Monday 25 December 2023

ಹೆಣ್ಣು ಭ್ರೂಣ ಹತ್ಯೆ: ಈ ಮನಸ್ಥಿತಿಯನ್ನು ಬರೇ ಕಾನೂನಿನಿಂದ ಬದಲಿಸಬಹುದೇ?



ಇತ್ತೀಚೆಗೆ ರಾಜ್ಯದ ಮಂಡ್ಯದಲ್ಲಿ ಭಿನ್ನ ಪಾದಯಾತ್ರೆ ನಡೆಯಿತು. ಮದುವೆಗೆ ಹೆಣ್ಣು ಕರುಣಿಸು ಎಂದು ಕೋರಿ ಮಾಯಕಾರ ಮಾದೇವನಿಗೆ ಹರಕೆ ಒಪ್ಪಿಸಲು ನಡೆಸಿದ ಪಾದಯಾತ್ರೆ ಇದು. ಇವರು ಹೀಗೆ ಪಾದಯಾತ್ರೆ ನಡೆಸುತ್ತಿರುವಾಗ ಇದೇ ಮಂಡ್ಯದ ಲ್ಯಾಬ್‌ಗಳ ಮೇಲೆ  ಪೊಲೀಸರು ಕಣ್ಣಿಟ್ಟಿದ್ದರು. ಭಾರೀ ಸಂಖ್ಯೆಯಲ್ಲಿ ಇಲ್ಲಿ ಹೆಣ್ಣುಭ್ರೂಣ ಹತ್ಯೆಯಾಗುತ್ತಿದೆ ಎಂಬ ಸುಳಿವು ಅವರಿಗೆ ಲಭಿಸಿತ್ತು. ಆ ಬಳಿಕ  ಹಲವರನ್ನು ಬಂಧಿಸಿದರು. ಕೇವಲ ಮೂರೇ ಮೂರು ವರ್ಷಗಳಲ್ಲಿ ಈ ಮಂಡ್ಯ-ಮೈಸೂರು ಭಾಗದಲ್ಲಿ 900ರಷ್ಟು ಹೆಣ್ಣು ಭ್ರೂಣ  ಹತ್ಯೆಯಲ್ಲಿ ಈ ಬಂಧಿತರು ಭಾಗಿಯಾಗಿದ್ದಾರೆ ಅನ್ನುವುದು ಬೆಳಕಿಗೆ ಬಂತು. ಒಂದುಕಡೆ,

ಮದುವೆಗೆ ಹೆಣ್ಣಿಲ್ಲ ಎಂಬ ಸ್ಥಿತಿಯಾದರೆ ಇನ್ನೊಂದು ಕಡೆ ಇರುವ ಹೆಣ್ಣನ್ನೇ ಸಾಯಿಸುವ ಸ್ಥಿತಿ- ಇವೆರಡೂ ಒಂದೇ ಕಡೆ ನಡೆ ದಿರುವುದು ನಿಜಕ್ಕೂ ಅಚ್ಚರಿ. ಉತ್ತರ ಕನ್ನಡ, ಮಂಡ್ಯ-ಮೈಸೂರು, ಬೆಳಗಾವಿ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ಹರೆಯದ ಹೆಣ್ಣು  ಮಕ್ಕಳ ಸಂಖ್ಯೆ ತೀವ್ರವಾಗಿ ಕಡಿಮೆಯಾಗುತ್ತಿದೆ ಎಂಬ ವರದಿ ಇದೆ. ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿ ಬೆಳಗಾವಿ ಮೊದಲ ಸ್ಥಾನದಲ್ಲಿದ್ದರೆ, ಮಂಡ್ಯ ಎರಡು ಮತ್ತು ಬಾಗಲಕೋಟೆ ಮೂರನೇ ಸ್ಥಾನದಲ್ಲಿದೆ. ಅದರಲ್ಲೂ ಮಂಡ್ಯ, ಚಿಕ್ಕಬಳ್ಳಾಪುರ, ಬಾಗಲಕೋಟೆ,  ಕಲಬುರಗಿ, ಬೀದರ್ ಮುಂತಾದ ಜಿಲ್ಲೆಗಳಲ್ಲಿ ಸಾವಿರ ಗಂಡು ಮಕ್ಕಳಿಗೆ 900ಕ್ಕಿಂತಲೂ ಕಡಿಮೆ ಹೆಣ್ಣು ಮಕ್ಕಳಿದ್ದು, ಸರ್ಕಾರದ ಕೆಂಪು  ಪಟ್ಟಿಯಲ್ಲಿದೆ. ಇದು ಸರಕಾರದ ನಾಗರಿಕ ನೋಂದಣಿ ವ್ಯವಸ್ಥೆಯನ್ನು ಆಧರಿಸಿದ ದತ್ತಾಂಶಗಳಂತೆ  ತಯಾರಿಸಲಾದ ಮಾಹಿತಿ.  ತಿಂಗಳುಗಳ ಹಿಂದೆ ಆದಿಚುಂಚನಗಿರಿ ಮಠದಲ್ಲಿ ವಧು-ವರ ಸಂಬಂಧ ಏರ್ಪಡಿಸುವುದಕ್ಕಾಗಿ ಸಮ್ಮೇಳನ ಏರ್ಪಡಿಸಲಾಗಿತ್ತು. ಇದರಲ್ಲಿ  10 ಸಾವಿರದಷ್ಟು ಯುವಕರಿಗೆ ಪ್ರತಿಯಾಗಿ ಕೇವಲ 300ರಷ್ಟು ಯುವತಿಯರು ಮಾತ್ರ ಪಾಲ್ಗೊಂಡಿದ್ದರು.

ಯಾಕೆ ಹೀಗಾಗುತ್ತಿದೆ ಅನ್ನುವುದು ಎಲ್ಲರಿಗೂ ಗೊತ್ತು. ಕೊಟ್ಟ ಹೆಣ್ಣು ಕುಲದಿಂದ ಹೊರಗೆ ಅನ್ನುವ ಮಾತು ಈ ದೇಶದಲ್ಲಿ ಚಾಲ್ತಿಯಲ್ಲಿದೆ. ಹೆಣ್ಣಿನ ಪಾಲಿಗೆ ನಮ್ಮೆಲ್ಲ ಸಾಂಪ್ರದಾಯಿಕ ಆಚರಣೆಗಳು ಮತ್ತು ದೃಷ್ಟಿಕೋನಗಳು ಅಭದ್ರತೆಯನ್ನು ಸೂಚಿಸುತ್ತವೆಯೇ ಹೊರತು  ಆಕೆಯ ಬಗ್ಗೆ ಹೆಮ್ಮೆ, ಅಭಿಮಾನ ಮತ್ತು ಸಂತಸ ಪಡುವ ರೀತಿಯಲ್ಲಿ ಇಲ್ಲವೇ ಇಲ್ಲ. ವಂಶವನ್ನು ಮುಂದುವರಿಸಲು ಗಂಡು ಬೇಕು  ಎಂಬಲ್ಲಿಂದ ಹಿಡಿದು ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ ಕೊಡಬೇಕಾಗುತ್ತದೆ ಎಂಬಲ್ಲಿವರೆಗೆ ಹೆಣ್ಣು ವಂಶಕ್ಕೆ ಅನನುಕೂಲಕರವಾದ  ಪಟ್ಟಿಯನ್ನೇ ಸಮಾಜ ತಯಾರಿಸಿಟ್ಟುಕೊಂಡಿದೆ. ಹೆಣ್ಣನ್ನು ಎಷ್ಟೇ ಓದಿಸಿದರೂ ಅಂತಿಮವಾಗಿ ಆಕೆ ಪರರ ಪಾಲಾಗುತ್ತಾಳೆ ಎಂಬ ನಂಬಿಕೆ,  ಕೃಷಿ ಚಟುವಟಿಕೆಯಲ್ಲಿ ಹೆಣ್ಣಿಗಿಲ್ಲದ ಪ್ರಾಧಾನ್ಯತೆ, ಹೆಣ್ಣನ್ನು ಸದಾ ಕಾಡುವ ಸುರಕ್ಷಿತತೆಯ ಭೀತಿ ಮತ್ತು ಕೆಲವೊಮ್ಮೆ ಆಸ್ತಿಯಲ್ಲಿ ಹೆಣ್ಣು  ಮಕ್ಕಳಿಗೆ ಪಾಲು ಕೊಡಬೇಕಾಗುತ್ತದೆಂಬ ಭಯ.. ಇತ್ಯಾದಿಗಳೂ ಪಾಲಕರ ಹೆಣ್ಣು ದ್ವೇಷಕ್ಕೆ ಕಾರಣವಾಗುತ್ತದೆ. ಅಂದಹಾಗೆ,

ಕಾನೂನಿನ ಮೂಲಕ ಈ ಮಾನಸಿಕತೆಯನ್ನು ಪೂರ್ಣ ಮಟ್ಟದಲ್ಲಿ ಬದಲಿಸಬಹುದು ಎಂದು ಹೇಳುವ ಹಾಗಿಲ್ಲ. ಯಾಕೆಂದರೆ, ಹೆಣ್ಣು  ಭ್ರೂಣ ಪತ್ತೆ ಮತ್ತು ಹತ್ಯೆಯನ್ನು ಸುಸಜ್ಜಿತ ಆಸ್ಪತ್ರೆಗಳಲ್ಲೇ  ನಡೆಸಬೇಕೆಂದಿಲ್ಲ. ಇದನ್ನು ತೀರಾ ಅಸುರಕ್ಷಿತವಾಗಿ ಮತ್ತು ನಗರದಿಂದ  ದೂರದ ಪ್ರದೇಶಗಳಲ್ಲೂ ಮಾಡಲಾಗುತ್ತದೆ. ಸ್ಥಾಪಿತ ಸ್ಕ್ಯಾನಿಂಗ್ ಕೇಂದ್ರಗಳ ಬದಲು ಮೊಬೈಲ್ ಪ್ರಯೋಗಾಲಯದಲ್ಲೂ ಇಂಥ ಪತ್ತೆ  ಮತ್ತು ಹತ್ಯೆ ನಡೆಯುತ್ತಿರುವುದರಿಂದ ಅಧಿಕಾರಿಗಳಿಗೆ ಇದರ ಸುಳಿವು ಸಿಗುವುದು ಸುಲಭವಲ್ಲ. ಇತ್ತೀಚೆಗೆ ಮಂಡ್ಯದಲ್ಲಿ ಪತ್ತೆ ಹಚ್ಚಲಾದ  ‘ಭ್ರೂಣಹತ್ಯೆ’ ಜಾಲವು ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿತ್ತು. ಮಂಡ್ಯದ ಅಲೆಮನೆ ಸಮೀಪದ ಕೊಠಡಿಯಲ್ಲಿ ಯಾರಿಗೂ ಅನುಮಾನ ಬಾರದಂತೆಯೇ ಈ ಕೃತ್ಯ ನಡೆಯುತ್ತಿತ್ತು. ಸ್ಥಳೀಯರಿಗೆ ಈ ಬಗ್ಗೆ ಗೊತ್ತಾಗುವುದು ಸುಲಭವೂ ಅಲ್ಲ. ಇಲ್ಲಿ ಇನ್ನೊಂದು  ಸಂಗತಿಯೂ ಇದೆ, ಈ ಭ್ರೂಣ ಹತ್ಯೆಯ ವೈದ್ಯರ ಒತ್ತಾಸೆಯಿಂದ ನಡೆಯುತ್ತಿದೆ ಎನ್ನುವಂತೆಯೂ ಇಲ್ಲ. ದಂಪತಿಗಳ ಸಮ್ಮತಿಯಿಂದ  ಮತ್ತು ಒತ್ತಾಯದಿಂದಲೇ ಇಂಥವು ನಡೆಯುತ್ತಿರುವುದರಿಂದ ಇವು ಬಹಿರಂಗಕ್ಕೆ ಬರುವುದಕ್ಕೂ ಕಷ್ಟವಿದೆ. ಭ್ರೂಣಹತ್ಯೆಗಾಗಿ ನಿಗದಿ ಪಡಿಸಲಾದ ಶುಲ್ಕದಲ್ಲಿ ಏನಾದರೂ ಏರುಪೇರಾಗಿ ಜಗಳವಾದರೆ ಮಾತ್ರ ಇಂಥವು ಸಾರ್ವಜನಿಕ ಗಮನಕ್ಕೆ ಬರುತ್ತದೆ. ಆದ್ದರಿಂದಲೇ, ಈ  ಹೆಣ್ಣು ಭ್ರೂಣಹತ್ಯೆಯನ್ನು ಕಾನೂನು ತಕ್ಕಡಿಯಲ್ಲಷ್ಟೇ ಇಟ್ಟು ನೋಡದೇ ಸಾಮಾಜಿಕ ಮತ್ತು ಧಾರ್ಮಿಕ ದೃಷ್ಟಿಯಿಂದಲೂ ಪರಿಶೀ ಲಿಸಬೇಕಾಗಿದೆ.

ಈ ಇಡೀ ಪ್ರಕ್ರಿಯೆಯಲ್ಲಿ ದಂಪತಿಗಳ ಪಾತ್ರ ಬಹು ಅಮೂಲ್ಯವಾದುದು. ಅವರ ಒಪ್ಪಿಗೆಯಿಲ್ಲದೇ ಭ್ರೂಣಹತ್ಯೆ ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಬಡ ಮತ್ತು ಅರೆ ಮಧ್ಯಮ ಕುಟುಂಬಗಳಲ್ಲಿ ಇಂಥ ಭ್ರೂಣಹತ್ಯೆ ಹೆಚ್ಚು. ಮೊದಲ ಮಗು ಹೆಣ್ಣಾದರೆ, ಎರಡನೇ ಮಗು  ಗಂಡಾಗಬೇಕೆಂದು  ಬಯಸುವುದು ಮತ್ತು ಅದು ಕೈಗೂಡುವುದಿಲ್ಲ ಎಂದು ಭ್ರೂಣ ಪತ್ತೆಯಲ್ಲಿ ಸ್ಪಷ್ಟವಾದರೆ ಹತ್ಯೆಗೆ ಮುಂದಾಗುವುದು  ನಡೆಯುತ್ತಿದೆ. ಇದು ಮನಸ್ಥಿತಿಯೊಂದರ ಫಲಿತಾಂಶ. ಹೆಣ್ಣು ಅಶಕ್ತೆ ಮತ್ತು ಕುಟುಂಬಕ್ಕೆ ಭಾರ ಅನ್ನುವ ಭಾವನೆಯೇ ಈ ಹತ್ಯೆಗೆ  ಕಾರಣ. ಬರೇ ಕಾನೂನು ಈ ಮನಸ್ಥಿತಿಯನ್ನು ಬದಲಿಸದು. ಪರಂಪರಾಗತವಾಗಿ ಮನಸ್ಸಲ್ಲಿ ಉಳಿದು ಬಿಟ್ಟಿರುವ ಈ ಮನಸ್ಥಿತಿಯನ್ನು ಬದಲಿಸುವುದಕ್ಕೂ ಸರಕಾರ ಅಭಿಯಾನ ರೂಪದ ಗಂಭೀರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಮನೆ ಮನೆ ಭೇಟಿಯಷ್ಟೇ  ಅಲ್ಲ, ಕೂಲಿಕಾರರಾಗಿ ಒಂದೂರಿನಿಂದ  ಮತ್ತೊಂದೂರಿಗೆ ವಲಸೆ ಹೋಗಿರುವ ದಂಪತಿಗಳನ್ನು ಭೇಟಿ ಮಾಡಿ ಅವರಲ್ಲಿ ಅರಿವು  ಮೂಡಿಸುವ ಪ್ರಯತ್ನಗಳಾಗಬೇಕು. ಉಚಿತ ಶಿಕ್ಷಣವೂ ಸೇರಿದಂತೆ ಹೆಣ್ಣು ಮಕ್ಕಳಿಗಾಗಿ ಸರಕಾರ ಜಾರಿ ಮಾಡಿರುವ ವಿವಿಧ ಯೋಜನೆಗಳ ಕುರಿತಂತೆ ಮಾಹಿತಿ ನೀಡಬೇಕು. ಇದರ ಜೊತೆಗೇ ಮಾನವ ಜೀವ ಎಷ್ಟು ಅಮೂಲ್ಯ ಎಂಬುದನ್ನು ಅವರು ಗಂಭೀರವಾಗಿ  ಅವಲೋಕಿಸುವಂತೆ ಮಾಡಬೇಕು. ಇದಕ್ಕಾಗಿ ವಿವಿಧ ಸರಕಾರೇತರ ಸಂಸ್ಥೆಗಳ ನೆರವನ್ನು ಪಡೆದುಕೊಳ್ಳಬೇಕು. ಒಂದುರೀತಿಯಲ್ಲಿ
,
ಭ್ರೂಣಹತ್ಯೆ ಎಂಬುದು 21ನೇ ಶತಮಾನದ ಪಿಡುಗಲ್ಲ. ಇದಕ್ಕೆ ಪುರಾತನ ಇತಿಹಾಸವಿದೆ. ಪ್ರವಾದಿ ಮುಹಮ್ಮದ್(ಸ)ರ ಕಾಲದಲ್ಲೂ ಈ  ಪಿಡುಗು ವ್ಯಾಪಕವಾಗಿತ್ತು. ಕೆಲವೊಂದು ಬುಡಕಟ್ಟುಗಳು ಹೆಣ್ಣು ಮಗುವನ್ನು ಅಪಾರವಾಗಿ ದ್ವೇಷಿಸುತ್ತಿದ್ದುವು. ಇವತ್ತಿನಂತೆ ಭ್ರೂಣಪತ್ತೆ  ಪರೀಕ್ಷೆ ಇಲ್ಲದ ಆ ಕಾಲದಲ್ಲಿ ಹುಟ್ಟಿದ ಕೂಡಲೇ ಹೆಣ್ಣು ಮಗುವನ್ನು ಹೂಳುವ ಪದ್ಧತಿ ಇತ್ತು. ಪ್ರವಾದಿ ಮುಹಮ್ಮದ್(ಸ)ರು ಈ  ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ಜನರ ಮನಸ್ಸಲ್ಲಿ ಅಪರಾಧಿ ಭಾವವನ್ನು ಹುಟ್ಟು ಹಾಕಿದರು. ಪ್ರತಿಯೊಬ್ಬರನ್ನೂ ಮರಣಾನಂತರ ದೇವನು ಎಬ್ಬಿಸುತ್ತಾನೆ ಮತ್ತು ಹತ್ಯೆಗೀಡಾದ ಹೆಣ್ಣು ಮಗುವಿನ ಮುಂದೆ ಆಕೆಯ ಹೆತ್ತವರನ್ನು ನಿಲ್ಲಿಸಿ ವಿಚಾರಣೆಗೊಳಪಡಿಸಿ  ಶಿಕ್ಷೆಯನ್ನು ನೀಡಲಾಗುತ್ತದೆ ಎಂದು ಎಚ್ಚರಿಸಿದರು. ಯಾವ ಹೆತ್ತವರು ಹೆಣ್ಣು ಮಗುವನ್ನು ಚೆನ್ನಾಗಿ ಲಾಲಿಸಿ ಪಾಲಿಸಿ ಬೆಳೆಸುತ್ತಾರೋ  ಅವರಿಗೆ ಸ್ವರ್ಗವಿದೆ ಎಂದು ಘೋಷಿಸಿದರು. ಮದುವೆಯ ವೇಳೆ ಹೆಣ್ಣಿಗೆ ವಧು ಧನ ಪಾವತಿಸಿ ಮದುವೆಯಾಗಬೇಕೆಂದು ಯುವಕರಿಗೆ  ಆದೇಶಿಸಿದರು. ಆ ಮೂಲಕ ವರದಕ್ಷಿಣೆ ಎಂಬ ಪರಿಕಲ್ಪನೆಗೇ ಕೊಡಲಿಯೇಟು ನೀಡಿದರು. ಶಿಕ್ಷಣ ಪ್ರತಿ ಹೆಣ್ಣು-ಗಂಡಿನ ಮೇಲೂ  ಕಡ್ಡಾಯ ಎಂದು ಸಾರಿದರು. ಗಂಡಿನಂತೆಯೇ ಹೆಣ್ಣಿಗೂ ಹೆತ್ತವರ ಆಸ್ತಿಯಲ್ಲಿ ಪಾಲಿದೆ ಎಂದರು. ಯುದ್ಧದಲ್ಲಿ ಮಹಿಳೆಯನ್ನು  ಪಾಲುಗೊಳಿಸಿದರು. ಮದೀನಾದ ಸಂತೆಯಲ್ಲಿ ಮಹಿಳೆಯರೂ ವ್ಯಾಪಾರಿಯಾದರು. ಮಹಿಳೆ ಮಸೀದಿಗೂ ಹೋಗಬಹುದು,  ಸಂತೆಯಲ್ಲಿ ವ್ಯಾಪಾರವನ್ನೂ ಮಾಡಬಹುದು, ಯುದ್ಧದಲ್ಲೂ ಭಾಗವಹಿಸಬಹುದು, ಮದುವೆಯ ವೇಳೆ ವರನೇ ಆಕೆಗೆ ವಧು ಧನ  ಪಾವತಿಸಿ ವಿವಾಹವಾಗಬೇಕು, ಬೇಡದ ವಿವಾಹದಿಂದ ಆಕೆ ವಿಚ್ಛೇದನ ಪಡಕೊಳ್ಳಬಹುದು, ಆಸ್ತಿಯಲ್ಲಿ ಆಕೆಗೂ ಪಾಲು ಇದೆ, ಯಾವ  ಮಕ್ಕಳು ತಾಯಿಯ ಕೋಪಕ್ಕೆ ಪಾತ್ರರಾಗುತ್ತಾರೋ ಅವರು ನರಕಕ್ಕೆ.. ಇತ್ಯಾದಿ ಇತ್ಯಾದಿ ಅಮೂಲ್ಯ ಮತ್ತು ಚೇತೋಹಾರಿ ನೀತಿಗಳನ್ನು  ಧರ್ಮದ ಭಾಗವಾಗಿ ಪ್ರಸ್ತುತಪಡಿಸಿದರು. ಅಲ್ಲದೇ, ಪವಿತ್ರ ಕುರ್‌ಆನಿನ 114 ಅಧ್ಯಾಯಗಳ ಪೈಕಿ 4ನೇ ಅಧ್ಯಾಯದ ಹೆಸರನ್ನೇ ‘ಮಹಿಳೆ’  ಎಂದಿಟ್ಟರು. ಮಹಿಳಾ ಪರ ಅವರ ಈ ಸರಣಿ ಕ್ರಮಗಳು ನಿಧಾನಕ್ಕೆ ಅಂದಿನ ಜನರ ಮೇಲೆ ಗಾಢ ಪರಿಣಾಮ ಬೀರತೊಡಗಿದವು.  ಅಂತಿಮವಾಗಿ, ಹೆಣ್ಣು ಮಗುವಿಗಾಗಿ ಆಸೆಪಡುವ ಮತ್ತು ಹೆಮ್ಮೆಪಡುವ ಸಮಾಜವೊಂದನ್ನು ಅವರು ಕಟ್ಟಿ ಬೆಳೆಸಿದರು.

ಸದ್ಯ ಕಾನೂನಾತ್ಮಕವಾಗಿ ಮತ್ತು ಭಾವನಾತ್ಮಕವಾಗಿ ಜನರನ್ನು ಸಂಸ್ಕರಿಸುವ ಪ್ರಯತ್ನ ನಡೆಯಬೇಕಾಗಿದೆ.

Friday 22 December 2023

ಮುಸ್ಲಿಮ್ ಸಮುದಾಯದ ಚರ್ಚೆಗೆ ಹೊಸ ಸಾಧ್ಯತೆ ತೆರೆದುಕೊಟ್ಟ ಆಶಿಕ್




ದ.ಕ. ಜಿಲ್ಲೆಯ 24ರ ಯುವಕ ರಾಷ್ಟ್ರ ಮಟ್ಟದಲ್ಲಿ ಸುದ್ದಿಗೀಡಾಗಿದ್ದಾರೆ. ಸೋನಿ ಟಿ.ವಿ. ನಡೆಸಿಕೊಡುವ ಮಾಸ್ಟರ್ ಶೆಫ್ ಇಂಡಿಯಾ ಎಂಬ  ಬಹುಪ್ರಸಿದ್ಧ ಅಡುಗೆ ಸ್ಪರ್ಧೆಯಲ್ಲಿ ಮಂಗಳೂರಿನ ಈ ಮುಹಮ್ಮದ್ ಆಶಿಕ್ ದೇಶದಾದ್ಯಂತದ 30 ಸಾವಿರ ಸ್ಪರ್ಧಾಳುಗಳನ್ನು ಹಿಂದಿಕ್ಕಿ  ಪ್ರಥಮ ಸ್ಥಾನ ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ. ಕಳೆದ ವರ್ಷವೂ ಸೋನಿ ಟಿ.ವಿ.ಯ ಸ್ಪರ್ಧೆಯಲ್ಲಿ ಈ ಆಶಿಕ್ ಸ್ಪರ್ಧಿಸಿದ್ದರು.  ಆದರೆ ವಿಫಲರಾಗಿದ್ದರು. ಈ ಬಾರಿ ಮತ್ತೆ ಸ್ಪರ್ಧಿಸಿದರು. ಹೊಟೇಲ್ ಮ್ಯಾನೇಜ್‌ಮೆಂಟ್ ಕಲಿಯಬೇಕೆಂಬ ಬಯಕೆ ಇಟ್ಟುಕೊಂಡರೂ  ಆರ್ಥಿಕ ಪರಿಸ್ಥಿತಿಯಿಂದಾಗಿ ಅದನ್ನು ಕೈಬಿಟ್ಟ ಯುವಕನೋರ್ವ ಸ್ವಪ್ರಯತ್ನದಿಂದ ಅದ್ಭುತ ಸಾಧಕನಾಗಿ ಮೂಡಿ ಬಂದಿರುವುದನ್ನು ಒಟ್ಟು  ಸಮಾಜ ಅದರಲ್ಲೂ ಮುಸ್ಲಿಮ್ ಸಮುದಾಯ ಅವಲೋಕನಕ್ಕೆ ಒಳಪಡಿಸುವುದು ಸಕಾಲಿಕವಾದುದು.

ದಕ್ಷಿಣ  ಕನ್ನಡವನ್ನು ಕೋಮುಸೂಕ್ಷ್ಮ  ಜಿಲ್ಲೆ ಎಂದು ಕರೆಯುವುದಿದೆ. ಈ ಹೆಸರು ವಿನಾಕಾರಣ ಬಂದಿಲ್ಲ. ಅನೈತಿಕ ಪೊಲೀಸ್‌ಗಿರಿ, ಗುಂಪು  ಥಳಿತ, ದ್ವೇಷಭಾಷಣ, ಕೋಮುಗಲಭೆಗಳನ್ನು ಒಡಲಲ್ಲಿ ಇಟ್ಟುಕೊಂಡು ಆಗಾಗ ಅಷ್ಟಿಷ್ಟು ಹೊರಚೆಲ್ಲಿ ದಾವಾಗ್ನಿ ಸೃಷ್ಟಿಸುವ ಜಿಲ್ಲೆ ಇದು.  ಇದರ ಪರಿಣಾಮ ಇಲ್ಲಿನ ಜನಜೀವನದ ಮೇಲೂ ಆಗಿದೆ. ಮುಖ್ಯವಾಗಿ, ಮುಸ್ಲಿಮ್ ಸಮುದಾಯದ ಮೇಲೆ ಈ ವಾತಾವರಣ ಸಾಕಷ್ಟು  ಅಡ್ಡ ಪರಿಣಾಮವನ್ನೂ ಬೀರಿದೆ. ಸಮುದಾಯದ ಮಂದಿ ಒಂದುಕಡೆ ಒಟ್ಟು ಸೇರಿದರೆ ರಾಜಕೀಯ ಮಾತನಾಡದೇ ಮತ್ತು  ರಾಜಕಾರಣಿಗಳ ಕೋಮುದ್ವೇಷದ ಮಾತುಗಳನ್ನು ಉಲ್ಲೇಖಿಸಿ ಚರ್ಚಿಸದೇ ವಿರಮಿಸುವುದು ಕಡಿಮೆ. ವಾಟ್ಸಪ್ ಗ್ರೂಪ್‌ಗಳಲ್ಲೂ  ಇಂಥವುಗಳದ್ದೇ  ಕಾರುಬಾರು. ದ್ವೇಷಭಾಷಣಗಳನ್ನು ಖಂಡಿಸುವುದು, ರಾಜಕಾರಣಿಯ ಮುಸ್ಲಿಮ್ ದ್ವೇಷಿ ಹೇಳಿಕೆಯನ್ನು ಪ್ರಶ್ನಿಸುವುದು,  ಮುಸ್ಲಿಮ್ ಸಮುದಾಯ ರಾಜಕೀಯವಾಗಿ ಏನು ಮಾಡಬೇಕೆಂದು ಚರ್ಚಿಸುವುದು, ಯಾವ ರಾಜಕಾರಣಿ ಮತ್ತು ರಾಜಕೀಯ ಪಕ್ಷ  ಮುಸ್ಲಿಮರಿಗೆ ಅನಾನುಕೂಲ ಎಂದೆಲ್ಲಾ ವಿಶ್ಲೇಷಿಸುವುದನ್ನೇ ಮುಸ್ಲಿಮ್ ಸಮುದಾಯದ ಹೆಚ್ಚಿನ ವಾಟ್ಸಪ್ ಗ್ರೂಪ್‌ಗಳಲ್ಲಿ  ಮಾಡಲಾಗುತ್ತಿದೆ. ಇವುಗಳು ತಪ್ಪು ಎಂದಲ್ಲ. ಆದರೆ ಮುಸ್ಲಿಮ್ ಸಮುದಾಯದ ಆದ್ಯತೆಯೇ ಇದಾಗಿಬಿಟ್ಟರೆ, ಅದರ ನಕಾರಾತ್ಮಕ  ಪರಿಣಾಮವನ್ನು ಹೊಸ ತಲೆಮಾರು ಅನುಭವಿಸಬೇಕಾಗುತ್ತದೆ. ಇಂಥ ವಾಟ್ಸಾಪ್ ಚರ್ಚೆಗಳು ಅಲ್ಲೇ  ಉಳಿಯದೇ ಆ ಬಳಿಕ ಮನೆಯಲ್ಲೂ ಪ್ರಸ್ತಾಪವಾಗುತ್ತದೆ. ಪದೇಪದೇ ಇಂಥದ್ದೇ  ಚರ್ಚೆ-ವಿಶ್ಲೇಷಣೆಯನ್ನು ಓದುತ್ತಾ ಓದುತ್ತಾ ವ್ಯಕ್ತಿ ಅನಗತ್ಯ ಆತಂಕ ಮತ್ತು  ಗುಂಗಿಗೆ ಬೀಳಬಹುದು. ನಿಜವಾಗಿ,

ಅಭದ್ರತೆಯೇ ಬದುಕಾಗುವುದು ಅಪಾಯಕಾರಿ. ಎಲ್ಲೋ  ನಡೆಯುವ ದ್ವೇಷ ಭಾಷಣ, ಅಮಾನವೀಯ ಕೃತ್ಯಗಳನ್ನು ಇನ್ನೆಲ್ಲೋ  ಕುಳಿತು  ದಿನಾ ಚರ್ಚಿಸುವುದರಿಂದ ನಿರ್ಮಾಣಾತ್ಮಕ ಆಲೋಚನೆಗೆ ತಡೆ ಬೀಳಬಹುದು. ಅದು ಮನೆಯ ಮಕ್ಕಳ ಮೇಲೂ ಪರಿಣಾಮ  ಬೀರಬಹುದು. ಸ್ವತಂತ್ರ ಆಲೋಚನೆಗಳೊಂದಿಗೆ, ಸಮೃದ್ಧವಾಗಿ ಬೆಳೆಯಬೇಕಾದ ಮಕ್ಕಳು ಆತಂಕ, ಅನುಮಾನ ಮತ್ತು ನಕಾರಾತ್ಮಕ  ಧೋರಣೆಯೊಂದಿಗೆ ಬೆಳೆಯಬಹುದು. ಮುಹಮ್ಮದ್ ಆಶಿಕ್‌ನ ಸಾಧನೆ ಈ ಎಲ್ಲ ಹಿನ್ನೆಲೆಯಲ್ಲಿ ಮುಖ್ಯವಾಗುತ್ತದೆ. ಈ ಯುವಕ ಈ  ಮಟ್ಟಕ್ಕೆ ಬೆಳೆದುದು ಪವಾಡದಿಂದಲ್ಲ. ಸ್ಪಷ್ಟ ಗುರಿ, ಅಪಾರ ಬದ್ಧತೆ ಮತ್ತು ಛಲವೇ ಈ ಆಶಿಕ್‌ನನ್ನು ದೇಶ-ವಿದೇಶದ ತೀರ್ಪುಗಾರರು  ಮಾಸ್ಟರ್ ಶೆಫ್ ಆಫ್ ಇಂಡಿಯಾವಾಗಿ ಗುರುತಿಸಿದ್ದಾರೆ. ಮನೆಯಲ್ಲೇ  ಶುಚಿ-ರುಚಿಯಾದ ಆಹಾರ ತಯಾರಿಸಿ ಕೊಡುವಲ್ಲಿಂದ  ಆರಂಭವಾದ ಈ ಯುವಕನ ಪ್ರಯಾಣವು, ಕಾಲೇಜುಗಳ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಸ್ವತಃ ಸ್ಟಾಲ್ ಹಾಕಿ ವ್ಯಾಪಾರ ಮಾಡುವಲ್ಲಿ  ವರೆಗೆ ಮತ್ತು ಅಲ್ಲಿಂದ ಕುಲ್ಕಿ ಶರ್ಬತ್ ಎಂಬ ಪಾನೀಯ ಮಾರಾಟದವರೆಗೂ ಬೆಳೆಯಿತು. ದ್ವಿತೀಯ ಪಿಯುಸಿಯ ಬಳಿಕ ಆರ್ಥಿಕ  ಅಡಚಣೆಯಿಂದ ಕಲಿಕೆ ಮುಂದುವರಿಸಲಾಗದೇ ಸೇಲ್ಸ್ಮ್ಯಾನ್ ಕೆಲಸಕ್ಕೆ ಸೇರಿಕೊಂಡ ಆಶಿಕ್, 20ರ ಹರೆಯಲ್ಲೇ  `ಕುಲ್ಕಿ ಹಬ್' ಎಂಬ  ವಿವಿಧ ಪಾನೀಯಗಳ ಅಂಗಡಿ ತೆರೆದರು. ತಾನು ಶೆಫ್ ಆಗಬೇಕು ಎಂಬ ಕನಸನ್ನು ಎಂದೂ ಬಿಟ್ಟು ಕೊಡದ ಛಲದ ಸುಖವನ್ನು  ಇಂದು ಈ ಆಶಿಕ್ ಅನುಭವಿಸುತ್ತಿದ್ದಾರೆ. ಅಂದಹಾಗೆ,

ಕೋಮು ಸಂಬಂಧಿ  ವಿಷಯಗಳಿಗಾಗಿಯೇ ರಾಷ್ಟ್ರ ಮಟ್ಟದಲ್ಲಿ ಆಗಾಗ ಸುದ್ದಿಗೀಡಾಗುವ ಜಿಲ್ಲೆಯ ತರುಣನೋರ್ವ ಅತ್ಯಂತ  ಚೇತೋಹಾರಿ ಮತ್ತು ಪ್ರೇರಣದಾಯಿ ಸಂಗತಿಗಾಗಿ ರಾಷ್ಟçಮಟ್ಟದಲ್ಲಿ ಸುದ್ದಿಗೀಡಾಗುವುದು ಮುಸ್ಲಿಮ್ ಸಮುದಾಯದ ಚರ್ಚೆಯ ದಿಕ್ಕನ್ನು  ಬದಲಿಸುವುದಕ್ಕೆ ಪ್ರೇರಣೆಯಾಗಬೇಕು. ಈ ಮುಹಮ್ಮದ್ ಆಶಿಕ್ ಒಂದಷ್ಟು ಸಮಯದವರೆಗೆ ಸಮುದಾಯದ ವಾಟ್ಸಪ್ ಚರ್ಚೆಗಳಲ್ಲಿ  ಸ್ಥಾನ ಪಡೆಯಬೇಕು. ಪ್ರತಿ ಮನೆ ಮನೆಗಳಲ್ಲೂ ಈ ಆಶಿಕ್ ಚರ್ಚಾವಸ್ತುವಾಗಬೇಕು. ಹೊಸ ತಲೆಮಾರು ಇಂಥ ಸಾಧಕರ ಕತೆಗಳನ್ನು  ಕೇಳಿಕೊಂಡು ಬೆಳೆಯಬೇಕು. ದಿನವಿಡೀ ಕಾಂಗ್ರೆಸ್ಸು, ಬಿಜೆಪಿ, ಅದು, ಇದು ಎಂದು ಚರ್ಚಿಸುವುದಕ್ಕಿಂತ ಬೆಳೆಯುತ್ತಿರುವ ಪೀಳಿಗೆಯನ್ನು  ಅತ್ಯಂತ ನಿರ್ಮಾಣಾತ್ಮಕವಾಗಿ ಬೆಳೆಸುವುದು ಹೇಗೆ, ಅವರನ್ನು ಸಾಧಕರಾಗಿ ಪರಿವರ್ತಿಸುವುದು ಹೇಗೆ ಎಂಬ ಬಗ್ಗೆ ಗಂಭೀರ  ಅವಲೋಕನಗಳು ಸೋಶಿಯಲ್ ಮೀಡಿಯಾದಲ್ಲಿ ನಡೆಯಬೇಕು. ಅಷ್ಟೇ ತೀವ್ರವಾಗಿ ಇಂಥ ಚರ್ಚೆ ಗಳು ಪ್ರತಿ ಮನೆಮನೆಯಲ್ಲೂ  ನಡೆಯಬೇಕು. ಮಕ್ಕಳು ಈ ಚರ್ಚೆಯನ್ನು ಕೇಳಿ ಬೆಳೆಯುವುದರಿಂದ ಅವರಲ್ಲೂ ನಕಾರಾತ್ಮಕ ಭಾವಗಳು ಹೊರಟು ಹೋಗಿ ಆಶಾವಾದ  ತುಂಬಿಕೊಳ್ಳುತ್ತದೆ. ತಾವೂ ಆಶಿಕ್ ಆಗಬೇಕು ಅಥವಾ ಸಾಧಕರಾಗಿ ಗುರುತಿಸಿಕೊಳ್ಳಬೇಕು ಎಂಬ ಛಲ ತುಂಬುತ್ತದೆ. 

ಈ ಬಾರಿಯ  ನೀಟ್ ಪರೀಕ್ಷೆಯಲ್ಲಿ ಮುಸ್ಲಿಮ್ ಸಮುದಾಯದ ವ್ಯಕ್ತಿ ಮೊದಲ 100 ರ‍್ಯಾಂಕಲ್ಲೂ ಕಾಣಿಸಿಕೊಂಡಿಲ್ಲ. ಅಬ್ದುಲ್ ಬಾಸಿತ್ ಅನ್ನುವ  ಪ್ರತಿಭಾವಂತ ಪಡೆದಿರುವ 113ನೇ ರ‍್ಯಾಂಕೇ ಸಮುದಾಯದ ಪಾಲಿನ ಕಿರೀಟ. ತಮಿಳುನಾಡಿನ ಪ್ರಬಂಜನ್ ಮತ್ತು ಆಂಧ್ರದ ವರುಣ್  ಚಕ್ರವರ್ತಿ ಒಟ್ಟು 720 ಅಂಕಗಳಲ್ಲಿ 720 ಅಂಕಗಳನ್ನೂ ಪಡೆದು ಮೊದಲ ಸ್ಥಾನ ಪಡೆದಿದ್ದರು. ಈ ಬಗೆಯ ಪೈಪೋಟಿಯತ್ತ ಮುಸ್ಲಿಮ್  ಸಮುದಾಯದ ಮಕ್ಕಳನ್ನು ತರಬೇತುಗೊಳಿಸಬೇಕು. ಐಐಟಿ, ಐಐಐಟಿ, ಐಐಎಸ್‌ಇ, ಎನ್‌ಐಟಿ ಮತ್ತು ಐಐಎಂಗಳಲ್ಲಿ ಮುಸ್ಲಿಮ್  ಸಮುದಾಯದ ಅನುಪಾತ 1.92% ಎಂಬುದು ಈಗಿನ ಲೆಕ್ಕಾಚಾರ. ಈ ಅಂಕಿಅಂಶಗಳನ್ನು ಎತ್ತಿ ಉತ್ತಮಗೊಳಿಸುವುದಕ್ಕೆ ಪೂರಕ  ಯೋಚನೆ ಮತ್ತು ಯೋಜನೆಗಳಿಗೆ ಸಮುದಾಯ ಚಾಲನೆ ನೀಡಬೇಕು. ಅದಕ್ಕೆ ಪ್ರಥಮ ಹೆಜ್ಜೆಯಾಗಿ ಸಕಾರಾತ್ಮಕ ಆಲೋಚನೆಗಳಿಗೆ  ಆದ್ಯತೆ ನೀಡಬೇಕು. ಮುಸ್ಲಿಮ್ ಸಮುದಾಯ ಬರಹ, ಭಾಷಣ, ಸೋಶಿಯಲ್ ಮೀಡಿಯಾ ಚರ್ಚೆ ಗಳು ಮತ್ತು ಮನೆಯ  ಮಾತುಕತೆಗಳೆಲ್ಲವೂ ಹೊಸ ಪೀಳಿಗೆಯ ಪಾಲಿಗೆ ಆಸಕ್ತಿಕರವಾಗುವಂತೆ ಮತ್ತು ಸಾಧನೆಗೆ ಪ್ರೇರಣೆಯಾಗುವಂತೆ ಇರಬೇಕು. ಭಾರತದ  ಚಂದ್ರಯಾನದ ಯಶಸ್ಸಿನಲ್ಲಿ ಪಾತ್ರಧಾರಿಗಳಾಗಿರುವ ಸನಾ ಫೈರೋಝï, ಯಾಸಿರ್ ಅಮ್ಮಾರ್, ಮುಹಮ್ಮದ್ ಶಬೀರ್ ಆಲಂ, ಅರೀಬ್  ಅಹ್ಮದ್, ಅಖ್ತದಾರ್ ಅಬ್ಬಾಸ್, ಇಶ್ರತ್ ಜಮಾಲ್, ಖುಶ್ಬೂ ಮಿರ್ಝಾ ಮುಂತಾದ ವಿಜ್ಞಾನಿಗಳನ್ನು ಸಂದರ್ಭಾ ನುಸಾರ ಮಕ್ಕಳ  ಮುಂದೆ ಪ್ರಸ್ತಾಪಿಸಿ ಕನಸು ಕಟ್ಟಬೇಕು. ಇದೇನೂ ಅಸಾಧ್ಯವಲ್ಲ. ಪ್ರತಿ ಮಗುವೂ ವಿಶಿಷ್ಟ. ಸಾಹಸ ಮತ್ತು ಸಾಧನೆ ಮಕ್ಕಳನ್ನು  ಆಕರ್ಷಿಸುವಷ್ಟು ಇನ್ನಾವುದೂ ಆಕರ್ಷಿಸುವುದಿಲ್ಲ. ಒಂದುವೇಳೆ, ಮನೆಯನ್ನು ಸಾಧಕರ ಕುರಿತಾದ ಮಾತಿನ ಮಂಟಪವಾಗಿಸಿಬಿಟ್ಟರೆ  ಮತ್ತು ಕಠಿಣ ಸವಾಲುಗಳನ್ನೂ ಎದುರಿಸಿ ವಿಜಯಿಯಾದವರ ಸಾಹಸಗಾಥೆಗೆ ಮೀಸಲಾಗಿಸಿದರೆ ಅದನ್ನು ಆಲಿಸುತ್ತಾ ಬೆಳೆಯುವ ಮಗು  ಅದನ್ನೇ ಕನಸುತ್ತದೆ. ಅಂಥದ್ದೇ  ಬದುಕು ರೂಪಿಸಿಕೊಳ್ಳಲು ಹವಣಿಸುತ್ತದೆ. ಸದ್ಯ,

ಮುಹಮ್ಮದ್ ಆಶಿಕ್ ಪ್ರತಿ ಮನೆಯ ಬೆರಗಾಗಿ ಚರ್ಚೆಗೆ ಒಳಗಾಗುವುದರಿಂದ ಬೆಳೆಯುವ ಪೀಳಿಗೆಯಲ್ಲಿ ಹೊಸ ಕನಸು ಹುಟ್ಟಲು  ಅವಕಾಶ ಒದಗಿಸುತ್ತದೆ. ಬರೇ ಧರ್ಮ ದ್ವೇಷ ಹೇಳಿಕೆಗಳು ಮತ್ತು ಪ್ರತಿ ಹೇಳಿಕೆಗಳನ್ನೇ ಇಡೀ ದಿನ ಚರ್ಚಿಸುತ್ತಾ ಅದನ್ನೇ ಮುಸ್ಲಿಮ್  ಸಮುದಾಯದ ಆದ್ಯತಾ ವಿಷಯವಾಗಿ ಮಾರ್ಪಡಿಸುವುದರಿಂದ ಮುಸ್ಲಿಮ್ ಸಮುದಾಯ ದೂರ ನಿಲ್ಲಬೇಕಾಗಿದೆ. ಮುಸ್ಲಿಮ್  ಸಮುದಾಯದ ಆದ್ಯತೆಗಳನ್ನು ಮುಸ್ಲಿಮ್ ಸಮುದಾಯವೇ ನಿರ್ಧರಿಸಬೇಕು. ಇನ್ನಾರೋ ಹಾಕಿ ಕೊಡುವ ರಂಗಸ್ಥಳದಲ್ಲಿ ನಿಂತು ಅವರ  ಆದೇಶದಂತೆ ಕುಣಿಯುವುದರಿಂದ ಸಮುದಾಯಕ್ಕೆ ಯಾವ ಲಾಭವೂ ಇಲ್ಲ. ಈ ಕುಣಿತವನ್ನೇ ಬೆಳೆಯುವ ಪೀಳಿಗೆಗಳೂ ಕಲಿಯುತ್ತವೆ  ಮತ್ತು ಅವೂ ಅದನ್ನೇ ಮುಂದುವರಿಸುತ್ತವೆ. ಭಯಪಡುವವರು ಇರುವವರೆಗೆ ಭಯಪಡಿಸುವವರು ಇದ್ದೇ  ಇರುತ್ತಾರೆ. ಇದೊಂದು  ಮುಗಿಯದ ನಾಟಕ. ಮುಸ್ಲಿಮ್ ಸಮುದಾಯ ಇಂಥ ನಕಾರಾತ್ಮಕ ಚರ್ಚೆಗಳಿಂದ ಹೊರಬಂದು ಸಕಾರಾತ್ಮಕ ಚರ್ಚೆಗಳಿಗೆ  ಹೊರಳಬೇಕು. ಪ್ರತಿ ಮನೆಯಲ್ಲೂ ಮುಹಮ್ಮದ್ ಆಶಿಕ್‌ನಂಥ ಸಾಧಕರು ಚರ್ಚಾ ವಿಷಯವಾಗಬೇಕು. ಹೊಸ ಪೀಳಿಗೆ ಇಂಥ  ಚರ್ಚೆಗಳನ್ನೇ ಆಲಿಸಿ ಬೆಳೆಯಬೇಕು. ಇದು ಖಂಡಿತ ಸಾಧ್ಯ. ತನ್ನ ಅಪೂರ್ವ ಛಲ ಮತ್ತು ಆತ್ಮವಿಶ್ವಾಸದಿಂದ ಅಮೋಘ ಸಾಧನೆ  ಮಾಡಿದ ಆಶಿಕ್‌ಗೆ ಅಭಿನಂದನೆಗಳು.

Tuesday 12 December 2023

ಪಶ್ಚಾತ್ತಾಪಪಡುವ ಅಪ್ಪ, ಅಪರಾಧಿ ಮಗ ಮತ್ತು ಭ್ರೂಣಕ್ಕೇ ಕತ್ತಿಯಿಕ್ಕುವ ವೈದ್ಯರ ಮಧ್ಯೆ...



1. ಕೇರಳ: ಹಾಸಿಗೆಯಲ್ಲಿ ಮಲ ವಿಸರ್ಜಿಸಿದರೆಂದು ಅನಾರೋಗ್ಯ ಪೀಡಿತ ತಂದೆಯನ್ನೇ ಕೊಂದ ಮಗ

2. 900 ಭ್ರೂಣಹತ್ಯೆ  ಮಾಡಿದ ವೈದ್ಯನ ಬಂಧನ ಮತ್ತು 

3. ಎಲ್ಲಾ ಆಸ್ತಿಯನ್ನೂ ಮಗನಿಗೆ ಕೊಟ್ಟು ತಪ್ಪು ಮಾಡಿದೆ ಎಂದ ರೇಮಂಡ್ ಸಂಸ್ಥಾಪಕ ಜಯಪತ್  ಸಿಂಘಾನಿಯಾ...

ಕಳೆದ ವಾರದ ಈ ಮೂರೂ ಸುದ್ದಿಗಳ ಕೇಂದ್ರ ಬಿಂದು ಮನುಷ್ಯ. ಮಾತ್ರವಲ್ಲ, ಬುದ್ಧಿ, ವಿವೇಕ, ಅಂತಃಕರಣ ಇರುವ ಮತ್ತು  ರಕ್ತಸಂಬಂಧ  ಹಾಗೂ ಮಾನವೀಯ ಸಂಬಂಧಗಳ ಪೋಷಕನಂತೆ ಬಿಂಬಿಸಿಕೊಳ್ಳುತ್ತಿರುವ ಮನುಷ್ಯ ಹೇಗೆ ಅವೆಲ್ಲವನ್ನೂ ಅವಗಣಿಸಬಲ್ಲ  ಮತ್ತು ರಾಕ್ಷಸನಂತೆ ವರ್ತಿಸಬಲ್ಲ ಎಂಬುದಕ್ಕೂ ಈ ಮೂರೂ ಸುದ್ದಿಗಳು ಒಳ್ಳೆಯ ಉದಾಹರಣೆ.

ಎಂಟು  ತಿಂಗಳ ಹಿಂದೆ 65 ವರ್ಷದ ಸೆಬಾಸ್ಟಿಯನ್ ಎಂಬ ತಂದೆ ಕಾರು ಅಪಘಾತದಲ್ಲಿ ಗಾಯಗೊಂಡ ಬಳಿಕ ಹಾಸಿಗೆಗೆ  ಸೀಮಿತರಾದರು. ಅವರ ಪತ್ನಿ ಈ ಅಪಘಾತದ ಆಸು-ಪಾಸಿನಲ್ಲೇ  ಕ್ಯಾನ್ಸರ್‌ನಿಂದ ತೀರಿಕೊಂಡಿದ್ದರು. ಮಗ ಸೆಬಿನ್ ಕ್ರಿಶ್ಚಿಯನ್  ತಂದೆಯನ್ನು ನೋಡಿಕೊಳ್ಳುತ್ತಿದ್ದ. 64 ವರ್ಷಗಳ ವರೆಗೆ ಆರೋಗ್ಯವಂತರಾಗಿದ್ದ ಮತ್ತು ನಡೆಯುತ್ತಿದ್ದ ಈ ಅಪ್ಪನಿಗೆ ಈ ಮಗ  ಭಾರವಾಗಿರಲಿಲ್ಲ. ಆದರೆ, ಈ ಅಪ್ಪ ಎಂಟೇ ಎಂಟು ತಿಂಗಳಲ್ಲಿ ಮಗನಿಗೆ ಭಾರವಾದರು. ಇದೇ ಅಪ್ಪ ಈ 26 ವರ್ಷದ ಮಗನನ್ನು ಶಿಶುವಾದಾಗಿನಿಂದ ನಡೆಯುವ ಪ್ರಾಯದ ವರೆಗೆ ಮುದ್ದಾಡಿಸಿರಬಹುದು. ಕೈ ಹಿಡಿದು ನಡೆಸಿರಬಹುದು. ಮಾರುಕಟ್ಟೆಗೆ, ಶಾಲೆಗೆ,  ಪಾರ್ಕ್ ಗೆ  ಕರಕೊಂಡು ಹೋಗಿರಬಹುದು. ಆಗೆಲ್ಲ ಈ ಮಗನನ್ನು ಈ ಅಪ್ಪ ಭಾರ ಅಂದುಕೊಂಡಿರುತ್ತಿದ್ದರೆ ಈ ಕ್ರಿಶ್ಚಿಯನ್ ಜೀವಂತ  ಇರುತ್ತಲೇ ಇರಲಿಲ್ಲ. ಇದರ ಜೊತೆಗೆ ಓದಬಹುದಾದ ಇನ್ನೊಂದು ಸುದ್ದಿಯೆಂದರೆ, 1500 ಕೋಟಿ ರೂಪಾಯಿ ಬೆಲೆಬಾಳುವ  ರೇಮಂಡ್ ಬ್ರಾಂಡ್‌ನ ಸಂಸ್ಥಾಪಕ ವಿಜಯಪಥ್ ಸಿಂಘಾನಿಯಾ ಅವರದು. 85 ವರ್ಷದ ಇವರು ಇವತ್ತು ಬಾಡಿಗೆ ಮನೆಯಲ್ಲಿ  ವಾಸಿಸುತ್ತಿದ್ದಾರೆ. 2015ರಲ್ಲಿ ಇವರು ತಮ್ಮ ಎಲ್ಲಾ ಶೇರುಗಳು ಮತ್ತು ಕಂಪೆನಿಯನ್ನು ತನ್ನ ಏಕೈಕ ಮಗ ಗೌತಮ್ ಸಿಂಘಾನಿಯಾಗೆ  ನೀಡಿದರು. ಶೂನ್ಯದಿಂದ ರೇಮಂಡ್ ಎಂಬ ಬೃಹತ್ ಬಟ್ಟೆ ಉದ್ಯಮವನ್ನು ಕಟ್ಟಿ ಬೆಳೆಸಿದ ಈ ವಿಜಯಪಥ್ ಸಿಂಘಾನಿಯಾ, ಜಗತ್ತೇ  ಗುರುತಿಸುವಷ್ಟು ಪ್ರಸಿದ್ಧ ಉದ್ಯಮಿಯಾದರು. ಆದರೆ, ಯಾವಾಗ ತನ್ನ ಮಗನಿಗೆ ತನ್ನ ಸಂಪೂರ್ಣ ಆಸ್ತಿಯನ್ನು ಬರೆದು ಕೊಟ್ಟರೋ ಆ  ಬಳಿಕದಿಂದ ಅವರ ಕಷ್ಟದ ದಿನಗಳು ಆರಂಭವಾದುವು. ‘ಮಗನಿಗೆ ಆಸ್ತಿಯನ್ನು ಬರೆದು ಕೊಡುವಾಗ ಒಂದಿಷ್ಟು ಹಣವನ್ನು  ಉಳಿಸಿಕೊಳ್ಳದೇ ಇರುತ್ತಿದ್ದರೆ ಇವತ್ತು ಬೀದಿಯೇ ಗತಿಯಾಗುತ್ತಿತ್ತು..’ ಎಂದು ಈ ಅಪ್ಪ ಇವತ್ತು ನೊಂದು ನುಡಿಯುತ್ತಾರೆ. ಇವತ್ತು ಅಪ್ಪ-ಮಗನ ಸಂಬಂಧ ಹಳಸಿದೆ. ಅಪ್ಪನತ್ತ ತಿರುಗಿಯೂ ಈ ಮಗ ನೋಡುತ್ತಿಲ್ಲ. ಅಂದಹಾಗೆ,

ಈ ಎರಡು ಸುದ್ದಿಗಳಿಗಿಂತ ತುಸು ಭಿನ್ನವಾದ ಆದರೆ, ಈ ಎರಡೂ ಸುದ್ದಿಗಳಿಗಿಂತಲೂ ಅತಿ ಭೀಕರವಾದ ಸುದ್ದಿಯೇ ಭ್ರೂಣಹತ್ಯೆಗೆ  ಸಂಬಂಧಿಸಿದ್ದು. ಪತ್ರಿಕೆಗಳ ಪಾಲಿಗೆ ಮುಖಪುಟದ ಲೀಡಿಂಗ್ ಸುದ್ದಿಯಾಗಬೇಕಿದ್ದ ಈ ಭ್ರೂಣಹತ್ಯೆಯು ಹೆಚ್ಚಿನೆಲ್ಲಾ ಪತ್ರಿಕೆಗಳ ಒಳ ಪುಟವನ್ನು ಸೇರಿಕೊಂಡಿದೆ ಎಂಬುದೇ ಸಮಾಜದಲ್ಲಿ ಇದೆಷ್ಟು ಮಾಮೂಲು ಎಂಬುದನ್ನು ಹೇಳುತ್ತದೆ. ಬೆಂಗಳೂರು-ಮೈಸೂರು  ಸುತ್ತಮುತ್ತ ಹತ್ತರಷ್ಟು ಮಂದಿಯನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಬಂಧಿಸಿದ್ದಾರೆ. ಇವರಲ್ಲಿ ವೈದ್ಯರು, ಲ್ಯಾಬ್ ಟೆಕ್ನೀಶಿಯನ್,  ಆಸ್ಪತ್ರೆ ಮುಖ್ಯಸ್ಥರೆಲ್ಲಾ ಇದ್ದಾರೆ. ಹೆಣ್ಣು ಭ್ರೂಣವನ್ನು ಪತ್ತೆ ಹಚ್ಚಿ ಹತ್ಯೆ ಮಾಡುವುದೇ ಇವರ ಕಾಯಕ. ಒಂದು ಭ್ರೂಣಹತ್ಯೆಗೆ 25  ಸಾವಿರದಷ್ಟು ಹಣವನ್ನು ಪಡೆಯುತ್ತಾರೆ. ಇದೊಂದು ಜಾಲ. ಹಾಗಂತ, ಪೊಲೀಸರ ಕೈಗೆ ಸಿಗದೇ ಇರುವ ಇಂಥ ಕುಖ್ಯಾತ ಜಾಲಗಳು  ರಾಜ್ಯದಲ್ಲಿ ಇನ್ನೂ ಅನೇಕ ಇರಬಹುದು. ಇದನ್ನೇ ದೇಶಕ್ಕೆ ಅನ್ವಯಿಸಿ ನೋಡುವಾಗ ಭಯವಾಗುತ್ತದೆ. ದೇಶದಲ್ಲಿ ಒಂದು ದಿನದಲ್ಲಿ  ಎಷ್ಟು ಭ್ರೂಣಗಳು ಹತ್ಯೆಯಾಗುತ್ತಿರಬಹುದು ಮತ್ತು ಇದಕ್ಕೆ ನೆರವಾಗುವ ವೈದ್ಯರು ಮತ್ತು ಆಸ್ಪತ್ರೆಗಳು ಎಷ್ಟಿರಬಹುದು? ಅಂದಹಾಗೆ,

ಹೆತ್ತವರ ಬಗ್ಗೆ ಕಾಳಜಿಯ ಬೋಧನೆಯನ್ನು ನೀಡದ ಒಂದೇ ಒಂದು ಧರ್ಮ ಇಲ್ಲ. ಭಾರತವಂತೂ ಧರ್ಮಗಳೇ ತುಂಬಿಕೊಂಡಿರುವ  ಮಣ್ಣು. ಶ್ರವಣಕುಮಾರನ ಭಾವುಕ ಕತೆಯನ್ನು ಬಾಲ್ಯದಲ್ಲಿ ಓದಿ ಬೆಳೆಯುವ ಮಕ್ಕಳೇ ಇಲ್ಲಿ ಅಧಿಕವಿದ್ದಾರೆ. ಹೆಣ್ಣನ್ನು ಪೂಜಿಸುವ ಮತ್ತು  ದೇವತೆಯೆಂದು ಬಾಗುವ ಸಂಸ್ಕೃತಿಯೂ ಇಲ್ಲಿನದು. ಹಿಂದೂ, ಇಸ್ಲಾಮ್, ಕ್ರೈಸ್ತ- ಈ ಮೂರೂ ಧರ್ಮಗಳು ಹೆತ್ತವರ ಮತ್ತು ಹೆಣ್ಣಿನ  ಬಗ್ಗೆ ಗೌರವಾರ್ಹವಾದ ಚಿಂತನೆಯನ್ನೇ ಹೊಂದಿವೆ. ಹೆತ್ತವರ ವಿಷಯದಲ್ಲಿ ಇಸ್ಲಾಮ್ ಎಂಥ ಕಟು ಧೋರಣೆಯನ್ನು ಹೊಂದಿದೆ  ಎಂದರೆ, ವೃದ್ಧರಾಗಿರುವ ಹೆತ್ತವರ ಬಗ್ಗೆ ಛೆ ಎಂಬ ಉದ್ಗಾರವನ್ನೂ ಮಕ್ಕಳು ಹೊರಡಿಸಬಾರದು ಎನ್ನುತ್ತದೆ. ಹೆತ್ತವರ ಕೋಪಕ್ಕೆ  ತುತ್ತಾದ ಯಾವ ಮಕ್ಕಳೂ ಅವರೆಷ್ಟೇ ಧರ್ಮಿಷ್ಟರಾದರೂ ಸ್ವರ್ಗ ಪ್ರವೇಶಿಸಲಾರರು ಎಂದೇ ಹೇಳಿದೆ. ‘ಹೆತ್ತವರೇ ಮಕ್ಕಳ ಪಾಲಿನ ಸ್ವರ್ಗ  ಮತ್ತು ನರಕ’ ಎಂದೂ ಹೇಳಿದೆ. ಮಗ ಮುಸ್ಲಿಮ್ ಆಗಿದ್ದು, ಹೆತ್ತಬ್ಬೆ ಮುಸ್ಲಿಮೇತರರಾಗಿದ್ದರೂ ಹೆತ್ತವರ ಮೇಲಿನ ಕರ್ತವ್ಯಗಳಲ್ಲಿ ಮಗನಿಗೆ ಯಾವ ರಿಯಾಯಿತಿಯೂ ಇರುವುದಿಲ್ಲ ಎಂದೂ ತಾಕೀತು ಮಾಡಿದೆ. ನಿತ್ರಾಣದ ಮೇಲೆ ನಿತ್ರಾಣವನ್ನು ಅನುಭವಿಸಿ ಮಗುವನ್ನು  ಹೆರುವ ತಾಯಿಗಾಗಿ ಮಕ್ಕಳು ಸದಾ ಪ್ರಾರ್ಥಿಸುತ್ತಿರಬೇಕೆಂದು ಕುರ್‌ಆನ್ ಹೇಳಿದೆಯಲ್ಲದೇ, ಆ ಪ್ರಾರ್ಥನಾ ವಿಧಾನವನ್ನೂ ಕಲಿಸಿಕೊಟ್ಟಿದೆ. ಇದಿಷ್ಟೇ ಅಲ್ಲ, ಹೆಣ್ಣು ಮಗುವನ್ನು ಪ್ರೀತಿಸುವ ಮತ್ತು ಕಾಳಜಿ ತೋರುವ ವಿಷಯದಲ್ಲಂತೂ ಇಸ್ಲಾಮ್ ಅತೀ  ಮುಂಚೂಣಿಯಲ್ಲಿದೆ. ಒಬ್ಬರು ತನ್ನ ಹೆಣ್ಣು ಮಗುವಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರವನ್ನು ಕಲಿಸಿ ಅವರ ಬದುಕು  ಚೆಲುವಾಗಿಸಿದರೆ ಆ ಹೆತ್ತವರಿಗೆ ಸ್ವರ್ಗ ಇದೆ ಎಂದು ಪ್ರವಾದಿ(ಸ) ಕಲಿಸಿದ್ದಾರೆ. ಹೆಣ್ಣು ಮಗುವಿನ ಕಾರಣಕ್ಕಾಗಿ ಹೆತ್ತವರಿಗೆ ಸ್ವರ್ಗದ  ವಾಗ್ದಾನವನ್ನು ನೀಡಿದ ಏಕೈಕ ಧರ್ಮವಾಗಿ ಇಸ್ಲಾಮ್ ಗುರುತಿಸಿಕೊಂಡಿದೆ. ಇದೇವೇಳೆ,

ಗಂಡು ಮಗುವಿನ ಹೆತ್ತವರಿಗೆ ಇಸ್ಲಾಮ್ ಈ ವಾಗ್ದಾನವನ್ನು ನೀಡಿಯೇ ಇಲ್ಲ. ಒಂದುವೇಳೆ, ಹೆಣ್ಣು ಮಗು ಎಂಬ ಕಾರಣಕ್ಕೆ ಹತ್ಯೆ  ನಡೆಸಿದರೆ, ಮರಣಾನಂತರ ವಿಚಾರಣೆಯ ವೇಳೆ ಅಂಥ ಹೆತ್ತವರನ್ನು ಆ ಮಗುವಿನ ಮುಂದೆಯೇ ಕಟಕಟೆಯಲ್ಲಿ ನಿಲ್ಲಿಸಲಾಗುವುದು  ಮತ್ತು ಯಾವ ಕಾರಣಕ್ಕಾಗಿ ನಿನ್ನನ್ನು ಹತ್ಯೆ ನಡೆಸಲಾಯಿತು ಮಗೂ ಎಂದೂ ಪ್ರಶ್ನಿಸಲಾಗುವುದು, ಅದು ಕೊಡುವ ಉತ್ತರದ  ಆಧಾರದಲ್ಲಿ ಹೆತ್ತವರಿಗೆ ಶಿಕ್ಷೆಯನ್ನು ನೀಡಲಾಗುವುದು ಎಂಬ ಗಂಭೀರ ಎಚ್ಚರಿಕೆಯನ್ನೂ ಕುರ್‌ಆನ್‌ನಲ್ಲಿ ನೀಡಲಾಗಿದೆ. ನಿಜವಾಗಿ,

ಇವತ್ತು ಹೊಸ ಮಂದಿರ-ಮಸೀದಿಗಳ ನಿರ್ಮಾಣ ಭರದಿಂದ ಸಾಗುತ್ತಲೇ ಇದೆ. ವರ್ಷದಿಂದ ವರ್ಷಕ್ಕೆ ಮಂದಿರ-ಮಸೀದಿಗೆ ತೆರಳುವ  ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವೂ ಆಗುತ್ತಿದೆ. ಧರ್ಮದ ಹೆಸರಲ್ಲಿ ನಡೆಯುವ ಸಭೆ, ಸಮಾರಂಭ, ಪ್ರವಚನ, ಗೋಷ್ಠಿಗಳಿಗೆ ಜನರೂ ಭಾರೀ  ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಚಪ್ಪಾಳೆ, ಶಿಳ್ಳೆಗಳೂ ಬೀಳುತ್ತಿವೆ. ಆದರೆ, ಧರ್ಮಬೋಧನೆಗಳ ಪಾಲನೆಯಲ್ಲಿ ಮಾತ್ರ ಈ ಉತ್ಸಾಹ  ಕಾಣಿಸುವುದಿಲ್ಲ. ಧರ್ಮಿಷ್ಠರೆಂದು ಹೇಳಿಕೊಳ್ಳುವವರೇ ಮತ್ತು ಧರ್ಮದ ಪೋಷಾಕು ತೊಟ್ಟವರೇ ಅತ್ಯಾಚಾರಿಗಳು, ಭ್ರಷ್ಟರು, ವಂಚಕರಾಗಿ  ಗುರುತಿಸಿಕೊಳ್ಳುತ್ತಿದ್ದಾರೆ. ಧರ್ಮದ್ವೇಷದ ಭಾಷಣಗಳನ್ನೂ ಮಾಡುತ್ತಿದ್ದಾರೆ. ಧರ್ಮವು ಎಂಬುದು ವ್ಯಕ್ತಿಯ ಪೋಷಾಕಿಗೆ  ಸೀಮಿತಗೊಂಡು ಆಚರಣೆಯಲ್ಲಿ ನಾಸ್ತಿಯಾದ ಸ್ಥಿತಿಗೆ ಬಂದಿದೆ. ಇದು ಬದಲಾಗಬೇಕು.

 ಧರ್ಮ ಎಂಬುದು ನಾಗರಿಕ ಸಮಾಜದಲ್ಲಿ  ಮೌಲ್ಯಗಳನ್ನು ಬಿತ್ತುವ ಬೋಧನೆಗಳ ಹೆಸರು. ಆ ಬೋಧನೆಗಳನ್ನು ಚಾಚೂ ತಪ್ಪದೇ ಅಳವಡಿಸಿಕೊಂಡ ವ್ಯಕ್ತಿ ಸಮಾಜ ಕಂಟಕ  ಆಗಲಾರ. ಮಂದಿರ-ಮಸೀದಿಯನ್ನು ಕೆಡುಕಿಗೆ ಬಳಸಲಾರ. ಧರ್ಮದ ಪೋಷಾಕು ತೊಟ್ಟು ಧರ್ಮದ್ರೋಹಿ ಕೆಲಸಗಳಲ್ಲಿ  ಭಾಗಿಯಾಗಲಾರ. ಸದ್ಯ ಇದಕ್ಕೆ ವಿರುದ್ಧವಾದುದು ನಡೆಯುತ್ತಿದೆ ಎಂದಾದರೆ, ಅದು ಅಪಾಯಕಾರಿ. ಅಂದಹಾಗೆ,

ಈ ದೇಶದಲ್ಲಿ ಅಪರಾಧಗಳು  ನಡೆಯದೇ ಇರುವುದಕ್ಕೆ ಕಾನೂನುಗಳ ಭಯವೊಂದೇ ಕಾರಣ ಅಲ್ಲ, ಧರ್ಮ ಮತ್ತು ಅದು ಬಿತ್ತಿದ ದೇವಭಯವೂ ಕಾರಣ. ಇಲ್ಲಿ ಅ ಪರಾಧ ಕೃತ್ಯಗಳಲ್ಲಿ ಭಾಗಿಯಾದರೆ, ಮರಣಾನಂತರ ದೇವನು ಪ್ರಶ್ನಿಸುತ್ತಾನೆ ಮತ್ತು ಶಿಕ್ಷೆ ನೀಡುತ್ತಾನೆ ಎಂಬ ಬೋಧನೆಯೂ ಜನರ  ಬದುಕಿನ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ, ಧರ್ಮದ ಮೌಲ್ಯಗಳಿಗೆ ಮತ್ತೆ ಮತ್ತೆ ಪ್ರಸ್ತುತತೆಯನ್ನು ಕಲ್ಪಿಸುತ್ತಲೇ ಇರಬೇಕಾದ  ಹೊಣೆಗಾರಿಕೆ ಎಲ್ಲ ಧರ್ಮಿಷ್ಠರ ಮೇಲಿದೆ. ಪಶ್ಚಾತ್ತಾಪಪಡುವ ಸಿಂಘಾನಿಯಾರಂಥ  ತಂದೆ, ಕ್ರಿಶ್ಚಿಯನ್‌ನಂಥ ಮಗ ಮತ್ತು ಹೆಣ್ಣು  ಭ್ರೂಣವನ್ನು ಹತ್ಯೆ ಮಾಡುವ ವೈದ್ಯರು ಶೂನ್ಯವಾಗಬೇಕಾದುದು ಎಲ್ಲರ ಅಗತ್ಯ.

Tuesday 28 November 2023

ಉಡುಪಿಯಲ್ಲಿ ತಾಯಿ-ಮಕ್ಕಳ ಹತ್ಯೆ: ಕಲಿಯಬೇಕಾದ ಪಾಠ ಏನು?

 




ಕರಾವಳಿ ಮತ್ತೆ ಸುದ್ದಿಯಲ್ಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಅಕ್ಷಯ್ ಕಲ್ಲೇಗ ಎಂಬ ಯುವಕನ ಹತ್ಯೆ ನಡೆದು ವಾರವಾಗುವ  ಮೊದಲೇ ಉಡುಪಿಯ ನೇಜಾರಿನಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ನಡೆದಿದೆ. ಈ ಎರಡೂ ಹತ್ಯೆಗಳಲ್ಲಿರುವ ಸಮಾನ ಅಂಶವೇನೆಂದರೆ, ಹತ್ಯೆಗೆ ಬಳಸಿರುವ ಆಯುಧ. ತಲವಾರಿಗೆ ಹಿಂದೂ-ಮುಸ್ಲಿಮ್ ಎಂಬ ಬೇಧ ಇಲ್ಲ. ಹೆಣ್ಣು-ಗಂಡು, ಮಕ್ಕಳು, ಶಿಶುಗಳು  ಎಂಬ ಬೇಧವೂ ಇಲ್ಲ. ಅದು ಯಾರ ಕೈಯಲ್ಲಿದೆಯೋ ಅವರ ಆದೇಶವನ್ನು ಚಾಚೂ ತಪ್ಪದೇ ಪಾಲಿಸುತ್ತದೆ. ಇನ್ನು, ಈ ತಲವಾರಿಗೆ  ಬಲಿಯಾಗುವವರ ಧರ್ಮ ಯಾವುದೇ ಆದರೂ ಚೆಲ್ಲುವ ರಕ್ತದ ಬಣ್ಣ ಒಂದೇ. ಬಲಿಯಾದವರ ಕುಟುಂಬದವರು ಹಾಕುವ ಕಣ್ಣೀರಿನ  ಬಣ್ಣವೂ ಒಂದೇ. ಹಾಗಂತ,

ಕರಾವಳಿಯನ್ನು ಬೆಚ್ಚಿಬೀಳಿಸಿದ ಮೊದಲ ಹತ್ಯೆಯೇನೂ ಇದಲ್ಲ. 11 ವರ್ಷಗಳ ಹಿಂದೆ ದ.ಕ. ಜಿಲ್ಲೆಯ ಪಂಜಿಮೊಗರಿನಲ್ಲಿ ರಝಿಯಾ  ಎಂಬ ತಾಯಿ ಹಾಗೂ ಫಾತಿಮಾ ಎಂಬ ಮಗಳನ್ನು ಮನೆಗೆ ನುಗ್ಗಿ ಹತ್ಯೆ ಮಾಡಲಾಗಿತ್ತು. ಅಪರಾಧಿ ಇನ್ನೂ ಪತ್ತೆಯಾಗಿಲ್ಲ. ಇದೀಗ,  46 ವರ್ಷದ ಹಸೀನಾ ಎಂಬ ತಾಯಿ ಹಾಗೂ ಮಕ್ಕಳಾದ ಅಫ್ನಾಜ್, ಅಯ್ನಾಝï, ಆಸಿಮ್‌ರನ್ನು ಮನೆಗೆ ನುಗ್ಗಿ ಹತ್ಯೆ ಮಾಡಲಾಗಿದೆ.  ಈ ಎರಡು ಭಯಾನಕ ಕ್ರೌರ್ಯಗಳ ನಡುವೆಯೂ  ಕರಾವಳಿಯಲ್ಲಿ ಸಾಕಷ್ಟು ರಕ್ತ ಹರಿದಿದೆ. ಇವೆಲ್ಲಕ್ಕೂ ಧರ್ಮದ್ವೇಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ವಿಧಾನಸಭಾ ಚುನಾವಣೆ ನಡೆಯುವುದಕ್ಕಿಂತ ಸಮಯಗಳ ಮೊದಲು ದ.ಕ. ಜಿಲ್ಲೆಯನ್ನು ಮೂರು ಹತ್ಯೆಗಳು  ನಡುಗಿಸಿಬಿಟ್ಟವು. ಬಲಿಯಾದವರನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲಾಯಿತು. ಹೀಗೆ ವಿಭಜಿಸಿ ಈ ಹತ್ಯೆಗಳ ಪರ-ವಿರುದ್ಧ  ಮಾತಾಡಿದವರು ಮಕ್ಕಳು, ಕುಟುಂಬ ಎಂದು ಆರಾಮವಾಗಿ ಬದುಕುತ್ತಿದ್ದಾರೆ. ರಾಜಕಾರಣಿಗಳಂತೂ ಆ ಘಟನೆಯನ್ನೇ ಮರೆತಿದ್ದಾರೆ.  ಪತ್ರಿಕೆಗಳೂ ಮರೆತಿವೆ. ಸೋಶಿಯಲ್ ಮೀಡಿಯಾವಂತೂ ಕ್ರಿಕೆಟ್, ಬಿಗ್‌ಬಾಸು, ಅಫೇರು ಎಂದೆಲ್ಲಾ ತನ್ನದೇ ಲೋಕದಲ್ಲಿ ಮುಳುಗಿ  ಹೋಗಿದೆ. ಸದ್ಯ ಈ ಹತ್ಯೆಗಳನ್ನು ಇವತ್ತು ಯಾರಾದರೂ ನೆನಪಿಸುತ್ತಿದ್ದರೆ ಅದು ಸಂತ್ರಸ್ತ ಕುಟುಂಬದವರು ಮಾತ್ರ. ಮಗನನ್ನು  ಕಳಕೊಂಡ ಹೆತ್ತವರು, ಪತಿಯನ್ನು ಕಳಕೊಂಡ ಪತ್ನಿ ಮತ್ತು ಮಕ್ಕಳ ಹೊರತು ಇನ್ನಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇಷ್ಟಿದ್ದೂ,

ರಕ್ತದಾಹದ ಭಾಷೆಯಲ್ಲಿ ಮಾಡಲಾಗುವ ಭಾಷಣಗಳಿಗೆ ಕಡಿವಾಣ ಬಿದ್ದಿಲ್ಲ. ಚಪ್ಪಾಳೆ, ಶಿಳ್ಳೆಗಳೂ ಕಡಿಮೆಯಾಗಿಲ್ಲ. ಒಂದು ಮನೆಯ  ಬೆಳಕನ್ನು ನಂದಿಸುವುದು ಎಷ್ಟು ಆಘಾತಕಾರಿ ಎಂದು ಬುದ್ಧಿ ಹೇಳುವವರಿಗೆ ಮಾನ್ಯತೆಯೂ ಸಿಗುತ್ತಿಲ್ಲ. ಒಂದುಕಡೆ ತನ್ನ ಎಲ್ಲವನ್ನೂ  ಕಳಕೊಂಡು ಕುಟುಂಬವೊಂದು ಕಣ್ಣೀರು ಹಾಕುತ್ತಿರುವಾಗ ಇನ್ನೊಂದು ಕಡೆ ಆ ಕಣ್ಣೀರಿಗೆ ನಾವೇ ಕಾರಣ ಎಂಬಂತೆ  ಸಂಭ್ರಮಪಡುವ  ಕೇಡುಗಾಲ ಇದು. ಇಂಥ ಸ್ಥಿತಿಯಲ್ಲಿ ತಾಯಿ ಮತ್ತು ಮೂವರು ಮಕ್ಕಳ ಹತ್ಯೆ ನಡೆದಿದೆ. ಈ ಹತ್ಯೆಗೆ ಕಾರಣ ಏನೇ ಇರಬಹುದು,  ಆದರೆ ಇಂಥವು ಯಾಕೆ ನಡೆಯುತ್ತಿದೆ ಎಂಬ ಬಗ್ಗೆ ಒಟ್ಟು ಸಮಾಜ ಚಿಂತಿಸಬೇಕಾಗಿದೆ. ಯುವ ಸಮೂಹಕ್ಕೆ ನೆತ್ತರ ರುಚಿ ಹತ್ತಿಸಿದ್ದು  ಯಾರು? ಯಾವುದು? ಸಾಮಾನ್ಯವಾಗಿ, ಇಂಥ ಕೃತ್ಯಗಳಲ್ಲಿ ಹೆಚ್ಚಾಗಿ ಯುವ ಸಮೂಹವೇ ಭಾಗಿಯಾಗುತ್ತಿದೆ. ಕತ್ತಿ-ತಲವಾರನ್ನು ಮ ನಬಂದAತೆ ಬಳಸುತ್ತಿದೆ. ಯಾವುದೋ ಮನೆಯ ದೀಪವನ್ನು ನಂದಿಸಿ, ಜೈಲಿಗೂ ಹೋಗಿ ಊರಿಗೂ ಮನೆಯವರಿಗೂ ಭಾರ ಎ ನ್ನಿಸಿಕೊಳ್ಳುತ್ತಿದೆ. ಜೈಲಿನಿಂದ ಹೊರಬಂದ ಬಳಿಕ ಮತ್ತದೇ ಕೃತ್ಯಗಳಲ್ಲಿ ಭಾಗಿಯಾಗಬೇಕಾದ ಒತ್ತಡವೋ ಅನಿವಾರ್ಯತೆಯೋ  ಎದುರಾಗುತ್ತಿದೆ. ಇವನ್ನು ಈ ಆವೇಶದ ಹುಡುಗರಿಗೆ ಬಿಡಿಸಿ ಹೇಳುವವರು ಯಾರು? ಅಂದಹಾಗೆ,

ಉಡುಪಿಯಲ್ಲಿ ಮೂವರು ಮಹಿಳೆಯರು ಮತ್ತು ಓರ್ವ ಮಗುವನ್ನು ಹತ್ಯೆ ಮಾಡಿದ ಅಪರಾಧಿಯನ್ನು ಈ ವ್ಯವಸ್ಥೆ ಬಂಧಿಸಬಹುದು.  ಆತನಿಗೆ ನ್ಯಾಯಾಲಯದಲ್ಲಿ ಶಿಕ್ಷೆಯೂ ಆಗಬಹುದು. ಆದರೆ ಎರಡು ಪ್ರಶ್ನೆಗಳು ಈ ನಾಗರಿಕ ಸಮಾಜವನ್ನು ಸದಾ ಉತ್ತರಕ್ಕಾಗಿ  ಪೀಡಿಸುವುದನ್ನು ತಪ್ಪಿಸಲಾಗದು. 1. ತನ್ನ ಇಡೀ ಕುಟುಂಬವನ್ನೇ ಕಳಕೊಂಡ ನೂರ್ ಮುಹಮ್ಮದ್ ಎಂಬ ಮೂರು ಮಕ್ಕಳ ಪಾಲಿನ  ಅಪ್ಪ ಮತ್ತು ಹಸೀನಾ ಎಂಬವರ ಪತಿಯ ಒಡಲಾಳದ ಸಂಕಟಕ್ಕೆ ಈ ಪ್ರಭುತ್ವದಿಂದ ಔಷಧಿ ಕೊಡಲು ಸಾಧ್ಯವೇ? 2. ಮಚ್ಚು- ಲಾಂಗು-ಕತ್ತಿ-ಬಂದೂಕು-ಕಡಿ-ಕೊಲ್ಲು, ಸೇಡು-ದ್ವೇಷ... ಇತ್ಯಾದಿಗಳನ್ನೇ ಮನರಂಜನೆಯ ಹೆಸರಲ್ಲಿ ಪ್ರತಿ ಮನೆ ಮನೆಗೂ  ತಲುಪಿಸುತ್ತಿರುವ ಚಿತ್ರರಂಗವನ್ನು ನಾವು ಕಟಕಟೆಯಲ್ಲಿ ನಿಲ್ಲಿಸುವುದು ಯಾವಾಗ?

ಸಿನಿಮಾ ಎಂಬುದು ಒಂದು ಉದ್ಯಮ. ಹಾಕಿದ ದುಡ್ಡನ್ನು ಬಡ್ಡಿಸಮೇತ ವಾಪಸ್ ಪಡಕೊಳ್ಳುವ ಜರೂರತ್ತು ಈ ಕ್ಷೇತ್ರಕ್ಕಿದೆ. ಆ ಕಾರಣ ದಿಂದಲೇ ಮನರಂಜನೆ ಎಂಬ ಗುರಿಯ ಆಚೆಗೆ ವ್ಯಾಪಾರಿ ದೃಷ್ಟಿಕೋನದಿಂದ ಯೋಚಿಸಬೇಕಾದ ಅನಿವಾರ್ಯತೆ ನಿರ್ಮಾಪಕನ ಮೇಲೆ  ಇದ್ದೇ  ಇರುತ್ತದೆ. ಅಂದಹಾಗೆ, ಮನರಂಜನೆ ಮತ್ತು ವ್ಯಾಪಾರ ಇವೆರಡೂ ಸರಳ ರೇಖೆಯಲ್ಲಿ ಚಲಿಸಬಹುದೇ ಹೊರತು  ಜೊತೆಗೂಡುವುದು ಬಹಳ ಕಷ್ಟ. ಇವತ್ತಿನ ಹೆಚ್ಚಿನ ಸಿನಿಮಾಗಳು ಬಂದೂಕು, ಲಾಂಗು-ಮಚ್ಚು ಮತ್ತು ಕ್ರೌರ್ಯಗಳಿಂದ ಹೊರತಾಗಿಲ್ಲ.  ಆರಾಮ ಕೋಣೆಯಲ್ಲಿ ಕುಳಿತು ಸಿನಿಮಾಕ್ಕಾಗಿ ಅದ್ಭುತ ಕತೆ ರಚಿಸುವ ಕತೆಗಾರನ ಮುಂದೆ ಆ ಕತೆ ದೃಶ್ಯರೂಪ ಪಡೆದಾಗ ಅದು  ಸಮಾಜದಲ್ಲಿ ಎಂಥ ಪರಿಣಾಮ ಬೀರಬಹುದು ಎಂಬ ಅರಿವು ಇರುತ್ತದೋ ಗೊತ್ತಿಲ್ಲ. ಹೀರೋ, ಹೀರೋಯಿನ್ ಮತ್ತು ವಿಲನ್  ಪಾತ್ರವನ್ನು ಸೃಷ್ಟಿಸಿ, ಆ ಹೀರೋಯಿನನ್ನು ತನ್ನವಳನ್ನಾಗಿಸುವುದಕ್ಕೆ ಹೀರೋ ಹತ್ತು ಹಲವು ತಂತ್ರಗಳನ್ನು ಹೆಣೆಯುವುದು, ಆ ದಿಶೆಯಲ್ಲಿ  ಹತ್ಯೆ, ಜಗಳ, ಘರ್ಷಣೆ ಇತ್ಯಾದಿಗಳನ್ನು ನಡೆಸುವುದು ಮತ್ತು ಇವೆಲ್ಲವನ್ನೂ ನೋಡಗರ ಮನಸ್ಸಿಗೆ ಸರಿ ಎಂದು ಬಿಂಬಿಸುವುದು ಸಿ ನಿಮಾಗಳಲ್ಲಿ ಸಾಮಾನ್ಯವಾಗಿರುತ್ತದೆ. ಮನರಂಜನೆಯ ಹೆಸರಲ್ಲಿ ಸಿನಿಮಾ ಕ್ಷೇತ್ರ ಇದನ್ನು ಸಮರ್ಥಿಸಿಕೊಳ್ಳಬಹುದು. ಆದರೆ,

 ವೀಕ್ಷಕರೆಲ್ಲ  ಒಂದೇ ಮನಸ್ಥಿತಿಯವರು ಇರಬೇಕಿಲ್ಲವಲ್ಲ. ಒಂದು ಸಿನಿಮಾದಿಂದ ಒಬ್ಬೊಬ್ಬರು ಒಂದೊಂದು ರೀತಿಯ ಪಾಠವನ್ನು ಕಲಿತುಕೊಳ್ಳಬಹುದು. ಇನ್ನೊಬ್ಬರನ್ನು ಮುಗಿಸುವುದಕ್ಕೆ ಅದರಿಂದ ಪ್ರೇರಣೆ ಪಡೆಯುವವರಿರಬಹುದು. ಹತ್ಯೆ ನಡೆಸಿದ ಬಳಿಕ  ತಪ್ಪಿಸಿಕೊಳ್ಳುವ ವಿಧಾನವನ್ನೂ ಸಿನಿಮಾದಿಂದ ಕಲಿತುಕೊಳ್ಳುವವರಿರಬಹುದು. ಸಿನಿಮಾಗಳಿಂದ ಪ್ರೇರಣೆ ಪಡೆದು ನಡೆದ ಅನೇಕ ಅ ಪರಾಧ ಕೃತ್ಯಗಳು ಈಗಾಗಲೇ ಸುದ್ದಿಗೀಡಾಗಿವೆ. ಮಲಯಾಳಂನ ದೃಶ್ಯಂ ಸಿನಿಮಾದ ಪ್ರೇರಣೆ ಯಿಂದ ಅಪರಾಧ ಕೃತ್ಯವೆಸಗಿದವರು  ಕೆಲವು ಸಮಯದ ಹಿಂದೆ ಸುದ್ದಿಗೀಡಾಗಿದ್ದರು. ಇವಲ್ಲದೇ ಮನರಂಜನೆಯ ಹೆಸರಲ್ಲಿ ನಡೆಯುವ ಕೆಲವು ಹಿಂಸಾಸ್ವರೂಪಿ ಆಟಗಳೂ  ಪ್ರತಿ ಮನೆಯ ಟಿವಿ ಯಲ್ಲೂ ವಿಜೃಂಭಿಸುತ್ತಿವೆ. ಮೊಬೈಲ್‌ನ ಈ ಕಾಲದಲ್ಲಿ ಟಿವಿಯ ಹಂಗಿಲ್ಲದೇ ಪ್ರತಿಯೊಬ್ಬರಿಗೂ ಇವೆಲ್ಲ ದಕ್ಕುತ್ತಲೂ  ಇವೆ. ಮನುಷ್ಯ ಕ್ರೂರಿಯಾಗುವುದಕ್ಕೆ ಏನೇನೆಲ್ಲ ಬೇಕೋ ಅವೆಲ್ಲವನ್ನೂ ಒದಗಿಸುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯೂ ನಾವಿರುವ ಇದೇ  ಸಮಾಜದಲ್ಲಿದೆ. ಸದ್ಯ ನಾವು ಇವೆಲ್ಲವನ್ನೂ ಹರಡಿಟ್ಟುಕೊಂಡೇ ಈ ತಾಯಿ ಮಕ್ಕಳ ಹತ್ಯೆಯ ಸಹಿತ ಎಲ್ಲವನ್ನೂ ವಿಶ್ಲೇಷಣೆಗೆ ಒಳಪಡಿಸ ಬೇಕಾಗಿದೆ. ಮುಖ್ಯವಾಗಿ, ಯುವ ಸಮೂಹಕ್ಕೆ ಸಹನೆಯ ಮತ್ತು ಮೌಲ್ಯದ ಪಾಠ ವನ್ನು ತಿಳಿ ಹೇಳುವ ಪ್ರಯತ್ನ ಪ್ರತಿ ಮನೆಯಲ್ಲೂ  ನಡೆಯಬೇಕಾಗಿದೆ. ಹುಚ್ಚು ಆವೇಶಕ್ಕೆ ಬಿದ್ದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ತಡೆಯುವುದಕ್ಕೆ ಪ್ರತಿ ಮನೆಯೂ ಎಚ್ಚರಿಕೆಯ  ಹೆಜ್ಜೆ ಇಡಬೇಕಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ಯೆಗೀಡಾದ ಅಕ್ಷಯ್‌ನ ತಂದೆ ಎದೆ ಬಿರಿದು ಕಣ್ಣೀರು ಹಾಕುವ ವೀಡಿಯೋವನ್ನು ಸೋಶಿಯಲ್  ಮೀಡಿಯಾದಲ್ಲಿ ಅಸಂಖ್ಯ ಮಂದಿ ವೀಕ್ಷಿಸಿದ್ದಾರೆ. ನೋಡಿದ ಎಲ್ಲರ ಕಣ್ಣೂ ಒದ್ದೆಯಾಗಿದೆ. ಇದೀಗ ಉಡುಪಿಯ ನೂರ್ ಮುಹಮ್ಮದ್  ಅವರ ಸರದಿ. ತನ್ನ ಕುಟುಂಬದ ಎಲ್ಲರನ್ನೂ ಕಳಕೊಂಡು ಒಂಟಿಯಾದ ಅವರ ಸಂಕಟವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವರು  ವಿದೇಶಕ್ಕೆ ಹೋಗಿರುವುದೇ ಪತ್ನಿ-ಮಕ್ಕಳನ್ನು ಸುಖವಾಗಿಡುವುದಕ್ಕೆ. ರಾತ್ರಿ-ಬೆಳಗಾಗುವುದರೊಳಗೆ ತನ್ನ ಇಡೀ ಪರಿವಾರವೇ ಹೊರಟು  ಹೋದರೆ ಆ ವ್ಯಕ್ತಿಗಾಗುವ ಆಘಾತ ಹೇಗಿರಬಹುದು? ದ್ವೇಷದ ಹೆಸರಲ್ಲೋ  ಸೇಡಿನ ಹೆಸರಲ್ಲೋ  ತಲವಾರು-ಬಂದೂಕು ಎತ್ತಿಕೊಳ್ಳುವ  ಪ್ರತಿಯೊಬ್ಬರೂ ಈ ಕುರಿತಂತೆ ಅವಲೋಕಿಸಬೇಕು. ಹತ್ಯೆ ಯಾವುದಕ್ಕೂ ಪರಿಹಾರ ಅಲ್ಲ, ಅದು ಕುಟುಂಬವೊಂದರ ದೀರ್ಘ ಕಣ್ಣೀರ  ಬದುಕಿಗೆ ಆರಂಭ ಅಷ್ಟೇ.

Monday 13 November 2023

ಬಿಜೆಪಿ ಮತ್ತು ಮಡಿಲ ಮಾಧ್ಯಮವನ್ನು ಬೆತ್ತಲೆ ಮಾಡಿದ ಡೊಮಿನಿಕ್ ಮಾರ್ಟಿನ್

 





ಕೇರಳ ಬಾಂಬ್ ಸ್ಫೋಟದ ಆರೋಪಿಯನ್ನು ಘಟನೆ ನಡೆದ 7 ಗಂಟೆಗಳ ಒಳಗೆ ಪೊಲೀಸರು ಬಂಧಿಸಿದ್ದಾರೆ. ಕೇರಳದ ಕೊಚ್ಚಿ  ಸಮೀಪದ ಕಳಮಶ್ಶೇರಿಯ ಕನ್ವೆನ್ಶನ್ ಸೆಂಟರ್‌ನಲ್ಲಿ ಬಾಂಬ್ ಸ್ಫೋಟ ನಡೆದಾಗ ಸಮಯ ಸುಮಾರು ಬೆಳಗ್ಗಿನ 9 ಗಂಟೆ. ಆರೋಪಿ  ಡೊಮಿನಿಕ್ ಮಾರ್ಟಿನ್ ಎಂಬವನನ್ನು ಬಂಧಿಸಿದ್ದೇವೆ ಎಂದು ಕೇರಳ ಎಡಿಜಿಪಿ ಎಂ.ಆರ್. ಅಜಿತ್ ಕುಮಾರ್ ಮಾಧ್ಯಮಗಳ ಮುಂದೆ  ಘೋಷಿಸುವಾಗ ಸಮಯ ಸಂಜೆ 4 ಗಂಟೆ 15 ನಿಮಿಷ. ಆದರೆ, ಈ 9ರಿಂದ ನಾಲ್ಕೂ ಕಾಲು ಗಂಟೆಯ ಈ ಸಣ್ಣ ಅವಧಿಯ ಒಳಗೆ  ಮಾಧ್ಯಮಗಳು, ಸೋಶಿಯಲ್ ಮೀಡಿಯಾ ಬಳಕೆದಾರರು ಮತ್ತು ಬಿಜೆಪಿ ನಾಯಕರು ಜನರನ್ನು ದಾರಿ ತಪ್ಪಿಸುವುದಕ್ಕೆ ಹರಡಿದ  ಸುಳ್ಳುಗಳು ಮಾತ್ರ ಭಯಾನಕವಾಗಿತ್ತು. ಈ ಸ್ಫೋಟದ ಹಿಂದೆ ಮುಸ್ಲಿಮರಿದ್ದಾರೆ ಎಂದು ನೇರವಾಗಿಯೋ ಪರೋಕ್ಷವಾಗಿಯೋ  ನಂಬಿಸಲು ಅವರೆಲ್ಲ ಯತ್ನಿಸಿದರು. ಕೇರಳ ಬಿಜೆಪಿ ರಾಜ್ಯ ಸಮಿತಿ ಸದಸ್ಯ ಸಂದೀಪ್ ಜಿ. ವಾರಿಯರ್ ಅಂತೂ ‘ಯಹೋವನ ಸಾಕ್ಷಿ’  ಎಂಬ ಪಂಥವನ್ನು ಯಹೂದಿಗಳ ಗುಂಪು ಎಂದೇ ಕರೆದರು. ‘ಯಹೂದಿಗಳ ಪವಿತ್ರ ಗ್ರಂಥವಾದ ತೋರಾವನ್ನೇ ಈ ಯಹೋವನ  ಸಾಕ್ಷಿಗಳೂ ಅನುಸರಿಸುತ್ತಾರೆ, ಇವರಿಬ್ಬರೂ ಒಂದೇ ದೈವಿಕ ಗ್ರಂಥದ ಅನುಯಾಯಿಗಳು, ಹಮಾಸನ್ನು ಸಮರ್ಥಿಸಿದ ಸಿಪಿಎಂ ಮತ್ತು  ಕಾಂಗ್ರೆಸ್‌ಗಳು ಈ ಭಯೋತ್ಪಾದಕ ದಾಳಿಯ ಹೊಣೆಯನ್ನು ವಹಿಸಿಕೊಳ್ಳಬೇಕು..’ ಎಂದು ಹೇಳಿದರು. ಅಂದರೆ,

ಹಮಾಸ್ ಮೇಲೆ ಇಸ್ರೇಲ್ ಸಾರಿರುವ ಯುದ್ಧಕ್ಕೆ ಆಕ್ರೋಶಗೊಂಡ ಮುಸ್ಲಿಮರು ಯಹೂದಿಯರದ್ದೇ  ಪಂಗಡವಾದ ಯಹೋವನ  ಸಾಕ್ಷಿಗಳ ಮೇಲೆ ಬಾಂಬ್ ದಾಳಿ ನಡೆಸಿದ್ದಾರೆ ಎಂದೇ ಇದರರ್ಥ. ಇದೇ ಭಾವದ ಹೇಳಿಕೆಯನ್ನು ಕೇಂದ್ರ ಸಚಿವ ರಾಜೀವ್ ಚಂದ್ರ ಶೇಖರ್ ಕೂಡಾ ನೀಡಿದರು-
‘ಕೇರಳವನ್ನು ಲವ್ ಜಿಹಾದ್ ನಾಡನ್ನಾಗಿಸಲು ಹಾಗೂ ದ್ವೇಷವನ್ನು ಹಬ್ಬಿಸಲು ಭಯೋತ್ಪಾದಕ ಹಮಾಸ್  ಸಂಘಟನೆಯನ್ನು ಬೆಂಬಲಿಸುತ್ತಿರುವ ಕಾಂಗ್ರೆಸ್-ಸಿಪಿಎಂ, ಯುಪಿಎ ಮೈತ್ರಿಕೂಟದ ಲಜ್ಜೆಗೆಟ್ಟ ತುಷ್ಠೀಕರಣ ರಾಜಕೀಯಕ್ಕೆ  ನಾಚಿಕೆಯಾಗಬೇಕು..’ ಎಂದವರು ಟ್ವೀಟ್ ಮಾಡಿದರು. ಈ ಟ್ವೀಟ್‌ನ ಟಾರ್ಗೆಟ್ ಕೂಡಾ ಮುಸ್ಲಿಮರೇ. ಬಿಜೆಪಿಯ ಇನ್ನೋರ್ವ  ನಾಯಕ ಮತ್ತು ಅದಕ್ಕಿಂತಲೂ ಮುಖ್ಯವಾಗಿ ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅಂತೂ ಇವರಿಗಿಂತಲೂ ಒಂದು ಹೆಜ್ಜೆ  ಮುಂದಿಟ್ಟರು-
 `ಕಾಂಗ್ರೆಸ್ ಮತ್ತು ಸಿಪಿಎಂನಿಂದ  ದಶಕಗಳ ಕಾಲದ ಓಲೈಕೆ ಮತಬ್ಯಾಂಕ್ ರಾಜಕಾರಣವು ಮುಸ್ಲಿಮರನ್ನು  ಅವಿದ್ಯಾವಂತರನ್ನಾಗಿ, ಹಿಂದುಳಿದವರನ್ನಾಗಿ ಮತ್ತು ಅಪರಾಧಿಗಳನ್ನಾಗಿ ಮಾಡಿದೆ, ಅದರಿಂದಾಗಿ ಭಯೋತ್ಪಾದನೆಯನ್ನು ನಾವು ಮನೆಬಾಗಿಲಿಗೆ ಆಹ್ವಾನಿಸಿದ್ದೇವೆ, ಈ ಜನರು ಮುಖ್ಯವಾಹಿನಿಗೆ ಬರಲು ಯಾವಾಗ ಯೋಚಿಸುತ್ತಾರೆ..’ ಎಂದು ಟ್ವೀಟ್ ಮಾಡಿದರು. ಈ  ಟ್ವೀಟ್‌ನ ಗುರಿ ಕೂಡಾ ಮುಸ್ಲಿಮರೇ. ಮುಸ್ಲಿಮರು ಅವಿದ್ಯಾವಂತರಾಗಿದ್ದು, ಆ ಕಾರಣದಿಂದ ಅಪರಾಧಿಗಳಾಗುತ್ತಿದ್ದಾರೆ ಮತ್ತು  ಭಯೋತ್ಪಾದನೆ ಯಲ್ಲಿ ಭಾಗಿಯಾಗುತ್ತಿದ್ದಾರೆ ಎಂಬರ್ಥವನ್ನೇ ಈ ಟ್ವೀಟ್ ಧ್ವನಿಸುತ್ತದೆ. ಇವೆಲ್ಲಕ್ಕೂ ಕಲಶ ಇಟ್ಟಂತೆ ಕನ್ನಡದ ಪವರ್ ಟಿವಿ  ಸುದ್ದಿ ಪ್ರಕಟಿಸಿತು, ‘ಬಾಂಬ್ ಸ್ಫೋಟದ ಆರೋಪಿ ಪೊಲೀಸರಿಗೆ ಶರಣು’ ಎಂಬ ಶೀರ್ಷಿಕೆಯ ಸುದ್ದಿಯನ್ನು ಮುಸ್ಲಿಮನ  ಫೋಟೋದೊಂದಿಗೆ ಅದು ಪ್ರಕಟಿಸಿತು. ಇಷ್ಟೇ ಅಲ್ಲ,

ಈ ಸ್ಫೋಟ ನಡೆದ ಬೆನ್ನಿಗೇ ಸೋಷಿಯಲ್ ಮೀಡಿಯಾವಂತೂ ಸುಳ್ಳುಗಳನ್ನೇ ಹೊತ್ತುಕೊಂಡು ಮನಬಂದಂತೆ ತಿರುಗಾಡಿತು.  ‘ಯಹೋವನ ಸಾಕ್ಷಿಗಳು’ ಎಂಬ ಪಂಥವನ್ನು ಅದು ಯಹೂದಿಗಳೆಂದೇ ಬಿಂಬಿಸಿತು. ಯಹೂದಿಗಳನ್ನೇ ಗುರಿ ಮಾಡಿ ಬಾಂಬ್  ಸ್ಫೋಟಿಸಲಾಗಿದೆ ಎಂಬಂತೆ  ಆಡಿಕೊಂಡಿತು. ಈ ಸ್ಫೋಟಕ್ಕಿಂತ ಮೊದಲು ಕೇರಳದಲ್ಲಿ ನಡೆದ ಫೆಲೆಸ್ತೀನ್ ಪರ ರ‍್ಯಾಲಿಗಳನ್ನು ಎತ್ತಿ  ಹೇಳುತ್ತಾ, ಈ ಸ್ಫೋಟಕ್ಕೂ ಈ ರ‍್ಯಾಲಿಗೂ ನಡುವೆ ಸಂಬಂಧವನ್ನು ಕಲ್ಪಿಸಿತು. ನಿಜವಾಗಿ,

ಬಾಂಬ್ ಸ್ಫೋಟಗೊಂಡ ಕಳಮಶ್ಶೇರಿಯಲ್ಲಿ ಯಹೂದಿಗಳೇ ಇಲ್ಲ. ಕೇರಳದಲ್ಲಿ ಒಟ್ಟು 15ರಿಂದ 20ರಷ್ಟು ಯಹೂದಿಗಳಿದ್ದಾರೆ ಎಂದು  ಅಂಕಿ-ಅಂಶ  ಹೇಳುತ್ತದೆ. ಫ್ಯೂ ರಿಸರ್ಚ್ ಸೆಂಟರ್ 2021ರಲ್ಲಿ ಪ್ರಕಟಿಸಿದ ವರದಿ ಪ್ರಕಾರ, ಭಾರತದಲ್ಲಿ ಹೆಚ್ಚೆಂದರೆ 3ರಿಂದ 4 ಸಾವಿರ  ಯಹೂದಿ ಮತ್ತು ಬಹಾಯಿ ಸಮುದಾಯದವರಿದ್ದಾರೆ. ಕೇರಳದಲ್ಲಿ ಹಿಂದೂಗಳ ಸಂಖ್ಯೆ 54% ಇದ್ದರೆ, ಮುಸ್ಲಿಮರು 22% ಮತ್ತು  ಕ್ರೈಸ್ತರು 18% ಇದ್ದಾರೆ. ಈ ಯಹೋವನ ಸಾಕ್ಷಿಗಳು ಎಂಬುದು ಕ್ರೈಸ್ತರದ್ದೇ  ಒಂದು ಬಂಡಾಯ ಪಂಥ. ಈ ಗುಂಪು ಕ್ರೈಸ್ತರ ತ್ರಿ  ಏಕತ್ವವನ್ನು ಒಪ್ಪುವುದಿಲ್ಲ. ಇವರು ಯಹೋವನನ್ನು ನಿಜವಾದ ಸೃಷ್ಟಿಕರ್ತ ಎಂದು ವಾದಿಸುತ್ತಾರೆ ಮತ್ತು ಈ ಯಹೋವನು ಪ್ರವಾದಿ  ಇಬ್ರಾಹೀಮ್, ಮೂಸಾ ಮತ್ತು ಈಸಾರ ದೇವ ಎಂದು ಹೇಳುತ್ತಾರೆ. ಹಾಗೆಯೇ, ಇವರ ವೆಬ್‌ಸೈಟ್ ಮಾಹಿತಿಯ ಆಧಾರದಲ್ಲಿ  ಹೇಳುವುದಾದರೆ, ಇವರು ಝಿಯೋನಿಝಮ್ ಅನ್ನು ಒಂದು ಧರ್ಮ ಎಂದು ಒಪ್ಪುವುದಿಲ್ಲ ಮತ್ತು ರಾಜಕೀಯ ಝಿಯೋನಿಝಮ್  ಬಗ್ಗೆ ತಟಸ್ಥ ನಿಲುವನ್ನು ಹೊಂದಿದ್ದಾರೆ. ಆದರೆ, ಈ ಎಲ್ಲ ಸತ್ಯವನ್ನು ಅಡಗಿಸಿಟ್ಟು ಬಿಜೆಪಿ ನಾಯಕರು, ಮಾಧ್ಯಮ ಮತ್ತು ಸೋಶಿಯಲ್  ಮೀಡಿಯಾದ ಒಂದು ಗುಂಪು ಅತ್ಯಂತ ಅಮಾನವೀಯವಾದ ಪರಮ ಸುಳ್ಳನ್ನು ಹಂಚಿಕೊಂಡಿದೆ. ಆ ಮೂಲಕ ತಮ್ಮ ಮುಸ್ಲಿಮ್  ದ್ವೇಷವನ್ನು ಜಗಜ್ಜಾಹೀರುಗೊಳಿಸಿದೆ. ನಿಜವಾಗಿ,

ಈ ದೇಶದಲ್ಲಿ ಮುಸ್ಲಿಮ್ ದ್ವೇಷ ಎಂಬುದು ಒಂದೊಳ್ಳೆಯ ಸರಕು. ಪ್ರತಿನಿತ್ಯ ಈ ಸರಕನ್ನು ಮಾರುವ ಒಂದು ಗುಂಪು ಸೋಶಿಯಲ್  ಮೀಡಿಯಾದಲ್ಲಿ ಸಕ್ರಿಯವಾಗಿದೆ. ಮುಸ್ಲಿಮರನ್ನು ಖಳರಂತೆ ಬಿಂಬಿಸುವುದೇ ಈ ಗುಂಪಿನ ಪರಮ ಉದ್ದೇಶ. ಇದೇ ಗುಂಪು ಇದೇ  ಕೇರಳದ ವೀಡಿಯೋವೊಂದನ್ನು ವಾರದ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿತ್ತು. ಮುಸ್ಲಿಮ್ ವಿದ್ಯಾರ್ಥಿನಿಯರು  ಓರ್ವ ಹಿಂದೂ ಮಹಿಳೆಯೊಂದಿಗೆ ವಾಗ್ವಾದ ನಡೆಸುವ ವೀಡಿಯೋ. ಬುರ್ಖಾ ಧರಿಸಿರದ ಕಾರಣಕ್ಕಾಗಿ ಹಿಂದೂ ಮಹಿಳೆಯನ್ನು  ಬಸ್ಸಿನಿಂದ ಕೆಳಗಿಳಿಸಿದ ಮುಸ್ಲಿಮ್ ವಿದ್ಯಾರ್ಥಿನಿಯರು ಎಂಬ ಒಕ್ಕಣೆಯೊಂದಿಗೆ ಈ ವೀಡಿಯೋವನ್ನು ಟ್ವೀಟರ್(ಎಕ್ಸ್)ನಲ್ಲಿ ವ್ಯಾಪಕವಾಗಿ  ಹಂಚಿಕೊಳ್ಳಲಾಗಿತ್ತು. ಉತ್ತರ ಭಾರತವೂ ಸೇರಿದಂತೆ ವಿದೇಶದಲ್ಲೂ ಈ ವೀಡಿಯೋ ಭಾರೀ ಪ್ರಚಾರವನ್ನು ಪಡೆಯಿತು. ‘ಪಶ್ಚಿಮ  ಕೇರಳದಲ್ಲಿ ಬುರ್ಖಾ ಧರಿಸದೇ ಬಸ್ಸಿನಲ್ಲಿ ಪ್ರಯಾಣಿಸಲೂ ಸಾಧ್ಯವಿಲ್ಲ..’ ಎಂದು ಈ ವೀಡಿಯೋ ಹಂಚಿಕೊಂಡ ಬಿಜೆಪಿಯ ರಾಷ್ಟ್ರೀಯ  ಕಾರ್ಯದರ್ಶಿ ಅನಿಲ್ ಆ್ಯಂಟನಿ ಟ್ವೀಟ್ ಮಾಡಿದ್ದರು. ಆದರೆ, ಈ ವೀಡಿಯೋದ ಕುರಿತಂತೆ ಅಕ್ಟೋಬರ್ 28ರಂದು ಇಂಡಿಯಾ ಟುಡೇ  ಪತ್ರಿಕೆಯು ಸತ್ಯಶೋಧನಾ ವರದಿಯನ್ನು ಪ್ರಕಟಿಸುವ ಮೂಲಕ ಸುಳ್ಳಿಗೆ ಬಲವಾದ ಏಟು ಕೊಟ್ಟಿತು. ನಿಜವಾಗಿ, ಆ ವೀಡಿಯೋಕ್ಕೂ  ಧರ್ಮಕ್ಕೂ ಸಂಬಂಧವೇ ಇರಲಿಲ್ಲ. ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾಕ್ಕೆ ಹೋಗುತ್ತಿದ್ದ ಬಸ್ಸಿನೊಳಗೆ ಅಕ್ಟೋಬರ್ 20ರಂದು ಆ  ಘಟನೆ ನಡೆದಿತ್ತು.

ಕುಂಬಳೆಯ ಖನ್ಸಾ ವಿಮೆನ್ಸ್ ಕಾಲೇಜಿನ ವಿದ್ಯಾರ್ಥಿನಿಯರು ಬಸ್ಸನ್ನು ತಡೆದು ಹತ್ತಿದ್ದರು. ಕಾಲೇಜಿನ ಎದುರು ಬಸ್ ನಿಲುಗಡೆ ಇಲ್ಲದೇ  ಇರುವುದನ್ನು ಪ್ರತಿಭಟಿಸಿ ಅವರು ಬಸ್ ತಡೆದಿದ್ದರು. ವೀಡಿಯೋದಲ್ಲಿರುವ ಆಶಾ ಭಾಸ್ಕರ್ ಅನ್ನುವ ಮಹಿಳೆ ಕುಂಬಳೆಯಲ್ಲಿರುವ ಶಿಕ್ಷಣ  ಸಂಸ್ಥೆಯೊಂದರ ಅಧಿಕಾರಿಯಾಗಿದ್ದು, ಬಸ್ ತಡೆದುದನ್ನು ಪ್ರಶ್ನಿಸಿದ್ದಲ್ಲದೇ, ಬಸ್ ಪರ ವಾದಿಸಿದ್ದರು. ಇದು ವಿದ್ಯಾರ್ಥಿನಿಯರನ್ನು  ಕೆರಳಿಸಿತ್ತು. ಅಲ್ಲದೇ, ಬಸ್ ಹತ್ತುವ ಗಡಿಬಿಡಿಯಲ್ಲಿ ವಿದ್ಯಾರ್ಥಿನಿಯರು ಅವರ ಪಾದಕ್ಕೂ ತುಳಿದಿದ್ದರು. ಈ ಹಿನ್ನೆಲೆಯಲ್ಲೇ  ಆ ವಾಗ್ವಾದ  ನಡೆದಿತ್ತು. ಧರ್ಮಕ್ಕೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಆಶಾ ಭಾಸ್ಕರ್ ಇಂಡಿಯಾ ಟುಡೇಯೊಂದಿಗೆ ಹೇಳಿದರು. ಇವೇ ಅಭಿಪ್ರಾಯವನ್ನು ಬಸ್‌ನ ಕಂಡೆಕ್ಟರ್ ಮನೋಜ್ ಕೂಡಾ ಹೇಳಿದರು. ಹಾಗೆಯೇ, ‘ಆ ವೀಡಿಯೋದ ಜೊತೆಗೆ ಹಂಚಿಕೊಳ್ಳುತ್ತಿರುವ  ಮಾಹಿತಿಗಳು ಸಂಪೂರ್ಣ ಸುಳ್ಳಿನಿಂದ ಕೂಡಿದೆ’ ಎಂದು ಕುಂಬಳೆ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಅನೂಪ್ ಕುಮಾರ್ ಕೂಡಾ  ಹೇಳಿದರು. ಖನ್ಸಾ ಕಾಲೇಜಿನ ಮುಂಭಾಗ ಬಸ್ ನಿಲ್ಲಿಸಬೇಕೆಂದು ಕಾಲೇಜು ಆಗ್ರಹಿಸುತ್ತಿದ್ದು, ಆರ್.ಟಿ.ಓ. ಅಧಿಕಾರಿಗಳು ಇನ್ನೂ ಅದಕ್ಕೆ  ಅನುಮತಿಸಿಲ್ಲ ಎಂದವರು ಹೇಳಿದರಲ್ಲದೇ, ವೀಡಿಯೋದಲ್ಲಿರುವ ಮಹಿಳೆ ಯಾವ ದೂರನ್ನೂ ಕೊಟ್ಟಿಲ್ಲ ಎಂದೂ ಹೇಳಿದರು. ಈ ಎಲ್ಲ  ಮಾಹಿತಿಯನ್ನು ಇಂಡಿಯಾ ಟುಡೇ ಫ್ಯಾಕ್ಟ್ ಚೆಕ್ ವರದಿಯಲ್ಲಿ ವಿಸ್ತೃತವಾಗಿ  ವಿವರಿಸಲಾಗಿದೆ. ಅಂದಹಾಗೆ,

ಸುಳ್ಳು ಧರ್ಮವಿರೋಧಿ. ಆದರೆ, ಧರ್ಮ ರಕ್ಷಣೆ ಮಾಡುತ್ತೇವೆ ಎಂದು ಘೋಷಿಸುತ್ತಾ ತಿರುಗುವ ಗುಂಪು ಮತ್ತು ರಾಜಕೀಯ  ಪಕ್ಷವೊಂದು ತಮ್ಮ ಉದ್ದೇಶ ಸಾಧನೆಗಾಗಿ ಸುಳ್ಳನ್ನೇ ಆಶ್ರಯಿಸಿದೆ. ಇದು ಅತ್ಯಂತ ಆಘಾತಕಾರಿ ಮತ್ತು ವಿಡಂಬನಾತ್ಮಕ. ನಿಜವಾಗಿ,  ಮುಸ್ಲಿಮ್ ದ್ವೇಷವನ್ನೇ ಹಿಂದೂ ಧರ್ಮ ರಕ್ಷಣೆ ಎಂದು ನಂಬಿರುವ ಈ ಗುಂಪಿನಿಂದಲೇ ಹಿಂದೂ ಧರ್ಮಕ್ಕೆ ಅಪಾಯ ಇದೆ. ಧರ್ಮ  ಎಂಬ ಸತ್ಯಕ್ಕೆ ಸುಳ್ಳು ಎಂಬ ಅಧರ್ಮ ಎಂದೂ ಉತ್ತರ ಅಲ್ಲ, ಪರ್ಯಾಯವೂ ಅಲ್ಲ.

Monday 30 October 2023

ಧರ್ಮದ್ವೇಷದ ಕಾರ್ಖಾನೆಯಲ್ಲಿ ಉತ್ಪಾದನೆಯಾಗುತ್ತಿರುವ ಸುಳ್ಳುಗಳು

 



ಕಳೆದವಾರ ಎರಡು ಸುದ್ದಿಗಳು ಸದ್ದು ಮಾಡಿದುವು. 

1. ಕೇರಳದ ಕೋಝಿಕೋಡ್‌ನಲ್ಲಿ ಫೆಲೆಸ್ತೀನ್ ಪರ ಮಾಡಲಾದ ರ‍್ಯಾಲಿ.
 2.  ಮಂದಿರದ ಅರ್ಚಕರಿಗೆ ಬ್ಯಾಟ್‌ನಿಂದ ಥಳಿಸಲಾದ ಘಟನೆ.

ಈ ಎರಡೂ ಘಟನೆಗಳಿಗೆ ಸಂಬಂಧಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹಂಚಿಕೆಯಾದುವು. ಟ್ವೀಟರ್,  ಫೇಸ್‌ಬುಕ್ ಮತ್ತು ವಾಟ್ಸಪ್‌ಗಳಲ್ಲಿ ಈ ವೀಡಿಯೋಗಳನ್ನು ಅದಕ್ಕೆ ನೀಡಲಾದ ಒಕ್ಕಣೆಯೊಂದಿಗೆ ಅಸಂಖ್ಯ ಮಂದಿ ಹಂಚಿಕೊಂಡರು.  ಮುಸ್ಲಿಮ್ ವಿರೋಧಿ ಮತ್ತು ಧರ್ಮದ್ವೇಷವನ್ನು ಕೆರಳಿಸುವುದಕ್ಕೆ ಈ ಎರಡೂ ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ  ಅಸಂಖ್ಯ ಮಂದಿ ಬಳಸಿಕೊಂಡರು. ನಿಜವಾಗಿ,

 ಈ ಎರಡೂ ವೀಡಿಯೋಗಳು ಮುಸ್ಲಿಮರಿಗೆ ಸಂಬಂಧಿಸಿದ್ದೇ  ಆಗಿರಲಿಲ್ಲ. ಫೆಲೆಸ್ತೀನ್  ಪರ ಕೋಝಿಕ್ಕೋಡ್‌ನಲ್ಲಿ ರ‍್ಯಾಲಿ ನಡೆಸಿದ್ದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಎಂಬ ರಾಜಕೀಯ ಪಕ್ಷ. ಎಸ್.ಕ್ಯು.ಆರ್. ಇಲ್ಯಾಸ್  ಇದರ ರಾಷ್ಟ್ರೀಯ ಅಧ್ಯಕ್ಷರಾದರೆ, ರವಿಶಂಕರ್ ತ್ರಿಪಾಠಿ ರಾಷ್ಟ್ರೀಯ ಉಪಾಧ್ಯಕ್ಷ. ಕೇರಳ ಘಟಕದ ಅಧ್ಯಕ್ಷರಾಗಿ ರಝಾಕ್ ಮಲೇರಿ  ಎಂಬವರು ಕಾರ್ಯನಿರ್ವಹಿಸುತ್ತಿದ್ದರೆ, ಸುರೇಂದ್ರನ್ ಕರಿಪುಝ ಎಂಬವರು ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ಉಷಾ ಕುಮಾರಿ,  ಜ್ಯೋತಿವ್ಯಾಸ್, ಗಣೇಶ್, ಪ್ರೇಮ ಮುಂತಾದವರು ಕಾರ್ಯದರ್ಶಿಗಳಾಗಿ ಸಕ್ರಿಯವಾಗಿದ್ದಾರೆ. ಜಾನ್ ಉಪಾಧ್ಯಕ್ಷರಾಗಿದ್ದಾರೆ. ಹಾಗೆಯೇ,  ಖ್ಯಾತ ಸಾಹಿತ ಬಿ.ಟಿ. ಲಲಿತಾ ನಾಯಿಕ್ ಅವರು ಈ ಮೊದಲು ಕರ್ನಾಟಕ ಘಟಕದ ಅಧ್ಯಕ್ಷರಾಗಿ ಕರ್ತವ್ಯ ನಿಭಾಯಿಸಿದ್ದರು. ಆದರೆ,

ಈ ಎಲ್ಲವನ್ನೂ ಅಡಗಿಸಿಟ್ಟು ಈ ರಾಷ್ಟ್ರೀಯ ಪಕ್ಷದ ವಿರುದ್ಧವೇ ಸುಳ್ಳುಗಳನ್ನು ಹರಡಲಾಯಿತು. ಈ ಸುಳ್ಳಿಗೆ ಚಾಲನೆ ನೀಡಿದ್ದು ಬಿಜೆಪಿ  ಯುವ ಮೋರ್ಚಾದ ರಾಷ್ಟ್ರೀಯ ಕಾರ್ಯದರ್ಶಿ ತೇಜಿಂದರ್ ಪಾಲ್ ಬಗ್ಗಾ. ಕೇರಳದಲ್ಲಿ ಹಮಾಸ್ ಉಗ್ರರ ಪರ ರ‍್ಯಾಲಿ  ನಡೆಸಲಾಗಿದ್ದು, ಫೆಲೆಸ್ತೀನ್ ಧ್ವಜದ ಬದಲು ಇಟಲಿ ಧ್ವಜವನ್ನು ಪ್ರದರ್ಶಿಸಲಾಗಿದೆ ಎಂದು ಅವರು ಟ್ವೀಟರ್‌ನಲ್ಲಿ (ಎಕ್ಸ್)  ವೀಡಿಯೋವೊಂದನ್ನು ಹಂಚಿಕೊಂಡರು. ಬಿಜೆಪಿ ರಾಷ್ಟ್ರೀಯ ವಕ್ತಾರ ಅನಿಲ್ ಆ್ಯಂಟನಿಯಂತೂ  ಇದೇ ವೀಡಿಯೋಗೆ ಇನ್ನಷ್ಟು ಉ ಪ್ಪು-ಖಾರ ಸೇರಿಸಿ ಟ್ವೀಟ್ ಮಾಡಿದರು. ಕೇರಳದಲ್ಲಿ ಇಸ್ಲಾಮಿಕ್ ಮೂಲಭೂತವಾದ ಮತ್ತು ತೀವ್ರಗಾಮಿ ನಿಲುವು ಗಂಭೀರ ಹಂತದಲ್ಲಿದೆ ಎಂಬಂತೆ  ಬರೆದು ಬಗ್ಗಾ ಅವರದೇ ವೀಡಿಯೋವನ್ನು ಹಂಚಿಕೊಂಡಿದ್ದರು. ಇವರು ಕೇರಳದ ಕಾಂಗ್ರೆಸ್ ಮುಖಂಡ ಎ.ಕೆ.  ಆ್ಯಂಟನಿಯವರ ಮಗ. ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡಿದ್ದರು. ಕೇರಳದವರಾದ ಇವರಿಗೆ ಕೇರಳದ ವೆಲ್‌ಫೇರ್  ಪಾರ್ಟಿಯ ಬಗ್ಗೆ ಮತ್ತು ಅದರ ಧ್ವಜದ ಬಗ್ಗೆ ತಿಳಿದಿಲ್ಲ ಎಂದು ಹೇಳುವಂತೆಯೂ ಇಲ್ಲ. ಆದರೂ ತೇಜಿಂದರ್ ಪಾಲ್ ಬಗ್ಗಾ ಹರಡಿದ  ಸುಳ್ಳನ್ನೇ ಇವರೂ ಹಿಂದು-ಮುಂದು  ನೋಡದೇ ಹಂಚಿಕೊಂಡರು. ನಿಜವಾಗಿ,

ಕೇರಳದಲ್ಲಿ ಹಮಾಸ್‌ನ ಪರ ಈ ರ‍್ಯಾಲಿ ನಡೆಸಲಾಗಿರಲಿಲ್ಲ ಮತ್ತು ಇಟಲಿಯ ಧ್ವಜವನ್ನೂ ಪ್ರದರ್ಶಿಸಲಾಗಿರಲಿಲ್ಲ. ಇಟಲಿ ಮತ್ತು ವೆಲ್ ಫೇರ್ ಪಾರ್ಟಿ ಆಫ್ ಇಂಡಿಯಾದ ಧ್ವಜದ ನಡುವೆ ವ್ಯತ್ಯಾಸ ಇದೆ. ನೀಲಿ, ಬಿಳಿ ಮತ್ತು ಕೆಂಪು ಬಣ್ಣವು ಎರಡೂ ಧ್ವಜಗಳಲ್ಲಿದ್ದರೂ  ವೆಲ್‌ಫೇರ್ ಪಾರ್ಟಿಯ ಧ್ವಜದ ಮಧ್ಯಭಾಗದಲ್ಲಿರುವ ಬಿಳಿ ಬಣ್ಣದಲ್ಲಿ ಎರಡು ತೆನೆಗಳ ಚಿತ್ರ ಇದೆ. ಇಟಲಿಯ ರಾಷ್ಟ್ರೀಯ ಧ್ವಜದಲ್ಲಿ ಈ  ತೆನೆಗಳಿಲ್ಲ ಮತ್ತು ಅದರ ಮೂರೂ ಬಣ್ಣಗಳೂ ಸಮಪ್ರಮಾಣದಲ್ಲಿವೆ. ಆದರೆ, ಅನಿಲ್ ಆ್ಯಂಟನಿಯಾಗಲಿ ತೇಜಿಂದರ್ ಬಗ್ಗಾ ಆಗಲಿ  ಅಥವಾ ಇವರಿಬ್ಬರ ಟ್ವೀಟ್‌ಗಳನ್ನು ಹಂಚಿಕೊಂಡ ಅಸಂಖ್ಯಾತ ಬೆಂಬಲಿಗರಾಗಲಿ ಈ ವ್ಯತ್ಯಾಸವನ್ನು ಕಂಡೇ ಇಲ್ಲದಂತೆ ವರ್ತಿಸಿದ್ದಾರೆ.  ಮಾತ್ರವಲ್ಲ, ಫೆಲೆಸ್ತೀನ್ ಪರ ಮತ್ತು ಗಾಝಾದ ಸಂತ್ರಸ್ತರ ಪರ ರ‍್ಯಾಲಿ ಎಂದು ಬ್ಯಾನರ್‌ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದ್ದರೂ ಹಮಾಸ್  ಉಗ್ರರ ಪರ ರ‍್ಯಾಲಿ ಎಂಬ ಸುಳ್ಳನ್ನು ಹರಡಿದ್ದಾರೆ. ಅನಿಲ್ ಆ್ಯಂಟನಿಗಂತೂ  ಇದು ಇಸ್ಲಾಮಿಕ್ ಮೂಲಭೂತವಾಗಿ ಕಂಡಿದೆ.  ರಾಜಕೀಯ ಪಕ್ಷವೊಂದು ಮಾಡಿದ ರ‍್ಯಾಲಿಯನ್ನು ಮುಸ್ಲಿಮರ ರ‍್ಯಾಲಿಯಂತೆ ಮತ್ತು ಉಗ್ರರ ಪರ ರ‍್ಯಾಲಿಯಂತೆ ಅತ್ಯಂತ ಯೋಜನಾಬದ್ಧವಾಗಿ ಸುಳ್ಳನ್ನು ಉತ್ಪಾದಿಸಿ ಹಂಚಲಾಗಿದೆ. ಅಂದಹಾಗೆ,

2020 ನವೆಂಬರ್ 3ರಂದು ಹರ್ಯಾಣದ ಫತೇಹಾಬಾದ್ ಜಿಲ್ಲೆಯ ಧಾಬಿಕಲಾನ್ ಗ್ರಾಮದಲ್ಲಿ ನಾಲ್ವರು ಯುವಕರು ಸೇರಿ ಅರ್ಚಕರಿಗೆ  ಬ್ಯಾಟ್‌ನಿಂದ ಥಳಿಸಿದ್ದರು. ಉತ್ತರ ಭಾರತದ ಪ್ರಮುಖ ಪತ್ರಿಕೆಗಳಾದ ದೈನಿಕ್ ಜಾಗರಣ್ ಮತ್ತು ದೈನಿಕ್ ಭಾಸ್ಕರ್ ಪತ್ರಿಕೆಗಳು ಈ ಬಗ್ಗೆ  ವರದಿಯನ್ನೂ ಮಾಡಿದ್ದುವು. ಮಠದ ಒಳಗೆ ಬ್ಯಾಟನ್ನು ಇರಿಸಲು ಒಪ್ಪದ ಅರ್ಚಕನ ವರ್ತನೆಗೆ ಸಿಟ್ಟಾದ ಅಮಿತ್, ಕೃಷ್ಣಾ, ಪ್ರದೀಪ್  ಮತ್ತು ರಾಕೇಶ್ ಎಂಬ ಯುವಕರು ಅರ್ಚಕರಿಗೆ ಥಳಿಸಿದ್ದು, ಇವರನ್ನು ಬಂಧಿಸಲಾಗಿದೆ ಎಂಬ ಮಾಹಿತಿಯೂ ಆ ವರದಿಯಲ್ಲಿತ್ತು.  ಖಬ್ರೆ ಅಬೀ ತಕ್ ಎಂಬ ಯುಟ್ಯೂಬ್ ಚಾನೆಲ್ ಈ ಕುರಿತಂತೆ ಇನ್ನಷ್ಟು ವಿವರಗಳನ್ನು ನೀಡಿತ್ತು. ಯುವತಿಯೊಂದಿಗೆ ದೂರವಾಣಿಯಲ್ಲಿ  ಅಸಭ್ಯವಾಗಿ ಮಾತಾಡಿದ ಕಾರಣಕ್ಕಾಗಿ ಅವರನ್ನು ಥಳಿಸಲಾಗಿದೆ ಎಂದು ಅದು ಹೇಳಿತ್ತು. ಇವು ಏನೇ ಇದ್ದರೂ ಈ ಘಟನೆಗೂ  ಮುಸ್ಲಿಮರಿಗೂ ಯಾವ ಸಂಬಂಧವೂ ಇಲ್ಲ. ಆದರೆ, 

ಕಳೆದವಾರ ಈ ಘಟನೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ  ಹಂಚಿಕೆಯಾಯಿತು. ಮಂದಿರದ ಅರ್ಚಕನನ್ನು ಥಳಿಸುತ್ತಿರುವ ಮುಸ್ಲಿಮ್ ಮತಾಂಧರು ಎಂಬ ಒಕ್ಕಣೆಯೊಂದಿಗೆ ಅಸಂಖ್ಯ ಮಂದಿ  ವೀಡಿಯೋ ಹಂಚಿಕೊಂಡರು. ಭಾರತೀಯ ಯುವ ಮೋರ್ಚಾದ ಸೋಶಿಯಲ್ ಮೀಡಿಯಾದ ದೆಹಲಿ ಸಹಸಂಯೋಜಕಿ ಆಕಾಂಕ್ಷಾ  ಈ ವೀಡಿಯೋವನ್ನು ಟ್ವೀಟ್ ಮಾಡಿದರು. ಆ ಬಳಿಕ ಸಾವಿರಾರು ಮಂದಿ ಇದನ್ನು ಮರುಟ್ವೀಟ್ ಮಾಡಿದರು. ನಿಜವಾಗಿ,

ಸುಳ್ಳು ಹೇಳುವುದು ಮತ್ತು ಸುಳ್ಳು ಹರಡುವುದನ್ನು ಧರ್ಮಗಳು ಅಪರಾಧವಾಗಿ ಕಾಣುತ್ತವೆ. ಆದರೆ, ಧರ್ಮವನ್ನು ರಕ್ಷಿಸುತ್ತೇವೆ ಎಂದು  ಹೇಳುವವರು ಸುಳ್ಳನ್ನೇ ಆಶ್ರಯಿಸಿಕೊಂಡಿದ್ದಾರೆ. ಈ ದೇಶದಲ್ಲಿ ಪ್ರತಿದಿನ ಅಸಂಖ್ಯ ಸುಳ್ಳುಗಳನ್ನು ಉತ್ಪಾದಿಸಲಾಗುತ್ತದೆ. ಬಳಿಕ ಅದನ್ನು  ವಿವಿಧ ಸೋಶಿಯಲ್ ಮೀಡಿಯಾಗಳ ಮೂಲಕ ಹಂಚಲಾಗುತ್ತದೆ. ಹೀಗೆ ಉತ್ಪಾದನೆಯಾಗುವ ಸುಳ್ಳುಗಳಲ್ಲಿ 99% ಸುಳ್ಳುಗಳು ಕೂಡ  ಮುಸ್ಲಿಮ್ ದ್ವೇಷವನ್ನೇ ಕಾರುವಂಥವು. ಹಿಂದೂ-ಮುಸ್ಲಿಮ್ ವಿಭಜನೆಯನ್ನೇ ಗುರಿಯಾಗಿಸಿಕೊಂಡು ಉತ್ಪಾದನೆಯಾಗುವ ಸುಳ್ಳುಗಳನ್ನು  ಧರ್ಮರಕ್ಷಣೆಯ ಭ್ರಮೆಯಲ್ಲಿರುವವರು ಸತ್ಯವೆಂದೇ ನಂಬಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ಮುಸ್ಲಿಮರನ್ನು ಮತಾಂಧರು, ಉಗ್ರರು,  ಹಿಂದೂ ಧರ್ಮ ದ್ವೇಷಿಗಳು ಎಂದೆಲ್ಲ ಬಿಂಬಿಸುವುದೇ ಹೆಚ್ಚಿನೆಲ್ಲ ವೀಡಿಯೋ, ಆಡಿಯೋ ಮತ್ತು ಸುದ್ದಿಗಳ ಉದ್ದೇಶ. ಅಷ್ಟಕ್ಕೂ,

ಯಾವುದೇ ಸುಳ್ಳು ಸುದ್ದಿಯನ್ನು ಉತ್ಪಾದನೆ ಮಾಡುವುದು ಸುಲಭ. ಆದರೆ ಅದನ್ನು ಪತ್ತೆ ಹಚ್ಚುವುದು ಸುಲಭ ಅಲ್ಲ. ಅದಕ್ಕೆ ಒಂದಷ್ಟು  ಶ್ರಮ ಬೇಕಾಗುತ್ತದೆ. ಎಲ್ಲರಿಗೂ ಸತ್ಯಶೋಧನೆ ಮಾಡುವುದಕ್ಕೂ ಬರುವುದಿಲ್ಲ. ಯಾರಾದರೂ ಶ್ರಮಪಟ್ಟು ಸತ್ಯಶೋಧನೆ ಮಾಡಿದರೂ  ಆ ವೇಳೆಗಾಗಲೇ ಸುಳ್ಳು ತಲುಪಬೇಕಾದಲ್ಲೆಲ್ಲ ತಲುಪಿರುತ್ತದೆ. ಆ ಬಳಿಕ ಹಂಚಿಕೆಯಾಗುವ ಈ ಸತ್ಯಸುದ್ದಿಯು ಈ ಮೊದಲಿನ ಸುಳ್ಳು  ಸುದ್ದಿ ತಲುಪಿದವರಿಗೆಲ್ಲ ತಲುಪುತ್ತದೆ ಎಂದು ಹೇಳುವುದಕ್ಕೂ ಬರುವುದಿಲ್ಲ. ದ್ವೇಷ ಮತ್ತು ನಕಾರಾತ್ಮಕ ಸುದ್ದಿಗಿರುವ ಮಾರುಕಟ್ಟೆ ಪ್ರೀತಿ  ಮತ್ತು ಸಕಾರಾತ್ಮಕ ಸುದ್ದಿಗೆ ಇರುವುದಿಲ್ಲ ವಾದ್ದರಿಂದ ಇಂಥ ಸತ್ಯಶೋಧಿತ ಸುದ್ದಿಗಳನ್ನು ಹಂಚಿಕೊಳ್ಳುವವರೂ ಕಡಿಮೆ. ಅಲ್ಲದೇ, ಸುದ್ದಿಯೊಂದರ ಮೂಲವನ್ನು ಹುಡುಕುತ್ತಾ ಸತ್ಯವೋ ಸುಳ್ಳೋ ಎಂಬುದನ್ನು ಪತ್ತೆ ಹಚ್ಚುವವರ ಸಂಖ್ಯೆಗೆ ಹೋಲಿಸಿದರೆ ಸುಳ್ಳು ಉತ್ಪಾದಿಸುವವರ ಸಂಖ್ಯೆ ಎಷ್ಟೋ ಸಾವಿರ ಪಟ್ಟು ಅಧಿಕವಿದೆ. ಆದ್ದರಿಂದ, ಒಂದು ಸುದ್ದಿಯ ಮೂಲವನ್ನು ಹುಡುಕುವಾಗ ಅಸಂಖ್ಯ ಸುಳ್ಳು  ಸುದ್ದಿಗಳು ಉತ್ಪಾದನೆಯಾಗಿ ಮಾರುಕಟ್ಟೆಗೆ ಹಂಚಿಕೆಯಾಗುತ್ತಿರುತ್ತದೆ. ಇವನ್ನೆಲ್ಲ ಪತ್ತೆ ಹಚ್ಚುವುದು ಅಸಾಧ್ಯ ಅನ್ನುವಷ್ಟು ಕಷ್ಟ. ಆದ್ದರಿಂದ,

ಸರಕಾರ ಮನಸ್ಸು ಮಾಡದ ಹೊರತು ಸುಳ್ಳು ಸುದ್ದಿಗಳ ನಿಯಂತ್ರಣ ಸಾಧ್ಯವಿಲ್ಲ. ದುರಂತ ಏನೆಂದರೆ, ಇವತ್ತು ಪ್ರಭುತ್ವವೇ ಈ  ಸುಳ್ಳುಗಳನ್ನು ಆಶ್ರಯಿಸಿಕೊಂಡಿದೆ. ಸುಳ್ಳು ಹರಡುವವರಲ್ಲಿ ಪ್ರಭುತ್ವವನ್ನು ಬೆಂಬಲಿಸುವ ಮುಖಂಡರು, ಕಾರ್ಯಕರ್ತರು ಮತ್ತು  ಹೊಣೆಗಾರರೇ ಅಧಿಕವಿದ್ದಾರೆ. ವೆಲ್‌ಫೇರ್ ಪಾರ್ಟಿಯ ರ‍್ಯಾಲಿ ಮತ್ತು ಹರ್ಯಾಣದ ಅರ್ಚಕರ ಥಳಿತದ ವೀಡಿಯೋಗಳನ್ನು ಸುಳ್ಳು  ಒಕ್ಕಣೆಗಳೊಂದಿಗೆ ಪ್ರಭುತ್ವದ ಹೊಣೆಗಾರರೇ ಹಂಚಿಕೊಂಡಿರುವುದು ಇದಕ್ಕೆ ಅತೀ ಪ್ರಬಲ ಉದಾಹರಣೆ. ಅಂದಹಾಗೆ, ಧರ್ಮವೇ  ಖಂಡಿಸುವ ಸುಳ್ಳನ್ನು ಧರ್ಮ ರಕ್ಷಣೆಗೆಂದು ಉತ್ಪಾದಿಸುವವರಿರುವ ದೇಶದಲ್ಲಿ ಸುಳ್ಳು ರಾಜಗಾಂಭೀರ್ಯದಿಂದ ಸುತ್ತುವುದರಲ್ಲಿ ಆಶ್ಚರ್ಯವೂ ಇಲ್ಲ.

Thursday 26 October 2023

‘ಹಮಾಸ’ನ್ನು ಪದೇ ಪದೇ ಕಟಕಟೆಯಲ್ಲಿ ನಿಲ್ಲಿಸುವ ಮೊದಲು

 





1. ಶಂಕಿತರ ಮೊಬೈಲ್ ಮತ್ತು ಕಂಪ್ಯೂಟರ್‌ನೊಳಗೆ ನುಗ್ಗಿ ಗೂಢಚರ್ಯೆ ನಡೆಸುವ ಸ್ಪೈ ವೇರ್ ತಂತ್ರಜ್ಞಾನದಿಂದ  ಹಿಡಿದು ಡ್ರೋನ್  ಕ್ಯಾಮರಾಗಳ ಕಣ್ಗಾವಲು ವ್ಯವಸ್ಥೆಯವರೆಗೆ ಮತ್ತು ಮೊಸಾದ್‌ನಂತಹ ಜಾಗತಿಕವಾಗಿಯೇ ಅತೀ ಪ್ರಬಲ ಗುಪ್ತಚರ ವಿಭಾಗದಿಂದ  ಹಿಡಿದು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ವರೆಗೆ ಎಲ್ಲದರ ಕಣ್ತಪ್ಪಿಸಿ ಇಝ್ಝುದ್ದೀನ್ ಅಲ್ ಖಸ್ಸಾಂ ಬ್ರಿಗೇಡ್ ಎಂಬ ಗಾಝಾದ ಹಮಾಸ್‌ನ ಸಶಸ್ತ್ರ  ತಂಡವು ನೆಲ, ಜಲ ಮತ್ತು ವಾಯು ಪ್ರದೇಶದ ಮೂಲಕ ಇಸ್ರೇಲ್‌ನೊಳಗೆ ನುಗ್ಗಿ ದಾಳಿ ನಡೆಸಲು ಶಕ್ತವಾದುದು ಹೇಗೆ?

2. ಇಸ್ರೇಲ್ ನಾಗರಿಕರ ಮೇಲೆ ಹಮಾಸ್ ದಾಳಿ ನಡೆಸಿದ್ದು ಎಷ್ಟು ಸರಿ?

ಸದ್ಯ ಈ ಎರಡೂ ಪ್ರಶ್ನೆಗಳಿಗೂ ಮಹತ್ವ ಇದೆ. ಹಮಾಸ್ ಎಂಬುದು ಫೆಲೆಸ್ತೀನಿನ ಅತ್ಯಂತ ಜನಪ್ರಿಯ ರಾಜಕೀಯ ಪಕ್ಷ. ಅದರ ಸಶಸ್ತ್ರ  ಪಡೆಯ ಹೆಸರು ಇಝ್ಝುದ್ದೀನ್ ಅಲ್ ಖಸ್ಸಾಂ. ಹಾಗಂತ, ಇಂಥದ್ದೊಂದು ವ್ಯವಸ್ಥೆ ಕೇವಲ ಹಮಾಸ್‌ಗೆ ಮಾತ್ರ ಇರುವುದಲ್ಲ. ಪಶ್ಚಿಮ  ದಂಡೆಯಲ್ಲಿ ಅಧಿಕಾರದಲ್ಲಿರುವ ಮುಹಮ್ಮದ್ ಅಬ್ಬಾಸ್ ನೇತೃತ್ವದ ಫತಹ್ ಎಂಬ ರಾಜಕೀಯ ಪಕ್ಷಕ್ಕೂ ಇದೆ. ಆ ಸಶಸ್ತ್ರ ಪಡೆಯ  ಹೆಸರು ಅಲ್ ಖುದ್ಸ್. ಇವೆರಡರ ಹೊರತಾಗಿ ಅಲ್ಲಿನ ಎಡಪಕ್ಷಕ್ಕೂ ತನ್ನದೇ ಆದ ಸಶಸ್ತ್ರ ಪಡೆಯೂ ಇದೆ. ಅಂದರೆ, ಫೆಲೆಸ್ತೀನಿನ  ರಾಜಕೀಯ ಪಕ್ಷಗಳು ತಮ್ಮದೇ ಆದ ಸಶಸ್ತ್ರ ಪಡೆಯನ್ನು ಹೊಂದಿದ್ದು, ಫೆಲೆಸ್ತೀನನ್ನು ಇಸ್ರೇಲ್‌ನಿಂದ ವಿಮೋಚನೆಗೊಳಿಸುವುದಕ್ಕೆ ಸಶಸ್ತ್ರ  ಹೋರಾಟ ಅನಿವಾರ್ಯ ಎಂದು ಅವು ಭಾವಿಸಿಕೊಂಡಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ, 1948ರಲ್ಲಿ ಸ್ಥಾಪನೆಯಾದ ದಿನದಿಂದ ಈ ವರೆಗೆ ಫೆಲೆಸ್ತೀನಿಯರೊಂದಿಗೆ ಇಸ್ರೇಲ್ ನಡಕೊಂಡ ವಿಧಾನವನ್ನೂ ಒರೆಗಲ್ಲಿಗೆ ಹಚ್ಚಬೇಕಾಗುತ್ತದೆ.

1948ರಲ್ಲಿ ಇಸ್ರೇಲ್ ಸ್ಥಾಪನೆಗೊಂಡದ್ದೇ  ಬ್ರಿಟಿಷರ ಸಂಚಿನಿಂದ. ಆಗ ಫೆಲೆಸ್ತೀನ್ ಬ್ರಿಟಿಷ್ ಆಧಿಪತ್ಯಕ್ಕೆ ಒಳಪಟ್ಟಿತ್ತು. ದ್ವಿತೀಯ  ವಿಶ್ವಯುದ್ಧದಲ್ಲಿ ಯಹೂದಿಯರು ಅನುಭವಿಸಿದ ಸಂಕಟಕ್ಕೆ ಮರುಗಿದ ಯುರೋಪಿಯನ್ ರಾಷ್ಟ್ರಗಳು, ಅವರಿಗೊಂದು ದೇಶ  ಕಟ್ಟಿಕೊಡಬೇಕೆಂದು ತೀರ್ಮಾನಿಸಿದಾಗ ಕಂಡದ್ದೇ  ಫೆಲೆಸ್ತೀನ್. ಆದರೆ ಈ ವಿಷಯದಲ್ಲಿ ಫೆಲೆಸ್ತೀನಿಯರನ್ನಾಗಲಿ, ಅರಬ್ ರಾಷ್ಟ್ರಗಳನ್ನಾಗಲಿ ಬ್ರಿಟಿಷ್ ಸಹಿತ ಯುರೋಪಿಯನ್ ಯೂನಿಯನ್ ರಾಷ್ಟ್ರಗಳು ವಿಶ್ವಾಸಕ್ಕೆ ಪಡಕೊಳ್ಳಲಿಲ್ಲ. ಯಹೂದಿಯರಿಗೆ ಯಾಕೆ ಫೆಲೆಸ್ತೀ ನಿನಲ್ಲೇ  ರಾಷ್ಟ್ರ  ಕಟ್ಟಿ ಕೊಡಬೇಕು, ಅವರನ್ನು ನಿರ್ದಯವಾಗಿ ನಡೆಸಿಕೊಂಡ ಹಿಟ್ಲರನ ಜರ್ಮನಿಯಲ್ಲೇಕೆ ಅದನ್ನು ನಿರ್ಮಿಸಬಾರದು  ಎಂಬ ಪ್ರಶ್ನೆಯನ್ನೂ ಈ ರಾಷ್ಟçಗಳು ಕಿವಿಗೆ ಹಾಕಿಕೊಳ್ಳಲಿಲ್ಲ. ಹೀಗೆ 1948ರಲ್ಲಿ ಹುಟ್ಟುವಾಗ ತೀರಾ ಸಣ್ಣ ಭೂಪ್ರದೇಶವನ್ನು ಹೊಂದಿದ್ದ  ಇಸ್ರೇಲ್ ಇವತ್ತು ಫೆಲೆಸ್ತೀನ್ ಭೂಮಿಯನ್ನು ಒತ್ತುವರಿ ನಡೆಸಿ ನಡೆಸಿ ಬೃಹತ್ತಾಗಿ ಬೆಳೆದಿದೆ. ವಿಶ್ವದಾದ್ಯಂತದ ಯಹೂದಿಯರನ್ನು ಅದು  ತನ್ನಲ್ಲಿಗೆ ಕರೆಸಿಕೊಳ್ಳುತ್ತಿದೆ ಮತ್ತು ಅವರ ವಸತಿಗಾಗಿ ಫೆಲೆಸ್ತೀನಿ ನಾಗರಿಕರನ್ನು ಒಕ್ಕಲೆಬ್ಬಿಸಿ ಭೂವಿಸ್ತರಣೆ ಮಾಡುತ್ತಿದೆ. ಅಂದಹಾಗೆ,

ಇಸ್ರೇಲ್ ರಾಷ್ಟ್ರವನ್ನು ಫೆಲೆಸ್ತೀನಿ ಮಣ್ಣಿನಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬ ಕಾರಣದಿಂದಲೇ ಅರಬ್ ರಾಷ್ಟ್ರಗಳು ಇಸ್ರೇಲ್ ವಿರುದ್ಧ  3 ಯುದ್ಧಗಳನ್ನು ನಡೆಸಿವೆ. ಮೊದಲನೆಯದ್ದು, 1948ರಲ್ಲಿ. ಅಮೇರಿಕ ಮತ್ತು ಯುರೋಪಿಯನ್ ರಾಷ್ಟ್ರಗಳ ಪೂರ್ಣ ಪ್ರಮಾಣದ  ಬೆಂಬಲ ಇಲ್ಲದೇ ಇರುತ್ತಿದ್ದರೆ ಈ ಯುದ್ಧಗಳಲ್ಲಿ ಇಸ್ರೇಲ್‌ಗೆ ಗೆಲುವು ಸಿಗುವುದಕ್ಕೆ ಸಾಧ್ಯವೇ ಇರಲಿಲ್ಲ. ಒಂದುಕಡೆ ತನ್ನ ಮಣ್ಣಿನಲ್ಲಿ  ಯಹೂದಿಯರಿಗೆ ಅಕ್ರಮವಾಗಿ ರಾಷ್ಟ್ರವೊಂದನ್ನು ನಿರ್ಮಿಸಿದ್ದು ಮತ್ತು ಇನ್ನೊಂದು ಕಡೆ ಆ ರಾಷ್ಟ್ರಕ್ಕೆ ಶಸ್ತ್ರಾಸ್ತ್ರ, ಹಣಕಾಸು ಸಹಿತ ಸರ್ವ  ನೆರವನ್ನೂ ಅಮೇರಿಕ ಸಹಿತ ವಿವಿಧ ರಾಷ್ಟ್ರಗಳು ನೀಡುತ್ತಿರುವುದು- ಇವೆರಡೂ ಫೆಲೆಸ್ತೀನಿಯರಲ್ಲಿ ಕಿಚ್ಚು ಹಚ್ಚಿದ್ದರೆ, ಅದು ಅಸಹಜವಲ್ಲ.  ಆದ್ದರಿಂದಲೇ, ಇಸ್ರೇಲ್ ಜೊತೆ ಅವಿರತ ಶಾಂತಿ ಒಪ್ಪಂದ ಮಾಡಿಕೊಂಡು ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿ ನೋಬೆಲ್ ಪ್ರಶಸ್ತಿಗೆ ಭಾಜನರಾದ ಫೆಲೆಸ್ತೀನ್ ನಾಯಕ ಯಾಸಿರ್ ಅರಫಾತ್ ಅವರು 1948ರ ಯುದ್ಧದಲ್ಲಿ ಭಾಗಿಯಾಗಿದ್ದರು. 1983ರಿಂದ 93ರ ವರೆಗೆ ಟ್ಯುನೀಶಿಯಾದಲ್ಲಿ ನೆಲೆಸಿ ಫೆಲೆಸ್ತೀನ್ ವಿಮೋಚನೆಗಾಗಿ ಹೋರಾಡಿದ್ದರು. 1993ರಲ್ಲಿ ಗಾಝಾಕ್ಕೆ ಮರಳಿ ಸ್ವಾಯತ್ತ ಸರ್ಕಾರ ರಚಿಸಿದರು.  ಆ ಬಳಿಕ ಇಸ್ರೇಲ್ ಜೊತೆ ಕ್ಯಾಂಪ್ ಡೇವಿಡ್ ಸಭೆ, ಓಸ್ಲೋ ಒಪ್ಪಂದ, ಮ್ಯಾಡ್ರಿಡ್ ಕಾನ್ಫರೆನ್ಸ್ ನಡೆಸಿದರು. ಆದರೆ ಇಸ್ರೇಲ್ ಈ ಒಪ್ಪಂದವನ್ನು ಪಾಲಿಸಲಿಲ್ಲ ಎಂದು ಮಾತ್ರವಲ್ಲ, ಶಾಂತಿದೂತ ಅರಫಾತ್‌ರನ್ನು ನಿರ್ದಯವಾಗಿ ನಡೆಸಿಕೊಂಡಿತು. ಜಾಗತಿಕವಾಗಿಯೇ  ಅತ್ಯಂತ ಜನಪ್ರಿಯ ನಾಯಕರಾಗಿದ್ದ ಮತ್ತು ಫತಹ್ ರಾಜಕೀಯ ಪಕ್ಷದ ಪ್ರಮುಖರಾಗಿದ್ದ ಅವರಿಗೆ 2002ರಿಂದ 2004ರ ವರೆಗೆ  ಅಕ್ಷರಶಃ ನಿರ್ಬಂಧವನ್ನು ಹೇರಿತು. ಫೆಲೆಸ್ತೀನ್‌ನ ರಮಲ್ಲಾ  ಪ್ರದೇಶದಿಂದ ಹೊರಹೋಗುವುದಕ್ಕೆ ತಡೆ ಹೇರಿತು. ಅವರು  ಹೊರರಾಷ್ಟ್ರಗಳಿಗೆ ಭೇಟಿಕೊಟ್ಟು ಇಸ್ರೇಲ್ ಮೇಲೆ ಒತ್ತಡ ಹೇರದಂತೆ ತಡೆಯುವುದೇ ಈ ನಿರ್ಬಂಧದ ಉದ್ದೇಶವಾಗಿತ್ತು. 2004ರಲ್ಲಿ ಈ  ಅರಫಾತ್ ನಿಧನರಾದರು. ಅವರ ಶಾಂತಿ ಯತ್ನ ಮತ್ತು ಜನಪ್ರಿಯತೆಯನ್ನು ಸಹಿಸಿಕೊಳ್ಳಲಾಗದೇ ಇಸ್ರೇಲ್ ವಿಷವಿಕ್ಕಿ ಕೊಂದಿದೆ ಎಂಬ  ಸಂದೇಹವೂ ಅಸ್ತಿತ್ವದಲ್ಲಿದೆ. ನಿಜವಾಗಿ,

ಈ ಅರಫಾತ್‌ರನ್ನು ನಿರ್ದಯವಾಗಿ ನಡೆಸಿಕೊಂಡ ಕಾರಣದಿಂದ ಹುಟ್ಟಿಕೊಂಡಿರುವ ರಾಜಕೀಯ ಸಂಘಟನೆಯೇ ಹಮಾಸ್. 1987ರಲ್ಲಿ  ಈ ಹಮಾಸ್ ರಚನೆಗೊಳ್ಳುವ ಮೊದಲೇ ಇಸ್ರೇಲ್‌ನ ಕೈಗಳಲ್ಲಿ ಸಾಕಷ್ಟು ರಕ್ತದ ಕಲೆಗಳಿದ್ದುವು. ಇಸ್ರೇಲ್‌ನ ದಾಳಿಯಿಂದ ಮತ್ತು  ಭೂವಿಸ್ತರಣಾ ದಾಹದಿಂದ ಚೆಲ್ಲಾಪಿಲ್ಲಿಯಾದ ಫೆಲೆಸ್ತೀನಿಯರು ಪಕ್ಕದ ವಿವಿಧ ಅರಬ್ ರಾಷ್ಟ್ರಗಳಿಗೆ ಹೋಗಿ ನಿರಾಶ್ರಿತ ಶಿಬಿರಗಳಲ್ಲಿ  ನೆಲೆಸಿದ್ದರು. ಅದರಲ್ಲಿ ಲೆಬನಾನ್ ನ  ಶಬ್ರ-ಶತೀಲ ಎಂಬ ನಿರಾಶ್ರಿತ ಶಿಬಿರವೂ ಒಂದು. 1982ರಲ್ಲಿ ಈ ನಿರಾಶ್ರಿತ ಶಿಬಿರದ ಮೇಲೆ ಬಾಂಬ್  ಹಾಕಿದ ಇಸ್ರೇಲ್ ಸುಮಾರು ಮೂರೂವರೆ ಸಾವಿರಕ್ಕಿಂತಲೂ ಅಧಿಕ ಮಂದಿಯ ಮಾರಣಹೋಮಕ್ಕೆ ಕಾರಣವಾಗಿತ್ತು. ಆದ್ದರಿಂದ, ಹಮಾಸ್‌ನಿಂದಾಗಿ  ಇಸ್ರೇಲ್ ಹಿಂಸಾರೂಪ ತಾಳಿದೆ ಎಂಬುದು ಅಪ್ಪಟ ಸುಳ್ಳು. ಇಸ್ರೇಲ್‌ನ ಹಿಂಸೆಯನ್ನು ಪ್ರತಿರೋಧಿಸುವ ಉದ್ದೇಶದಿಂದಲೇ ಹಮಾಸ್  ಸ್ಥಾಪನೆಯಾಗಿದೆ. ಅದು ಅಲ್ ಖೈದಾ, ಐಸಿಸ್, ಲಷ್ಕರೆ ತ್ವಯಿಬಾ ಅಥವಾ ಆಫ್ರಿಕನ್ ಸಶಸ್ತ್ರ  ದಳಗಳಂತೆ ಇನ್ನಾವುದೋ ರಾಷ್ಟ್ರದ ಮೇಲೆ  ಗೆರಿಲ್ಲಾ ಹೋರಾಟ ನಡೆಸುತ್ತಿಲ್ಲ. ತನ್ನದೇ ಭೂಮಿಯಲ್ಲಿ ಅಕ್ರಮವಾಗಿ ರಚಿಸಲ್ಪಟ್ಟ ರಾಷ್ಟ್ರದ ವಿರುದ್ಧ ವಿಮೋಚನೆಯ ಹೋರಾಟ  ನಡೆಸುತ್ತಿದೆ. ಆದ್ದರಿಂದಲೇ, ಹಮಾಸನ್ನು ಭಯೋತ್ಪಾದಕ ಸಂಘಟನೆ ಎಂದು ಕರೆಯುವುದಕ್ಕೆ ಟರ್ಕಿ, ಇರಾನ್, ರಷ್ಯಾ ಸಹಿತ ವಿವಿಧ  ಅರಬ್ ರಾಷ್ಟ್ರಗಳು ಈಗಲೂ ಹಿಂಜರಿಯುತ್ತಿವೆ. ಅಷ್ಟಕ್ಕೂ,

ಈ 2023ರಲ್ಲಿ ಈವರೆಗೆ 200ಕ್ಕಿಂತ ಅಧಿಕ ಫೆಲೆಸ್ತೀನಿಯರನ್ನು ಇಸ್ರೇಲ್ ಹತ್ಯೆ ಮಾಡಿದೆ. 2022ರಲ್ಲಿ 220 ಮಂದಿ ಫೆಲೆಸ್ತೀನಿಯರನ್ನು  ಇಸ್ರೇಲ್ ಹತ್ಯೆ ಮಾಡಿತ್ತು. ಇದರಲ್ಲಿ 30 ಮಕ್ಕಳು. ಮಾತ್ರವಲ್ಲ, ವಿಶ್ವಸಂಸ್ಥೆಯಲ್ಲಿ ಇಸ್ರೇಲ್ ವಿರುದ್ಧ 45ರಷ್ಟು ಮಸೂದೆಗಳು  ಅಂಗೀಕಾರಗೊಂಡಿವೆ. ಆದರೆ ಅವುಗಳಲ್ಲಿ ಒಂದಕ್ಕೂ ಇಸ್ರೇಲ್ ಕಿಂಚಿತ್ ಬೆಲೆಯನ್ನೂ ಕೊಟ್ಟಿಲ್ಲ. ಫೆಲೆಸ್ತೀನಿನಲ್ಲಿ ಇಸ್ರೇಲ್ ನಡೆಸುತ್ತಿ ರುವ  ಕ್ರೌರ್ಯಗಳ ತನಿಖೆಯನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಿಂದ ನಡೆಸಬೇಕೆಂಬ ಮಸೂದೆ ಕಳೆದ ವರ್ಷ ವಿಶ್ವಸಂಸ್ಥೆಯಲ್ಲಿ  ಮಂಡಿಸಲಾಗಿತ್ತು. ಇದನ್ನು ಅಮೇರಿಕ, ಬ್ರಿಟನ್, ಜರ್ಮನಿ ಸಹಿತ 26 ರಾಷ್ಟ್ರಗಳು ವಿರೋಧಿಸಿದವು. ಆದರೆ 87 ರಾಷ್ಟ್ರಗಳು ಬೆಂಬಲಿಸುವುದರೊಂದಿಗೆ ಅದು ಅಂಗೀಕಾರಗೊಂಡಿತ್ತು. ಆದರೆ, ಅಂತಾರಾಷ್ಟೀಯ ನ್ಯಾಯಾಲಯಕ್ಕೆ ಇಸ್ರೇಲನ್ನು ಸ್ಪರ್ಶಿಸಲೂ ಈವರೆಗೂ  ಸಾಧ್ಯವಾಗಿಲ್ಲ. ಹಾಗಂತ,

1987ರಲ್ಲಿ ಸ್ಥಾಪನೆಗೊಂಡ ಬಳಿಕದಿಂದ ಈವರೆಗೆ ಇಸ್ರೇಲ್ ನಾಗರಿಕರ ಮೇಲೆ ಹಮಾಸ್ ದಾಳಿಯನ್ನೇ ನಡೆಸಿರಲಿಲ್ಲ. ಅದರ  ರಾಕೆಟ್‌ಗಳು, ಹೋರಾಟಗಳಿಗೆಲ್ಲ ಸೇನೆಯೇ ಗುರಿಯಾಗಿತ್ತು. ಈ ಬಾರಿ ಅದು ಹೋರಾಟದ ದಾರಿಯನ್ನು ಬದಲಿಸಿದೆ. ಆದ್ದರಿಂದಲೇ,  ಹಮಾಸನ್ನು ಕಟಕಟೆಯಲ್ಲಿ ನಿಲ್ಲಿಸಿ ಪ್ರಶ್ನಿಸುವುದು ತಪ್ಪಾಗುವುದಿಲ್ಲ. ಇದೇವೇಳೆ, ಇಸ್ರೇಲ್ ಉದ್ದಕ್ಕೂ ಫೆಲೆಸ್ತೀನ್ ನಾಗರಿಕರ ವಿರುದ್ಧವೇ  ದಾಳಿ ನಡೆಸುತ್ತಾ ಬಂದಿದೆ ಎಂಬ ಪ್ರಜ್ಞೆಯೂ ಈ ಪ್ರಶ್ನೆ ಎಸೆಯುವವರಿಗೆ ಇರಬೇಕು. 2014ರಲ್ಲಿ 3 ಮಂದಿ ಇಸ್ರೇಲಿ ಯೋಧರನ್ನು  ಹಮಾಸ್ ಅಪಹರಿಸಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ದಾಳಿಗೆ 2100 ಮಂದಿ ಫೆಲೆಸ್ತೀನಿ ನಾಗರಿಕರು ಮೃತಪಟ್ಟಿದ್ದರು.  ಅಂದಹಾಗೆ, ಇಸ್ರೇಲ್‌ನ ಕ್ರೌರ್ಯದ ಬಗ್ಗೆ ಏನೊಂದೂ ಮಾತನಾಡದೆ ಫೆಲೆಸ್ತೀನಿಯರ ಪ್ರತಿರೋಧವನ್ನೇ ಜಾಗತಿಕ ಬಲಿಷ್ಠ ರಾಷ್ಟ್ರಗಳು  ಈವರೆಗೆ ಕಟೆಕಟೆಯಲ್ಲಿ ನಿಲ್ಲಿಸುತ್ತಾ ಬಂದಿದೆ. ಅದರ ಫಲಿತಾಂಶವೇ ಸಹನೆಯ ಕಟ್ಟೆಯೊಡೆದ ಈ ಪ್ರತಿಕ್ರಿಯೆ ಎಂದೂ ಹೇಳಬಹುದು.  ಇದು ಸಮಸ್ಯೆಗೆ ಪರಿಹಾರ ಅಲ್ಲದೇ ಇರಬಹುದು. ಆದರೆ ಪರಿಹಾರ ಆಗಬಹುದಾದ ಅನೇಕ ಸಂದರ್ಭಗಳನ್ನು ಮತ್ತು ಅವಕಾಶಗಳನ್ನು  ಇವೇ ಬಲಿಷ್ಠ ರಾಷ್ಟ್ರಗಳು ಉದ್ದೇಶಪೂರ್ವಕ ಹಾಳುಮಾಡಿದುವಲ್ಲ, ಇಸ್ರೇಲ್‌ನ ಸಕಲ ಕ್ರೌರ್ಯಕ್ಕೂ ಬೆಂಗಾವಲಾಗಿ ನಿಂತುವಲ್ಲ, ಅದೇಕೆ  ಚರ್ಚೆಗೆ ಒಳಗಾಗುತ್ತಿಲ್ಲ? ಇಸ್ರೇಲ್‌ನ ಹಿಂಸೆಗೆ ಮೌನ ಸಮ್ಮತಿ ಕೊಡುತ್ತಾ ಫೆಲೆಸ್ತೀನಿಯರ ಪ್ರತಿರೋಧವನ್ನೇ ಗಂಟಲು ಬಿರಿದು  ವಿರೋಧಿಸುತ್ತಿರುವುದೇಕೆ? ಹಾಗಂತ, ಪ್ರತಿರೋಧವೊಂದು ನಾಗರಿಕರ ಮೇಲಿನ ಹಿಂಸಾತ್ಮಕ ದಾಳಿಯಾಗಿ ಪರಿವರ್ತನೆಗೊಳ್ಳುವುದನ್ನು  ಒಪ್ಪಲು ಖಂಡಿತ ಸಾಧ್ಯವಿಲ್ಲ. 

ಇನ್ನಾದರೂ ಬಲಿಷ್ಠರು ಫೆಲೆಸ್ತೀನಿಯರಿಗಾದ ಅನ್ಯಾಯವನ್ನು ಸರಿಪಡಿಸಲಿ.

Monday 9 October 2023

ಇಸ್ಲಾಮ್: ಅನ್ಯ ಧರ್ಮ ಅಸಹಿಷ್ಣುವೇ?




ಸನ್ಮಾರ್ಗ ಸೀರತ್ ವಿಶೇಷಾಂಕ ಸಂಪಾದಕೀಯ 

ಪ್ರಥಮ ಮಾನವ ಮತ್ತು ಪ್ರಥಮ ಪ್ರವಾದಿ ಆದಮ್‌ರ(ಅ) ಇಬ್ಬರು ಪುತ್ರರಲ್ಲಿ ಕಿರಿಯವನಾದ ಕಾಬೀಲನು ಅಣ್ಣ ಹಾಬೀಲ್‌ನನ್ನು ಹತ್ಯೆ ಮಾಡುತ್ತಾನೆ. ಅಣ್ಣ ಹಾಬೀಲ್‌ನನ್ನು ಹತ್ಯೆ ಮಾಡಲು ತಮ್ಮ ಕಾಬೀಲ್ ಮುಂದಾದಾಗ ಅಣ್ಣ ಹೇಳುವ ಮಾತನ್ನು ಮತ್ತು ಆ ಇಡೀ ವೃತ್ತಾಂತವನ್ನು ಪವಿತ್ರ ಕುರ್‌ಆನ್‌ನ ಅಧ್ಯಾಯ 50: 27-30ರ ವಚನಗಳಲ್ಲಿ ಹೀಗೆ ವಿವರಿಸಲಾಗಿದೆ-


ನೀನು ನನ್ನನ್ನು ಹತ್ಯೆ ಮಾಡಲು ಕೈಯೆತ್ತಿದರೂ ನಾನು ನಿನ್ನ ಹತ್ಯೆ ಮಾಡಲ್ಲ. ನಾನು ಸರ್ವಲೋಕಗಳ ಪ್ರಭುವಾದ ಅಲ್ಲಾಹನನ್ನು ಭಯಪಡುತ್ತೇನೆ ಎಂದು ಹಾಬೀಲ್ ಹೇಳುತ್ತಾರೆ. ಕೊನೆಗೆ ಅಣ್ಣನನ್ನು ಕಾಬೀಲ್ ಹತ್ಯೆ ಮಾಡಿದ ಮತ್ತು ನಷ್ಟ ಹೊಂದಿದವರಲ್ಲಿ ಸೇರಿದ.

ಈ ವೃತ್ತಾಂತದ ಬೆನ್ನಿಗೇ ಪವಿತ್ರ ಕುರ್ ಆನ್ ನ  32ನೇ ವಚನದಲ್ಲಿ ಹೀಗೆ ಹೇಳಲಾಗಿದೆ-
ಓರ್ವ ಮಾನವನ ಹತ್ಯೆಯ ಬದಲಿಗೆ ಅಥವಾ ಭೂಮಿಯಲ್ಲಿ ಕ್ಷೋಭೆಯನ್ನುಂಟು ಮಾಡುವ ಕಾರಣದ ಹೊರತಾಗಿ ಯಾರಾದರೂ ಓರ್ವ ಮನುಷ್ಯನನ್ನು ಹತ್ಯೆ ಮಾಡಿದರೆ ಅವನು ಸಕಲ ಮಾನವ ಸಮೂಹವನ್ನೇ ಹತ್ಯೆ ಮಾಡಿದಂತೆ ಮತ್ತು ಒಬ್ಬನು ಇನ್ನೊಬ್ಬನಿಗೆ ಜೀವದಾನ ಮಾಡಿದರೆ ಸಕಲ ಮಾನವ ಸಮೂಹಕ್ಕೇ ಜೀವದಾನ ಮಾಡಿದಂತೆ.

ಪ್ರವಾದಿ(ಸ) ಹೀಗೆ ಹೇಳಿದ್ದಾರೆ,
ಯಾರಾದರೂ ಒಪ್ಪಂದ ಮಾಡಿಕೊಂಡ (ಅಥವಾ ದೇಶದ ಪ್ರಜೆಗಳಾಗಿರಲು ಒಪ್ಪಿಕೊಂಡೆ ಅಲ್ಪಸಂಖ್ಯಾತ) ಮುಸ್ಲಿಮೇತರರ ಹತ್ಯೆ ನಡೆಸಿದರೆ ಅಂಥ ಹತ್ಯೆಕೋರರು ನಲ್ವತ್ತು ವರ್ಷ ಪ್ರಯಾಣಿಸಿ ಹೋಗಬೇಕಾದಷ್ಟು ದೂರದವರೆಗೂ ಹಬ್ಬುವಂಥ ಸ್ವರ್ಗದ ಪರಿಮಳವನ್ನು ಕೂಡಾ ಅನುಭವಿಸಲಾರರು.

ಈ ಮೂರೂ ವಿಷಯಗಳಲ್ಲಿ ಏಕ ಸತ್ಯವೊಂದಿದೆ. ಇಸ್ಲಾಮ್ ಹಿಂಸೆಯ ವಿರೋಧಿ, ಅನ್ಯ ಧರ್ಮ ಅಸಹಿಷ್ಣುತೆಯ ವಿರೋಧಿ ಮತ್ತು ಒಂದು ಹತ್ಯೆಯನ್ನು ಇಡೀ ಮಾನವ ಸಮೂಹವನ್ನೇ ಹತ್ಯೆ ಮಾಡಿದುದಕ್ಕೆ ಸಮವೆಂದು ಪರಿಗಣಿಸುವಷ್ಟು ಹತ್ಯೆ ವಿರೋಧಿ. ಈ ಜಗತ್ತಿನಲ್ಲಿ ಪ್ರಪ್ರಥಮವಾಗಿ ಹತ್ಯೆಗೊಳಗಾದ ಹಾಬೀಲ್‌ನನ್ನು ಇಸ್ಲಾಮ್ ಸಜ್ಜನನೆಂದು ಪರಿಚಯಿಸುತ್ತದೆ ಮತ್ತು ಹತ್ಯೆ ಮಾಡಿದವ ಪ್ರವಾದಿಯ ಮಗನೇ ಆಗಿದ್ದರೂ ಆತನನ್ನು ನಷ್ಟ ಹೊಂದಿದವ ಮತ್ತು ಭ್ರಷ್ಟ ಚಿತ್ತದವ ಎಂದು ಉಲ್ಲೇಖಿಸುತ್ತದೆ. ಅಲ್ಲದೇ, ತಾನು ಹತ್ಯೆಗೊಳಗಾಗುವುದು ಶತಃಸಿದ್ಧ ಎಂದು ಗೊತ್ತಿದ್ದೂ ‘ತಾನು ಸರ್ವಲೋಕಗಳ ಪ್ರಭುವಾದ ಅಲ್ಲಾಹನನ್ನು ಭಯಪಡುತ್ತೇನೆ’ ಎಂದು ಅಣ್ಣ ಹೇಳುತ್ತಾರೆ. ಅಂದರೆ, ಅಲ್ಲಾಹನನ್ನು ಭಯಪಡುವವ ಹತ್ಯೆ ನಡೆಸುವುದಿಲ್ಲ ಅನ್ನುವುದೇ ಇದರ ತಾತ್ಪರ್ಯ. ಈ ಘಟನೆಯನ್ನು ಹೇಳಿದ ಬೆನ್ನಿಗೇ ಹತ್ಯೆಗೆ ಸಂಬಂಧಿಸಿ ಪವಿತ್ರ ಕುರ್ ಆನ್ ಸಾರ್ವತ್ರಿಕ  ನಿಯಮವನ್ನೂ ಮುಂದಿಡುತ್ತದೆ. ಪ್ರವಾದಿ ಮುಹಮ್ಮದ್(ಸ) ಈ ಕುರ್‌ಆನನ್ನೇ ಬೋಧಿಸಿದರು ಮತ್ತು ಬದುಕಿದರು. ‘ತನ್ನ ಅಧೀನದಲ್ಲಿರುವ ಮುಸ್ಲಿಮೇತರ ಕಾರ್ಮಿಕನನ್ನು ಅವಧಿಗಿಂತ ಹೆಚ್ಚು ದುಡಿಸಿದರೆ ಪರಲೋಕ ವಿಚಾರಣೆಯ ವೇಳೆ ನಾನು ಆ ಮುಸ್ಲಿಮೇತರನ ಪರ ನಿಲ್ಲುವೆ..’ ಎಂದು ಪ್ರವಾದಿ(ಸ) ತನ್ನ ಅನುಯಾಯಿಗಳ ಮುಂದೆ ಘೋಷಿಸುವುದಕ್ಕೆ ಈ ಪವಿತ್ರ ಕುರ್‌ಆನೇ ಪ್ರೇರಣೆ. ಮುಹಮ್ಮದರು ಪ್ರವಾದಿಯಾಗಿ 40ನೇ ವರ್ಷದಲ್ಲಿ ನಿಯುಕ್ತರಾದರು ಮತ್ತು 63 ವರ್ಷಗಳ ವರೆಗೆ ಬದುಕಿದರು. ಅವರು ಮೃತಪಡುವಾಗ, ಯುದ್ಧ ಕವಚ ಓರ್ವ ಯಹೂದಿಯ ಬಳಿ ಅಡವಿಡಲಾದ ಸ್ಥಿತಿಯಲ್ಲಿ ಇತ್ತು ಎಂದು ಇತಿಹಾಸ ಹೇಳುತ್ತದೆ. ಇನ್ನೊಂದು ಮಹತ್ವಪೂರ್ಣ ಘಟನೆಯೂ ಉಲ್ಲೇಖಾರ್ಹ-

 ಬಶೀರ್ ಬಿನ್ ಉಬೈರಿಕ್ ಎಂಬ ಮುಸ್ಲಿಮ್ ವ್ಯಕ್ತಿ ಇನ್ನೋರ್ವನ ಗುರಾಣಿಯನ್ನು ಕದಿಯುತ್ತಾರೆ ಮತ್ತು ಮಾಲಕ ತನ್ನ ಗುರಾಣಿಯನ್ನು ಹುಡುಕುತ್ತಿರುವುದು ಗೊತ್ತಾದಾಗ ಅದನ್ನು ಓರ್ವ ಯಹೂದಿಯ ಮನೆಯಲ್ಲಿ ಸದ್ದಿಲ್ಲದೇ ಇಟ್ಟುಬಿಡುತ್ತಾರೆ. ಗುರಾಣಿಯ ಮಾಲಕ ಪ್ರವಾದಿಯವರಲ್ಲಿ(ಸ) ದೂರು ನೀಡುವುದಲ್ಲದೇ ಬಶೀರ್ ಬಿನ್ ಉಬೈರಿಕ್‌ನ ಮೇಲೆ ಸಂದೇಹವನ್ನೂ ವ್ಯಕ್ತಪಡಿಸುತ್ತಾನೆ. ಆದರೆ ಬಷೀರ್ ಬಿನ್ ಉಬೈ ರಿಕ್  ಕಳ್ಳತನವನ್ನು ನಿರಾಕರಿಸುತ್ತಾನಲ್ಲದೇ ಯಹೂದಿಯತ್ತ ಕೈ ತೋರಿಸುತ್ತಾನೆ. ಆ ಬಶೀರ್‌ನ ಪರ ಆತನ ಝಫರ್ ಗೋತ್ರದವರೂ ಹಲವು ಮುಸ್ಲಿಮರೂ ಬೆಂಬಲಕ್ಕೆ ನಿಲ್ಲುತ್ತಾರೆ ಮತ್ತು ಆ ಅಲ್ಪಸಂಖ್ಯಾತ ಯಹೂದಿ ವ್ಯಕ್ತಿ ತಾನು ಕದ್ದಿಲ್ಲ ಎಂದು ಹೇಳಿದರೂ ಸಾಂದರ್ಭಿಕ ಸಾಕ್ಷ್ಯಗಳು ಅವನ ವಿರುದ್ಧವೇ ಇರುವುದರಿಂದ ಪ್ರವಾದಿ(ಸ) ಆತನನ್ನೇ ತಪ್ಪಿತಸ್ಥ ಎಂದು ತೀರ್ಮಾನಿಸುವುದಕ್ಕೆ ಮುಂದಾಗುತ್ತಾರೆ. ಆಗ ಪ್ರವಾದಿಯವರನ್ನು(ಸ) ತಿದ್ದುವ ಧಾಟಿಯಲ್ಲಿ ಪವಿತ್ರ ಕುರ್‌ಆನ್ ನ ವಾಣಿಗಳು ಅಲ್ಲಾಹನಿಂದ ಅವತೀರ್ಣವಾಗುತ್ತವೆ  ಮತ್ತು ಅಪ್ರಾಮಾಣಿಕರ ಪರ ವಾದಿಸುವವರಾಗಬೇಡಿ ಎಂದು (ಅಧ್ಯಾಯ 4, ವಚನ 105-106) ಪ್ರವಾದಿಯನ್ನು ಎಚ್ಚರಿಸುತ್ತದೆ ಮತ್ತು ಯಹೂದಿಯ ಪರ ತೀರ್ಪು ಕೊಡುವಂತೆ ಮಾಡುತ್ತದೆ.

ಅನ್ಯ ಧರ್ಮೀಯರನ್ನು ಅಸಹಿಷ್ಣುತೆಯಿಂದ ಕಾಣುವುದಕ್ಕೂ ಇಸ್ಲಾಮ್‌ಗೂ ಸಂಬಂಧ  ಇಲ್ಲ. ಈ ದೇಶದಲ್ಲಿ 800 ವರ್ಷಗಳ ಕಾಲ ಮುಸ್ಲಿಮರು ರಾಜರಾಗಿ ಮೆರೆದರೂ ಇವತ್ತಿಗೂ ಮುಸ್ಲಿಮರ ಸಂಖ್ಯೆ 15%ವನ್ನೂ ಮೀರಿಲ್ಲ. ಇಸ್ಲಾಮ್ ಅನ್ಯಧರ್ಮ ಅಸಹಿಷ್ಣುವೇ ಆಗಿದ್ದಿದ್ದರೆ ಈ ದೇಶದ ಬಹುಸಂಖ್ಯಾತರು ಇವತ್ತು ಮುಸ್ಲಿಮರೇ ಆಗಿರುತ್ತಿದ್ದರು. ಹಾಗಂತ, ಇದರಾಚೆಗೆ ಹಿಂದೂವನ್ನು ದ್ವೇಷಿಸುವ ಮುಸ್ಲಿಮ್ ಮತ್ತು ಮುಸ್ಲಿಮರನ್ನು ದ್ವೇಷಿಸುವ ಹಿಂದೂ ಇರಲು ಸಾಧ್ಯವಿದೆ. ಅದಕ್ಕೆ ಧರ್ಮ ಕಾರಣ ಅಲ್ಲ. ಸಂದರ್ಭ, ಸನ್ನಿವೇಶ, ತಪ್ಪು ಅಭಿಪ್ರಾಯಗಳು, ಅಸೂಯೆ, ಅಹಂಕಾರ, ರಾಜಕೀಯ ಅಧಿಕಾರ ಇತ್ಯಾದಿ ಇತ್ಯಾದಿ ವೈಯಕ್ತಿಕವಾದವುಗಳೇ ಕಾರಣವಾಗಿವೆ. ಅವನ್ನು ವೈಯಕ್ತಿಕವಾಗಿ ನೋಡಬೇಕೇ ಹೊರತು ಧರ್ಮದ ಕನ್ನಡಕದಿಂದಲ್ಲ. ಮುಸ್ಲಿಮ್ ರಾಷ್ಟ್ರಗಳಾಗಿರುವ ಮತ್ತು ಕುರ್‌ಆನನ್ನೇ ಸಂವಿಧಾನವಾಗಿ ಒಪ್ಪಿಕೊಂಡಿರುವ ಅರಬ್ ರಾಷ್ಟ್ರಗಳಲ್ಲಿ ಇವತ್ತು ಲಕ್ಷಾಂತರ ಹಿಂದೂಗಳು ಅಸಹಿಷ್ಣುತೆಯ ಅಣುವಿನಷ್ಟಾದರೂ ತಾರತಮ್ಯವನ್ನು ಅನುಭವಿಸದೆ ಬದುಕುತ್ತಿರುವುದೇ ಇಸ್ಲಾಮ್ ಅನ್ಯಧರ್ಮ ಅಸಹಿಷ್ಣುವಲ್ಲ ಎಂಬುದಕ್ಕೆ ಸಾಕ್ಷಿ.

Friday 29 September 2023

ನಾಲ್ಕು ಗೋಡೆಯೊಳಗಿರುವ ಅಪ್ಪ-ಅಮ್ಮನ ದೂರುಗಳು..




ಸನ್ಮಾರ್ಗ ಸಂಪಾದಕೀಯ


84 ವರ್ಷದ ವೃದ್ಧೆಯ ಕುರಿತಾದ ಪ್ರಕರಣ ವಾರಗಳ ಹಿಂದೆ  ರಾಜ್ಯ ಹೈಕೋರ್ಟ್ ನಲ್ಲಿ  ವಿಚಾರಣೆಗೆ ಬಂದಿತ್ತು. ಇಬ್ಬರು ಗಂಡು ಮಕ್ಕಳು  ನಿರ್ಲಕ್ಷಿಸಿದ ಕಾರಣ ಆ ತಾಯಿ ಮಗಳ ಮನೆಯಲ್ಲಿ ಜೀವನ ಸಾಗಿಸುತ್ತಿದ್ದಾರೆ.

ತನ್ನಿಬ್ಬರು ಗಂಡು ಮಕ್ಕಳ ನಿರ್ಲಕ್ಷ್ಯ  ಧೋರಣೆ ಆ ತಾಯಿಯನ್ನು ತೀವ್ರವಾಗಿ ಕಾಡಿತ್ತು. ಅವರು ಮೈಸೂರು ಜಿಲ್ಲಾಧಿಕಾರಿಯವರಲ್ಲಿ ಈ  ಬಗ್ಗೆ ತನ್ನ ಸಂಕಟವನ್ನೂ ತೋಡಿಕೊಂಡಿದ್ದರು. ಅವರ ನೋವಿಗೆ ಸ್ಪಂದಿಸಿದ್ದ ಜಿಲ್ಲಾಧಿಕಾರಿ, ಮಕ್ಕಳಾದ ಮಹೇಶ್ ಮತ್ತು ಗೋಪಾಲ್ ನನ್ನು ಕರೆದು ಬುದ್ಧಿವಾದ ಹೇಳಿದ್ದರು ಮತ್ತು ಕೊನೆಗೆ ಈ ತಾಯಿಗೆ ಪ್ರತಿ ತಿಂಗಳು 10 ಸಾವಿರ ರೂಪಾಯಿ ಪಾವತಿಸುವಂತೆ  ಆದೇಶಿಸಿದ್ದರು. ಆದರೆ ಇದು ಮಕ್ಕಳಿಗೆ ಒಪ್ಪಿಗೆಯಾಗಿರಲಿಲ್ಲ. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಗೆ  ಅರ್ಜಿ ಸಲ್ಲಿಸಿದರು.  ಸಹೋದರಿಯರ ಕುಮ್ಮಕ್ಕಿನಿಂದಲೇ ತಾಯಿ ಜೀವನಾಂಶ ಕೋರುತ್ತಿದ್ದಾರೆ ಎಂದೂ ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಈ ಆಕ್ಷೇಪವನ್ನು  ತಿರಸ್ಕರಿಸಿದ ಹೈಕೋರ್ಟು, ಆ ಇಬ್ಬರು ಗಂಡು ಮಕ್ಕಳಿಗೆ ಪಾಠವನ್ನೂ ಬೋಧಿಸಿದೆ. ‘ದುಡಿಯಲು ಸಮರ್ಥನಾಗಿರುವ ವ್ಯಕ್ತಿ ತನ್ನ  ಪತ್ನಿಯನ್ನು ನೋಡಿಕೊಳ್ಳಬಹುದಾದರೆ, ಅವಲಂಬಿತ ತಾಯಿಯನ್ನೇಕೆ ನೋಡಿಕೊಳ್ಳಬಾರದು’ ಎಂದೂ ಪ್ರಶ್ನಿಸಿದೆ. ‘ತಾಯಿಯ ಹೆಣ್ಣು  ಮಕ್ಕಳು ಆಸ್ತಿಯಲ್ಲಿ ಪಾಲನ್ನು ಕೋರಿಲ್ಲ, ಗಂಡು ಮಕ್ಕಳು ತ್ಯಜಿಸಿರುವ ತಾಯಿಯನ್ನು ಈ ಹೆಣ್ಣು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ. ಇಲ್ಲದಿದ್ದರೆ ಈ ತಾಯಿ ರಸ್ತೆಯಲ್ಲಿರಬೇಕಿತ್ತು’ ಎಂದೂ ಆತಂಕ ವ್ಯಕ್ತಪಡಿಸಿದೆ. ಮಾತ್ರವಲ್ಲ, ಮೈಸೂರು ಜಿಲ್ಲಾಧಿಕಾರಿ ಆದೇಶವನ್ನು ಎತ್ತಿ ಹಿಡಿದಿದೆ.

ಬದುಕಿನ ಸಂಧ್ಯಾ ಕಾಲದಲ್ಲಿರುವ ಮತ್ತು ಇನ್ನೊಬ್ಬರನ್ನು ಅವಲಂಬಿಸಿಕೊಂಡಿರುವ ಸುಮಾರು ಒಂದೂವರೆ ಕೋಟಿ ವೃದ್ಧರು ಸದ್ಯ ಈ  ದೇಶದಲ್ಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇವರಲ್ಲಿ 65% ಮಂದಿ ಕೂಡಾ ಬಡವರು. ತಮ್ಮದೇ ಆದ ಆದಾಯವಿಲ್ಲದೇ ಮಕ್ಕಳನ್ನೋ  ಇನ್ನಿತರರನ್ನೋ ಅವಲಂಬಿಸಿದವರು. ಇವರಲ್ಲಿ ಹೆಚ್ಚಿನವರೂ ಸುಖವಾಗಿಲ್ಲ ಎಂಬುದು ಈಗಾಗಲೇ ಬಿಡುಗಡೆಗೊಂಡಿರುವ ಅಧ್ಯಯನ  ವರದಿಗಳೇ ಹೇಳುತ್ತವೆ. 2019ರಲ್ಲಿ ಬಿಡುಗಡೆಯಾದ ಏಜ್‌ವೆಲ್ ಫೌಂಡೇಶನ್‌ನ ಸಮೀಕ್ಷಾ ವರದಿ ಮತ್ತು 2015ರಲ್ಲಿ ಬಿಡುಗಡೆಯಾದ  ಹೆಲ್ಪ್ ಏಜ್ ಇಂಡಿಯಾದ ಸರ್ವೆ ವರದಿಗಳನ್ನು ಅಧ್ಯಯನಕ್ಕೆ ಒಳಪಡಿಸಿದರೆ ಎದೆ ನಡುಗುವ ವಿವರಗಳನ್ನು ದರ್ಶಿಸಬಹುದು.

ಹೆಲ್ಪ್ ಏಜ್ ಇಂಡಿಯಾ 12 ನಗರಗಳಲ್ಲಿ ನಡೆಸಿದ ಸರ್ವೇ ಪ್ರಕಾರ, ಬೆಂಗಳೂರು ಮತ್ತು ನಾಗಪುರದಲ್ಲಿ ಹಿರಿಯರು ಅತೀ ಹೆಚ್ಚು  ನಿಂದನೆ, ಬೈಗುಳಕ್ಕೆ ಒಳಗಾಗುತ್ತಿದ್ದಾರೆ. ದೆಹಲಿ ಮತ್ತು ಕಾನ್ಪುರಗಳಲ್ಲಿ ಈ ನಿಂದನೆಯ ಪ್ರಮಾಣ ಅತೀ ಕಡಿಮೆಯಿದೆ. ಪ್ರತೀ 10ರಲ್ಲಿ 4  ಮಂದಿ ವೃದ್ಧರು ಮನೆಯಲ್ಲಿ ನಿಂದನೆಯನ್ನು ಎದುರಿಸುತ್ತಿದ್ದಾರೆ. ಸರಾಸರಿ ಪ್ರತಿ 10ರಲ್ಲಿ 3 ಮಂದಿ ಮನೆಯವರ ತೀವ್ರ ನಿರ್ಲಕ್ಷ್ಯಕ್ಕೆ  ಒಳಗಾಗುತ್ತಿದ್ದಾರೆ. ಹಾಗೆಯೇ ಪ್ರತಿ 10ರಲ್ಲಿ 3 ಮಂದಿ ಮನೆಯವರ ಅಗೌರವ, ಅನಾದರಕ್ಕೆ ತುತ್ತಾಗುತ್ತಿದ್ದಾರೆ. ಇದಕ್ಕಿಂತಲೂ  ಘೋರವಾದುದು ಏನೆಂದರೆ, ಸರಾಸರಿ ಪ್ರತಿ 5ರಲ್ಲಿ ಇಬ್ಬರು ಪ್ರತಿದಿನ ತೀವ್ರತರದ ನಿಂದನೆ, ಬೈಗುಳಕ್ಕೆ ಒಳಗಾಗುತ್ತಿದ್ದರೆ ಪ್ರತಿ 10ರಲ್ಲಿ  ಮೂವರು ಸರಾಸರಿ ವಾರಕ್ಕೊಮ್ಮೆ ತೀವ್ರ ನಿಂದನೆಗೆ ಗುರಿಯಾಗುತ್ತಿದ್ದಾರೆ. ಪ್ರತಿ 5ರಲ್ಲಿ ಒಬ್ಬರು ಸರಾಸರಿ ತಿಂಗಳಿಗೊಮ್ಮೆ ನಿಂದನೆಗೆ  ತುತ್ತಾಗುತ್ತಿದ್ದಾರೆ. ಹಾಗಂತ,

ವೃದ್ಧರಿಗೆ ಹೀಗೆ ತೊಂದರೆ ಕೊಡುತ್ತಿರುವವರು ಯಾರೋ ಅಪರಿಚಿತರಲ್ಲ. ಸ್ವತಃ ಮಗ, ಮಗಳು ಅಥವಾ ಸೊಸೆಯಂದಿರೇ. ಪ್ರತಿ  10ರಲ್ಲಿ 6 ಮಂದಿ ವೃದ್ಧರು ಸೊಸೆ ಮತ್ತು ಬಹುತೇಕ ಮಗನಿಂದಲೇ ನಿಂದನೆಗೆ ಒಳಗಾಗುತ್ತಿದ್ದಾರೆ. ಆದರೆ, ವೃದ್ಧರಾದ ಹೆತ್ತವರನ್ನು  ಹೆಣ್ಣು ಮಕ್ಕಳು ನಿಂದಿಸಿರುವ ಪ್ರಮಾಣ ಅತ್ಯಲ್ಪ. ಬರೇ 7% ಹೆಣ್ಣು ಮಕ್ಕಳು ಮಾತ್ರ ಈ ಆರೋಪ ಹೊತ್ತಿದ್ದಾರೆ. ಆದರೆ, ಸರ್ವೇಯಲ್ಲಿ  ಮಾತನಾಡಿರುವ ಯಾವ ವೃದ್ಧರೂ ಮೊಮ್ಮಕ್ಕಳ ಮೇಲೆ ಯಾವ ದೂರನ್ನೂ ಸಲ್ಲಿಸಿಲ್ಲ. ಔಷಧಿಗಳನ್ನು ತಂದು ಕೊಡದ ಮತ್ತು ಅತೀವ  ಅಗತ್ಯಗಳಿಗಾಗಿಯೂ ಹಣ ನೀಡದ ಮಕ್ಕಳ ಬಗ್ಗೆ ಹೆಚ್ಚಿನ ಹಿರಿಯರು ದೂರಿಕೊಂಡಿರುವುದೂ ಸರ್ವೇಯಲ್ಲಿದೆ. ವೃದ್ಧಾಪ್ಯ ವೇತನದ  ಹಣವನ್ನೂ ನುಂಗಿ ನೀರು ಕುಡಿಯುವ ಮಕ್ಕಳೂ ಧಾರಾಳ ಇದ್ದಾರೆ.

ಬಹುಶಃ ಅಧ್ಯಯನ ವರದಿಗಳ ಬೆನ್ನು ಬಿದ್ದು ಮಾಹಿತಿಗಳನ್ನು ಕಲೆ ಹಾಕಹೊರಟರೆ ರಾಶಿ ರಾಶಿ ವಿವರಗಳು ಸಿಗಬಹುದೇನೋ. ಇಂಥ  ಅಧ್ಯಯನ ವರದಿಗಳು ಅಂಕಿ-ಸಂಖ್ಯೆಗಳ ಜೊತೆಗೇ ಈ ವೃದ್ಧರೊಂದಿಗೆ ನಡೆಸಲಾದ ವೈಯಕ್ತಿಕ ಮಾತುಕತೆಗಳ ವಿವರವನ್ನೂ  ಕೊಡುತ್ತದೆ. ಅವನ್ನು ಓದುವಾಗ ಹೃದಯ ಮಿಡಿಯುತ್ತದೆ. ಮಕ್ಕಳ ಮೇಲೆ ಆರೋಪವನ್ನು ಹೊರಿಸಲಾಗದ ಸಂಕಟ ಒಂದೆಡೆಯಾದರೆ, ನರಕದಂಥ ಬದುಕು ಬಾಳಲಾಗದ ದುಃಖ ಇನ್ನೊಂದೆಡೆ- ಇವೆರಡರ ನಡುವೆ ವೃದ್ಧ ಹೆತ್ತವರು ಬೇಯುತ್ತಿರುವುದನ್ನು ಇಂಥ  ಸರ್ವೇಗಳು ಮನದಟ್ಟು ಮಾಡಿಸುತ್ತವೆ. ಸಾಮಾನ್ಯವಾಗಿ ಯಾವ ಹೆತ್ತವರೂ ಇತರರೆದುರು ಮಕ್ಕಳನ್ನು ದೂರುವುದಿಲ್ಲ. ಮಕ್ಕಳು ಎಷ್ಟೇ  ಕೆಟ್ಟದಾಗಿ ನಡೆಸಿಕೊಂಡರೂ ಅವನ್ನು ಇತರರಲ್ಲಿ ಹೇಳುವುದರಿಂದ ಮಕ್ಕಳು ಅವಮಾನಿತರಾಗುತ್ತಾರೆ ಎಂದೇ ಭಾವಿಸಿ ಸಹಿಸಿಕೊಳ್ಳುತ್ತಾರೆ.  ಆದರೆ, ಮಕ್ಕಳ ದೌರ್ಜನ್ಯ ವಿಪರೀತ ಮಟ್ಟಕ್ಕೆ ತಲುಪಿದಾಗ ಅನ್ಯ ದಾರಿಂಯಿಲ್ಲದೇ ಹೃದಯ ತೆರೆದು ಮಾತಾಡುತ್ತಾರೆ. ಯಾವುದೇ  ಸರ್ವೇಯಲ್ಲಿ ವೃದ್ಧ ಹೆತ್ತವರು ತಮ್ಮ ಮಕ್ಕಳ ಬಗ್ಗೆ ದೂರಿಕೊಂಡಿದ್ದಾರೆಂದರೆ, ಅವರು ಇಂಥದ್ದೊಂದು ನರಕಮಯ ಸನ್ನಿವೇಶದ  ತುತ್ತತುದಿಯಲ್ಲಿ ಬದುಕುತ್ತಿದ್ದಾರೆಂದೇ ಅರ್ಥ. ಅಂದಹಾಗೆ,

ವೃದ್ಧರ ಪಾಲಿಗೆ ಅನೇಕ ವಿಷಯಗಳು ನಕಾರಾತ್ಮಕವಾಗಿವೆ. ತಮ್ಮ ಮೇಲೆ ಅನ್ಯಾಯವಾಗುತ್ತಿದೆ ಎಂದು ಹೇಳಿ ಸಾರ್ವಜನಿಕ ಗಮನ  ಸೆಳೆಯಬಲ್ಲ ಸ್ಥಳದಲ್ಲಿ ಪ್ರತಿಭಟನೆ ಮಾಡುವ ಸಾಮರ್ಥ್ಯ ಅವರಿಗಿಲ್ಲ. ಇತರರ ಹಂಗಿಲ್ಲದೇ ಬದುಕುವೆ ಎಂದು ಹೇಳುವ ವಯಸ್ಸೂ  ಅದಲ್ಲ. ವೃದ್ಧರು ಪರಸ್ಪರ ಸಂಪರ್ಕದಲ್ಲಿರಿಸಬಹುದಾದ ವ್ಯವಸ್ಥೆಯಾಗಲಿ, ಅಂಥ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವ ವಯಸ್ಸಾಗಲಿ  ಅವರದಲ್ಲ. ಆದ್ದರಿಂದಲೇ, ಒಂದೇ ಫ್ಲ್ಯಾಟ್‌ನಲ್ಲಿದ್ದರೂ ಪರಸ್ಪರ ಅಪರಿಚಿತರಾಗಿಯೇ ಅವರು ಬದುಕುತ್ತಿರುತ್ತಾರೆ. ಹಕ್ಕುಗಳ ಬಗ್ಗೆ  ಗೊತ್ತಿದ್ದರೂ ಮತ್ತು ಕಾನೂನು ಸಂರಕ್ಷಣೆಯ ಕುರಿತು ಮಾಹಿತಿ ಇದ್ದರೂ ಅವನ್ನು ಹೋರಾಡಿ ಪಡಕೊಳ್ಳುವಷ್ಟು ದೇಹತ್ರಾಣ ಅವರಲ್ಲಿರುವುದಿಲ್ಲ. ಟಿ.ವಿ. ಚಾನೆಲ್‌ಗಳ ಮೈಕ್‌ಗಳಾಗಲಿ, ಪತ್ರಕರ್ತರ ಪೆನ್ನುಗಳಾಗಲಿ ಅವರಲ್ಲಿಗೆ ತಲುಪುವುದು ಶೂನ್ಯ ಅನ್ನುವಷ್ಟು ಕಡಿಮೆ.  ವೃದ್ಧರು ಹೆಚ್ಚೆಂದರೆ ಮನೆಯಿಂದ ಆಸ್ಪತ್ರೆಗೆ ಮತ್ತು ಆಸ್ಪತ್ರೆಯಿಂದ ಮನೆಗೆ ಮಾತ್ರ ಸೀಮಿತವಾಗಿರುವುದರಿಂದ  ಹಾಗೂ ಮದುವೆ,  ಮುಂಜಿ, ಮರಣ, ಸಭೆ-ಸಮಾರಂಭಗಳಲ್ಲಿ ಗೈರು ಹಾಜರಿರುವುದರಿಂದ ಅವರ ಬಗೆಗಿನ ಸಾರ್ವಜನಿಕ ಗಮನವೂ ಕಡಿಮೆ. ಪ್ರಸ್ತಾಪವೂ  ಕಡಿಮೆ. ಅಣು ಕುಟುಂಬದ ಈ ಕಾಲದಲ್ಲಂತೂ ವೃದ್ಧ ಅಪ್ಪನನ್ನೋ ಅಮ್ಮನನ್ನೋ ಅಥವಾ ಅವರಿಬ್ಬರನ್ನೂ ಮನೆಯಲ್ಲಿ ಕೂಡಿಟ್ಟು  ಮಗ-ಸೊಸೆ ದುಡಿಯಲು ಹೋಗುತ್ತಿರುವುದೇ ಹೆಚ್ಚು. ಇಂಥ ಸ್ಥಿತಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೆ ಅವರು ಏಕತಾನತೆಯಿಂದ  ಬದುಕಬೇಕಾಗುತ್ತದೆ. ಅಷ್ಟಕ್ಕೂ,

ತೈತೀರಿಯಾ ಉಪನಿಷತ್‌ನಲ್ಲಿ ಹೇಳಲಾಗಿರುವ, ಮಾತೃ ದೇವೋಭವ ಪಿತೃ ದೇವೋಭವ ಎಂಬ ಶ್ಲೋಕ ಬಹಳ ಪ್ರಸಿದ್ಧ. ಪವಿತ್ರ  ಕುರ್‌ಆನ್ ಅಂತೂ ವೃದ್ಧ ಹೆತ್ತವರ ಬಗ್ಗೆ ಎಷ್ಟು ಕಾಳಜಿ ವ್ಯಕ್ತಪಡಿಸಿದೆ ಎಂದರೆ, ಅವರ ಬಗ್ಗೆ ‘ಛೆ’ ಎಂಬ ಭಾವ ಕೂಡ ಮಕ್ಕಳಲ್ಲಿ  ವ್ಯಕ್ತವಾಗಬಾರದು ಎಂದು ಆಜ್ಞಾಪಿಸಿದೆ. ‘ಹೆತ್ತವರೇ ಮಕ್ಕಳ ಪಾಲಿನ ಸ್ವರ್ಗ ಮತ್ತು ನರಕ’ ಎಂದೂ ಇಸ್ಲಾಮ್ ಹೇಳಿದೆ. ‘ಬಾಲ್ಯದಲ್ಲಿ  ಅವರು ನಮ್ಮನ್ನು ಪ್ರೀತಿ ವಾತ್ಸಲ್ಯದಿಂದ ಸಾಕಿ ಸಲಹಿದಂತೆಯೇ ನೀನು ಅವರ ಮೇಲೆ ಕರುಣೆ ತೋರು’ ಎಂದು ಮಕ್ಕಳು ಹೆತ್ತವರಿಗಾಗಿ ಸದಾ  ದೇವನಲ್ಲಿ ಪ್ರಾರ್ಥಿಸಬೇಕೆಂಬ ನಿರ್ದಿಷ್ಟ ಪ್ರಾರ್ಥನಾ ಕ್ರಮವನ್ನೇ ಇಸ್ಲಾಮ್ ಕಲಿಸಿಕೊಟ್ಟಿದೆ. ‘ನಿಮ್ಮನ್ನು ನಿತ್ರಾಣದ ಮೇಲೆ ನಿತ್ರಾಣವನ್ನು  ಸಹಿಸಿ ಹೆತ್ತಿದ್ದಾಳೆ’ ಎಂಬ ಪದಪ್ರಯೋಗಿಸಿಯೇ ತಾಯಿಯ ಮಹತ್ವವನ್ನು ಎತ್ತಿ ಹೇಳಿರುವ ಕುರ್‌ಆನ್, ‘ನಿಮ್ಮ ಯಾವುದೇ ಸೇವೆಯು  ಪ್ರಸವದ ಸಮಯದಲ್ಲಿ ತಾಯಿ ಅನುಭವಿಸಿದ ನೋವಿಗೆ ಸಮನಾಗದು’ ಎಂಬ ರೀತಿಯ ಮಾರ್ಮಿಕ ಉಪದೇಶವನ್ನೂ ನೀಡಿದೆ.  ಅಂದಹಾಗೆ,

ಮಕ್ಕಳು, ಮೊಮ್ಮಕ್ಕಳು, ಕುಟುಂಬ ಎಂದು ಸಾಮರ್ಥ್ಯವಿರುವವರೆಗೆ ದುಡಿದು ಹಾಕಿದವರನ್ನು ವೃದ್ಧಾಪ್ಯದಲ್ಲಿ ನಿರ್ಲಕ್ಷಿಸುವುದು ಸಲ್ಲದು.  ಅದು ಮಹಾಪಾಪ.

ಹಿಂದೂ ಧರ್ಮದ ರಕ್ಷಣೆಗೆ ಮುಸ್ಲಿಮರನ್ನು ನಿಂದಿಸಲೇಬೇಕಾ?

 



ಸನ್ಮಾರ್ಗ ಸಂಪಾದಕೀಯ

ಕುಂದಾಪುರ ಕಾಳಿ, ದುರ್ಗೆ, ಹಿಂದುತ್ವ ಭಾಷಣಗಾರ್ತಿ, ಕಾದಂಬರಿಗಾರ್ತಿ, ಚಿಂತಕಿ ಎಂಬೆಲ್ಲಾ  ಬಿರುದನ್ನು ಅಂಟಿಸಿಕೊಂಡ  ಮತ್ತು  ಮುಸ್ಲಿಮರನ್ನು ತಿವಿಯುವುದನ್ನೇ ಹಿಂದೂ ಧರ್ಮದ ಉದ್ಧಾರವಾಗಿ ಕಂಡಿದ್ದ ಚೈತ್ರಾ ಕುಂದಾಪುರ ಎಂಬ ಯುವತಿ ದಿನ  ಬೆಳಗಾಗುವುದರೊಳಗೆ ವಂಚಕಿಯಾಗಿ ಮಾರ್ಪಟ್ಟಿದ್ದಾಳೆ. ಉದ್ಯಮಿಯೊಬ್ಬರಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ  ಎದುರಿಸುತ್ತಿದ್ದಾಳೆ. ಆಕೆಯ ವಂಚನೆಯ ವಿವಿಧ ಕರಾಳ ಸುದ್ದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ಆಕೆ ಈ ಹಿಂದೆ ಮಾಡಿರುವ  ಬೆಂಕಿ ಭಾಷಣಗಳೂ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆಕೆಯನ್ನು ಎತ್ತಿ ಮೆರೆದಾಡಿದವರು ಮತ್ತು ಹಿಂದೂ ಧರ್ಮದ  ಪ್ರಚಾರಕಿ ಎಂದು ತಲೆ ಮೇಲೆ ಕೂರಿಸಿದವರೆಲ್ಲ ಗಾಢ ಮೌನಕ್ಕೆ ಜಾರಿದ್ದಾರೆ. ಆಕೆಯ ಭಾಷಣಗಳಿಂದ ಗರಿಷ್ಠ ಲಾಭ  ಪಡೆದುಕೊಂಡಿರುವ ಬಿಜೆಪಿ ಈಗಾಗಲೇ ಆಕೆಯಿಂದ ಅಂತರ ಕಾಯ್ದುಕೊಂಡಿದೆ. ಆಕೆ ಯಾರೆಂದೇ ಗೊತ್ತಿಲ್ಲ ಎಂದು ಹೇಳಿ  ಕೈತೊಳೆದುಕೊಂಡಿದೆ. ಆಕೆಯನ್ನು ಕರೆಸಿ ಭಾಷಣ ಮಾಡಿಸಿರುವ ಊರವರು ಇದೀಗ ಪ್ರಾಯಶ್ಚಿತ್ತ ಪೂಜೆ ಮಾಡಿಕೊಂಡದ್ದೂ ನಡೆದಿದೆ.  ಮೊನ್ನೆ ಮೊನ್ನೆವರೆಗೆ ಬೃಹತ್ ವೇದಿಕೆಯನ್ನೇರಿ ದ್ವೇಷ ಭಾಷಣ ಮಾಡುತ್ತಾ ಭಾರೀ ಜನಸ್ತೋಮದಿಂದ ಚಪ್ಪಾಳೆ, ಶಿಳ್ಳೆ, ಜೈಕಾರ  ಪಡೆಯುತ್ತಿದ್ದ ಯುವತಿಯೊಬ್ಬಳ ಸ್ಥಿತಿ ಇದು. 

ಅಷ್ಟಕ್ಕೂ,

ಈ ಬೆಳವಣಿಗೆಯಿಂದ ಯಾರು, ಏನನ್ನು ಕಳಕೊಂಡರು? ಯಾರ ವರ್ಚಸ್ಸಿಗೆ ಹಾನಿಯಾಗಿದೆ? ಮುಖಭಂಗವಾದ ಅನುಭವ  ಯಾರಿಗಾಗಿದೆ? ಚೈತ್ರ ಜಾಮೀನಿನ ಮೂಲಕ ನಾಳೆ ಬಿಡುಗಡೆಗೊಳ್ಳಬಹುದು. ಭಾಷಣದ ಬದಲು ಬೇರೆಯದೇ ಉದ್ಯೋಗವನ್ನು  ನೋಡಿಕೊಳ್ಳಲೂ ಬಹುದು ಅಥವಾ ತಾನು ಸಂತ್ರಸ್ತೆ ಎಂಬ ಅವತಾರವನ್ನು ತಾಳಲೂ ಬಹುದು. ಆದರೆ, ಆಕೆಯಿಂದಾಗಿ ಹಿಂದೂ  ಧರ್ಮದ ವರ್ಚಸ್ಸಿಗೆ ಆಗಿರುವ ಹಾನಿಯನ್ನು ಇಷ್ಟು ಸುಲಭದಲ್ಲಿ ನಿವಾರಿಸಿಬಿಡಲು ಸಾಧ್ಯವಿಲ್ಲ. ಆಕೆ ವೇದಿಕೆಯೇರಿ ತನ್ನನ್ನು ಹಿಂದೂ  ಧರ್ಮದ ವಕ್ತಾರೆಯಂತೆ ಬಿಂಬಿಸಿಕೊಳ್ಳುತ್ತಿದ್ದಳು. ಹಿಂದೂ ಧರ್ಮದ ರಕ್ಷಣೆಗಾಗಿ ಹೋರಾಡುತ್ತಿರುವ ಕಾರ್ಯಕರ್ತೆಯಂತೆ  ಆಡಿಕೊಳ್ಳುತ್ತಿದ್ದಳು. ಮುಸ್ಲಿಮರ ವಿರುದ್ಧ ಮಾಡುತ್ತಿದ್ದ ಭಾಷಣಕ್ಕೂ ಹಿಂದೂ ಧರ್ಮದ ರಕ್ಷಣೆಯ ಕವಚವನ್ನು ತೊಡಿಸುತ್ತಿದ್ದಳು.  ಅಲ್ಲದೇ, ಆಕೆಗೆ ವೇದಿಕೆ ಒದಗಿಸುತ್ತಿದ್ದುದೂ ಹಿಂದುತ್ವ ಸಂಘಟನೆಗಳೇ. ಸ್ವಾಮೀಜಿಗಳು, ಧರ್ಮಪ್ರೇಮಿಗಳೆಂದು ಕರೆಸಿಕೊಳ್ಳುತ್ತಿದ್ದವರು  ಹಂಚಿಕೊಳ್ಳುತ್ತಿದ್ದ ವೇದಿಕೆಗಳನ್ನೇ ಈಕೆಯೂ ಹಂಚಿಕೊಳ್ಳುತ್ತಿದ್ದಳು. ಮಾತ್ರವಲ್ಲ, ಈಕೆಯ ಭಾಷಣವನ್ನು ಖಂಡಿಸಿ ಹಿಂದೂ ಧರ್ಮದ  ಸ್ವಾಮೀಜಿಗಳಾಗಲಿ, ವಿದ್ವಾಂಸರಾಗಲಿ ಬಹಿರಂಗ ಹೇಳಿಕೆ ಕೊಟ್ಟದ್ದೂ ಇಲ್ಲ. ಆದ್ದರಿಂದ ಆಕೆಯ ಮಾತುಗಳನ್ನು ಹಿಂದೂ ಧರ್ಮದ  ರಕ್ಷಣೆಯ ಭಾಗವಾಗಿ ಮತ್ತು ಹಿಂದೂ ಧರ್ಮದ ಅಗತ್ಯವಾಗಿ ಜನರು ಭಾವಿಸಿಕೊಂಡಿದ್ದರೆ, ಅದು ತಪ್ಪಾಗುವುದಿಲ್ಲ. ನಿಜವಾಗಿ, ಚೈತ್ರಾಳ  ವರ್ಚಸ್ಸಿಗೆ ಆಗಿರುವ ಹಾನಿಗಿಂತ ಆಕೆ ಪ್ರಚಾರ ಮಾಡುತ್ತಿದ್ದ ವಿಚಾರಧಾರೆಗೆ ಆಗಿರುವ ಹಾನಿ ಎಷ್ಟೋ ಪಟ್ಟು ದೊಡ್ಡದು. ಚೈತ್ರಾಳಿಂದಾಗಿ  ಇವತ್ತು ಹಿಂದೂ ಸಮುದಾಯ ನಾಚಿಕೆಯಿಂದ ತಲೆತಗ್ಗಿಸಿದೆ. ಆಕೆಯಿಂದ ಅಂತರ ಕಾಯ್ದುಕೊಂಡು ಮಾತಾಡುತ್ತಿದೆ. 

ಅಂದಹಾಗೆ,

ವಂಚನೆ ಎಂಬುದು ಈ ಸಮಾಜಕ್ಕೆ ಹೊಸತಲ್ಲ. ವಂಚನೆ ಆರೋಪ ಹೊತ್ತುಕೊಂಡವರಲ್ಲಿ ಚೈತ್ರ ಮೊಟ್ಟಮೊದಲಿಗಳೂ ಅಲ್ಲ.  ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಬೇಧ ಇಲ್ಲದೇ ವಂಚಕರು ಪ್ರತಿದಿನ ಬಂಧನಕ್ಕೀಡಾಗುತ್ತಲೂ ಇದ್ದಾರೆ. ಹಾಗಿದ್ದ ಮೇಲೂ  ಚೈತ್ರಳಿಂದಾಗಿ ಒಂದು ಸಮುದಾಯ ಅವಮಾನಕ್ಕೆ ಒಳಗಾದ ಭಾವದಲ್ಲಿ ಮಾತಾಡಲು ಕಾರಣವೇನು? ಒಂದೇ ಕಾರಣ, ಆಕೆ ಧರ್ಮದ  ವಕ್ತಾರೆಯಂತೆ, ರಕ್ಷಕಿಯಂತೆ ಮತ್ತು ಉದ್ಧಾರಕಿಯಂತೆ ಬಿಂಬಿಸಿಕೊಂಡದ್ದು ಮತ್ತು ಸಂಘಟನೆಗಳು ಅದಕ್ಕೆ ಪೂರಕ ವೇದಿಕೆಗಳನ್ನು  ನಿರ್ಮಿಸಿಕೊಟ್ಟು ಆಕೆಯ ಮಾತುಗಳಿಗೆ ಮೌನಸಮ್ಮತಿ ನೀಡಿದ್ದು. ಇಸ್ಲಾಮ್ ಧರ್ಮವನ್ನು ಬೈಯುವುದು ಹಿಂದೂ ಧರ್ಮದ  ರಕ್ಷಣೆಯಾಗಲು ಸಾಧ್ಯವಿಲ್ಲ ಎಂಬ ಬುದ್ಧಿವಾದವನ್ನು ಆಕೆಗೆ ಬಹಿರಂಗವಾಗಿ ಯಾರೂ ನೀಡಿಲ್ಲ. ಸಣ್ಣ ವಯಸ್ಸಿನ ಯುವತಿಗೆ ಹಿಂದೂ  ಧರ್ಮದ ಹೆಸರಲ್ಲಿ ಅಂಥ ವೇದಿಕೆಯನ್ನು ಕೊಡಬೇಡಿ ಎಂದು ಕಾರ್ಯಕ್ರಮ ಆಯೋಜಕರಿಗೆ ಬಹಿರಂಗವಾಗಿ ತಿಳಿ ಹೇಳಿದ ಯಾವ  ಸನ್ನಿವೇಶವೂ ನಡೆದಿಲ್ಲ. ಹಿಂದೂ ಧರ್ಮದ ಪಾಲನೆಯೇ ಧರ್ಮರಕ್ಷಣೆ ಎಂಬ ವಿವೇಕದ ಮಾತನ್ನೂ ಯಾರೂ ಬಹಿರಂಗವಾಗಿ  ಹೇಳಲಿಲ್ಲ. ಹಾಗಂತ, ಆಂತರಿಕವಾಗಿ ಇಂಥ ಪ್ರಕ್ರಿಯೆಗಳು ನಡೆದಿರಲೂ ಬಹುದು. ಹಿಂದೂ ಧರ್ಮದ ತಜ್ಞರು ಆಕೆಗೆ ಬುದ್ಧಿಮಾತು  ಹೇಳಿರಲೂಬಹುದು. ಆದರೆ, ಆಕೆಗೆ ಪದೇ ಪದೇ ವೇದಿಕೆ ಸಿಗುತ್ತಿದ್ದುದನ್ನು ನೋಡಿದರೆ ಮತ್ತು ಅಲ್ಲೆಲ್ಲಾ  ಮುಸ್ಲಿಮ್ ದ್ವೇಷವನ್ನೇ ತನ್ನ  ಭಾಷಣದ ವಿಷಯವನ್ನಾಗಿಸಿದ್ದನ್ನು ಪರಿಗಣಿಸಿದರೆ ಒಂದೋ ಆಕೆ ಬುದ್ಧಿಮಾತನ್ನು ತಿರಸ್ಕರಿಸಿದ್ದಾಳೆ ಅಥವಾ ಬುದ್ಧಿಮಾತನ್ನು ಯಾರೂ  ಹೇಳಿಯೇ ಇಲ್ಲ ಎಂದೇ ಅಂದುಕೊಳ್ಳಬೇಕಾಗುತ್ತದೆ.

ಯಾವುದೇ ಧರ್ಮದ ಅಳಿವು ಮತ್ತು ಉಳಿವು ಆಯಾ ಧರ್ಮವನ್ನು ಅನುಸರಿಸುವವರ ಕೈಯಲ್ಲಿದೆ. ಧರ್ಮವನ್ನು ಬದ್ಧತೆಯಿಂದ ಪಾಲಿಸುವುದೇ ಆಯಾ ಧರ್ಮಕ್ಕೆ ಅನುಯಾಯಿಗಳು ಮಾಡುವ ಅತಿದೊಡ್ಡ ಸೇವೆ. ಮುಸ್ಲಿಮರನ್ನು ಬೈಯುವುದರಿಂದ ಹಿಂದೂ ಧರ್ಮದ  ರಕ್ಷಣೆಯಾಗುತ್ತದೆ ಎಂಬುದು ಬರೇ ಭ್ರಮೆ. ಮುಸ್ಲಿಮರನ್ನು ಬೈಯುವ ಭಾಷಣಕಾರರಿಗೆ ಹಿಂದೂ ಧರ್ಮದೊಂದಿಗೆ ಗುರುತಿಸಿಕೊಂಡ  ಸಂಘಟನೆಗಳು ವೇದಿಕೆ ನಿರ್ಮಿಸಿ ಕೊಡುವುದರಿಂದ ಹಿಂದೂಗಳ ಬಗ್ಗೆ ಮುಸ್ಲಿಮರಲ್ಲಿ ನಕಾರಾತ್ಮಕ ಭಾವನೆ ಬರಲು  ಕಾರಣವಾಗಬಹುದೇ ಹೊರತು ಅದರಿಂದ ಹಿಂದೂ ಧರ್ಮಕ್ಕೆ ಸಾಮಾಜಿಕವಾಗಿ ಯಾವ ಲಾಭವೂ ಉಂಟಾಗದು. ಮುಸ್ಲಿಮರಿಗೆ  ಸಂಬಂಧಿಸಿಯೂ ಇವೇ ಮಾತು ಅನ್ವಯ. ಹಿಂದೂಗಳನ್ನು ಬೈಯುವ ಯಾವುದೇ ಭಾಷಣಕಾರ ಇಸ್ಲಾಮ್‌ಗೆ ಹಾನಿಯನ್ನಲ್ಲದೇ  ಯಾವ ಉಪಕಾರವನ್ನೂ ಮಾಡಲಾರ. ವ್ಯಕ್ತಿಯ ತಪ್ಪನ್ನು ಸಮುದಾಯದ ಮೇಲೆ ಹೊರಿಸಿ ಬೈಯುವುದರಿಂದ ಭಾಷಣವೇನೋ  ಆಕರ್ಷಕವಾಗಬಹುದು. ಆದರೆ, ಅದು ಭಾಷಣಕಾರ ಪ್ರತಿನಿಧಿಸುವ ಧರ್ಮದ ಬಗ್ಗೆ ನಾಗರಿಕರಲ್ಲಿ ನಕಾರಾತ್ಮಕ ಭಾವ ಸೃಷ್ಟಿಸುತ್ತದೆ. ತಪ್ಪು  ಚೈತ್ರಾಳದ್ದಾದರೂ ಹಾಲಶ್ರೀ ಸ್ವಾಮೀಜಿಗಳದ್ದಾದರೂ ವ್ಯಕ್ತಿಗತವಾಗಿ ನೋಡಬೇಕೇ ಹೊರತು ಒಂದು ಸಮುದಾಯದ್ದೋ  ಧರ್ಮದ್ದೋ   ಭಾಗವಾಗಿ ಅಲ್ಲ. ಆದರೆ, ಚೈತ್ರ ಇದಕ್ಕಿಂತ ಹೊರತಾಗಿದ್ದಾಳೆ. ಆಕೆ ತನ್ನ ಧರ್ಮದ ವಕ್ತಾರೆಯಂತೆ, ಧರ್ಮರಕ್ಷಕಿಯಂತೆ  ಬಿಂಬಿಸಿಕೊಂಡದ್ದಷ್ಟೇ ಅಲ್ಲ, ಆಕೆಗಾಗಿ ಪದೇ ಪದೇ ವೇದಿಕೆಗಳನ್ನು ಒದಗಿಸಿದ ಸಂಘಟನೆಗಳೂ ಕೂಡಾ ಧಾರ್ಮಿಕವಾಗಿ  ಗುರುತಿಸಿಕೊಂಡಿವೆ. ಪ್ರತಿ ಭಾಷಣದಲ್ಲೂ ಆಕೆ ಇಸ್ಲಾಮ್ ಮತ್ತು ಮುಸ್ಲಿಮರನ್ನು ಪ್ರಶ್ನೆಯ ಮೊನೆಯಲ್ಲಿ ನಿಲ್ಲಿಸುತ್ತಿದ್ದಾಗಲೂ ಚಪ್ಪಾಳೆ  ಬೀಳುತ್ತಿತ್ತೇ ಹೊರತು ಆಕೆಗೆ ವೇದಿಕೆಗಳೇನೂ ಕಡಿಮೆಯಾಗಲಿಲ್ಲ. ಆದ್ದರಿಂದಲೇ, ಆಕೆಯ ವ್ಯಕ್ತಿಗತ ತಪ್ಪು ಒಂದು ಸಮುದಾಯವನ್ನೇ  ಪ್ರಶ್ನೆಯಾಗಿ ಇರಿಯುತ್ತಿದೆ. 

ನಿಜವಾಗಿ,

ಮುಸ್ಲಿಮರನ್ನು ನಿಂದಿಸಿ ಭಾಷಣ ಮಾಡುವವರಲ್ಲಿ ಚೈತ್ರ ಮೊದಲಿಗಳಲ್ಲ. ಇಂಥವರು ಅನೇಕರಿದ್ದಾರೆ. ವ್ಯಕ್ತಿಗತ ತಪ್ಪುಗಳನ್ನು ಒಂದು  ಸಮುದಾಯದ ಮತ್ತು ಧರ್ಮದ ಮೇಲೆ ಹೊರಿಸಿ ಅವಮಾನಿಸುವುದನ್ನೇ ಇವರೆಲ್ಲ ಕಸುಬಾಗಿಸಿಕೊಂಡಿದ್ದಾರೆ. ಇದನ್ನೇ ಧರ್ಮರಕ್ಷಣೆ  ಎಂದೂ ನಂಬಿಸುತ್ತಿದ್ದಾರೆ. ಅಂದಹಾಗೆ, ಹಿಂದೂ ಆಗಲಿ, ಮುಸ್ಲಿಮ್ ಆಗಲಿ ಅಥವಾ ಇನ್ನಾವುದೇ ಸಮುದಾಯವಾಗಲಿ ತಪ್ಪಿತಸ್ತರನ್ನು  ದಂಡಿಸುವ ಅಧಿಕಾರವನ್ನು ಈ ದೇಶದಲ್ಲಿ ಪಡೆದಿಲ್ಲ. ಅದಿರುವುದು ಸರಕಾರದ ಕೈಯಲ್ಲಿ. ಆದ್ದರಿಂದ ಮುಸ್ಲಿಮ್ ವ್ಯಕ್ತಿಯ ತಪ್ಪನ್ನು ಆ  ಸಮುದಾಯ ಖಂಡಿಸಬಹುದೇ ಹೊರತು ದಂಡಿಸುವುದು ಅಪರಾಧವಾಗುತ್ತದೆ. ಆದ್ದರಿಂದ, ಅಪರಾಧ ಕೃತ್ಯವೆಸಗುವ ಮುಸ್ಲಿಮ್  ವ್ಯಕ್ತಿಯನ್ನು ಮುಸ್ಲಿಮ್ ಸಮುದಾಯ ಯಾಕೆ ದಂಡಿಸುವುದಿಲ್ಲ ಎಂಬ ಪ್ರಶ್ನೆಯೊಂದನ್ನು ಎಸೆದು ಆ ಬಳಿಕ ಮುಸ್ಲಿಮ್ ಸಮುದಾಯ  ಆತನ ಅಪರಾಧದ ಜೊತೆಗಿದೆ ಎಂಬ ತೀರ್ಪು ಕೊಡುತ್ತಾ ಸಮಾಜದಲ್ಲಿ ಮುಸ್ಲಿಮ್ ದ್ವೇಷವನ್ನು ಬಿತ್ತುವ ಪ್ರಯತ್ನ ಈ ಎಲ್ಲ  ಭಾಷಣಕಾರರಿಂದ ಸಾಮಾನ್ಯವಾಗಿ ನಡೆಯುತ್ತಿದೆ. ವ್ಯಕ್ತಿಗತ ತಪ್ಪನ್ನೇ ಮುಸ್ಲಿಮ್ ಸಮುದಾಯವನ್ನು ನಿಂದಿಸುವುದಕ್ಕೆ ಈ ಎಲ್ಲ ದ್ವೇಷ  ಭಾಷಣಕಾರರು ಬಳಸುತ್ತಿದ್ದಾರೆ. ಇದನ್ನು ಹಿಂದೂ-ಮುಸ್ಲಿಮರೆಲ್ಲರೂ ವಿರೋಧಿಸುವ ಪ್ರಕ್ರಿಯೆ ಪ್ರಾರಂಭವಾಗಬೇಕು. ದ್ವೇಷಭಾಷಣ  ಮಾಡುವ ಯಾರೇ ಇರಲಿ, ತಕ್ಷಣ ಅವರನ್ನು ವೇದಿಕೆಯಿಂದ ಕೆಳಗಿಳಿಸುವ ಮತ್ತು ಮುಂದೆ ಅವರಿಗೆ ವೇದಿಕೆ ಒದಗಿಸದಿರುವ  ನಿರ್ಧಾರವನ್ನು ಹಿಂದೂ-ಮುಸ್ಲಿಮರು ಕೈಗೊಳ್ಳಬೇಕು. ಹಿಂದೂ ಧರ್ಮದ ಬಗ್ಗೆ ಹಿಂದೂ ವಿದ್ವಾಂಸರು ಮಾತಾಡಲಿ. ಮುಸ್ಲಿಮರಲ್ಲೂ  ಇದೇ ಬೆಳವಣಿಗೆ ನಡೆಯಲಿ. ದ್ವೇಷ ಭಾಷಣಕಾರರು ಧರ್ಮಕ್ಕೆ ಅಪಾಯಕಾರಿಗಳೇ ಹೊರತು ಧರ್ಮರಕ್ಷಕರಲ್ಲ. ಚೈತ್ರ ಎಲ್ಲರಿಗೂ  ಪಾಠವಾಗಲಿ.

Monday 18 September 2023

ಬೀಫ್‌ನಲ್ಲಿ ಗೋಮಾಂಸ ಇಲ್ಲವೇ?

 



ಬೀಫ್ ರಫ್ತಿನಲ್ಲಿ ಭಾರತ ಜಗತ್ತಿನಲ್ಲೇ ನಾಲ್ಕನೇ ಸ್ಥಾನದಲ್ಲಿದೆ ಎಂಬ ಸುದ್ದಿ ಕಳೆದವಾರ ಬಿಡುಗಡೆಗೊಂಡ ಮರುದಿನ ನಟಿ ಐಂದ್ರಿತಾ ರೇ ಮಾಡಿದ ಟ್ವೀಟ್ಗಿ ಮಾಧ್ಯಮಗಳ ಗಮನ ಸೆಳೆದಿತ್ತು. ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಟ್ರಕ್ಸ ನಲ್ಲಿ ಗೋಮಾಂಸ ಸಾಗಿಸಲಾಗುತ್ತಿದೆ ಎಂದು ಹೇಳಿ ವೀಡಿಯೊಂದನ್ನು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿದ್ದರು. ಆದರೆ ಐಂದ್ರಿತಾ  ಅವರ ಹೇಳಿಕೆಯಲ್ಲಿ ಸತ್ಯಾಂಶವಿಲ್ಲ ಎಂದು ಆ ಬಳಿಕ ಬೆಂಗಳೂರು ಡಿಸಿಪಿ ಸಿ.ಕೆ. ಬಾಬಾ ಸ್ಪಷ್ಟಪಡಿಸಿದರು. ವಾಹನದಲ್ಲಿ ಮೂಳೆಗಳು,  ಕೊಂಬುಗಳು, ಚರ್ಮ ಮತ್ತು ಪ್ರಾಣಿಗಳ ಉಪಉತ್ಪನ್ನಗಳು ಪತ್ತೆಯಾಗಿದ್ದು ಅದು ಗೋವಿನದ್ದಲ್ಲ ಅಥವಾ ಗೋಮಾಂಸವಲ್ಲ ಎಂದು  ವಿವರಿಸಿದ್ದರು. ಪತ್ತೆಯಾದ ಈ ತ್ಯಾಜ್ಯವು ಬಿಬಿಎಂಪಿ ಪೂರ್ವ ವಿಭಾಗದ ಕಸಾಯಿಖಾನೆಗೆ ಸಂಬಂಧಿಸಿದ್ದು ಎಂದೂ ಹೇಳಿದ್ದರು. ಈ  ಸ್ಪಷ್ಟೀಕರಣದ ಬೆನ್ನಿಗೇ ಐಂದ್ರಿತಾ ರೇ ತನ್ನ ಟ್ವೀಟ್ ಅನ್ನು ಅಳಿಸಿ ಹಾಕಿದ್ದರು. ಅಂದಹಾಗೆ,

ಗೋಮಾಂಸ  ಎಂಬ ಪದ ಕೇಳಿದ ಕೂಡಲೇ ಬೆಚ್ಚಿ ಬೀಳುವ ಒಂದು ಗುಂಪಿನ ಮುಗ್ಧ ಸದಸ್ಯೆಯೇ ಈ ಐಂದ್ರಿತಾ ರೇ ಹೊರತು  ಆಕೆಯೇನೂ ಒಂಟಿಯಲ್ಲ. ಐಂದ್ರಿತಾರಂತೆ  ಭಾವುಕವಾಗುವ, ಹಿಂದು-ಮುಂದು  ಆಲೋಚಿಸದೇ ಮಾತಾಡುವ ಮತ್ತು ಹತ್ಯೆಗೂ  ಸಿದ್ಧವಾಗುವ ದೊಡ್ಡದೊಂದು ಗುಂಪು ಈ ದೇಶದಲ್ಲಿದೆ. ಈ ಗುಂಪಿಗೆ ಗೋರಾಜಕೀಯದ ಮಾಹಿತಿಯೇ ಇರುವುದಿಲ್ಲ ಅಥವಾ  ಗೊತ್ತಿರುವ ಯಾವ ಮಾಹಿತಿಯನ್ನೂ ನಂಬದಷ್ಟು ಅವು ಬುದ್ಧಿಭ್ರಮಣೆಗೆ ಒಳಗಾಗಿರುತ್ತವೆ. ಈ ಗುಂಪಿಗೆ ನೇತೃತ್ವವನ್ನು ನೀಡುವವರು  ಅಷ್ಟರ ಮಟ್ಟಿಗೆ ಈ ಗುಂಪಿನ ಮೆದುಳು ತೊಳೆದಿರುತ್ತಾರೆ. ನಿಜವಾಗಿ,

ಐಂದ್ರಿತಾ ರೇ ಹಂಚಿಕೊಂಡ  ವೀಡಿಯೋ ಮತ್ತು ಆ ಬಳಿಕ ಡಿಸಿಪಿ ಕೊಟ್ಟ ಸ್ಪಷ್ಟನೆಯಲ್ಲಿ ಕೆಲವು ಸತ್ಯಗಳಿವೆ. ಬೆಂಗಳೂರಿನಲ್ಲಿ  ಕಸಾಯಿಖಾನೆಗಳಿವೆ ಎಂಬ ಸತ್ಯವೂ ಇದರಲ್ಲಿ ಒಂದು. ಈ ಕಸಾಯಿಖಾನೆಗಳು ಸಿದ್ದರಾಮಯ್ಯ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ  ಬಾಗಿಲು ತೆರೆದಿರುವುದಲ್ಲ ಮತ್ತು ಕಸಾಯಿಖಾನೆ ಎಂಬುದು ತರಕಾರಿ ಕತ್ತರಿಸುವ ಅಂಗಡಿಯೂ ಅಲ್ಲ. ಈ ಕಸಾಯಿಖಾನೆಗಳು  ಸರಕಾರದ ಅಧೀನದಲ್ಲಿವೆ ಮತ್ತು ವರ್ಷಂಪ್ರತಿ ಸರಕಾರ ಏಲಂ ಕರೆದು ಅವನ್ನು ಹಂಚುತ್ತಲೂ ಇದೆ. ರಾಜ್ಯಾದ್ಯಂತ ನೂರಕ್ಕಿಂತಲೂ  ಅಧಿಕ ಅಧಿಕೃತ ಕಸಾಯಿಖಾನೆಗಳಿವೆ. ಮಾಂಸ ಮಾಡುವುದೇ ಇವುಗಳ ಉದ್ದೇಶ. ನಿಜವಾಗಿ, ಬೊಮ್ಮಾಯಿ ಸರಕಾರ ಗೋಹತ್ಯಾ  ನಿಷೇಧ ಕಾಯ್ದೆಯನ್ನು ಜಾರಿಗೆ ತಂದಾಗ ಐಂದ್ರಿತಾ ಪ್ರತಿನಿಧಿಸುವ ‘ಗೋಪ್ರೇಮಿ ಗುಂಪನ್ನು’ ದಾರಿತಪ್ಪಿಸುವಲ್ಲಿ ಯಶಸ್ವಿಯಾಗಿತ್ತು.  ಗೋಹತ್ಯೆಯನ್ನು ನಿಷೇಧಿಸುತ್ತೇವೆ ಎಂದು ಹೇಳುತ್ತಲೇ ಗೋಮಾಂಸಕ್ಕೆ ನಿಷೇಧವಿಲ್ಲ ಎಂದೂ ಬೊಮ್ಮಾಯಿ ಸರಕಾರ ಹೇಳಿತ್ತು ಮತ್ತು  ರಾಜ್ಯದ ಯಾವುದೇ ಮಾಂಸದಂಗಡಿಯಲ್ಲಿ ಗೋಮಾಂಸ ಯಥೇಚ್ಚ ಲಭ್ಯವಾಗುತ್ತಿತ್ತು. ಗೋಹತ್ಯೆಗೆ ನಿಷೇಧವಿಲ್ಲದ ಕೇರಳ ಮುಂತಾದ  ರಾಜ್ಯಗಳಿಂದ ರಾಜ್ಯದೊಳಗೆ ಗೋಮಾಂಸ ಆಮದಾಗುತ್ತಿತ್ತು. ಅಷ್ಟಕ್ಕೂ, ಒಂದು ಸರಕಾರ ಗೋಹತ್ಯೆಯ ವಿರೋಧಿ ಎಂದಾದರೆ,  ಗೋಮಾಂಸಕ್ಕೆ ಅವಕಾಶ ಕೊಡುವುದರ ಉದ್ದೇಶವೇನು? ತನ್ನ ರಾಜ್ಯದಲ್ಲಿ ಗೋಹತ್ಯೆಗೆ ಅವಕಾಶ ಇಲ್ಲವೆಂದ ಮೇಲೆ ಹೊರರಾಜ್ಯದಲ್ಲಿ  ಹತ್ಯೆ ಮಾಡಿದ ಗೋವಿನ ಮಾಂಸವನ್ನು ತಿನ್ನುವುದಕ್ಕೆ ಅವಕಾಶ ಮಾಡಿಕೊಡುವುದೇಕೆ? ಗೋಹತ್ಯೆಯ ವಿರೋಧವು ಗೋಮಾಂಸದ  ಮೇಲೆ ಪ್ರೀತಿಯಾಗಿ ಬದಲಾದುದೇಕೆ? ಒಂದುರೀತಿಯಲ್ಲಿ, 

ಬೊಮ್ಮಾಯಿ ಸರಕಾರಕ್ಕೆ ಗೋಹತ್ಯಾ ನಿಷೇಧ ಕಾಯ್ದೆ ಜಾರಿಯಾಗುವುದು  ಬೇಕಾಗಿರಲಿಲ್ಲ. ಆದರೆ ತಾನು ಗೋಹತ್ಯಾ ವಿರೋಧಿ ಎಂಬುದಾಗಿ ತನ್ನ ಕಾರ್ಯಕರ್ತರನ್ನು ನಂಬಿಸಿತ್ತು. ಆ ನಂಬಿಕೆಯನ್ನು  ಉಳಿಸಬೇಕಾದರೆ ಕಾಯ್ದೆ ಜಾರಿಯ ನಾಟಕ ನಡೆಯಬೇಕಿತ್ತು. ಇದೇವೇಳೆ, ಹೈನುದ್ಯಮ ಮತ್ತು ಭತ್ತ ಇತ್ಯಾದಿ ಕೃಷಿಯಲ್ಲಿ  ತೊಡಗಿಸಿಕೊಂಡಿರುವ ರೈತರನ್ನು ಎದುರು ಹಾಕಿಕೊಳ್ಳುವಂತೆಯೂ ಇರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಗೋವು ಮತ್ತು ಎತ್ತುಗಳ  ಹತ್ಯೆಯನ್ನು ನಿಷೇಧಿಸುವುದೆಂದರೆ, ರೈತರ ಕತ್ತು ಹಿಸುಕಿದಂತೆ. ಗೋವು ಸಹಿತ ಜಾನುವಾರುಗಳ ಸಾಕಾಣಿಕೆ ಮತ್ತು ಮಾರಾಟ ಎರಡೂ  ಧಾರ್ಮಿಕ ಶ್ರದ್ಧೆಯ ಆಚೆಗೆ ಲಾಭ-ನಷ್ಟಗಳ ಲೆಕ್ಕಾಚಾರವನ್ನೂ ಹೊಂದಿವೆ. ಪುರಾತನ ಕಾಲದಂತೆ ಹೈನುದ್ಯಮಿಯ ಯಾವುದೇ ಹಸು  ಗರ್ಭ ಧರಿಸುವುದಿಲ್ಲ. ವರ್ಷದ 365 ದಿನವೂ ಹಾಲು ಹಿಂಡುವ ಬಯಕೆಯಿಂದಲೇ ಹೈನುದ್ಯಮಿ ಹಸು ಸಾಕುತ್ತಾರೆ. ಅದಕ್ಕಾಗಿಯೇ  ಕೃತಕ ವಿಧಾನಗಳ ಮೂಲಕ ಗರ್ಭ ಧರಿಸುವಂತೆ ಮಾಡುತ್ತಾರೆ. ಹೆಚ್ಚೆಚ್ಚು ಹಾಲು ಕೊಡುವ ಹಸುಗಳ ತಳಿಗಳನ್ನು ತಂದು  ಸಾಕಲಾಗುತ್ತದೆ. ಅಲ್ಲದೇ, ಹುಟ್ಟುವ ಗಂಡು ಕರುಗಳನ್ನು ಹೆಚ್ಚು ಸಮಯ ಹಟ್ಟಿಯಲ್ಲಿ ಇರಿಸಿಕೊಳ್ಳುವುದೂ ಇಲ್ಲ. ಹಾಲಿಗಾಗಿ ಹಸು  ಸಾಕುವ ಮತ್ತು ಹೈನುದ್ಯಮವನ್ನೇ ಕಸುಬಾಗಿಸಿಕೊಂಡವರ ಹಟ್ಟಿಯಲ್ಲಿ ಹೆಣ್ಣು ಕರುಗಳೇ ಯಾಕಿವೆ ಎಂಬ ಪತ್ತೆ ಕಾರ್ಯಕ್ಕೆ ತೊಡಗಿರುವ  ಯಾರಿಗೂ ಹಸು ಸಾಕಾಣಿಕೆಯ ಗಣಿತ ಅರ್ಥವಾಗುತ್ತದೆ. ಇಲ್ಲಿರುವುದು ಬರೇ ಧಾರ್ಮಿಕ ಶ್ರದ್ಧೆಯಲ್ಲ, ಪಕ್ಕಾ ಲಾಭ-ನಷ್ಟ ಲೆಕ್ಕಾಚಾರ.  ಇದರಾಚೆಗೆ ಶ್ರದ್ಧಾವಂತರೂ ಇದ್ದಾರೆ. ಅವರು ವ್ಯಾಪಾರಿ ಉದ್ದೇಶದಿಂದ ಹಸು ಸಾಕುವುದೂ ಇಲ್ಲ. ಈ ಎಲ್ಲ ವಾಸ್ತವ ಬೊಮ್ಮಾಯಿ  ಸರಕಾರದ ಮುಂದಿರುವುದರಿಂದಲೇ ಅದು ಗೋಹತ್ಯೆಯನ್ನು ನಿಷೇಧಿಸಿದಂತೆ ಮಾಡಿ ಗೋಮಾಂಸ ಲಭ್ಯತೆಗೆ ಮತ್ತು ಸೇವನೆಗೆ  ಅವಕಾಶ ಮಾಡಿಕೊಟ್ಟಿತು. ಹಾಗಂತ,

ಹೀಗೆ ಮಾಡುವುದರಿಂದ ಅನಧಿಕೃತ ಹತ್ಯೆಗೆ ಅವಕಾಶವಾಗುತ್ತದೆ ಎಂಬುದು ಸರಕಾರಕ್ಕೆ ಗೊತ್ತಿರಲಿಲ್ಲ ಎಂದಲ್ಲ. ಅನಧಿಕೃತ ಹತ್ಯೆಗೆ  ಬಾಗಿಲೊಂದನ್ನು ತೆರೆದಿಡುವುದರಿಂದ ಹಸು-ಎತ್ತುಗಳಿಗೆ ಬೇಡಿಕೆ ಸೃಷ್ಟಿಯಾಗುತ್ತದೆ. ತಮಗೆ ಬೇಡದ ಹಸುವನ್ನೋ ಎತ್ತುವನ್ನೋ  ರೈತರು ಈ ಅನಧಿಕೃತ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಇದರಿಂದಾಗಿ ರೈತರು ಸರಕಾರದ ವಿರೋಧಿಗಳಾಗುವುದು ತಪ್ಪುತ್ತದೆ.  ಅಲ್ಲದೇ, ಹೀಗೆ ಅನಧಿಕೃತವಾಗಿ ನಡೆಯುವ ಮಾರಾಟ-ಸಾಗಾಟದ ಅಲ್ಲೊಂದು -ಇಲ್ಲೊಂದು  ಆಯ್ದ ಪ್ರಕರಣವನ್ನು ಪತ್ತೆ ಹಚ್ಚಿದಂತೆ  ಮಾಡಿ, ‘ಗೋಹತ್ಯಾ ನಿಷೇಧ ಕಾಯ್ದೆಗೆ ತಾನೆಷ್ಟು ಬದ್ಧ’ ಎಂಬುದನ್ನು ತೋರಿಸಿಕೊಂಡಂತೆಯೂ ಆಗುತ್ತದೆ. ಬೊಮ್ಮಾಯಿ ಸರಕಾರ  ಮಾಡಿದ್ದು ಇದನ್ನೇ. ನಿಜವಾಗಿ,

ಗೋಮಾಂಸ ಎಂಬ ಪದ ಕೇಳಿದ ಕೂಡಲೇ ಬೆಚ್ಚಿಬೀಳುವ ಗುಂಪನ್ನು ಸರಕಾರಗಳು ವಂಚಿಸುತ್ತಾ ಬಂದ ಅನೇಕ ಸಂಗತಿಗಳಿವೆ.  1971ರಲ್ಲಿ ಬರೇ 1,79,000 ಟನ್ ಬೀಫ್ ರಫ್ತು ಮಾಡಿದ್ದ ಭಾರತವು 2020ರಲ್ಲಿ 13,76,000 ಟನ್ ರಫ್ತು ಮಾಡಿತ್ತು. ಮೊನ್ನೆ ಮೊನ್ನೆ  ಯುನೈಟೆಡ್ ಸ್ಟೇಟ್ಸ್ ಡಿಪಾರ್ಟ್ ಮೆಂಟ್ ಆಫ್ ಆಗ್ರಿಕಲ್ಚರ್ ಬಿಡುಗಡೆಗೊಳಿಸಿದ ವರದಿ ಪ್ರಕಾರ ಬೀಫ್ ರಫ್ತಿನಲ್ಲಿ ಭಾರತ ನಾಲ್ಕನೇ  ಸ್ಥಾನದಲ್ಲಿದೆ. ಮೊದಲ ಸ್ಥಾನ ಬ್ರೆಝಿಲ್‌ಗಾದರೆ ಆಸ್ಟ್ರೇಲಿಯಾಕ್ಕೆ ಎರಡನೇ ಸ್ಥಾನ. ಅಮೇರಿಕ ನಂಬರ್ ಮೂರು. 2013-14ರಲ್ಲಿ  13,14,161 ಮೆಟ್ರಿಕ್ ಟನ್ ಬೀಫ್ ರಫ್ತು ಮಾಡಿದ್ದ ಭಾರತವು 2014-15ರಲ್ಲಿ 14,75,540 ಮೆಟ್ರಿಕ್ ಟನ್ ಬೀಫ್ ರಫ್ತು ಮಾಡಿತ್ತು. ಬೀ ಫ್ ಮಾಂಸವಿದೆಯೆಂದು ಹೇಳಿ ಉತ್ತರ ಪ್ರದೇಶದಲ್ಲಿ ಅಖ್ಲಾಕ್ ಎಂಬವರನ್ನು ಮನೆಗೆ ನುಗ್ಗಿ ಹತ್ಯೆ ನಡೆಸಲಾದ 2015-16ರಲ್ಲಿ ಭಾರತದಿಂದ ಬೀಫ್ ರಫ್ತಿಗೇನೂ ತೊಂದರೆಯಾಗಿಲ್ಲ. ಆ ವರ್ಷ 13,14,161 ಮೆಟ್ರಿಕ್ ಟನ್‌ನಷ್ಟು ಮಾಂಸವನ್ನು ರಫ್ತು ಮಾಡಲಾಗಿತ್ತು.  ಅಲ್ಲದೇ, ಬೀಫ್ ರಫ್ತು ಮಾಡುವಲ್ಲಿ ವಿವಿಧ ರಾಜ್ಯಗಳ ಕೊಡುಗೆಯನ್ನೂ ಗಮನಿಸಬೇಕು. ಬೀಫ್ ರಫ್ತಿನಲ್ಲಿ ಅತಿದೊಡ್ಡ ಕೊಡುಗೆ  ಮುಂಬೈ ನಗರಿಯದ್ದು. ಭಾರತ ರಫ್ತು ಮಾಡುವ ಒಟ್ಟು ಬೀಫ್‌ನ ಪೈಕಿ 39.94% ಮಾಂಸವನ್ನು ಮುಂಬೈ ಒದಗಿಸುತ್ತದೆ. ಬಳಿಕದ ಸ್ಥಾನ  ದೆಹಲಿ, ಉತ್ತರ ಪ್ರದೇಶದ ಅಲೀಘರ್, ಗಾಝಿಯಾಬಾದ್, ಆಗ್ರಾ ಇತ್ಯಾದಿ ನಗರಗಳಿಗೆ ಸಲ್ಲುತ್ತದೆ. ಆದರೆ,

ಗೋಹತ್ಯೆ ನಿಷೇಧ ಎಂಬ ಘೋಷಣೆಯಿಂದ ರೋಮಾಂಚಿತವಾಗುವ ಮತ್ತು ಬೀಫ್ ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂಬ  ಸುದ್ದಿಯನ್ನು ಸುಳ್ಳೆಂದೋ ಅಥವಾ ಅದರಲ್ಲಿ ಗೋಮಾಂಸವೇ ಇಲ್ಲ ಎಂದೋ ನಂಬುತ್ತಾ ಬದುಕುತ್ತಿರುವ ಗುಂಪಿಗೆ ತಾವು  ರಾಜಕೀಯದ ದಾಳ ಎಂಬುದು ಗೊತ್ತೇ ಇಲ್ಲ ಅಥವಾ ಅವರ ಮೆದುಳನ್ನು ಅಷ್ಟರ ಮಟ್ಟಿಗೆ ತೊಳೆದು ಬಿಡುವಲ್ಲಿ ಅವರ ನಾಯಕರು  ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಮೋದಿ ಸರಕಾರವು ಎಮ್ಮೆ, ಕೋಣ ಇತ್ಯಾದಿ ಪ್ರಾಣಿಗಳ ಮಾಂಸವನ್ನಷ್ಟೇ ರಫ್ತು ಮಾಡುತ್ತಿದ್ದು ಆ  ಬೀಫ್‌ನಲ್ಲಿ ಗೋಮಾಂಸ ಸೇರಿಲ್ಲ ಎಂದೂ ನಂಬಿಸುತ್ತಿದ್ದಾರೆ. ಒಂದುವೇಳೆ, ಭಾರತದಿಂದ ರಫ್ತು ಮಾಡುವ ಬೀಫ್‌ನಲ್ಲಿ ಗೋಮಾಂಸ  ಇಲ್ಲ ಎಂಬುದೇ ನಿಜವಾಗಿದ್ದರೆ ಈ ಹಿಂದಿನ ಕಾಂಗ್ರೆಸ್ ಸರಕಾರಕ್ಕೂ ಇದೇ ಮಾತು ಅನ್ವಯವಾಗಬೇಕಾಗುತ್ತದೆ. ಆಗಲೂ ಭಾರತದಿಂದ  ರಫ್ತಾಗುತ್ತಿದ್ದ ಮಾಂಸಕ್ಕೆ ಬೀಫ್ ಎಂದೇ ಹೆಸರಿತ್ತು. ಈಗಲೂ ಅದೇ ಹೆಸರಿದೆ. ಆದರೆ, ಈ ಹಿಂದಿನ ಸರಕಾರ ರಫ್ತು ಮಾಡುತ್ತಿದ್ದ ಬೀಫ್‌ಗೆ ಗೋಮಾಂಸ ಎಂಬ ವ್ಯಾಖ್ಯಾನ ಕೊಟ್ಟಿದ್ದ ಇದೇ ಮಂದಿ ಇದೀಗ ಈಗಿನ ಬೀಫ್‌ಗೆ ಎಮ್ಮೆ-ಕೋಣ, ಎತ್ತು ಎಂದೆಲ್ಲ  ಹೇಳುವುದಾದರೆ ಅದನ್ನು ಕಾಪಟ್ಯ, ದಗಲುಬಾಜಿತನ ಎಂದೇ ಹೇಳಬೇಕಾಗುತ್ತದೆ. ನಿಜವಾಗಿ,

ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ನಟಿ ಐಂದ್ರಿತಾ ರೇ ತಂದ ವೀಡಿಯೋ ಈ ದೇಶದ ಮುಗ್ಧ ಗುಂಪೊಂದರ  ಪ್ರತೀಕದಂತಿತ್ತು.

ಜಿಹಾದ್‌ಗೆ ಸಿದ್ಧವಾಗಬೇಕಾದ ಮುಸ್ಲಿಮ್ ಸಮುದಾಯ





2021 ಸೆಪ್ಟೆಂಬರ್‌ನಲ್ಲಿ ಅದಾನಿ ಮಾಲಕತ್ವದ ಗುಜರಾತ್‌ನ ಮುಂದ್ರಾ ನಿಲ್ದಾಣದಲ್ಲಿ ಮೂರು ಸಾವಿರ ಕಿಲೋ ಗ್ರಾಮ್ ಹೆರಾಯಿನನ್ನು  ವಶಪಡಿಸಿಕೊಳ್ಳಲಾಯಿತು. ಇದರ ಬೆಲೆ 20 ಸಾವಿರ ಕೋಟಿ ರೂಪಾಯಿ. 2022 ಮೇಯಲ್ಲಿ 125 ಕೋಟಿ ರೂಪಾಯಿ ಮೌಲ್ಯದ  ಮಾದಕ ವಸ್ತುವನ್ನು ಆಂಧ್ರಪ್ರದೇಶದ ಶಮ್‌ಶಾದ್‌ನಲ್ಲಿರುವ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಯಿತು. 2022 ಜುಲೈಯಲ್ಲಿ ಗುಜರಾತ್‌ನ ಮುಂದ್ರಾ ನಿಲ್ದಾಣ ಮತ್ತೆ ಸುದ್ದಿಯ ಕೇಂದ್ರವಾಯಿತು. 376 ಕೋಟಿ ರೂ ಪಾಯಿಯ ಹೆರಾಯಿನನ್ನು ವಶಪಡಿಸಿಕೊಳ್ಳಲಾಯಿತು. 2023 ಜೂನ್‌ನಲ್ಲಂತೂ ದೇಶವೇ ಬೆಚ್ಚಿ ಬೀಳುವ ಆಘಾತಕಾರಿ ಸುದ್ದಿ  ಹೊರಬಿತ್ತು. ಕೇರಳದಲ್ಲಿ 25 ಸಾವಿರ ಕೋಟಿ ರೂಪಾಯಿ ಮೊತ್ತದ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಅನ್ನುವುದೇ ಈ  ಮಾಹಿತಿ. ಬೋಟ್‌ನಲ್ಲಿ ಈ ಮಾದಕ ವಸ್ತುವನ್ನು ಸಾಗಿಸಲಾಗುತ್ತಿತ್ತು. ಅಷ್ಟಕ್ಕೂ,

ಈ ಭಾರೀ ಪ್ರಮಾಣದ ಮಾದಕ ವಸ್ತುಗಳು ಸಾಗುವುದಾದರೂ ಎಲ್ಲಿಗೆ? ಇದರ ಗ್ರಾಹಕರು ಯಾರು? ಮಾರಾಟಗಾರರು ಯಾರು  ಎಂಬೆಲ್ಲಾ ಪ್ರಶ್ನೆಗಳೊಂದಿಗೆ ಪತ್ತೆ ಕಾರ್ಯಕ್ಕೆ ತೊಡಗಿದರೆ ಬೆಚ್ಚಿ ಬೀಳಿಸುವ ಮಾಹಿತಿಗಳು ಟನ್ನುಗಟ್ಟಲೆ ಸಿಗುತ್ತವೆ. ಕಳೆದವಾರ ಜಮ್ಮು- ಕಾಶ್ಮೀರದ ಡಿಜಿಪಿ ದಿಲ್‌ಬಾಗ್ ಸಿಂಗ್ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಕಾಶ್ಮೀರದ ನಿಜ ಸಮಸ್ಯೆ ಉಗ್ರವಾದವಲ್ಲ, ಮಾದಕ  ಪದಾರ್ಥಗಳು ಎಂದೂ ಅವರು ಹೇಳಿದರು. 2019ರಿಂದ 2022ರ ನಡುವೆ ಕಾಶ್ಮೀರದಲ್ಲಿ ಹೆರಾಯಿನ್ ಪತ್ತೆಯಲ್ಲಿ 100%  ಹೆಚ್ಚಳವಾಗಿದೆ, ಎಫ್‌ಐಆರ್‌ನಲ್ಲಿ 60% ಹೆಚ್ಚಳವಾಗಿದೆ ಎಂದೂ ಹೇಳಿದರು. ಕಾಕತಾಳೀಯವೆಂಬಂತೆ  ದ ಕ ಜಿಲ್ಲೆಯ ಮಂಗಳೂರು ನಗರ  ಪೊಲೀಸ್  ಕಮೀಶನರ್ ಕುಲದೀಪ್ ಕುಮಾರ್ ಜೈನ್ ಕೂಡಾ ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಠಿ ಕರೆದು, ಜಿಲ್ಲೆಯು ಹೇಗೆ ಮಾದಕ  ಪದಾರ್ಥಗಳ ಅಡ್ಡೆಯಾಗುತ್ತಿದೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟರು. 2023ರ ಜನವರಿಯಿಂದ ಡ್ರಗ್ಸ್ ಗೆ  ಸಂಬಂಧಿಸಿ 243 ಪ್ರಕರಣಗಳು  ದಾಖಲಾಗಿದ್ದು, 299 ಮಂದಿಯ ಮೇಲೆ ಕೇಸು ದಾಖಲಾಗಿದೆ. 1 ಕೋಟಿ ರೂಪಾಯಿ ಮೊತ್ತದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ, 106  ಡ್ರಗ್ಸ್ ಮಾರಾಟಗಾರರನ್ನು ಬಂಧಿಸಲಾಗಿದೆ ಎಂಬೆಲ್ಲಾ  ಮಾಹಿತಿಯನ್ನು ಹಂಚಿಕೊಂಡರು. ನಿಜವಾಗಿ,

ನಾಲ್ಕು ಬಂದೂಕು, ಹತ್ತು ಜಿಲೆಟಿನ್ ಕಡ್ಡಿಗಳು, 6 ಚೂರಿ, 3 ಮೊಬೈಲ್ ಮತ್ತು ಒಂದು ನಕಾಶೆಯನ್ನು ಪೊಲೀಸರು ವಶ ಪಡಿಸಿಕೊಂಡರೆ ಅದರ ಸುತ್ತ ದಿನವಿಡೀ ಚರ್ಚೆ ನಡೆಸುವ ನಮ್ಮ ಪತ್ರಿಕೆ ಮತ್ತು ಟಿ.ವಿ. ಮಾಧ್ಯಮಗಳು ಸಾವಿರಾರು ಕೋಟಿ ರೂ ಪಾಯಿ ಮೊತ್ತದ ಮಾದಕ ವಸ್ತುಗಳು ವಶವಾದುದನ್ನು ಚರ್ಚೆಗೆ ಅನರ್ಹ ವಿಷಯವೆಂಬಂತೆ  ನಿರ್ಲಕ್ಷಿಸಿ ಬಿಡುತ್ತವೆ. ಒಂದುರೀತಿಯಲ್ಲಿ,  ಬಾಂಬ್ಲೂ ಗಿಂತಲೂ   ಈ ಮಾದಕ ವಸ್ತು ಅಪಾಯಕಾರಿ. ಅದು ಯುವ ಸಮೂಹವನ್ನು ಸಂಪೂರ್ಣ ಅನುತ್ಪಾದಕವಾಗಿ ಮಾರ್ಪಡಿಸಿ  ಬಿಡುತ್ತದೆ. ಹೆತ್ತವರನ್ನೇ ಹತ್ಯೆ ಮಾಡುವುದಕ್ಕೂ ಹೇಸದಂಥ ಮಕ್ಕಳನ್ನು ತಯಾರಿಸುತ್ತದೆ. ಯಾವುದೇ ವಿಧ್ವಂಸಕ ಕೃತ್ಯ ನಡೆಸುವುದಕ್ಕೆ  ಮತ್ತು ಹತ್ಯೆ, ಅನ್ಯಾಯ ಎಸಗುವುದಕ್ಕೆ ಇಂಥವರು ಸುಲಭದಲ್ಲಿ ಬಳಕೆಯಾಗುತ್ತಾರೆ. ಒಂದು ಮನೆಯಲ್ಲಿ ಓರ್ವ ವ್ಯಕ್ತಿ ಮಾದಕ ವಸ್ತು  ಬಳಕೆದಾರನಿದ್ದಾನೆಂದರೆ ಆ ಮನೆಯ ನೆಮ್ಮದಿ ಮಾತ್ರವಲ್ಲ, ಆ ಮನೆಯ ಪರಿಸರದ ಮನೆಗಳ ನೆಮ್ಮದಿಯೂ ಕೆಟ್ಟು ಹೋಗುತ್ತದೆ. ಆತ  ತನ್ನ ಅಕ್ಕ-ಪಕ್ಕದ ಮನೆಯ ಯುವಕರನ್ನೂ ಇದರ ದಾಸರನ್ನಾಗಿ ಮಾಡುತ್ತಾನೆ. ಆತನ ಇಚ್ಛೆಗೆ ಸ್ಪಂದಿಸದಿದ್ದರೆ ಹತ್ಯೆ ನಡೆಸುವುದಕ್ಕೂ  ಮುಂದಾಗಬಹುದು.

ಯಾವ ಜವಾಬ್ದಾರಿಯನ್ನೂ ವಹಿಸಿಕೊಳ್ಳದ ಮತ್ತು ಸದಾ ಅಮಲಿನಲ್ಲೇ  ತೇಲಾಡುವ ಒಂದು ನಿರುಪಯುಕ್ತ ಯುವ ತಲೆಮಾರನ್ನು ಈ  ಮಾದಕ ವಸ್ತುಗಳು ನಿರ್ಮಿಸುತ್ತವೆ. ಕಾಶ್ಮೀರದಿಂದ ದಕ್ಷಿಣ ಭಾರತದ ಕರಾವಳಿ ಭಾಗದ ವರೆಗೆ ಸದ್ಯ ಈ ಅಪಾಯಕಾರಿ ಸ್ಥಿತಿ ಇದೆ.  ಇದನ್ನು ಮಟ್ಟ ಹಾಕದಿದ್ದರೆ ಅದರ ಪರಿಣಾಮವನ್ನು ಮುಂದೆ ಪ್ರತಿ ಮನೆಯೂ ಎದುರಿಸಬೇಕಾಗಬಹುದು. ಈಗಾಗಲೇ ಕಾಶ್ಮೀರ ಈ  ನಿಟ್ಟಿನಲ್ಲಿ ಪ್ರಕ್ರಿಯೆ ಆರಂಭಿಸಿದೆ. ಕಾಶ್ಮೀರದ ಮಸೀದಿಯಿಂದ ಶಾಲೆಯ ವರೆಗೆ ಜನಜಾಗೃತಿ ಅಭಿಯಾನ ಪ್ರಾರಂಭವಾಗಿದೆ. ಧಾರ್ಮಿಕ  ಮುಖಂಡರು, ಮೌಲಾನಾರು ಮತ್ತು ಶಿಕ್ಷಕರು ಈಗಾಗಲೇ ಡ್ರಗ್ಸ್ ವಿರುದ್ಧ ಜಿಹಾದ್ ಘೋಷಿಸಿದ್ದಾರೆ. 2023ರಲ್ಲಿ ಈವರೆಗೆ 10 ಲಕ್ಷ   ಮಂದಿ ಕಾಶ್ಮೀರಿಗಳು ಡ್ರಗ್ಸ್ ಮಾಯಾಜಾಲಕ್ಕೆ ಒಳಗಾಗಿದ್ದಾರೆ ಎಂಬ ಮಾಹಿತಿಯು ಪ್ರತಿ ಮನೆ ಮತ್ತು ಮಸೀದಿಗಳ ನಿದ್ದೆಗೆಡಿಸಿದೆ. ಅಲ್ಲಿನ ಮುಗಮ್ ಇಮಾಂಬರ ಎಂಬ ಸಂಘಟನೆಯು ಮನೆ ಮನೆ ಅಭಿಯಾನಕ್ಕೆ ಇಳಿದಿದೆ. ಶಾಲೆ ಮತ್ತು ಕಾಲೇಜುಗಳಲ್ಲಿ ಸ್ಕ್ರೀನ್ ಟೆಸ್ಟ್  ಪ್ರಾರಂಭಿಸಲಾಗಿದೆ. ಅಂದಹಾಗೆ,

90%ಕ್ಕಿಂತಲೂ ಅಧಿಕ ಮುಸ್ಲಿಮರೇ ಇರುವ ನಾಡೊಂದು ಉಮ್ಮುಲ್ ಖಬಾಯಿಸ್ ಅಥವಾ ಕೆಡುಕುಗಳ ಮಾತೆ ಎಂದು ಇಸ್ಲಾಮ್  ಗುರುತಿಸಿರುವ ಅಮಲು ಪದಾರ್ಥಗಳಿಗೆ ಬಲಿಯಾಗಿರುವುದು ನಿಜಕ್ಕೂ ಆಘಾತಕಾರಿ. ದಕ್ಷಿಣ ಕನ್ನಡ ಜಿಲ್ಲೆಯ ಪರಿಸ್ಥಿತಿಯೂ ಇದಕ್ಕಿಂತ  ಭಾರೀ ಭಿನ್ನವೇನೂ ಇಲ್ಲ. ಇಲ್ಲಿನ ಮಾದಕ ವಸ್ತು ಮಾರಾಟಗಾರರು ಮತ್ತು ಸೇವಿಸುವವರಲ್ಲಿ ದೊಡ್ಡದೊಂದು ಸಂಖ್ಯೆ  ಮುಸ್ಲಿಮರದ್ದಾಗಿದೆ. ಇದು ಕಹಿ ಸುದ್ದಿಯಾದರೂ ಜೀರ್ಣಿಸಿಕೊಳ್ಳಬೇಕಾಗಿದೆ. ವಾಸ್ತವವನ್ನು ಒಪ್ಪಿಕೊಳ್ಳದ ಹೊರತು ಪರಿಹಾರ  ಸಾಧ್ಯವಿಲ್ಲ. ಮುಸ್ಲಿಮ್ ಸಮುದಾಯದ ಯುವ ಪೀಳಿಗೆಯು ಈ ಕೆಡುಕುಗಳ ಮಾತೆಯನ್ನು ಅಪ್ಪಿಕೊಳ್ಳುತ್ತಿರುವುದಕ್ಕೆ ಕಾರಣಗಳೇನು?  ಅವರನ್ನು ಈ ಅಮಲು ಜಗತ್ತಿನೊಳಗೆ ವ್ಯವಸ್ಥಿತವಾಗಿ ತಳ್ಳಲಾಗುತ್ತಿದೆಯೇ? ಬಾಹ್ಯ ಸಂಚಿನ ಪರಿಣಾಮದಿಂದಾಗಿ ಅವರು  ತಮಗರಿವಿಲ್ಲದಂತೆಯೇ ಮಾದಕ ವಸ್ತುಗಳತ್ತ ಆಕರ್ಷಿತರಾಗುತ್ತಿದ್ದಾರೆಯೇ? ಅಥವಾ ಸಾಮಾಜಿಕ, ಕೌಟುಂಬಿಕ ಸಮಸ್ಯೆಗಳು ಅವರನ್ನು  ಈ ಅಮಲು ಸೇವಕರನ್ನಾಗಿ ಮಾರ್ಪಡಿಸುತ್ತಿದೆಯೇ? ಅಥವಾ ಇದರಾಚೆಗೆ ಬೇರೇನಾದರೂ ಕಾರಣಗಳು ಇವೆಯೇ? ಇವು ಏನೇ  ಇದ್ದರೂ,

ಮುಸ್ಲಿಮ್ ಸಮುದಾಯ ತುರ್ತಾಗಿ ಗಮನ ಹರಿಸಬೇಕಾದ ಸಂದರ್ಭ ಇದು. ಸಮುದಾಯದ ಯಾವನೇ ವ್ಯಕ್ತಿ ಯಾವುದಾದರೊಂದು  ಮಸೀದಿಯ ಜೊತೆಗೇ ಗುರುತಿಸಿಕೊಂಡೇ ಇರುತ್ತಾನೆ. ಇಂಥದ್ದೊಂದು  ವ್ಯವಸ್ಥೆ ಇನ್ನಾವ ಸಮುದಾಯದಲ್ಲೂ ಇಲ್ಲ. ಪ್ರತಿ ಮಸೀದಿಯೂ  ಮನಸ್ಸು ಮಾಡಿದರೆ ಮತ್ತು ಒಂದು ಮಸೀದಿಯು ಇನ್ನೊಂದು ಮಸೀದಿಯೊಂದಿಗೆ ಸೇರಿಕೊಂಡು ಕಾರ್ಯಪ್ರವೃತ್ತವಾದರೆ ಯುವ  ಸಮೂಹವನ್ನು ಅಪಾಯದಿಂದ ರಕ್ಷಿಸುವುದಕ್ಕೆ ಸಾಧ್ಯವಿದೆ. ಮಾದಕ ವಸ್ತುಗಳ ವಿರುದ್ಧ ಮಸೀದಿ ಕಮಿಟಿ ಜಿಹಾದ್ ಘೋಷಿಸಬೇಕು. ತನ್ನ ಮಸೀದಿ ವ್ಯಾಪ್ತಿಯಲ್ಲಿ ಮಾದಕ ವಸ್ತು ವಿರೋಧಿ ಅಭಿಯಾನ ಕೈಗೊಳ್ಳಬೇಕು. ಶುಕ್ರವಾರದ ಜುಮಾದಲ್ಲಿ ಮತ್ತು ಇನ್ನಿತರ  ಸಂದರ್ಭಗಳಲ್ಲಿ ಮಾದಕ ವಸ್ತುವಿನ ವಿರುದ್ಧ ಜನಜಾಗೃತಿ ಮೂಡಿಸಬೇಕು. ಮದ್ಯ ಮತ್ತು ಮಾದಕ ಪದಾರ್ಥಗಳ ಅಪಾಯದ ಕುರಿತು  ಮದ್ರಸ ವಿದ್ಯಾರ್ಥಿಗಳಿಗೆ ನಿರಂತರ ತಿಳುವಳಿಕೆ ನೀಡಬೇಕು. ಮಸೀದಿ ಕಮಿಟಿಯು ಈ ವಿಷಯಗಳಿಗೆ ಟಾಸ್ಕ್ ಫೋರ್ಸ್ ತಂಡವನ್ನು  ರಚಿಸಿ ತನ್ನ ವ್ಯಾಪ್ತಿಯ ಪ್ರತಿ ಮನೆಗೂ ಆ ತಂಡ ಭೇಟಿ ಕೊಡುವ ಮತ್ತು ಮನೆಯ ಪರಿಸ್ಥಿತಿಯನ್ನು ತಿಳಿಯುವ ಪ್ರಯತ್ನಕ್ಕಿಳಿಯಬೇಕು.  ತಮ್ಮ ಮಸೀದಿ ವ್ಯಾಪ್ತಿಯೊಳಗೆ ಮಾದಕ ಪದಾರ್ಥಗಳ ಮಾರಾಟ ಜಾಲ ಸಕ್ರಿಯವಾಗಿದ್ದರೆ ಪೊಲೀಸರಿಗೆ ಮಾಹಿತಿ  ಕೊಡುವಂತಾಗಬೇಕು. ಅಂದಹಾಗೆ,

ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಈಗಾಗಲೇ ಮಾದಕ ವಸ್ತು ವಿರೋಧಿ ಅಭಿಯಾನ ಆರಂಭವಾಗಿದೆ. ಇದು ದೀರ್ಘಕಾಲೀನ  ಜಿಹಾದ್. ವರದಕ್ಷಿಣೆಯ ವಿರುದ್ಧ ಯಶಸ್ವಿ ಜಿಹಾದ್ ನಡೆಸಿದ ಅನುಭವವೂ ಕರಾವಳಿ ಪ್ರದೇಶದ ಮುಸ್ಲಿಮ್ ಸಮುದಾಯಕ್ಕಿದೆ. ಈ  ಯಶಸ್ಸು ಒಂದೆರಡು ತಿಂಗಳುಗಳಲ್ಲಿ ಸಾಧ್ಯವಾದುದಲ್ಲ. ಭಾಷಣ ವೇದಿಕೆಯಿಂದ ಹಿಡಿದು ಸಾಂಸ್ಕೃತಿಕ ವೇದಿಕೆಗಳ ವರೆಗೆ ಅಭೂತ  ಪೂರ್ವ ಹೋರಾಟವೊಂದನ್ನು ಈ ವರದಕ್ಷಿಣೆಯ ವಿರುದ್ಧ ಕರಾವಳಿ ಭಾಗದ ಮುಸ್ಲಿಮ್ ಸಮು ದಾಯ ಸಾರಿತ್ತು. ಲೇಖನ, ಕವನ,  ಹಾಡು, ನಾಟಕ, ಜಾಥಾ, ಕರಪತ್ರ, ಶುಕ್ರವಾರದ ಜುಮಾ ಖುತ್ಬಾ... ಹೀಗೆ ಸರ್ವ ಮಾಧ್ಯಮವನ್ನೂ ಬಳಸಿ ಸಮುದಾಯ ಸಾರಿದ  ಹೋರಾಟದಿಂದ ವರದಕ್ಷಿಣೆಯು ಸದ್ಯ ಹಿನ್ನೆಲೆಗೆ ಸರಿದಿದೆ. ನಾಚಿಕೆ ಮುನ್ನೆಲೆಗೆ ಬಂದಿದೆ. ವರದಕ್ಷಿಣೆ ವಿರೋಧಿ ಕಾನೂನಿನಿಂದ  ಮಾಡಲಾಗದ ಬೃಹತ್ ಬದಲಾವಣೆಯೊಂದನ್ನು ಸಾಮುದಾಯಿಕ ಜಾಗೃತಿ ಕಾರ್ಯಕ್ರಮದಿಂದ ಮಾಡಲು ಸಮುದಾಯಕ್ಕೆ  ಸಾಧ್ಯವಾಗಿದೆ. ಮದ್ಯ ಮತ್ತು ಮಾದಕ ವಸ್ತುಗಳ ವಿರುದ್ಧವೂ ಇಂಥದ್ದೇ  ಸಂಘಟಿತ ಸಮರವೊಂದು ನಡೆಯಲೇಬೇಕಾಗಿದೆ. ಮಸೀ ದಿಗಳು, ಸಂಘಟನೆಗಳು, ಲೇಖಕರು, ಸಂಸ್ಕೃತಿ ಚಿಂತಕರು ಸಹಿತ ಸರ್ವರೂ ಪ್ರಯತ್ನಿಸಿದರೆ ಮತ್ತು ವಿವಿಧ ಸಂಘಟನೆಗಳು  ಸಕ್ರಿಯವಾದರೆ ಕೆಡುಕುಗಳ ಮಾತೆಗೆ ಯುವ ತಲೆಮಾರು ಆಕರ್ಷಿತವಾಗುವುದನ್ನು ತಡೆಯುವುದಕ್ಕೆ ಖಂಡಿತ ಸಾಧ್ಯವಿದೆ.