ಉತ್ತರಾಖಂಡದ ಉಧಂಸಿಂಗ್ ನಗರದ ಶಾಯರಾ ಬಾನು ಅವರನ್ನು 2002ರಲ್ಲಿ ರಿಝ್ವಾನ್ ಅಹ್ಮದ್ ಎಂಬವರು ವಿವಾಹವಾಗುತ್ತಾರೆ. 2015ರಲ್ಲಿ ಶಾಯರಾ ಬಾನುಗೆ ರಿಝ್ವಾನ್ ತಲಾಕ್ (ವಿಚ್ಛೇದನ) ನೀಡುತ್ತಾರೆ. ಶಾಯರಾ ಈ ವಿಚ್ಛೇದನ ಕ್ರಮವನ್ನು ಒಪ್ಪುವುದಿಲ್ಲ. ‘ತಲಾಕ್ ತಲಾಕ್ ತಲಾಕ್’ ಎಂದು ಒಂದೇ ಉಸಿರಿಗೆ ಮೂರು ಬಾರಿ ಹೇಳುವ ಕ್ರಮದ ಮೂಲಕ ತನಗೆ ವಿಚ್ಛೇದನ ನೀಡಲಾಗಿದ್ದು, ಈ ತಲಾಕನ್ನು ರದ್ದುಗೊಳಿಸಬೇಕೆಂದು ಕೋರಿ ಆಕೆ 2016 ಫೆಬ್ರವರಿಯಲ್ಲಿ ಸುಪ್ರೀಮ್ ಕೋರ್ಟ್ನ ಬಾಗಿಲು ತಟ್ಟುತ್ತಾರೆ. ಅಲ್ಲದೇ, ಬಹುಪತ್ನಿತ್ವ ಮತ್ತು ನಿಖಾ ಹಲಾಲ ಎಂಬೆರಡು ಪದ್ಧತಿಗಳನ್ನೂ ರದ್ದುಗೊಳಿಸುವಂತೆ ಸುಪ್ರೀಮ್ ಕೋರ್ಟಿಗೆ ಮನವಿ ಮಾಡುತ್ತಾರೆ. ಈ ಅರ್ಜಿಯ ವಿಚಾರಣೆಗಾಗಿ 2017 ಮಾರ್ಚ್ 30ರಂದು ಸುಪ್ರೀಮ್ ಕೋರ್ಟು ಐವರು ನ್ಯಾಯಾಧೀಶರ ನ್ಯಾಯಪೀಠವನ್ನು ರಚಿಸುತ್ತದೆ. ಮುಖ್ಯ ನ್ಯಾಯಾಧೀಶರಾದ ಜೆ.ಎಸ್. ಖೇಹರ್ ನೇತೃತ್ವದಲ್ಲಿ ರಚಿಸಲಾದ ಈ ಸಮಿತಿಯಲ್ಲಿ ನ್ಯಾಯಾಧೀಶರಾದ ಕುರಿಯನ್ ಜೋಸೆಫ್, ಆರ್.ಎಫ್. ನಾರಿಮನ್, ಯು.ಯು. ಲಲಿತ್ ಮತ್ತು ಅಬ್ದುಲ್ ನಝೀರ್ರನ್ನು ಸೇರಿಸಲಾಗುತ್ತದೆ. ಈ ಪೀಠವು ತ್ರಿವಳಿ ತಲಾಕನ್ನು ಅಸಿಂಧು ಎಂದು ಘೋಷಿಸುತ್ತದೆ. ಆದರೆ,
2017 ಆಗಸ್ಟ್ 22ರಂದು ನೀಡಲಾದ ಈ ತೀರ್ಪು ಭಿನ್ನಮತದಿಂದ ಕೂಡಿತ್ತು. ಐವರು ನ್ಯಾಯಾ ಧೀಶರ ಪೈಕಿ ಮುಖ್ಯ ನ್ಯಾಯಾಧೀಶ ಕೇಹರ್ ಮತ್ತು ಅಬ್ದುಲ್ ನಝೀರ್ ಅವರು ತ್ರಿವಳಿ ತಲಾಕನ್ನು ಅಸಿಂಧು ಎಂದು ಘೋಷಿಸುವುದಕ್ಕೆ ವಿರುದ್ಧ ಇದ್ದರು. ಆದರೆ ಇದಕ್ಕೆ ಇತರ ಮೂವರು ನ್ಯಾಯಾಧೀಶರ ಬೆಂಬಲ ಸಿಗಲಿಲ್ಲ. ಹೀಗೆ ತ್ರಿವಳಿ ತಲಾಕ್ ಅಸಿಂಧು ಎಂಬುದಾಗಿ 3:2 ಬಹುಮತದ ಮೂಲಕ ಸಾರಲಾಯಿತು. ಅಂದರೆ, ಒಂದೇ ಉಸಿರಿನಲ್ಲಿ ತಲಾಕ್ ತಲಾಕ್ ತಲಾಕ್ ಎಂದು ಹೇಳಿದರೆ ಅದು ವಿಚ್ಛೇದನ ಆಗುವುದಿಲ್ಲ ಎಂದು ಅರ್ಥ ಮತ್ತು ಅವರಿಬ್ಬರೂ ಪತಿ-ಪತ್ನಿಯರಾಗಿಯೇ ಮುಂದುವರಿಯುತ್ತಾರೆ ಎಂಬುದೇ ಇದರ ತಾತ್ಪರ್ಯ. ಆದರೆ 2019 ಜುಲೈಯಲ್ಲಿ ಕೇಂದ್ರ ಸರಕಾರ ತ್ರಿವಳಿ ತಲಾಕ್ ವಿರುದ್ಧ ಕಾನೂನೊಂದನ್ನು ಜಾರಿಗೊಳಿಸಿತು. ಅದರ ಪ್ರಕಾರ, ತ್ರಿವಳಿ ತಲಾಕ್ ಹೇಳುವುದು ಕ್ರಿಮಿನಲ್ ಅಪರಾಧ ಮತ್ತು ಅಂಥ ಅಪರಾಧ ಎಸಗಿದವರಿಗೆ 3 ವರ್ಷಗಳ ಶಿಕ್ಷೆ ವಿಧಿಸಬಹುದಾಗಿದೆ. ಅಂದರೆ,
ಪತ್ನಿಯನ್ನು ಏಕಾಏಕಿ ಬಿಟ್ಟುಹೋಗುವ ಪತಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸುವುದೇ ಸರಿಯಾದ ಕ್ರಮ ಎಂದಾಗಿದ್ದರೆ ಕೇಂದ್ರ ಸರಕಾರ ಹಿಂದೂ ಪತಿಗೂ ಇದೇ ಕಾನೂನನ್ನು ಅನ್ವಯಗೊಳಿಸಬೇಕಿತ್ತಲ್ಲವೇ? ಆದರೆ, ತ್ರಿವಳಿ ತಲಾಕ್ ಹೇಳುವುದನ್ನು ಕ್ರಿಮಿನಲ್ ಅಪರಾಧವೆಂದು ಸಾರಿರುವ ಕೇಂದ್ರ ಸರಕಾರ ಹಿಂದೂ ಪತಿಯ ಇಂಥದ್ದೇ ಕ್ರಮವನ್ನು ಸಿವಿಲ್ ಅಪರಾಧವಾಗಿ ದಾಖಲಿಸಿದೆ. ಆ ಕಾನೂನಿನಲ್ಲಿ ಇಂಥ ಯಾವ ತೀವ್ರತೆಯೂ ಇಲ್ಲ. ಸಮಾನ ನಾಗರಿಕ ಸಂಹಿತೆಯ ಬಗ್ಗೆ ನಿಂತಲ್ಲಿ ಕುಳಿತಲ್ಲಿ ಮಾತಾಡುವ ಇದೇ ಕೇಂದ್ರ ಸರಕಾರವೇ ಮುಸ್ಲಿಮರಿಗೊಂದು ಮತ್ತು ಹಿಂದೂಗಳಿಗೊಂದು ಕಾನೂನನ್ನು ರೂಪಿಸಿದೆ ಎಂಬುದೂ ಗಮನಾರ್ಹ. ನಿಜವಾಗಿ,
ತ್ರಿವಳಿ ತಲಾಕ್ನ ವಿರುದ್ಧ ಸುಪ್ರೀಮ್ ಕೋರ್ಟಿಗೆ ದೂರು ಸಲ್ಲಿಸಿದ ಶಾಯರಾ ಬಾನುರದ್ದೇ ಒಂದು ದೀರ್ಘ ಕತೆಯಿದೆ. ಈಕೆ ಉತ್ತರಾಖಂಡದ ಬಿಜೆಪಿ ಅಧ್ಯಕ್ಷ ಬನ್ವಿಧರ್ ಭಾಗವತ್ ಸಮ್ಮುಖದಲ್ಲಿ 2020 ಅಕ್ಟೋಬರ್ನಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಾರೆ. ಇದಕ್ಕಿಂತ ಎರಡು ವರ್ಷಗಳ ಮೊದಲೇ ತಾನು ಬಿಜೆಪಿ ಸೇರ್ಪಡೆಗೊಳ್ಳಲು ಬಯಸುವುದಾಗಿ ಹೇಳಿದ್ದರು. ಬಿಜೆಪಿಯಿಂದ ಚುನಾವಣೆಗೆ ಸ್ಪರ್ಧಿಸಲೂ ಸಿದ್ಧ ಎಂದೂ ಘೋಷಿಸಿದ್ದರು. ಆಕೆಯ ಮಾತು, ವರ್ತನೆ ಮತ್ತು ನಡವಳಿಕೆಗಳಲ್ಲಿ ಅನುಮಾನಕ್ಕೆ ಪೂರಕವಾದ ಧಾರಾಳ ಇದ್ದುವು. ತನ್ನ ಅಜೆಂಡಾ ಜಾರಿಗೊಳಿಸುವುದಕ್ಕಾಗಿ ಬಿಜೆಪಿ ಆಕೆಯನ್ನು ಬಳಸಿಕೊಂಡಿದೆ ಎಂಬ ಸಂದೇಹವನ್ನು ಆಕೆಯ ಬಿಜೆಪಿ ಸೇರ್ಪಡೆ ಪುಷ್ಠೀಕರಿಸಿದಂತಿತ್ತು. ತ್ರಿವಳಿ ತಲಾಕ್ ಕಾನೂನನ್ನು ಸಮರ್ಥಿಸುವುದಕ್ಕೆ ಬಿಜೆಪಿ ಆಕೆಯನ್ನು ಧಾರಾಳ ಬಳಸಿಕೊಂಡಿತು. ಅಸಮರ್ಪಕ ಕಾನೂನೊಂದನ್ನು ಸಂತ್ರಸ್ತೆಯ ಮೂಲಕವೇ ಸಮರ್ಥಿಸಿಕೊಂಡ ಬಿಜೆಪಿ, ತನ್ನನ್ನು ಮುಸ್ಲಿಮ್ ಮಹಿಳೆಯರ ಪಾಲಿನ ಮಸೀಹನಂತೆ ಬಿಂಬಿಸಿಕೊಂಡಿತು. ಇದೀಗ,
ತಪ್ಪಾದ ಕ್ರಮದಿಂದ ಸರಿಯಾದ ಕ್ರಮದತ್ತ ಸಮಾಜವನ್ನು ಕೊಂಡೊಯ್ಯಬೇಕಾದ ಸರಕಾರ, ಪತಿಯನ್ನೇ ಜೈಲಲ್ಲಿಟ್ಟು ಪತ್ನಿಯನ್ನು ಅತಂತ್ರಗೊಳಿಸಿ ತಾನು ಮುಸ್ಲಿಮ್ ಮಹಿಳೆಯರ ಹಿತ ಕಾದಿದ್ದೇನೆ ಎಂದು ಹೇಳುತ್ತಿರುವುದು ನಾಚಿಕೆಗೇಡು.