Friday, 26 July 2024

ನಮ್ಮ ಮಕ್ಕಳು ಅಂಥವರಲ್ಲ ಎಂದು ಆರಾಮವಾಗಿ ಇರಬೇಡಿ..

 




ಕಳೆದ ಒಂದೇ ವಾರದಲ್ಲಿ ನಡೆದ ಘಟನೆಗಳಿವು-

ರೀಲ್ಸ್ ನ  ಹುಚ್ಚಿಗೆ ಬಿದ್ದು ಜೀವ ಕಳಕೊಳ್ಳುತ್ತಿರುವ ಯುವ ಸಮೂಹದ ಸುದ್ದಿಗಳು ಪ್ರತಿದಿನವೆಂಬಂತೆ  ವರದಿಯಾಗುತ್ತಿವೆ.  ತಮ್ಮದೇ ಆದ ಐಡೆಂಟಿಟಿ ಸೃಷ್ಟಿಸಿಕೊಳ್ಳುವ ಉದ್ದೇಶದಿಂದ ಹರೆಯದ ಯುವಕ-ಯುವತಿಯರು ನಡೆಸುತ್ತಿರುವ  ಕಸರತ್ತುಗಳಿಂದ ಮನೆಗಳು ಸ್ಮಶಾನಗಳಾಗುತ್ತಿವೆ. ಕರಣ್ ಪರ್ಮಾರ್ ಎಂಬ 7ನೇ ತರಗತಿ ವಿದ್ಯಾರ್ಥಿಯನ್ನೇ ಹುಡುಗನನ್ನೇ  ಈ ರೀಲ್ಸ್ ಹುಚ್ಚು ಬಿಟ್ಟಿಲ್ಲ ಎಂದ ಮೇಲೆ ಹರೆಯದ ಪೀಳಿಗೆಯಲ್ಲಿ ಈ ಭ್ರಮೆ ಎಷ್ಟಿರಬಹುದು?

ಮಧ್ಯಪ್ರದೇಶದ ಈ ಕರಣ್ ಪರ್ಮಾರ್ ರೀಲ್ಸ್ ಮಾಡಲು ಹೋಗಿ ಜೀವ ಕಳಕೊಂಡಿದ್ದಾನೆ. ಆತ್ಮಹತ್ಯೆಯ ರೀಲ್ಸ್  ಮಾಡುವುದಕ್ಕಾಗಿ ಈತ ಗೆಳೆಯರೊಂದಿಗೆ ಹೋಗಿದ್ದ. ಕುತ್ತಿಗೆಗೆ ಹಗ್ಗ ಬಿಗಿದು ಸಂಕಟ ಪಡುತ್ತಿರುವಂತೆ ನಟಿಸುವುದು  ರೀಲ್ಸ್ ನ  ಗುರಿ. ಆದರೆ, ಹಗ್ಗ ನಿಜಕ್ಕೂ ಆತನ ಕೊರಳನ್ನು ಬಿಗಿದಿದೆ. ಆತ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಶ್ರಮ ಪಡುತ್ತಿದ್ದರೂ ಉಳಿದ ಮಕ್ಕಳ ಅದನ್ನು ನಟನೆ ಎಂದುಕೊಂಡು  ಆಟಕ್ಕೆ ಮರಳಿದ್ದಾರೆ. ಹೀಗೆ ಆ ಬಾಲಕ ಪ್ರಾಣ ಬಿಟ್ಟಿದ್ದಾನೆ.  ಇದೊಂದೇ ಅಲ್ಲ
,
ಜೈಪುರದಲ್ಲಿ ಮದುವೆ ನಿಶ್ಚಿತವಾಗಿದ್ದ ವಧು-ವರರು ಮದುವೆಗೆ ಮುಂಚಿನ ಫೋಟೋ ಶೂಟಿಂಗ್ ವೇಳೆ ಗಂಭೀರ  ಗಾಯಗೊಂಡಿದ್ದಾರೆ. 22 ವರ್ಷದ ರಾಹುಲ್ ಮತ್ತು 20 ವರ್ಷದ ಜಾಹ್ನವಿ ರೈಲ್ವೆ ಸೇತುವೆಯ ಮೇಲೆ ನಿಂತು  ಶೂಟಿಂಗ್ ನಡೆಸುತ್ತಿದ್ದಾಗ ರೈಲು ಬಂದಿದೆ. ಭಯದಿಂದ ಇಬ್ಬರೂ 300 ಅಡಿ ಎತ್ತರದಿಂದ ಕೆಳಗೆ ಹಾರಿದ್ದಾರೆ. ಇಬ್ಬರೂ  ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮುಂಬೈಯ ಶ್ವೇತಾ ಎಂಬ 23 ವರ್ಷದ ಯುವತಿಯ ಸ್ಥಿತಿಯೂ  ಇದಕ್ಕಿಂತ ಭಿನ್ನವಲ್ಲ. ರೀಲ್ಸ್ ಗಾಗಿ  ಈಕೆ ಕಾರನ್ನು ಹಿಂದೆಗೆಯುವ ಪ್ರಯತ್ನದ ನಡುವೆ 300 ಅಡಿ ಪ್ರಪಾತಕ್ಕೆ ಬಿದ್ದು ಜೀವ  ಕಳಕೊಂಡಿದ್ದಾಳೆ. ಹಿಂದುಗಡೆ ಇರುವ ಭಾರೀ ಪ್ರಪಾತದ ಹತ್ತಿರ ಕಾರು ತಂದು ನಿಲ್ಲಿಸುವುದು ಆಕೆಯ ಉದ್ದೇಶವಾಗಿತ್ತು.  ಆದರೆ ಪ್ರಪಾತದ ಹತ್ತಿರ ಬಂದು ಬ್ರೇಕ್ ಹಾಕುವ ಬದಲು ಎಕ್ಸಿಲರೇಟರ್ ಒತ್ತಿದ್ದು ಈ ಸಾವಿಗೆ ಕಾರಣವಾಗಿತ್ತು.  ಮುಂಬೈಯ 27 ವರ್ಷದ ಆನ್ವಿ ಕಮ್‌ದಾರ್ ಎಂಬ ಯುವತಿ ಜೀವ ಕಳಕೊಂಡದ್ದೂ ರೀಲ್ಸ್ ಕಾರಣವೇ. ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್ಗಳಿರುವ ಈಕೆಯ ಣhegಟoಛಿಚಿಟರಿouಡಿಟಿಚಿಟ ಖಾತೆ  ಬಹಳ ಜನಪ್ರಿಯ. ಜಲಪಾತದಂಥ ನೀರ ಹರಿವಿನ ಬಳಿ ನಿಂತು ರೀಲ್ಸ್ ಮಾಡುತ್ತಿರುವ ವೇಳೆ ಈಕೆ ಕಾಲುಜಾರಿ 400  ಅಡಿ ಪ್ರಪಾತಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.
ವಾರದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಇನ್ನೊಂದು ವೀಡಿಯೋವೊಂದು ಹರಿದಾಡುತ್ತಿತ್ತು. ಎತ್ತರದ ಕಟ್ಟಡದಲ್ಲಿ ಯುವತಿ  ನೇತಾಡುತ್ತಿದ್ದರೆ ಯುವಕ ಆಕೆಯ ಕೈ ಹಿಡಿದಿದ್ದ. ಟೆರೇಸ್‌ನ ಮೇಲೆ ಕೊನೆಯಲ್ಲಿ ಮಲಗಿದ್ದ ಯುವಕ ಕೆಳಗೆ ಕೈ ಚಾಚಿ  ಯುವತಿಯನ್ನು ಕೈ ಹಿಡಿದು ನೇತಾಡಿಸುವ ಈ ವೀಡಿಯೋವನ್ನು ರೀಲ್ಸ್ ಗಾಗಿ  ಮಾಡಲಾಗಿತ್ತು. ಮಹಾರಾಷ್ಟ್ರದ  ಮೀನಾಕ್ಷಿ  ಸಾಲುಂಕೆ ಮತ್ತು ಮಿಹಿರ್ ಗಾಂಧಿ ಎಂಬಿಬ್ಬರನ್ನು ಪೊಲೀಸರು ಆ ಬಳಿಕ ಬಂಧಿಸಿದರು.. ಅಂದಹಾಗೆ, 

ಸೋಶಿಯಲ್  ಮೀಡಿಯಾದ ಈ ಕಾಲದಲ್ಲಿ ಇಂಥ ಬಂಧನಗಳಾಗಲಿ ಅಥವಾ ಸಾವಿನ ಸುದ್ದಿಗಳಾಗಲಿ ಯುವ ಸಮೂಹದಲ್ಲಿ ಭಾರೀ  ಪರಿವರ್ತನೆ ತರಬಲ್ಲುದು ಎಂದು ಹೇಳುವ ಹಾಗಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಒಮ್ಮೆ ಕಣ್ಣಾಡಿಸಿದರೆ ಇಂಥ ಸಾಹಸಮಯ  ರೀಲ್ಸ್ ಗಳು ಕಣ್ಣು   ಕುಕ್ಕುವಷ್ಟು ಸಿಗುತ್ತವೆ. ಅದೊಂದು ಹುಚ್ಚು. ಕ್ರೇಜು. ತನ್ನವರ ಎದುರು ಭಿನ್ನ ಐಡೆಂಟಿಟಿಯನ್ನು  ಸ್ಥಾಪಿಸುವ ಉಮೇದು. ಮಾಲು, ಮಾರುಕಟ್ಟೆ, ಮದುವೆ, ಮುಂಜಿ, ಪಾರ್ಟಿಗಳಲ್ಲಿ ಗುರುತಿಗೀಡಾಗುವ ಹಂಬಲ.  ಸಾರ್ವಜನಿಕವಾಗಿ ಹೆಚ್ಚೆಚ್ಚು ಗುರುತಿಗೀಡಾಗಲು ಪ್ರಾರಂಭವಾದಂತೆಯೇ ಹೊಸ ಹೊಸ ಸಾಹಸದ ರೀಲ್ಸ್ ಗಳನ್ನು  ಮಾಡಲೇಬೇಕಾದ ಒತ್ತಡಕ್ಕೆ ಇಂಥವರು ಒಳಗಾಗತೊಡಗುತ್ತಾರೆ. ಒಮ್ಮೆ ಮಾಡಿದಂಥ ಸಾಹಸವನ್ನು ಇನ್ನೊಮ್ಮೆ ಮಾಡಿದರೆ  ಅದಕ್ಕೆ ಮೆಚ್ಚುಗೆಯೂ ಸಿಗುವುದಿಲ್ಲ. ಅಪಾಯಕಾರಿ ಸಾಹಸಕ್ಕೆ ಆ ಪ್ರಾಯದವರಲ್ಲಿ ಹೆಚ್ಚು ಮೆಚ್ಚುಗೆ ಸಿಗುತ್ತವಾದ್ದರಿಂದ  ಅಂಥದಕ್ಕೆ ಪ್ರಯತ್ನಿಸಲೇಬೇಕಾದ ಅಗತ್ಯವೂ ಇರುತ್ತದೆ. ಹಾಗಂತ,

ಇಂಥ  ಸಾಹಸಪೂರ್ಣ ರೀಲ್ಸ್ ಗಾಗಿ  ಇವರೆಲ್ಲ ತರಬೇತಿ ಪಡೆದಿರುತ್ತಾರೆ ಎಂದಲ್ಲ. ಹುಂಬ ಧೈರ್ಯವೇ ಇಂಥ ರೀಲ್ಸ್ ದಾರರ  ಬಂಡವಾಳ. ಕೈಯಲ್ಲಿ ಮೊಬೈಲ್ ಇದೆ, ಹುಚ್ಚು ಪ್ರಾಯವಿದೆ ಮತ್ತು ಹುಂಬ ಧೈರ್ಯವೂ ಇದೆ.. ಈ ಮೂರು  ಸೇರಿಕೊಂಡಾಗ ಅಪಾಯಕಾರಿಯಾದ ಸಾಹಸಗಳೂ ಮಾಮೂಲಿಯಾಗಿ ಕಾಣಿಸ ತೊಡಗುತ್ತದೆ. ಒಂದಕ್ಕಿಂತ  ಭಿನ್ನವಾದ  ಮತ್ತು ಒಂದನ್ನೊಂದು  ಮೀರಿಸುವ ರೀಲ್ಸ್ ಪ್ರಯತ್ನಗಳೂ ನಡೆಯಲೇಬೇಕಾಗುತ್ತದೆ. ಇನ್‌ಸ್ಟಾಗ್ರಾಮ್‌ನಲ್ಲಿರುವ ವಿವಿಧ  ರೀಲ್ಸ್ ಗಳನ್ನು ವೀಕ್ಷಿಸುತ್ತಾ ಮತ್ತು ಅದಕ್ಕಿಂತ ಹೆಚ್ಚು ಸಾಹಸಮಯ ಮತ್ತು ಭಿನ್ನ ರೀಲ್ಸ್ ಗಳನ್ನು ಮಾಡಲು ಪ್ರಯತ್ನಿಸುತ್ತಾ  ಕೊನೆಗೆ ಹೀಗೆ ಜೀವಕಳಕೊಳ್ಳುವವರು ಧಾರಾಳ ಇದ್ದಾರೆ. 15 ರಿಂದ 30ರ ಪ್ರಾಯದ ಒಳಗಿನವರೇ ಹೆಚ್ಚಾಗಿ ಮಾಡುವ  ಇಂಥ ಅಪಾಯಕಾರಿ ಸಾಹಸದ ರೀಲ್ಸ್ ಗಳು ಅವರಿಗೆ ಮಾತ್ರ ಸೀಮಿತಗೊಳ್ಳುವುದಲ್ಲ ಎಂಬುದೇ ಈ ಬಗ್ಗೆ ಗಂಭೀರವಾಗಿ  ಆಲೋಚಿಸುವುದಕ್ಕೆ ಕಾರಣವಾಗಬೇಕಿದೆ. ಇಂಥ ರೀಲ್ಸ್ ಗಳು ಬೆಳೆಯುವ  ಪೀಳಿಗೆಯನ್ನು ಪ್ರಭಾವಿತಗೊಳಿಸುತ್ತದೆ ಮತ್ತು ಆ  ಪೀಳಿಗೆಯು ಇದಕ್ಕಿಂತಲೂ ಅಪಾಯಕಾರಿ ಸಾಹಸಕ್ಕೆ ಕೈ ಹಾಕಬಲ್ಲದು. ಇವುಗಳ ಪರಿಣಾಮವಾದರೋ ಅತ್ಯಂತ ಘೋರ.  ಹರೆಯದ ಮಗ ಅಥವಾ ಮಗಳನ್ನು ಕಳಕೊಳ್ಳುವ ಹೆತ್ತವರು ಜೀವನಪೂರ್ತಿ ಸಂಕಟಪಡಬೇಕಾಗುತ್ತದೆ. ದೇಶಕ್ಕೆ ಅಮೂಲ್ಯ  ಮಾನವ ಶಕ್ತಿ ನಷ್ಟವಾಗುತ್ತದೆ. ಹಾಗಂತ,

ಈ ಸಮಸ್ಯೆಗೆ ಪರಿಹಾರವೇನು ಎಂಬ ಪ್ರಶ್ನೆಯಿದೆ. ಸೋಶಿಯಲ್ ಮೀಡಿಯಾವಂತೂ ಸಮಾಜದ ಉಸಿರಾಟವೇ ಆಗಿ  ಹೋಗಿದೆ. ಅದರಿಂದ ಹೊರಬರಲು ಸಾಧ್ಯವೇ ಇಲ್ಲದಷ್ಟು ಅದು ಬದುಕಿನ ಭಾಗವಾಗಿ ಹೋಗಿದೆ. ಆದ್ದರಿಂದ  ಜಾಗೃತಿಯೊಂದೇ ಏಕೈಕ ಪರಿಹಾರವಾಗಿ ಕಾಣಿಸುತ್ತಿದೆ. ಇದೇ ಸೋಶಿಯಲ್ ಮೀಡಿಯವನ್ನು ಬಳಸಿಯೇ ಈ ಜಾಗೃತಿ  ಮಾಡುವಂತಾಗಬೇಕು. ಅದೂ ಹದಿಹರೆಯದವರ ಮೆಚ್ಚಿನ ಇನ್‌ಸ್ಟಾಗ್ರಾಮ್ ಮೂಲಕವೇ ಈ ಪ್ರಯತ್ನ ನಡೆಯಬೇಕು. ಇನ್‌ಸ್ಟಾಗ್ರಾಮ್‌ನ ಸಾಮಾನ್ಯ ಬಳಕೆದಾರರು ಜಾಗೃತಿ ಮೂಡಿಸುವುದು ಒಂದಾದರೆ, ಸರ್ಕಾರವೇ ಈ ಬಗ್ಗೆ ನಿರ್ದಿಷ್ಟ  ಯೋಜನೆ ಮತ್ತು ಗುರಿಯೊಂದಿಗೆ ಕಾರ್ಯಪ್ರವೃತ್ತವಾಗುವುದು ಇನ್ನೊಂದು. ಸರ್ಕಾರವು ಒಂದು ಆಂದೋಲನದಂತೆ  ಇಂಥ  ಜಾಗೃತಿ ಕಾರ್ಯಕ್ಕಿಳಿದರೆ ಹುಚ್ಚು ಪ್ರಾಯದಲ್ಲಿ ವಿವೇಕಕ್ಕೂ ಮೂಡಿಸಬಲ್ಲುದು. ಅಲ್ಲದೆ, ಪ್ರತಿ ಮನೆಯ ಹಿರಿಯರೂ ಈ  ಕುರಿತಂತೆ ಎಚ್ಚರಿಕೆ ವಹಿಸಬೇಕು. ರೀಲ್ಸ್ ನ  ಸುತ್ತ ಹೆಣೆದುಕೊಂಡಿರುವವರ ಅಪಾಯಗಳ ಬಗ್ಗೆ ತಮ್ಮ ಮನೆಯ ಮಕ್ಕಳಲ್ಲಿ  ಆಗಾಗ ವಿಚಾರಿಸುತ್ತಿರಲೇಬೇಕು. ರೀಲ್ಸ್ ಮಾಡುವ ವೇಳೆ ಅಪಾಯಕ್ಕೆ ಸಿಲುಕಿದ ಸುದ್ದಿ, ಜೀವ ಕಳಕೊಂಡವರ ಸುದ್ದಿಗಳ ನ್ನು ಈ ಪ್ರಾಯದ ಮಕ್ಕಳಲ್ಲಿ ಮನೆಯವರು ಹಂಚುತ್ತಿರಬೇಕು. ಬಾಹ್ಯ ನೋಟಕ್ಕೆ ನಮ್ಮ ಮಕ್ಕಳು ಅಂಥವರಲ್ಲ ಎಂದೇ ಅನಿಸಬಹುದು. ಇವರು ಬರೇ ರೀಲ್ಸ್ ಮಾತ್ರ ನೋಡ್ತಾರೆ, ರೀಲ್ಸ್ ಮಾಡಲ್ಲ, ಮಾಡಿದ್ರೂ ಅಪಾಯಕಾರಿ ಸನ್ನಿವೇಶಗಳಲ್ಲಿ  ಚಿತ್ರೀಕರಿಸಲ್ಲ.. ಎಂಬೆಲ್ಲಾ ಅಭಿಪ್ರಾಯ ಹೆತ್ತವರಿಗಿರಬಹುದು. ಆದರೆ, ನಿರ್ಲಕ್ಷ್ಯ  ಸಲ್ಲದು. ಮಕ್ಕಳಲ್ಲಿ ಆಗಾಗ ಜಾಗೃತಿ  ಮೂಡಿಸುವ ಮಾತುಗಳನ್ನು ಹೇಳುತ್ತಿರಬೇಕು. ಮುಖ್ಯವಾಗಿ ಮನೆಯಿಂದ ಹೊರಗೆ ಗೆಳೆಯರೊಂದಿಗೆ ಸುತ್ತಾಟಕ್ಕೆ  ಹೋಗುವಾಗ ಈ ವಿಷಯದಲ್ಲಿ ಬಹಳ ಎಚ್ಚರಿಕೆ ಇರಬೇಕು.

ಇನ್‌ಸ್ಟಾಗ್ರಾಮ್ ಎಂಬುದು ಫೇಸ್‌ಬುಕ್ ಅಥವಾ ಎಕ್ಸ್ ನಂಥಲ್ಲ. ಫೇಸ್‌ಬುಕ್ ಮತ್ತು ಎಕ್ಸ್ ನಲ್ಲಿ ಗಂಭೀರ ಚರ್ಚೆ,  ರಾಜಕೀಯ, ಕೋಮುವಾದ, ವಿಚಾರ ಮಂಥನಗಳು ನಡೆಯುವಾಗ ಈ ಇನ್‌ಸ್ಟಾಗ್ರಾಮ್ ಮನರಂಜನೆಯನ್ನೇ  ಮುಖ್ಯವಾಗಿಸಿ ಕೊಂಡಿರುತ್ತದೆ. ಮುಖ್ಯವಾಗಿ ರೀಲ್ಸ್ ನ  ದುನಿಯಾಕ್ಕೆ ಬಹಳ ದೊಡ್ಡ ಮಾರುಕಟ್ಟೆಯಿದೆ. ಹ ದಿಹರೆಯದವರಿಂದ ಹಿಡಿದು ಹಿರಿಯವರ ವರೆಗೆ ಅದರ ವ್ಯಾಪ್ತಿ ಬಹಳ ದೊಡ್ಡದು. ಭಾಷೆಯ ಹಂಗಿಲ್ಲದೇ ರೀಲ್ಸ್ ಗಳು  ಜಗತ್ತನ್ನಿಡೀ ಸುತ್ತುತ್ತಲೂ ಇರುತ್ತವೆ. ಹದಿಹರೆಯಕ್ಕೆ ಏನೆಲ್ಲಾ ಬೇಕೋ  ಅವೆಲ್ಲವನ್ನೂ ಒದಗಿಸುವ ಸಾಮರ್ಥ್ಯ ಈ ರೀಲ್ಸ್  ಜಗತ್ತಿನಲ್ಲಿದೆ. ಇಡೀ ದಿನ ಸ್ಕ್ರಾಲ್ ಮಾಡಿದರೂ ಮುಗಿಯದಷ್ಟು ಮತ್ತು ಹೊಸ ಹೊಸ ರೀಲ್ಸ್ ಗಳನ್ನು ಒದಗಿಸುವಷ್ಟು  ಯಥೇಚ್ಛ ರೀಲ್ಸ್ ಬಂಡವಾಳವೂ ಈ ಜಗತ್ತಿನಲ್ಲಿದೆ. ಆದ್ದರಿಂದಲೇ ರೀಲ್ಸ್ ಗಾಗಿ ಹದಿಹರೆಯದ ಜೀವಹಾನಿಯನ್ನು  ಗಂಭೀರವಾಗಿ ಪರಿಗಣಿಸಬೇಕಿದೆ. ಎಲ್ಲೋ ದೂರದ ಸಂಗತಿ ಎಂದು ಮೈ ಮರೆತರೆ ನಾಳೆ ಹತ್ತಿರದಿಂದಲೇ ಇಂಥ ಸುದ್ದಿಗಳನ್ನು ಅಲಿಸಬೇಕಾದಂಥ ಸ್ಥಿತಿಯೂ ಎದುರಾದೀತು.

Monday, 15 July 2024

ಬುಲ್ಡೋಜರ್‌ನ ‘ಧರ್ಮ’ವನ್ನು ತೆರೆದಿಟ್ಟ ಪತ್ರಕರ್ತ ಅನುಜ್ ಬೆಹಲ್

 



ಕಳೆದವಾರ ಫ್ರಂಟ್‌ಲೈನ್ ಪತ್ರಿಕೆ ಒಂದು ವರದಿಯನ್ನು ಪ್ರಕಟಿಸಿತ್ತು. ಅನುಜ್ ಬೆಹಲ್ ತಯಾರಿಸಿರುವ ಈ ವರದಿಯು  ಪ್ರಭುತ್ವದ ವಿನಾಶಕಾರಿ ಮತ್ತು ಪಕ್ಷಪಾತೀ ನೀತಿಯನ್ನು ಹಸಿಹಸಿಯಾಗಿ ಬಿಡಿಸಿಟ್ಟಿತ್ತು. 'ನ್ಯಾಯಾಲಯಗಳ ಅನುಮತಿ ಇಲ್ಲದೆ  ಕಳೆದ ಎರಡು ವರ್ಷಗಳಲ್ಲಿ ಒಂದೂವರೆ ಲಕ್ಷಕ್ಕಿಂತಲೂ ಅಧಿಕ ಮನೆ ಮತ್ತು ಕಟ್ಟಡಗಳನ್ನು ಬುಲ್ಡೋಜರ್ ಬಳಸಿ  ನೆಲಸಮಗೊಳಿಸಲಾಗಿದೆ, ಇದರಿಂದಾಗಿ 7 ಲಕ್ಷಕ್ಕಿಂತಲೂ ಅಧಿಕ ಮಂದಿ ನೆಲೆಯಿಲ್ಲದಂತಾಗಿದ್ದಾರೆ..’ ಎಂಬ ಮಾಹಿತಿಯನ್ನು  ಅನುಜ್ ಬೆಹಲ್ ಈ ವರದಿಯಲ್ಲಿ ನೀಡಿದ್ದಾರೆ. ಈ ಧ್ವಂಸ ಕಾರ್ಯಾಚರಣೆಯಿಂದಾಗಿ 2017ರಿಂದ 23ರ ನಡುವೆ  ಸುಮಾರು 17 ಲಕ್ಷ ಮಂದಿ ನೆಲೆ ಕಳಕೊಂಡಿದ್ದಾರೆ. ಕೇವಲ 2023ರಲ್ಲೇ  3 ಲಕ್ಷ ಮಂದಿಯನ್ನು ಈ ಬುಲ್ಡೋಜರ್ ರಾಜ್  ಬೀದಿಪಾಲು ಮಾಡಿದೆ. ಹಾಗಂತ,

ಈ ಬುಲ್ಡೋಜರ್ ಬಹಳ ಬುದ್ಧಿವಂತ. ಅದು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಧ್ವಂಸ ಕಾರ್ಯಕ್ಕೆ ಇಳಿಯುವುದಿಲ್ಲ. ಅದು  ಧರ್ಮ, ಜಾತಿ, ಜನಾಂಗವನ್ನು ನೋಡಿಕೊಂಡೇ ನೆಲಸಮ ಕಾರ್ಯಾಚರಣೆಗೆ ಇಳಿಯುತ್ತದೆ. ಹೀಗೆ ಬುಲ್ಡೋಜರ್‌ಗೆ  ಸಿಲುಕಿ ಚಿಂದಿಯಾದ ಒಟ್ಟು ಮನೆಗಳ ಪೈಕಿ 44% ಮನೆಗಳು ಮುಸ್ಲಿಮರದ್ದೇ  ಆಗಿವೆ. ಬುಡಕಟ್ಟು ಸಮುದಾಯದ 23%  ಮನೆಗಳು ಧ್ವಂಸಗೊಂಡಿದ್ದರೆ ಹಿಂದುಳಿದ ಸಮುದಾಯದ 17% ಮನೆಗಳನ್ನು ಧ್ವಂಸಗೊಳಿಸಲಾಗಿದೆ. ದಲಿತ  ಸಮುದಾಯದ 5% ಮನೆಗಳೂ ಬುಲ್ಡೋಜರ್‌ಗೆ ಸಿಲುಕಿ ಧರಾಶಾಹಿಯಾಗಿವೆ. ಇದರ ಹೊರತಾಗಿ ವಿವಿಧ ಪ್ರಕರಣಗಳಲ್ಲಿ  ಆರೋಪಿಯಾಗಿರುವವರ ಮನೆಗಳನ್ನೂ ಧ್ವಂಸಗೊಳಿಸಲಾಗಿದೆ. ಒಂದು ವರದಿಯ ಪ್ರಕಾರ, ಇಂಥ 128 ಆರೋಪಿಗಳ  ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಇತ್ತೀಚೆಗಷ್ಟೇ ಮಧ್ಯಪ್ರದೇಶದಲ್ಲಿ ಮನೆಯನ್ನು ಧ್ವಂಸಗೊಳಿಸಲಾಯಿತು. ಅದಕ್ಕಿಂತ  ಮೊದಲು ಬೀಫ್ ಸಿಕ್ಕಿದೆ ಎಂಬ ಆರೋಪದಲ್ಲಿ ಆ ಮನೆಯವರನ್ನು ಬಂಧಿಸಲಾಗಿತ್ತು. ಬಳಿಕ ಮನೆಯನ್ನು  ಧ್ವಂಸಗೊಳಿಸಲಾಯಿತು. ಹಾಗಂತ, 

ಇಂಥ ನೆಲಸಮ ಕಾರ್ಯಾಚರಣೆಗೆ ನ್ಯಾಯಾಲಯದ ಅನುಮತಿ ಪಡಕೊಂಡದ್ದು  ವಿರಳಾತಿ ವಿರಳ. ನ್ಯಾಯಾಲಯ ಈ ಬಗ್ಗೆ ಪ್ರಶ್ನಿಸಿದರೆ ರಾಜ್ಯ ಸರಕಾರಗಳು ಕೊಡುತ್ತಿರುವ ಸಮರ್ಥನೆಗಳೂ ವಿಚಿತ್ರ. ಅವು  ಅಕ್ರಮವಾಗಿ ಕಟ್ಟಲಾಗಿರುವುದರಿಂದ ನಾವು ಧ್ವಂಸಗೊಳಿಸಿದ್ದೇವೆ ಎಂದು ಅವು ಹೇಳುತ್ತವೆಯೇ ಹೊರತು ನಿಜಸ್ಥಿತಿಯನ್ನು  ಅವು ಜಾಣತನದಿಂದ ಮರೆಸಿಡುತ್ತವೆ.

2022 ಮೇ 21ರಂದು ಅಸ್ಸಾಮ್‌ನ ನಗೋನ್ ಜಿಲ್ಲೆಯ ಸಲೊನೋಬಾರಿ ಗ್ರಾಮದ ಬಟದ್ರವ ಪೊಲೀಸ್ ಕಸ್ಟಡಿಯಲ್ಲಿ  ಶಫೀಕುಲ್ ಇಸ್ಲಾಮ್ ಎಂಬವರ ಸಾವು ಸಂಭವಿಸಿತ್ತು. ಇದು ಪೊಲೀಸ್ ದೌರ್ಜನ್ಯದಿಂದಾದ ಸಾವು ಎಂದು ಕುಟುಂಬಿಕರು  ಆಕ್ರೋಶಗೊಂಡರು. ಇವರೊಂದಿಗೆ ಸ್ಥಳೀಯರೂ ಸೇರಿಕೊಂಡರು. ಆಕ್ರೋಶದ ಗುಂಪು ಪೊಲೀಸ್ ಠಾಣೆಗೆ ಬೆಂಕಿ  ಹಚ್ಚಿತು. ಈ ಶಫೀಕುಲ್ ಇಸ್ಲಾಮ್ ಬಡ ಮೀನು ಮಾರಾಟಗಾರ. ಈ ಘಟನೆಯ ಮರುದಿನ ಅಧಿಕಾರಿಗಳು 6 ಮಂದಿಯ  ಮನೆಯನ್ನು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದರು. ಮಾತ್ರವಲ್ಲ, ಇವೆಲ್ಲ ಅಕ್ರಮವಾಗಿ ಕಟ್ಟಲಾದ ಮನೆಗಳಾಗಿದ್ದುವು  ಎಂದು ಅಧಿಕಾರಿಗಳು ಸಮರ್ಥಿಸಿಕೊಂಡಿರು. ವಿಶೇಷ ಏನೆಂದರೆ, ಈ ಧ್ವಂಸ ಘಟನೆಯ ಬೆನ್ನಿಗೇ ಅಸ್ಸಾಮ್  ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ಕೈಗೆತ್ತಿಕೊಂಡಿತು. ರಾಜ್ಯದ ಬಿಜೆಪಿ ಸರಕಾರದ  ಪಾಲಿಗೆ ಇದು ಅನಿರೀಕ್ಷಿತ ಬೆಳವಣಿಗೆಯಾಗಿತ್ತು. ಅಲ್ಲದೇ, ಕಸ್ಟಡಿಯಲ್ಲಿ ಸಾವಿಗೀಡಾದ ಶಫೀಕುಲ್ ಇಸ್ಲಾಮ್‌ನ ಪತ್ನಿ  ರಶೀದಾ ಖಾತೂನ್ ಅವರು ಪರಿಹಾರವನ್ನು ಕೋರಿ ನ್ಯಾಯಾಲಯದ ಮೊರೆ ಹೋದರು. ಈ ಎರಡೂ ಬೆಳವಣಿಗೆಯ  ಬಳಿಕ ರಾಜ್ಯ ಸರಕಾರ ತನ್ನ ಮಾತಿನ ವರಸೆಯನ್ನು ಬದಲಿಸಿತು. ‘ಮಾರಕಾಯುಧಗಳನ್ನು ಪತ್ತೆಹಚ್ಚುವ ಕಾರ್ಯಾಚರಣೆಯ  ಭಾಗವಾಗಿ ಮನೆ ಪರಿಶೀಲಿಸಿದೆವು, ಆದರೆ, ಪತ್ತೆ ಕಾರ್ಯಾಚರಣೆಯ ವೇಳೆ ಯಾವುದೇ ಶಸ್ತ್ರಾಸ್ತ್ರಗಳು ಪತ್ತೆಯಾಗದೇ  ಇರುವುದರಿಂದ ಶಸ್ತ್ರಾಸ್ತ್ರಗಳನ್ನು ಮನೆಯೊಳಗೆ ನೆಲ ಅಗೆದು ಬಚ್ಚಿಟ್ಟಿರುವ ಸಾಧ್ಯತೆಯನ್ನು ಊಹಿಸಲಾಯಿತು ಮತ್ತು ಆ  ಕಾರಣಕ್ಕಾಗಿ ಮನೆಯನ್ನೇ ನೆಲಸಮಗೊಳಿಸಿ ಪತ್ತೆ ಕಾರ್ಯ ನಡೆಸಲಾಯಿತು.. ’ ಎಂದು ಕೋರ್ಟಿನ ಮುಂದೆ ಸರಕಾರ  ಹೇಳಿಕೊಂಡಿತು. ಮಾತ್ರವಲ್ಲ, ಈ ಕಾರ್ಯಾಚರಣೆಯಿಂದಾಗಿ ಬಂದೂಕು, 5 ಜೀವಂತ ಗುಂಡುಗಳು ಪತ್ತೆಯಾದುವು  ಎಂದೂ ಸಮರ್ಥಿಸಿಕೊಂಡಿತು. ಆದರೆ,

ನ್ಯಾಯಾಲಯ ಈ ಇಡೀ ಕಾರ್ಯಾಚರಣೆಯನ್ನೇ ಕಾನೂನುಬಾಹಿರ ಎಂದು ಹೇಳಿ ಸರಕಾರವನ್ನು ಕಟುವಾಗಿ ಟೀಕಿಸಿತು.  ಧ್ವಂಸಕಾರ್ಯ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ತಾಕೀತು ಮಾಡಿತು. ಮಾತ್ರವಲ್ಲ,  ಶಫೀಕುಲ್ ಇಸ್ಲಾಮ್, ಅವರ ಇಬ್ಬರು ಸಹೋದರರು ಮತ್ತು ಕುಟುಂಬದ ಮೂವರು ಸಹಿತ ಒಟ್ಟು ಧ್ವಂಸಗೊಳಿಸಲಾದ  ಆರು ಮನೆಗಳಿಗೆ ಪರಿಹಾರವನ್ನು ನೀಡುವಂತೆ ಆದೇಶಿಸಿತು. ಕೊನೆಗೆ 2024 ಮೇ 22ರಂದು ಹಿಮಂತ್ ಬಿಸ್ವ ಶರ್ಮ  ಅವರ ಸರಕಾರ ಕೋರ್ಟಿನ ಮುಂದೆ ತಲೆಬಾಗಿತು. ಮಾತ್ರವಲ್ಲ, ಒಟ್ಟು 32 ಲಕ್ಷದ 50 ಸಾವಿರ ರೂಪಾಯಿ ಪರಿಹಾರ  ನೀಡಿರುವುದನ್ನು ದಾಖಲೆ ಸಮೇತ ನ್ಯಾಯಾಲಯಕ್ಕೆ ಸಮರ್ಪಿಸಿತು. ನಿಜವಾಗಿ,

ಈ ಶಫೀಕುಲ್ ಇಸ್ಲಾಮ್ ಪ್ರಕರಣವು ಭಾರತದಲ್ಲಿ ವಿಶೇಷವಾಗಿ ಉತ್ತರ ಭಾರತದಲ್ಲಿ ಸರಕಾರಗಳು ಹೇಗೆ ಮುಸ್ಲಿಮರನ್ನು  ದಮನಿಸುತ್ತಿವೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ. ಶಫೀಕುಲ್ ಇಸ್ಲಾಮ್‌ರನ್ನು ಬಂಧಿಸಿದ ಪೊಲೀಸರು  ಬಿಡುಗಡೆಗಾಗಿ ಕುಟುಂಬದಿಂದ  10 ಸಾವಿರ ರೂಪಾಯಿ ಲಂಚ ಕೇಳಿದ್ದರು ಎಂಬ ಆರೋಪವಿದೆ. ಆದರೆ ಮರುದಿನ  ಕಸ್ಟಡಿಯಲ್ಲೇ  ಶಫೀಕುಲ್ ಇಸ್ಲಾಮ್‌ನ ಸಾವು ಸಂಭವಿಸಿತು. ಆಕ್ರೋಶಿತ ಗುಂಪು ಪೊಲೀಸ್ ಠಾಣೆಗೆ ಬೆಂಕಿ ಕೊಟ್ಟಿತು.  ಇದಾದ ಮರುದಿನ ಪೊಲೀಸರು ಶಫೀಕ್‌ನ ಪತ್ನಿ, ಮಗಳು ಮತ್ತು 8ನೇ ತರಗತಿಯಲ್ಲಿ ಕಲಿಯುತ್ತಿರುವ ಮಗನನ್ನು ಬಂಧಿಸಿ  ಕೊಂಡೊಯ್ದರು. ಇವರ ಮೇಲೆ ಯುಎಪಿಎ ಅಡಿಯಲ್ಲಿ ಕೇಸು ದಾಖಲಿಸಿದರು. ಇದೇ ಸಮಯದಲ್ಲಿ ಇವರ ಮನೆಯನ್ನು  ಅಧಿಕಾರಿಗಳು ಧ್ವಂಸಗೊಳಿಸಿದರು. ಅಲ್ಲದೇ, ಶಫೀಕ್‌ನ ಇಬ್ಬರು ಸಹೋದರರು ಮತ್ತು ಇಬ್ಬರು ಸಂಬಂಧಿಗಳ ಮನೆಯನ್ನೂ ಧ್ವಂಸಗೊಳಿಸಲಾಯಿತು. ಅಲ್ಲದೇ, ಮೇ 30ರಂದು ಇನ್ನೋರ್ವ ಆರೋಪಿ ಆಶಿಕುಲ್ ಇಸ್ಲಾಮ್ ಎಂಬವ ರಸ್ತೆ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ಈತ ಪೊಲೀಸ್ ಕಸ್ಟಡಿಯಲ್ಲಿದ್ದು, ತಪ್ಪಿಸಿಕೊಳ್ಳುವ  ಭರದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಸಮರ್ಥಿಸಿಕೊಂಡರು. ಆದರೆ, ಇದನ್ನು ನಂಬುವ ಸ್ಥಿತಿಯಲ್ಲಿ  ಸಲೋನೋಬಾರಿ ಗ್ರಾಮದ ಯಾರೂ ಇರಲಿಲ್ಲ. ಇದು ನಕಲಿ ಎನ್‌ಕೌಂಟರ್ ಎಂದೇ ಅವರೆಲ್ಲ ವಾದಿಸಿದ್ದರು. ಈ  ಸಲೊನೋಬಾರಿ ಗ್ರಾಮದಲ್ಲಿ 3000 ಮಂದಿ ವಾಸಿಸುತ್ತಿದ್ದು, ಹೆಚ್ಚಿನವರು ಬಂಗಾಳಿ ಮೂಲದ ಮುಸ್ಲಿಮರಾಗಿದ್ದಾರೆ.  ನಿಜವಾಗಿ,

ಪ್ರಭುತ್ವಕ್ಕೆ ತನ್ನ ಅಕ್ರಮಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ನೂರು ದಾರಿಗಳಿರುವಾಗ, ಜನಸಾಮಾನ್ಯರಿಗೆ ತಮ್ಮ ಸಕ್ರಮವನ್ನು  ಸಮರ್ಥಿಸಿಕೊಳ್ಳುವುದಕ್ಕೆ ಏಕೈಕ ದಾರಿಯೂ ಇರುವುದಿಲ್ಲ. ಏಕೆಂದರೆ, ಪ್ರಭುತ್ವದ ಕೈಯಲ್ಲಿ ಎಲ್ಲವೂ ಇರುತ್ತದೆ. ತನ್ನ  ಅಕ್ರಮವನ್ನು ಸಮರ್ಥಿಸಿಕೊಳ್ಳುವುದಕ್ಕೆ ಪೂರಕವಾಗಿ ದಾಖಲೆಗಳನ್ನೂ ಸನ್ನಿವೇಶಗಳನ್ನೂ ಸೃಷ್ಟಿಸಿಕೊಳ್ಳುವುದಕ್ಕೆ ಅದು  ಶಕ್ತವಿದೆ. ಶಫೀಕುಲ್ ಇಸ್ಲಾಮ್ ಪ್ರಕರಣದಲ್ಲಿಯೇ ಇದಕ್ಕೆ ಆಧಾರವಿದೆ. ಆರಂಭದಲ್ಲಿ ತನ್ನ ಮನೆ ಧ್ವಂಸ  ಕಾರ್ಯಾಚರಣೆಯನ್ನು ಅಕ್ರಮದ ಹೆಸರಲ್ಲಿ ಸಮರ್ಥಿಸಿಕೊಂಡಿದ್ದ ಸರಕಾರ, ಅದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು  ಗೊತ್ತಾದಾಗ ಶಸ್ತ್ರಾಸ್ತ್ರ ಪತ್ತೆಗಾಗಿ ಎಂಬ ಇನ್ನೊಂದು ಸಮರ್ಥನೆಯನ್ನು ಕಂಡುಕೊಂಡಿತ್ತು. ಮಾತ್ರವಲ್ಲ, ನೆಲದಲ್ಲಿ  ಹುದುಗಿಸಿಟ್ಟ ಬಂದೂಕು ಸಿಕ್ಕಿದೆ ಎಂದೂ ತನ್ನ ಧ್ವಂಸವನ್ನು ಸಮರ್ಥಿಸಿಕೊಂಡಿತ್ತು. ಹಾಗಂತ, ಅಕ್ರಮ ಎಂದು ಸುಳ್ಳು  ಹೇಳಿದ್ದ ಸರಕಾರಕ್ಕೆ ಬಂದೂಕು ಪತ್ತೆ ಎಂಬ ಇನ್ನೊಂದು ಸುಳ್ಳು ಹೇಳಲು ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಸಹಜ. ಬಹುಶಃ,  ಈ ಸತ್ಯ ಮನವರಿಕೆಯಾದುದರಿಂದಲೇ ಪರಿಹಾರ ಕೊಡುವಂತೆ ಕೋರ್ಟು ಆದೇಶಿಸಿರಬೇಕು. ಇದು ಕೇವಲ ಒಂದೇ  ಒಂದು ನೆಲಸಮ ಕಾರ್ಯಾಚರಣೆಯ ಕತೆ. ಇಂಥ ನೆಲಸಮ ಕಾರ್ಯಾಚರಣೆಯು ಕಳೆದ ಎರಡು ವರ್ಷಗಳಲ್ಲಿ  ಒಂದೂವರೆ ಲಕ್ಷದಷ್ಟಾಗಿದೆ ಎಂದಾದರೆ, ಅದರಲ್ಲಿ ಇಂಥ ಸರಕಾರಿ ಪ್ರಣೀತ ಎಷ್ಟು ಕತೆಗಳಿರಬಹುದು? ನಗರಾಭಿವೃದ್ಧಿ,  ಸರಕಾರಿ ಭೂಮಿ ಒತ್ತುವರಿ, ಅಕ್ರಮ ನಿವಾಸ... ಎಂಬೆಲ್ಲಾ ಚಂದದ ಹೆಸರಲ್ಲಿ ನೆಲಸಮಗೊಳಿಸಲಾದ ಎಷ್ಟು ಸಕ್ರಮ  ನಿವಾಸಗಳಿರಬಹುದು? ಅದರಲ್ಲೂ ‘ಮುಸ್ಲಿಮರು’ ಎಂಬ ಕಾರಣಕ್ಕಾಗಿ ಎಷ್ಟು ಮನೆಗಳ ಮೇಲೆ ಬುಲ್ಡೋಜರ್ ಹರಿದಿರಬಹುದು?

ವರದಿಯನ್ನು ಪ್ರಕಟಿಸಿದ ಫ್ರಂಟ್‌ಲೈನ್ ಪತ್ರಿಕೆಗೂ ಮತ್ತು ವರದಿ ತಯಾರಿಸಿದ ಅನುಜ್ ಬೆಹಲ್‌ರಿಗೂ ಧನ್ಯವಾದ.

Monday, 8 July 2024

ಮುಹಮ್ಮದ್ ಸಿರಾಜ್ ನ 'ಅಲ್ಲಾಹ್' ಗೆ ವಿರೋಧ ಏಕೆ?





ಭಾರತದಲ್ಲಿ ಮುಸ್ಲಿಮ್ ದ್ವೇಷ ಎಷ್ಟು ಆಳವಾಗಿದೆ ಎಂಬುದಕ್ಕೆ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಮುಹಮ್ಮದ್ ಸಿರಾಜ್ ಒಂದೊಳ್ಳೆಯ  ಉದಾಹರಣೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ಸಾಧನೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿರುವಾಗ ಕೆಲವರಿಗೆ ಸಿರಾಜ್‌ನಲ್ಲಿ ಇಸ್ಲಾಮ್  ಕಾಣಿಸಿದೆ. ವಿಶ್ವಕಪ್ಪನ್ನು ಎತ್ತಿ ಹಿಡಿದ ಚಿತ್ರವನ್ನು ತನ್ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದ ಸಿರಾಜ್, Thank you Almighty Allah ಎಂದು ಬರಕೊಂಡಿದ್ದರು. ಇದನ್ನೇ ಅಪರಾಧವಾಗಿ ಕಂಡಿರುವ ಅನೇಕರು ಸಿರಾಜ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಇದು  ಭಾರತೀಯ ತಂಡದ ಗೆಲುವೇ ಹೊರತು ಅಲ್ಲಾಹನದ್ದಲ್ಲ’ ಎಂದು ಓರ್ವ ಬರೆದರೆ, ‘ಅಲ್ಲಾಹನಿಂದ ಇದು ಸಾಧ್ಯ ಎಂದಾಗಿದ್ದರೆ  ಪಾಕಿಸ್ತಾನ ವಿಶ್ವಕಪ್ ಗೆಲ್ಲುತ್ತಿತ್ತೇ ಹೊರತು ಭಾರತವಲ್ಲ’ ಎಂದು ಇನ್ನೋರ್ವ ಬರೆದಿದ್ದಾನೆ. ‘ಭಾರತ ವಿಶ್ವಕಪ್ ಗೆದ್ದಿರೋದಕ್ಕೆ ಅ
ಲ್ಲಾಹನೂ  ಕಾರಣವಲ್ಲ, ಮುಸ್ಲಿಮ್ ಆಟಗಾರನೂ ಕಾರಣವಲ್ಲ’ ಎಂದು ಇನ್ನೋರ್ವ ಬರೆದಿದ್ದಾನೆ. ಇಂಥ ದ್ವೇಷಪೂರಿತ ಇನ್ನಷ್ಟು ಪ್ರತಿಕ್ರಿಯೆಗಳು ಸಿರಾಜ್  ಇನ್‌ಸ್ಟಾಗ್ರಾಮ್ ನಲ್ಲಿದೆ..  ನಿಜವಾಗಿ,

ಅತೀವ ಆನಂದದ ವೇಳೆ ವ್ಯಕ್ತಪಡಿಸುವ ಭಾವನೆಗಳನ್ನು ಸನ್ನಿವೇಶದಿಂದ ಬೇರ್ಪಡಿಸಿ ಓದುವುದೇ ತಪ್ಪು. ಗೆದ್ದ ಖುಷಿಯಲ್ಲಿದ್ದ ಸಿರಾಜ್ ದೇವನನ್ನು ನೆನಪಿಸಿಕೊಂಡಿದ್ದಾರೆ. ಅವರು ತಮ್ಮ ಭಾಷೆಯಲ್ಲಿ ದೇವನನ್ನು ಅಲ್ಲಾಹ್ ಅನ್ನುತ್ತಾರೆ. ಹಾಗೆಯೇ, ವಿರಾಟ್ ಕೊಹ್ಲಿ ದೇವನನ್ನು ಗಾಡ್  ಅನ್ನುತ್ತಾರೆ. ಅದು ಅವರ ಭಾಷೆ. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದ ವಿರಾಟ್ ಕೋಹ್ಲಿ ತನ್ನ ಸಂತಸವನ್ನು ವ್ಯಕ್ತಪಡಿಸಿರುವುದು ಹೀಗೆ:

This was my last T20 World Cup; this is exactly what we wanted to achieve. One day you feel like you can't get a run, and this happens, God is great..

ಕೊಹ್ಲಿ ಮತ್ತು ಸಿರಾಜ್ ಇಬ್ಬರೂ ತಮ್ಮ ತಂಡದ ಸಾಧನೆಗಾಗಿ ದೇವನನ್ನು ಸ್ಮರಿಸಿದ್ದಾರೆ. ಆದರೆ ಯಾರೂ ಕೊಹ್ಲಿಯನ್ನು ಟ್ರೋಲ್ ಮಾಡಿಲ್ಲ.  ‘ಫೈನಲ್ ಪಂದ್ಯದಲ್ಲಿ 76 ರನ್ ಮಾಡಿರುವುದು ಕೊಹ್ಲಿ, ಹೀಗಿರುವಾಗ, ದೇವನೇಕೆ ದೊಡ್ಡವನಾಗಬೇಕು, ಆಡಿದ್ದು ದೇವನಾ..’ ಎಂದು ಯಾರೂ  ಪ್ರಶ್ನಿಸಿಲ್ಲ. ಆದರೆ ಸಿರಾಜ್ ಅದನ್ನೇ ತನ್ನ ಭಾಷೆಯಲ್ಲಿ ಹೇಳಿದಾಗ ಅದು ಮಹಾ ಅಪರಾಧವಾಗುತ್ತದೆ. ಮಾತ್ರವಲ್ಲ, ದೇವರು ಒಂದುವೇಳೆ ಗೆಲ್ಲಿಸುವುದಾದರೆ, ಪಾಕಿಸ್ತಾನವನ್ನು ಗೆಲ್ಲಿಸಬೇಕೇ ಹೊರತು ಭಾರತವನ್ನಲ್ಲ ಎಂಬ ಅತೀ ಕಳಪೆ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸುತ್ತಾರೆ. ಅಲ್ಲಾಹ್  ಎಂದರೆ ಮುಸ್ಲಿಮರ ದೇವ ಮತ್ತು ಆತ ಮುಸ್ಲಿಮ್ ಪಕ್ಷಪಾತಿ ಎಂಬ ಅವರ ಅಪಕ್ವ ಆಲೋಚನೆಯೇ ಈ ರೀತಿಯ ಪ್ರತಿಕ್ರಿಯೆಗೆ ಮೂಲ  ಕಾರಣ.

ಈ ಬಾರಿ ಸಂಸತ್ ಸದಸ್ಯರ ಪ್ರಮಾಣ ವಚನದ ವೇಳೆ ಪ್ರಮುಖ ಕ್ರಿಕೆಟ್ ಆಟಗಾರ ಯೂಸುಫ್ ಪಠಾಣ್ ಅವರು ‘ಈಶ್ವರನ’ ಹೆಸರಲ್ಲಿ ಪ್ರತಿಜ್ಞೆ  ಸ್ವೀಕರಿಸಿದರು. ಹಾಗಂತ, ಯೂಸುಫ್ ಪಠಾಣ್ ಹಿಂದೂ ಅಲ್ಲ. ಅವರ ತಂದೆ ಓರ್ವ ಧರ್ಮಗುರು. ಧೋನಿ ನೇತೃತ್ವದ ತಂಡ 2007ರಲ್ಲಿ  ಟಿ20 ವಿಶ್ವಕಪ್ ಗೆದ್ದಾಗ ಅದರ ಭಾಗವಾಗಿದ್ದವರು ಇದೇ ಯೂಸುಫ್ ಪಠಾಣ್. ಧಾರ್ಮಿಕ ಕುಟುಂಬದಿಂದ  ಬಂದ ಮತ್ತು ಧರ್ಮವನ್ನು  ನಿಷ್ಠೆಯಿಂದ ಅನುಸರಿಸುವ ಯೂಸುಫ್ ಪಠಾಣ್, ಅಲ್ಲಾಹನನ್ನು ಈಶ್ವರ್ ಅಂದರು. ಸಿರಾಜ್ ನೇರವಾಗಿಯೇ ಅಲ್ಲಾಹ್ ಅಂದರು. ಎರಡರ  ಅರ್ಥವೂ ಭಿನ್ನವಾಗಿಲ್ಲ. ಅಲ್ಲದೆ, ಅಲ್ಲಾಹನನ್ನು ಈಶ್ವರ್ ಎಂದ ಯೂಸುಫ್ ಪಠಾಣ್‌ರನ್ನೂ ಮುಸ್ಲಿಮರು ಟೀಕಿಸಿಲ್ಲ, ಸಿರಾಜ್‌ನನ್ನೂ ಟೀಕಿಸಿಲ್ಲ.  ಯಾಕೆಂದರೆ, ಅಲ್ಲಾಹ್ ಎಂಬ ಪದದ ಅರ್ಥ ಏನು ಅನ್ನುವುದು ಅವರಿಗೆ ಗೊತ್ತಿದೆ. ಸರ್ವಶಕ್ತ, ಸೃಷ್ಟಿಕರ್ತ, ದೇವ ಎಂಬ ಅರ್ಥದಲ್ಲಿ  ಮುಸ್ಲಿಮರು ಅಲ್ಲಾಹ್ ಎಂಬ ಪದ ಬಳಸುತ್ತಾರೆ. ಅಲ್ಲಾಹ್ ಎಂದರೆ, ಮುಸ್ಲಿಮರ ದೇವ ಮತ್ತು ಈಶ್ವರ್ ಅಂದರೆ ಹಿಂದೂಗಳ ದೇವ ಎಂಬ  ಅರ್ಥ ಇಲ್ಲವೇ ಇಲ್ಲ. ಹಾಗಂತ, ಸಿರಾಜ್‌ನನ್ನು ಟೀಕಿಸಿದವರಿಗೆ ಈ ವ್ಯತ್ಯಾಸ ಗೊತ್ತಿಲ್ಲ ಎಂದು ಹೇಳುವಂತಿಲ್ಲ. ಈ ಟೀಕೆ ಈಗಾಗಲೇ ಈ ದೇಶದಲ್ಲಿ ಬೆಂಕಿ ಕೊಟ್ಟು ಹೊತ್ತಿಸಿ ಬಿಡಲಾಗಿರುವ ಮುಸ್ಲಿಮ್ ದ್ವೇಷಭಾವದ ಫಲಿತಾಂಶ ಎಂದು ಹೇಳುವುದೇ ಹೆಚ್ಚು ಸರಿ. ಯಾಕೆಂದರೆ,

ಈ ಬಗೆಯ ದ್ವೇಷಭಾವ ವ್ಯಕ್ತವಾಗಿರುವುದು ಇದೇ ಮೊದಲಲ್ಲ. 2021 ಅಕ್ಟೋಬರ್‌ನಲ್ಲೂ ಇಂಥದ್ದೇ  ಮುಸ್ಲಿಮ್ ದ್ವೇಷ ವ್ಯಕ್ತವಾಗಿತ್ತು. ಆಗ  ನಿಂದನೆಗೆ ಗುರಿಯಾದದ್ದು ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ. ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ  ಟಿ20 ವಿಶ್ವಕಪ್‌ನ ಲೀಗ್ ಪಂದ್ಯದಲ್ಲಿ ಶಮಿಯ ಬೌಲಿಂಗ್ ಉತ್ತಮವಾಗಿರಲಿಲ್ಲ. ಪಾಕ್ ತಂಡ ಹತ್ತು ವಿಕೆಟ್‌ಗಳಿಂದ ಆ ಪಂದ್ಯವನ್ನು  ಗೆದ್ದುಕೊಂಡಿತ್ತು. ಆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಶಮಿಯನ್ನು ತೀವ್ರವಾಗಿ ನಿಂದಿಸಲಾಯಿತು. ದ್ರೋಹಿ, ಪಾಕ್ ಬೆಂಬಲಿಗ, ಮ್ಯಾಚ್  ಫಿಕ್ಸಿಂಗ್ ಮಾಡಿದವ ಎಂದೆಲ್ಲಾ ಜರೆಯಲಾಯಿತು. ಹಾಗಂತ, ಆ ಪಂದ್ಯ ಸೋಲುವುದಕ್ಕೆ ಶಮಿ ಒಬ್ಬರೇ ಕಾರಣವಾಗಿರಲಿಲ್ಲ. ಬ್ಯಾಟುಗಾರರೂ  ಕಾರಣವಾಗಿದ್ದರು. ಇತರ ಬೌಲರ್‌ಗಳೂ ಕಾರಣವಾಗಿದ್ದರು. ಆದರೆ, ಅವೆಲ್ಲವನ್ನೂ ಅಡಗಿಸಿ ದುಬಾರಿ ಒಂದು ಓವರನ್ನೇ ಕಟಕಟೆಯಲ್ಲಿ ನಿಲ್ಲಿಸಿದುದೇಕೆ ಎಂಬ ಪ್ರಶ್ನೆಗೆ ಉತ್ತರ ಬೇರೇನೂ ಅಲ್ಲ- ಮುಸ್ಲಿಮ್ ದ್ವೇಷ. ನಿಜವಾಗಿ,

ಈ ದೇಶದಲ್ಲಿ ಮುಸ್ಲಿಮ್ ದ್ವೇಷ ಆಳವಾಗಿದೆ. ರಾಜಕೀಯ ಕಾರಣಕ್ಕಾಗಿ ಮಣ್ಣು, ನೀರು, ಗೊಬ್ಬರ ಹಾಕಿ ಬೆಳೆಸಲಾದ ಈ ದ್ವೇಷವೆಂಬ ಸಸಿ  ಇವತ್ತು ಬೆಳೆದು ಹೆಮ್ಮರವಾಗಿದೆ. ಪ್ರತಿಯೊಂದರಲ್ಲೂ ಮುಸ್ಲಿಮ್ ದ್ವೇಷಕ್ಕೆ ಕಾರಣವನ್ನು ಹುಡುಕುವ ಅಪಾಯಕಾರಿ ಗುಂಪು ತಯಾರಾಗಿದೆ.  ಅಂದಹಾಗೆ, ಇಂಥ ಗುಂಪಿನಲ್ಲಿರುವವರ ಸಂಖ್ಯೆ ಸಣ್ಣದು ಎಂದು ಹೇಳಿ ನಮಗೆ ತಿರಸ್ಕರಿಸಬಹುದು. ಆದರೆ, ಈ ಸಣ್ಣ ಗುಂಪು ಸಮಾಜದ  ಮೇಲೆ ಬೀರುತ್ತಿರುವ ಪರಿಣಾಮಗಳು ಸಣ್ಣದಲ್ಲ ಮತ್ತು ಇಂಥವರು ತೀರಾ ಜನಸಾಮಾನ್ಯರೂ ಅಲ್ಲ. ಸಿರಾಜ್ ವಿರುದ್ಧ ವೆರಿಫೈಡ್  ಖಾತೆಗಳಿಂದಲೇ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂಬುದೇ ಈ ಗುಂಪಿನ ಆಳ-ಅಗಲವನ್ನು ತಿಳಿಸುತ್ತದೆ. ಇಂಥ ಗುಂಪಿನ ಸಂಖ್ಯೆ ಎಷ್ಟೇ ಸಣ್ಣದಿರಲಿ,  ಅದು ತನ್ನ ದ್ವೇಷ ಭಾವವನ್ನು ಜನಸಾಮಾನ್ಯರ ಬಳಿಗೂ ತಲುಪಿಸುವಷ್ಟು ಪ್ರಭಾವಶಾಲಿಯಾಗಿದೆ. ದ್ವೇಷಕ್ಕೆ ಪೂರಕವಾದ ಏನೂ ಇಲ್ಲದಿದ್ದರೂ  ಅನಾವಶ್ಯಕವಾಗಿ ಅಂಥದ್ದೊಂದು  ಭಾವವನ್ನು ಸೃಷ್ಟಿಸಿ ಹಂಚುವುದು ಇಂಥ ಗುಂಪಿನ ಪೂರ್ಣಕಾಲಿಕ ಉದ್ಯೋಗ. ಮುಸ್ಲಿಮ್ ಜನಸಾಮಾ ನ್ಯರಿಂದ ಹಿಡಿದು ಸಿನಿಮಾ ರಂಗ, ಕ್ರೀಡಾ ರಂಗ, ಕಲಾರಂಗ, ಅಧಿಕಾರಿ ವರ್ಗ ಸಹಿತ ಎಲ್ಲರನ್ನೂ ಹಿಂದೂ ವಿರೋಧಿಗಳಂತೆ ಅಥವಾ  ಕರ್ಮಠರಂತೆ ಚಿತ್ರಿಸುವುದನ್ನು ಈ ಗುಂಪು ಮಾಡುತ್ತಾ ಬರುತ್ತಿದೆ. ಮಾತ್ರವಲ್ಲ, ಮುಸ್ಲಿಮರ ಜೊತೆ ಸ್ನೇಹಮಯ ಸಂಬಂಧವನ್ನು ಹೊಂದಿರುವ  ಮತ್ತು ಮುಸ್ಲಿಮ್ ದ್ವೇಷಭಾವವನ್ನು ಪ್ರಶ್ನಿಸುವ ಹಿಂದೂಗಳನ್ನೂ ಈ ಗುಂಪು ಟ್ರೋಲ್ ಮಾಡುತ್ತಿದೆ. ಈ ಗುಂಪಿಗೆ ಆಯಕಟ್ಟಿನ ಜಾಗದಲ್ಲಿರುವವರ ಬೆಂಬಲವೂ ಇದೆ. ರಾಜಕೀಯ ಆಶ್ರಯವೂ ಸಿಗುತ್ತಿದೆ. ಆದ್ದರಿಂದ,

ಗುಂಪು  ಸಣ್ಣದಾಗಿದ್ದರೂ ಅದು ಹುಟ್ಟು ಹಾಕುವ ಕಲ್ಪಿತ ಬರಹಗಳು ಮತ್ತು ಪ್ರತಿಕ್ರಿಯೆಗಳು ತಳಮಟ್ಟದ ಜನಸಾಮಾನ್ಯರನ್ನು ತಲುಪಬಲ್ಲಷ್ಟು  ಶಕ್ತಿಶಾಲಿಯಾಗಿದೆ. ಈ ಕಾರಣದಿಂದಲೇ ಸಿರಾಜ್‌ರ ವಿರುದ್ಧ ವ್ಯಕ್ತವಾಗಿರುವ ದ್ವೇಷಭಾವದ ಪ್ರತಿಕ್ರಿಯೆಗಳು ಮಹತ್ವ ಪಡೆಯುತ್ತವೆ. 11 ಮಂದಿಯ  ಸಾಂಘಿಕ ಆಟವಾಗಿ ಗುರುತಿಸಿಕೊಂಡಿರುವ ಕ್ರಿಕೆಟ್‌ನಲ್ಲಿ ಒಬ್ಬ ಮುಸ್ಲಿಮನ ಒಂದು ಬಾರಿಯ ಕಳಪೆ ಪ್ರದರ್ಶನವನ್ನು ಹೆಕ್ಕಿ ಜರೆಯುವುದೆಂದರೆ,  ಅದಕ್ಕೆ ಆಟದ ಮೇಲಿನ ಪ್ರೀತಿ ಕಾರಣ ಎಂದು ಹೇಳುವುದಕ್ಕಿಂತ ಆಟಗಾರನ ಧರ್ಮದ ಮೇಲಿನ ದ್ವೇಷವೇ ಕಾರಣ ಅನ್ನುವುದೇ ಸರಿ. ಇದಕ್ಕೆ  ಓರ್ವ ಸಿರಾಜ್ ಮಾತ್ರ ಉದಾಹರಣೆಯಲ್ಲ. ಮುಹಮ್ಮದ್ ಶಮಿಯನ್ನೂ ಹೀಗೆಯೇ ನಡೆಸಿಕೊಳ್ಳಲಾಗಿದೆ. ಮಾತ್ರವಲ್ಲ, ದೇಶದಾದ್ಯಂತ  ಮುಸ್ಲಿಮರ ಮೇಲೆ ಆಗುತ್ತಿರುವ ಅನ್ಯಾಯ-ದೌರ್ಜನ್ಯ ಮತ್ತು ಸುಳ್ಳು ಪ್ರಚಾರಗಳಲ್ಲೂ ಇದು ವ್ಯಕ್ತವಾಗುತ್ತಿದೆ. ನಿಜವಾಗಿ,

ಸಮಸ್ಯೆ ಸಿರಾಜ್‌ನ ಅಲ್ಲಾಹನದ್ದಲ್ಲ. ಈ ಅಲ್ಲಾಹನನ್ನು ದ್ವೇಷಿಸುತ್ತಿರುವ ನಿರ್ದಿಷ್ಟ ಮನಸ್ಥಿತಿಯದ್ದು. ಅಲ್ಲಾಹ್, ಈಶ್ವರ್, ಗಾಡ್ ಎಂಬುದೆಲ್ಲಾ  ದೇವನನ್ನು ಸಂಬೋಧಿಸುವ ವಿವಿಧ ಪದಗಳು ಎಂಬುದನ್ನು ಈ ಗುಂಪಿಗೆ ತಿಳಿಸಿಕೊಡಬೇಕಾದ ಅಗತ್ಯವೂ ಇಲ್ಲ. ಯಾಕೆಂದರೆ, ಗೊತ್ತಿದ್ದೇ  ಈ  ಗುಂಪು ಧರ್ಮ ದ್ವೇಷಕ್ಕೆ ಇಳಿದಿದೆ. ಒಂದುವೇಳೆ, ಅಲ್ಲಾಹ್ ಎಂಬ ಪದದ ಬದಲು ಈಶ್ವರ್ ಎಂದು ಸಿರಾಜ್ ಬರೆದುಕೊಂಡಿರುತ್ತಿದ್ದರೆ ಇದೇ  ಗುಂಪು ಸಿರಾಜ್‌ನನ್ನು ಹಾಡಿ ಹೊಗಳುತ್ತಿತ್ತು ಎಂಬುದಕ್ಕೆ ವಿಶೇಷ ಅಧ್ಯಯನವೇನೂ ಬೇಕಾಗಿಲ್ಲ.

ಮುಹರ‍್ರಮ್: ಇಸ್ಲಾಮೀ ಕ್ಯಾಲೆಂಡರ್‌ನ ಪ್ರಥಮ ತಿಂಗಳಾಗುವುದಕ್ಕೆ ಕಾರಣ ಏನು?





ಕ್ರಿ.ಶ. 622, ಮುರ‍್ರಮ್ 1ರಂದು ಪ್ರವಾದಿ(ಸ) ಮತ್ತು ಅವರ ಸಂಗಡಿಗ ಅಬೂಬಕರ್(ರ)ರು ಮಕ್ಕಾದಿಂದ ಮದೀನಾಕ್ಕೆ ಐತಿಹಾಸಿಕ ವಲಸೆ  (ಹಿಜ್‌ರಾ) ಆರಂಭಿಸಿದ್ದರು. ಬಳಿಕ ದ್ವಿತೀಯ ಖಲೀಫಾ ಉಮರ್(ರ)ರು ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿ ಮುಹರ‍್ರಮ್ ಅನ್ನೇ  ಆಯ್ಕೆ ಮಾಡಿಕೊಂಡರು. ಇಲ್ಲೊಂದು  ಪ್ರಶ್ನೆಯಿದೆ. ಯಾಕೆ ಪ್ರವಾದಿ(ಸ)ರ ಹಿಜ್‌ರಾ ದಿನಾಂಕವನ್ನೇ ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ  ತಿಂಗಳಾಗಿ ಆಯ್ಕೆ ಮಾಡಿಕೊಳ್ಳಲಾಯಿತು? 

ಇಸ್ಲಾಮೀ ಇತಿಹಾಸದಲ್ಲಿ ಅತ್ಯಂತ ಮಹತ್ವಪೂರ್ಣವಾದ ಬದ್ರ್ ಹೋರಾಟ ನಡೆದಿರುವುದು  ರಮಝಾನ್ 17ರಂದು. ಇಸ್ಲಾಮೀ ಇತಿಹಾಸದ ಬಹುಮುಖ್ಯ ಮಗ್ಗುಲಾದ ಹುದೈಬಿಯಾ ಒಪ್ಪಂದ ನಡೆದಿರುವುದು ದುಲ್ ಕಅದ್ 6ರಂದು.  ಕ್ರಿ.ಶ. 630ರ ರಮಝಾನ್‌ನಲ್ಲಿ ಇಸ್ಲಾಮೀ ಇತಿಹಾಸದ ಮೈಲುಗಲ್ಲೆಂದೇ  ವಿಶ್ಲೇಷಿಸಲಾಗುವ ಮಕ್ಕಾ ವಿಜಯ ದೊರಕಿದೆ. ಇದಲ್ಲದೇ, ಇಸ್ಲಾಮೀ  ಇತಿಹಾಸದಲ್ಲಿ ಇಂಥ ಇನ್ನೂ ಒಂದಕ್ಕಿಂತ  ಹೆಚ್ಚು ಘಟನೆಗಳಿವೆ. ಆದರೆ, ಇವಾವುದನ್ನೂ ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಿಗೆ  ಆಧಾರವಾಗಿ ಖಲೀಫಾ ಉಮರ್(ರ) ಬಳಸಿಕೊಳ್ಳದಿರಲು ಕಾರಣವೇನು? ಬದ್ರ‍್ ನಲ್ಲಿ  ಇಲ್ಲದ ಏನನ್ನು ಅವರು ಹಿಜ್‌ರಾದಲ್ಲಿ ಕಂಡುಕೊಂಡರು?  ಮಕ್ಕಾ ವಿಜಯಕ್ಕಿಂತ ಹಿಜ್‌ರಾ ಮುಖ್ಯವಾಗುವುದಕ್ಕೆ ಕಾರಣ ಏನಿರಬಹುದು?

ನಿಜವಾಗಿ, ತನ್ನ 53ನೇ ಪ್ರಾಯದಲ್ಲಿ ಪ್ರವಾದಿ(ಸ) ಮಕ್ಕಾದಿಂದ ಮದೀನಾಕ್ಕೆ ವಲಸೆ ಹೋಗಲು ತೀರ್ಮಾನಿಸುತ್ತಾರೆ. ಅದಾಗಲೇ ಮಕ್ಕಾದಲ್ಲಿದ್ದ  ಹೆಚ್ಚಿನ ಪ್ರವಾದಿ(ಸ) ಅನುಯಾಯಿಗಳು ಮದೀನಾಕ್ಕೆ ವಲಸೆ ಹೋಗಿದ್ದರು. ಉಳಿದವರೂ ಮಕ್ಕಾವನ್ನು ಬಿಡಲಿದ್ದಾರೆ ಎಂಬುದು ಪ್ರವಾದಿ  ವಿರೋಧಿಗಳಿಗೆ ದಿಟವಾಗಿತ್ತು. ಆದ್ದರಿಂದ, ಈ ವಲಸೆಯನ್ನು ತಡೆಯಬೇಕು ಮತ್ತು ಅದಕ್ಕಾಗಿ ಪ್ರವಾದಿಯನ್ನು(ಸ) ವಧಿಸಬೇಕು ಎಂಬ ಸಂಚನ್ನು ಅವರು ಹೂಡಿದರು. ಎಲ್ಲ ಬುಡಕಟ್ಟುಗಳಿಂದ ಒಬ್ಬೊಬ್ಬರನ್ನು ಆಯ್ಕೆ ಮಾಡಿ, ಗುಂಪು ರಚಿಸಿ  ಅರ್ಧರಾತ್ರಿ ಪ್ರವಾದಿ(ಸ) ಮನೆಯ ಸುತ್ತ ನಿಲ್ಲಿಸಿದರು.  ಪ್ರವಾದಿ(ಸ) ಹತ್ಯೆಯ ಬಳಿಕ ಸಂಭಾವ್ಯ ಪ್ರತೀಕಾರವನ್ನು ಈ ವಿರೋಧಿಗಳು ನಿರೀಕ್ಷಿಸಿದ್ದರು. ಆದರೆ ಮಕ್ಕಾದ ಎಲ್ಲ ಬುಡಕಟ್ಟುಗಳೂ ಜೊತೆ  ಸೇರಿ ಹತ್ಯೆ ನಡೆಸಿದರೆ ಪ್ರವಾದಿಯ ಹಾಶಿಮ್ ಮನೆತನಕ್ಕೆ ಈ ಎಲ್ಲ ಬುಡಕಟ್ಟುಗಳ ವಿರುದ್ಧ ಪ್ರತೀಕಾರ ತೀರಿಸಲು ಸಾಧ್ಯವಿಲ್ಲ ಎಂಬ ತಂತ್ರದ  ಭಾಗವಾಗಿಯೇ ಈ ವಿಶೇಷ ಗುಂಪನ್ನು ರಚಿಸಲಾಗಿತ್ತು. ಈ ಷಡ್ಯಂತ್ರವನ್ನು ಅಲ್ಲಾಹನು ಪ್ರವಾದಿಗೆ(ಸ) ತಿಳಿಸಿರುವುದನ್ನು ಪವಿತ್ರ ಕುರ್‌ಆನ್  (8:30) ಉಲ್ಲೇಖಿಸಿದೆ. ಪ್ರವಾದಿ ಹಿಡಿ ಮರಳನ್ನು ತೆಗೆದು ತನ್ನ ಮನೆ ಎದುರು ನಿಂತಿದ್ದ ಹತ್ಯೆಕೋರ ಗುಂಪಿನ ಮೇಲೆ ಎಸೆಯುತ್ತಾರೆ ಮತ್ತು  ಅವರ ಮುಂದೆಯೇ ಪ್ರವಾದಿ(ಸ) ಆ ರಾತ್ರಿ ಹೊರಟು ಹೋಗುತ್ತಾರೆ ಎಂಬುದು ಇಸ್ಲಾಮೀ ಇತಿಹಾಸದಲ್ಲಿ ದಾಖಲಾಗಿದೆ. ಅಲ್ಲದೇ, ವಲಸೆಯ  ಭಾಗವಾಗಿ ಪ್ರವಾದಿ(ಸ) ತನ್ನ ಸಂಗಾತಿ ಅಬೂಬಕರ್(ರ) ಜೊತೆ ತೂರ್ ಎಂಬ ಗುಹೆಯಲ್ಲಿ ಮೂರು ದಿನಗಳ ಕಾಲ ತಂಗಿದಾಗ ಗುಹೆಯ  ದ್ವಾರದಲ್ಲಿ ಪಾರಿವಾಳ ಗೂಡು ಕಟ್ಟಿ ಮೊಟ್ಟೆ ಇಡುವುದು, ಜೇಡ ಬಲೆ ಕಟ್ಟುವುದೂ ನಡೆಯುತ್ತದೆ. ಆ ಮೂಲಕ ಇವರನ್ನು ಹುಡುಕಿಕೊಂಡು  ಬಂದ ಶತ್ರುಗಳು ಈ ಗುಹೆಯಲ್ಲಿ ಅವರಿರಲು ಸಾಧ್ಯವಿಲ್ಲ ಎಂದು ತೀರ್ಮಾನಿಸುತ್ತಾರೆ. ಪ್ರವಾದಿಯನ್ನು ಹುಡುಕಿಕೊಂಡು ಬಂದ ಸುರಾಕಾ  ಎಂಬವನ ಕುದುರೆಯ ಕಾಲು ಮರಳಿನಲ್ಲಿ ಹೂತು ಹೋಗುವುದು ಮತ್ತು ವಲಸೆಯ ದಾರಿಯಾಗಿ ಪ್ರವಾದಿಯವರು(ಸ) ಉಮ್ಮು ಮುಆದ್‌ರ  ಮನೆಯಲ್ಲಿ ತಂಗುವುದು, ಅವರ ಸಣಕಲು ಆಡು ದಷ್ಟಪುಷ್ಟವಾಗಿ ಹಾಲು ನೀಡುವುದೂ ನಡೆಯುತ್ತದೆ. ಆದರೆ,
ಈ ಪವಾಡಗಳ ಆಚೆಗೆ, ಹಿಜ್‌ರಾ ಮುಖ್ಯವಾಗುವುದು ಪ್ರವಾದಿಯ(ಸ) ದೂರದೃಷ್ಟಿ, ಧೈರ್ಯ, ಪ್ರತಿತಂತ್ರ, ಆತ್ಮವಿಶ್ವಾಸ ಮತ್ತು ಪ್ರಾಯೋಗಿಕ  ವಿಧಾನಗಳಿಗಾಗಿ ಎಂದೇ ಹೇಳಬಹುದು. 

ತನ್ನ ಮನೆಯ ಸುತ್ತ ನಿಂತಿದ್ದ ಹತ್ಯೆಕೋರ ಗುಂಪಿನ ಕಡೆಗೆ ಮರಳನ್ನೆಸೆದು ಆ ಅರ್ಧರಾತ್ರಿ ಹೊರಟು  ಹೋಗುವ ಮೊದಲು ಪ್ರವಾದಿ(ಸ) ತನ್ನ ಜಾಗದಲ್ಲಿ ಆಪ್ತ ಅಲಿ(ರ)ರನ್ನು ಮಲಗಿಸಿದ್ದರು. ತನ್ನನ್ನು ಕೊಲ್ಲಲೆಂದು ಮನೆಯನ್ನು ಸುತ್ತುವರಿದು  ನಿಂತವರು ತಾನಿನ್ನೂ ಮನೆಯೊಳಗೆ ಮಲಗಿದ್ದೇನೆಂದು ಭಾವಿಸಲಿ ಎಂಬುದು ಅವರ ಉದ್ದೇಶವಾಗಿತ್ತು. ಅಲ್ಲಾಹನ ಸಹಾಯದ  ಹೊರತಾಗಿಯೂ ಪ್ರವಾದಿ(ಸ) ಇಂಥ ದ್ದೊಂದು ಪ್ರತಿತಂತ್ರವನ್ನು ಹೆಣೆದರು ಎಂಬುದು ಇಲ್ಲಿ ಬಹಳ ಮುಖ್ಯ. ಆ ಬಳಿಕ ಪ್ರವಾದಿ(ಸ)  ನೇರವಾಗಿ ಮದೀನಾದ ಕಡೆಗೆ ನಡೆಯಲಿಲ್ಲ. ಮದೀನಾಕ್ಕೆ ತೀರಾ ವಿರುದ್ಧ ದಾರಿಯಲ್ಲಿ ಸಾಗಿ ತೂರ್ ಎಂಬ ಗುಹೆಯ ಒಳಗೆ ಅಡಗಿಕೊಂಡರು.  ಬೆನ್ನಟ್ಟಿ ಬರುವ ಶತ್ರುಗಳ ದಾರಿ ತಪ್ಪಿಸುವುದೇ ಇದರ ಗುರಿಯಾಗಿತ್ತು. ಬಳಿಕ ಬೆನ್ನಟ್ಟಿ ಬಂದ ಶತ್ರುಗಳು ಈ ಗುಹೆಯ ಸಮೀಪಕ್ಕೆ ಬಂದುದು  ಮತ್ತು ಅವರ ಕಾಲ ಸಪ್ಪಳ ಕೇಳಿಸುವುದೂ ನಡೆಯಿತು. ಸಂಗಡಿಗ ಅಬೂಬಕರ್ ಆತಂಕಿತರಾದರು. ಶತ್ರುಗಳು ಇಣುಕಿ ನೋಡಿಬಿಟ್ಟರೆ ಎಂಬ  ಭಯವನ್ನು ಅವರು ತೋಡಿಕೊಂಡರು. ಆಗ, ‘ಭಯ ಪಡಬೇಡಿ, ಅಲ್ಲಾಹನು ನಮ್ಮ ಜೊತೆ ಇದ್ದಾನೆ’ (9:40) ಎಂದು ಪ್ರವಾದಿ(ಸ) ಸಾಂತ್ವನ ಪಡಿಸುವುದು ಕುರ್‌ಆನ್ ನಲ್ಲಿದೆ. ಶತ್ರುಗಳ ತಂತ್ರಕ್ಕೆ ಪ್ರತಿತಂತ್ರವನ್ನು ಹೆಣೆದ ಬಳಿಕ ಅಲ್ಲಾಹನ ಮೇಲೆ ಅಚಂಚಲ ಮತ್ತು ಕಲ್ಮಶವಿಲ್ಲದ ವಿಶ್ವಾಸ  ಇಟ್ಟುಕೊಳ್ಳಬೇಕು ಎಂಬ ಅತಿ ಪ್ರಬಲವಾದ ಸಂದೇಶವನ್ನು ಅವರು ನೀಡಿದರು. ಶತ್ರುಗಳು ಕೈಯಳತೆಯ ದೂರವಷ್ಟೇ ಇದ್ದಾಗ ಪ್ರವಾದಿ ಈ  ಆತ್ಮವಿಶ್ವಾಸದ ಮಾತನ್ನಾಡಿದ್ದರು ಎಂಬುದು ಇಲ್ಲಿ ಬಹಳ ಮುಖ್ಯ. ಅಲ್ಲಿಂದ ಪ್ರವಾದಿ(ಸ) ಮತ್ತು ಅಬೂಬಕರ್ ಹೊರಟು ಹೋಗುತ್ತಾರೆ. ಇತ್ತ  ಅವರನ್ನು ಹುಡುಕಿ ನಿರಾಶರಾದ ಶತ್ರುಗಳು ಅವರನ್ನು ಪತ್ತೆ ಹಚ್ಚುವವರಿಗೆ 100 ಒಂಟೆಗಳ ಇನಾಮು ಘೋಷಿಸುತ್ತಾರೆ. ಇದರಿಂದ ಪ್ರೇರಿತನಾದ  ಸುರಾಕಾ ಎಂಬ ಮರಳುಗಾಡಿನ ಚತುರ ವ್ಯಕ್ತಿ ಪ್ರವಾದಿ(ಸ)ರ ಬೆನ್ನಟ್ಟುತ್ತಾರೆ. ಮಾತ್ರವಲ್ಲ, ಪ್ರವಾದಿಯ ಹತ್ತಿರಕ್ಕೂ ತಲುಪುತ್ತಾರೆ. ಆದರೆ ಅವರ  ಕುದುರೆಯ ಕಾಲು ಮರಳಿನಲ್ಲಿ ಹೂತು ಹೋಗುತ್ತದೆ. ಆಗ ಪ್ರವಾದಿ(ಸ) ಈ ಸುರಾಕಾನಲ್ಲಿ ಹೀಗೆ ಹೇಳುತ್ತಾರೆ,

 ‘ಒಂದು ದಿನ ರೋಮ್‌ನ  ಚಕ್ರಾಧಿಪತಿ ಕಿಸ್ರಾನ ಕೈಬಳೆ ನಿನ್ನ ಕೈಗೆ ಬರಲಿದೆ.’ ಅಂದರೆ ನಿನ್ನ ಜೀವಂತ ಕಾಲದಲ್ಲೇ  ರೋಮ್ ಸಾಮ್ರಾಜ್ಯವು ಇಸ್ಲಾಮೀ ಸಾಮ್ರಾಜ್ಯದ ಅಧೀನಕ್ಕೆ ಒಳಪಡಲಿದೆ ಎಂದು ಅರ್ಥ. ಇದು ಆ ಬಳಿಕ ನಿಜವೂ ಆಯಿತು. ನಿಜವಾಗಿ,
ಸುರಾಕಾನಲ್ಲಿ ಇಂಥದ್ದೊಂದು  ಮಾತನ್ನು ಹೇಳುವಾಗ ಪ್ರವಾದಿಗೆ(ಸ) ಮಕ್ಕಾದಲ್ಲಿ ಅಸ್ತಿತ್ವವೇ ಇರಲಿಲ್ಲ. ಮದೀನಾ  ಹೇಗೆ ಸ್ವೀಕರಿಸುತ್ತದೆ  ಎಂಬುದೂ ಅವರಿಗೆ ದೃಢವಿರಲಿಲ್ಲ. ತನ್ನದೆಂದು ಹೇಳಿಕೊಳ್ಳುವ ಒಂದು ಊರೇ ಇಲ್ಲದ ಸಮಯದಲ್ಲೂ ಪ್ರವಾದಿ(ಸ) ಆಡಿರುವ ಈ  ಮಾತುಗಳು ಓರ್ವ ಸತ್ಯವಿಶ್ವಾಸಿಯಲ್ಲಿ ಇರಬೇಕಾದ ಆತ್ಮವಿಶ್ವಾಸ, ದೂರದೃಷ್ಟಿ ಮತ್ತು ಅಚಲ ದೇವವಿಶ್ವಾಸದ ಮಹತ್ವವನ್ನು ಹೇಳುತ್ತದೆ.  ಒಂದುರೀತಿಯಲ್ಲಿ,

ಅಲ್ಲಾಹನ ಮಾರ್ಗದರ್ಶನದ ಹೊರತಾಗಿಯೂ ಪ್ರವಾದಿ(ಸ) ಹಲವು ಪ್ರಾಯೋಗಿಕ ಮತ್ತು ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡರು.  ಸಾಂದರ್ಭಿಕ ತಂತ್ರಗಳನ್ನು ಹೆಣೆದರು. ಅತ್ಯಪೂರ್ವವಾದ ದೂರದೃಷ್ಟಿಯನ್ನೂ ಹೊಂದಿದ್ದರು. ಜೊತೆಗೇ ಅಲ್ಲಾಹನ ಮೇಲೆ ಅಚಂಚಲವಾದ  ವಿಶ್ವಾಸವನ್ನೂ ಇಟ್ಟಿದ್ದರು. ಓರ್ವ ನಾಯಕ ಹೇಗಿರಬೇಕು ಮತ್ತು ಅತ್ಯಂತ ಸವಾಲಿನ ಸಂದರ್ಭದಲ್ಲಿ ಸತ್ಯವಿಶ್ವಾಸಿಗಳ ಮನಸ್ಥಿತಿ ಏನಿರಬೇಕು  ಎಂಬುದನ್ನು ಹಿಜ್‌ರಾ ಸ್ಪಷ್ಟಪಡಿಸುತ್ತದೆ. ಸುತ್ತುವರಿದಿರುವ ಶತ್ರುಗಳು ಇನ್ನೇನು ಗುರಿ ಸಾಧಿಸಿಯೇ ಬಿಡುತ್ತಾರೆ ಎಂಬಂತ  ಸ್ಥಿತಿಯಿದ್ದರೂ ಸ್ಥಿಮಿತ  ಕಳಕೊಳ್ಳದೇ ಪ್ರತಿತಂತ್ರವನ್ನು ಹೂಡುವುದು ಮತ್ತು ಅಲ್ಲಾಹನ ಮೇಲೆ ಅಣುವಿನಷ್ಟೂ ಕಲ್ಮಶವಿಲ್ಲದ ವಿಶ್ವಾಸವನ್ನು ಹೊಂದುವುದೇ ಮುಹರ‍್ರಮ್‌ನ  ಪಾಠ. ಬದ್ರ‍್ ನಲ್ಲಿ  ಪ್ರವಾದಿಯ ಜೊತೆ 313 ಮಂದಿ ಅನುಯಾಯಿಗಳು ಇದ್ದರು. ಹುದೈಬಿಯಾ ಒಪ್ಪಂದದ ವೇಳೆ 1400ರಷ್ಟು ಸಂಗಡಿಗರಿದ್ದರು.  ಮಕ್ಕಾ ವಿಜಯದ ಸಮಯದಲ್ಲಂತೂ ಈ ಸಂಖ್ಯೆ ಹಲವು ಪಟ್ಟು ಹೆಚ್ಚಾಗಿತ್ತು. ಆದರೆ, ಮುಹರ‍್ರಂ 1ರಂದು ನಡೆದ ಹಿಜ್‌ರಾ ಹಾಗಲ್ಲ. ಪ್ರವಾದಿ  ಮುಹಮ್ಮದ್(ಸ) ಮತ್ತು ಅಬೂಬಕರ್(ರ) ಎಂಬ ಇಬ್ಬರ ಜೊತೆ ಮೂರನೆಯವನಾಗಿ ಇದ್ದುದು ಅಲ್ಲಾಹನು ಮಾತ್ರ. ಇನ್ನೊಂದು ಕಡೆ  ಮಕ್ಕಾದ ಅಷ್ಟೂ ಬುಡಕಟ್ಟುಗಳು ಕತ್ತಿ ಹಿರಿದು ನಿಂತಿದ್ದುವು. ಇದು ಇಸ್ಲಾಮಿನ ಪಾಲಿಗೆ ಪ್ರಪ್ರಥಮ ಅಳಿವು-ಉಳಿವಿನ ಸಂದರ್ಭವಾಗಿತ್ತು. ಈ  ಸಂದ ರ್ಭವನ್ನು ಪ್ರವಾದಿ(ಸ) ಹೇಗೆ ಎದುರಿಸುತ್ತಾರೆ ಎಂಬುದೂ ಐತಿಹಾಸಿಕವಾಗಿಯೂ ದಾಖಲಾಗುವುದಿತ್ತು. ಇಸ್ಲಾಮಿನ ಭವಿಷ್ಯವೂ ಪ್ರವಾದಿ  ಕೈಗೊಳ್ಳುವ ನಿರ್ಧಾರ ಮತ್ತು ತೋರುವ ಆತ್ಮವಿಶ್ವಾಸವನ್ನು ಹೊಂದಿಕೊಂಡಿತ್ತು. ಆ ಕಾರಣದಿಂದಲೇ ಮುಹರ‍್ರಂ ಒಂದರ ಹಿಜ್‌ರಾ  ಮುಖ್ಯವಾಗುತ್ತದೆ. ಬಹುಶಃ,

ಇತರೆಲ್ಲವುಗಳಿಗಿಂತ ಮುಹರ‍್ರಂ ಅನ್ನೇ ಖಲೀಫಾ ಉಮರ್ (ರ) ಇಸ್ಲಾಮೀ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿ ಆಯ್ಕೆ ಮಾಡಿರುವುದಕ್ಕೆ ಇವೆಲ್ಲ  ಕಾರಣವಾಗಿರಬಹುದು.

Friday, 21 June 2024

ಹಾಜಿ ಯಾರು?





ಹಾಜಿ ಯಾರು? ಈ ಪ್ರಶ್ನೆಗೆ ಉತ್ತರ ಸುಲಭ ಇದೆ. ಯಾರು ಹಜ್ಜ್ ನಿರ್ವಹಣೆಗಾಗಿ ಮಕ್ಕಾದಲ್ಲಿ ಸೇರುತ್ತಾರೋ ಅವರೇ ಹಾಜಿಗಳು. ಆದರೆ,  ಹಾಜಿ ಎಂದರೆ ಇಷ್ಟು ಮಾತ್ರವೇ? ಹೀಗೆ ಒಂದು ವಾಕ್ಯದಲ್ಲಿ ಹೇಳಿ ಮುಗಿಸಬಹುದಾದ ಒಂದು ಪರಿಕಲ್ಪನೆಯೇ ಹಾಜಿ? ಓರ್ವ ವ್ಯಕ್ತಿ  ಇರುವುದೆಲ್ಲವ ಬಿಟ್ಟು ಯಾಕೆ ಹಜ್ಜ್ ಗೆ  ಹೋಗಬೇಕು?

ಭಾರತದಿಂದ ಮಕ್ಕಾಕ್ಕೆ ಬಹಳ ದೂರವೇನೂ ಇಲ್ಲ. ವಿಮಾನದಲ್ಲಿ ಕುಳಿತು ಒಂದು ಪುಟ್ಟ ನಿದ್ದೆ  ಮಾಡಿ ಎಚ್ಚರಗೊಳ್ಳುವಷ್ಟೇ ದೂರ. ಆದರೆ ಈ  ಸಣ್ಣ ಪ್ರಯಾಣಕ್ಕೆ ಓರ್ವ ಹಾಜಿ ಮಾಡಿಕೊಳ್ಳುವ ತಯಾರಿಗಳು ಏನೇನು? ವರ್ಷಗಳ ಮೊದಲೇ ಇಂಥದ್ದೊಂದು  ಪ್ರಯಾಣದ ಕನಸು  ಕಾಣುತ್ತಾರೆ. ಅರ್ಜಿ ಹಾಕುವ ಪ್ರಕ್ರಿಯೆಯೂ ಆರಂಭಗೊಳ್ಳುತ್ತದೆ. ಒಮ್ಮೆ ಅರ್ಜಿ ಸ್ವೀಕೃತವಾಗಿ ಹಜ್ಜ್ ನಿರ್ವಹಿಸುವವರ ಪಟ್ಟಿಯಲ್ಲಿ ತನ್ನ ಹೆಸರೂ  ಬರಲಿ ಎಂದು ಆಶೆಯಿಂದ ಕಾಯುತ್ತಾರೆ. ಒಮ್ಮೆ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿತೆಂದರೆ ಅತೀವ ಖುಷಿ ಪಡುತ್ತಾರೆ. ಆಗಿನಿಂದಲೇ ಅವರ  ಮಕ್ಕಾ ಯಾತ್ರೆ ಮಾನಸಿಕವಾಗಿ ಆರಂಭಗೊಳ್ಳುತ್ತದೆ. ತಾನು ಯಾರೊಂದಿಗೆಲ್ಲ ಒರಟಾಗಿ ನಡಕೊಂಡಿದ್ದೇನೆ, ಯಾರಲ್ಲಿ ಸಾಲ ಮಾಡಿದ್ದೇನೆ,  ಯಾರ ಮನಸ್ಸನ್ನು ನೋಡಿಯಿಸಿದ್ದೇನೆ.. ಎಂದೆಲ್ಲ ಅವಲೋಕನ ನಡೆಯತೊಡಗುತ್ತದೆ. ಅಂಥವರನ್ನು ಖುದ್ದಾಗಿ ಕಂಡೋ ಇತರ ಸೌಲಭ್ಯಗಳ  ಮೂಲಕವೋ ಸಂಪರ್ಕಿಸಿಯೋ ಕ್ಷಮಿಸುವಂತೆ ಮನವಿ ಮಾಡಿಕೊಳ್ಳುತ್ತಾರೆ. ಹಜ್ಜ್ ಗಾಗಿ  ತೆರಳುವ ದಿನಾಂಕ ಹತ್ತಿರ ಬರುತ್ತಿರುವಂತೆಯೇ ಮನಸ್ಸು  ಭಾರವಾಗತೊಡಗುತ್ತದೆ. ಸಾಲದಿಂದ ಮುಕ್ತವಾಗುವುದು ಮತ್ತು ತನ್ನ ಅನುಪಸ್ಥಿತಿಯಲ್ಲಿ ಮನೆ ನಿರ್ವಹಣೆಗಾಗಿ ಬೇಕಾದ ಏರ್ಪಾಡು  ಮಾಡುವುದೂ ನಡೆಯುತ್ತದೆ. ಹಜ್ಜ್ ತರಬೇತಿ ಕಾರ್ಯಾಗಾರಗಳಲ್ಲಿ ಭಾಗವಹಿಸುತ್ತಾರೆ. ಆ ಮೂಲಕ ತನ್ನ ಈ ಇಡೀ ಪ್ರಕ್ರಿಯೆಯಲ್ಲಿ ಸಣ್ಣ  ದೋಷವೂ ಉಂಟಾಗಬಾರದೆಂಬ ಎಚ್ಚರಿಕೆ ವಹಿಸತೊಡಗುತ್ತಾರೆ. ಇವೆಲ್ಲ ಹಜ್ಜ್ ಗೆ  ತೆರಳುವುದಕ್ಕಿಂತ ಮೊದಲಿನ ಸಿದ್ಧತೆಗಳಾದರೆ ತೆರಳಿದ  ಬಳಿಕವಂತೂ ವ್ಯಕ್ತಿ ಸಂಪೂರ್ಣ ಬದಲಾಗುತ್ತಾರೆ. ಎಲ್ಲಿಯ ವರೆಗೆಂದರೆ, ತಾನು ಆವರೆಗೆ ಇಷ್ಟಪಟ್ಟು ಧರಿಸುತ್ತಿದ್ದ ಬಟ್ಟೆಗಳಿಂದಲೇ  ಮುಕ್ತವಾಗುವಷ್ಟು. ಹೊಲಿಗೆ ಇಲ್ಲದ ಎರಡು ತುಂಡು ಬಿಳಿ ಬಟ್ಟೆಯ ಹೊರತು ಪುರುಷನ ಮೈಮೇಲೆ ಇನ್ನಾವುದೂ ಇರುವುದಿಲ್ಲ.  ಒಂದುರೀತಿಯಲ್ಲಿ, ಐಡೆಂಟಿಟಿ ಇಲ್ಲದ ವ್ಯಕ್ತಿ. ಎರಡು ತುಂಡು ಬಟ್ಟೆ ಧರಿಸಿದ ಲಕ್ಷಾಂತರ ಜನರ ನಡುವೆ ಆತ ಒಂದು ಬಿಂದು ಮಾತ್ರ. ಸೌದಿಯ  ರಾಜಕುಮಾರನಾದರೂ ಇರಾನಿನ ಖೊಮೇನಿ ಆದರೂ ಅಥವಾ ದೆಹಲಿ ಶಾಹಿ ಇಮಾಮೇ ಆದರೂ ಎಲ್ಲರೂ ಒಂದು ಬಿಂದು ಮಾತ್ರ.  ನಿಜವಾಗಿ,

ಹಜ್ಜ್ ನಿರ್ವಹಣೆಗಾಗಿ ಭಾರತದಿಂದ ಮಕ್ಕಾಕ್ಕೆ ತೆರಳುವ ವ್ಯಕ್ತಿ ಈ ಪ್ರಯಾಣಕ್ಕಿಂತ ಮೊದಲು ಇದಕ್ಕಿಂತ ಸಾವಿರ ಕಿಲೋಮೀಟರ್ ದೂರದ  ರಾಷ್ಟ್ರಕ್ಕೆ ಪ್ರಯಾಣಿಸಿರಬಹುದು. ಆದರೆ, ಮಕ್ಕಾ ಪ್ರಯಾಣಕ್ಕಾಗಿ ಮಾಡಿದ ಸಿದ್ಧತೆಯ ಒಂದು ಶೇಕಡಾ ಸಿದ್ಧತೆಯನ್ನೂ ಅದಕ್ಕೆ ಮಾಡಿರುವ ಸಾಧ್ಯತೆ  ಕಡಿಮೆ. ಆದ್ದರಿಂದಲೇ, ಹಾಜಿ ಯಾರು ಅನ್ನುವ ಪ್ರಶ್ನೆ ಮುಖ್ಯವಾಗುತ್ತದೆ. ಹಾಜಿ ಎಂಬುದು ಒಂದು ವಾಕ್ಯದಲ್ಲಿ ಮುಗಿಸುವ ವಿಷಯವಲ್ಲ.  ಅದೊಂದು ಮಾಡೆಲ್. ಹಜ್ಜ್ ನಿರ್ವಹಿಸುವ ವ್ಯಕ್ತಿಯ ಎಲ್ಲ ಪಾಪಗಳನ್ನೂ ಅಲ್ಲಾಹನು ಕ್ಷಮಿಸುತ್ತಾನೆ ಮತ್ತು ಆಗಷ್ಟೇ ಭೂಮಿಗೆ ಬಂದ ಶಿಶುವನಷ್ಟೇ ಅವರು ಶುಭ್ರವಾಗಿರುತ್ತಾರೆ ಎಂದು ಪ್ರವಾದಿ(ಸ) ಹೇಳಿದ್ದಾರೆ. ಆದ್ದರಿಂದ ಹಜ್ಜ್ ನಿರ್ವಹಣೆಗಾಗಿ ತೆರಳುವ ಹಾಜಿ ಮತ್ತು ಹಜ್ಜ್  ನಿರ್ವಹಿಸಿ ಮರಳುವ ಹಾಜಿ- ಇಬ್ಬರೂ ಒಂದೇ ಅಲ್ಲ. ತೆರಳುವ ಹಾಜಿ ತನ್ನ ಐಡೆಂಟಿಟಿಯಿಂದ  ಕಳಚಿಕೊಂಡಿರುವುದಿಲ್ಲ. ಆದರೆ, ಮರಳುವ  ಹಾಜಿಗೆ ಐಡೆಂಟಿಟಿಯನ್ನೇ ಕಳಚಿಕೊಂಡ ಮತ್ತು ಆ ಕ್ಷಣದ ರೋಮಾಂಚನ, ಭಾವುಕತೆ, ಒಂಟಿತನ ಮತ್ತು ಆಧ್ಯಾತ್ಮಿಕತೆಯ ಪರಾಕಾಷ್ಟೆಯ ಅನುಭವವಾಗಿರುತ್ತದೆ. ಅಲ್ಲದೇ, ಹೀಗೆ ತೆರಳುವುದು ಒಂದು ಬಾರಿ ಮಾತ್ರ ಕಡ್ಡಾಯ ಎಂಬುದೂ ಬಹಳ ಮುಖ್ಯ. ಹಾಗಂತ,

ಹಜ್ ನಿಂದ  ಮರಳಿದ ಬಳಿಕವೂ ಮತ್ತೊಂದು ಹಜ್ಜ್ ನಿರ್ವಹಿಸುವುದಕ್ಕೆ ಬೇಕಾಗುವಷ್ಟು ಅವರಲ್ಲಿ ಹಣ ಇರಬಹುದು, ಆರೋಗ್ಯವೂ  ಇರಬಹುದು. ಆದರೂ ಮತ್ತೊಂದು ಬಾರಿ ಹೋಗಿ ವಿನೀತವಾಗುವುದು ಅವರ ಮೇಲೆ ಕಡ್ಡಾಯವಲ್ಲ. ಅಂದರೆ, ಹಾಜಿಯ ಚಟುವಟಿಕೆಯ  ಕೇಂದ್ರ ಮಕ್ಕಾ ಅಲ್ಲ ಎಂದೇ ಇದರರ್ಥ. ಹಜ್ಜ್ ನಿರ್ವಹಿಸಿ ಸಕಲ ಆಧ್ಯಾತ್ಮಿಕ ಚೈತನ್ಯವನ್ನೂ ಪಡೆದು ಮರಳಿದ ಬಳಿಕ ಹಾಜಿ ತಾನಿರುವ ಪ್ರದೇಶವನ್ನು ಮಕ್ಕಾ ಮಾಡಬೇಕು ಅಥವಾ ಶಾಂತಿಯ ಕೇಂದ್ರ ಮಾಡಬೇಕು. ಲಕ್ಷಾಂತರ ಹೆಣ್ಣು ಮತ್ತು ಗಂಡು ಒಂದೇ ಕಡೆ ಸೇರಿಯೂ ಯಾವ  ಕೆಡುಕೂ ನಡೆಯದ, ಕಳ್ಳತನ, ಮೋಸ, ಅನ್ಯಾಯ, ಹಲ್ಲೆ, ಹತ್ಯೆಗಳಂತಹ ಸರ್ವ ಕೆಡುಕುಗಳಿಂದಲೂ ಮುಕ್ತವಾದ ಆ ಮಕ್ಕಾದ ವಾತಾವರಣವನ್ನು ತನ್ನೂರಲ್ಲೂ ‘ಹಾಜಿ’ ಸಾಧ್ಯವಾಗಿಸಬೇಕು. ಅದಕ್ಕಾಗಿ ಮುಂದಿನ ಜೀವನದಲ್ಲಿ ಸರ್ವಸಾಧ್ಯ ಪ್ರಯತ್ನ ನಡೆಸಬೇಕು.

ಇವರೇ ಹಾಜಿ.



7 ಲಕ್ಷ ಯಹೂದಿಯರನ್ನು ಅವಲಂಬಿಸಿದೆಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ?


ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಕುರಿತಂತೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಚರ್ಚೆ ಮತ್ತು ಪರಾಮರ್ಶೆಗಳು ನಡೆಯುತ್ತಿವೆ. ಇಸ್ರೇಲ್ ಮತ್ತು  ಫೆಲೆಸ್ತೀನ್ ನಡುವಿನ ಸಂಘರ್ಷವನ್ನು ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ  ಸ್ಥಾಪನೆಯಿಂದ ಮಾತ್ರ ಪರಿಹರಿಸಲು ಸಾಧ್ಯ ಎಂಬ ಅಭಿಪ್ರಾಯಕ್ಕೆ ದಿನೇ ದಿ ನೇ ಬಲ ಬರುತ್ತಿದೆ. ಫೆಲೆಸ್ತೀನನ್ನು ಸ್ವತಂತ್ರ ರಾಷ್ಟ್ರವಾಗಿ ಅಂಗೀಕರಿಸುವ ರಾಷ್ಟ್ರಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮೊನ್ನೆ ಮೊನ್ನೆಯಂತೆ  ಐರ್ಲ್ಯಾಂಡ್, ನಾರ್ವೆ ಮತ್ತು ಸ್ಪೈನ್‌ಗಳು ಫೆಲೆಸ್ತೀನ್‌ಗೆ ಸ್ವತಂತ್ರ ರಾಷ್ಟ್ರದ ಮಾನ್ಯತೆ ನೀಡಿವೆ. ಫೆಲೆಸ್ತೀನ್ ಎಂಬ ವಿಶಾಲ ಭೂಭಾಗದಲ್ಲಿ 1948ರಲ್ಲಿ  ಇಸ್ರೇಲ್ ಎಂಬ ಸ್ವತಂತ್ರ ರಾಷ್ಟ್ರ ಸ್ಥಾಪನೆಯಾಗುವಾಗ ಅದರ ವ್ಯಾಪ್ತಿ ತೀರಾ ಕಿರಿದಾಗಿತ್ತು ಮತ್ತು ಜನಸಂಖ್ಯೆಯೂ ಕಡಿಮೆ ಇತ್ತು. ಆದರೆ ಇವತ್ತು  ಇಡೀ ಫೆಲೆಸ್ತೀನನ್ನು ಇಸ್ರೇಲ್ ಆಳುತ್ತಿದೆ ಮತ್ತು ಜಗತ್ತಿನಾದ್ಯಂತ ಇರುವ ಯಹೂದಿಯರನ್ನು ತನ್ನಲ್ಲಿಗೆ ಕರೆಸಿಕೊಂಡು ಜನಸಂಖ್ಯೆಯನ್ನು ಅ ಪಾರ ಪ್ರಮಾಣದಲ್ಲಿ ವೃದ್ಧಿಸಿಕೊಂಡಿದೆ. ನಿಜವಾಗಿ,


ಇಸ್ರೇಲ್ ಮತ್ತು ಫೆಲೆಸ್ತೀನ್ ಎಂಬ ಎರಡು ರಾಷ್ಟ್ರಗಳ ಪರಿಕಲ್ಪನೆ 1948ರಿಂದ ಆರಂಭವಾದುದಲ್ಲ. ಫೆಲೆಸ್ತೀನನ್ನು ಆಳುತ್ತಿದ್ದ ಬ್ರಿಟಿಷರು  1936ರಲ್ಲೇ  ಈ ಕುರಿತಂತೆ ಲಾರ್ಡ್ ವಿಲಿಯಂ ರಾಬರ್ಟ್ ಪೀಲ್ ಎಂಬವರ ನೇತೃತ್ವದಲ್ಲಿ ಆಯೋಗವೊಂದನ್ನು ರಚಿಸಿದ್ದರು. ಆ ಆಯೋಗವು  ಸ್ವತಂತ್ರ ಫೆಲೆಸ್ತೀನ್ ಮತ್ತು ಇಸ್ರೇಲ್ ರಾಷ್ಟ್ರದ ಸ್ಥಾಪನೆಯ ಪ್ರಸ್ತಾವನೆಯನ್ನು ಮುಂದಿಟ್ಟಿತ್ತು. ಪಶ್ಚಿಮ ದಂಡೆ, ಗಾಝಾ ಮತ್ತು ಸೆರೇವ್  ಮರುಭೂಮಿಯನ್ನು ಒಳಗೊಂಡ ಫೆಲೆಸ್ತೀನ್ ರಾಷ್ಟ್ರ ನಿರ್ಮಿಸುವುದು ಈ ಪ್ರಸ್ತಾವನೆಯಲ್ಲಿ ಸೇರಿತ್ತು. ಎರಡನೇ ವಿಶ್ವಯುದ್ಧದ ಬಳಿಕ ಫೆಲೆಸ್ತೀನ್  ವಿಷಯದಲ್ಲಿ ವಿಶೇಷ ಆಯೋಗವನ್ನು ವಿಶ್ವಸಂಸ್ಥೆ ರೂಪಿಸಿತು. ಇದೂ ಕೂಡಾ ಫೆಲೆಸ್ತೀನ್ ಭೂಭಾಗವನ್ನು ಎರಡಾಗಿ ವಿಂಗಡಿ ಸುವ ಉದ್ದೇಶವನ್ನೇ ಹೊಂದಿತ್ತು. ಈ ಆಯೋಗದ ಪ್ರಸ್ತಾವನೆಗೆ ಅರಬ್ ರಾಷ್ಟ್ರಗಳಷ್ಟೇ ಅಲ್ಲ, ಭಾರತವೂ ವಿರೋಧವನ್ನು ವ್ಯಕ್ತಪಡಿಸಿತ್ತು. ಈ ಪ್ರಸ್ತಾವನೆಯ  ಪ್ರಕಾರ ಒಟ್ಟು ಫೆಲೆಸ್ತೀನ್ ಭೂಭಾಗದ 32% ಭೂಮಿಯಲ್ಲಿ ಇಸ್ರೇಲ್ ರಾಷ್ಟ್ರ ಸ್ಥಾಪನೆಯಾಗಬೇಕಿತ್ತು. ಈ ನಡುವೆ 1948 ಮೇ 14ರಂದು  ಏಕಾಏಕಿ ಸ್ವತಂತ್ರ ಇಸ್ರೇಲ್ ರಾಷ್ಟ್ರ ಸ್ಥಾಪನೆಯ ಘೋಷಣೆಯಾಯಿತು. ಇದರ ವಿರುದ್ಧ ಅರಬ್ ರಾಷ್ಟ್ರಗಳು ಸಿಡಿದು ನಿಂತವು. 1949ರಲ್ಲಿ ಪ್ರಥಮ  ಇಸ್ರೇಲ್-ಅರಬ್ ಯುದ್ಧ ನಡೆಯಿತು ಮತ್ತು ಅಮೇರಿಕ ಮತ್ತು ಅದರ ಬೆಂಬಲಿಗರ ನೆರವಿನಿಂದ ಇಸ್ರೇಲ್ ಆ ಯುದ್ಧದಲ್ಲಿ ಜಯಶಾಲಿಯಾಯಿತು. ಮಾತ್ರವಲ್ಲ, ವಿಶ್ವಸಂಸ್ಥೆ ಪ್ರಸ್ತಾಪ ಮಾಡಿದ್ದ 32% ಭೂಮಿಯ ಬದಲಾಗಿ ಇನ್ನೂ 22% ಹೆಚ್ಚುವರಿ ಭೂಮಿಯನ್ನು ಅದು ವಶ ಪಡಿಸಿಕೊಂಡಿತು. 1967ರ ಎರಡನೇ ಇಸ್ರೇಲ್-ಅರಬ್ ಯುದ್ಧವಂತೂ ಫೆಲೆಸ್ತೀನ್‌ಗೆ ಇನ್ನಷ್ಟು ಹಾನಿಯನ್ನು ಉಂಟು ಮಾಡಿತು. ಆರು ದಿನಗಳ  ಕಾಲ ನಡೆದ ಈ ಯುದ್ಧದಲ್ಲಿ ಪಶ್ಚಿಮ ದಂಡೆ, ಪಶ್ಚಿಮ ಜೆರುಸಲೇಮ್, ಗಾಝಾ ಪಟ್ಟಿ ಮತ್ತು ಸಿರಿಯದ ವಶದಲ್ಲಿದ್ದ ಗೋಲಾನ್ ಬೆಟ್ಟವನ್ನೂ ವಶಪಡಿಸಿಕೊಂಡು ಇಸ್ರೇಲ್ ವಿಶಾಲ ರಾಷ್ಟ್ರವಾಗಿ ಮಾರ್ಪಟ್ಟಿತು. ಈ ಯುದ್ಧವನ್ನು ಗೆಲ್ಲಿಸಿಕೊಟ್ಟದ್ದೂ ಅಮೇರಿಕ ಮತ್ತು ಅದರ  ಮಿತ್ರ ರಾಷ್ಟ್ರಗಳೇ.

 1993 ಮತ್ತು 1995ರಲ್ಲಿ ಇಸ್ರೇಲ್ ಪ್ರಧಾನಿ ಇಝಾಕ್ ರಬಿನ್ ಮತ್ತು ಫೆಲೆಸ್ತೀನ್ ಲಿಬರೇಶನ್ ಆರ್ಗನೈಝೇಶನ್‌ನ ಮುಖ್ಯಸ್ಥ  ಯಾಸಿರ್ ಅರಫಾತ್‌ರ ನಡುವೆ ಐತಿಹಾಸಿಕ ಓಸ್ಲೋ ಒಪ್ಪಂದ ನಡೆಯಿತು. ಎರಡು ಸ್ವತಂತ್ರ ರಾಷ್ಟ್ರಗಳ ಸ್ಥಾಪನೆಯನ್ನು ಅನುಮೋದಿಸಿದ ಒಪ್ಪಂದ ಎಂಬ ನೆಲೆಯಲ್ಲಿ ಇದಕ್ಕೆ ಬಹಳ ಪ್ರಾಮುಖ್ಯತೆ ಲಭಿಸಿತು. ದುರಂತ ಏನೆಂದರೆ,

ಈ ಒಪ್ಪಂದವನ್ನು ಪ್ರಬಲವಾಗಿ ವಿರೋಧಿಸಿದ್ದು ಯಹೂದಿ ಉಗ್ರವಾದಿಗಳು. ಈ ಒಪ್ಪಂದಕ್ಕೆ ಸಹಿ ಹಾಕಿದ ಪ್ರಧಾನಿ ಇಝಾಕ್ ರಬಿನ್‌ರನ್ನು  1995ರಲ್ಲಿ ಈ ಉಗ್ರವಾದಿಗಳು ಹತ್ಯೆ ಮಾಡಿದರು. ಮಾತ್ರವಲ್ಲ, ಮುಂದಿನ ಚುನಾವಣೆಯಲ್ಲಿ ಅವರ ಲೇಬರ್ ಪಾರ್ಟಿಯನ್ನು ಇಸ್ರೇಲಿನ  ಮತದಾರರು ಸೋಲಿಸಿದರಲ್ಲದೇ ಬಲಪಂಥೀಯ ತೀವ್ರವಾದಿ ನಿಲುವಿನ ಬೆಂಜಮಿನ್ ನೆತನ್ಯಾಹು ಅವರ ಲಿಕುಡ್ ಪಕ್ಷವನ್ನು ಗೆಲ್ಲಿಸಿದರು.  ಆದರೆ, ಓಸ್ಲೋ ಒಪ್ಪಂದಕ್ಕೆ ಸಹಿ ಹಾಕಿದ ಯಾಸಿರ್ ಅರಫಾತ್‌ರ ಬಗ್ಗೆ ಫೆಲೆಸ್ತೀನ್‌ನಲ್ಲಿ ವಿರೋಧ ಇತ್ತಾದರೂ ಮತ್ತು ವಿಶೇಷವಾಗಿ ಹಮಾಸ್  ಈ ಒಪ್ಪಂದವನ್ನು ತಿರಸ್ಕರಿಸಿತ್ತಾದರೂ ಅದು ಎಂದೂ ಯಾಸಿರ್ ಅರಫಾತ್‌ರನ್ನು ಹತ್ಯೆ ಮಾಡುವುದು ಬಿಡಿ, ಅವರಿಗೆ ಸಣ್ಣ ಮಟ್ಟದ ಹಲ್ಲೆ   ಮಾಡುವುದಕ್ಕೂ ಮುಂದಾಗಲಿಲ್ಲ. ಒಂದುರೀತಿಯಲ್ಲಿ, ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗಲೇಬಾರದೆಂಬ ಉಗ್ರ ನಿಲುವಿನ ಯಹೂದಿಗಳಿಗೆ  ಹೋಲಿಸಿದರೆ ಫೆಲೆಸ್ತೀನಿಯರು ಉದಾರವಾದಿಗಳಾಗಿದ್ದರು. 1967ಕ್ಕಿಂತ ಮೊದಲಿನ ಗಡಿ ರೇಖೆಯ ಆಧಾರದಲ್ಲಿ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ  ಸ್ಥಾಪನೆಗೆ ಅವರು ಸಿದ್ಧವಾಗಿದ್ದರು. ಆದರೆ ಇಸ್ರೇಲ್‌ನಲ್ಲಿ ಇಂಥ ವಾತಾವರಣವೇ ಇದ್ದಿರಲಿಲ್ಲ. ಫೆಲೆಸ್ತೀನ್ ಭೂಮಿಯಲ್ಲಿ ಇಸ್ರೇಲ್ ರಾಷ್ಟ್ರವೊಂದೇ  ಇರಬೇಕು ಮತ್ತು ಫೆಲೆಸ್ತೀನಿಯರು ತಮ್ಮಿಂದ ಆಳಿಸಿಕೊಂಡಿರಬೇಕು ಎಂಬ ಮನಸ್ಥಿತಿ ನೇತನ್ಯಾಹು ಮತ್ತು ಅವರನ್ನು ಬೆಂಬಲಿಸುವವರದ್ದಾಗಿದೆ.  ಆದ್ದರಿಂದ, ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣಕ್ಕೆ ಅಡ್ಡಿಯಾಗಿರುವುದು ಹಮಾಸೂ ಅಲ್ಲ ಅಥವಾ ಗಾಝಾದ ಸಶಸ್ತ್ರ  ಹೋರಾಟಗಾರರೂ  ಅಲ್ಲ, ತನ್ನ ಪಕ್ಕ ಇನ್ನೊಂದು ರಾಷ್ಟ್ರವನ್ನು ಇಸ್ರೇಲ್‌ನ ರಾಜಕೀಯ ನಾಯಕರು ಬಯಸುತ್ತಿಲ್ಲ. ಒಂದುವೇಳೆ, ಅವರು ಒಪ್ಪಿಕೊಂಡರೆ ಉಗ್ರವಾದಿಗಳ ಬೆದರಿಕೆಯಡಿ ಅವರು ಬದುಕಬೇಕಾಗುತ್ತದೆ. ಇನ್ನೊಂದು ಸಂಗತಿ ಏನೆಂದರೆ,

ಇಸ್ರೇಲ್‌ಗೆ ನಿರ್ದಿಷ್ಟ ಗಡಿಯೆಂಬುದೇ ಇಲ್ಲ. ಅದು ವಿಸ್ತರಣಾವಾದಿ ದೇಶ. 1948ರಲ್ಲಿ ಸ್ಥಾಪನೆಯಾಗುವಾಗಲೇ ಅದು ವಿಶ್ವಸಂಸ್ಥೆಯ ಭೂ ನಕ್ಷೆಯನ್ನು ಉಲ್ಲಂಘಿಸಿತ್ತು. ವಿಶ್ವಸಂಸ್ಥೆ ಹೇಳಿದುದಕ್ಕಿಂತ ಹೆಚ್ಚಿನ ಭೂಮಿಯನ್ನು ಆಗಲೇ ಅದು ವಶಪಡಿಸಿಕೊಂಡಿತ್ತು. 1967ರಲ್ಲಂತೂ ಫೆಲೆಸ್ತೀ ನಿನ ಐತಿಹಾಸಿಕ ಭೂಪ್ರದೇಶವನ್ನೆಲ್ಲ ವಶಪಡಿಸಿಕೊಂಡಿತು. 1970ರಿಂದ ಫೆಲೆಸ್ತೀನಿ ಭೂಭಾಗದಲ್ಲಿ ಅದು ಯಹೂದಿಯರಿಗಾಗಿ ಅಕ್ರಮ  ವಸತಿಯನ್ನು ನಿರ್ಮಿಸುತ್ತಲೇ ಬಂದಿದೆ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವು 1967ರ ಮೊದಲಿನ ಗಡಿ ಗುರುತಿನಂತೆ ಆಗಬೇಕು ಎಂದು ಫೆಲೆಸ್ತೀನಿಯರು ಆಗ್ರಹಿಸುತ್ತಿದ್ದರೂ ಇಸ್ರೇಲ್ ಅದಕ್ಕೆ ಒಪ್ಪಿಕೊಳ್ಳು ತ್ತಿಲ್ಲ. ಯಾಕೆಂದರೆ, 1970ರಿಂದ ಅದು ಫೆಲೆಸ್ತೀನ್ ಭೂಭಾಗವಾದ ಪಶ್ಚಿಮ ದಂಡೆ  ಮತ್ತು ಪಶ್ಚಿಮ ಜೆರುಸಲೇಮ್‌ನಲ್ಲಿ 7 ಲಕ್ಷ ಯಹೂದಿಯರನ್ನು ಅಕ್ರಮವಾಗಿ ತಂದು ಕೂರಿಸಿದೆ. ಒಂದುವೇಳೆ, 1967ರ ಮೊದಲಿನ ಸ್ಥಿತಿಗೆ  ಇಸ್ರೇಲ್ ಮರಳಬೇಕಾದರೆ ಮತ್ತು ಅದೇ ಗಡಿ ಗುರುತಿನೊಂದಿಗೆ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಒಪ್ಪಿಕೊಳ್ಳಬೇಕಾದರೆ ಈ 7 ಲಕ್ಷ ಯಹೂದಿಯರನ್ನು ಹೊರದಬ್ಬಬೇಕಾಗುತ್ತದೆ ಅಥವಾ 1967ರ ಮೊದಲಿದ್ದ ಇಸ್ರೇಲ್ ಎಂಬ ಭೂಭಾಗದೊಳಗೆ ಇವರನ್ನೆಲ್ಲಾ ಕರೆಸಿಕೊಳ್ಳಬೇಕಾಗುತ್ತದೆ.  ಆದರೆ, ಇದು ಸುಲಭ ಅಲ್ಲ. ಈ 7 ಲಕ್ಷ ಜನಸಂಖ್ಯೆ ಎಂಬುದು ಇಸ್ರೇಲ್ ರಾಜಕೀಯದ ಮಟ್ಟಿಗೆ ಅತ್ಯಂತ ಪ್ರಭಾವಶಾಲಿ ಸಂಖ್ಯೆಯಾಗಿದೆ.  ಇವರ ವಿರೋಧವನ್ನು ಕಟ್ಟಿಕೊಳ್ಳಲು ಇಸ್ರೇಲಿನ ಯಾವುದೇ ರಾಜಕೀಯ ಪಕ್ಷ ಸಿದ್ಧವಾಗಲಾರದು. ಹಾಗೆಯೇ,

1948ರಲ್ಲಿ ಇಸ್ರೇಲ್ ಸ್ಥಾಪನೆಯ ಸಂದರ್ಭದಲ್ಲಿ ಯಹೂದಿ ಸಶಸ್ತ್ರ  ದಳವು ವ್ಯಾಪಕ ಹಿಂಸಾಚಾರ ನಡೆಸಿತ್ತಲ್ಲದೇ, ಲಕ್ಷಾಂತರ ಫೆಲೆಸ್ತೀನಿಯರನ್ನು  ತಮ್ಮ ನೆಲದಿಂದ ಓಡಿಸಿ ವಿಶ್ವಸಂಸ್ಥೆ ನಿಗದಿಪಡಿಸಿದ ಭೂಮಿಗಿಂತಲೂ ನೂರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು. ಹೀಗೆ ಸುಮಾರು  7 ಲಕ್ಷ ಫೆಲೆಸ್ತೀನಿಯರು ನಿರಾಶ್ರಿತರಾಗಿ ಬದುಕು ಸಾಗಿಸುತ್ತಿದ್ದಾರೆ. ಅವರೆಲ್ಲರಿಗೂ ಮರಳುವ ಅವಕಾಶ ಸಿಗಬೇಕು ಎಂಬುದು ಅಂತಾರಾಷ್ಟ್ರೀಯ  ಕಾನೂನು ಹೇಳುತ್ತದೆ. ಆದರೆ, ಫೆಲೆಸ್ತೀನಿ ನಿರಾಶ್ರಿತರು ತಾಯ್ನಾಡಿಗೆ ಮರಳುವುದಕ್ಕೆ ಇಸ್ರೇಲ್ ಒಪ್ಪಿಕೊಳ್ಳುತ್ತಿಲ್ಲ. ಹಾಗೆಯೇ, ಅಲ್ ಅಕ್ಸಾ  ಮಸೀದಿ ಒಳಗೊಂಡ ಜೆರುಸಲೇಮ್ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ದ ರಾಜಧಾನಿಯಾಗಬೇಕು ಎಂಬುದು ಫೆಲೆಸ್ತೀನಿಯರ ವಾದವಾಗಿದೆ. ಆದರೆ,  ಇಸ್ರೇಲ್ ಅದಕ್ಕೂ ಸಮ್ಮತಿಸುತ್ತಿಲ್ಲ.

2023 ನವೆಂಬರ್‌ನಲ್ಲಿ ಇಸ್ರೇಲ್ ಮೇಲೆ ಹಮಾಸ್ ದಾಳಿ ಮಾಡಿದ ಬಳಿಕದಿಂದ ಗಾಝಾದಲ್ಲಿ ಆಗಿರುವ ಜೀವಹಾನಿ ಮತ್ತು ಆರ್ಥಿಕ ನಷ್ಟದ  ಚರ್ಚೆಗಳ ನಡುವೆಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯ ಕುರಿತೂ ಬಲವಾದ ಕೂಗು ಕೇಳಿಬರುತ್ತಿದೆ. ಒಂದಲ್ಲ ಒಂದು ದಿನ ತಮ್ಮ ಕ ನಸಿನ ರಾಷ್ಟ್ರ ಸ್ಥಾಪನೆಯ ಬಗ್ಗೆ ಫೆಲೆಸ್ತೀನಿಯರು ಆಶಾವಾದಿಗಳಾಗಿದ್ದಾರೆ. ಅಮೇರಿಕ ಸಹಿತ ಬಲಾಢ್ಯ ರಾಷ್ಟ್ರಗಳೆಲ್ಲ ಇಸ್ರೇಲ್‌ನ ಬೆನ್ನಿಗಿದ್ದೂ  ಫೆಲೆಸ್ತೀನಿಯರು ತಮ್ಮ ಹೋರಾಟ ಮನೋಭಾವದಲ್ಲಿ ರಾಜಿ ಮಾಡಿಕೊಳ್ಳುತ್ತಿಲ್ಲ. ಜೊತೆಜೊತೆಗೇ ಫೆಲೆಸ್ತೀನ್ ಅಕ್ಕಪಕ್ಕದ ರಾಷ್ಟ್ರಗಳ ಸಹಿತ  ಅರಬ್ ರಾಷ್ಟ್ರಗಳ ಗಾಢ ಮೌನವೂ ಆಯಾ ರಾಷ್ಟ್ರಗಳ ನಾಗರಿಕರಲ್ಲಿ ಆಕ್ರೋಶವನ್ನು ಉಂಟು ಮಾಡುತ್ತಿದೆ. 2023 ನವೆಂಬರ್‌ನಲ್ಲಿ ಹಮಾಸ್  ನಡೆಸಿರುವ ದಾಳಿಯನ್ನು ಯಾರೂ ಬೆಂಬಲಿಸುತ್ತಿಲ್ಲವಾದರೂ ಆ ದಾಳಿಯು ಜಾಗತಿಕವಾಗಿಯೇ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ನಿರ್ಮಾಣದ ಬಗ್ಗೆ  ಗಂಭೀರ ಚರ್ಚೆಯೊಂದಕ್ಕೆ ಕಾರಣವಾಗಿದೆ ಎಂಬುದಂತೂ  ಸ್ಪಷ್ಟ.

Monday, 3 June 2024

ಮರ್ದಕರೇ, ಮರ್ದಿತರ ಪ್ರಾರ್ಥನೆಯನ್ನು ಕಡೆಗಣಿಸದಿರಿ...

 




ಮರ್ದಿತರಿಗೂ ದೇವನಿಗೂ ನಡುವೆ ಪರದೆಗಳಿಲ್ಲ ಎಂಬುದು ಇಸ್ಲಾಮಿನ ನಿಲುವು. ಅಧಿಕಾರದ ಮದದಿಂದಲೋ ಧರ್ಮದ್ವೇಷದ ವ್ಯಸನದಿಂದಲೋ ಅಥವಾ ಹಣಬಲ, ತೋಳ್ಬಲ, ಜಾತಿಬಲದ ಮೇಲ್ಮೆಯಿಂದಲೋ ದುರ್ಬಲರ ಮೇಲೆ ಅನ್ಯಾಯ ಎಸಗುವವರನ್ನು ಎಚ್ಚರಿಸುವುದಕ್ಕಾಗಿಯೇ ಬಂದಿರುವ ಸೂಚನೆ ಇದು. ಮರ್ದಿತರು ದೇವನಲ್ಲಿ ಪ್ರಾರ್ಥಿಸಿದರೆ ತಕ್ಷಣ ಅವರ ಪ್ರಾರ್ಥನೆಯನ್ನು ದೇವನು ಆಲಿಸುತ್ತಾನೆ, ಅಲ್ಲಿ ಪರದೆಯೇ ಇರುವುದಿಲ್ಲ ಎಂಬುದಾಗಿ ಇಲ್ಲಿ ಮರ್ದಕರಿಗೆ ಎಚ್ಚರಿಕೆ ನೀಡಲಾಗಿದೆ. ಹಾಗಂತ, ಮರ್ದಿತರು ಎಂಬ ಪದಕ್ಕೆ  ಇಸ್ಲಾಮ್ ಯಾವುದೇ ಜಾತಿ, ಧರ್ಮ, ಭಾಷೆ, ಲಿಂಗವನ್ನು ಅಂಟಿಸಿಲ್ಲ. ಅದು ಧರ್ಮಾತೀತ, ದೇಶಾತೀತ, ಭಾಷಾತೀತ ಪದ. ಅನ್ಯಾಯಕ್ಕೆ  ಒಳಗಾಗುವ ಸರ್ವರೂ ಆ ಚೌಕಟ್ಟಿನೊಳಗೆ ಬರುತ್ತಾರೆ. ಇಂಥವರ ಸಂಖ್ಯೆಯೇ ಜಗತ್ತಿನಲ್ಲಿ ಅತ್ಯಧಿಕವಿದೆ ಎಂಬುದೂ ಗಮನಾರ್ಹ. ಇದೀಗ  ಇಂಥದ್ದೇ  ಒಂದು ಚರ್ಚೆಗೆ ಉಡುಪಿ ಬಿಜೆಪಿಯ ಮಾಜಿ ಶಾಸಕ ರಘುಪತಿ ಭಟ್ ಚಾಲನೆ ನೀಡಿದ್ದಾರೆ. ಹಿಜಾಬ್ ವಿವಾದ ನನ್ನ ಸೃಷ್ಟಿಯಲ್ಲ  ಎಂದವರು ಹೇಳಿದ್ದಾರೆ. ಅದರಲ್ಲಿ ತನ್ನ ಪಾತ್ರವಿಲ್ಲ ಎಂಬಂತೆ ಹೇಳಿಕೆ ನೀಡಿದ್ದಾರೆ. ಆದರೆ,

ಹಿಜಾಬ್ ವಿವಾದದ ಸಮಯದಲ್ಲಿ ಉಡುಪಿಯ ಶಾಸಕರಾಗಿದ್ದವರು ಇದೇ ರಘುಪತಿ ಭಟ್. ಹಿಜಾಬ್ ವಿವಾದಕ್ಕೆ ಕಾರಣವಾದ ಉಡುಪಿ  ಮಹಿಳಾ ಕಾಲೇಜಿನ ಆಡಳಿತ ಸಮಿತಿಯ ಚೇರ್ಮನ್ಗಿ ಆಗಿದ್ದವರೂ ಇದೇ ರಘುಪತಿ ಭಟ್. ಹಿಜಾಬ್ ವಿವಾದ ಎಂಬ ಹೆಸರಲ್ಲಿ ಖಳರಂತೆ  ಬಿಂಬಿಸಲಾದ ಆ ಹೆಣ್ಮಕ್ಕಳು ಬುರ್ಖಾ ಹಾಕುತ್ತೇವೆಂದೋ ಮುಖ ಮುಚ್ಚುವ ನಕಾಬ್ ಧರಿಸುತ್ತೇವೆಂದೋ ಹೇಳಿರಲಿಲ್ಲ. ಸಮವಸ್ತ್ರದ  ಭಾಗವಾಗಿ ಕುತ್ತಿಗೆಯಲ್ಲಿರುವ ಶಾಲನ್ನು ತಲೆಗೆ ಹಾಕುವುದಕ್ಕೆ ಅನುಮತಿ ಕೊಡಿ ಎಂದಷ್ಟೇ ವಿನಂತಿಸಿದ್ದರು. ‘ಸರಿ ಹಾಕ್ಕೊಳ್ಳಿ’ ಎಂದು ಹೇಳಿ  ಮುಗಿಸಬಹುದಾಗಿದ್ದ ತೀರಾತೀರಾ ಸಾಮಾನ್ಯ ಸಂಗತಿಯೊಂದು ರಾಜ್ಯದ ಶಾಲಾ-ಕಾಲೇಜುಗಳನ್ನೇ ಬಂದ್ ಮಾಡಿಡಬೇಕಾದಷ್ಟು ತೀವ್ರರೂಪಕ್ಕೆ  ಯಾಕೆ ಹೊರಳಿತು ಎಂಬುದನ್ನು ಅವರು ವಿವರಿಸಿಲ್ಲ. ‘ಹಿಜಾಬ್ ವಿವಾದ ತನ್ನ ಸೃಷ್ಟಿಯಲ್ಲ ಮತ್ತು ಅದರಲ್ಲಿ ತಾನಿಲ್ಲ’ ಎಂಬ ಅವರ ಮಾತು  ಇನ್ನಾರದೋ ಕಡೆಗೆ ಕೈ ತೋರಿಸುತ್ತದೆ. ಅವರು ಯಾರು? ಶಾಸಕನನ್ನೂ ಮೀರಿ ಅಲ್ಲಿ ಅಧಿಕಾರ ಚಲಾಯಿಸಿದವರು ಯಾರು? ಆ ಹೆಣ್ಮಕ್ಕಳ  ಬೇಡಿಕೆಯನ್ನು ತಿರಸ್ಕರಿಸುವುದರಿಂದ ಯಾರಿಗೆ ಲಾಭ ಇತ್ತು? ಆ ಲಾಭ ಏನು? ಶಾಸಕನಾಗಿಯೂ ರಘುಪತಿ ಭಟ್ ಇವೆಲ್ಲವನ್ನೂ ನೋಡಿ  ಸುಮ್ಮನಿರಲು ಕಾರಣವೇನು? ರಾಜಕೀಯ ಲೆಕ್ಕಾಚಾರವೇ? ಅಸಾಮರ್ಥ್ಯವೇ? ನಿಜವಾಗಿ,

ಹಿಜಾಬ್ ವಿವಾದದಿಂದ ಕಳಚಿಕೊಳ್ಳಲು ಪ್ರಯತ್ನಿಸುತ್ತಿರುವ ರಘುಪತಿ ಭಟ್ರು, ವಿವಾದದ ಸಮಯದಲ್ಲಿ ಶಾಸಕರಾಗಿ ಕರ್ತವ್ಯ ನಿಭಾಯಿಸಿರಲಿಲ್ಲ  ಎಂಬುದಕ್ಕೆ ಆಧಾರಗಳೇ ಬೇಕಿಲ್ಲ. ಆ ವಿವಾದವನ್ನು ಅಲ್ಲಿಗೇ ಮುಗಿಸುವ ಮತ್ತು ಆ ಹೆಣ್ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ನಿಲ್ಲುವ ಎಲ್ಲ ಅವಕಾಶಗಳೂ ಅವರಿಗಿದ್ದುವು. ಆದರೆ, ಅವರು ಹಾಗೆ ಮಾಡಲಿಲ್ಲ. ಅದಕ್ಕೆ ರಾಜಕೀಯ ಕಾರಣಗಳಿದ್ದುವು. ಅದನ್ನು ಎದುರಿಸಿ ನಿಲ್ಲುವ ನಿಷ್ಠುರತೆಯನ್ನು  ಅವರು ಪ್ರದರ್ಶಿಸಲಿಲ್ಲ. ಅದಕ್ಕೂ ರಾಜಕೀಯ ಲೆಕ್ಕಾಚಾರವೇ ಕಾರಣವಾಗಿತ್ತು. ಮುಂದಿನ ಚುನಾವಣೆಯಲ್ಲಿ ತನ್ನ ಗೆಲುವಿಗೆ ಈ ವಿವಾದ  ಮೆಟ್ಟಿಲಾದೀತು ಎಂದವರು ಭಾವಿಸಿರುವ ಸಾಧ್ಯತೆಯೂ ಇದೆ. ಅಥವಾ ಅವರನ್ನು ಹಾಗೆ ಮನವೊಲಿಸಿರಲೂ ಬಹುದು. ಅಥವಾ ಪಕ್ಷದ ಉನ್ನತ  ನಾಯಕರು ಅವರಿಗೆ ಅಂಥ ಆದೇಶ ನೀಡಿರಲೂ ಬಹುದು. ಆದರೆ, ಆ ಬಳಿಕದ ಪರಿಸ್ಥಿತಿ ಎಷ್ಟು ಬದಲಾಯಿತೆಂದರೆ, ಪಕ್ಷ ಅವರನ್ನೇ  ಕಡೆಗಣಿಸಿತು. ಅವರಿಗೆ ಪಕ್ಷ ವಿಧಾನಸಭಾ ಟಿಕೇಟನ್ನೇ ನಿರಾಕರಿಸಿತು. ಒಂದುಕಡೆ, ಅವರನ್ನು ಭರಪೂರ ಬಳಸಿಕೊಂಡ ಅವರ ಪಕ್ಷ ಇನ್ನೊಂದು  ಕಡೆ ಅವರನ್ನು ತಿಪ್ಪೆಗೆಸೆಯಿತು. ಆದರೆ, ಆಗಲೂ ಅವರು ಹಿಜಾಬ್‌ನಲ್ಲಿ ತನ್ನ ಪಾತ್ರವಿಲ್ಲ ಎಂಬ ಹೇಳಿಕೆಯನ್ನು ಕೊಡಲಿಲ್ಲ. ಯಾಕೆಂದರೆ,  ಹಿಜಾಬ್ ವಿವಾದದಲ್ಲಿ ಅವರನ್ನು ಪಕ್ಷ ಹೇಗೆ ದುರುಪ ಯೋಗಪಡಿಸಿಕೊಂಡಿತೋ ಈ ಟಿಕೆಟ್ ನಿರಾಕರಣೆಯ ಬಳಿಕವೂ ಅವರಿಗೆ ಉನ್ನತ  ಹುದ್ದೆಯ ಆಮಿಷ ವನ್ನು ಒಡ್ಡಿತು. ಅದನ್ನು ಅವರು ನಂಬಿದರು ಮತ್ತು ಹಿಜಾಬ್ ವಿವಾದದಲ್ಲಿ ಅವರ ಪಾತ್ರದ ಬಗ್ಗೆ ಇರುವ ಆರೋಪಗಳಿಗೆ  ಉತ್ತರಿಸುವುದರಿಂದ ನುಣುಚಿಕೊಂಡರು. ಇದಾಗಿ ಎರಡು ವರ್ಷಗಳ ಬಳಿಕ ಇದೀಗ ಅವರನ್ನು ಪಕ್ಷದಿಂದಲೇ ಉಚ್ಛಾಟಿಸಲಾಗಿದೆ. ಪದವೀಧರ  ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದಕ್ಕಾಗಿ ಈ ಶಿಕ್ಷೆ ನೀಡಲಾಗಿದೆ. ಇದೀಗ ಅವರು  ಎರಡು ವರ್ಷಗಳ ಹಿಂದಿನ ವಿವಾದದ ಅಸಲಿ ಕತೆಯನ್ನು ಹೇಳಿಕೊಂಡಿದ್ದಾರೆ. ಒಂದುರೀತಿಯಲ್ಲಿ,

ಇದೊಂದು ಬಗೆಯ ಆತ್ಮಾವಲೋಕನ. ರಾಜಕೀಯದಲ್ಲಿ ಸಕ್ರಿಯರಾಗಿದ್ದೂ ಮತ್ತು ಗೆಲ್ಲುವ ಎಲ್ಲ ಅವಕಾಶಗಳಿದ್ದೂ ಅನಿರೀಕ್ಷಿತವಾಗಿ ಟಿಕೆಟ್ ಕೈ  ತಪ್ಪುವುದು ಮತ್ತು ತನ್ನ ಸುತ್ತಲಿದ್ದವರೆಲ್ಲ ಮಾಯವಾಗಿ ತಾನು ಒಂಟಿಯಾಗುವುದನ್ನೆಲ್ಲ ಜೀರ್ಣಿಸಿಕೊಳ್ಳುವುದು ರಘುಪತಿ ಭಟ್ ಸಹಿತ ಯಾವ  ರಾಜಕಾರಣಿಗಳಿಗೂ ಸುಲಭ ಅಲ್ಲ. ಇಂಥ ಸ್ಥಿತಿ ಅವರನ್ನು ದಿನೇ ದಿನೇ ಸುಡುತ್ತಿರುತ್ತದೆ. ಇದೀಗ ಪಕ್ಷದಿಂದಲೇ ಉಚ್ಛಾಟಿಸಲಾದ  ಬಳಿಕವಂತೂ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿರಬಹುದು. ಹಾಗಂತ, ಇದು ರಘುಪತಿ ಭಟ್ ಒಬ್ಬರ ಸಮಸ್ಯೆಯಲ್ಲ. ಈಶ್ವರಪ್ಪ ಕೂಡ ಇವರದ್ದೇ   ಸ್ಥಿತಿಯಲ್ಲಿದ್ದಾರೆ. ಅವರನ್ನು ಪಕ್ಷದಿಂದ ಉಚ್ಛಾಟಿಸ ಲಾಗಿದೆ. ಅವರದ್ದು ಉರಿನಾಲಗೆ. ಮುಸ್ಲಿಮ್ ಸಮುದಾಯವನ್ನು ಮತ್ತು ಅವರ ಅಸ್ಮಿತೆಯ ನ್ನು ಸಂದರ್ಭ ಸೃಷ್ಟಿಸಿಕೊಂಡೇ ಪ್ರಶ್ನಿಸುತ್ತಿದ್ದವರು ಈಶ್ವರಪ್ಪ. ಬಹಿರಂಗ ಭಾಷಣದಲ್ಲಿ ಅವರು ಅದಾನನ್ನು ತಮಾಷೆ ಮಾಡಿದ್ದರು. ಮುಸ್ಲಿಮರನ್ನು  ವಿನಾ ಕಾರಣ ಆಡಿಕೊಳ್ಳುವುದು ಮತ್ತು ಸಭಿಕರಲ್ಲಿ ಆವೇಶವನ್ನು ಹುಟ್ಟಿಸುವುದು ಅವರ ಚಾಳಿಯಾಗಿತ್ತು. ಅವರಿಗೂ ಕಳೆದ ವಿಧಾನಸಭಾ ಚು ನಾವಣೆಯಲ್ಲಿ ಟಿಕೆಟ್ ಸಿಗಲಿಲ್ಲ. ಬಳಿಕ ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದರು ಮತ್ತು ಪಕ್ಷದಿಂದಲೇ  ಉಚ್ಚಾಟನೆಗೊಂಡರು. ಇದೀಗ ಅವರೂ ಒಂಟಿ. ರಸ್ತೆಗಿಳಿದರೆ ಸಾಕು ಅಭಿಮಾನಿಗಳ ದಂಡೇ ಸೇರುತ್ತಿದ್ದ ಅವರನ್ನು ಈಗ ಯಾರೂ ಹತ್ತಿರ  ಸೇರಿಸಿಕೊಳ್ಳುತ್ತಿಲ್ಲ. ಅವರ ಹೇಳಿಕೆಗಳಿಗೆ ಮಾಧ್ಯಮಗಳಲ್ಲಿ ಕವರೇಜೂ ಸಿಗುತ್ತಿಲ್ಲ. ಇಂಥ ದಯನೀಯ ಸ್ಥಿತಿಯನ್ನು ಇವತ್ತು ಎದುರಿಸುತ್ತಿರುವರಲ್ಲಿ  ಅನಂತ್ ಕುಮಾರ್ ಹೆಗಡೆ, ನಳಿನ್ ಕುಮಾರ್ ಕಟೀಲ್, ಸಿಟಿ ರವಿಯಂಥ ಹಲವು ರಾಜ್ಯ ನಾಯಕರಿದ್ದಾರೆ. ರಾಷ್ಟçಮಟ್ಟದಲ್ಲಿ ಇನ್ನೂ ಅ ನೇಕರಿದ್ದಾರೆ. ಕಾರಣವೇ ಇಲ್ಲದೇ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಮತ್ತು ಮುಸ್ಲಿಮರ ಆಚಾರ-ಸಂಸ್ಕೃತಿಯನ್ನು ವ್ಯಂಗ್ಯವಾಗಿ ಆಡಿಕೊಳ್ಳುವ  ಇವರೆಲ್ಲ ಇವತ್ತು ಬಹುತೇಕ ಒಂಟಿಯಾಗಿದ್ದಾರೆ. ಅಧಿಕಾರ ಬಲ ಇದ್ದಾಗ ಅಮಲೇರಿಸಿಕೊಂಡವರು ಅಧಿಕಾರ ನಷ್ಟವಾದಾಗ ಅದನ್ನು  ಜೀರ್ಣಿಸಿಕೊಳ್ಳಲೂ ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ. ಅಂದಹಾಗೆ,

ಅನ್ಯಾಯಕ್ಕೆ ಒಳಗಾದವರು ಬೇರೆ ದಾರಿಯೇ  ಕಾಣದಾದಾಗ ಮತ್ತು ತಮಗಾರೂ ಇಲ್ಲ ಎಂಬ ಭಾವುಕತೆಗೆ ಒಳಗಾದಾಗ ಮಾಡುವ ಪ್ರಾರ್ಥನೆ  ಅತ್ಯಂತ ಅಪಾಯಕಾರಿ ಎಂಬುದು ಐತಿಹಾಸಿಕವಾಗಿ ಅನೇಕ ಬಾರಿ ರುಜುವಾತಾಗಿದೆ. ದೇವರು ಅಂಥ ಪ್ರಾರ್ಥನೆಯನ್ನು ಆಲಿಸುತ್ತಾನೆ  ಎಂಬುದು ಇಸ್ಲಾಮಿನ ಬೋಧನೆಯೂ ಆಗಿದೆ. ಸಂತ್ರಸ್ತರ ಪಾಲಿನ ಕೊನೆಯ ಆಯುಧವೇ ಪ್ರಾರ್ಥನೆ. ಹಾಗಂತ, ಅನ್ಯಾಯ ಎಸಗಿದವರು  ಮತ್ತು ಪರಮ ಕ್ರೂರಿಗಳು ಯಾವ ಶಿಕ್ಷೆಗೂ ಒಳಗಾಗದೇ ತುಂಬು ಬಾಳುವೆ ನಡೆಸಿ ಹೊರಟು ಹೋಗಿಲ್ಲವೇ ಎಂಬ ಪ್ರಶ್ನೆ ಇರಬಹುದು.  ಬಾಹ್ಯನೋಟಕ್ಕೆ ನಮಗೆ ಅವರು ಚೆನ್ನಾಗಿದ್ದಾರೆಂದು ಕಂಡರೂ ಆಂತರಿಕವಾಗಿ ಅವರ ಸ್ಥಿತಿ ಏನು ಅನ್ನುವುದು ನಮಗೆ ಗೊತ್ತಿರುವುದಿಲ್ಲ. ಅವರ  ಶಾರೀರಿಕ ಹಾಗೂ ಮಾನಸಿಕ ತೊಂದರೆಗಳು ಹೊರಜಗತ್ತಿಗೆ ಗೊತ್ತಾಗಬೇಕೆಂದೇನೂ ಇಲ್ಲ. ಅದರಾಚೆಗೆ, ಮರ್ದಕರನ್ನು ಪರಲೋಕದಲ್ಲಿ  ವಿಚಾರಣೆಗೊಳಪಡಿಸಿ ಕಠಿಣ ಶಿಕ್ಷೆ ನೀಡಲಾಗುವುದು ಎಂಬ ಸಂದೇಶವನ್ನೂ ಇಸ್ಲಾಮ್ ನೀಡುತ್ತದೆ. ಇಹಲೋಕದಲ್ಲಿ ಮರ್ದಕರು ತಕ್ಕ ಶಿಕ್ಷೆ ಅನುಭವಿಸುತ್ತಾರೋ ಇಲ್ಲವೋ ಆದರೆ ಪರಲೋಕದಲ್ಲಂತೂ ಅವರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಾರರು ಎಂಬುದೇ ಇಸ್ಲಾಮಿನ ಪ್ರಬಲ ನಿಲುವು.  ಆದ್ದರಿಂದ, ‘ದುರ್ಬಲರ ಮೇಲೆ ಸವಾರಿ ಮಾಡದಿರಿ, ಅವರ ಪ್ರಾರ್ಥನೆಗೆ ಅಪಾರ ಶಕ್ತಿಯಿದೆ..’ ಎಂದು ಇಸ್ಲಾಮ್ ಹೇಳುತ್ತದೆ. ರಘುಪತಿ ಭಟ್  ಮತ್ತು ಇನ್ನಿತರರ ಇಂದಿನ ಸ್ಥಿತಿಯು ಮರ್ದಕರ ಕಣ್ಣು ತೆರೆಸಲು ಧಾರಾಳ ಸಾಕು. ಹಾಗಂತ,

‘ಮರ್ದಕರು’ ಎಂಬ ಗುಂಪು ರಾಜಕೀಯದಲ್ಲಿ ಮಾತ್ರ ಇರುವುದಲ್ಲ ಮತ್ತು ಅವರು ನಿರ್ದಿಷ್ಟ ಧರ್ಮ, ಲಿಂಗ, ದೇಶಕ್ಕೆ ಸೀಮಿತರೂ ಅಲ್ಲ.  ಮರ್ದಕರು ಮತ್ತು ಮರ್ದಿತರು ಎಂಬ ಈ ಎರಡು ಗುಂಪಿನಲ್ಲಿ ಬಾಹ್ಯನೋಟಕ್ಕೆ ಮರ್ದಕರೇ ಮೇಲುಗೈ ಪಡೆದಂತೆ ಕಾಣಿಸುತ್ತಾರೆ. ಆದರೆ  ಮರ್ದಿತರ ಪ್ರಾರ್ಥನೆಗೆ ಮರ್ದಕರನ್ನು ಪಶ್ಚಾತ್ತಾಪಕ್ಕೆ ದೂಡುವ ಸಾಮರ್ಥ್ಯವಿದೆ ಎಂಬುದನ್ನು ಮರೆಯಬಾರದು.