Monday, 24 March 2025

ಕಾನೂನೊಂದೇ ವೃದ್ಧ ಹೆತ್ತವರಿಗೆ ಸುರಕ್ಪತೆಯನ್ನು ಒದಗಿಸಬಲ್ಲುದೇ?




ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುವ ವೃದ್ಧ ಹೆತ್ತವರಿಗೆ ಆಸರೆಯಾಗಲು ರಾಜ್ಯ ಸರಕಾರ ನಿರ್ಧರಿಸಿದೆ. ವಯಸ್ಸಾದ ತಂದೆ- ತಾಯಿಯಿಂದ ಆಸ್ತಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡ ಬಳಿಕ ಅವರನ್ನು ನಿರ್ಲಕ್ಷಿಸುವ ಮಕ್ಕಳಿಗೆ ಪಾಠವಾಗುವ  ಸಂದೇಶವನ್ನು ಸಚಿವ ಕೃಷ್ಣ ಭೈರೇಗೌಡ ನೀಡಿದ್ದಾರೆ. ಹೀಗೆ ಮಾಡುವ ಮಕ್ಕಳ ಹೆಸರಲ್ಲಿರುವ ವಿಲ್ ಅಥವಾ ದಾನಪತ್ರವ ನ್ನು ರದ್ದು ಮಾಡುವುದಕ್ಕೆ 2007ರಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ‘ಪೋಷಕರ ಕಲ್ಯಾಣ ಕಾಯ್ದೆ’ಯಲ್ಲಿ ಅವಕಾ ಶವಿದ್ದು, ಅದನ್ನು ಕಠಿಣವಾಗಿ ಜಾರಿ ಮಾಡಲಾಗುವುದು ಎಂದವರು ಹೇಳಿದ್ದಾರೆ. ಮುಖ್ಯವಾಗಿ ಬೆಳಗಾವಿ ಇನ್‌ಸ್ಟಿಟ್ಯೂಟ್  ಆಫ್ ಮೆಡಿಕಲ್ ಸೈನ್ಸ್ ಒಂದರಲ್ಲಿಯೇ ಹೀಗೆ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟ ಹೆತ್ತವರ ಸಂಖ್ಯೆ 150ಕ್ಕಿಂತಲೂ ಹೆಚ್ಚಿದೆ ಎಂದು  ವರದಿಯಿದೆ. ರಾಜ್ಯದ ಇನ್ನಿತರ ಆಸ್ಪತ್ರೆಗಳಲ್ಲಿ ಲೆಕ್ಕ ಹಾಕಿದರೆ ಈ ಸಂಖ್ಯೆ ಬಹಳ ದೊಡ್ಡದಿರಬಹುದು. ನಿಜವಾಗಿ,

ಪೋಷಕರ ಕಲ್ಯಾಣ ಕಾಯ್ದೆಯನ್ನು ಅತ್ಯಂತ ಬಿಗಿಯಾಗಿ ಜಾರಿಗೆ ತಂದ ಕೊಪ್ಪಳ ಉಪವಿಭಾಗಾಧಿ ಕಾರಿ ಸಿ.ಡಿ. ಗೀತಾ  ಅವರು 2019ರಲ್ಲಿ ಚರ್ಚೆಗೆ ಒಳಗಾಗಿದ್ದರು. ಕೊಪ್ಪಳದ ಗಂಗಾವತಿ ನಗರದ ಸತ್ಯನಾರಾಯಣ ಪೇಟೆಯ 68 ವರ್ಷದ  ಮನೋಹರ ದೇಸಾಯಿಯವರು ತಮ್ಮ ಹೆಸರಿನಲ್ಲಿದ್ದ 3 ಎಕರೆ ಭೂಮಿಯನ್ನು ಮಕ್ಕಳಾದ ರಾಘವೇಂದ್ರ, ಯೋಗೇಶ,  ವಿನಯ ದೇಸಾಯಿ ಅವರ ಹೆಸರಿಗೆ ವರ್ಗಾಯಿಸಿದ್ದರು. ಆದರೆ, ಆಸ್ತಿ ವರ್ಗಾವಣೆ ಆದ ಬಳಿಕ ಮಕ್ಕಳು ತಮ್ಮನ್ನು  ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ವೈದ್ಯಕೀಯ ಖರ್ಚು-ವೆಚ್ಚಗಳಿಗೆ ಹಣ ನೀಡುತ್ತಿಲ್ಲ, ತಾನು ಹೃದಯ ಸಂಬAಧಿ  ಕಾಯಿಲೆಯಿಂದ ಬಳಲುತ್ತಿದ್ದು, ಶಸ್ತçಚಿಕಿತ್ಸೆಗೆ ಹಣ ಬೇಕಾಗಿದೆ, ಆದರೆ ಮಕ್ಕಳು ಅದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿಲ್ಲ,  ಆದ್ದರಿಂದ ಮಕ್ಕಳ ಹೆಸರಿಗೆ ವರ್ಗಾಯಿಸಿರುವ ಭೂಮಿಯನ್ನು ಪುನಃ ನನಗೇ ನೀಡಬೇಕು ಎಂದವರು ಅರ್ಜಿ ಸಲ್ಲಿಸಿದ್ದರು.  ಇದನ್ನು ಆಲಿಸಿದ ಉಪ ವಿಭಾಗಾಧಿಕಾರಿ ಗೀತಾ ನೇತೃತ್ವದ ನ್ಯಾಯಮಂಡಳಿಯು ಪೋಷಕರ ಕಲ್ಯಾಣ ಕಾಯ್ದೆಯನ್ನು  ಬಳಸಿ ಆಸ್ತಿ ದಾನಪತ್ರವನ್ನು ರದ್ದು ಮಾಡಿ ಮನೋಹರ ದೇಸಾಯಿಯವರಿಗೆ ವರ್ಗಾಯಿಸಿತ್ತು. ಇದಾಗಿ 6 ವರ್ಷಗಳ  ಬಳಿಕ ರಾಜ್ಯ ಸರಕಾರ ಈ ಕಾಯ್ದೆಯ ಬಗ್ಗೆ ವಿಧಾನಸಭೆಯಲ್ಲೇ  ಉಲ್ಲೇಖಿಸಿ ಕಾನೂನು ಜಾಗೃತಿಯ ಪಾಠ ಮಾಡಿದೆ.  ಅಂದಹಾಗೆ,

ದೈಹಿಕವಾಗಿ ಶಕ್ತರಾಗಿರುವವರೆಗೆ ಸಮಸ್ಯೆಗಳು ಕಡಿಮೆ ಅಥವಾ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವ  ಧೈರ್ಯ ಮತ್ತು ಛಲ ವ್ಯಕ್ತಿಯಲ್ಲಿ ಇರುತ್ತದೆ. ಏನಿಲ್ಲವೆಂದರೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸುವ ಮೂಲಕ  ಸಾರ್ವಜನಿಕ ಗಮನ ಸೆಳೆಯುವುದಕ್ಕೆ ಅವಕಾಶ ಇರುತ್ತದೆ. ಮಾಧ್ಯಮಗಳ ಗಮನ ಸೆಳೆದು ತನ್ನ ಸಮಸ್ಯೆ ಸಾರ್ವಜನಿಕವಾಗಿ  ಚರ್ಚೆಯಾಗುವಂತೆ ನೋಡಿಕೊಳ್ಳುವುದಕ್ಕೂ ಸವಲತ್ತು ಇರುತ್ತದೆ. ಆದರೆ, ವೃದ್ಧರು ಹಾಗಲ್ಲ. ಈ ಯಾವ ಅವಕಾಶವನ್ನೂ  ಬಳಸಿಕೊಳ್ಳಲು ಸಾಧ್ಯವಾಗದಷ್ಟು ಅವರು ದುರ್ಬಲರಾಗಿರುತ್ತಾರೆ. ಒಂದು ಸಾರ್ವಜನಿಕ ಪ್ರತಿಭಟನೆ ಹಮ್ಮಿಕೊಳ್ಳುವುದಕ್ಕೆ  ಬೇಕಾದ ದೈಹಿಕ ಶಕ್ತಿಯಾಗಲಿ, ಸಂಪರ್ಕವಾಗಲಿ ಇರುವುದಿಲ್ಲ. ಈ ಅಸಾಮರ್ಥ್ಯವು ಅವರನ್ನು ಮಾನಸಿಕವಾಗಿ  ಕುಗ್ಗಿಸುತ್ತಿರುತ್ತದೆ. ತಮಗೆ ಎದುರಾಗುವ ಎಲ್ಲ ರೀತಿಯ ಕಿರುಕುಳ ಮತ್ತು ಹಿಂಸೆಯನ್ನೂ ಬಾಯಿ ಮುಚ್ಚಿ ಅ ನುಭವಿಸಬೇಕೆಂಬ ಭಾವವು ದಿನೇ ದಿನೇ ಅವರನ್ನು ಕಂಗಾಲುಗೊಳಿಸುತ್ತಿರುತ್ತದೆ. ಮನೆಗೆ ಬಂದವರಲ್ಲಿ ಈ ಸಂಕಟವನ್ನು  ಹೇಳಿಕೊಳ್ಳೋಣವೆಂದರೆ, ಎಲ್ಲಿ ಮಕ್ಕಳು ಹಗೆ ತೀರಿಸುತ್ತಾರೋ ಅನ್ನುವ ಭಯ. ಹೀಗೆ ಯಾರಲ್ಲೂ ಹೇಳಿಕೊಳ್ಳಲಾಗದ  ಮತ್ತು ಹೇಳದೆಯೂ ಇರಲಾಗದ ಸ್ಥಿತಿಯೊಂದು ವೃದ್ಧ ಹೆತ್ತವರz್ದÁಗಿರುತ್ತದೆ. ಈ ಬಗ್ಗೆ ಸರ್ವೇ ನಡೆಸಿರುವ ಹೆಲ್ಪ್ ಏಜ್  ಇಂಡಿಯಾವು 2022ರಲ್ಲಿ ಬಿಡುಗಡೆಗೊಳಿಸಿರುವ ವರದಿಯಲ್ಲಿ ಆಘಾತಕಾರಿ ಅಂಶಗಳಿವೆ. ಮುಖ್ಯವಾಗಿ,

ಈ ದೇಶದ ವೃದ್ಧ ಹೆತ್ತವರ ಪೈಕಿ 82% ಮಂದಿಯೂ ತಮ್ಮ ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಆದರೆ ಇವರಲ್ಲಿ 35% ವೃದ್ಧ  ಹೆತ್ತವರು ತಮ್ಮ ಗಂಡು ಮಕ್ಕಳಿಂದ ನಿಂದನೆಯನ್ನು ಎದುರಿಸುತ್ತಿದ್ದಾರೆ ಮತ್ತು 21% ವೃದ್ಧರು ತಮ್ಮ ಸೊಸೆಯಂದಿರಿಂದ   ನಿಂದನೆ ಮತ್ತು ಕಟು ಮಾತುಗಳನ್ನು ಅನುಭವಿಸುತ್ತಿದ್ದಾರೆ. ಮನೆಕೆಲಸಗಾರ್ತಿಯಿಂದ 2% ವೃದ್ಧರು ನಿಂದನೆಯನ್ನು  ಎದುರಿಸುತ್ತಿದ್ದಾರೆ ಎಂದು ಹೆಲ್ಪ್ ಏಜ್ ಇಂಡಿಯಾ ಬಿಡುಗಡೆಗೊಳಿಸಿರುವ ವರದಿಯಲ್ಲಿ ಹೇಳಲಾಗಿದೆ. ಬ್ರಿಡ್ಜ್ ದಿ ಗ್ಯಾಪ್:  ಅಂಡರ್‌ಸ್ಟ್ಯಾಂಡಿಂಗ್  ಎಲ್ಡರ್ ನೀಡ್ಸ್ ಎಂಬ ಹೆಸರಲ್ಲಿ ಬಿಡುಗಡೆಗೊಳಿಸಲಾಗಿರುವ ಈ ವರದಿಯಲ್ಲಿ 22 ನಗರಗಳ  300ರಷ್ಟು ವೃದ್ಧರನ್ನು ಸಂದರ್ಶಿಸಲಾಗಿತ್ತು. ಅಂದಹಾಗೆ,

ವರ್ಷಾoಪ್ರತಿ   ವೃದ್ಧಾಶ್ರಮಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದು ಮತ್ತು ಮಕ್ಕಳ ನಿರ್ಲಕ್ಷ್ಯವನ್ನು ಆರೋಪಿಸಿ ವೃದ್ಧರು  ನ್ಯಾಯಾಲಯದ ಬಾಗಿಲು ತಟ್ಟುತ್ತಿರುವ ಸಂಖ್ಯೆಯಲ್ಲೂ ಅಧಿಕವಾಗುತ್ತಿರುವುದು ಆಶಾದಾಯಕ ಬೆಳವಣಿಗೆಯೇನೂ ಅಲ್ಲ.  ಹಾಗಂತ, ದೇಶದ ವೃದ್ಧರ ಪೈಕಿ 82% ಮಂದಿ ಕೂಡಾ ಮನೆಯಲ್ಲೇ  ಇದ್ದಾರೆ ಎಂಬುದಕ್ಕಾಗಿ ನಾವು ಸಂತಸಪಡುವ  ಹಾಗೂ ಇಲ್ಲ. ಹೀಗೆ ಮನೆಯಲ್ಲೇ  ಇರುವ ವೃದ್ಧ ಹೆತ್ತವರು ಹೇಗೆ ಬದುಕುತ್ತಿದ್ದಾರೆ, ಅವರನ್ನು ಮಕ್ಕಳು ಮತ್ತು  ಸೊಸೆಯಂದಿರು ಹೇಗೆ ನೋಡಿಕೊಳ್ಳುತ್ತಿದ್ದಾರೆ ಎಂಬುದೂ ಬಹಳ ಮುಖ್ಯ. ಅನೇಕ ಬಾರಿ ಹೀಗೆ ಮನೆಯಲ್ಲಿರುವ ವೃದ್ಧ  ಹೆತ್ತವರು ವೃದ್ಧಾಶ್ರಮವನ್ನು ಬಯಸುವಷ್ಟು ಮನೆಯ ವಾತಾವರಣ ಕ್ರೂರವಾಗಿರುತ್ತದೆ. ಮಕ್ಕಳು ಅವರನ್ನು ಹೊರೆಯಂತೆ  ಕಾಣುವುದು ಮತ್ತು ದಿನಾ ನಿಂದಿಸುವುದು ನಡೆಯುತ್ತಿರುತ್ತದೆ. ಇಂಥ ಬೆಳವಣಿಗೆಯನ್ನು ವಿಲ್ ಅಥವಾ ದಾನಪತ್ರವನ್ನು  ರದ್ದುಗೊಳಿಸುವುದರಿಂದ ಪರಿಹರಿಸಬಹುದೇ ಎಂಬ ಪ್ರಶ್ನೆಯಿದೆ. ಇದು ಒಂದು ಪರಿಹಾರ ಮಾರ್ಗ ಆಗಬಹುದಾದರೂ  ಮಕ್ಕಳ ಮನಸ್ಥಿತಿಯಲ್ಲಿ ಬದಲಾವಣೆ ತರದ ಹೊರತು ಇದಕ್ಕೆ ಬೇರೆ ಯಾವುದೂ ಪೂರ್ಣ ಪರಿಹಾರ ಆಗಲಾರದು ಎಂದೇ  ಹೇಳಬೇಕಾಗುತ್ತದೆ. ಮಕ್ಕಳ ಹೆಸರಿಗೆ ವರ್ಗಾಯಿಸಿದ ಆಸ್ತಿಯನ್ನು ಮರಳಿ ಪಡೆಯಲು ಹೆತ್ತವರಿಗೆ ಅವಕಾಶ  ಮಾಡಿಕೊಡಲಾಗುವ ಕಾನೂನು ಹೆತ್ತವರನ್ನೇ ಅಪಾಯಕ್ಕೆ ದೂಡುವ ಸಾಧ್ಯತೆಗೂ ಕಾರಣವಾಗಬಹುದು. ದೈಹಿಕವಾಗಿ  ದುರ್ಬಲರಾಗಿರುವ ಹೆತ್ತವರನ್ನು ನಿರ್ದಯಿ ಮಕ್ಕಳು ಸಾಯಿಸಲೂ ಬಹುದು. ಆದ್ದರಿಂದಲೇ ಮಕ್ಕಳ ಮನಸ್ಥಿತಿಯನ್ನು  ಬದಲಾಯಿಸುವ ಪರಿಹಾರ ಮುಖ್ಯ ಅನಿಸುವುದು.

ಹೆತ್ತವರನ್ನು ನಿರ್ಲಕ್ಷಿಸುವ ಮಕ್ಕಳನ್ನು ಪವಿತ್ರ ಕುರ್‌ಆನ್ ದೇವಭಯ ಮತ್ತು ವಿಚಾರಣೆಯ ಭಯದ ಆಧಾರದಲ್ಲಿ  ತಿದ್ದುವುದಕ್ಕೆ ಆದ್ಯತೆ ನೀಡಿದೆ. ನೀವು ಸ್ವರ್ಗಕ್ಕೋ ಅಥವಾ ನರಕಕ್ಕೋ ಎಂಬುದನ್ನು ನಿರ್ಧರಿಸುವುದು ನೀವು ನಿಮ್ಮ ವೃದ್ಧ  ಹೆತ್ತವರೊಂದಿಗೆ ಹೇಗೆ ನಡಕೊಂಡಿದ್ದೀರಿ ಎಂಬುದನ್ನು ಆಧರಿಸಿರುತ್ತದೆ ಎಂದು ಇಸ್ಲಾಮ್ ಬೋಧಿಸುತ್ತದೆ. ಹೆತ್ತವರಿಗೆ ‘ಛೆ’  ಎಂಬ ಪದವನ್ನೂ ಬಳಸಬಾರದು ಎಂದೂ ಕುರ್‌ಆನ್ ಎಚ್ಚರಿಸುತ್ತದೆ. ಚಿಕ್ಕಂದಿನಲ್ಲಿ ನಮ್ಮನ್ನು ಪ್ರೀತಿ ವಾತ್ಸಲ್ಯದಿಂದ  ನೋಡಿಕೊಂಡಂತೆಯೇ ಅವರ ವೃದ್ಧಾಪ್ಯದಲ್ಲಿ ಅವರನ್ನು ಅನುಗ್ರಹಿಸು ಎಂದು ದೇವನಲ್ಲಿ ಪ್ರಾರ್ಥಿಸುವಂತೆ ಕುರ್‌ಆನ್  ಮಕ್ಕಳಿಗೆ ಆದೇಶಿಸುತ್ತದೆ. ಸಂಕಷ್ಟಗಳ ಮೇಲೆ ಸಂಕಷ್ಟವನ್ನು ಅನುಭವಿಸಿ ತಾಯಿ ನಿಮ್ಮನ್ನು ಪ್ರಸವಿಸಿದ್ದಾಳೆ ಎಂದು  ತಾಯಿಯ ಮಹತ್ವವನ್ನು ಸಾರುತ್ತಾ ಕುರ್‌ಆನ್ ಮಕ್ಕಳನ್ನು ಎಚ್ಚರಿಸುತ್ತದೆ. ವೃದ್ಧರಾದ ಹೆತ್ತವರ ಸೇವೆ ಮಾಡುವುದು  ಧರ್ಮಯುದ್ಧದಲ್ಲಿ ಭಾಗವಹಿಸುವುದಕ್ಕೆ ಸಮಾನವಾದುದು ಎಂದು ಪ್ರವಾದಿ(ಸ) ಹೇಳಿದ್ದಾರೆ. ಹೆತ್ತವರ ಕೋಪಕ್ಕೆ  ತುತ್ತಾಗುವ ಮಕ್ಕಳು ಎಷ್ಟೇ ಧರ್ಮಿಷ್ಟರಾದರೂ ಸ್ವರ್ಗ ಪ್ರವೇಶಿಸಲಾರರು ಎಂಬುದಾಗಿಯೂ ಇಸ್ಲಾಮ್ ಎಚ್ಚರಿಸುತ್ತದೆ.  ಇಸ್ಲಾಮ್ ಇಂಥ ಬೋಧನೆಗಳ ಮೂಲಕವೇ ಸಮಾಜವನ್ನು ತಿದ್ದುವ ಪ್ರಯತ್ನ ನಡೆಸಿದೆ. ಸದ್ಯದ ಅಗತ್ಯ ಏನೆಂದರೆ,

ಕಾನೂನಿನ ಕಣ್ಣು ತಪ್ಪಿಸಲು ಸಾಧ್ಯವಾದರೂ ದೇವನ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಪ್ರಜ್ಞೆಯೊಂದಿಗೆ  ಬದುಕುವ ಸಮಾಜವನ್ನು ನಿರ್ಮಿಸುವುದು. ಅಷ್ಟೇ.

Tuesday, 11 March 2025

ಯಾವುದು ಸಾಬ್ರ ಬಜೆಟ್?





ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ ಬಜೆಟನ್ನು ಸಾಬ್ರ ಬಜೆಟ್, ಹಲಾಲ್ ಬಜೆಟ್, ಪಾಕಿಸ್ತಾನಿ ಬಜೆಟ್  ಎಂದು ಟೀಕಿಸುವ ಮೂಲಕ ಬಿಜೆಪಿ ಮತ್ತು ಅದರ ಬಾಲಬಡುಕ ಮಾಧ್ಯಮಗಳು ಮಾಡಿರುವ ಅತಿದೊಡ್ಡ ಉಪಕಾರ ಏ ನೆಂದರೆ, ಮಾತಾಡುವಾಗ ತಾವು ಮೆದುಳು ಉಪಯೋಗಿಸಲ್ಲ ಎಂಬುದನ್ನು ಸಾಬೀತುಪಡಿಸಿರುವುದು. ಈ ಬಾರಿಯ  ಬಜೆಟ್‌ನ ಒಟ್ಟು ಗಾತ್ರ ೪,೦೯,೫೪೯ ಕೋಟಿ ರೂಪಾಯಿ. ಇದರಲ್ಲಿ ಅಲ್ಪಸಂಖ್ಯಾತರಿಗೆ ಕೊಡಲಾದ ಮೊತ್ತ ಬರೇ ೪೫೦೦  ಕೋಟಿ ರೂಪಾಯಿ. ಇದು ಒಟ್ಟು ಬಜೆಟ್ ಮೊತ್ತಕ್ಕೆ ಹೋಲಿಸಿದರೆ ಬರೇ ಒಂದು ಶೇಕಡಾ ಮಾತ್ರ ಆಗುತ್ತದೆ. ಅದರಲ್ಲೂ  ಅಲ್ಪಸಂಖ್ಯಾತರೆಂದರೆ ಬರೇ ಮುಸ್ಲಿಮರು ಮಾತ್ರ ಎಂದಾಗುವುದಿಲ್ಲ. ಕ್ರೈಸ್ತರು, ಜೈನರು, ಬೌದ್ಧರು, ಸಿಕ್ಖರು ಎಲ್ಲರೂ  ಇದೇ ಅಲ್ಪಸಂಖ್ಯಾತ ಚೌಕಟ್ಟಿನೊಳಗೆ ಬರುತ್ತಾರೆ. ಇದೇವೇಳೆ,

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ೪೨,೦೧೮ ಕೋಟಿ ರೂಪಾಯಿಯನ್ನು ನೀಡಲಾಗಿದೆ. ಹಿಂದುಳಿದ ವರ್ಗಗಳಿಗೆ  ೩೫೦೦ ಕೋಟಿ ರೂಪಾಯಿ ಅನುದಾನ ನೀಡಲಾಗಿದೆ. ಅಲ್ಲದೇ ಹಿಂದುಳಿದ ವರ್ಗಗಳಲ್ಲೇ  ಬೇರೆ ಬೇರೆ ನಿಗಮಗಳಿವೆ.  ಅವುಗಳಿಗೂ ಪ್ರತ್ಯೇಕ ಅನುದಾನವನ್ನು ನೀಡಲಾಗಿದೆ. ಈಗಾಗಲೇ ೨ ಕೋಟಿ ರೂಪಾಯಿ ವರೆಗಿನ ಸರ್ಕಾರಿ  ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಇದೆ. ಅದನ್ನು ಪ್ರಶ್ನಿಸದ ಈ ಬಿಜೆಪಿ ಮತ್ತು  ಅದರ ಬಾಲಬಡುಕರು ಇದೀಗ ಮುಸ್ಲಿಮರೂ ಸೇರಿದಂತೆ ಅಲ್ಪಸಂಖ್ಯಾತ ಗುತ್ತಿಗೆದಾರರಿಗೆ ಸರಕಾರಿ ಕಾಮಗಾರಿಗಳಲ್ಲಿ  ಮೀಸಲಾತಿ ನೀಡಿರುವುದನ್ನು ಪ್ರಶ್ನಿಸುತ್ತಿz್ದÁರೆ. ಈ ಬಾರಿಯ ಬಜೆಟ್‌ನಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಗೆ ೨೯,೯೯೨  ಕೋಟಿ ರೂಪಾಯಿಯ ಅನುದಾನ ಘೋಷಿಸಲಾಗಿದೆ. ಜೊತೆಗೇ ಬುಡಕಟ್ಟು ಉಪಯೋಜನೆಗಾಗಿ ೧೨,೦೨೬ ಕೋಟಿ  ರೂಪಾಯಿ ಅನುದಾನ ನೀಡಲಾಗಿದೆ. ಪರಿಶಿಷ್ಟ ಜಾತಿಗೆ ಸಂಬAಧಿಸಿ ಪ್ರಗತಿ ಕಾಲನಿ ಎಂಬ ಯೋಜನೆಯನ್ನು  ಹಮ್ಮಿಕೊಳ್ಳಲಾಗಿದ್ದು, ಅದರ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲು ೨೨೨ ಕೋಟಿ ರೂಪಾಯಿ ಮೀಸಲಿಡಲಾಗಿದೆ.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಒಟ್ಟು ೩೧ ವಸತಿ ಶಾಲೆಗಳನ್ನು ಪಿಯು ಶಾಲೆಗಳಾಗಿ ಉ ನ್ನತೀಕರಣ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿದೆ. ೨೫ ಹೋಬಳಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ  ಪಂಗಡದ ವಸತಿ ಶಾಲೆಗಳನ್ನು ಪ್ರಾರಂಭಿಸುವುದಾಗಿ ಹೇಳಲಾಗಿದೆ. ೨೧೩ ಕೋಟಿ ರೂಪಾಯಿಯ ವೆಚ್ಚದಲ್ಲಿ ಕ್ರೈಸ್ ವಸತಿ  ಶಾಲೆಗಳಿಗೆ ಡೆಸ್ಕ್, ಬೆಂಚ್, ಪೀಠೋಪಕರಣ ಮತ್ತು ಇತರ ಅಗತ್ಯ ಶೈಕ್ಷಣಿಕ ಮೂಲ ಸೌಲಭ್ಯಗಳನ್ನು ಒದಗಿಸುವುದಾಗಿ  ಬಜೆಟ್‌ನಲ್ಲಿ ಹೇಳಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿ ನಿಲಯಗಳಲ್ಲಿನ ಆಹಾರ ವ್ಯವಸ್ಥೆಯ ಪಾರದ ರ್ಶಕತೆಗಾಗಿ ಸಾಮಾಜಿಕ ಪರಿಶೋಧನೆ ನಡೆಸುವುದಾಗಿ ಹೇಳಲಾಗಿದೆ. ದೇಶದ ಪ್ರತಿಷ್ಠಿತ ೧೦೦ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ  ಮತ್ತು ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ ಎಸ್‌ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು ಎಂದು  ಸಿದ್ದರಾಮಯ್ಯ ಘೋಷಿಸಿದ್ದಾರೆ. ಸರಕಾರಿ ಮತ್ತು ಖಾಸಗಿ ಮೆಡಿಕಲ್, ಎಂಜಿನಿಯರಿAಗ್ ಕಾಲೇಜುಗಳಲ್ಲಿ ವ್ಯಾಸಂಗ  ಮಾಡುತ್ತಿದ್ದು, ಅದೇ ಕಾಲೇಜಿನ ವಸತಿ ನಿಲಯ ಗಳಲ್ಲಿ ಪ್ರವೇಶ ಪಡೆದ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು  ೩೫೦೦ ರೂಪಾಯಿ ನೆರವು ನೀಡಲಾಗುತ್ತದೆ. ಹೈನುಗಾರಿಕೆ ಕೈಗೊಳ್ಳುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ  ಸಮುದಾಯದವರಿಗೆ ನಿಗಮದ ಮೂಲಕ ಘಟಕ ವೆಚ್ಚವಾಗಿ ಶೇ. ೫೦ರಷ್ಟು ಸಹಾಯ ಧನ ನೀಡಲಾಗುವುದು ಅಥವಾ ೧  ಲಕ್ಷದ ೨೫ ಸಾವಿರ ಸಹಾಯ ಧನ ನೀಡಲಾಗುವುದು. ೨೦೨೫-೨೬ರಲ್ಲಿ ೭೮ ಬುಡಕಟ್ಟು ವಸತಿ ಶಾಲೆಗಳಲ್ಲಿ ೭ನೇ ತರಗತಿ  ಪ್ರಾರಂಭಿಸಲಾಗುವುದು. ಪರಿಶಿಷ್ಟ ಪಂಗಡದ ೨೦ ಹೊಸ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳನ್ನು  ಪ್ರಾರಂಭಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಅಂದಹಾಗೆ,

ಮುಸ್ಲಿಮರೂ ಸೇರಿದಂತೆ ಇಡೀ ಅಲ್ಪಸಂಖ್ಯಾತ ಸಮುದಾಯಕ್ಕೆ ಬರೇ ೪೫೦೦ ಕೋಟಿ ರೂಪಾಯಿ ಕೊಟ್ಟಿದ್ದನ್ನೇ ಹಲಾಲ್  ಬಜೆಟ್, ಸಾಬ್ರ ಬಜೆಟ್ ಎನ್ನುವುದಾದರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಲಾಗಿರುವ ೪೨,೦೧೮ ಕೋಟಿ ರೂ ಪಾಯಿ ನೀಡಿರುವುದನ್ನು ಏನೆನ್ನ ಬೇಕು? ಈ ಬಿಜೆಪಿ ಮತ್ತು ಅದರ ಬಾಲಬಡುಕ ಮಾಧ್ಯಮಗಳು ಆಗಾಗ ‘ಹಿಂದೂ’  ಎಂಬ ಐಡೆಂಟಿಟಿ ಕಾರ್ಡನ್ನು ಪ್ರದರ್ಶಿಸುತ್ತದಲ್ಲ? ಪರಿಶಿಷ್ಟ ಮಾತ್ರವಲ್ಲ, ಜಾತಿ-ಪಂಗಡ ಮತ್ತು ಬುಡಕಟ್ಟು  ಸಮುದಾಯಗಳನ್ನೂ ಅದು ಹಿಂದೂ ಎಂಬ ವಿಶಾಲ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳುತ್ತಲ್ಲ? ಹಾಗಿದ್ದ ಮೇಲೆ ಜುಜುಬಿ  ೪೫೦೦ ಕೋಟಿ ರೂಪಾಯಿಯನ್ನು ಮುಸ್ಲಿಮರು, ಜೈನರು, ಕ್ರೈಸ್ತರೂ ಸೇರಿದಂತೆ ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟಿದ್ದಕ್ಕಾಗಿ  ಇದು ಸಾಬ್ರ ಬಜೆಟ್ ಆಗುವುದಾದರೆ ಎಸ್‌ಸಿ, ಎಸ್‌ಟಿ ಸಮುದಾಯಗಳಿಗೆ ಮೀಸಲಿರಿಸಲಾದ ೪೨,೦೧೮ ಕೋಟಿಗಾಗಿ  ಯಾಕೆ ಇದನ್ನು ಹಿಂದೂ ಬಜೆಟ್ ಎಂದು ಬಿಜೆಪಿ ಕರೆಯುತ್ತಿಲ್ಲ?

ರಾಜ್ಯದಲ್ಲಿ ಅಲ್ಪಸಂಖ್ಯಾತರು ಹೆಚ್ಚೆಂದರೆ ೧೮% ಇದ್ದಾರೆ. ಆದರೆ ಎಸ್‌ಸಿ, ಎಸ್‌ಟಿ ಸಮುದಾಯದ ಸಂಖ್ಯೆ ೨೬% ಇದೆ. ಜ ನಸಂಖ್ಯೆಯ ಈ ಶೇಕಡಾವಾರನ್ನು ಹೋಲಿಸಿದರೆ ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಮೊತ್ತ ನಗಣ್ಯ ಅನ್ನುವಷ್ಟು ಸಣ್ಣದು. ೨೬%  ಇರುವ ಸಮುದಾಯಕ್ಕೆ ೪೨,೦೧೮ ಕೋಟಿ ರೂಪಾಯಿ ಕೊಡುವಾಗ ೧೮% ಇರುವ ಸಮುದಾಯಕ್ಕೆ ಬರೇ ೪೫೦೦ ಕೋಟಿ  ರೂಪಾಯಿ ಕೊಡುವುದು ಯಾವ ನ್ಯಾಯ? ನಿಜಕ್ಕೂ, ಬಿಜೆಪಿ ಮತ್ತು ಅದರ ಮಡಿಲ ಮಾಧ್ಯಮಗಳು ಪ್ರಶ್ನಿಸಬೇಕಾದದ್ದು  ಈ ತಾರತಮ್ಯವನ್ನು. ಆದರೆ, ಬಿಜೆಪಿಯಾದರೋ ರಾಜಕೀಯ ಪಕ್ಷ. ಅಲ್ಪಸಂಖ್ಯಾತರೆAದರೆ ಮುಸ್ಲಿಮರು ಮಾತ್ರ ಎಂಬAತೆ  ನಟಿಸುತ್ತಾ ಮತ್ತು ನಂಬಿಸುತ್ತಾ ಬರುತ್ತಿರುವ ಆ ಪಕ್ಷಕ್ಕೆ ಅಧಿಕಾರದ ಗುರಿಯಿದೆ. ಅದಕ್ಕೆ ಪೂರಕವಾಗಿ ಏನೆಲ್ಲ ಸುಳ್ಳುಗಳನ್ನು  ಹೆಣೆಯಬೇಕೋ ಅವೆಲ್ಲವನ್ನೂ ಅದು ಹೆಣೆಯುತ್ತಿದೆ. ಆದರೆ, ಈ ಟಿವಿ ಮಾಧ್ಯಮಕ್ಕೆ ಏನಾಗಿದೆ? ಅದೇಕೆ ಈ ಮಟ್ಟದಲ್ಲಿ  ಸುಳ್ಳಿಗೆ ನೇತೃತ್ವವನ್ನು ನೀಡುತ್ತಿದೆ? ಅಂದಹಾಗೆ,

ಅಲ್ಪಸAಖ್ಯಾತರಲ್ಲಿ ಉಳಿದೆಲ್ಲ ಸಮುದಾಯಗಳನ್ನು ಬಿಟ್ಟು ಕೇವಲ ಮುಸ್ಲಿಮರನ್ನು ಮಾತ್ರ ಎತ್ತಿಕೊಂಡರೂ ಮತ್ತು ಈ  ಸಮುದಾಯ ಸರಕಾರಕ್ಕೆ ಸಲ್ಲಿಸುವ ನೇರ ಮತ್ತು ಪರೋಕ್ಷ ತೆರಿಗೆಗಳೆಷ್ಟು ಎಂಬುದನ್ನು ಲೆಕ್ಕ ಹಾಕಿದರಂತೂ ಬಜೆಟ್‌ನಲ್ಲಿ  ಘೋಷಿಸಲಾಗಿರುವುದು ಜುಜುಬಿಯಲ್ಲೇ  ಜುಜುಬಿ ಎಂದು ಗೊತ್ತಾಗುತ್ತದೆ. ಜನಸಂಖ್ಯೆಯ ಆಧಾರದಲ್ಲಿ ಹೇಳುವುದಾದರೆ,  ಮುಸ್ಲಿಮ್ ಸಮುದಾಯ ೨೯ ಸಾವಿರ ಕೋಟಿ ರೂಪಾಯಿಯನ್ನು ಪರೋಕ್ಷ ತೆರಿಗೆಯಾಗಿ ಸರಕಾರಕ್ಕೆ ಪಾವತಿಸುತ್ತಿದೆ.  ಅಲ್ಲದೇ, ಮುಸ್ಲಿಮ್ ಸಮುದಾಯವು ರಾಜ್ಯದ ಅತ್ಯಂತ ದೊಡ್ಡ ಗ್ರಾಹಕ ಸಮುದಾಯವಾಗಿದೆ. ಅಬಕಾರಿಯನ್ನು  ಹೊರತುಪಡಿಸಿ ಉಳಿದೆಲ್ಲ ಇಲಾಖೆಗಳೂ ಮುಸ್ಲಿಮ್ ಸಮುದಾಯದಿಂದ ಧಾರಾಳ ಲಾಭ ಪಡೆಯುತ್ತಿದೆ. ವಿದೇಶಿ  ವಿನಿಮಯದ ವಿಚಾರದಲ್ಲಂತೂ ಸರಕಾರದ ಬೊಕ್ಕಸಕ್ಕೆ ಮುಸ್ಲಿಮ್ ಸಮುದಾಯದ ಕೊಡುಗೆ ಬಹಳ ದೊಡ್ಡದು. ಜವಳಿ,  ಮೀನುಗಾರಿಕೆ, ಕೈಗಾರಿಕೆ, ಚರ್ಮೋದ್ಯಮ ಸಹಿತ ಹಲವು ಕ್ಷೇತ್ರಗಳಿಗೆ ಮುಸ್ಲಿಮ್ ಕೊಡುಗೆ ಸಣ್ಣದೇನಲ್ಲ. ಮುಸ್ಲಿಮರ ನೇರ  ಮತ್ತು ಪರೋಕ್ಷ ತೆರಿಗೆಗಳು ಈ ಎಲ್ಲ ಕ್ಷೇತ್ರಗಳಿಂದ ಸರಕಾರಕ್ಕೆ ಪ್ರತಿದಿನ ಸಲ್ಲಿಕೆಯಾಗುತ್ತಿದೆ. ಒಂದುರೀತಿಯಲ್ಲಿ,

ಮುಸ್ಲಿಮ್ ಸಮುದಾಯ ನೇರವಾಗಿ ಮತ್ತು ಪರೋಕ್ಷವಾಗಿ ಈ ಸರಕಾರಕ್ಕೆ ನೀಡುತ್ತಿರುವ ಹಣವನ್ನು ಲೆಕ್ಕ ಹಾಕಿದರೆ,  ಸರಕಾರದಿಂದ ಸಮುದಾಯ ಪಡಕೊಳ್ಳುತ್ತಿರುವುದು ಶೂನ್ಯಾತಿಶೂನ್ಯ ಎಂದೇ ಹೇಳಬೇಕು. ತಾವು ಕೊಟ್ಟಿರುವುದರಿಂದ  ೧%ದಷ್ಟನ್ನು ಮಾತ್ರ ಪಡೆಯುತ್ತಿರುವ ಮತ್ತು ಮಿಕ್ಕುಳಿದ ೯೯%ವನ್ನೂ ಸರ್ವರ ಅಭಿವೃದ್ಧಿಗಾಗಿ ಬಿಟ್ಟು ಕೊಡುತ್ತಿರುವ  ಸಮುದಾಯದ ಬಗ್ಗೆ ಹೆಮ್ಮೆ ಪಡಬೇಕಾದ ಈ ಬಿಜೆಪಿ ಮತ್ತು ಬಾಲಬಡುಕ ಮಾಧ್ಯಮಗಳು ಇದೀಗ ಅವೆಲ್ಲವನ್ನೂ  ಮರೆಮಾಚಿ ಅಪ್ಪಟ ಸುಳ್ಳನ್ನು ಹರಡುತ್ತಿರುವುದಕ್ಕೆ ನಾಚಿಕೆಯಾಗಬೇಕು. ನಿಜವಾಗಿ, ಹೆಚ್ಚಿನ ಅನುದಾನಕ್ಕಾಗಿ ಮುಸ್ಲಿಮರು  ಬೀದಿಗಿಳಿಯಬೇಕಿತ್ತು. ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಘೋಷಿಸುವಂತೆ ಸರಕಾರದ ಮೇಲೆ ಒತ್ತಡ ಹೇರಬೇಕಿತ್ತು.  ತಾವು ಸರಕಾರಕ್ಕೆ ಪಾವತಿಸುತ್ತಿರುವುದರಿಂದ ೧೦%ವನ್ನಾದರೂ ನಮಗೆ ಮರಳಿಸಿ ಎಂದು ಒತ್ತಾಯಿಸಬೇಕಿತ್ತು. ಆದರೆ, ಅದರ  ಬದಲು ಈ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವ ರೀತಿಯ ಮಾತುಗಳನ್ನು ಬಿಜೆಪಿ ಆಡುತ್ತಿದೆ ಎಂದಾದರೆ  ಅದರೊಳಗೆ ಮುಸ್ಲಿಮ್ ದ್ವೇಷವೆಂಬ ವಿಷ ತುಂಬಿದೆ ಎಂದಷ್ಟೇ ಹೇಳಬೇಕಾಗಿದೆ.

Monday, 10 February 2025

ಕೇಜ್ರಿವಾಲ್ ಸೋಲಿಗೆ ಏನು ಕಾರಣ?

 


‘ಆಲ್ಟರ್‌ನೇಟಿವ್ ಪಾಲಿಟಿಕ್ಸ್’ ಎಂಬ ಹೆಸರಲ್ಲಿ ಅಧಿಕಾರಕ್ಕೆ ಬಂದ ಕೇಜ್ರಿವಾಲ್‌ರ ಆಪ್ ಪಕ್ಷಕ್ಕೆ ದೆಹಲಿ ಚುನಾವಣೆಯಲ್ಲಿ  ಸೋಲಾಗಲು ಕಾರಣವೇನು ಎಂಬ ಬಗ್ಗೆ ಟಿ.ವಿ. ಚಾನೆಲ್‌ಗಳು, ಪತ್ರಿಕೆಗಳು ಮತ್ತು ಸೋಶಿಯಲ್ ಮೀಡಿಯಾಗಳು  ಚರ್ಚಿಸಿ ಚರ್ಚಿಸಿ ಸುಸ್ತಾಗಿವೆ. ಕೇಜ್ರಿವಾಲ್ ಮಾಡಿರುವ ತಪ್ಪುಗಳು, ದುರಹಂಕಾರ ಎನ್ನಬಹುದಾದ ನಿಲುವುಗಳು, ಮತಗಳ  ಮೇಲೆ ಕಣ್ಣಿಟ್ಟು ತೆಗೆದುಕೊಂಡು ಅನ್ಯಾಯದ ನಿರ್ಧಾರಗಳು ಮತ್ತು ಭ್ರಷ್ಟಾಚಾರಗಳು ಇತ್ಯಾದಿ ಸಾಲುಸಾಲು ಕಾರಣಗಳು  ಒಂದೊಂದಾಗಿ ಉಲ್ಲೇಖಕ್ಕೆ ಒಳಗಾಗುತ್ತಿವೆ. ಅಲ್ಲದೇ, ಇವಿಎಂ ಮೇಲೆ ಆರೋಪ ಹೊರಿಸದೆಯೇ ಕೇಜ್ರಿವಾಲ್ ಕೂಡಾ  ತನ್ನ ಸೋಲನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ಇವಿಎಂ ಹೊರತಾದ ಕಾರಣಗಳನ್ನೇ ದೆಹಲಿ ಫಲಿತಾಂಶಕ್ಕೆ ಸಂಬಂಧಿಸಿ  ಚರ್ಚಿಸಬೇಕಾಗಿದೆ ಎಂಬ ಪರೋಕ್ಷ ಸೂಚನೆಯನ್ನೂ ಅವರು ನೀಡಿದ್ದಾರೆ.

ಬಹುಶಃ, ಕೇಜ್ರಿವಾಲ್ ಸೋಲನ್ನು ಎರಡು ಮಗ್ಗುಲುಗಳಲ್ಲಿ ಚರ್ಚಿಸಬಹುದಾಗಿದೆ. 
1. ಅದರ ಹುಟ್ಟು ಯಾಕಾಯಿತೋ  ಅಧಿಕಾರ ಸಿಕ್ಕ ಬಳಿಕ ಅದು ತನ್ನ ಹುಟ್ಟನ್ನೇ ಮರೆಯಿತು. 10 ವರ್ಷಗಳ ಹಿಂದೆ ದೆಹಲಿ ಗದ್ದುಗೆಗೇರುವುದಕ್ಕೆ ಅವರಿಗೆ  ಊರುಗೋಲು ಆದದ್ದು ಭ್ರಷ್ಟಾಚಾರ. ಅಣ್ಣಾ ಹಜಾರೆಯನ್ನು ಬಳಸಿಕೊಂಡು ಮನ್‌ಮೋಹನ್ ಸಿಂಗ್ ಸರಕಾರದ ವಿರುದ್ಧ  ದೆಹಲಿಯ ಜಂತರ್ ಮಂತರ್‌ನಲ್ಲಿ ಹೋರಾಟ ಸಂಘಟಿಸಿದ್ದ ಕೇಜ್ರಿವಾಲ್, ಆ ಬಳಿಕ ದೆಹಲಿಯ ಕಾಂಗ್ರೆಸ್ ಮುಖ್ಯಮಂತ್ರಿ  ಶೀಲಾ ದೀಕ್ಷಿತ್ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ರಂಗಕ್ಕಿಳಿದರು. ಶೀಲಾರನ್ನು ಮಹಾನ್ ಭ್ರಷ್ಟಾಚಾರಿ ಎಂದರು.  2013ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಶೀಲಾ ದೀಕ್ಷಿತ್ ವಿರುದ್ಧ ಸ್ಪರ್ಧಿಸಿ 25 ಸಾವಿರ ಮತಗಳ ಅಂತರದಿAದ  ಜಯಗಳಿಸಿದರು. ಆ ಬಳಿಕ ಭ್ರಷ್ಟಾಚಾರದ ಆರೋಪಗಳು ಒಂದೊAದಾಗಿ ಬಿದ್ದು ಹೋದುವು. 2ಜಿ ಹಗರಣವನ್ನು ಮತ್ತು  ಲೋಕಪಾಲ ಜಾರಿಯನ್ನು ಮುಂದಿಟ್ಟುಕೊಂಡು ಇಂಡಿಯಾ ಎಗೈನ್‌ಸ್ಟ್ ಕರಪ್ಶನ್ ಎಂಬ ಧ್ಯೇಯವಾಕ್ಯದಡಿ ಹೋರಾಟ  ಸಂಘಟಿಸಿದ್ದ ಕೇಜ್ರಿವಾಲ್ ತಂಡ ಆ ಬಳಿಕ ಅವೆರಡನ್ನೂ ಬಹುತೇಕ ಮರೆತೇ ಬಿಟ್ಟವು. 2ಜಿ ಹಗರಣವೇ ಅಲ್ಲ ಅನ್ನುವುದ ನ್ನು ವರ್ಷಗಳ ಬಳಿಕ ನ್ಯಾಯಾಲಯವೇ ಸಾರಿತು. ಶೀಲಾ ದೀಕ್ಷಿತ್‌ರ ಭ್ರಷ್ಟಾಚಾರ ಏನು ಅನ್ನುವುದನ್ನು ಪತ್ತೆ ಹಚ್ಚಲು  ಈವರೆಗೂ ಕೇಜ್ರಿವಾಲ್‌ಗೆ ಸಾಧ್ಯವಾಗಲಿಲ್ಲ. ಲೋಕಪಾಲ್‌ನ ಸ್ಥಿತಿ ಈಗ ಏನಾಗಿದೆ ಅನ್ನುವುದೇ ತಿಳಿದಿಲ್ಲ. ಇದೇವೇಳೆ, ಸ್ವತಃ  ಕೇಜ್ರಿವಾಲ್ ಅವರೇ ಭ್ರಷ್ಟಾಚಾರದ ಆರೋಪಕ್ಕೆ ಸಿಲುಕಿದರು. ಜೈಲಿಗೂ ಹೋದರು.

ವಿಶೇಷ ಏನೆಂದರೆ, 2013ರಲ್ಲಿ ಶೀಲಾ ದೀಕ್ಷಿತ್‌ರ ವಿರುದ್ಧ ಭ್ರಷ್ಟಾಚಾರದ ಸುಳ್ಳು ಆರೋಪವನ್ನು ಹೊರಿಸಿ ಗೆದ್ದಿದ್ದ  ಕೇಜ್ರಿವಾಲ್‌ರ ಸೋಲಿಗೆ ಅದೇ ಶೀಲಾ ದೀಕ್ಷಿತ್‌ರ ಮಗನೇ ಕಾರಣವಾದದ್ದು. ನವದೆಹಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ  ಕೇಜ್ರಿವಾಲ್ ಅವರು 4089 ಮತಗಳ ಅಂತರದಿAದ ಸೋತಿದ್ದಾರೆ. ಇದೇ ಕ್ಷೇತ್ರದಲ್ಲೇ  ಕೇಜ್ರಿವಾಲ್ ಅವರು 2013ರಲ್ಲಿ  ಶೀಲಾ ದೀಕ್ಷಿತ್‌ರನ್ನು ಸೋಲಿಸಿದ್ದರು. ಈ ಬಾರಿ ಶೀಲಾ ದೀಕ್ಷಿತ್‌ರ ಮಗ ಸಂದೀಪ್ ಸಿಂಗ್ ಅವರು ಕಾಂಗ್ರೆಸ್‌ನಿAದ ಸ್ಪ ರ್ಧಿಸಿ 4566 ಮತಗಳನ್ನು ಪಡೆದು ಮೂರನೇ ಸ್ಥಾನಿಯಾದರು. ಒಂದುವೇಳೆ, ಕಾಂಗ್ರೆಸ್ ಮತ್ತು ಆಪ್ ಮೈತ್ರಿ  ಮಾಡಿಕೊಂಡು ಸಂದೀಪ್ ದೀಕ್ಷಿತ್ ಇಲ್ಲಿ ಸ್ಪರ್ಧಿಸದೇ ಇರುತ್ತಿದ್ದರೆ, ಅವರಿಗೆ ಬಿದ್ದಿರುವ 4566 ಮತಗಳು ಕೇಜ್ರಿವಾಲ್‌ಗೆ  ಬಿದ್ದು ಅವರು ಗೆಲ್ಲುವ ಸಾಧ್ಯತೆ ಇತ್ತು ಎಂಬ ವಿಶ್ಲೇಷಣೆ ನಡೆಯುತ್ತಿದೆ. ಅಂತೂ 2013ರಲ್ಲಿ ಭ್ರಷ್ಟಾಚಾರದ ಸುಳ್ಳು ಆರೋಪ  ಹೊರಿಸಿ ಶೀಲಾ ದೀಕ್ಷಿತ್‌ರನ್ನು ಸೋಲಿಸಿದ್ದ ಕೇಜ್ರಿವಾಲ್‌ರನ್ನು 12 ವರ್ಷಗಳ ಬಳಿಕ ಅದೇ ಶೀಲಾ ದೀಕ್ಷಿತ್‌ರ ಮಗ  ಸೋಲಿಸಿದ್ದು ವಿಶೇಷ ಅನ್ನಬೇಕು.

ಅಂದಹಾಗೆ, ಅಧಿಕಾರದಲ್ಲಿರುವಾಗ ಕೇಜ್ರಿವಾಲ್ ಅತ್ಯಂತ ದುರಹಂಕಾರದಿಂದ  ಮತ್ತು ಕೋಮುಪಕ್ಷಪಾತದಿಂದ ವರ್ತಿಸಿದರು  ಅನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಸಿಎಎ-ಎನ್‌ಆರ್‌ಸಿ ಹೋರಾಟದ ಸಂದರ್ಭದಲ್ಲಿ ಅವರ ಮಾತು-ಕೃತಿಗಳು  ಯಾವ ಕಾರಣಕ್ಕೂ ‘ಆಲ್ಟರ್‌ನೇಟಿವ್ ಪಾಲಿಟಿಕ್ಸ್’ನ ರೂಪದಲ್ಲಿರಲಿಲ್ಲ. ದೆಹಲಿ ಪೊಲೀಸ್ ಇಲಾಖೆ ತನ್ನ ಕೈಯಲ್ಲಿರುತ್ತಿದ್ದರೆ  ಒಂದೇ ತಾಸಿನೊಳಗೆ ಶಾಹೀನ್‌ಬಾಗ್ ಪ್ರತಿಭಟನಾಕಾರರನ್ನು ತೆರವು ಮಾಡಿಸುತ್ತಿದ್ದೆ  ಎಂದು ಇಂಡಿಯಾ ಟುಡೆ ಚಾನೆಲ್  ಜೊತೆಗಿನ ಸಂವಾದದಲ್ಲಿ ಹೇಳಿದ್ದರು. ಈಗ ಕೇಜ್ರಿವಾಲ್‌ರ ವಿರುದ್ಧ ಯಾರು ಗೆದ್ದಿದ್ದಾರೋ ಅದೇ ಪರ್ವೇಶ್ ವರ್ಮಾ  ಅವರು 2020ರಲ್ಲಿ ದೆಹಲಿಯಲ್ಲಿ ಮುಸ್ಲಿಮ್ ದ್ವೇಷ ಭಾಷಣ ಮತ್ತು ಘೋಷಣೆಗಳನ್ನು ಕೂಗುತ್ತಾ ರ‍್ಯಾಲಿ ನಡೆಸಿದ್ದರು.  ಅವರ ನೇತೃತ್ವದಲ್ಲಿದ್ದ ದುಷ್ಕರ್ಮಿಗಳ ಗುಂಪು ಮುಸ್ಲಿಮರ ಮೇಲೆ ದಬ್ಬಾಳಿಕೆ, ದೌರ್ಜನ್ಯ, ಹಿಂಸೆಯನ್ನು ಎಸಗಿತ್ತು. ಆದರೆ  ಆ ಇಡೀ ಸನ್ನಿವೇಶವನ್ನು ಕೈಕಟ್ಟಿ ನೋಡಿದ್ದ ಕೇಜ್ರಿವಾಲ್, ತನಗೂ ತನ್ನದೇ ಜನತೆ ಅನುಭವಿಸುತ್ತಿರುವ ಸಂಕಷ್ಟಕ್ಕೂ  ಸಂಬAಧವೇ ಇಲ್ಲ ಎಂಬAತೆ ನಡೆದುಕೊಂಡಿದ್ದರು. ಆ ನೋವನ್ನು ಈ ಬಾರಿ ಮುಸ್ಲಿಮರು ಮತದಾನದಲ್ಲಿ ವ್ಯಕ್ತ ಪಡಿಸಿದ್ದಾರೆ. 25%ಕ್ಕಿಂತ ಹೆಚ್ಚು ಮುಸ್ಲಿಮ್ ಮತದಾರರಿರುವ ಕ್ಷೇತ್ರಗಳಲ್ಲಿ ಆಪ್ ಕಳೆದಬಾರಿ 61%ಕ್ಕಿಂತ ಹೆಚ್ಚು ಮತಗಳನ್ನು  ಪಡೆದಿದ್ದರೆ ಈ ಬಾರಿ ಅದು 50%ಕ್ಕೆ ಕುಸಿದಿದೆ. ಅಂದರೆ 11% ಮತಗಳಿಕೆ ಇಲ್ಲಿ ಕಡಿಮೆಯಾಗಿದೆ. ಹಾಗೆಯೇ, ಮುಸ್ಲಿಮ್  ಮತದಾರರ ಪ್ರಮಾಣ 10ರಿಂದ 25% ಇರುವ ಕ್ಷೇತ್ರಗಳಲ್ಲೂ ಆಪ್ ಈ ಬಾರಿ 7%ಕ್ಕಿಂತಲೂ ಹೆಚ್ಚು ಕಡಿಮೆ ಮತಗಳನ್ನು  ಪಡೆದಿದೆ. ಅಲ್ಲದೇ, ದೆಹಲಿಯಲ್ಲಿ ಬಡ ಮುಸ್ಲಿಮರ ಮನೆಗಳನ್ನು ಮತ್ತು ಮಸೀದಿಗಳನ್ನು ಅಕ್ರಮದ ಹೆಸರಲ್ಲಿ ದೆಹಲಿಯ  ಬಿಜೆಪಿ ಆಡಳಿತದ ನಗರ ಪಾಲಿಕೆಯು ಬುಲ್ಡೋಜರ್ ಮೂಲಕ ನೆಲಸಮ ಮಾಡುತ್ತಿದ್ದಾಗ ಸುಮ್ಮನಿದ್ದ ಮುಖ್ಯಮಂತ್ರಿ  ಅತಿಶಿ ಅವರು ದೇವಸ್ಥಾನದ ಮುಂದೆ ನಿಂತು ಬುಲ್ಡೋಜರ್ ಮಾಡದಂತೆ ಅಬ್ಬರಿಸಿದ್ದೂ ನಡೆದಿತ್ತು. ಜೊತೆಗೇ ದೆಹಲಿ  ಸರಕಾರದ ಎಲ್ಲ ಕಚೇರಿಗಳಲ್ಲಿ ಸರಕಾರದ್ದೇ  ಖರ್ಚಲ್ಲಿ ಲಕ್ಷ್ಮೀ ಪೂಜೆಯನ್ನೂ ಮಾಡಲಾಗಿತ್ತು. ನೋಟಿನಲ್ಲಿ ಲಕ್ಷ್ಮಿಯ ಚಿತ್ರ  ಛಾಪಿಸಬೇಕೆಂದು ಇದೇ ಕೇಜ್ರಿವಾಲ್ ಒಂದು ಸಂದರ್ಭದಲ್ಲಿ ಆಗ್ರಹಿಸಿದ್ದರು. ಒಂದುಕಡೆ, ಮುಸ್ಲಿಮರ ವಿರುದ್ಧ ಬಿಜೆಪಿ  ಬಹಿರಂಗ ಸಮರ ಸಾರಿ ಇನ್ನಿಲ್ಲದಂತೆ ತೊಂದರೆ ಕೊಡುತ್ತಿರುವುದನ್ನು ಮೌನವಾಗಿ ನೋಡುತ್ತಾ ಮತ್ತು ಇನ್ನೊಂದು ಕಡೆ  ಬಿಜೆಪಿಯ ಮತದಾರರನ್ನು ಸೆಳೆಯುವುದಕ್ಕಾಗಿ ಬಿಜೆಪಿಯಂತೆಯೇ ನಡಕೊಳ್ಳುತ್ತಾ ಆಪ್ ತನ್ನ ಮೂಲವನ್ನೇ ಮರೆತು  ನಡಕೊಂಡಿತ್ತು.

ನಿಜವಾಗಿ, ಹರ್ಯಾಣದಲ್ಲಿ ಗೆಲ್ಲಲೇಬೇಕಿದ್ದ ಕಾಂಗ್ರೆಸನ್ನು ಸೋಲಿಸಿದ್ದು ಇದೇ ಕೇಜ್ರಿವಾಲ್ ಪಕ್ಷ. ಹರ್ಯಾಣದಲ್ಲಿ  ಯಾವುದೇ ನಿರೀಕ್ಷೆ ಇಲ್ಲದಿದ್ದರೂ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳದೇ ಒಂಟಿಯಾಗಿ ಎಲ್ಲ 90 ಸ್ಥಾನಗಳಿಗೂ ಆಪ್ ಸ್ಪ ರ್ಧಿಸಿತು. ಈ ಮೂಲಕ ಕಾಂಗ್ರೆಸ್ ಸುಮಾರು 17 ಕ್ಷೇತ್ರಗಳಲ್ಲಿ ಸೋಲಲು ನೇರ ಕಾರಣವಾಯಿತು. ಒಂದುವೇಳೆ, ಈ 17  ಸ್ಥಾನಗಳ ಪೈಕಿ 15 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತಿದ್ದರೂ ಹರ್ಯಾಣ ಕಾಂಗ್ರೆಸ್ ಪಾಲಾಗುತ್ತಿತ್ತು. ಇದಕ್ಕೆ ದೆಹಲಿಯಲ್ಲಿ  ಕಾಂಗ್ರೆಸ್ ಪ್ರತೀಕಾರವನ್ನು ತೀರಿಸಿಕೊಂಡಿತು. ದೆಹಲಿಯ ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಸ್ಪರ್ಧಿಸಿತು. ಕನಿಷ್ಠ 12 ಕ್ಷೇತ್ರಗಳಲ್ಲಿ  ಆಪ್ ಅಭ್ಯರ್ಥಿಗಳ ಸೋಲಿಗೆ ನೇರ ಕಾರಣವಾಯಿತು. ಹಾಗೆಯೇ, ರಾಹುಲ್ ಗಾಂಧಿ ಸಹಿತ ಪ್ರಮುಖ ನಾಯಕರೇ  ದೆಹಲಿಯಲ್ಲಿ ಆಪ್ ವಿರುದ್ಧ ಚುನಾವಣಾ ಭಾಷಣ ಮಾಡಿದರು. ಈ ಭಾಷಣಗಳ ಕಾರಣದಿಂದಲೂ ಆಪ್‌ಗೆ ಬೀಳಬೇಕಿದ್ದ  ಸಾವಿರಾರು ಮತಗಳು ಇತರ ಪಕ್ಷಗಳ ಪಾಲಾದುವು. ಒಂದುವೇಳೆ, ದೆಹಲಿಯಲ್ಲಿ ಈ ಎರಡೂ ಪಕ್ಷಗಳು ಮೈತ್ರಿ  ಮಾಡಿಕೊಂಡಿರುತ್ತಿದ್ದರೆ ಫಲಿತಾಂಶ ಈ ರೀತಿ ಇರುತ್ತಿರಲಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ನಿಜವಾಗಿ, ದೆಹಲಿಯಲ್ಲಿ ಕೇಜ್ರಿವಾಲ್ ಯಾವೆಲ್ಲ ಉಚಿತಗಳನ್ನು ಈಗಾಗಲೇ ಜಾರಿ ಮಾಡಿದ್ದರೋ ಅವೆಲ್ಲವನ್ನೂ ಹಾಗೆಯೇ  ಮುಂದುವರಿಸುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಮಾತ್ರವಲ್ಲ, ಕೇಜ್ರಿವಾಲ್ ಕೊಡುವ 200 ಯೂನಿಟ್ ಉಚಿತ ವಿದ್ಯುತ್  ಬದಲಾಗಿ 300 ಯುನಿಟ್ ನೀಡುವುದಾಗಿಯೂ ಬಿಜೆಪಿ ಭರವಸೆಯನ್ನು ನೀಡಿತ್ತು. ಹೀಗಿರುವಾಗ ದೆಹಲಿ ಜನರ ಪಾಲಿಗೆ  ಕೇಜ್ರಿವಾಲ್‌ರೇ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದ ಯಾವ ಅಗತ್ಯವೂ ಇರಲಿಲ್ಲ. ತಮಗೆ ಈಗಾಗಲೇ ಸಿಗುವ  ಉಚಿತಗಳೆಲ್ಲವೂ ಬಿಜೆಪಿ ಅಧಿಕಾರಕ್ಕೆ ಬಂದರೂ ಲಭ್ಯವಾಗುವುದಾದರೆ ಬದಲಾವಣೆ ಮಾಡಿ ನೋಡುವುದರಲ್ಲಿ  ಕಳಕೊಳ್ಳುವುದಕ್ಕೇನಿದೆ ಎಂದವರು ಭಾವಿಸಿರಬಹುದು ಅಥವಾ 2020ರ ಚುನಾವಣೆಯಲ್ಲಿ ಕೇಜ್ರಿವಾಲ್‌ರನ್ನು ಈ  ಮತದಾರರು ಕೇವಲ ಉಚಿತಕ್ಕಾಗಿ ಮಾತ್ರ ಬೆಂಬಲಿಸಿರಲೂ ಬಹುದು. ಆಂತರಿಕವಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ  ಕೇವಲ ಉಚಿತಕ್ಕಾಗಿ ಮಾತ್ರ ಅವರು ಕೇಜ್ರಿವಾಲ್‌ಗೆ ಮತ ಹಾಕಿರಬಹುದು. ಲೋಕಸಭಾ ಚುನಾವಣೆಯಲ್ಲಿ 8ರಲ್ಲಿ 8 ಸ್ಥಾ ನವನ್ನೂ ಈ ಮತದಾರರು ಬಿಜೆಪಿಗೆ ನೀಡಿರುವುದನ್ನು ನೋಡಿದರೆ, ಬಿಜೆಪಿ ನೀಡಿರುವ ಉಚಿತದ ಭರವಸೆಯೇ ಕೇಜ್ರಿ  ಸೋಲಿನಲ್ಲಿ ಪ್ರಮುಖ ಪಾತ್ರ ವಹಿಸಿರಬಹುದು ಎಂದೂ ಹೇಳಬಹುದು.

Tuesday, 14 January 2025

ರಘುರಾಮ್ ಭಟ್ರು, ಮುಸ್ಲಿಮ್ ಯುವಕ ಮತ್ತು ಸಮಾಜ




ಹಿಂದೂ ಮುಸ್ಲಿಮರನ್ನು ಪರಸ್ಪರ ಶತ್ರುಗಳಂತೆ ಮತ್ತು ಈ ಎರಡೂ ಧರ್ಮಗಳು ಜೊತೆ ಜೊತೆಯಾಗಿ ಸಾಗಲು ಸಾಧ್ಯವೇ  ಇಲ್ಲ ಎಂಬಂತೆ  ಭಾಷಣಗಳಲ್ಲೂ ಬರಹಗಳಲ್ಲೂ ಪ್ರಚಾರ ಮಾಡಲಾಗುತ್ತಿರುವ ಈ ದಿನಗಳಲ್ಲಿ ಇವೆಲ್ಲವನ್ನೂ ಸುಳ್ಳು  ಮಾಡುವಂತೆ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಈಶ್ವರಮಂಗಲದಲ್ಲಿ ಕಳೆದವಾರ ನಡೆದಿದೆ. ಇಲ್ಲಿನ ಮುಂಡ್ಯ  ದೇವಸ್ಥಾನದ ಅರ್ಚಕರಾದ ರಘುರಾಮ ಭಟ್ ಅವರು ಬೈಕ್ ಸ್ಕಿಡ್ ಆಗಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಅವರನ್ನು  ಅಲ್ಲಿಯೇ ಇದ್ದ ಕುಂಬ್ರ ಮಸೀದಿಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಆ ಬಳಿಕ ರಿಕ್ಷಾ ಚಾಲಕ ಬಶೀರ್  ಕಡ್ತಿಮಾರ್ ಎಂಬವರು ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಘಟನೆಯ ವೀಡಿಯೋ  ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಮಾಣದಲ್ಲಿ ಹಂಚಿಕೆಯಾಗಿದೆ. ಮಸೀದಿಯ ವರಾಂಡದಲ್ಲಿ ಕುಳಿತ ಅರ್ಚಕರ  ಕಾಲಿನಿಂದ ರಕ್ತ ಹರಿಯುತ್ತಿದೆ. ಅವರು ಧರಿಸಿರುವ ಚಪ್ಪಲಿಯಲ್ಲೂ ರಕ್ತವಿದೆ. ಅವರ ಗಾಯಗೊಂಡ ಕಾಲಿಗೆ ಮುಸ್ಲಿಮ್  ಯುವಕ ಬ್ಯಾಂಡೇಜ್ ಕಟ್ಟುತ್ತಿರುವುದು ಮತ್ತು ಕಾಲಿನಿಂದ ರಕ್ತವನ್ನು ಒರೆಸುತ್ತಿರುವುದೂ ವೀಡಿಯೋದಲ್ಲಿದೆ.
ನಿಜವಾಗಿ, 

ಇದು ವೀಡಿಯೋ ಮಾಡಿ ಹಂಚಿಕೊಳ್ಳುವಷ್ಟು ಅಪರೂಪದಲ್ಲಿ ಅಪರೂಪದ ಘಟನೆ ಏನಲ್ಲ. ಸೋಶಿಯಲ್ ಮೀಡಿಯಾಕ್ಕಿಂತ ಮೊದಲಿನ ಕಾಲದಲ್ಲೂ ಇಂಥ ಘಟನೆಗಳು ನಡೆಯುತ್ತಿದ್ದುವು. ಸೋಶಿಯಲ್ ಮೀಡಿಯಾದ ಈ  ಕಾಲದಲ್ಲೂ ಇಂಥವು ನಡೆಯುತ್ತಲೇ ಇವೆ. ಆದರೆ, ಇವತ್ತೇಕೆ ಇಂಥ ವೀಡಿಯೋಗಳು ಬಿಸಿ ಬಿಸಿ ದೋಸೆಯಂತೆ  ಹಂಚಿಕೆಯಾಗುತ್ತಿವೆ ಎಂದರೆ, ಅದಕ್ಕೆ ನಾವು ನೆಟ್ಟು ಬೆಳೆಸುತ್ತಿರುವ ದ್ವೇಷವೆಂಬ ಸಸಿಯೇ ಕಾರಣ.

ಈ ಹಿಂದೆ ಸೋಶಿಯಲ್ ಮೀಡಿಯಾ ಇರಲಿಲ್ಲ. ಆ ಕಾರಣದಿಂದಲೋ ಏನೋ ದ್ವೇಷ ಪ್ರಚಾರಕ್ಕೆ ಅವಕಾಶವೂ  ಸೀಮಿತವಾಗಿತ್ತು. ಜನರು ಪರಸ್ಪರ ಧರ್ಮ ನೋಡದೇ ಮರುಗುತ್ತಾ, ಸಹಕರಿಸುತ್ತಾ ತಮ್ಮ ಪಾಡಿಗೇ ಬದುಕುತ್ತಿದ್ದರು.  ಆದರೆ, ಯಾವಾಗ ಸೋಶಿಯಲ್ ಮೀಡಿಯಾದ ಆಗಮನವಾಯಿತೋ ದ್ವೇಷ ಪ್ರಚಾರದ ಭರಾಟೆಯೂ ಹೆಚ್ಚಾಯಿತು.  ಹಿಂದೂ ಮತ್ತು ಮುಸ್ಲಿಮರನ್ನು ಎರಡು ಧ್ರುವಗಳಂತೆ ವ್ಯಾಖ್ಯಾನಿಸುವ ಕೈ ಮತ್ತು ಬಾಯಿಗಳು ದೇಶದೆಲ್ಲೆಡೆ  ತುಂಬಿಕೊಳ್ಳತೊಡಗಿದವು. ದಿನನಿತ್ಯ ಪತ್ರಿಕೆ, ಟಿ.ವಿ. ಚಾನೆಲ್ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಈ ದ್ವೇಷದ್ದೇ  ಪ್ರಾಬಲ್ಯ.  ‘ಮುಸ್ಲಿಮನಿಂದ ಹಿಂದೂ ಯುವಕನಿಗೆ ಚೂರಿ’, ‘ಮುಸ್ಲಿಮ್ ಯುವಕನನ್ನು ಥಳಿಸಿ ಹತ್ಯೆ ಮಾಡಿದ ಹಿಂದೂ’, ‘ಅಕ್ರಮ  ಗೋಸಾಗಾಟ: ಇಬ್ಬರು ಮುಸ್ಲಿಮರ ಬಂಧನ’, ‘ಮುಸ್ಲಿಮ್ ಯುವಕನೊಂದಿಗೆ ಹಿಂದೂ ಯುವತಿ ಪರಾರಿ’, ‘ಹಿಂದೂ  ಯುವಕನೊಂದಿಗೆ ಮುಸ್ಲಿಮ್ ಯುವತಿ ಮದುವೆ’, ‘ಮತಾಂತರ’, ‘ಕಾಫಿರ್’, ‘ಜಿಹಾದ್’, ‘ಮಂದಿರ ಒಡೆದು ಮಸೀದಿ  ನಿರ್ಮಾಣ’, ‘ಇಷ್ಟನೇ ಇಸವಿಗೆ ಮುಸ್ಲಿಮರು ಬಹುಸಂಖ್ಯಾತ ರಾಗುವರು’, ‘ಹಿಂದೂಗಳ ಭೂಮಿ ಕಬಳಿಸುತ್ತಿರುವ  ಮುಸ್ಲಿಮರು’, ‘ಮುಸ್ಲಿಮರು ಪಾಕಿಸ್ತಾನಕ್ಕೆ ಹೋಗಲಿ’, ‘ಹಿಂದೂ ಧರ್ಮ ಅಪಾಯದಲ್ಲಿದೆ’, ‘ಹಿಂದೂ-ಮುಸ್ಲಿಮರು  ಜೊತೆಯಾಗಿ ಬದುಕಲು ಸಾಧ್ಯವಿಲ್ಲ...’ ಹೀಗೆ ಭಯಪಡಿಸುವ, ಹಿಂದೂ-ಮುಸ್ಲಿಮರನ್ನು ವಿಭಜಿಸುವ ಮತ್ತು ಅಪರಾಧಕ್ಕಿಂತ ಅಪರಾಧಿಗಳ ಧರ್ಮವನ್ನೇ ಎತ್ತಿ ಹೇಳುವ ರೀತಿಯ ಸುದ್ದಿ ನಿರೂಪಣೆ ಮತ್ತು ಶೀರ್ಷಿಕೆಗಳು ನಿಧಾನಕ್ಕೆ ಜನರ ಮನಸ್ಸನ್ನು ಕಲಕತೊಡಗಿದುವು. ಒಂದುಕಡೆ ಪತ್ರಿಕೆಗಳು ಇಂಥ ಸುದ್ದಿಗಳ ಬೆನ್ನು ಬೀಳುತ್ತಿದ್ದರೆ ಇನ್ನೊಂದು ಕಡೆ  ರಾಜಕಾರಣಿಗಳು ಇದಕ್ಕಿಂತಲೂ ಪ್ರಚೋದನಕಾರಿಯಾಗಿ ಮಾತಾಡತೊಡಗಿದರು. ಈ ಎಲ್ಲವೂ ಸೇರಿಕೊಂಡು ಒಂದು  ಬಗೆಯ ಅನುಮಾನ ಮತ್ತು ಭಯದ ವಾತಾವರಣವನ್ನು ನಿರ್ಮಿಸತೊಡಗಿದುವು. ಹಾಗಂತ,

ಪಕ್ಕದ ಫ್ಲಾಟಿನಲ್ಲಿರುವ ಹಿಂದೂವಿನ ಬಗ್ಗೆ ಮುಸ್ಲಿಮನು ಯಾವುದೇ ತಕರಾರು ವ್ಯಕ್ತಪಡಿಸುವುದಿಲ್ಲ. ಹಾಗೆಯೇ ಮುಸ್ಲಿಮನ  ಬಗ್ಗೆ ಹಿಂದೂವಿಗೂ ಯಾವುದೇ ದೂರುಗಳಿರುವುದಿಲ್ಲ. ಇದು ನಗರಕ್ಕೆ ಸಂಬಂಧಿಸಿ ಮಾತ್ರ ಅಲ್ಲ, ಹಳ್ಳಿ, ಗ್ರಾಮೀಣ ಪ್ರದೇ ಶಗಳ ಪರಿಸ್ಥಿತಿಯೂ ಹೀಗಿಯೇ. ಅಕ್ಕಪಕ್ಕದಲ್ಲಿ ಮನೆ ಮಾಡಿಕೊಂಡು ಬದುಕುತ್ತಿರುವ ಹಿಂದೂವಿಗಾಗಲಿ  ಮುಸ್ಲಿಮರಿಗಾಗಲಿ ಪರಸ್ಪರ ದೂರುಗಳಿಲ್ಲ. ಹಾಗಿದ್ದರೆ ಹಿಂದೂಗಳಿಗೆ ಅಪಾಯಕಾರಿಯಾದ ಮುಸ್ಲಿಮ್ ಮತ್ತು  ಮುಸ್ಲಿಮರಿಗೆ ಅಪಾಯಕಾರಿಯಾದ ಹಿಂದೂ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರೆ ಎಲ್ಲರೂ ತಮಗೆ ಗೊತ್ತಿಲ್ಲದ ಇನ್ನೊಂದು  ಊರಿನತ್ತ ಬೆಟ್ಟು ಮಾಡುತ್ತಾರೆ. ತನ್ನ ಪಕ್ಕದ ಮುಸ್ಲಿಮ್ ಒಳ್ಳೆಯವ, ಆದರೆ, ಆ ಬಿಹಾರದ  ಮುಸ್ಲಿಮ್ ಇದ್ದಾರಲ್ಲ,  ಅವರು ಕೆಟ್ಟವರು ಎಂಬ ಸಮರ್ಥನೆ ಸಿಗುವುದಿದೆ. ಅಂದಹಾಗೆ,

ಆ ಬಿಹಾರದ  ಮುಸ್ಲಿಮನನ್ನು ಈ ವ್ಯಕ್ತಿ ನೋಡಿರುವುದಿಲ್ಲ, ಮಾತಾಡಿಸಿರುವುದಿಲ್ಲ. ಮತ್ತೆ ಹೇಗೆ ಬಿಹಾರ  ಮುಸ್ಲಿಮರು  ಕೆಟ್ಟವರಾಗಿದ್ದಾರೆ ಅಂದರೆ, ಅದಕ್ಕೆ ಈ ಮಾಧ್ಯಮಗಳು ಮತ್ತು ಭಾಷಣಗಾರರೇ ಕಾರಣ. ಎಲ್ಲೋ  ಏನೋ ಘಟನೆ ನಡೆದಿದೆ  ಎಂಬ ಆಧಾರದಲ್ಲಿ ಇಡೀ ಮುಸ್ಲಿಮ್ ಸಮುದಾಯವನ್ನೇ ಕಟಕಟೆಯಲ್ಲಿ ನಿಲ್ಲಿಸುವ ರೀತಿಯ ಸುದ್ದಿ ಭಯೋತ್ಪಾದನೆಯನ್ನು  ಇವರೆಲ್ಲ ಹರಡುತ್ತಿದ್ದಾರೆ. ನಿಜವಾಗಿ, 

ಹಿಂದೂಗಳಾಗಲಿ ಮುಸ್ಲಿಮರಾಗಲಿ ಈ ಮಣ್ಣಿನಲ್ಲೇ  ಬೆಳೆದವರು. ಹಿಂದೂ ಮುಸ್ಲಿಮರ ಸಾಮರಸ್ಯದ ಬದುಕಿಗೆ  ಇಲ್ಲಿ ಸಾವಿರ ವರ್ಷಗಳಿಗಿಂತಲೂ ಅಧಿಕ ಇತಿಹಾಸವಿದೆ. ಹಿಂದೂವಿಗೆ ಮುಸ್ಲಿಮ್ ನೆರವಾಗುವುದು ಮತ್ತು ಮುಸ್ಲಿಮರಿಗೆ  ಹಿಂದೂ ನೆರವಾಗುವುದೆಲ್ಲ ಸುದ್ದಿ ಮಾಡಿ ದಣಿಯುವಷ್ಟು ಈ ದೇಶದಲ್ಲಿ ಪ್ರತಿದಿನ ನಡೆಯುತ್ತಿದೆ. ಬಹುತೇಕ ಇಂಥ ಘಟನೆಗಳನ್ನು ಜನರು ವೀಡಿಯೋ ಮಾಡುವುದಿಲ್ಲ. ಸಹಜವೆಂಬಂತೆ  ಇವೆಲ್ಲ ಬದುಕಿನ ಭಾಗವಾಗಿ ನಡೆದುಕೊಂಡು  ಹೋಗುತ್ತಿದೆ. ಮಾತ್ರವಲ್ಲ, ಮಾಧ್ಯಮಗಳಿಗೂ ಇಂಥವುಗಳಲ್ಲಿ ಆಸಕ್ತಿ ಕಡಿಮೆ. ದ್ವೇಷ ಬಿತ್ತುವ ರಾಜಕಾರಣಿಗಳಂತೂ ಇಂಥ  ಘಟನೆಗಳನ್ನೇ ದ್ವೇಷಿಸುವ ಸಾಧ್ಯತೆ ಇದೆ. ಆದರೆ, ನಕಾರಾತ್ಮಕ ಸುದ್ದಿಗಳು ಹೀಗಲ್ಲ. ಅವುಗಳಿಗೆ ಬಹುಬೇಗ ಪ್ರಚಾರ  ಸಿಗುತ್ತವೆ. ಇವತ್ತಿನ ದಿನಗಳಲ್ಲಿ ಇಂಥ ಸುದ್ದಿಗಳಿಗೆ ಬಹುದೊಡ್ಡ ಮಾರುಕಟ್ಟೆಯಿದೆ. ಆ ಕಾರಣದಿಂದಲೇ,

ಈಶ್ವರಮಂಗಲದಲ್ಲಿ ನಡೆದಂಥ ಘಟನೆಗಳು ಹೆಚ್ಚೆಚ್ಚು ಚರ್ಚೆಯಾಗಬೇಕು ಮತ್ತು ಪ್ರತಿ ಘಟನೆಯೂ ಚಿತ್ರೀಕರಣಗೊಂಡು  ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೆಯಾಗಬೇಕು ಅನ್ನುವುದು. ನಕಾರಾತ್ಮಕ ಸುದ್ದಿಗಳನ್ನು ತೆರೆಮರೆಗೆ ಸರಿಸಬೇಕಾದರೆ  ಅಥವಾ ಅವುಗಳ ಪ್ರಭಾವವನ್ನು ಕಡಿಮೆಗೊಳಿಸ ಬೇಕಾದರೆ ಸಕಾರಾತ್ಮಕ ಸುದ್ದಿಗಳು ಮುನ್ನೆಲೆಗೆ ಬರಬೇಕಾಗುತ್ತದೆ. ಜನರು  ಸಿದ್ಧಾಂತದ ಮಾತುಗಳಿಗಿಂತ ಪ್ರಾಯೋಗಿಕ ಘಟನೆಗಳಿಗೆ ಬೇಗ ಆಕರ್ಷಿತರಾಗುತ್ತಾರೆ. ರಘುರಾಮ್ ಭಟ್‌ರನ್ನು ಮುಸ್ಲಿಮ್  ಯುವಕ ಮಸೀದಿ ವರಾಂಡದಲ್ಲಿ ಕೂರಿಸಿ ಉಪಚರಿಸಿದ ವೀಡಿಯೋ ಚಿತ್ರೀಕರಣಗೊಳ್ಳದೇ ಇರುತ್ತಿದ್ದರೆ ಅದು ಪ್ರಭಾವ ಶಾಲಿ ಸುದ್ದಿ ಆಗುವ ಸಾಧ್ಯತೆ ಕಡಿಮೆ ಇತ್ತು. ಸುದ್ದಿಯೇ ಆಗದೇ ತೆರೆಮರೆಗೆ ಸರಿಯುವ ಸಾಧ್ಯತೆಯೂ ಇತ್ತು. ಆದರೆ  ಯಾವಾಗ ಆ ಇಡೀ ಘಟನೆ ಕ್ಯಾಮರಾದಲ್ಲಿ ಸೆರೆಯಾಯಿತೋ ಜನಸಾಮಾನ್ಯರು ಅದರಲ್ಲಿ ತಮ್ಮನ್ನು ಕಂಡರು.  ಮುಸ್ಲಿಮರನ್ನು ದ್ವೇಷಿಸುತ್ತಿದ್ದ ವ್ಯಕ್ತಿಗಳೇ ಈ ದೃಶ್ಯವನ್ನು ಮೆಚ್ಚಿಕೊಂಡರು. ನೆರವಾದ ಆ ಮುಸ್ಲಿಮ್ ಯುವಕನಿಗೆ ಧನ್ಯವಾದ  ಸಲ್ಲಿಸಿದರು. ಮಾತ್ರವಲ್ಲ, ಅಪಪ್ರಚಾರ ಮತ್ತು ದ್ವೇಷ ಪ್ರಚಾರದ ಸುದ್ದಿ ಮತ್ತು ಭಾಷಣವನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ  ಯಾರಾದರೂ ಹಂಚಿಕೊಂಡಾಗ ಅದಕ್ಕೆ ಪ್ರತಿಕ್ರಿಯೆಯಾಗಿ ಈ ವೀಡಿಯೋವನ್ನು ಹಂಚಿಕೊಳ್ಳುವುದೂ ನಡೆಯಿತು.

ಸದ್ಯದ ಅಗತ್ಯ ಏನೆಂದರೆ, ಸಾಧ್ಯವಾದಷ್ಟೂ ಸಕಾರಾತ್ಮಕ ಸುದ್ದಿ ಮತ್ತು ವೀಡಿಯೋಗಳನ್ನು ಹಂಚಿಕೊಳ್ಳುವುದು. ಆ ಮೂಲಕ  ನಕಾರಾತ್ಮಕ ಸುದ್ದಿಗಳ ಪ್ರಭಾವವನ್ನು ತಗ್ಗಿಸುವುದು. ಸಾಮಾನ್ಯ ಜನರು ಎಂದೂ ಪ್ರತೀಕಾರ ಭಾವದಿಂದ ಬದುಕುವುದಿಲ್ಲ.  ಅವರೊಳಗೆ ಅಂಥ ಭಾವವನ್ನು ಪದೇ ಪದೇ ತುಂಬಿಸಲಾಗುತ್ತದೆ. ಒಂದುವೇಳೆ, ಅವರಿಗೆ ಸಕಾರಾತ್ಮಕ ಸುದ್ದಿಗಳು ಮತ್ತು  ವೀಡಿಯೋಗಳು ಲಭಿಸಿದರೆ ಅವರು ದ್ವೇಷ ಸಾಧಕರ ಟೂಲ್ ಆಗುವುದಕ್ಕೆ ಸಾಧ್ಯವೂ ಇಲ್ಲ. ಈ ಹಿನ್ನೆಲೆಯಲ್ಲಿ ಈಶ್ವರ  ಮಂಗಲದ ಅರ್ಚಕರ ವೀಡಿಯೋ ಮುಖ್ಯವಾಗುತ್ತದೆ. ಅದನ್ನು ಚಿತ್ರೀಕರಿಸಿ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡವರನ್ನು ಶ್ಲಾಘಿಸಬೇಕಾಗುತ್ತದೆ. ನಕಾರಾತ್ಮಕ ಸುದ್ದಿಗಳೇ ತುಂಬಿ ಹೋಗಿರುವ ಮಾರುಕಟ್ಟೆಗೆ ಇಂಥ ಸಕಾರಾತ್ಮಕ  ಸುದ್ದಿಗಳು ಲಗ್ಗೆ ಇಡುತ್ತಾ ಹೋದರೆ ನಿಧಾನಕ್ಕೆ ಇವುಗಳೇ ಈ ಮಾರುಕಟ್ಟೆಯನ್ನು ಆಳಬಹುದು ಮತ್ತು ಆಳಬೇಕು.

ಅರ್ಚಕ ರಘುರಾಮ್ ಭಟ್‌ರನ್ನು ಮಸೀದಿ ವರಾಂಡಕ್ಕೆ ಕೊಂಡೊಯ್ದು ಉಪಚರಿಸಿದ ಆ ಒಳ್ಳೆಯ ಮನಸ್ಸುಗಳಿಗೆ ಧ ನ್ಯವಾದ.

Monday, 6 January 2025

ಜಮಾಅತೆ ಇಸ್ಲಾಮೀ ಹಿಂದ್ ಆಗ್ರಹ ಮತ್ತು 2024ರ ಭಾರತ




2025ನ್ನು ಕೋಮು ಸೌಹಾರ್ದದ ವರ್ಷವಾಗಿ ಘೋಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಜಮಾಅತೆ  ಇಸ್ಲಾಮೀ ಹಿಂದ್ ಆಗ್ರಹಿಸಿರುವಂತೆಯೇ, 2024ರ ಭಾರತದ ಚಿತ್ರಣವನ್ನು ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಆಂಡ್  ಸೆಕ್ಯುಲರಿಸಂ ಎಂಬ ಸರಕಾರೇತರ ಸಂಸ್ಥೆಯೊಂದು ದೇಶದ ಮುಂದಿಟ್ಟಿದೆ. 2024ರಲ್ಲಿ ಒಟ್ಟು 59 ಕೋಮು ಘರ್ಷಣೆಗಳು  ನಡೆದಿದ್ದು, ಸಾವಿಗೀಡಾದ 13 ಮಂದಿಯಲ್ಲಿ 10 ಮಂದಿ ಮುಸ್ಲಿಮರಾಗಿದ್ದರೆ ಮೂರು ಮಂದಿ ಹಿಂದೂಗಳು ಎಂದು  ವರದಿ ಹೇಳುತ್ತದೆ. ಗುಂಪು ಥಳಿತದ ಒಟ್ಟು 12 ಪ್ರಕರಣಗಳು ನಡೆದಿದ್ದು, ಸಾವಿಗೀಡಾದ 10 ಮಂದಿಯಲ್ಲಿ 8 ಮಂದಿ  ಮುಸ್ಲಿಮರಾಗಿದ್ದಾರೆ. ಇನ್ನುಳಿದ ಇಬ್ಬರಲ್ಲಿ ಒಬ್ಬರು ಹಿಂದೂ ಮತ್ತು ಇನ್ನೊಬ್ಬರು ಕ್ರೈಸ್ತರಾಗಿದ್ದಾರೆ. 2021ರಲ್ಲಿ ಗುಂಪು  ಥಳಿತದಿಂದಾಗಿ 21 ಮಂದಿ ಹತ್ಯೆಗೀಡಾಗಿದ್ದರು ಎಂಬುದನ್ನು ಪರಿಗಣಿಸಿದರೆ, 2024 ಪರಿಸ್ಥಿತಿ ಒಂದಷ್ಟು ಸುಧಾರಿಸಿ  ಎಂದು ಹೇಳಬಹುದು. ಅದೇವೇಳೆ, 2023ರಲ್ಲಿ 32 ಕೋಮು ಘರ್ಷಣೆ ಪ್ರಕರಣಗಳು ನಡೆದಿದ್ದರೆ, 2024ರಲ್ಲಿ 59  ಪ್ರಕರಣಗಳು ನಡೆದಿವೆ ಎಂಬುದು ಅಷ್ಟೇ ಆತಂಕದ ಸಂಗತಿಯೂ ಹೌದು. ಅಂದಹಾಗೆ,

ಕೋಮು ಘರ್ಷಣೆ ಮತ್ತು ಗುಂಪು ಥಳಿತ ಎಂಬ ಕ್ರೌರ್ಯದ ಈ ಎರಡು ವಿಭಿನ್ನ ಮಾದರಿಗಳು ಮನುಷ್ಯರು ಮತ್ತು  ಪ್ರಾಣಿಗಳ ನಡುವೆ ನಡೆಯುತ್ತಿಲ್ಲ ಅಥವಾ ಮನುಷ್ಯರು ಮತ್ತು ಅನ್ಯಗೃಹ ಜೀವಿಗಳ ನಡುವೆಯೂ ನಡೆಯುತ್ತಿಲ್ಲ. ತ ನ್ನಂತೆಯೇ ಕಣ್ಣು, ಕಿವಿ, ಮೂಗು, ಬಾಯಿ, ಕೈ-ಕಾಲು ಸಹಿತ ಸರ್ವ ಅಂಗಗಳೂ ಸಮಾನವಾಗಿರುವ ವ್ಯಕ್ತಿಯ ಮೇಲೆ  ಆತನ ಧರ್ಮ, ಆಹಾರ, ಸಂಸ್ಕೃತಿ ಬೇರೆ ಎಂಬ ಕಾರಣಕ್ಕಾಗಿ ಓರ್ವ ವ್ಯಕ್ತಿ ಅಮಾನುಷವಾಗಿ ನಡಕೊಳ್ಳುವುದನ್ನೇ  ಇವೆರಡೂ ಸಂಕೇತಿಸುತ್ತವೆ. ಹೆಚ್ಚಿನೆಲ್ಲ ಕೋಮು ಘರ್ಷಣೆಗಳು ಧಾರ್ಮಿಕ ಸಭೆ ಮತ್ತು ಮೆರವಣಿಗೆಗಳ ಸಂದರ್ಭದಲ್ಲಿಯೇ  ನಡೆದಿದೆ. ಪ್ರಶ್ನೆ ಇರುವುದೂ ಇಲ್ಲೇ.

ಧರ್ಮದ ಹೆಸರಲ್ಲಿ ನಡೆಯುವ ಕಾರ್ಯಕ್ರಮಗಳೇಕೆ ಮನುಷ್ಯ ವಿರೋಧಿ ಸ್ವರೂಪವನ್ನು ಪಡಕೊಳ್ಳ ತೊಡಗಿವೆ? ಧಾರ್ಮಿಕ  ಕಾರ್ಯಕ್ರಮಗಳೆಂದರೆ ಆಯಾ ಧರ್ಮದ ಮೌಲ್ಯಗಳನ್ನು ಜನರಿಗೆ ತಲುಪಿಸುವ ಸಂದರ್ಭವಾಗಿ ಬಳಕೆಯಾಗಬೇಕು.  ಗಣೇಶ ಚತುರ್ಥಿ ಎಂಬುದು ಗಣೇಶನನ್ನು ನಂಬುವ ಮತ್ತು ನಂಬದ ಜನರಿಗೆ ಮಾಹಿತಿಯನ್ನು ಮುಟ್ಟಿಸುವ ಮತ್ತು  ಸಿಹಿಯಾದ ಸನ್ನಿವೇಶವನ್ನು ಅನುಭವಿಸುವ ಘಳಿಗೆ. ತನ್ನನ್ನು ನಂಬದವರ ಮೇಲೆ ಗಣೇಶ ಬಲವಂತದಿAದ ತನ್ನ  ವಿಚಾರವನ್ನು ಹೇರಿದ ಯಾವ ಕುರುಹೂ ಹಿಂದೂ ಪುರಾಣದಲ್ಲಿ ಇಲ್ಲ. ಕೃಷ್ಟಾಷ್ಟಮಿಗೆ ಸಂಬAಧಿಸಿಯೂ ಇವೇ ಮಾತನ್ನು  ಹೇಳ ಬಹುದು. ಈದ್‌ಗೆ ಸಂಬAಧಿಸಿಯೂ ಇವೇ ಮಾತುಗಳನ್ನು ಹೇಳಬಹುದು. ಈ ದೇಶದಲ್ಲಿ 20 ಕೋಟಿಯಷ್ಟು  ಮುಸ್ಲಿಮರಿದ್ದಾರೆ. ಇದರ ಹೊರತಾಗಿ ಕ್ರೈಸ್ತರು, ಸಿಕ್ಖರು, ಬೌದ್ಧರು, ಫಾರ್ಸಿಗಳು ಸಹಿತ ಹಿಂದೂ ಮತ್ತು ಇಸ್ಲಾಮ್  ಧರ್ಮಗಳಲ್ಲಿ ಗುರುತಿಸಿಕೊಳ್ಳದ ಕೋಟ್ಯಂತರ ಜನರಿದ್ದಾರೆ. ಇವರೆಲ್ಲರಿಗೆ ಹಿಂದೂ ಧರ್ಮವನ್ನು ಪರಿಚಯಿಸುವ  ಹೊಣೆಗಾರಿಕೆ ಆ ಧರ್ಮದ ವಕ್ತಾರರ ಮೇಲಿದೆ. ಯಾವುದೇ ಧರ್ಮದ ಬಗ್ಗೆ ಸದ್ಭಾವನೆ ಮೂಡುವುದು ಮತ್ತು ಆ  ಧರ್ಮದ ಕಡೆಗೆ ಜನರು ಆಕರ್ಷಿತರಾಗುವುದು, ಆ ಧರ್ಮದ ಅನುಯಾಯಿಗಳ ವರ್ತನೆ ಮತ್ತು ಬದುಕಿನ ರೀತಿ- ನೀತಿಯಿಂದ. ವಿಷಾದ ಏನೆಂದರೆ,

ಈ ದೇಶದ ಬಹುಸಂಖ್ಯಾತರ ಒಂದು ಗುಂಪು ದಿನೇ ದಿನೇ ಹಿಂದೂ ಧರ್ಮದ ಐಕಾನ್‌ಗಳ ಬಗ್ಗೆ ಮತ್ತು ಹಿಂದೂ  ಧರ್ಮದ ಮೌಲ್ಯಗಳ ಬಗ್ಗೆ ಹಿಂದೂಯೇತರರಿಗೆ ಅತ್ಯಂತ ನಕಾರಾತ್ಮಕ ಸಂದೇಶವನ್ನು ರವಾನಿಸುತ್ತಾ ಇದೆ. ಹಾಗಂತ, ಈ  ಗುಂಪಿನಲ್ಲಿ ಕೇವಲ ಜನಸಾಮಾನ್ಯರು ಮಾತ್ರ ಇರುವುದಲ್ಲ. ಧರ್ಮಗುರುಗಳು, ಸ್ವಾಮೀಜಿಗಳು, ಮುಖಂಡರು ಸಹಿತ  ಪ್ರಭಾವಶಾಲಿಗಳೂ ಇದ್ದಾರೆ. ಇವರೆಲ್ಲ ಹಿಂದೂ ಧರ್ಮವನ್ನು ಪ್ರಚಾರ ಮಾಡುವ ಮತ್ತು ಅದರ ಮೌಲ್ಯಗಳನ್ನು  ಸಾರ್ವಜನಿಕವಾಗಿ ಹಂಚಿಕೊಳ್ಳುವ ಬದಲು ಹಿಂದೂಯೇತರ ಧರ್ಮಗಳನ್ನು ಅದರಲ್ಲೂ ಮುಖ್ಯವಾಗಿ ಇಸ್ಲಾಮನ್ನು  ತೆಗಳಲು ಸಮಯ ವಿನಿಯೋಗಿಸುತ್ತಾರೆ. ಅಪ್ಪಟ ಧಾರ್ಮಿಕ ಸಭೆಗಳಲ್ಲೂ ಮುಸ್ಲಿಮ್ ದ್ವೇಷ ಭಾಷಣಗಳು ನಡೆಯುತ್ತವೆ.  ಧಾರ್ಮಿಕ ಮೆರವಣಿಗೆಗಳಂತೂ ಮಸೀದಿಗಳ ಮುಂದೆ ಸ್ಥಗಿತಗೊಂಡು ಕೂಗಬಾರದ ಘೋಷಣೆಗಳನ್ನು ಕೂಗುವುದು  ಮತ್ತು ಕುಣಿತ ಮತ್ತು ಬ್ಯಾಂಡುಗಳನ್ನು ಬಡಿಯುವುದನ್ನೆಲ್ಲ ಮಾಡಲಾಗುತ್ತದೆ. ಮುಸ್ಲಿಮರು ಹೆಚ್ಚಿರುವ ಪ್ರದೇಶಗಳಲ್ಲಿ ಇಂಥ  ಮೆರವಣಿಗೆಗಳು ಸಾಗುವಾಗಲಂತೂ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲಾಗುತ್ತದೆ. ಅವಮಾನಕಾರಿಯಾಗಿ ನಿಂದಿಸಲಾಗುತ್ತದೆ. ಕಲ್ಲು ತೂರಾಟ ಮತ್ತು ಪ್ರಚೋದನಾತ್ಮಕ ಆಂಗಿಕ ಅಭಿನಯಗಳೂ ನಡೆಯುತ್ತವೆ. ವಿಷಾದ ಏನೆಂದರೆ,

ಇಂಥ  ಬೆಳವಣಿಗೆಗಳನ್ನು ಪ್ರಶ್ನಿಸಬೇಕಾದವರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲ ಎಂಬುದು. ಇದು ಹಿಂದೂ ಧರ್ಮದ  ವರ್ಚಸ್ಸಿಗೆ ಹಾನಿಯನ್ನುಂಟು ಮಾಡುವುದಕ್ಕೆ ಪರೋಕ್ಷ ಕೊಡುಗೆಯನ್ನು ನೀಡುತ್ತದೆ. ಯಾರು ಹಿಂದೂ ಧರ್ಮದ  ರಕ್ಷಕರಂತೆ ಬಿಂಬಿಸಿಕೊಂಡು  ಧರ್ಮ ದ್ವೇಷದ ಮಾತನ್ನಾಡುತ್ತಾರೋ ಮತ್ತು ಮುಸ್ಲಿಮರ ವಿರುದ್ಧ ಪ್ರಚೋದನಾತ್ಮಕವಾಗಿ  ನಡಕೊಳ್ಳುತ್ತಾರೋ ಅದರ ಪ್ರಭಾವ ಅವರಿಗಷ್ಟೇ ಮತ್ತು ಅವರಿರುವ ಪ್ರದೇಶಕ್ಕಷ್ಟೇ ಸೀಮಿತವಾಗಿರುವುದಿಲ್ಲ. ಅವರು  ಆಡಿರುವ ಪ್ರತಿ ಮಾತು ಮತ್ತು ಪ್ರತಿ ವರ್ತನೆಯೂ ಸೋಶಿಯಲ್ ಮೀಡಿಯಾದ ಕಾರಣದಿಂದಾಗಿ ದೇಶದೆಲ್ಲೆಡೆಗೆ  ಹರಡುತ್ತದೆ. ಇದು ಹಿಂದೂ ಧರ್ಮದ ನಿಜ ಮೌಲ್ಯದ ಮೇಲೆ ಮಸುಕನ್ನು ಮೂಡಿಸುತ್ತಲೇ ಹೋಗುತ್ತದೆ. ಸಂಭಾವಿತರು  ಇಂಥ ಮಾತುಗಳಿಂದ ಅಂತರ ಕಾಯ್ದುಕೊಳ್ಳುತ್ತಾ ತಮ್ಮಷ್ಟಕ್ಕೇ ತಾವಿದ್ದರೆ, ಪ್ರಚೋದಕರ ಮಾತು-ಕೃತಿಯಿಂದ  ಪ್ರಭಾವಿತರಾದವರು ಅದಕ್ಕೆ ಇನ್ನಷ್ಟು ಉಪ್ಪು-ಖಾರ ಸೇರಿಸಿ ಇನ್ನಷ್ಟು ಉಗ್ರವಾಗಿ ನಡಕೊಳ್ಳತೊಡಗುತ್ತಾರೆ. ಮುಸ್ಲಿಮರ  ವಿರುದ್ಧ ಮತ್ತು ಅವರ ಆಚಾರ-ವಿಚಾರಗಳ ವಿರುದ್ಧ ಹೇಳಿಕೆಗಳನ್ನು ನೀಡತೊಡಗುತ್ತಾರೆ. ಸಂದರ್ಭ-ಸನ್ನಿವೇಶಗಳು ಸಿಕ್ಕರೆ  ಅಥವಾ ಅಂಥವುಗಳನ್ನು ಸ್ವಯಂ ಸೃಷ್ಟಿಸಿಕೊಂಡೇ ಕಾನೂನು ಕೈಗೆತ್ತಿಕೊಳ್ಳುತ್ತಾರೆ. ಥಳಿತಗಳಲ್ಲಿ ಭಾಗಿಯಾಗುತ್ತಾರೆ. ಹೀಗೆ  ಹಿಂದೂ ಧರ್ಮದ ನಿಜ ಮೌಲ್ಯ ಪ್ರತಿಪಾದಕರು ಒಂದು ಕಡೆ ಮೌನವಾಗುತ್ತಾ ಸಾಗಿದಾಗ, ಹಿಂದೂ ಧರ್ಮವನ್ನು ತಪ್ಪಾಗಿ  ಪ್ರತಿನಿಧಿಸುವ ಗುಂಪು ಸದ್ದು ಮಾಡುತ್ತಾ ತಿರುಗುತ್ತಿರುತ್ತದೆ. ಇದರಿಂದಾಗಿ ಹಿಂದೂ ಧರ್ಮವು ದಿನೇ ದಿನೇ ತನ್ನ ವರ್ಚಸ್ಸ ನ್ನು ಕಳಕೊಳ್ಳುತ್ತಾ ಸಾಗುತ್ತಿರುತ್ತದೆ. ಸದ್ಯ ಅಂಥದ್ದೊಂದು  ವಾತಾವರಣ ದೇಶದೆಲ್ಲೆಡೆ ಇದೆ ಎಂಬುದೇ ನಿಜ.  ಒಂದು ರೀತಿಯಲ್ಲಿ,

ಈ ಬಗೆಯ ವಾತಾವರಣ ಈ ದೇಶದ ಅಭಿವೃದ್ಧಿಗೂ ಮತ್ತು ಆರೋಗ್ಯಕ್ಕೂ ಹಾನಿಕಾರಕ. ಈ ದೇಶದಲ್ಲಿ ಹಿಂದೂ- ಮುಸ್ಲಿಮ್ ಸೌಹಾರ್ದದ ಬದುಕಿಗೆ ಸಾವಿರ ವರ್ಷಗಳ ಇತಿಹಾಸವಿದೆ. ವಿದೇಶದಿಂದ ಬಂದ ಅರಬ್ ವರ್ತಕರನ್ನು ಈ  ದೇಶದ ಹಿಂದೂಗಳು ಪ್ರೀತಿಯಿಂದ ಬರಮಾಡಿ ಕೊಂಡಿದ್ದಾರೆ. ಅವರು ಇಲ್ಲೇ  ನೆಲೆಸುವುದಕ್ಕೂ ವೈವಾಹಿಕ ಸಂಬಂಧ ಬೆಳೆಸುವುದಕ್ಕೂ ಅವಕಾಶ ನೀಡಿದ್ದಾರೆ.  ಹಿಂದೂ-ಮುಸ್ಲಿಮರ ನಡುವೆ ಸೌಹಾರ್ದದ ಬೆಸುಗೆಯನ್ನು ಕಟ್ಟಿದ ಮಹಾನುಭಾವರಾದ ಅನೇಕರು ಈ ನೆಲದಲ್ಲಿ ಆಗಿ  ಹೋಗಿದ್ದಾರೆ. ಮಸೀದಿ ಮತ್ತು ಮಂದಿರಗಳು ಧರ್ಮ ಸೌಹಾರ್ದದ ಸಂಕೇತಗಳಾಗಿ ನೂರಾರು ವರ್ಷಗಳಿಂದ ಈ ದೇ ಶದಲ್ಲಿ ಗುರುತಿಸಿಕೊಂಡು ಬಂದಿವೆ. ಅವು ಹಾಗೆಯೇ ಉಳಿಯಬೇಕಾದುದು ಈ ದೇಶದ ಒಳಿತು ಮತ್ತು ಅಭಿವೃದ್ಧಿಯ  ದೃಷ್ಟಿಂಯಿಂದ  ಅನಿವಾರ್ಯ. ಆದ್ದರಿಂದ,

ಧರ್ಮವನ್ನು ದ್ವೇಷದ ಸಾಧನವಾಗಿ ಬಳಸುವ ಗುಂಪುಗಳನ್ನು ತಡೆಯಬೇಕಾದುದು ಆಯಾ ಧರ್ಮಗಳ ಹೊಣೆಗಾರರ  ಕರ್ತವ್ಯವಾಗಿದೆ. ಹಿಂಸಾತ್ಮಕ ಮನೋಭಾವವುಳ್ಳವರ ಕೈಯ ಆಯುಧವಾಗಿ ಧರ್ಮ ಬಳಕೆಯಾಗಬಾರದು. ಧರ್ಮಕ್ಕೆ  ಸಂಬಂಧಿಸಿದ ರ‍್ಯಾಲಿಗಳು, ಮೆರವಣಿಗೆಗಳು, ಭಾಷಣಗಳೆಲ್ಲ ಆಯಾ ಧರ್ಮದ ಮೌಲ್ಯವನ್ನು ಸಾರುವುದಕ್ಕಿರುವ  ಸಂದರ್ಭಗಳಾಗಬೇಕೇ ಹೊರತು ಇನ್ನೊಂದು ಧರ್ಮವನ್ನು ಅವಮಾನಿಸುವ ಮತ್ತು ಧರ್ಮದ್ವೇಷದ ಮಾತುಗಳ ನ್ನಾಡುವುದಕ್ಕಿರುವ ಸಂದರ್ಭವಾಗಿ ಬಳಕೆಯಾಗಬಾರದು. ಇದು ಸಾಧ್ಯವಾಗುವುದು ಧರ್ಮದ ನಿಜ ಅನುಯಾಯಿಗಳು  ಮೌನ ಮುರಿದಾಗ. ರಾಜಕೀಯಕ್ಕಾಗಿ ಧರ್ಮದ ದುರುಪಯೋಗಿಸುವವರನ್ನು ಪ್ರಬಲವಾಗಿ ವಿರೋಧಿಸುವ  ವಾತಾವರಣವನ್ನು ಹುಟ್ಟು ಹಾಕಬೇಕಾಗಿದೆ. ಹಿಂದೂ ಧರ್ಮವು ಮುಸ್ಲಿಮ್ ವಿರೋಧಿಯಲ್ಲ ಮತ್ತು ಧರ್ಮದ ಹೆಸರಲ್ಲಿ  ಮಾಡುವ ಅನ್ಯಾಯ, ಹಲ್ಲೆ-ಹತ್ಯೆಗಳು ಸ್ವೀಕಾರಾರ್ಹವಲ್ಲ ಎಂಬುದನ್ನು ಪ್ರಬಲವಾಗಿ ಸಾರುವ ಸನ್ನಿ ವೇಶಗಳು  ನಿರ್ಮಾಣವಾಗಬೇಕು. 2025 ಆ ಕಾರಣಕ್ಕಾಗಿ ಗುರುತಿಗೀಡಾಗಲಿ ಎಂದು ಜಮಾಅತೆ ಇಸ್ಲಾಮೀ ಹಿಂದ್ ಹಾರೈಸಿದೆ. ಧರ್ಮದ್ವೇಷದ ಭಾಷಣ, ಲಿಂಚಿಂಗ್ , ಪ್ರಭುತ್ವ ತಾರತಮ್ಯದಂಥ ಅನ್ಯಾಯಗಳು ಕೊನೆಯಾಗಲಿ ಎಂದೂ ಆಗ್ರಹಿಸಿದೆ. ಜೊತೆಗೆ ಬಜೆಟ್ ಗೆ ಸಂಬಂಧಿಸಿ ಹದಿನಾರು ಅಂಶಗಳ ಬೇಡಿಕೆ ಪಟ್ಟಿಯನ್ನೂ ಮುಂದಿಟ್ಟಿದೆ. ಎಲ್ಲವೂ ನಿರೀಕ್ಷಿಸಿದಂತೆ ಸಾಗಿದರೆ 2025 ಭಾರತದ ಪಾಲಿಗೆ ಸ್ಮರಣೀಯ ವರ್ಷವಾಗಲಿದೆ.

Saturday, 4 January 2025

ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ಮತ್ತು ಧರ್ಮ...




ಕಳೆದವಾರ ನಡೆದ ಎರಡು ಘಟನೆಗಳಿಗೆ ಮಾಧ್ಯಮಗಳು ಸಾಕಷ್ಟು ಮಹತ್ವ ಕೊಟ್ಟು ಪ್ರಕಟಿಸಿದುವು. 

1. ಸಾರ್ವಜನಿಕ  ಇಲಾಖೆಯಲ್ಲಿ ಎಂಜಿನಿಯರ್ ಆಗಿ ನಿವೃತ್ತರಾದ ಒಡಿಸ್ಸಾದ ಹಿರಿಯ ನಾಗರಿಕರೊಬ್ಬರು ಪೊಲೀಸರಿಗೆ ದೂರು ನೀಡುವ  ಮೂಲಕ ಮೊದಲ ಘಟನೆ ಬೆಳಕಿಗೆ ಬಂತು. ಇವರಿಗೆ ಬೇರೆ ಬೇರೆ ಸಂಖ್ಯೆಯಿಂದ  ಕರೆ ಬಂತು. ನಿಮ್ಮ ಹೆಸರಲ್ಲಿ ಭಾರೀ ಪ್ರಮಾಣದಲ್ಲಿ ಹಣಕಾಸು ಅವ್ಯವಹಾರ ಆಗಿದೆ  ಮತ್ತು ನಿಮ್ಮ ಆಧಾರ್ ಲಿಂಕನ್ನು ಬಳಸಿಕೊಂಡು ವಂಚಕರು ನಿಮ್ಮನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿಬಿಟ್ಟಿದ್ದಾರೆ ಎಂದು ಕರೆ  ಮಾಡಿದವರು ಹೇಳಿದರು. ಮುಂಬೈ ಕ್ರೈಮ್ ಬ್ರಾಂಚ್ ನಿಂದ ಕರೆ ಮಾಡಲಾಗುತ್ತಿದೆ ಎಂದು ಹೇಳಿದ ಆ ವ್ಯಕ್ತಿ, ಪ್ರಕರಣದಲ್ಲಿ  ನಿಮಗೆ 7 ವರ್ಷಗಳ ವರೆಗೆ ಶಿಕ್ಷೆಯಾಗುತ್ತದೆ ಎಂದೂ ನಂಬಿಸಿದ. ಅವರ ಆಧಾರ್ ಸಂಖ್ಯೆಯನ್ನೂ ಹೇಳಿದ. ಇನ್ನೊಂದು  ಕಡೆ, ಫೆಡೆಕ್ಸ್ ಎಂಬ ಕೊರಿಯರ್ ಸಂಸ್ಥೆಯಿಂದ  ಎಂದು ಹೇಳಿಕೊಂಡು ಕರೆ ಬಂತು. ಅವರ ಹೆಸರಲ್ಲಿ ಮಾದಕ ಪದಾರ್ಥ  ವ್ಯವಹಾರ ನಡೆಯುತ್ತಿರುವುದಾಗಿ ಕರೆ ಮಾಡಿದಾತ ಹೇಳಿದನಲ್ಲದೇ, ಭಾರೀ ಅಪಾಯ ಕಾದಿದೆ ಎಂಬಂತೆ  ಬೆದರಿಸಿದ. ಈ  ಹಿರಿಯರಿಗೆ ಭಯವಾಯಿತು. ಇಂಜಿನಿಯರ್ ಆಗಿ ಕೈತುಂಬಾ ಸಂಬಳ ಪಡೆದು ಆರಾಮವಾಗಿ ಬದುಕಿದ್ದ ಅವರ ಪಾಲಿಗೆ  ಈ ಕರೆಗಳು ಅನಿರೀಕ್ಷಿತವಾಗಿತ್ತು. ನಿವೃತ್ತಿ ವೇತನ ಮತ್ತು ಉದ್ಯೋಗಸ್ಥೆಯಾಗಿದ್ದ ಪತ್ನಿಯ ದುಡಿಮೆಯೊಂದಿಗೆ  ಆರಾಮವಾಗಿ ಬದುಕುವುದನ್ನು ಮಾತ್ರ ಯೋಚಿಸಿದ್ದ ಅವರನ್ನು ಈ ಕರೆಗಳು ಚಿಂತೆಗೆ ಹಚ್ಚಿತು. ಇತರರಿಗೆ ಗೊತ್ತು  ಮಾಡುವುದಕ್ಕಿಂತ ಆದಷ್ಟು ಬೇಗ ಈ ಉರುಳಿನಿಂದ ಪಾರಾದರೆ ಸಾಕು ಎಂದು ಯೋಚಿಸಿದ ಅವರು ಕರೆ ಮಾಡಿದವರ  ತಾಳಕ್ಕೆ ತಕ್ಕಂತೆ ಕುಣಿಯತೊಡಗಿದರು. ತನ್ನ ಮತ್ತು ಪತ್ನಿಯ ಖಾತೆಯಿಂದ ಕರೆ ಮಾಡಿದವರು ನೀಡಿದ ಖಾತೆಗೆ ಒಟ್ಟು  ಒಂದು ಕೋಟಿ 37 ಲಕ್ಪ ರೂಪಾಯಿಯನ್ನು ವರ್ಗಾಯಿಸಿದರು. ಮತ್ತೂ ಅವರು ಪೀಡಿಸಿದಾಗ ಇವರು ಪೊಲೀಸರಿಗೆ  ದೂರು ನೀಡಿದರು. ತನಿಖೆ ಕೈಗೊಂಡ ಪೊಲೀಸರು ಅನಿತಾ ಮಲ್ಹೋತ್ರಾ ಮತ್ತು ಅನುರಾಗ್ ಮಲ್ಹೋತ್ರ ಎಂಬ ತಾಯಿ,  ಮಗನನ್ನು ಬಂಧಿಸಿದರು. ಇವರ ಮೇಲೆ ಅದಾಗಲೇ ಇಂಥ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿರುವುದನ್ನೂ ಪತ್ತೆ  ಹಚ್ಚಿದರು.

ಇನ್ನೊಂದು ಘಟನೆ, ವಿಜಯ ಕುಮಾರ್ ಎಂಬ 39 ವರ್ಷ ವಯಸ್ಸಿನ ವ್ಯಕ್ತಿಯದ್ದು. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ  ಆಫ್ ಇಂಡಿಯಾ ಅಥವಾ TRAIಯ  ಅಧಿಕಾರಿಗಳೆಂದು ಗುರುತಿಸಿಕೊಂಡ ವ್ಯಕ್ತಿಗಳು ಇವರಿಗೆ ಕರೆ ಮಾಡಿದರು. ನಿಮ್ಮ  ಮೊಬೈಲ್ ಸಿಮ್ ಹಣಕಾಸು ಅವ್ಯವಹಾರಗಳಿಗೆ ಬಳಕೆಯಾಗಿದೆ ಎಂದು ಹೇಳಿದರು. ಬಳಿಕ ವೀಡಿಯೋ ಕರೆಗೆ  ಬರುವಂತೆ ಆಹ್ವಾನಿಸಿದರು. ಇವರು ವೀಡಿಯೋ ಕರೆ ಮಾಡುವ ಆ್ಯಪ್ ಡೌನ್‌ಲೋಡ್ ಮಾಡಿ ಸ್ಪಂದಿಸಿದರು. ಅಲ್ಲಿಂದ  ಭಯ ಹುಟ್ಟಿಸುವ ಪ್ರಕ್ರಿಯೆ ಆರಂಭವಾಯಿತು. ನೀವು ತನಿಖೆಯಲ್ಲಿದ್ದೀರಿ ಮತ್ತು ನಿಮ್ಮ ಆಧಾರ್ ಕಾರ್ಡ್ ಬಳಸಿ  ರಾಷ್ಟ್ರೀಯ ಬ್ಯಾಂಕ್‌ ನಿಂದ  6 ಕೋಟಿ ರೂಪಾಯಿಯ ಅವ್ಯವಹಾರ ಮಾಡಲಾಗಿದೆ ಎಂದು ನಂಬಿಸಿದರು. ಬೆದರಿದ  ವಿಜಯ ಕುಮಾರ್, ಕರೆ ಮಾಡಿದವರು ಹೇಳಿದಂತೆ ನಡಕೊಳ್ಳಲು ಪ್ರಾರಂಭಿಸಿದರು. ಒಟ್ಟು 11 ಖಾತೆಯಿಂದ 12 ಕೋಟಿ  ರೂಪಾಯಿಯಷ್ಟು ಮೊತ್ತವನ್ನು ಅವರ ಖಾತೆಗಳಿಗೆ ವರ್ಗಾಯಿಸಿದರು. ದುರಂತ ಏನೆಂದರೆ, ಈ ಇಡೀ ಪ್ರಕ್ರಿಯೆಯನ್ನು  ಮನೆಯವರಿಂದ ಮತ್ತು ಗೆಳೆಯರಿಂದ ಅವರು ಮುಚ್ಚಿಟ್ಟಿದ್ದರು. ಕೊನೆಗೆ ಗತ್ಯಂತರವಿಲ್ಲದೇ ಪೊಲೀಸರಿಗೆ ದೂರು  ನೀಡಿದಾಗ ಘಟನೆ ಬೆಳಕಿಗೆ ಬಂತು. ಅಂದಹಾಗೆ,

ಡಿಜಿಟಲ್ ಅರೆಸ್ಟ್ ಎಂಬ ಹೊಸ ಪದವೊಂದು ಹುಟ್ಟಿಕೊಂಡದ್ದೇ  ಈ ಬಗೆಯ ವಂಚನೆಗಳ ಹಿನ್ನೆಲೆಯಲ್ಲಿ. ತಾಂತ್ರಿಕವಾಗಿ  ಹೊಸ ಹೊಸ ಸಂಶೋಧನೆಗಳಾದಂತೆಯೇ ವಂಚನೆ, ಮೋಸಗಳಲ್ಲೂ ಹೊಸ ಹೊಸ ಶೋಧನೆಗಳಾಗುತ್ತವೆ ಎಂಬುದನ್ನು  ಇವು ಮತ್ತು ಇಂಥ ಹತ್ತು-ಹಲವು ಬಗೆಯ ವಂಚನಾ ಘಟನೆಗಳು ಹೇಳುತ್ತಿವೆ. ಅಲ್ಲದೇ, ಇದೀಗ ಮೊಬೈಲ್ ಕರೆಗಳ  ಮೊದಲು ಡಿಜಿಟಲ್ ಅರೆಸ್ಟಿನ ಬಗ್ಗೆ ಎಚ್ಚರಿಸುವ ಮಾಹಿತಿಗಳನ್ನು ಕೇಂದ್ರ ಸರಕಾರ ಹಂಚಿಕೊಳ್ಳತೊಡಗಿದೆ. ನೀವು ಯಾರಿಗಾದರೂ ಕರೆ ಮಾಡುವ ಉದ್ದೇಶದಿಂದ ಡಯಲ್ ಮಾಡಿದರೆ ಆ ಕಡೆಯ ವ್ಯಕ್ತಿ ಕರೆ ಸ್ವೀಕರಿಸುವ ವರೆಗೂ ಈ ಮಾಹಿತಿ  ನಿಮ್ಮನ್ನು ಪದೇ ಪದೇ ಎಚ್ಚರಿಸುತ್ತಲೇ ಇರುತ್ತದೆ. ಈ ಹಿಂದೆ ಕೊರೋನಾ ಕಾಲದಲ್ಲಿ ಇಂಥದ್ದೇ  ಎಚ್ಚರಿಕೆಯನ್ನು ಆಲಿಸಿ  ಆಲಿಸಿ ಅದು ಬಾಯಿಪಾಠವೇ ಆಗಿತ್ತು. ಅಂಥದ್ದೇ  ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ ಎಂಬುದನ್ನೇ ಈಗಿನ  ಬೆಳವಣಿಗೆಗಳು ಹೇಳುತ್ತಿವೆ. ನಿಜವಾಗಿ,

ಕಾನೂನಿನ ಭಯ ಮತ್ತು ದೇವಭಯ- ಎರಡೂ ಇಲ್ಲವಾದಾಗ ಮನುಷ್ಯ ಅತ್ಯಂತ ಕ್ರೂರಿಯಾಗಬಲ್ಲ. ಅಪರಾಧ  ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣ ಬಹಳ ಕಡಿಮೆಯಾಗಿರುವುದು ಇಲ್ಲಿನ ಒಂದು ಲೋಪವಾದರೆ, ಸತ್ಯ-ನ್ಯಾಯ- ಪ್ರಾಮಾಣಿಕತೆ ಇತ್ಯಾದಿ ಮೌಲ್ಯಗಳು ಸಾಮಾಜಿಕ ಬದುಕಿನಿಂದ ದೂರವಾಗುತ್ತಿರುವುದು ಇನ್ನೊಂದು ಲೋಪ. ಭಾರತೀಯ  ಕಾನೂನುಗಳು ಎಷ್ಟೇ ಪ್ರಬಲವಾಗಿರಲಿ, ಅದನ್ನು ಜಾರಿ ಮಾಡುವ ವಿವಿಧ ಹಂತದ ಅಧಿಕಾರಿಗಳು ಭ್ರಷ್ಟರಾದರೆ, ಕಾನೂನು  ಹಲ್ಲಿಲ್ಲದ ಹಾವಾಗಬೇಕಾಗುತ್ತದೆ. ಯಾವುದೇ ಅಪರಾಧವನ್ನು ಪರಿಣಾಮಕಾರಿಯಾಗಿ ಸಾಬೀತುಪಡಿಸುವುದು ಪೊಲೀಸರನ್ನು ಹೊಂದಿಕೊಂಡಿರುತ್ತದೆ. ಅವರು ಪ್ರಕರಣ ದಾಖಲು ಮಾಡುವುದು, ಸಾಕ್ಷ್ಯ  ಸಂಗ್ರಹ, ಪೂರಕ ಸಾಕ್ಷ್ಯಗಳು ಮತ್ತು ಪ್ರಬಲ  ಎಫ್‌ಐಆರ್ ಅನ್ನು ದಾಖಲಿಸಿದರೆ ಅಪರಾಧಿ ಕಾನೂನು ಕುಣಿಕೆಯಿಂದ ತಪ್ಪಿಸಿಕೊಳ್ಳುವುದು ಸುಲಭ ಅಲ್ಲ. ಬಳಿಕ  ನ್ಯಾಯಾಧೀಶರ ಪಾತ್ರವೂ ಇಲ್ಲಿ ಮುಖ್ಯವಾಗುತ್ತದೆ. ಆದರೆ, ಅಪರಾಧವನ್ನು ದಾಖಲಿಸುವ ಪ್ರಾಥಮಿಕ ಹಂತವೇ ನಮ್ಮ  ದೇಶದಲ್ಲಿ ತೀರಾ ದುರ್ಬಲವಾಗಿದೆ. ಬಡವರಿಗೊಂದು ನೀತಿ, ಶ್ರೀಮಂತರಿಗೊಂದು, ರಾಜಕಾರಣಿಗಳಿಗೊಂದು,  ಪ್ರಭಾವಿಗಳಿಗೊಂದು ನೀತಿ ಎಂಬಂತೆ ನಮ್ಮಲ್ಲಿನ ಹೆಚ್ಚಿನ ಪೊಲೀಸ್ ಠಾಣೆಗಳು ವರ್ತಿಸುತ್ತವೆ. ನೀವು ಶ್ರೀಮಂತರಾಗಿದ್ದು,  ಹಣ ನೀಡಲು ತಯಾರಿದ್ದೀರೆಂದರೆ ಎಂಥದ್ದೇ  ಅಪರಾಧವನ್ನೂ ಮುಚ್ಚಿ ಹಾಕಲು ಸಾಧ್ಯವಿದೆ ಎಂಬ ವಾತಾವರಣವೊಂದು  ದೇಶದಲ್ಲಿ ನಿರ್ಮಾಣವಾಗಿಬಿಟ್ಟಿದೆ. ಆದ್ದರಿಂದಲೇ, ಮೇಲಿನ ಎರಡೂ ಘಟನೆಗಳ ವ್ಯಕ್ತಿಗಳು ಲಂಚ ಕೊಟ್ಟು ಪ್ರಕರಣದಿಂದ  ಪಾರಾಗುವ ದಾರಿಯನ್ನು ಕಂಡುಕೊಳ್ಳಲು ಯತ್ನಿಸಿದ್ದರು.
ಇನ್ನೊಂದು ಕಡೆ,

 ಧರ್ಮವು ಬಾಹ್ಯ ಸಂಕೇತಗಳಿಗಷ್ಟೇ ಸೀಮಿತಗೊಳ್ಳತೊಡಗಿದೆ. ಧರ್ಮವೆಂದರೆ, ಮೌಲ್ಯಗಳ  ಗೋದಾಮು ಎಂದರ್ಥ. ಪೊಲೀಸರು, ಸಿಸಿಟಿವಿಗಳು, ನ್ಯಾಯಾಲಗಳು ಮತ್ತು ಕಾನೂನುಗಳು ಇಲ್ಲದೇ ಇರುವ  ಸಮಯದಲ್ಲೂ ಅತ್ಯಂತ ಪ್ರಾಮಾಣಿಕ ಮತ್ತು ಸತ್ಯಸಂಧ ಬದುಕನ್ನು ನಡೆಸಲು ಪ್ರೇರಣೆ ನೀಡುವುದಕ್ಕೆ ವ್ಯಕ್ತಿಯನ್ನು  ತರಬೇತುಗೊಳಿಸುವುದೇ ಧರ್ಮ. ಸುಳ್ಳು ಹೇಳಿದರೆ, ವಂಚಿಸಿದರೆ, ಅನ್ಯಾಯ ಎಸಗಿದರೆ, ಅಪರಾಧ ಪ್ರಕರಣಗಳಲ್ಲಿ  ಭಾಗಿಯಾದರೆ... ಇತ್ಯಾದಿ ಸರ್ವ ಕೆಡುಕುಗಳಿಗೂ ದೇವನು ಶಿಕ್ಷೆ ನೀಡುತ್ತಾನೆ ಎಂಬ ಪ್ರಜ್ಞೆಯೊಂದಿಗೆ ಬದುಕುವುದನ್ನೇ  ಧರ್ಮಗಳು ಕಲಿಸಿಕೊಡುತ್ತವೆ. ವಿಶೇಷ ಏನೆಂದರೆ,

ಈ ದೇಶದಲ್ಲಿ ಧರ್ಮಿಷ್ಠರು ದಿನೇ ದಿನೇ ಹೆಚ್ಚುತ್ತಿದ್ದಾರೆ. ಮಸೀದಿಗಳಡಿ ಮಂದಿರವನ್ನು ಹುಡುಕುವಷ್ಟು ಮತ್ತು ಅನಾಥ  ಆರಾಧನಾಲಯಗಳನ್ನು ಪುನರುಜ್ಜೀವನಗೊಳಿಸಿ ಆರಾಧನೆಗೆ ಅರ್ಹ ಮಾಡುವಷ್ಟು ಧಾರ್ಮಿಕತನ ಇಲ್ಲಿ ಕಾಣಿಸುತ್ತಿದೆ. ಹಿಂ ದಿಗಿಂತ ಹೆಚ್ಚಾಗಿ ಇವತ್ತು ಜನರು ಧಾರ್ಮಿಕ ಸಂಕೇತಗಳನ್ನು ಧರಿಸುತ್ತಿದ್ದಾರೆ. ಆದರೆ, ಧರ್ಮ ಕಲಿಸುವ ಮೌಲ್ಯಗಳ  ಪಾಲನೆಯಲ್ಲಿ ಮಾತ್ರ ದಿನೇ ದಿನೇ ಸೋರಿಕೆ ಹೆಚ್ಚಾಗುತ್ತಿದೆ. ಅತೀವ ಧರ್ಮನಿಷ್ಠ ಎಂದು ಗುರುತಿಸಿಕೊಂಡವರೇ ಅಪರಾಧ  ಪ್ರಕರಣಗಳಲ್ಲಿ ಸಿಕ್ಕಿ ಬೀಳುವುದನ್ನೂ ಮತ್ತು ಯಾವ ಅಪರಾಧಿ ಪ್ರಜ್ಞೆಯೂ ಇಲ್ಲದೆ ವರ್ತಿಸುವುದನ್ನೂ ನಾವು  ನೋಡುತ್ತಿದ್ದೇವೆ.

ಇಸ್ಲಾಮ್ ಮನುಷ್ಯ ಸಂಬಂಧವನ್ನು ದೇವನೊಂದಿಗೆ ಜೋಡಿಸುತ್ತದೆ. ಮನುಷ್ಯನ ಪ್ರತಿ ಕ್ರಿಯೆಯೂ ದಾಖಲಿಸಲ್ಪಡುತ್ತದೆ  ಮತ್ತು ಮರಣಾನಂತರ ದೇವನು ಅವನ್ನು ಎದುರಿಟ್ಟು ವಿಚಾರಿಸುತ್ತಾನೆ ಎಂಬು ದಾಗಿ ಇಸ್ಲಾಮ್ ಹೇಳುತ್ತದೆ. ಆದ್ದರಿಂದ  ದೇವ ನೋಡುತ್ತಿದ್ದಾನೆ ಎಂಬ ಪ್ರಜ್ಞೆಯಿಂದಲೇ ಇಹಲೋಕ ದಲ್ಲಿ ಜೀವಿಸಬೇಕು ಎಂದು ಇಸ್ಲಾಮ್ ಆದೇಶಿಸುತ್ತದೆ. ವ್ಯಕ್ತಿ  ಸುಧಾರಣೆಯಲ್ಲಿ ದೇವಭಯವನ್ನು ಪ್ರಬಲ ಅಸ್ತçವಾಗಿ ಪ್ರತಿಪಾದಿಸುವ ಇಸ್ಲಾಮ್, ಅಪರಾಧವನ್ನು ತಡೆಯುವುದಕ್ಕೆ  ಇದನ್ನೇ ಪ್ರಬಲ ಆಯುಧವಾಗಿಯೂ ಪರಿಚಯಿಸುತ್ತದೆ. ಕಾನೂನುಗಳ ದೌರ್ಬಲ್ಯವನ್ನು ದುರುಪಯೋಗಿಸುವವರ ಸಂಖ್ಯೆ  ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ‘ದೇವ ನೋಡುತ್ತಿದ್ದಾನೆ’ ಎಂಬ ಎಚ್ಚರಿಕೆಯ ಪ್ರಜ್ಞೆಯನ್ನು ಜನರಲ್ಲಿ ಮೂಡಿಸಬೇಕಾದ  ಅಗತ್ಯ ಇದೆ.

ಕುವೈಟ್‌ನಿಂದ ಮರಳಿರುವ ಪ್ರಧಾನಿಯ ಕಣ್ಣು ತೆರೆಸಿಯಾನೇ ಅರ್ಮಾನ್ ಖಾನ್?





ಪ್ರಧಾನಿ ನರೇಂದ್ರ ಮೋದಿಯವರು ಕುವೈಟ್ ಅಮೀರ್ ಶೇಖ್ ಮಿಶಲ್ ಅಲ್ ಅಹ್ಮದ್ ಅಲ್ ಜಾಬಿರ್ ಅಲ್ ಸಲಾಹ್  ಅವರಿಂದ ಕುವೈಟ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್ ಪ್ರಶಸ್ತಿಯನ್ನು  ಸ್ವೀಕರಿಸುತ್ತಿರುವಾಗ ಇತ್ತ ಅರ್ಮಾನ್ ಖಾನ್ ಅನ್ನುವ ಬಡ ಟ್ರಕ್ ಚಾಲಕನೊಬ್ಬನ ವೀಡಿಯೋ ಸೋಶಿಯಲ್  ಮೀಡಿಯಾದಲ್ಲಿ ಹರಿದಾಡುತ್ತಾ ಇತ್ತು. ಆತನ ಸುತ್ತ ದುಷ್ಕರ್ಮಿಗಳ ಗುಂಪು ನಿಂತಿತ್ತು. ಹೊಡೆದು ಬಡಿದು ಸತಾಯಿಸಿದ್ದ  ಆ ಗುಂಪು ‘ಗೋವು ನಮ್ಮ ತಾಯಿ, ಎತ್ತು ನಮ್ಮ ತಂದೆ’ (ಗೋ ಹಮಾರಾ ಮಾತಾ ಹೆ, ಬೆಯಿಲ್ ಹಮಾರಾ ಬಾಪ್ ಹೆ)  ಎಂದು ಹೇಳುವಂತೆ ಅರ್ಮಾನ್‌ನನ್ನು ನಿರ್ಬಂಧಿಸಿತು. ಇದು ನಡೆದಿರುವುದು ಹರ್ಯಾಣದ ನೂಹ್ ಪ್ರದೇಶದಲ್ಲಿ.  ಹಾಗಂತ, ಈತ ಗೋವುಗಳ ಸಾಗಾಟ ಮಾಡುತ್ತಾ ಇರಲಿಲ್ಲ. ಆತನ ಟ್ರಕ್‌ನಲ್ಲಿ ಎತ್ತುಗಳೇ ಇದ್ದುವು. ಆ ಕಾರಣದಿಂದಲೇ,  ‘ಎತ್ತು ನಮ್ಮ ತಂದೆ’ ಎಂದು ಆತನಲ್ಲಿ ಈ ಗುಂಪು ಹೇಳಿಸಿತ್ತು.

ಒಂದುಕಡೆ, ಮುಸ್ಲಿಮ್ ರಾಷ್ಟ್ರಗಳೆಂದೇ ಅಧಿಕೃತವಾಗಿ ಗುರುತಿಸಿಕೊಂಡಿರುವ ಮತ್ತು ಮುಸ್ಲಿಮರೇ ಆಡಳಿತ ನಡೆಸುತ್ತಿರುವ  ಗಲ್ಫ್ ರಾಷ್ಟ್ರಗಳೊಂದಿಗೆ ಭಾರತಕ್ಕೆ ಉತ್ತಮ ಸಂಬಂಧ ಇದೆ. ಯುಎಇ, ಸೌದಿ, ಈಜಿಪ್ಟ್, ಬಹರೈನ್ ಸಹಿತ ವಿವಿಧ  ಮುಸ್ಲಿಮ್ ರಾಷ್ಟ್ರಗಳಿಗೆ ಪ್ರಧಾನಿ ಮೋದಿ ಭೇಟಿಯನ್ನೂ ನೀಡಿದ್ದಾರೆ. ಇವುಗಳಲ್ಲಿ ಒಂದಕ್ಕಿಂತ  ಹೆಚ್ಚು ಭೇಟಿ ನೀಡಿದ  ರಾಷ್ಟçಗಳೂ ಇವೆ. ಕಳೆದ 43 ವರ್ಷಗಳಲ್ಲೇ  ಭಾರತದ ಯಾವೊಬ್ಬ ಪ್ರಧಾನಿಯೂ ಭೇಟಿ ನೀಡದ ಕುವೈಟ್‌ಗೆ ಮೋದಿ  ಭೇಟಿ ನೀಡುವ ಮೂಲಕ ಇತಿಹಾಸವನ್ನೂ ನಿರ್ಮಿಸಿz್ದÁರೆ. ಈ ಹಿಂದೆ ಪ್ರಿನ್ಸ್ ಚಾರ್ಲ್ಸ್, ಕ್ಲಿಂಟನ್, ಜಾರ್ಜ್ ಬುಶ್‌ಗೆ  ನೀಡಲಾಗಿರುವ ಅತ್ಯುನ್ನತ ಪ್ರಶಸ್ತಿಯನ್ನು ಮೋದಿಗೆ ನೀಡುವ ಮೂಲಕ ಕುವೈಟ್ ಉನ್ನತವಾಗಿಯೇ ಗೌರವಿಸಿದೆ. ಇಷ್ಟೇ  ಅಲ್ಲ,

ಬಹುದೊಡ್ಡ ಸಂಖ್ಯೆಯ ಭಾರತೀಯರಿಗೆ ಈ ರಾಷ್ಟ್ರಗಳು ಉದ್ಯೋಗವನ್ನೂ ನೀಡಿ ಪೊರೆದಿವೆ. ಕೇವಲ ಯುಎಇ ಒಂದೇ  ಸುಮಾರು 36 ಲಕ್ಷದಷ್ಟು ಭಾರತೀಯರಿಗೆ ಉದ್ಯೋಗ ನೀಡಿದೆ. ಇವರಲ್ಲಿ 9 ಲಕ್ಷ ಮಂದಿ ಹಿಂದೂಗಳು. 24 ಲಕ್ಷ  ಮಂದಿ ಭಾರತೀಯರಿಗೆ ಉದ್ಯೋಗ ನೀಡಿರುವ ಸೌದಿಯು ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ 24 ಲಕ್ಷದಲ್ಲಿ 7  ಲಕ್ಷ ಮಂದಿ ಹಿಂದೂ ಗಳಿದ್ದಾರೆ. ಕುವೈಟ್ 10 ಲಕ್ಷ ಭಾರತೀಯರಿಗೆ ಉದ್ಯೋಗ ನೀಡಿದ್ದರೆ, ಒಮಾನ್ ಸುಮಾರು 7 ಲಕ್ಷ  ಭಾರತೀಯರಿಗೆ ಉದ್ಯೋಗ ನೀಡಿದೆ. ಕತಾರ್ ಸುಮಾರು ಒಂದು ಲಕ್ಷ ಮಂದಿ ಭಾರತೀಯರಿಗೆ ಜೀವನಾಧಾರ ನೀಡಿದ್ದರೆ,  ಬಹರೈನ್ ಸುಮಾರು ಮೂರೂವರೆ ಲಕ್ಷ ಮಂದಿಗೆ ಜೀವನಾಧಾರ ನೀಡಿದೆ. ಇದರಲ್ಲಿ ಒಂದು ಲಕ್ಷಕ್ಕಿಂತಲೂ ಅಧಿಕ  ಹಿಂದೂಗಳಿದ್ದಾರೆ. ಹಾಗಂತ,

ಮುಸ್ಲಿಮ್ ಎಂದೇ ತಮ್ಮನ್ನು ಕರೆಸಿಕೊಳ್ಳುತ್ತಿರುವ ಮತ್ತು ಮುಸ್ಲಿಮರೇ ಬಹುಸಂಖ್ಯಾತರಾಗಿರುವ ಈ ರಾಷ್ಟ್ರಗಳಲ್ಲಿ ಧರ್ಮ,  ಆಹಾರ, ಆರಾಧನೆಯ ಕಾರಣಕ್ಕಾಗಿ ಒಬ್ಬನೇ ಒಬ್ಬ ಹಿಂದೂ ದೌರ್ಜನ್ಯಕ್ಕೆ ಒಳಗಾಗುತ್ತಿಲ್ಲ. ಅಲ್ಲಿನ ಹಿಂದೂಗಳ ಮೇಲೆ  ಸಾಮೂಹಿಕ ಥಳಿತ ನಡೆಯುತ್ತಿಲ್ಲ. ಅಪರಾಧ ಕೃತ್ಯಗಳಲ್ಲಿ ಭಾಗಿಯಾದ ಹಿಂದೂ ವ್ಯಕ್ತಿಯನ್ನು ಎತ್ತಿಕೊಂಡು ಅಲ್ಲಿರುವ ಇಡೀ  ಹಿಂದೂಗಳನ್ನು ಕಟಕಟೆಯಲ್ಲಿ ನಿಲ್ಲಿಸುವ ಸನ್ನಿವೇಶಗಳೂ ನಡೆದಿಲ್ಲ. ಹಿಂದೂಗಳ ವಿರುದ್ಧ ಯಾರೂ ಭಾಷಣ ಮಾಡುವುದಿಲ್ಲ. ಭಗವದ್ಗೀತೆಯನ್ನೋ ಹಿಂದೂ ಪುರಾಣಗಳನ್ನೋ ಎತ್ತಿಕೊಂಡು ಯಾರೂ ಅವಮಾನಕರ ಹೇಳಿಕೆ ನೀಡುವುದಿಲ್ಲ.  ಇವುಗಳ ಇಷ್ಟನೇ ಪುಟದಲ್ಲಿರುವ ಇಂತಿಂಥ  ಶ್ಲೋಕಗಳು ಮತ್ತು ಮಾಹಿತಿಗಳು ಹೇಗೆ ಇಸ್ಲಾಮ್ ವಿರೋಧಿ ಎಂದು  ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದಿಲ್ಲ. ಹಿಂದೂ ವಿರೋಧಿ ಅಭಿಯಾನವನ್ನು ಯಾರೂ ಕೈಗೊಳ್ಳುವುದಿಲ್ಲ.  ಹಿಂದೂಗಳಿಗೆ ಮನೆ ನೀಡುವುದಿಲ್ಲ, ಹಿಂದೂಗಳಿಗೆ ಉದ್ಯೋಗ ನೀಡುವುದಿಲ್ಲ, ಹಿಂದೂಗಳೊಂದಿಗೆ ವ್ಯಾಪಾರ ನಡೆಸುವು ದಿಲ್ಲ.. ಎಂದೆಲ್ಲಾ ಯಾರೂ ಹೇಳುವುದೂ ಇಲ್ಲ. ಅಲ್ಲಿಯ ಧರ್ಮಗುರುಗಳು ಹಿಂದೂ ವಿರೋಧಿ ಭಾಷಣ ಮಾಡುವುದಿಲ್ಲ.  ಶಾಲೆಯಲ್ಲಾಗಲಿ, ಮಾರುಕಟ್ಟೆಯಲ್ಲಾಗಲಿ, ಸರಕಾರಿ ಕಚೇರಿಗಳಲ್ಲಾಗಲಿ ಅಥವಾ ನ್ಯಾಯಾಲಯಗಳಲ್ಲೇ  ಆಗಲಿ,  ಹಿಂದೂ-ಮುಸ್ಲಿಮ್ ಎಂಬ ಬೇಧವನ್ನೂ ಮಾಡುವುದಿಲ್ಲ. ನಿಜವಾಗಿ,

ಇವೆಲ್ಲ ಔದಾರ್ಯವಲ್ಲ. ಅಲ್ಪಸಂಖ್ಯಾತರಿಗೆ ರಕ್ಷಣೆ ಒದಗಿಸಬೇಕಾದ ಜವಾಬ್ದಾರಿ ಆಯಾ ರಾಷ್ಟ್ರಗಳ ಬಹುಸಂಖ್ಯಾತರದ್ದು.  ಒಂದು ರಾಷ್ಟ್ರದಲ್ಲಿ ಅಲ್ಪಸಂಖ್ಯಾತರು ಅಸುರಕ್ಷಿತತೆ ಮತ್ತು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ ಎಂದರೆ, ಅದು ಅಲ್ಲಿನ  ಬಹುಸಂಖ್ಯಾತರ ವೈಫಲ್ಯವಾಗಿ ಮತ್ತು ಅವರ ಪಾಲಿನ ನಾಚಿಕೆಗೇಡಿನ ಸಂಗತಿಯಾಗಿ ಗುರುತಿಸಿಕೊಳ್ಳಬೇಕಾಗುತ್ತದೆ.  ಪಾಕಿಸ್ತಾನ, ಅಫಘಾನಿಸ್ತಾನ, ಬಾಂಗ್ಲಾದೇಶಗಳ ಅಲ್ಪಸಂಖ್ಯಾತ ಹಿಂದೂಗಳಿಗೆ ಸಂಬಂಧಿಸಿಯೂ ಇವೇ ಮಾತು ನೂರು  ಶೇಕಡಾ ಅನ್ವಯವಾಗುತ್ತದೆ. ಆದರೆ, 

ಪಾಕಿಸ್ತಾನ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂಗಳು ಸುರಕ್ಷಿತವಾಗಿರಬೇಕೆಂದು  ಬಯ ಸುವ ಮತ್ತು ಅದಕ್ಕಾಗಿ ಧ್ವನಿಯೆತ್ತುವ ಮೋದಿ ಸರಕಾರ, ಭಾರತದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರ ಬಗ್ಗೆ  ಅಸಹನೆಯಿಂದ ವರ್ತಿಸುತ್ತಿದೆ. ಹರ್ಯಾಣದ ಅರ್ಮಾನ್ ಖಾನ್ ಸೇರಿದಂತೆ, ಈ ದೇಶದಲ್ಲಿ ಮುಸ್ಲಿಮರ ವಿರುದ್ಧ ಪ್ರತಿ ನಿತ್ಯವೆಂಬಂತೆ  ದೌರ್ಜನ್ಯ ನಡೆಸುತ್ತಿರುವ ದುಷ್ಕರ್ಮಿಗಳ ಗುಂಪನ್ನು ಪ್ರಚೋದಿ ಸುತ್ತಿರುವ ಚಿಂತನೆ ಯಾವುದು ಎಂಬುದು  ರಹಸ್ಯವೇನಲ್ಲ. ಈ ದುಷ್ಕರ್ಮಿಗಳು ಯಾವ ರಾಜಕೀಯ ಪಕ್ಷದ ಬೆಂಬಲಿಗರು ಎಂಬುದೂ ರಹಸ್ಯವಲ್ಲ. ದ್ವೇಷ ಭಾಷಣ  ಮಾಡುವ, ಕುರ್‌ಆನನ್ನು ಮತ್ತು ಪ್ರವಾದಿಯನ್ನು(ಸ) ಸಾರ್ವಜನಿಕವಾಗಿಯೇ ಅವಮಾನಿಸುವ ಮತ್ತು ಮಸೀದಿಗಳ  ಅಡಿಯಲ್ಲಿ ಮಂದಿರ ವನ್ನು ಹುಡುಕುವವರಲ್ಲಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನ್ನು ಫಾಲೋ ಮಾಡುವವರು ಎಂಬುದೂ ರಹಸ್ಯವಲ್ಲ. ಸ್ವತಃ ಪ್ರಧಾನಿಯವರೇ ಚುನಾವಣೆಯ ಸಮಯದಲ್ಲಿ ಈ  ದುಷ್ಕರ್ಮಿಗಳ ಭಾಷೆಯಲ್ಲೇ  ಮಾತಾಡಿದ್ದೂ ಇದೆ. ಕುವೈಟ್ ಸರಕಾರದಿಂದ ಅತ್ಯುನ್ನತ ಪ್ರಶಸ್ತಿಯನ್ನು ಸ್ವೀಕರಿಸಿಕೊಂಡ  ಇದೇ ಪ್ರಧಾನಿಯ ಸಂಪುಟದಲ್ಲಿ ಒಬ್ಬನೇ ಒಬ್ಬ ಮುಸ್ಲಿಮ್ ಸಚಿವರೂ ಇಲ್ಲ. ಲೋಕಸಭೆಯಲ್ಲಿರುವ ಇವರ ಪಕ್ಷದ 243  ಸದಸ್ಯರ ಪೈಕಿ ಒಬ್ಬನೇ ಒಬ್ಬ ಮುಸ್ಲಿಮ್ ಸಂಸದನೂ ಇಲ್ಲ. ಪೂರ್ಣ ಬಹುಮತದೊಂದಿಗೆ 13 ರಾಜ್ಯಗಳಲ್ಲಿ  ಅಧಿಕಾರದಲ್ಲಿದ್ದರೂ ಒಂದೇ ಒಂದು ರಾಜ್ಯದಲ್ಲಿ ಮುಸ್ಲಿಮರನ್ನು  ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ ಎಂದು ಮಾತ್ರವಲ್ಲ, ಸಂಪುಟಕ್ಕೂ ಸೇರಿಸಿಕೊಂಡಿಲ್ಲ. ಇವೆಲ್ಲ ಕುವೈಟ್‌ಗೆ ಭೇಟಿ ನೀಡಿರುವ  ಪ್ರಧಾನಿ ಮೋದಿಗೆ ಗೊತ್ತಿರಲೇಬೇಕು. ವಿಷಾದ ಏನೆಂದರೆ,

ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ಅನ್ಯಾಯವನ್ನು ಮೋದಿ ಸರಕಾರ ಅಧಿಕೃತವಾಗಿಯೇ ಪ್ರಶ್ನಿಸುತ್ತದೆ. ತನ್ನ  ಪ್ರತಿನಿಧಿಯನ್ನೂ ಬಾಂಗ್ಲಾದೇಶಕ್ಕೆ ಕಳುಹಿಸಿಕೊಟ್ಟು ಪ್ರತಿಭಟನೆ ಸಲ್ಲಿಸುತ್ತದೆ. ಹಾಗಂತ, ಇದು ತಪ್ಪು ಎಂದಲ್ಲ. ಇದು  ಆಗಲೇಬೇಕು. ಆದರೆ, ತನ್ನದೇ ನೆಲದ ಅಲ್ಪಸಂಖ್ಯಾತರನ್ನು ದೌರ್ಜನ್ಯಕ್ಕೆ ತುತ್ತಾಗಲು ಬಿಟ್ಟು ಮತ್ತು ದುಷ್ಕರ್ಮಿಗಳಿಗೆ  ರಾಜಕೀಯ ಆಶ್ರಯವನ್ನು ನೀಡುತ್ತಾ ಇನ್ನೊಂದು ರಾಷ್ಟ್ರದ ಅಲ್ಪಸಂಖ್ಯಾತರಿಗಾಗಿ ಧ್ವನಿಯೆತ್ತುವುದು ಮಾತ್ರ ದ್ವಂದ್ವವಾಗಿ  ಕಾಣುತ್ತದೆ. ಇತರ ರಾಷ್ಟ್ರಗಳು ಮತ್ತು ಅಲ್ಲಿನ ನಾಗರಿಕರು ನ್ಯಾಯದ ಪರ ನಿಲ್ಲಬೇಕು ಮತ್ತು ನ್ಯಾಯಯುತವಾಗಿ  ನಡಕೊಳ್ಳಬೇಕು ಎಂದು ಬಯಸುವ ಪ್ರಭುತ್ವವೊಂದು ಸ್ವಯಂ ಅನ್ಯಾಯವಾಗಿ ನಡಕೊಳ್ಳುತ್ತದೆಂದರೆ ಮತ್ತು ತನ್ನ ಬೆಂಬಲಿಗರನ್ನು ಅನ್ಯಾಯಕ್ಕೆ ಪ್ರಚೋದಿಸುತ್ತದೆಂದರೆ, ಅದನ್ನು ಬೂಟಾಟಿಕೆಯೆಂದಲ್ಲದೇ ಇನ್ನೇನೆಂದು ಕರೆಯಬೇಕು?  ಅಂದಹಾಗೆ,

ಯಾವುದೇ ರಾಷ್ಟ್ರ  ಬಲಾಢ್ಯ ಆರ್ಥಿಕ ಶಕ್ತಿಯಾಗಬೇಕಾದರೆ ಆ ದೇಶದ ನಾಗರಿಕರು ಭಯರಹಿತ ಮತ್ತು ಸುರಕ್ಷಿತ ಭಾವವ ನ್ನು ಹೊಂದಬೇಕಾದುದು ಬಹಳ ಅಗತ್ಯ. ಸದಾ ಘರ್ಷಣೆಯ ವಾತಾವರಣ ಇರುವ ಮತ್ತು ಅಸುರಕ್ಷಿತವಾಗಿರುವ ಯಾವ  ದೇಶದಲ್ಲೂ ಯಾವ ಕಂಪೆನಿಗಳೂ ಹೂಡಿಕೆ ಮಾಡುವುದಿಲ್ಲ. ಯಾವುದೇ ಉದ್ಯಮಿ ಹಣ ಹೂಡುವ ಮೊದಲು ಆ ರಾಷ್ಟ್ರ  ಸುರಕ್ಷಿತವಾಗಿದೆಯೇ ಎಂಬುದಕ್ಕೆ ಮೊದಲ ಆದ್ಯತೆ ನೀಡುತ್ತಾರೆ. ಯುಎಇ, ಕತಾರ್, ಸೌದಿ, ಕುವೈಟ್‌ಗಳೆಲ್ಲ ಇವತ್ತು ಅತ್ಯಂತ  ವೇಗವಾಗಿ ಬೆಳೆದಿರುವ ಮತ್ತು ಬೆಳೆಯುತ್ತಿರುವ ಆರ್ಥಿಕ ಶಕ್ತಿಯಾಗಿ ಬದಲಾಗಿರುವುದರ ಹಿಂದೆ ಈ ಸುರಕ್ಷಿತ  ವಾತಾವರಣಕ್ಕೆ ಮೊದಲ ಸ್ಥಾನವಿದೆ. ಅಲ್ಲಿ ಧರ್ಮದ ಆಧಾರದಲ್ಲಿ ಪಕ್ಷಪಾತ ನಡೆಸುವುದಿಲ್ಲ. ಕೋಮುಗಲಭೆಗಳಿಗೆ  ಜಾಗವಿಲ್ಲ. ದ್ವೇಷ ಭಾಷಣಕ್ಕೆ ಅವಕಾಶವೇ ಇಲ್ಲ. ಧರ್ಮ ನೋಡದೇ ದುಷ್ಕರ್ಮಿಗಳು ಮತ್ತು ಸಮಾಜ ಘಾತುಕ ಶಕ್ತಿಗಳ  ವಿರುದ್ಧ ಅಲ್ಲಿನ ಪ್ರಭುತ್ವ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತದೆ. ಆ ಕಾರಣದಿಂದಲೇ ಹಿಂದೂಗಳೂ ಮುಸ್ಲಿಮರೂ ಈ  ರಾಷ್ಟçಗಳಲ್ಲಿ ಉದ್ಯೋಗ ಮಾಡುವುದನ್ನು ಬಯಸುತ್ತಾರೆ. ಕಂಪೆನಿಗಳೂ ಇಂಥದ್ದೇ  ವಾತಾವಣವನ್ನು ಬಯಸುತ್ತವೆ.  ಆದ್ದರಿಂದ,

ಬಲಾಢ್ಯ ಆರ್ಥಿಕ ಶಕ್ತಿಯಾಗಬೇಕೆಂದು ಬಯಸುವ ಭಾರತವು ಮೊದಲಾಗಿ ಇಲ್ಲಿನ ಧರ್ಮದ್ವೇಷಿಗಳನ್ನು ಮಟ್ಟ  ಹಾಕಬೇಕಾಗಿದೆ. ದುಷ್ಕಮಿಗಳಿಗೆ ಧರ್ಮ ಇಲ್ಲ ಎಂಬ ಪ್ರಬಲ ಸಂದೇಶವನ್ನು ಸಾರಬೇಕಾಗಿದೆ. ಕುವೈಟ್‌ನಿಂದ ಪ್ರಶಸ್ತಿ  ಸ್ವೀಕರಿಸಿಕೊಂಡು ಮರಳಿರುವ ಪ್ರಧಾನಿ ಮೋದಿಯವರ ಕಣ್ಣು ತೆರೆಸಲು ಅರ್ಮಾನ್ ಖಾನ್ ಯಶಸ್ವಿಯಾಗಲಿ ಎಂದು  ಹಾರೈಸೋಣ.