Monday 26 December 2016

ಬಾಟಲಿಯ ಎದುರು ಜಯಗಳಿಸಬೇಕಾದ ಬಟ್ಟಲು

      ಒಂದು ಚೀಟಿಯಲ್ಲಿ ಸಾವು ಮತ್ತು ಇನ್ನೊಂದು ಚೀಟಿಯಲ್ಲಿ ಬದುಕು ಎಂದು ಬರೆದು, ನಿಮ್ಮ ಆಯ್ಕೆಯ ಚೀಟಿಯನ್ನು ಎತ್ತಿಕೊಳ್ಳಿ ಎಂದು ಜನರಲ್ಲಿ ವಿನಂತಿಸಿದರೆ ಸಾವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಶೂನ್ಯ ಅನ್ನುವಷ್ಟು ಕಡಿಮೆ. ಸಾವು ಯಾರ ಆಯ್ಕೆಯೂ ಅಲ್ಲ ಅಥವಾ ಅದು ಆಯ್ಕೆ ಎಂಬ ಚೌಕಟ್ಟಿನಿಂದ ಹೊರಗಿನದು. ಹೊಟ್ಟೆಯಲ್ಲಿರುವ ಮಗುವನ್ನೇ ಸಾಯಿಸುವ ಸ್ವಾತಂತ್ರ್ಯ ಅದರ ತಾಯಿಗಿಲ್ಲ. ನಿಜವಾಗಿ, ಇನ್ನೂ ಹುಟ್ಟದೇ ಇರುವ ಮಗುವಿನ ಸಾವು-ಬದುಕಿನ ತೀರ್ಮಾನದ ಸ್ವಾತಂತ್ರ್ಯ ತಾಯಿಗೆ ಇರಲೇಬೇಕಿತ್ತು. ಯಾಕೆಂದರೆ, ಆ ಮಗು ಇನ್ನೂ ಭೂಮಿಗೆ ಬಂದಿಲ್ಲ. ಜಗತ್ತು ಆ ಮಗುವನ್ನು ನೋಡಿಯೂ ಇಲ್ಲ. ಹೆಸರು, ಉದ್ಯೋಗ, ಆಧಾರ್ ಕಾರ್ಡ್, ಮತದಾನದ ಗುರುತು ಚೀಟಿ, ಚಾಲನಾ ಪರವಾನಿಗೆ, ಪಾಸ್‍ಪೋರ್ಟ್... ಇತ್ಯಾದಿಗಳೊಂದೂ ಇಲ್ಲದ ಮತ್ತು ಬಾಹ್ಯ ಜಗತ್ತಿಗೆ ಇನ್ನೂ ಬಾರದ ಮಗು.ಆದರೂ  ಮಗುವನ್ನು ಸಾಯಿಸುವ ಹಾಗಿಲ್ಲ. ಒಂದು ವೇಳೆ, ಗರ್ಭ ಧರಿಸಿರುವುದು ನಾನು ಮತ್ತು ಗರ್ಭವನ್ನು ಉಳಿಸಿಕೊಳ್ಳಬೇಕೋ ಅಳಿಸಬೇಕೋ ಎಂಬ ತೀರ್ಮಾನವೂ ನನ್ನದೇ ಎಂದು ಓರ್ವ ಮಹಿಳೆ ವಾದಿಸುವುದಾದರೆ ಅದು ಕಾನೂನು ಪ್ರಕಾರ ಅಪರಾಧವಾಗುತ್ತದೆ. ಬದುಕು ಅಷ್ಟು ಅಮೂಲ್ಯವಾದುದು. ಆದ್ದರಿಂದಲೇ, ಆತ್ಮಹತ್ಯೆಯನ್ನು ಅಪರಾಧದ ಪಟ್ಟಿಯಲ್ಲಿಡಲಾಗಿದೆ. ಈ ಕಾರಣದಿಂದಲೇ ಇಲ್ಲಿ ಪ್ರಶ್ನೆಯೊಂದು ಉದ್ಭವಿಸುತ್ತದೆ. ಬದುಕನ್ನು ನಮ್ಮ ಕಾನೂನು ಇಷ್ಟು ಆಳವಾಗಿ ಪ್ರೀತಿಸುತ್ತಿರುವಾಗಲೂ ಮದ್ಯ ಹೇಗೆ ನಮ್ಮ ನಡುವೆ ಅಸ್ತಿತ್ವವನ್ನು ಉಳಿಸಿಕೊಂಡಿತು? ಮದ್ಯಪಾನ ಆರೋಗ್ಯಕ್ಕೆ ಹಾನಿಕರ ಎಂದು ಯಾವುದಾದರೂ ಜ್ಯೋತಿಷಿಗಳೋ ವಾಸ್ತು ತಜ್ಞರೋ ಹೇಳುವುದಲ್ಲ. ಹೆಂಡ-ಸಾರಾಯಿ ಸಹವಾಸ, ಪತ್ನಿ - ಮಕ್ಕಳ ಉಪವಾಸ... ಎಂಬ ಘೋಷಣೆಯೂ ಅವರದಲ್ಲ. ಸಿನಿಮಾಗಳಲ್ಲಿ ಮದ್ಯಪಾನದ ದೃಶ್ಯ ಪ್ರಸಾರವಾಗುವಾಗಲೆಲ್ಲ `ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಕಡ್ಡಾಯವಾಗಿ ಸಾರಬೇಕೆಂದು ಹೇಳಿದ್ದೂ ಇವರಲ್ಲ. ಎಲ್ಲವೂ ಸರಕಾರದ್ದೇ ಆದೇಶಗಳು. ಇಷ್ಟಿದ್ದೂ ಮದ್ಯವನ್ನೇಕೆ ನಮ್ಮ ವ್ಯವಸ್ಥೆ ಆಲಂಗಿಸುತ್ತಿದೆ? ಕರ್ನಾಟಕದ ಬೊಕ್ಕಸಕ್ಕೆ ವರ್ಷಕ್ಕೆ 16510 ಕೋಟಿ ರೂಪಾಯಿ ಆದಾಯ ಬರುತ್ತದೆ ಎಂಬುದರ ಹೊರತು ಬೇರೆ ಯಾವ ಸಮರ್ಥನೆ ನಮ್ಮನ್ನಾಳುವವರಿಗಿದೆ? ಬರೇ ಆದಾಯವೊಂದೇ ಮದ್ಯಪಾನವನ್ನು ಕಾನೂನು ಸಮ್ಮತಗೊಳಿಸುವುದಕ್ಕೆ ಸಾಕಾಗಬಹುದೆ? ಓರ್ವರ ಆರೋಗ್ಯವನ್ನು ಕೆಡಿಸಿ ಬೊಕ್ಕಸ ತುಂಬಿಸುವುದು ಎಷ್ಟಂಶ ನೈತಿಕವಾದುದು? ಮದ್ಯಪಾನ ಸಂಬಂಧಿ ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ಸಾಯುವವರ ಸಂಖ್ಯೆ ಒಂದೂವರೆ ಲಕ್ಷಕ್ಕಿಂತ ಅಧಿಕ ಎಂದು ಕಳೆದವಾರ ಸ್ವತಃ ಕೇಂದ್ರ ಸರಕಾರವೇ ಸುಪ್ರೀಮ್ ಕೋರ್ಟ್‍ನಲ್ಲಿ ಒಪ್ಪಿಕೊಂಡಿದೆ. ಮದ್ಯಪಾನ ಮಾಡಿ ವಾಹನ ಚಲಾವಣೆ ಮಾಡುವುದರಿಂದ ಸ್ವತಃ ಮದ್ಯಪಾನಿಯಷ್ಟೇ ಅನಾಹುತಕ್ಕೆ ತುತ್ತಾಗುವುದಲ್ಲ, ಮದ್ಯಪಾನ ಮಾಡದೇ ಇರುವ ಮತ್ತು ಮದ್ಯವನ್ನು ಪ್ರಬಲವಾಗಿ ವಿರೋಧಿಸುವ ಜನರೂ ಅದರ ಅಡ್ಡ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಕೇವಲ ಕರ್ನಾಟಕ ರಾಜ್ಯವೊಂದರಲ್ಲೇ 2016ರಲ್ಲಿ 82,049 ಮಂದಿ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಕಾರಣಕ್ಕೆ ದಂಡತೆತ್ತಿದ್ದಾರೆ. 2015ರಲ್ಲಿ ಈ ಸಂಖ್ಯೆ 80,479ಕ್ಕೆ ಕುಸಿದರೆ 2016 ಅಕ್ಟೋಬರ್‍ಗಾಗುವಾಗಲೇ ಹೀಗೆ ದಂಡ ತೆತ್ತವರ ಸಂಖ್ಯೆ 91,957ಕ್ಕೇರಿದೆ. ಈ ಕಾರಣದಿಂದಲೇ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ 500 ಮೀಟರ್ ಒಳಗಡೆ ಇರುವ ಮದ್ಯದಂಗಡಿಗಳನ್ನು ತೆರವುಗೊಳಿಸಬೇಕೆಂಬ ಸುಪ್ರೀಮ್ ಕೋರ್ಟ್‍ನ ಕಳೆದವಾರದ ಆದೇಶ ಮುಖ್ಯವೆನಿಸುವುದು.
      ವಿಶೇಷ ಏನೆಂದರೆ, ಮದ್ಯ ನಿಷೇಧಕ್ಕೆ ಒತ್ತಾಯಿಸಿ ಸುಪ್ರೀಮ್ ಕೋರ್ಟ್‍ನಲ್ಲಿ ಅರ್ಜಿಯನ್ನು ದಾಖಲಿಸಿರುವುದು ಸರಕಾರ ಅಲ್ಲ, ಅಪಘಾತಕ್ಕೀಡಾಗಿ ವೀಲ್‍ಚೇರ್‍ಗೆ ಸೀಮಿತವಾದ ಹರ್ಮಾನ್ ಸಿಂಗ್ ಎಂಬ ವ್ಯಕ್ತಿ. ನಿಜವಾಗಿ ಮದ್ಯಪಾನವು ಚಾಲಕನ ನಿಯಂತ್ರಣವನ್ನು ಮಾತ್ರ ತಪ್ಪಿಸುವುದಲ್ಲ, ಈ ದೇಶದ ಕೋಟ್ಯಂತರ ಜನರ ನಾಡಿ ಬಡಿತವನ್ನೇ ತಪ್ಪಿಸುತ್ತದೆ. ಹಾಗಂತ, ಈ ಕುಡುಕರು ಆಶ್ರಯಿಸಿಕೊಂಡಿರುವುದು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಅಸುಪಾಸಿನಲ್ಲಿರುವ ಮದ್ಯದಂಗಡಿಗಳನ್ನಲ್ಲ. ಈ ಹೆದ್ದಾರಿಗಳ ತೀರಾ ತೀರಾ ಹೊರಗಡೆ ರಾಜ ಠೀವಿಯಿಂದ ಫೋಸು ಕೊಡುತ್ತಿರುವ ಮದ್ಯದಂಗಡಿಗಳನ್ನು. ದಿನವಹೀ ದುಡಿದ ದುಡ್ಡನ್ನು ಮದ್ಯದಂಗಡಿಗೆ ಸುರಿದು ಮನವನ್ನೂ ಮನೆಯನ್ನೂ ನರಕ್ಕೆ ಮಾಡುವ ಕೋಟ್ಯಂತರ ಕುಡುಕರನ್ನು ತಯಾರಿಸುತ್ತಿರುವುದು ಈ ಮದ್ಯದಂಗಡಿಗಳೇ. ಸರಕಾರಗಳ ಸಚಿವ ಸಂಪುಟದಲ್ಲಿ ಅಬಕಾರಿ ಎಂಬ ಮದ್ಯಪಾನದ ಖಾತೆಯೇ ಇದೆ. ಆ ಖಾತೆಯ ಹೊಣೆಗಾರಿಕೆಯೇ ಜನರಿಗೆ ಕುಡಿತವನ್ನು ಸುಲಭಗೊಳಿಸುವುದು ಮತ್ತು ಆದಾಯವನ್ನು ಲೆಕ್ಕ ಹಾಕುವುದು. ಅಷ್ಟಕ್ಕೂ, ಇಂಥದ್ದೊಂದು ದ್ವಂದ್ವ ಬೇರೆ ಇರಲು ಸಾಧ್ಯವೇ? ಒಂದು ಕಡೆ ಕುಡಿತವನ್ನು ಆರೋಗ್ಯಕ್ಕೆ ಹಾನಿಕರ ಎಂದು ಸರಕಾರ ಘೋಷಿಸುತ್ತಲೇ ಇನ್ನೊಂದು ಕಡೆ ಅದನ್ನು ಮಾರುವುದಕ್ಕೆಂದೇ ಖಾತೆಯೊಂದನ್ನು ಇಟ್ಟುಕೊಳ್ಳುವುದಕ್ಕೆ ಏನೆನ್ನಬೇಕು? ತನ್ನದೇ ಪ್ರಜೆಗಳನ್ನು ಅಂಗವಿಕಲರನ್ನಾಗಿಸಿಯೋ ರೋಗಿಗಳಾಗಿಸಿಯೋ ಅಥವಾ ಸಾವಿಗೆ ದೂಡಿಯೋ ಸರಕಾರವೊಂದು ಅದಾಯ ಗಳಿಸಲು ಶ್ರಮಿಸುತ್ತದೆಂಬುದು ಏನನ್ನು ಸೂಚಿಸುತ್ತದೆ? ಅಂದಹಾಗೆ, ಯಾವುದೇ ಸರಕಾರಿ ನೀತಿಯನ್ನು ಜನಪರವೋ ಜನವಿರೋಧಿಯೋ ಎಂದು ತೀರ್ಮಾನಿಸುವುದಕ್ಕೆ ಒಂದು ಮಾನದಂಡ ಇದೆ. ಅದು ಆದಾಯವನ್ನು ಆಧಾರವಾಗಿಕೊಂಡ ಮಾನದಂಡ ಅಲ್ಲ. ಜನರ ಒಳಿತು ಮತ್ತು ಸಂತೋವನ್ನು ಆ ಮಾನದಂಡ ಅವಲಂಬಿಸಿರುತ್ತದೆ. ಮದ್ಯ ಯಾವ ರೀತಿಯಲ್ಲೂ ಜನರ ಒಳಿತನ್ನು ಬಯಸುತ್ತಿಲ್ಲ. ಅದರ ಚಟಕ್ಕೆ ತುತ್ತಾದವರು ಮನೆ ಮತ್ತು ಸಮಾಜದ ನೆಮ್ಮದಿಯನ್ನು ಕೆಡಿಸಿ ಬಿಡುತ್ತಾರೆ. ಅಂಗವಿಕಲ ಸಮಾಜದ ಹುಟ್ಟಿಗೆ ಕಾರಣರಾಗುತ್ತಾರೆ. ಅಪಘಾತದ ಮೂಲಕ ಸಾಮೂಹಿಕ ಹತ್ಯೆಗೆ ಕಾರಣರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ ಹೆದ್ದಾರಿಗಳಿಂದ ಮಾತ್ರ ಅಲ್ಲ, ಭೂಮಿಯಿಂದಲೇ ಮದ್ಯದಂಗಡಿಗಳು ತೆರವುಗೊಳ್ಳಲೇ ಬೇಕಾದ ಸರ್ವ ಅಗತ್ಯ ಇದೆ. ಇದರ ಆರಂಭ ಎಂಬ ನೆಲೆಯಲ್ಲಿ ಸುಪ್ರೀಮ್‍ಕೋರ್ಟ್‍ನ ಆದೇಶವನ್ನು ನಾವು ಸ್ವಾಗತಿಸಬೇಕಾಗಿದೆ. ಈ ಆದೇಶವು ಮುಂದಿನ ದಿನಗಳಲ್ಲಿ ಹೆದ್ದಾರಿಗಳ 500 ಮೀಟರ್ ಫಾಸಲೆಯನ್ನು ಮೀರಿ ಕಿಲೋ ಮೀಟರ್‍ಗಳಾಗಿ ಬಳಿಕ ದೇಶದಿಂದಲೇ ಮದ್ಯದಂಗಡಿಗಳನ್ನು ತೆರವುಗೊಳಿಸುವುದಕ್ಕೆ ಕಾರಣವಾಗಬೇಕಾಗಿದೆ.
       ಅಂದಹಾಗೆ, ಮದ್ಯ ಎಂಬುದು ಅನ್ನದಂತೆ ಅಲ್ಲ. ಅದೊಂದು ನಶೆ. ಅನ್ನ ನಶೆ ಅಲ್ಲ, ಆರೋಗ್ಯವರ್ಧಕ ಆಹಾರ. ಮದ್ಯವಂತೂ ಆರೋಗ್ಯವನ್ನು ಕೆಡಿಸುವ ಮತ್ತು ನಶೆಯಲ್ಲಿ ತೇಲಾಡಿಸುವ ಪಾನೀಯ. ಆದ್ದರಿಂದ ಅನ್ನದ ಬಟ್ಟಲು ಮತ್ತು ಮದ್ಯದ ಬಾಟಲು ಸರಿಸಮಾನವಾಗಿ ಗೌರವಕ್ಕೀಡಾಗಲು ಸಾಧ್ಯವೇ ಇಲ್ಲ. ಅನ್ನವನ್ನು ಗೌರವಿಸುವ ಸಮಾಜ ಆರೋಗ್ಯಪೂರ್ಣವಾಗಿರುತ್ತದೆ. ನಶೆಯನ್ನು ಬೆಂಬಲಿಸುವ ಸಮಾಜ ಅನಾರೋಗ್ಯವನ್ನು ಪ್ರತಿನಿಧಿಸುತ್ತದೆ. ಅನಾರೋಗ್ಯವು ಬಲಿಷ್ಠ ದೇಶವನ್ನು ಮತ್ತು ಆರೋಗ್ಯಪೂರ್ಣ ಚಿಂತನೆಗಳನ್ನು ಹೊಂದಿರಲು ಸಾಧ್ಯವಿಲ್ಲ. ಅತ್ಯಾಚಾರಕ್ಕೂ ಮದ್ಯಕ್ಕೂ ನಡುವೆ ನಂಟಿರುವುದೇ ಅನ್ನ ಮತ್ತು ನಶೆಯಲ್ಲಿ ನಮ್ಮ ಆಯ್ಕೆ ಯಾವುದಾಗಿರಬೇಕೆಂಬುದನ್ನು ಸೂಚಿಸುತ್ತದೆ. ನಶೆ ನಮ್ಮನ್ನು ಮತ್ತು ನಮ್ಮತನವನ್ನು ಕೊಂದರೆ ಅನ್ನ ನಮ್ಮನ್ನು ಮತ್ತು ದೇಶವನ್ನು ಬದುಕಿಸುತ್ತದೆ. ಆದ್ದರಿಂದ ಸಾವನ್ನು ತಿರಸ್ಕರಿಸೋಣ. ಬದುಕನ್ನು ಆರಿಸೋಣ.

Tuesday 20 December 2016

ಲಿಂಗಸುಗೂರಿನ ಗಂಗಮ್ಮ ಮತ್ತು ಕಾಡುವ ಪ್ರಶ್ನೆ

       ಕಳೆದವಾರ ಎರಡು ಘಟನೆಗಳು ನಡೆದುವು. ಎರಡೂ ಘಟನೆಗಳು ತಂದೆ ಮತ್ತು ಮಕ್ಕಳಿಗೆ ಸಂಬಂಧಿಸಿದ್ದು. ಒಂದು ಘಟನೆ ದೆಹಲಿಯ ಹೈಕೋರ್ಟ್‍ನಲ್ಲಿ ನಡೆದರೆ ಇನ್ನೊಂದು ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ನಡೆಯಿತು. ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ವೃದ್ಧೆ ಗಂಗಮ್ಮಳನ್ನು ಏಕೈಕ ಮಗ ಬಿಟ್ಟು ಹೋಗಿದ್ದ. ಎಂಟು ತಿಂಗಳ ಹಿಂದೆ ಬಿದ್ದು ಆಕೆಯ ಕಾಲು ಮುರಿದಿತ್ತು. ನಡೆಯುವುದಕ್ಕಾಗುತ್ತಿರಲಿಲ್ಲ. ತೆವಳಿಕೊಂಡು ಹೋಗಿ ಶೌಚ ಮತ್ತಿತರ ಕರ್ಮಗಳನ್ನು ಮಾಡಬೇಕಿತ್ತು. ತಾಯಿ ಮನೆಯೊಳಗೆ ಹೊಲಸು ಮಾಡುತ್ತಾಳೆಂಬ ಸಿಟ್ಟು ಮಗನಿಗೆ. ಏಕೈಕ ಮಗ ಎಂಬ ನೆಲೆಯಲ್ಲಿ ಮುದ್ದಿನಿಂದ ಬೆಳೆಸಿದ್ದ ಆಕೆ ತನ್ನ 5 ಎಕರೆ ಭೂಮಿಯನ್ನು ಮಗನ ಹೆಸರಲ್ಲಿ ಬರೆಸಿದ್ದಳು. ಇದೀಗ ಮಗ ಆಸ್ಪತ್ರೆಗೆಂದು ಹೇಳಿ ಕರಕೊಂಡು ಬಂದು ಬಸ್ ನಿಲ್ದಾಣದಲ್ಲಿ ಬಿಟ್ಟು ಪರಾರಿಯಾಗಿದ್ದ. ಆಕೆ ತನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಿ ಎಂದು ಕಂಡಕಂಡವರಲ್ಲಿ ಅಂಗಲಾಚುತ್ತಿದ್ದಳು. ಇಂಥದ್ದೇ ಕರುಣ ಕತೆಯೊಂದು ದಿಲ್ಲಿಯಲ್ಲಿ ಸಾರ್ವಜನಿಕರ ಗಮನ ಸೆಳೆಯಿತು. ವೃದ್ಧ ಹೆತ್ತವರು ತಮ್ಮ ಮಗ ಮತ್ತು ಸೊಸೆಯ ವಿರುದ್ಧ ಕೋರ್ಟ್‍ಗೆ ದೂರು ಸಲ್ಲಿಸಿದ್ದರು. ತಮ್ಮ ಬದುಕನ್ನು ಮಗ ಮತ್ತು ಸೊಸೆ ನರಕವನ್ನಾಗಿ ಮಾಡಿದ್ದಾರೆ. ಕನಿಷ್ಠ ಮನೆಯ ವಿದ್ಯುತ್ ಬಿಲ್ ಅನ್ನು ಪಾವತಿಸುವುದಕ್ಕೂ ಅವರು ನಿರಾಕರಿಸುತ್ತಿದ್ದಾರೆ. ಆದ್ದರಿಂದ ತಮ್ಮ ಮನೆಯ ಪ್ರಥಮ ಅಂತಸ್ತಿನಲ್ಲಿ  ಬಿಡಾರ ಹೂಡಿರುವ ಮಗ ಮತ್ತು ಕುಟುಂಬವನ್ನು ಮನೆಯಿಂದ ಹೊರಹೋಗುವಂತೆ ಆದೇಶಿಸಬೇಕು ಎಂದು ವಿನಂತಿಸಿದ್ದರು. ದೆಹಲಿಯ ಕೆಳ ಕೋರ್ಟು ಈ ಮನವಿಯನ್ನು ಪುರಸ್ಕರಿಸಿತು. ಅದರ ವಿರುದ್ಧ ಮಗ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ. ಹೈಕೋರ್ಟ್ ಕಳೆದವಾರ ಮಗನನ್ನು ತರಾಟೆಗೆ ತೆಗೆದುಕೊಂಡಿತಲ್ಲದೇ, ಪೋಷಕರ ಮನೆಯಲ್ಲಿ ವಾಸಿಸುವುದು ಪುತ್ರನ ಹಕ್ಕಲ್ಲ ಎಂದು ತೀರ್ಪಿತ್ತಿತು. ಮನೆ ಖಾಲಿ ಮಾಡು ಎಂದೂ ಆದೇಶಿಸಿತು.
      ಒಂದು ರೀತಿಯಲ್ಲಿ ದೆಹಲಿ ಮತ್ತು ಲಿಂಗಸುಗೂರಿನ ಘಟನೆಗಳ ಪಾತ್ರಧಾರಿಗಳ ಮಧ್ಯೆ ಯಾವ ಸಂಬಂಧವೂ ಇಲ್ಲ. ಅವರು ಪರಸ್ಪರ ಪರಿಚಿತರಲ್ಲ. ಭಾಷೆ ಬೇರೆ. ಅಂತಸ್ತು ಬೇರೆ. ದೆಹಲಿಯ ಹೆತ್ತವರಿಗೆ ಎರಡಂತಸ್ತಿನ ಮನೆಯಿದೆ. ಲಿಂಗಸುಗೂರಿನ ಗಂಗವ್ವ ಮುಗ್ಧೆ. ಆಸ್ತಿಯನ್ನೂ ಮಗನಿಗೆ ಬರೆದುಕೊಟ್ಟಾಕೆ. ಆದರೆ ಎರಡಂತಸ್ತಿನ ಮನೆಯ ಹೆತ್ತವರ ದೂರಿನಲ್ಲೂ ಬಡಪಾಯಿ ಗಂಗವ್ವನ ದೂರಿನಲ್ಲೂ ಭಾರೀ ವ್ಯತ್ಯಾಸವೇನೂ ಇಲ್ಲ. ಇಬ್ಬರಲ್ಲೂ ತಮ್ಮ ಮಕ್ಕಳ ಮೇಲೆಯೇ ಆರೋಪಗಳಿವೆ. ಆ ಕಾರಣದಿಂದಲೇ ಇದು ವಿಶ್ಲೇಷಣೆಗೆ ಅರ್ಹವೆನಿಸುತ್ತದೆ. ಇದರಲ್ಲಿ ಹೆತ್ತವರ ಪಾತ್ರವೇನು? ಮಕ್ಕಳ ಪಾತ್ರ ಏನು? ಆಧುನಿಕ ಜೀವನ ಕ್ರಮಗಳ ಕೊಡುಗೆ ಏನು? ಹಾಗಂತ, ಮಕ್ಕಳ ಮೇಲೆ ಸಕಲ ಆರೋಪವನ್ನೂ ಹೊರಿಸಿ ಪ್ರಕರಣಕ್ಕೆ ಇತಿಶ್ರೀ ಹಾಡುವುದು ಸುಲಭ. ಆದರೆ ಹೀಗೆ ಮಾಡುವುದು ನಿಜಕ್ಕೂ ನ್ಯಾಯಪೂರ್ಣವೇ? ಈ ಮಕ್ಕಳ ಬೆಳವಣಿಗೆಯಲ್ಲಿ ಹೆತ್ತವರು ಯಾವ ರೀತಿಯ ಪಾತ್ರವನ್ನು ನಿರ್ವಹಿಸಿದ್ದಾರೆಂಬ ಅಂಶವನ್ನೂ ಇಲ್ಲಿ ಪರಿಗಣಿಸಬೇಡವೇ? ಮಕ್ಕಳಾಗದೇ ಹರಕೆ ಹೊತ್ತೂ ಹೊತ್ತೂ ಕೊನೆಗೆ ಹುಟ್ಟಿದ ಮಗನೇ ಹೀಗೆ ಬಸ್ಸು ನಿಲ್ದಾಣದಲ್ಲಿ ಎಸೆದು ಹೋದ ಎಂಬ ಕೊರಗು ಗಂಗಮ್ಮಳದ್ದು. ಆದರೆ ಹರಕೆ ಹೊತ್ತು ಸಿಕ್ಕ ಮಗನನ್ನು ಗಂಗಮ್ಮ ಬೆಳೆಸಿದ್ದು ಯಾವ ರೀತಿಯಲ್ಲಿ? ಕೊಟ್ಟ ಶಿಕ್ಷಣ ಯಾವುದು? ಶಿಶು ಪ್ರಾಯದಿಂದ ಹಿಡಿದು ಹದಿಹರೆಯ ಮತ್ತು ಪ್ರೌಢಾವಸ್ಥೆಯ ವರೆಗೆ ಒಂದು ಮಗು ತನ್ನಿಷ್ಟದಂತೆ ಬೆಳೆಯುವುದಕ್ಕೂ ಪ್ರತಿ ಹಂತದಲ್ಲೂ ಹೆತ್ತವರ ನಿಗಾದೊಂದಿಗೆ ಬೆಳೆಯುವುದಕ್ಕೂ ವ್ಯತ್ಯಾಸ ಇದೆ. ಮಗುವಿನ ಆರೋಗ್ಯಪೂರ್ಣ ಬೆಳವಣಿಗೆಯಲ್ಲಿ ಹೆತ್ತವರ ಸದುಪದೇಶಗಳ ಪಾತ್ರ ಬಹಳ ದೊಡ್ಡದು. ಮಗು ಕೇಳಿದ್ದನ್ನೆಲ್ಲ ಕೊಡುವುದಷ್ಟೇ ಹೆತ್ತವರ ಜವಾಬ್ದಾರಿಯಲ್ಲ. ಅದನ್ನು ಓರ್ವ ಪರಿಚಾರಕನೂ ಮಾಡಬಲ್ಲ. ಅದರಾಚೆಗೆ ಮಗು ಕೇಳದೇ ಇರುವ ಆದರೆ ಕೊಡಲೇಬೇಕಾದ ಅನೇಕಾರು ಅಂಶಗಳಿವೆ. ಮಗು ಬೆಳೆದಂತೆಲ್ಲ ಆ ಬೆಳವಣಿಗೆಗೆ ತಕ್ಕಂತೆ ಮೌಲ್ಯವನ್ನು ತುಂಬುತ್ತಾ ಸಾಗುವುದು ಬಹಳ ಮುಖ್ಯ. ಮಗು ಶೂವನ್ನೋ ಫುಟ್ಬಾಲನ್ನೋ ಕ್ರಿಕೆಟ್ ಬ್ಯಾಟ್ ಅನ್ನೋ ಅಥವಾ ಆಟಿಕೆಗಳು, ಸೈಕಲ್, ಉಡುಪುಗಳು.. ಇತ್ಯಾದಿಗಳನ್ನೋ ಖರೀದಿಸಿಕೊಡುವಂತೆ ಒತ್ತಾಯಿಸುವಾಗ, ಅವುಗಳಿಗೆ ತಾನು ವ್ಯಯಿಸುವ ಹಣ ಎಷ್ಟು ಅಮೂಲ್ಯವಾದುದು ಮತ್ತು ಎಷ್ಟು ಬೆವರಿನ ಫಲ ಎಂಬುದನ್ನು ಸಂದರ್ಭಕ್ಕೆ ತಕ್ಕಂತೆ ಹೆತ್ತವರು ಮನವರಿಕೆ ಮಾಡಿಸುತ್ತಿರಬೇಕು. ಹಾಗಂತ, ಪ್ರೀತಿಯನ್ನು ವ್ಯಕ್ತಪಡಿಸುವುದರಲ್ಲಿ ಜಿಪುಣರಾಗಬೇಕಿಲ್ಲ. ಮಕ್ಕಳು ಒಂದಿಷ್ಟು ದೊಡ್ಡವರಾದ ಕೂಡಲೇ ಅವರೊಂದಿಗೆ ಭಾರತ-ಪಾಕ್‍ಗಳಂತೆ ಅಂತರವನ್ನು ಕಾಯ್ದುಕೊಳ್ಳಲೂಬೇಕಿಲ್ಲ. ಆದರೆ, ತಾವು ದುಡಿಯುತ್ತಿರುವುದು ನಿಮ್ಮ ಸಲುವಾಗಿ ಮತ್ತು ನಿಮ್ಮ ಉತ್ತಮ ಭವಿಷ್ಯದ ದೃಷ್ಟಿಯಿಂದ ಎಂಬ ಸಂದೇಶವನ್ನು ಮಕ್ಕಳಿಗೆ ಅರ್ಥವಾಗುವಂತೆ ಆಗಾಗ ರವಾನಿಸುತ್ತಿರಬೇಕು. ಅಷ್ಟಕ್ಕೂ, ಇವತ್ತಿನ ದಿನಗಳಲ್ಲಿ ಎಲ್ಲವನ್ನೂ ಬಾಯಿ ಮಾತಿನಿಂದಲೇ ಹೇಳಬೇಕಿಲ್ಲ. ಪರಿಣಾಮಕಾರಿ ವೀಡಿಯೋಗಳು ಧಾರಾಳ ಲಭ್ಯವಿವೆ. ಮಕ್ಕಳು ಕಂಪ್ಯೂಟರ್, ಮೊಬೈಲ್‍ಗಳಲ್ಲಿ ಹೆತ್ತವರಿಗಿಂತಲೂ ಹೆಚ್ಚು ನಿಪುಣರಾಗಿರುವುದರಿಂದ ಅವರಿಗೆ ಮೌಲ್ಯಯುತ ವೀಡಿಯೋಗಳನ್ನು ತೋರಿಸುವುದು ಕಷ್ಟವಲ್ಲ. ಹೆತ್ತವರನ್ನು ವೃದ್ಧಾಶ್ರಮಕ್ಕೆ ಅಟ್ಟುವ ಮಕ್ಕಳ ಬಗ್ಗೆ ಮತ್ತು ಹೆತ್ತವರು ಅದರಿಂದ ಅನುಭವಿಸುವ ನೋವುಗಳ ಬಗ್ಗೆ ಎಳೆ ಪ್ರಾಯದ ಮನಸ್ಸಿನಲ್ಲಿ ಭಾವನಾತ್ಮಕತೆಯನ್ನು ತುಂಬುವುದು ಉತ್ತಮ. ಒಂದು ಪುಟ್ಟ ವೀಡಿಯೋ ಒಂದು ಮಗುವನ್ನು ಜೀವನಪರ್ಯಂತ ಮೌಲ್ಯಯುತವಾಗಿ ಬದುಕುವಂತೆ ಮಾಡುವುದಕ್ಕೆ ಸಾಕಾಗಬಹುದು.
      ಮಕ್ಕಳ ಮನಸ್ಸು ತೀರಾ ಮೃದು. ಆ ಮೃದು ಮನಸ್ಸನ್ನು ಯಾವ ಆಕೃತಿಗೆ ಬೇಕಾದರೂ ಪಳಗಿಸುವ ಸಾಮರ್ಥ್ಯ ಹೆತ್ತವರಿಗಿದೆ. ದುರಂತ ಏನೆಂದರೆ, ಅನೇಕ ಬಾರಿ ಹೆತ್ತವರು ಇಂಥ ಸನ್ನಿವೇಶದಲ್ಲಿ ಎಡವುತ್ತಾರೆ. ಮಕ್ಕಳನ್ನು ಮೌಲ್ಯಯುತವಾಗಿ ಬೆಳೆಸುವ ಬದಲಾಗಿ ಕೇವಲ ಆರೋಗ್ಯಪೂರ್ಣವಾಗಿ ಬೆಳೆಸುವುದಕ್ಕೇ ಆದ್ಯತೆ ನೀಡುತ್ತಾರೆ. ಭವಿಷ್ಯದಲ್ಲಿ ಮಗು ಏನಾಗಬೇಕು ಎಂಬುದನ್ನು ಚರ್ಚಿಸುತ್ತಾ ಮತ್ತು ಚಿಂತಿಸುತ್ತಾ ದುಡ್ಡು ಕೂಡಿಡುತ್ತಾರೆ. ಖರ್ಚು ಮಾಡುತ್ತಾರೆ. ಮಗುವೇನೋ ಹುಲುಸಾಗಿ ಬೆಳೆಯುತ್ತದೆ. ಆದರೆ, ಮೌಲ್ಯಕ್ಕೆ ಸಂಬಂಧಿಸಿ ಟೊಳ್ಳಾಗಿರುತ್ತದೆ. ಹೆತ್ತವರ ಬೆವರಿನ ಅರಿವು ಮಗುವಿಗಿರುವುದಿಲ್ಲ. ನಿದ್ದೆಗೆಟ್ಟು ದುಡಿದು ಸಂಪಾದಿಸಿದ ಹಣದ ಬೆಲೆ ಗೊತ್ತಿರುವುದಿಲ್ಲ. ಬಹುತೇಕ ಬಾರಿ ಹೆತ್ತವರು ಅದನ್ನು ಮಗುವಿನಿಂದ ಅಡಗಿಸಿಡುವುದೂ ಇದೆ. ನಿಜವಾಗಿ, ತನ್ನ ಕೆಲಸ ಏನು, ಒಂದು ದಿನ ದುಡಿಯದಿದ್ದರೆ ಮನೆಯ ಪರಿಸ್ಥಿತಿ ಏನು, ತಾನು ಯಾಕಾಗಿ ದುಡಿಯುತ್ತೇನೆ.. ಎಂಬುದೆಲ್ಲ ಗಂಡ-ಹೆಂಡತಿಯರ ನಡುವಿನ ಖಾಸಗಿ ವಿಷಯಗಳಷ್ಟೇ ಆಗಬೇಕಿಲ್ಲ. ಮಗುವಿಗೂ ಅದು ಗೊತ್ತಿರಬೇಕು. ಆರೋಗ್ಯಪೂರ್ಣ ಮತ್ತು ಮೌಲ್ಯಯುತ, ಕುಟುಂಬದ ಅಡಿಪಾಯ ಇದು.
     ಅಂದಹಾಗೆ, ದೆಹಲಿಯ ಹೆತ್ತವರು ಮತ್ತು ಲಿಂಗಸುಗೂರಿನ ಗಂಗಮ್ಮ ಈ ವಿಷಯದಲ್ಲಿ ತಮ್ಮ ಪಾತ್ರವನ್ನು ಎಷ್ಟಂಶ ನಿಭಾಯಿಸಿದ್ದಾರೋ ಗೊತ್ತಿಲ್ಲ. ಒಂದು ವೇಳೆ ನಿಭಾಯಿಸಿದ್ದರೂ ಮಕ್ಕಳು ತಪ್ಪು ದಾರಿ ಹಿಡಿಯಬಾರದೆಂದೇನೂ ಇಲ್ಲವಲ್ಲ. ಆದರೂ ಮಕ್ಕಳ ಮೇಲೆಯೇ ಸಂಪೂರ್ಣ ಆರೋಪ ಹೊರಿಸುವ ಮೊದಲು ಹೆತ್ತವರ ಜವಾಬ್ದಾರಿಗಳೂ ಚರ್ಚೆಗೊಳಗಾಗಬೇಕು. ಪವಿತ್ರ ಕುರ್‍ಆನ್ ಅಂತೂ ವೃದ್ಧ ಹೆತ್ತವರ ಬಗ್ಗೆ ಛೆ ಎಂಬ ಪದವನ್ನೂ ಬಳಸಬಾರದು ಎಂದು ಮಕ್ಕಳಿಗೆ ತಾಕೀತು ಮಾಡಿದೆ. ಹೆತ್ತವರ ಅತೃಪ್ತಿಗೆ ಪಾತ್ರವಾದ ಮಕ್ಕಳಿಗೆ ಸ್ವರ್ಗವಿಲ್ಲ ಎಂಬ ಬೆದರಿಕೆಯನ್ನೂ ಒಡ್ಡಿದೆ. ಚಿಕ್ಕಂದಿನಲ್ಲಿ ಅವರು ನಿಮ್ಮನ್ನು ಸಾಕಿದಷ್ಟೇ ಮಮತೆಯಿಂದ ವೃದ್ಧಾಪ್ಯದಲ್ಲಿ ಅವರನ್ನು ನೀವು ಸಾಕಬೇಕೆಂದು ಮಕ್ಕಳಿಗೆ ಅದು ಆದೇಶಿಸಿದೆ. ಹೆತ್ತವರು ಖಂಡಿತ ಇಂಥ ಗೌರವಾದರಗಳಿಗೆ ಅರ್ಹರು. ಆದರೆ ಚಿಕ್ಕಂದಿನಲ್ಲಿ ಮಕ್ಕಳಿಗೆ ಅದನ್ನು ಮನವರಿಕೆ ಮಾಡಿಸುವ ಪ್ರಯತ್ನಗಳು ನಡೆಯಲಿ. ಲಿಂಗಸುಗೂರಿನ ಬಸ್ ನಿಲ್ದಾಣದಲ್ಲಿ ಕಣ್ಣೀರು ಹಾಕಿದ ಗಂಗಮ್ಮ ಎಲ್ಲರ ಹೃದಯವನ್ನೂ ತಟ್ಟಲಿ.

Thursday 15 December 2016

ಹೆಣ್ಣನ್ನು ದೂರ ಇಟ್ಟವರ ದೂರು


         ನಮ್ಮ ನಡುವೆ ಇವತ್ತು ಎರಡು ರೀತಿಯ ಜೀವನ ದೃಷ್ಟಿಕೋನಗಳಿವೆ.
1. ಸಾಧನೆಗೆ ಹೆಣ್ಣು ತೊಡಕು ಎಂಬ ದೃಷ್ಟಿಕೋನ.
2. ವಿಧವೆ ಮತ್ತು ವಿಚ್ಛೇದಿತೆಯರ ಮರು ವಿವಾಹ ಅನಪೇಕ್ಷಿತ ಎಂಬ ನಿಲುವು.
     ಮೊದಲ ದೃಷ್ಟಿಕೋನಕ್ಕೆ ಅತ್ಯುತ್ತಮ ಉದಾಹರಣೆಯಾಗಿ ಪ್ರಧಾನಿ ನರೇಂದ್ರ ಮೋದಿಯವರೇ ನಮ್ಮ ಜೊತೆ ಇದ್ದಾರೆ. ಇದಕ್ಕೆ ಇನ್ನಷ್ಟು ಸ್ಪಷ್ಟ ಉದಾಹರಣೆಯನ್ನು ಕೊಡಬೇಕೆಂದರೆ, ಆರೆಸ್ಸೆಸ್ ಇದೆ. ಇಬ್ಬರೂ ನೇರವಾಗಿಯೋ ಪರೋಕ್ಷವಾಗಿಯೋ ಪ್ರತಿಪಾದಿಸುವ ನಿಲುವುಗಳು ಒಂದೇ- ಹೆಣ್ಣು ಸಾಧನೆಗೆ ಅಡ್ಡಿಯಾಗಿದ್ದಾಳೆ. ಆಕೆಯನ್ನು ಬದುಕಿನ ಭಾಗವಾಗಿ ಸ್ವೀಕರಿಸಿದರೆ ನಂಬಿದ ಸಿದ್ಧಾಂತವನ್ನು ಜಾರಿಗೊಳಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ನರೇಂದ್ರ ಮೋದಿಯವರು ಜಶೋದಾ ಬೆನ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡರು. ಆರೆಸ್ಸೆಸ್‍ನ ಪ್ರಮುಖ ಹೊಣೆಗಾರರಂತೂ ಮದುವೆಯಾಗದೆಯೇ ಉಳಿಯುವುದನ್ನು ಮೌಲ್ಯವಾಗಿ ಸ್ವೀಕರಿಸಿಕೊಂಡರು. ಇನ್ನೊಂದು- ವಿಧವೆ ಮತ್ತು ವಿಚ್ಛೇದಿತೆಯರಿಗೆ ಸಂಬಂಧಿಸಿದ ನಿಲುವು. ಇಲ್ಲೂ ಘೋಷಿತ ಮತ್ತು ಅಘೋಷಿತ ನೀತಿ ಸಂಹಿತೆಗಳಿವೆ. ವಿಚ್ಛೇದಿತೆಯರು ಮತ್ತು ವಿಧವೆಯರು ಮರು ಮದುವೆಯಾಗುವುದು ಇವತ್ತಿನ ಸಮಾಜದಲ್ಲಿ ತೀರಾ ಸರಳ ಅಲ್ಲ. ಇವರ ಬಗ್ಗೆ ಸಮಾಜದಲ್ಲಿ ಒಂದು ರೀತಿಯ ಆತಂಕ ಇದೆ. ಅಮಂಗಲೆಯರು, ಅಮಾನ್ಯರು, ಅಪಶಕುನರು.. ಮುಂತಾದ ಕಳಂಕಲೇಪಿತ ಬಿರುದುಗಳೊಂದಿಗೆ ಸಮಾಜ ಇವರನ್ನು ಮುಖ್ಯ ವಾಹಿನಿಯಿಂದ ಹೊರಗಿಟ್ಟಿದೆ ಮತ್ತು ಹೊರಗಿಡುತ್ತಿದೆ. ಅದೇ ವೇಳೆ ಪುರುಷನಿಗೆ ಈ ಸಮಸ್ಯೆ ಇಲ್ಲ. ಆತ ಅಮಂಗಲ ಆಗಲಾರ. ಬಹುಶಃ, ಭಾರತೀಯರ ಸಾಮಾಜಿಕ ಬದುಕನ್ನು ಅಧ್ಯಯನ ನಡೆಸುವ ಯಾರಿಗೇ ಆಗಲಿ ಸುಲಭದಲ್ಲೇ ಮನವರಿಕೆಯಾಗುವ ಅಂಶವಿದು. ಪ್ರವಾದಿ ಮುಹಮ್ಮದ್(ಸ) ಮುಖ್ಯವಾಗುವುದೂ ಇಲ್ಲೇ. ಅವರು ಈ ದೃಷ್ಟಿಕೋನಕ್ಕೆ ಪರ್ಯಾಯವಾದ ದೃಷ್ಟಿಕೋನವನ್ನು ಮಂಡಿಸಿದರು. ಮಾತ್ರವಲ್ಲ, ಪ್ರಯೋಗಕ್ಕೂ ಒಳಪಡಿಸಿದರು ಮತ್ತು ಯಶಸ್ವಿಯೂ ಆದರು. ಬಡ್ಡಿರಹಿತ ಮತ್ತು ಶೋಷಣೆರಹಿತ ಸಿದ್ಧಾಂತವನ್ನು ಅವರು ಮಕ್ಕಾ ಮತ್ತು ಮದೀನಾದಲ್ಲಿ ಪ್ರತಿಪಾದಿಸುವಾಗ ಅವರ ಜೊತೆ ಪತ್ನಿಯರಿದ್ದರು. ಮಕ್ಕಳಿದ್ದರು. ಅವರ ಈ ವಿಚಾರಧಾರೆಗೆ ಮೊದಲು ಬೆಂಬಲ ಸೂಚಿಸಿದ್ದೇ ಅವರ ಪತ್ನಿ. ಕೇವಲ 23 ವರ್ಷಗಳ ಸಣ್ಣ ಅವಧಿಯೊಳಗೆ  ಅವರು ತನ್ನ ಆ ವಿಚಾರಧಾರೆಯನ್ನು ಮಕ್ಕಾ-ಮದೀನಾದ ಲಕ್ಷಾಂತರ ಮಂದಿಯ ವಿಚಾರಧಾರೆಯಾಗಿ ಬದಲಾಯಿಸಿದರು. ಐತಿಹಾಸಿಕವಾಗಿ ಅತ್ಯಂತ ಹೃಸ್ವ ಅವಧಿಯಲ್ಲಿ ಸಾಧಿಸಲಾದ ಮನಃಪರಿವರ್ತನೆ ಇದು. ಅವರು ಹೆಣ್ಣನ್ನು ತೊಡಕಾಗಿ ಪರಿಗಣಿಸಲಿಲ್ಲ. ಬೆಳಕಾಗಿ ಪರಿಗಣಿಸಿದರು. ಹೆಣ್ಣನ್ನು ಹೊರತುಪಡಿಸಿದ ಜೀವನ ಕ್ರಮವನ್ನು ಅವರು ಅಮಾನ್ಯಗೊಳಿಸಿದರು. ಅವರು ಮೊದಲು ವಿವಾಹವಾದದ್ದೇ ತನಗಿಂತ 15 ವರ್ಷ ಹಿರಿಯಳಾದ, ವಿಚ್ಛೇದಿತಳಾದ ಮತ್ತು ಮೂವರು ಮಕ್ಕಳ ತಾಯಿಯಾದ ಹೆಣ್ಣನ್ನು. ಆ ಮೂವರು ಮಕ್ಕಳನ್ನು ಪ್ರವಾದಿ ಎಷ್ಟಂಶ ಪ್ರೀತಿಸಿದರೆಂದರೆ, ಪ್ರವಾದಿಯವರನ್ನು(ಸ) ವಿರೋಧಿಗಳ ಹಲ್ಲೆಯಿಂದ ರಕ್ಷಿಸುವ ಭರದಲ್ಲಿ ಹಾರಿಸ್ ಎನ್ನುವ ಮಗ ಪ್ರಾಣವನ್ನೇ ಒತ್ತೆ ಇಟ್ಟರು. ಪ್ರವಾದಿ ಮದುವೆಯಾದವರ ಪಟ್ಟಿಯಲ್ಲಿ ಕನ್ಯೆ ಇರುವುದು ಒಬ್ಬರೇ. ಉಳಿದವರೆಲ್ಲ ಯೌವನವನ್ನು ದಾಟಿದ ವಿಧವೆಯರೋ ವಿಚ್ಛೇದಿತೆಯರೋ ಆಗಿದ್ದರು. ಒಂದು ರೀತಿಯಲ್ಲಿ, ಅವರು ವಿಧವೆಯರು ಮತ್ತು ವಿಚ್ಛೇದಿತೆಯನ್ನು ತನ್ನ ಕೌಟುಂಬಿಕ ವ್ಯಾಪ್ತಿಯೊಳಗೆ ತಂದರು. ಭದ್ರತೆಯನ್ನು ಮತ್ತು ಆಶ್ರಯವನ್ನು ಒದಗಿಸಿದರು. ಇದು ಅಂದಿನ ಕಾಲದಲ್ಲಿ ಅತ್ಯಂತ ಅಚ್ಚರಿಯ ನಡೆ. ವಿಧವೆಯರು ಮತ್ತು ವಿಚ್ಛೇದಿತೆಯರ ಬಗೆಗಿನ ಪ್ರವಾದಿಯವರ ಈ ದೃಷ್ಟಿಕೋನ ಅಂದಿನ ಸಮಾಜವನ್ನು ಎಷ್ಟಂಶ ಪ್ರಭಾವಿಸಿತೆಂದರೆ, ಸಮಾಜದ ಒಟ್ಟು ಚಿಂತನೆಯ ಧಾಟಿಯೇ ಬದಲಾಯಿತು. ಅದು ವಿಧವೆಯರು ಮತ್ತು ವಿಚ್ಛೇದಿತೆಯರ ಮದುವೆಗೆ ಆದ್ಯತೆಯನ್ನು ನೀಡುವಲ್ಲಿ ವರೆಗೆ ಬೆಳೆಯಿತು. ಅವರು ಮಂಗಳೆಯರಾದರು. ಮುಖ್ಯವಾಹಿನಿಯ ಜೊತೆಗೇ ಗುರುತಿಸಿಕೊಂಡರು.
      ಸದ್ಯ ಹೆಣ್ಣು ಚರ್ಚೆಯಲ್ಲಿದ್ದಾಳೆ ಮತ್ತು ಈ ಚರ್ಚೆಯು ಪ್ರವಾದಿ ಮುಹಮ್ಮದ್‍ರನ್ನೇ(ಸ) ಅಪರಾಧಿ ಸ್ಥಾನದಲ್ಲಿ ಕೂರಿಸುವಷ್ಟು ಏಕಮುಖವಾಗಿ ನಡೆಯುತ್ತಿದೆ. ಹೆಣ್ಣನ್ನು ಅಡ್ಡಿಯೆಂದು ಪರಿಗಣಿಸಿ ದೂರ ತಳ್ಳಿದವರೇ ಪ್ರವಾದಿಯವರ ಮಹಿಳಾ ನಿಲುವನ್ನು ದೂರುತ್ತಿದ್ದಾರೆ. ವಿಧವೆ ಮತ್ತು ವಿಚ್ಛೇದಿತೆಯರನ್ನು ಅಮಂಗಲೆಯಾಗಿಸಿಕೊಂಡವರೇ ಈ ಮಹಿಳೆಯರಿಗೆ ಆಶ್ರಯವನ್ನು ನೀಡಿದ ವಿಚಾರಧಾರೆಯಲ್ಲಿ ಮಹಿಳಾ ಶೋಷಣೆಯನ್ನು ಹುಡುಕುತ್ತಿದ್ದಾರೆ.
ಸರಿ-ತಪ್ಪುಗಳನ್ನು ನೀವೇ ವಿಶ್ಲೇಷಿಸಿ.


ಭ್ರೂಣ ಎತ್ತಿರುವ ಪ್ರಶ್ನೆ

       ಕೇರಳದ ಕಾಸರಗೋಡು ಜಿಲ್ಲೆಯ ಯುವತಿಯೋರ್ವಳು ಅತ್ಯಾಚಾರದ ಇನ್ನೊಂದು ಮುಖವನ್ನು ಮತ್ತೊಮ್ಮೆ ನಮ್ಮ ಮುಂದೆ ತೆರೆದಿಟ್ಟಿದ್ದಾಳೆ. ಆ ಮುಖ ಅತ್ಯಂತ ಭಾವಾನಾತ್ಮಕವಾದುದು. `ಜೀವಿಸುವ ಹಕ್ಕು' ಎಂಬ ಸಹಜ ಸ್ವಾತಂತ್ರ್ಯದ ಅಸ್ತಿತ್ವವನ್ನೇ ಅಲುಗಾಡಿಸುವಂಥದ್ದು. ಇನ್ನಷ್ಟೇ ಕಣ್ಣು ಬಿಡಬೇಕಿರುವ ಮತ್ತು ಈ ಜಗತ್ತಿನಲ್ಲಿ ಬಾಳಿ-ಬದುಕುವುದಕ್ಕೆ ಸಕಲ ಹಕ್ಕುಗಳನ್ನೂ ಹೊಂದಿರುವ ಮಗುವನ್ನು (ಭ್ರೂಣ) ಉಳಿಸಿಕೊಳ್ಳಬೇಕೋ ಅಳಿಸಿಹಾಕಬೇಕೋ ಎಂಬುದಕ್ಕೆ ಸಂಬಂಧಿಸಿದ್ದು. ಕೇರಳದ ಹೈಕೋರ್ಟ್ ಕಳೆದವಾರ ಈ ಕುರಿತಂತೆ ತೀರ್ಪೊಂದನ್ನು ನೀಡಿದೆ. ಯುವತಿಯ ಮನವಿಯನ್ನು ಗೌರವಿಸುವ ಮೂಲಕ ಮಗುವಿಗೆ (ಭ್ರೂಣ) ಜೀವಿಸುವ ಹಕ್ಕನ್ನು ಅದು ನಿರಾಕರಿಸಿದೆ. ಹಾಗಂತ, ಇದು ಮೊಟ್ಟ ಮೊದಲ ಪ್ರಕರಣವೇನೂ ಅಲ್ಲ. ಕಳೆದ ವರ್ಷ ಗುಜರಾತ್‍ನ ಸಬರಕಾಂತ್ ಜಿಲ್ಲೆಯ ಪ್ರೌಢಶಾಲೆಯ ಹುಡುಗಿಯೊಬ್ಬಳು ಇದೇ ಪ್ರಶ್ನೆಯೊಂದಿಗೆ ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದ್ದಳು. ಆಕೆಯ ಮೇಲೆ ವೈದ್ಯನೋರ್ವ ಅತ್ಯಾಚಾರ ಎಸಗಿದ್ದ. ಯಾರಲ್ಲೂ ಬಾಯಿ ಬಿಡಬಾರದೆಂದು ಬೆದರಿಸಿದ್ದ. ಮಲ ಹೊರುವ ಕಾರ್ಮಿಕನ ಮಗಳಾದ ಆ ಹುಡುಗಿ ಅತ್ಯಾಚಾರ ಮತ್ತು ಬೆದರಿಕೆ ಎಂಬ ಎರಡು ಅಲಗಿನ ಕತ್ತಿಯನ್ನು ಎದುರಿಸಲಾಗದೇ ಮೌನವಾಗಿದ್ದಳು. ಆ ಬಸಿರು ಆ ಅಪ್ಪನಿಗೂ ಗೊತ್ತಾಗಲಿಲ್ಲ. ಗೊತ್ತಾಗುವಾಗ ಭ್ರೂಣಕ್ಕೆ 24 ವಾರಗಳೇ ಸಂದಿದ್ದುವು. ಗರ್ಭಕ್ಕೆ ಸಂಬಂಧಿಸಿ 1971ರ ವೈದ್ಯಕೀಯ ಕಾಯ್ದೆಯ ಪ್ರಕಾರ, 20 ವಾರಗಳೊಳಗಿನ ಭ್ರೂಣವನ್ನಷ್ಟೇ ಕಿತ್ತು ಹಾಕಲು (ಅಬಾರ್ಷನ್) ಅನುಮತಿ ಇದೆ. ಈ ಅನುಮತಿಯೂ ಬೇಕಾಬಿಟ್ಟಿಯಲ್ಲ. ಗರ್ಭಿಣಿಯ ಆರೋಗ್ಯಕ್ಕೆ ಅಪಾಯವಿರುವುದಾದರೆ ಅಥವಾ ಭ್ರೂಣದ ಬೆಳವಣಿಗೆಯಲ್ಲಿ ತೊಂದರೆಗಳಿದ್ದರೆ ಮಾತ್ರ ಅಬಾರ್ಷನ್ ಮಾಡಬಹುದು. ಆದರೆ ಆ ಹುಡುಗಿಗೆ ಸಂಬಂಧಿಸಿ ಈ ಯಾವ ತೊಂದರೆಯೂ ಇರಲಿಲ್ಲ. ಹುಡುಗಿಯೂ ಆರೋಗ್ಯದಿಂದಿದ್ದಳು. ಭ್ರೂಣವೂ ಆರೋಗ್ಯದಿಂದಿತ್ತು. ಆದ್ದರಿಂದಲೇ, ಭ್ರೂಣವನ್ನು ಕಿತ್ತು ಹಾಕಲು ಆಕೆ ಮಾಡಿಕೊಂಡ ಮನವಿಯನ್ನು ಮಧ್ಯಪ್ರದೇಶದ ಹೈಕೋರ್ಟ್ ತಳ್ಳಿಹಾಕಿತ್ತು. ಹುಡುಗಿ ಸುಪ್ರೀಮ್ ಕೋರ್ಟ್‍ನ ಮೆಟ್ಟಲೇರಿದಳು. ಆಗ ಸುಪ್ರೀಮ್ ಕೋರ್ಟು ಆ ಹುಡುಗಿಯ ಮನವಿಯನ್ನು ಪುರಸ್ಕರಿಸಿತ್ತು. ಕಳೆದವಾರ ಸುದ್ದಿಗೀಡಾದ ಕಾಸರಗೋಡಿನ ಪ್ರಕರಣವು ಈ ಕುರಿತಂತೆ ಎರಡನೆಯದ್ದು. ಈಕೆಯೂ ಕಾಸರಗೋಡಿನ ಸರಕಾರಿ ಆಸ್ಪತ್ರೆಗೆ ಹೋಗಿದ್ದಳು. ತನ್ನ ಹೊಟ್ಟೆಯೊಳಗಿನ ಭ್ರೂಣವನ್ನು ಕಿತ್ತು ಹಾಕುವಂತೆ ವಿನಂತಿಸಿದ್ದಳು. ಆದರೆ, ಭ್ರೂಣಕ್ಕೆ 20 ವಾರಗಳಿಗಿಂತ ಹೆಚ್ಚು ಪ್ರಾಯವಾಗಿದೆ ಎಂಬ ಕಾರಣವನ್ನು ಮುಂದಿಟ್ಟು ಆಸ್ಪತ್ರೆಯು ಅಬಾರ್ಷನ್‍ಗೆ ನಿರಾಕರಿಸಿತ್ತು. ಆಕೆ ಕೇರಳ ಹೈಕೋರ್ಟಿನ ಬಾಗಿಲು ತಟ್ಟಿದಳು. ಹೈಕೋರ್ಟು ಆಕೆಯ ಮನವಿಯನ್ನು ಪುರಸ್ಕರಿಸಿತು.
       ಇಲ್ಲೊಂದು ಮುಖ್ಯ ಪ್ರಶ್ನೆಯಿದೆ. ಯುವತಿಯ ಹೊಟ್ಟೆಯೊಳಗಿನ ಭ್ರೂಣದ ಹೊಣೆಗಾರಿಕೆಯನ್ನು ಯಾರು ವಹಿಸಿಕೊಳ್ಳಬೇಕು ಎಂಬುದು. ಕಾಸರಗೋಡಿನ ಈ ಯುವತಿಯ ಮೇಲೆ ಅತ್ಯಾಚಾರ ನಡೆಯಿತು. ಅತ್ಯಾಚಾರಿ ಮದುವೆಯಾಗುವುದಾಗಿ ಒಪ್ಪಿಕೊಂಡ. ಬಳಿಕ ಮಾತಿಗೆ ತಪ್ಪಿದ. ಆದರೆ ಭ್ರೂಣ ಬೆಳೆಯುತ್ತಿತ್ತು. ನಿಜವಾಗಿ, ಇಬ್ಬರು ಪ್ರೌಢ ವ್ಯಕ್ತಿಗಳ ನಡುವೆ ನಡೆದ ಪ್ರಕರಣ ಇದು. ಭ್ರೂಣವನ್ನು ಆಕೆ ಇಚ್ಛೆ ಪಟ್ಟು ಪಡೆದಿಲ್ಲದೇ ಇರಬಹುದು. ಅದು ಕ್ರೌರ್ಯವೊಂದು ಬಿಟ್ಟು ಹೋದ ಕುರುಹೇ ಆಗಿರಬಹುದು. ಆದರೆ ಇದರಲ್ಲಿ ಭ್ರೂಣದ ತಪ್ಪೇನಿದೆ? ತನ್ನನ್ನು ಬಸಿರಾಗು ಎಂದು ಆ ಭ್ರೂಣ ಕೇಳಿಕೊಂಡಿಲ್ಲ. ತಾಯಿ ಮುಗ್ಧೆ ಹೌದೋ ಅಲ್ಲವೋ ಭ್ರೂಣವಂತೂ ಮುಗ್ಧ. ಒಂದೊಮ್ಮೆ ಸಂತ್ರಸ್ತೆಯಷ್ಟೇ ಆ ಭ್ರೂಣವೂ ಪವಿತ್ರ. ಬಸಿರಿಗೆ ಕಾರಣ ಏನೇ ಇರಲಿ ಮತ್ತು ಅದರಿಂದಾಗಿ ಸಂತ್ರಸ್ತೆಗಾಗಿರುವ ಆಘಾತದ ಪ್ರಮಾಣವು ಎಷ್ಟೇ ತೀವ್ರವಾಗಿರಲಿ ಅದಕ್ಕೆ ಭ್ರೂಣವನ್ನು ಹೊಣೆಗಾರವನ್ನಾಗಿ ಮಾಡಲು ಸಾಧ್ಯವಿಲ್ಲ. ಒಂದು ಕಡೆ ಭ್ರೂಣ ಬೇಡ ಅನ್ನುವ ಸಂತ್ರಸ್ತೆ ಮತ್ತು ಇನ್ನೊಂದು ಕಡೆ ಸಂತ್ರಸ್ತೆಯ ಜಗತ್ತನ್ನು ನೋಡುವ ಉತ್ಸಾಹದಿಂದ ಕಣ್ಣು ಮಿಟಕಿಸುತ್ತಿರುವ ಭ್ರೂಣ- ಇವುಗಳ ನಡುವಿನ ಈ ಸಂಘರ್ಷದಲ್ಲಿ ಇವತ್ತು ಯುವತಿ ಗೆದ್ದಿರಬಹುದು. ಆದರೆ ಈ ಗೆಲುವು ಒಂದು ಸಾವಿನೊಂದಿಗೆ ಲಭ್ಯವಾಗಿದೆ ಎಂಬಂಶವನ್ನೂ ನಾವು ಅರಿತುಕೊಳ್ಳಬೇಕಿದೆ.
        ನಿಜವಾಗಿ ಅತ್ಯಾಚಾರ, ಗರ್ಭಧಾರಣೆ, ಅಬಾರ್ಷನ್.. ಮುಂತಾದ ಸಹಜ ಪದಗಳಾಚೆಗೆ ನಮ್ಮನ್ನು ಕೊಂಡೊಯ್ಯಬೇಕಾದ ಪ್ರಕರಣ ಇದು. ಓರ್ವ ಹೆಣ್ಣಿನ ಮೇಲೆ ಬಲಾತ್ಕಾರ ಮಾಡುವಲ್ಲಿಗೆ ಗಂಡಿನ ಹೋರಾಟ ಕೊನೆಗೊಳ್ಳುತ್ತದೆ. ಆದರೆ, ಹೆಣ್ಣಿನ ಸಮಸ್ಯೆ ಆರಂಭಗೊಳ್ಳುವುದೇ ಇಲ್ಲಿಂದ. ಅತ್ಯಾಚಾರವು ಗಂಡಿನ ಪಾಲಿಗೆ ಎಷ್ಟು ಇಚ್ಚಿತವೋ ಹೆಣ್ಣಿನ ಪಾಲಿಗೆ ಅಷ್ಟೇ ಅಇಚ್ಚಿತ. ಆಕೆ ಅದನ್ನು ನಿರೀಕ್ಷಿಸಿಲ್ಲವಾದ್ದರಿಂದ ಅದು ಆಘಾತವನ್ನಷ್ಟೇ ಅಲ್ಲ, ದೈಹಿಕ ಮತ್ತು ಮಾನಸಿಕವಾದ ಹಲವಾರು ಏರು-ಪೇರುಗಳಿಗೂ ಕಾರಣವಾಗುತ್ತದೆ. ಮನೆಯಲ್ಲಿ ಹೇಳಬೇಕೋ ಬೇಡವೋ ಅನ್ನುವ ತೊಳಲಾಟ ಒಂದು ಕಡೆಯಾದರೆ, ಹೇಳಿದರೆ ಏನೇನೆಲ್ಲ ಎದುರಿಸಬೇಕಾದೀತು ಎಂಬ ಭಯ ಇನ್ನೊಂದು ಕಡೆ. ಅತ್ಯಾಚಾರಿಯ ಬೆದರಿಕೆ ಮತ್ತೊಂದು ಕಡೆ. ಒಂದು ವೇಳೆ, ಇವೆಲ್ಲವನ್ನೂ ಮೀರಿ ತನ್ನ ಮೇಲಾದ ಕ್ರೌರ್ಯವನ್ನು ದಿಟ್ಟತನದಿಂದ ಬಹಿರಂಗಪಡಿಸಿದರೂ ಸಮಸ್ಯೆ ಅಲ್ಲಿಗೇ ಮುಗಿಯುವುದಿಲ್ಲ. `ಅತ್ಯಾಚಾರಕ್ಕೊಳಗಾದವಳು' ಎಂಬ ಪಟ್ಟಿಯೊಂದು ಆಕೆಯ ಹಣೆಯ ಮೇಲೆ ಸದಾ ತೂಗುತ್ತಿರುತ್ತದೆ. ಮದುವೆಯ ಸಂದರ್ಭದಲ್ಲಿ ಆ ಪಟ್ಟಿ ಸದ್ದು ಮಾಡಬಹುದು. ನೆರೆಕರೆಯಲ್ಲಿ, ಸಮಾಜದಲ್ಲಿ ಆ ಪಟ್ಟಿಗೆ ಇನ್ನಿಲ್ಲದ ಮಹತ್ವ ಸಿಗಬಹುದು. ಅದರ ಜೊತೆಗೇ ಗರ್ಭಧರಿಸುವ ಸಾಧ್ಯತೆಯೂ ಇರುತ್ತದೆ. ಸಂತ್ರಸ್ತತೆಯು ಅತ್ಯಾಚಾರಿಗೋ, ಮನೆಯವರಿಗೋ ಅಥವಾ ಸಮಾಜಕ್ಕೋ ಹೆದರಿ ಎಲ್ಲವನ್ನೂ ಮುಚ್ಚಿಟ್ಟು ಕೂತರೆ ಅಥವಾ ಅತ್ಯಾಚಾರದ ಪರಿಣಾಮದ ಬಗ್ಗೆ ಅರಿವು ಇಲ್ಲದವಳಾಗಿದ್ದರೆ, ಭ್ರೂಣದ ರೂಪದಲ್ಲಿ ಅತ್ಯಾಚಾರ ಮತ್ತೆ ಕಾಡುತ್ತದೆ. ಕೊನೆಗೊಂದು ದಿನ ಅದು ಸಂತ್ರಸ್ತೆಗೆ ಸವಾಲೆಸೆಯುವ ಹಂತಕ್ಕೂ ತಲುಪುತ್ತದೆ. ಒಂದು ರೀತಿಯಲ್ಲಿ, ‘ಅತ್ಯಾಚಾರದ ಸಂತ್ರಸ್ತೆ’ ಎದುರಿಸುವ ಸವಾಲುಗಳ ಹಲವು ಮಜಲುಗಳಿವು. ಆಕೆ ಮೌನವಾದರೂ ಸಮಸ್ಯೆಯೇ, ಮಾತಾಡಿದರೂ ಸಮಸ್ಯೆಯೇ. ವಿಷಾದ ಏನೆಂದರೆ, ಇವತ್ತು ಅತ್ಯಾಚಾರ ಪ್ರಕರಣಗಳು ಸಹಜ `ಪ್ರಕರಣ'ಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವಷ್ಟು ಜುಜುಬಿ ಅನ್ನಿಸಿಕೊಳ್ಳುತ್ತಿರುವುದು. ಸಂತ್ರಸ್ತೆಯ ಭಾವನಾತ್ಮಕ ಜಗತ್ತನ್ನು ಸ್ಪರ್ಶಿಸುವುದಕ್ಕೆ ನಮ್ಮ ಲೇಖನಿ, ಮೈಕುಗಳು ಆಸಕ್ತಿ ತೋರದೇ ಇರುವುದು.
      ಅಂದಹಾಗೆ, ಅತ್ಯಾಚಾರವೆಂಬುದು ಕ್ರೌರ್ಯವಷ್ಟೇ ಅಲ್ಲ, ಅದು ಒಂದು ನಿಷ್ಪಾಪಿ ಭ್ರೂಣದ ಹುಟ್ಟು ಮತ್ತು ಅದರ ಸಾವನ್ನು ಅನಿವಾರ್ಯಗೊಳಿಸುವ ಪಾತಕ ಕೂಡ. ಒಂದು ವೇಳೆ ಅತ್ಯಾಚಾರಿಯು ಸಂತ್ರಸ್ತೆಯನ್ನು ಕೊಲೆ ಮಾಡದೆ ಬಿಟ್ಟು ಬಿಡಲೂಬಹುದು. ಆದರೆ, ಅತ್ಯಾಚಾರದಿಂದಾಗಿ ಜೀವ ತಳೆಯಬಹುದಾದ ಭ್ರೂಣ(ಮಗು)ವನ್ನು ಸಂತ್ರಸ್ತೆ ಕೊಲ್ಲಲೇಬೇಕಾಗುತ್ತದೆ. ಅದಕ್ಕೆ ಆಕೆ ಹೊಣೆಗಾರಳಲ್ಲ. ಆದ್ದರಿಂದ, ಆ ಹತ್ಯೆಯ ಸಂಪೂರ್ಣ ಹೊಣೆಯನ್ನು ಅತ್ಯಾಚಾರಿಯೇ ಹೊರಬೇಕು. ಮಾತ್ರವಲ್ಲ, ಕೋರ್ಟಿನ ತೀರ್ಪುಗಳು ಈ ಕುರಿತಂತೆ ಇನ್ನಷ್ಟು ವಿಸ್ತಾರ ಚರ್ಚೆಗೆ ವೇದಿಕೆ ಒದಗಿಸಬೇಕು. ಅತ್ಯಾಚಾರಿಗೆ ಮರಣದಂಡನೆಯೇ ಯಾಕೆ ಸೂಕ್ತ ಎಂಬುದಕ್ಕೆ ಬಲವಾದ ಉತ್ತರವನ್ನು ಪಡೆಯುವುದಕ್ಕಾದರೂ ಇಂಥದ್ದೊಂದು ಮರು ಅವಲೋಕನ ಅನಿವಾರ್ಯ.