Thursday 19 December 2013

ಮಕ್ಕಳಿಲ್ಲದ, ಹೆತ್ತವರೂ ಆಗದ ಅವರು..

   ಕುಟುಂಬ ಎಂಬ ಪದಕ್ಕೆ ಡಿಕ್ಷನರಿಯಲ್ಲಿ, ‘ಮನೆಯೊಳಗಿರುವ ತಂದೆ-ತಾಯಿ, ಪತ್ನಿ-ಮಕ್ಕಳು ಮೊದಲಾದ ಎಲ್ಲ ಸಂಬಂಧಿಕರು..’ ಎಂಬ ಅರ್ಥ ಇದೆ. ಇಂಥ ಹಲವು ಕುಟುಂಬಗಳು ಒಟ್ಟು ಸೇರಿ ಸಮಾಜ ಅಸ್ತಿತ್ವಕ್ಕೆ ಬರುತ್ತದೆ. ಮದುವೆ, ಮುಂಜಿ, ಹೆರಿಗೆ, ಬಾಣಂತನಗಳು ಆ ಸಮಾಜದ ಭಾಗವಾಗುತ್ತದೆ. ಶಾಲೆ-ಕಾಲೇಜುಗಳು ಅಸ್ತಿತ್ವಕ್ಕೆ ಬರುತ್ತವೆ. ಗರ್ಭಿಣಿ ಪತ್ನಿಯನ್ನು ಪತಿ ನಿತ್ಯ ಕಣ್ತುಂಬಿಕೊಳ್ಳುತ್ತಾನೆ. ಆಕೆಯ ಹೊಟ್ಟೆಗೆ ತಲೆಯಿಟ್ಟು ಮಗುವಿನೊಂದಿಗೆ ಮಾತಾಡುತ್ತಾನೆ. ಮಗು ಹೆಣ್ಣೋ-ಗಂಡೋ ಎಂಬ ಚರ್ಚೆ-ತಮಾಷೆಗಳು ಅವರಿಬ್ಬರ ನಡುವೆ ನಡೆಯುತ್ತದೆ. ಆಕೆಯ ಸಂಕಟ, ಹೆರಿಗೆಯ ದಿನಾಂಕ, ಅದಕ್ಕೆ ಮಾಡಿಕೊಳ್ಳಬೇಕಾದ ಸಿದ್ಧತೆಗಳು, ಹೆರಿಗೆಗಾಗಿ ದಾಖಲಾಗಬೇಕಾದ ಆಸ್ಪತ್ರೆ.. ಎಲ್ಲವೂ ಮನೆಯಲ್ಲಿ ಚರ್ಚೆಗೊಳಗಾಗುತ್ತದೆ. ಅತ್ತೆ-ಮಾವ, ನಾದಿನಿ, ಮೈದುನ.. ಎಲ್ಲರ ಕುತೂಹಲ-ಕಾಳಜಿಯ ಕೇಂದ್ರವಾಗಿ ಗರ್ಭಿಣಿ ಮಾರ್ಪಡುತ್ತಾಳೆ. ಅತ್ತೆ ಮನೆಯಲ್ಲೂ, ತವರು ಮನೆಯಲ್ಲೂ ಆಕೆಯದೇ ಸುದ್ದಿ. ಇನ್ನು, ಪ್ರಸವವಾದರಂತೂ ಈ ಎರಡು ಕುಟುಂಬಗಳಲ್ಲಿ ಮಾತ್ರವಲ್ಲ, ಆ ಕುಟುಂಬಗಳೊಂದಿಗೆ ಸಂಬಂಧ ಹೊಂದಿರುವ ಎಲ್ಲ ಕುಟುಂಬಗಳೂ ಸಂತಸ ವ್ಯಕ್ತಪಡಿಸುತ್ತವೆ. ಶುಭಾಶಯ ಕೋರುವುದು, ಸಿಹಿ ಹಂಚುವುದು ನಡೆಯುತ್ತದೆ. ಬಳಿಕ ಮಗುವಿಗೆ ಹೆಸರಿಡುವ ಸಂಭ್ರಮ. ಮಗು ನಡೆದಂತೆ ಮನೆಯವರೂ ನಡೆಯುತ್ತಾರೆ. ಅದು ಮಾತಾಡಿದಂತೆ ಮನೆಯವರೂ ಮಾತಾಡುತ್ತಾರೆ. ಮನೆಯೊಳಗಿನ ಸಣ್ಣ ಪುಟ್ಟ ಮನಸ್ತಾಪಗಳನ್ನೆಲ್ಲ ಮಗು ತನ್ನ ಮುಗ್ಧತನದ ಮೂಲಕ ನಿವಾರಿಸಿ ಬಿಡುತ್ತದೆ. ಮಗು ಬೆಳೆದಂತೆ ಶಾಲೆಗೆ ಸೇರಿಸಲಾಗುತ್ತದೆ. ಮಗು ಶಾಲೆಯಲ್ಲಿ ಕಲಿತದ್ದನ್ನು, ಆಡಿದ್ದನ್ನು ಮನೆಯಲ್ಲಿ ಬಂದು ಹೇಳುವಾಗ, ಒಂದು ಬಗೆಯ ಕಲರವ ಮನೆಯಲ್ಲೂ ಕಾಣಿಸಿಕೊಳ್ಳುತ್ತದೆ. ಹೀಗೆ ಮಗು ಬೆಳೆಯುವುದು, ಉದ್ಯೋಗಿಯಾಗುವುದು, ಮದುವೆ ಮಾಡಿಕೊಳ್ಳುವುದು, ಮಕ್ಕಳಾಗುವುದು ಮತ್ತು ಅಜ್ಜ-ಅಜ್ಜಿಯಾಗಿ ಅಪ್ಪ-ಅಮ್ಮ ಪರಿವರ್ತಿತಗೊಳ್ಳುವುದು.. ಇಂಥ ಪ್ರಕ್ರಿಯೆಗಳು ಸಮಾಜದಲ್ಲಿ ನಿರಂತರ ನಡೆಯುತ್ತಿರುತ್ತದೆ. ಒಂದು ವೇಳೆ, ಇಂಥ ಪ್ರಕ್ರಿಯೆಗಳಿಗೆ ಅವಕಾಶ ಇಲ್ಲದೇ ಹೋದರೆ ಏನಾದೀತು? ಗಂಡು-ಗಂಡನ್ನೇ ವಿವಾಹವಾಗುವುದು ಅಥವಾ ಹೆಣ್ಣು-ಹೆಣ್ಣನ್ನೇ ವಿವಾಹವಾಗುವುದಾದರೆ ಈ ಸಮಾಜದ ಅಸ್ತಿತ್ವ ಎಲ್ಲಿಯ ವರೆಗೆ ಉಳಿದೀತು? ಗಂಡು-ಗಂಡಿನ ಅಥವಾ ಹೆಣ್ಣು-ಹೆಣ್ಣಿನ ಸಂಬಂಧದಿಂದ ಲೈಂಗಿಕ ಸುಖಗಳ ವಿನಿಮಯ ನಡೆಯಬಲ್ಲುದೇ ಹೊರತು ಮಾನವ ಜನಾಂಗದ ವಿಸ್ತರಣೆಯಲ್ಲವಲ್ಲ. ಅಲ್ಲಿ ಗರ್ಭಧಾರಣೆಯಿಲ್ಲ. ಪತಿ-ಪತ್ನಿ ಎಂಬ ಎರಡು ನೈಸರ್ಗಿಕ ಪ್ರಬೇಧಗಳಿಲ್ಲ. ಮಗುವಿನ ಜನನವಿಲ್ಲ. ಆದ್ದರಿಂದಲೇ ಅಪ್ಪ-ಅಮ್ಮ, ಅಜ್ಜ-ಅಜ್ಜಿ ಎಂಬ ಅಪ್ಯಾಯಮಾನವಾದ ಗುರುತುಗಳಿಗೂ ಅವಕಾಶ ಇಲ್ಲ. ಇಬ್ಬರ ಸಂಬಂಧದೊಂದಿಗೆ ಪ್ರಾರಂಭವಾಗಿ ಅವರೊಂದಿಗೇ ಕೊನೆಗೊಳ್ಳುವ ಒಂದು ಜೀವನ ಕ್ರಮವು ಭವಿಷ್ಯದಲ್ಲಿ ಎಂಥ ವಾತಾವರಣವನ್ನು ಉಂಟು ಮಾಡೀತು? ಮಾನವ ಸಂತತಿಯ ವಿಸ್ತರಣೆ ಎಂಬುದು ಪ್ರಕೃತಿಯ ಸಹಜ ನಿಯಮ. ಮಾನವರಲ್ಲೂ ಪ್ರಾಣಿಗಳಲ್ಲೂ ಈ ಪ್ರಕ್ರಿಯೆ ನಿರಂತರವಾಗಿ ಜಾರಿಯಲ್ಲಿರುವುದರಿಂದಲೇ ನಾಡು ಮತ್ತು ಕಾಡಿನಲ್ಲಿ ಜೀವಂತಿಕೆ ತುಂಬಿಕೊಂಡಿದೆ. ಅಂದಹಾಗೆ, ಹುಲಿಯ ಸಂತತಿಯನ್ನು ಹೆಚ್ಚಿಸುವುದಕ್ಕಾಗಿ ನಮ್ಮ ವ್ಯವಸ್ಥೆ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳುತ್ತಿವೆ ಎಂಬುದು ಆಗಾಗ ಸುದ್ದಿಗೊಳಗಾಗುತ್ತಿರುತ್ತವೆ. ಬೇರೆ ಬೇರೆ ತಳಿಯ ಹುಲಿ, ಸಿಂಹಗಳ ಸಂಖ್ಯೆಯನ್ನು ಎಣಿಸುವ ಮತ್ತು ಅದರ ವೃದ್ಧಿಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುವ ಪ್ರಯತ್ನಗಳು ನಡೆಯುತ್ತಲೇ ಇವೆ. ಒಂದು ವೇಳೆ, ಗಂಡು ಹುಲಿ ಹೆಣ್ಣಿನ ಬದಲು ಗಂಡನ್ನೇ ಆಯ್ಕೆ ಮಾಡಿಕೊಳ್ಳುವ ವಾತಾವರಣವನ್ನೊಮ್ಮೆ ಕಲ್ಪಿಸಿಕೊಳ್ಳಿ. ಹುಲಿಗಳ ಸಂತತಿಯ ಗತಿ ಏನಾಗಬಹುದು? ಕೆಲವು ವರ್ಷಗಳಲ್ಲೇ ಹುಲಿ, ಸಿಂಹಗಳು ಇತಿಹಾಸದ ಪುಟ ಸೇರುವುದಕ್ಕೆ ಸಾಧ್ಯವಿದೆಯಲ್ಲವೇ? ಹೀಗಿರುವಾಗ, ಮಾನವ ಸಂತತಿಯನ್ನೇ ಬೆಳೆಸದ ಸಲಿಂಗ ರತಿಯನ್ನು ವೈಯಕ್ತಿಕ ಸ್ವಾತಂತ್ರ್ಯದ ನೆಪದಲ್ಲಿ ಬೆಂಬಲಿಸಿದರೆ ಭವಿಷ್ಯದ ಅನಾಹುತಕ್ಕೆ ಯಾರು ಹೊಣೆ ಹೊರಬೇಕು?
 ಗಂಡು-ಹೆಣ್ಣಿನ ನಡುವೆ ಪ್ರಕೃತಿ ಸಹಜವಾದ ಆಕರ್ಷಣೆಯಿದೆ. ಆ ಆಕರ್ಷಣೆಯು ಮಾನವ ಸಂತತಿಯ ವೃದ್ಧಿಗಷ್ಟೇ ಕಾರಣವಾಗುವುದಲ್ಲ, ಸಮಾಜದಲ್ಲಿ ಜವಾಬ್ದಾರಿಯ ಪ್ರಜ್ಞೆ, ಕರುಣೆ, ಅನುಕಂಪ, ಮಾನವೀಯತೆಯ ಪ್ರಜ್ಞೆಯನ್ನೂ ಅದು ಬೆಳೆಸುತ್ತದೆ. ದಾಂಪತ್ಯ ಎಂಬುದು ಬರೇ ದೈಹಿಕ ಸುಖಕ್ಕಷ್ಟೇ ಮೀಸಲಾದ ಸಂಬಂಧ ಅಲ್ಲ. ಅಲ್ಲಿ ಪರಸ್ಪರ ಜವಾಬ್ದಾರಿಯಿದೆ. ಕೊಡು-ಕೊಳ್ಳುವಿಕೆಯಿದೆ. ಪ್ರೀತಿ-ಅನುಕಂಪಗಳ ಒರತೆಯಿದೆ. ಪತಿ-ಪತ್ನಿಯರಾಗಿ, ಹೆತ್ತವರಾಗಿ, ಅಜ್ಜ-ಅಜ್ಜಿಯರಾಗಿ ದಂಪತಿಗಳು ಮಾರ್ಪಡುವ ಒಂದು ಅದ್ಭುತ ಪರಿಕಲ್ಪನೆಯನ್ನು ಸಲಿಂಗರತಿಯ ಜೋಡಿಗಳಿಂದ ನಿರೀಕ್ಷಿಸಲು ಸಾಧ್ಯವೇ? ಅಲ್ಲಿ ಹೊಣೆಗಾರಿಕೆಗಳು ಕಡಿಮೆ. ಲೈಂಗಿಕ ಸುಖಕ್ಕಿಂತ ಹೊರತಾದ ಇನ್ನಾವ ಉದ್ದೇಶಗಳೂ ಆ ಜೋಡಿಗಳ ನಡುವೆ ಇರುವ ಸಾಧ್ಯತೆ ಇಲ್ಲ. ಮಕ್ಕಳ ಜನನಕ್ಕೆ ಅವಕಾಶವೇ ಇಲ್ಲದಿರುವುದರಿಂದ ಸಾಮಾಜಿಕ ಜವಾಬ್ದಾರಿಗಳೂ ಇರುವುದಿಲ್ಲ. ಶಾಲೆಗಳ ಅಗತ್ಯವೂ ಇಲ್ಲ. ಒಂದು ಬಗೆಯ ಒಣ ವಾತಾವರಣವನ್ನು ಸೃಷ್ಟಿ ಮಾಡುವ ಈ ಮಾದರಿಯ ಜೀವನ ವಿಧಾನವನ್ನು ನಾವು ಬೆಂಬಲಿಸತೊಡಗಿದರೆ ಅದರಿಂದ ಸಮಾಜಕ್ಕಾಗುವ ಲಾಭವಾದರೂ ಏನು?
   ನಿಜವಾಗಿ, ಹೆಣ್ಣು-ಹೆಣ್ಣಿನಿಂದ ಮತ್ತು ಗಂಡು-ಗಂಡಿನಿಂದ ಆಕರ್ಷಣೆಗೆ ಒಳಗಾಗುವುದು ಮತ್ತ ದೈಹಿಕ ಸಂಬಂಧವನ್ನು ಬೆಳೆಸುವುದೆಲ್ಲ ಈ 21ನೇ ಶತಮಾನದಲ್ಲಿ ದಿಢೀರ್ ಆಗಿ ಕಾಣಿಸಿಕೊಂಡ ಹೊಸ ಬೆಳವಣಿಗೆಯೇನಲ್ಲ. ಅನಾದಿ ಕಾಲದಿಂದಲೂ ಇಂಥ ಪ್ರಕ್ರಿಯೆಗಳೂ ನಡೆಯುತ್ತಲೇ ಬಂದಿದೆ. ಮಾತ್ರವಲ್ಲ, ಧರ್ಮ ಅದನ್ನು ಅಪರಾಧವೆಂದೇ ಪರಿಗಣಿಸಿದೆ (ಪವಿತ್ರ ಕುರಾನ್  29:28-29) ಇಷ್ಟಕ್ಕೂ, ಯಾವುದೇ ಒಂದು ಕ್ರಿಯೆಗೂ ಬಲವಾದ ಅಡಿಪಾಯ ಇರಲೇಬೇಕು. ನಿದ್ದೆಗೆ, ಊಟಕ್ಕೆ, ದುಡಿಮೆಗೆ, ಮದುವೆಗೆ.. ಹೀಗೆ ಎಲ್ಲದಕ್ಕೂ ಅದರದೇ ಆದ ಉದ್ದೇಶ, ಫಲಿತಾಂಶಗಳು ಇರುತ್ತವೆ. ನಿದ್ದೆ ಮಾಡುವುದರಿಂದ ಮರುದಿನದ ಬದುಕನ್ನು ರೂಪಿಸಲು ಸಾಧ್ಯವಾಗುತ್ತದೆ. ಊಟ ಮಾಡದೇ ಇದ್ದರೆ ಮರುದಿನ ಹುರುಪಿನಿಂದ ಬದುಕಲು ಸಾಧ್ಯವಾಗುವುದಿಲ್ಲ. ದುಡಿಮೆಯ ಉದ್ದೇಶ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ಬದುಕನ್ನು ಸಂತಸವಾಗಿಡುವುದೂ ಆಗಿರುತ್ತದೆ. ಕೇವಲ ದೈಹಿಕ ಸುಖವನ್ನು ಪಡಕೊಳ್ಳುವ ಉದ್ದೇಶಕ್ಕಿಂತಲೂ ಬದುಕಿನ ಸೌಂದರ್ಯ, ಸಂತಾನ ವೃದ್ಧಿಯ ಗುರುತರ ಹೊಣೆಗಾರಿಕೆಯೂ ಮದುವೆಗಿದೆ. ಒಂದು ರೀತಿಯಲ್ಲಿ ಪ್ರಕೃತಿಯ ನಿಯಮಗಳಲ್ಲಿ ಒಂದು ತತ್ವವಿದೆ. ಹೊಣೆಗಾರಿಕೆಯಿದೆ. ಆದರೆ ಗಂಡು-ಗಂಡು ಜೋಡಿಯಾಗಿ ದಂಪತಿಗಳಂತೆ ಬದುಕುವುದರ ಹಿಂದೆ ದೈಹಿಕ ಸುಖದ ವಿನಿಮಯದ ಹೊರತಾದ ಇನ್ನಾವ ತರ್ಕಗಳೂ ಕಾಣಿಸುತ್ತಿಲ್ಲ. ಆ ಸುಖವನ್ನು ಪಡಕೊಂಡ ಬಳಿಕ ಏನು ಎಂಬ ಪ್ರಶ್ನೆಗೆ ಯಾವ ಉತ್ತರವೂ ಲಭಿಸುತ್ತಿಲ್ಲ. ಒಂದು ವೇಳೆ ಅವರಿಬ್ಬರ ದೈಹಿಕ ಸೌಂದರ್ಯ ಕ್ಷೀಣಿಸಿದ ಮೇಲೆ ಆ ಸಂಬಂಧ ಎಲ್ಲಿಯ ವರೆಗೆ ಬಾಳಿಕೆ ಕಂಡೀತು? ಆಕರ್ಷಣೆ ಕಳಕೊಂಡ ಬಳಿಕ ಅವರಿಬ್ಬರೂ ಬೇರೆ ಬೇರೆಯಾದರೆ, ಅವರ ಹೊಣೆಗಾರಿಕೆಯನ್ನು ಯಾರು ಹೊರಬೇಕು? ಮಕ್ಕಳಿಲ್ಲದ, ಹೆತ್ತವರೂ ಆಗದ ಇವರಿಂದ ಸಮಾಜದ ಅಭಿವೃದ್ದಿsಗೆ ಯಾವ ಕೊಡುಗೆಯಿರುತ್ತದೆ? ಒಣಗಿದ ಗದ್ದೆಗಳು, ಮುಚ್ಚಿದ ಮನೆಗಳು, ಉದ್ಯೋಗಿಗಳಿಲ್ಲದ ಕಾರ್ಖಾನೆಗಳ ಒಂದು ಚಿತ್ರಣವನ್ನು ಕಲ್ಪಿಸಿಕೊಂಡರೇನೇ ಸಲಿಂಗ ರತಿಯ ಅನಾಹುತ ಸ್ಪಷ್ಟವಾಗುತ್ತದೆ. ಆದ್ದರಿಂದಲೇ ಈ ಪ್ರಕ್ರಿಯೆಯನ್ನು ತಡೆಯುವ ಪ್ರಯತ್ನಗಳು ನಡೆಯಬೇಕಾಗಿದೆ. ಇದಕ್ಕೆ ಬೆಂಬಲ ಸಿಗದಂಥ ವಾತಾವರಣವನ್ನು ಸೃಷ್ಟಿ ಮಾಡಬೇಕಾಗಿದೆ. ಇಲ್ಲದೇ ಹೋದರೆ ಚೈತನ್ಯವನ್ನು ಕಳೆದುಕೊಂಡ ಒಣ ಮನುಷ್ಯರನ್ನಷ್ಟೇ ಭವಿಷ್ಯದಲ್ಲಿ ನೋಡಬೇಕಾದೀತು.   

Thursday 12 December 2013

ಸ್ಥಿಮಿತ ಕಳಕೊಳ್ಳುವ ಹೆತ್ತವರು ಮತ್ತು ನಂಬಿಕೆ ಕಳಕೊಳ್ಳದ ಮಕ್ಕಳು

ರಮೇಶ್ ನಾಯ್ಕ
    ಈ ಸುದ್ದಿಗಳನ್ನು ಓದಿ
1. 14 ವರ್ಷದ ಮಗಳು ಅರುಷಿಯನ್ನು ಕೊಂದ ಅಪರಾಧಕ್ಕಾಗಿ ಆಕೆಯ ಹೆತ್ತವರಾದ ರಾಜೇಶ್ ಮತ್ತು ನೂಪುರ್ ತಲ್ವಾರ್ ದಂಪತಿಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.
2. ಕೌಟುಂಬಿಕ ದ್ವೇಷದ ಹಿನ್ನೆಲೆಯಲ್ಲಿ ತನ್ನ 10 ಮತ್ತು 14 ವರ್ಷದ ಮಕ್ಕಳನ್ನು ಕೊಂದ ಬ್ಯಾಂಕ್ ಮ್ಯಾನೇಜರ್ ರಮೇಶ್ ನಾಯ್ಕನಿಗೆ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ.
3. ಮೂರನೇ ಹೆರಿಗೆಯಲ್ಲೂ ಅವಳಿ ಹೆಣ್ಣು ಮಕ್ಕಳಾದ ದುಃಖದಿಂದ ಬಡ ಕುಟುಂಬವೊಂದು ನವಜಾತ ಶಿಶುಗಳನ್ನು ಪರಭಾರೆ ಮಾಡಿ ಬಂಧನಕ್ಕೀಡಾಗಿದ್ದಾರೆ..
   ಕಳೆದೆರಡು ವಾರಗಳಲ್ಲಿ ಪ್ರಕಟವಾದ ಈ ಮೂರೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆ ಯಿದೆ. ಅದೇನೆಂದರೆ, ಈ ಮೂರರಲ್ಲೂ ಮಕ್ಕಳೇ ನಾಯಕರು. ಹೆತ್ತವರೇ ಖಳನಾಯಕರು. ನಿಜವಾಗಿ, ಇನ್ನೂ ಪ್ರೌಢಾವಸ್ಥೆಗೆ ತಲುಪದ ಪುಟ್ಟ ಮಕ್ಕಳು ಈ ಜಗತ್ತಿನಲ್ಲಿ ಖಳರಾದದ್ದು ಇಲ್ಲವೇ ಇಲ್ಲ. ಹಾಗಂತ ಖಳರಾಗುವುದಕ್ಕೆ ಬೇಕಾದ ಅವಕಾಶ ಅಥವಾ ಉಪಕರಣಗಳು ಅವರ ಮುಂದೆ ಇರಲಿಲ್ಲ ಎಂದಲ್ಲ. ಎಲ್ಲವೂ ಇತ್ತು. ಚೂರಿ, ಕತ್ತಿ, ಕಲ್ಲು.. ಮತ್ತಿತರ ಅಪಾಯಕಾರಿ ವಸ್ತುಗಳು ಮನೆಯಲ್ಲಿ ಮಕ್ಕಳ ಕೈಗೆಟಕುವ ರೀತಿಯಲ್ಲೇ ಇರುತ್ತದೆ. ಅಪ್ಪ ಸಿಟ್ಟಿನಿಂದ ಥಳಿಸಿದಾಗ ಮಕ್ಕಳು ಚೂರಿಯ ಮೂಲಕ ಪ್ರತಿಕ್ರಿಯಿಸುವುದಕ್ಕೆ ಅವಕಾಶ ಇರುತ್ತದೆ. ತಾಯಿಯ ಬೈಗುಳ, ಗದರಿಕೆಗೆ ಪ್ರತಿಕ್ರಿಯೆಯಾಗಿ ಮಕ್ಕಳು ಕಲ್ಲೆಸೆಯುವುದಕ್ಕೂ ಅವಕಾಶ ಇದೆ. ಅಲ್ಲದೇ ಅನೇಕ ಬಾರಿ ಹೆತ್ತವರು ಮಕ್ಕಳನ್ನು ತಪ್ಪಾಗಿಯೇ ದಂಡಿಸುತ್ತಾರೆ. ಆದರೆ ತಪ್ಪನ್ನು ಒಪ್ಪಿಕೊಳ್ಳುವುದು ಅವರಿಗೆ ಗೊತ್ತೇ ಹೊರತು, ದೊಡ್ಡವರಂತೆ ಅದನ್ನು ಜಾಣ್ಮೆಯಿಂದ ಸಮರ್ಥಿಸಿಕೊಳ್ಳುವುದು ಗೊತ್ತಿರುವುದಿಲ್ಲ. ತಮ್ಮ ಕೃತ್ಯವನ್ನು ಮನದಟ್ಟಾಗುವಂತೆ ವಿವರಿಸುವ ಕಲೆಯೂ ಅವರಿಗೆ ಕರಗತವಾಗಿರುವುದಿಲ್ಲ. ಆದರೂ, ಮಕ್ಕಳು ತಮ್ಮ ಹೆತ್ತವರನ್ನು ದ್ವೇಷಿಸುವುದಿಲ್ಲ. ಅಪಾಯಕಾರಿ ಅಸ್ತ್ರಗಳನ್ನು ಎತ್ತಿಕೊಂಡು ಹಗೆ ಸಾಧಿಸುವುದಿಲ್ಲ. ಯಾಕೆ ಹೀಗೆ ಅಂದರೆ, ಮಕ್ಕಳಿಗೆ ಹೆತ್ತವರ ಮೇಲೆ ಅಪಾರ ನಂಬಿಕೆಯಿರುತ್ತದೆ. ಹೆತ್ತವರು ಎಂದೂ ತಮ್ಮ ಜೊತೆಗಿರುತ್ತಾರೆ ಅನ್ನುವ ಭರವಸೆಯೊಂದಿಗೆ ಅವು ಬದುಕುತ್ತವೆ. ಹೀಗಿರುವಾಗ ಹೆತ್ತವರೇ ಮಕ್ಕಳ ಹಂತಕರಾಗುವುದನ್ನು ಹೇಗೆ ವ್ಯಾಖ್ಯಾನಿಸುವುದು? ಯಾರಾದರೂ ತಂಟೆ ಮಾಡಿದರೆ ಮಕ್ಕಳು ಓಡೋಡಿ ಬರುವುದು ಹೆತ್ತವರ ಬಳಿಗೆ. ಶಾಲೆಯಲ್ಲಿ ಶಿಕ್ಷಕರು ಗದರಿಸಿದರೆ, ಗೆಳೆಯರು ಜಗಳ ಕಾಯ್ದರೆ, ಟಿಫಿನ್ ತಿನ್ನಲಾಗದಿದ್ದರೆ.. ಎಲ್ಲವನ್ನೂ ಮಕ್ಕಳು ಹೆತ್ತವರ ಜೊತೆಯೇ ಹಂಚಿಕೊಳ್ಳುತ್ತಾರೆ. ಇಂಥದ್ದೊಂದು ಪ್ರೀತಿ, ನಂಬಿಕೆಯ ಸಂಬಂಧವೊಂದು ಬಿರುಕು ಬಿಡುತ್ತಿರುವುದೇಕೆ? ಇವತ್ತಿನ ದಿನಗಳಲ್ಲಿ ಇಂಥ ಪ್ರಕರಣಗಳು ತೀರಾ ಅಪರೂಪದ್ದಾಗಿಯೂ ಉಳಿದಿಲ್ಲ. ಯಾವ ಊರಲ್ಲೂ ಯಾವ ಸಂದರ್ಭದಲ್ಲೂ ಘಟಿಸಬಹುದಾದ ಮಾಮೂಲಿ ಪ್ರಕರಣದ ಸ್ಥಿತಿಗೆ ಇವು ತಲುಪಿ ಬಿಟ್ಟಿವೆ. ಕಚೇರಿಯಲ್ಲೋ ವ್ಯವಹಾರದಲ್ಲೋ ಆಗಿರುವ ಆಘಾತದ ಸಿಟ್ಟನ್ನು ಎಷ್ಟೋ ಹೆತ್ತವರು ತಮ್ಮ ಮಕ್ಕಳ ಮೇಲೆ ತೀರಿಸಿಕೊಳ್ಳುವುದಿದೆ. ಮಕ್ಕಳಿಗೆ ಅದನ್ನು ಪ್ರಶ್ನಿಸುವ ಸಾಮಥ್ರ್ಯ ಇಲ್ಲದಿರುವುದರಿಂದಷ್ಟೇ ಹೆಚ್ಚಿನವು ಸುದ್ದಿಗೊಳಗಾಗುವುದಿಲ್ಲ.
   ಕೌಟುಂಬಿಕ ಕಲಹಗಳು ಆಘಾತಕಾರಿ ಮಟ್ಟದಲ್ಲಿ ಹೆಚ್ಚುತ್ತಿರುವ ದಿನಗಳಿವು. ದೊಡ್ಡ ಕುಟುಂಬಗಳು ಅಣು ಕುಟುಂಬಗಳಾಗಿ ಬದಲಾಗುತ್ತಿವೆ. ಒಂದು ಕಡೆ ಬದುಕು ತುಟ್ಟಿಯಾಗುತ್ತಿದ್ದರೆ ಇನ್ನೊಂದೆಡೆ ಆಧುನಿಕ ಜೀವನ ಕ್ರಮಗಳು ಬಲವಾಗಿ ಆಕರ್ಷಿಸುತ್ತಿವೆ. ಅವುಗಳ ಆಕರ್ಷಣೆಯಿಂದ ತಪ್ಪಿಸಿಕೊಂಡು ಬದುಕಲಾಗದಷ್ಟು ಅವು ಅನಿವಾರ್ಯ ಅನ್ನಿಸಿಕೊಳ್ಳುತ್ತಿವೆ. ಇವುಗಳ ನಡುವೆ ಸಮ ತೋಲನ ಕಾಯ್ದುಕೊಳ್ಳುವುದು ಅನೇಕ ಸಂದರ್ಭಗಳಲ್ಲಿ ಸಾಧ್ಯವಾಗುತ್ತಿಲ್ಲ. ಪತಿ-ಪತ್ನಿಯರ ನಡುವೆ ಜಗಳ, ವಿವಾಹ ವಿಚ್ಛೇದನ, ಅನಾಥ ಮಕ್ಕಳ ಪ್ರಕರಣಗಳು ಹೆಚ್ಚಾಗುತ್ತಿವೆ. ಪತಿ ಮತ್ತು ಪತ್ನಿಯ ಮೇಲೆ ಇವತ್ತಿನ ಜೀವನ ಕ್ರಮಗಳು ಹೆಚ್ಚುವರಿ ಹೊರೆಯನ್ನು ಹೊರಿಸುತ್ತಿರುವುದರಿಂದ ಮನಶ್ಶಾಂತಿ ಕಡಿಮೆಯಾಗುತ್ತಿದೆ. ತೀರಾ ಸಹನೆಯಿಂದ ಪ್ರತಿಕ್ರಿಯಿಸಬಹುದಾದ ಸಣ್ಣ ಪ್ರಕರಣಗಳೂ ರಾದ್ಧಾಂತಕ್ಕೆ ಕಾರಣವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನೆಮ್ಮದಿಯ ಮನೆಗಳನ್ನು ನಿರ್ಮಿಸುವ ಬಗ್ಗೆ ಗಂಭೀರ ಚರ್ಚೆಗಳು ನಡೆಯಬೇಕಿದೆ. ಒಂದು ಮನೆಯಲ್ಲಿ ಪತಿಯ ಜವಾಬ್ದಾರಿ, ಪತ್ನಿಯ ಹೊಣೆಗಾರಿಕೆ, ಮಕ್ಕಳ ತರಬೇತಿ, ಹಿರಿಯರ ಸ್ಥಾನ-ಮಾನ.. ಎಲ್ಲವುಗಳನ್ನೂ ಅವಲೋಕನಕ್ಕೆ ಒಳಪಡಿಸುವ ವಾತಾವರಣವನ್ನು ಬೆಳೆಸಬೇಕಿದೆ. ಯಾಕೆಂದರೆ, ಇವತ್ತು ಹೊಟ್ಟೆಗೆ ಮತ್ತು ಬಟ್ಟೆಗೆ ತೊಂದರೆ ಇಲ್ಲದ ಮನೆಗಳಿಂದಲೇ ಹೆಚ್ಚೆಚ್ಚು ಆಘಾತಕಾರಿ ಸುದ್ದಿಗಳು ಕೇಳಿಬರುತ್ತಿವೆ. ನೆಮ್ಮದಿ ಕಳಕೊಳ್ಳುತ್ತಿರುವ ಮನೆಗಳಲ್ಲಿ ಹೆಚ್ಚಿನವು ಮಧ್ಯಮ ಮತ್ತು ಶ್ರೀಮಂತವಾದವೇ. ಒಂದು ರೀತಿಯಲ್ಲಿ, ಟಿ.ವಿ. ಮತ್ತು ಇಂಟರ್‍ನೆಟ್‍ಗಳು ನವಪೀಳಿಗೆಯಲ್ಲಿ ಹೊಸ ಹೊಸ ಕನಸುಗಳನ್ನು ಬಿತ್ತುತ್ತಿವೆ. ಹೊಸ ಹೊಸ ವಿಚಾರಗಳನ್ನು ರೂಪಿಸುತ್ತಿವೆ. ಅವುಗಳಿಂದ ಪ್ರಭಾವಿತಗೊಳ್ಳುವ ಪೀಳಿಗೆಯು ತಪ್ಪು ಹೆಜ್ಜೆಯಿರಿಸುವುದಕ್ಕೂ ಅವಕಾಶ ಇದೆ. ಮಕ್ಕಳಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾದ ಮತ್ತು ತಿದ್ದಬೇಕಾದ ಹೆತ್ತವರು ಅದು ಬಿಟ್ಟು ಜೀವನ ಸೌಲಭ್ಯವನ್ನು ಹೆಚ್ಚಿಸುವ ಭರದಲ್ಲಿ ಬಿಝಿಯಾಗಿರುತ್ತಾರೆ. ಹೀಗೆ ತಾಳ ತಪ್ಪಿದ ವಾತಾವರಣದಲ್ಲಿ ಕೊನೆಗೆ ಅಸಹನೆ, ಆಕ್ರೋಶಗಳೇ ಮೇಲುಗೈ ಪಡೆಯುವ ಸಾಧ್ಯತೆಯೂ ಇರುತ್ತದೆ.
   ಮಕ್ಕಳು ಮತ್ತು ಹೆತ್ತವರು ಎರಡು ಬೇರೆ ಬೇರೆ ಧ್ರುವಗಳಲ್ಲ. ಪರಸ್ಪರ ಅವಲಂಬಿತರು. ಮಕ್ಕಳಿಲ್ಲದ ಬದುಕನ್ನು ನಿರೀಕ್ಷಿಸಲು ಹೇಗೆ ಒಂದು ಕುಟುಂಬಕ್ಕೆ ಸಾಧ್ಯವಿಲ್ಲವೋ ಹಾಗೆಯೇ ಹೆತ್ತವರು ಇಲ್ಲದಿರುವ ಒಂದು ಬದುಕನ್ನು ನಿರೀಕ್ಷಿಸಲು ಮಕ್ಕಳಿಗೂ ಸಾಧ್ಯವಿಲ್ಲ. ಇಲ್ಲಿಯ ಸಂಬಂಧ ಭಾವಪೂರ್ಣವಾದದ್ದು. ಪರಸ್ಪರ ಭರವಸೆ, ನಂಬಿಕೆ, ಪ್ರೀತಿಯ ತಳಹದಿಯಲ್ಲಿ ಕಟ್ಟಲಾದದ್ದು. ಅಂಥ ಸಂಬಂಧಗಳು ಬಿರುಕು ಬಿಡದಂತೆ ಕಾಪಾಡಿಕೊಳ್ಳಬೇಕಾದ ಅಗತ್ಯ ಬಹಳವಿದೆ. ಹೆತ್ತವರನ್ನು ಹಂತಕರಂತೆ ಭೀತಿಯಿಂದ ನೋಡುವ ಮಕ್ಕಳು ಮತ್ತು ಮಕ್ಕಳನ್ನು ಕೊಲೆಗೆ ಅರ್ಹರೆಂಬಂತೆ ನೋಡುವ ಹೆತ್ತವರು ಸಮಾಜದಲ್ಲಿ ಬೆಳೆಯತೊಡಗಿದರೆ ಅದಕ್ಕಿಂತ ಭೀತಿಯ ಸನ್ನಿವೇಶ ಇನ್ನೊಂದಿಲ್ಲ. ಆದ್ದರಿಂದ ಬದುಕಿನ ಜಂಜಾಟದ ಮಧ್ಯೆಯೂ ಸ್ಥಿಮಿತವನ್ನು ಕಳಕೊಳ್ಳದ ಕುಟುಂಬಗಳು ನಿರ್ಮಾಣಗೊಳ್ಳುವಂತೆ ನೋಡಿಕೊಳ್ಳಬೇಕಾಗಿದೆ. ಮಕ್ಕಳು, ಹೆತ್ತವರು, ಹಿರಿಯರು ನೆಮ್ಮದಿಯಾಗಿ ಬದುಕುವ ‘ಮನೆಗಳ' ನಿರ್ಮಾಣಕ್ಕೆ ಒತ್ತು ಸಿಗಬೇಕಿದೆ. ಇಲ್ಲದಿದ್ದರೆ, ಹಂತಕ ಹೆತ್ತವರಂತೆ ಹಂತಕ ಮಕ್ಕಳೂ ಸೃಷ್ಟಿಯಾದಾರು
.

Wednesday 4 December 2013

ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಅನುಮಾನಗಳು

ಏ.ಕೆ. ಗಂಗೂಲಿ
ಪ್ರಕರಣವೊಂದರ ಸರಿ-ತಪ್ಪುಗಳನ್ನು ಚರ್ಚಿಸುವುದಕ್ಕಿಂತ ಮೊದಲು ನಾವು ತೆಗೆದುಕೊಳ್ಳಲೇ ಬೇಕಾದ ಎಚ್ಚರಿಕೆಗಳು ಯಾವುವು? ಯಾವುದೇ ಒಂದು ಪ್ರಕರಣಕ್ಕೆ ಹೊರಗೆ ಕಾಣುವ ಮುಖವಷ್ಟೇ ಇರಬೇಕೆಂದಿಲ್ಲವಲ್ಲ. ಕಾಣದ್ದೂ ಇರಬಹುದಲ್ಲವೇ? ಆ ಕಾಣದ ಮುಖವನ್ನು ಪತ್ತೆ ಹಚ್ಚದೆಯೇ ಅಥವಾ ಆ ಬಗ್ಗೆ ಅನುಮಾನಿಸದೆಯೇ ಖಚಿತ ಅಭಿಪ್ರಾಯ ವ್ಯಕ್ತಪಡಿಸುವ ವಿಧಾನವನ್ನು ಏನೆಂದು ಕರೆಯಬೇಕು? ಅದರಿಂದಾಗಿ ತೊಂದರೆಗೆ ಒಳಗಾಗಬಹುದಾದ ವ್ಯಕ್ತಿಗಳಿಗೆ ನಾವು ಯಾವ ಪರಿಹಾರ ಕೊಡಬಲ್ಲೆವು? ತರುಣ್ ತೇಜ್‍ಪಾಲ್ ಮತ್ತು ಸುಪ್ರೀಮ್ ಕೋರ್ಟಿನ ಮಾಜಿ ನ್ಯಾಯಾಧೀಶ ಏ.ಕೆ. ಗಂಗೂಲಿ ಅವರ ಮೇಲೆ ಕೇಳಿ ಬಂದ ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ಆ ಬಗ್ಗೆ ಸುಪ್ರೀಮ್ ಕೋರ್ಟ್‍ನ ಮಾಜಿ ನ್ಯಾಯಾಧೀಶ ಅಲ್ತಮಷ್ ಕಬೀರ್ ಮತ್ತು ಮಾಜಿ ಅಟಾರ್ನಿ ಜನರಲ್ ಸೋಲಿ ಸೋರಾಬ್ಜಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಇಂಥದ್ದೊಂದು ಚರ್ಚೆಗೆ ವೇದಿಕೆ ಒದಗಿಸಿದೆ.
   ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಕೂಡಲೇ ಆ ಆರೋಪವನ್ನು ಕಣ್ಣು ಮುಚ್ಚಿ ಒಪ್ಪಿಕೊಳ್ಳಬಹುದೇ? ಆರೋಪ ಹೊರಿಸಿದವರನ್ನು ಮುಗ್ಧೆ, ಸಂತ್ರಸ್ತೆ ಮತ್ತು ಆರೋಪಕ್ಕೀಡಾದವರನ್ನು ಪರಮದುಷ್ಟ ಎಂದು ಹಣೆಪಟ್ಟಿ ಹಚ್ಚುವುದು ನೈತಿಕವಾಗಿ ಸರಿಯೇ? ಅಂಥ ಆರೋಪಗಳಲ್ಲೂ ದುರುದ್ದೇಶ ಇರಬಾರದು ಎಂದಿದೆಯೇ? ಹಾಗಂತ, ಲೈಂಗಿಕ ದೌರ್ಜನ್ಯದ ಬಗ್ಗೆ ಕೇಳಿ ಬರುತ್ತಿರುವ ಎಲ್ಲ ಪ್ರಕರಣಗಳೂ ಈ ಪಟ್ಟಿಯಲ್ಲಿ ಸೇರಿವೆ ಎಂದಲ್ಲ. ಲೈಂಗಿಕ ದೌರ್ಜನ್ಯ ಎಂಬುದೇ ಓರ್ವ ಹೆಣ್ಣಿನ ಮಟ್ಟಿಗೆ ಅತಿ ಹೀನ ಮತ್ತು ಸದಾ ಕಾಡುವ ಹಿಂಸೆಯಾಗಿರುತ್ತದೆ. ಒಂದು ವೇಳೆ ಆಕೆ ಅಂಥ ದೌರ್ಜನ್ಯವನ್ನು ಬಹಿರಂಗಪಡಿಸದೇ ಒಳಗೊಳಗೇ ಸಹಿಸಿಕೊಂಡು ಬದುಕಿದರೆ ಸಮಾಜಕ್ಕೆ ಗೊತ್ತಾಗದೇ ಇರಬಹುದು. ಆದರೆ ಆ ಕ್ರೌರ್ಯ ಆಕೆಯನ್ನು ಜೀವನಪೂರ್ತಿ ನೆರಳಾಗಿ ಕಾಡುತ್ತಿರುತ್ತದೆ. ಕೂತಲ್ಲಿ, ನಿಂತಲ್ಲಿ, ನಿದ್ದೆಯಲ್ಲಿ, ಒಂಟಿತನದ ಸಂದರ್ಭದಲ್ಲಿ ಅದು ಮತ್ತೆ ದೌರ್ಜನ್ಯ ನಡೆಸು ತ್ತಲೇ ಇರುತ್ತದೆ. ಅದು ಬಿಟ್ಟು, ಈ ಕ್ರೌರ್ಯವೆಸಗಿದ ವ್ಯಕ್ತಿಗೆ ಶಿಕ್ಷೆಯಾಗಬೇಕೆಂದು ಆಕೆ ತೀರ್ಮಾನಿಸಿದರೆ ಅಲ್ಲೂ ಸಮಸ್ಯೆ ಎದುರಾಗುತ್ತದೆ. ಆವರೆಗೆ ತನಗಷ್ಟೇ ಗೊತ್ತಿದ್ದ ಕ್ರೌರ್ಯವೊಂದು ಸಮಾಜದ ಪಾಲಾಗುತ್ತದೆ. ಮಾಧ್ಯಮಗಳು ಅದನ್ನು ಹೊತ್ತು ತಿರುಗುತ್ತವೆ. ಗೆಳತಿಯರು, ನೆರೆಕರೆಯವರು ವಿಚಿತ್ರವಾಗಿ ನೋಡತೊಡಗುತ್ತಾರೆ. ವಿವಾಹದ ಸಂದರ್ಭದಲ್ಲೂ ‘ಅತ್ಯಾಚಾರ ಸಂತ್ರಸ್ತೆ' ಎಂಬ ಐಡೆಂಟಿಟಿ ಹಲವು ಸಮಸ್ಯೆಗಳನ್ನು ತಂದೊಡ್ಡುವ ಅಪಾಯವಿರುತ್ತದೆ. ಹೀಗಿರುವಾಗ, ತನ್ನದೇ ಆದ ಮತ್ತು ತನಗಷ್ಟೇ ಗೊತ್ತಿರುವ ಒಂದು ಕ್ರೌರ್ಯವನ್ನು ತನಗೆ ಗುರುತು-ಪರಿಚಯವೇ ಇಲ್ಲದ ಇತರರಿಗೆ ತಿಳಿಸುವುದು ಮತ್ತು ಕೋರ್ಟಿನ ಮೊರೆ ಹೋಗುವುದೆಲ್ಲ ಸಣ್ಣ ಸಂಗತಿಯಲ್ಲ. ಅದಕ್ಕೆ ಅಪಾರ ಧೈರ್ಯ, ಛಲದ ಅಗತ್ಯವಿದೆ. ಇವೆಲ್ಲವನ್ನೂ ಒಪ್ಪಿಕೊಳ್ಳುತ್ತಲೇ ಇಂಥ ದೌರ್ಜನ್ಯ ಆರೋಪಗಳಿಗೆ ಇರಬಹುದಾದ ಇನ್ನೊಂದು ಮುಖದ ಬಗ್ಗೆಯೂ ಅಷ್ಟೇ ಎಚ್ಚರಿಕೆಯಿಂದ ಚರ್ಚಿಸಬೇಕಾಗಿದೆ.
   ನಿಜವಾಗಿ, ಪ್ರಸಿದ್ಧಿಯ ತುತ್ತ ತುದಿಯಲ್ಲಿರುವವರನ್ನು ಒಂದೇ ಏಟಿಗೆ ಬೀಳಿಸುವ ಸಾಮರ್ಥ್ಯ  ಇರುವುದು ಲೈಂಗಿಕ ದೌರ್ಜನ್ಯದ ಆರೋಪಗಳಿಗೆ. ಅದು ವ್ಯಕ್ತಿಯನ್ನು ಜರ್ಝರಿತಗೊಳಿಸುತ್ತದೆ. ಸಮಾಜಕ್ಕೆ ಮುಖ ತೋರಿಸದಷ್ಟು ಕುಗ್ಗಿಸುತ್ತದೆ. ಮಾತ್ರವಲ್ಲ, ಮಾಧ್ಯಮಗಳು ಕೂಡ ಆರೋಪವನ್ನು ಖಚಿತಪಡಿಸಿಕೊಳ್ಳದೆಯೇ ತಕ್ಷಣ ಸುದ್ದಿಗೆ ಮಸಾಲೆ ಅರೆಯುತ್ತದೆ. ಗಂಗೂಲಿಯವರನ್ನೇ ಎತ್ತಿ ಕೊಳ್ಳೋಣ. ಪ್ರಕರಣಕ್ಕೆ ಒಂದು ವರ್ಷ ಸಂದಿದೆ. ಪ್ರಕರಣ ಇಷ್ಟು ತಡವಾಗಿ ಬೆಳಕಿಗೆ ಬರುವುದಕ್ಕೆ ಕಾರಣ ಏನು? ನಿರ್ಭಯಳ ಪರ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲೇ ಈ ದೌರ್ಜನ್ಯ ನಡೆದಿದೆ ಎಂದಾದರೆ ಅದನ್ನು ಬಹಿರಂಗಪಡಿಸುವುದಕ್ಕೆ ಆ ಸಂದರ್ಭಕ್ಕಿಂತ ಉತ್ತಮವಾದುದು ಇನ್ನಾವುದಿತ್ತು? ಕೇವಲ ಗಂಗೂಲಿಯವರ ಹುದ್ದೆ, ಪ್ರಭಾವಕ್ಕೆ ಮಣಿದು ಹೀಗೆ ತಡ ಮಾಡುವುದಕ್ಕೆ ಸಾಧ್ಯವಿದೆಯೇ? ಅಲ್ತಮಷ್ ಕಬೀರ್ ಕೂಡಾ ಈ ಆರೋಪದ ವಾಸ್ತವಾಂಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗಂತ, ಗಂಗೂಲಿ ಇಲ್ಲಿ ಸಂಕೇತ ಮಾತ್ರ. ರಾಜಕೀಯ ಅಥವಾ ಇನ್ನಿತರ ದುರುದ್ದೇಶಗಳಿಂದ ಒಂದು ಸಾಮಾನ್ಯ ಪ್ರಕರಣವು ಅಸಾಮಾನ್ಯ ಪ್ರಕರಣವಾಗಿ ಬಿಡುವುದಕ್ಕೆ ಇವತ್ತು ಅವಕಾಶ ಇದೆ. ಸಹಮತದ ಸೆಕ್ಸ್‍ನಲ್ಲಿ ಏರ್ಪಟ್ಟ ಜೋಡಿಗಳು ಆ ಬಳಿಕ ವಿರಸದ ಕಾರಣದಿಂದಾಗಿ ಅತ್ಯಾಚಾರ ಮೊಕದ್ದಮೆ ಹೂಡಿದ್ದಿದೆ. ಸದ್ಯದ ದಿನಗಳು ಎಷ್ಟು ನಾಜೂಕಿನವು ಅಂದರೆ, ಯಾರನ್ನು ಬೇಕಾದರೂ ಖೆಡ್ಡಾಕ್ಕೆ ಬೀಳಿಸಬಹುದು ಎಂಬ ವಾತಾವರಣವಿದೆ. ಮದ್ಯ, ಮಾನಿನಿಯರ ಮುಖಾಂತರ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು ತೀರಾ ಕಷ್ಟದ್ದೆಂದು ಹೇಳುವಂತಿಲ್ಲ. ಅಷ್ಟಕ್ಕೂ, ತರುಣ್ ತೇಜ್‍ಪಾಲ್ ಪ್ರಕರಣ ದಲ್ಲಿ ಇಂಥದ್ದೊಂದು ಅನುಮಾನ ತಪ್ಪೇ ಎಂದು ಹೇಳುವಾಗಲೂ ‘ರಾಜಕೀಯ'ಕ್ಕೆ ಯಾವುದೂ ಅಸಾಧ್ಯವಲ್ಲ ಎಂಬುದು ಕೂಡಾ ಅಷ್ಟೇ ನಿಜವಾಗಿದೆ.
   ತೇಜ್‍ಪಾಲ್ ಮತ್ತು ಗಂಗೂಲಿ ಪ್ರಕರಣಗಳು ಹೇಗೆ ಕೊನೆ ಮುಟ್ಟುತ್ತೋ ಗೊತ್ತಿಲ್ಲ. ಆದರೆ, ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳು ಪ್ರಸಿದ್ಧ ವ್ಯಕ್ತಿಗಳೇ. ಅಲ್ಲದೇ ಅವರ ಮೇಲೆ ಆರೋಪ ಹೊರಿಸಿದವರು ಹೊರಗಿನವರಲ್ಲ, ಜೊತೆಗೇ ಕೆಲಸ ಮಾಡುತ್ತಿರುವವರು. ಮೋದಿಯವರ ‘ಅಕ್ರಮ ಬೇಹುಗಾರಿಕೆ' ಪ್ರಕರಣವು ಬಹಿರಂಗವಾದ ಬೆನ್ನಿಗೇ ಈ ಎರಡೂ ಪ್ರಕರಣಗಳು ಬಹಿರಂಗಗೊಂಡಿವೆ ಎಂಬುದೂ ಬಹಳ ಮುಖ್ಯ. ಭಾವಿ ಪ್ರಧಾನಿ ಅಭ್ಯರ್ಥಿ ಒಳಗೊಂಡಿರುವ ಪ್ರಕರಣದ ಕಾವನ್ನು ತಗ್ಗಿಸುವುದಕ್ಕಾಗಿ ತೇಜ್‍ಪಾಲ್ ಪ್ರಕರಣವನ್ನು ಉಬ್ಬಿಸಲಾಯಿತೇ? ಅಕ್ರಮ ಬೇಹುಗಾರಿಕಾ ಪ್ರಕರಣದ ಯುವತಿಗೂ ಮೋದಿಯವರಿಗೂ ನಡುವೆ ಇದ್ದ ಸಂಬಂಧವೇನು ಎಂಬ ಬಗ್ಗೆ ಮಾಧ್ಯಮಗಳು ಕುತೂಹಲ ವ್ಯಕ್ತಪಡಿಸುವ ಹೊತ್ತಿನಲ್ಲೇ ತೇಜ್‍ಪಾಲ್ ಹೆಜ್ಜೆ ತಪ್ಪಿರುವ ಪ್ರಕರಣವು ಸುದ್ದಿ ಮಾಡಿರುವುದರಲ್ಲಿ ಯಾವ ಅನುಮಾನಕ್ಕೂ ಅವಕಾಶ ಇಲ್ಲವೇ? ಅವರನ್ನು ಬೇಕೆಂತಲೇ ಹೆಜ್ಜೆ ತಪ್ಪಿಸಲಾಯಿತೇ ಅಥವಾ ಹೆಜ್ಜೆ ತಪ್ಪಿದ ಅವರನ್ನು ಬಳಸಿಕೊಳ್ಳಲಾಯಿತೇ?
    ರಾಜಕೀಯ ವಾತಾವರಣವು ಅತಿಹೀನ ಸ್ಥಿತಿಗೆ ತಲುಪಿರುವ ಇಂದಿನ ದಿನಗಳಲ್ಲಿ ಯಾವುದನ್ನೂ ನೇರವಾಗಿ ನಂಬುವಂಥ ಸ್ಥಿತಿಯಿಲ್ಲ. ಲೈಂಗಿಕ ದೌರ್ಜನ್ಯ ಪ್ರಕರಣಗಳೂ ಈ ಸಾಲಿಗೆ ಸೇರುತ್ತಿರು ವುದು ವಿಷಾದನೀಯ. ಆದರೆ, ಹಾಗೆ ಅನುಮಾನಿಸುವುದಕ್ಕೆ ಸದ್ಯದ ದಿನಗಳು ಒತ್ತಾಯಿಸುತ್ತಿವೆ ಅನ್ನುವುದನ್ನು ತಿರಸ್ಕರಿಸುವಂತಿಲ್ಲ.

Monday 25 November 2013

ಅಮಲೇರಿಸುವ ಮದ್ಯವೂ ಹೆಜ್ಜೆ ತಪ್ಪುವ ‘ತರುಣ’ರೂ

    ತೆಹಲ್ಕಾದ ತರುಣ್ ತೇಜ್‍ಪಾಲ್ ಇವತ್ತು ಮಾಧ್ಯಮಗಳನ್ನಿಡೀ ತುಂಬಿಕೊಂಡಿದ್ದಾರೆ. ಪತ್ರಕರ್ತರು ಅವರ ಮನೆಯ ಗೋಡೆಗೆ ಕ್ಯಾಮರಾಗಳನ್ನಿಟ್ಟು ಕಾಯುತ್ತಿದ್ದಾರೆ. ಅವರ ಬಾಲ್ಯ, ಯೌವನ, ಪತ್ರಿಕೋದ್ಯಮದಲ್ಲಿ ಅವರು ನಡೆಸಿದ ವಿನೂತನ ಪ್ರಯೋಗಗಳೆಲ್ಲ ಮಾಧ್ಯಮಗಳಲ್ಲಿ ವಿಸ್ತೃತವಾಗಿ ಚರ್ಚೆಗೆ ಒಳಪಡುತ್ತಿವೆ. ಆದರೆ, ಹೆಣ್ಣನ್ನು ಲೈಂಗಿಕ ದೌರ್ಜನ್ಯದಿಂದ ಮುಕ್ತಗೊಳಿಸುವುದಕ್ಕೆ ಈ ಚರ್ಚೆಗಳು ಎಷ್ಟರ ಮಟ್ಟಿಗೆ ನೆರವಾಗಬಲ್ಲುದು? ಯಾಕೆಂದರೆ, ‘ಮದ್ಯದ ಅಮಲಿನಲ್ಲಿ ನಾನು ಹೆಜ್ಜೆ ತಪ್ಪಿದೆ..' ಎಂದು ತೇಜ್‍ಪಾಲ್‍ರೇ ಹೇಳಿದ್ದಾರೆ. ಹಾಗಂತ, ಮದ್ಯದಿಂದಾಗಿ ಹೀಗೆ ಹೆಜ್ಜೆ ತಪ್ಪುವವರಲ್ಲಿ ತೇಜ್‍ಪಾಲ್ ಮೊದಲಿಗರೇನೂ ಅಲ್ಲ. ಕೊನೆಯವರಾಗುವ ಸಾಧ್ಯತೆಯೂ ಇಲ್ಲ. ಈ ದೇಶದಲ್ಲಿ ಪ್ರತಿದಿನ ಅಸಂಖ್ಯ ಮಂದಿ ಮದ್ಯದಿಂದಾಗಿ ಹೆಜ್ಜೆ ತಪ್ಪುತ್ತಿದ್ದಾರೆ. ಮಾತ್ರವಲ್ಲ, ಈ ತಪ್ಪಿದ ಹೆಜ್ಜೆಗಳಿಗೆ ಸಾವಿರಾರು ಹೆಣ್ಣು ಮಕ್ಕಳು ನಿತ್ಯ ಬಲಿಯಾಗುತ್ತಲೂ ಇದ್ದಾರೆ. ಹೀಗಿರುವಾಗ, ನಮ್ಮ ಚರ್ಚೆಯ ಕೇಂದ್ರ ಬಿಂದುವಾದರೂ ಯಾರಾಗಿರಬೇಕು; ತೇಜ್‍ಪಾಲೋ, ಮದ್ಯವೋ? ಯಾಕೆ ಯಾರೂ ಮದ್ಯದ ಬಗ್ಗೆ ಮಾತನ್ನೇ ಆಡುತ್ತಿಲ್ಲ? ಓರ್ವ ವ್ಯಕ್ತಿಯನ್ನು ಭೀಕರ ಅಪರಾಧ ಎಸಗುವಂತೆ ಮದ್ಯವು ಪ್ರೇರೇಪಿಸುತ್ತದೆಂದಾದರೆ ನಾವು ಮೊತ್ತಮೊದಲು ಶಿಕ್ಷೆಗೆ ಒಳ ಪಡಿಸಬೇಕಾದದ್ದು ಯಾರನ್ನು, ತೇಜ್‍ಪಾಲ್‍ರನ್ನೋ? ಒಂದು ಕ್ರೌರ್ಯದ ಪ್ರಮುಖ ರೂವಾರಿಯನ್ನು (ಮದ್ಯ) ಪ್ರೀತಿಸುತ್ತಾ ಅದರಿಂದ ಪ್ರಚೋದಿತರಾದವರನ್ನು ಗಂಭೀರ ಶಿಕ್ಷೆಗೆ ಒಳಪಡಿಸಬೇಕೆಂದು ಒತ್ತಾಯಿಸುವುದು ಯಾವ ನೀತಿ, ಯಾವ ಬಗೆಯ ಪ್ರಾಮಾಣಿಕತೆ?
   ಮದ್ಯಕ್ಕೂ ಲೈಂಗಿಕ ದೌರ್ಜನ್ಯಗಳಿಗೂ ಬಲವಾದ ನಂಟಿದೆ. ದೆಹಲಿಯ ನಿರ್ಭಯಳಿಂದ ಹಿಡಿದು ಉಡುಪಿಯ ನಿರ್ಭಯಳ ವರೆಗೆ ಈ ದೇಶದಲ್ಲಿ ಎಷ್ಟೆಲ್ಲ ಲೈಂಗಿಕ ದೌರ್ಜನ್ಯಗಳು ಬೆಳಕಿಗೆ ಬಂದಿವೆಯೋ ಅವೆಲ್ಲವುಗಳ ಜೊತೆ ಮದ್ಯಕ್ಕೆ ಸಂಬಂಧ ಇದೆ. ಒಂದು ಕಡೆ ಮಹಿಳೆಯರ ಸುರಕ್ಷಿತತೆ, ಸಬಲೀಕರಣದ ಬಗ್ಗೆ ನಾವೆಲ್ಲ ಭಾರೀ ಉತ್ಸಾಹದಿಂದ ಮಾತಾಡುತ್ತೇವೆ. ಮಾಧ್ಯಮಗಳು ಅಸಂಖ್ಯ ಪುಟಗಳನ್ನು ಇದಕ್ಕಾಗಿ ಖರ್ಚು ಮಾಡುತ್ತಿವೆ. ದೆಹಲಿಯಲ್ಲಿ ನಿರ್ಭಯಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಾಗ ಈ ದೇಶ ಒಂದಾಗಿ ಪ್ರತಿಭಟಿಸಿತ್ತು. ವಿದ್ಯಾರ್ಥಿಗಳಿಂದ ಹಿಡಿದು ಪತ್ರಕರ್ತರ ವರೆಗೆ ಎಲ್ಲರೂ ಅತ್ಯಾಚಾರ ಮುಕ್ತ ಭಾರತದ ಬಗ್ಗೆ ಮಾತಾಡಿದರು. ದುರಂತ ಏನೆಂದರೆ, ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರು ಪಾನಮತ್ತರಾಗಿದ್ದರು ಎಂಬುದು ಗೊತ್ತಿದ್ದು ಕೂಡ ಯಾರೂ ಪಾನ ನಿಷೇಧಕ್ಕೆ ಒತ್ತಾಯಿಸಿಯೇ ಇಲ್ಲ! ಯಾಕೆ ಹೀಗೆ? ಮದ್ಯ ಸೇವಿಸುವುದರಿಂದ ಹೆಜ್ಜೆ ತಪ್ಪುತ್ತದೆ ಮತ್ತು ಅದು ಮಾಡಬಾರದ ಕೃತ್ಯಗಳನ್ನು ಮಾಡುವಂತೆ ಪ್ರಚೋದಿಸುತ್ತದೆ ಎಂಬುದು ಕುಡಿಯುವವನಿಗೂ ಗೊತ್ತು, ಕುಡಿಸುವವನಿಗೂ ಗೊತ್ತು. ಹೀಗಿದ್ದೂ, ಮದ್ಯದ ಬಗ್ಗೆ ಮಾತಾಡದೇ ಅದು ಮಾಡಿಸುವ ಕ್ರೌರ್ಯಗಳ ಕುರಿತು ಮಾತ್ರ ಅಪಾರ ಆಕ್ರೋಶ ವ್ಯಕ್ತಪಡಿಸುವುದೇಕೆ?
   ಈ ದೇಶದಲ್ಲಿ ಕೋಟ್ಯಂತರ ಗುಡಿಸಲುಗಳು ಇವತ್ತು ಅತ್ಯಂತ ಆತಂಕದಲ್ಲಿ ದಿನದೂಡುತ್ತಿವೆ. ‘ಈ ದಿನ ಸಂಜೆಯಾಗದಿರಲಿ..’ ಎಂದು ಆಸೆಪಡುವ ಕೋಟ್ಯಂತರ ತಾಯಿ, ಮಕ್ಕಳು ಅಂಥ ಗುಡಿಸಲುಗಳಲ್ಲಿ ವಾಸಿಸುತ್ತಿದ್ದಾರೆ. ಸಂಜೆಯಾಗುವಾಗ ಗಂಡ ಕುಡಿದು ಬರುತ್ತಾನೆ. ಪತ್ನಿ, ಮಕ್ಕಳ ಮೇಲೆ ದೌರ್ಜನ್ಯ ಎಸಗುತ್ತಾನೆ. ಮನೆಯಲ್ಲಿರುವವರ ಹೊಟ್ಟೆಗೆ ಏನನ್ನೂ ಕೊಡದೇ ತನ್ನ ಹೊಟ್ಟೆಯನ್ನು ಮದ್ಯದಿಂದ ತುಂಬಿಸಿಕೊಂಡು ಬರುವ ಅಸಂಖ್ಯ ಯಜಮಾನರಿಂದ ಈ ದೇಶದ ಕೋಟ್ಯಂತರ ಗುಡಿಸಲುಗಳು ತುಂಬಿ ಹೋಗಿವೆ. ಆ ಗುಡಿಸಲುಗಳಿಗೆ ಬಾಯಿ ಇಲ್ಲ. ಪ್ರತಿಭಟಿಸುವ ಸಾಮರ್ಥ್ಯ  ಇಲ್ಲ. ಪೇಟೆಯ ನಿರ್ಭಯರಂತೆ ಮಾತಾಡುವ ಕಲೆ ಗೊತ್ತಿಲ್ಲ. ಒಂದು ವೇಳೆ ಇಂಥ ಗುಡಿಸಲುಗಳಿಗೆ ಮಾತಾಡುವ ಸಾಮರ್ಥ್ಯಇರುತ್ತಿದ್ದರೆ, ಅಸಂಖ್ಯ ತೇಜ್‍ಪಾಲ್‍ರ ಕತೆಗಳನ್ನು ಅವು ಸಾರಿ ಸಾರಿ ಹೇಳುತ್ತಿದ್ದುವು. ನಮ್ಮ ಪೊಲೀಸ್ ಠಾಣೆಗಳು ಕೇಸು ದಾಖಲಿಸಿ ದಾಖಲಿಸಿ ಸುಸ್ತಾಗುತ್ತಿದ್ದುವು. ಹೀಗಿರುವಾಗ, ತೇಜ್‍ಪಾಲ್‍ರನ್ನು ಜೈಲಿಗಟ್ಟುವುದರಿಂದ ಇಂಥ ಗುಡಿಸಲುಗಳ ಸಂಕಟಗಳು ಕೊನೆಯಾಗಬಲ್ಲುದೇ? ಹಾಗಂತ, ತೇಜ್‍ಪಾಲ್‍ರನ್ನು ಸಮರ್ಥಿಸುವುದು ಇಲ್ಲಿನ ಉದ್ದೇಶವಲ್ಲ. ಆದರೂ ತೇಜ್‍ಪಾಲ್ ಯಾರೆಂದೇ ಗೊತ್ತಿಲ್ಲದ ಆದರೆ ಮದ್ಯದಂಗಡಿಗಳು ಎಲ್ಲಿವೆಯೆಂದು ಖಚಿತವಾಗಿ ಗೊತ್ತಿರುವ ಮಂದಿ ಈ ದೇಶದಲ್ಲಿ ಅಸಂಖ್ಯ ಇದ್ದಾರಲ್ಲ, ಅವರೇಕೆ ನಮ್ಮ ಗಂಭೀರ ಚರ್ಚೆಯ ವ್ಯಾಪ್ತಿಗೆ ಒಳಪಡುತ್ತಿಲ್ಲ? ಅವರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿರುವ ತಾಯಿ, ಮಕ್ಕಳ ಬಗ್ಗೆಯೇಕೆ ನಾವು ಕಾಳಜಿ ತೋರುತ್ತಿಲ್ಲ?
   ನಿಜವಾಗಿ, ನಾವು ಇವತ್ತು ಗಂಭೀರ ಚರ್ಚೆಗೆ ಒಳಪಡಿಸಬೇಕಾದದ್ದು ಲೈಂಗಿಕ ದೌರ್ಜನ್ಯ ಎಸಗಿದ ತೇಜ್‍ಪಾಲ್‍ರನ್ನಲ್ಲ. ಅವರನ್ನು ಈ ಕೃತ್ಯಕ್ಕೆ ಪ್ರಚೋದಿಸಿದ ಮದ್ಯವನ್ನು. ಇವತ್ತು ಹೊಟ್ಟೆ ತುಂಬಿದವರ ಖಯಾಲಿಗಾಗಿ ಏರ್ಪಾಟಾಗುವ ಕಾರ್ಯಕ್ರಮಗಳಲ್ಲಿ ಮದ್ಯಕ್ಕೆ ಪ್ರಮುಖ ಸ್ಥಾನವಿದೆ. ಅಂಥ ಕಡೆ ತೇಜ್‍ಪಾಲ್‍ರಂಥ ಧಾರಾಳ ಮಂದಿ ಹೆಜ್ಜೆ ತಪ್ಪುತ್ತಿರುತ್ತಾರೆ. ಅವು ಕೆಲವೊಮ್ಮೆ ಸುದ್ದಿಯಾಗುವುದನ್ನು ಬಿಟ್ಟರೆ ಉಳಿದಂತೆ ಹೆಚ್ಚಿನವು ತಪ್ಪಿದ ಹೆಜ್ಜೆಗಳನ್ನು ಸಹಿಸಿಕೊಂಡು ಸುಮ್ಮ ನಾಗುತ್ತವೆ. ಆದ್ದರಿಂದ ತೇಜ್‍ಪಾಲ್‍ರನ್ನು ಶಿಕ್ಷಿಸುವುದರಿಂದ ಹೆಣ್ಣು ಮಕ್ಕಳು ಸುರಕ್ಷಿತರಾಗುತ್ತಾರೆ ಎಂದು ಖಂಡಿತ ಹೇಳುವಂತಿಲ್ಲ. ದೆಹಲಿಯ ನಿರ್ಭಯಳ ಮೇಲೆ ಅತ್ಯಾಚಾರ ಎಸಗಿದವರು ಗಲ್ಲು ಶಿಕ್ಷೆಯ ಜಾರಿಯನ್ನು ಎದುರು ನೋಡುತ್ತಿದ್ದರೂ ಈ ದೇಶದಲ್ಲಿ ಅತ್ಯಾಚಾರ ಪ್ರಕರಣಗಳಿಗೇನೂ ಕಡಿವಾಣ ಬಿದ್ದಿಲ್ಲವಲ್ಲವೇ? ಅತ್ಯಾಚಾರಕ್ಕೆ ಗಲ್ಲು ಶಿಕ್ಷೆಯಿದೆ ಎಂದು ಗೊತ್ತಿದ್ದೂ ಒಂದು ಸಮಾಜದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ ಅನ್ನುವುದು ಏನನ್ನು ಸೂಚಿಸುತ್ತದೆ? ಶಿಕ್ಷೆಯನ್ನು ಪ್ರೀತಿಸುವ ಸಮಾಜವೊಂದು ಇರಲು ಸಾಧ್ಯವೇ? ಇಲ್ಲ ಎಂದಾದರೆ, ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆಯುತ್ತಿರುವುದೇಕೆ? ಹೆಜ್ಜೆ ತಪ್ಪಿಸುವ ಮದ್ಯದ ಹೊರತಾಗಿ ಬೇರೆ ಯಾವ ಕಾರಣಗಳನ್ನು ನಾವು ಇದಕ್ಕೆ ಕೊಡಬಲ್ಲೆವು?
   ಆದ್ದರಿಂದ, ತೇಜ್‍ಪಾಲ್ ಪ್ರಕರಣವು ನಮ್ಮ ಚರ್ಚೆಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಒಂದು ನೆಪವಾಗಬೇಕಾಗಿದೆ. ಹೆಜ್ಜೆ ತಪ್ಪಿಸುವ ಮದ್ಯವು ನಮ್ಮ ಚರ್ಚೆಯ ವ್ಯಾಪ್ತಿಗೆ ಒಳಪಟ್ಟರೆ ಅದಕ್ಕಾಗಿ ಈ ದೇಶದ ಕೋಟ್ಯಂತರ ಗುಡಿಸಲುಗಳು ಸಂತಸಪಟ್ಟಾವು. ಒಂದು ರೀತಿಯಲ್ಲಿ, ಮದ್ಯವನ್ನು ಹೊರಗಿಟ್ಟು ಲೈಂಗಿಕ ದೌರ್ಜನ್ಯವನ್ನು ಚರ್ಚಿಸುವುದು ಅನಾಪೆsಲಿಸ್ ಸೊಳ್ಳೆಗಳನ್ನು ಹೊರಗಿಟ್ಟು ಮಲೇರಿಯಾ ರೋಗದ ಬಗ್ಗೆ ಚರ್ಚಿಸಿದಂತೆ. ಅದರಿಂದ ಯಾವ ಪ್ರಯೋಜನವೂ ಇಲ್ಲ.

Monday 18 November 2013

ರನ್ನುಗಳ ರಾಶಿಯಲ್ಲಿ ಚರ್ಚೆಯಾಗದೇ ಉಳಿದ ಬಾಲ್ಯ

    ಕ್ರಿಕೆಟ್‍ಗೆ ವಿದಾಯ ಕೋರಿದ ಸಚಿನ್ ತೆಂಡುಲ್ಕರ್‍ರ ಸುತ್ತ ಟಿ.ವಿ. ಚಾನೆಲ್‍ಗಳು ಗಂಭೀರ ಚರ್ಚೆಯಲ್ಲಿ ಮುಳುಗಿದ್ದಾಗಲೇ ಅತ್ತ ಹೈದರಾಬಾದ್‍ನಲ್ಲಿ, ‘ಚಿಲ್ಡ್ರನ್ ಇನ್ ಮೀಡಿಯಾ: ರೈಟ್ಸ್ ಆಫ್ ಚೈಲ್ಡ್ ಆರ್ಟಿಸ್ಟ್' ಎಂಬ ವಿಷಯದ ಮೇಲೆ ಗೋಷ್ಠಿಯೊಂದು ನಡೆಯುತ್ತಿತ್ತು. ಗೋಷ್ಠಿಯ ಕೇಂದ್ರೀಯ ವಿಷಯದಲ್ಲಿ ಸಚಿನ್ ಇಲ್ಲದೇ ಇದ್ದರೂ ಸಚಿನ್ ಅಲ್ಲಿ ಪ್ರಸ್ತಾಪವಾದರು. ವಿಶ್ವನಾಥನ್ ಆನಂದ್ ಚರ್ಚೆಗೊಳಪಟ್ಟರು. ಖ್ಯಾತ ಚಿಂತಕ ಅಮೋಲ್ ಪಾಲೇಕರ್, ಬಬಿತಾ ಶರ್ಮಾ ಮತ್ತು ಡಾಕ್ಯುಮೆಂಟರಿ ನಿರ್ದೇಶಕಿ ಉಮಾ ಮಗಳ್... ಮುಂತಾದವರಿದ್ದ ಚರ್ಚೆಯು ಎಷ್ಟು ಆಸಕ್ತಿಕರವಾಗಿತ್ತೆಂದರೆ, ಸಚಿನ್‍ರ ಪ್ರಭಾವಳಿಯಲ್ಲಿ ಮಾಧ್ಯಮಗಳು ಹೇಗೆ ಬಹುಮುಖ್ಯ ವಿಚಾರವನ್ನು ಮರೆತುಬಿಟ್ಟಿವೆ ಎಂಬುದನ್ನು ಅವರು ಬಿಚ್ಚಿಟ್ಟರು. ಸಚಿನ್‍ರ ಶಿಕ್ಷಣ, ರಿಯಾಲಿಟಿ ಶೋಗಳಲ್ಲಿ ಬೊಂಬೆಗಳಂತೆ ಕಾಣುವ ಮಕ್ಕಳ ಮನಃಸ್ಥಿತಿ, ಸಿನಿಮಾದಲ್ಲಿರುವ ಬಾಲ ನಟರ ಮೇಲಿನ ಒತ್ತಡಗಳು.. ಎಲ್ಲವನ್ನೂ ಈ ಗೋಷ್ಠಿ ಅತ್ಯಂತ ಆಳವಾಗಿ ಚರ್ಚಿಸಿತು. ಒಂದು ವೇಳೆ; ರವಿಶಾಸ್ತ್ರಿ, ಗಂಗೂಲಿ, ಕಪಿಲ್, ಗವಾಸ್ಕರ್.. ಮುಂತಾದವರನ್ನು ಕೂರಿಸಿಕೊಂಡು ಟಿ.ವಿ. ಚಾನೆಲ್‍ಗಳು ‘ಸಚಿನ್ ವಿದಾಯ'ವನ್ನು ಚರ್ಚಿಸುವುದಕ್ಕಿಂತ ಈ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಿರುತ್ತಿದ್ದರೆ, ಈ ದೇಶದ ಕೋಟ್ಯಂತರ ಮಕ್ಕಳು ಖಂಡಿತ ಸಂತಸಪಡುತ್ತಿದ್ದುವು.
   ಕ್ರಿಕೆಟ್‍ನಲ್ಲಿ ಸಚಿನ್ ರಾಶಿ ರಾಶಿ ರನ್ನುಗಳನ್ನು ಸಂಗ್ರಹಿಸಿರಬಹುದು. ಆದರೆ, ರನ್ನುಗಳ ಈ ಭರಾಟೆಯಲ್ಲಿ ಅವರಿಗೆ ತಮ್ಮ ಹೈಸ್ಕೂಲ್ ಶಿಕ್ಷಣವನ್ನು ಪೂರ್ಣಗೊಳಿಸಲೂ ಸಾಧ್ಯವಾಗಿಲ್ಲ. 19 ವರ್ಷದವರಿಗಿರುವ ಕ್ರಿಕೆಟ್ ತಂಡದ ನಾಯಕನಾಗಿದ್ದ ಉನ್ಮುಕ್ತ್ ಚಂದ್‍ಗೆ ಪಿಯು ಓದುವುದಕ್ಕೂ ಸಾಧ್ಯವಾಗುತ್ತಿಲ್ಲ. ಇನ್ನು, ಟಿ.ವಿ. ಚಾನೆಲ್‍ಗಳಲ್ಲಿ ಪ್ರದರ್ಶನದ ಬೊಂಬೆಗಳಾಗುತ್ತಿರುವ ಮಕ್ಕಳನ್ನು ನೋಡುವಾಗಲಂತೂ ದಿಗಿಲಾಗುತ್ತದೆ. ತಮ್ಮದಲ್ಲದ ಮಾತು, ವಯಸ್ಸನ್ನೂ ಮೀರಿದ ಪ್ರೌಢತೆ, ನಗು, ಹಾವ-ಭಾವಗಳನ್ನು ಆ ಮಕ್ಕಳು ಪ್ರದರ್ಶಿಸುತ್ತಿರುವುದು ಯಾರ ಒತ್ತಡದಿಂದ? ಯಾವುದೇ ಒಂದು ಮಗುವಿನ ವರ್ತನೆಗೂ ವಯಸ್ಸಿಗೂ ಖಂಡಿತ ಸಂಬಂಧವಿರುತ್ತದೆ. ನಿಜವಾಗಿ, 5 ವರ್ಷದ ಮಗು ಸಚಿನ್‍ನಂತೆ ಬ್ಯಾಟು ಬೀಸಬೇಕು ಎಂದು ಬಯಸುವುದು ಖಂಡಿತ ತಪ್ಪು. 10 ವರ್ಷದ ಹುಡುಗನಿಂದ ಮನ್‍ಮೋಹನ್ ಸಿಂಗ್‍ರ ಆರ್ಥಿಕ ನಡೆಗಳ ಬಗ್ಗೆ ವ್ಯಾಖ್ಯಾನವನ್ನು ಬಯಸುವುದಕ್ಕೆ ಯಾವ ಅರ್ಥವೂ ಇಲ್ಲ. ಪಿ.ಟಿ. ಉಷಾರ ಟ್ರ್ಯಾಕ್ ದಾಖಲೆಯನ್ನು ಪುಟಾಣಿಯೊಂದು ಅಳಿಸಿ ಹಾಕಬೇಕೆಂದು ಯಾರೂ ಬಯಸುತ್ತಿಲ್ಲ. ಯಾಕೆಂದರೆ, ಮಗು ಮಗುವೇ. ದೊಡ್ಡವರು ದೊಡ್ಡವರೇ. ಆದರೆ ನಾವೆಲ್ಲ ಸೇರಿಕೊಂಡು ಪುಟಾಣಿಗಳಿಂದ ಈ ‘ಮಗು’ತನವನ್ನು ಕಸಿದುಕೊಳ್ಳುತ್ತಿದ್ದೇವೆಯೇ ಎಂದು ಗಂಭೀರವಾಗಿ ಆಲೋಚಿಸಬೇಕಾಗಿದೆ. ಸಿನಿಮಾದಲ್ಲಿ ನಟಿಸುವ ಮಗುವನ್ನೇ ಎತ್ತಿಕೊಳ್ಳಿ. ಅದರ ಮುಂದೆ ಡಯಲಾಗ್‍ನ ಸಿದ್ಧ ಮಾದರಿಯೊಂದು ಇರುತ್ತದೆ. ಹಿರಿಯ ನಟರಂತೆ ಮಗುವಿಗೆ ಡಯಲಾಗನ್ನು ಹೇಳಲು ಮತ್ತು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವಾದ್ದರಿಂದ ಅದು ಮನನ ಮಾಡಲೇಬೇಕು. ಹೀಗೆ ಮನನ ಮಾಡಿದ್ದನ್ನು ಒಂದೇ ಬಾರಿ ಹೇಳಿ ಮುಗಿಸುವಂತಿಲ್ಲ. ಹೇಳುವ ರೀತಿ, ಆಂಗಿಕ ಅಭಿನಯ, ಭಾವಾಭಿವ್ಯಕ್ತತೆ.. ಎಲ್ಲವನ್ನೂ ಪರಿಗಣಿಸಲಾಗುತ್ತದೆ. ಹೀಗೆ, ಮತ್ತೆ ಮತ್ತೆ ಅಭಿನಯಿಸಬೇಕಾದ ಮತ್ತು ನಿರ್ದೇಶಕರಿಂದಲೋ ಸಹ ನಟರಿಂದಲೋ ಬೈಸಿಕೊಳ್ಳಬೇಕಾದ ಒತ್ತಡದಲ್ಲಿ ಮಗು ಸಿಲುಕುತ್ತದೆ. ಎಲ್ಲೋ ತಮ್ಮದಲ್ಲದ ಊರಿನಲ್ಲಿ ಅಭಿನಯಕ್ಕಾಗಿ ಕಾಯುತ್ತಾ, ಮತ್ತೆ ಮತ್ತೆ ಅಭಿನಯಿಸುತ್ತಾ ಬೆಳೆಯುವ ಮಗುವಿನ ಮನಃಸ್ಥಿತಿ ಹೇಗಿರಬಹುದು? ಅದು ಎದುರಿಸುವ ಒತ್ತಡಗಳ ಪ್ರಮಾಣ ಎಷ್ಟಿರಬಹುದು?
   ಟಿ.ವಿ.ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಮಕ್ಕಳ ಪರಿಸ್ಥಿತಿಯಂತೂ ಇದಕ್ಕಿಂತಲೂ ಭೀಕರ. ಅವುಗಳ ಬಾಲ್ಯವನ್ನು ತಮ್ಮ ಜನಪ್ರಿಯತೆಗಾಗಿ ಚಾನೆಲ್‍ಗಳು ಕಸಿದುಕೊಳ್ಳುತ್ತವೆ. ಒಂದು ಮಗು ಹಾಡುವುದು ಬೇರೆ, ಆ ಹಾಡಿಗಾಗಿ ದಿನ, ವಾರಗಟ್ಟಲೆ ಒತ್ತಡಕ್ಕೆ ಸಿಲುಕಿಸುವುದು ಬೇರೆ. ಕೇವಲ ಇವಷ್ಟೇ ಅಲ್ಲ- ವೇದಿಕೆಯಲ್ಲಿ ಹೇಗೆಲ್ಲ ಮಾತಾಡಬೇಕು, ದೊಡ್ಡವರೊಂದಿಗೆ ಹೇಗೆ ಕಿಚಾಯಿಸಬೇಕು, ಎಲ್ಲರ ಗಮನ ಕೇಂದ್ರವಾಗಲು ಹೇಗೆ ಆಂಗಿಕ ಅಭಿನಯ ಮಾಡಬೇಕು.. ಎಲ್ಲವನ್ನೂ ಮಗು ದೊಡ್ಡವರಿಂದ ಹೇಳಿಸಿಕೊಳ್ಳುತ್ತದೆ. ಇದರ ಮಧ್ಯೆ ಹೆತ್ತವರು ಕ್ಷಣಕ್ಷಣಕ್ಕೂ ಮಗುವಿಗೆ ತನ್ನ ಜವಾಬ್ದಾರಿಯನ್ನು ನೆನಪಿಸುತ್ತಿರುತ್ತಾರೆ. ಹೀಗೆ, ತನ್ನ ವಯಸ್ಸಿನ ಮಕ್ಕಳ ಜೊತೆ ಸ್ವಚ್ಛಂದವಾಗಿ ಬಾಲ್ಯವನ್ನು ಕಳೆಯಬೇಕಾದ ಮಕ್ಕಳನ್ನು ಜಗಮಗಿಸುವ ವೇದಿಕೆಯಲ್ಲಿ, ಹಿರಿಯರೊಂದಿಗೆ ಮಾತುಕತೆಗೆ ಇಳಿಸಲಾಗುತ್ತದೆ. ಒಂದು ರೀತಿಯಲ್ಲಿ, ಇದು ಪ್ರಾಣಿಯನ್ನು ಕಸಾಯಿಖಾನೆಗೆ ಒಯ್ದಂತೆ. ಕಸಾಯಿಖಾನೆಯು ಪ್ರಾಣಿಯ ಆಯ್ಕೆ ಅಲ್ಲ. ಅದು ಆ ಪ್ರಾಣಿಯ ಮಾಲಿಕ ಮತ್ತು ಖರೀದಿದಾರರ ಆಯ್ಕೆ. ಅದು ಅವರ ಆಣತಿಯಂತೆ ವರ್ತಿಸಬೇಕಾಗುತ್ತದೆಯೇ ಹೊರತು ತನ್ನತನವನ್ನಲ್ಲ. ಟಿ.ವಿ. ಚಾನೆಲ್‍ಗಳು, ಚಿತ್ರರಂಗ ಮತ್ತು ಮಕ್ಕಳ ಹೆತ್ತವರು ಇವತ್ತು ಮಾಡುತ್ತಿರುವುದು ಇದನ್ನೇ. ಮಕ್ಕಳನ್ನು ಅವರ ಹೆತ್ತವರಿಂದ ಖರೀದಿಸಿ ಶೋಗಳೆಂಬ ಕಸಾಯಿಖಾನೆಗೆ ಚಾನೆಲ್‍ಗಳು ಮತ್ತು ಚಿತ್ರರಂಗವು ಯೋಗ್ಯಗೊಳಿಸುತ್ತವೆ. ಮಕ್ಕಳು ‘ಕಸಾಯಿ’ಗೆ ಸಂಪೂರ್ಣ ಯೋಗ್ಯವೆಂದು ಮನವರಿಕೆಯಾದ ಬಳಿಕ ವೇದಿಕೆಯೆಂಬ ಕಸಾಯಿಖಾನೆಯಲ್ಲಿ ತಂದು ನಿಲ್ಲಿಸುತ್ತದೆ. ಪ್ರೇಕ್ಷಕರೆಂಬ ಖರೀದಿದಾರರು ಆ ಕಸಾಯಿಖಾನೆಯ ಸುತ್ತ ನೆರೆದಿರುತ್ತಾರೆಂಬುದು ಇವುಗಳಿಗೆ ಚೆನ್ನಾಗಿ ಗೊತ್ತು. ಹೀಗೆ ಹೆತ್ತವರನ್ನು ಮರುಳುಗೊಳಿಸಿ ಟಿ.ವಿ. ಚಾನೆಲ್‍ಗಳು ಮಕ್ಕಳನ್ನು ಬಲಿಪ್ರಾಣಿಯಂತೆ ಬಳಸಿ ಬಿಸಾಕುತ್ತಿವೆ. ಆ ಬಳಿಕ ಆ ಮಕ್ಕಳ ಭವಿಷ್ಯ ಏನಾಗಿದೆ, ಅವು ರಿಯಾಲಿಟಿ ಶೋಗಳ ಒತ್ತಡಗಳಿಂದ ಹೇಗೆ ಹೊರಬಂದಿವೆ, ಟಿ.ವಿ.ಗಳಲ್ಲಿ ಪ್ರದರ್ಶಿಸಿದ ಪ್ರತಿಭೆಯನ್ನು ಎಷ್ಟರ ಮಟ್ಟಿಗೆ ಉಳಿಸಿಕೊಂಡಿವೆ.. ಎಂಬುದನ್ನೆಲ್ಲಾ ಶೋ ಮುಗಿದ ಬಳಿಕ ಯಾರೂ ಕೆದಕುವುದಿಲ್ಲವಾದ್ದರಿಂದ ಅದೊಂದು ಚರ್ಚಿಸಲೇ ಬೇಕಾದ ಇಶ್ಶೂವಾಗಿಯೂ ಗುರುತಿಸಿಕೊಳ್ಳುವುದಿಲ್ಲ. ಆದ್ದರಿಂದ,  
   ಸಚಿನ್ ತೆಂಡುಲ್ಕರ್‍ರ ವಿದಾಯವು ಈ ನಿಟ್ಟಿನಲ್ಲಿ ಚರ್ಚೆಯೊಂದಕ್ಕೆ ಕಾರಣವಾಗಬೇಕಾಗಿದೆ. ಕ್ರಿಕೆಟ್‍ನ ಉನ್ನತ ಮೆಟ್ಟಲನ್ನು ಹತ್ತಿದರೂ ಹೈಸ್ಕೂಲ್ ಮೆಟ್ಟಲನ್ನೂ ಹತ್ತದ ಅವರು, ಪುಟ್ಟ ಮಕ್ಕಳಿಗೆ ‘ಬಾಲ್ಯ'ವನ್ನು ಒದಗಿಸುವಂತೆ ಒತ್ತಾಯಿಸುವುದಕ್ಕೆ ಪ್ರೇರಕವಾಗಬೇಕಾಗಿದೆ. ಹೆತ್ತವರ ವಿಪರೀತ ಕನಸಿಗೆ ಮಕ್ಕಳ ಬಾಲ್ಯ ಕಮರಿ ಹೋಗದಂತೆ ಎಚ್ಚರಿಕೆಯ ಸಂದೇಶವನ್ನು ಸಚಿನ್ ಬದುಕು ರವಾನಿಸಬೇಕಾಗಿದೆ.

Monday 11 November 2013

ಯಾವುದು ನಂಬಿಕೆ, ಯಾವುದೆಲ್ಲ ಮೂಢನಂಬಿಕೆ?

    ಯಾವುದು ನಂಬಿಕೆ, ಯಾವುದೆಲ್ಲ ಮೂಢನಂಬಿಕೆ ಎಂದು ವಿಭಜಿಸುವುದಕ್ಕೆ ನಮ್ಮಲ್ಲಿರುವ ಮಾನದಂಡಗಳು ಯಾವುವು? ವಿಚಾರವಾದಿಗಳಿಗೆ ಮೂಢನಂಬಿಕೆಯಂತೆ ಕಾಣುವ ಆಚರಣೆಯೊಂದು ಆಸ್ತಿಕರಿಗೆ ನಂಬಿಕೆಯಾಗಿ ಕಾಣಬಹುದು. ಆಸ್ತಿಕರಿಗೆ ನಿಂದನೆಯಂತೆ ಕಾಣುವ ವಿಷಯವೊಂದು ನಾಸ್ತಿಕರಿಗೆ ಬಂಡಾಯ ಪ್ರವೃತ್ತಿಯಂತೆ ಗೋಚರಿಸಬಹುದು. ನಂಬಿಕೆಗೂ ಮೂಢನಂಬಿಕೆಗೂ ನಡುವೆ ಸಮಾಜ ಎಳೆದಿರುವ ಗೆರೆ ಬಹಳ ತೆಳುವಾದದ್ದು. ಒಂದು ಧರ್ಮ ನಂಬಿಕೆಯಾಗಿ ಒಪ್ಪಿಕೊಂಡಿರುವುದನ್ನು ಇನ್ನೊಂದು ಧರ್ಮ ಹಾಗೆಯೇ ಒಪ್ಪಿಕೊಳ್ಳಬೇಕೆಂದಿಲ್ಲ. ಇಸ್ಲಾಮ್ ಏಕದೇವವಾದವನ್ನು ಪ್ರತಿ ಪಾದಿಸುತ್ತದೆ. ವಿಗ್ರಹ ಆರಾಧನೆಯು ಇಸ್ಲಾಮಿನ ಮಟ್ಟಿಗೆ ಅನ್ಯವಾದದ್ದು. ಒಂದು ರೀತಿಯಲ್ಲಿ ಮೂಢ ಆರಾಧನೆ. ಸುನ್ನತಿ ಕರ್ಮವನ್ನು ಮುಸ್ಲಿಮರು ಬಹಳ ಶ್ರದ್ಧೆಯಿಂದ ಪಾಲಿಸುತ್ತಾರೆ. ಮುಸ್ಲಿಮೇತರರ ಮಟ್ಟಿಗೆ ಅದು ಅತಿರೇಕ ಮತ್ತು ಮೂಢ ಆಚರಣೆಯಾಗಿ ಕಾಣಬಹುದು. ಇವು ಒಂದೆರಡು ಉದಾಹರಣೆಗಳಷ್ಟೇ. ಇಂಥವುಗಳ ಪಟ್ಟಿ ಸಾಕಷ್ಟು ಉದ್ದವಿದೆ. ಹೀಗಿರುವಾಗ, ಸಿದ್ಧರಾಮಯ್ಯರು ಜಾರಿಗೆ ತರಲು ಹೊರಟಿರುವ ಮೂಢನಂಬಿಕೆ ತಡೆ ಮಸೂದೆಯನ್ನು ಒಂದೇ ಏಟಿಗೆ ಸ್ವಾಗತಾರ್ಹವೆಂತಲೋ ಖಂಡನಾರ್ಹವೆಂತಲೋ ಷರಾ ಬರೆದು ಬಿಡುವುದು ತಪ್ಪಾಗಬಹುದು. ಮುಖ್ಯವಾಗಿ, ಮಸೂದೆಯ ಅಂಶಗಳು ಇನ್ನೂ ಸಾರ್ವಜನಿಕವಾಗಿ ಬಿಡುಗಡೆಗೊಂಡಿಲ್ಲ. ಅದರಲ್ಲಿ ಏನೇನಿವೆ, ಯಾವುದನ್ನೆಲ್ಲ ಮೂಢನಂಬಿಕೆಯಾಗಿ ಪಟ್ಟಿ ಮಾಡಲಾಗಿದೆ, ಹಿಂದೂ ಧರ್ಮವನ್ನು ಮಾತ್ರ ಕೇಂದ್ರೀಕರಿಸಿ ಕರಡು ಪ್ರತಿಯನ್ನು ರಚಿಸಲಾಗಿದೆಯೇ.. ಮುಂತಾದ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯಬೇಕಾದರೆ ಮಸೂದೆಯು ಸಾರ್ವಜನಿಕವಾಗಿ ಬಹಿರಂಗಗೊಳ್ಳಬೇಕು. ದುರಂತ ಏನೆಂದರೆ, ಕೆಲವು ನಿರ್ದಿಷ್ಟ ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳು ಕರಡು ಪ್ರತಿಯ ವಿರುದ್ಧ ಸಮರವನ್ನೇ ಸಾರಿಬಿಟ್ಟಿವೆ. ಮಸೂದೆಯನ್ನು ‘ಹಿಂದೂ ವಿರೋಧಿ' ಎಂಬಲ್ಲಿ ವರೆಗೆ ಅವು ತಂದು ಮುಟ್ಟಿಸಿವೆ. ‘ಮೂಢನಂಬಿಕೆ ವಿರೋಧಿ ಮಸೂದೆ’ಯನ್ನು ನಂಬಿಕೆ ವಿರೋಧಿ ಮಸೂದೆಯೆಂಬಂತೆ ತಪ್ಪಾಗಿ ಬಿಂಬಿಸುವ ಪ್ರಯತ್ನದಲ್ಲಿ ಅವು ತಮ್ಮನ್ನು 24 ಗಂಟೆಯೂ ತೊಡಗಿಸಿಕೊಂಡಿವೆ. ಇಷ್ಟಕ್ಕೂ, ಮಸೂದೆಯ ರಚನಾ ಮಂಡಳಿಯಲ್ಲಿ ಇರುವವರನ್ನು ನೋಡಿಕೊಂಡು ಒಟ್ಟು ಸಮೂದೆಯ ಭವಿಷ್ಯವನ್ನೇ ನಿರ್ಧರಿಸುವುದಕ್ಕೆ ಏನೆನ್ನಬೇಕು? ಮಸೂದೆಯೊಂದು ಸ್ವೀಕಾರಾರ್ಹವೋ ಅಲ್ಲವೋ ಎಂಬುದನ್ನು ನಿರ್ಧರಿಸುವುದಕ್ಕೆ ಮಸೂದೆಯಲ್ಲಿ ಅಡಕವಾಗಿರುವ ಅಂಶಗಳು ಮಾನದಂಡವಾಗಬೇಕೇ ಹೊರತು ಅದನ್ನು ರಚಿಸಿದವರು ಅಲ್ಲವಲ್ಲ. ಸದ್ಯ ಈ ಮಸೂದೆಯನ್ನು ವಿರೋಧಿಸುತ್ತಿರುವ ನಿರ್ದಿಷ್ಟ ವರ್ಗವೊಂದರ ಭಾಷೆ, ವಾದ ಮಂಡನೆ, ಆಕ್ರೋಶದ ಧಾಟಿಯನ್ನು ನೋಡುವಾಗ ಅವರ ಉದ್ದೇಶ ಶುದ್ಧಿಯ ಬಗ್ಗೆಯೇ  ಅನುಮಾನ ಉಂಟಾಗುತ್ತದೆ.
   ಹಾಗಂತ, ಎಲ್ಲ ಧರ್ಮಗಳೂ ವಿರೋಧಿಸುವ ಅನೇಕ ಮೂಢನಂಬಿಕೆಗಳು ಸಮಾಜದಲ್ಲಿವೆ. ಅವು ಧರ್ಮದ ಮೂಲದಿಂದ ಹುಟ್ಟಿಕೊಂಡದ್ದಲ್ಲ. ಧರ್ಮಕ್ಕೂ ಅವುಗಳಿಗೂ ಸಂಬಂಧವೂ ಇರುವುದಿಲ್ಲ. ಆದರೆ, ಅವು ಸಮಾಜದ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆಯೆಂದರೆ, ಧರ್ಮವನ್ನೂ ಮೀರಿ ಅವು ವರ್ಚಸ್ಸು ಬೆಳೆಸಿಕೊಂಡಿವೆ. ಮಸೀದಿ, ದೇವಾಲಯ, ಚರ್ಚುಗಳಲ್ಲಿ ಸೇರುವುದಕ್ಕಿಂತ ಅಧಿಕ ಮಂದಿ ಇವತ್ತು ಇಂಥ ಮೂಢನಂಬಿಕೆಗಳ ಸುತ್ತ ನೆರೆಯುವುದಿದೆ. ಅಲ್ಲಿ ಶೋಷಣೆಯೂ ನಡೆಯುತ್ತದೆ. ಅತ್ಯಾಚಾರ, ವಂಚನೆಯೂ ನಡೆಯುತ್ತದೆ. ಒಂದು ಸರಕಾರ ತರುವ ಕಾನೂನು ಇಂಥ ಧರ್ಮ ವಿರೋಧಿ ನಂಬಿಕೆಗಳ ವಿರುದ್ಧವೇ ಆಗಿದ್ದರೆ ಅದನ್ನು ಸ್ವಾಗತಿಸಲೇಬೇಕು. ಆದರೆ ಅದಕ್ಕಿಂತಲೂ ಮೊದಲು, ಕಾನೂನಿಗಿಂತ ಹೊರತಾದ ಜಾಗೃತಿ ಕಾರ್ಯಕ್ರಮಗಳ ಮೂಲಕ ಇವನ್ನು ಅಳಿಸಬಹುದೇ ಎಂದು ಯೋಚಿಸುವುದೂ ಬಹಳ ಅಗತ್ಯ. ಯಾಕೆಂದರೆ, ನಂಬಿಕೆಗಳೆಂಬುದು ಕ್ರಿಮಿನಲ್ ಕೃತ್ಯಗಳಂತೆ ಅಲ್ಲ. ಕಳ್ಳತನ, ಅತ್ಯಾಚಾರ, ಕೊಲೆ ಮುಂತಾದುವುಗಳ ಜೊತೆ ವ್ಯವಹರಿಸು ವಂತೆ ಸಾಮಾಜಿಕ ನಂಬಿಕೆಗಳೊಂದಿಗೆ ವ್ಯವಹರಿಸುವುದು ತಪ್ಪು. ನಿರ್ದಿಷ್ಟ ನಂಬಿಕೆಯೊಂದು ಧರ್ಮ ವಿರೋಧಿಯೇ ಆಗಿದ್ದರೂ ಅದನ್ನು ಆಚರಿಸುವವರು ಆ ಬಗ್ಗೆ ಗಾಢ ಅಭಿಮಾನವನ್ನು ಹೊಂದಿರುತ್ತಾರೆ. ತಮ್ಮ ನಂಬಿಕೆಯಲ್ಲಿ ದೃಢ ವಿಶ್ವಾಸವನ್ನು ಇಟ್ಟಿರುತ್ತಾರೆ. ಅವರನ್ನು ತಿದ್ದುವುದಕ್ಕೆ ಲಾಠಿ, ಖಾಕಿಯನ್ನು ಬಳಸುವುದರಿಂದ ಸಂಘರ್ಷದ ವಾತಾವರಣವನ್ನು ಹುಟ್ಟು ಹಾಕಿದಂತಾಗುತ್ತದೆಯೇ ಹೊರತು, ಅವರನ್ನು ತಿದ್ದಿದಂತಲ್ಲ. ನಂಬಿಕೆಗೂ ಕ್ರಿಮಿನಲ್ ಕೃತ್ಯಕ್ಕೂ ನಡುವೆ ಇರುವ ಈ ವ್ಯತ್ಯಾಸ ವನ್ನು ವ್ಯವಸ್ಥೆ ಗಂಭೀರವಾಗಿ ಪರಿಗಣಿಸಬೇಕು. ಆದ್ದರಿಂದಲೇ, ಕಾನೂನು ಜಾರಿಗಿಂತಲೂ ಮೊದಲು ವ್ಯವಸ್ಥಿತ ಮತ್ತು ಪರಿಣಾಮಕಾರಿ ಜಾಗೃತಿ ಕಾರ್ಯಕ್ರಮವೊಂದನ್ನು ಸರಕಾರ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸುವುದು. ಯಾಕೆಂದರೆ,      ಸಮಾಜ ಈ ವಂಚಕರನ್ನು ಮುಗ್ಧವಾಗಿ ಅನುಸರಿಸುತ್ತಿದೆ. ಅವರು ಹೇಳಿದಷ್ಟು ದುಡ್ಡು, ಹರಕೆ.. ಇನ್ನಿತರ ವಸ್ತುಗಳನ್ನು ಉದಾರವಾಗಿ ನೀಡುತ್ತಿದೆ. ಹೀಗಿರುವಾಗ, ಸರಕಾರವೇ, ‘ಮೂಢನಂಬಿಕೆ ವಿರೋಧಿ' ಅಭಿಯಾನವನ್ನು ಆರಂಭಿಸಿದರೆ ಒಳಿತಲ್ಲವೇ? ಯಾವುದೆಲ್ಲ ಮೂಢನಂಬಿಕೆ, ಧರ್ಮಕ್ಕೂ ಅದಕ್ಕೂ ಸಂಬಂಧಗಳೇನು, ಬೂದಿ ಬಾಬಾಗಳಿಗೆ ಧಾರ್ಮಿಕವಾಗಿ ಏನು ಸ್ಥಾನಮಾನವಿದೆ, ಧರ್ಮಗಳ ನಿಜವಾದ ಸಾರವೇನು.. ಎಂಬಿತ್ಯಾದಿ ವಿಷಯಗಳ ಸುತ್ತ ಎಲ್ಲ ಧರ್ಮದ ಪ್ರತಿನಿಧಿಗಳನ್ನು ಸೇರಿಸಿ ಸಮಾಜ ಶುದ್ಧಿ ಕಾರ್ಯಕ್ರಮವನ್ನು ಹಮ್ಮಿ ಕೊಂಡರೆ ಮೂಢನಂಬಿಕೆಯ ಜೊತೆ ಗುರುತಿಸಿಕೊಂಡ ಮುಗ್ಧರಲ್ಲಿ ದೊಡ್ಡದೊಂದು ವರ್ಗ ಆ ಬಗ್ಗೆ ಜಿಗುಪ್ಸೆ ತಾಳುವ ಸಾಧ್ಯತೆ ಇದೆ. ಅನೇಕ ಕಡೆ ಭಕ್ತರೇ ವಂಚಕರ ವಿರುದ್ಧ ಬಂಡೇಳಲೂ ಬಹುದು. ಇಂಥ ಪ್ರಯತ್ನಗಳು ವ್ಯಾಪಕ ಮಟ್ಟದಲ್ಲಿ ನಡೆದ ಬಳಿಕ ಕಾನೂನು ಜಾರಿಯ ಬಗ್ಗೆ ಚರ್ಚೆ, ಸಂವಾದಗಳು ನಡೆದರೆ ಅವು ಹೆಚ್ಚು ಅರ್ಥಪೂರ್ಣವಾಗುವುದಕ್ಕೆ ಅವಕಾಶಗಳಿವೆ.
   ಏನೇ ಆಗಲಿ, ಸಾಕಷ್ಟು ಅರ್ಥವ್ಯಾಪ್ತಿಯಿರುವ ನಂಬಿಕೆ-ಮೂಢನಂಬಿಕೆ ಎಂಬ ವಿಷಯಗಳ ಸುತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹುಟ್ಟು ಹಾಕಿರುವ ಚರ್ಚೆಯನ್ನು ಒಂದೇ ಏಟಿಗೆ ಧರ್ಮವಿರೋಧಿ ಎಂಬ ಹಣೆಪಟ್ಟಿ ಹಚ್ಚಿ ತಿರಸ್ಕರಿಸಬೇಕಿಲ್ಲ. ಸಮಾಜದಲ್ಲಿರುವ ಮತ್ತು ಸಕಲ ಧರ್ಮಗಳೂ ವಿರೋಧಿಸುವ ಮೂಢನಂಬಿಕೆಗಳ ಪಟ್ಟಿ ಮಾಡುವುದಕ್ಕೆ ಮತ್ತು ಅವುಗಳಿಂದಾಗುವ ಹಾನಿಯನ್ನು ತಿಳಿದುಕೊಳ್ಳುವುದಕ್ಕೆ ಈ ಚರ್ಚೆ ಖಂಡಿತ ಉಪಯುಕ್ತವಾಗಬಹುದು. ಅಂಥದ್ದೊಂದು ಚರ್ಚೆಗೆ ಸಿದ್ಧರಾಮಯ್ಯರ ಕರಡು ಮಸೂದೆ ಪ್ರೇರಕವಾಗಲಿ ಎಂದು ಹಾರೈಸೋಣ.

Wednesday 23 October 2013

ಕಾರು ಎಂಬ ಸೌoದರ್ಯ ಮತ್ತು ಸೈಕಲ್ ಎಂಬ ಕುರೂಪ


ಈ ಸುದ್ದಿಗಳನ್ನು ಓದಿ
  1. 174 ದೊಡ್ಡ ಮತ್ತು ಸಣ್ಣ ರಸ್ತೆಗಳಲ್ಲಿ ಸೈಕಲ್ ಸಂಚಾರವನ್ನು ನಿಷೇಧಿಸುವ ಪಶ್ಚಿಮ ಬಂಗಾಲ ಸರಕಾರದ ತೀರ್ಮಾನದ ವಿರುದ್ಧ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ.
  2. ಕಳೆದ 10 ವರ್ಷಗಳಲ್ಲಿ ಸ್ಲಮ್ ನಿವಾಸಿಗಳ ಸಂಖ್ಯೆಯಲ್ಲಿ 25% ಹೆಚ್ಚಳವಾಗಿದ್ದು, ಸ್ಲಮ್ ಮುಕ್ತ ನಗರ ನಿರ್ಮಾಣಕ್ಕೆ ಹಿನ್ನಡೆಯಾಗಿದೆ.
  ಮಾಧ್ಯಮಗಳಲ್ಲಿ ಕಳೆದ ವಾರ ಪ್ರಕಟವಾದ ಈ ಎರಡೂ ಸುದ್ದಿಗಳಲ್ಲಿ ಒಂದು ಪ್ರಮುಖ ಹೋಲಿಕೆಯಿದೆ. ಅದೇನೆಂದರೆ, ಇವೆರಡೂ ಜನಸಾಮಾನ್ಯರಿಗೆ ಸಂಬಂಧಿಸಿದವು. ಸೈಕಲ್ ಶ್ರೀಮಂತರ ಸಂಕೇತ ಅಲ್ಲ. ಅದು ಬಡವರಷ್ಟೇ ತೆಳ್ಳಗೆ. ತೂಕವೂ ಕಡಿಮೆ. ಆಧುನಿಕ ಕಾರುಗಳ ಯಾವ ಥಳಕು-ಬಳುಕೂ ಜನಸಾಮಾನ್ಯರ ಸೈಕಲ್‍ಗಳಿಗಿಲ್ಲ. ಕೂಲಿ ಕಾರ್ಮಿಕರ ನರಗಳಂತೆ ಅದರ ಚಕ್ರದ ಸರಿಗೆಗಳು ಎದ್ದು ಕಾಣುತ್ತವೆ. ಮಳೆಗೆ ಒದ್ದೆಯಾಗದೇ ಬಿಸಿಲಿಗೆ ಬೆವರದೇ ಇರುವ ವ್ಯವಸ್ಥೆ ಶ್ರೀಮಂತರ ವಾಹನಗಳಲ್ಲಿರುವಾಗ ಸೈಕಲ್‍ನಲ್ಲಿ ಅಂಥ ವ್ಯವಸ್ಥೆಯೇ ಇಲ್ಲ. ಭೂಮಿಯಿಂದ ಅಗೆದು ತೆಗೆದ ತೈಲವನ್ನು ಸೈಕಲ್ ಸ್ವೀಕರಿಸುವುದಿಲ್ಲ. ಶ್ರೀಮಂತರು ಆಧುನಿಕ ಕಾರುಗಳಲ್ಲಿ ಆರಾಮವಾಗಿ ಪ್ರಯಾಣಿಸುವಾಗ, ಬಡವರು ಸೈಕಲನ್ನು ತುಳಿದುಕೊಂಡೋ ದೂಡಿಕೊಂಡೋ ಸಂಚರಿಸುತ್ತಾರೆ. ಕಾರು, ರಿಕ್ಷಾ, ದ್ವಿಚಕ್ರ ವಾಹನಗಳಿಗೆ ಪಾರ್ಕಿಂಗ್ ಸ್ಥಳಗಳಿರುವಂತೆ ಸೈಕಲ್‍ಗೆಂದೇ ಅಂಥ ಪಾರ್ಕಿಂಗ್‍ಗಳಿರುವುದು ತೀರಾ ಕಡಿಮೆ. ಒಂದು ರೀತಿಯಲ್ಲಿ, ಸೈಕಲ್ ಮತ್ತು ಅದರಲ್ಲಿ ಸಂಚರಿಸುವವರ ಈ ಕೊರತೆಗಳನ್ನು ಆಧುನಿಕ ಆಲೋಚನೆಗಳು ಇವತ್ತು ದೌರ್ಬಲ್ಯ ಎಂದು ತೀರ್ಮಾನಿಸುವ ಹಂತಕ್ಕೆ ತಲುಪಿಬಿಟ್ಟಿವೆ. ನಗರ ಸುಂದರವಾಗಿ ಕಾಣಿಸಬೇಕಾದರೆ ಸೈಕಲ್‍ಗಳು ಇಲ್ಲವಾಗಬೇಕು, ತಳ್ಳುಗಾಡಿಗಳು ತೊಲಗಬೇಕು, ಕೈಗಾಡಿಗಳು ಕಾಣಿಸಿಕೊಳ್ಳಬಾರದು.. ಎಂದೆಲ್ಲಾ ಅವು ಅಂದುಕೊಂಡಿವೆ. ಅದಕ್ಕೆ ಪೂರಕವಾಗಿ ಕಾನೂನು ರೂಪಿಸುವಂತೆ ಅವು ಸರಕಾರಗಳ ಮೇಲೆ ಒತ್ತಡ ಹೇರುತ್ತಿವೆ.
  ದುರಂತ ಏನೆಂದರೆ, ಉತ್ತರ ಪ್ರದೇಶದ ದೌಂಡಿಯಾ ಖೇರಾ ಗ್ರಾಮದಲ್ಲಿ ನಡೆಯುತ್ತಿರುವ ನಿಧಿ ಶೋಧವು ಹುಟ್ಟು ಹಾಕಿರುವ ಕುತೂಹಲ. ಮಾಧ್ಯಮಗಳಲ್ಲಿ ಪ್ರತಿದಿನದ ಚಟುವಟಿಕೆಗಳು ವರದಿಯಾಗುತ್ತಿವೆ. ಎಷ್ಟು ಅಗಲ, ಉದ್ದದಲ್ಲಿ, ಎಷ್ಟು ಸೆಂಟಿ ವಿೂಟರ್ ಜಾಗವನ್ನು ಅಗೆಯಲಾಯಿತು ಎಂಬೆಲ್ಲಾ ಮಾಹಿತಿಗಳನ್ನು ಅವು ಭಾರೀ ಆಸಕ್ತಿಯಿಂದ ಪ್ರಕಟಿಸುತ್ತಿವೆ. ನಿಜವಾಗಿ, ಇನ್ನೂ ಖಚಿತವಲ್ಲದ ನಿಧಿಯ ಬಗ್ಗೆ ನಮ್ಮ ವ್ಯವಸ್ಥೆ ತೋರ್ಪಡಿಸುತ್ತಿರುವ ಆಸಕ್ತಿಯ ಸಣ್ಣ ಪ್ರಮಾಣವನ್ನಾದರೂ ಬಡವರ ಬಗ್ಗೆ ತೋರಿಸುತ್ತಿದ್ದರೆ, ಸೈಕಲ್ ಇವತ್ತು ನಿಷೇಧಕ್ಕೆ ಅರ್ಹವಾಗುವಷ್ಟು ಅಪಾಯಕಾರಿ ವಾಹನ ಆಗುತ್ತಿರಲಿಲ್ಲ. ಕನಿಷ್ಠ, ಪರ್ಯಾಯ ರಸ್ತೆಯ ವ್ಯವಸ್ಥೆಯನ್ನೇ ಮಾಡದೆ ಸೈಕಲನ್ನು ನಿಷೇಧಿಸಲಾಗುತ್ತದೆಂದರೆ, ಅದನ್ನು ‘ಬಡವರಿಗೆ ನಿಷೇಧ’ ಎಂದಲ್ಲದೇ ಬೇರೇನೆಂದು ವ್ಯಾಖ್ಯಾನಿಸಲು ಸಾಧ್ಯ? ಹಾಗಾದರೆ, ಜಾಗದ ದುರುಪಯೋಗ ಎಂದು ವಾದಿಸಿ ಶ್ರೀಮಂತರ ಬೃಹತ್ ಬಂಗಲೆಗಳನ್ನು ನಮ್ಮ ವ್ಯವಸ್ಥೆ ನಿಷೇಧಿಸಬಲ್ಲುದೇ? ತಾನು, ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳಿಗಾಗಿ ಮುಖೇಶ್ ಅಂಬಾನಿ ಕಟ್ಟಿದ 27 ಅಂತಸ್ತಿನ ಮನೆಯ ಬಗ್ಗೆ ವ್ಯವಸ್ಥೆಯ ನಿಲುವೇನು? ಆ ದುಡ್ಡಿನಲ್ಲಿ ಸ್ಲಂನಲ್ಲಿ ಜೀವಿಸುವ ಅನೇಕಾರು ಮಂದಿಗೆ ಮನೆಗಳನ್ನು ನಿರ್ಮಿಸಿಕೊಡಬಹುದಿತ್ತು ಎಂದು ಅದು ಹೇಳುತ್ತದೆಯೇ? 5 ಮಂದಿಯ ಕುಟುಂಬವು 10ಕ್ಕಿಂತಲೂ ಹೆಚ್ಚು ಆಧುನಿಕ ವಾಹನಗಳನ್ನು ಪೇರಿಸಿಕೊಟ್ಟುಕೊಂಡು ಬದುಕುತ್ತಿರುವುದು ನಮ್ಮ ವ್ಯವಸ್ಥೆಗೇಕೆ ಅಸಂಗತ ಅನ್ನಿಸುತ್ತಿಲ್ಲ? ವಾಹನ ದಟ್ಟಣೆಗೆ, ತೈಲದ ದುರ್ಬಲಕೆಗೆ ಇಂಥ ಐಶಾರಾಮದ ಬದುಕು ಕಾರಣ ಎಂದು ಹೇಳಿ ಅವನ್ನು ನಿಷೇಧಿಸುವುದಕ್ಕೇಕೆ ಮುಂದಾಗುತ್ತಿಲ್ಲ? ಒಂದು ಕಡೆ, ನಮ್ಮ ವ್ಯವಸ್ಥೆ ಓರ್ವ ಸಾಧುವಿನ ಕನಸನ್ನು ಬೆನ್ನಟ್ಟಿಕೊಂಡು ಬುಲ್ಡೋಜರ್‍ನೊಂದಿಗೆ ಅಗೆಯಲು ಪ್ರಾರಂಭಿಸುತ್ತದೆ. ಇನ್ನೊಂದು ಕಡೆ, ಇದೇ ವ್ಯವಸ್ಥೆ ಇದೇ ಬುಲ್ಡೋಜರನ್ನು ಸ್ಲಂಗಳ ಧ್ವಂಸಕ್ಕಾಗಿ ಕಳುಹಿಸುತ್ತದೆ. ನಮ್ಮ ವ್ಯವಸ್ಥೆಗೆ ದುಡ್ಡು, ಶ್ರೀಮಂತರು ಅಗತ್ಯವೇ ಹೊರತು ಬಡವರು, ಸೈಕಲ್‍ಗಳು ಅಲ್ಲ ಎಂಬುದನ್ನಲ್ಲವೇ ಇವು ಸಮರ್ಥಿಸುತ್ತಿರುವುದು?
  ನಿಜವಾಗಿ, ಸ್ಲಮ್‍ಗಳ ಸಂಖ್ಯೆ ವರ್ಷಂಪ್ರತಿ ಹೆಚ್ಚಳವಾಗುತ್ತಿದೆಯೆಂದರೆ ನಮ್ಮನ್ನಾಳುವವರ ಆಲೋಚನೆಗಳು ದಿನೇ ದಿನೇ ಶ್ರೀಮಂತರಿಂದ ಪ್ರಭಾವಿತಗೊಳ್ಳುತ್ತಿವೆ ಎಂದೇ ಅರ್ಥ. ಅವರು ಬೇಕೆಂದ ಕಡೆ ನಮ್ಮ ವ್ಯವಸ್ಥೆ ಭೂಮಿಯನ್ನು ಒದಗಿಸುತ್ತದೆ. ಅವರಿಗೆ ಸಬ್ಸಿಡಿ ದರದಲ್ಲಿ ಸಾಲ ಕೊಡುತ್ತದೆ. ಒಂದು ಹಂತದ ವರೆಗೆ ಉಚಿತವಾಗಿ ನೀರು, ವಿದ್ಯುತ್ ಒದಗಿಸುತ್ತದೆ. ಅವರ ಕೈಯಲ್ಲಿ ಈ ದೇಶದ ಭವಿಷ್ಯವಿದೆ ಎಂದು ನಮ್ಮನ್ನಾಳುವವರು ತೀರ್ಮಾನಿಸಿರುವುದರಿಂದ ಅವರಿಗಾಗಿ ಈ 'ಸೈಕಲ್ ಮನುಷ್ಯರನ್ನು' ಒಕ್ಕಲೆಬ್ಬಿಸಬೇಕಾಗುತ್ತದೆ. ತಮ್ಮದೇ ಆದ ತುಂಡು ಭೂಮಿ, ಕೆಲಸಗಳನ್ನು ತೊರೆದು ಈ ಮಂದಿ ಎಲ್ಲೆಲ್ಲಿಗೋ ಹೋಗಬೇಕಾಗುತ್ತದೆ. ಅನೇಕ ಬಾರಿ ಪರಿಹಾರದ ಹೆಸರಲ್ಲಿ ಅವರ ಕೈಗೆ ಬರುವ ದುಡ್ಡು ಹೊಸತೊಂದು ಮನೆ ಖರೀದಿಸುವುದಕ್ಕೋ ವ್ಯಾಪಾರ ಆರಂಭಿಸುವುದಕ್ಕೋ ಸಾಲುವುದಿಲ್ಲ. ಪ್ರತಿಭಟನೆ, ಅದು-ಇದು ಎಂದು ಅತ್ತಿತ್ತ ಓಡಾಡಿಯೇ ದುಡ್ಡಿನ ದೊಡ್ಡದೊಂದು ಪಾಲು ಅದಾಗಲೇ ಮುಗಿದಿರುತ್ತದೆ. ಇಂಥವರು ಕೊನೆಗೆ ಸ್ಲಮ್‍ಗಳಂಥ ಪ್ರದೇಶಗಳಲ್ಲಿ ಬಿಡಾರ ಹೂಡುವ ಅನಿವಾರ್ಯತೆ ತಲೆದೋರುತ್ತದೆ. ಸರಿಯಾದ ಉದ್ಯೋಗವಾಗಲಿ, ಮನೆಯಾಗಲಿ ಇಲ್ಲದೇ ಅಪರಿಚಿತ ಪ್ರದೇಶದಲ್ಲಿ ಬದುಕುವ ಓರ್ವ ಬಡವನನ್ನು ಊಹಿಸಿ.. ಆತನನ್ನು ಮತ್ತು ಅಂಥ ಅಸಂಖ್ಯ ಸಂತ್ರಸ್ತರನ್ನು ನಗರದ ಸೌಂದರ್ಯಕ್ಕೆ ಕಳಂಕ ಎಂದು ನಾವು ತೀರ್ಮಾನಿಸುವಾಗ ಅಂಥದ್ದೊಂದು ಪರಿಸ್ಥಿತಿಯನ್ನು ನಿರ್ಮಿಸಿದವರ ಬಗ್ಗೆ ನಮ್ಮಲ್ಲೇಕೆ ಆಕ್ರೋಶ ವ್ಯಕ್ತವಾಗುತ್ತಿಲ್ಲ? ಅಭಿವೃದ್ಧಿ ಎಂಬುದು ಬಡವನ ಮನೆ, ಗದ್ದೆ, ಸೈಕಲನ್ನು ಧ್ವಂಸ ಮಾಡಿ ಸಾಧಿಸುವಂಥದ್ದೇ? ಸ್ಲಮ್ ಮುಕ್ತ ನಗರ, ಸೈಕಲು ಮುಕ್ತ ರಸ್ತೆ ಎಂಬೆಲ್ಲ ಪ್ರಾಸಬದ್ಧ ವಾಕ್ಯಗಳನ್ನು ರಚಿಸುವುದು ಸುಲಭ. ಅದು ಕೇಳಲೂ ಇಂಪಾಗಿರುತ್ತದೆ. ಆದರೆ, ಎಲ್ಲ ಅಭಿವೃದ್ಧಿ ಮತ್ತು ಸೌಂದರ್ಯದ ಕಲ್ಪನೆ ಬಡವರನ್ನು ಗುರಿಯಾಗಿಸಿಕೊಂಡೇ ಯಾಕೆ ಬರುತ್ತವೆ? ಬಡತನ ಎಂಬುದು ಖಂಡಿತ ಕುರೂಪದ ಹೆಸರಲ್ಲ. ಅದನ್ನು ನಮ್ಮ ವ್ಯವಸ್ಥೆ ಕುರೂಪ ಎಂದು ಭಾವಿಸುತ್ತದಾದರೆ ಆ ಕುರೂಪತನದ ಹೊಣೆಯನ್ನು ವ್ಯವಸ್ಥೆಯೇ ವಹಿಸಿಕೊಳ್ಳಬೇಕು. ಆ ಕುರೂಪತನವನ್ನು ಸೌಂದರ್ಯವಾಗಿ ಮಾರ್ಪಡಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಬೇಕು. ಅದು ಬಿಟ್ಟು, ಬಡವರ ಅಸ್ತಿತ್ವ, ಸಂಕೇತಗಳನ್ನೇ ನಿಷೇಧಿಸುವುದು ವ್ಯವಸ್ಥೆಯ ಕುರೂಪತನವನ್ನಷ್ಟೇ ತೋರಿಸುತ್ತದೆ.
  ನಿಜವಾಗಿ, ಶ್ರೀಮಂತರು ಮತ್ತು ಬಡವರು ಒಂದು ವ್ಯವಸ್ಥೆಯ ಎರಡು ಕಣ್ಣುಗಳೇ ಹೊರತು ಅದರಲ್ಲಿ ಒಂದನ್ನು ಸುಂದರ ಮತ್ತು ಇನ್ನೊಂದನ್ನು ಕುರೂಪ ಎಂದು ವಿಭಜಿಸುವುದೇ ತಪ್ಪು. ಒಂದು ಪ್ರದೇಶದ ಶ್ರೀಮಂತರು ಒಟ್ಟು ಸೇರಿ ತಮ್ಮ ಪ್ರದೇಶದ ಬಡವರ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಂತಹ ಪ್ರಯತ್ನಗಳು ನಡೆದರೆ ಶ್ರೀಮಂತರನ್ನು ಬಡವರು ಅಸೂಯೆಯಿಂದ ನೋಡುವ ಸಂದರ್ಭಗಳು ಕೊನೆಗೊಂಡೀತು. ಮನಸ್ಸು ಮಾಡಿದರೆ ಬಡವರನ್ನು ಸಬಲರನ್ನಾಗಿಸುವುದಕ್ಕೆ ಹತ್ತು-ಹಲವು ಅವಕಾಶಗಳು ಖಂಡಿತ ಇವೆ. ವರ್ಷಕ್ಕೊಮ್ಮೆ ತಮ್ಮ ಲಾಭದ ಒಂದಂಶವನ್ನು ಒಟ್ಟು ಸೇರಿಸಿ ತಮ್ಮ ಪ್ರದೇಶದ ಬಡವನನ್ನು ಸಬಲನನ್ನಾಗಿಸುವುದಕ್ಕೆ ಶ್ರೀಮಂತರು ವಿನಿಯೋಗಿಸಬಹುದು. ಆತ ಆ ದುಡ್ಡನ್ನು ವ್ಯಾಪಾರದಲ್ಲೋ ಇನ್ನಿತರ ಮಾರ್ಗದಲ್ಲೋ ಹೂಡಿ ಸಬಲನಾಗುವಂತೆ ನೋಡಿಕೊಳ್ಳಬಹುದು. ಇಂಥ ಕ್ರಮಕ್ಕೆ ಯಾರಾದರೂ ಚಾಲನೆ ಕೊಟ್ಟರೆ ಖಂಡಿತ ಮುಂದೊಂದು ದಿನ ಅದು ಚಳವಳಿಯಾಗಿ ಮಾರ್ಪಾಡಬಹುದಲ್ಲದೇ ಶ್ರೀಮಂತರನ್ನು ಅಭಿಮಾನದಿಂದ ನೋಡುವ ವರ್ಗವೊಂದು ಬೆಳೆದು ಬಂದೀತು. ಆದ್ದರಿಂದ, ಸೈಕಲ್ ಇಲ್ಲದ ರಸ್ತೆ ಮತ್ತು ಸ್ಲಂಗಳಿಲ್ಲದ ಪಟ್ಟಣವನ್ನು ನಿರ್ಮಿಸಲು ಹೊರಟಿರುವ ವ್ಯವಸ್ಥೆಯು, `ಸೈಕಲ್‍ಗಳನ್ನೂ' `ಸ್ಲಂಗಳನ್ನೂ' ಸುಂದರಗೊಳಿಸಲು ಪ್ರಯತ್ನಿಸಬೇಕಾಗಿದೆ. ಸ್ಲಂಗಳಲ್ಲಿ ವಾಸಿಸುವವರು ಮತ್ತು ಸೈಕಲ್‍ನಲ್ಲಿ ಪ್ರಯಾಣಿಸುವವರು ದ್ವಿತೀಯ ದರ್ಜೆಯ ನಾಗರಿಕರಲ್ಲ ಎಂದು ಸಾರಬೇಕಾಗಿದೆ.

Thursday 17 October 2013

 ಇಂಥ ಗೆಲುವನ್ನು ಈ ಮಗು ಮತ್ತೆ ಮತ್ತೆ ದಾಖಲಿಸುತ್ತಲೇ ಇರಲಿ..

   ನಾರ್ವೆಯ ನೋಬೆಲ್ ಶಾಂತಿ ಪ್ರತಿಷ್ಠಾನವು ಮಲಾಲ ಎಂಬ ಮಗುವನ್ನು ರಣಹದ್ದುಗಳ ಕೈಯಿಂದ ಒಂದು ವರ್ಷದ ಮಟ್ಟಿಗಾದರೂ ರಕ್ಷಿಸಿದೆ. ಮಲಾಲ ಯಾರು, ಆಕೆ ಎಲ್ಲಿದ್ದಾಳೆ, ಯಾವ ಕಾರಣಕ್ಕಾಗಿ ಸುದ್ದಿಯಲ್ಲಿದ್ದಾಳೆ.. ಎಂಬುದೆಲ್ಲಾ ಶಾಲೆಯ ಮೆಟ್ಟಲು ಹತ್ತದ ಜನಸಾಮಾನ್ಯರಿಗೂ ಇವತ್ತು ಗೊತ್ತು. ಹಾಗಂತ, ಮಲಾಲ ಅಪಾರ ಪ್ರತಿಭಾವಂತೆ ಏನಲ್ಲ. ಸಣ್ಣ ಪ್ರಾಯದಲ್ಲೇ ಅಸಾಮಾನ್ಯ ಸಾಧನೆ ಮಾಡಿದ ಗುರುತೂ ಆಕೆಗಿಲ್ಲ. ಪಾಕ್ ಮತ್ತು ಅಫಘಾನಿಸ್ತಾನದ ಗಡಿಭಾಗದಲ್ಲಿ ತಣ್ಣಗೆ ಕಲಿಯುತ್ತಿದ್ದ ಈ ಮಗುವಿನ ಮೇಲೆ ಆದ ಗುಂಡಿನ ದಾಳಿಯು ಆಕೆಯನ್ನು ಪ್ರಸಿದ್ಧಿಗೆ ಒಯ್ದಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಿಸುವಷ್ಟು, ವೈಟ್ ಹೌಸ್‍ಗೆ ಭೇಟಿ ಕೊಡಿಸುವಷ್ಟು, ಜಾಗತಿಕ ನಾಯಕರ ಜೊತೆ ವೇದಿಕೆ ಹಂಚಿಕೊಳ್ಳುವಷ್ಟು ಆಕೆಯನ್ನು ಅದು ಎತ್ತರಕ್ಕೆ ಏರಿಸಿದೆ. ಪಾಶ್ಚಾತ್ಯ ಯುದ್ಧದಾಹಿ ರಾಷ್ಟ್ರಗಳು ತಮ್ಮ ಮಾತುಗಳನ್ನು ಈ ಮಗುವಿನ ಬಾಯಿಯಲ್ಲಿ ಇವತ್ತು ಹೇಳಿಸುತ್ತಿವೆ. ಜಗತ್ತಿನ ಸಕಲ ಆಗು-ಹೋಗುಗಳ ಬಗ್ಗೆಯೂ ಹೇಳಿಕೆ ಕೊಡುವಂಥ ಸ್ಥಿತಿಗೆ ಅವು ಆ ಮಗುವನ್ನು ನೂಕಿಬಿಟ್ಟಿವೆ. ಪಾಕ್‍ನ ಬೆನಝೀರ್ ಆಗಬೇಕು ಎಂದು ಒಮ್ಮೆ ಆ ಮಗು ಹೇಳಿದರೆ, ಇನ್ನೊಮ್ಮೆ ಪಾಕ್-ಅಫಘನ್ನಿನ ಮಹಿಳೆಯರ ಬಗ್ಗೆ ಮಾತಾಡುತ್ತದೆ. ಮಕ್ಕಳ ಹಕ್ಕು, ಶಿಕ್ಷಣದ ಅಗತ್ಯ, ಮಹಿಳಾ ಸಬಲೀಕರಣ.. ಎಂದೆಲ್ಲಾ ತನ್ನ ವಯಸ್ಸಿಗೆ ವಿೂರಿದ ಮಾತುಗಳನ್ನು ಆ ಮಗು ಹೇಳುತ್ತಿದೆ. ಇಂಥ ಹೊತ್ತಲ್ಲೇ ಆಕೆಯ ಹೆಸರು ನೋಬೆಲ್ ಶಾಂತಿ ಪ್ರಶಸ್ತಿಯ ಪಟ್ಟಿಗೂ ಸೇರ್ಪಡೆಗೊಂಡಿತು. ರಶ್ಯಾದ ಅಧ್ಯಕ್ಷ  ಪುಟಿನ್ ಮತ್ತು ರಾಸಾಯನಿಕ ಅಸ್ತ್ರ ತಡೆ ಸಂಸ್ಥೆ (ಓ.ಪಿ.ಸಿ.ಡಬ್ಲ್ಯು)ಯು ಪ್ರಶಸ್ತಿಯ ಪಟ್ಟಿಯಲ್ಲಿದ್ದರೂ ಮಾಧ್ಯಮಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೊಳಗಾದದ್ದು ಈ ಮಗುವೇ. ಅಷ್ಟಕ್ಕೂ, ನೋಬೆಲ್ ಪ್ರಶಸ್ತಿಯನ್ನು ನೀಡುವುದಕ್ಕೆ ಪರಿಗಣಿಸಲಾಗುವ ಅರ್ಹತೆಗಳೇನು, ಮಲಾಲ ಆ ಪ್ರಶಸ್ತಿಗೆ ಎಷ್ಟು ಅರ್ಹ, ಆಕೆಯ ಯಾವ ಸಾಧನೆಯನ್ನು ಪ್ರಶಸ್ತಿ ಪ್ರತಿಷ್ಠಾನವು ಪರಿಗಣಿಸಬೇಕು.. ಎಂಬೆಲ್ಲ ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಲು ಮಾಧ್ಯಮಗಳು ಶ್ರಮಿಸಿದ್ದು ತೀರಾ ಕಡಿಮೆ.  ಇದೀಗ ರಾಸಾಯನಿಕ ಅಸ್ತ್ರ ತಡೆ ಸಂಸ್ಥೆಯನ್ನು ನೋಬೆಲ್ ಪ್ರತಿಷ್ಠಾನವು ಶಾಂತಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಈ ಮೂಲಕ ಅದು ಮಾಡಿದ ಅತಿ ದೊಡ್ಡ ಸಾಧನೆಯೇನೆಂದರೆ, ಮಲಾಲಳನ್ನು ರಕ್ಷಿಸಿದ್ದು. ಒಂದು ವೇಳೆ ಶಾಂತಿ ಪ್ರಶಸ್ತಿಗೆ ಮಲಾಲ ಆಯ್ಕೆಯಾಗುತ್ತಿದ್ದರೆ ಆ ಪ್ರಶಸ್ತಿಯ ಮೌಲ್ಯವಷ್ಟೇ ಅಲ್ಲ, ಆ ಮಗುವಿನ ಆಯುಷ್ಯವೂ ಕುಸಿಯುವ ಸಾಧ್ಯತೆಯಿತ್ತು. ಯಾಕೆಂದರೆ, ಆಕೆಯನ್ನು ಸಾಕುತ್ತಿರುವ ರಾಷ್ಟ್ರಗಳಿಗೆ ಆ ಮಗು ಒಂದು ಆಯುಧ. ಆ ಆಯುಧವನ್ನು ಬಳಸಿಕೊಂಡು ಕಳೆದೊಂದು ವರ್ಷದಲ್ಲಿ ಅವು ಪಾಕ್ ಮತ್ತು ಅಫಘಾನ್‍ಗಳ ಮೇಲೆ ಅನೇಕಾರು ಡ್ರೋನ್‍ಗಳನ್ನು ಎಸೆದಿವೆ. ಈ ಮಗುವಿನ ಬೆನ್ನ ಹಿಂದೆ ಕೂತು ಅವು ತಾಲಿಬಾನ್‍ಗಳ ವಿರುದ್ಧ ಬಂದೂಕು ಸಿಡಿಸಿವೆ. ಈ ಎರಡು ರಾಷ್ಟ್ರಗಳಲ್ಲಿ ತಮ್ಮ ಸೈನಿಕರು ಎಸಗಿರುವ ಮತ್ತು ಎಸಗುತ್ತಿರುವ ಮನುಷ್ಯ ವಿರೋಧಿ ಕೃತ್ಯಗಳನ್ನೆಲ್ಲ ಸಮರ್ಥಿಸಿಕೊಳ್ಳಲು ಅವರಿಗೆ ಈ ಮಗು ಬೇಕೇ ಬೇಕು. ಅಫಘನ್ನಿನಲ್ಲೋ ಪಾಕ್‍ನಲ್ಲೋ ಸ್ಫೋಟಗಳು ನಡೆದಾಗಲೆಲ್ಲ ಅವು ಈ ಮಗುವಿನಲ್ಲಿ ಹೇಳಿಕೆಯನ್ನು ಹೊರಡಿಸುತ್ತವೆ. ಆ ಮಗು ಹೇಳಿಕೆ ಕೊಡುವುದು ಶಿಕ್ಷಣದ ಬಗ್ಗೆಯಾದರೂ ಪತ್ರಿಕೆಗಳು ಅದನ್ನು ಪ್ರಕಟಿಸುವಾಗ  ‘ತಾಲಿಬಾನ್ ಗುಂಡನ್ನು’ ಸಹಜವಾಗಿ ಪ್ರಸ್ತಾಪಿಸುತ್ತವೆ. ಟಿ.ವಿ. ಆ್ಯಂಕರ್‍ಗಳು, ‘ಗುಂಡು ಪ್ರಕರಣವನ್ನು’ ಉಲ್ಲೇಖಿಸದೆ ಮತ್ತು ಆಕೆಯನ್ನು ಚಿಕಿತ್ಸೆಗೆ ತುರ್ತಾಗಿ ಇಂಗ್ಲೆಂಡಿಗೆ ಹೊತ್ತೊಯ್ದ ದೃಶ್ಯವನ್ನು ತೋರಿಸದೆ ಸುದ್ದಿಯನ್ನು ಮುಗಿಸುವುದಿಲ್ಲ. ಹೀಗಿರುವಾಗ, ಈ ಮಗುವಿಗೆ ನೋಬೆಲ್ ಬರುತ್ತಿದ್ದರೆ ಪ್ರಚಾರದ ಅಬ್ಬರದಲ್ಲಿ ಅದು ಖಂಡಿತ ಕಳೆದು ಹೋಗುತ್ತಿತ್ತು. ನಿರೀಕ್ಷೆಯ ಭಾರವನ್ನು ಹೊತ್ತುಕೊಳ್ಳಲಾಗದೇ ಮಗು ಕುಸಿದು ಹೋಗುವ ಸಾಧ್ಯತೆಯೂ ಇತ್ತು. ಅಲ್ಲದೆ, ಪ್ರಶಸ್ತಿಯ ಭಾರವನ್ನು ತಡೆಯಲಾಗದೇ ಮಗು ಬಾಡಿ ಹೋಗಿ ಚಲಾವಣೆಗೊಳ್ಳದ ನಾಣ್ಯದಂತಾಗಿದ್ದರೆ ಈ ಯುದ್ಧದಾಹಿಗಳು ತಾವೇ ಗುಂಡು ಪ್ರಕರಣವೊಂದನ್ನು ಸೃಷ್ಟಿಸಿ ಅದನ್ನು ತಾಲಿಬಾನ್‍ಗಳ ತಲೆಗೆ ಕಟ್ಟಿ ಮಗುವನ್ನು ಬಲಿ ಕೊಡುವುದಕ್ಕೂ ಹೇಸುತ್ತಿರಲಿಲ್ಲ.
 ನಿಜವಾಗಿ, ಮಲಾಲ ಎಂಬ ಮಗುವನ್ನು ಪಾಶ್ಚಾತ್ಯ ಯುದ್ಧದಾಹಿಗಳಿಂದ ತುರ್ತಾಗಿ ರಕ್ಷಿಸಬೇಕಾದ ಅಗತ್ಯವಿದೆ. ಆಕೆಯ ಮೇಲೆ ನಡೆದ ಗುಂಡಿನ ದಾಳಿಗಿಂತ ವರ್ಷಗಳ ಮೊದಲೇ ಆ್ಯಡಮ್ ಗಿಲ್ಲಿಕ್ ಎಂಬ ಪತ್ರಕರ್ತ ಮಾರುವೇಷದಲ್ಲಿ ಈ ಕುಟುಂಬವನ್ನು ಸಂಪರ್ಕಿಸಿ ಚಿತ್ರಿಸಿದ ಡಾಕ್ಯುಮೆಂಟರಿಯನ್ನು ನೋಡುವಾಗ ಇಡೀ ಗುಂಡು ಪ್ರಕರಣದ ಬಗ್ಗೆಯೇ ಅನುಮಾನ ಮೂಡುತ್ತದೆ. ತಮ್ಮ ಯೋಜನೆಗಳನ್ನು ಜಾರಿಗೊಳಿಸಲಿಕ್ಕಾಗಿ ಈ ಮಗುವನ್ನು ಬಳಸಿಕೊಳ್ಳಲು ಬೃಹತ್ ರಾಷ್ಟ್ರಗಳು ಮುಂಚಿತವಾಗಿಯೇ ತೀರ್ಮಾನಿಸಿದ್ದುವೇ ಎಂದು ಸಂಶಯವಾಗುತ್ತದೆ. ಬಹುಶಃ, ಆ ಮಗುವಿಗೆ ಈ ವಾಸ್ತವ ಗೊತ್ತಿರಬೇಕೆಂದೇನೂ ಇಲ್ಲ. ತನ್ನ ಪ್ರಾಯೋಜಕರು ಏನೆಂದು ಹೇಳಿಕೊಡುತ್ತಿದ್ದಾರೋ ಅದನ್ನೇ ನಂಬುವಂಥ ವಯಸ್ಸು ಅದು. ತನ್ನ ಮೇಲೆ ತಾಲಿಬಾನ್ ದಾಳಿ ನಡೆಸಿದೆ ಎಂದು ಆ ಮಗು ಬಲವಾಗಿ ನಂಬಿದೆ. ಜಗತ್ತನ್ನೂ ಹಾಗೆಯೇ ನಂಬಿಸಲಾಗಿದೆ. ಅದುವೇ ನಿಜ ಎಂದು ನಾವು ಗಟ್ಟಿಯಾಗಿ ಹೇಳುವಾಗಲೂ ಅನುಮಾನದ ಪುಟ್ಟದೊಂದು ಗೆರೆ ನಮ್ಮಂಥ ಅಸಂಖ್ಯ ಮಂದಿಯ ಎದೆಯಲ್ಲಿ ಹಾದುಹೋಗುತ್ತಿರುವುದು ಸುಳ್ಳೇನೂ ಅಲ್ಲ. ಆಕೆಯನ್ನು ಯಾರು ಇವತ್ತು ಸಾಕುತ್ತಿದ್ದಾರೋ ಅವರು ಈ ಹಿಂದೆ ಮಾಡಿರುವ ವಂಚನೆಗಳನ್ನು ಸ್ಮರಿಸುವಾಗ ಮಲಾಲ ಗುಂಡು ಪ್ರಕರಣವು ಈ ವಂಚನೆಯ ಮುಂದುವರಿದ ಭಾಗವಾಗಿರಬಹುದೇ ಎಂಬ ಸಂಶಯ ಬಂದೇ ಬರುತ್ತದೆ. 1953ರಲ್ಲಿ ಇರಾನಿನ ಪ್ರಜಾತಂತ್ರ ಸರಕಾರವನ್ನು ಉರುಳಿಸುವಲ್ಲಿ ಮತ್ತು ಅಮೇರಿಕನ್ ಪರವಾಗಿದ್ದ ಶಾ ಪಹ್ಲವಿ ಎಂಬವರನ್ನು ರಾಜನಾಗಿ ನೇಮಕ ಮಾಡುವಲ್ಲಿ ಪರದೆಯ ಹಿಂದೆ ಕೆಲಸ ಮಾಡಿದ್ದು ಅಮೇರಿಕವೇ ಎಂದು ಎರಡು ತಿಂಗಳ ಹಿಂದೆ ಅದುವೇ ಒಪ್ಪಿಕೊಂಡಿತ್ತು. ಅಮೇರಿಕವನ್ನು ವಿರೋಧಿಸುತ್ತಿರುವ ಲ್ಯಾಟಿನ್ ಅಮೇರಿಕದ ರಾಷ್ಟ್ರಗಳ ಅಧ್ಯಕ್ಷರುಗಳಿಗೆ ಅದು ಕ್ಯಾನ್ಸರ್ ವೈರಸನ್ನು ಚುಚ್ಚುತ್ತಿದೆ ಎಂಬ ಅನುಮಾನ ಅಲ್ಲಿಯ ಜನರಲ್ಲಿ ಇವತ್ತು ವ್ಯಾಪಕವಾಗಿದೆ. ಹ್ಯೂಗೋ ಚಾವೇಝ್‍ರ ಸಾವು ಈ ಅನುಮಾನವನ್ನು ಇನ್ನಷ್ಟು ಬಲಪಡಿಸಿದೆ. ಕಳೆದ ವಾರವಷ್ಟೇ ಅರ್ಜಂಟೀನಾದ ಅಧ್ಯಕ್ಷೆ ಕ್ರಿಸ್ಟಿನಾ ಕಿರ್ಚನರ್ ಅವರ ಮೆದುಳಿನಲ್ಲಿದ್ದ ಕ್ಯಾನ್ಸರ್‍ಕಾರಕ ಗಡ್ಡೆಯನ್ನು ತೆಗೆದು ಹಾಕಲಾಗಿದೆ. ಹೀಗಿರುವಾಗ, ಮಲಾಲಳನ್ನು 'ತಾಲಿಬಾನ್ ಸಂತ್ರಸ್ತೆ' ಎಂದು ಬಿಂಬಿಸಲು ಅಮೇರಿಕಕ್ಕೆ ಅಸಾಧ್ಯವೆಂದು ಹೇಗೆ ನಂಬುವುದು? ಮಗುವನ್ನು ಮುಂದಿಟ್ಟುಕೊಂಡು ತಮ್ಮ ಯುದ್ಧದಾಹಿ ಕಾರ್ಯಾಚರಣೆಯನ್ನು ಮುಂದುವರಿಸಲು ಈ ಶಕ್ತಿಗಳು ಪ್ರಯತ್ನಿಸಲಾರವು ಎಂದು ಅನುಮಾನಿಸದಿರುವುದು ಹೇಗೆ?
   ಏನೇ ಆಗಲಿ, ಗುಂಡು ಪ್ರಕರಣದಿಂದ ಜರ್ಝರಿತವಾಗಿರುವ ಮಗುವನ್ನು ನೋಬೆಲ್ ಮೂಲಕ ಗಲ್ಲಿಗೇರಿಸುವ ಯುದ್ಧದಾಹಿಗಳ ತಂತ್ರವನ್ನು ವಿಫಲಗೊಳಿಸಿದ್ದಕ್ಕಾಗಿ ನಾವೆಲ್ಲ ನೋಬೆಲ್ ಶಾಂತಿ ಪ್ರತಿಷ್ಠಾನಕ್ಕೆ ಕೃತಜ್ಞತೆ ಸಲ್ಲಿಸಬೇಕಾಗಿದೆ. ನೋಬೆಲ್‍ನ ಹಿನ್ನೆಲೆ, ಅದರ ಮೌಲ್ಯ, ಉದ್ದೇಶ, ಇತಿಹಾಸ.. ಮುಂತಾದುವುಗಳನ್ನೆಲ್ಲ ಅರಗಿಸಿಕೊಳ್ಳುವಷ್ಟು ಪ್ರಬುದ್ಧವಲ್ಲದ ಮಗುವಿನ ಕುತ್ತಿಗೆಗೆ ಅದನ್ನು ನೇತು ಹಾಕುವುದರಿಂದ ಮಗು ಶಾಶ್ವತವಾಗಿ ಬಾಡಿ ಹೋಗುವ ಅವಕಾಶ ಖಂಡಿತ ಇತ್ತು. ಆ ಬಳಿಕ ಅಂಥ ಮಗುವನ್ನು ಸಾಕುವ ಔದಾರ್ಯವನ್ನು ಪಾಶ್ಚಾತ್ಯ ಪೋಷಕರು ತೋರ್ಪಡಿಸುವ ಸಾಧ್ಯತೆಯೂ ಇರಲಿಲ್ಲ.ಇದೀಗ ಮಗು ಗೆದ್ದಿದೆ. ಮಾತ್ರವಲ್ಲ, ಆ ಮಗುವನ್ನು ಬಳಸಿಕೊಂಡು ತನ್ನ ಮನುಷ್ಯ ವಿರೋಧಿ ಯೋಜನೆಗಳನ್ನು ಜಾರಿಗೊಳಿಸುತ್ತಿರುವವರ ತಂತ್ರ ತಾತ್ಕಾಲಿಕವಾಗಿ ವಿಫಲವಾಗಿದೆ. ಈ ವೈಫಲ್ಯ ಇನ್ನೂ ಮುಂದುವರಿಯಲಿ ಮತ್ತು ಈ ಮಗು ಇವರ ವಿರುದ್ಧ ಮತ್ತೆ ಮತ್ತೆ ಇಂಥ ಗೆಲುವನ್ನು ದಾಖಲಿಸುತ್ತಲೇ ಇರಲಿ ಎಂದೇ ಹಾರೈಸೋಣ.

Monday 7 October 2013

ನಮ್ಮ ಮುಖವಾಡದ ಬದುಕಿಗೆ ಕೀಟನಾಶಕ ಎಸೆದ ದಂಪತಿಗಳು..

   ಲಿಂಗಪ್ಪ ಗೌಡ ಮತ್ತು ತಿಮ್ಮಕ್ಕ ಎಂಬೆರಡು ಹೆಸರುಗಳು ಮೋದಿ, ರಾಹುಲ್, ಲಾಲೂ, ಸೋನಿಯಾ.. ಮುಂತಾದ ಹೆಸರುಗಳ ಮುಂದೆ ಏನೇನೂ ಅಲ್ಲ ಎಂಬ ಏಕೈಕ ಕಾರಣಕ್ಕಾಗಿ ಈ ಇಬ್ಬರ ದೂರುಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಲಿಂಗಪ್ಪರದು ಸರಿಸುಮಾರು ಮೋದಿಯ ವಯಸ್ಸು - 65. ತಿಮ್ಮಕ್ಕರದು ಸೋನಿಯಾರ ವಯಸ್ಸು - 60. ಈ ಎರಡು ಸಾಮ್ಯತೆಗಳನ್ನು ಬಿಟ್ಟರೆ ಉಳಿದಂತೆ ಮೋದಿ ಮತ್ತು ಸೋನಿಯಾರೊಂದಿಗೆ ಹೋಲಿಸಿಕೊಳ್ಳುವುದಕ್ಕೆ ಈ ಇಬ್ಬರಲ್ಲಿ ಯಾವುದೂ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್‍ರ ಊರಾದ ಸುಳ್ಯದಲ್ಲಿ ವಾಸಿಸುತ್ತಿರುವ ಈ ದಂಪತಿಗಳಿಗೆ ಮಕ್ಕಳಿಲ್ಲ. ಇವರನ್ನು ಯಾವ ಕುಟುಂಬಗಳು ಆರೈಕೆ ಮಾಡಬೇಕಿತ್ತೋ, ಅವೇ ತಿರಸ್ಕರಿಸಿವೆ. ದೊಡ್ಡಿಯಲ್ಲಿ ಕೂಡಿಟ್ಟು, ಉಪವಾಸ ಕೂರಿಸಿವೆ. ಕೊನೆಗೆ ನೆರೆಯವರೊಂದಿಗೆ ಸಾಲ ಪಡೆದು ಕೀಟನಾಶಕ ಖರೀದಿಸಿ ತಂದು, ಸೇವಿಸಿ ಈ ಹಿರಿ ಜೀವಗಳು ಕಳೆದ ವಾರ ಆತ್ಮಹತ್ಯೆಗೆ ಯತ್ನಿಸಿವೆ.
   ನಿಜವಾಗಿ, ಲಿಂಗಪ್ಪ ಮತ್ತು ತಿಮ್ಮಕ್ಕರನ್ನು ಇಬ್ಬರು ವ್ಯಕ್ತಿಗಳಾಗಿಯಷ್ಟೇ ನಾವು ಪರಿಗಣಿಸಬೇಕಾದ್ದಲ್ಲ. ಇವರು ಅಸಂಖ್ಯ ವ್ಯಕ್ತಿಗಳ ಎರಡು ಜೀವಂತ ಪ್ರತಿನಿಧಿಗಳು ಮಾತ್ರ. ಇವರ ದೌರ್ಬಲ್ಯ ಯಾವುದೆಂದರೆ ಪ್ರಾಯ. ಹಾಗಂತ, ಪ್ರಾಯ ಎಂಬುದು ಕೆಲವೇ ಕೆಲವು ನಿರ್ದಿಷ್ಟ ಜಾತಿ, ಧರ್ಮ, ಭಾಷೆಯ ಮಂದಿಯನ್ನು ಹುಡುಕಿಕೊಂಡು ಬರುವ ಕಾಯಿಲೆ ಏನಲ್ಲ. ಮುಪ್ಪು ಎಂಬುದು ಬದುಕಿನ ಸಹಜ ಪ್ರಕ್ರಿಯೆ. ವೃದ್ಧರಿಗೆ ಹಿಂಸೆ ಕೊಡುವವರು ಒಂದು ಕಾಲದಲ್ಲಿ ಖಂಡಿತ ವೃದ್ಧಾಪ್ಯಕ್ಕೆ ತಲುಪುತ್ತಾರೆ. ಇವು ಅವರಿಗೂ ಗೊತ್ತು. ಹಾಗಿದ್ದೂ ನಮ್ಮ ನಡುವಿನ ಈ ‘ಅನುಭವಿಗಳನ್ನು' ಆತ್ಮಹತ್ಯೆಗೆ ಪ್ರಚೋದಿಸುವಷ್ಟು ನಾವು ಕ್ರೂರರಾಗುತ್ತೇವಲ್ಲ, ಯಾಕೆ? ಯಾವುದು ನಮ್ಮನ್ನು ಇಂಥ ವರ್ತನೆಗೆ ಪ್ರೇರೇಪಿಸುತ್ತಿವೆ? ಆಧುನಿಕತೆಯೇ, ಓದೇ, ಜೀವನ ಕ್ರಮಗಳೇ..? ಇಷ್ಟಕ್ಕೂ, ಲಿಂಗಪ್ಪರನ್ನೋ ತಿಮ್ಮಕ್ಕರನ್ನೋ ಎತ್ತಿಕೊಂಡು ಗಂಭೀರ ಚರ್ಚೆಯೊಂದು ಆರಂಭವಾಗುವಂತಹ ವಾತಾವರಣ ನಮ್ಮ ಸುತ್ತ-ಮುತ್ತ ಇವತ್ತು ಕಾಣಿಸುತ್ತಾ ಇಲ್ಲ. ಯಾಕೆಂದರೆ, ವೃದ್ಧರಿಗೆ ಪ್ರತಿಭಟನೆ ಮಾಡುವಷ್ಟು ಆರೋಗ್ಯ ಇಲ್ಲ. ಪತ್ರಿಕಾಗೋಷ್ಠಿ ಕರೆಯುವ ಸಾಮರ್ಥ್ಯ  ಇಲ್ಲ. ತಮ್ಮಂತೆ ಸಂಕಟಪಡುವ ವೃದ್ಧರನ್ನೆಲ್ಲಾ ಒಟ್ಟು ಸೇರಿಸುವ ಸಂಪರ್ಕ ಜಾಲವೂ ಅವರಲ್ಲಿಲ್ಲ. ಒಂದು ವೇಳೆ, ಇಂಥ ಸಾಮರ್ಥ್ಯ ಬಂದರೂ ಅವರು ಪ್ರತಿಭಟಿಸುವುದಾದರೂ ಯಾರ ವಿರುದ್ಧ? ಮಕ್ಕಳು ಎಷ್ಟೇ ಹಿಂಸೆ ಕೊಟ್ಟರೂ ಅವರನ್ನು ಸಾರ್ವಜನಿಕವಾಗಿ ದೂರಿಕೊಳ್ಳುವುದಕ್ಕೆ ಯಾವ ಹೆತ್ತವರು ಇಷ್ಟಪಡುತ್ತಾರೆ? ತಮ್ಮ ಮಕ್ಕಳು ಸಮಾಜದಲ್ಲಿ ಸದಾ ಘನತೆಯಿಂದ ಬಾಳಬೇಕೆಂಬುದನ್ನು ಬಯಸಿಯೇ ಅವರು ಹಗಲಿರುಳು ದುಡಿದಿರುತ್ತಾರಲ್ಲವೇ? ಇಂಥವರು ವೃದ್ಧಾಪ್ಯಕ್ಕೆ ತಲುಪಿದ ಕೂಡಲೇ ನಮಗೆ ‘ಅನಗತ್ಯ'ವಾಗಿ ಕಾಣಿಸುವುದು ಯಾವ ಮನಸ್ಥಿತಿ? ‘ನಿರ್ಭಯ'ಳ ಪರವಾಗಿ ವಾರಗಟ್ಟಲೆ ಪ್ರತಿಭಟನೆ ಮಾಡುವ ನಾವು ಲಿಂಗಪ್ಪರನ್ನು ಸೃಷ್ಟಿಸುವ ಮನಸ್ಥಿತಿಯ ವಿರುದ್ಧವೇಕೆ ಗಂಭೀರವಾಗಿ ಧ್ವನಿಯೆತ್ತುತ್ತಿಲ್ಲ? ನಿಜವಾಗಿ, ಅತ್ಯಾಚಾರದ ವಿರುದ್ಧ ವೇದಿಕೆಯೇರಿಯೋ ಪತ್ರಿಕೆಗಳಲ್ಲಿ ಬರೆದೋ ಆಕ್ರೋಶ ವ್ಯಕ್ತಪಡಿಸುವುದು ಸುಲಭ. ಅತ್ಯಾಚಾರವೆಂಬುದು ಇವತ್ತು ಪಾರ್ಲಿಮೆಂಟಿನಿಂದ ಹಿಡಿದು ಕ್ಲಾಸ್‍ರೂಮ್‍ಗಳ ವರೆಗೆ ಭಾರೀ ಬೆಲೆಬಾಳುವ ವಿಷಯ. ದೇಶದ ಯಾವುದಾದರೊಂದು ಮೂಲೆಯಲ್ಲಿ ಅದರ ವಿರುದ್ಧ ಪ್ರತಿದಿನವೆಂಬಂತೆ ಪ್ರತಿಭಟನೆಗಳಾಗುತ್ತಲೇ ಇವೆ. ಆದರೆ ಔಷಧಗಳಿಂದ ದಿನದೂಡುತ್ತಿರುವ ಮತ್ತು ದೈಹಿಕ ಆಕರ್ಷಣೆ ಕಳಕೊಂಡಿರುವ ಒಂದು ಬೃಹತ್ ವರ್ಗ ಅತ್ಯಾಚಾರಕ್ಕೆ (ಆಚಾರವನ್ನು ವಿೂರಿದ ನಡವಳಿಕೆ) ಒಳಗಾಗುತ್ತಿದ್ದರೂ ಅವರನ್ನು ರಾಜಕೀಯ ವಾಗಿಯೋ ಶೈಕ್ಷಣಿಕವಾಗಿಯೋ ಯಾರೂ ಪ್ರತಿನಿಧಿಸುತ್ತಿಲ್ಲ. ಅವರ ಸಂಕಟಗಳು ಮನೆಯ ನಾಲ್ಕು ಗೋಡೆಗಳಿಂದ ಹೊರಗೆ ಒಂದು ಇಶ್ಶೂವಾಗಿ ಗುರುತಿಸಿಕೊಳ್ಳುತ್ತಲೂ ಇಲ್ಲ. ಅವರು ಲಿಂಗಪ್ಪರಂತೆ ಏನಾದರೂ ಎಡವಟ್ಟು ಮಾಡಿಕೊಂಡರೂ ಅದು ಆಯಾ ಊರಿನ ಒಂದು ದಿನದ ಸುದ್ದಿಯಾಗಿ ಬಿಡುತ್ತದೆಯೇ ಹೊರತು ಸರ್ವ ಊರಿನ ಬಹುದಿನಗಳ ಇಶ್ಶೂವಾಗಿ ಬದಲಾಗುವುದಿಲ್ಲ.
   ಹಿರಿಯರನ್ನು ಆತ್ಮಹತ್ಯೆಗೆ ದೂಡುವಷ್ಟು ಒಂದು ಸಮಾಜದಲ್ಲಿ ನೈತಿಕ ಮೌಲ್ಯ ಕುಸಿದಿದೆಯೆಂಬುದು ಖಂಡಿತ ಆಘಾತಕಾರಿಯಾದದ್ದು. ಹಿರಿಯರು ಯುವ ಸಮೂಹದಂತೆ ಅಲ್ಲ. ಅವರಲ್ಲಿ ಅನುಭವದ ಕಣಜವೇ ಇರುತ್ತದೆ. ಆದ್ದರಿಂದಲೇ, ಪುಟ್ಟದೊಂದು ಸಮಸ್ಯೆ ಎದುರಾದರೂ ಹಿಂದು-ಮುಂದು ನೋಡದೇ ಆತ್ಮಹತ್ಯೆಗೆ ಯತ್ನಿಸುವ ಯುವ ಸಮೂಹದೊಂದಿಗೆ ಲಿಂಗಪ್ಪರ ಆತ್ಮಹತ್ಯೆಯನ್ನು ಹೋಲಿಸುವಂತಿಲ್ಲ. ನಿಜವಾಗಿ, ಹಿರಿಯರ ಜಗತ್ತಿನಿಂದ ಬರುವ ದೂರುಗಳು ಹೆಚ್ಚು ತೂಕದ್ದಾಗಿ ಕಾಣಿಸುವುದು ಈ ಕಾರಣದಿಂದಲೇ. ಅತ್ಯಾಚಾರಕ್ಕೆ ಕಾರಣವಾಗಿರುವ ವಿವಿಧ ಮಗ್ಗುಲುಗಳ ಬಗ್ಗೆ ನಾವು ಹೇಗೆ ಚರ್ಚಿಸುತ್ತೇವೆಯೋ ಅದೇ ರೀತಿಯಲ್ಲಿ ಹಿರಿಯರ ಸಮಸ್ಯೆಗಳು ಮತ್ತು ಅದರ ಪರಿಹಾರಗಳ ಸುತ್ತ ಚರ್ಚಿಸುವ ಅಗತ್ಯ ಇದೆ. ಹಿರಿಯರೆಂದರೆ, ಕೀಟನಾಶ ಸೇವಿಸಿಯೋ ಭಿಕ್ಷೆ ಬೇಡಿಯೋ ಗಮನ ಸೆಳೆಯಬೇಕಾದ ವ್ಯಕ್ತಿತ್ವಗಳಲ್ಲ. ಅವರು ಮನೆಯ ಕಿರೀಟಗಳು. ಆ ಕಿರೀಟಗಳನ್ನು ಅನಗತ್ಯವೆಂದು ಸಾರಿ ಬೀದಿಗೆ ಅಟ್ಟುವವರು ನಿಜವಾಗಿ ಕಿರೀಟದ ಮಹತ್ವ ಅರಿಯದವರಾಗಿದ್ದಾರೆ. ಅಂಥವರಿಗೆ ಹಿರಿಯರೆಂಬ ಕಿರೀಟದ ಮೌಲ್ಯವನ್ನು ಮತ್ತೆ ಮತ್ತೆ ಮನವರಿಕೆ ಮಾಡಿಸುತ್ತಲೇ ಇರಬೇಕಾದ ಹೊಣೆಗಾರಿಕೆ-ಅತ್ಯಾಚಾರ, ಮೋದಿ, ರಾಹುಲ್, ಲಾಲೂ.. ಎಂದೆಲ್ಲಾ ದಿನವಿಡೀ ಸಮಯ ಕಳೆಯವ ನಮ್ಮೆಲ್ಲರ ಮೇಲಿದೆ. ವೃದ್ಧರಾದ ಹೆತ್ತವರ ಬಗ್ಗೆ ಛೆ ಎಂಬ ಪದ ಕೂಡ ಬಳಸಬಾರದು ಎಂದು ಪವಿತ್ರ ಕುರ್‍ಆನ್ (17:23) ಎಚ್ಚರಿಸಿದೆ. ಹೆತ್ತವರ ಕೋಪಕ್ಕೆ ಗುರಿಯಾದ ಮಕ್ಕಳು ಎಷ್ಟೇ ಧರ್ಮಿಷ್ಟರಾಗಿದ್ದರೂ ಸ್ವರ್ಗ ಪ್ರವೇಶಿಸುವುದಿಲ್ಲ' ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. 
   ವೃದ್ಧಾಶ್ರಮಗಳು ಜನಪ್ರಿಯತೆ ಗಳಿಸುತ್ತಿರುವ ಇಂದಿನ ದಿನಗಳಲ್ಲಿ ಹಿರಿಯರು ದಿನೇ ದಿನೇ ಗೌರವ ಕಳಕೊಳ್ಳತೊಡಗಿದ್ದಾರೆ. ಅವರನ್ನು ‘ಭಾರ'ವಾಗಿ ನೋಡುವ ಆಧುನಿಕ ಪೀಳಿಗೆಗಳು ಬೆಳೆದು ಬರುತ್ತಿವೆ. ಇಂಥ ಹೊತ್ತಲ್ಲಿ, ಲಿಂಗಪ್ಪ ಮತ್ತು ತಿಮ್ಮಕ್ಕ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಆತ್ಮಹತ್ಯೆಯನ್ನು ಇಬ್ಬರು ಕೈಲಾಗದವರ ದಡ್ಡ ಪ್ರಯತ್ನ ಎಂದು ನಾವು ತಳ್ಳಿ ಹಾಕದೇ ನಮ್ಮ ಮೌಲ್ಯ ವಿರೋಧಿ ಮುಖವಾಡದ ಬದುಕಿಗೆ ಅವರು ಸಲ್ಲಿಸಿದ ಪ್ರತಿಭಟನೆ ಎಂದೇ ಪರಿಗಣಿಸಬೇಕಾಗಿದೆ. ಮಾತ್ರವಲ್ಲ, ನಮ್ಮ ನಮ್ಮ ಮನೆಯಲ್ಲಿರುವ ಹಿರಿಯರನ್ನು ಗೌರವಿಸಿ, ಆರೈಕೆ ಮಾಡುವ ಮೂಲಕ ಈ ಪ್ರತಿಭಟನೆಗೆ ಉತ್ತರವನ್ನು ನೀಡಬೇಕಾಗಿದೆ.

Thursday 26 September 2013

ಪದ್ಮಲತಾರನ್ನು ಪ್ರೀತಿಸುವ ಚಂದ್ರಶೇಖರ್ ಗಳು ಹೆಚ್ಚಾಗಲಿ

‘ಪತಿ-ಪತ್ನಿ’ ಎಂಬ ಪದಗುಚ್ಛದಲ್ಲಿ ಇರುವ ಅಕ್ಷರಗಳು ನಾಲ್ಕೇ ಆದರೂ ಅದು ಪ್ರತಿನಿಧಿಸುವ ಮೌಲ್ಯಗಳು 4 ಸಾವಿರ ಅಕ್ಷರಗಳನ್ನೂ ವಿೂರಿಸುವಂಥದ್ದು. ಯುವಕನೋರ್ವ ಪತಿ ಆಗುವುದು ಮತ್ತು ಯುವತಿ ಪತ್ನಿ ಆಗುವುದೆಲ್ಲ ಸಿನಿಮಾವೊಂದರ ಪಾತ್ರದಷ್ಟು ಸರಳ ಅಲ್ಲ. ಅದೊಂದು ಕರಾರು. ಸಿನಿಮಾದ ಅವಧಿಯೇ ಎರಡೋ ಮೂರೋ ಗಂಟೆಗಳು. ಆ ಅವಧಿಗಷ್ಟೇ ಪತಿ-ಪತ್ನಿ ಪಾತ್ರಧಾರಿಗಳು ತಮ್ಮನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ಅವಧಿ ಮುಗಿದ ಬಳಿಕ ಅವರು ಅದಾಗಿರುವುದಿಲ್ಲ. ಸಿನಿಮಾದಲ್ಲಿ ‘ಮೇಡ್ ಫಾರ್ ಈಚ್ ಅದರ್’ ಎಂಬಂತೆ ಕಂಡಿದ್ದರೂ ಹೊರಗೆ ಅವರು ಜಗಳಾಡಬಹುದು. ಪರಸ್ಪರರ ಕಾಲೆಳೆಯಬಹುದು. ಒಬ್ಬರ ಬೆಳವಣಿಗೆಯನ್ನು ತಡೆಯಲು ಇನ್ನೊಬ್ಬರು ಪ್ರಯತ್ನಿಸಬಹುದು. ಅಲ್ಲದೇ, ಸಿನಿಮಾದಲ್ಲಿ ಪತಿ-ಪತ್ನಿಯಾಗಿ ಅಭಿನಯಿಸಿದ ಹೀರೋ ಹೀರೋಯಿನ್‍ಗಳು ನಿಜ ಬದುಕಿನಲ್ಲೂ ಅದಾಗಲು ತೀರ್ಮಾನಿಸಿ, ಕೊನೆಗೆ ಸಂಬಂಧವನ್ನೇ ಮುರಿದುಕೊಂಡ ಸುದ್ದಿಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಯಾಕೆಂದರೆ, ದಾಂಪತ್ಯ ಎಂಬುದು ಸಿನಿಮಾದಂತೆ ಅಲ್ಲ. ಅದರಲ್ಲಿ ಕೆಲವು ಮೌಲ್ಯಗಳಿವೆ. ಆ ಮೌಲ್ಯಗಳೆಲ್ಲ ಅವಧಿ ರಹಿತವಾದದ್ದು. ಆದರೆ, ಪತಿ-ಪತ್ನಿಯರಾಗಲು ಯಾವಾಗ ಸೌಂದರ್ಯ ಮಾನದಂಡ ಆಗುತ್ತದೋ ಆಗ ನಿಜ ಬದುಕು ಕೂಡಾ ಸಿನಿಮಾ ಆಗುತ್ತದೆ. ಸಿನಿಮಾದಂತೆ ನಿರ್ದಿಷ್ಟ ಅವಧಿವರೆಗೆ ಮಾತ್ರ ಅದು ಬಾಳುತ್ತದೆ. ಕಳೆದ ವಾರ ಸುಪ್ರೀಮ್ ಕೋರ್ಟಿನ ಮುಂದೆ ಬಂದ ಪ್ರಕರಣವೊಂದು ದಾಂಪತ್ಯದ ಪಾವಿತ್ರ್ಯತೆಯ ಕುರಿತಂತೆ ಹತ್ತು-ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಓರ್ವರು ತನ್ನ ಪತ್ನಿಯನ್ನು ಯಾವೆಲ್ಲ ಕಾರಣಕ್ಕಾಗಿ ಪ್ರೀತಿಸಬೇಕು ಅಥವಾ ಕೈಬಿಡಬೇಕು ಎಂಬೆಲ್ಲ ಪ್ರಶ್ನೆಗಳಿಗೆ ಅವಕಾಶ ಒದಗಿಸಿದೆ.
 ಆಂಧ್ರ ಪ್ರದೇಶದ ಕಾಕಿನಾಡದ ಡಾ| ಕೊಲ್ಲಂ ಚಂದ್ರಶೇಖರ್ ಎಂಬವರು ತಮ್ಮ ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಸ್ಕಿಝೋಪ್ರೇನಿಯಾ (ಮಾನಸಿಕ ಕಾಯಿಲೆ) ರೋಗದಿಂದ ಪತ್ನಿ ಕೊಲ್ಲಂ ಪದ್ಮಲತಾ ಬಳಲುತ್ತಿದ್ದು, ಅವರಿಂದ ತನಗೆ ವಿಚ್ಛೇದನ ಕೊಡಿಸಿ ಅಂದಿದ್ದರು. ನಿಜವಾಗಿ ಸ್ಕಿಝೋಪ್ರೇನಿಯಾ ಎಂಬುದು ಗುಣವಾಗದ ಕಾಯಿಲೆ ಅಲ್ಲ. ‘ಒಂದು ಮಗು ಇರುವ ನೀವು ಈ ಕಾರಣವನ್ನು ಮುಂದಿಟ್ಟು ವಿಚ್ಛೇದನ ಕೋರುತ್ತೀರಲ್ಲ, ನಿಮ್ಮ ಮನಃಸಾಕ್ಷಿ ಒಪ್ಪುತ್ತಾ..?’ ಅಂತ ನ್ಯಾಯಮೂರ್ತಿ ಸಿಂಘ್ವಿ ಮತ್ತು ಗೋಪಾಲ ಗೌಡರನ್ನೊಳಗೊಂಡ ನ್ಯಾಯಪೀಠ ಕಳೆದವಾರಅವರನ್ನು ಪ್ರಶ್ನಿಸಿತು.
 ನಿಜವಾಗಿ, ದಾಂಪತ್ಯವೆಂಬುದು ಒಂದು ರೋಗಕ್ಕೆ ಕುಸಿದು ಬೀಳುವಷ್ಟು ದುರ್ಬಲ ಆಗಬಾರದು. ಜಗತ್ತಿನಲ್ಲಿ ಎರಡು ಅಪರಿಚಿತ ಕುಟುಂಬಗಳು ತಮ್ಮ ಮಕ್ಕಳ ಕಾರಣಕ್ಕಾಗಿ ಹತ್ತಿರ ಆಗುವುದು ಮತ್ತು ಬಿಟ್ಟಿರಲಾರದಂಥ ವಿಶ್ವಾಸ ಬೆಳೆಸಿಕೊಳ್ಳುವುದಕ್ಕೆ ಅವಕಾಶ ಇದ್ದರೆ ಅದು ದಾಂಪತ್ಯದಲ್ಲಿ ಮಾತ್ರ. ಅದು ಕುಟುಂಬದ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ತಮಗೆ ಸಂಬಂಧವೇ ಇಲ್ಲದವರನ್ನು ಆಪ್ತರನ್ನಾಗಿ ಮಾರ್ಪಡಿಸುತ್ತದೆ. ಹೀಗಿರುವಾಗ, ಇಂಥ ಸಂಬಂಧವೊಂದನ್ನು ಬೆಳೆಸುವುದಕ್ಕೆ ಮಾನದಂಡವಾಗಬೇಕಾದದ್ದು ಯಾವುದು? ಸೌಂದರ್ಯವೋ, ಸಂಪತ್ತೋ, ಹುದ್ದೆಯೋ? ‘ಚಾರಿತ್ರ್ಯವೇ ಈ ಸಂಬಂಧದ ಮಾನದಂಡ ಆಗಿರಲಿ’ ಎಂದು ಪ್ರವಾದಿ ಮುಹಮ್ಮದ್(ಸ) ಹೇಳಿದ್ದಾರೆ. ದುರಂತ ಏನೆಂದರೆ, ಚಾರಿತ್ರ್ಯದ ಹೊರತಾದ ಎಲ್ಲವೂ ಇವತ್ತು ದಾಂಪತ್ಯ ಸಂಬಂಧ ಕುದುರಿಸುವುದಕ್ಕೆ ಮಾನದಂಡ ಆಗುತ್ತಿದೆ. ಹೆಣ್ಣಿನ ಸೌಂದರ್ಯ, ದುಡ್ಡು, ಹುದ್ದೆಯನ್ನು ನೋಡಿಕೊಂಡು ಪ್ರಪೋಸಲ್  ಕಳುಹಿಸುವ ಮತ್ತು ಒಪ್ಪಿಕೊಳ್ಳುವ ಸಂದರ್ಭಗಳೇ ಅಧಿಕವಾಗುತ್ತಿವೆ. ಇಂಥ ವಾತಾವರಣದಲ್ಲಿ ಪದ್ಮಲತಾ ‘ಅನಗತ್ಯ’ ಆಗುವುದರಲ್ಲಿ ಅಚ್ಚರಿ ಏನಿದೆ?
 ಅಂದಹಾಗೆ, ಚಂದ್ರಶೇಖರ್ ಎಂಬುದು ಓರ್ವ ವ್ಯಕ್ತಿಯ ಹೆಸರಲ್ಲ. ಅದೊಂದು ಮನಸ್ಥಿತಿ. ಆಧುನಿಕ ಜೀವನ ಕ್ರಮಗಳು ಇಂಥ ಅಸಂಖ್ಯ ಚಂದ್ರಶೇಖರ್‍ರನ್ನು ಪ್ರತಿನಿತ್ಯ ಬೆಳೆಸುತ್ತಿವೆ. ಅವರು ಎಲ್ಲೆಲ್ಲೋ ಬೆಳೆಯುತ್ತಿಲ್ಲ. ನಮ್ಮ ನಮ್ಮ ಮನೆಯಲ್ಲಿ, ನೆರೆಯಲ್ಲಿ, ಪಕ್ಕದಲ್ಲೇ ಬೆಳೆಯುತ್ತಿದ್ದಾರೆ. ಅವರ ಪಾಲಿಗೆ ಪದ್ಮಲತಾ ಒಂದು ಸೌಂದರ್ಯ ಮಾತ್ರ. ಸೌಂದರ್ಯ ಇಲ್ಲದ ಪದ್ಮಲತಾರನ್ನು ಇಷ್ಟಪಡುವುದಕ್ಕೆ ಈ ಜಗತ್ತು ಅವರಿಗೆ ಇವತ್ತು ಕಲಿಸಿಕೊಡುತ್ತಿಲ್ಲ. ಸಿನಿಮಾ, ಟಿ.ವಿ. ಜಾಹೀರಾತುಗಳಲ್ಲಿ ಬರುವ ಹೆಣ್ಣು ಮಕ್ಕಳಿಗೆ ಆಧುನಿಕ ಜಗತ್ತು ಕೆಲವು ವಿಶೇಷ ಅರ್ಹತೆಗಳನ್ನು ನಿಗದಿಪಡಿಸಿದೆ. ನಿರ್ದಿಷ್ಟ ಚರ್ಮ, ಕಣ್ಣು, ನಗು, ಸುತ್ತಳತೆಯನ್ನು ಸೌಂದರ್ಯದ ಮಾನದಂಡವಾಗಿ ಮತ್ತು ಪುರುಷ ಇಷ್ಟಪಡುವುದಕ್ಕೆ ಬೇಕಾದ ಅರ್ಹತೆಗಳಾಗಿ ಹೇಳಿಕೊಟ್ಟು, ಇವು ಹೊಂದಿರುವ ಹೆಣ್ಣು ಮಾತ್ರ ಬದುಕನ್ನು ನೆಮ್ಮದಿಯಾಗಿಡಬಹುದು ಎಂಬ ಭ್ರಮೆಯನ್ನು ಹರಡುತ್ತಿದೆ. ಈ ಭ್ರಮೆಯ ಹಿಂದೆ ಅಸಂಖ್ಯ ‘ಚಂದ್ರಶೇಖರ್’ಗಳು ಇವತ್ತು ಸುತ್ತುತ್ತಿದ್ದಾರೆ. ಒಂದು ಕಡೆ ಸೌಂದರ್ಯವನ್ನು ಆರಾಧಿಸುತ್ತಿರುವ ಜಗತ್ತು, ಇನ್ನೊಂದು ಕಡೆ ಸ್ವಚ್ಛಂದತೆಯನ್ನು ಬದುಕಿನ ಸಹಜ ಭಾಗವಾಗಿ ಪ್ರತಿಪಾದಿಸುತ್ತಿರುವ ಮಾಧ್ಯಮಗಳು-ಇವೆರಡರ ಮಧ್ಯೆ 'ಚಂದ್ರಶೇಖರ್‍ಗಳು' ಹೇಗೇಗೋ ಬದುಕುತ್ತಿದ್ದಾರೆ. ಅತ್ಯಾಚಾರಗಳು, ಲೈಂಗಿಕ ಪೀಡನೆಗಳು, ವಿಚ್ಛೇದನಗಳ ಹಿಂದೆ ಈ ಮನಸ್ಥಿತಿಯ ಪ್ರಭಾವ ಧಾರಾಳ ಇದೆ. ಇಲ್ಲದಿದ್ದರೆ, ತನ್ನ ಹಾಸಿಗೆಯನ್ನು ಹಂಚಿಕೊಳ್ಳುವ, ತನಗಾಗಿ ಕಾಯುವ; ಮಕ್ಕಳ ಪಾಲನೆ, ಮನೆ ನಿರ್ವಹಣೆಯೆಂದೆಲ್ಲಾ ದಣಿವರಿಯದೇ ಕೆಲಸ ಮಾಡುವ ಪತ್ನಿಯನ್ನು ಕಾಯಿಲೆಯ ಕಾರಣಕ್ಕಾಗಿ ಕೈ ಬಿಡುವುದೆಂದರೇನು? ಕಾಯಿಲೆ ಎಂಬುದು ಅರ್ಜಿ ಹಾಕಿ ಪಡಕೊಳ್ಳುವಂಥದ್ದಲ್ಲವಲ್ಲ. ಯಾರನ್ನೂ ಯಾವ ಸಂದರ್ಭದಲ್ಲೂ ಕಾಯಿಲೆ ಕಾಡಬಹುದು. ಹಾಗಂತ ಕಾಯಿಲೆಗೆ ಮದ್ದು ಮಾಡದೇ ಸಂಗಾತಿಯನ್ನೇ ಕೈ ಬಿಡುವುದು ಯಾವ ಮನಸ್ಥಿತಿ?
   ಪತಿ-ಪತ್ನಿ ಪರಸ್ಪರ ಉಡುಪಾಗಿದ್ದಾರೆ ಎಂದು  ಸಾರಿದ ಪವಿತ್ರ ಕುರ್‍ಆನ್ (2: 187), ವಿಚ್ಚೇದನವು ದೇವನಿಗೆ ಅತ್ಯಂತ ಅಪ್ರಿಯವಾಗಿದೆ ಎಂದೂ  ಹೇಳಿದೆ.  ಉಡುಪಿಗೆ ನಮ್ಮ ದೇಹದೊಂದಿಗೆ ಎಷ್ಟು ಹತ್ತಿರದ ಬಾಂಧವ್ಯ ಇದೆಯೋ ಅಷ್ಟೇ ನಿಕಟ ಸಂಬಂಧ ದಂಪತಿಗಳ ಮಧ್ಯೆ ಇರಬೇಕು. ಉಡುಪಿನಲ್ಲಿ ಪುಟ್ಟ ಕೊಳೆ ಆದರೆ ನಾವು ಅದನ್ನು ತೊಳೆಯಲು ಪ್ರಯತ್ನಿಸುತ್ತೇವೆಯೇ ಹೊರತು ಹರಿಯಲಲ್ಲ. ರೋಗ ಎಂಬುದು ಇಂಥದ್ದೇ ಒಂದು ಕೊಳೆ. ಅದನ್ನು ತೊಳೆದರೆ ಬಟ್ಟೆ ಇನ್ನಷ್ಟು ಶುಭ್ರವಾಗುತ್ತದೆ. ಅಲ್ಲದೇ, ಸೌಂದರ್ಯ, ದುಡ್ಡು, ಸುತ್ತಳತೆಗಳೆಂಬ ಅನೇಕಾರು ಆಧುನಿಕ ಕೊಳೆಗಳೂ ಎಲ್ಲರ ಮನಸ್ಸಿನೊಳಗೂ ಇವತ್ತು ಸೇರಿಕೊಳ್ಳುತ್ತಿವೆ. ಅವುಗಳನ್ನು ತೊಳೆದು ಮನಸ್ಸನ್ನು ಶುಭ್ರಗೊಳಿಸಿದರೆ ವರದಕ್ಷಿಣೆ ತರದ ಹೆಣ್ಣೂ ಇಷ್ಟವಾಗಬಲ್ಲಳು. ಕಾಯಿಲೆ ಪೀಡಿತ ಪದ್ಮಲತಾರೂ ‘ಅಗತ್ಯವಾಗಿ’ ಕಾಣಿಸಬಲ್ಲರು. ಆದ್ದರಿಂದ 'ಚಂದ್ರಶೇಖರ್‍ಗಳ' ಸಂಖ್ಯೆ ಹೆಚ್ಚಳಗೊಳ್ಳದಂತೆ ಸಮಾಜದಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಕಾಯಿಲೆ ಇಲ್ಲದ ಪದ್ಮಲತಾರಿಗಿಂತ ಕಾಯಿಲೆ ಪೀಡಿತ ಪದ್ಮಲತಾರನ್ನು ಹೆಚ್ಚು ಪ್ರೀತಿಸುವ, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುವ ಪತಿಯಂದಿರನ್ನು ಸಮಾಜದಲ್ಲಿ ತಯಾರಿಸಬೇಕಾಗಿದೆ. ಇಲ್ಲದಿದ್ದರೆ ದಾಂಪತ್ಯ ಎಂಬುದು 'ರುಚಿ' ಇರುವ ವರೆಗೆ ಮಾತ್ರ ಚಾಲ್ತಿಯಲ್ಲಿರುವ ಮಾರುಕಟ್ಟೆ ವಸ್ತುವಾಗಿ ಮಾರ್ಪಟ್ಟೀತು.

Monday 23 September 2013

ಕಾಂಕ್ರೀಟು ಕಟ್ಟಡಗಳಿಂದ ಹೊರಬೀಳುತ್ತಿರುವ ಬ್ರೇಕಿಂಗ್ ನ್ಯೂಸ್ ಗಳು

   ಯುವತಿ ನಾಪತ್ತೆ, ಯುವಕ ಆತ್ಮಹತ್ಯೆ, ನವವಿವಾಹಿತೆ ಪರಾರಿ, ಪತ್ನಿಯ ಕೊಲೆ, ಬೀದಿ ಪಾಲಾದ ಹೆತ್ತವರು.. ಮುಂತಾದ ಶೀರ್ಷಿಕೆಗಳಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗುವ ಸುದ್ದಿಗಳ ದೌರ್ಬಲ್ಯ ಏನೆಂದರೆ, ಇಂಥವರಿಗೆ ನರೇಂದ್ರ ಮೋದಿ, ಕರೀನಾ ಕಪೂರ್, ತೆಂಡುಲ್ಕರ್, ವಿಜಯ್.. ಮುಂತಾದ ಹೆಸರುಗಳಿಲ್ಲ ಅನ್ನುವುದು. ನರೇಂದ್ರ ಮೋದಿ ಕೈ ಬೀಸಿದರೂ ಮಾಧ್ಯಮಗಳು ಮುಖಪುಟದಲ್ಲಿ ಬರೆಯುತ್ತವೆ. ಪತ್ನಿಯೊಂದಿಗೆ ವಿಜಯ್ ಜಗಳಾಡಿದುದನ್ನು ವಾರಗಟ್ಟಲೆ ಟಿ.ವಿ. ಮಾಧ್ಯಮಗಳು ಚರ್ಚಿಸುತ್ತವೆ. ದೇವೇಗೌಡರ ನಿದ್ದೆ, ಯಡಿಯೂರಪ್ಪರ ಜಾಗಿಂಗ್, ಸೆಲೆಬ್ರಿಟಿಗಳ ಗಾಸಿಪ್‍ಗಳನ್ನೆಲ್ಲ ಮಾಧ್ಯಮಗಳು ಮುಖಪುಟದಲ್ಲಿಟ್ಟು ಗೌರವಿಸುತ್ತವೆ. ಹಾಗಂತ, ಈ ನಿದ್ದೆ, ಜಾಗಿಂಗ್, ಕೈ ಬೀಸುವಿಕೆಗಿಂತ ‘ಆತ್ಮಹತ್ಯೆ’ಯು ಕಡಿಮೆ ಮಹತ್ವದ್ದು ಎಂದಲ್ಲ. ಆದರೆ ಆತ್ಮಹತ್ಯೆ ಎಂಬುದು ಮಾಮೂಲಿ ಘಟನೆಯಾಗಿರುವಾಗ ಅದನ್ನು ಪ್ರತಿದಿನ ಪತ್ರಿಕೆಗಳು ಮುಖಪುಟದಲ್ಲಿಟ್ಟು ಕೊಟ್ಟರೆ ಏನು ಆಕರ್ಷಣೆಯಿದೆ, ಕೌಟುಂಬಿಕ ನೆಲೆಗಟ್ಟು ಕುಸಿದು ಹೋಗಿರುವ ಇಂದಿನ ದಿನಗಳಲ್ಲಿ ಯುವತಿ ಪರಾರಿಯಾಗಿರುವುದನ್ನು ಬ್ರೇಕಿಂಗ್ ನ್ಯೂಸ್ ಆಗಿಸಿದರೆ ಯಾರು ಓದುತ್ತಾರೆ.. ಅನ್ನುವ ವಾತಾವರಣವು ಮಾಧ್ಯಮ ಕಚೇರಿಗಳಿಂದ ಹಿಡಿದು ಸಾರ್ವಜನಿಕವಾಗಿಯೂ ನೆಲೆಗೊಂಡಿದೆ.
   ಇವತ್ತು, ನರೇಂದ್ರ ಮೋದಿಯವರು ಪ್ರಧಾನಿ ಪದಕ್ಕೆ ಅರ್ಹರೋ ಅಲ್ಲವೋ ಅನ್ನುವ ಚರ್ಚೆಯೊಂದು ದೇಶಾದ್ಯಂತ ಚಾಲ್ತಿಯಲ್ಲಿದೆ. ಅವರ ಭಾಷಣ, ಭಾಷೆ, ಮ್ಯಾನರಿಸಂ.. ಎಲ್ಲವೂ ಸುದ್ದಿ ಮಾಧ್ಯಮಗಳ ಪ್ರಮುಖ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ. ‘ನನಗೆ ದೇಶ ಪ್ರಥಮ’ ಎಂದು ಹೇಳುವ ನರೇಂದ್ರ ಮೋದಿ ಮತ್ತು ಅವರ ದೇಶದಲ್ಲಿ ಟಾಟಾ, ಬಿರ್ಲಾ, ಅಂಬಾನಿ, ಅದಾನಿ ಮುಂತಾದ ಬೃಹತ್ ಕಾರ್ಪೊರೇಟ್‍ಗಳಿಗೆ ಮಾತ್ರ ಜಾಗ ಇರುತ್ತದೆ ಎಂದು ಹೇಳುವ ವಿರೋಧಿಗಳು ಮಾಧ್ಯಮಗಳನ್ನಿಡೀ ಆವರಿಸಿಕೊಂಡಿದ್ದಾರೆ. ಮೋದಿ ಎಂದಲ್ಲ, ಮಾಧ್ಯಮಗಳ ಮುಖಪುಟದಲ್ಲೋ ಪ್ರಮುಖ ಪುಟಗಳಲ್ಲೋ ಪ್ರಕಟವಾಗುವ ಎಷ್ಟು ಸುದ್ದಿಗಳು ಸಾಮಾಜಿಕ ನೆಲೆಗಟ್ಟನ್ನು ಪ್ರತಿನಿಧಿಸುತ್ತವೆ? ನೈತಿಕತೆಯ ಬಗ್ಗೆ, ಕುಸಿಯುತ್ತಿರುವ ಕೌಟುಂಬಿಕ ಪಾವಿತ್ರ್ಯತೆಯ ಬಗ್ಗೆ ಚರ್ಚಿಸುವುದಕ್ಕೆ ಮಾಧ್ಯಮಗಳು ಎಷ್ಟಂಶ ಉತ್ಸುಕವಾಗಿವೆ? ಅಷ್ಟಕ್ಕೂ, ಅಭಿವೃದ್ಧಿ ಎಂದರೆ, ರೂಪಾಯಿಯ ಮೌಲ್ಯ ಹೆಚ್ಚಾಗುವುದು, ರಸ್ತೆಗಳೆಲ್ಲಾ ಕಾಂಕ್ರೀಟೀಕರಣಗೊಳ್ಳುವುದು, ಬೃಹತ್ ಕಟ್ಟಡಗಳು ತಲೆ ಎತ್ತುವುದಷ್ಟೇ ಅಲ್ಲವಲ್ಲ. ಆ ಕಟ್ಟಡಗಳ ತುಂಬ ಅಭದ್ರ ಕುಟುಂಬಗಳು ವಾಸಿಸುತ್ತಿದ್ದರೆ, ಆ ಕಟ್ಟಡಗಳಿಗಾಗಿ ಹೆಮ್ಮೆ ಪಡುವುದಾದರೂ ಹೇಗೆ? ಕಾಂಕ್ರೀಟು ರಸ್ತೆಗಳಿಗಾಗಿ ಒಂದು ದೇಶ ಹೆಮ್ಮೆ ಪಡಬೇಕಾದರೆ ಆ ರಸ್ತೆಯಲ್ಲಿ ಸಾಗುವವರ ನೈತಿಕ ಆಲೋಚನೆಗಳು ಅಷ್ಟೇ ಪಾರದರ್ಶಕವಿರಬೇಕಲ್ಲವೇ? ಸದ್ಯದ ದಿನಗಳು ಹೇಗಿವೆ ಎಂದರೆ, ದೇಶವನ್ನು ಮುನ್ನಡೆಸುವವರು ಮತ್ತು ಅದರ ಕನಸು ಕಾಣುವವರೆಲ್ಲ ಜನಸಾಮಾನ್ಯರಿಗೆ ಅರ್ಥವಾಗದ ಭಾಷೆಯಲ್ಲಿ ಮಾತಾಡುತ್ತಿದ್ದಾರೆ. ಅವರ ಮಾತುಗಳು ಸಮಾಜದ ಮೂಲ ಸಂರಚನೆಯನ್ನು ಪ್ರತಿನಿಧಿಸುವುದೇ ಇಲ್ಲ. ರೂಪಾಯಿ ಅಪಮೌಲ್ಯ, ಹಗರಣ, ಪಾಕಿಸ್ತಾನ, ಅದೂ-ಇದೂಗಳ ಸುತ್ತವೇ ರಾಜಕಾರಣಿಗಳು ಸುತ್ತುತ್ತಿದ್ದಾರೆ. ಮಾಧ್ಯಮಗಳು ಅದನ್ನೇ ಪ್ರತಿದಿನ ಮೆಲ್ಲುತ್ತಿವೆ. ಹಾಗಂತ, ಇವು ಗಂಭೀರ ಸಮಸ್ಯೆಗಳು ಅಲ್ಲ ಎಂದಲ್ಲ. ಆದರೆ ಸಮಾಜದ ತಳಮಟ್ಟದ ಸಮಸ್ಯೆಗಳಿಗೆ ನಮ್ಮ ಚರ್ಚೆಯಲ್ಲಿ ಯಾವ ಪಾತ್ರವೂ ಸಿಗದೇ ಹೋದರೆ, ಬಲಿಷ್ಠ ಭಾರತವನ್ನು ಕಟ್ಟುವುದಾದರೂ ಹೇಗೆ? ಯಾವ ದೇಶದಲ್ಲಿ ಕೌಟುಂಬಿಕ ವಾತಾವರಣ ಚೆನ್ನಾಗಿರುವುದಿಲ್ಲವೋ ಆ ದೇಶದಲ್ಲಿ ಎಷ್ಟೇ ಬಲಿಷ್ಠ ಕಟ್ಟಡಗಳು ನಿರ್ಮಾಣಗೊಂಡರೂ ಯಾವ ಪ್ರಯೋಜನವೂ ಇಲ್ಲ. ನಿಜವಾಗಿ, ಕಟ್ಟಡವನ್ನು ಬಲಿಷ್ಠಗೊಳಿಸುವುದು ಅದರೊಳಗೆ ವಾಸಿಸುವ ಕುಟುಂಬಗಳು. ಸಿಮೆಂಟು, ಹೊೈಗೆ, ಕಲ್ಲು, ಕಬ್ಬಿಣ.. ಮುಂತಾದುವುಗಳೆಲ್ಲ ಒಂದು ಕಟ್ಟಡವನ್ನು ಬಲಿಷ್ಠಗೊಳಿಸಬಲ್ಲುದೇ ಹೊರತು ಕುಟುಂಬಗಳನ್ನಲ್ಲ ಅಥವಾ ಜನರ ಆಲೋಚನೆಗಳನ್ನಲ್ಲ. ಇವತ್ತು ಪ್ರತಿದಿನವೂ ಹೊಸ ಹೊಸ ವಿಚಾರಗಳ ಬಗ್ಗೆ ಸಂಶೋಧನೆಗಳಾಗುತ್ತಿವೆ. 10 ವರ್ಷಗಳ ಹಿಂದೆ ಒಂದು ಸೇತುವೆಯನ್ನು ಕಟ್ಟಲು ಎಷ್ಟು ಸಮಯ ಮತ್ತು ಶ್ರಮ ವ್ಯಯಿಸಲಾಗುತ್ತಿತ್ತೋ ಅಷ್ಟು ಶ್ರಮ ಮತ್ತು ಸಮಯ ಇವತ್ತು ವ್ಯಯಿಸಬೇಕಿಲ್ಲ. 20 ಮಂದಿ ಮಾಡುವ ಕೆಲಸವನ್ನು ಇವತ್ತು ಒಂದು ಮೆಷೀನು ಮಾಡುತ್ತದೆ. ಕೇವಲ ಸೇತುವೆ ಎಂದಲ್ಲ, ಎಲ್ಲ ಕ್ಷೇತ್ರಗಳಲ್ಲೂ ಮಾರ್ಪಾಟುಗಳಾಗಿವೆ. ದುರಂತ ಏನೆಂದರೆ, ಈ ಆಧುನಿಕತೆಯ ಬಗ್ಗೆ ಚರ್ಚೆಗಳಾಗುವಷ್ಟು ಇವು ನಮ್ಮ ಆಲೋಚನೆ, ಜೀವನ ವಿಧಾನದ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ಚರ್ಚೆಗಳೇ ಆಗುತ್ತಿಲ್ಲ.
   ನಿಜವಾಗಿ, ರಾಜಕಾರಣಿಗಳು ಎತ್ತಿಕೊಂಡಿರುವ ವಿಷಯಗಳ ಸುತ್ತ ಮಾತ್ರ ಇವತ್ತು ಚರ್ಚೆ ನಡೆಯಬೇಕಾದ್ದಲ್ಲ. ರೂಪಾಯಿ ಅಪಮೌಲ್ಯಕ್ಕಿಂತಲೂ ವೇಗವಾಗಿ ದೇಶದ ನೈತಿಕ ನೆಲೆಗಟ್ಟು ಕುಸಿಯುತ್ತಿದೆ. ಆಧುನಿಕ ಜೀವನ ಕ್ರಮಗಳು ಪ್ರತಿ ಮನೆಯ ಮೇಲೂ ದಾಳಿ ಮಾಡುತ್ತಿವೆ. ವಿಚ್ಛೇದನ ಕೋರಿ ಸಲ್ಲಿಕೆಯಾಗುವ ದೂರುಗಳಲ್ಲಿ ವರ್ಷಂಪ್ರತಿ ಹೆಚ್ಚಳವಾಗುತ್ತಿದೆ. ಪರಾರಿಯಾಗುವ ಹೆಣ್ಮಕ್ಕಳು, ಆತ್ಮಹತ್ಯೆ ಮಾಡಿಕೊಳ್ಳುವ ಯುವಕರು, ಬೀದಿಪಾಲಾಗುವ ಹಿರಿಯರ ಸಂಖ್ಯೆ ದಿನೇದಿನೇ ಹೆಚ್ಚಾಗು ತ್ತಿದೆ. ಆದ್ದರಿಂದ ಪತ್ರಿಕೆಗಳ ತೀರಾ ಒಳಪುಟಗಳಲ್ಲಿ ಒಂದು ಕಾಲಮ್‍ನಲ್ಲಿ ಪ್ರತಿದಿನ ಕಾಣಿಸಿಕೊಳ್ಳುವ ಈ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಬೇಕು. ವಾರದ ಏಳೂ ದಿನಗಳನ್ನು ರಾಜಕಾರಣಿಗಳಿಗೆ ವಿೂಸಲಿಡುವ ಬದಲು ಒಂದು ದಿನವನ್ನಾದರೂ ಪತ್ರಿಕೆಗಳು ತಮ್ಮ ಮುಖಪುಟವನ್ನು ಇಂಥ ಸುದ್ದಿಗಳಿಗೆ ವಿೂಸಲಿಡಬೇಕು. ಯಾಕೆಂದರೆ, ಮಾಧ್ಯಮ ಏನನ್ನು ಚರ್ಚಿಸುತ್ತದೋ ಅದನ್ನೇ ಸಮಾಜವೂ ಚರ್ಚಿಸುತ್ತದೆ. ಯಾವುದನ್ನು ಗಂಭೀರ ಸಮಸ್ಯೆ ಅನ್ನುತ್ತದೋ ಜನತೆಯೂ ಅದನ್ನೇ ಒಪ್ಪುತ್ತದೆ. ಆದ್ದರಿಂದಲೇ ಹೊಟೇಲು, ಗೂಡಂಗಡಿಗಳಲ್ಲಿ ಕುಳಿತ ಮಂದಿ ಪಕ್ಕದಲ್ಲಿ ನಡೆದ ಆತ್ಮಹತ್ಯೆಯ ಬದಲು ದೂರದ ಮೋದಿ, ಶಾರುಖ್ ಖಾನ್‍ಗಳ ಬಗ್ಗೆ ಚರ್ಚಿಸುವುದು.
   ಒಂದು ಸಮಾಜದ ಆರೋಗ್ಯವು ಆ ಸಮಾಜ ಕೌಟುಂಬಿಕ ವಾತಾವರಣವನ್ನು ಅವಲಂಬಿಸಿಕೊಂಡಿದೆ. ಕೊಲೆ, ಅತ್ಯಾಚಾರ, ಆತ್ಮಹತ್ಯೆ, ಪರಾರಿ..ಗಳು ಒಂದು ಸಮಾಜದಲ್ಲಿ ಮಾಮೂಲಿಯಾಗುತ್ತಿದೆಯೆಂದರೆ, ಆ ದೇಶ ದುರ್ಬಲವಾಗುತ್ತಿದೆ ಎಂದೇ ಅರ್ಥ. ಅಂಥ ದೇಶದಲ್ಲಿ ಮೋದಿ ಪ್ರಧಾನಿಯಾದರೂ ರಾಹುಲ್ ಪ್ರಧಾನಿಯಾದರೂ ಯಾವ ಪ್ರಯೋಜನವೂ ಇಲ್ಲ. ಆದ್ದರಿಂದ ಕೌಟುಂಬಿಕ ಭದ್ರತೆ, ನೈತಿಕ ಮೌಲ್ಯಗಳನ್ನು ಪಾಲಿಸುವ ಒಂದು ಸಮಾಜವನ್ನು ಕಟ್ಟುವಲ್ಲಿ ಗಂಭೀರ ಚರ್ಚೆ ನಡೆಯಬೇಕಿದೆ. ಭ್ರಷ್ಟಾಚಾರ ಮುಕ್ತ ಭಾರತದಂತೆಯೇ ಅನೈತಿಕ ಮುಕ್ತ ಭಾರತದ ಘೋಷಣೆಯೂ ನಡೆಯಬೇಕಿದೆ. ಇಲ್ಲದಿದ್ದರೆ ಕಾಂಕ್ರೀಟು ಕಟ್ಟಡ ಮತ್ತು ರಸ್ತೆಗಳಲ್ಲಿ ಮಾತ್ರ ಭಾರತ ಬಲಿಷ್ಠವಾದೀತು, ನೈತಿಕವಾಗಿ ಅಲ್ಲ.

Monday 9 September 2013

ಸ್ವಾಮಿನಿಷ್ಠೆಯನ್ನು ಪ್ರತಿಭಟಿಸಿ ಹೊರಟುಹೋದ ರಾಕಸ್ ಮಿಶ್

ರಾಕಸ್ ಮಿಶ್
   ರಾಕಸ್ ಮಿಶ್ (Rochus Misch) ಎಂಬವರ ಸಾವಿನ ಸುದ್ದಿಯನ್ನು ಕಳೆದ ವಾರ ಎಲ್ಲ ಪತ್ರಿಕೆಗಳೂ ಪ್ರಕಟಿಸಿದ್ದುವು. ಹಾಗಂತ, 96 ವರ್ಷದ ಈ ವ್ಯಕ್ತಿ ಯಾವುದಾದರೂ ಬೃಹತ್ ಕಂಪೆನಿಯ ಮುಖ್ಯಸ್ಥರೋ ರಾಷ್ಟ್ರವೊಂದರ ಅಧ್ಯಕ್ಷರೋ ಆಗಿರಲಿಲ್ಲ. ಜರ್ಮನಿಯ ಅಡಾಲ್ಫ್ ಹಿಟ್ಲರನ ಅಂಗರಕ್ಷಕರಾಗಿದ್ದರು ಎಂಬುದನ್ನು ಬಿಟ್ಟರೆ ಈ ವ್ಯಕ್ತಿಗೆ ಬೇರೆ ಯಾವ ವಿಶೇಷತೆಯೂ ಇರಲಿಲ್ಲ. 1945 ಎಪ್ರಿಲ್ 30ರಂದು ಸೇನಾ ನೆಲೆಯೊಂದರಲ್ಲಿ ಹಿಟ್ಲರ್ ಮತ್ತು ಆತನ ಪತ್ನಿ ಈವಾ ಬ್ರೌನ್‍ರು ಆತ್ಮಹತ್ಯೆ ಮಾಡಿಕೊಳ್ಳುವಾಗ ಮಿಶ್ ಹತ್ತಿರವೇ ಇದ್ದರು. ಹಿಟ್ಲರನ ಆಪ್ತ ಮಂತ್ರಿ ಗೋಬೆಲ್ ಮತ್ತು ಪತ್ನಿ ಮಗ್ದಾರು ತಮ್ಮ 6 ಮಕ್ಕಳಿಗೆ ವಿಷವುಣಿಸಿ 1945 ಮೇ ಒಂದರಂದು ಆತ್ಮಹತ್ಯೆ ಗೈದಾಗಲೂ ಮಿಶ್ ಜೊತೆಗಿದ್ದರು. ಬಳಿಕ ಅವರು ಸೇನಾ ನೆಲೆಯಿಂದ ತಪ್ಪಿಕೊಂಡು ಹೊರ ಬಂದರು. ರಶ್ಯನ್ ಸೇನೆಯಿಂದ ಬಂಧನಕ್ಕೀಡಾಗಿ 9 ವರ್ಷ ಸೆರೆಮನೆ ವಾಸ ಅನುಭವಿಸಿದರು. ಬಹುಶಃ ಮೊನ್ನೆ, ಮಿಶ್‍ರ ಸಾವನ್ನು ಮತ್ತು ಅವರನ್ನು ಸುತ್ತಿಕೊಂಡಿರುವ ಈ ಎಲ್ಲ ಸಂಗತಿಗಳನ್ನು ಅತ್ಯಂತ ಆಸಕ್ತಿಯಿಂದ ಓದಿರುವವರಲ್ಲಿ ಮುಂಬೈಯ ತಿಲೋಜ ಜೈಲಿನಲ್ಲಿರುವ ವಂಜಾರ, ದಿನೇಶ್ ಕುಮಾರ್, ಎನ್.ಕೆ. ಅವಿೂನ್.. ಮುಂತಾದವರೂ ಇರಬಹುದು. ಮಾತ್ರವಲ್ಲ, ತಮ್ಮ ಜೈಲು ವಾಸಕ್ಕಿರುವ ಕಾರಣಗಳ ಜೊತೆ ಹಿಟ್ಲರ್, ಮಿಶ್‍ರನ್ನು ಇಟ್ಟು ಹೋಲಿಸಿ ನೋಡಿರಲೂ ಬಹುದು.
   ನಿಜವಾಗಿ, ವಂಜಾರ ಮತ್ತು ಅವರ ತಂಡಕ್ಕೂ ರಾಕಸ್ ಮಿಶ್‍ರಿಗೂ ಖಂಡಿತ ಕೆಲವು ವ್ಯತ್ಯಾಸಗಳಿವೆ. ವಂಜಾರ ಮತ್ತು ತಂಡವನ್ನು ಈ ದೇಶದ ನ್ಯಾಯಾಲಯ ಈ ವರೆಗೂ ಅಪರಾಧಿ ಎಂದು ಘೋಷಿಸಿಲ್ಲ. ಅಮಾಯಕರನ್ನು ಹತ್ಯೆ ಮಾಡುವಂತೆ ಅವರಿಗೆ ಯಾರು ಆದೇಶಿಸಿದ್ದರೋ ಅವರ ಅಪರಾಧವೂ ಸಾಬೀತಾಗಿಲ್ಲ. ಆದರೆ, ಇವರೆಲ್ಲ ಅಪರಾಧಿಗಳಾಗಿ ಘೋಷಣೆಗೀಡಾಗುವ ಸಾಧ್ಯತೆಗಳು ದಿನೇ ದಿನೇ ಹೆಚ್ಚಾಗುತ್ತಿವೆ ಎಂಬುದರಿಂದಲೇ ಮಿಶ್ ಮುಖ್ಯವಾಗುತ್ತಾರೆ. ಅಷ್ಟಕ್ಕೂ, ಎರಡನೇ ಜಾಗತಿಕ ಸಮರದಲ್ಲಿ ಹಿಟ್ಲರ್ ಜಯ ಗಳಿಸುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಮಿಶ್ ಜೈಲಿಗೆ ಹೋಗುತ್ತಿದ್ದರೇ? ಗೋಬೆಲ್, ಮಗ್ದಾ, ಈವಾ ಮುಂತಾದವರೆಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೇ? ಹಿಟ್ಲರನ ಮೇಲೆ ಸಾವಿರಾರು ಯಹೂದಿಯರನ್ನು ಹತ್ಯೆ ಮಾಡಿರುವ ಆರೋಪ ಇದೆ. ಒಂದು ವೇಳೆ, ಆತ ಯುದ್ಧದಲ್ಲಿ ಜಯಿಸಿರುತ್ತಿದ್ದರೆ, ಸಾವಿಗೀಡಾದವರನ್ನೆಲ್ಲ ಭಯೋತ್ಪಾದಕರೆಂದೋ ದೇಶದ್ರೋಹಿಗಳೆಂದೋ ಘೋಷಿಸಿ ಬಿಡುವ ಸಾಧ್ಯತೆ ಖಂಡಿತ ಇತ್ತು. ಅಧಿಕಾರವು ಎಲ್ಲ ಕ್ರೌರ್ಯಗಳನ್ನೂ ಕಾಲದ ಅನಿವಾರ್ಯತೆಗಳಾಗಿ ಮಾರ್ಪಡಿಸಿ ಬಿಡುತ್ತದೆ. ದೇಶದ್ರೋಹಿ ಅಥವಾ ದೇಶ ಪ್ರೇಮದ ವ್ಯಾಖ್ಯಾನಗಳು ಅಧಿಕಾರಸ್ಥರನ್ನು ಹೊಂದಿಕೊಂಡು ಬದಲಾಗುತ್ತಿರುತ್ತದೆ. ಓರ್ವ ಸಾಮಾನ್ಯ ವ್ಯಕ್ತಿಯನ್ನು ಭಯೋತ್ಪಾದಕನೆಂದು ಬಿಂಬಿಸುವ ಮತ್ತು ಹತ್ಯೆ ಮಾಡುವ ಕೆಲಸವು ಓರ್ವ ಪ್ರಧಾನಿಗೋ ಮುಖ್ಯಮಂತ್ರಿಗೋ ಕಷ್ಟದ್ದಲ್ಲ. ಯಾಕೆಂದರೆ ಒಂದಿಡೀ ವ್ಯವಸ್ಥೆಯೇ ಅವರ ಅಧೀನದಲ್ಲಿರುತ್ತದೆ. ಅವರು ಕೆಲವು ನಂಬಿಗಸ್ಥ ಅಧಿಕಾರಿಗಳ ಮೂಲಕ ಆಡನ್ನು ನಾಯಿಯನ್ನಾಗಿಯೂ ನಾಯಿಯನ್ನು ಆಡನ್ನಾಗಿಯೂ ಪರಿವರ್ತಿಸಬಲ್ಲರು. ಈ ದೇಶದಲ್ಲಿ ನಡೆದ ಅನೇಕಾರು ಹತ್ಯಾ ಕಾಂಡಗಳ ಸುತ್ತ ಇಂಥದ್ದೊಂದು ಅನುಮಾನ ಇದ್ದೇ ಇದೆ. ಗುಜರಾತ್ ಹತ್ಯಾಕಾಂಡ ಮತ್ತು ಎನ್‍ಕೌಂಟರ್‍ಗಳು ಅವುಗಳಲ್ಲಿ ಒಂದು ಎಂದಷ್ಟೇ ಹೇಳಬಹುದಾಗಿದೆ. ಒಂದು ವೇಳೆ, ಗುಜರಾತನ್ನು ಆಳುತ್ತಿರುವ ಪಕ್ಷವೇ ಇವತ್ತು ಕೇಂದ್ರದಲ್ಲಿಯೂ ಅಧಿಕಾರದಲ್ಲಿರುತ್ತಿದ್ದರೆ ವಂಜಾರ ಮತ್ತು ತಂಡ ಜೈಲಿಗೆ ಹೋಗುವ ಸಾಧ್ಯತೆ ಇತ್ತೇ ಎಂಬ ಪ್ರಶ್ನೆ ಈ ದೇಶದ ಅಸಂಖ್ಯ ಮಂದಿಯನ್ನು ಇವತ್ತು ಕಾಡುತ್ತಿರಬಹುದು. ಮೋದಿ ಪ್ರಧಾನಿಯಾದರೆ ಗುಜರಾತ್  ಹತ್ಯಾಕಾಂಡದ ತನಿಖೆ ಯಾವ ಸ್ಥಿತಿಗೆ ಮುಟ್ಟಬಹುದು ಎಂಬ ಕುತೂಹಲವೂ ಇರಬಹುದು. ಒಂದು ರೀತಿಯಲ್ಲಿ, ಈ ದೇಶದಲ್ಲಿ ಬೆಳಕಿಗೆ ಬರುವ ಹತ್ಯಾಕಾಂಡಗಳಿಗೂ ರಾಜಕೀಯಕ್ಕೂ ಸಂಬಂಧ ಇದೆ. ಆಡಳಿತ ಪಕ್ಷ  ಬದಲಾಗುವಾಗ ಅದರ ಕ್ರೌರ್ಯಗಳೂ ಬಯಲಾಗತೊಡಗುತ್ತದೆ. ಮಾತ್ರವಲ್ಲ, ಕಾನೂನನ್ನು ಕಡೆಗಣಿಸಿ ಅವರ ಬಂಟರಂತೆ ಕೆಲಸ ಮಾಡಿದ ಅಧಿಕಾರಿಗಳ ಮುಖವೂ ಬಹಿರಂಗವಾಗುತ್ತದೆ.
   ಹಿಟ್ಲರನ ಜೊತೆಗಿದ್ದ ರಾಕಸ್ ಮಿಶ್‍ರು ಹತ್ಯಾಕಾಂಡದಲ್ಲೇನೂ ಭಾಗಿಯಾಗಿರಲಿಲ್ಲ. ಆದರೆ ಹಿಟ್ಲರನ ನಿಲುವನ್ನು, ಗೋಬೆಲ್‍ನ ತಂತ್ರವನ್ನು ಬೆಂಬಲಿಸುವಂಥ ಮನಸ್ಥಿತಿಯನ್ನು ಅವರು ಬೆಳೆಸಿಕೊಂಡಿದ್ದರು. ತನ್ನನ್ನು ಈ ಮಂದಿ ಕಾಪಾಡುತ್ತಾರೆ ಎಂಬ ಹುಂಬ ಧೈರ್ಯ ಅವರಲ್ಲಿತ್ತು. ವಂಜಾರ ಮತ್ತು ಅವರ 'ಎನ್‍ಕೌಂಟರ್' ತಂಡದ ಮನಸ್ಥಿತಿ ಬಹುತೇಕ ಹೀಗೆಯೇ ಇತ್ತು ಎಂಬುದನ್ನು 'ವಂಜಾರ' ಪತ್ರವೇ ಸ್ಪಷ್ಟಪಡಿಸುತ್ತದೆ. ಈ ತಂಡ ಮಿಶ್‍ಗಿಂತ ಸಾಕಷ್ಟು ಪಳಗಿತ್ತು. ತನ್ನ ನಾಯಕನಿಗಾಗಿ ಯಾವ ಮಟ್ಟಕ್ಕೆ ಹೋಗಲೂ ಅದು ಸಿದ್ಧವಿತ್ತು. ಸಂವಿಧಾನವನ್ನು ಉಲ್ಲಂಘಿಸಿ ಮಾಡುವ ಈ ಕಾರ್ಯದಲ್ಲಿ ನಾಯಕ ತಮ್ಮನ್ನು ರಕ್ಷಿಸುತ್ತಾನೆ ಎಂದು ಅದು ನಂಬಿತ್ತು. ಇದೀಗ ಈ ತಂಡ ಕುಪಿತಗೊಂಡಿದೆ. ನಾಯಕ ತಮ್ಮನ್ನು ರಕ್ಷಿಸುತ್ತಿಲ್ಲ ಎಂದು ಸಿಟ್ಟಾಗಿದೆ. ಈ ಸಂದರ್ಭದಲ್ಲೇ ಮಿಶ್ ಸಾವಿಗೀಡಾಗಿರುವುದು ಕಾಕತಾಳೀಯವಾಗಿದ್ದರೂ ಖಂಡಿತ ಆ ಸಾವಿನಲ್ಲಿ ದೊಡ್ಡದೊಂದು ಪಾಠವಿದೆ. ನಿಜವಾಗಿ, ರಾಕಸ್ ಮಿಶ್‍ನ ಬಗ್ಗೆ ನಾವು ಆಸಕ್ತಿ ತಾಳಬೇಕಾದದ್ದು ಆತನ ಸ್ವಾಮಿನಿಷ್ಠೆಯ ಪಾತ್ರಕ್ಕಾಗಿ. ಈ ದೇಶದಲ್ಲಿ ಮಿಶ್‍ನಂತೆ ಸ್ವಾಮಿನಿಷ್ಠೆಯೊಂದಿಗೆ ಕೆಲಸ ಮಾಡುವ ಅಧಿಕಾರಿಗಳು ಧಾರಾಳ ಇದ್ದಾರೆ. ಅವರಿಗೆ ಸಂವಿಧಾನಕ್ಕಿಂತ ಅಧಿಕಾರಸ್ಥರ ಆದೇಶವೇ ಮೇಲು. ಅವರಿಗಾಗಿ ಯಾರನ್ನು ಬೇಕಾದರೂ ಭಯೋತ್ಪಾದಕರಾಗಿಸಲು, ಆರೋಪ ಹೊರಿಸಿ ಜೈಲಿಗಟ್ಟಲು ಅವರು ಸಿದ್ಧರು. ವಂಜಾರ ಮತ್ತು ತಂಡವು ಈಗಾಗಲೇ ಇದನ್ನು ಒಪ್ಪಿಕೊಂಡಿದೆ. ಮಾತ್ರವಲ್ಲ, ನಾಯಕರನ್ನು ನಂಬಿ ಕಾನೂನನ್ನು ಉಲ್ಲಂಘಿಸಬೇಡಿ ಎಂದೂ ಅದು ಎಲ್ಲ ಅಧಿಕಾರಿಗಳಿಗೂ ಪರೋಕ್ಷವಾಗಿ ಮನವಿ ಮಾಡಿದೆ. ಆ ಮನವಿಯ ಬೆನ್ನಿಗೇ, 'ಇನ್ನು ನಾನು ಇಲ್ಲಿರಲಾರೆ' ಎಂದು ಘೋಷಿಸಿ ರಾಕಸ್ ಮಿಶ್  ಹೊರಟು ಹೋಗಿದ್ದಾರೆ.
ವಂಜಾರ

ಸರ್ವಾಧಿಕಾರಿಯಾಗಿದ್ದ  ಹಿಟ್ಲರ್ ನ ಕಾಲದಲ್ಲಿ ತಾನು ತೋರಿದ ಸ್ವಾಮಿನಿಷ್ಟೆಯನ್ನು ಈ ಪ್ರಜಾತಂತ್ರ ಯುಗದಲ್ಲೂ ಕೆಲವರು ಮುಂದುವರಿಸಿರುವುದಕ್ಕೆ ಅವರು ವ್ಯಕ್ತಪಡಿಸಿದ ಪ್ರತಿಭಟನೆಯೆಂದೇ ಈ ಸಾವನ್ನು ನಾವು  ಪರಿಗಣಿಸಬೇಕಾಗಿದೆ. ಮಾತ್ರವಲ್ಲ, ಅವರ ಸಾವು ಸ್ವಾಮಿನಿಷ್ಠೆಯ ಬದಲು ಸಂವಿಧಾನ ನಿಷ್ಠೆಯನ್ನು ಆಯ್ಕೆ ಮಾಡಿಕೊಳ್ಳಲು ನಮ್ಮ ಅಧಿಕಾರಿಗಳಿಗೆ ಪ್ರೇರಕವಾಗಬೇಕಾಗಿದೆ.

Monday 2 September 2013

‘ನಿರ್ಭಯ’ಳ ಮೇಲೆ ಮತ್ತೊಮ್ಮೆ ಅತ್ಯಾಚಾರ?

   ಅತ್ಯಾಚಾರಕ್ಕೆ ಪ್ರೇರಕವಾಗುವ ಅಂಶಗಳ ಬಗ್ಗೆ ಸಮಾಜದಲ್ಲಿ ಭಿನ್ನಾಭಿಪ್ರಾಯಗಳೇನೇ ಇರಲಿ, ಅತ್ಯಾಚಾರಿಗೆ ಯಾವ ಶಿಕ್ಷೆ ಕೊಡಬೇಕು ಎಂಬ ಬಗ್ಗೆ ಈ ದೇಶದಲ್ಲಿ ಬಹುತೇಕ ಒಮ್ಮತ ಇದೆ. ನೇಣಿಗಿಂತ ಕಡಿಮೆಯದಾದ ಶಿಕ್ಷೆಯನ್ನು ಯಾರೂ ಇವತ್ತು ಪ್ರತಿಪಾದಿಸುತ್ತಿಲ್ಲ. ಇಂಥ ಹೊತ್ತಲ್ಲಿ, ದೆಹಲಿಯ ನಿರ್ಭಯಳ ಮೇಲಿನ ಅತ್ಯಾಚಾರ ಮತ್ತು ಹತ್ಯೆಯಲ್ಲಿ ಭಾಗಿಯಾದ ಆರೋಪಿ ಮನೋಜ್ ನಿಗೆ ನ್ಯಾಯಮಂಡಳಿಯು 3 ವರ್ಷಗಳ ಶಿಕ್ಷೆಯನ್ನು ಘೋಷಿಸಿದೆ. ನಿಜವಾಗಿ, ಇದು ಸಂತ್ರಸ್ತ ಕುಟುಂಬವನ್ನು ಮಾತ್ರವಲ್ಲ, ಈ ಬರ್ಬರ ಘಟನೆಯ ವಿರುದ್ಧ ಸಿಡಿದು ನಿಂತ ಎಲ್ಲರನ್ನೂ ಆಘಾತಕ್ಕೆ ಒಳಪಡಿಸಿದೆ. ಆರೋಪಿ ಅಪ್ರಾಪ್ತನಾಗಿದ್ದು, ಇದಕ್ಕಿಂತ ಹೆಚ್ಚಿನ ಶಿಕ್ಷೆಯನ್ನು ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ನ್ಯಾಯಮಂಡಳಿ ಅಭಿಪ್ರಾಯಪಟ್ಟಿದೆ.
   ಒಂದು ರೀತಿಯಲ್ಲಿ, ಈ ತೀರ್ಪು ನಿರ್ಭಯಳ ಮೇಲೆ ಮತ್ತೊಮ್ಮೆ ಎಸಗಲಾದ ಅತ್ಯಾಚಾರ. ಓರ್ವ ವ್ಯಕ್ತಿಗೆ ಅತ್ಯಾಚಾರ ಎಸಗುವ ಮತ್ತು ಬರ್ಬರವಾಗಿ ವರ್ತಿಸುವ ಸಾಮರ್ಥ್ಯ ಇದೆಯೆಂದಾದರೆ ಆತನನ್ನು ಅಪ್ರಾಪ್ತ ಎಂದು ಯಾಕೆ ಪರಿಗಣಿಸಬೇಕು? ಅಪ್ರಾಪ್ತಕ್ಕೆ ಇರುವ ಮಾನದಂಡ ಏನು? ಪ್ರಾಪ್ತ ವಯಸ್ಕ ಎಸಗುವ ಕ್ರೌರ್ಯಗಳನ್ನೇ ಓರ್ವ ಅಪ್ರಾಪ್ತನೂ ಎಸಗಬಲ್ಲನೆಂದಾದರೆ ಅವರನ್ನು ಪ್ರಾಪ್ತ ಮತ್ತು ಅಪ್ರಾಪ್ತ ಎಂದು ಯಾಕೆ ವಿಭಜಿಸಬೇಕು? ನಿರ್ಭಯಳ ಜೊತೆ ಅತ್ಯಂತ ಬರ್ಬರವಾಗಿ ವರ್ತಿಸಿದ್ದು ಈ ಅಪ್ರಾಪ್ತನೇ ಎಂದು ವರದಿಗಳು ಹೇಳಿವೆ. ಆದರೆ ಸದ್ಯ ಆತ ಜೈಲಿನ ಬದಲು ಸುಧಾರಣಾ ಕೇಂದ್ರದಲ್ಲಿ ದಿನ ಕಳೆಯುತ್ತಿದ್ದಾನೆ. ಟಿ.ವಿ., ಆಟಿಕೆಗಳು ಮುಂತಾದ ಸೌಲಭ್ಯಗಳನ್ನು ಆತನಿಗೆ ಒದಗಿಸಲಾಗಿದೆ. ಅಪ್ರಾಪ್ತನಾಗಿರುವುದರಿಂದ ಜೈಲು ಎಂಬುದು ಆತನ ಪಾಲಿಗೆ ಪುನರ್ ವಸತಿ ಕೇಂದ್ರವಾಗಿ ಮಾರ್ಪಟ್ಟಿದೆ. ಕ್ರೌರ್ಯದಲ್ಲಿ ಪ್ರಾಪ್ತರನ್ನೂ ವಿೂರಿಸುವಂತೆ ವರ್ತಿಸಿದ್ದರೂ ಜುಜುಬಿ ಶಿಕ್ಷೆ ಪಡಕೊಂಡು ಪಾರಾಗಬಹುದಾದ ಇಂಥ ಕಾನೂನುಗಳು ಯಾಕೆ ಇನ್ನೂ ಜೀವಂತವಿವೆ? ನಿಜವಾಗಿ, ಓರ್ವನು ಪ್ರಾಪ್ತನೋ ಅಪ್ರಾಪ್ತನೋ ಎಂಬುದನ್ನು ನಿರ್ಧರಿಸುವುದಕ್ಕಿರುವ ಅತ್ಯುತ್ತಮ ಮಾನದಂಡ ಏನೆಂದರೆ, ಅದು ಆತನ ವರ್ತನೆ. ಶಾಲಾ ಮಕ್ಕಳು ಪೆನ್ಸಿಲೋ ಪೆನ್ನೋ, ಸ್ಕೇಲೋ ಕದಿಯಬಹುದು. ಟಿಫಿನ್ ಬಾಕ್ಸ್ ನಿಂದ ಕದ್ದು ಏನಾದರೂ ತಿನ್ನಬಹುದು. ಮಕ್ಕಳ ಪ್ರಾಯವನ್ನು ಹೊಂದಿಕೊಂಡು ಇವೆಲ್ಲ ಸಹಜ ಅನ್ನಿಸಿಕೊಳ್ಳುತ್ತದೆ. ಹಾಗಂತ, 20 ವರ್ಷದ ಯುವಕನೊಬ್ಬ ತನ್ನ ಸಹಪಾಠಿಯ ಪೆನ್ನು ಕದಿಯುವುದು, ಟಿಫಿನ್ ಬಾಕ್ಸ್ ನಿಂದ ಕದ್ದು ತಿನ್ನುವುದು ಸಾಧ್ಯವಿಲ್ಲ. ಯಾಕೆಂದರೆ, ಆ ಪ್ರಾಯದಲ್ಲಿ ಅದು ತೀರಾ ಅಸಹಜ. ಬಾಲ್ಯಕ್ಕೂ ಯೌವನಕ್ಕೂ ವ್ಯತ್ಯಾಸ ಇದೆ. ಮಧ್ಯ ವಯಸ್ಕರಿಗೂ ಹಿರಿಯರಿಗೂ ವ್ಯತ್ಯಾಸ ಇದೆ. ಹಿರಿಯರಾಡುವ ಅನುಭವದ ಮಾತುಗಳನ್ನು ಯುವಕರಿಂದ ನಿರೀಕ್ಷಿಸುವುದು ಖಂಡಿತ ತಪ್ಪು. ಮಧ್ಯ ವಯಸ್ಕರ ಆಲೋಚನಾ ವಿಧಾನವನ್ನು ಮಕ್ಕಳಲ್ಲಿ ಹುಡುಕುವುದು ತೀರಾ ಬಾಲಿಶತನ. 25 ವರ್ಷದ ಯುವತಿಯೊಬ್ಬಳು ಪೆನ್ಸಿಲ್ ಕದ್ದಿದ್ದಾಳೆ ಎಂದು ಯಾರಾದರೂ ಆರೋಪಿಸಿದರೆ, ಸಹಜವಾಗಿ, ಕದ್ದವಳ ಆರೋಗ್ಯದ ಬಗ್ಗೆ ಚರ್ಚೆಯಾಗಬಹುದೇ ಹೊರತು ಕಳ್ಳತನದ ಬಗ್ಗೆಯಲ್ಲ. ಯಾಕೆಂದರೆ, ಪೆನ್ಸಿಲ್ ಕದಿಯುವುದು ಆ ವಯಸ್ಸಿಗೆ ಸಂಬಂಧಿಸಿ ತೀರಾ ಅಸಹಜ. ಈ ಕಾರಣದಿಂದಲೇ ದೆಹಲಿ ಅತ್ಯಾಚಾರದ ಆರೋಪಿಯ ಅಪ್ರಾಪ್ತತನವನ್ನು ಚರ್ಚೆಗೆ ಒಳಪಡಿಸಬೇಕಾಗಿದೆ. ಅಂದಹಾಗೆ,  18 ವರ್ಷಕ್ಕಿಂತ ಮೊದಲು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಸಾಧ್ಯವಿಲ್ಲ ಎಂದೇನೂ ಸಾಬೀತಾಗಿಲ್ಲವಲ್ಲ. 18 ವರ್ಷಕ್ಕಿಂತ ಕೆಳಗಿನ ಅಸಂಖ್ಯ ಮಂದಿ ಇವತ್ತು ಈ ದೇಶದಲ್ಲಿ ಕಾನೂನನ್ನು ವಂಚಿಸಿ ಮದುವೆಯಾಗುತ್ತಿದ್ದಾರೆ. ಮಕ್ಕಳೂ ಆಗುತ್ತಿವೆ. ವಿಜ್ಞಾನವು ಸಾಕಷ್ಟು ಬೆಳೆದಿರುವ ಇಂದಿನ ದಿನಗಳಲ್ಲಿ ಮಕ್ಕಳು ತಮ್ಮ ವಯಸ್ಸಿಗಿಂತಲೂ ಪ್ರೌಢವಾಗಿ ವರ್ತಿಸುವುದಕ್ಕೆ ಪ್ರಚೋದಕವಾಗುವಂಥವು ಧಾರಾಳ ಇವೆ. ಇಂಟರ್‍ನೆಟ್‍ನಲ್ಲಿ ಒಂದು ಗುಂಡಿ ಅದುಮಿದರೆ ಪ್ರಾಪ್ತರು-ಅಪ್ರಾಪ್ತರು ಎಂಬ ಬೇಧವಿಲ್ಲದೇ ಎಲ್ಲರೆದುರು ಎಲ್ಲವೂ ತೆರೆದುಕೊಳ್ಳುತ್ತದೆ. ಅಪ್ರಬುದ್ಧರನ್ನು ಪ್ರಬುದ್ಧ ಮಾಡುವಷ್ಟು ವಿಷಯಗಳ ಖಜಾನೆಯೇ ಅದರೊಳಗಿದೆ. ಅಲ್ಲದೇ, ಇಂದಿನ ಯುವಪೀಳಿಗೆಯನ್ನು ಇವುಗಳಿಂದ ತಡೆದು ನಿಲ್ಲಿಸುವುದಕ್ಕೆ ಯಾವ ವ್ಯವಸ್ಥೆಯೂ ನಮ್ಮ ಬಳಿ ಇಲ್ಲ. ಹೀಗಿರುವಾಗ, 18 ವರ್ಷದ ಒಳಗಿನವರನ್ನು ಸಾರಾಸಗಟು ಅಪ್ರಾಪ್ತರೆಂದು ಮುದ್ರೆ ಒತ್ತಿ ಬಿಡುವುದು ಎಷ್ಟು ಸರಿಯೆನಿಸಬಹುದು? ಅಷ್ಟಕ್ಕೂ, ‘ನಿರ್ಭಯ’ ಪ್ರಕರಣದಲ್ಲಿ ಈ ಅಪ್ರಾಪ್ತನ ಮೇಲಿನ ಆರೋಪ ಸಾಬೀತಾಗಿದೆ. ಆತ ಕಾನೂನಿನ ಪ್ರಕಾರ ಅಪ್ರಾಪ್ತನಾಗಿದ್ದರೂ ದೈಹಿಕವಾಗಿ ಮತ್ತು ಲೈಂಗಿಕವಾಗಿ ಪ್ರಾಪ್ತನೇ ಆಗಿದ್ದ.  ಪ್ರಾಪ್ತರಲ್ಲಿ ಮೂಡಬಹುದಾದ ಎಲ್ಲ ಲೈಂಗಿಕ ಭಾವನೆಗಳೂ ಆತನಲ್ಲೂ ಮೂಡಿದ್ದುವು. ಅಲ್ಲದೇ, 17 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ ಎಂಬ ಸುದ್ದಿ ಇವತ್ತು ಸಮಾಜದಲ್ಲಿ ಅಚ್ಚರಿಯ ಸಂಗತಿಯಾಗಿಯೇನೂ ಉಳಿದಿಲ್ಲ. ಆ ಪ್ರಾಯದಲ್ಲಿ ಅಂಥದ್ದೊಂದು ಕ್ರೌರ್ಯ ಸಾಧ್ಯ ಎಂದು ಸಮಾಜವೇ ಇವತ್ತು ಒಪ್ಪಿಕೊಂಡಿದೆ. ಹೀಗಿರುವಾಗ, 18 ವರ್ಷ ಎಂಬ ಕಾನೂನಿನ ಮಿತಿಯನ್ನು ಬಲವಾಗಿ ಹಿಡಿದುಕೊಂಡು ನ್ಯಾಯ ತೀರ್ಮಾನ ಮಾಡುವ ವಾತಾವರಣವನ್ನು ಇನ್ನೂ ಯಾಕೆ ನಾವು ಮುಂದುವರಿಸಬೇಕು? ಪ್ರಾಪ್ತ ವಯಸ್ಸಿನ ಮಿತಿ ಹದಿನೆಂಟೇ ಇದ್ದರೂ ಅಪರೂಪದ ಪ್ರಕರಣಗಳಲ್ಲಿ ವಿವೇಚನಾಧಿಕಾರವನ್ನು ಬಳಸಿಕೊಂಡು ತೀರ್ಪು ನೀಡುವ ಅವಕಾಶವನ್ನು ನ್ಯಾಯಾಧೀಶರಿಗೆ ಕೊಡಬಹುದಲ್ಲವೇ?
   ಜಗತ್ತು ಇವತ್ತು ಅತ್ಯಂತ ವೇಗವಾಗಿ ಬದಲಾಗುತ್ತಿದೆ. ಆಧುನಿಕ ಸೌಲಭ್ಯಗಳು ಯುವಪೀಳಿಗೆಯನ್ನು ಅತಿವೇಗವಾಗಿ ಪ್ರೌಢಗೊಳಿಸುತ್ತಿವೆ. ಇಂಥ ಹೊತ್ತಲ್ಲಿ, ಪ್ರಾಪ್ತ ಮತ್ತು ಅಪ್ರಾಪ್ತತೆಯನ್ನು ವಿಭಜಿಸುವುದು ಸುಲಭವಲ್ಲ. 25 ವರ್ಷಗಳ ಹಿಂದೆ 25 ವರ್ಷ ಪ್ರಾಯದ ಮಂದಿ ಹೇಗೆ ಆಲೋಚಿಸುತ್ತಿ ದ್ದರೋ ಹಾಗೆ ಇವತ್ತು 18 ವರ್ಷದ ಮಂದಿಯೇ ಆಲೋಚಿಸುತ್ತಾರೆ. ಕೆಲವೊಮ್ಮೆ ಅವರಿಗಿಂತಲೂ ಪ್ರೌಢವಾಗಿ ಅಥವಾ ಕ್ರೂರವಾಗಿ ವರ್ತಿಸುವಷ್ಟೂ ಬೆಳೆದಿರುತ್ತಾರೆ. ಆದ್ದರಿಂದ 18 ಎಂಬ ರೇಖೆಯೊಂದನ್ನು ಎಳೆದು ಎಲ್ಲ ಅಪರಾಧಗಳನ್ನೂ ಅದರ ಮೇಲೆ ಅಥವಾ ಕೆಳಗೆ ಎಂದು ವಿಂಗಡಿಸು
ವುದು ಅನೇಕ ಬಾರಿ ಹಾಸ್ಯಾಸ್ಪದವಾಗಿ ಬಿಡುತ್ತದೆ. ಬರ್ಬರ ಕ್ರೌರ್ಯವನ್ನು ಎಸಗಿದವರು ಕೂಡ ಕೆಲವೊಮ್ಮೆ ಇದರ ಲಾಭ ಪಡೆದು ಒಟ್ಟು ಕಾನೂನನ್ನೇ ನಗೆಪಾಟಲು ಮಾಡಿಬಿಡುತ್ತಾರೆ. ಮಾತ್ರವಲ್ಲ, ಸಂತ್ರಸ್ತರು ನ್ಯಾಯಾಂಗದ ಮೇಲೆಯೇ ವಿಶ್ವಾಸವನ್ನು ಕಳಕೊಂಡು ಬಿಡುವಷ್ಟು ಅದು ಅತಿರೇಕವಾಗಿ ಬಿಡುತ್ತದೆ. ‘ನಿರ್ಭಯ' ಪ್ರಕರಣದಲ್ಲಿ ಸಾಬೀತಾಗಿರುವುದು ಇದುವೇ.

Monday 26 August 2013

ಮನ ಕದಡುವ ಮನರಂಜನೆ ಮತ್ತು ಅತ್ಯಾಚಾರ

   ಅತ್ಯಾಚಾರ ಪ್ರಕರಣಗಳನ್ನು ಪ್ರಮುಖ ಟಿ.ವಿ. ಮತ್ತು ಪತ್ರಿಕೆಗಳು ಗಂಭೀರ ಚರ್ಚೆಗೆ ಎತ್ತಿಕೊಳ್ಳ ಬೇಕಾದರೆ ಅತ್ಯಾಚಾರಕ್ಕೀಡಾದವರು ‘ಉನ್ನತ ವಲಯಕ್ಕೆ’ ಸೇರಬೇಕಾದುದು ಕಡ್ಡಾಯವೇ ಎಂಬ ಪ್ರಶ್ನೆಯು ದೆಹಲಿಯ ‘ನಿರ್ಭಯ' ಪ್ರಕರಣದ ಜೊತೆಜೊತೆಗೇ ಹುಟ್ಟಿಕೊಂಡಿದ್ದರೂ ಅತ್ಯಾಚಾರವೆಂಬ ಕ್ರೌರ್ಯವನ್ನು ಚರ್ಚೆಗೆತ್ತಿಕೊಳ್ಳುವುದನ್ನೇ ತಡೆಯುವಷ್ಟು ಇಂಥ ಪ್ರಶ್ನೆಗಳು ಮಹತ್ವಪೂರ್ಣ ಆಗಬಾರದು. ದೆಹಲಿಯಲ್ಲಿ ‘ನಿರ್ಭಯ'ಳ ಮೇಲೆ ನಡೆದ ಅತ್ಯಾಚಾರ ಘಟನೆಯು ದೇಶದಾದ್ಯಂತ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಮಾಧ್ಯಮಗಳು ವಾರಗಟ್ಟಲೆ ಚರ್ಚಿಸಿದುವು. ಪ್ರಕರಣದ ವಿರುದ್ಧ ಈ ದೇಶದಲ್ಲಿ ಕಾಣಿಸಿಕೊಂಡ ಆಕ್ರೋಶ ಎಷ್ಟು ಪ್ರಬಲವಾಗಿತ್ತೆಂದರೆ ಸರಕಾರ ಹೊಸ ಕಾನೂನನ್ನೇ ರೂಪಿಸಲು ಮುಂದಾಯಿತು. 'ನಿರ್ಭಯ' ನಿಧಿಯನ್ನು ಸ್ಥಾಪಿಸಿತು. ಹಾಗಂತ, ಅತ್ಯಾಚಾರವನ್ನು ತಡೆಗಟ್ಟುವುದಕ್ಕೆ ಇಂಥ ಕ್ರಮಗಳು ಸಂಪೂರ್ಣ ಯಶಸ್ವಿಯಾದವು ಎಂದಲ್ಲ. ಆ ಬಳಿಕವೂ ಪ್ರತಿನಿತ್ಯ ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಲೇ ಇದ್ದುವು. ಆದರೆ, ಹೀಗೆ ಅತ್ಯಾಚಾರಕ್ಕೀಡಾಗುವ ಯುವತಿಯರು 'ನಿರ್ಭಯ'ಳಂತೆ 'ಉನ್ನತ ವಲಯದಲ್ಲಿ' ಗುರುತಿಸಿಕೊಳ್ಳದ ಮತ್ತು ದೆಹಲಿ, ಮುಂಬೈ, ಕೊಲ್ಕತ್ತಾ.. ಮುಂತಾದ ಮಹಾ ನಗರಗಳಲ್ಲಿ ವಾಸಿಸದವರಾಗಿದ್ದುದರಿಂದಲೋ ಏನೋ ಮಾಧ್ಯಮಗಳ ಅವಕೃಪೆಗಳು ಒಳಗಾದರು. ಸಾರ್ವಜನಿಕವಾಗಿ ಒಂದು ಬಗೆಯ ಅಸಹನೆ, ಅನುಮಾನ ಸೃಷ್ಟಿಯಾದದ್ದೇ ಇಲ್ಲಿ. ಅತ್ಯಾಚಾರಕ್ಕೀಡಾದವರ ಹುದ್ದೆ, ಕಲಿಕೆ, ವಾಸಸ್ಥಳವನ್ನು ನೋಡಿಕೊಂಡು ಘಟನೆಯನ್ನು ಗಂಭೀರ ಅಥವಾ ಸಾಮಾನ್ಯ ಎಂದು ವಿಭಜಿಸುವುದು ಸರಿಯೇ, ಅತ್ಯಾಚಾರ ಎಲ್ಲಿ ನಡೆದರೂ, ಯಾರ ಮೇಲೆ ನಡೆದರೂ ಗಂಭೀರವೇ. ಮತ್ತೇಕೆ ಮಾಧ್ಯಮಗಳು ಅತ್ಯಾಚಾರ ಪ್ರಕರಣಗಳನ್ನು ಚರ್ಚೆಗೊಳಪಡಿಸುವಾಗ ಈ ಸೂಕ್ಷ್ಮ ತೆಯನ್ನು ಪಾಲಿಸುತ್ತಿಲ್ಲ.. ಎಂದು ಮುಂತಾಗಿ ಅನೇಕಾರು ಪ್ರಶ್ನೆಗಳು ಸಾರ್ವಜನಿಕವಾಗಿ ಕೇಳಿ ಬಂದುವು. ಇದೀಗ ಮುಂಬೈಯಲ್ಲಿ ಪತ್ರಕರ್ತೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಮಾಧ್ಯಮಗಳು ಅದಕ್ಕೆ ಕೊಟ್ಟ ಮಹತ್ವವು ಇಂಥ ಪ್ರಶ್ನೆಗಳಿಗೆ ಮತ್ತೊಮ್ಮೆ ಅವಕಾಶ ಮಾಡಿಕೊಟ್ಟಿದೆ.
   ಅತ್ಯಾಚಾರ ಎಂಬ ನಾಲ್ಕಕ್ಷ ರಕ್ಕೆ ಓರ್ವ ಹೆಣ್ಣು ಮಗಳ ಇಡೀ ಬದುಕಿನೊಂದಿಗೆ ಸಂಬಂಧ ಇದೆ. ಅತ್ಯಾಚಾರಿಗಳು ತಪ್ಪಿಸಿಕೊಳ್ಳುವಷ್ಟು ಸುಲಭವಾಗಿ ಓರ್ವ ಹೆಣ್ಣು ಮಗಳು ಆ ಆಘಾತದ ಗಾಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ದೈಹಿಕ ಗಾಯ ಒಂದೆಡೆಯಾದರೆ ಮಾನಸಿಕ ಗಾಯ ಇನ್ನೊಂದೆಡೆ. ಬದುಕನ್ನು ಮತ್ತೆ ಮೊದಲಿನಂತೆ ಅನುಭವಿಸಲು ಹೊರಡುವಾಗ ಹತ್ತು-ಹಲವು ಸಮಸ್ಯೆಗಳು ಆಕೆಗೆ ಎದುರಾಗುತ್ತವೆ. ಅತ್ಯಾಚಾರಿಗಳ ಕಡೆಯಿಂದ ಬೆದರಿಕೆ, ಒತ್ತಡಗಳು ಬರುತ್ತವೆ. ಸಮಾಜ ವಿಚಿತ್ರವಾಗಿ ನೋಡುವುದಕ್ಕೂ ಅವಕಾಶ ಒದಗುತ್ತದೆ. ಬಹುಶಃ ಹೆಸರನ್ನು ಗೌಪ್ಯವಾಗಿಟ್ಟುಕೊಂಡು ಘಟನೆಯನ್ನು ಮಾತ್ರ ಬಹಿರಂಗಪಡಿಸುವ ಅಪರೂಪದ ಪ್ರಕರಣಗಳಲ್ಲಿ ಅತ್ಯಾಚಾರವೂ ಒಂದು. ಯಾಕೆ ಹೀಗೆ ಅಂದರೆ, ಅತ್ಯಾಚಾರ ಎಂಬುದು ಕೇವಲ ಒಂದು ಅಪರಾಧವಷ್ಟೇ ಅಲ್ಲ, ಅದರೊಂದಿಗೆ ಹೆಣ್ಣಿನ ಗೌರವ, ಮಾನ, ಪ್ರತಿಷ್ಠೆ.. ಎಲ್ಲವೂ ಒಳಗೊಂಡಿದೆ. ನಿಜವಾಗಿ, ‘ನಿರ್ಭಯ' ಪ್ರಕರಣದ ಬಳಿಕ ದೇಶದಲ್ಲಿ ಕಾಣಿಸಿಕೊಂಡ ಪ್ರತಿಭಟನೆ, ಆಕ್ರೋಶವನ್ನು ಪರಿಗಣಿಸಿದರೆ, ಖಂಡಿತ ಅತ್ಯಾಚಾರ ಪ್ರಕರಣಗಳಲ್ಲಿ ಭಾರೀ ಕುಸಿತ ಉಂಟಾಗಬೇಕಿತ್ತು. ಅತ್ಯಾಚಾರಿಗಳನ್ನು ಕಠಿಣವಾಗಿ ದಂಡಿಸುವ ಕಾಯ್ದೆಯನ್ನು ನೋಡಿಯಾದರೂ ಅತ್ಯಾಚಾರಿ ಮನಸ್ಥಿತಿಯ ಮಂದಿಯಲ್ಲಿ ಭೀತಿ ಮೂಡಬೇಕಿತ್ತು. ಆದರೆ ಇಂಥ ಸುಳಿವುಗಳೇನೂ ಕಾಣಿಸುತ್ತಿಲ್ಲ. ಪತ್ರಕರ್ತೆಯ ಮೇಲೆ ಅತ್ಯಾಚಾರ ನಡೆದ ಮರುದಿನವೇ ಜಾರ್ಖಂಡ್‍ನಲ್ಲಿ ಮಹಿಳಾ ಪೊಲೀಸ್ ಪೇದೆಯ ಮೇಲೆ ಅತ್ಯಾಚಾರವಾಗಿದೆ. ಇವೆಲ್ಲ ಕೊಡುವ ಸಂದೇಶವೇನು? ಶಿಕ್ಷೆಯ ಭೀತಿ ಸಮಾಜದಿಂದ ಹೊರಟು ಹೋಗಿದೆ ಎಂಬುದನ್ನೇ ಅಲ್ಲವೇ?
   ನಿಜವಾಗಿ, ಅತ್ಯಾಚಾರ ಪ್ರಕರಣಗಳನ್ನು ಗಂಭೀರ ಚರ್ಚಾ ವಸ್ತುವಾಗಿ ಎತ್ತಿಕೊಳ್ಳುವ ಮಾಧ್ಯಮಗಳಲ್ಲಿ ಹೆಣ್ಣು ಭಾರೀ ಗೌರವಯುತವಾಗಿಯೇನೂ ಕಾಣಿಸಿಕೊಳ್ಳುತ್ತಿಲ್ಲ. ಆಕೆಯ ಉಡುಪು, ವರ್ತನೆ, ಆಂಗಿಕ ಭಾಷೆ.. ಎಲ್ಲವೂ ಸಭ್ಯತನದ ಮೇರೆಯೊಳಗಿದೆ ಎಂದು ಧೈರ್ಯದಿಂದ ಹೇಳುವ ವಾತಾವರಣವೂ ಇಲ್ಲ. ಮನರಂಜನೆಯ ಹೆಸರಲ್ಲಿ ಸಿನಿಮಾಗಳನ್ನು ಸಮರ್ಥಿಸಿಕೊಳ್ಳುವುದು ಸುಲಭ. ಹಾಗಂತ ವೀಕ್ಷಕರು ಕೇವಲ ಮನರಂಜನೆಯಾಗಿಯಷ್ಟೇ ಸಿನಿಮಾ, ಟಿ.ವಿ. ಕಾರ್ಯಕ್ರಮಗಳನ್ನು ಪರಿಗಣಿಸಬೇಕೆಂದಿಲ್ಲವಲ್ಲ. ಎಲ್ಲರೂ ಒಂದು ದೃಶ್ಯವನ್ನು ಒಂದೇ ಬಗೆಯಲ್ಲಿ ಅನುಭವಿಸುತ್ತಾರಾ? ಬೇರೆ ಬೇರೆ ವೀಕ್ಷಕರ ಮೇಲೆ ಅದು ಭಿನ್ನ ಭಿನ್ನ ಪ್ರಭಾವಗಳನ್ನು ಬೀರುವುದಕ್ಕೂ  ಅವಕಾಶ ಇದೆಯಲ್ಲವೇ? ವೀಕ್ಷಕನು ಬೆಳೆದು ಬಂದ ಪರಿಸರ, ಸಂಸ್ಕøತಿ ,ಜ್ಞಾನವನ್ನು ಹೊಂದಿಕೊಂಡು ಒಂದು ದೃಶ್ಯವೋ ಒಂದು ಡಯಲಾಗೋ ವ್ಯಾಖ್ಯಾನವನ್ನು ಪಡೆಯುತ್ತದೆ. ಹೀಗಿರುವಾಗ, ಸಿನಿಮಾ ಕ್ಷೇತ್ರವೂ ಸೇರಿದಂತೆ ಮಾಧ್ಯಮ ರಂಗವು ತನ್ನ ಕಾರ್ಯಕ್ರಮಗಳನ್ನು ಕೇವಲ ಮನರಂಜನೆಯೆಂದು ಸಮರ್ಥಿಸಿಕೊಳ್ಳುತ್ತಾ ಲೈಂಗಿಕ ದೌರ್ಜನ್ಯಕ್ಕೂ ತಮಗೂ ಸಂಬಂಧವಿಲ್ಲ ಎಂದು ಹೇಳುವುದನ್ನು ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳಬಹುದು?
   ಆಧುನಿಕ ಜೀವನ ಶೈಲಿಯು ಸ್ವಚ್ಛಂದತೆಯನ್ನು ಹೆಚ್ಚೆಚ್ಚು ಪ್ರೋತ್ಸಾಹಿಸುತ್ತಿದೆ. ಈ ಹಿಂದೆ ಯಾವುದೆಲ್ಲ ಕಪ್ಪು ಪಟ್ಟಿಯಲ್ಲಿದ್ದುವೋ ಅವೆಲ್ಲ ನಿಧಾನಕ್ಕೆ ಬಿಳಿ ಪಟ್ಟಿಯಲ್ಲಿ ಜಾಗ ಪಡಕೊಳ್ಳುತ್ತಿದೆ. ಮದ್ಯಪಾನವು ಇವತ್ತು ವ್ಯಕ್ತಿಯ ಸ್ಥಾನಮಾನವನ್ನು ಹೇಳುವ ಮಾನದಂಡವಾಗಿ ಪರಿವರ್ತನೆಯಾಗಿದೆ. ನೈತಿಕತೆ, ಪ್ರಾಮಾಣಿಕತೆ ಮುಂತಾದ ಪದಗಳಿಗಿದ್ದ ‘ತೂಕ' ಕಡಿಮೆಯಾಗುತ್ತಿದೆ. ಬದುಕನ್ನು ಅನುಭವಿಸುವ, ನಿಯಂತ್ರಣಗಳನ್ನೆಲ್ಲ ದಾಟಿ ಬದುಕುವ ಮುಕ್ತ ಜೀವನ ಕ್ರಮಗಳು ಆಧುನಿಕ ತಲೆಮಾರನ್ನು ತೀವ್ರವಾಗಿ ಆಕರ್ಷಿಸುತ್ತಿವೆ. ಇಂಥ ಹೊತ್ತಲ್ಲಿ, ಉನ್ನತ ಶಿಕ್ಷಣ ಪಡೆಯದ, ಗೆಳತಿಯರನ್ನು ಹೊಂದಲು ವಿಫಲವಾದ ಸಾಮಾನ್ಯ ವರ್ಗದಲ್ಲಿ ಅಸಹನೆ ಮಡುಗಟ್ಟುವುದಕ್ಕೆ ಅವಕಾಶ ಇದೆ. ತಮಗೆ ಅಸಾಧ್ಯವಾದದ್ದನ್ನು ಇತರರು ಅನುಭವಿಸುತ್ತಿದ್ದಾರೆಂಬ ಅಸೂಯೆಯು ಅಂತಿಮವಾಗಿ ಅವರನ್ನು ತಪ್ಪು ಕೃತ್ಯಕ್ಕೆ ಪ್ರೇರೇಪಿಸುತ್ತಿರಲಾರದು ಎಂದು ಹೇಳಲು ಸಾಧ್ಯವಿಲ್ಲ. ಬಹುಶಃ ಮದ್ಯಪಾನವು ಇಂಥ ಅಪಾಯಕಾರಿ ಸಾಹಸಕ್ಕೆ ಧೈರ್ಯ ಕೊಡುತ್ತಿರಲೂ ಬಹುದು.
   ಅತ್ಯಾಚಾರ ರಹಿತ ಸಮಾಜವೊಂದನ್ನು ಕಟ್ಟಬೇಕಾದರೆ ಮೊಟ್ಟಮೊದಲು ಅತ್ಯಾಚಾರಕ್ಕೆ ಪ್ರಚೋ
ದಕವಾಗುವ ಸರ್ವ ಚಟುವಟಿಕೆಗಳನ್ನೂ ನಿಯಂತ್ರಿಸಬೇಕಾದ ಅಗತ್ಯವಿದೆ. ಮನುಷ್ಯನನ್ನು ಅಮಲಲ್ಲಿ ತೇಲಿಸುವ ಮದ್ಯಪಾನಕ್ಕೆ ಸಂಪೂರ್ಣ ನಿಷೇಧ ವಿಧಿಸಬೇಕಾಗಿದೆ. ಅತ್ಯಾಚಾರ ಪ್ರಕರಣಗಳನ್ನು ವಿಚಾರಣೆಗೆ ಒಳಪಡಿಸುವುದಕ್ಕಾಗಿ ಪ್ರತ್ಯೇಕ ನ್ಯಾಯ ಮಂಡಳಿಗಳನ್ನು ಸ್ಥಾಪಿಸಿ, ಪ್ರತಿದಿನ ವಿಚಾರಣೆ ನಡೆಯುವಂತೆ ಮತ್ತು ಅತಿ ಶೀಘ್ರವಾಗಿ ತನಿಖೆ, ಆರೋಪ ಪಟ್ಟಿ, ಸಾಕ್ಷಿಗಳ ವಿಚಾರಣೆ ನಡೆಸಿ, ಅಂತಿಮ ತೀರ್ಪು ನೀಡುವಂತೆ ನೋಡಿಕೊಳ್ಳಬೇಕಾಗಿದೆ. ಯಾಕೆಂದರೆ ಅತ್ಯಾಚಾರವೆಂಬುದು ಕಳ್ಳತನ, ಕೊಲೆಯಂತೆ ಖಂಡಿತ ಅಲ್ಲ. ಒಂದು ಸಮಾಜದ ಆರೋಗ್ಯವನ್ನು ಅಳೆಯುವ ಮಾನದಂಡವೇ ಅಲ್ಲಿಯ ಮಹಿಳೆಯರು. ಅವರ ಆರೋಗ್ಯ ಅಪಾಯಕಾರಿ ಮಟ್ಟದಲ್ಲಿದ್ದರೆ ಆ ಸಮಾಜ ಪತನದ ಹಾದಿಯಲ್ಲಿದೆಯೆಂದೇ ಅರ್ಥ. ಆದ್ದರಿಂದ ಮಹಿಳೆಯರನ್ನು ರಕ್ಷಿಸಲು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ.

Tuesday 20 August 2013

ಪ್ರಜಾತಂತ್ರವಾದಿಗಳ ಮುಖವಾಡವನ್ನು ಕಳಚಿಟ್ಟ ಬ್ರದರ್‍ಹುಡ್

   ಪ್ರಜಾತಂತ್ರದ ಬಗ್ಗೆ ಭಾರೀ ಕಾಳಜಿ ವ್ಯಕ್ತಪಡಿಸಿ ಆಗಾಗ ಹೇಳಿಕೆಗಳನ್ನು ಕೊಡುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳ ಕಪಟ ಮುಖವನ್ನು ಈಜಿಪ್ಟ್ ನ ಮುಸ್ಲಿಮ್ ಬ್ರದರ್‍ಹುಡ್ ಮತ್ತೊಮ್ಮೆ ತೆರೆದಿಟ್ಟಿದೆ. ಈ ಮುಖ ಎಷ್ಟು ಅಪಾಯಕಾರಿಯಾದದ್ದೆಂದರೆ ಅದಕ್ಕೆ ಪಾಪ ಭಾವನೆಯೂ ಇಲ್ಲ, ನಾಚಿಕೆಯೂ ಇಲ್ಲ. ಚೀನಾದಲ್ಲಿ, ಮ್ಯಾನ್ಮಾರ್, ಸಿರಿಯಾಗಳಲ್ಲಿ ನಡೆದ ಪ್ರಜಾ ಚಳವಳಿಗಳನ್ನು ಬೆಂಬಲಿಸಿದ್ದು ಅಮೇರಿಕವೇ. ಉತ್ತರ ಕೊರಿಯದ ಕಮ್ಯುನಿಸ್ಟ್ ಸೇನಾಡಳಿತವನ್ನು ಕಿತ್ತು ಹಾಕುವುದಕ್ಕಾಗಿ ನಿರ್ಬಂಧಗಳನ್ನು ಹೇರುತ್ತಿರುವುದೂ ಅಮೇರಿಕವೇ. ಇಂಥ ರಾಷ್ಟ್ರವೊಂದು ಈಜಿಪ್ಟ್ ಸೇನಾಡಳಿತವನ್ನು ಬೆಂಬಲಿಸುವ ಧಾಟಿಯಲ್ಲಿ ಮಾತಾಡುತ್ತಿರುವುದಕ್ಕೆ ಏನೆನ್ನಬೇಕು? ಈಜಿಪ್ಟ್ ಗೆ ತಾನು ಪ್ರತಿ ವರ್ಷ ಕೊಡುತ್ತಿರುವ 1.3 ಬಿಲಿಯನ್ ಡಾಲರ್ ಸೇನಾ ನೆರವನ್ನು ಕಡಿತಗೊಳಿಸಿದರೆ ಅದನ್ನು ಸೌದಿ ಅರೇಬಿಯ ಮತ್ತು ಯುಎಇ ತುಂಬುವ ಸಾಧ್ಯತೆ ಇರುವುದರಿಂದ ತಾನು ನೆರವು ಕಡಿತಗೊಳಿಸಲಾರೆ (ದಿ ಹಿಂದೂ, ಆಗಸ್ಟ್ 17) ಎಂದಿರುವುದನ್ನು ಏನೆಂದು ವ್ಯಾಖ್ಯಾನಿಸಬೇಕು? ಅಮೇರಿಕ ಇಷ್ಟೊಂದು ದುರ್ಬಲವಾದದ್ದು ಯಾವಾಗಿನಿಂದ?
   ಇರಾನ್‍ನ ಅಣು ಯೋಜನೆಯನ್ನು ಪ್ರತಿಭಟಿಸಿ ಅಮೇರಿಕ ಹತ್ತಾರು ಬಾರಿ ಮಾತಾಡಿದೆ. ಪ್ರಾದೇಶಿಕ ಭದ್ರತೆಗೆ ಇರಾನ್‍ನ ಅಣು ಯೋಜನೆ ಎಷ್ಟು ದೊಡ್ಡ ಅಪಾಯವೆಂಬುದನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅದು ವಿವರಿಸುತ್ತಲೇ ಬಂದಿದೆ. ಅದರ ಮೇಲೆ ಹಲವು ಸುತ್ತಿನ ನಿರ್ಬಂಧಗಳನ್ನೂ ಈಗಾಗಲೇ ಹೊರಿಸಿದೆ. ಅಷ್ಟೇ ಅಲ್ಲ, ಇರಾನ್‍ನೊಂದಿಗೆ ಯಾರೂ ಸಂಬಂಧ ಬೆಳೆಸಬಾರದೆಂದೂ ವಿಶ್ವ ರಾಷ್ಟ್ರಗಳಿಗೆ ತಾಕೀತು ಮಾಡಿದೆ. ಇಷ್ಟೊಂದು ಸಾಮರ್ಥ್ಯ  ಇರುವ ಅಮೇರಿಕವು ಸೌದಿ ಅರೇಬಿಯದ ಮುಂದೆ ಈ ಮಟ್ಟದಲ್ಲಿ ತಲೆ ತಗ್ಗಿಸುತ್ತಿರುವುದಕ್ಕೆ ಕಾರಣವೇನು? ಇರಾನ್‍ನ ಅಣು ಯೋಜನೆಯು ವಲಯದ ಭದ್ರತೆಗೆ ಅಪಾಯಕಾರಿ ಎಂದಾದರೆ, ಈಜಿಪ್ಟ್ ಸೇನಾಡಳಿತವನ್ನು ಬೆಂಬಲಿಸುವ ಸೌದಿ ಅರೇಬಿಯವು ವಲಯದ ಪ್ರಜಾ ಚಳವಳಿಗಳಿಗೆ  ಅಪಾಯಕಾರಿಯೇ ಅಲ್ಲವೇ? ಇರಾನ್‍ನ ವಿರುದ್ಧ ಕಠಿಣ ನಿಲುವು ತಳೆದಂತೆಯೇ ಸೌದಿಯ ವಿರುದ್ಧವೂ ತಳೆಯಲು ಅಮೇರಿಕಕ್ಕೆ ಏನು ತೊಂದರೆಯಿದೆ?
   ನಿಜವಾಗಿ, ಅಮೇರಿಕವು ಈಜಿಪ್ಟ್ ಗೆ ಒದಗಿಸುತ್ತಿರುವ ನೆರವಿಗೂ ಸೌದಿ ಮತ್ತು ಯುಎಇ ಒದಗಿಸುತ್ತಿರುವ ನೆರವಿಗೂ ತುಂಬಾ ವ್ಯತ್ಯಾಸವಿದೆ. ಅಮೇರಿಕದ ನೆರವು ನೇರವಾಗಿ ತಲುಪುವುದು ಮಿಲಿಟರಿ ಚಟುವಟಿಕೆಗಳಿಗೆ. ಈಜಿಪ್ಟ್ ಸೇನೆಯು ಇವತ್ತು ಪ್ರತಿಭಟನೆಯನ್ನು ಬುಲ್ಡೋಜರ್ ಹರಿಸಿ ದಮನಿಸಿದ್ದರೆ, ಆ ಬುಲ್ಡೋಜರನ್ನು ಒದಗಿಸಿದ್ದು ಅಮೇರಿಕ. ಸೇನಾ ಸಮವಸ್ತ್ರ, ಆಯುಧಗಳು, ಮದ್ದುಗುಂಡುಗಳು ಎಲ್ಲವೂ ಆಮದಾಗಿರುವುದು ಅಮೇರಿಕದಿಂದಲೇ. ಆದರೆ ಸೌದಿ ಅಥವಾ ಯುಎಇಯ ನೆರವು ನೇರವಾಗಿ ಮಿಲಿಟರಿಗೆ ಸಂಬಂಧಿಸಿದ್ದಲ್ಲ. ಮಿಲಿಟರಿಗೆ ಬಳಸಿಕೊಳ್ಳುವ ಅವಕಾಶ ಇದ್ದರೂ ಈಜಿಪ್ಟ್ ನ ಆರ್ಥಿಕ ಬೇಡಿಕೆಯನ್ನು ಪೂರೈಸುವುದಕ್ಕೆ ಇದನ್ನು ನೀಡುತ್ತಿರುವುದಾಗಿ ಅವು ಬಿಂಬಿಸಿಕೊಳ್ಳುತ್ತಿವೆ. ಅದೇನೇ ಇದ್ದರೂ, ಒಂದು ಪ್ರಜಾತಂತ್ರ ಸರಕಾರವನ್ನು ಪದಚ್ಯುತಗೊಳಿಸಿದ ಅಪರಾಧವನ್ನು ಸೇನೆ ಹೊತ್ತು ಕೊಂಡಿರುವಾಗ ಅದಕ್ಕೆ ಬೆಂಬಲವಾಗಿ ನಿಲ್ಲುವುದನ್ನು ಜಗತ್ತೇಕೆ ಪ್ರಶ್ನಿಸುತ್ತಿಲ್ಲ? ಐದಾರು ತಿಂಗಳುಗಳ ಹಿಂದೆ ಮಾಲಿ ಎಂಬ ಪುಟ್ಟ ರಾಷ್ಟ್ರದ ಪ್ರಜಾ ಸರಕಾರವನ್ನು ಬಂಡುಕೋರರು ಬುಡಮೇಲುಗೊಳಿಸಿದಾಗ, ಫ್ರಾನ್ಸ್ ನೆರವಿಗೆ ಧಾವಿಸಿತ್ತು. ಸೇನಾ ಕಾರ್ಯಾಚರಣೆಯನ್ನು ನಡೆಸಿ ಬಂಡುಕೋರರನ್ನು ಹೊರ ದಬ್ಬಿತ್ತು. ಮ್ಯಾನ್ಮಾರ್‍ನ ಸೇನಾ ಆಡಳಿತದ ವಿರುದ್ಧ ಅಮೇರಿಕವು ಕೆಲವು ನಿರ್ಬಂಧಗಳನ್ನು ಹೇರಿ ಪ್ರಜಾತಂತ್ರಕ್ಕೆ ಮರಳುವಂತೆ ಒತ್ತಡ ಹಾಕಿತ್ತು. ಇಲ್ಲೆಲ್ಲಾ ಅನ್ವಯವಾಗುವ ನೀತಿಯು ಈಜಿಪ್ಟ್ ನ ವಿಷಯದಲ್ಲಿ ಮಾತ್ರ ಯಾಕೆ ಅಳವಡಿಕೆಯಾಗುತ್ತಿಲ್ಲ?
    ನಿಜವಾಗಿ, ಅಮೇರಿಕ ಬಯಸುವುದು ಪ್ರಜಾತಂತ್ರವನ್ನಲ್ಲ. ತನ್ನ ಹಿತಾಸಕ್ತಿಗೆ ಅನುಕೂಲವಾಗುವ ಸರಕಾರಗಳನ್ನು. ಬ್ರದರ್‍ಹುಡ್ ಅಧಿಕಾರದಲ್ಲಿ ಮುಂದುವರಿದರೆ ತನ್ನ ಮಿತ್ರ ರಾಷ್ಟ್ರ ಇಸ್ರೇಲ್ ಮತ್ತು ಗಲ್ಫ್ ದೊರೆಗಳಿಗೆ ಅಪಾಯ ಎದುರಾಗಬಹುದು ಎಂದು ಅಮೇರಿಕ ಭಯ ಪಡುತ್ತಿದೆ. ಆದ್ದರಿಂದಲೇ ಬ್ರದರ್‍ಹುಡ್ ಮತ್ತು ಅಂತಾರಾಷ್ಟ್ರೀಯ ಮಧ್ಯಸ್ಥಿಕೆದಾರರ ಮಧ್ಯೆ ಸಂಧಾನ ಮಾತುಕತೆ ಯಶಸ್ವಿಯಾಗಿದ್ದರೂ ಸೇನೆ ಅದನ್ನು ತಿರಸ್ಕರಿಸಿ ಬುಲ್ಡೋಜರ್ ಹರಿಸಿತು ಎಂದು ದಿ ಹಿಂದೂ (ಆಗಸ್ಟ್ 17, 2013) ಸಂಪಾದಕೀಯ ಬರೆದಿರುವುದು. ಮಾತ್ರವಲ್ಲ, ಸೇನಾ ದೌರ್ಜನ್ಯವನ್ನು ಖಂಡಿಸಿ ಉಪಾಧ್ಯಕ್ಷ ಮುಹಮ್ಮದ್ ಅಲ್ ಬರ್ದಾಯಿ ರಾಜಿನಾಮೆ ಕೊಟ್ಟು ಹೊರಬಂದರೂ ಅವರ ನ್ಯಾಶನಲ್ ಸಾಲ್ವೇಶನ್ ಫ್ರಂಟ್ ಪಕ್ಷವು ಸೇನೆಯನ್ನು ಈಗಲೂ ಬೆಂಬಲಿಸುತ್ತಿರುವುದು. ಒಂದು ವೇಳೆ, ಪ್ರಜಾತಂತ್ರದ ಪರ ಅಮೇರಿಕದ ನಿಲುವು ಪ್ರಾಮಾಣಿಕವೇ ಆಗಿರುತ್ತಿದ್ದರೆ ಅದು ಮೊಟ್ಟಮೊದಲು ಸೌದಿ ದೊರೆತನದ ವಿರುದ್ಧ ಮಾತಾಡಬೇಕಿತ್ತು. ಮಾತ್ರವಲ್ಲ, ಈಜಿಪ್ಟ್ ನ ಸೇನಾ ಪಡೆಯನ್ನು ಬೆಂಬಲಿಸಬಾರದೆಂದೂ ತಾಕೀತು ಮಾಡಬೇಕಿತ್ತು. ಆದರೆ ಅಮೇರಿಕ ಇವಾವುದನ್ನೂ ಮಾಡಿಲ್ಲ.
   ಈಜಿಪ್ಟ್ ನ ಬೆಳವಣಿಗೆಯು ಒಂದು ರೀತಿಯಲ್ಲಿ ಅರಬ್ ಜಗತ್ತಿನ ತಲ್ಲಣಗಳನ್ನು ಬಹಿರಂಗಕ್ಕೆ ತಂದಿದೆ. ಬ್ರದರ್‍ಹುಡ್‍ನ ರಾಜಕೀಯ ಗೆಲುವು ತಮ್ಮ ದೊರೆತನದ ಅವಸಾನಕ್ಕೆ ಕಾರಣವಾದೀತೆಂಬ ಭೀತಿಯಿಂದ ಅವು ನಡುಗುತ್ತಿವೆ. ಅರಬ್ ದೊರೆತನಕ್ಕೆ ಅಪಾಯ ಎದುರಾಗುವುದೆಂದರೆ ಅದು ತಮ್ಮ ಹಿತಾಸಕ್ತಿಗೆ ಎದುರಾಗುವ ಅಪಾಯವೂ ಹೌದೆಂಬುದಾಗಿ ಅಮೇರಿಕ ಭಾವಿಸಿಕೊಂಡಿದೆ. ಆದ್ದರಿಂದ ಅರಬ್ ವಲಯದಲ್ಲಿ ಪ್ರಜಾತಂತ್ರ ಗಟ್ಟಿಯಾಗಬಾರದೆಂದು ಅವರೆಲ್ಲ ತೀರ್ಮಾನಿಸಿದ್ದಾರೆ. ಈ ಕಾರಣದಿಂದಲೇ ಟುನೀಶ್ಯಾ, ಟರ್ಕಿ, ಲಿಬಿಯಗಳ ಚುನಾಯಿತ ಸರಕಾರಗಳ ವಿರುದ್ಧ ಬಂಡಾಯ ಕಾಣಿಸಿಕೊಂಡಿರುವುದು. ತಾವೇ ಪ್ರತಿಭಟನೆಯನ್ನು ಆಯೋಜಿಸಿ ಅದರ ನೆಪದಲ್ಲಿ ಚುನಾಯಿತ ಸರಕಾರಗಳನ್ನು ಉರುಳಿಸುವ ನಾಟಕವನ್ನು ಈ ಮಂದಿ ಹೆಣೆದಿದ್ದಾರೆ. ಅದರ ಪ್ರಥಮ ಬಲಿಪಶು ಮುಸ್ಲಿಮ್ ಬ್ರದರ್‍ಹುಡ್. ದಶಕಗಳ ಹಿಂದೆ ಅಲ್ಜೀರಿಯಾದಲ್ಲಿ ಇಸ್ಲಾಮಿಕ್ ಸಾಲ್ವೇಶನ್ ಫ್ರಂಟ್ ಪಕ್ಷವು  ಚುನಾವಣೆಯಲ್ಲಿ ಭಾರೀ ಗೆಲುವು ದಾಖಲಿಸಿದ್ದರೂ ಸೇನೆಯು ಬಲವಂತದಿಂದ ಅಧಿಕಾರ ಕಿತ್ತುಕೊಂಡು ಮತ್ತೆಂದೂ ತಲೆ ಎತ್ತದಂತೆ ಮಾಡಿರುವ ಹಾಗೆಯೇ ಈಜಿಪ್ಟ್ ನಲ್ಲೂ ಮತ್ತು ಇತರೆಡೆಗಳಲ್ಲೂ ಮಾಡುವ ಹುನ್ನಾರವನ್ನು ಅವು ರೂಪಿಸಿವೆ. ಒಮ್ಮೆ ಅಧಿಕಾರವನ್ನು ಕೊಟ್ಟಂತೆ ಮಾಡಿ, ಆ ಬಳಿಕ ವಿವಿಧ ಆರೋಪಗಳ ಮುಖಾಂತರ ಕಸಿದುಕೊಂಡು, ಶಾಶ್ವತವಾಗಿ ದಮನಿಸುವುದು ಅವರ ಉದ್ದೇಶ. ಈಜಿಪ್ಟ್ ಬೆಳವಣಿಗೆ ಸೂಚಿಸುತ್ತಿರುವುದು ಇದನ್ನೇ.

Monday 12 August 2013

ನಾಪತ್ತೆಯಾಗುವ ಪಾಂಡೆ ಮತ್ತು ಗುಜರಾತ್ ಮಾದರಿ


   ‘ನಾಪತ್ತೆ’ ಆಗುವವರಿಗೆ ಗುಜರಾತ್ ರಾಜ್ಯವು ಎಷ್ಟೊಂದು ಸುರಕ್ಷಿತ ತಾಣ ಎಂಬುದನ್ನು ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿ ಪಿ.ಪಿ. ಪಾಂಡೆಯವರು ಕಳೆದ ಎರಡ್ಮೂರು ತಿಂಗಳಿನಿಂದ ಸಾಬೀತುಪಡಿಸುತ್ತಲೇ ಬಂದಿದ್ದಾರೆ. ಇಶ್ರತ್ ಜಹಾನ್ ಎನ್‍ಕೌಂಟರ್ ಪ್ರಕರಣದಲ್ಲಿ ಅವರ ವಿರುದ್ಧ ಸಿಬಿಐಯು ಆರೋಪ ಪಟ್ಟಿ ಸಲ್ಲಿಸಿದ ಕೂಡಲೇ ಅವರು ನಾಪತ್ತೆಯಾಗಿದ್ದರು. ಮೊನ್ನೆ ಮೊನ್ನೆಯಂತೆ ಸ್ಟ್ರೆಚರ್‍ನಲ್ಲಿ ಮಲಗಿಕೊಂಡು ದಿಢೀರ್ ಆಗಿ ಸಿಬಿಐ ನ್ಯಾಯಾಲಯದಲ್ಲಿ ಹಾಜರಾದರು. ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಆದರೆ ಅರ್ಜಿ ತಿರಸ್ಕøತಗೊಂಡ ಕೂಡಲೇ ಆಸ್ಪತ್ರೆಯಿಂದ ಅವರು ಪುನಃ ನಾಪತ್ತೆಯಾಗಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕನೊಬ್ಬನಿಗೆ ಗುಜರಾತ್‍ನಲ್ಲಿ ಇಷ್ಟೊಂದು ದೀರ್ಘ ಅವಧಿವರೆಗೆ ತಲೆಮರೆಸಿಕೊಂಡು ಬದುಕಲು ಸಾಧ್ಯ ಎಂದಾದರೆ ‘ಮೋದಿ ಮಾದರಿಯ' ಅರ್ಥವಾದರೂ ಏನು? ಆ ಮಾದರಿಯಲ್ಲಿ ಏನೆಲ್ಲ, ಯಾವುದೆಲ್ಲ ಒಳಗೊಂಡಿದೆ? ಇಶ್ರತ್ ಜಹಾನ್‍ಳನ್ನು ರಾತೋರಾತ್ರಿ ಪತ್ತೆ ಹಚ್ಚಿ ಎನ್‍ಕೌಂಟರ್ ಮಾಡುವಷ್ಟು ನಿಪುಣರಾಗಿರುವ ಗುಜರಾತ್ ಪೊಲೀಸರಿಗೆ, ಪಾಂಡೆಯನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲವೆಂದರೆ ಏನರ್ಥ? ಇಷ್ಟಕ್ಕೂ, ಇಶ್ರತ್‍ ಜಹಾನ್, ಪ್ರಾಣೇಶ್ ಪಿಳ್ಳೆ ಎಂಬವರೆಲ್ಲ ಪಾಂಡೆಯಂತೆ  ಪರಿಚಿತರಲ್ಲವಲ್ಲ. ಅವರೆಲ್ಲ ತೀರಾ ಸಾಮಾನ್ಯರಲ್ಲಿ ಸಾಮಾನ್ಯರು. ನಾಪತ್ತೆಯಾಗಿರುವರೆಂದು ಹೇಳಿ ಅವರ ಪೋಟೋವನ್ನು ರೈಲು, ಬಸ್ಸು ನಿಲ್ದಾಣಗಳಲ್ಲಿ ತೂಗು ಹಾಕಲಾಗಿಲ್ಲ. ಪತ್ರಿಕೆಗಳಲ್ಲಿ ಅವರ ಪೋಟೋ ಪ್ರಕಟ ಆಗಿಲ್ಲ. ಹಾಗಿದ್ದರೂ ಅವರನ್ನು ಪತ್ತೆ ಹಚ್ಚುವ ಸಾಮರ್ಥ್ಯ  ಗುಜರಾತ್ ಪೊಲೀಸ್ ಇಲಾಖೆಗೆ ಇದೆಯೆಂದ ಮೇಲೆ, ಗುಜರಾತ್‍ನಾದ್ಯಂತ ಸಣ್ಣ ಮಕ್ಕಳಿಗೂ ಮುಖ ಪರಿಚಯ ಇರುವ ಪಾಂಡೆ ಯಾಕೆ ಪತ್ತೆಯಾಗುತ್ತಿಲ್ಲ? ಮೋದಿಯವರು ಮಾದರಿ ಎಂದು ಹೇಳುತ್ತಾರಲ್ಲ, ಯಾವುದನ್ನು? ಈ ಪೊಲೀಸ್ ಇಲಾಖೆಯನ್ನೇ? ಇಂಥದ್ದೊಂದು ಅದಕ್ಷ  ಇಲಾಖೆಯನ್ನು ಕಟ್ಟಿ ಬೆಳೆಸಿರುವ ಮೋದಿಯವರು ಒಂದು ವೇಳೆ ಪ್ರಧಾನಿಯಾದರೆ ಈ ದೇಶದ ಪೊಲೀಸ್ ಇಲಾಖೆಗಳ ಸ್ಥಿತಿ ಏನಾದೀತು? ಕ್ರಿಮಿನಲ್‍ಗಳು, ಕೊಲೆ ಆರೋಪಿಗಳೆಲ್ಲ ನಾಪತ್ತೆಯಾಗುತ್ತಾ, ಸಾಮಾನ್ಯರು ಎನ್‍ಕೌಂಟರ್‍ಗೆ ಒಳಗಾಗುವ ವಾತಾವರಣ ಸೃಷ್ಟಿಯಾಗದೇ? ಒಂದು ನಾಪತ್ತೆ ಪ್ರಕರಣವನ್ನೇ ನಿಭಾಯಿಸಲಾಗದ ಮೋದಿಯವರು ಈ ವಿಶಾಲ ದೇಶವನ್ನು ಹೇಗೆ ತಾನೇ ಮುನ್ನಡೆಸಿಯಾರು?  
   ನಿಜವಾಗಿ, ಬಿಜೆಪಿ ಈ ದೇಶದಲ್ಲಿ ಹತ್ತಾರು ಪ್ರತಿಭಟನೆಗಳನ್ನು ನಡೆಸಿದೆ. ದೆಹಲಿ ಅತ್ಯಾಚಾರದಿಂದ ಹಿಡಿದು ಉಡುಪಿ ಅತ್ಯಾಚಾರದ ವರೆಗೆ ಧರಣಿ, ರಾಲಿಗಳನ್ನು ನಡೆಸಿದೆ. ಅಕ್ರಮ ಗೋಸಾಗಾಟಗಾರರನ್ನು ಬಂಧಿಸುವಂತೆ ಅದು ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ಅಂದಹಾಗೆ, ಇಂಥ ಅಪರಿಚಿತ ಅಪರಾಧಿಗಳ ವಿರುದ್ಧ ಬಿಜೆಪಿ ಕಾರ್ಯಕರ್ತರಲ್ಲಿ ಈ ಮಟ್ಟದ ಆಕ್ರೋಶ ಇರುವುದನ್ನು ತಪ್ಪು ಅನ್ನಬೇಕಿಲ್ಲ. ಅಪರಾಧಿಗಳು ಯಾರೇ ಆಗಿದ್ದರೂ ಅವರನ್ನು ಪತ್ತೆ ಹಚ್ಚುವಂತೆ ಒತ್ತಾಯಿಸುವುದು ಪ್ರತಿಯೋರ್ವ ಪ್ರಜೆಯ ಹಕ್ಕು. ದೇಶವು ಕ್ರಿಮಿನಲ್‍ಗಳ, ಕಳ್ಳಕಾಕರ, ಅತ್ಯಾಚಾರಿ ಗಳ ಪಾಲಾಗದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿಯನ್ನು ಯಾರು ಪ್ರದರ್ಶಿಸಿದರೂ ಅದು ಶ್ಲಾಘನೀಯವೇ. ಆದರೆ, ಬಿಜೆಪಿ ಕಾರ್ಯಕರ್ತರ ಈ ನ್ಯಾಯ ಪ್ರಜ್ಞೆಯು ಪಾಂಡೆಯ ವಿಚಾರದಲ್ಲಿ ಮಾತ್ರ ಯಾಕೆ ನಾಪತ್ತೆಯಾಗಿದೆ? ದೆಹಲಿಯಲ್ಲಿ ಅತ್ಯಾಚಾರಕ್ಕೆ ಈಡಾದ ಯುವತಿಯಂತೆಯೇ ಇಶ್ರತ್ ಕೂಡಾ ಓರ್ವ ಹೆಣ್ಣು. ಆಕೆ ಅಪರಾಧಿ ಎಂದು ಈವರೆಗೂ ಸಾಬೀತಾಗಿಲ್ಲ. ಆ ಇಡೀ ಎನ್‍ಕೌಂಟರ್ ಪ್ರಕರಣವೇ ನಕಲಿ ಎಂದು ಬಹುತೇಕ ಇವತ್ತು ಖಚಿತವಾಗಿಬಿಟ್ಟಿದೆ. ಹೀಗಿರುವಾಗ ಯುವತಿಯನ್ನು ಕೊಂದ ಆರೋಪಿಯನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿ ಯಾಕೆ ಅದು ಪ್ರತಿಭಟನೆ ಮಾಡುತ್ತಿಲ್ಲ? ಒಂದು ವೇಳೆ, ಪಾಂಡೆಯಂತೆ ಆರೋಪ ಹೊತ್ತುಕೊಂಡ ಅಧಿಕಾರಿಯೊಬ್ಬ ಬಿಹಾರದಲ್ಲೋ ದೆಹಲಿಯಲ್ಲೋ ನಾಪತ್ತೆಯಾಗುತ್ತಿದ್ದರೆ ಮೋದಿಯವರ ಕುಹುಕ ನುಡಿಗಳು ಹೇಗಿರುತ್ತಿತ್ತು? ಅದನ್ನು  ಯುಪಿಎಯ ವೈಫಲ್ಯಕ್ಕೆ ಪುರಾವೆಯಾಗಿ  ಅವರು ಉಲ್ಲೇಖಿಸುತ್ತಿರಲಿಲ್ಲವೇ? ದೇಶದೊಳಗೇ ಇರುವ ಅಧಿಕಾರಿಯನ್ನು ಪತ್ತೆ ಹಚ್ಚದವರು ಇನ್ನು ದಾವೂದ್ ಇಬ್ರಾಹೀಮ್‍ನನ್ನು ಪತ್ತೆ ಹಚ್ಚುತ್ತಾರಾ ಎಂದು ಪ್ರಶ್ನಿಸುತ್ತಿರಲಿಲ್ಲವೇ?
   ಪಾಂಡೆಯವರ ನಾಪತ್ತೆ ಪ್ರಕರಣವನ್ನು ಯಾವುದೋ ಓರ್ವ ಕಿಸೆಗಳ್ಳನ ನಾಪತ್ತೆಯಂತೆ ಪರಿಗಣಿಸಲು ಖಂಡಿತ ಸಾಧ್ಯವಿಲ್ಲ. ಹಿರಿಯ ಅಧಿಕಾರಿಯಾಗಿರುವ ಅವರು ನಾಪತ್ತೆಯಾಗುತ್ತಾರೆಂಬುದೇ ದೊಡ್ಡ ವಿಡಂಬನೆ. ನಡೆಯಲು ಸಾಧ್ಯವಿಲ್ಲದಷ್ಟು ಹೃದಯ ಬೇನೆಯಿರುವ ಓರ್ವ ವ್ಯಕ್ತಿ ನಾಪತ್ತೆಯಾಗುವುದು ಮತ್ತು ಅವರನ್ನು ಪತ್ತೆ ಹಚ್ಚುವಲ್ಲಿ ಒಂದಿಡೀ ವ್ಯವಸ್ಥೆ  ವೈಫಲ್ಯ ಅನುಭವಿಸುವುದೆಲ್ಲ ಗುಜರಾತ್ ಮಾದರಿ ಯಾಕೆ ಭಯಾನಕ ಅನ್ನುವುದಕ್ಕೆ ಉದಾಹರಣೆಯಾಗಿದೆ. ಅಲ್ಲಿ ಮೋದಿಗೆ ನಿಷ್ಠೆ ವ್ಯಕ್ತಪಡಿಸುವ ವ್ಯಕ್ತಿ ಸ್ಟ್ರೆಚರ್‍ನಲ್ಲಿ ಮಲಗಿದ್ದರೂ ನಾಪತ್ತೆಯಾಗುತ್ತಾನೆ. ನಿಜವಾಗಿ ಈ ಮಾದರಿಗೆ ಹೋಲಿಸಿದರೆ ಕರ್ನಾಟಕ ಮಾದರಿ ಎಷ್ಟೋ ಪಾಲು ಉತ್ತಮ. ಮೂಡಬಿದಿರೆಯ ಜೈನ ಬಸದಿಯಿಂದ ಆಭರಣಗಳನ್ನು ಹೊತ್ತೊಯ್ದ ಅಂತಾರಾಷ್ಟ್ರೀಯ ಕಳ್ಳನನ್ನು ಆಂಧ್ರ ಪ್ರದೇಶದಿಂದ ಪತ್ತೆ ಹಚ್ಚಿ ಕರೆ ತರಲು ರಾಜ್ಯ ಪೊಲೀಸರು ಯಶಸ್ವಿಯಾಗಿದ್ದಾರೆ. ಪಾಂಡೆಗೆ ಹೋಲಿಸಿದರೆ ಈ ಕಳ್ಳ ತೀರಾ ಅಪರಿಚಿತ. ಆತ ಪ್ರತಿ ಸಂದರ್ಭದಲ್ಲೂ ವೇಷ ಬದಲಿಸುತ್ತಿದ್ದ. ತನ್ನ ಗುರುತು ಪತ್ತೆಯಾಗದಂತೆ ಜಾಗರೂಕತೆ ಪಾಲಿಸುತ್ತಿದ್ದ. ಇಷ್ಟೆಲ್ಲಾ ಅಡೆತಡೆಗಳಿದ್ದೂ ರಾಜ್ಯ ಪೊಲೀಸರು ಓರ್ವ ನಿಪುಣ ಕಳ್ಳನನ್ನು ಎರಡು ವಾರಗಳೊಳಗೆ ಬಂಧಿಸಿ ತರುತ್ತಾರೆಂದರೆ ಯಾಕೆ ಈ ಇಲಾಖೆ ಮೋದಿಯ ಪಾಲಿಗೆ ಮಾದರಿ ಆಗಬಾರದು?
   ಮೋದಿ ಈ ದೇಶದ ಮುಂದೆ ಯಾವ ಮಾದರಿಯನ್ನು ಇವತ್ತು ಪ್ರತಿಪಾದಿಸುತ್ತಿದ್ದಾರೋ ಅದರ ಇನ್ನೊಂದು ಮುಖವಾಗಿ ಪಾಂಡೆ ನಮ್ಮ ಮುಂದಿದ್ದಾರೆ. ಗುಜರಾತ್ ಮಾದರಿಯಲ್ಲಿ ಪಾಂಡೆಯಂಥವರು ಬಂಧನಕ್ಕೆ ಒಳಗಾಗುವುದಿಲ್ಲ ಎಂಬುದಷ್ಟೇ ಈ ಪ್ರಕರಣ ಸಾರುವುದಲ್ಲ ಬದಲು ಇಶ್ರತ್‍ಳಂಥ ಬಲಿಗಳು ಈ ಮಾದರಿಗೆ ಸದಾ ಅಗತ್ಯವಿರುತ್ತದೆ ಎಂಬುದನ್ನೂ ಇದು ಹೇಳುತ್ತದೆ. ಆದ್ದರಿಂದಲೇ, ಪಾಂಡೆ ನಾಪತ್ತೆಯನ್ನು ಕೇವಲ ಓರ್ವ ಅಧಿಕಾರಿಯ ನಾಪತ್ತೆ ಪ್ರಕರಣವಾಗಿ ಪರಿಗಣಿಸಲು ಸಾಧ್ಯವಿಲ್ಲ. ಆ ನಾಪತ್ತೆಯ ಜೊತೆ ವ್ಯವಸ್ಥೆಗೂ ಪಾಲಿದೆ. ಈ ವಾಸ್ತವವನ್ನು ಅರಿತುಕೊಂಡರೆ ಗುಜರಾತ್ ಮಾದರಿ ಯಾವ ಕಾರಣಕ್ಕೆ ಈ ದೇಶದ ಪಾಲಿಗೆ ಮಾರಕ ಎಂಬುದು ಗೊತ್ತಾಗುತ್ತದೆ. ಈ ಮಾದರಿಯು ಪಾಂಡೆಯಂಥವರ ಅಡ್ಡೆಯಾಗಬಹುದೇ ಹೊರತು ಜನಸಾಮಾನ್ಯರ ಕನಸಿನ ರಾಷ್ಟ್ರವಾಗದು.


Monday 5 August 2013

ಗೋವನ್ನು ಹಿಂದೂ ಮುಸ್ಲಿಮ್ ಎಂದು ವಿಭಜಿಸದಿರೋಣ

    ಗೋವಿನ ಸುತ್ತ ಈ ದೇಶದಲ್ಲಿ ಅತಿ ಅನ್ನಬಹುದಾದಷ್ಟು ಬಾರಿ ಚರ್ಚೆಗಳು ನಡೆದಿವೆ. ಗೋವನ್ನು ಆರಾಧ್ಯವಾಗಿ ಪರಿಗಣಿಸುವವರು ಇರುವಂತೆಯೇ ಆಹಾರವಾಗಿ ಪರಿಗಣಿಸುವವರೂ ಈ ದೇಶದಲ್ಲಿ ಧಾರಾಳ ಇದ್ದಾರೆ. ಹಾಗಂತ ಈ ಭಿನ್ನ ದೃಷ್ಟಿಕೋನಗಳನ್ನು ಸಮಾಜಘಾತುಕರು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗಪಡಿಸುವುದನ್ನು ಯಾರೂ ಯಾವ ಕಾರಣಕ್ಕೂ ಬೆಂಬಲಿಸಬಾರದು. ಗೋವನ್ನು ಆರಾಧಿಸುವವರನ್ನು ಅವಮಾನಿಸುವುದಕ್ಕಾಗಿ ಯಾರಾದರೂ ಗೋಮಾಂಸ ಸೇವಿಸುತ್ತಾರಾದರೆ ಅಥವಾ ಜಾನುವಾರುಗಳ ಹತ್ಯೆ ನಡೆಸುತ್ತಾರಾದರೆ, ಅವರನ್ನು ಬಲವಾಗಿ ಖಂಡಿಸುವುದಕ್ಕೆ ನಮಗೆ ಸಾಧ್ಯವಾಗಬೇಕು. ಯಾಕೆಂದರೆ ಇನ್ನೊಬ್ಬರ ಆರಾಧ್ಯರನ್ನು ಅವಮಾನಿಸುವುದನ್ನು ಪವಿತ್ರ ಕುರ್‍ಆನ್ ಕಾನೂನುಬಾಹಿರವೆಂದು ಸಾರುತ್ತದೆ. (6:17)
   ರಾಜ್ಯ ಬಿಜೆಪಿ ಸರಕಾರವು 2010ರಲ್ಲಿ ಗೋ ಸಂರಕ್ಷಣಾ ಕಾಯ್ದೆಯನ್ನು ರೂಪಿಸಿದಾಗ ರಾಜ್ಯದಲ್ಲಿ ಪರ-ವಿರುದ್ಧ ಅಭಿಪ್ರಾಯಗಳು ವ್ಯಕ್ತವಾಗಿದ್ದುವು. ಗೋವು, ಕರು, ಎತ್ತು, ಎಮ್ಮೆ, ಕೋಣಗಳನ್ನು ಹತ್ಯೆ ಮಾಡುವುದು 1 ಲಕ್ಷ ರೂ. ದಂಡಕ್ಕೆ ಮತ್ತು 7 ವರ್ಷ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧವೆಂದು ಕಾಯ್ದೆಯಲ್ಲಿ ಉಲ್ಲೇಖಿಸಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾದುವು. ಬಳಕೆಗೆ ಯೋಗ್ಯವಲ್ಲದ ಎತ್ತು, ಕೋಣಗಳನ್ನು ಮತ್ತು ಬಂಜೆಯಾಗಿರುವ ಗೋವು, ಎಮ್ಮೆಗಳನ್ನು ರೈತರು ಏನು ಮಾಡಬೇಕು ಎಂದು ಅನೇಕರು ಪ್ರಶ್ನಿಸಿದರು. ಒಂದು ಹಸು ಅಥವಾ ಎಮ್ಮೆಯ ಆಯುಷ್ಯ ಸಾಮಾನ್ಯವಾಗಿ 25 ವರ್ಷ ಆಗಿದ್ದರೂ ಅದು ಹಾಲು ಕೊಡುವುದು 15 ವರ್ಷಗಳ ವರೆಗೆ ಮಾತ್ರ. ಉಳಿದ 10 ವರ್ಷಗಳ ವರೆಗೆ ಓರ್ವ ರೈತ ಅದನ್ನು ಸಾಕಬೇಕಾದರೆ ಸಾಕಷ್ಟು ದುಡ್ಡಿನ ಅಗತ್ಯ ಇದೆ. ಉಳುಮೆಗೆ ಯೋಗ್ಯವಲ್ಲದ ಎತ್ತು, ಕೋಣದ ಸ್ಥಿತಿಯೂ ಹೀಗೆಯೇ. ಅವುಗಳನ್ನು ಮಾರದೇ ಹೊಸತನ್ನು ಖರೀದಿಸುವುದಕ್ಕೆ ರೈತ ಎಲ್ಲಿಂದ ದುಡ್ಡು ಹೊಂದಿಸಬೇಕು? ಆದ್ದರಿಂದ ಸರಕಾರವು ಮುದಿ ಜಾನುವಾರುಗಳನ್ನು ಖರೀದಿಸುವುದಕ್ಕೆ ವ್ಯವಸ್ಥೆ ಮಾಡದೆ ಮತ್ತು ಮೇವು, ಹಿಂಡಿಗಾಗಿ ಬಜೆಟ್‍ ಅನ್ನು ರೂಪಿಸದೇ ಕೇವಲ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವುದು ತಪ್ಪು ಎಂದು ಅನೇಕರು ವಾದಿಸಿದರು. ಹೀಗಿರುತ್ತಾ, ಹಿಂದಿನ 1964 ರ ಕಾಯ್ದೆಯನ್ನೇ ಈಗಿನ ಕಾಂಗ್ರೆಸ್ ಸರಕಾರವು ಊರ್ಜಿತಗೊಳಿಸಿತು. ಹಾಗಂತ ಈ ನಿರ್ಧಾರದ ವಿರುದ್ಧ ಪ್ರತಿಭಟನೆಗಳು ನಡೆದಿಲ್ಲ ಎಂದಲ್ಲ. ನಡೆದಿದೆ. ಆದರೆ ಈ ಪರ ಮತ್ತು ವಿರುದ್ಧ ನಿಲುವುಗಳನ್ನು ಗೌರವಿಸಬೇಕೇ ಹೊರತು ಒಂದನ್ನು ದೇಶಪ್ರೇಮಿಯೆಂದೂ ಇನ್ನೊಂದನ್ನು ದೇಶದ್ರೋಹಿಯೆಂದೂ ವಿಭಜಿಸುವುದು ಖಂಡಿತ ತಪ್ಪು.
   ಆದರೆ ಇತ್ತಿತ್ತಲಾಗಿ ಗೋ ಕಳ್ಳತನ ಎಂಬ ಶೀರ್ಷಿಕೆಯಲ್ಲಿ ಹೆಚ್ಚೆಚ್ಚು ಸುದ್ದಿಗಳು ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ನಿಜವಾಗಿ, ಗೋವನ್ನು ಕದಿಯುವವರಿಗೂ ಅದನ್ನು ಆಹಾರವಾಗಿಯೂ ಪರಿಗಣಿಸುವವರಿಗೆ ವ್ಯತ್ಯಾಸವಿದೆ. ಕದಿಯುವುದು ಯಾವ ವಸ್ತುವನ್ನೇ ಆದರೂ ಅಪರಾಧವೇ. ಕೇವಲ ಗೋವು ಎಂದಲ್ಲ, ಅಕ್ರಮವಾಗಿ ಜಾನು ವಾರುಗಳನ್ನು ಸಾಗಾಟ ಮಾಡುವುದು, ಮಾಂಸ ಮಾಡುವುದನ್ನು ಯಾವ ನಿಟ್ಟಿನಲ್ಲೂ ಸಮರ್ಥಿಸಿ ಕೊಳ್ಳಲು ಸಾಧ್ಯವಿಲ್ಲ. ಹಾಲು ಕೊಡುವ ಆಕಳನ್ನು ಮತ್ತು ಕರುವನ್ನು ಮಾಂಸಕ್ಕಾಗಿ ಉಪಯೋಗಿಸುವುದನ್ನು ಇಸ್ಲಾಂ ಬಲವಾಗಿ ವಿರೋಧಿಸುತ್ತದೆ. ಅಂಥವರು  ಯಾರೇ ಆಗಿರಲಿ, ಯಾವ ಧರ್ಮಕ್ಕೇ ಸೇರಿರಲಿ, ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲೇಬೇಕು.
   ಸಾರ್ವಜನಿಕವಾಗಿ ಇವತ್ತು ಒಂದು ಬಗೆಯ ಪೂರ್ವಗ್ರಹವಿದೆ. ಗೋ ಕಳ್ಳತನ ಅಥವಾ ಅಕ್ರಮ ಸಾಗಾಟಕ್ಕೆ ಮುಸ್ಲಿಮ್ ಸಮುದಾಯದ ಬೆಂಬಲವಿದೆ ಎಂದು ನಂಬಿಕೊಂಡವರು ಸಮಾಜದಲ್ಲಿದ್ದಾರೆ. ಅಕ್ರಮ ಕಸಾಯಿಖಾನೆಗಳ ಬಗ್ಗೆಯೂ ಇಂಥದ್ದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರಿದ್ದಾರೆ. ನಿಜವಾಗಿ, ಕದಿಯುವುದು ಗೋವನ್ನಾದರೂ ಇನ್ನೇನನ್ನೇ ಆದರೂ ಅದು ಕಳ್ಳತನವೇ. ಗೋವನ್ನು ಕದ್ದರೆ ಅದನ್ನು ಬೆಂಬಲಿಸುವುದು, ಅಡಿಕೆ ಕದ್ದರೆ ವಿರೋಧಿಸುವುದನ್ನು ಯಾರಿಂದಲೂ ಸಮರ್ಥಿಸಿ ಕೊಳ್ಳಲು ಸಾಧ್ಯವಿಲ್ಲ. ಇತರೆಲ್ಲ ವಸ್ತುಗಳ ಅಕ್ರಮ ಸಾಗಾಟ ಹೇಗೆ ತಪ್ಪೋ ಹಾಗೆಯೇ ಅಕ್ರಮ ಗೋಸಾಗಾಟವೂ. ದುರಂತ ಏನೆಂದರೆ, ಗೋವಿಗೆ ಸಂಬಂಧಿಸಿದ ಯಾವುದೇ ಚರ್ಚೆಯನ್ನು ಇವತ್ತು ಮುಸ್ಲಿಮ್ vs ಹಿಂದೂ ಎಂದು ವಿಭಜಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಗೋಹತ್ಯೆ ನಿಷೇಧಕ್ಕೆ ಮುಸ್ಲಿಮರೇ ಅಡ್ಡಗಾಲಾಗಿದ್ದಾರೆ ಎಂಬ ರೀತಿಯಲ್ಲಿ ಪ್ರಚಾರ ಮಾಡಲಾಗುತ್ತಿದೆ. ನಿಜವಾಗಿ, ಗೋವು ಮುಸ್ಲಿಮರ ಅನಿವಾರ್ಯ ಆಹಾರವೇನೂ ಅಲ್ಲ. ಅದನ್ನು ತಿನ್ನದಿದ್ದರೆ ಮುಸ್ಲಿಮರ ವಿಶ್ವಾಸಕ್ಕೆ ಯಾವ ರೀತಿಯ ಧಕ್ಕೆಯೂ ತಗಲುವುದಿಲ್ಲ. ಅಲ್ಲದೇ, ಅದನ್ನು ಈ ದೇಶಕ್ಕೆ ಆಹಾರವಾಗಿ ಪರಿಚಯಿಸಿದ್ದೂ ಮುಸ್ಲಿಮರಲ್ಲ. ಹೌದು, ಎಂದಾಗಿದ್ದರೆ ಅದನ್ನು ತಿನ್ನುವವರು ಕೇವಲ ಮುಸ್ಲಿಮರಷ್ಟೇ ಆಗಿರಬೇಕಿತ್ತಲ್ಲವೇ? ಈ ದೇಶದಲ್ಲಿ ಗೋ ಮಾಂಸ ಇವತ್ತು ಆಹಾರವಾಗಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಮುಸ್ಲಿಮರಲ್ಲ, ಬಹುಸಂಖ್ಯಾತರೇ. ಅವರ ಬೇಡಿಕೆಯಿಂದಾಗಿಯೇ ಅದು ಈ ವರೆಗೆ ಆಹಾರವಾಗಿ ಉಳಿದುಕೊಂಡಿದೆ. ಒಂದುವೇಳೆ,  ಗೋಮಾಂಸ ಕೇವಲ ಮುಸ್ಲಿಮರ ಆಹಾರವಷ್ಟೇ ಆಗಿರುತ್ತಿದ್ದರೆ ಈ ದೇಶದಲ್ಲಿ ಎಂದೋ ಅದು ನಿಷೇದಕ್ಕೆ ಒಳಗಾಗುತ್ತಿತ್ತು.  ಅಷ್ಟೇ ಅಲ್ಲ, ಈ ದೇಶದಲ್ಲಿ ಇವತ್ತು 3500ಕ್ಕಿಂತಲೂ ಅಧಿಕ ವಧಾಗ್ರಹಗಳಿವೆ. ಅವನ್ನು ಸ್ಥಾಪಿಸಿದ್ದು, ಅದಕ್ಕೆ ಪರವಾನಿಗೆ ಕೊಟ್ಟದ್ದೆಲ್ಲ ಮುಸ್ಲಿಮರು ಅಲ್ಲವಲ್ಲ. ಇವತ್ತು ಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ ಪ್ರಥಮ ಸ್ಥಾನದಲ್ಲಿದೆ. ಹಾಗೆಯೇ, 1998ರಿಂದಲೇ ಹಾಲುತ್ಪಾದನೆಯಲ್ಲೂ ಭಾರತ ಪ್ರಥಮ ಸ್ಥಾನದಲ್ಲಿದೆ. ಜೊತೆಗೇ, 2016-17ರ ಅವಧಿಯಲ್ಲಿ 150 ಮಿಲಿಯನ್ ಟನ್‍ಗಳಷ್ಟು ಹಾಲುತ್ಪಾದನೆಯ ಗುರಿಯನ್ನು ಕೇಂದ್ರ ಸರಕಾರ ಇಟ್ಟುಕೊಂಡಿದ್ದು ಮೇವಿಗಾಗಿ 2,242 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಜೊತೆಗೇ ಮಿಲಿಯಾಂತರ ಜಾನುವಾರುಗಳ ಸೃಷ್ಟಿಗೂ ಯೋಜನೆಯನ್ನು ರೂಪಿಸಿದೆ. (ದಿ ಹಿಂದೂ- ಅನುಷಾ ನಾರಾಯಣ್- 2013, ಮೇ 5) ಹೀಗಿರುತ್ತಾ, ಗೋವನ್ನು ಮುಸ್ಲಿಮ್ ಇಶ್ಶೂವಾಗಿ ಬಿಂಬಿಸುವುದಕ್ಕೆ ಏನೆನ್ನಬೇಕು?
   ಗೋವು ಗೌರವಾರ್ಹವಾಗಿ ಮತ್ತು ಆಹಾರವಾಗಿ ಈ ದೇಶದಲ್ಲಿ ಅನಾದಿ ಕಾಲದಿಂದಲೂ ಬಳಕೆಯಲ್ಲಿರುವುದಕ್ಕೆ ಇತಿಹಾಸ ಸಾಕ್ಷಿಯಾಗಿದೆ. ಆದ್ದರಿಂದ ಗೋ ಹತ್ಯೆಯನ್ನು ಮುಸ್ಲಿಮೀಕರಣ ಮಾಡಬೇಕಾದ ಅಗತ್ಯವಿಲ್ಲ. 1998ರಲ್ಲಿ ಕೇಂದ್ರದಲ್ಲಿ ಎನ್.ಡಿ.ಎ. ಸರಕಾರ ಅಧಿಕಾರದಲ್ಲಿದ್ದಾಗಲೇ ಮಾಂಸ ರಫ್ತಿನಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನವನ್ನು ಗಳಿಸಿಕೊಂಡದ್ದು. ಮಾಂಸ ರಫ್ತಿನಿಂದ ಈ ದೇಶ ದೊಡ್ಡ ಪ್ರಮಾಣದಲ್ಲೇ ಆದಾಯವನ್ನು ಗಳಿಸುತ್ತಿದೆ. ಈ ಸತ್ಯವನ್ನು ಅಡಗಿಸಿಟ್ಟು ಮುಸ್ಲಿಮ್ vs ಹಿಂದೂ ಎಂಬಂತೆ ಗೋವನ್ನು ವಿಭಜಿಸುವುದು ತಪ್ಪು. ಗೋ ಕಳ್ಳತನ ಅಥವಾ ಅಕ್ರಮ ಸಾಗಾಟವನ್ನು ಯಾರೇ ಮಾಡಿದರೂ ಅದು ಕಾನೂನುಬಾಹಿರವೇ. ಅದನ್ನು ಖಂಡಿಸೋಣ. ಆದರೆ ಗೋವನ್ನು ಹಿಂದೂ-ಮುಸ್ಲಿಮ್ ಆಗಿ ವರ್ಗೀಕರಿಸುವುದು ಬೇಡ.

Tuesday 23 July 2013

ಬಾಂಬ್ ಹುಡುಕುವ ನಾವು ಮತ್ತು ಪ್ರತಿಭಟಿಸುವ ಅವರು

   ಕಾಶ್ಮೀರವನ್ನು ಭಾರತದ ಭಾಗವೆಂದು ಸಾಧಿಸಿ ತೋರಿಸುವುದಕ್ಕಾಗಿ ಐತಿಹಾಸಿಕ ದಾಖಲೆ, ಅಂಕಿ-ಅಂಶಗಳನ್ನು ಈ ದೇಶದಲ್ಲಿ ಧಾರಾಳ ಪ್ರಮಾಣದಲ್ಲಿ ಮಂಡಿಸಲಾಗಿದೆ. ಕಾಶ್ಮೀರಿಗಳ ಕುರಿತಂತೆ, ಅವರ ನೋವು, ಸಂಕಟಗಳ ಕುರಿತಂತೆ ಚರ್ಚಿಸಿದುದಕ್ಕಿಂತ ಹೆಚ್ಚು, ಕಾಶ್ಮೀರ ಎಂಬ ಕಲ್ಲು-ಮಣ್ಣಿನ ಭೂಮಿಯ ಬಗ್ಗೆ ಅತೀವ ಕಾಳಜಿಯಿಂದ ಮಾತಾಡಿದವರೂ ಇಲ್ಲಿದ್ದಾರೆ. ಅವರಿಗೆ ಕಾಶ್ಮೀರ ಬೇಕೇ ಹೊರತು ಕಾಶ್ಮೀರಿಗಳಲ್ಲ. ಕಾಶ್ಮೀರಿಗಳೆಲ್ಲ ಒಂದೋ ಉಗ್ರವಾದಿಗಳು ಇಲ್ಲವೇ ಅವರ ಬೆಂಬಲಿಗರು ಎಂಬ ಧಾಟಿಯಲ್ಲೇ ಅವರು ಮಾತಾಡುತ್ತಾರೆ. ಕಾಶ್ಮೀರಿಗಳು ಪ್ರತಿಭಟಿಸಿದರೆ ಈ ಮಂದಿ ಪ್ರತಿಭಟನಾಕಾರರನ್ನೇ ಟೀಕಿಸುತ್ತಾರೆ. ಸದ್ಯ ಕಾಶ್ಮೀರದಲ್ಲಿ ಕಾಣಿಸಿಕೊಂಡಿರುವ ಪ್ರತಿಭಟನೆಯ ಬಗ್ಗೆಯೂ ದೇಶದ ಒಂದು ವರ್ಗ ಇಂಥ ನಕಾರಾತ್ಮಕ ಧಾಟಿಯಲ್ಲೇ ಮಾತಾಡುತ್ತಿದೆ.
   ದಿ ಹಿಂದೂ ಪತ್ರಿಕೆಯಲ್ಲಿ ಜೂನ್ 30ರಂದು ‘ನೈಟ್ ಆಫ್ ಹಾರರ್’ ಎಂಬೊಂದು ಲೇಖನವನ್ನು ಹರ್ಷಮಂದರ್ ಬರೆದಿದ್ದರು. ಕಾಶ್ಮೀರಿಗಳನ್ನು ಭಯೋತ್ಪಾದಕರಂತೆ ಮತ್ತು ಅಲ್ಲಿಯ ಭದ್ರತಾ ಪಡೆಗಳನ್ನು ನೂರು ಶೇಕಡಾ ಸಭ್ಯರಂತೆ ಬಿಂಬಿಸುವವರೆಲ್ಲ ಒಮ್ಮೆ ಆ ಲೇಖನವನ್ನು ಓದಬೇಕು. 1991 ಫೆಬ್ರವರಿ 23ರ ರಾತ್ರಿ ಕುಪ್ವಾರ ಜಿಲ್ಲೆಯ ಕುನನ್ ಪೋಶ್‍ಪೋರಾ ಗ್ರಾಮಕ್ಕೆ ಸೇನೆ ನುಗ್ಗುತ್ತದೆ. ಭಯೋತ್ಪಾದಕರು ಅಡಗಿಕೊಂಡಿದ್ದಾರೆಂಬ ನೆಪವೊಡ್ಡಿ ಮನೆ ಮನೆ ತಪಾಸಿಸುತ್ತದೆ. ಮಕ್ಕಳ ಎದುರೇ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುತ್ತದೆ. ಪುರುಷರನ್ನು ಭೀಕರ ಹಿಂಸೆಗೆ ಗುರಿಪಡಿಸುತ್ತದೆ. ಎಲ್ಲಿಯವರೆಗೆಂದರೆ ಆ ಗ್ರಾಮದ ಮಹಿಳೆಯರು ಎರಡ್ಮೂರು ದಿನಗಳ ವರೆಗೆ ದೂರು ಕೊಡುವುದಕ್ಕೂ ಹಿಂಜರಿಯುತ್ತಾರೆ. ಕೊನೆಗೆ ರಾಜ್ಯ ಮಾನವ ಹಕ್ಕು ಆಯೋಗವು ಸಂತ್ರಸ್ತರ ದೂರನ್ನು ಆಲಿಸಲು ಮುಂದಾಗುತ್ತದಲ್ಲದೇ 2011 ಅಕ್ಟೋಬರ್ 16ರಂದು ವರದಿಯನ್ನು ಮಂಡಿಸುತ್ತದೆ. ಯೋಧರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವುದಾಗಿ ಅದು ದಾಖಲೆ ಸಮೇತ ಸಾಬೀತುಪಡಿಸುತ್ತದೆ. ಆದ್ದರಿಂದ ಸಂತ್ರಸ್ತ ಮಹಿಳೆಯರಿಗೆ 3 ಲಕ್ಷ ಪರಿಹಾರ ನೀಡಬೇಕು ಮತ್ತು ಯೋಧರ ವಿರುದ್ಧ ಹೂಡಲಾಗಿರುವ ಕ್ರಿಮಿನಲ್ ಮೊಕದ್ದಮೆಯ ತನಿಖೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸುತ್ತದೆ. ಹಿರಿಯ ಪತ್ರಕರ್ತೆ ಸೀಮಾ ಮುಸ್ತಫಾ, ಜಾನ್ ದಯಾಳ್, ಸೆಹ್ಬಾ ಫಾರೂಖಿ, ಇ.ಎನ್. ರಾಮ್ ಮೋಹನ್, ಬಾಲಚಂದ್ರ, ಮುಹಮ್ಮದ್ ಸಲೀಮ್.. ಮತ್ತಿತರ ಮಾನವ ಹಕ್ಕು ಕಾರ್ಯಕರ್ತರು 2013 ಜೂನ್‍ನಲ್ಲಿ ಈ ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತರ ಮಾತುಗಳನ್ನು ಆಲಿಸಿದ್ದರು. ಘಟನೆ ನಡೆದು 22 ವರ್ಷಗಳಾಗಿದ್ದರೂ ಸಂತ್ರಸ್ತ ಮಹಿಳೆಯರು ಅಂದಿನ ಭೀತಿಯಿಂದ ಹೊರಬಂದಿಲ್ಲ ಎಂದೂ ಹೇಳಿದ್ದರು. ನಿಜವಾಗಿ, ಕಾಶ್ಮೀರದಲ್ಲಿ ಈಗ ಉದ್ಭವಿಸಿರುವ ಆತಂಕಕಾರಿ ಪರಿಸ್ಥಿತಿಯನ್ನು ಇಂಥ ಹಿನ್ನೆಲೆಗಳ ಜೊತೆಗಿಟ್ಟು ನೋಡಬೇಕಾದ ಅಗತ್ಯ ಇದೆ. 2009ರಲ್ಲಿ ಬೆಂಗಳೂರಿನಲ್ಲಿ ಸಿ.ಕೆ. ನಾಯ್ಡು ಕ್ರಿಕೆಟ್ ಟೂರ್ನಮೆಂಟ್ ನಡೆಯುತ್ತಿತ್ತು. ಕಾಶ್ಮೀರ ತಂಡವನ್ನು ಪ್ರತಿನಿಧಿಸಿದ್ದ ಪರ್ವೇಝ್ ರಸೂಲ್ ಎಂಬ ಯುವ ಕ್ರಿಕೆಟಿಗನನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡರು. ಆತ ತನ್ನ ಬ್ಯಾಗ್‍ನಲ್ಲಿ ಬ್ಯಾಟು, ಪ್ಯಾಡು, ಬಾಲ್‍ಗಳ ಬದಲು ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದಾನೆ ಎಂಬುದಾಗಿ ಪೊಲೀಸರು ಅನುಮಾನಿಸಿದ್ದರು. ಆ ಯುವಕ ಇವತ್ತು ಭಾರತೀಯ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾನೆ. ಅಷ್ಟಕ್ಕೂ, ಓರ್ವ ಕ್ರಿಕೆಟಿಗನ ಮೇಲೆಯೇ ಪೊಲೀಸರ ನಡವಳಿಕೆ ಈ ಮಟ್ಟದಲ್ಲಿದೆಯೆಂದ ಮೇಲೆ ಸಾಮಾನ್ಯ ಯುವಕರನ್ನು ಭದ್ರತಾ ಪಡೆಗಳು ಹೇಗೆ ನಡೆಸಿಕೊಂಡಾವು? ಕಾಶ್ಮೀರಿಗಳ ಪ್ರತಿಭಟನೆ, ಕಲ್ಲೆಸೆತಗಳನ್ನು ಟೀಕಿಸುವವರೆಲ್ಲ ಅದರ ಇನ್ನೊಂದು ಮುಖವನ್ನು ಎಷ್ಟರ ಮಟ್ಟಿಗೆ ಅರ್ಥೈಸಲು ಪ್ರಯತ್ನಿಸಿದ್ದಾರೆ? ಕಾಶ್ಮೀರವು ಭಾರತದ ಭಾಗವಾಗುವುದಕ್ಕಿಂತ ಮೊದಲು ಕಾಶ್ಮೀರಿಗಳನ್ನು ಭಾರತದ ಭಾಗವಾಗುವಂತೆ ಮಾಡುವುದಕ್ಕೆ ಸರ್ಕಾರಗಳು, ಭದ್ರತಾ ಪಡೆಗಳು ಯಾವ ಮಟ್ಟದಲ್ಲಿ ಶ್ರಮಿಸಿವೆ? ಕಾಶ್ಮೀರ ಅಂದರೆ ಬರೇ ಪ್ರವಾಸಿಗರನ್ನು ಸೆಳೆಯುವ, ಆಪಲ್ ಬೆಳೆಯುವ ಭೂಮಿಯಷ್ಟೇ ಅಲ್ಲವಲ್ಲ. ಕಾಶ್ಮೀರ ಭಾರತದ ಭಾಗವಾಗುವುದೆಂದರೆ ಕಾಶ್ಮೀರಿಗಳೂ ಭಾರತದ ಭಾಗವಾಗುವುದೆಂದರ್ಥ. ಆದರೆ ಇಂಥದ್ದೊಂದು ಇನ್‍ಕ್ಲೂಸಿವ್ ಧೋರಣೆಯನ್ನು ತಳೆಯಲು ನಮಗೆ ಎಷ್ಟರ ಮಟ್ಟಿಗೆ ಸಾಧ್ಯವಾಗಿದೆ? ಕಾಶ್ಮೀರದ ಪ್ರತ್ಯೇಕತಾ ಹೋರಾಟದ ಬಗ್ಗೆ, ಪಂಡಿತರ ವಲಸೆಯ ಕುರಿತು ಸರಿ-ತಪ್ಪುಗಳ ಚರ್ಚೆ ನಡೆಸುವುದು ಸುಲಭ. ಕಾಶ್ಮೀರಿಗಳ ಮೇಲಿನ ದೌರ್ಜನ್ಯವನ್ನು ಎತ್ತಿ ಹೇಳಿದಾಗಲೆಲ್ಲ, ಪಂಡಿತರ ಸ್ಥಿತಿಯನ್ನು ಉಲ್ಲೇಖಿಸಿ ಎದುರುತ್ತರ ಕೊಡುವುದು ಈ ದೇಶದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ನಿಜವಾಗಿ, ಇಂಥ ಜಿದ್ದಾಜಿದ್ದಿಗಳೇ ಕಾಶ್ಮೀರವನ್ನು ಇವತ್ತು ಈ ಹಂತಕ್ಕೆ ತಲುಪಿಸಿರುವುದು. ಪ್ರತ್ಯೇಕತಾ ಹೋರಾಟ, ಅದಕ್ಕೆ ಬೆಂಬಲವಾಗಿ ನಿಂತ ವಿದೇಶಿ ಶಕ್ತಿಗಳು, ಅದರಿಂದಾಗಿ ಕಣಿವೆಯಲ್ಲಾದ ರಕ್ತಪಾತಗಳು ಮತ್ತು ಜಗ್ಮೋಹನ್ ಎಂಬ ರಾಜ್ಯಪಾಲರ ಪಕ್ಷಪಾತಿ ನಿಲುವುಗಳು.. ಎಲ್ಲವೂ ಚರಿತ್ರೆಗೆ ಸೇರಿ ಹೋಗಿವೆ. ಇವತ್ತು ಕಾಶ್ಮೀರವನ್ನು ಪ್ರತಿ ನಿಧಿಸುತ್ತಿರುವುದು ಒಂದಾನೊಂದು ಕಾಲದ ಮಂದಿಯಲ್ಲ. ಯುವ ಸಮೂಹ. ಅವರನ್ನು ವಿಶ್ವಾಸದಿಂದ ನಡೆಸಿಕೊಳ್ಳುವ ಬದಲು ಪ್ರತ್ಯೇಕತಾವಾದಿಗಳಂತೆ ನಡೆಸಿಕೊಂಡರೆ ಕಣಿವೆ ಶಾಂತವಾಗುವುದಾದರೂ ಹೇಗೆ? ಕಾಶ್ಮೀರದಲ್ಲಿ ಮಾನವ ಹಕ್ಕುಗಳಿಗೆ ಭಾರೀ ತೂಕವೇನೂ ಇಲ್ಲ. ಹಕ್ಕುಗಳ ಬಗ್ಗೆ ತೀವ್ರ ನಿರಾಶೆಗೊಂಡ ಒಂದು ದೊಡ್ಡ ಸಮೂಹವೇ ಅಲ್ಲಿ ನಿರ್ಮಾಣವಾಗಿದೆ. ಕಾಶ್ಮೀರವು ಇವತ್ತು ಮಾಧ್ಯಮಗಳಲ್ಲಿ ಸುದ್ದಿಯಾಗಬೇಕಾದರೆ ನಾಲ್ಕೈದು ಮಂದಿಯ ಸಾವಾದರೂ ಸಂಭವಿಸಬೇಕು ಎಂಬಂಥ ವಾತಾವರಣವಿದೆ. ಇಂಥ ಸ್ಥಿತಿಯಲ್ಲಿ ಕಾಶ್ಮೀರವನ್ನು ಭಾರತದ ಭಾಗ ಎಂದು ಡಂಗುರ ಸಾರುವುದರಿಂದ ಏನು ಲಾಭವಿದೆ? ಕಾಶ್ಮೀರಿಗಳನ್ನು ವಿಶ್ವಾಸದಿಂದ ನಡೆಸಿಕೊಳ್ಳದ ಹೊರತು ಅವರನ್ನು ಭಾಗವಾಗಿಸುವುದಾದರೂ ಹೇಗೆ?
   ಕಾಶ್ಮೀರದ ಯುವ ಸಮೂಹದ ಆಗ್ರಹಗಳಿಗೆ ಕಿವಿಯಾಗುವ ಮತ್ತು ಅವರಲ್ಲಿ ಭರವಸೆ ತುಂಬುವ ಕೆಲಸ ತೀವ್ರಗತಿಯಲ್ಲಿ ನಡೆಯಬೇಕಿದೆ. ಕಾಶ್ಮೀರಿಗಳೆಂದರೆ ಭಯೋತ್ಪಾದಕರಲ್ಲ, ನಮ್ಮ ಸಹೋದರರು ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕಿದೆ. ಕ್ರಿಕೆಟ್ ಆಟಗಾರನ ಬ್ಯಾಗ್‍ನಲ್ಲಿ ಬಾಂಬು ಹುಡುಕುವ, ಪ್ರತಿ ಮನೆಯಲ್ಲೂ ಭಯೋತ್ಪಾದಕನನ್ನು ಕಾಣುವ, ಕಾಶ್ಮೀರ ಎಂಬ ಭೂಮಿಯನ್ನು ಮಾತ್ರ ಪ್ರೀತಿಸುವ ನಮ್ಮ ಸಣ್ಣ ಮನಸನ್ನೂ ತುಸು ವಿಶಾಲಗೊಳಿಸಬೇಕಿದೆ.

Monday 15 July 2013

ಮನುಷ್ಯರಾಗಿರುವುದಷ್ಟೇ ಅರ್ಹತೆಯಲ್ಲ..

   ಓರ್ವ ಪ್ರಧಾನಿ ಅಭ್ಯರ್ಥಿಗೆ ಇರಬೇಕಾದ ಅರ್ಹತೆಗಳು ಏನೆಲ್ಲ ಎಂಬ ಚರ್ಚೆಯು ನರೇಂದ್ರ ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿಯ ಒಂದು ವರ್ಗ ಬಿಂಬಿಸಿದಂದಿನಿಂದಲೇ ಆರಂಭವಾಗಿದೆ. ಮಾತ್ರವಲ್ಲ, ಆ ಚರ್ಚೆಯಲ್ಲಿ ಮೋದಿ ಮತ್ತೆ ಮತ್ತೆ ತನ್ನ ಅನರ್ಹತೆಯನ್ನು ಸಾರುತ್ತಲೂ ಇದ್ದಾರೆ. ಅವರೊಳಗೆ ಒಂದು ಬಗೆಯ ಗೊಂದಲ ಇದೆ. ತನ್ನ ಅಭಿಮಾನಿ ವಲಯವನ್ನೂ ಮೀರಿ ಗುರುತಿಸಿಕೊಳ್ಳುವ ಹಂಬಲ ಕೆಲವೊಮ್ಮೆ ಅವರ ಮಾತಿನಲ್ಲಿ ಕಾಣಿಸಿಕೊಂಡರೆ ಇನ್ನೂ ಕೆಲವೊಮ್ಮೆ, ಎಲ್ಲಿ ತನ್ನ ಅಭಿಮಾನಿ ವಲಯ ಮುನಿಸಿಕೊಳ್ಳುವುದೋ ಎಂಬ ಭೀತಿ ಕಾಣಿಸುತ್ತದೆ. ಸದ್ಭಾವನಾ ಯಾತ್ರೆ, 2002ರ ಗುಜರಾತ್ ನರಮೇಧಕ್ಕೆ ವಿಷಾದ, ನಾಯಿಮರಿ, ಹಿಂದೂ ರಾಷ್ಟ್ರವಾದಿ.. ಇವೆಲ್ಲ ಅವರೊಳಗಿನ ಗೊಂದಲಕ್ಕೆ ಪುರಾವೆಗಳು. 120 ಕೋಟಿ ಭಾರತೀಯರಿಗೆ ನಾಯಕತ್ವ ನೀಡಬೇಕಾದ ವ್ಯಕ್ತಿಯೊಬ್ಬರಿಗೆ ಇರಬೇಕಾದ ಮೊಟ್ಟಮೊದಲ ಅರ್ಹತೆ ಏನೆಂದರೆ, ಈ ದೇಶ ಮತ್ತು ಇಲ್ಲಿರುವ ಜನರ ಕುರಿತಂತೆ ಗೊಂದಲರಹಿತ ನಿಲುವು. ಈ ದೇಶದಲ್ಲಿರುವುದು ಮೋದಿಯ ಅಭಿಮಾನಿಗಳು ಮಾತ್ರ ಅಲ್ಲ. ಅವರನ್ನು ಅನುಮಾನಿಸುವ, ಭೀತಿಯಿಂದ ನೋಡುವ, ಖಂಡಿಸುವ ಮಂದಿ ಕೂಡ ಧಾರಾಳ ಇದ್ದಾರೆ. ಅವರೆಲ್ಲರನ್ನೂ ಸಮಚಿತ್ತದಿಂದ ನಿಭಾಯಿಸುವ ಹೊಣೆಗಾರಿಕೆ ನಾಯಕನ ಮೇಲಿರುತ್ತದೆ. ಮೋದಿಗೆ ಇದು ಸಾಧ್ಯವಾಗಿದೆಯೇ? ಈ ದೇಶದ 20 ಕೋಟಿಯಷ್ಟಿರುವ ದೊಡ್ಡದೊಂದು ಜನಸಮೂಹವನ್ನು ಕಾರಿನ ಚಕ್ರದಡಿಗೆ ಸಿಲುಕುವ ಬಡಪಾಯಿ ನಾಯಿಮರಿಗೆ ಅವರು ಹೋಲಿಸುತ್ತಾರೆ. ಗುಜರಾತ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಅವರಾಡಿದ ಈ ಮಾತಿನಿಂದ ರವಾನೆಯಾಗುವ ಸೂಚನೆಯಾದರೂ ಏನು? ನಾಯಿ ಮರಿಯನ್ನು ಯಾವ ಚಾಲಕ ಕೂಡ ಉದ್ದೇಶಪೂರ್ವಕವಾಗಿ ಚಕ್ರದಡಿ ಸಿಲುಕಿಸುವುದಿಲ್ಲ. ಅನೇಕ ಬಾರಿ ಪ್ರಾಣಿಗಳನ್ನು ರಕ್ಷಿಸುವ ಪ್ರಯತ್ನದಲ್ಲಿ ಚಾಲಕನೇ ಅಪಾಯಕ್ಕೆ ಸಿಲುಕುವುದಿದೆ. ಆದರೆ ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ನಿರ್ವಹಿಸಿದ ಪಾತ್ರ ಈ ರೀತಿಯದ್ದೇ? ಉದ್ದೇಶಪೂರ್ವಕ ಪಾತ್ರ ಇದ್ದಿರಲಿಲ್ಲವೇ? ಅಂಥದ್ದೊಂದು ಹತ್ಯಾಕಾಂಡದ ಉದ್ದೇಶದಿಂದಲೇ ಅವರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮೊದಲೇ ಆಯಕಟ್ಟಿನ ಜಾಗಕ್ಕೆ ನೇಮಿಸಿರುವುದು ಸುಳ್ಳೇ? ಗುಜರಾತ್‍ನ ಹತ್ತಾರು ಪೊಲೀಸ್ ಅಧಿಕಾರಿಗಳು ಹತ್ಯಾಕಾಂಡದ ಆರೋಪ ಹೊತ್ತು ತಿರುಗುತ್ತಿರುವುದು ಏನನ್ನು ಸೂಚಿಸುತ್ತದೆ? ಇವೆಲ್ಲ ಮೋದಿಯ ಗಮನಕ್ಕೆ ಬಂದೇ ಇಲ್ಲ ಅನ್ನುವುದಾದರೆ ಅಂಥ ನಾಯಕನೊಬ್ಬ ಈ ದೇಶವನ್ನು ಮುನ್ನಡೆಸುವುದಾದರೂ ಹೇಗೆ? ಕೇವಲ 6 ಕೋಟಿ ಜನಸಂಖ್ಯೆ ಇರುವ ರಾಜ್ಯವೊಂದರ ಆಡಳಿತ ವ್ಯವಸ್ಥೆ, ಅಧಿಕಾರಿ ವರ್ಗಗಳ ಮೇಲೆ ನಿಯಂತ್ರಣ ಇಡಲಾಗದ ವ್ಯಕ್ತಿ 120 ಕೋಟಿ ಜನಸಂಖ್ಯೆ ಇರುವ ರಾಷ್ಟ್ರವೊಂದರ ಮೇಲೆ ಹೇಗೆ ತಾನೇ ನಿಯಂತ್ರಣ ಇಟ್ಟುಕೊಳ್ಳಬಲ್ಲ? ಗುಜರಾತ್ ಹತ್ಯಾಕಾಂಡದಲ್ಲಿ ತಾನು ನಿಷ್ಕಳಂಕ ಅಂತ ಮೋದಿ ಹೇಳುತ್ತಲೇ ಬಂದಿದ್ದಾರೆ. ಆದ್ದರಿಂದಲೇ ತಾನು ಕ್ಷಮೆ ಯಾಚಿಸಲ್ಲ ಎಂದೂ ಹೇಳುತ್ತಿದ್ದಾರೆ. ಹಾಗಾದರೆ, 1984ರ ಸಿಕ್ಖ್ ಹತ್ಯಾಕಾಂಡದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರೆ? ಸೋನಿಯಾ ಕಾಂಗ್ರೆಸ್‍ನ ನಾಯಕಿಯಾಗಿದ್ದರೆ? ಆದರೂ ಅವರು ಕ್ಷಮೆ ಯಾಚಿಸಿಲ್ಲವೇ? ಎಲ್ಲೋ ಒಂದು ಕಡೆ ರೈಲು ಅಪಘಾತಕ್ಕೀಡಾದಾಗ, ಲಾಲ್ ಬಹದ್ದೂರ್ ಶಾಸ್ತ್ರಿಯವರು ರೈಲ್ವೆ ಖಾತೆಗೆ ರಾಜೀನಾಮೆ ನೀಡಿದರಲ್ಲ, ಯಾಕೆ? ಅವರೇನು ಅಪಘಾತಕ್ಕೀಡಾದ ರೈಲಿನ ಚಾಲಕರಾಗಿದ್ದರೆ? ಕಲ್ಲಿದ್ದಲು ಹಗರಣ, ಟೆಲಿಕಾಂ, ಕಾಮನ್ವೆಲ್ತ್ ಹಗರಣದ ಹೊಣೆ ಹೊತ್ತುಕೊಂಡು ಪ್ರಧಾನಿ ಮನಮೋಹನ್ ಸಿಂಗ್‍ರು ರಾಜೀನಾಮೆ ಕೊಡಬೇಕೆಂದು ಬಿಜೆಪಿ ಹಲವು ಬಾರಿ ಆಗ್ರಹಿಸಿದೆ. ಉತ್ತರಾಖಂಡದ ಪ್ರವಾಹ ನಿರ್ವಹಣೆಯಲ್ಲಿ ಅಲ್ಲಿನ ಕಾಂಗ್ರೆಸ್ ಮುಖ್ಯಮಂತ್ರಿ ಬಹುಗುಣ ವಿಫಲರಾಗಿದ್ದಾರೆಂದು ಆರೋಪಿಸಿ ಇದೇ ಬಿಜೆಪಿ ಅವರ ರಾಜೀನಾಮೆಗೆ ಒತ್ತಾಯಿಸಿದೆ. ಇಲ್ಲೆಲ್ಲಾ ಪರಿಗಣನೆಗೆ ಬರುವ ನಿಯಮ ಮೋದಿ ವಿಷಯದಲ್ಲಿ ಮಾತ್ರ ಅಳವಡಿಕೆ ಆಗುತ್ತಿಲ್ಲವೇಕೆ?
   ನಿಜವಾಗಿ, ಮೋದಿ ಈಗಾಗಲೇ ಒಂದು ನಿರ್ದಿಷ್ಟ ಇಮೇಜನ್ನು ಬೆಳೆಸಿಕೊಂಡಿದ್ದಾರೆ. ಒಂದು ವೇಳೆ ಗುಜರಾತ್ ಹತ್ಯಾಕಾಂಡಕ್ಕಾಗಿ ಕ್ಷಮೆ ಯಾಚಿಸಿದರೆ, ಆ ಇಮೇಜ್‍ಗೆ ಧಕ್ಕೆ ಬರಬಹುದೆಂಬ ಭೀತಿ ಅವರಲ್ಲಿ ಮತ್ತು ಅವರನ್ನು ಉಬ್ಬಿಸುತ್ತಿರುವವರಲ್ಲಿ ಇದೆ. ಬಾಬರಿ ಮಸೀದಿಯ ಧ್ವಂಸಕ್ಕೆ ವಿಷಾದಿಸಿದ ಮತ್ತು ಜಿನ್ನಾರನ್ನು ಹೊಗಳಿದ ಅಡ್ವಾಣಿಯಂತೆ ತಾನೂ ಕಳೆದುಹೋಗುವೆನೆಂಬ ಭಯ ಅವರನ್ನು ಕಾಡುತ್ತಿದೆ. ಆದ್ದರಿಂದಲೇ ಕ್ಷಮೆ ಯಾಚನೆಯ ವಿಚಾರ ಪ್ರಸ್ತಾಪವಾದಾಗಲೆಲ್ಲ ಅವರು ನಾಯಿ ಮರಿಯಂಥ ಕತೆಯನ್ನು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸರ್ವರನ್ನೂ ಮೆಚ್ಚಿಸಿಕೊಳ್ಳುವುದಕ್ಕಾಗಿ ಸದ್ಭಾವನಾ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಮತ್ತೊಮ್ಮೆ ತಾನು ಹಿಂದೂ ರಾಷ್ಟ್ರವಾದಿ ಅನ್ನುತ್ತಾರೆ. ಒಂದು ರೀತಿಯಲ್ಲಿ ಅವರನ್ನು ಅಸ್ತಿತ್ವ ಭಯ ಕಾಡುತ್ತಿದೆ. ಅಷ್ಟಕ್ಕೂ, ಮುಸ್ಲಿಮ್ ರಾಷ್ಟ್ರವಾದಿ, ಕ್ರೈಸ್ತ ರಾಷ್ಟ್ರವಾದಿ, ಸಿಕ್ಖ್ ರಾಷ್ಟ್ರವಾದಿ.. ಎಂದೆಲ್ಲಾ ರಾಷ್ಟ್ರವಾದದಲ್ಲಿ ವಿಭಜನೆಯಿದೆಯೇ? ನಾಳೆ, ರಾಜ್ಯದ ಆರೋಗ್ಯ ಮಂತ್ರಿ ಯು.ಟಿ. ಕಾದರ್ ಅವರು,  ತಾನು ಮುಸ್ಲಿಮ್ ರಾಷ್ಟ್ರವಾದಿ ಅಂದರೆ ಬಿಜೆಪಿ ಏನಂದೀತು? ಗೃಹ ಸಚಿವ ಜಾರ್ಜ್‍ ರು,  ತಾನು ಕ್ರೈಸ್ತ ರಾಷ್ಟ್ರವಾದಿ ಅಂದರೆ ಇದೇ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾರದೇ? ಹಿಂದೂ ರಾಷ್ಟ್ರವಾದವನ್ನು ಮುಂದಿಡುವ ಮೋದಿಯಂತೆಯೇ ದಲಿತ್ ರಾಷ್ಟ್ರದ, ಸಿಕ್ಖ್ ರಾಷ್ಟ್ರದ ವಾದವನ್ನು ಮುಂದಿಡುವವರು ತಯಾರಾಗಬಹುದಲ್ಲವೇ? ಮೋದಿಗೆ ಇರುವಷ್ಟೇ ಹಕ್ಕು, ಅರ್ಹತೆ, ಸ್ವಾತಂತ್ರ್ಯ ಈ ದೇಶದ ಇತರೆಲ್ಲ ಪ್ರಜೆಗಳಿಗೂ ಇದೆಯಲ್ಲವೇ? ಅವರಂತೆಯೇ ಇತರರೂ ಮಾತಾಡಲು, ಹಕ್ಕು ಪ್ರತಿಪಾದಿಸಲು ಪ್ರಾರಂಭಿಸಿದರೆ ಈ ದೇಶ ಎತ್ತ ಸಾಗೀತು?
   ಮೋದಿಯ ಮಾತು, ಆವೇಶ, ಹಾವಭಾವ, ಆಂಗಿಕ ಸನ್ನೆಗಳೆಲ್ಲ ಅವರೊಳಗೆ ಓರ್ವ ಅಪಾಯಕಾರಿ ಖಳನಾಯಕ ಇರುವುದನ್ನು ಚೆನ್ನಾಗಿ ಬಿಂಬಿಸುತ್ತದೆ. ಆ ಖಳನಾಯಕನೇ 2002ರ ಹತ್ಯಾ ಕಾಂಡದ ಸಂದರ್ಭದಲ್ಲಿ ಗುಜರಾತ್‍ಗೆ ನೇತೃತ್ವ ನೀಡಿದ್ದು. ಅಂಥ ವ್ಯಕ್ತಿಯೊಬ್ಬ ಈ ದೇಶಕ್ಕೆ ನೇತೃತ್ವ ಕೊಡಲು ಯಾವ ರೀತಿಯಿಂದಲೂ ಸೂಕ್ತರಲ್ಲ. 120 ಕೋಟಿ ಭಾರತೀಯರನ್ನು ಸಮಾನವಾಗಿ ಕಾಣುವ ಮತ್ತು ನಾಯಿ ಮರಿಗಳಂತೆ ಕಾಣದಿರುವ ಆರೋಗ್ಯಪೂರ್ಣ ಮನಸ್ಸು ಆ ನಾಯಕನಿಗಿರಬೇಕು. ಬರೇ ಮನುಷ್ಯರಾಗಿರುವುದಷ್ಟೇ ಪ್ರಧಾನಿ ಹುದ್ದೆಗಿರುವ ಅರ್ಹತೆಯಲ್ಲ. ಎಲ್ಲ ಅಂಗಗಳೂ ಸ್ವಸ್ಥ ಮತ್ತು ನಿರ್ಮಲವಾಗಿರಬೇಕಾದುದೂ  ಅಗತ್ಯ. ಆದರೆ ಮೋದಿ ಬರೇ ಮನುಷ್ಯರಷ್ಟೇ ಆಗಿದ್ದಾರೆ. ಉಳಿದ ಯಾವ ಅರ್ಹತೆಗಳೂ ಅವರಲ್ಲಿ ಕಾಣಿಸುತ್ತಿಲ್ಲ.