Monday 30 September 2019

ಸ್ಟಾಕ್‍ಹೋಮ್ ಸಿಂಡ್ರೋಮ್‍ನಿಂದ ಹೊರಬರಲು ವೇದಿಕೆ ಒದಗಿಸಿದ ಹಿಂದಿ



ಈ ದೇಶದ ಜನತೆ ಮತ್ತು ಮಾಧ್ಯಮಗಳ ವರ್ತನೆಗಳಲ್ಲಿ ಸ್ಟಾಕ್‍ಹೋಮ್ ಸಿಂಡ್ರೋಮ್‍ನ ಲಕ್ಷಣಗಳಿವೆ ಎಂದು ತಜ್ಞರು ಅಂದಾಜಿಸುತ್ತಿರುವ ಹೊತ್ತಿನಲ್ಲಿಯೇ ಈ ಅಂದಾಜನ್ನು ಮೀರುವ ಬೆಳವಣಿಗೆಗಳು ದಕ್ಷಿಣ ಭಾರತದಲ್ಲಿ ಕಾಣಿಸತೊಡಗಿವೆ. ದೌರ್ಜನ್ಯಕ್ಕೆ ಒಳಗಾದವರು ತಮ್ಮ ಮೇಲೆ ದೌರ್ಜನ್ಯ ಎಸಗಿದವರನ್ನೇ ಬೆಂಬಲಿಸುವ ಮತ್ತು ಅವರಿಗೆ ಪ್ರಾಮಾಣಿಕವಾಗಿ ನಿಷ್ಠೆ ತೋರುವ ಸ್ಥಿತಿಯನ್ನು ಸ್ಟಾಕ್‍ಹೋಮ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ವೀರಪ್ಪನ್‍ನಿಂದ ಅಪಹರಣಕ್ಕೊಳಗಾಗಿ ಸುಮಾರು 108 ದಿನಗಳ ಕಾಲ ಕಾಡಿನಲ್ಲಿ ಒತ್ತೆ ಸೆರೆಯಿದ್ದು, ಬಿಡುಗಡೆಗೊಂಡ ಡಾ| ರಾಜ್‍ಕುಮಾರ್ ಹೇಳಿಕೆಯಲ್ಲಿ ಈ ಸಿಂಡ್ರೋಮ್‍ನ ಲಕ್ಷಣಗಳನ್ನು ತಜ್ಞರು ಗುರುತಿಸಿದ್ದರು. ಕೇಂದ್ರ ಸರಕಾರದ ಆಡಳಿತ ನೀತಿಯ ವಿಷಯದಲ್ಲಿ ಈ ದೇಶದ ಮಾಧ್ಯಮ ಮತ್ತು ಜನರು ಇಂಥದ್ದೇ  ಸ್ಟಾಕ್‍ಹೋಮ್ ಸಿಂಡ್ರೋಮ್‍ಗೆ ತುತ್ತಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಕೇಂದ್ರ ಸರಕಾರದ ಪ್ರತಿಯೊಂದು ನೀತಿಯನ್ನೂ ಬೆಂಬಲಿಸುವ ಮಾಧ್ಯಮ ನೀತಿಯನ್ನು ಇದಕ್ಕೆ ಉದಾಹರಣೆಯಾಗಿ ನೀಡಲಾಗುತ್ತಿತ್ತು. ಪ್ರಧಾನಿ ಮೋದಿಯವರ ಕಳೆದ 100 ದಿನಗಳ ಆಡಳಿತದಲ್ಲಿ 38 ಮಸೂದೆಗಳನ್ನು ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಇದರಲ್ಲಿ 28 ಮಸೂದೆಯನ್ನೂ ಬಿಜೆಪಿ ಪಾಸು ಮಾಡಿಕೊಂಡಿದೆ ಮತ್ತು ಇವೆಲ್ಲವೂ ತನ್ನ ಬಹುಮತವನ್ನು ಬಳಸಿಕೊಂಡು ಮಾಡಿಕೊಳ್ಳಲಾದ ಪಾಸುಗಳು ಎಂಬುದು ಗೊತ್ತಿದ್ದೂ ಹೆಚ್ಚಿನ ಮಾಧ್ಯಮಗಳಿಂದ ವಿರೋಧ ವ್ಯಕ್ತವಾಗಿರಲಿಲ್ಲ. ಹಲವು ವಿರೋಧಾಭಾಸಗಳಿಂದ ಕೂಡಿರುವ ಮತ್ತು ಮುಸ್ಲಿಮ್ ಮಹಿಳೆಯ ಸಬಲೀಕರಣಕ್ಕೆ ಯಾವ ರೀತಿಯಲ್ಲೂ ಪೂರಕ ಆಗದ ‘ತ್ರಿವಳಿ ತಲಾಕ್ ಮಸೂದೆ’ಯಿಂದ ಹಿಡಿದು ಕಾಶ್ಮೀರಿಗಳಿಗೆ ಸ್ವಾಯತ್ತತೆಯನ್ನು ಅನುಮತಿಸುವ ‘370 ವಿಧಿ ರದ್ದತಿ’ ವರೆಗೆ; ‘ಯುಎಪಿಎ’ ತಿದ್ದುಪಡಿ ಮಸೂದೆಯಿಂದ ಹಿಡಿದು ನಾಗರಿಕರನ್ನು ದೋಚುವ ‘ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮಸೂದೆ’ಯ ವರೆಗೆ ಕೇಂದ್ರ ಸರಕಾರ ಸಾಲು ಸಾಲು ಜನವಿರೋಧಿ ನೀತಿಯನ್ನು ಜಾರಿಗೊಳಿಸುತ್ತಿದ್ದರೂ ಹೆಚ್ಚಿನ ಮಾಧ್ಯಮಗಳು ‘ದಿಟ್ಟ ನಿರ್ಧಾರ, ಪರಿವರ್ತನೆಯ ಪರ್ವ’ ಎಂದು ಮುಂತಾದ ಹೊಗಳುಭಟ ಪದಗಳೊಂದಿಗೆ ಅವನ್ನು ಸಮರ್ಥಿಸಿಕೊಳ್ಳುವ ಹಂತಕ್ಕೆ ತಲುಪಿದ್ದುವು. ಇದೀಗ,
ದಕ್ಷಿಣ ಭಾರತವು ಈ ಸಿಂಡ್ರೋಮ್‍ನಿಂದ ಹೊರಬರುವ ಸೂಚನೆಗಳನ್ನು ನೀಡತೊಡಗಿದೆ. ಗೃಹಸಚಿವ ಅಮಿತ್ ಶಾ ಅವರ ಹೇಳಿಕೆ ಇದಕ್ಕೆ ಮುನ್ನುಡಿ ಬರೆದಂತಿದೆ. ‘ಹಿಂದಿ ಇಡೀ ದೇಶದ ಭಾಷೆ ಆಗಬೇಕು’ ಎಂದು ಹಿಂದಿ ದಿವಸದ ಅಂಗವಾಗಿ ಅವರು ಮಾಡಿರುವ ಟ್ವೀಟ್‍ಗೆ ದಕ್ಷಿಣ ಭಾರತದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಒಂದುರೀತಿಯಲ್ಲಿ ದಕ್ಷಿಣ ಭಾರತೀಯರನ್ನು ಒಂದೇ ದಾರದಲ್ಲಿ ಪೋಣಿಸಲು ಅವಕಾಶ ಒದಗಿಸಿಕೊಟ್ಟ ಹೇಳಿಕೆ ಇದು. ಗೃಹ ಸಚಿವರ ಈ ಹೇಳಿಕೆಗಿಂತ ಎರಡು ದಿನಗಳ ಮೊದಲು ರಾಜ್ಯದಲ್ಲಿ ಕನ್ನಡ ಅಸ್ಮಿತೆಯ ಕುರಿತಾದ ಚರ್ಚೆ ದೊಡ್ಡದಾಗಿ ಎದ್ದಿತ್ತು. ಇದಕ್ಕೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಅವರ ನಡೆಯೇ ಕಾರಣ. ‘ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಕ್ಲರ್ಕ್ ಹುದ್ದೆಗೆ ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಇದೆ’ ಎಂದವರು ಹೇಳಿದ್ದರು. ಆಶ್ಚರ್ಯದ ಸಂಗತಿ ಏನೆಂದರೆ, ಹೀಗೆ ನಡೆಯುತ್ತಿರುವ ಕ್ಲರ್ಕ್ ಹುದ್ದೆಗಳಲ್ಲಿ 953 ಹುದ್ದೆಗಳು ರಾಜ್ಯದ್ದಾಗಿದ್ದು, ಅದರಲ್ಲೂ 699 ಹುದ್ದೆಗಳು ಕರಾವಳಿಯ ಎರಡು ಬ್ಯಾಂಕ್‍ಗಳಿಗೆ ಸಂಬಂಧಿಸಿದ್ದಾಗಿದೆ.
ಹಿಂದಿ ಕರ್ನಾಟಕದ ಭಾಷೆಯಲ್ಲ. ಹಿಂದಿಯಲ್ಲಿ ಉತ್ತರ ಭಾರತೀಯರು ಹೇಗೆ ಸುಲಲಿತವಾಗಿ ವ್ಯವಹರಿಸಬಲ್ಲರೋ ಹಾಗೆಯೇ ಕನ್ನಡಿಗರು ಕನ್ನಡದಲ್ಲಿ ವ್ಯವಹರಿಸಬಲ್ಲರು. ಆದ್ದರಿಂದ ಕನ್ನಡ ನೆಲಕ್ಕೆ ಅನ್ಯವಾದ ಹಿಂದಿ ಅಥವಾ ಇಂಗ್ಲಿಷ್‍ನಲ್ಲಿ ಮಾತ್ರ ಪರೀಕ್ಷೆಯನ್ನು ಎದುರಿಸುವಾಗ ಭಾಷಾ ಸವಾಲು ಎದುರಾಗುತ್ತದೆ. ಆದರೆ ಉತ್ತರ ಭಾರತೀಯರಿಗೆ ಈ ಸಮಸ್ಯೆ ಇಲ್ಲ. ಇದು ಉತ್ತರ ಭಾರತೀಯರು ಸುಲಭವಾಗಿ ಈ ಪರೀಕ್ಷೆಗಳಲ್ಲಿ ಮೇಲುಗೈ ಪಡೆಯಲು ನೆರವಾಗುತ್ತದೆ. ಕನ್ನಡಿಗರೇ ಕಟ್ಟಿ ಬೆಳೆಸಿದ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರು ತುಂಬಿಕೊಳ್ಳುವುದಕ್ಕೆ ಮತ್ತು ಬ್ಯಾಂಕ್ ವ್ಯವಹಾರಗಳು ಹಿಂದಿಮಯವಾಗುವುದಕ್ಕೆ ಕಾರಣವಾಗುತ್ತದೆ. ಈಗಾಗಲೇ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರನ್ನು ತುಂಬಿಸಿಕೊಳ್ಳುವ ತಂತ್ರ ಒಂದು ಹಂತದವರೆಗೆ ಜಾರಿಯಾಗಿದೆ. ‘ಬ್ಯಾಂಕಿಂಗ್ ಸಿಬಂದಿ ಆಯ್ಕೆ ಸಂಸ್ಥೆ’ಯು (ಐಬಿಪಿಎಸ್) ನಡೆಸುವ ಪರೀಕ್ಷೆ ಬರೆಯಬೇಕಿದ್ದರೆ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಅಭ್ಯರ್ಥಿ ಓದಿರಬೇಕಾದುದು 2014ರ ತನಕ ಕಡ್ಡಾಯವಾಗಿತ್ತು. ಆದರೆ,
ಈ ನಿಯಮವನ್ನು 2014ರಲ್ಲಿ ಬದಲಾಯಿಸಲಾಯಿತಲ್ಲದೇ ‘ನೇಮಕಾತಿ ನಡೆದ 6 ತಿಂಗಳಲ್ಲಿ ಪ್ರಾದೇಶಿಕ ಭಾಷೆ ಕಲಿತರೆ ಸಾಕು’ ಎಂದು ಮೃದುಗೊಳಿಸಲಾಯಿತು. ಇದರಿಂದಾಗಿ ಆದ ಬದಲಾವಣೆ ಏನೆಂದರೆ, ರಾಜ್ಯದ ಬ್ಯಾಂಕುಗಳಲ್ಲಿ ಉತ್ತರ ಭಾರತೀಯರ ಹೆಚ್ಚಳ. 6 ತಿಂಗಳಲ್ಲಿ ಅವರು ಭಾಷೆ ಕಲಿಯುತ್ತಾರೋ ಇಲ್ಲವೋ, ಆದರೆ, ಬ್ಯಾಂಕ್ ವ್ಯವಹಾರಗಳಲ್ಲಂತೂ ಕನ್ನಡಿಗರಿಗೆ ಭಾಷಾ ಸಮಸ್ಯೆ ಎದುರಾಗತೊಡಗಿತು. ಇದನ್ನು ಮನಗಂಡೇ ಬ್ಯಾಂಕುಗಳ ಹುದ್ದೆಗಳಿಗೆ ನಡೆಯುವ ನೇಮಕಾತಿ ಪರೀಕ್ಷೆಯನ್ನು ಕನ್ನಡ ಸೇರಿದಂತೆ 13 ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವುದಾಗಿ ಕೇಂದ್ರದ ವಿತ್ತ ಸಚಿವರು ಭರವಸೆ ನೀಡಿದ್ದರು. ಇದೀಗ ಅವರು ತಮ್ಮ ಮಾತಿನಿಂದ ನುಣುಚಿಕೊಂಡಿದ್ದಾರೆ. ‘ಕರ್ನಾಟಕದ ಬ್ಯಾಂಕುಗಳಲ್ಲಿ ಹುದ್ದೆ ಪಡೆಯಲು ಹಿಂದಿಯಲ್ಲಿ ಪರೀಕ್ಷೆ ಬರೆಯಬೇಕು’ ಎಂಬ ಅಸಂಗತ ಫರ್ಮಾನು ಹೊರಡಿಸಿದ್ದಾರೆ. ಇದು ಕನ್ನಡಿಗರನ್ನು ಕೆರಳಿಸಿದೆ. ಬ್ಯಾಂಕಿಂಗ್ ಪರೀಕ್ಷೆಗೆ ಕನ್ನಡದಲ್ಲಿ ಬರೆಯಲು ಅವಕಾಶ ಇರಬೇಕೆಂದು ಒತ್ತಾಯಿಸಿ ರೂಪುಗೊಂಡ ಹೋರಾಟಕ್ಕೆ ಇದು ಕಿಚ್ಚು ಹಚ್ಚಿದೆ. ಕನ್ನಡ ಪತ್ರಿಕೆಗಳು ಈ ನೀತಿಯನ್ನು ಖಂಡಿಸಿವೆ. ‘ಹಿಂದಿ ಹೇರಿಕೆ’ ಎಂದು ಅವು ಹೇಳಬೇಕಾದ ಒತ್ತಡಕ್ಕೆ ಸಿಲುಕಿವೆ. ಈ ಬೆಳವಣಿಗೆಯ ಎರಡು ದಿನಗಳ ಬಳಿಕ ಬಂದ ಅಮಿತ್ ಶಾರ ಹೇಳಿಕೆಯು ಕರ್ನಾಟಕದ ಜೊತೆ ದಕ್ಷಿಣದ ಇತರ ರಾಜ್ಯಗಳನ್ನೂ ಸೇರಿಸುವುದಕ್ಕೆ ಸೇತುವೆಯಾದಂತಾಗಿದೆ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಸಿಕ್ಕ ಜನಾದೇಶವನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ದುರುಪಯೋಗಿಸುತ್ತಿದೆ ಅನ್ನುವ ಅಭಿಪ್ರಾಯಕ್ಕೆ ಇಂಬು ನೀಡುವ ಎರಡು ಬೆಳವಣಿಗೆಗಳಿವು. ಭಾಷೆ ಎಂಬುದು ಬರೇ ಸಂವಹನ ಮಾಧ್ಯಮವಷ್ಟೇ ಅಲ್ಲ, ಅದು ಒಂದು ಸಂಸ್ಕøತಿಯನ್ನು ಪ್ರತಿನಿಧಿಸುತ್ತದೆ. ಜನರ ಬದುಕು-ಭಾವದೊಂದಿಗೆ ಅದಕ್ಕೆ ಸಂಬಂಧವಿರುತ್ತದೆ. ಭಾಷೆಯೊಂದು ಆ ಭಾಷೆಯನ್ನಾಡುವ ಮಂದಿಯ ಪುರಾತನ ಕಾಲದ ಬದುಕಿನಿಂದ ಹಿಡಿದು ಆಧುನಿಕ ಜನರ ಬದುಕಿನ ತನಕ ಪ್ರತಿ ವೈಶಿಷ್ಟ್ಯಕ್ಕೂ ಆಚಾರ-ವಿಚಾರಕ್ಕೂ ಸಾಕ್ಷ್ಯ  ವಹಿಸುತ್ತಾ, ಅದನ್ನು ಕಾಪಿಡುತ್ತಾ ಬಂದಿರುತ್ತದೆ.
ಹಿಂದಿಯು ಉತ್ತರ ಭಾರತದ ಒಂದೆರಡು ರಾಜ್ಯಗಳ ಭಾಷೆ. ಅದು ರಾಷ್ಟ್ರಭಾಷೆಯಲ್ಲ. ಈ ದೇಶಕ್ಕೆ ರಾಷ್ಟ್ರಭಾಷೆ ಎಂಬುದಿಲ್ಲ. ಹಿಂದಿಗೆ ಸಾಂವಿಧಾನಿಕವಾಗಿ ಏನು ಸ್ಥಾನವಿದೆಯೋ ಅದೇ ಸ್ಥಾನ-ಮಾನ ಕನ್ನಡಕ್ಕೂ ಇದೆ. ಹಿಂದಿಯನ್ನು ಪ್ರೀತಿಸುವುದು ಬೇರೆ ಮತ್ತು ಹೇರುವುದು ಬೇರೆ. ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡದೇ ಇರುವುದು ದಬ್ಬಾಳಿಕೆಯ ನೀತಿ. ಹಾಗಂತ, ಈ ದಬ್ಬಾಳಿಕೆ ಕೇವಲ ಭಾಷೆಗೆ ಸಂಬಂಧಿಸಿ ಮಾತ್ರ ವ್ಯಕ್ತಗೊಂಡ ನೀತಿಯಲ್ಲ. ಕೇಂದ್ರದ ಕಳೆದ 100 ದಿಂಗಳ ಆಡಳಿತದ ಪ್ರತಿ ಹೆಜ್ಜೆಯಲ್ಲೂ ಈ ಆಗ್ರಹ ವ್ಯಕ್ತಗೊಂಡಿದೆ. 38 ಮಸೂದೆಗಳ ಪೈಕಿ 28 ಮಸೂದೆಗಳನ್ನು ಪಾಸು ಮಾಡಿಕೊಂಡ ರೀತಿಯಲ್ಲೂ ಈ ನೀತಿ ವ್ಯಕ್ತವಾಗಿದೆ. ಯಾವುದೇ ಸಮಸ್ಯೆಯನ್ನು ಪರಿಹರಿಸುವುದಕ್ಕಿಂತ ದಂಡ ನೀತಿ, ದಮನ ನೀತಿಗೆ ಆದ್ಯತೆ ಕೊಡುತ್ತಿರುವ ಅತ್ಯಂತ ಅಪಾಯಕಾರಿ ನಡೆಯೊಂದು ಈ ಕಳೆದ 100 ದಿನಗಳಲ್ಲಿ ಕಾಣಿಸಿಕೊಂಡಿದೆ. ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುತ್ತಿರುವ ರೀತಿಯೂ ಇದಕ್ಕಿಂತ ಭಿನ್ನವಲ್ಲ. ಇಂಥದ್ದೊಂದು ದಂಡನಾ ಕ್ರಮ ಎಷ್ಟು ಜನಪರ ಮತ್ತು ಪ್ರಾಯೋಗಿಕ ಎಂಬುದನ್ನು ಲೆಕ್ಕಿಸದೆಯೇ ಜಾರಿಗೊಳಿಸಿದ ಕ್ರಮವು ಎಂಥ ಸಮಸ್ಯೆಯನ್ನು ಸೃಷ್ಟಿಸಿತು ಅನ್ನುವುದಕ್ಕೆ ಪ್ರತಿದಿನದ ವರದಿಗಳೇ ಸಾಕ್ಷಿ. ‘ಹಿಂದಿ ದೇಶ ಭಾಷೆ ಆಗಬೇಕು’ ಎಂಬ ಮಾತಿನಲ್ಲೂ ಮತ್ತು ‘ಕನ್ನಡಿಗರಿಗೆ ಕನ್ನಡದಲ್ಲಿ ಬ್ಯಾಂಕ್ ನೇಮಕಾತಿ ಪರೀಕ್ಷೆ ಬರೆಯಲು ಅವಕಾಶವಿಲ್ಲ’ ಎಂಬ ನೀತಿಯಲ್ಲೂ ಧ್ವನಿಸುತ್ತಿರುವುದು ಈ ದಬ್ಬಾಳಿಕೆ ನೀತಿಯೇ.
ಸದ್ಯ ದಕ್ಷಿಣ ಭಾರತದಲ್ಲಿ ದೊಡ್ಡಮಟ್ಟದಲ್ಲಿ ಕಾಣಿಸಿಕೊಂಡಿರುವ ಹಿಂದಿ ಹೇರಿಕೆ ವಿರೋಧಿ ಧ್ವನಿಯು ಈ ದಬ್ಬಾಳಿಕೆಗೆ ಕಡಿವಾಣ ಹಾಕಲು ಯಶಸ್ವಿಯಾಗುತ್ತೋ ನೋಡಬೇಕು. ಅಂತೂ ಸ್ಟಾಕ್‍ಹೋಮ್ ಸಿಂಡ್ರೋಮ್‍ನಿಂದ ಮಾಧ್ಯಮ ಮತ್ತು ಜನತೆ ಹೊರಬರುತ್ತಿರುವ ಲಕ್ಷಣಗಳನ್ನು ಈ ಬೆಳವಣಿಗೆಯು ಸೂಚಿಸುತ್ತಿದೆ.

Saturday 21 September 2019

2016ರಲ್ಲಿ ಸಂಭ್ರಮಿಸಿದವರನ್ನು ಪಶ್ಚಾತ್ತಾಪಕ್ಕೆ ತಳ್ಳಿದ ಅರ್ಥವ್ಯವಸ್ಥೆ


ಚಂದ್ರಯಾನ-2 ಕೊನೆಕ್ಷಣದಲ್ಲಿ ವಿಫಲಗೊಂಡು ನೊಂದುಕೊಂಡ ಇಸ್ರೋ ಅಧ್ಯಕ್ಷ  ಕೆ. ಶಿವನ್ ಅವರನ್ನು ಸಂತೈಸಿ, ಹುರಿದುಂಬಿಸಿದ ರೀತಿಯಲ್ಲೇ  ಈ ದೇಶದ ಅರ್ಥವ್ಯವಸ್ಥೆಯು ಪ್ರಧಾನಿ ನರೇಂದ್ರ ಮೋದಿಯವರಿಂದ ಚೇತೋಹಾರಿ ಕ್ರಮಗಳನ್ನು ನಿರೀಕ್ಷಿಸುತ್ತಿದೆ. ಅರ್ಥವ್ಯವಸ್ಥೆಯ ಕುಸಿತದಿಂದ ಬಿಜೆಪಿಯ ಮೇಲೆ ರಾಜಕೀಯವಾಗಿ ಪರಿಣಾಮ ಬೀಳುತ್ತೋ ಇಲ್ಲವೋ ಆದರೆ, ಬಡವರ ಮೇಲೆ, ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಮೇಲೆ ಈಗಾಗಲೇ ಪರಿಣಾಮ ಬೀರತೊಡಗಿದೆ. ಡಾಲರ್ ನ ಎದುರು ರೂಪಾಯಿಯ ಮೌಲ್ಯ ಕುಸಿಯತೊಡಗಿದೆ. ಇದೇ ಮೊದಲ ಬಾರಿ 10 ಗ್ರಾಂ ಚಿನ್ನಕ್ಕೆ 40 ಸಾವಿರ ರೂಪಾಯಿಗಿಂತಲೂ ಅಧಿಕ ಬೆಲೆ ಏರಿಕೆಯಾಗಿದೆ. ಮಾಧ್ಯಮಗಳಲ್ಲಿ ಪ್ರತಿದಿನ ಅರ್ಥವ್ಯವಸ್ಥೆಯ ಕುಸಿತ ಮತ್ತು ಅದು ಉದ್ಯಮಗಳ ಮೇಲೆ ಬೀರುತ್ತಿರುವ ಪರಿಣಾಮಗಳ ಬಗ್ಗೆ ಸುದ್ದಿಗಳು ಪ್ರಕಟವಾಗುತ್ತಿವೆ. ಜಿಡಿಪಿಯಂತೂ ಹಿಂದೆಂದೂ ಕಾಣದಷ್ಟು ಪಾತಾಳಕ್ಕೆ ಕುಸಿದಿದೆ.
2018ರವರೆಗೆ ಈ ದೇಶದಲ್ಲಿ ಜಿಡಿಪಿಯನ್ನು ಲೆಕ್ಕಾಚಾರ ಮಾಡುವ ಒಂದು ಪದ್ಧತಿಯಿತ್ತು. ಕೇಂದ್ರ ಸರಕಾರವು 2018ರಲ್ಲಿ ಅದನ್ನು ಬದಲಿಸಿತು. ಈ ಬದಲಾವಣೆಗೊಂಡ ಲೆಕ್ಕಾಚಾರದ ಪ್ರಕಾರ ಸದ್ಯ ಭಾರತದ ಜಿಡಿಪಿ 5%. ಒಂದುವೇಳೆ, ಮನ್‍ಮೋಹನ್ ಸಿಂಗ್ ಕಾಲದ ಅಥವಾ 2018ಕ್ಕಿಂತ ಮೊದಲಿನ ಲೆಕ್ಕಾಚಾರ ಪದ್ಧತಿಯಂತೆ ಲೆಕ್ಕ ಹಾಕುವುದಾದರೆ ಈಗಿನದು 3.5% ಜಿಡಿಪಿ. ಇದು ಆತಂಕಕಾರಿ ಕುಸಿತ ಎಂದು ಅರ್ಥತಜ್ಞರೇ ಹೇಳುತ್ತಿದ್ದಾರೆ. ಸದ್ಯದ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ ಎಂಬ ಅಭಿಪ್ರಾಯ ವ್ಯಾಪಕವಾಗಿದೆ. ಸತತ ಮೂರು ತ್ರೈಮಾಸಿಕಗಳಲ್ಲಿ ಜಿಡಿಪಿ ತಗ್ಗಿದರೆ ಅದನ್ನು ಆರ್ಥಿಕ ಹಿಂಜರಿತವಾಗಿ ಲೆಕ್ಕ ಹಾಕಲಾಗುತ್ತದೆ. ಆದರೆ, ಇದೀಗ ಸತತ 5 ತ್ರೈಮಾಸಿಕದಲ್ಲೂ ಜಿಡಿಪಿ ಕುಸಿತವನ್ನೇ ತೋರಿಸುತ್ತಿದೆ. ಬ್ಯಾಂಕಿಂಗ್ ಕ್ಷೇತ್ರದಿಂದ ತೊಡಗಿ ಅಟೋಮೊಬೈಲ್, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಣ್ಣ ಉದ್ದಿಮೆಗಳು ಭಾರೀ ಕುಸಿತಕ್ಕೆ ಒಳಗಾಗಿವೆ. ಕಾರ್ಪೋರೇಟ್ ಕಂಪೆನಿಗಳು ಹೂಡಿಕೆ ಮಾಡುವುದಕ್ಕೆ ಹಿಂಜರಿಯುತ್ತಿರುವುದಷ್ಟೇ ಅಲ್ಲ, ಭಾರೀ ಪ್ರಮಾಣದಲ್ಲಿ ಷೇರುಗಳನ್ನು ಹಿಂತೆಗೆದುಕೊಳ್ಳುತ್ತಲೂ ಇವೆ. ಕೇಂದ್ರ ಸರಕಾರವು ಆರ್ ಬಿಐನಲ್ಲಿದ್ದ ಮೀಸಲು ನಿಧಿಯಿಂದ 1.76 ಲಕ್ಷ ಕೋಟಿ ರೂಪಾಯಿಯನ್ನು ಪಡೆದುಕೊಂಡ ಬಳಿಕವೂ ಆರ್ಥಿಕ ಕ್ಷೇತ್ರದ ಕುಸಿತದಲ್ಲಿ ಏರಿಕೆ ಕಂಡುಬರುತ್ತಿಲ್ಲ. ಇನ್ನೊಂದೆಡೆ,
ವಾಹನ ಉತ್ಪಾದನೆ ಮತ್ತು ಬಟ್ಟೆ ತಯಾರಿಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಟಾಟಾ, ಅಶೋಕ್ ಲೈಲ್ಯಾಂಡ್, ಮಾರುತಿ ಸುಝುಕಿ, ಹೋಂಡಾ ಸಹಿತ ದೇಶೀಯ ಮತ್ತು ಬಹುರಾಷ್ಟ್ರೀಯ ವಾಹನ ತಯಾರಿಕಾ ಕಂಪೆನಿಗಳು ಭಾರೀ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಕೈ ಬಿಡುತ್ತಿವೆ. ಉತ್ಪಾದನೆಯನ್ನು ಸ್ಥಗಿತಗೊಳಿಸುತ್ತಿವೆ. ಉತ್ಪಾದನಾ ರಹಿತ ದಿನಗಳು ಎಂಬ ಹೊಸ ಪರಂಪರೆಯನ್ನೇ ಈ ಕಂಪೆನಿಗಳು ಆರಂಭ ಮಾಡಿವೆ. ಬಟ್ಟೆ ತಯಾರಿಕಾ ಕ್ಷೇತ್ರದಲ್ಲೂ ಕಂಪನ ಸೃಷ್ಟಿಯಾಗಿವೆ. ಬಟ್ಟೆಗಳು ಮಾರಾಟವಾಗುತ್ತಿಲ್ಲ. ಉದ್ಯೋಗ ಸೃಷ್ಟಿಯಲ್ಲಿ ಎರಡನೇ ಅತಿ ದೊಡ್ಡ ಕ್ಷೇತ್ರವಾಗಿರುವ ಈ ರಂಗವನ್ನು ಬಾಧಿಸಿರುವ ಈ ಮುಗ್ಗಟ್ಟಿನಿಂದಾಗಿ ಲಕ್ಷಾಂತರ ಮಂದಿ ನೇರವಾಗಿ ಉದ್ಯೋಗ ಕಳಕೊಳ್ಳುವಂತಾಗಿದೆ. ಇನ್ನು, ಪರೋಕ್ಷ ಸಂತ್ರಸ್ತರ ಸಂಖ್ಯೆಯಂತೂ ಅಗಣಿತ. ಬಟ್ಟೆ ತಯಾರಿಯಿಂದ ತೊಡಗಿ, ಅದರ ದಾಸ್ತಾನು, ಸಾಗಾಣಿಕೆ ಮತ್ತು ವಿವಿಧ ಅಂಗಡಿಗಳಲ್ಲಿ ಅದರ ಮಾರಾಟ ಮತ್ತು ಈ ಎಲ್ಲವುಗಳಿಗೂ ಹಣಕಾಸಿನ ನೆರವು ನೀಡುವ ಬ್ಯಾಂಕುಗಳು ಹಾಗೂ ಆ ಕಾರಣದಿಂದಾಗಿ ಹಣದ ಚಲಾವಣೆ ಇತ್ಯಾದಿ ಒಂದು ದೊಡ್ಡ ಸರಪಣಿಯನ್ನೇ ಈ ಕುಸಿತ ತೊಂದರೆಗೀಡು ಮಾಡಿದೆ.
ಜನರು ಉಡುಪು ಖರೀದಿಗೆ ಆಸಕ್ತಿ ತೋರುವುದಿಲ್ಲ ಅಂದರೆ ಅದು ಉಡುಪು ಮಾರಾಟ ಮಾಡುವ ಅಂಗಡಿಯ ಸಮಸ್ಯೆ ಮಾತ್ರ ಆಗುವುದಲ್ಲ. ಅದು ಆ ಅಂಗಡಿಯಿಂದ ಆರಂಭವಾಗಿ ಬಟ್ಟೆ ತಯಾರಿಸುವ ಕಂಪೆನಿಯವರೆಗೆ ಎಲ್ಲವನ್ನೂ ಎಲ್ಲರನ್ನೂ ಬಾಧಿಸುತ್ತದೆ. ಬಟ್ಟೆ ಮಾರಾಟವಾಗದಿದ್ದರೆ ಬ್ಯಾಂಕ್‍ನಿಂದ ಸಾಲ ಎತ್ತುವ ಪ್ರಶ್ನೆ ಬರುವುದಿಲ್ಲ. ಈ ಮೊದಲು ಎತ್ತಿದ ಸಾಲದ ತೀರುವಳಿಯೂ ಆಗುವುದಿಲ್ಲ. ಇದರಿಂದಾಗಿ ಬ್ಯಾಂಕಿಂಗ್ ಕ್ಷೇತ್ರವು ಹಣದ ಚಲಾವಣೆಯ ಅಭಾವದಿಂದಾಗಿ ಕುಸಿಯತೊಡಗುತ್ತದೆ. ಅಲ್ಲಿನ ಉಗ್ಯೋಗಿಗಳನ್ನು ಕೈಬಿಡುವ ಪರಿಸ್ಥಿತಿ ಎದುರಾಗುತ್ತದೆ. ಬ್ಯಾಂಕುಗಳ ನಡುವಿನ ವಿಲೀನದಿಂದ ಬಂಡವಾಳದಲ್ಲಿ ವೃದ್ಧಿಯಾಗಬಹುದು. ಎರಡು ಬ್ಯಾಂಕ್‍ಗಳ ಹಣ ಒಂದೇ ಕಡೆ ಜಮೆಯಾಗುವುದಕ್ಕೆ ಈ ವಿಲೀನ ಕಾರಣವಾಗಬಹುದು. ಆದರೆ, ಅದರಿಂದ ಬ್ಯಾಂಕಿಂಗ್ ಕ್ಷೇತ್ರ ಚೇತರಿಸಿಕೊಳ್ಳಲಿದೆ ಎಂದು ಹೇಳಲಾಗದು. ಬ್ಯಾಂಕಿಂಗ್ ಕ್ಷೇತ್ರದ ಚೇತರಿಕೆ ಇತರ ಕ್ಷೇತ್ರಗಳ ಚೇತರಿಕೆಯನ್ನು ಹೊಂದಿಕೊಂಡಿದೆ.
ಭಾರೀ ಪ್ರಮಾಣದಲ್ಲಿ ವಾಹನಗಳು ಮಾರಾಟವಾಗುವುದೆಂದರೆ ಅದು ವಾಹನ ತಯಾರಿಕಾ ಕಂಪೆನಿಗಳಿಗಷ್ಟೇ ಖುಷಿಯ ಸಂಗತಿ ಅಲ್ಲ. ಬ್ಯಾಂಕಿಗೂ ಸಿಹಿಸುದ್ದಿ. ಬ್ಯಾಂಕಿನಿಂದ ಸಾಲವನ್ನು ಎತ್ತಿಕೊಂಡೇ ವಾಹನವನ್ನು ಖರೀದಿಸಲಾಗುತ್ತದೆ. ಹೀಗೆ ಮಾರಾಟವಾಗುವಾಗ ವಾಹನಗಳ ಬಿಡಿಭಾಗಗಳನ್ನು ತಯಾರಿಸುವ ಕಂಪೆನಿಗಳಿಗೂ ಅದನ್ನು ಮಾರುವ ಅಂಗಡಿಗಳಿಗೂ ಪ್ರಯೋಜನವಾಗುತ್ತದೆ. ಅವೂ ಬ್ಯಾಂಕ್‍ನಿಂದ ಸಾಲವನ್ನು ಎತ್ತಿಕೊಂಡಿರುತ್ತದೆ. ಅಸಂಖ್ಯಾತ ಗ್ಯಾರೇಜುಗಳಿಗೆ ಕೆಲಸ ಸಿಗುತ್ತದೆ. ವಿಮಾ ಕಂಪೆನಿಗಳೂ ಚಟುವಟಿಕೆಯಿಂದಿರುತ್ತವೆ. ಇದೊಂದು ರೀತಿಯಲ್ಲಿ ಸರಪಣಿ ಇದ್ದ ಹಾಗೆ. ಒಂದನ್ನು ಇನ್ನೊಂದು, ಅದನ್ನು ಮತ್ತೊಂದು, ಮಗದೊಂದು.. ಹೀಗೆ ಅವಲಂಬಿಸಿಕೊಂಡು ಬದುಕುತ್ತಿರುತ್ತವೆ. ಆದ್ದರಿಂದ, ವಾಹನ ಉತ್ಪಾದನೆಯಲ್ಲಿ ಮತ್ತು ಮಾರಾಟದಲ್ಲಿ ಭಾರೀ ಕುಸಿತ ಆಗಿದೆ ಎಂಬುದು ಪರಿಣಾಮದ ದೃಷ್ಟಿಯಿಂದ ಆಘಾತಕಾರಿಯಾದುದು. ಇದನ್ನು ನಾವು ಕೇವಲ ವಾಹನ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸಿ ನೋಡಬೇಕಿಲ್ಲ. ಬಟ್ಟೆ, ಎಲೆಕ್ಟ್ರಾನಿಕ್ ಸಾಧನಗಳು, ಕೃಷಿ ಕ್ಷೇತ್ರ ಸಹಿತ ಎಲ್ಲವುಗಳ ಪರಿಸ್ಥಿತಿಯೂ ಇದುವೇ. ಜನರಲ್ಲಿ ಖರೀದಿ ಸಾಮರ್ಥ್ಯ ಕುಸಿದರೆ ಅದು ಉದ್ಯಮ ಕ್ಷೇತ್ರದ ಕೋಟ್ಯಂತರ ಮಂದಿಯನ್ನು ನೇರವಾಗಿಯೋ ಪರೋಕ್ಷವಾಗಿಯೋ ಕಾಡುತ್ತದೆ. ಅಂದಹಾಗೆ,
2008ರಲ್ಲೂ ಈಗಿನಂಥದ್ದೇ ಆರ್ಥಿಕ ಹಿಂಜರಿತ ಎದುರಾಗಿತ್ತು ಎಂದು ಹೇಳಲಾಗುತ್ತಿದೆ. ಅಮೇರಿಕದ ಲೆಹ್ಮನ್ ಬ್ರದರ್ಸ್ ಬ್ಯಾಂಕು ದಿವಾಳಿತನವನ್ನು ಘೋಷಿಸಿದ ಬಳಿಕ ಜಾಗತಿಕ ಮಟ್ಟದಲ್ಲಿ ಕಾಣಿಸಿಕೊಂಡ ಆರ್ಥಿಕ ಹಿಂಜರಿತದ ಬಿಸಿ ಆಗ ಭಾರತವನ್ನೂ ತಟ್ಟಿತ್ತು. ಆದರೆ ಮನ್‍ಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರಕಾರವು ಆ ಕುಸಿತದ ಅಡ್ಡ ಪರಿಣಾಮವನ್ನು ಕರಾರುವಕ್ಕಾಗಿ ಊಹಿಸಿ ತಕ್ಷಣ ಕ್ರಮಗಳನ್ನು ಕೈಗೊಂಡಿತ್ತು. ಆರ್ಥಿಕ ನೆರವಿನ ಪ್ಯಾಕೇಜ್ ಮತ್ತಿತರ ಕ್ರಮಗಳ ಮೂಲಕ ತಕ್ಷಣ ಸ್ಪಂದಿಸಿತ್ತು. ಜೊತೆಗೇ ಆಗಿನ ಸರಕಾರದಲ್ಲಿ ಪ್ರಣವ್ ಮುಖರ್ಜಿ, ಚಿದಂಬರಮ್ ಮತ್ತು ಪ್ರಧಾನಿ ಮನ್‍ಮೋಹನ್ ಸಿಂಗ್‍ರಂಥ ನಿಪುಣ ಅರ್ಥತಜ್ಞರಿದ್ದರು. ಆದರೆ, ಪ್ರಧಾನಿ ಮೋದಿ ನೇತೃತ್ವದ ಸರಕಾರದಲ್ಲಿ ಅರ್ಥ ತಜ್ಞರ ದೊಡ್ಡ ಕೊರತೆಯಿದೆ. ನಿರ್ಮಲ ಸೀತಾರಾಮನ್ ಅನನುಭವಿ. ಸತತ 5 ತ್ರೈಮಾಸಿಕದಲ್ಲಿ ಜಿಡಿಪಿಯ ಕುಸಿತ ಉಂಟಾದ ಬಳಿಕವೂ ಕ್ಷೀಪ್ರ ಪರಿಹಾರೋಪಾಯಗಳನ್ನು ಕಂಡುಕೊಳ್ಳಲು ಈ ಸರಕಾರ ವಿಫಲವಾಗುತ್ತಿದೆ. ಈ ವೈಫಲ್ಯಕ್ಕೆ ಇಂಬು ನೀಡುವಂತೆ ಸರಕಾರದ ಮೌನವೂ ಸೇರಿಕೊಂಡಿದೆ. ಆರ್ಥಿಕ ಹಿಂಜರಿತಕ್ಕೆ ಪ್ರತಿ ಕ್ಷೇತ್ರವೂ ಸಾಕ್ಷ್ಯ ವಹಿಸುತ್ತಿದ್ದರೂ ಪ್ರಧಾನಿಯಾಗಲಿ, ಹಣಕಾಸು ಸಚಿವರಾಗಲಿ ಅದನ್ನು ಒಪ್ಪಿಕೊಂಡು ಬಹಿರಂಗ ಹೇಳಿಕೆಗಳನ್ನು ನೀಡುತ್ತಿಲ್ಲ. ಹಿಂಜರಿತವನ್ನು ಒಪ್ಪಿಕೊಳ್ಳದೇ ಇರುವುದರಿಂದ ಪರಿಹಾರ ಕ್ರಮಗಳನ್ನು ಘೋಷಿಸುತ್ತಲೂ ಇಲ್ಲ. ಸರಕಾರದ ಈ ಹಿಂಜರಿಕೆಯು ಉದ್ಯಮ ಹೂಡಿಕೆ ಕ್ಷೇತ್ರವೂ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮೋಡ ಕವಿಯುವಂತೆ ಮಾಡಿದೆ. ಅವುಗಳ ಆತ್ಮವಿಶ್ವಾಸ ಕುಸಿದಿದೆ.
ಡಿಮಾನಿಟೈಸೇಷನನ್ನು ಆರ್ಥಿಕ ಕ್ರಾಂತಿ ಎಂದು ಕರೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಬೆಂಬಲಿಗರು 2016ರಲ್ಲಿ ಸಂಭ್ರಮಿಸುತ್ತಿದ್ದಾಗ ಅದರ ದೂರಗಾಮಿ ಪರಿಣಾಮ ಏನು ಅನ್ನುವುದನ್ನು ಮನ್‍ಮೋಹನ್ ಸಿಂಗ್ ಅವರು ಅಂದು ವಿವರಿಸಿದ್ದರು. ಅವರು ಅಂದು ಏನು ಊಹಿಸಿದ್ದರೋ ಅದು ಈಗ ನಿಜವಾಗುತ್ತಿದೆ. ಅದರ ಮೇಲೆ ಜಿಎಸ್‍ಟಿಯೂ ಸೇರಿಕೊಂಡು ಈಗ ದೇಶದ ಆರ್ಥಿಕ ಸ್ಥಿತಿಯೇ ಅಲ್ಲೋಲ ಕಲ್ಲೋಲಗೊಂಡಿದೆ. ಇದು ಕೇಂದ್ರ ಸರಕಾರದ ಸ್ವಯಂಕೃತ ಅಪರಾಧ. ದೂರದೃಷ್ಟಿಯಿಲ್ಲದೇ ಕೈಗೊಳ್ಳುವ ‘ಜನಪ್ರಿಯ’ ತೀರ್ಮಾನಗಳು ಯಾಕೆ ಅಪಾಯಕಾರಿ ಅನ್ನುವುದನ್ನು ಇದು ಸೂಚಿಸುತ್ತದೆ.

Friday 13 September 2019

ನಮ್ಮ ವಿವೇಕವನ್ನು ತಟ್ಟಿ ಎಚ್ಚರಿಸಬೇಕಾದ ಕುವೈತ್ ಯುವಕರ ವೀಡಿಯೋ




ತಿಂಗಳ ಹಿಂದೆ ವೀಡಿಯೋವೊಂದು ವೈರಲ್ ಆಗಿತ್ತು. ವೀಡಿಯೋದಲ್ಲಿದ್ದುದು ಒಂದಿಷ್ಟು ಯುವಕರು. ಹಿಂದೂ, ಮುಸ್ಲಿಮ್ ಮತ್ತು ಕ್ರೈಸ್ತ ಸಮುದಾಯದವರಾದ ಆ ಯುವಕರ ಬೇಡಿಕೆ ಒಂದೇ ಆಗಿತ್ತು- ‘ಹೇಗಾದರೂ ಮಾಡಿ ತಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳಿ’ ಎಂಬುದು. ಕರ್ನಾಟಕದ ವಿವಿಧ ಪ್ರದೇಶಗಳಿಂದ ಉದ್ಯೋಗವನ್ನು ಅರಸಿಕೊಂಡು ಕುವೈತ್‍ಗೆ ಆಗಮಿಸಿದ ಯುವಕರ ಗುಂಪು ಇದು. 2019 ಜನವರಿಯ ಆರಂಭದಲ್ಲಿ ಮ್ಯಾನ್‍ಪವರ್ ಕನ್ಸಲ್ಟನ್ಸಿಯವರು ಕಳುಹಿಸಿಕೊಟ್ಟಿದ್ದ ಈ ಯುವಕರೆಲ್ಲ ಕಳೆದ ಐದಾರು ತಿಂಗಳಿಂದ ಅತ್ಯಂತ ಅತಂತ್ರವಾಗಿ ಬದುಕಬೇಕಾಯಿತು. ಸಂದರ್ಶನದ ವೇಳೆ ಉದ್ಯೋಗ ಕೊಡುವುದಾಗಿ ಹೇಳಿದ ಕಂಪೆನಿಯ ಹೆಸರೇ ಬೇರೆ ಮತ್ತು ಕುವೈತ್‍ನಲ್ಲಿ ಕೆಲಸಕ್ಕೆ ಸೇರಿಸಿಕೊಂಡ ಕಂಪೆನಿಯ ಹೆಸರೇ ಬೇರೆ ಎಂಬುದರಿಂದ ತೊಡಗಿ ದೂರುಗಳ ಮೂಟೆಯೇ ಈ 59 ಮಂದಿಯಲ್ಲಿದೆ. ಸಂಬಳವೂ ಸಿಗದೇ ಕೊನೆಗೆ ಊಟ-ಉಪಾಹಾರವೂ ಲಭ್ಯವಿಲ್ಲದೇ ಚಿಂತಾಜನಕ ಸ್ಥಿತಿಗೆ ತಲುಪುವುದರ ಜೊತೆಜೊತೆಗೇ ಸಂವಹನದ ಸಮಸ್ಯೆಯೂ ಇವರನ್ನು ಕಾಡಿತು. ಅಲ್ಲಿನ ಕಾರ್ಮಿಕ ನ್ಯಾಯಾಲಯದ ಕಾರ್ಯವೈಖರಿಯ ಬಗ್ಗೆ ತಿಳುವಳಿಕೆ ಇಲ್ಲದ ಹಾಗೂ ಅರಬಿ ಭಾಷೆಯಲ್ಲಿ ಸಂವಹನ ನಡೆಸಲು ಗೊತ್ತಿಲ್ಲದ ಈ ಮಂದಿ ಒಂದು ರೀತಿಯಲ್ಲಿ ಬೇಡರ ಬಲೆಯೊಳಗೆ ಸಿಲುಕಿಕೊಂಡಂತಾಗಿತ್ತು. ಈ ಸ್ಥಿತಿಯಲ್ಲಿ ಕೊನೆಯ ಅಸ್ತ್ರವೆಂಬಂತೆ ಅವರೆಲ್ಲ ಸೇರಿ ವೀಡಿಯೋವೊಂದನ್ನು ಮಾಡಿ ಸಾರ್ವಜನಿಕವಾಗಿ ಹಂಚಿಕೊಂಡಿದ್ದರು. ಮಂಗಳೂರು ಶಾಸಕ ವೇದವ್ಯಾಸ್ ಕಾಮತ್‍ರಲ್ಲಿ ಅವರು ಆ ವೀಡಿಯೋದ ಮೂಲಕ ನೆರವು ಕೋರಿದರು. ಇದೀಗ ಅವರನ್ನು ಬಿಡಿಸಿಕೊಳ್ಳುವ ಪ್ರಯತ್ನಗಳಿಗೆ ಯಶಸ್ಸು ಸಿಕ್ಕಿದೆ. ಕುವೈತ್‍ನಲ್ಲಿ ಸಿಲುಕಿಕೊಂಡ ಈ ಯುವಕರು ಹಂತಹಂತವಾಗಿ ಈ ದೇಶಕ್ಕೆ ಮರಳುತ್ತಿದ್ದಾರೆ. ನಿಜವಾಗಿ,
ಘಟನೆಯ ನೇರ ಮುಖ ಇದು. ಆದರೆ ಇದರ ಪರೋಕ್ಷ ಮುಖಗಳು ಒಂದಕ್ಕಿಂತ ಹೆಚ್ಚಿವೆ. ಒಂದನೆಯದಾಗಿ, ಬಡತನಕ್ಕೆ ಹಿಂದೂ-ಮುಸ್ಲಿಮ್ ಎಂಬ ಭೇದ ಇಲ್ಲ. ಸಂಕಷ್ಟಕ್ಕೂ ಹಿಂದೂ-ಮುಸ್ಲಿಮ್ ಎಂಬ ವ್ಯತ್ಯಾಸ ಇಲ್ಲ. ಕುವೈತ್ ಎಂಬುದು ಮುಸ್ಲಿಮ್ ರಾಷ್ಟ್ರವಾಗಿರುವುದರಿಂದ ಈ 59 ಮಂದಿಯ ಪೈಕಿ ಮುಸ್ಲಿಮರಿಗೆ ಆದರ ಮತ್ತು ಮುಸ್ಲಿಮೇತರ ಉದ್ಯೋಗಾಕಾಂಕ್ಷಿಗಳಿಗೆ ಅನಾದಾರವೂ ನಡೆದಿಲ್ಲ. ಇವರೆಲ್ಲರಲ್ಲೂ ಇದ್ದಿದ್ದ ಭಯ ಒಂದೇ ಆಗಿತ್ತು. ಬಯಕೆಯೂ ಒಂದೇ ಆಗಿತ್ತು. ಇದ್ದಿದ್ದೂ ಜೊತೆಗೆಯೇ. ಅಬೂಬಕರ್ ಸಿದ್ದೀಕ್, ವರುಣ್, ಪಾಲ್ಟ್ರಿಕ್ ಫರ್ನಾಂಡಿಸ್ ಎಂಬಿತ್ಯಾದಿಯಾಗಿ ಇವರ ಹೆಸರಲ್ಲಿ ಭಿನ್ನತೆಯಿದ್ದರೂ ಈ ಭಿನ್ನತೆಯ ಆಚೆಗೆ ಇವರಲ್ಲಿ ಮತ್ತು ಇವರ ಕುಟುಂಬಿಕರ ಆತಂಕದಲ್ಲಿ ಯಾವ ವ್ಯತ್ಯಾಸವೂ ಇರಲಿಲ್ಲ. ಕುವೈತ್‍ನಲ್ಲಿ ಇವರೆಲ್ಲ- ಭಾರತೀಯರು ಮತ್ತು ಮನುಷ್ಯರೆಂಬ ನೆಲೆಯಲ್ಲಿ ಸಮಾನ ಪರಿಗಣನೆಗೆ ಒಳಪಟ್ಟರು. ಎರಡನೆಯದಾಗಿ,
ವಂಚಿಸುವವರಲ್ಲೂ ಮತ್ತು ವಂಚನೆಗೆ ಒಳಗಾಗುವವರಲ್ಲೂ ಹಿಂದೂ-ಮುಸ್ಲಿಮ್ ಎಂಬ ಬೇಧವಿಲ್ಲ. ಈ 59 ಮಂದಿಯನ್ನು ಕುವೈತ್‍ಗೆ ಕಳುಹಿಸಿದ ಮ್ಯಾನ್‍ಪವರ್ ಕಂಪೆನಿಯಾಗಲಿ, ಸಂದರ್ಶನದ ಸಮಯದಲ್ಲಿ ಉದ್ಯೋಗ ಕೊಡುತ್ತೇನೆಂದು ನಂಬಿಸಿದವರಾಗಲಿ ಮತ್ತು ಕುವೈತ್‍ನಲ್ಲಿ ವಂಚಿಸಿದವರಾಗಲಿ ಎಲ್ಲರೂ ಒಂದೇ ಧರ್ಮಕ್ಕೋ ಒಂದೇ ಜಾತಿಗೋ ಒಂದೇ ಭಾಷೆಗೋ ಸೇರಿದವರಲ್ಲ. ಧರ್ಮ, ಭಾಷೆ, ದೇಶವೆಂಬ ಐಡೆಂಟಿಟಿಯ ಆಚೆಗೆ ಅವರೆಲ್ಲ ಒಂದೇ ಬಿಂದುವಿನಲ್ಲಿ ಸೇರಿಕೊಂಡವರು. ಈ 59 ಮಂದಿಗೆ ನಿರ್ದಿಷ್ಟ ಕಂಪೆನಿಯಲ್ಲಿ ನಿರ್ದಿಷ್ಟ ಉದ್ಯೋಗವನ್ನೇ ಕೊಡಿಸುತ್ತೇವೆ ಎಂದು ನಂಬಿಸಿ ಕೈಕೊಟ್ಟವರಲ್ಲಿ ಹಿಂದೂಗಳೂ ಇದ್ದಾರೆ. ಮುಸ್ಲಿಮರೂ ಇz್ದÁರೆ. ಅವರು ಹಾಗೆ ವಂಚಿಸುವಾಗ ತಂತಮ್ಮ ಧರ್ಮೀಯರ ಮೇಲೆ ವಿಶೇಷ ಮೃದು ಭಾವನೆಯನ್ನೇನೂ ತೋರಿಲ್ಲ. ವಂಚನೆಗೊಳಗಾಗುವವರು ತನ್ನ ಧರ್ಮದವರೋ ಅನ್ಯ ಧರ್ಮದವರೋ ಅನ್ನುವುದು ವಂಚನೆಯ ಸಮಯದಲ್ಲಿ ಅವರಿಗೆ ಮುಖ್ಯವೂ ಆಗಿಲ್ಲ. ವಂಚಿಸುವುದೇ ಅವರ ಉದ್ದೇಶವಾಗಿತ್ತು. ಅದುವೇ ಆ ಸಂದರ್ಭದಲ್ಲಿ ಅವರ ಧರ್ಮ. ಅವರು ಹಿಂದೂ-ಮುಸ್ಲಿಮ್ ಏನೇ ಆಗಿದ್ದರೂ ವಂಚನಾತ್ಮಕ ಮನಸ್ಥಿತಿಯ ಮಟ್ಟಿಗೆ ಅವರೆಲ್ಲರೂ ಸಮಾನರು ಮತ್ತು ಒಂದೇ ಧರ್ಮದವರು. ಮೂರನೆಯದಾಗಿ,
ಈ 59 ಮಂದಿಗೆ ನೆರವಾದವರಲ್ಲೂ ಈ ಧಾರ್ಮಿಕ ವೈವಿಧ್ಯತೆಯಿದೆ. ಮೋಹನ್‍ದಾಸ್ ಕಾಮತ್‍ರಿಂದ ಹಿಡಿದು ಅಹ್ಮದ್ ಬಾವಾರ ವರೆಗೆ ಮಾಧವ್ ನಾಯಕ್‍ರಿಂದ ಹಿಡಿದು ತುಳುಕೂಟದ ವರೆಗೆ ಈ ಪಟ್ಟಿಯಲ್ಲಿ ಬಹುತ್ವದ ಭಾರತವೇ ಕಾಣಸಿಗುತ್ತದೆ. ಇವರಾರೂ ಈ 59 ಮಂದಿಯಲ್ಲಿ ಧರ್ಮವನ್ನು ಹುಡುಕಿಲ್ಲ. ತಂತಮ್ಮ ಧರ್ಮದವರನ್ನು ಪ್ರತ್ಯೇಕಿಸಿ ಅವರ ಸಂಕಷ್ಟಗಳಿಗೆ ಮಾತ್ರ ಮಿಡಿಯುವ ಸಣ್ಣ ಮನಸ್ಸನ್ನೂ ತೋರಿಲ್ಲ. ನೆರವಾಗಲು ಧಾವಿಸಿ ಬಂದ ಎಲ್ಲರಿಗೂ ಈ 59 ಮಂದಿ ಮನುಷ್ಯರಾಗಿ ಕಂಡಿರುವರೇ ಹೊರತು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬಿತ್ಯಾದಿಯಾಗಿ ಅಲ್ಲ. ಅಂದಹಾಗೆ, ವಂಚಕರು ಹೇಗೆ ಧರ್ಮಾತೀತರೋ ವಂಚನೆಗೊಳಗಾದವರಿಗೆ ಮಿಡಿಯುವ ಮನಸುಗಳೂ ಧರ್ಮಾತೀತವೇ. ಒಳ್ಳೆಯ ಮನಸ್ಸು ಅನ್ನುವುದು ನಿರ್ದಿಷ್ಟ ಧರ್ಮೀಯರಲ್ಲಿ ಮಾತ್ರ ಇರುವ ಒಂದಲ್ಲ. ಅದು ಧರ್ಮಾತೀತ. ಹಿಂದೂ-ಮುಸ್ಲಿಮ್-ಕ್ರೈಸ್ತ ಸಹಿತ ಎಲ್ಲ ಧರ್ಮದಲ್ಲೂ ಒಳ್ಳೆಯವರಿದ್ದಾರೆ. ಕೆಟ್ಟವರೂ ಇದ್ದಾರೆ. ಆಹಾರ, ಉಡುಪು, ಆಕಾರ, ಗಡ್ಡ, ನಾಮ, ಟೋಪಿ, ನಂಬಿಕೆ, ಆಚಾರ, ಸಂಸ್ಕೃತಿ, ಬಿಳಿ, ಹಸಿರು, ಕೇಸರಿ ಇತ್ಯಾದಿ ಇತ್ಯಾದಿ ವೈವಿಧ್ಯತೆಗಳು ಅವನ್ನು ನಿರ್ಧರಿಸುವುದಿಲ್ಲ. ಅಷ್ಟಕ್ಕೂ,
ಮಾಂಸಾಹಾರಿ ಕರುಣಾಮಯಿಯೂ ಆಗಬಲ್ಲ. ಕ್ರೂರನೂ ಆಗಬಲ್ಲ. ಸಸ್ಯಾಹಾರಿಗೂ ಇದು ಅನ್ವಯ. ಗಡ್ಡ ಬಿಡುವುದು, ನಾಮ ಹಾಕುವುದು, ಟೋಪಿ ಧರಿಸುವುದು, ಮಸೀದಿ-ಮಂದಿರಗಳಿಗೆ ಹೋಗುವುದು, ನಿರ್ದಿಷ್ಟ ಉಡುಪು ಧರಿಸುವುದು ಮುಂತಾದುವುಗಳೆಲ್ಲ ಧರ್ಮದ ಗುರುತುಗಳೇ ಹೊರತು ಒಳ್ಳೆಯವರು ಮತ್ತು ಕೆಟ್ಟವರು ಅನ್ನುವುದರ ಗುರುತುಗಳಲ್ಲ. ಕೆಟ್ಟತನಕ್ಕೆ ಸಾಮಾಜಿಕ, ಆರ್ಥಿಕ, ರಾಜಕೀಯ, ಕೌಟುಂಬಿಕ ಮತ್ತು ಪರಿಸರಾತ್ಮಕ ಕಾರಣಗಳಿವೆ. ಒಳ್ಳೆತನದಲ್ಲೂ ಒಂದಕ್ಕಿಂತ ಹೆಚ್ಚು ಕಾರಣಗಳು ಮಿಳಿತವಾಗಿವೆ. ನಾಲ್ಕನೆಯದಾಗಿ,
ಔದ್ಯೋಗಿಕ ಸಮಸ್ಯೆಗಳೂ ಹಿಂದೂ-ಮುಸ್ಲಿಮ್ ಸಹಿತ ಎಲ್ಲರ ಪಾಲಿಗೂ ಸಮಾನವಾಗಿವೆ. ಉದ್ಯೋಗ ಕ್ಷೇತ್ರದಲ್ಲಿ ಕಳೆದ 45 ವರ್ಷಗಳಲ್ಲೇ ಈ ದೇಶ ಇವತ್ತು ಭಾರೀ ವೈಫಲ್ಯವನ್ನು ಕಂಡಿದೆ ಎಂಬ ಸಂಗತಿಗೆ ಆತಂಕ ಪಡಬೇಕಾದುದು ಯಾವುದಾದರೂ ನಿರ್ದಿಷ್ಟ ಧರ್ಮದ ಅಥವಾ ರಾಜಕೀಯ ಪಕ್ಷದ ಜನರಲ್ಲ. ಅದು ಈ ದೇಶದ ಸಮಸ್ಯೆ ಮತ್ತು ಈ ಸಮಸ್ಯೆ ಧರ್ಮಾತೀತವಾಗಿ ಎಲ್ಲರನ್ನೂ ಕಾಡುವಂಥದ್ದು. ಉದ್ಯೋಗಕ್ಕಾಗಿ ಕುವೈತ್‍ಗೆ ತೆರಳಿದ 59 ಮಂದಿಯ ಹೆಸರುಗಳೇ ಇದನ್ನು ಸ್ಪಷ್ಟಪಡಿಸುತ್ತದೆ. ವಿಷಾದ ಏನೆಂದರೆ,
ಈ 59 ಮಂದಿಯ ಸಂಕಟವನ್ನು ವಿವರಿಸುವ ವೀಡಿಯೋ ತಿಂಗಳ ಹಿಂದೆ ವಾಟ್ಸಾಪ್-ಫೇಸ್‍ಬುಕ್‍ಗಳಲ್ಲಿ ವೈರಲ್ ಆಗುವ ಮೊದಲೂ ಮತ್ತು ಆ ಬಳಿಕವೂ ಅನೇಕಾರು ವೀಡಿಯೋಗಳು ವೈರಲ್ ಆಗಿವೆ. ಆದರೆ ಅವುಗಳಲ್ಲಿ ಹೆಚ್ಚಿನೆಲ್ಲ ವೀಡಿಯೋಗಳು ಥಳಿತಕ್ಕೆ ಮತ್ತು ಲೈಂಗಿಕ ಹಿಂಸೆಗೆ ಸಂಬಂಧಿಸಿದ್ದು. ಅದರಲ್ಲಿ ಇತ್ತೀಚಿನದ್ದು ತಬ್ರೇಝï ಅನ್ನುವ ಜಾರ್ಖಂಡಿನ ಯುವಕನಿಗೆ ಸಂಬಂಧಿಸಿದ್ದು. ಇಲ್ಲಿ ಥಳಿಸುವವರದ್ದು ಒಂದು ಧರ್ಮವಾದರೆ ಥಳಿತಕ್ಕೆ ಒಳಗಾಗುವವರದ್ದು ಇನ್ನೊಂದು ಧರ್ಮ. ಧರ್ಮ ಬೇರೆ ಅನ್ನುವುದರ ಹೊರತು ಈ ಥಳಿತಕ್ಕೆ ಮತ್ತು ಹಾಗೆ ಥಳಿಸಿ ಥಳಿಸಿ ಹತ್ಯೆಗೈಯುವುದಕ್ಕೆ ಬಲವಾದ ಇನ್ನಾವ ಕಾರಣಗಳೂ ಕಾಣಿಸುತ್ತಿಲ್ಲ. ಒಂದುವೇಳೆ,
ಕುವೈತ್‍ನಲ್ಲಿ ಸಿಲುಕಿಕೊಂಡ 59 ಮಂದಿಯ ನೋವನ್ನು ಅನುಭವಿಸಲು ವೇದವ್ಯಾಸ್ ಕಾಮತ್‍ರಿಗೂ ಅಹ್ಮದ್ ಬಾವಾರಿಗೂ ವಿಜಯ್ ಫೆರ್ನಾಂಡಿಸ್‍ರಿಗೂ ಮತ್ತು ಇಂಥ ಅನೇಕಾರು ಮಂದಿಗೂ ಸಾಧ್ಯವಾದಂತೆಯೇ ಥಳಿತಕ್ಕೊಳಗಾಗುವ ಮಂದಿಯ ನೋವನ್ನೂ ಹೀಗೆ ಧರ್ಮಾತೀತವಾಗಿ ಅನುಭವಿಸಲು ಈ ದೇಶದ ಎಲ್ಲರಿಗೂ ಸಾಧ್ಯವಾಗುತ್ತಿದ್ದರೆ ಹೇಗಿರುತ್ತಿತ್ತೋ? ಈ ಹಿನ್ನೆಲೆಯಲ್ಲಿ,
ಕುವೈತ್ ಯುವಕರ ವೀಡಿಯೋ ನಮ್ಮೊಳಗನ್ನು ತಟ್ಟಲಿ. ನಮ್ಮನ್ನು ವಿವೇಕವಂತರಾಗಿಸಲಿ.

ತಲಾಕ್ ಮಸೂದೆ: ಸುಪ್ರೀಂ ಕೋರ್ಟಿನ ನೋಟೀಸು ಹುಟ್ಟುಹಾಕಿರುವ ಜಿಜ್ಞಾಸೆ; ಪರಿಹಾರವೋ, ಸಮಸ್ಯೆಯೋ?



ತ್ರಿವಳಿ ತಲಾಕ್ ಮಸೂದೆಯನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿ ಸುಪ್ರೀಮ್ ಕೋರ್ಟು ಕೇಂದ್ರ ಸರಕಾರಕ್ಕೆ ನೋಟೀಸು ಜಾರಿಗೊಳಿಸಿದೆ. ನಿಜವಾಗಿ, ಇಂಥದ್ದೊಂದು ನೋಟೀಸು ಅಚ್ಚರಿಯದ್ದೇನೂ ಅಲ್ಲ. ಮುಸ್ಲಿಮರ ಕುರಿತಂತೆ ಬಿಜೆಪಿಗಿರುವ ನಕಾರಾತ್ಮಕ ಧೋರಣೆಯನ್ನು ಈ ತ್ರಿವಳಿ ಮಸೂದೆ ಪ್ರತಿಬಿಂಬಿಸುತ್ತದೆ ಅನ್ನುವ ಆಕ್ಷೇಪ ಈ ಹಿಂದೆಯೇ ವ್ಯಕ್ತವಾಗಿತ್ತು. ಮಸೂದೆಯು ಮುಸ್ಲಿಮ್ ಮಹಿಳೆಯರ ಸಬಲೀಕರಣಕ್ಕಿಂತ ಅವರನ್ನು ಅತಂತ್ರ ಮತ್ತು ಪರತಂತ್ರಗೊಳಿಸುವ ಉದ್ದೇಶವನ್ನಷ್ಟೇ ಹೊಂದಿದಂತಿದೆ ಎಂಬ ಆರೋಪವೂ ಕೇಳಿ ಬಂದಿತ್ತು. ಇದೀಗ ಜಮೀಯತೆ ಉಲಮಾಯೆ ಹಿಂದ್ ಮತ್ತು ಸಮಸ್ತ ಕೇರಳ ಜಮೀಯತುಲ್ ಉಲಮಾ ಮತ್ತಿತರರು ಸಲ್ಲಿಸಿರುವ ಆಕ್ಷೇಪಾರ್ಹ ಅರ್ಜಿಗೆ ಸ್ಪಂದಿಸಿ ಸುಪ್ರೀಮ್ ಕೋರ್ಟು ಕೇಂದ್ರಕ್ಕೆ ಕಳುಹಿಸಿರುವ ನೋಟೀಸು- ತ್ರಿವಳಿ ತಲಾಕ್ ಮಸೂದೆಯ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದೆ. ಅಷ್ಟಕ್ಕೂ,
ಗಲಭೆ, ಅಪಹರಣ, ನಿರ್ಲಕ್ಷ್ಯದಿಂದಾದ ಸಾವು, ದ್ವಿಪತ್ನಿತ್ವ-ಪತಿತ್ವ, ಲಂಚ, ಆಹಾರದಲ್ಲಿ ಕಲಬೆರಕೆ ಇತ್ಯಾದಿ ಇತ್ಯಾದಿಗಳಿಗೆ ವಿಧಿಸುವ ಶಿಕ್ಷೆಗಿಂತಲೂ ಹೆಚ್ಚಿನ ಶಿಕ್ಷೆಯನ್ನು ತ್ರಿವಳಿ ತಲಾಕ್ ಹೇಳಿದವರಿಗೆ ನೀಡಲು ಕೇಂದ್ರ ಸರಕಾರ ಮುಂದಾಗಿರುವುದು ಏನನ್ನು ಸೂಚಿಸುತ್ತದೆ? ತ್ರಿವಳಿ ತಲಾಕ್ ಹೇಳಿದವರನ್ನು ಮೂರು ವರ್ಷಗಳ ಕಾಲ ಜೈಲಿಗೆ ಕಳುಹಿಸುವುದರಿಂದ ತಲಾಕ್‍ಗೊಳಗಾದ ಪತ್ನಿಗೆ ಸಿಗುವ ಲಾಭ ಏನು? ಈತ ಜೈಲಲ್ಲಿರುವ ಸಮಯದಲ್ಲಿ ಆಕೆಯ ಕೌಟುಂಬಿಕ ಸ್ಥಿತಿಗತಿಯೇನು? ಆಕೆಯ ಮತ್ತು ಮಕ್ಕಳ ಜೀವನೋಪಾಯಕ್ಕೆ ಬೇಕಾದುದನ್ನು ಜೈಲಲ್ಲಿರುವ ಆತ ಒದಗಿಸಲು ಸಾಧ್ಯವೇ? ಆತ ಜೈಲಿನಿಂದ ಮರಳಿ ಬಂದ ಬಳಿಕ ಆಕೆ ಪತ್ನಿಯಾಗಿಯೇ ಉಳಿಯುತ್ತಾಳೆಯೇ? ಈ ಮಸೂದೆಯಂತೆ ಆತ 3 ವರ್ಷ ಜೈಲಲ್ಲಿದ್ದು ಮರಳಿ ಊರಿಗೆ ಬಂದಾಗ ನಡೆಯಬಹುದಾದ ಬೆಳವಣಿಗೆಗಳೇನು? ಆತ ಆಕೆಯನ್ನು ಸ್ವೀಕರಿಸದೇ ಇದ್ದರೆ ಅದು ತಂದೊಡ್ಡುವ ಬಿಕ್ಕಟ್ಟುಗಳೇನು ಎಂಬೆಲ್ಲ ಪ್ರಶ್ನೆಗಳಿಗೆ ಈ ಮಸೂದೆ ಯಾವ ಉತ್ತರವನ್ನೂ ನೀಡುತ್ತಿಲ್ಲ. ತ್ರಿವಳಿ ತಲಾಕ್ ಹೇಳಿದವರನ್ನು ಜೈಲಿಗಟ್ಟುವ ಉದ್ದೇಶವನ್ನಷ್ಟೇ ಹೊಂದಿರುವ ಮತ್ತು ಆನಂತರದ ಬೆಳವಣಿಗೆಗಳಿಗೆ ಯಾವ ಪರಿಹಾರವನ್ನೂ ಹೇಳದ ಮಸೂದೆಯೊಂದು ಮಹಿಳಾ ಪರ ಎಂದು ಬಿಂಬಿಸಿಕೊಳ್ಳುವುದೇ ಅತ್ಯಂತ ಹಾಸ್ಯಾಸ್ಪದ. ತ್ರಿವಳಿ ತಲಾಕನ್ನು ರದ್ದುಗೊಳಿಸುವುದು ಮತ್ತು ಆ ಮೂಲಕ ಮಹಿಳೆಯರ ದಾಂಪತ್ಯ ಬದುಕಿಗೆ ಸುರಕ್ಷಿತತೆಯನ್ನು ಒದಗಿಸುವುದೇ ಕೇಂದ್ರ ಸರಕಾರದ ಉದ್ದೇಶವೆಂದಾದರೆ ಜೈಲು ಶಿಕ್ಷೆ ಅದಕ್ಕೆ ಪರಿಹಾರ ಅಲ್ಲ. ಅದು ಇಡೀ ಉದ್ದೇಶವನ್ನೇ ಹಾಳು ಮಾಡಿ ಬಿಡುತ್ತದೆ.  ಅಂದಹಾಗೆ,
ತಲಾಕ್ ತಲಾಕ್ ತಲಾಕ್ ಎಂದು ಒಂದೇ ಉಸಿರಿಗೆ ಮೂರು ಬಾರಿ ಹೇಳುವ ವಿಚ್ಛೇದನ ಕ್ರಮವನ್ನು ಸುಪ್ರೀಮ್ ಕೋರ್ಟು ರದ್ದುಪಡಿಸಿದೆಯೇ (Null and Void) ಹೊರತು ಅದನ್ನು ಅಪರಾಧ ಎಂದು ಹೇಳಿಲ್ಲ. ತಲಾಕ್ ಎಂದು ಮೂರು ಬಾರಿ ಒಂದೇ ಉಸಿರಿಗೆ ಹೇಳುವುದರಿಂದ ವಿಚ್ಛೇದನ ಆಗುವುದಿಲ್ಲ ಎಂಬುದು ಸುಪ್ರೀಮ್ ಕೋರ್ಟ್‍ನ ನಿಲುವು. ಅದು ಅಪರಾಧ ಅಲ್ಲ. ಆ ದಂಪತಿಗಳು ಹಾಗೆ ತಲಾಕ್ ಹೇಳಿದ ಬಳಿಕವೂ ಪತಿ-ಪತ್ನಿಯಾಗಿಯೇ ಉಳಿಯುತ್ತಾರೆ ಅನ್ನುವ ಧ್ವನಿ ಆ ತೀರ್ಪಿನಲ್ಲಿದೆ. ಆದರೆ ಕೇಂದ್ರ ಸರಕಾರವು ಜಾರಿಗೆ ತಂದ ತಲಾಕ್ ಮಸೂದೆಯಲ್ಲಿ ತಲಾಕ್ ತಲಾಕ್ ತಲಾಕ್ ಎಂದು ಹೇಳುವುದನ್ನೇ ಅಪರಾಧಗೊಳಿಸಿದೆ. ಇದಕ್ಕೆ ಕಾರಣವೇನು? ಇದು ಸುಪ್ರೀಮ್ ಕೋರ್ಟ್‍ನ ಉದ್ದೇಶವಲ್ಲ ಅನ್ನುವುದು ಅದರ ತೀರ್ಪಿನಲ್ಲಿ ಉಲ್ಲೇಖಿಸಲಾಗಿರುವ Null and Void ಎಂಬ ಪದ ಪ್ರಯೋಗವೇ ಸ್ಪಷ್ಟಪಡಿಸುತ್ತಿರುವಾಗ ಕೇಂದ್ರ ಸರಕಾರ ಆ ತೀರ್ಪನ್ನೂ ಮೀರಿ ಕಾನೂನು ರಚಿಸಿರುವುದು ಯಾಕೆ? ನಡೆಯದೇ ಇರುವ ವಿಚ್ಛೇದನಕ್ಕೆ ಜೈಲುಶಿಕ್ಷೆಯ ಅಗತ್ಯವಾದರೂ ಏನು? ಅಲ್ಲದೇ, ಜೈಲುಶಿಕ್ಷೆ ನೀಡುವುದರಿಂದ ಆ ತಲಾಕನ್ನು ಸಿಂಧುಗೊಳಿಸಿದಂತೆ ಆಗುವುದಿಲ್ಲವೇ? ಇದೊಂದು ರೀತಿಯ ದ್ವಂದ್ವ. ಸ್ಪಷ್ಟತೆಯಿಲ್ಲದ ಮಸೂದೆ. ಹಾಗಂತ,
ತ್ರಿವಳಿ ತಲಾಕ್ ಸಮರ್ಥನೀಯ ಎಂದಲ್ಲ. ದಾಂಪತ್ಯ ಸಂಬಂಧವನ್ನು ಒಂದೇ ಉಸಿರಿನ ಹೇಳಿಕೆಯೊಂದು ಮುರಿದು ಬಿಡುವುದು ಸಾಮಾಜಿಕ ಸೌಖ್ಯವನ್ನು ಪ್ರತಿಬಿಂಬಿಸುವುದೂ ಇಲ್ಲ. ಹೆಣ್ಣು ಮತ್ತು ಗಂಡು ದಂಪತಿಗಳಾಗಿ ಮಾರ್ಪಡುವುದರ ಹಿಂದೆ ಉಭಯ ಕುಟುಂಬಗಳ ಶ್ರಮ ಇದೆ. ಸಮಾಲೋಚನೆಯಿದೆ. ಸಮಯದ ವ್ಯಯ ಇದೆ. ಸಂಪತ್ತಿನ ಖರ್ಚು ಇದೆ. ಇಷ್ಟುದ್ದದ ಪ್ರಕ್ರಿಯೆಗೆ ಕಾರಣ ಏನೆಂದರೆ, ಪತಿ-ಪತ್ನಿಯಾಗಲಿರುವ ಯುವಕ-ಯುವತಿಯ ದಾಂಪತ್ಯ ಬದುಕು ಸುಗಮವಾಗಿ ಸಾಗಬೇಕು ಎಂಬುದಾಗಿದೆ. ತ್ರಿವಳಿ ತಲಾಕ್ ಈ ಉದ್ದೇಶವನ್ನು ಪೂರ್ತಿಗೊಳಿಸುವುದಿಲ್ಲ. ಹೆಣ್ಣು ಮತ್ತು ಗಂಡು ರಾತೋರಾತ್ರಿ ತಮ್ಮನ್ನು ದಂಪತಿಗಳು ಎಂದು ದಿಢೀರ್ ಆಗಿ ಘೋಷಿಸುವುದನ್ನು ಸಮಾಜ ಹೇಗೆ ಸಹಜವಾಗಿ ಸ್ವೀಕರಿಸುವುದಿಲ್ಲವೋ ಹಾಗೆಯೇ ಈ ತ್ರಿವಳಿ ತಲಾಕ್ ಕೂಡ. ಇದು ಸಾಮಾಜಿಕ ಮೌಲ್ಯಕ್ಕೆ ವಿರುದ್ಧ. ಆ ಹೆಣ್ಣು ಮತ್ತು ಗಂಡನ್ನು ಪತಿ-ಪತ್ನಿಯಾಗಿಸುವುದಕ್ಕೆ ಯಾರೆಲ್ಲ ಶ್ರಮಿಸಿದ್ದಾರೋ, ಏನೆಲ್ಲ ಖರ್ಚು ಮಾಡಿದ್ದಾರೋ ಮತ್ತು ಎಷ್ಟು ಸಮಯವನ್ನು ವ್ಯಯಿಸಿದ್ದಾರೋ ಆ ಎಲ್ಲವನ್ನೂ ಈ ಬಗೆಯ ವಿಚ್ಛೇದನ ಅವಮಾನಿಸುತ್ತದೆ. ಹೆಣ್ಣು ಮತ್ತು ಗಂಡಿನ ನಡುವೆ ದಾಂಪತ್ಯ ಸಂಬಂಧವನ್ನು ಕುದುರಿಸುವುದಕ್ಕೆ ಹೇಗೆ ಕುಟುಂಬಿಕರ ನಡುವೆ ಸಮಾಲೋಚನೆ ನಡೆಸಲಾಗಿದೆಯೋ ಅದೇ ರೂಪದಲ್ಲಿ ವಿಚ್ಛೇದನಕ್ಕೂ ಎರಡು ಕುಟುಂಬಗಳ ನಡುವೆ ಸಮಾಲೋಚನೆ, ಅವಲೋಕನ, ಮಾತುಕತೆಗಳು ನಡೆಯಬೇಕು ಎಂಬುದು ಸಹಜವಾದ ಬೇಡಿಕೆ. ಇಸ್ಲಾಮ್ ಇದನ್ನೇ ಹೇಳುತ್ತದೆ. ತ್ರಿವಳಿ ತಲಾಕ್ ಈ ಪ್ರಕೃತಿ ಸಹಜ ಬೇಡಿಕೆಯನ್ನು ಪೂರೈಸುವುದಿಲ್ಲ. ಸುಪ್ರೀಮ್ ಕೋರ್ಟು ತ್ರಿವಳಿ ತಲಾಕನ್ನು ಅಮಾನ್ಯಗೊಳಿಸುವುದರ ಹಿಂದೆ ಈ ಉದ್ದೇಶವೂ ಇರಬಹುದು. ಆದರೆ, ಈ ತಲಾಕ್ ಕ್ರಮವನ್ನೇ ಅಪರಾಧಗೊಳಿಸಿ ಬಿಡುವುದೆಂದರೆ, ಪರೋಕ್ಷವಾಗಿ ಆ ತಲಾಕ್ ಕ್ರಮವನ್ನೇ ಸಿಂಧುಗೊಳಿಸಿದಂತೆ. ಇದು ತಲಾಕ್‍ಗೊಳಗಾದ ಮಹಿಳೆಯರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಬಹುದೇ ಹೊರತು ಆಕೆಯನ್ನು ಸಬಲಗೊಳಿಸಲಾರದು. ಅದಕ್ಕಿಂತ ತ್ರಿವಳಿ ತಲಾಕ್ ಪ್ರಕರಣಗಳನ್ನು ಇತ್ಯರ್ಥಪಡಿಸುವುದಕ್ಕೆ ಸರಕಾರ ಮುಸ್ಲಿಮ್ ಸಮುದಾಯದ ಒಳಗಡೆಯೇ ಸೂಕ್ತ ಏರ್ಪಾಡುಗಳನ್ನು ಮಾಡಬಹುದಿತ್ತು. ಮುಸ್ಲಿಮ್ ಸಮುದಾಯವನ್ನು ಪ್ರತಿನಿಧಿಸುವ ಮುಸ್ಲಿಮ್ ಪರ್ಸನಲ್ ಲಾ ಬೋರ್ಡ್ ಮತ್ತು ಇನ್ನಿತರ ಪ್ರಮುಖ ಮುಸ್ಲಿಮ್ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು, ತ್ರಿವಳಿ ತಲಾಕ್ ಇತ್ಯರ್ಥ ಮಂಡಳಿಗಳನ್ನು ರೂಪಿಸುವುದಕ್ಕೆ ಅವುಗಳಿಗೆ ಹೊಣೆಗಾರಿಕೆಯನ್ನು ವಹಿಸಿಕೊಟ್ಟು, ಅದಕ್ಕೆ ಕಾನೂನು ಮಾನ್ಯತೆಯೂ ಸೇರಿದಂತೆ ವಿವಿಧ ಅಗತ್ಯಗಳ ಬಗ್ಗೆ ಪರಾಮರ್ಶೆ ನಡೆಸಬಹುದಿತ್ತು. ತ್ರಿವಳಿ ತಲಾಕನ್ನು ಅಸಿಂಧು ಎಂದು ಮಾನ್ಯ ಮಾಡುವುದರ ಜೊತೆಜೊತೆಗೇ ಆ ತಲಾಕನ್ನು ಸಿಂಧುಗೊಳಿಸುವ ಮಾರ್ಗೋಪಾಯಗಳನ್ನು ಕಂಡುಕೊಳ್ಳುವಂತೆ ಮತ್ತು ಆ ದಂಪತಿಗಳು ವಿಚ್ಛೇದಿತರಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಇತ್ಯರ್ಥ ಮಂಡಳಿಗೆ ವಹಿಸಿಕೊಡಬಹುದಿತ್ತು. ತ್ರಿವಳಿ ತಲಾಕ್‍ನ ಬಗ್ಗೆ ಮುಸ್ಲಿಮ್ ಸಮುದಾಯದಲ್ಲಿ ಜಾಗೃತಿ ಮೂಡಿಸುವುದಕ್ಕೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬಹುದಿತ್ತು. ಬಹುಮುಖ್ಯವಾಗಿ ಮುಸ್ಲಿಮ್ ಸಂಘಟನೆಗಳು ಈ ಬಗ್ಗೆ ರಾಷ್ಟ್ರವ್ಯಾಪಿ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಒತ್ತಡ ಹೇರುವುದು ಮತ್ತು ಅದಕ್ಕೆ ಪೂರಕವಾಗಿ ಧನಸಹಾಯ ಮಾಡುವುದಕ್ಕೆ ಕ್ರಮ ಕೈಗೊಳ್ಳಬಹುದಿತ್ತು. ಮಸೀದಿಗಳನ್ನು ಇದಕ್ಕಾಗಿ ಬಳಸಿಕೊಳ್ಳುವಂತೆ ಒತ್ತಾಯಪಡಿಸಬಹುದಿತ್ತು. ಮುಸ್ಲಿಮ್ ಸಮುದಾಯದೊಳಗೆ ಪ್ರಾದೇಶಿಕವಾಗಿ ಪ್ರಭಾವಿಯಾಗಿರುವ ಅಸಂಖ್ಯ ಸಂಘ-ಸಂಸ್ಥೆಗಳಿವೆ. ಅವುಗಳನ್ನೆಲ್ಲ ಈ ಕಾಯಕದಲ್ಲಿ ಬಳಸಿಕೊಂಡು ತ್ರಿವಳಿ ತಲಾಕ್ ವಿರೋಧಿ ಅಭಿಯಾನ ಮತ್ತು ಜನಜಾಗೃತಿ ಸಭೆಗಳನ್ನು ನಡೆಸಬಹುದಿತ್ತು. ಪ್ರಜೆಗಳ ಕ್ಷೇಮವೇ ಸರಕಾರದ ಅಂತಿಮ ಉದ್ದೇಶವೆಂದಾದರೆ ಇವೆಲ್ಲ ಅಸಾಧ್ಯವಲ್ಲ. ಅಂದಹಾಗೆ,
ಒಂದು ತಪ್ಪಾದ ಕ್ರಮವನ್ನು ಅದಕ್ಕಿಂತಲೂ ದೊಡ್ಡ ತಪ್ಪಿನ ಮೂಲಕ ಎದುರಿಸುವುದು ಕ್ರೌರ್ಯವೇ ಹೊರತು ಮಾನವೀಯವಲ್ಲ. ತ್ರಿವಳಿ ತಲಾಕನ್ನು ಸುಪ್ರೀಮ್ ಕೋರ್ಟು ಅಪರಾಧವೆನ್ನದೇ ಅಮಾನ್ಯಗೊಳಿಸಿರುವುದನ್ನು ಈ ಹಿನ್ನೆಲೆಯಲ್ಲಿಯೇ ನಾವು ನೋಡಬೇಕು ಮತ್ತು ಅವಲೋಕಿಸಬೇಕು. ಅದು ತಪ್ಪಾದ ಆಚರಣೆಯನ್ನು ಸರಿಪಡಿಸುವ ಉದ್ದೇಶವನ್ನು ಹೊಂದಿದ್ದರೆ ಕೇಂದ್ರದ ತಲಾಕ್ ಮಸೂದೆಯು ಅದನ್ನು ಮತ್ತಷ್ಟು ಬಿಗಡಾಯಿಸುವ ಉದ್ದೇಶವನ್ನಷ್ಟೇ ಹೊಂದಿದಂತಿದೆ. ಈ ಮಸೂದೆಯು ತ್ರಿವಳಿ ತಲಾಕ್‍ಗೆ ಪರಿಹಾರ ಅಲ್ಲ, ಮಸೂದೆಯೇ ಒಂದು ಸಮಸ್ಯೆ.

ಕುಂಞಿ ಅಹ್ಮದ್ ಎಂಬ ತಹಶೀಲ್ದಾರ ಮತ್ತು ಸಂವೇದನಾಶೀಲ ಮಾಧ್ಯಮ



ಸಂವಾದನಾಶೀಲ ಪತ್ರಿಕೋದ್ಯಮ ಅಂದರೆ ಏನು ಅನ್ನುವ ಪ್ರಶ್ನೆಗೆ ಉತ್ತರ - ಮೀನಾಕ್ಷಿ. ಇವತ್ತು ಮೀನಾಕ್ಷಿಯವರ  ಕಣ್ಣಿನಲ್ಲಿ ಭರವಸೆ ತುಂಬಿದ್ದರೆ ಅದರ ದೊಡ್ಡದೊಂದು ಪಾಲು ಪತ್ರಿಕೆಗಳಿಗೆ ಸಲ್ಲಬೇಕು. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ತಾಲೂಕಿನ ಪಂಜ ಗ್ರಾಮದ ಪಲ್ಲೋಡಿ ಎಂಬಲ್ಲಿ ಶೆಡ್‍ನಲ್ಲಿ ಬದುಕುತ್ತಿದ್ದ ಮೀನಾಕ್ಷಿಗೆ ಮನೆ ಇರಲಿಲ್ಲ. ಅಲ್ಲದೇ ಅವರು ಅಂಗವಿಕಲೆ. ಇಬ್ಬರು ಮಕ್ಕಳೂ ಇದ್ದಾರೆ. ಸ್ವಂತ ಮನೆಯಿಲ್ಲದ, ಅಂಗವಿಕಲೆಯಾಗಿರುವ ಮತ್ತು ಇಬ್ಬರು ಪುಟ್ಟ ಮಕ್ಕಳನ್ನೂ ಹೊಂದಿರುವ ಮಹಿಳೆಯೊಬ್ಬರು ಇವತ್ತಿನ ಸಾಮಾಜಿಕ ಪರಿಸ್ಥಿತಿಯಲ್ಲಿ ದಿನದೂಡುವುದು ಸುಲಭ ಅಲ್ಲ. ಸುರಕ್ಷಿತತೆಯ ಸವಾಲು ಒಂದು ಕಡೆಯಾದರೆ, ಹೊಟ್ಟೆಪಾಡು ಇನ್ನೊಂದು ಕಡೆ. ಹಾಗಂತ,
ಸರಕಾರಿ ಸೌಲಭ್ಯಗಳು ಸಿಗಬೇಕೆಂದರೆ ದಾಖಲೆ ಪತ್ರಗಳು ಬೇಕು. ಶ್ರೀಮಂತರು ಪಡೆದಷ್ಟು ಸುಲಭವಾಗಿ ಬಡವರು ದಾಖಲೆ ಪತ್ರಗಳನ್ನು ಪಡೆದುಕೊಳ್ಳುವ ವಾತಾವರಣವೂ ಇಲ್ಲಿಲ್ಲ. ಶ್ರೀಮಂತರು ಇರುವಲ್ಲಿಗೆ ಓಡೋಡಿ ಕೊಂಡು ಬರುವ ದಾಖಲೆ ಪತ್ರಗಳು ಬಡವರು ಓಡೋಡಿಕೊಂಡು ಹೋದರೂ ಕೈಗೆ ಸಿಗುವುದು ಕಷ್ಟ. ಮೀನಾಕ್ಷಿಗೂ ಅದರ ಅನುಭವವಾಗಿದೆ. ಅವರು ವಾಸವಿದ್ದ ಶೆಡ್‍ನಿಂದ ಅಧಿಕಾರಿಗಳು ತೆರಿಗೆ ಸಂಗ್ರಹಿಸುತ್ತಿದ್ದರೂ ಹಕ್ಕು ಪತ್ರ ನೀಡಿರಲಿಲ್ಲ. ‘94 ಸಿ’ ಕೆಟಗರಿಯಡಿ ಅವರಿಗೆ ಹಕ್ಕು ಪತ್ರ ನೀಡುವ ಅವಕಾಶವಿದ್ದೂ ಅದನ್ನು ಅವರ ಪಾಲಿಗೆ ನಿರಾಕರಿಸುತ್ತಲೇ ಬರಲಾಗಿತ್ತು. ಮೀನಾಕ್ಷಿಗೆ ಕಾನೂನು ಕಟ್ಟಳೆಗಳ ಬಗ್ಗೆ ಅರಿವೂ ಇಲ್ಲ. ತನಗೆ ಹಕ್ಕುಪತ್ರ ನೀಡಿ ಎಂದು ಆಕೆ ಅರ್ಜಿ ಸಲ್ಲಿಸಿದ್ದರಾದರೂ ಅದನ್ನು ಮಾನ್ಯ ಮಾಡಲಾಗಿರಲಿಲ್ಲ. ಪಕ್ಕದ ಗುತ್ತಿಗಾರಿನ ಹೊಟೇಲೊಂದರಲ್ಲಿ ಕೂಲಿ ಮಾಡಿಕೊಂಡು ಮತ್ತು ಇಬ್ಬರು ಮಕ್ಕಳನ್ನು ಓದಿಸಿಕೊಂಡು ಅಸಹಾಯಕ ಸ್ಥಿತಿಯಲ್ಲಿ ಬದುಕುತ್ತಿದ್ದ ಅವರು ಮಾಧ್ಯಮದ ಕಣ್ಣಿಗೆ ಬಿದ್ದಿದ್ದಾರೆ. ಮೀನಾಕ್ಷಿಯ ಬದುಕನ್ನು ಮಾಧ್ಯಮದ ಮಂದಿ ಸುದ್ದಿ ಮಾಡಿದ್ದಾರೆ. ಈ ಸುದ್ದಿಯನ್ನು ಓದಿದ ಸುಳ್ಯದ ತಹಶೀಲ್ದಾರರಾದ ಕುಂಞಿ ಅಹ್ಮದ್‍ರು ತಕ್ಷಣ ಸ್ಪಂದಿಸಿದ್ದಾರೆ. ಪಂಜ ಗ್ರಾಮದ ಕಂದಾಯ ಇಲಾಖೆಯ ನಿರೀಕ್ಷಕರನ್ನು, ಗ್ರಾಮ ಲೆಕ್ಕಿಗ, ಗ್ರಾಮ ಕರಣಿಕ ಮತ್ತು ನಾಡ ಕಚೇರಿಯ ಅಧಿಕಾರಿಗಳನ್ನು ಸ್ಥಳ ಪರಿಶೀಲನೆಗೆ ಕಳುಹಿಸಿ ವರದಿ ತರಿಸಿಕೊಂಡಿದ್ದಾರೆ. ‘94 ಸಿ’ ಕೆಟಗರಿಯ ಅಡಿಯಲ್ಲಿ ಮೀನಾಕ್ಷಿಗೆ ನಿವೇಶನದ ಹಕ್ಕು ಪತ್ರ ನೀಡಲು ಮುಂದಾಗಿದ್ದಾರೆ.
ಸಾಮಾನ್ಯವಾಗಿ, ರಾಜಕೀಯ ಸುದ್ದಿಗಳಿಗೆ ಕೊಡುವಷ್ಟು ಆದ್ಯತೆಯನ್ನು ಮಾಧ್ಯಮಗಳು ಜನಸಾಮಾನ್ಯರ ಬವಣೆಗಳಿಗೆ ಕೊಡುವುದು ಕಡಿಮೆ. ಪ್ರವಾಹ, ಭೂಕಂಪ, ಭೀಕರ ಅಪಘಾತ, ಸಾಂಕ್ರಾಮಿಕ ರೋಗಗಳು ಇತ್ಯಾದಿ ಅಪರೂಪದ ಸನ್ನಿವೇಶಗಳಲ್ಲಿ ಮಾತ್ರ ಜನಸಾಮಾನ್ಯರು ಪತ್ರಿಕೆಗಳ ಮುಖಪುಟದಲ್ಲಿ ಬರುತ್ತಾರೆಯೇ ಹೊರತು ಉಳಿದಂತೆ ಅವರು ಒಳಪುಟದ ಎಲ್ಲೋ ಮೂಲೆಯಲ್ಲಿ ಅಥವಾ ಪುಟಗಳಲ್ಲಿ ಕಾಣಿಸಿಕೊಳ್ಳದೆಯೇ ತಮ್ಮ ಪಾಡಿಗೆ ಬದುಕುತ್ತಿರುತ್ತಾರೆ. ಅವರು ಸಂಪಾದಕೀಯ ವಸ್ತು ಆಗುವುದಂತೂ ಬಲು ಅಪರೂಪ. ನಿಜವಾಗಿ, ಜನಪ್ರತಿನಿಧಿಗಳೆಂಬ ನೆಲೆಯಲ್ಲಿ ರಾಜಕಾರಣಿಗಳು ಪತ್ರಿಕೆಗಳ ಮುಖಪುಟಕ್ಕೆ ಎಷ್ಟು ಅರ್ಹರೋ ಜನಪ್ರತಿನಿಧಿಗಳಿಂದ ನಿರ್ಲಕ್ಷ್ಯಕ್ಕೊಳಗಾದವರೆಂಬ ನೆಲೆಯಲ್ಲಿ ಜನಸಾಮಾನ್ಯರೂ ಅಷ್ಟೇ ಅರ್ಹ. ಜನರ ಪ್ರಾತಿನಿಧ್ಯವನ್ನು ರಾಜಕಾರಣಿ ಸರಿಯಾಗಿ ನಿಭಾಯಿಸದಿದ್ದಾಗ ಅದನ್ನು ಮುಖಪುಟದಲ್ಲಿಟ್ಟು ಪ್ರತಿನಿಧಿಯಲ್ಲಿ ಪ್ರಶ್ನಿಸಬೇಕಾದದ್ದು ಮಾಧ್ಯಮದ ಜವಾಬ್ದಾರಿ. ಮೀನಾಕ್ಷಿ ಇದಕ್ಕೊಂದು ಉದಾಹರಣೆ. ಆಕೆ ಜನಪ್ರತಿನಿಧಿಯ ನಿರ್ಲಕ್ಷ್ಯದ ಸಂಕೇತ. ವ್ಯವಸ್ಥೆ ಸೃಷ್ಟಿಸಿದ ಸಂತ್ರಸ್ತೆ. ಇಂಥ ಸಂದರ್ಭಗಳಲ್ಲಿ ಜನಪ್ರತಿನಿಧಿ ಒಳಪುಟಕ್ಕೂ ಜನಸಾಮಾನ್ಯರು ಮುಖಪುಟಕ್ಕೂ ಬರಬೇಕು. ಜನಪ್ರತಿನಿಧಿಯನ್ನು ಪ್ರಶ್ನಿಸಬೇಕು. ಶೆಡ್‍ನಲ್ಲಿ ಬದುಕುವ ಮೀನಾಕ್ಷಿಯಿಂದ ತೆರಿಗೆ ಸಂಗ್ರಹಿಸುವ ವ್ಯವಸ್ಥೆಗೆ ಆಕೆಗೊಂದು ನಿವೇಶನ ಹಕ್ಕು ಪತ್ರ ನೀಡಲು ಯಾವ ಕಾಯ್ದೆ-ಕಟ್ಟಳೆ ಅಡ್ಡ ಬರುತ್ತದೆ ಅನ್ನುವ ಪ್ರಶ್ನೆಯನ್ನು ಮುನ್ನೆಲೆಗೆ ತರಬೇಕು. ಸಂವೇದನಾಶೀಲ ಪತ್ರಿಕೋದ್ಯಮದ ಅಗತ್ಯ ಇದು.
ಮಾಧ್ಯಮ ಜಗತ್ತು ಇವತ್ತು ಹಲವು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲಿ ವಿಶ್ವಾಸಾರ್ಹತೆಯ ಸವಾಲೂ ಒಂದು. ಮಾಧ್ಯಮಗಳು ‘ಜನಪ್ರಿಯ ಸುದ್ದಿ’ಯ ಹಿಂದೆ ಬಿದ್ದಿವೆ ಎಂಬ ಆರೋಪವೂ ಒಂದು. ‘ಜವಾಬ್ದಾರಿರಹಿತ ಜನರ ಬಳಗ’ ಎಂಬ ಆರೋಪವನ್ನೂ ಮಾಧ್ಯಮದ ಮೇಲೆ ಇವತ್ತು ಹೊರಿಸಲಾಗುತ್ತಿದೆ. ಜನಸಾಮಾನ್ಯರ ಧ್ವನಿಯಾಗುವುದಕ್ಕಿಂತ ಆಡಳಿತಗಾರರ ಪರ ನಿಲುವನ್ನು ತಳೆಯುತ್ತಿದೆ ಅನ್ನುವ ಆರೋಪವೂ ಮಾಧ್ಯಮದವರ ಮೇಲಿದೆ. ಪತ್ರಿಕೆಗಳ ಮತ್ತು ಟಿ.ವಿ. ಚಾನೆಲ್‍ಗಳ ದೊಡ್ಡ ಗ್ರಾಹಕರು ಯಾರೆಂದರೆ, ಜನಸಾಮಾನ್ಯರು. ಅವರಿಲ್ಲದೆ ಪತ್ರಿಕೆಗಳೂ ಇಲ್ಲ, ಚಾನೆಲ್‍ಗಳೂ ಇಲ್ಲ. ಪತ್ರಿಕೆಗಳನ್ನು ಜಾಹೀರಾತುಗಳು ಸಾಕುತ್ತಿರಬಹುದು ಮತ್ತು ಜಾಹೀರಾತಿನ ಹೊರತಾಗಿ ಪತ್ರಿಕೆ ಅಥವಾ ಚಾನೆಲ್‍ಗಳನ್ನು ನಡೆಸುವುದೂ ಕಷ್ಟಕರವಾಗಿರಬಹುದು. ಒಂದು ಪತ್ರಿಕೆಯನ್ನು ಖರೀದಿಸುವುದಕ್ಕೆ ಓದುಗನೋರ್ವ ಖರ್ಚು ಮಾಡುವ ಮೊತ್ತದ ಮೂರು ಪಟ್ಟು ಹೆಚ್ಚು ಖರ್ಚು ಪತ್ರಿಕೆಗಳ ಮುದ್ರಣಕ್ಕೆ ತಗಲುತ್ತಿರಬಹುದು. ಆದರೆ ಇವಾವುವೂ ಮಾಧ್ಯಮ ರಂಗವು ಆಡಳಿತ ಪP್ಷÀದ ತುತ್ತೂರಿಯಾಗುವುದಕ್ಕೆ ಮತ್ತು ಜನಸಾಮಾನ್ಯರನ್ನು ಕಡೆಗಣಿಸುವುದಕ್ಕೆ ಸಮರ್ಥನೆಗಳಾಗುವುದಿಲ್ಲ. ದುರಂತ ಏನೆಂದರೆ,
ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಾದ ಮತ್ತು ಪ್ರಶ್ನಿಸುವ ಧ್ವನಿಯಲ್ಲಿ ಮಾತಾಡಬೇಕಾದ ಮಾಧ್ಯಮ ಕ್ಷೇತ್ರವು ಇವತ್ತು ನಿಧಾನಕ್ಕೆ ತನ್ನ ಜವಾಬ್ದಾರಿಯಿಂದಲೇ ನುಣುಚಿಕೊಳ್ಳುತ್ತಿರುವುದು. ಎಣಿಕೆಯ ಪತ್ರಿಕೆಗಳು ಮತ್ತು ಚಾನೆಲ್‍ಗಳನ್ನು ಬಿಟ್ಟರೆ ಹೆಚ್ಚಿನವು ಆಡಳಿತ ಪP್ಷÀದ ಕರಪತ್ರವಾಗಿ ಮತ್ತು ಧ್ವನಿಯಾಗಿ ಮಾರ್ಪಟ್ಟು ಬಿಟ್ಟಿವೆ. ಇಂಥ ಸ್ಥಿತಿಯಲ್ಲಿ, ಮೀನಾಕ್ಷಿಯಂತಹವರು ಸುದ್ದಿ ಕೇಂದ್ರವಾಗುವುದು ಸುಲಭ ಅಲ್ಲ. ಮಾತ್ರವಲ್ಲ, ಮೀನಾಕ್ಷಿ ಈ ಪಟ್ಟಿಯಲ್ಲಿರುವ ಏಕೈಕ ವ್ಯಕ್ತಿಯೂ ಅಲ್ಲ. ಈ ದೇಶದ ಪ್ರತಿ ಹಳ್ಳಿ, ಗ್ರಾಮ, ಪಟ್ಟಣ, ಬೃಹತ್ ನಗರಗಳಲ್ಲಿ ಇಂಥ ಕೋಟ್ಯಾಂತರ ಮಂದಿ ಇದ್ದಾರೆ. ಅವರೆಲ್ಲರ ಅಪರಾಧ ಏನೆಂದರೆ, ಅವರು ಬಡವರಾಗಿರುವುದು. ಮಾಧ್ಯಮದ ಗಮನ ಸೆಳೆಯಬಲ್ಲ ಯಾವುದೂ ಅವರಿಗೆ ಗೊತ್ತಿಲ್ಲದಿರುವುದು. ಜನಪ್ರತಿನಿಧಿಯ ಬಳಿಗೆ ತೆರಳಬಲ್ಲ ಎಲ್ಲ ದಾರಿಗಳೂ ಅವರ ಪಾಲಿಗೆ ಮುಚ್ಚಿರುವುದು.
ಇವತ್ತಿನ ದಿನಗಳಲ್ಲಿ ಜವಾಬ್ದಾರಿಯುತ ಪತ್ರಿಕೋದ್ಯಮ ಅತೀ ಅಗತ್ಯವಾಗಿದೆ. ಅಂದಹಾಗೆ, ಮಾಧ್ಯಮವು ತನ್ನ ಜವಾಬ್ದಾರಿಯನ್ನು ಮರೆತರೆ ಮತ್ತು ಸಂವೇದನಾ ಶೂನ್ಯವಾದರೆ ಏನಾಗಬಹುದು ಅನ್ನುವುದಕ್ಕೆ ದ.ಕ. ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಜಾರಿಗೆಬೈಲಿನಲ್ಲಿರುವ (ಗೋವಿಂದೂರು) ಅಬ್ದುರ್ರವೂಫ್ ಮುಸ್ಲಿಯಾರ್ ಉತ್ತಮ ಉದಾಹರಣೆ. ‘ಪಾಕಿಸ್ತಾನಕ್ಕೆ ಸೆಟಲೈಟ್ ಕರೆ ಮಾಡಿದ ಉಗ್ರ’ ಎಂಬ ಧಾಟಿಯಲ್ಲಿ ಸುದ್ದಿ ಸ್ಫೋಟಿಸಿ ಆ ವ್ಯಕ್ತಿಯನ್ನು ಮಾನಸಿಕವಾಗಿ ಹಿಂಸಿಸಿದ್ದು ಜನಸಾಮಾನ್ಯರಲ್ಲ, ಮಾಧ್ಯಮ ರಂಗ. ಒಂದುರೀತಿಯಲ್ಲಿ, ಮೀನಾಕ್ಷಿ ಮತ್ತು ಅಬ್ದುರ್ರವೂಫ್ ಮುಸ್ಲಿಯಾರ್- ಇವರಿಬ್ಬರೂ ಸಂವೇದನಾಶೀಲ ಪತ್ರಿಕೋದ್ಯಮ ಮತ್ತು ಬೇಜವಾಬ್ದಾರಿಯುತ ಪತ್ರಿಕೋದ್ಯಮ ಇವೆರಡರ ಉದಾಹರಣೆಗಳೂ ಹೌದು. ಮಾಧ್ಯಮ ರಂಗದ ಮೇಲಿನ ಭರವಸೆಯನ್ನು ಮೀನಾಕ್ಷಿ ಇನ್ನಷ್ಟು ಬಲಗೊಳಿಸಿದರೆ, ಮಾಧ್ಯಮದ ಬೇಜವಾಬ್ದಾರಿತನಕ್ಕೆ ರವೂಫ್ ಮುಸ್ಲಿಯಾರ್ ಪ್ರಕರಣವು ಮತ್ತಷ್ಟು ಪುಷ್ಠಿಯನ್ನು ಒದಗಿಸಿದೆ. ಆದ್ದರಿಂದ,
ಅಬ್ದುರ್ರವೂಫ್ ಮುಸ್ಲಿಯಾರ್‍ರಂತಹ ಸಂತ್ರಸ್ತರು ಮತ್ತಷ್ಟು ತಯಾರಾಗದಂತೆ ಮತ್ತು ಮೀನಾಕ್ಷಿಯಂತಹವರು ನಿರ್ಲಕ್ಷ್ಯಕ್ಕೆ ಒಳಗಾಗದಂತೆ ನೋಡಿಕೊಳ್ಳುವ ಪ್ರತಿಜ್ಞೆಯನ್ನು ಮಾಧ್ಯಮ ರಂಗವು ಕೈಗೊಳ್ಳಬೇಕು. ಪ್ರಜಾತಂತ್ರದ ನಾಲ್ಕನೇ ಕಂಭವಾದ ಮಾಧ್ಯಮ ರಂಗವು ನಿಜವಾಗಿ ಅತ್ಯಂತ ಬಲಶಾಲಿ. ಪ್ರಭಾವಿ. ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ತರಬಲ್ಲಷ್ಟು ಸಮರ್ಥ. ತನ್ನ ಸಾಮರ್ಥ್ಯವನ್ನು ಅರಿತುಕೊಂಡು ಅದನ್ನು ಶಕ್ತವಾಗಿ ಬಳಸಿಕೊಳ್ಳಲು ಮಾಧ್ಯಮ ರಂಗ ಸಿದ್ಧವಾದರೆ ಮೀನಾಕ್ಷಿಯಂತಹ ಅಸಂಖ್ಯ ಜನಸಾಮಾನ್ಯರ ಮುಖದಲ್ಲಿ ನಗು ಚಿಮ್ಮಬಹುದು. ಹಾಗೆಯೇ ಅಬ್ದುರ್ರವೂಫ್ ಮುಸ್ಲಿಯಾರ್ ರಂತಹ ಸಂತ್ರಸ್ತರ ಸೃಷ್ಟಿಯೂ ಆಗಲಾರದು. ಅಂದಹಾಗೆ,
ಕುಂಞಿ ಅಹ್ಮದ್‍ರಂತಹ ತಹಶೀಲ್ದಾರರ ಸಂಖ್ಯೆ ಇನ್ನಷ್ಟು ಹೆಚ್ಚಲಿ.