Wednesday 26 March 2014

ನಮ್ಮ ಸಂವೇದನಾರಹಿತ ಬದುಕಿಗೆ ಕನ್ನಡಿ ಹಿಡಿದ ಕಾರ್ಯಕ್ರಮ

   ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವ ಮತ್ತು ಪರಸ್ಪರರನ್ನು ಎತ್ತಿ ಕಟ್ಟುವ ವಾತಾವರಣವು ದೇಶದಲ್ಲಿ ಸದ್ಯ ಚಲಾವಣೆಯಲ್ಲಿರುವಾಗಲೇ ಕಳೆದವಾರ ರಾಷ್ಟ್ರಪತಿ ಭವನದಲ್ಲಿ ಒಂದು ಅಪರೂಪದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮ ಎಷ್ಟು ಭಾವನಾತ್ಮಕ ಮತ್ತು ಆಪ್ತವಾಗಿತ್ತೆಂದರೆ, ‘ಕಡಿ, ಕೊಲ್ಲು, ಮುಗಿಸು..' ಮುಂತಾದ ಭಾಷೆಯಲ್ಲಿ ಮಾತಾಡುವ ಎಲ್ಲರಿಗೂ ಅದರಲ್ಲಿ ಸಾಕಷ್ಟು ಪಾಠವಿತ್ತು. ಆದರೆ, ಹೆಚ್ಚಿನ ಪತ್ರಿಕೆಗಳು ಆ ಕಾರ್ಯಕ್ರಮದ ಸುದ್ದಿಯನ್ನು ಪ್ರಕಟಿಸಲೇ ಇಲ್ಲ. ಬಹುಶಃ, ಪ್ರತಿವರ್ಷ ಇಂಥದ್ದೊಂದು ಕಾರ್ಯಕ್ರಮ ರಾಷ್ಟ್ರಪತಿ ಭವನದಲ್ಲಿ ನಡೆಯುತ್ತದೆ ಅನ್ನುವುದೋ ಅಥವಾ ಸೆಲೆಬ್ರಿಟಿಗಳು ಮತ್ತು ಅವರ ಡ್ಯಾನ್ಸುಗಳು ಇಲ್ಲದ ಸಪ್ಪೆ ಕಾರ್ಯಕ್ರಮ ಅನ್ನುವುದೋ ಯಾವುದು ಇದಕ್ಕೆ ಕಾರಣ ಎಂಬುದನ್ನು ಅವೇ ಹೇಳಬೇಕು.
   ಉತ್ತರಾಖಂಡದ ಪ್ರವಾಹದ ಸಂದರ್ಭದಲ್ಲಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವುದಕ್ಕಾಗಿ ಮಿಗ್ 17v5 ವಿಮಾನದ ಪೈಲಟ್ ಕ್ಯಾಸ್ಟಲಿನೋ ಎಂಬವರು ಅಪಾಯಕಾರಿ ಸಾಹಸಕ್ಕೆ ಕೈ ಹಾಕಿದ್ದರು. ಬೆಟ್ಟ-ಗುಡ್ಡಗಳಲ್ಲಿ ಚೆಲ್ಲಾಪಿಲ್ಲಿಯಾಗಿದ್ದ ಸುಮಾರು 80 ಸಂತ್ರಸ್ತರನ್ನು ಅವರು ಜೀವದ ಹಂಗು ತೊರೆದು ರಕ್ಷಿಸಿದ್ದರು. ಈ ಸಂದರ್ಭದಲ್ಲಿ ಅವರ ಜೊತೆ ಸಹ ಪೈಲಟ್ ಆಗಿ ಪ್ರವೀಣ್ ಅನ್ನುವವರೂ ಇದ್ದರು. ಆದರೆ, ಈ ಕಾರ್ಯಾಚರಣೆಯ ಸಂದರ್ಭದಲ್ಲೇ ವಿಮಾನ ಪತನಗೊಂಡು ಅವರಿಬ್ಬರೂ ಸಾವಿಗೀಡಾದರು. ಅಸ್ಸಾಮ್‍ನ ಗ್ರಾಮವೊಂದಕ್ಕೆ ತಗುಲಿದ ಬೆಂಕಿಯನ್ನು ನಂದಿಸುವುದಕ್ಕಾಗಿ ಯುವ ಯೋಧನೋರ್ವ ಜೀವ ಪಣಕ್ಕಿಟ್ಟು ಧುಮುಕಿ ಯಶಸ್ವಿಯಾಗಿದ್ದ. ಹಾಗೆಯೇ, ಅಸ್ಸಾಮ್‍ನಲ್ಲಿ ನಡೆದ ಅಪಘಾತವೊಂದರಲ್ಲಿ ತನ್ನ ಮೂವರು ಗೆಳೆಯರನ್ನು ಉಳಿಸುವುದಕ್ಕಾಗಿ ಶ್ರಮಿಸುವ ವೇಳೆ ಯುವ ಇಂಜಿನಿಯರ್ ಮನೀಶ್ ಸಾವಿಗೀಡಾಗಿದ್ದ.. ಇವರೆಲ್ಲರನ್ನು ಗೌರವಿಸುವ ಕಾರ್ಯಕ್ರಮ ಅದಾಗಿತ್ತು. ಆದರೆ ಇವರು ಮತ್ತು ಇಂಥ ಸಾಹಸಗಳನ್ನು ಮೆರೆದ ಇತರರ ಗೌರವಾರ್ಥ ರಾಷ್ಟ್ರಪತಿ ನೀಡಿದ ಕೀರ್ತಿಚಕ್ರ, ಶೌರ್ಯಚಕ್ರ, ವಿಶಿಷ್ಟ ಸೇವಾ ಪದಕಗಳನ್ನು ಪಡಕೊಳ್ಳುವುದಕ್ಕೆ ಇವರಲ್ಲಿ ಬಹುತೇಕರೂ ಜೀವಂತವಿರಲಿಲ್ಲ. ಆದ್ದರಿಂದಲೇ ಅವರ ಪತ್ನಿಯೋ, ಅಮ್ಮನೋ, ಅಪ್ಪನೋ ಭಾವುಕ ಮನಸ್ಸಿನಿಂದ ಸ್ವೀಕರಿಸಿದರು. ಕಣ್ಣೀರು ಮಿಡಿದರು. ಮನುಷ್ಯರನ್ನು ಅವರ ಧರ್ಮ, ಹೆಸರು, ಭಾಷೆಯ ಹಂಗಿಲ್ಲದೇ ಪ್ರೀತಿಸುವ ಮತ್ತು ಇನ್ನೊಬ್ಬರಿಗಾಗಿ ಬದುಕುವ ಅಮೂಲ್ಯ ಮಾದರಿ ಪಾತ್ರಗಳಾಗಿ ಅವರು ನೆರೆದವರನ್ನು ತಟ್ಟಿದರು.
 ಚುನಾವಣೆಯ ಕಾವು ಬಿರುಸು ಪಡೆಯುತ್ತಿರುವ ಈ ದಿನಗಳಲ್ಲಿ ಕ್ಯಾಸ್ಟಲಿನೋ, ಪ್ರವೀಣ್, ಮನೀಶ್.. ಮುಂತಾದ ಪಾತ್ರಗಳು ಮತ್ತೆ ಮತ್ತೆ ಚರ್ಚೆಗೊಳಗಾಗಬೇಕಾದ ತುರ್ತು ಅಗತ್ಯ ಇದೆ. ಉತ್ತರಾಖಂಡದಲ್ಲಿ ದಿಕ್ಕೆಟ್ಟು ನಿಂತ ಯಾತ್ರಾರ್ಥಿಗಳಿಗೂ ಕ್ಯಾಸ್ಟಲಿನೋಗೂ ಯಾವ ಸಂಬಂಧವೂ ಇರಲಿಲ್ಲ. ಆತ ಉತ್ತರಾಖಂಡದವನಲ್ಲ. ಆತನ ಭಾಷೆಗೂ ಉತ್ತರಾಖಂಡಕ್ಕೂ ಸಂಬಂಧ ಇರಲಿಲ್ಲ. ಅಲ್ಲಿ ಆತನಿಗೆ ಬಂಧುಗಳಾರೂ ಇರಲಿಲ್ಲ. ಅಲ್ಲದೇ ಸಂತ್ರಸ್ತರ ಧರ್ಮವನ್ನು ಆತ ಆಚರಿಸುತ್ತಲೂ ಇರಲಿಲ್ಲ. ಒಂದು ರೀತಿಯಲ್ಲಿ, ಪ್ರವಾಹ ಪೀಡಿತ ಪ್ರದೇಶಕ್ಕೆ ಹೋಗದೇ ಇರುವುದಕ್ಕೆ ಇಂಥ ಹತ್ತು-ಹಲವು ಕಾರಣಗಳು ಆತನ ಮುಂದಿದ್ದುವು. ಅಲ್ಲದೇ, ಪ್ರವಾಹ ಪೀಡಿತ ಪ್ರದೇಶವು ಅತ್ಯಂತ ದುರ್ಗಮ ಮತ್ತು ಅಪಾಯಕಾರಿ ವಲಯದಲ್ಲಿತ್ತು. ಆದರೆ, ಕ್ಯಾಸ್ಟಲಿನೋ ಇವಾವುದನ್ನೂ ನೆಪ ಮಾಡಿಕೊಂಡು ಕೂರಲಿಲ್ಲ. ಕೇವಲ ಎರಡೇ ದಿನಗಳಲ್ಲಿ 15 ಸಾವಿರ ಸಂತ್ರಸ್ತರನ್ನು ಉತ್ತರಾಖಂಡದಿಂದ ಗುಜರಾತ್‍ಗೆ ಸಾಗಿಸಿರುವೆ ಎಂದು ಎಲ್ಲೋ ಕುಳಿತು ಸುಳ್ಳು ಸುಳ್ಳೇ ಪ್ರಚಾರ ಮಾಡಿದ ಗುಜರಾತ್‍ನ ಮುಖ್ಯಮಂತ್ರಿ ಮೋದಿ ಮತ್ತು ಕ್ಯಾಸ್ಟಲಿನೋರನ್ನು ಒಮ್ಮೆ ಹೋಲಿಸಿನೋಡಿ. ಇಂದಿನ ದಿನಗಳಲ್ಲಿ ಇಂಥದ್ದೊಂದು ಹೋಲಿಕೆಯ ಅಗತ್ಯ ಯಾಕೆ ಇದೆ ಎಂದರೆ, ಇವತ್ತು ‘ಕ್ಯಾಸ್ಟಲಿನೋ ಮಾದರಿ’ ಕಡಿಮೆ ಆಗುತ್ತಿದೆ. ‘ಮೋದಿ ಮಾದರಿ’ ಜನಪ್ರಿಯವಾಗುತ್ತಿದೆ. ನಿಜವಾಗಿ, ಕ್ಯಾಸ್ಟಲಿನೋ ಓರ್ವ ವ್ಯಕ್ತಿಯಲ್ಲ, ಅದೊಂದು ಪಾತ್ರ. ಈ ದೇಶದ ಕೋಟ್ಯಾಂತರ ಮಂದಿ ಆ ಪಾತ್ರದಂತೆ ಇವತ್ತು ನಿತ್ಯ ಬದುಕುತ್ತಿದ್ದಾರೆ. ಅವರ ಹೆಸರು ಅಬ್ದುಲ್ಲ, ನಾರಾಯಣ, ಡಿಸೋಜ... ಏನೇ ಇರಬಹುದು, ಆದರೆ ಈ ಪಾತ್ರದಂತೆ ಬದುಕುವುದಕ್ಕೆ ಈ ಹೆಸರುಗಳು ಎಂದೂ ಅವರಿಗೆ ಅಡ್ಡಿಯಾಗಿಲ್ಲ. ನೆರೆಯವನ ಮನೆಗೆ ತನ್ನ ಮನೆಯಿಂದ ನೀರು ಕೊಡುವ ಅಬ್ದುಲ್ಲ; ಪಕ್ಕದ ಮನೆಯ ಅನಾರೋಗ್ಯ ಪೀಡಿತ ಯೂಸುಫ್‍ನನ್ನು ಆಸ್ಪತ್ರೆಗೆ ಸೇರಿಸಿ ಬಿಲ್ ಪಾವತಿಸುವ ರಮೇಶ; ನಡು ರಾತ್ರಿ ಫಾತಿಮಾಳ ಹೆರಿಗೆ ನೋವಿಗೆ ಸ್ಪಂದಿಸಿ ನಿದ್ದೆಗೆಟ್ಟು ಕಾಯುವ ಜಯಲಕ್ಷ್ಮಿ; ನೆರೆಯ ವೃದ್ಧೆ ಸೆಲಿನಾ ಬಾಯಿಯನ್ನು ತಾಯಿಯಂತೆ ಉಪಚರಿಸುವ ಲಕ್ಷ್ಮಿ... ಇಂಥ ಪಾತ್ರಗಳು ಈ ಸಮಾಜದಲ್ಲಿ ಧಾರಾಳ ಇವೆ. ಮಾತ್ರವಲ್ಲ, ಇಂಥ ಮನುಷ್ಯ ಪ್ರೀತಿಯೇ ಈ ದೇಶದ ಜೀವಾಳವೂ ಆಗಿದೆ. ಕ್ಯಾಸ್ಟಲಿನೋ ಇದರ ಒಂದು ಬಿಂಬ ಅಷ್ಟೇ. ಆದರೆ ರಾಜಕೀಯವು ಇವತ್ತು ಸಮಾಜದ ಈ ಮಾನವೀಯ ಬೆಸುಗೆಯನ್ನು ತುಂಡರಿಸುವ ಭಾಷೆಯಲ್ಲಿ ಮಾತಾಡುತ್ತಿದೆ. ಒಂದು ಧರ್ಮವನ್ನು ಮತ್ತು ಅದರ ಅನುಯಾಯಿಗಳನ್ನು ಅಸ್ಪ್ರಶ್ಯರಂತೆ ನೋಡುವುದಕ್ಕೆ ಪ್ರಚೋಧನೆ ಕೊಡುತ್ತಿದೆ. ನಿಜವಾಗಿ, ಕೆಲವು ರಾಜಕಾರಣಿಗಳು ಕ್ಯಾಸ್ಟಲಿನೋರಂಥ ಮನುಷ್ಯರನ್ನು ಎಂದೂ ಇಷ್ಟಪಡುವುದಿಲ್ಲ. ಯಾಕೆಂದರೆ, ಇಂಥವರ ಸಂಖ್ಯೆ ಹೆಚ್ಚಿದಂತೆಲ್ಲಾ, ಅವರ ಅಧಿಕಾರ ನಿರೀಕ್ಷೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ತನ್ನ ಸಾಧನೆಯನ್ನು ಹೇಳಿಕೊಂಡು ಓಟು ಬೇಡುವುದಕ್ಕೂ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸಿ ಓಟು ಪಡೆಯುವುದಕ್ಕೂ ವ್ಯತ್ಯಾಸ ಇದೆ.  ಮೊದಲನೆಯದ್ದು ತೀರಾ ಕಷ್ಟದ್ದಾದರೆ ಎರಡನೆಯದು ತೀರಾ ಸುಲಭ. ಸದ್ಯದ ದಿನಗಳಲ್ಲಿ ಈ ಸುಲಭದ ಆಯ್ಕೆಯನ್ನು ಪರಿಗಣಿಸುವ ರಾಜಕಾರಣಿಗಳ ಒಂದು ದಂಡೇ ನಿರ್ಮಾಣವಾಗುತ್ತಿದೆ. ಅವರ ಭಾಷೆ, ವರ್ತನೆ, ಅವೇಶಗಳೆಲ್ಲ ಕ್ಯಾಸ್ಟಲಿನೋನನ್ನು ಪ್ರತಿನಿಧಿಸುತ್ತಿಲ್ಲ. ಆ ಭಾಷೆಗೆ ಸಂತ್ರಸ್ತರನ್ನು ನಿರ್ಮಾಣ ಮಾಡುವ ಸಾಮರ್ಥ್ಯ  ಇದೆಯೇ ಹೊರತು ಸಂತೃಪ್ತರನ್ನು ತಯಾರಿಸುವುದಲ್ಲ. ಆ ವರ್ತನೆಯಲ್ಲಿ ಮನುಷ್ಯರ ಸಹಾಯಕ್ಕೆ ಧುಮುಕುವ ಇರಾದೆಗಿಂತ ಮನುಷ್ಯರ ಅಸಹಾಯಕತೆಯಿಂದ ಲಾಭ ಎತ್ತುವ ಹುನ್ನಾರ ಕಾಣಿಸುತ್ತದೆ. ಆ  ಆವೇಶಕ್ಕೆ ಜನರನ್ನು ರಕ್ಷಿಸುವ ತುಡಿತಕ್ಕಿಂತ ಅವರನ್ನು ವಿಭಜಿಸಿ ಸಂತ್ರಸ್ತರನ್ನಾಗಿಸುವ ಉಮೇದು ಇದೆ.
   ಸಾಮಾನ್ಯವಾಗಿ, ಸಿನಿಮಾ ತಾರೆಯರ ಕಾರ್ಯಕ್ರಮಕ್ಕೆ ಮಾಧ್ಯಮಗಳಲ್ಲಿ ವ್ಯಾಪಕ ಪ್ರಚಾರ ಸಿಗುತ್ತದೆ. ಸಿನಿ ಅವಾರ್ಡ್‍ನಂಥ ಕಾರ್ಯಕ್ರಮಗಳು ಟಿ.ವಿ. ಚಾನೆಲ್‍ಗಳನ್ನು ದಿನವಿಡೀ ತುಂಬಿಕೊಂಡಿರುತ್ತವೆ. ತಾರೆಯರ ಮಾತು, ನಗು, ಡ್ಯಾನ್ಸು, ಹಾವಭಾವಗಳನ್ನು ತುಂಬಿಕೊಳ್ಳಲು ಕ್ಯಾಮರಾಗಳು ದಣಿವರಿಯದೇ ಕಾಯುತ್ತವೆ. ಆದರೆ, ಇತರಿಗಾಗಿ ಬದುಕುವ, ಅವರ ಉಳಿವಿಗಾಗಿ ತಾವೇ ಜೀವತ್ಯಾಗ ಮಾಡುವ ಮನುಷ್ಯರ ಬಗ್ಗೆ ಹೇಳುವುದಕ್ಕೆ ನಮ್ಮ ಮಾಧ್ಯಮಗಳು ಉತ್ಸಾಹ ತೋರುತ್ತಿಲ್ಲ. ಅವರನ್ನು ಸ್ಮರಿಸಿಕೊಂಡು ಕಣ್ತುಂಬಿಕೊಳ್ಳುವ ಪತ್ನಿ, ಅಪ್ಪ, ತಾಯಿಯನ್ನು ತುಂಬಿಕೊಳ್ಳಲು ಕ್ಯಾಮರಾಗಳಿಗೆ ಪುರುಸೊತ್ತಿಲ್ಲ. ಅವರನ್ನು ಎದುರಿಟ್ಟುಕೊಂಡು ಒಂದೊಳ್ಳೆಯ ಮನುಷ್ಯ ಪ್ರೇಮಿ ಚಿಂತನೆಯನ್ನು ಸಮಾಜಕ್ಕೆ ಅರ್ಪಿಸುವುದಕ್ಕೆ ಪ್ರಯತ್ನಗಳೂ ನಡೆಯುತ್ತಿಲ್ಲ. ಬಹುಶಃ, ಬರಬರುತ್ತಾ ನಾವೆಲ್ಲ ಸಂವೇದನೆಯನ್ನು ಕಳಕೊಳ್ಳುತ್ತಿರುವುದಕ್ಕೆ ಇವೆಲ್ಲ ಸಾಕ್ಷಿಯಾಗಬಹುದೇನೋ. ಇದು ಬದಲಾಗಬೇಕು. ಕ್ಯಾಸ್ಟಲಿನೋರಂಥ ಪಾತ್ರವನ್ನು ಸಮಾಜದಲ್ಲಿ ಪೋಷಿಸಿ ಬೆಳೆಸುವ ಬರಹ, ಚಿಂತನೆಗಳು ಹರಿದು ಬರಬೇಕು. ಇಲ್ಲದಿದ್ದರೆ ವಿಭಜಿಸುವ ಪಾತ್ರಗಳು ನಮ್ಮ ನಡುವಿನ ಕ್ಯಾಸ್ಟಲಿನೋರನ್ನು ನುಂಗಿಬಿಟ್ಟಾವು.

Thursday 20 March 2014

ನಮ್ಮ ಸಂಶೋಧನೆಯ ಮಿತಿಯನ್ನು ಸ್ಪಷ್ಟಪಡಿಸಿದ ವಿಮಾನ

   ಕಣ್ಮರೆಯಾದ ಮಲೇಶ್ಯಾದ ವಿಮಾನವು, ಅಮೇರಿಕದ ಕಾದಂಬರಿಕಾರ ವಿನ್ಸೆಂಟ್ ಗಡ್ಡೀಸ್ ಎಂಬವರು 1964ರಲ್ಲಿ ಬರೆದ, 'ದಿ ಡೆಡ್ಲಿ ಬರ್ಮುಡಾ ಟ್ರಯಾಂಗಲ್' ಎಂಬ ಕಾದಂಬರಿಯನ್ನು ಮತ್ತೊಮ್ಮೆ ಚರ್ಚೆಗೆ ತಂದಿದೆ. ಅಟ್ಲಾಂಟಿಕ್ ಸಮುದ್ರ ವ್ಯಾಪ್ತಿಯಲ್ಲಿರುವ ಈ ದ್ವೀಪದ ಬಗ್ಗೆ ಸಾಕಷ್ಟು ಊಹಾಪೋಹಗಳು ಈಗಲೂ ಇವೆ. 1945 ಡಿ. 5ರಂದು ಅಮೇರಿಗ ಎಫ್ 19 ಮಾದರಿಯ ವಿಮಾನವೊಂದು ಅಲ್ಲಿ ಕಣ್ಮರೆಯಾದ ಬಳಿಕ ಹತ್ತಾರು ಕಣ್ಮರೆ ಪ್ರಕರಣಗಳು ಈ ದ್ವೀಪದಲ್ಲಿ ನಡೆದಿವೆ. ಹಡಗುಗಳು ಮತ್ತು ವಿಮಾನಗಳನ್ನು ನುಂಗುವ ದ್ವೀಪವೆಂಬ ನೆಲೆಯಲ್ಲಿ ಅದರ ಬಗ್ಗೆ ಸಂಶೋಧನೆಗಳು ನಡೆದಿವೆ. ‘ದಿ ಬರ್ಮುಡಾ ಟ್ರಯಾಂಗಲ್ ಮಿಸ್ಟರಿ: ಸಾಲ್ವಡ್’ ಎಂಬ ಕಾದಂಬರಿಯನ್ನು 1975ರಲ್ಲಿ ಬರೆದ ಲಾರೆನ್ಸ್ ಕ್ರುಶ್ಚೇವ್ ಎನ್ನುವವರು, ಈ ದ್ವೀಪದ ಬಗೆಗಿರುವ ಊಹಾಪೋಹಗಳನ್ನು ಸುಳ್ಳು ಎಂದಿದ್ದಾರೆ. ಆದರೂ ಈ ದ್ವೀಪದ ಕುರಿತಾದ ಕುತೂಹಲ ತಣಿದಿಲ್ಲ. ಬ್ರಿಟನ್ನಿನ ಪ್ರಮುಖ ಟಿ.ವಿ. ಚಾನೆಲ್ ಆದ ‘ಚಾನೆಲ್ 4’ ಅಂತೂ 1992ರಲ್ಲಿ ಈ ಬಗ್ಗೆ ‘ಬರ್ಮುಡಾ ಟ್ರಯಾಂಗಲ್’ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಿ ಮತ್ತೊಮ್ಮೆ ಚರ್ಚೆಗೆ ಒಳಪಡಿಸಿತ್ತು. ಒಂದು ರೀತಿಯಲ್ಲಿ, ಆಧುನಿಕ ಸಂಶೋಧನೆಗಳ ಬಗ್ಗೆ ನಾವೆಷ್ಟೇ ಜಂಭ ಕೊಚ್ಚಿಕೊಂಡರೂ ಭೂಮಿಯಲ್ಲಿ ನಾವು ತಲುಪದ ಮತ್ತು ಬೇಧಿಸಲು ಆಗದ ಸ್ಥಳಗಳಿರಲು ಸಾಧ್ಯ ಎಂಬುದನ್ನು ಇಂಥ ಸುದ್ದಿಗಳು ಆಗಾಗ ಮನದಟ್ಟು ಮಾಡುತ್ತಿರುತ್ತದೆ. ಇದೀಗ, ಮಲೇಶ್ಯಾದ ಈ ವಿಮಾನವನ್ನು ಈ ದ್ವೀಪ ನುಂಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿರುವುದು ಇಂಥ ಅನುಮಾನಗಳಿಗೆ ಮತ್ತೊಮ್ಮೆ ಜೀವ ಒದಗಿಸಿದೆ.
 ಜಗತ್ತಿನಲ್ಲಿ ಸಾಮಾನ್ಯವಾಗಿ ಎರಡು ವಿಧದ ವಿಚಾರಧಾರೆಗಳಿವೆ. ಒಂದು ಕಣ್ಣಿಗೆ ಕಾಣುವಂಥದ್ದನ್ನು ಮಾತ್ರ ನಂಬುವ ವಿಚಾರಧಾರೆ. ಇನ್ನೊಂದು, ಕಣ್ಣಿಗೆ ಕಾಣದೇ ಇರುವ ಆದರೆ, ಇದೆ ಎಂದು ಧರ್ಮಗ್ರಂಥಗಳು ಪ್ರತಿಪಾದಿಸಿರುವ ವಿಷಯಗಳನ್ನು ನಂಬುವ ವಿಚಾರಧಾರೆ. ಜಗತ್ತಿನಲ್ಲಿ ಈ ಎರಡು ವಿಚಾರಧಾರೆಗಳು ಎಲ್ಲ ಕಾಲಗಳಲ್ಲೂ ಸದಾ ಮುಖಾಮುಖಿಯಾಗುತ್ತಲೇ ಬಂದಿವೆ. ದೇವನು ಇದ್ದಾನೆ ಎಂದು ಒಂದು ವರ್ಗ ಹೇಳುವಾಗ ಆತನನ್ನು ತೋರಿಸು ಎಂದು ಇನ್ನೊಂದು ವರ್ಗ ಹೇಳುತ್ತದೆ. ಸ್ವರ್ಗ ಮತ್ತು ನರಕ ಎಂಬ ಎರಡು ವಸ್ತುಗಳನ್ನು ದೇವನು ಸೃಷ್ಟಿಸಿದ್ದಾನೆ ಎಂದು ಹೇಳುವವರೂ ಭೂಮಿಯೇ ಸ್ವರ್ಗ ಮತ್ತು ನರಕ ಎಂದು ವಾದಿಸುವವರೂ ಧಾರಾಳ ಇದ್ದಾರೆ. ಭೂಮಿಯ ಸೃಷ್ಟಿ ರಹಸ್ಯವನ್ನು ಕಂಡುಕೊಳ್ಳುವ ಒಂದು ಪ್ರಯತ್ನವಾಗಿ ಎರಡು ವರ್ಷಗಳ ಹಿಂದೆ ಬಿಗ್ ಬ್ಯಾಂಗ್ಸ್ ಎಂಬ ಸಂಶೋಧನೆಯನ್ನು ಕೈಗೊಳ್ಳಲಾಯಿತು. ವಿವಿಧ ದೇಶಗಳ ಅನೇಕಾರು ವಿಜ್ಞಾನಿಗಳು ಈ ಸಂಶೋಧನೆಯಲ್ಲಿ ಭಾಗವಹಿಸಿ ಸೃಷ್ಟಿ ರಹಸ್ಯದ ಸತ್ಯಗಳನ್ನು ಕಂಡುಕೊಳ್ಳಲು ಯತ್ನಿಸಿದರು. ಆರ್ಕಿಮಿಡೀಸ್, ಗೆಲಿಲಿಯೋ, ನ್ಯೂಟನ್‍ರಿಂದ ಹಿಡಿದು ಈ ಕಾಲದ ಅದ್ಭುತವಾದ ಸ್ಟೀಫನ್ ಹಾಕಿಂಗ್ಸ್‍ರ ವರೆಗೆ ವಿಜ್ಞಾನಿಗಳ ದಂಡೇ ಈ ಜಗತ್ತಿನ ರಹಸ್ಯವನ್ನು ಹುಡುಕುವ ಪ್ರಯತ್ನ ನಡೆಸುತ್ತಲೇ ಇವೆ. ಮನುಷ್ಯ ಹೇಗಾದ, ಪ್ರಾಣಿಗಳು ಹೇಗಾದುವು, ಸೂರ್ಯ, ಚಂದ್ರ, ನಕ್ಷತ್ರ, ಆಕಾಶ, ನೀರು.. ಎಲ್ಲವುಗಳ ಬಗೆಗೂ ಈ ವಿಜ್ಞಾನಿಗಳು ಕುತೂಹಲಗೊಂಡು ಸಂಶೋಧನೆಗೊಳಪಡಿಸುತ್ತಲೇ ಬಂದಿದ್ದಾರೆ. ವಿಕಾಸವಾದದ ಸಿದ್ಧಾಂತವನ್ನು ಡಾರ್ವಿನ್ ಮುಂದಿಟ್ಟಾಗ ಅಂದಿನಿಂದ ಇಂದಿನ ವರೆಗಿನ ಸಮಾಜ ಅದನ್ನು ಅನುಮಾನಿಸುತ್ತಲೇ ಬಂದಿತು. ಮಂಗ ವಿಕಾಸ ಹೊಂದುತ್ತಾ ಮನುಷ್ಯ ರೂಪ ತಾಳಿದುದಾದರೆ, ಆ ಬಳಿಕ ಈ ವಿಕಸನವು ಸ್ಥಬ್ಧಗೊಂಡಿತೇಕೆ ಎಂಬ ಪ್ರಶ್ನೆ ಇವತ್ತೂ ಪ್ರಸ್ತುತವಾಗಿಯೇ ಉಳಿದಿದೆ. ಮನುಷ್ಯನ ಹೃದಯಕ್ಕೆ ಬದಲಿ ಹೃದಯವನ್ನು, ರಕ್ತಕ್ಕೆ ಬದಲಿ ರಕ್ತವನ್ನು, ಕಿಡ್ನಿಗೆ ಬದಲಿ ಕಿಡ್ನಿಯನ್ನು, ಕಣ್ಣಿಗೆ ಬದಲಿ ಕಣ್ಣನ್ನು.. ಹೀಗೆ ಮಾನವ ದೇಹದ ವಿವಿಧ ಅಂಗಗಳಿಗೆ ಪ್ರಯೋಗಾಲಯದಲ್ಲಿ ಬದಲಿ ಅಂಗಗಳನ್ನು ಸೃಷ್ಟಿಸುವ ಪ್ರಯತ್ನದಲ್ಲಿ ಯಾವ ವಿಜ್ಞಾನಿಗಳು ಈ ವರೆಗೂ ಯಶಸ್ಸು ಕಂಡಿಲ್ಲ. ಮನುಷ್ಯನ ದೇಹದಿಂದ ಒಂದಂಶವನ್ನು ತೆಗೆದು ಒಂದು ಜೀವವನ್ನು ಸೃಷ್ಟಿಸುವ ಕ್ಲೋನಿಂಗ್‍ನಂಥ ಪ್ರಯತ್ನಗಳು ಸಫಲಗೊಂಡಿವೆಯೇ ಹೊರತು ಕೇವಲ ಪ್ರಯೋಗಾಲಯವೇ ಓರ್ವ ಮನುಷ್ಯನನ್ನು ಸೃಷ್ಟಿಸುವ ಪ್ರಯತ್ನ ಈ ವರೆಗೂ ಯಶಸ್ಸು ಕಂಡಿಲ್ಲ. ಧಾರ್ಮಿಕ ಚಿಂತನೆಗಳಿಗೆ ಬಲ ಬರುವುದು ಇಂಥ ಸ್ಥಿತಿಯಲ್ಲೇ. ವಿಜ್ಞಾನ ಹೇಳದ ಅಥವಾ ಹೇಳಿಯೂ ಹತ್ತಾರು ಅನುಮಾನಗಳಿಗೆ ಉತ್ತರ ಸಿಗದ ಅನೇಕಾರು ವಿಷಯಗಳ ಬಗ್ಗೆ ಧರ್ಮಗ್ರಂಥಗಳು ಸ್ಪಷ್ಟವಾಗಿ ಉತ್ತರಿಸುತ್ತವೆ. ಮನುಷ್ಯ ಹೇಗೆ ಮತ್ತು ಯಾಕೆ ಸೃಷ್ಟಿಯಾಗಿದ್ದಾನೆ, ಮೊತ್ತಮೊದಲ ಮಾನವನ ಹೆಸರೇನು, ಆ ಬಳಿಕ ಹೇಗೆ ಅವರ ಸಂತಾನಗಳು ವಿಕಸನ ಹೊಂದಿದುವು, ಮೊತ್ತಮೊದಲ ಮರಣ ಹೇಗಾಯಿತು, ಮೃತಪಟ್ಟವರು ಮತ್ತು ಅದಕ್ಕೆ ಕಾರಣರಾದವರ ಹೆಸರುಗಳು ಏನೇನು, ಮೃತ ಶರೀರವನ್ನು ದಫನ ಮಾಡುವ ಕಲೆ ಹೇಗೆ ಅವರಿಗೆ ಸಿದ್ಧಿಸಿತು, ಅದನ್ನು ಹೇಳಿಕೊಟ್ಟದ್ದು ಯಾವುದು.. ಮುಂತಾದುವುಗಳಿಂದ ಹಿಡಿದು, ಒಂಭತ್ತು ತಿಂಗಳ ನಡುವೆ ಒಂದು ಶಿಶು ತಾಯಿಯ ಉದರದಲ್ಲಿ ವಿಕಸನಗೊಳ್ಳುವ ವಿವಿಧ ಹಂತಗಳ ವರೆಗೆ, ಭೂಮಿಯ ರಚನೆಯಿಂದ ಹಿಡಿದು ಪ್ರಳಯದ ವಿವಿಧ ಕುರುಹುಗಳ ವರೆಗೆ.. ಎಲ್ಲವನ್ನೂ ಅತ್ಯಂತ ಸ್ಪಷ್ಟವಾಗಿ ಪವಿತ್ರ ಕುರ್‍ಆನ್ (23:14, 49: 13, 5: 27-31, 46:15...)ವಿವರಿಸಿದೆ. ದೇವನನ್ನು ಗುರುತಿಸುವುದಕ್ಕೆ ಈ ಭೂಮಿಯಲ್ಲಿ ಹತ್ತು-ಹಲವು ದೃಷ್ಟಾಂತಗಳನ್ನು ಸೃಷ್ಟಿಸಲಾಗಿದೆ ಎಂದು ಅದು ಹೇಳುತ್ತದೆ. ಬರ್ಮುಡಾ ಟ್ರಯಾಂಗಲ್ ಎಂಬುದು ಆ ಕುರುಹು ಹೌದೋ ಅಲ್ಲವೋ ಆದರೆ ಮಾನವ ಜಗತ್ತನ್ನು ಅದು ಕುತೂಹಲದ ಮೊಟ್ಟೆಯಾಗಿಸಿ ಬಿಟ್ಟಿದೆ. ಸಂಶೋಧನೆಗೆ ಸವಾಲನ್ನು ಒಡ್ಡುತ್ತಲೇ, ಭೂಮಿಯಲ್ಲಿ ಇಂಥದ್ದೊಂದು ಅಚ್ಚರಿಯ ದ್ವೀಪವನ್ನು ಯಾರು ಮತ್ತು ಯಾಕೆ ಸೃಷ್ಟಿಸಿದರು ಎಂಬ ಪ್ರಶ್ನೆಯನ್ನು ಎತ್ತುತ್ತಲೇ ಇದೆ.
 ನಿಜವಾಗಿ, ವಿಮಾನ ಎಂಬುದು ಕಾರಿನಂತೆಯೋ, ಬಸ್ಸು, ಬೈಕ್‍ನಂತೆಯೋ ಅಲ್ಲ. ಈ ಭೂಮಿಯಲ್ಲಿ ತಾಂತ್ರಿಕವಾಗಿ ಅತ್ಯಂತ ಹೆಚ್ಚು ನಿಖರವಾಗಿರುವ ಮತ್ತು ಅನೇಕಾರು ತಪಾಸಣೆ, ಪ್ರಯೋಗಗಳ ಬಳಿಕ ಚಾಲನೆಗೆ ಬರುವ ವಾಹನ ಅದು. ಪ್ರಯಾಣಿಕರೂ ಅಷ್ಟೇ. ಬಸ್ಸಿಗೋ, ಟ್ಯಾಕ್ಸಿಗೋ ಹತ್ತಿದಂತೆ ವಿಮಾನವನ್ನು ಹತ್ತುವಂತಿಲ್ಲ. ಬಿಗಿಯಾದ ತಪಾಸಣೆಯ ಬಳಿಕವೇ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ. ಓರ್ವ ಪ್ರಯಾಣಿಕ ಏನೇನಲ್ಲ ಕೊಂಡೊಯ್ಯಬಹುದು ಮತ್ತು ಅವು ಎಷ್ಟು ಕೆ.ಜಿ. ಮಿತಿಯಲ್ಲಿರಬೇಕು ಎಂಬ ನಿಯಮವೂ ಇದೆ. ಹೀಗೆ ಸಾಮಾನ್ಯ ಪ್ರಯಾಣಕ್ಕಿಂತ ಭಿನ್ನವಾಗಿ ಬಿಗಿ ನಿಯಮ, ತಪಾಸಣೆಗೊಳಪಟ್ಟು ಹಾರುವ ವಿಮಾನವು ಆಕಾಶದ ಮತ್ತು ಭೂಮಿಯ ಮೇಲೆ ಎಲ್ಲೇ ಇದ್ದರೂ ಸತತ ಮೂಲ ಕೇಂದ್ರದೊಂದಿಗೆ ಅದು ಸಂಪರ್ಕದಲ್ಲಿರುವಂತೆ ನೋಡಿಕೊಳ್ಳಲಾಗುತ್ತದೆ. ವಿಮಾನದ ಪ್ರತಿ ಚಲನೆಯ ಮೇಲೂ ರಾಡಾರ್ ಕಣ್ಣಿಟ್ಟಿರುತ್ತದೆ. ಹೀಗೆ ಇತರೆಲ್ಲ ವಾಹನಗಳಿಗಿಂತ ಹೆಚ್ಚು ಸೌಕರ್ಯವಿರುವ ಮತ್ತು ನಿಖರವಾಗಿರುವ ಆನೆಗಾತ್ರದ ವಿಮಾನವೇ ಎಲ್ಲ ಮಾನವ ನಿರ್ಮಿತ ವ್ಯವಸ್ಥೆಯನ್ನೇ ದಿಕ್ಕು ತಪ್ಪಿಸಿ ಕಣ್ಮರೆಯಾಗಲು ಸಾಧ್ಯವೆಂದರೆ ಅದು ರವಾನಿಸುವ ಸಂದೇಶವೇನು? ಭೂಮಿಯಲ್ಲಿ ತಾನು ಮುಟ್ಟದ ಜಾಗವೇ ಇಲ್ಲ ಎಂದು ವಿಜ್ಞಾನ ಹೇಳುವಾಗ ಮತ್ತು ಮಂಗಳನಲ್ಲಿ ನೀರು ಹುಡುಕುತ್ತಿರುವಾಗ ನಡೆದ ಈ ಘಟನೆ ಏನನ್ನು ಸೂಚಿಸುತ್ತದೆ? ಭೂಮಿಯಲ್ಲಿ ವಿಜ್ಞಾನ ತಲುಪದ ಮತ್ತು ಅದರ ತಂತ್ರಜ್ಞಾನಗಳಿಗೂ ನಿಲುಕದ ಜಾಗಗಳಿವೆಯೇ? ಯಾರು ಅದರ ಸೃಷ್ಟಿಕರ್ತ? ಏನದರ ಉದ್ದೇಶ?
   ಕಣ್ಮರೆಯಾದ ವಿಮಾನವನ್ನು ಎದುರಿಟ್ಟುಕೊಂಡು ಜಗತ್ತು ಈ ಬಗ್ಗೆ ಚರ್ಚಿಸಬೇಕಾಗಿದೆ. ಒಂದು ವೇಳೆ ಅದು ಪತ್ತೆಯಾದರೂ ಕೂಡ.

Wednesday 5 March 2014

ಮೋದಿ ಎಂಬ ಆರೋಪಿಯೂ ಸಲ್ಮಾನ್ ಎಂಬ ಅಸಭ್ಯರೂ

    ‘ಏನಿಲ್ಲದಿದ್ದರೂ ರಾಜಕಾರಣಿಗಳ ಕೈ ಮತ್ತು ಬಾಯಿ ಶುದ್ಧವಾಗಿರುತ್ತದೆ..' ಎಂದು ಯಾರಾದರೂ ಹೇಳಿದರೆ, ಅದನ್ನೇ ಜನರು ದಿನದ ಜೋಕ್ ಆಗಿ ಪರಿಗಣಿಸುವಷ್ಟು ಅವರ ಈ ಎರಡು ಅಂಗಗಳು ಇವತ್ತು ವಿಶ್ವಾಸಾರ್ಹತೆಯನ್ನು ಕಳಕೊಂಡು ಬಿಟ್ಟಿವೆ. ಹಾಗಂತ, ರಾಜಕಾರಣಿ ಎಂಬುದು ಮನುಷ್ಯ ವರ್ಗಕ್ಕಿಂತ ಭಿನ್ನವಾದ ಜೀವಿಯೇನೂ ಅಲ್ಲ. ಮನುಷ್ಯರನ್ನು ಹೊರತುಪಡಿಸಿದ ‘ಶೂನ್ಯ' ಪ್ರದೇಶದಲ್ಲಿ ಅವರು  ಬದುಕುತ್ತಲೂ ಇಲ್ಲ. ರಾಜಕಾರಣಿಯಾಗುವುದಕ್ಕಿಂತ ಮೊದಲು ಪ್ರತಿಯೊಬ್ಬರೂ ಸಾಮಾನ್ಯ ಮನುಷ್ಯರೇ ಆಗಿರುತ್ತಾರೆ. ಅವರಲ್ಲಿ ಜನಸಾಮಾನ್ಯರಂತೆ ರೇಶನ್ ಅಂಗಡಿಗಳಲ್ಲಿ ಕ್ಯೂ ನಿಂತವರಿರಬಹುದು. ಮಣ್ಣು ಹೊತ್ತವರು, ಬಾವಿಯಿಂದ ನೀರು ಸೇದಿದವರು, ಕಾರಿನಲ್ಲೇ ಓಡಾಡಿದವರು.. ಎಲ್ಲರೂ ಇರಬಹುದು. ಆಗೆಲ್ಲಾ ಶುದ್ಧವಾಗಿಯೇ ಇರುವ ಇವರ ಕೈ ಮತ್ತು ಬಾಯಿಗಳು ರಾಜಕಾರಣಿಯಾದ ಮೇಲೆ ಅಶುದ್ಧವಾಗುವುದೇಕೆ? ಆಡಬಾರದ ಮಾತನ್ನು ಆಡುವಷ್ಟು, ಮಾಡಬಾರದ ಕೆಲಸವನ್ನು ಮಾಡುವಷ್ಟು ಅವು ಲಜ್ಜೆರಹಿತವಾಗುವುದೇಕೆ? ಲಕ್ಷಾಂತರ ಮಂದಿಯನ್ನು ಪ್ರತಿನಿಧಿಸುವ ರಾಜಕಾರಣಿಯೊಬ್ಬ ಹೊಲಸು ಮಾತಾಡುತ್ತಾರೆಂದರೆ ಅದು ಲಕ್ಷಾಂತರ ಮಂದಿಗೆ ಮಾಡುವ ಅವಮಾನ. ಆದ್ದರಿಂದಲೇ, ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್‍ರನ್ನು ನಾವು ಖಂಡಿಸಬೇಕಾಗಿದೆ. ಕಳೆದವಾರ ತಮ್ಮ ಅಸಂಸ್ಕ್ರ ತ ನಾಲಗೆಯನ್ನು ಅವರು ದೇಶದ ಮುಂದೆ ಪ್ರದರ್ಶಿಸಿದ್ದಾರೆ. ನರೇಂದ್ರ ಮೋದಿಯನ್ನು ಷಂಡ, ನಪುಂಸಕ ಎಂದು ಕರೆದು ತನ್ನ ಯೋಗ್ಯತೆ ಏನು ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಅವರ ಈ ಪದ ಪ್ರಯೋಗವನ್ನು ಯಾವ ನೆಲೆಯಲ್ಲೂ ಸ್ವೀಕರಿಸಲು ಸಾಧ್ಯವಿಲ್ಲ.
 ನಿಜವಾಗಿ, ನರೇಂದ್ರ ಮೋದಿಯ ಬಗ್ಗೆ, ಅವರ ರಾಜಕೀಯ ವಿಚಾರಧಾರೆಗಳ ಬಗ್ಗೆ ಪ್ರತಿಕ್ರಿಯಿಸುವುದಕ್ಕೆ ಸಲ್ಮಾನ್ ಖುರ್ಷಿದ್‍ರಿಗೆ ಎಲ್ಲ ರೀತಿಯಲ್ಲೂ ಅರ್ಹತೆಯಿದೆ. ಗುಜರಾತ್ ಗಲಭೆಗೆ ಸಂಬಂಧಿಸಿ ಮೋದಿಯ ಪ್ರಾಮಾಣಿಕತೆಯನ್ನು ಅವರು ಪ್ರಶ್ನಿಸುವುದಾದರೆ, ಅದನ್ನಾರೂ ತಪ್ಪೂ ಅನ್ನುತ್ತಿಲ್ಲ. ಈ ದೇಶದಲ್ಲಿ ಯಾವ ರಾಜಕಾರಣಿಯೂ ಪ್ರಶ್ನಾತೀತರಲ್ಲ. ಮೋದಿಯೂ ಕೂಡ. ಆದರೆ ಓರ್ವ ಮನುಷ್ಯರಾಗಿ ಮೋದಿಗೂ ಕೆಲವು ಅರ್ಹತೆಗಳಿವೆ. ಗುಜರಾತ್ ಹತ್ಯಾಕಾಂಡದಲ್ಲಿ ಮೋದಿಯ ಶಂಕಿತ ಪಾತ್ರದ ಬಗ್ಗೆ ಎಷ್ಟೇ ಅನುಮಾನಗಳಿದ್ದರೂ ಓರ್ವ ಮನುಷ್ಯರಾಗಿ ಅವರಿಗೆ ಸಲ್ಲತಕ್ಕ ಗೌರವಗಳನ್ನು ನಿರಾಕರಿಸುವುದು ಸಭ್ಯತನವಲ್ಲ.  1984 ಸಿಕ್ಖ್ ಹತ್ಯಾಕಾಂಡಕ್ಕೆ ಸಂಬಂಧಿಸಿ ಕಾಂಗ್ರೆಸ್ ನಾಯಕರನ್ನು ಸಲ್ಮಾನ್‍ರದ್ದೇ ಭಾಷೆಯಲ್ಲಿ ಖಂಡಿಸುವುದಕ್ಕೆ ಮೋದಿಗೂ ಅವಕಾಶ ಇದೆಯಲ್ಲವೇ? ಹತ್ಯಾಕಾಂಡಗಳಂಥ ಭೀಕರ ಕ್ರೌರ್ಯಗಳನ್ನು ಖಂಡಿಸುವುದಕ್ಕಾಗಿ ಇಂಥ ಪದಗಳ ಬಳಕೆಯನ್ನು ನಾವು ಸಹಿಸುವುದಾದರೆ ಅದು ನಮ್ಮನ್ನು ಎತ್ತ ಕೊಂಡೊಯ್ದೀತು? ಮೋದಿಯನ್ನು ಖಂಡಿಸುವುದಕ್ಕೆ ಈ ನಾಗರಿಕ ಜಗತ್ತಿನಲ್ಲಿ ಧಾರಾಳ ಸಭ್ಯ ಪದಗಳಿವೆ. ಕ್ರೌರ್ಯವೊಂದರ ಸಕಲ ಗಂಭೀರತೆಯನ್ನೂ ಪ್ರತಿನಿಧಿಸಬಲ್ಲಷ್ಟು ಅವು ಪ್ರಭಾವಶಾಲಿಯೂ ಆಗಿವೆ. ಅವನ್ನು ಬಿಟ್ಟು ಅಸಭ್ಯ ಪದಗಳನ್ನು ಬಳಸುವುದು ನಿಜವಾಗಿ ಸಭ್ಯ ಪದಗಳಿಗೆ ಮಾಡುವ ಅವಮಾನವಾಗಿದೆ. ಮಾತ್ರವಲ್ಲ, ಅಸಭ್ಯ ಪದಗಳನ್ನು ಬಳಕೆ ಮಾಡುವ ಮೂಲಕ ಅಸಭ್ಯರಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಮತ್ತು ಸಾರ್ವಜನಿಕರಿಂದ ಅನುಕಂಪ ಗಿಟ್ಟಿಸಿಕೊಳ್ಳುವುದಕ್ಕೂ ಅವಕಾಶ ಒದಗಿಸಿದಂತಾಗುತ್ತದೆ. ಈ ಹಿನ್ನಲೆಯಲ್ಲೂ ಖುರ್ಷಿದ್‍ರ ಪದಪ್ರಯೋಗವನ್ನು ವಿರೋಧಿಸಬೇಕಾಗಿದೆ. ಗುಜರಾತ್ ಹತ್ಯಾಕಾಂಡದಲ್ಲಿ ಮೋದಿ ಶಂಕಿತರಾಗಿರಬಹುದು. ಆದರೆ ಅದರ ಹೆಸರಲ್ಲಿ ಖುರ್ಷಿದ್‍ರ ಅಸಭ್ಯ ಪದಪ್ರಯೋಗವನ್ನು ಸಮರ್ಥಿಸಲು ಸಾಧ್ಯವಿಲ್ಲ. ನ್ಯಾಯ ಮೋದಿಗಾದರೂ ಸಲ್ಮಾನ್‍ರಿಗಾದರೂ ಏಕಪ್ರಕಾರ ಇರಬೇಕೆಂಬುದೇ ಖುರ್ಷಿದ್ ಪ್ರತಿನಿಧಿಸುವ ಧರ್ಮದ ನಿಯಮ. ಅದನ್ನು ಯಾರು ವಿೂರಿದರೂ ಖಂಡನಾರ್ಹವೇ.
 ಹಾಗಿದ್ದರೂ ಈ ಪದಪ್ರಯೋಗಕ್ಕೆ ಕಾರಣವಾದ ಅಂಶಗಳ ಬಗ್ಗೆ ಮೋದಿ ಮತ್ತು ಅವರ ಬೆಂಬಲಿಗರು ಆತ್ಮಾವಲೋಕನ ನಡೆಸಬೇಕಾದ ಅಗತ್ಯವಿದೆ. ಮೋದಿ ಖಂಡನೆಗೆ ಒಳಗಾಗುತ್ತಿರುವುದು ಇದು ಮೊದಲ ಸಲವೇನೂ ಅಲ್ಲ. ಕೊನೆಯದಾಗುವ ಸಾಧ್ಯತೆಯೂ ಇಲ್ಲ. ಈ ದೇಶದ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರು, ಬುದ್ಧಿಜೀವಿಗಳು ಎಂದಷ್ಟೇ ಅಲ್ಲ, ಸ್ವತಃ ಅಮೇರಿಕವೇ ಮೋದಿಯವರನ್ನು ಶಂಕಿತರಂತೆ ನೋಡುತ್ತಿದೆ. ಒಂದು ದೇಶದ ಪ್ರಧಾನಿ ಅಭ್ಯರ್ಥಿಯಾಗಿರುವ ಮತ್ತು ರಾಜ್ಯವೊಂದರ ಮುಖ್ಯಮಂತ್ರಿಯಾಗಿರುವ ವ್ಯಕ್ತಿಯೊಬ್ಬರನ್ನು ಹತ್ತಿರ ಸೇರಿಸುವುದಕ್ಕೆ ಅಮೇರಿಕ ಸಿದ್ಧವಾಗುತ್ತಿಲ್ಲವೆಂದರೆ ಅದನ್ನು ಪಿತೂರಿ ಎಂದೋ ದುರುದ್ದೇಶ ಎಂದೋ ಸಾಮನ್ರ್ಯೀಕರಿಸಲು ಸಾಧ್ಯವಿಲ್ಲ. ಅಲ್ಲದೇ ಮೋದಿ ಇತರೆಲ್ಲ ಪಕ್ಷಗಳಿಗಿಂತಲೂ ಹೆಚ್ಚು ಕಾರ್ಪೋರೇಟ್ ಪ್ರಿಯರು. ಅಮೇರಿಕ ಸಹಿತ ಬೃಹತ್ ರಾಷ್ಟ್ರಗಳಿಂದ ಬಂಡವಾಳ ಹರಿದು ಬರುವುದನ್ನು ಇಷ್ಟಪಡುವವರು. ಅಮೇರಿಕದ ಭಯೋತ್ಪಾದನಾ ವಿರೋಧಿ ಹೋರಾಟವನ್ನಾಗಲಿ, ಆರ್ಥಿಕ ಸಿದ್ಧಾಂತವನ್ನಾಗಲಿ ಮೋದಿ ಎಂದೂ ವಿಮರ್ಶಿಸಿಲ್ಲ. ಒಂದು ರೀತಿಯಲ್ಲಿ ಅಮೇರಿಕಕ್ಕೆ ಸರ್ವರೀತಿಯಿಂದಲೂ ಮೆಚ್ಚುಗೆಯವರಾಗಬೇಕಾದ ಮೋದಿಯನ್ನು ಅಮೆರಿಕ ಅಸ್ಪೃಶ್ಯರಂತೆ ಕಾಣಬೇಕಾದರೆ ಮೋದಿಯವರೊಳಗೊಬ್ಬ ಶಂಕಿತ ಇದ್ದಾನೆಂಬ ಅನುಮಾನವೇ ಇದಕ್ಕೆ ಕಾರಣವೆನ್ನಬೇಕಾಗಿದೆ. ಈ ಸತ್ಯವನ್ನು ಮೋದಿ ಬೆಂಬಲಿಗರು ಜೋರುದನಿಯಿಂದ ಅಡಗಿಸಲು ಯತ್ನಿಸಿದಷ್ಟೂ ಅದು ಮತ್ತೆ ಮತ್ತೆ ಚಿಮ್ಮುತ್ತಲೇ ಇರುತ್ತದೆ.
   ಈ ದೇಶದ 120 ಕೋಟಿಯಷ್ಟು ಬೃಹತ್ ಜನಸಂಖ್ಯೆಯನ್ನು ಲೋಕಸಭೆಯಲ್ಲಿ ನೇರವಾಗಿ ಪ್ರತಿನಿಧಿಸುವುದು ಕೇವಲ 543ರಷ್ಟು ಸಂಸದರು ಮಾತ್ರ. ಅಂದರೆ ಪ್ರತಿಯೊಬ್ಬ ಸಂಸದನೂ ಲಕ್ಷಾಂತರ ಮಂದಿಯ ಮಾತು-ಕೃತಿ, ಭಾವನೆ, ಸಂಸ್ಕøತಿ, ಧರ್ಮ, ನಡೆ, ನುಡಿಗಳನ್ನು ಪ್ರತಿನಿಧಿಸುತ್ತಾನೆ. ಗುಲ್ಬರ್ಗಾ ಲೋಕಸಭಾ ಕ್ಷೇತ್ರದ ಜನಪ್ರತಿನಿಧಿಯೊಬ್ಬರ ವೇಷ-ಭೂಷಣ, ಮಾತುಗಾರಿಕೆ ಮತ್ತು ಗ್ರಹಿಕೆಗಳು ಉತ್ತರ ಪ್ರದೇಶದ್ದೋ ಒಡಿಸ್ಸಾದ್ದೋ ಲೋಕಸಭಾ ಕ್ಷೇತ್ರದ ಜನಪ್ರತಿನಿಧಿಯೊಬ್ಬರ ವೇಷ-ಭೂಷಣ, ಭಾಷೆ, ಗ್ರಹಿಕೆಗಳಂತೆ ಇರಬೇಕಾಗಿಲ್ಲ. ಇವರಿಬ್ಬರೂ ತಂತಮ್ಮ ಕ್ಷೇತ್ರದಲ್ಲಿ ಎದುರಿಸುತ್ತಿರುವ ಸಮಸ್ಯೆ, ಸವಾಲುಗಳೂ ಭಿನ್ನ ಭಿನ್ನ ಆಗಿರಬಹುದು. ಇವರಿಬ್ಬರ ಧಾರ್ಮಿಕ ಚಿಂತನೆಗಳಲ್ಲೂ ವ್ಯತ್ಯಾಸ ಇರಬಹುದು. ಹಾಗಂತ, ಇವರಿಬ್ಬರ ಮಧ್ಯೆ ಸತ್ಯ, ನ್ಯಾಯ, ಮೌಲ್ಯ, ಸಭ್ಯತೆ, ನೈತಿಕತೆ.. ಮುಂತಾದ ಗುಣಗಳ ಬಗ್ಗೆ ಭಿನ್ನಾಭಿಪ್ರಾಯ ಇರುವುದಕ್ಕೆ ಸಾಧ್ಯವಿಲ್ಲ. ನಾನು ಸುಳ್ಳು ಹೇಳುತ್ತೇನೆ, ನಾನು ಹತ್ಯಾಕಾಂಡ ನಡೆಸುತ್ತೇನೆ, ನಾನು ಅನೈತಿಕತೆಯಲ್ಲೇ ನಂಬಿಕೆ ಇರಿಸಿದ್ದೇನೆ.. ಎಂದು ಯಾವ ಜನಪ್ರತಿನಿಧಿಯೂ ಬಹಿರಂಗವಾಗಿ ಘೋಷಿಸುವುದಿಲ್ಲ. ಯಾಕೆಂದರೆ, ಇವೆಲ್ಲ ಎಲ್ಲ ಜನರ ಪಾಲಿಗೂ ಸಮಾನ. ಭಿನ್ನ ಭಿನ್ನ ದೇಶ, ಭಾಷೆ, ಧರ್ಮ, ಸಂಸ್ಕøತಿಗಳುಳ್ಳವರೆಲ್ಲರಿಗೂ ಮೌಲ್ಯಗಳು ಬಹುತೇಕ ಒಂದೇ ಆಗಿರುತ್ತವೆ. ಆದ್ದರಿಂದಲೇ, ಸಲ್ಮಾ ನ್ ಖುರ್ಷಿದ್‍ರ ಪದಬಳಕೆಯನ್ನು ನಾವು ಪ್ರತಿಭಟಿಸಬೇಕಾದದ್ದು. ಅವರು ಮುಸ್ಲಿಮರೆಂಬ ಕಾರಣಕ್ಕಾಗಿ ಮತ್ತು ಅವರು ಆ ಪದ ಬಳಸಿದ್ದು ಓರ್ವ ಹತ್ಯಾಕಾಂಡದ ಆರೋಪಿಯ ವಿರುದ್ಧ ಎಂಬುದಕ್ಕಾಗಿ ಅದೆಂದೂ ಸಹ್ಯ ಆಗುವುದಕ್ಕೆ ಸಾಧ್ಯವಿಲ್ಲ. ಆಗಬಾರದು ಕೂಡಾ. ಮೋದಿ ಈ ಸಮಾಜದ ಸಭ್ಯತನಕ್ಕೆ ತಮ್ಮ ಕೃತ್ಯಗಳ ಮೂಲಕ ಅಪಚಾರ ಎಸಗಿದ್ದಾರೆಂದಾದರೆ ಅದನ್ನು ಅಸಭ್ಯ ಪದಗಳ ಮೂಲಕ ಪ್ರಶ್ನಿಸುವುದು ಉತ್ತರ ಆಗುವುದಿಲ್ಲ. ಬದಲು ಅದು ಇನ್ನೊಂದು ತಪ್ಪಷ್ಟೇ ಆಗುತ್ತದೆ. ಗುಜರಾತ್ ಹತ್ಯಾಕಾಂಡದಲ್ಲಿ ಮೋದಿಯ ಪಾತ್ರ ಏನು ಎಂಬುದನ್ನು ನ್ಯಾಯಾಲಯ ಇಂದಲ್ಲ ನಾಳೆ ಖಂಡಿತ ನಿರ್ಧರಿಸುತ್ತದೆ. ಅದನ್ನು ಸಲ್ಮಾನ್ ಖುರ್ಷಿದ್‍ರು ಅಸಭ್ಯ ಪದಗಳ ಮೂಲಕ ನಿರ್ಧರಿಸುವ ಅಗತ್ಯವಿಲ್ಲ.