಅಭಿಮಾನದಿಂದ ಮೆಚ್ಚಿಕೊಳ್ಳುವ ಸ್ಥಿತಿ ಇನ್ನೊಂದೆಡೆ.
ಸುಳ್ಳಿನ ಪರದೆಯನ್ನು ಸರಿಸಿದ ಕೊರೋನಾಕ್ಕೆ ಅಭಿನಂದನೆಗಳು.






