Tuesday 26 December 2017

ತಲಾಕ್: ಸುಧಾರಣೆಯೋ, ಸಮಸ್ಯೆಯೋ?

   ಮತ್ತೊಂದು ಸುತ್ತಿನ ಚರ್ಚೆಗೆ ತಲಾಕ್ ಸಿದ್ಧವಾಗಿದೆ. ತ್ರಿವಳಿ ತಲಾಕನ್ನು ಸಂವಿಧಾನ ಬಾಹಿರವೆಂದು ಕಳೆದ ಆಗಸ್ಟ್ ನಲ್ಲಿ ಸುಪ್ರೀಮ್ ಕೋರ್ಟ್ ಘೋಷಿಸಿದ ಬಳಿಕ ಒಂದೆರಡು ವಾರಗಳ ತನಕ ‘ಮಾಧ್ಯಮ ಡಾರ್ಲಿಂಗ್’ ಆಗಿ ಗುರುತಿಸಿಕೊಂಡು ಬಳಿಕ ತಣ್ಣಗಾದ ‘ತಲಾಕ್’, ಮತ್ತೆ ಬಹು ಚರ್ಚಿತಗೊಳ್ಳುವುದಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆ. ಗೃಹ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ‘ಮುಸ್ಲಿಮ್ ಮಹಿಳೆಯ ವಿವಾಹ ಮತ್ತು ಹಕ್ಕು ರಕ್ಷಣಾ ಮಸೂದೆ’ಯನ್ನು ಕೇಂದ್ರ ಸರಕಾರ ಸಿದ್ಧಪಡಿಸಿದೆ. ಈ ಮಸೂದೆಯ ಸಂಪೂರ್ಣ ವಿವರಗಳು ಇನ್ನೂ ಬಹಿರಂಗವಾಗಿಲ್ಲದಿದ್ದರೂ ಬಹಿರಂಗವಾಗಿರುವ ವಿಷಯಗಳಲ್ಲಿ ಒಂದಷ್ಟು ಅನುಮಾನ ಮತ್ತು ಆತಂಕಕ್ಕೆ ಎಡೆ ಮಾಡಿಕೊಡುವ ಅಂಶಗಳಿವೆ. ಇಡೀ ಮಸೂದೆಯನ್ನು ಕೇಂದ್ರ ಸಚಿವರ ಆಂತರಿಕ ಸಮಿತಿ ರಚಿಸಿದೆ. ತ್ರಿವಳಿ ತಲಾಕ್ ನೀಡುವ ವ್ಯಕ್ತಿಗೆ ಮೂರು ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸುವ ಅವಕಾಶವು ಈ ಮಸೂದೆಯಲ್ಲಿದೆ. ತ್ರಿವಳಿ ತಲಾಕನ್ನು ಜಾಮೀನುರಹಿತ ಅಪರಾಧವಾಗಿ ಪರಿಗಣಿಸಲಾಗುತ್ತದೆ. ತ್ರಿವಳಿ ತಲಾಕ್ ಪಡೆದುಕೊಂಡ ಮಹಿಳೆ ಪರಿಹಾರವನ್ನು ಬಯಸಿ ಮತ್ತು ಅಪ್ರಾಪ್ತ ಮಕ್ಕಳನ್ನು ತನ್ನ ಬಳಿ ಇರಿಸಿಕೊಳ್ಳುವುದಕ್ಕಾಗಿ ನ್ಯಾಯಾಲಯದ ಮೊರೆ ಹೋಗಬಹುದು. ಜಮ್ಮು-ಕಾಶ್ಮೀರವನ್ನು ಹೊರತುಪಡಿಸಿ ಭಾರತದಾದ್ಯಂತದ ತ್ರಿವಳಿ ತಲಾಕ್‍ಗಳು ಈ ಮಸೂದೆಯ ವ್ಯಾಪ್ತಿಗೆ ಒಳಪಡಲಿದೆ.
    ವಿಚಿತ್ರ ಏನೆಂದರೆ, ಮುಸ್ಲಿಮ್ ಸಮುದಾಯದ ಯಾರೊಬ್ಬರಲ್ಲೂ ಈ ಮಸೂದೆಗೆ ಸಂಬಂಧಿಸಿ ಚರ್ಚಿಸಲಾಗಿಲ್ಲ. ಈ ದೇಶದಲ್ಲಿ ಸುಮಾರು 20 ಕೋಟಿಯಷ್ಟು ಮುಸ್ಲಿಮರಿದ್ದಾರೆ. ಇಷ್ಟೊಂದು ಬೃಹತ್ ಜನಸಮುದಾಯದಲ್ಲಿ ತಪ್ಪಾಗಿ ಚಾಲ್ತಿಯಲ್ಲಿರುವ ಒಂದು ಸಂಪ್ರದಾಯದ ಮೇಲೆ ಕಾನೂನು ರಚಿಸುವಾಗ ಆ ಸಮುದಾಯದ ಧ್ವನಿಯನ್ನೇ ನಿರ್ಲಕ್ಷಿಸಬೇಕಾದ ಅಗತ್ಯ ಏನಿತ್ತು? ತ್ರಿವಳಿ ತಲಾಕ್ ಎಂಬುದು ಮುಸ್ಲಿಮ್ ಸಮುದಾಯವು ಸರ್ವಾನುಮತದಿಂದ ಬೆಂಬಲಿಸುತ್ತಿರುವ ವಿಚ್ಛೇದನ ಕ್ರಮವಲ್ಲ. ಇಸ್ಲಾಮಿನ ಪ್ರಕಾರ ವಿವಾಹವೆಂಬುದು ಒಂದು ಒಪ್ಪಂದ. ಯಾವ ಒಪ್ಪಂದವೇ ಆಗಲಿ, ಅದರ ಸಿಂಧುತ್ವಕ್ಕೆ ಕೆಲವು ನಿಯಮಗಳಿವೆ. ಸಾಕ್ಷಿಗಳು ಮತ್ತು ಅನುಮೋದಕರ ಹೊರತಾಗಿ ಒಪ್ಪಂದ ವೊಂದು ಊರ್ಜಿತಗೊಳ್ಳಲು ಸಾಧ್ಯವಿಲ್ಲ. ಇಸ್ಲಾಮಿನ ವಿವಾಹವೆಂಬುದು ಸಾಕ್ಷಿಗಳ ರುಜು ಮತ್ತು ಆಯಾ ಮಸೀದಿಗಳ ಅನುಮೋದನೆಯೊಂದಿಗೆ ನಡೆಯುತ್ತದೆ. ಒಂದು ವೇಳೆ, ಈ ಒಪ್ಪಂದವನ್ನು ಅನೂರ್ಜಿತಗೊಳಿಸುವುದಾದರೂ ಅದಕ್ಕೂ ಕೆಲವು ನಿಯಮಗಳಿವೆ. ವಿವಾಹಕ್ಕೆ ಸಾಕ್ಷಿಗಳು ಬೇಕಿರುವಂತೆಯೇ ವಿವಾಹ ವಿಚ್ಛೇದನಕ್ಕೂ ಸಾಕ್ಷಿಗಳ ಅಗತ್ಯ ಇದೆ. ತಲಾಕ್ ಎಂಬುದು ಏಕಮುಖ ಅಲ್ಲ. ಅದು ಬಹುಮುಖಿಯಾದುದು. ತಲಾಕನ್ನು ಪತಿ ಮತ್ತು ಪತ್ನಿಯ ನಡುವಿನ ಖಾಸಗಿ ವಿಷಯ ವಾಗಿ ಇಸ್ಲಾಮ್ ಪರಿಗಣಿಸುವುದಿಲ್ಲ. ಯಾವಾಗ ಅದು ಖಾಸಗಿ ವಿಷಯವಾಗಿ ಮಾರ್ಪಡುತ್ತದೋ ಆಗ ತ್ರಿವಳಿ ತಲಾಕ್‍ನಂತಹ ತಪ್ಪಾದ ಕ್ರಮಗಳು ರೂಢಿಗೆ ಬರುತ್ತವೆ. ನಿಜವಾಗಿ, ತಲಾಕ್ ನೀಡಬಯಸುವ ವ್ಯಕ್ತಿ ಅದಕ್ಕಾಗಿ ಕೆಲವು ನೀತಿ-ಸಂಹಿತೆಗಳನ್ನು ಪಾಲಿಸಬೇಕಾಗುತ್ತದೆ. ಮೊದಲು ಆತ ಆ ಬಗ್ಗೆ ಪತ್ನಿಗೆ ತಿಳಿಸಬೇಕಾಗುತ್ತದೆ. ಬಳಿಕ, ಪತ್ನಿಯ ಮತ್ತು ತನ್ನ ಕುಟುಂಬದ ತಜ್ಞರಲ್ಲಿ ವಿಷಯ ಪ್ರಸ್ತಾಪಿಸಬೇಕಾಗುತ್ತದೆ. ಕನಿಷ್ಠ ಮೂರು ತಿಂಗಳ ಅವಧಿಯ ಹೊರತು ತಲಾಕ್ ನೀಡಲು ಅಸಾಧ್ಯವಾಗಬಹುದಾದ ನಿಯಮವು ಇಸ್ಲಾಮಿನದ್ದು. ಹಾಗಂತ, ಈ ನೀತಿಸಂಹಿತೆ ನೂರು ಶೇಕಡಾ ಪಾಲನೆಯಾಗುತ್ತಿದೆ ಎಂದಲ್ಲ. ಮುಸ್ಲಿಮ್ ಸಮುದಾಯದಲ್ಲಿ ನಗಣ್ಯ ಸಂಖ್ಯೆಯಲ್ಲಾದರೂ ತ್ರಿವಳಿ ತಲಾಕನ್ನು ಪಾಲಿಸುವವರಿದ್ದಾರೆ. ಇದನ್ನು ಯಾರೂ ನಿರಾಕರಿಸುತ್ತಲೂ ಇಲ್ಲ. ಹಾಗಂತ, ಇಡೀ ಮುಸ್ಲಿಮ್ ಸಮುದಾಯವನ್ನೇ ಅಪರಾಧಿಯಂತೆ ಕಾಣುವ ಅಗತ್ಯ ಏನಿದೆ? ಮುಸ್ಲಿಮ್ ಸಮುದಾಯದ ಸುಧಾರಣೆಯೇ ಕೇಂದ್ರ ಸರಕಾರದ ಉದ್ದೇಶವೆಂದಾದರೆ, ಆ ಸಮುದಾಯದ ಧ್ವನಿಯನ್ನು ಆಲಿಸುವುದೂ ಮುಖ್ಯವಾಗಬೇಡವೇ? ಮುಸ್ಲಿಮ್ ಸಮುದಾಯದ ಕಲ್ಯಾಣವನ್ನು ಬಯಸಿ ಚಟುವಟಿಕೆಯಿಂದಿರುವ ಮಹಿಳೆಯರ ಮತ್ತು ಪುರುಷರ ಹಲವು ಸಂಘಟನೆಗಳು ಈ ದೇಶದಲ್ಲಿವೆ. ತ್ರಿವಳಿ ತಲಾಕ್‍ಗೆ ಸಂಬಂಧಿಸಿ ಸುಪ್ರೀಮ್ ಕೋರ್ಟ್‍ನಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ತನ್ನ ವಾದವನ್ನು ಮಂಡಿಸಿದೆ. ಅದರ ನಿಲುವುಗಳು ಏನೇ ಇರಲಿ, ಸುಪ್ರೀಮ್ ಕೋರ್ಟ್‍ನ ತೀರ್ಪನ್ನು ಅದೂ ಒಪ್ಪಿಕೊಂಡಿದೆ. ಹೀಗಿರುವಾಗ, ಕರಡು ರಚನೆಯ ವೇಳೆ ಈ ಕಾನೂನು ಮಂಡಳಿಯೂ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಶರೀಅತ್ ತಜ್ಞರ ಅಭಿಪ್ರಾಯಗಳನ್ನು ಕೇಳಬಹುದಿತ್ತಲ್ಲವೇ? ಒಂದು ಸಮುದಾಯದ ಮೇಲೆ ಕಾನೂನನ್ನು ಹೇರುವುದಕ್ಕೂ ಅದರ ವಿಶ್ವಾಸವನ್ನು ಗಳಿಸಿ ಕಾನೂನು ರೂಪಿಸುವುದಕ್ಕೂ ವ್ಯತ್ಯಾಸ ಇದೆ. ಒಂದು ಸರ್ವಾಧಿಕಾರಿ ನಿಲುವಾದರೆ ಇನ್ನೊಂದು ಪ್ರಜಾತಂತ್ರ ನಿಲುವು. ಕೇಂದ್ರ ಸರಕಾರ ಯಾಕೆ ಸರ್ವಾಧಿಕಾರಿ ನಿಲುವನ್ನೇ ಆಯ್ಕೆ ಮಾಡಿಕೊಂಡಿದೆ? ಅದರ  ಗುರಿ ತ್ರಿವಳಿ ತಲಾಕನ್ನು ನಿಷ್ಕ್ರಿಯ ಗೊಳಿಸುವುದಕ್ಕಿಂತಲೂ ಮುಸ್ಲಿಮ್ ಸಮುದಾಯವನ್ನು ಚರ್ಚೆಯ ಮೊನೆಯಲ್ಲಿ ನಿಲ್ಲಿಸುವುದೇ ಆಗಿದೆಯೇ? ಮುಸ್ಲಿಮ್ ಸಮುದಾಯದ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸಿ ಮಸೂದೆ ರೂಪಿಸುವುದೆಂದರೆ, ‘ವಿವಾದ ರಹಿತ’ ಮಸೂದೆಯನ್ನು ತಯಾರಿಸುವುದು ಎಂದೇ ಅರ್ಥ. ಹಾಗೊಂದು ವೇಳೆ ವಿವಾದ ರಹಿತ ಮಸೂದೆ ರಚನೆಯಾಗಿ ಬಿಟ್ಟರೆ ಅದರಿಂದ ಮುಸ್ಲಿಮರಿಗೆ ಸಂಬಂಧಿಸಿ ತನ್ನ ‘ಉಗ್ರ ವರ್ಚಸ್ಸಿಗೆ’ ಧಕ್ಕೆಯಾಗಬಹುದು ಎಂದು ಕೇಂದ್ರ ಸರಕಾರ ಭಾವಿಸಿತೆ? ತಲಾಕ್, ಬಹುಪತ್ನಿತ್ವ, ಜಿಹಾದ್, ವಂದೇ ಮಾತರಂ.. ಇತ್ಯಾದಿಗಳೆಲ್ಲ ವಿವಾದವಾದಷ್ಟು ಕೇಂದ್ರ ಸರಕಾರಕ್ಕೆ ಲಾಭ ಹೆಚ್ಚು ಎಂಬುದನ್ನು ಚುನಾವಣೆಗಳು ಸಾಬೀತುಪಡಿಸುತ್ತಿವೆ. ಮುಸ್ಲಿಮ್ ವಿರೋಧಿ ಹಣೆಪಟ್ಟಿಯೊಂದನ್ನು ಸದಾ ಧರಿಸಿರಬೇಕೆಂಬುದು ಬಿಜೆಪಿಯ ಅಲಿಖಿತ ಸಂವಿಧಾನ. ಆ ಸಂವಿಧಾನದಂತೆಯೇ ತ್ರಿವಳಿ ತಲಾಕ್ ಮಸೂದೆಯನ್ನು ತಯಾರಿಸಲಾಯಿತೇ?
    ಅಷ್ಟಕ್ಕೂ, ವರದಕ್ಷಿಣೆ, ಅತ್ಯಾಚಾರ, ಗೃಹಹಿಂಸೆಯಂಥ ಅಪರಾಧಗಳ ವಿರುದ್ಧ ರಚಿಸಲಾದ ಕಾನೂನುಗಳು ಇವತ್ತು ದುರುಪಯೋಗವಾಗುತ್ತಿರುವುದು ಎಲ್ಲರಿಗೂ ಗೊತ್ತು. ಇಲ್ಲಿನ ನ್ಯಾಯಾಲಯಗಳೇ ಇದನ್ನು ಒಪ್ಪಿಕೊಂಡಿವೆ. ಒಂದು ರೀತಿಯಲ್ಲಿ ಪ್ರತಿ ಕಾನೂನೂ ದುರುಪಯೋಗದ ಸಾಧ್ಯತೆಯನ್ನು ಹೊಂದಿರುತ್ತವೆ ಎಂಬುದೇ ಸತ್ಯ. ಆಯಾ ಕ್ಷೇತ್ರದಲ್ಲಿ ತಜ್ಞರೆನಿಸಿಕೊಂಡವರೊಂದಿಗೆ ಸಮಾಲೋಚಿಸಿ ರೂಪಿಸಲಾದ ಈ ಮೇಲಿನ ಕಾನೂನುಗಳೇ ದುರುಪಯೋಗಕ್ಕೆ ಒಳಗಾಗಬಹುದಾದರೆ ಇನ್ನು ಮುಸ್ಲಿಮ್ ಸಮುದಾಯವನ್ನು ವಿಶ್ವಾಸಕ್ಕೆ ಪಡೆಯದೆಯೇ ರೂಪಿಸಲಾದ ಕಾನೂನು ಎಷ್ಟು ಪರಿಣಾಮಕಾರಿಯಾಗಬಹುದು? ಇನ್ನು ಮುಂದೆ, ‘ಸರಿ’ ತಲಾಕೂ ತ್ರಿವಳಿ ತಲಾಕ್ ಆಗಿ ಗುರುತಿಸಿಕೊಳ್ಳಬಹುದೇ? ಈ ವರೆಗೆ ಶೋಷಕ ಪಾತ್ರ ಪುರುಷನದ್ದಾಗಿತ್ತು. ಇನ್ನು ಅದು ಮಹಿಳೆಯ ಪಾಲಾಗಲಿದೆಯೇ? ಭಾರತೀಯ ನ್ಯಾಯಾಂಗ ವ್ಯವಸ್ಥೆಯು ಈಗಾಗಲೇ ‘ದೂರು ಭಾರ’ದಿಂದ ಕುಸಿದು ಕೂತಿದೆ. ಇನ್ನು ತ್ರಿವಳಿ ತಲಾಕ್‍ನ ಭಾರವು ಅದರ ಮೇಲೆ ಬಿದ್ದರೆ ಅದು ಅದರ ವೇಗವನ್ನು ಎಷ್ಟು ವರ್ಷಗಳ ಹಿಂದಕ್ಕೆ ಒಯ್ಯಬಹುದು? ದೂರು ಪ್ರತಿದೂರುಗಳ ಜಗ್ಗಾಟದಲ್ಲಿ ಯಾರು ಗೆಲ್ಲಬಹುದು? ಆ ಗೆಲುವಿನಲ್ಲಿ ನಿಜ ಗೆಲುವು ಯಾರಿಗೆಲ್ಲ ದಕ್ಕಬಹುದು? ಹಾಗೆ ನ್ಯಾಯ ಸಿಗುವಾಗ ದೂರುದಾರ ಪತಿ-ಪತ್ನಿ ಎಷ್ಟು ವರ್ಷಗಳನ್ನು ಖರ್ಚು ಮಾಡಬೇಕಾಗಬಹುದು?
ತಪ್ಪನ್ನು ತಿದ್ದಿಕೊಳ್ಳಬೇಕಾದುದು ಖಂಡಿತ ಅಗತ್ಯ. ಆದರೆ ಈ ತಿದ್ದುಪಡಿಗೆ ನೇತೃತ್ವವನ್ನು ನೀಡಿದವರ ವರ್ತನೆಯನ್ನು ನೋಡುವಾಗ ಈ ತಿದ್ದುಪಡಿಯೇ ಇನ್ನಷ್ಟು ತಪ್ಪುಗಳ ಉತ್ಪಾದಕವಾಗುವ ಸಾಧ್ಯತೆಯೇ ಕಾಣುತ್ತಿದೆ. ಇದು ಆತಂಕಕಾರಿ.



Monday 25 December 2017

ಗುಜರಾತ್ ವಿಶ್ಲೇಷಣೆ: ರಾಹುಲ್, ಜಿಗ್ನೇಶ್ ಹಣೆಯಲ್ಲೇ ಎಲ್ಲವೂ ಇದೆ...

      ಬದುಕು ಮತ್ತು ಭಾವನೆಗಳ ನಡುವಿನ ಸಮರ ಎಂದೇ ಹೇಳಬಹುದಾಗಿದ್ದ ಗುಜರಾತ್ ಚುನಾವಣೆಯಲ್ಲಿ ಭಾವನೆ
ಮೇಲುಗೈ ಪಡೆದಿದೆ. ಬದುಕು ಬದಿಗೆ ಸರಿದಿದೆ. ಗುಜರಾತ್‍ನ ಒಟ್ಟು ಸಾಮಾಜಿಕ ವಾತಾವರಣ ಹೇಗಿದೆ ಎಂಬುದಕ್ಕೆ ಜಿಗ್ನೇಶ್ ಮೇವಾನಿ ಮತ್ತು ರಾಹುಲ್‍ಗಾಂಧಿಯವರ ಹಣೆಯೇ ಸಾಕ್ಷಿ. ಹಿಂದುಳಿದ ವರ್ಗಗಳ ಐಕಾನ್ ಆಗಿ ಮೂಡಿಬಂದಿರುವ ಜಿಗ್ನೇಶ್ ಮೇವಾನಿಯವರ ಹಣೆಯಲ್ಲಿ ಚುನಾವಣಾ ಪ್ರಚಾರದುದ್ದಕ್ಕೂ ಕುಂಕುವ ಎದ್ದು ಕಾಣುತ್ತಿತ್ತು. ರಾಹುಲ್ ಗಾಂಧಿಯವರ ಹಣೆಯನ್ನೂ ಕುಂಕುಮ ಅಲಂಕರಿಸಿತ್ತು. ಗುಜರಾತ್‍ನ ಉನಾ ಎಂಬಲ್ಲಿ ಐವರು ದಲಿತ ಯುವಕರನ್ನು ಅರೆಬೆತ್ತಲೆಗೊಳಿಸಿ ಥಳಿಸಲಾದ ಘಟನೆಯ ಬಳಿಕ ಭಾರೀ ಸದ್ದಿನೊಂದಿಗೆ ಮುನ್ನೆಲೆಗೆ ಬಂದ ವ್ಯಕ್ತಿ ಜಿಗ್ನೇಶ್ ಮೇವಾನಿ. ಹಿಂದೂ ಧರ್ಮಕ್ಕೂ ಮತ್ತು ಜಿಗ್ನೇಶ್ ಪ್ರತಿನಿಧಿಸುವ ದಲಿತ-ಹಿಂದುಳಿದ ಸಮುದಾಯಕ್ಕೂ ನಡುವೆ ಶತ ಶತಮಾನಗಳಿಂದ ಭಿನ್ನಾಭಿಪ್ರಾಯಗಳಿವೆ. ಈ ಸಮುದಾಯ ಆರಾಧನಾ ಕ್ರಮ ಬೇರೆ. ಆಹಾರ ಪದ್ಧತಿ ಬೇರೆ. ನಾಮಸೂಚಿಗಳು ಬೇರೆ. ಸಾಮಾಜಿಕ ರೀತಿ-ನೀತಿಗಳು ಬೇರೆ. ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಸ್ವೀಕರಿಸಿರುವುದಕ್ಕೆ ಈ ಸಮುದಾಯಗಳ ಮೇಲಾಗುತ್ತಿರುವ ದೌರ್ಜನ್ಯಗಳೇ ಮುಖ್ಯ ಕಾರಣ. ದಲಿತ- ಹಿಂದುಳಿದ ಸಮುದಾಯಗಳು ಹಿಂದೂ ಧರ್ಮದ ಒಳಗೋ-ಹೊರಗೋ ಎಂಬ ಕುರಿತು ಅಸಂಖ್ಯ ಚರ್ಚೆಗಳು ನಡೆದಿವೆ. ಈಗಲೂ ನಡೆಯುತ್ತಿದೆ. ಕುಂಕುಮವು ದಲಿತ ಸಮುದಾಯದ ಗುರುತು ಆಗಿ ಎಲ್ಲೂ ಗುರುತಿಸಿಕೊಂಡಿಲ್ಲ. ಹೀಗಿದ್ದೂ `ಉನಾ'ದಿಂದ ಹುಟ್ಟಿಕೊಂಡ ಜಿಗ್ನೇಶ್, ತನ್ನ ಹಣೆಯಲ್ಲಿ ಕುಂಕುಮ ಸದಾ ಎದ್ದು ಕಾಣುವಂತೆ ನೋಡಿಕೊಂಡಿರುವುದು ಯಾವ ಉದ್ದೇಶದಿಂದ? ರಾಹುಲ್ ಗಾಂಧಿಯು ಗುಜರಾತ್ ಚುನಾವಣಾ ಪ್ರಚಾರವನ್ನು ಆರಂಭಿಸಿದ್ದೇ ಮಂದಿರ ಭೇಟಿಯ ಮೂಲಕ. ಪ್ರಚಾರ ಸಮಯದಲ್ಲಿ ಸುಮಾರು 26ಕ್ಕಿಂತೂ ಅಧಿಕ ಮಂದಿರಗಳಿಗೆ ಭೇಟಿಕೊಟ್ಟರು. ಕಳೆದ 22 ವರ್ಷಗಳಿಂದ ಅಧಿಕಾರದಲ್ಲಿರುವ ಬಿಜೆಪಿಯು ಇಡೀ ಗುಜರಾತ್‍ನಲ್ಲಿ ಯಾವ ಬಗೆಯ ವಾತಾವರಣವನ್ನು ಹುಟ್ಟುಹಾಕಿದೆ ಎಂಬುದನ್ನು ಇವರಿಬ್ಬರ ಹಣೆಯೇ ಹೇಳುತ್ತಿದೆ. ಬಹುಸಂಖ್ಯಾತ ಧರ್ಮದ ಪ್ರತಿನಿಧಿಗಳಾಗಿ ಗುರುತಿಸಿಕೊಳ್ಳುವುದು ಗುಜರಾತ್‍ನ ಮಟ್ಟಿಗೆ ಅನಿವಾರ್ಯ. ರಾಹುಲ್ ಗಾಂಧಿಯನ್ನು ಎಲ್ಲಿಯವರೆಗೆ ಒತ್ತಡಕ್ಕೆ ಸಿಲುಕಿಸಲಾಯಿತೆಂದರೆ ಒಂದು ಹಂತದಲ್ಲಿ ಅವರು ತಮ್ಮ ಜನಿವಾರವನ್ನೂ ಪ್ರದರ್ಶಿಸಬೇಕಾಯಿತು. ‘ತಾನು ಶಿವನ ಆರಾಧಕ’ ಎಂದೂ ಬಹಿರಂಗವಾಗಿಯೇ ಹೇಳಬೇಕಾಯಿತು. ‘ರಾಹುಲ್ ಗಾಂಧಿಯವರು ಮಸೀದಿ ಪರವೋ ಮಂದಿರ ಪರವೋ’ ಎಂಬ ಪ್ರಶ್ನೆಯನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಎಸೆದರು. ಅಹ್ಮದ್ ಪಟೇಲ್‍ರನ್ನು ಕಾಂಗ್ರೆಸ್ ಮುಖ್ಯಮಂತ್ರಿ ಮಾಡಲಿದೆ ಎಂದು ಪ್ರಧಾನಿಯವರು ಹೇಳುವ ಮೂಲಕ, ಕಾಂಗ್ರೆಸನ್ನು ಗೆಲ್ಲಿಸಿದರೆ ಗುಜರಾತ್‍ಗೆ ಮುಸ್ಲಿಮನೊಬ್ಬ ಮುಖ್ಯಮಂತ್ರಿಯಾಗುತ್ತಾನೆ ಎಂಬ ಸೂಚನೆ ಕೊಟ್ಟರು. ರಾಹುಲ್ ಗಾಂಧಿಯವರು ಅಪ್ಪಿ-ತಪ್ಪಿಯೂ ಮಸೀದಿಗೆ ಭೇಟಿ ಕೊಡಲಿಲ್ಲ. ಹಾಗಂತ, ಮಸೀದಿಗೆ ಭೇಟಿಕೊಡಬೇಕಾಗಿತ್ತು ಎಂಬುದು ಇಲ್ಲಿನ ಉದ್ದೇಶ ಅಲ್ಲ. ಮುಸ್ಲಿಮ್ ಎಂಬ ಪದವನ್ನೇ ಉಲ್ಲೇಖಿಸಬಾರದ, ಆ ಸಮುದಾಯದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಬಾರದ, ‘ಅಲ್ಪಸಂಖ್ಯಾತ ಅಭಿವೃದ್ಧಿ’ ಎಂಬ ಪದವನ್ನು ಪ್ರಣಾಳಿಕೆಯಲ್ಲೂ ಉಲ್ಲೇಖಿಸಬಾರದ ಸ್ಥಿತಿಯೊಂದನ್ನು ಗುಜರಾತ್‍ನಲ್ಲಿ ನಿರ್ಮಿಸಲಾಗಿದೆ. ಈ ಸ್ಥಿತಿ ಎಷ್ಟು ಅಪಾಯಕಾರಿ ಹಂತಕ್ಕೆ ತಲುಪಿದೆಯೆಂದರೆ, ರಾಹುಲ್ ಗಾಂಧೀ ಮತ್ತು ಜಿಗ್ನೇಶ್ ವೇವಾನಿಯಂತಹವರು ಅನಿವಾರ್ಯವಾಗಿ ಇದನ್ನು ಪಾಲಿಸಬೇಕಾಗುತ್ತದೆ. ಮುಸ್ಲಿಮನೊಬ್ಬ ಮುಖ್ಯಮಂತ್ರಿಯಾಗುವುದನ್ನು ಕಾಂಗ್ರೆಸ್‍ಗೆ ಹಿನ್ನಡೆಯಾಗಿಯೂ ಬಿಜೆಪಿಗೆ ಲಾಭಕರವಾಗಿಯೂ ನೋಡಲಾಗುತ್ತದೆ. ಇಂಥ ಸನ್ನಿವೇಶದಲ್ಲಿ, ಜಾತ್ಯತೀತತೆಯಲ್ಲಿ ನಂಬಿಕೆಯಿರಿಸುವ ಯಾವುದೇ ರಾಜಕೀಯ ಪಕ್ಷದ ಮುಂದೆ ಆಯ್ಕೆಗಳು ತೀರಾ ಕಡಿಮೆಯಿರುತ್ತವೆ. ಕಾಂಗ್ರೆಸ್‍ನ ಸೋಲಿಗಿರುವ ಕಾರಣಗಳೂ ಇಲ್ಲೇ ಎಲ್ಲೋ ಇವೆ. ಜಿಎಸ್‍ಟಿ, ನೋಟ್ ಬ್ಯಾನ್, ಪಟೇಲ್ ಮತ್ತು ಹಿಂದುಳಿದ ಸಮುದಾಯಗಳ ಅಸಮಾಧಾನ ಮತ್ತು ಆಡಳಿತ ವಿರೋಧಿ ಅಲೆಯ ಹೊರತಾಗಿಯೂ ಗುಜರಾತ್ ಬಿಜೆಪಿಯ ಕೈ ತಪ್ಪಲಿಲ್ಲ್ಲ ಅನ್ನುವುದನ್ನು ಈ ಹಿನ್ನೆಲೆಯಲ್ಲೇ ವಿಶ್ಲೇಷಿಸಬೇಕಾಗುತ್ತದೆ. 2002ರ ಗುಜರಾತ್ ಹತ್ಯಾಕಾಂಡದಲ್ಲಿ ಬಹುಮುಖ್ಯ ಪಾತ್ರ ವಹಿಸಿದ್ದ ಅಹ್ಮದಾಬಾದ್ ಮತ್ತು ವಡೋದರ ವಲಯಗಳು ಬಿಜೆಪಿಯ ಗೆಲುವಿನಲ್ಲಿ ಈ ಬಾರಿಯೂ ಬಹುಮುಖ್ಯ ಪಾತ್ರವಹಿಸಿವೆ. ಒಟ್ಟು ಮತದಾರರಲ್ಲಿ 48% ದಷ್ಟಿರುವ ಮಹಿಳೆಯರು ಮತ್ತು 12 ಲಕ್ಷದಷ್ಟಿದ್ದ ಹೊಸ ಮತದಾರರಲ್ಲಿ ಹೆಚ್ಚಿನವರು ಬಿಜೆಪಿಯ ಪರ ನಿಂತರು ಎಂದೂ ಹೇಳಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‍ನಲ್ಲಿ ಸುಮಾರು 38 ರಾಲಿಗಳನ್ನು ನಡೆಸಿದರು. ಅಮಿತ್ ಷಾ ಅಂತೂ ಚುನಾವಣಾ ದಿನಾಂಕ ಘೋಷಣೆಯಾಗುವುದಕ್ಕಿಂತ ಮೊದಲೇ ಗುಜರಾತ್‍ನಲ್ಲಿ ಠಿಕಾಣಿ ಹೂಡಿದರು. ಪ್ರಚಾರದ ಕೊನೆಯ ಹಂತದಲ್ಲಂತೂ ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್, ಉಪ ರಾಷ್ಟ್ರಪತಿ ಹಾಮಿದ್ ಅನ್ಸಾರಿ, ನಿವೃತ್ತ ಸೇನಾ ವರಿಷ್ಠರೂ ಸೇರಿದಂತೆ ಹಲವರನ್ನು ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನಿ ಏಜೆಂಟ್‍ಗಳೆಂದು ಕರೆದರು. ದೇಶ ವಿರೋಧಿ ಸಂಚಿನ ಭಾಗವಾಗಿ ಅವರನ್ನು ಪರಿಗಣಿಸಿದರು. ಬಹುಶಃ, ಬದುಕಿನ ಬದಲು ಭಾವನೆಯ ಆಧಾರದಲ್ಲಿ ನಡೆಸಲಾದ ಮತ್ತೊಂದು ಚುನಾವಣೆ ಇದು.
        ನಿಜವಾಗಿ, ಗುಜರಾತ್ ಎಂಬುದು ವ್ಯಾಪಾರಿಗಳ ನಾಡು. ನೋಟ್ ಬ್ಯಾನ್ ಮತ್ತು ಜಿಎಸ್‍ಟಿಗಳಿಂದ ಅತ್ಯಂತ ಹೆಚ್ಚು ತೊಂದರೆಗೊಳಗಾಗಿರಬಹುದಾದ ರಾಜ್ಯವೂ ಇದುವೇ. ಆದ್ದರಿಂದ, ಕಾಂಗ್ರೆಸ್ ತನ್ನ ಪ್ರಚಾರ ಸಾಮಗ್ರಿಯಲ್ಲಿ ಇದಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟಿರುವುದರಲ್ಲಿ ಅಚ್ಚರಿಯೇನೂ ಇರಲಿಲ್ಲ. ರೈತರ ಬಗ್ಗೆ, ನಿರುದ್ಯೋಗದ ಬಗ್ಗೆ, 22 ವರ್ಷಗಳ ಆಡಳಿತ ವೈಫಲ್ಯಗಳ ಕುರಿತಂತೆ ಕಾಂಗ್ರೆಸ್ ಪ್ರಶ್ನೆ ಎತ್ತಿತ್ತು. ಪಟೇಲರಿಗೆ ಮೀಸಲಾತಿ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣವೂ ಸೇರಿದಂತೆ ವಿವಿಧ ಕೊಡುಗೆಗಳನ್ನು ಕಾಂಗ್ರೆಸ್ ಮುಂದಿಟ್ಟಿತು. ಆದರೆ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗೆಗೊಳಿಸಿದ್ದೇ ಪ್ರಥಮ ಹಂತದ ಮತದಾನದ ಒಂದು ದಿನ ಮೊದಲು. ಪ್ರಣಾಳಿಕೆಗೆ ಬಿಜೆಪಿ ನೀಡುವ ಪ್ರಾಮುಖ್ಯತೆ ಎಷ್ಟು ಎಂಬುದನ್ನು ಇದುವೇ ಹೇಳುತ್ತದೆ. ಅದರ ಮಟ್ಟಿಗೆ ಪ್ರಣಾಳಿಕೆಯೆಂಬುದು ಒಂದು ಸಾಂಪ್ರದಾಯಿಕ ಪತ್ರಿಕಾ ಬಿಡುಗಡೆಯೇ ಹೊರತು ಅದರ ಚುನಾವಣಾ ತಂತ್ರವು ಪ್ರಣಾಳಿಕೆಯನ್ನು ಆಧರಿಸಿಕೊಂಡೇ ಇಲ್ಲ. ಜನರ ಬದುಕಿನ ಬಗ್ಗೆ ಮಾತಾಡುವುದಕ್ಕಿಂತ ಭಾವನೆಗಳ ಮೇಲೆ ಮಾತಾಡುವುದೇ ಹೆಚ್ಚು ಪ್ರಯೋಜನಕಾರಿ ಎಂಬುದನ್ನು ಬಿಜೆಪಿ ಕಂಡುಕೊಂಡಿದೆ. ನೋಟ್ ಬ್ಯಾನ್ ಅನ್ನು ಎತ್ತಿಕೊಂಡು ವ್ಯಾವಹಾರಿಕ ಚರ್ಚೆ ನಡೆಸುವುದಕ್ಕೂ `ಅದರಿಂದ ದೇಶಕ್ಕೆ ದೂರಗಾಮಿ ಪ್ರಯೋಜನವಿದೆ’ ಎಂದು ವಾದಿಸುವುದಕ್ಕೂ ವ್ಯತ್ಯಾಸವಿದೆ. ಒಂದು ವಾಸ್ತವ ಆಧಾರಿತವಾದರೆ ಇನ್ನೊಂದು ಭಾವನೆ ಆಧಾರಿತ. ಭಾವನೆಗೆ ವಾಸ್ತವವನ್ನು ಕಡೆಗಣಿಸುವ ಸಾಮರ್ಥ್ಯ ಇದೆ. ಮಾತ್ರವಲ್ಲ, ವಾಸ್ತವವನ್ನೇ ದೇಶದ್ರೋಹಿಯಾಗಿ ಕಾಣುವಷ್ಟು ಅದು ಪ್ರಬಲವೂ ಹೌದು. ಸದ್ಯ ಬಿಜೆಪಿಯು ಭಾವನೆ ಎಂಬ ಈ ಅಪಾಯಕಾರಿ ಕುದುರೆಯನ್ನೇರಿದೆ. ಜನಸಾಮಾನ್ಯರು ಕುದುರೆಯ ಆಕರ್ಷಣೆಗಷ್ಟೇ ಮಹತ್ವ ಕೊಡುತ್ತಾರೆ ಎಂಬುದು ಬಿಜೆಪಿಗೆ ಗೊತ್ತು.  ಸದ್ಯದ ತುರ್ತು ಏನೆಂದರೆ,   ವರ್ತಮಾನ ಕಾಲದ ಸಮಸ್ಯೆಗಳಿಗೆ ಪರಿಹಾರವೂ ಆಗದ ಮತ್ತು ಭವಿಷ್ಯತ್ ಕಾಲದ ಸವಾಲುಗಳಿಗೆ ಉತ್ತರವೂ ಆಗದ ಈ ಕುದುರೆಯನ್ನು ಕಟ್ಟಿಹಾಕುವುದು. ಗುಜರಾತ್ ಚುನಾವಣಾ ಫಲಿತಾಂಶವನ್ನು ಬಿಜೆಪಿಯ ಗೆಲುವು- ಕಾಂಗ್ರೆಸ್‍ನ ಸೋಲು ಎಂದು ಹೇಳುವುದಕ್ಕಿಂತ ಭಾವನೆಯ ಗೆಲುವು ಮತ್ತು ಬದುಕಿನ ಸೋಲು ಎಂದಷ್ಟೇ ವಿಶ್ಲೇಷಿಸಬಹುದು. ಈ ವಾತಾವರಣ ಅತ್ಯಂತ ಅಪಾಯಕಾರಿ.

Tuesday 19 December 2017

ಯಾದಗಿರಿ ಎತ್ತಿರುವ ದೇಶಪ್ರೇಮದ ಪ್ರಶ್ನೆ

     ಕಳೆದವಾರ ಮಾಧ್ಯಮಗಳು ಬರ್ನಾನ ಯಾದಗಿರಿ ಎಂಬ ಯುವಕನ ಗುಣಗಾನ ಮಾಡಿವೆ. ಮುಖ್ಯ ವಾಹಿನಿಯ ಸಾಕಷ್ಟು ಪತ್ರಿಕೆಗಳು ಈ ಯುವಕನನ್ನು ಪ್ರಶಂಸಿಸಿ ಸುದ್ದಿ ಬರೆದಿವೆ. ಸಾಫ್ಟ್‍ವೇರ್ ಇಂಜಿನಿಯರ್ ಪದವೀಧರನಾಗಿರುವ ಹೈದಾರಾಬಾದ್‍ನ ಈ ಯುವಕ ಸೇನೆ ಸೇರಿದ್ದಾನೆ. ಡೆಹ್ರಾಡೂನ್‍ನಲ್ಲಿರುವ ಇಂಡಿಯನ್ ಮಿಲಿಟರಿ ಅಕಾಡೆಮಿಯಲ್ಲಿ ಕಳೆದವಾರ ಸೇನಾಧಿಕಾರಿಯಾಗಿ ನೇಮಕಗೊಂಡಿದ್ದಾನೆ. ಯಾದಗಿರಿಯ ತಂದೆ ಕೂಲಿ ಕಾರ್ಮಿಕ. ಹೈದಾರಾಬಾದ್‍ನ ಸಿಮೆಂಟ್ ಕಾರ್ಖಾನೆಯೊಂದರಲ್ಲಿ ದಿನಕ್ಕೆ 100 ರೂಪಾಯಿ ವೇತನಕ್ಕಾಗಿ ಅವರು ದುಡಿಯುತ್ತಿದ್ದಾರೆ. CAT  ಪರೀಕ್ಷೆಯಲ್ಲಿ 94.4% ಅಂಕ ಪಡೆದ ಬರ್ನಾನ ಯಾದಗಿರಿಗೆ ಇಂದೋರ್‍ನ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ನೀಡಿದ ಸೀಟನ್ನು ಮತ್ತು ಅಮೇರಿಕನ್ ಮೂಲದ ಯೂನಿಯನ್ ಫೆಸಿಪಿಕ್ ರೇಲ್ ರೋಡ್ ಕಂಪೆನಿಯು ನೀಡಿದ ಉದ್ಯೋಗ ಕೊಡುಗೆಯನ್ನು ತಿರಸ್ಕರಿಸಿ ಆತ ಸೇನೆ ಸೇರಿಕೊಂಡಿದ್ದಾನೆ. ದಿನಕ್ಕೆ 100 ರೂಪಾಯಿಗೆ ದುಡಿಯುವ ಕೂಲಿ ಕಾರ್ಮಿಕನೋರ್ವನ ಮಗನ ಮುಂದೆ ಕೈ ತುಂಬಾ ಸಂಬಳ ಎಣಿಸುವ ಉದ್ಯೋಗವಿದ್ದೂ ಅದಕ್ಕೆ ಬೆನ್ನು ಹಾಕಿರುವುದನ್ನು ಮಾಧ್ಯಮಗಳು ದೇಶ ಪ್ರೇಮದ ಭಾಗವಾಗಿ ಕಂಡಿವೆ. ಹಾಗಂತ, ಇದನ್ನು ಅಲ್ಲಗಳೆಯಬೇಕಿಲ್ಲ. ಬಡತನದಲ್ಲಿ ಬೆಳೆದ ಮಗುವಿಗೆ ಮತ್ತು ಅದರ ಹೆತ್ತವರಿಗೆ ಕೆಲವು ಕನಸುಗಳಿರುತ್ತವೆ. ಬಡತನದ ಸ್ಥಿತಿಯಿಂದ ಹೊರಬರುವುದೂ ಅದರಲ್ಲಿ ಒಂದು. ಇಷ್ಟಿದ್ದೂ ಬರ್ನಾನ ಯಾದಗಿರಿ ಸೇನೆ ಸೇರಿದ್ದಾರೆಂದರೆ ಅದು ಪ್ರಶಂಸಾರ್ಹ ಮತ್ತು ಸವಾಲಿನ ನಿರ್ಧಾರ. ಆದರೆ ಈ ನಿರ್ಧಾರದ ಮೂಲಕ ಆ ಯುವಕ ಈ ಪ್ರಶಂಸಕರ ಮುಂದೆ ಕೆಲವು ಪ್ರಶ್ನೆಗಳನ್ನು ಇಟ್ಟಿದ್ದಾನೆ. ಆತನನ್ನು ಪ್ರಶಂಸಿಸಿದ ಪತ್ರಿಕೆಗಳಾವುವೂ ಎತ್ತದ ಅಥವಾ ಜಾಣತನದಿಂದ ಮರೆಗೆ ಸರಿಸಿದ ಪ್ರಶ್ನೆಗಳಿವು. ಯಾಕೆ ಬಡವರ ಮಕ್ಕಳೇ ಸೇನೆ ಸೇರುತ್ತಾರೆ? ದೇಶ ಪ್ರೇಮ ಎಂಬ ಬಹೂಪಯೋಗಿ ಅಸ್ತ್ರವು ಸದಾ ಯಾಕೆ ಬಡವರ ಗುಡಿಸಲನ್ನೇ ಗುರಿಯಾಗಿಸುತ್ತದೆ? ಶ್ರೀಮಂತ ಮನೆಯ ಮಗುವೊಂದು ಸೂಟು-ಬೂಟನ್ನು ಕಳಚಿ ಸೇನೆ ಸೇರುವ ಸನ್ನಿವೇಶಗಳೇಕೆ ನಿರ್ಮಾಣವಾಗುತ್ತಿಲ್ಲ? ಅಂದಹಾಗೆ, ಬರ್ನಾನ ಯಾದಗಿರಿಯನ್ನು ಹೊಗಳುವ ಮಾಧ್ಯಮಗಳು ಅದೇ ಧ್ವನಿಯಲ್ಲಿ ಶ್ರೀಮಂತರ ದೇಶ ಪ್ರೇಮವನ್ನೂ ಪ್ರಶ್ನೆಗೊಳಪಡಿಸಬಹುದಿತ್ತಲ್ಲ. ಅಮೇರಿಕನ್ ಮೂಲದ ಕಂಪೆನಿಯು ನೀಡುವ ಸಂಬಳಕ್ಕೆ ಹೋಲಿಸಿದರೆ ಬರ್ನಾನ ಯಾದಗಿರಿಗೆ ಸೇನೆ ನೀಡುವ ವೇತನ ತೀರಾ ತೀರಾ ಜುಜುಬಿ. ಆದ್ದರಿಂದ ಅಮೇರಿಕನ್ ಕಂಪೆನಿ ಉದ್ಯೋಗವನ್ನು ಕೈ ಬಿಟ್ಟು ಬರ್ನಾನ ಸೇನೆ ಸೇರುವುದೆಂದರೆ, ಅದಕ್ಕೆ ಗಟ್ಟಿ ಗುಂಡಿಗೆ ಬೇಕು. ಆದರೆ ಶ್ರೀಮಂತ ಕುಟುಂಬದ ಮಗುವಿಗೆ ಈ ಸಮಸ್ಯೆ ಬರುವುದಿಲ್ಲ. ಆದರೂ ಯಾಕೆ ಗುಡಿಸಲಿನ ಮಕ್ಕಳೇ ಸೇನೆ ಸೇರುತ್ತಾರೆ ಮತ್ತು ಯಾಕೆ ಅದು ದೇಶ ಪ್ರೇಮದ ಆಚೆಗಿನ ಪ್ರಶ್ನೆಗಳನ್ನು ಎತ್ತಲು ಮತ್ತೆ ಮತ್ತೆ ವಿಫಲವಾಗುತ್ತದೆ? ಮಾಧ್ಯಮಗಳು ಉದ್ದೇಶಪೂರ್ವಕಾಗಿ ಇಂಥ ಪ್ರಶ್ನೆಗಳ ಹುಟ್ಟನ್ನು ತಡೆಯಲು ಪ್ರಯತ್ನಿಸುತ್ತಿವೆಯೋ? ಅದರ ಭಾಗವಾಗಿಯೇ ದೇಶಪ್ರೇಮವನ್ನು ಮುಂದೊತ್ತಲಾಗುತ್ತಿದೆಯೋ? ಮುಖ್ಯವಾಹಿನಿ ಮಾಧ್ಯಮಗಳ ಆಯಕಟ್ಟಿನ ಜಾಗದಲ್ಲಿರುವವರಲ್ಲಿ ಎಷ್ಟು ಮಂದಿಯ ಮಕ್ಕಳು ಸೇನೆಯಲ್ಲಿದ್ದಾರೆ? ದೇಶ ಪ್ರೇಮದ ಬಗ್ಗೆ ನಿರರ್ಗಳ ಭಾಷಣ ಮಾಡುವ ರಾಜಕಾರಣಿಗಳ ಎಷ್ಟು ಮಕ್ಕಳು ಸೇನೆ ಸೇರುತ್ತಿದ್ದಾರೆ? ಪಾಕ್ ಗಡಿಯಲ್ಲೋ, ನಕ್ಸಲರ ಜೊತೆಗೋ ಅಥವಾ ಇನ್ನೆಲ್ಲೋ ಕಾದಾಡಿ ಪ್ರಾಣತೆರುವ ಯೋಧರನ್ನು ಹುತಾತ್ಮರೆಂದು ಕರೆದು, ವೀರಾವೇಶದ ಹೇಳಿಕೆ ನೀಡುವವರನ್ನೇಕೆ ಮಾಧ್ಯಮಗಳು ಪ್ರಶ್ನೆಗೊಳಪಡಿಸುತ್ತಿಲ್ಲ? ಹುತಾತ್ಮರಾಗುವುದೋ ಬಡಗುಡಿಸಲಿನ ಯುವಕರು. ಅದರ ಲಾಭ ಎತ್ತುವುದೋ ರಾಜಕಾರಣಿಗಳು. ಯಾಕೆ ಹೀಗೆ? ಇದೊಂದು ಸಂಚು ಯಾಕಾಗಿರಬಾರದು?
   ನಿಜವಾಗಿ, ದೇಶ ಪ್ರೇಮವೆಂಬುದು ಬಡವರು ಮಾತ್ರ ಆಚರಿಸಿ ತೋರಿಸಬೇಕಾದ ವಿಷಯವಲ್ಲ. ಅದು ದೇಶದ ಎಲ್ಲ ನಾಗರಿಕರಿಗೆ ಸಂಬಂಧಿಸಿದ್ದು. ದೇಶದ ಕಟ್ಟ ಕಡೆಯಲ್ಲಿರುವ ನಾಗರಿಕನಿಂದ ಹಿಡಿದು ದೇಶದ ತುತ್ತ ತುದಿಯಲ್ಲಿರುವ ನಾಗರಿಕನವರೆಗೆ ಎಲ್ಲರ ಮೇಲೂ ಇದರ ಹೊಣೆಗಾರಿಕೆಯಿದೆ. ದುರಂತ ಏನೆಂದರೆ, ಇವತ್ತು ದೇಶ ಪ್ರೇಮ, ಸಂಸ್ಕøತಿ ಪ್ರೇಮ, ಧರ್ಮ ರಕ್ಷಣೆ ಇತ್ಯಾದಿ ಇತ್ಯಾದಿಗಳನ್ನೆಲ್ಲ ಎರಡಾಗಿ ವಿಭಜಿಸಲಾಗಿದೆ. ಮೇಲ್ತುದಿಯಲ್ಲಿರುವ ಉದ್ಯಮಿಗಳು, ರಾಜಕಾರಣಿಗಳು, ಚಿತ್ರರಂಗದವರು ಮುಂತಾಗಿ ಹೈ ಸೊಸೈಟಿ ಎಂದು ನಾವು ಹೇಳಬಹುದಾದ ಬಡವರ್ಗವು ಒಂದು ಕಡೆಯಾದರೆ, ಬರ್ನಾನ ಯಾದಗಿರಿಯು ಪ್ರತಿನಿಧಿಸುವ ಬಡ ವರ್ಗವು ಇನ್ನೊಂದು ಕಡೆ ಮತ್ತು ಪ್ರತಿ ಸಮಯದಲ್ಲೂ ಪ್ರಶ್ನೆಗೆ ಮತ್ತು ಹಿಂಸೆಗೆ ಗುರಿಯಾಗುವುದೂ ಯಾದಗಿರಿ ಪ್ರತಿನಿಧಿಸುವ ಈ ವರ್ಗವೊಂದೇ. ಧರ್ಮ ರಕ್ಷಣೆಯ ನೊಗವನ್ನು ಹೊತ್ತುಕೊಂಡಿರುವುದೂ ಇದೇ ವರ್ಗ. ಅದರ ಹೆಸರಲ್ಲಿ ಹಲ್ಲೆ ಮತ್ತು ಹತ್ಯೆಗೆ ಗುರಿಯಾಗುತ್ತಿರುವುದೂ ಇದೇ ವರ್ಗ. ದೇಶ ಪ್ರೇಮವನ್ನು ಗುತ್ತಿಗೆ ಪಡಕೊಂಡಂತೆ ವರ್ತಿಸುತ್ತಿರುವುದೂ ಇದೇ ವರ್ಗ. ಅದರ ಹೆಸರಲ್ಲಿ ಹಿಂಸೆಗೆ ತುತ್ತಾಗುವುದೂ ಇದೇ ವರ್ಗ. ಸೇನೆ, ಪೆÇಲೀಸ್ ಇಲಾಖೆ ಸೇರಿಕೊಳ್ಳಬೇಕಾದುದೂ ಇದೇ ವರ್ಗ. ಅದರ ಪರಿಣಾಮವಾಗಿ ಶಾಶ್ವತ ಅಂಗವೈಕಲ್ಯ, ಸಾವುಗಳಿಗೆ ತುತ್ತಾಗಬೇಕಾದುದೂ ಇದೇ ವರ್ಗ. ಇನ್ನೊಂದು ವರ್ಗದ ಕೆಲಸ ಏನೆಂದರೆ, ಜನರನ್ನು ಪ್ರಚೋದಿಸುವುದು. ಯಾವುದು ದೇಶಪ್ರೇಮ, ಯಾವುದು ಅಲ್ಲ ಎಂಬುದನ್ನು ಮಾಧ್ಯಮಗಳ ಮುಂದೆ ನಿಂತು ಈ ವರ್ಗ ಘೋಷಿಸುತ್ತದೆ. ಯಾರಿಂದ, ಯಾವುದರಿಂದ ಧರ್ಮ ನಾಶವಾಗಬಹುದು ಎಂಬ ಬಗ್ಗೆ ಭಾಷಣಗಳನ್ನು ಬಿಗಿಯುತ್ತದೆ. ಸಂಸ್ಕøತಿಯನ್ನು ಉಳಿಸಿಕೊಳ್ಳಬೇಕಾದರೆ ಯಾವೆಲ್ಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಅದು ಪಾಠ ಮಾಡುತ್ತದೆ. ಗಡಿ ಕಾಯುತ್ತಾ ಹುತಾತ್ಮನಾಗುವುದೆಂದರೆ ಅದೆಷ್ಟು ಗೌರವಾನ್ವಿತ ಮರಣ ಎಂಬ ಬಗ್ಗೆ ಹೇಳಿಕೆಗಳನ್ನು ಹೊರಡಿಸುತ್ತದೆ ಮತ್ತು ಬಳಿಕ ತಂತಮ್ಮ ಐಶಾರಾಮಿ ಬಂಗಲೆಯಲ್ಲೋ ಮನೆಯಲ್ಲೋ ಆರಾಮವಾಗಿರುತ್ತದೆ.
   ನಿಜವಾಗಿ, ಬರ್ನಾನ ಯಾದಗಿರಿಯ ಆಯ್ಕೆ ನಮ್ಮನ್ನೆಲ್ಲ ಕಾಡಬೇಕಾದುದು ಈ ಎಲ್ಲವುಗಳ ಹಿನ್ನೆಲೆಯಲ್ಲಿ. ಬಡವರ ಮನೆಯ ಮಕ್ಕಳನ್ನು ದೇಶ ಪ್ರೇಮ, ಧರ್ಮಪ್ರೇಮಗಳ ಹೆಸರಲ್ಲಿ ಶ್ರೀಮಂತ ವರ್ಗ ದಿಕ್ಕು ತಪ್ಪಿಸುತ್ತಿವೆಯೇ ಅನ್ನುವ ಅನುಮಾನವನ್ನು ಬರ್ನಾನ ಯಾದಗಿರಿ ನಮ್ಮ ಮುಂದಿಟ್ಟಿದ್ದಾರೆ. ದೇಶ, ಧರ್ಮ, ಸಂಸ್ಕøತಿ ಮುಂತಾದುವುಗಳು ಶ್ರೀಮಂತ ವರ್ಗ ಮತ್ತು ರಾಜಕಾರಣಿಗಳ ಖಯಾಲಿಗಳನ್ನು ಅಡಗಿಸುವ ಅಸ್ತ್ರಗಳೇ? ಈ ವರ್ಗದ ತೆವಲುಗಳ ಬಗ್ಗೆ ಜನಸಾಮಾನ್ಯರು ಗಮನ ಹರಿಸದಂತೆ ತಡೆಯುವುದಕ್ಕೆ ಧರ್ಮ, ಸಂಸ್ಕøತಿ, ದೇಶ ಪ್ರೇಮ.. ಇತ್ಯಾದಿಗಳನ್ನು ತೇಲಿಸಿ ಬಿಡಲಾಗಿದೆಯೇ? ಬಡವರ ಮಕ್ಕಳಿಗೆ ಇವುಗಳ ರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಟ್ಟು ಅವರು ಆಟ ನೋಡುತ್ತಿದ್ದಾರೆಯೇ? ಸಂದರ್ಭಕ್ಕೆ ತಕ್ಕಂತೆ ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುವುದು ಈ ಸಂಚಿನ ಭಾಗವೇ?
    ಬರ್ನಾನ ಯಾದಗಿರಿಯನ್ನು ಮೆಚ್ಚಿಕೊಳ್ಳುವ ಜೊತೆ ಜೊತೆಗೇ ನಾವು ನಮ್ಮೊಳಗೆ ಇಂಥ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾಗಿದೆ.

Friday 15 December 2017

ಬುಡನ್ ಗಿರಿಯ ಭಕ್ತಿ ಎಲ್ಲಿಯವರೆಗೆ?

      ಚಿಕ್ಕಮಗಳೂರು ಮತ್ತು ಹುಣಸೂರಿನಲ್ಲಿ ನಡೆದ ಬೆಳವಣಿಗೆಗಳು ಕೆಲವು ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತಿವೆ. ಎರಡೂ ಕಡೆಯ ಮೆರವಣಿಗೆಗೆ ನೇತೃತ್ವ ನೀಡಿರುವುದು ಬಿಜೆಪಿ. ಹುಣಸೂರಿನ ವಿವಾದಿತ ಕಲ್ಕುಣಿಕೆಯ ರಂಗನಾಥ ಬಡಾವಣೆಯಲ್ಲಿ ಮೆರವಣಿಗೆ ಸಾಗಬಾರದೆಂದು ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. ಆದರೆ ಹನುಮಂತೋತ್ಸವ ಮೆರವಣಿಗೆಯನ್ನು ಅಲ್ಲಿಂದಲೇ ಆರಂಭಿಸುವುದಾಗಿ ಬಿಜೆಪಿ ಸಂಸದರು ಘೋಷಿಸಿದರು. ಬಾಬಾ ಬುಡನ್‍ಗಿರಿಯಲ್ಲೂ ನಿರ್ಬಂಧಿತ ಪ್ರದೇಶವಿದೆ. ಮೆರವಣಿಗೆಕೋರರು ಅಲ್ಲಿಗೇ ನುಗ್ಗಿದರು. ಎರಡೂ ಕಡೆಯ ಬೆಳವಣಿಗೆಗಳು ಧರ್ಮ ಮತ್ತು ಭಕ್ತಿಯ ಹೆಸರಲ್ಲಿ ನಡೆದಿದೆ. ಸದ್ಯ ನಮ್ಮನ್ನು ನಾವು ಕೇಳಬೇಕಾದ ಪ್ರಶ್ನೆ ಏನೆಂದರೆ, ಭಕ್ತಿಯ ಮೂಲ ಉದ್ದೇಶ ಏನು? ದತ್ತಾತ್ರೇಯ ಸ್ವಾಮಿಯ ಭಕ್ತನಿಗೆ ಅಥವಾ ಹನುಮಂತನ ಭಕ್ತನಿಗೆ ಕಾನೂನನ್ನು ಮೀರಿ ನಡೆದುಕೊಳ್ಳಬೇಕೆಂಬ ಇಚ್ಛೆ ಬರುವುದು ಹೇಗೆ? ಭಕ್ತಿಯ ಇನ್ನೊಂದು ಅರ್ಥವೇ ಶಾಂತಿ ಮತ್ತು ಸರ್ವಹಿತ. ಆದ್ದರಿಂದಲೇ, ಧಾರ್ಮಿಕ ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳು ರಾಗ-ದ್ವೇಷಗಳಿಂದ ಮುಕ್ತವಾಗಿರುತ್ತವೆ. ಕುಂಭ ಮೇಳದಲ್ಲಿ ಸಾವಿರಾರು ಮಂದಿ ಸೇರುತ್ತಾರೆ. ಇಂಥ ಅನೇಕಾರು ಉದಾಹರಣೆಗಳನ್ನು ಕೊಡಬಹುದು. ಈ ದೇಶದಲ್ಲಿ ಮಂದಿರ-ಮಸೀದಿ-ಚರ್ಚ್‍ಗಳು ಪ್ರತಿದಿನವೆಂಬಂತೆ ತುಂಬಿಕೊಂಡಿರುತ್ತವೆ. ಭಕ್ತರು ತಮಗಿಷ್ಟ ಬಂದಂತೆ ನಡಕೊಂಡು ತೃಪ್ತಿಪಡುತ್ತಾರೆ. ಅಲ್ಲಿ ಲಾಠಿ ಪ್ರಹಾರ ಮಾಡಬೇಕಾದ, ಕೇಸು ದಾಖಲಿಸಿಕೊಳ್ಳಬೇಕಾದ ಯಾವ ಸನ್ನಿವೇಶವೂ ನಿರ್ಮಾಣವಾಗುವುದಿಲ್ಲ. ಇವಕ್ಕೆ ಭಿನ್ನವಾಗಿ ಬಾಬಾ ಬುಡನ್‍ಗಿರಿ ಯಾಕಿದೆ? ನಿರ್ಬಂಧವನ್ನು ಮುರಿದೇ ಭಕ್ತಿ ಪ್ರದರ್ಶಿಸುತ್ತೇವೆ ಎಂಬ ಹಠದ ಹಿಂದಿರುವುದು ಏನು?
    ನಿಜವಾಗಿ, ಬಾಬ ಬುಡನ್‍ಗಿರಿ ಎಂಬುದು ಸಾಮಾನ್ಯ ಜನರಿಗೆ ಸಂಬಂಧಿಸಿ ಹೇಳುವುದಾದರೆ, ಯಾರೊಬ್ಬರ ಸೊತ್ತೂ ಅಲ್ಲ. ಹೆಸರು ಬಾಬ ಬುಡನ್‍ಗಿರಿ ಎಂದಿದ್ದರೂ ಹಿಂದೂ ಮತ್ತು ಮುಸ್ಲಿಮರಿಬ್ಬರೂ ಸಮಾನವಾಗಿ ಅಲ್ಲಿ ನಡಕೊಳ್ಳುತ್ತಿದ್ದಾರೆ. ವಿವಾದಕ್ಕಿಂತ ಮೊದಲೂ ಮತ್ತು ಆ ಬಳಿಕವೂ ಇದು ಮುಂದುವರಿದೇ ಇದೆ. ಹೀಗಿರುವಾಗ, ಬುಡನ್‍ಗಿರಿಯ ಬೆಟ್ಟವನ್ನು ವರ್ಷಕ್ಕೊಮ್ಮೆ ಹತ್ತಿ ಅವರು ಮತ್ತು ನಾವು ಎಂದು ಸಮಾಜವನ್ನು ವರ್ಗೀಕರಿಸುವುದು ಯಾಕೆ? ಈ ದೇಶದಲ್ಲಿ 80%ದಷ್ಟಿರುವ ಬೃಹತ್ ಸಮುದಾಯವೊಂದಕ್ಕೆ 15%ದಷ್ಟಿರುವ ಪುಟ್ಟ ಸಮುದಾಯದಿಂದ ಬೆದರಿಕೆ ಇದೆ ಎಂಬಂತೆ ಬಿಂಬಿಸುವುದರ ನಿಜ ಉದ್ದೇಶ ಏನು? ಯಾವುದೇ ಕಾಲದಲ್ಲಿ 15%ದಷ್ಟಿರುವ ಪುಟ್ಟ ಗುಂಪೊಂದು 80%ದಷ್ಟಿರುವ ಬೃಹತ್ ಗುಂಪನ್ನು ಬೆದರಿಸಿದ್ದಿದೆಯೇ? ಹಾಗಂತ, ಈ ಪುಟ್ಟ ಗುಂಪಿನ ಬಳಿ ಅಧಿಕಾರ ಇಲ್ಲ. ಕಾರ್ಯಾಂಗದ ಮೇಲೆ ಯಾವ ಹಿಡಿತವೂ ಇಲ್ಲ. ನ್ಯಾಯಾಂಗದಲ್ಲಿ ಅದರ ಪ್ರತಿನಿಧಿಗಳು ಭೂತಗನ್ನಡಿ ಹಿಡಿದು ಹುಡುಕಿದರೂ ಸಿಗದಷ್ಟು ಅಲ್ಪ ಪ್ರಮಾಣದಲ್ಲಿದ್ದಾರೆ. ಶೈಕ್ಷಣಿಕವಾಗಿ ಹಿಂದುಳಿದಿರುವ, ಆರ್ಥಿಕವಾಗಿ ಪ್ರಪಾತದಲ್ಲಿರುವ ಮತ್ತು ರಾಜಕೀಯವಾಗಿ ಗುರುತೇ ಇಲ್ಲದ ಪುಟ್ಟ ಗುಂಪನ್ನು ಪ್ರತಿವರ್ಷ ಬಾಬಬುಡನ್ ಗಿರಿಯಲ್ಲಿ ನಿಂತು ಆಕ್ಷೇಪಿಸುವುದು ಮತ್ತು ಆ ಗುಂಪೇ ಬಾಬಾಬುಡನ್ ಗಿರಿ ಬೆಟ್ಟವನ್ನು ದತ್ತಾತ್ರೇಯ ಸ್ವಾಮಿ ಬೆಟ್ಟವಾಗುವುದರಿಂದ ತಡೆದಿದೆ ಎಂದೆಲ್ಲಾ ಆರೋಪಿಸುವುದು ಎಷ್ಟು ಸರಿ? ಒಂದು ವೇಳೆ, ಈ ಪುಟ್ಟ ಗುಂಪು ಅಷ್ಟೊಂದು ಪ್ರಭಾವಶಾಲಿಯಾಗಿರುತ್ತಿದ್ದರೆ ಈ ದೇಶದ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿ ಅವರೇ ಇರಬೇಕಿತ್ತಲ್ಲವೇ? ಉದ್ಯಮ ಕ್ಷೇತ್ರವನ್ನು ಅವರೇ ಆಳಬೇಕಿತ್ತಲ್ಲವೇ? ರಾಜಕೀಯವಾಗಿ ಉನ್ನತ ಸ್ಥಾನವೆಲ್ಲ ಅವರೊಳಗೇ ಹಂಚಿಕೆಯಾಗಬೇಕಿತ್ತಲ್ಲವೇ? ಶೈಕ್ಪಣಿಕ ಸಂಸ್ಥೆಗಳು, ಆರೋಗ್ಯ ಕೇಂದ್ರಗಳು ಅವರ ಸುಪರ್ದಿಯಲ್ಲೇ  ಇರಬೇಕಿತ್ತಲ್ಲವೇ? ಆದರೆ ಮಾನವಾಭಿವೃದ್ಧಿಗೆ ಸಂಬಂಧಿಸಿ ಈ ದೇಶದಲ್ಲಿ ಇರುವ ಯಾವ ಅಂಕಿ-ಅಂಶಗಳನ್ನೇ ಎತ್ತಿಕೊಂಡರೂ ಅದರಲ್ಲಿ ಮುಸ್ಲಿಮರ ಸ್ಥಾನ ತೀರಾ ಕೆಳಮಟ್ಟದ್ದು. ಇಷ್ಟೊಂದು ದುರ್ಬಲ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಬಲಿಷ್ಟವಾಗಿರುವ ಸಬಲ ಸಮುದಾಯಕ್ಕೆ ಬೆದರಿಕೆಯಾಗಿದೆ ಎಂಬ ಪ್ರಚಾರದ ಹಿಂದಿರುವುದು ನಿಜಕ್ಕೂ ಯಾವುದು- ಭಕ್ತಿಯೋ ರಾಜಕೀಯವೋ?
1992ರಲ್ಲಿ ನಡೆದ ಬಾಬರಿ ಮಸೀದಿ ಧ್ವಂಸದ ಬಳಿಕದಿಂದ ತೊಡಗಿ ಮುಂದಿನ ಕೆಲವು ವರ್ಷಗಳ ವರೆಗೆ ಈ ದೇಶದ ಅಸಂಖ್ಯ ಸಣ್ಣ-ಪುಟ್ಟ ಗುಡಿ-ದೇಗುಲಗಳು ಅದ್ದೂರಿ ಕಾರ್ಯಕ್ರಮಗಳನ್ನು ಹಾಕಿಕೊಂಡವು. ಆವರೆಗೆ ಕೌಟುಂಬಿಕ ಆಚರಣೆಯಂತೆ ನಡೆದು ಮುಗಿದು ಹೋಗುತ್ತಿದ್ದ ವಾರ್ಷಿಕ ಕಾರ್ಯಕ್ರಮಗಳು ಮೆರವಣಿಗೆ ಮತ್ತು ಭಾರೀ ಪ್ರಚಾರದೊಂದಿಗೆ ನಡೆದುವು. ತೀಕ್ಷ್ಣ  ನುಡಿಯ ಭಾಷಣಗಳೂ ನಡೆದುವು. ಆದರೆ ಆ ಧ್ವಂಸ ಘಟನೆಯ ಎರಡು ದಶಕಗಳ ಬಳಿಕ ಈಗ ಅವುಗಳ ಜಾಡು ಹಿಡಿದು ನಡೆದರೆ, ತೀವ್ರ ನಿರಾಶೆಯೇ ಎದುರಾಗುತ್ತದೆ. ಆ ದೈವ-ದೇವಸ್ಥಾನಗಳು ಇವತ್ತು ಗತ ದಿನಗಳತ್ತ ಮರಳಿವೆ. ತಿವಿಯುವ ಭಾಷಣಗಳಾಗಲಿ, ಅದ್ಧೂರಿ ಮೆರವಣಿಗೆಗಳಾಗಲಿ ಇಲ್ಲದೇ ಹಳೆ ದಿನಗಳಂತೆ ಸಹಜವಾಗಿ ನಡೆಯುತ್ತಿವೆ. ನಿಜವಾಗಿ, ಭಕ್ತಿಯೆಂದರೆ ಇದುವೇ. ಇನ್ನೋರ್ವರನ್ನು ಗುರಿಯಾಗಿಸಿಕೊಂಡು ನಡೆಯುವ ಆಚರಣೆಯಲ್ಲಿ ಭಕ್ತಿ ಇರುವುದಿಲ್ಲ. ಬರೇ ಸದ್ದು ಇರುತ್ತದೆ. ಅದರ ಗುರಿ ಭಕ್ತಿಯಲ್ಲ, ಆ ಇನ್ನೊಬ್ಬರು ಅಥವಾ ಆ ಇನ್ನೊಂದು. ಅದು ಸಾಧಿತವಾದ ಕೂಡಲೇ ಸದ್ದು ನಿಲ್ಲುತ್ತದೆ. 1992ರ ಬಳಿಕದ ಈ ‘ಭಕ್ತಿ’ ಪ್ರದರ್ಶನದ ಹಿಂದೆ ರಾಜಕೀಯ ಇತ್ತು. ಆ ರಾಜಕೀಯಕ್ಕೆ ಅಸಹಜವಾದ ಭಕ್ತಿ ಪ್ರದರ್ಶನದ ಅಗತ್ಯ ಇತ್ತು. ಜೊತೆಗೇ ಕಲ್ಪಿತ ವೈರಿಯೊಂದರ ಅಗತ್ಯವೂ ಇತ್ತು. ಗುಮ್ಮವನ್ನು ತೋರಿಸಿ ಮಗುವನ್ನು ಪಳಗಿಸುವಂತೆ 15%ದಷ್ಟಿರುವ ಪುಟ್ಟ ಗುಂಪನ್ನು ಅತ್ಯಂತ ವಿಕಾರವಾಗಿ ತೋರಿಸಿ 80%ದಷ್ಟಿರುವ ಬೃಹತ್ ಗುಂಪನ್ನು ವಶೀಕರಿಸಲು ಆ ರಾಜಕೀಯ ಯತ್ನಿಸಿತು. ಈ ಪುಟ್ಟ ಗುಂಪಿನಿಂದ ಗುಡಿ-ದೇವಸ್ಥಾನಗಳ ಮೇಲೆ ಇರುವ ಬೆದರಿಕೆಗಳ ಬಗ್ಗೆ ಪ್ರಚಾರ ನಡೆಸಲಾಯಿತು. ನಿಜವಾಗಿ, ಈ ಪುಟ್ಟ ಗುಂಪಿಗೆ ಈ ಗುಡಿ-ದೇವಸ್ಥಾನಕ್ಕೆ ಬೆದರಿಕೆ ಒಡ್ಡುವ ಸಾಮಥ್ರ್ಯ ಬಿಡಿ, ಈ ಗುಡಿಗಳು ರಸ್ತೆಯುದ್ದಕ್ಕೂ ಹಾಕುವ ದೀಪಗಳನ್ನೇ ಆನಂದಿಸುವ ಸ್ಥಿತಿಯಲ್ಲಷ್ಟೇ ಅವು ಇದ್ದುವು. ಹೀಗೆ ಕಲ್ಪಿತ ವೈರಿಯನ್ನು ವಿಕಾರವಾಗಿ ತೋರಿಸಿ ತೀರಾ ಸ್ಥಳೀಯವಾಗಿ ಮತ್ತು ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಆಚರಣೆಗಳನ್ನು ಅದ್ದೂರಿಯಾಗಿ ನಡೆಸಲಾಯಿತು. ಸಮಾಜ ನಿಧಾನಕ್ಕೆ ಅವರು ಮತ್ತು ನಾವು ಎಂದಾಗತೊಡಗಿತು. ಮನುಷ್ಯರೇ ಮನುಷ್ಯರನ್ನು ದ್ವೇಷಿಸುವ ಸ್ಥಿತಿಗೆ ತಲುಪಿತು. ಗುಡಿ ಮತ್ತು ಮಸೀದಿಗಳೆರಡೂ ವೈರಿಗಳಂತೆ ಬದುಕತೊಡಗಿದುವು. ಹೀಗೆ ಈ ಸಾಮಾಜಿಕ ವಿಭಜನೆಯು ಅಂತಿಮವಾಗಿ ‘ಮತ’ವಾಗಿ ಮಾರ್ಪಾಟುಗೊಂಡಿತು. ಸ್ಥಳೀಯ ಚುನಾವಣೆಗಳಲ್ಲೂ ಅದು ಬಿಂಬಿತವಾಯಿತು. ರಾಜಕೀಯ ಅಧಿಕಾರವೇ ಈ ಎಲ್ಲದರ ಗುರಿ ಆಗಿತ್ತಾದ್ದರಿಂದ ಅದು ಲಭ್ಯವಾದ ಮೇಲೆ ಆ ರಾಜಕೀಯ ಪP್ಷÀದ ಗಮನ ಬೇರೆಡೆಗೆ ತಿರುಗಿತು. ನಿಧಾನಕ್ಕೆ ಗುಡಿ-ದೇಗುಲಗಳು ಹಿಂದಿನ ಸ್ವರೂಪಕ್ಕೆ ಮರಳಿದುವು. ಕೃತಕ ಭಕ್ತಿ-ವೈಭವಗಳು ಕಾಣೆಯಾದುವು.
ಒಂದು ವೇಳೆ, ಬಾಬಾಬುಡನ್ ಗಿರಿಯ ವಿವಾದವು ಬಿಜೆಪಿ ಬಯಸಿದಂತೆಯೇ ಇತ್ಯರ್ಥವಾದರೆ ಆ ಬಳಿಕದಿಂದ ಈ ಬೆಟ್ಟ ದತ್ತಮಾಲಾಧಾರಿಗಳಿಲ್ಲದೇ ಭಣಗುಡುವ ಸಾಧ್ಯತೆ ಇದೆ. ಯಾಕೆಂದರೆ, ಈಗ ವಿವಾದ ಹುಟ್ಟುಹಾಕಿದವರ ಗುರಿ ಭಕ್ತಿಯಲ್ಲ.

Saturday 9 December 2017

ಅಪ್ಪುಗೆ ಭಾವದ ನುಡಿಗಳ ಅಗತ್ಯ ಮತ್ತು ಧರ್ಮ ಸಂಸದ್

      ಮೈಸೂರಿನಲ್ಲಿ ನಡೆದ 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಉಡುಪಿಯಲ್ಲಿ ನಡೆದ 15ನೇ ಧರ್ಮಸಂಸದ್‍ಗಳು
ಬಹುತೇಕ ಜೊತೆಜೊತೆಯಾಗಿಯೇ ಆರಂಭಗೊಂಡು ಜೊತೆಜೊತೆಯಾಗಿಯೇ ಮುಕ್ತಾಯವನ್ನೂ ಕಂಡಿವೆ. ಈ ಆರಂಭ ಮತ್ತು ಅಂತ್ಯವನ್ನು ಬಿಟ್ಟರೆ ಉಳಿದಂತೆ ಇವೆರಡರ ನಡುವೆ ಹೋಲಿಕೆ, ಶೂನ್ಯ ಅನ್ನುವಷ್ಟು ಕಡಿಮೆ. ಕಾರ್ಯಕ್ರಮದ ಪ್ರಾಯೋಜಕರಿಂದ ಹಿಡಿದು, ನಿರ್ಣಯಗಳ ವರೆಗೆ; ಅತಿಥಿಗಳಿಂದ ಹಿಡಿದು ಭಾಷಣಗಳ ವರೆಗೆ ಎಲ್ಲದರಲ್ಲೂ ತದ್ವಿರುದ್ಧ ಅನ್ನಬಹುದಾದವುಗಳೇ ಹೆಚ್ಚಿವೆ. ಇದಕ್ಕಿರುವ ಪ್ರಮುಖ ಕಾರಣ ಏನೆಂದರೆ, ಒಂದನ್ನು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದರೆ ಇನ್ನೊಂದನ್ನು ಸರ್ವ ಕನ್ನಡಿಗರ ಪರವಾಗಿ ಕನ್ನಡ ಸಾಹಿತ್ಯ ಪರಿಷತ್ ಆಯೋಜಿಸಿದೆ ಎಂಬುದು. ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಪರ ಮಾತುಗಳಿಗೆ ಸಮ್ಮೇಳನದಲ್ಲೇ  ಪ್ರತಿರೋಧ ಎದುರಾಯಿತು. ಪ್ರತಿಭಟನೆಯೂ ನಡೆಯಿತು. ಭಗ್‍ವಾನ್‍ರ ಮಾತುಗಳನ್ನು ಸಭಿಕರು ಪ್ರಶ್ನಿಸಿದರು. ಈ ಪ್ರಕ್ರಿಯೆ ಸಮ್ಮೇಳನದ ಆರಂಭದಿಂದ ಕೊನೆಯ ವರೆಗೂ ಮುಂದುವರಿಯಿತು. ವಿವಿಧ ವಿಚಾರಧಾರೆಗಳು, ವೈವಿಧ್ಯ ದೃಷ್ಟಿಕೋನಗಳು, ಮಂಡನೆ-ಖಂಡನೆ, ಅನಿಸಿದ್ದನ್ನು ಹೇಳುವ ಮತ್ತು ಸಮರ್ಥಿಸಿಕೊಳ್ಳುವ ಸ್ವಾತಂತ್ರ್ಯ.. ಇತ್ಯಾದಿಗಳು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ದಕ್ಕೂ ಕಾಣಿಸಿಕೊಂಡವು. ಒಂದು ರೀತಿಯಲ್ಲಿ, 6 ಕೋಟಿ ಕನ್ನಡಿಗರನ್ನು ಅವರ ಎಲ್ಲ ವೈವಿಧ್ಯತೆಗಳ ಜೊತೆಗೇ ಒಪ್ಪಿ-ಅಪ್ಪಿ ಪ್ರತಿನಿಧಿಸಿದ ಸಮ್ಮೇಳನ ಅದು. ಧರ್ಮ ಸಂಸದ್ ಇದಕ್ಕೆ ವಿರುದ್ಧವಾಗಿ ನಡೆಯಿತು. ಅಲ್ಲಿ ಪ್ರತಿ ಮಾತುಗಳ ನಡುವೆಯೂ ಮಿತಿಗಳಿದ್ದುವು. ಮೀಸಲಾತಿಯ ವಿರುದ್ಧ ಕಾಶಿ ಬನಾರಸ್‍ನ ಜಗದ್ಗುರು ಶಂಕರಾಚಾರ್ಯ ಸ್ವಾಮಿ ನರೇಂದ್ರನ್ ಸರಸ್ವತಿಯವರು ಮಾತಿಗಿಳಿದಾಗ ಸಂಘಟಕರು ಅವರನ್ನು ತಡೆದು ಮಾತಿನ ಪಥ ಬದಲಿಸಿದರು. ಪೇಜಾವರ ಮಠದ ವಿಶ್ವೇಶ್ವರ ತೀರ್ಥರು ಒಮ್ಮೆ ಸಂವಿಧಾನವನ್ನೇ ಬದಲಿಸಬೇಕು ಎಂಬರ್ಥದಲ್ಲಿ ಕರೆ ಕೊಟ್ಟಾಗಲೂ ಮತ್ತು ಆ ಬಳಿಕ ಸಂವಿಧಾನ ತಿದ್ದುಪಡಿಯ ಉದ್ದೇಶವನ್ನಷ್ಟೇ ತನ್ನ ಮಾತುಗಳು ಹೊಂದಿದ್ದುವು ಎಂಬ ಸ್ಪಷ್ಟೀಕರಣ ಕೊಟ್ಟಾಗಲೂ ಧರ್ಮ ಸಂಸದ್‍ನಲ್ಲಿ ಯಾವ ಪ್ರತಿಕ್ರಿಯೆಯೂ ಗೋಚರಿಸಲಿಲ್ಲ. ಇನ್ನು, ಎರಡೂ ಕಡೆ ಮಂಡಿಸಲಾದ ನಿರ್ಣಯಗಳಲ್ಲೂ ಈ ವ್ಯತ್ಯಾಸಗಳು ಎದ್ದು ಕಾಣುವಂತಿತ್ತು. ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಾದ ನಿರ್ಣಯಗಳು ಸಂಪೂರ್ಣವಾಗಿ ಕನ್ನಡ ನಾಡು, ನುಡಿಯ ಸಬಲೀಕರಣ ಮತ್ತು ರP್ಷÀಣೆಯನ್ನೇ ಕೇಂದ್ರೀಕರಿಸಿದ್ದರೆ ಧರ್ಮ ಸಂಸದ್‍ನ ನಿರ್ಣಯಗಳು ಇಷ್ಟು ಸ್ಪಷ್ಟವಾಗಿ ಧರ್ಮದೊಳಗಿನ ಸವಾಲುಗಳನ್ನು ಪ್ರತಿನಿಧಿಸುವಲ್ಲಿ ವಿಫಲವಾದುವು. ಮುಖ್ಯವಾಗಿ, ಅಸ್ಪೃಶ್ಯ ಆಚರಣೆಯನ್ನು ನಿವಾರಿಸುವುದಕ್ಕಾಗಿ ದಲಿತ ಮತ್ತು ಬ್ರಾಹ್ಮಣರ ನಡುವೆ ವಿವಾಹ ಸಂಬಂಧವನ್ನು ಏರ್ಪಡಿಸಬೇಕು ಎಂಬ ಸಾರ್ವಜನಿಕ ಆಗ್ರಹಕ್ಕೆ ನಿರ್ಣಯದಲ್ಲಿ ಯಾವ ಸ್ಥಾನವೂ ಸಿಕ್ಕಿಲ್ಲ. ಜಾತಿರಹಿತ ಹಿಂದೂ ಸಮಾಜ ಅಥವಾ ಜಾತಿ ಸಹಿತ ಹಿಂದೂ ಸಮಾಜ ಎಂಬ ಅಭಿಪ್ರಾಯಗಳ ಬಗ್ಗೆ ನಿರ್ಣಯದಲ್ಲಿ ಯಾವ ತೀರ್ಮಾನವನ್ನೂ ಕೈಗೊಳ್ಳಲಾಗಿಲ್ಲ. ಪಂಕ್ತಿ ಭೋಜನದ ಬಗ್ಗೆ ಧರ್ಮ ಸಂಸದ್‍ನಲ್ಲಿ ಅಸಂತೃಪ್ತಿ ವ್ಯಕ್ತವಾದರೂ ನಿರ್ಣಯದಲ್ಲಿ ಅದಕ್ಕೆ ಪಾಲು ಸಿಗಲಿಲ್ಲ. ಅದೇ ವೇಳೆ, ಹಿಂದೂ ಸಮುದಾಯದಲ್ಲಿ ಆಚರಣೆಯಲ್ಲಿರುವ ವಿವಿಧ ರೀತಿಯ ಮೌಢ್ಯಗಳ ಬಗ್ಗೆಯಾಗಲಿ ಅಥವಾ ರಾಜ್ಯ ಸರಕಾರ ತರಲುದ್ದೇಶಿಸಿರುವ ಮೌಢ್ಯ ವಿರೋಧಿ ಕಾಯ್ದೆಯ ಬಗ್ಗೆಯಾಗಲಿ ನಿರ್ಣಯದಲ್ಲಿ ಯಾವ ಬೆಳಕನ್ನೂ ಚೆಲ್ಲಲಾಗಿಲ್ಲ. ಮೌಢ್ಯ ಮತ್ತು ಅಮೌಢ್ಯ ಇವುಗಳ ನಡುವೆ ಸಾಕಷ್ಟು ಸಿಕ್ಕುಗಳಿವೆ. ಹಾಗಂತ, ಹಿಂದೂ ಸಮುದಾಯ ಮಾತ್ರ ಈ ಮೌಢ್ಯತೆಯಿಂದ ಸಂತ್ರಸ್ತವಾಗಿರುವುದಲ್ಲ. ಆದರೆ, 80%ದಷ್ಟಿರುವ ಬೃಹತ್ ಜನಸಂಪತ್ತನ್ನು ಇಡಿಯಾಗಿ ‘ಹಿಂದೂ ಸಮುದಾಯ' ಎಂದು ಕರೆಯುವ ವಿಶ್ವ ಹಿಂದೂ ಪರಿಷತ್‍ನ ಮಟ್ಟಿಗೆ ಮೌಢ್ಯತೆ ಬಹುಮುಖ್ಯ ಇಶ್ಯೂ ಆಗಬೇಕಿತ್ತು. ಅಷ್ಟರ ಮಟ್ಟಿಗೆ ಸಾಮಾಜಿಕವಾಗಿ ಮೂಢನಂಬಿಕೆಗಳು ಮತ್ತು ಅದರ ಫಲಿತಾಂಶವಾದ ಶೋಷಣೆಗಳು ಸಮಾಜದಲ್ಲಿ ಅಸ್ತಿತ್ವದಲ್ಲಿವೆ. ಸಾಮಾನ್ಯ ಜನರಿಗೆ ಯಾವುದು ಮೌಢ್ಯ, ಯಾವುದು ಅಮೌಢ್ಯ ಎಂಬುದನ್ನು ಸುಲಭದಲ್ಲಿ ಬೇರ್ಪಡಿಸಿ ನೋಡುವ ಸಾಮಥ್ರ್ಯವೂ ಇರುವುದಿಲ್ಲ. ಪ್ರತಿ ಮೌಢ್ಯವೂ ಧರ್ಮದ ವೇಷವನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ತೊಟ್ಟಿರುವುದರಿಂದ ಜನರ ಶೋಷಣೆಯೂ ಸುಲಭ. ಈ ದೇಶದ ಬೃಹತ್ ಹಿಂದೂ ಜನಸಮುದಾಯವನ್ನು ಪರಿಗಣಿಸಿ ಹೇಳುವುದಾದರೆ, ಗೋವು, ಲವ್ ಜಿಹಾದ್, ಶಾದಿಭಾಗ್ಯಗಳಂತವು ಧರ್ಮ ಸಂಸದ್‍ನ ಬಹು ಉಲ್ಲೇಖಿತ ಮತ್ತು ಬಹು ಚರ್ಚಿತ ವಿಷಯಗಳಾಗುವ ಬದಲು ದಲಿತ ಮತ್ತು ಬ್ರಾಹ್ಮಣರ ನಡುವೆ ವಿವಾಹ ಸಂಬಂಧ, ಸಹಪಂಕ್ತಿ ಭೋಜನ, ಮೌಢ್ಯ ನಿವಾರಣೆ, ಸರ್ವ ಭಾರತೀಯರ ಮಾನ-ಪ್ರಾಣ-ಸೊತ್ತುಗಳ ರಕ್ಷಣೆ, ಧರ್ಮದ ನೆಪದಲ್ಲಾಗುವ ಅನ್ಯಾಯ-ದೌರ್ಜನ್ಯಗಳ ಖಂಡನೆ.. ಇತ್ಯಾದಿಗಳು ಧರ್ಮ ಸಂಸದ್‍ನಲ್ಲಿ ಒತ್ತುಕೊಟ್ಟು ಚರ್ಚೆಗೊಳಗಾಗಬೇಕಿತ್ತು ಮತ್ತು ಸಮ್ಮೇಳನದ ನಿರ್ಣಯದಲ್ಲೂ ಅವಕ್ಕೆ ಸ್ಥಾನ ಸಿಗಬೇಕಿತ್ತು. ಗೋಮಾಂಸವನ್ನು ವಿದೇಶಕ್ಕೆ ರಫ್ತು ಮಾಡುವ ಪ್ರಕ್ರಿಯೆಗೆ ತಡೆಬಿದ್ದರೆ ಗೋಹತ್ಯೆ ನಿಷೇಧದ ಬೇಡಿಕೆಯಲ್ಲಿ ಬಹುದೊಡ್ಡ ಮೈಲುಗಲ್ಲನ್ನು ಸಾಧಿಸಿದಂತೆ. ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರವಿದ್ದೂ ಕಳೆದ ಮೂರೂವರೆ ವರ್ಷಗಳಲ್ಲಿ ಇದು ನೆರವೇರದೇ ಇರುವುದಕ್ಕೆ ಸಮ್ಮೇಳನದಲ್ಲಿ ಸೌಮ್ಯ ಅತೃಪ್ತಿಯೊಂದು ಕಾಣಿಸಿಕೊಂಡದ್ದನ್ನು ಬಿಟ್ಟರೆ ನಿರ್ಣಯದಲ್ಲಿ ಈ ಅಂಶ ಪ್ರಸ್ತಾಪವೇ ಆಗಿಲ್ಲ. ಇವೆಲ್ಲದರ ಜೊತೆಗೇ ಈ ದೇಶದಲ್ಲಿ ಒಂದಷ್ಟು ಮುಸ್ಲಿಮರು ಮತ್ತು ಮತ್ತೊಂದಿಷ್ಟು ಕ್ರೈಸ್ತರೂ ಇದ್ದಾರೆ. 80%ದಷ್ಟಿರುವ ಬೃಹತ್ ಸಮುದಾಯವು ಈ ಸಣ್ಣ ಗುಂಪಿಗೆ ಕೊಡುವ ಭರವಸೆಗಳೇನು, ಅವರ ಕಲ್ಯಾಣ-ರಕ್ಷಣೆಗಾಗಿ ಹಾಕಿಕೊಂಡಿರುವ ಯೋಜನೆಗಳೇನು, ಅವರ ಬಗೆಗಿನ ದೃಷ್ಟಿಕೋನಗಳೇನು ಎಂಬುದರ ಬಗ್ಗೆ ನಿರ್ಣಯದಲ್ಲಿ ಏನೇನೂ ಹೇಳಲಾಗಿಲ್ಲ. ಯಾವುದೇ ಸಮಾಜದ ಸಣ್ಣ ಗುಂಪು ಬೃಹತ್ ಗುಂಪಿನಿಂದ ರಕ್ಷಣೆಯ ಭರವಸೆಯನ್ನು ನಿರೀಕ್ಷಿಸುತ್ತದೆ. ಸೌಹಾರ್ದವನ್ನು ಬಯಸುತ್ತದೆ. ಆದರೆ, ಧರ್ಮ ಸಂಸದ್‍ನಲ್ಲಿ ವ್ಯಕ್ತವಾದ ಅಭಿಪ್ರಾಯಗಳು ಈ ಎರಡು ಪುಟ್ಟ ಗುಂಪನ್ನು ಆರೋಪಿ ಸ್ಥಾನದಲ್ಲಿ ಇರಿಸುವ ರೀತಿಯಲ್ಲಿ ಇತ್ತೇ ಹೊರತು ಅವರಲ್ಲಿ ಭರವಸೆ ತುಂಬುವ ಯಾವುದೂ ಇರಲಿಲ್ಲ.
ನಿಜವಾಗಿ, ಯಾವುದೇ ಧರ್ಮವೊಂದರ ನೇತೃತ್ವ ಸ್ಥಾನದಲ್ಲಿರುವವರು ತಮ್ಮ ಧರ್ಮದೊಳಗಿನ ಬೆಳವಣಿಗೆಗಳ ಬಗ್ಗೆ, ಸರಿ-ತಪ್ಪುಗಳ ಬಗ್ಗೆ ಮತ್ತು ಭವಿಷ್ಯದ ಯೋಜನೆಗಳನ್ನು ಸಿದ್ಧಪಡಿಸುವ ಬಗ್ಗೆ ಚಿಂತನ-ಮಂಥನ ನಡೆಸುವುದು ಯಾವ ಕಾರಣಕ್ಕೂ ಆಕ್ಷೇಪಾರ್ಹವೋ ಖಂಡನಾರ್ಹವೋ ಅಲ್ಲ. ಅನುಯಾಯಿಗಳು ಧರ್ಮಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಾಗ ‘ಧರ್ಮ’ವನ್ನು ಬೋಧಿಸುವುದು ಆಯಾ ಧರ್ಮದ ವಿದ್ವಾಂಸರ ಹೊಣೆಗಾರಿಕೆ. ಇವತ್ತು ಪ್ರತಿದಿನ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಆಧುನಿಕ ಪೀಳಿಗೆಯಂತೂ ಈ ಆವಿಷ್ಕಾರಗಳ ನಡುವೆ ಕೂತು ಧರ್ಮ-ಆಚಾರ-ಲೌಕಿಕ-ಅಲೌಕಿಕತೆಗಳನ್ನು ಮುಖಾಮುಖಿಗೊಳಿಸಿ ಪ್ರಶ್ನಿಸುತ್ತಿವೆ. ಧರ್ಮದ ಅಗತ್ಯ-ಅನಗತ್ಯಗಳ ಬಗ್ಗೆ ಅವು ಆಧುನಿಕ ಮಾಧ್ಯಮಗಳ ಮೂಲಕ ಹೊಸ ಸಾಧ್ಯತೆಗಳನ್ನು ಹುಡುಕುತ್ತಿವೆ. ಧರ್ಮವೇ ಎಲ್ಲ ಹಿಂಸೆ-ಮೌಢ್ಯ-ಶೋಷಣೆಗಳಿಗೆ ಕಾರಣ ಎಂದು ತೀರ್ಪು ಕೊಡುವ ಸ್ಥಿತಿಯಲ್ಲಿ ಅವು ಬಂದು ಕೂತಿವೆ. ಹೀಗಿರುವಾಗ, ಹಿಂದೂ ಧರ್ಮದ ಸ್ವಾಮೀಜಿಗಳು ಒಂದೆಡೆ ಕೂತು ಅವಲೋಕನ ನಡೆಸುವುದು ಅತ್ಯಂತ ಒಳ್ಳೆಯ ಬೆಳವಣಿಗೆ. ಅದೇವೇಳೆ, ಹಿಂದೂ ಧರ್ಮದ ಹೊರಗಡೆ ಪುಟ್ಟ ಗೂಡು ಕಟ್ಟಿಕೊಂಡಿರುವ ಮುಸ್ಲಿಮ್-ಕ್ರೈಸ್ತ ಧರ್ಮದ ಅನುಯಾಯಿಗಳಿಗಂತೂ ಈ ಬೆಳವಣಿಗೆಯ ಬಗ್ಗೆ ವಿಶೇಷ ಆಸಕ್ತಿ ಇರುವುದು ಸಹಜವೇ ಆಗಿತ್ತು. ಆದರೆ ಈ ಆಸಕ್ತಿಗೆ ಬಲ ತುಂಬಬಹುದಾದ ಯಾವುದೂ ಧರ್ಮ ಸಂಸದ್‍ನಿಂದ ಕೇಳಿಬರಲಿಲ್ಲ ಎಂಬುದು ಅತ್ಯಂತ ವಿಷಾದನೀಯ. ಅದರ ಬದಲು ಅವರನ್ನೇ ಆರೋಪಿ ಸ್ಥಾನದಲ್ಲಿ ಕೂರಿಸಿ ಬೆದರಿಸುವ ಧಾಟಿಯ ಮಾತುಗಳೇ ಧರ್ಮ ಸಂಸದ್‍ನಿಂದ ಕೇಳಿಬಂದುವು. ನಿಜವಾಗಿ, ಭಯದ ನೆರಳಲ್ಲಿ ಕಟ್ಟಿ ಹಾಕುವುದಕ್ಕಿಂತ ವಿಶ್ವಾಸಪೂರ್ಣ ಮತ್ತು ಅಪ್ಪುಗೆ ಭಾವದ ನುಡಿಗಳು ಇಂದಿನ ಅಗತ್ಯವಾಗಿತ್ತು. ಈ ಅಗತ್ಯವನ್ನು ಪೂರೈಸುವುದಕ್ಕೆ ಧರ್ಮ ಸಂಸದ್‍ನಿಂದ ಖಂಡಿತ ಸಾಧ್ಯವಿತ್ತು. ಹಾಗಾಗದಿರುವುದರಲ್ಲಿ ನೋವಿದೆ.



Thursday 23 November 2017

ಹೆಣ್ಣು ಹೆಚ್ಚೋ ಗಂಡು ಹೆಚ್ಚೋ?

      ಹೆಣ್ಣು ಎಷ್ಟು ಅಮೂಲ್ಯ ಅನ್ನುವುದನ್ನು ಸಾಬೀತುಪಡಿಸುವ ಘಟನೆಗಳು ಆಗಾಗ ನಮ್ಮೆದುರು ನಡೆಯುತ್ತಲೇ ಇರುತ್ತವೆ. ಕಳೆದವಾರ ಪೂಜಾ ಬಿಜರ್ನಿಯ ಎಂಬ ದೆಹಲಿಯ ಹೆಣ್ಣು ಮಗಳು ಸುದ್ದಿಗೀಡಾದಳು. ಇಳಿ ವಯಸ್ಸಿನ ತಂದೆಗೆ ಆಕೆ ತನ್ನ ಯಕೃತ್ತನ್ನೇ (ಲಿವರ್) ದಾನ ಮಾಡಿದಳು. ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಅವರಿಬ್ಬರ ಫೋಟೋವನ್ನು ವೈದ್ಯರಾದ ರಜಿತ್ ಭೂಷಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಹೊಟ್ಟೆಯ ಭಾಗದಲ್ಲಿ ಮೂಡಿರುವ ಆಳವಾದ ಗಾಯದ ಗುರುತಿನ ನಡುವೆಯೂ ನಗುವ ಆ ಹೆಣ್ಣು ಮಗಳ ಫೋಟೋ, ಫ್ರೇಮ್ ಹಾಕಿ ಕಾಪಿಡಬೇಕಾದಷ್ಟು ಅಮೂಲ್ಯವಾದುದು.
     ಅಂದಹಾಗೆ, ಹೆಣ್ಣಿಗೆ ನಮ್ಮ ದೇಶದಲ್ಲಿ ಯಾವ ಸ್ಥಾನ-ಮಾನವಿದೆ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಅಂಕಿ-ಅಂಶಗಳ ಮೊರೆ ಹೋಗಬೇಕಾಗಿಲ್ಲ. ಈ ದೇಶದಲ್ಲಿ ಜಾರಿಯಲ್ಲಿರುವ ‘ಲಿಂಗ ಪತ್ತೆ ಪರೀಕ್ಷೆ ತಡೆ ಕಾನೂನೇ’ ಇದನ್ನು ಚೆನ್ನಾಗಿ ವಿವರಿಸುತ್ತದೆ. ಈ ಆಧುನಿಕ ಕಾಲದಲ್ಲೂ ಈ ದೇಶದ ಓರ್ವ ತಾಯಿಗೆ ತನ್ನ ಹೊಟ್ಟೆಯಲ್ಲಿರುವುದು ಹೆಣ್ಣೋ-ಗಂಡೋ ಎಂಬುದು ಗೊತ್ತಾಗುವುದೇ ಪ್ರಸವದ ಬಳಿಕ. ಅಷ್ಟಕ್ಕೂ, ಗರ್ಭ ಧರಿಸುವುದು ಹೆಣ್ಣು. 9 ತಿಂಗಳು ಹೊಟ್ಟೆಯಲ್ಲಿಟ್ಟುಕೊಳ್ಳುವುದೂ ಹೆಣ್ಣು. ಈ ಅವಧಿಯಲ್ಲಿ ಎದುರಾಗುವ ಸರ್ವ ಗರ್ಭ ಸಂಬಂಧಿ ಸಮಸ್ಯೆಗಳನ್ನು ತಾಳಿಕೊಳ್ಳುವುದೂ ಹೆಣ್ಣೇ. ಆದರೂ ಆಕೆಗೆ ತನ್ನ ಹೊಟ್ಟೆಯಲ್ಲಿರುವ ಶಿಶು ಗಂಡೋ-ಹೆಣ್ಣೋ ಎಂಬುದನ್ನು ತಿಳಿದುಕೊಳ್ಳುವ ಸ್ವಾತಂತ್ರ್ಯ ಇಲ್ಲ. ನಿಜವಾಗಿ, ಪ್ರಸವ ಪೂರ್ವದಲ್ಲೇ ಶಿಶುವಿನ ಲಿಂಗ ಬಹಿರಂಗವಾಗುವುದರಿಂದ ಅನೇಕಾರು ಪ್ರಯೋಜನಗಳಿವೆ. ಹೆಣ್ಣು ಮಗುವನ್ನು ಬಯಸುವ ತಂದೆ ಆ ಕುರಿತಂತೆ ತನ್ನೊಳಗೆ ಕನಸುಗಳನ್ನು ಹೆಣೆಯಬಲ್ಲ. ಹೆಣ್ಣು ಮಕ್ಕಳ ಮನಸ್ಥಿತಿ ಹೇಗಿರುತ್ತದೆ, ಅದರೊಂದಿಗೆ ಅಪ್ಪನಾಗಿ ತನ್ನ ವರ್ತನೆ ಹೇಗಿರಬೇಕು, ಯಾವ ರೀತಿ ಬೆಳೆಸಬೇಕು, ಯಾವ ಹೆಸರು ಉತ್ತಮ, ತಾನೆಷ್ಟು ಸಮಯ ಮೀಸಲಿಡಬೇಕು…ಇತ್ಯಾದಿಗಳನ್ನು ನಿರ್ಣಯಿಸುವುದಕ್ಕೆ ಪ್ರಸವ ಪೂರ್ವದಲ್ಲೇ ಆತನಿಗೆ ಅದು ಅವಕಾಶ ನೀಡುತ್ತದೆ. ನಿರ್ದಿಷ್ಟ ಮಗುವನ್ನು ಸ್ವಾಗತಿಸುವುದಕ್ಕೆ ಬೇಕಾದ ತಯಾರಿ ನಡೆಸಲು ಸಮಯಾವಕಾಶವೂ ಸಿಕ್ಕಂತಾಗುತ್ತದೆ. ಸಾಮಾನ್ಯವಾಗಿ, ತಾಯಿಯ ಹೊಟ್ಟೆಯೊಳಗಿರುವ ಮಗು ಹೊರ ಜಗತ್ತಿನ ಚಲನೆಗಳನ್ನು ಆಲಿಸುತ್ತದೆ ಎಂದುವಿ ಜ್ಞಾನ ಹೇಳುತ್ತದೆ. ತಾಯಿಯ ಭಾವನೆಗಳು ಮಗುವಿನ ಮೇಲೆ ಪರಿಣಾಮವನ್ನು ಬೀರುತ್ತದೆ. ಸಂಗೀತ ಆಲಿಸುವ ತಾಯಿಯಿಂದ ಮಗು ಸಂಗೀತದ ಭಾವಗಳನ್ನು ಹೀರಬಹುದು. ತಾಯಿಯ ಖುಷಿ ಮಗುವಿಗೂ ರವಾನೆಯಾಗಬಹುದು. ತಾಯಿಯ ನೋವು ಮಗುವಿಗೂ ಅರಿವಾಗಬಹುದು. ಒಂದು ವೇಳೆ, ಹುಟ್ಟಲಿರುವ ಮಗು ಹೆಣ್ಣೋ-ಗಂಡೋ ಎಂಬುದು ಹೆತ್ತವರಿಗೆ ಪ್ರಸವ ಪೂರ್ವದಲ್ಲೇ ಗೊತ್ತಾದರೆ ಅವರು ಮಗುವನ್ನು ನಿರ್ದಿಷ್ಟ ಹೆಸರಲ್ಲೇ ಸಂಬೋಧಿಸಬಹುದು. ಅದೇ ಭಾವದಲ್ಲಿ ಪರಸ್ಪರ ಮಾತುಕತೆ ನಡೆಸಬಹುದು. ಇವೆಲ್ಲವೂ ಹೊಟ್ಟೆಯೊಳಗಿನ ಮಗುವನ್ನು ಒಂದು ಹಂತದ ವರೆಗೆ ತಟ್ಟಿಯೇ ತಟ್ಟುತ್ತದೆ. ಅಷ್ಟಕ್ಕೂ, ಹೊಟ್ಟೆಯೊಳಗೆ ಹೆಣ್ಣು ಮಗುವಿದ್ದೂ ಅದರ ಅರಿವಿರ ತಾಯಿ-ತಂದೆಯರಿಬ್ಬರೂ ಗಂಡು ಮಗುವಿನ ಕನಸನ್ನು ಹಂಚಿಕೊಳ್ಳುತ್ತಾ ಆ ಬಗ್ಗೆ ಮಾತುಕತೆ-ಭಾವನೆಗಳನ್ನು ವಿನಿಮಯಗೊಳಿಸುತ್ತಾ ಬದುಕುವುದು ಶಿಶುವಿನ ಮೇಲೆ ಯಾವ ಪರಿಣಾಮವನ್ನು ಬೀರಬಹುದು? ಆರೋಗ್ಯಪೂರ್ಣ ಮಗುವಿನ ದೃಷ್ಟಿಯಿಂದ ಹೆತ್ತವರ ಪ್ರಸವಪೂರ್ವ ಚಟುವಟಿಕೆಗಳೂ ಬಹುಮುಖ್ಯ ಎಂಬುದನ್ನು ನಾವು ಒಪ್ಪುವುದಾದರೆ, ಪ್ರಸವಪೂರ್ವದಲ್ಲೇ  ಶಿಶುವಿನ ‘ಲಿಂಗ’ವನ್ನು ಬಹಿರಂಗಪಡಿಸುವುದು ಅಗತ್ಯ ಎಂದು ಹೇಳಬೇಕಾಗುತ್ತದೆ. ಗಲ್ಫ್ ರಾಷ್ಟ್ರಗಳಲ್ಲಿ ಇದು ಜಾರಿಯಲ್ಲೂ ಇದೆ. ಆದರೆ ನಮ್ಮಲ್ಲಿ ಇದು ಕಾನೂನುಬಾಹಿರ. ಕಾರಣ ಏನೆಂದರೆ, ಹೆಣ್ಣು ಮಗುವಿನ ಬಗೆಗೆ ಈ ದೇಶದಲ್ಲಿರುವ ತಾತ್ಸಾರ. ಈ ತಾತ್ಸಾರ ಭಾವವು ಅಂತಿಮವಾಗಿ ಗರ್ಭಪಾತ ಮಾಡಿಸಿಕೊಳ್ಳುವುದಕ್ಕೋ, ಗರ್ಭದಲ್ಲೇ ಮಗುವಿಗೆ ಪೋಷಕಾಹಾರ ಸಿಗದೇ ನಿತ್ರಾಣವಾಗುವಂತೆ ನೋಡಿಕೊಳ್ಳುವುದಕ್ಕೋ ಅಥವಾ ಪಾರಂಪರಿಕ ಮದ್ದನ್ನು ಬಳಸಿ ಗರ್ಭದಲ್ಲೇ ಶಿಶು ಸಾಯುವಂತೆ ಮಾಡುವುದಕ್ಕೋ ಕಾರಣವಾಗಬಹುದು ಎಂಬ ಭಯ ನಮ್ಮನ್ನಾಳುವವರಲ್ಲಿದೆ. ಹಾಗಂತ, ಈ ಭಯವನ್ನು ವಿನಾ ಕಾರಣ ಎಂದು ಹೇಳುವಂತೆಯೂ ಇಲ್ಲ. ಹೀಗೆ ಭಯಪಟ್ಟುಕೊಳ್ಳುವುದಕ್ಕೆ ಆಧಾರವಾಗಿ ಅಸಂಖ್ಯ ಘಟನೆಗಳು ಈ ದೇಶದಲ್ಲಿ ನಡೆದಿವೆ ಮತ್ತು ನಡೆಯುತ್ತಲೂ ಇವೆ. ಹೆಣ್ಣು ಮತ್ತು ಗಂಡಿನ ನಡುವೆ ಅಂತರವನ್ನು ತೋರುವ ಹೆತ್ತವರು ನಮ್ಮಲ್ಲಿ ಧಾರಾಳ ಇದ್ದಾರೆ . ಗಂಡಿಗೆ ವಂಶೋದ್ಧಾರಕ ಎಂಬ ಗೌರವ ಸಲ್ಲುವಾಗ ಹೆಣ್ಣಿಗೆ ಕುಲದಿಂದ ಹೊರಗಿನವಳು ಎಂಬ ಅಗೌರವ ಸಲ್ಲುತ್ತದೆ.
      ನಿಜವಾಗಿ, ಹೆಣ್ಣು ಮತ್ತು ಗಂಡನ್ನು ಅಳೆಯಬೇಕಾದುದು ಅವರು ಗಳಿಸಬಹುದಾದ ವರಮಾನದ ಆಧಾರದಲ್ಲೋ ದೈಹಿಕ ಸಾಮರ್ಥ್ಯದ ಆಧಾರದಲ್ಲೋ ಅಲ್ಲ. ಗಂಡು-ಹೆಣ್ಣು ಎರಡೂ ಪ್ರಕೃತಿಯ ವಿಶಿಷ್ಟ ಕೊಡುಗೆಗಳು. ಹೆಣ್ಣಿಗಿಂತ ಭಿನ್ನ ಸಾಮಥ್ರ್ಯವನ್ನು ಹೇಗೆ ಗಂಡಿನಲ್ಲಿ ಹುದುಗಿಸಿಡಲಾಗಿದೆಯೋ ಹಾಗೆಯೇ ಗಂಡಿಗಿಂತ ಭಿನ್ನ ಸಾಮಥ್ರ್ಯವನ್ನು ಹೆಣ್ಣಿನಲ್ಲೂ ತುಂಬಿಡಲಾಗಿದೆ. ಇಬ್ಬರಲ್ಲೂ ವಿಭಿನ್ನ ಪ್ರತಿಭೆಗಳಿವೆ. ಪೂಜಾ ಇದನ್ನು ಸಾರುವ ಒಂದು ಪುಟ್ಟ ಉದಾಹರಣೆ ಮಾತ್ರ. ಒಂದು ವೇಳೆ, ಹೆಣ್ಣು ಗಂಡಿಗಿಂತ ಕೀಳು ಆಗಿರುತ್ತಿದ್ದರೆ ಪೂಜಾಳ ಯಕೃತ್ ಆಕೆಯ ತಂದೆಯ ದೇಹಕ್ಕೆ ಹೊಂದಿಕೊಳ್ಳುವುದಕ್ಕೆ ಸಾಧ್ಯವೇ ಇರಲಿಲ್ಲ. ಅವರ ದೇಹ ಆಕೆಯ ಯಕೃತನ್ನು ತಿರಸ್ಕರಿಸಬೇಕಿತ್ತು. ಗಂಡಿನ ಯಕೃತನ್ನು ಮಾತ್ರ ಸ್ವೀಕರಿಸಬೇಕಿತ್ತು. ಆದರೆ ಪ್ರಕೃತಿ ಎಂದೂ ಮನುಷ್ಯರ ನಡುವೆ ಇಂಥ ವಿಭಜನೆಯನ್ನು ಮಾಡಿಯೇ ಇಲ್ಲ. ಅದು ಗಂಡು ಮತ್ತು ಹೆಣ್ಣನ್ನು ಎರಡು ಅಚ್ಚರಿಗಳಾಗಿ ಜಗತ್ತಿನ ಮುಂದಿಟ್ಟಿದೆಯೇ ಹೊರತು ಒಂದನ್ನು ಇನ್ನೊಂದರ ಎದುರು ಅವಮಾನಿಸಿಲ್ಲ. ದುರ್ಬಲಗೊಳಿಸಿಲ್ಲ. ತನ್ನ ಯಕೃತನ್ನು ತಂದೆಗೆ ದಾನ ಮಾಡುವ ಮೂಲಕ ಪ್ರಕೃತಿಯ ಈ ಸಂದೇಶವನ್ನು ಪೂಜಾ ಜನರಿಗೆ ತಲುಪಿಸಿದ್ದಾ ಳೆ. ಮಾತ್ರವಲ್ಲ, ‘ಗಂಡು ಬಯಕೆ’ಯ ಹೆತ್ತವರಿಗೆ ಹೆಣ್ಣು ಏನು ಎಂಬುದನ್ನು ಸ್ಪಷ್ಟಪಡಿಸಿದ್ದಾಳೆ. ಪವಿತ್ರ ಕುರ್‍ಆನ್ ಅಂತೂ ಹೆಣ್ಣನ್ನು ಗಂಡಿಗಿಂತ ಮೇಲ್ದರ್ಜೆಯಲ್ಲಿರಿಸಿ ಗೌರವಿಸಿದೆ. ಇಬ್ಬರು ಹೆಣ್ಮಕ್ಕಳನ್ನು ಪಡೆದ ಹೆತ್ತವರು ಸ್ವರ್ಗ ದಕ್ಕಬಲ್ಲ ಸೌಭಾಗ್ಯಶಾಲಿಗಳು ಎಂದು ಪ್ರವಾದಿ(ಸ) ಹೇಳಿದ್ದಾರೆ. ಹೆಣ್ಣು ಶಿಶುವಿನ ಹತ್ಯೆಯು ಘೋರ ಪಾಪ ಎಂದು ಪವಿತ್ರ ಕುರ್‍ಆನ್ ಎಚ್ಚರಿಸಿದೆ. ತಾಯಿಯ (ಹೆಣ್ಣಿನ) ಪಾದದಡಿ ಸ್ವರ್ಗವಿದೆ ಎಂದು ಪ್ರವಾದಿ(ಸ) ಹೇಳಿದ್ದಾರೆ. ತಂದೆಗೆ ಯಕೃತನ್ನು ದಾನ ಮಾಡುವ ಮೂಲಕ ಹೆಣ್ಣಿನ ಕುರಿತಾದ ಈ ಎಲ್ಲ ಹೇಳಿಕೆಗಳಿಗೆ ಪೂಜಾ ನ್ಯಾಯ ತುಂಬಿದ್ದಾಳೆ. ಇಂಥವರ ಸಂಖ್ಯೆ ಬೆಳೆಯಲಿ. 

Friday 17 November 2017

870 ದಿನಗಳು ಮತ್ತು...

      ಯೋಧರ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪಕ್ಷದ ನಾಯಕರು ಆಗಾಗ ವ್ಯಕ್ತಪಡಿಸುತ್ತಿರುವ ಹೆಮ್ಮೆ, ಅಭಿಮಾನ, ಗೌರವಗಳೆಲ್ಲ ಎಷ್ಟು ಪ್ರಾಮಾಣಿಕ ಎಂಬುದನ್ನು ಕಳೆದವಾರ ದೆಹಲಿಯ ಜಂತರ್ ಮಂತರ್ ಸ್ಪಷ್ಟಪಡಿಸಿತು. ಏಕ ಶ್ರೇಣಿ, ಏಕ ಪಿಂಚಣಿ ಎಂಬ ಆಗ್ರಹವನ್ನು ಮುಂದಿಟ್ಟು ಕಳೆದ 870 ದಿನಗಳಗಿಂತಲೂ ಅಧಿಕ ಸಮಯದಿಂದ ಜಂತರ್ ಮಂತರ್‍ನಲ್ಲಿ ಪ್ರತಿಭಟಿಸುತ್ತಿದ್ದ ಮಾಜಿ ಯೋಧರನ್ನು ದೆಹಲಿ ಪೊಲೀಸರು ಬಲವಂತದಿಂದ ತೆರವುಗೊಳಿಸಿದರು. ಹಾಗೆ ತೆರವುಗೊಂಡ ಈ ವಯೋವೃದ್ಧ ಯೋಧರು ಪಾರ್ಲಿಮೆಂಟ್ ರಸ್ತೆಯಲ್ಲಿ ಪ್ರತಿಭಟನೆಗೆ ಕುಳಿತರು. ಅಲ್ಲಿಂದಲೂ ತೆರವುಗೊಳಿಸಲಾಯಿತು. ಹಾಗಂತ, ಜಂತರ್ ಮಂತರ್‍ನಲ್ಲಿ ಯಾವುದೇ ಪ್ರತಿಭಟನೆ ಹಮ್ಮಿಕೊಳ್ಳಬಾರದೆಂದು ರಾಷ್ಟ್ರೀಯ ಹಸಿರು ಆಯೋಗವು ನೀಡಿದ ನಿರ್ದೇಶನದಂತೆ ತಾವು ಕ್ರಮ ಕೈಗೊಂಡಿರುವುದಾಗಿ ದೆಹಲಿ ಪೊಲೀಸರು ತಮ್ಮನ್ನು ಸಮರ್ಥಿಸಿಕೊಳ್ಳಬಹುದು. ಆದರೆ ನಿವೃತ್ತ ಯೋಧರು (IESM - ಭಾರತದ ಮಾಜಿ ನಿವೃತ್ತ ಯೋಧರ ಚಳವಳಿ) ಜಂತರ್ ಮಂತರ್‍ನಲ್ಲಿ ಪ್ರತಿಭಟನೆ ಪ್ರಾರಂಭಿಸಿದ್ದು ನಿನ್ನೆ ಮೊನ್ನೆಯಲ್ಲ. 2015 ರಿಂದಲೇ ಈ ಪ್ರತಿಭಟನೆ ಆರಂಭವಾಗಿದೆ. ಮನ್‍ಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರವು 6ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸಿ 2008ರಲ್ಲಿ ಹುಟ್ಟಿಕೊಂಡದ್ದೇ IESM. ಏಕ ಶ್ರೇಣಿ, ಏಕ ಪಿಂಚಣಿಯನ್ನು ಆಗ್ರಹಿಸಿ ಆ ಬಳಿಕದಿಂದ ನಿವೃತ್ತ ಯೋಧರು ವಿವಿಧ ಹಕ್ಕೊತ್ತಾಯಗಳನ್ನು ಮಂಡಿಸುತ್ತಾ ಬಂದರು. ಯುಪಿಎ ಸರಕಾರವು ಏಕ ಶ್ರೇಣಿ ಏಕ ಪಿಂಚಣಿ ಆಗ್ರಹವನ್ನು ಒಪ್ಪಿಕೊಳ್ಳುವ ಸೂಚನೆ ಕೊಟ್ಟಿತ್ತಾದರೂ 2014ರ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಯೋಧರ ಆಗ್ರಹಕ್ಕೆ ದನಿಗೂಡಿಸಿದರು. ಅಧಿಕಾರಕ್ಕೆ ಬಂದರೆ ಏಕ ಶ್ರೇಣಿ ಏಕ ಪಿಂಚಣಿ ಬೇಡಿಕೆಯನ್ನು ಪೂರೈಸುವುದಾಗಿ ಮಾತು ಕೊಟ್ಟರು. ಕೇವಲ ಇದೊಂದೇ ಅಲ್ಲ, ಗಡಿಯಲ್ಲಿ ಹುತಾತ್ಮಾರಾಗುತ್ತಿರುವ ಯೋಧರಿಗಾಗಿ ಚುನಾವಣಾ ಭಾಷಣ ಮಾಡಿದಲ್ಲೆಲ್ಲ ಅವರು ಮರುಗಿದರು. ಭಾರತೀಯ ಯೋಧರ ಒಂದು ತಲೆಗೆ ಪಾಕ್ ಯೋಧರ ಹತ್ತು ತಲೆಯನ್ನು ಕತ್ತರಿಸಿ ತರುವುದಾಗಿ ಬಿಜೆಪಿ ನಾಯಕರು ಘೋಷಿಸಿದ್ದು ಇದೇ ಸಂದರ್ಭದಲ್ಲಿ. ಯೋಧರು ಗಡಿಯಲ್ಲಿ ಎಚ್ಚರದಿಂದಿರುವುದರಿಂದ ನಾವು ಸುಖವಾಗಿ ನಿದ್ದೆ ಮಾಡುತ್ತೇವೆ ಎಂಬಂತಹ ಹತ್ತು ಹಲವು ಭಾವುಕ ಮಾತುಗಳನ್ನು ಅವರು ತೇಲಿಸಿ ಬಿಟ್ಟರು. ಆದರೆ ಯಾವಾಗ ನರೇಂದ್ರ ಮೋದಿಯವರು ಪ್ರಧಾನಿಯಾದರೋ ಏಕ ಶ್ರೇಣಿ ಏಕ ಪಿಂಚಣಿ ಎಂಬುದು ನಿಧಾನವಾಗಿ ತೆರೆಮರೆಗೆ ಸರಿಯತೊಡಗಿತು. ನಿವೃತ್ತ ಯೋಧರು 2015 ಜೂನ್‍ನಲ್ಲಿ ಮತ್ತೆ ಚಳವಳಿಗೆ ಧುಮುಕಿದರು. ಅದರ ಪರಿಣಾಮವಾಗಿ ನರೇಂದ್ರ ಮೋದಿ ಸರಕಾರವು ಏಕ ಶ್ರೇಣಿ ಏಕ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿತಾದರೂ ಯೋಧರ ಒಂದು ದೊಡ್ಡ ಗುಂಪು ಅಸಮಾಧಾನ ವ್ಯಕ್ತಪಡಿಸಿತು. ತಮ್ಮ ಆಗ್ರಹದ ಪ್ರಕಾರ ಮತ್ತು ಭರವಸೆ ನೀಡಿದ ಪ್ರಕಾರ ನಿಯಮಾವಳಿಗಳನ್ನು ಇದರಲ್ಲಿ ರಚಿಸಲಾಗಿಲ್ಲ ಎಂದು ಅದು ಆರೋಪಿಸಿತು. ಪ್ರತಿಭಟನೆ ಪ್ರಾರಂಭಿಸಿತು. ಅಂದಿನಿಂದ ಇಂದಿನವರೆಗೆ ಈ ಯೋಧರು ಪ್ರತಿಭಟಿಸು ತ್ತಲೇ ಇದ್ದಾರೆ. 870 ದಿನಗಳಿಗಿಂತಲೂ ಹೆಚ್ಚು ದಿನ ಈ ಹಿರಿ ವಯಸ್ಸಿನ ಯೋಧರನ್ನು ಬೀದಿ ಪಾಲಾಗಿಸಿದ ಸರಕಾರವೊಂದು ಇದೀಗ ಅವರ ತೆರವು ಕಾರ್ಯಾಚರಣೆಗೂ ತಮಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದೆ. ನಿಜವಾಗಿ, ಪ್ರಶ್ನಿಸಬೇಕಾದದ್ದು ತೆರವು ಕಾರ್ಯಾಚರಣೆಯನ್ನಲ್ಲ, 2 ವರ್ಷಕ್ಕಿಂತಲೂ ಹೆಚ್ಚು ಕಾಲ ಯೋಧರನ್ನು ಸರಕಾರವೊಂದು ಬೀದಿಪಾಲು ಮಾಡಿತಲ್ಲ, ಇದು ಎಷ್ಟು ಸರಿ? ಯೋಧರ ಸೇವೆಯನ್ನು ಪಟ್ಟಿ ಮಾಡಿ ಕೇಳುಗರನ್ನು ಭಾವುಕಗೊಳಿಸುವ ಪಕ್ಷವೊಂದು ಹೀಗೆ ಯೋಧರನ್ನು ನಿಷ್ಕರುಣೆಯಿಂದ ನಡೆಸಿಕೊಳ್ಳುವುದು ನೈತಿಕವೇ? ಏಕ ಶ್ರೇಣಿ ಏಕ ಪಿಂಚಣಿ ನಿಯಮವನ್ನು ಯೋಧರ ಒಂದು ಗುಂಪು ಒಪ್ಪಿಕೊಂಡಿದೆ ಎಂಬುದು ಇನ್ನೊಂದು ಗುಂಪನ್ನು ಸತಾಯಿಸುವುದಕ್ಕಿರುವ ಪರವಾನಿಗೆ ಆಗುತ್ತದೆಯೇ? ಸದ್ಯ ಪ್ರತಿಭಟನೆಯಲ್ಲಿ ತೊಡಗಿರುವವರಲ್ಲಿ ಭೂ, ವಾಯು ಮತ್ತು ನೌಕಾ ದಳದ ಪ್ರಮುಖ ನಿವೃತ್ತ ಅಧಿಕಾರಿಗಳಿದ್ದಾರೆ. ಕೇಂದ್ರದ ಏಕಶ್ರೇಣಿ ಏಕಪಿಂಚಣಿ ಯೋಜನೆಯನ್ನು ಒಪ್ಪಿಕೊಂಡ ಯೋಧರು ಹೇಗೆ ದೇಶ ಸೇವಕರೋ ಒಪ್ಪಿಕೊಳ್ಳದ ಇವರೂ ದೇಶಸೇವಕರೇ. ಯೋಧರ ಯೋಗಕ್ಷೇಮಕ್ಕೆ ಆದ್ಯತೆ ಕೊಡುವ ರೀತಿಯಲ್ಲಿ ಸೇನಾ ನೆಲೆಗಳಿಗೆ ಭೇಟಿ, ಯೋಧರ ಜೊತೆ ದೀಪಾವಳಿ ಆಚರಣೆ ಇತ್ಯಾದಿಗಳನ್ನು ಸರಕಾರ ಮಾಡುತ್ತದಲ್ಲ, ಇದರ
ಅರ್ಥವೇನು? ಇವೆಲ್ಲ ಕ್ಯಾಮರಾ ಕೇಂದ್ರಿತ ಕಾರ್ಯಕ್ರಮಗಳೇ? ಬರೇ ತುಟಿ ಸೇವೆಗಳೇ?
     2014ರ ಲೋಕಸಭಾ ಚುನಾವಣೆಯಲ್ಲಿ ಯೋಧರು ಮುಖ್ಯ ಚರ್ಚಾವಿಷಯವಾಗಿದ್ದರು. ಒಂದೆಡೆ ಪಾಕಿಸ್ತಾನವನ್ನು ಹಳಿಯುವುದು ಮತ್ತು ಇನ್ನೊಂದೆಡೆ ಭಾರತೀಯ ಯೋಧರ ಯೋಗ ಕ್ಷೇಮದ ಬಗ್ಗೆ ಕರುಣಾಭರಿತ ಮಾತುಗಳನ್ನಾಡುವುದನ್ನು ಬಿಜೆಪಿ ಅಭ್ಯಾಸ ಮಾಡಿಕೊಂಡಿತ್ತು. ಗಡಿಯಲ್ಲಿ ಯೋಧರ ಮೇಲೆ ನಡೆಯುವ ಪ್ರತಿ ದಾಳಿ ಪ್ರಕರಣವನ್ನೂ ಬಿಜೆಪಿ ಚುನಾವಣಾ ವಿಷಯವಾಗಿ ಮಾರ್ಪಡಿಸಿಕೊಂಡಿತ್ತು. ಒಂದು ವೇಳೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಪಾಕ್ ಧ್ವಂಸಗೊಳ್ಳುತ್ತದೆ, ಗಡಿ ಶಾಂತವಾಗುತ್ತದೆ, ಯೋಧರೆಲ್ಲ ಚೆನ್ನಾಗಿ ನಿದ್ದೆ ಮಾಡುತ್ತಾರೆ.. ಇತ್ಯಾದಿ ಇತ್ಯಾದಿ ನಿರೀಕ್ಷೆಗಳ ಗಂಟನ್ನು ಬಿಜೆಪಿ ಬೆಂಬಲಿಗರು ದೇಶದಾದ್ಯಂತ ಹರಡಲು ಯಶಸ್ವಿಯಾಗಿದ್ದರು. ಸದ್ಯ ಆ ಪೌರುಷದ ಹೇಳಿಕೆ ಮತ್ತು ಹುಟ್ಟಿಸಿದ ನಿರೀಕ್ಷೆಗಳಿಗೆ ಮೂರೂವರೆ ವರ್ಷಗಳು ಸಂದಿವೆ. ದುರಂತ ಏನೆಂದರೆ, ಈ ಮೂರೂವರೆ ವರ್ಷಗಳಲ್ಲಿ 870ಕ್ಕಿಂತಲೂ ಅಧಿಕ ದಿನ ನಮ್ಮ ದೇಶದ ಹೆಮ್ಮೆಯ ಯೋಧರು ನ್ಯಾಯ ಕೇಳುತ್ತಾ ಬೀದಿಯಲ್ಲಿ ಕಳೆದಿದ್ದಾರೆ. ಗಡಿಯಲ್ಲಿರುವ ಯೋಧರ ಯೋಗಕ್ಷೇಮದ ವಿಷಯ ಬಿಟ್ಟು ಬಿಡಿ, ಗಡಿಯೊಳಗಿರುವ ವಯೋವೃದ್ಧ ಯೋಧರ ಯೋಗಕ್ಷೇಮಕ್ಕೇ ಸ್ಪಂದಿಸಲು ಈ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಗಡಿಯಂತೂ ಉದ್ವಿಘ್ನತೆಯಲ್ಲೇ  ಇದೆ. ಯುಪಿಎ ಸರಕಾರ ಇರುವಾಗ ಗಡಿಯಿಂದ ಯಾವೆಲ್ಲ ದುಃಖಕರ ಸುದ್ದಿಗಳು ಬರುತ್ತಿತ್ತೋ ಅವು ಈಗಲೂ ಮುಂದುವರಿದಿವೆ. ಪಾಕಿಸ್ತಾನವಂತೂ ಮೂರೂವರೆ ವರ್ಷಗಳ ಹಿಂದೆ ಹೇಗಿತ್ತೋ ಹಾಗೆಯೇ ಇದೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಯೋಧರ ಕುರಿತಂತೆ ಮಾಡಿರುವ ಭಾಷಣದ ತುಣುಕುಗಳನ್ನು ಇವತ್ತು ಯಾರಾದರೂ ಮರು ಕೇಳಿಸಿಕೊಂಡರೆ ಆ ನರೇಂದ್ರ ಮೋದಿ ಈಗಿನ ಪ್ರಧಾನಿ ನರೇಂದ್ರ ಮೋದಿ ಅಲ್ಲವೇ ಅಲ್ಲ ಎಂದು ಖಂಡಿತ ಹೇಳಿಯಾರು. ಅಂದಿನ ಭಾಷಣಗಾರ ಮೋದಿಗೂ ಇಂದಿನ ಪ್ರಧಾನಿ ಮೋದಿಗೂ ವಿವರಿಸಲಾಗದ ಅಂತರ ಇದೆ. 870 ದಿನಗಳಿಂದ ಬೀದಿಯಲ್ಲಿರುವ ನಿವೃತ್ತ ಯೋಧರು ಇದಕ್ಕೆ ಒಂದು ಉದಾಹರಣೆ ಮಾತ್ರ.

Monday 6 November 2017

ಅಕ್ಟೋಬರ್ 30ರ ಪತ್ರಿಕೆಗಳು

     ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿ, ವರದಿ, ವಿಶ್ಲೇಷಣೆಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಸಿಗುವ ಆದರ ಮತ್ತು ಆದ್ಯತೆಯು ಇತರ ಸುದ್ದಿಗಳಿಗೆ ಲಭ್ಯವಾಗುವುದಿಲ್ಲ ಎಂಬ ದೂರನ್ನು ಕಳೆದವಾರ ಮಾಧ್ಯಮ ಕ್ಷೇತ್ರ ಮತ್ತೊಮ್ಮೆ ಸಾಬೀತುಪಡಿಸಿದೆ. ಅಕ್ಟೋಬರ್ 29ರ ಆದಿತ್ಯವಾರದಂದು ರಾಯಚೂರಿನಲ್ಲಿ ರಾಜ್ಯಮಟ್ಟದ ಸಮಾವೇಶವೊಂದು ನಡೆಯಿತು. 10 ಸಾವಿರಕ್ಕಿಂತಲೂ ಅಧಿಕ ಮಂದಿ ಇದರಲ್ಲಿ ಭಾಗವಹಿಸಿದರು. ಹೆಚ್ಚಿನವರು ಮಹಿಳೆಯರು. ‘ಮದ್ಯ ನಿಷೇಧ ಆಂದೋಲನ ಕರ್ನಾಟಕ’ ಎಂಬ ಏಕ ವೇದಿಕೆಯ ಅಡಿ ಸುಮಾರು 32 ಸಂಘಟನೆಗಳು ಜೊತೆಗೂಡಿ ಏರ್ಪಡಿಸಿದ ಈ ಸಭೆಯಲ್ಲಿ ‘ನಶಾ ಮುಕ್ತ್ ಭಾರತ್’ ಸಂಘಟನೆಯ ಮುಖ್ಯಸ್ಥೆ ಮೇಧಾ ಪಾಟ್ಕರ್ ಭಾಗವಹಿಸಿ ದ್ದರು. ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಜಾರಿಯಾಗಬೇಕು ಎಂದು ಸಭೆ ಒತ್ತಾಯಿಸಿತು. ಅಂದಹಾಗೆ ಕೃಷಿಗೆ ಹೆಸರುವಾಸಿಯಾದ ನಾಡೊಂದು ಕೃಷಿಗೆ ಸಂಬಂಧಿಸಿಯೇ ಇಲ್ಲದ ವಿಷಯದ ಮೇಲೆ ಬೃಹತ್ ಸಭೆಯೊಂದನ್ನು ಏರ್ಪಡಿಸುವುದು, ಚರ್ಚೆ ನಡೆಸುವುದು ಮತ್ತು ಭಾರೀ ಸಂಖ್ಯೆಯಲ್ಲಿ ಜನ ಸೇರುವುದೆಲ್ಲ ಅಕ್ಟೋಬರ್ 30 ರಂದು ಪ್ರಕಟವಾಗುವ ಪತ್ರಿಕೆಗಳಲ್ಲಿ ಮುಖ್ಯ ಸುದ್ದಿಯಾಗಬೇಕಿತ್ತು, `ಸಂಪಾದಕೀಯ ವಸ್ತು’ ಆಗಬೇಕಿತ್ತು ಎಂದು ಬಯಸುವುದು ತಪ್ಪಲ್ಲ. ಆದರೆ ಈ ನಿರೀಕ್ಷೆಗೆ ವಿರುದ್ಧವಾಗಿ ಪತ್ರಿಕೆಗಳು ವರ್ತಿಸಿದುವು. ನಿಜವಾಗಿ, ಈ ದೇಶದಲ್ಲಿ ಪ್ರತಿದಿನ ರಾಜಕೀಯ ರಹಿತ ಅಸಂಖ್ಯ ಜನಮುಖಿ ಕಾರ್ಯಕ್ರಮಗಳು ನಡೆಯುತ್ತವೆ. ಯೋಜನೆಗಳು ರೂಪು ಪಡೆಯುತ್ತವೆ. ಮನೆಯಿಲ್ಲದವರಿಗೆ ಮನೆ ಕಟ್ಟಿ ಕೊಡುವ, ಆಹಾರದ ವ್ಯವಸ್ಥೆ ಮಾಡುವ, ಮಾಸಾಶನ ನೀಡುವ, ಸ್ವಉದ್ಯೋಗಕ್ಕೆ ನೆರವು ನೀಡುವ, ಬಾವಿ ತೋಡುವ, ಚಿಕಿತ್ಸೆ ವೆಚ್ಚವನ್ನು ಭರಿಸುವ, ಸಾಮಾಜಿಕ ಪಿಡುಗುಗಳ ವಿರುದ್ಧ ಜನಜಾಗೃತಿ ಮೂಡಿಸುವ.. ಇತ್ಯಾದಿ ಘಟನೆಗಳು ನಡೆಯುತ್ತಲೇ ಇರುತ್ತವೆ. ರಾಜಕಾರಣಿಯೋರ್ವರ ಹಳಸಲು ಹೇಳಿಕೆಗಿಂತ ಎಷ್ಟೋ ಪಾಲು ಬೆಲೆಬಾಳುವ ಚಟುವಟಿಕೆಗಳು ಇವು. ಆದರೆ ಇಂಥ ಚಟುವಟಿಕೆಗಳು ಸಾಮಾನ್ಯವಾಗಿ ಪತ್ರಿಕೆಗಳ ಒಳಪುಟದ ತೀರಾ ಒಳಗೆ ಒಂದು ಕಾಲಂನಲ್ಲಿ ಸತ್ತು ಹೋಗುವುದೇ ಹೆಚ್ಚು. ಒಂದು ವೇಳೆ, ರಾಜಕಾರಣಿಗಳು ಇಂಥ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಪತ್ರಿಕೆಗಳ ಒಂದು ಕಾಲಂ ಅವಮಾನದಿಂದ ಇಂಥ ಸುದ್ದಿಗಳು ಪಾರುಗೊಂಡು ಎರಡು ಕಾಲಂ ಎಂಬಷ್ಟು ಮೇಲ್ದರ್ಜೆಗೇರುವುದಿದೆ. ಅದರಾಚೆಗೆ ಇಂಥ ಚಟುವಟಿಕೆಗಳಿಗೆ ಪತ್ರಿಕೆಗಳಲ್ಲಿ ಮಾನ್ಯತೆ ಲಭ್ಯವಾಗುವುದಿಲ್ಲ. ಇದನ್ನು ಬದಲಿಸುವುದು ಹೇಗೆ? ರಾಜಕೀಯ ಸುದ್ದಿಗಳೇಕೆ ಮಾಧ್ಯಮಗಳಿಗೆ ಇಷ್ಟ?
     ಸಾಮಾನ್ಯವಾಗಿ ಇವತ್ತು ಜನರ ಆದ್ಯತೆಯನ್ನು ನಿರ್ಧರಿಸುವುದೇ ಪತ್ರಿಕೆಗಳು. ಅವು ಯಾವುದನ್ನು ಚರ್ಚಾರ್ಹ ಎಂಬುದಾಗಿ ಬಿಂಬಿಸುತ್ತದೋ ಅದನ್ನೇ ಜನರು ಚರ್ಚಾರ್ಹವಾಗಿ ಸ್ವೀಕರಿಸುತ್ತಾರೆ. ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸಿದರೂ ಇದು ವ್ಯಕ್ತವಾಗುತ್ತದೆ. ಅಲ್ಲಿ ಅತ್ಯಂತ ಹೆಚ್ಚು ಬರಹಗಳು ಕಾಣಿಸಿಕೊಳ್ಳುವುದೇ ರಾಜಕೀಯದ ಮೇಲೆ. ತನ್ನ ಮನೆಯ ಪಕ್ಕವೇ ಇರುವ `ಚರಂಡಿ’ ಅವ್ಯವಸ್ಥೆಯನ್ನು ಹೇಳಿಕೊಳ್ಳುವುದಕ್ಕಿಂತ ಮೋದಿಯನ್ನೋ ಸಿದ್ಧರಾಮಯ್ಯರನ್ನೋ ಗುರಿಯಾಗಿ ಬರೆಯುವುದರಲ್ಲಿ ವ್ಯಕ್ತಿ ಸುಖ ಪಡುತ್ತಾನೆ. ನೀರಿಲ್ಲದ ಊರಿಗೆ ಬಾವಿ ತೋಡಿಸಿಕೊಟ್ಟ ಸುದ್ದಿಗಿಂತ ಹೆಚ್ಚು ರಾಜಕಾರಣಿಯೋರ್ವರ ಹೇಳಿಕೆಯ ಮೇಲಿನ ಪ್ರತಿಕ್ರಿಯೆಗೆ ಲೈಕ್ ಮತ್ತು ಕಾಮೆಂಟ್‍ಗಳು ಲಭ್ಯವಾಗುತ್ತವೆ. ಅಷ್ಟಕ್ಕೂ, ಪತ್ರಿಕೆಯೊಂದು ರಾಯಚೂರಿನಲ್ಲಿ ನಡೆದ ಮದ್ಯನಿಷೇಧದಂತಹ ಕಾರ್ಯ ಕ್ರಮಕ್ಕೆ ಆದ್ಯತೆಯನ್ನು ಕೊಟ್ಟರೆ ಏನಾದೀತು? ರಾಜಕೀಯ ಸುದ್ದಿಗಳ ಬದಲು ಸಾಮಾಜಿಕ ಸುದ್ದಿಗಳಿಗೆ ಅವು ಮಹತ್ವ ಕೊಡುವುದರಿಂದ ಏನೆಲ್ಲ ಬದಲಾವಣೆಗಳಾಗಬಹುದು? ಇದರ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳು ಏನೇನು? ರಾಜಕೀಯವು ಜನರ ನಾಡಿಮಿಡಿತವನ್ನು ನಿರ್ಧರಿಸುತ್ತದೆ ಎಂಬುದು ನಿಜ. ದೇಶದ ಭವಿಷ್ಯ ರಾಜಕೀಯ ನಿರ್ಧಾರವನ್ನು ಅವಲಂಬಿಸಿಕೊಂಡಿದೆ. ಪಾಕ್‍ನ ವಿರುದ್ಧ ಯುದ್ಧ ಬೇಕೋ ಬೇಡವೋ ಎಂಬುದನ್ನು ಜನಸಾಮಾನ್ಯ ನಿರ್ಧರಿಸಲಾರ. ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಮತ್ತು ತಗ್ಗಿಸುವ ಎರಡೂ ಸಾಮರ್ಥ್ಯ ರಾಜಕೀಯಕ್ಕಿದೆ.  ಆದರೂ ಇವತ್ತು ಮಾಧ್ಯಮಗಳು ರಾಜಕೀಯ ಸುದ್ದಿಗಳಿಗೆ ಕೊಡುತ್ತಿರುವ ಆದ್ಯತೆಗಳು ಬರೇ ಇವನ್ನು ಮಾತ್ರ ಅವಲಂಬಿಸಿರುವುದೇ ಅಥವಾ ನಿರ್ಲಕ್ಷ್ಯ ಧೋರಣೆಯೇ?
       ಮಾಧ್ಯಮ ಕ್ಷೇತ್ರವೆಂಬುದು ಸ್ವತಂತ್ರ ವ್ಯವಸ್ಥೆ. ಇಲ್ಲಿ ರಾಜಕಾರಣಿ ವಿಮರ್ಶೆಗೊಳಗಾಗಬೇಕು. ಆಡಳಿತ ವ್ಯವಸ್ಥೆಯನ್ನು ಪರೀಕ್ಷೆಗೊಡ್ಡಬೇಕು. ಪಕ್ಪಮೋಹ, ಜಾತಿಮೋಹ, ಭಾಷೆ ಮೋಹಗಳಂ ಹೊರಗೆ ನಿಂತು ನೋಡುವ ಕಣ್ಣು ಇರಬೇಕು. ಜೊತೆಗೇ ರಾಜಕೀಯ ವ್ಯವಸ್ಥೆಯ ತಪ್ಪುಗಳನ್ನು ಎತ್ತಿ ಹೇಳುತ್ತಾ, ಜನರನ್ನು ಎಚ್ಚರಿಸುತ್ತಾ ಮತ್ತು ಅಗತ್ಯವೆಂದು ಕಂಡುಬಂದಾ ಗಲೆಲ್ಲ ಜನರನ್ನು ಪ್ರತಿಚಳವಳಿಗೆ ಸಜ್ಜುಗೊಳಿಸುತ್ತಾ ನಿರ್ಮಾಣಾತ್ಮಕ ಪಾತ್ರದಲ್ಲಿ ಗುರುತಿಸಿಕೊಳ್ಳಬೇಕು. ರಾಯಚೂರು ಸಮಾವೇಶವು ಪತ್ರಿಕೆಗಳ ಆದ್ಯತಾ ಪಟ್ಟಿಯಲ್ಲಿ ಕಾಣಿಸಿಕೊಳ್ಳಬೇಕಿತ್ತೆಂದು ಅನಿಸುವುದು ಈ ಕಾರಣಕ್ಕೆ. ಮದ್ಯ ಒಂದು ಸಾಮಾಜಿಕ ಪಿಡುಗು. ಬಡವರೇ ಹೆಚ್ಚಿರುವ ಈ ದೇಶದ ಪಾಲಿಗೆ ಮದ್ಯವು ನಿಧಾನ ರೋಗವಾಗಿ ಮಾರ್ಪಟಿರುವುದು ಎಲ್ಲರಿಗೂ ಗೊತ್ತು. ಅಲ್ಲದೇ ಇದರಿಂದ ತೊಂದರೆಗೊಳಪಡುತ್ತಿರುವವರಲ್ಲಿ ಅತ್ಯಂತ ಹೆಚ್ಚಿರುವುದು ಮಹಿಳೆಯರೇ. ಇವನ್ನೆಲ್ಲ ಸರಕಾರವೇ ಬಿಡುಗಡೆಗೊಳಿಸುವ ಅಂಕಿ ಅಂಶಗಳೇ ಕಾಲಕಾಲಕ್ಕೆ ದೃಢಪಡಿಸುತ್ತಲೂ ಇವೆ. ಇಷ್ಟಿದ್ದೂ, ಮದ್ಯವು ಯಾಕೆ ನಿಷೇಧಕ್ಕೆ ಒಳಪಡುತ್ತಿಲ್ಲ ಅನ್ನುವ ಪ್ರಶ್ನೆ ಅಸಹಜವೋ ಅಗಂಭೀರವೋ ಆಗಬೇಕಿಲ್ಲ. ಜನರ ನಾಡಿಮಿಡಿತಕ್ಕೆ ಸ್ಪಂದಿಸಬೇಕಾದ ರಾಜಕಾರಣಿಗಳು ಅದರಲ್ಲಿ ವಿಫಲವಾದಾಗ ಜನರು ಸಂಘಟಿತರಾಗುತ್ತಾರೆ. ಸಭೆ ಸೇರುತ್ತಾರೆ. ಇಂಥ ಸಮಯದಲ್ಲಿ ಪತ್ರಿಕೆಗಳು ತಮ್ಮ ಆದ್ಯತಾ ಪಟ್ಟಿಯಲ್ಲಿ ಬದಲಾವಣೆ ತರದೇ ಹೋದರೆ, ಅವು ರಾಜಕಾರಣದ ಮುಖವಾಣಿ ಎಂಬ ಬಿರುದಿಗೆ ಹೆಚ್ಚು ನಿಕಟವಾಗುತ್ತದೆ. ಒಂದು ರೀತಿಯಲ್ಲಿ, ಪ್ರತಿಭಟನೆ, ಸಾಮಾಜಿಕ ಚಟುವಟಿಕೆಗಳೆಂಬುದು ರಾಜಕೀಯ ವ್ಯವಸ್ಥೆಯ ವೈಫಲ್ಯದ ಸಂಕೇತ. ವ್ಯವಸ್ಥೆ ಸರಿ ಇದ್ದರೆ ಪ್ರತಿಭಟನೆಯ ಅಗತ್ಯವೇ ಇಲ್ಲ. ಆದ್ದರಿಂದ ರಾಜಕೀಯರಹಿತ ಸುದ್ದಿಗಳಿಗೆ ಆದ್ಯತೆಯನ್ನು ಕೊಟ್ಟು ಪತ್ರಿಕೆಗಳು ರಾಜಕೀಯ ವ್ಯವಸ್ಥೆಯನ್ನು ತರಾಟೆಗೆತ್ತಿಕೊಳ್ಳಲಿ ಎಂದು ಬಯಸುವುದು. ರಾಯಚೂರು ಸಮಾವೇಶ ಮುಖ್ಯವಾಗಬೇಕಾದದ್ದೂ ಈ ಹಿನ್ನೆಲೆಯಲ್ಲೇ. ಆದರೆ ಹಾಗಾಗಿಲ್ಲ ಅನ್ನುವುದು ವಿಷಾದಕರ.


Tuesday 31 October 2017

ಮೌನಿ ಮತ್ತು ವಾಚಾಳಿಯ ನಡುವೆ ನೋಟು

       ನೋಟು ನಿಷೇಧ ಮಾಡಿದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಚತುರ ಅರ್ಥ ತಜ್ಞನಾಗಿ ಮತ್ತು ಚಾಣಕ್ಯನಿಗೆ ಸಮವಾಗಿ ಕಂಡವರು ಹಾಗೂ ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್‍ರ ಮಾತುಗಳನ್ನು ತಮಾಷೆ ಮಾಡಿದವರಲ್ಲಿ ಹೆಚ್ಚಿನವರು ಈಗ ತತ್ವಜ್ಞಾನಿಗಳಂತೆ ಆಡತೊಡಗಿದ್ದಾರೆ. ಅತ್ತ ನರೇಂದ್ರ ಮೋದಿಯವರನ್ನು ಬಿಡಲೂ ಆಗದ ಇತ್ತ ಅವರ `ಅರ್ಥಕ್ರಾಂತಿ’ಯನ್ನು ಬೆಂಬಲಿಸಲೂ ಆಗದ ಸ್ಥಿತಿಗೆ ತಲುಪಿದ್ದಾರೆ. ಭಾರತೀಯ ಸ್ಟೇಟ್‍ಬ್ಯಾಂಕ್ (ಎಸ್‍ಬಿಐ) ದೀರ್ಘ ಸಮಯದ ಬಳಿಕ ಮೌನ ಮುರಿದಿದೆ. ನೋಟು ಬದಲಾಯಿಸುವುದಕ್ಕಾಗಿ ಸರತಿ ಸಾಲಲ್ಲಿ ನಿಂತು ತನ್ನ ಗ್ರಾಹಕರು ಸಾವಿಗೆ ತುತ್ತಾಗಲೂ ಮಾತಾಡದಿದ್ದ ಎಸ್‍ಬಿಐ ಇದೀಗ ಜಿಡಿಪಿ ಕುಸಿತಕ್ಕೆ ತನ್ನ ನೇರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ. ಸರಕಾರ ಹೇಳುತ್ತಿರುವಂತೆ `ಇದು ತಾಂತ್ರಿಕ ದೋಷವಲ್ಲ, ವಾಸ್ತವಿಕ ಸಂಗತಿ’ ಎಂದು ಕಟುವಾಗಿ ಹೇಳಿದೆ. ಇದರ ನಡುವೆ ಬಿಜೆಪಿಗೆ ಆಪ್ತರಾಗಿರುವ ಮತ್ತು ಸದಾ ಬಿಜೆಪಿ ಪರ ವಕಾಲತ್ತು ವಹಿಸುವ ಡಾ| ಸುಬ್ರಹ್ಮಣಂ ಸ್ವಾಮಿ ಮತ್ತು ಎಸ್. ಗುರು ಮೂರ್ತಿಯವರು ಮೊದಲ ಬಾರಿ ಮನ್‍ಮೋಹನ್ ಸಿಂಗ್‍ರ ಭಾಷೆಯಲ್ಲಿ ಮಾತಾಡಿದ್ದಾರೆ. ಇಬ್ಬರಿಗೂ ದೇಶದ ಅರ್ಥವ್ಯವಸ್ಥೆ ಸಾಗುತ್ತಿರುವ ಹಾದಿಯ ಬಗ್ಗೆ ಆತಂಕ ಇದೆ. `ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಕುಸಿದತ್ತ ಸಾಗುತ್ತಿದೆ’ ಎಂಬ ಭಯ ಸುಬ್ರಹ್ಮಣ್ಯಂ ಸ್ವಾಮಿಯವರದ್ದು. ಇದು ಹೀಗೆ ಮುಂದುವರಿದರೆ ಬ್ಯಾಂಕ್‍ಗಳು ಕುಸಿಯಬಹುದು, ಕೈಗಾರಿಕೆಗಳು ಮುಚ್ಚಬಹುದು ಮತ್ತು ದೇಶ ‘ಬಿಕ್ಕಟ್ಟಿನತ್ತ ಸಾಗಬಹುದು..’ ಎಂದೂ ಅವರು ಹೇಳಿದ್ದಾರೆ. ಗುರುಮೂರ್ತಿಯವರ ಆತಂಕವೂ ಇದಕ್ಕಿಂತ ಕಡಿಮೆಯದ್ದಲ್ಲ. ಮನ್‍ಮೋಹನ್ ಸಿಂಗ್‍ರಂತೂ ನೋಟು ನಿಷೇಧದ ಆರಂಭದಲ್ಲಿಯೇ ಅದನ್ನು ಅನಗತ್ಯ ಮತ್ತು ಅಪಾಯಕಾರಿ ನಡೆ’ ಎಂದೇ ವ್ಯಾಖ್ಯಾನಿಸಿದ್ದರು. ಚಿದಂಬರಂ ಅವರೂ ನೋಟು ನಿಷೇಧವನ್ನು ‘ವಿಫಲ ಕ್ರಾಂತಿ’ ಎಂದು ಕರೆದಿದ್ದರು. ಆದರೆ ಸಾರ್ವಜನಿಕವಾಗಿ ಈ ಇಬ್ಬರು ಅರ್ಥ ತಜ್ಞರ ಮಾತುಗಳಿಗೆ ಭಾರೀ ಮಹತ್ವ ಲಭ್ಯವಾಗಿರಲಿಲ್ಲ. ಅವರ ಮಾತುಗಳಲ್ಲಿದ್ದ ಸಹಜ ಆತಂಕವನ್ನು ಬಿಜೆಪಿ ಮತ್ತು ಅದರ ಬೆಂಬಲಿಗ ಮಾಧ್ಯಮಗಳು ‘ವಿರೋಧ ಪಕ್ಷದ ಟೀಕೆ’ಯಾಗಿ ಕಡೆಗಣಿಸಿದುವು. ವ್ಯಂಗ್ಯಕ್ಕೂ ಬಳಸಿಕೊಂಡವು. ನೋಟು ನಿಷೇಧದ ಸುತ್ತ ಮುದ್ರಣ ಮತ್ತು ದೃಶ್ಯ ಮಾಧ್ಯಮಗಳು ಮಾಡಿರುವ ವರದಿ, ಚರ್ಚೆ ಮತ್ತು ವಿಶ್ಲೇಷಣೆಗಳು ಎಷ್ಟು ಏಕಮುಖವಾಗಿತ್ತು ಅಂದರೆ, ಬ್ಯಾಂಕ್‍ಗಳ ಎದುರು ಸರತಿ ಸಾಲಲ್ಲಿ ನಿಂತು ಸಾವಿಗೀಡಾದ ಪ್ರಕರಣಗಳನ್ನು ಕೂಡಾ ತೀರಾ ಹಗುರವಾಗಿ ಕಾಣಲಾಯಿತು. ‘ದೇಶಕ್ಕಾಗಿ, ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ನಿಗ್ರಹಿಸುವುದಕ್ಕಾಗಿ ಮತ್ತು ನಕಲಿ ನೋಟಿನ ಚಲಾವಣೆಯನ್ನು ತಡೆಯುವುದಕ್ಕಾಗಿ..’ ಎಂದೆಲ್ಲಾ ಸರಕಾರದ ನುಡಿಮುತ್ತನ್ನು ಮಾಧ್ಯಮಗಳು ಅಧ್ಯಯನಾತ್ಮಕ ವರದಿಯಂತೆ ಮಂಡಿಸಿದುವು. ಕಾಶ್ಮೀರದ ಕಲ್ಲೆಸೆತಕ್ಕೆ ನಕಲಿ ನೋಟುಗಳು ಕಾರಣ ಅಂದಿತು ಸರಕಾರ. ನಕ್ಸಲರನ್ನೂ ಅದೇ ಹಣ ಸಾಕುತ್ತಿದೆ ಅಂದಿತು. ಪಾಕಿಸ್ತಾನಕ್ಕೆ ಆಘಾತವಾಗಿದೆ ಎಂಬಂತೆ ಹೇಳಿಕೊಂಡಿತು. ನೋಟು ನಿಷೇಧದ ಸಮಯದಲ್ಲಿ 50 ದಿನಗಳ ಅವಧಿಯನ್ನು ಭಾರತೀಯರಿಂದ ಅಪೇಕ್ಷಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಆ 50 ದಿನವನ್ನು ದಾಟಿ 150 ದಿನಗಳಾದರೂ ಯಾವ ಅಚ್ಛೇ ದಿನವನ್ನೂ ನೀಡದಿದ್ದಾಗ ಮತ್ತು ಕನಿಷ್ಠ ನೋಟು ನಿಷೇಧಕ್ಕಾಗಿ ಪಶ್ಚಾತ್ತಾಪವನ್ನೂ ಪಡದಿದ್ದಾಗ ಚಿದಂಬರಂ, ಮನಮೋಹನ್‍ರ ಮಾತುಗಳನ್ನು ಸಮಾಜ ನೆನಪಿಸತೊಡಗಿತು. ಈ ಅವಧಿಯಲ್ಲಿ ಕಾಶ್ಮೀರದಲ್ಲಿ ಈ ಹಿಂದೆಂದಿಗಿಂತಲೂ ಹೆಚ್ಚು ಕಲ್ಲೆಸೆತ ಮತ್ತು ಹಿಂಸಾಚಾರ ಪ್ರಕರಣಗಳು ನಡೆದುವು. ಸತತ 100ಕ್ಕಿಂತಲೂ ಅಧಿಕ ದಿನಗಳ ವರೆಗೆ ಕಾಶ್ಮೀರದಲ್ಲಿ ಪ್ರತಿಭಟನೆಗಳು ನಡೆದುವು. ನಕ್ಸಲರು ಸೇನೆಯ ವಿರುದ್ಧ ಅತ್ಯಂತ ಪ್ರಬಲ ದಾಳಿಗಳನ್ನು ಸಂಘಟಿಸಿದರು. ನೋಟು ನಿಷೇಧವು ಕಾಶ್ಮೀರದ ಬೆಳವಣಿಗೆಗಳ ಮೇಲೆ ಪರಿಣಾಮ ಬೀರಿಲ್ಲ ಮತ್ತು ನಕ್ಸಲರನ್ನು ಅದು ಈ ಹಿಂದಿಗಿಂತಲೂ ಹೆಚ್ಚು ಚುರುಕುಗೊಳಿಸಿದೆ ಎಂಬ ಅಂಶಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೊಳಗಾಗತೊಡಗಿದಾಗ ಸರಕಾರವು ನೋಟು ನಿಷೇಧಕ್ಕೆ ಇನ್ನೊಂದು ಕಾರಣವನ್ನು ಮುಂದಿಟ್ಟಿತು. ತೆರಿಗೆ ವಂಚಕರನ್ನು ಪತ್ತೆ ಹಚ್ಚುವುದು ಅದರ ಗುರಿಯಾಗಿತ್ತು ಅಂದಿತು. ಇದಾಗಿ ಕೆಲವೇ ಸಮಯದಲ್ಲಿ ಆರ್‍ಬಿಐ ಹೊರಡಿಸಿದ ಹೇಳಿಕೆಯು ಕೇಂದ್ರವನ್ನು ಮತ್ತೊಂದು ಆಘಾತ ತಳ್ಳಿತು. ನಿಷೇಧಿತ ನೋಟುಗಳಲ್ಲಿ 99% ನೋಟುಗಳೂ ಬ್ಯಾಂಕುಗಳಿಗೆ ಮರಳಿ ಬಂದಿವೆ ಎಂದು ಅದು ಹೇಳಿತು. ಈ ಮುಖಾಂತರ ನೋಟು ನಿಷೇಧ ಎಂಬ ಪ್ರಕ್ರಿಯೆಯೇ ಅತೀ ದೊಡ್ಡ ವಿಫಲ ಪ್ರಯೋಗ ಎಂಬುದಾಗಿ ಸಾಬೀತಾಯಿತು. ಇದರ ಬೆನ್ನಿಗೇ ಕೇಂದ್ರ ಸರಕಾರವು ಜಿಎಸ್‍ಟಿ ತೆರಿಗೆ ಪದ್ಧತಿಯನ್ನು ಜನರ ಮೇಲೆ ಹೇರಿತು. ಸದ್ಯ ನೋಟು ನಿಷೇಧ ಮತ್ತು ಜಿಎಸ್‍ಟಿಗಳು ಸೇರಿಕೊಂಡು ದೇಶದ ಅರ್ಥವ್ಯವಸ್ಥೆಯನ್ನೇ ಅಲುಗಾಡಿಸುವ ಹಂತಕ್ಕೆ ತಲುಪಿಬಿಟ್ಟಿದೆ. ಈ ವರೆಗೆ ಪ್ರಧಾನಿ ನರೇಂದ್ರ ಮೋದಿಯವರಲ್ಲಿ ‘ಅಚ್ಛೇ ದಿನ್’ ಅನ್ನು ಕನವರಿಸುತ್ತಿದ್ದ ಮತ್ತು ಒಳಗೊಳಗೇ ಸುಖಿಸುತ್ತಿದ್ದವರಲ್ಲಿ ಅನೇಕರು ತಮ್ಮ ನಿರಾಶೆಯನ್ನು ಒಬ್ಬೊಬ್ಬರಾಗಿ ಹಂಚಿಕೊಳ್ಳತೊಡಗಿದ್ದಾರೆ. ಸಣ್ಣ-ಪುಟ್ಟ ವ್ಯಾಪಾರಿಗಳು, ಉದ್ದಿಮೆದಾರರು ನೋಟು ನಿಷೇಧದ ಆರಂಭದಲ್ಲಿಯೇ ಅದರ ಪರಿಣಾಮವನ್ನು ಎದುರಿಸತೊಡಗಿದ್ದರು. ಇವರಲ್ಲಿ ನರೇಂದ್ರ ಮೋದಿಯವರ ಬಗ್ಗೆ ಭಾರೀ ನಿರೀಕ್ಷೆ ಇಟ್ಟುಕೊಂಡಿಲ್ಲದ ಮಂದಿ ಆರಂಭದಲ್ಲೇ ತಮ್ಮ ಆತಂಕವನ್ನು ಸಂದರ್ಭಾನುಸಾರ ಹಂಚಿಕೊಂಡೂ ಇದ್ದರು. ಆದರೆ, ಮೋದಿ ಬೆಂಬಲಿಗ ವರ್ತಕರು ಮತ್ತು ಜನಸಾಮಾನ್ಯರು ಅಷ್ಟು ಬೇಗ ಒಪ್ಪಿಕೊಳ್ಳಲು ಸಿದ್ಧರಾಗಿರಲಿಲ್ಲ. ವ್ಯಾಪಾರ-ವಹಿವಾಟುಗಳ ಮೇಲೆ ನೋಟು ನಿಷೇಧದಿಂದ ಅಡ್ಡ ಪರಿಣಾಮ ಉಂಟಾಗಿದ್ದರೂ ಮತ್ತು ವ್ಯವಹಾರಗಳಲ್ಲಿ ತೀವ್ರ ಹಿನ್ನಡೆ ಎದುರಾಗಿದ್ದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳುವುದಕ್ಕೆ ಅವರು ಹಿಂಜರಿಕೆ ತೋರಿದ್ದರು. ಇದಕ್ಕೆ ಇರುವ ಇನ್ನೊಂದು ಕಾರಣ, ಭ್ರಮೆ. ಮಾಧ್ಯಮಗಳು ಮೋದಿಯವರ ಸುತ್ತ ಅಂಥದ್ದೊಂದು ಭ್ರಮೆಯನ್ನು ಹುಟ್ಟು ಹಾಕಿದ್ದುವು. ಅಳೆದೂ ತೂಗಿ ಆಡುವ ಮನ್‍ಮೋಹನ್ ಸಿಂಗ್‍ರ ಮಾತಿಗಿಂತ ವಾಚಾಳಿಯಾಗಿರುವ ಮೋದಿಯವರನ್ನು ಅವು ಭಾರತದ ವಿಮೋಚಕನಂತೆ ಬಿಂಬಿಸಿದುವು. ಕಾಂಗ್ರೆಸ್‍ಗೆ 60 ವರ್ಷಗಳನ್ನು ಕೊಟ್ಟು ಕೆಟ್ಟೆವು ಎಂದು ಜನರು ಅಂದುಕೊಳ್ಳುವಷ್ಟರ ಮಟ್ಟಿಗೆ ದೇಶ ಭ್ರಮೆಯಲ್ಲಿ ತೇಲತೊಡಗಿತು. ಹೀಗೆ ಭ್ರಮೆ ಮತ್ತು ನಿರೀಕ್ಷೆಗಳ ಮೇಲೆ ಬದುಕತೊಡಗಿದ ಜನರನ್ನು ಅರ್ಥತಜ್ಞನೂ ಅಲ್ಲದ, ಪ್ರಬಲ ವೈಚಾರಿಕ ನೆಲೆಗಟ್ಟನ್ನೂ ಹೊಂದಿಲ್ಲದ ಮತ್ತು ಆರ್ಥಿಕ ಒಳ-ಹೊರಗನ್ನು ವಿಶ್ಲೇಷಣೆಗೆ ಒಳಪಡಿಸಲೂ ಶಕ್ತರಲ್ಲದ ಮೋದಿಯವರು ಪ್ರಯೋಗಕ್ಕೆ ಒಡ್ಡಿದರು.
     ಇದೀಗ ಆ ಭ್ರಮೆಯಲ್ಲಿ ನಿಧಾನಕ್ಕೆ ಬಿರುಕುಗಳು ಮೂಡತೊಡಗಿವೆ. ಕವಿದ ಪೊರೆ ಕಳಚಿಕೊಂಡು ವಾಸ್ತವ ಭಾರತ ಕಾಣತೊಡಗಿದೆ. ಸಣ್ಣ ಉದ್ದಿಮೆಗಳು ಈಗಲೂ ಸಾಧ್ಯವಾಗದೇ ಒದ್ದಾಡುತ್ತಿವೆ. ಕೈಗಾರಿಕೆಗಳಿಗೆ ಬಡಿದಿರುವ ಗ್ರಹಣ ಇನ್ನೂ ಬಿಟ್ಟಿಲ್ಲ. ವ್ಯಾಪಾರ-ವಹಿವಾಟುಗಳಲ್ಲಿ ಕಾಣಿಸಿಕೊಂಡಿದ್ದ ನಿಧಾನತೆ ಹಾಗೆಯೇ ಮುಂದುವರಿದಿದೆ. ಉತ್ಪಾದನೆ ಕುಂಠಿತಗೊಂಡಿದೆ. ರಫ್ತು ವ್ಯವಹಾರಗಳಲ್ಲಿ ಕಾಣಿಸಿಕೊಂಡಿದ್ದ ಇಳಿಮುಖದಲ್ಲಿ ಏನೇನೂ ಬದಲಾವಣೆಯಾಗಿಲ್ಲ. ಸಣ್ಣ-ಪುಟ್ಟ ಬ್ಯಾಂಕ್‍ಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬಹುದು ಎಂಬ ಭಯಮಿಶ್ರಿತ ಮಾತುಗಳೂ ಸಾರ್ವಜನಿಕವಾಗಿ ಕೇಳಿ ಬರತೊಡಗಿವೆ. ಸುಬ್ರಹ್ಮಣ್ಯ ಸ್ವಾಮಿಯವರ ಹೇಳಿಕೆಯೂ ಇಂಥ ಸಾಧ್ಯತೆಯೆಡೆಗೇ ಬೊಟ್ಟು ಮಾಡುತ್ತಿವೆ. ಆದ್ದರಿಂದ ಕೇಂದ್ರ ಸರಕಾರವು ಆಗಿರುವ ವೈಫಲ್ಯವನ್ನು ಒಪ್ಪಿಕೊಂಡು ಅರ್ಥವ್ಯವಸ್ಥೆಯ ಪುನಶ್ಚೇತನಕ್ಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ಗಿಮಿಕ್‍ಗಳು ಜನರನ್ನು ಮರುಳುಗೊಳಿಸಬಹುದು, ಆದರೆ ದೇಶವನ್ನಲ್ಲ. ದೇಶವೆಂಬ ವ್ಯವಸ್ಥೆ ಗಿಮಿಕ್‍ಗಳಾಚೆಗಿನ ವಾಸ್ತವ. ಈ ವಾಸ್ತವಕ್ಕೆ ಮುಖಾಮುಖಿಯಾಗಬೇಕಾದುದು ಇಂದಿನ ಅಗತ್ಯ.

ಗಂಗೆಯಲ್ಲಿ ಸ್ನಾನ ಮಾಡದ ಸಾಧುಗಳು ಮತ್ತು ಹಬ್ಬ

        ಹಿರಿಯ ಪರಿಸರತಜ್ಞ ಮತ್ತು ನ್ಯಾಯವಾದಿಯಾಗಿರುವ ಸಂಜಯ್‍ ಉಪಾಧ್ಯಾಯ ಎಂಬವರು ಕಳೆದ ತಿಂಗಳು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದ ದೂರು ಎಷ್ಟು ಮಹತ್ವಪೂರ್ಣವಾದುದುಎಂಬುದನ್ನು ಕಳೆದವಾರ ಗಂಗೆ ಸಾಬೀತು ಪಡಿಸಿದ್ದಾಳೆ. ದೇಶದ ಅನೇಕಾರು ಆಶ್ರಮಗಳ ಸಾಧುಗಳು ಗಂಗೆಯಲ್ಲಿ ಸ್ನಾನ ಮಾಡಲು ಕಳೆದವಾರ ನಿರಾಕರಿಸಿದರು. ವಿಜಯದಶಮಿಯಂದು ಸಾಧುಗಳು ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುವುದು ಸಂಪ್ರದಾಯ. ಆದರೆ ಈ ಸಂಪ್ರದಾಯವನ್ನು ಪಾಲಿಸಲೂ ಸಾಧ್ಯವಾಗದಷ್ಟು ಗಂಗಾನದಿ ಮಾಲಿನ್ಯದಿಂದ ತುಂಬಿ ಹೋಗಿದೆ ಎಂದವರು ವಿಷಾದಿಸಿದರು. 9 ದಿನಗಳ ಕಾಲ ಆಚರಿಸಲಾದ ವಿಜಯದಶಮಿ ಹಬ್ಬ ಮತ್ತು ದುರ್ಗಾದೇವಿ ಮೂರ್ತಿಯ ವಿಸರ್ಜನೆಯಿಂದಾಗಿ ಗಂಗೆ ಕೊಳಕಾಗಿದ್ದಾಳೆ ಎಂಬುದು ಅವರ ದೂರು. ಗಂಗೆಯ ತಟದಲ್ಲಿರುವ ಕಂಪೆನಿಗಳ ತ್ಯಾಜ್ಯಕ್ಕೂ ಈ ಕೊಳಕಿನಲ್ಲಿ ಪಾತ್ರ ಇದೆ ಎಂಬುದೂ ಅಷ್ಟೇ ಸತ್ಯ. ಒಂದುಕಡೆ, ಸ್ವಚ್ಛ ಭಾರತ ಅಭಿಯಾನ ಮತ್ತು ಬಯಲು ಶೌಚಮುಕ್ತ ಭಾರತಕ್ಕಾಗಿ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿದ್ದರೆ ಇನ್ನೊಂದೆಡೆ ನಂಬಿಕೆಯ ಹೆಸರಲ್ಲಿ ಪರಿಸರವನ್ನೇ ಕೊಳಕು ಮಾಡುವ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಹಾಗಂತ, ಇದು ಹಿಂದೂ ಧರ್ಮದ ಸಮಸ್ಯೆ ಅಲ್ಲ. ಇದು ಧರ್ಮಾತೀತ. ಕಂಪೆನಿಗಳು ಹೊರ ಹಾಕುವ ಅಪಾರ ಪ್ರಮಾಣದ ತ್ಯಾಜ್ಯಗಳಿಗೆ ನಾವು ಯಾವ ಧರ್ಮವನ್ನು ಹೊಣೆ ಮಾಡಬಹುದು? ಆ ಕಂಪೆನಿಗಳಲ್ಲಿ ದುಡಿಯುವುದರಲ್ಲಿ ಹಿಂದೂ, ಮುಸ್ಲಿಮ್, ಕ್ರೈಸ್ತರಾದಿಯಾಗಿ ಎಲ್ಲರೂ ಇರಬಹುದು. ಅದರ ಮಾಲಿಕ ನಿರ್ದಿಷ್ಟ ಧರ್ಮದೊಂದಿಗೆ ಗುರುತಿಸುತ್ತಲೂ ಇರಬಹುದು. ಹಾಗಂತ, ಮಾಲಿಕನ ಧರ್ಮವೇ ತ್ಯಾಜ್ಯ ನಿರ್ವಹಣೆಯ ವೈಫಲ್ಯಕ್ಕೆ ಕಾರಣ ಎಂದು ವಾದಿಸುವುದು ಮೂರ್ಖತನವಾಗುತ್ತದೆ. ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸುವುದಕ್ಕಿಂತ ತ್ಯಾಜ್ಯವನ್ನು ನದಿಯಲ್ಲೋ ಭೂಮಿಯ ಮೇಲೋ ಎಸೆಯುವುದರಿಂದ ಲಾಭದಾಯಕ ಎಂಬ ವ್ಯಾವಹಾರಿಕ ಲೆಕ್ಕಾಚಾರವೇ ಇದಕ್ಕೆಕಾರಣವಾಗಿರುತ್ತದೆ. ಅಂದಹಾಗೆ, ಕಂಪೆನಿಗಳು ಪ್ರತಿದಿನ ಹೊರಹಾಕುವ ತ್ಯಾಜ್ಯದ ಎದುರು ಹಬ್ಬಗಳ ಸಮಯದಲ್ಲಿ ಉಂಟಾಗುವ ತ್ಯಾಜ್ಯದ ಪ್ರಮಾಣ ಕಡಿಮೆಯೇ ಆಗಿದ್ದರೂ ಪರಿಣಾಮದ ದೃಷ್ಟಿಯಿಂದ ಇದು ದೊಡ್ಡದೇ. ಯಾಕೆಂದರೆ, ಹಬ್ಬಗಳೆಂಬುದು ಧರ್ಮಸೂಚಕ. ಚೌತಿ, ವಿಜಯದಶಮಿ, ಕೃಷ್ಣಾಷ್ಟಮಿ, ಈದ್, ಕ್ರಿಸ್‍ಮಸ್‍ಗಳು ನಿರ್ದಿಷ್ಟ ಧರ್ಮದೊಂದಿಗೆ ತಳಕು ಹಾಕಿಕೊಂಡೇ ಆಚರಿಸಲ್ಪಡುತ್ತವೆ. ಹಬ್ಬಗಳೆಂಬುದು ಕಂಪೆನಿಗಳಂಥಲ್ಲ. ಕಂಪೆನಿಗಳೂ ಸಹಿತ ಸಮಾಜಕ್ಕೆ ಮೌಲ್ಯವನ್ನು ಮತ್ತು ಮಾರ್ಗದರ್ಶನವನ್ನು ನೀಡುತ್ತವೆ ಎಂಬುದು ಹಬ್ಬಗಳ ವಿಶೇಷತೆ. ಹೀಗಿರುವಾಗ ಸ್ವಚ್ಛತೆಯ ವಿಷಯದಲ್ಲಿಅಥವಾ ಪರಿಸರ ಕಾಳಜಿಯ ವಿಷಯದಲ್ಲಿ ಒಂದು ಧರ್ಮಕ್ಕೆ ಸ್ಪಷ್ಟ ನಿಲುವುಗಳು ಇಲ್ಲದೇಇರುವುದಕ್ಕೆ ಸಾಧ್ಯವೇಇಲ್ಲ. ಕಳೆದ ಗಣೇಶ ಚತುರ್ಥಿಯ ಸಮಯದಲ್ಲಿ ಸಂಜಯ್‍ ಉಪಾಧ್ಯಾಯರು ಹಸಿರು ನ್ಯಾಯಾಧಿಕರಣಕ್ಕೆಅರ್ಜಿ ಸಲ್ಲಿಸಿದ್ದು ಈ ಕಾರಣದಿಂದಲೇ. ರಾಜಧಾನಿ ದೆಹಲಿಯಲ್ಲಿ ಹರಿಯುವ ಯಮುನಾ ನದಿಯು ವಿಸರ್ಜಿತ ಗಣೇಶ ಮೂರ್ತಿಗಳಿಂದಾಗಿ ಮಾಲಿನ್ಯಗೊಂಡಿದೆ ಎಂದವರು ಹೇಳಿದ್ದರು. ಮಣ್ಣಿನಲ್ಲಿ ಮಾಡಿರುವ ಮೂರ್ತಿಗಳು ನೀರಿನಲ್ಲಿ ಕರಗುತ್ತವೆಯೇ ಹೊರತು ಪ್ಯಾರಿಸ್ ಪ್ಲಾಸ್ಟರ್‍ನಿಂದ ಮಾಡಿದವುಗಳು ಕರಗುವುದಿಲ್ಲ. ವಿಷಾದ ಏನೆಂದರೆ, ಯಮುನೆಯಲ್ಲಿ ತೇಲುತ್ತಿರುವ ಅಸಂಖ್ಯ ಗಣೇಶ ಮೂರ್ತಿಗಳು ಪ್ಯಾರಿಸ್ ಪ್ಲಾಸ್ಟರ್‍ನಿಂದ ಮಾಡಿದವುಗಳು. ಕೇವಲ ದೆಹಲಿ ನಗರವೊಂದರಲ್ಲೇ 200ರಷ್ಟು ದುರ್ಗಾಪೂಜಾ ಪೆಂಡಾಲ್‍ಗಳಿವೆ ಮತ್ತು ಅವುಗಳಿಂದ ಅನೇಕ ಮೂರ್ತಿಗಳು ಯಮುನೆಯಲ್ಲಿ ವಿಸರ್ಜಿಸಲ್ಪಡುತ್ತವೆಎಂದು ವರದಿಗಳು ಹೇಳುತ್ತವೆ. ಅಲ್ಲದೇ ಮನೆಗಳಿಂದಲೂ ಇಂಥ ಮೂರ್ತಿಗಳನ್ನು ತಂದು ಯಮುನೆಯಲ್ಲಿ ವಿಸರ್ಜಿಸಲಾಗುತ್ತದೆ. ಹೀಗೆ ವಿಸರ್ಜಿಸಲಾಗುವ ಮೂರ್ತಿಗಳಲ್ಲಿ ಹೆಚ್ಚಿನವು ಪ್ಯಾರಿಸ್ ಪ್ಲಾಸ್ಟರ್‍ನಿಂದ ರಚಿಸಿದವುಗಳಾಗಿವೆ ಎಂದೂ ವರದಿಗಳು ಹೇಳುತ್ತಿವೆ. ರಾಷ್ಟ್ರೀಯ ಹಸಿರು ನ್ಯಾಯಾಧೀಕರಣವಂತೂ ಪ್ಯಾರಿಸ್ ಪ್ಲಾಸ್ಟರ್‍ನಿಂದ ಮಾಡಲಾಗುವ ಮೂರ್ತಿಗಳನ್ನು 2015 ರಲ್ಲೇ ಸಂಪೂರ್ಣವಾಗಿ ನಿಷೇಧಿಸಿದೆ. ಈ ವಿಷಯದಲ್ಲಿ ಸಮಾಜ ಎಚ್ಚೆತ್ತುಕೊಂಡಿಲ್ ಲಅನ್ನುವುದಕ್ಕೆ ಯಮುನೆಯಲ್ಲಿ ತೇಲುತ್ತಿರುವ ಮೂರ್ತಿಗಳು ಮತ್ತುಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ನಿರಾಕರಿಸಿರುವ ಸಾಧುಗಳೇ ಸಾಕ್ಷಿ.
    ಸಮಾಜದ ಆರೋಗ್ಯವನ್ನು ಕೆಡಿಸುವರೂಪದಲ್ಲಿ ನಿಜವಾದ ಧಾರ್ಮಿಕ ಆಚರಣೆಯೊಂದು ಇರುವುದಕ್ಕೆ ಸಾಧ್ಯವೇ ಇಲ್ಲ ಎಂದು ನಾವು ವಾದಿಸುವಾಗುವಲ್ಲೆಲ್ಲ, ಹಾಗಾದರೆ ಇವೆಲ್ಲ ಏನು ಅನ್ನುವ ಪ್ರಶ್ನೆಯು ತಕ್ಷಣದ ಪ್ರತಿಕ್ರಿಯೆಯಾಗಿ ನಮ್ಮೆದುರು ನಿಲ್ಲುತ್ತದೆ. ಕೊಳಕು- ಧರ್ಮದ ಪ್ರತೀಕ ಅಲ್ಲ. ಅದು ಧರ್ಮವನ್ನು ಪಾಲಿಸದವರ ಪ್ರತೀಕ. ನಿಜವಾಗಿ, ಒಂದು ಧರ್ಮವನ್ನು ಅದು ಪ್ರತಿಪಾದಿಸುವ ವಿಷಯಗಳ ಆಧಾರದ ಮೇಲೆ ಅಳಿಯಬೇಕೆ ಹೊರತು ಅದರ ಅನುಯಾಯಿಗಳೆಂದು ಗುರುತಿಸಿಕೊಂಡವರ ನಡವಳಿಕೆಯ ಮೇಲೆ ಅಲ್ಲ. ಅನುಯಾಯಿಗಳ ಧರ್ಮನಿಷ್ಠೆ, ನಿಯಮ ಪಾಲನೆಗಳು ಸದಾಕಾಲ ಏಕ ಪ್ರಕಾರವಾಗಿರುತ್ತವೆ ಎಂದು ಹೇಳುವ ಹಾಗಿಲ್ಲ. ಸಂದರ್ಭ ಮತ್ತು ಸನ್ನಿವೇಶಗಳು ಅವರನ್ನು ನಿಯಮ ಉಲ್ಲಂಘಕರಾಗಿ ಮಾರ್ಪಡಿಸಬಹುದು. ಧರ್ಮ ಅನುಯಾಯಿಗಳಾಗಿ ಗುರುತಿಸಿಕೊಂಡೇ ಸ್ವ ಲಾಭಕ್ಕಾಗಿ ಧರ್ಮದ ನಿಯಮಗಳನ್ನು ಅವರು ಉಲ್ಲಂಘಿಸಬಹುದು. ಹಾಗಂತ, ಅದಕ್ಕೆಧರ್ಮದ ಮೂಲ ತತ್ವಗಳು ಹೊಣೆಯಾಗುವುದಿಲ್ಲ. ಇಸ್ಲಾಮ್‍ ಧರ್ಮವು ಸ್ವಚ್ಛತೆಯನ್ನು ಧರ್ಮದ ಅರ್ಧಭಾಗವೆಂದು ಘೋಷಿಸಿದೆ. ಎಲ್ಲಿಯ ವರೆಗೆಂದರೆ ನಡೆಯುವ ದಾರಿಯಲ್ಲಿ ಸ್ವಚ್ಛತೆಗೆ ತಡೆ ಒಡ್ಡುವಂತದ್ದು ಇದ್ದರೆ ಅದನ್ನು ನೀಗಿಸುವುದೂ ಧರ್ಮ ಎಂದು ಅದು ಹೇಳಿದೆ. ಐದು ಬಾರಿಯ ಕಡ್ಡಾಯ ನಮಾಝïಗಿಂತ ಮೊದಲು ಐದು ಬಾರಿಯೂ ಕಡ್ಡಾಯವಾಗಿ ಅಂಗಾಂಗಗಳನ್ನು ನೀರಿನಲ್ಲಿ ಸ್ವಚ್ಛಗೊಳಿಸಬೇಕೆಂದು ಅದುಆದೇಶ ನೀಡಿದೆ. ಹಬ್ಬಗಳ ಸಮಯದಲ್ಲಿ ಪರಿಸರಕ್ಕೆ ಹಾನಿ ಮಾಡುವ ಯಾವ ಆಚರಣೆಯನ್ನೂ ಅದು ಯಾರ ಮೇಲೆಯೂ ಹೇರಿಲ್ಲ. ದುರಂತ ಏನೆಂದರೆ, ಇವತ್ತು ಹಬ್ಬಗಳಿಗಿಂತ ಒಂದು ವಾರ ಮೊದಲೇ ಮಾಧ್ಯಮಗಳು ‘ಪರಿಸರ ಸ್ನೇಹಿ ಹಬ್ಬ’ದ ಬಗ್ಗೆ ಲೇಖನಗಳನ್ನು ಪ್ರಕಟಿಸುತ್ತವೆ. ಸರಕಾರದ ಜಾಹೀರಾತು ಪ್ರಕಟವಾಗುತ್ತದೆ. ವಿವಿಧ ಸಭೆ-ಸಮಾರಂಭಗಳಲ್ಲಿ ಪರಿಸರ ಸ್ನೇಹಿ ಹಬ್ಬದ ಅಗತ್ಯಗಳನ್ನು ಒತ್ತಿ ಹೇಳಲಾಗುತ್ತದೆ. ನಿಜವಾಗಿ, ಇದು ನಾವೆಲ್ಲ ಸೇರಿಕೊಂಡು ಹಬ್ಬಗಳಿಗೆ ಮತ್ತು ಅದು ಪ್ರತಿನಿಧಿಸುವ ಧರ್ಮಗಳಿಗೆ ಮಾಡುವ ಅವಮಾನ. ಹಬ್ಬಯಾವತ್ತೂ ಪರಿಸರ ವಿರೋಧಿಯಾಗಲು ಸಾಧ್ಯವೇ ಇಲ್ಲ. ಒಂದು ಹಬ್ಬದ ಆಚರಣೆಯು ಪರಿಸರ ವಿರೋಧಿಯಾಗಿದೆ ಎಂದು ಹೇಳುವುದು ಒಂದೋ ಆ ಹಬ್ಬವನ್ನು ಆಚರಿಸುವವರಲ್ಲಿ ಪರಿಸರ ಕಾಳಜಿ ಇಲ್ಲ ಅಥವಾ ಆ ಹಬ್ಬಯಾವ ಧರ್ಮವನ್ನು ಪ್ರತಿನಿಧಿಸುತ್ತದೋ ಆ ಧರ್ಮವು ಪರಿಸರ ವಿರೋಧಿಯಾಗಿದೆ ಎಂದು ಸಾರಿದಂತಾಗುತ್ತದೆ.
ಇವತ್ತಿನ ತುರ್ತುಅಗತ್ಯಏನೆಂದರೆ, ಹಬ್ಬಗಳು ಸಾಮಾಜೀಕರಣಗೊಳ್ಳುವುದು. ಪರಿಸರ ಸ್ನೇಹಿ, ಸಮಾಜ ಸ್ನೇಹಿ ಮತ್ತು ಮನುಷ್ಯ ಸ್ನೇಹಿಯಾಗುವುದು. ಹಬ್ಬದ ಸಂತೋಷವು ನಿರ್ದಿಷ್ಟಧರ್ಮದ ಅನುಯಾಯಿಗಳಿಗೆ ಮಾತ್ರ ಸೀಮಿತವಾಗದೇ ಸಮಾಜದ ಎಲ್ಲರ ಸಂತೋಷಕ್ಕೂ ಕಾರಣವಾಗುವುದು. ಆದರೆಗಂಗೆಯಲ್ಲಿ ಪವಿತ್ರ ಸ್ನಾನ ಮಾಡಲು ಸಾಧುಗಳು ನಿರಾಕರಿಸಿರುವ ಘಟನೆಯುಇಲ್ಲೆಲ್ಲೋ ತೂತಾಗಿರುವುದನ್ನು ಸೂಚಿಸುತ್ತಿದೆ. ಇದು ವಿಷಾದನೀಯ.

Monday 30 October 2017

ಟಿಪ್ಪು ಚರ್ಚೆ: ಯಾರ ಅಗತ್ಯ?

ಟಿಪ್ಪು ಆದ ಯಡಿಯೂರಪ್ಪ ಮತ್ತು ಶೆಟ್ಟರ್
           ಸಂಶೋಧಕ ಬಿ. ಶೇಖ್ ಅಲಿಯವರ `ಟಿಪ್ಪು ಸುಲ್ತಾನ್: ಎ ಕ್ರುಸೇಡರ್ ಫಾರ್ ಚೇಂಜ್' ಎಂಬ ಸಂಶೋಧನಾತ್ಮಕ ಕೃತಿಯೊಂದಿದೆ. ಸುಮಾರು 6 ವರ್ಷಗಳ ಹಿಂದೆ ಪ್ರಕಟವಾದ ಈ ಕೃತಿಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಬಿಜೆಪಿಯ ಜಗದೀಶ್ ಶೆಟ್ಟರ್ ಅವರ ಅನಿಸಿಕೆಗಳೂ ಇವೆ. ಈ ಅನಿಸಿಕೆಯಲ್ಲಿ ಅವರು ಟಿಪ್ಪುವನ್ನು ಮೈಸೂರು ಸಾಮ್ರಾಜ್ಯದ ಹುಲಿ ಎಂದು ಕರೆದಿದ್ದಾರೆ. ವಯಸ್ಸಿಗೆ ಮೀರಿದ ಪ್ರಬುದ್ಧತೆಯನ್ನು ಹೊಂದಿದ್ದ ಸುಧಾರಕ ಎಂದು ಕೊಂಡಾಡಿದ್ದಾರೆ. ಟಿಪ್ಪುವಿನ ರಾಷ್ಟ್ರ ಪರಿಕಲ್ಪನೆ, ಕೈಗಾರಿಕಾ ನೀತಿ ಮತ್ತು ಸೈನಿಕ ಕೌಶಲ್ಯಗಳನ್ನು ಹೊಗಳಿದ್ದಾರೆ. ಇನ್ನು ಬಿಜೆಪಿಯ ರಾಜ್ಯಾಧ್ಯಕ್ಷರಾಗಿರುವ ಯಡಿಯುರಪ್ಪನವರಂತೂ ಟಿಪ್ಪು ಗುಣಗಾನದಲ್ಲಿ ಜಗದೀಶ್ ಶೆಟ್ಟರನ್ನೂ ಮೀರಿಸಿದ್ದಾರೆ. ಟಿಪ್ಪುವಿಗೆ ಸಂಬಂಧಿಸಿದ ಒಂದು ಕಾರ್ಯಕ್ರಮದಲ್ಲಿ ಅವರು ಟಿಪ್ಪು ಪೇಟವನ್ನು ಮುಡಿಗೇರಿಸಿಕೊಂಡು ಥೇಟ್ ಟಿಪ್ಪು ಸುಲ್ತಾನನಂತೆ ಫೋಸು ಕೊಟ್ಟಿದ್ದಾರೆ. ಇದಂತೂ ಜಗದೀಶ್ ಶೆಟ್ಟರ್ ಅವರ ಅನಿಸಿಕೆಯ ಬಳಿಕ ನಡೆದ ಘಟನೆ. ಕಳೆದ ವರ್ಷ ಟಿಪ್ಪು ಪೇಟದಾರಿ ಯಡಿಯೂರಪ್ಪ ಅವರ ಚಿತ್ರವು ಮಾಧ್ಯಮಗಳಲ್ಲಿ ಪ್ರಕಟವೂ ಆಗಿತ್ತು. ಪ್ರಶ್ನೆಯಿರುವುದೂ ಇಲ್ಲೇ. ಐದಾರು ವರ್ಷಗಳ ಹಿಂದೆ ಟಿಪ್ಪುವಿನಲ್ಲಿ ಸಕಾರಾತ್ಮಕವಾದುದನ್ನು ಮಾತ್ರ ಕಂಡ ಬಿಜೆಪಿಗೆ ಈಗ ಏನಾಗಿದೆ? ಅದೇಕೆ ಮಾತು ಹೊರಳಿಸುತ್ತಿದೆ? ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ತನ್ನ ಹೆಸರನ್ನೇ ನಮೂದಿಸಬಾರದೆಂದು ಬಿಜೆಪಿಯ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳುವಷ್ಟು ಬದಲಾದದ್ದು ಏಕೆ? ಟಿಪ್ಪು ಸುಲ್ತಾನ್ ಗತಿಸಿ ಶತಮಾನವೊಂದು ಕಳೆದಿದೆ. ಈ ಅವಧಿಯೊಳಗೆ ಟಿಪ್ಪುವಿನ ಬಗ್ಗೆ ನೂರಾರು ಪುಸ್ತಕಗಳು ಬಿಡುಗಡೆಗೊಂಡಿವೆ. ಟಿಪ್ಪುವನ್ನೇ ಕೇಂದ್ರ ಬಿಂದುವಾಗಿಟ್ಟುಕೊಂಡು ಸಂಜಯ್ ಖಾನ್ ಅವರು ಟೆಲಿ ಧಾರಾವಾಹಿ ನಿರ್ಮಿಸಿದ್ದಾರೆ. ಅನೇಕಾರು ಕಂತುಗಳಲ್ಲಿ ದೂರದರ್ಶನವೇ ಅದನ್ನು ಪ್ರಸಾರ ಮಾಡಿದೆ. ಅದಲ್ಲದೇ ಅಸಂಖ್ಯ ಬೀದಿ ನಾಟಕಗಳು, ಜನಪದೀಯ ಹಾಡುಗಳು, ಪಾಡ್ಡನ ಗಳಲ್ಲಿ ಟಿಪ್ಪುವಿನ ಸ್ಮರಣೆ ಇದೆ. ಒಂದು ವೇಳೆ, ಬಿಜೆಪಿಗೆ ಟಿಪ್ಪುವಿನ ಬಗ್ಗೆ ತಕರಾರು ಇರುವುದು ನಿಜವೇ ಆಗಿದ್ದರೆ 6 ವರ್ಷಗಳ ಹಿಂದೆಯೂ ಅದು ಇರಬೇಕಿತ್ತು. ಯಡಿಯೂರಪ್ಪರು ಸ್ವತಃ ಟಿಪ್ಪು ವಿನಂತಾಗುವ ಸಂದರ್ಭದಲ್ಲೂ ಅದು ವ್ಯಕ್ತವಾಗಬೇಕಿತ್ತು. ಆದರೆ, 6 ವರ್ಷಗಳ ಹಿಂದೆ ಟಿಪ್ಪುವನ್ನು ಸುಧಾರಕನೆಂದು ಕರೆದ ಮತ್ತು ಸ್ವತಃ ಟಿಪ್ಪುವಿನಂತೆ ವೇಷ ತೊಟ್ಟ ಪಕ್ಷವೊಂದು ಕಳೆದ ಎರಡು ವರ್ಷಗಳಿಂದ ಟಿಪ್ಪುವನ್ನು ಕ್ರೂರಿ, ಮತಾಂಧ, ಹಿಂದೂ ವಿರೋಧಿ ಎಂದೆಲ್ಲಾ ಕರೆಯುತ್ತಿರು ವುದು ಏನನ್ನು ಸೂಚಿಸುತ್ತದೆ? ದ್ವಂದ್ವ, ಇತಿಹಾಸದ ವಿಸ್ಮøತಿ, ಅಗ್ಗದ ರಾಜಕೀಯ ಮತ್ತು...?
     ನಿಜವಾಗಿ ಈ ದ್ವಂದ್ವ ಇಲ್ಲಿಗೇ ಮುಗಿಯುವುದಿಲ್ಲ. 2014ರ ಆರಂಭದಲ್ಲಿ ಮನ್‍ಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತಕೂಟವು ನೋಟು ರದ್ಧತಿಯ ಬಗ್ಗೆ ಮಾತಾಡಿತ್ತು. 2005 ಮಾರ್ಚ್ 31ರ ಮೊದಲು ಪ್ರಕಟವಾದ ನೋಟುಗಳನ್ನು ರದ್ದುಪಡಿಸುವುದು ಅದರ ಉದ್ದೇಶವಾಗಿತ್ತು. ಆ ಸಂದರ್ಭದಲ್ಲಿ ಮಾಧ್ಯಮಗಳೂ ಚರ್ಚೆ ನಡೆಸಿದ್ದುವು. ಆಗ ಈ ಚಿಂತನೆಗೆ ಪ್ರಬಲ ವಿರೋಧ ವ್ಯಕ್ತವಾದದ್ದೇ ಬಿಜೆಪಿಯಿಂದ. ಆಗ ಪಕ್ಷದ ವಕ್ತಾರೆಯಾಗಿದ್ದ ಮೀನಾಕ್ಷಿ ಲೇಖಿಯವರು ನೋಟು ರದ್ಧತಿ ಚಿಂತನೆಯನ್ನು `ಬಡವ ವಿರೋಧಿ ನಿಲುವು’ ಎಂದೇ ಟೀಕಿಸಿದ್ದರು. ವಿದೇಶದಿಂದ ಕಪ್ಪು ಹಣವನ್ನು ಮರಳಿ ತರಬೇಕೆಂಬ ಅಗ್ರಹವನ್ನು ಮರೆಸಲು ಯುಪಿಎ ಕೂಟವು ನಡೆಸುತ್ತಿರುವ ತಂತ್ರ ಇದು ಎಂದೂ ವಿಶ್ಲೇಷಿಸಿದ್ದರು. ನೋಟು ರದ್ಧತಿಯನ್ನು ವಿರೋಧಿಸಿ ಅವರು ಮಾತಾಡಿದ್ದ ವೀಡಿಯೋ ಕಳೆದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇನ್ನೊಂದು ಆಧಾರ್ ಕಾರ್ಡ್. ಅರುಣ್ ಜೇಟ್ಲಿಯವರು ಆಧಾರ್ ಕಾರ್ಡನ್ನು ತೀವ್ರವಾಗಿ ವಿರೋಧಿಸಿದ್ದರು. ಜಿಎಸ್ಟಿ ಮತ್ತು ಎಫ್‍ಡಿಐ (ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ 100% ನೇರ ವಿದೇಶಿ ಹೂಡಿಕೆ)ಯನ್ನು ಖಂಡಿಸಿದ್ದರು. ದುರಂತ ಏನೆಂದರೆ, ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಈ ಮೂರೂ ವಿಷಯಗಳ ಮೇಲೆ ಗಾಢ ವಿಸ್ಮøತಿಯನ್ನು ತೋರಿದೆ. ಅಧಿಕಾರದಲ್ಲಿರುವಾಗ ಒಂದು ನಿಲುವು ಮತ್ತು ಅಧಿಕಾರ ಕೈ ತಪ್ಪಿದಾಗ ಇನ್ನೊಂದು ನಿಲುವು-ಇದಕ್ಕೆ ಸಂದರ್ಭ ಸಾಧಕತನ ಅನ್ನುವುದಕ್ಕಿಂತ ಉತ್ತಮ ಹೆಸರು ಬೇರೆ ಯಾವುದಿದೆ? ಒಂದು ವೇಳೆ, ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದರೆ ಅದು ಟಿಪ್ಪು ಜಯಂತಿ ಯನ್ನು ಸರಕಾರದ ಮತ್ತು ಪಕ್ಷದ ಅಧಿಕೃತ ಕಾರ್ಯಕ್ರಮವಾಗಿ ಘೋಷಿಸದೆಂದು ಹೇಗೆ ಹೇಳು ವುದು? ಟಿಪ್ಪು ಜಯಂತಿಯ ಪ್ರಯುಕ್ತ ಸರಕಾರಿ ರಜೆ ಸಾರದೆಂದು ಹೇಗೆ ನಂಬುವುದು?
     ನಿಜವಾಗಿ ಬಿಜೆಪಿಗೆ ಸದ್ಯ ಸಮಾಜವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವ ಇಶ್ಯೂವೊಂದರ ಅಗತ್ಯ ಇದೆ. ಟಿಪ್ಪು ಅದಕ್ಕೆ ಸೂಕ್ತ ವ್ಯಕ್ತಿ ಎಂದು ಅನಿಸಿದೆ. ಈ ಮೂಲಕ ಕೆಲವು ದಿನಗಳ ಮಟ್ಟಿಗೆ ಸುದ್ದಿಯಲ್ಲಿರುವುದನ್ನು ಅದು ಎದುರು ನೋಡುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು- ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಿ ಟಿಪ್ಪುವಿನ ನಿಜ ಇತಿಹಾಸವನ್ನು ಸಮಾಜದ ಮುಂದಿಡುವುದು. ಇನ್ನೊಂದು- ಟಿಪ್ಪುವಿನ ಕುರಿತಂತೆ ಯಾವುದೇ ಕಾರ್ಯಕ್ರಮ, ರಾಲಿ, ಚರ್ಚೆಗಳನ್ನು ಏರ್ಪಡಿಸದೇ ಮೌನವಾಗಿರುವುದು. ಟಿಪ್ಪು ಚರ್ಚೆಗೊಳಗಾಗಬೇಕಾದದ್ದು ಬಿಜೆಪಿಯ ಸದ್ಯದ ಅಗತ್ಯ. ಅದು ಸಕಾರಾತ್ಮಕವೋ ನಕಾರಾತ್ಮಕವೋ ಎಂಬುದು ಮುಖ್ಯ ಅಲ್ಲ. ಟಿಪ್ಪು ಚರ್ಚೆಯಲ್ಲಿರಬೇಕು ಮತ್ತು ಆ ಚರ್ಚೆಯ ಮರೆಯಲ್ಲಿ ಹಿಂದೂ ಧ್ರುವೀಕರಣ ನಡೆಸಬೇಕು. ಬಿಜೆಪಿ ಸಂಕಷ್ಟದಲ್ಲಿರುವಾಗಲೆಲ್ಲ ಅದನ್ನು ಪಾರುಗೊಳಿಸುತ್ತಿರುವುದು ಇಂಥ ಕೃತಕ ವಿಷಯಗಳೇ. ನೋಟು ರದ್ಧತಿ, ಜಿಎಸ್‍ಟಿ ಮತ್ತು ಉದ್ಯೋಗ ಕುಸಿತದ ಕಾರಣದಿಂದ ದೇಶದ ಪರಿಸ್ಥಿತಿ ತೀವ್ರ ಹದಗೆಟ್ಟಿರುವ ಈ ಸಮಯದಲ್ಲಿ ಅದು ತಾಜ್‍ಮಹಲ್ ಅನ್ನು ಚರ್ಚೆಗೆತ್ತಿಕೊಂಡಿದೆ. ಹಾಗಂತ ತಾಜ್‍ಮಹಲ್‍ನ ಇತಿಹಾಸ ಅದಕ್ಕೆ ಗೊತ್ತಿಲ್ಲ ಎಂದಲ್ಲ. ಅದೊಂದು ತಂತ್ರಗಾರಿಕೆ. ಬಿಜೆಪಿಗೆ ಇಂಥ ದೊಡ್ಡ ಇತಿಹಾಸವೇ ಇದೆ. ಆದ್ದರಿಂದ ಬಿಜೆಪಿ ತೋಡಿದ ಹಳ್ಳಕ್ಕೆ ಬೀಳದಂತೆ ಸಮಾಜ ಎಚ್ಚರಿಕೆ ವಹಿಸಬೇಕು. ಟಿಪ್ಪುವಿನ ಬಗ್ಗೆ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೊದಲು ಇದು ಎಷ್ಟು ಅಗತ್ಯ ಅನ್ನುವ ಬಗ್ಗೆ ಗಂಭೀರ ಅವಲೋಕನ ನಡೆಸಬೇಕು. ಟಿಪ್ಪುವಿನ ಇತಿಹಾಸವನ್ನು ಸಮಾಜಕ್ಕೆ ಪರಿಚಯಿಸಬೇಕು ಎಂಬ ಉಮೇದಿನಲ್ಲಿ ಹಮ್ಮಿಕೊಳ್ಳುವ ಕಾರ್ಯಕ್ರಮಗಳು ಅಂತಿಮವಾಗಿ ಬಿಜೆಪಿ ಲಾಭ ಮಾಡಿ ಕೊಡಬಲ್ಲುದೇ ಎಂಬುದೂ ಚರ್ಚೆಗೆಗೊಳಗಾಗ ಬೇಕು. ಟಿ.ವಿ. ಚಾನೆಲ್‍ಗಳು ತಮ್ಮ ಒಂದಷ್ಟು ಪ್ರೈಮ್‍ಟೈಂ ಅನ್ನು ಟಿಪ್ಪು ಚರ್ಚೆಗಾಗಿ ಮೀಸಲಿಡಬೇಕೆಂದು ಬಿಜೆಪಿ ಮನಸಾರೆ ಬಯಸುತ್ತಿದೆ. ಮುದ್ರಣ ಮಾಧ್ಯಮಗಳಲ್ಲಿ ಧಾರಾಳ ಲೇಖನ ಮತ್ತು ಸುದ್ದಿಗಳು ಬರುವುದನ್ನು ಅದು ನಿರೀಕ್ಷಿಸುತ್ತಿದೆ. ಈ ಬಯಕೆ ಮತ್ತು ನಿರೀಕ್ಷೆಗೆ ವಿರುದ್ಧವಾದ ಬೆಳವಣಿಗೆಗಳು ನಡೆಯುವುದೆಂದರೆ, ಅದು ಬಿಜೆಪಿಯ ಸೋಲು ಮತ್ತು ಟಿಪ್ಪುವಿನ ಗೆಲುವು. ಇದು ಸದ್ಯದ ಅಗತ್ಯವೂ ಹೌದು.

Saturday 21 October 2017

ಹಾಲಿವುಡ್‍ನ ಹೆಣ್ಣು ಎತ್ತಿರುವ ಪ್ರಶ್ನೆ

     ಕಳೆದ ಅಕ್ಟೋಬರ್ 12ರಂದು ದಿ ಹಿಂದೂ ಪತ್ರಿಕೆ ಎರಡು ಸುದ್ದಿಗಳನ್ನು ಒತ್ತು ಕೊಟ್ಟು ಪ್ರಕಟಿಸಿತು. ಒಂದು - ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಸಚಿನ್ ತೆಂಡುಲ್ಕರ್ ಅವರು ಜೊತೆಯಾಗಿ ಭಾಗವಹಿಸಿದ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ್ದರೆ, ಇನ್ನೊಂದು - ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ಹಾಲಿವುಡ್ ಚಿತ್ರ ನಿರ್ಮಾಪಕ ಹಾರ್ವೆ ವೆನ್‍ಸ್ಟಿನ್‍ಗೆ ಸಂಬಂಧಿಸಿದ್ದು. ‘ಹೆಣ್ಣು ಸಮಸ್ಯೆಯಲ್ಲ, ಪರಿಹಾರ, ಆಕೆ ಸಮಾಜದ ಆಸ್ತಿ..’ ಎಂದೆಲ್ಲ ಸಚಿನ್ ಹೆಣ್ಣನ್ನು ಹೊಗಳಿದರು. `ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯ’ ಪ್ರಯುಕ್ತ ನಡೆದ ಕಾರ್ಯಕ್ರಮವೆಂಬ ನೆಲೆಯಲ್ಲಿ ಆ ಇಡೀ ಕಾರ್ಯಕ್ರಮದ ಕೇಂದ್ರ ಬಿಂದು ಹೆಣ್ಣು ಆಗಿದ್ದಳು. ಅದೇ ವೇಳೆ, ಈ ಸುದ್ದಿಯ ತುಸು ಕೆಳಗೆ ಇಟಲಿಯ ಖ್ಯಾತ ನಟಿ ಆಸಿಯಾ ಅರ್ಜೆಂಟೋ ಮತ್ತು ಇತರ 10ಕ್ಕಿಂತಲೂ ಹೆಚ್ಚು ನಟಿಯರ ಮೇಲೆ ಹಾರ್ವೆ ವೆನ್‍ಸ್ಟಿನ್ ನಡೆಸಿದ ಲೈಂಗಿಕ ದೌರ್ಜನ್ಯದ ಸುದ್ದಿ ಇತ್ತು. ನ್ಯೂಯಾರ್ಕ್ ಪತ್ರಿಕೆಯ ವರದಿಗಾರ ರೋನನ್ ಫೆರ್ರೋ ಎಂಬವ 10 ತಿಂಗಳ ಕಾಲ ವಿವಿಧ ನಟಿಯರೊಂದಿಗೆ ಸಂದರ್ಶನ ನಡೆಸಿ ಈ ವರದಿಯನ್ನು ತಯಾರಿಸಿದ್ದ. ಈ ವರದಿ ಪ್ರಕಟಣೆಗಿಂತ ಕೆಲವು ಸಮಯಗಳ ಮೊದಲು ಹಾಲಿವುಡ್‍ನ ಖ್ಯಾತ ನಟಿಯರಾದ ಆ್ಯಂಜೆಲಿನಾ ಜೋಲಿ, ರೋಸನ್ನಾ ಅಕ್ರ್ವೆಟ್, ಗೆನೆತ್ ಪಾಲ್ಟ್ರೋ.. ಮುಂತಾದವರು ಹಾಲಿವುಡ್‍ನಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಬಾಯಿ ತೆರೆದಿದ್ದರು. ವಿಶೇಷ ಏನೆಂದರೆ, ಹಾರ್ವೆ ವೆನ್‍ಸ್ಟಿನ್‍ರ ಮೇಲೆ ಗಂಭೀರ ಲೈಂಗಿಕ ಪೀಡನೆಯ ಆರೋಪ ಹೊರಿಸಿದ ನಟಿ ಆಸಿಯಾ ಅರ್ಜೆಂಟೋಗೆ ಈಗ 42 ವರ್ಷ. ಆಕೆಯ ತಂದೆಯಾದರೋ ಖ್ಯಾತ ಚಿತ್ರ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಡಾರಿಯೋ ಅರ್ಜೆಂಟೋ. 20 ವರ್ಷವಿz್ದÁಗಲೇ ಹಾರ್ವೆ ವೆನ್‍ಸ್ಟಿನ್ ತನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಎಂದು ಆಸಿಯಾ ಅರ್ಜೆಂಟೋ ಹೇಳಿದ್ದಾರೆ. ಈ ವರೆಗೂ ಈ ವಿಷಯವನ್ನು ಬಹಿರಂಗಗೊಳಿಸದೇ ಇದ್ದುದಕ್ಕೆ ಆತನ ಭಯ ಕಾರಣ ಎಂದೂ ಆಕೆ ಹೇಳಿದ್ದಾರೆ. ಆಶ್ಚರ್ಯವಾಗುವುದೂ ಇಲ್ಲೇ. ಮಹಿಳಾ ಸಮಾನತೆ, ಸ್ವಾತಂತ್ರ್ಯ, ಸ್ವೇಚ್ಛೆ, ಸ್ವಾಭಿಮಾನ ಇತ್ಯಾದಿ ಇತ್ಯಾದಿಗಳ ಬಗ್ಗೆ ಗಟ್ಟಿ ದನಿಯಲ್ಲಿ ಮಾತಾಡುವ ಕ್ಷೇತ್ರದಲ್ಲೂ ಹೆಣ್ಣು ಶೋಷಿತಳೇ? ಶೋಷಣೆಯನ್ನು 20 ವರ್ಷಗಳ ಕಾಲ ಮುಚ್ಚಿಡುವಷ್ಟು ಆ ಕ್ಷೇತ್ರ ಆಕೆಯ ಪಾಲಿಗೆ ಅಪಾಯಕಾರಿಯೇ? ನಾಗರಿಕ ಸಮಾಜದಲ್ಲಿ ಇರುವಂತೆಯೇ ಅಲ್ಲೂ ಹೆಣ್ಣು ಭಯದಿಂದಲೇ ಬದುಕುತ್ತಿರುವಳೇ? ಹಾಗಿದ್ದರೆ ಆ ಕ್ಷೇತ್ರ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಿ ತಯಾರಿಸುವ ಸಿನಿಮಾಗಳು ಮತ್ತು ಆ ಸಿನಿಮಾಗಳಲ್ಲಿ ಶೋಷಣೆಯ ವಿರುದ್ಧ ಮಾತಾಡುವ ಹಿರೋಯಿನ್‍ಗಳ ನಿಜ ಸ್ಥಿತಿ ಏನು?
      ಮಹಿಳಾ ಶೋಷಣೆಯ ವಿರುದ್ಧ ಸರಕಾರಗಳು ಎಷ್ಟು ಕಾನೂನುಗಳನ್ನು ರಚಿಸಿವೆಯೋ ಅವೆಲ್ಲಕ್ಕಿಂತ ಎಷ್ಟೋ ಪಟ್ಟು ಅಧಿಕ ಶೋಷಣೆ ವಿರೋಧಿ ಚಿತ್ರಗಳನ್ನು ಸಿನಿಮಾ ಕ್ಷೇತ್ರ ತಯಾರಿಸಿವೆ. ನಿಜವಾಗಿ, ಸರಕಾರದ ಕಾನೂನುಗಳಿಗಿಂತ ಹೆಚ್ಚು ಸಮಾಜವನ್ನು ಆಕರ್ಷಿಸುವುದು ಸಿನಿಮಾಗಳು. ಹೆಣ್ಣನ್ನು ಆಸ್ತಿಯೆಂದೋ ಪುರುಷರಿಗೆ ಸಮಾನವೆಂದೋ ಪ್ರತಿಭಾ ಸಂಪನ್ನಳೆಂದೋ ಓರ್ವ ರಾಜಕಾರಣಿ ಹೇಳುವುದಕ್ಕೂ ಸಿನಿಮಾ ನಿರ್ದೇಶಕ ಹೇಳುವುದಕ್ಕೂ ತುಂಬಾ ವ್ಯತ್ಯಾಸ ಇದೆ. ಅಲ್ಲೊಂದು ಕತೆ ಇರುತ್ತದೆ. ಪಾತ್ರಧಾರಿಗಳಿರುತ್ತಾರೆ. ಕ್ಯಾಮರಾ ಕೈ ಚಳಕವಿರುತ್ತದೆ. ಡಯಲಾಗ್‍ಗಳಿರುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಒಂದು ದೊಡ್ಡ ತಂಡದ ಶ್ರಮ ಇರುತ್ತದೆ. ನಾಗರಿಕ ಸಮಾಜದಲ್ಲಿ ಹೆಣ್ಣು ಅನುಭವಿಸುತ್ತಿರುವ ಯಾತನೆ, ಹಕ್ಕು ಹರಣ, ಅಸ್ವಾತಂತ್ರ್ಯ, ಶೋಷಣೆಗಳನ್ನೆಲ್ಲ ಅತ್ಯಂತ ಸೊಗಸಾಗಿ ಹೇಳುವ ಮಾಧ್ಯಮವಾಗಿ ಸಿನಿಮಾ ಕ್ಷೇತ್ರ ಇವತ್ತು ಬೆಳೆದು ಬಿಟ್ಟಿದೆ. ವಿಶೇಷ ಏನೆಂದರೆ, ಸಿನಿಮಾ ಕ್ಷೇತ್ರದಿಂದ ಬಿಡುಗಡೆಯಾಗುವ ಚಿತ್ರಗಳು ಮಹಿಳಾ ವಿರೋಧಿ ಅನ್ನಿಸಿಕೊಂಡದ್ದು ಬಹಳ ಬಹಳ ಕಡಿಮೆ. ಭಾಷಾವಾರು ಚಿತ್ರಗಳು ಕೆಲವೊಮ್ಮೆ ಇಂಥ ಅಪವಾದಗಳನ್ನು ಹೊತ್ತಿರಬಹುದು. ಆದರೆ ಬಾಲಿವುಡ್ ಮತ್ತು ಹಾಲಿವುಡ್‍ಗಳು ಯಾವತ್ತೂ ಹೆಣ್ಣಿನ ಸ್ವಾತಂತ್ರ್ಯ, ಸ್ವೇಚ್ಛೆ, ಸ್ವಾಭಿಮಾನ, ಹಕ್ಕು, ಧೈರ್ಯಗಳ ಪರವೇ ನಿಂತಿದೆ. ಅತ್ಯಾಚಾರ ಯತ್ನದ ಸಮಯದಲ್ಲಿ ಆಕೆ ಹೇಗೆ ತಪ್ಪಿಸಿಕೊಳ್ಳಬೇಕು, ಬೆದರಿಕೆಗಳನ್ನು ಹೇಗೆ ಮೆಟ್ಟಿ ನಿಲ್ಲಬೇಕು, ಶೋಷಣೆಯನ್ನು ಹೇಗೆ ಎದುರಿಸಬೇಕು, ಕೋರ್ಟ್‍ನಲ್ಲಿ ಹೇಗೆ ವಾದಿಸಬೇಕು, ಅಧಿಕಾರಿಯಾಗಿ ಹೇಗೆ ಒತ್ತಡಗಳನ್ನು ಮೀರಿ ಹೊಣೆ ನಿಭಾಯಿಸಬೇಕು, ಶೋಷಕರನ್ನು ಹೇಗೆ ದಂಡಿಸಬೇಕು.. ಇಂಥ ನೂರಾರು ಪಾಠಗಳನ್ನು ಅವು ಹೇಳಿ ಕೊಟ್ಟಿವೆ ಮತ್ತು ಈಗಲೂ ಹೇಳಿ ಕೊಡುತ್ತಿವೆ. ಆದ್ದರಿಂದಲೇ, ಸಾಮಾನ್ಯ ಜನರು ಇವತ್ತಿಗೂ ಸಿನಿಮಾ ಕ್ಷೇತ್ರಗಳಲ್ಲಿರುವ ಹೆಣ್ಣನ್ನು ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಪಡೆಯುತ್ತಿರುವ ಬಲಶಾಲಿಗಳು ಎಂದೇ ತಿಳಿದುಕೊಂಡಿದ್ದಾರೆ. ಅವರು ಶೋಷಣೆಗೆ ಒಳಗಾಗಲ್ಲ ಅಂದುಕೊಂಡಿದ್ದಾರೆ. ಒಂದು ವೇಳೆ, ಯಾರಾದರೂ ಆಕೆಯನ್ನು ಶೋಷಿಸುವ ಪ್ರಯತ್ನ ಮಾಡಿದಲ್ಲಿ ಆಕೆ ಸಿಡಿಯುವಳು ಎಂದೂ ನಂಬಿದ್ದಾರೆ.. ದುರಂತ ಏನೆಂದರೆ, ಪರದೆಯಲ್ಲಿ ಅದ್ಭುತವಾಗಿ ಮಹಿಳಾ ಹಕ್ಕಿನ ಬಗ್ಗೆ ಮಾತಾಡುವ ಹೀರೋಯಿನ್ ಪರದೆಯ ಹಿಂದೆ ಮೌನ ವಹಿಸುತ್ತಾಳೆ ಅಥವಾ ಮೌನಿಯಾಗಲೇಬೇಕಾದ ಭಯದ ವಾತಾವರಣ ಇದೆ. ಅಲ್ಲೂ ಲೈಂಗಿಕ ಶೋಷಣೆ ಇದೆ ಎಂಬುದನ್ನು ಇತ್ತೀಚೆಗಷ್ಟೇ ಕೇರಳದ ಪ್ರಮುಖ ನಟಿಯೊಬ್ಬರು ಬಹಿರಂಗಪಡಿಸಿದ್ದರು. ಇದು ಪರದೆಯಲ್ಲಿ ಹೀರೋಯಿನ್ ಆಗಿ ಮೆರೆಯುವ ಹೆಣ್ಣಿನ ಬದುಕು. ಹಾಲಿವುಡ್ ಅನ್ನುವುದು ಅಂತಾರಾಷ್ಟ್ರೀಯ ಸಿನಿಮಾ ಕ್ಷೇತ್ರ. ಆ ಕ್ಷೇತ್ರದಲ್ಲೇ ಇಷ್ಟು ಪ್ರಮಾಣದ ಮಹಿಳಾ ಶೋಷಣೆ ಇದೆ ಎಂದರೆ ಮತ್ತು ಅದನ್ನು ಹೇಳಿಕೊಳ್ಳಲಾಗದಷ್ಟು ಭಯದ ವಾತಾವರಣ ಇದೆ ಎಂದರೆ ಇನ್ನು ಈ ಸಮಾಜದ ಬಗ್ಗೆ ಹೇಳುವುದಕ್ಕೇನಿದೆ?     
       ನಿಜವಾಗಿ, ಈ ಜಗತ್ತು ಹೆಣ್ಣಿನ ಪಾಲಿಗೆ ಶೋಷಣೆ ಮುಕ್ತ ಮತ್ತು ಭಯಮುಕ್ತವಾಗಬೇಕಾಗಿದೆ. ಪುರುಷ ಹೇಗೆ ಶೋಷಣೆ ಮುಕ್ತ ವಾತಾವರಣವನ್ನು ಬಯಸುತ್ತಾನೋ ಹಾಗೆಯೇ ಹೆಣ್ಣೂ ಬಯಸುತ್ತಾಳೆ. ದುರಂತ ಏನೆಂದರೆ, ಹೆಣ್ಣನ್ನು ಬಳಸಿಕೊಂಡು ಶೋಷಣೆಮುಕ್ತ ಸಂದೇಶವನ್ನು ನೀಡುವ ವ್ಯಕ್ತಿಯೇ ಆಕೆಯನ್ನು ಶೋಷಿಸುತ್ತಾನೆ. ಚರ್ಚೆ ಹುಟ್ಟಿಕೊಳ್ಳಬೇಕಾದುದು ಇಲ್ಲೇ. ಹೆಣ್ಣಿನ ಸುರಕ್ಷಿತತೆಗೆ ಯಾರು ಅಡ್ಡಿ? ಯಾವುದು ಅಡ್ಡಿ? ಎಲ್ಲಿ ಅಡ್ಡಿ? ಶೋಷಣೆಯ ಬೇರುಗಳು ಎಲ್ಲೆಲ್ಲಿ ಇವೆ? ಅವನ್ನು ಗುರುತಿಸುವುದು ಹೇಗೆ? ಕಾನೂನು ಕಟ್ಟಳೆಗಳು ಹೆಣ್ಣಿನ ಪಾಲಿಗೆ ಒಂದು ಹಂತದ ವರೆಗೆ ನೆಮ್ಮದಿಯನ್ನು ಕೊಡಬಹುದು. ಆದರೆ, ಸಾಮಾಜಿಕ ಮನಸ್ಥಿತಿಯನ್ನು ಸಂಪೂರ್ಣವಾಗಿ ಅವು ಬದಲಿಸಲಾರವು. ಆದ್ದರಿಂದ ಹೆಣ್ಣು ಸ್ವತಃ ತನ್ನೊಳಗೆ ಕೆಲವು ಪ್ರಶ್ನೆಗಳನ್ನು ಹಾಕಿಕೊಳ್ಳಬೇಕು. ತಾನು ಯಾಕೆ ಅಸುರಕ್ಷಿತೆ? ತನ್ನನ್ನು ಅಸುರಕ್ಷಿತೆಯನ್ನಾಗಿ ಮಾಡಿದುದು ಯಾರು? ಯಾವುದು? ಹೆಣ್ಣಿನಿಂದ ಶೋಷಣೆಯ ಭೀತಿಯನ್ನು ಪುರುಷನೇಕೆ ಅನುಭವಿಸುತ್ತಿಲ್ಲ? ಯಾಕೆ ಎಲ್ಲವೂ ಏಕಮುಖವಾಗಿದೆ? ಹೆಣ್ಣು ಸ್ನೇಹಿ ಜಗತ್ತನ್ನು ನಿರ್ಮಿಸುವುದಕ್ಕೆ ಏನೆಲ್ಲ ಬದಲಾವಣೆ ಆಗಬೇಕು? ಅದಕ್ಕೆ ಯಾವುದು ಆಧಾರವಾಗಬೇಕು? ಕಾನೂನುಗಳಾಚೆ ಮತ್ತು ಸಿನಿಮಾಗಳಾಚೆ ಒಂದು ಸಂತುಲಿತ ಮನಸ್ಥಿತಿಯನ್ನು ಸಮಾಜದಲ್ಲಿ ತಯಾರಿಸುವುದು ಹೇಗೆ? ಇದರಲ್ಲಿ ಹೆಣ್ಣು ಮತ್ತು ಗಂಡಿನ ಪಾತ್ರ ಹಾಗೂ ಹೊಣೆಗಾರಿಕೆಗಳು ಏನೇನು?
ಚರ್ಚೆ ನಡೆಯಲಿ.



Wednesday 18 October 2017

ಕಮ್ಯುನಿಸ್ಟ್ ನಾಡಿನ ದಲಿತ ಅರ್ಚಕ ಮತ್ತು ಬಿಜೆಪಿ ನಾಡಿನ ಮೀಸೆ ಚಳವಳಿ

      ಗುಜರಾತ್ ಮತ್ತು ಕೇರಳದಿಂದ ವರದಿಯಾಗಿರುವ ಸುದ್ದಿಗಳು `ಸಾಮಾಜಿಕ ನ್ಯಾಯ' ಮತ್ತು `ಸರ್ವರೂ ಸಮಾನರು' ಎಂಬ ಪರಿಕಲ್ಪನೆಯ ಸುತ್ತ ದೇಶದಲ್ಲಿ ಮತ್ತೊಂದು ಸುತ್ತಿನ ಗಂಭೀರ ಚರ್ಚೆಗೆ ತೆರೆದುಕೊಳ್ಳಬೇಕಾದಷ್ಟು ಮಹತ್ವಪೂರ್ಣವಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕಳೆದವಾರ ಕೇರಳಕ್ಕೆ ಭೇಟಿ ನೀಡಿದರು ಮತ್ತು ಅಲ್ಲಿ ನಡೆಯುತ್ತಿರುವ ರಾಜಕೀಯ ಕೊಲೆಗಳ ಬಗ್ಗೆ ಪ್ರಸ್ತಾಪಿಸಿದರು. ಆದರೆ ಅವರು ಹೊರಟು ಹೋದ ಮರು ಘಳಿಗೆಯಲ್ಲೇ ಅಲ್ಲಿನ ನಿಜ ಸಮಸ್ಯೆ ಚರ್ಚೆಗೆ ಒಳಗಾಯಿತು. ತಿರುವಾಂಕೂರು ದೇವಸ್ಯಂ ಮಂಡಳಿಯ ಅಧೀನದಲ್ಲಿರುವ ದೇವಾಲಯಗಳ ಅರ್ಚಕ ಹುದ್ದೆಗಳಲ್ಲಿ 32% ದಷ್ಟು ಹುದ್ದೆಯನ್ನು ದಲಿತ ಮತ್ತು ಹಿಂದುಳಿದ ಸಮುದಾಯಗಳಿಗೆ ಮೀಸಲಿಡುವ ರಾಜ್ಯ ಸರಕಾರದ ನಿರ್ಧಾರವನ್ನು ಅಲ್ಲಿನ ಬ್ರಾಹ್ಮಣ ಸಂಘಟನೆಯಾದ ನಂಬೂದರಿ ಯೋಗಕ್ಷೇಮ ಸಭಾವು ಖಂಡಿಸಿತು. ಹಾಗಂತೂ ಈ ವಿರೋಧವು ಕೇವಲ ಯೋಗಕ್ಷೇಮ ಸಭಾದ ವತಿಯಿಂದ ಮಾತ್ರ ಎದುರಾದುದಲ್ಲ. ಬೇರೆ ಬೇರೆ ಬ್ರಾಹ್ಮಣ ಸಂಘಗಳಿಂದಲೂ ಪ್ರತಿಭಟನೆ ಎದುರಾಯಿತು. ದಲಿತರ ಮೇಲೆ ಈ ಹಿಂದೆ ನಡೆದ ಮತ್ತು ಈಗಲೂ ನಡೆಯುತ್ತಿರುವ ಹಲ್ಲೆಗಳೂ ಚರ್ಚೆಯ ವೇಳೆ ಉಲ್ಲೇಖಕ್ಕೆ ಒಳಗಾದುವು. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್‍ಗೆ ಭೇಟಿಕೊಟ್ಟರು. ಅವರ ಈ ಭೇಟಿಯ ಸಮಯದಲ್ಲಿ ಗುಜರಾತ್‍ನಲ್ಲಿ `ಮೀಸೆ ನನ್ನ ಹಕ್ಕು' ಅನ್ನುವ ಚಳವಳಿಯೊಂದು ನಡೆಯುತ್ತಿತ್ತು. ದಲಿತ ಸಮುದಾಯದ ಮಂದಿ ಮೀಸೆ ತಿರುವಿ ಸೆಲ್ಫಿ ತೆಗೆದುಕೊಳ್ಳುವ ಚಳುವಳಿಯೊಂದಕ್ಕೆ ಚಾಲನೆ ಕೊಟ್ಟಿದ್ದರು. ಇದಕ್ಕೆ ಕಾರಣ ಅದೇ ಮೇಲ್ವರ್ಗ. ಮೀಸೆ ಬೆಳೆಸಿದ ಕಾರಣಕ್ಕೆ ದಲಿತ ಯುವಕರನ್ನು ಥಳಿಸಿದುದೇ ಈ ಮೀಸೆ ಚಳುವಳಿಯ ಹುಟ್ಟಿಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಾರಂಭವಾದ ಈ ಚಳುವಳಿಯ ಕಾವು ಬೆಳೆಯುತ್ತಾ ಜನಪ್ರಿಯಾಗತೊಡಗಿತು. ದೃಶ್ಯ ಮತ್ತು ಮುದ್ರಣ ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಲೇಬೇಕಾದ ಅನಿವಾರ್ಯತೆಗೂ ಒಳಗಾದುವು. ಆದರೆ ಪ್ರಧಾನಿಯವರು ಈ ಮೀಸೆ ಚಳವಳಿಯ ಬಗ್ಗೆ ಮತ್ತು ಅದಕ್ಕೆ ಕಾರಣವಾದ ಅಂಶಗಳ ಬಗ್ಗೆ ಏನನ್ನೂ ಹೇಳಲಿಲ್ಲ. ಅವರೂ ಅಮಿತ್ ಷಾರಂತೆ ರಾಜಕೀಯವನ್ನಷ್ಟೇ ಆಡಿದರು.
     ದೇಶವನ್ನಾಳುವ ಪಕ್ಷದ ಅಧ್ಯಕ್ಷ ಮತ್ತು ಪ್ರಧಾನಿಯವರು ಎರಡು ಬೇರೆ ಬೇರೆ ರಾಜ್ಯಗಳಿಗೆ ಭೇಟಿ ಕೊಡುವುದು ಮತ್ತು ಆ ಭೇಟಿಯ ವೇಳೆ ಆ ಎರಡೂ ರಾಜ್ಯಗಳಲ್ಲಿ ಇರುವ ಅಸ್ಪøಶ್ಯ ಮನಸ್ಥಿತಿಗಳ ಕುರಿತು ಏನನ್ನೂ ಆಡದಿರುವುದರ ಹಿನ್ನೆಲೆ ಏನು? `ಸರ್ವರೂ ಸಮಾನರು' ಅನ್ನುವ ಸಂವಿಧಾನ ಜಾರಿಯಾಗಿ 70 ವರ್ಷಗಳು ಕಳೆದ ಬಳಿಕವೂ ಕೆಲವರು ಹೆಚ್ಚು ಸಮಾನರಾಗಿರುವುದು ಯಾಕೆ ರಾಜಕೀಯ ಭಾಷಣಗಳಲ್ಲಿ ಪ್ರಾಮುಖ್ಯತೆ ಪಡಕೊಳ್ಳುವುದಿಲ್ಲ? ಓರ್ವ ವ್ಯಕ್ತಿಯ ಪಾಲಿಗೆ ಅತ್ಯಂತ ಮಹತ್ವಪೂರ್ಣವಾದುದು ಏನೆಂದರೆ, ಘನತೆ, ಗೌರವ, ಸ್ವಾಭಿಮಾನ, ಹಕ್ಕು, ಸ್ವಾತಂತ್ರ್ಯ ಇತ್ಯಾದಿ ಇತ್ಯಾದಿ. ಯಾರೂ ಇದಕ್ಕೆ ಕುಂದುಂಟಾಗದಂತೆ ನಡೆದುಕೊಳ್ಳಬಾರದು. ಸಂವಿಧಾನಕ್ಕಿಂತ ಮೊದಲು ಈ ದೇಶದಲ್ಲಿ ಆಚರಣೆಯಲ್ಲಿದ್ದ ಎಲ್ಲ ಅಸ್ಪೃಶ್ಯ ಪದ್ಧತಿಗಳನ್ನೂ ಸಂವಿಧಾನ ಅಮಾನ್ಯಗೊಳಿಸಿದೆ. ಮನುಷ್ಯರನ್ನು ಧರ್ಮ, ಚರ್ಮ, ಭಾಷೆ, ಹೆಸರು, ಜಾತಿ, ಆಹಾರ, ಆರಾಧನೆ, ಲಿಂಗದ ಹೆಸರಲ್ಲಿ ಅಸಮಾನವಾಗಿ ಕಾಣುವುದನ್ನು ಅನಾಗರಿಕವಾಗಿ ಕಾಣಲಾಗಿದೆ. ಅಚ್ಚರಿ ಏನೆಂದರೆ ಸಂವಿಧಾನ ಜಾರಿಯಾಗುವಾಗ ಇದ್ದ ತಲೆಮಾರು ಇವತ್ತು ಬಹುತೇಕ ನಿಧನ ಪಟ್ಟಿ ಸೇರಿಕೊಂಡಿದೆ ಅಥವಾ ವೃದ್ಧಾಪ್ಯ ಪಟ್ಟಿಯಲ್ಲಿದೆ. ಈಗ ದಲಿತ ಅರ್ಚಕರನ್ನು ವಿರೋಧಿಸುವುದು ಅಥವಾ ದಲಿತರು ಮೀಸೆ ಬೆಳೆಸುವುದಕ್ಕೆ ಅಡ್ಡಿಪಡಿಸುವುದು ಆ ಹಳೆ ತಲೆಮಾರು ಅಲ್ಲ. ಹೊಸ ಪೀಳಿಗೆ. ಆದ್ದರಿಂದ ಈ ಪೀಳಿಗೆಗೆ ಸಂವಿಧಾನ ಗೊತ್ತಿಲ್ಲ ಎಂದು ಹೇಳುವ ಹಾಗಿಲ್ಲ. ಇಷ್ಟಿದ್ದೂ ಈ ವರ್ಗ ಮನುಷ್ಯರಲ್ಲೇ ಕೆಲವರನ್ನು `ಅಸ್ಪೃಶ್ಯ'ರಾಗಿ ಕಾಣುತ್ತಾರಲ್ಲಾ, ಏನಿದರ ಮರ್ಮ? ಭಾರತೀಯ ರಾಜಕೀಯ ಚಟುವಟಿಕೆಗಳಿಗೂ ಇದರಲ್ಲಿ ಪಾತ್ರ ಇರಬಹುದೇ? ಯಾಕೆಂದರೆ, ರಾಜಕಾರಣಿಗಳು ಅಸ್ಪøಶ್ಯ ಆಚರಣೆಯನ್ನು ಖಂಡಿಸಿ ಅಥವಾ ಅದನ್ನೇ ಕೇಂದ್ರೀಯ ವಸ್ತುವಾಗಿಸಿಕೊಂಡು ಮಾತಾಡುವುದು ತೀರಾ ತೀರಾ ಕಡಿಮೆ. ಸ್ವಾತಂತ್ರ್ಯದ ಆರಂಭ ಕಾಲದಲ್ಲಿ ಇಂಥ ಭಾಷಣಗಳು ಆಗಿವೆಯೇ ಏನೋ. ಆದರೆ, ಬರ ಬರುತ್ತಾ ರಾಜಕಾರಣವೆಂಬುದು ಮತ ಕೇಂದ್ರಿತ ವ್ಯವಸ್ಥೆಯಾಗಿ ಪರಿವರ್ತನೆ ಹೊಂದುತ್ತಲೇ, ಭಾಷಣಗಳ ಧಾಟಿಯೂ ಬದಲಾಯಿತು. ಅಜೆಂಡಾಗಳೂ ಬರಲಾದುವು. ಅಸ್ಪøಶ್ಯತೆಯನ್ನು ನಿವಾರಿಸುವುದಕ್ಕಿಂತ ಉಳಿಸಿಕೊಳ್ಳುವುದರಲ್ಲಿಯೇ ಲಾಭವನ್ನು ಕಂಡುಕೊಳ್ಳಲಾಯಿತು. ತಾತ್ಕಾಲಿಕ ಕೊಡುಗೆಗಳ ಮೂಲಕ ಅಸ್ಪøಶ್ಯರನ್ನು ತೃಪ್ತಿಪಡಿಸುವುದು ಮತ್ತು ಅಸ್ಪೃಶ್ಯತೆಯನ್ನು ಆಚರಿಸುವವರೊಂದಿಗೆ ಹೊಂದಿಕೊಂಡು ನಡೆಯುವುದನ್ನು ರಾಜಕೀಯ ಸ್ಟ್ರಾಟಜಿಯಾಗಿ ಕಂಡುಕೊಳ್ಳಲಾಯಿತು. ಅಮಿತ್ ಷಾರ ಕೇರಳ ಭೇಟಿಯಲ್ಲಿ ವ್ಯಕ್ತವಾಗಿರುವುದೂ ಇದುವೇ. ಅವರು ಕೇರಳಕ್ಕೆ ಭೇಟಿ ಕೊಡುವುದಕ್ಕಿಂತ ಮೊದಲೇ ಅರ್ಚಕ ಹುದ್ದೆಗೆ ಸಂಬಂಧಿಸಿ ಕೇರಳ ಸರಕಾರವು ತೀರ್ಮಾನವನ್ನು ಕೈಗೊಂಡಿತ್ತು. ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ಖಾತರಿಗೊಳಿಸುವ ನಿಟ್ಟಿನಲ್ಲಿ ಅದೊಂದು ಐತಿಹಾಸಿಕ ನಿರ್ಧಾರ. ರಾಷ್ಟ್ರವನ್ನಾಳುವ ಪಕ್ಷದ ಅಧ್ಯಕ್ಷ ಎಂಬ ನೆಲೆಯಲ್ಲಿ ಆ ಬಗ್ಗೆ ಮಾತಾಡುವುದು ಅಮಿತ್ ಷಾರ ಹೊಣೆಯಾಗಿತ್ತು. `ದಲಿತರು ಮತ್ತು ಬ್ರಾಹ್ಮಣರು' ಸಮಾನರು ಎಂಬುದನ್ನು ತಿರುವಾಂಕೂರು ದೇವಸ್ಯಂ ಮಂಡಳಿಯ ಅಧೀನದಲ್ಲಿರುವ ದೇವಾಲಯ ಘೋಷಿಸುವುದೆಂದರೆ, ಅದು ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರ ನಡುವಿನ ಸಂಘರ್ಷಕ್ಕಿಂತ ಎಷ್ಟೋ ಪಾಲು ದೊಡ್ಡದು. ಒಂದು ರೀತಿಯಲ್ಲಿ ಪರಸ್ಪರ ಹೋಲಿಕೆಗೆ ಒಳಗಾಗಬಾರದಷ್ಟು ದೊಡ್ಡದು. ಒಂದು ದೊಡ್ಡ ಸಮುದಾಯ ಸಮಾನತೆಯ ಸ್ವಾತಂತ್ರ್ಯವನ್ನು ಅನುಭವಿಸುವುದನ್ನು ರಾಜಕೀಯ ಮರೆತು ಶ್ಲಾಘಿಸಬೇಕಾದುದು ಮುತ್ಸದ್ದಿ ನಡೆ. ಒಂದು ವೇಳೆ, ಇದು ನಡೆಯುತ್ತಿದ್ದರೆ, ನಂಬೂದರಿ ಯೋಗಕ್ಷೇಮ ಸಭಾವು ಅಕ್ಷೇಪ ವ್ಯಕ್ತಪಡಿಸುವ ಧೈರ್ಯ ತೋರುತ್ತಿರಲಿಲ್ಲವೇನೋ. ಇದೇ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಂಬಂಧಿಸಿಯೂ ಹೇಳಬಹುದು. ರಾಹುಲ್ ಗಾಂಧಿಗೂ ಇದೇ ಮಾತನ್ನು ಅನ್ವಯಿಸಬಹುದು. ದಮನಿತ ಸಮುದಾಯವೊಂದು ಘನತೆ, ಸ್ವಾಭಿಮಾನವನ್ನು ಆಗ್ರಹಿಸಿ `ಮೀಸೆ ಚಳವಳಿ' ನಡೆಸುತ್ತಿರುವಾಗ, ಅಲ್ಲೇ ಇದ್ದೂ ಆ ಬಗ್ಗೆ ಏನನ್ನೂ ಆಡದೇ ಇರುವುದೆಂದರೇನು? ಯಾಕೆ ನರೇಂದ್ರ ಮೋದಿಯವರು ದಲಿತರ ಸ್ವಾಭಿಮಾನದ ಪ್ರಶ್ನೆಯನ್ನು ನಿರ್ಲಕ್ಷಿಸಿದರು? ಪ್ರಧಾನಿ ಎಂಬ ನೆಲೆಯಲ್ಲಿ ಅವರ ಮಾತಿಗೆ ವಿಶೇಷ ನೆಲೆ-ಬೆಲೆಯಿದೆ. ಅದು ರವಾನಿಸುವ ಸಂದೇಶಕ್ಕೆ ಮಹತ್ವ ಇದೆ. ಇದು ಪ್ರಧಾನಿಯವರಿಗೆ ಗೊತ್ತಿಲ್ಲವೆಂದಲ್ಲ. ಗೊತ್ತಿದ್ದೂ ಅವರೇಕೆ ಬರೇ ರಾಜಕೀಯವನ್ನಷ್ಟೇ ಮಾತಾಡಿದರು? ಒಂದು ಸಮುದಾಯದ ಸ್ವಾಭಿಮಾನದ ಪ್ರಶ್ನೆಯನ್ನು ಯಾಕೆ ಅವರು ನಿರ್ಲಕ್ಷಿಸಿದರು?
     ಕೇರಳವೇ ಇರಲಿ, ಗುಜರಾತೇ ಇರಲಿ, ದಲಿತರಿಗೆ ಸಂಬಂಧಿಸಿ ಮೇಲ್ವರ್ಗದ ನಿಲುವಿನಲ್ಲಿ ಭಾರೀ ವ್ಯತ್ಯಾಸವೇನೂ ಇಲ್ಲ ಅನ್ನುವುದನ್ನು ಅರ್ಚಕ ಮತ್ತು ಮೀಸೆ ಚಳವಳಿ ಸ್ಪಷ್ಟಪಡಿಸಿದೆ. ದಲಿತರನ್ನು ಈ ದೇಶ ಈಗಲೂ ಹೊರಗಿಟ್ಟೇ ನೋಡುತ್ತಿದೆ. ಈ ಬಗ್ಗೆ ರಾಜಕಾರಣಿಗಳಲ್ಲಿ ಗಾಢ ನಿರ್ಲಕ್ಷ್ಯವೂ ಇದೆ. ನರೇಂದ್ರ ಮೋದಿ ಮತ್ತು ಅಮಿತ್ ಷಾರು ಇದನ್ನು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

Wednesday 27 September 2017

ರಾಜಕಾರಣಿಗಳು ಬಯಸುವ ಭಾರತ-ಪಾಕ್

        ಭಾರತದ ರಾಜಕಾರಣಿಗಳು ಪಾಕಿಸ್ತಾನವನ್ನು ಪ್ರೀತಿಸುವಷ್ಟು ಬಹುಶಃ ಭಾರತೀಯರನ್ನೇ ಪ್ರೀತಿಸಲಾರರೇನೋ ಅನಿಸುತ್ತದೆ. ರಾಜಕಾರಣಿಗಳಿಗೆ ಅದರಲ್ಲೂ ಮುಖ್ಯವಾಗಿ ಆಡಳಿತ ಪಕ್ಷಕ್ಕೆ ಯಾವಾಗಲೂ ವೈರಿ ರಾಷ್ಟ್ರವೊಂದು ಕಡ್ಡಾಯವಾಗಿ ಇರಬೇಕಾಗುತ್ತದೆ. ಇದು ಭಾರತದ ರಾಜಕಾರಣಿಗಳ ಅಗತ್ಯ ಮಾತ್ರ ಅಲ್ಲ. ಜಾಗತಿಕ ರಾಷ್ಟ್ರಗಳ ಅಗತ್ಯವೂ ಹೌದು. ಅಮೇರಿಕವು ರಷ್ಯವನ್ನು ಮತ್ತು ರಷ್ಯವು ಅಮೇರಿಕವನ್ನು ಒಂದು ಕಾಲದಲ್ಲಿ ಹೇಗೆ ವೈರಿ ರಾಷ್ಟ್ರವಾಗಿ ಬಿಂಬಿಸುತ್ತಾ ತಂತಮ್ಮ ರಾಷ್ಟ್ರಗಳ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿದುವೋ ಮತ್ತ ಗದ್ದುಗೆಯನ್ನು ಉಳಿಸಿಕೊಳ್ಳುವುದಕ್ಕೆ ಹೇಗೆ ಈ ಹಗೆ ಭಾವವನ್ನು ಬಳಸಿಕೊಂಡವೋ ಅದರ ಅತ್ಯಂತ ನವೀನ ಮಾದರಿಯಾಗಿ ಭಾರತ ಮತ್ತು ಪಾಕಿಸ್ತಾನಗಳಿವೆ. ಭಾರತದ ಪಕ್ಕ ಪಾಕಿಸ್ತಾನ ಇರಬೇಕು ಅಥವಾ ಪಾಕಿಸ್ತಾನದ ಪಕ್ಕ ಭಾರತ ಇರಬೇಕು ಎಂಬುದನ್ನು ತೀರ್ಮಾನಿಸಿದ್ದು ಈ ಎರಡೂ ರಾಷ್ಟ್ರಗಳ ನಾಗರಿಕರೋ ಅಥವಾ ರಾಜಕಾರಣಿಗಳೋ ಅಲ್ಲ. ಅದು ಪ್ರಕೃತಿಯ ಕೊಡುಗೆ. ಆದರೆ, ಭಾರತ ಮತ್ತು ಪಾಕಿಸ್ತಾನಗಳು ಅಕ್ಕ-ಪಕ್ಕ ಸದಾ ಇರಲಿ ಎಂದು ಈ ಎರಡೂ ದೇಶಗಳ ರಾಜಕಾರಣಿಗಳು ಇವತ್ತು ಬಯಸುತ್ತಿರುವ ಸಾಧ್ಯತೆ ಖಂಡಿತ ಇದೆ. ಅವರು ಈ ನೆರೆ-ಹೊರೆಯನ್ನು ಮನಸಾರೆ ಆನಂದಿಸುತ್ತಿದ್ದಾರೆ. ಅವರ ಎಲ್ಲ ವೈಫಲ್ಯಗಳನ್ನು ತಕ್ಷಣಕ್ಕೆ ಸರಿಸಿ ಬಿಡುವ ಸಾಮಥ್ರ್ಯ ಈ ನೆರೆಹೊರೆಗಿದೆ. ಪಾಕಿಸ್ತಾನಕ್ಕೆ ಭಾರತದಲ್ಲಿ ಎಷ್ಟು ಬೆಂಬಲಿಗರಿದ್ದಾರೆ ಎಂಬುದನ್ನು 2014ರ ಲೋಕಸಭಾ ಚುನಾವಣೆ ಬಹಳ ದೊಡ್ಡ ಮಟ್ಟದಲ್ಲಿ ಸಾಬೀತುಪಡಿಸಿತು. ನರೇಂದ್ರ ಮೋದಿಯವರು ಬಹುತೇಕ ಪ್ರತಿ ಚುನಾವಣಾ ಸಭೆಯಲ್ಲೂ ಪಾಕಿಸ್ತಾನವನ್ನು ಪ್ರಸ್ತಾಪಿಸಿದರು. ಪ್ರಧಾನಿ ಮನ್‍ಮೋಹನ್ ಸಿಂಗ್‍ರ ವಿದೇಶಾಂಗ ನೀತಿಯನ್ನು ಅಣಕಿಸಿದರು. ಲವ್ ಲೆಟರ್ ವಿದೇಶ ನೀತಿ ಎಂದು ಟೀಕಿಸಿದರು. ಗಡಿಯಲ್ಲಿ ಉರುಳುವ ಭಾರತದ ಓರ್ವ ಯೋಧನ ತಲೆಗೆ ಪಾಕಿಸ್ತಾನದ 10 ಯೋಧರ ತಲೆಯನ್ನು ತರುವ ಅದ್ಭುತ ಯೋಜನೆಯನ್ನು ಅವರ ಪಕ್ಷ ಮತದಾರರ ಮುಂದಿಟ್ಟಿತು. ದಾವೂದ್ ಇಬ್ರಾಹೀಮ್‍ನನ್ನು ಭಾರತಕ್ಕೆ ಕರೆತರುವ ಭರವಸೆ ನೀಡಲಾಯಿತು. ಬಹುಶಃ ಬಿಜೆಪಿ ಕೊಡುತ್ತಿದ್ದ ಭರವಸೆಗಳನ್ನು ನಂಬುವುದಾದರೆ ಅದು ಅಧಿಕಾರಕ್ಕೆ ಬಂದ ತಕ್ಷಣ ಪಾಕ್‍ನ ವಿರುದ್ಧ ಯುದ್ಧ ಸಾರಿ ಬಿಡುತ್ತದೇನೋ ಎಂದೇ ಅಂದುಕೊಳ್ಳಬೇಕಿತ್ತು. ದುರಂತ ಏನೆಂದರೆ, ಚುನಾವಣೆಯ ಸಮಯದಲ್ಲಿ ಪಾಕ್‍ನ ನೆರಳನ್ನೂ ದ್ವೇಷಿಸುವ ರೀತಿಯಲ್ಲಿ ಮಾತಾಡುತ್ತಿದ್ದ ಬಿಜೆಪಿಯು ಗೆದ್ದ ಬಳಿಕ ಪಾಕ್ ಪ್ರಧಾನಿಯನ್ನೇ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಿತು. ಆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರೇ ಗುಟ್ಟಾಗಿ ಪಾಕಿಸ್ತಾನಕ್ಕೆ ತೆರಳಿ ಪ್ರಧಾನಿ ನವಾಝ್ ಶರೀಫ್‍ರ ಖಾಸಗಿ ಕುಟುಂಬ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರ ತಾಯಿಗೆ ಉಡುಗೊರೆಯನ್ನು ಕಳುಹಿಸಿದರು. ಹಾಗಂತ, ಈ ಎಲ್ಲ ಸಂದರ್ಭಗಳಲ್ಲಿ ಪಾಕಿಸ್ತಾನ ಬದಲಾಗಿತ್ತು ಎಂದಲ್ಲ. ಮನ್‍ಮೋಹನ್ ಸಿಂಗ್‍ರ ಕಾಲದಲ್ಲಿದ್ದ ಗಡಿ ಹಾಗೆಯೇ ಇತ್ತು. ಗಡಿಯಲ್ಲಿ ಯೋಧರ ಸಾವು, ಘರ್ಷಣೆ, ಒಳನುಸುಳುವಿಕೆಗಳೆಲ್ಲ ನಡೆಯುತ್ತಲೇ ಇದ್ದುವು. ಆದರೂ ನರೇಂದ್ರ ಮೋದಿ ನೇತೃತ್ವದ ಈ ಮೂರು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನದ ವಿರುದ್ಧ ನಿರೀಕ್ಷಿತ ಯಾವ ಕ್ರಮವನ್ನೂ ಕೈಗೊಳ್ಳಲಾಗಿಲ್ಲ. ಕಾಶ್ಮೀರ ಈ ಹಿಂದೆಂದಿಗಿಂತಲೂ ಹೆಚ್ಚು ಇವತ್ತು ಉದ್ವಿಗ್ನ ಸ್ಥಿತಿಯಲ್ಲಿದೆ. ನೂರಕ್ಕಿಂತಲೂ ಅಧಿಕ ದಿನಗಳ ವರೆಗೆ ಕಾಶ್ಮೀರಿಗಳು ಪ್ರತಿಭಟನೆ ನಡೆಸಿದಂತಹ ಅಭೂತಪೂರ್ವ ಬೆಳವಣಿಗೆಯೂ ನಡೆಯಿತು. ಆದರೆ ಗಡಿಯಲ್ಲಿ ಮಾಮೂಲಾಗಿರುವ ಮತ್ತು ಎಲ್ಲ ಆಡಳಿತಗಳ ಕಾಲದಲ್ಲೂ ನಡೆದಿರುವ ಪ್ರತಿದಾಳಿಯನ್ನೇ ಸರ್ಜಿಕಲ್ ಸ್ಟ್ರೈಕ್ ಎಂಬ ಹೆಸರಲ್ಲಿ ವೈಭವೀಕರಿಸಿ ಹೇಳುವ ಪ್ರಯತ್ನ ಮಾಡಿದ್ದನ್ನು ಬಿಟ್ಟರೆ ಮೋದಿಯವರು ಪಾಕ್‍ನ ವಿರುದ್ಧ ಇನ್ನಾವ ಬಿಗು ಕ್ರಮವನ್ನೂ ಕೈಗೊಂಡಿಲ್ಲ. ಅದರ ಬದಲು ಮನ್‍ಮೋಹನ್ ಸಿಂಗ್ ಸರಕಾರಕ್ಕಿಂತ ತುಸು ಹೆಚ್ಚೇ ಅದು ಪಾಕ್ ಪ್ರೇಮಿ ನೀತಿಯನ್ನು ತಳೆದಿದೆ ಅನ್ನುವುದನ್ನು ಕಳೆದವಾರ ಕೇಂದ್ರ ಸರಕಾರದ ಗೃಹ ಇಲಾಖೆ ಬಿಡುಗಡೆಗೊಳಿಸಿದ ಅಂಕಿ-ಅಂಶಗಳು ಸ್ಪಷ್ಟಪಡಿಸಿವೆ. 2012-13ರಲ್ಲಿ ಮನ್‍ಮೋಹನ್ ಸಿಂಗ್ ಸರಕಾರವು ಪಾಕ್ ನಾಗರಿಕರಿಗಾಗಿ 1,32,590 ವಿಸಾಗಳನ್ನು ಮಂಜೂರು ಮಾಡಿತ್ತು. ಆದರೆ ನರೇಂದ್ರ ಮೋದಿ ಸರಕಾರವು 2015-16ರ ಅವಧಿಯಲ್ಲಿ 1,72,536 ವಿಸಾಗಳನ್ನು ಮಂಜೂರು ಮಾಡಿದೆ. ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ಮನ್‍ಮೋಹನ್ ಸಿಂಗ್ ಸರಕಾರವು 2011ರಲ್ಲಿ 48,640 ವಿಸಾಗಳನ್ನು, 2012ರಲ್ಲಿ 59,846 ಮತ್ತು 2013ರಲ್ಲಿ 72,744 ವಿಸಾಗಳನ್ನು ಮಂಜೂರು ಮಾಡಿದ್ದರೆ ಮೋದಿ ಸರಕಾರವು 2014ರಲ್ಲಿ 94,993 ಮತ್ತು 2015ರಲ್ಲಿ 72,543 ವಿಸಾಗಳನ್ನು ಮಂಜೂರು ಮಾಡಿದೆ. ಅಲ್ಲದೇ 2016ರಲ್ಲಿ 1,04,720 ಮಂದಿ ಪಾಕ್ ನಾಗರಿಕರು ಭಾರತಕ್ಕೆ ಭೇಟಿ ನೀಡಿರುವರು ಎಂಬ ವರದಿಯೂ ಇದೆ. ಒಂದು ಕಡೆ ಪಾಕಿಸ್ತಾನವನ್ನು ತೆಗಳುತ್ತಾ ಮತ್ತು ಪಾಕ್ ನಾಗರಿಕರನ್ನು ಭಯೋತ್ಪಾದಕರಂತೆ ಬಿಂಬಿಸುತ್ತಲೇ ಇನ್ನೊಂದು ಕಡೆ ಪಾಕಿಸ್ತಾನಿಯರನ್ನು ಭಾರತಕ್ಕೆ ಸ್ವಾಗತಿಸುವಲ್ಲಿ ಮನ್‍ಮೋಹನ್ ಸಿಂಗ್ ಸರಕಾರಕ್ಕಿಂತಲೂ ಹೆಚ್ಚು ಉತ್ಸಾಹ ತೋರುತ್ತಿರುವುದಕ್ಕೆ ಏನೆನ್ನಬೇಕು; ದ್ವಂದ್ವ, ಕಾಪಟ್ಯ, ಮೋಸ, ದಗಲ್ಬಾಜಿ.. ಎಂದರೆ ಸಾಕೇ? ತಮಾಷೆ ಏನೆಂದರೆ, ಪಾಕ್ ನಾಗರಿಕರಿಗೆ ಭಾರೀ ಸಂಖ್ಯೆಯಲ್ಲಿ ವಿಸಾ ಮಂಜೂರು ಮಾಡಿರುವ ಮಾಹಿತಿ ಬಿಡುಗಡೆಗೊಂಡ ದಿನವೇ ಕೇಂದ್ರದ ಸಾಮಾಜಿಕ ನ್ಯಾಯ ಖಾತೆಯ ಸಹಾಯಕ ಸಚಿವ ರಾಮದಾಸ್ ಅಠವಳೆ ಅವರ ಹೇಳಿಕೆಯೂ ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ‘ಪಾಕಿಸ್ತಾನದ ವಿರುದ್ಧ ಯುದ್ಧ ಸಾರುವ ಸಮಯ ಬಂದಿದೆ..’ ಎಂದವರು ಹೇಳಿದ್ದಾರೆ. 2014ರ ಲೋಕಸಭಾ ಚುನಾವಣೆಯನ್ನು ಬಿಜೆಪಿ ಎದುರಿಸಿದ್ದೇ  ಯುದ್ಧದ ಭಾಷೆಯನ್ನು ಬಳಸಿ. ಆದರೆ ಕಳೆದ ಮೂರು ವರ್ಷಗಳ ಆಡಳಿತಾವಧಿಯಲ್ಲಿ ಆ ಭಾಷೆಗೆ ತದ್ವಿರುದ್ಧವಾಗಿ ಅದು ನಡೆದುಕೊಂಡಿದೆ. ಎಲ್ಲಿಯ ವರೆಗೆಂದರೆ, ವಿಸಾ ಮಂಜೂರಾತಿಯಲ್ಲೂ ಅದು ಮನ್‍ಮೋಹನ್ ಸಿಂಗ್ ಸರಕಾರವನ್ನು ಹಿಂದಿಕ್ಕಿದೆ. ಹೀಗಿರುತ್ತಾ, ಯುದ್ಧ ಸನ್ನಿಹಿತವಾಗಿದೆ ಅಂದರೆ ಏನರ್ಥ? ಇದು ಯಾರನ್ನು ಮೋಸಗೊಳಿಸುವ ಹೇಳಿಕೆ? ಈ ಹೇಳಿಕೆಯ ಅಗತ್ಯ ಈಗ ಏನಿತ್ತು? ಮೋದಿಯವರು ಚುನಾವಣಾ ಸಮಯದಲ್ಲಿ ನೀಡಿದ ಭರವಸೆಗಳ ಕುರಿತಂತೆ ಜನರು ನಿರಾಶರಾಗುತ್ತಿದ್ದಾರೆ ಎಂಬುದರ ಸೂಚನೆಯೇ ಈ ಹೇಳಿಕೆ? ಕಪ್ಪು ಹಣ ಮರಳಿ ಭಾರತಕ್ಕೆ ತರುವ ಭರವಸೆ, ನೋಟು ಅಮಾನ್ಯೀಕರಣದ ಸಮಯದಲ್ಲಿ ನೀಡಿದ ಭರವಸೆ, ಜಿಎಸ್‍ಟಿ ನೀತಿಗಳು ಬಿಜೆಪಿಯನ್ನು ನಂಬಿಕೆಗನರ್ಹ ಪಕ್ಪವಾಗಿ ಪರಿವರ್ತಿಸುತ್ತಿದೆ ಅನ್ನುವುದನ್ನು ಈ ಹೇಳಿಕೆ ಬಿಂಬಿಸುತ್ತಿದೆಯೇ? ಆ ಕಾರಣದಿಂದಲೇ ಚರ್ಚೆಯಲ್ಲೇ ಇಲ್ಲದ ಪಾಕಿಸ್ತಾನವನ್ನು ಅಠವಳೆ ಚರ್ಚೆಗೆ ಎಳೆದು ತಂದರೇ? ಬೆಲೆಯೇರಿಕೆಯ ಕುರಿತು ಜನರು ಚರ್ಚಿಸುತ್ತಿರುವ ಈ ಹೊತ್ತಿನಲ್ಲಿ ‘ಪಾಕ್‍ನ ವಿರುದ್ಧ ಯುದ್ಧ’ ಎಂಬ ಹಳೆ ಡಯಲಾಗನ್ನು ಮರು ಉಚ್ಚರಿಸಿದುದರ ಹಿಂದೆ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ತಂತ್ರ ಇದೆಯೇ? ಮುಂದಿನ ದಿನಗಳಲ್ಲಿ ಇನ್ನಷ್ಟು ಸಚಿವರು ಪಾಕ್ ಕೇಂದ್ರಿತ ಹೇಳಿಕೆಗಳನ್ನು ನೀಡುವರೇ? ‘ಗಡಿ ಉದ್ವಿಗ್ನ’ಗೊಂಡ ಒಂದಷ್ಟು ಸುದ್ದಿಗಳು ಮತ್ತೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳಬಹುದೇ?
ಅಂದಹಾಗೆ, ಪಾಕಿಸ್ತಾನವು ಭಾರತದ ಶತ್ರುವಲ್ಲ ಅಥವಾ ಭಾರತವು ಪಾಕಿಸ್ತಾನದ ಶತ್ರುವೂ ಅಲ್ಲ. ನಿಜವಾದ ಶತ್ರುಗಳು ಎರಡೂ ದೇಶಗಳಲ್ಲಿರುವ ರಾಜಕಾರಣಿಗಳು. ಶತ್ರುತ್ವದ ಭಾಷೆಯಲ್ಲಿ ಮಾತಾಡುವ ರಾಜಕಾರಣಿಗಳನ್ನು ಮನೆಗಟ್ಟುವುದೇ ಇದಕ್ಕಿರುವ ಸೂಕ್ತ ಪರಿಹಾರ.


Saturday 23 September 2017

ಸುಶ್ಮಿತಾಳ ಪ್ರಶ್ನೆಗೆ ನಮ್ಮಲ್ಲಿ ಏನುತ್ತರವಿದೆ?

     ಸುಶ್ಮಿತಾ ಆಚಾರ್ಯ ಎಂಬ 11 ವರ್ಷದ ಮಗು ದೊಡ್ಡಪ್ಪನ ಬೈಕಲ್ಲಿ ಕೂರುತ್ತದೆ. ಕಂಸಾಳೆ ನೃತ್ಯಪಟುವಾಗಿದ್ದ ಮಗುವಿಗೆ ಅಪ್ಪನ ಸೈಟು ನೋಡುವ ಆಸೆ. ಬಸ್ಸು ನಿಲ್ಲುತ್ತದೆ. ಹಿಂಬದಿಯಲ್ಲಿ ಸಾಗುತ್ತಿದ್ದ ಬೈಕೂ ನಿಲ್ಲುತ್ತದೆ. ಹಿಂದಿನಿಂದ ವೇಗವಾಗಿ ಬರುತ್ತಿದ್ದ ಲಾರಿಯೊಂದು ಬೈಕ್‍ಗೆ ಡಿಕ್ಕಿ ಹೊಡೆಯುತ್ತದೆ. ಬಸ್ಸು ಮತ್ತು ಲಾರಿಯ ನಡುವೆ ಸಿಲುಕಿಕೊಂಡ ಬೈಕ್‍ನಿಂದ ಮಗು ರಸ್ತೆಗೆ ಬೀಳುತ್ತದೆ. ಲಾರಿ ಮಗುವಿನ ಮೇಲೆ ಚಲಿಸುತ್ತದೆ.. ಮುಂದಿನದನ್ನು ಹೇಳಬೇಕಿಲ್ಲ. ಮಗು ಮೃತಪಡುತ್ತದೆ.
      ಉಡುಪಿ ಜಿಲ್ಲೆಯ ಕಟಪಾಡಿಯಲ್ಲಿ ಕಳೆದವಾರ ಸಂಭವಿಸಿದ ಈ ಘಟನೆಯಿಂದ ಸುಶ್ಮಿತಾ, ಉಡುಪಿ ಮತ್ತು ಕಟಪಾಡಿ ಎಂಬ ನಾಮಪದಗಳನ್ನು ಕಳಚಿದರೆ, ಈ ಸುದ್ದಿ ಕರ್ನಾಟಕದ್ದಷ್ಟೇ ಆಗಿ ಉಳಿಯಲ್ಲ, ಇದು ತಮಿಳ್ನಾಡಿನದ್ದೂ ಆದೀತು, ದೆಹಲಿ, ಮಧ್ಯಪ್ರದೇಶ, ರಾಜಸ್ಥಾನದ್ದೂ ಆದೀತು. ಅಪಘಾತಗಳು ಈ ದೇಶದಲ್ಲಿ ಅಷ್ಟರ ಮಟ್ಟಿಗೆ ಸಾಮಾನ್ಯವಾಗಿದೆ. ಕಳೆದವಾರ ಕೇಂದ್ರ ಸಚಿವ ನಿತಿನ್ ಗಡ್ಕರಿಯವರು 2016ರಲ್ಲಿ ಸಂಭವಿಸಿದ ಅಪಘಾತ ಮತ್ತು ಸಾವು-ನೋವುಗಳ ವಿವರವನ್ನು ದೇಶದ ಮುಂದಿಟ್ಟರು. ಈ ವಿವರಗಳು ಎಷ್ಟು ಭಯಾನಕವಾಗಿವೆಯೆಂದರೆ, ದೇಶದ ರಸ್ತೆಗಳನ್ನೆಲ್ಲ ಶಾಶ್ವತವಾಗಿ ಮುಚ್ಚಿಬಿಟ್ಟು ಕಾಲುದಾರಿಯನ್ನು ಆರಂಭಿಸಿ ಬಿಟ್ಟರೆ ಹೇಗೆ ಎಂದು ಚಿಂತಿಸುವಂತಾಗಿದೆ. 2016ರಲ್ಲಿ ಒಟ್ಟು 4.81 ಲಕ್ಷ ಅಪಘಾತ ಪ್ರಕರಣಗಳು ನಡೆದಿವೆ. ಇದು ಅಧಿಕೃತ ಪ್ರಕರಣಗಳು ಮಾತ್ರ. ಪೊಲೀಸ್ ಠಾಣೆಯನ್ನು ಹತ್ತದ ಸಣ್ಣ-ಪುಟ್ಟ ಅಪಘಾತ ಪ್ರಕರಣಗಳು ಈ ಲೆಕ್ಕದ ವ್ಯಾಪ್ತಿಯಲ್ಲಿ ಬರುವುದಿಲ್ಲ. ಒಟ್ಟು 1.51 ಲಕ್ಷ ಮಂದಿ ಅಪಘಾತಗಳಿಂದಾಗಿ ಸಾವಿಗೀಡಾಗಿದ್ದಾರೆ. ಅಪಘಾತಗಳಲ್ಲಿ ಭಾಗಿಯಾದ ಹೆಚ್ಚಿನ ಚಾಲಕರ ವಯಸ್ಸು 25ರಿಂದ 35 ವರ್ಷಗಳ ಒಳಗೆ. ಸಾವಿಗೀಡಾದವರಲ್ಲಿ 85% ಮಂದಿಯ ವಯಸ್ಸು 18ರಿಂದ 60 ವರ್ಷದೊಳಗೆ. 18ರಿಂದ 60 ಎಂಬ ವಯಸ್ಸು ಯಾವುದೇ ದೇಶದ ಪಾಲಿಗೆ ಅತೀ ಮಹತ್ವದ ವಯಸ್ಸು. ಅದು ದುಡಿಯುವ ವಯಸ್ಸು. ಕೌಶಲ್ಯವನ್ನು ಅಭಿವೃದ್ಧಿಪಡಿಸುವ ವಯಸ್ಸು. ದೇಶದ ಸಂಪನ್ಮೂಲವಾಗಬಹುದಾದ ವಯಸ್ಸು. ದುರಂತ ಏನೆಂದರೆ, ಅಪಘಾತಗಳಲ್ಲಿ ಸಾವಿಗೀಡಾದ ಹೆಚ್ಚಿನವರ ವಯಸ್ಸು 18 ರಿಂದ 60 ಎಂದು ಮಾತ್ರವಲ್ಲ, ಅಪರಾಧಿಗಳಾಗಿ ಜೈಲು ಸೇರಿದವರಲ್ಲಿ ಹೆಚ್ಚಿನವರು 25 ರಿಂದ 35 ವಯಸ್ಸಿನ ಒಳಗಿನವರು ಎಂಬುದು. ದ್ವಿಚಕ್ರ ವಾಹನವನ್ನು ಬಳಸುವುದು ಬಹುತೇಕ ಯುವ ಸಮೂಹ. ಅಪಘಾತಗಳಲ್ಲಿ ಸಿಂಹಪಾಲನ್ನು ಈ ದ್ವಿಚಕ್ರಗಳೇ ಹೊತ್ತುಕೊಂಡಿವೆ- 34.8%. 2015ಕ್ಕೆ ಹೋಲಿಸಿದರೆ 2016ರಲ್ಲಿ ಸಾವಿಗೀಡಾದವರ ಸಂಖ್ಯೆ 3% ಹೆಚ್ಚಿದೆ. ಒಟ್ಟು ಅಪಘಾತ ಪ್ರಕರಣಗಳಲ್ಲಿ ಶೇ. 84 ರಷ್ಟು ಅಪಘಾತಗಳಿಗೆ ಚಾಲಕರ ಮಿತಿ ಮೀರಿದ ವೇಗವೇ ಕಾರಣ ಎಂದೂ `Road Accidents in India -2016’ ಎಂಬ ಶೀರ್ಷಿಕೆಯಲ್ಲಿ ಗಡ್ಕರಿಯವರು ಬಿಡುಗಡೆಗೊಳಿಸಿದ ವರದಿಯಲ್ಲಿದೆ. ಇದನ್ನು ಹೇಗೆ ಜೀರ್ಣಿಸಿಕೊಳ್ಳುವುದು?
       ಭಾರತದ ರಸ್ತೆಗಳನ್ನು ಜೈಶ್ ಮುಹಮ್ಮದ್, ಇಂಡಿಯನ್ ಮುಜಾಹಿದೀನ್, ಮಾವೋವಾದಿ ನಕ್ಸಲ್ ಮುಂತಾದ ನಿಷೇಧಿತ ಭಯೋತ್ಪಾದಕ ಗುಂಪುಗಳೇನೂ ನಿರ್ವಹಿಸುತ್ತಿಲ್ಲ. ರಾಜ್ಯ ಹೆದ್ದಾರಿ ಮತ್ತು ರಾಷ್ಟ್ರ ಹೆದ್ದಾರಿ ಎಂದು ವಿಭಜಿಸಿ ಒಟ್ಟು ರಸ್ತೆಗಳ ನಿರ್ವಹಣೆ ಮಾಡುತ್ತಿರುವುದು ನಮ್ಮ ಸರಕಾರಗಳೇ. ಒಂದುವೇಳೆ, ರಸ್ತೆಯಲ್ಲಿ ಹುದುಗಿಸಿಟ್ಟಿರುವ ಬಾಂಬ್‍ಗಳು ಸ್ಫೋಟಗೊಂಡು ಅಪಘಾತಗಳಾಗುತ್ತಿವೆ ಎಂದಾಗಿದ್ದರೆ ಭಯೋತ್ಪಾದನಾ ತಂಡಗಳ ತಲೆಗೆ ಕಟ್ಟಿಯಾದರೂ ಈ ಸಾವುಗಳ ಹೊಣೆಯಿಂದ ಸರಕಾರಗಳಿಗೆ ತಪ್ಪಿಸಿಕೊಳ್ಳಬಹುದಿತ್ತು. ಆದರೆ ನಮ್ಮ ರಸ್ತೆಗಳೆಂದೂ ಹಾಗೆ ಸಿಡಿದಿಲ್ಲ. ಯಾವ ಸವಾರನ ಮೇಲೂ ಅದು ದಾಳಿ ಮಾಡಿಲ್ಲ. ಹೀಗಿರುವಾಗ ಒಂದೂವರೆ ಲಕ್ಷದಷ್ಟು ಮಂದಿಯನ್ನು ಬರೇ ಒಂದೇ ವರ್ಷದಲ್ಲಿ ಸಾಯಿಸಿದ ಹೊಣೆಯನ್ನು ಯಾರು ಹೊರಬೇಕು? 25ರಿಂದ 35 ವರ್ಷದೊಳಗಿನ ಚಾಲಕರೇ, ಸಾವಿಗೀಡಾದವರೇ, ವಾಹನಗಳೇ? ಒಂದು ಕಡೆ ಬಯಲುಮುಕ್ತ ಶೌಚಾಲಯಕ್ಕಾಗಿ ಸರಕಾರದ ವತಿಯಿಂದ ಗಂಭೀರ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಜನರ ಆರೋಗ್ಯವೇ ಇದರ ಪ್ರಧಾನ ಗುರಿ. ಇನ್ನೊಂದು ಕಡೆ ಸ್ವಚ್ಛ ಭಾರತ ಅಭಿಯಾನಗಳೂ ನಡೆಯುತ್ತಿವೆ. ಇದರ ಗುರಿಯೂ ಆರೋಗ್ಯಪೂರ್ಣ ಪರಿಸರವೇ. ಜನರ ಆರೋಗ್ಯಕ್ಕಾಗಿ ಮತ್ತು ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ವರ್ಷಂಪ್ರತಿ ನಮ್ಮ ಸರಕಾರಗಳು ಕೋಟ್ಯಾಂತರ ರೂಪಾಯಿಯನ್ನು ವ್ಯಯ ಮಾಡುತ್ತಿವೆ. ಗಂಗಾನದಿಯನ್ನು ಸ್ವಚ್ಛಗೊಳಸುವುದು ಕೂಡ ಈ ಅಭಿಯಾನದ ಒಂದು ಭಾಗ. ಗಂಗೆ ಮಲಿನವಾಗುವುದೆಂದರೆ, ಆ ನದಿಯ ತಟದಲ್ಲಿರುವ ಲಕ್ಷಾಂತರ ಕುಟುಂಬಗಳ ಆರೋಗ್ಯ ಮಲಿನವಾಗುವುದು ಎಂದರ್ಥ. ಜನರ ಆರೋಗ್ಯಕ್ಕಾಗಿ ಇಷ್ಟೆಲ್ಲ ಕಷ್ಟಪಟ್ಟು ಸರಕಾರಗಳು ಹಣ ವ್ಯಯಿಸುತ್ತಿರುವಾಗ ಇನ್ನೊಂದು ಕಡೆ ಇದೇ ಆರೋಗ್ಯವಂತ ಮತ್ತು ಬಹುಮುಖ್ಯವಾಗಿ ಯುವಸಮೂಹ ರಸ್ತೆಯಲ್ಲಿ ಹೆಣವಾಗುವುದನ್ನು ಏನೆಂದು ಕರೆಯಬೇಕು? ಆರೋಗ್ಯವಂತರಾದ ಮಂದಿ ಪ್ರತಿದಿನ ಅಪಘಾತಕ್ಕೆ ಸಿಲುಕಿ ದೇಶದ ಸಂಪನ್ಮೂಲ ಪಟ್ಟಿಯಿಂದ ಹೊರಬೀಳುತ್ತಿರುವುದಕ್ಕೆ ಏನು ಪರಿಹಾರವಿದೆ? ಇದಕ್ಕೆ ಬಾಯಿಬಾರದ ರಸ್ತೆಗಳನ್ನು ದೂರಿ ಯಾವ ಪ್ರಯೋಜನವೂ ಇಲ್ಲ. ಇಂಥ ರಸ್ತೆಗಳನ್ನು ನಿರ್ಮಿಸಿದವರು, ರಸ್ತೆ ಸಾರಿಗೆ ಅಧಿಕಾರಿಗಳು, ರಸ್ತೆ ಸುರಕ್ಷಿತಾ ನಿಯಮಗಳನ್ನು ಉಲ್ಲಂಘಿಸಿದ ಚಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳದವರು, ಅಧಿಕಾರಶಾಹಿಗಳು, ಭ್ರಷ್ಟತನ, ಲಂಚಗುಳಿತನ, ವ್ಯವಸ್ಥೆಯ ಬೇಜವಾಬ್ದಾರಿತನ.. ಎಲ್ಲವೂ ಈ ಸಾವುಗಳ ಹೊಣೆಯನ್ನು ಹೊತ್ತುಕೊಳ್ಳಬೇಕು. ಈ ಸಾವುಗಳನ್ನು ಈ ಎಲ್ಲರೂ ಸೇರಿಕೊಂಡು ನಡೆಸಿರುವ ಹತ್ಯೆಯೆಂದೇ ನಾವು ಪರಿಗಣಿಸಬೇಕು. ಅಂದಹಾಗೆ, ಅಪಘಾತಗಳನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಿಲ್ಲ ಎಂಬುದರ ಅರ್ಥ- ಈಗ ನಡೆಯುತ್ತಿರುವ ಅಪಘಾತಗಳೆಲ್ಲ ತಪ್ಪಿಸಲಸಾಧ್ಯವಾದುದು ಎಂದಲ್ಲ. ವಾಹನಗಳಿಂದ ತೆರಿಗೆಯ ರೂಪದಲ್ಲಿ ಅಪಾರ ಪ್ರಮಾಣದಲ್ಲಿ ದುಡ್ಡು ಸಂಗ್ರಹಿಸುವ ಸರಕಾರಗಳು ಆ ಹಣದಿಂದ ಸಮರ್ಪಕ ರಸ್ತೆ ನಿರ್ಮಾಣಕ್ಕಾಗಿ ವ್ಯಯ ಮಾಡುವ ಮೊತ್ತವೆಷ್ಟು ಎಂಬುದು ಮೊದಲಾಗಿ ಬಹಿರಂಗಕ್ಕೆ ಬರಬೇಕು. ರಸ್ತೆ ತೆರಿಗೆಯ ಮೊದಲ ಹಕ್ಕುದಾರ ರಸ್ತೆಗಳೇ. ಸುರಕ್ಷಿತ ಮತ್ತು ಸಂಚಾರಯೋಗ್ಯ ರಸ್ತೆಗಳ ನಿರ್ಮಾಣದ ಹೊಣೆಯನ್ನು ಸಂಪೂರ್ಣವಾಗಿ ಸರಕಾರಗಳೇ ಹೊತ್ತುಕೊಳ್ಳಬೇಕು. ಅಪಘಾತದ ಮೂಲಕ ಆಗುವ ಪ್ರತಿ ಸಾವಿಗೂ ಸರಕಾರ ನಡೆಸುವ ಹತ್ಯೆಯೆಂಬಷ್ಟು ಗಂಭೀರವಾಗಿ ಸಮಾಜ ಪ್ರತಿಕ್ರಿಯಿಸಬೇಕು. ಸುರಕ್ಷಿತ ರಸ್ತೆ ನಿರ್ಮಾಣದಲ್ಲಿ ವ್ಯವಸ್ಥೆ ಅಸಡ್ಡೆ ತೋರಿದರೆ ಜನರು ತೆರಿಗೆ ಪಾವತಿಯನ್ನು ತಡೆ ಹಿಡಿಯಬೇಕು. ‘ತೆರಿಗೆ ತಡೆ’ ಚಳವಳಿ ಎಲ್ಲೆಡೆಯೂ ಕಾಣಿಸಿಕೊಳ್ಳಬೇಕು. ಪ್ರತಿವರ್ಷ ಒಂದೂವರೆ ಲಕ್ಷದಷ್ಟು ಮಂದಿ ರಸ್ತೆಯಲ್ಲಿ ಹೆಣವಾಗುತ್ತಿರುವುದನ್ನು ಸಹಜ ಸಾವಾಗಿ ಪರಿಗಣಿಸಲು ಖಂಡಿತ ಸಾಧ್ಯವಿಲ್ಲ. ಎಲ್ಲೆಲ್ಲ ಲೋಪ ಸಂಭವಿಸಿದೆಯೋ ಅಲ್ಲೆಲ್ಲ ಲೋಪ ತಿದ್ದುವ ತುರ್ತು ಕ್ರಮಗಳನ್ನು ಸರಕಾರಗಳು ಕೈಗೊಳ್ಳಬೇಕು. ಇನ್ನಷ್ಟು ಸುಶ್ಮಿತಾರು ನಮ್ಮನ್ನು ಮೌನವಾಗಿಸುವ ಮೊದಲು ವ್ಯವಸ್ಥೆ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಮುಂದೊಂದು ದಿನ ಸಾರಿಗೆ ಸಚಿವರನ್ನೇ ಜನರು ‘ಭಯೋತ್ಪಾದಕ’ ಎಂದು ಕರೆದು ಕೇಸು ದಾಖಲಿಸಿಯಾರು.

Monday 11 September 2017

ವೃದ್ಧಾಶ್ರಮ ಪರಿಹಾರವಾಗುವ ಮೊದಲು...

      ಏಜ್‍ವೆಲ್ ಫೌಂಡೇಶನ್ ಎಂಬ ಸಂಸ್ಥೆಯು ವೃದ್ಧರಿಗೆ ಸಂಬಂಧಿಸಿ 2015ರಲ್ಲಿ ಬಿಡುಗಡೆಗೊಳಿಸಿದ Human Rights of elderly in India: A critical reflection on social Development ಎಂಬ ಹೆಸರಿನ ಸಮೀಕ್ಷಾ ವರದಿಯನ್ನು ಗಮನಿಸುವಾಗ ಕಳೆದವಾರ ಸುಪ್ರೀಮ್ ಕೋರ್ಟ್ ನೀಡಿದ ಆದೇಶವು ಮಹತ್ವಪೂರ್ಣವಾಗಿ ಕಾಣುತ್ತದೆ. ಎಲ್ಲ ಜಿಲ್ಲೆಗಳ ಪ್ರತಿಯೊಂದು ವೃದ್ಧಾಶ್ರಮದ ಸ್ಥಿತಿಗತಿಯ ಕುರಿತು ವರದಿ ನೀಡುವಂತೆ ಸು. ಕೋರ್ಟು ದೇಶದ ಎಲ್ಲ ರಾಜ್ಯಗಳಿಗೆ ಆದೇಶ ನೀಡಿದೆ. ರಾಜ್ಯದ ಸಚಿವ ಸಂಪುಟ ವಿಸ್ತರಣೆ, ಬಾಬಾ ರಾಮ್-ರಹೀಮ್, ಜಿಡಿಪಿ ಕುಸಿತ, ನೋಟು ಅಮಾನ್ಯೀಕರಣದ ವೈಫಲ್ಯಗಳ ಚರ್ಚೆಯಲ್ಲಿ ಬಹುತೇಕ ಸುದ್ದಿಯಾಗದೇ ಹೋದ ಈ ಆದೇಶವು ಸುಮಾರು 10 ಕೋಟಿಗಿಂತಲೂ ಅಧಿಕ ವೃದ್ಧರನ್ನು ಹೊಂದಿರುವ ದೇಶವೊಂದರಲ್ಲಿ ಚರ್ಚೆಯಾಗದೇ ಹೋಗುವುದು ಅತ್ಯಂತ ವಿಷಾದಕರ.
     ಹಿರಿಯರನ್ನು ಗೌರವದಿಂದ ಕಾಣುವ ಪರಂಪರೆಯೊಂದು ಈ ದೇಶಕ್ಕಿದೆ. ಮಾತೃ ದೇವೋಭವ, ಪಿತೃ ದೇವೋಭವ ಎಂಬ ಪದಗುಚ್ಛ ಈ ದೇಶದಲ್ಲಿ ಪ್ರಚಲಿತದಲ್ಲಿದೆ. ತಂದೆ ಮತ್ತು ತಾಯಿಯು ದೇವನಿಗೆ ಸಮಾನವೆಂಬಷ್ಟು ಗೌರವಾರ್ಹ ಭಾವನೆಯು ಈ ದೇಶದ ಸಂಸ್ಕೃತಿಯ ಭಾಗವಾಗಿ ಬಿಟ್ಟಿದೆ. ಆದ್ದರಿಂದಲೋ ಏನೋ ಮುಂದುವರಿದ ಮತ್ತು ಜನಸಂಖ್ಯೆಯಲ್ಲಿ ತೀರಾ ಕಡಿಮೆ ಇರುವ ರಾಷ್ಟ್ರಗಳಿಗೆ ಹೋಲಿಸಿದರೆ, ಜನಸಂಖ್ಯೆಯಲ್ಲಿ ಎಷ್ಟೋ ಪಾಲು ಅಧಿಕ ಇರುವ ಭಾರತದಲ್ಲಿ ವೃದ್ಧಾಶ್ರಮಗಳು ಕಡಿಮೆ. ಎಲ್ಲ ರಾಜ್ಯಗಳಲ್ಲಿರುವ ಅಧಿಕೃತ ವೃದ್ಧಾಶ್ರಮಗಳ ಸಂಖ್ಯೆ 500ರನ್ನು ಮೀರುವುದಿಲ್ಲ. 10 ಕೋಟಿಗಿಂತಲೂ ಅಧಿಕ ವೃದ್ಧರಿರುವ ದೇಶವೊಂದಕ್ಕೆ 500ರಷ್ಟು ವೃದ್ಧಾಶ್ರಮಗಳು ಸಾಲಬಹುದೇ ಎಂಬುದು ಒಂದು ಪ್ರಶ್ನೆಯಾದರೆ, ವೃದ್ಧರಿಗೆ ವೃದ್ಧಾಶ್ರಮಗಳ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಇದರ ಜೊತೆಜೊತೆಗೇ ಹುಟ್ಟಿಕೊಳ್ಳುತ್ತದೆ.
       ಹುಟ್ಟುವಾಗ ಯಾರೂ ವೃದ್ಧರಾಗಿ ಹುಟ್ಟುವುದಿಲ್ಲ. ಮಗುತನ, ಹದಿಹರೆಯ, ಯೌವನ, ನಡುವಯಸ್ಸನ್ನು ದಾಟಿಯೇ ಪ್ರತಿಯೊಬ್ಬರೂ ವೃದ್ಧಸ್ಥಿತಿಗೆ ತಲುಪುತ್ತಾರೆ. ಇದೊಂದು ಪ್ರಕ್ರಿಯೆ. ಮಗುವಾಗಿದ್ದವರು ವಿವಿಧ ಹಂತಗಳನ್ನು ದಾಟಿ ವೃದ್ಧಾವಸ್ಥೆಗೆ ತಲುಪುವಾಗ ಅವರ ಮಕ್ಕಳು ಅವರನ್ನು ಈ ಪ್ರಕ್ರಿಯೆಯಲ್ಲಿ ಹಿಂಬಾಲಿಸುತ್ತಾ ಇರುತ್ತಾರೆ. ಅಪ್ಪ ಮತ್ತು ಅಮ್ಮ ನಡುವಯಸ್ಸನ್ನು ದಾಟುವಾಗ ಅವರ ಮಕ್ಕಳು ಹದಿಹರೆಯಕ್ಕೋ ಅದಕ್ಕಿಂತ ಸಣ್ಣ ಪ್ರಾಯಕ್ಕೋ ತಲುಪಿರುತ್ತಾರೆ. ಹೆತ್ತವರು ದುಡಿಯುವುದು, ತಮ್ಮ ಇಷ್ಟಗಳನ್ನು ಪೂರೈಸುವುದು, ಶಾಲಾ ಖರ್ಚು ವೆಚ್ಚವನ್ನು ನೋಡಿಕೊಳ್ಳುವುದು, ಸುತ್ತಾಡಿಸುವುದು.. ಇತ್ಯಾದಿಗಳು ಪ್ರತಿದಿನ ಈ ಮಕ್ಕಳ ಕಣ್ಣೆದುರಲ್ಲೇ ನಡೆಯುತ್ತಿರುತ್ತವೆ. ಆದ್ದರಿಂದ ಹೆತ್ತವರು ವೃದ್ಧಾಪ್ಯಕ್ಕೆ ತಲುಪುವುದೆಂಬುದು ದಿಢೀರ್ ಪ್ರಕ್ರಿಯೆಯಲ್ಲ. ಹೆತ್ತವರನ್ನು ಆ ಸ್ಥಿತಿಯಲ್ಲಿ ನೋಡುವುದಕ್ಕೆ ನಾವಿನ್ನೂ ಮಾನಸಿಕವಾಗಿ ಸಜ್ಜಾಗಿಲ್ಲ ಎಂದು ಮಕ್ಕಳು ಸಬೂಬು ಹೇಳುವಂತೆಯೂ ಇಲ್ಲ. ಪವಿತ್ರ ಕುರ್‍ಆನ್ ಅಂತೂ ವೃದ್ಧ ಹೆತ್ತವರ ಆರೈಕೆಯ ಸಂಪೂರ್ಣ ಹೊಣೆಯನ್ನು ಅವರ ಮಕ್ಕಳ ಮೇಲೆ ಹೇರಿದೆ. ಹೆತ್ತವರು ತಮ್ಮ ಮಕ್ಕಳನ್ನು ಶಿಶು ಪ್ರಾಯದಲ್ಲಿ ಹೇಗೆ ಆರೈಕೆ ಮಾಡಿದ್ದರೋ ಮತ್ತು ಯಾವ ಪ್ರೇಮಭಾವವನ್ನು ಹೊಂದಿದ್ದರೋ ಅದೇ ರೀತಿಯಲ್ಲಿ ಆ ಮಕ್ಕಳು ವೃದ್ಧರಾದ ತಮ್ಮ ಹೆತ್ತವರನ್ನು ಆರೈಕೆ ಮಾಡಬೇಕೆಂದು ಅದು ತಾಕೀತು ಮಾಡಿದೆ. ಎಲ್ಲಿಯ ವರೆಗೆಂದರೆ, ಎಷ್ಟೇ ದೊಡ್ಡ ಧರ್ಮಿಷ್ಟನಾದರೂ ಆತ ತನ್ನ ಹೆತ್ತವರ ಕೋಪಕ್ಕೆ ಗುರಿಯಾಗಿದ್ದರೆ ಸ್ವರ್ಗ ಪಡೆಯಲಾರ ಎಂದು ಕಟುವಾಗಿ ಎಚ್ಚರಿಸುವಷ್ಟು. ಹೆತ್ತವರ ಬಗ್ಗೆ ‘ಛೆ’ ಎಂಬ ತಿರಸ್ಕಾರದ ಧ್ವನಿಯನ್ನೂ ಉದ್ಘರಿಸಬಾರದು ಅನ್ನುವಷ್ಟು. ಹಾಗಂತ, ಹೆತ್ತವರನ್ನು ಗೌರವಿಸುವಂತೆ ತಾಕೀತು ಮಾಡಿರುವುದು ಪವಿತ್ರ ಕುರ್‍ಆನ್ ಮಾತ್ರವಲ್ಲ, ಹಿಂದೂ ಧರ್ಮದಲ್ಲೂ ಇದಕ್ಕೆ ನಿದರ್ಶನಗಳಿವೆ. ಶ್ರವಣಕುಮಾರನ ಕತೆ ಬಹುತೇಕ ಜನಜನಿತ. ಆದರೆ ಏಜ್‍ವೆಲ್ ಫೌಂಡೇಶನ್ ನೀಡಿರುವ ವರದಿ ಮತ್ತು ಮಾಧ್ಯಮಗಳಲ್ಲಿ ನಾವು ಆಗಾಗ ಓದುತ್ತಿರುವ ಸುದ್ದಿಗಳನ್ನು ಪರಿಗಣಿಸಿದರೆ, ಈ ಪರಂಪರೆಯಲ್ಲಿ ಬಿರುಕು ಮೂಡಿರುವುದು ಹಾಗೂ ತೇಪೆ ಹಚ್ಚಲಾಗದಷ್ಟು ಅವು ಅಪಾಯಕಾರಿ ಹಂತಕ್ಕೆ ತಲುಪುತ್ತಿರುವುದು ಸ್ಪಷ್ಟವಾಗುತ್ತಿದೆ. ದೇಶದ್ಯಾಂತ ಪ್ರತಿ ಮೂವರು ವೃದ್ಧರಲ್ಲಿ ಒಬ್ಬರು ತಮ್ಮ ಕುಟುಂಬಸ್ಥರಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂದು ಏಜ್‍ವೆಲ್ ಫೌಂಡೇಶನ್ ಬಿಡುಗಡೆ ಮಾಡಿರುವ ವರದಿ ಹೇಳುತ್ತದೆ. ಪ್ರತಿ ಮೂವರಲ್ಲಿ ಓರ್ವ ವೃದ್ಧರು ದೈಹಿಕವಾಗಿ ಹಿಂಸೆಗೆ ಒಳಗಾಗುತ್ತಾರೆ ಮತ್ತು ನಿಂದನೀಯ ಮಾತುಗಳನ್ನು ಆಲಿಸುತ್ತಾರೆ ಎಂದು ವರದಿ ವಿವರಿಸಿದೆ. 60 ವರ್ಷಕ್ಕಿಂತ ಮೇಲ್ಪಟ್ಟ ದೇಶಾದ್ಯಂತದ ಸುಮಾರು 5 ಸಾವಿರ ಮಂದಿಯನ್ನು ಭೇಟಿಯಾಗಿ ತಯಾರಿಸಲಾದ ವರದಿ ಇದು. 2490 ಮಂದಿ ಪುರುಷರು ಮತ್ತು 2510 ಮಂದಿ ಮಹಿಳೆಯರನ್ನು ಈ ವರದಿ ತಯಾರಿಕೆಯ ವೇಳೆ ಭೇಟಿ ಮಾಡಲಾಗಿದೆ. ನಗರ ಪ್ರದೇಶದ ವೃದ್ಧರಿಗೆ ಹೋಲಿಸಿದರೆ ಗ್ರಾಮೀಣ ಪ್ರದೇಶದ ವೃದ್ಧರೇ ಹೆಚ್ಚು ಸುರಕ್ಷಿತರು ಎಂದೂ ಹೇಳಲಾಗಿದೆ. ಅಂದಹಾಗೆ, 10 ಕೋಟಿಗಿಂತಲೂ ಅಧಿಕ ವೃದ್ಧರಿರುವ ದೇಶದಲ್ಲಿ ಬರೇ 5 ಸಾವಿರ ಮಂದಿಯ ಅಭಿಪ್ರಾಯಗಳು ಹೇಗೆ 10 ಕೋಟಿಯನ್ನು ಪ್ರತಿನಿಧಿಸಬಲ್ಲುದು ಎಂಬ ಪ್ರಶ್ನೆಯ ಆಚೆಗೆ ಈ ವರದಿಯ ಮೇಲೆ ಈ ದೇಶದಲ್ಲಿ ವಿಶ್ಲೇಷಣೆ ನಡೆಯಬೇಕು. ವೃದ್ಧರು ತಮ್ಮ ವಯಸ್ಸನ್ನು ಭಾರವಾಗಿ ನೋಡದಂಥ ಸೌಖ್ಯ ವಾತಾವರಣವನ್ನು ನಿರ್ಮಿಸುವುದು ಹೇಗೆ? ಪ್ರತಿಭಟನೆ ಮಾಡುವಂಥ ವಯಸ್ಸು ಅವರದಲ್ಲ. ಇನ್ನೊಬ್ಬರೊಂದಿಗೆ ದುಮ್ಮಾನ ಹೇಳಿಕೊಳ್ಳುವುದು ಅನೇಕ ಬಾರಿ ಅವರ ಪಾಲಿಗೆ ಅಪಾಯಕಾರಿಯಾಗಿರುತ್ತದೆ. ಆದ್ದರಿಂದಲೇ ಹೆಚ್ಚಿನ ಬಾರಿ ಅವರ ಸಮಸ್ಯೆಗಳು ಹೊರ ಜಗತ್ತಿನ ಮುಂದೆ ತೆರೆದುಕೊಳ್ಳುವುದೇ ಇಲ್ಲ. ಇಂಥ ಸ್ಥಿತಿಯಲ್ಲಿ, ವೃದ್ಧರಿಗೆ ಸೌಖ್ಯ ಭಾವ ಒದಗಿಸಿಕೊಡುವ ವಿಧಾನ ಯಾವುದು? ವೃದ್ಧಾಶ್ರಮಗಳಲ್ಲಿ ಇದನ್ನು ಹುಡುಕಬಹುದೇ? ಅದು ಅವರಿಗೆ ನೆಮ್ಮದಿಯನ್ನು ಕೊಡಬಹುದೇ? ದೇಶದ  ವೃದ್ಧಾಶ್ರಮಗಳ ಪರಿಸ್ಥಿತಿ ಹೇಗಿದೆ, ಅವು ವೃದ್ಧರನ್ನು ಸೇರಿಸಿಕೊಳ್ಳುವ ಮೊದಲು ಏನೆಲ್ಲ ಷರತ್ತುಗಳನ್ನು ಹಾಕುತ್ತವೆ, ಆ ಷರತ್ತುಗಳನ್ನು ಪೂರೈಸಲು ಎಷ್ಟು ವೃದ್ಧರು ಶಕ್ತರಿದ್ದಾರೆ, ಪೂರೈಸಲಾಗದ ಷರತ್ತಿನ ಕಾರಣಕ್ಕಾಗಿಯೇ ಎಷ್ಟು ವೃದ್ಧರು ಬೀದಿಗೆ ಬಿದ್ದಿದ್ದಾರೆ, ವೃದ್ಧಶ್ರಮದಲ್ಲಿರುವ ವೃದ್ಧರ ಅಭಿಪ್ರಾಯಗಳೇನು... ಇತ್ಯಾದಿಗಳೂ ಮುಖ್ಯವಾಗುತ್ತವೆ. ಸುಪ್ರೀಮ್ ಕೋರ್ಟ್‍ನ ಆದೇಶ ಪ್ರಾಮುಖ್ಯತೆ ಪಡಕೊಳ್ಳುವುದು ಈ ಎಲ್ಲವುಗಳ ಹಿನ್ನಲೆಯಲ್ಲಿ.
ದೇಶದಲ್ಲಿ ವೃದ್ಧರ ಪರವಾದ ಹಲವು ಕಾನೂನುಗಳಿವೆ. ಆದರೆ, ಅವು ಅವರ ಪಾಲಿಗೆ ನೆರವಾಗಿ ಬರಬೇಕೆಂದರೆ ಮೊದಲು ಅವರು ದೂರು ಕೊಡಬೇಕು. ಪೊಲೀಸು ಠಾಣೆ, ಕೋರ್ಟು- ಕಚೇರಿಗೆ ಹೋಗುವ ಧೈರ್ಯ ತೋರಬೇಕು. ವೃದ್ಧರಲ್ಲಿ ಇಷ್ಟು ಆರೋಗ್ಯ ಮತ್ತು ಧೈರ್ಯ ಇದೆಯೇ ಅನ್ನುವುದು ಇಲ್ಲಿಯ ಮುಖ್ಯ ಪ್ರಶ್ನೆ. ಅಲ್ಲದೇ ಕುಟುಂಬದ ಮರ್ಯಾದೆಯ ಪ್ರಶ್ನೆಯೂ ಇಲ್ಲಿ ಅವರನ್ನು ಕಾಡುತ್ತದೆ. ಬದುಕಿರುವ ವರೆಗೆ ಹೇಗಾದರೂ ದಿನದೂಡುವುದು ಅನ್ನುವ ಹೊಂದಾಣಿಕೆಯ ಮನಸ್ಥಿತಿಗೆ ತಯಾರಾಗಲು ಅವರ ಸುತ್ತಲಿನ ಪರಿಸ್ಥಿತಿ ಒತ್ತಡವನ್ನು ಹೇರುತ್ತಿರುತ್ತದೆ. ಇದರಾಚೆಗೆ ಧೈರ್ಯ ತೋರುವ ವೃದ್ಧರಷ್ಟೇ ಕಾನೂನಿನಿಂದ ಲಾಭವನ್ನು ಪಡೆದುಕೊಳ್ಳಬಹುದು. ಇದು ಬಾಹ್ಯ ನೋಟಕ್ಕೆ ತೋರುವಷ್ಟು ಸುಲಭದ ಹಾದಿಯಂತೂ ಅಲ್ಲ. ವೃದ್ಧರನ್ನು ಅವರ ಮುಸ್ಸಂಜೆಯ ಪ್ರಾಯದಲ್ಲಿ ಕೋರ್ಟು- ಕಾನೂನು ಎಂದು ಅಲೆದಾಡಿಸುವುದು ಅಥವಾ ಪ್ರತಿಭಟನೆಗೆ ಕೂರಿಸುವುದು ಇವೆರಡರ ಹೊರತಾಗಿ ಮೂರನೆಯ ಆಯ್ಕೆಯಾಗಿ ವೃದ್ಧಾಶ್ರಮಗಳಷ್ಟೇ ಇರುವುದೇ? ಇದರಾಚೆಗೆ ಅವರ ಮನೆಯನ್ನೇ ಅವರಿಗೆ ನೆಮ್ಮದಿಯ ತಾಣವನ್ನಾಗಿ ಮಾಡಲು ಸಾಧ್ಯವಿಲ್ಲವೇ? ಮಕ್ಕಳಿಗೆ ಚಿಕ್ಕಂದಿನಲ್ಲೇ ಹೆತ್ತವರು ಆ ಬಗ್ಗೆ ತರಬೇತಿ ನೀಡುವುದು ಒಂದು ಆಯ್ಕೆಯಾಗಬಾರದೇ? ಹೆತ್ತವರ ಬಗ್ಗೆ ಮಕ್ಕಳು ಹೆಮ್ಮೆ ಪಟ್ಟುಕೊಳ್ಳುವ ಮತ್ತು ಅವರ ಸುಖಕ್ಕಾಗಿ ಸರ್ವ ತ್ಯಾಗಕ್ಕೂ ಸಿದ್ಧವಾಗಲು ಪ್ರೇರೇಪಿಸುವ ಬರಹ, ವೀಡಿಯೋ, ಸಿನಿಮಾ, ನಾಟಕಗಳನ್ನು ಮಕ್ಕಳಿಗೆ ತೋರಿಸುವುದನ್ನೂ ಒಂದು ಆಯ್ಕೆಯಾಗಿ ಎತ್ತಿಕೊಳ್ಳಬಹುದಲ್ಲವೇ?
      ಮುಖ್ಯವಾಗಿ, ವೃದ್ಧ ಹೆತ್ತವರನ್ನು ಗೌರವದಿಂದ ಕಾಣುವಂಥ ಶುದ್ಧ ಮನಸ್ಸನ್ನು ಆಯಾ ಹೆತ್ತವರು ಚಿಕ್ಕಂದಿನಲ್ಲೇ ತಮ್ಮ ಮಕ್ಕಳಲ್ಲಿ ಬಿತ್ತಬೇಕು. ಸಂದರ್ಭ, ಸನ್ನಿವೇಶವನ್ನು ಅದಕ್ಕಾಗಿ ಬಳಸಿಕೊಳ್ಳಬೇಕು. ಮುಂದಿನ ತಲೆಮಾರು ವೃದ್ಧ ಹೆತ್ತವರಿಗೆ ವೃದ್ಧಾಶ್ರಮಗಳನ್ನು ಪರ್ಯಾಯ ಮನೆಯಾಗಿ ಕಂಡುಕೊಳ್ಳದಂತೆ ಪ್ರೇರೇಪಣೆ ನೀಡಬೇಕು. ಅನಿವಾರ್ಯ ಕಾರಣಗಳ ಹೊರತು ವೃದ್ಧಾಶ್ರಮ ಎಂದೂ ಪರಿಹಾರ ಆಗಬಾರದು.

Sunday 3 September 2017

ಖಾಸಗಿತನವನ್ನು ಚರ್ಚಿಸಬೇಕಾದವರು ತ್ರಿವಳಿಯಲ್ಲಿ ಕಳೆದುಹೋದರೆ?

     ಖಾಸಗಿತನ ಅಂದರೇನು, ಅದರ ವ್ಯಾಪ್ತಿ ಎಷ್ಟು, `ಖಾಸಗಿತನವು ವ್ಯಕ್ತಿಯ ಮೂಲಭೂತ ಹಕ್ಕು’ ಎಂದು ಸುಪ್ರೀಮ್‍ಕೋರ್ಟ್ ತೀರ್ಪು ನೀಡಿರುವುದು ಏನೆಲ್ಲ ಬದಲಾವಣೆಗಳಿಗೆ ಕಾರಣವಾಗಬಹುದು, ಈಗಾಗಲೇ ಇರುವ ಯಾವೆಲ್ಲ ಕಾನೂನುಗಳ ಮೇಲೆ ಅದು ಪರಿಣಾಮ ಬೀರಬಹುದು ಇತ್ಯಾದಿ ಇತ್ಯಾದಿಗಳ ಮೇಲೆ ಗಂಭೀರ ಚರ್ಚೆಗೆ ತೆರೆದುಕೊಳ್ಳಬೇಕಾಗಿದ್ದ ಮಾಧ್ಯಮಗಳು ಈ ಹೊಣೆಗಾರಿಕೆಯಿಂದ ಬಹುತೇಕ ನುಣುಚಿಕೊಂಡಿವೆ. ತ್ರಿವಳಿ ತಲಾಕ್‍ನ ಮೇಲೆ ತೀರ್ಪು ನೀಡಿದ ಎರಡು ದಿನಗಳ ಬಳಿಕ ಖಾಸಗಿತನದ ಮೇಲೂ ಸುಪ್ರೀಮ್ ಕೋರ್ಟ್ ತೀರ್ಪು ನೀಡಿತು. ತ್ರಿವಳಿ ತಲಾಕ್ ತೀರ್ಪಿಗೆ ಹೋಲಿಸಿದರೆ ಖಾಸಗಿತನದ ಮೇಲಿನ ತೀರ್ಪು ಹೆಚ್ಚು ಮಹತ್ವಪೂರ್ಣ ಮತ್ತು ದೂರಗಾಮಿ ಪರಿಣಾಮ ಬೀರುವಂಥದ್ದು. ತ್ರಿವಳಿ ತಲಾಕ್‍ನ ಬಗ್ಗೆ ತೀರ್ಪು ನೀಡುವ ವೇಳೆ ಐವರು ನ್ಯಾಯಾಧೀಶರ ನ್ಯಾಯಪೀಠದಲ್ಲಿ ಭಿನ್ನಮತ ತಲೆದೋರಿತ್ತು. ಇಬ್ಬರು ನ್ಯಾಯಾಧೀಶರು ತ್ರಿವಳಿ ತಲಾಕನ್ನು ಸಂವಿಧಾನಬದ್ಧ ಎಂದು ವ್ಯಾಖ್ಯಾನಿಸಿದರು. ಸಂವಿಧಾನದ 25ನೇ ಪರಿಚ್ಛೇದವು ಮೂಲಭೂತ ಹಕ್ಕಾಗಿ ಪರಿಗಣಿಸಿರುವ ಧಾರ್ಮಿಕ ಹಕ್ಕಿನ ವ್ಯಾಪ್ತಿಯೊಳಗೆ ತ್ರಿವಳಿ ತಲಾಕ್ ಒಳಪಡುತ್ತದೆ ಎಂದವರು ಅಭಿಪ್ರಾಯಪಟ್ಟರು. ಆದರೆ ಐವರು ನ್ಯಾಯಾಧೀಶರ ಪೀಠದ ಒಮ್ಮತದ ತೀರ್ಪಿನಲ್ಲಿ ಈ ಅಭಿಪ್ರಾಯವು ಅಮಾನ್ಯಗೊಂಡಿತಾದರೂ ತ್ರಿವಳಿ ತಲಾಕ್ ಮೇಲಿನ ಚರ್ಚೆ ಎಷ್ಟು ಸೂಕ್ಷ್ಮವಾಗಿರಬೇಕು ಎಂಬುದನ್ನು ಈ ಭಿನ್ನಮತ ಸ್ಪಷ್ಟಪಡಿಸುತ್ತದೆ. ಆದರೆ ಖಾಸಗಿತನವು ಮೂಲಭೂತ ಹಕ್ಕು ಎಂಬ ಬಗ್ಗೆ ನ್ಯಾಯಪೀಠದ 9 ನ್ಯಾಯಾಧೀಶರಲ್ಲಿ ಯಾರಿಗೂ ಭಿನ್ನಾಭಿಪ್ರಾಯ ಇರಲಿಲ್ಲ. ತ್ರಿವಳಿ ತಲಾಕ್ ಶರೀಅತ್‍ನ ಭಾಗವೋ ಅಲ್ಲವೋ ಎಂಬ ಬಗ್ಗೆ ಮುಸ್ಲಿಮ್ ಸಮುದಾಯದೊಳಗೆ ಹೇಗೆ ಭಿನ್ನಾಭಿಪ್ರಾಯ ಇತ್ತೋ ಹಾಗೆಯೇ ಖಾಸಗಿತನವು ಮೂಲಭೂತ ಹಕ್ಕು ಹೌದೋ ಅಲ್ಲವೋ ಎಂಬ ಬಗ್ಗೆ ಕೇಂದ್ರ ಸರಕಾರ ಮತ್ತು ವಿರೋಧ ಪಕ್ಷಗಳ ನಡುವೆಯೂ ಭಿನ್ನಾಭಿಪ್ರಾಯ ಇತ್ತು. ಈ ದೇಶದ ನಾಗರಿಕರಲ್ಲೂ ಈ ಬಗ್ಗೆ ವಿವಿಧ ಅಭಿಪ್ರಾಯಗಳಿದ್ದುವು. ಸದ್ಯ ಕೇಂದ್ರದ ವಾದವನ್ನು ಸುಪ್ರೀಮ್‍ಕೋರ್ಟ್ ತಿರಸ್ಕರಿಸಿದೆ. ಖಾಸಗಿತನವನ್ನು ಅದು ಮೂಲಭೂತ ಹಕ್ಕಾಗಿ ಪರಿಗಣಿಸಿದೆ. ಇಲ್ಲಿರುವ ಕುತೂಹಲ ಏನೆಂದರೆ, ಖಾಸಗಿತನವನ್ನು ಮೂಲಭೂತ ಹಕ್ಕಾಗಿ ಪರಿಗಣಿಸಲು ಕೇಂದ್ರ ಸರಕಾರ ಹಿಂಜರಿದುದು ಯಾವ ಕಾರಣಕ್ಕಾಗಿ ಎಂಬುದು. ಒಂದುವೇಳೆ, ಈ ಕುರಿತಂತೆ ಆಳ ಅಧ್ಯಯನ ನಡೆಸಿದರೆ ಮತ್ತು 547 ಪುಟಗಳ ತೀರ್ಪಿನ ಮೇಲೆ ವಿಶ್ಲೇಷಣೆ ನಡೆಸಿದರೆ ಒಂದೊಂದಾಗಿ ಕಾರಣಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ.
ಕೇಂದ್ರದ ಬಿಜೆಪಿ ಸರಕಾರ ಮತ್ತು ಅದರ ಬೆಂಬಲಿಗ ವರ್ಗವು ಈ ದೇಶದಲ್ಲಿ ಕೆಲವು ಅನಾಹುತಗಳನ್ನು ಮಾಡಿಟ್ಟಿವೆ. ಯಾರು ಯಾವ ಆಹಾರವನ್ನು ಸೇವಿಸಬೇಕು ಎಂಬುದನ್ನು ಅವು ನಿರ್ದೇಶಿಸತೊಡಗಿವೆ. ಗಂಡು ಮತ್ತು ಹೆಣ್ಣು ಮಾತಾಡುವುದರ ಮೇಲೂ ಅವು ನಿರ್ಬಂಧ ವಿಧಿಸಿವೆ. ಮನೆಯ ಫ್ರೀಝರ್‍ನಲ್ಲಿ ಏನೇನಿದೆ ಎಂಬ ಬಗ್ಗೆ ಅವು ದಾಳಿ ಮಾಡಿ ಪತ್ತೆ ಹಚ್ಚತೊಡಗಿವೆ. ಇದೊಂದು ಭಾಗವಾದರೆ ಇನ್ನೊಂದು ಆಧಾರ್ ಕಾರ್ಡ್. ಆಧಾರ್ ಕಾರ್ಡನ್ನು ರದ್ದುಪಡಿಸುವೆ ಎಂಬ ಭರವಸೆಯೊಂದಿಗೆ ಕಳೆದ ಲೋಕಸಭಾ ಚುನಾವಣೆಯನ್ನು ಎದುರಿಸಿದವರು ನರೇಂದ್ರ ಮೋದಿ. ಆದರೆ ಗುಜರಾತ್‍ನ ಮುಖ್ಯಮಂತ್ರಿ ನರೇಂದ್ರ ಮೋದಿಯವರು ಪ್ರಧಾನಿ ನರೇಂದ್ರ ಮೋದಿಯಾಗಿ ಬದಲಾದ ಬಳಿಕ ಆಧಾರ್ ಕಾರ್ಡ್‍ನ ವಿಷಯದಲ್ಲೂ ಸಂಪೂರ್ಣ ಬದಲಾದರು. ಆಧಾರ್ ಕಾರ್ಡನ್ನು ರದ್ದುಗೊಳಿಸುವ ಬದಲು ಎಲ್ಲದಕ್ಕೂ ಕಡ್ಡಾಯಗೊಳಿಸಿದರು. ರೈಲು ಟಿಕೇಟು, ವಿಮಾನ ಟಿಕೇಟು, ಶಾಲಾ ಸೇರ್ಪಡೆಯಂಥ ತೀರಾ ತೀರಾ ಸಾಮಾನ್ಯ ವಿಷಯಗಳಿಗೂ ಆಧಾರನ್ನು ಅನಿವಾರ್ಯಗೊಳಿಸಿದರು. ಸುಪ್ರೀಮ್ ಕೋರ್ಟ್‍ನ ತೀರ್ಪು ಪ್ರಾಮುಖ್ಯತೆ ಪಡಕೊಳ್ಳುವುದೇ ಇಲ್ಲಿ. ಬಿಜೆಪಿ ಮತ್ತು ಅದರ ಬೆಂಬಲಿಗ ವರ್ಗದ ಮೇಲೆ ಈ ತೀರ್ಪು ಯಾವೆಲ್ಲ ರೀತಿಯಲ್ಲಿ ಪರಿಣಾಮ ಬೀರಬಹುದು? ಆಹಾರದ ಆಯ್ಕೆಯು ಓರ್ವನ/ಳ ಖಾಸಗಿ ಹಕ್ಕು. ಯಾರು ಯಾರ ಜೊತೆ ಮಾತಾಡಬೇಕು, ಮನೆಯಲ್ಲಿ ಯಾವ ಆಹಾರವನ್ನು ತಂದಿಟ್ಟುಕೊಳ್ಳಬೇಕು ಅನ್ನುವುದೂ ಖಾಸಗಿ ವಿಚಾರವೇ. ಆಧಾರ್‍ನ ಅಸ್ತಿತ್ವವೂ ಇಲ್ಲಿ ಪ್ರಶ್ನಾರ್ಹಗೊಳ್ಳುತ್ತದೆ. ಆಧಾರ್ ಕಾರ್ಡನ್ನು ನಿರ್ವಹಿಸುತ್ತಿರುವುದು ಖಾಸಗಿ ಸಂಸ್ಥೆಗಳು. ಈ ದೇಶದ 120 ಕೋಟಿ ಮಂದಿಯ ಸರ್ವ ಖಾಸಗಿ ಸಂಗತಿಗಳನ್ನು ಉತ್ತದಾಯಿ ಇಲ್ಲದ ಖಾಸಗಿ ಸಂಸ್ಥೆಗಳ ಸುಪರ್ದಿಗೆ ವಹಿಸಿಕೊಡುವ ಪ್ರಕ್ರಿಯೆ ಎಷ್ಟು ಸುರಕ್ಷಿತ? ವ್ಯಕ್ತಿಯ ಕಣ್ಣು ಮತ್ತು ಕೈ ಬೆರಳುಗಳು ಬಹು ಅಮೂಲ್ಯ ದಾಖಲೆಗಳು. ಅವಲ್ಲದೇ ಬ್ಯಾಂಕ್ ಖಾತೆ ಸಂಖ್ಯೆ, ಜನ್ಮ ದಿನಾಂಕ, ಶೈಕ್ಷಣಿಕ ಮತ್ತು ಉದ್ಯೋಗ ವಿವರಗಳು, ಮೊಬೈಲ್ ಸಂಖ್ಯೆ ಸಹಿತ ಬಹುತೇಕ ಎಲ್ಲ ಖಾಸಗಿ ವಿವರಗಳೂ ಆಧಾರ್‍ನ ಹೆಸರಲ್ಲಿ ಖಾಸಗಿ ಸಂಸ್ಥೆಗಳ ಮೂಲಕ ಪಡಕೊಳ್ಳಲಾಗುತ್ತದೆ. ಮಾತ್ರವಲ್ಲ, ಈ ಸಂಸ್ಥೆಗಳ ಕೈಯಲ್ಲಿ ಈ ದಾಖಲೆಗಳು ಸುರಕ್ಷಿತವಲ್ಲ ಎಂಬುದನ್ನೂ ಒಂದಕ್ಕಿಂತ ಹೆಚ್ಚು ಪ್ರಕರಣಗಳ ದೃಢಪಡಿಸುತ್ತಲೂ ಇವೆ. ಛತ್ತೀಸ್‍ಗಢದಲ್ಲಿ 16 ಲಕ್ಷ ಮಂದಿಯ ಆಧಾರ್ ದಾಖಲೆಗಳು ಸೋರಿಕೆಯಾದದ್ದು ಇತ್ತೀಚೆಗೆ ವರದಿಯಾಗಿತ್ತು. Mygov ಎಂಬ ಆ್ಯಪ್ ಅನ್ನು ತಯಾರಿಸಿದ ಶ್ರೀವಾಸ್ತವ್ ಎಂಬವರನ್ನು ಇತ್ತೀಚೆಗೆ ಬಂಧಿಸಲಾಗಿತ್ತು. ಈ ಆ್ಯಪ್‍ನ ಮೂಲಕ ಆಧಾರ್ ವಿವರಗಳನ್ನು ಪಡೆಯಲಾದುದೂ 50 ಸಾವಿರ ಮಂದಿ ಈ ಆ್ಯಪನ್ನು ಡೌನ್‍ಲೋಡ್ ಮಾಡಿರುವುದೂ ಬಹಿರಂಗವಾಗಿತ್ತು. ಕ್ರಿಕೆಟ್ ಆಟಗಾರ ಮಹೇಂದ್ರ ಸಿಂಗ್ ಧೋನಿಯ ಆಧಾರ್ ಭಾವಚಿತ್ರ ಸೋರಿಕೆಯಾಗಿರುವ ಬಗ್ಗೆ ಅವರ ಪತ್ನಿ ಸಾಕ್ಷಿ ಧೋನಿ ಈ ಹಿಂದೆ ಮಾಧ್ಯಮಗಳೊಂದಿಗೆ ಆತಂಕ ತೋಡಿಕೊಂಡದ್ದನ್ನೂ ಇಲ್ಲಿ ಸ್ಮರಿಸಿಕೊಳ್ಳಬಹುದು. ಇಂಥ ಸ್ಥಿತಿಯಲ್ಲಿ, ಖಾಸಗಿತನವು ಮೂಲಭೂತ ಹಕ್ಕಾಗುವುದು ಏನೆಲ್ಲ ಬದಲಾವಣೆಗಳಿಗೆ ಕಾರಣವಾಗಬಹುದು? ಮಾಧ್ಯಮಗಳು ನಡೆಸುವ ಸ್ಟಿಂಗ್ ಆಪರೇಶನ್‍ಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆಯೇ? ಸೆಲೆಬ್ರಿಟಿಗಳ ಖಾಸಗಿ ವಿಚಾರಗಳನ್ನು ಪ್ರಸಾರ ಮಾಡುವುದು ಅಪರಾಧ ಆಗಲಿದೆಯೇ? ಗೌಪ್ಯವಾಗಿಡಬೇಕೆಂದು ರೋಗಿಯೋರ್ವ ಬಯಸುವ ರೋಗ ವಿವರಗಳನ್ನು ಆಸ್ಪತ್ರೆ ಅಥವಾ ವೈದ್ಯರು ಬಹಿರಂಗಪಡಿಸುವುದು ಇದರ ವ್ಯಾಪ್ತಿಗೆ ಒಳಪಡುತ್ತದೆಯೇ? ಅರ್ಧರಾತ್ರಿ ಮನೆಗೆ ನುಗ್ಗಿ ಆರೋಪಿಯನ್ನು ಪೊಲೀಸರು ಎಳೆದು ತರುವ ಬೆಳವಣಿಗೆಗಳು ಇನ್ನು ಮುಂದೆ ನಿಲ್ಲಲಿದೆಯೇ? ನಿದ್ದೆ ಖಾಸಗಿ ಹಕ್ಕು. ಅದನ್ನು ನಿಷೇಧಿಸುವುದು ಮೂಲಭೂತ ಹಕ್ಕನ್ನು ನಿಷೇಧಿಸಿದ ಅಪರಾಧವಾಗಿ ಪರಿಗಣಿಸಲ್ಪಡಬಹುದೇ? ಹೀಗಿದ್ದೂ, ತ್ರಿವಳಿ ತಲಾಕನ್ನು ರುಚಿಕಟ್ಟಾಗಿಸಿ ಮತ್ತೆ ಮತ್ತೆ ಬಡಿಸಿದ ಮಾಧ್ಯಮಗಳು ಖಾಸಗಿ ಹಕ್ಕಿನ ಮೇಲಿನ ತೀರ್ಪಿನ ಸುತ್ತ ಇಂಥದ್ದೊಂದು ಚರ್ಚೆಯನ್ನು ಗಂಭೀರವಾಗಿ ನಡೆಸಲೇ ಇಲ್ಲವಲ್ಲ, ಏನು ಕಾರಣ? ಕೇಂದ್ರ ಸರಕಾರವನ್ನು ತರಾಟೆಗೆ ಎತ್ತಿಕೊಳ್ಳಬೇಕಾಗುತ್ತದೆ ಎಂಬ ಜಿ ಹುಜೂರ್ ಮನಸ್ಥಿತಿಯೇ? ತಮ್ಮ ಕಾರ್ಯವ್ಯಾಪ್ತಿಯನ್ನು ತೀರ್ಪು ಮೋಟಕುಗೊಳಿಸುತ್ತದೆ ಎಂಬ ಸಿಟ್ಟೇ? ಜನರನ್ನು ಈ ಕುರಿತು ಜಾಗೃತಿಗೊಳಿಸಿದಷ್ಟೂ ತಮಗೆ ಅಪಾಯಗಳು ಜಾಸ್ತಿಯಾಗುತ್ತಾ ಹೋಗಬಹುದು ಎಂಬ ಭಯವೇ?
    ತ್ರಿವಳಿ ತಲಾಕ್ ಮತ್ತು ಖಾಸಗಿತನದ ತೀರ್ಪು ಇವೆರಡರಲ್ಲಿ ಖಾಸಗಿತನದ ಮೇಲಿನ ತೀರ್ಪೇ ಅತ್ಯಂತ ಹೆಚ್ಚು ಪ್ರಾಮುಖ್ಯತೆ ಪಡೆಯಬೇಕಾದುದು. ತ್ರಿವಳಿ ತಲಾಕ್‍ನಿಂದಾಗಿ ಶೋಷಣೆಗೀಡಾದವರಿಗೆ ಹೋಲಿಸಿದರೆ ಖಾಸಗಿತನದ ಮೇಲಿನ ಹಲ್ಲೆಯಿಂದಾಗಿ ಸಂತ್ರಸ್ತರಾದವರ ಸಂಖ್ಯೆ ಸಾವಿರಾರು ಪಟ್ಟು ಅಧಿಕ. ಆದರೆ ಖಾಸಗಿತನದ ಮೇಲಿನ ತೀರ್ಪನ್ನು ಮಾಧ್ಯಮಗಳು ಜುಜುಬಿಯಾಗಿ ಪರಿಗಣಿಸಿದುವು. ತ್ರಿವಳಿ ತಲಾಕನ್ನು ಅತಿ ಗಂಭೀರವಾಗಿ ಕಂಡುವು. ಮಾಧ್ಯಮ ಮನಸ್ಥಿತಿಯನ್ನು ಮತ್ತು ಅದರ ಬೇಜವಾಬ್ದಾರಿ ನೀತಿಯನ್ನು ಸ್ಪಷ್ಟಪಡಿಸಿಕೊಳ್ಳುವುದಕ್ಕೆ ಇದು ಧಾರಾಳ ಸಾಕು.

Thursday 31 August 2017

ಪ್ರವಾದಿ ಇಬ್ರಾಹೀಮ್ ಪ್ರಸ್ತುತಪಡಿಸಿದ ಶ್ರಮಸಂಸ್ಕೃತಿ

    ಶ್ರಮಸಂಸ್ಕೃತಿ  ಅನ್ನುವ ಪದಗುಚ್ಛವಿದೆ. ಕಾರ್ಲ್ ಮಾರ್ಕ್ಸ್ ನ ಚಿಂತನೆ ಹರಳುಗಟ್ಟುವುದೇ ಶ್ರಮಸಂಸ್ಕೃತಿಯ ಮೇಲೆ. ಬಸವಣ್ಣ ಬೋಧಿಸಿದ `ಕಾಯಕವೇ ಕೈಲಾಸ' ಎಂಬ ತತ್ವ ಪದವು ಲಿಂಗಾಯತ ಧರ್ಮದ ಮೂಲ ಬೇರು. ಬುದ್ಧನೂ ಇದಕ್ಕೆ ಹೊರತಲ್ಲ. ಇವುಗಳ ಜೊತೆಗೇ ಇಸ್ಲಾಮ್, ಕ್ರೈಸ್ತ ಮತ್ತು ಯಹೂದಿ- ಈ ಮೂರೂ ಧರ್ಮಗಳು ಗೌರವಿಸುವ ಮತ್ತು ಮಾನ್ಯ ಮಾಡುವ ಪ್ರವಾದಿ ಇಬ್ರಾಹೀಮ್(ಅ)ರು ಪರಿಚಯ ಪಡಿಸಿದ ಶ್ರಮಸಂಸ್ಕೃತಿಯನ್ನು ಹೋಲಿಸಿ ನೋಡಿದರೆ ಹೇಗನಿಸುತ್ತದೆ? ಬುದ್ಧ, ಬಸವ, ಮಾರ್ಕ್ಸ್ ಮತ್ತು ಇಂಥ ಇನ್ನಿತರ ಸುಧಾರಕರ ಚಿಂತನೆಗಳಿಗೂ ಪ್ರವಾದಿ ಇಬ್ರಾಹೀಮರ(ಅ) ಚಿಂತನೆಗೂ ನಡುವೆ ಇರುವ ಪ್ರಮುಖ ವ್ಯತ್ಯಾಸ ಏನೆಂದರೆ, ಅದು ಆಧ್ಯಾತ್ಮಿಕತೆ. ಇಬ್ರಾಹೀಮರು(ಅ) ಶ್ರಮಸಂಸ್ಕೃತಿಯನ್ನು ಆಧ್ಯಾತ್ಮಿಕತೆ ಯೊಂದಿಗೆ ಜೋಡಿಸಿದರು. ಅವರು ಶ್ರಮವನ್ನೇ ಕೈಲಾಸ ಅನ್ನಲಿಲ್ಲ. ಶ್ರಮ ಮತ್ತು ಕೈಲಾಸವನ್ನು ವಿಭಜಿಸಿ, ಒಂದನ್ನೊಂದು ಪೋಣಿಸಿದರು. ಶ್ರಮ ಜೀವಂತ ವ್ಯಕ್ತಿಗೆ ಸಂಬಂಧಿಸಿದ್ದು. ಕೈಲಾಸವಾದರೋ ಶ್ರಮದ ಸಂಕಲ್ಪಕ್ಕೆ ಹೊಂದಿಕೊಂಡು ಮರಣಾನಂತರ ಲಭ್ಯವಾಗುವಂಥದ್ದು ಎಂದು ವಾದಿಸಿದರು. ಇರಾಕ್‍ನ ಉರ್ ಎಂಬ ಪಟ್ಟಣದಿಂದ ಬಹುದೂರದ ಮಕ್ಕಾಕ್ಕೆ ಪತ್ನಿ ಹಾಜರಾ ಮತ್ತು ಹಸುಳೆ ಇಸ್ಮಾಈಲ್‍ರ ಜೊತೆ ಅವರು ಪಯಣ ಬೆಳೆಸಿದ್ದು, ಮಕ್ಕಾದ ನಿರ್ಜನ ಭೂಮಿಯಲ್ಲಿ ಪತ್ನಿ ಮತ್ತು ಮಗುವನ್ನು ತಂಗುವಂತೆ ಹೇಳಿದ್ದು ಮತ್ತು ಮಗುವಿನ ಕಾಲಬುಡದಲ್ಲಿ ನೀರಿನ ಒರತೆ ಚಿಮ್ಮಿದ್ದು... ಇವೆಲ್ಲದರಲ್ಲಿ ಬರೇ ಶ್ರಮವೊಂದೇ ಗೋಚರವಾಗುವುದಲ್ಲ, ದೇವನ ಮೇಲಿನ ಅಚಲ ವಿಶ್ವಾಸ ಮತ್ತು ಅದಕ್ಕೆ ಲಭ್ಯವಾದ ಪುರಸ್ಕಾರವೂ ಗೋಚರವಾಗುತ್ತದೆ. ಬರೇ ಹೊಟ್ಟೆಪಾಡಿನ (ಶ್ರಮ) ಗುರಿಯೊಂದಿಗೆ ಇಬ್ರಾಹೀಮ್ ಮತ್ತು ಅವರ ಕುಟುಂಬ ಯಾತ್ರೆ ಹೊರಟಿರುತ್ತಿದ್ದರೆ ಮಕ್ಕಾದಲ್ಲಿ ಹಾಜರಾರು ಹೇಗೆ ವರ್ತಿಸುತ್ತಿದ್ದರು? ಇಬ್ರಾಹೀಮರೊಂದಿಗೆ ಏನೆಂದು ಪ್ರಶ್ನಿಸುತ್ತಿದ್ದರು? ಆಧ್ಯಾತ್ಮಿಕ ರಹಿತ ಯಾತ್ರೆ (ಶ್ರಮ) ಮತ್ತು ಆಧ್ಯಾತ್ಮಿಕ ಸಹಿತ ಯಾತ್ರೆಗಳು ಮುಖಾಮುಖಿಯಾಗುವುದು ಇಲ್ಲೇ. ಮಕ್ಕಾದಲ್ಲಿ ತಂಗುವಂತೆ ಹೇಳಿ ಹೊರಟು ನಿಂತ ಪತಿ ಇಬ್ರಾಹೀಮ್‍ರರೊಂದಿಗೆ(ಅ) ಹಾಜರಾ- ‘ಇದು ದೇವನ ಆದೇಶವೇ’ ಎಂದು ಪ್ರಶ್ನಿಸುತ್ತಾರೆ. ಇಹಲೋಕ ಮತ್ತು ಪರಲೋಕ ಎಂಬ ಆಧ್ಯಾತ್ಮಿಕ ಸತ್ಯವನ್ನು ಒಪ್ಪಿಕೊಂಡ ಹಾಗೂ ಇಹದ ಜೀವನವನ್ನು ಆಧಾರವಾಗಿಸಿಕೊಂಡು ಪಾರತ್ರಿಕ ಕೈಲಾಸ ಲಭ್ಯವಾಗುತ್ತದೆ ಎಂದು ವಿಶ್ವಾಸವಿಡುವವರಿಂದ ಮಾತ್ರ ಇಂಥ ಪ್ರಶ್ನೆ ಸಾಧ್ಯ. ‘ನಾನಿಲ್ಲಿರುವುದು ದೇವನ ಇಚ್ಛೆ ಎಂದಾದರೆ, ಹಾಗೆಯೇ ಆಗಲಿ’ ಎಂದು ಹಾಜರಾ ಹೇಳುತ್ತಾರೆ. ಮಾತ್ರವಲ್ಲ, ಮಗುವಿಗೆ ನೀರಿನ ಅಗತ್ಯ ಕಂಡು ಬಂದಾಗ ಹುಡುಕಲಾರಂಭಿಸುತ್ತಾರೆ. ಬೆಟ್ಟಗಳ ನಡುವೆ ಅಲೆಯುತ್ತಾರೆ. ಆಗ ಉದ್ಭವವಾಗುವ ನೀರಿನ ಚಿಲುಮೆಯೇ ಝಂ ಝಂ. ಅದು ಶ್ರಮ ಮತ್ತು ದೇವನ ಮೇಲಿನ ಅಚಂಚಲ ವಿಶ್ವಾಸದ ಪ್ರತೀಕ. ಬರೇ ಶ್ರಮ ಅಥವಾ ಬರೇ ವಿಶ್ವಾಸಗಳ ಆಚೆಗಿನ ಕತೆಯೊಂದನ್ನು ಝಂ ಝಂ ಹೇಳುತ್ತದೆ. ಶ್ರಮ ಮತ್ತು ದೇವ ವಿಶ್ವಾಸವು ಅಪೂರ್ವ ಮತ್ತು ಅನೂಹ್ಯವಾದ ಸಾಧನೆಯನ್ನು ಮಾಡಿಸಬಲ್ಲುದು ಅನ್ನುವುದಕ್ಕೆ ಸಾಕ್ಷಿ ಝಂ ಝಂ. ಸಾಮಾನ್ಯವಾಗಿ ಬರೇ ಶ್ರಮವನ್ನೇ ಗುರಿಯಾಗಿಸಿಕೊಂಡು, ಅದನ್ನೇ ಕೈಲಾಸವೆಂದುಕೊಂಡು ಮತ್ತು ಮರಣಾನಂತರ ಏನೂ ಇಲ್ಲ ಎಂದುಕೊಂಡು ಬದುಕುವವರು ಹಾಜರಾರ ಸ್ಥಾನದಲ್ಲಿರುತ್ತಿದ್ದರೆ ಅಲ್ಲಿ ನಡೆಯಬಹುದಾಗಿದ್ದ ಮಾತುಕತೆಯ ಸನ್ನಿವೇಶವನ್ನೊಮ್ಮೆ ಕಲ್ಪಿಸಿಕೊಳ್ಳಿ. ನೀರಿಲ್ಲದ ಮತ್ತು ಜನವಾಸವಿಲ್ಲದ ಪ್ರದೇಶದಲ್ಲಿ ತಾಯಿ ಮತ್ತು ಮಗುವು ತಂಗುವಂತೆ ಹೇಳುವುದೇ ಅತೀ ದೊಡ್ಡ ಪ್ರಮಾದವಾಗಿ ಆಧ್ಯಾತ್ಮಿಕರಹಿತ ಶ್ರಮಸಂಸ್ಕೃತಿ  ವ್ಯಾಖ್ಯಾನಿಸುವ ಸಾಧ್ಯತೆಯಿದೆ. ಆದ್ದರಿಂದಲೇ, ಪ್ರವಾದಿ ಇಬ್ರಾಹೀಮ್(ಅ) ಪ್ರಸ್ತುತಪಡಿಸಿದ ಶ್ರಮಸಂಸ್ಕೃತಿ  ವಿಭಿನ್ನವಾದುದು. ಅವರ ಶ್ರಮಸಂಸ್ಕೃತಿಯಲ್ಲಿ ದೇವನು ಹೊರಗಲ್ಲ, ಒಳಗೆ. ದೇವನ ಮೇಲಿನ ವಿಶ್ವಾಸವು- ಎಷ್ಟೇ ಕಠಿಣ ಮತ್ತು ಅಪಾಯಕಾರಿ ಶ್ರಮವನ್ನೂ ಸುಲಭಗೊಳಿಸಬಲ್ಲುದು ಎಂದು ಅದು ಸಾರುತ್ತದೆ. ಇದಕ್ಕೆ ಹಾಜರಾ ಮತ್ತು ಝಂ ಝಂ ಉತ್ತಮ ಉದಾಹರಣೆ. 5 ಸಾವಿರ ವರ್ಷಗಳಷ್ಟು ಹಿಂದೆ ಆಗಿ ಹೋದ ಶ್ರಮವು ಸಾರ್ವಕಾಲಿಕ ಶ್ರಮಸಂಸ್ಕೃತಿಯಾಗಿ ಮಾರ್ಪಾಟುಗೊಂಡಿರುವುದು ಮತ್ತು ಪ್ರತಿವರ್ಷ ಈ ಶ್ರಮಸಂಸ್ಕೃತಿಯ ಭಾಗವಾಗಲು ವಿಶ್ವಾದ್ಯಾಂತ ಜನರಿಂದ ಪೈಪೋಟಿ ನಡೆಯುತ್ತಿರುವುದು ಆ ಶ್ರಮದ ಮಹತ್ವ ಮತ್ತು ಯಶಸ್ಸನ್ನು ಹೇಳುತ್ತದೆ. ಆದ್ದರಿಂದಲೇ ಹಜ್ಜ್ ವಿಭಿನ್ನ, ಸಾರ್ವಕಾಲಿಕ.