Tuesday 14 June 2022

ನಿಜಕ್ಕೂ, ಈ ದೇಶದ ಶತ್ರು ಯಾರು?

 



ಈ ದೇಶದ ಶತ್ರು ಯಾರು ಎಂದು ಯಾರಲ್ಲಾದರೂ ಕೇಳಿದರೆ, ತಕ್ಷಣಕ್ಕೆ ಸಿಗಬಹುದಾದ ಉತ್ತರ- ಪಾಕಿಸ್ತಾನ. ಅದುಬಿಟ್ಟರೆ ಚೀನಾ. ಆದರೆ ಕೇಂದ್ರ ಗೃಹ ಇಲಾಖೆ ಪ್ರತಿವರ್ಷ ಬಿಡುಗಡೆಗೊಳಿಸುವ ವರದಿಯನ್ನು ಪರಿಶೀಲಿಸಿದರೆ, ಶತ್ರು ನಮ್ಮ ಬಗಲಲ್ಲೇ ಇದ್ದಾನೆ ಎಂಬುದು ಮನವರಿಕೆಯಾಗುತ್ತದೆ. ಈ ದೇಶದ ರಸ್ತೆಗಳೇ ಈ ದೇಶದ ಪಾಲಿಗೆ ಅತಿದೊಡ್ಡ ಶತ್ರು. ಈ ದೇಶ ಪಾಕ್ ಮತ್ತು ಚೀನಾಗಳ ಜೊತೆ ನಾಲ್ಕು ಯುದ್ಧಗಳಲ್ಲಿ ಭಾಗಿಯಾಗಿದ್ದರೂ ರಸ್ತೆ ಅಪಘಾತಕ್ಕೆ ಸಂಬಂಧಿಸಿ ವರ್ಷವೊಂದರಲ್ಲಿ ಆಗುತ್ತಿರುವ ಸಾವುಗಳಿಗೆ ಹೋ ಲಿಸಿದರೆ, ಯುದ್ಧದಲ್ಲಿನ ಸಾವಿನ ಪ್ರಮಾಣ ಕಡಿಮೆ.

ಈ ದೇಶದಲ್ಲಿ ಪ್ರತಿದಿನ 377 ಮಂದಿ ರಸ್ತೆ ಅಪಘಾತದಿಂದಾಗಿ ಸಾವಿಗೀಡಾಗುತ್ತಾರೆ ಎಂದು ಕೇಂದ್ರ ಗೃಹ ಇಲಾಖೆಯ 2021ರ ವರದಿ ಹೇಳುತ್ತದೆ. 2021ರಲ್ಲಿ ಒಟ್ಟು 4,43,110 ರಸ್ತೆ ಅಪಘಾತಗಳಾಗಿವೆ. ಅಂದರೆ ಪ್ರತಿದಿನ 1214 ರಸ್ತೆ ಅಪಘಾತಗಳು, ಸಾವಿನ ಪ್ರಮಾಣ 1,37,605. ಈ ಸಾವುಗಳ ಪೈಕಿ 25% ಸಾವುಗಳು ಕೂಡಾ ದ್ವಿಚಕ್ರ ವಾಹನ ಸವಾರರದ್ದು. ಪ್ರತಿದಿನ 14 ವರ್ಷಕ್ಕಿಂತ ಕೆಳಗಿನ 20 ಮಕ್ಕಳು ಸಾವಿಗೀಡಾಗುತ್ತಾರೆ ಎಂದು ವರದಿ ಹೇಳುತ್ತದೆ. ಪ್ರತಿ ಒಂದು ನಿಮಿಷಕ್ಕೆ ಒಂದು ಅತಿಗಂಭೀರ ಅಪಘಾತ ಸಂಭವಿಸುತ್ತದೆ. ಪ್ರತಿಗಂಟೆಗೆ 10 ಮಂದಿ ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಾರೆ. ಹಾಗಂತ,

ಈ ಅಂಕಿ ಅಂಶಗಳಲ್ಲಿ ಸಣ್ಣ-ಪುಟ್ಟ ಅಪಘಾತಗಳು, ರಾಜಿ ಪಂಚಾತಿಕೆಯಲ್ಲಿ ಇತ್ಯರ್ಥಗೊಂಡ ಅಪಘಾತ ಪ್ರಕರಣಗಳು ಸೇರಿಲ್ಲ. ಪೊ ಲೀಸು ಠಾಣೆಯಲ್ಲಿ ಅಧಿಕೃತವಾಗಿ ನೋಂದಣಿಯಾದ ಪ್ರಕರಣಗಳ ವಿವರವಷ್ಟೇ ಇಲ್ಲಿದೆ. ವಿಷಾದ ಏನೆಂದರೆ,

ಅಪಘಾತದಲ್ಲಿ ಸಾವಿಗೀಡಾಗುವವರು ಮತ್ತು ಗಾಯಗೊಳ್ಳುವವರಲ್ಲಿ ಯುವಕರೇ ಹೆಚ್ಚು ಎಂಬುದು. ಅದರಲ್ಲೂ ದ್ವಿಚಕ್ರ ವಾಹನ ಚಲಾಯಿಸುವ, ಚಿಗುರು ಮೀಸೆಯ ಪೋರರೇ ಹೆಚ್ಚು. ರಸ್ತೆ ಅಪಘಾತಕ್ಕೆ ಸಂಬAಧಿಸಿ ಬಿಡುಗಡೆಗೊಳಿಸಲಾದ ವರದಿಯಲ್ಲಿ, ಅದಕ್ಕೆ ಕಾರಣವಾದ ಅಂಶಗಳ ವಿವರಗಳೂ ಇವೆ. ಅದರಲ್ಲಿ ಅತೀವೇಗದ ಚಾಲನೆಗೆ ಮೊದಲ ಸ್ಥಾನ ಲಭ್ಯವಾಗಿದೆ. ಒಟ್ಟು ಅಪಘಾತ ಗಳ ಪೈಕಿ 60% ಅಪಘಾತಗಳಿಗೂ ಅತಿ ವೇಗದ ಚಾಲನೆಯೇ ಕಾರಣ ಎಂದು ವರದಿ ಹೇಳುತ್ತದೆ. 2020ರಲ್ಲಿ ನಡೆದ ಒಟ್ಟು 3,54,796 ಅ ಪಘಾತಗಳ ಪೈಕಿ 75,383 ಅಪಘಾತಗಳಿಗೆ ಅತಿ ವೇಗದ ಚಾಲನೆಯೇ ಕಾರಣ ಎಂಬುದು ಕೇಂದ್ರ ಸರ್ಕಾರದ ವರದಿಯಲ್ಲಿರುವ ಬಹುಮುಖ್ಯ ಅಂಶ. ಇದನ್ನು ಇನ್ನಷ್ಟು ಸರಳೀಕರಿಸಿ ಹೇಳುವುದಾದರೆ, ರಸ್ತೆ ಅಪಘಾತಕ್ಕೆ ಬಲಿಯಾದ ಒಟ್ಟು 1,33,201 ಮಂದಿಯ ಪೈಕಿ 75,333 ಮಂದಿಯ ಸಾವಿಗೂ ಅತಿವೇಗದ ಚಾಲನೆಯೇ ಕಾರಣ.

ಹಾಗೆಯೇ 3,35,201 ಮಂದಿಗಾದ ಗಾಯಗಳ ಪೈಕಿ 2,09,736 ಮಂದಿಯ ಗಾಯಕ್ಕೂ ಅತಿವೇಗದ ಚಾಲನೆಯೇ ಕಾರಣ.

ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಏನೆಂದರೆ, ಸಂತ್ರಸ್ತರು. ಒಟ್ಟು ಸಂತ್ರಸ್ತರ ಪೈಕಿ 43.6% ಮಂದಿ ದ್ವಿಚಕ್ರ ವಾಹನ ಸವಾರರಾದರೆ, 13.2% ಸಂತ್ರಸ್ತರು ಕಾರು ಸವಾರರು. ಇನ್ನು ಓವರ್ ಟೇಕಿಂಗ್ ಮತ್ತು ಅತಿವೇಗವಾಗಿ ವಾಹನ ಚಲಾಯಿಸಿದ್ದರಿಂದಾಗಿ 24.3% ಅ ಪಘಾತಗಳಾಗಿದ್ದು, ಕೇವಲ ಈ ಕಾರಣದಿಂದಾಗಿಯೇ 35,219 ಮಂದಿ ಸಾವಿಗೀಡಾಗಿದ್ದಾರೆ. 77,067 ಮಂದಿ ಕೇವಲ ಈ ಓವರ್ ಟೇಕಿಂಗ್ ಚಲಾವಣೆಯಿಂದಾಗಿ ಗಾಯಗೊಂಡಿದ್ದಾರೆ. ಅಷ್ಟಕ್ಕೂ,
ಈ ವರೆಗಿನ ರಸ್ತೆ ಅಪಘಾತಗಳಿಗೆ ಕಾರಣವಾದ ಅಂಶಗಳ ಕೂಲಂಕಷ ಪರಿಶೀಲನೆ ನಡೆಸಿದಾಗ ಸಿಕ್ಕ ಫಲಿತಾಂಶ ಏನೆಂದರೆ, ಅತಿವೇಗ, ಕುಡಿತ, ರಸ್ತೆ ನಿಯಮಗಳ ಉಲ್ಲಂಘನೆ, ಹೆಲ್ಮೆಟ್ ರಹಿತ ಚಾಲನೆ, ಸೀಟ್ ಬೆಲ್ಟ್ ಧರಿಸದೇ ಇರುವುದು, ತಪ್ಪು ಕಡೆಯಿಂದ ಓವರ್ ಟೇಕಿಂಗ್ ಮತ್ತು ನಿರ್ಲಕ್ಷ್ಯ ಚಲಾವಣೆ- ಇತ್ಯಾದಿಗಳೇ ಅಪಘಾತಕ್ಕೆ ಕಾರಣ ಎಂಬುದು ಪತ್ತೆಯಾಗಿದೆ. ನಿಜವಾಗಿ,

ಯಾವುದೇ ಅಪಘಾತವು- ಅಪಘಾತ ಎಂಬ ನಾಲ್ಕಕ್ಷರಕ್ಕಿಂತ ಆಚೆಗಿನ ಹಲವು ಸಾಮಾಜಿಕ, ಆರ್ಥಿಕ ಮತ್ತು ಮಾನಸಿಕ ಪರಿಣಾಮಗಳ ನ್ನು ತಂದೊಡ್ಡುವ ಗಂಭೀರ ಸಮಸ್ಯೆಯಾಗಿದೆ. ಪ್ರತಿವರ್ಷ ಸರಾಸರಿ ಒಂದೂವರೆ ಲಕ್ಷದಷ್ಟು ಮಾನವ ಸಂಪನ್ಮೂಲವನ್ನು ಈ ದೇಶ ಕಳಕೊಳ್ಳುತ್ತಿದೆ ಎಂಬುದು ರಸ್ತೆ ಅಪಘಾತದ ಒಂದು ಮುಖವಾದರೆ, ಹೀಗೆ ಕಳಕೊಳ್ಳುವವರಲ್ಲಿ ದೊಡ್ಡ ಸಂಖ್ಯೆ ದುಡಿಯುವ ಪ್ರಾಯದ ಯುವಕರದ್ದು ಎಂಬುದು ಇನ್ನೊಂದು ಮುಖ ಮತ್ತು ಇದುವೇ ಅತ್ಯಂತ ಗಂಭೀರ ವಿಶ್ಲೇಷಣೆಗೆ ಒಳಗಾಗಬೇಕಾದ ಭಾಗ. ಈ ದೇಶದ ಜಿಡಿಪಿಗೆ ದುಡಿಯುವ ಪ್ರಾಯದ ಯುವಕರ ಕೊಡುಗೆ ಬಹಳ ದೊಡ್ಡದು. ದೇಶದ ಅಭಿವೃದ್ಧಿಯಲ್ಲಿ ಇವರು ಎಸಗುವ ಪಾತ್ರ ಬಹಳ ಮುಖ್ಯ. ದುಡಿಯುವ ಪ್ರಾಯದ ವ್ಯಕ್ತಿಯೋರ್ವ ರಸ್ತೆ ಅಪಘಾತಕ್ಕೆ ತುತ್ತಾಗುವುದರ ನೇರ ಪರಿಣಾಮ ಆತನನ್ನು ಅವಲಂಬಿಸಿದ ಕುಟುಂಬದ ಮೇಲಾಗುತ್ತದೆ. ಆವರೆಗೆ ಇತರರನ್ನು ಅವಲಂಬಿಸದೆ ಬದುಕುತ್ತಿದ್ದ ಕುಟುಂಬವೊಂದು ಆ ಬಳಿಕ ಅತಂತ್ರವಾಗುವುದಕ್ಕೆ ಅವಕಾಶ ಇರುತ್ತದೆ. ಆ ಕುಟುಂಬದ ಮಕ್ಕಳ ಕಲಿಕೆಯ ಮೇಲೆ ಅದು ಪರಿಣಾಮ ಬೀರುತ್ತದೆ. ಸಂತಸದ ಬದುಕು ಒಮ್ಮೆಲೇ ದುಃಖಸ್ಥಿತಿಗೆ ಜಾರುತ್ತದೆ. ಮನೆಯ ವರಮಾನದಲ್ಲಿ ಕುಸಿತವಾಗುವುದರ ಜೊತೆಗೇ ನಿತ್ಯದ ಬದುಕಿಗೆ ಸರ್ಕಾರವನ್ನು ಅವಲಂಬಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇದು ಸರ್ಕಾರಕ್ಕೂ ಹೊರೆ. ಒಟ್ಟು ಅಪಘಾತಗಳಲ್ಲಿ ದ್ವಿಚಕ್ರ ವಾಹನಗಳ ಪಾಲು ಸುಮಾರು 25% ಎಂಬುದೇ ಪ್ರತಿವರ್ಷ ಈ ದೇಶದ ಯುವ ಸಮೂಹದ ಮೇಲೆ ಆಗುತ್ತಿರುವ ಆಘಾತಗಳನ್ನು ಹೇಳುತ್ತದೆ. ದ್ವಿಚಕ್ರ ಚಲಾಯಿಸುವವರಲ್ಲಿ ಹೆಚ್ಚಿನವರು ಯುವ ಪ್ರಾಯದವರು ಮತ್ತು 50 ವರ್ಷಕ್ಕಿಂತ ಒಳಗಿನವರು. ಈ ದೇಶದ ಪಾಲಿಗೆ ಈ ಪ್ರಾಯ ಬಹಳ ಮುಖ್ಯ. ದುಡಿಯುವ ಸಾಮರ್ಥ್ಯವಿರುವ ಇವರನ್ನು ಕಳಕೊಳ್ಳುವುದೆಂದರೆ, ದೇಶದಲ್ಲಿ ಪ್ರತಿ ವರ್ಷ ಬಹುದೊಡ್ಡ ಸಂತ್ರಸ್ತ ಪಡೆಯನ್ನು ತಯಾರಿಸುವುದೆಂದೇ ಅರ್ಥ. ಸ್ವಯಂ ದುಡಿಮೆಯಿಂದ ಬದುಕುತ್ತಿದ್ದ ಕುಟುಂಬಗಳು ದಿಢೀರನೆ ಪರಾವಲಂಬಿಯಾಗುವ ಈ ಸ್ಥಿತಿ ಅತ್ಯಂತ ಅಪಾಯಕಾರಿ. ಇದು ಸೃಷ್ಟಿಸುವ ಸಾಮಾಜಿಕ ಮತ್ತು ಆರ್ಥಿಕ ಸವಾಲುಗಳು ಸಣ್ಣದಲ್ಲ. ಆದ್ದರಿಂದ,

ರಸ್ತೆ ಅಪಘಾತಗಳನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು. ಅಪಘಾತ ಸಂಖ್ಯೆಯನ್ನು ಕಡಿಮೆಗೊಳಿಸುವುದಕ್ಕೆ ಪೂರಕವಾದ ನಿಯಮಗಳನ್ನು ಕಠಿಣಗೊಳಿಸಬೇಕು. ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸುವುದನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸುವ ಕ್ರಮಗಳನ್ನು ಜಾರಿಗೆ ತರಬೇಕು. ಅದೇವೇಳೆ, ಅಪಘಾತಗಳಿಗೆ ಅವೈಜ್ಞಾನಿಕ ರಸ್ತೆ ಉಬ್ಬುಗಳು ಮತ್ತು ಅತ್ಯಂತ ಕಳಪೆ ರಸ್ತೆಗಳ ಕೊಡುಗೆಯೇನೂ ಕಡಿಮೆಯಿಲ್ಲ. ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೂ ಪ್ರತಿದಿನ ಮಾನವ ಸಂಪನ್ಮೂಲವನ್ನು ಬಲಿ ತೆಗೆದುಕೊಳ್ಳುತ್ತಲೇ ಇದೆ. ಇವನ್ನು ತಡೆಯುವುದಕ್ಕಾಗಿ ರಸ್ತೆ ಕ್ಯಾಮರಾಗಳನ್ನು ಅಳವಡಿಸಿ ವಾಹನಗಳ ಮೇಲೆ ನಿಗಾ ವಹಿಸುವ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕು. ವಿದೇಶಗಳಲ್ಲಿ ಅದರಲ್ಲೂ ಯುಎಇಯಂಥ ಗಲ್ಫ್ ರಾಷ್ಟ್ರಗಳಲ್ಲಿ ರಸ್ತೆ ಕ್ಯಾಮರಾಗಳು ಅಪಘಾತಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರವನ್ನು ನಿಭಾಯಿಸುತ್ತಿವೆ ಎಂಬುದು ದೃಢವಾಗಿದೆ. ರಸ್ತೆ ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚಿ ಕಠಿಣ ದಂಡನೆಗೆ ಒಳಪಡಿಸಲು ಈ ಕ್ಯಾಮರಾಗಳು ಸಾಕಷ್ಟು ನೆರವು ನೀಡುತ್ತಿವೆ. ಅತಿವೇಗ, ಓವರ್ ಟೇಕಿಂಗ್, ಕೆಂಪು ದೀಪ ಉಲ್ಲಂಘನೆ ಇತ್ಯಾದಿಗಳ ಮೇಲೆ ನಿಗಾ ವಹಿಸುವುದಕ್ಕೆ ಈ ಕ್ಯಾಮರಾಗಳು ಸಹಕಾರಿಯಾಗಿವೆ. ಹಾಗೆಯೇ ತಪ್ಪಿತಸ್ಥರನ್ನು ಕಠಿಣ ದಂಡನೆಗೆ ಒಳಪಡಿಸುವುದೂ ಬಹಳ ಮುಖ್ಯ. ಇಂಥ ಕ್ರಮಗಳು ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುತ್ತದೆ. ತಮ್ಮನ್ನು ಸೆರೆಹಿಡಿಯಲು ಕ್ಯಾಮರಾಗಳಿವೆ ಎಂಬ ಪ್ರಜ್ಞೆಯು ವಾಹನ ಸವಾರರನ್ನು ಎಚ್ಚರಿಕೆಯಿಂದ ಚಲಾಯಿಸಲು ಪ್ರೇರೇಪಿಸುತ್ತದೆ. ಅಂದಹಾಗೆ,

ಪತ್ರಿಕೆಗಳು ಪ್ರತಿದಿನ ಪ್ರಕಟಿಸುವ ಅಪಘಾತಗಳ ಸಂಖ್ಯೆ ಮತ್ತು ಅದಕ್ಕೆ ತುತ್ತಾದವರ ಪ್ರಾಯವನ್ನು ನೀವೇ ಒಮ್ಮೆ ಗಮನವಿಟ್ಟು ಪರಿಶೀ ಲಿಸಿ. ದ್ವಿಚಕ್ರ ವಾಹನಗಳು ಮತ್ತು ಯುವಕರೇ ಇದರಲ್ಲಿ ಅಧಿಕ ಕಾಣಿಸುತ್ತಾರೆ. ಅಂದಹಾಗೆ, ರಸ್ತೆ ಉಬ್ಬುಗಳು ಮತ್ತು ಕಳಪೆ ರಸ್ತೆಗಳ ಮೇಲೆ ಆರೋಪ ಹೊರಿಸುವುದರಿಂದ ಈ ಜೀವಗಳು ಮರಳಿ ಬರಲಾರವು. ಪ್ರತಿ ಮನೆಯಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು. ಯುವಕರನ್ನು ಕೂರಿಸಿ ಹೆತ್ತವರು ಪದೇಪದೇ ಎಚ್ಚರಿಕೆಯನ್ನು ನೀಡುತ್ತಿರಬೇಕು. ಪ್ರತಿಬಾರಿ ವಾಹನವೇರುವ ಮೊದಲು ಯುವಕರ ಕಿವಿಯಲ್ಲಿ ಗುಂಯ್‌ಗುಡುವಷ್ಟು ಈ ಎಚ್ಚರಿಕೆಯ ಪಾಠ ಪರಿಣಾಮಕಾರಿಯಾಗಿರಬೇಕು.

ಜ್ಞಾನವಾಪಿ ಮತ್ತು ಮಳಲಿ ಮಸೀದಿ: ತಮಾಷೆಯ ಪ್ರತಿಕ್ರಿಯೆಗಳಿಗೆ ಕಾರಣವೇನು?

 



ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ದೊರಕಿದೆ ಎನ್ನಲಾದ ಶಿವಲಿಂಗದ ಚಿತ್ರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಳಲಿಯಲ್ಲಿರುವ ಮಸೀದಿಯು ಮಂದಿರವಾಗಿತ್ತೇ ಎಂಬುದನ್ನು ಕಂಡುಕೊಳ್ಳಲು ನಡೆಸಲಾದ ತಾಂಬೂಲ ಪ್ರಶ್ನೆ- ಇವೆರಡಕ್ಕೂ ಸಾರ್ವಜನಿಕರಿಂದ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಈ ಹಿಂದಿನ ಬಾಬರಿ ಮಸೀದಿ ವಿವಾದದ ಸಂದರ್ಭದ ಪ್ರತಿಕ್ರಿಯೆಗಳಿಗೆ ಹೋಲಿಸಿದರೆ, ಸಾಕಷ್ಟು ವ್ಯತ್ಯಾಸಗಳು ಕಾಣಸಿಗುತ್ತವೆ. ಸಾರ್ವಜನಿಕರಿಂದ ಎಷ್ಟು ಗಂಭೀರ ಪ್ರತಿಕ್ರಿಯೆಗಳು ಬಂದುವೋ ಅದಕ್ಕಿಂತಲೂ ಅಧಿಕ ಲಘುವಾದ ಪ್ರತಿಕ್ರಿಯೆಗಳು ವ್ಯಕ್ತವಾದುವು. ಜೋಕ್‌ಗಳೂ ಹಂಚಿಕೆಯಾದುವು. ಮಂದಿರ-ಮಸೀದಿ ನೆಪದಲ್ಲಿ ಉಂಟು ಮಾಡುವ ವಿವಾದವನ್ನು ಜನರು ಈ ಹಿಂದಿನಂತೆ ಭಾವನಾತ್ಮಕವಾಗಿ ನೋಡುವುದಕ್ಕಿಂತ ರಾಜಕೀಯವಾಗಿ ನೋಡುವುದಕ್ಕೆ ಒಲವು ವ್ಯಕ್ತಪಡಿಸಿದ್ದಾರೆ ಎಂಬುದಕ್ಕೆ ಈ ಪ್ರತಿಕ್ರಿಯೆಗಳು ಸಾಕ್ಷ್ಯ ಒದಗಿಸಿದುವು. ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗವಿದೆಯೆಂದು ಒಂದು ಗುಂಪು ವಾದಿಸುವಾಗ, ಅದು ಶಿವ ಲಿಂಗವಲ್ಲ, ಕಾರಂಜಿ ಎಂದು ಇನ್ನೊಂದು ಗುಂಪು ವಾದಿಸಿತು. ಚಿತ್ರಗಳೂ ಪ್ರಕಟವಾದುವು. ಆ ಬಳಿಕ ತಮಾಷೆ, ವ್ಯಂಗ್ಯ, ಕುಚೋದ್ಯ, ಅಪಹಾಸ್ಯ.. ಇತ್ಯಾದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಧಾರಾಳ ಹಂಚಿಕೆಯಾದುವು. ಇದೇವೇಳೆ,

ಮಳಲಿ ಮಸೀದಿಯ ಬಗ್ಗೆ ತಾಂಬೂಲ ಪ್ರಶ್ನೆಯೂ ನಡೆಯಿತು. ಕೇರಳದ ಪಾಣಿಕ್ಕರ್ ಎಂಬವರನ್ನು ಕರೆದು ವೀಳ್ಯದೆಲೆಯಲ್ಲಿ ಸತ್ಯಾಸತ್ಯತೆಯನ್ನು ಹುಡುಕುವ ತಾಂಬೂಲ ಪ್ರಶ್ನೆ ನಡೆಸಲಾಯಿತು. ಇದು ಕೂಡಾ ಗಂಭೀರ ಪ್ರತಿಕ್ರಿಯೆಗಳಿಗಿಂತ ಹೆಚ್ಚು ಲಘುವಾದ ಪ್ರತಿಕ್ರಿಯೆಗಳಲ್ಲಿ ತೇಲಿ ಹೋಯಿತು. ಹಾಸ್ಯ, ತಮಾಷೆ, ಜೋಕ್‌ಗಳು ಈ ತಾಂಬೂಲ ಪ್ರಶ್ನೆಯ ಸುತ್ತ ಹರಿದಾಡಿದುವು. ನಿಜವಾಗಿ,

1990ರಲ್ಲಿ ಪರಾಕಾಷ್ಟೆಗೇರಿದ ಬಾಬರಿ ಮಸೀದಿ ವಿವಾದ ಮತ್ತು 2019 ನವೆಂಬರ್ 9ರಂದು ಈ ಬಗ್ಗೆ ಸುಪ್ರೀಮ್ ಕೋರ್ಟು ನೀಡಿದ ತೀರ್ಪು- ಇವೆರಡೂ ಭಾರತೀಯ ನಾಗರಿಕ ಸಮಾಜದ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿವೆ. ಈ ಪ್ರಭಾವ ಎರಡು ಬಗೆಯದು. ಒಂದು- ಭಾವನಾತ್ಮಕವಾದರೆ ಇನ್ನೊಂದು- ರಾಜಕೀಯ ಸ್ವರೂಪದ್ದು.

ಬಾಬರಿ ಮಸೀದಿ ವಿವಾದ ಸ್ವತಂತ್ರಪೂರ್ವದಲ್ಲೇ ಹುಟ್ಟಿಕೊಂಡಿತ್ತು ಮತ್ತು ಅದನ್ನು ರಾಮ ಜನ್ಮಭೂಮಿ ಎಂದು ಬಿಂಬಿಸುವ ಪ್ರಯತ್ನಗಳು ಆ ಸಮಯದಲ್ಲೇ ನಡೆದಿದ್ದುವು. ಸ್ವಾತಂತ್ರ‍್ಯ ದೊರೆತು ಎರಡು ವರ್ಷಗಳಾಗುತ್ತಲೇ ಈ ವಿವಾದವನ್ನು ಬೆಚ್ಚಗಿಡುವ ಪ್ರಯತ್ನಗಳೂ ನಡೆದುವು. 1949ರಲ್ಲಿ ಅಯೋಧ್ಯೆ ಜಿಲ್ಲಾಧಿಕಾರಿಯ ಪರೋಕ್ಷ ನೆರವಿನೊಂದಿಗೆ ಮಸೀದಿಯ ಒಳಗೆ ವಿಗ್ರಹ ತಂದಿಟ್ಟ ಬೆಳವಣಿಗೆಯೂ ನಡೆಯಿತು. 1990ರಲ್ಲಿ ಬಿಜೆಪಿ ರಾಮ ರಥಯಾತ್ರೆ ನಡೆಸಿದಾಗಲೂ ಜನರು ಅದನ್ನು ರಾಜಕೀಯಕ್ಕಿಂತಲೂ ಹೆಚ್ಚಾಗಿ ಭಾವನಾತ್ಮಕವಾಗಿ ನೋಡಿದರು. ಬಾಬರಿ ಮಸೀದಿ ಇರುವ ಕಟ್ಟಡವೇ ರಾಮ ಜನ್ಮಭೂಮಿ ಎಂಬುದಾಗಿ ಸ್ವಾತಂತ್ರ‍್ಯ ಪೂರ್ವ ಮತ್ತು ಸ್ವಾತಂತ್ರ‍್ಯ ಲಭ್ಯವಾದ ಬಳಿಕವೂ ನಡೆಸಿಕೊಂಡು ಬರಲಾದ ಪ್ರಚಾರವೇ ಇದಕ್ಕೆ ಕಾರಣವಾಗಿತ್ತು. ರಾಮ ರಥಯಾತ್ರೆ ನಡೆಸುವಾಗ ಬಿಜೆಪಿ ರಾಜಕೀಯವಾಗಿ ಇನ್ನೂ ಬಲಿತಿರಲಿಲ್ಲ. ಶಿಶುವಾಗಿದ್ದ ಬಿಜೆಪಿಗೆ ಅಂಥದ್ದೊಂದು ರಥಯಾತ್ರೆ ನಡೆಸಲು ಸಾಧ್ಯವಾದದ್ದು ಮತ್ತು ಅದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾದುದಕ್ಕೆ ತಲೆತಲಾಂತರದಿಂದ ಬಾಬರಿ ಮಸೀದಿ ಸುತ್ತ ಹರಡಲಾದ ಸುದ್ದಿಗಳೇ ಕಾರಣವಾಗಿದ್ದುವು. ಆದ್ದರಿಂದಲೇ,

ಬಾಬರಿ ವಿವಾದವನ್ನು ಜನರು ರಾಜಕೀಯಕ್ಕಿಂತ ಹೊರತಾಗಿ ಭಾವನಾತ್ಮಕವಾಗಿ ನೋಡಿದರು. ಮಾತ್ರವಲ್ಲ, ಬಾಬರಿ ವಿವಾದದ ಉದ್ದಕ್ಕೂ ಎಲ್ಲೂ ಜನರು ಲಘುವಾಗಿ ಪ್ರತಿಕ್ರಿಯಿಸಿದ್ದು ಬಹಳ ಬಹಳ ಕಡಿಮೆ. ಮೀಮ್‌ಗಳು, ಜೋಕ್‌ಗಳು, ತಮಾಷೆಗಳೆಲ್ಲ ಈ ವಿವಾದಕ್ಕೆ ಸಂಬಂಧಿಸಿ ವ್ಯಕ್ತವಾಗಿರಲಿಲ್ಲ. ಉತ್ಖನನಕ್ಕೆ ನ್ಯಾಯಾಲಯ ಆದೇಶಿಸಿದಾಗಲೂ ಇದನ್ನು ಲಘುವಾಗಿ ಎತ್ತಿಕೊಂಡು ಸಾರ್ವಜ ನಿಕರು ಆಡಿಕೊಂಡಿರಲಿಲ್ಲ. ಆದರೆ,

ಆ ಬಳಿಕದ ಜ್ಞಾನವಾಪಿ ಮಸೀದಿಯಾಗಲಿ, ಮಳಲಿಯ ಮಸೀದಿಯಾಗಲಿ ಆ ಬಗೆಯ ಗಂಭೀರತೆಯನ್ನು ಉಳಿಸಿಕೊಳ್ಳುವಲ್ಲಿ ವಿಫಲವಾಗಿವೆ. ಇದಕ್ಕೆ ಕಾರಣ- ಬಾಬರಿಗೆ ಸಂಬಂಧಿಸಿ ಸುಪ್ರೀಮ್ ತೀರ್ಪು ಮತ್ತು ಬಿಜೆಪಿಯ ರಾಜಕೀಯ ದುರುದ್ದೇಶಗಳ ಬಗ್ಗೆ ಸಾರ್ವಜನಿಕರಲ್ಲಾದ ತಿಳುವಳಿಕೆ. ಒಂದುಕಡೆ,

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಮಂಜೂರಾದ 60 ಲಕ್ಷಕ್ಕಿಂತಲೂ ಅಧಿಕ ಹುದ್ದೆಗಳು ಖಾಲಿ ಇವೆ ಎಂಬುದು ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ಅಧಿಕೃತ ಪಟ್ಟಿಯೇ ಹೇಳುತ್ತಿದೆ. ತೈಲ ಬೆಲೆ ನೂರರ ಗಡಿಯನ್ನು ದಾಟಿದೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಸಾವಿರ ರೂಪಾಯಿಯನ್ನು ದಾಟಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ವಿಪರೀತ ಏರಿರುವುದರಿಂದ ಹೊಟೇಲು ತಿನಿಸುಗಳು ಸುಡುತ್ತಿವೆ. ತರಕಾರಿಗಳು ಮತ್ತು ದಿನನಿತ್ಯ ಬಳಕೆಯ ವಸ್ತುಗಳೂ ಗಗನಕ್ಕೇರಿ ಕೂತಿವೆ. ಕಳೆದ ಮೂರು ದಶಕದಲ್ಲೇ ನಿರುದ್ಯೋಗ ಪ್ರಮಾಣವು ಉತ್ತುಂಗದಲ್ಲಿದೆ. ವಿದೇಶಿ ಬಂಡವಾಳ ಕಂಪೆನಿಗಳು ದೇಶದಿಂದ ಕಾಲ್ಕೀಳುತ್ತಿವೆ. ಒಂದುಕಡೆ, ಬಂಡವಾಳ ಹೂಡುವಂತೆ ವಿದೇಶಿ ಕಂಪೆನಿಗಳನ್ನು ಆಹ್ವಾನಿಸುವುದು ಮತ್ತು ಇನ್ನೊಂದೆಡೆ ಮುಸ್ಲಿಮ್ ವಿರೋಧಿ ಭಾವನೆಗಳನ್ನು ಕೆರಳಿಸುತ್ತಾ ಬಿಗುವಿನ ವಾತಾವರಣ ಉಂಟು ಮಾಡುತ್ತಿರುವುದೂ ನಡೆಯುತ್ತಿದೆ. ಇಂಥ ಸನ್ನಿವೇಶದಲ್ಲಿ ಮಂದಿರ-ಮಸೀದಿ ಎಂದು ಬಿಜೆಪಿ ಮತ್ತು ಅದರ ಬೆಂಬಲಿಗ ಪಡೆಯು ಮಾತಾಡತೊಡಗಿದರೆ, ಜನರು ಅದನ್ನು ಲಘುವಾಗಿಯಲ್ಲದೇ ಮತ್ತೆ ಹೇಗೆ ಪರಿಗಣಿಸಬೇಕು?

ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಸುಪ್ರೀಮ್ ನೀಡಿದ ತೀರ್ಪಿಗೆ ಜನಸಾಮಾನ್ಯರು ಬಿಡಿ, ಹಿರಿಯ ನ್ಯಾಯವಾದಿಗಳೇ ಅಚ್ಚರಿ ವ್ಯಕ್ತಪಡಿಸಿದ್ದರು. ಸಾಕ್ಷ್ಯಾಧಾರಕ್ಕಿಂತ ಬಹುಸಂಖ್ಯಾತ ಭಾವನೆಗಳಿಗೇ ಆದ್ಯತೆ ನೀಡಲಾಗಿದೆ ಎಂದು ಪ್ರತಿಕ್ರಿಯಿಸಿದ್ದರು. ಕಾನೂನನ್ನು ಉಲ್ಲಂಘಿಸಿ ಬಾಬರಿ ಮಸೀದಿಯನ್ನು ಒಡೆದವರಿಗೆ ಇನ್ನೂ ಶಿಕ್ಷೆಯಾಗಿಲ್ಲ ಎಂದು ಮಾತ್ರವಲ್ಲ, ಆ ಕುರಿತಾಗಿರುವ ನ್ಯಾಯ ಪ್ರಕ್ರಿಯೆಯು ಇನ್ನೂ ಸ್ಥಳೀಯ ನ್ಯಾಯಾಲಯದಲ್ಲಿಯೇ ಶೈಶವಾವಸ್ಥೆಯಲ್ಲಿದೆ. ಬಹುಶಃ, ಅದರ ತೀರ್ಪು ಹೊರಬೀಳುವಾಗ ಆರೋಪಿಗಳಲ್ಲಿ ಯಾರಾದರೊಬ್ಬರು ಬದುಕಿ ಉಳಿದಿರುತ್ತಾರೆ ಎಂದು ಹೇಳಲಾಗದಷ್ಟು ವಿಚಾರಣಾ ಪ್ರಕ್ರಿಯೆ ನಿಧಾನಗತಿಯಲ್ಲಿದೆ. ಒಂದುಕಡೆ, ಬಾಬರಿ ಮಸೀದಿಯ 2.77 ಎಕರೆ ಜಮೀನು ಒಡೆತನದ ತಗಾದೆಯನ್ನು ಇತ್ಯರ್ಥಪಡಿಸಲು ಕೋರ್ಟು ತೋರಿದ ಮುತುವರ್ಜಿಯು ಆ ಜಮೀ ನಿನಲ್ಲಿದ್ದ ಮಸೀದಿಯನ್ನು ಉರುಳಿಸಲು ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಲು ತೋರಿಸುತ್ತಿಲ್ಲ ಎಂಬ ಅಸಮಾಧಾನವಾದರೆ, ಇ ನ್ನೊಂದೆಡೆ, ನ್ಯಾಯ ತಜ್ಞರನ್ನೇ ಅಚ್ಚರಿಯಲ್ಲಿ ಕೆಡವಿದ ತೀರ್ಪು- ಇವೆರಡೂ ಆ ಬಳಿಕದ ಮಂದಿರ-ಮಸೀದಿ ವಿವಾದಗಳ ಕುರಿತು ಜ ನರಲ್ಲಿ ಲಘುವಾದ ಭಾವನೆ ಹುಟ್ಟಿಸಲು ಕಾರಣವಾದುವು.

ಅಲ್ಲದೇ, ಮಂದಿರ-ಮಸೀದಿ ಹೊರತು ಬಿಜೆಪಿಗೆ ಅಸ್ತಿತ್ವವಿಲ್ಲ ಎಂಬುದೂ ದಿನೇದಿನೇ ಸ್ಪಷ್ಟವಾಗುತ್ತಿದೆ. ಆಡಳಿತಾತ್ಮಕವಾಗಿ ಬಿಜೆಪಿ ಒಂದು ವಿಫಲ ಪ್ರಯೋಗ. ನೋಟ್‌ಬ್ಯಾನ್ ಮೂಲಕ ಅದು ಈ ದೇಶದ ಆರ್ಥಿಕತೆಗೆ ನೀಡಿದ ಹೊಡೆತದ ಗಾಯ ಇನ್ನೂ ಮಾಸಿಲ್ಲ. ಹೊಸ 2000 ರೂಪಾಯಿ ನೋಟಿನ ಸುತ್ತ ಅದು ಭ್ರಮೆಯೊಂದನ್ನು ಸೃಷ್ಟಿಸಿತು. ನಕಲಿ ಹಣ ಮತ್ತು ಕಪ್ಪು ಹಣದ ಸಮಸ್ಯೆಗೆ ಈ ಹೊಸ ನೋಟು ಪರಿಹಾರ ಎಂದು ಅದು ಸಾಮಾಜಿಕ ಮಾಧ್ಯಮಗಳು ಮತ್ತು ಮುಖ್ಯವಾಹಿನಿ ಮಾಧ್ಯಮಗಳ ಮೂಲಕ ಪ್ರಚಾರ ಮಾಡಿತು. ಎಲ್ಲಿಯವರೆಗೆಂದರೆ, 2000 ನೋಟಿನಲ್ಲಿ ಉಪಗ್ರಹ ಆಧಾರಿತ ಚಿಪ್ ಅನ್ನು ಅಳವಡಿಸಲಾಗಿದೆ ಎಂಬ ಪುಕಾರನ್ನೂ ಹಬ್ಬಿಸಿತು. ಆದರೆ, ಇದೀಗ ಆ 2000 ನೋಟನ್ನೇ ಮಾರುಕಟ್ಟೆಯಿಂದ ಸದ್ದಿಲ್ಲದೇ ಹಿಂಪಡೆಯುತ್ತಿರುವ ಸೂಚನೆಗಳು ಲಭ್ಯವಾಗುತ್ತಿವೆ. 2000ದ ಅಸಲಿ ನೋಟಿಗಿಂದ ನಕಲಿ ನೋಟುಗಳೇ ಮಾರುಕಟ್ಟೆಯಲ್ಲಿ ಹೆಚ್ಚಿವೆ ಎಂಬ ಮಾಹಿತಿಗಳಿವೆ. ಕಪ್ಪು ಹಣವನ್ನಂತೂ ನೋಟ್‌ಬ್ಯಾನ್‌ನಿಂದ ನಿ ಲ್ಲಿಸಲು ಸಾಧ್ಯವಾಗಿಲ್ಲ ಎಂಬುದು ಈ ಮೊದಲೇ ಸಾಬೀತಾಗಿದೆ. ಹೀಗಿರುತ್ತಾ, ಬಿಜೆಪಿ ಮಂದಿರ-ಮಸೀದಿಯ ಹೊರತು ಅಡಗಿಕೊಳ್ಳಲು ಬೇರೆ ಯಾವ ಜಾಗ ಇದೆ?

ಈ ಸತ್ಯವನ್ನು ಜನರೂ ಈಗ ಅರಿತುಕೊಳ್ಳುತ್ತಿದ್ದಾರೆ. ಬಹುಶಃ, ಈ ಕಾರಣದಿಂದಾಗಿಯೇ ಮಳಲಿ ಮಸೀ ದಿಯ ತಾಂಬೂಲ ಪ್ರಶ್ನೆಯಾಗಲಿ, ಜ್ಞಾನವಾಪಿ ಮಸೀದಿ, ಮಥುರಾ ಶಾಹಿ ಈದ್ಗಾ ಮಸೀದಿ ವಿವಾದಗಳು ಗಂಭೀರತೆಯನ್ನು ಕಳಕೊಂಡು ಲಘು ಹಾಸ್ಯ ಪ್ರತಿಕ್ರಿಯೆಗೆ ತುತ್ತಾಗುತ್ತಿರಬೇಕು. ಜನರು ನಿತ್ಯದ ಬದುಕಿಗೆ ಪರದಾಡುತ್ತಿರುವಾಗ ಬಿಜೆಪಿ ಮತ್ತು ಪರಿವಾರವು ಮಸೀದಿಗಳಲ್ಲಿ ಮಂದಿರದ ಕುರುಹುಗಳಿವೆಯೇ ಎಂಬ ಪತ್ತೆ ಕಾರ್ಯದಲ್ಲಿ ನಿರತವಾಗಿವೆ. ಮುಂದಿನ ಲೋಕಸಭಾ ಚುನಾವಣೆಗೆ ಯಾವುದಾದರೊಂದು ಮಸೀದಿ ವಿವಾದವನ್ನು ಮುನ್ನೆಲೆಗೆ ತರುವುದೇ ಅದರ ಉದ್ದೇಶ. ಆದರೆ ಜನರು ಪ್ರಬುದ್ಧರಾಗುತ್ತಿದ್ದಾರೆ ಮತ್ತು ರಾಜಕೀಯ ದುರುದ್ದೇಶಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ಮಳಲಿ ಮಸೀದಿ ಮತ್ತು ಜ್ಞಾನವಾಪಿ ಮಸೀದಿ ವಿವಾದಗಳು ಸೂಚಿಸುತ್ತವೆ. ಇದು ಆಶಾದಾಯಕ ಬೆಳವಣಿಗೆ.

 

ಪುತ್ರಿ ರೇಶ್ಮಾಳನ್ನು ಕೊಂದ ತಾಯಿ ವಿಮಲಾ!

 



ಆತ್ಮಹತ್ಯೆಯೊಂದು ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗಬೇಕಾದರೆ ಒಂದೋ ಆತ್ಮಹತ್ಯೆ ಮಾಡಿದವರು ಕೆಫೆ ಕಾಫಿ ಡೇಯ ಸಿದ್ದಾರ್ಥ ಆಗಿರಬೇಕು ಅಥವಾ ಸುಶಾಂತ್ ಸಿಂಗ್ ರಾಜಪೂತ್‌ರಂಥ ಸಿನಿಮಾ ನಟರಾಗಿರಬೇಕು. ಸೆಲೆಬ್ರಿಟಿಗಳು, ಉದ್ಯಮಿಗಳು, ಕ್ರೀಡಾಪಟುಗಳು, ರಾಜಕಾರಣಿಗಳು ಮುಂತಾದವರ ಆತ್ಮಹತ್ಯೆಗೂ ಒಂದು ಕಿಮ್ಮತ್ತು ಇರುತ್ತದೆ. ಅವರ ಆತ್ಮಹತ್ಯೆಯನ್ನು ಮುಖಪುಟದಲ್ಲಿಟ್ಟು ಪತ್ರಿಕೆಗಳು ಒಂದರ್ಧ ದಿನ ಚರ್ಚಿಸುವ ಆಸಕ್ತಿ ತೋರಿಸುವುದಿದೆ. ಆದರೆ, ಜನಸಾಮಾನ್ಯರ ಆತ್ಮಹತ್ಯೆಗೆ ಮುಖಪುಟ ಬಿಡಿ, ಒಳಪುಟದಲ್ಲಿ ತೀರಾ ಒಂದು ಕಾಲಮ್ ನೀಡುವುದಕ್ಕೂ ಪತ್ರಿಕೆಗಳು ಕಂಜೂಸ್‌ತನ ತೋರಿಸುತ್ತವೆ. ಕಳೆದವಾರ,

ಬಹುತೇಕ ಪತ್ರಿಕೆಗಳ ಒಳಪುಟದಲ್ಲಿ ಒಂದು ಕಾಲಮ್‌ನಲ್ಲಿ ಪ್ರಕಟವಾದ ಸುದ್ದಿಯೊಂದು ನಾವೆಲ್ಲರೂ ತುಸು ಪುರುಸೊತ್ತು ಮಾಡಿಕೊಂಡು ಜಿಜ್ಞಾಸೆಗೊಳಪಡಿಸಬೇಕಾದಷ್ಟು ಮಹತ್ವದ್ದಾಗಿತ್ತು. ಕಾಸರಗೋಡು ಸಮೀಪದ 58 ವರ್ಷದ ವಿಮಲಾ ಎಂಬ ತಾಯಿ ತನ್ನ 28 ವರ್ಷದ ಪುತ್ರಿ ರೇಶ್ಮಾಳನ್ನು ಕತ್ತು ಹಿಸುಕಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡರು. ಈ ಸುದ್ದಿ ಪ್ರಕಟವಾದ ಎರಡು ದಿನಗಳ ಬಳಿಕ ಉಡುಪಿ ಜಿಲ್ಲೆಗೆ ಸಂಬಂಧಿಸಿ ಆತ್ಮಹತ್ಯೆಯ ಅಂಕಿ-ಅಂಶ ಪ್ರಕಟವಾಯಿತು. 2022 ಜನವರಿಯಿಂದ ಮೇ ತಿಂಗಳ ಅಂತ್ಯದ ವೇಳೆಗೆ ಉಡುಪಿ ಜಿಲ್ಲೆಯೊಂದರಲ್ಲೇ ಒಟ್ಟು 281 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಘಾತಕಾರಿ ಸಂಗತಿ ಏನೆಂದರೆ, ಈ 281 ಮಂದಿಯ ಪೈಕಿ ಅರ್ಧದಷ್ಟು ಮಂದಿಯ ಪ್ರಾಯ 20ರಿಂದ 40. ಅಂದಹಾಗೆ, ಕೊರೋನಾ ಅತ್ಯಂತ ತೀವ್ರವಾಗಿ ಅಪ್ಪಳಿಸಿದ್ದ 2020ರ ಜನವರಿಯಿಂದ ಜೂನ್‌ವರೆಗಿನ 6 ತಿಂಗಳ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 100ರಷ್ಟಿತ್ತು. 2020ರ ಕೊನೆಯಲ್ಲಿ ಈ ಸಂಖ್ಯೆ 743ಕ್ಕೆ ಏರಿತ್ತು. 2021ರಲ್ಲಿ ಈ ಸಂಖ್ಯೆ 828ಕ್ಕೆ ನೆಗೆದಿತ್ತು. ಇದೀಗ 2022ರ ಆರಂಭಿಕ 5 ತಿಂಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿವರ ಸಂಖ್ಯೆ 281ಕ್ಕೆ ಮುಟ್ಟಿದೆ. ಇದೇವೇಳೆ,

ಪುತ್ರಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ವಿಮಲಾ ಎಂಬ ತಾಯಿಯ ಪ್ರಕರಣವನ್ನೂ ಇಲ್ಲಿ ಎತ್ತಿಕೊಳ್ಳಬಹುದು. ತಾಯಿ ವಿಮಲಾ ಆರೋಗ್ಯವಂತೆಯಾಗಿದ್ದರೂ ಪುತ್ರಿ ರೇಶ್ಮಾ ಎಂಡೋಸಲ್ಫಾನ್ ಪೀಡಿತೆ. ಅದೊಂದು ಮುಗಿಯದ ಕಾಯಿಲೆ. ಕರ್ನಾಟಕ-ಕೇರಳ ಗಡಿಭಾಗದಲ್ಲಿ ಈ ಎಂಡೋಸಲ್ಫಾನ್ ಮಾಡಿರುವ ಅನಾಹುತ ಸಣ್ಣದಲ್ಲ. ದೊಡ್ಡದೊಂದು ಸಂತ್ರಸ್ತ ಗುಂಪನ್ನೇ ಅದು ಸೃಷ್ಟಿಸಿಬಿಟ್ಟಿದೆ. ದ್ವಿತೀಯ ಮಹಾಯುದ್ಧದ ಅಣುಬಾಂಬ್‌ನ ವಿಕಿರಣಕ್ಕೆ ತುತ್ತಾದವರು ಮತ್ತು ಆನಂತರದ ಪೀಳಿಗೆ ಹೇಗೆ ವಿವಿಧ ಅಂಗವೈಕಲ್ಯಕ್ಕೆ ತುತ್ತಾಗಿ ನರಕಸದೃಶ ಬದುಕು ನಡೆಸಬೇಕಾಯಿತೋ ಅಂಥದ್ದೇ ಒಂದು ದುರಂತ ಬದುಕು ಈ ಎಂಡೋಸಲ್ಫಾನ್ ಪೀಡಿತರದ್ದು. ಗಡಿಪ್ರದೇಶದ ಸಾಕಷ್ಟು ಮನೆಗಳು ಇಂಥವರಿಂದ ತುಂಬಿಕೊಂಡಿದೆ. ಎಂಡೋಸಲ್ಫಾನ್‌ನಿಂದ ಅವರ ಮೇಲೆ ಆಗಿರುವ ದುಷ್ಪರಿಣಾಮಗಳಿಗೆ ಹೋಲಿಸಿದರೆ, ಸರ್ಕಾರದ ವತಿಯಿಂದ ಅವರಿಗೆ ಲಭಿಸಿರುವ ಪರಿಹಾರ ಸೌಲಭ್ಯಗಳು ಶೂನ್ಯ ಅನ್ನುವಷ್ಟು ಕಡಿಮೆ. ಕೆಲವು ವರ್ಷಗಳ ಹಿಂದೆ ಈ ಸಂತ್ರಸ್ತರು ವಿನೂತನ ಪ್ರತಿಭಟನೆಯನ್ನು ನಡೆಸಿದರು. ಸರ್ಕಾರದ ಗಮನ ಸೆಳೆಯಲೆಂದು ಬೆಂಗಳೂರಿಗೂ ಹೋದರು. ಅಂದಹಾಗೆ,

ತನ್ನದೇ ಪ್ರಜೆಗಳನ್ನು ಜೀವಚ್ಛವವಾಗಿ ಬದುಕುವಂತೆ ಮಾಡಿದ ಸರ್ಕಾರವು ಒಂದಿಷ್ಟು ಪುಡಿಗಾಸನ್ನು ಎಸೆದು ಕೈ ತೊಳೆದುಕೊಳ್ಳಬಹುದು. ಆದರೆ, ಎಂಡೋಸಲ್ಫಾನ್ ಎಂಬ ರಾಸಾಯನಿಕದ ಅಡ್ಡ ಪರಿಣಾಮವನ್ನು ಈ ಸರ್ಕಾರದ ಮಂದಿಗೆ ಅನುಭವಿಸಲು ಸಾಧ್ಯವಿಲ್ಲ. ಅದನ್ನು ಆ ಸಂತ್ರಸ್ತರೇ ಅನುಭವಿಸಬೇಕು. ಜೀವನಪೂರ್ತಿ ಇನ್ನೊಬ್ಬರನ್ನು ಅವಲಂಬಿಸಿಕೊAಡು ಬದುಕುವುದೆಂದರೆ, ಅದು ಕೊಡುವ ಮಾನಸಿಕ ಒತ್ತಡ ಸಣ್ಣದಲ್ಲ. ಇನ್ನು, ಈ ಎಂಡೋಸಲ್ಫಾನ್ ಅನೇಕ ಮನೆಗಳನ್ನು ಒಡೆದಿದೆ. ಎಂಡೋಪೀಡಿತ ಪತ್ನಿ-ಮಕ್ಕಳನ್ನು ಬಿಟ್ಟು ತೆರಳಿದ ಗಂಡಂದಿರಿದ್ದಾರೆ. ಒಂದು ಮನೆಯಲ್ಲಿ ಮಕ್ಕಳು ಮಾತ್ರ ಎಂಡೋ ಪೀಡಿತರಾದದ್ದಿದೆ. ಪತ್ನಿ ಮಾತ್ರ ಅಥವಾ ಪತಿ ಮಾತ್ರ ಎಂಡೋದ ದುಷ್ಪರಿಣಾಮಕ್ಕೆ ಒಳಗಾದದ್ದಿದೆ. ಕೆಲವೊಂದು ಮನೆಯಲ್ಲಿ ಎಲ್ಲರೂ ಅದರಿಂದ ಪೀಡಿತರಾದದ್ದೂ ಇದೆ. ಇದೊಂದು ಕರುಣಾಜನಕ ಕತೆ. ಇಂಥ ಸಂದರ್ಭ ಪೀಡಿತರಲ್ಲಿ ಧೈರ್ಯ ತುಂಬುವ ಮತ್ತು ಭರವಸೆ ಕಳಕೊಳ್ಳದಂತೆ ಮಾಡುವ ಕೆಲಸ ಸರ್ಕಾರದ ವತಿಯಿಂದ ಆಗಬೇಕು. ಅವರ ನೆಮ್ಮದಿಗೆ ಒತ್ತು ನೀಡುವ ಕೆಲಸಗಳಾಗಬೇಕು. 28 ವರ್ಷಗಳ ವರೆಗೆ ಎಂಡೋಪೀಡಿತ ಮಗಳನ್ನು ಸಾಕಿದ ಅಮ್ಮ, ಅಂತಿಮವಾಗಿ ಇನ್ನು ಸಾಧ್ಯವಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿರಬೇಕಾದರೆ ಆ ತಾಯಿಯ ಎದೆಯೊಳಗೆ ನಡೆದಿರಬಹುದಾದ ಯುದ್ಧವಾದರೂ ಎಂಥದ್ದಿರಬಹುದು? ನನ್ನ ನಂತರ ಈ ಮಗಳ ಆರೈಕೆಗೆ ಇನ್ನಾರು ಎಂಬ ಪ್ರಶ್ನೆ ಬಾರಿಬಾರಿಗೂ ಕಾಡಿರಬಹುದೇ? ನಿಜವಾಗಿ,

ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರ ಅಲ್ಲ ಎಂಬುದು ಜೀವಂತ ಇರುವ ಎಲ್ಲರಿಗೂ ಗೊತ್ತಿದೆ. ಆತ್ಮಹತ್ಯೆಯಿಂದ ಅವರ ಅಸ್ತಿತ್ವ ಇಲ್ಲದಾಗುತ್ತದೆಯೇ ಹೊರತು ಸಮಸ್ಯೆಯಲ್ಲ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಸಮಸ್ಯೆಯನ್ನು ಅವರು ತನ್ನ ತಂದೆಗೋ ತಾಯಿಗೋ ಸಹೋದರ, ಸಹೋದರಿಯರಿಗೋ ಅಥವಾ ಕುಟುಂಬಕ್ಕೋ ದುಪ್ಪಟ್ಟು ಪ್ರಮಾಣದಲ್ಲಿ ವರ್ಗಾಯಿಸುತ್ತಾರೆ. ಉಡುಪಿಯ ಅಂಕಿ-ಅಂಶಗಳನ್ನೇ ಎತ್ತಿಕೊಳ್ಳಿ. ಇಲ್ಲಿ ಆತ್ಮಹತ್ಯೆ ಮಾಡಿಕೊಂಡವರಲ್ಲಿ ಅರ್ಧದಷ್ಟು ಮಂದಿ 20 ರಿಂದ 40ರ ನಡುವಿನ ಪ್ರಾಯದವರು. ಯಾವುದೇ ಸಾಹಸಪೂರ್ಣ ಕೆಲಸಕ್ಕೆ ಧುಮುಕುವ ಪ್ರಾಯ ಇದು. ಹೊಟೇಲ್ ಬ್ಯುಸಿನೆಸ್, ವ್ಯಾಪಾರ, ಭೂವ್ಯವಹಾರ, ವಾಹನಗಳನ್ನು ಖರೀದಿಸಿ ಬಾಡಿಗೆಗೆ ಕೊಡುವುದು, ಹೊಸ ಉದ್ಯಮಕ್ಕೆ ಕೈ ಹಾಕುವುದು, ಬಟ್ಟೆ, ಆಟಿಕೆ, ದಿನಸಿ ಇತ್ಯಾದಿ ಅಂಗಡಿಗಳನ್ನು ತೆರೆಯುವುದೆಲ್ಲ ಬಹುತೇಕ ಈ ಪ್ರಾಯದಲ್ಲೆ. ಆದರೆ, ನೋಟು ನಿಷೇಧವು ಇಂಥ ಉತ್ಸಾಹಗಳನ್ನು ಒಮ್ಮೆಲೇ ನೆಲಕ್ಕೆ ಕೆಡವಿ ಬಿಟ್ಟಿತು.

ಆ ಬಳಿಕ ಕೊರೋನಾದ ದಾಳಿಯು ಇದ್ದಬದ್ದ ಆತ್ಮವಿಶ್ವಾಸವನ್ನು ಧರಾಶಾಹಿಗೊಳಿಸಿತು. ನೋಟು ನಿಷೇಧದ ಬಳಿಕ ಈ ದೇಶದಲ್ಲಿ ಯಾರದಾದರೂ ಆದಾಯ ಹೆಚ್ಚಾಗಿದ್ದರೆ ಅದು ಅಂಬಾನಿ ಮತ್ತು ಅದಾನಿಯದ್ದು ಮಾತ್ರ ಎಂಬ ಮಾತನ್ನು ಸಾಬೀತುಪಡಿಸುವುದಕ್ಕೆ ಈ ದೇಶದಲ್ಲಿ ಸಾವಿರಾರು ಉದಾಹರಣೆಗಳಿವೆ. ನೋಟು ನಿಷೇಧದ ಬಳಿಕ ವ್ಯಾಪಾರಿಗಳು ಬದುಕಿ ಉಳಿಯುವುದಕ್ಕಾಗಿ ಬ್ಯಾಂಕ್ ಮತ್ತು ಫೈನಾನ್ಸ್ಗಳಿಂದ ಸಾಲ ಎತ್ತಿಕೊಂಡರು. ಇನ್ನೇನು ತಮ್ಮ ವ್ಯಾಪಾರ ಚಿಗುರೊಡೆಯುತ್ತಿದೆ ಎಂಬಂತಾದಾಗ ಕೊರೋನಾ ವಕ್ಕರಿಸಿತು. 2020ರಿಂದ 22ರ ನಡುವೆ ಎರಡು ಬಾರಿ ಕೊರೋನಾ ಮಾಡಿದ ದಾಳಿಯು ಸಾಲ ಪಡಕೊಂಡವರ ಮುಂದೆ ಬರೀ ಕತ್ತಲೆಯನ್ನಷ್ಟೇ ತೆರೆದಿಟ್ಟಿತು. ಅಲ್ಲದೇ, ಸಾಲ ಪಡಕೊಂಡವರಿಗೆ ಬಡ್ಡಿ ಮನ್ನಾ, ಸಾಲ ಮರುಪಾವತಿಗೆ ಕನಿಷ್ಠ ಎರಡು ಆರ್ಥಿಕ ವರ್ಷದ ಕಾಲಾವಕಾಶ ಇತ್ಯಾದಿ ರಿಯಾಯಿತಿಗಳನ್ನು ರಿಸರ್ವ್ ಬ್ಯಾಂಕ್ ನೀಡಲಿಲ್ಲ. ಒಂದು ಕಡೆ,

ಪಡೆದ ಸಾಲದ ಮರುಪಾವತಿಯ ಚಿಂತೆ, ಇನ್ನೊಂದು ಕಡೆ ನೋಟು ನಿಷೇಧ ಮತ್ತು ಕೊರೋನಾ ದಾಳಿಯಿಂದ ಇನ್ನೂ ಚೇತರಿಸಿಕೊಳ್ಳದ ತನ್ನ ಉದ್ಯಮ- ಇವುಗಳು ಮತ್ತೆ ಮತ್ತೆ ಕಾಡುತ್ತಾ ಸಾಲಗಾರ ರನ್ನು ಖಿನ್ನತೆಗೆ ದೂಡಿದ್ದರೆ ಅದರಲ್ಲಿ ಅಚ್ಚರಿಯೇನಿಲ್ಲ. ಇದರ ಜೊತೆಗೇ ಪ್ರೇಮ ವೈಫಲ್ಯ ಮತ್ತು ಮದ್ಯಪಾನ ಚಟಗಳು ಕೂಡ ಆತ್ಮಹತ್ಯೆಗೆ ಕಾರಣವಾಗುತ್ತಿವೆ. ಉಡುಪಿಯ 73 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 27 ಕೇಂದ್ರಗಳಿಗೆ ಖಾಸಗಿ ಆಸ್ಪತ್ರೆಯ ಮನೋರೋಗ ತಜ್ಞರು ನಿಯಮಿತವಾಗಿ ಭೇಟಿ ಕೊಟ್ಟು ಕೌನ್ಸೆಲಿಂಗ್ ನಡೆಸುತ್ತಿದ್ದಾರೆ ಎಂಬ ವರದಿಯೂ ಬಂದಿದೆ. ಈ ವರದಿಯೇ ಜನರ ಸದ್ಯದ ಮಾನಸಿಕ ಸ್ಥಿತಿಯನ್ನು ಹೇಳುತ್ತದೆ. ಹೆಚ್ಚೆಚ್ಚು ಜನರು ಖಿನ್ನತೆಯಂಥ ಮಾನಸಿಕ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಆ ಖಿನ್ನತೆಯ ಹಿಂದೆ ದುರಂತ ಕತೆಗಳಿರುತ್ತವೆ. ಸಾಲ ಮಾಡಿ ಉದ್ಯಮ ಪ್ರಾರಂಭಿಸಿ ಅದು ಕೈ ಕೊಟ್ಟಾಗ ಮದ್ಯವ್ಯಸನಕ್ಕೆ ತುತ್ತಾಗಿ ತನ್ನ ಸಹಿತ ತನ್ನ ಕುಟುಂಬದ ನೆಮ್ಮದಿಯನ್ನು ಕೆಡಿಸುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ನಮಗೆ ಅವರ ಕುಡಿತವಷ್ಟೇ ಬಾಹ್ಯನೋಟಕ್ಕೆ ಕಾಣಿಸುತ್ತದೆ. ಆ ನೋಟದ ಆಧಾರದಲ್ಲಿ ನಾವು ಅವರ ಬಗ್ಗೆ ಕೆಟ್ಟ ಷರಾ ಬರೆದು ನಿರ್ಲಕ್ಷ್ಯ ಮಾಡುತ್ತೇವೆ.

ಆದರೆ, ಅವರ ಮದ್ಯಪಾನದ ಹಿಂದೆ ಸರ್ಕಾರದ ಕೆಟ್ಟ ಆಡಳಿತ ನೀತಿಗೂ ಪಾತ್ರ ಇರುತ್ತದೆ. ಆದ್ದರಿಂದ ಆತ್ಮಹತ್ಯೆ ಮಾಡುವ ಮತ್ತು ಮದ್ಯ ಸೇವಿಸುವವರನ್ನು ಬಾಹ್ಯನೋಟದ ಆಚೆಗೆ ವಿಶ್ಲೇಷಣೆಗೆ ಒಳಪಡಿಸಬೇಕು. ಆತ್ಮಹತ್ಯೆ ಪರಿಹಾರ ಅಲ್ಲದಿರಬಹುದು. ಆದರೆ ಅದನ್ನು ಅವರಿಗೆ ಅನಿವಾರ್ಯಗೊಳಿಸಿದವರು ಕಟಕಟೆಯಲ್ಲಿ ನಿಲ್ಲುವಂತೆ ಮಾಡಬೇಕು. ಅಧಿಕಾರದಲ್ಲಿರುವವರ ಮೇಲೆ ಅದರ ಜವಾಬ್ದಾರಿಯನ್ನು ಹೊರಿಸಿ, ಜನರು ಪಾಠ ಕಲಿಸಬೇಕು.

ಮುಸ್ಲಿಮರೇ, ಶತ್ರುಗಳನ್ನು ಸೃಷ್ಟಿಸಿಕೊಳ್ಳಬೇಡಿ

 



ಪ್ರವಾದಿ(ಸ)ಯವರನ್ನು ನಿಂದಿಸುವ ಮೂಲಕ ಮುಸ್ಲಿಮ್ ಸಮುದಾಯದ ಭಾವನೆಗೆ ಧಕ್ಕೆ ತಂದ ಬಿಜೆಪಿ ಮುಖಂಡರಾದ ನೂಪುರ್ ಶರ್ಮಾ ಮತ್ತು ಜಿಂದಾಲ್‌ರನ್ನು ಈವರೆಗೂ ಬಂಧಿಸಿಲ್ಲ. ಅವರ ಮನೆ ಮೇಲೆ ಬುಲ್ಡೋಜರ್ ಹರಿಸಲಾಗಿಲ್ಲ. ಧರ್ಮ ಸಂಸದ್‌ನಲ್ಲಿ ಮುಸ್ಲಿಮರ ಹತ್ಯೆಗೆ ಕರೆ ಕೊಟ್ಟವರು ಮತ್ತು ದ್ವೇಷ ಭಾಷಣ ಮಾಡಿದವರ ಮನೆ ಮೇಲೆ ಬುಲ್ಡೋಜರ್ ಹರಿದಿಲ್ಲ. ಹಿಜಾಬ್ ವಿವಾದದ ಸಂದರ್ಭದಲ್ಲಿ ರಾಜ್ಯದ ಶಾಲೆಗಳಿಗೆ ಕಲ್ಲೆಸೆದ ವಿದ್ಯಾರ್ಥಿಗಳ ಮನೆಯನ್ನೂ ಧ್ವಂಸಗೊಳಿಸಲಾಗಿಲ್ಲ. 2018ರ ಕೊನೆಯಲ್ಲಿ ಕೇರಳದಲ್ಲಿ 7 ಹರತಾಳ ಮತ್ತು ಒಂದು ರಾಜ್ಯ ಬಂದ್ ಕೂಡ ನಡೆಯಿತು. ಇದಕ್ಕೆ ಕಾರಣ, ಶಬರಿಮಲೆಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್ ನೀಡಿದ ತೀರ್ಪು. ‘ಪ್ರಾಯ ಮಿತಿಯಿಲ್ಲದೇ ಎಲ್ಲ ಮಹಿಳೆಯರೂ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶಿಸಬಹುದು’ ಎಂದು ಅದು ತೀರ್ಪಿತ್ತಿತ್ತು. ಈ ತೀರ್ಪನ್ನು ಇವತ್ತು ಬುಲ್ಡೋಜರನ್ನು ಸಮರ್ಥಿಸುತ್ತಿರುವ ಇದೇ ಬಿಜೆಪಿ ಮತ್ತು ಸಂಘಪರಿವಾರ ತೀವ್ರವಾಗಿ ವಿರೋಧಿಸಿತ್ತು ಮತ್ತು ಹರತಾಳ ಮತ್ತು ಬಂದ್‌ಗಳನ್ನೂ ನಡೆಸಿತ್ತು. ಈ ಪ್ರತಿಭಟನೆಯಲ್ಲಿ 100ರಷ್ಟು ಸರ್ಕಾರಿ ಬಸ್‌ಗಳಿಗೆ ಹಾನಿಯಾಯಿತು. ಸರ್ಕಾರಿ ಕಚೇರಿ ಮತ್ತು ಲೈಬ್ರರಿಗಳು ಹಾನಿಗೊಂಡವು. 3000ದಷ್ಟು ಮಂದಿಯನ್ನು ಬಂಧಿಸಲಾಯಿತು. 500ಕ್ಕಿಂತಲೂ ಅಧಿಕ ಪ್ರಕರಣಗಳು ದಾಖಲಾದುವು. 144 ಸೆಕ್ಷನ್ ಜಾರಿಗೊಳಿಸಲಾಯಿತು. ಆದರೆ, ಇವರಾರ ಮನೆಯ ಮೇಲೂ ಬುಲ್ಡೋಜರ್ ಹರಿದಿಲ್ಲ ಮತ್ತು ಬಿಜೆಪಿಯಾಗಲಿ ಸಂಘಪರಿವಾರವಾಗಲಿ, ಬುಲ್ಡೋಜರ್ ಹರಿಸುವಂತೆ ಆಗ್ರಹಿಸಿಯೂ ಇಲ್ಲ.

ಆದರೆ ಪ್ರವಾದಿ ನಿಂದನೆಯಿಂದ ಪ್ರಚೋದನೆಗೊಂಡು ಬೀದಿಗಿಳಿದ ಉತ್ತರ ಪ್ರದೇಶದ ಮುಸ್ಲಿಮರ ಮನೆಯನ್ನು ಬುಲ್ಡೋಜರ್ ಹರಿಸಿ ಧ್ವಂಸಗೊಳಿಸಲಾಗುತ್ತಿದೆ. ಇದಕ್ಕಿಂತ ತಿಂಗಳ ಮೊದಲು ದೆಹಲಿಯಲ್ಲೂ ಇಂಥದ್ದೇ ಕ್ರೌರ್ಯ ಎಸಗಲಾಗಿತ್ತು. ಮುಸ್ಲಿಮ್ ಬಾಹುಳ್ಯದ ಪ್ರದೇಶದ ಮೇಲೆ ಬಿಜೆಪಿ ಆಡಳಿತದ ನಗರ ಪಾಲಿಕೆ ಬುಲ್ಡೋಜರ್ ಹರಿಸಿತ್ತು. ಇದೇ ಸಂದರ್ಭದಲ್ಲಿ ಮಧ್ಯಪ್ರದೇಶಕ್ಕೂ ಈ ಕ್ರೌರ್ಯ ವಿಸ್ತರಿಸಿತ್ತು. ಅಷ್ಟಕ್ಕೂ,

ಹಿಂಸಾತ್ಮಕ ಪ್ರತಿಭಟನೆಯನ್ನು ತೋರಿಸಿ ಬುಲ್ಡೋಜರನ್ನು ಸಮರ್ಥಿಸುವವರು, ಶಾಲೆಗೆ ಕಲ್ಲೆಸೆದು ಸಾರ್ವಜನಿಕ ಆಸ್ತಿಪಾಸ್ತಿಗೆ ನಷ್ಟವುಂಟು ಮಾಡಿದವರ ಮನೆಯನ್ನೂ ಧ್ವಂಸಗೊಳಿಸುವಂತೆ ಆಗ್ರಹಿಸಬೇಕಿತ್ತಲ್ಲ? ಶಬರಿಮಲೆಗೆ ಸಂಬಂಧಿಸಿ ಸುಪ್ರೀಮ್ ತೀರ್ಪನ್ನು ವಿರೋಧಿಸಿ ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾದವರ ಮನೆಯನ್ನೂ ಧ್ವಂಸಗೊಳಿಸಲು ಆಗ್ರಹಿಸಬೇಕಿತ್ತಲ್ಲ? ಅಂದರೆ,

ಇಲ್ಲಿನ ಉದ್ದೇಶ ಸ್ಪಷ್ಟ. ಈ ಬುಲ್ಡೋಜರ್ ಮುಸ್ಲಿಮರ ವಿರುದ್ಧ ಮಾತ್ರ ಹರಿಯುತ್ತದೆ. ಮಾತ್ರವಲ್ಲ, ಬಿಜೆಪಿ ಸರ್ಕಾರದ ವಿರುದ್ಧ ಯಾರೆಲ್ಲ ಮಾತಾಡುತ್ತಾರೋ ಮತ್ತು ಹೋರಾಡುತ್ತಾರೋ ಅವರನ್ನೇ ಈ ಬುಲ್ಡೋಜರ್ ಗುರಿಯಾಗಿಸಿಕೊಳ್ಳುತ್ತದೆ. ಇದಕ್ಕೆ ಉದಾಹರಣೆ,

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಜಾವೇದ್ ಅಹ್ಮದ್. ಇವರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಸ್ಥಳೀಯ ಮುಖಂಡರು. ಅದಕ್ಕಿಂತಲೂ ಮುಖ್ಯವಾಗಿ ಜೆಎನ್‌ಯು ವಿದ್ಯಾರ್ಥಿ ಸಂಘದ ಈಗಿನ ಚುನಾಯಿತ ಸದಸ್ಯೆ ಮತ್ತು ಅಲಿಘಡ್ ಮುಸ್ಲಿಮ್ ಮಹಿಳಾ ಯುನಿವರ್ಸಿಟಿಯ ಮಾಜಿ ಅಧ್ಯಕ್ಷೆ ಅಫ್ರೀನ್ ಫಾತಿಮಾರ ತಂದೆ. ಎನ್‌ಆರ್‌ಸಿ ಹೋರಾಟದಲ್ಲಿ ಈ ಅಫ್ರೀನ್ ಫಾತಿಮಾ, ಅವರ ತಂದೆ, ತಾಯಿ ಮತ್ತು ಸಹೋದರಿ ಸಕ್ರಿಯವಾಗಿ ಭಾಗವಹಿಸಿದ್ದರು. ಅನೇಕ ವೇದಿಕೆಗಳಲ್ಲಿ ಈ ಅಫ್ರೀನ್ ಫಾತಿಮಾ ಮಾತಾಡಿದ್ದರು. ಇದೀಗ ಇವರ ಮನೆಯನ್ನು ಬುಲ್ಡೋಜರ್ ಹರಿಸಿ ಧ್ವಂಸ ಮಾಡಲಾಗಿದೆ. ಈ ಧ್ವಂಸಕ್ಕಿಂತ ಒಂದು ದಿನ ಮೊದಲು ಪ್ರತಿಭಟನೆಯ ನೆಪದಲ್ಲಿ ಅಫ್ರೀನ್‌ರ ತಂದೆ, ತಾಯಿ ಮತ್ತು ಸಹೋದರಿಯನ್ನು ಬಂಧಿಸಲಾಗಿತ್ತು. ಈ ಮನೆ ಅಕ್ರಮ ಎಂಬುದು ಬುಲ್ಡೋಜರ್ ಹರಿಸಿದವರ ಸಮರ್ಥನೆ. ಆದರೆ ಈ ಸಮರ್ಥನೆ ಪರಮ ಸುಳ್ಳು ಅನ್ನುವುದಕ್ಕೆ ಅವರ ಬಂಧನ ಮತ್ತು ಮರುದಿನದ ಬುಲ್ಡೋಜರೇ ಅತ್ಯುತ್ತಮ ಪುರಾವೆ. ಒಂದುವೇಳೆ ಆ ಮನೆ ಅಕ್ರಮವೇ ಆಗಿದ್ದರೆ ಇಷ್ಟು ಸಮಯ ತಡ ಮಾಡಿದ್ದೇಕೆ? ರಾತ್ರಿ ಹಗಲಾಗುವುದರ ನಡುವೆ ಆ ತಾರಸಿ ಮನೆಯನ್ನು ಕಟ್ಟಲು ಸಾಧ್ಯವೇ? ಕಳೆದ 25 ವರ್ಷಗಳಿಂದ ನಾವು ಆ ಮನೆಗೆ ತೆರಿಗೆ ಕಟ್ಟುತ್ತಿದ್ದೇವೆ ಎಂದು ಅಫ್ರೀನ್ ಫಾತಿಮಾ ಹೇಳಿದ್ದಾರೆ. ಕಟ್ಟಡ ಅಕ್ರಮ ವೆಂದಾದರೆ ತೆರಿಗೆ ಸಕ್ರಮ ಹೇಗಾಗುತ್ತದೆ? ಕಳೆದ 25 ವರ್ಷಗಳಿಂದ ಸರ್ಕಾರ ಯಾವ ಆಧಾರದಲ್ಲಿ ತೆರಿಗೆ ಸ್ವೀಕರಿಸಿದೆ? ಆ ತೆರಿಗೆಯೇ ಆ ಮನೆ ಸಕ್ರಮ ಎಂಬುದಕ್ಕೆ ಪುರಾವೆ ಅಲ್ಲವೇ? ಒಂದುವೇಳೆ ಅಕ್ರಮವೇ ಆಗಿದ್ದರೆ, 25 ವರ್ಷಗಳಿಂದ ತೆರಿಗೆ ಸ್ವೀಕರಿಸಿದ ಮತ್ತು ಆ ಮನೆ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಮೊದಲು ಕ್ರಮ ಕೈಗೊಳ್ಳಬೇಕಿತ್ತಲ್ಲವೇ? ನಿಜವಾಗಿ,

ಪ್ರಭುತ್ವ ಜನಾಂಗ ವಿರೋಧಿಯಾದರೆ ಏನಾಗಬಹುದು ಎಂಬುದರ ಸೂಚನೆ ಇದು. ಜನಾಂಗ ವಿರೋಧಿ ಸರ್ಕಾರವು ಯಾವುದೇ ಪ್ರಕರಣವನ್ನು ಎರಡು ರೀತಿಯಾಗಿ ವಿಭಜಿಸುತ್ತದೆ. ಅವರದು ಮತ್ತು ನಮ್ಮದು. ನಮ್ಮದು ಸಹ್ಯ ಮತ್ತು ಅವರದು ಅಸಹ್ಯ ಎಂದು ಮರು ವಿಂಗಡನೆಯನ್ನೂ ಮಾಡುತ್ತದೆ. ಉತ್ತರ ಪ್ರದೇಶದ ಬುಲ್ಡೋಜರ್‌ನ ಹಿಂದಿರುವುದು ಇದೇ ಲೆಕ್ಕಾಚಾರ. ಅಂದಹಾಗೆ,

ಮುಸ್ಲಿಮರು ಹೀಗೇಕೆ ಎಂಬ ಪ್ರಶ್ನೆಯು ಪ್ರವಾದಿ ನಿಂದನೆಯನ್ನು ಖಂಡಿಸಿ ಮುಸ್ಲಿಮರು ನಡೆಸಿದ ಪ್ರತಿಭಟನೆಯ ಬಳಿಕ ಹುಟ್ಟಿಕೊಂಡಿದೆ. ಈ ಪ್ರಶ್ನೆ ಕುಚೋದ್ಯದ್ದಲ್ಲ, ನಿರ್ಲಕ್ಷಿಸಬೇಕಾದದ್ದೂ ಅಲ್ಲ. ಪ್ರತಿಭಟನೆ ಪ್ರತಿಯೋರ್ವರ ಹಕ್ಕು ಎಂದು ಹೇಳುವಾಗ, ಕಾನೂನು ಪಾ ಲಿಸಬೇಕಾದುದು ಪ್ರತಿಯೋ ರ್ವನ ಕರ್ತವ್ಯ ಎಂದೂ ಹೇಳಬೇಕಾಗುತ್ತದೆ. ಈ ಹಕ್ಕು ಮತ್ತು ಕರ್ತವ್ಯಗಳ ನಡುವೆ ಹೊಂದಾಣಿಕೆ ಆಗ ದಿದ್ದರೆ ಏನಾಗಬಹುದು ಎಂಬುದಕ್ಕೆ ಪ್ರವಾದಿ ನಿಂದನೆಯನ್ನು ವಿರೋಧಿಸಿ ನಡೆದ ಪ್ರತಿಭಟನೆಯೇ ಸಾಕ್ಷಿ. ಈ ಪ್ರತಿಭಟನೆಗೆ ಯಾರು ಕರೆ ಕೊಟ್ಟಿದ್ದಾರೆ ಎಂಬುದೇ ಸ್ಪಷ್ಟವಿಲ್ಲ. ಆದರೆ ಈ ಪ್ರತಿಭಟನೆಯಲ್ಲಿ ಎಸೆಯಲಾದ ಕಲ್ಲು ದೇಶದಾದ್ಯಂತ ಚರ್ಚೆಗೊಳಗಾಗಿದೆ. ಮುಸ್ಲಿಮರು ಹಿಂಸಾಪ್ರಿಯರು ಎಂದು ಮುದ್ರೆಯೊತ್ತಲು ಕಾದಿರುವವರಿಗೆ ಬೇಕಾದ ಪುರಾವೆಗಳನ್ನು ಸ್ವತಃ ಮುಸ್ಲಿಮರೇ ಚಿನ್ನದ ತಟ್ಟೆಯಲ್ಲಿಟ್ಟು ಕೊಟ್ಟು ಬಿಟ್ಟಿದ್ದಾರೆ. ಈ ಪ್ರತಿಭಟನೆಗಿಂತ ಮೊದಲು ಸುಮಾರು 17 ರಾಷ್ಟ್ರಗಳು ಭಾರತ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದುವು. ನೂಪುರ್ ಮತ್ತು ಜಿಂದಾಲ್‌ರಿಂದಾಗಿ ಪ್ರಭುತ್ವ ತೀವ್ರ ಮುಜುಗರವನ್ನು ಎದುರಿಸುತ್ತಿತ್ತು.

ಆದರೆ ಮುಸ್ಲಿಮರು ನಡೆಸಿದ ಪ್ರತಿಭಟನೆ ಸರ್ಕಾರವನ್ನು ಮುಜುಗರಿಂದ ಪಾರು ಮಾಡಿತು. ಮುಸ್ಲಿಮರು ಪ್ರತಿಭಟನೆ ನಡೆಸಬೇಕು ಎಂದು ಬಯಸುವ ಪ್ರಭುತ್ವ ಇವತ್ತು ಅಧಿಕಾರದಲ್ಲಿದೆ ಮತ್ತು ಮುಸ್ಲಿಮರ ಪ್ರತಿಭಟನೆಯನ್ನು ಹೇಗೆ ಹಿಂದೂ ವಿರೋಧಿ ಮತ್ತು ದೇಶವಿರೋಧಿಯಾಗಿ ಚಿತ್ರಿಸಬೇಕೆಂದೂ ಅದಕ್ಕೆ ಗೊತ್ತಿದೆ. ಇಂಥ ಸಂದರ್ಭದಲ್ಲಿ ಮುಸ್ಲಿಮರ ಪ್ರತಿ ಹೆಜ್ಜೆಯೂ ಲೆಕ್ಕಾಚಾರದ್ದಾಗಿರಬೇಕು. ಪ್ರತಿಭಟನೆ ಮಾಡಲೇಬೇಕೆಂದಿದ್ದರೆ ಆ ಪ್ರತಿಭಟನೆಯನ್ನು ಸಮಾಜದ್ರೋಹಿಗಳು ಕೈವಶ ಮಾಡಿಕೊಳ್ಳದಂತೆ ಸರ್ವ ಪೂರ್ವ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕು. ಪ್ರತಿಭಟನೆಯನ್ನು ಆಯೋಜಿಸುವಷ್ಟೇ ಆ ಪ್ರತಿಭಟನೆ ಹೇಗೆ ಅಂತ್ಯಗೊಳ್ಳುತ್ತದೆ ಎಂಬುದೂ ಮುಖ್ಯ. ಮಾಧ್ಯಮಗಳ ಕ್ಯಾಮರಾಗಳು ದೇಶಪ್ರೇಮಿ ಘೋಷಣೆ, ನ್ಯಾಯಯುತ ಹಕ್ಕುಗಳ ಬೇಡಿಕೆಯತ್ತ ತಿರುಗುವುದಿಲ್ಲ. ಎಲ್ಲಿ ಕಾನೂನು ವಿರೋಧಿ ಕೃತ್ಯಗಳಾಗುತ್ತೆ ಎಂಬುದನ್ನು ಹುಡುಕುತ್ತಿರುತ್ತದೆ. ಇಂಥ ಸಂದರ್ಭದಲ್ಲಿ ಪ್ರತಿಭಟನೆಗಿಳಿದವರು ಮೈಯೆಲ್ಲ ಕಣ್ಣಾಗಿರಬೇಕಾದುದು ತೀರಾ ಅಗತ್ಯ. ಯಾವ ಕಾರಣಕ್ಕೂ ಕಾನೂನನ್ನು ಕೈಗೆತ್ತಿಕೊಳ್ಳುವ ಮತ್ತು ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗುವ ವರ್ತನೆ ಖಂಡನಾರ್ಹ.

ಪ್ರವಾದಿ ನಿಂದನೆಯನ್ನು ವಿರೋಧಿಸಿ ನಡೆಸಲಾದ ಪ್ರತಿಭಟನೆಯು ಮುಸ್ಲಿಮರ ಪರ ಅನುಕಂಪದ ಬದಲು ಅಸಮಾಧಾನವನ್ನು ಹೆಚ್ಚಿಸಿದೆ. ಈ ವಿಷಯದಲ್ಲಿ ಮುಸ್ಲಿಮರ ಪರ ಧ್ವನಿಯೆತ್ತುತ್ತಿದ್ದವರ ಧ್ವನಿಯನ್ನೂ ಮೌನವಾಗಿಸಿದೆ. ಇದು ಮುಸ್ಲಿಮ್ ಸಮುದಾಯದ ಸ್ವಯಂಕೃತಾ ಪರಾಧ. ಕಾನೂನನ್ನು ಪಾಲಿಸದ ಯಾವ ಸಮುದಾಯವೂ ಸಾರ್ವಜನಿಕರಿಂದಾಗಲಿ, ನ್ಯಾಯಾಂಗದಿಂದಾಗಲಿ ಅಥವಾ ನ್ಯಾಯದ ಪರ ಧ್ವನಿಯೆತ್ತುವ ಮನುಷ್ಯ ಪ್ರೇಮಿಗಳಿಂದಾಗಲಿ ಬೆಂಬಲ ಗಿಟ್ಟಿಸಲು ಸಾಧ್ಯವಿಲ್ಲ. ಅನ್ಯಾಯವನ್ನು ಪ್ರಶ್ನಿಸುವುದಕ್ಕೆ ನ್ಯಾಯಯುತವಾದ ಮಾರ್ಗವನ್ನೇ ಆಯ್ದುಕೊಳ್ಳಬೇಕು. ಪ್ರವಾದಿ ನಿಂದನೆಗೆ ಸಂಬಂಧಿಸಿದ ಪ್ರತಿಭಟನೆಯಿಂದ ಮುಸ್ಲಿಮರಿಗೆ ಏನು ದಕ್ಕಿದೆ ಎಂದು ಅವಲೋಕಿಸಿದರೆ, ಲಾಠಿ ಏಟು, ಜೀವ ಹಾನಿ, ಜೈಲು, ಆಸ್ತಿ-ಪಾಸ್ತಿ ನಷ್ಟ ಇತ್ಯಾದಿಗಳು ಮಾತ್ರ. ಜೈಲಲ್ಲಿರಬೇಕಾಗಿದ್ದು ನೂಪುರ್ ಶರ್ಮ ಮತ್ತು ಜಿಂದಾಲ್. ಆದರೆ, ಇವತ್ತು ಮುಸ್ಲಿಮರು ಜೈಲಲ್ಲಿದ್ದಾರೆ. ಲಾಠಿಯೇಟಿಗೆ ಗುರಿಯಾಗಿದ್ದಾರೆ. ಆದರೆ, ಜೈಲಲ್ಲಿರಬೇಕಾದವರು ಹೊರಗಡೆಯಿದ್ದಾರೆ. ಇದಕ್ಕೆ ಪ್ರಭುತ್ವವನ್ನಷ್ಟೇ ದೂರಿ ಪ್ರಯೋಜನವಿಲ್ಲ. ಮುಸ್ಲಿಮರ ಪಾಲೂ ಇದರಲ್ಲಿದೆ. ತಮ್ಮ ಮಾತು, ವರ್ತನೆಗಳಿಂದ ಈ ದೇಶದ ಜನರ ಹೃದಯದಲ್ಲಿ ಜಾಗ ಗಿಟ್ಟಿಸಿಕೊಳ್ಳಬೇಕಿದ್ದ ಮುಸ್ಲಿಮರು, ಶತ್ರುಗಳನ್ನು ಸೃಷ್ಟಿಸಿಕೊಳ್ಳುತ್ತಿರುವುದು ಅಪಾಯಕಾರಿ. ಇದು ಬದಲಾಗಲಿ.

ಧರ್ಮ ದಂಗಲ್ ಎನ್ನುತ್ತಾ ರಂಗಭೂಮಿಗೆ ಕನ್ನ ಕೊರೆದ ಟಿವಿ ಚಾನೆಲ್ ಗಳು

 



ಮುಸ್ಲಿಮರನ್ನೇ ಕೇಂದ್ರೀಕರಿಸಿ ‘ಧರ್ಮ ದಂಗಲ್’ ಎಂಬಂಥ  ಪ್ರಚೋದಕ ಶೀರ್ಷಿಕೆಗಳನ್ನು ಕೊಟ್ಟು ಟಿ.ವಿ. ಚಾನೆಲ್‌ಗಳು ನಡೆಸುತ್ತಿದ್ದ  ಚರ್ಚೆಯಿಂದ ರೋಮಾಂಚನಗೊಂಡವರಂತೆ  ವರ್ತಿಸುತ್ತಿದ್ದವರ ಮಾತಿನ ವರಸೆ ಬದಲಾಗುತ್ತಿದೆ.

`ರಾತ್ರಿ 10ರಿಂದ ಮುಂಜಾನೆ 6ರ ವರೆಗೆ ಮೈಕ್ ಬಳಸಬಾರದು ಎಂಬ ಸುಪ್ರೀಮ್ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಿ...'  ಎಂದು ಒತ್ತಾಯಿಸಿ ಅಭಿಯಾನ ನಡೆಸಿದವರ ಧ್ವನಿ ತಗ್ಗಿದೆ. ಮೌನವಾಗಿದ್ದವರಿಗೆ ಧ್ವನಿ ಬಂದಿದೆ. ಯಕ್ಷಗಾನ ಕ್ಷೇತ್ರದ ಕಲಾವಿದರು ಮೈಕ್  ನಿಷೇಧದಿಂದಾಗುವ ಪರಿಣಾಮಗಳ ಬಗ್ಗೆ ಮೊದಲ ಬಾರಿ ಮಾತಾನಾಡಿದ್ದಾರೆ. ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಕಲಾವಿದರಾದ  ಚಂದ್ರಶೇಖರ ಮುಂಡಾಜೆ, ವಿಶ್ವನಾಥ ನಾಯಕ್ ಕಾರಿಂಜೆ ಮುಂತಾದವರು ಮೈಕ್ ನಿಷೇಧಕ್ಕೆ ಅಸಮಾಧಾನವನ್ನು ಮಾಧ್ಯಮಗಳ  ಮುಂದೆ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಯಕ್ಷಗಾನ ಸಂಜೆ 6ರಿಂದ ಬೆಳಿಗ್ಗೆ 6ರ ವರೆಗೆ ನಡೆಯುವ ಸಂಪ್ರದಾಯವಿದ್ದು, ಇದು  ಬಹುತೇಕ ಮೈಕನ್ನೇ ಅವಲಂಬಿಸಿದೆ. ಮೈಕ್ ಇಲ್ಲದ ಯಕ್ಷಗಾನವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲದ ಕಾರಣ, ನಿಯಮದಿಂದ  ಯಕ್ಷಗಾನಕ್ಕೆ ವಿನಾಯಿತಿ ನೀಡಬೇಕು ಎಂದು ಪಟ್ಲ ಸತೀಶ್ ಶೆಟ್ಟಿ ಸರ್ಕಾರವನ್ನು ಕೋರಿದ್ದಾರೆ. ಹಾಗಂತ,

ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಮೈಕ್ ಬಳಕೆಯನ್ನು ನಿರ್ಬಂಧಿಸಿ ಸರ್ಕಾರ ಸುತ್ತೋಲೆ ಹೊರಡಿಸಿದ್ದು ದಿಢೀರ್ ಆಗಿ ಅಲ್ಲ.

ಮೈಕನ್ನು ಕೇಂದ್ರೀಕರಿಸಿ ಚರ್ಚೆ ನಡೆಯುವುದಕ್ಕಿಂತ ಮರ‍್ನಾಲ್ಕು ತಿಂಗಳುಗಳ ಮೊದಲೇ ರಾಜ್ಯದಲ್ಲಿ ಮುಸ್ಲಿಮರನ್ನು ಗುರಿ ಮಾಡಿ  ಚರ್ಚೆ ಪ್ರಾರಂಭವಾಗಿತ್ತು. ಮುಸ್ಲಿಮ್ ವಿದ್ಯಾರ್ಥಿನಿಯರು ಧರಿಸುವ ಹಿಜಾಬ್ ಈ ಚರ್ಚೆಗೆ ಮುನ್ನುಡಿ ಬರೆಯಿತು. ಈ ಚರ್ಚೆಯನ್ನು ಎಷ್ಟು ಏಕಮುಖ ಗೊಳಿಸಲಾಯಿತೆಂದರೆ, ಬಿಂದಿ, ಕಾಲುಂಗುರ, ರುದ್ರಾಕ್ಷಿ ಮಾಲೆ, ನಾಮ, ಸಿಕ್ಖರ ಟರ್ಬನ್... ಎಲ್ಲವನ್ನೂ ಸಂಸ್ಕೃತಿಯ  ಹೆಸರಲ್ಲಿ ಸಮರ್ಥಿಸುತ್ತಾ, ಹಿಜಾಬನ್ನು ಮಾತ್ರ ಧಾರ್ಮಿಕ ಉಡುಪು ಎಂದು ವಿಭಜಿಸಲಾಯಿತು. ಹಿಜಾಬ್‌ಧಾರಿ ವಿದ್ಯಾರ್ಥಿನಿಯರನ್ನು ಇದೇ ಮೊದಲ ಬಾರಿ ನೋಡುವಂತೆ ಮಾಧ್ಯಮ ಕ್ಯಾಮರಾಗಳು ಬೆರಗಿನಿಂದ ಸೆರೆ ಹಿಡಿದುವು. ಆವರೆಗೆ ಹಿಜಾಬ್ ಧರಿಸಿ ತರಗತಿಯೊಳಗೆ ಕುಳಿತು ಪಾಠ ಕೇಳಲು ಅನುಮತಿಯಿತ್ತಿದ್ದ ಕಾಲೇಜುಗಳೇ ಹಿಜಾಬ್ ವಿರೋಧಿ ಅಬ್ಬರಕ್ಕೆ ಮಣಿದು ಅನುಮತಿ ನಿರಾಕರಿಸಿದುವು. ಸರ್ಕಾರವೇ ತನ್ನ ಈ ಹಿಂದಿನ ಸುತ್ತೋಲೆಯನ್ನು ತಿದ್ದಿ ಹೊಸ ಸುತ್ತೋಲೆಯನ್ನು ಹೊರಡಿಸಿತು.  ಹಿಜಾಬ್‌ನ ವಿರುದ್ಧ ಕೇಸರಿ ಶಾಲು ರಂಗಪ್ರವೇಶಿಸಿತು. ನಿಜವಾಗಿ,

ಹಿಜಾಬ್ ಎಂಬುದು ವಿದ್ಯಾರ್ಥಿನಿಯರು ಮತ್ತು ಶಾಲಾಡಳಿತದ ನಡುವಿನ ವಿಷಯವೇ ಹೊರತು ಹಿಂದೂಗಳು ಮತ್ತು  ಮುಸ್ಲಿಮರ ನಡುವಿನದ್ದಲ್ಲ. ಆದರೆ, ಸಚಿವರು, ಆಳುವ ಪಕ್ಷದ ಜನಪ್ರತಿನಿಧಿಗಳು ಮತ್ತು ಮಾಧ್ಯಮಗಳು ಇಡೀ ವಿಷಯವನ್ನು ಹಿಂದೂ- ಮುಸ್ಲಿಮ್ ಆಗಿ ಪರಿವರ್ತಿಸಿದುವು. ಸರ್ಕಾರ ಹೈಕೋರ್ಟ್ನಲ್ಲಿ ಹಿಜಾಬ್‌ನ ವಿರುದ್ಧ ವಾದಿಸಿತು. ವಿದ್ಯಾರ್ಥಿನಿಯರ  ಶಿಕ್ಷಣ ಮೊಟಕುಗೊಳ್ಳದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕಾದ ಸರಕಾರವು ಅಚ್ಚರಿಯೆಂಬಂತೆ  ಅದಕ್ಕೆ ವಿರುದ್ಧವಾಗಿ ವರ್ತಿಸಿತು.  ಗೇಟು ಹಾಕಿ ವಿದ್ಯಾರ್ಥಿನಿಯರು ಕ್ಯಾಂಪಸ್ ಪ್ರವೇಶಿಸದಂತೆ ತಡೆಯುವುದಕ್ಕೆ ತಾನೇ ನೇತೃತ್ವ ನೀಡಿತು. ಮುಸ್ಲಿಮರನ್ನು ಖಳರಂತೆ,  ಕರ್ಮಠರಂತೆ, ಮತ್ತು ಹಿಂದೂ ವಿರೋಧಿಗಳಂತೆ ಬಿಂಬಿಸುವ ಶ್ರಮ ಸರ್ಕಾರದಿಂದ ಹಿಡಿದು ಮಾಧ್ಯಮಗಳ ವರೆಗೆ ಬಿರುಸಾಗಿ  ನಡೆಯಿತು. ಇದರ ಬೆನ್ನಿಗೇ ಮುಸ್ಲಿಮರಿಗೆ ವ್ಯಾಪಾರ ಬಹಿಷ್ಕಾರ ಹೇರುವ ಕೂಗು ಕೇಳಿ ಬಂತು. ಜಾತ್ರೆಗಳಲ್ಲಿ ಮುಸ್ಲಿಮ್ ವರ್ತಕರು  ಅಂಗಡಿ ಇಡುವಂತಿಲ್ಲ ಎಂಬುದನ್ನು ಘಂಟಾಘೋಷವಾಗಿ ಸಾರಲಾಯಿತು. ಸಚಿವರೇ ಇಂಥ ಪ್ರಕ್ರಿಯೆಯನ್ನು ಕಾನೂನಿನ ನೆಪದಲ್ಲಿ  ಸಮರ್ಥಿಸಿದರು. ದೇವಾಲಯದ ಸಮೀಪ ಕಲ್ಲಂಗಡಿ ಇಟ್ಟಿದ್ದ ನಬಿಸಾಬ್ ಎಂಬ ವಯೋವೃದ್ಧನ ಕಲ್ಲಂಗಡಿ ಹಣ್ಣುಗಳನ್ನು ನೆಲಕ್ಕೆ  ಚೆಲ್ಲಲಾಯಿತು. ಆ ಬಳಿಕ ಹಲಾಲ್ ಆಹಾರದ ಬಗ್ಗೆ ಚರ್ಚೆ ಶುರುವಾಯಿತು. ಹಲಾಲ್‌ಗೆ ವಿರುದ್ಧವಾಗಿ ಜಟ್ಕಾ ಕಟ್ ಅನ್ನು ಮುನ್ನೆಲೆಗೆ  ತರಲಾಯಿತು. ಜಟ್ಕಾ ಕಟ್ ಅಂಗಡಿಗಳು ತೆರೆದುವು. ಹಲಾಲ್ ಪದ್ಧತಿಯನ್ನು ಹಿಂದೂ ವಿರೋಧಿ ಎಂದು ಬಿಂಬಿಸಿ, ಅದರ ಸುತ್ತ ಹಲವು ಕಲ್ಪಿತ ಕತೆಗಳನ್ನು ಹುಟ್ಟು ಹಾಕಿ ಸಮಾಜವನ್ನು ಹಿಂದೂ ಮುಸ್ಲಿಮ್ ಆಗಿ ಒಡೆಯುವ ಪ್ರಯತ್ನ ನಡೆಯಿತು. ಹಲಾಲ್  ಮಾಂಸೋದ್ಯಮದಿಂದ  ಬರುವ ಹಣವು ಭಯೋತ್ಪಾದನೆಗೆ ಬಳಕೆಯಾಗುತ್ತಿದೆ ಎಂಬ ವದಂತಿಯನ್ನು ಹಬ್ಬಲಾಯಿತು. ಇದರ  ಜೊತೆಜೊತೆಗೇ ಮುಸ್ಲಿಮ್ ವ್ಯಾಪಾರಿಗಳಿಗೆ ಮಾವು ಮಾರಬೇಡಿ, ಕುರಿ, ಆಡುಗಳನ್ನು ಮಾರಬೇಡಿ ಎಂದೆಲ್ಲಾ ಕರೆ ಕೊಡಲಾಯಿತು.  ಇದೇವೇಳೆ,
`ಅಕ್ಷಯ ತೃತೀಯದ ಪ್ರಯುಕ್ತ ಚಿನ್ನ ಖರೀದಿಸುವವರು ಹಿಂದೂಗಳ ಮಳಿಗೆಗಳನ್ನೇ  ಆಯ್ಕೆ ಮಾಡಿಕೊಳ್ಳಿ' ಎಂಬ ಪ್ರಚಾರವೂ  ನಡೆಯಿತು. ಆ ಬಳಿಕದ್ದೇ  ಮೈಕ್ ಚರ್ಚೆ.

ಮೈಕ್ ಬಳಕೆಯ ಬಗ್ಗೆ ಸುಪ್ರೀಮ್ ತೀರ್ಪನ್ನು ಎತ್ತಿಕೊಂಡು ಇಲ್ಲಿನ ಮಾಧ್ಯಮಗಳು ಮತ್ತು ಕೆಲವು ಹರಕು ಬಾಯಿಗಳು ಎಷ್ಟು ಪಕ್ಷಪಾತಿತನದಿಂದ ಚರ್ಚೆ ಹುಟ್ಟು ಹಾಕಿದುವೆಂದರೆ, ಈ ರಾಜ್ಯದಲ್ಲಿ ಮುಸ್ಲಿಮರು ಮಾತ್ರ ಮೈಕ್ ಬಳಸುತ್ತಿದ್ದಾರೆ ಎಂದೇ ನಂಬುವಷ್ಟು.  ಸುಪ್ರೀಮ್ ತೀರ್ಪಿನಂತೆ ಸರ್ಕಾರ ನಡೆದುಕೊಂಡರೆ ಮುಂಜಾನೆಯ ಅಝಾನ್ ಸ್ಥಗಿತಗೊಳ್ಳುತ್ತದೆ ಎಂಬ ವಾದವನ್ನು ತೇಲಿಬಿಟ್ಟು ಟಿ.ವಿ.  ಆ್ಯಂಕರ್‌ಗಳು ಜನಸಾಮಾನ್ಯರನ್ನು ರೋಮಾಂಚಿತಗೊಳಿಸಿದರು. ಸರ್ಕಾರದ ಹೊಣೆಗಾರರು ಪರೋಕ್ಷವಾಗಿ ಇದಕ್ಕೆ ದನಿಗೂಡಿಸಿದರು.  ರಾಜ್ಯದಲ್ಲಿ ಎಷ್ಟೆಷ್ಟು ಮಸೀದಿಗಳಿವೆ ಮತ್ತು ಅವುಗಳಲ್ಲಿ ಎಷ್ಟೆಷ್ಟು ಮೈಕ್‌ಗಳಿವೆ ಎಂಬಲ್ಲಿಂದ ತೊಡಗಿ ಅಝಾನ್‌ನಿಂದಾಗುವ ಮಾನಸಿಕ  ಕಿರಿಕಿರಿ, ನಿದ್ರಾಭಂಗಗಳ ವರೆಗೆ ಚರ್ಚೆ ರಸವತ್ತಾಗಿ ನಡೆಯತೊಡಗಿತು. ಅಷ್ಟಕ್ಕೂ,

ಸುಪ್ರೀಮ್‌ನ ಆದೇಶದಲ್ಲಿ ಮಸೀದಿಯ ಮೈಕ್‌ಗಳು ಎಂಬ ಉಲ್ಲೇಖವೇ ಇರಲಿಲ್ಲ. ರಾತ್ರಿ 10ರಿಂದ ಬೆಳಿಗ್ಗೆ 6ರ ವರೆಗೆ ಯಾವ  ಮೈಕ್‌ಗಳೂ ಮಾತಾಡಬಾರದು ಎಂದಷ್ಟೇ ಸುಪ್ರೀಮ್ ಹೇಳಿದೆ. ಆದ್ದರಿಂದ ಮೈಕ್ ಕುರಿತಾದ ಯಾವುದೇ ಚರ್ಚೆ ಮತ್ತು ಹೇಳಿಕೆಯು,  ಮೈಕ್ ಬಳಸಿ ಮಾಡಲಾಗುವ ಯಕ್ಷಗಾನ, ರಸಮಂಜರಿ, ಜಾತ್ರೆ, ಕೋಲ, ಉರೂಸ್, ಮೆಹಂದಿ, ಗಣಪತಿ ಮೆಂಡಾಲ್, ಅಯ್ಯಪ್ಪ ಭಜನೆ,  ಸುಪ್ರಭಾತ... ಇತ್ಯಾದಿಗಳನ್ನು ಒಳಗೊಂಡದ್ದಾಗಿರಬೇಕಿತ್ತೇ ಹೊರತು ಅಝಾನ್ ಕೇಂದ್ರಿತವಾಗಿ ಅಲ್ಲ. ಆದರೆ ಚರ್ಚೆ ನಡೆದದ್ದು ಕೇವಲ  ಅಝಾನ್ ಸುತ್ತ ಮಾತ್ರ. `ಮಸೀದಿಯಿಂದ ಮೈಕ್‌ಗಳನ್ನು ಕಿತ್ತು ಹಾಕುತ್ತೇವೆ, ಮುಂಜಾನೆಯ ಅಝಾನ್ ವೇಳೆ ಮೈಕ್‌ನಲ್ಲಿ ಭಜನೆ  ಹಾಕುತ್ತೇವೆ, ಹನುಮಾನ್ ಚಾಲೀಸ ಪಠಿಸುತ್ತೇವೆ...' ಎಂಬಂಥ  ಪ್ರಚೋದಕ ಮಾತುಗಳ ಭರಾಟೆಯಲ್ಲಿ ನಿಜಕ್ಕೂ ಮೈಕ್ ನಿಷೇಧದಿಂದ  ಆಗುವ ಒಟ್ಟು ಸಾಮಾಜಿಕ ಸಮಸ್ಯೆಗಳು ಸಾರ್ವಜನಿಕರ ಗಮನಕ್ಕೇ ಬಾರದಂತೆ ನೋಡಿಕೊಳ್ಳಲಾಯಿತು. ಪ್ರತಿಯೊಂದನ್ನೂ ಹಿಂದೂ- ಮುಸ್ಲಿಮ್ ಆಗಿ ವಿಭಜಿಸುವುದು ಮತ್ತು ಆ ಮುಖಾಂತರ ರಾಜಕೀಯ ಲಾಭವನ್ನು ಕೊಯ್ಯುವುದು- ಎಂಬ ತಂತ್ರಕ್ಕೆ ಸುಪ್ರೀಮ್ ತೀ ರ್ಪನ್ನು ಬಳಸಿಕೊಳ್ಳಲಾಯಿತು. ಸರ್ಕಾರ ಮೈಕ್ ನಿಷೇಧಿಸಿ ಸುತ್ತೋಲೆಯನ್ನು ಹೊರಡಿಸಿತು. ಇದೀಗ,

ಸಾರ್ವಜನಿಕ ಭ್ರಮೆ ಕಳಚತೊಡಗಿದೆ. ಮೈಕ್ ನಿಷೇಧದಿಂದಾಗಿ ಮುಸ್ಲಿಮರು ಕಳಕೊಳ್ಳುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿನದನ್ನು  ಯಕ್ಷಗಾನ, ಕೋಲ, ಜಾತ್ರೆ, ರಸಮಂಜರಿ, ಅಯ್ಯಪ್ಪ, ಗಣಪತಿ... ಇತ್ಯಾದಿಗಳಿಗಾಗಿ ಕಳಕೊಳ್ಳಬೇಕಾಗುತ್ತದೆ ಎಂಬ ಅರಿವು ಸಾಮಾನ್ಯ  ನಾಗರಿಕರಿಗೆ ಆಗತೊಡಗಿದೆ. ಮುಸ್ಲಿಮರು ಹೆಚ್ಚೆಂದರೆ, ಒಂದೂವರೆ ನಿಮಿಷದ ಅಝಾನನ್ನಷ್ಟೇ ಕಳಕೊಳ್ಳಬಲ್ಲರು. ಆದರೆ, ಮೈಕ್  ಬಳಸದೆಯೇ ಯಕ್ಷಗಾನ, ಕೋಲ, ಜಾತ್ರೆ, ಸುಪ್ರಭಾತ ಇತ್ಯಾದಿಗಳು ನಡೆಯುವುದು ಹೇಗೆ ಎಂಬ ಪ್ರಶ್ನೆಯನ್ನು ಆಯಾ ಕ್ಷೇತ್ರದವರೇ  ಕೇಳತೊಡಗಿದ್ದಾರೆ. ನಿಜವಾಗಿ,

ಪ್ರಭುತ್ವ ಮತ್ತು ಮಾದ್ಯಮ ಹುಟ್ಟು ಹಾಕಿದ ಮುಸ್ಲಿಮ್ ದ್ವೇಷದಿಂದಾದ ಪರಿಣಾಮ ಇದು. ಧರ್ಮದ ಆಧಾರದಲ್ಲಿ ಪೋಷಿಸಿ ಬೆಳೆಸುವ  ದ್ವೇಷ ಎಷ್ಟು ಅಪಾಯಕಾರಿ ಎಂದರೆ, ಅದು ಕಣ್ಣಿದ್ದೂ ಕುರುಡಾಗಿರುತ್ತದೆ. ಕಿವಿಯಿದ್ದೂ ಕಿವುಡಾಗಿರುತ್ತದೆ ಮತ್ತು ಹೃದಯದ ಭಾಷೆಯನ್ನೇ ಮರೆತಿರುತ್ತದೆ. ಹಿಜಾಬ್‌ನಿಂದ ಮೈಕ್‌ವರೆಗಿನ ಬೆಳವಣಿಗೆ ಇದನ್ನೇ ಸ್ಪಷ್ಟಪಡಿಸುತ್ತಿದೆ.