Thursday, 1 April 2021

ಬಂಧನದಲ್ಲಿಡಬೇಕಾದುದು ಮಂದಿರಗಳನ್ನಲ್ಲ...



ಕಳೆದವಾರ ಎರಡು ಘಟನೆಗಳು ನಡೆದುವು.
1. ಸರಕಾರಿ ಶಾಲೆಯ ಮಕ್ಕಳನ್ನು ಮುಖ್ಯೋಪಾಧ್ಯಾಯರು ಮಸೀದಿಯ ಭೋಜನಕ್ಕೆ ಕಳುಹಿಸಿದ್ದು.
2. ಉತ್ತರಾಖಂಡದಲ್ಲಿ 150ಕ್ಕಿಂತಲೂ ಅಧಿಕ ದೇವಾಲಯಗಳ ಆವರಣದಲ್ಲಿ ಮುಸ್ಲಿಮರಿಗೆ ಪ್ರವೇಶವಿಲ್ಲ ಎಂಬ ಬ್ಯಾನರ್ ತೂಗು  ಹಾಕಿದ್ದು.
ಈ ಎರಡೂ ಬೆಳವಣಿಗೆಗಳ ಹಿಂದೆ ಆಂತರಿಕವಾದ ಸಂಬಂಧವೊಂದಿದೆ-
ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಎಂಬಲ್ಲಿ ಹೊಸ ಮಸೀದಿಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು ಮತ್ತು ಶಾಲೆಯ ಮಕ್ಕಳನ್ನು  ಮಧ್ಯಾಹ್ನದ ಭೋಜನಕ್ಕೆ ಕಳುಹಿಸಿ ಕೊಡುವಂತೆ ಸ್ಥಳೀಯ ಸರಕಾರಿ ಶಾಲೆಯ ಮುಖ್ಯೋಪಾಧ್ಯಾಯದಲ್ಲಿ ಮಸೀದಿ ಆಡಳಿತ  ಸಮಿತಿಯವರು ಕೇಳಿಕೊಂಡರು. ಬ್ರಾಹ್ಮಣರೇ ಊಟ ತಯಾರಿಯ ಹೊಣೆ ಹೊತ್ತಿರುವುದನ್ನೂ ಅವರು ತಿಳಿಸಿದ್ದರು. ಆ ವಿನಂತಿಯನ್ನು  ಮುಖ್ಯೋಪಾಧ್ಯಾಯರು ಸಹಜವೆಂಬಂತೆ ಸ್ವೀಕರಿಸಿ ಮಕ್ಕಳನ್ನು ಕಳುಹಿಸಿಯೂ ಕೊಟ್ಟಿದ್ದರು. ಆದರೆ ಆ ಬಳಿಕ ಮುಖ್ಯೋಪಾಧ್ಯಾಯರನ್ನು ಸಂಘಪರಿವಾರದ ವ್ಯಕ್ತಿ ತರಾಟೆಗೆ ತೆಗೆದುಕೊಂಡರು. ಸೋರಿಕೆಯಾದ ಆ ಫೋನ್ ಸಂಭಾಷಣೆ ಜಿಲ್ಲೆಯಲ್ಲಿ ಚರ್ಚಾ  ವಿಷಯವಾಯಿತು. ಮುಖ್ಯೋಪಾಧ್ಯಾಯರು ಭಯದಿಂದ ಕ್ಷಮೆ ಯಾಚಿಸಿದರು. ಪ್ರತಿಭಟನೆಯಂಥ ಉಗ್ರ ನಿರ್ಧಾರ ತಳೆಯಬೇಡಿ  ಎಂದು ಬೇಡಿಕೊಂಡರು. ತನ್ನಿಂದ ತಪ್ಪಾಯ್ತು ಎಂದು ಬಾರಿಬಾರಿಗೂ ಹೇಳುತ್ತಾ ಹೋದರು. ಹಾಗಂತ,
ಒಂದು ಖಾಸಗಿ ಭೋಜನ ಕೂಟಕ್ಕೆ ಸರಕಾರಿ ಶಾಲೆಯ ಮಕ್ಕಳನ್ನು ಕಳುಹಿಸಿಕೊಡುವುದು ಕಾನೂನು ಪ್ರಕಾರ ಸರಿಯೇ ಎಂಬ ಪ್ರಶ್ನೆ  ತಪ್ಪಲ್ಲ. ಊರ ಸಹಜ ಬಾಂಧವ್ಯದ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯರು ಸರಿ-ತಪ್ಪುಗಳ ಜಿಜ್ಞಾಸೆಗೆ ಬೀಳದೇ ಮಕ್ಕಳನ್ನು  ಕಳುಹಿಸಿಕೊಟ್ಟಿರಬಹುದು. ಅಲ್ಲದೇ, ಒಂದು ದಿನ ಮೊದಲೇ ಮಕ್ಕಳಲ್ಲಿ ಆ ಬಗ್ಗೆ ಅವರು ಹೇಳಿಯೂ ಇದ್ದರು. ಮನೆಯಲ್ಲಿ ಒಪ್ಪಿಗೆ  ಕೊಟ್ಟವರು ಮಾತ್ರ ಭೋಜನಕ್ಕೆ ಹೋಗಬಹುದು, ಅಲ್ಲದವರು ಟಿಫಿನ್ ತರಬಹುದು ಎಂದೂ ಹೇಳಿದ್ದರು. ಇವೆಲ್ಲವನ್ನೂ ಕಾನೂನಿ ನಾಚೆಗಿನ ಮಾನವ ಸಹಜ ಸಂಬಂಧದ ದೃಷ್ಟಿಯಿಂದ ನೋಡಿದರೆ ಯಾವ ಸಮಸ್ಯೆಯೂ ಇಲ್ಲ. ಒಂದುವೇಳೆ, ಕಾನೂನು ಪ್ರಕಾರವೇ  ವಿಶ್ಲೇಷಿಸುವುದಿದ್ದರೂ ತಪ್ಪಿಲ್ಲ. ಆದರೆ, ಮುಖ್ಯೋಪಾಧ್ಯಾಯರನ್ನು ಕರೆ ಮಾಡಿ ತರಾಟೆಗೆ ತೆಗೆದುಕೊಂಡವರ ಸಮಸ್ಯೆ ಭೋಜನ ಆಗಿರಲಿಲ್ಲ. ಮಸೀದಿಯಾಗಿತ್ತು ಮತ್ತು ಮುಸ್ಲಿಮರಾಗಿದ್ದರು. ಲವ್ ಜಿಹಾದ್, ಹಿಂದೂ ಹೆಣ್ಮಕ್ಕಳ ರಕ್ಷಣೆ, ಮುಸ್ಲಿಮರಿಗೆ ಹರಿದು ಬರುವ ಹಣ  ಇತ್ಯಾದಿಗಳ ಮೂಲಕವೇ ಆ ವ್ಯಕ್ತಿ ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದರ ಜೊತೆಗೇ ಉತ್ತರಾಖಂಡದ ಡೆಹ್ರಾಡೂನ್‌ನ 150 ಮಂದಿರಗಳು ತೂಗು ಹಾಕಿರುವ ಬ್ಯಾನರ್‌ಗಳನ್ನೂ ಇಟ್ಟು ನೋಡಬೇಕು.
ದೇಶ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿರುವಾಗ ಮತ್ತು ನಿರುದ್ಯೋಗದಿಂದ ಸಾಮಾಜಿಕ ವಾತಾವರಣ ಕಳವಳಕಾರಿ ಮಟ್ಟಕ್ಕೆ  ಮುಟ್ಟಿರುವಾಗ, ಪ್ರಭುತ್ವವನ್ನು ಬೆಂಬಲಿಸುವವರ ಪಾಲಿಗೆ ಇವಲ್ಲದೇ ಅನ್ಯದಾರಿಯಿಲ್ಲ ಎಂದಷ್ಟೇ ಇಂಥ ಬೆಳವಣಿಗೆಗಳಿಗೆ ಷರಾ  ಬರೆಯಬೇಕಾಗಿದೆ. ಇಂಥ ಬೆಳವಣಿಗೆಗಳನ್ನು ಸೃಷ್ಟಿ ಮಾಡದೇ ಹೋದರೆ ಜನರು ಪ್ರಭುತ್ವದ ವೈಫಲ್ಯಗಳ ಬಗ್ಗೆ ಮಾತಾಡತೊಡಗುತ್ತಾರೆ.  ಅನ್ನ, ಉದ್ಯೋಗಕ್ಕಾಗಿ ಆಗ್ರಹಿಸುತ್ತಾರೆ. ಒಂದು ಕಡೆ ರೈತ ಪ್ರತಿಭಟನೆ 4 ತಿಂಗಳನ್ನೂ ದಾಟಿ ಮುಂದುವರಿಯುತ್ತಿದೆ. ಬ್ಯಾಂಕ್ ಸಿಬಂದಿಗಳು ಈಗಷ್ಟೇ ಪ್ರತಿಭಟನೆಯನ್ನು ನಿಲ್ಲಿಸಿದ್ದಾರೆ. ಸರಕಾರವೇ ಖಾಸಗೀಕರಣವಾಗಿ ಬಿಡುತ್ತೋ ಎಂಬ ಮಾತುಗಳು ಕೇಳಿ ಬರುವಷ್ಟು  ಒಂದೊಂದನ್ನೇ ಖಾಸಗಿಗೆ ಮಾರಲಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಜನಾಕ್ರೋಶ ಬೀದಿಗೆ ಬರದಂತೆ ತಡೆಯುವುದಕ್ಕಿರುವ ಜನಪ್ರಿಯ ದಾರಿ  ಒಂದೇ- ಹಿಂದೂ-ಮುಸ್ಲಿಮ್ ವಿಭಜನೆ. ಮುಸ್ಲಿಮರನ್ನು ದ್ವೇಷಿಸುವ ಮತ್ತು ಅವರ ಸುತ್ತ ಸುಳ್ಳುಗಳನ್ನು ಹಬ್ಬಿಸಿ ಚರ್ಚೆಯಾಗುವಂತೆ  ನೋಡಿಕೊಳ್ಳುವುದು. ಇಲ್ಲದಿದ್ದರೆ,
ಮುಸ್ಲಿಮರಿಗೆ ಪ್ರವೇಶವಿಲ್ಲ ಎಂಬ ಬ್ಯಾನರನ್ನು ಮಂದಿರಗಳು ಯಾಕಾದರೂ ತೂಗು ಹಾಕಬೇಕು? ಮುಸ್ಲಿಮ್ ಆಗಿದ್ದುಕೊಂಡು ಮಂದಿರ  ಪ್ರವೇಶಿಸಬಾರದೇ? ಅದರಿಂದ ಆಗುವ ಹಾನಿಯೇನು? ಮಂದಿರ, ಮಸೀದಿ, ಚರ್ಚ್, ಸ್ತೂಪ ಇವೆಲ್ಲ ಆಯಾ ಧರ್ಮದ ಸಂಕೇತಗಳು.  ಅವು ಆಯಾ ಧರ್ಮಗಳ ಬಗ್ಗೆ ಬಹಳಷ್ಟನ್ನು ಹೇಳುತ್ತವೆ. ಪೂಜೆ, ಗರ್ಭಗುಡಿ, ಹಿಂದೂ ಸಂಪ್ರದಾಯ, ಭಜನೆ, ಅರ್ಚಕರು, ಆರತಿ,  ಸಂಸ್ಕೃತ ಶ್ಲೋಕಗಳು ಇತ್ಯಾದಿಗಳ ಬಗ್ಗೆ ಮುಸ್ಲಿಮನಿಗೆ ಸುಲಭವಾಗಿ ಅರಿತುಕೊಳ್ಳುವುದಕ್ಕೆ ಮಂದಿರ ಒಂದು ಸುಲಭ ತಾಣ. ಬಾಯಿಯಲ್ಲಿ  ಹೇಳುವುದಕ್ಕೂ ಕಣ್ಣಾರೆ ಕಾಣುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಸಂಶೋಧನಾ ನಿರತ ಮುಸ್ಲಿಮ್ ವಿದ್ಯಾರ್ಥಿಯೋರ್ವ ಮಂದಿರಕ್ಕೆ  ಭೇಟಿ ನೀಡದೇ ಹೇಗೆ ವಿಷಯ ಮಂಡಿಸಬಹುದು? ಮಂದಿರ ಹಿಂದೂಗಳಿಗೆ ಸಂಬಂಧಿಸಿದ್ದೇ ಆಗಿರಬಹುದು. ಆದರೆ, ಇತರ  ಧರ್ಮೀಯರಿಗೆ ಬಾಗಿಲು ಮುಚ್ಚುವುದರಿಂದ ಅದು ಸ್ವಯಂ ಅಡಗಿಕೊಂಡಂತಾಗುತ್ತದೆ. ಸಂಸ್ಕೃತದ ಇಂದಿನ ಸ್ಥಿತಿಗೆ ಅದನ್ನು ಇತರರಿಂದ  ಅಡಗಿಸಿಟ್ಟುದುದೇ ಕಾರಣ ಎಂಬುದು ಎಲ್ಲರಿಗೂ ಗೊತ್ತು.
ಮುಸ್ಲಿಮರು ಮತ್ತು ಹಿಂದೂಗಳ ನಡುವೆ ದ್ವೇಷಭಾವವನ್ನು ಬೆಳೆಸುವುದರಿಂದ ಯಾರಿಗೆ ಲಾಭ ಎಂಬ ಬಗ್ಗೆ ಉಭಯ ಧರ್ಮೀಯರೂ  ಸ್ವಯಂ ಆತ್ಮಾವಲೋಕನ ನಡೆಸಬೇಕಾದ ಅಗತ್ಯ ಇದೆ. ಮುಸ್ಲಿಮರ ಊಟ, ಮುಸ್ಲಿಮರ ಸ್ನೇಹ, ಮುಸ್ಲಿಮರಿಂದ ವ್ಯಾಪಾರ, ಮಸೀದಿ,  ಆಝಾನ್... ಮುಂತಾದುವುಗಳೆಲ್ಲ ನಿಷೇಧದ ಪಟ್ಟಿಗೆ ಬೀಳುವುದಕ್ಕಿಂತ ಮೊದಲು ಉಭಯ ಧರ್ಮೀಯರೂ ಎಚ್ಚೆತ್ತುಕೊಳ್ಳಬೇಕು.  ಯಾವುದಾದರೊಂದು ನೆಪದಲ್ಲಿ ನಾಳೆ ಇನ್ನೇನಕ್ಕೋ ನಿಷೇಧ ಹೇರುವ ಬೆಳವಣಿಗೆ ನಡೆಯಬಹುದು. ಗೋವಿನ ತಲೆಯಿಂದ ಅ ಪವಿತ್ರಗೊಳ್ಳುತ್ತಿದ್ದ ಮಂದಿರಗಳು ಈಗ ಮುಸ್ಲಿಮರ ಪ್ರವೇಶದಿಂದಲೇ ಅಪವಿತ್ರಗೊಳ್ಳುವ ಹಂತಕ್ಕೆ ಬಂದುಬಿಟ್ಟಿದೆ. ಇದೊಂದು ಅ ಪಾಯಕಾರಿ ಬೆಳವಣಿಗೆ. ಈ ದೇಶದ ಯಾವ ಮಸೀದಿಗಳೂ ಹಿಂದೂಗಳಿಗೆ ಪ್ರವೇಶವಿಲ್ಲ ಎಂಬ ಬೋರ್ಡನ್ನು ಈವರೆಗೂ ತೂಗು  ಹಾಕಿಲ್ಲ. ಹಾಕಲೂ ಬಾರದು. ಕ್ರೈಸ್ತ ಅನುಯಾಯಿಗಳಿಗೆ ಪ್ರವಾದಿ ಮುಹಮ್ಮದರು(ಸ) ಮಸೀದಿಯಲ್ಲೇ  ಪ್ರಾರ್ಥನೆಗೆ ಅವಕಾಶ  ಮಾಡಿಕೊಟ್ಟ ಚರಿತ್ರೆ ಇದೆ. ಮಸೀದಿಯೊಳಗೆ ಮೂತ್ರ ಮಾಡಿದವನನ್ನು ತಿಳಿಹೇಳಿ ಕಳುಹಿಸಿಕೊಟ್ಟ ಇತಿಹಾಸ ಇದೆ. ಸಾಧ್ಯವಾದರೆ ಪ್ರತಿ  ಮಸೀದಿಗಳೂ ಹಿಂದೂಗಳಿಗೆ ಸ್ವಾಗತ ಎಂಬ ಬೋರ್ಡನ್ನು ನೇತು ಹಾಕುವ ಮತ್ತು ಇತರ ಧರ್ಮೀಯರಿಗೆ ಮಸೀದಿಯಲ್ಲಿ ನಡೆಯುವ  ಚಟುವಟಿಕೆ, ನಮಾಝï, ಪ್ರಾರ್ಥನೆ, ಅಂಗಶುದ್ಧಿ ಇತ್ಯಾದಿಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು. ಹಳ್ಳಿ  ಹಳ್ಳಿ, ಗ್ರಾಮ ಗ್ರಾಮಗಳಲ್ಲಿ ಇಂಥ ಕಾರ್ಯಕ್ರಮಗಳು ಅಭಿಯಾನದಂತೆ ನಡೆಯಬೇಕು. ಹಿಂದೂ ಸಮುದಾಯದ ಪ್ರಮುಖರನ್ನು, ಬಿಜೆಪಿ,  ಕಾಂಗ್ರೆಸ್ಸು, ಜೆಡಿಎಸ್ಸು ಎಂಬ ರಾಜಕೀಯ ಬೇಧವಿಲ್ಲದೇ ಮತ್ತು ಸಂಘಪರಿವಾರ ಎಂಬ ಅಂತರ ಕಾಯ್ದುಕೊಳ್ಳದೇ ಸರ್ವರನ್ನೂ ಆಹ್ವಾ ನಿಸುವ ಪ್ರಯತ್ನ ನಡೆಯಬೇಕು. ಮಸೀದಿ, ಮದ್ರಸಗಳ ಕುರಿತು ಚಾಲ್ತಿಯಲ್ಲಿರುವ ಸುಳ್ಳು ಸುದ್ದಿಗಳಿಗೆ ಏಟು ಕೊಡುವುದಕ್ಕೂ ಇದರಿಂದ  ಸಾಧ್ಯವಾಗಬಹುದು.
ಈ ದೇಶದ ಇಂದಿನ ಗಂಭೀರ ಸಮಸ್ಯೆ ಧರ್ಮ ಅಲ್ಲ. ಅದು ಸಮಸ್ಯೆಯೇ ಅಲ್ಲ. ಹಿಂದೂಗಳಾಗಲಿ ಮುಸ್ಲಿಮರಾಗಲಿ ಈ ದೇಶದ  ಏಕತೆ, ಸಮಗ್ರತೆ, ವೈವಿಧ್ಯತೆಗೆ ತೊಡಕೂ ಅಲ್ಲ. ಮಸೀದಿಗಳು ತಮ್ಮ ಪಾಡಿಗಿವೆ ಮತ್ತು ಮಂದಿರಗಳೂ ಕೂಡ. ಭಕ್ತಿಯಿಂದ  ಬಂದವರಿಗೂ ದ್ವೇಷದಿಂದ ಬಂದವರಿಗೂ ಅವು ಒಳಿತನ್ನೇ ಬಯಸುತ್ತವೆ. ಜನರು ಮಸೀದಿಗೋ ಮಂದಿರಕ್ಕೋ ತೆರಳುವುದು- ನೆಮ್ಮ ದಿ, ಶಾಂತಿಯನ್ನು ಬಯಸಿಕೊಂಡು. ಧ್ಯಾನ ಸ್ಥಿತಿಗೆ ತಲುಪುವುದಕ್ಕೆ ಅವು ಉತ್ತಮ ತಾಣ. ಅಂಥ ತಾಣಗಳನ್ನೇ ಬೇಲಿ ಹಾಕಿ ಬಂಧನದಲ್ಲಿಡುವುದು ಅತ್ಯಂತ ಖೇದಕರ. ಹಿಂದೂ ಧರ್ಮದ ಬೆಳವಣಿಗೆ ಮತ್ತು ಸೌಂದರ್ಯವು ಇಸ್ಲಾಮನ್ನು ಮತ್ತು ಮುಸ್ಲಿಮರನ್ನು  ದ್ವೇಷಿಸುವುದರಲ್ಲಿಲ್ಲ, ಪ್ರೀತಿಸುವುದರಲ್ಲಿದೆ. ಆದರೆ ಈ ಸತ್ಯವನ್ನೇ ಮರೆಮಾಚಲಾಗುತ್ತಿದೆ. ಇದು ವಿಷಾದನೀಯ.

Thursday, 25 March 2021

ಆಸಿಫ್: ಏರುಗತಿಯಲ್ಲಿರುವ ದ್ವೇಷಭಾವದ ಜಿಡಿಪಿ




ನಿಜಕ್ಕೂ ಆ ಬಾಲಕ ಥಳಿತಕ್ಕೆ ಅರ್ಹನೇ? ನೀರು ಕುಡಿಯುವುದು ಥಳಿಸಬೇಕಾದಷ್ಟು ಕ್ರೂರ ಅಪರಾಧವೇ? ಬಾಲಕನ ತಂದೆಯ ಪ್ರ ಶ್ನೆಯೂ ಇಲ್ಲಿ ಊರ್ಜಿತ- ನೀರಿಗೆ ಧರ್ಮವನ್ನು ಬೆರೆಸಿದವರು ಯಾರು? ಮಂದಿರದಿಂದ ಓರ್ವ ಮುಸ್ಲಿಮ್ ಬಾಲಕ ನೀರು  ಕುಡಿಯುವುದು ಅಪರಾಧ ಏಕಾಗಬೇಕು? ಇಂಜಿನಿಯರ್ ಆಗಿರುವ ಶೃಂಗಿ ಯಾದವ್‌ಗೆ ಇಷ್ಟು ಪರಿಜ್ಞಾನವೂ ಇಲ್ಲವೇ? ಬೇಡ, ಆತ ನೊಳಗೆ ದ್ವೇಷ ತುಂಬಿಕೊಂಡಿದೆಯೆಂದೇ  ಹೇಳೋಣ ಮತ್ತು ತನ್ನ ಪರಿವಾರದಲ್ಲಿ ಹೀರೋಯಿಸಂ ತೋರ್ಪಡಿಸಲು ಅಥವಾ ಪ್ರಚಾರದ  ಗೀಳಿಗಾಗಿ ಆ ಬಾಲಕನನ್ನು ಥಳಿಸಿದನೆಂದೇ ಒಪ್ಪೋಣ. ಆದರೆ, ಆ ಮಂದಿರದ ಆಡಳಿತ ಸಮಿತಿಗೇನಾಗಿದೆ? ಇಡೀ ಬೆಳವಣಿಗೆಯನ್ನು  ಸಾವಧಾನದಿಂದ ಪರಿಶೀಲಿಸಿ ಹೇಳಿಕೆ ನೀಡುವುದಕ್ಕೆ ಅವಕಾಶವಿದ್ದೂ ಅದು ಮಾಡಿದ್ದೇನು? ಶೃಂಗಿ ಯಾದವ್‌ನ ಬೆಂಬಲಕ್ಕೆ ಅದು  ನಿಂತದ್ದೇಕೆ? ಆತನ ಕಾನೂನು ಹೋರಾಟಕ್ಕೆ ಬೆಂಬಲ ನೀಡುತ್ತೇವೆ ಎಂದು ಅದು ಘೋಷಿಸಿದ್ದೇಕೆ? ಆ ಬಾಲಕ ನೀರು ಕುಡಿದದ್ದನ್ನು  ಸಂಚು ಎಂದು ಹೇಳುವಷ್ಟು, ಸ್ಥಳೀಯ ವಾತಾವರಣವನ್ನು ಕೆಡಿಸಲು ಮಾಡಲಾದ ಯತ್ನವೆಂದು ವಾದಿಸುವಷ್ಟು ಮತ್ತು ಆ ಬಾಲಕ  ಒಂಟಿಯಲ್ಲ, ಆತನ ಹಿಂದೆ ಸಂಚುಕೋರರಿದ್ದಾರೆ ಎಂದು ಸಮರ್ಥಿಸುವಷ್ಟು ಹೀನ ಹಂತಕ್ಕೆ ತಲುಪಿದ್ದೇಕೆ? ನಿಜವಾಗಿ,

ಆಸಿಫ್ ಎಂಬ ಆ ಬಾಲಕನಿಗೆ ಥಳಿಸಿರುವುದಕ್ಕಿಂತಲೂ ಮಂದಿರದ ಈ ಸಮರ್ಥನೆ ಹೆಚ್ಚು ಆಘಾತಕಾರಿ. ಉತ್ತರ ಪ್ರದೇಶದ  ಘಾಸಿಯಾಬಾದ್‌ನಲ್ಲಿರುವ ದಾಸ್ನಾದೇವಿ ಮಂದಿರದಲ್ಲಿ ಯತಿಯಾಗಿರುವ ನರಸಿಂಗಾನಂದ್  ಸರಸ್ವತಿ ಮತ್ತು ಅವರ ಶಿಷ್ಯನಾಗಿ  ಗುರುತಿಸಿಕೊಂಡಿರುವ ಆರೋಪಿ ಶೃಂಗಿ ಯಾದವ್ ಇಬ್ಬರೂ ಹಿಂದೂ ಧರ್ಮದೊಂದಿಗೆ ಗುರುತಿಸಿಕೊಂಡವರು. ಶೃಂಗಿ ಯಾದವ್ ಈ  ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡಿರುವ ಫೋಟೋಗಳು ಈಗ ಮುನ್ನೆಲೆಗೆ ಬರುತ್ತಿವೆ. ಚೂರಿ, ಬಂದೂಕು ಮತ್ತು  ಇನ್ನಿತರ ಆಯುಧಗಳನ್ನು ಹಿಡಿದ ಫೋಟೋವನ್ನು ಆತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಪ್ರಚೋದನಾತ್ಮಕ ಮತ್ತು ತೀವ್ರ  ಬಲಪಂಥೀಯ ಮಾತುಗಳಿಂದ ನರಸಿಂಗಾನಂದ್  ಸರಸ್ವತಿ ಪರಿಚಿತರು ಎಂದು ಇಂಡಿಯನ್ ಎಕ್ಸ್ ಪ್ರೆಸ್  ವರದಿ ಮಾಡಿದೆ. ಒಂದು  ಕೋಣೆಯ ಪುಟ್ಟ ಗೂಡಿನಂಥ ಮನೆಯಲ್ಲಿ ವಾಸಿಸುವ ಆಸಿಫ್ ಮತ್ತು ಆತನ ಹೆತ್ತವರು ನೀರು ಕುಡಿದು ಮಾಡುವ ಸಂಚಾದರೂ ಏ ನು? ಮನೆಯ ಆರ್ಥಿಕ ಸ್ಥಿತಿಯನ್ನು ಸರಿದೂಗಿಸಲು ಕೆಲಸ ಮಾಡುವ ಈ ಬಾಲಕನನ್ನು ಥಳಿಸಿರುವುದನ್ನು ಒಂದು ಮಂದಿರ ಸಮಿತಿ  ಬೆಂಬಲಿಸುವುದೆಂದರೆ, ನಿಜಕ್ಕೂ ಅದಕ್ಕೆ ಧಾರ್ಮಿಕ ದ್ವೇಷವಲ್ಲದೇ ಬೇರೇನಾದರೂ ಕಾರಣ ಇದ್ದೀತೆ? ದೇಶದಲ್ಲಿ ಉಳಿದೆಲ್ಲ ಕ್ಷೇತ್ರಗಳು  ಸಂಪೂರ್ಣ ಧರಾಶಾಹಿಯಾಗಿರುವಾಗಲೂ ಈ ಧರ್ಮದ್ವೇಷದ ಜಿಡಿಪಿಯಲ್ಲಿ ಈ ಮಟ್ಟದ ಏರಿಕೆಯಾಗಿರುವುದು ಏನನ್ನು ಸೂಚಿಸುತ್ತದೆ?

ಕಳೆದ ಒಂದು ವರ್ಷದಲ್ಲಿ 10,113 ಕಂಪೆನಿಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ ಎಂದು ಕಾರ್ಪೊರೇಟ್ ವ್ಯವಹಾರಗಳ ರಾಜ್ಯ ಸಚಿವ  ಅನುರಾಗ್ ಸಿಂಗ್ ಠಾಕೂರ್ ಲೋಕಸಭೆಗೆ ತಿಳಿಸಿದ್ದಾರೆ. ಅಭಿವೃದ್ಧಿಗೆ ಹಣ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿರುವುದನ್ನು ಪ್ರತಿದಿನದ  ಬೆಳವಣಿಗೆಗಳೇ ಹೇಳುತ್ತಿವೆ. ರಾಜ್ಯದ ಜಿಎಸ್‌ಟಿ ಪಾಲನ್ನು ನೀಡದೇ ಇರುವುದರಿಂದಾಗಿ ಏನನ್ನೂ ಮಾಡಲಾಗದ ಸ್ಥಿತಿ ಎದುರಾಗಿದೆ.  ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆಯಲ್ಲಿ ದಿನನಿತ್ಯವೆಂಬಂತೆ ಏರಿಕೆಯಾಗುತ್ತಿದೆ. ನಿರುದ್ಯೋಗದ  ಪ್ರಮಾಣವಂತೂ ಸ್ಫೋಟಕ ಸ್ಥಿತಿಯಲ್ಲಿದೆ. 14 ವರ್ಷದ ಆಸಿಫ್‌ನನ್ನು ಥಳಿಸಿದ ಶೃಂಗಿ ಯಾದವ್‌ನೂ ನಿರುದ್ಯೋಗಿ. ಎಂಜಿನಿಯರ್  ಆಗಿದ್ದೂ ಕೆಲಸ ಸಿಗದೇ ಕೊನೆಗೆ ದಾಸ್ನಾದೇವಿ ಮಂದಿರ ಸೇರಿಕೊಂಡವ. ಕೊರೋನಾ ಲಾಕ್‌ಡೌನ್‌ಗಿಂತ ಮೊದಲು ಯಾರ‍್ಯಾರು  ಯಾವೆಲ್ಲ ಉದ್ಯೋಗದಲ್ಲಿದ್ದರೋ ಅವರಲ್ಲಿ ಅರ್ಧಾಂಶದಷ್ಟು ಮಂದಿ ಇವತ್ತು ನಿರುದ್ಯೋಗಿಗಳಾಗಿ ಕಷ್ಟಪಡುತ್ತಿದ್ದಾರೆ. ಮಾಧ್ಯಮ ಕ್ಷೇತ್ರ ದಿಂದ ತೊಡಗಿ ಶಿಕ್ಷಣ, ಕಾರ್ಪೊರೇಟ್ ಸಹಿತ ಎಲ್ಲ ಕ್ಷೇತ್ರಗಳಲ್ಲೂ ಉದ್ಯೋಗ ಕಡಿತ ಊಹಿಸದಷ್ಟು ಪ್ರಮಾಣದಲ್ಲಿ ನಡೆದಿದೆ. ತಮ್ಮ  ಉದ್ಯೋಗವನ್ನು ನಂಬಿಕೊಂಡು ಮನೆ, ವಾಹನ, ಜಾಗ ಇತ್ಯಾದಿಗಳಿಗಾಗಿ ಬ್ಯಾಂಕಿನಿಂದ ಸಾಲ ಪಡೆದವರು ಈ ಅನಿರೀಕ್ಷಿತ  ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ತಿಂಗಳು ತಿಂಗಳು ಕಟ್ಟಬೇಕಾದ ಇಎಂಐ ಭೂತ ಅವರನ್ನು ಪ್ರತಿದಿನವೂ ಕಾಡುತ್ತಿದೆ.  ಒಂದುರೀತಿಯಲ್ಲಿ ವಾಟ್ಸಾಪ್, ಫೇಸ್‌ಬುಕ್‌ನಲ್ಲಿ ಹರಡಲಾಗುತ್ತಿರುವ ಸುಳ್ಳುಗಳೇ ಜನರನ್ನು ಇನ್ನೂ ತಾಳ್ಮೆಯಿಂದಿರುವಂತೆ  ಮಾಡಿದೆ.  ಆರ್ಥಿಕ ಸ್ಥಿತಿಯ ಬಗ್ಗೆ ಮತ್ತು ದೇಶದ ಬಗ್ಗೆ ಪ್ರಭುತ್ವದ ಕಾಲಾಳುಗಳು ಹರಿಬಿಡುತ್ತಿರುವ ವೈಭವೀಕೃತ ಸುಳ್ಳುಗಳು ಜನರನ್ನು ಭ್ರಮಾಧೀ ನರನ್ನಾಗಿ ಮಾಡಿದೆ. ಒಂದುವೇಳೆ ಈ ಮಾಧ್ಯಮ ಇಲ್ಲದೇ ಹೋಗಿರುತ್ತಿದ್ದರೆ ಈಗಾಗಲೇ ಜನಾಕ್ರೋಶಕ್ಕೆ ದೇಶ ತತ್ತರಿಸಿ ಹೋಗಿರುತ್ತಿತ್ತು.  ದುರಂತ ಏನೆಂದರೆ,

ಈ ಎಲ್ಲ ಕುಸಿತಗಳ ನಡುವೆಯೂ ಮುಸ್ಲಿಮ್ ದ್ವೇಷವೆಂಬ ಕ್ರೌರ್ಯಭಾವದ ಅಭಿವೃದ್ಧಿಯಲ್ಲಿ ದಿನೇ ದಿನೇ ಹೆಚ್ಚಳವಾಗುತ್ತಿರುವುದು.  ಅಂದಹಾಗೆ, ಒಂದು ವ್ಯವಸ್ಥಿತ ಸಂಚಿನ ಹೊರತು ಈ ದ್ವೇಷಭಾವವನ್ನು ಸಾರ್ವಜನಿಕವಾಗಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ನೀರು  ಕುಡಿದ ಬಾಲಕನನ್ನು ಸಂಚುಕೋರ ಎಂದು ಮಂದಿರ ಸಮಿತಿಯೇ ಹೇಳುತ್ತದೆಂದರೆ, ಏನೆಂದು ಹೇಳುವುದು? ನಿಜವಾಗಿ, ಸಂಚಿರುವುದು  ಆ ಬಾಲಕನಲ್ಲಲ್ಲ, ಆತನನ್ನು ಥಳಿಸಿದವನಲ್ಲಿ. ಹಾಗೆ ಥಳಿಸುವಂತೆ ಪ್ರಚೋದನೆ ನೀಡಿದವರಲ್ಲಿ ಮತ್ತು ಇಂಥ ಥಳಿತದಲ್ಲೇ  ತಮ್ಮ ಅಸ್ತಿತ್ವವಿದೆ  ಎಂದು ನಂಬಿಕೊಂಡವರಲ್ಲಿ.
ಹಿಂದೂಗಳನ್ನು ಮುಸ್ಲಿಮರು ಮತ್ತು ಮುಸ್ಲಿಮರನ್ನು ಹಿಂದೂಗಳು ಸದಾ ದ್ವೇಷಿಸುತ್ತಾ ಬದುಕಬೇಕೆಂದು ಯಾವುದೇ ಪ್ರಭುತ್ವ  ಬಯಸುವುದಾದರೆ, ಅದಕ್ಕೆ ಎರಡು ಕಾರಣಗಳಿವೆ.
 1. ದೀರ್ಘಕಾಲೀನ ರಾಜಕೀಯ ಅಧಿಕಾರದ ಬಯಕೆ.
 2. ಸರಕಾರಿ ವೈಫಲ್ಯವನ್ನು  ಮುಚ್ಚಿಡುವುದು. 
ಸದ್ಯದ ವಾತಾವರಣ ಈ ಎರಡನ್ನೂ ಸಮರ್ಥಿಸುವಂತಿದೆ. ದೇಶದ ಆರ್ಥಿಕ ಸ್ಥಿತಿ ಕುಸಿದು ಹೋಗಿದೆ. ಇನ್ನೊಂದೆಡೆ  ಅಧಿಕಾರವನ್ನು ಬಿಟ್ಟು ಕೊಡುವುದಕ್ಕೆ ಈಗಿನ ಪ್ರಭುತ್ವಕ್ಕೆ ಸುತಾರಾಂ ಇಷ್ಟವಿಲ್ಲ. ಹಾಗಂತ, ಅಧಿಕಾರವನ್ನು ಉಳಿಸಿಕೊಳ್ಳುವುದಕ್ಕೆ ಇರುವ  ಪ್ರಾಮಾಣಿಕ ದಾರಿಯೆಂದರೆ ಅಭಿವೃದ್ಧಿ. ಜನರಿಗೆ ನೆಮ್ಮದಿಯ ಬದುಕನ್ನು ನೀಡುವುದರಿಂದ ಜನರು ಮತ್ತೆ ಅದೇ ಸರಕಾರವನ್ನು  ಆರಿಸುತ್ತಾರೆಂಬುದು ವಾಡಿಕೆ. ಆದರೆ, ಸೌಖ್ಯ ರಾಷ್ಟ್ರವನ್ನು ಕಟ್ಟುವಲ್ಲಿ ಯಾವುದೇ ಪ್ರಭುತ್ವ ವಿಫಲವಾದರೆ ಅದು ಏನು ಮಾಡಬಹುದು?  ಈ ಪ್ರಶ್ನೆಗೆ ಉತ್ತರವೇ ದ್ವೇಷ. ಜನರು ಈ ವೈಫಲ್ಯವನ್ನು ಚರ್ಚಿಸದಂತೆ ನೋಡಿಕೊಳ್ಳುವುದು. ಇದು ಸಾಧ್ಯವಾಗಬೇಕೆಂದರೆ, ಜನರನ್ನು  ಧಾರ್ಮಿಕವಾಗಿ ವಿಭಜಿಸುವುದು. ಅವರ ನಡುವೆ ಅನುಮಾನ, ಸಂದೇಹ, ದ್ವೇಷಭಾವವನ್ನು ಬಿತ್ತುವುದು ಮತ್ತು ತನ್ನನ್ನು ಧರ್ಮೋದ್ಧಾರಕ  ಎಂದು ಬಿಂಬಿಸಿಕೊಂಡು  ಹುಸಿ ವರ್ಚಸ್ಸನ್ನು ಸೃಷ್ಟಿಸಿಕೊಳ್ಳುವುದು. ಧರ್ಮ ಅಪಾಯದಲ್ಲಿದೆ ಎಂದು ನಂಬಿಸಿಬಿಟ್ಟು ಅದುವೇ ದಿನೇ ದಿನೇ  ಚರ್ಚೆಯಾಗುವಂತೆ ನೋಡಿಕೊಳ್ಳುವುದು. ಇದು ಯಶಸ್ವಿಯಾದರೆ ಆ ಬಳಿಕ ಅದು ಅಫೀಮಿನಂತೆ ಜನರನ್ನು ಭ್ರಮೆಯಲ್ಲಿ ತೇಲಿಸಿ  ಬಿಡುತ್ತದೆ. ಪ್ರತಿ ಘಟನೆಯೂ ಧರ್ಮದ ದೃಷ್ಟಿಯಲ್ಲಿ ಚರ್ಚೆಗೊಳಗಾಗುತ್ತದೆ. ಪ್ರಭುತ್ವವನ್ನು ವಿಮರ್ಶಿಸುವ ಯಾವ ಬರಹ, ಭಾಷಣ,  ಕತೆಗಳೂ ಧರ್ಮವಿರೋಧಿಯೆಂದೋ ಸಂಚೆಂದೊ  ಗುರುತಿಸಲ್ಪಟ್ಟು ಧರ್ಮ ಧ್ರುವೀಕರಣಕ್ಕೆ ಮತ್ತಷ್ಟು ಶಕ್ತಿ ತುಂಬುತ್ತದೆ. ಸದ್ಯ  ನಡೆಯುತ್ತಿರುವುದೂ ಇದುವೇ. ನಿಜವಾಗಿ,

ದಾಸ್ನಾದೇವಿ ಮಂದಿರವು ಆ ಬಾಲಕನ ಪರ ನಿಲ್ಲಬೇಕಿತ್ತು. ಮಂದಿರದ ಒಳಗಡೆ ಇರುವ ನೀರಿನ ಟ್ಯಾಪನ್ನು ಮಂದಿರದ ಹೊರಗಡೆಗೂ  ವಿಸ್ತರಿಸಿ ನೀರು ಎಲ್ಲರಿಗಾಗಿ ಎಂದು ಘೋಷಿಸಬೇಕಿತ್ತು. ಶೃಂಗಿ ಯಾದವ್‌ನನ್ನು ಮಂದಿರದಿಂದ  ಹೊರಹಾಕಿ ಪ್ರತೀಕಾರ ತೀರಿಸಬೇಕಿತ್ತು.  ಆಸಿಫ್ ಕುಟುಂಬವನ್ನು ಮಂದಿರಕ್ಕೆ ಕರೆದು ವಿಶ್ವಾಸ ತುಂಬಬೇಕಿತ್ತು. ಆದರೆ ಇವಾವುವೂ ಆಗಿಲ್ಲ ಎಂಬುದಕ್ಕೆ ವಿಷಾದವಿದೆ.

Monday, 15 March 2021

ಆಯಿಷಾ: ಚರ್ಚೆಗೆ ಎತ್ತಿಕೊಳ್ಳಬೇಕಾದ್ದು ಯಾವುದನ್ನು?



ಅಹ್ಮದಾಬಾದ್‌ನ ಆಯಿಷಾ ಎಂಬ ಯುವತಿಯ ಆತ್ಮಹತ್ಯೆಯು ಮುಸ್ಲಿಮ್ ಸಮುದಾಯದ ಒಳಗೆ ಚರ್ಚಿತವಾಗುತ್ತಿದೆ. ಇಬ್ಬರು  ವ್ಯಕ್ತಿಗಳು ಪರಸ್ಪರ ಭೇಟಿಯಾದಾಗ, ಸಮುದಾಯದ ಮಂದಿ ಒಂದೆಡೆ ಕಲೆತಾಗ ಪ್ರಸ್ತಾಪವಾಗುವಷ್ಟು ಆ ಘಟನೆ ಸಮುದಾಯದ  ಮೇಲೆ ಪರಿಣಾಮ ಬೀರಿದೆ. ಉತ್ತರ ಪ್ರದೇಶದ ಅಗ್ರಾದ ವಿದ್ವಾಂಸರು ಮತ್ತು ಮುಸ್ಲಿಮರು ಈ ಕೆಡುಕಿನ ವಿರುದ್ಧ ಸಮರ ಸಾರುವ  ಪ್ರತಿಜ್ಞೆ ಮಾಡಿದ್ದಾರೆ. ಅಷ್ಟಕ್ಕೂ,
ವರದಕ್ಷಿಣೆ ಎಂಬುದು ಮುಸ್ಲಿಮ್ ಸಮುದಾಯಕ್ಕೆ ಅಪರಿಚಿತ ಪದ ಅಲ್ಲ. ಇಂಥ ಪದ ಭಾರತೀಯ ಮುಸ್ಲಿಮರಿಗೆ ಪರಿಚಿತವಾಗಿ  ಹಲವು ದಶಕಗಳೇ ಕಳೆದಿವೆ. ಆಯಿಷಾರಂಥ ಹಲವು ಜೀವಗಳು ಈ ಕೆಡುಕಿಗೆ ಬಲಿಯಾಗಿವೆ. ಆಯಿಷಾ ಸ್ವತಃ ತನ್ನ ಬದುಕನ್ನು  ಕೈಯಾರೆ ಮುಗಿಸಿಕೊಂಡರೆ, ಇನ್ನಷ್ಟು ಆಯಿಷಾರು ಪತಿ ಮನೆಯವರ ಸೀಮೆ ಎಣ್ಣೆಗೋ, ವಂಚನೆಯ ಹತ್ಯೆಗೋ ಬಲಿಯಾಗಿದ್ದಾರೆ.  ಈ ಕೆಡುಕಿಗೆ ಸಿಲುಕಿ ಕಣ್ಣೀರಾದ ಹೆತ್ತವರ ಸಂಖ್ಯೆ ಅಗಾಧವಿದೆ. ಇದೀಗ ಅಹ್ಮದಾಬಾದ್‌ನ ಆಯಿಷಾ ಈ ಪಿಡುಗಿನ ಕುರಿತಂತೆ ನಮ್ಮ  ಪ್ರಜ್ಞೆಯನ್ನು ಮತ್ತೊಮ್ಮೆ ಕೆದಕಿದ್ದಾರೆ. ಅಷ್ಟಕ್ಕೂ,
ಓರ್ವ ಹೆಣ್ಣು ಮಗಳ ಮತ್ತು ಆಕೆಯ ಹೆತ್ತವರ ಸಂಕಟವನ್ನು ಗಂಭೀರವಾಗಿ ಪರಿಗಣಿಸುವುದಕ್ಕೆ ಬಲಿಯೊಂದರ ಅಗತ್ಯವಿತ್ತೇ ಎಂಬ  ಪ್ರಶ್ನೆ ಗಮನಾರ್ಹ. ಇದೇ ಸಂದರ್ಭದಲ್ಲಿ ಪ್ರತಿ ಪ್ರಶ್ನೆಯೂ ಮೂಡುತ್ತದೆ. ಆಕೆ ಹಾಗೆ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳದೇ  ಹೋಗಿರುತ್ತಿದ್ದರೆ ವರದಕ್ಷಿಣೆಯ ಕುರಿತಂತೆ ಮುಸ್ಲಿಮ್ ಸಮುದಾಯದಲ್ಲಿ ಕಂಡು ಬಂದಿರುವ ಇವತ್ತಿನ ತಲ್ಲಣ ಮತ್ತು ಸಂಕಟ  ವ್ಯಕ್ತವಾಗುವುದಕ್ಕೆ ಸಾಧ್ಯವಿತ್ತೇ? ಹಾಗಂತ, ಆಕೆಗೆ ಆತ್ಮಹತ್ಯೆಗೆ ಹೊರತಾದ ಇನ್ನಷ್ಟು ದಾರಿಗಳಿದ್ದುವು ಎಂಬ ಸಮರ್ಥನೆಗೆ ಅರ್ಥವಿದೆ.  ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬಹುದಿತ್ತು. ಮಸೀದಿ ಕಮಿಟಿಯನ್ನು ಸಂಪರ್ಕಿಸಿ ಪರಿಹಾರ ಕೋರಬಹುದಿತ್ತು. ಮತ್ತೂ  ಪರಿಹಾರ ಕಾಣಲಿಲ್ಲವೆಂದರೆ ಹಣದಾಹದ ಪತಿಯಿಂದ ಖುಲಾ ಕೇಳಬಹುದಿತ್ತು ಮತ್ತು ಆತ ಅದಕ್ಕೂ ನಿರಾಕರಿಸಿದರೆ ಫಸ್ಕ್  ಮಾಡಿಕೊಳ್ಳಬಹುದಿತ್ತು. ಆತ್ಮಹತ್ಯೆಯನ್ನು ಪಾಪ ಎಂದು ಪರಿಗಣಿಸುವ ಧರ್ಮದ ಹೆಣ್ಣೊಬ್ಬಳ ಆತ್ಮಹತ್ಯೆಯು ತಪ್ಪಾದ ಆಯ್ಕೆಯತ್ತ  ಇತರರನ್ನು ಪ್ರಚೋದಿಸಬಹುದು ಎಂಬ ಆತಂಕದಲ್ಲಿ ಕಾಳಜಿಯೂ ಇದೆ.
ಇವೆಲ್ಲ ಒಪ್ಪಿತವೇ ಆದರೆ,
ಎರಡ್ಮೂರು ದಶಕಗಳ ಹಿಂದಿನ ಸಾಮಾಜಿಕ ವಾತಾವರಣಕ್ಕೂ ಇಂದಿಗೂ ಆನೆ-ಇಲಿಯಷ್ಟು ವ್ಯತ್ಯಾಸವಿದೆ. ಈ ಹಿಂದಿನ ಕಾಲದಲ್ಲೂ  ವರದಕ್ಷಿಣೆ ಇತ್ತು ಮತ್ತು ಸಾಮಾಜಿಕ ಸಂಯಮವೂ ಇತ್ತು. ಶೈಕ್ಷಣಿಕವಾಗಿ ಹೆಣ್ಮಕ್ಕಳು ಹಿಂದುಳಿದಿದ್ದರು. ಸಕಲ ಸಂಕಷ್ಟಗಳನ್ನೂ  ಹಿಂಸೆ, ಅವಮಾನಗಳನ್ನೂ ಅವುಡುಗಟ್ಟಿ ಸಹಿಸಿಕೊಳ್ಳುವ ಅಪಾರ ಸಂಯಮ ಅವರಲ್ಲಿತ್ತು. ಶಿಕ್ಷಣ ವಂಚಿತರಾಗಿದ್ದ ಹೆಣ್ಮಕ್ಕಳಲ್ಲಿ  ಪ್ರಶ್ನಿಸುವ ಧೈರ್ಯವೂ ಕಡಿಮೆ ಇತ್ತು. ಇಷ್ಟಿದ್ದೂ, ಆ ಕಾಲದಲ್ಲಿ ಪ್ರಶ್ನಿಸಿದ ಹೆಣ್ಮಕ್ಕಳಿದ್ದಾರೆ. ಅವರ ಸಂಖ್ಯೆ ಅಪರೂಪದ್ದಾಗಿದ್ದರೂ  ಅವರ ಪ್ರಶ್ನೆಯು ಆ ಬಳಿಕ ಸಮುದಾಯದಲ್ಲಿ ವರದಕ್ಷಿಣೆ ವಿರೋಧಿ ಅಭಿಯಾನದಂಥ ಸಾಮಾಜಿಕ ಕ್ರಾಂತಿಗೂ ಕಾರಣವಾಗಿದೆ.  ಇದೊಂದು ಹಂತ. ಈ ಹಂತವನ್ನು ಗಮನದಲ್ಲಿಟ್ಟುಕೊಂಡೇ ಈಗಿನ ಬೆಳವಣಿಗೆಯನ್ನು ನಾವು ಪರಾಮರ್ಶೆಗೆ ಒಡ್ಡಬೇಕು.
ಇದು ಮಾಧ್ಯಮ ಕ್ರಾಂತಿಯ ಕಾಲ. ಬೆರಳಿನ ತುದಿಯಲ್ಲೇ  ಇವತ್ತು ಎಲ್ಲವೂ ಇದೆ. ಮಾನವ ಸಹಜವಾಗಿ ಇರಬೇಕಾದ  ಸಂಯಮವನ್ನು ಬಹುತೇಕ ಧರಾಶಾಹಿಗೊಳಿಸಿದ್ದೇ  ಇಂದಿನ ಮಾಧ್ಯಮ ಕ್ರಾಂತಿ. ಮೊಬೈಲ್ ಎಂಬುದು ಚಟವಾಗಿ ಬಿಟ್ಟಿದೆ.  ಪ್ರತಿಯೊಬ್ಬರಿಗೂ ಐಡೆಂಟಿಟಿಯನ್ನು ಕೊಡಮಾಡಬಲ್ಲ ಶಕ್ತಿ ಇದಕ್ಕಿದೆ. ತನಗೇನು ಹೇಳಬೇಕು, ಯಾರೊಂದಿಗೆ ಹೇಳಬೇಕು, ಎಷ್ಟು  ಹೇಳಬೇಕು, ಹೇಗೆ ಹೇಳಬೇಕು ಇತ್ಯಾದಿಗಳನ್ನು ನಿರ್ಬಿಢೆಯಿಂದ ತೀರ್ಮಾನಿಸಿ ಅದನ್ನು ವ್ಯಕ್ತಗೊಳಿಸುವುದಕ್ಕೆ ಇವತ್ತು ಕಷ್ಟವಲ್ಲ.  ಆಯಿಷಾಳಂತೆ ಕಷ್ಟಪಟ್ಟವರು ಎರಡ್ಮೂರು ದಶಕಗಳ ಹಿಂದೆ ಖಂಡಿತ ಇದ್ದಿರಬಹುದು. ಆದರೆ, ಅವರಾರೂ ನಮ್ಮ ಗಮನದಲ್ಲಿರದೇ  ಇರಲು ಏಕೈಕ ಕಾರಣ- ಆಯಿಷಾಳಲ್ಲಿದ್ದಂತಹ ಸಂವಹನ ಮಾಧ್ಯಮ ಅವರಲ್ಲಿದ್ದಿರಲಿಲ್ಲ ಎಂಬುದು ಮಾತ್ರ. ಇದೇವೇಳೆ,
ಈ ಸಂವಹನ ಮಾಧ್ಯಮವು ಆಯಿಷಾರಂಥ ಕೋಟ್ಯಂತರ ಮಂದಿಯಿಂದ  ಸಹನೆಯೆಂಬ ಬಹುಮೂಲ್ಯ ಶಕ್ತಿಯನ್ನೂ  ಕಸಿದುಕೊಂಡಿದೆ. ಇವತ್ತಿನ ಪೀಳಿಗೆಗೆ ದೀರ್ಘ ಲೇಖನವೋ ಭಾಷಣವೋ ಪ್ರಬಂಧವೋ ಬೋರು ಬೋರು. ಅಂಥದ್ದನ್ನು ಮೆಚ್ಚದ  ಒಂದು ಪೀಳಿಗೆ ಇವತ್ತು ತಯಾರಾಗಿದ್ದರೆ ಅದರ ಹಿಂದೆ ಈ ಮೊಬೈಲು ಕೆಲಸ ಮಾಡಿದೆ. ಯುವ ಪೀಳಿಗೆಯಿಂದ ಸಂಯಮವನ್ನೇ  ಕಸಿದುಕೊಂಡು ಆ ಜಾಗದಲ್ಲಿ ಅಸಹನೆಯನ್ನು ಊರಿದೆ. ವಿವೇಚನೆಯಿಲ್ಲದೇ ನಿರ್ಧಾರ ಕೈಗೊಳ್ಳುವ, ಪ್ರತಿಕ್ರಿಯಿಸುವ, ಧುಮುಕುವ  ಪೀಳಿಗೆಯನ್ನು ತಯಾರು ಅದು ಮಾಡಿದೆ. ಆಯಿಷಾಳ ನಿರ್ಧಾರದಲ್ಲಿ ಇಂಥದ್ದೊಂದು ಸಾಧ್ಯತೆಯನ್ನು ಅಲ್ಲಗಳೆಯಲಾಗದು.  ಆತ್ಮಹತ್ಯೆಗಿಂತ ಹೊರತಾದ ಹಲವು ದಾರಿಗಳು ಮುಕ್ತವಾಗಿದ್ದರೂ ಆಕೆ ಅವನ್ನು ಆಯ್ಕೆ ಮಾಡಿಕೊಳ್ಳದೇ ಇರುವುದರಲ್ಲಿ ಈ  ಸಂಯಮರಾಹಿತ್ವಕ್ಕೆ ಪಾಲು ಇರಬಹುದು. ಹಾಗಂತ,
ಆತ್ಮಹತ್ಯೆಯನ್ನು ಉಲ್ಲೇಖಿಸಿಕೊಂಡು ಆಕೆ ಎತ್ತಿರುವ ಪ್ರಶ್ನೆ ಮತ್ತು ರವಾನಿಸಿರುವ ಸಂದೇಶವನ್ನು ನಗಣ್ಯವಾಗಿ ಕಾಣುವುದು  ಅತಿದೊಡ್ಡ ಪಾಪವಾಗಬಹುದು. ಆಕೆ ಪ್ರತಿಭಟನೆಯೊಂದನ್ನು ಸಲ್ಲಿಸಿ ಹೋಗಿದ್ದಾಳೆ. ಅದಕ್ಕಾಗಿ ಆಕೆ ಆಯ್ಕೆ ಮಾಡಿಕೊಂಡಿರುವ ದಾರಿ  ಸರಿಯೋ ತಪ್ಪೋ ಎಂಬುದರ ಆಚೆಗೆ ಆಕೆ ಎತ್ತಿರುವ ಪ್ರಶ್ನೆ ಸಮುದಾಯದಲ್ಲಿ ಚರ್ಚೆಗೊಳಗಾಗಬೇಕು. ಇಸ್ಲಾಮಿನಲ್ಲಿ ಅತಿ  ವಿಶಿಷ್ಟವಾದ ಮತ್ತು ಮಹಿಳಾ ಪರವಾದ ವಧುದನ ಎಂಬ ನಿಯಮವೊಂದಿದೆ ಎಂದು ವಾದಿಸುವುದರಿಂದ ‘ವಧು’ವಿನ ಸಂಕಟ  ಕೊನೆಯಾಗಲಾರದು. ನಿಯಮವೊಂದು ಜನಪರವೋ ಜನದ್ರೋಹಿಯೋ ಆಗುವುದು ಅದು ಕಟ್ಟುನಿಟ್ಟಾಗಿ ಜಾರಿಗೊಂಡಾಗ.  ವಧುಧನ ಅಥವಾ ಮಹ್ರ್ ವಧುವಿನ ಸೊತ್ತು. ವಧುವಿಗೆ ಈ ಮೊತ್ತವನ್ನು ಪಾವತಿಸುವ ಮೂಲಕ ವರನು ಆ ವಧುವನ್ನು ಜೋ ಪಾನವಾಗಿ ನೋಡಿಕೊಳ್ಳುವ, ಆಕೆಯ ಸಕಲ ಹಕ್ಕುಗಳನ್ನು ಗೌರವಿಸುವ ಮತ್ತು ತವರು ಮನೆಯಲ್ಲಿ ಏನೆಲ್ಲ ಸವಲತ್ತುಗಳಿದ್ದುವೋ  ಅವೆಲ್ಲವನ್ನೂ ತನ್ನ ಮನೆಯಲ್ಲೂ ಆಕೆಗೆ ಒದಗಿಸುವ ಪ್ರತಿಜ್ಞೆಯನ್ನು ಮಾಡುತ್ತಾನೆ. ಇದೊಂದು ಬಲವಾದ ಕರಾರು. ಓರ್ವನು ತನ್ನ  ನಿಕಾಹ್‌ಗಿಂತ ಮೊದಲೇ ಈ ಮಹ್ರನ್ನು ತನ್ನ ವಧುವಿಗೆ ತಿಳಿಸಬೇಕು. ಅದನ್ನು ಪುರಸ್ಕರಿಸುವ ಮತ್ತು ತಿರಸ್ಕರಿಸುವ ಸ್ವಾತಂತ್ರ‍್ಯ  ಅವಳದ್ದು. ಆದರೆ,
ಇವತ್ತು ಮಹ್ರ್ ಪರಿಕಲ್ಪನೆ ದುರ್ಬಲವಾಗಿ ವರದಕ್ಷಿಣೆ ಬಲ ಪಡೆದಿರುವುದಕ್ಕೆ ಧಾರ್ಮಿಕ ಅಜ್ಞಾನವೊಂದೇ ಕಾರಣ ಅಲ್ಲ, ಧಾರ್ಮಿಕ  ವಿದ್ವಾಂಸರ ಅಖಚಿತ ನಿಲುವುಗಳಿಗೂ ಈ ಪಾಪದಲ್ಲಿ ಪಾಲಿದೆ. ವರದಕ್ಷಿಣೆಯನ್ನು ಖಂಡಿಸುವ ಮತ್ತು ವರದಕ್ಷಿಣೆಯ ಮದುವೆಯಲ್ಲಿ  ಪಾಲ್ಗೊಳ್ಳದೇ ಇರುವ ನಿಷ್ಠುರ ನಿಲುವನ್ನು ವಿದ್ವಾಂಸ ವಲಯ ಒಕ್ಕೊರಳಿನಿಂದ ಕೈಗೊಳ್ಳುತ್ತಿದ್ದರೆ ಈ ಪಿಡುಗು ಈ ಮಟ್ಟದಲ್ಲಿ  ಬೆಳೆಯಲು ಸಾಧ್ಯವಿರುತ್ತಿರಲಿಲ್ಲ. ಮಸೀದಿ ಕಮಿಟಿಗಳ ನಿರ್ಲಕ್ಷ್ಯ  ಧೋರಣೆಗೂ ಈ ಪಾಪದಲ್ಲಿ ಪಾಲಿದೆ. ಸದ್ಯ ಸಮುದಾಯದ ಗುರಿ  ಏನೆಂದರೆ, ಆಗಿಹೋದ ಪಾಪಗಳಿಗೆ ದೇವನಲ್ಲಿ ಕ್ಷಮೆ ಯಾಚಿಸುತ್ತಾ ವರದಕ್ಷಿಣೆಯ ವಿರುದ್ಧ ಕಠಿಣ ನಿಲುವನ್ನು ಪ್ರತಿ ಮಸೀದಿಯ  ವಿದ್ವಾಂಸರೂ ಕೈಗೊಳ್ಳುವುದು.
ವರದಕ್ಷಿಣೆಯನ್ನು ಇವತ್ತು ನೇರವಾಗಿ ಕೇಳುವ ಪದ್ಧತಿಯಿಲ್ಲ. ನನ್ನ ಮಗಳಿಗೆ ಇಷ್ಟು ಚಿನ್ನ ಹಾಕಿರುವೆ ಅಥವಾ ನನ್ನ ಮಗನಿಗೆ  ಇಂತಿಂಥ  ಕಾರು ಇಷ್ಟ ಎಂಬಲ್ಲಿಂದ  ಹಿಡಿದು ಬೇರೆ ಬೇರೆ ಪರೋಕ್ಷ  ರೂಪದಲ್ಲಿ ಅದು ಜಾರಿಯಲ್ಲಿದೆ. ಇಂಥ ಸರ್ವ ಪಿಡುಗಿನ  ವಿರುದ್ಧವೂ ಪ್ರಬಲ ಹೋರಾಟ ಸಂಘಟಿಸಬೇಕಾದುದು ಬಹು ಅಗತ್ಯ. ಆಗಿ ಹೋದ ತಪ್ಪುಗಳನ್ನು ಮತ್ತೆ ಮತ್ತೆ ಕೆದಕುತ್ತಾ  ಗಾಯವನ್ನು ವ್ರಣವಾಗಿಸುವುದಕ್ಕಿಂತ ಮುಂದಿನ ದಿನಗಳ ಕಡೆಗೆ ಸಕಾರಾತ್ಮಕವಾಗಿ ಚಿಂತಿಸುವುದೇ ಇಂದಿನ ಅನಿವಾರ್ಯತೆ. ತಪ್ಪು  ಮಾನವ ಸಹಜ. ಅದರಲ್ಲಿ ಗಟ್ಟಿಯಾಗಿ ನಿಲ್ಲುವುದಷ್ಟೇ ಕ್ರೌರ್ಯ.
ಆಯಿಷಾಳ ಕೃತ್ಯವನ್ನು ವಿಮರ್ಶಿಸುವುದಕ್ಕಾಗಿ ನಮ್ಮ ಸಮಯ, ಧಾರ್ಮಿಕ ಜ್ಞಾನ, ಮೊಬೈಲ್ ಜಿಬಿಯನ್ನು ವ್ಯಯಿಸುವುದಕ್ಕಿಂತ ಆಕೆ  ಎತ್ತಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ವ್ಯಯಿಸಿದರೆ ಸಮುದಾಯದ ಹೆಣ್ಮಕ್ಕಳ ಮತ್ತು ಹೆಣ್ಣು ಹೆತ್ತವರ ಪ್ರಾರ್ಥನೆ  ನಮ್ಮ ಮೇಲಿದ್ದೀತು.

Tuesday, 9 March 2021

ಜನಾಕ್ರೋಶಕ್ಕೆ ಕೊಚ್ಚಿ ಹೋಗಿರುವ ಕತೆಗಳ ನಡುವೆ...



ಸನ್ಮಾರ್ಗ ವಾರ್ತೆ 

ಸನ್ಮಾರ್ಗ ಸಂಪಾದಕೀಯ 

ಮಾರಾಟಕ್ಕೆಂದು ಸಂತೆಗೆ ತಂದಿದ್ದ ಹೋರಿಗಳನ್ನು ಯಾರೂ ಖರೀದಿಸದಿರುವುದರಿಂದ ಹತಾಶರಾದ ರೈತರು ಅವುಗಳನ್ನು  ಸಂತೆಯಲ್ಲೇ  ಬಿಟ್ಟು ಹೋದ ಸುದ್ದಿಯನ್ನು ಜನವರಿ 23ರ ಪ್ರಜಾವಾಣಿ ವೆಬ್ ಆವೃತ್ತಿಯಲ್ಲಿ ಚಿತ್ರಸಹಿತ ಪ್ರಕಟಿಸಲಾಗಿತ್ತು. ಘಟನೆ  ನಡೆದುದು ಹಾಸನದ ಸಮೀಪ. ಜನವರಿ 24ರಂದು ವಾರ್ತಾಭಾರತಿ ಪತ್ರಿಕೆಯಲ್ಲಿ ಮಾಹಿತಿಪೂರ್ಣ ಬರಹವೊಂದು ಪ್ರಕಟವಾಗಿತ್ತು.  ಬೆಂಗಳೂರಿನಲ್ಲಿರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯ ಅಧ್ಯಯನ ಸಂಸ್ಥೆಯಲ್ಲಿ ದಾಖಲೀಕರಣ ಮಾಡುವ ಶ್ರೀನಿವಾಸ್  ಕೆ. ಎಂಬವರು ಈ ಬರಹವನ್ನು ಬರೆದಿದ್ದರು. ಅವರ ಪ್ರಕಾರ,
ಗೋಹತ್ಯೆ ನಿಷೇಧದಿಂದ ಮೃಗಾಲಯಗಳಿಗೆ ಆಹಾರದ ಅಭಾವ ತೀವ್ರ ರೂಪದಲ್ಲಿ ತಟ್ಟಲಿದೆ. ರಾಜ್ಯದಲ್ಲಿ 10ಕ್ಕೂ ಅಧಿಕ  ಮೃಗಾಲಯಗಳಿವೆ. ರಾಜ್ಯದಲ್ಲಿ 1,783 ಚಿರತೆಗಳಿವೆ. ಚಾಮರಾಜೇಂದ್ರ ಮೃಗಾಲಯ ಮತ್ತು ಬನ್ನೇರುಘಟ್ಟ ಮೃಗಾಲಯಗಳು ದೇಶದಲ್ಲೇ  ಪ್ರಸಿದ್ಧವಾಗಿದ್ದು, ರಾಜ್ಯದ ಬೊಕ್ಕಸಕ್ಕೆ ಪ್ರವಾಸೋದ್ಯಮದ ಮೂಲಕ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ.  ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರತಿದಿನ 350 ಕೆಜಿಯಷ್ಟು ಗೋಮಾಂಸ ಸರಬರಾಜಾಗುತ್ತಿದ್ದು ಬನ್ನೇರುಘಟ್ಟ ಉದ್ಯಾನವನಕ್ಕೆ  1300 ಕೆಜಿ ಗೋಮಾಂಸ ಸರಬರಾಜಾಗುತ್ತಿದೆ. ಬನ್ನೇರುಘಟ್ಟ ಉದ್ಯಾನವನದಲ್ಲಿ 100 ಸಿಂಹಗಳು, 41 ಹುಲಿಗಳು ಮತ್ತು 30  ಚಿರತೆಗಳಿವೆ. ಚಾಮರಾಜೇಂದ್ರ ಮೃಗಾಲಯದಲ್ಲಿ 25 ಸಿಂಹ, 50 ಹುಲಿ ಮತ್ತು 100 ಚಿರತೆಗಳಿವೆ. ಹಾಗೆಯೇ ಗೊಡ್ಡು ಮೇಕೆ,  ಕುರಿಗಳ ಮಾಂಸವನ್ನು ಅಥವಾ ಕೋಳಿ ಮಾಂಸವನ್ನು ಈ ಪ್ರಾಣಿಗಳಿಗೆ ನೀಡಿದರೆ ಕಾಲು-ಬಾಯಿ ರೋಗಕ್ಕೆ ಕಾರಣವಾಗಬಹುದು  ಎನ್ನಲಾಗಿದೆ. ಒಂದುವೇಳೆ,
ಈ ಗೋಹತ್ಯೆ ನಿಷೇಧ ಕ್ರಮವನ್ನು ಇಡೀ ದೇಶಕ್ಕೆ ಅನ್ವಯಿಸಿದರೆ, ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ದೇಶದಲ್ಲಿ 190ರಷ್ಟು  ಮೃಗಾಲಯಗಳಿವೆ. ಹಾಗೆಯೇ 2019ರ ಗಣತಿಯಂತೆ ಈ ದೇಶದಲ್ಲಿ 2,967 ಹುಲಿಗಳಿವೆ. ಚಿರತೆಗಳ ಸಂಖ್ಯೆ 12,852. ಸಿಂಹಗಳು  674ರಷ್ಟಿವೆ. ಇನ್ನು, ಗೋವನ್ನು ವಧಿಸುವುದು ಕೇವಲ ಆಹಾರಕ್ಕಾಗಿ ಮಾತ್ರ ಎಂದು ಭಾವಿಸಬೇಡಿ. ವಧಿಸುವ ಗೋವು ಸಹಿತ ಜಾ ನುವಾರುಗಳ ಪೈಕಿ 50%ದಷ್ಟು ಅಂಶವು ಆಹಾರಕ್ಕಾಗಿ ಬಳಕೆಯಾದರೆ, ಇನ್ನರ್ಧ ಅಂಶವು ಸಕ್ಕರೆ ತಯಾರಿಸಲು, ಐಷಾರಾಮಿ  ಕಾರುಗಳ ಸೀಟು ತಯಾರಿಸಲು, ಚಪ್ಪಲಿಗಳು, ಬ್ಯಾಗುಗಳು, ಬೆಲ್ಟ್ ಸಹಿತ ಅನೇಕಾರು ವಸ್ತುಗಳ ತಯಾರಿಕೆಗೆ ಬಳಕೆಯಾಗುತ್ತದೆ.  ರಾಜ್ಯದಲ್ಲಿ ಇದೀಗ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಬಂದಿರುವುದರಿAದ ಇದನ್ನೇ ವೃತ್ತಿಯಾಗಿಸಿಕೊಂಡ ಸುಮಾರು 40  ಸಾವಿರಕ್ಕೂ ಅಧಿಕ ಕುಟುಂಬಗಳಿಗೆ ಸಮಸ್ಯೆಯಾಗಲಿದೆ. ಅಂದಹಾಗೆ,
ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಗೆ ಬಂದಿರುವುದು ಇದು ಮೊದಲೇನಲ್ಲ. ಈಗಿನ ಕಾಯ್ದೆಯು ಈಗಾಗಲೇ ಇದ್ದ  1964ರ ಕಾಯ್ದೆಗೆ ಬೇರೆಯದೇ ಸ್ವರೂಪವನ್ನಷ್ಟೇ ನೀಡಿದೆ. ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯ್ದೆ 1964ರಂತೆ ಎತ್ತು ಮತ್ತು  ಕೋಣಗಳನ್ನು ವಧಿಸುವುದಕ್ಕೆ ನಿರ್ಬಂಧ ಇರಲಿಲ್ಲ. ಅಲ್ಲದೇ 12 ವರ್ಷಕ್ಕಿಂತ ಮೇಲಿನ ಗೊಡ್ಡು ಹಸುಗಳನ್ನು ವಧಿಸುವುದಕ್ಕೆ ಅ ನುಮತಿ ಇತ್ತು. ಆದರೆ 2020ರ ಗೋಹತ್ಯೆ ನಿಷೇಧ ಕಾಯ್ದೆಯು ಈ ಎಲ್ಲ ಅವಕಾಶಕ್ಕೂ ತೆರೆ ಎಳೆದಿದೆ. ಯಾರಾದರೂ ಈ  ಕಾಯ್ದೆಯನ್ನು ಉಲ್ಲಂಘಿಸಿದರೆ 7 ವರ್ಷಗಳ ವರೆಗೆ ಜೈಲುವಾಸ ಮತ್ತು 5 ಲಕ್ಷ ರೂಪಾಯಿಯಷ್ಟು ದಂಡ ವಿಧಿಸುವುದಕ್ಕೆ ಅವಕಾಶ  ಇದೆ. ಗೋರಕ್ಷಕರಿಗೆ ರಕ್ಷಣೆಯನ್ನು ಕೊಡುವ ಸೂಚನೆ ಇದೆ. ಈ ಕಾಯ್ದೆಯನ್ನು ಜಾರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುವ  ಪೊಲೀಸ್ ಇಲಾಖೆಗೆ ಸಂಪೂರ್ಣ ಸ್ವಾತಂತ್ರ‍್ಯವನ್ನು ನೀಡಲಾಗಿದೆ. ನಿಜವಾಗಿ,
ಗೋಹತ್ಯೆ ನಿಷೇಧ ಕಾಯ್ದೆಯನ್ನು ಮೊದಲಾಗಿ ಜಾರಿಗೆ ತಂದಿರುವುದು ಯಡಿಯೂರಪ್ಪ ಸರ್ಕಾರ ಅಲ್ಲ. ಈ ಮೊದಲೇ  ಅಂಥದ್ದೊಂದು ಕಾಯ್ದೆಯೊಂದಿತ್ತು. ಆ ಕಾಯ್ದೆಯು ರೈತರಿಗೆ, ಹೈನುದ್ಯಮಿಗಳಿಗೆ ಮತ್ತು ಮೃಗಾಲಯದ ಪ್ರಾಣಿಗಳಿಗೆ  ಪೂರಕವಾಗಿತ್ತು. ಉಳುಮೆಗೆ ಬಾರದ ಎತ್ತುಗಳು ಮತ್ತು ಹಾಲು ನೀಡದ ಹಸುಗಳನ್ನು ಮಾರಿ, ಆ ಮೂಲಕ ಬರುವ ಆದಾಯ ದಿಂದ ಎಳೆಕರುಗಳನ್ನು ಮತ್ತು ಉಳುಮೆಗೆ ಸಾಮರ್ಥ್ಯವಿರುವ ಎತ್ತುಗಳನ್ನು ಖರೀದಿಸುವುದಕ್ಕೆ ಅವಕಾಶವಿತ್ತು. ನಿಜಕ್ಕೂ ಇದು  ರೈತಸ್ನೇಹಿ ಕಾಯ್ದೆ. ಆದ್ದರಿಂದಲೇ, ಈ ಕಾಯ್ದೆಯ ಹೊರತಾಗಿಯೂ ಗೋವು, ಎತ್ತುಗಳ ಕೊರತೆ ರಾಜ್ಯದಲ್ಲಿ ಕಂಡು ಬಂದಿಲ್ಲ.  ಹಾಲುತ್ಪಾದನೆಯಲ್ಲಿ ಇಳಿಕೆಯಾಗಿಲ್ಲ. ಒಂದುವೇಳೆ,
1964ರ ಜಾನುವಾರು ಕಾಯ್ದೆಯು ಗೋಸಂರಕ್ಷಣಾ ವಿರೋಧಿಯಾಗಿರುತ್ತಿದ್ದರೆ ಈ 5 ದಶಕಗಳಲ್ಲಿ ಗೋಸಂತತಿಯ ನಾಶಕ್ಕೆ ಈ  ರಾಜ್ಯ ಸಾಕ್ಷಿಯಾಗಬೇಕಿತ್ತು. ಹಾಲುತ್ಪಾದನೆಯಲ್ಲಿ ತೀವ್ರ ಇಳಿಕೆ ಕಂಡುಬರಬೇಕಿತ್ತು. ಆದರೆ ಹೀಗೇನೂ ಆಗಿಲ್ಲ. ಅಂದರೆ, ಗೋಹತ್ಯೆ  ನಿಷೇಧ 2020ರ ಕಾಯ್ದೆಗಿಂತ ಮೊದಲಿನ 1964ರ ಕಾಯ್ದೆಯು ರೈತಸ್ನೇಹಿ ಮತ್ತು ಜಾನುವಾರು ಸ್ನೇಹಿಯಾಗಿತ್ತು ಎಂದೇ ಅರ್ಥ.  ಅಷ್ಟಕ್ಕೂ,
1964ರ ಕಾಯ್ದೆಯನ್ನು ರದ್ದುಗೊಳಿಸಿ ಸಂಪೂರ್ಣ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೆ ತನ್ನಿ ಎಂದು ರಾಜ್ಯದಲ್ಲಿ ರೈತರಾಗಲಿ  ಹೈನುದ್ಯಮದಲ್ಲಿ ತೊಡಗಿಸಿಕೊಂಡವರಾಗಲಿ ಬೇಡಿಕೆಯನ್ನಿಟ್ಟಿರುವುದೋ ವಿಧಾನಸೌಧ ಚಲೋ ನಡೆಸಿರುವುದೋ ಈವರೆಗೂ ನಡೆ ದಿಲ್ಲ. ಅಲ್ಲದೇ, ಈ ಬಗ್ಗೆ ಜನಾಭಿಪ್ರಾಯವನ್ನೂ ಸಂಗ್ರಹಿಸಲಾಗಿಲ್ಲ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶ ಇತ್ತು ನಿಜ.  ಆದರೆ, ಬಿಜೆಪಿಗೆ ರಾಜ್ಯದ ಜನತೆ ಓಟು ಹಾಕಿರುವುದಕ್ಕೆ ಆ ಒಂದೇ ಭರವಸೆ ಕಾರಣ ಆಗಿತ್ತೇ? ಒಂದುವೇಳೆ,
ಗೋಹತ್ಯೆ ನಿಷೇಧ ಕಾಯ್ದೆಯ ಏಕ ಭರವಸೆಯೊಂದನ್ನೇ ಪ್ರಣಾಳಿಕೆಯನ್ನಾಗಿಸಿ ಮತ್ತು ಇನ್ನಾವುದೂ ಪ್ರಣಾಳಿಕೆಯಲ್ಲಿ ಇಲ್ಲದೇ  ಇರುತ್ತಿದ್ದರೆ ಜನರು ಆ ಕಾರಣಕ್ಕಾಗಿ ಮಾತ್ರ ಮತ ನೀಡಿದ್ದಾರೆ ಎಂದು ಹೇಳಬಹುದಿತ್ತು. ಆದರೆ ಹಾಗೆ ನಡೆದಿಲ್ಲ ಮತ್ತು  ನಡೆಯುವದಕ್ಕೆ ಸಾಧ್ಯವೂ ಇಲ್ಲ. ಜನರು ಯಾವುದೇ ರಾಜಕೀಯ ಪಕ್ಷಕ್ಕೆ ಮತ ಹಾಕುವುದಕ್ಕೂ ಬೇರೆ ಬೇರೆ ಸಂಗತಿಗಳು  ಕಾರಣವಾಗಿರುತ್ತವೆ. ಹೆಚ್ಚಿನ ಬಾರಿ ಪ್ರಣಾಳಿಕೆಗೂ ಜನರ ಮತ ಚಲಾವಣೆಗೂ ಸಂಬಂಧವೇ ಇರುವುದಿಲ್ಲ. ಗೆದ್ದ ಬಳಿಕ ರಾಜಕೀಯ  ಪಕ್ಷಗಳೂ ಹೆಚ್ಚಿನ ಬಾರಿ ಪ್ರಣಾಳಿಕೆಯತ್ತ ಮುಖವೆತ್ತಿ ನೋಡುವುದೂ ಇಲ್ಲ. ಪಕ್ಷವೊಂದಕ್ಕೆ ಬೀಳುವ ಮತಗಳಿಗೂ ಪ್ರಣಾಳಿಕೆಯಲ್ಲಿ  ಹೇಳಲಾಗುವ ಭರವಸೆಗಳಿಗೂ ಹೆಚ್ಚಿನ ಬಾರಿ ಯಾವ ಹೋಲಿಕೆಯೂ ಇರುವುದಿಲ್ಲ. ಆದ್ದರಿಂದ ಪ್ರಣಾಳಿಕೆಯನ್ನು ತೋರಿಸಿ ಬಿಜೆಪಿ  ಗೋಹತ್ಯಾ ನಿಷೇಧ ಕಾಯ್ದೆಯನ್ನು ಸಮರ್ಥಿಸಿಕೊಳ್ಳುವುದು ಸಂದರ್ಭ ಸಾಧಕತನವೇ ಹೊರತು ಪ್ರಾಮಾಣಿಕತೆಯಲ್ಲ.
ರಾಜ್ಯದಲ್ಲಿ ಗೋಹತ್ಯಾ ನಿಷೇಧ ಕಾಯ್ದೆಯಂತೆ ಈಗಾಗಲೇ ಪ್ರಥಮ ಕೇಸು ದಾಖಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾಯ್ದೆಯ  ನೇರ ಪರಿಣಾಮವನ್ನು ರೈತರು ಎದುರಿಸಬೇಕಿರುವುದರಿಂದ ರಾಜ್ಯ ಎರಡು ಸವಾಲುಗಳಿಗೆ ಸಾಕ್ಷಿಯಾಗಗಬಹುದು. 
1. ರೈತರು  ಮತ್ತು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ಪ್ರತಿಭಟನೆ.
 2. ಹೈನುಗಾರಿಕೆಯಿಂದ ರೈತರು ನಿಧಾನವಾಗಿ ದೂರ  ಸರಿಯುವುದು. ಹಾಗಂತ,
ಇವು ಏನೇ ಆದರೂ ಅದರಿಂದ ಆಯಾ ಕುಟುಂಬಗಳು ಮಾತ್ರ ಸಂಕಷ್ಟಕ್ಕೆ ಒಳಗಾಗುವುದಲ್ಲ. ಹಾಲುತ್ಪಾದನೆಯಲ್ಲಿ ಕೊರತೆಯಿಂದ  ಹಿಡಿದು ಮಾಂಸದ ಅಲಭ್ಯತೆ ಮತ್ತು ಮಾಂಸದಿಂದ  ಉತ್ಪತ್ತಿಯಾಗುವ ವಿವಿಧ ವಸ್ತುಗಳ ಬೆಲೆ ಏರಿಕೆಗೂ ಈ ಕಾಯ್ದೆಯು  ಕಾರಣವಾಗಲಿದೆ. ಮೃಗಾಲಯದ ಪ್ರಾಣಿಗಳ ಆಹಾರ ಬೇಡಿಕೆಗೂ ಪರ್ಯಾಯ ದಾರಿಗಳನ್ನು ಹುಡುಕಬೇಕಾಗುತ್ತದೆ. ಗೋಮಾಂಸ  ಹೊರತಾದ ಮಾಂಸಗಳು ದುಬಾರಿಯಾಗಿರುವುದರಿಂದ ಅದರ ಹೊರೆಯನ್ನು ಸರಕಾರ ಹೊತ್ತುಕೊಳ್ಳಬೇಕಾಗುತ್ತದೆ. ಬೀಡಾಡಿ ಜಾ ನುವಾರುಗಳ ಸಂಖ್ಯೆ ಹೆಚ್ಚಾಗಲಿದ್ದು, ಗೋಶಾಲೆಗಳ ನಿರ್ವಹಣೆಯೂ ಸವಾಲಾಗಲಿದೆ. ಈಗಿನ ಕಾಯ್ದೆಯನ್ನು ನೇರಾತಿನೇರ ಜಾರಿ  ಮಾಡಬೇಕಾದರೆ ಗ್ರಾಮಕ್ಕೆ ನಾಲ್ಕೈದು  ಗೋಶಾಲೆಗಳನ್ನಾದರೂ ತೆರೆಯಬೇಕಾಗಬಹುದು. ಮೇವು, ಹಿಂಡಿ ಸಹಿತ ಅದರ  ನಿರ್ವಹಣೆಗೆ ಬೇಕಾಗುವ ಹಣಕ್ಕೆ ಏನು ದಾರಿ? ಈ ಸವಾಲಿಗೆ ಒಂದು ನಯಾಪೈಸೆಯನ್ನೂ ತೆಗೆದಿಡದ ಸರಕಾರವೂ ಕೇವಲ  ಕಾಯ್ದೆ ತಂದು ಮಾಡುವುದೇನು? ಅಂದಹಾಗೆ,
ಜನಮರುಳು ಕಾಯ್ದೆಗಳು ಜನಾಕ್ರೋಶದ ಪ್ರವಾಹದಲ್ಲಿ ಕೋಚ್ಚಿಹೋದ ಕತೆಗಳು ಇತಿಹಾಸದಲ್ಲಿ ಧಾರಾಳ ಇವೆ.

Saturday, 13 February 2021

ಅವರು ಮಕ್ಕಳು, ಅಷ್ಟೇ



ಕಳೆದವಾರ ಪ್ರಕಟವಾದ ಈ ಮೂರು ಸುದ್ದಿಗಳನ್ನು ಓದಿ.
1. ಓದುತ್ತಿಲ್ಲವೆಂಬ ಕಾರಣಕ್ಕೆ ಎಂಟರ ಹರೆಯದ ಬಾಲಕನಿಗೆ ಹೆತ್ತ ತಂದೆಯೇ ಕಾದ ಸಟ್ಟುಗರಿಂದ ಬರೆ ಎಳೆದಿದ್ದಾರೆ. ಘಟನೆ  ನಡೆದಿರುವುದು ಕೇರಳದ ಪಟ್ಟಣಂತಿಟ್ಟದಲ್ಲಿ. ತೋಳುಗಳು ಮತ್ತು ಕಾಲುಗಳಿಗೆ ಸುಟ್ಟ ಗಾಯಗಳಾಗಿರುವ ಮಗುವನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ. ಮಗುವಿನ ತಂದೆಗೆ ಮದ್ಯ ಸೇವನೆಯ ಚಟವಿದೆ.
2. ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಸಮಯದಲ್ಲಿ ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕಾಪ್ಸಿಕೋಫ್ರಿ ಗ್ರಾಮದ ಭಾ ನ್‌ಬೋರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 12 ಮಕ್ಕಳಿಗೆ ಪೊಲೀಯೋ ಹನಿ ನೀಡುವ ಬದಲು ಸ್ಯಾನಿಟೈಸರ್ ಹನಿ  ನೀಡಲಾಗಿದೆ. ಎಲ್ಲವೂ 5 ವರ್ಷಕ್ಕಿಂತ ಕೆಳಗಿನ ಮಕ್ಕಳು. ಮಕ್ಕಳನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
3. 4 ವರ್ಷದ ಮಗುವಿನ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಲಾದ ಘಟನೆ ಮಧ್ಯಪ್ರದೇಶದ ಬೊನೆರಾ ಜಿಲ್ಲೆಯಲ್ಲಿ ನಡೆದಿದೆ.  ಅತ್ಯಾಚಾರಿಯ ಮೇಲೆ ಈಗಾಗಲೇ ಅತ್ಯಾಚಾರಗೈದ ಆರೋಪ ಇದ್ದು ಜಾಮೀನಿನ ಮೇಲೆ ಜೈಲಿನಿಂದ ಇತ್ತೀಚೆಗಷ್ಟೇ  ಬಿಡುಗಡೆಗೊಂಡಿದ್ದ.
ಅಂದಹಾಗೆ, ಛೆ, ಅಯ್ಯೋ, ಎಂಥ ಕ್ರೂರಿಗಳು... ಇತ್ಯಾದಿ ಉದ್ಗಾರಗಳೊಂದಿಗೆ ಸುದ್ದಿಯನ್ನು ಓದಿ ಮುಗಿಸುವುದರ ಆಚೆಗೆ ಮಕ್ಕಳ  ಸುರಕ್ಷಿತೆಗಾಗಿ ನಾವೇನು ಮಾಡಬಹುದು? ಈ ಬಗೆಯ ಪ್ರಶ್ನೆಯೊಂದನ್ನು ಪ್ರತಿಯೋರ್ವರೂ ಸ್ವಯಂ ಕೇಳಿಕೊಳ್ಳಬೇಕು.  ದೊಡ್ಡವರಿಗೆ ಪ್ರಶ್ನಿಸುವುದಕ್ಕೆ ಬರುತ್ತದೆ. ಅನ್ಯಾಯವಾದಾಗ ಅದನ್ನು ವೀಡಿಯೋ ಮಾಡಿ ಹಂಚಿಕೊಳ್ಳುವುದಕ್ಕೂ ಬರುತ್ತದೆ. ಕಷ್ಟದ ಲ್ಲಿದ್ದರೂ, ಕಾಯಿಲೆ ಬಿದ್ದರೂ ಮನೆ ಇಲ್ಲದಿದ್ದರೂ, ಅನ್ಯಾಯವಾಗಿ ಪೊಲೀಸರೋ, ಇನ್ನಾರೋ ಥಳಿಸಿದರೂ ಅವೆಲ್ಲವನ್ನೂ  ನಾಗರಿಕ ಜಗತ್ತಿಗೆ ತಿಳಿಸುವ ಕಲೆ ದೊಡ್ಡವರಲ್ಲಿರುತ್ತದೆ. ಅದಕ್ಕೆ ಬೇಕಾದ ಅಧುನಿಕ ಉಪಕರಣಗಳಿರುವುದೂ ದೊಡ್ಡವರಲ್ಲೇ. ಆದರೆ,  ಎಳೆ ಪ್ರಾಯದ ಮಕ್ಕಳ ಪಾಲಿಗೆ ಇವ್ಯಾವೂ ಲಭ್ಯವಿಲ್ಲ. ಎಲ್ಲಿಯವರೆಗೆಂದರೆ, ತಮ್ಮ ಮೇಲಿನ ಅನ್ಯಾಯ, ಹಲ್ಲೆ, ಬೈಗುಳ, ಥಳಿತ  ಇತ್ಯಾದಿ ಎಸಗಿದವರನ್ನು ದಂಡಿಸುವುದಕ್ಕೆ ಕಾನೂನುಗಳಿವೆ ಎಂಬುದೂ ಅವರಿಗೆ ಗೊತ್ತಿರುವುದಿಲ್ಲ.
ದೊಡ್ಡವರಲ್ಲಿ ಏನೇನೆಲ್ಲ ಆಧುನಿಕ ಸೌಲಭ್ಯಗಳು ಇವೆ ಎಂದು ನಾವು ಹೇಳುತ್ತೇವೆಯೋ ಅವ್ಯಾವುವೂ ಲಭ್ಯವಿಲ್ಲದ ಬಹುದೊಡ್ಡ  ಸಮೂಹವೆಂದರೆ ಮಕ್ಕಳು. ಅವರಿಗೆ ಕಣ್ಣೀರು ಇಳಿಸಲು ಬರುತ್ತದೆ. ಆದರೆ ಅದನ್ನು ವೀಡಿಯೋ ಮಾಡಿ ಹಂಚಿಕೊಳ್ಳುವ  ಮೊಬೈಲು ಅವರ ಕೈಯಲ್ಲಿಲ್ಲ. ಹೆತ್ತವರಲ್ಲಿ ಹಲವು ವಿಧ. ಕೆಲವು ಮನೆಗಳಲ್ಲಿ ಹೆತ್ತವರಿಬ್ಬರೂ ಉದ್ಯೋಗಕ್ಕೆ ಹೋಗುತ್ತಾರೆ. ಕೆಲವು  ಮನೆಗಳಲ್ಲಿ ತಂದೆ ಮಾತ್ರ ಕೆಲಸಕ್ಕೆ ಹೋಗುತ್ತಾರೆ. ಈ ಕೆಲಸದಲ್ಲೂ ಹತ್ತಾರು ವಿಧ. ಪ್ಯಾಂಟು, ಬೂಟು, ಟೈ, ಕೋಟು ಧರಿಸಿ  ಕೆಲಸಕ್ಕೆ ಹೋಗುವ ಅಪ್ಪ ಇರುವಂತೆಯೇ ಇಸ್ತ್ರಿ  ಹಾಕದ, ದೊರಗು ಉಡುಪನ್ನು ಧರಿಸಿ ಕೆಲಸಕ್ಕೆ ಹೋಗುವ ಅಪ್ಪನೂ ಇದ್ದಾನೆ.  ಅಮ್ಮಂದಿರಲ್ಲೂ ಇಂಥ ವೈವಿಧ್ಯವಿದೆ. ಮನೆಯಲ್ಲೇ  ಇರುವ ಅಮ್ಮ ಇರುವಂತೆಯೇ ಮುಂಜಾನೆಯಿಂದ  ಸಂಜೆವರೆಗೆ ದುಡಿಯುವ  ಅಮ್ಮನೂ ಇದ್ದಾಳೆ. ಇವರೆಲ್ಲರೂ ಉದ್ಯೋಗದಲ್ಲಿ ಒಬ್ಬರಿಗಿಂತ ಒಬ್ಬರ ನಡುವೆ ವ್ಯತ್ಯಾಸ ಇರುವಂತೆಯೇ, ಉದ್ಯೋಗ ಸ್ಥಳದ  ವಾತಾವರಣದಲ್ಲೂ ವ್ಯತ್ಯಾಸ ಇರುತ್ತದೆ. ಶಾಂತ ವಾತಾವರಣ, ಸದಾ ಒತ್ತಡದ ಸ್ಥಿತಿ, ಮೇಲಧಿಕಾರಿಗಳಿಂದ ಯಾವಾಗಲೂ ಬೈಗುಳ;  ಅತೀವ ಕಠಿಣ ಕೆಲಸ, ಬಿರು ಬಿಸಿಲಿನಲ್ಲಿ ಬೆಳಗ್ಗಿನಿಂದ ಸಂಜೆವರೆಗೆ ದುಡಿಯಬೇಕಾದ ಸ್ಥಿತಿಯೂ ಇರುತ್ತದೆ. ಸಾಮಾನ್ಯವಾಗಿ  ಉದ್ಯೋಗ ಸ್ಥಳದ ವಾತಾವರಣಕ್ಕೆ ಹೊಂದಿಕೊಂಡು ಅವರ ವರ್ತನೆಯಲ್ಲೂ ವ್ಯತ್ಯಾಸ ಇರುತ್ತದೆ. ಸದಾ ಒತ್ತಡದ ಸನ್ನಿವೇಶದಲ್ಲಿ  ಕೆಲಸ ಮಾಡುವ ವ್ಯಕ್ತಿ, ಆ ಒತ್ತಡದ ಪರಿಣಾಮವನ್ನು ಮನೆವರೆಗೂ ಕೊಂಡು ಹೋಗುವುದಿದೆ ಮತ್ತು ಅದರ ಭಾರವನ್ನು ಮಕ್ಕಳ  ಮೇಲೆ ಹೇರಿ ಹಗುರವಾಗುವುದಿದೆ. ಮಕ್ಕಳನ್ನು ಥಳಿಸುವ, ಬೈಯುವ, ನಿಂದಿಸುವ ಮತ್ತು ಗದರಿಸುವ ಹೆತ್ತವರು ಮನಃ ಪೂರ್ವಕವಾಗಿ ಹಾಗೆ ಮಾಡುತ್ತಾರೆಂದು ಹೇಳಲಾಗದು. ಇನ್ನೆಲ್ಲೋ  ಆದ ಅವಮಾನಕ್ಕೆ, ನಿಂದನೆಗೆ ಆ ಕ್ಷಣದಲ್ಲಿ ತಕ್ಕ ಉತ್ತರ  ನೀಡಲಾಗದೇ ಅಥವಾ ಆ ಸಾಮರ್ಥ್ಯ ಇಲ್ಲದೇ ಒಳಗೊಳಗೇ ಕುದಿಯುತ್ತಾ ಸಿಟ್ಟನ್ನು ಮಕ್ಕಳ ಮೇಲೆ ಅಕಾರಣವಾಗಿ  ತೀರಿಸಿಕೊಳ್ಳುವುದಿದೆ. ಇವು ಏನೇ ಇದ್ದರೂ ಬಲಿಪಶುಗಳು ಮಾತ್ರ ಮಕ್ಕಳೇ. ಅಷ್ಟಕ್ಕೂ,
ತಪ್ಪೇ ಮಾಡದ ಮಗುವಿನ ಮೇಲೆ ಅಪ್ಪ ಏನೇನೋ ಕಾರಣ ಕೊಟ್ಟು ಬಾರಿಸಿದರೆ ಆ ಮಗುವಿನ ಮನಸ್ಸು ಏನಂದೀತು? ಆ  ಕ್ಷಣದಲ್ಲಿ ಆ ಮಗುವಿನ ಮನಸ್ಸಲ್ಲಿ ಏನೆಲ್ಲ ಪ್ರಶ್ನೆಗಳು ಹುಟ್ಟಿಕೊಂಡೀತು? ತೀರಾ ಪುಟ್ಟ ಪ್ರಮಾದಕ್ಕೂ ಕೆಂಡಾಮAಡಲವಾಗುವ ಅಪ್ಪ  ಅಥವಾ ಅಮ್ಮನ ಬಗ್ಗೆ ಒಂದು ಮಗು ಏನೇನು ಭಾವಿಸಿಕೊಂಡೀತು? ಮದ್ಯ ಸೇವಿಸಿ ಬಂದು ಮನೆಯಲ್ಲಿ ಅಮ್ಮನಿಗೋ ತನಗೋ  ಬಾರಿಸುವ ಅಪ್ಪನನ್ನು ಕಂಡು ಮಗುವಿನಲ್ಲಿ ಏಳುವ ಪ್ರಶ್ನೆಗಳೇನಿರಬಹುದು?
ಮನೆಯ ನಾಲ್ಕು ಗೋಡೆಗಳ ಒಳಗೆ ಅತ್ಯಂತ ಅಸಹಾಯಕರು ಯಾರೆಂದರೆ, ಮಕ್ಕಳು. ಅಪ್ಪ-ಅಮ್ಮನ ಮೂಡ್ ಯಾವಾಗ ಚೆ ನ್ನಾಗಿರುತ್ತೋ ಆವಾಗೆಲ್ಲ ಅವರಲ್ಲಿ ಖುಷಿ. ಅವರು ತಪ್ಪು ಮಾಡಿದರೂ ಮಾಡದಿದ್ದರೂ ಹೆತ್ತವರನ್ನು ಹೊಂದಿಕೊಂಡು ಅವರ  ಸುಖ-ದುಃಖ ನಿರ್ಣಯವಾಗುತ್ತದೆ. ಇನ್ನು, ಅವರ ಜಗತ್ತು ಕೂಡ ಬಹಳ ಸಣ್ಣದು. ಅವರ ಭಾವನೆಗಳನ್ನು ಜಗತ್ತಿನ ಮುಂ ದಿಡುವುದಕ್ಕೆ ಯಾವ ಮಾಧ್ಯಮವೂ ಇಲ್ಲ. ಅಥವಾ ದೊಡ್ಡವರಂತೆ ಮಾಧ್ಯಮವನ್ನು ಬಳಸಿ ಹೇಳಿಕೊಳ್ಳುವ ಸಾಮರ್ಥ್ಯವೂ ಅವರಲ್ಲಿಲ್ಲ. ಆದ್ದರಿಂದಲೇ, ಈ ಜಗತ್ತಿನಲ್ಲಿ ದೊಡ್ಡವರ ಸಂಕಟ, ಭಾವನೆ, ಅಭಿಪ್ರಾಯಗಳು ಸುದ್ದಿಗೊಳಗಾಗುವಂತೆ ಮಕ್ಕಳು ಸು ದ್ದಿಗೊಳಗಾಗುವುದಿಲ್ಲ. ಅವರ ಅಭಿಪ್ರಾಯಗಳಿಗೆ ವೇದಿಕೆಗಳಿಲ್ಲ. ಅವರ ಮೇಲಿನ ಹಲ್ಲೆಯನ್ನು, ನಿಂದನೆಯನ್ನು ಅಥವಾ  ಶೋಷಣೆಯನ್ನು ಹೊರ ಜಗತ್ತಿಗೆ ತಿಳಿಸುವ ದಾರಿಗಳಿಲ್ಲ. ಈ ಎಲ್ಲ ಕಾರಣಗಳಿಂದ ಬಾಹ್ಯ ಜಗತ್ತಿನ ಪಾಲಿಗೆ ಮಕ್ಕಳೆಲ್ಲ  ಸುಖವಾಗಿದ್ದಾರೆ ಎಂಬ ವಾತಾವರಣ ಇದೆ. ಅಲ್ಲೊಂದು  ಇಲ್ಲೊಂದು  ಪ್ರಕರಣಗಳಷ್ಟೇ ಮಾಧ್ಯಮಗಳ ಒಳಗಿನ ಪುಟಗಳಲ್ಲಿ  ಕಾಣಿಸಿಕೊಳ್ಳುತ್ತವೆ. ಅಷ್ಟಕ್ಕೂ, ಅಂಥ ಸುದ್ದಿಯನ್ನು ಹೊರ ಜಗತ್ತಿಗೆ ಹೇಳುವುದೂ ಮಕ್ಕಳಲ್ಲ, ದೊಡ್ಡವರು. ಅಂದಹಾಗೆ,
ಮಕ್ಕಳ ಈ ಎಲ್ಲ ಅಸಹಾಯಕತೆಯನ್ನು ದೊಡ್ಡವರಾದ ನಾವು ಶಾಂತಚಿತ್ತದಿಂದ ಅರ್ಥೈಸಬೇಕು ಮತ್ತು ಸ್ಪಂದಿಸಬೇಕು. ನಾವು  ಥಳಿಸಿದರೆ ತಿರುಗಿ ಥಳಿಸುವ ಸಾಮರ್ಥ್ಯವಿಲ್ಲದ, ಬೈದರೆ ತಿರುಗಿ ಬೈಯಲು ಬಾರದ, ಊಟ ಕೊಡದಿದ್ದರೆ ಊಟ ತಯಾರಿಸಿ ತಿ ನ್ನಲು ತಿಳಿಯದ ಮಕ್ಕಳ ಮೇಲೆ ಪ್ರತಾಪ ತೋರಿಸುವುದು ಅತಿ ದೊಡ್ಡ ಕ್ರೌರ್ಯ ಮತ್ತು ಅತಿ ಹೀನ ಕಾರ್ಯ. ನಮ್ಮ ಪಕ್ಕದ ಮ ನೆಯಲ್ಲಿ, ಆಸು-ಪಾಸಿನಲ್ಲಿ ಮಕ್ಕಳ ಮೇಲೆ ಹೆತ್ತವರಿಂದ ದೌರ್ಜನ್ಯ ನಡೆಯುತ್ತಿದ್ದರೆ ಅವರನ್ನು ತಿದ್ದುವ ಅಥವಾ ತಿದ್ದುವ ಸಾಮರ್ಥ್ಯ  ಉಳ್ಳವರಲ್ಲಿ ಹೇಳಿಸುವ ಪ್ರಯತ್ನಗಳು ನಡೆಯಬೇಕು. ಸ್ವತಃ ನಾವೂ ಮಕ್ಕಳ ಜೊತೆ ಕರುಣೆಯಿಂದ ವರ್ತಿಸಬೇಕು. ತಪ್ಪು ಮಾಡುವ  ಪ್ರಾಯವೇ ಮಕ್ಕಳದು. ಅದಕ್ಕೆ ಕಠಿಣ ದಂಡನೆ ಉತ್ತರವಲ್ಲ. ಹೂ ಮನಸ್ಸಿನ ಮಕ್ಕಳನ್ನು ಹೂವಿನಂತೆ ಪ್ರೀತಿಸಬೇಕಾದುದು ನಮ್ಮೆಲ್ಲರ  ಜವಾಬ್ದಾರಿ.
ಆರಂಭದ ಮೂರು ಘಟನೆಗಳಲ್ಲಿ ಮಕ್ಕಳ ಅಸಹಾಯಕತೆಯ ದಟ್ಟ ಛಾಯೆಯಿದೆ ಮತ್ತು ದೊಡ್ಡವರ ದೊಡ್ಡಸ್ತಿಕೆಯ ಅಹಂಭಾವ  ಮತ್ತು ನಿರ್ಲಕ್ಷ್ಯವಿದೆ. ಇದು ಕೊನೆಯಾಗಲಿ. ಮಕ್ಕಳ ಬಾಳು ಸುಂದರವಾಗಲಿ. 

Friday, 12 February 2021

ಹೆಣ್ಣು ಮತ್ತು ಕೇಡಿನ ಕಣ್ಣುಳ್ಳ ಸಮಾಜ

ಸನ್ಮಾರ್ಗ ಸಂಪಾದಕೀಯ 

ಪತ್ರಿಕೆಗಳಲ್ಲಿ ಅತ್ಯಾಚಾರದ ವಿರುದ್ಧ ಸಂಪಾದಕೀಯವೋ ಮುಖ್ಯ ಬರಹವೋ ಪ್ರಕಟವಾಗಬೇಕಾದರೆ ಬರೇ ಅತ್ಯಾಚಾರವಷ್ಟೇ ಆದರೆ  ಸಾಲದು, ಅದು ಬರ್ಬರವಾಗಿರಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ, ಅತ್ಯಾಚಾರ ಎಂಬ ಪದಕ್ಕೆ ಹೌಹಾರುವ ಸ್ಥಿತಿ  ಈಗಿಲ್ಲ. ಅದನ್ನೊಂದು ಸಹಜ ಕ್ರಿಯೆಯಾಗಿ ದೇಶ ಒಪ್ಪಿಕೊಂಡು ಬಿಟ್ಟಿದೆ. ಈಗ ಅಸಹಜವಾಗುವುದು ಯಾವುದೆಂದರೆ, ಬರ್ಬರ  ಅತ್ಯಾಚಾರ. ಅತ್ಯಾಚಾರಿಗಳು ಹೆಣ್ಣಿನ ಮರ್ಮಾಂಗವನ್ನು ಛಿದ್ರಗೊಳಿಸಿದರೆ ಮತ್ತು ಹೆಣ್ಣಿನೊಂದಿಗೆ ಅತ್ಯಂತ ಪೈಶಾಚಿಕವಾಗಿ  ನಡೆಸಿಕೊಂಡರೆ ಆ ಸುದ್ದಿ ಪತ್ರಿಕೆಗಳ ತೀರಾ ಒಳಪುಟಕ್ಕೆ ಹೋಗುವುದು ತಪ್ಪುತ್ತದೆ. ಉಳಿದಂತೆ ಕೇವಲ ಅತ್ಯಾಚಾರ ಪ್ರಕರಣವೊಂದು  ಒಳಪುಟದ ಬದಲು ಮುಖಪುಟಕ್ಕೆ ಬರಬೇಕಾದರೆ ಹಲವು ರಾಜಕೀಯ ಸುದ್ದಿಗಳ ಜೊತೆ ಗುದ್ದಾಡಬೇಕಾಗುತ್ತದೆ. ಸದ್ಯ ಬರ್ಬರ  ಅಥವಾ ಅತಿ ಬರ್ಬರ ಅನ್ನಬಹುದಾದ ಅತ್ಯಾಚಾರಗಳು ಕಳೆದ ಒಂದೇ ವಾರದಲ್ಲಿ ಒಂದಕ್ಕಿಂತ ಹೆಚ್ಚು ನಡೆದಿವೆ. ಜಾರ್ಖಂಡ್‌ನ  ಚತರಾ ಎಂಬ ಜಿಲ್ಲೆಯಲ್ಲಿ 50 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ನಡೆದಿದೆ. ಆ ಮಹಿಳೆಯ ಮರ್ಮಾಂಗಕ್ಕೆ ಲೋಹದ  ವಸ್ತುವನ್ನು ತುರುಕಲಾಗಿದೆ. ಉತ್ತರ ಪ್ರದೇಶದ ಬದೌನ್‌ನಲ್ಲಿ 50 ವರ್ಷದ ಮಹಿಳೆಯನ್ನು ಅತ್ಯಾಚಾರ ಮಾಡಿ ಸಾಯಿಸಿದವರಲ್ಲಿ  ಪ್ರಧಾನ ಆರೋಪಿ ದೇವಾಲಯವೊಂದರ ಅರ್ಚಕ. ತೀವ್ರ ರಕ್ತಸ್ರಾವದಿಂದಾಗಿ ಈ ಮಹಿಳೆ ಸಾವಿಗೀಡಾದರು. ತಮಿಳುನಾಡಿನ  ನಾಗಪಟ್ಟಣಂನಲ್ಲಿರುವ ದೇವಾಲಯದ ಆವರಣದಲ್ಲಿ 40 ವರ್ಷದ ಮಹಿಳೆಯನ್ನು ಅತ್ಯಾಚಾರಗೈಯಲಾಗಿದೆ. ನಿಜವಾಗಿ,
ಅರ್ಚಕ, ದೇವಾಲಯ ಎಂಬಿವುಗಳು ಸಾಮಾಜಿಕ ಗೌರವವನ್ನು ಪಡಕೊಂಡವುಗಳು. ಆದ್ದರಿಂದಲೇ ಪತ್ರಿಕೆಗಳು ಸುದ್ದಿಗಳಲ್ಲಿ  ದೇವಾಲಯದ ಆವರಣದಲ್ಲಿ ಅತ್ಯಾಚಾರ ಎಂದೂ ಅತ್ಯಾಚಾರ ಎಸಗಿದವರಲ್ಲಿ ಅರ್ಚಕನೇ ಪ್ರಧಾನ ಆರೋಪಿ ಎಂದೂ ಒತ್ತು  ಕೊಡಲಾಗಿದೆ. ಓರ್ವ ಸಾಮಾನ್ಯ ವ್ಯಕ್ತಿ ಅತ್ಯಾಚಾರಿ ಎನಿಸಿಕೊಳ್ಳುವುದಕ್ಕೂ ಅರ್ಚಕನೋ ಧರ್ಮಗುರುವೋ ಅತ್ಯಾಚಾರಿ ಎ ನಿಸಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸ ಇದೆ. ಇಬ್ಬರೂ ಪೀಡಿಸಿರುವುದು ಹೆಣ್ಣನ್ನೇ ಆಗಿರಬಹುದು ಮತ್ತು ಕ್ರೌರ್ಯದಲ್ಲೂ ಸಮಾನತೆ  ಇರಬಹುದು. ಆದರೆ, ಸಮಾಜದಲ್ಲಿ ಕಾರ್ಮಿಕನಿಗೆ ಇಲ್ಲದ ವಿಶೇಷ ಮಾನ್ಯತೆ, ಗೌರವ ಅರ್ಚಕನಿಗೆ ಇದೆ. ಆತ ಧರ್ಮದ  ಅಂತಃಸತ್ವವನ್ನು ತಿಳಿದವ. ಸಮಾಜಕ್ಕೆ ಬೋಧಿಸುವವ. ಹೆಣ್ಣಿಗೆ ಧರ್ಮ ನೀಡಿರುವ ಮಾನ್ಯತೆಯನ್ನು ತಿಳಿದವ. ಆದರೆ ಆತನೇ ಹೆಣ್ಣ ನ್ನು ಕ್ರೂರವಾಗಿ ನಡೆಸಿಕೊಳ್ಳುವುದೆಂದರೆ, ಅದು ಒಟ್ಟು ಆಸ್ತಿಕ ಭಾವನೆಯನ್ನೇ ಘಾಸಿಗೊಳಿಸುತ್ತದೆ. ಹಾಗಂತ, ಈ ಮಾತು  ಅರ್ಚಕರಿಗೆ ಮಾತ್ರ ಅನ್ವಯವಲ್ಲ. ಎಲ್ಲ ಧರ್ಮದ ಧಾರ್ಮಿಕ ಗುರುಗಳಿಗೂ ಅನ್ವಯ. ವಿಷಾದ ಏನೆಂದರೆ,
ಹೆಣ್ಣಿನ ಸುರಕ್ಷಿತತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾನೂನಿನ ಮೇಲೆ ಕಾನೂನು ರಚಿತವಾಗುತ್ತಿದ್ದರೂ ಮತ್ತು ಶೈಕ್ಷಣಿಕ ಅನುಪಾತವು  ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದ್ದರೂ ಹೆಣ್ಣು ದಿನದಿಂದ ದಿನಕ್ಕೆ ಅಸುರಕ್ಷಿತ ವಲಯಕ್ಕೆ ಜಾರುತ್ತಿದ್ದಾಳೆ. ಮೇಲೆ  ಉಲ್ಲೇಖಿಸಲಾದ ಮೂರೂ ಪ್ರಕರಣಗಳ ಮಹಿಳೆಯರೂ ಯೌವನ ಪ್ರಾಯವನ್ನು ದಾಟಿದವರು. ಬದೌನ್ ಪ್ರಕರಣದಲ್ಲಂತೂ ಪೊಲೀಸ್ ಅಧಿಕಾರಿಗಳು ಅತ್ಯಂತ ಬೇಜವಾಬ್ದಾರಿಯುತವಾಗಿ ವರ್ತಿಸಿದ್ದಾರೆ. ಕೇಸು ದಾಖಲಿಸುವುದಾಗಲಿ, ದೇಹವನ್ನು ಮರಣೋತ್ತರ  ಪರೀಕ್ಷೆಗೆ ಕಳುಹಿಸುವುದಾಗಲಿ ಮಾಡಿಲ್ಲ. ಅಂದರೆ, ಇದು ಶಿಕ್ಷಣದ ಕೊರತೆಯಿಂದಾಗುವ ಕ್ರೌರ್ಯ ಅಲ್ಲ. ಇದೊಂದು ಮನಸ್ಥಿತಿ. ಆ  ಮನಸ್ಥಿತಿ ಅರ್ಚಕರಲ್ಲೂ ಇದೆ, ಪೊಲೀಸ್ ಅಧಿಕಾರಿಗಳಲ್ಲೂ ಇದೆ, ಕಾರ್ಮಿಕನಲ್ಲೂ ಇದೆ, ರಾಜಕಾರಣಿಗಳಲ್ಲೂ ಇದೆ. ಶಿಕ್ಷಣವೊಂದೇ  ಇಂಥ ಮನಸ್ಥಿತಿಯನ್ನು ಬದಲಿಸಲಾರದು ಎಂಬುದಕ್ಕೆ ಜಮ್ಮುವಿನ ಕಥುವಾದಿಂದ ತೊಡಗಿ ಉತ್ತರ ಪ್ರದೇಶದ ಬದೌನ್‌ವರೆಗೆ ಸಾಲು  ಸಾಲು ಪುರಾವೆಗಳು ಲಭಿಸುತ್ತಲೂ ಇವೆ.
ಹೆಣ್ಣು ಮತ್ತು ಗಂಡು ವೈರಿಗಳಲ್ಲ. ಬಹುತೇಕ ಪ್ರತಿ ಮನೆಯಲ್ಲೂ ಹೆಣ್ಣು ಇದ್ದಾಳೆ, ಗಂಡೂ ಇದ್ದಾನೆ. ಆದ್ದರಿಂದ, ಹೆಣ್ಣಿನ  ಪರಿಚಯವೇ ಇಲ್ಲದ, ಹೆಣ್ಣಿನ ಭಾವನೆಗಳನ್ನು ಅರಿತೇ ಇಲ್ಲದ ಗಂಡುಗಳ ಒಂದು ಪ್ರತ್ಯೇಕ ದ್ವೀಪ ಎಲ್ಲೂ ಇಲ್ಲ. ಹೀಗಿರುವಾಗ  ಹೆಣ್ಣೆಂದರೆ ಹೇಗೆ ಬೇಕಾದರೂ ಬಳಸಿ ಎಸೆಯಬಹುದಾದಷ್ಟು ಅಗ್ಗದ ಮತ್ತು ದುರ್ಬಲ ವಸ್ತು ಎಂದು ಗಂಡು ಭಾವಿಸುವುದಾದರೆ  ಅದಕ್ಕೆ ಹೆಣ್ಣಿನ ಒಡನಾಟ ಇಲ್ಲದೇ ಇರುವುದು ಕಾರಣವೇ ಅಲ್ಲ. ಹಾಗಿದ್ದರೆ, ಯಾವುದು ಕಾರಣ? ಕಾನೂನುಗಳ ಬಗ್ಗೆ  ನಿರ್ಲಕ್ಷ್ಯವೋ, ಭಯ ರಹಿತ ಭಾವವೋ? ಮನೆಯಲ್ಲಿ ಪೋಷಕರಿಂದ ಸೂಕ್ತ ತರಬೇತಿ ಸಿಗದೇ ಇರುವುದರ ಪರಿಣಾಮವೋ,  ಮದ್ಯದ ಅಮಲೋ, ಸಿನಿಮಾಗಳ ಪ್ರಭಾವವೋ, ಇಂಟರ್‌ನೆಟ್ ಮೂಲಕ ಸುಲಭವಾಗಿ ಲಭ್ಯವಾಗುತ್ತಿರುವ ನೀಲಿಚಿತ್ರಗಳ  ಹಾವಳಿಯೋ? ಯಾವುದು ಕಾರಣ? ಹಾಗಂತ,
ಇಂಥ ಪ್ರಶ್ನೆಗಳು ಮತ್ತು ಚರ್ಚೆಗಳು ಈ ಮೊದಲು ಟನ್ನುಗಟ್ಟಲೆ ನಡೆದಿವೆ. ಆದರೆ, ಆ ಚರ್ಚೆಗಳಿಗೆ ಹೆಣ್ಣನ್ನು ಸುರಕ್ಷಿತಗೊಳಿಸಲು  ಸಾಧ್ಯವಾಗಿಲ್ಲ. ಬಹಳ ಮುಖ್ಯವಾಗಿ, ಹೆಚ್ಚಿನೆಲ್ಲ ಅತ್ಯಾಚಾರ ಪ್ರಕರಣಗಳಲ್ಲಿ ಮದ್ಯ ಪ್ರಮುಖ ಆರೋಪಿಯಾಗಿರುವುದನ್ನು ಗಮ ನಿಸಬಹುದಾಗಿದೆ. 2012ರ ನಿರ್ಭಯ ಪ್ರಕರಣದಿಂದ ಹಿಡಿದು ಹೈದರಾಬಾದ್ ಪ್ರಕರಣದ ವರೆಗೆ ಅಥವಾ ಪ್ರತಿದಿನದ ಅತ್ಯಾಚಾರ  ಪ್ರಕರಣಗಳ ವರೆಗೆ ಇದನ್ನು ಕಾಣಬಹುದು. ಮದ್ಯವು ವ್ಯಕ್ತಿಯ ಚಿತ್ತಸ್ವಾಸ್ಥ್ಯವನ್ನು ಕೆಡಿಸುತ್ತದೆ. ಸ್ವಾಸ್ಥ್ಯ ಕೆಟ್ಟ ಬಳಿಕ ಕೆಡುಕು  ಸಂಭವಿಸುವುದು ಅಸಹಜ ಅಲ್ಲ. ಆದ್ದರಿಂದ ಅತ್ಯಾಚಾರವನ್ನು ತಡೆಯಬೇಕೆಂದು ಬಯಸಿ ಕಾನೂನಿನ ಮೇಲೆ ಕಾನೂನು  ಮಾಡುವುದರ ಜೊತೆ ಜೊತೆಗೇ ಮದ್ಯವನ್ನು ಅಲಭ್ಯಗೊಳಿಸಬೇಕು. ಅಮಲಿನಲ್ಲಿರುವ ವ್ಯಕ್ತಿಗೆ ತಾನೇನು ಮಾಡುತ್ತಿದ್ದೇನೆ ಅಥವಾ  ತಾನು ಮಾಡುತ್ತಿರುವ ಕೃತ್ಯ ಎಷ್ಟು ಅಪಾಯಕಾರಿ ಎಂಬುದರ ಪೂರ್ಣ ತಿಳುವಳಿಕೆ ಇರುವ ಸಾಧ್ಯತೆ ಕಡಿಮೆ. ಇದ್ದರೂ  ಇರಬೇಕಾದಷ್ಟು ಗಂಭೀರತೆ ಇರುವುದಿಲ್ಲ. ಏನನ್ನೂ ಮಾಡುವ ಹುಂಬ ಧೈರ್ಯವನ್ನು ಅಮಲು ಕೊಟ್ಟು ಬಿಡುತ್ತದೆ. ಈ  ಹಿನ್ನೆಲೆಯಲ್ಲಿ ಅತ್ಯಾಚಾರವನ್ನು ತಡೆಯುವುದಕ್ಕೆ ಕೇವಲ ಕಾನೂನೊಂದೇ ಪರಿಹಾರವಾಗಿ ಕಾಣುತ್ತಿಲ್ಲ. ಅದರ ಜೊತೆಗೇ ಈ ಕಾನೂ ನುಗಳನ್ನೆಲ್ಲಾ ಮುರಿಯುವುದಕ್ಕೆ ಪ್ರಚೋದನೆ ಕೊಡುವ ಮದ್ಯವನ್ನು ನಿಷೇಧಿಸಬೇಕು. ಅದರ ಜೊತೆಗೇ, ಈಗಾಗಲೇ ನಿಷೇಧಕ್ಕೆ  ಒಳಗಾಗಿರುವ ಗಾಂಜಾದಂತಹ ಅಮಲು ಪದಾರ್ಥಗಳು ಯಾವ ಕಾರಣಕ್ಕೂ ಸಾರ್ವಜನಿಕರಿಗೆ ಲಭ್ಯವಾಗದಂತೆ  ನೋಡಿಕೊಳ್ಳಬೇಕು.
ಈ ದೇಶದ ಕಾವ್ಯ, ಕವಿತೆ, ಕತೆ, ಕಾದಂಬರಿ, ನಾಟಕ.. ಎಲ್ಲದರಲ್ಲೂ ಹೆಣ್ಣಿದ್ದಾಳೆ. ಜನಪದಗಳಲ್ಲಿ, ಲಾವಣಿಗಳಲ್ಲಿ ಆಕೆಯನ್ನು  ಕೊಂಡಾಡಲಾಗಿದೆ. ಈ ಭೂಮಿಯನ್ನೇ ತಾಯಿಯೆಂದು ಗೌರವಿಸಲಾಗುತ್ತಿದೆ. ಇಷ್ಟೆಲ್ಲಾ
 ಇದ್ದೂ ಹೆಣ್ಣು ನಿತ್ಯ ಅತ್ಯಾಚಾರದ ಭಯದಲ್ಲಿ  ಬದುಕಬೇಕಾದ ಸ್ಥಿತಿ ಎದುರಾಗಿರುವುದು ಅತ್ಯಂತ ವಿಷಾದನೀಯ ಮತ್ತು ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ಸಂಗತಿ.  ನಾಲಗೆಯಲ್ಲಿ ಹೆಣ್ಣನ್ನು ಕೊಂಡಾಡುತ್ತಾ ವರ್ತನೆಯಲ್ಲಿ ಹೆಣ್ಣನ್ನು ಚೆಂಡಾಡುವ ಮಾನಸಿಕ ಸ್ಥಿತಿಗೆ ಅಂತ್ಯ ಹಾಡಲೇಬೇಕು. ಹೆಣ್ಣು ಈ  ಸಮಾಜದ ಕಣ್ಣು. ಆ ಕಣ್ಣಿಗೆ ಕೇಡು ಬರುವುದೆಂದರೆ ಅದು ಸಮಾಜ ದೃಷ್ಟಿಗೆ ಕೇಡು ಬಂದAತೆ. ಕೇಡಿನ ಕಣ್ಣುಳ್ಳ ಸಮಾಜ ಎಂದೂ  ಸ್ವಸ್ಥವಿರಲಾರದು.

Saturday, 16 January 2021

ಬಾಬರಿ: ರಚನಾತ್ಮಕ ಪ್ರತಿಕ್ರಿಯೆಯ ಸಂಕೇತ- ಧನ್ನಿಪುರ

 



ಅಯೋಧ್ಯೆಯ ಧನ್ನಿಪುರದಲ್ಲಿ ನಿರ್ಮಾಣವಾಗಲಿರುವ ಮಸೀದಿಯು ಹಲವು ಕಾರಣಗಳಿಗಾಗಿ ಗಮನ ಸೆಳೆದಿದೆ. ಬಾಬರಿ ಮಸೀದಿ  ಇದ್ದ ಜಾಗವನ್ನು ರಾಮಮಂದಿರ ನಿರ್ಮಾಣಕ್ಕೆ ಬಿಟ್ಟುಕೊಟ್ಟ ಸುಪ್ರೀಮ್ ಕೋರ್ಟು, ಅದಕ್ಕೆ ಬದಲಿಯಾಗಿ 5 ಎಕರೆ ಭೂಮಿಯನ್ನು  ಮಸೀದಿ ನಿರ್ಮಾಣಕ್ಕೆ ನೀಡುವ ಪ್ರಸ್ತಾಪ ಮುಂದಿಟ್ಟಿತು. ಈ ಪ್ರಸ್ತಾಪಕ್ಕೆ ಪರ-ವಿರೋಧ ಅಭಿಪ್ರಾಯಗಳೂ ವ್ಯಕ್ತವಾಗಿದ್ದುವು.  ಕೋರ್ಟು ಮುಂದಿರಿಸಿರುವ ಈ ಪ್ರಸ್ತಾಪವನ್ನು ತಿರಸ್ಕರಿಸಬೇಕು ಎಂದು ಒಂದು ಬಣ ವಾದಿಸಿದರೆ, ಇನ್ನೊಂದು ಬಣ ಅದನ್ನು  ಸ್ವೀಕರಿಸುವ ಇರಾದೆ ವ್ಯಕ್ತಪಡಿಸಿತು. ಅದರಂತೆ ಧನ್ನಿಪುರದಲ್ಲಿ ಸರಕಾರ ಕೊಡಮಾಡಿದ 5 ಎಕರೆ ಭೂಮಿಯನ್ನು ಸ್ವೀಕರಿಸಿತು. ಇ ದೀಗ ಆ ಕುರಿತಂತೆ ಇನ್ನಷ್ಟು ವಿವರಗಳನ್ನು ಮಾಧ್ಯಮಗಳಿಗೆ ಬಿಡುಗಡೆಗೊಳಿಸಲಾಗಿದೆ. ಈ ವಿವರಗಳು ಬಹಳ ಚೇತೋಹಾರಿ.  ಸಾಮಾನ್ಯವಾಗಿ,

ಬಾಬರಿ ಮಸೀದಿಗೆ ಪರ್ಯಾಯವಾಗಿ ಅಂಥದ್ದೇ  ಇನ್ನೊಂದು ಮಸೀದಿ ನಿರ್ಮಾಣವಾಗುತ್ತದೆ ಎಂದು ಅನೇಕರು ಭಾವಿಸಿದ್ದರು.  ಸುಪ್ರೀಮ್ ಕೊಡಮಾಡಿರುವ 5 ಎಕರೆ ಭೂಮಿಯನ್ನು ಸ್ವೀಕರಿಸಬಾರದು ಎಂದು ವಾದಿಸುತ್ತಿದ್ದುದಕ್ಕೆ ಈ ಭಾವನೆಯೂ ಒಂದು  ಕಾರಣವಾಗಿತ್ತು.

ಧ್ವಂಸಗೊಳಿಸಲಾದ ಬಾಬರಿ ಮಸೀದಿಯನ್ನು ಮತ್ತೆ ಅಲ್ಲೇ  ನಿರ್ಮಾಣ ಮಾಡಬೇಕು ಎಂಬ ವಾದದ ಹಿಂದಿದ್ದುದು ಕೇವಲ ಮಸೀ ದಿಯೊಂದರ ನಿರ್ಮಾಣದ ಆಗ್ರಹವಲ್ಲ, ತೋಳುಬಲದ ಮೂಲಕ ಸಂವಿಧಾವನ್ನು ಹಾಡುಹಗಲೇ ಅವಮಾನಿಸಲಾದ ಘಟನೆಗೆ  ನ್ಯಾಯ ಸಲ್ಲಬೇಕು ಎಂಬ ಕಾರಣದಿಂದಾಗಿತ್ತು. ಈ ದೇಶದ ನ್ಯಾಯವ್ಯವಸ್ಥೆಯನ್ನು ಒಪ್ಪುವ ಯಾರೂ 1992 ಡಿಸೆಂಬರ್ 6ರಂದು  ನಡೆಸಲಾದ ಕೃತ್ಯವನ್ನು ಸಮರ್ಥಿಸುವುದಕ್ಕೆ ಸಾಧ್ಯವಿಲ್ಲ. ಅದು ನ್ಯಾಯದ ಅಣಕ. ನ್ಯಾಯಾಂಗಕ್ಕೆ ಮಾಡಲಾದ ಅಗೌರವ. ಸ್ವಾತಂತ್ರ‍್ಯ  ಲಭ್ಯವಾಗಿ 6 ದಶಕಗಳು ಕಳೆದ ಬಳಿಕವೂ ಸಂವಿಧಾನವನ್ನು ಯಥಾರೂಪದಲ್ಲಿ ಜಾರಿಗೆ ತರಲು ನಮ್ಮ ಆಡಳಿತ ವ್ಯವಸ್ಥೆಗಳು ಹೇಗೆ  ವಿಫಲವಾಗುತ್ತಿವೆ ಎಂಬುದಕ್ಕೆ ಸಾಕ್ಷ್ಯ  ಒದಗಿಸಿದ ಘಟನೆ.

ಯಾವುದೇ ಮಸೀದಿ ಅಥವಾ ಮಂದಿರ ವಿವಾದಕ್ಕೆ ಒಳಗಾಗುವುದು ಬೇರೆ, ಆ ವಿವಾದವನ್ನು ತೋಳುಬಲದಿಂದ ಬಗೆಹರಿಸುವೆವು  ಎಂದು ಸಾರುವುದು ಬೇರೆ. ಈ ದೇಶ ಸಂವಿಧಾನವನ್ನು ಒಪ್ಪಿಕೊಂಡ ಮೇಲೆ ವಿವಾದ ಪರಿಹರಿಸುವುದಕ್ಕೆ ನ್ಯಾಯಾಲಯವನ್ನು ಆ ಶ್ರಯಿಸಬೇಕಾದುದು ಪ್ರತಿಯೋರ್ವ ಪ್ರಜೆಯ ಹೊಣೆಗಾರಿಕೆ. ಆದ್ದರಿಂದ ನ್ಯಾಯಾಲಯವೆಂಬುದು ದುರ್ಬಲರು ಎಡತಾಕುವ ಜಾಗ  ಮತ್ತು ಪ್ರಬಲರಿಗೆ ಅದರ ಅಗತ್ಯವಿಲ್ಲ ಎಂಬ ವಾತಾವರಣ ನಿರ್ಮಾಣವಾಗುವುದು ಸಂವಿಧಾನಕ್ಕೆ ಅವಮಾನ ಮಾಡಿದಂತೆ. ಬಾಬರಿ  ಮಸೀದಿ ವಿವಾದವು ನ್ಯಾಯಾಲಯದಲ್ಲಿತ್ತು ಮತ್ತು ವಿಚಾರಣೆಯ ಹಂತದಲ್ಲೂ ಇತ್ತು. ಈ ನಡುವೆಯೇ ತೋಳುಬಲದ ಮೂಲಕ  ಅದನ್ನು ಉರುಳಿಸಲಾಯಿತು. ವಿರೋಧ ಎದುರಾದದ್ದು ಈ ಧ್ವಂಸಕಾರ್ಯದ ಬಗ್ಗೆ. ಬಾಬರಿ ಮಸೀದಿ ವಿವಾದದ ಅಂತಿಮ ತೀರ್ಪು  ಬರೆದ ಸುಪ್ರೀಮ್ ಕೋರ್ಟು ಕೂಡ ಈ ಧ್ವಂಸವನ್ನು ತಪ್ಪು ಎಂದಿತ್ತು. ಇದೀಗ ಸುಪ್ರೀಮ್ ನೀಡಿರುವ 5 ಎಕರೆ ಭೂಮಿಯು ಮತ್ತೆ  ದೇಶದ ಗಮನ ಸೆಳೆದಿದೆ. ನಿಜವಾಗಿ,

ಆ ಭೂಮಿಯಲ್ಲಿ ಒಂದು ಭವ್ಯ ಮಸೀದಿಯೊಂದನ್ನು ಮಾತ್ರ ಕಟ್ಟಿರುತ್ತಿದ್ದರೆ ಅದು ಸುದ್ದಿಯ ಕೇಂದ್ರವಾಗುವ ಸಾಧ್ಯತೆ ಕಡಿಮೆಯಿತ್ತು.  ಆದರೆ ಭೂಮಿಯನ್ನು ಸ್ವೀಕರಿಸಿದವರು ಬಿಡುಗಡೆಗೊಳಿಸಿರುವ ನೀಲನಕ್ಷೆಯ ವಿವರಗಳು ಕುತೂಹಲಕಾರಿಯಾಗಿವೆ. ಇಲ್ಲಿ 2000  ಮಂದಿ ಒಮ್ಮೆಗೇ ನಮಾಝï ಮಾಡಬಹುದಾದಷ್ಟು ವಿಸ್ತಾರವುಳ್ಳ ಮಸೀದಿಯ ನಿರ್ಮಾಣದ ಜೊತೆಜೊತೆಗೇ 300 ಹಾಸಿಗೆಗಳುಳ್ಳ  ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಸಮುದಾಯ ಪಾಕಶಾಲೆ ಮತ್ತು ಮ್ಯೂಸಿಯಂ ಕೂಡ ನಿರ್ಮಾಣವಾಗಲಿದೆ. ಒಂದುರೀತಿಯಲ್ಲಿ, 1992  ಡಿಸೆಂಬರ್ 6ರಂದು ನಡೆದ ಐತಿಹಾಸಿಕ ಅನ್ಯಾಯಕ್ಕೆ ನೀಡಲಾದ ರಚನಾತ್ಮಕ ತಿರುಗೇಟು ಇದು. ಅಂದಹಾಗೆ,

ಮುಸ್ಲಿಮರಿಗೆ ಮಸೀದಿಯ ಕೊರತೆಯಿಲ್ಲ. ಹಾಗೆಯೇ ಮಸೀದಿಗಳೆಂದರೆ ಮುಸ್ಲಿಮರು ಮಾತ್ರ ಆರಾಧಿಸುವ ಜಾಗವೂ ಹೌದು.  ಆದ್ದರಿಂದ ಮಸೀದಿಗಳು ಹೆಚ್ಚೆಚ್ಚು ನಿರ್ಮಾಣವಾಗುವುದರಿಂದ ನಮಾಝï‌ನ ಸ್ಥಳಗಳು ಹೆಚ್ಚಾಗಬಹುದೇ ಹೊರತು ಅದರಿಂದ  ಮುಸ್ಲಿಮೇತರರಿಗೆ ಪ್ರಯೋಜನವಾಗುವುದಕ್ಕೆ ಸಾಧ್ಯವಿಲ್ಲ. ಇದು ಮಂದಿರ, ಚರ್ಚ್, ಗುರುದ್ವಾರಗಳಿಗೂ ಅನ್ವಯಿಸುತ್ತದೆ. ಆದ್ದರಿಂದ  ಉರುಳಿದ ಬಾಬರಿ ಮಸೀದಿಗೆ ಬದಲಾಗಿ ಒಂದು ಮಸೀದಿ ಕಟ್ಟುವುದು ಮುಸ್ಲಿಮ್ ಸಮುದಾಯದ ತುರ್ತು ಅಗತ್ಯವೇನೂ  ಆಗಿರಲಿಲ್ಲ. ಆದರೆ, ಆಸ್ಪತ್ರೆ, ಮ್ಯೂಸಿಯಂಗಳು ಹಾಗಲ್ಲ. ಆಸ್ಪತ್ರೆಯೆಂಬುದು ಧರ್ಮಾತೀತ. ಬಾಬರಿ ಮಸೀದಿಯನ್ನು  ಉರುಳಿಸಿದವರನ್ನೂ ಅದನ್ನು ಬೆಂಬಲಿಸಿದವರನ್ನೂ ಬೆಂಬಲಿಸದವರನ್ನೂ ಸಮಾನವಾಗಿ ಸ್ವೀಕರಿಸಿಕೊಳ್ಳುವ ಜಾಗ. ಮುಂದೊಂದು  ದಿನ ಅಂಥದ್ದೊಂದು ವಾತಾವರಣ ನಿರ್ಮಾಣವಾಗಲೂ ಬಹುದು. ಉರುಳಿಸಿದುದನ್ನು ಬೆಂಬಲಿಸಿದವರು ಅಥವಾ ಉರುಳಿಸಿದವರ  ಪೀಳಿಗೆಯೇ ಮುಂದೊಂದು ದಿನ ಈ ಆಸ್ಪತ್ರೆಯನ್ನು ಪ್ರವೇಶಿಸುವಾಗ ಹಳತು ನೆನಪಾಗಲೂಬಹುದು. ರಚನಾತ್ಮಕ ಪ್ರತಿಕ್ರಿಯೆ ಅ ನ್ನುವುದು ಇದಕ್ಕೆ. ಅವರನ್ನು ಮರು ಅವಲೋಕನಕ್ಕೆ ಮತ್ತು ಪಶ್ಚಾತ್ತಾಪಕ್ಕೆ ಇಂಥ ಬೆಳವಣಿಗೆಗಳು ಪ್ರೇರಣೆಯನ್ನು ನೀಡುತ್ತವೆ. ಇದರ  ಜೊತೆಜೊತೆಗೇ ಮ್ಯೂಸಿಯಂ ನಿರ್ಮಾಣವನ್ನೂ ಇಟ್ಟು ನೋಡಬೇಕು. ಮ್ಯೂಸಿಯಂನಲ್ಲಿ ಏನೆಲ್ಲ ಇರಲಿವೆ ಎಂಬುದು ಇನ್ನೂ  ಸ್ಪಷ್ಟವಾಗಿಲ್ಲವಾದರೂ ಆ ಮ್ಯೂಸಿಯಂ ಧ್ವಂಸಗೊಳಿಸಲಾದ ಬಾಬರಿ ಮಸೀದಿ ವಿವರಗಳನ್ನು ಒಳಗೊಂಡಿರುವ ಎಲ್ಲ ಸಾಧ್ಯತೆಗಳಿವೆ  ಮತ್ತು ಅದು ಅತೀ ಅಗತ್ಯ ಕೂಡ. ಅಷ್ಟಕ್ಕೂ,

ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದವರಿಗೆ ಮತ್ತು ಅದರ ಸಂಚು ಹೆಣೆದವರಿಗೆ ಶಿಕ್ಷೆ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಕೋರ್ಟು  ತೀರ್ಪು ಬರುವಾಗ ಅವರೆಲ್ಲ ಜೀವಂತ ಇರುತ್ತಾರೋ ಎಂಬುದರ ಬಗ್ಗೆಯೂ ಸ್ಪಷ್ಟತೆಯಿಲ್ಲ. ಈಗಾಗಲೇ ಆ ಧ್ವಂಸ ಘಟನೆಗೆ 3 ದ ಶಕಗಳಾಗುತ್ತಾ ಬಂದಿವೆ. ಆರೋಪಿಗಳಲ್ಲಿ ಹಲವರು ಸಹಜ ಸಾವಿಗೂ ಒಳಗಾಗಿದ್ದಾರೆ. ಮಾತ್ರವಲ್ಲ, ಒಂದೆರಡು ತಲೆಮಾರುಗಳ  ಬಳಿಕ ಆ ಧ್ವಂಸ ಘಟನೆಯ ನೆನಪೇ ಅಳಿದು ಹೋಗುವುದಕ್ಕೂ ಅವಕಾಶ ಇದೆ. ಆದ್ದರಿಂದ ಮ್ಯೂಸಿಯಂ ನಿರ್ಮಾಣ ಬಹಳ  ಪ್ರಾಮುಖ್ಯವಾದದ್ದು ಅನ್ನಿಸುತ್ತದೆ. ಬಾಬರಿ ಮಸೀದಿಯ ಆರಂಭದಿಂದ ಹಿಡಿದು 1992 ಡಿಸೆಂಬರ್ 6ರಂದು ಧ್ವಂಸಗೈಯಲಾದ  ಘಟನೆಯವರೆಗೆ ಎಲ್ಲ ವಿವರಗಳನ್ನೂ ವೀಕ್ಷಕರಿಗೆ ಒದಗಿಸುವ ಮ್ಯೂಸಿಯಂ ರಚನೆಯಾದರೆ ಅದರಿಂದ ಭವಿಷ್ಯದ ಪೀಳಿಗೆಯು  ವಿಸ್ಮೃತಿಗೆ ಹೋಗುವುದನ್ನು ತಪ್ಪಿಸಬಹುದಾಗಿದೆ.

ಯಾವುದೇ ಒಂದು ಸಮುದಾಯ ಸಶಕ್ತವಾಗಿ ಬೆಳೆಯಬೇಕೆಂದರೆ ಅದಕ್ಕೆ ಗತ ಇತಿಹಾಸದ ಅರಿವು ಇರಬೇಕಾಗುತ್ತದೆ. ಗತ  ತಲೆಮಾರು ಎದುರಿಸಿದ ಸವಾಲು, ಸಂಘಟಿಸಿದ ಹೋರಾಟ ಮತ್ತು ಮಾಡಿದ ತ್ಯಾಗವನ್ನು ತಿಳಿದುಕೊಂಡಿರಬೇಕಾಗುತ್ತದೆ. ಬೈತುಲ್  ಮಕ್ದಿಸ್‌ನ ಪ್ರಸ್ತಾಪ ಆದಾಗಲೆಲ್ಲ ಸಲಾಹುದ್ದೀನ್ ಅಯ್ಯೂಬಿಯವರು ನೆನಪಿಗೆ ಬರುವುದಕ್ಕೆ ಕಾರಣ ಈ ಇತಿಹಾಸದ ಅರಿವು. ಅವರ  ಹೋರಾಟದ ಯಾವ ಮಗ್ಗುಲೂ ದಾಖಲುಗೊಳ್ಳದೇ ಇರುತ್ತಿದ್ದರೆ ಇವತ್ತು ಬೈತುಲ್ ಮಕ್ದಿಸ್‌ನ ಜೊತೆ ಅವರ ನೆನಪು ಆಗುವುದಕ್ಕೆ  ಸಾಧ್ಯವಿರಲಿಲ್ಲ. ಆದ್ದರಿಂದ ಹೊಸ ತಲೆಮಾರಿಗೆ ಹಳೆ ಇತಿಹಾಸವನ್ನು ತಿಳಿಸಬೇಕಾದುದು ಅವರ ಸಶಕ್ತ ಬೆಳವಣಿಗೆಯ ದೃಷ್ಟಿಯಿಂದ  ತುಂಬಾ ಅಗತ್ಯ. ಈ ಹಿನ್ನೆಲೆಯಲ್ಲಿ ಧನ್ನಿಪುರದಲ್ಲಿ ನಿರ್ಮಾಣವಾಗುವ ಮ್ಯೂಸಿಯಂ ಮತ್ತು ಆಸ್ಪತ್ರೆ ಅತ್ಯಂತ ಬುದ್ಧಿವಂತಿಕೆಯ ನಡೆ.  ಇದು ಸ್ವಾಗತಾರ್ಹ.