Tuesday, 20 June 2023

ಸಂತ್ರಸ್ತರ ಪರ ನಿಲ್ಲುವುದಕ್ಕೂ ಭಯ ಪಡಬೇಕಾದ ಕಾಲ..


27-6-2022

 ತೀಸ್ತಾ ಸೆಟಲ್ವಾಡ್ ಅವರ ಬಂಧನವಾಗಿದೆ. ಒಂದುವೇಳೆ, ಅವರಿಲ್ಲದೇ ಇರುತ್ತಿದ್ದರೆ ಗುಜರಾತ್ ನರಮೇಧದ ಸಂತ್ರಸ್ತರು ಹೇಗಿರುತ್ತಿದ್ದರು? ಅವರು ತಮ್ಮ ಕಮ್ಯುನಲಿಸಂ ಕೋಂಬಾಟ್ ಪತ್ರಿಕೆಯನ್ನು ವರ್ಷಗಳ ಕಾಲ ಗುಜರಾತ್ ಸಂತ್ರಸ್ತರ ಸಂಕಟಗಳಿಗೆ ಮೀಸಲಿಡದೇ ಇರುತ್ತಿದ್ದರೆ ಮತ್ತು ನರಮೇಧದ ಒಳಸಂಚುಗಳನ್ನು ಇಂಚಿಂಚಾಗಿ ನಾಗರಿಕ ಸಮಾಜದ ಮುಂದಿಡದೇ ಇರುತ್ತಿದ್ದರೆ, ಏನಾಗಿರುತ್ತಿತ್ತು? ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್ ಎಂಬ ಸರಕಾರೇತರ ಸಂಸ್ಥೆಯನ್ನು ಸ್ಥಾಪಿಸಿ ನರಮೇಧದ ಸಂತ್ರಸ್ತರನ್ನು ಕೋರ್ಟಿಗೆ ಹೋಗುವಂತೆ ಧೈರ್ಯ ತುಂಬದೇ ಇರುತ್ತಿದ್ದರೆ, ಒಂದೇ ಒಂದು ಪ್ರಕರಣವಾದರೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತಿತ್ತೇ?

ತನ್ನವರನ್ನು ಕಳಕೊಂಡದ್ದಲ್ಲದೇ ಭೀಕರ ಅತ್ಯಾಚಾರಕ್ಕೂ ಗುರಿಯಾದ ಬಿಲ್ಕೀಸ್‌ಗೆ 50 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ನೀಡುವಂತೆ ಸುಪ್ರೀಮ್ ಕೋರ್ಟು ಗುಜರಾತ್ ಸರಕಾರಕ್ಕೆ ಆದೇಶಿಸಿದ್ದರೆ, ಅದಕ್ಕೆ ಕಾರಣ ಇದೇ ಸೆಟಲ್ವಾಡ್. ಗುಜರಾತ್ ನರಮೇಧಕ್ಕೆ ಸಂಬಂಧಿಸಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದರೆ, ಅದರ ಹಿಂದಿನ ರೂವಾರಿ ಇದೇ ಸೆಟಲ್ವಾಡ್.

ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಸುಮಾರು 50ರಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ. ಇವರಲ್ಲಿ ಗಲ್ಲು ಶಿಕ್ಷೆಗೆ ಒಳಗಾದವರು ಮತ್ತು ಜೀವಾವಧಿ ಶಿಕ್ಷೆಗೆ ಒಳಗಾದವರೂ ಇದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವೆಯಾಗಿದ್ದ ಮಾಯಾ ಕೊಡ್ನಾನಿಯ ನ್ನು ಕಟಕಟೆಯಲ್ಲಿ ನಿಲ್ಲಿಸಲು ಸಾಧ್ಯವಾಗಿದ್ದಿದ್ದರೆ ಅದರ ಹಿಂದೆ ಸೆಟಲ್ವಾಡ್‌ರ ಶ್ರಮ ಸಾಕಷ್ಟಿದೆ. ಗುಜರಾತ್ ನರಮೇಧಕ್ಕೆ ಸಂಬಂಧಿಸಿ ತೀಸ್ತಾ ಸಂತ್ರಸ್ತರ ಆಮ್ಲಜನಕವಾಗಿದ್ದರು. ಪ್ರಭುತ್ವದ ಮೌನ ಸಮ್ಮತಿಯೊಂದಿಗೆ ನರಮೇಧವೊಂದು ನಡೆದಾಗ ಸಂತ್ರಸ್ತರ ಮುಂದೆ ಎರಡ್ಮೂರು ಸವಾಲುಗಳಿರುತ್ತವೆ.
1. ಪ್ರಭುತ್ವವೇ ಅವರ ವಿರುದ್ಧ ನಿಂತಿರುವುದು.
2. ಸಂತ್ರಸ್ತರೆಂಬ ನೆಲೆಯಲ್ಲಿನ ಅಸಹಾಯಕತೆ.
3. ನ್ಯಾಯಕ್ಕಾಗಿ ಕೋರ್ಟು ಮೆಟ್ಟಲು ಹತ್ತಬೇಕಾದರೆ ಎದುರಾಗುವ ಹಣಕಾಸಿನ ಅಡಚಣೆ.

ಎಲ್ಲಕ್ಕಿಂತ ದೊಡ್ಡ ಸವಾಲಿನ ಕೆಲಸವೇನೆಂದರೆ, ಪ್ರಭುತ್ವವನ್ನು ಎದುರು ಹಾಕಿಕೊಳ್ಳುವುದು. ಗುಜರಾತ್ ನರಮೇಧದಲ್ಲಿ ಬದುಕುಳಿದ ಸಂತ್ರಸ್ತರು ತಮ್ಮ ಮೇಲಾದ ದೌರ್ಜನ್ಯ ಮತ್ತು ತಾವು ಕಂಡುಂಡ ಭೀಕರ ದೃಶ್ಯದ ವಿವರಗಳನ್ನು ದಾಖಲಿಸಬೇಕಿದ್ದುದು ಪೊಲೀಸ್ ಠಾಣೆಗಳಲ್ಲಿ. ಆದರೆ ಹೆಚ್ಚಿನ ಕ್ರೌರ್ಯಗಳು ಈ ಪೊಲೀಸ್ ಠಾಣೆಗಳ ನಿಷ್ಕ್ರೀಯತೆ ಅಥವಾ ಬೆಂಬಲದಿಂದಲೇ ನಡೆದಿದ್ದುವು. ಆದ್ದರಿಂದ, ಸಂತ್ರಸ್ತರೋರ್ವರು ಠಾಣೆಯೊಂದರ ಮೆಟ್ಟಲೇರುವುದು ಮತ್ತು ದೂರು ದಾಖಲಿಸುವುದು ಸುಲಭ ಅಲ್ಲ. ಅಲ್ಲಿನ ಪೊಲೀಸರು ಬಿಡಿ, ಕಂಭ ಕಂಭಗಳೂ ಆ ಸಂತ್ರಸ್ತರನ್ನು ದುರುಗುಟ್ಟಿ ನೋಡುವುದು ಸಹಜ. ಇಂಥ ಸವಾಲನ್ನು, ಆಗಷ್ಟೇ ತನ್ನವರನ್ನೆಲ್ಲ ಕಳಕೊಂಡು ಬೀದಿ ಪಾಲಾಗಿರುವ ಓರ್ವ ಸಂತ್ರಸ್ತ ಎದುರಿಸುವುದು ಸುಲಭ ಅಲ್ಲ. ತೀಸ್ತಾ ಮುಖ್ಯವಾಗುವುದೇ ಇಲ್ಲಿ. ದೇಶ ಕಂಡ ಪ್ರಪ್ರಥಮ ಅಟಾರ್ನಿ ಜನರಲ್ ಚಿಮನ್‌ಲಾಲ್ ಸೆಟಲ್ವಾಡ್‌ರ ಮೊಮ್ಮಗಳಾದ ಮತ್ತು ನ್ಯಾಯವಾದಿ ಅತುಲ್ ಸೆಟಲ್ವಾಡ್‌ರ ಮಗಳಾದ ತೀಸ್ತಾರಲ್ಲಿ ಸಹಜವಾಗಿಯೇ ಕಾನೂನು ಪರಿಜ್ಞಾನ ಚೆನ್ನಾಗಿತ್ತು. ಜೊತೆಗೆ ಅವರು ಮುಂಬೈಯಲ್ಲಿ ಬೆಳೆದವರಾದರೂ ಹುಟ್ಟಿದ್ದು ಗುಜರಾತ್ ನಲ್ಲಿದುದರಿಂದ ಆ ಮಣ್ಣಿನ ಗುಣವನ್ನು ಅವರು ಚೆನ್ನಾಗಿಯೇ ಬಲ್ಲವರಾಗಿದ್ದರು.

1992ರಲ್ಲಿ ಮುಂಬೈ ಗಲಭೆ ನಡೆದಾಗ, ಅದನ್ನು ಹತ್ತಿರದಿಂದ ಕಂಡು ಮಾಧ್ಯಮಗಳಿಗೆ ವರದಿ ಮಾಡಿದ ಅನುಭವವೂ ಅವರಿಗಿತ್ತು. ಕೋಮು ಘರ್ಷಣೆಯ ಹೆಸರಲ್ಲಿ ನಡೆಯುವ ಜನಾಂಗೀಯ ಹಿಂಸೆ ಮತ್ತು ಏಕಮುಖ ಹತ್ಯಾಕಾಂಡಗಳನ್ನು ಅವರಿಗೆ ಮುಂಬೈ ಗಲಭೆ ಚೆನ್ನಾಗಿ ಪರಿಚಯಿಸಿತ್ತು. ಆದ್ದರಿಂದಲೇ, 2002ರ ಗುಜರಾತ್ ನರಮೇಧ ಕ್ಕಿಂತ 5 ವರ್ಷಗಳ ಮೊದಲೇ ಹತ್ಯಾಕಾಂಡವೊಂದರ ಭೀತಿಯನ್ನು ಅವರು ವ್ಯಕ್ತಪಡಿಸಿದ್ದರು ಮತ್ತು ವಿವಿಧ ದಾಖಲೆ ಹಾಗೂ ವರದಿಗಳನ್ನು ಸಂಗ್ರಹಿಸಿ ನ್ಯಾಯವಾದಿಗಳ ಬಾಗಿಲು ತಟ್ಟಿದ್ದರು. ಅಂದಹಾಗೆ, ತೀಸ್ತಾ ಅವರ ಛಲ ಬಿಡದ ಹೋರಾಟಕ್ಕೆ ಒಂದು ಸಾಕ್ಷ್ಯ ಬೇಕೆಂದರೆ ಅದು ಬಿಲ್ಕೀಸ್ ಬಾನು ಪ್ರಕರಣ. ಬೆಸ್ಟ್ ಬೇಕರಿ ಮತ್ತು ಬಿಲ್ಕೀಸ್ ಬಾನು ಪ್ರಕರಣದ ತನಿಖೆಯನ್ನು ಗುಜರಾತ್ ಪೊಲೀಸರು ಕೈಬಿಟ್ಟಿದ್ದರು. ತೀಸ್ತಾ ಸುಮ್ಮನಾಗಲಿಲ್ಲ. ಬಿಲ್ಕೀಸ್‌ರಲ್ಲಿ ಧೈರ್ಯ ತುಂಬಿದರು. ನ್ಯಾಯವನ್ನು ಪಡೆದೇ ತೀರಬೇಕೆಂಬ ಛಲ ಹುಟ್ಟಿಸಿದರು. ಅವರಿಂದಾಗಿಯೇ ಆ ಪ್ರಕರಣ ಸುಪ್ರೀಮ್ ಮೆಟ್ಟಿಲೇರಿತು ಮತ್ತು ಸುಪ್ರೀಮ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿ.ಎನ್.ಖರೆ ಅವರು ಪ್ರಕರಣದ ಮರು ತನಿಖೆಗೆ ಆದೇಶಿಸಿದ್ದರು.

ನಿಜವಾಗಿ, ಪ್ರಭುತ್ವ ಭಾಗಿಯಾದ ಯಾವುದೇ ನರಮೇಧವು ಹೆಚ್ಚು ಸಮಯ ಸಾರ್ವಜನಿಕವಾಗಿ ಚರ್ಚೆಯಲ್ಲಿರುವುದು ಕಡಿಮೆ. ಇದಕ್ಕೆ ಕಾರಣ, ಪ್ರಭುತ್ವದ ಭೀತಿ. ರಾಷ್ಟ್ರೀಯ ಮಾಧ್ಯಮಗಳು ಒಂದಿಷ್ಟು ದಿನ ಇಂಥ ಕ್ರೌರ್ಯಗಳ ಅಷ್ಟಿಷ್ಟು ವರದಿಯನ್ನು ಮಾಡಿ ಬಳಿಕ ಬೆನ್ನು ಹಾಕುವುದು ರೂಢಿ. ಆದರೆ ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಈ ಮಾತು ಸುಳ್ಳಾಗಿದ್ದರೆ ಅದರ ಪೂರ್ಣ ಶ್ರೇಯಸ್ಸು ತೀಸ್ತಾರಿಗೆ ಸಲ್ಲಬೇಕು. ಗುಜರಾತ್ ನರಮೇಧಕ್ಕೆ ಪೂರ್ವಭಾವಿಯಾಗಿ ನಡೆದಿರಬಹುದಾದ ಸಂಚುಗಳಿಂದ ಹಿಡಿದು, ಇಡೀ ನರಮೇಧಕ್ಕೆ ನೇತೃತ್ವ ನೀಡಿದವರು, ಪ್ರಚೋದನೆ ಕೊಟ್ಟವರು ಮತ್ತು ಮಾಧ್ಯಮಗಳ ಸುಳ್ಳು ಸುದ್ದಿಗಳನ್ನು ತೀಸ್ತಾ ತನ್ನ ಕಮ್ಯುನಲಿಸಂ ಕೊಂಬಾಟ್ ಪತ್ರಿಕೆಯಲ್ಲಿ ಯಾವ ಮುಲಾಜೂ ಇಲ್ಲದೇ ಪ್ರಕಟಿಸತೊಡಗಿದರು. ನಿಜವಾಗಿ,

ತನ್ನ ಪತ್ರಿಕೆಯನ್ನು ಅವರು ಕೇವಲ ಗುಜರಾತ್ ನರಮೇಧದ ಬಲಿಪಶುಗಳಿಗಾಗಿಯೇ ಅರ್ಪಿಸಿದ್ದರು. ಆರಂಭದಿಂದ ಕೊನೆಪುಟದ ವರೆಗೆ ನರಮೇಧದ ಇಂಚಿಂಚು ವಿವರಗಳು ಮತ್ತು ಕಾನೂನು ಪ್ರಕ್ರಿಯೆಗಳ ಮಾಹಿತಿಗಾಗಿ ಮೀಸಲಿಟ್ಟರು. ಸಂತ್ರಸ್ತರನ್ನು ಭೇಟಿಯಾಗಿ ಅವರ ಮಾತುಗಳನ್ನು ಗುಜರಾತ್‌ನಿಂದ ಹೊರಗಿನ ಓದುಗರಿಗೆ ತಲುಪಿಸಿದರು. ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯ ಮಾಹಿತಿಗಳನ್ನು ನೀಡುತ್ತಾ ಬಂದರು. ಎಲ್ಲೆಲ್ಲ ಸಂತ್ರಸ್ತರಿದ್ದರೋ ಅವರೆಲ್ಲರಿಗೂ ಏಕಧ್ವನಿ ಬರುವಂತೆ ಮತ್ತು ಧೈರ್ಯದಿಂದಿರುವಂಥ ವಾತಾವರಣ ಸೃಷ್ಟಿಸಿದರು. ಗುಜರಾತ್‌ನಿಂದ ಹೊರಬಂದು ವಿವಿಧ ರಾಜ್ಯಗಳಲ್ಲಿ ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಮಾಹಿತಿಗಳನ್ನು ಹಂಚಿಕೊಂಡರು. ಯಾವ ಕಾರಣಕ್ಕೂ ಗುಜರಾತ್ ನರಮೇಧದ ರೂವಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಮತ್ತು ಈ ನರಮೇಧ ಸಾರ್ವಜನಿಕ ಪ್ರಜ್ಞೆಯಿಂದ ಮಾಸಿ ಹೋಗಬಾರದು ಎಂಬ ಪ್ರಾಮಾಣಿಕ ಕಳಕಳಿ ತೀಸ್ತಾರಲ್ಲಿತ್ತು. ಒಂದು ನರಮೇಧದ ಪ್ರಜ್ಞೆ ಸಾರ್ವಜ ನಿಕವಾಗಿ ಇರುವವರೆಗೆ ಇನ್ನೊಂದು ನರಮೇಧ ಸುಲಭ ಅಲ್ಲ. ಯಾಕೆಂದರೆ,

ಜನರು ತಕ್ಷಣಕ್ಕೆ ಎಚ್ಚೆತ್ತುಕೊಳ್ಳುತ್ತಾರೆ. ನರಮೇಧದ ಸಾಧ್ಯತೆಗಳನ್ನು ಗುರುತಿಸಿ ಸಮಾಜಕ್ಕೆ ಎಚ್ಚರಿಕೆಯನ್ನು ರವಾನಿಸುತ್ತಾರೆ. ಕಳೆದ 20 ವರ್ಷಗಳಲ್ಲಿ ತೀಸ್ತಾ ತನ್ನ ಆಯು ಷ್ಯದ ಬಹುತೇಕ ಸಮಯವನ್ನು ಇನ್ನೊಂದು ನರಮೇಧ ನಡೆಯದಂತೆ ತಡೆಯುವುದಕ್ಕಾಗಿ ಮೀಸಲಿ ಟ್ಟರು ಎಂದರೂ ಸರಿ. 2002ರ ಗುಜರಾತ್ ಹತ್ಯಾಕಾಂಡಕ್ಕೆ ಪೂರ್ವಭಾವಿಯಾಗಿ ಅಲ್ಲಿನ ಆದಿವಾಸಿಗಳು, ಕ್ಷತ್ರಿಯ, ಹರಿಜನರಲ್ಲಿ ಹೇಗೆ ಮುಸ್ಲಿಮ್ ದ್ವೇಷವನ್ನು ಗಟ್ಟಿಗೊಳಿಸಲಾಗುತ್ತಾ ಬರಲಾಯಿತು ಎಂಬ ಮಾಹಿತಿ ತೀಸ್ತಾರಲ್ಲಿ ಇದ್ದುದರಿಂದಲೇ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ದೇಶದಾದ್ಯಂತ ಸುತ್ತಿದರು. ಒಂದುಕಡೆ, ತನ್ನ ಸಿಟಿಜನ್ಸ್ ಫಾರ್ ಜಸ್ಟೀಸ್ ಎಂಡ್ ಪೀಸ್ ಎಂಬ ಸಂಸ್ಥೆಯ ಮೂಲಕ ಗುಜರಾತ್ ಸಂತ್ರಸ್ತರಲ್ಲಿ ಧೈರ್ಯ ತುಂಬುತ್ತಾ ಮತ್ತು ಇನ್ನೊಂದು ಕಡೆ, ತನ್ನ ಕಮ್ಯುನಲಿಸಂ ಕೊಂಬಾಟ್ ಮೂಲಕ ದೇಶದ ಉದ್ದಗಲದ ಭಾರತೀಯರಲ್ಲಿ ನರಮೇಧದ ಪೈಶಾಚಿಕತೆಯನ್ನು ವಿವರಿಸುತ್ತಾ ನಡೆದರು. ಇದರಿಂದಾಗಿ ಪ್ರಭುತ್ವ ಮತ್ತು ಅವರ ಬೆಂಬಲಿಗರ ತೀವ್ರ ವಿರೋಧವನ್ನೂ ಕಟ್ಟಿಕೊಂಡರು. ಅವರನ್ನು ಕಾನೂ ನಿನ ಕುಣಿಕೆಯಲ್ಲಿ ಸಿಲುಕಿಸುವುದಕ್ಕೆ ಒಂದಲ್ಲ ಒಂದು ಪ್ರಯತ್ನಗಳು ನಡೆಯುತ್ತಲೇ ಬಂದುವು. ಇದೀಗ, ಕ್ರಿಮಿನಲ್ ಪಿತೂರಿ, ಸುಳ್ಳು ಸಾಕ್ಷ್ಯಾಧಾರ ಸಲ್ಲಿಕೆ ಮತ್ತು ಸಂತ್ರಸ್ತರ ಭಾವುಕತೆಯನ್ನು ದುರುಪಯೋಗಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಈ ಬಂಧನದ ಹಿಂದೆ ಸುಪ್ರೀಮ್ ಕೋರ್ಟ್‌ನ ಪರಾಮರ್ಶೆಗೂ ಪಾತ್ರ ಇದೆ ಎಂಬುದೇ ಅತಿದೊಡ್ಡ ದುರಂತ. ಒಂದುವೇಳೆ,

ಮುಂಬೈ, ಭೀವಂಡಿ, ಭಾಗಲ್ಪುರ್, ನೆಲ್ಲಿ, ದೆಹಲಿ ಅಥವಾ ಇನ್ನಾವುದೇ ಕಡೆ ನಡೆದ ಹತ್ಯಾಕಾಂಡಗಳ ಬಗ್ಗೆ ತೀಸ್ತಾರಂತೆ ಮಾನವ ಹಕ್ಕು ಕಾರ್ಯಕರ್ತರು ಮತ್ತು ಸಂಘಟನೆಗಳು ರಂಗಕ್ಕಿಳಿಯದೇ ಇರುತ್ತಿದ್ದರೆ ಮತ್ತು ಸಂತ್ರಸ್ತರ ಬೆನ್ನಿಗೆ ನಿಲ್ಲದೇ ಇರುತ್ತಿದ್ದರೆ ಆ ಕ್ರೌರ್ಯಕ್ಕೆ ಕಾರಣರಾದವರು ಕಟಕಟೆಯ ವರೆಗೆ ತಲುಪುತ್ತಿದ್ದರೇ? ತೀಸ್ತಾರಂತೆ ಸಂತ್ರಸ್ತರ ಜೊತೆಗೆ ನಿಲ್ಲುವುದನ್ನೇ ಮತ್ತು ಅವರಲ್ಲಿ ನ್ಯಾಯಕ್ಕಾಗಿ ಆಗ್ರಹಿಸುವ ಕಿಚ್ಚು ತುಂಬುವುದನ್ನೇ ಅಪರಾಧ ಎಂದು ಹೇಳುವುದಾದರೆ, ಸಂತ್ರಸ್ತರಿಗೆ ಇನ್ನು ಮುಂದೆ ನೆರವಾಗಲು ಯಾರು ಸಿಗಬಹುದು? ಅಷ್ಟಕ್ಕೂ, ಇನ್ನು ಮುಂದೆ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋದರೆ ಅದರ ಹೆಸರಲ್ಲಿ ನ್ಯಾಯವಾದಿ ಮತ್ತು ಎಫ್‌ಐಆರ್ ದಾಖಲಿಸಿದ ಪೊಲೀಸರನ್ನು ತೀಸ್ತಾರಂತೆ ಬಂಧಿಸಲಾಗುವುದೇ? ಮೋದಿಯವರಿಗೆ ಕ್ಲೀನ್‌ಚಿಟ್ ಕೊಡುವುದು ಬೇರೆ, ಅವರ ಮೇಲೆ ಕೇಸು ದಾಖಲಿಸಲು ನೆರವಾದುದಕ್ಕೆ ತೀಸ್ತಾರನ್ನು ಬಂಧಿಸುವುದು ಬೇರೆ. ಟೀಸ್ತಾ ಗೆದ್ದು ಬರಲಿ.

ಅಗ್ನಿಪಥ್‌ಗೆ ವಿರೋಧವೇಕೆ? ಎಡವಿದ್ದು ಯಾರು?

 


30-6-2022

2013 ಸೆಪ್ಟೆಂಬರ್ 15ರಂದು ಹರ್ಯಾಣದ ರೆವಾರಿಯಲ್ಲಿ ನಿವೃತ್ತ ಯೋಧರು ರ‍್ಯಾಲಿಯನ್ನು ಸಂಘಟಿಸಿದ್ದರು. ವನ್ ರ‍್ಯಾಂಕ್ ವನ್ ಪೆನ್ಶನ್ (ಸಮಾನ ಶ್ರೇಣಿ ಸಮಾನ ಪಿಂಚಣಿ) ಯೋಜನೆಯನ್ನು ಜಾರಿಗೆ ತರಬೇಕು ಎಂಬುದು ಅವರ ಒತ್ತಾಯವಾಗಿತ್ತು. ಅಂದರೆ, ಸೇನೆಯಿಂದ ಈ ಹಿಂದೆ ನಿವೃತ್ತಿಯಾದವರಿಗೂ ಆ ಬಳಿಕ ನಿವೃತ್ತಿಯಾದವರಿಗೂ ಪಿಂಚಣಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬ ಬೇಡಿಕೆ. ಉದಾಹರಣೆಗೆ, ಯೋಧನಾಗಿ 1990ರಲ್ಲಿ ನಿವೃತ್ತಿಯಾದ ವ್ಯಕ್ತಿಗೂ 2020ರಲ್ಲಿ ಯೋಧನಾಗಿ ನಿವೃತ್ತಿಯಾದ ವ್ಯಕ್ತಿಗೂ ಪಿಂಚಣಿಯಲ್ಲಿ ವ್ಯತ್ಯಾಸ ಇರುತ್ತದೆ. ಯಾಕೆಂದರೆ, 1990ರಲ್ಲಿ ಓರ್ವ ಯೋಧನಿಗೆ ವೇತನ ಎಷ್ಟಿರುತ್ತದೋ 2020ರ ಯೋಧನಿಗೆ ವೇತನ ಅಷ್ಟೇ ಇರುವುದಿಲ್ಲ. ಪಿಂಚಣಿಗೆ ವೇತನ ಮಾನದಂಡ ಆಗಿರುವುದರಿಂದ 1990ರಲ್ಲಿ ನಿವೃತ್ತಿಯಾದ ಯೋಧ ಮತ್ತು 2020ರಲ್ಲಿ ನಿವೃತ್ತಿಯಾದ ಯೋಧ ಒಂದೇ ಶ್ರೇಣಿಯವರಾದರೂ ಪಿಂಚಣಿಯಲ್ಲಿ ವ್ಯತ್ಯಾಸ ಇರುತ್ತದೆ. 1990ರ ಯೋಧ ಕಡಿಮೆ ಪಿಂಚಣಿ ಪಡೆಯುವಾಗ 2020ರ ನಿವೃತ್ತ ಯೋಧ ಅಧಿಕ ಪಿಂಚಣಿ ಪಡೆಯುತ್ತಾನೆ. ಇದು ಯೋಧರ ನಡುವೆ ತಾರತಮ್ಯವಾಗಿದ್ದು, ಪಿಂಚಣಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬುದು ರ‍್ಯಾಲಿನಿರತ ಯೋಧರ ಆಗ್ರಹವಾಗಿತ್ತು.

ಆಗ ಮನ್‌ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು ಮತ್ತು 2014ರ ಲೋಕಸಭಾ ಚುನಾವಣೆಗೆ ರಂಗ ಸಜ್ಜುಗೊಳ್ಳುತ್ತಿತ್ತು. ನರೇಂದ್ರ ಮೋದಿಯವರು ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿತವಾಗಿದ್ದರು. ಅವರು ಈ ಯೋಧರ ರ‍್ಯಾಲಿಯಲ್ಲಿ ಭಾಗವಹಿಸಿ ಮಾತ ನಾಡಿದರಲ್ಲದೇ, ಒಂದು ಶ್ರೇಣಿ, ಒಂದು ಪಿಂಚಣಿ ಎಂಬ ಬೇಡಿಕೆಗೆ ಬೆಂಬಲ ಸಾರಿದ್ದರು. ಇದಾಗಿ ಈಗ 9 ವರ್ಷಗಳೇ ಕಳೆದಿವೆ. ಈಗ ಅದೇ ನರೇಂದ್ರ ಮೋದಿಯವರು ಅಗ್ನಿಪಥ್ ಎಂಬ ಯೋಜನೆಯ ಮೂಲಕ ನೋ ರ‍್ಯಾಂಕ್ ನೋ ಪೆನ್ಶನ್ ಎಂದು ಘೋಷಿಸಿದ್ದಾರೆ. ಅಂದು ನಿವೃತ್ತ ಯೋಧರು ಬೀದಿಗಿಳಿದಿದ್ದರೆ ಇಂದು ಸೇನಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಗ್ನಿಪಥ್ ಯೋಜನೆಯ ಬಗ್ಗೆ ನಿವೃತ್ತ ಸೇನಾಧಿಕಾರಿಗಳು ಮತ್ತು ರಕ್ಷಣಾ ತಜ್ಞರೇ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಗಳನ್ನೆಲ್ಲ ಬಿಜೆಪಿ ವಿರೋಧಿಯೆಂದೋ ವಿರೋಧ ಪಕ್ಷಗಳ ಪಿತೂರಿಯೆಂದೋ ಸಾರಾಸಗಟಾಗಿ ತಳ್ಳಿ ಹಾಕುವುದು ದೇಶದ ಹಿತದೃಷ್ಟಿಯಿಂದ ಅ ಪಾಯಕಾರಿ. ಒಂದುಕಡೆ, ಈ ದೇಶದ ಮೇಲೆ ಕಣ್ಣಿಟ್ಟಿರುವ ಚೀನಾ ಮತ್ತು ಪಾಕಿಸ್ತಾನವಿದೆ. ನೆರೆಕರೆಯ ದೇಶಗಳ ಜೊತೆಗೂ ಭಾರತದ ಸಂಬಂಧ ಉತ್ತಮವಾಗಿಲ್ಲ. ಚೀನಾ ಯಾವ ಸಂದರ್ಭದಲ್ಲೂ ಈ ರಾಷ್ಟ್ರಗಳನ್ನು ಬಳಸಿಕೊಂಡು ದೇಶದ ಮೇಲೆ ಆಕ್ರಮಣ ನಡೆಸುವುದಕ್ಕೆ ಅವಕಾಶವಿದೆ. ಇನ್ನೊಂದು ಕಡೆ, ಈಶಾನ್ಯ ಭಾರತದಲ್ಲಿ ಬಂಡಾಯ ಚಟುವಟಿಕೆಯಿದೆ. ಕಾಶ್ಮೀರವೂ ಸುಖವಾಗಿಲ್ಲ. ಇಂಥ ಸ್ಥಿತಿಯಲ್ಲಿ, ಅನುಭವಿ ಮತ್ತು ನಿಪುಣ ಯೋಧರ ಅಗತ್ಯ ಬಹಳವೇ ಇದೆ.

ಅಗ್ನಿಪಥ್ ಯೋಜನೆಯಂತೆ, 17ರಿಂದ 25 ವರ್ಷದೊಳಗಿನವರನ್ನು ನಾಲ್ಕು ವರ್ಷಗಳ ಅವಧಿಗೆ ಯೋಧರಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಯೋಧರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಮೊದಲ ವರ್ಷ 46 ಸಾವಿರ ಅಗ್ನಿವೀರರನ್ನು ಆಯ್ಕೆ ಮಾಡಲಿದ್ದು, ಈ ಆಯ್ಕೆ ಪ್ರಕ್ರಿಯೆ 90 ದಿನಗಳಲ್ಲಿ ಮುಗಿಯಲಿದೆ. ಪ್ರತಿ ವರ್ಷದಂತೆ ನಾಲ್ಕು ವರ್ಷಗಳವರೆಗೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸೇರ್ಪಡೆಯಾಗುವ ಯೋಧರಿಗೆ 12ನೇ ತರಗತಿಯ ಪ್ರಮಾಣ ಪತ್ರ ನೀಡಲಾಗುವುದು. ಮಾತ್ರವಲ್ಲ, ನಾಲ್ಕು ವರ್ಷಗಳ ಬಳಿಕ ನಿವೃತ್ತರಾಗುವ ಯೋಧರು ಪೂರ್ಣಾವಧಿ ಸೇವೆಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಇವರಲ್ಲಿ 25% ಮಂದಿಯನ್ನು ಮಾತ್ರ ಪೂರ್ಣಾವಧಿಗೆ ಆಯ್ಕೆ ಮಾಡಲಾಗುತ್ತದೆ.

ಸಮಸ್ಯೆ ಇರುವುದೂ ಇಲ್ಲಿ. ಯೋಧರನ್ನು ದೇಶಸೇವೆ ಮಾಡುವವರು ಎಂದು ಗುರುತಿಸಲಾಗುತ್ತದೆಯೇ ಹೊರತು ವೃತ್ತಿನಿರತರೆಂದಲ್ಲ. ಭಾರತೀಯ ಸೇನೆ ಸೇರುವುದೆಂದರೆ, ಅದೊಂದು ಹೆಮ್ಮೆ. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ತಾನ, ಬಿಹಾರ ಮುಂತಾದ ರಾಜ್ಯಗಳು ಯುವಕರನ್ನು ದೊಡ್ಡ ಮಟ್ಟದಲ್ಲಿ ದೇಶಸೇವೆಗೆಂದು ಕಳಿಸುತ್ತಿದೆ. ಯೋಧನ ಕುಟುಂಬವೊಂದು ತಮ್ಮ ಗ್ರಾಮದಲ್ಲಿರುವುದನ್ನುಈ ಊರಿನವರು ಹೆಮ್ಮೆಯೆಂದು ಭಾವಿಸುವ ವಾತಾವರಣವಿದೆ. ದೇಶಸೇವೆಯ ನಡುವೆ ರಜೆಯಲ್ಲಿ ಊರಿಗೆ ಮರಳುವ ಯೋಧನಿಗೆ ಅಪಾರ ಗೌರವವೂ ಲಭ್ಯವಾಗುತ್ತದೆ. ಎಷ್ಟೋ ಬಾರಿ ಯೋಧರ ಸಾಹಸಪೂರ್ಣ ಸೇವೆಗಾಗಿ ಯೋಧರನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಊರೇ ಸಂಭ್ರಮಿಸುತ್ತದೆ. ಆದರೆ, ನಾಲ್ಕು ವರ್ಷಗಳ ಸೇವೆಯ ಬಳಿಕ ಯೋಧ ಎಂಬ ಹಣೆಪಟ್ಟಿಯನ್ನು ಕಳಚಿಟ್ಟು ಸರ್ಕಾರ ಕೊಡುವ 11 ಲಕ್ಷ ರೂಪಾಯಿಯನ್ನು ಪಡೆದುಕೊಂಡು ಮರಳುವವನಿಗೆ/ಳಿಗೆ ಈ ಗೌರವ ಲಭ್ಯವಾದೀತೇ ಎಂಬುದು ಮೊದಲ ಪ್ರಶ್ನೆ. ಹೀಗೆ ನಿವೃತ್ತರಾಗುವ ಯೋಧರಿಗೆ ಪಿಂಚಣಿಯಿಲ್ಲ. ಪೂರ್ಣಾವಧಿ ಯೋಧರಿಗೆ ಸಿಗುವ ಭೂಮಿ, ಶಿಕ್ಷಣ ಮೀಸಲಾತಿ, ಆರೋಗ್ಯ ರಿಯಾಯಿತಿಗಳೂ ಸಿಗಲ್ಲ. ಈ ನಾಲ್ಕು ವರ್ಷಗಳಲ್ಲಿ ಅವರ ಶಿಕ್ಷಣವೂ ಮೊಟಕುಗೊಳ್ಳುತ್ತದೆ. 12ನೇ ತರಗತಿಯ ಸರ್ಟಿಫಿಕೇಟನ್ನು ಮತ್ತು 11 ಲಕ್ಷವನ್ನು ಹಿಡಿದುಕೊಂಡು ಅವರು ತನ್ನೂರಿಗೆ ಮರಳುತ್ತಾರೆ. ಆ ಬಳಿಕ ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಬೇಕಾಗುತ್ತದೆ. ವೃತ್ತಿಗಾಗಿ ಹುಡುಕಾಟ ನಡೆಸಬೇಕಾಗುತ್ತದೆ. ಅಂದಹಾಗೆ, ದೇಶದಲ್ಲಿ ಇವತ್ತು ನಿರುದ್ಯೋಗದ ಸಮಸ್ಯೆ ಉಚ್ಛ್ರಾಯ ಸ್ಥಿತಿಯಲ್ಲಿದೆ. ಕೊರೋನಾ ನೆಪದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸೇನಾ ಭರ್ತಿ ನಡೆದೂ ಇಲ್ಲ. ಅಲ್ಲದೇ,

ಭಾರತೀಯ ಸೇನೆ ಸದ್ಯ ಒಂದು ಲಕ್ಷ ಯೋಧರ ಕೊರತೆಯನ್ನು ಎದುರಿಸುತ್ತಲೂ ಇದೆ. ಇಂಥ ಸ್ಥಿತಿಯಲ್ಲಿ ಪೂರ್ಣಾವಧಿ ಯೋಧರ ಬದಲು ನಾಲ್ಕು ವರ್ಷಗಳ ಗುತ್ತಿಗೆಯಾಧಾರಿತ ಯೋಧರ ಆಯ್ಕೆಯನ್ನು ದಿಢೀರ್ ಘೋಷಿಸಿದರೆ ಏನಾದೀತು? ಉತ್ತರ ಭಾರತದಲ್ಲಿ ಸೇನಾ ಆಯ್ಕೆಗೆ ತರಬೇತಿ ನೀಡಲೆಂದೇ ಅನೇಕ ಕೋಚಿಂಗ್ ಸೆಂಟರ್‌ಗಳಿವೆ. ಇಲ್ಲಿ ವರ್ಷಗಳಿಂದ ಯುವಕರು ದೈಹಿಕ ಕಸರತ್ತು ನಡೆಸುತ್ತಲೂ ಇದ್ದಾರೆ. ಜೀವನ ಭದ್ರತೆಯ ಜೊತೆಗೇ ಜೀವಿತ ಕಾಲದ ವರೆಗೆ ಯೋಧರೆಂಬ ಗೌರವ ಲಭಿಸುವ ನಿರೀಕ್ಷೆಯೇ ಅವರ ಸೇನಾ ಸೇರ್ಪಡೆಗೆ ಕಾರಣ. ಅಂದಹಾಗೆ,

ಅಗ್ನಿವೀರ್ ವಿಚಲಿತಗೊಳಿಸಿದ್ದು ಇಂಥ ಯುವ ಸಮೂಹವನ್ನು. ಅವರೆಲ್ಲರ ನಿರೀಕ್ಷೆಗಳನ್ನು ಅಗ್ನಿಪಥ್ ಯೋಜನೆ ಮಣ್ಣುಪಾಲು ಮಾಡಿದೆ. ದೇಶಸೇವೆಯೆಂಬ ಹೊಣೆಗಾರಿಕೆಯನ್ನು ಗುತ್ತಿಗೆಯಾಧಾರಿತ ವೃತ್ತಿಮಟ್ಟಕ್ಕೆ ಇಳಿಸಿರುವುದಕ್ಕೆ ಅವರಲ್ಲಿ ಆಕ್ರೋಶ ಇದೆ. 2013ರಲ್ಲಿ ಒಂದೇ ಶ್ರೇಣಿ ಒಂದೇ ಪಿಂಚಣಿಯನ್ನು ಬೆಂಬಲಿಸಿದ ಇದೇ ಮೋದಿಯವರು ಇವತ್ತು ಯೋಧರಿಗೆ ಪಿಂಚಣಿ ಕೊಡುವುದು ರಕ್ಷಣಾ ಇಲಾಖೆಗೆ ಹೊರೆಯಾಗುತ್ತದೆ ಎಂದು ಹೇಳುತ್ತಿರುವುದು ಅವರಲ್ಲಿ ಅಸಮಾಧಾನ ಮೂಡಿಸಿದೆ. ಈಗಿನ ಬಜೆಟ್‌ನಲ್ಲಿ ಕೇವಲ ಯೋಧರ ಪಿಂಚಣಿಗಳಿಗೆ 1,19,696 ಕೋಟಿ ರೂಪಾಯಿಯನ್ನು ಮೀಸಲಿರಿಸಲಾಗಿದ್ದರೆ, 1,63,453 ಕೋಟಿ ರೂಪಾಯಿಯನ್ನು ಯೋಧರ ವೇತ ನಕ್ಕಾಗಿ ಮೀಸಲಿರಿಸಲಾಗಿದೆ. ಇದು ಭಾರೀ ಹೊರೆ ಎಂದು ಸರ್ಕಾರ ವಾದಿಸುತ್ತಿದೆ. ಒಟ್ಟು ರಕ್ಷಣಾ ಬಜೆಟ್‌ನ ಪೈಕಿ 54%ದಷ್ಟು ಹಣವೂ ಕೇವಲ ಪಿಂಚಣಿ ಮತ್ತು ವೇತನಕ್ಕಾಗಿ ಖರ್ಚಾಗುತ್ತಿದೆ ಎಂಬ ಅಂಕಿ-ಅಂಶವನ್ನು ಸರ್ಕಾರ ಮುಂದಿಡುತ್ತಿದೆ. ಈ ಖರ್ಚನ್ನು ತಗ್ಗಿಸುವುದಕ್ಕಾಗಿಯೇ ಯೋಧರನ್ನು ಗುತ್ತಿಗೆಯಾಧಾರಿತ ಕಾರ್ಮಿಕರಂತೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬುದು ಸರ್ಕಾರದ ಪರೋಕ್ಷ ಸಮರ್ಥನೆ. ಆದರೆ,

ದೇಶಸೇವೆ ಎಂಬುದು ಗುತ್ತಿಗೆ ಆಧಾರಿತ ವೃತ್ತಿಯಲ್ಲ. ಅದೊಂದು ಗೌರವ, ಹೆಮ್ಮೆ. ಬಿಜೆಪಿ ಈ ಯೋಧರನ್ನೇ ತೋರಿಸಿ ಮತ ಯಾಚಿಸಿದ ಪಕ್ಷ. ದೇಶಪ್ರೇಮ, ದೇಶಭಕ್ತಿ ಎಂಬುದು ಬಿಜೆಪಿಯ ಅನುದಿನದ ಸ್ಲೋಗನ್. ಇಂಥ ಪಕ್ಷವೊಂದು ಯೋಧರ ಪಿಂಚಣಿಯ ನ್ನು ಹೊರೆ ಎಂದು ಪರಿಗಣಿಸುವುದು ಮತ್ತು ಅವರ ಸೇವೆಯನ್ನು ವೃತ್ತಿಯೆಂದು ತೃಣೀಕರಿಸುವುದು ಅಪ್ಪಟ ದೇಶದ್ರೋಹದ ಕೃತ್ಯ. ಶಾಸಕರು, ಸಂಸದರು ಜೀವನಪೂರ್ತಿ ಪಡೆಯುವ ಪಿಂಚಣಿಯನ್ನು ಹೊರೆ ಎಂದು ಪರಿಗಣಿಸದ ಮತ್ತು ಅದಕ್ಕೆ ಯಾವ ವಿರೋಧವ ನ್ನೂ ವ್ಯಕ್ತಪಡಿಸದ ಬಿಜೆಪಿ, ಯೋಧರ ಪಿಂಚಣಿಯನ್ನು ಮಾತ್ರ ಹೊರೆ ಎಂದು ಪರಿಗಣಿಸಿರುವುದು ಅದರ ಯೋಧ ದ್ರೋಹಕ್ಕೆ ಅತ್ಯುತ್ತಮ ಉದಾಹರಣೆ.

ಯೋಧರು ಎಂದೂ ಈ ದೇಶಕ್ಕೆ ಹೊರೆಯಲ್ಲ, ಅವರು ಈ ದೇಶದ ಆಸ್ತಿ. ಕೈಯಲ್ಲಿ 11 ಲಕ್ಷ ರೂಪಾಯಿಯನ್ನು ಕೊಟ್ಟು ನಾಲ್ಕು ವರ್ಷಗಳ ಬಳಿಕ ಮನೆಗೆ ಅಟ್ಟುವುದು ಸಣ್ಣ ಸಂಗತಿಯಲ್ಲ. ಇಂಥ ಬೆಳವಣಿಗೆ ಅವರನ್ನು ವಿಚಲಿತಗೊಳಿಸುವ ಸಾಧ್ಯತೆಯಿದೆ. ಬಳಿಕ ಉದ್ಯೋಗದ ಸಮಸ್ಯೆಯೂ ಅವರನ್ನು ಕಾಡಲಿದೆ. ಇಂಥ ವಿಚಲಿತ ಮತ್ತು ಆಕ್ರೋಶಿತ ನಿರುದ್ಯೋಗಿ ಯುವ ಸಮೂಹವನ್ನು ರಾಜಕೀಯ ಮತ್ತು ಸಮಾಜದ್ರೋಹಿ ಶಕ್ತಿಗಳು ಮುಂದೆ ದುರ್ಬಳಕೆ ಮಾಡಿಕೊಳ್ಳಬಹುದು. ರುವಾಂಡ ಮತ್ತು ಯುಗೋಸ್ಲಾವಿಯಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಾಂಗ ಹತ್ಯೆಯಲ್ಲಿ ಮಿಲಿಟರಿ ಪಡೆಯ ದೊಡ್ಡ ಪಾತ್ರವಿರುವುದು ಎಲ್ಲರಿಗೂ ಗೊತ್ತು. ನಾಲ್ಕು ವರ್ಷಗಳ ವೃತ್ತಿಯ ಬಳಿಕ ಸೇನೆಯಿಂದ ಮನೆಗೆ ಮರಳುವವರಲ್ಲಿ ಇಂಥ ಜನಾಂಗ ದ್ವೇಷವನ್ನು ತುಂಬಿ ಸಮಾಜಘಾತುಕರು ದುರು ಪಯೋಗಪಡಿಸುವುದಕ್ಕೂ ಸಾಧ್ಯವಿದೆ. ಆದ್ದರಿಂದ, ಅಗ್ನಿಪಥ್ ಯೋಜನೆ ಮರುಪರಿಶೀಲನೆ ಬಹಳ ಅಗತ್ಯ. ದೇಶ ಕಾಯುವ ಯೋಧರನ್ನು ದಯವಿಟ್ಟು ಅವಮಾನಿಸಬೇಡಿ.

ಮುಸ್ಲಿಮ್ ಸಮುದಾಯದ ಮೇಲಿನ ಆರೋಪವನ್ನು ಸುಳ್ಳು ಮಾಡಿದ ನೂಪುರ್ ಶರ್ಮಾ

 


7-7-2022

ನೂಪುರ್ ಶರ್ಮಾರ ಬಗ್ಗೆ ಸುಪ್ರೀಮ್ ಕೋರ್ಟ್‌ನ ಪೀಠವೊಂದು ವ್ಯಕ್ತಪಡಿಸಿದ ಅಭಿಪ್ರಾಯವು ಮುಸ್ಲಿಮರಿಗೆ ನ್ಯಾಯಾಂಗ ನಿಷ್ಠೆಯ ಬಗ್ಗೆ ಪಾಠ ಮಾಡುತ್ತಿದ್ದವರ ಬಣ್ಣವನ್ನು ಮತ್ತೊಮ್ಮೆ ಬಯಲುಗೊಳಿಸಿದೆ.‘ನೂಪುರ್ ಶರ್ಮಾರ ಹೇಳಿಕೆಯೇ ಸಮಸ್ಯೆಯ ಮೂಲ, ಅವರು ದೇಶದ ಕ್ಷಮೆ ಯಾಚಿಸಬೇಕು...’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಂಗ ಪೀಠವನ್ನೇ ಈ ಗುಂಪು ತಪ್ಪಿತಸ್ಥ ಸ್ಥಾನದಲ್ಲಿ ಕೂರಿಸಿದೆ. ಹಿಜಾಬ್ ಪ್ರಕರಣದಲ್ಲಿ ಮುಸ್ಲಿಮರು ನ್ಯಾಯಾಂಗಕ್ಕೆ ಗೌರವವನ್ನು ನೀಡಬೇಕು ಎಂದು ಬೋಧನೆ ಮಾಡುತ್ತಿದ್ದವರೇ ಇದೀಗ, ‘ಇದೇನು ಷರಿಯಾ ಕೋರ್ಟಾ...’ ಎಂದು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಬಾಬರಿ ಮಸೀದಿ ತೀರ್ಪನ್ನು ಐತಿಹಾಸಿಕ ಎಂದು ಸಂಭ್ರಮಿಸಿದ್ದು ಇದೇ ಗುಂಪು. ಈ ತೀರ್ಪಿಗೆ ಮುಸ್ಲಿಮರು ಎಲ್ಲಾದರೂ ಅಸಮಾಧಾನ ಸೂಚಿಸುತ್ತಾರಾ ಎಂದು ದುರ್ಬೀನು ಹಿಡಿದು ಹುಡುಕುತ್ತಿದ್ದುದು ಇದೇ ಗುಂಪು. ಮುಲ್ಲಾ, ಮೌಲಾನಾಗಳ ಬಾಯಿಗೆ ಮೈಕ್ ಇಟ್ಟು ನ್ಯಾಯಾಂಗದ ತೀರ್ಪನ್ನು ಖಂಡಿಸುವ ಸಣ್ಣ ಹೇಳಿಕೆಯಾದರೂ ಹೊರಬೀಳಲಿ... ಎಂದು ಪೀಡಿಸುತ್ತಿದ್ದ ಮಾಧ್ಯಮ ಗುಂಪನ್ನು ಅಭಿಮಾನದಿಂದ ನೋಡುತ್ತಿದ್ದುದೂ ಇದೇ ಗುಂಪು. ಒಂದುರೀತಿಯಲ್ಲಿ,

ಈ ದೇಶದ ಪ್ರಜಾತಂತ್ರ, ಸಂವಿಧಾನ, ನ್ಯಾಯಾಂಗಗಳ ಮೇಲೆಲ್ಲ ನಂಬಿಕೆ ಇಡಬೇಕಾದ ಮತ್ತು ನಿಷ್ಠೆ ವ್ಯಕ್ತಪಡಿಸಬೇಕಾದ ಹೊಣೆಗಾರಿಕೆ ಮುಸ್ಲಿಮರ ಮೇಲಿದೆಯೇ ಹೊರತು ತಮಗಲ್ಲ ಎಂದು ಈ ಗುಂಪು ಸಾರುತ್ತಿದೆ. ಶಬರಿಮಲೆಗೆ ಸಂಬಂಧಿಸಿ ಸುಪ್ರೀಮ್ ಕೋರ್ಟು ನೀಡಿದ ತೀರ್ಪನ್ನು ಇದೇ ಗುಂಪು ಬಲವಾಗಿ ವಿರೋಧಿಸಿತ್ತು. ವಿರೋಧಿಸಿದ್ದು ಮಾತ್ರವಲ್ಲ, ಕೇರಳದಲ್ಲಿ 7 ಹರತಾಳಗಳು ನಡೆದಿದ್ದುವು. ಒಂದು ರಾಜ್ಯ ಬಂದ್ ಕೂಡಾ ನಡೆದಿತ್ತು. ಶಬರಿಮಲೆ ಪ್ರವೇಶಿಸಲು ಯತ್ನಿಸಿದ ಸುಮಾರು 10ರಷ್ಟು ಮಹಿಳೆಯರನ್ನು ಥಳಿಸಿ ಹಿಂದಕ್ಕೆ ಕಳುಹಿಸಲಾಗಿತ್ತು. ಹರತಾಳ ಎಷ್ಟು ಕಾನೂನು ಬಾಹಿರವಾಗಿತ್ತೆಂದರೆ, ಕೇರಳ ರಸ್ತೆ ಸಾರಿಗೆ ಸಂಸ್ಥೆಯ ನೂರಕ್ಕಿಂತಲೂ ಅಧಿಕ ಬಸ್‌ಗಳಿಗೆ ಹಾನಿ ಎಸಗಲಾಗಿತ್ತು. ಸರ್ಕಾರಿ ಲೈಬ್ರರಿ ಮತ್ತು ಕಟ್ಟಡಗಳನ್ನು ಪುಡಿಗೈಯಲಾಗಿತ್ತು. ಸುಮಾರು 500ರಷ್ಟು ಪ್ರಕರಣಗಳು ದಾಖಲಾಗಿದ್ದುವು. ಸಾವಿರಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಲಾಗಿತ್ತು. ನಿಜವಾಗಿ,

ಈ ದೇಶದ ಕಾನೂನಿಗೆ ಅತ್ಯಂತ ಹೆಚ್ಚು ನಿಷ್ಠವಾಗಿರುವುದು ಮುಸ್ಲಿಮ್ ಸಮುದಾಯ. ಈ ಸಮುದಾಯದ ನಿರೀಕ್ಷೆಯನ್ನು ಹುಸಿಗೊಳಿಸಿದ ಹಲವು ತೀರ್ಪುಗಳು ಸುಪ್ರೀಮ್‌ನಿಂದ ಬಂದಿದ್ದರೂ ಶಬರಿಮಲೆಯಂಥ ವಿರೋಧವನ್ನು ಅದು ವ್ಯಕ್ತಪಡಿಸಿಯೇ ಇಲ್ಲ. ಶಬಾನೋ ಪ್ರಕರಣವೊಂದನ್ನು ಬಿಟ್ಟರೆ ಉಳಿದಂತೆ ಅತ್ಯಂತ ಸಂಯಮದ ಪ್ರತಿಕ್ರಿಯೆಯನ್ನಷ್ಟೇ ಈ ಸಮುದಾಯ ವ್ಯಕ್ತಪಡಿಸಿದೆ. ಬಾಬರಿ ಮಸೀದಿ ಜಮೀನು ವಿವಾದದ ಬಗ್ಗೆ ಸುಪ್ರೀಮ್ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ನೀಡಿದ ತೀರ್ಪಿನ ಬಗ್ಗೆ ಖ್ಯಾತ ನ್ಯಾಯವಾದಿಗಳೇ ಅಸಮಾಧಾನ ಸೂಚಿಸಿದಾಗಲೂ ಈ ಸಮುದಾಯ ಎಲ್ಲೂ ಕಾನೂನು ಕೈಗೆತ್ತಿಕೊಳ್ಳುವ ಸಾಹಸಕ್ಕೆ ಇಳಿಯಲಿಲ್ಲ. ಹರತಾಳ ನಡೆಸಲಿಲ್ಲ. ಅಷ್ಟಕ್ಕೂ, ಬಾಬರಿ ಮಸೀದಿಯ ಬಗ್ಗೆ ತಕರಾರು ಎತ್ತಿದವರು ಅದನ್ನು ವ್ಯಕ್ತಪಡಿಸುವುದಕ್ಕೆ ಆಯ್ಕೆ ಮಾಡಿಕೊಂಡ ರೀತಿಯೇ ಕಾನೂನು ವಿರೋಧಿಯಾಗಿತ್ತು. ಅವರು ಕಾನೂನನ್ನೇ ಕೈಗೆತ್ತಿಕೊಂಡರು. ಬಾಬರಿ ಮಸೀದಿಗೆ ಯಾವುದೇ ಹಾನಿ ಮಾಡುವು ದಿಲ್ಲ ಎಂಬ ಮುಚ್ಚಳಿಕೆಯನ್ನು ಬರೆದುಕೊಟ್ಟು, ನ್ಯಾಯಾಂಗವನ್ನೇ ವಂಚಿಸಿದರು. ಬಾಬರಿ ಮಸೀದಿಯನ್ನು ಹಾಡುಹಗಲೇ ಬೀಳಿಸಿದರು. ಮಾತ್ರವಲ್ಲ,

ಈ ಕ್ರಿಮಿನಲ್ ಕೃತ್ಯಕ್ಕೆ 30 ವರ್ಷಗಳೇ ಸಂದಿದ್ದರೂ ಇವತ್ತಿಗೂ ಆ ಪ್ರಕರಣ ಸ್ಥಳೀಯ ನ್ಯಾಯಾಲಯದಿಂದ ಮೇಲೆ ಬಂದಿಲ್ಲ. ಆ ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾದವರಲ್ಲಿ ಹಲವರು ಈಗಾಗಲೇ ಯಾವ ಶಿಕ್ಷೆಯನ್ನೂ ಎದುರಿಸದೇ ಸಹಜ ಸಾವಿಗೆ ಒಳಗಾಗಿದ್ದಾರೆ. ಇನ್ನು, ಜೀವಂತ ಇರುವವರೂ ಆ ಪ್ರಕರಣದ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಎಂದು ಅಂದುಕೊಳ್ಳುವ ಹಾಗಿಲ್ಲ. ಯಾಕೆಂದರೆ, ಆ ಪ್ರಕರಣ ಹಳ್ಳ ಹಿಡಿದಂತಿದೆ. ಈ ದೇಶದ ಮತ್ತು ಜಗತ್ತಿನ ಸರ್ವ ಮಾಧ್ಯಮಗಳ ಮುಂದೆಯೇ ನಡೆದ ಕೃತ್ಯವೊಂದು 30 ವರ್ಷಗಳ ಬಳಿಕವೂ ಸ್ಥಳೀಯ ನ್ಯಾಯಾಲಯದ ವಿಚಾರಣಾ ಹಂತದಲ್ಲಿದೆ ಎಂದರೆ, ಅದರರ್ಥವೇನು? ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣಗಳು ಇತ್ಯರ್ಥವಾಗುವುದು ಬೇಗ. ಸಿವಿಲ್ ವ್ಯಾಜ್ಯಗಳ ವಿಚಾರಣೆ ತೆವಳಿಕೊಂಡ ರೀತಿಯಲ್ಲಾಗುವಾಗ, ಕ್ರಿಮಿನಲ್ ಪ್ರಕರಣಗಳ ವಿಚಾರಣೆಯು ಕನಿಷ್ಠ ನಡೆಯುವ ವೇಗದಲ್ಲಾದರೂ ಸಾಗುತ್ತದೆ ಎಂಬುದು ಸಾಮಾನ್ಯ ಹೇಳಿಕೆ. ಆದರೆ,

ಬಾಬರಿ ಮಸೀದಿ ಪ್ರಕರಣದಲ್ಲಿ ಈ ನಂಬಿಕೆಯೇ ಹುಸಿಯಾಗಿದೆ. ಆದರೂ ಮುಸ್ಲಿಮರು ಈ ದೇಶದ ನ್ಯಾಯಾಂಗವನ್ನು ಖಂಡಿಸಿ ವಾಹನಗಳಿಗೆ ಬೆಂಕಿ ಹಚ್ಚಿಲ್ಲ. ದುರಂತ ಏನೆಂದರೆ,

ನ್ಯಾಯಾಲಯದ ತೀರ್ಪು ತಮಗನುಕೂಲವಾಗಿದ್ದರೆ ಮಾತ್ರ ಸ್ವೀಕಾರ, ಇಲ್ಲದಿದ್ದರೆ ತಿರಸ್ಕಾರ ಎಂದು ತಮ್ಮ ಮಾತು-ಕೃತಿಗಳಿಂದ ಪದೇ ಪದೇ ಸಾಬೀತುಪಡಿಸುತ್ತಿರುವ ಅದೇ ಗುಂಪು, ಕಾನೂನು ಪಾಲನೆಯ ಹೆಸರಲ್ಲಿ ಮುಸ್ಲಿಮರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುತ್ತಿದೆ. ಹಿಜಾಬ್ ಪ್ರಕರಣದಲ್ಲಿ ಹೈ ಕೋರ್ಟ್ ನೀಡಿದ ತೀರ್ಪಿಗೆ ಮುಸ್ಲಿಮ್ ಸಮುದಾಯ ಅಸಮಾಧಾನ ಸೂಚಿಸಿದ್ದನ್ನು ಇದೇ ಗುಂಪು ಪರ್ವತ ಮಾಡಿತ್ತು. ಬೆಳಗ್ಗಿನಿಂದ ಸಂಜೆವರೆಗೆ ಮುಸ್ಲಿಮ್ ಸಮುದಾಯದ ಮಂದಿ ಸ್ವಯಂ ಪ್ರೇರಿತ ವಾಗಿ ತಮ್ಮ ಅಂಗಡಿಗಳನ್ನು ಮುಚ್ಚಿ ಅಸಮಾಧಾನ ಸೂಚಿಸಿದ್ದನ್ನು ನ್ಯಾಯಾಂಗಕ್ಕೆ ಅಗೌರವ ಎಂದು ಈ ಗುಂಪು ಪ್ರಚಾರ ಮಾಡಿತ್ತು. ಆ ಬಳಿಕ ಜಾತ್ರೋತ್ಸವಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಬಹಿಷ್ಕಾರ ಹೇರುವುದಕ್ಕೆ ಇದನ್ನೇ ಕಾರಣವಾಗಿಯೂ ನೀಡಿತ್ತು. ತಮಾಷೆ ಏನೆಂದರೆ, ಕೋರ್ಟು ತೀರ್ಪಿಗೆ ಮುಸ್ಲಿಮರು ಕನಿಷ್ಠ ಅಸಮಾಧಾನವನ್ನೂ ಸೂಚಿಸಬಾರದು ಎಂದು ಹೇಳುವ ಇದೇ ಗುಂಪು, 2018ರ ಶಬರಿಮಲೆ ತೀರ್ಪಿಗೆ ವ್ಯಕ್ತ ಪಡಿಸಿದ ಹಿಂಸಾತ್ಮಕ ವಿರೋಧವನ್ನೂ ಸಮರ್ಥಿಸುತ್ತಿತ್ತು. ನಿಜವಾಗಿ,

ಈ ಗುಂಪು ನ್ಯಾಯಾಂಗಕ್ಕೂ ನಿಷ್ಠವಾಗಿಲ್ಲ, ಸಂವಿಧಾನಕ್ಕೂ ನಿಷ್ಠವಾಗಿಲ್ಲ. ಅದರ ನಿಷ್ಠಾನಿಷ್ಠ ಎಲ್ಲವೂ ಷರತ್ತಿಗೆ ಒಳಪಟ್ಟಿರುತ್ತದೆ. ನಿರ್ದಿಷ್ಟ ರಾಜಕೀಯ ಪಕ್ಷದ ಹಿತವೇ ಈ ಷರತ್ತು. ಒಂದುವೇಳೆ, ನೂಪುರ್ ಶರ್ಮಾ ಕಾಂಗ್ರೆಸ್‌ನಲ್ಲಿದ್ದು ಈ ಹೇಳಿಕೆ ನೀಡಿರುತ್ತಿದ್ದರೆ ಮತ್ತು ಕಾಂಗ್ರೆಸ್ ಆಕೆಯನ್ನು ಪಕ್ಷದಿಂದ ಅಮಾನತುಗೊಳಿಸಿರುತ್ತಿದ್ದರೆ ಈ ಗುಂಪಿನ ಪ್ರತಿಕ್ರಿಯೆ ಹೇಗಿರುತ್ತಿತ್ತು ಯೋಚಿಸಿ. ಆ ಕ್ರಮವನ್ನು ಮುಸ್ಲಿಮ್ ಓಲೈಕೆ ಎಂದು ಈ ಗುಂಪು ಹಂಗಿಸುತ್ತಿತ್ತು. ಕಾಂಗ್ರೆಸನ್ನು ಹಿಂದೂ ವಿರೋಧಿ ಎಂದು ಪ್ರಚಾರ ಮಾಡಲಾಗುತ್ತಿತ್ತು. ಕಾಂಗ್ರೆಸ್‌ನ ಉನ್ನತ ನಾಯಕರಿಂದ ಹಿಡಿದು ತಳಮಟ್ಟದ ನಾಯಕರ ವರೆಗೆ ಪ್ರತಿಯೊಬ್ಬರನ್ನೂ ಉಲ್ಲೇಖಿಸಿ ಮಾನ ಹರಾಜು ಹಾಕುವ ಪೋಸ್ಟ್‌ಗಳು ಸೋಷಿ ಯಲ್ ಮೀಡಿಯಾಗಳಲ್ಲಿ ತುಂಬಿ ತುಳುಕಿರುತ್ತಿತ್ತು. ಆದರೆ, ನೂಪುರ್ ಶರ್ಮಾ ಬಿಜೆಪಿಯವರಾದ್ದರಿಂದ ಮತ್ತು ಅಮಾ ನತುಗೊಳಿಸಿದ್ದೂ ಬಿಜೆಪಿಯಾದುದರಿಂದ ಈ ಗುಂಪು ಮೌನವಾಗಿದೆ. ಮಾತ್ರವಲ್ಲ, ಪ್ರವಾದಿಯನ್ನು ನಿಂದಿಸಿರುವ ಏಕೈಕ ಕಾರಣಕ್ಕಾಗಿಯೇ ಆಕೆಯನ್ನು ಬೆಂಬಲಿಸುತ್ತಿದೆ. ಒಂದುವೇಳೆ, ಹಿಂದೂ ದೇವ-ದೇವಿಯರ ವಿರುದ್ಧ ಈಕೆ ಇಂಥದ್ದೇ ಹೇಳಿಕೆ ನೀಡಿರುತ್ತಿದ್ದರೆ ಇದೇ ಗುಂಪು ಇಂಥದ್ದೇ ಧೋರಣೆಯನ್ನು ತಳೆಯುತ್ತಿತ್ತೇ? ಕೆಲವು ಸಮಯಗಳ ಹಿಂದೆ ಸಾಹಿತಿ ಭಗವಾನ್ ಅವರಿಗೆ ನ್ಯಾಯವಾದಿಯೊಬ್ಬರು ನ್ಯಾಯಾಲಯದ ಆವರಣದಲ್ಲೇ ಮಸಿ ಬಳಿದಿದ್ದರು. ಆಗ ಇದೇ ಗುಂಪು ಆ ಮಸಿಯನ್ನು ಸಮರ್ಥಿಸಿತ್ತು. ಭಗವಾನ್ ಹಿಂದೂ ಧರ್ಮವನ್ನು ಮತ್ತು ಶ್ರೀರಾಮರನ್ನು ಅವಮಾನಿಸಿದ್ದಾರೆ ಎಂಬುದೇ ಈ ಮಸಿಗೆ ಕಾರಣವಾಗಿತ್ತು. ಈ ಹಿಂದೆ ಕಲಾವಿದ ಎಂ.ಎಫ್. ಹುಸೇನ್ ಅವರು ದೇವ-ದೇವಿಯರ ನಗ್ನ ಚಿತ್ರವನ್ನು ಬಿಡಿಸಿದಾಗ, ಅದನ್ನು ಖಂಡಿಸಿ ಅವರ ಮೇಲೆ ದೇಶದ ವಿವಿಧ ಕಡೆ ಪ್ರಕರಣ ದಾಖಲಿಸಿದ್ದನ್ನು ಬೆಂಬಲಿಸುತ್ತಿರುವುದೂ ಇದೇ ಗುಂಪು. ಒಂದುರೀತಿಯಲ್ಲಿ,

ಈ ದೇಶದ ಮುಂದೆ ಈಗಾಗಲೇ ಸಾಬೀತಾಗಿರುವ ಸತ್ಯವೊಂದನ್ನು ನೂಪುರ್ ಹೇಳಿಕೆ ಮತ್ತೊಮ್ಮೆ ದೃಢಪಡಿಸಿದೆ. ಈ ದೇಶದ ಕಾನೂ ನು ಪಾಲಿಸುವವರಲ್ಲಿ ಮುಂದಿರುವುದು ಮುಸ್ಲಿಮರೇ. ಈ ದೇಶದ ಪ್ರಜಾತಂತ್ರಕ್ಕೆ ಗೌರವ ವ್ಯಕ್ತಪಡಿಸುವವರಲ್ಲಿ ಮುಂಚೂಣಿಯ ಲ್ಲಿರುವುದೂ ಮುಸ್ಲಿಮರೇ. ಮುಸ್ಲಿಮರು ಈ ದೇಶದ ನ್ಯಾಯಾಂಗಕ್ಕೆ ನಿಷ್ಠರಾಗಿದ್ದಾರೆ. ಆದರೆ ಅವರನ್ನು ಯಾರು ಸದಾ ಆರೋಪಿ ಸ್ಥಾ ನದಲ್ಲಿ ನಿಲ್ಲಿಸುತ್ತಿದ್ದರೋ ಅವರ ನ್ಯಾಯಾಂಗ ನಿಷ್ಠೆ ಶಂಕಾಸ್ಪದವಾಗಿದೆ. ಅವರು ನ್ಯಾಯಾಂಗದ ಬದಲು ರಾಜಕೀಯ ಪಕ್ಷಕ್ಕೆ ನಿಷ್ಠವಾಗಿದ್ದಾರೆ. ತೀರ್ಪು ತಮಗನುಕೂಲವಾಗಿದ್ದರೆ ಮಾತ್ರ ನ್ಯಾಯಾಂಗವನ್ನು ಗೌರವಿಸುತ್ತಾರೆ. ಇಲ್ಲದಿದ್ದರೆ ನ್ಯಾಯಾಲಯವನ್ನೇ ಕಟಕಿಯಾಡುತ್ತಾರೆ. ನೂಪುರ್ ಶರ್ಮಾರ ಹೇಳಿಕೆಯು ಈ ಸತ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

ಬಕ್ರೀದ್ ಸುತ್ತೋಲೆ: ಸರ್ಕಾರದ ಉದ್ದೇಶವೇನು?

 


9-7-2022

ಈದುಲ್ ಅಝ್ಹಾ ಅಥವಾ ಬಕ್ರೀದ್‌ನ ಹಿನ್ನೆಲೆಯಲ್ಲಿ ಮುಸ್ಲಿಮ್ ಸಮುದಾಯವನ್ನು ಗುರಿಯಾಗಿಸಿ ರಾಜ್ಯ ಸರಕಾರ 3 ದಿನಗಳ ಮುಂಚಿತವಾಗಿಯೇ ಕೆಲವು ಎಚ್ಚರಿಕೆಗಳನ್ನು ರವಾನಿಸಿದೆ. ಪ್ರಾಣಿ ವಧೆಗೆ ಸಂಬಂಧಿಸಿದಂತೆ ಇರುವ ಕಠಿಣ ಕಾಯ್ದೆಗಳನ್ನು ಅದು ಮುಸ್ಲಿಮರಿಗೆ ನೆನಪಿಸಿದೆ. ‘ಬಕ್ರೀದ್ ಹಬ್ಬದ ಸಮಯದಲ್ಲಿ ಜಾನುವಾರು ಬಲಿ ನೀಡುವ ಬದಲಾಗಿ ಅವುಗಳನ್ನು ನಾವೆಲ್ಲರೂ ಸಂರಕ್ಷಣೆ ಮಾಡೋಣ..’ ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಮೂರು ದಿನಗಳ ಮೊದಲೇ ಮುಸ್ಲಿಮರಿಗೆ ಹಿತವಚನ ನೀಡಿದ್ದಾರೆ. ಅಲ್ಲದೆ,

‘ಬಕ್ರೀದ್ ವೇಳೆ ಜಾನುವಾರು ಬಲಿ ನೀಡಲು ಅವಕಾಶ ಕೊಡುವುದಿಲ್ಲ ಎಂದೂ ಅವರು ಹೇಳಿದ್ದಾರೆ. ರಾಜ್ಯದ ಎಲ್ಲ ಗಡಿಭಾಗಗಳಲ್ಲಿ ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿ ಗೋಹತ್ಯೆ ನಿಷೇಧ ಕಾಯ್ದೆ ಉಲ್ಲಂಘ ನೆಯಾಗದಂತೆ ಜಾಗ್ರತೆ ವಹಿಸಬೇಕು, ಅಂಥ ಪ್ರಕರಣ ಎಲ್ಲಾದರೂ ಕಂಡುಬಂದರೆ ಪೊಲೀಸರಿಗೆ ಮಾಹಿತಿ ಕೊಡಬೇಕು, ಗೋವು, ಹಸು, ಎತ್ತು, ಹೋರಿ, ಕರು, ಒಂಟೆ ಮತ್ತು ಹದಿಮೂರು ವರ್ಷದೊಳಗಿನ ಎಮ್ಮೆ-ಕೋಣ ಸೇರಿದಂತೆ ಯಾವುದರ ಬಲಿಯೂ ನಡೆಯಬಾರದು, ಒಂದುವೇಳೆ ಉಲ್ಲಂಘಿಸಿದರೆ ಪ್ರಾಣಿ ಬಲಿ ತಡೆ ಕಾಯ್ದೆಯನ್ವಯ 6 ತಿಂಗಳ ಶಿಕ್ಷೆ ಮತ್ತು ಭಾರತೀಯ ದಂಡಸಂಹಿತೆಯ ಅನ್ವಯ 5 ವರ್ಷಗಳ ಶಿಕ್ಷೆ ವಿಧಿಸಲಾಗುವುದು...’ ಎಂದು ರಾಜ್ಯ ಸರಕಾರ ಎಚ್ಚರಿಕೆಯನ್ನೂ ನೀಡಿದೆ. ಅಲ್ಲದೇ, ಪ್ರಾಣಿವಧೆ ಕಾಯ್ದೆಯನ್ವಯ ಆಹಾರಕ್ಕೆ ಯೋಗ್ಯವಾದ ಪ್ರಾಣಿಗಳನ್ನು ಅಧಿಕೃತ ಕಸಾಯಿಖಾನೆಗಳಲ್ಲಿ ಮಾತ್ರ ವಧಿಸುವಂತೆಯೂ ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅಂದಹಾಗೆ,

ಬಕ್ರೀದ್‌ಗಿಂತ ಮೂರು ದಿನಗಳ ಮೊದಲು ಸಚಿವರು ನೀಡಿದ ಎಚ್ಚರಿಕೆ ಮತ್ತು ಮರುದಿನ ಸರ್ಕಾರ ಹೊರಡಿಸಿದ ಸುತ್ತೋಲೆಯನ್ನು ನೋಡುವಾಗ ಮುಸ್ಲಿಮ್ ಸಮುದಾಯ ಯಾವುದೋ ಕಾನೂನುಬಾಹಿರ ಚಟುವಟಿಕೆಗೆ ಸಿದ್ಧವಾಗುತ್ತಿದೆ ಎಂದೇ ನಂಬಬೇಕು. ಮುಸ್ಲಿಮರನ್ನು ಅಪರಾಧಿಗಳಂತೆ ಬಿಂಬಿಸುವ ಮತ್ತು ಗೋಹತ್ಯೆ ನಡೆಸಲು ಅವರು ಸಂಚು ಹೂಡಿರುವಂತೆ ಸಂದೇಶ ರವಾನಿಸುವ ಪ್ರಯತ್ನ ಸಚಿವರ ಹೇಳಿಕೆ ಮತ್ತು ಸರ್ಕಾರದ ಸುತ್ತೋಲೆಯಲ್ಲಿ ಇರುವಂತಿದೆ. ಪ್ರಾಣಿಬಲಿ ಬಕ್ರೀದ್‌ನ ಭಾಗ. ಜಾನುವಾರುಗಳನ್ನು ಬಲಿ ನೀಡುವುದಕ್ಕೆ ಸರ್ಕಾರದ ಸುತ್ತೋಲೆಯಲ್ಲಿ ಅನುಮತಿ ನಿರಾಕರಿಸಲಾಗಿದೆ. ಆದ್ದರಿಂದ ಬಲಿ ನೀಡಲು ಉಳಿದಿರುವುದು ಆಡು, ಮೇಕೆ ಮತ್ತು ಕುರಿಗಳು ಮಾತ್ರ. ಆದರೆ ಇದಕ್ಕೂ ಷರತ್ತುಗಳನ್ನು ವಿಧಿಸಲಾಗಿದೆ. ಅಧಿಕೃತ ಕಸಾಯಿಖಾನೆಯ ಹೊರತು ಇನ್ನೆಲ್ಲೂ ಇವುಗಳನ್ನು ವಧೆ ಮಾಡಬಾರದೆಂದು ಎಚ್ಚರಿಸಲಾಗಿದೆ. ನಿಜವಾಗಿ,

ಹಬ್ಬದ ಸಂದರ್ಭದಲ್ಲಿ ಪ್ರಾಣಿಬಲಿ ನೀಡುವುದು ಮುಸ್ಲಿಮರು ಮಾತ್ರ ಅಲ್ಲ. ಜಾತ್ರೆ ಅಥವಾ ಊರ ಹಬ್ಬದ ವೇಳೆ ಮುಸ್ಲಿಮೇತರ ಸಮುದಾಯದಲ್ಲೂ ಪ್ರಾಣಿಬಲಿ ಸಂಪ್ರದಾಯವಿದೆ. ಕೋಳಿ, ಕುರಿ, ಮೇಕೆಗಳನ್ನು ಬಲಿ ಕೊಟ್ಟು ಊರ ಹಬ್ಬ ಆಚರಿಸಿದ ಸುದ್ದಿಗಳು ಆಗಾಗ ಮಾಧ್ಯಮಗಳಲ್ಲೂ ವರದಿಯಾಗುತ್ತಿರುತ್ತವೆ. ಆದರೆ ಸರ್ಕಾರ ಎಂದೂ ಕೂಡ ಇಂಥ ಊರ ಹಬ್ಬಗಳ ವೇಳೆ ನಿಯಮಗಳ ಪಟ್ಟಿಯನ್ನು ಜಾರಿಗೊಳಿಸಿದ ಉದಾಹರಣೆಯಿಲ್ಲ. ಕಸಾಯಿಖಾನೆಯ ಹೊರತು ಇನ್ನೆಲ್ಲೂ ಪ್ರಾಣಿವಧೆ ಅಪರಾಧ ಎಂದು ಸರ್ಕಾರ ಬಕ್ರೀದ್‌ನ ಹೊರತಾದ ಬೇರೆ ಯಾವ ಸಂದರ್ಭದಲ್ಲೂ ಘೋಷಿಸಿದ ಉದಾಹರಣೆ ಇದೆಯೇ? ಇದು ಎಷ್ಟು ಪ್ರಾಯೋಗಿಕ? ರಾಜ್ಯದಲ್ಲಿ ಈ ಮೊದಲು ಬಕ್ರೀದ್ ನಡೆದಿಲ್ಲವೇ? ಪ್ರಾಣಿಬಲಿ ಕೊಟ್ಟಿಲ್ಲವೇ? ಆಗೆಲ್ಲ ಜಾರಿಯಾಗದ ಸುತ್ತೋಲೆಗಳು ಈಗ ದಿಢೀರ್ ಆಗಿ ಜಾರಿಯಾಗಿರುವುದಕ್ಕೆ ಕಾರಣಗಳೇನು? ಬಕ್ರೀದ್‌ನ ಸಮಯದಲ್ಲಿ ಪೊಲೀಸರು ಕಾರ್ಯಾಚರಣೆಗೆ ಇಳಿಯೋದು ಮತ್ತು ಒಂದು ರೀತಿಯಲ್ಲಿ ಭಯವನ್ನು ಸಮಾಜದಲ್ಲಿ ಸೃಷ್ಟಿಸುವುದರಿಂದ ಸರ್ಕಾರಕ್ಕೆ ಸಿಗುವ ಲಾಭವೇನು? ಅಷ್ಟಕ್ಕೂ,

ಕುರ್ಬಾನಿ (ಪ್ರಾಣಿಬಲಿ) ಎಂಬುದು ಮಾಂಸದ ಉದ್ದೇಶದಿಂದ ಮಾಡುವ ವಧೆ ಅಲ್ಲ. ಮತ್ತು ಬಕ್ರೀದ್ ಹೊರತಾದ ದಿನಗಳಲ್ಲಿ ಮಾಡುವ ವಧೆಯು ಪ್ರಾಣಿಬಲಿ ಆಗುವುದೂ ಇಲ್ಲ. ಕುರ್ಬಾನಿಗೆ ಒಂದು ಹಿನ್ನೆಲೆ ಇದೆ. ಪ್ರವಾದಿ ಇಬ್ರಾಹೀಮ್(ಅ) ಮತ್ತು ಇಸ್ಮಾಈಲ್‌ರ ಮೌಲ್ಯಯುತ ಬದುಕನ್ನು ನೆನಪಿಸುವ ಉದ್ದೇಶದ ಸಾಂಕೇತಿಕ ಕ್ರಮ ಇದು. ಮಾತ್ರವಲ್ಲ, ಆರ್ಥಿಕವಾಗಿ ಸಬಲರ ಮೇಲೆ ಮಾತ್ರ ಇಂಥ ಬಲಿ ನೀಡುವ ಹೊಣೆಗಾರಿಕೆ ಇದೆ. ಬಲಿ ನೀಡಲಾದ ಬಳಿಕ ಮಾಂಸವನ್ನು ಬಡಬಗ್ಗರಿಗೆ ಹಂಚಲಾಗುತ್ತದೆ. ಅಂದಹಾಗೆ, ಇಲ್ಲಿ ಬಲಿ ಎಂಬ ಪದ ಬಳಕೆಯಲ್ಲಿದ್ದರೂ ಸಾಮಾನ್ಯ ವಧಾ ಕ್ರಮವನ್ನೇ ಇಲ್ಲೂ ಅನುಸರಿಸಲಾಗುತ್ತದೆ. ಬಕ್ರೀದ್‌ನ ಸಮಯದಲ್ಲಿ ಮಾಡುವ ಪ್ರಾಣಿವಧೆಗೂ ಇತರ ಸಂದರ್ಭಗಳಲ್ಲಿ ಮಾಡುವ ಪ್ರಾಣಿವಧೆಗೂ ವಧೆ ಎಂಬ ನೆಲೆಯಲ್ಲಿ ಯಾವ ವ್ಯತ್ಯಾಸವೂ ಇಲ್ಲ.
ಆದರೆ, ಸರ್ಕಾರದ ಆದೇಶವು ಈ ಬಲಿಕರ್ಮದ ಸ್ಫೂರ್ತಿಯನ್ನೇ ತಗ್ಗಿಸುವಂತಿದೆ. ಬಡಬಗ್ಗರಲ್ಲಿ ಮಾಂಸ ವನ್ನು ಹಂಚುವ ಈ ಧಾರ್ಮಿಕ ಕ್ರಿಯೆಯ ಕತ್ತು ಹಿಸುಕುವ ಉದ್ದೇಶವನ್ನಷ್ಟೇ ಹೊಂದಿರುವಂತಿದೆ. ಅಷ್ಟಕ್ಕೂ,

ಪ್ರಾಣಿಬಲಿ ನೀಡಬಯಸುವ ವ್ಯಕ್ತಿಯೋರ್ವ ಅದಕ್ಕಾಗಿ ಕಸಾಯಿಖಾನೆಯನ್ನೇ ಆಶ್ರಯಿಸುವುದು ಎಷ್ಟು ಪ್ರಾಯೋಗಿಕ ಎಂದು ಸರ್ಕಾರ ಅಧ್ಯಯನ ನಡೆಸಿದೆಯೇ? ಒಂದು ಜಿಲ್ಲೆಯಲ್ಲಿ ಎಷ್ಟು ಕಸಾಯಿಖಾನೆಗಳಿವೆ? ಇರುವ ಕಸಾಯಿಖಾನೆಗಳಲ್ಲಿ ಬಕ್ರೀದ್‌ನ ಬಲಿಕರ್ಮಕ್ಕೆ ಬೇಕಾದಷ್ಟು ಸೌಲಭ್ಯ ಗಳಿವೆಯೇ? ಕೇವಲ ಮೂರು ದಿನಗಳವರೆಗೆ ಮಾತ್ರ ಬಲಿಕರ್ಮವನ್ನು ನಿಭಾಯಿಸಲು ಅವಕಾಶ ಇದೆ. ಈ ಅವ ಧಿಯೊಳಗೆ ಎಲ್ಲ ಬಲಿಕರ್ಮಗಳೂ ಮುಗಿದಿರಬೇಕು ಎಂದು ಮಾತ್ರವಲ್ಲ, ಚರ್ಮ ಸುಲಿಯುವ ಮತ್ತು ಮಾಂಸ ಮಾಡುವ ಪ್ರಕ್ರಿಯೆಗಳೂ ಅಲ್ಲೇ ನಡೆಯಬೇಕಾಗುತ್ತದೆ. ಇವೆಲ್ಲಕ್ಕೂ ಕಸಾಯಿಖಾನೆಗಳಲ್ಲಿ ಪೂರಕ ವ್ಯವಸ್ಥೆಯಿದೆಯೇ? ಈ ಬಗ್ಗೆ ಸರ್ಕಾರ ವರ ದಿಯನ್ನು ತರಿಸಿಕೊಂಡಿದೆಯೇ?

ದಕ್ಷಿಣ ಕನ್ನಡಕ್ಕೆ ಸಂಬಂಧಿಸಿ ಹೇಳುವುದಾದರೆ, ಸದ್ಯ ಒಂದು ರೀತಿಯ ಮಂಕು ಕವಿದ ವಾತಾವರಣವಿದೆ. ಮಂಗಳೂರು ನಗರದಲ್ಲಿ ಇರುವ ಏಕೈಕ ಕಸಾಯಿಖಾನೆಯನ್ನು ದುರಸ್ತಿಯ ನೆಪದಲ್ಲಿ ಜಿಲ್ಲಾಡಳಿತ ದಿನಗಳ ಹಿಂದೆಯೇ ಮುಚ್ಚಿದೆ. ಅಲ್ಲದೇ, ಕುರ್ಬಾನಿಗಾಗಿ ಪರ್ಯಾಯ ವ್ಯವಸ್ಥೆಯನ್ನೂ ಮಾಡಿದಂತಿಲ್ಲ. ಏನಿದರ ಅರ್ಥ? ಒಂದುಕಡೆ, ಕುರಿ, ಮೇಕೆ ಮತ್ತು ಆಡುಗಳನ್ನು ಕಸಾಯಿಖಾನೆಯಲ್ಲಿ ಬಲಿಗಾಗಿ ವಧೆ ಮಾಡಬೇಕು ಎಂದು ಹೇಳುವ ಸರ್ಕಾರ, ಇನ್ನೊಂದು ಕಡೆ ಇರುವ ಏಕೈಕ ಕಸಾಯಿಖಾನೆಯನ್ನೂ ಮುಚ್ಚಿಸುತ್ತದೆ ಎಂದರೆ, ಮುಸ್ಲಿಮ್ ಸಮುದಾಯವನ್ನು ಕಾನೂನು ಉಲ್ಲಂಘಿಸಲು ಪರೋಕ್ಷವಾಗಿ ಪ್ರೇರೇಪಿಸುತ್ತಿದೆ ಎಂದೇ ಅರ್ಥವಲ್ಲವೇ? ಹಾಗಂತ,

ಮಂಗಳೂರಿನ ಕಸಾಯಿಖಾನೆಗೆ ಬಂದಿರುವ ದುಃಸ್ಥಿತಿ, ರಾಜ್ಯದ ಬೇರೆ ಕಸಾಯಿಖಾನೆಗಳಿಗೆ ಬಂದಿದೆಯೇ ಎಂಬ ವರದಿಯಿಲ್ಲ. ಮುಸ್ಲಿಮ್ ಸಮುದಾಯವನ್ನು ಉದ್ದೇಶಪೂರ್ವಕವಾಗಿ ಕಾನೂನು ಉಲ್ಲಂಘನೆಗೆ ಸರ್ಕಾರ ಪ್ರಚೋದಿಸುತ್ತಿದೆಯೇ? ಧಾರ್ಮಿಕ ಕರ್ಮವೊಂದನ್ನು ಸುಲಲಿತವಾಗಿ ನೆರವೇರಿ ಸುವುದಕ್ಕೆ ಅವಕಾಶ ಮಾಡಿಕೊಡಬೇಕಾದ ಸರ್ಕಾರವೊಂದು ಅದಕ್ಕೆ ಅಡ್ಡಗಾಲಿಡುವಂತೆ ವರ್ತಿಸುತ್ತಿರು ವುದೇಕೆ? ಆಡು, ಕುರಿ, ಮೇಕೆಗಳನ್ನು ಮುಸ್ಲಿಮರು ತಂತಮ್ಮ ಮನೆಗಳಲ್ಲಿ ಬಲಿಯರ್ಪಿಸುವುದರಿಂದ ಸರ್ಕಾರಕ್ಕೆ ಆಗುವ ತೊಂದರೆಯೇನು? ಹಾಗಂತ, ಎಲ್ಲ ಮನೆಗಳಲ್ಲೂ ಇಂಥ ಬಲಿಯರ್ಪಣೆ ನಡೆಯುವುದಿಲ್ಲ. ಆರ್ಥಿಕವಾಗಿ ಸಬಲರಾಗಿರುವ ಮುಸ್ಲಿಮರು ಮಾತ್ರ ಬಲಿಯರ್ಪಿಸುತ್ತಾರೆ. ಅಂಥವರನ್ನು ಕಸಾಯಿಖಾನೆಗೆ ಅಟ್ಟುವುದೇಕೆ? ಇಂಥ ನಿಯಮ ಬಲಿಯರ್ಪಿಸಲು ಬಯಸುವವರಿಗಷ್ಟೇ ಅಲ್ಲ, ಕಸಾಯಿಖಾನೆಯನ್ನು ನಿರ್ವಹಿಸುವವರಿಗೂ ಸಮಸ್ಯೆಯನ್ನು ತಂದೊಡ್ಡುತ್ತದೆ. ನಿಜವಾಗಿ,

ಸರ್ಕಾರದ ನಿಯಮದಿಂದ ಸಾತ್ವಿಕ ಮುಸ್ಲಿಮರು ಮತ್ತು ವ್ಯಾಪಾರಸ್ಥರು ಖಂಡಿತ ತೊಂದರೆಯನ್ನು ಎದುರಿಸುತ್ತಾರೆ. ಮಾಂಸ ಮಾರಾಟಗಾರರನ್ನು ದಬಾಯಿಸುವುದಕ್ಕೆ ಮತ್ತು ಕಿರುಕುಳ ಕೊಟ್ಟು ಬಂಧಿಸು ವುದಕ್ಕೆ ಪೊಲೀಸರಿಗೆ ಈ ಸುತ್ತೋಲೆ ಅಪರಿಮಿತ ಅ ಧಿಕಾರವನ್ನು ನೀಡುತ್ತದೆ. ಮುಸ್ಲಿಮರು ಹಬ್ಬದ ಖುಷಿಯನ್ನು ಅನುಭವಿಸದಂತೆ ಮತ್ತು ಭೀತಿಯಲ್ಲಿ ಕಳೆಯುವಂತೆಯೂ ಮಾಡುತ್ತದೆ. ಅಲ್ಲದೇ, ಕುರಿ, ಮೇಕೆ, ಆಡು ಮಾಂಸವನ್ನು ಮಾರಾಟ ಮಾಡುವ ವ್ಯಾಪಾರಸ್ಥರ ಮೇಲೆ ದುಷ್ಕರ್ಮಿಗಳಿಗೆ ಏರಿ ಹೋಗುವುದಕ್ಕೂ ದಾಂಧಲೆ ನಡೆಸುವುದಕ್ಕೂ ಈ ಸುತ್ತೋಲೆ ಪ್ರೇರಣೆ ನೀಡುತ್ತದೆ. ಇದು ಅನ್ಯಾಯ. ಪ್ರಭುತ್ವ ಮತ್ತು ಅದರ ಬೆಂಬಲಿಗರ ವರ್ತನೆಯಿಂದ ಈಗಾಗಲೇ ರೋಸಿ ಹೋಗಿರುವ ಮುಸ್ಲಿಮರಿಗೆ ಕನಿಷ್ಠ ಹಬ್ಬದ ಖುಷಿಯನ್ನು ಅನುಭವಿಸುವುದಕ್ಕೂ ಸರ್ಕಾರ ಅಡ್ಡಿಪಡಿಸುತ್ತಿರುವುದು ಖಂಡನಾರ್ಹ. ಕುರಿ, ಮೇಕೆ, ಆಡುಗಳ ಬಲಿಗೆ ವಿಧಿಸಲಾಗಿರುವ ಷರತ್ತುಗಳನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳಬೇಕು. ಜೊತೆಗೇ ಮುಸ್ಲಿಮ್ ಸಮುದಾಯವನ್ನು ಅಪರಾಧಿಗಳಂತೆ ನಡೆಸಿಕೊಳ್ಳುವುದನ್ನು ನಿಲ್ಲಿಸಬೇಕು.

ನಡುವಯಸ್ಸಿನಲ್ಲಿ ಸಲ್ಲಿಸಿದ ವಿಚ್ಛೇದನಾ ಅರ್ಜಿಯನ್ನು ವೃದ್ಧಾಪ್ಯದಲ್ಲಿ ಇತ್ಯರ್ಥ ಪಡಿಸಿದರೆ ಹೇಗೆ?

 


22-7-2022

ಹೆಣ್ಣಿನ ಸುತ್ತ ಈ ಜಗತ್ತಿನಲ್ಲಿ ರಚಿತವಾಗಿರುವಷ್ಟು ಕತೆ, ಕಾದಂಬರಿ, ಹಾಡು, ಸಿನಿಮಾ, ನಾಟಕಗಳು ಇನ್ನಾವ ಜೀವಿಯ ಸುತ್ತವೂ ರಚ ನೆಯಾಗಿರುವ ಸಾಧ್ಯತೆ ಇಲ್ಲ. ಹೆಣ್ಣನ್ನು ಈ ದೇಶದಲ್ಲಿ ಪೂಜಿಸಲಾಗುತ್ತದೆ. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂದು ಕೊಂಡಾಡಲಾಗುತ್ತದೆ. ಹೆಣ್ಣಿನ ಕೇಶ, ಕಣ್ಣು, ಕಿವಿ, ಮೂಗು, ಬಾಯಿ, ತುಟಿ, ಕೆನ್ನೆ, ಉಗುರು... ಹೀಗೆ ಎಲ್ಲವೂ ಬಣ್ಣನೆಗೆ ಒಳಗಾಗುತ್ತದೆ. ಹಾಗಂತ, ಇದು ಒಂದು ಮುಖವಾದರೆ, ಇದರ ಇನ್ನೊಂದು ಮುಖ ಅತ್ಯಂತ ಕರಾಳ. ಆಕೆಯ ಮೇಲೆ ದೌರ್ಜನ್ಯ ನಡೆಸುವ ಮತ್ತು ಇನ್ನಿಲ್ಲದಂತೆ ಸತಾಯಿಸುವ ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಲೇ ಇರುತ್ತವೆ. ಕಳೆದವಾರ ರಾಜ್ಯ ಹೈಕೋರ್ಟ್ ಇಂಥದ್ದೊಂದು ಪ್ರಕರಣದ ಮೇಲೆ ಬೆಳಕು ಚೆಲ್ಲಿದೆ. ನಿಜವಾಗಿ,

ಈ ಪ್ರಕರಣ ಸಾಮಾನ್ಯವಾಗಿ ವರದಿಯಾಗುವ ಅತ್ಯಾಚಾರ, ಹತ್ಯೆ, ದೌರ್ಜನ್ಯ ಇತ್ಯಾದಿಗಳಿಗಿಂತ ಭಿನ್ನವಾದುದು ಮತ್ತು ಹೆಣ್ಣಿನ ಸಾಮಾಜಿಕ ಭದ್ರತೆಗೆ ಸಂಬಂಧಿಸಿದ್ದು.

ಚಿಕ್ಕಮಗಳೂರಿನ ಓರ್ವ ಮಹಿಳೆ ಪತಿಯಿಂದ ವಿಚ್ಛೇದನ ಕೋರಿ 2012ರಲ್ಲಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇವರು ಮದುವೆಯಾದುದು 1999ರಲ್ಲಿ. 2001ರಲ್ಲಿ ಹೆಣ್ಣು ಮಗುವಿನ ಜನನವೂ ಆಯಿತು. ಪತಿ ವ್ಯಾಪಾರಿ. ಸಾಲವೂ ಇತ್ತು. ಸಾಲ ಹೆಚ್ಚುತ್ತಾ ಹೋಯಿತಲ್ಲದೇ ಪತ್ನಿ ಮತ್ತು ಮಗುವಿನ ಬೇಕು-ಬೇಡಗಳಿಗೂ ಸ್ಪಂದಿಸುವುದನ್ನು ಪತಿ ಕಡಿಮೆ ಮಾಡತೊಡಗಿದ. ನಿರ್ವಾಹವಿಲ್ಲದೆ ಆಕೆ 2008ರಲ್ಲಿ ಬ್ಯಾಂಕ್ ಉದ್ಯೋಗಕ್ಕೆ ಸೇರಿಕೊಂಡಳು. ಮಾತ್ರವಲ್ಲ, ಸಾಲದಿಂದ ಪತಿಯನ್ನು ಮೇಲೆತ್ತುವುದಕ್ಕಾಗಿ ಪ್ರತಿ ತಿಂಗಳು ಹಣ ನೀಡುತ್ತಲೂ ಇದ್ದಳು. ಅದುವೇ 60 ಲಕ್ಷ ರೂಪಾಯಿಯಷ್ಟಾಯಿತು. ಆದರೆ ಆತ ಸಾಲ ತೀರಿಸಲಿಲ್ಲ ಎಂದು ಮಾತ್ರವಲ್ಲ, ಪತ್ನಿ ನೀಡುತ್ತಿರುವ ಹಣವನ್ನೇ ಖರ್ಚು ಮಾಡುತ್ತಾ ಆರಾಮವಾಗಿ ಇರತೊಡಗಿದ. ಅಲ್ಲದೇ, ಆತನನ್ನು ವಿದೇಶಕ್ಕೆ ಕಳುಹಿಸಿ ಸೆಲೂನ್ ಅಂಗಡಿಯನ್ನೂ ಹಾಕಿಕೊಟ್ಟಳು. ಆದರೆ ಅದೂ ನಡೆಯಲಿಲ್ಲ. ಆತನ ಬೇಜವಾಬ್ದಾರಿತನವೇ ಸೆಲೂನ್ ಮುಚ್ಚಲು ಕಾರಣ ಎಂಬುದೂ ಆಕೆಗೆ ಮನದಟ್ಟಾಯಿತು. ಆತ ಮರಳಿ ಊರಿಗೆ ಬಂದ ಮತ್ತು ಪತ್ನಿಯನ್ನು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ಮಾಡತೊಡಗಿದ. ಇವೆಲ್ಲದರಿಂದಲೂ ರೋಸಿ ಹೋದ ಪತ್ನಿ 2012ರಲ್ಲಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದಳು. ಆದರೆ, ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಕೊಡಿಸಲು ನಿರಾಕರಿಸಿತು. ಪತಿಯಿಂದ ಯಾವುದೇ ಕ್ರೌರ್ಯ ನಡೆದಿಲ್ಲ ಎಂದು ತನ್ನ ತೀರ್ಪನ್ನು ಸಮರ್ಥಿಸಿಕೊಂಡಿತು. ಇದನ್ನು ಪ್ರಶ್ನಿಸಿ ಆಕೆ ರಾಜ್ಯ ಹೈಕೋರ್ಟ್ ಮೆಟ್ಟಿಲೇರಿದಳು. ಅರ್ಜಿಯನ್ನು ಪರಿಗಣಿಸಿದ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ಜೆ.ಎಂ. ಖಾಜಿ ಅವರಿದ್ದ ನ್ಯಾಯಪೀಠ, ಆಕೆಗೆ ವಿಚ್ಛೇದನವನ್ನು ಮಂಜೂರು ಮಾಡಿತು ಮತ್ತು ಪತ್ನಿಯೊಂದಿಗೆ ಆತನಿಗೆ ಯಾವುದೇ ಬಾಂಧವ್ಯವಿಲ್ಲ, ಕೇವಲ ಧನಲಕ್ಷ್ಮಿಯಂತೆ ಆಕೆಯನ್ನು ಪರಿಗಣಿಸಿದ್ದಾನೆ, ಈ ಮೂಲಕ ಪತ್ನಿಗೆ ಆತ ಮಾನಸಿಕ ಆಘಾತ ನೀಡಿದ್ದಾನೆ ಎಂದು ಹೇಳಿತು. ಅಷ್ಟಕ್ಕೂ,
ಆಕೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು 2012ರಲ್ಲಿ. ಆದರೆ ವಿಚ್ಛೇದನ ದೊರಕಿದ್ದು 2022ರಲ್ಲಿ. ಹಾಗಂತ, ಈ ತೀರ್ಪನ್ನೇ ಅಂತಿಮ ಎಂದು ಹೇಳುವ ಹಾಗಿಲ್ಲ. ಈ ತೀರ್ಪನ್ನು ನಿರಾಕರಿಸಿ ಪತಿ ಸುಪ್ರೀಮ್ ಕೋರ್ಟಿಗೆ ಹೋಗಬಹುದು ಮತ್ತು ಅಲ್ಲಿ ವಿಚಾರಣೆ ಪೂರ್ಣಗೊಂಡು ತೀರ್ಪು ಹೊರಬೀಳುವಾಗ ಇನ್ನಷ್ಟು ವರ್ಷಗಳು ಉರುಳಲೂ ಬಹುದು. ಇದು ಪ್ರಕರಣದ ಒಂದು ಭಾಗವಾದರೆ, ಇನ್ನೊಂದು ಪತಿ ಮತ್ತು ಪತ್ನಿಯ ನಡುವಿನ ಹೊಣೆಗಾರಿಕೆಯದ್ದು.

ವಿಚ್ಛೇದನ ಈ ಸಮಾಜಕ್ಕೆ ಹೊಸತಲ್ಲ ಮತ್ತು ವಿಚ್ಛೇದನಕ್ಕಾಗಿ ಸಲ್ಲಿಸುವ ಅರ್ಜಿಗಳ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವುದೂ ರಹಸ್ಯವಾಗಿಲ್ಲ. ಆದರೆ ಇಂಥ ಅರ್ಜಿಗಳ ವಿಲೇವಾರಿಗೆ ತಗಲುವ ದೀರ್ಘ ಸಮಯವು ಅರ್ಜಿದಾರರ ಮೇಲೆ ಬೀರಬಹುದಾದ ಪರಿಣಾಮಗಳು ಏನೇನು? ಈ ಅರ್ಜಿ ಇತ್ಯರ್ಥವಾಗದೆ ಇನ್ನೊಂದು ಮದುವೆಯಾಗುವಂತಿಲ್ಲ. ವಿದೇಶಕ್ಕೆ ಹೋಗುವುದಕ್ಕೂ ತೊಂದರೆ ಎದುರಾಗುವ ಸಾಧ್ಯತೆಗಳೂ ಇರುತ್ತವೆ ಮತ್ತು ಈ ಪ್ರಕರಣ ಇತ್ಯರ್ಥವಾಗುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಒತ್ತಡಗಳು ಇದ್ದೇ ಇರುತ್ತವೆ. ಮದುವೆ ಎಂಬುದು ಹೇಗೆ ಎರಡು ಕುಟುಂಬಗಳ ನಡುವಿನ ಸಡಗರವೋ ಹಾಗೆಯೇ ವಿಚ್ಛೇದನವೂ ಎರಡು ಕುಟುಂಬಗಳ ವಿಷಾದವೂ ಆಗಿರುತ್ತದೆ. ಕೇವಲ ಪತಿ ಅಥವಾ ಪತ್ನಿ ಮಾತ್ರ ವಿಚ್ಛೇದನ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಲ್ಲ. ಎರಡು ಕುಟುಂಬಗಳೂ ಒಂದಲ್ಲ ಒಂದು ರೀತಿಯಲ್ಲಿ ಆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುತ್ತದೆ. ಮಾನಸಿಕ ಒತ್ತಡ, ಸಾಮಾಜಿಕ ಪ್ರತಿಷ್ಠೆಯ ಪ್ರಶ್ನೆಗಳೂ ಇದರಲ್ಲಿ ಅಡಕವಾಗಿರುತ್ತದೆ. ಆದ್ದರಿಂದ ಇಂಥ ಪ್ರಕರಣಗಳು ಆದಷ್ಟು ಶೀಘ್ರ ಇತ್ಯರ್ಥವಾಗಬೇಕಾದುದು ಬಹಳ ಅಗತ್ಯ. ಅಲ್ಲದೇ,

ವಿಚ್ಛೇದನಕ್ಕೆ ಅರ್ಜಿ ಹಾಕಿರುವ ಹೆಣ್ಣು ಅಥವಾ ಗಂಡಿನ ಪ್ರಾಯಕ್ಕೂ ನಾವಿಲ್ಲಿ ಮಹತ್ವ ಕಲ್ಪಿಸಬೇಕಾಗುತ್ತದೆ. ವಿಚ್ಛೇದನ ಎಂಬುದು ಆಸ್ತಿ ವಿವಾದದಂತೆ ಅಲ್ಲ. ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ ಬಳಿಕದ ಪ್ರತಿದಿನವೂ ಪತಿ ಮತ್ತು ಪತ್ನಿಯ ಪಾಲಿಗೆ ಅಮೂಲ್ಯ. ಉದಾಹರಣೆಗಾಗಿ, ಈ ಮೇಲಿನ ಪ್ರಕರಣವನ್ನೇ ಎತ್ತಿಕೊಳ್ಳಿ. ಇವರಿಬ್ಬರೂ ಮದುವೆಯಾಗಿರುವುದು 1999ರಲ್ಲಿ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದು 2012ರಲ್ಲಿ. ಅಂದರೆ, ಮದುವೆಯಾಗಿ 13 ವರ್ಷಗಳ ಬಳಿಕ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೇ, ವಿಚ್ಛೇದನಕ್ಕಿಂತ ಮೊದಲೇ ಅವರಿಬ್ಬರ ನಡುವೆ ಹೊಣೆಗಾರಿಕೆಯ ಬಗ್ಗೆ ಸಾಕಷ್ಟು ತಿಕ್ಕಾಟಗಳು ನಡೆದಿವೆ. ಮಾನಸಿಕ ಸಂಬಂಧಗಳು ಕಡಿದು ಹೋಗಿವೆ. ಕೊನೆಗೆ 2012ರಲ್ಲಿ ವಿಚ್ಛೇದನಕ್ಕಾಗಿ ಪತ್ನಿ ಅರ್ಜಿ ಸಲ್ಲಿಸಿದ್ದಾಳೆ. ಒಂದುರೀತಿಯಲ್ಲಿ, ಇದು 30-40 ವರ್ಷಗಳ ನಡುಪ್ರಾಯ. ಈ ಅರ್ಜಿ ಕುಟುಂಬ ನ್ಯಾಯಾಲಯದಿಂದ ಹೈಕೋರ್ಟಿಗೆ ತಲುಪಿ ಇತ್ಯರ್ಥವಾಗುವಾಗ 10 ವರ್ಷಗಳೇ ಕಳೆದಿವೆ. ನಿಜವಾಗಿ,

ಈ 10 ವರ್ಷ ಬಹು ಅಮೂಲ್ಯ. ನಡುವಯಸ್ಸಿನಲ್ಲಿ ಹಾಕಿದ ಅರ್ಜಿಯೊಂದು ವೃದ್ಧಾಪ್ಯದಲ್ಲಿ ಇತ್ಯರ್ಥವಾದರೆ ಹೇಗೋ ಹಾಗೆಯೇ ಇದು. ಅವರಿಬ್ಬರ ಬದುಕಿನ ಮಹತ್ವಪೂರ್ಣ 10 ವರ್ಷಗಳು ಬರೇ ಕೋರ್ಟು ತೀರ್ಪನ್ನು ಕಾಯುವುದರ ಕಳೆದಿವೆ. ಬೇಡದ ಮದುವೆಯಿಂದ ಬಿಡುಗಡೆಗೊಂಡು ಹೊಸ ದಾಂಪತ್ಯವೊAದನ್ನು ಪ್ರಾರಂಭಿಸಬೇಕಿದ್ದ ಅವರಿಬ್ಬರೂ ಕೋರ್ಟು ತೀರ್ಪನ್ನು ಕಾಯುತ್ತಾ ಯೌವನದ ಅಮೂಲ್ಯ ಸಮಯವನ್ನು ನಷ್ಟ ಮಾಡಿಕೊಂಡಿದ್ದಾರೆ. ಇದು ನಿಜಕ್ಕೂ ಗಂಭೀರ ಅವಲೋಕನಕ್ಕೆ ಒಳಗಾಗಬೇಕಾದ ಸಂಗತಿ. ವಿಚ್ಛೇದನ ಪ್ರಕರಣವನ್ನು ಇಂತಿಷ್ಟೇ ಅವಧಿಯೊಳಗೆ ಇತ್ಯರ್ಥಪಡಿಸಬೇಕೆಂಬ ನಿಯಮ ಮಾಡಿದರೆ ಹೇಗೆ ಎಂಬ ಬಗ್ಗೆ ಚರ್ಚೆ ನಡೆಯಬೇಕು. ಅದಕ್ಕಿಂತಲೂ ಮೊದಲು ವಿಚ್ಛೇದನ ತಗಾದೆಯನ್ನು ಕೌಟುಂಬಿಕವಾಗಿ ಇತ್ಯರ್ಥಪಡಿಸುವ ವಿಧಾನದ ಬಗ್ಗೆ ಸಾರ್ವ ಜನಿಕ ತಿಳುವಳಿಕೆ ಮೂಡಿಸಬೇಕು. ಯುವಪೀಳಿಗೆಯಲ್ಲಿ ಸಹನೆ ಕಡಿಮೆ. ತಕ್ಷಣಕ್ಕೆ ನಿರ್ಧಾರ ಕೈಗೊಳ್ಳುವ ಅವಸರ ಅವರಲ್ಲಿರುತ್ತದೆ. ಆದ್ದರಿಂದ ವಿವಾಹ ಮಾಡಿಕೊಡುವುದಷ್ಟೇ ಎರಡೂ ಕುಟುಂಬಗಳ ಹೊಣೆಗಾರಿಕೆ ಅಲ್ಲ. ಕೌಟುಂಬಿಕ ಜೀವನದಲ್ಲಿ ಎದುರಾಗುವ ಭಿನ್ನಾಭಿಪ್ರಾಯ, ಬಿಕ್ಕಟ್ಟುಗಳ ಬಗೆಗೂ ಪತಿ-ಪತ್ನಿ ಇಬ್ಬರಿಗೂ ತಿಳಿ ಹೇಳುವ ಪ್ರಯತ್ನಗಳೂ ನಡೆಯಬೇಕು. ಒಂದುವೇಳೆ,

ಅವರಿಬ್ಬರ ನಡುವೆ ಹೊಂದಾಣಿಕೆಯ ಪ್ರಶ್ನೆ ಎದುರಾದರೆ, ಎರಡೂ ಕುಟುಂಬಗಳು ಪ್ರತಿಷ್ಠೆ ಮರೆತು ಒಂದಾಗಬೇಕು. ಮಕ್ಕಳನ್ನು ಕೂರಿಸಿ ಮಾತುಕತೆ ನಡೆಸಬೇಕು. ಇಂಥ ಒಂದಕ್ಕಿಂತ ಹೆಚ್ಚು ಪ್ರಯತ್ನಗಳ ಬಳಿಕವೂ ಹೊಂದಾಣಿಕೆ ಅಸಾಧ್ಯ ಎಂದು ಕಂಡು ಬಂದಾಗ ಮಾತ್ರ ವಿಚ್ಛೇದನ ಪ್ರಕ್ರಿಯೆಗೆ ಚಾಲನೆ ನೀಡಬೇಕು. ಅಷ್ಟಕ್ಕೂ, ಮಾತುಕತೆಯ ಮೂಲಕ ಸಹಜ ವಾತಾವರಣದಲ್ಲಿ ಇದು ಇತ್ಯರ್ಥವಾಗುವುದಾದರೆ ಅದುವೇ ಉತ್ತಮ. ಯಾಕೆಂದರೆ, ನ್ಯಾಯಾಲಯಗಳಲ್ಲಿ ಪ್ರಕರಣ ಇತ್ಯರ್ಥ ವಾಗುವಾಗ ವರ್ಷಗಳೇ ದಾಟಿರುತ್ತವೆ ಮತ್ತು ತೀರ್ಪಿನ ಮೇಲೆ ಆಸಕ್ತಿಯೇ ಹೊರಟು ಹೋಗಿರುತ್ತದೆ.

ನಿಜವಾಗಿ, ಹೆಣ್ಣನ್ನು ಪೂಜನೀಯ ಸ್ಥಾನದಲ್ಲಿಟ್ಟು ನೋಡುವ ದೇಶ ಇದು. ಆದರೆ, ಈಗಿನ ಸ್ಥಿತಿ, ಈ ಭಾವನೆಗೂ ಹೆಣ್ಣನ್ನು ಈ ದೇಶದಲ್ಲಿ ನಡೆಸಿಕೊಳ್ಳುತ್ತಿರುವ ರೀತಿಗೂ ಯಾವ ಸಂಬಂಧವೂ ಇಲ್ಲ ಎಂಬಂತಿದೆ. ಈ ಮೇಲಿನ ಪ್ರಕರಣದಲ್ಲೂ ಹೆಣ್ಣನ್ನು ಸತಾಯಿಸಲಾಗಿದೆ. ಆಕೆಯ ದುಡಿಮೆಯ ಹಣವನ್ನು ಪಡೆದುದಲ್ಲದೇ ವಿಚ್ಛೇದನಕ್ಕೂ ಒಪ್ಪಿಕೊಳ್ಳದೇ ಕಿರುಕುಳಕೊಡಲಾಗಿದೆ. ಇಲ್ಲಿನ ನ್ಯಾಯ ವ್ಯವಸ್ಥೆಯಂತೂ ಆಕೆಗೆ ಸ್ಪಂದಿಸುವಾಗ ಅತ್ಯಮೂಲ್ಯ 12 ವರ್ಷಗಳೇ ಕಳೆದು ಹೋಗಿವೆ. ಇದು ಅತ್ಯಂತ ವಿಷಾದನೀಯ. ವಿಚ್ಛೇದನದ ಈ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ತರಲೇಬೇಕು.

ಮದ್ರಸ ಪಠ್ಯ ಪರಿಷ್ಕರಣೆಗೆ ಸಚಿವರನ್ನು ಒತ್ತಾಯಿಸಿದ ಆ ಪೋಷಕರು ಯಾರು?

 ಪಠ್ಯಪುಸ್ತಕ ಪರಿಷ್ಕರಣೆ ವಿವಾದದಿಂದ ಇನ್ನೂ ಮುಕ್ತಿ ಹೊಂದಿಲ್ಲದ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರು ಇದೀಗ ಮದರಸ ಪಠ್ಯಪುಸ್ತಕಗಳ ಪರಿಷ್ಕರಣೆಯ ಬಗ್ಗೆ ಮಾತಾಡಿದ್ದಾರೆ. ಹಾಗಂತ,

ಇಂಥದ್ದೊಂದು ಪರಿಷ್ಕರಣೆಯ ಬೇಡಿಕೆಯನ್ನು ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಾಗಲಿ ಅಥವಾ ರಾಜ್ಯದ ಯಾವುದಾದರೂ ಮದ್ರಸಾವಾಗಲಿ ತಮ್ಮೆದುರು ಇಟ್ಟಿಲ್ಲ ಎಂದೂ ಅವರು ಹೇಳಿದ್ದಾರೆ. ಹಾಗಿದ್ದರೆ ಈ ದಿಢೀರ್ ಪರಿಷ್ಕರಣೆಯ ಚಿಂತನೆ ಮೂಡಲು ಕಾರಣವೇನು ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ‘ಮುಸ್ಲಿಮ್ ಸಮುದಾಯದ ಕೆಲವು ಪೋಷಕರು ತಮ್ಮನ್ನು ಭೇಟಿ ಮಾಡಿ ಇಂಥ ಪರಿಷ್ಕರಣೆಯ ಬೇಡಿಕೆ ಇಟ್ಟಿದ್ದಾರೆ...’ ಎಂದವರು ಸಮರ್ಥಿಸಿಕೊಂಡಿದ್ದಾರೆ. ‘ಉಳಿದ ಸಮುದಾಯಗಳಿಗೆ ಸಿಗುವಂಥ ಶಿಕ್ಷಣ ತಮ್ಮ ಮಕ್ಕಳಿಗೂ ಸಿಗಬೇಕೆಂಬುದು ಅವರ ಬೇಡಿಕೆಯಾಗಿದ್ದು, ಇದಕ್ಕಾಗಿ ಮದ್ರಸ ಪಠ್ಯ ಪರಿಷ್ಕರಣೆ ಸಾಧ್ಯತೆಯನ್ನು ಸರ್ಕಾರ ಪರಿಗಣಿಸಲಿದೆ’ ಎಂದವರು ಹೇಳಿಕೊಂಡಿದ್ದಾರೆ. ತಮಾಷೆ ಏನೆಂದರೆ,

ಆ ಪೋಷಕರು ಯಾರು, ಮದ್ರಸಕ್ಕೂ ಅವರಿಗೂ ಏನು ಸಂಬಂಧ, ಅವರ ಮಕ್ಕಳು ಯಾವ ಮದ್ರಸದಲ್ಲಿ ಕಲಿಯುತ್ತಿದ್ದಾರೆ, ಮದ್ರಸದ ಯಾವ್ಯಾವ ಪಠ್ಯಗಳ ಬಗ್ಗೆ ಅವರಿಗೆ ತಕರಾರಿದೆ ಎಂಬಿತ್ಯಾದಿ ಸಂದೇಹಗಳಿಗೆ ಶಿಕ್ಷಣ ಸಚಿವರು ಯಾವ ಉತ್ತರವನ್ನೂ ನೀಡಿಲ್ಲ. ಆ ಪೋಷಕರ ಮಾತನ್ನು ಶಿಕ್ಷಣ ಸಚಿವರು ಇಷ್ಟು ಗಂಭೀರವಾಗಿ ಪರಿಗಣಿಸಲು ಕಾರಣವೇನು, ಅವರು ರಾಜ್ಯ ಮದ್ರಸ ಸಮಿತಿಗಳ ಅಧ್ಯಕ್ಷರಾಗಿರುವರೇ, ಇಲ್ಲ ಯಾವುದಾದರೊಂದು ಧಾರ್ಮಿಕ ಸಂಘಟನೆಯ ಮುಖ್ಯಸ್ಥರಾಗಿರುವರೇ ಅಥವಾ ಕನಿಷ್ಠ ಯಾವುದಾದರೊಂದು ಪ್ರಮುಖ ಮದ್ರಸ ಸಂಸ್ಥೆಯ ಅಧ್ಯಕ್ಷರೇ ಎಂಬ ಬಗ್ಗೆಯೂ ಅವರು ವಿವರಣೆಯನ್ನು ನೀಡಿಲ್ಲ. ಅಲ್ಲದೇ, ಶಿಕ್ಷಣ ಸಚಿವರನ್ನು ಭೇಟಿಯಾಗಿ ಮದ್ರಸ ಪಠ್ಯಪುಸ್ತಕ ಪರಿಷ್ಕರಣೆಗೆ ತಾವು ಮನವಿ ಮಾಡಿಕೊಂಡಿರುವುದಾಗಿ ಯಾವ ಪೋಷಕರೂ ಈವರೆಗೆ ಹೇಳಿಕೆಯನ್ನೂ ನೀಡಿಲ್ಲ. ಆದರೆ, ಮದ್ರಸ ಮತ್ತು ಮದ್ರಸ ಶಿಕ್ಷಣದ ಬಗ್ಗೆ ಬಿಜೆಪಿ ಮುಖಂಡರಾದ ಸಿ.ಟಿ. ರವಿ, ಈಶ್ವರಪ್ಪ, ರೇಣುಕಾಚಾರ್ಯ, ಅನಂತಕುಮಾರ್ ಹೆಗ್ಡೆ ಮತ್ತಿತರರು ಆಗಾಗ ತಕರಾರೆತ್ತುತ್ತಲೇ ಬಂದಿದ್ದಾರೆ. ಆದ್ದರಿಂದ, ಇವರನ್ನೇ ಮುಸ್ಲಿಮ್ ಸಮುದಾಯದ ಕೆಲವು ಪೋಷಕರು ಎಂದು ಬಿ.ಸಿ. ನಾಗೇಶ್ ಉಲ್ಲೇಖಿಸಿದ್ದಾರೋ ಎಂದು ಅನುಮಾನಿಸಬೇಕಾಗುತ್ತದೆ.

ದೇಶದ ಎಲ್ಲೆಡೆ ನಾಯಿಕೊಡೆಗಳಂತೆ ಮದ್ರಸಾಗಳು ತಲೆ ಎತ್ತುತ್ತಿವೆ, ಇವು ತಪ್ಪಾದ ಕ್ರಮದಲ್ಲಿ ಧಾರ್ಮಿಕ ಶಿಕ್ಷಣವನ್ನು ನೀಡುತ್ತಿವೆ, ಮಾತ್ರವಲ್ಲ, ಮದ್ರಸಾಗಳಿಂದ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ- ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಈ ಹಿಂದೆ ಹೇಳಿದ್ದರು. ಹಾಗಂತ, ಇವರು ಯಾವ ಮದ್ರಸದ ವಿದ್ಯಾರ್ಥಿ ಅಥವಾ ಯಾವ ಮದ್ರಸದ ಪಠ್ಯಪುಸ್ತಕವನ್ನು ಅಧ್ಯಯನ ನಡೆಸಿದ್ದಾರೆ ಎಂಬುದನ್ನು ಈವರೆಗೂ ಬಹಿರಂಗಪಡಿಸಿಲ್ಲ. ಇನ್ನೋರ್ವ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಅವರಂತೂ ಮದರಸಗಳನ್ನೇ ಮುಚ್ಚಬೇಕೆಂದು ಕರೆಕೊಟ್ಟಿದ್ದರು.‘ಮದರಸಗಳಲ್ಲಿ ದೇಶವಿರೋಧಿ ಚಟುವಟಿಕೆಗಳಿಗೆ ಪೂರಕವಾದ ಬೋಧನೆಯನ್ನು ಮಾಡಲಾಗುತ್ತಿದೆ’ ಎಂದವರು ತಮ್ಮ ಬೇಡಿಕೆಗೆ ಸಮರ್ಥನೆಯನ್ನು ನೀಡಿದ್ದರು. ಆದರೆ, ದೇಶವಿರೋಧಿ ಚಟುವಟಿಕೆಗೆ ಪೂರಕವಾದ ಬೋಧನೆ ಯಾವುದು ಮತ್ತು ಯಾವ ಮದರಸದಲ್ಲಿ ಅದನ್ನು ಕಲಿಸಲಾಗುತ್ತಿದೆ ಎಂಬ ನಿರ್ದಿಷ್ಟ ಉಲ್ಲೇಖವನ್ನು ಅವರು ಮಾಡಿರಲಿಲ್ಲ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರೂ ಇಂಥದ್ದೇ ಆರೋಪವನ್ನು ಹೊರಿಸಿದ್ದರು. ಇವರಲ್ಲದೇ ಬಿಜೆಪಿಯ ಇನ್ನಷ್ಟು ಮುಖಂಡರೂ ಸಮಯ-ಸಂದರ್ಭವನ್ನು ನೋಡಿಕೊಂಡು ಇಂಥ ಹೇಳಿಕೆಗಳನ್ನು ನೀಡುತ್ತಲೂ ಬಂದಿದ್ದಾರೆ. ಆದ್ದರಿಂದ ಶಿಕ್ಷಣ ಸಚಿವರ ಹೇಳಿಕೆಯನ್ನು ಲಘುವಾಗಿ ಪರಿಗಣಿಸಲೂ ಸಾಧ್ಯವಿಲ್ಲ. ಮುಸ್ಲಿಮ್ ಸಮುದಾಯ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ನೋಡುವ ಉದ್ದೇಶದಿಂದ ಅವರು ಈ ಹೇಳಿಕೆಯನ್ನು ಕೊಟ್ಟಿರಬಹುದು ಅಥವಾ ಬಿಜೆಪಿ ಮತದಾರರಲ್ಲಿ ಪುಳಕವನ್ನು ತುಂಬುವ ಉದ್ದೇಶವೂ ಅವರಿಗೆ ಇದ್ದೀತು.

ಮೊದಲನೆಯದಾಗಿ, ತಮ್ಮ ಮಕ್ಕಳಿಗೆ ಮದರಸ ಶಿಕ್ಷಣವನ್ನು ಕೊಡಿಸುವ ಅಥವಾ ಕೊಡಿಸದೇ ಇರುವ ಪೂರ್ಣ ಸ್ವಾತಂತ್ರ‍್ಯ ಈ ರಾಜ್ಯದ ಪ್ರತಿ ಮುಸ್ಲಿಮ್ ಪೋಷಕರಿಗೂ ಇದೆ. ಮುಸ್ಲಿಮ್ ಸಮುದಾಯದ ಪ್ರತಿ ಮಗುವೂ ಮದರಸ ಶಿಕ್ಷಣ ಪಡೆಯಲೇ ಬೇಕು ಎಂಬ ಕಾನೂ ನು ರಾಜ್ಯದಲ್ಲಿ ಇಲ್ಲ. ಆದ್ದರಿಂದ, ಶಿಕ್ಷಣ ಸಚಿವರನ್ನು ಭೇಟಿಯಾಗಿರುವ ಪೋಷಕರು, ‘ಉಳಿದ ಸಮುದಾಯಗಳಿಗೆ ದೊರೆಯುತ್ತಿರುವ ಶಿಕ್ಷಣವನ್ನು ತಮ್ಮ ಮಕ್ಕಳಿಗೂ ನೀಡುವಂತೆ’ ವ್ಯಕ್ತಪಡಿಸಿದ ಕಳಕಳಿಯ ಉದ್ದೇಶಶುದ್ಧಿಯೇ ಪ್ರಶ್ನಾರ್ಹವಾಗುತ್ತದೆ. ಶಾಲಾ ಶಿಕ್ಷಣದಂತೆ ಮದ್ರಸ ಶಿಕ್ಷಣ ಕಡ್ಡಾಯವೇ ಆಗಿಲ್ಲದಿರುವಾಗ, ಯಾರಿಗೇ ಆಗಲಿ ತೊಂದರೆ ಏನಿದೆ? ಹಾಗಂತ,

ಮದ್ರಸ ಪಠ್ಯಪುಸ್ತಕಗಳ ಪರಿಷ್ಕರಣೆ ನಡೆಯಲೇಬಾರದು ಎಂದು ಯಾರೂ ವಾದಿಸುತ್ತಿಲ್ಲ. ಅಲ್ಲದೇ, ಕಾಲಕಾಲಕ್ಕೂ ಮದ್ರಸ ಪಠ್ಯಪುಸ್ತಕ ಮಂಡಳಿಗಳು ಪುಸ್ತಕ ಪರಿಷ್ಕರಣೆ ಮಾಡುತ್ತಲೂ ಬಂದಿವೆ. ತಕರಾರು ಏನೆಂದರೆ, ಮದ್ರಸ ಪಠ್ಯಪುಸ್ತಕಗಳ ಮೇಲೆ ಸರ್ಕಾರದ ಹಸ್ತಕ್ಷೇಪ ಸರಿಯೇ ಎಂಬುದು ಒಂದಾದರೆ ಮದ್ರಸ ಮತ್ತು ಅದರ ಪಠ್ಯಪುಸ್ತಕಗಳ ಬಗ್ಗೆ ವಿರೋಧದ ಮಾತನ್ನಾಡುತ್ತಲೇ ಬಂದಿರುವ ಬಿಜೆಪಿ ಮುಖಂಡರು ಮತ್ತು ಅವರ ನೇತೃತ್ವದ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಇಳಿದರೆ ಏನಾದೀತು ಎಂಬುದು ಇನ್ನೊಂದು.
ಈಗಾಗಲೇ ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ತೀವ್ರ ಚರ್ಚೆಯಲ್ಲಿದೆ. ತಮ್ಮ ಪಕ್ಷದ ಅಜೆಂಡಾವನ್ನೇ ಪಠ್ಯಪುಸ್ತಕದಲ್ಲಿ ತುರುಕುವುದಕ್ಕೆ ಈ ಸರ್ಕಾರ ಪ್ರಯತ್ನಿಸಿದೆ ಎಂಬುದು ದಾಖಲೆ ಸಹಿತ ಬಹಿರಂಗವಾಗಿದೆ. ಪಠ್ಯಪುಸ್ತಕಗಳ ಪರಿಶೀಲನೆಗೆಂದು ರಚಿಸಲಾದ ಸಮಿತಿಯು ಈ ಹೊಣೆಗಾರಿಕೆಯನ್ನೂ ಮೀರಿ ಪರಿಷ್ಕರಣೆಯನ್ನೇ ಮಾಡಿರುವ ಕಳವಳಕಾರಿ ಸತ್ಯವೂ ಬಹಿರಂಗವಾಗಿದೆ. ಶಾಲಾ ಪಠ್ಯಪುಸ್ತಕಗಳ ಪರಿಸ್ಥಿತಿಯೇ ಹೀಗಾದರೆ ಇನ್ನು, ಈ ಸರ್ಕಾರ ಪರಿಷ್ಕರಣೆಗೊಳಿಸುವ ಮದ್ರಸ ಪಠ್ಯಪುಸ್ತಕಗಳು ಹೇಗಿದ್ದೀತು? ಪರಿಷ್ಕರಣೆಗೆ ರಚಿಸುವ ತಂಡ ಯಾವುದಿದ್ದೀತು? ನಿಜವಾಗಿ,

ಮದ್ರಸಗಳು ಈ ರಾಜ್ಯದಲ್ಲಿ ದಿಢೀರ್ ಆಗಿ ಹುಟ್ಟಿಕೊಂಡದ್ದಲ್ಲ. ಸ್ವಾತಂತ್ರ‍್ಯಪೂರ್ವದಿಂದಲೇ ಮದರಸ ಪದ್ಧತಿ ಮುಸ್ಲಿಮರಲ್ಲಿ ರೂಢಿಯ ಲ್ಲಿದೆ. ಶಿಕ್ಷಣವನ್ನು ಧಾರ್ಮಿಕ ಮತ್ತು ಲೌಕಿಕ ಎಂದು ವಿಭಜಿಸಿದಂದಿನಿಂದ ಮದರಸಗಳು ಪ್ರತ್ಯೇಕ ಸಾಂಸ್ಥಿಕ ರೂಪವನ್ನು ಪಡಕೊಂಡವು. ಈ ರಾಜ್ಯದ ಯಾವುದೇ ಸರ್ಕಾರಿ ಶಾಲೆಯಲ್ಲಿ ಅರಬಿ ಭಾಷೆಯನ್ನೋ ಅಥವಾ ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ವಚನಗಳನ್ನೋ ಕಲಿಸುವ ವ್ಯವಸ್ಥೆಯಿಲ್ಲ. ಹಾಗಂತ, ಓರ್ವ ಮುಸ್ಲಿಮ್ ಆಗಬೇಕೆಂದಾದರೆ ಇಸ್ಲಾಮಿನ ಕಡ್ಡಾಯ ಕರ್ಮಗಳನ್ನು ನಿರ್ವಹಿಸಬೇಕಾದುದು ಬಹಳ ಅಗತ್ಯ. ಇದನ್ನು ಕಲಿತುಕೊಳ್ಳುವ ಸೌಲಭ್ಯ ಸರ್ಕಾರಿ ಶಾಲೆಗಳಲ್ಲಿ ಇಲ್ಲ ಎಂದಾದರೆ ಮತ್ತೆ ಅವರು ಅವುಗಳನ್ನು ಎಲ್ಲಿಂದ ಕಲಿತುಕೊಳ್ಳಬೇಕು? ಈ ಅನಿವಾರ್ಯತೆಗಳೇ ಮದ್ರಸಗಳನ್ನು ಹುಟ್ಟು ಹಾಕಿದುವು. ಪವಿತ್ರ ಕುರ್‌ಆನನ್ನು ಕಲಿಸುವ, ನಮಾಝ್ ಇತ್ಯಾದಿ ಕರ್ಮಗಳನ್ನು ಅಭ್ಯಾಸಗೊಳಿಸುವ ಮತ್ತು ಇಸ್ಲಾಮಿನ ಇತಿಹಾಸವನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದಲೇ ಮದ್ರಸಗಳು ತಲೆ ಎತ್ತಿದುವು. ಇವತ್ತೂ ಕೂಡ ಮದ್ರಸಾಗಳು ಕಲಿಸುತ್ತಿರುವುದು ಇವುಗಳನ್ನೇ. ಅಲ್ಲದೇ,


28-7-2022

ಮದ್ರಸಾ ಪಠ್ಯಗಳೇನೂ ರಹಸ್ಯವಾಗಿಲ್ಲ. ಯಾರಿಗೆ ಬೇಕಾದರೂ ಖರೀದಿಸುವಷ್ಟು ಅಗ್ಗದ ದರದಲ್ಲಿ ಮಾರುಕಟ್ಟೆಯಲ್ಲಿ ಮಾರಾಟಕ್ಕಿವೆ. ಸಚಿವರು ಪಠ್ಯಪುಸ್ತಕಗಳ ಮೇಲೆ ಆರೋಪ ಹೊರಿಸುವುದ ಕ್ಕಿಂತ ಮೊದಲು ಇವನ್ನೊಮ್ಮೆ ಪರಿಶೀಲಿಸಬೇಕಿತ್ತು. ಅಥವಾ ಯಾವ ತರಗತಿಯ ಪಠ್ಯಕ್ರಮದಲ್ಲಿ ಲೋಪದೋಷಗಳಿವೆ ಎಂಬುದನ್ನು ನಿರ್ದಿಷ್ಟವಾಗಿ ಉಲ್ಲೇಖಿಸಬೇಕಿತ್ತು. ಆಗ ಅದು ಚರ್ಚೆಯ ಸ್ವರೂಪವನ್ನು ಪಡೆದುಕೊಳ್ಳುತ್ತಿತ್ತಲ್ಲದೇ, ಸಚಿವರ ಉದ್ದೇಶ ಶುದ್ಧಿಯು ಪ್ರಶ್ನಾರ್ಹಗೊಳ್ಳುವುದೂ ತಪ್ಪುತ್ತಿತ್ತು. ಅಷ್ಟಕ್ಕೂ,

ಮದ್ರಸ ಮತ್ತು ಅದರ ಸಾಂಸ್ಥಿಕ ರೂಪವನ್ನೇ ಪ್ರಶ್ನಿಸುವ ಹಾಗೂ ಅದನ್ನು ತಾಲಿಬಾನ್‌ಗಳನ್ನು ಸೃಷ್ಟಿಸುವ ಕೇಂದ್ರವೆಂದು ಜರೆಯುವ ಪಕ್ಷ ಮತ್ತು ಅದರ ನೇತೃತ್ವದ ಸರ್ಕಾರವು ಪಠ್ಯ ಪರಿಷ್ಕರಣೆಯ ಬಗ್ಗೆ ಮಾತಾಡುವುದೇ ಒಂದು ತಮಾಷೆ. ಅಜ್ಞಾತ ಪೋಷಕರ ಭುಜದಲ್ಲಿ ಬಂದೂಕು ಇಟ್ಟು ಮದ್ರಸದ ಮೇಲೆ ಸಿಡಿಸುವ ಈ ತಂತ್ರ ಕೆಟ್ಟದು. ಮದ್ರಸ ಎಂದರೆ, ಹೆಸರು, ಊರು, ಮುಖ ಪರಿಚಯ ಇಲ್ಲದ ಯಾವುದೋ ಪೋಷಕರು ಅಲ್ಲ. ಅದಕ್ಕೊಂದು ಸಮಿತಿ, ಹೊಣೆಗಾರರಿದ್ದಾರೆ. ಅಧಿಕೃತ ಪಠ್ಯಪುಸ್ತಕಗಳೂ ಇವೆ. ಈ ಹೊಣೆಗಾರರಲ್ಲಿ ಯಾರೂ ಸಚಿವರ ಮುಂದೆ ಪಠ್ಯಪರಿಷ್ಕರಣೆಯ ಬೇಡಿಕೆಯನ್ನು ಇಟ್ಟಿಲ್ಲ. ಸಚಿವರು ಅವರ ಜೊತೆ ಮಾತನ್ನೂ ಆಡಿಲ್ಲ. ಅದು ಬಿಟ್ಟು ಯಾರೋ ಪೋಷಕರನ್ನು ತೋರಿಸಿ ತನ್ನ ಪಕ್ಷದ ಅಜೆಂಡಾವನ್ನು ಮದ್ರಸಾಗಳ ಮೇಲೆ ಹೇರುವುದು ಸಲ್ಲ. ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಮಾಡುವ ಯಾವ ಪರಿಷ್ಕರಣೆಯೂ ಖಂಡನಾರ್ಹ.

ಮಸೂದ್, ಪ್ರವೀಣ್, ಫಾಝಿಲ್: ಸಂತ್ರಸ್ತರು ಹೇಳಿದ ಕಾರಣಗಳು

 


4-8-2022

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಆಧಾರದಲ್ಲಿ ಹತ್ಯೆಗಳು ನಡೆದಿರುವುದು ಇದು ಮೊದಲಲ್ಲ. ಆದರೆ ಅತ್ಯಂತ ನಿರ್ಲಜ್ಜವಾಗಿ ಮತ್ತು ಬಹಿರಂಗವಾಗಿ ಒಂದು ಸರ್ಕಾರ ಒಂದು ಕೋಮಿನ ಪರ ನಿಂತಿದ್ದು ಇದೇ ಮೊದಲು. ಹತ್ಯೆಗೀಡಾದ ಪ್ರವೀಣ್ ಮನೆಗೆ ಮುಖ್ಯಮಂತ್ರಿ ಬೊಮ್ಮಾಯಿಯಿಂದ ಹಿಡಿದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಜಿಲ್ಲಾ ಸಂಸದ ನಳಿನ್ ಕುಮಾರ್ ಕಟೀಲ್, ತೇಜಸ್ವಿ ಸೂರ್ಯ, ಸಚಿವರಾದ ಸುನೀಲ್ ಕುಮಾರ್, ಅಂಗಾರ, ಬಿಜೆಪಿ ಶಾಸಕರಾದ ಮಠಂದೂರು, ಪೂಂಜಾ ಸಹಿತ ಸಾಲು ಸಾಲು ಜನಪ್ರತಿನಿಧಿಗಳು ಭೇಟಿ ನೀಡಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರ 25 ಲಕ್ಷ ರೂಪಾಯಿ ಪರಿಹಾರವನ್ನೂ ಘೋಷಿಸಿದೆ. ಮೃತ ವ್ಯಕ್ತಿಯ ಪತ್ನಿಗೆ ಸರ್ಕಾರಿ ಉದ್ಯೋಗ ನೀಡುವ ಭರವಸೆ ನೀಡಲಾಗಿದೆ. ಆದರೆ ಪ್ರವೀಣ್ ಹತ್ಯೆಗಿಂತ ಮೊದಲು ಅದೇ ಪರಿಸರದಲ್ಲಿ ಮಸೂದ್ ಎಂಬ ಯುವಕನ ಹತ್ಯೆಯಾಗಿದೆ. ಹಾಗೆಯೇ ಪ್ರವೀಣ್ ಹತ್ಯೆಯ ಎರಡೇ ದಿನದೊಳಗೆ ಫಾಝಿಲ್ ಎಂಬ ಯುವಕನ ಹತ್ಯೆಯಾಗಿದೆ. ಈ ಹತ್ಯೆ ನಡೆಯುವಾಗಲಂತೂ ಮುಖ್ಯಮಂತ್ರಿಯವರು ಜಿಲ್ಲೆಯಲ್ಲೇ ಇದ್ದರು. ಆದರೆ ಪ್ರವೀಣ್ ಮನೆಗೆ ಭೇಟಿ ಕೊಟ್ಟ ಮುಖ್ಯಮಂತ್ರಿಗಳು ಅಲ್ಲೆ ಪಕ್ಕದ ಮಸೂದ್ ಮನೆಗೆ ಭೇಟಿ ಕೊಟ್ಟಿಲ್ಲ. ಅವರು ಬಿಡಿ, ಸ್ಥಳೀಯ ಸಂಸದ ನಳೀನ್ ಕುಮಾರ್ ಕಟೀಲ್ ಆಗಲಿ, ಕ್ಷೇತ್ರದ ಶಾಸಕ ಅಂಗಾರ ಆಗಲಿ ಯಾರೂ ಆ ಮನೆಗೆ ಭೇಟಿ ಕೊಟ್ಟಿಲ್ಲ. ಸರ್ಕಾರ ನಯಾಪೈಸೆ ಪರಿಹಾರ ಘೋಷಿಸಿಲ್ಲ. ಅಲ್ಲದೇ, ಇಂಥದ್ದೆ ನಿರ್ಲಕ್ಷ್ಯ ಫಾಝಿಲ್ ಹತ್ಯೆ ವಿಚಾರದಲ್ಲೂ ನಡೆದಿದೆ. ಜಿಲ್ಲೆಯ ಸಂಸದ ಕಟೀಲ್ ಆಗಲಿ, ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿಯಾಗಲಿ ಫಾಝಿಲ್ ಮನೆಗೆ ಭೇಟಿ ಕೊಟ್ಟಿಲ್ಲ. ಸರ್ಕಾರ ಯಾವ ಪರಿಹಾರವನ್ನೂ ಘೋಷಿಸಿಲ್ಲ. ಇದು ಘಟನೆಯ ಒಂದು ಮುಖವಾದರೆ, ಇನ್ನೊಂದು ಮುಖ ಪಕ್ಷಬೇಧ ಮತ್ತು ಧರ್ಮಬೇಧದ ಹಂಗಿಲ್ಲದೇ ನಮ್ಮೆಲ್ಲರ ಕಣ್ಣನ್ನು ತೆರೆಸುವಂಥದ್ದು. ಅದುವೇ, ಫಾಝಿಲ್, ಮಸೂದ್ ಮತ್ತು ಪ್ರವೀಣ್ ಮನೆಯವರು ಹಂಚಿಕೊಂಡ ಸಂಕಟ.

ಮಸೂದ್, ಪ್ರವೀಣ್ ಮತ್ತು ಫಾಝಿಲ್ ಕುಟುಂಬಗಳು ತಮ್ಮ ಮನಸ್ಸನ್ನು ಮಾಧ್ಯಮಗಳ ಮುಂದೆ ತೆರೆದಿಟ್ಟಿದ್ದಾರೆ. ರಾಜಕೀಯ ಪಕ್ಷ ಪಾತವನ್ನು ಮಸೂದ್ ತಾಯಿ ನೇರವಾಗಿ ಪ್ರಶ್ನಿಸಿದ್ದಾರೆ. ‘ಪ್ರವೀಣ್ ಮನೆಗೆ ಬಂದ ಮುಖ್ಯಮಂತ್ರಿಗಳು ನನ್ನ ಮನೆಗೇಕೆ ಬಂದಿಲ್ಲ, ಪರಿಹಾರವೇಕೆ ಘೋಷಿಸಿಲ್ಲ, ಪ್ರವೀಣ್ ಮತ್ತು ಮಸೂದ್- ಇಬ್ಬರ ದೇಹದಿಂದ ಹರಿದಿರುವುದು ರಕ್ತವೇ ಅಲ್ಲವೇ...’ ಎಂದವರು ಪ್ರಶ್ನಿಸಿದ್ದಾರೆ. ಪ್ರವೀಣ್ ಪತ್ನಿ ನೂತನ ಅಂತೂ ಬಿಜೆಪಿಯ ನಾಯಕರನ್ನು ತೀವ್ರವಾಗಿ ತರಾಟೆಗೆ ಎತ್ತಿಕೊಂಡಿದ್ದಾರೆ. ‘ನಿಮ್ಮ ಮಕ್ಕಳಿಗೆ ಹೀಗಾಗಿರುತ್ತಿದ್ದರೆ ಏನು ಮಾಡುತ್ತಿದ್ದಿರಿ? ನನ್ನ ಗಂಡನನ್ನು ನನಗೆ ಮರಳಿಸಿ ಕೊಡಲು ನಿಮ್ಮಿಂದ ಸಾಧ್ಯವಾ...’ ಎಂದು ಮುಂತಾಗಿ ಆಕ್ರೋಶ ಹೊರಹಾಕಿದ್ದಾರೆ. ಫಾಝಿಲ್ ತಂದೆಯಂತೂ ಮಾಧ್ಯಮಗಳನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ‘ಪ್ರೇಮ ಪ್ರಕರಣಕ್ಕಾಗಿ ಈ ಹತ್ಯೆ ನಡೆದಿದೆ ಎಂದು ನೀವೇಕೆ ಸುಳ್ಳು ಹೇಳಿದಿರಿ...’ ಎಂದವರು ಪ್ರಶ್ನಿಸಿದ್ದಾರೆ ಅಂದಹಾಗೆ,

ಈ ಮೂರೂ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬದ ಮಾತುಗಳು ಎರಡು ಸಂಗತಿಗಳನ್ನು ಸ್ಪಷ್ಟಪಡಿಸುತ್ತವೆ. 1.ಹೊಲಸು ರಾಜಕೀಯ. 2. ಬೇಜವಾಬ್ದಾರಿ ಮಾಧ್ಯಮ. ಈ ಘಟನೆಯಲ್ಲಿ ಇವೆರಡೂ ಜನರ ಕೆಂಗಣ್ಣಿಗೆ ಗುರಿಯಾಗಿವೆ. ನಿಜವಾಗಿ,

ಇಂಥ ಸಂದರ್ಭಗಳಲ್ಲಿ ಮಾಧ್ಯಮದ ಪಾತ್ರ ಹಿರಿದು. ಯಾವುದೇ ಘಟನೆಯಲ್ಲೂ ಓಟನ್ನು ಹುಡುಕುವ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ, ಮಾಧ್ಯಮ ರಂಗಕ್ಕೆ ಆ ಹಪಾಹಪಿ ಇಲ್ಲ. ಅವು ಜನರ ಓಟಿನಿಂದ ಉಸಿರಾಡುತ್ತಿರುವುದಲ್ಲ. ಅಧಿಕಾರಕ್ಕಾಗಿ ರಾಜಕೀಯ ಮಾಡುವ ರಾಜಕೀಯ ಪಕ್ಷಗಳ ಸಂಚನ್ನು ಬಯಲುಗೊಳಿಸುವುದೇ ಮಾಧ್ಯಮಗಳ ಜವಾಬ್ದಾರಿ. ಆದರೆ ಈ ಮೂರು ಘಟನೆಗಳ ಪೈಕಿ ರಾಜ್ಯದ ಪ್ರಮುಖ ಟಿ.ವಿ. ಚಾನೆಲ್‌ಗಳು ಪ್ರವೀಣ್ ಹತ್ಯೆಯನ್ನು ಮಾತ್ರ ಗಂಭೀರವಾಗಿ ಪರಿಗಣಿಸಿದುವು. ಪ್ರಚೋದನಕಾರಿ ಶೀರ್ಷಿಕೆಗಳೊಂದಿಗೆ ಹತ್ತು-ಹಲವು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿದುವು. ಪ್ರವೀಣ್ ಮನೆಯ ತುಸು ದೂರದಲ್ಲಿ ನಾಲ್ಕು ದಿನಗಳ ಮೊದಲು ನಡೆದಿದ್ದ ಮಸೂದ್ ಹತ್ಯೆಯನ್ನು ಕಂಡೇ ಇಲ್ಲದಂತೆ ವರ್ತಿಸಿದ್ದ ಇವೇ ಮಾಧ್ಯಮಗಳು ಪ್ರವೀಣ್ ಹತ್ಯೆಯನ್ನು ಭಿನ್ನವಾಗಿ ಎತ್ತಿಕೊಂಡವು. ಫಾಝಿಲ್ ಸಾವು ದೃಢವಾಗುವುದಕ್ಕಿಂತ ಮೊದಲೇ ಸೋಷಿಯಲ್ ಮೀಡಿಯಾಗಳಲ್ಲಿ ಊಹಾಪೋಹಗಳನ್ನು ಹರಿಯಬಿಡಲಾಯಿತು. ‘ಫಾಝಿಲ್ ಸುನ್ನಿಯಾಗಿದ್ದು, ಶಿಯಾ ಮುಸ್ಲಿಮರು ಈ ಹತ್ಯೆ ನಡೆಸಿದ್ದಾರೆ..’ ಎಂಬ ಅತ್ಯಂತ ಕ್ರೂರ ಸುಳ್ಳು ಪ್ರಚಾರವಾಯಿತು. ಇಂಗ್ಲಿಷ್‌ನ ಜನಪ್ರಿಯ ಪತ್ರಿಕೆಯೊಂದು ಮುಖಪುಟದಲ್ಲಿ ಈ ಸುಳ್ಳು ಸುದ್ದಿಗೆ ಜಾಗ ನೀಡಿತು. ಓಪ್ ಇಂಡಿಯಾ ಅನ್ನುವ ಬಲಪಂಥೀಯ ವೆಬ್‌ಸೈಟ್ ಕೂಡಾ ಈ ಸುಳ್ಳನ್ನು ಭಾರೀ ಮಹತ್ವ ಕೊಟ್ಟು ಪ್ರಕಟಿಸಿತು. ಫಾಝಿಲ್‌ನ ಹತ್ಯೆಯನ್ನು ಸಂಭ್ರಮಿಸಿದವರು ಹುಟ್ಟು ಹಾಕಿದ ಸುಳ್ಳಿದು. ನಿಜವಾಗಿ,

ಹೊಲಸು ರಾಜಕೀಯ ಮತ್ತು ಬೇಜವಾಬ್ದಾರಿ ಮಾಧ್ಯಮಗಳಿಂದಾಗಿಯೇ ರಾಜ್ಯದ ಜನರ ನೆಮ್ಮದಿ ಹಾಳಾಗಿದೆ. ಅಭಿವೃದ್ಧಿಯನ್ನು ಮುಂದಿಟ್ಟು ರಾಜಕಾರಣ ಮಾಡುವ ಧೈರ್ಯ ಆಡಳಿತಗಾರರಿಗೆ ಇಲ್ಲ. ಮಳೆಗಾಲ ಆರಂಭವಾಗಿದೆ. ಆದರೆ, ಮಳೆಗಾಲವನ್ನು ಎದುರಿಸುವಲ್ಲಿ ರಾಜ್ಯ ಸರ್ಕಾರ ಯಾವ ಸಿದ್ಧತೆಯನ್ನೂ ಮಾಡಿಕೊಂಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸ್ಮಾರ್ಟ್ ಸಿಟಿಯ ಪಟ್ಟಿಯಲ್ಲಿದೆ. 2000 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಈ ಕಾಮಗಾರಿ ಎಷ್ಟು ಕಳಪೆಯಾಗಿದೆಯೆಂದರೆ, ಮೊದಲ ಮಳೆಗೆ ಇಡೀ ಮಂಗಳೂರೇ ಮುಳುಗಿದೆ. ಅತ್ಯಂತ ಅಸಮರ್ಪಕವಾಗಿ ಈ ಕಾಮಗಾರಿ ನಡೆಸಲಾಗಿದೆ. ಮಂಗಳೂರಿನಲ್ಲಿ ಏರ್‌ಪೋರ್ಟ್, ಬಂದರ್, ರೈಲ್ವೇ ನಿಲ್ದಾಣ, ಮಾಲ್‌ಗಳು, ಹಲವು ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಇದ್ದರೂ ಉದ್ಯೋಗ ಸೃಷ್ಟಿ ಆಗುತ್ತಿಲ್ಲ. ಕಂಪೆನಿಗಳು ಇಲ್ಲಿ ಹೂಡಿಕೆ ಮಾಡಲು ಒಪ್ಪುತ್ತಿಲ್ಲ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉದ್ಯೋಗವನ್ನರಸಿ ಬೆಂಗಳೂರಿಗೋ ವಿದೇಶಕ್ಕೋ ಹೋಗುತ್ತಿದ್ದಾರೆ. ಪ್ರತಿಭಾವಂತರವನ್ನು ತಯಾರಿಸುವ ಆದರೆ ಉದ್ಯೋಗ ಕೊಡದ ಬಹುಶಃ ಏಕೈಕ ಜಿಲ್ಲೆ ದಕ್ಷಿಣ ಕನ್ನಡವೇ ಇರಬೇಕು. ಹೊರಜಿಲ್ಲೆ ಮತ್ತು ರಾಜ್ಯಗಳಿಂದ ಮಂಗಳೂರಿಗೆ ಶಿಕ್ಷಣಕ್ಕಾಗಿ ಮಕ್ಕಳು ಬರುತ್ತಿದ್ದಾರೆ. ಆಸ್ಪತ್ರೆಗಳಿಗೂ ಹೊರ ರಾಜ್ಯಗಳಿಂದ ರೋಗಿಗಳೂ ಬರುತ್ತಿದ್ದಾರೆ. ಮಂಗಳೂರು ಸಮುದ್ರದಿಂದ ಸುತ್ತುವರಿದಿರುವ ಕಾರಣ ಬಂದರು ಪಟ್ಟಣವಾಗಿಯೂ ಪರಿವರ್ತಿತವಾಗಿದೆ. ಹೊರ ರಾಜ್ಯಗಳ ಜೊತೆ ಇಲ್ಲಿನ ಬಂದರಿನಿAದ ವ್ಯವಹಾರಗಳು ನಡೆಯುತ್ತವೆ. ಇಲ್ಲಿನ ರೈಲು ನಿಲ್ದಾಣವೂ ಜನನಿಬಿಡವಾಗಿರುತ್ತದೆ. ಅಂತಾರಾಷ್ಟ್ರೀಯ ವಿಮಾನ ಸಂಪರ್ಕ ಕಲ್ಪಿಸುವ ನಿಲ್ದಾಣವೂ ಇಲ್ಲಿದೆ. ಎರಡು ಬೃಹತ್ ಮಾಲ್‌ಗಳೂ ಸೇರಿದಂತೆ ಹಲವು ಮಾಲ್‌ಗಳೂ ಇಲ್ಲಿವೆ. ಇಷ್ಟೆಲ್ಲ ಇದ್ದೂ ಈ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿ ಆಗದೇ ಇರುವುದಕ್ಕೆ ಏನು ಕಾರಣ? ಯಾಕೆ ಕಂಪೆನಿಗಳು ಇಲ್ಲಿ ಹೂಡಿಕೆ ಮಾಡಲು ಭಯಪಡುತ್ತಿವೆ? ಅಂದಹಾಗೆ, ಈ ಮೂರು ಹತ್ಯೆಗಳ ನಡುವೆಯೇ ಇಲ್ಲಿ ಪಬ್ ದಾಳಿ ನಡೆದಿದೆ. ಕೆಲವು ವರ್ಷಗಳ ಹಿಂದೆ ಇದೇ ಮಂಗಳೂರಿನಲ್ಲಿ ಪಬ್ ದಾಳಿ ನಡೆದಿತ್ತು ಮತ್ತು ಅಲ್ಲಿದ್ದ ಹೆಣ್ಮಕ್ಕಳನ್ನು ಹೀನಾಯವಾಗಿ ನಡೆಸಿಕೊಳ್ಳಲಾಗಿತ್ತು. ಅವರ ಮೇಲೆ ಹಲಗಲೆ ನಡೆಸಿದ್ದು ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅಂದಹಾಗೆ,

ಬೆAಗಳೂರು ಆಗಿ ಪರಿವರ್ತನೆಯಾಗುವುದಕ್ಕೆ ಸಕಲ ಅವಕಾಶಗಳಿದ್ದೂ ಮಂಗಳೂರು ಯಾಕೆ ಬೆಂಗಳೂರು ಆಗುತ್ತಿಲ್ಲ ಅನ್ನುವುದಕ್ಕೆ ಇಲ್ಲಿನ ಹೊಲಸು ರಾಜಕೀಯವೇ ಮುಖ್ಯ ಕಾರಣ. ಧರ್ಮದ್ವೇಷವನ್ನು ಉತ್ಪಾದಿಸಿ ಮಾರುವ ಕೆಟ್ಟ ರಾಜಕೀಯವೊಂದು ಈ ಜಿಲ್ಲೆಯಲ್ಲಿದೆ. ಇದರ ರೂವಾರಿ ಬಿಜೆಪಿ. ಚುನಾವಣೆ ಹತ್ತಿರ ಬರುವಾಗ ಪ್ರಚೋದನಕಾರಿ ಭಾಷಣ ಮತ್ತು ಹತ್ಯೆಗಳು ಈ ಜಿಲ್ಲೆಗೆ ಸಾಮಾನ್ಯ ಎಂಬಂತಾಗಿ ಬಿಟ್ಟಿದೆ. ಧರ್ಮದ್ವೇಷವನ್ನೇ ಬಿತ್ತಿ ಚುನಾವಣೆಯಲ್ಲಿ ಫಸಲು ಪಡೆಯುವ ಸಂಚಿಗೆ ಇಲ್ಲಿ ದಶಕಗಳಿಂದ ಮಾನ್ಯತೆ ಸಿಗುತ್ತಲೇ ಇದೆ. ಎಲ್ಲಿವರೆಗೆ ಈ ರಾಜಕೀಯ ನೀತಿಗೆ ತಿರುಗೇಟು ಸಿಗುವುದಿಲ್ಲವೋ ಅಲ್ಲಿವರೆಗೆ ಬಡವರು ಬಲಿಯಾಗುತ್ತಲೇ ಹೋಗುತ್ತಿರುತ್ತಾರೆ. ಅಂದಹಾಗೆ,

ದ್ವೇಷದ ಚೂರಿಗೆ ಬಲಿಯಾದ ಮಸೂದ್ ಮತ್ತು ಫಾಝಿಲ್ ಕೂಲಿ ಕಾರ್ಮಿಕರಾದರೆ ಪ್ರವೀಣ್ ಕೋಳಿ ಅಂಗಡಿ ವ್ಯಾಪಾರಿ. ರಾಜಕಾರಣಿಗಳು ಮತ್ತು ಅವರ ಮಕ್ಕಳು ಎಲ್ಲೋ ಹಾಯಾಗಿರುತ್ತಾರೆ. ಪ್ರತಿ ಕೋಮು ಹತ್ಯೆ ಹೇಳುತ್ತಿರುವುದೂ ಈ ಸತ್ಯವನ್ನೇ