Monday 31 December 2018

ಬಿಜೆಪಿ ಮತ್ತು ಮಾಧ್ಯಮ ಹೆಣೆದ ಸಂಚೇ ಲೋಕಪಾಲ?




ನಾ ಖಾವೂಂಗಾ ನಾ ಖಾನೆದೂಂಗ ಎಂಬ ಪದೋಕ್ತಿಯನ್ನು ಉರುಳಿಸಿ ಅಧಿಕಾರಕ್ಕೇರಿದ ನರೇಂದ್ರ ಮೋದಿಯವರು ಆ ಬಳಿಕ ಆ ಮಾತನ್ನು ಎಷ್ಟರ ವರೆಗೆ ನಿರ್ಲಕ್ಷಿಸಿದರು ಅನ್ನುವುದಕ್ಕೆ ಆರ್.ಟಿ.ಐ. (ಮಾಹಿತಿ ಹಕ್ಕು ಕಾಯಿದೆ) ಉತ್ತರ ನೀಡಿದೆ. ಈ ಉತ್ತರ ಆಘಾತಕಾರಿಯಾದುದು. ಭ್ರಷ್ಟಾಚಾರವನ್ನು ಖಂಡಿಸಿ ಮತ್ತು ಅದಕ್ಕಾಗಿ ಮನ್‍ಮೋಹನ್ ಸಿಂಗ್‍ರನ್ನು ತಮಾಷೆ ಮಾಡಿ ಅಧಿಕಾರಕ್ಕೇರಿದ ಪಕ್ಷವೊಂದು ಆ ಬಳಿಕ ಆ ಇಡೀ ಪ್ರಕ್ರಿಯೆಯನ್ನು ಹೇಗೆ ಮರೆತಿದೆ ಎಂಬುದನ್ನು ಆರ್‍ ಟಿ ಐ ಮೂಲಕ ಲಭ್ಯವಾದ ಮಾಹಿತಿಗಳು ದೇಶದ ಮುಂದಿಟ್ಟಿದೆ.
2013-14ರಲ್ಲಿ ಈ ದೇಶದಲ್ಲಿ ಅಭೂತಪೂರ್ವವಾದ ಬೆಳವಣಿಗೆಗಳು ನಡೆದುವು. ಅದರಲ್ಲಿ ಒಂದು- ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಹೋರಾಟವಾದರೆ, ಇನ್ನೊಂದು- ಬಾಬಾ ರಾಮ್‍ದೇವ್ ಅವರ ಕಪ್ಪು ಹಣ ವಾಪಸಾತಿ ಪ್ರತಿಭಟನೆ. ಈ ಸಂದರ್ಭದಲ್ಲಿ ಮಸೀಹನಂತೆ ಫೋಸು ಕೊಟ್ಟದ್ದು ಬಿಜೆಪಿ. ಅದು ಅಣ್ಣಾ ಹಜಾರೆಯನ್ನು ಬೆಂಬಲಿಸಿತು. ಲೋಕ್‍ಪಾಲ್ ಅನ್ನು ಜಾರಿಗೊಳಿಸಬೇಕೆಂಬ ಹಜಾರೆಯವರ ಬೇಡಿಕೆಗೆ ಬೆಂಬಲ ಸೂಚಿಸಿತು. ಕಪ್ಪು ಹಣ ವಾಪಸಾತಿಯ ಬಗೆಗಂತೂ ಅದು ಕೊಟ್ಟ ಭರವಸೆ ಮತ್ತು ನೀಡಿದ ಮಾಹಿತಿಗಳು ರೋಮಾಂಚನಕಾರಿಯಾದುದು. 2009ರ ಲೋಕಸಭಾ ಚುನಾವಣೆಯಲ್ಲಿ ಅಡ್ವಾಣಿಯವರು ಕಪ್ಪು ಹಣದ ಬಗ್ಗೆ ಏನೆಲ್ಲ ಮಾಹಿತಿಗಳನ್ನು ದೇಶದ ಮುಂದೆ ಇಟ್ಟಿದ್ದರೋ ಅದನ್ನು ಎಲ್ಲ ರೀತಿಯಲ್ಲೂ ಮೀರಿಸುವ ಮಾಹಿತಿಯನ್ನು ನರೇಂದ್ರ ಮೋದಿಯವರು ದೇಶದ ಮುಂದಿಟ್ಟರು. ಅಧಿಕಾರಕ್ಕೆ ಬಂದ 100 ದಿನದೊಳಗೆ ಪ್ರತಿಯೊಬ್ಬ ಭಾರತೀಯನ ಬ್ಯಾಂಕ್ ಖಾತೆಗೆ 15 ಲಕ್ಷ ರೂಪಾಯಿ ತುಂಬುವುದಾಗಿ ಅವರು ಭರವಸೆ ನೀಡಿದರು. ಅಡ್ವಾಣಿಯವರಿಗೆ ಇಷ್ಟು ಧೈರ್ಯವಿರಲಿಲ್ಲ. ಅವರು ಕಪ್ಪು ಹಣದಿಂದ ಒಂದೊಂದು ಗ್ರಾಮಕ್ಕೆ ಎಷ್ಟೆಷ್ಟು ಅನುದಾನವನ್ನು ಒದಗಿಸಬಹುದು ಎಂದಷ್ಟೇ ಹೇಳಿದ್ದರು. ಮೋದಿ ನೇತೃತ್ವದ ಬಿಜೆಪಿ ಬಾಬಾ ರಾಮ್‍ದೇವ್‍ರನ್ನೂ ಬೆಂಬಲಿಸಿತು. ಹೀಗೆ ಲೋಕಪಾಲವನ್ನು ಜಾರಿಗೆ ತರುವ ಮತ್ತು ಪ್ರತಿ ಭಾರತೀಯರ ಖಾತೆಗೆ 15 ಲಕ್ಷ ರೂಪಾಯಿಯನ್ನು ತುಂಬುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿಯು ಸದ್ಯ ಅವೆರಡನ್ನೂ ಹೇಗೆ ನಿರ್ಲಕ್ಷಿಸಿದೆ ಎಂದರೆ, ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ರಚಿಸಲಾದ ಸಮಿತಿಯು ಈವರೆಗೆ ಒಂದೇ ಒಂದು ಸಭೆಯನ್ನೂ ನಡೆಸಿಲ್ಲ. ತಮಾಷೆ ಏನೆಂದರೆ, ಈ ಸಮಿತಿಯ ರಚನೆಯಾದದ್ದೇ  2018 ಮಾರ್ಚ್‍ನಲ್ಲಿ. ಇದಕ್ಕೂ ಒಂದು ಕಾರಣ ಇದೆ. ಈ ಬಗ್ಗೆ ಸುಪ್ರೀಮ್ ಕೋರ್ಟಿಗೆ ವ್ಯಕ್ತಿಯೋರ್ವರು ತಕರಾರು ಅರ್ಜಿ ಸಲ್ಲಿಸಿದುದನ್ನು ಪರಿಗಣಿಸಿ ಇಂಥದ್ದೊಂದು ಸಮಿತಿಯನ್ನು ತರಾತುರಿಯಿಂದ ರಚಿಸಲಾಗಿತ್ತು. ಇದರರ್ಥ ಏನು? ಭ್ರಷ್ಟಾಚಾರವನ್ನು ಚುನಾವಣಾ ಅಜೆಂಡಾ ಆಗಿಸಿಕೊಂಡೇ ಅಧಿಕಾರ ಪಡೆದ ಪಕ್ಷವೊಂದು ಆ ಬಳಿಕ ಆ ಇಡೀ ಪ್ರಕ್ರಿಯೆಯನ್ನೇ ನಿರ್ಲಕ್ಷಿಸಿತು ಎಂದಲ್ಲವೇ? ಯಾಕೆ ಈ ದೇಶದ ಮಾಧ್ಯಮಗಳು ಈ ಬಗ್ಗೆ ಒತ್ತಡವನ್ನು ಹೇರಲಿಲ್ಲ? ಅಣ್ಣಾ ಹಜಾರೆಯವರು ಯಾಕೆ ಪರಿಣಾಮಕಾರಿ ಚಳವಳಿಯನ್ನು ನಡೆಸಲಿಲ್ಲ ಮತ್ತು ಮಾಧ್ಯಮಗಳೇಕೆ ಅಣ್ಣಾ ಅವರ ಆ ಬಳಿಕದ ಸತ್ಯಾಗ್ರಹಕ್ಕೆ ಬೆಂಗಾವಲಾಗಿ ನಿಲ್ಲಲಿಲ್ಲ? ಹಾಗಿದ್ದರೆ, 2013-14ರ ಭ್ರಷ್ಟಾಚಾರ ವಿರೋಧಿ ಹೋರಾಟವೆಂಬುದು ಒಂದು ಸಂಚಾಗಿತ್ತೇ? ಮನಮೋಹನ್ ಸಿಂಗ್ ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ ಬಿಜೆಪಿ-ಹಜಾರೆ-ರಾಮ್‍ದೇವ್ ಮತ್ತು ಮಾಧ್ಯಮದ ಒಂದು ವರ್ಗ ಈ ಸಂಚಿನ ಹಿಂದಿತ್ತೇ? ಈ ಬಗ್ಗೆ ತನಿಖೆ ನಡೆಸುವಂತೆ ನ್ಯಾಯಾಲಯಕ್ಕೆ ಯಾಕೆ ಮನವಿ ಸಲ್ಲಿಸಬಾರದು?
2ಜಿ ಸ್ಪೆಕ್ಟ್ರಂ ತರಂಗಾಂತರ ಹಂಚಿಕೆಯನ್ನೇ ಮುಖ್ಯ ಕೇಂದ್ರವಾಗಿಟ್ಟುಕೊಂಡು ಮನ್‍ಮೋಹನ್ ಸಿಂಗ್ ಸರಕಾರವನ್ನು ತರಾಟೆಗೆತ್ತಿಕೊಂಡಿದ್ದ ಬಿಜೆಪಿ, ಇವತ್ತು ಆ ಪ್ರಕರಣವನ್ನು ಹೇಗೆ ನಿಭಾಯಿಸಿದೆ ಅನ್ನುವುದೂ ದೇಶಕ್ಕೆ ಗೊತ್ತು. ಆರೋಪಿಗಳೆಲ್ಲ ಒಬ್ಬೊಬ್ಬರಾಗಿ ಬಿಡುಗಡೆಗೊಳ್ಳುತ್ತಿದ್ದಾರೆ. ಕಾಂಗ್ರೆಸ್‍ನ ಮೇಲೆ ಮತದಾರರು 2014ರ ಚುನಾವಣೆಯಲ್ಲಿ ಮುನಿಸಿಕೊಳ್ಳುವುದಕ್ಕೆ 1 ಲಕ್ಷ ಕೋಟಿ ರೂಪಾಯಿ ಹಗರಣವಾಗಿ ಬಿಂಬಿತವಾದ 2ಜಿ ಸ್ಪೆಕ್ಟ್ರಂಗೆ ಬಹುಮುಖ್ಯ ಪಾತ್ರ ಇದೆ. ಆದರೆ, ಇವತ್ತು ಅದೊಂದು ಹಗರಣವೇ ಅಲ್ಲವೇನೋ ಅನ್ನುವ ಭಾವನೆ ಮೂಡುವಂತೆ ಬೆಳವಣಿಗೆಗಳು ನಡೆಯುತ್ತಿವೆ. ಹಾಗಿದ್ದರೆ, 2ಜಿ ಸ್ಪೆಕ್ಟ್ರಂನ ಬಗ್ಗೆ 2013-14ರಲ್ಲಿ ಹೇಳಲಾಗಿರುವುದೆಲ್ಲ ಸುಳ್ಳೇ? ಸುದ್ದಿ ಮನೆಯ ಡೆಸ್ಕ್ ರೂಂನಲ್ಲಿ ಕುಳಿತು ಕಟ್ಟಿದ ಕತೆಗಳೇ ಅವೆಲ್ಲ? ಬಿಜೆಪಿ ಜೊತೆ ಮಾಧ್ಯಮದ ಒಂದು ವರ್ಗವೂ ಸೇರಿಕೊಂಡು ಇಂಥದ್ದೊಂದು ಸುಳ್ಳು ಕತೆಯನ್ನು ಹೆಣೆದವೇ? ಯಾಕೆ ಇವತ್ತು ಮಾಧ್ಯಮಗಳು ಮಾತಾಡುತ್ತಿಲ್ಲ? ಟಿವಿಯಲ್ಲಿ ಚರ್ಚೆ, ವಿಶ್ಲೇಷಣೆ, ಎಕ್ಸ್‍ಕ್ಲೂಸಿವ್ ನ್ಯೂಸ್‍ಗಳು ಪ್ರಸಾರವಾಗುತ್ತಿಲ್ಲ? ಹಾಗಿದ್ದರೆ 2ಜಿ ಸ್ಪೆಕ್ಟ್ರಂ ಅನ್ನುವುದೂ ಚುನಾವಣಾ ಗಿಮಿಕ್ಕೇ? ಲೋಕಪಾಲ ಅನ್ನುವುದೂ ಚುನಾವಣಾ ತಂತ್ರವೇ? ಕಪ್ಪು ಹಣ ಅನ್ನುವುದೂ ಜುಮ್ಲಾವೇ?
ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿಕೊಂಡ ಬಳಿಕ ನರೇಂದ್ರ ಮೋದಿಯವರು ಈ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ವಿಧಾನಸಭಾ ಚುನಾವಣೆಗಳ ಸಮಯದಲ್ಲಂತೂ ಸರಣಿ ಭಾಷಣಗಳನ್ನು ನೀಡಿದ್ದಾರೆ. ಈ ಎಲ್ಲ ಸಂದರ್ಭಗಳಲ್ಲಿ ಭ್ರಷ್ಟಾಚಾರವನ್ನು ಒಂದು ಇಶ್ಯೂ ಆಗಿ ಅವರು ಎತ್ತಿಕೊಂಡದ್ದು ಎಲ್ಲರಿಗೂ ಗೊತ್ತು. ಸಿದ್ದರಾಮಯ್ಯ ಸರಕಾರವನ್ನು ಅವರು 10 ಪರ್ಸೆಂಟ್ ಸರಕಾರ ಎಂದು ಮೂದಲಿಸಿದ್ದರು. ವ್ಯಂಗ್ಯ ಏನೆಂದರೆ, ಆಗಲೂ ಕೇಂದ್ರದಲ್ಲಿ ಲೋಕಪಾಲ ಖಾಲಿ ಬಿದ್ದಿತ್ತು. ಕನಿಷ್ಠ ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿಕ್ಕಾಗಿ ಒಂದು ಸಮಿತಿಯನ್ನೂ ಆ ಸಮಯದಲ್ಲಿ ಅವರು ರಚಿಸಿರಲಿಲ್ಲ. ಆದರೂ ಅವರು ಭ್ರಷ್ಟಾಚಾರ ನಿರ್ಮೂಲನೆಯ ಕುರಿತಂತೆ ಮಾತಾಡುತ್ತಿದ್ದಾರೆ. ಮಾಧ್ಯಮಗಳು ಅದನ್ನು ವರದಿ ಮಾಡುತ್ತಲೂ ಇವೆ. ಒಂದುವೇಳೆ, ಭ್ರಷ್ಟಾಚಾರದ ನಿರ್ಮೂಲನೆಗೆ ಲೋಕಪಾಲದ ಅಗತ್ಯ ಇಲ್ಲವೆಂದಾದರೆ, ಅದು ಮನಮೋಹನ್ ಸಿಂಗ್‍ರ ಕಾಲದಲ್ಲೂ ಅನಗತ್ಯ ಆಗಬೇಕಿತ್ತಲ್ಲವೇ? ಲೋಕಪಾಲ ಇಲ್ಲದೆಯೇ ಭ್ರಷ್ಟಾಚಾರವನ್ನು ನಿಗ್ರಹಿಸಬಹುದು ಎಂದು ಬಿಜೆಪಿ ಹೇಳಬೇಕಿತ್ತಲ್ಲವೇ? ಧರಣಿ ನಡೆಸಬೇಡಿ ಎಂದು ಅಣ್ಣಾ ಹಜಾರೆಯವರಲ್ಲೂ ಅದು ಕೋರಬೇಕಿತ್ತಲ್ಲವೇ? ಆದರೆ ಆ ಸಂದರ್ಭದಲ್ಲಿ ಲೋಕಪಾಲವೇ ಪರಿಹಾರ ಎಂಬ ರೀತಿಯಲ್ಲಿ ಮಾತಾಡಿದ ಬಿಜೆಪಿಯು ಈಗ ಆ ಬಗ್ಗೆ ಗಮನವನ್ನೇ ಹರಿಸಿಲ್ಲ ಅಂದರೆ ಏನರ್ಥ? ಅಧಿಕಾರಕ್ಕೇರಿದ ನಾಲ್ಕೂವರೆ ವರ್ಷಗಳ ಬಳಿಕವೂ ಲೋಕಪಾಲಕ್ಕೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಸಮಿತಿಯ ಸಭೆಯೇ ನಡೆದಿಲ್ಲವೆಂದರೆ ಏನರ್ಥ?
2014ರ ಲೋಕಸಭಾ ಚುನಾವಣೆಯಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿದ್ದ ಲೋಕಪಾಲ ಮಸೂದೆ ಮತ್ತು ಕಪ್ಪು ಹಣ- ಈ ಎರಡರಲ್ಲೂ ಬಿಜೆಪಿ ಇವತ್ತು ಗಾಢ ವೈಫಲ್ಯವನ್ನು ಕಂಡಿದೆ. ಈ ದೇಶದ ಮತದಾರರು ಬಿಜೆಪಿಯನ್ನು ಬೆಂಬಲಿಸುವುದಕ್ಕೆ ಮುಖ್ಯ ಕಾರಣಗಳಲ್ಲಿ ಈ ಎರಡಕ್ಕೂ ಪಾತ್ರ ಇದೆ. ಆದರೆ, ಮೋದಿಯವರ ಅಧಿಕಾರದ ಅವಧಿ ಕೊನೆಗೊಳ್ಳುತ್ತಾ ಬರುತ್ತಿರುವ ಈ ಹೊತ್ತಿನಲ್ಲಿ ಈ ಎರಡನ್ನೂ ಪರಿಶೀಲನೆಗೆ ಒಡ್ಡಿದರೆ, ನಿರಾಶೆಯ ಜೊತೆಗೇ ಪ್ರಶ್ನೆಗಳೂ ಕಾಡುತ್ತವೆ. ಭ್ರಷ್ಟಾಚಾರ ನಿರ್ಮೂಲನೆಗೂ ಬಿಜೆಪಿಗೂ ಸಂಬಂಧ ಏನು? ಬಿಜೆಪಿ ಅಧಿಕಾರದಲ್ಲಿರುವ ಯಾವೆಲ್ಲ ರಾಜ್ಯಗಳು ಭ್ರಷ್ಟಾಚಾರ ಮುಕ್ತವಾಗಿವೆ? ಬಿಜೆಪಿಯ ಯಾವೆಲ್ಲ ನಾಯಕರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ? ಯಾರಿಗೆಲ್ಲ ಶಿಕ್ಷೆಯಾಗಿದೆ? ವ್ಯಾಪಂ ಹಗರಣ ಎಷ್ಟು ಕೋಟಿಯದು? ಅದರಲ್ಲಿ ಭಾಗಿಯಾದ ಬಿಜೆಪಿಯ ನಾಯಕರುಗಳೆಲ್ಲ ಯಾರ್ಯಾರು? ಶವಪೆಟ್ಟಿಗೆ ಹಗರಣ ಯಾರ ಅಧಿಕಾರಾವಧಿಯಲ್ಲಿ ನಡೆದಿದೆ? ಪ್ರಶ್ನೆಗಾಗಿ ಲಂಚ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ? ನೋಟಿನ ಕಂತೆಯೊಂದಿಗೆ ಕಾಣಿಸಿಕೊಂಡ ಬಂಗಾರು ಲಕ್ಷ್ಮಣ್ ಯಾವ ಪಕ್ಷದವರು? ಈ ಪಟ್ಟಿ ಇನ್ನೂ ಉದ್ದ ಇದೆ.
ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್‍ನ ಮೇಲೆ ಏನೆಲ್ಲ ಆರೋಪಗಳಿವೆಯೋ ಆ ಎಲ್ಲ ಆರೋಪಗಳೂ ಇವತ್ತು ಬಿಜೆಪಿಯ ಮೇಲೂ ಇದೆ. ಬಹುದೀರ್ಘಕಾಲ ಆಳಿದ ಪಕ್ಷವೆಂಬ ನೆಲೆಯಲ್ಲಿ ಕಾಂಗ್ರೆಸ್‍ನಿಂದಾದ ಹಗರಣಗಳ ಪಟ್ಟಿ ಉದ್ದ ಇದೆ ಮತ್ತು ಬಿಜೆಪಿಯ ಆಡಳಿತಾವಧಿ ಹೃಸ್ವವಾಗಿದ್ದರೂ ಹಗರಣಗಳ ವ್ಯಾಪ್ತಿಯಲ್ಲಿ ಆ ಹೃಸ್ವತನವೇನೂ ಕಾಣಿಸುತ್ತಿಲ್ಲ. ಸಣ್ಣ ಅವಧಿಯಲ್ಲಿ ಹಗರಣಗಳ ಮಟ್ಟಿಗೆ ದೊಡ್ಡದೊಂದು ಸಾಧನೆಯನ್ನು ಮಾಡಿದ ಕೀರ್ತಿ ಬಿಜೆಪಿಗಿದೆ. ಹೀಗಿರುವಾಗ, ಲೋಕಪಾಲರನ್ನು ಅದು ನೇಮಿಸುತ್ತದೆ ಮತ್ತು ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ತನ್ನ ಬದ್ಧತೆಯನ್ನು ವ್ಯಕ್ತಪಡಿಸುತ್ತದೆ ಎಂದು ನಾವು ನಿರೀಕ್ಷಿಸುವುದು ಹೇಗೆ? ನಿಜವಾಗಿ,
ಬಿಜೆಪಿ ಏನು ಅನ್ನುವುದಕ್ಕೆ ಲೋಕಪಾಲವೇ ಅತ್ಯುತ್ತಮ ಉದಾಹರಣೆ.

Friday 21 December 2018

ಕಿಚ್ಚುಗತ್ತಿ ಮಾರಮ್ಮ, ಗಂಗೆ ಮತ್ತು ಗೋಪಾಲದಾಸ



ಚಾಮರಾಜನಗರದ ಕಿಚ್ಚುಗತ್ತಿ ಮಾರಮ್ಮ ದೇವಾಲಯಕ್ಕೂ ಉತ್ತರ ಭಾರತದ ಗಂಗಾ ನದಿಗೂ ನೇರವಾಗಿಯೋ ಪರೋಕ್ಷವಾಗಿಯೋ ಆಧ್ಯಾತ್ಮಿಕವಾದ ಸಂಬಂಧ ಇದೆ. ವಿಷಾದ ಏನೆಂದರೆ, ಮಾರಮ್ಮ ಗುಡಿಯಲ್ಲಿ ಭಕ್ತರು ಪ್ರಸಾದ ಸ್ವೀಕರಿಸಿ ಸಾವಿಗೀಡಾಗುವಾಗ ಅತ್ತ ಗಂಗೆಯ ತಟದಲ್ಲಿ ಸತ್ಯಾಗ್ರಹ ನಿರತ ಸಾಧುಗಳು ನಾಪತ್ತೆಯಾಗುತ್ತಿದ್ದಾರೆ.
ಗಂಗೆಗೂ ಸಾಧುಗಳಿಗೂ ಅವಿನಾಭಾವ ನಂಟು ಇದೆ. ಗಂಗೆ ಪವಿತ್ರಳು ಅನ್ನುವ ನಂಬಿಕೆ ಹಿಂದೂಗಳದ್ದು. ಆದ್ದರಿಂದಲೇ, ಗಂಗೆಯ ಪಾವಿತ್ರ್ಯಕ್ಕೆ ಧಕ್ಕೆ ತರಬಹುದಾದ ಯೋಜನೆಗಳ ವಿರುದ್ಧ ಅವರು ಪ್ರತಿಭಟಿಸುತ್ತಲೇ ಬಂದಿದ್ದಾರೆ. ಪರಿಸರ ತಜ್ಞನಾಗಿ ಗುರುತಿಸಿಕೊಂಡಿದ್ದ ಮತ್ತು ಆ ಬಳಿಕ ಸನ್ಯಾಸಿಯಾಗಿ ಪರಿವರ್ತಿತರಾದ ಜಿ.ಡಿ. ಅಗರ್ವಾಲ್ ಎಂಬವರು ಉಪವಾಸ ಸತ್ಯಾಗ್ರಹ ನಿರತರಾಗಿರುತ್ತಾ ಕಳೆದ ವರ್ಷದ ಅಕ್ಟೋಬರ್ 11 ರಂದು ಸಾವಿಗೀಡಾದರು. ಗಂಗಾ ನದಿಯ ವಿವಿಧ ಉಪನದಿಗಳ ಮೇಲೆ ಸರಕಾರಿ ಯೋಜನೆಗಳು ಜಾರಿಯಾಗುವುದನ್ನು ಮತ್ತು ಮರಳು ಹಾಗೂ ಗಣಿಗಾರಿಕೆಯನ್ನು ವಿರೋಧಿಸಿ ಅವರು ಸಾವಿಗಿಂತ 5 ತಿಂಗಳ ಮೊದಲೇ ಉತ್ತರಾಖಂಡದ ಮತ್ರಿ ಸದನ್ ಆಶ್ರಮದಲ್ಲಿ ಉಪವಾಸ ಸತ್ಯಾಗ್ರಹ ಪ್ರಾರಂಭಿಸಿದ್ದರು. ಗಂಗೆ ಕಲುಷಿತಗೊಂಡಿರುವುದಕ್ಕೆ ಗಂಗೆಯ ಉಪನದಿಗಳಾದ ಅಲಕ್‍ನಂದಾ, ಭಾಗೀರಥಿ, ಮಂದಾಕಿನಿ, ಪಿಂದಾಕ ಇತ್ಯಾದಿಗಳ ಮೇಲೆ ಮರಳುಗಾರಿಕೆ, ಗಣಿಗಾರಿಕೆ ಮತ್ತು ಅಣೆಕಟ್ಟುಗಳ ನಿರ್ಮಾಣದಂಥ ಸರಕಾರಿ ಯೋಜನೆಗಳೇ ಕಾರಣ ಅನ್ನುವುದು ಅಗರ್ವಾಲ್‍ರೂ ಸೇರಿದಂತೆ ಅನೇಕ ಸಾಧುಗಳ ವಾದ. ಪರಿಸರ ತಜ್ಞರೂ ಇವರ ಜೊತೆ ನಿಂತಿದ್ದಾರೆ. ಅಣೆಕಟ್ಟುಗಳನ್ನು ಕಟ್ಟಿ ಹೈಡ್ರೋ ಪವರ್ ಯೋಜನೆಯನ್ನು ಸರಕಾರ ಜಾರಿಗೊಳಿಸುವುದಕ್ಕೆ ಮುಂದಾಗಿರುವುದನ್ನು ಅಪಾಯಕಾರಿ ಎಂದು ಅವರು ಹೇಳುತ್ತಿದ್ದಾರೆ. ಪರಿಸರ ತಜ್ಞರಾಗಿದ್ದ ಅಗರ್ವಾಲ್ ಅವರು ಸಾಧುವಾಗಿ ಪರಿವರ್ತಿತವಾದದ್ದರ ಹಿಂದೆ ಇದರ ಪ್ರಭಾವವೂ ಇದೆ. ಅವರನ್ನು ಉತ್ತರಾಖಂಡ್ ಸರಕಾರ ಸಾಯಲು ಬಿಟ್ಟಿತು. ಇದೀಗ ಗೋಪಾಲ ದಾಸ್ ಎನ್ನುವ ಇನ್ನೋರ್ವ ಸಾಧುವೂ ನಾಪತ್ತೆಯಾಗಿದ್ದಾರೆ. ಗಂಗೆಯ ನದೀ ಪಾತ್ರದಲ್ಲಿ ಹೈಡ್ರೋಪವರ್ ಯೋಜನೆಯನ್ನು ಸರಕಾರ ಕೈಗೆತ್ತಿಕೊಂಡಿರುವುದನ್ನು ಪ್ರತಿಭಟಿಸಿ ಜೂನ್ 24 ರಿಂದ ಹರಿದ್ವಾರದ ಮತ್ರಿ ಸದನ್ ಆಶ್ರಮದಲ್ಲಿ ಅವರು ಉಪವಾಸ ಪ್ರಾರಂಭಿಸಿದ್ದರು. ಡಿಸೆಂಬರ್ 4 ರಂದು ಅವರನ್ನು ಪೋಲೀಸರು ಬಲವಂತದಿಂದ ಎತ್ತಿಕೊಂಡು ಹೋಗಿ ಡೆಹ್ರಾಡೂನಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದರು. ಡಿ. 6 ರ ಬಳಿಕ ಅವರು ನಾಪತ್ತೆಯಾಗಿದ್ದಾರೆ. ಅವರನ್ನು ಕೊಲ್ಲಲಾಗಿದೆ ಎಂದು ಮತ್ರಿ ಸದನ್ ಆಶ್ರಮದ ಸ್ವಾಮಿ ಶಿವಾನಂದ್ ಹೇಳುತ್ತಾರೆ. ಇದೀಗ ತನ್ನ ಮಗನನ್ನು ಪತ್ತೆ ಹಚ್ಚಿ ಕೊಡಿ ಎಂದು ಗೋಪಾಲ್ ದಾಸ್ ಅವರ ತಾಯಿ ಶಕುಂತಲಾ ದೇವಿ ಉಪವಾಸ ಕೂತಿದ್ದಾರೆ.
ಗಂಗೆ ಮತ್ತು ಮಾರಮ್ಮ ಗುಡಿ ಇವು ಎರಡೂ ಬೇರೆ ಬೇರೆ ರಾಜ್ಯಗಳಲ್ಲಿರುವ ಮತ್ತು ಬೇರೆ ಬೇರೆ ಭಕ್ತರನ್ನು ಹೊಂದಿರುವ ಎರಡು ಶಕ್ತಿ ಕೇಂದ್ರಗಳು. ಎರಡಕ್ಕೂ ಮಹತ್ವ ಲಭಿಸಿರುವುದು ಆಧ್ಯಾತ್ಮಿಕ ಕಾರಣದಿಂದ. ನಿಜವಾಗಿ, ಆಧ್ಯಾತ್ಮಿಕತೆಯಲ್ಲಿ ಎರಡು ಬಗೆಯಿದೆ. ಒಂದು: ಮುಗ್ಧ ಭಕ್ತರು. ಇನ್ನೊಂದು ಆಧ್ಯಾತ್ಮಿಕ ಕೇಂದ್ರವನ್ನು ನಿಯಂತ್ರಿಸುವವರು. ಮಚ್ಚುಗತ್ತಿ ದೇವಾಲಯಕ್ಕೂ ಇದು ಅನ್ವಯಿಸುತ್ತದೆ. ಒಂದು ಕಡೆ ಮುಗ್ಧ ಭಕ್ತರಿದ್ದರೆ, ಇನ್ನೊಂದು ಕಡೆ ಈ ದೇವಾಲಯವನ್ನು ನಿಯಂತ್ರಿಸುವವರ ಮೇಲೆ ಭೂ ಅತಿಕ್ರಮಣ, ಸರಕಾರಿ ಜಮೀನು ಒತ್ತುವರಿ ಇತ್ಯಾದಿ  ಆರೋಪಗಳಿವೆ. ಭಕ್ತರ ಹರಿವು ಹೆಚ್ಚಾದಂತೆಯೇ ಕಾಣಿಕೆಗಳ ಸಂಗ್ರಹವೂ ಅಧಿಕವಾಗುತ್ತದೆ. ಭಕ್ತರನ್ನು ಆಕರ್ಷಿಸುವುದಕ್ಕಾಗಿ ಮೌಡ್ಯಗಳನ್ನು ಪ್ರಚಾರ ಮಾಡಬೇಕಾಗುತ್ತದೆ. ಕಾಣಿಕೆಗಳ ಸಂಗ್ರಹದಲ್ಲಿ ಹೆಚ್ಚಳವಾಗುತ್ತದೆಂದರೆ ಆಡಳಿತಾತ್ಮಕವಾಗಿ ದುರಾಸೆಗಳೂ ಜಾಗೃತಗೊಳ್ಳುತ್ತವೆ. ಭಕ್ತರಿಗೆ ಇದು ಗೊತ್ತಿರುವುದಿಲ್ಲ. ಆದಾಯವನ್ನು ಹೆಚ್ಚುಗೊಳಿಸುವುದಕ್ಕಾಗಿ ಹೊಸ ಹೊಸ ಪವಾಡಗಳನ್ನು ಹುಟ್ಟು ಹಾಕುತ್ತಿರುವುದರ ಬಗ್ಗೆಯೂ ಅರಿವಿರುವುದಿಲ್ಲ. ತಾವು ಕಣ್ಣಾರೆ ಕಾಣದಿದ್ದರೂ ಯಾರೋ ಹೇಳಿದ್ದನ್ನು, ಕೇಳಿದ್ದನ್ನು ಮನಸಾರೆ ನಂಬಿ ಭಾವುಕತೆಯನ್ನು ಅವರು ಬೆಳೆಸಿಕೊಂಡಿರುತ್ತಾರೆ. ಇವರ ಕಿವಿಗೆ ಪವಾಡದ ಸಂಗತಿಯನ್ನು ಯಾರು ತುಂಬಿಸಿರುತ್ತಾರೋ ಅವರಿಗೂ ಪವಾಡದ ಅನುಭವ ಆಗಿರುವುದಿಲ್ಲ. ಗಂಗೆಗೆ ಸಂಬಂಧಿಸಿಯೂ ಇವತ್ತು ಬಹುತೇಕ ಅಸ್ತಿತ್ವದಲ್ಲಿರುವುದು ಇದುವೇ. ಪವಿತ್ರವೆಂದು ನಂಬಿರುವ ಗಂಗೆಯನ್ನು ಅಪವಿತ್ರ ಮಾಡಿರುವುದು ಯಾವುದೋ ಕಂಪೆನಿಗಳು, ಇನ್ನಾರದೋ ಶವಗಳು, ಮಾಲಿನ್ಯಗಳು ಕಾರಣ ಎಂದೇ ಜನರನ್ನು ನಂಬಿಸಿಕೊಂಡು ಬರಲಾಗಿದೆ. ಸರಕಾರ ಅಂಥದ್ದೊಂದು ಜಾಹೀರಾತನ್ನು ಕೊಟ್ಟು ಅಪವಿತ್ರ ಗಂಗೆಯನ್ನು ಶುದ್ಧಗೊಳಿಸುವುದಕ್ಕೆ ಕೋಟ್ಯಾಂತರ ರೂಪಾಯಿಯನ್ನು ಘೋಷಿಸುತ್ತದೆ. ಜನರಿಗೆ ಸರಕಾರದ ಮೇಲೆ ಪ್ರೀತಿಯೂ ಉಕ್ಕುತ್ತದೆ. ಸರಕಾರಗಳ ಗುರಿಯೂ ಇದುವೇ. ಜನರನ್ನು ನಂಬಿಸುವುದು. ಹೀಗೆ ಜನರಿಗೆ ಸರಕಾರದ ಮೇಲೆ ಒಮ್ಮೆ ನಂಬಿಕೆ ಬಂದು ಬಿಟ್ಟರೆ ಸಾಕು ಆ ಬಳಿಕ ಹಿಂದಿನ ಕ್ರಮವನ್ನೇ ಮುಂದುವರಿಸಿಕೊಂಡು ಹೋಗುವುದಕ್ಕೆ ಸರಕಾರಕ್ಕೆ ದಾರಿ ಸುಲಭವಾಗುತ್ತದೆ. ನಿಜವಾಗಿ, ಹರಿದ್ವಾರದ ಮತ್ರಿ ಸದನ್ ಆಶ್ರಮದಲ್ಲಿ ಸತ್ಯಾಗ್ರಹ ನಿರತ ಸನ್ಯಾಸಿಗಳು ಸರಕಾರದ ಈ ಧೋರಣೆಯ ವಿರೋಧಿಗಳು. ಒಂದು ಕಡೆ ಗಂಗಾ ಶುದ್ಧೀಕರಣಕ್ಕೆ ಕೋಟ್ಯಾಂತರ ಹಣವನ್ನು ಘೋಷಿಸುವ ಕೇಂದ್ರ ಮತ್ತು ಉತ್ತರಾ ಖಂಡ ಸರಕಾರಗಳು ಇನ್ನೊಂದು ಕಡೆ ಗಂಗೆಯ ಮೇಲೆ ವಿವಿಧ ಕಾರ್ಪೋರೇಟ್ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅತ್ಯಾಚಾರ ನಡೆಸುತ್ತಿದೆ ಎಂಬುದು ಅವರ ದೂರು.
ಸರಕಾರಗಳಿಗೆ ಗಂಗೆಯನ್ನು ಪವಿತ್ರಳು ಎಂದು ನಂಬುವ ಮುಗ್ಧರ ಅಗತ್ಯವಿದೆಯೇ ಹೊರತು ಗೋಪಾಲ ದಾಸ್‍ರಂತಹ ಸನ್ಯಾಸಿಗಳ ಅಗತ್ಯವಿಲ್ಲ. ಇಂಥವರನ್ನು ಸರಕಾರ ಮುಳ್ಳುಗಳಂತೆ ಪರಿಗಣಿಸುತ್ತದೆ ಮತ್ತು ಅವರನ್ನು ದಾರಿಯಿಂದ ಸರಿಸಿ ಬಿಡುವುದಕ್ಕೆ ಯತ್ನಿಸುತ್ತದೆ. ಹರಿದ್ವಾರದಲ್ಲಿ ನಡೆಯುತ್ತಿರುವುದೂ ಇದುವೇ. ಸತ್ಯಾಗ್ರ ನಿರತ ಅಗರ್ವಾಲ್‍ರ ಸಾವಿನ ಬಳಿಕವೂ ಉತ್ತರಾಖಂಡ ಸರಕಾರ ತನ್ನ ಹೈಡ್ರೋಪವರ್ ಯೋಜನೆಯನ್ನು ನಿಲ್ಲಿಸುವುದಿಲ್ಲ ಎಂದಾದರೆ ಮತ್ತು ನದಿ ಪಾತ್ರದ ವಿವಿಧ ಚಟುವಟಿಕೆಗಳಿಗೆ ತಡೆ ಒಡ್ಡುವುದಿಲ್ಲ ಎಂದಾದರೆ ಏನಿದರ ಅರ್ಥ? ಗಂಗೆಯ ಶುದ್ಧೀಕರಣವನ್ನು ಸರಕಾರ ಲಾಭ-ನಷ್ಟದ ಕನ್ನಡಕದಿಂದ ನೋಡುತ್ತಿದೆ ಎಂದೇ ಅಲ್ಲವೇ? ಗಂಗೆಯನ್ನು ಶುದ್ಧೀಕರಣಗೊಳಿಸುವುದಕ್ಕೆ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದಕ್ಕಿಂತ ಕಾರ್ಪೋರೇಟ್ ಯೋಜನೆಗಳಿಗೆ ಹಸಿರು ನಿಶಾನೆ ತೋರಿಸಿದರೆ ಬೊಕ್ಕಸಕ್ಕೂ ಹಣ ಲಭಿಸುತ್ತದೆ ಮತ್ತು ಪಾರ್ಟಿ ಪಂಡೂ ಸಿಗುತ್ತದೆ ಎಂಬುದರ ಹೊರತು ಇದಕ್ಕೆ ಬೇರೆ ಏನು ಕಾರಣವಿದೆ?
ಆಧ್ಯಾತ್ಮಿಕತೆ ಎಂಬುದು ಇವತ್ತು ಶೋಷಣೆಯ ಅತಿ ದೊಡ್ಡ ಮಾರುಕಟ್ಟೆಯಾಗಿ ರೂಪಾಂತರಗೊಂಡಿದೆ. ಮಾರಮ್ಮ ಗುಡಿಯೂ ಗಂಗೆಯೂ ಇದಕ್ಕಿಂತ ಭಿನ್ನವಲ್ಲ. ಸದ್ಯದ ತುರ್ತು ಅಗತ್ಯ ಏನೆಂದರೆ, ಆಧ್ಯಾತ್ಮಿಕ ಕೇಂದ್ರಗಳನ್ನು ಮಧ್ಯವರ್ತಿಗಳಿಂದ ರಕ್ಷಿಸಿ, ಭಕ್ತರಿಗೆ ಮುಕ್ತವಾಗಿಡುವುದು. ಆದಾಯಕ್ಕಿಂತ ಭಕ್ತಿಗೆ ಪ್ರಾಮುಖ್ಯತೆಯನ್ನು ಕಲ್ಪಿಸುವುದು. ಅದಾಯವೇ ಸಕಲ ಶೋಷಣೆಗಳ ಮೂಲ. ಆದಾಯದ ಗುರಿ ಇಲ್ಲದೇ ಇರುತ್ತಿದ್ದರೆ ನಿರ್ಜನ ಮತ್ತು ಅರಣ್ಯ ಪ್ರದೇಶದಲ್ಲಿ ಮಾರಮ್ಮ ಗುಡಿ ತಲೆ ಎತ್ತುತ್ತಿತ್ತೇ ಅನ್ನುವ ಪ್ರಶ್ನೆ ಅತ್ಯಂತ ಸೂಕ್ತ. ಆಧ್ಯಾತ್ಮಿಕ ಕೇಂದ್ರಗಳನ್ನು ದಲ್ಲಾಲಿಗಳ ಹಿಡಿತದಿಂದ ಹೊರತಂದು ಜನರಿಗೆ ಮುಕ್ತವಾಗಿಸಿ ಬಿಟ್ಟರೆ ಇವತ್ತಿನ ಬಹುತೇಕ ಶಕ್ತಿ ಕೇಂದ್ರಗಳೂ ಭಕ್ತರ ಬರವನ್ನು ಎದುರಿಸಬಹುದು ಎಂಬುದು ಸುಳ್ಳಲ್ಲ. ಯಾಕೆಂದರೆ, ದಲ್ಲಾಳಿಗಳೇ ಅವುಗಳನ್ನು ಸೃಷ್ಟಿಸಿರುವುದು ಮತ್ತು ಅವುಗಳ ಸುತ್ತ ಪವಾಡಗಳ ಕಟ್ಟಕತೆಗಳನ್ನು ಹುಟ್ಟು ಹಾಕಿರುವುದು. ಹೆಚ್ಚಿನ ಭಕ್ತರು ಮುಗ್ಧರು. ಅವರು ಪವಾಡಗಳನ್ನು ನಂಬುತ್ತಾರೆ. ಶಕ್ತಿ ಕೇಂದ್ರಗಳ ಮೇಲೆ ಭರವಸೆಯಿಡುತ್ತಾರೆ. ಕೊನೆಗೆ ಅನಾಹುತಕ್ಕೂ ತುತ್ತಾಗುತ್ತಾರೆ. ಪವಾಡಗಳನ್ನು ಸೃಷ್ಟಿಸಿದವರು ಅದಾಯವನ್ನು ಲೆಕ್ಕ ಹಾಕುತ್ತಾ ಆರಾಮವಾಗಿರುತ್ತಾರೆ.
ಮಾರುಕಟ್ಟೆ ಆಧಾರಿತ ಆಧ್ಯಾತ್ಮಿಕತೆಯ ಬದಲು ದೇವ ಕೇಂದ್ರಿತ ಮತ್ತು ದಲ್ಲಾಳಿ ರಹಿತ ಆಧ್ಯಾತ್ಮಿಕತೆಯನ್ನು ಪ್ರಚುರ ಪಡಿಸುವ ಮೂಲಕ ಇದಕ್ಕೆ ಉತ್ತರವನ್ನು ನೀಡಬೇಕಾದ ಅಗತ್ಯವಿದೆ. ದೇವನನ್ನು ತಲುಪುದಕ್ಕೆ ಮಾನವನ ಮಧ್ಯಸ್ಥಿತಿಕೆಯ ಅಗತ್ಯವಿಲ್ಲ. ಮಾನವನನ್ನು ಸೃಷ್ಟಿಸಿರುವುದು ದೇವನೆಂದಾದರೆ, ಆ ದೇವನಲ್ಲಿ ಇಷ್ಟಾರ್ಥವನ್ನು ಬೇಡುವುದಕ್ಕೆ ಪೂಜಾರಿಗಳು, ಮುಜಾವರುಗಳ ಅಗತ್ಯ ಏಕಿದೆ? ಪವಾಡಗಳ ಹೆಸರಲ್ಲಿ ವಿವಿಧ ಶಕ್ತಿ ಕೇಂದ್ರಗಳ ಅಗತ್ಯ ಏನಿದೆ?
ನಾಪತ್ತೆಯಾಗಿರುವ ಗೋಪಾಲ ದಾಸ್ ಮತ್ತು ಮಾರಮ್ಮ ಗುಡಿ ಪ್ರಸಾದ ದುರಂತವು ಆಧ್ಯಾತ್ಮಿಕ ಶೋಷಣೆಯ ವಿರುದ್ಧ ಜನಜಾಗೃತಿಯನ್ನು ಹುಟ್ಟು ಹಾಕುವುದಕ್ಕೆ ಕಾರಣವಾಗಲಿ.

Saturday 15 December 2018

ಐನ್‍ಸ್ಟೀನ್‍ರ ದೇವ ಮತ್ತು ಕೆಲವು ಪ್ರಶ್ನೆಗಳು


   
ದೇವನ ಕುರಿತಾದ ಜಿಜ್ಞಾಸೆ ಹೊಸತಲ್ಲ. ಗಾಡ್, ಪರಮಾತ್ಮ, ಅಲ್ಲಾಹ್, ಖುದಾ... ಹೀಗೆ ಜಗತ್ತಿನ ವಿವಿಧ ಭಾಷೆಗಳಲ್ಲಿ ವಿವಿಧ ರೂಪದಲ್ಲಿ ಕರೆಯಿಸಿಕೊಳ್ಳುವ ದೇವ, ಈ ಗೋಲದ ಅತಿ ಬಳಕೆಯ ಹೆಸರು. ದೇವನ ಹೆಸರಲ್ಲಿ ಒಂದು ಕಡೆ ಪೂಜೆ-ಪ್ರಾರ್ಥನೆಗಳು ನಡೆಯುತ್ತಿದ್ದರೆ, ಇನ್ನೊಂದು ಕಡೆ ಹತ್ಯೆ, ಮಾರಣ ಹೋಮಗಳೂ ನಡೆಯುತ್ತಿವೆ. ದೇವನನ್ನು ಒಪ್ಪುವ ಮತ್ತು ಒಪ್ಪದಿರುವವರು ಇರುವಂತೆಯೇ, ದೇವನನ್ನು ಭಯ ಪಡುವವರೂ ಮತ್ತು ಪ್ರೀತಿಸುವವರೂ ಇದ್ದಾರೆ. ಮಾನವರೇ ದೇವನಾಗಿ ಪರಿವರ್ತಿತಗೊಳ್ಳುವ ಪ್ರಸಂಗಗಳೂ ನಡೆಯುತ್ತಿವೆ. ಅವರಿಗೆ ಒಂದಷ್ಟು ಭಕ್ತರೂ ಲಭ್ಯವಾಗುತ್ತಾರೆ. ದೇವನೆಂದರೆ ಯಾರು, ಆತನ ರೂಪ, ಆಕಾರ, ಬಣ್ಣಗಳಿಂದ ಹಿಡಿದು ಏಕನೋ ಅನೇಕನೋ, ಪತ್ನಿ-ಮಕ್ಕಳಿರುವವನೋ, ಒಂಟಿಯೋ, ಜಗತ್ತನ್ನು ಸೃಷ್ಟಿಸಿದ್ದು ಆತನೆಂದಾದರೆ ಆತನನ್ನು ಸೃಷ್ಟಿಸಿದ್ದು ಯಾರು, ಆತ ಎಲ್ಲಿದ್ದಾನೆ ಇತ್ಯಾದಿ ಪ್ರಶ್ನೆಗಳು ಈ ಜಗತ್ತಿಗೆ ಹೊಸತಲ್ಲ. ಇಂಥ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕಾಗಿಯೇ ಅಸಂಖ್ಯ ವೇದಿಕೆಗಳು ನಿರ್ಮಾಣವಾಗಿವೆ. ಬರಹಗಳು ಖರ್ಚಾಗಿವೆ. ಹಾಗಂತ,
     ಇದು ಈ 21ನೇ ಶತಮಾನದಲ್ಲಿ ದಿಢೀರ್ ಆಗಿ ಹುಟ್ಟಿಕೊಂಡ ಜಿಜ್ಞಾಸೆ ಏನಲ್ಲ. ಪುರಾತನ ಕಾಲದಿಂದಲೂ ದೇವ ಒಂದು ಚೋದ್ಯದ ವಸ್ತು. ದೇವನ ಬಗ್ಗೆ ಪ್ರಸಿದ್ಧ ವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೀನ್‍ರಿಗೂ ಕುತೂಹಲ ಇತ್ತು. ಜರ್ಮನಿಯ ತತ್ವಜ್ಞಾನಿ ಎರಿಕ್ ಗಟ್‍ಕೈಂಡ್‍ಗೆ 1954ರಲ್ಲಿ ಅವರು ಬರೆದಿದ್ದ ಒಂದೂವರೆ ಪುಟದ ಪತ್ರವನ್ನು ಕಳೆದವಾರ ಏಲಂಗೆ ಇಡಲಾಗಿತ್ತು. ಆ ಒಂದು ಪತ್ರ ಸುಮಾರು 3 ಬಿಲಿಯನ್ ಡಾಲರ್ ಗೆ ಮಾರಾಟವಾಗಬಹುದೆಂಬ ಅಂದಾಜನ್ನು ಮಾಡಲಾಗಿದೆ. ಐನ್‍ಸ್ಟೀನ್‍ರಿಗೆ ದೇವನ ಮೇಲೆ ಭಾರೀ ಭರವಸೆಯೇನೂ ಇದ್ದಿರಲಿಲ್ಲ. ದೇವ ಎಂಬುದು ಮಾನವರ ದೌರ್ಬಲ್ಯ ಎಂಬ ರೀತಿಯಲ್ಲಿ ಅವರು ವ್ಯಾಖ್ಯಾನಿಸಿದ್ದರು. ಅದೇವೇಳೆ, ತಾನು ಗುರುತಿಸಿಕೊಂಡಿರುವ ಯಹೂದಿ ಧರ್ಮದ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತಲೂ ಇದ್ದರು. ಎರಿಕ್ ಗಟ್‍ಕೈಂಡ್‍ರ Choose life: The biblical call to revolt ಎಂಬ ಕೃತಿಯನ್ನು ಓದಿ, ಆ ಬಳಿಕ ಬರೆದ ಈ ಒಂದೂವರೆ ಪುಟದ ಪತ್ರದಲ್ಲಿ ‘The word God is for me nothing but the expression of and product of human weaknesses’ ಎಂದು ಅವರು ಹೇಳಿದ್ದರು.
    ದೇವಾಸ್ತಿತ್ವದ ಕುರಿತಂತೆ ಐನ್‍ಸ್ಟೀನ್‍ನ ನಿಲುವನ್ನು ಎಷ್ಟು ಮಂದಿ ಒಪ್ಪುತ್ತಾರೋ ಇಲ್ಲವೋ, ಆದರೆ ಈ ಜಗತ್ತಿನ ಜನಸಂಖ್ಯೆಯನ್ನು ಆಸ್ತಿಕರು ಮತ್ತು ನಾಸ್ತಿಕರು ಎಂದು ವಿಭಜಿಸಿದರೆ ಆಸ್ತಿಕರ ಸಂಖ್ಯೆಯೇ ಹೆಚ್ಚಿದ್ದೀತು. ದೇವನನ್ನು ನಿರಾಕರಿಸುವವರಲ್ಲಿ ಈ ಜಗತ್ತಿನ ಹುಟ್ಟಿನ ಬಗ್ಗೆ ಇವತ್ತಿಗೂ ಪ್ರಬಲವಾದ ವಾದಗಳಿಲ್ಲ. ಮಾನವ ಸಂತತಿಯ ಪ್ರಾರಂಭವನ್ನು ನಿಖರವಾಗಿ ಹೇಳಿ ಬಿಡುವುದಕ್ಕೆ ಬೇಕಾದ ದಾಖಲೆಗಳಿಲ್ಲ. ಮಾನವ ವಿಕಾಸವಾದದ ತಳಿ ಎಂದು ಹೇಳಿದರೆ ಮತ್ತು ಆತ ಮೊದಲು ಮಂಗನಾಗಿದ್ದ ಎಂದು ವಾದಿಸಿದರೆ ಆ ವಾದವನ್ನು ಅಲುಗಾಡಿಸುವ ಪ್ರತಿ ಪ್ರಶ್ನೆಗಳೂ ಅಷ್ಟೇ ಪ್ರಬಲವಾಗಿ ಎದುರ್ಗೊಳ್ಳುತ್ತವೆ. ಈ ಜಗತ್ತಿನಲ್ಲಿ ಮನುಷ್ಯ ಜೀವಿ ಮಾತ್ರ ಇರುವುದಲ್ಲ. ಅಸಂಖ್ಯ ವಿಧದ ಕೀಟಗಳಿವೆ. ನದಿ ತೊರೆಗಳಿವೆ. ಸಮುದ್ರಗಳಿವೆ. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹೇಳಿ ಮುಗಿಸಲಾಗದಷ್ಟು ಈ ಜಗತ್ತಿನಲ್ಲಿ ಜೀವ ವೈವಿಧ್ಯ ಮತ್ತು ಸೃಷ್ಟಿ ವೈಶಿಷ್ಟ್ಯಗಳಿವೆ. ಇವೆಲ್ಲವೂ ಓರ್ವ ಎಂಜಿನಿಯರ್‍ ನ  ನಿಯಂತ್ರಣದಲ್ಲಿರುವಂತೆ ಯಾಕೆ ವರ್ತಿಸುತ್ತಿವೆ ಎಂಬ ಪ್ರಶ್ನೆಯನ್ನು ಆಸ್ತಿಕರು ಕೇಳುತ್ತಲೇ ಇದ್ದಾರೆ. ಬಿಗ್‍ಬ್ಯಾಂಗ್ ಥಿಯರಿಯಲ್ಲೂ ಇಂಥದ್ದೊಂದು ಪ್ರಶ್ನೆಯನ್ನು ಎತ್ತಲಾಗಿತ್ತು. ಈ ಜಗತ್ತನ್ನು ನಿಯಂತ್ರಿಸುವ ಒಂದು ಅದ್ವಿತೀಯ ಶಕ್ತಿ ಇದೆ ಎಂಬ ರೀತಿಯಲ್ಲಿ ಹೇಳಿಕೆಯನ್ನು ನೀಡಲಾಗಿತ್ತು. ಆದ್ದರಿಂದಲೇ,
      ವಿಜ್ಞಾನಿಗಳೆಲ್ಲರೂ ನಾಸ್ತಿಕರಾಗದೇ ಇದ್ದಿರುವುದು. ಹೆಚ್ಚಿನ ವಿಜ್ಞಾನಿಗಳು ದೇವ ಎಂಬ ಅಜ್ಞಾತ ಶಕ್ತಿಯ ಮೇಲೆ ವಿಶ್ವಾಸವನ್ನು ತಾಳಿದವರೇ ಆಗಿದ್ದಾರೆ. ಇಲ್ಲಿರುವ ಸಮಸ್ಯೆ ಏನೆಂದರೆ, ದೇವನನ್ನು ಹೇಗೆ ಪರಿಭಾವಿಸಬೇಕು ಎಂಬುದರಲ್ಲಿ. ದೇಶದಲ್ಲಿ 120 ಕೋಟಿಗಿಂತಲೂ ಅಧಿಕ ಜನರಿದ್ದಾರೆ. ಇವರಲ್ಲಿ ಬಹುಸಂಖ್ಯಾತ ಮಂದಿ ದೇವನನ್ನು ನಿರಾಕಾರವೆಂದು ಭಾವಿಸುತ್ತಿಲ್ಲ. ಮಾತ್ರವಲ್ಲ, ದೇವನನ್ನು ಪರಿಭಾವಿಸುವಲ್ಲಿ ಈ ಗುಂಪು ಎಷ್ಟು ವಿಭಜಿಸಿ ಬಿಟ್ಟಿವೆಯೆಂದರೆ ನೂರಾರು ರೂಪದಲ್ಲಿ ದೇವನನ್ನು ಇವರೆಲ್ಲ ಕಲ್ಪಿಸಿಕೊಂಡಿದ್ದಾರೆ. ಯಾರು ಹೇಗೆಲ್ಲ ಕಲ್ಪಿಸಿಕೊಂಡಿz್ದÁರೋ ಅದಕ್ಕೆ ತಕ್ಕಂತೆ ಆ ದೇವನಿಗೆ ರೂಪವನ್ನೂ ಕೊಟ್ಟಿದ್ದಾರೆ. ಒಂದು ಕಡೆ ದೇವನೊಬ್ಬನೇ ಎನ್ನುವ ಜನರಿದ್ದರೆ, ಇನ್ನೊಂದು ಕಡೆ ಅದೇ ದೇವನಿಗೆ ಅನೇಕ ರೂಪಗಳನ್ನು ಕೊಟ್ಟು ಆರಾಧಿಸುವ ಕ್ರಮವೂ ಇಲ್ಲಿದೆ. ಪವಿತ್ರ ಕುರ್‍ಆನ್ ದೇವನನ್ನು ಪರಿಚಯಿಸಿರುವುದು ಹೀಗೆ;
      ದೇವನು ಏಕೈಕನು. ಆತ ಯಾರ ಅವಲಂಬಿತನೂ ಅಲ್ಲ. ಆದರೆ ಎಲ್ಲರೂ ಆತನ ಅವಲಂಬಿತರು. ದೇವನಿಗೆ ಯಾವುದೇ ಸಂತಾನವಿಲ್ಲ. ಅವನು ಯಾರ ಸಂತಾನವೂ ಅಲ್ಲ. ಅವನಿಗೆ ಸಮಾನರು ಯಾರೂ ಇಲ್ಲ. (ಅಧ್ಯಾಯ 112, ವಚನ 1-4)
     ದೇವ ನಿಜಕ್ಕೂ ಹೇಗಿರಬೇಕು, ಆತ ಹೇಗೆ ಪೂಜೆಗೊಳ್ಳಬೇಕು, ಆತನ ಸಂದೇಶ ಏನು, ಮನುಷ್ಯರನ್ನು ಆತ ಸೃಷ್ಟಿಸಿರುವುದು ನಿಜವೇ ಎಂದಾದರೆ, ಯಾಕೆ ಸೃಷ್ಟಿಸಿದ್ದಾನೆ, ಬರಿದೇ ಸೃಷ್ಟಿಸಿ ಜಗಳಾಡಿಸುವುದು ಆತನ ಉದ್ದೇಶವೇ? ಅಲ್ಲ ಎಂದಾದರೆ, ಆ ಉದ್ದೇಶ ಏನು? ಆತ ಏನನ್ನು ಜನರಿಂದ ಬಯಸುತ್ತಿದ್ದಾನೆ ಇತ್ಯಾದಿಗಳು ಖಂಡಿತ ಉದ್ಧಟತನ ಪ್ರಶ್ನೆಗಳಾಗಲಾರದು. ಈ ಜಗತ್ತು ತನ್ನಿಂತಾನೇ ಸೃಷ್ಟಿಯಾಗಿದೆ ಮತ್ತು ಇದಕ್ಕೆ ಸೃಷ್ಟಿಕರ್ತನೋರ್ವನಿಲ್ಲ ಎಂಬ ವಾದವನ್ನು ಒಪ್ಪದವರೇ ಈ ಜಗತ್ತಿನಲ್ಲಿ ಅಧಿಕ ಇರುವಾಗ ಇವರೆಲ್ಲ ಇಂಥದ್ದೊಂದು ಪ್ರಶ್ನೆಯನ್ನು ತಮ್ಮೊಳಗೆ ಕೇಳಿಕೊಳ್ಳಬೇಕು. ನಾವೇಕೆ ಬದುಕುತ್ತಿದ್ದೇವೆ ಮತ್ತು ತಿಂದುಂಡು ಕೊನೆಗೊಂದು ದಿನ ಸಾಯುವುದೇ ತಮ್ಮ ಬದುಕಿನ ಉದ್ದೇಶವೇ ಎಂದೊಮ್ಮೆ ಪ್ರಶ್ನಿಸಿಕೊಳ್ಳಬೇಕು. ಇಂಥದ್ದೊಂದು ಬದುಕಿಗಾಗಿ ದೇವನು ನಮ್ಮನ್ನು ಸೃಷ್ಟಿಸಬೇಕಿತ್ತೇ?
    ಹುಟ್ಟಿದ ತಪ್ಪಿಗೆ ಬದುಕುವ ಮತ್ತು ಬದುಕಿದ ತಪ್ಪಿಗೆ ಸಾಯುವ ಪ್ರಕ್ರಿಯೆಯೊಂದು ಪ್ರಾಣಿವರ್ಗದಲ್ಲಿದೆ. ಅವು ಹುಟ್ಟುತ್ತವೆ, ಬದುಕುತ್ತವೆ ಮತ್ತು ಒಂದು ದಿನ ಸಾಯುತ್ತವೆ. ಅವುಗಳ ಮಿತಿ ಅದು. ಆದರೆ ಮನುಷ್ಯನೂ ಹಾಗೆಯೇ? ಪ್ರಾಣಿ ವರ್ಗವನ್ನು ಮೀರಿದ ಮತ್ತು ಅವುಗಳನ್ನು ತನಗೆ ಬೇಕಾದಂತೆ ಪಳಗಿಸುವ ಸಾಮಥ್ರ್ಯವನ್ನು ಪಡೆದಿರುವ ಆತನ ಬದುಕೂ ಅದರಂತೆಯೇ ಆಗಬೇಕೇ? ಓರ್ವ ವ್ಯಕ್ತಿ ಇನ್ನೋರ್ವ ವ್ಯಕ್ತಿಯ ಜೊತೆ ಯಾವ ಬಗೆಯ ಸಂಬಂಧವನ್ನು ಬೆಳೆಸಬೇಕು? ಹೇಗೆ ವರ್ತಿಸಬೇಕು? ನೆರೆಕರೆಯಲ್ಲಿ ವಾಸಿಸುವವರ ದಿನಚರಿಗಳು ಹೇಗಿರಬೇಕು? ನಿಜಕ್ಕೂ ದೇವನು ಹೇಗಿರಬೇಕು ಮತ್ತು ನಾವು ಪೂಜಿಸುವ ದೇವನು ಹೇಗಿದ್ದಾನೆ? ನಾವು ದೇವನನ್ನು ಗ್ರಹಿಸಿಕೊಂಡದ್ದು ಯಾವ ಮೂಲದಿಂದ? ನನ್ನ ಗ್ರಹಿಕೆ ಸರಿಯೇ? ಇತ್ಯಾದಿ ಪ್ರಶ್ನೆಗಳು ಮಾನವರಲ್ಲಿ ಮೂಡಬೇಕಾಗಿರುವುದು ಪ್ರಕೃತಿ ಸಹಜ ಬೇಡಿಕೆ.
   ನಮ್ಮೆದುರೇ ಮಂಗಗಳ ಹುಟ್ಟು, ಬೆಳವಣಿಗೆ, ಸಾವು ಸಂಭವಿಸುತ್ತಿರುತ್ತವೆ. ಮಂಗಚೇಷ್ಟೆಯ ನೂರಾರು ವರದಿಗಳನ್ನು ಪತ್ರಿಕೆ, ಟಿ.ವಿ. ಮಾಧ್ಯಮಗಳಲ್ಲಿ ನಾವು ಓದಿ ಆನಂದಿಸುತ್ತಲೂ ಇರುತ್ತೇವೆ. ಮಂಗನಿಂದ ಮಾನವ ಅನ್ನುವ ವಾದವನ್ನು ಮತ್ತೆ ಮತ್ತೆ ನಮ್ಮೊಳಗೆ ಕೆದಕಿ ಕೆದಕಿ ಜಿಜ್ಞಾಸೆಗೆ ಒಡ್ಡುವ ಮತ್ತು ಆ ವಾದಕ್ಕೆ ಪ್ರತಿ ವಾದವನ್ನು ಹುಟ್ಟು ಹಾಕುವುದಕ್ಕೆ ಪ್ರೇರಣೆ ಕೊಡುವ ಪ್ರಕೃತಿ ವೈಚಿತ್ರ್ಯಗಳಿವು. ನಿಜವಾಗಿ, ಮನುಷ್ಯ ಮಂಗನಿಂದಲ್ಲ ಮತ್ತು ಮನುಷ್ಯನ ಹುಟ್ಟಿನ ಹಿಂದೆ ಉದ್ದೇಶ ಮತ್ತು ಕಾರಣಗಳಿವೆ ಎಂಬುದು ನಮ್ಮ ವಾದವೆಂದಾದರೆ ಆ ಉದ್ದೇಶ ಮತ್ತು ಗುರಿಗಳನ್ನೊಮ್ಮೆ ಹುಡುಕುವ ಪ್ರಯತ್ನವನ್ನು ನಾವು ಮಾಡಬೇಕು. ಬದುಕು-ಸಾವು ಮತ್ತು ಸಾವಿನಾಚೆಯ ಬದುಕಿನ ಕುರಿತಾಗಿ ನಮ್ಮನ್ನು ನಾವು ಚಿಂತನೆಗೆ ಹಚ್ಚಿಕೊಳ್ಳಬೇಕು. ಇಂಥ ಚಿಂತನೆಗೆ ದೇವನು ಸಿಕ್ಕಾನು ಮತ್ತು ಆತನೇ ನಿಜವಾದ ದೇವ.
ಐನ್‍ಸ್ಟೀನ್ ಈ ಬಗೆಯ ಹುಡುಕಾಟ ನಡೆಸಿಲ್ಲವೇನೋ.