Tuesday, 5 September 2023

ಚಂದ್ರಯಾನ: ಪ್ರತಿ ಮುಸ್ಲಿಮ್ ಮನೆಯಲ್ಲೂ ಚರ್ಚಾ ವಿಷಯವಾಗಲಿ






ಚಂದ್ರಯಾನದ ಯಶಸ್ಸನ್ನು ಭಾರ ತೀಯ ಮುಸ್ಲಿಮರು ಸಂಭ್ರಮಿಸಿದ್ದಾರೆ. ಮುಸ್ಲಿಮ್ ವಿದ್ವಾಂಸರಿಂದ  ಹಿಡಿದು ಜನ ಸಾಮಾನ್ಯರ ವರೆಗೆ  ದೇಶದಾದ್ಯಂತ ಈ ಸಂಭ್ರಮ ವ್ಯಕ್ತವಾಗಿದೆ. ವಿಜ್ಞಾನಿಗಳನ್ನು ಅಭಿನಂದಿಸಿ ಜಮಾಅತೆ ಇಸ್ಲಾಮೀ ಹಿಂದ್ ಟ್ವೀಟ್ ಮಾಡಿದೆ. ‘ಇದೊಂದು  ಐತಿಹಾಸಿಕ ಸಂದರ್ಭ, ದೇಶ ಜಾಗತಿಕವಾಗಿ ಬಲಾಢ್ಯ ಶಕ್ತಿಯಾಗಿರುವು ದರ ಸಂಕೇತ’ ಎಂದು ರಾಷ್ಟ್ರೀಯ ಉಪಾಧ್ಯಕ್ಷ  ಎಂಜಿನಿಯರ್  ಮುಹಮ್ಮದ್ ಸಲೀಮ್ ಟ್ವೀಟ್ ಮಾಡಿದ್ದಾರೆ. ಜಮೀಯತೆ ಉಲೆಮಾಯೆ ಹಿಂದ್‌ನ ಮುಖಂಡ ಖಾಲಿದ್ ರಶೀದ್ ಫರಂಗಿ  ಮಹಾವಿಯವರು ವಿಜ್ಞಾನಿಗಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ. ಚಂದ್ರಯಾನ ಯಶಸ್ವಿಯಾಗುವುದಕ್ಕಾಗಿ ತಮ್ಮ ಮದ್ರಸದ ಮಕ್ಕಳು  ವಿಶೇಷ ನಮಾಜ್  ಮಾಡಿರುವುದಾಗಿಯೂ ಹೇಳಿದ್ದಾರೆ. ಖ್ಯಾತ ಉರ್ದು ಕವಿ ಖಾಲಿದ್ ಅಝ್ಮಿ ಬರೆದ ಕವನ ವೈರಲ್ ಆಗಿದೆ.  ಭಾರತ್ ಹೈ ಮೇರಾ ದೇಶ್, ಔರ್ ಯಹ್ ಮೇರಿ ಜಾನ್ ಹೈ... ಎಂಬ ಸಾಲುಗಳೊಂದಿಗೆ ಅವರು ಬರೆದ ಕವನದಲ್ಲಿ ದೇಶಪ್ರೇಮ,  ದೇಶದ ಮೇಲಿನ ಋಣ ಮತ್ತು ಹೆಮ್ಮೆಯ ಭಾವಗಳಿವೆ. ದೇಶದ ಎರಡು ಪ್ರಮುಖ ಧಾರ್ಮಿಕ ಸಂಘಟನೆಗಳಾದ ಎಸ್‌ಕೆಎಸ್‌ಎಸ್‌ಎಫ್  ಮತ್ತು ಎಸ್‌ಎಸ್‌ಎಫ್‌ಗಳು ಚಂದ್ರಯಾನದ ಯಶಸ್ಸನ್ನು ಸಂಭ್ರಮದಿಂದ  ಹಂಚಿಕೊಂಡಿವೆ. ಚಂದ್ರನಲ್ಲಿ ಲ್ಯಾಂಡ್ ಆಗುವ ದಿನವಾದ  ಆಗಸ್ಟ್ 23ರಂದು ವಿಶೇಷ ನಮಾಜ್ ï‌ನ ವ್ಯವಸ್ಥೆ ಮಾಡಿವೆ. ಹಲವು ಧಾರ್ಮಿಕ ಮುಖಂಡರು ಚಂದ್ರಯಾನ ಯಶಸ್ವಿಯಾಗುವಂತೆ  ಪ್ರಾರ್ಥಿಸಿದ್ದು ಮತ್ತು ಆ ಬಳಿಕ ಸಂಭ್ರಮ ಹಂಚಿಕೊಂಡದ್ದೂ ನಡೆದಿದೆ. ಎಷ್ಟರವರೆಗೆಂದರೆ, ಮುಸ್ಲಿಮರಿಗೆ ಸಂಬಂಧಿಸಿ ನಕಾರಾತ್ಮಕ ಸು ದ್ದಿಗಳನ್ನು ಹಂಚಿಕೊಳ್ಳುವುದನ್ನೇ ಪೂರ್ಣಕಾಲಿಕ ಉದ್ಯೋಗವನ್ನಾಗಿ ಮಾಡಿಕೊಂಡವರೂ ‘ಮುಸ್ಲಿಮ್ ಸಂಭ್ರಮ’ದ ಕ್ಷಣಗಳನ್ನು  ಹಂಚಿಕೊಂಡಿದ್ದಾರೆ,

ಭಾರತೀಯ ಮುಸ್ಲಿಮರಿಗೆ ಸಂಬಂಧಿಸಿ ಒಂದಕ್ಕಿಂತ  ಹೆಚ್ಚು ಕಾರಣಕ್ಕಾಗಿ ಚಂದ್ರಯಾನದ ಯಶಸ್ಸು ಮುಖ್ಯವಾಗುತ್ತದೆ. ಮುಸ್ಲಿಮರ ಬಗ್ಗೆ  ನಖಶಿಖಾಂತ ನಕಾರಾತ್ಮಕ ಧೋರಣೆಯನ್ನು ಹೊಂದಿರುವ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರದಲ್ಲಿರುತ್ತಾ ಮತ್ತು ಈ ಚಂದ್ರಯಾನದ  ಯಶಸ್ಸಿನ ಸಂಪೂರ್ಣ ಕ್ರೆಡಿಟನ್ನು ಪಡಕೊಳ್ಳುತ್ತಿರುವ ಈ ಹೊತ್ತಿನಲ್ಲೂ ಮುಸ್ಲಿಮರು ಚಂದ್ರಯಾನ ಯಶಸ್ಸನ್ನು ಸಂಭ್ರಮಿಸಿರುವುದು  ಪ್ರಬುದ್ಧ ನಡೆಯಾಗಿದೆ. ಚಂದ್ರಯಾನದ ಯಶಸ್ಸು ಯಾವುದೇ ಓರ್ವ ವ್ಯಕ್ತಿ, ಪಕ್ಷ  ಅಥವಾ ಸರಕಾರಕ್ಕೆ ಸೀಮಿತವಾಗುವುದಿಲ್ಲ. ಇಸ್ರೋವ ನ್ನು ಸ್ಥಾಪಿಸಿದ್ದೇ  ನೆಹರೂ. ಆ ಬಳಿಕದಿಂದ ಈವರೆಗೆ ಸುಮಾರು 90ರಷ್ಟು ರಾಕೆಟ್‌ಗಳಲ್ಲಿ ಬಾಹ್ಯಾಕಾಶಕ್ಕೆ ಹಾರಿಸಲಾಗಿದೆ. ಇದರಿಂದ ಈ  ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಲಾಭವಾಗಿದೆ. ಚಂದ್ರಯಾನ ಪರಿಕಲ್ಪನೆಯನ್ನು ಆರಂಭಿಸಿದವರು ಪ್ರಧಾನಿ ಅಟಲ್  ಬಿಹಾರಿ ವಾಜಪೇಯಿ. 2008ರಲ್ಲಿ ಮೊದಲ ಚಂದ್ರಯಾನ ಪ್ರಯತ್ನ ಮಾಡಲಾಯಿತಾದರೂ ಅದರಲ್ಲಿ ಯಶಸ್ಸು ಸಿಗಲಿಲ್ಲ. 2019ರಲ್ಲಿ  ಮತ್ತೆ ಪ್ರಯತ್ನಿಸಲಾಯಿತು. ಆದರೆ ಅದೂ ವಿಫಲವಾಯಿತು. ಇದೀಗ ಮೂರನೇ ಬಾರಿ ನಡೆಸಲಾದ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಿದೆ.  ಸುಮಾರು 800 ಕೋಟಿ ರೂಪಾಯಿ ವೆಚ್ಚದಲ್ಲಿ 3,900 ಭಾರ ತೂಗುವ ಈ ಚಂದ್ರಯಾನದ ನೇತೃತ್ವವನ್ನು ಇಸ್ರೋ ಅಧ್ಯಕ್ಷ ಸೋಮ ನಾಥ್ ವಹಿಸಿಕೊಂಡಿದ್ದರು. 2019ರಲ್ಲಿ ಚಂದ್ರಯಾನ ಪ್ರಯತ್ನ ವಿಫಲಗೊಂಡಾಗ ಕಣ್ಣೀರು ಹಾಕಿದ್ದ ಆಗಿನ ಇಸ್ರೋ ಅಧ್ಯಕ್ಷ ಶಿವನ್‌ರಲ್ಲಿ  ಸಂತೋಷ ತರಿಸಲು ಈ ಸೋಮನಾಥ್ ಇವತ್ತು ಯಶಸ್ವಿಯಾಗಿದ್ದಾರೆ. ನಿಜವಾಗಿ,

ಈ ಸೋಮನಾಥ್‌ರ ಹೊರತಾಗಿ ಈ ಚಂದ್ರಯಾನ ಅಭಿಯಾನದಲ್ಲಿ ದುಡಿದವರಲ್ಲಿ 54 ಮಂದಿ ಮಹಿಳಾ ವಿಜ್ಞಾನಿಗಳೂ ಇದ್ದಾರೆ.  ಇವರಲ್ಲಿ 8 ಮಂದಿ ಮುಸ್ಲಿಮ್ ವಿಜ್ಞಾನಿಗಳೂ ಇದ್ದಾರೆ. ಇವರಲ್ಲಿ 2013ರಿಂದ ಇಸ್ರೋದಲ್ಲಿ ದುಡಿಯುತ್ತಿರುವ ಉತ್ತರ ಪ್ರದೇಶದ  ಘೋರಕ್‌ಪುರ್‌ನ ಸನಾ ಫಿರೋಜ್  ಕೂಡಾ ಒಬ್ಬರು. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಮಾಡಿರುವ  ಇವರು, ಚಂದ್ರಯಾನದ ತಾಂತ್ರಿಕ ವಿಭಾಗದಲ್ಲಿ ದುಡಿದವರಾಗಿದ್ದಾರೆ. ಇವರ ಪತಿ ಯಾಸಿರ್ ಅಹ್ಮದ್ ಕೂಡಾ ಈ ಚಂದ್ರಯಾನ ಯಶಸ್ಸಿನಲ್ಲಿ ಭಾಗಿಯಾಗಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ಸ್ ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಪದವೀಧರರಾಗಿರುವ ಇವರೂ  ಘೋರಕ್‌ಪುರದವರೇ. ಹಲವು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿರುವ ಇವರು 2010ರಿಂದ ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ.  ಹಾಗೆಯೇ ಏರೋಸ್ಪೇಸ್, ಏರೋನಾಟಿಕಲ್ ಮತ್ತು ಆಸ್ಟ್ರೋನಾಟಿಕಲ್ ಎಂಜಿನಿಯರಿಂಗ್ ನಲ್ಲಿ ಬಿಟೆಕ್ ಪಡೆದಿರುವ ಕೇರಳದ  ಮುಹಮ್ಮದ್ ಸಾದಿಕ್ ಆಲಂ ಕೂಡ ಈ ಚಂದ್ರಯಾನದ ಯಶಸ್ಸಿನ ಭಾಗವಾಗಿದ್ದು, 2018ರಿಂದ ಇಸ್ರೋದಲ್ಲಿ ತಾಂತ್ರಿಕ ವಿಭಾಗದಲ್ಲಿ  ದುಡಿಯುತ್ತಿದ್ದಾರೆ. ಉತ್ತರ ಪ್ರದೇಶದ ಮುಝಫ್ಫರ್ ನಗರ್‌ನ ಅರೀಬ್ ಅಹ್ಮದ್‌ರಿಗೂ ಈ ಚಂದ್ರಯಾನದ ಯಶಸ್ಸಿನಲ್ಲಿ ಪಾಲಿದೆ. ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್ ನಲ್ಲಿ ಬಿಟೆಕ್ ಪಡೆದಿರುವ ಇವರು  ಚಂದ್ರಯಾನ ತಪಾಸಣಾ ತಂಡದ ಸದಸ್ಯರಾಗಿದ್ದರು. 2015ರಿಂದ ಇಸ್ರೋದಲ್ಲಿ ದುಡಿಯುತ್ತಿರುವ ಅಖ್ತರ್ ಅಬ್ಬಾಸ್, ಚಂದ್ರಯಾನಕ್ಕಾಗಿ  ದುಡಿದ ಇನ್ನೋರ್ವ ತಂತ್ರಜ್ಞ. ಅಲೀಘರ್ ಮುಸ್ಲಿಮ್ ಯುನಿವರ್ಸಿಟಿಯಲ್ಲಿ ಬಿಟೆಕ್ ಮತ್ತು ಎಂಟೆಕ್ ಪದವಿ ಪಡೆದಿರುವ ಇವರು  ಉತ್ತರ ಪ್ರದೇಶದವರು. ಇಶ್ರತ್ ಜಮಾಲ್ ಎಂಬವರು ಈ ಅಭಿಯಾನದಲ್ಲಿ ಭಾಗಿಯಾದ ಇನ್ನೋರ್ವ ವಿಜ್ಞಾನಿ. 2017ರಿಂದ ಇವರು  ಇಸ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಇಸ್ರೋ ಘಟಕದಲ್ಲಿ ಸಂಶೋಧನಾ ವಿಭಾಗದಲ್ಲಿ ದುಡಿಯುತ್ತಿರುವ ಇವರು  ಎಲೆಕ್ಟ್ರಿ ಕಲ್ ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಮತ್ತು ಪವರ್ ಆಂಡ್ ಕಂಟ್ರೋಲ್ ತಂತ್ರಜ್ಞಾನದಲ್ಲಿ ಎಂಟೆಕ್ ಪದವಿ ಪಡೆದಿದ್ದಾರೆ. ಅ ಲೀಘರ್ ಮುಸ್ಲಿಮ್ ಯುನಿವರ್ಸಿಟಿಯಿಂದ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಪಡೆದಿರುವ ಖುಶ್ಬೂ ಮಿರ್ಝಾ ಅವರು  ಚಂದ್ರಯಾನಕ್ಕಾಗಿ ದುಡಿದ ಇನ್ನೋರ್ವ ತಂತ್ರಜ್ಞೆ. ದೆಹಲಿ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್  ಎಂಜಿನಿಯರಿಂಗ್  ನಲ್ಲಿ ಬಿಟೆಕ್ ಪದವಿ ಪಡೆದಿರುವ ಇವರು 2021ರಲ್ಲಿ ಇಸ್ರೋ ಸೇರಿದ್ದಾರೆ. ನಿಜವಾಗಿ,

ಚಂದ್ರಯಾನದ ಯಶಸ್ಸಿನಲ್ಲಿ ಮುಸ್ಲಿಮ್ ಸಮುದಾಯದ ವಿಜ್ಞಾನಿಗಳ ಪಾತ್ರವೂ ಇದೆ ಎಂಬುದು ಎಷ್ಟು ಮುಖ್ಯವೋ ಮುಸ್ಲಿಮ್  ಸಮುದಾಯದ ಸಂಭ್ರಮವು ಯುವಪೀಳಿಗೆಯಲ್ಲಿ ಉಂಟು ಮಾಡಬಹುದಾದ ರೋಮಾಂಚನವೂ ಅಷ್ಟೇ ಮುಖ್ಯ. ಚಂದ್ರಯಾನದ  ಯಶಸ್ಸನ್ನು ಪ್ರತಿ ಮನೆಯೂ ಸಂಭ್ರಮಿಸುವಾಗ, ಅದು ಮನೆಯ ಮಕ್ಕಳ ಮೇಲೂ ಪ್ರಭಾವ ಬೀರುತ್ತದೆ. ನಾವೂ ವಿಜ್ಞಾನಿಯಾಗಬೇಕು  ಎಂಬ ಭಾವ ಅವರೊಳಗೆ ಹುಟ್ಟುವಂತೆ ಮಾಡುತ್ತದೆ. ಸಾಮಾನ್ಯವಾಗಿ, ವೈದ್ಯರಾಗಬೇಕು, ಪೈಲಟ್, ಉದ್ಯಮಿ, ಚಾರ್ಟರ್ಡ್  ಅಕೌಂಟೆಂಟ್, ಲಾಯರ್ ಇತ್ಯಾದಿ ಆಗಬೇಕೆಂದು ಬಯಕೆ ವ್ಯಕ್ತಪಡಿಸುವ ವಿದ್ಯಾರ್ಥಿಗಳೇ ಇವತ್ತು ಹೆಚ್ಚಿದ್ದಾರೆ. ಎಸೆಸೆಲ್ಸಿ ಅಥವಾ  ಪಿಯುಸಿ ಫಲಿತಾಂಶದ ಬಳಿಕ ಟಾಪರ್ ಆದ ವಿದ್ಯಾರ್ಥಿಗಳನ್ನು ಮಾತನಾಡಿಸಿದರೆ ವಿಜ್ಞಾನಿ ಆಗಬೇಕು ಎಂದು ಹೇಳುವವರು ಕಡಿಮೆ.  ಅದಕ್ಕಿರುವ ಮೊದಲ ಕಾರಣ, ವಿಜ್ಞಾನಿಗಳು ಸಾರ್ವಜನಿಕವಾಗಿ ಚರ್ಚೆಯಲ್ಲಿ ಇಲ್ಲದೇ ಇರುವುದು. ಕ್ರಿಕೆಟ್ ಪಂದ್ಯದಲ್ಲಿ ಭಾರತ ಗೆದ್ದುದನ್ನು ಸಾಮಾನ್ಯ ಜನರು ಆಡಿಕೊಳ್ಳುವಷ್ಟು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಹಾರಿಸಲಾಗುವ ರಾಕೆಟ್‌ನ ಬಗ್ಗೆ ಆಡಿಕೊಳ್ಳುವುದಿಲ್ಲ.  ಪತ್ರಿಕೆಗಳೂ ಅಷ್ಟೇ. ಕ್ರಿಕೆಟ್ ಪಂದ್ಯದ ಗೆಲುವನ್ನು ಎರಡ್ಮೂರು ದಿನಗಳ ಕಾಲ ಬೇರೆ ಬೇರೆ ವಿಶ್ಲೇಷಣೆಗೆ ಒಡ್ಡುವ ಪತ್ರಿಕೆಗಳು ವೈಜ್ಞಾನಿಕ  ಸಾಧನೆಯನ್ನು ಒಂದು ದಿನದ ಮುಖಪುಟ ಸುದ್ದಿಯಾಗಿಸುವುದನ್ನು ಬಿಟ್ಟರೆ ಅದಕ್ಕಾಗಿ ದುಡಿದವರನ್ನಾಗಲಿ, ಅದರ ಹಿಂದಿರುವ ಶ್ರಮವನ್ನಾಗಲಿ, ಅದರ ಬಜೆಟ್ಟು ಮತ್ತು ತಾಂತ್ರಿಕ ಸೂಕ್ಷ್ಮತೆಗಳನ್ನಾಗಲಿ ಚರ್ಚೆಗೆ ಎತ್ತಿಕೊಳ್ಳುವುದೇ ಇಲ್ಲ. ಇಂಥ ಅಸೂಕ್ಷ್ಮತೆಗಳೇ ಹೊಸ  ತಲೆಮಾರಿನಲ್ಲಿ ವಿಜ್ಞಾನ ಕ್ಷೇತ್ರವು ಬೆರಗನ್ನು ಹುಟ್ಟಿಸದೇ ಇರುವುದಕ್ಕೆ ಕಾರಣವಾಗಿದೆ. ಬೆಳೆಯುತ್ತಿರುವ ಪೀಳಿಗೆಯ ಮುಂದೆ ಕೈ ತುಂಬಾ  ದುಡ್ಡು ಮಾಡುವ ವೈದ್ಯರು, ಲಾಯರುಗಳು, ಸಿಎಗಳು ಮತ್ತು ವಿದೇಶದಲ್ಲಿ ದುಡಿಯುವವರೇ ಸುಳಿದಾಡುತ್ತಿರುತ್ತಾರೆ. ತಾವೂ  ಅವರಂತಾಗಬೇಕು ಮತ್ತು ಬದುಕನ್ನು ಆರಾಮವಾಗಿ ಕಟ್ಟಿಕೊಳ್ಳಬೇಕು ಎಂಬ ಕನಸು ಕಟ್ಟುತ್ತಾರೆ. ಇದು ಅವರ ತಪ್ಪಲ್ಲ. ಅವರಿಗೆ  ಇವುಗಳೇ ಮಹಾನ್ ಎಂದು ಪ್ರತಿಕ್ಷಣ ಬಿಂಬಿಸುತ್ತಿರುವ ಎಲ್ಲ ಜವಾಬ್ದಾರಿಯುತ ನಾಗರಿಕರ ತಪ್ಪು. ಮಾಧ್ಯಮಗಳಿಗೆ ಇವುಗಳಲ್ಲಿ  ಅತಿದೊಡ್ಡ ಪಾಲಿದೆ. ಒಂದುರೀತಿಯಲ್ಲಿ,

ಚಂದ್ರಯಾನದ ಯಶಸ್ಸಿಗೆ ಮುಸ್ಲಿಮ್ ನೇತಾರರು ವ್ಯಕ್ತಪಡಿಸಿರುವ ಪ್ರತಿಕ್ರಿಯೆಯು ಖಂಡಿತ ಸಮುದಾಯದ ಬೆಳೆಯುತ್ತಿರುವ ಪೀಳಿಗೆಯ  ದೃಷ್ಟಿಯಿಂದ ಅತ್ಯಂತ ಪ್ರಯೋಜನಕಾರಿ. ತಾನೂ ವಿಜ್ಞಾನಿಯಾಗಬೇಕು ಮತ್ತು ದೇಶಕ್ಕೆ ದೊಡ್ಡ ಕೊಡುಗೆಗಳನ್ನು ನೀಡಬೇಕು ಎಂಬ  ಬಯಕೆಯೊಂದು ಅವರೊಳಗೆ ಹುಟ್ಟಿಕೊಳ್ಳಲು ಈ ಸಂಭ್ರಮ ಪ್ರೇರಣೆ ಒದಗಿಸಬಹುದು. ಹಾಗೆಯೇ  ಚಂದ್ರಯಾನದಲ್ಲಿ ಭಾಗಿಯಾದ  ಮುಸ್ಲಿಮ್ ವಿಜ್ಞಾನಿಗಳೂ ಪ್ರತಿಮನೆಯ ಚರ್ಚಾ ವಿಷಯವಾಗಬೇಕು. ಹೀಗಾದರೆ ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡೀತು.  ಇದುವೇ ನಿಜವಾದ ಸಂಭ್ರಮ.

Thursday, 31 August 2023

ಗುಜರಾತ್ ಹತ್ಯಾಕಾಂಡದಲ್ಲಿ ಪ್ರಭುತ್ವ ಭಾಗಿಯಾಗಿತ್ತೇ?





ಬಿಲ್ಕಿಸ್ ಬಾನು ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಮತ್ತು ಗುಜರಾತ್ ಸರಕಾರಕ್ಕೆ ಸುಪ್ರೀಮ್ ಕೋರ್ಟು ಕೆಲವು ಖಾರ ಪ್ರಶ್ನೆಗಳನ್ನು ಕೇಳಿದೆ.  ಈ 11 ಮಂದಿ ಅಪರಾಧಿಗಳನ್ನು ಮಾತ್ರ ಯಾಕೆ ಕ್ಷಮೆಗೆ ಆಯ್ಕೆ ಮಾಡಿಕೊಂಡಿದ್ದೀರಿ, ರಾಜ್ಯದಲ್ಲಿರುವ ಉಳಿದ ಅಪರಾಧಿಗಳಿಗೂ ಯಾಕೆ  ಇದೇ ಮಾನದಂಡವನ್ನು ಅನ್ವಯಿಸಿ ಬಿಡುಗಡೆಗೊಳಿಸಿಲ್ಲ... ಎಂದು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರನ್ನು ಒಳಗೊಂಡ ನ್ಯಾಯಪೀಠ ಪ್ರಶ್ನಿಸಿದೆ. ಮರಣ ದಂಡನೆ ವಿಧಿಸಲಾಗಿದ್ದ ಈ ಅಪರಾಧಿಗಳ ಶಿಕ್ಷೆಯನ್ನು ಆ ಬಳಿಕ  ಜೀವಾವಧಿಗೆ ಇಳಿಸಲಾಗಿದೆ. ಇಂಥ ಅಪರಾಧಿಗಳನ್ನು 14 ವರ್ಷ ಶಿಕ್ಷೆಯ ಬಳಿಕ ಹೇಗೆ ಬಿಡುಗಡೆಗೊಳಿಸಿದಿರಿ? ಅಲ್ಲದೇ, ಈ ಪ್ರಕರಣದ  ವಿಚಾರಣೆ ಗೋಧ್ರಾ ನ್ಯಾಯಾಲಯದಲ್ಲಿ ನಡೆಯದಿದ್ದರೂ ಬಿಡುಗಡೆಯ ವಿಷಯದಲ್ಲಿ ಗೋಧ್ರಾ ನ್ಯಾಯಾಲಯದ ಅಭಿಪ್ರಾಯವನ್ನು  ಯಾಕೆ ಪಡೆದಿರಿ? ಈ ಬಿಡುಗಡೆಗೆ ಸಿಬಿಐ ಆಕ್ಷೇಪ ವ್ಯಕ್ತಪಡಿಸಿಲ್ಲವೇಕೆ? ಎಂದೂ ನ್ಯಾಯಪೀಠ ಪ್ರಶ್ನಿಸಿದೆ.

2022 ಆಗಸ್ಟ್ 15ರಂದು ಈ 11 ಮಂದಿ ಅಪರಾಧಿಗಳನ್ನು ಸನ್ನಡತೆಯ ಆಧಾರದಲ್ಲಿ ಗುಜರಾತ್ ಸರಕಾರ ಬಿಡುಗಡೆಗೊಳಿಸಿತ್ತು.  2002ರ ಗುಜರಾತ್ ಹತ್ಯಾಕಾಂಡದ ವೇಳೆ ಈ ಅಪರಾಧಿಗಳು ಬಿಲ್ಕಿಸ್ ಬಾನು ಮತ್ತು ಅವರ ಕುಟುಂಬದ ಮೇಲೆ ಅತ್ಯಂತ ಪೈ ಶಾಚಿಕವಾಗಿ ನಡಕೊಂಡಿದ್ದರು. 21 ವರ್ಷದವಳಾಗಿದ್ದ ಮತ್ತು 5 ತಿಂಗಳ ಗರ್ಭಿಣಿಯಾಗಿದ್ದ ಬಿಲ್ಕಿಸ್ ಬಾನುರನ್ನು ಸಾಮೂಹಿಕ  ಅತ್ಯಾಚಾರಕ್ಕೆ ಒಳಪಡಿಸಲಾಗಿತ್ತು. ಆಕೆಯ ಪುಟ್ಟ ಮಗಳನ್ನು ಕಣ್ಣೆದುರೇ ನೆಲಕ್ಕೆ ಬಡಿದು ಈ ದುರುಳರು ಹತ್ಯೆ ಮಾಡಿದ್ದರು. ಅಲ್ಲದೇ,  ಆಕೆಯ ಕುಟುಂಬದ 7 ಮಂದಿಯ ಹತ್ಯೆಗೂ ಕಾರಣರಾಗಿದ್ದರು. ಗುಜರಾತ್ ಗಲಭೆಯ ವೇಳೆ ಜೀವ ಉಳಿಸಿಕೊಳ್ಳುವುದಕ್ಕಾಗಿ ಟ್ರಕ್  ಒಂದರಲ್ಲಿ ಸುರಕ್ಷಿತ ಸ್ಥಳಕ್ಕೆ ಸಾಗುತ್ತಿದ್ದ ಗುಂಪಿನಲ್ಲಿ ಈ ಬಿಲ್ಕಿಸ್ ಮತ್ತು ಹತ್ಯೆಗೀಡಾದ ಈ 7 ಮಂದಿಯೂ ಸೇರಿದ್ದರು. ಆ ಘಟನೆಯಲ್ಲಿ  ಒಟ್ಟು 14 ಮಂದಿಯನ್ನು ಹತ್ಯೆ ಮಾಡಲಾಗಿತ್ತು. ಪ್ರಜ್ಞೆ ಕಳಕೊಂಡು ಬಿದ್ದಿದ್ದ ಬಿಲ್ಕಿಸ್‌ರನ್ನು ಈ ದುರುಳರು ಸತ್ತಿದ್ದಾರೆಂದು ಭಾವಿಸಿ ಬಿಟ್ಟು  ಹೋಗಿದ್ದರು. ಪ್ರಜ್ಞೆ ಮರಳುವಾಗ ಬಿಲ್ಕಿಸ್ ನಗ್ನರಾಗಿದ್ದರು. ಬಳಿಕ ಹತ್ತಿರದ ಗುಡ್ಡ ಏರಿ ಅಲ್ಲಿಯ ಮನೆಯೊಂದರಲ್ಲಿ ಅವರು ಆಶ್ರಯ  ಪಡೆದರು. ಈ ಪ್ರಕರಣದ ವಿಚಾರಣೆಯನ್ನು ಗುಜರಾತ್‌ನ ಬದಲು ಮುಂಬೈಯಲ್ಲಿ ನಡೆಸುವಂತೆ ಸುಪ್ರೀಮ್ ಕೋರ್ಟು ಆದೇಶಿಸಿತ್ತು.  ವಿಚಾರಣೆ ನಡೆಸಿದ ಸಿಬಿಐ ಈ ಅಪರಾಧಿಗಳಿಗೆ ಮರಣ ದಂಡನೆ ಶಿಕ್ಷೆಯನ್ನು ವಿಧಿಸಿತ್ತು. ಆ ಬಳಿಕ ಮುಂಬೈ ಹೈಕೋರ್ಟು ಶಿಕ್ಷೆಯನ್ನು  ಜೀವಾವಧಿಗೆ ಇಳಿಸಿತ್ತು.

ಈ ನಡುವೆ ಬಿಲ್ಕಿಸ್ ಬಾನು ಹಲವು ಸವಾಲುಗಳನ್ನು ಎದುರಿಸಿದ್ದರು. ನಿರಂತರ ಜೀವ ಬೆದರಿಕೆ ಆಕೆಯನ್ನು ಬೆನ್ನಟ್ಟಿತ್ತು. ಮರ‍್ನಾಲ್ಕು  ಬಾರಿ ಮನೆ ಬದಲಾಯಿಸಿದ್ದರು. ಒಂದುಕಡೆ, ಪುಟ್ಟ ಮಗಳೂ ಸೇರಿದಂತೆ ಕುಟುಂಬದ 7 ಮಂದಿಯನ್ನು ಕಣ್ಣೆದುರೇ ಕಳಕೊಂಡ ದುಃಖ  ಮತ್ತು ಅತ್ಯಾಚಾರಕ್ಕೊಳಗಾದ ಆಘಾತ, ಇನ್ನೊಂದೆಡೆ ಜೀವ ಬೆದರಿಕೆ- ಇವೆರಡನ್ನೂ ಎದುರಿಸಿ ನಿಲ್ಲುವುದು ಆಕೆಗೆ ಸುಲಭವಾಗಿರಲಿಲ್ಲ.  ಆಕೆಗೆ ಈ 11 ಮಂದಿ ದುಷ್ಕರ್ಮಿಗಳಷ್ಟೇ ಸವಾಲಾಗಿರಲಿಲ್ಲ, ಇಡೀ ಪ್ರಭುತ್ವವನ್ನೇ ಆಕೆ ಎದುರಿಸಬೇಕಿತ್ತು. ಪೊಲೀಸ್ ಠಾಣೆಯ ಕಂಭ  ಕಂಭಗಳೂ ಬಿಲ್ಕಿಸ್‌ರನ್ನು ಬೆದರಿಸುತ್ತಿತ್ತು. ಅತ್ಯಾಚಾರದ ಸಂತ್ರಸ್ತೆ ಎಂಬೊಂದು  ಹಣೆಪಟ್ಟಿಯನ್ನು ಅಂಟಿಸಿಕೊಂಡೇ  ಆಕೆ ಬದುಕಬೇಕಿತ್ತು.  ನ್ಯಾಯಾಲಯದ ವಿಚಾರಣೆಗೂ ಹಾಜರಾಗಬೇಕಿತ್ತು. ಮಾಧ್ಯಮಗಳ ಪ್ರಶ್ನೆಗಳಿಗೂ ಉತ್ತರಿಸಬೇಕಿತ್ತು. ಆದರೆ, ಬಿಲ್ಕಿಸ್ ಈ ಎಲ್ಲ ಸವಾಲನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿದರು. ತನ್ನ ಮೇಲೆ ಅತ್ಯಾಚಾರಗೈದ ಮತ್ತು ಕುಟುಂಬ ಸದಸ್ಯರನ್ನು ಹತ್ಯೆಗೈದವರನ್ನು ಶಿಕ್ಷೆಯ  ಕುಣಿಕೆಗೆ ತಲುಪಿಸಿಯೇ ಸಿದ್ಧ ಎಂಬ ಹಠಕ್ಕೆ ಬಿದ್ದರು. ಈ ದಿಕ್ಕಿನಲ್ಲಿ ಎದುರಾದ ಸರ್ವ ಒತ್ತಡಗಳನ್ನೂ ಧಿಕ್ಕರಿಸಿದರು. ಈ ಹೋರಾಟ  ಮನೋಭಾವದ ಪರಿಣಾಮವಾಗಿಯೇ ಈ 11 ಮಂದಿ ಕ್ರೂರಿಗಳಿಗೆ ಶಿಕ್ಷೆಯಾಯಿತು. ಸಾಮಾನ್ಯವಾಗಿ,

ಕೋಮುಗಲಭೆಯ ವೇಳೆ ಎಸಗಲಾಗುವ ಅತ್ಯಾಚಾರ ಮತ್ತು ಹತ್ಯೆ  ಪ್ರಕರಣಗಳಲ್ಲಿ ದುಷ್ಕರ್ಮಿಗಳಿಗೆ ಶಿಕ್ಷೆಯಾಗುವುದು ಬಹಳ ಕಡಿಮೆ.  ಹೆಚ್ಚಿನ ವೇಳೆ ಸಂತ್ರಸ್ತರು ದೂರು ಕೊಡುವುದಿಲ್ಲ. ಒಂದುವೇಳೆ ಕೊಟ್ಟರೂ ದುಷ್ಕರ್ಮಿಗಳ ಒತ್ತಡದಿಂದಾಗಿ ನ್ಯಾಯಾಲಯದಲ್ಲಿ ಅವರು  ಹೇಳಿಕೆ ಬದಲಿಸುವುದೇ ಹೆಚ್ಚು. ಗುಜರಾತ್‌ನ ಬೆಸ್ಟ್ ಬೇಕರಿ ಪ್ರಕರಣ ಇದಕ್ಕೆ ತಾಜಾ ಉದಾಹರಣೆ. ಅತ್ಯಾಚಾರಕ್ಕೊಳಗಾಗಿ ಜೀವಭಯದಿಂದ ಊರು ಬಿಟ್ಟವರು ಮರಳಿ ಊರಿಗೆ ಬರಬೇಕಾದರೆ ದುಷ್ಕರ್ಮಿಗಳೇ ಕೆಲವು ಷರತ್ತುಗಳನ್ನು ವಿಧಿಸುತ್ತಾರೆ. ಅದರಲ್ಲಿ, ದೂರು  ನೀಡಬಾರದು ಮತ್ತು ನೀಡಿದ್ದರೆ ಅದನ್ನು ಹಿಂತೆಗೆದುಕೊಳ್ಳಬೇಕು ಎಂಬುದೂ ಒಂದು. ಬಹುತೇಕ ಪ್ರಕರಣಗಳಲ್ಲಿ ಈ ರಾಜಿ  ಒಪ್ಪಂದವೇ ಮೇಲುಗೈ ಪಡೆಯುತ್ತದೆ. ಅಲ್ಲದೇ, ಪೊಲೀಸರೂ ಸೂಕ್ತ ಎಫ್‌ಐಆರ್ ದಾಖಲಿಸುವುದಿಲ್ಲ. ಪೂರಕ ಸಾಕ್ಷ್ಯಗಳನ್ನೂ  ಸಂಗ್ರಹಿಸುವುದಿಲ್ಲ. ಅವರು ದುಷ್ಕರ್ಮಿಗಳ ಜೊತೆ ಶಾಮೀಲಾಗಿ ಪ್ರಕರಣವನ್ನು ದುರ್ಬಲಗೊಳಿಸುವ ಸನ್ನಿವೇಶಗಳೇ ಹೆಚ್ಚು. ಇಂಥ  ಹಲವು ಸವಾಲುಗಳ ನಡುವೆಯೂ ಬಿಲ್ಕಿಸ್ ಬಾನು ದುಷ್ಕರ್ಮಿಗಳನ್ನು ಕಟಕಟೆಗೆ ತಂದಿದ್ದಾರೆಂದರೆ ಮತ್ತು ಶಿಕ್ಷೆಯಾಗುವಂತೆ  ನೋಡಿಕೊಂಡಿದ್ದಾರೆಂದರೆ, ಅದು ಸಣ್ಣ ಸಾಹಸವಲ್ಲ. ನಿಜವಾಗಿ, 

ಗುಜರಾತ್ ಸರಕಾರ ಬಿಲ್ಕಿಸ್ ಪರ ನಿಲ್ಲಬೇಕಿತ್ತು. ಆದರೆ, ಅದು  ದುಷ್ಕರ್ಮಿಗಳ ಪರ ನಿಂತಿತು. ಈ ದುರುಳರನ್ನು ಬಿಡುಗಡೆಗೊಳಿಸುವುದಕ್ಕೆ ಅನುಮತಿಸುವಂತೆ ಕೇಂದ್ರ ಗೃಹ ಇಲಾಖೆಗೆ ಪತ್ರ  ಬರೆಯಿತು. ದುರಂತ ಏನೆಂದರೆ, ಈ ಪತ್ರ ಬರೆದುದಕ್ಕಾಗಿ ಗುಜರಾತ್ ಸರಕಾರಕ್ಕೆ ಛೀಮಾರಿ ಹಾಕಬೇಕಿದ್ದ ಕೇಂದ್ರ ಗೃಹ ಇಲಾಖೆಯು  ಬಿಡುಗಡೆಗೆ ಅನುಮತಿಯನ್ನು ನೀಡಿ ಈ ಪಾಪ ಕಾರ್ಯದಲ್ಲಿ ತಾನೂ ಶಾಮೀಲಾಯಿತು. ಹಾಗಂತ, ಇಲ್ಲಿಗೇ ಮುಗಿದಿಲ್ಲ.

ಈ ಬಿಡುಗಡೆಯನ್ನು ಪ್ರಶ್ನಿಸಿ ಬಿಲ್ಕಿಸ್ ಬಾನು, ಸಂಸದೆ ಮಹುವಾ ಮೊಯಿತ್ರ ಸೇರಿದಂತೆ ಇತರರು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿ  ನ್ಯಾಯಮೂರ್ತಿ ಕೆ.ಎ. ಜೋಸೆಫ್ ಮತ್ತು ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವನ್ನು ಸುಪ್ರೀಮ್ ಕೋರ್ಟು ರಚಿಸಿತು.  ಆದರೆ ಕೇಂದ್ರ ಮತ್ತು ಗುಜರಾತ್ ಸರಕಾರಗಳು ಇಲ್ಲೂ ಆಟವಾಡತೊಡಗಿತು. ಪ್ರಕರಣದ ವಿಚಾರಣೆಯನ್ನು ಪದೇ ಪದೇ  ಮೂಂದೂಡುವಂಥ ಸನ್ನಿವೇಶವನ್ನು ಸರಕಾರಗಳು ಸೃಷ್ಟಿಸತೊಡಗಿದುವು. ಕೆ.ಎ. ಜೋಸೆಫ್ ಈ ಪ್ರಕರಣದ ವಿಚಾರಣೆ ನಡೆಸುವುದು ಈ  ಎರಡೂ ಸರಕಾರಗಳಿಗೂ ಬೇಕಿರಲಿಲ್ಲ. 2023 ಜೂನ್ 16ರಂದು ಅವರು ನಿವೃತ್ತಿಯಾಗಲಿದ್ದು, ಅಲ್ಲಿಯವರೆಗೆ ವಿವಿಧ ಕಾರಣಗಳನ್ನು  ಮುಂದಿಟ್ಟು ವಿಚಾರಣೆ ನಡೆಸದಂತೆ ನೋಡಿಕೊಂಡವು. ಇದನ್ನು ಖುದ್ದು ಜೋಸೆಫ್ ಅವರೇ ಬಹಿರಂಗವಾಗಿ ಹೇಳಿಕೊಂಡರು. ಇದೀಗ  ಅವರ ಜಾಗಕ್ಕೆ ನ್ಯಾಯಮೂರ್ತಿ ಉಜ್ವಲ್ ಭುಯಾನ್ ನೇಮಕವಾಗಿದ್ದಾರೆ ಮತ್ತು ವಿಚಾರಣೆ ಪ್ರಾರಂಭವಾಗಿದೆ. ನಿಜವಾಗಿ,

ಈ 11 ಮಂದಿ ಅಪರಾಧಿಗಳನ್ನು ಬಿಡುಗಡೆಗೊಳಿಸುವ ಮೂಲಕ ಕೇಂದ್ರ ಮತ್ತು ಗುಜರಾತ್ ಸರಕಾರಗಳು ಈ ದೇಶದ ವರ್ಚಸ್ಸಿಗೆ  ಅಂತಾರಾಷ್ಟ್ರೀಯ ಮಟ್ಟದಲ್ಲಿ ಧಕ್ಕೆಯನ್ನು ತಂದಿದೆ. ಅಲ್ಲದೇ, ಈ ಅಪರಾಧಿಗಳ ಬಗ್ಗೆ ಗುಜರಾತ್ ಸರಕಾರ ಎಷ್ಟು ಅನುಕಂಪವನ್ನು  ಹೊಂದಿತ್ತು ಅನ್ನುವುದಕ್ಕೆ ಜೈಲಿನಲ್ಲಿರುವಾಗ ಅವರಿಗೆ ಸಿಕ್ಕಿರುವ ಪೆರೋಲ್‌ಗಳೇ ಸಾಕ್ಷಿ. ಈ ಅಪರಾಧಿಗಳಲ್ಲಿ ನಾಲ್ಕರಿಂದ 5 ಮಂದಿ  ಶಿಕ್ಷಾವಧಿಯಲ್ಲೇ  ಸಾವಿರಕ್ಕಿಂತಲೂ ಅಧಿಕ ದಿನಗಳನ್ನು ಜೈಲಿನ ಹೊರಗಡೆ ಕಳೆದಿದ್ದರು. ಜೈಲಧಿಕಾರಿಗಳು ಈ ಅಪರಾಧಿಗಳಿಗೆ  ಇಂಥದ್ದೊಂದು ಬಿಡುಗಡೆ ಭಾಗ್ಯವನ್ನು ಕರುಣಿಸಿದ್ದರು. ಹಾಗಂತ, ಇಂಥ ಪೆರೋಲ್ ಭಾಗ್ಯಗಳು ಇತರ ಅಪರಾಧಿಗಳಿಗೆ ಲಭಿಸಿರುವ  ಯಾವ ಮಾಹಿತಿಯೂ ಇಲ್ಲ. ಅಷ್ಟಕ್ಕೂ,

 ಗುಜರಾತ್ ಸರಕಾರ ಈ ಅಪರಾಧಿಗಳನ್ನು ಇಷ್ಟೊಂದು ಕಾಳಜಿಯಿಂದ ನೋಡಿಕೊಳ್ಳಲು  ಕಾರಣ ಏನು? ಗುಜರಾತ್ ಹತ್ಯಾಕಾಂಡವನ್ನು ಈ ಸರಕಾರ ಸಂಭ್ರಮಿಸುತ್ತಿದೆಯೇ? ಅಂಥದ್ದೊಂದು ಹತ್ಯಾಕಾಂಡವನ್ನು ಅದು  ಬಯಸಿತ್ತೇ? ಅಲ್ಲದೇ, ಬಿಡುಗಡೆಗೊಂಡ ಈ ಅಪರಾಧಿಗಳನ್ನು ಜೈಲಿನ ಹೊರಗಡೆ ಆರತಿ ಎತ್ತಿ ಸ್ವಾಗತಿಸಲಾಗಿತ್ತು. ಸಿಹಿ ಹಂಚಿ  ಸಂಭ್ರಮಿಸಲಾಗಿತ್ತು. ಹೀಗೆ ಬಿಡುಗಡೆಗೊಂಡ ಅಪರಾಧಿಗಳಲ್ಲಿ ಓರ್ವ ಆ ಬಳಿಕ ಬಿಜೆಪಿ ಸಚಿವರಿದ್ದ ವೇದಿಕೆಯನ್ನೂ ಹಂಚಿಕೊಂಡಿದ್ದ.  ಇವೆಲ್ಲ ಏನು? ಈ ಅಪರಾಧಿಗಳ ಬಗ್ಗೆ ಗುಜರಾತ್ ಮತ್ತು ಕೇಂದ್ರ ಸರಕಾರಕ್ಕೆ ಇಷ್ಟು ಕಕ್ಕುಲಾತಿ ಏಕೆ? ದೇಶಕ್ಕೆ ಅಪಕೀರ್ತಿ ತಂದವರನ್ನು  ಇವರೆಲ್ಲ ಇಷ್ಟು ಗೌರವಯುತವಾಗಿ ನಡೆಸಿಕೊಳ್ಳುತ್ತಿರುವುದೇಕೆ? ಗುಜರಾತ್ ಹತ್ಯಾಕಾಂಡದಲ್ಲಿ ಪ್ರಭುತ್ವ ಭಾಗಿಯಾಗಿರುವುದರ ಸೂಚನೆಯೇ ಇದು? ತನ್ನ ನಿವೃತ್ತಿಯನ್ನು ಈ ಎರಡೂ ಸರಕಾರಗಳು ಕಾಯುತ್ತಿವೆ ಎಂದು ನ್ಯಾಯಮೂರ್ತಿ ಕೆ.ಎ. ಜೋಸೆಫ್  ಹೇಳಿರುವುದರ ಆಂತರ್ಯವೇನು? ನಿಜಕ್ಕೂ ನ್ಯಾಯಪ್ರಿಯರೆಲ್ಲ ತಲೆತಗ್ಗಿಸಬೇಕಾದ ಪ್ರಕರಣ ಇದು.

Wednesday, 23 August 2023

47ರ ಭಾರತಕ್ಕೆ 76ರ ಭಾರತದ ಮುಖಾಮುಖಿ



ಸನ್ಮಾರ್ಗ ಸಂಪಾದಕೀಯ 

1947 ಆಗಸ್ಟ್ 15ರಂದು ಗಾಂಧೀಜಿ ಕೊಲ್ಕತ್ತಾ ಬಳಿಯ ನೌಕಾಲಿಯಲ್ಲಿದ್ದರು. ಆಗಸ್ಟ್ 6ರಂದೇ ಅವರು ಲಾಹೋರ್‌ನಿಂದ  ಕೊಲ್ಕತ್ತಾಕ್ಕೆಂದು ಹೊರಟಿದ್ದರು. ಅಲ್ಲಿಂದ ನೌಕಾಲಿಗೆ ಹೋಗುವುದು ಅವರ ಉದ್ದೇಶ. ಭಾರತ ಮತ್ತು ಪಾಕಿಸ್ತಾನ ಎಂಬ ಹೆಸರಲ್ಲಿ  ಭಾರತ ವಿಭಜನೆಗೊಂಡು ಸ್ವತಂತ್ರಗೊಳ್ಳುವುದು ಅದಾಗಲೇ ದೇಶಕ್ಕೆ ದೇಶವೇ ತಿಳಿದಿರುವ ಕಾರಣ ಉತ್ತರ ಭಾರತದಲ್ಲಿ ಹಿಂದೂ- ಮುಸ್ಲಿಮ್ ಘರ್ಷಣೆ ಸ್ಫೋಟಗೊಂಡಿತ್ತು. ಇವತ್ತು ಬಾಂಗ್ಲಾದೇಶದ ಭಾಗವಾಗಿರುವ ನೌಕಾಲಿಯಲ್ಲಿ ಹಿಂದೂಗಳು  ಅಲ್ಪಸಂಖ್ಯಾತರಾಗಿದ್ದರು. ಕೊಲ್ಕತ್ತಾದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರು. ಮುಸ್ಲಿಮ್ ಪಾಕಿಸ್ತಾನ ಮತ್ತು ಹಿಂದೂ ಭಾರತ ಎಂಬ  ಕರಿಛಾಯೆಗೆ ಬಡಜನರು ಸಿಲುಕಿಕೊಂಡರು. ನೌಕಾಲಿಯಲ್ಲಿ ಹಿಂದೂಗಳು ಸಂತ್ರಸ್ತರಾದರೆ ಕೊಲ್ಕತ್ತಾದಲ್ಲಿ ಮುಸ್ಲಿಮರು ಸಂತ್ರಸ್ತರಾದರು.  ನೌಕಾಲಿಗೆಂದು ಹೊರಟ ಗಾಂಧೀಜಿಯವರು ಆಗಸ್ಟ್ 9ರಂದು ಕೊಲ್ಕತ್ತಾ ತಲುಪಿದರು. ಆಗ ಅವರನ್ನು ಪ್ರಮುಖ ಮುಸ್ಲಿಮ್  ಮುಖಂಡ ಹುಸೈನ್ ಶಹೀದ್ ಸುಹ್ರವರ್ದಿ ಭೇಟಿಯಾಗಿ ಕೊಲ್ಕತ್ತಾದಲ್ಲೇ  ಉಳಕೊಳ್ಳುವಂತೆ ಮತ್ತು ಮುಸ್ಲಿಮರ ಮೇಲಿನ ದಾಳಿಯನ್ನು  ತಡೆಯುವುದಕ್ಕೆ ನೆರವಾಗುವಂತೆ ವಿನಂತಿಸಿದರು. ನೌಕಾಲಿಯಲ್ಲಿ ಹಿಂದೂಗಳ ಮೇಲಿನ ದಾಳಿಯನ್ನು ತಡೆಯಲು ನೀವು ನೆರವಾದರೆ,  ಕೊಲ್ಕತ್ತಾದಲ್ಲಿ ಮುಸ್ಲಿಮರ ಮೇಲಿನ ದಾಳಿಯನ್ನು ತಡೆಯಲು ನೆರವಾಗುವೆ..  ಎಂದು ಗಾಂಧೀಜಿ ಮಾತು ಕೊಟ್ಟರು. ಆ ಬಳಿಕ  ಅವರಿಬ್ಬರೂ ಭುಜಕ್ಕೆ ಭುಜ ಸೇರಿಸಿ ಕೋಮುಗಲಭೆಯನ್ನು ನಿಯಂತ್ರಿಸುವುದಕ್ಕೆ ಶ್ರಮಿಸಿದರು. ಗಾಂಧೀಜಿ ಅಮರಣಾಂತ ಉಪವಾಸ  ವ್ರತ ಘೋಷಿಸಿದರು. ಅತ್ಯಂತ ಅಪಾಯಕಾರಿ ಸನ್ನಿವೇಶದಲ್ಲೂ ಗಾಂಧೀಜಿ ಜನರ ನಡುವೆ ನಿಂತರು. ಹಿಂದೂಗಳಿಗೆ ಸುಹ್ರವರ್ದಿಯ  ಮೇಲೆ ಆಕ್ರೋಶವಿತ್ತು. ಹಿಂದೂಗಳ ಮೇಲಿನ ದಾಳಿಯ ವೇಳೆ ಅವರ ನಿಲುವಿನ ಬಗ್ಗೆ ಆಕ್ಷೇಪವಿತ್ತು. ಆದರೆ, ಗಾಂಧೀಜಿ ನಿಜ  ನಾಯಕನಂತೆ ಎಲ್ಲರನ್ನೂ ಸೇರಿಸಿಕೊಂಡು ಹಿಂದೂ-ಮುಸ್ಲಿಮರನ್ನು ದ್ವೇಷದ ಕುಲುಮೆಯಿಂದ ಹೊರತಂದರು. ಹಿಂದೂಗಳನ್ನು  ಮಂದಿರದಲ್ಲೂ ಮುಸ್ಲಿಮರನ್ನು ಮಸೀದಿಯಲ್ಲೂ ಸೇರಿಸಿದರು. ಎಲ್ಲಿಯವರೆಗೆಂದರೆ, ಆಗಸ್ಟ್ 26ರ ಈದುಲ್ ಫಿತರ್ ಹಬ್ಬವನ್ನು ಎಲ್ಲರ  ಜೊತೆ ಸೇರಿ ಆಚರಿಸಿದರು. ಜನರು ಸಂಕಷ್ಟದಲ್ಲಿರುವಾಗ ಓರ್ವ ಜವಾಬ್ದಾರಿಯುತ ವ್ಯಕ್ತಿ ಏನು ಮಾಡಬಹುದು ಎನ್ನುವುದಕ್ಕೆ ನಿದರ್ಶನ  ಇದು. ದುರಂತ ಏನೆಂದರೆ,

1947 ಆಗಸ್ಟ್ 15ರ ಆಸುಪಾಸಿನಲ್ಲಿ ಕೊಲ್ಕತ್ತಾ, ನೌಕಾಲಿ ಕೋಮುದ್ವೇಷದಿಂದ ಉರಿದಿದ್ದರೆ ಈ 2023ರ ಆಗಸ್ಟ್ ಆಸುಪಾಸಿನಲ್ಲಿ  ಮಣಿಪುರ, ಹರ್ಯಾಣಗಳು ಉರಿಯುತ್ತಿವೆ. ಸ್ವಾತಂತ್ರ‍್ಯ ಲಭ್ಯವಾಗಿ 75 ವರ್ಷಗಳಾದ ಬಳಿಕವೂ ಧರ್ಮದ ಹೆಸರಿನಲ್ಲಿ ನಡೆಯುವ  ಅತ್ಯಾಚಾರಕ್ಕೆ ತೆರೆಬಿದ್ದಿಲ್ಲ. ಮಣಿಪುರದಲ್ಲಿ ಮೇಥಿಗಳು ಕುಕಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿಸಿ ಅತ್ಯಾಚಾರ  ನಡೆಸಿದ್ದಾರೆ. 150ಕ್ಕಿಂತಲೂ ಅಧಿಕ ಮಂದಿಯ ಪ್ರಾಣಹಾನಿಯಾಗಿದೆ. ಮೇಥಿಗಳು ಮತ್ತು ಕುಕಿಗಳು ಶಸ್ತಾಸ್ತ್ರ  ಹಿಡಿದು  ಹೋರಾಡುತ್ತಿದ್ದಾರೆ. ಮೇ 3ರಿಂದ ಆರಂಭವಾಗಿರುವ ಧರ್ಮದ್ವೇಷದ ಈ ಚಟುವಟಿಕೆ ಇನ್ನೂ ನಿಂತಿಲ್ಲ. ನೌಖಾಲಿಯಲ್ಲಿ ಹಿಂದೂಗಳ  ವಿರುದ್ಧ ತಿರುಗಿ ಬಿದ್ದಿದ್ದ ಮುಸ್ಲಿಮರನ್ನು ಮತ್ತು ಕೊಲ್ಕತ್ತಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಸಾಧಿಸುತ್ತಿದ್ದ ಹಿಂದೂಗಳನ್ನು ಮನುಷ್ಯರಾಗಿ  ಆಲೋಚಿಸುವಂತೆ ಮಾಡುವುದಕ್ಕೆ ಗಾಂಧೀಜಿಗೆ ಸಾಧ್ಯವಾಗಿತ್ತು. ಅವರು ಆ ಪ್ರದೇಶಗಳಿಗೆ ಭೇಟಿಕೊಟ್ಟು, ಜನರೊಂದಿಗೆ ಬೆರೆತು, ಉಪವಾಸ ಆಚರಿಸಿ ಜನರ ಭಾವನೆಯಲ್ಲಿ ಬದಲಾವಣೆಯನ್ನು ತರಲು ಯಶಸ್ವಿಯಾಗಿದ್ದರು. ಆದರೆ ಇವತ್ತು ಇಂಥ ನಾಯಕರೇ  ಕಾಣಿಸುತ್ತಿಲ್ಲ. ಸರ್ವರನ್ನೂ ಜೊತೆಗೆ ಕೊಂಡೊಯ್ಯಬೇಕಾದ ಮತ್ತು ಜನರ ಸಂಕಷ್ಟಕ್ಕೆ ಸದಾ ಸ್ಪಂದಿಸಬೇಕಿದ್ದ ಪ್ರಧಾನಿ ಆ  ಹೊಣೆಗಾರಿಕೆಯಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಮಣಿಪುರಕ್ಕೆ ಬೆಂಕಿ ಬಿದ್ದು ಮೂರು ತಿಂಗಳು ಕಳೆದ ಬಳಿಕ ಮಣಿಪುರದ ಬಗ್ಗೆ  ಕೇವಲ ಎರಡೇ ಎರಡು ನಿಮಿಷ ಪ್ರಧಾನಿ ಮಾತನಾಡಿದ್ದಾರೆ. ಅದೂ ಕೂಡಾ ಪ್ರತಿಪಕ್ಷಗಳು ಪಾರ್ಲಿಮೆಂಟ್‌ನಲ್ಲಿ ಅವಿಶ್ವಾಸ ನಿರ್ಣಯ  ಮಂಡಿಸಿ ಪ್ರಧಾನಿ ಮಾತಾಡಲೇಬೇಕಾದ ಅನಿವಾರ್ಯ ಸ್ಥಿತಿಯನ್ನು ನಿರ್ಮಿಸಿದ ಬಳಿಕ. ನೌಕಾಲಿ ಭಾರತದ ಭಾಗವಾಗುವುದಿಲ್ಲವೆಂದು  ಗೊತ್ತಿದ್ದೂ ಕೂಡಾ ಗಾಂಧೀಜಿ ಅಲ್ಲಿಗೆ ತೆರಳಿದ್ದರು. ಜನರೊಂದಿಗೆ ಬೆರೆತಿದ್ದರು. ಭೂಮಿ ಯಾರ ಪಾಲಾಗುತ್ತದೆ ಎಂಬುದರ ಆಚೆಗೆ ಅಲ್ಲಿ  ಬದುಕುತ್ತಿರುವವರ ಪ್ರಾಣ-ಮಾನಕ್ಕೆ ಅವರು ಪ್ರಾಮುಖ್ಯತೆ ನೀಡಿದ್ದರು. ಹಾಗಂತ,

ಗಾಂಧೀಜಿ ದೇಶದ ಪ್ರಧಾನಿಯೋ ರಾಷ್ಟ್ರಪತಿಯೋ ಏನೂ ಆಗಿರಲಿಲ್ಲ. ಆದರೆ ಮಣಿಪುರ ಈ ದೇಶದ್ದೇ  ಒಂದು ತುಂಡು ಭಾಗ.  ಅಲ್ಲದೇ, ಈಗಿನ ಗಾಂಧಿರಹಿತ ಭಾರತಕ್ಕೆ ಪ್ರಧಾನಿಯೇ ನಾಯಕ. ಆದರೆ ಈಗಿನ ಪ್ರಧಾನಿ ಮಣಿಪುರಕ್ಕೆ ಈವರೆಗೆ ಭೇಟಿ ಕೊಟ್ಟಿಲ್ಲ. ಅಲ್ಲಿನ ಜನರ  ಭಾವನೆಗಳನ್ನು ಆಲಿಸಿಲ್ಲ. ಅತ್ಯಂತ ಸಂಕಷ್ಟದಲ್ಲಿರುವ ಸಮಯದಲ್ಲಿ ಜನರು ಪ್ರಧಾನಿಯ ಉಪಸ್ಥಿತಿಯನ್ನು ಬಯಸುತ್ತಾರೆ. ಅವರಲ್ಲಿ ತಮ್ಮ  ಸಂಕಷ್ಟಗಳನ್ನು ಹೇಳಿಕೊಂಡು ಹಗುರವಾಗುತ್ತಾರೆ. ಆದರೆ ಕಳೆದ ಮೂರು ತಿಂಗಳ ಅವಧಿಯಲ್ಲಿ ದೇಶದ ಇತರ ರಾಜ್ಯಗಳಿಗೆ ಮತ್ತು  ವಿದೇಶಕ್ಕೆ ಪ್ರಯಾಣಿಸಿರುವ ಪ್ರಧಾನಿ ಮಣಿಪುರಕ್ಕೆ ಭೇಟಿ ಕೊಡುವುದು ಬಿಡಿ, ಮಣಿಪುರಿಗಳಲ್ಲಿ ಧೈರ್ಯ ತುಂಬುವುದಕ್ಕೆ ಒಂದೈದು  ನಿಮಿಷವನ್ನೂ ವ್ಯಯಿಸಿಲ್ಲ. ಇಲ್ಲಿ ಇನ್ನೂ ಒಂದು ಆಘಾತಕಾರಿ ಅಂಶವಿದೆ. ಅದೇನೆಂದರೆ,

ಕಳೆದ ಆಗಸ್ಟ್ ನಲ್ಲಿ  11 ಮಂದಿ ಅತ್ಯಾಚಾರಿ ಅಪರಾಧಿಗಳನ್ನು ಬಿಡುಗಡೆಗೊಳಿಸಲಾಗಿತ್ತು. 2002ರಲ್ಲಿ ಗುಜರಾತ್‌ನಲ್ಲಿ ನಡೆದ  ಧರ್ಮದ್ವೇಷದ ಹಿಂಸೆಯ ವೇಳೆ ಬಿಲ್ಕಿಸ್ ಬಾನು ಎಂಬ 22 ವರ್ಷದ ಗರ್ಭಿಣಿಯ ಮೇಲೆ ಅತ್ಯಾಚಾರಗೈದ, ಆಕೆಯ ಮಗಳನ್ನು ನೆಲಕ್ಕೆ  ಬಡಿದು ಹತ್ಯೆಗೈದುದೂ ಸೇರಿದಂತೆ 7 ಮಂದಿಯ ಹತ್ಯೆ ನಡೆಸಿದ ಅಪರಾಧಿಗಳು ಇವರು. ಇವರು ಜೀವನಪರ್ಯಂತ ಜೈಲಲ್ಲಿರಬೇಕು  ಎಂಬುದು ನ್ಯಾಯಾಲಯದ ನಿಲುವಾಗಿತ್ತು. ಆದರೆ ಇವರನ್ನು ಬಿಡುಗಡೆಗೊಳಿಸಲು ಗುಜರಾತ್ ಸರಕಾರ ನಿರ್ಧರಿಸಿತು. ಹಾಗಂತ, ಈ  ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ತೀರ್ಪು ನೀಡಿರುವುದರಿಂದ ಕೇಂದ್ರ ಸರಕಾರದ ಒಪ್ಪಿಗೆಯ ಹೊರತು ಬಿಡುಗಡೆ ಅಸಾಧ್ಯವಾಗಿತ್ತು.  ಆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಗೆ ಅನುಮತಿ ಕೋರಿ ಗುಜರಾತ್ ಸರಕಾರ ಪತ್ರ ಬರೆಯಿತು. ಕೇಂದ್ರ ಸರಕಾರ ಈ ಬಿಡುಗಡೆಗೆ  ಅನುಮತಿಯನ್ನೂ ನೀಡಿತು. ಸ್ವಾತಂತ್ರ‍್ಯದ ಅಮೃತ ಮಹೋತ್ಸವ ನಡೆಯುತ್ತಿರುವ ವೇಳೆಯಲ್ಲೇ  ಈ ಅಪರಾಧಿಗಳನ್ನು ಸನ್ನಡತೆಯ  ಆಧಾರದಲ್ಲಿ ಬಿಡುಗಡೆಗೊಳಿಸಲಾಯಿತು. ಪ್ರಧಾನಿ ಮನಸ್ಸು ಮಾಡಿದ್ದಿದ್ದರೆ ಈ ಬಿಡುಗಡೆ ಸಾಧ್ಯವೇ ಇರಲಿಲ್ಲ.  ಸ್ವತಂತ್ರಗೊಂಡು  75  ವರ್ಷಗಳಾಗುವಾಗ ದೇಶ ಎತ್ತ ಕಡೆ ಮುಖ ಮಾಡಿದೆ ಎಂಬುದನ್ನು ಇದು ಸೂಚಿಸುತ್ತದೆ.

ನಿಜವಾಗಿ, ಗಾಂಧೀಜಿಯ ಹೆಸರನ್ನು ಉಚ್ಚರಿಸಲೂ ಲಾಯಕ್ಕಲ್ಲದ ಹೆಚ್ಚಿನವರು ಇವತ್ತು ಜನಪ್ರತಿನಿಧಿಗಳಾಗಿದ್ದಾರೆ. ಹಲ್ಲೆ, ಹತ್ಯೆ,  ಅತ್ಯಾಚಾರ, ದ್ವೇಷಭಾಷಣ, ಭ್ರಷ್ಟಾಚಾರ ಇತ್ಯಾದಿ ಕೊಳಕುಗಳನ್ನು ಅಂಟಿಸಿಕೊಳ್ಳದೇ ಸ್ವಚ್ಛವಾಗಿರುವ ಜನಪ್ರತಿನಿಧಿಗಳ ಸಂಖ್ಯೆ ವರ್ಷಂಪ್ರತಿ  ಕಡಿಮೆಯಾಗುತ್ತಿದೆ. ಸ್ವಾತಂತ್ರ‍್ಯದ 75 ವರ್ಷಗಳಲ್ಲಿ ಪ್ರಾಮಾಣಿಕತೆ, ನೈತಿಕತೆ, ಧರ್ಮ, ಮೌಲ್ಯ ಇತ್ಯಾದಿಗಳ ಅರ್ಥವೇ ಬದಲಾಗಿದೆ.  ಪ್ರಧಾನಿ ಸಹಿತ ಜನಪ್ರತಿನಿಧಿಗಳು ಪ್ರತಿ ಮಾತನ್ನೂ ಓಟಿನ ಲೆಕ್ಕಾಚಾರದಿಂದಲೇ ಆಡುತ್ತಾರೆ. ಮುಸ್ಲಿಮರ ಮತಗಳೇ ಬೇಡ ಎಂದು  ಹೇಳುವಷ್ಟು ರಾಜಕೀಯ ಕೊಳೆತು ಹೋಗಿದೆ. ಕೋಮುಗಲಭೆಯನ್ನೂ ಓಟಿನ ದೃಷ್ಟಿಕೋನದಿಂದಲೇ ನೋಡಲಾಗುತ್ತದೆ. ಭ್ರಷ್ಟಾಚಾರಿ  ತಮ್ಮ ಪಕ್ಷದವರಾದರೆ ಸಮರ್ಥಿಸುವುದು ಮತ್ತು ಅನ್ಯ ಪಕ್ಷದವನಾದರೆ ಪ್ರತಿಭಟಿಸುವುದು ಎಂಬಲ್ಲಿಗೆ ನೈತಿಕತೆ ಕುಸಿದು ಹೋಗಿದೆ. ರೈಲು  ಅಪಘಾತದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಲಾಲ್ ಬಹದ್ದೂರ್ ಶಾಸ್ತ್ರಿ  ಇವತ್ತಿನ ರಾಜಕಾರಣದಲ್ಲಿ ದಡ್ಡ  ಅನಿಸಿಕೊಂಡಿದ್ದಾರೆ. ಅಂದಹಾಗೆ,

1947ರ ಭಾರತ ಮತ್ತು 2023ರ ಭಾರತವನ್ನು ತಕ್ಕಡಿಯಲ್ಲಿಟ್ಟು ತೂಗುವಾಗ ಖುಷಿ ಮತ್ತು ದುಃಖ ಎರಡರ ಅನುಭವವೂ  ಉಂಟಾಗುತ್ತದೆ. 47ರ ಭಾರತ ಸ್ವತಃ ಸೂಜಿಯನ್ನು ತಯಾರಿಸಲಾರದಷ್ಟು ಬಡವಾಗಿತ್ತು. ಆದರೆ, ಹೃದಯದಲ್ಲಿ ಶ್ರೀಮಂತವಾಗಿತ್ತು.  2023ರ ಭಾರತ ಚಂದ್ರನಲ್ಲಿಗೆ ರಾಕೆಟ್ ಕಳುಹಿಸುವಷ್ಟು ಶ್ರೀಮಂತವಾಗಿದೆ. ಆದರೆ, ಹೃದಯದಲ್ಲಿ ಬಡವಾಗಿದೆ. ಬರಬರುತ್ತಾ ಹಿಂದೂ  ಮತ್ತು ಮುಸ್ಲಿಮರನ್ನು ಅಥವಾ ಹಿಂದೂ ಮತ್ತು ಕ್ರೈಸ್ತರನ್ನು ಕಿಡಿ ಹೊತ್ತಿಕೊಳ್ಳುವ ಎರಡು ವೈರಿ ವಸ್ತುಗಳಂತೆ ಪರಿವರ್ತಿಸಿ ಬಿಡಲಾಗಿದೆ.  ಅಭಿವೃದ್ಧಿ ರಾಜಕಾರಣ ಸರಿದು ಹೋಗಿ ದ್ವೇಷ ರಾಜಕಾರಣ ಮುನ್ನೆಲೆಗೆ ಬಂದಿದೆ. ನಿಜವಾಗಿ, 2023ರ ಭಾರತವನ್ನು ಕಂಡು 47ರ  ಭಾರತ ಸಂಭ್ರಮಿಸಬೇಕಿತ್ತು. ಆದರೆ, ಅಂಥದ್ದೊಂದು ಸಂತಸಕ್ಕೆ ಮಣಿಪುರಗಳು, ಹರ್ಯಾಣಗಳು ಅವಕಾಶ ಕೊಡುತ್ತಿಲ್ಲ. ಆ 11 ಮಂದಿ  ಅಪರಾಧಿಗಳಂತೂ 47ರ ಭಾರತ ನಾಚುವಂತೆ ಎದೆ ಸೆಟೆದು ನಡೆದಾಡುತ್ತಿದ್ದಾರೆ. ಇದು ನಿಜಕ್ಕೂ ವಿಷಾದನೀಯ.

Monday, 14 August 2023

ಹರ್ಯಾಣ ಹಿಂಸೆ: ಮುಸ್ಲಿಮರನ್ನು ಬಲಿಪಶು ಮಾಡುವ ಮೊದಲು...



ಹರ್ಯಾಣದ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಅವಳಿ-ಜವಳಿಗಳಂತೆ ಅಕ್ಕ-ಪಕ್ಕ ಇವೆ. ಗುರುಗ್ರಾಮ್ ಎಂಬುದು ದೇಶದಲ್ಲಿಯೇ  ಅತ್ಯಂತ ಮುಂದುವರಿದ ಜಿಲ್ಲೆ. ಬೆಂಗಳೂರು ಮತ್ತು ಮುಂಬೈ ಯನ್ನು ಬಿಟ್ಟರೆ ದೇಶಕ್ಕೆ ಅತ್ಯಧಿಕ ಆದಾಯವನ್ನು ತಂಡುಕೊಡುವ  ಮೂರನೇ ಜಿಲ್ಲೆ ಈ ಗುರುಗ್ರಾಮ್. ಇಲ್ಲಿ ಮಾಲ್‌ಗಳಿವೆ, ಆಸ್ಪತ್ರೆಗಳಿವೆ, ಯುನಿವರ್ಸಿಟಿಗಳಿವೆ, ಸಣ್ಣ-ಪುಟ್ಟ 500 ಕಂಪೆನಿಗಳಿವೆ. ಮೂಲಭೂತ ಸೌಲಭ್ಯಗಳು ವಿಫುಲವಾಗಿರುವ ಜಿಲ್ಲೆ ಇದು. ಆದರೆ, ನೂಹ್ ಜಿಲ್ಲೆ ಇದಕ್ಕೆ ಸಂಪೂರ್ಣ ತದ್ವಿರುದ್ಧ. ಇಲ್ಲಿ ಒಂದೇ ಒಂದು ಯುನಿವರ್ಸಿಟಿಯಿಲ್ಲ. ರೈಲ್ವೆ ಸೌಲಭ್ಯವಿಲ್ಲ. ಕುಡಿಯುವ ನೀರಿಗೆ ತತ್ವಾರ. ನೀರಾವರಿ ಸೌಲಭ್ಯವಿಲ್ಲ. ಆರೋಗ್ಯ ಮತ್ತು ಶಿಕ್ಷಣಕ್ಕೆ ಬೇಕಾದ  ಸೌಲಭ್ಯವೂ ಇಲ್ಲ. 2018ರಲ್ಲಿ ನೀತಿ ಆಯೋಗವು ತಯಾರಿಸಿದ ದೇಶದಲ್ಲಿಯೇ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಈ ನೂಹ್  ಕೂಡಾ ಸ್ಥಾನ ಪಡಕೊಂಡಿದೆ. ಇದೇ ನೂಹ್‌ನಲ್ಲಿ ಜುಲೈ 31ರಂದು ಹಿಂಸೆ ಸ್ಫೋಟಿಸಿದೆ. 

ಸಂಘಪರಿವಾರ ಹಮ್ಮಿಕೊಂಡ ಬ್ರಿಜ್‌ಮಂಡಲ್  ಜಲಾಭಿಷೇಕ್ ಯಾತ್ರೆಯು ಹಿಂಸಾಕೃತ್ಯಗಳಿಗೆ ಸಾಕ್ಷಿಯಾಯಿತಲ್ಲದೇ ಇಬ್ಬರು ಹೋಮ್ ಗಾರ್ಡ್ ಗಳು, ಓರ್ವ ಮಸೀದಿ ಇಮಾಮ್  ಸೇರಿದಂತೆ 6 ಮಂದಿ ಸಾವಿಗೀಡಾದರು. ಅನೇಕ ವಾಹನಗಳು ಬೆಂಕಿಗಾಹುತಿಯಾದುವು. ಸುಮಾರು 100ರಷ್ಟು ಮಂದಿ  ಗಾಯಗೊಂಡರು. 150ರಷ್ಟು ಎಫ್‌ಐಆರ್‌ಗಳು ದಾಖಲಾದುವು. 200ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಲಾಯಿತು.


ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ಈ ಜಿಲ್ಲೆಯ ಮಂದಿ ಮಳೆ ಆಧಾರಿತ ಕೃಷಿಯನ್ನೇ ಅವಲಂಬಿಸಿಕೊAಡಿದ್ದಾರೆ. ಸರಕಾರದ  ಅವಕೃಪೆಗೆ ಒಳಗಾಗಿರುವ ಕಾರಣ ಸೂಕ್ತ ನೀರಾವರಿ ಸೌಲಭ್ಯವೂ ಇಲ್ಲ. ಹೈನುಗಾರಿಕೆ, ಆಡು-ಕುರಿ ಸಾಕಾಣೆ ಮತ್ತು ಗುಜರಿ  ಅಂಗಡಿಗಳ ನಿರ್ವಹಣೆಯ ಮೂಲಕ ಇಲ್ಲಿನ ಜನರು ಬದುಕು ಕಟ್ಟಿಕೊಂಡಿದ್ದಾರೆ. ಸರಕಾರದ ತೀವ್ರ ನಿರ್ಲಕ್ಷ್ಯದ ಹೊರತಾಗಿಯೂ ತಮ್ಮ  ಪಾಡಿಗೆ ಹೊಟ್ಟೆ ತುಂಬಿಕೊಳ್ಳುತ್ತಿರುವ ನೂಹ್‌ನ ಜನರನ್ನು ಧಾರ್ಮಿಕವಾಗಿ ಪ್ರಚೋದಿಸುವ ಪ್ರಯತ್ನಗಳು ವರ್ಷಗಳಿಂದ ನಡೆಯುತ್ತಲೇ  ಬಂದಿದ್ದುವು. ಕೇವಲ ನೂಹ್ ಮಾತ್ರ ಅಲ್ಲ, ಅತ್ಯಂತ ಮುಂದುವರಿದ ಗುರುಗ್ರಾಮ್‌ನಲ್ಲೂ ಇಂಥದ್ದೇ  ಪ್ರಚೋದನಕಾರಿ ಭಾಷಣಗಳು  ನಡೆಯುತ್ತಿದ್ದುವು. ಶುಕ್ರವಾರದ ಜುಮಾ ನಮಾಝನ್ನು ನಗರದ ತೆರೆದ ಬಯಲಲ್ಲಿ ನಡೆಸದಂತೆ 2018ರಿಂದಲೂ ಸಂಘಪರಿವಾರ  ಸರಕಾರಕ್ಕೆ ತಾಕೀತು ಮಾಡುತ್ತಲೇ ಬಂದಿದೆ. ಇದರಿಂದಾಗಿ 116 ಸ್ಥಳಗಳಲ್ಲಿ ನಡೆಯುತ್ತಿದ್ದ ಜುಮಾ ನಮಾಝï ಇದೀಗ 6ಕ್ಕೆ ಇಳಿದಿದೆ. 

 ಗುರುಗ್ರಾಮ್‌ನಲ್ಲಿರುವ ಮಾಂಸದಂಗಡಿಗಳ ವಿರುದ್ಧ ಪದೇ ಪದೇ ದಾಳಿಯನ್ನೋ ಭೀತಿಯನ್ನೋ  ಹಬ್ಬಿಸಲಾಗುತ್ತಲೇ ಇದೆ. ಇಂಥ ಮಾಂಸ ದಂಗಡಿಗಳ ಮಾಲಿಕರು ಬಹುತೇಕ ಮುಸ್ಲಿಮರು. ನವರಾತ್ರಿ ಹಬ್ಬದ ಪ್ರಯುಕ್ತ ಎಲ್ಲ  ಮಾಂಸದಂಗಡಿಗಳನ್ನೂ ಮುಚ್ಚಿಸಲಾಗುತ್ತದೆ. 2021ರಲ್ಲಿ ಕ್ರಿಸ್‌ಮಸ್ ಸಂಭ್ರಮ ಕೂಟಕ್ಕೆ ಇದೇ ಸಂಘಪರಿವಾರ ದಾಳಿ ಮಾಡಿ  ದಾಂಧಲೆಗೈದಿತ್ತು. 2 ವರ್ಷಗಳ ಹಿಂದೆ ಗುರುಗ್ರಾಮ್‌ನ ಪಟೌಡಿ ಎಂಬ ಪ್ರದೇಶದಲ್ಲಿ ಮಹಾ ಪಂಚಾಯತನ್ನು ಏರ್ಪಡಿಸಲಾಗಿತ್ತಲ್ಲದೇ,  ಅಲ್ಪಸಂಖ್ಯಾತರ ವಿರುದ್ಧ ಹಿಂಸೆಗೆ ಬಹಿರಂಗ ಕರೆ ಕೊಡಲಾಗಿತ್ತು. ಮೊನ್ನೆ ಜುಲೈ 31ರಂದು ಸಂಘಪರಿವಾರ ಹಮ್ಮಿಕೊಂಡಿದ್ದ  ಬ್ರಿಜ್‌ಮಂಡಲ್ ಜಲಾಭಿಷೇಕ್ ಯಾತ್ರೆ ಕೂಡಾ ಪ್ರಚೋದನಕಾರಿ ಭಾಷಣಗಳಿಂದ ಮುಕ್ತವಾಗಿರಲಿಲ್ಲ. ನೂಹ್ ಜಿಲ್ಲೆಯ ಮಂದಿರಗಳನ್ನು  ಮಹಾಭಾರತ ಕಾಲದ ವೈಭವಕ್ಕೆ ಮರಳಿ ತರಲಾಗುವುದು ಎಂದು ಯಾತ್ರೆಯಲ್ಲಿ ಘೋಷಿಸಲಾಗಿತ್ತು. ನೂಹ್ ಜಿಲ್ಲೆಯ ಪಕ್ಕದ ಅಲ್ವಾರ್ ನಲ್ಲಿ ಜುನೈದ್ ಮತ್ತು ನಾಸಿರ್ ಎಂಬಿಬ್ಬರನ್ನು ಸುಟ್ಟು ಕೊಂದ ಆರೋಪಿ ಮೋನು ಮನೆಸರ್ ಎಂಬವ ಈ ಯಾತ್ರೆಗೂ ಮುನ್ನ  ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದ. ತಾನು ಈ ಯಾತ್ರೆಯಲ್ಲಿ ಭಾಗಿಯಾಗುವೆ, ನೀವೂ ಬನ್ನಿ ಎಂದು  ಸಾರ್ವಜನಿಕರಲ್ಲಿ ವಿನಂತಿಸಿದ್ದ. ಆತ ಈ ಇಬ್ಬರ ಹತ್ಯೆಗೆ ಸಂಬಂಧಿಸಿದಂತೆ  ರಾಜಸ್ತಾನ ಪೊಲೀಸರಿಗೆ ಬೇಕಾಗಿರುವ ವ್ಯಕ್ತಿ. ಇಂಥವ ಈ  ಯಾತ್ರೆಯಲ್ಲಿ ಭಾಗಿಯಾಗುತ್ತಾನೆನ್ನುವುದೇ ಸಾರ್ವಜನಿಕ ಆಕ್ರೋಶ ವನ್ನು ಹುಟ್ಟು ಹಾಕಿದೆ. ಈತ ವೀಡಿಯೋ ಹಂಚಿಕೊಂಡ  ಬಳಿಕ  ಪರ-ವಿರುದ್ಧ ಅಭಿಪ್ರಾಯಗಳು ಸೋಶಿಯಲ್ ಮೀಡಿಯಾದಲ್ಲಿ ಧಾರಾಳ ಹಂಚಿಕೆಯಾಗಿವೆ. ಪ್ರಚೋದನಕಾರಿ ಬರಹ-ವೀಡಿಯೋಗಳೂ  ಹರಿದಾಡಿವೆ. ಆತನನ್ನು ತಡೆಯಬೇಕೆಂಬ ಆಕ್ರೋಶವೂ ಕೆಲವರಲ್ಲಿ ಕಾಣಿಸಿಕೊಂಡಿದೆ. ಇದೇವೇಳೆ,


ಅಭೂತಪೂರ್ವವೆಂಬಂತೆ  ಪಕ್ಕದ ರಾಜಸ್ತಾನ, ಉತ್ತರ ಪ್ರದೇಶಗಳಿಂದ ಭಾರೀ ಸಂಖ್ಯೆಯ ಜನರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.  15 ಸಾವಿರಕ್ಕಿಂತಲೂ ಅಧಿಕ ಮಂದಿಯ ಈ ಭಾರೀ ಪ್ರವಾಹವನ್ನು ಪೊಲೀಸರೂ ನಿರೀಕ್ಷಿಸಿರಲಿಲ್ಲ. ಗೋರಕ್ಷಕ್ ಎಂದು ಬರೆಯಲಾದ  ಹಲವು ಕಪ್ಪು ಬಣ್ಣದ ಕಾರುಗಳ ಪೈಕಿ ಒಂದರಲ್ಲಿ ಈ ಮನೆಸರ್ ಇದ್ದಾನೆ ಎಂಬ ವದಂತಿಗಳೂ ಹಬ್ಬಿವೆ. ಅಂದಹಾಗೆ,


ಹರ್ಯಾಣದಲ್ಲಿ ಬ್ರಿಜ್‌ಮಂಡಲ್ ಜಲಾಭಿಷೇಕ್ ಯಾತ್ರೆ ಮತ್ತು ಕನ್ವಾಲ್ ಯಾತ್ರೆ ಪ್ರತಿ ವರ್ಷವೂ ನಡೆಯುತ್ತಿದೆ. ಹೀಗಿರುವಾಗ, ಇಷ್ಟು  ವರ್ಷಗಳಲ್ಲಿ ಕಾಣಿಸಿಕೊಳ್ಳದ ಹಿಂಸೆ ಈ ಬಾರಿ ಸ್ಫೋಟಗಳ್ಳಲು ಕಾರಣವೇನು? ನೂಹ್ ಎಂಬುದು ಸ್ವಾತಂತ್ರ‍್ಯಾ ನಂತರ ಹಿಂದೂ- ಮುಸ್ಲಿಮ್ ಹಿಂಸೆಗೆ ಸಾಕ್ಷಿಯಾಗದ ಜಿಲ್ಲೆ. ತಮ್ಮ ಪಕ್ಕದಲ್ಲೇ  ವೈಭವೋಪೇತವಾಗಿ ಗುರುಗ್ರಾಮ್ ಜಿಲ್ಲೆ ಬೆಳೆಯುತ್ತಿದ್ದರೂ ತಮಗಾದ ಅನ್ಯಾಯವನ್ನು ಪ್ರಶ್ನಿಸದೇ ತಮ್ಮ ಪಾಡಿಗಿದ್ದ ಜಿಲ್ಲೆ  ಈ ನೂಹ್. ಹೀಗಿದ್ದ ಮೇಲೆ ದಿಢೀರಿರ್ ಆಗಿ ಈ ಹಿಂಸೆ ಸ್ಫೋಟಗೊಂಡದ್ದೇಕೆ?  ಉದ್ದೇಶಪೂರ್ವಕವಾಗಿ ಇಂಥದ್ದೊಂದು ಹಿಂಸೆಯನ್ನು ಪ್ರಚೋದಿಸಲಾಯಿತೇ? ಲ್ಯಾಂಡ್ ಮಾಫಿಯಾದ ಕೈವಾಡ ಈ ಹಿಂಸಾಚಾರದ  ಹಿಂದಿರಬಹುದೇ? ಹಿಂಸಾಚಾರದ ಬಳಿಕದ ಬೆಳವಣಿಗೆಗಳನ್ನು ನೋಡಿದರೆ, ಹೌದು ಅನ್ನುವಂತಿದೆ. ಹಿಂಸಾಚಾರದ ಎರಡೇ ದಿನದೊಳಗೆ ಹರ್ಯಾಣ ಸರಕಾರವು ಈ ನೂಹ್ ಜಿಲ್ಲೆಯಲ್ಲಿ ಬುಲ್ಡೋಜರ್‌ನೊಂದಿಗೆ ಪ್ರತ್ಯಕ್ಷವಾಯಿತು. ಸುಮಾರು 300ಕ್ಕಿಂತಲೂ ಅಧಿಕ  ಬಡ ಗುಡಿಸಲುಗಳನ್ನು ಧ್ವಂಸ ಮಾಡಿತು. ಅಲ್ಲಿದ್ದವರನ್ನು ರೋಹಿಂಗ್ಯನ್ನರು, ಅಕ್ರಮ ವಲಸಿಗರು ಎಂದು ನಾಮಕರಣ ಮಾಡಿತು.  ಒಂದುವೇಳೆ, ಆ ಗುಡಿಸಲು ಅಕ್ರಮವೇ ಆಗಿದ್ದಿದ್ದರೆ,  ಇಷ್ಟು ವರ್ಷ ಸರಕಾರಕ್ಕೆ ಅದು ಗೊತ್ತಿರಲಿಲ್ಲವೇ? ಅವುಗಳನ್ನು ತೆರವುಗೊಳಿಸಲು  ಹಿಂಸಾಚಾರದ ವರೆಗೆ ಸರಕಾರ ವಿಳಂಬ ಮಾಡಿತೇಕೆ? ಅಷ್ಟಕ್ಕೂ, ಈ ಮನೆಗಳನ್ನು ಕೆಡಹುವ ಪೂರ್ವದಲ್ಲಿ ಸರಕಾರ ನೋಟೀಸು ಜಾರಿ  ಮಾಡಿದೆಯೇ? ಈ ಗುಡಿಸಲುಗಳಿಂದ ಉತ್ತರಗಳನ್ನು ಪಡಕೊಂಡಿದೆಯೇ?


ಬಹುಶಃ, ಹರ್ಯಾಣ ಹಿಂಸೆಯ ಹಿಂದೆ ಹಿಂದೂ-ಮುಸ್ಲಿಮ್ ಎಂಬ ಗೋಚರ ಕಾರಣಕ್ಕಿಂತ ಹೊರತಾದ ಪ್ರಬಲ ಅಗೋಚರ  ಕಾರಣಗಳು ಇದ್ದಿರುವಂತಿದೆ. ಬಡವರನ್ನು ಒಕ್ಕಲೆಬ್ಬಿಸಿ ಆ ಜಾಗವನ್ನು ಕಬಳಿಸುವ ಉದ್ದೇಶದಿಂದಲೇ ಈ ಹಿಂಸಾಚಾರಕ್ಕೆ ರೂಪು  ನೀಡಲಾಗಿದೆಯೇ ಎಂಬ ಅನುಮಾನವಿದೆ. ಭೂಮಾಫಿಯಾದ ಮಂದಿ ಈ ಧಾರ್ಮಿಕ ಯಾತ್ರೆಯನ್ನು ತಮ್ಮ ಉದ್ದೇಶ ಜಾರಿಗಾಗಿ  ಬಳಸಿಕೊಂಡಿರುವಂತಿದೆ ಅಥವಾ ಸಮಾಜ ಘಾತುಕರು ಮತ್ತು ಭೂಮಾಫಿಯಾದ ಮಂದಿ ಜೊತೆ ಸೇರಿಯೇ ಈ ಹಿಂಸಾಚಾರದ  ತಂತ್ರ ಹೆಣೆದಿರುವಂತಿದೆ. ಇದರ ಹೊಲಬರಿಯದ ಬಡಪಾಯಿಗಳು ಹಿಂಸೆಯ ಕುಲುಮೆಗೆ ಬಿದ್ದಿರುವಂತಿದೆ.

ಪ್ರಭುತ್ವವೊಂದು  ತನ್ನದೇ ನಾಗರಿಕರನ್ನು ತಾರತಮ್ಯದಿಂದ ನಡೆಸಿಕೊಂಡರೆ ಏನಾಗಬಹುದು ಎನ್ನುವುದಕ್ಕೆ ನೂಹ್ ಮತ್ತು ಗುರುಗ್ರಾಮ್  ಜಿಲ್ಲೆಗಳು ಪ್ರತ್ಯಕ್ಷ ಸಾಕ್ಷಿಯಾಗಿವೆ. ದೇಶದ 739 ಜಿಲ್ಲೆಗಳ ಪೈಕಿ ಅತ್ಯಂತ ಹಿಂದುಳಿದ ಜಿಲ್ಲೆಯಾಗಿ ನೂಹ್ ಗುರುತಿಸಿಕೊಳ್ಳಲು  ಕಾರಣವೇನು? ಅದರ ಪಕ್ಕವೇ ಇರುವ ಗುರುಗ್ರಾಮ್ ಅತ್ಯಂತ ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ಗೌರವ ಗಿಟ್ಟಿಸಿಕೊಂಡದ್ದು ಹೇಗೆ?  ನೂಹ್ ಅನ್ನು ನಿರ್ಲಕ್ಷಿಸಿ ಗುರುಗ್ರಾಮ್ ಅನ್ನು ಮುದ್ದಿಸುವುದಕ್ಕೆ ಪ್ರಭುತ್ವಕ್ಕೆ ಇರುವ ಕಾರಣಗಳೇನು? ಅಲ್ಪಸಂಖ್ಯಾತರು ಹೆಚ್ಚಿರುವ  ಪ್ರದೇಶಗಳ ಅಭಿವೃದ್ಧಿಗೆ ಯಾವ ಕ್ರಮವನ್ನೂ ಕೈಗೊಳ್ಳದೇ ಇರುವುದು ಸರಕಾರಿ ನೀತಿಯ ಭಾಗವೇ? ಒಂದುಕಡೆ ಅಲ್ಪಸಂಖ್ಯಾತರು  ಹೆಚ್ಚಿರುವ ಪ್ರದೇಶಗಳನ್ನು ಪಾಳು ಬಿಡುವುದು ಮತ್ತು ಇನ್ನೊಂದು ಕಡೆ ಅವರನ್ನು ಗುಜರಿ ಹೆಕ್ಕುವವರು, ಶಿಕ್ಷಣ ವಂಚಿತರು, ಒರಟರು,  ನಾಗರಿಕ ಬದುಕಿಗೆ ಅಸೂಕ್ತರು ಎಂದೆಲ್ಲಾ  ನಿಂದಿಸುವುದು ಎಷ್ಟು ಸರಿ? ಪ್ರಭುತ್ವದ ಅನ್ಯಾಯವನ್ನು ನಾಗರಿಕರ ಅಪರಾಧದಂತೆ  ಬಿಂಬಿಸುವುದು ಯಾಕೆ?

ಹರ್ಯಾಣದ ಹಿಂಸೆಯನ್ನು ಖಂಡಿಸುತ್ತಲೇ ಅದರ ಒಳ-ಹೊರಗನ್ನು ನಾಗರಿಕ ಸಮಾಜ ಗಂಭೀರ ವಿಶ್ಲೇಷಣೆಗೆ ಒಡ್ಡಬೇಕಾದ  ಅಗತ್ಯವೂ ಇದೆ. ಇದು ಧರ್ಮದ ಕಾರಣಕ್ಕಾಗಿ ನಡೆದ ಘರ್ಷಣೆಯಂತೆ ಕಾಣಿಸುತ್ತಿಲ್ಲ. ಪ್ರಭುತ್ವದ ಅನ್ಯಾಯ, ಭೂಮಾಫಿಯಾ,  ಪ್ರಚೋದನೆ..  ಇತ್ಯಾದಿಗಳ ಪಾತ್ರವೂ ಇದರ ಹಿಂದಿರುವಂತಿದೆ. ಮುಸ್ಲಿಮರನ್ನು ಬಲಿಪಶು ಮಾಡುವ ಮೊದಲು ಸಮಗ್ರ ಅಧ್ಯಯನ  ನಡೆಯಬೇಕಿದೆ.



Monday, 7 August 2023

ದ್ರೌಪದಿಯನ್ನು ಅವಮಾನಿಸಿದ ದುಶ್ಶಾಸನನೇ ಈ ವರ್ತಮಾನದ ಹೀರೋ

ಸನ್ಮಾರ್ಗ ಸಂಪಾದಕೀಯ 

ವಿಷವನ್ನು ಯಾರು ಕುಡಿದರೂ ಫಲಿತಾಂಶ ಒಂದೇ. ಅದು ಲಿಂಗಭೇದ ಮಾಡುವುದಿಲ್ಲ. ಧರ್ಮದ್ವೇಷವೆಂಬ ವಿಷ ಸೇವಿಸಿರುವವರಲ್ಲೂ  ಇದೇ ಬಗೆಯ ಫಲಿತಾಂಶ ವ್ಯಕ್ತವಾಗುತ್ತಿದೆ. ಕೆಲವೊಮ್ಮೆ ಮಹಿಳೆಯರಲ್ಲಿ ಈ ವಿಷದ ತೀವ್ರತೆ ಹೆಚ್ಚಿರುತ್ತದೋ ಎಂಬ ಸಂದೇಹವೂ  ಉಂಟಾಗುತ್ತಿದೆ. ಉದಾಹರಣೆಗೆ, ಮಣಿಪುರ.

ಕುಕಿ ಸಮುದಾಯದ ವಿರುದ್ಧ ನಡೆಸಲಾಗುತ್ತಿರುವ ಸಂಘಟಿತ ಕ್ರೌರ್ಯಗಳ ಹಿಂದೆ ಮಹಿಳೆಯರ ಬಹುದೊಡ್ಡ ಪಾತ್ರ ಇದೆ ಎಂಬುದಾಗಿ  ವಿವಿಧ ವರದಿಗಳು ಹೇಳುತ್ತಿವೆ. ಮೈತಿ ಸಮುದಾಯದ ಪುರುಷರು ಕುಕಿ ಗ್ರಾಮಗಳಿಗೆ ನುಗ್ಗಿ ಹತ್ಯೆ-ಅತ್ಯಾಚಾರ-ದರೋಡೆಗಳನ್ನು  ನಡೆಸುತ್ತಿರುವಾಗ ಮಹಿಳೆಯರು ಅವರಿಗೆ ಬೆಂಬಲವಾಗಿ ನಿಂತಿದ್ದಾರೆ. ರಕ್ಷಣಾ ಪಡೆ ಆ ಗ್ರಾಮಗಳಿಗೆ ಹೋಗಿ ದುಷ್ಕರ್ಮಿಗಳನ್ನು  ಬಂಧಿಸದಂತೆ  ತಡೆಯುವುದಕ್ಕಾಗಿ ಮಹಿಳೆಯರು ರಸ್ತೆ ತಡೆ ನಡೆಸುತ್ತಿದ್ದಾರೆ. ಕಂದಕಗಳನ್ನು ತೋಡುತ್ತಿ ದ್ದಾರೆ ಮತ್ತು ಟೈರ್‌ಗಳನ್ನು  ಸುಟ್ಟು ಅಡ್ಡಿಪಡಿಸುತ್ತಿದ್ದಾರೆ. ಕ್ರೌರ್ಯದಲ್ಲಿ ತೊಡಗಿರುವ ಪುರುಷರು ಆ ಗ್ರಾಮದಿಂದ ತಪ್ಪಿಸಿಕೊಳ್ಳುವಂತೆ ಮಾಡುವುದೇ ಇವರ ಉದ್ದೇಶ  ಎಂದು ರಕ್ಷಣಾ ಪಡೆಯೇ ಮಾಧ್ಯಮಗಳೊಂದಿಗೆ ಹೇಳಿಕೊಂಡಿದೆ. ಅವರನ್ನು ಬಲವಂತದಿಂದ  ಚದುರಿಸಲು ಹೊರಟರೆ ಬೆತ್ತಲಾಗುವ  ಬೆದರಿಕೆಯನ್ನೂ ಹಾಕುತ್ತಿದ್ದಾರೆ. ರಕ್ಷಣಾ ಪಡೆಯಲ್ಲಿ ಮಹಿಳಾ ಸಿಬಂದಿಯ ಕೊರತೆಯಿಂದಾಗಿ ಈ ಮಹಿಳೆಯರ ಸಂಚು ಸಫಲವೂ ಆಗುತ್ತಿದೆ. ಎಲ್ಲಿಯವರೆಗೆಂದರೆ, ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲುಗೊಳಿಸಿ ಮೆರವಣಿಗೆ ಮಾಡಲಾದ ಘಟನೆಯ ಆರೋಪಿಯನ್ನು ಬಂಧಿಸಲು  ಹೋದ ರಕ್ಷಣಾ ಪಡೆಯನ್ನೂ ಈ ಮಹಿಳೆಯರು ತಡೆದಿದ್ದಾರೆ. ಟೈರ್‌ಗೆ ಬೆಂಕಿ ಕೊಟ್ಟು ರಸ್ತೆ ತಡೆ ನಿರ್ಮಿಸಿದ್ದಾರೆ. ಕೊನೆಗೆ ಅಶ್ರುವಾಯು ಸಿಡಿಸಿ ಚದುರಿಸಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರೇ ಹೇಳಿದ್ದಾರೆ.

ಸಾಮಾನ್ಯವಾಗಿ ಹೆಣ್ಣನ್ನು ಗಂಡಿಗಿಂತ  ಭಿನ್ನವಾಗಿ ಬಿಂಬಿಸಲಾಗುತ್ತದೆ. ಕತೆ, ಕಾದಂಬರಿ, ನಾಟಕ, ಸಿನಿಮಾ ಎಲ್ಲದರಲ್ಲೂ ಪುರುಷರೇ  ವಿಲನ್. ದ್ವೇಷ ಸಾಧಿಸುವ, ಹತ್ಯೆ ನಡೆಸುವ, ಅತ್ಯಾಚಾರ ಮತ್ತು ಹಿಂಸಾ ಕೃತ್ಯಗಳಲ್ಲಿ ತೊಡಗುವ ಪಾತ್ರಗಳೆಲ್ಲ ಬಹುತೇಕ ಪುರುಷರಿಗೇ ಮೀಸಲು.  ಈ ಪುರುಷರ  ಮಹಿಳೆಯರು ಇದ್ದೂ ಇಲ್ಲದಂತೆ ಅಥವಾ ಇಂಥ ಕೃತ್ಯಗಳಿಂದ ಅಂತರ ಕಾಯ್ದುಕೊಂಡಂತೆ  ಬದುಕುತ್ತಿರುತ್ತಾರೆ. ಕತೆ- ಕಾದಂಬರಿಗಳಲ್ಲಂತೂ  ಹೆಣ್ಣು ಕರುಣಾಮಯಿಯಾಗಿರುವುದೇ ಹೆಚ್ಚು. ಇತರರಿಗೆ ಮಿಡಿಯುವ ಮತ್ತು ಪುರುಷರಲ್ಲಿ ಮನುಷ್ಯತ್ವವನ್ನು  ಪ್ರೇರೇಪಿಸುವ ಪಾತ್ರವಾಗಿಯೇ ಹೆಣ್ಣು ಗುರುತಿಸಿಕೊಳ್ಳುತ್ತಾಳೆ. ಮಹಾಭಾರತ, ರಾಮಾಯಣದ ಎರಡು ಕೇಂದ್ರ ಬಿಂದುಗಳಾದ ದ್ರೌಪದಿ  ಮತ್ತು ಸೀತೆಯಲ್ಲಿ ದರ್ಶಿಸಬಹುದಾದ ಗುಣಗಳೂ ಇವುಗಳೇ.

ತುಂಬಿದ ಸಭೆಯಲ್ಲಿ ದ್ರೌಪದಿಯನ್ನು ಬೆತ್ತಲೆ ಮಾಡಲು ಹೊರಟ ದುರ್ಯೋಧನ ಮತ್ತು ದುಶ್ಶಾಸನರಿಗೆ ಅವರ ಪತ್ನಿಯರು  ಬೆಂಬಲವಾಗಿ ನಿಂತ ಉಲ್ಲೇಖಗಳು ಎಲ್ಲೂ ಇಲ್ಲ. ದುರ್ಯೋಧ ನನ ಪತ್ನಿ ಭಾನುಮತಿ ಮತ್ತು ದುಶ್ಶಾಸನನ ಪತ್ನಿ ನಿರ್ಜರ ಇಬ್ಬರೂ  ಈ ಹೀನ ಕೃತ್ಯದಲ್ಲಿ ಯಾವ ಪಾಲನ್ನೂ ಪಡಕೊಳ್ಳಲಿಲ್ಲ. ಹಾಗೆಯೇ, ಸೀತೆಯನ್ನು ರಾವಣ ಅಪಹರಿಸಿದ್ದರೂ ಆತನ ಪತ್ನಿ  ಮಂಡೋದರಿ ಅದಕ್ಕೆ ಬೆಂಬಲವಾಗಿ ನಿಲ್ಲಲಿಲ್ಲ. ಅಲ್ಲದೇ ಸೀತೆಗೆ ಯಾವ ಅನ್ಯಾಯವೂ ಆಗದಂತೆ ಬೆಂಗಾವಲಾಗಿ ನಿಂತಳು ಎಂಬ  ವಿವರಗಳೂ ಇವೆ. ಪೌರಾಣಿಕ ಕತೆಗಳಾಗಲಿ, ಇತಿಹಾಸವಾಗಲಿ ಉದ್ದಕ್ಕೂ ಹೆಣ್ಣನ್ನು ಬಿಂಬಿಸಿಕೊಂಡು  ಬಂದದ್ದು ಹೀಗೆಯೇ. ಆದರೆ ಈ  ವರ್ತಮಾನ ಹೀಗೇಕೆ?

ಮಣಿಪುರದಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಬೆತ್ತಲೆಗೊಳಿಸಿ ಮೆರವಣಿಗೆ ನಡೆಸಿದವರ ಧರ್ಮ ಯಾವುದು? ಅವರಿಗೆ ಯಾರು ಮಾದರಿ?  ದುರ್ಯೋಧನ ಮತ್ತು ದುಶ್ಶಾಸನರ ದುರ್ಗುಣವು ಹಿಂದೂ ಧರ್ಮವನ್ನು ಪ್ರೀತಿಸುವ ವ್ಯಕ್ತಿಯಲ್ಲಿರಲು ಸಾಧ್ಯವೇ? ದ್ರೌಪದಿಯ ವಸ್ತ್ರಾ ಪಹರಣ ಮಾಡಿರುವುದಕ್ಕಾಗಿ ಒಂದು ಕಡೆ ದುರ್ಯೋಧನ ಮತ್ತು ದುಶ್ಶಾಸನರನ್ನು ವಿಲನ್‌ಗಳಾಗಿ ನೋಡುವುದು ಮತ್ತು ಇನ್ನೊಂದು  ಕಡೆ ಅವರಿಬ್ಬರೂ ನಾಚುವಂತೆ ನಡಕೊಳ್ಳುವುದು ಇವೆರಡೂ ಒಬ್ಬರಲ್ಲೇ  ವ್ಯಕ್ತವಾಗುವುದು ಹೇಗೆ? ದ್ರೌಪದಿಯನ್ನು ಮಾದರಿ ಎಂದು  ಆರಾಧಿಸುವ ಮಹಿಳೆಯರು ಬೆತ್ತಲೆ ಮಾಡಿದವರಿಗೆ ಬೆಂಬಲವಾಗಿ ನಿಲ್ಲುವುದು ಹೇಗೆ? ಹಿಂದೂ ಧರ್ಮ ಎಂದೂ ದುರ್ಯೋಧನನನ್ನೋ ದುಶ್ಶಾನನನ್ನೋ ಶಕುನಿಯನ್ನೋ ಮಾದರಿ ಎಂದು ಹೇಳಿಲ್ಲ. ಹಿಂದೂ ಧರ್ಮವನ್ನು  ಪ್ರೀತಿಸುವುದೆಂದರೆ, ಇವರ ಕೃತ್ಯಗಳನ್ನು ಪ್ರೀತಿಸದಿರುವುದು ಮತ್ತು ಇವರ ಆಲೋಚನೆಗಳನ್ನು ಧರ್ಮವಿರೋಧಿ ಎಂದು ಮನಸಾರೆ  ನಂಬುವುದು. ಇಂಥ ಧರ್ಮವಿರೋಧಿ ಕೃತ್ಯಗಳು ಮತ್ತು ಆಲೋಚನೆಗಳು ಎಲ್ಲೆಲ್ಲಾ  ವ್ಯಕ್ತಗೊಳ್ಳುತ್ತವೋ ಅಲ್ಲೆಲ್ಲಾ  ಧರ್ಮಕ್ಕೆ ನಿಷ್ಠೆಯನ್ನು  ತೋರುವುದು ಮತ್ತು ಅಧರ್ಮವನ್ನು ವಿರೋಧಿಸುವುದು. ಅಂದಹಾಗೆ,

ದ್ರೌಪದಿ, ಸೀತೆ, ಮಂಡೋದರಿ, ದುರ್ಯೋಧನ, ದುಶ್ಶಾಸನ, ಶಕುನಿ... ಮುಂತಾದವರೆಲ್ಲ ಬರೇ ಪುರಾಣಕ್ಕೆ ಸೀಮಿತವಾದ ಪಾತ್ರಗಳಲ್ಲ.  ಅಲ್ಲದೇ, ಈ ಪಾತ್ರಗಳು ರೋಮಾಂಚನಗೊಳ್ಳುವುದಕ್ಕೋ  ಸಂಕಟಪಡುವುದಕ್ಕೋ ಮೀಸಲಾದ ವ್ಯಕ್ತಿತ್ವಗಳೂ ಅಲ್ಲ. ಈ ವರ್ತಮಾನದಲ್ಲಿ  ಯಾವುದು ಸರಿ ಮತ್ತು ಯಾವುದು ತಪ್ಪು ಎಂಬುದನ್ನು ಸ್ಪಷ್ಟಪಡಿಸಿಕೊಂಡು ಬದುಕುವುದಕ್ಕೆ ಈ ಪಾತ್ರಗಳು ಒರೆಗಲ್ಲು ಆಗಬೇಕು. ಹೆಣ್ಣು  ಬೆತ್ತಲೆಗೊಳ್ಳುವಾಗ, ದ್ರೌಪದಿಯ ಸಂಕಟ ಸಮಾಜದಲ್ಲಿ ಕಾಣಿಸಿಕೊಳ್ಳಬೇಕು. ಬೆತ್ತಲೆಗೊಳಿಸಿದವರು ನನ್ನ ಧರ್ಮದವರೋ, ನನ್ನ  ಪಕ್ಷದವರೋ ಎಂಬ ಆಲೋಚನೆಯ ಆಚೆಗೆ ಅವರು ದುರ್ಯೋಧನರು, ದುಶ್ಶಾಸನರು ಎಂಬ ಭಾವವೇ ಮೇಲುಗೈ ಪಡೆಯಬೇಕು.  ಹಾಗಂತ, ಕೇವಲ ಮಣಿಪುರಕ್ಕೆ ಸಂಬಂಧಿಸಿ ಮಾತ್ರ ಹೀಗೆ ಹೇಳಬೇಕಾದುದೂ ಅಲ್ಲ.

ಧರ್ಮದ್ವೇಷ ಸಾಂಕ್ರಾಮಿಕವೆಂಬಂತೆ  ದೇಶದ ಉದ್ದಗಲಕ್ಕೂ ವ್ಯಾಪಿಸುತ್ತಿದೆ. ತನ್ನ ಧರ್ಮದವ ಹೆಣ್ಣನ್ನು ಬೆತ್ತಲೆ ಮಾಡಿದರೂ ಅತ್ಯಾಚಾರಕ್ಕೆ  ಒಳಪಡಿಸಿದರೂ ಹತ್ಯೆ ಮಾಡಿದರೂ ವಂಚನೆ-ದರೋಡೆಯಲ್ಲಿ ಭಾಗಿಯಾದಾಗಲೂ  ಮೌನವಾಗುವುದು ಮತ್ತು ಬೇರೆ ಧರ್ಮದವರು  ಇಂಥದ್ದನ್ನೇ ಮಾಡಿದರೆ ಬೀದಿಗಿಳಿದು ದ್ವೇಷ ಸಾಧಿಸುವುದು ಎಲ್ಲೆಡೆ ಕಂಡುಬರುತ್ತಿದೆ. ಧರ್ಮ ಪ್ರೇಮ ಎಂದರೆ ಇನ್ನೊಂದು ಧರ್ಮವನ್ನು  ದ್ವೇಷಿಸುವುದು ಎಂಬಂತಾಗಿದೆ. ಈ ಪ್ರಜ್ಞೆ ಹುಟ್ಟಿಕೊಂಡದ್ದು ಹೇಗೆ? ಯಾವ ಧರ್ಮವೂ ಇಂಥದ್ದೊಂದು  ಮೌಲ್ಯವನ್ನು ಪ್ರತಿಪಾದಿಸಿಲ್ಲ.  ದ್ರೌಪದಿಯ ವಸ್ತ್ರಾಪಹರಣವನ್ನು ಶ್ರೀಕೃಷ್ಣ ತಡೆದನೇ ಹೊರತು ಭಾನುಮತಿಯದ್ದೋ  ನಿರ್ಜರಳದ್ದೋ  ವಸ್ತ್ರಾಪಹರಣಕ್ಕೆ ಆದೇಶಿಸಲಿಲ್ಲ.  ಅಷ್ಟಕ್ಕೂ, ದ್ರೌಪದಿಯ ವಸ್ತ್ರಾಪಹರಣವನ್ನು ತಡೆಯಬಲ್ಲ ಶಕ್ತಿವಂತ ಶ್ರೀಕೃಷ್ಣನಿಗೆ ಭಾನುಮತಿಯ ವಸ್ತ್ರಾಪಹರಣ ಮಾಡಬಲ್ಲ ಸಾಮರ್ಥ್ಯ  ಇರಲಿಲ್ಲ ಎಂದು ಇದರರ್ಥವಲ್ಲ. ಅದು ಧರ್ಮವಲ್ಲ ಎಂಬುದೇ ಅದಕ್ಕೆ ಕಾರಣ. ಧರ್ಮ ಅಂದರೆ ಇದುವೇ. ಆದರೆ, ಈ ಮೌಲ್ಯವೇ  ಇವತ್ತು ಸಮಾಜದಿಂದ ಕಣ್ಮರೆಯಾಗತೊಡಗಿದೆ. ಹೆಣ್ಣು ಬೆತ್ತಲೆಗೊಳ್ಳುತ್ತಿದ್ದಾಳೆ. ಆಕೆಯನ್ನು ರಕ್ಷಿಸುವ ಹೊಣೆ ಹೊರ ಬೇಕಾಗಿದ್ದ  ಸಮಾಜವೇ ಅದರ ಬೆಂಬಲಕ್ಕೆ ನಿಲ್ಲುತ್ತಿದೆ. ಅದರಲ್ಲೂ, ಬೆತ್ತಲೆಯ ಆಘಾತವನ್ನು ಚೆನ್ನಾಗಿ ಗ್ರಹಿಸಬಲ್ಲ ಮಹಿಳೆಯರೇ ಬೆತ್ತಲೆ  ಮಾಡಿದವರ ರಕ್ಷಣೆಗೆ ನಿಲ್ಲುತ್ತಿದ್ದಾರೆ. ನಿಜವಾಗಿ, 

ಇನ್ನೊಂದು, ಧರ್ಮವನ್ನು ದ್ವೇಷಿಸುವುದೇ ಸ್ವಧರ್ಮ ಪ್ರೇಮ ಎಂದು ನಂಬಿಕೊಂಡಿರುವುದರ ಫಲಿತಾಂಶ ಇದು. ಯಾವುದೇ ಧರ್ಮ  ಇನ್ನೊಂದು ಧರ್ಮವನ್ನು ದ್ವೇಷಿಸಿಕೊಂಡು ಬೆಳೆಯಲು ಸಾಧ್ಯವೇ ಇಲ್ಲ. ದ್ವೇಷ ಧರ್ಮದ ಅಗತ್ಯವೂ ಅಲ್ಲ. ಅಗತ್ಯ ಎಂದಾಗಿದ್ದರೆ  ಪುರಾಣ ಕತೆಗಳ ತುಂಬಾ ಇಂಥ ದ್ವೇಷಗಳೇ ತುಂಬಿಕೊಂಡಿರುತ್ತಿತ್ತು. ಅಲ್ಲೋರ್ವ  ಮಂಡೋದರಿ ಕಾಣಸಿಗುವುದಕ್ಕೆ ಸಾಧ್ಯವೂ ಇರಲಿಲ್ಲ.  ಧರ್ಮ ಯಾವಾಗಲೂ ಪರಿಶುದ್ಧ. ಆದರೆ, ಅಧಿಕಾರ ಹಾಗಲ್ಲ. ಶುದ್ಧ-ಅಶುದ್ಧ ಎಂಬ ಭೇದವನ್ನೇ ಅದು ಮಾಡುವುದಿಲ್ಲ. ಅಧಿಕಾರ  ಪಡೆಯುವುದಕ್ಕಾಗಿ ಯಾವ ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದಕ್ಕೂ ಅದು ಹೇಸುವುದಿಲ್ಲ. ಜನರನ್ನು ಕಚ್ಚಾಡಿಸುವುದರಿಂದ ಅಧಿಕಾರ  ಲಭ್ಯವಾಗುತ್ತದೆ ಎಂದಾದರೆ, ಅದು ಆ ಆಯ್ಕೆಯನ್ನೂ ಬಳಸಿಕೊಳ್ಳುತ್ತದೆ. ಧರ್ಮವನ್ನು ವಿಕೃತವಾಗಿ ವ್ಯಾಖ್ಯಾನಿಸುವುದರಿಂದ ಲಾಭ ಇದೆ  ಎಂದಾದರೆ ಅದಕ್ಕೂ ಕೈ ಹಾಕುತ್ತದೆ. ಕರುಣಾಮಯಿ ಹೆಣ್ಣಿನೊಳಗೂ ತೀರದ ದ್ವೇಷವನ್ನು ಅದು ಹುಟ್ಟು ಹಾಕುತ್ತದೆ. ಗಂಡನ್ನು  ಕ್ರೌರ್ಯದ ವಕ್ತಾರರಾಗಿ ಮಾರ್ಪ ಡಿಸುತ್ತದೆ. ತನ್ನ ಧರ್ಮದವರಲ್ಲದ ಎಲ್ಲರನ್ನೂ ವೈರಿಗಳಂತೆ ಮತ್ತು ತನ್ನ ಧರ್ಮವನ್ನು ನಾಶ  ಮಾಡಲು ಸಂಚು ಹೂಡುತ್ತಿರುವವರಂತೆ ಬಿಂಬಿಸುತ್ತದೆ. ಅಂತಿಮವಾಗಿ ಸ್ವಧರ್ಮ ಪ್ರೇಮವೆಂದರೆ, ಇನ್ನೊಂದು ಧರ್ಮವನ್ನು  ದ್ವೇಷಿಸುವುದು ಎನ್ನುವಲ್ಲಿಗೆ ತಂದು ಮುಟ್ಟಿಸುತ್ತದೆ. 

ಮಣಿಪುರದಿಂದ ಹಿಡಿದು ದೇಶದಾದ್ಯಂತ ಇವತ್ತು ಕಾಣಿಸಿಕೊಂಡಿರುವುದು ಇದೇ ಸಿದ್ಧಾಂತ. ಇದು ಧರ್ಮ ಅಲ್ಲ, ಅಧರ್ಮ. ದುಶ್ಶಾಸನನ ಕೃತ್ಯಕ್ಕೆ ಹೆಣ್ಣು ಬೆಂಬಲವಾಗಿ ನಿಲ್ಲುವುದು ಧರ್ಮವಾಗಲು ಸಾಧ್ಯವೇ ಇಲ್ಲ.

Tuesday, 20 June 2023

ಸಂತ್ರಸ್ತರ ಪರ ನಿಲ್ಲುವುದಕ್ಕೂ ಭಯ ಪಡಬೇಕಾದ ಕಾಲ..


27-6-2022

 ತೀಸ್ತಾ ಸೆಟಲ್ವಾಡ್ ಅವರ ಬಂಧನವಾಗಿದೆ. ಒಂದುವೇಳೆ, ಅವರಿಲ್ಲದೇ ಇರುತ್ತಿದ್ದರೆ ಗುಜರಾತ್ ನರಮೇಧದ ಸಂತ್ರಸ್ತರು ಹೇಗಿರುತ್ತಿದ್ದರು? ಅವರು ತಮ್ಮ ಕಮ್ಯುನಲಿಸಂ ಕೋಂಬಾಟ್ ಪತ್ರಿಕೆಯನ್ನು ವರ್ಷಗಳ ಕಾಲ ಗುಜರಾತ್ ಸಂತ್ರಸ್ತರ ಸಂಕಟಗಳಿಗೆ ಮೀಸಲಿಡದೇ ಇರುತ್ತಿದ್ದರೆ ಮತ್ತು ನರಮೇಧದ ಒಳಸಂಚುಗಳನ್ನು ಇಂಚಿಂಚಾಗಿ ನಾಗರಿಕ ಸಮಾಜದ ಮುಂದಿಡದೇ ಇರುತ್ತಿದ್ದರೆ, ಏನಾಗಿರುತ್ತಿತ್ತು? ಸಿಟಿಜನ್ಸ್ ಫಾರ್ ಜಸ್ಟಿಸ್ ಎಂಡ್ ಪೀಸ್ ಎಂಬ ಸರಕಾರೇತರ ಸಂಸ್ಥೆಯನ್ನು ಸ್ಥಾಪಿಸಿ ನರಮೇಧದ ಸಂತ್ರಸ್ತರನ್ನು ಕೋರ್ಟಿಗೆ ಹೋಗುವಂತೆ ಧೈರ್ಯ ತುಂಬದೇ ಇರುತ್ತಿದ್ದರೆ, ಒಂದೇ ಒಂದು ಪ್ರಕರಣವಾದರೂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತಿತ್ತೇ?

ತನ್ನವರನ್ನು ಕಳಕೊಂಡದ್ದಲ್ಲದೇ ಭೀಕರ ಅತ್ಯಾಚಾರಕ್ಕೂ ಗುರಿಯಾದ ಬಿಲ್ಕೀಸ್‌ಗೆ 50 ಲಕ್ಷ ರೂಪಾಯಿಯನ್ನು ಪರಿಹಾರವಾಗಿ ನೀಡುವಂತೆ ಸುಪ್ರೀಮ್ ಕೋರ್ಟು ಗುಜರಾತ್ ಸರಕಾರಕ್ಕೆ ಆದೇಶಿಸಿದ್ದರೆ, ಅದಕ್ಕೆ ಕಾರಣ ಇದೇ ಸೆಟಲ್ವಾಡ್. ಗುಜರಾತ್ ನರಮೇಧಕ್ಕೆ ಸಂಬಂಧಿಸಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದರೆ, ಅದರ ಹಿಂದಿನ ರೂವಾರಿ ಇದೇ ಸೆಟಲ್ವಾಡ್.

ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಸುಮಾರು 50ರಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ. ಇವರಲ್ಲಿ ಗಲ್ಲು ಶಿಕ್ಷೆಗೆ ಒಳಗಾದವರು ಮತ್ತು ಜೀವಾವಧಿ ಶಿಕ್ಷೆಗೆ ಒಳಗಾದವರೂ ಇದ್ದಾರೆ. ಮುಖ್ಯಮಂತ್ರಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವೆಯಾಗಿದ್ದ ಮಾಯಾ ಕೊಡ್ನಾನಿಯ ನ್ನು ಕಟಕಟೆಯಲ್ಲಿ ನಿಲ್ಲಿಸಲು ಸಾಧ್ಯವಾಗಿದ್ದಿದ್ದರೆ ಅದರ ಹಿಂದೆ ಸೆಟಲ್ವಾಡ್‌ರ ಶ್ರಮ ಸಾಕಷ್ಟಿದೆ. ಗುಜರಾತ್ ನರಮೇಧಕ್ಕೆ ಸಂಬಂಧಿಸಿ ತೀಸ್ತಾ ಸಂತ್ರಸ್ತರ ಆಮ್ಲಜನಕವಾಗಿದ್ದರು. ಪ್ರಭುತ್ವದ ಮೌನ ಸಮ್ಮತಿಯೊಂದಿಗೆ ನರಮೇಧವೊಂದು ನಡೆದಾಗ ಸಂತ್ರಸ್ತರ ಮುಂದೆ ಎರಡ್ಮೂರು ಸವಾಲುಗಳಿರುತ್ತವೆ.
1. ಪ್ರಭುತ್ವವೇ ಅವರ ವಿರುದ್ಧ ನಿಂತಿರುವುದು.
2. ಸಂತ್ರಸ್ತರೆಂಬ ನೆಲೆಯಲ್ಲಿನ ಅಸಹಾಯಕತೆ.
3. ನ್ಯಾಯಕ್ಕಾಗಿ ಕೋರ್ಟು ಮೆಟ್ಟಲು ಹತ್ತಬೇಕಾದರೆ ಎದುರಾಗುವ ಹಣಕಾಸಿನ ಅಡಚಣೆ.

ಎಲ್ಲಕ್ಕಿಂತ ದೊಡ್ಡ ಸವಾಲಿನ ಕೆಲಸವೇನೆಂದರೆ, ಪ್ರಭುತ್ವವನ್ನು ಎದುರು ಹಾಕಿಕೊಳ್ಳುವುದು. ಗುಜರಾತ್ ನರಮೇಧದಲ್ಲಿ ಬದುಕುಳಿದ ಸಂತ್ರಸ್ತರು ತಮ್ಮ ಮೇಲಾದ ದೌರ್ಜನ್ಯ ಮತ್ತು ತಾವು ಕಂಡುಂಡ ಭೀಕರ ದೃಶ್ಯದ ವಿವರಗಳನ್ನು ದಾಖಲಿಸಬೇಕಿದ್ದುದು ಪೊಲೀಸ್ ಠಾಣೆಗಳಲ್ಲಿ. ಆದರೆ ಹೆಚ್ಚಿನ ಕ್ರೌರ್ಯಗಳು ಈ ಪೊಲೀಸ್ ಠಾಣೆಗಳ ನಿಷ್ಕ್ರೀಯತೆ ಅಥವಾ ಬೆಂಬಲದಿಂದಲೇ ನಡೆದಿದ್ದುವು. ಆದ್ದರಿಂದ, ಸಂತ್ರಸ್ತರೋರ್ವರು ಠಾಣೆಯೊಂದರ ಮೆಟ್ಟಲೇರುವುದು ಮತ್ತು ದೂರು ದಾಖಲಿಸುವುದು ಸುಲಭ ಅಲ್ಲ. ಅಲ್ಲಿನ ಪೊಲೀಸರು ಬಿಡಿ, ಕಂಭ ಕಂಭಗಳೂ ಆ ಸಂತ್ರಸ್ತರನ್ನು ದುರುಗುಟ್ಟಿ ನೋಡುವುದು ಸಹಜ. ಇಂಥ ಸವಾಲನ್ನು, ಆಗಷ್ಟೇ ತನ್ನವರನ್ನೆಲ್ಲ ಕಳಕೊಂಡು ಬೀದಿ ಪಾಲಾಗಿರುವ ಓರ್ವ ಸಂತ್ರಸ್ತ ಎದುರಿಸುವುದು ಸುಲಭ ಅಲ್ಲ. ತೀಸ್ತಾ ಮುಖ್ಯವಾಗುವುದೇ ಇಲ್ಲಿ. ದೇಶ ಕಂಡ ಪ್ರಪ್ರಥಮ ಅಟಾರ್ನಿ ಜನರಲ್ ಚಿಮನ್‌ಲಾಲ್ ಸೆಟಲ್ವಾಡ್‌ರ ಮೊಮ್ಮಗಳಾದ ಮತ್ತು ನ್ಯಾಯವಾದಿ ಅತುಲ್ ಸೆಟಲ್ವಾಡ್‌ರ ಮಗಳಾದ ತೀಸ್ತಾರಲ್ಲಿ ಸಹಜವಾಗಿಯೇ ಕಾನೂನು ಪರಿಜ್ಞಾನ ಚೆನ್ನಾಗಿತ್ತು. ಜೊತೆಗೆ ಅವರು ಮುಂಬೈಯಲ್ಲಿ ಬೆಳೆದವರಾದರೂ ಹುಟ್ಟಿದ್ದು ಗುಜರಾತ್ ನಲ್ಲಿದುದರಿಂದ ಆ ಮಣ್ಣಿನ ಗುಣವನ್ನು ಅವರು ಚೆನ್ನಾಗಿಯೇ ಬಲ್ಲವರಾಗಿದ್ದರು.

1992ರಲ್ಲಿ ಮುಂಬೈ ಗಲಭೆ ನಡೆದಾಗ, ಅದನ್ನು ಹತ್ತಿರದಿಂದ ಕಂಡು ಮಾಧ್ಯಮಗಳಿಗೆ ವರದಿ ಮಾಡಿದ ಅನುಭವವೂ ಅವರಿಗಿತ್ತು. ಕೋಮು ಘರ್ಷಣೆಯ ಹೆಸರಲ್ಲಿ ನಡೆಯುವ ಜನಾಂಗೀಯ ಹಿಂಸೆ ಮತ್ತು ಏಕಮುಖ ಹತ್ಯಾಕಾಂಡಗಳನ್ನು ಅವರಿಗೆ ಮುಂಬೈ ಗಲಭೆ ಚೆನ್ನಾಗಿ ಪರಿಚಯಿಸಿತ್ತು. ಆದ್ದರಿಂದಲೇ, 2002ರ ಗುಜರಾತ್ ನರಮೇಧ ಕ್ಕಿಂತ 5 ವರ್ಷಗಳ ಮೊದಲೇ ಹತ್ಯಾಕಾಂಡವೊಂದರ ಭೀತಿಯನ್ನು ಅವರು ವ್ಯಕ್ತಪಡಿಸಿದ್ದರು ಮತ್ತು ವಿವಿಧ ದಾಖಲೆ ಹಾಗೂ ವರದಿಗಳನ್ನು ಸಂಗ್ರಹಿಸಿ ನ್ಯಾಯವಾದಿಗಳ ಬಾಗಿಲು ತಟ್ಟಿದ್ದರು. ಅಂದಹಾಗೆ, ತೀಸ್ತಾ ಅವರ ಛಲ ಬಿಡದ ಹೋರಾಟಕ್ಕೆ ಒಂದು ಸಾಕ್ಷ್ಯ ಬೇಕೆಂದರೆ ಅದು ಬಿಲ್ಕೀಸ್ ಬಾನು ಪ್ರಕರಣ. ಬೆಸ್ಟ್ ಬೇಕರಿ ಮತ್ತು ಬಿಲ್ಕೀಸ್ ಬಾನು ಪ್ರಕರಣದ ತನಿಖೆಯನ್ನು ಗುಜರಾತ್ ಪೊಲೀಸರು ಕೈಬಿಟ್ಟಿದ್ದರು. ತೀಸ್ತಾ ಸುಮ್ಮನಾಗಲಿಲ್ಲ. ಬಿಲ್ಕೀಸ್‌ರಲ್ಲಿ ಧೈರ್ಯ ತುಂಬಿದರು. ನ್ಯಾಯವನ್ನು ಪಡೆದೇ ತೀರಬೇಕೆಂಬ ಛಲ ಹುಟ್ಟಿಸಿದರು. ಅವರಿಂದಾಗಿಯೇ ಆ ಪ್ರಕರಣ ಸುಪ್ರೀಮ್ ಮೆಟ್ಟಿಲೇರಿತು ಮತ್ತು ಸುಪ್ರೀಮ್ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿ.ಎನ್.ಖರೆ ಅವರು ಪ್ರಕರಣದ ಮರು ತನಿಖೆಗೆ ಆದೇಶಿಸಿದ್ದರು.

ನಿಜವಾಗಿ, ಪ್ರಭುತ್ವ ಭಾಗಿಯಾದ ಯಾವುದೇ ನರಮೇಧವು ಹೆಚ್ಚು ಸಮಯ ಸಾರ್ವಜನಿಕವಾಗಿ ಚರ್ಚೆಯಲ್ಲಿರುವುದು ಕಡಿಮೆ. ಇದಕ್ಕೆ ಕಾರಣ, ಪ್ರಭುತ್ವದ ಭೀತಿ. ರಾಷ್ಟ್ರೀಯ ಮಾಧ್ಯಮಗಳು ಒಂದಿಷ್ಟು ದಿನ ಇಂಥ ಕ್ರೌರ್ಯಗಳ ಅಷ್ಟಿಷ್ಟು ವರದಿಯನ್ನು ಮಾಡಿ ಬಳಿಕ ಬೆನ್ನು ಹಾಕುವುದು ರೂಢಿ. ಆದರೆ ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಈ ಮಾತು ಸುಳ್ಳಾಗಿದ್ದರೆ ಅದರ ಪೂರ್ಣ ಶ್ರೇಯಸ್ಸು ತೀಸ್ತಾರಿಗೆ ಸಲ್ಲಬೇಕು. ಗುಜರಾತ್ ನರಮೇಧಕ್ಕೆ ಪೂರ್ವಭಾವಿಯಾಗಿ ನಡೆದಿರಬಹುದಾದ ಸಂಚುಗಳಿಂದ ಹಿಡಿದು, ಇಡೀ ನರಮೇಧಕ್ಕೆ ನೇತೃತ್ವ ನೀಡಿದವರು, ಪ್ರಚೋದನೆ ಕೊಟ್ಟವರು ಮತ್ತು ಮಾಧ್ಯಮಗಳ ಸುಳ್ಳು ಸುದ್ದಿಗಳನ್ನು ತೀಸ್ತಾ ತನ್ನ ಕಮ್ಯುನಲಿಸಂ ಕೊಂಬಾಟ್ ಪತ್ರಿಕೆಯಲ್ಲಿ ಯಾವ ಮುಲಾಜೂ ಇಲ್ಲದೇ ಪ್ರಕಟಿಸತೊಡಗಿದರು. ನಿಜವಾಗಿ,

ತನ್ನ ಪತ್ರಿಕೆಯನ್ನು ಅವರು ಕೇವಲ ಗುಜರಾತ್ ನರಮೇಧದ ಬಲಿಪಶುಗಳಿಗಾಗಿಯೇ ಅರ್ಪಿಸಿದ್ದರು. ಆರಂಭದಿಂದ ಕೊನೆಪುಟದ ವರೆಗೆ ನರಮೇಧದ ಇಂಚಿಂಚು ವಿವರಗಳು ಮತ್ತು ಕಾನೂನು ಪ್ರಕ್ರಿಯೆಗಳ ಮಾಹಿತಿಗಾಗಿ ಮೀಸಲಿಟ್ಟರು. ಸಂತ್ರಸ್ತರನ್ನು ಭೇಟಿಯಾಗಿ ಅವರ ಮಾತುಗಳನ್ನು ಗುಜರಾತ್‌ನಿಂದ ಹೊರಗಿನ ಓದುಗರಿಗೆ ತಲುಪಿಸಿದರು. ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯ ಮಾಹಿತಿಗಳನ್ನು ನೀಡುತ್ತಾ ಬಂದರು. ಎಲ್ಲೆಲ್ಲ ಸಂತ್ರಸ್ತರಿದ್ದರೋ ಅವರೆಲ್ಲರಿಗೂ ಏಕಧ್ವನಿ ಬರುವಂತೆ ಮತ್ತು ಧೈರ್ಯದಿಂದಿರುವಂಥ ವಾತಾವರಣ ಸೃಷ್ಟಿಸಿದರು. ಗುಜರಾತ್‌ನಿಂದ ಹೊರಬಂದು ವಿವಿಧ ರಾಜ್ಯಗಳಲ್ಲಿ ಗುಜರಾತ್ ನರಮೇಧಕ್ಕೆ ಸಂಬಂಧಿಸಿ ಮಾಹಿತಿಗಳನ್ನು ಹಂಚಿಕೊಂಡರು. ಯಾವ ಕಾರಣಕ್ಕೂ ಗುಜರಾತ್ ನರಮೇಧದ ರೂವಾರಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳಬಾರದು ಮತ್ತು ಈ ನರಮೇಧ ಸಾರ್ವಜನಿಕ ಪ್ರಜ್ಞೆಯಿಂದ ಮಾಸಿ ಹೋಗಬಾರದು ಎಂಬ ಪ್ರಾಮಾಣಿಕ ಕಳಕಳಿ ತೀಸ್ತಾರಲ್ಲಿತ್ತು. ಒಂದು ನರಮೇಧದ ಪ್ರಜ್ಞೆ ಸಾರ್ವಜ ನಿಕವಾಗಿ ಇರುವವರೆಗೆ ಇನ್ನೊಂದು ನರಮೇಧ ಸುಲಭ ಅಲ್ಲ. ಯಾಕೆಂದರೆ,

ಜನರು ತಕ್ಷಣಕ್ಕೆ ಎಚ್ಚೆತ್ತುಕೊಳ್ಳುತ್ತಾರೆ. ನರಮೇಧದ ಸಾಧ್ಯತೆಗಳನ್ನು ಗುರುತಿಸಿ ಸಮಾಜಕ್ಕೆ ಎಚ್ಚರಿಕೆಯನ್ನು ರವಾನಿಸುತ್ತಾರೆ. ಕಳೆದ 20 ವರ್ಷಗಳಲ್ಲಿ ತೀಸ್ತಾ ತನ್ನ ಆಯು ಷ್ಯದ ಬಹುತೇಕ ಸಮಯವನ್ನು ಇನ್ನೊಂದು ನರಮೇಧ ನಡೆಯದಂತೆ ತಡೆಯುವುದಕ್ಕಾಗಿ ಮೀಸಲಿ ಟ್ಟರು ಎಂದರೂ ಸರಿ. 2002ರ ಗುಜರಾತ್ ಹತ್ಯಾಕಾಂಡಕ್ಕೆ ಪೂರ್ವಭಾವಿಯಾಗಿ ಅಲ್ಲಿನ ಆದಿವಾಸಿಗಳು, ಕ್ಷತ್ರಿಯ, ಹರಿಜನರಲ್ಲಿ ಹೇಗೆ ಮುಸ್ಲಿಮ್ ದ್ವೇಷವನ್ನು ಗಟ್ಟಿಗೊಳಿಸಲಾಗುತ್ತಾ ಬರಲಾಯಿತು ಎಂಬ ಮಾಹಿತಿ ತೀಸ್ತಾರಲ್ಲಿ ಇದ್ದುದರಿಂದಲೇ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ದೇಶದಾದ್ಯಂತ ಸುತ್ತಿದರು. ಒಂದುಕಡೆ, ತನ್ನ ಸಿಟಿಜನ್ಸ್ ಫಾರ್ ಜಸ್ಟೀಸ್ ಎಂಡ್ ಪೀಸ್ ಎಂಬ ಸಂಸ್ಥೆಯ ಮೂಲಕ ಗುಜರಾತ್ ಸಂತ್ರಸ್ತರಲ್ಲಿ ಧೈರ್ಯ ತುಂಬುತ್ತಾ ಮತ್ತು ಇನ್ನೊಂದು ಕಡೆ, ತನ್ನ ಕಮ್ಯುನಲಿಸಂ ಕೊಂಬಾಟ್ ಮೂಲಕ ದೇಶದ ಉದ್ದಗಲದ ಭಾರತೀಯರಲ್ಲಿ ನರಮೇಧದ ಪೈಶಾಚಿಕತೆಯನ್ನು ವಿವರಿಸುತ್ತಾ ನಡೆದರು. ಇದರಿಂದಾಗಿ ಪ್ರಭುತ್ವ ಮತ್ತು ಅವರ ಬೆಂಬಲಿಗರ ತೀವ್ರ ವಿರೋಧವನ್ನೂ ಕಟ್ಟಿಕೊಂಡರು. ಅವರನ್ನು ಕಾನೂ ನಿನ ಕುಣಿಕೆಯಲ್ಲಿ ಸಿಲುಕಿಸುವುದಕ್ಕೆ ಒಂದಲ್ಲ ಒಂದು ಪ್ರಯತ್ನಗಳು ನಡೆಯುತ್ತಲೇ ಬಂದುವು. ಇದೀಗ, ಕ್ರಿಮಿನಲ್ ಪಿತೂರಿ, ಸುಳ್ಳು ಸಾಕ್ಷ್ಯಾಧಾರ ಸಲ್ಲಿಕೆ ಮತ್ತು ಸಂತ್ರಸ್ತರ ಭಾವುಕತೆಯನ್ನು ದುರುಪಯೋಗಿಸಿದ ಆರೋಪದಲ್ಲಿ ಬಂಧಿಸಲಾಗಿದೆ. ಈ ಬಂಧನದ ಹಿಂದೆ ಸುಪ್ರೀಮ್ ಕೋರ್ಟ್‌ನ ಪರಾಮರ್ಶೆಗೂ ಪಾತ್ರ ಇದೆ ಎಂಬುದೇ ಅತಿದೊಡ್ಡ ದುರಂತ. ಒಂದುವೇಳೆ,

ಮುಂಬೈ, ಭೀವಂಡಿ, ಭಾಗಲ್ಪುರ್, ನೆಲ್ಲಿ, ದೆಹಲಿ ಅಥವಾ ಇನ್ನಾವುದೇ ಕಡೆ ನಡೆದ ಹತ್ಯಾಕಾಂಡಗಳ ಬಗ್ಗೆ ತೀಸ್ತಾರಂತೆ ಮಾನವ ಹಕ್ಕು ಕಾರ್ಯಕರ್ತರು ಮತ್ತು ಸಂಘಟನೆಗಳು ರಂಗಕ್ಕಿಳಿಯದೇ ಇರುತ್ತಿದ್ದರೆ ಮತ್ತು ಸಂತ್ರಸ್ತರ ಬೆನ್ನಿಗೆ ನಿಲ್ಲದೇ ಇರುತ್ತಿದ್ದರೆ ಆ ಕ್ರೌರ್ಯಕ್ಕೆ ಕಾರಣರಾದವರು ಕಟಕಟೆಯ ವರೆಗೆ ತಲುಪುತ್ತಿದ್ದರೇ? ತೀಸ್ತಾರಂತೆ ಸಂತ್ರಸ್ತರ ಜೊತೆಗೆ ನಿಲ್ಲುವುದನ್ನೇ ಮತ್ತು ಅವರಲ್ಲಿ ನ್ಯಾಯಕ್ಕಾಗಿ ಆಗ್ರಹಿಸುವ ಕಿಚ್ಚು ತುಂಬುವುದನ್ನೇ ಅಪರಾಧ ಎಂದು ಹೇಳುವುದಾದರೆ, ಸಂತ್ರಸ್ತರಿಗೆ ಇನ್ನು ಮುಂದೆ ನೆರವಾಗಲು ಯಾರು ಸಿಗಬಹುದು? ಅಷ್ಟಕ್ಕೂ, ಇನ್ನು ಮುಂದೆ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಬಿದ್ದು ಹೋದರೆ ಅದರ ಹೆಸರಲ್ಲಿ ನ್ಯಾಯವಾದಿ ಮತ್ತು ಎಫ್‌ಐಆರ್ ದಾಖಲಿಸಿದ ಪೊಲೀಸರನ್ನು ತೀಸ್ತಾರಂತೆ ಬಂಧಿಸಲಾಗುವುದೇ? ಮೋದಿಯವರಿಗೆ ಕ್ಲೀನ್‌ಚಿಟ್ ಕೊಡುವುದು ಬೇರೆ, ಅವರ ಮೇಲೆ ಕೇಸು ದಾಖಲಿಸಲು ನೆರವಾದುದಕ್ಕೆ ತೀಸ್ತಾರನ್ನು ಬಂಧಿಸುವುದು ಬೇರೆ. ಟೀಸ್ತಾ ಗೆದ್ದು ಬರಲಿ.

ಅಗ್ನಿಪಥ್‌ಗೆ ವಿರೋಧವೇಕೆ? ಎಡವಿದ್ದು ಯಾರು?

 


30-6-2022

2013 ಸೆಪ್ಟೆಂಬರ್ 15ರಂದು ಹರ್ಯಾಣದ ರೆವಾರಿಯಲ್ಲಿ ನಿವೃತ್ತ ಯೋಧರು ರ‍್ಯಾಲಿಯನ್ನು ಸಂಘಟಿಸಿದ್ದರು. ವನ್ ರ‍್ಯಾಂಕ್ ವನ್ ಪೆನ್ಶನ್ (ಸಮಾನ ಶ್ರೇಣಿ ಸಮಾನ ಪಿಂಚಣಿ) ಯೋಜನೆಯನ್ನು ಜಾರಿಗೆ ತರಬೇಕು ಎಂಬುದು ಅವರ ಒತ್ತಾಯವಾಗಿತ್ತು. ಅಂದರೆ, ಸೇನೆಯಿಂದ ಈ ಹಿಂದೆ ನಿವೃತ್ತಿಯಾದವರಿಗೂ ಆ ಬಳಿಕ ನಿವೃತ್ತಿಯಾದವರಿಗೂ ಪಿಂಚಣಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬ ಬೇಡಿಕೆ. ಉದಾಹರಣೆಗೆ, ಯೋಧನಾಗಿ 1990ರಲ್ಲಿ ನಿವೃತ್ತಿಯಾದ ವ್ಯಕ್ತಿಗೂ 2020ರಲ್ಲಿ ಯೋಧನಾಗಿ ನಿವೃತ್ತಿಯಾದ ವ್ಯಕ್ತಿಗೂ ಪಿಂಚಣಿಯಲ್ಲಿ ವ್ಯತ್ಯಾಸ ಇರುತ್ತದೆ. ಯಾಕೆಂದರೆ, 1990ರಲ್ಲಿ ಓರ್ವ ಯೋಧನಿಗೆ ವೇತನ ಎಷ್ಟಿರುತ್ತದೋ 2020ರ ಯೋಧನಿಗೆ ವೇತನ ಅಷ್ಟೇ ಇರುವುದಿಲ್ಲ. ಪಿಂಚಣಿಗೆ ವೇತನ ಮಾನದಂಡ ಆಗಿರುವುದರಿಂದ 1990ರಲ್ಲಿ ನಿವೃತ್ತಿಯಾದ ಯೋಧ ಮತ್ತು 2020ರಲ್ಲಿ ನಿವೃತ್ತಿಯಾದ ಯೋಧ ಒಂದೇ ಶ್ರೇಣಿಯವರಾದರೂ ಪಿಂಚಣಿಯಲ್ಲಿ ವ್ಯತ್ಯಾಸ ಇರುತ್ತದೆ. 1990ರ ಯೋಧ ಕಡಿಮೆ ಪಿಂಚಣಿ ಪಡೆಯುವಾಗ 2020ರ ನಿವೃತ್ತ ಯೋಧ ಅಧಿಕ ಪಿಂಚಣಿ ಪಡೆಯುತ್ತಾನೆ. ಇದು ಯೋಧರ ನಡುವೆ ತಾರತಮ್ಯವಾಗಿದ್ದು, ಪಿಂಚಣಿಯಲ್ಲಿ ಸಮಾನತೆಯನ್ನು ಕಾಯ್ದುಕೊಳ್ಳಬೇಕು ಎಂಬುದು ರ‍್ಯಾಲಿನಿರತ ಯೋಧರ ಆಗ್ರಹವಾಗಿತ್ತು.

ಆಗ ಮನ್‌ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು ಮತ್ತು 2014ರ ಲೋಕಸಭಾ ಚುನಾವಣೆಗೆ ರಂಗ ಸಜ್ಜುಗೊಳ್ಳುತ್ತಿತ್ತು. ನರೇಂದ್ರ ಮೋದಿಯವರು ಬಿಜೆಪಿಯಿಂದ ಪ್ರಧಾನಿ ಅಭ್ಯರ್ಥಿಯಾಗಿ ಘೋಷಿತವಾಗಿದ್ದರು. ಅವರು ಈ ಯೋಧರ ರ‍್ಯಾಲಿಯಲ್ಲಿ ಭಾಗವಹಿಸಿ ಮಾತ ನಾಡಿದರಲ್ಲದೇ, ಒಂದು ಶ್ರೇಣಿ, ಒಂದು ಪಿಂಚಣಿ ಎಂಬ ಬೇಡಿಕೆಗೆ ಬೆಂಬಲ ಸಾರಿದ್ದರು. ಇದಾಗಿ ಈಗ 9 ವರ್ಷಗಳೇ ಕಳೆದಿವೆ. ಈಗ ಅದೇ ನರೇಂದ್ರ ಮೋದಿಯವರು ಅಗ್ನಿಪಥ್ ಎಂಬ ಯೋಜನೆಯ ಮೂಲಕ ನೋ ರ‍್ಯಾಂಕ್ ನೋ ಪೆನ್ಶನ್ ಎಂದು ಘೋಷಿಸಿದ್ದಾರೆ. ಅಂದು ನಿವೃತ್ತ ಯೋಧರು ಬೀದಿಗಿಳಿದಿದ್ದರೆ ಇಂದು ಸೇನಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.
ಅಗ್ನಿಪಥ್ ಯೋಜನೆಯ ಬಗ್ಗೆ ನಿವೃತ್ತ ಸೇನಾಧಿಕಾರಿಗಳು ಮತ್ತು ರಕ್ಷಣಾ ತಜ್ಞರೇ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಪ್ರಶ್ನೆಗಳನ್ನೆಲ್ಲ ಬಿಜೆಪಿ ವಿರೋಧಿಯೆಂದೋ ವಿರೋಧ ಪಕ್ಷಗಳ ಪಿತೂರಿಯೆಂದೋ ಸಾರಾಸಗಟಾಗಿ ತಳ್ಳಿ ಹಾಕುವುದು ದೇಶದ ಹಿತದೃಷ್ಟಿಯಿಂದ ಅ ಪಾಯಕಾರಿ. ಒಂದುಕಡೆ, ಈ ದೇಶದ ಮೇಲೆ ಕಣ್ಣಿಟ್ಟಿರುವ ಚೀನಾ ಮತ್ತು ಪಾಕಿಸ್ತಾನವಿದೆ. ನೆರೆಕರೆಯ ದೇಶಗಳ ಜೊತೆಗೂ ಭಾರತದ ಸಂಬಂಧ ಉತ್ತಮವಾಗಿಲ್ಲ. ಚೀನಾ ಯಾವ ಸಂದರ್ಭದಲ್ಲೂ ಈ ರಾಷ್ಟ್ರಗಳನ್ನು ಬಳಸಿಕೊಂಡು ದೇಶದ ಮೇಲೆ ಆಕ್ರಮಣ ನಡೆಸುವುದಕ್ಕೆ ಅವಕಾಶವಿದೆ. ಇನ್ನೊಂದು ಕಡೆ, ಈಶಾನ್ಯ ಭಾರತದಲ್ಲಿ ಬಂಡಾಯ ಚಟುವಟಿಕೆಯಿದೆ. ಕಾಶ್ಮೀರವೂ ಸುಖವಾಗಿಲ್ಲ. ಇಂಥ ಸ್ಥಿತಿಯಲ್ಲಿ, ಅನುಭವಿ ಮತ್ತು ನಿಪುಣ ಯೋಧರ ಅಗತ್ಯ ಬಹಳವೇ ಇದೆ.

ಅಗ್ನಿಪಥ್ ಯೋಜನೆಯಂತೆ, 17ರಿಂದ 25 ವರ್ಷದೊಳಗಿನವರನ್ನು ನಾಲ್ಕು ವರ್ಷಗಳ ಅವಧಿಗೆ ಯೋಧರಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಯೋಧರನ್ನು ಅಗ್ನಿವೀರ್ ಎಂದು ಕರೆಯಲಾಗುತ್ತದೆ. ಮೊದಲ ವರ್ಷ 46 ಸಾವಿರ ಅಗ್ನಿವೀರರನ್ನು ಆಯ್ಕೆ ಮಾಡಲಿದ್ದು, ಈ ಆಯ್ಕೆ ಪ್ರಕ್ರಿಯೆ 90 ದಿನಗಳಲ್ಲಿ ಮುಗಿಯಲಿದೆ. ಪ್ರತಿ ವರ್ಷದಂತೆ ನಾಲ್ಕು ವರ್ಷಗಳವರೆಗೆ ಈ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಸೇರ್ಪಡೆಯಾಗುವ ಯೋಧರಿಗೆ 12ನೇ ತರಗತಿಯ ಪ್ರಮಾಣ ಪತ್ರ ನೀಡಲಾಗುವುದು. ಮಾತ್ರವಲ್ಲ, ನಾಲ್ಕು ವರ್ಷಗಳ ಬಳಿಕ ನಿವೃತ್ತರಾಗುವ ಯೋಧರು ಪೂರ್ಣಾವಧಿ ಸೇವೆಗಾಗಿ ಅರ್ಜಿ ಸಲ್ಲಿಸಬಹುದಾಗಿದ್ದು, ಇವರಲ್ಲಿ 25% ಮಂದಿಯನ್ನು ಮಾತ್ರ ಪೂರ್ಣಾವಧಿಗೆ ಆಯ್ಕೆ ಮಾಡಲಾಗುತ್ತದೆ.

ಸಮಸ್ಯೆ ಇರುವುದೂ ಇಲ್ಲಿ. ಯೋಧರನ್ನು ದೇಶಸೇವೆ ಮಾಡುವವರು ಎಂದು ಗುರುತಿಸಲಾಗುತ್ತದೆಯೇ ಹೊರತು ವೃತ್ತಿನಿರತರೆಂದಲ್ಲ. ಭಾರತೀಯ ಸೇನೆ ಸೇರುವುದೆಂದರೆ, ಅದೊಂದು ಹೆಮ್ಮೆ. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ, ರಾಜಸ್ತಾನ, ಬಿಹಾರ ಮುಂತಾದ ರಾಜ್ಯಗಳು ಯುವಕರನ್ನು ದೊಡ್ಡ ಮಟ್ಟದಲ್ಲಿ ದೇಶಸೇವೆಗೆಂದು ಕಳಿಸುತ್ತಿದೆ. ಯೋಧನ ಕುಟುಂಬವೊಂದು ತಮ್ಮ ಗ್ರಾಮದಲ್ಲಿರುವುದನ್ನುಈ ಊರಿನವರು ಹೆಮ್ಮೆಯೆಂದು ಭಾವಿಸುವ ವಾತಾವರಣವಿದೆ. ದೇಶಸೇವೆಯ ನಡುವೆ ರಜೆಯಲ್ಲಿ ಊರಿಗೆ ಮರಳುವ ಯೋಧನಿಗೆ ಅಪಾರ ಗೌರವವೂ ಲಭ್ಯವಾಗುತ್ತದೆ. ಎಷ್ಟೋ ಬಾರಿ ಯೋಧರ ಸಾಹಸಪೂರ್ಣ ಸೇವೆಗಾಗಿ ಯೋಧರನ್ನು ಮೆರವಣಿಗೆಯಲ್ಲಿ ಕೊಂಡೊಯ್ದು ಊರೇ ಸಂಭ್ರಮಿಸುತ್ತದೆ. ಆದರೆ, ನಾಲ್ಕು ವರ್ಷಗಳ ಸೇವೆಯ ಬಳಿಕ ಯೋಧ ಎಂಬ ಹಣೆಪಟ್ಟಿಯನ್ನು ಕಳಚಿಟ್ಟು ಸರ್ಕಾರ ಕೊಡುವ 11 ಲಕ್ಷ ರೂಪಾಯಿಯನ್ನು ಪಡೆದುಕೊಂಡು ಮರಳುವವನಿಗೆ/ಳಿಗೆ ಈ ಗೌರವ ಲಭ್ಯವಾದೀತೇ ಎಂಬುದು ಮೊದಲ ಪ್ರಶ್ನೆ. ಹೀಗೆ ನಿವೃತ್ತರಾಗುವ ಯೋಧರಿಗೆ ಪಿಂಚಣಿಯಿಲ್ಲ. ಪೂರ್ಣಾವಧಿ ಯೋಧರಿಗೆ ಸಿಗುವ ಭೂಮಿ, ಶಿಕ್ಷಣ ಮೀಸಲಾತಿ, ಆರೋಗ್ಯ ರಿಯಾಯಿತಿಗಳೂ ಸಿಗಲ್ಲ. ಈ ನಾಲ್ಕು ವರ್ಷಗಳಲ್ಲಿ ಅವರ ಶಿಕ್ಷಣವೂ ಮೊಟಕುಗೊಳ್ಳುತ್ತದೆ. 12ನೇ ತರಗತಿಯ ಸರ್ಟಿಫಿಕೇಟನ್ನು ಮತ್ತು 11 ಲಕ್ಷವನ್ನು ಹಿಡಿದುಕೊಂಡು ಅವರು ತನ್ನೂರಿಗೆ ಮರಳುತ್ತಾರೆ. ಆ ಬಳಿಕ ಅವರು ತಮ್ಮ ಶಿಕ್ಷಣವನ್ನು ಮುಂದುವರಿಸಬೇಕಾಗುತ್ತದೆ. ವೃತ್ತಿಗಾಗಿ ಹುಡುಕಾಟ ನಡೆಸಬೇಕಾಗುತ್ತದೆ. ಅಂದಹಾಗೆ, ದೇಶದಲ್ಲಿ ಇವತ್ತು ನಿರುದ್ಯೋಗದ ಸಮಸ್ಯೆ ಉಚ್ಛ್ರಾಯ ಸ್ಥಿತಿಯಲ್ಲಿದೆ. ಕೊರೋನಾ ನೆಪದಲ್ಲಿ ಕಳೆದ ಎರಡು ವರ್ಷಗಳಲ್ಲಿ ಸೇನಾ ಭರ್ತಿ ನಡೆದೂ ಇಲ್ಲ. ಅಲ್ಲದೇ,

ಭಾರತೀಯ ಸೇನೆ ಸದ್ಯ ಒಂದು ಲಕ್ಷ ಯೋಧರ ಕೊರತೆಯನ್ನು ಎದುರಿಸುತ್ತಲೂ ಇದೆ. ಇಂಥ ಸ್ಥಿತಿಯಲ್ಲಿ ಪೂರ್ಣಾವಧಿ ಯೋಧರ ಬದಲು ನಾಲ್ಕು ವರ್ಷಗಳ ಗುತ್ತಿಗೆಯಾಧಾರಿತ ಯೋಧರ ಆಯ್ಕೆಯನ್ನು ದಿಢೀರ್ ಘೋಷಿಸಿದರೆ ಏನಾದೀತು? ಉತ್ತರ ಭಾರತದಲ್ಲಿ ಸೇನಾ ಆಯ್ಕೆಗೆ ತರಬೇತಿ ನೀಡಲೆಂದೇ ಅನೇಕ ಕೋಚಿಂಗ್ ಸೆಂಟರ್‌ಗಳಿವೆ. ಇಲ್ಲಿ ವರ್ಷಗಳಿಂದ ಯುವಕರು ದೈಹಿಕ ಕಸರತ್ತು ನಡೆಸುತ್ತಲೂ ಇದ್ದಾರೆ. ಜೀವನ ಭದ್ರತೆಯ ಜೊತೆಗೇ ಜೀವಿತ ಕಾಲದ ವರೆಗೆ ಯೋಧರೆಂಬ ಗೌರವ ಲಭಿಸುವ ನಿರೀಕ್ಷೆಯೇ ಅವರ ಸೇನಾ ಸೇರ್ಪಡೆಗೆ ಕಾರಣ. ಅಂದಹಾಗೆ,

ಅಗ್ನಿವೀರ್ ವಿಚಲಿತಗೊಳಿಸಿದ್ದು ಇಂಥ ಯುವ ಸಮೂಹವನ್ನು. ಅವರೆಲ್ಲರ ನಿರೀಕ್ಷೆಗಳನ್ನು ಅಗ್ನಿಪಥ್ ಯೋಜನೆ ಮಣ್ಣುಪಾಲು ಮಾಡಿದೆ. ದೇಶಸೇವೆಯೆಂಬ ಹೊಣೆಗಾರಿಕೆಯನ್ನು ಗುತ್ತಿಗೆಯಾಧಾರಿತ ವೃತ್ತಿಮಟ್ಟಕ್ಕೆ ಇಳಿಸಿರುವುದಕ್ಕೆ ಅವರಲ್ಲಿ ಆಕ್ರೋಶ ಇದೆ. 2013ರಲ್ಲಿ ಒಂದೇ ಶ್ರೇಣಿ ಒಂದೇ ಪಿಂಚಣಿಯನ್ನು ಬೆಂಬಲಿಸಿದ ಇದೇ ಮೋದಿಯವರು ಇವತ್ತು ಯೋಧರಿಗೆ ಪಿಂಚಣಿ ಕೊಡುವುದು ರಕ್ಷಣಾ ಇಲಾಖೆಗೆ ಹೊರೆಯಾಗುತ್ತದೆ ಎಂದು ಹೇಳುತ್ತಿರುವುದು ಅವರಲ್ಲಿ ಅಸಮಾಧಾನ ಮೂಡಿಸಿದೆ. ಈಗಿನ ಬಜೆಟ್‌ನಲ್ಲಿ ಕೇವಲ ಯೋಧರ ಪಿಂಚಣಿಗಳಿಗೆ 1,19,696 ಕೋಟಿ ರೂಪಾಯಿಯನ್ನು ಮೀಸಲಿರಿಸಲಾಗಿದ್ದರೆ, 1,63,453 ಕೋಟಿ ರೂಪಾಯಿಯನ್ನು ಯೋಧರ ವೇತ ನಕ್ಕಾಗಿ ಮೀಸಲಿರಿಸಲಾಗಿದೆ. ಇದು ಭಾರೀ ಹೊರೆ ಎಂದು ಸರ್ಕಾರ ವಾದಿಸುತ್ತಿದೆ. ಒಟ್ಟು ರಕ್ಷಣಾ ಬಜೆಟ್‌ನ ಪೈಕಿ 54%ದಷ್ಟು ಹಣವೂ ಕೇವಲ ಪಿಂಚಣಿ ಮತ್ತು ವೇತನಕ್ಕಾಗಿ ಖರ್ಚಾಗುತ್ತಿದೆ ಎಂಬ ಅಂಕಿ-ಅಂಶವನ್ನು ಸರ್ಕಾರ ಮುಂದಿಡುತ್ತಿದೆ. ಈ ಖರ್ಚನ್ನು ತಗ್ಗಿಸುವುದಕ್ಕಾಗಿಯೇ ಯೋಧರನ್ನು ಗುತ್ತಿಗೆಯಾಧಾರಿತ ಕಾರ್ಮಿಕರಂತೆ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂಬುದು ಸರ್ಕಾರದ ಪರೋಕ್ಷ ಸಮರ್ಥನೆ. ಆದರೆ,

ದೇಶಸೇವೆ ಎಂಬುದು ಗುತ್ತಿಗೆ ಆಧಾರಿತ ವೃತ್ತಿಯಲ್ಲ. ಅದೊಂದು ಗೌರವ, ಹೆಮ್ಮೆ. ಬಿಜೆಪಿ ಈ ಯೋಧರನ್ನೇ ತೋರಿಸಿ ಮತ ಯಾಚಿಸಿದ ಪಕ್ಷ. ದೇಶಪ್ರೇಮ, ದೇಶಭಕ್ತಿ ಎಂಬುದು ಬಿಜೆಪಿಯ ಅನುದಿನದ ಸ್ಲೋಗನ್. ಇಂಥ ಪಕ್ಷವೊಂದು ಯೋಧರ ಪಿಂಚಣಿಯ ನ್ನು ಹೊರೆ ಎಂದು ಪರಿಗಣಿಸುವುದು ಮತ್ತು ಅವರ ಸೇವೆಯನ್ನು ವೃತ್ತಿಯೆಂದು ತೃಣೀಕರಿಸುವುದು ಅಪ್ಪಟ ದೇಶದ್ರೋಹದ ಕೃತ್ಯ. ಶಾಸಕರು, ಸಂಸದರು ಜೀವನಪೂರ್ತಿ ಪಡೆಯುವ ಪಿಂಚಣಿಯನ್ನು ಹೊರೆ ಎಂದು ಪರಿಗಣಿಸದ ಮತ್ತು ಅದಕ್ಕೆ ಯಾವ ವಿರೋಧವ ನ್ನೂ ವ್ಯಕ್ತಪಡಿಸದ ಬಿಜೆಪಿ, ಯೋಧರ ಪಿಂಚಣಿಯನ್ನು ಮಾತ್ರ ಹೊರೆ ಎಂದು ಪರಿಗಣಿಸಿರುವುದು ಅದರ ಯೋಧ ದ್ರೋಹಕ್ಕೆ ಅತ್ಯುತ್ತಮ ಉದಾಹರಣೆ.

ಯೋಧರು ಎಂದೂ ಈ ದೇಶಕ್ಕೆ ಹೊರೆಯಲ್ಲ, ಅವರು ಈ ದೇಶದ ಆಸ್ತಿ. ಕೈಯಲ್ಲಿ 11 ಲಕ್ಷ ರೂಪಾಯಿಯನ್ನು ಕೊಟ್ಟು ನಾಲ್ಕು ವರ್ಷಗಳ ಬಳಿಕ ಮನೆಗೆ ಅಟ್ಟುವುದು ಸಣ್ಣ ಸಂಗತಿಯಲ್ಲ. ಇಂಥ ಬೆಳವಣಿಗೆ ಅವರನ್ನು ವಿಚಲಿತಗೊಳಿಸುವ ಸಾಧ್ಯತೆಯಿದೆ. ಬಳಿಕ ಉದ್ಯೋಗದ ಸಮಸ್ಯೆಯೂ ಅವರನ್ನು ಕಾಡಲಿದೆ. ಇಂಥ ವಿಚಲಿತ ಮತ್ತು ಆಕ್ರೋಶಿತ ನಿರುದ್ಯೋಗಿ ಯುವ ಸಮೂಹವನ್ನು ರಾಜಕೀಯ ಮತ್ತು ಸಮಾಜದ್ರೋಹಿ ಶಕ್ತಿಗಳು ಮುಂದೆ ದುರ್ಬಳಕೆ ಮಾಡಿಕೊಳ್ಳಬಹುದು. ರುವಾಂಡ ಮತ್ತು ಯುಗೋಸ್ಲಾವಿಯಾದಲ್ಲಿ ಅಲ್ಪಸಂಖ್ಯಾತ ಸಮುದಾಯದ ಜನಾಂಗ ಹತ್ಯೆಯಲ್ಲಿ ಮಿಲಿಟರಿ ಪಡೆಯ ದೊಡ್ಡ ಪಾತ್ರವಿರುವುದು ಎಲ್ಲರಿಗೂ ಗೊತ್ತು. ನಾಲ್ಕು ವರ್ಷಗಳ ವೃತ್ತಿಯ ಬಳಿಕ ಸೇನೆಯಿಂದ ಮನೆಗೆ ಮರಳುವವರಲ್ಲಿ ಇಂಥ ಜನಾಂಗ ದ್ವೇಷವನ್ನು ತುಂಬಿ ಸಮಾಜಘಾತುಕರು ದುರು ಪಯೋಗಪಡಿಸುವುದಕ್ಕೂ ಸಾಧ್ಯವಿದೆ. ಆದ್ದರಿಂದ, ಅಗ್ನಿಪಥ್ ಯೋಜನೆ ಮರುಪರಿಶೀಲನೆ ಬಹಳ ಅಗತ್ಯ. ದೇಶ ಕಾಯುವ ಯೋಧರನ್ನು ದಯವಿಟ್ಟು ಅವಮಾನಿಸಬೇಡಿ.