Monday 25 May 2020

ಅವರನ್ನು ಬೀದಿಯಲ್ಲಿಟ್ಟು ನಮಗೆ ಗಾಳಿಪಟ ಹಾರಿಸಲು ಸಾಧ್ಯವೇ? ಈದ್: ಒಂದು ಆತ್ಮ ಸಂವಾದ







ಈದ್‍ನ ಪರೋಕ್ಷ ಅರ್ಥ ಖುಷಿ, ಸಂಭ್ರಮ, ಸಂತೋಷ. ಈದ್ ಎಂಬುದು ಯಾವುದಾದರೊಂದು ದೇಶಕ್ಕೆ, ರಾಜ್ಯಕ್ಕೆ ಅಥವಾ ಯಾವುದಾದರೊಂದು ಜಿಲ್ಲೆಗೆ ಸೀಮಿತವಾದ ಒಂದಲ್ಲ. ದಿನದ ವ್ಯತ್ಯಾಸದೊಂದಿಗೆ ಜಾಗತಿಕವಾಗಿ ಆಚರಿಸುವ ಹಬ್ಬ. ಒಂದು ತಿಂಗಳ ಕಾಲದ ಉಪವಾಸದಿಂದ ಬಿಡುಗಡೆಗೊಂಡ ಸಂಭ್ರಮವನ್ನು ಹರ್ಷೋಲ್ಲಾಸದಿಂದ ಅನುಭವಿಸುವ ದಿನ. ವಿಶೇಷ ಏನೆಂದರೆ, ಈದ್‍ನ ದಿನ ಬಡವರಲ್ಲಿ ಬಡವರಾದ ಕುಟುಂಬ ಕೂಡ ಆನಂದ ಪಡಬೇಕು ಅನ್ನುವ ಗುರಿಯನ್ನು ಈದ್ ಹೊಂದಿದೆ. ಇವತ್ತಿನ ಬಂಡವಾಳಶಾಹಿ ಜಗತ್ತು ಪ್ರಸ್ತುತ ಪಡಿಸುವ ಆನಂದದ ನಿಯಮ ಏನೆಂದರೆ, ಉಳ್ಳವರ ಸಂಭ್ರಮದಲ್ಲಿ ಇಲ್ಲದವನಿಗೆ ಪಾಲಿಲ್ಲ. ಬಡವ ಆನಂದಲ್ಲಿದ್ದಾನೋ ಇಲ್ಲವೋ ಎಂಬುದನ್ನು ಪರಿಗಣಿಸಿ ಧನಿಕ ಆನಂದಪಡುವುದಲ್ಲ. ಆನಂದ ಆತನ ಹಕ್ಕು, ಅದಕ್ಕೂ ಬಡವನಿಗೂ ಸಂಬಂಧ ಇಲ್ಲ. ಬಡವ ಹಬ್ಬವನ್ನು ಹೇಗೆ ಬೇಕಾದರೂ ಆಚರಿಸಲಿ, ಧನಿಕ ಆ ಬಗ್ಗೆ ಚಿಂತಿಸಬೇಕಾಗಿಲ್ಲ. ಬಂಡವಾಳ ಶಾಹಿ ವ್ಯವಸ್ಥೆಯಲ್ಲಿ ಶ್ರೀಮಂತ  ಬಹುದೊಡ್ಡ ಭಾಗ್ಯವಂತ. ಆತನ ಶ್ರೀಮಂತಿಕೆಯಲ್ಲಿ ಬಡವನ ಬೆವರು ಎಷ್ಟೇ ಸುರಿದಿದ್ದರೂ ಆ ಬೆವರಿಗೆ ವೇತನ ನೀಡಿದರೆ, ಅಲ್ಲಿಗೆ ಆತನಿಗೂ ಆ ಬೆವರಿಗೂ ಸಂಬಂಧ ಮುಕ್ತಾಯಗೊಳ್ಳುತ್ತದೆ.

ಇವತ್ತು ವಲಸೆ ಕಾರ್ಮಿಕರು ಪಡುತ್ತಿರುವ ದಾರುಣ ಸ್ಥಿತಿಯ ಹಿಂದಿರುವುದೂ ಇದೇ ಮನಸ್ಥಿತಿ. ನಗರವನ್ನು ಸುಂದರಗೊಳಿಸಬೇಕು ಅನ್ನುವುದು ಸರಕಾರದ ಬಯಕೆ. ಆ ಬಯಕೆ ಪೂರ್ತಿಗೊಳ್ಳಬೇಕಾದರೆ ಈ ಕಾರ್ಮಿಕರು ಬೇಕು. ಅದಕ್ಕಾಗಿ ಅವರನ್ನು ಅತ್ಯಂತ ಕನಿಷ್ಠ ಸೌಲಭ್ಯದೊಂದಿಗೆ ನಗರಗಳಲ್ಲಿ ಉಳಿಸಿಕೊಳ್ಳಲಾಯಿತು. ಅವರ ರಕ್ತವನ್ನು ಬಸಿದು ನಗರವನ್ನೂ ಕಟ್ಟಲಾಯಿತು. ಇಂಥ ವಲಸೆ ಕಾರ್ಮಿಕರು 8 ಕೋಟಿಗಿಂತಲೂ ಅಧಿಕ ಇದ್ದಾರೆ ಎಂಬುದು ಕೇಂದ್ರ ಸರಕಾರವೇ ಒದಗಿಸಿದ ಮಾಹಿತಿ. ಇವರು ವಲಸಿಗಾರರಾಗಿರುವುದರಿಂದ ಇವರಲ್ಲಿ ಪಡಿತರ ಚೀಟಿಯೂ ಇಲ್ಲ. ಆದ್ದರಿಂದ ರಾಜ್ಯ ಸರಕಾರಗಳು ಉಚಿತವಾಗಿ ಹಂಚುವ ಅಕ್ಕಿ-ದವಸ ಧಾನ್ಯಗಳು ಇವರಿಗೆ ಲಭ್ಯವಾಗುತ್ತಲೂ ಇಲ್ಲ. ಕಳೆದ ವಾರ ಸ್ಟ್ರಾಂಡೆಡ್ ವರ್ಕರ್ಸ್ ಆಕ್ಷನ್ ನೆಟ್‍ವರ್ಕ್ ಎಂಬ ಸ್ವಯಂ ಸೇವಾ ಸಂಸ್ಥೆಯು 12,248 ವಲಸೆ ಕಾರ್ಮಿಕರನ್ನು ವಿವಿಧ ರೂಪದಲ್ಲಿ ಸಂಪರ್ಕಿಸಿದಾಗ ಸಿಕ್ಕ ಮಾಹಿತಿ ಅತ್ಯಂತ ಆಘಾತಕಾರಿಯಾದದು. ಇವರಲ್ಲಿ 82% ಮಂದಿಗೂ ಸರಕಾರ ವಿತರಿಸಿರುವ ಪಡಿತರ ಸಿಕ್ಕಿಲ್ಲ. ಸಂಪರ್ಕಿಸಲಾದ 9,981 ಮಂದಿಯ ಪೈಕಿ 64%  ಮಂದಿಯಲ್ಲಿ 100 ರೂಪಾಯಿಯೂ ಇಲ್ಲ. ನಮ್ಮ ನಗರವನ್ನು ಸುಂದರವಾಗಿಸುವುದಕ್ಕಾಗಿ ದುಡಿದೂ ದುಡಿದೂ ತಮ್ಮ ದೇಹವನ್ನು ಎಲುಬುಗೂಡನ್ನಾಗಿಸಿಕೊಂಡ ಈ ಮಂದಿಯನ್ನು ಅವರ ಕಷ್ಟಕಾಲದಲ್ಲಿ ಬೀದಿಗೆ ತಳ್ಳುವುದೆಂದರೆ, ಅದು ಯಾವ ಮನಸ್ಥಿತಿ?

ಮಾರ್ಚ್ 24 ರಂದು ಭಾರತದಲ್ಲಿ ಕೇವಲ 536 ಕೊರೋನಾ ಪಾಸಿಟಿವ್ ಪ್ರಕರಣಗಳಷ್ಟೇ ಇತ್ತು. ಕೇವಲ 10 ಮಂದಿ ಸಾವಿಗೀಡಾಗಿದ್ದರು. ಈ ಸಮಯದಲ್ಲೇ ವಿದೇಶದಲ್ಲಿದ್ದ ಶ್ರೀಮಂತರ ಮಕ್ಕಳು-ವಿದ್ಯಾರ್ಥಿಗಳನ್ನು ಕೇಂದ್ರ ಸರಕಾರವೇ ವಿಮಾನ ಕಳುಹಿಸಿ ಉಚಿತವಾಗಿ ಕರೆಸಿಕೊಂಡಿತ್ತು. ಲಾಕ್‍ಡೌನ್ ಘೋಷಿಸುವಾಗ ರಾಜಸ್ಥಾನದ ಕೋಟಾದಲ್ಲಿ ವಿವಿಧ ರಾಜ್ಯಗಳ ಸುಮಾರು 30 ಸಾವಿರ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು. ಐಐಟಿ ತರಬೇತಿಗೆ ಪ್ರಸಿದ್ಧವಾಗಿರುವ ಕೋಟಾದಿಂದ ಈ ವಿದ್ಯಾರ್ಥಿಗಳನ್ನು ಎಪ್ರಿಲ್‍ನಲ್ಲಿ ಆಯಾ ಸರಕಾರಗಳೇ ಬಸ್ ಕಳುಹಿಸಿ ತಂತಮ್ಮ ರಾಜ್ಯಗಳಿಗೆ ಕರೆಸಿಕೊಂಡಿತು. ಕೇವಲ ಉತ್ತರ ಪ್ರದೇಶವೊಂದೇ ಒಂದೇ ಬಾರಿಗೆ 175 ಬಸ್‍ಗಳನ್ನು ಕಳುಹಿಸಿಕೊಟ್ಟಿತು. ಆದರೆ, ಲಾಕ್‍ಡೌನ್‍ಗೆ 50 ದಿನಗಳು ತುಂಬಿರುವ ಈ ಹೊತ್ತಿನಲ್ಲಿ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳುಹಿಸಲು ತೀರ್ಮಾನಿಸುವಾಗ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಲಕ್ಷದ ಹತ್ತಿರವಾಗಿದೆ. ಸಾವು 3 ಸಾವಿರಕ್ಕೆ ಸಮೀಪವಿದೆ. ಇವತ್ತು ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸುವುದು ಮಾರ್ಚ್ 24ರಂದು ಕಳುಹಿಸುವುದಕ್ಕಿಂತ 100 ಪಟ್ಟು ಹೆಚ್ಚು ಅಪಾಯಕಾರಿ. ಈಗ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಕಾರ್ಮಿಕರ ನಡುವೆ ಸುರಕ್ಷಿತ ಅಂತರ ಕಾಯ್ದುಕೊಳ್ಳುವುದೂ ಕಷ್ಟ. ಅಲ್ಲದೇ, ಪ್ರಯಾಣದ ದುಡ್ಡನ್ನು ಅವರೇ ಪಾವತಿಸಬೇಕು. ಇದು ಕ್ರೌರ್ಯ. ಬಡವರಿಗೂ, ಸರಕಾರಕ್ಕೂ ಅಥವಾ ಅವರನ್ನು ದುಡಿಸಿ ಕೊಂಡವರಿಗೂ ಆಳು ಮತ್ತು ದಣಿ ಅನ್ನುವ ಸಂಬಂಧಕ್ಕಿಂತ ಹೊರತಾದ ಇನ್ನಾವ ಹಕ್ಕು-ಕರ್ತವ್ಯಗಳೂ ಇಲ್ಲ ಅನ್ನುವುದನ್ನು ಸಾರಿ ಸಾರಿ ಹೇಳಿದ ಸಂದರ್ಭ.

ಈದ್ ಇದಕ್ಕಿಂತ ಭಿನ್ನ. ಈದ್- ಹಬ್ಬ ಅಷ್ಟೇ ಅಲ್ಲ, ಅದು ನೀತಿ ಸಂಹಿತೆಯೊಂದನ್ನು ಶ್ರೀಮಂತರಿಗೂ ಬಡವರಿಗೂ ಮರು ನೆನಪಿಸುವ ಸಂದರ್ಭ. ಈದ್‍ನ ದಿನ ಮಸೀದಿ, ನಮಾಝï, ಪ್ರವಚನ, ಹೊಸಬಟ್ಟೆ ಯಾವುದೂ ಕಡ್ಡಾಯವಲ್ಲ. ಆದರೆ, ಒಂದು ದಿನಕ್ಕಾಗುವಷ್ಟು ಆಹಾರ ಧಾನ್ಯಗಳನ್ನು ತನ್ನ ಮನೆಯಲ್ಲಿ ಹೊಂದಿರುವ ವ್ಯಕ್ತಿ, ಅದಿಲ್ಲದ ಮನೆಗೆ ಆಹಾರ ವಸ್ತುಗಳನ್ನು ತಲುಪಿಸಬೇಕಾದುದು ಕಡ್ಡಾಯ. ಈ ಕಡ್ಡಾಯ ನಿಮಯವನ್ನು ಉಲ್ಲಂಘಿಸಿದರೆ, ಆತನ ಉಪವಾಸ ಪೂರ್ತಿಯಾಗುವುದಿಲ್ಲ. ಇದಕ್ಕಿಂತಲೂ ಬಹುಮುಖ್ಯವಾದುದು ಝಕಾತ್ ಎಂಬ ಪರಿಕಲ್ಪನೆ. ಉಳ್ಳವರು ತಮ್ಮ ಸಂಪತ್ತಿನಿಂದ ನಿರ್ದಿಷ್ಟ ಮೊತ್ತವನ್ನು ಬಡವರ ಕಲ್ಯಾಣಕ್ಕಾಗಿ ವ್ಯಯಿಸಲೇಬೇಕು. ಹಾಗೆ ಮಾಡದಿದ್ದರೆ ಆತ ಅಪರಾಧಿಯಾಗುತ್ತಾನೆ. ಅದಕ್ಕಾಗಿ ದೇವನು ಆತನಿಗೆ ಶಿಕ್ಷೆ ಕೊಡುತ್ತಾನೆ. ಈ ಶ್ರೀಮಂತನ ಹಣವನ್ನು ಪಡೆದ ಬಡವ್ಯಕ್ತಿ ಆ ಮೊತ್ತವನ್ನು ಸ್ವಉದ್ಯೋಗಕ್ಕೆ ಬಳಸಿಕೊಂಡು ಆತನೂ ಸಬಲನಾದರೆ, ಮುಂದೆ ಆತ ತನ್ನ ಸಂಪತ್ತಿನಿಂದ ಕಡ್ಡಾಯವಾಗಿ ದಾನ ನೀಡಲೇಬೇಕಾಗುತ್ತದೆ. ಇದೊಂದು ಬಗೆಯ ಸರಪಳಿ ಸಿದ್ಧಾಂತ. ಈ ಸರಪಳಿಯು ಶ್ರೀಮಂತ ಮತ್ತು ಬಡವ ಎಲ್ಲರನ್ನೂ ಜೊತೆಗೇ ಕೊಂಡೊಯ್ಯುತ್ತದೆ ಮತ್ತು ಜೋಡಿಸಿಡುತ್ತದೆ. ಬಡವನ ಕಷ್ಟಕ್ಕೆ ನೆರವಾಗುವುದು ತನ್ನ ಮೇಲಿನ ಧಾರ್ಮಿಕ ಹೊಣೆಗಾರಿಕೆ ಎಂದು ಓರ್ವ ಶ್ರೀಮಂತ ಅಂದುಕೊಳ್ಳುವುದಕ್ಕೂ ಆ ಹೊಣೆಗಾರಿಕೆಯ ಪ್ರಜ್ಞೆಯಿಲ್ಲದೇ ಬದುಕುವುದಕ್ಕೂ ಆಕಾಶ-ಭೂಮಿಯ ಅಂತರ ಇದೆ. ಉಪವಾಸದ ತಿಂಗಳಲ್ಲಿ ಝಕಾತ್ ಎಂಬ ಕಡ್ಡಾಯ ದಾನ ಜಾಗತಿಕವಾಗಿಯೇ ಅತ್ಯಧಿಕ ಸಂಖ್ಯೆಯಲ್ಲಿ ಸಂಗ್ರಹವಾಗುತ್ತಿರುವುದಕ್ಕೆ ಶ್ರೀಮಂತರಲ್ಲಿರುವ ಈ ಕಡ್ಡಾಯ ಪ್ರಜ್ಞೆಯೇ ಕಾರಣ.

ಕೊರೋನಾ ಕಾಲದಲ್ಲಿ ಈದ್ ಒಂದು ಸವಾಲು. ತಂತಮ್ಮ ಮನೆಯಲ್ಲಿ ಈದ್ ಆಚರಿಸಬೇಕಾದ ಅಸಂಖ್ಯ ಮಂದಿ ಇವತ್ತು ಬೀದಿಯಲ್ಲಿದ್ದಾರೆ. ಮನೆಯಲ್ಲಿದ್ದವರೂ ಉದ್ಯೋಗವಿಲ್ಲದೇ, ವ್ಯಾಪಾರವಿಲ್ಲದೇ ಸಂಕಟದಲ್ಲಿದ್ದಾರೆ. ಇಂಥದ್ದೊಂದು ಸ್ಥಿತಿಯನ್ನು ಈಗ ಜೀವಂತವಿರುವ ಯಾರೂ ತಮ್ಮ ಜೀವಮಾನದಲ್ಲಿ ನೋಡಿರುವ ಸಾಧ್ಯತೆ ಇಲ್ಲ. ಇದು ಹೊಸಬಟ್ಟೆ ಧರಿಸಿ ಗಾಳಿಪಟ ಹಾರಿಸುವ ಅಥವಾ ನೆಂಟರಿಷ್ಟರ ಮನೆಗೆ ಭೇಟಿ ಕೊಡುವ ಸಂದರ್ಭ ಅಲ್ಲ. ಮನೆಯಲ್ಲೇ  ಇದ್ದು ಈದ್‍ನ ಖುಷಿಯನ್ನು ಹಂಚಿಕೊಳ್ಳಬೇಕು. ಅದೇವೇಳೆ, ಬಡವರ ರಕ್ತ ಹೀರಿ ಅಸಹಾಯಕವಾಗಿಸಿ ರಸ್ತೆಗೆ ಬಿಡುವ ಬಂಡವಾಳಶಾಹಿ ಮನಸ್ಥಿತಿ ನಮ್ಮದಾಗದಂತೆ ಗರಿಷ್ಠ ಜಾಗರೂಕತೆ ಪಾಲಿಸಬೇಕು. ಹೊಸಬಟ್ಟೆ ಧರಿಸದಿದ್ದರೂ ಮಸೀದಿಗೆ ಹೋಗದಿದ್ದರೂ ಪರ್ಫ್ಯೂಮ್ ಪೂಸದಿದ್ದರೂ ಚಿಂತಿಲ್ಲ. ಈದ್‍ನ ದಿನ ಬಡವರ ಮನೆಯಲ್ಲಿ ಸೂತಕ ಮೌನ ಆವರಿಸದಂತೆ ನೋಡಿಕೊಳ್ಳಬೇಕು. ಅದು ಪ್ರತಿ ಉಪವಾಸಿಗನ ಕರ್ತವ್ಯ.

ಕೊರೋನಾ ಒಂದು ಕಾಯಿಲೆ ಅಷ್ಟೇ. ಅದನ್ನು ಮಣಿಸಬಹುದು. ಆದರೆ ಮನುಷ್ಯನೊಳಗಿರುವ ಅಮಾನವೀಯತೆ, ದ್ವೇಷ, ಸ್ಪಂದನಾ ರಹಿತ ಮನೋಭಾವವು ಮಣಿಸಲಾಗದ ಕಾಯಿಲೆಯಾಗಿ ಜಗತ್ತಿನಲ್ಲಿ ಉಳಿದುಕೊಂಡಿದೆ. ಕೋಟ್ಯಾಂತರ ಮಂದಿಯನ್ನು ಇದು ಬಲಿ ಪಡೆದಿದೆ. ವಲಸೆ ಕಾರ್ಮಿಕರ ಸ್ಥಿತಿ ಅದರದ್ದೇ  ಒಂದು ಭಾಗ. ಈದ್ ಈ ಮನಸ್ಥಿತಿಯನ್ನು ಪ್ರಶ್ನಿಸುವ ಹಬ್ಬವಾಗಲಿ. ಮನುಷ್ಯರನ್ನು ಪರಸ್ಪರ ಜೋಡಿಸುವ ಮತ್ತು ಸ್ಪಂದಿಸುವ ಸಂಕೇತವಾಗಲಿ. ನೆರೆಯವರು ಹಸಿದಿರುವಾಗ ಹೊಟ್ಟೆ ತುಂಬಾ ಉಣ್ಣುವವನು ನನ್ನವನಲ್ಲ ಎಂಬ ಪ್ರವಾದಿ(ಸ) ನುಡಿಗೆ ಬದ್ಧವಾಗಿ ಬದುಕುವ ಪ್ರತಿಜ್ಞಾ ದಿನವಾಗಲಿ.

Thursday 21 May 2020

ನಾವು ಮಣಿಸಬೇಕಾಗಿರುವ ನಮ್ಮೊಳಗಿನ ವೈರಸ್ಸು




ಮನುಷ್ಯನಿಗೆ ಸಂಬಂಧಿಸಿ ಅತಿ ಹೆಚ್ಚು ಅಮಾನವೀಯವಾಗಿ ನಡೆದುಕೊಂಡಿರುವುದು ಯಾರು ಅನ್ನುವ ಬಹುಮುಖ್ಯವಾದ ಪ್ರಶ್ನೆಗೆ ಕೊರೋನಾ ಮತ್ತೊಮ್ಮೆ ಜೀವವನ್ನು ಕೊಟ್ಟಿದೆ. ಮನುಷ್ಯರ ಪ್ರಾಣಗಳಿಗೆ ಎರಡು ವಿಧದಲ್ಲಿ ಅಪಾಯಗಳು ಎದುರಾಗುತ್ತವೆ.

 ಒಂದು- ನಿಸರ್ಗದತ್ತವಾದುದು.

ಎರಡು- ಮಾನವ ಜನ್ಯವಾದುದು.

ಸಾಂಕ್ರಾಮಿಕ ರೋಗಗಳು, ಸುನಾಮಿ, ಭೂಕಂಪ, ಪ್ರವಾಹ ಇತ್ಯಾದಿಗಳು ಮಾನವ ನಿಯಂತ್ರಣವನ್ನು ಮೀರಿದ್ದಾಗಿದೆ. ಇವುಗಳಲ್ಲಿ ಮನುಷ್ಯನ ನೇರಪಾತ್ರ ಶೂನ್ಯ ಅನ್ನುವಷ್ಟು ಕಡಿಮೆ. ಮನುಷ್ಯ ನೇರವಾಗಿ ಸುನಾಮಿಯನ್ನು ಉತ್ಪಾದಿಸುವುದಿಲ್ಲ. ಭೂಕಂಪನವನ್ನು ಹುಟ್ಟುಹಾಕಿ ಸಂಭ್ರಮಿಸುವುದಿಲ್ಲ. ಕೊರೋನಾವಾಗಲಿ, ಪ್ಲೇಗ್, ಸ್ಪಾನಿಶ್ ಫ್ಲೂ, ನಿಫಾ ಯಾವುದೇ ಇರಲಿ, ಮನುಷ್ಯ ಉದ್ದೇಶಪೂರ್ವಕವಾಗಿ ಅದನ್ನು ಉತ್ಪಾದಿಸಿ ಹಂಚುವುದಿಲ್ಲ. ಹಾಗಂತ,

ಇವುಗಳಲ್ಲಿ ಮನುಷ್ಯನ ಪರೋಕ್ಷ ಪಾತ್ರವನ್ನು ಸಂಪೂರ್ಣವಾಗಿ ನಿರಾಕರಿಸುವ ಹಾಗೆಯೇ ಇಲ್ಲ. ನಿಸರ್ಗದ ಮೇಲೆ ಮನುಷ್ಯ ನಡೆಸುವ ಅತ್ಯಾಚಾರವಾಗಲಿ, ಪ್ರವಾಹ, ಭೂಕಂಪ, ಸುನಾಮಿ ಇತ್ಯಾದಿಗಳಿಗೆ ಕಾರಣ ಎಂದು ತಜ್ಞರು ಹೇಳುವುದಿದೆ. ಗಗನಚುಂಬಿ ಕಟ್ಟಡಗಳ ನಿರ್ಮಾಣಕ್ಕಾಗಿ ಮತ್ತು ಗಣಿಗಾರಿಕೆಗಾಗಿ ಭೂಮಿಯನ್ನು ಕೊರೆಯಲಾಗುತ್ತದೆ. ಸ್ಫೋಟಕಗಳನ್ನು ಸಿಡಿಸಲಾಗುತ್ತದೆ. ನಗರ ನಿರ್ಮಾಣಕ್ಕಾಗಿ ಮರಗಳನ್ನು ಕಡಿಯಲಾಗುತ್ತದೆ. ಗುಡ್ಡಗಳನ್ನು ಕಡಿದು ಬೇಕಾಬಿಟ್ಟಿ ರೆಸಾರ್ಟ್‍ಗಳನ್ನು ನಿರ್ಮಿಸಿರುವುದಕ್ಕೂ ಕೊಡಗಿನ ಪ್ರವಾಹಕ್ಕೂ ಸಂಬಂಧ ಇದೆ ಎಂಬ ವಾದ ಇದೆ. ಜಾಗತಿಕ ತಾಪಮಾನವನ್ನು ಏರಿಸಿರುವುದರಲ್ಲಿ, ಪರಿಸರವನ್ನು ಕೆಡಿಸಿರುವುದರಲ್ಲಿ ಮತ್ತು ಅಣುಬಾಂಬ್‍ಗಳಂತಹ ಮಾರಕ ಸಮೂಹ ನಾಶಕ ಅಸ್ತ್ರಗಳ ಪರೀಕ್ಷೆಯಲ್ಲಿ- ಹೀಗೆ ಮಾನವ ಅನೂಚಾನೂಚವಾಗಿ ಪ್ರಕೃತಿಯ ಮೇಲೆ ಹಸ್ತಕ್ಷೇಪ ನಡೆಸುತ್ತಾ ಬಂದಿರುವುದರ ಒಟ್ಟು ಫಲಿತಾಂಶವೇ ನಿಸರ್ಗದತ್ತ ಅವಗಢಗಳು ಎಂದು ಹೇಳುವುದಿದೆ. ಇವು ಏನೇ ಇದ್ದರೂ,

ಈ ಎಲ್ಲ ಕೃತ್ಯಗಳಲ್ಲಿ ಬಹುತೇಕ ಎಲ್ಲ ಮನುಷ್ಯರ ಪಾತ್ರ ಇರುತ್ತದೆ. ಇದರಲ್ಲಿ ಕೆಲವರು ದೊಡ್ಡ ಪಾತ್ರವನ್ನು ನಿರ್ವಹಿಸಿದ್ದರೆ, ಬಹುಸಂಖ್ಯಾತರು ಇದಕ್ಕೆ ಸಣ್ಣ ಕೊಡುಗೆಯನ್ನಾದರೂ ನೀಡಿರುತ್ತಾರೆ. ಅಧಿಕಾರಕ್ಕೆ ಬಂದರೆ ಹೈಡ್ರೋಜನ್ ಬಾಂಬ್ ತಯಾರಿಸುವೆ ಎಂದು ಘೋಷಿಸುವ ಪಕ್ಷಕ್ಕೆ ಮತ ಹಾಕುವುದೂ ಈ ಕೊಡುಗೆಗಳಲ್ಲಿ ಒಂದು. ಗಣಿಗಾರಿಕೆಗೆ ದಿಕ್ಕು ದೆಸೆಯಿಲ್ಲದೇ ಅನುಮತಿ ಕೊಡುವ, ಅಭಿವೃದ್ಧಿ ಹೆಸರಲ್ಲಿ ಕಾಡುಗಳನ್ನೇ ಕಡಿಯುವ, ಪ್ರಕೃತಿದತ್ತವಾದ ನೆರೆ ಇತ್ಯಾದಿ ಜಲಮೂಲಗಳ ಮೇಲೆ ಬುಲ್ಡೋಜರ್ ಹರಿಸಿ ಕಾಂಕ್ರೀಟು ಕಟ್ಟಡ ಕಟ್ಟುವ ಸರಕಾರವನ್ನು ಬೆಂಬಲಿಸುವುದು ಕೂಡ ಈ ಪಾತ್ರದಲ್ಲಿ ಸೇರುತ್ತದೆ. ಆದ್ದರಿಂದಲೋ ಏನೋ ನಿಸರ್ಗದತ್ತವಾದ ಅನಾಹುತಗಳು ನಿರ್ದಿಷ್ಟ ಧರ್ಮ, ಜಾತಿ, ವ್ಯಕ್ತಿ, ಹುದ್ದೆಗಳಲ್ಲಿರುವವರನ್ನು ಹುಡುಕಿಕೊಂಡು ಬರುವುದಿಲ್ಲ. ಕೊರೋನಾ ದಾಳಿಗೆ ಸಿಲುಕಿದವರಲ್ಲಿ ಸಂಸತ್ ಸದಸ್ಯರೂ ಇದ್ದಾರೆ, ಮಂತ್ರಿಗಳೂ ಇದ್ದಾರೆ, ವೈದ್ಯರೂ ಇದ್ದಾರೆ, ದೇಶದ ಉಪಾಧ್ಯಕ್ಷರೂ ಇದ್ದಾರೆ, ಸೆಲೆಬ್ರಿಟಿಗಳು, ಕ್ರೀಡಾಳುಗಳು ಎಲ್ಲರೂ ಇದ್ದಾರೆ. ಸುನಾಮಿಯ ರಭಸಕ್ಕೆ ಸಿಲುಕಿದವರು ಧರ್ಮದ ಆಧಾರದಲ್ಲಿ ವಿಭಜಿಸಲಾಗದಷ್ಟು ಏಕರೂಪದಲ್ಲಿರುತ್ತಾರೆ. ಸಾಂಕ್ರಾಮಿಕ ರೋಗಗಳು, ಭೂಕಂಪ ಮುಂತಾದುವುಗಳು ಮನುಷ್ಯರನ್ನು ಸಮಾನವಾಗಿ ನೋಡುತ್ತವೆ. ಧರ್ಮ ಜಾತಿಗಳ ಹಂಗಿಲ್ಲದೇ ಆಕ್ರಮಿಸುತ್ತವೆ. ಮಸೀದಿ, ಮಂದಿರ, ಚರ್ಚ್, ಗುರುದ್ವಾರ ಎಲ್ಲವೂ ಏಕಪ್ರಕಾರವಾಗಿ ಅದಕ್ಕೆ ಪ್ರತಿಕ್ರಿಯಿಸುತ್ತವೆ. ಆದರೆ,

ಮಾನವ ಜನ್ಯವಾದ ಅಪಾಯಗಳು ಹೀಗಲ್ಲ. ಕೊರೋನಾ ಈ ದೇಶಕ್ಕೆ ಪ್ರವೇಶಿಸುವುದಕ್ಕಿಂತ ಮೊದಲು ಈ ದೇಶದ ರಾಜಧಾನಿಯಲ್ಲಿ ಮಾನವ ಜನ್ಯ ಹಿಂಸಾಚಾರವೊಂದು ನಡೆಯಿತು. ಸುಮಾರು 50ರಷ್ಟು ಪ್ರಾಣಗಳು ಅದಕ್ಕೆ ಎರವಾದುವು. ಇವುಗಳಲ್ಲಿ ಹಿಂದೂಗಳ ಪ್ರಾಣ ಎಷ್ಟು ಮತ್ತು ಮುಸ್ಲಿಮರ ಪ್ರಾಣ ಎಷ್ಟು ಎಂಬುದನ್ನು ಆ ಬಳಿಕ ಮಾಧ್ಯಮಗಳು ಹೆಸರು ಸಮೇತ ಪ್ರಕಟಿಸಿದುವು. ಮಾನವಜನ್ಯ ಅಪಾಯಗಳು ಎಷ್ಟು ಅಮಾನವೀಯ ಅನ್ನುವುದಕ್ಕೆ ಈ ಹೆಸರುಗಳ ವರ್ಗೀಕರಣವೇ ಅತ್ಯುತ್ತಮ ಪುರಾವೆ. ಇಲ್ಲಿ ಎರವಾದ ಪ್ರಾಣಗಳೆಲ್ಲ ಒಂದೋ ಮುಸ್ಲಿಮ್ ಆದುದಕ್ಕಾಗಿ ಇಲ್ಲವೇ ಹಿಂದೂ ಆದುದಕ್ಕಾಗಿ ಆಗಿವೆಯೇ ಹೊರತು ಇನ್ನಾವ ಅಪರಾಧಕ್ಕಾಗಿಯೂ ಅಲ್ಲ. ಇದೇವೇಳೆ,

ಶಾಶ್ವತ ಅಂಗವೈಕಲ್ಯಕ್ಕೆ ಒಳಗಾದವರು, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ನರಳುತ್ತಿರುವವರು, ಅತ್ಯಾಚಾರಕ್ಕೋ ದೈಹಿಕ ಹಿಂಸೆಗೋ ಒಳಗಾದವರು, ಅಪ್ಪನನ್ನು ಕಳಕೊಂಡ ಮಕ್ಕಳು, ಮಕ್ಕಳನ್ನು ಕಳಕೊಂಡ ವೃದ್ಧ ಹೆತ್ತವರು, ವಿಧವೆಯಾದ ಪತ್ನಿ, ವಿದುರನಾದ ಪತಿ, ಹೊಟ್ಟೆ ತುಂಬಿಸುತ್ತಿದ್ದ ವ್ಯಾಪಾರವನ್ನೂ, ನೆರಳಾಗಿದ್ದ ಮನೆಯನ್ನೂ- ಹೀಗೆ ಎಲ್ಲವನ್ನೂ ಕಳಕೊಂಡು ಹತಾಶೆಯಲ್ಲಿರುವವರು ಇವೆಲ್ಲಕ್ಕೂ ಇನ್ನೊಂದು ಧರ್ಮದ ಮನುಷ್ಯರನ್ನು ಹೊಣೆ ಮಾಡುತ್ತಾರೆ. ಸಂಕಟದಲ್ಲಿರುವವರೂ ಮನುಷ್ಯರೇ, ಅದಕ್ಕೆ ಕಾರಣರಾದವರೂ ಮನುಷ್ಯರೇ. ಇವೆಲ್ಲಕ್ಕೂ ಕಾರಣ ಏನೆಂದರೆ, ಧರ್ಮ, ಜಾತಿ, ರಾಜಕೀಯ ಇತ್ಯಾದಿಗಳು. ಹಾಗಂತ,

ನಿಸರ್ಗದತ್ತ ಅಪಾಯಗಳ ಸಂದರ್ಭದಲ್ಲೂ ಮನುಷ್ಯ ಇಂಥದ್ದೇ ಸಂಕಟಕ್ಕೆ ಒಳಗಾಗುತ್ತಾನೆ. ತನ್ನವರನ್ನು ಕಳಕೊಳ್ಳುತ್ತಾನೆ. ಮನೆ-ಮಠ, ವ್ಯಾಪಾರ ಕೇಂದ್ರಗಳೆಲ್ಲವೂ ಆತನ ಕಣ್ಣೆದುರೇ ಕಳೆದು ಹೋಗುವುದಿದೆ. ಆದರೆ, ಆತ ಅದಕ್ಕಾಗಿ ಇನ್ನೊಂದು ಧರ್ಮದವರನ್ನು ಅಪರಾಧಿ ಸ್ಥಾನದಲ್ಲಿ ಕೂರಿಸುವುದಿಲ್ಲ. ಆ ಸಂದರ್ಭದಲ್ಲಿ ಧರ್ಮಜಾತಿಗಳು ಅಡ್ಡ ಗೋಡೆಗಳಾಗಿ ನಿಲ್ಲುವುದೂ ಇಲ್ಲ. ಅಪಾಯದಲ್ಲಿರುವವರ ನೆರವಿಗೆ ಮಸೀದಿ, ಮಂದಿರಗಳ ಹಂಗಿಲ್ಲದೇ ಮತ್ತು ಧರ್ಮ-ಜಾತಿಗಳ ಸೋಂಕು ತಗಲದೇ ಸರ್ವರೂ ಧಾವಿಸುತ್ತಾರೆ. ಮಸೀದಿಯಲ್ಲೂ ಅವರಿಗಾಗಿ ಪ್ರಾರ್ಥಿಸಲಾಗುತ್ತದೆ. ನೆರವು ಸಂಗ್ರಹವಾಗುತ್ತದೆ. ಮಂದಿರ, ಚರ್ಚ್‍ಗಳಲ್ಲೂ ಇದೇ ವಾತಾವರಣ ಇರುತ್ತದೆ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಎಂಬ ಬೇಧವಿಲ್ಲದೇ ಎಲ್ಲರೂ ಪೀಡಿತರ ನೆರವಿಗೆ ಧಾವಿಸುತ್ತಾರೆ. ನಿಸರ್ಗದ ವೈಶಿಷ್ಟ್ಯ ಇದು. ಅದು ಮನುಷ್ಯರನ್ನು ಒಂದುಗೂಡಿಸುತ್ತದೆ. ಅದರ ಜಾತ್ಯತೀತ ಗುಣವೇ ಇದಕ್ಕೆ ಕಾರಣ. ಕೊರೋನಾ ಇವತ್ತು ಭಾರತೀಯರನ್ನು ಒಂದುಗೂಡಿಸಿದೆ. ಹಿಂದೂ-ಮುಸ್ಲಿಮ್, ಬಿಜೆಪಿ-ಕಾಂಗ್ರೆಸ್ ಎಂಬ ಭಾವವಿಲ್ಲದೇ ಎಲ್ಲರೂ ಕೊರೋನಾ ವಿರುದ್ಧ ಹೋರಾಟದಲ್ಲಿ ಜೊತೆಜೊತೆಯಾಗಿ ಸಾಗುತ್ತಿದ್ದಾರೆ. ಕಾಯಿಲೆ ಪೀಡಿತರು ಹಿಂದೂವೋ ಮುಸ್ಲಿಮೋ ಎಂದು ಯಾರೂ ವಿಭಜಿಸಿ ನೋಡುವುದಿಲ್ಲ. ಮನುಷ್ಯ ಎಂಬ ಏಕೈಕ ಗುರುತನ್ನು ಕೊರೋನಾ ಎಲ್ಲ ಮಾನವರಿಗೂ ನೀಡಿಬಿಟ್ಟಿದೆ. ಆದರೆ,

ಮಾನವ ಜನ್ಯ ಅಪಾಯಗಳಿಗೆ ಈ ಗುಣ ಇಲ್ಲ. ಅದು ಮೊಟ್ಟಮೊದಲಾಗಿ ಮನುಷ್ಯರನ್ನು ವಿಭಜಿಸುತ್ತದೆ. ಅದು ಹುಟ್ಟು ಪಡೆಯುವುದೇ ಧರ್ಮ ಮತ್ತು ರಾಜಕೀಯ ವಿಚಾರಧಾರೆಯ ವಿಭಜನೆಯಲ್ಲಿ. ಇಲ್ಲಿ ಪೀಡಿತರಾದವರಿಗೆ ನೆರವು ಸಂಗ್ರಹಿಸುವ ವಿಧಾನದಲ್ಲೂ ನಾವು ಮತ್ತು ಅವರು ಎಂಬ ವಿಭಜನೆಯಿರುತ್ತದೆ. ಸಂಕಷ್ಟದಲ್ಲಿರುವವರ ಸಂಕಟಕ್ಕೂ ಧರ್ಮವನ್ನು ಅಂಟಿಸಿ ಬಿಟ್ಟು ನಮ್ಮವರು ಮತ್ತು ಅನ್ಯರು ಎಂದು ಪ್ರತ್ಯೇಕಿಸುವುದು ಮಾನವ ಜನ್ಯ ಅಪಾಯಗಳ ಅತಿ ಭೀಕರ ಮುಖಗಳಲ್ಲಿ ಒಂದು. ನಿಸರ್ಗದತ್ತ ಅಪಾಯಗಳಿಗೆ ಈ ದುರ್ಗುಣ ಇಲ್ಲ. ಆದ್ದರಿಂದಲೇ, ಮಾನವ ಜನ್ಯ ಅಪಾಯಗಳಲ್ಲಿ ಅಮಾನವೀಯತೆ ಅತಿಹೆಚ್ಚು. ಮಾತ್ರವಲ್ಲ, ನಿಸರ್ಗದತ್ತ ಅಪಾಯಗಳಿಗೆ ಹೋಲಿಸಿದರೇ ಮಾನವಜನ್ಯ ಅಪಾಯಗಳೇ ಮನುಷ್ಯರ ಪ್ರಾಣಕ್ಕೆ ಅತಿಹೆಚ್ಚು ಹಾನಿ ಮಾಡಿರುವುದು. ಇತಿಹಾಸದ ಉದ್ದಕ್ಕೂ ಇದಕ್ಕೆ ರಾಶಿಗಟ್ಟಲೆ ಸಾಕ್ಷ್ಯಗಳು ಲಭಿಸುತ್ತವೆ. ರಾಜರು, ಚಕ್ರವರ್ತಿಗಳು, ಸರ್ವಾಧಿಕಾರಿಗಳು ಈ ಮಾನವ ಪ್ರಾಣಗಳ ಹರಣದಲ್ಲಿ ಬಹುದೊಡ್ಡ ಪಾತ್ರ ನಿಭಾಯಿಸಿದ್ದಾರೆ. ಹಿಟ್ಲರ್, ಮುಸೋಲೋನಿಯಂತವರು ಮನುಷ್ಯರ ಧರ್ಮ, ಭಾಷೆ, ವಿಚಾರಧಾರೆಯನ್ನು ನೋಡಿ ಸಂಹಾರ ನಡೆಸಿದ್ದಾರೆ. ಭಾರತ-ಪಾಕ್ ವಿಭಜನೆಯಾದಾಗ ಹಿಂದೂ-ಮುಸ್ಲಿಮ್ ರಕ್ತಪಾತ ನಡೆಯಿತು. ಆ ಬಳಿಕವೂ ಇದು ನಿಲ್ಲಲಿಲ್ಲ. ದೆಹಲಿ ಸಿಕ್ಖ್ ಹತ್ಯಾಕಾಂಡ, ಗುಜರಾತ್ ಹತ್ಯಾಕಾಂಡಗಳ ಸಹಿತ ಧರ್ಮದ ಆಧಾರದಲ್ಲಿ ಮನುಷ್ಯರ ಪ್ರಾಣಗಳು ಆಹುತಿಯಾಗುತ್ತಲೇ ಹೋದುವು. ಆಫ್ರಿಕಾದ ಹುಟು ಮತ್ತು ತುತ್ಸಿ ಜನಾಂಗಗಳು ಪರಸ್ಪರ ಕಾದಾಡಿಕೊಂಡು ಹರಿಸಿದ ರಕ್ತಕ್ಕೆ ಎಣೆಯಿಲ್ಲ.

ನಿಸರ್ಗ ಮತ್ತು ಮಾನವ ಇವೆರಡರಲ್ಲಿ ಮಾನವ ಕುಲಕ್ಕೆ ಅತ್ಯಂತ ಹೆಚ್ಚು ಹಾನಿ ಮಾಡಿರುವುದು ಯಾರು ಎಂದು ಪ್ರಶ್ನಿಸಿದರೆ, ಅದಕ್ಕೆ ಸರಿಯಾದ ಉತ್ತರ ಮಾನವ ಎಂಬುದಾಗಿದೆ. ಹೆಚ್ಚು ಅಮಾನವೀಯವಾದುದೂ ಮಾನವ ನಿರ್ಮಿತ ಅಪಾಯಗಳೇ. ಕೊರೋನಾದ ಈ ಸಂದರ್ಭದಲ್ಲಿ ನಾವೆಲ್ಲ ನಮ್ಮೊಳಗನ್ನು ಮತ್ತೆ ಮತ್ತೆ ಪರೀಕ್ಷಿಸಿಕೊಳ್ಳಬೇಕಿದೆ. ಕೊರೋನಾವನ್ನು ನಾವು ಮಣಿಸಬಹುದು. ಆದರೆ, ನಮ್ಮೊಳಗಿನ ವೈರಸನ್ನು ನಾವು ಎಂದು ಮಣಿಸಬಲ್ಲೆವು? ಕೊರೋನಾ ನಮ್ಮೆಲ್ಲರನ್ನೂ ಆತ್ಮಾವಲೋಕನಕ್ಕೆ ಒಳಪಡಿಸಲಿ.