Wednesday 27 May 2015

ಮುಕುಂದ್, ಓಂಕಾರ್‍ರ ಸಂಖ್ಯೆ ಅಸಂಖ್ಯವಾಗಲಿ...

ಝೀಶಾನ್ ಅಲಿ ಖಾನ್
    ಕೋಮುವಾದಿ ಸಿದ್ಧಾಂತವನ್ನು ಎದೆಯೊಳಗಿಟ್ಟುಕೊಂಡು ಬದುಕುತ್ತಿರುವ ಸರ್ವರನ್ನೂ ಓಂಕಾರ್ ಬಾನ್‍ಸೋಡೆ ಮತ್ತು ಮುಕುಂದ್ ಪಾಂಡೆ ಎಂಬಿಬ್ಬರು ಯುವಕರು ತರಾಟೆಗೆ ಎತ್ತಿಕೊಂಡಿದ್ದಾರೆ. ಅಂಥವರ ಆತ್ಮಸಾಕ್ಷಿಗೆ ತಮ್ಮ ಮನುಷ್ಯ ಪ್ರೇಮಿ ನಡೆಯ ಮೂಲಕ ಬಲವಾಗಿ ಚುಚ್ಚಿದ್ದಾರೆ. ಘಟನೆ ನಡೆದಿರುವುದು ಕಳೆದ ವಾರ. ವಜ್ರವನ್ನು ರಫ್ತು ಮಾಡುವ ಹರೇಕೃಷ್ಣ ಎಕ್ಸ್ ಪೋರ್ಟ್ (HKE) ಎಂಬ ಪ್ರಭಾವಿ ಕಂಪೆನಿಗೆ ಝೀಶಾನ್ ಅಲಿ ಖಾನ್ ಎಂಬ ಮುಂಬೈಯ ಎಂಬಿಎ ಪದವೀಧರ ಯುವಕ ಉದ್ಯೋಗಕ್ಕಾಗಿ ಅರ್ಜಿ ಹಾಕಿದ್ದ. ಆತನ ಅರ್ಜಿ ತಿರಸ್ಕೃತಗೊಂಡ ಬಗ್ಗೆ ಕಳೆದ ವಾರ ಕಂಪೆನಿಯಿಂದ  ಇಮೇಲ್ ಬರುತ್ತದೆ. ‘ಮುಸ್ಲಿಮರನ್ನು ಕಂಪೆನಿ ಪರಿಗಣಿಸುವುದಿಲ್ಲ' ಎಂಬುದನ್ನು ಅದಕ್ಕೆ ಕಾರಣವಾಗಿ ಉಲ್ಲೇಖಿಸುತ್ತದೆ. ಈ ಇಮೇಲ್ ಅನ್ನು ಝೀಶನ್ ತನ್ನ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುತ್ತಾನೆ. ವಿಶೇಷ ಏನೆಂದರೆ, ಈತನ ಜೊತೆಯಲ್ಲೇ ಓಂಕಾರ್ ಮತ್ತು ಮುಕುಂದ್‍ರು ಈ ಕಂಪೆನಿಗೆ ಅರ್ಜಿ ಹಾಕಿದ್ದರು. ಆ ಪ್ರಕಾರ ಅವರಿಗೆ ಇಂಟರ್‍ವ್ಯೂವ್‍ಗಾಗಿ ಕರೆ ಬಂದಿತ್ತು. ಉದ್ಯೋಗಿಯಾಗಿ ನೇಮಕಗೊಳ್ಳುವುದಕ್ಕೆ ಬೇಕಾದ ಆರಂಭಿಕ ಪರೀಕ್ಷೆಗಳಲ್ಲೂ ಅವರು ಉತ್ತೀರ್ಣರಾಗಿದ್ದರು. ಆದರೆ ಝೀಶನ್ ಅಲಿಯ ಪ್ರಕರಣ ಅವರ ಗಮನಕ್ಕೆ ಬಂದದ್ದೇ ತಡ ಅವರು ಕಂಪೆನಿಯ ಉದ್ಯೋಗದ ಆಫರ್ ಅನ್ನೇ ತಿರಸ್ಕರಿಸಿದರು. ಝೀಶನ್ ಅಲಿಯ ಮೇಲಾದ ಪಕ್ಷಪಾತವನ್ನು ಅವರು ಬಹಿರಂಗವಾಗಿಯೇ ಖಂಡಿಸಿದರು. ಅಲ್ಲದೇ ಮುಂಬೈಯಲ್ಲಿರುವ ಕಂಪೆನಿಯ ಕಚೇರಿಗೆ ಭೇಟಿ ಕೊಟ್ಟು ಅಲ್ಲಿನ ವಾತಾವರಣವನ್ನು ಅರಿತುಕೊಳ್ಳಲು ಪ್ರಯತ್ನಿಸಿದರು. ಹಿಂದೂಗಳಿಗೆ ಮಾತ್ರ ಪ್ರಾಶಸ್ತ್ಯ ಇರುವ ಮತ್ತು ಸಸ್ಯಾಹಾರದ ಪರ ಕಟ್ಟುನಿಟ್ಟಿನ ನಿಯಮಗಳಿರುವ ಕಂಪೆನಿಯ ಬಗ್ಗೆ ಅವರು ತಮ್ಮ ತೀವ್ರ ಅಸಹನೆಯನ್ನು ವ್ಯಕ್ತಪಡಿಸಿದರು. ನಿಜವಾಗಿ, ಓಂಕಾರ್ ಮತ್ತು ಮುಕುಂದ್ ಕಳೆದ ವಾರದ ಹೀರೋಗಳು. ಮಾನವ ಪ್ರೇಮದ ಬಗ್ಗೆ ಅವರಿಗಿರುವ ಖಚಿತ ವಿಶ್ವಾಸಕ್ಕಾಗಿ ನಾವು ಅವರನ್ನು ಮನಃಪೂರ್ವಕ ಅಭಿನಂದಿಸಬೇಕಾಗಿದೆ.
 ಇವತ್ತಿನ ಸುದ್ದಿಗಳ ಮಾರುಕಟ್ಟೆಯಲ್ಲಿ ನಕಾರಾತ್ಮಕ ಸುದ್ದಿಗಳಿಗೆ ಬಹುಬೇಡಿಕೆಯಿದೆ. ಮಾನಭಂಗ- ಬ್ರೇಕಿಂಗ್ ನ್ಯೂಸ್. ದರೋಡೆ- ಮುಖಪುಟದ ಸುದ್ದಿ. ಕೊಲೆ, ಅತ್ಯಾಚಾರ, ಕ್ರೌರ್ಯಗಳೆಲ್ಲ ವಾರಗಟ್ಟಲೆ ಚರ್ಚಿಸಬಹುದಾದ ಸುದ್ದಿಗಳು. ಹಾಗಂತ ಇವು ಪ್ರಮುಖ ಸುದ್ದಿಗಳಲ್ಲ ಎಂದು ಅರ್ಥವಲ್ಲ. ಆದರೆ ಈ ಸುದ್ದಿಗಳ ನಡುವೆಯೇ ನೂರಾರು ಓಂಕಾರ್‍ಗಳು, ಮುಕುಂದ್‍ರು ಬದುಕುತ್ತಿರುತ್ತಾರೆ. ಅವರು ಮಾನಭಂಗವನ್ನು ಪ್ರಶ್ನಿಸಿರುತ್ತಾರೆ. ಅತ್ಯಾಚಾರವನ್ನು ತಡೆದಿರುತ್ತಾರೆ. ಹತ್ಯಾಕಾಂಡ, ಕ್ರೌರ್ಯಗಳ ವಿರುದ್ಧ ಪ್ರಾಣದ ಹಂಗು ತೊರೆದು ಪ್ರತಿಭಟಿಸಿರುತ್ತಾರೆ. ಆದರೆ ನಕಾರಾತ್ಮಕ ಸುದ್ದಿಗಳ ಮೇಲಿರುವ ನಮ್ಮ ಒಲವು ಅನೇಕ ಬಾರಿ ಇಂಥವರು ಹೀರೋ ಆಗುವುದನ್ನು ತಪ್ಪಿಸಿಬಿಡುತ್ತದೆ. ಈ ದೇಶದಲ್ಲಿ ಕೋಮುಗಲಭೆಗಳು, ಹತ್ಯಾಕಾಂಡಗಳಷ್ಟೇ ನಡೆದಿರುವುದಲ್ಲ. ಅಂಥ ಸಂದರ್ಭದಲ್ಲಿ ಮಾನವೀಯತೆಯ ಅಸಂಖ್ಯ ಘಟನೆಗಳೂ ನಡೆಯುತ್ತಿರುತ್ತವೆ. ಮುಸ್ಲಿಮರನ್ನು ತನ್ನ ಮನೆಯೊಳಗೆ ಕೂರಿಸಿ ರಕ್ಷಿಸಿದ ಹಿಂದೂಗಳಿದ್ದಾರೆ. ಹಿಂದೂಗಳನ್ನು ರಕ್ಷಿಸಿದ ಮುಸ್ಲಿಮರಿದ್ದಾರೆ. ಮುಸ್ಲಿಮರ ಮನೆಗೆ ನೀರು ಒದಗಿಸುವ ಹಿಂದೂ, ಹಿಂದೂಗಳನ್ನು ಮನೆಯ ಸದಸ್ಯರಂತೆ ಪ್ರೀತಿಸುವ ಮುಸ್ಲಿಮ್ ಈ ಸಮಾಜದಲ್ಲಿ ಇವತ್ತೂ ಬದುಕುತ್ತಿದ್ದಾರೆ. ಅವರು ಪರಸ್ಪರ ಮದುವೆ, ಮುಂಜಿ, ಹಬ್ಬಗಳನ್ನು ಹಿಂದೂ-ಮುಸ್ಲಿಮ್ ವಿಭಜನೆಯಿಲ್ಲದೇ ಆಚರಿಸುತ್ತಾರೆ, ಅನುಭವಿಸುತ್ತಾರೆ. ಅವರ ಮೇಲೆ ಮನುಷ್ಯ ವಿರೋಧಿ ಪ್ರಚಾರಗಳು ಪ್ರಭಾವ ಬೀರಿಲ್ಲ. ‘ಲವ್ ಜಿಹಾದ್', ‘ಘರ್ ವಾಪ್‍ಸಿ', ‘ಟೆರರಿಸಂಗಳು ಅವರ ಅನ್ಯೋನ್ಯತೆಯನ್ನು ಕಡಿದು ಬಿಡಲು ಯಶಸ್ವಿಯಾಗಿಲ್ಲ. ನಿಜವಾಗಿ, ಇಂಥ ಮಾನವೀಯ ಘಟನೆಗಳು ಸಮಾಜದ ಮುಂದೆ ಮತ್ತೆ ಮತ್ತೆ ಬರಬೇಕು. ಅವು ಚರ್ಚೆಗೆ ಒಳಪಡಬೇಕು. ಇಂಥವುಗಳಿಗೆ ಹೆಚ್ಚೆಚ್ಚು ಪ್ರಾಮುಖ್ಯತೆ ಲಭಿಸಿದಂತೆಯೇ ಹರೇ ಕೃಷ್ಣ ಎಕ್ಸ್ ಪೋರ್ಟ್ ನಂಥ ಕಂಪೆನಿಗಳು ಮುಜುಗರಕ್ಕೆ ಒಳಗಾಗುತ್ತಲೇ ಹೋಗುತ್ತವೆ. ಅಷ್ಟಕ್ಕೂ, ಮನುಷ್ಯ ವಿರೋಧಿಯಾದ ಕಂಪೆನಿಯನ್ನೋ ವ್ಯಕ್ತಿಯನ್ನೋ ಮುಖ ಮುಚ್ಚಿ ಬದುಕುವಂತೆ ಮಾಡುವುದಕ್ಕೆ ನಾವು ಪ್ರತಿಭಟನೆಯೊಂದನ್ನೇ ಆಶ್ರಯಿಸಿಕೊಳ್ಳಬೇಕಿಲ್ಲ. ಇಂಥ ಮನುಷ್ಯ ಪ್ರೇಮಿ ಮುಖಗಳನ್ನು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸಿಬಿಟ್ಟರೂ ಸಾಕಾಗುತ್ತದೆ.
 ಅಂದಹಾಗೆ, ಝೀಶನ್ ಅಲಿ ಒಂಟಿಯಲ್ಲ. ಆತನಂತೆ ಧರ್ಮದ ಕಾರಣಕ್ಕಾಗಿ ತಿರಸ್ಕೃತಗೊಂಡವರ ದೊಡ್ಡದೊಂದು ಪಟ್ಟಿಯೇ ಈ ದೇಶದಲ್ಲಿದೆ. ಅವರಲ್ಲಿ ಪ್ರತಿಭೆಯಿದೆ, ಶೈಕ್ಷಣಿಕ ಅರ್ಹತೆಯಿದೆ, ದೈಹಿಕವಾದ ಸಾಮರ್ಥ್ಯವೂ ಇದೆ. ಆದರೂ ಅವರು ಸಮಾಜದ ಮುಖ್ಯ ವಾಹಿನಿಯಿಂದ ಆಗಾಗ ತಿರಸ್ಕೃತಗೊಳ್ಳುತ್ತಲೇ ಇರುತ್ತಾರೆ. ಹರೇಕೃಷ್ಣ ಎಕ್ಸ್ ಪೋರ್ಟ್ ಕಂಪೆನಿಯೇನೋ ತನ್ನ ಮನುಷ್ಯ ವಿರೋಧಿ ರೋಗವನ್ನು ಇಮೇಲ್ ಮೂಲಕ ಬಹಿರಂಗವಾಗಿಯೇ ಹೇಳಿಕೊಂಡಿತು. ಆದರೆ ಹೆಚ್ಚಿನೆಲ್ಲ ಸಂಸ್ಥೆಗಳು ಹೀಗೆ ಹೇಳಿಕೊಳ್ಳುವುದಿಲ್ಲ. ಅವು ರೋಗವನ್ನು ಒಳಗೊಳಗೇ ಬಚ್ಚಿಟ್ಟುಕೊಂಡು ಹೊರಗಡೆ ಮನುಷ್ಯ ಪ್ರೇಮದ ಮುಖವಾಡವನ್ನು ಹಾಕಿಕೊಂಡಿರುತ್ತವೆ. ತಮಗೆ ಬಂದ ಅರ್ಜಿಯನ್ನು ದಲಿತರು, ಶೂದ್ರರು, ಮಾದಿಗರು, ಮುಸ್ಲಿಮರು, ಕ್ರೈಸ್ತರು, ಬ್ರಾಹ್ಮಣರು.. ಎಂದು ವಿಭಜಿಸುತ್ತಾ ಪ್ರತಿಭೆಯನ್ನು ಹುಟ್ಟಿನ ಆಧಾರದಲ್ಲಿ ಅವು ವಿಂಗಡಿಸಿಬಿಡುತ್ತವೆ. ನಿಜವಾಗಿ, ಒಂದು ಸಮಾಜದ ಆಲೋಚನಾ ಕ್ರಮವನ್ನೇ ಬದಲಿಸಿಬಿಡಲು ಪ್ರಚೋದನೆ ನೀಡಬಹುದಾದ ಅಪಾಯಕಾರಿ ವರ್ತನೆಗಳಿವು. ಅನೇಕ ಬಾರಿ ಇಂಥ ಪಕ್ಷಪಾತಿ ನಿಲುವುಗಳೇ ವ್ಯಕ್ತಿಯನ್ನು ಕೋಮುವಾದಿಯನ್ನಾಗಿ ಮಾಡಿಬಿಡುತ್ತದೆ. ಉಗ್ರ ಚಿಂತನೆಯೆಡೆಗೆ ದೂಡಿ ಬಿಡುತ್ತದೆ. ದುರಂತ ಏನೆಂದರೆ, ಹೊರನೋಟಕ್ಕೆ ಇಂಥ ಸಂಸ್ಥೆಗಳ ನಿಲುವುಗಳು ಗೋಚರಕ್ಕೆ ಬರುವುದಿಲ್ಲವಾದ್ದರಿಂದ ವ್ಯಕ್ತಿಯ ಕೋಮುವಾದಕ್ಕಾಗಿ ನಾವು ಆತನ ಧರ್ಮವನ್ನು ಹೊಣೆ ಮಾಡುತ್ತೇವೆ. ಆತನ ಉಗ್ರ ಚಿಂತನೆಗೆ ಆತನ ಧರ್ಮದ ವಿಚಾರಧಾರೆಗಳೇ ಕಾರಣ ಅನ್ನುತ್ತೇವೆ. ಆದರೆ ಇವರನ್ನು ಉತ್ಪಾದಿಸುವ ಹರೇಕೃಷ್ಣ ಎಕ್ಸ್ ಪೋರ್ಟ್‍ನಂಥ ಕಂಪೆನಿಗಳು ಯಾವ ಸಂದರ್ಭದಲ್ಲೂ ಕಾನೂನಿನ ವ್ಯಾಪ್ತಿಯೊಳಗೇ ನಿಲ್ಲುವುದೇ ಇಲ್ಲ. ಅವು ಸಮಾಜಕ್ಕೆ ಮತ್ತೆ ಮತ್ತೆ
ಕಂಪೆನಿಯಿಂದ ಬಂದ  ಇಮೇಲ್
ಕೋಮುವಾದಿಗಳನ್ನೋ ಟಿರರಿಸ್ಟ್ ಗಳನ್ನೋ ಉತ್ಪಾದಿಸಿ ಬಿಡುಗಡೆ ಮಾಡುತ್ತಲೇ ಇರುತ್ತವೆ. ನಾವು ಮುಕುಂದ್ ಮತ್ತು ಓಂಕಾರ್‍ರನ್ನು ಅಭಿನಂದಿಸಬೇಕಾದದ್ದು ಈ ಬಹುಮುಖ್ಯ  ಕಾರಣಕ್ಕಾಗಿ. ಅವರು ಈ ಪಕ್ಷಪಾತಿ ಮನೋಭಾವವನ್ನು ಪ್ರಶ್ನಿಸಿದ್ದಾರೆ. ಹಾಗಂತ, ಅವರು ಪ್ರಶ್ನಿಸಲೇಬೇಕಾದ ಅಗತ್ಯವೇನೂ ಇರಲಿಲ್ಲ. ತಮಗೆ ಸಿಕ್ಕ ಉದ್ಯೋಗವನ್ನು ಅನುಭವಿಸಿಕೊಂಡು ಸುಮ್ಮನಿರಬಹುದಾದ ಎಲ್ಲ ಅವಕಾಶಗಳೂ ಅವರಿಗಿದ್ದುವು. ಝೀಶನ್ ಅಲಿ ಅವರ ಧರ್ಮದವನಲ್ಲ. ಓರಗೆಯವನೂ ಅಲ್ಲ. ಆದರೆ ಆ ಯುವಕರಿಬ್ಬರು ನಿಜವಾದ ಹಿಂದೂಗಳಾಗಿದ್ದರು. ನಿಜವಾದ ಹಿಂದೂವೊಬ್ಬ ಕೋಮುವಾದಿ, ಪಕ್ಷಪಾತಿಯಾಗುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ತೋರಿಸಿಕೊಟ್ಟರು. ಇದು ಅತ್ಯಂತ ಶ್ಲಾಘನೀಯ ಮತ್ತು ಅನುಕರಣೀಯ. ಸಮಾಜವನ್ನು ನಕಾರಾತ್ಮಕ ಮತ್ತು ಕೋಮುವಾದಿ ಚಿಂತನೆಗಳಿಂದ ಹೊರತರಬೇಕಾದರೆ ಇಂಥ ಮನುಷ್ಯ ಪ್ರೇಮದ ಘಟನೆಗಳು ಹೆಚ್ಚೆಚ್ಚು ನಡೆಯಬೇಕು ಮತ್ತು ಅವುಗಳಿಗೆ ಪ್ರಚಾರ ಸಿಗಬೇಕು. ಮುಕುಂದ್ ಮತ್ತು ಓಂಕಾರ್ ಈ ಸಮಾಜದ ಭರವಸೆಗಳು. ಅವರ ಬೆಲೆ ಹರೇಕೃಷ್ಣ ಎಕ್ಸ್ ಪೋರ್ಟ್ ಸಂಸ್ಥೆಯ ವಜ್ರಕ್ಕಿಂತ ಮಿಗಿಲಾದುದು. ಇಂಥವರ ಸಂಖ್ಯೆ ಅಸಂಖ್ಯವಾಗಲಿ ಎಂದು ಹಾರೈಸೋಣ. ಅವರ ಧೈರ್ಯದ ನಿಲುವಿಗಾಗಿ ಅಭಿನಂದಿಸೋಣ.

.

Monday 18 May 2015

ಐನ್‍ಸ್ಟಿನ್‍ರ ಪತ್ರ ಮತ್ತು ಹರ್ಮನ್‍ ಸಿಂಗ್ ರ ಟರ್ಬನ್

   
 ಕಳೆದವಾರ ಎರಡು ಪ್ರಮುಖ ಸುದ್ದಿಗಳು ಪ್ರಕಟವಾದುವು. ಒಂದು ಖ್ಯಾತ ವಿಜ್ಞಾನಿ ಐನ್‍ಸ್ಟಿನ್‍ಗೆ ಸಂಬಂಧಿಸಿದ್ದಾದರೆ ಇನ್ನೊಂದು ಹರ್ಮನ್ ಸಿಂಗ್ ಎಂಬ 22ರ ಯುವಕನಿಗೆ ಸಂಬಂಧಿಸಿದ್ದು. ದೇವ ಮತ್ತು ಧರ್ಮಕ್ಕೆ ಸಂಬಂಧಿಸಿದ ಚಿಂತನೆಗಳೂ ಸೇರಿದಂತೆ ಐನ್‍ಸ್ಟಿನ್‍ರ ವಿವಿಧ ಬರಹಗಳು ಜೂನ್ 11ರಂದು ಏಲಂ ಆಗಲಿವೆ ಅನ್ನುವುದು ಮೊದಲ ಸುದ್ದಿ. `ತಾನು ಎಂದೆಂದೂ ನಾಸ್ತಿಕ' ಎಂದು ಹೇಳಿಕೊಂಡು 1945 ಜುಲೈನಲ್ಲಿ ಐನ್‍ಸ್ಟಿನ್‍ರು ತನ್ನ ಗೆಳೆಯ ಕ್ಯಾನರ್‍ಗೆ ಪತ್ರ ಬರೆದಿದ್ದರು. ಅಲ್ಲದೆ, 1949ರಲ್ಲಿ ಮತ್ತೆ ತನ್ನ `ನಾಸ್ತಿಕ' ನಿಲುವನ್ನು ಸಮರ್ಥಿಸಿಕೊಂಡು ಅದೇ ಗೆಳೆಯನಿಗೆ ಮತ್ತೊಂದು ಪತ್ರ ಬರೆದಿದ್ದರು. ಇವಲ್ಲದೇ ತನ್ನ ಮಾಜಿ ಪತ್ನಿ ಮಿಲೆವಾ ಮ್ಯಾರಿಕ್ ಹಾಗೂ ಮಕ್ಕಳಾದ ಹ್ಯಾನ್ಸ್ ಮತ್ತು ಎಡ್ವರ್ಡ್ ಐನ್‍ಸ್ಟಿನ್‍ರಿಗೆ ಬರೆದ ಪತ್ರಗಳೂ ಈ ಏಲಂನಲ್ಲಿ ಒಳಗೊಳ್ಳಲಿವೆ ಎಂದು ಹೇಳಲಾಗಿದೆ. ಈ ಸುದ್ದಿಗಿಂತ ಒಂದು ದಿನ ಮೊದಲು ನ್ಯೂಝಿಲ್ಯಾಂಡ್‍ನಲ್ಲಿರುವ ಹರ್ಮನ್‍ಸಿಂಗ್ ಸುದ್ದಿಗೀಡಾಗಿದ್ದಾನೆ. ತನ್ನ ಅಕ್ಕನ ಜೊತೆ ಶಾಲೆಗೆ ಹೋಗುತ್ತಿದ್ದ ಐದರ ಹುಡುಗನಿಗೆ ಕಾರು ಢಿಕ್ಕಿಯಾಗಿ ತಲೆಯಿಂದ ರಕ್ತಸ್ರಾವವಾಗುತ್ತದೆ. ಅಲ್ಲೇ ಇದ್ದ ಹರ್ಮನ್ ಸಿಂಗ್ ತನ್ನ ತಲೆಯ ಟರ್ಬನ್ ಅನ್ನು ಕಳಚಿ ಮಗುವಿನ ತಲೆಗೆ ಕಟ್ಟುತ್ತಾನೆ. ಸಿಖ್ಖರಲ್ಲಿ ಟರ್ಬನ್ ಕಳಚುವುದಕ್ಕೆ ಕೆಲವು ಕಠಿಣ ನಿಬಂಧನೆಗಳಿವೆ. ಅಪರೂಪಕ್ಕೊಮ್ಮೆ ಅದನ್ನು ಕಳಚಲಾಗುತ್ತದೆ. ಆದ್ದರಿಂದಲೇ ಹರ್ಮನ್ ಸಿಂಗ್‍ನ ಟರ್ಬನ್ ಪ್ರಕರಣವು ನ್ಯೂಝಿಲ್ಯಾಂಡ್ ಮತ್ತು ಪಕ್ಕದ ಆಸ್ಟ್ರೇಲಿಯಾಗಳಲ್ಲಿ ದೊಡ್ಡ ಮಟ್ಟದ ಸುದ್ದಿಗೆ ಮತ್ತು ಶ್ಲಾಘನೆಗೆ ಪಾತ್ರವಾಗುತ್ತದೆ.
    ನಿಜವಾಗಿ, ಈ ಜಗತ್ತು ಕಂಡ ಅಪರೂಪದ ವಿಜ್ಞಾನಿ ಐನ್‍ಸ್ಟಿನ್. ಅಣ್ವಸ್ತ್ರಗಳ ತಯಾರಿಕೆಯಲ್ಲಿ ಅವರ ಥಿಯರಿಗೆ ಮಹತ್ವದ ಪಾತ್ರವಿದೆ ಎಂಬುದು ಎಲ್ಲರಿಗೂ ಗೊತ್ತು. ಜಪಾನಿನ ಹಿರೋಶಿಮ ಮತ್ತು ನಾಗಸಾಕಿಗೆ ಅಮೇರಿಕವು ಬಾಂಬ್ ಹಾಕಿದ ಒಂದು ತಿಂಗಳ ಬಳಿಕ ಅವರು ತನ್ನ ಮಗನಿಗೆ ಬರೆದ ಪತ್ರದಲ್ಲಿ ತನ್ನ ರಿಲೇಟಿವಿಟಿ ಥಿಯರಿಗೂ ಅಣುಬಾಂಬ್‍ಗೂ ನಡುವೆ ಇರುವ ಸಂಬಂಧವನ್ನು ಚರ್ಚಿಸಿದ್ದರು. ಅಂದಹಾಗೆ, ಧರ್ಮ ಮತ್ತು ದೇವರ ಬಗ್ಗೆ ಅವರ ಅಭಿಪ್ರಾಯಗಳು ಎಷ್ಟೇ ನಕಾರಾತ್ಮಕವಾಗಿರಲಿ, ಲಕ್ಷಾಂತರ ಮಂದಿಯ ಸಾವಿನಲ್ಲಿ ಅವರ ಚಿಂತನೆಗಳಿಗೂ ಪಾತ್ರವಿತ್ತು ಎಂಬುದನ್ನು ನಿರಾಕರಿಸುವ ಹಾಗಿಲ್ಲ. ದೇವರನ್ನು ಮತ್ತು ಧರ್ಮವನ್ನು ನಂಬುವ ಮನುಷ್ಯರ ಕೊಲೆಗೆ ಅವರ ಚಿಂತನೆಗಳನ್ನು ಬಳಸಲಾಗಿದೆ. ಅಷ್ಟಕ್ಕೂ, ನಾಸ್ತಿಕ ಎಂಬುದು ಆಸ್ತಿಕ ಎಂಬುದರ ವಿರೋಧ ಪದವೇನೂ ಆಗಬೇಕಿಲ್ಲ. ಒಂದು ಶ್ರೇಷ್ಠ ಇನ್ನೊಂದು ಕನಿಷ್ಠ ಎಂಬ ವಿಭಜನೆಯೂ ಬೇಕಿಲ್ಲ. ಹಿಟ್ಲರ್ ಆಸ್ತಿಕನಾಗಿದ್ದ, ಜಪಾನ್‍ಗೆ ಅಣುಬಾಂಬ್ ಹಾಕಿದವರೂ ಆಸ್ತಿಕರಾಗಿದ್ದರು, ಮುಸೋಲೋನಿ ಆಸ್ತಿಕನಾಗಿದ್ದ...  ಎಂದೆಲ್ಲಾ ಹೇಳಿ ಅಸ್ತಿಕರನ್ನು ಕ್ರೂರಿಗಳೆಂದು ಹೇಳುವಾಗ ಈ ಬಾಂಬ್‍ಗಳ ತಯಾರಿಯಲ್ಲಿ ನಾಸ್ತಿಕರೆನಿಸಿದ ಐನ್‍ಸ್ಟಿನ್‍ನಂಥ ವಿಜ್ಞಾನಿಗಳಿದ್ದಾರೆ ಎಂದೂ ಹೇಳಬೇಕಾಗುತ್ತದೆ. ಧರ್ಮ ಎಂಬುದು ಮಾನವೀಯ ಎಂಬ ಪದಕ್ಕೆ ಅನ್ವರ್ಥವಾದುದು. ಅದು ಮನುಷ್ಯರಿಗಾಗಿ ಇರುವಂಥದ್ದು. ಆದ್ದರಿಂದಲೇ ಹರ್ಮನ್ ಸಿಂಗ್‍ಗೆ ತನ್ನ ಟರ್ಬನ್ ಅನ್ನು ಕಳಚಲು ಸಾಧ್ಯವಾದದ್ದು. ಅದು ಧರ್ಮ. ಟರ್ಬನ್ ಅಸ್ತಿಕವಾದದ ಸಂಕೇತವೇ ಹೊರತು ಕ್ರೌರ್ಯದ ಸಂಕೇತ ಅಲ್ಲ.
 ಒಂದು ವ್ಯಕ್ತಿತ್ವವಾಗಿ ಐನ್‍ಸ್ಟಿನ್‍ರ ಮುಂದೆ ಹರ್ಮನ್ ಸಿಂಗ್ ಏನೂ ಅಲ್ಲ. ಅವರಿಬ್ಬರ ನಡುವೆ ಯಾವ ನೆಲೆಯಲ್ಲೂ ಹೋಲಿಕೆಗಳಲ್ಲ. ಆದರೆ ಎರಡು ವಾದಗಳನ್ನು ಪ್ರತಿನಿಧಿಸುವವರೆಂಬ ನೆಲೆಯಲ್ಲಿ ಐನ್‍ಸ್ಟಿನ್ ಮತ್ತು ಹರ್ಮನ್ ಸಿಂಗ್‍ರನ್ನು ನಾವು ಎದುರು-ಬದುರು ನಿಲ್ಲಿಸಬಹುದು. ಹಾಗಂತ, ಒಂದನ್ನು ಸರಿ ಮತ್ತು ಇನ್ನೊಂದನ್ನು ತಪ್ಪು ಎಂದು ಸಾಬೀತು ಪಡಿಸುವುದು ಇಂಥ ಮುಖಾಮುಖಿಗಳ ಉದ್ದೇಶ ಆಗಬೇಕಿಲ್ಲ. ಅಷ್ಟಕ್ಕೂ, ಧರ್ಮ ಅಫೀಮು ಎಂದು ಹೇಳುವವರಲ್ಲಿ ಅದನ್ನು ಸಮರ್ಥಿಸುವುದಕ್ಕೆ ಉದ್ದದ ಪಟ್ಟಿಯಿದೆ. ಜಗತ್ತಿನಲ್ಲಾದ ಯುದ್ಧ, ಹತ್ಯೆ, ಹತ್ಯಾಕಾಂಡಗಳ ವಿವರವನ್ನು ಅವರು ಅದರ ಸಮರ್ಥನೆಗಾಗಿ ಮುಂದಿಡಬಲ್ಲರು. ನಾಸ್ತಿಕವಾದವನ್ನು ಪ್ರಶ್ನಿಸುವವರಲ್ಲೂ ಇಂಥದ್ದೇ ಉದ್ದದ ಪಟ್ಟಿಯಿದೆ. ನಿಜವಾಗಿ, ಧರ್ಮ ಎಂಬುದು ನಾವು ನಾಸ್ತಿಕ-ಆಸ್ತಿಕ ಎಂಬ ಸೀಮಿತ ಪರಿಧಿಯೊಳಗಿಟ್ಟು ನೋಡುವುದಕ್ಕಿಂತ ವಿಶಾಲವಾದದ್ದು. ನಾಗಸಾಕಿಗೆ ಬಾಂಬ್ ಹಾಕಿದವರು ಅದನ್ನು ಧರ್ಮದ ಕಾರಣಕ್ಕಾಗಿ ಎಸಗಿರುವ ಸಾಧ್ಯತೆಯಿಲ್ಲ. ನಾಸ್ತಿಕವಾದವನ್ನು ಪ್ರತಿಪಾದಿಸಿದ ಸ್ಟಾಲಿನ್ ಮಾನವ ಹತ್ಯಾಕಾಂಡದ ಆರೋಪವನ್ನು ಹೊತ್ತುಕೊಂಡಿದ್ದಾರೆ. ತನ್ನ ಪತ್ನಿಯನ್ನೇ ಗುಂಡಿಟ್ಟು ಕೊಂದ ಆರೋಪ ಸ್ಟಾಲಿನ್ ಮೇಲಿದೆ. ಹಾಗಂತ, ಸ್ಟಾಲಿನ್ ಎಸಗಿದ ಹತ್ಯಾಕಾಂಡ ಮತ್ತು ಹತ್ಯೆಗಳಿಗೆ ಅವರ ನಾಸ್ತಿಕ ವಾದವೇ ಕಾರಣ ಎಂದು ವಾದಿಸುವುದು ಅಸಾಧುವಾಗುತ್ತದೆ. ಧರ್ಮ ಕ್ರೌರ್ಯದ ವಿರೋಧ ಪದ. ಆದ್ದರಿಂದಲೇ ಹರ್ಮನ್ ಸಿಂಗ್‍ನ ಮನಸ್ಸು ಮಗುವಿನ ರಕ್ತಕ್ಕೆ ಸ್ಪಂಧಿಸಿತು. ನಮಾಝ್ ನಡೆಯುತ್ತಿರುವ ಪಕ್ಕದಲ್ಲೇ ಮನೆ ಉರಿಯುತ್ತಿದ್ದರೆ ನಮಾಜ್ ಬಿಟ್ಟು ಮನೆಯ ಬೆಂಕಿಯನ್ನು ನಂದಿಸುವುದನ್ನೇ ಇಸ್ಲಾಮ್ ಧರ್ಮ ಎಂದು ಹೇಳುತ್ತದೆ. ನಮಾಝ್ ದೇವನಿಗೆ ಅತೀ ಹತ್ತಿರ ಮತ್ತು ಬಹು ಪ್ರಾಮುಖ್ಯತೆ ಇರುವ ಆರಾಧನೆಯೇ ಆಗಿರಬಹುದು. ಆದರೆ ಮನುಷ್ಯರ ಸಂಕಟ ಆ ಆರಾಧನೆಗಿಂತ ಮಿಗಿಲು. ನಮಾಝ್‍ನ ವೇಳೆ ಮಗುವಿನ ಅಳು ಕೇಳಿಸಿದರೆ ನಮಾಝನ್ನು ತ್ವರಿತಗೊಳಿಸುವುದು ಧರ್ಮ. ಒಬ್ಬನ ಹತ್ಯೆಯನ್ನು ಸರ್ವ ಮಾನವರ ಹತ್ಯೆಗೆ ಸಮನಾಗಿಸುವುದು ಧರ್ಮ. ಈ ಹಿನ್ನೆಲೆಯಲ್ಲಿ ಧರ್ಮವನ್ನು ಅಧ್ಯಯನ ನಡೆಸಿದರೆ ಹರ್ಮನ್ ಸಿಂಗ್ ಮತ್ತು ಆತ ಪ್ರತಿಪಾದಿಸಿದ ಧರ್ಮ ಅರ್ಥವಾಗುತ್ತದೆ. ಒಂದು ವೇಳೆ ಸ್ಟಾಲಿನ್‍ರ ಹತ್ಯಾಕಾಂಡವನ್ನು ಎದುರಿಟ್ಟುಕೊಂಡು ನಾಸ್ತಿಕವಾದವನ್ನು ಓದಲು ಹೊರಟರೆ ಅದು ‘ಕ್ರೌರ್ಯಗಳ ವಾದ’ ಎಂದು ಹೇಳಬೇಕಾಗುತ್ತದೆ. ಆದರೆ ಇದು ತಪ್ಪು. ವ್ಯಕ್ತಿಗತ ತಪ್ಪುಗಳನ್ನು ‘ವಾದ’ಕ್ಕೆ ಜೋಡಿಸಿ ನೋಡಬಾರದು.
 ಹಿಟ್ಲರ್‍ನಿಂದ ತೊಂದರೆಗೆ ಗುರಿಯಾದ ಐನ್‍ಸ್ಟೀನ್‍ರು ನಾಸ್ತಿಕವಾದವನ್ನು ಪ್ರತಿಪಾದಿಸುವುದರಲ್ಲಿ ಒಂದು ತರ್ಕವಿದೆ. ಹಿಟ್ಲರ್ ತಾನು ಆರ್ಯ ವಂಶಸ್ಥ ಅನ್ನುತ್ತಿದ್ದ. ‘ಧರ್ಮಿಷ್ಠ’ ಎಂದೂ ಗುರುತಿಸಿಕೊಳ್ಳುತ್ತಿದ್ದ. ಆದ್ದರಿಂದ ಆತನ ಅಮಾನವೀಯ ವರ್ತನೆಗಳು ಐನ್‍ಸ್ಟೀನ್‍ರನ್ನು ನಾಸ್ತಿಕವಾದಿಯಾಗಿ ಮಾಡಿರಲೂ ಬಹುದು. ಆದರೆ ಅವರ ನಾಸ್ತಿಕವಾದದ ಪ್ರತಿಪಾದನೆಯುಳ್ಳ ಪತ್ರದ ಏಲಂನ ಸಂದರ್ಭದಲ್ಲಿಯೇ ಹರ್ಮನ್ ಸಿಂಗ್ ತನ್ನ ಟರ್ಬನ್ ಅನ್ನು ಕಳಚಿ ಮಗುವನ್ನು ಉಳಿಸುವ ಪ್ರಯತ್ನ ಮಾಡಿದ್ದಾನೆ. ಈ ಮೂಲಕ ಧರ್ಮ ಮಾನವೀಯವಾದುದು ಮತ್ತು ಅದರ ಮೇಲಿರುವ ಕ್ರೌರ್ಯಗಳ ಆರೋಪ ಅಸಾಧುವಾದುದು ಎಂದು ಸಾರಿದ್ದಾನೆ. ಜೂನ್ 11ರ ಏಲಂನಲ್ಲಿ ಐನ್‍ಸ್ಟೀನ್ ರ ‘ನಾಸ್ತಿಕ' ಪತ್ರಗಳು ಎಷ್ಟು ಬೆಲೆಗೆ ಮಾರಾಟವಾಗುತ್ತದೋ ಏನೋ ಆದರೆ ಬೆಲೆ ಕಟ್ಟಲಾಗದ ಸಂದೇಶವೊಂದನ್ನು ಹರ್ಮನ್ ಸಿಂಗ್ ರವಾನಿಸಿದ್ದಾನೆ. ಮಾನವೀಯತೆಯೇ ಧರ್ಮ ಎಂದ ಆತನನ್ನು ಅಭಿನಂದಿಸೋಣ.

Tuesday 12 May 2015

ನಕಲಿ ಪ್ರಣಾಳಿಕೆಯನ್ನು ಬಹಿರಂಗಕ್ಕೆ ತಂದ ಬಿಜೆಪಿಯ ‘ರಾಮ’

   ಬಿಜೆಪಿ ಮತ್ತೆ ಮಾತು ಮರೆತಿದೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ಅದು ಇತರ ಪಕ್ಷಗಳು ನೀಡದ ಕೆಲವು ವಿಶೇಷ ಭರವಸೆಗಳನ್ನು ಭಾರತೀಯರ ಮುಂದಿಟ್ಟಿತ್ತು. ಅದರಲ್ಲಿ ರಾಮ ಮಂದಿರ ನಿರ್ಮಾಣವೂ ಒಂದು. ಅದಕ್ಕೆಷ್ಟು ಒತ್ತು ನೀಡಲಾಗಿತ್ತೆಂದರೆ, ಪೂರ್ಣ ಬಹುಮತ ಸಿಕ್ಕರೆ ಅಧಿಕಾರಕ್ಕೇರಿದ ದಿನವೇ ಮಂದಿರ ನಿರ್ಮಾಣಕ್ಕಾಗಿ ಪ್ರಯತ್ನಿಸಲಾಗುತ್ತದೆ ಎಂಬಷ್ಟು. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯ ರದ್ಧತಿ, ಸಮಾನ ನಾಗರಿಕ ಸಂಹಿತೆ, ಗೋಹತ್ಯಾ ನಿಷೇಧ.. ಮುಂತಾದುವುಗಳಿಗೂ ಚುನಾವಣಾ ಪ್ರಣಾಳಿಕೆಯಲ್ಲಿ ವಿಶೇಷ ಒತ್ತು ನೀಡಲಾಗಿತ್ತು. ಆದರೆ ಇದೀಗ ‘ರಾಮಮಂದಿರ ನಿರ್ಮಾಣಕ್ಕೆ ಕಾನೂನು ರಚಿಸುವುದಿಲ್ಲ' ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಇದಕ್ಕೆ, ‘ರಾಜ್ಯಸಭೆಯಲ್ಲಿ ಬಹುಮತವಿಲ್ಲ’ ಎಂಬುದನ್ನು ಕಾರಣವಾಗಿ ಕೊಟ್ಟಿದ್ದಾರೆ. ಅಲ್ಲದೇ, ಬಹುಮತ ಸಿಕ್ಕರೂ ಕಾನೂನು ರಚಿಸುವ ಬಗ್ಗೆ ಅವರು ಭರವಸೆ ಕೊಟ್ಟಿಲ್ಲ. ರಾಮಮಂದಿರ ನಿರ್ಮಾಣದ ವಿಷಯದಲ್ಲಿ ಒಂದು ಬಗೆಯ ನಿರಾಸಕ್ತಿ ಅವರ ಮಾತಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಷ್ಟಕ್ಕೂ, ರಾಜ್ಯಸಭೆಯಲ್ಲಿ ಬಹುಮತ ಇಲ್ಲದೆಯೂ ವಿವಾದಾತ್ಮಕ ಭೂ ಮಸೂದೆಯನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲು ಹೊರಟಿರುವ ಪಕ್ಷವೊಂದು ಅದೇ ರಾಜ್ಯಸಭೆಯನ್ನು ತೋರಿಸಿ ರಾಮಮಂದಿರ ನಿರ್ಮಾಣದ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿರುವುದಕ್ಕೆ ಏನೆನ್ನಬೇಕು? ಭೂಮಸೂದೆಗೆ ವಿರೋಧ ಪಕ್ಷಗಳು ಬಿಡಿ, ಬಿಜೆಪಿ ಮಿತ್ರಕೂಟದಲ್ಲಿಯೇ ಅಪಸ್ವರ ಇದೆ. ಸಂಘಪರಿವಾರದ ಕಿಸಾನ್ ಮೋರ್ಚಾ ಆಕ್ಷೇಪ ವ್ಯಕ್ತಪಡಿಸಿದೆ. ಅಣ್ಣಾ ಹಜಾರೆಯಿಂದ ತೊಡಗಿ ಅನೇಕಾರು ರೈತ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಭೂ ಮಸೂದೆಯನ್ನು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಪ್ರಸ್ತಾಪಿಸಿಯೂ ಇರಲಿಲ್ಲ. ಇಷ್ಟಿದ್ದೂ, ಈ ಭೂ ಮಸೂದೆಗಾಗಿ ಸುಗ್ರೀವಾಜ್ಞೆಯ ಮೊರೆ ಹೋಗುವ ಬಿಜೆಪಿಯು ರಾಮಮಂದಿರ ವಿಷಯದಲ್ಲಿ ಬಹುಮತದ ಕೊರತೆಯನ್ನು ತೋರಿಸುತ್ತಿರುವುದು ಎಷ್ಟು ಪ್ರಾಮಾಣಿಕ? ನಿಜವಾಗಿ, ಬಿಜೆಪಿಗೆ ವರ್ಚಸ್ಸು ಪ್ರಾಪ್ತವಾದದ್ದೇ ರಾಮಮಂದಿರ ಚಳವಳಿಯಿಂದ. ಪ್ರಧಾನಿ ವಿ.ಪಿ. ಸಿಂಗ್‍ರ ಮಂಡಲ್ ವರದಿಗೆ ವಿರುದ್ಧವಾಗಿ ಬಿಜೆಪಿ ಕಮಂಡಲ್ (ರಾಮಮಂದಿರ) ಅನ್ನು ಎತ್ತಿಕೊಂಡ ಬಳಿಕ ಈ ದೇಶದಲ್ಲಿ ಧಾರಾಳ ರಕ್ತ ಹರಿದಿದೆ. ಒಂದಂಕಿಯಲ್ಲಿದ್ದ ಬಿಜೆಪಿಯ ಲೋಕಸಭಾ ಸೀಟುಗಳು ನೂರನ್ನು ದಾಟಿವೆ. ಒಂದು ರೀತಿಯಲ್ಲಿ, ಬಿಜೆಪಿಯ ರಾಮಮಂದಿರ ಚಳವಳಿಯೇ ಭಾರತೀಯರನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿದ್ದು. ಅದು ರಾಮಮಂದಿರ ನಿರ್ಮಾಣದ ಹೆಸರಲ್ಲಿ ಇಟ್ಟಿಗೆಯನ್ನು ಸಂಗ್ರಹಿಸಿತು. ದುಡ್ಡನ್ನು ಒಟ್ಟು ಸೇರಿಸಿತು. ಈ ದೇಶದ ಉದ್ದಗಲಕ್ಕೂ ಸಭೆ-ಸಮಾರಂಭಗಳನ್ನು ಏರ್ಪಡಿಸಿ ‘ನಾವು’ ಮತ್ತು ‘ಅವರು’ ಎಂಬ ಎರಡು ಪ್ರತಿಕೃತಿಗಳನ್ನು ರಚಿಸಿತು. ‘ನಾವು' ಸಂತ್ರಸ್ತರು ಮತ್ತು ‘ಅವರು' ಆಕ್ರಮಣಕೋರರು. ಈ ಆಕ್ರಮಣಕೋರರಿಂದ ಮಂದಿರವನ್ನು ಉಳಿಸಿಕೊಳ್ಳಬೇಕಾದ ಜವಾಬ್ದಾರಿಯನ್ನು ಬಿಜೆಪಿ ಹೊತ್ತುಕೊಂಡಿದೆ ಎಂಬ ಧಾಟಿಯಲ್ಲಿ ಅದು ಮಾತಾಡಿತು. ಹೀಗೆ ರಾಮಮಂದಿರದ ಹೆಸರಲ್ಲಿ ಒಂದು ಭಾವುಕ ಸನ್ನಿವೇಶವನ್ನು ನಿರ್ಮಾಣ ಮಾಡಲು 90ರ ದಶಕದಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಅಂದಿನಿಂದ ಕಳೆದ ಲೋಕಸಭಾ ಚುನಾವಣೆಯ ವರೆಗೆ ಸನ್ನಿವೇಶದ ಆರ್ದ್ರತೆಯನ್ನು ಉಳಿಸಿಕೊಂಡು ಬರಲು ಬಿಜೆಪಿ ಉದ್ದಕ್ಕೂ ಪ್ರಯತ್ನಿಸಿದೆ. ವಾಜಪೇಯಿ ನೇತೃತ್ವದ ಸಮ್ಮಿಶ್ರ ಸರಕಾರ ರಚನೆಗೊಂಡಾಗಲೂ ಬಿಜೆಪಿಯ ‘ರಾಮ ಬದ್ಧತೆ' ಪ್ರಶ್ನೆಗೀಡಾಗಿದೆ. ಆದರೆ ಲೋಕಸಭೆಯಲ್ಲಿ ಪೂರ್ಣ ಬಹುಮತವಿಲ್ಲದಿರುವುದನ್ನು ಆಗ ಕಾರಣವಾಗಿ ಕೊಡಲಾಗಿತ್ತು. ಇದೀಗ ಪೂರ್ಣ ಬಹುಮತ ಲಭಿಸಿಯೂ ಬಿಜೆಪಿ ತನ್ನ ಭರವಸೆಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ. ಇದಕ್ಕೆ ಏನೆನ್ನಬೇಕು? ಭೂ ಮಸೂದೆಯ ಮೇಲಿರುವ ಆಸಕ್ತಿಯ ಒಂದಂಶವಾದರೂ ರಾಮಮಂದಿರದ ಮೇಲಿಲ್ಲ ಎಂಬುದರ ಹೊರತು ಬೇರೆ ಯಾವ ಕಾರಣವನ್ನು ಇದಕ್ಕೆ ಕೊಡಬಹುದು?
 ನಿಜವಾಗಿ, ಬಿಜೆಪಿಯಲ್ಲಿ ಎರಡು ಪ್ರಣಾಳಿಕೆಗಳಿವೆ. ಒಂದು ಜನರಿಗೆ ತೋರಿಸಲು ಇರುವುದಾದರೆ ಇನ್ನೊಂದು ಜಾರಿಗೊಳಿಸಲು. ತೋರಿಸುವ ಪ್ರಣಾಳಿಕೆಯಲ್ಲಿ ಭಾವ ತೀವ್ರತೆಯಿರುತ್ತದೆ. ಆರ್ದ್ರರತೆಯಿರುತ್ತದೆ. ಧರ್ಮ, ಸಂಸ್ಕøತಿ, ಮಠ, ಮಂದಿರಗಳ ಬಗ್ಗೆ ಅಪಾರ ಮಿಡಿತಗಳಿರುತ್ತವೆ. ಹಿಂದೂ ಧರ್ಮ ಅಪಾಯದಲ್ಲಿದೆ ಎಂದು ವಾದಿಸುವುದು ಈ ಪ್ರಣಾಳಿಕೆಯೇ. ಮುಸ್ಲಿಮರ ಜನಸಂಖ್ಯೆಯ ಬಗ್ಗೆ, ತಲಾಕ್‍ನ ಬಗ್ಗೆ, ಬುರ್ಖಾ-ಬಹುಪತ್ನಿತ್ವದ ಬಗ್ಗೆ ಭೀತಿಕಾರಕ ಪದಗಳೊಂದಿಗೆ ವಿವರಿಸುವುದೂ ಈ ಪ್ರಣಾಳಿಕೆಯೇ. ಮುಸ್ಲಿಮ್ ‘ತುಷ್ಠೀಕರಣ’, ‘ಹಿಂದೂ ಸಂತ್ರಸ್ತರು’ ಎಂಬೆಲ್ಲ ಪದಗಳನ್ನು ಈ ಪ್ರಣಾಳಿಕೆಯಲ್ಲಿ ಧಾರಾಳ ಉಲ್ಲೇಖಿಸಲಾಗುತ್ತದೆ. ಲವ್ ಜಿಹಾದ್, ಮತಾಂತರ ಮುಂತಾದುವು ಈ ಪ್ರಣಾಳಿಕೆಯಲ್ಲಿ ಅನೇಕ ಬಾರಿ ಕಾಣಸಿಗುತ್ತದೆ. ರಾಮ ಮಂದಿರ, ಸೋಮನಾಥ ದೇವಾಲಯ, ಗೋಹತ್ಯೆ, 370ನೇ ವಿಧಿ ರದ್ಧತಿ.. ಮುಂತಾದುವುಗಳು ಈ ಪ್ರಣಾಳಿಕೆಯಲ್ಲಿನ ಖಾಯಂ ಸಂಗತಿಗಳು. ಆದರೆ ಇನ್ನೊಂದು ಪ್ರಣಾಳಿಕೆಯಲ್ಲಿ ಇವಾವುವೂ ಇರುವುದಿಲ್ಲ. ಅಲ್ಲಿರುವುದು ಕಾರ್ಪೋರೇಟ್, ಕಾರ್ಪೋರೇಟ್ ಮತ್ತು ಕಾರ್ಪೋರೇಟ್ ಮಾತ್ರ. ಆದ್ದರಿಂದಲೇ, ಭೂಸ್ವಾಧೀನ ಮಸೂದೆಗಾಗಿ ಸುಗ್ರೀವಾಜ್ಞೆಯನ್ನೂ ರಾಮಮಂದಿರಕ್ಕಾಗಿ ಬಹುಮತದ ಕೊರತೆಯನ್ನೂ ಅದು ತೋರಿಸುತ್ತಿರುವುದು. ರಾಮಮಂದಿರವೆಂಬುದು ನಕಲಿ ಪ್ರಣಾಳಿಕೆ. ಕಾರ್ಪೋರೇಟರ್‍ಗಳನ್ನು ಸಂತೃಪ್ತಿಪಡಿಸುವುದು ಅಸಲಿ ಪ್ರಣಾಳಿಕೆ. ಒಂದು ರೀತಿಯಲ್ಲಿ, ಬಿಜೆಪಿಗೂ ಕಾಂಗ್ರೆಸ್‍ಗೂ ಪ್ರಣಾಳಿಕೆಯ ವಿಷಯದಲ್ಲಿ ದೊಡ್ಡ ವ್ಯತ್ಯಾಸವೇನೂ ಇಲ್ಲ. ಎರಡೂ ಪಕ್ಷಕ್ಕೂ ಅಮೇರಿಕನ್ ಪ್ರಣೀತ ಅರ್ಥವ್ಯವಸ್ಥೆ ಇಷ್ಟ. ಬಂಡವಾಳಶಾಹಿ ಸಿದ್ಧಾಂತಕ್ಕೆ ಸಂಬಂಧಿಸಿ ಎರಡೂ ಪಕ್ಷಗಳಲ್ಲಿ ದೊಡ್ಡ ವ್ಯತ್ಯಾಸ ಏನಿಲ್ಲ. ಕಾರ್ಪೋರೇಟ್ ಕುಳಗಳನ್ನು ಓಲೈಸುವುದರಲ್ಲಿ ಕಾಂಗ್ರೆಸ್‍ಗಿಂತ ಬಿಜೆಪಿ ಒಂದು ಹೆಜ್ಜೆ ಮುಂದೇ ಇದೆ. ಬಂಡವಾಳ ಹೂಡಿಕೆ, ಮುಕ್ತ ಮಾರುಕಟ್ಟೆ, ವಿಮೆ, ರಕ್ಷಣೆ, ತೈಲ, ಬ್ಯಾಂಕಿಂಗ್ ಮುಂತಾದ ಕ್ಷೇತ್ರಗಳನ್ನೆಲ್ಲ ವಿದೇಶಿ ಹೂಡಿಕೆಗೆ ತೆರೆದಿಡುವಲ್ಲಿ ಬಿಜೆಪಿಯಲ್ಲಿರುವ ಉಮೇದು ಕಾಂಗ್ರೆಸ್‍ಗಿಂತ ಹೆಚ್ಚೇ ಇದೆ. ವ್ಯತ್ಯಾಸ ಏನೆಂದರೆ, ಜನರಿಗೆ ತೋರಿಸುವುದಕ್ಕೆಂದೇ ಕಾಂಗ್ರೆಸ್ ಪಕ್ಷವು ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧಪಡಿಸುವುದಿಲ್ಲ. ಹಾಗಂತ, ಇಂಥ ನಕಲಿ ಪ್ರಣಾಳಿಕೆಯ ಅಗತ್ಯ ಅದರ ಪಾಲಿಗೆ ಬಂದಿಲ್ಲ ಎಂದಲ್ಲ. ಸೈದ್ಧಾಂತಿಕ ಸಂಘರ್ಷ ಮತ್ತು ಒಂದು ಬಗೆಯ ಅಂಜಿಕೆ ಹಾಗೆ ಮಾಡುವುದರಿಂದ ಅದನ್ನು ತಡೆ ಹಿಡಿದಿದೆ. ಆದರೂ ಅನೇಕ ಬಾರಿ ಅದು ಬಿಜೆಪಿಯ ನಕಲಿ ಪ್ರಣಾಳಿಕೆಯಂತೆ ಕಾರ್ಯಾಚರಿಸಿದೆ. ಬಿಜೆಪಿಗಿಂತಲೂ ತೀವ್ರವಾಗಿ ನಕಲಿ ಪ್ರಣಾಳಿಕೆಯ ಮೇಲೆ ಬದ್ಧತೆ ವ್ಯಕ್ತಪಡಿಸಿದೆ. ಆದರೂ ಬಿಜೆಪಿ ಮತ್ತು ಕಾಂಗ್ರೆಸನ್ನು ಮುಖಾಮುಖಿಗೊಳಿಸಿದರೆ ನಕಲಿ ಪ್ರಣಾಳಿಕೆಯನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸಿದ ಶ್ರೇಯಸ್ಸು ಬಿಜೆಪಿಗೇ ಸಲ್ಲುತ್ತದೆ.
 ಏನೇ ಆಗಲಿ, ರಾಮಮಂದಿರ ನಿರ್ಮಾಣದ ಹೊಣೆಗಾರಿಕೆಯಿಂದ ಹಿಂಜರಿಯುವ ಮೂಲಕ ರಾಮಮಂದಿರವು ಜನರನ್ನು ಭಾವನಾತ್ಮಕವಾಗಿ ಒಗ್ಗೂಡಿಸುವುದಕ್ಕಿರುವ ಒಂದು ಅಸ್ತ್ರ ಮಾತ್ರ ಎಂಬುದನ್ನು ಮೋದಿ ಸರಕಾರವು ಪರೋಕ್ಷವಾಗಿ ಜನರ ಮುಂದೆ ಒಪ್ಪಿಕೊಂಡಂತಾಗಿದೆ. ರಾಮಮಂದಿರವನ್ನು ನಿರ್ಮಿಸುವ ಮೂಲಕ ಈ ಅಸ್ತ್ರವನ್ನು ಕಳಕೊಳ್ಳಲು ಅದು ಸಿದ್ಧವಿಲ್ಲ. ರಾಜನಾಥ್ ಸಿಂಗ್‍ರ ಮಾತು ಇದನ್ನೇ ಸೂಚಿಸುತ್ತದೆ.

Friday 8 May 2015

ಬೇಟಿ ಹಠಾವೋ ಬೀಜ ತಯಾರಿಸಿದ ರಾಮ್‍ದೇವ್

    6 ವರ್ಷದೊಳಗಿನ 1000 ಗಂಡು ಮಕ್ಕಳಿಗೆ 914 ಹೆಣ್ಣು ಮಕ್ಕಳಿರುವ ದೇಶವೊಂದರಲ್ಲಿ ಸುದ್ದಿಗೀಡಾಗಬೇಕಾದ ಮದ್ದು ಯಾವುದು - ಪುತ್ರ ಜೀವಕ್ ಬೀಜವೋ ಅಥವಾ ಪುತ್ರಿ ಜೀವಕ್ ಬೀಜವೋ? ಬಾಬಾ ರಾಮ್‍ದೇವ್ ಇಂಥದ್ದೊಂದು ಚರ್ಚೆಯ ಕೇಂದ್ರವಾಗಿದ್ದಾರೆ. ಪುತ್ರ ಸಂತಾನ ಪ್ರಾಪ್ತಿಗಾಗಿರುವ ಪುತ್ರ ಜೀವಕ್ ಬೀಜವನ್ನು ಅವರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಇದು ವಿವಾದಕ್ಕೆ ಕಾರಣವಾದಾಗ ಅದನ್ನು ಸಂಸ್ಕೃತ ಪದವೆಂದು ಸಮರ್ಥಿಸಲು ಹೋಗಿ ಮತ್ತಷ್ಟು ನಗೆಪಾಟಲಿಗೆ ಗುರಿಯಾಗಿದ್ದಾರೆ. ಒಂದು ಕಡೆ, ಹರ್ಯಾಣ ಸರಕಾರದ ಬೇಟಿ ಪಡಾವೋ ಬೇಟಿ ಬಚಾವೋ ಎಂಬ ಕಾರ್ಯಕ್ರಮದ ಬ್ರಾಂಡ್ ಅಂಬಾಸಡರ್ ಇವರು. ಇನ್ನೊಂದು ಕಡೆ, ಪುತ್ರ ಪ್ರಾಪ್ತಿಗಾಗಿ ಮಾತ್ರೆಗಳನ್ನು ಮಾರುತ್ತಿರುವುದೂ ಇವರೇ. ಈ ದ್ವಂದ್ವಕ್ಕೆ ಏನೆನ್ನಬೇಕು? ಹಾಗಂತ, ಇದು ರಾಮ್‍ದೇವ್ ಒಬ್ಬರ ಸಮಸ್ಯೆಯಲ್ಲ. ಇಂಥ ದ್ವಂದ್ವಗಳುಳ್ಳ ತಂಡವೇ ಈ ದೇಶದಲ್ಲಿದೆ. ಹಿಂದುಗಳು ಮೂರು, ನಾಲ್ಕು, ಐದು.. ಹೀಗೆ ಮಕ್ಕಳನ್ನು ಹೊಂದಬೇಕೆಂದು ಆಗ್ರಹಿಸುತ್ತಿರುವುದು ಈ ತಂಡದ ಮಂದಿಯೇ.ಆದರೆ ಅವರು ಸ್ವತಃ ಹೆರುವುದನ್ನೇ ನಿಷೇಧಿಸಿಕೊಂಡಿದ್ದಾರೆ. ಕಾಂಗ್ರೆಸ್ ಸರಕಾರ ಇದ್ದಾಗ ಪ್ರತಿದಿನ ಬೆಳಗ್ಗೆದ್ದು 'ಕಪ್ಪು ಹಣ' ಎಂದು ಕೂಗಿಯೇ ಈ ತಂಡದ ಮಂದಿ ಬ್ರಶ್ ಮಾಡುತ್ತಿದ್ದರು. ಮೋದಿ ಪ್ರಧಾನ ಮಂತ್ರಿಯಾದ ಬಳಿಕ ಅವರು ಆ ವಿಷಯದಲ್ಲಿ ಮಾತಾಡುವುದನ್ನೇ ನಿಲ್ಲಿಸಿದ್ದಾರೆ. ಬಾಂಗ್ಲಾದೇಶಿ ನುಸುಳುಕೋರರಿಗೂ ಆಧಾರ್ ಕಾರ್ಡ್ ಸಿಗುತ್ತಿದ್ದು, ಅದನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದೂ ಈ ತಂಡದವರೇ. ಇದೀಗ ಹಿಂದಿಗಿಂತಲೂ ನಿಷ್ಠುರವಾಗಿ ಆಧಾರ್ ಕಾರ್ಡನ್ನು ಜಾರಿಗೊಳಿಸುತ್ತಿರುವುದೂ ಇವರೇ. ಮುಸ್ಲಿಮರ ವಿಶ್ವಾಸ ಬೆಳೆಸುವುದಕ್ಕಾಗಿ ಸದ್ಭಾವನಾ ಯಾತ್ರೆ ಕೈಗೊಂಡವರು ಈ ತಂಡದ ಬೆಂಬಲಿಗರೇ ಆಗಿದ್ದರು. ಇದೀಗ ಮುಸ್ಲಿಮರ ಓಟಿನ ಹಕ್ಕನ್ನೇ ಕಸಿಯಬೇಕೆಂದೂ ಸಂತಾನ ಹರಣ ಚಿಕಿತ್ಸೆಗೆ ಅವರನ್ನು ಗುರಿಪಡಿಸಬೇಕೆಂದೂ ಒತ್ತಾಯಿಸುತ್ತಿರುವವರೂ ಈ ಮಂದಿಯೇ. ಒಂದು ರೀತಿಯಲ್ಲಿ, ಈ ತಂಡದ ಐಡೆಂಟಿಟಿಯೇ ‘ದ್ವಂದ್ವ' ಆಗಿಬಿಟ್ಟಿದೆ. ಪುತ್ರ ಜೀವಕ್ ಬೀಜದ ಮೂಲಕ ರಾಮ್‍ದೇವ್‍ರು ಈ 'ದ್ವಂದ್ವ'ಗಳಿಗೆ ಅಧಿಕೃತ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.
 ನಿಜವಾಗಿ, ಈ ದೇಶದಲ್ಲಿ ತಯಾರಾಗಬೇಕಾದ ಔಷಧಿ ಯಾವುದು ಎಂಬುದನ್ನು ತೀರ್ಮಾನಿಸುವುದಕ್ಕೆ ಪಂಜಾಬ್-ಹರ್ಯಾಣಗಳಂಥ ರಾಜ್ಯಗಳ ಹೆಣ್ಣು-ಗಂಡು ಅನುಪಾತವೇ ಧಾರಾಳ ಸಾಕು. ಹರ್ಯಾಣವನ್ನು ವಧುಗಳ ಕೊರತೆ ಎಷ್ಟರ ಮಟ್ಟಿಗೆ ಬಾಧಿಸಿಬಿಟ್ಟಿದೆಯೆಂದರೆ ಬಿಹಾರದಿಂದ ಯುವತಿಯರನ್ನು ಹರ್ಯಾಣಕ್ಕೆ ಕರೆತಂದು ಮದುವೆ ಮಾಡಿಕೊಳ್ಳಲಾಗುತ್ತದೆ. ಈ ಎರಡು ರಾಜ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಪುತ್ರಿಯರು ಕಾಣೆಯಾಗತೊಡಗಿದ್ದಾರೆ. ಎಲ್ಲರಿಗೂ 'ಪುತ್ರ ಜೀವಕ್ ಬೀಜ' ಬೇಕು ಅಥವಾ ಪುತ್ರ ಸಂತಾನ ಬೇಕು. ರಾಮ್‍ದೇವ್‍ರಿಗೆ ಇದು ಗೊತ್ತಿಲ್ಲ ಎಂದಲ್ಲ. ‘ಬೇಟಿ ಪಡಾವೋ ಬೇಟಿ ಬಚಾವೋ' ಎಂಬ ಯೋಜನೆ ಹರ್ಯಾಣದಲ್ಲಿ ಹುಟ್ಟಿಕೊಂಡದ್ದೇ ಈ ಕಾರಣದಿಂದ. ಹೀಗಿದ್ದೂ ಅವರು ಪುತ್ರ ಸಂತಾನ ಪ್ರಾಪ್ತಿಗಾಗಿ ಮಾತ್ರೆಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಾರೆಂದರೆ ಒಂದೋ ಅವರು ಪಕ್ಕಾ ವ್ಯಾಪಾರಿಯಾಗಿರಬೇಕು ಅಥವಾ ಹೆಣ್ಣು ಸಂತಾನದ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿರಬೇಕು. ಪುತ್ರರನ್ನು ಬಯಸುವ ಸಮಾಜವೊಂದರಲ್ಲಿ ಪುತ್ರ ಜೀವಕ್ ಬೀಜಕ್ಕೆ ಇರುವ ಮಾರುಕಟ್ಟೆ ಎಷ್ಟು ದೊಡ್ಡದು ಎಂಬುದು ವ್ಯಾಪಾರಿಯಾಗಿ ರಾಮ್‍ದೇವ್‍ರಿಗೆ ಚೆನ್ನಾಗಿಯೇ ತಿಳಿದಿರುತ್ತದೆ. ಯೋಗವನ್ನು ಮಾರಬಲ್ಲ ರಾಮ್‍ದೇವ್‍ರಿಗೆ ಮಾತ್ರೆಯನ್ನು ಉತ್ಪಾದಿಸುವುದು ಮತ್ತು ಮಾರುಕಟ್ಟೆ ಕಂಡುಕೊಳ್ಳುವುದು ಕಷ್ಟವಲ್ಲ. ಸದ್ಯ ಅವರು ಸಮಾಜದ ಪುತ್ರ ದೌರ್ಬಲ್ಯವನ್ನು ತನ್ನ ವ್ಯಾಪಾರಕ್ಕಾಗಿ ಚೆನ್ನಾಗಿ ಬಳಸಿಕೊಂಡಿದ್ದಾರೆ. ಆದರೆ ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯ ರಾಯಭಾರಿಯಾದ ಬಳಿಕವೂ ಅವರು ಇಂಥದ್ದೊಂದು ಔಷಧವನ್ನು ಮಾರುತ್ತಾರೆಂದರೆ, ಅವರದು ಬೇಟಿ ಹಠಾವೋ ಮನಸ್ಥಿತಿ ಎಂದೂ ಹೇಳಬೇಕಾಗುತ್ತದೆ. ನಿಜವಾಗಿ, ಓರ್ವ ವ್ಯಾಪಾರಿ ಎಷ್ಟೇ ಕಟುಕನಾಗಿದ್ದರೂ ಆತ ಸಮಾಜ ಸೇವಕನಾಗಿ ಗುರುತಿಸಿಕೊಳ್ಳಬಯಸುತ್ತಾನೆ. ಸಮಾಜದ ಕೆಂಗಣ್ಣಿಗೆ ಗುರಿಯಾಗಬಲ್ಲ ಅಥವಾ ಮನ್ನಣೆ ಸಿಗದಂಥ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಸಮಾಜಕ್ಕೆ ಏನಾದರೂ ನೀಡುತ್ತಲಿರಬೇಕು ಮತ್ತು ಅದನ್ನು ಸಮಾಜ ಎತ್ತಿ ಹೇಳಬೇಕೆಂಬ ಒಳ ಆಸೆಯೂ ಅವನಲ್ಲಿರುತ್ತದೆ. ಇಂಥ ಆಸೆಗಳಿಂದ ಸಮಾಜಕ್ಕಾಗುವ ಲಾಭ ಏನೆಂದರೆ, ಸಮಾಜ ಅಷ್ಟರ ಮಟ್ಟಿಗೆ ಇಂಥ ವ್ಯಕ್ತಿತ್ವಗಳ ಕಿರುಕುಳಗಳಿಂದ ಮುಕ್ತವಾಗಿರುವುದು. ಅವರು ಸಮಾಜಕ್ಕೇನೂ ಕೊಡದಿದ್ದರೂ ತೊಂದರೆ ಮಾಡುವುದಿಲ್ಲವಲ್ಲ ಎಂಬ ನಿರಾಳಭಾವದಿಂದ ಬದುಕುವುದು. ಆದರೆ, ರಾಮ್‍ದೇವ್‍ರು ಕಟುಕ ವ್ಯಾಪಾರಿಗಳನ್ನೂ ವಿೂರಿಸುವ ಆತಂಕಕಾರಿ ಮನಸ್ಥಿತಿಯನ್ನು ಪುತ್ರ ಬೀಜದ ಮೂಲಕ ತೆರೆದಿಟ್ಟಿದ್ದಾರೆ. ಅವರು ವ್ಯಾಪಾರಕ್ಕಾಗಿ ಆಯ್ಕೆ ಮಾಡಿಕೊಂಡದ್ದು ಭತ್ತ, ಅಳಸಂಡೆ, ಬದನೆ, ಕುಂಬಳಕಾಯಿ, ತೊಂಡೆಕಾಯಿಯಂಥ ಬೀಜಗಳನ್ನಲ್ಲ, ಪುತ್ರ ಬೀಜವನ್ನು. ಈ ಬೀಜ ಮಣ್ಣಿನಲ್ಲಿ ಬೆಳೆಯುವುದಿಲ್ಲ. ಮನುಷ್ಯರ ಹೊಟ್ಟೆಯಲ್ಲಿ ಬೆಳೆಯುತ್ತದೆ. ನಿಜವಾಗಿ, ಹೊಟ್ಟೆಯಲ್ಲಿ ಗಂಡು ಬೆಳೆಯಬೇಕೋ ಹೆಣ್ಣು ಬೆಳೆಯಬೇಕೋ ಎಂದು ತೀರ್ಮಾನಿಸಬೇಕಾದದ್ದು ಮನುಷ್ಯ ಅಲ್ಲ, ಪ್ರಕೃತಿ. ಪ್ರಕೃತಿಯ ತೀರ್ಮಾನಕ್ಕೆ ಮನುಷ್ಯ ಎಲ್ಲಿಯ ವರೆಗೆ ಬದ್ಧವಾಗಿರುತ್ತಾನೋ ಅಲ್ಲಿಯ ವರೆಗೆ ಭೂಮಿಯ ಸಮತೋಲನದಲ್ಲಿ ವ್ಯತ್ಯಾಸ ಉಂಟಾಗುವುದಿಲ್ಲ. ಇದು ಎಲ್ಲರಿಗೂ ಗೊತ್ತು. ಆದರೆ ಆಸೆಬುರುಕ ಮನುಷ್ಯ ಕೆಲವೊಮ್ಮೆ ಅಧಿಕ ಇಳುವರಿಯ ಆಸೆಯಿಂದ ಅಥವಾ ದುಡ್ಡು ದುಪ್ಪಟಾಗುವ ದುರಾಸೆಯಿಂದ ನಕಲಿ ಬೀಜಗಳನ್ನು ಖರೀದಿಸುವುದಿದೆ ಅಥವಾ ವಂಚಕರನ್ನು ಸವಿೂಪಿಸುವುದಿದೆ. ರಾಮ್‍ದೇವ್‍ರ ಪುತ್ರಬೀಜ ಇಂಥ ವಂಚಕರನ್ನು ನೆನಪಿಸುತ್ತದೆ. ಸಮಾಜದ ಆಸೆಬುರುಕ ಮನುಷ್ಯರನ್ನು ಗುರಿಯಿರಿಸಿಕೊಂಡೇ ಅವರು ಪುತ್ರ ಬೀಜವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದಾರೆ. ಹೀಗೆ ಮಾಡುವಾಗ ತಾನು ಪ್ರಕೃತಿಗೆ ಮೋಸ ಮಾಡುತ್ತಿದ್ದೇನೆಂಬ ಅರಿವು ಅವರಿಗೆ ಇದ್ದಿರಲಿಲ್ಲ ಎಂದು ಹೇಳುವಂತಿಲ್ಲ. ಪ್ರಕೃತಿ, ಆಧ್ಯಾತ್ಮ, ಶಾಸ್ತ್ರ, ಪುರಾಣಗಳ ಬಗ್ಗೆ ತನ್ನ ಯೋಗ ಶಿಬಿರದಲ್ಲಿ ಬಾಯ್ತುಂಬ ಹೇಳುವ ರಾಮ್‍ದೇವ್‍ರಿಗೆ ತನ್ನ ಪುತ್ರ ಬೀಜವು ಪ್ರಕೃತಿಯ ಹೆಣ್ಣು-ಗಂಡು ಸಮತೋಲನಕ್ಕೆ ಸಡ್ಡು ಹೊಡೆಯುತ್ತದೆ ಎಂಬುದಾಗಿ ಅರಿತಿರುವುದಿಲ್ಲ ಎಂದು ವಾದಿಸುವುದು ನಮ್ಮ ಮೂರ್ಖತನವಾಗುತ್ತದೆ. ಸಮಾಜದ ಒಳಿತಿನ ಬಗ್ಗೆ ಯಾವ ಕಾಳಜಿಯೂ ಇಲ್ಲದ ಮತ್ತು ಪ್ರಕೃತಿಯ ಕುರಿತಂತೆ ತೀವ್ರ ಅಗೌರವ ಇರುವ ವ್ಯಕ್ತಿಯಿಂದ ಮಾತ್ರ ಇಂಥ ವ್ಯಾಪಾರ ಸಾಧ್ಯ. ಆದ್ದರಿಂದ ನಕಲಿ ಭತ್ತ, ಅಳಸಂಡೆ, ತೊಂಡೆ, ಬದನೆ.. ಬೀಜಗಳಿಗಿಂತ ಎಷ್ಟೋ ಅಪಾಯಕಾರಿಯಾಗಿ ರಾಮ್‍ದೇವ್‍ರ ಪುತ್ರಬೀಜ ಗೋಚರಿಸುತ್ತದೆ.  ಅವರ ಬೀಜದಿಂದ ಪುತ್ರ ಸಂತಾನ ಪ್ರಾಪ್ತಿಯಾಗುತ್ತದೋ ಇಲ್ಲವೋ ಆದರೆ ಪುತ್ರಿ ಸಂತಾನದ ಕಡೆಗಣನೆಗಂತೂ ಕರೆ ಕೊಡುತ್ತದೆ. ಆದ್ದರಿಂದಲೇ ಇದು ಮನುಷ್ಯ ವಿರೋಧಿ. ಮಾನವತೆಗೆ ವಿರುದ್ಧವಾದ ಈ ಪುತ್ರಬೀಜದ ವಿರುದ್ಧ ಸಮಾಜ ಮುಖ್ಯವಾಗಿ ಮಹಿಳೆಯರು ಧ್ವನಿಯೆತ್ತಬೇಕು. ಹೆಣ್ಣು ಕೀಳಲ್ಲ ಮತ್ತು ಅಮುಖ್ಯಳೂ ಅಲ್ಲ. ಆಕೆಯನ್ನು ಕೀಳಾಗಿಸುವ ರಾಮ್‍ದೇವ್‍ರ ಬೀಜ ಈ ದೇಶಕ್ಕೆ ಅಗತ್ಯವೂ ಇಲ್ಲ. ಬೇಕಾದರೆ ರಾಮ್‍ದೇವ್‍ರು ಅಳಸಂಡೆ, ಮಾವು, ತೊಂಡೆ, ಮುಳ್ಳುಸೌತೆ ಬೀಜಗಳನ್ನು ಮಾರಲಿ. ಆದರೆ ಪುತ್ರಿಯರನ್ನು ಅವಮಾನಿಸದಿರಲಿ.