Tuesday 30 December 2014

ಸ್ಫೋಟಗೊಳ್ಳುವ ಬಾಂಬುಗಳು ಮತ್ತು ಕಾಡುವ ಅನುಮಾನಗಳು..

    ಸ್ಫೋಟಗಳು, ಸ್ಫೋಟಕಗಳು ಮತ್ತು ತನಿಖೆಗಳು ಈ ದೇಶಕ್ಕೆ ಹೊಸತಲ್ಲ. ಹಾಗೆಯೇ ಅವು ಉಳಿಸಿ ಹೋಗುವ ಅನುಮಾನಗಳೂ ಕಡಿಮೆಯದಲ್ಲ. 2008 ನವೆಂಬರ್ 26ರಂದು ನಡೆದ ಮುಂಬೈ ದಾಳಿ ಮತ್ತು 1995 ಡಿಸೆಂಬರ್ 17ರಂದು ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯಲ್ಲಿ ವಿಮಾನದ ಮೂಲಕ ಉದುರಿಸಲಾದ ಶಸ್ತ್ರಾಸ್ತ್ರಗಳ ಕುರಿತಂತೆ ಕಳೆದವಾರ ಕೆಲವು ಮಾಹಿತಿಗಳು ಬಿಡುಗಡೆಯಾದುವು. ಈ ಮಾಹಿತಿಗಳು ಎಷ್ಟು ಆಘಾತಕಾರಿಯಾಗಿವೆಯೆಂದರೆ, ಈ ದೇಶದಲ್ಲಿ ಈವರೆಗೆ ನಡೆದಿರುವ ಎಲ್ಲ ವಿಧ್ವಂಸಕ ಪ್ರಕರಣಗಳ ಬಗ್ಗೆಯೂ ಸಂದೇಹ ತಾಳುವಷ್ಟು. ಮುಂಬೈ ದಾಳಿಯ ಕುರಿತಂತೆ ಭಾರತ, ಬ್ರಿಟನ್ ಮತ್ತು ಅಮೇರಿಕದ ಗುಪ್ತಚರ ಸಂಸ್ಥೆಗಳ ಬಳಿ ಮೊದಲೇ ಸಾಕಷ್ಟು ಮಾಹಿತಿಗಳಿದ್ದುವು ಎಂದು ಕಳೆದವಾರ ಅಮೇರಿಕದ ನ್ಯೂಯಾರ್ಕ್ ಟೈಮ್ಸ್ ಬಹಿರಂಗಪಡಿಸಿದೆ. 2008ರ ಜನವರಿಯಲ್ಲಿಯೇ ಅಮೇರಿಕವು ಸಂಭಾವ್ಯ ಈ ದಾಳಿಯ ಬಗ್ಗೆ ಭಾರತವನ್ನು ಎಚ್ಚರಿಸಿದ್ದು, ಹೆಡ್ಲಿಯ ಪತ್ನಿಯ ಮೂಲಕ ಮಾಹಿತಿ ಪಡಕೊಂಡದ್ದು, ದಾಳಿಯ ರೂವಾರಿಗಳು ಕೆಲವು ವಸ್ತುಗಳನ್ನು ಅಮೇರಿಕದಿಂದ ಖರೀದಿಸಿದ್ದು.. ಸೇರಿದಂತೆ ಕೆಲವಾರು ಮಾಹಿತಿಗಳು ಮೊದಲೇ ಸೋರಿಕೆಯಾಗಿದ್ದುವು. ಆದರೂ ಮುಂಬೈ ದಾಳಿಯನ್ನು ತಡೆಗಟ್ಟಲಿಕ್ಕಾಗಲಿ, ಕರ್ಕರೆ, ಸಾಲಸ್ಕರ್‍ರ ಜೀವವನ್ನು ಉಳಿಸಿಕೊಳ್ಳುವುದಕ್ಕಾಗಲಿ ಭಾರತಕ್ಕೆ ಸಾಧ್ಯವಾಗಲಿಲ್ಲ. ಬಹುಶಃ ಅನುಮಾನಗಳು ಗಟ್ಟಿಗೊಳ್ಳುವುದೂ ಇಲ್ಲೇ. ಆ ದಾಳಿಯ ಹಿಂದೆ ವ್ಯವಸ್ಥಿತ ಷಡ್ಯಂತ್ರವೊಂದು ಕೆಲಸ ಮಾಡಿದೆಯೇ? ಆ ದಾಳಿಯ ಅಗತ್ಯ ಯಾರಿಗಿತ್ತು? ಅವರ ಉದ್ದೇಶ ಏನಾಗಿತ್ತು? ‘ಹೂ ಕಿಲ್ಲ್ ಡ್ ಕರ್ಕರೆ’ ಎಂಬ ತನ್ನ ಕೃತಿಯಲ್ಲಿ ಮಹಾರಾಷ್ಟ್ರದ ಮಾಜಿ ಪೊಲೀಸ್ ಮುಖ್ಯಸ್ಥ ಎಸ್.ಎಂ. ಮುಶ್ರಿಫ್ ವ್ಯಕ್ತಪಡಿಸಿದ ಅನುಮಾನಗಳೇ ನಿಜವೇ? ಕರ್ಕರೆ, ಸಾಲಸ್ಕರ್‍ಗಳನ್ನು ಹತ್ಯೆ ಮಾಡುವುದೇ ಆ ದಾಳಿಯ ಮುಖ್ಯ ಗುರಿಯಾಗಿತ್ತೇ.. ಬಹುಶಃ ಸಂದೇಹಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅದರಲ್ಲೂ ಪುರುಲಿಯಾ ಪ್ರಕರಣದ ಮುಖ್ಯ ಆರೋಪಿಗಳು ಕಳೆದ ವಾರ ಸಾಕ್ಷ್ಯ ಚಿತ್ರವೊಂದಕ್ಕೆ (ಡಾಕ್ಯುಮೆಂಟರಿ) ನೀಡಿದ ಹೇಳಿಕೆಗಳನ್ನು ಪರಿಗಣಿಸಿದರೆ, ಈ ಸಂದೇಹಗಳು ಇನ್ನಷ್ಟು ಬಲ ಪಡೆಯುತ್ತವೆ. ಪಶ್ಚಿಮ ಬಂಗಾಲದ ಪುರುಲಿಯಾ ಜಿಲ್ಲೆಯ ಜಲ್ದಾ, ಘಟಂಗಾ, ಬೆಲವಲು, ಮರವಲು ಗ್ರಾಮಗಳಲ್ಲಿ 1995 ಡಿ. 17ರ ರಾತ್ರಿ 300ಕ್ಕಿಂತಲೂ ಅಧಿಕ ಏ.ಕೆ. 47 ರೈಫಲ್‍ಗಳು ಮತ್ತು ಮಿಲಿಯನ್ ಸುತ್ತಿಗಾಗುವಷ್ಟು ಮದ್ದು ಗುಂಡುಗಳನ್ನು ವಿಮಾನದ ಮೂಲಕ ಉದುರಿಸಲಾಗಿತ್ತು. ಹಾಗೆ ಶಸ್ತ್ರಾಸ್ತ್ರಗಳನ್ನು ಉದುರಿಸಿದ ಅಂಟನೋವ್ ಎಂಬ ಹೆಸರಿನ ಆ ವಿಮಾನ ಹೊರಟೂ ಹೋಗಿತ್ತು. ಕೆಲವು ದಿನಗಳ ಬಳಿಕ ಅದೇ ವಿಮಾನ ಮರಳಿ ಬಂದಾಗ ಬಲವಂತದಿಂದ ಭೂಮಿಗೆ ಇಳಿಸಲಾಗಿತ್ತು. ಆಗ ಶಸ್ತ್ರಾಸ್ತ್ರ ಉದುರಿಸಿದ ಆರೋಪದಲ್ಲಿ ಇಂಗ್ಲೆಂಡಿನ ಶಸ್ತ್ರಾಸ್ತ್ರ ವ್ಯಾಪಾರಿ ಪೀಟರ್ ಬ್ಲೀಚ್ ಮತ್ತು ಲಾತ್ವಿಯಾ ದೇಶದ 5 ಮಂದಿಯನ್ನು ಬಂಧಿಸಲಾಗಿತ್ತು. ಆದರೆ ಮುಖ್ಯ ಆರೋಪಿ ಡೆನ್ಮಾರ್ಕ್‍ನ ಕಿಮ್ ಡೆವಿ  ವಿಮಾನ ನಿಲ್ದಾಣದಿಂದ ಕಣ್ಮರೆಯಾಗಿದ್ದ. ಪಶ್ಚಿಮ ಬಂಗಾಳದಲ್ಲಿ ಸಕ್ರಿಯರಾಗಿರುವ ಆನಂದ ಮಾರ್ಗಿಗಳ ಉಪಯೋಗಕ್ಕಾಗಿ ಆ ಶಸ್ತ್ರಾಸ್ತ್ರಗಳನ್ನು ಉದುರಿಸಲಾಗಿತ್ತು ಎಂದು 1997ರಲ್ಲಿ ಕೋರ್ಟು ಅಭಿಪ್ರಾಯಪಟ್ಟಿತು. ಮಾತ್ರವಲ್ಲ, ಆರೋಪಿಗಳಿಗೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಲಾಯಿತು. ಆದರೆ ಲಾತ್ವಿಯದ 5 ಮಂದಿಗೆ ರಷ್ಯವು ರಶ್ಯನ್ ಪೌರತ್ವವನ್ನು ನೀಡಿತಲ್ಲದೇ ಅವರ ಬಿಡುಗಡೆಗೆ ಭಾರತದ ಮೇಲೆ ಒತ್ತಡ ಹೇರಿತು. ಹೀಗೆ 2000ದಲ್ಲಿ ಅವರಿಗೆ ಕ್ಷಮಾದಾನ ನೀಡಲಾಯಿತು. 2004ರಲ್ಲಿ ಪೀಟರ್ ಬ್ಲೀಚ್‍ಗೆ ರಾಷ್ಟ್ರಪತಿಯವರು ಕ್ಷಮಾದಾನ ನೀಡಿದರು. ಇದರ ಹಿಂದೆ ಬ್ರಿಟನ್‍ನ ಒತ್ತಡ ಕೆಲಸ ಮಾಡಿತ್ತು. ಈ ನಡುವೆ ಕಿಮ್ ಡೆವಿಯ ಪತ್ತೆಗೆ ಇಂಟರ್‍ಪೋಲ್ ನೋಟೀಸನ್ನು ಜಾರಿಗೊಳಿಸಿದ್ದೂ ಮತ್ತು 2010 ಎಪ್ರಿಲ್ 9ರಂದು ಡೆನ್ಮಾರ್ಕ್ ಸರಕಾರ ಆತನನ್ನು ಪತ್ತೆ ಹಚ್ಚಿದ್ದೂ ನಡೆಯಿತಾದರೂ ಆತನನ್ನು ಭಾರತಕ್ಕೆ ಗಡೀಪಾರುಗೊಳಿಸಲು ಅದು ಒಪ್ಪಲಿಲ್ಲ. ಇದೀಗ ಆತನೇ ಇಡೀ ಪ್ರಕರಣವನ್ನು ಬಿಚ್ಚಿಟ್ಟಿದ್ದಾನೆ. ಪಶ್ಚಿಮ ಬಂಗಾಲದಲ್ಲಿ ದೀರ್ಘಕಾಲದಿಂದ ಆಡಳಿತ ನಡೆಸುತ್ತಿದ್ದ ಕಮ್ಯುನಿಸ್ಟ್ ಸರಕಾರವನ್ನು ಉರುಳಿಸುವುದಕ್ಕಾಗಿ ಭಾರತದ ಸರಕಾರ ಮತ್ತು ಭಾರತದ ಗುಪ್ತಚರ ಸಂಸ್ಥೆ (ರಾ) ಜಂಟಿಯಾಗಿ ಆ ಸಂಚನ್ನು ಹೆಣೆದಿತ್ತು ಎಂದು ಮಾತ್ರವಲ್ಲ, ತನ್ನನ್ನು ಸುರಕ್ಷಿತವಾಗಿ ಡೆನ್ಮಾರ್ಕ್‍ಗೆ ತಲುಪಿಸುವ ಭರವಸೆಯನ್ನೂ ನೀಡಲಾಗಿತ್ತು ಎಂದಾತ ಹೇಳಿದ್ದಾನೆ. ಪಶ್ಚಿಮ ಬಂಗಾಲದೊಂದಿಗೆ ಕಿಮ್ ಡೆವಿಗೆ ಮೊದಲೇ ನಂಟಿತ್ತು. ಅಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿ ಆತ ಭಾಗಿಯಾಗಿದ್ದ. ಆನಂದ ಮಾರ್ಗ ಸಂಘಟನೆಯ ಸದಸ್ಯನೂ ಆಗಿದ್ದ. ಆನಂದ ಮಾರ್ಗಿಗಳನ್ನು ಬಳಸಿ ಬಂಗಾಳದಲ್ಲಿ ಆಂತರಿಕ ಸಂಘರ್ಷಗಳನ್ನು ಹುಟ್ಟು ಹಾಕುವುದು ಮತ್ತು ಅದರ ನೆಪದಲ್ಲಿ ರಾಷ್ಟ್ರಪತಿ ಆಡಳಿತವನ್ನು ರಾಜ್ಯದ ಮೇಲೆ ಹೇರುವುದು ತನ್ನನ್ನು ಬಳಸಿಕೊಂಡವರ ಉದ್ದೇಶವಾಗಿತ್ತು ಎಂದೂ ಆತ ಹೇಳಿಕೊಂಡಿದ್ದಾನೆ. ವಿಶೇಷ ಏನೆಂದರೆ, ಈ ಶಸ್ತ್ರಾಸ್ತ್ರವಿದ್ದ ವಿಮಾನ ಭಾರತಕ್ಕೆ ಬಂದಾಗ ರಾಡರ್ ಸ್ಥಗಿತಗೊಂಡಿತ್ತು. ಒಂದು ರೀತಿಯಲ್ಲಿ, ಆ ಇಡೀ ಪ್ರಕರಣ ಹತ್ತಾರು ಅನುಮಾನಗಳನ್ನು ಉಳಿಸಿಕೊಂಡೇ ಇತಿಹಾಸದ ಪುಟಗಳನ್ನು ಸೇರಿಕೊಂಡಿದೆ. ಇವಷ್ಟೇ ಅಲ್ಲ, 2001 ಡಿ. 13ರಂದು ದೇಶದ ಪಾರ್ಲಿಮೆಂಟಿನ ಮೇಲೆ ನಡೆದ ದಾಳಿಯ ಕುರಿತಂತೆಯೂ ಕೆಲವಾರು ಸಂಶಯಗಳು ಈಗಲೂ ಉಳಿದುಕೊಂಡಿವೆ. ಪಾರ್ಲಿಮೆಂಟಿನಲ್ಲಿ ರಕ್ಷಣಾ ಹಗರಣದ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲೇ ಆ ದಾಳಿ ನಡೆದಿತ್ತು. ಅರುಂಧತಿ ರಾಯ್‍ರಂತಹವರು ಇಡೀ ಘಟನೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎತ್ತಿದ್ದರು. ಕಾಶ್ಮೀರದ ಶರಣಾಗತ ಹೋರಾಟಗಾರನಾಗಿದ್ದ ಅಫ್ಝಲ್ ಗುರುವನ್ನು ಆತನ ಅರಿವಿಗೆ ಬಾರದೆಯೇ ವ್ಯವಸ್ಥಿತವಾಗಿ ಆ ದಾಳಿಯಲ್ಲಿ ಬಳಸಿಕೊಳ್ಳಲಾಗಿತ್ತು ಎಂಬ ಮಾತುಗಳು ಆಗ ವ್ಯಕ್ತವಾಗಿದ್ದುವು. ಆತ ಕೊಟ್ಟ ಹೇಳಿಕೆಗಳು ಇಡೀ ಪ್ರಕರಣಕ್ಕೆ ಇನ್ನೊಂದು ಮುಖ ಇರಬಹುದಾದ ಸಾಧ್ಯತೆಗಳನ್ನು ವ್ಯಕ್ತಪಡಿಸಿತ್ತು.
 ನಿಜವಾಗಿ, ಈ ದೇಶದಲ್ಲಿ ನಡೆಯುವ ಸ್ಫೋಟಗಳು ಮತ್ತು ದಾಳಿಗಳ ಹಿಂದೆ ಹೊರಗೆ ಗೋಚರವಾಗುವುದಕ್ಕಿಂತ ಭಿನ್ನವಾದ ಕೆಲವು ಆಯಾಮಗಳಿರುತ್ತವೆ ಅನ್ನುವುದಕ್ಕೆ ಈ ಮೇಲಿನ ಮಾಹಿತಿಗಳೇ ಅತ್ಯುತ್ತಮ ಪುರಾವೆ. ಮಹಾರಾಷ್ಟ್ರದ ಮಾಲೆಗಾಂವ್‍ನ ಮಸೀದಿಯೊಂದರ ದಫನ ಭೂಮಿಯಲ್ಲಿ ಬಾಂಬ್ ಸ್ಫೋಟಗೊಂಡು 37 ಮಂದಿ ಸಾವಿಗೀಡಾದಾಗಲೂ ಅದನ್ನು ಮುಸ್ಲಿಮ್ ಭಯೋತ್ಪಾದನೆ ಎಂದೇ ಕರೆಯಲಾಗಿತ್ತು. ಸಂಜೋತಾ ಎಕ್ಸ್ ಪ್ರೆಸ್ ರೈಲು ಸಹಿತ ಇನ್ನಿತರ ಕೆಲವಾರು ಬಾಂಬ್ ಸ್ಫೋಟಗಳಿಗೂ ಮುಸ್ಲಿಮ್ ಭಯೋತ್ಪಾದನೆಯನ್ನೇ ಹೊಣೆ ಮಾಡಲಾಗಿತ್ತು. ಆದರೆ ಹೇಮಂತ್ ಕರ್ಕರೆಯವರ ನೇತೃತ್ವದಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್, ಪುರೋಹಿತ್, ಅಸೀಮಾನಂದ ಮುಂತಾದವರ ಬಂಧನದೊಂದಿಗೆ ಮುಸ್ಲಿಮ್ ಭಯೋತ್ಪಾದನೆಯ ಸತ್ಯಾಸತ್ಯತೆಗಳು ಸಮಾಜದಲ್ಲಿ ಚರ್ಚೆಗೊಳಗಾದುವು. ಮುಸ್ಲಿಮ್ ಭಯೋತ್ಪಾದನೆ ಎಂಬ ಪರಿಚಿತ ಹೆಸರಿನಲ್ಲಿ ಇನ್ನಾರೋ ಸ್ಫೋಟಗಳನ್ನು ಈ ದೇಶದಲ್ಲಿ ನಡೆಸುತ್ತಿರುವೆಂಬುದನ್ನು ಕರ್ಕರೆ ತಂಡ ಖಚಿತಪಡಿಸಿತ್ತು. ಬಹುಶಃ, ಭಯೋತ್ಪಾದನೆಯ ಕುರಿತಂತೆ ಈ ದೇಶದಲ್ಲಿ ಆವರೆಗೆ ಇದ್ದ ಸಿದ್ಧ ನಂಬಿಕೆಗೆ ಕರ್ಕರೆ ಆ ಬಂಧನದ ಮೂಲಕ ಬಲವಾದ ಏಟನ್ನು ಕೊಟ್ಟಿದ್ದರು. ‘ಬಾಂಬ್ ಸ್ಫೋಟಿಸುವುದಕ್ಕೆ ಮುಸ್ಲಿಮರೇ ಬೇಕಾಗಿಲ್ಲ’ ಎಂಬ ಸಂದೇಶವನ್ನು ಅವರು ಪುರೋಹಿತ್, ಸಾಧ್ವಿಗಳನ್ನು ತೋರಿಸಿ ಸಾಬೀತುಪಡಿಸಿದ್ದರು. ಆದ್ದರಿಂದಲೇ, ಕರ್ಕರೆಯವರನ್ನು ಬಲಿ ಪಡೆದುಕೊಂಡ ಮುಂಬೈ ದಾಳಿಯ ಸುತ್ತ ಅನುಮಾನಗಳು ಮೂಡುವುದು.
 

ಏನೇ ಆಗಲಿ, ಪುರುಲಿಯಾದಿಂದ ಹಿಡಿದು ಮೊನ್ನೆ ನಡೆದ ಬೆಂಗಳೂರು ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ವರೆಗೆ ಎಲ್ಲವನ್ನೂ ಸಂದೇಹದಿಂದ ನೋಡಲೇಬೇಕಾದ ಪರಿಸ್ಥಿತಿ ಇವತ್ತು ನಿರ್ಮಾಣವಾಗಿದೆ. ಪ್ರತಿ ಪ್ರಕರಣಕ್ಕೂ ಹೊರಗೆ ಕಾಣುವ ಮತ್ತು ಕಾಣದ ಎರಡು ಮುಖಗಳಿರುತ್ತವೆ. ನಾವೆಲ್ಲ ಹೊರಗೆ ಕಾಣುವ ಮುಖಗಳನ್ನೇ ನಿಜ ಎಂದು ನಂಬಿ ಬಿಡುತ್ತೇವೆ. ಈ ಮುಖಗಳನ್ನು ‘ನಿಜ’ ಮಾಡುವುದಕ್ಕಾಗಿ ಕಾಣದ ಮುಖಗಳು ಕೃತಕ ಪುರಾವೆಗಳನ್ನೂ ಮಾಹಿತಿಗಳನ್ನೂ ಬಹಿರಂಗಪಡಿಸುತ್ತಿರುತ್ತವೆ. ಅದಕ್ಕಾಗಿ ಅವು ಲಭ್ಯವಿರುವ ಎಲ್ಲ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತವೆ. ಪುರುಲಿಯಾ ಮತ್ತು ಮುಂಬೈ ದಾಳಿಯ ಕುರಿತು ಬಹಿರಂಗವಾದ ಮಾಹಿತಿಗಳು ಸ್ಪಷ್ಟಪಡಿಸುವುದೂ ಇವನ್ನೇ.

Tuesday 23 December 2014

ಪ್ರಶ್ನೆಗೊಳಪಡಿಸುತ್ತಾ ಗುರಿಮುಟ್ಟಿದ ಪ್ರವಾದಿ(ಸ)

    ಓರ್ವ ಸಮಾಜ ಸುಧಾರಕನ ಮುಂದೆ ಸಾಮಾನ್ಯವಾಗಿ ಎರಡು ಆಯ್ಕೆಗಳಿರುತ್ತವೆ. ಒಂದು ಉಗ್ರವಾದವಾದರೆ ಇನ್ನೊಂದು ಸೌಮ್ಯವಾದ. ತಮ್ಮ ಗುರಿಯನ್ನು ಮುಟ್ಟುವುದಕ್ಕಾಗಿ ಈ ಎರಡು ವಿಧಾನಗಳನ್ನು ಆಯ್ದುಕೊಂಡ ಸುಧಾರಕರ ದೊಡ್ಡದೊಂದು ಪಟ್ಟಿ ಈ ಜಗತ್ತಿನಲ್ಲಿದೆ. ಓರ್ವ ಸಮಾಜ ಸುಧಾರಕನೆಂಬ ನೆಲೆಯಲ್ಲಿ ಪ್ರವಾದಿ ಮುಹಮ್ಮದ್‍ರ(ಸ) ಮುಂದೆಯೂ ಈ ಎರಡು ಆಯ್ಕೆಗಳಿದ್ದುವು. ಅವರ ನಿಲುವಿಗೆ ಸಮಾಜದಿಂದ ವ್ಯಕ್ತವಾದ ಪ್ರತಿಕ್ರಿಯೆಗಳನ್ನು ಪರಿಗಣಿಸಿದರೆ, ಅವರು ಉಗ್ರವಾದವನ್ನು ನೆಚ್ಚಿಕೊಳ್ಳಬೇಕಿತ್ತು. ತಾಯಿಫ್‍ನಲ್ಲಿ ಮಾಡಲಾದ ಹಲ್ಲೆ, ಅವರ ಮೇಲೆ ದಿಗ್ಬಂಧನ ವಿಧಿಸಿ 3 ತಿಂಗಳುಗಳ ಕಾಲ ಹಸಿವೆಯಿಂದಿರಿಸಿದ್ದು, ಸಾರ್ವಜನಿಕವಾಗಿ ವಿವಿಧ ರೀತಿಯಲ್ಲಿ ಅವಮಾನ, ಹಲ್ಲೆ, ನಿಂದನೆಗೆ ಗುರಿಪಡಿಸಿದ್ದು, ತನ್ನ ಬೆಂಬಲಿಗರನ್ನು ಕಟು ಕ್ರೌರ್ಯಕ್ಕೆ ಒಳಪಡಿಸುತ್ತಿದ್ದುದು, ಹುಟ್ಟಿದೂರು ಮಕ್ಕಾದಿಂದಲೇ ವಲಸೆ ಹೋಗುವಂತೆ ನಿರ್ಬಂಧಿಸಿದ್ದು.. ಹೀಗೆ ಓರ್ವ ಸಮಾಜ ಸುಧಾರಕನಾಗಿ ಅವರು ಮಕ್ಕಾದಲ್ಲಿ 13 ವರ್ಷಗಳ ಕಾಲ ಅನುಭವಿಸಿದ ಚಿತ್ರಹಿಂಸೆಯು ‘ಉಗ್ರವಾದವೇ ಪರಿಹಾರ’ ಎಂದು ತೀರ್ಮಾನಿಸುವುದಕ್ಕೆ ಎಲ್ಲ ರೀತಿಯಲ್ಲೂ ತಕ್ಕುದಾಗಿತ್ತು. ಆದರೆ ಮುಹಮ್ಮದ್(ಸ) ಉಗ್ರವಾದವನ್ನು ತನ್ನ ಉದ್ದೇಶ ಸಾಧನೆಗಾಗಿ ಆಯ್ಕೆ ಮಾಡಿಕೊಳ್ಳಲೇ ಇಲ್ಲ. ವ್ಯಭಿಚಾರಕ್ಕೆ ಅನುಮತಿಯನ್ನು ಕೇಳಿದ ಬಂದ ಓರ್ವ ಗ್ರಾವಿೂಣ ವ್ಯಕ್ತಿಯನ್ನು ಅವರು ತಿದ್ದಿದ್ದು - ‘ಆ ವ್ಯಭಿಚಾರ ನಿನ್ನ ಮಗಳೊಂದಿಗಾದರೆ ಹೇಗೆ..’ ಎಂಬ ತೀಕ್ಷ್ಣ ಪ್ರಶ್ನೆಯೊಂದಿಗೆ. ಆ ಪ್ರಶ್ನೆ ಆ ವ್ಯಕ್ತಿಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತೆಂದರೆ, ಆತ ತನ್ನ ಆಲೋಚನಾ ವಿಧಾನವನ್ನೇ ಬದಲಿಸಿದ. ಮದ್ಯಪಾನವನ್ನು ಬದುಕಿನ ಅವಿಭಾಜ್ಯ ಅಂಗವೆಂದು ನಂಬಿಕೊಂಡು ಬಂದಿದ್ದ ಸಮಾಜವನ್ನು ಅವರು ಹಲಾಲ್-ಹರಾಮ್ ಎಂದು ಕಡ್ಡಿ ಮುರಿದಂತೆ ವಿಭಜಿಸದೇ ಅದನ್ನು ಸಹನೆಯಿಂದ ಅಧ್ಯಯನಕ್ಕೆ ಒಳಪಡಿಸಿದರು. ‘ಕುಡಿತದ ಅಮಲಿನಲ್ಲಿರುವಾಗ ನಮಾಝ್ ಮಾಡಬಾರದು' ಎಂಬ ಸೌಮ್ಯ ಎಚ್ಚರಿಕೆಯನ್ನು ನೀಡಿ ಅದರ ಒಳಿತು-ಕೆಡುಕುಗಳು ಸಮಾಜದಲ್ಲಿ ಚರ್ಚಿತವಾಗುವಂತೆ ನೋಡಿಕೊಂಡರು. ಅವರು ವಿಗ್ರಹಾರಾಧನೆಯ ಪ್ರಬಲ ವಿರೋಧಿಯಾಗಿದ್ದರೂ ಕಅಬಾಲಯದಲ್ಲಿದ್ದ 300ಕ್ಕಿಂತಲೂ ಅಧಿಕ ವಿಗ್ರಹಗಳಲ್ಲಿ ಒಂದನ್ನೂ ತೆಗಳಲಿಲ್ಲ. ಅದಕ್ಕೆ ಹಾನಿಯೆಸಗುವುದಾಗಲಿ, ಸ್ಥಳಾಂತರ ಮಾಡುವುದಾಗಲಿ ಮಾಡಲಿಲ್ಲ. ಅದರ ಬದಲು ಅವರು ವಿಗ್ರಹಾರಾಧನೆಯ ಸುತ್ತ ಸಮಾಜದಲ್ಲಿ ಚರ್ಚೆಯೊಂದನ್ನು ಹುಟ್ಟುಹಾಕಿದರು. ಮದೀನಾದಿಂದ ಮಕ್ಕಾಕ್ಕೆ ತೀರ್ಥಯಾತ್ರೆಯ ಉದ್ದೇಶದೊಂದಿಗೆ ಬಂದ ಅವರು ಮತ್ತು ಅನುಯಾಯಿಗಳನ್ನು ಅವರ ವಿರೋಧಿಗಳು ಮಾರ್ಗ ಮಧ್ಯದಲ್ಲೇ ತಡೆದಾಗ ಅವರ ಮುಂದೆ ಎರಡು ಆಯ್ಕೆಗಳಿದ್ದುವು. ಒಂದೋ ಉಗ್ರವಾದಿಯಾಗುವುದು ಅಥವಾ ಆ ತಡೆಯನ್ನು ವೈಚಾರಿಕವಾಗಿ ಎದುರಿಸುವುದು. ಅವರು ಎರಡನೆಯದನ್ನು ಆಯ್ದುಕೊಂಡರು. ಬಾಹ್ಯನೋಟಕ್ಕೆ ಹಿನ್ನಡೆಯಂತೆ ಕಾಣುವ ಒಪ್ಪಂದಕ್ಕೂ ಮುಂದಾದರು. ಒಪ್ಪಂದ ಪತ್ರದಲ್ಲಿ ಪ್ರವಾದಿ ಮುಹಮ್ಮದ್ ಎಂದು ನಮೂದಿಸುವುದಕ್ಕೆ ವಿರೋಧಿಗಳು ಆಕ್ಷೇಪ ವ್ಯಕ್ತಪಡಿಸಿದಾಗ ‘ಅಬ್ದುಲ್ಲಾರ ಮಗ ಮುಹಮ್ಮದ್' ಎಂದು ಬರೆಯಿಸಿ ಉಗ್ರ ನಿಲುವಿನಿಂದ ದೂರ ನಿಂತರು. ವಿರೋಧಿಗಳು ಯುದ್ಧವೊಂದನ್ನು ಅನಿವಾರ್ಯಗೊಳಿಸಿದಾಗಲೂ ಸೆರೆಸಿಕ್ಕ ಕೈದಿಗಳನ್ನು ತನ್ನ ಸಮಾಜದ ಅಕ್ಷರ ಗುರುಗಳಾಗಿ ಗೌರವಿಸಿದರು. ಬಹುಶಃ, ಪ್ರವಾದಿ ಮುಹಮ್ಮದ್‍ರ ಬದುಕಿನ ಉದ್ದಕ್ಕೂ ಓರ್ವ ಮಾದರಿ ಸಮಾಜ ಸುಧಾರಕ ಎದ್ದು ಕಾಣುತ್ತಾರೆ. ಸಮಾಜಕ್ಕೆ ಅವರು ವೈಚಾರಿಕತೆಯ ರುಚಿಯನ್ನು ಹತ್ತಿಸಿದರು. ಸ್ವಯಂ ಆಲೋಚಿಸುವಂತೆ ಪ್ರಚೋದನೆ ಕೊಟ್ಟರು. ಪ್ರತಿಯೊಂದನ್ನೂ ವಿಮರ್ಶಿಸುತ್ತಾ ನಡೆದರು. ಮಾತ್ರವಲ್ಲ, ಏನನ್ನು ಬೋಧಿಸುತ್ತಿದ್ದರೋ ಅದಕ್ಕೆ ಅನ್ವರ್ಥವಾಗಿ ಬದುಕಿದರು.
   ಪುಟ್ಟ ಮಕ್ಕಳ ಹತ್ಯಾಕಾಂಡ ನಡೆಸಿ ಪ್ರತೀಕಾರ ತೀರಿಸಿದೆವೆಂದು ಹೇಳಿಕೊಳ್ಳುವ ಕ್ರೂರಿಗಳ ಜಗತ್ತಿನಲ್ಲಿ ಮಗು ಹೃದಯದ ಪ್ರವಾದಿ(ಸ) ಇವತ್ತು ಒಂಟಿಯಾಗುತ್ತಿದ್ದಾರೆ. ಮಕ್ಕಳನ್ನು ದೇವಚರರು ಎಂದು ಕರೆದ ಮತ್ತು ಯುದ್ಧದ ಸಂದರ್ಭದಲ್ಲಿ ಕೂಡ ಮಕ್ಕಳ ಹತ್ಯೆಯನ್ನು ನಿಷೇಧಿಸಿದ ಅವರ ಧೋರಣೆಯನ್ನು ಅವಮಾನಿಸುವಂಥ ಘಟನೆಗಳು ನಮ್ಮ ಸುತ್ತ-ಮುತ್ತ ನಡೆಯುತ್ತಿವೆ. ನಿಜವಾಗಿ, ಸಮಾಜದ ಪಾಲಿಗೆ ಓರ್ವ ಸುಧಾರಕ ಅತಿ ಮುಖ್ಯ ಅನ್ನಿಸುವುದು ಆ ಸಮಾಜದ ಆರೋಗ್ಯ ತೀವ್ರವಾಗಿ ಹದಗೆಟ್ಟಾಗ. ಮಕ್ಕಳು, ಮಹಿಳೆಯರು ಅಸ್ತಿತ್ವದ ಭಯವನ್ನು ಎದುರಿಸುವಾಗ. ಆದ್ದರಿಂದ ಪ್ರವಾದಿ ಮುಹಮ್ಮದ್(ಸ) ಇವತ್ತಿನ ಸಮಾಜದ ಅಗತ್ಯವಾಗಿದ್ದಾರೆ. ಅವರು ಏನಾಗಿದ್ದರೋ ಮತ್ತು ಏನನ್ನು ಬೋಧಿಸಿದ್ದರೋ ಅದನ್ನು ಅಷ್ಟೇ ನಿರ್ಮಲವಾಗಿ ಸಮಾಜದ ಮುಂದಿಡಬೇಕಾದ ಅಗತ್ಯವಿದೆ. ಮಕ್ಕಳನ್ನು ಕೊಲೆ ಮಾಡುವ, ಅಪಹರಿಸುವ, ಅತ್ಯಾಚಾರ ನಡೆಸುವವರ ನಿಜಮುಖವನ್ನು ಸಮಾಜ ಅರಿತುಕೊಳ್ಳುವುದಕ್ಕಾದರೂ ಈ ಕೆಲಸ ಆಗಲೇಬೇಕಿದೆ.

Wednesday 17 December 2014

ಆಗ್ರಾ ಮತಾಂತರದ ಹಿಂದೆ ಮತಾಂತರವನ್ನೇ ನಿಷೇಧಿಸುವ ಉದ್ದೇಶ ಇದೆಯೇ?

    ಸಾಧ್ವಿ ಜ್ಯೋತಿ ನಿರಂಜನ್, ಸಾಕ್ಷಿ ಮಹಾರಾಜ್ ಮತ್ತು ಸುಶ್ಮಾ ಸ್ವರಾಜ್‍ರನ್ನು ವಿವಾದದಿಂದ ರಕ್ಷಿಸಲು ಆಗ್ರಾದ ಮಧುನಗರ ಕೊಳೆಗೇರಿಯು ಯಶಸ್ವಿಯಾಗಿದೆ. ಪಾರ್ಲಿಮೆಂಟ್‍ನಲ್ಲಿ ಕಪ್ಪುಹಣದ ಚರ್ಚೆ ನಡೆಯುತ್ತಿದ್ದಾಗ ದೆಹಲಿಯ ಕಾರ್ಯಕ್ರಮದಲ್ಲಿ ಸಾಧ್ವಿ ವಿವಾದಿತ ಹೇಳಿಕೆಯೊಂದನ್ನು ಕೊಟ್ಟರು. ಪಾರ್ಲಿಮೆಂಟು ಸಾಧ್ವಿಯ ಸುತ್ತ ತಿರುಗತೊಡಗಿತು. ಕಪ್ಪು ಹಣವನ್ನು ಕೈಬಿಟ್ಟು ಪ್ರತಿಪಕ್ಷಗಳು ಸಾಧ್ವಿಯನ್ನು ಎತ್ತಿಕೊಂಡವು. ಕ್ಷಮೆಯಾಚನೆಯನ್ನೂ ಪಡೆದುವು. ಅದೇ ವೇಳೆ ಸಾಕ್ಷಿ ಮಹಾರಾಜ್ ಎಂಬ ಸಂಸದ ಗೋಡ್ಸೆಯನ್ನು ಮಹಾನ್ ದೇಶಭಕ್ತ ಎಂದು ಹೊಗಳಿದರು. ಸಾಧ್ವಿಯ ಸುತ್ತ ನೆರೆದಿದ್ದ ವಿರೋಧ ಪಕ್ಷಗಳು ಮಹಾರಾಜ್‍ರ ಸುತ್ತ ನೆರೆದುವು. ಅವರಿಂದ ಕ್ಷಮಾಯಾಚನೆಯನ್ನು ಪಡಕೊಳ್ಳುವುದಕ್ಕಾಗಿ ಒತ್ತಡವನ್ನು ಹೇರತೊಡಗಿದುವು. ಅವರಿಂದ ಮೂರು ಮೂರು ಬಾರಿ ಕ್ಷಮೆ ಯಾಚನೆಯನ್ನು ಪಡೆಯುವ ಹೊತ್ತಲ್ಲೇ ಭಗವದ್ಗೀತೆ ರಾಷ್ಟ್ರ ಗ್ರಂಥವಾಗಬೇಕು ಎಂದು ಸುಶ್ಮಾ ಸ್ವರಾಜ್ ಹೇಳಿಕೆಯನ್ನು ಕೊಟ್ಟರು. ಸಾಧ್ವಿ ಮತ್ತು ಸಾಕ್ಷಿಯನ್ನು ಕೈಬಿಟ್ಟ ವಿರೋಧ ಪಕ್ಷಗಳು ಸುಶ್ಮಾರನ್ನು ತರಾಟೆಗೆ ತೆಗೆದುಕೊಂಡವು. ಈ ಕುರಿತಂತೆ ಮಾಧ್ಯಮಗಳಲ್ಲಿ ಚರ್ಚೆಗಳೂ ನಡೆದುವು. ಈ ಚರ್ಚೆ ಇನ್ನೂ ಮುಗಿಯುವುದಕ್ಕಿಂತ ಮೊದಲೇ ಆಗ್ರಾದ ಮಧುನಗರ ಕೊಳೆಗೇರಿಯ 56 ಮುಸ್ಲಿಮ್ ಕುಟುಂಬಗಳು ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುದ್ದಿ ಪ್ರಕಟವಾದುವು. ಮಾಧ್ಯಮಗಳಲ್ಲಿ ಮಾತ್ರವಲ್ಲ, ಪಾರ್ಲಿಮೆಂಟಿನಲ್ಲೂ ಇದು ತೀವ್ರ ಚರ್ಚೆ, ವಿವಾದಕ್ಕೆ ಕಾರಣವಾಯಿತು. ಇದೀಗ ಈ ಸುದ್ದಿಯನ್ನು ಮರೆಸುವಂತೆ ಅಲೀಘಡ್‍ನಲ್ಲಿ ಡಿ. 25ರಂದು ಸಂಘಪರಿವಾರ ನಡೆಸಲುದ್ದೇಶಿಸಿರುವ ಮತಾಂತರ ಕಾರ್ಯಕ್ರಮವು ಪ್ರಚಾರ ಪಡೆಯುತ್ತಿದೆ. ಅಂತೂ ಕಪ್ಪು ಹಣದ ಸುತ್ತ ಆರಂಭಗೊಂಡ ಚರ್ಚೆಯು ಬೇಕಾಬಿಟ್ಟಿ ತಿರುವು ಪಡೆದು ಮೋದಿಯನ್ನೂ ಮತ್ತು ಅವರ ಪಕ್ಷವನ್ನೂ ರಕ್ಷಿಸುವಲ್ಲಿ ಸಫಲವಾಗಿದೆ.
 ನಿಜವಾಗಿ, ಆಗ್ರಾ ಮತಾಂತರ ಪ್ರಕರಣಕ್ಕೆ ಬಿಜೆಪಿ ನೀಡುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ಆ ಇಡೀ ಪ್ರಕ್ರಿಯೆಯೇ ಸಂಚಿನಂತೆ ಕಾಣುತ್ತದೆ. ಪ್ರಕರಣಕ್ಕೆ ಸಂಬಂಧಿಸಿ ಪಾರ್ಲಿಮೆಂಟಿನಲ್ಲಿ ಹೇಳಿಕೆ ನೀಡಿದ ವೆಂಕಯ್ಯ ನಾಯ್ಡುರವರು, ‘ದೇಶದಾದ್ಯಂತ ಮತಾಂತರ ವಿರೋಧಿ ಕಾನೂನನ್ನು ಜಾರಿಗೆ ತರೋಣ’ ಎಂದರು. ಬಹುಶಃ, ಆಗ್ರಾದ ಮತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಹೇಳಿಕೆಗಳನ್ನೂ ಮತ್ತು ವೆಂಕಯ್ಯ ನಾಯ್ಡು ಅವರ ಹೇಳಿಕೆಯನ್ನೂ ಜೊತೆಯಾಗಿಟ್ಟು ನೋಡಿದರೆ ಷಡ್ಯಂತ್ರದ ಅಸ್ಪಷ್ಟ ಚಿತ್ರವೊಂದು ಮೂಡಿಬರುತ್ತದೆ. ಮತಾಂತರ ವಿರೋಧಿ ಕಾನೂನನ್ನು ರಚಿಸುವ ಮತ್ತು ಅದನ್ನು ದೇಶದಾದ್ಯಂತ ಏಕಪ್ರಕಾರ ಹೇರುವ ಉದ್ದೇಶದಿಂದಲೇ ಆಗ್ರ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತೇ? ಆಗ್ರಾದಲ್ಲಿ ಮತಾಂತರ ನಡೆದೇ ಇಲ್ಲ ಎಂದು ಅದರಲ್ಲಿ ಭಾಗವಹಿಸಿದವರು ಹೇಳಿಕೊಳ್ಳುತ್ತಿದ್ದಾರೆ. ರೇಶನ್ ಕಾರ್ಡನ್ನು ಪಡಕೊಳ್ಳುವುದಕ್ಕಾಗಿ ನಾವು ಆ ಕಾರ್ಯಕ್ರಮಕ್ಕೆ ಹೋಗಿರುವುದಾಗಿ ಅನೇಕರು ಹೇಳಿಕೊಂಡಿದ್ದಾರೆ. ಅದರಲ್ಲಿ ಭಾಗವಹಿಸಿದವರು ಆ ಕಾರ್ಯಕ್ರಮದ ಬಳಿಕವೂ ಮಸೀದಿಗೆ ಹೋದದ್ದು ಮತ್ತು ತಾವು ಈಗಲೂ ಮುಸ್ಲಿಮರೇ ಆಗಿರುವುದಾಗಿ ಮಾಧ್ಯಮಗಳ ಮುಂದೆ ಹೇಳಿಕೊಂಡಿರುವುದೂ ನಡೆದಿದೆ. ಇವೆಲ್ಲ ಸೂಚಿಸುವುದೇನನ್ನು? ಮತಾಂತರ ಎಂಬುದು ಒಂದು ಪೂಜಾ ಕಾರ್ಯಕ್ರಮದ ಸುತ್ತ ನೆರೆಯುವುದರ ಹೆಸರು ಅಲ್ಲವಲ್ಲ. ಅದು ಸೈದ್ಧಾಂತಿಕ ಪರಿವರ್ತನೆ. ಒಂದು ಸಿದ್ಧಾಂತದಿಂದ ವಿಮುಖಗೊಂಡು ಇನ್ನೊಂದರಲ್ಲಿ ನೆಲೆ, ಬೆಲೆ ಹುಡುಕುವ ಪ್ರಕ್ರಿಯೆ. ಆಗ್ರಾ ಮತಾಂತರ ಪ್ರಕರಣದಲ್ಲಿ ಇಂಥ ಯಾವ ಅಂಶಗಳೂ ವ್ಯಕ್ತಗೊಂಡೇ ಇಲ್ಲ. ಬಡ ಮನುಷ್ಯರು ಒಂದು ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದುದನ್ನು ಬಿಟ್ಟರೆ ಉಳಿದಂತೆ ಯಾವ ಬದಲಾವಣೆಗಳೂ ನಡೆದಿಲ್ಲ. ಇಂಥದ್ದೊಂದು ನಿರ್ಜೀವ ಕಾರ್ಯಕ್ರಮವನ್ನು ಸಂಘಪರಿವಾರ ಹಮ್ಮಿಕೊಂಡಿರುವುದಕ್ಕೆ ಕಾರಣಗಳೇನು? ಅವು ನಿಜವಾಗಿಯೂ ಮತಾಂತರ ಮಾಡಲು ಬಯಸಿತ್ತೇ ಅಥವಾ ಅಂಥದ್ದೊಂದು ಹುಯಿಲೆಬ್ಬಿಸುವ ಉದ್ದೇಶವನ್ನಷ್ಟೇ ಹೊಂದಿತ್ತೇ? ಮತಾಂತರವು ದೇಶದಾದ್ಯಂತ ಚರ್ಚೆಗೊಳಗಾಗಲಿ ಮತ್ತು ಮತಾಂತರ ವಿರೋಧಿ ಕಾನೂನನ್ನು ರಚಿಸಲು ಕೇಂದ್ರ ಸರಕಾರಕ್ಕೆ ತಕ್ಕ ಸಂದರ್ಭ ಒದಗಿ ಬರಲಿ ಎಂಬ ತಂತ್ರ ಅದರ ಹಿಂದಿತ್ತೇ?
 ಮತಾಂತರ ವೈಯಕ್ತಿಕವಾದುದು. ಕಾಂಗ್ರೆಸಿಗನೋರ್ವ ಬಿಜೆಪಿಗನಾಗುವುದು, ಬಿಜೆಪಿಗನೋರ್ವ ಕಮ್ಯುನಿಸ್ಟನಾಗುವುದು ಅಥವಾ ಕಮ್ಯುನಿಸ್ಟನು ಕಾಂಗ್ರೆಸಿಗನಾಗುವುದು ಹೇಗೆ ಸಹಜ ಮತ್ತು ಸರಾಗವೋ ಹಿಂದೂವೊಬ್ಬ ಮುಸ್ಲಿಮ್ ಆಗುವುದು, ಮುಸ್ಲಿಮನೋರ್ವ ಕ್ರೈಸ್ತ ಆಗುವುದು ಅಥವಾ ಕ್ರೈಸ್ತನೋರ್ವ ಹಿಂದೂ ಆಗುವುದು ಕೂಡ ಅಷ್ಟೇ ಸಹಜ ಮತ್ತು ಸರಾಗ ಆಗಬೇಕು. ಬಿಜೆಪಿ ಸಿದ್ಧಾಂತದಿಂದ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಸಿದ್ಧಾಂತರವಾಗುವುದು ತಲ್ಲಣ ಸೃಷ್ಟಿಸುವುದಿಲ್ಲವಾದರೆ ಇಸ್ಲಾಮ್‍ನಿಂದ ಹಿಂದೂ ಧರ್ಮಕ್ಕೆ ಧರ್ಮಾಂತರವಾಗುವುದು ಯಾಕೆ ತಲ್ಲಣ ಉಂಟು ಮಾಡಬೇಕು? ಧರ್ಮಾಂತರ ಓರ್ವ ವ್ಯಕ್ತಿಯ ಸಹಜ ಸ್ವಾತಂತ್ರ್ಯ. ಸಿದ್ಧಾಂತಗಳನ್ನು ಅಧ್ಯಯನ ನಡೆಸುತ್ತ ಆತ ಒಂದರಿಂದ ಇನ್ನೊಂದಕ್ಕೆ ವಾಲಬಲ್ಲ. ಚೆಗೆವಾರನನ್ನು ಓದುತ್ತಾ ಪುಳಕಿತಗೊಂಡ ವ್ಯಕ್ತಿ ಮುಂದೆ ಪ್ರವಾದಿ ಮುಹಮ್ಮದ್‍ರನ್ನು ಓದುತ್ತಾ ಪ್ರಭಾವಿತನಾಗಬಲ್ಲ. ಅದು ಅಧ್ಯಯನನಿರತ ವ್ಯಕ್ತಿಯ ಸ್ವಾತಂತ್ರ್ಯ. ಈ ಸ್ವಾತಂತ್ರ್ಯಕ್ಕೆ ಅಪಾಯ ಒದಗುವುದು ಯಾವಾಗ ಎಂದರೆ ಆಮಿಷಗಳು ಮತ್ತು ಬೆದರಿಕೆಗಳು ಈ ಪ್ರಕ್ರಿಯೆಯಲ್ಲಿ ಜಾಗ ಪಡಕೊಂಡಾಗ. ಅಧ್ಯಯನದಿಂದಾಗಿ ಓರ್ವ ವ್ಯಕ್ತಿಯಲ್ಲಿ ಉಂಟಾಗುವ ಸೈದ್ಧಾಂತಿಕ ಬದಲಾವಣೆಗೂ ಬೆದರಿಕೆಗಳ ಕಾರಣಕ್ಕಾಗಿ ಓರ್ವ ವ್ಯಕ್ತಿ ಸಿದ್ಧಾಂತವನ್ನು ಬದಲಿಸಿಕೊಳ್ಳುವುದಕ್ಕೂ ವ್ಯತ್ಯಾಸ ಇದೆ. ಯಾವ ಸಿದ್ಧಾಂತವೂ ಆಮಿಷಗಳಿಂದಲೋ ಬೆದರಿಕೆಗಳಿಂದಲೋ ಅನುಯಾಯಿಗಳನ್ನು ಹೆಚ್ಚಿಸಿಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಯಾಕೆಂದರೆ, ಸಿದ್ಧಾಂತವೊಂದು ಅಸ್ತಿತ್ವಕ್ಕೆ ಬರುವುದು ಬೆದರಿಕೆಗಳ ಮೂಲಕ ಕೂಡಿಹಾಕಿದ ಅನುಯಾಯಿಗಳಿಂದಲ್ಲ. ಅಂಥ ಅನುಯಾಯಿಗಳು ಆ ಸಿದ್ಧಾಂತದ ಜಾರಿಯಲ್ಲಿ ಪಾಲುಗೊಳ್ಳಲಾರರು. ಅವರನ್ನು ನೋಡಿ ಇತರರು ಆ ಸಿದ್ಧಾಂತಕ್ಕೆ ಆಕರ್ಷಿತರೂ ಆಗಲಾರರು. ಒಂದು ರೀತಿಯಲ್ಲಿ, ಅಂಥ ಅನುಯಾಯಿಗಳು ಆ ಸಿದ್ಧಾಂತದ ಪರಾಜಯದಲ್ಲಿ ಪ್ರಮುಖ ಪಾತ್ರ ನಿರ್ವಹಿಸಬಲ್ಲರೇ ಹೊರತು ವಿಜಯದಲ್ಲಲ್ಲ. ಆದ್ದರಿಂದಲೇ, ಪವಿತ್ರ ಕುರ್‍ಆನ್- ಧರ್ಮದಲ್ಲಿ ಬಲಾತ್ಕಾರವಿಲ್ಲ (2:256) ಎಂದು ಬಲವಾಗಿ ಸಾರಿದೆ. ಇದು ಆಗ್ರದಲ್ಲಿ ಮತಾಂತರ ಕಾರ್ಯಕ್ರಮವನ್ನು ಹಮ್ಮಿಕೊಂಡವರಿಗೆ ಗೊತ್ತಿಲ್ಲ ಎಂದಲ್ಲ. ಆಮಿಷಗಳಿಗೆ ಮನಸೋತು ಬರುವವರು ನಿಷ್ಠಾವಂತ ಅನುಯಾಯಿಗಳಾಗಲಾರರು ಎಂಬುದು ತೀರಾ ಸಾಮಾನ್ಯರಿಗೂ ಗೊತ್ತಿರುತ್ತದೆ. ನಾಳೆ ರೇಶನ್ ಕಾರ್ಡ್‍ಗಿಂತಲೂ ಬೆಲೆಬಾಳುವ ಆಮಿಷವನ್ನು ಇನ್ನಾರೋ ಒಡ್ಡಿದರೆ ಇವರು ತಮ್ಮ ನಿಷ್ಠೆಯನ್ನು ಖಂಡಿತ ಬದಲಿಸಬಲ್ಲರು. ಯಾಕೆಂದರೆ, ಹಸಿದವರಿಗೆ ಹೊಟ್ಟೆಯೇ ಮೊದಲ ಧರ್ಮ. ಹಸಿವಿನಿಂದ ಮುಕ್ತವಾಗಬೇಕೋ ಅಥವಾ ಸಿದ್ಧಾಂತ ಬೇಕೋ ಎಂಬೆರಡು ಆಯ್ಕೆಗಳ ಮುಂದೆ ಬಡವರು ಹಸಿವಿನಿಂದ ಮುಕ್ತವಾಗುವುದನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆಗ್ರದಲ್ಲಿ ಇಂಥದ್ದೊಂದು ಆಮಿಷದ ಮೂಲಕ ಜನರನ್ನು ಸೇರಿಸಲಾಗಿದೆ. ಬಹುಶಃ ಸೇರಿಸಿದವರಿಗೆ ಒಂದು ಉದ್ದೇಶವಿರುವಂತೆಯೇ ಸೇರಿದವರಿಗೂ ಒಂದು ಉದ್ದೇಶವಿತ್ತು. ಸೇರಿದವರ ಉದ್ದೇಶ ರೇಶನ್ ಕಾರ್ಡ್ ಮತ್ತಿತರ ಸೌಲಭ್ಯ ಪಡಕೊಳ್ಳುವುದು. ಆದರೆ ಸೇರಿಸಿದವರ ಉದ್ದೇಶ? ಹಿಂದೂ ಧರ್ಮಕ್ಕೆ ಮತಾಂತರಿಸುವುದೋ ಅಥವಾ ಮತಾಂತರ ವಿರೋಧಿ ಕಾನೂನು ರಚನೆಗೆ ಮೋದಿ ಸರಕಾರಕ್ಕೆ ಅವಕಾಶ ಸೃಷ್ಟಿಸಿಕೊಡುವುದೋ? ಸದ್ಯದ ಬೆಳವಣಿಗೆಗಳನ್ನು ನೋಡಿದರೆ ಆ ಮತಾಂತರದ ಉದ್ದೇಶ ಏನೆಂದು ಸ್ಪಷ್ಟವಾಗುತ್ತದೆ.

Wednesday 10 December 2014

ಕಲ್ಲು, ಚೂರಿ, ಬೆಂಕಿ ಮತ್ತು ಧರ್ಮರಕ್ಷಣೆ

    ಒಂದು ಸಮಾಜದ ಸ್ವಾಸ್ಥ್ಯಕ್ಕೂ ಆ ಸಮಾಜದಲ್ಲಿರುವ ನಂಬಿಕೆ ಮತ್ತು ನಿರೀಕ್ಷೆಗಳಿಗೂ ಸಂಬಂಧ ಇರುತ್ತದೆ. ಸಾಮಾಜಿಕ ಸ್ವಾಸ್ಥ್ಯ ಎಂಬುದು ಅಲ್ಲಿರುವ ಆಸ್ಪತ್ರೆಗಳನ್ನೋ ಪೊಲೀಸರನ್ನೋ ಹೊಂದಿಕೊಂಡಿಲ್ಲ. ಕೆಲವು ರಮ್ಯ ನಿರೀಕ್ಷೆಗಳು ಆ ಸಮಾಜದ ಸೌಖ್ಯವನ್ನು ನಿರ್ಧರಿಸುತ್ತದೆ. ಮಸೀದಿಯಿಂದ ಹಾನಿಯನ್ನು ನಿರೀಕ್ಷಿಸದ ಸಮಾಜ, ದೇವಾಲಯದಿಂದ ಒಳಿತನ್ನೇ ನಿರೀಕ್ಷಿಸುವ ಸಮಾಜ, ಹಿಂದೂ-ಮುಸ್ಲಿಮ್-ಕ್ರೈಸ್ತರಿಂದ ಭದ್ರತೆಯನ್ನೇ ನಿರೀಕ್ಷಿಸುವ ಸಮಾಜ.. ಹೀಗೆ ಇಂಥ ಒಳ್ಳೆಯ ನಿರೀಕ್ಷೆಗಳು ಒಂದು ಸಮಾಜವನ್ನು ಶಾಂತಿಯಿಂದ ಮತ್ತು ಖುಷಿಯಿಂದ ಇಡಬಲ್ಲುದು. ದುರಂತ ಏನೆಂದರೆ, ಈ ವಾಸ್ತವವನ್ನು ಅತ್ಯಂತ ಚೆನ್ನಾಗಿ ಅರಿತುಕೊಂಡಿರುವುದು ಶಾಂತಿಯ ವಿರೋಧಿಗಳು. ಆದ್ದರಿಂದಲೇ ಅವರ ಮೊದಲ ಗುರಿ ಮಸೀದಿಯೋ ಮಂದಿರವೋ ಆಗಿರುತ್ತದೆ. ಹಂದಿ ಮತ್ತು ಹಸುವಿನ ತಲೆಯನ್ನು ಈ ಎರಡು ಕೇಂದ್ರಗಳಿಗೆ ಎಸೆಯಲಾಗುತ್ತದೆ. ಕಲ್ಲು ತೂರಾಟ ನಡೆಯುತ್ತದೆ. ಮಸೀದಿ-ಮಂದಿರಗಳು ಎಲ್ಲಿಯ ವರೆಗೆ ಸಮಾಜದ ಶಾಂತಿಯ ನಿರೀಕ್ಷೆಗಳಿಗೆ ಪೂರಕವಾಗಿರುತ್ತದೋ ಅಥವಾ ಅಲ್ಲಿಂದ ಹೊರ ಬೀಳುವ ಸುದ್ದಿಗಳು ನೆಮ್ಮದಿದಾಯಕವಾಗಿರುತ್ತದೋ ಅಲ್ಲಿಯ ವರೆಗೆ ಕಲ್ಲುಗಳಿಗೆ, ಹಂದಿ-ಹಸುವಿನ ತಲೆಗಳಿಗೆಲ್ಲ ಜಯ ಸಿಗುವುದು ಕಡಿಮೆ. ಸದ್ಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿರುವ ಅಹಿತಕರ ಘಟನೆಗಳಿಗೆ ಈ ಕೇಂದ್ರಗಳನ್ನೇ ಗುರಿ ಮಾಡಲಾಗಿದೆ. ಗಂಗೊಳ್ಳಿಯಲ್ಲಿ, ಉಳಾಯಿಬೆಟ್ಟು, ಬಜ್ಪೆ ಮತ್ತಿತರ ಪ್ರದೇಶಗಳಲ್ಲಿ ಕೋಮುಗಲಭೆಗೆ ಪೂರಕವಾದ ವಾತಾವರಣಗಳನ್ನು ನಿರ್ಮಿಸಲಾಗುತ್ತಿದೆ. ಕಲ್ಲು ತೂರಾಟ ನಡೆದಿದೆ. ಚೂರಿ ಇರಿತವಾಗಿದೆ. ಒಂದು ಸಮಾಜದ ನೆಮ್ಮದಿಯನ್ನು ಕೆಡಿಸುವುದಕ್ಕೆ ಬೇಕಾದ ಪೂರ್ವ ತಯಾರಿಗಳನ್ನು ದುಷ್ಕರ್ಮಿಗಳು ಯೋಜಿತವಾಗಿ ಮಾಡುತ್ತಿದ್ದಾರೆ. ಇಂಥ ಸ್ಥಿತಿಯಲ್ಲಿ ಸಮಾಜ ಪ್ರಚೋದನೆಗೆ ಒಳಗಾಗಬಾರದು. ಮಸೀದಿಗೋ ಮಂದಿರಕ್ಕೋ  ಕಲ್ಲೆಸೆಯುವವರು, ಗಡ್ಡವನ್ನೋ ನಾಮವನ್ನೋ ನೋಡಿ ಚೂರಿ ಹಾಕುವವರೆಲ್ಲ ಧರ್ಮ ವಿರೋಧಿಗಳೇ ಹೊರತು ಅವರಿಂದ ಧರ್ಮಕ್ಕಾಗಲಿ, ಸಮಾಜಕ್ಕಾಗಲಿ ಯಾವ ಪ್ರಯೋಜನವೂ ಇಲ್ಲ. ಗಡ್ಡಧಾರಿ ಅಥವಾ ನಾಮಧಾರಿ ವ್ಯಕ್ತಿಯನ್ನು ಚೂರಿ ಇರಿತಕ್ಕೆ ಒಳಪಡಿಸುವುದರಿಂದ ಗಾಯಗೊಳ್ಳುವುದು ಆ ವ್ಯಕ್ತಿಗಳಲ್ಲ, ಆಯಾ ಧರ್ಮಗಳು ಸಾರುವ ಮಾನವೀಯ ಮೌಲ್ಯಗಳು. ಚೂರಿಗೆ, ಬೆಂಕಿಗೆ ಅಥವಾ ಕಲ್ಲಿಗೆ ಸ್ವಯಂ ಬುದ್ಧಿಯಿಲ್ಲ. ಚೂರಿಯನ್ನು ತರಕಾರಿ ಕತ್ತರಿಸುವುದಕ್ಕೂ ಬಳಸಬಹುದು. ಓರ್ವನ ಪ್ರಾಣ ತೆಗೆಯುವುದಕ್ಕೂ ಉಪಯೋಗಿಸಬಹುದು. ಬಳಕೆದಾರನ ಉದ್ದೇಶವನ್ನು ಹೊಂದಿಕೊಂಡು ಅದು ಕೆಲಸ ಮಾಡುತ್ತದೆ. ಆದ್ದರಿಂದಲೇ, ಪೊಲೀಸರು ಚೂರಿಗಳ ಮೇಲೋ ಕಲ್ಲುಗಳ ಮೇಲೋ ಕೇಸು ದಾಖಲಿಸುವುದಿಲ್ಲ. ಯಾರು ಅದನ್ನು ಬಳಸಿಕೊಂಡು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಬಯಸಿದರೋ ಅವರ ಮೇಲೆಯೇ ಕೇಸು ದಾಖಲಾಗುತ್ತದೆ. ಧರ್ಮಗಳೂ ಹೀಗೆಯೇ. ಅವು ಯಾರಿಗೂ ಕಲ್ಲೆಸೆಯುವುದಿಲ್ಲ. ಚೂರಿ ಹಾಕುವುದಿಲ್ಲ. ಹಸುವಿನದ್ದೋ ಹಂದಿಯದ್ದೋ ತಲೆಯನ್ನು ಎಸೆಯುವುದಿಲ್ಲ. ಅವು ಸ್ವಯಂ ಪವಿತ್ರ. ಈ ಪವಿತ್ರವನ್ನು ಅಪವಿತ್ರಗೊಳಿಸುವುದು ಅದರ ಅನುಯಾಯಿಗಳೆಂದು ಹೇಳಿಕೊಳ್ಳುವ ದುಷ್ಕರ್ಮಿಗಳು. ದುರಂತ ಏನೆಂದರೆ, ಅನೇಕ ಬಾರಿ ಈ ಅನುಯಾಯಿಗಳನ್ನು ದುಷ್ಕರ್ಮಿಗಳು ಎಂದು ಗುರುತಿಸುವುದಕ್ಕೆ ಸಮಾಜಕ್ಕೆ ಸಾಧ್ಯವಾಗುವುದಿಲ್ಲ. ಅವರು ಹಬ್ಬಿಸುವ ಸುಳ್ಳು ಸುದ್ದಿಗಳನ್ನು ನಿಜವೆಂದೇ ನಂಬಿ ಅವರ ಬೆಂಬಲಕ್ಕೆ ಸಮಾಜ ನಿಲ್ಲುವುದಿದೆ. ಅವರು ಮಾಡುತ್ತಿರುವುದೇ ನಿಜವಾದ ಧರ್ಮ ಸೇವೆ ಎಂದು ಭಾವಿಸುವುದಿದೆ. ಇಂಥ ಮುಗ್ಧ ನಂಬಿಕೆಗಳೇ ಅನೇಕ ಬಾರಿ ಸಮಾಜದ ನೆಮ್ಮದಿಯನ್ನು ಹಾಳು ಮಾಡಿಬಿಡುತ್ತದೆ.
 ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್‍ಬುಕ್‍ಗಳು ಜನರ ದೈನಂದಿನ ಬದುಕಿನ ಅನಿವಾರ್ಯತೆಗಳಾಗಿ ಬದಲಾಗಿರುವ ಇಂದಿನ ದಿನಗಳಲ್ಲಿ ಒಂದು ಸ್ವಸ್ಥ ಸಮಾಜವನ್ನು ಅಸ್ವಸ್ಥಗೊಳಿಸುವುದಕ್ಕೆ ತುಂಬಾ ಕಷ್ಟವೇನೂ ಇಲ್ಲ. ವದಂತಿಗಳನ್ನು ಹೇಗೆ ಬೇಕಾದರೂ ಈ ಮಾಧ್ಯಮಗಳ ಮೂಲಕ ಬಿತ್ತರಿಸಬಹುದು. ವಾಟ್ಸಪ್ ಅಂತೂ ಪ್ರಚೋದನಕಾರಿ ಸಂದೇಶಗಳನ್ನು ರವಾನಿಸುವುದಕ್ಕೆ ಧಾರಾಳ ಬಳಕೆಯಾಗುತ್ತಿದೆ. ಹೆಣ್ಣು ಮಕ್ಕಳ ರಕ್ಷಣೆಯ ಹೆಸರಲ್ಲಿ, ಧರ್ಮರಕ್ಷಣೆಯ ನೆಪದಲ್ಲಿ ವಿವಿಧ ರೀತಿಯ ಗುಂಪುಗಳು ಈ ತಾಣಗಳಲ್ಲಿ ಹುಟ್ಟು ಪಡೆಯುತ್ತಿವೆ. ಕೋಮುವಾದಿ ಪೇಜ್‍ಗಳು ಕಾಣಿಸಿಕೊಳ್ಳುತ್ತಿವೆ. ನಿಜವಾಗಿ, ಇಂಥ ಸೌಲಭ್ಯಗಳನ್ನು ಬಳಸಿಕೊಂಡು ಸಮಾಜವನ್ನು ಉದ್ವಿಘ್ನಗೊಳಿಸುವುದು ಸುಲಭ. ಸಾಮಾನ್ಯವಾಗಿ, ಸಮಾಜ ಎರಡು ವಿಷಯಗಳಲ್ಲಿ ತುಂಬಾ ಸೆನ್ಸಿಟಿವ್ ಆಗಿರುತ್ತದೆ. ಅವುಗಳ ಮೇಲೆ ದಾಳಿಯೋ ಘಾಸಿಯೋ ಆದಾಗ ಅದು ಪ್ರಚೋದನೆಗೊಳ್ಳುತ್ತದೆ. ಅವುಗಳಲ್ಲಿ ಒಂದು, ಧಾರ್ಮಿಕ ಕ್ಷೇತ್ರಗಳಾದರೆ ಇನ್ನೊಂದು ಹೆಣ್ಣು ಮಕ್ಕಳು. ಸದ್ಯ ದೇಶದಾದ್ಯಂತ ದುಷ್ಕರ್ಮಿಗಳು ಈ ಎರಡು ಅಸ್ತ್ರಗಳನ್ನು ಬಳಸುತ್ತಿದ್ದಾರೆ. ಲವ್ ಜಿಹಾದ್ ಎಂಬ ಹೆಸರಲ್ಲಿ ಈಗಾಗಲೇ ಸಮಾಜದಲ್ಲಿ ಒಂದು ವ್ಯವಸ್ಥಿತ ಅಪಪ್ರಚಾರಕ್ಕೆ ಚಾಲನೆ ಕೊಡಲಾಗಿದೆ. ಕರಾವಳಿ ಪ್ರದೇಶದಲ್ಲಿ ಸದ್ಯ ಕಾಣಿಸಿಕೊಂಡಿರುವ ಕೋಮುಗಲಭೆಯ ವಾತಾವರಣಕ್ಕೂ ಎರಡ್ಮೂರು ತಿಂಗಳುಗಳಲ್ಲಿ ಇಲ್ಲಿ ಕಾಣಿಸಿಕೊಂಡಿರುವ ವಿಭಿನ್ನ ಧರ್ಮಗಳ ಯುವಕ-ಯುವತಿಯರ ಪ್ರೇಮ ಪ್ರಕರಣಕ್ಕೂ ಸಂಬಂಧ ಇದೆ. ಸಮಾಜ ಇಂಥ ಪ್ರಕರಣಗಳ ಸಂದರ್ಭದಲ್ಲಿ ಭಾವುಕವಾಗುತ್ತದೆ. ತನ್ನ ಮನೆಯ ಮಗಳು ಇನ್ನೊಂದು ಧರ್ಮದ ಯುವಕನನ್ನು ಪ್ರೀತಿಸಿ ವಿವಾಹವಾಗುವುದನ್ನು ಸೀದಾ ಸಾದಾ ಒಪ್ಪಿಕೊಳ್ಳುವ ಮನಸ್ಥಿತಿಯಂತೂ ಇವತ್ತಿನ ಸಮಾಜದಲ್ಲಿಲ್ಲ. ಈ ವಾತಾವರಣವು ಧುಷ್ಕರ್ಮಿಗಳ ಮಧ್ಯಪ್ರವೇಶಕ್ಕೆ ಅವಕಾಶ ಮಾಡಿಕೊಡುತ್ತದೆ. ವಿವಿಧ ಬಗೆಯ ವದಂತಿಗಳನ್ನು ಹಬ್ಬಿಸುವುದಕ್ಕೆ ಇದು ದಾರಿ ತೆರೆದುಕೊಡುತ್ತದೆ. ಇಂಥ ಪ್ರಕರಣಗಳ ಹಿಂದೆ ಷಡ್ಯಂತ್ರ ಇದೆಯೆಂದೋ ಧರ್ಮದ ನಾಶಕ್ಕೆ ಹೆಣೆದ ತಂತ್ರವೆಂದೋ ಅಥವಾ ಇನ್ನೇನೋ ಆಗಿ ಆ ಪ್ರಕರಣವನ್ನು ಭಾವನಾತ್ಮಕ ಧ್ರುವೀಕರಣಕ್ಕೆ ಬಳಸಿಕೊಳ್ಳಲಾಗುತ್ತದೆ. ಉತ್ತರ ಪ್ರದೇಶದ ವಿೂರತ್‍ನಿಂದ ಹಿಡಿದು ದಕ್ಷಿಣ ಕನ್ನಡದ ವರೆಗೆ ಸಮಾಜವನ್ನು ಉದ್ವಿಘ್ನಗೊಳಿಸುವಲ್ಲಿ ಇಂಥ ಪ್ರಕರಣಗಳೇ ಮುಖ್ಯ ಪಾತ್ರ ವಹಿಸುತ್ತಿವೆ. ಅಷ್ಟಕ್ಕೂ, ಹೆಣ್ಣು-ಗಂಡಿನ ನಡುವೆ ಪ್ರೇಮಾಂಕುರವಾಗುವುದಕ್ಕೂ ಷಡ್ಯಂತ್ರಕ್ಕೂ ಏನು ಸಂಬಂಧವಿದೆ? ಶಾಲೆಯಿಂದ ಹಿಡಿದು ಮಾರುಕಟ್ಟೆ, ಕಚೇರಿ ಸಹಿತ ಎಲ್ಲೆಡೆಯೂ ಹೆಣ್ಣು-ಗಂಡು ಮುಕ್ತವಾಗಿ ಬೆರೆಯುವ ವಾತಾವರಣ ಈ ದೇಶದಲ್ಲಿರುವಾಗ ಪ್ರೇಮಾಂಕುರಕ್ಕೆ ಷಡ್ಯಂತ್ರವಾದರೂ ಯಾಕೆ ಬೇಕು? ಪ್ರೇಮ ಎಂಬುದು ಷಡ್ಯಂತ್ರದ ಮತ್ತು ಬಂದೂಕಿನ ಮೊನೆಯಲ್ಲಿ ಚಿಗುರುವಂಥ ಸಂಗತಿಯೇ? ಎರಡು ಹೃದಯಗಳ ವಿಶ್ವಾಸದ ಆಧಾರದಲ್ಲಿ ಚಿಗುರುವ ಸಂಬಂಧವನ್ನು ಧರ್ಮದ ಷಡ್ಯಂತ್ರವಾಗಿ ಯಾಕೆ ನೋಡಬೇಕು?
 ನೆಮ್ಮದಿ ಎಂಬುದು ಸರ್ವರ ಬಯಕೆ. ನಾಸ್ತಿಕನೂ ಆಸ್ತಿಕನೂ ನೆಮ್ಮದಿಯನ್ನು ಬಯಸುತ್ತಾನೆ. ಧರ್ಮಗಳಂತೂ ಸೌಖ್ಯ ಸಮಾಜದ ನಿರ್ಮಾಣದ ಉದ್ದೇಶದಿಂದಲೇ ಅಸ್ತಿತ್ವದಲ್ಲಿವೆ. ಈ ಹಿನ್ನೆಲೆಯಲ್ಲಿ ಸಮಾಜದ ಪ್ರತಿಯೋರ್ವ ವ್ಯಕ್ತಿ ಆತ್ಮಾವಲೋಕನ ನಡೆಸಿಕೊಳ್ಳಬೇಕು. ಧರ್ಮ ರಕ್ಷಣೆಯ ಹೆಸರಲ್ಲಿ ಎತ್ತಿಕೊಳ್ಳುವ ಪ್ರತಿ ಕಲ್ಲು, ಚೂರಿ, ಬೆಂಕಿಗಳು ಎತ್ತಿಕೊಂಡವರ ಧರ್ಮವನ್ನು ಅವಮಾನಿಸುತ್ತದೆಯೇ ಹೊರತು ಇನ್ನೊಂದು ಧರ್ಮವನ್ನೋ ಅದರ ಅನುಯಾಯಿಗಳನ್ನೋ ಅಲ್ಲ. ಚೂರಿ ಇರಿತದಿಂದ ಉದುರುವ ರಕ್ತ, ಬೆಂಕಿಯಿಂದ ಉರಿಯುವ ಕಟ್ಟಡ ಮತ್ತು ಕಲ್ಲಿನಿಂದ ಹಾನಿಗೀಡಾಗುವ ಗಾಜುಗಳೆಲ್ಲ ಪವಿತ್ರವಾದವುಗಳೇ. ಅವನ್ನು ತನ್ನ ಕಲ್ಲು, ಚೂರಿ, ಬೆಂಕಿ ನಾಶಪಡಿಸಿತೆಂದು ನಂಬಿದವರೇ ನಿಜವಾದ ಧರ್ಮದ್ರೋಹಿಗಳು.

Tuesday 2 December 2014

ಸಂವೇದನಾರಹಿತ ಪತ್ರಿಕೋದ್ಯಮಕ್ಕೆ ಬಲಿಯಾದ ಲಲಿತ

    ಕ್ಲೆಪ್ಪೋಮೇನಿಯಾ ಎಂಬೊಂದು ರೋಗವಿದೆ. ಕದಿಯುವುದೇ ಈ ರೋಗದ ಲಕ್ಷಣ. ಈ ರೋಗಕ್ಕೆ ತುತ್ತಾದವರು ಸಾಮಾನ್ಯವಾಗಿ ಸಹಜವಾಗಿರುತ್ತಾರೆ. ಕ್ಲೆಪ್ಪೋಮೇನಿಯ ರೋಗಿ ಎಂದು ನೋಡಿದ ಕೂಡಲೇ ಹೇಳಿ ಬಿಡಬಹುದಾದ ಯಾವ ಲಕ್ಷಣಗಳೂ ಬಾಹ್ಯನೋಟಕ್ಕೆ ಗೋಚರಿಸುವುದಿಲ್ಲ. ಆದರೆ ರೋಗಿ ಒಳಗೊಳಗೇ ಒತ್ತಡ ಅನುಭವಿಸುತ್ತಿರುತ್ತಾನೆ/ಳೆ. ಕದಿಯುವಂತೆ ವ್ಯಕ್ತಿಯ ಮೇಲೆ ಆ ರೋಗ ಒತ್ತಾಯವನ್ನು ಹೇರುತ್ತಲೇ ಇರುತ್ತದೆ. ಅಂತಿಮವಾಗಿ ಕಳ್ಳತನ ಮಾಡುವ ಮೂಲಕ ಆ ಒತ್ತಡದಿಂದ ಆತ/ಕೆ ಹೊರಬರುತ್ತಾರೆ. ದುರಂತ ಏನೆಂದರೆ, ಕ್ಲೆಪ್ಪೋಮೇನಿಯ ರೋಗದ ಬಗ್ಗೆ ಸಮಾಜಕ್ಕೆ ಗೊತ್ತಿರುವುದು ತೀರಾ ಕಡಿಮೆ. ಕಳ್ಳತನವನ್ನು ರೋಗವಾಗಿ ನೋಡುವ ಹಂತಕ್ಕೆ ಸಮಾಜ ಇನ್ನೂ ಬೆಳೆದಿಲ್ಲ. ಆದ್ದರಿಂದಲೇ ಕಳ್ಳತನ ಪ್ರಕರಣಗಳ ಬಗ್ಗೆ ನಡೆಯುವ ಹೆಚ್ಚಿನೆಲ್ಲ ಚರ್ಚೆಗಳು ಕ್ಲೆಪ್ಪೋಮೇನಿಯದ ಉಲ್ಲೇಖವಿಲ್ಲದೇ ಅಥವಾ ಅಂಥದ್ದೊಂದು ಸಾಧ್ಯತೆಯನ್ನು ಚರ್ಚೆಗೊಡ್ಡದೆಯೇ ಕೊನೆಗೊಳ್ಳುತ್ತದೆ. ಟೀಕೆ, ನಿಂದನೆ, ಅಪಹಾಸ್ಯದ ಮಾತುಗಳು ಧಾರಾಳ ಕೇಳಿ ಬರುತ್ತವೆ. ಒಂದು ಕಡೆ ರೋಗದ ಒತ್ತಡ, ಇನ್ನೊಂದು ಕಡೆ ರೋಗವನ್ನು ಅರ್ಥೈಸಿಕೊಳ್ಳದ ಸಮಾಜ - ಇವುಗಳ ಮಧ್ಯೆ ರೋಗಿಗಳು ಸಹಜವಾಗಿ ಕುಗ್ಗಿ ಹೋಗುತ್ತಾರೆ. ಅವಮಾನದಿಂದ ಖಿನ್ನತೆಗೆ ಒಳಗಾಗುವುದೂ ಇದೆ. ಕಳೆದ ವಾರ ಸಾವಿಗೀಡಾದ ಎಚ್.ಎಸ್. ಲಲಿತಾರು ಇದಕ್ಕೆ ಅತ್ಯುತ್ತಮ ಉದಾಹರಣೆ.
 ಕಳೆದ ಮಾರ್ಚ್‍ನಲ್ಲಿ ಕನ್ನಡದ ಹೆಚ್ಚಿನೆಲ್ಲ ಟಿ.ವಿ. ಚಾನೆಲ್‍ಗಳು ‘ಕಳ್ಳಿ ಕಾರ್ಪೋರೇಟರ್' ಎಂಬ ಆನೆಗಾತ್ರದ ಶೀರ್ಷಿಕೆಯಲ್ಲಿ ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ್ದುವು. ಬೆಂಗಳೂರು ಮಹಾ ನಗರ ಪಾಲಿಕೆಯ ಗಿರಿನಗರ ವಾರ್ಡ್‍ನ ಬಿಜೆಪಿ ಕಾರ್ಪೋರೇಟರ್ ಲಲಿತಾ ಎಂಬವರು ಬಟ್ಟೆ ಅಂಗಡಿಯೊಂದರಲ್ಲಿ ಸೀರೆ ಕದ್ದು ಸಿಕ್ಕಿಬಿದ್ದ ಸುದ್ದಿ ಅದು. ಸಿ.ಸಿ. ಟಿ.ವಿ.ಯಲ್ಲಿ ಸೆರೆಯಾದ ದೃಶ್ಯಗಳನ್ನು ಪದೇಪದೇ ಪ್ರಸಾರ ಮಾಡುತ್ತಾ ಲಲಿತ ಅವರನ್ನು ಮತ್ತು ಅವರ ಕುಟುಂಬವನ್ನು ಟಿ.ವಿ. ಚಾನೆಲ್‍ಗಳು ಮಾನಸಿಕವಾಗಿ ಕೊಂದಿದ್ದುವು. ಪ್ರಕರಣವನ್ನು ವೈಭವೀಕರಿಸಿದಂತೆ ಅವರ ಕುಟುಂಬವು ಆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ವಿನಂತಿಸಿತ್ತು. ಲಲಿತಾ ಅವರು ಕ್ಲೆಪ್ಪೋಮೇನಿಯ ರೋಗಕ್ಕೆ ತುತ್ತಾಗಿರುವುದನ್ನು ದಾಖಲೆಗಳ ಸಮೇತ ಅವರ ಪತಿ ಮಾಧ್ಯಮಗಳ ಎದುರು ಬಿಡಿಸಿಟ್ಟಿದ್ದರು. ಆದರೆ ಆ ಹೊತ್ತಿಗಾಗಲೇ ಲಲಿತಾ ‘ಕಳ್ಳಿ'ಯ ಇಮೇಜನ್ನು ಗಳಿಸಿಕೊಂಡು ಬಿಟ್ಟಿದ್ದರು.
ಘಟನೆಗೆ ಎಷ್ಟು ದೊಡ್ಡ ಮಟ್ಟದ ಪ್ರಚಾರ ಸಿಕ್ಕಿತ್ತೆಂದರೆ, ಬಿಜೆಪಿ ಅವರನ್ನು ವಜಾಗೊಳಿಸಿತು. ಕ್ಲೆಪ್ಪೋಮೇನಿಯ ರೋಗದ ಬಗ್ಗೆ ಮತ್ತು ಲಲಿತಾ ಅವರು ಅದರಿಂದ ಬಳಲುತ್ತಿರುವ ಬಗ್ಗೆ ಮಾಧ್ಯಮಗಳ ಮುಂದೆ ವಿವರಿಸಿ ನೊಂದ ಕುಟುಂಬಕ್ಕೆ ಮಾನಸಿಕ ಧೈರ್ಯ ಕೊಡುವ ಬದಲು ಬಿಜೆಪಿ ಇಡೀ ಪ್ರಕರಣದಿಂದ ಪಲಾಯನ ಮಾಡಿತು. ನಿಜವಾಗಿ, ಲಲಿತ ಅವರನ್ನು ಕಳ್ಳತನದ ಆರೋಪದಿಂದ ಪಾರು ಮಾಡುವ ಸಾಮರ್ಥ್ಯವಿದ್ದುದು ಒಂದು ಬಿಜೆಪಿಗಾದರೆ ಇನ್ನೊಂದು ಮಾಧ್ಯಮಕ್ಕೆ. ಆದರೆ ಅವೆರಡೂ ತೀರಾ ಬೇಜವಾಬ್ದಾರಿಯಿಂದ ವರ್ತಿಸಿದ್ದುವು. ಕಳ್ಳಿ ಕಾರ್ಪೋರೇಟರ್ ಎಂದಿದ್ದ ಮಾಧ್ಯಮಗಳಿಗೆ ಕ್ಲೆಪ್ಪೋಮೇನಿಯ ಕಾರ್ಪೋರೇಟರ್ ಎಂದು ತಿದ್ದಿಕೊಳ್ಳುವ ಅವಕಾಶವೂ ಇತ್ತು. ಆದರೆ ಮಾಧ್ಯಮ ಕ್ಷೇತ್ರದ ಬೇಜವಾಬ್ದಾರಿ ವರ್ತನೆಯು ಲಲಿತ ಮತ್ತು ಅವರ ಕುಟುಂಬವನ್ನು ತೀವ್ರವಾಗಿ ಘಾಸಿಗೊಳಿಸಿತು. ಲಲಿತ ಖಿನ್ನತೆಗೆ ಒಳಗಾದರು. ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದು ಕೊನೆಗೆ ಮೃತಪಟ್ಟರು.  
   ಬಹುಶಃ, ಅವಸರದ ಪತ್ರಿಕೋದ್ಯಮಕ್ಕೆ ಜೀವತೆತ್ತವರ ಪಟ್ಟಿಯಲ್ಲಿ ಲಲಿತಾರ ಹೆಸರು ಎಷ್ಟನೆಯದೋ ಗೊತ್ತಿಲ್ಲ. ಆದರೆ ಬ್ರಿಟನ್ನಿನ ರಾಜಕುಮಾರಿ ಡಯಾನರಂತೆ ಲಲಿತ ಕೂಡ ಮಾಧ್ಯಮ ದಾಹಕ್ಕೆ ಬಲಿಯಾಗಿದ್ದಾರೆ. ಆದರೂ ಮಾಧ್ಯಮಗಳಲ್ಲಿ ಮುಖ್ಯವಾಗಿ ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಈ ಬಗ್ಗೆ ಎಳ್ಳಷ್ಟೂ ಪಶ್ಚಾತ್ತಾಪಭಾವ  ಕಾಣಿಸಿಕೊಂಡಿಲ್ಲ. ಕನಿಷ್ಠ ಅರ್ಥಪೂರ್ಣ ಶ್ರದ್ಧಾಂಜಲಿ ಸಲ್ಲಿಸುವ ಅವಕಾಶವನ್ನೂ ಅವು ಬಳಸಿಕೊಂಡಿಲ್ಲ. ನಿಜವಾಗಿ, ಕಾರ್ಪೋರೇಟರ್ ಓರ್ವರು ಸೀರೆ ಕದಿಯುತ್ತಾರೆಂಬುದೇ ಅಚ್ಚರಿಯ ಸಂಗತಿ. ಯಾಕೆಂದರೆ, ಕಾರ್ಪೋರೇಟರ್‍ಗೆ ಅವರದ್ದೇ ಆದ ಸಾಮಾಜಿಕ ಸ್ಥಾನಮಾನ, ಗೌರವಾದರಗಳಿವೆ. ಕದ್ದು ಸೀರೆ ಉಡಬೇಕಾದಷ್ಟು ಬಡತನವಿರುವ ಕಾರ್ಪೋರೇಟರ್‍ಗಳು ಬೆಂಗಳೂರಿನಲ್ಲಿದ್ದಾರೆಂಬುದನ್ನು ಊಹಿಸುವುದಕ್ಕೂ ಸಾಧ್ಯವಿಲ್ಲ. ಅಲ್ಲದೇ, ಲಲಿತ ಅವರ ಹಿನ್ನೆಲೆಯೂ ಬಡತನದ್ದಲ್ಲ...  ಸುದ್ದಿ ತಯಾರಿಸುವ ಸಂದರ್ಭದಲ್ಲಿ ಓರ್ವ ಪತ್ರಕರ್ತನ/ಳನ್ನು ವಿವೇಚನೆಗೆ ಒಡ್ಡಬೇಕಾದ ಅಂಶಗಳಿವು. 'ಕಳ್ಳಿ ಕಾರ್ಪೋರೇಟರ್' ಎಂಬ ಶೀರ್ಷಿಕೆಯನ್ನು ರಚಿಸುವುದಕ್ಕಿಂತ ಮೊದಲು ನಿಜವಾಗಿಯೂ ಅದು ಕಳ್ಳತನವೇ ಎಂಬೊಂದು ಅನುಮಾನ ಓರ್ವ ಪತ್ರಕರ್ತನಲ್ಲಿ ಮೂಡಿ ಬರಲೇಬೇಕಿತ್ತು. ಕಾರ್ಪೋರೇಟರ್ ಕದ್ದದ್ದೇಕೆ ಎಂಬ ಶಂಕೆಯ ಹುಳವೊಂದು ಮೆದುಳನ್ನು ಕೆರೆಯುವ ಸಂದರ್ಭ
ಸೃಷ್ಟಿಯಾಗಬೇಕಿತ್ತು. ಅಷ್ಟಕ್ಕೂ, ಬಟ್ಟೆಯ ಅಂಗಡಿಗಳಲ್ಲಿ ಸಿ.ಸಿ. ಕ್ಯಾಮೆರಾ ಇರುತ್ತದೆ, ಏನೇ ಎಡವಟ್ಟು ಮಾಡಿಕೊಂಡರೂ ಗೊತ್ತಾಗುತ್ತದೆ.. ಎಂಬ ಪ್ರಜ್ಞೆ ಲಲಿತ ಅವರನ್ನು ಬಿಡಿ ತೀರಾ ಸಾಮಾನ್ಯರಿಗೂ ಇವತ್ತು ಗೊತ್ತಿರುತ್ತದೆ. ಹೀಗಿರುತ್ತಾ ಕಾರ್ಪೋರೇಟರ್‍ರನ್ನು ಕಳ್ಳಿ ಎಂದು ಒಂದೇ ಏಟಿಗೆ ಕರೆದದ್ದನ್ನು ಏನೆಂದು ಪರಿಗಣಿಸಬೇಕು? ಪತ್ರಿಕೋದ್ಯಮದ ತುರ್ತುಗಳು ಏನೇ ಇರಲಿ, ಅದಕ್ಕಿಂತ ಓರ್ವ ವ್ಯಕ್ತಿಯ ಮಾನ ಮತ್ತು ಘನತೆ ಅಮೂಲ್ಯವಾದುದು. ತುರ್ತುಗಳ ನೆಪದಲ್ಲಿ ಓರ್ವ ವ್ಯಕ್ತಿಯ ಘನತೆಗೆ ಧಕ್ಕೆತರುವ ಸ್ವಾತಂತ್ರ್ಯ ಯಾವ ಪತ್ರಕರ್ತರಿಗೂ ಇಲ್ಲ. ಆದರೂ ಲಲಿತಾರ ಪ್ರಕರಣದಲ್ಲಿ ಮಾಧ್ಯಮಗಳು ಬೇಕಾಬಿಟ್ಟಿಯಾಗಿ ವರ್ತಿಸಿದುವು. ಓರ್ವ ಮಹಿಳೆಯಾಗಿ ಮತ್ತು ಜನಪ್ರತಿನಿಧಿಯಾಗಿ ಅವರಿಗಿರಬಹುದಾದ ಸ್ಥಾನಮಾನವನ್ನು ಪರಿಗಣಿಸದೆಯೇ ಮತ್ತು ಅವರಿಗೆ ತಮ್ಮನ್ನು ಸಮರ್ಥಿಸಿಕೊಳ್ಳುವುದಕ್ಕೆ ಇರುವ ಸ್ವಾತಂತ್ರ್ಯವನ್ನು ಮಾನ್ಯ ಮಾಡದೆಯೇ ತಾವೇ ತೀರ್ಪು ಕೊಟ್ಟವು.
 ಅಂದಹಾಗೆ, ಮಾಧ್ಯಮಗಳು ಕಟಕಟೆಯಲ್ಲಿ ನಿಲ್ಲುವುದು ಇದು ಮೊದಲ ಸಲವೇನೂ ಅಲ್ಲ. ಅವುಗಳ ಈಗಿನ ವರ್ತನೆಯನ್ನು ನೋಡಿದರೆ ಇದು ಕೊನೆಯದಾಗುವ ಸಾಧ್ಯತೆಯೂ ಇಲ್ಲ. ಪತ್ರಿಕೆಗಳು ಮತ್ತು ಚಾನೆಲ್‍ಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಪತ್ರಿಕಾ ರಂಗಕ್ಕೆ ಒಳತಾಗಬಹುದು ಎಂದೇ ಭಾವಿಸಲಾಗಿತ್ತು. ಸಣ್ಣ ಪುಟ್ಟ ಸುದ್ದಿಗಳಿಗೂ ಸ್ಪೇಸ್ ಸಿಗಬಹುದು, ಸುದ್ದಿಗೆ ನ್ಯಾಯ ಒದಗಬಹುದು, ಪಾರದರ್ಶಕತೆ ಉಂಟಾಗಬಹುದು.. ಎಂಬೆಲ್ಲ ನಿರೀಕ್ಷೆಗಳನ್ನು ಹುಟ್ಟಿಸಲಾಗಿತ್ತು. ಸಾಮಾನ್ಯವಾಗಿ, ಗ್ರಾವಿೂಣ ಪ್ರದೇಶಗಳು ಯಾವಾಗಲೂ ಮಾಧ್ಯಮ ಕಣ್ಣಿನಿಂದ ಹೊರಗಿರುತ್ತವೆ. ಅಲ್ಲಿನ ಸಮಸ್ಯೆಗಳಿಗೆ ಕ್ಯಾಮರಾ ಮತ್ತು ಪೆನ್ನು ಹಿಡಿಯುವ ಕೈಗಳು ಸಿಗುವುದು ಕಡಿಮೆ. ಪತ್ರಿಕೆ ಮತ್ತು ಟಿ.ವಿ. ಚಾನೆಲ್‍ಗಳ ಹೆಚ್ಚಳದಿಂದಾಗಿ ಈ ಕೊರತೆಗಳನ್ನು ತುಂಬಬಹುದು ಎಂದೂ ಹೇಳಲಾಗುತ್ತಿತ್ತು. ಇವತ್ತು ಈ ನಿರೀಕ್ಷೆಗಳಿಗೆ ಸ್ವಲ್ಪ ಮಟ್ಟಿನ ನ್ಯಾಯ ಸಿಕ್ಕಿವೆಯಾದರೂ ಅದಕ್ಕಿಂತಲೂ ಭಯಾನಕ ಅಪಾಯವೊಂದು ಈಗ ಸೃಷ್ಟಿಯಾಗಿಬಿಟ್ಟಿವೆ. ಅದುವೇ ಪೈಪೋಟಿ. ತಾವೇ ಮೊದಲು ಸುದ್ದಿಯನ್ನು ಬಿತ್ತರಿಸಬೇಕು ಎಂಬ ಅವಸರವು ಸರಿ-ತಪ್ಪುಗಳನ್ನು ವಿವೇಚಿಸದ ಹಂತಕ್ಕೆ ಪತ್ರಕರ್ತರನ್ನು ತಲುಪಿಸಿಬಿಟ್ಟಿವೆ. ಯಾವ ಎಚ್ಚರಿಕೆಯನ್ನೂ ಇರಿಸದೇ ಬ್ರೇಕಿಂಗ್ ನ್ಯೂಸ್, ಎಕ್ಸ್ ಕ್ಲೂಸಿವ್ ನ್ಯೂಸ್‍ಗಳನ್ನು ತಯಾರಿಸುವಷ್ಟು ಅದು ಪತ್ರಕರ್ತರನ್ನು ಸಂವೇದನಾರಹಿತಗೊಳಿಸಿವೆ. ಘನತೆ, ಗೌರವ, ಸ್ಥಾನ-ಮಾನ, ಸತ್ಯ, ಗೌಪ್ಯತೆ.. ಮುಂತಾದುವುಗಳೆಲ್ಲ ಪತ್ರಿಕೋದ್ಯಮದ ತುರ್ತುಗಳು ಮತ್ತು ಪೈಪೋಟಿಯ ರಭಸಕ್ಕೆ ಸಿಲುಕಿ ನಿಧನ ಹೊಂದುತ್ತಿವೆ. ಲಲಿತ ಅದರ ಇತ್ತೀಚಿನ ಬಲಿ. ಆದ್ದರಿಂದ ಈ ಬಲಿಗಳ ಸಂಖ್ಯೆಯಲ್ಲಿ ಇನ್ನಷ್ಟು ಹೆಚ್ಚಳ ಉಂಟಾಗದಿರಲಿಕ್ಕಾಗಿ ಮಾಧ್ಯಮ ಕ್ಷೇತ್ರವು ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ. ಮಾಧ್ಯಮ ಜಗತ್ತು ಯಾಕೆ ಸಂವೇದನಾಶೀಲವಾಗಬೇಕು ಎಂಬ ಪ್ರಶ್ನೆ ಎದ್ದಾಗಲೆಲ್ಲ ಲಲಿತ ನೆನಪಾಗಲಿ. ಅವರ ಸಾವು ಮಾಧ್ಯಮ ಕ್ಷೇತ್ರದ ಒಣ ಮನಸ್ಸುಗಳಿಗೆ ವಿವೇಚನೆಯನ್ನು ತುಂಬಲಿ.

Tuesday 25 November 2014

ಭಯೋತ್ಪಾದನೆಯ ಆರೋಪದಿಂದ ಮದ್ರಸಗಳನ್ನು ಪಾರುಗೊಳಿಸಿದ ಬಾಬಾ ರಾಮ್‍ಪಾಲ್

   ವಿದ್ಯಾರ್ಥಿ ಸಂಘಟನೆಯಾದ ಎಸ್‍ಐಓವು (ಸ್ಟುಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ), ಕಳೆದವಾರ ಬೆಂಗಳೂರಿನಲ್ಲಿ, `ಮದ್ರಸಗಳ ಪ್ರಸಕ್ತ ಸ್ಥಿತಿಗತಿಯ' ಕುರಿತಂತೆ ಸರ್ವೇ ಆಧಾರಿತ ವರದಿಯ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡ ಅದೇ ದಿನ ಮಾಧ್ಯಮಗಳಲ್ಲಿ ಶಸ್ತ್ರಾಸ್ತ್ರಗಳ ವಿವರಗಳು ಪ್ರಕಟವಾಗಿದ್ದುವು. ಹರ್ಯಾಣದ ಸ್ವಘೋಷಿತ ದೇವಮಾನವ ಬಾಬಾ ರಾಮ್‍ಪಾಲ್‍ರ ಆಶ್ರಮದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳ ವಿವರಗಳಾಗಿದ್ದುವು ಅವು. ಏರ್‍ಗನ್‍ಗಳು, ರಿವಾಲ್ವರ್‍ಗಳು, ಗ್ರೆನೇಡ್‍ಗಳು, ಸಿಡಿಮದ್ದುಗಳು, ಪೆಟ್ರೋಲ್ ಬಾಂಬ್, ಆ್ಯಸಿಡ್ ತುಂಬಿದ ಬ್ಯಾಗುಗಳು, ಆ್ಯಸಿಡ್ ಸಿರಿಂಜ್, 800 ಲೀಟರ್ ಡೀಸೆಲ್, ಮೆಣಸಿನ ಪುಡಿ.. ಸಹಿತ ಶಸ್ತ್ರಾಸ್ತ್ರಗಳ ಕಾರ್ಖಾನೆಯಲ್ಲಿ ಇರಬಹುದಾದ ಎಲ್ಲವೂ ಅಲ್ಲಿದ್ದುವು. ಒಂದು ವೇಳೆ ಆ ವಸ್ತುಗಳಲ್ಲಿ ಕೆಲವೇ ಕೆಲವು ವಸ್ತುಗಳಾದರೂ ಯಾವುದಾದರೊಂದು ಮದ್ರಸದಲ್ಲಿ ಪತ್ತೆಯಾಗಿರುತ್ತಿದ್ದರೆ ಬೆಂಗಳೂರಿನ ಆ ಕಾರ್ಯಕ್ರಮದ ಪರಿಸ್ಥಿತಿ ಏನಾಗಿರುತ್ತಿತ್ತು? ಮಾಧ್ಯಮಗಳು ಆ ಕಾರ್ಯಕ್ರಮದ ಸಂಘಟಕರನ್ನು ಹೇಗೆಲ್ಲ ಮುತ್ತಿಕೊಳ್ಳುತ್ತಿದ್ದವು? ಆ ಇಡೀ ಚರ್ಚಾಗೋಷ್ಠಿಯನ್ನೇ ಭಯೋತ್ಪಾದಕ ಕಾರ್ಯಕ್ರಮವಾಗಿ ಚಿತ್ರಿಸಲು ಏನೆಲ್ಲ ಪದ ಪ್ರಯೋಗ, ಶೀರ್ಷಿಕೆಗಳು ರಚಿತವಾಗುತ್ತಿದ್ದುವು? ರಾಜ್ಯಾದ್ಯಂತದ 84 ಮದ್ರಸಗಳ ಮೇಲೆ ಸರ್ವೆ ನಡೆಸಿ ತಯಾರಿಸಲಾದ ವರದಿಗೆ ಅವು ಏನೆಂದು ಶೀರ್ಷಿಕೆ ಕೊಡುತ್ತಿದ್ದುವು? ದುರಂತ ಏನೆಂದರೆ, ಮದ್ರಸ ಭಯೋತ್ಪಾದನೆಯ ಬಗ್ಗೆ ಮಾತಾಡುವ ಗೃಹ ಸಚಿವ ರಾಜನಾಥ್ ಸಿಂಗ್‍ರು ಈ ಶಸ್ತ್ರಾಸ್ತ್ರಗಳ ಕುರಿತಂತೆ ಇನ್ನೂ ಮೌನ ಮುರಿದಿಲ್ಲ. ಆಶ್ರಮಗಳು ಭಯೋತ್ಪಾದಕರ ಅಡಗುತಾಣವಾಗುತ್ತಿವೆಯೇ ಎಂಬೊಂದು ಅನುಮಾನಿತ ಹೇಳಿಕೆಯನ್ನು ಹೊರಡಿಸುವುದಕ್ಕೆ ಪೂರಕ ವಾತಾವರಣವಿದ್ದಾಗ್ಯೂ ಅವರು ತುಟಿ ಬಿಚ್ಚುತ್ತಿಲ್ಲ. ಮಾಧ್ಯಮಗಳು ನ್ಯಾಯಪಾಲನೆಯಲ್ಲಿ ಎಷ್ಟು ನಿಷ್ಠವಾಗಿವೆಯೆಂದರೆ, ಆ ಶಸ್ತ್ರಾಸ್ತ್ರಗಳಲ್ಲಿ ಅವುಗಳಿಗೆ ಅನುಮಾನವೇ ಬರುತ್ತಿಲ್ಲ. ಮದ್ರಸಕ್ಕೆ ಹೋಗುವ ಪುಟ್ಟ ಮಕ್ಕಳ ಟೊಪ್ಪಿಯೊಳಗೆ ಬಾಂಬಿದೆಯೇ ಎಂಬ ಪತ್ತೆದಾರಿಕೆಯಲ್ಲಿ ತೊಡಗಿದ್ದವರೆಲ್ಲ ರಾಮ್‍ಪಾಲ್‍ರ ಶಸ್ತ್ರಾಸ್ತ್ರವನ್ನು ಮುಂದಿಟ್ಟುಕೊಂಡು `ಆಶ್ರಮ ಭಯೋತ್ಪಾದನೆಯ' ಬಗ್ಗೆ ಭೀತಿಯನ್ನೂ ವ್ಯಕ್ತಪಡಿಸುತ್ತಿಲ್ಲ. ದೇಶಾದ್ಯಂತದ ಆಶ್ರಮಗಳೆಲ್ಲ ತನಿಖೆಗೆ ಒಳಗಾಗಲಿ ಎಂಬ ಹಕ್ಕೊತ್ತಾಯಗಳು ಮಾಧ್ಯಮಗಳಿಂದಾಗಲಿ, ಮದ್ರಸ ಭಯೋತ್ಪಾದನೆ ಎಂಬ ಪದವನ್ನು ಸೃಷ್ಟಿಸಿದವರಿಂದಾಗಲಿ ಕೇಳಿ ಬರುತ್ತಿಲ್ಲ. ಇವತ್ತು ರಾಮ್‍ಪಾಲ್ ಆಶ್ರಮದ ಶಸ್ತ್ರಾಸ್ತ್ರಗಳು ಮತ್ತು ಅಲ್ಲಿನ ಬೆಳವಣಿಗೆಗಳೆಲ್ಲ ಕೇವಲ ಆ ಆಶ್ರಮಕ್ಕೆ ಮಾತ್ರ ಸೀಮಿತಗೊಂಡು ಬಿಟ್ಟಿವೆ. ಮದ್ರಸ ಭಯೋತ್ಪಾದನೆಯ ಚರ್ಚೆಯು ದೇಶಾದ್ಯಂತದ ಮದ್ರಸಗಳನ್ನು ಒಳಗೊಳಿಸಿದಂತೆ ಹಾಗೂ ಪ್ರತಿ ಗಲ್ಲಿಯಲ್ಲಿ ಟೋಪಿ ಇಟ್ಟ ಪುಟ್ಟ ಮಗು ಮತ್ತು ಬಡ ಮೌಲಾನ ಕೆಂಗಣ್ಣಿಗೆ ಗುರಿಯಾದಂತೆ ಯಾವ ಆಶ್ರಮಗಳೂ  ಗುರಿಯಾಗುತ್ತಿಲ್ಲ. ಮದ್ರಸ ಭಯೋತ್ಪಾದನೆಯಂತೆ ಆಶ್ರಮ ಭಯೋತ್ಪಾದನೆ ಎಂಬ ಚೆಂದದ ಶೀರ್ಷಿಕೆಯಲ್ಲಿ ಚಾನೆಲ್‍ಗಳು ಚರ್ಚೆಯನ್ನೂ ಹಮ್ಮಿಕೊಳ್ಳುತ್ತಿಲ್ಲ.
 ನಿಜವಾಗಿ, ಮದ್ರಸ ಭಯೋತ್ಪಾದನೆ, ಆಶ್ರಮ ಭಯೋತ್ಪಾದನೆ ಮುಂತಾದ ಪದ ಪ್ರಯೋಗಗಳೇ ತಪ್ಪು. ಮದ್ರಸಗಳು, ಆಶ್ರಮಗಳು, ಇಗರ್ಜಿ, ಮಸೀದಿ, ಮಂದಿರಗಳೆಲ್ಲ ಪವಿತ್ರ ಭಾವನೆಯ ಸಂಕೇತಗಳು. ಮಾರುಕಟ್ಟೆಗೆ ಪ್ರವೇಶಿಸಿದಂತೆ ಯಾರೂ ಮಂದಿರಕ್ಕೆ ಪ್ರವೇಶಿಸುವುದಿಲ್ಲ. ಮಸೀದಿಗೆ ತೆರಳುವಾಗ ಇರುವ ಭಕ್ತಿ ಭಾವನೆಯು ಮದುವೆ ಸಭಾಂಗಣಕ್ಕೆ ಹೋಗುವಾಗ ಇರುವುದಿಲ್ಲ. ಆದರೆ ಪತ್ರಿಕೋದ್ಯಮದ ತುರ್ತುಗಳು ಮತ್ತು ಮನುಷ್ಯ ವಿರೋಧಿ ಮನಸುಗಳು ಒಟ್ಟುಗೂಡಿ ಈ ಪವಿತ್ರ ಸಂಕೇತಗಳನ್ನೇ ಭೀತಿಕಾರಕಗೊಳಿಸುವಲ್ಲಿ ಒಂದು ಹಂತದವರೆಗೆ ಇವತ್ತು ಯಶಸ್ವಿಯಾಗಿವೆ. ಈ ದೇಶದ ಯಾವ ಮದ್ರಸದಲ್ಲೂ ಬಾಬಾ ರಾಮ್‍ಪಾಲ್‍ರ ಆಶ್ರಮದಲ್ಲಿ ಸಿಕ್ಕಂತಹ ವಸ್ತುಗಳು ಈ ವರೆಗೂ ಸಿಗದಿದ್ದರೂ ಅವುಗಳನ್ನು ಸೂಜಿಮೊನೆಯಲ್ಲಿ ನಿಲ್ಲಿಸಿರುವುದಕ್ಕೆ ಈ ಕಾರಣಕ್ಕಿಂತ ಹೊರತಾದುದು ಏನೂ ಕಾಣಿಸುತ್ತಿಲ್ಲ. ಅಂದ ಹಾಗೆ, ಈ ದೇಶದ ಹೆಚ್ಚಿನೆಲ್ಲಾ ಮದ್ರಸಗಳ ಸ್ಥಿತಿ ಅತ್ಯಂತ ಶೋಚನೀಯವಾದದ್ದು. ಮೂಲಭೂತ ಸೌಕರ್ಯಗಳು ಇಲ್ಲದ, ಆಟದ ಮೈದಾನಗಳಂತಹ ವಿದ್ಯಾರ್ಥಿಸ್ನೇಹಿ ಪರಿಸರ ಇಲ್ಲದ, ಬಡ ಡೆಸ್ಕು, ಬೆಂಚು, ಕಪ್ಪು ಬೋರ್ಡು, ಚಾಕುಪೀಸುಗಳ ಪುಟ್ಟ ಜಗತ್ತಿನಲ್ಲಿ ಅವು ಉಸಿರಾಡುತ್ತಿವೆ. ಹೆಚ್ಚಿನೆಲ್ಲವೂ `ಬಡತನ ರೇಖೆಗಿಂತ' ಕೆಳಗಿರುವವುಗಳೇ. ಅಲ್ಲಿ ಕಲಿಸುವ ಮೌಲಾನರು ಕೂಡಾ ಬಡತನದ ಹಿನ್ನೆಲೆಯವರೇ. ಆರ್ಥಿಕವಾಗಿ ತೀರಾ ಸೋತು ಹೋಗಿರುವ ಒಂದು ಸಮುದಾಯದ ಕಲಿಕಾ ಕೇಂದ್ರಗಳು (ಮದ್ರಸಗಳು) ಎಲ್ಲ ಆಧುನಿಕ ಸೌಲಭ್ಯಗಳಿಂದ ಸುಸಜ್ಜಿತವಾಗಿರುವುದಕ್ಕೆ ಸಾಧ್ಯವೂ ಇಲ್ಲ. ಸಾಚಾರ್ ಸಮಿತಿಯ ವರದಿಯಲ್ಲಿ ಮುಸ್ಲಿಮರ ಸ್ಥಾನವು ದಲಿತರಿಗಿಂತ ಕೆಳಗಿರುವಾಗ ಆ ಸಮುದಾಯ ನಡೆಸುವ ಮದ್ರಸಗಳಾಗಲಿ ಮಸೀದಿಗಳಾಗಲಿ ಈ ಸ್ಥಾನದಿಂದ ಮೇಲೇರಿ ಗುರುತಿಸಿಕೊಳ್ಳುವುದನ್ನು ಯಾರೂ ಊಹಿಸಲಾರರು. ಒಂದು ರೀತಿಯಲ್ಲಿ, ಈ ದೇಶದ ಹೆಚ್ಚಿನೆಲ್ಲಾ ಮದ್ರಸಗಳಲ್ಲಿ ಕಲಿಸುವ ಮೌಲಾನಗಳಲ್ಲಿ ಮತ್ತು ಅಲ್ಲಿನ ಸೌಲಭ್ಯಗಳಲ್ಲಿ ದೊಡ್ಡದೊಂದು ಬಡತನದ ಛಾಯೆಯಿದೆ. ಇಂತಹ ಸ್ಥಿತಿಯಲ್ಲಿ, ಅವು ಬಾಂಬ್ ತಯಾರಿಕೆಯನ್ನು ಕಲಿಸುತ್ತವೆ ಎಂಬ ಆರೋಪವೇ ಅತ್ಯಂತ ಹೇಯವಾದದ್ದು. ಆದರೂ ದೇಶದಲ್ಲಿ ಅಂಥದ್ದೊಂದು ಆರೋಪವನ್ನು ಯಶಸ್ವಿಯಾಗಿ ಹೊರಿಸಲಾಗಿದೆ. ಕರ್ನಾಟಕದಲ್ಲಿರುವ ಎಲ್ಲ ಮದ್ರಸಗಳ ಒಟ್ಟು ಆಸ್ತಿಗೆ ಸಮಾನವಾಗುವಷ್ಟು ಸಂಪತ್ತನ್ನು ಕೇವಲ ಬಾಬಾ ರಾಮ್‍ಪಾಲ್‍ರ ಆಶ್ರಮವೊಂದೇ ಹೊಂದಿದ್ದರೂ ಮದ್ರಸಗಳು ಭಯೋತ್ಪಾದಕವಾಗಿಯೂ ರಾಮ್‍ಪಾಲ್‍ರ ಆಶ್ರಮ ಕ್ರಿಮಿನಲ್ ಆರೋಪಗಳಿಗಾಗಿಯೂ ಗುರುತಿಸಿಕೊಳ್ಳುತ್ತಿವೆ. ಬಹುಶಃ ಬಡ ಮದ್ರಸಗಳು ಮತ್ತು ಅದರ ಪುಟ್ಟ ಮಕ್ಕಳಿಗಿಲ್ಲದ ಕೆಲವೊಂದು ವಿಶೇಷತೆಗಳು ಇಂಥ ಆಶ್ರಮಗಳಿಗಿರುವುದೇ ಇದಕ್ಕೆ ಕಾರಣ. ಆಶ್ರಮಗಳಿಗಿರುವ ರಾಜಕೀಯ ಪ್ರಭಾವ ಮದ್ರಸಗಳಿಗಿಲ್ಲ. ಬೇಕಾದಾಗ ರಾಜಕೀಯ ಪಕ್ಷಗಳಿಗೆ ಕಪ್ಪುಹಣ ಒದಗಿಸುವ ತಾಕತ್ತೂ ಅವುಗಳಿಗಿಲ್ಲ. ವಿಜೃಂಭಣೆಯ ಕಾರ್ಯಕ್ರಮಗಳನ್ನು ನಡೆಸುವ ಸಂಪತ್ತೂ ಅವುಗಳ ಬಳಿಯಿಲ್ಲ. ಇಷ್ಟೆಲ್ಲ ದೌರ್ಬಲ್ಯಗಳನ್ನು ಹೊಂದಿರುವ ಕೇಂದ್ರಗಳು ವ್ಯವಸ್ಥೆಯ ಅವಕೃಪೆಗಲ್ಲದೇ ಕೃಪೆಗೆ ಪಾತ್ರವಾಗುವುದನ್ನು ಇಂದಿನ ರಾಜಕೀಯ ಪರಿಸ್ಥಿತಿಯಲ್ಲಿ ಊಹಿಸುವುದು ತೀರಾ ಕಷ್ಟ.
   ಅಂದಹಾಗೆ, ಬಾಬಾ ರಾಮ್‍ಪಾಲ್‍ರ ಆಶ್ರಮದಲ್ಲಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳ ವಿವರಗಳು ಪ್ರಕಟವಾದ ದಿನವೇ ಮದ್ರಸಗಳ ಸ್ಥಿತಿಗತಿಗಳ ಕುರಿತಂತೆ ಸರ್ವೇ ಆಧಾರಿತ ವರದಿ ಬೆಂಗಳೂರಿನಲ್ಲಿ ಬಿಡುಗಡೆಗೊಂಡದ್ದು ಕಾಕತಾಳೀಯವೇ ಆಗಿರಬಹುದು. ಆದರೆ, ಕೆಲವೊಮ್ಮೆ ಅಂಥ ಕಾಕತಾಳೀಯದಲ್ಲೂ ಸೂಕ್ಷ್ಮ ಸಂದೇಶಗಳಿರುತ್ತವೆ. ಮದ್ರಸಗಳನ್ನು ಕೆಲವು ವರ್ಷ ಗಳಿಂದ ಭೂತಗನ್ನಡಿಯಿಟ್ಟು ನೋಡುತ್ತಿದ್ದವರಿಗೆ ರಾಮ್‍ಪಾಲ್ ಒಂದು ಸವಾಲು ಎಸೆದಿದ್ದಾರೆ. ನಿಮ್ಮ ಭೂತಗನ್ನಡಿ ಎಷ್ಟು ಪ್ರಾಮಾಣಿಕವಾಗಿದೆ ಎಂಬುದೇ ಆ ಸವಾಲು. ಮದ್ರಸಗಳ ಮೇಲೆ ಪತ್ತೆದಾರಿ ಕ್ಯಾಮರಾ ಇಟ್ಟವರು ಮತ್ತು ಇಡಬಯಸುವವರು ಈ ಸವಾಲನ್ನು ಅತ್ಯಂತ ಪ್ರಾಮಾಣಿಕತೆಯಿಂದ ಸ್ವೀಕರಿಸಬೇಕಾಗಿದೆ. ಭಯೋತ್ಪಾದನೆ, ಅತ್ಯಾಚಾರ, ಹತ್ಯಾಕಾಂಡ ಕೋಮುವಾದ... ಇವೆಲ್ಲ ಯಾವುದಾದರೊಂದು ಧಾರ್ಮಿಕ ಪಾಠ ಪುಸ್ತಕದ ಉತ್ಪನ್ನವಲ್ಲ. ಅದೊಂದು ಮನಸ್ಥಿತಿ. ಆ ಮನಸ್ಥಿತಿಯ ಹುಟ್ಟಿಗೆ ಮನೆ, ಪರಿಸರ, ಸಹವಾಸ ಮತ್ತಿತರ ಸಂಗತಿಗಳು ಕಾರಣವೇ ಹೊರತು ನಿರ್ದಿಷ್ಟ ಧರ್ಮಗಳೋ ಅದರ ಕಲಿಕಾ ಕೇಂದ್ರಗಳೋ ಅಲ್ಲ. ಬಂಧನದ ಮೂಲಕ ರಾಮ್‍ಪಾಲ್ ಸಾರಿದ ಈ ಸಂದೇಶವನ್ನು ಮದ್ರಸ ಭಯೋತ್ಪಾದನೆ ಎಂಬ ಸುಳ್ಳು ಭೂತವನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಬ್ಬಿಸುತ್ತಿರುವ ಎಲ್ಲರೂ ಕೇಳಿಸಿಕೊಳ್ಳಬೇಕು. ಕೆಡುಕುನ್ನು ನಿರ್ದಿಷ್ಟ ಧರ್ಮಕ್ಕೆ ಅಥವಾ ಸಂಕೇತಗಳಿಗೆ ಸೇರಿಸದೆಯೇ ಜಾತ್ಯತೀತವಾಗಿ ನೋಡುವ ಪ್ರಾಮಾಣಿಕತೆ ಬೆಳೆದು ಬರಬೇಕು. ಮದ್ರಸದ ಕುರಿತಾದ ವರದಿಯ ಮೂಲಕ ಇಂಥದ್ದೊಂದು ಅವಲೋಕನಕ್ಕೆ ಪ್ರೇರಣೆ ಕೊಟ್ಟ ಎಸ್.ಐ.ಓ.ವನ್ನು ಅಭಿನಂದಿಸೋಣ. ಹಾಗೆಯೇ ರಾಮ್‍ಪಾಲ್‍ರಿಗೆ ಕೃತಜ್ಞತೆ ಸಲ್ಲಿಸೋಣ.

Wednesday 19 November 2014

ಪ್ರತಿ ಪ್ರತಿಭಟನೆಯ ಅಗತ್ಯವನ್ನು ಸಾರಿದ ನಂದಿತಾ ಪ್ರಕರಣ

   
ತೀರ್ಥಹಳ್ಳಿ ಶಾಂತವಾಗಿದೆ. ನಂದಿತಾ ಎಂಬ ಮಗುವಿನ ಮೃತದೇಹವನ್ನು ನೆಪವಾಗಿಟ್ಟುಕೊಂಡು ನಿರ್ದಿಷ್ಟ ಮನೆಗಳಿಗೆ ಕಲ್ಲೆಸೆದವರು, ವಾಹನಗಳಿಗೆ ಬೆಂಕಿ ಕೊಟ್ಟವರು ಮತ್ತು ಅವಾಚ್ಯ ಪದಗಳನ್ನು ಬಳಸಿದವರೆಲ್ಲ ಈಗ ಮೌನವಾಗಿದ್ದಾರೆ. ಸಿಓಡಿ ತನಿಖೆಯ ಒಂದೊಂದೇ ವಿವರಗಳು ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಲೂ ಇವೆ. ನಂದಿತಾ ಪ್ರಕರಣವನ್ನು ಅವರು ಹಿಂದೂ ಮುಸ್ಲಿಮ್ ಆಗಿ ವಿಭಜಿಸಿದ್ದರು. ಆ ಮಗುವಿನ ಮೇಲೆ ಅತ್ಯಾಚಾರವಾಗಿದೆ ಎಂದು ಆರೋಪಿಸಿದ್ದರು. ಡೆತ್‍ನೋಟ್ ಆಕೆ ಬರೆದೇ ಇಲ್ಲ ಎಂದು ಹೇಳಿದ್ದರು. ಬಹುಶಃ, ಬದುಕಿರುವಾಗ ನಂದಿತಾ ಇಷ್ಟಪಡದೇ ಇರಬಹುದಾದ ವಾತಾವರಣವನ್ನು ಆಕೆಯ ಜಡದೇಹವನ್ನು ಮುಂದಿಟ್ಟುಕೊಂಡು ಅವರೆಲ್ಲ ಸೃಷ್ಟಿ ಮಾಡಿದರು. ಆ ಸಾವಿನ ಹೊಣೆಯನ್ನು ಮುಸ್ಲಿಮ್ ಸಮುದಾಯ ಹೊರಬೇಕು ಎಂಬ ರೀತಿಯಲ್ಲಿ ಆರೋಪಗಳೂ ಪ್ರಚಾರಗಳೂ ನಡೆದುವು. ಆದ್ದರಿಂದ, ಇದೀಗ ಸೃಷ್ಟಿಯಾಗಿರುವ ಶಾಂತ ವಾತಾವರಣವನ್ನು ಆ ಒಟ್ಟು ಪ್ರಕರಣದ ಅವಲೋಕನಕ್ಕಾಗಿ ಬಳಸಿಕೊಳ್ಳಬೇಕಿದೆ. ಮಗು ಯಾರದ್ದಾದರೂ ಮಗುವೇ. ಮಗುವಿನ ಹೆಸರು ‘ನಂದಿತಾ' ಎಂದಿರುವ ಕಾರಣಕ್ಕಾಗಿ ಆಕೆಯನ್ನು ಹಿಂದೂವಾಗಿಸುವುದು ಅಥವಾ ಆರೋಪಿಯ ಹೆಸರು ಸುಹಾನ್ ಎಂದಿದೆ ಎಂಬ ಕಾರಣಕ್ಕಾಗಿ ಆತನನ್ನು ಮುಸ್ಲಿಮ್ ಆಗಿಸುವುದು ಮತ್ತು ಈ ಆಧಾರದಲ್ಲಿಯೇ ಇಡೀ ಘಟನೆಯನ್ನು ನಾವು ಮತ್ತು ಅವರು ಎಂದು ವಿಭಜಿಸಿ ನೋಡುವುದೆಲ್ಲ ಧರ್ಮಗಳಿಗೆ ಮಾತ್ರವಲ್ಲ, ಆಯಾ ಧರ್ಮಗಳು ಸಾರುವ ಮಾನವತೆಯ ಸಂದೇಶಗಳಿಗೂ ವಿರುದ್ಧ. ಓರ್ವ ಸಂತ್ರಸ್ತೆ ಎಂಬ ನೆಲೆಯಲ್ಲಿ ನಂದಿತಾ ಎಲ್ಲರ ಮಗಳು. ಆದ್ದರಿಂದಲೇ ಆಕೆಯ ಮೇಲಾದ ಅನ್ಯಾಯವು ಹಿಂದೂ-ಮುಸ್ಲಿಮ್ ಎಂಬ ವರ್ಗೀಕರಣವಿಲ್ಲದೆ ಎಲ್ಲರ ಖಂಡನೆಗೂ ಅರ್ಹವಾದದ್ದು. ನಿಜವಾಗಿ, ನಂದಿತಾ ಪ್ರಕರಣದಲ್ಲಿ ಪ್ರತಿಭಟನೆಗೆ ಇಳಿಯಬೇಕಾದದ್ದು ಹಿಂದೂಗಳೋ ಮುಸ್ಲಿಮರೋ ಕ್ರೈಸ್ತರೋ ಆಗಿರಲಿಲ್ಲ. ಈ ವಿಭಜನೆಯ ಹಂಗಿಲ್ಲದೇ ಮನುಷ್ಯರೆಂಬ ನೆಲೆಯಲ್ಲಿ ಒಂದುಗೂಡಲು ಎಲ್ಲರಿಗೂ ಸಾಧ್ಯವಾಗಬೇಕಿತ್ತು. ದುರಂತ ಏನೆಂದರೆ, ಇವತ್ತು ಅನ್ಯಾಯಗಳೂ ಪ್ರತಿಭಟನೆಗಳೂ ವರ್ಗೀಕರಣಗೊಂಡುಬಿಟ್ಟಿವೆ. ಪ್ರತಿಭಟನೆ ಹಮ್ಮಿಕೊಳ್ಳುವವರಲ್ಲೂ ಬೇರೆ ಬೇರೆ ಉದ್ದೇಶಗಳಿವೆ. ಆ ಉದ್ದೇಶಗಳು ಕೆಲವೊಮ್ಮೆ ಎಷ್ಟು ಅಪಾಯಕಾರಿ ಎಂದರೆ ಅಂಥ ಪ್ರತಿಭಟನೆಯಲ್ಲಿ ಸ್ವತಃ ಸಂತ್ರಸ್ತ ಕುಟುಂಬವೇ ಭಾಗವಹಿಸಲಾರದಷ್ಟು. ಹೀಗಿರುವಾಗ, ಬೇರೆ ಬೇರೆ ಧರ್ಮಗಳಲ್ಲಿ ಗುರುತಿಸಿಕೊಂಡಿರುವ ಮಂದಿ ಆ ಗುರುತನ್ನು ಬದಿಗಿಟ್ಟು ಒಂದಾಗಬೇಕೆನ್ನುವ ಆಶಯವನ್ನು ಅಷ್ಟು ಸುಲಭದಲ್ಲಿ ಜಾರಿಗೊಳಿಸಲು ಸಾಧ್ಯವಿಲ್ಲ. ತೀರ್ಥಹಳ್ಳಿಯ ಪ್ರಕರಣವನ್ನೇ ಎತ್ತಿಕೊಳ್ಳಿ. ಆ ಪ್ರತಿಭಟನೆಯ ಗುರಿ ಏನಿತ್ತು? ಪ್ರತಿಭಟನಾಕಾರರ ಹಾವ-ಭಾವಗಳು ಹೇಗಿದ್ದುವು? ಅಲ್ಲಿ ಕೇಳಿ ಬರುತ್ತಿರುವ ಘೋಷಣೆಗಳು ಏನಾಗಿದ್ದುವು? ನಂದಿತಾಳ ಸಾವಿಗೆ ಕಾರಣ ಏನೆಂಬುದು ಖಚಿತಗೊಳ್ಳುವ ಮೊದಲೇ ಅವರು ಕಾರಣವನ್ನು ಪತ್ತೆಹಚ್ಚಿದವರಂತೆ ವರ್ತಿಸಿದ್ದರಲ್ಲದೇ ಅನ್ಯಾಯವನ್ನು ಖಂಡಿಸಬಯಸುವ ಮುಸ್ಲಿಮ್, ಕ್ರೈಸ್ತ ಮತ್ತು ಹಿಂದೂಗಳ ದೊಡ್ಡದೊಂದು ವರ್ಗವು ಅದರಲ್ಲಿ ಭಾಗವಹಿಸದಷ್ಟು ಆ ಪ್ರತಿಭಟನೆಯನ್ನು ಅವರು ಹದಗೆಡಿಸಿಬಿಟ್ಟಿದ್ದರು. ಇಡೀ ಪ್ರತಿಭಟನೆ ಏಕಮುಖವಾಗಿತ್ತು. ನಂದಿತಾಳ ಭಾವನೆಗಳನ್ನು ಪ್ರತಿನಿಧಿಸುವ ಏನೇನೂ ಅಲ್ಲಿರಲಿಲ್ಲ. ನಂದಿತಾ ಇಲ್ಲದ ಮನೆಯನ್ನು ಕಲ್ಪಿಸಿ ಕಣ್ಣೀರಾಗುವ ಹೆತ್ತವರಿಗೆ ಸಾಂತ್ವನವಾಗಬಹುದಾದದ್ದೂ ಅಲ್ಲಿರಲಿಲ್ಲ. ಯಾಕೆ ಹೀಗಾಯಿತೆಂದರೆ, ಪ್ರತಿಭಟನೆಯ ಕೇಂದ್ರೀಯ ಉದ್ದೇಶ ನಂದಿತಾ ಆಗಿಯೇ ಇರಲಿಲ್ಲ. ರಾಜಕೀಯ ಮತ್ತಿತರ ಅಂಶಗಳು ನಂದಿತಾಳ ನೆಪದಲ್ಲಿ ಮುನ್ನೆಲೆಗೆ ಬಂದುವು. ನಿಂದನೆ, ಬೈಗುಳ, ಬೆಂಕಿಯಿಡುವಿಕೆಗಳೆಲ್ಲ ಅದರದ್ದೇ ಉತ್ಪನ್ನ. ನಿಜವಾಗಿ, ಒಂದು ಮಗುವಿಗೆ ಸಲ್ಲಿಸುವ ಶ್ರದ್ಧಾಂಜಲಿಯ ಸ್ವರೂಪ ಈ ರೀತಿಯಲ್ಲಿರಬಾರದಿತ್ತು. ಸಮಾಜದ ಸರ್ವರೂ ಪಾಲುಗೊಳ್ಳುವ ಮತ್ತು ಮಗುವಿನ ಮೇಲಾದ ಅನ್ಯಾಯವನ್ನು ಏಕಧ್ವನಿಯಲ್ಲಿ ಪ್ರಶ್ನಿಸುವ ವಾತಾವರಣವೊಂದು ಕಾಣಿಸಿಕೊಳ್ಳಬೇಕಿತ್ತು. ಸದ್ಯ ತಣ್ಣಗಾಗಿರುವ ತೀರ್ಥಹಳ್ಳಿಯನ್ನು ಎದುರಿಟ್ಟುಕೊಂಡು ನಾವೆಲ್ಲ ಇಂಥ ಸಾಧ್ಯತೆಗಳ ಬಗ್ಗೆ ಚರ್ಚಿಸಬೇಕಿದೆ.
   ಅಂದಹಾಗೆ, ನಂದಿತಾಳ ಮೇಲೆ ಅನ್ಯಾಯ ಎಸಗಿದವರಿಗೆ ಶಿಕ್ಷೆ ಆಗುವುದಷ್ಟೇ ಇವತ್ತಿನ ಅಗತ್ಯ ಅಲ್ಲ, ಆಕೆಯ ಹೆಸರಲ್ಲಿ ಅನ್ಯಾಯ ಎಸಗಿದವರಿಗೆ ಶಿಕ್ಷೆ ಆಗಬೇಕಾದುದೂ ಅಷ್ಟೇ ಅಗತ್ಯ. ವಿಶೇಷ ಏನೆಂದರೆ, ಈ ದೇಶದಲ್ಲಿ ಇಂಥ ವಿಭಜನವಾದಿ ಪ್ರತಿಭಟನೆಗಳು ಆಗಾಗ ನಡೆಯುವುದಿದೆ. ತೀರ್ಥಹಳ್ಳಿಗಿಂತ ನಾಲ್ಕೈದು ತಿಂಗಳ ಮೊದಲು ಉತ್ತರ ಪ್ರದೇಶದ ವಿೂರತ್‍ನಲ್ಲೂ ಇಂಥದ್ದೇ ಪ್ರತಿಭಟನೆ ನಡೆದಿತ್ತು. ಪ್ರೀತಿಸಿದ ಎರಡು ಜೀವಗಳನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಿ ಅದಕ್ಕೆ ಲವ್ ಜಿಹಾದ್ ಎಂಬೊಂದು ಹೆಸರನ್ನು ಕೊಟ್ಟು ಇಡೀ ರಾಜ್ಯವನ್ನೇ ಅಲುಗಾಡಿಸಲಾಗಿತ್ತು. ಸತ್ಯಾಸತ್ಯತೆ ಬಹಿರಂಗವಾಗುವುದಕ್ಕಿಂತ ಮೊದಲೇ ಪ್ರತಿಭಟನಾಕಾರರು ಇಡೀ ಪ್ರಕರಣವನ್ನು ತನಿಖೆ ನಡೆಸಿದವರಂತೆ ವರ್ತಿಸಿದ್ದರು. ನಿರ್ದಿಷ್ಟ ಧರ್ಮವನ್ನು ನಿಂದಿಸುವುದಕ್ಕೆ ಆ ಘಟನೆಯನ್ನು ಬಳಸಿಕೊಂಡಿದ್ದರು. ‘ಬಹು ಬನಾವೋ ಭೇಟಿ ಬಚಾವೋ’ ಎಂಬ ಅಭಿಯಾನವನ್ನು ಆ ಘಟನೆಯ ನೆಪದಲ್ಲಿ ಹಮ್ಮಿಕೊಂಡಿದ್ದರು. ನಮ್ಮ ಈಶ್ವರಪ್ಪನವರಂತೆ ಸಂಸದರಾದ ಮಹಂತ ಅವೈದ್ಯನಾಥ್ ಅಲ್ಲಿ ಮಾತಾಡಿದ್ದರು. ಹೀಗೆ ವಿೂರತ್ ನಗರ ಉರಿದ ಬಳಿಕ ಸತ್ಯವು ಬಹಿರಂಗವಾಯಿತು. ಸುಳ್ಳು ಹೇಳಿಕೆ ಕೊಡುವಂತೆ ಯುವತಿಯ ತಂದೆಗೆ ಲಂಚ ಕೊಡಲಾದದ್ದೂ ಸೇರಿ ಆ ಇಡೀ ವಾಸ್ತವಾಂಶಗಳು ಬೆಳಕಿಗೆ ಬಂದುವು. ಆದರೆ ಅವು ದೊಡ್ಡ ಸದ್ದು ಮಾಡಲಿಲ್ಲ. ದಿನಂಪ್ರತಿ ಸ್ವಲ್ಪಸ್ವಲ್ಪವೇ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿ ತಣ್ಣಗಾಗಿ ಬಿಟ್ಟವು. ತೀರ್ಥಹಳ್ಳಿ ಕೂಡ ಸದ್ಯ ಅದೇ ಹಾದಿಯಲ್ಲಿ ಸಾಗುತ್ತಿರುವಂತಿದೆ. ಉದ್ವಿಗ್ನಗೊಂಡಿದ್ದ ತೀರ್ಥಹಳ್ಳಿ ಇವತ್ತು ಶಾಂತವಾಗಿದೆ. ಈ ವಾತಾವರಣದಲ್ಲಿ ನಂದಿತಾಳಿಗೆ ಸಂಬಂಧಿಸಿ ನಿಜ ವರದಿಗಳು ದಿನಂಪ್ರತಿ ವರದಿಯಾಗುತ್ತಿವೆ. ಒಂದು ರೀತಿಯಲ್ಲಿ, ತೀರ್ಥಹಳ್ಳಿಯನ್ನು ಉರಿಸಿದ ಪ್ರತಿಭಟನಾಕಾರರನ್ನು ಪ್ರಶ್ನಿಸಬೇಕಾದ ಸಂದರ್ಭ ಇದು. ನಂದಿತಾಳ ಮೇಲಾಗಿರಬಹುದಾದ ಅನ್ಯಾಯವನ್ನು ಸರ್ವ ಧರ್ಮೀಯರೂ ತಮ್ಮ ಮಗಳ ಮೇಲಿನ ಅನ್ಯಾಯ ಎಂದು ಪರಿಗಣಿಸಿ ಆಕೆಯ ಹೆಸರಲ್ಲಿ ತೀರ್ಥಹಳ್ಳಿಯನ್ನು ಉರಿಸಿದವರ ಉದ್ದೇಶ ಶುದ್ಧಿಯನ್ನು ಏಕಧ್ವನಿಯಲ್ಲಿ ಪ್ರಶ್ನಿಸಬೇಕಾಗಿದೆ. ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಬೇಕಾಗಿದೆ. ಸಮಾಜದ ಹಿತದೃಷ್ಟಿಯಿಂದ ಇಂಥದ್ದೊಂದು ಪ್ರತಿ ಪ್ರತಿಭಟನೆಯ ಅಗತ್ಯ ಇವತ್ತು ಬಹಳ ಇದೆ. ಸಮಾಜವನ್ನು ವಿಭಜಿಸುವ ಪ್ರತಿಭಟನೆಗಳಿಗೆ ಸಮಾಜದಿಂದ ಸವಾಲು ಎದುರಾಗುವುದು ಒಂದು ಆರೋಗ್ಯಕರ ಬೆಳವಣಿಗೆ. ಒಂದು ಘಟನೆಗೆ ಸುಳ್ಳು ಸ್ವರೂಪವನ್ನು ಕೊಟ್ಟು ಸಮಾಜವನ್ನು ವಿಭಜಿಸಿದವರನ್ನು ಸತ್ಯ ಸುದ್ದಿ ಹೊರಬಿದ್ದ ಬಳಿಕ ತರಾಟೆಗೆತ್ತಿಕೊಳ್ಳುವುದರಿಂದ ದೊಡ್ಡದೊಂದು ಬದಲಾವಣೆ ಸಾಧ್ಯವಿದೆ. ಹೀಗೆ ಮಾಡಿದರೆ, ವದಂತಿಗಳನ್ನು ಹರಡುವವರು ಆ ಬಳಿಕ ತುಸು ಎಚ್ಚರಿಕೆಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಕ್ಕೆ ಅವಕಾಶವಿದೆ. ಅದೇ ರೀತಿ ವ್ಯವಸ್ಥೆಯ ಮೇಲೂ ಈ ಕುರಿತಂತೆ ಒತ್ತಡ ಹೇರಬೇಕಾಗಿದೆ. ಅನ್ಯಾಯವನ್ನು ಒಂದು ನಿರ್ದಿಷ್ಟ ಸಮುದಾಯದ ಮೇಲೆ ಹೇರಿ ರಾಜಕೀಯವೋ ಇನ್ನಾವುದೋ ಲಾಭವನ್ನು ಪಡಕೊಳ್ಳುವುದಕ್ಕೆ ಪ್ರಯತ್ನಿಸುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕಾದ ಅಗತ್ಯವೂ ಇದೆ. ಇಲ್ಲದಿದ್ದರೆ ಈ ಸಮಾಜವನ್ನು ಉದ್ವಿಗ್ನಗೊಳಿಸುವುದಕ್ಕೆ ನಾಳೆ ಇನ್ನೊಂದು ಪ್ರಕರಣ ಹೇತುವಾಗಬಹುದು. ಸತ್ಯದ ಎದೆಗೆ ತುಳಿದಂತೆ ಅದರ ವ್ಯಾಖ್ಯಾನಗಳು ನಡೆಯಬಹುದು. ಮತ್ತೆ ಕಲ್ಲೆಸೆತ, ಬೆಂಕಿ, ಕರ್ಫ್ಯೂಗಳಿಗೂ ಅದು ಕಾರಣವಾಗಬಹುದು. ಅದಾಗುವುದಕ್ಕಿಂತ ಮೊದಲು ಪ್ರತಿ ಪ್ರತಿಭಟನೆಗಳ ಏರ್ಪಾಡುಗಳು ನಡೆಯಬೇಕು. ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಗುರುತುರಹಿತ ಪಾಲುಗೊಳ್ಳುವಿಕೆಗಳು ಆ ಪ್ರತಿಭಟನೆಯಲ್ಲಿ ನಡೆಯಬೇಕು. ಸುಳ್ಳನ್ನು ಹರಡಿ ಸಮಾಜವನ್ನು ಉದ್ವಿಗ್ನಗೊಳಿಸುವವರನ್ನು ಬಹುಸಂಖ್ಯಾತ ಸಮಾಜವು ತಿರಸ್ಕರಿಸುವುದಕ್ಕೆ ಮುಂದಾಗುವಷ್ಟು ಆ ಪ್ರತಿಭಟನೆ ಪ್ರಭಾವಶಾಲಿಯಾಗಬೇಕು. ನಂದಿತಾ ಪ್ರಕರಣವು ಇಂಥದ್ದೊಂದು ಬೆಳವಣಿಗೆಗೆ ಕಾರಣವಾಗುವುದಾದರೆ ಖಂಡಿತ ಆ ಸಾವನ್ನು ಬಲಿದಾನವೆಂದೇ ಸ್ವೀಕರಿಸಿ ಗೌರವಿಸೋಣ.

Tuesday 11 November 2014

ಜನನ ಪ್ರಕ್ರಿಯೆಯೇ ನಿಂತು ಹೋಗುವ ಜೀವನಕ್ರಮವನ್ನು ಬೆಂಬಲಿಸಬೇಕೇ?

    
   ಮೊನ್ನೆ ಅಕ್ಟೋಬರ್ 30ರಂದು ಅಮೇರಿಕದ ಬ್ಲೂಮ್‍ಬರ್ಗ್ ಬಿಸಿನೆಸ್ ವೀಕ್ ಪತ್ರಿಕೆಯಲ್ಲಿ ಪ್ರಕಟವಾದ ಬರಹವೊಂದಕ್ಕೆ ಪ್ರತಿಕ್ರಿಯೆಯಾಗಿ ಮರುದಿನ ಅಕ್ಟೋಬರ್ 31ರಂದು ರಶ್ಯದಲ್ಲಿ ಸ್ಮಾರಕವೊಂದನ್ನು ಉರುಳಿಸಲಾಯಿತು. ವಿಶ್ವಪ್ರಸಿದ್ಧ ಆ್ಯಪಲ್ ಕಂಪೆನಿಯ ಸ್ಥಾಪಕ ಅಮೇರಿಕದ ಸ್ಟೀವ್ ಜಾಬ್ಸ್ ರ ಈ ಸ್ಮಾರಕವನ್ನು ರಶ್ಯಾದ ಸೈಂಟ್ ಪೀಟರ್ಸ್‍ಬರ್ಗ್ ಕಾಲೇಜಿನ ಎದುರುಗಡೆ  2013 ಜನವರಿಯಲ್ಲಿ ಸ್ಥಾಪಿಸಲಾಗಿತ್ತು. ಸ್ಟೀವ್ ಜಾಬ್ಸ್ ರಿಗೆ ಜಾಗತಿಕವಾಗಿಯೇ ವಿಶೇಷ ಮನ್ನಣೆಯಿದೆ. ಅವರ ಸುತ್ತ ಬೆರಗಿನ ನೂರಾರು ಕತೆಗಳಿವೆ. ಶೂನ್ಯದಿಂದ ಒಂದು ಕಂಪೆನಿಯನ್ನು ಕಟ್ಟಿ ಬೆಳೆಸುವಲ್ಲಿ ಅವರು ತೋರಿದ ತಾಳ್ಮೆ, ಬುದ್ಧಿವಂತಿಕೆ, ಶ್ರಮ, ಉತ್ಸಾಹಗಳೆಲ್ಲ ಇವತ್ತು ಕೋಟ್ಯಂತರ ಮಂದಿಯನ್ನು ಪ್ರಭಾವಿತಗೊಳಿಸಿವೆ. ವರ್ಷಗಳ ಹಿಂದೆ ಕ್ಯಾನ್ಸರ್‍ನಿಂದಾಗಿ ಅವರು ಮೃತಪಟ್ಟಾಗ ಝೆಪ್ಸ್(ZEFS) ಎಂಬ ಹೆಸರಿನ ರಶ್ಯಾದ ಉದ್ಯಮಿಗಳ ಸಂಘಟನೆಯು ಅವರನ್ನು ಸ್ಮಾರಕವಾಗಿ ನಿಲ್ಲಿಸಬೇಕೆಂದು ತೀರ್ಮಾನಿಸಿತು. ಅದರಂತೆ ಎರಡು ವಿೂಟರ್ ಎತ್ತರದ ಮತ್ತು ಐ ಪೋನ್ (i Phone) ಆಕೃತಿಯ ಸ್ಮಾರಕವು 2013 ಜನವರಿಯಲ್ಲಿ ಸೈಂಟ್ ಪೀಟರ್ಸ್‍ಬರ್ಗ್‍ನಲ್ಲಿ ತಲೆ ಎತ್ತಿತು. ರಶ್ಯಾ ಮತ್ತು ಅಮೇರಿಕದ ಮಧ್ಯೆ ಸಂಬಂಧ ಉತ್ತಮವಾಗಿಲ್ಲದಿದ್ದರೂ ಜಾಬ್ಸ್ ಆ ಸಂಬಂಧಗಳಾಚೆಗೆ ಪ್ರಭಾವವನ್ನು ಬೀರಿದ್ದ. ಆದರೆ ಅದೇ ಆ್ಯಪಲ್ ಕಂಪೆನಿಯ ನೂತನ ಮುಖ್ಯಸ್ಥ (ಸಿಇಓ) ಅಮೇರಿಕದ ಟಿಮ್ ಕುಕ್‍ರು ತಾನು ಸಲಿಂಗ ಕಾಮಿ (ಗೇ) ಎಂದು ಬಿಸಿನೆಸ್ ವೀಕ್ ಪತ್ರಿಕೆಯಲ್ಲಿ ಮೊನ್ನೆ ಅಕ್ಟೋಬರ್ 30ರಂದು ಘೋಷಿಸಿದರು. ತನ್ನ ರಾಜ್ಯವಾದ ಅಲಬಾಮದಲ್ಲಿ ‘ಗೇ' ಮದುವೆಗೆ ಅನುಮತಿಯಿಲ್ಲದಿರುವುದನ್ನು ಅವರು ಟೀಕಿಸಿದರು. ಸಲಿಂಗ ಕಾಮವು ತನ್ನ ಹಕ್ಕು ಮತ್ತು ಸ್ವಾತಂತ್ರ್ಯ ಎಂದು ಅವರು ಪ್ರತಿಪಾದಿಸಿದರು. ಇದರ ಮರುದಿನವೇ ಜಾಬ್ಸ್ ರ ಸ್ಮಾರಕವನ್ನು ರಶ್ಯಾದಲ್ಲಿ ಉರುಳಿಸಲಾಯಿತು. ಸಲಿಂಗ ಕಾಮದ ಪರ ಪ್ರಚಾರಾಂದೋಲನವನ್ನು ತಡೆಗಟ್ಟಲು ಕಠಿಣ ಕಾನೂನುಗಳನ್ನು ಜಾರಿಗೆ ತರಬೇಕೆಂದು ಝೆಪ್ಸ್ ಆಗ್ರಹಿಸಿತು. ಒಂದು ವೇಳೆ ಸ್ಟೀವ್ ಜಾಬ್ಸ್ ರ ಪ್ರತಿಮೆಯನ್ನು ತೆರವುಗೊಳಿಸದಿದ್ದರೆ ಅದು ಮುಂದೆ ಸಲಿಂಗ ಹೋರಾಟಕ್ಕೆ ಪ್ರೇರಣೆ ನೀಡಲು ಅವಕಾಶವಿದೆ ಎಂದೂ ಅದು ವಾದಿಸಿತು.
 ಒಂದು ರೀತಿಯಲ್ಲಿ, ನೈತಿಕ-ಅನೈತಿಕಗಳು ಅನಾದಿ ಕಾಲದಿಂದಲೂ ಚರ್ಚೆಗೊಳಗಾಗುತ್ತಾ ಬಂದಿದೆ. ಜಗತ್ತು ಬೌದ್ಧಿಕವಾಗಿ ಮತ್ತು ತಾಂತ್ರಿಕವಾಗಿ ವಿಕಸಿತವಾದಂತೆಲ್ಲ ಇಂಥ ಚರ್ಚೆಗಳು ಬಿರುಸನ್ನು ಪಡೆಯುತ್ತಲೂ ಇವೆ. ವೇಶ್ಯಾವಾಟಿಕೆ ಕಾನೂನುಬದ್ಧಗೊಳ್ಳಬೇಕೋ ಬೇಡವೋ ಎಂಬುದು ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಹುಟ್ಟಿಕೊಂಡ ಚರ್ಚೆ. ಸಲಿಂಗ ಮದುವೆಗೆ ಅನುಮತಿ ನೀಡಬೇಕೆಂದು ಕೋರಿ ಈಗಾಗಲೇ ಸುಪ್ರೀಮ್ ಕೋರ್ಟಿಗೆ ಅರ್ಜಿಯನ್ನೂ ಸಲ್ಲಿಸಲಾಗಿದೆ. ಬಹುಶಃ, ಮುಂದಿನ ದಿನಗಳಲ್ಲಿ ಇಂಥ ಅರ್ಜಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲೂ ಬಹುದು. ಯಾಕೆಂದರೆ, ಪ್ರಕೃತಿ ನಿಯಮವನ್ನು ವಿೂರುವುದೇ ಬದುಕು ಎಂದು ಆಲೋಚಿಸುವ ಮತ್ತು ಅದನ್ನು ತನ್ನ ಸ್ವಾತಂತ್ರ್ಯವೆಂದು ಪ್ರತಿಪಾದಿಸುವ ಬೆಳವಣಿಗೆಗಳಿಗೆ ಆಧುನಿಕ ಜಗತ್ತಿನಲ್ಲಿ ಮಾನ್ಯತೆ ಲಭ್ಯವಾಗುತ್ತಿದೆ. ತೋಚಿದಂತೆ ಬದುಕುವುದನ್ನೇ ಜೀವನ ಕ್ರಮ ಎಂದು ಹೇಳಿಕೊಡಲಾಗುತ್ತಿದೆ. ಈ ಜೀವನ ಕ್ರಮದಲ್ಲಿ ವೇಶ್ಯಾವಾಟಿಕೆಯೂ ಸ್ವಾತಂತ್ರ್ಯ. ಸಲಿಂಗ ರತಿಯೂ ಸ್ವಾತಂತ್ರ್ಯ. ಲಿವ್ ಇನ್ ಟುಗೆದರೂ ಸ್ವಾತಂತ್ರ್ಯ. ಆದರೆ ಇವುಗಳ ಜೊತೆಗೇ ಕೆಲವು ಪ್ರಶ್ನೆಗಳೂ ಉದ್ಭವಿಸುತ್ತವೆ. ಇಂಥ ಸ್ವಾತಂತ್ರ್ಯಗಳು ಅಂತಿಮವಾಗಿ ಸಮಾಜವನ್ನು ಎಲ್ಲಿಗೆ ತಲುಪಿಸಬಲ್ಲುದು? ಜನನ ಮತ್ತು ಮರಣ ಎಂಬುದು ಪ್ರಕೃತಿ ನಿಯಮ. ಅದರಲ್ಲೊಂದು ಸಮತೋಲನದ ಉದ್ದೇಶವಿದೆ. ಆ ಸಮತೋಲನದ ಮೇಲೆ ಮಾನವ ಜಗತ್ತು ಸ್ವಾಮ್ಯವನ್ನು ಪಡಕೊಳ್ಳಲು ಪ್ರಯತ್ನಿಸಿದಾಗಲೆಲ್ಲ ಪ್ರಕೃತಿ ಮುನಿದಿದೆ. ತನ್ನ ಅಸಮಾಧಾನವನ್ನು ವಿವಿಧ ರೂಪದಲ್ಲಿ ಹೊರಗೆಡಹಿದೆ. ಕುಟುಂಬಕ್ಕೊಂದೇ ಮಗು ಎಂಬ ಕಾನೂನನ್ನು ಅತ್ಯಂತ ಕಠಿಣವಾಗಿ ಜಾರಿಗೊಳಿಸಿದ ದೇಶ ಚೀನಾ. ಆ ನಿಯಮವು ಇವತ್ತು ಚೀನಾದ ಲಿಂಗಾನುಪಾತದಲ್ಲಿ ಎಷ್ಟು ಆಳವಾದ ಗಾಯವನ್ನು ಮೂಡಿಸಿಬಿಟ್ಟಿದೆಯೆಂದರೆ, ಇದೀಗ ಆ ನಿಯಮವನ್ನೇ ಸಡಿಲಿಸಬೇಕಾಗಿ ಬಂದಿದೆ. ಒಂದೇ ಮಗು ಎಂದಾಗ ಹೆಚ್ಚಿನ ಕುಟುಂಬಗಳೆಲ್ಲ ಗಂಡು ಮಗುವನ್ನೇ ಬಯಸಿದುವು. ಹೆಣ್ಣು ಮಕ್ಕಳನ್ನು ಹೊಟ್ಟೆಯಲ್ಲೇ ಕೊಲ್ಲುವ ಕ್ರೌರ್ಯಕ್ಕೂ ಅದು ಕಾರಣವಾಯಿತು. ಚೀನಾ ಎಂದಲ್ಲ ನಮ್ಮದೇ ದೇಶದ ಹರ್ಯಾಣ ಮತ್ತಿತರ ರಾಜ್ಯಗಳಲ್ಲಿ ಹೆಣ್ಣು ಮಕ್ಕಳ ಸಂಖ್ಯೆಯಲ್ಲಿ ತೀವ್ರ ಕುಸಿತಕ್ಕೆ ಪ್ರಕೃತಿ ವಿರೋಧಿ ಗಂಡು ಪ್ರೇಮವೇ ಕಾರಣವಾಗಿದೆ. ಹರ್ಯಾಣದಲ್ಲಿ ಇವತ್ತು ಹೆಣ್ಣಿನ ಬರ ಎಷ್ಟು ಬಿಗಡಾಯಿಸಿದೆ
ಟಿಮ್ ಕುಕ್‍
ಎಂದರೆ ಬಿಹಾರದಿಂದ ವಧುಗಳನ್ನು ಹರ್ಯಾಣಕ್ಕೆ ತಂದು ಮದುವೆ ಮಾಡಿಸಲಾಗುತ್ತಿದೆ. ವಧುಗಳ ಬರದಿಂದ ಹರ್ಯಾಣದ ಪುರುಷ ಜಗತ್ತು ಕಂಗೆಟ್ಟಿದೆ. ಇಂಥ ಸ್ಥಿತಿಯಲ್ಲಿ ಸಲಿಂಗ ಕಾಮದ ಕಾನೂನು ಬದ್ಧತೆಯನ್ನೊಮ್ಮೆ ಕಲ್ಪಿಸಿಕೊಳ್ಳಿ. ಈ ಜೀವನ ಕ್ರಮದಲ್ಲಿ ಗಂಡು-ಗಂಡನ್ನು ವಿವಾಹವಾಗುತ್ತಾನೆ ಅಥವಾ ಒಟ್ಟಾಗಿ ಬದುಕುತ್ತಾನೆ. ದೈಹಿಕ ಸುಖವನ್ನು ಪರಸ್ಪರ ಹಂಚಿಕೊಳ್ಳಲಾಗುತ್ತದೆ.
 ನಿಜವಾಗಿ, ಹೆಣ್ಣು ಮತ್ತು ಗಂಡಿನ ನಡುವೆ ಪ್ರಕೃತಿಯೇ ಅನುರಾಗವನ್ನು ಇಟ್ಟಿದೆ. ಆ ಅನುರಾಗದ  ಹಿಂದೆ ಇರುವ ಉದ್ದೇಶವು ಕೇವಲ ದೈಹಿಕ ಸುಖವನ್ನು ಹಂಚಿಕೊಳ್ಳುವುದು ಮಾತ್ರವೇ ಅಲ್ಲ. ಆ ಅನುರಾಗದ ಮೂಲಕ ಜನನ ಪ್ರಕ್ರಿಯೆಗೆ ಒಂದು ವೇದಿಕೆಯನ್ನು ಸಿದ್ಧಪಡಿಸಲಾಗುತ್ತದೆ. ಮದುವೆ ಎಂಬ ಸಾಮಾಜಿಕ ಮಾನ್ಯತೆಯಡಿಯಲ್ಲಿ ಹೆಣ್ಣು-ಗಂಡು ಒಟ್ಟಾಗುತ್ತಾರೆ. ಆ ಮೂಲಕ ಭವಿಷ್ಯದ ಪೀಳಿಗೆಯ ಉದಯವನ್ನೂ ನಿರೀಕ್ಷಿಸಲಾಗುತ್ತದೆ. ಹೀಗೆ ಹೆಣ್ಣು-ಗಂಡು ಪರಸ್ಪರ ಆಕರ್ಷಿತಗೊಳ್ಳುವುದು, ಮದುವೆಯಲ್ಲಿ ಒಂದಾಗುವುದು ಮತ್ತು ಹೊಸ ಪೀಳಿಗೆಗೆ ಜನ್ಮ ಕೊಡುವ ಮೂಲಕ ಮಾನವ ಸಂತತಿಯ ಬೆಳವಣಿಗೆಯು ಮುಂದುವರಿಯುವಂತೆ ನೋಡಿಕೊಳ್ಳಲಾಗುತ್ತದೆ. ಆದರೆ ಸಲಿಂಗ ಮದುವೆಯಲ್ಲಿ ಈ ಪ್ರಕ್ರಿಯೆಗೆ ಅವಕಾಶಗಳೇ ಇಲ್ಲ. ಸಲಿಂಗ ಕಾಮ ಎಂಬುದು ಕೇವಲ ದೈಹಿಕ ಸುಖವನ್ನು ಅನುಭವಿಸುವುದಕ್ಕಿರುವ ಒಂದು ವೇದಿಕೆಯೇ ಹೊರತು ಅದರಿಂದ ಮಾನವ ಜಗತ್ತಿಗೆ ಯಾವ ಕೊಡುಗೆಯೂ ಸಿಗುವುದಿಲ್ಲ. ಅದೊಂದು ಒಣ ಬದುಕು. ಅಲ್ಲಿ ಮಕ್ಕಳಿಲ್ಲ. ಆದ್ದರಿಂದಲೇ ಆ ಬದುಕು ಅವರಲ್ಲಿಗೇ ಕೊನೆಗೊಳ್ಳುತ್ತದೆ. ಅಂದಹಾಗೆ, ಸಲಿಂಗ ಕಾಮವು ಸ್ವಾತಂತ್ರ್ಯದ ಹೆಸರಲ್ಲಿ ಕಾನೂನುಬದ್ಧಗೊಂಡರೆ, ಅದು ಬೀರುವ ಪರಿಣಾಮ ಹೇಗಿರಬಹುದು? ಸಲಿಂಗ ಮದುವೆಗಳು ಜನಪ್ರಿಯಗೊಳ್ಳುವುದರಿಂದ ಸಮಾಜದಲ್ಲಿ ಏನೇನು ಬದಲಾವಣೆಗಳಾಗಬಹುದು? ಗದ್ದೆಗಳು, ಕಾರ್ಖಾನೆಗಳು, ಶಾಲೆಗಳು ಸಹಿತ ವಿವಿಧ ಕ್ಷೇತ್ರಗಳ ಪರಿಸ್ಥಿತಿ ಹೇಗಿದ್ದೀತು? ಜನನ ಪ್ರಕ್ರಿಯೆ ನಿಂತು ಹೋದ ಅಥವಾ ಭಾರೀ ಪ್ರಮಾಣದಲ್ಲಿ ಕುಸಿತ ಕಂಡ ಸಮಾಜದಲ್ಲಿ ಗದ್ದೆಯನ್ನು ಉಳುವವರಾದರೂ ಯಾರಿರುತ್ತಾರೆ? ಮಕ್ಕಳು, ಕುಟುಂಬ ಎಂಬೊಂದು ಪರಿಸರವೇ ಓರ್ವರನ್ನು ಗದ್ದೆ ಉಳುವುದಕ್ಕೆ, ಬೆಳೆ ಬೆಳೆಯುವುದಕ್ಕೆ ಅಥವಾ ಕೃಷಿ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಹೆಚ್ಚಿನ ಬಾರಿ ಪ್ರೇರೇಪಿಸುತ್ತದೆ. ಮಕ್ಕಳೇ ಇಲ್ಲದ ಕುಟುಂಬದಲ್ಲಿ ಕೃಷಿ ಚಟುವಟಿಕೆ, ಸಂಪಾದನೆಯ ಉತ್ಸಾಹ ಸಹಜವಾಗಿಯೇ ಕಡಿಮೆ. ಹಾಗೆಯೇ, ಯುವ ಪೀಳಿಗೆಯ ಅಭಾವದಿಂದಾಗಿ ಕಾರ್ಖಾನೆಗಳು ಮುಚ್ಚಬಹುದು. ಉತ್ಪಾದನಾ ರಂಗದಲ್ಲಿ ತೀವ್ರ ಕುಸಿತ
ಉಂಟಾಗಬಹುದು. ಶಾಲೆಗಳ ಅಗತ್ಯವೇ ಕಂಡುಬರಲಾರದು. ಅಂಥದ್ದೊಂದು ಸಾಧ್ಯಾಸಾಧ್ಯತೆ ಎದುರಿರುವುದರಿಂದಲೇ ಪವಿತ್ರ ಕುರ್‍ಆನ್ ಸಹಿತ ಧಾರ್ಮಿಕ ಗ್ರಂಥಗಳು ಸಲಿಂಗ ಕಾಮವನ್ನು ಕಠಿಣವಾಗಿ ವಿರೋಧಿಸಿವೆ. ಮಾತ್ರವಲ್ಲ, ಈ ಕೃತ್ಯವನ್ನು ಜೀವನ ಕ್ರಮವಾಗಿ ಅಳವಡಿಸಿಕೊಂಡಿದ್ದ ಲೂತ್ ಎಂಬ ಹೆಸರಿನ ಪುರಾತನ ಸಮೂಹವೇ ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವುದನ್ನು (ಅಧ್ಯಾಯ 11) ವಿವರಿಸಿದೆ.
 ಏನೇ ಆಗಲಿ, ಪ್ರಕೃತಿ ಮತ್ತು ವಿಕೃತಿಗಳ ನಡುವೆ ಎಷ್ಟೆಲ್ಲ ಅರ್ಥ ವ್ಯತ್ಯಾಸ ಮತ್ತು ಭಾವ ವ್ಯತ್ಯಾಸಗಳಿವೆಯೋ ಅಷ್ಟೇ ವ್ಯತ್ಯಾಸ ಸಲಿಂಗ ಕಾಮ ಮತ್ತು ವ್ಯಕ್ತಿ ಸ್ವಾತಂತ್ರ್ಯದ ನಡುವೆಯೂ ಇದೆ. ಅವೆರಡರ ನಡುವೆ ಪರಸ್ಪರ ಸಂಧಿಸದಷ್ಟು ಅಂತರವಿದೆ. ಸ್ವಾತಂತ್ರ್ಯವು ಪ್ರಕೃತಿದತ್ತವಾದರೆ ಸಲಿಂಗ ಕಾಮವು ಪ್ರಕೃತಿ ವಿರೋಧಿ. ಅವೆರಡರ ನಡುವೆ ಸಂಘರ್ಷ ಏರ್ಪಡಬಹುದೇ ಹೊರತು ಸಹಮತವಲ್ಲ. ಟಿಮ್ ಕುಕ್‍ರ ಬರಹಕ್ಕೆ ಉರುಳಿದ ಸ್ಟೀವ್ ಜಾಬ್ಸ್ ರ ಸ್ಮಾರಕವೇ ಇದಕ್ಕೆ ಅತ್ಯುತ್ತಮ ಪುರಾವೆ.

Tuesday 4 November 2014

ಒಂದು ಸಾವಿನ ಸುತ್ತ..

   ವಾರನ್ ಆ್ಯಂಡರ್ಸನ್ ಎಂಬ ಕಾರ್ಪೋರೇಟ್ ದೊರೆಯ ಸಾವು ಮತ್ತು ಅಂತ್ಯ ಸಂಸ್ಕಾರವು ಜಗತ್ತಿನ ಗಮನಕ್ಕೆ ಬಾರದೆಯೇ ನಡೆದು ಹೋಗಿದೆ. ಅಮೇರಿಕದ ಫ್ಲೋರಿಡಾದಲ್ಲಿರುವ ವೆರೋ ಬೀಚ್ ನರ್ಸಿಂಗ್ ಹೋಮ್‍ನಲ್ಲಿ ಸೆ. 29ರಂದು ಆತ ಮೃತಪಟ್ಟಿದ್ದರೂ ಅದನ್ನು ಆತನ ಕುಟುಂಬಸ್ಥರು ಒಂದು ತಿಂಗಳ ಬಳಿಕ ಮೊನ್ನೆ ಅಕ್ಟೋಬರ್ 31ರಂದು ಜಗತ್ತಿನ ಗಮನಕ್ಕೆ ತಂದಿದ್ದಾರೆ. ಮರುದಿನವೇ ಮಧ್ಯಪ್ರದೇಶದಲ್ಲಿ ರಾಲಿಗಳು ನಡೆದಿವೆ. ಆ ಸಾವನ್ನು ‘ದೇವನು ಕೊಟ್ಟ ಶಿಕ್ಷೆ' ಎಂದು ಆ ರಾಲಿಯಲ್ಲಿ ಬಣ್ಣಿಸಲಾಗಿದೆ. ನಿಜವಾಗಿ, 1984 ಡಿಸೆಂಬರ್ 2ರ ವರೆಗೆ ವಾರನ್ ಆ್ಯಂಡರ್ಸನ್ ಜಗತ್ತಿನ ಬಹುದೊಡ್ಡ ಗೌರವಾರ್ಹ ವ್ಯಕ್ತಿ. ಅತಿ ದೊಡ್ಡ ಕಾರ್ಪೋರೇಟ್ ಕುಳ. ಆತ ಯೂನಿಯನ್ ಕಾರ್ಬೈಡ್ ಕಾರ್ಪೋರೇಶನ್ನಿನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ (CEO) ಬೆಳೆದು ಬಂದ ರೀತಿಯನ್ನು ಮಧ್ಯಪ್ರದೇಶದಲ್ಲಿ ಮಾತ್ರವಲ್ಲ, ಅಮೇರಿಕದಲ್ಲೂ ಅತ್ಯಂತ ಅಚ್ಚರಿಯೊಂದಿಗೆ ವರ್ಣಿಸಲಾಗುತ್ತಿತ್ತು. ಆತ ಸಾಹಸಮಯ ಕತೆಯೊಂದರ ಪಾತ್ರವಾಗಿದ್ದ. ಅಮೇರಿಕಕ್ಕೆ ವಲಸೆ ಬಂದ ಕುಟುಂಬವೊಂದರಲ್ಲಿ 1921ರಲ್ಲಿ ಓರ್ವ ಕಾರ್ಪೆಂಟರ್‍ನ ಮಗನಾಗಿ ಜನಿಸಿದ್ದು, ಯೂನಿಯನ್ ಕಾರ್ಬೈಡ್ ಕಂಪೆನಿಯಲ್ಲಿ ಸೇಲ್ಸ್‍ಮ್ಯಾನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದು ಮತ್ತು ಕ್ರಮೇಣ ಆ ಕಂಪೆನಿಯ ಸಿಇಓ ಆದದ್ದು.. ಎಲ್ಲವೂ ಹಲವಾರು ಭಾಷಣಗಳಿಗೆ ವಸ್ತುವಾಗಿತ್ತು. ಆ ಬಗ್ಗೆ ಬರಹಗಳೂ ಪ್ರಕಟವಾಗಿದ್ದುವು. ಆ್ಯಂಡರ್ಸನ್‍ನ ಆಕೃತಿಯು ಈ ಮಟ್ಟದಲ್ಲಿ ಅಜಾನುಬಾಹು ರೂಪ ಪಡೆದಿದ್ದರಿಂದಲೇ 1984 ಡಿ. 6ರಂದು ಭೋಪಾಲ್ ಅನಿಲ ದುರಂತ ಆರೋಪದಲ್ಲಿ ಆತನ ಬಂಧನವಾದಾಗ ಖ್ಯಾತ ಉದ್ಯಮಿ ಜೆ.ಆರ್.ಡಿ. ಟಾಟಾರವರು ಆಘಾತ ವ್ಯಕ್ತಪಡಿಸಿದ್ದು. ಆ್ಯಂಡರ್ಸನ್‍ನ ಬಂಧನವು ತನ್ನನ್ನು ಗಾಬರಿ ಮತ್ತು ಬೆರಗುಗೊಳಿಸಿದೆ ಎಂದವರು ಹೇಳಿದ್ದರು. ಭಾರತೀಯ ಉದ್ಯಮ ವಲಯವು ಬಂಧನವನ್ನು ಅನ್ಯಾಯದ ಕ್ರಮ ಎಂದು ಖಂಡಿಸಿದ್ದುವು. ಬಹುಶಃ ಬಂಧನದ ಮರುದಿನವೇ ಜಾವಿೂನು ಪಡೆದುಕೊಂಡು ಸರಕಾರ ವ್ಯವಸ್ಥೆ ಮಾಡಿದ ವಿಶೇಷ ವಿಮಾನದಲ್ಲಿ ಆತ ಅಮೇರಿಕಕ್ಕೆ ಹಾರಿರುವುದಕ್ಕೆ ಉದ್ಯಮ ವಲಯದ ಈ ಆಘಾತ, ಖಂಡನೆ, ಅಚ್ಚರಿಗಳು ದೊಡ್ಡ ಪಾತ್ರ ವಹಿಸಿರಬಹುದು. ಹಾಗೆ ತೆರಳಿದ ಆ್ಯಂಡರ್ಸನ್ ಮತ್ತೆಂದೂ ಭಾರತಕ್ಕೆ ಹಿಂದಿರುಗಲಿಲ್ಲ. ಭಾರತವು ಆತನನ್ನು ತಲೆಮರೆಸಿಕೊಂಡ ಆರೋಪಿ ಎಂದು ಘೋಷಿಸಿತು. ಹಾಗೆ ಘೋಷಿಸುವಾಗ ಘೋಷಿಸಿದ ಭಾರತಕ್ಕೂ ಆತನನ್ನು ಸ್ವಾಗತಿಸಿದ ಅಮೇರಿಕಕ್ಕೂ ಆತ ಎಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂಬುದು ಚೆನ್ನಾಗಿ ಗೊತ್ತಿತ್ತು. ಅಂದಿನಿಂದ ಇಂದಿನ ವರೆಗೆ ಸುಮಾರು 30 ವರ್ಷಗಳು ಕಳೆದುಹೋಗಿವೆ. ಈ ಮಧ್ಯೆ ಅನೇಕ ಬಾರಿ ಭಾರತ ಮತ್ತು ಅಮೇರಿಕದ ಅಧಿಕಾರಿಗಳ ನಡುವೆ ಮಾತುಕತೆ ನಡೆದಿವೆ. ಎರಡೂ ದೇಶಗಳ ಅಧ್ಯಕ್ಷರು ಪರಸ್ಪರ ಭೇಟಿಯಾಗಿದ್ದಾರೆ. ಅಣು ತಂತ್ರಜ್ಞಾನ, ಶಸ್ತ್ರಾಸ್ತ್ರ, ವ್ಯಾಪಾರ ನೀತಿ.. ಸಹಿತ ಹತ್ತಾರು ಒಪ್ಪಂದಗಳು ಏರ್ಪಟ್ಟಿವೆ. ಆದರೂ ತನಿಖೆಗಾಗಿ ಆ್ಯಂಡರ್ಸನ್‍ನನ್ನು ಪಡೆದುಕೊಳ್ಳಲು ಭಾರತಕ್ಕೆ ಸಾಧ್ಯವಾಗಿಲ್ಲ. ಭಾರತದ ಅಧ್ಯಕ್ಷರು  ಅಮೇರಿಕಕ್ಕೆ ಭೇಟಿ ನೀಡುವ ಅಥವಾ ಅಮೇರಿಕದ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡುವ ಸಂದರ್ಭಗಳಲ್ಲೆಲ್ಲಾ ಮಧ್ಯಪ್ರದೇಶದ ಭೋಪಾಲ್‍ನಲ್ಲಿ ಪ್ರತಿಭಟನೆ ನಡೆಯುತ್ತದೆ. 1984 ಡಿ. 3ರಂದು ನಡೆದ ಅನಿಲ ದುರಂತದಲ್ಲಿ ಸಾವಿಗೀಡಾದ ಸಾವಿರಾರು ಮಂದಿಯ ಕುಟುಂಬಸ್ಥರು, ಅಂಗವಿಕಲರಾದವರು, ವಿಷಾಂಶಗಳು ತುಂಬಿಕೊಂಡ ಭೂಮಿಯನ್ನು ಬಿಡಲೂ ಆಗದೆ ಇರಲೂ ಆಗದೆ ಸಂಕಟ ಪಡುವವರೆಲ್ಲ ಅಲ್ಲಿ ಆ್ಯಂಡರ್ಸನ್‍ನ ಫೋಟೋ ಹಿಡಿದು ನ್ಯಾಯಕ್ಕಾಗಿ ಆಗ್ರಹಿಸುತ್ತಾರೆ. ವಿಕಾರವಾಗಿ ಬೆಳೆದ ತಲೆ, ಕಣ್ಣು, ಕಿವಿ, ದೇಹಗಳುಳ್ಳ ಮಕ್ಕಳನ್ನು ತಂದು ಮಾಧ್ಯಮಗಳ ಮುಂದೆ ಪ್ರದರ್ಶಿಸುತ್ತಾರೆ. ಆದರೆ ಕಾರ್ಪೋರೇಟ್ ಲಾಬಿಯ ಮುಂದೆ ಅವೆಲ್ಲವೂ ವಿಫಲವಾಗುತ್ತಲೇ ಹೋಗಿವೆ. ಇದೀಗ ಪ್ರಕೃತಿಯೇ ಆತನನ್ನು ಸೆಳೆದುಕೊಂಡಿದೆ. ‘ಭೋಪಾಲ್ ದುರಂತವು ಅವರನ್ನು ಹಲವು ವರ್ಷಗಳಿಂದ ಮಾನಸಿಕವಾಗಿ ಬೇಟೆಯಾಡುತ್ತಿತ್ತು’ ಎಂದು ಪತ್ನಿ ಲಿಯಾನ್‍ರು CBS ನ್ಯೂಸ್‍ಗೆ ಹೇಳಿದ್ದರಲ್ಲಿಯೇ ಆ್ಯಂಡರ್ಸನ್‍ನ ಪಾಪಪ್ರಜ್ಞೆ, ಮಾನಸಿಕ ಸಂಘರ್ಷವನ್ನು ಊಹಿಸಬಹುದು.
 ಭೋಪಾಲ್ ದುರಂತದ ಸಂತ್ರಸ್ತರು ಆ್ಯಂಡರ್ಸನ್‍ನ ಫೋಟೋವನ್ನು ಕೈಬಿಟ್ಟು ಇನ್ನು ಡೌ ಕೆಮಿಕಲ್ ಕಂಪೆನಿಯ ಮುಖ್ಯಸ್ಥ ಆ್ಯಂಡ್ರ್ಯೂ ಲಿವೆರಿಸ್‍ರ  ಫೋಟೋವನ್ನು ಎತ್ತಿಕೊಳ್ಳುವುದಾಗಿ ಘೋಷಿಸಿದ್ದಾರೆ. ಯಾಕೆ ಹೀಗೆ ಎಂದರೆ, ಯೂನಿಯನ್ ಕಾರ್ಬೈಡ್ ಕಂಪೆನಿಯನ್ನು ಇವತ್ತು ಅಮೇರಿಕದ್ದೇ ಆದ ಡೌ ಕಂಪೆನಿ ಖರೀದಿಸಿದೆ. ಮಾತ್ರವಲ್ಲ, ದುರಂತದ ಬಗ್ಗೆ ತನಗಾವ ಹೊಣೆಗಾರಿಕೆಯೂ ಇಲ್ಲ ಎಂದೂ ಅದು ಹೇಳಿಕೊಂಡಿದೆ. ಒಂದು ರೀತಿಯಲ್ಲಿ, ಇದು ಬಹುತೇಕ ಎಲ್ಲ ಕಾರ್ಪೋರೇಟರ್‍ಗಳ ಮನಸ್ಥಿತಿ. ಅವರಿಗೆ ಈ ದೇಶದ ಮಣ್ಣು ಬೇಕು, ನೀರು ಬೇಕು, ಉದ್ಯಮ ಸ್ನೇಹಿ ವಾತಾವರಣ, ತೆರಿಗೆ ರಹಿತ ಸರಕಾರಿ ಸೌಲಭ್ಯಗಳು ಬೇಕು. ಆದರೆ ಜನರ ಆರೋಗ್ಯ, ಅಭಿವೃದ್ಧಿಯನ್ನು ಹೆಚ್ಚಿನ ಬಾರಿ ಅವರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಪಶ್ಚಿಮ ಬಂಗಾಲದ ಸಿಂಗೂರು, ಕೇರಳದ ಪ್ಲಾಚಿಮಾಡ, ತಮಿಳ್ನಾಡಿನ ಕುಡಂಕುಲಂ, ಮಹಾರಾಷ್ಟ್ರದ ಜೈತಾಪುರ, ನಮ್ಮದೇ ರಾಜ್ಯದ ಗದಗ, ದಕ್ಷಿಣ ಕನ್ನಡ.. ಎಲ್ಲೆಡೆಯೂ ಕಾರ್ಪೋರೇಟ್ ಉದ್ಯಮಗಳು ಜನಸಾಮಾನ್ಯರನ್ನು ಪೀಡಿಸಿವೆ. ಅವರ ಭೂಮಿಯನ್ನು ಕಬಳಿಸುವುದಕ್ಕಾಗಿ ರಾತೋರಾತ್ರಿ ಬುಲ್ಡೋಜರ್‍ಗಳನ್ನು ಹರಿಸಿವೆ. ಕೃಷಿ ಭೂಮಿ, ಫಲವತ್ತಾದ ತೋಟ, ಮನೆಗಳನ್ನು ಅವು ಧ್ವಂಸಗೊಳಿಸಿವೆ. ಜನರ ಸುರಕ್ಷಿತತೆಗಿಂತ ತಮ್ಮ ಉದ್ಯಮದ ಸುರಕ್ಷಿತತೆಯನ್ನೇ ಮುಖ್ಯವಾಗಿಸಿಕೊಂಡು ಕಾರ್ಯಾಚರಿಸುವ ಶೈಲಿ ಕಾರ್ಪೋರೇಟ್ ಕಂಪೆನಿಗಳದ್ದು. ಭೋಪಾಲ್ ದುರಂತದ ಹಿಂದೆಯೂ ಇಂಥದ್ದೇ ಒಂದು ಕತೆಯಿದೆ. ಯೂನಿಯನ್ ಕಾರ್ಬೈಡ್ ಕಾರ್ಖಾನೆಯಲ್ಲಿ  ತಾಂತ್ರಿಕ ತೊಂದರೆಗಳಿರುವ ಬಗ್ಗೆ ಆ್ಯಂಡರ್ಸನ್‍ಗೆ ಆ ಮೊದಲೇ ಮಾಹಿತಿಯಿತ್ತು ಎಂದು ಹೇಳಲಾಗುತ್ತಿದೆ. ಸೋರಿಕೆ ಉಂಟಾದರೆ ತೆಗೆದುಕೊಳ್ಳಬೇಕಾದ ತುರ್ತು ಕ್ರಮಗಳ ವಿಷಯದಲ್ಲೂ ತೀವ್ರ ಅಸಡ್ಡೆ ವಹಿಸಲಾಗಿತ್ತು ಎಂಬ ಆರೋಪವೂ ಇದೆ. ತನ್ನ 65ನೇ ಹುಟ್ಟು ಹಬ್ಬದ ಆಚರಣೆಯ ಮತ್ತಿನಲ್ಲಿ ಆತ ಕಾರ್ಖಾನೆಯ ಲೋಪದೋಷಗಳನ್ನು ಕಡೆಗಣಿಸಿದ್ದ ಎಂಬ ಅಭಿಪ್ರಾಯವೂ ಇದೆ. ಅಂತೂ ಜಾಗತಿಕವಾಗಿಯೇ ಅತಿದೊಡ್ಡ ದುರಂತಕ್ಕೆ ಕಾರಣನಾದ ಆತ ಕೊನೆಯ ವರೆಗೂ ಯಾವ ವಿಚಾರಣೆ, ಶಿಕ್ಷೆಯೂ ಇಲ್ಲದೇ ಬದುಕಿದ್ದಾನೆ. ಒಂದು ವೇಳೆ, ಆ್ಯಂಡರ್ಸನ್ ಭಾರತದವನಾಗಿದ್ದು ಅನಿಲ ದುರಂತವು ಅಮೇರಿಕದ ನ್ಯೂಯಾರ್ಕ್‍ನಲ್ಲೋ ಫ್ಲೋರಿಡಾದಲ್ಲೋ ಸಂಭವಿಸಿರುತ್ತಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತು? ಅಮೇರಿಕದಿಂದ ಆತ ತಪ್ಪಿಸಿಕೊಳ್ಳಲು ಸಾಧ್ಯವಿತ್ತೇ? ಒಂದು ವೇಳೆ ತಪ್ಪಿಸಿಕೊಂಡರೂ ಆತನನ್ನು ಮರಳಿಸುವಂತೆ ಭಾರತದ ಮೇಲೆ ಅದು ಒತ್ತಡ ಹಾಕುತ್ತಿರಲಿಲ್ಲವೇ? ಬಗ್ಗದಿದ್ದರೆ ಭಾರತಕ್ಕೆ ಕಾರ್ಪೋರೇಟ್ ಕಂಪೆನಿಗಳು ಕಾಲಿಡದಂತೆ ಅದು ನೋಡಿಕೊಳ್ಳುತ್ತಿರಲಿಲ್ಲವೇ? ದಿಗ್ಬಂಧನ ವಿಧಿಸುತ್ತಿರಲಿಲ್ಲವೇ?
 ಏನೇ ಆಗಲಿ, ಆ್ಯಂಡರ್ಸನ್‍ನ ಸಾವು ಎಲ್ಲ ಕಾರ್ಪೋರೇಟ್ ದೊರೆಗಳಿಗೂ ಪಾಠವಾಗಬೇಕು. ಅವರ ಹಣಬಲ, ಜನಬಲ, ಬುಲ್ಡೋಜರ್‍ಗಳನ್ನು ಎದುರಿಸುವ ಸಾಮರ್ಥ್ಯ ರೈತರ ನೇಗಿಲಿಗೆ, ಎತ್ತಿಗೆ ಅಥವಾ ಜನಸಾಮಾನ್ಯರ ಗುಡಿಸಲುಗಳಿಗೆ ಇಲ್ಲದೇ ಇರಬಹುದು. ಆದರೆ ತೋಳ್ಬಲವೊಂದೇ ಸಾಮರ್ಥ್ಯದ ಮಾನದಂಡವಲ್ಲ. ಕೆಲವೊಮ್ಮೆ ಕಣ್ಣೀರಿಗೂ ಪ್ರಾರ್ಥನೆಗೂ ಅದರ ನೂರು ಪಟ್ಟು ಅಧಿಕ ಸಾಮರ್ಥ್ಯ ಇರುತ್ತದೆ. ಆ್ಯಂಡರ್ಸನ್‍ನ ಕದ್ದು ಮುಚ್ಚಿದ ಬದುಕು ಮತ್ತು ರಹಸ್ಯ ಸಾವು ಇದನ್ನೇ ಹೇಳುತ್ತದೆ.

Tuesday 28 October 2014

ಪ್ರಾಣಿಗಳು ತಯಾರಿಸುವ ಪಟ್ಟಿ ಮತ್ತು ಬಾಬಾ ರಾಮ್‍ದೇವ್

   ಆಸ್ಟ್ರೇಲಿಯಾದಿಂದ ಎರಡು ಸುದ್ದಿಗಳು ಹೊರಬಿದ್ದಿವೆ. ಎರಡು ಕೂಡ ಮನುಷ್ಯರಿಗೆ ಸಂಬಂಧಿಸಿದ್ದು. ಬಡಿತ ನಿಲ್ಲಿಸಿದ ಹೃದಯಕ್ಕೆ ಚೇತರಿಕೆ ನೀಡಿ ಅದನ್ನು ಮತ್ತೊಬ್ಬರಿಗೆ ಕಸಿ ಮಾಡಬಹುದು ಎಂಬುದನ್ನು ಅಲ್ಲಿನ ವೈದ್ಯರು ಪ್ರಾಯೋಗಿಕವಾಗಿ ತೋರಿಸಿಕೊಟ್ಟಿದ್ದಾರೆ. ಮಾತ್ರವಲ್ಲ, ಹಾಗೆ ಕಸಿ ಮಾಡಿಸಿಕೊಂಡ ಮೂವರು ಹೃದ್ರೋಗಿಗಳು ಈಗ ಚೇತರಿಸುತ್ತಿದ್ದಾರೆ ಎಂಬ ಅಚ್ಚರಿಯ ಸುದ್ದಿಯನ್ನೂ ಅವರು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನೊಂದು ಸುದ್ದಿ ಕೂಡ ಅಲ್ಲಿಯದೇ. 13 ಮಿಲಿಯನ್ ವರ್ಷಗಳ ಮೊದಲು ಕಾಂಗರೂ ಪ್ರಾಣಿ ಮತ್ತು ಮನುಷ್ಯ ಮುಖಾಮುಖಿಯಾದ ಸುದ್ದಿಯದು. ಮನುಷ್ಯ ಆ ನಾಡನ್ನು ಪ್ರವೇಶಿಸುವ ಮೊದಲು ಕಾಂಗರೂಗಳು ನೆಗೆದು ಚಲಿಸುತ್ತಿರಲಿಲ್ಲ. ಮನುಷ್ಯನಂತೆಯೇ ನಡೆಯುತ್ತಿದ್ದುವು. ಅದು ಭಾರೀ ಗಾತ್ರ ಮತ್ತು ತೂಕವನ್ನು ಹೊಂದಿದ್ದುವು. ಆದರೆ ಮನುಷ್ಯನ ಪ್ರವೇಶವಾದ ಬಳಿಕ ಅವುಗಳು ನಿಧಾನಕ್ಕೆ ಅಳಿಯತೊಡಗಿದುವು. ಮನುಷ್ಯ ತನ್ನ ಸ್ವಾರ್ಥಕ್ಕೋ ದುರಾಸೆಗೋ ಅವುಗಳ ನಿರ್ನಾಮದಲ್ಲಿ ಸಕ್ರಿಯನಾದ. ಅಂತಿಮವಾಗಿ ಆ ಪ್ರಬೇಧವೇ ಅಳಿದು ಹೋಗಿ ಈಗಿನ ನೆಗೆಯುವ ಚಿಕ್ಕ ಗಾತ್ರದ ಕಾಂಗರೂಗಳು ಹೊಸ ರೂಪದಲ್ಲಿ ಜನ್ಮ ತಾಳಿದುವು ಎಂದು ವಿಜ್ಞಾನಿಗಳು ತಮ್ಮ ಸಂಶೋಧನಾ ವರದಿಯಲ್ಲಿ ವಿವರಿಸಿದ್ದಾರೆ.
 ನಿಜವಾಗಿ, ಮನುಷ್ಯ ಮತ್ತು ಪ್ರಾಣಿಗಳು ನಿತ್ಯ ಮುಖಾಮುಖಿಯಾಗಿಯೇ ಬದುಕುತ್ತಿವೆ. ಮಾತ್ರವಲ್ಲ, ಹೆಚ್ಚಿನೆಲ್ಲ ಮುಖಾಮುಖಿಗಳಲ್ಲಿ ಪ್ರಾಣಿಗಳು ಸೋಲನ್ನೊಪ್ಪಿಕೊಳ್ಳುತ್ತಲೂ ಇವೆ. ಪ್ರಾಣಿಗಳನ್ನು ಪ್ರಾಣಿ ಸಂಗ್ರಹಾಲಯದಲ್ಲಿಟ್ಟು ದುಡ್ಡು ಮಾಡುವವನೂ ಮನುಷ್ಯನೇ. ಬೃಹತ್ ಗಾತ್ರದ ಆನೆಗಳನ್ನು ಪಳಗಿಸಿ ತನ್ನ ಲಾಭಕ್ಕಾಗಿ ಉಪಯೋಗಿಸಿಕೊಳ್ಳುತ್ತಿರುವವನೂ ಮನುಷ್ಯನೇ. ತನ್ನ ಸಂವಹನಕ್ಕಾಗಿ ಮೊಬೈಲ್ ಟವರ್‍ಗಳನ್ನು ನಿಲ್ಲಿಸಿ ಹಕ್ಕಿ ಸಂಕುಲಗಳನ್ನು ನಾಶ ಮಾಡುತ್ತಿರುವವನೂ ಮನುಷ್ಯನೇ. ಪ್ರಾಣಿಗಳು ಇವತ್ತಿನ ಜಗತ್ತಿನಲ್ಲಿ ಮನರಂಜನೆಗೆ ಬಳಕೆಯಾಗುತ್ತಿವೆ. ಅವುಗಳನ್ನು ಎದುರು-ಬದುರು ನಿಲ್ಲಿಸಿ ಹೊಡೆದಾಡಿಸಲಾಗುತ್ತದೆ. ಸ್ಪರ್ಧೆಗೆ ಕಟ್ಟಿ ಜೂಜು ನಡೆಸಲಾಗುತ್ತದೆ. ಜಲ್ಲಿಕಟ್ಟು, ಕೋಳಿಕಟ್ಟು, ಕಂಬಳಗಳಲ್ಲಿ ಅವು ಮನುಷ್ಯನ ಬಯಕೆಯಂತೆ ಓಡುತ್ತವೆ, ಕಾದಾಡುತ್ತವೆ, ಸಾಯುತ್ತವೆ. ಆದರೆ ಇದಕ್ಕೆ ಭಿನ್ನವಾದ ವಾತಾವರಣವೊಂದನ್ನು ಹುಟ್ಟು ಹಾಕಲು ಪ್ರಾಣಿಗಳಿಗೆ ಈ ವರೆಗೆ ಸಾಧ್ಯವಾಗಿಲ್ಲ. ಅವು ಮನುಷ್ಯನನ್ನು ಕೂಡಿ ಹಾಕುವ ಮನುಷ್ಯ ಸಂಗ್ರಹಾಲಯವನ್ನು ಸ್ಥಾಪಿಸಿಲ್ಲ. ಜಲ್ಲಿಕಟ್ಟು, ಕಂಬಳಗಳನ್ನು ಮನುಷ್ಯನಿಗಾಗಿ ಹುಟ್ಟು ಹಾಕಿಲ್ಲ. ಆತನನ್ನು ಎತ್ತಿಕೊಂಡು ಸರ್ಕಸ್ ಕಂಪೆನಿಯನ್ನೋ ಹೊಡೆದಾಟದ ಪಂದ್ಯಗಳನ್ನೋ ಅವು  ಏರ್ಪಡಿಸಿಲ್ಲ. ಒಂದು ವೇಳೆ,  ಮನುಷ್ಯನ ಬೌದ್ಧಿಕ ಸಾಮರ್ಥ್ಯವನ್ನು ಪ್ರಕೃತಿಯು ಪ್ರಾಣಿ ಜಗತ್ತಿಗೂ ಅನುಗ್ರಹಿಸಿರುತ್ತಿದ್ದರೆ ಪ್ರಪಂಚದ ಸ್ಥಿತಿ-ಗತಿಗಳು ಹೇಗಿರುತ್ತಿತ್ತು? ಮನುಷ್ಯನನ್ನು ಯಾವ ಪ್ರಾಣಿ ಯಾವೆಲ್ಲ ರೀತಿಯಲ್ಲಿ ಬಳಸಿಕೊಳ್ಳುತ್ತಿತ್ತು?
 ದುರಂತ ಏನೆಂದರೆ, ಮನುಷ್ಯ ಪ್ರಾಣಿಲೋಕವನ್ನು ಮಾತ್ರ ಮುಖಾಮುಖಿಗೊಳ್ಳುತ್ತಿರುವುದಲ್ಲ. ಆತ/ಕೆ ಪ್ರತಿದಿನ ಮನುಷ್ಯರನ್ನೂ ಮುಖಾಮುಖಿಯಾಗುತ್ತಿರುತ್ತಾನೆ. ಇಲ್ಲಿ ಪ್ರತಿಭಾವಂತರು, ಬುದ್ಧಿವಂತರು, ಕೋಮುವಾದಿಗಳು, ವಂಚಕರು, ಕ್ರೂರಿಗಳು, ಜನಾಂಗ ದ್ವೇಷಿಗಳು.. ಮುಂತಾದ ಅನೇಕ ರೀತಿಯ ಮನುಷ್ಯರಿದ್ದಾರೆ. ಮನುಷ್ಯ ಜಗತ್ತಿನ ದೌರ್ಬಲ್ಯ ಏನೆಂದರೆ, ಮನುಷ್ಯರ ನಡುವೆ ಇಷ್ಟೆಲ್ಲ ವಿಭಾಗಗಳಿದ್ದರೂ ಅವುಗಳನ್ನು ಪತ್ತೆ ಹಚ್ಚುವುದಕ್ಕೆ ಸರಿಯಾದ ಹೆಸರುಗಳಿಲ್ಲ ಎಂಬುದು. ಪ್ರಾಣಿ ಜಗತ್ತಿನಲ್ಲಿರುವ ಕ್ರೂರ ಪ್ರಾಣಿಗಳ ಬಗ್ಗೆ ಪ್ರಸ್ತಾಪವಾದ ಕೂಡಲೇ ಚಿರತೆ, ಹುಲಿ, ಸಿಂಹ, ಕರಡಿ ಮುಂತಾದ ಹೆಸರುಗಳು ಮುಂದೆ ಬರುತ್ತವೆ. ಹಾಗೆಯೇ ಬುದ್ಧಿವಂತ ಪ್ರಾಣಿ, ಸಾಧು ಪ್ರಾಣಿಗಳ ಪ್ರಸ್ತಾಪವಾದಾಗಲೂ ಕೆಲವು ಪ್ರಾಣಿಗಳು ನಮ್ಮ ಮುಂದೆ ಸುಳಿದಾಡುತ್ತವೆ. ಆದರೆ ಮನುಷ್ಯರಲ್ಲಿ ಭ್ರಷ್ಟ ಮನುಷ್ಯ, ಕೋಮುವಾದಿ ಮನುಷ್ಯ, ಕ್ರೂರಿ ಮನುಷ್ಯ... ಎಂದು ಮುಂತಾಗಿ ಪ್ರತ್ಯೇಕವಾಗಿ ಗುರುತಿಸಿಬಿಡುವುದಕ್ಕೆ ಯಾವ ಏರ್ಪಾಡುಗಳೂ ಇಲ್ಲ. ಮನುಷ್ಯರಲ್ಲಿ ಹುಲಿಯಂಥ ಮನುಷ್ಯ, ಚಿರತೆಯಂಥವ, ನರಿಯಂಥ ಮನುಷ್ಯ ಖಂಡಿತ ಇದ್ದಾರೆ. ಆದರೂ ಅವರು ಆ ಗುರುತನ್ನು ಮರೆಮಾಚಿಕೊಂಡು ಮನುಷ್ಯರ ಗುಂಪಿನಲ್ಲಿ ಸಹಜವಾಗಿ ಇದ್ದುಬಿಡುತ್ತಾರೆ. ಅಣ್ಣಾ ಹಜಾರೆ, ಬಾಬಾ ರಾಮ್‍ದೇವ್, ಸತ್ಯಾರ್ಥಿ, ಹಿರೇಮಠ್, ಮೋದಿ, ಮನ್‍ಮೋಹನ್ ಸಿಂಗ್, ಉಮಾ ಭಾರತಿ, ಮಮತಾ ಬ್ಯಾನರ್ಜಿ.. ಇವರೆಲ್ಲ ಮನುಷ್ಯರೇ. ಆದರೆ ಹುಲಿ, ಜಿಂಕೆ, ಇಲಿ, ಚಿರತೆಗಳನ್ನು ಅವುಗಳ ಸ್ವಭಾವಕ್ಕನುಗುಣವಾಗಿ ಹೆಸರಿಸಿದಂತೆ ಇವರನ್ನೂ ಹೆಸರಿಸಬಯಸಿದರೆ ಇವರೆಲ್ಲರೂ ವಿವಿಧ ಹೆಸರುಗಳಿಂದ ಗುರುತಿಸಿಕೊಳ್ಳಬೇಕಾದೀತು. ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ‘ಕಪ್ಪು ಹಣ'ಕ್ಕಾಗಿ ಧರಣಿ ಕೂತ ಬಾಬಾ ರಾಮ್‍ದೇವ್‍ರನ್ನೇ ಎತ್ತಿಕೊಳ್ಳಿ. ಮನ್‍ಮೋಹನ್ ಸಿಂಗ್‍ರ ಸರಕಾರವನ್ನು ಅವರು ಯಾವೆಲ್ಲ ಪದಗಳಿಂದ ಟೀಕಿಸುತ್ತಿದ್ದರು? ಕಪ್ಪು ಹಣವನ್ನು ವಾಪಾಸು ಪಡೆಯುವುದರಿಂದ ಈ ದೇಶದಲ್ಲಿ ಆಗಬಹುದಾದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಎಷ್ಟೆಲ್ಲ ಮಾತಾಡಿದ್ದರು? ಕಪ್ಪು ಹಣವನ್ನು ಭಾರತಕ್ಕೆ ವಾಪಾಸು ತರಿಸದೇ ಹೋರಾಟ ಕಣದಿಂದ ವಿರಮಿಸುವುದಿಲ್ಲ ಎಂದು ಹೇಳಿದ್ದೂ ಅವರೇ. ತನ್ನ ಹೋರಾಟ ಬರೇ ದೇಶಹಿತದಿಂದ ರೂಪುಗೊಂಡಿದ್ದೇ ಹೊರತು ಇದಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ ಎಂದು ಹೇಳಿಕೊಂಡದ್ದೂ ಅವರೇ. ಆದರೆ, ಮೋದಿ ಸರಕಾರ ರಚನೆಯಾದಂದಿನಿಂದ ಅವರು ಹೋರಾಟ ಕಣದಲ್ಲಿ ಕಾಣಿಸಿಕೊಂಡೇ ಇಲ್ಲ. ಕಪ್ಪು ಹಣದ ವಿಷಯದಲ್ಲಿ ಮನ್‍ಮೋಹನ್ ಸರಕಾರದ ನಿಲುವನ್ನೇ ಮೋದಿ ಸರಕಾರ ತೋರುತ್ತಿರುವಾಗಲೂ ಅವರು ಮೌನ ಮುರಿಯುತ್ತಿಲ್ಲ. ಏನಿದರ ಅರ್ಥ? ಅವರ ಗುರಿ ಇದ್ದುದು ಕಪ್ಪು ಹಣದ ವಾಪಾಸಿನ ಮೇಲೋ ಅಥವಾ ಮನ್‍ಮೋಹನ್ ಸರಕಾರದ ಮೇಲೋ? ಅಷ್ಟಕ್ಕೂ, ಕಪ್ಪು ಹಣದ ವಿಷಯದಲ್ಲಿ ಅವರು ಕೇವಲ ಮಾತಾಡಿದ್ದಲ್ಲ. ರಾಮ್‍ಲೀಲಾ ಮೈದಾನದಲ್ಲಿ ಒಂದು ಜನಸಮೂಹವನ್ನು ಸೇರಿಸಿದ್ದರು. ಒಂದು ವೇಳೆ ತನ್ನ ಹೋರಾಟ ಮೋದಿಯವರನ್ನು ಅಧಿಕಾರಕ್ಕೇರಿಸುವುದೇ ಹೊರತು ಕಪ್ಪು ಹಣದ ವಾಪಸಲ್ಲ ಎಂದು ಹೇಳಿರುತ್ತಿದ್ದರೆ, ಅಂದು ಅಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುವುದಕ್ಕೆ ಖಂಡಿತ ಸಾಧ್ಯವಿರಲಿಲ್ಲ. ಒಂದು ರೀತಿಯಲ್ಲಿ, ಅವರು ಹೊರಗೊಂದು ಮನುಷ್ಯರಾಗಿದ್ದುಕೊಂಡೇ ಒಳಗೊಂದು ಮನುಷ್ಯರೂ ಆಗಿದ್ದರು. ಹೊರಗಿನ ಮನುಷ್ಯ ಎಷ್ಟು ಸಾಧುವೋ ಅಷ್ಟೇ ಒಳಗಿನ ಮನುಷ್ಯ ವಂಚಕನಾಗಿದ್ದ. ಆದರೆ ಸೇರಿದ ಮಂದಿಗೆ ಹೊರಗಿನ ಮನುಷ್ಯನಷ್ಟೇ ಗೋಚರಿಸುತ್ತಿದ್ದ.
 ಒಂದು ಕಡೆ, ಮನುಷ್ಯನ ಬೌದ್ಧಿಕ ಸಾಮರ್ಥ್ಯವು ವಿಕಸಿಸುತ್ತಲೇ ಇದೆ. ಬಡಿತ ನಿಲ್ಲಿಸಿದ ಹೃದಯಕ್ಕೆ ಚೇತರಿಕೆ ಕೊಡುವಷ್ಟು ಆತ ಪ್ರತಿಭಾವಂತ. ಅದರ ಜೊತೆಗೇ ಅತ್ಯಂತ ಅವಿಕಸಿತ ಆಲೋಚನೆಗಳನ್ನೂ ಪೂರ್ವಗ್ರಹಗಳನ್ನೂ ಪೋಷಿಸಿಕೊಂಡು ಬರುತ್ತಿರುವವನೂ ಈತನೇ/ಈಕೆಯೇ. ಬುದ್ಧಿವಂತ ಪ್ರಾಣಿಯಾದ ಮನುಷ್ಯನ ಈ ದೌರ್ಬಲ್ಯಗಳೇ ಇವತ್ತು ರಕ್ತಪಾತಕ್ಕೂ ಮೌಲ್ಯಪತನಕ್ಕೂ ಕ್ರೌರ್ಯಕ್ಕೂ ಕಾರಣವಾಗಿದೆ. ಒಂದು ವೇಳೆ ಸ್ವಭಾವಕ್ಕೆ ಅನುಗುಣವಾಗಿ ಮನುಷ್ಯರಿಗೆ ಹೆಸರು ಕೊಡುವ ಹೊಣೆಯನ್ನು ಪ್ರಾಣಿ ಜಗತ್ತು ವಹಿಸಿಕೊಂಡಿರುತ್ತಿದ್ದರೆ ಬಾಬಾ ರಾಮ್‍ದೇವ್‍ರಿಗೆ ಅವು ಕೊಡಬಹುದಾದ ಹೆಸರು ಏನಾಗಿರುತ್ತಿತ್ತು? ‘ಕಪಟ ಪ್ರಾಣಿ'ಗಳು ಎಂಬೊಂದು ವಿಭಾಗವನ್ನು ತಯಾರಿಸಿ ಅದರಲ್ಲಿ ಮೊದಲ ಹೆಸರಾಗಿ ಅವರನ್ನೇ ನಮೂದಿಸುತ್ತಿತ್ತೋ ಏನೋ.

Wednesday 22 October 2014

‘ಭಾರತ್ ಮಾತಾಕಿ ಜೈ’ಯ ಒತ್ತಡ ಮತ್ತು ಐಸಿಸ್‍ನ ಬಾವುಟ

   ಕಾಶ್ಮೀರದಲ್ಲಿ ಕಳೆದವಾರ ಕಾಣಿಸಿಕೊಂಡ ಬಾವುಟವೊಂದು ಮಾಧ್ಯಮಗಳ ಕುತೂಹಲವನ್ನು ಕೆರಳಿಸಿವೆ. ಕೆಲವು ಪತ್ರಿಕೆಗಳು ಈ ಬಾವುಟವನ್ನು ಮುಂದಿಟ್ಟುಕೊಂಡು ಸಂಪಾದಕೀಯ ಬರೆದಿವೆ. ಇರಾಕ್ ಮತ್ತು ಸಿರಿಯದಲ್ಲಿ ಸುದ್ದಿಯಲ್ಲಿರುವ ಐಸಿಸ್‍ನ (ISIS) ಬಾವುಟವನ್ನು ಕಾಶ್ಮೀರದ ಯುವಕರು ಪ್ರದರ್ಶಿಸಿರುವುದನ್ನು ಅಲ್ ಕಾಯಿದಾ ಮುಖಂಡ ಜವಾಹಿರಿಯ ಇತ್ತೀಚಿನ ಟೇಪಿನೊಂದಿಗೆ ಜೋಡಿಸಿ ಕೆಲವರು ಚರ್ಚಿಸುತ್ತಿದ್ದಾರೆ. ‘ಐಸಿಸ್ ಭಾರತಕ್ಕೂ ಕಾಲಿಟ್ಟಿತೇ' ಅನ್ನುವ ಶೀರ್ಷಿಕೆಯಲ್ಲಿ ಟಿ.ವಿ. ಚಾನೆಲ್‍ಗಳು ಸುದ್ದಿಯನ್ನೂ ಪ್ರಸಾರ ಮಾಡಿವೆ. ಈ ಮೊದಲೂ ತಮಿಳ್ನಾಡಿನಲ್ಲಿ ಮತ್ತು ಕಾಶ್ಮೀರದಲ್ಲಿ ಈ ಬಾವುಟ ಹಾರಾಡಿತ್ತು ಎಂಬ ವಾದಗಳೂ ಕೇಳಿಬರುತ್ತಿವೆ. ಒಟ್ಟಿನಲ್ಲಿ ಅನಾಗರಿಕತೆ ಮತ್ತು ಮಾನವ ಹತ್ಯೆಯ ಸುದ್ದಿಗಳನ್ನಷ್ಟೇ ಕೊಡುತ್ತಿರುವ ಐಸಿಸ್ ಎಂಬ ಗುಂಪಿಗೆ ಭಾರತದಲ್ಲೂ ಬೆಂಬಲಿಗರಿರುವರೋ ಎಂಬ ಅನುಮಾನವೊಂದನ್ನು ಹುಟ್ಟುಹಾಕುವ ಸನ್ನಿವೇಶಗಳು ಸೃಷ್ಟಿಯಾಗುತ್ತಿರುವಂತೆ ಕಾಣುತ್ತಿದೆ.
 ಎರಡು ವರ್ಷಗಳ ಹಿಂದಿನವರೆಗೂ ಈ ದೇಶದಲ್ಲಿ ಲಷ್ಕರೆ ತ್ವಯ್ಯಿಬ, ಹರ್ಕತುಲ್ ಮುಜಾಹಿದೀನ್, ಇಂಡಿಯನ್ ಮುಜಾಹಿದೀನ್.. ಮುಂತಾದ ಹೆಸರುಗಳೇ ಸುದ್ದಿಯಲ್ಲಿದ್ದುವು. ಇವುಗಳ ಅಸ್ತಿತ್ವ, ಅನುಯಾಯಿಗಳ ಸಂಖ್ಯೆ, ಅವುಗಳ ಮನುಷ್ಯ ವಿರೋಧಿ ಧೋರಣೆ ಮುಂತಾದುವುಗಳು ಹತ್ತು-ಹಲವು ಬಾರಿ ಇಲ್ಲಿ ಚರ್ಚೆಗೀಡಾದುವು. ಭಾರತೀಯ ಮುಸ್ಲಿಮರನ್ನು ಭಯೋತ್ಪಾದಕರೆಂದೋ ಅದರ ಬೆಂಬಲಿಗರೆಂದೋ ಕರೆಯುವುದಕ್ಕೆ ಆ ಹೆಸರುಗಳು ಬಳಕೆಯಾದುವು. ಮುಸ್ಲಿಮರೆಲ್ಲ ಭಯೋತ್ಪಾದಕರಲ್ಲ, ಆದರೆ ಭಯೋತ್ಪಾದಕರೆಲ್ಲ ಮುಸ್ಲಿಮರೇ.. ಎಂದೂ ವ್ಯಾಖ್ಯಾನಿಸಲಾಯಿತು. ಆದರೆ ಇವತ್ತು ಈ ಲಷ್ಕರ್-ಮುಜಾಹಿದೀನ್‍ಗಳ ಪತ್ತೆಯೇ ಇಲ್ಲ. ಮಾಧ್ಯಮಗಳಲ್ಲಿ ಅಪ್ಪಿ-ತಪ್ಪಿಯೂ ಅವುಗಳ ಹೆಸರು ಕಾಣಿಸಿಕೊಳ್ಳುತ್ತಿಲ್ಲ. ಭಾರತದಲ್ಲಿ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವುದಕ್ಕಾಗಿಯೇ ಅಸ್ತಿತ್ವಕ್ಕೆ ಬಂದ ಈ ಲಷ್ಕರ್‍ಗಳು ಮತ್ತು ಅವುಗಳ ಉಗ್ರವಾದಿ ಕಾರ್ಯಕರ್ತರು ಸದ್ಯ ಏನು ಮಾಡುತ್ತಿದ್ದಾರೆ, ಎಲ್ಲಿದ್ದಾರೆ ಅನ್ನುವುದರ ಸುತ್ತ ಚರ್ಚೆಗಳೂ ನಡೆಯುತ್ತಿಲ್ಲ. ಆದರೆ ಇವುಗಳ ಸ್ಥಾನದಲ್ಲಿ ಇವತ್ತು ಐಸಿಸ್ ಎಂಬ ಹೊಸ ಹೆಸರು ಕಾಣಿಸಿಕೊಳ್ಳತೊಡಗಿದೆ. ಈ ಐಸಿಸ್‍ನ ಮೇಲೆ ಇವತ್ತು ಹೊರಿಸಲಾಗಿರುವ ಆರೋಪಗಳನ್ನು ಪರಿಗಣಿಸಿದರೆ, ಅದು ಮೆದುಳು ಸ್ವಸ್ಥ ಇರುವ ಮನುಷ್ಯರ ಗುಂಪು ಎಂದು ನಂಬುವುದಕ್ಕೇ ಕಷ್ಟವಿದೆ. ಸುನ್ನಿಗಳ ಹೊರತಾದ ಎಲ್ಲರನ್ನೂ ಅದು ಕೊಲ್ಲುತ್ತಿದೆ. ಪತ್ರಕರ್ತರು, ಸೇವಾ ಕಾರ್ಯಕರ್ತರ ಕತ್ತು ಸೀಳಿ ವೀಡಿಯೋ ಬಿಡುಗಡೆಗೊಳಿಸುತ್ತಿದೆ. ಬಹುದೇವಾರಾಧಕರಾದ ಯಜೀದಿಗಳನ್ನು ಸತಾಯಿಸುತ್ತಿದೆ. ಮಹಿಳೆಯರನ್ನು ಗುಲಾಮರನ್ನಾಗಿ ಬಳಸಿಕೊಳ್ಳುತ್ತಿದೆ. ಮಾತ್ರವಲ್ಲ, ಈ ಗುಂಪಿನ ನಾಯಕ ಅಬೂಬಕರ್ ಬಗ್ದಾದಿಯು 2004ರಲ್ಲಿ ಬರೆದ ಮತ್ತು ‘ದಿ ಮ್ಯಾನೇಜ್‍ಮೆಂಟ್ ಆಫ್  ಸೆವೇಜೆರಿ' ಎಂಬ ಹೆಸರಲ್ಲಿ 2006ರಲ್ಲಿ ಇಂಗ್ಲಿಷ್‍ಗೆ ಅನುವಾದಗೊಂಡ ಪುಸ್ತಕದ ವಿವರಗಳೂ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿವೆ. ವಿಲಿಯಂ ಮೆಕಾಂಟ್ ಎಂಬವರು ಅನುವಾದಿಸಿದ ಆ ಪುಸ್ತಕದಲ್ಲಿ ಇವೆ ಎಂದು ಹೇಳಲಾಗುತ್ತಿರುವ ಅಂಶಗಳನ್ನು ನೋಡಿದರೆ, ಆರೋಗ್ಯವಂತ ಮನುಷ್ಯನೊಬ್ಬ ಹಾಗೆಲ್ಲ ಬರೆಯಬಹುದು ಎಂದು ಊಹಿಸುವುದಕ್ಕೂ ಸಾಧ್ಯವಿಲ್ಲ. ದುರಂತ ಏನೆಂದರೆ, ಅಬೂಬಕರ್ ಬಗ್ದಾದಿಯ ಐಸಿಸ್‍ನ ಬಗ್ಗೆ, ಆತನ ಖಿಲಾಫತ್ ಘೋಷಣೆಯ ಬಗ್ಗೆ ಮತ್ತು ರಕ್ತದಾಹದ ಬಗ್ಗೆ ಧಾರಾಳ ವಿವರಗಳನ್ನೂ ಸಂಶೋಧಿತ ವರದಿಗಳನ್ನೂ ಒದಗಿಸುತ್ತಿರುವ ಮಾಧ್ಯಮ ಜಗತ್ತು ಆತನ ಹಿನ್ನೆಲೆಯ ಬಗ್ಗೆ ಏನನ್ನೂ ಹೇಳುತ್ತಿಲ್ಲ. ಎರಡು ವರ್ಷಗಳ ಹಿಂದೆ ದಿಢೀರ್ ಆಗಿ ಚರ್ಚೆಗೆ ಬಂದ ಈ ವ್ಯಕ್ತಿಯು ಮೊದಲು ಎಲ್ಲಿದ್ದ, ಏನಾಗಿದ್ದ ಎಂಬುದನ್ನು ಚರ್ಚೆಗೆ ಒಳಪಡಿಸುತ್ತಿಲ್ಲ. ಗ್ವಾಂಟನಾಮೋ ಜೈಲಲ್ಲಿದ್ದ ಈತನನ್ನು ಅಮೇರಿಕ ಯಾವ ಕಾರಣಕ್ಕಾಗಿ ಬಿಡುಗಡೆಗೊಳಿಸಿತು ಅನ್ನುವುದು ಈ ವರೆಗೂ ಬಹಿರಂಗವಾಗಿಲ್ಲ. ಐಸಿಸ್ ಇವತ್ತು ಬಳಸುತ್ತಿರುವ ಆಯುಧಗಳು ಎಷ್ಟು ಆಧುನಿಕವಾದವು ಎಂದರೆ, ಸಿರಿಯಾ ಅಥವಾ ಇರಾಕ್‍ನ ಸರಕಾರಗಳಿಗೂ ಅದನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ಆಯುಧಗಳನ್ನು ಸ್ವಯಂ ಉತ್ಪಾದಿಸುವ ವೈಜ್ಞಾನಿಕ ಬಲವಾಗಲಿ, ಸುಸಜ್ಜಿತ ಕಾರ್ಖಾನೆಯಾಗಲಿ ಇಲ್ಲದ ಗುಂಪೊಂದು  ಆಧುನಿಕ ಆಯುಧಗಳನ್ನು ಪಡೆಯುತ್ತಿರುವುದು ಎಲ್ಲಿಂದ? ಅರಬ್ ರಾಷ್ಟ್ರಗಳ ಹೆಸರಲ್ಲಿ ಮೂರನೆಯ ಶಕ್ತಿಯೊಂದು ಐಸಿಸ್ ಅನ್ನು ನಿಯಂತ್ರಿಸುತ್ತಿದೆಯೇ, ಅದರ ಉದ್ದೇಶ ಏನಿರಬಹುದು?
 ನಿಜವಾಗಿ, ಯಾವುದೇ ಒಂದು ಬಾವುಟವನ್ನು ಹೊಲಿಯುವುದಕ್ಕೋ ಪ್ರದರ್ಶಿಸುವುದಕ್ಕೋ ಕಷ್ಟವೇನೂ ಇಲ್ಲ. ಆದರೆ ಅದನ್ನು ಹೊಲಿಯುವವರಿಗೆ ಮತ್ತು ಪ್ರದರ್ಶಿಸುವವರಿಗೆ ತಾನು ಯಾವುದನ್ನು ಹೊಲಿಯುತ್ತಿದ್ದೇನೆ ಮತ್ತು ಪ್ರದರ್ಶಿಸುತ್ತಿದ್ದೇನೆ ಅನ್ನುವ ಎಚ್ಚರಿಕೆ ಇರಬೇಕು. ಐಸಿಸ್ ಎಂಬುದು ಕಾಶ್ಮೀರ ಎಂದಲ್ಲ, ಈ ಜಗತ್ತಿನ ಯಾವ ಮೂಲೆಯಲ್ಲಿರುವ ಮುಸ್ಲಿಮರ ಸಮಸ್ಯೆಗಳಿಗೂ ಪರಿಹಾರ ಅಲ್ಲ. ಅದರ ಹೆಸರಲ್ಲಿ ವರದಿಯಾಗುತ್ತಿರುವ ಸುದ್ದಿಗಳನ್ನು ಪರಿಗಣಿಸಿದರೆ ಅದು ಈ ಗೋಲದಿಂದ ಅತ್ಯಂತ ಶೀಘ್ರ ನಿರ್ನಾಮವಾಗಬೇಕಾದ ಗುಂಪು ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಅಂದಹಾಗೆ, ಈ ದೇಶದಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯದ, ಜನಾಂಗ ಭೇದದ ಧೋರಣೆಯನ್ನು ತಳೆಯಲಾಗುತ್ತಿದೆ, ಹತ್ಯಾಕಾಂಡಕ್ಕೆ ಗುರಿಪಡಿಸಲಾಗುತ್ತಿದೆ, ಸದಾ ಭಯದ ವಾತಾವರಣದಲ್ಲಿ ಬದುಕುವಂತೆ ಮತ್ತು ಆರ್ಥಿಕವಾಗಿ ಸಮರ್ಥರಾಗದಂತೆ ಕೋಮುಗಲಭೆಗಳ ಮೂಲಕವೋ ಇನ್ನಿತರ ಷಡ್ಯಂತ್ರಗಳ ಮೂಲಕವೋ ತಡೆಲಾಗುತ್ತಿದೆ ಎಂಬುದೆಲ್ಲ ನಿಜ. ಆದರೆ ಅದಕ್ಕೆ ಐಸಿಸ್ ಅಥವಾ ಇನ್ನಿತರ ಉಗ್ರವಾದಿ ಆಲೋಚನೆಗಳು ಪರಿಹಾರ ಅಲ್ಲ. ಐಸಿಸ್ ಅನ್ನು ಈ ದೇಶದಲ್ಲಿ ನಿಷೇಧಿಸಲಾಗಿಲ್ಲ ಎಂಬ ಕಾರಣವನ್ನು ಮುಂದೊಡ್ಡಿ ಅದರ ಬಾವುಟ ಹಾರಾಡಿಸುವುದನ್ನು ಸಮರ್ಥಿಸಲೂ ಸಾಧ್ಯವಿಲ್ಲ. ಕೋಮುವಾದಿಗಳು ಈ ದೇಶದಲ್ಲಿ ಎಷ್ಟು ಸಂಖ್ಯೆಯಲ್ಲಿದ್ದಾರೋ ಅದರ ಎಷ್ಟೋ ಪಾಲು ಅಧಿಕ ಸಂಖ್ಯೆಯಲ್ಲಿ ಕೋಮುವಾದದ ವಿರೋಧಿಗಳು ಈ ದೇಶದಲ್ಲಿದ್ದಾರೆ. ವಿವಿಧ ಧರ್ಮೀರಿರುವ ಈ ದೇಶದಲ್ಲಿ ಅತ್ಯಂತ ಉತ್ತಮವಾದ ಸಂವಿಧಾನವೂ ಇದೆ. ಇಲ್ಲಿನ ಕೋರ್ಟುಗಳೂ ಅನೇಕ ಬಾರಿ ಕೋಮುವಾದಿ ಆಲೋಚನೆಗಳಿಗೆ, ಹತ್ಯಾಕಾಂಡದ ಆರೋಪಿಗಳಿಗೆ ಶಿಕ್ಷೆ ನೀಡಿವೆ. ಸರ್ವರಿಗೂ ಸಮಾನ ನ್ಯಾಯ, ಸ್ವಾತಂತ್ರ್ಯ, ಹಕ್ಕುಗಳನ್ನು ಒದಗಿಸುವಂತೆ ಆಗ್ರಹಿಸುವುದಕ್ಕೆ ಸಭೆ, ಸೆಮಿನಾರ್, ರಾಲಿಗಳೂ ಇಲ್ಲಿ ನಡೆಯುತ್ತಿವೆ. ಒಂದು ರೀತಿಯಲ್ಲಿ, ದಮನಿತರ ಪರ ಮತ್ತು ದಂಗೆಕೋರರ ವಿರುದ್ಧವಿರುವ ಒಂದು ವಾತಾವರಣ ಇವತ್ತು ಈ ದೇಶದಲ್ಲಿದೆ. ಹೀಗಿರುವಾಗ ಈ ಯಾವ ಗುಣವನ್ನೂ ಹೊಂದಿಲ್ಲದ ಐಸಿಸ್ ಅನ್ನು ಯುವಕರು ಬೆಂಬಲಿಸುತ್ತಾರೆಂದರೆ, ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲ  ಹೇಳುವಂತೆ, ಅವರನ್ನು ಮೂರ್ಖರೆಂದಲ್ಲದೇ ಇನ್ನೇನೆಂದು ಕರೆಯಬೇಕು?
 ಈ ದೇಶದಲ್ಲಿ ಮುಸ್ಲಿಮರಿಗೆ ಎರಡು ಸವಾಲುಗಳು ಸದಾ ಎದುರಾಗುತ್ತಲೇ ಇರುತ್ತವೆ. ಒಂದು ದೇಶಪ್ರೇಮದ್ದಾದರೆ ಇನ್ನೊಂದು ಭಯೋತ್ಪಾದನೆಯದ್ದು. ಈ ಎರಡು ಅಸ್ತ್ರಗಳನ್ನು ಎತ್ತಿಕೊಂಡು ಮುಸ್ಲಿಮರನ್ನು ಇರಿಯುವುದಕ್ಕೆ ಕೋಮುವಾದಿಗಳು ಸಂದರ್ಭಗಳನ್ನು ಹುಡುಕುತ್ತಲೇ ಇರುತ್ತಾರೆ. ಪ್ರತಿದಿನ ಬೆಳಿಗ್ಗೆದ್ದ ಕೂಡಲೇ ಭಾರತ್ ಮಾತಾ ಕಿ ಜೈ ಎಂದು ಘೋಷಿಸಿಯೇ ಮುಸ್ಲಿಮರು ನಿತ್ಯದ ಕರ್ಮಗಳನ್ನು ನಿರ್ವಹಿಸಬೇಕು ಎಂದು ಅವರು ಒತ್ತಡ ಹಾಕುತ್ತ್ತಿದ್ದಾರೆ. ಮದ್ರಸಗಳಲ್ಲಿ ರಾಷ್ಟ್ರಧ್ವಜ ಅರಳುತ್ತದೋ ಇಲ್ಲವೋ ಎಂಬುದನ್ನು ಕ್ಯಾಮರಾ ಹಿಡಿದುಕೊಂಡು ಅವರು ಪತ್ತೆದಾರಿಕೆ ನಡೆಸುತ್ತಿದ್ದಾರೆ. ಬಾಂಬ್ ಸ್ಫೋಟಗಳು ನಡೆದ ತಕ್ಷಣ ಮುಸ್ಲಿಮರಿಂದ ಅವರು ಖಂಡನೆಯನ್ನು ನಿರೀಕ್ಷಿಸುತ್ತಾರೆ.. ಆದರೂ ಇವಾವುವೂ ಐಸಿಸ್‍ನ ಬಾವುಟವನ್ನು ಪ್ರದರ್ಶಿಸುವುದಕ್ಕೆ ಸಮರ್ಥನೆ ಆಗುವುದಿಲ್ಲ. ಮುಸ್ಲಿಮರನ್ನು ಸದಾ ಕಟಕಟೆಯಲ್ಲಿ ನಿಲ್ಲಿಸುವ ವಾತಾವರಣದಿಂದ ನೊಂದು ಅದಕ್ಕೆ ಪ್ರತಿರೋಧವೆಂಬಂತೆ ಈ ಬಾವುಟವನ್ನು ಹಾರಿಸಲಾಗಿದೆ ಎಂದು ಹೇಳುವುದರಲ್ಲಿ ನಿಜ ಇದೆಯಾದರೂ ಅದು ಸಂಪೂರ್ಣ ಒಪ್ಪತಕ್ಕದ್ದಲ್ಲ. ಐಸಿಸ್ ಇಸ್ಲಾಮನ್ನು ಯಾವ ರೀತಿಯಲ್ಲೂ ಪ್ರತಿನಿಧಿಸುತ್ತಿಲ್ಲ. ಆದ್ದರಿಂದಲೇ ಅದರ ಬಾವುಟವನ್ನು ಪ್ರದರ್ಶಿಸುವುದು ತಪ್ಪು, ಆಕ್ಷೇಪಾರ್ಹ ಮತ್ತು ಖಂಡನೀಯ. ಅನ್ಯಾಯವನ್ನು ನ್ಯಾಯಯುತ ವಿಧಾನದ ಮೂಲಕ ಪ್ರಶ್ನಿಸಬೇಕೇ ಹೊರತು ಅನ್ಯಾಯಯುತವಾಗಿ ಅಲ್ಲ.

Wednesday 15 October 2014

ಧರ್ಮರಕ್ಷಣೆಯ ನಿಜರೂಪವನ್ನು ತೋರಿಸಿಕೊಟ್ಟ ಶಾಂತಲಿಂಗೇಶ್ವರ ಸ್ವಾಮಿ

ಇಬ್ರಾಹೀಮ್
   ಅಕ್ಟೋಬರ್ 5 ಯಾವುದಾದರೂ ರಾಷ್ಟ್ರ ನಾಯಕರ ಜಯಂತಿಯದ್ದೋ ಧಾರ್ಮಿಕವಾಗಿ ವಿಶೇಷ ಆಚರಣೆಗಳದ್ದೋ ದಿನಾಂಕವಲ್ಲ. ಕ್ಯಾಲೆಂಡರ್‍ನಲ್ಲಿ ಆ ದಿನಕ್ಕೆ ಯಾವ ಮಹತ್ವವೂ ಇಲ್ಲ. ವಾರದ ಏಳು ದಿನಗಳಲ್ಲಿ ಒಂದು ದಿನವನ್ನಷ್ಟೇ ಸೂಚಿಸುವ ಆ ದಿನದಂದು ಗುಲ್ಬರ್ಗಾ ಜಿಲ್ಲೆಯ ಅಲಂದ್ ತಾಲೂಕಿನ ನಿಂಬಾಳ ಗ್ರಾಮದಲ್ಲಿ ವಿಶೇಷ ಕಾರ್ಯಕ್ರಮವೊಂದು ನಡೆಯಿತು. ‘ಮದ್ಯಮುಕ್ತ ಗ್ರಾಮ’ ಯೋಜನೆಗೆ ಒಂದು ವರ್ಷ ತುಂಬಿದ ನೆನಪಲ್ಲಿ ಏರ್ಪಡಿಸಲಾದ ಈ ಕಾರ್ಯಕ್ರಮದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದರು. ಒಂದು ಬಗೆಯ ತೃಪ್ತಿ, ನೆಮ್ಮದಿಯ ವಾತಾವರಣ ಆ ಸಭೆಯನ್ನಿಡೀ ಆವರಿಸಿಕೊಂಡಿತ್ತು. ಅದಕ್ಕೆ ಕಾರಣವೂ ಇದೆ.
 2013 ಅಕ್ಟೋಬರ್ 5ರಂದು ಶಾಂತಲಿಂಗೇಶ್ವರ ಮಠದ ಶಾಂತಲಿಂಗೇಶ್ವರ ಸ್ವಾಮಿಯವರ ನೇತೃತ್ವದಲ್ಲಿ ನಿಂಬಾಳ ಗ್ರಾಮವನ್ನು ಮದ್ಯಮುಕ್ತಗೊಳಿಸುವ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಆ ಯೋಜನೆಯನ್ನು ಜಾರಿಗೊಳಿಸುವುದಕ್ಕಾಗಿ ಮನೆ ಮನೆಗೆ ಭೇಟಿ ನೀಡುವ ತಂಡವನ್ನು ರಚಿಸಲಾಗಿತ್ತು. ಹೊರಗೆ ಕುಡಿದು ಊರಿಗೆ ಬರುವವರ ಮೇಲೂ ನಿಗಾ ಇಡುವುದಕ್ಕೆ ಮತ್ತು ಅವರಿಂದ ದಂಡ ವಸೂಲಿ ಮಾಡುವುದಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಮನೆಯ ಪುರುಷರನ್ನು ಮದ್ಯ ಚಟದಿಂದ ಬಿಡಿಸುವಲ್ಲಿ ಮಹಿಳೆಯರು ಸಹಕರಿಸದಿದ್ದರೆ ತಾನು ಗ್ರಾಮಕ್ಕೆ ಭೇಟಿ ನೀಡುವುದಿಲ್ಲ ಎಂದು ಸ್ವಾವಿೂಜಿಗಳು ಬೆದರಿಕೆ ಹಾಕಿದ್ದರು. ಮಹಿಳೆಯರು ಜಾಗೃತರಾದದ್ದೇ ತಡ, ಗ್ರಾಮದಲ್ಲಿದ್ದ 3 ಮದ್ಯದಂಗಡಿಗಳು ಬಾಗಿಲು ಮುಚ್ಚಿದುವು. ಹೊರಗೆಲ್ಲೋ ಕುಡಿದು ಬರುವವರ ಮೇಲೆ ನಿಗಾವಿರಿಸಿದ್ದರಿಂದಾಗಿ ಕಳೆದೊಂದು ವರ್ಷದಲ್ಲಿ ದಂಡ ರೂಪದಲ್ಲಿ 50 ಸಾವಿರ ರೂಪಾಯಿ ಸಂಗ್ರಹವಾಗಿದೆ. ಮಾತ್ರವಲ್ಲ, ಇವತ್ತು ನಿಂಬಾಳ ಗ್ರಾಮವು ಮದ್ಯಮುಕ್ತ ಮತ್ತು ಕುಡುಕ ಮುಕ್ತ ಗ್ರಾಮವಾಗಿ ಗುರುತಿಸಿಕೊಂಡಿದೆ.
 ನಿಜವಾಗಿ, ನಿಂಬಾಳ ಗ್ರಾಮವನ್ನು ಶಾಂತಲಿಂಗೇಶ್ವರ ಸ್ವಾಮಿಯವರು ಮದ್ಯಮುಕ್ತಗೊಳಿಸಿದ್ದು ಪವಾಡದಿಂದಲ್ಲ, ಬದ್ಧತೆಯಿಂದ. ಅಷ್ಟಕ್ಕೂ, ಈ ದೇಶದಲ್ಲಿ ಎಷ್ಟೆಷ್ಟು ಗ್ರಾಮಗಳಿವೆಯೋ ಅದಕ್ಕಿಂತಲೂ ಹೆಚ್ಚು ದೇವಾಲಯ, ಮಸೀದಿ, ಬಸದಿ, ಚರ್ಚ್‍ಗಳಿವೆ. ಈ ಧಾರ್ಮಿಕ ಕೇಂದ್ರಗಳಲ್ಲಿ ಯಾವ ಕೇಂದ್ರವೂ ಮದ್ಯದ ಪರ ಮಾತಾಡುವುದೂ ಇಲ್ಲ. ಬಹುತೇಕ ಇಂಥ ಕೇಂದ್ರಗಳಲ್ಲಿ ವಾರಕ್ಕೊಮ್ಮೆಯಾದರೂ ಭಕ್ತರು ಸೇರುವ ಮತ್ತು ಧಾರ್ಮಿಕ ನಾಯಕರಿಂದ ಪ್ರವಚನವನ್ನೋ ಉಪದೇಶಗಳನ್ನೋ ಆಲಿಸುವ ಸಂದರ್ಭಗಳೂ ಇರುತ್ತವೆ. ಆದರೂ ಯಾಕೆ ಕೆಡುಕು ವಿರೋಧಿ ಆಂದೋಲನವೊಂದನ್ನು ಕೈಗೊಳ್ಳುವುದಕ್ಕೆ ಇವುಗಳಿಗೆ ಸಾಧ್ಯವಾಗುತ್ತಿಲ್ಲ? ಅಂದಹಾಗೆ, ಸ್ವಾವಿೂಜಿಯನ್ನೋ ಮೌಲಾನಾರನ್ನೋ ಅಥವಾ ಫಾದರ್‍ಗಳನ್ನೋ ಗೌರವಿಸುವಷ್ಟು ಈ ಸಮಾಜ ರಾಜಕಾರಣಿಗಳನ್ನು ಗೌರವಿಸುವುದಿಲ್ಲ. ಒಂದು ಅಪಾರ ಜನಸಂದಣಿಯನ್ನು ಯಾವ ದುಡ್ಡಿನ ಆಮಿಷವೂ ಒಡ್ಡದೇ ಒಟ್ಟು ಸೇರಿಸುವ ಸಾಮರ್ಥ್ಯ  ಅವರಲ್ಲಿದೆ. ಅವರನ್ನು ಸಮಾಜ ಆಲಿಸುತ್ತದೆ. ಅವರ ಮಾತನ್ನು ಪಾಲಿಸುತ್ತದೆ. ಇಷ್ಟಿದ್ದೂ ಈ ಕೇಂದ್ರಗಳೆಲ್ಲ ದುರ್ಬಲವಾಗಿ ಗುರುತಿಸಿಕೊಂಡಿರುವುದೇಕೆ? ಇವತ್ತು ಈ ದೇಶದ ಕೋಟ್ಯಂತರ ಮನೆಗಳು ಹರಿಸುತ್ತಿರುವ ಕಣ್ಣೀರಿನಲ್ಲಿ ಮದ್ಯಕ್ಕೆ, ವರದಕ್ಷಿಣೆಗೆ  ಮತ್ತು ಕೋಮುಗಲಭೆಗಳಿಗೆ ಪ್ರಮುಖ ಪಾತ್ರವಿದೆ. ಹಾಗಿದ್ದೂ, ಇವುಗಳ  ವಿರುದ್ಧ ಯಾಕೆ ಜಾಗೃತಿ ಕಾರ್ಯಕ್ರಮಗಳು ಹುಟ್ಟಿಕೊಳ್ಳುತ್ತಿಲ್ಲ?
 ಇವತ್ತು ಧರ್ಮರಕ್ಷಣೆಯ ಬಗ್ಗೆ ಧಾರಾಳ ಭಾಷಣ, ಲೇಖನಗಳು ಪ್ರಕಟವಾಗುತ್ತಿವೆ. ಧಾರ್ಮಿಕ ಕೇಂದ್ರಗಳಲ್ಲಿ ಮೈ ನವಿರೇಳಿಸುವ ಉಪದೇಶಗಳನ್ನು ನೀಡಲಾಗುತ್ತಿದೆ. ದುರಂತ ಏನೆಂದರೆ, ಧರ್ಮರಕ್ಷಣೆ ಎಂಬುದು ಇನ್ನೊಂದು ಧರ್ಮವನ್ನು ವೈರಿಯಂತೆ ಕಾಣುವ ಮತ್ತು ಆಯುಧಗಳನ್ನು ಎತ್ತಿಕೊಳ್ಳುವುದರ ಹೆಸರು ಎಂದೇ ತಿಳಿದುಕೊಳ್ಳಲಾಗಿದೆ. ಇನ್ನೊಂದು ಧರ್ಮದವರ ಮೇಲಿನ ಹಲ್ಲೆ, ಹತ್ಯೆಯನ್ನು ಧರ್ಮರಕ್ಷಣೆಯ ಹಾದಿಯಲ್ಲಿನ ಯಶಸ್ಸು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಮಾತ್ರವಲ್ಲ, ಹಾಗೆ ಹಲ್ಲೆ  ನಡೆಸುವುದಕ್ಕೆ ಎಷ್ಟು ಯುವಕರು ಬೇಕಾದರೂ ನಮ್ಮಲ್ಲಿದ್ದಾರೆ. ಸೆ. 25ರಂದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸವಿೂಪದ ಕುಕ್ಕಿಲದ ಇಬ್ರಾಹೀಮ್ ಎಂಬ ಯುವಕನಿಗೆ ಕೊಣಾಜೆ ಸವಿೂಪದ ಗ್ರಾಮಚಾವಡಿಯ ಬಳಿ ಚೂರಿಯಿಂದ ಇರಿಯಲಾಯಿತು. ಯುವಕ ಆ ಪರಿಸರಕ್ಕೆ ತೀರಾ ಹೊಸಬ. ಅಲ್ಲಿ ಆತನ ಮಾವನ ಮನೆಯಿದೆ ಎಂಬುದನ್ನು ಬಿಟ್ಟರೆ ಅಲ್ಲಿಗೂ ಆತನಿಗೂ ಬೇರೆ ಯಾವ ನಂಟೂ ಇಲ್ಲ. ಆತನ ಬೈಕ್‍ನ ಸಂಖ್ಯೆ 786 ಆಗಿದ್ದುದು ಮತ್ತು ಗಡ್ಡ ಬೆಳೆಸಿದ್ದುದೇ ಆತನ ಅಪರಾಧವಾಗಿತ್ತು. ಓರ್ವ ಅಮಾಯಕನಾಗಿ ಆ ಘಟನೆ ಆತನ ಮೇಲೆ ಬೀರುವ ಪರಿಣಾಮ  ಯಾವ ಬಗೆಯದು? ಈತ ಬೈಕಲ್ಲಿ ಹೋಗುತ್ತಿರುವಾಗಲೇ ಹಿಂಬದಿಯಿಂದ ಬೈಕಲ್ಲಿ ಬಂದವರು ಇರಿದು ಚೂರಿ ತೋರಿಸಿ ಹೊರಟು ಹೋದದ್ದು ಯಾವ ದ್ವೇಷದಿಂದ? ಅದರಿಂದ ಧರ್ಮಕ್ಕೆ ಯಾವ ಲಾಭವಿದೆ? ತೋಳಿನ ಎರಡೂ ನರಗಳು ತುಂಡಾಗಿರುವ ಮತ್ತು ಹೊಟ್ಟೆಯಿಂದ ಬೆನ್ನಿನ ವರೆಗೆ 20 ಹೊಲಿಗೆಗಳನ್ನು ಹಾಕಿರುವ ಸ್ಥಿತಿಯಲ್ಲಿ ಬದುಕುತ್ತಿರುವ ಆ ಯುವಕನ ಪ್ರಶ್ನೆಗಳಿಗೆ ಹಲ್ಲೆಕೋರರು ಕೊಡಬಹುದಾದ ಉತ್ತರಗಳೇನು? ಲಕ್ಷವನ್ನೂ ದಾಟಿದ ಖರ್ಚು, ದೈಹಿಕ ಮತ್ತು ಮಾನಸಿಕವಾಗಿ ಆಗಿರುವ ಗಾಯಕ್ಕೆ ಹಲ್ಲೆಕೋರರಲ್ಲಿ ಏನು ಸಮರ್ಥನೆಯಿದೆ? ಅಷ್ಟಕ್ಕೂ, ಇಬ್ರಾಹೀಮ್‍ನ ಜಾಗದಲ್ಲಿ ಗಣೇಶನನ್ನು  ಇಟ್ಟು ನೋಡಿದರೂ ಇವೇ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಧರ್ಮಗಳೇಕೆ ಚೂರಿ-ತಲವಾರುಗಳ ಮೂಲಕ ಮಾತಾಡುತ್ತಿವೆ? ಮುಸ್ಲಿಮನಿಗೆ ಹಿಂದೂ ಇರಿಯುವುದು ಅಥವಾ ಹಿಂದೂವಿಗೆ ಮುಸ್ಲಿಮ್ ಇರಿಯುವುದೆಲ್ಲ ಆಯಾ ಧರ್ಮಗಳಿಗೆ ಲಾಭ ತಂದು ಕೊಡಬಹುದೇ? ದ್ವೇಷ-ಅಸಹನೆಗಳಿಗೆ ಮಾತ್ರ ಕಾರಣವಾಗುವ ಇಂಥ ಪ್ರಕರಣಗಳಲ್ಲಿ ಯುವಕರು ನಂಬಿಕೆ ಇಟ್ಟುಕೊಳ್ಳುತ್ತಿರುವುದೇಕೆ? ನಿಜವಾಗಿ, ಒಂದು ಧರ್ಮದ ಅಸ್ತಿತ್ವಕ್ಕೆ ದೊಡ್ಡ ಅಪಾಯ ಎದುರಾಗಿರುವುದೇ ಮದ್ಯಪಾನ, ವರದಕ್ಷಿಣೆ, ಅನೈತಿಕತೆ, ಕೋಮುವಾದಗಳಂಥ ಸಾಮಾಜಿಕ ಕೆಡುಕುಗಳಿಂದ. ಇವು ಸಮಾಜದಲ್ಲಿ ಪ್ರಾಬಲ್ಯ ಸ್ಥಾಪಿಸಿರುವಷ್ಟು ದಿನ ಧರ್ಮದ ಪ್ರಸ್ತುತತೆ ಪ್ರಶ್ನಾರ್ಹವಾಗುತ್ತಲೇ ಇರುತ್ತದೆ. ಇಂಥ ಸ್ಥಿತಿಯಲ್ಲಿ, ಕುಡಿದು ಧರ್ಮರಕ್ಷಣೆಗೆ ಇಳಿಯುವ, ವರದಕ್ಷಿಣೆ ಪಡೆದು ಧರ್ಮ ಬೋಧನೆ ಮಾಡುವ, ಅನ್ಯ ಧರ್ಮೀಯರನ್ನು ದ್ವೇಷಿಸುತ್ತಲೇ ಮನುಷ್ಯತ್ವದ ಬಗ್ಗೆ ಮಾತಾಡುವ ಮಂದಿ ಸೃಷ್ಟಿಯಾಗುತ್ತಲೇ ಹೋಗುತ್ತಾರೆ. ಅಷ್ಟಕ್ಕೂ, ನಮ್ಮ ರಾಜ್ಯದ ಎಲ್ಲ ಗ್ರಾಮಗಳೂ ನಿಂಬಾಳ ಗ್ರಾಮವನ್ನು ಮಾದರಿಯಾಗಿ ಎತ್ತಿಕೊಳ್ಳುವ ಸನ್ನಿವೇಶವೊಂದನ್ನು ಸುಮ್ಮನೆ ಕಲ್ಪಿಸಿಕೊಳ್ಳಿ. ಪ್ರತಿ ಮಸೀದಿ, ದೇವಾಲಯ, ಚರ್ಚ್‍ಗಳು ಜಂಟಿಯಾಗಿ ಮದ್ಯಮುಕ್ತ, ವರದಕ್ಷಿಣೆ ಮುಕ್ತ ಮತ್ತು ಕೋಮುದ್ವೇಷ  ಮುಕ್ತ ಗ್ರಾಮದ ಯೋಜನೆಯೊಂದಿಗೆ ಬೀದಿಗಿಳಿಯುವುದನ್ನು ಕಲ್ಪಿಸಿಕೊಳ್ಳಿ. ಆ ವಾತಾವರಣ ಹೇಗಿರಬಹುದು?
 ಮಾನವನ ಅಸ್ತಿತ್ವ ಈ ಭೂಮಿಯಲ್ಲಿ ಇರುವವರೆಗೆ ಒಳಿತು ಮತ್ತು ಕೆಡುಕಿನ ಅಸ್ತಿತ್ವ ಇದ್ದೇ ಇರುತ್ತದೆ. ಒಳಿತನ್ನು ಪ್ರೀತಿಸುವವರು ಇರುವಂತೆಯೇ ಕೆಡುಕನ್ನು ಪ್ರೀತಿಸುವವರೂ ಇರುತ್ತಾರೆ. ಆದರೆ ಕೆಡುಕನ್ನು ಪ್ರೀತಿಸುವವರಲ್ಲಿ ಒಂದು ಅಂಜಿಕೆಯಿರುತ್ತದೆ. ತಾನು ಮದ್ಯಪಾನಿ ಎಂದು ಮದ್ಯಪಾನ ಮಾಡುವವ ಎದೆತಟ್ಟಿ ಹೇಳಿಕೊಳ್ಳುವುದಿಲ್ಲ. ವರದಕ್ಷಿಣೆ ಪಡೆದವ ಆ ಸಂಗತಿಯನ್ನು ಸಮಾಜದಿಂದ ಮುಚ್ಚಿಟ್ಟುಕೊಂಡೇ ಬದುಕುತ್ತಿರುತ್ತಾನೆ. ಅಪ್ಪಟ ಕೋಮುವಾದಿ ಕೂಡ ತಾನು ಹಾಗಲ್ಲ ಎಂದು ನಂಬಿಸಲು ಹೆಣಗುತ್ತಿರುತ್ತಾನೆ. ಒಂದು ರೀತಿಯಲ್ಲಿ ಕೆಡುಕಿನ ಜೊತೆ ಅಂಜಿಕೆ ಮತ್ತು ಭಯ ಜೋಡಿಕೊಂಡೇ ಇರುತ್ತದೆ. ಆದರೆ ಒಳಿತಿಗೆ ಈ ಯಾವ ದೌರ್ಬಲ್ಯಗಳೂ ಇಲ್ಲ. ಆದರೂ ಒಳಿತಿನ ಪ್ರತಿಪಾದಕರು ಅಂಜಿಕೊಳ್ಳುತ್ತಲೂ ಕೆಡುಕಿನ ಬೆಂಬಲಿಗರು ರಾಜಾರೋಷವಾಗಿಯೂ ತಿರುಗುತ್ತಿರುವುದನ್ನು ಏನೆಂದು ಕರೆಯಬೇಕು? ಇದು ಯಾರ ಅಸಾಮರ್ಥ್ಯ? ಅಂದಹಾಗೆ, ನಿಂಬಾಳ ಗ್ರಾಮಕ್ಕೆ ಮದ್ಯ ವಿರೋಧಿ ಅಭಿಯಾನ ಕೈಗೊಳ್ಳಲು ಮತ್ತು ಅದರಲ್ಲಿ ಯಶಸ್ವಿಯಾಗಲು ಸಾಧ್ಯ ಎಂದಾದರೆ ಇತರ ಗ್ರಾಮಗಳಿಗೂ ಅದು ಸಾಧ್ಯವಾಗಬಾರದೆಂದಿಲ್ಲವಲ್ಲ. ನಿಂಬಾಳ ಗ್ರಾಮದಲ್ಲಿ ಇಲ್ಲದ ಕೋಮು ವೈರಸ್‍ನ ಹಾವಳಿ ದಕ್ಷಿಣ ಕನ್ನಡ ಸಹಿತ ಕೆಲವಾರು ಜಿಲ್ಲೆಗಳಲ್ಲಿ  ತೀವ್ರ ಮಟ್ಟದಲ್ಲಿದೆ. ಈ ವೈರಸ್ ಎಲ್ಲ ಧರ್ಮಗಳ ವೈರಿ ಎಂಬುದು ಎಲ್ಲರಿಗೂ ಗೊತ್ತು. ಆದ್ದರಿಂದ, ಅದರ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲು ಕಷ್ಟವೇನೂ ಇಲ್ಲ. ನಿಂಬಾಳ ಗ್ರಾಮದಂತೆ ರಾಜ್ಯದ  ಪ್ರತಿ ಗ್ರಾಮವನ್ನೂ ಮದ್ಯ ಮುಕ್ತ ಮತ್ತು ಕೋಮುದ್ವೇಷ ಮುಕ್ತ ಗ್ರಾಮವನ್ನಾಗಿ ಪರಿವರ್ತಿಸಲು ಸರ್ವ ಧರ್ಮಗಳ ಪ್ರಮುಖರೂ ಒಂದಾಗಿಬಿಟ್ಟರೆ ದೊಡ್ಡದೊಂದು ಬದಲಾವಣೆಯನ್ನು ಖಂಡಿತ ನಿರೀಕ್ಷಿಸಬಹುದು.
 ಏನೇ ಆಗಲಿ, ನಿಂಬಾಳ ಗ್ರಾಮವನ್ನು ಮದ್ಯಮುಕ್ತಗೊಳಿಸಲು ಯಶಸ್ವಿಯಾದ ಜನತೆಯನ್ನು ಮತ್ತು ಶಾಂತಲಿಂಗೇಶ್ವರ ಸ್ವಾಮಿಯನ್ನು ನಾವು ಅಭಿನಂದಿಸಬೇಕಾಗಿದೆ. ಅವರೊಂದು ಮಾದರಿ ಗ್ರಾಮವನ್ನು ಕಟ್ಟಿ ಈ ರಾಜ್ಯಕ್ಕೆ ಅರ್ಪಿಸಿದ್ದಾರೆ. ಆ ಮಾದರಿಯನ್ನು ಎದುರಿಟ್ಟುಕೊಂಡು ಮದ್ಯಮುಕ್ತ, ವರದಕ್ಷಿಣೆ  ಮತ್ತು ಕೋಮುದ್ವೇಷ ಮುಕ್ತ ಗ್ರಾಮಗಳನ್ನು  ಕಟ್ಟಲು ನಾವು ಪ್ರಯತ್ನಿಸಬೇಕಾಗಿದೆ. ಇನ್ನೊಬ್ಬನಿಗೆ ಇರಿಯುವ, ಇನ್ನೊಂದು ಧರ್ಮವನ್ನು ದ್ವೇಷಿಸುವವರು ಯಾರೇ ಇರಲಿ, ಅವರೆಲ್ಲ ನಿಂಬಾಳ ಗ್ರಾಮವನ್ನು ತಮ್ಮ ಧರ್ಮ ರಕ್ಷಣೆಗೆ ಮಾದರಿಯಾಗಿ ಎತ್ತಿಕೊಳ್ಳಬೇಕಾಗಿದೆ.

Wednesday 8 October 2014

ದೇಶಪ್ರೇಮದ ಅಮಲಿನಲ್ಲಿ ದೇಶದ್ರೋಹಿಯಾದ ಸಲ್ಮಾನ್

   ಕೇರಳದ 25 ವರ್ಷ ಪ್ರಾಯದ ಸಲ್ಮಾನ್ ಎಂಬ ಯುವಕನು ನಮ್ಮ ದೇಶಪ್ರೇಮ ಮತ್ತು ದೇಶಾಭಿಮಾನದ ಪರಿಕಲ್ಪನೆಯ ಸುತ್ತ ಚರ್ಚೆಯೊಂದನ್ನು ಹುಟ್ಟು ಹಾಕಿದ್ದಾನೆ. ಆಗಸ್ಟ್ 18ರಂದು ಸಲ್ಮಾನ್ ಮತ್ತು ಇತರ 5 ಮಂದಿ ಗೆಳೆಯರು ತಿರುವನಂತಪುರದ ಸಿನಿಮಾ ಥಿಯೇಟರ್‍ಗೆ ಪ್ರವೇಶಿಸಿದ್ದಾರೆ. ಪ್ರತಿ ಶೋದ (ದೇಖಾವೆ) ಬಳಿಕ ರಾಷ್ಟ್ರಗೀತೆ ನುಡಿಸುವುದು ಕೇರಳದ ಥಿಯೇಟರ್‍ಗಳಲ್ಲಿ ವಾಡಿಕೆ. ಆದರೆ ಸಲ್ಮಾನ್ ಮತ್ತು ಗೆಳೆಯರು ರಾಷ್ಟ್ರಗೀತೆಯ ಸಮಯದಲ್ಲಿ ಎದ್ದು ನಿಲ್ಲಲಿಲ್ಲ. ಇದನ್ನು ಇತರ ಸಭಿಕರು ಆಕ್ಷೇಪಿಸಿದಾಗ ಮಾತಿನ ಚಕಮಕಿಗಳು ನಡೆದುವು. ಬಳಿಕ ಒಂದು ದಿನ ಮಧ್ಯರಾತ್ರಿ ಮನೆಗೆ ನುಗ್ಗಿದ ಪೊಲೀಸರು ಸಲ್ಮಾನ್‍ನನ್ನು ಬಂಧಿಸಿದರು. ಆತನ ಮೇಲೆ ದೇಶದ್ರೋಹದ (Sedition) ಕೇಸು ದಾಖಲಿಸಿದರಲ್ಲದೇ ಫೇಸ್‍ಬುಕ್‍ನಲ್ಲಿ ದೇಶದ ತ್ರಿವರ್ಣ ಧ್ವಜವನ್ನು ಅವಮಾನಿಸುವ ಸ್ಟೇಟಸ್ ಹಾಕಿದ್ದಾನೆ ಎಂಬ ಆರೋಪದಲ್ಲಿ ಐಟಿ ಕಾಯ್ದೆಯ ಪ್ರಕಾರ ಇನ್ನೊಂದು ಮೊಕದ್ದಮೆಯನ್ನೂ ಹೂಡಿದರು. ಒಂದು ತಿಂಗಳ ಕಾಲ ಸಲ್ಮಾನ್ ಜೈಲಲ್ಲಿದ್ದ. ಇದೇ ವೇಳೆ ಇತರ ಐದು ಮಂದಿಯನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಹರಿಹರ ಶರ್ಮಾ ಎಂಬ ಗೆಳೆಯ ನಿರೀಕ್ಷಣಾ ಜಾವಿೂನು ಪಡೆದುಕೊಂಡ. ಪ್ರಕರಣವು ಕೇರಳದಲ್ಲಿ ಪ್ರತಿಭಟನೆ ಮತ್ತು ತೀವ್ರ ವಾಗ್ವಾದಕ್ಕೆ ಕಾರಣವೂ ಆಯಿತು. ಜಾವಿೂನು ಪಡೆದು ಹೊರಬಂದ ಸಲ್ಮಾನ್, ಪೊಲೀಸರು ಮತ್ತು ಜೈಲಧಿಕಾರಿಗಳಿಂದ ತನಗಾದ ಅನುಭವವನ್ನು ಮಾಧ್ಯಮದ ಮುಂದೆ ಹೇಳಿಕೊಂಡ. ತನ್ನನ್ನು ಮುಸ್ಲಿಮ್ ಭಯೋತ್ಪಾದಕ ಮತ್ತು ಪಾಕ್ ಗೂಢಚರ ಎಂದು ಪೊಲೀಸರು ನಿಂದಿಸಿರುವುದಾಗಿಯೂ ಆತ ಆಪಾದಿಸಿದ.
 ಅಂದಹಾಗೆ, ರಾಷ್ಟ್ರಗೀತೆಯನ್ನು ಗೌರವಿಸಬೇಕಾದುದು ಪ್ರತಿಯೋರ್ವ ನಾಗರಿಕನ ಕರ್ತವ್ಯ. ಇದಕ್ಕೆ ಸಲ್ಮಾನ್ ಆಗಲಿ ಹರಿಹರ ಶರ್ಮಾ ಆಗಲಿ ಹೊರತಲ್ಲ. ರಾಷ್ಟ್ರಗೀತೆ ಎಂಬುದು ಮೋಹನ್ ಲಾಲ್‍ನದ್ದೋ ಮಮ್ಮುಟಿಯದ್ದೋ ಸಿನಿಮಾದ ಹಾಡಿನಂತಲ್ಲ. ಅದಕ್ಕೆ ಅದರದ್ದೇ ಆದ ಗೌರವ ಮತ್ತು ಸ್ಥಾನಮಾನವಿದೆ. ಅದು ಒಂದು ದೇಶವನ್ನು ಮತ್ತು ಅದರ ಸಂಸ್ಕ್ರಿತಿಯನ್ನು ಪ್ರತಿನಿಧಿಸುತ್ತದೆ. ಈ ಅರಿವು ಮತ್ತು ಎಚ್ಚರಿಕೆ ಸಲ್ಮಾನ್ ಹಾಗೂ ಗೆಳೆಯರ ಬಳಗದಲ್ಲಿ ಇರಲೇಬೇಕಿತ್ತು. ರಾಷ್ಟ್ರಗೀತೆಯನ್ನು ಥಿಯೇಟರ್ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ನುಡಿಸುವುದು ಕಡ್ಡಾಯವಲ್ಲ ಎಂಬ ಕೇಂದ್ರ ಸರಕಾರದ ಆದೇಶವನ್ನು ಮುಂದುಮಾಡಿ, ಈ ಘಟನೆಯನ್ನು ಸಮರ್ಥಿಸುವುದು ಸರಿಯೂ ಆಗುವುದಿಲ್ಲ. ಆದರೆ ಸಲ್ಮಾನ್‍ನ ಬಂಧನಕ್ಕೆ ಕೇವಲ ‘ಎದ್ದು ನಿಂತಿಲ್ಲ' ಎಂಬುದೊಂದೇ ಕಾರಣವೇ ಅಥವಾ ಆತನ ಧರ್ಮವೂ ಆ ಬಂಧನದ ಹಿಂದಿದೆಯೇ? ಉಳಿದ ಐದು ಮಂದಿಯ ಮನೆಗೆ ಮಧ್ಯರಾತ್ರಿ ದಾಳಿ ಮಾಡದ ಪೊಲೀಸರು, ಈತನನ್ನೇ ಆ ದಾಳಿಗೆ ಆಯ್ಕೆ ಮಾಡಿಕೊಂಡಿದ್ದೇಕೆ? ಮುಸ್ಲಿಮ್ ಭಯೋತ್ಪಾದಕ ಮತ್ತು ಪಾಕ್ ಗೂಢಚರ ಎಂದಿರುವುದರ ಅರ್ಥವೇನು? ಒಂದು ವೇಳೆ ಈ ಬಂಧನಕ್ಕೆ ಧರ್ಮದ ಬಣ್ಣವೇ ಇಲ್ಲ ಎಂದಾದರೆ ಆತನನ್ನು ನಕ್ಸಲೀಯ ಎಂದೋ ಚೀನಾ ಗೂಢಚರ ಎಂದೋ ಕರೆಯಬಹುದಿತ್ತಲ್ಲವೇ? ಅಲ್ಲದೇ, ಆತನ ಮೇಲೆ ಆ ಘಟನೆಯ ಹೊರತು ಇನ್ನಾವ ಆರೋಪಗಳೂ ಇರಲಿಲ್ಲ. ಈ ಹಿಂದೆ ದೇಶವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ ಆರೋಪವೂ ಇಲ್ಲ. ಇಷ್ಟಿದ್ದೂ ಆತನನ್ನು ಭಯೋತ್ಪಾದಕನೆಂದು ಕರೆದಿರುವುದು ಮತ್ತು ದೇಶದ್ರೋಹದ ಮೊಕದ್ದಮೆ ದಾಖಲಿಸಿರುವುದಕ್ಕೆಲ್ಲ ಏನೆನ್ನಬೇಕು?
 ದೇಶಪ್ರೇಮ ಎಂಬುದು ಬರೇ ಒಂದು ಪದವಾಗಿ ಮತ್ತು ಪ್ರಾಯೋಗಿಕತೆಯ ಪ್ರಜ್ಞೆಯಾಗಿ - ಹೀಗೆ ಎರಡು ರೀತಿಯಲ್ಲಿ ಈ ದೇಶದಲ್ಲಿ ಇವತ್ತು ಚಲಾವಣೆಯಲ್ಲಿದೆ. ಒಂದು ಪದವೆಂಬ ನೆಲೆಯಲ್ಲಿ ದೇಶಪ್ರೇಮಕ್ಕೆ ಕರ್ತವ್ಯ ಮತ್ತು ಹೊಣೆಗಾರಿಕೆಗಳೇನೂ ಇಲ್ಲ. ಸಂದರ್ಭಕ್ಕೆ ತಕ್ಕಂತೆ ಈ ‘ದೇಶಪ್ರೇಮ' ಎಲ್ಲಿ ಬೇಕಾದರೂ ಹೇಗೆ ಬೇಕಾದರೂ ಜಾಗೃತಗೊಳ್ಳಬಹುದು. ಜಾನುವಾರು ಸಾಗಾಟಗಾರರ ಮೇಲೆ ಹಲ್ಲೆ ನಡೆಸುವುದೂ ದೇಶಪ್ರೇಮವಾಗುತ್ತದೆ. ಮದ್ರಸಾಗಳನ್ನು ಭಯೋತ್ಪಾದಕ ಕೇಂದ್ರ ಎನ್ನುವುದು, ಮುಸ್ಲಿಮ್ ಐಡೆಂಟಿಟಿಯನ್ನು ಪ್ರಶ್ನಿಸುವುದು, ಭಯೋತ್ಪಾದಕರೆನ್ನುವುದು.. ಎಲ್ಲವೂ ದೇಶಪ್ರೇಮದ ಭಾಗವಾಗಿ ಗುರುತಿಗೀಡಾಗುತ್ತದೆ. ಈ ದೇಶಪ್ರೇಮ ತೀರಾ ಸುಲಭದ್ದು. ವರ್ಷದಲ್ಲಿ ಎರಡು ಬಾರಿ ಭಾರತದ ತ್ರಿವರ್ಣ ಹಾರಿಸುವುದು ಮತ್ತು  ಮೊಗಲರು ಹಾಗೂ ಇನ್ನಿತರ ಮುಸ್ಲಿಮ್ ದೊರೆಗಳನ್ನು ದೂಷಿಸುವುದರಿಂದ ದೇಶಪ್ರೇಮದ ಬೇಡಿಕೆ ಪೂರ್ತಿಯಾಗುತ್ತದೆ. ಆದರೆ ಒಂದು ಪ್ರಾಯೋಗಿಕ ಪ್ರಜ್ಞೆಯೆಂಬ ನೆಲೆಯಲ್ಲಿ ‘ದೇಶಪ್ರೇಮ'ವು ಇಷ್ಟು ಸರಳ ಮತ್ತು ಸುಲಭವಾಗಿಲ್ಲ. ಅದಕ್ಕೂ ಈ ದೇಶಕ್ಕೂ ಮತ್ತು ಇಲ್ಲಿನ ಜನರಿಗೂ ಬಿಡಿಸಲಾರದ ನಂಟಿದೆ. ಈ ದೇಶದ ಸಂವಿಧಾನವನ್ನು ಮತ್ತು ಅದು ಪ್ರತಿಪಾದಿಸುವ ಸಮಾನತೆಯನ್ನು ಈ ದೇಶಪ್ರೇಮ ಗೌರವಿಸುತ್ತದೆ. ಸಕ್ರಮ ಮತ್ತು ಅಕ್ರಮ ಎರಡೂ ಸಂದರ್ಭದಲ್ಲೂ ಅದು ಕಾನೂನನ್ನು ಗೌರವಿಸುತ್ತದೆ. ಈ ದೇಶದ ಪ್ರತಿಯೋರ್ವ ನಾಗರಿಕನ ಜೀವ, ಸೊತ್ತು, ಮಾನ, ಹಕ್ಕುಗಳನ್ನು ಅದು ಗೌರವಾರ್ಹ ಎಂದು ಪ್ರತಿಪಾದಿಸುತ್ತದೆ. ಪ್ರತಿಭೆಯಲ್ಲಾಗಲಿ, ಅಪರಾಧದಲ್ಲಾಗಲಿ ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬಿತ್ಯಾದಿ ವಿಭಜನೆ ಮಾಡುವುದನ್ನು ಅದು ದೇಶದ್ರೋಹತನ ಎಂದೇ ಕರೆಯುತ್ತದೆ. ನಿಜವಾಗಿ, ಈ ದೇಶಪ್ರೇಮದ ಪ್ರತಿಪಾದಕರಿಗೆ ಮಚ್ಚು, ಲಾಂಗು, ಬಂದೂಕುಗಳ ಅಗತ್ಯವಿಲ್ಲ. ಪ್ರಚೋದಕ ಭಾಷಣಗಳನ್ನು ಮಾಡಬೇಕಾಗಿಯೂ ಇಲ್ಲ. ಆದರೆ ಬರೇ ಪದವಾಗಿರುವ ದೇಶಪ್ರೇಮಕ್ಕೆ ಇವೆಲ್ಲವುಗಳ ಅಗತ್ಯವಿದೆ. ಅದು ಜೀವಂತವಾಗಿರುವುದೇ ಕಾನೂನುಬಾಹಿರ ಚಟುವಟಿಕೆಗಳ ಮೂಲಕ. ನಿಜವಾಗಿ, ಸಲ್ಮಾನ್ ಪ್ರಕರಣ ಚರ್ಚಾರ್ಹವಾಗಬೇಕಾದದ್ದು ಈ ಹಿನ್ನೆಲೆಯಲ್ಲೇ. ಬಲಪಂಥೀಯ ವಿಚಾರಧಾರೆಗೆ ರಾಜಕೀಯ ಅಧಿಕಾರ ಲಭ್ಯವಾಗಿರುವಾಗ ಮತ್ತು ಸರಕಾರಿ ವಾಹಿನಿಯಾದ ದೂರದರ್ಶನದಲ್ಲೇ ಭಾಗವತ್‍ರಂಥವರಿಗೆ ಭಾಷಣದ ಅವಕಾಶ ಸಿಗುತ್ತಿರುವಾಗ ಇಂಥ ಪ್ರಕರಣಗಳನ್ನು ಆಕಸ್ಮಿಕ ಎಂದು ಹೇಳುವಂತಿಲ್ಲ. ಈ ರೀತಿಯ ದೇಶಪ್ರೇಮದಲ್ಲೊಂದು ಅಮಲಿದೆ. ಈ ಅಮಲು ಸರಿ-ತಪ್ಪುಗಳನ್ನು ಕಡೆಗಣಿಸುವಷ್ಟು ಅಪಾಯಕಾರಿಯಾದದ್ದು. ಅದು ವ್ಯವಸ್ಥೆಯನ್ನು ಆವರಿಸಿಕೊಂಡು ಬಿಟ್ಟರೆ, ಗಂಭೀರವಲ್ಲದ ಪ್ರಕರಣವೂ ಗಂಭೀರವಾಗುತ್ತದೆ. ಸಾಮಾನ್ಯ ಕ್ರಿಮಿನಲ್ ಪ್ರಕರಣವೂ ದೇಶದ್ರೋಹವಾಗುತ್ತದೆ. ವ್ಯಕ್ತಿಯ ಚರ್ಮ, ಧರ್ಮ ನೋಡಿಕೊಂಡು ಪ್ರಕರಣವು ಭೀಕರ ಅಥವಾ ಸಾಮಾನ್ಯವಾಗಿ ವಿಭಜನೆಗೊಳ್ಳುತ್ತದೆ.
 ನಿಜವಾಗಿ, ದೇಶಪ್ರೇಮ, ದೇಶಾಭಿಮಾನ, ಸಮಾನ ಸ್ವಾತಂತ್ರ್ಯ.. ಮುಂತಾದುವುಗಳೆಲ್ಲ ವಿಸ್ತೃತ ಅರ್ಥವುಳ್ಳವು. ಆದರೆ ಅದನ್ನು ಈ ದೇಶದ ಒಂದು ವರ್ಗ ಅತ್ಯಂತ ಸೀಮಿತ ಅರ್ಥಕ್ಕೆ ಇಳಿಸಿ ಬಿಟ್ಟಿದೆ. ರಾಷ್ಟ್ರಗೀತೆಗೆ ಎದ್ದು ನಿಲ್ಲುತ್ತಲೇ ಈ ವರ್ಗ ಕಾನೂನುಬಾಹಿರ ಕೃತ್ಯಗಳಲ್ಲೂ ಭಾಗಿಯಾಗುತ್ತವೆ ಮತ್ತು ಬಹಿರಂಗವಾಗಿಯೇ ಈ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತವೆ. ಸಲ್ಮಾನ್ ಪ್ರಕರಣವನ್ನು ವಿಶ್ಲೇಷಿಸುವಾಗ ಈ ದ್ವಂದ್ವವೂ ಚರ್ಚೆಗೊಳಗಾಗಬೇಕಾದುದು ಅತಿ ಅಗತ್ಯ. ಆದ್ದರಿಂದ ರಾಷ್ಟ್ರಗೀತೆಯನ್ನು ಗೌರವಿಸದ ಸಲ್ಮಾನ್‍ನ ವರ್ತನೆಯನ್ನು ಖಂಡಿಸುತ್ತಲೇ, ಆತನೊಂದಿಗೆ ವ್ಯವಸ್ಥೆ ನಡೆದುಕೊಂಡ ರೀತಿಯನ್ನೂ ನಾವು ಪ್ರಶ್ನಿಸಬೇಕಾಗುತ್ತದೆ.

Monday 29 September 2014

ಮಕ್ಸೂದ್ ಮತ್ತು ಹುಲಿಯನ್ನು ಈದ್‍ಗೆ ಮುಖಾಮುಖಿಗೊಳಿಸೋಣ

   ಮೃಗ ಎಂಬ ಪದಕ್ಕೆ ಡಿಕ್ಷನರಿಯಲ್ಲಿ ಪ್ರಾಣಿ, ಪಶು, ದುಷ್ಟಜಂತು, ಹಿಂಸ್ರಪ್ರಾಣಿ, ಕಸ್ತೂರಿ ಮೃಗ.. ಮುಂತಾದ ಅರ್ಥಗಳಿವೆ. ನಮ್ಮೆಲ್ಲರೊಳಗೂ ಒಂದು ‘ಮೃಗ’ ಇದೆ. ಸಂದರ್ಭಕ್ಕೆ ತಕ್ಕಂತೆ ಅದು ವರ್ತಿಸುತ್ತಲೂ ಇದೆ. ಕೆಲವೊಮ್ಮೆ ಪಶುವಿನಂತೆ, ಕೆಲವೊಮ್ಮೆ ಕಸ್ತೂರಿ ಮೃಗದಂತೆ, ಕೆಲವೊಮ್ಮೆ ಹಿಂಸಾತ್ಮಕವಾಗಿ, ಕೆಲವೊಮ್ಮೆ ದುಷ್ಟತನದಿಂದ.. ಹೀಗೆ ವಿವಿಧ ಸನ್ನಿವೇಶಗಳಲ್ಲಿ ನಮ್ಮೊಳಗಿನ ಮೃಗ ತನ್ನತನವನ್ನು ಪ್ರದರ್ಶಿಸುತ್ತಿರುತ್ತದೆ. ದೆಹಲಿಯ ಮೃಗಾಲಯದಲ್ಲಿದ್ದ ಹುಲಿಯೊಂದು ಯುವಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆಯು ಕಳೆದವಾರ ಮಾಧ್ಯಮಗಳಲ್ಲಿ ಸುದ್ದಿಗೀಡಾಯಿತು. ವಾಟ್ಸಪ್, ಫೇಸ್‍ಬುಕ್‍ಗಳಲ್ಲಿ ಆ 15 ನಿಮಿಷಗಳ ವೀಡಿಯೋ ಪ್ರಸಾರವಾಯಿತು. ಮಕ್ಸೂದ್ ಎಂಬ ಆ ಯುವಕನು ಹುಲಿಯ ಎದುರು ಅಕ್ಷರಶಃ ಪಶುವಿನಂತಿದ್ದ. ಬಿಟ್ಟುಬಿಡುವಂತೆ ಹುಲಿಯೊಂದಿಗೆ ವಿನಂತಿಸುತ್ತಿದ್ದ. ನಿಜವಾಗಿ, ಇದು ಆತನ ನೈಜ ಸ್ವಭಾವ ಎಂದು ಹೇಳುವಂತಿಲ್ಲ. ಮೃಗಾಲಯದೊಳಗೆ ಪಶುವಾದ ಆತ ಹೊರಗೆ ಈ ಮೊದಲು ಹುಲಿಯಂತೆ ವರ್ತಿಸಿರಲೂ ಬಹುದು. ಹಿಂಸಾತ್ಮಕ ಸ್ವಭಾವವನ್ನು ಪ್ರದರ್ಶಿಸಿರಬಹುದು. ಯಾಕೆಂದರೆ, ಈ ಜಗತ್ತಿನಲ್ಲಿ ಮನುಷ್ಯನಷ್ಟು ಬುದ್ಧಿವಂತ ಪ್ರಾಣಿ ಮತ್ತು ಅಷ್ಟೇ ಹಿಂಸಾತ್ಮಕ ಪ್ರಾಣಿ ಬೇರೊಂದಿಲ್ಲ. ಅಸೂಯೆ, ಅಹಂ, ಮೋಸ, ದಾಷ್ಟ್ರ್ಯತನ, ಹಗೆತನ, ಕೋಮುವಾದ...  ಮುಂತಾದ ಪದಗಳೆಲ್ಲ ಹೆಚ್ಚು ಹೊಂದುವುದು ಮನುಷ್ಯನಿಗೇ. ಹುಲಿಗೆ ತುಂಬಾ ಅಸೂಯೆ ಇದೆ, ಚಿರತೆ ಅಹಂಕಾರಿ, ಆನೆ ಮೋಸಗಾರ, ಪಶುವಿಗೆ ಹಗೆತನವಿದೆ ಎಂದೆಲ್ಲಾ ನಾವು ಹೇಳುವುದೇ ಇಲ್ಲ. ಆದರೂ ಪ್ರಾಣಿ ಜಗತ್ತಿನ ಮೇಲೆ ಧಾರಾಳ ಆರೋಪಗಳನ್ನು ಹೊರಿಸಿ ಮಾನವ ಜಗತ್ತು ಇವತ್ತು ಬದುಕುತ್ತಿದೆ. ಮಕ್ಸೂದ್‍ನು ಹುಲಿಯಿರುವ ಕಂದಕಕ್ಕೆ ಬೀಳುವ ಮೊದಲು ಆತನ ಸಹಿತ ಅಲ್ಲಿದ್ದವರೆಲ್ಲ ಹುಲಿಯನ್ನು ಮನಸಾರೆ ಆನಂದಿಸಿದ್ದರು. ಆದರೆ ಯಾವಾಗ ಮಕ್ಸೂದ್‍ನು ಹುಲಿಯ ಬಳಿಗೆ ಬಿದ್ದನೋ ಆ ಹುಲಿಯ ಸೌಂದರ್ಯ, ಆಕೃತಿ, ಬಿಳಿಪಟ್ಟೆ...  ಎಲ್ಲದರ ಕುರಿತಾದ ಮಾತುಗಳೂ  ಸ್ಥಗಿತಗೊಂಡು ಅದು ಕ್ರೂರವಾಗಿಯೂ ಮಕ್ಸೂದ್ ಪಶುವಾಗಿಯೂ ಕಾಣಿಸಿದ.
   ಒಂದು ರೀತಿಯಲ್ಲಿ, ಮಕ್ಸೂದ್ ಮತ್ತು ಹುಲಿ - ಇವೆರಡೂ ಬೇರೆ ಬೇರೆಯಲ್ಲ. ಓರ್ವನೇ  ಮನುಷ್ಯನ ಎರಡು ಮುಖಗಳು. ಮನುಷ್ಯ ಇವತ್ತು ಇಂಥ ಹತ್ತು-ಹಲವು ಮುಖಗಳೊಂದಿಗೆ ಬದುಕುತ್ತಿದ್ದಾನೆ. ಹಜ್ ನ ಉದ್ದೇಶ ಏನೆಂದರೆ, ಈ ಮುಖಗಳನ್ನು ಕಿತ್ತೆಸೆದು ಪ್ರಕೃತಿ ಸಹಜವಾದ ಮತ್ತು ಎಳ್ಳಷ್ಟೂ ಅಪ್ರಾಮಾಣಿಕತೆಯಿಲ್ಲದ ವ್ಯಕ್ತಿತ್ವಗಳನ್ನು ತಯಾರಿಸುವುದು. ಇಸ್ಮಾಈಲ್‍ರ(ಅ) ನೆನಪಲ್ಲಿ ಪ್ರಾಣಿಬಲಿಯನ್ನು ಕೊಡಲು ಮುಂದಾಗುವ ಸಮಾಜವು ‘ಮಕ್ಸೂದ್ ಮತ್ತು ಹುಲಿ'ಯನ್ನು ಮತ್ತೆ ಮತ್ತೆ ನೆನಪಿಸಿ ಕೊಳ್ಳಬೇಕಾದ ತುರ್ತು ಅಗತ್ಯವಿದೆ. ಪ್ರಾಣಿಯನ್ನು ಬಲಿ ಕೊಡುವಾಗ ಮತ್ತು ಅದರ ಮಾಂಸವನ್ನು ಸೇವಿಸುವಾಗ ಪ್ರತಿಯೋರ್ವರೂ ತಮ್ಮ ‘ಹುಲಿತ್ವ ಮತ್ತು ಮಕ್ಸೂದತ್ವ'ಕ್ಕೆ ಶಾಶ್ವತ ವಿದಾಯ ಹೇಳುವ ಪ್ರತಿಜ್ಞೆ ಮಾಡಬೇಕಾಗಿದೆ. ಅಲ್ಲಾಹನಿಗೆ ಪ್ರಾಣಿಯ ರಕ್ತವಾಗಲಿ ಮಾಂಸವಾಗಲಿ ತಲುಪುವುದಿಲ್ಲ (22:37) ಎಂಬ ಕುರ್‍ಆನ್ ವಚನದ ಉದ್ದೇಶವೂ ಇದುವೇ.
   ನಿಜವಾಗಿ, ಪ್ರತಿವರ್ಷ ಬಕ್ರೀದ್ ಆಗಮಿಸುವುದು ಪ್ರಾಣಿಬಲಿಯನ್ನು ನೀಡುವುದಕ್ಕೋ ಅದರ ಮಾಂಸವನ್ನು ತಿನ್ನುವುದಕ್ಕೋ ಅಲ್ಲ. ಇದು ದೊಡ್ಡದೊಂದು ಗುರಿಯ ಬಿಡಿ ಬಿಡಿ ಭಾಗಗಳಷ್ಟೇ. ನಮ್ಮೊಳಗಿನ ಎಲ್ಲ ಬಗೆಯ ಮಾಲಿನ್ಯಗಳಿಗೆ ಕತ್ತಿ ಇಡುವುದರ ಸಂಕೇತವಾಗಿಯಷ್ಟೇ ನಾವದನ್ನು ಪರಿಗಣಿಸಬೇಕು. ಬಲಿ ನೀಡುವಾಗ ಪ್ರಾಣಿಗಾಗುವ ನೋವು ಮತ್ತು ಒದ್ದಾಟಗಳು ಈದ್ ಆಚರಿಸುವ ಪ್ರತಿಯೋರ್ವರ ಒಳಗೂ ಆಗಬೇಕು. ಹೊಸ ಬಟ್ಟೆ ಧರಿಸುವಾಗ, ಮಾಂಸದೂಟ ಸೇವಿಸುವಾಗ, ಆಲಿಂಗಿಸುವಾಗ, ಲಬ್ಬೈಕ್ ಹೇಳುವಾಗ.. ಎಲ್ಲ ಸಂದರ್ಭಗಳಲ್ಲೂ ಆ ನೋವು ಮನದೊಳಗೆ ಪ್ರತಿಧ್ವನಿಸಬೇಕು. ಮಕ್ಸೂದ್ ಮತ್ತು ಹುಲಿಯ ನಡುವೆ ನಡೆದ 15 ನಿಮಿಷಗಳ ದೇಹಭಾಷೆಯ ಸಂವಾದ ಮತ್ತು ಅಂತಿಮವಾಗಿ ಹುಲಿತ್ವವು ಮೇಲುಗೈ ಪಡೆದುದನ್ನು ನಾವು ಈದ್‍ನ ಸಂದರ್ಭದಲ್ಲಿ ಮುಖಾಮುಖಿಗೊಳಿಸಬೇಕು. ಮನುಷ್ಯ ಪಶುವೂ ಆಗಬಲ್ಲ, ಹುಲಿಯೂ ಆಗಬಲ್ಲ. ಸಂದರ್ಭಕ್ಕೆ ತಕ್ಕಂತೆ ತನ್ನ ಪಶುತ್ವವನ್ನೂ ಹುಲಿತ್ವವನ್ನೂ ಪ್ರದರ್ಶಿಸಬಲ್ಲ. ಮಾತ್ರವಲ್ಲ, ಹುಲಿಯಲ್ಲೂ ಪಶುವಲ್ಲೂ ಇಲ್ಲದ ಅನೇಕಾರು ದುರ್ಗುಣಗಳನ್ನೂ ಅನಾವರಣಗೊಳಿಸಬಲ್ಲ. ಈದ್ ಮುಖ್ಯವಾಗಬೇಕಾದದ್ದು ಈ ಎಲ್ಲ ಹಿನ್ನೆಲೆಗಳಲ್ಲಿ. ಅದು ಮಕ್ಸೂದತ್ವ ಮತ್ತು ಹುಲಿತ್ವದಿಂದ ನಮ್ಮನ್ನು ಮುಕ್ತಗೊಳಿಸಿ ಇಬ್ರಾಹೀಮ್ ಮತ್ತು ಇಸ್ಮಾಈಲತ್ವದ ನೈಜ ಪ್ರತಿನಿಧಿಗಳಾಗಿ ಬದಲಿಸಬೇಕು. ಮಕ್ಸೂದ್ ಮತ್ತು ಹುಲಿಯನ್ನು ಈದ್‍ಗೆ ಮುಖಾಮುಖಿಗೊಳಿಸಿದರೆ ಈದ್ ನಮ್ಮಿಂದೇನು ಬಯಸುತ್ತದೆ ಅನ್ನುವುದು ಸ್ಪಷ್ಟವಾಗುತ್ತದೆ. ಹಾಗಾದಾಗ ಈ ಜಗತ್ತಿಗೆ ಇಬ್ರಾಹೀಮ್, ಇಸ್ಮಾಈಲ್ ಮತ್ತು ಹಾಜಿರಾರ ಕೊರತೆ ಎದುರಾಗುವುದಿಲ್ಲ. ಹಾಗಾಗಲಿ ಎಂದು ಹಾರೈಸೋಣ.

Friday 26 September 2014

ವ್ಯಾಪಾರಿಗಳ ಜೋಳಿಗೆಯಿಂದ ತಪ್ಪಿಸಿಕೊಂಡ ಸ್ಕಾರ್ಫ್

    “ಮುಸ್ಲಿಮರ ಸ್ಕಾರ್ಫ್ ಮತ್ತು ಸಿಕ್ಖರ ಟರ್ಬನ್‍ಗೆ ಬಾಸ್ಕೆಟ್‍ಬಾಲ್ ಕ್ರೀಡೆಯಲ್ಲಿ ಅನುಮತಿ ನೀಡಲಾಗುವುದಲ್ಲದೇ ಮುಂದಿನ ಎರಡು ವರ್ಷಗಳ ವರೆಗೆ ವಿವಿಧ ಪಂದ್ಯಾವಳಿಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಪರಿಶೀಲನೆಗೊಳಪಡಿಸಿದ ಬಳಿಕ ಅಧಿಕೃತ ಘೋಷಣೆ ಹೊರಡಿಸಲಾಗುವುದು” - ಎಂದು ಕಳೆದವಾರ ವಿಶ್ವ ಬಾಸ್ಕೆಟ್‍ಬಾಲ್ ಸಂಸ್ಥೆಯು (FIBA) ಹೇಳಿಕೊಂಡಿದೆ. ಈ ವರೆಗೆ 5 ಸೆಂಟಿ ವಿೂಟರ್‍ನ ಹೇರ್‍ಬೆಂಡ್‍ಗೆ ಮಾತ್ರ ಅವಕಾಶ ಇತ್ತು. ಮಹಿಳಾ ಆಟಗಾರ್ತಿಯರು ಸ್ಕಾರ್ಫ್ ಧರಿಸುವುದನ್ನಾಗಲಿ, ಟರ್ಬನ್ ತೊಡುವುದನ್ನಾಗಲಿ ಅದು ನಿಷೇಧಿಸಿತ್ತು. ಆದ್ದರಿಂದಲೇ ಈ ಹೇಳಿಕೆಗೆ ವಿವಿಧ ಭಾಗಗಳಿಂದ ಸಂತೋಷದ ಪ್ರತಿಕ್ರಿಯೆಗಳು ವ್ಯಕ್ತವಾದುವು. ಅನೇಕ ಮಂದಿ ಸಂಸ್ಥೆಯ ಈ ಘೋಷಣೆಯನ್ನು ಸ್ವಾಗತಿಸಿದರು. ನಿಜವಾಗಿ, ವ್ಯಕ್ತಿ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಕುರಿತಂತೆ ಅಪಾರ ಚರ್ಚೆಗಳಾಗುತ್ತಿರುವ ಈ ದಿನಗಳಲ್ಲಿ ಬಾಸ್ಕೆಟ್‍ಬಾಲ್ ಸಂಸ್ಥೆಯೊಂದು ಈ ವರೆಗೂ ಸ್ಕಾರ್ಫ್-ಟರ್ಬನ್ ನಿಷೇಧ ನೀತಿಯನ್ನು ಪಾಲಿಸಿಕೊಂಡು ಬರುತ್ತಿತ್ತು ಎಂಬುದೇ ಅಚ್ಚರಿಯ ಸಂಗತಿ. ಒಂದು ರೀತಿಯಲ್ಲಿ ಸಂತೋಷಕ್ಕಿಂತ ದುಃಖಿಸಬೇಕಾದ, ಸ್ವಾಗತಕ್ಕಿಂತ ಮರುಕಪಡಬೇಕಾದ ಮನಸ್ಥಿತಿಯೊಂದರ ಅನಾವರಣ ಇದು.
 ಯುರೋಪಿಯನ್ ರಾಷ್ಟ್ರಗಳ ಬಗ್ಗೆ ನಮ್ಮಲ್ಲಿ ಕೆಲವು ಭ್ರಮೆಗಳಿವೆ. ವ್ಯಕ್ತಿ, ಅಭಿವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅಪಾರ ಮನ್ನಣೆ ಕೊಡುವ ರಾಷ್ಟ್ರಗಳವು ಎಂಬೊಂದು ನಂಬುಗೆ ಅಸಂಖ್ಯ ಮಂದಿಯಲ್ಲಿದೆ. ಲಿವಿಂಗ್ ಟುಗೆದರ್, ಸಲಿಂಗ ಸ್ವಾತಂತ್ರ್ಯ, ಮದುವೆ-ವಿಚ್ಛೇದನ.. ಮುಂತಾದ ಹಲವಾರು ವಿಷಯಗಳ ಬಗ್ಗೆ ಅವುಗಳ ಉದಾರ ಧೋರಣೆಗಳು ಶ್ಲಾಘನೆಗೆ ಒಳಗಾಗುವುದೂ ಇದೆ. ಆದರೆ ಇದು ಒಂದು ಮುಖ ಮಾತ್ರ. ಅದರ ಇನ್ನೊಂದು ಮುಖ ಎಷ್ಟು ಕರಾಳ ಮತ್ತು ಪಕ್ಷಪಾತದಿಂದ ಕೂಡಿದೆಯೆಂದರೆ, ತಲೆಗೆ ಸುತ್ತುವ ಒಂದು ಬಟ್ಟೆಯನ್ನೂ ಅದು ಸಹಿಸಿಕೊಳ್ಳುತ್ತಿಲ್ಲ. ಬಾಸ್ಕೆಟ್‍ಬಾಲ್ ಸಂಸ್ಥೆಯ (FIBA) ಕಚೇರಿ ಇರುವುದು ಸ್ವೀಡನ್‍ನಲ್ಲಿ. ಬಾಸ್ಕೆಟ್‍ಬಾಲ್ ಆಟವು ತೃತೀಯ ಜಗತ್ತಿನಲ್ಲಿ ಜನಪ್ರಿಯವೂ ಆಗಿಲ್ಲ. ಬಿಳಿಯರು ಮತ್ತು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲೇ ಹೆಚ್ಚು ಜನಪ್ರಿಯತೆ ಗಳಿಸಿಕೊಂಡ ಕ್ರೀಡೆ ಇದು. ಯಾವುದೋ ಆಫ್ರಿಕನ್ ಖಂಡದ ಮತ್ತು ಬಡತನದ ಬೇಗೆಯಲ್ಲಿರುವ ರಾಷ್ಟ್ರಗಳು ಸೇರಿ ಇಂಥ ನಿಯಮ ರೂಪಿಸಿರುತ್ತಿದ್ದರೆ ಅದನ್ನು ಪುರಾತನ ಮನಸ್ಥಿತಿ ಅನ್ನಬಹುದಿತ್ತು. ವ್ಯಕ್ತಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಮಹತ್ವವನ್ನು ಗ್ರಹಿಸುವಲ್ಲಿ ಅವು ಇನ್ನೂ ಬೆಳೆದಿಲ್ಲ ಎಂದು ಸಮರ್ಥಿಸಿಕೊಳ್ಳಬಹುದಿತ್ತು. ಆದರೆ ಅಭಿವೃದ್ಧಿ ಹೊಂದಿದವರೇ ಹೆಚ್ಚಿನ ಪ್ರಮಾಣದಲ್ಲಿ ಆಡುವ ಮತ್ತು ಅವರೇ ಸಂಸ್ಥೆಯಲ್ಲಿ ನಿಯಮಗಳನ್ನು ರೂಪಿಸುವ ಅಧಿಕಾರ ಹೊಂದಿದ್ದೂ ಈ 21ನೇ ಶತಮಾನದಲ್ಲೂ ಇಂಥ ನಿಯಮಗಳು ಅಸ್ತಿತ್ವ ಉಳಿಸಿಕೊಂಡದ್ದು ಹೇಗೆ? ಸ್ಕಾರ್ಫ್‍ನಿಂದ ಬಾಸ್ಕೆಟ್ ಬಾಲ್‍ಗೆ ಯಾವ ತೊಂದರೆಯಿದೆ? ಟರ್ಬನ್ ಧರಿಸುವುದರಿಂದ ಏನು ಹಾನಿಯಿದೆ? ಯಾವ ಮಾನದಂಡದಲ್ಲಿ ಇಂಥ ನಿಯಮಗಳನ್ನು ರೂಪಿಸಲಾಗುತ್ತದೆ? ಕಳೆದ ಒಲಿಂಪಿಕ್ಸ್ ನ ವರೆಗೆ ಕುಸ್ತಿಯಲ್ಲಿ ಮಹಿಳೆಯರಿಗೆ ಸಂಪೂರ್ಣ ಮೈಮುಚ್ಚುವ ಬಟ್ಟೆ ಧರಿಸುವುದಕ್ಕೆ ಅನುಮತಿ ಇರಲಿಲ್ಲ. ಈ ಕಾರಣದಿಂದಾಗಿ ಮುಸ್ಲಿಮ್ ಕ್ರೀಡಾಪಟುಗಳು ಅದರಿಂದ ದೂರವಿದ್ದರು. ಕಳೆದ ಬಾರಿ ಈ ನಿಯಮವನ್ನು ಸಡಿಲಿಸಲಾಯಿತು. ಎರಡು ವರ್ಷಗಳ ಹಿಂದೆ ಇರಾನಿ ಆಟಗಾರ್ತಿಯರು ಮೈಮುಚ್ಚುವ ಬಟ್ಟೆ ಧರಿಸಿ ಕಬಡ್ಡಿ ಆಡಿ ವಿಶ್ವದ ಗಮನ ಸೆಳೆದಿದ್ದರು. ಅದೇ ಉಡುಪಿನಲ್ಲಿ ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲೂ ಭಾಗವಹಿಸಿದ್ದರು. ಹೀಗಿರುವಾಗ ಧಾರ್ಮಿಕ ವಸ್ತ್ರಸಂಹಿತೆ ತೊಡಕಾಗುವುದು ಯಾರಿಗೆ? ಆಟಗಾರರಿಗೆ ಅದು ಸಮಸ್ಯೆ ಆಗುವುದಿಲ್ಲ ಎಂದಾದರೆ ಕ್ರೀಡಾ ಸಂಸ್ಥೆಗಳಿಗೇಕೆ ಸಮಸ್ಯೆಯಾಗುತ್ತಿದೆ? ಅವರು ಕ್ರೀಡೆಯ ಹೆಸರಲ್ಲಿ ಏನನ್ನು ಮತ್ತು ಯಾವುದನ್ನು ಪ್ರಚೋದಿಸುತ್ತಿದ್ದಾರೆ?
 ಎರಡ್ಮೂರು ವರ್ಷಗಳ ಹಿಂದೆ ಬ್ಯಾಡ್ಮಿಂಟನ್ ಸಂಸ್ಥೆ ಚರ್ಚೆಗೊಳಗಾಗಿತ್ತು. ಬ್ಯಾಡ್ಮಿಂಟನ್ ಆಟಗಾರ್ತಿಯರು ಕಡ್ಡಾಯವಾಗಿ ಸ್ಕರ್ಟ್ ಧರಿಸಬೇಕು ಎಂದು ಅದು ಆದೇಶ ಹೊರಡಿಸಿತ್ತು. ವೀಕ್ಷಕರು ಗ್ಯಾಲರಿಯಲ್ಲಿ ಸೇರಬೇಕಾದರೆ ಈ ಉಡುಪು ಸಂಹಿತೆ ಅಗತ್ಯ ಎಂದು ಸಮರ್ಥಿಸಿಯೂ ಇತ್ತು. ಆಗ ಜ್ವಾಲಾ ಗುಟ್ಟಾ, ಸೈನಾ ನೆಹ್ವಾಲ್, ಅಶ್ವಿನಿ ಪೊನ್ನಪ್ಪ.. ಮುಂತಾದವರು ತಂತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಏನಿವೆಲ್ಲ? ಬ್ಯಾಡ್ಮಿಂಟನ್ ಸಂಸ್ಥೆ ಮತ್ತು ಬಾಸ್ಕೆಟ್ ಬಾಲ್ ಸಂಸ್ಥೆಯ ಈ ಕ್ರೀಡಾ ನಿಯಮಗಳನ್ನು ಹೋಲಿಸಿ ನೋಡಿಕೊಳ್ಳಿ. ಯಾಕೆ ಮಹಿಳಾ ಆಟಗಾರ್ತಿಯರ ಉಡುಪುಗಳನ್ನು ಅವು ಗಿಡ್ಡವಾಗಿಸುತ್ತಿವೆ? ಕ್ರೀಡೆ ಎಂಬುದು ಸಂಪೂರ್ಣವಾಗಿ ಪ್ರತಿಭೆಯನ್ನೇ ಆಧರಿಸಿರುವಂಥದ್ದು. ಇಂತಿಂಥ ಧರ್ಮದ, ಇಂತಿಂಥ ಉಡುಪಿನ ವ್ಯಕ್ತಿಗಳಲ್ಲಿ ಮಾತ್ರ ಪ್ರತಿಭೆ ಇರುತ್ತದೆ ಎಂಬ ನಿಯಮ ಎಲ್ಲೂ ಇಲ್ಲ. ಅತ್ಯಂತ ಬಲಶಾಲಿ ಮತ್ತು ಶ್ರೀಮಂತ ರಾಷ್ಟ್ರಗಳ ಮುಂದೆ ಕೀನ್ಯ, ಸೊಮಾಲಿಯಾ, ಘಾನಾದಂಥ ಬಡ ರಾಷ್ಟ್ರಗಳ ಪ್ರತಿಭೆಗಳು ಸ್ಪರ್ಧಿಸಿ ಗೆಲ್ಲುತ್ತಿವೆ. ಅಷ್ಟಕ್ಕೂ, ಯಾವ ಕ್ರೀಡೆಯೂ ಬಟ್ಟೆಯನ್ನು ಹೊಂದಿಕೊಂಡಿಲ್ಲವಲ್ಲ. ಬಟ್ಟೆ ಎಂಬುದು ಪ್ರತಿಭೆಯ ಸಂಕೇತವೂ ಅಲ್ಲ. ಅದು ದೇಹವನ್ನೋ ಕೇಶವನ್ನೋ ಮುಚ್ಚುವಂಥದ್ದು. ಕ್ರೀಡೆಯು ಇದರ ವಿರೋಧಿಯಾಗಿರಲು ಸಾಧ್ಯವೇ ಇಲ್ಲ. ಯಾರು ಪ್ರತಿಭಾ ಪ್ರದರ್ಶನಕ್ಕೆ ಉಡುಪು ವೈರಿ ಎಂದು ಭಾವಿಸುತ್ತಾರೋ ನಿಜವಾಗಿ ಅವರೇ ಕ್ರೀಡೆಯ ವೈರಿಗಳು. ಅವರು ಕ್ರೀಡೆಯ ಹೆಸರಲ್ಲಿ ಇನ್ನೇನನ್ನೋ ಬಯಸುತ್ತಿದ್ದಾರೆ. ಆ ಬಯಕೆಗೆ ಪೂರಕವಾಗಿ ಆಟಗಾರರನ್ನು ಆಡಿಸುತ್ತಿದ್ದಾರೆ. ಅದಕ್ಕಾಗಿ ವಿವಿಧ ನಿಯಮಗಳನ್ನು ರೂಪಿಸುತ್ತಿದ್ದಾರೆ. ಆಟಗಾರರ ಆಟಕ್ಕಿಂತ ಅವರ ಬಟ್ಟೆ, ಸ್ಕಾರ್ಫ್, ಟರ್ಬನ್‍ಗಳೇ ಅವರ ಪ್ರತಿಭೆಯನ್ನು ಅಳೆಯುವ ಮಾನದಂಡವಾಗಿರುತ್ತದೆ.
 ಕ್ರೀಡೆಗಳನ್ನೆಲ್ಲ ಸಂಶೋಧಿಸಿದ್ದು ಮನುಷ್ಯನೇ. ಈ ಸಂಶೋಧನೆಗೆ ವಿವಿಧ ಕಾರಣಗಳು ಇರಬಹುದು. ಹೊಟ್ಟೆ ತುಂಬಿದ ಮತ್ತು ಹೊಟ್ಟೆ ಖಾಲಿಯಾದ ಇಬ್ಬರೂ ಕೂಡ ತಂತಮ್ಮ ಮಿತಿಯೊಳಗೆ ಕ್ರೀಡೆಗಳನ್ನು ಹುಟ್ಟು ಹಾಕಿದ್ದಾರೆ. ಪ್ರತಿಯೊಂದಕ್ಕೂ ಅದರದ್ದೇ ಆದ ಸ್ಥಳೀಯತೆ, ಸಾಂಸ್ಕ್ರಿತಿಕತೆ, ಸಾಂಪ್ರದಾಯಿಕ ಅನನ್ಯತೆಯಿದೆ. ಆದರೆ ಬರಬರುತ್ತಾ ಇಂಥ ಕ್ರೀಡೆಗಳೆಲ್ಲ ಸ್ಥಳೀಯತೆಯನ್ನು ಕಳಚಿಕೊಂಡು ಅಪರಿಚಿತ ಪ್ರದೇಶಕ್ಕೂ ನುಗ್ಗಿದುವು. ಸಾಂಪ್ರದಾಯಿಕ ಚೌಕಟ್ಟನ್ನು ವಿೂರಿ ಬೆಳೆಯತೊಡಗಿದುವು. ಸಾಂಸ್ಕøತಿಕ ಅನನ್ಯತೆಯಿಂದ ಬಿಡಿಸಿಕೊಂಡು ಹೊರಚಿಮ್ಮಿದುವು. ಇವಕ್ಕೆಲ್ಲ ಕ್ರೀಡೆಯನ್ನು ಕ್ರೀಡೆಯಾಗಿ ಸ್ವೀಕರಿಸದ ವ್ಯಾವಹಾರಿಕ ಮನಸ್ಥಿತಿಯೇ ಕಾರಣವಾಗಿತ್ತು. ಕ್ರಮೇಣ ಕ್ರೀಡೆಗಳೆಲ್ಲ ತಂತಮ್ಮ ಸ್ಥಳೀಯತೆಯಿಂದ ಕಳಚಿಕೊಂಡು ವ್ಯಾಪಾರಿಗಳ ಜೋಳಿಗೆಯಲ್ಲಿ ಹೊಸ ರೂಪಗಳನ್ನು ಪಡೆಯತೊಡಗಿದುವು. ಯಾವ ಕ್ರೀಡೆಯನ್ನು ಯಾವೆಲ್ಲ ರೀತಿಯಲ್ಲಿ ಆಡಿಸಿದರೆ ಅದು ಕ್ರೀಡಾ ಮಾರುಕಟ್ಟೆಯಲ್ಲಿ ದುಡ್ಡು ತಂದಿಡಬಹುದು ಎಂಬ ಲೆಕ್ಕಾಚಾರಗಳು ನಡೆದುವು. ಅದಕ್ಕೆ ಪೂರಕವಾಗಿ ನಿಯಮಗಳು ರೂಪುಗೊಂಡವು. ಮಹಿಳೆಯರು ಮತ್ತು ಪುರುಷರು ಆಡುವ ಆಟ ಒಂದೇ ಆದರೂ ಇಬ್ಬರಿಗೂ ಬೇರೆ ಬೇರೆ ನಿಯಮಗಳನ್ನು ರೂಪಿಸಲಾಯಿತು. ಟೆನ್ನಿಸ್, ಬ್ಯಾಡ್ಮಿಂಟನ್, ಕಬಡ್ಡಿ, ಬಾಸ್ಕೆಟ್‍ಬಾಲ್, ರಿಲೇ, ವಾಲಿಬಾಲ್, ಸ್ಕೇಟಿಂಗ್.. ಸಹಿತ ಎಲ್ಲದರಲ್ಲೂ ಮಹಿಳಾ ಆಟವನ್ನು ಉಡುಪು ಕೇಂದ್ರಿತವಾಗಿ ರೂಪಿಸಲಾಯಿತು. ಆದ್ದರಿಂದಲೇ ಸ್ಕಾರ್ಫ್, ಟರ್ಬನ್‍ಗಳೆಲ್ಲ ನಿಷೇದಕ್ಕೆ ಒಳಗಾದುವು.
 

ಏನೇ ಆಗಲಿ, ನಿಷೇಧವನ್ನು ಹಿಂತೆಗೆದುಕೊಳ್ಳುವ ಮೂಲಕ ಆಟಕ್ಕೂ ಉಡುಪಿಗೂ ಸಂಬಂಧ ಇಲ್ಲ ಎಂಬುದನ್ನು ಬಾಸ್ಕೆಟ್ ಬಾಲ್ ಸಂಸ್ಥೆಯು ಬಹಿರಂಗವಾಗಿ ಒಪ್ಪಿಕೊಂಡಿದೆ. ಇದು ಕ್ರೀಡೆಯ ಇತರ ಸಂಸ್ಥೆಗಳಿಗೂ ಒಂದು ಮಾದರಿಯಾಗಲಿ. ಕ್ರೀಡೆಯನ್ನು ಮೈಮಾಟದ ಪ್ರದರ್ಶನದಿಂದ ಹೊರತಂದು ಅವು ರಕ್ಷಿಸಲಿ. ಉಡುಪಿನ ಹೊರತಾದ ಕಾರಣಕ್ಕಾಗಿ ಜನರು ಪ್ರತಿ ಆಟವನ್ನೂ ಇಷ್ಟಪಡಲು ಪ್ರೇರಕವಾಗುವಂಥ ನಿಯಮಗಳನ್ನು ಎಲ್ಲ ಕ್ರೀಡಾ ಸಂಸ್ಥೆಗಳೂ ಜಾರಿಗೆ ತರಲಿ.

Wednesday 17 September 2014

`ಸ್ಫೋಟಿಸುವವರ' ನಡುವೆ ಮಾನ ಕಳಕೊಳ್ಳುವ ಪಿಂಕಿ, ಅಬ್ದುಲ್ ಕಾದರ್


ಅಬ್ದುಲ್ ಕಾದರ್
    ಸೆ. 13 ಮತ್ತು 14ರಂದು ಮಾಧ್ಯಮಗಳಲ್ಲಿ ಎರಡು ಸುದ್ದಿಗಳು ಪ್ರಕಟವಾದುವು. ಸೆ. 13ರ ಸುದ್ದಿ ಪಿಂಕಿ ಪ್ರಮಾಣಿಕ್ ಎಂಬ ಕ್ರೀಡಾಪಟುವಿಗೆ ಸಂಬಂಧಿಸಿದ್ದಾದರೆ, 14ರದ್ದು ಅಬ್ದುಲ್ ಕಾದರ್ ಎಂಬ ಗಲ್ಫ್ ಉದ್ಯೋಗಿಗೆ ಸಂಬಂಧಿಸಿದ್ದು. 2012ರಲ್ಲಿ ಪಿಂಕಿ ಪ್ರಮಾಣಿಕ್ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿದ್ದಳು. ಏಶ್ಯನ್ ಗೇಮ್ಸ್, ಸೌತ್ ಏಶ್ಯನ್ ಮತ್ತು ಏಶ್ಯನ್ ಇಂಡೋರ್ ಗೇಮ್ಸ್ ಗಳಲ್ಲಿ 4 ಚಿನ್ನ ಮತ್ತು ಬೆಳ್ಳಿ ಪದಕವನ್ನು ಪಡೆದಿದ್ದ ಪ್ರಮಾಣಿಕ್‍ಳ ಮೇಲೆ ಆಕೆಯ ಪಕ್ಕದ ಕೋಣೆಯಲ್ಲಿ ವಾಸಿಸುವ ಅನಾಮಿಕ ಆಚಾರ್ಯ ಎಂಬವಳು ಅತ್ಯಾಚಾರದ ಆರೋಪ ಹೊರಿಸಿದ್ದಳು. ಪ್ರಮಾಣಿಕ್‍ಳನ್ನು ಗಂಡು ಎಂದು ಕರೆದಿದ್ದಳು. ಈ ದೂರಿನ ಕುರಿತಂತೆ ಕಲ್ಕತ್ತಾದ ಪೊಲೀಸ್ ಎಷ್ಟು ಅಮಾನುಷವಾಗಿ ನಡಕೊಂಡಿತೆಂದರೆ, ಪ್ರಮಾಣಿಕ್‍ಳನ್ನು ಪುರುಷ ಕೈದಿಗಳ ಕೋಣೆಯಲ್ಲಿ ಕೂಡಿಹಾಕಿತು. ಬಂಧಿಸಿದ್ದೂ ಪುರುಷ ಪೊಲೀಸರೇ. 25 ದಿನಗಳ ಕಾಲ ಜೈಲಲ್ಲಿದ್ದು ಹೊರಬರುವಷ್ಟರಲ್ಲಿ ಮೂರು ಬಾರಿ ಲಿಂಗಪತ್ತೆ ಪರೀಕ್ಷೆ ನಡೆಸಲಾಯಿತು. ಮಾಧ್ಯಮಗಳಲ್ಲಿ ಹತ್ತು-ಹಲವು ರಂಜನೀಯ ಕತೆಗಳು ಪ್ರಕಟವಾದುವು. ಎಲ್ಲವೂ ತಣ್ಣಗಾದ ಬಳಿಕ ಆಕೆ ಹೆಣ್ಣಾಗಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿತು. ಇದೀಗ ಸೆ. 13ರಂದು ಕೊಲ್ಕತ್ತಾ ಹೈಕೋರ್ಟು ಆಕೆಯ ಮೇಲಿದ್ದ ಅತ್ಯಾಚಾರ ಆರೋಪವನ್ನು ತಳ್ಳಿಹಾಕಿದೆ.
 ಸೆ. 14ರ ಸುದ್ದಿಯಂತೂ ಇದಕ್ಕಿಂತಲೂ ಭೀಕರವಾದುದು. ದುಬೈಗೆ ತೆರಳುವುದಕ್ಕಾಗಿ ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದ ಕಾಸರಗೋಡಿನ ಅಬ್ದುಲ್ ಕಾದರ್ ಎಂಬ ಯುವಕ ಗಂಟೆಯೊಳಗೆ ಭಯೋತ್ಪಾದಕನಾಗಿ ಬದಲಾಗಿದ್ದ. ಆತನ ಮೇಲೆ ವಿಮಾನ ನಿಲ್ದಾಣವನ್ನು ಸ್ಫೋಟಿಸುವ ಮತ್ತು ಸಿರಿಯನ್ ಉಗ್ರವಾದಿಗಳೊಂದಿಗೆ ಸಂಬಂಧ ಇರುವ ಭಯೋತ್ಪಾದಕನೆಂಬ ಆರೋಪ ಹೊರಿಸಿ ಮಾಧ್ಯಮಗಳು ಹಬ್ಬ ಆಚರಿಸಿದವು. ಅಷ್ಟಕ್ಕೂ, ಭಯೋತ್ಪಾದಕನೆಂದು ಗುರುತಿಸಿಕೊಳ್ಳುವುದಕ್ಕೆ ಓರ್ವ ವ್ಯಕ್ತಿಯಲ್ಲಿ ಇರಬೇಕಾದ ಅರ್ಹತೆಗಳೇನು? ಮುಸ್ಲಿಮ್ ಹೆಸರು, ಉಗುರುಸುತ್ತಿಗೆ ಬಳಸುವ ಔಷಧಿ (ಹೈಡ್ರೋಜನ್ ಪೆರಾಕ್ಸೈಡ್), ಕೆಟ್ಟು ಹೋದ ಬ್ಯಾಟರಿ, ಟ್ಯಾಬ್... ಇವು ಭಯೋತ್ಪಾದಕ ಉಪಕರಣಗಳೇ? ಇವುಗಳ ಆಧಾರದಲ್ಲಿ ಓರ್ವನನ್ನು ಶಂಕಿತ ಭಯೋತ್ಪಾದಕ ಎಂದು ಕರೆಯಬಹುದೇ? ವಿಮಾನ ನಿಲ್ದಾಣದಲ್ಲಿರುವ ಕೇಂದ್ರೀಯ ಸುರಕ್ಷತಾ ಪಡೆ(ಸಿಐಎಸ್‍ಎಫ್)ಯ ಅಧಿಕಾರಿಗಳಿಗೆ ಬಾಂಬ್‍ಗೆ ಬಳಸುವ ಅಮೊನಿಯಂ ನೈಟ್ರೇಟ್ ಯಾವುದು ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಯಾವುದು ಎಂಬ ಸಾಮಾನ್ಯ ತಿಳುವಳಿಕೆಯೂ ಇಲ್ಲವೇ? ಮಂಗಳೂರಿನ ವಿಮಾನ ನಿಲ್ದಾಣದಿಂದ ವಿದೇಶಗಳಿಗೆ ಹಾರುವವರಲ್ಲಿ ಅಬ್ದುಲ್ ಕಾದರ್ ಮೊದಲಿಗನೇನೂ ಅಲ್ಲ. ದಿನನಿತ್ಯ ಅನೇಕರು ಮಂದಿ ಅಲ್ಲಿಂದ ವಿಮಾನವೇರುತ್ತಾರೆ. ವಿವಿಧ ಲಗೇಜುಗಳನ್ನು ತರುತ್ತಾರೆ. ಅಲ್ಲದೆ ಭಯೋತ್ಪಾದಕರ ಕುರಿತಂತೆ ಮಂಗಳೂರು ವಿಮಾನ ನಿಲ್ದಾಣವು ಸಾಕಷ್ಟು ಎಚ್ಚರಿಕೆಯಿಂದಿರುವ ತಾಣವೂ ಹೌದು. ಹೀಗಿರುವಾಗ, ಇಲ್ಲಿರುವ ಅಧಿಕಾರಿಗಳಿಗೆ ಉಗುರುಸುತ್ತಿನ ಔಷಧಿ ಯಾವುದು ಅಮೊನಿಯಂ ನೈಟ್ರೇಟ್ ಯಾವುದು ಎಂಬ ಬಗ್ಗೆಯೂ ತಿಳುವಳಿಕೆ ಇಲ್ಲ ಎಂದರೆ ಏನರ್ಥ? ನಿಜ, ಅಬ್ದುಲ್ ಕಾದರ್‍ನಿಗೆ ತನ್ನಲ್ಲಿರುವ ವಸ್ತುವಿನ ಬಗ್ಗೆ ಗೊತ್ತಿರಲಿಲ್ಲ. ಆತನಿಗೆ ಆ ವಸ್ತುವನ್ನು ಕೊಟ್ಟಿರುವ ನೆರೆಮನೆಯವರು ಅದರ ಬಗ್ಗೆ ಹೇಳಿಯೂ ಇರಲಿಲ್ಲ. ಇಷ್ಟು ಮಾತ್ರಕ್ಕೆ ಅದನ್ನು ಸ್ಫೋಟಕ ಉಪಕರಣ ಎಂದು ಅಧಿಕಾರಿಗಳು ಘೋಷಿಸುವುದು ಸಮರ್ಥನೀಯವೇ? ಅದು ಸ್ಫೋಟಕ ವಸ್ತುವೇ ಯಾಕಾಗಬೇಕಿತ್ತು? ಇನ್ನಿತರ ಸಾಮಾನ್ಯ ಎಲೆಕ್ಟ್ರಾನಿಕ್ ಉಪಕರಣಗಳೂ ಆಗಬಹುದಿತ್ತಲ್ಲವೇ ಅಥವಾ ತಪಾಸಣೆಯವರೆಗೂ ಮಾಧ್ಯಮಗಳಿಗೆ `ಸ್ಫೋಟಕ' ಸುದ್ದಿಯನ್ನು ಅಧಿಕಾರಿಗಳು ಕೊಡದೇ ಇರಬಹುದಿತ್ತಲ್ಲವೇ? ಯಾಕೆ ಈ ಸಂಯಮವನ್ನು ಅಧಿಕಾರಿಗಳು ತೋರ್ಪಡಿಸಲಿಲ್ಲ, ಅಬ್ದುಲ್ ಕಾದರ್ ಎಂಬ ಹೆಸರನ್ನು ನೋಡಿಯೋ ಅಥವಾ ತಮಾಷೆಯೋ?
 ನಿಜವಾಗಿ ಔಷಧಿ, ಟ್ಯಾಬ್, ಬ್ಯಾಟರಿಗಳನ್ನು ಸ್ಫೋಟಕ ವಸ್ತುಗಳೆಂದು ಮೊದಲು ಕರೆದುದು ಪತ್ರಕರ್ತರಲ್ಲ, ಅಧಿಕಾರಿಗಳು. ಅವರು ಅಂಥದ್ದೊಂದು ಸೂಚನೆಯನ್ನು ಪತ್ರಕರ್ತರಿಗೆ ರವಾನಿಸಿದ್ದಾರೆ. ಆ ಸುದ್ದಿಯನ್ನು ಪಡೆದುಕೊಂಡ ಪತ್ರಕರ್ತರು ಅದನ್ನು ಇನ್ನಷ್ಟು ಭೀಕರಗೊಳಿಸಿದ್ದಾರೆ. ಅಬ್ದುಕ್ ಕಾದರ್‍ನಿಗೂ ಸಿರಿಯನ್ ಹೋರಾಟಗಾರರಿಗೂ ನಡುವೆ ಸಂಬಂಧ ಕಲ್ಪಿಸಿದ್ದಾರೆ. ವಿಮಾನ ನಿಲ್ದಾಣವನ್ನೇ ಸ್ಫೋಟಿಸುವ ಸಂಚನ್ನು ಅವರು ಸೃಷ್ಟಿಸಿದ್ದಾರೆ. ಒಂದು ರೀತಿಯಲ್ಲಿ, ಪತ್ರಕರ್ತರ ನಡುವೆ ಎಂಥ ಭೀಕರ ಆತಂಕವಾದಿಗಳಿದ್ದಾರೋ ಅದಕ್ಕಿಂತಲೂ ಭೀಕರ ಭಯೋತ್ಪಾದಕರು ಅಧಿಕಾರಿ ವರ್ಗಗಳ ನಡುವೆಯೂ ಇದ್ದಾರೇನೋ ಅನ್ನುವ ಅನುಮಾನವೊಂದನ್ನು ಈ ಪ್ರಕರಣವು ಹುಟ್ಟು ಹಾಕಿದೆ. ಹಾಗಂತ, ಪತ್ರಕರ್ತರಿಗೆ ಅಧಿಕಾರಿಗಳಿಗಿಂತ ಹೆಚ್ಚಿನ ಸಾಮಾಜಿಕ ಬದ್ಧತೆಯಿದೆ. ಅಧಿಕಾರಿಗಳು ಏನನ್ನೇ ಹೇಳಲಿ, ಅವರು ಅದನ್ನು ವರದಿ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕಾಗುತ್ತದೆ. ತಾನು ಹೆಣೆಯುವ ಸುದ್ಧಿ ಸಮಾಜದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ಆಲೋಚಿಸಬೇಕಗುತ್ತದೆ. ಇಷ್ಟಿದ್ದೂ ಮತ್ತೆ ಮತ್ತೆ ಇಂಥ ತಪ್ಪುಗಳು ಸಂಭವಿಸುತ್ತಿರುವುದೇಕೆ? ಸಿರಿಯನ್ ಭಯೋತ್ಪಾದಕರೊಂದಿಗೆ ಅಬ್ದುಲ್ ಕಾದರ್‍ನಿಗೆ ಸಂಬಂಧ ಇದೆ ಎಂಬ ಹೇಯ ಸುಳ್ಳನ್ನು ಓರ್ವ ಪತ್ರಕರ್ತ ಯಾವ ಕಾರಣಕ್ಕಾಗಿ ಹೆಣೆದ? ಅದು ಆತನ ಸ್ವಯಂ ಸೃಷ್ಟಿಯೋ ಅಥವಾ ಅದರ ಹಿಂದೆ ಅಧಿಕಾರಿ ವರ್ಗಗಳ ಪಾತ್ರವಿದೆಯೊ? ಈ ದೇಶದಲ್ಲಿ ಓರ್ವನು ಭಯೋತ್ಪಾದನೆಯ ಆರೋಪ ಹೊತ್ತುಕೊಳ್ಳುವುದು ಕಳ್ಳತನದ್ದೋ ವಂಚನೆಯದ್ದೋ ಆರೋಪ ಹೊತ್ತುಕೊಂಡಂತೆ ಅಲ್ಲವಲ್ಲ. ಅದರಲ್ಲೂ ಹೆಸರು 'ಅಬ್ದುಲ್ ಕಾದರ್' ಎಂದಾದರೆ ಆ ಆರೋಪ ಎಷ್ಟು ಗಂಭೀರ ಸ್ವರೂಪವನ್ನು ಪಡಕೊಳ್ಳುತ್ತದೆ ಎಂಬುದು ಸುದ್ದಿ ತಯಾರಿಸುವ ಪತ್ರಕರ್ತನಿಗೂ ಗೊತ್ತು, ಅದನ್ನು ಪ್ರಕಟಿಸುವ ಸಂಪಾದಕನಿಗೂ ಗೊತ್ತು. ಹೀಗಿರುವಾಗ, ಓರ್ವ ಪತ್ರಕರ್ತ ಮತ್ತು ಪತ್ರಿಕೆಯು ಅಂಥ ಸುದ್ದಿಗಳನ್ನು ಪ್ರಕಟಿಸುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ಸುದ್ದಿಯಲ್ಲಿ ವಸ್ತುನಿಷ್ಠತೆಗೆ ಪ್ರಾಶಸ್ತ್ಯ ನೀಡಬೇಕಾಗುತ್ತದೆ. ಆದರೂ ಮಾಧ್ಯಮಗಳೇಕೆ ಪದೇ ಪದೇ ಎಡವುತ್ತಿವೆ?
ಪಿಂಕಿ ಪ್ರಮಾಣಿಕ್
ನಿಜವಾಗಿ, ಇಂಥ ಪ್ರಕರಣಗಳಿಗೆ ಎರಡು ಮುಖಗಳಿರುತ್ತವೆ. ಒಂದು ಪತ್ರಕರ್ತರದ್ದಾದರೆ ಇನ್ನೊಂದು ಪೊಲೀಸರದ್ದು. ಈ ಎರಡೂ ಮುಖಗಳು ಒಟ್ಟು ಸೇರಿದಾಗ ಓರ್ವ ಭಯೋತ್ಪಾದಕ ತಯಾರಾಗುತ್ತಾನೆ. ಅಬ್ದುಲ್ ಕಾದರ್ ಪತ್ರಿಕೆಗಳಲ್ಲಿ ಭಯೋತ್ಪಾದಕನಾಗಿ ಗುರುತಿಗೀಡಾಗಿರುವುದಕ್ಕೆ ಕೇವಲ ಪತ್ರಕರ್ತ ಮಾತ್ರ ಕಾರಣ ಎಂದು ಹೇಳುವಂತಿಲ್ಲ. ಆತನಿಗೆ ಸುದ್ದಿಯನ್ನು ಒದಗಿಸುವ ಅಧಿಕಾರಿಗಳಿಗೂ ಅದರಲ್ಲಿ ಪಾತ್ರ ಇದೆ. ಸಿರಿಯನ್ ವೈರಸನ್ನು ಅಂಟಿಸಿಕೊಂಡ ಪತ್ರಕರ್ತರು ಇರುವಂತೆ 'ಸ್ಫೋಟ ಮನಸ್ಥಿತಿಯನ್ನು' ಹೊಂದಿರುವ ಅಧಿಕಾರಿಗಳೂ ಇದ್ದಾರೆ. ಈ ಎರಡರ ಉತ್ಪನ್ನವಾಗಿ ಓರ್ವ ಭಯೋತ್ಪಾದಕ ಹುಟ್ಟುತ್ತಾನೆ. ಈ ದೇಶದಲ್ಲಿ ಇಂಥ ನೂರಾರು ಭಯೋತ್ಪಾದಕರನ್ನು ಈ ಜೋಡಿ ಈಗಾಗಲೇ ಸೃಷ್ಟಿ ಮಾಡಿವೆ. ಅಬ್ದುಲ್ ಕಾದರ್‍ಗೆ ಸಿರಿಯನ್ ಭಯೋತ್ಪಾದನೆಯನ್ನು ಜೋಡಿಸಿದಂತೆ ಈ ಹಿಂದಿನವರಿಗೆ ಹುಜಿ, ಲಷ್ಕರ್, ಇಂಡಿಯನ್ ಮುಜಾಹಿದೀನ್‍ಗಳನ್ನು ಇವರು ಜೋಡಿಸಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಇವರೊಳಗಿನ ವೈರಸ್‍ಗಳು ಕೆಲಸ ಮಾಡುತ್ತಿವೆ. ಸದ್ಯ ಸಿರಿಯ ಮತ್ತು ಇರಾಕ್‍ನಿಂದ ಹತ್ಯೆ, ಶಿರಚ್ಛೇದ ಮತ್ತಿತರ ಸುದ್ದಿಗಳು ಧಾರಾಳವಾಗಿ ಹರಿದುಬರುತ್ತಿವೆ. ಅಲ್ಲಿ ಹೋರಾಡುತ್ತಿರುವವರ ಸಂಖ್ಯೆ, ಅವರ ದೇಶ, ಅವರ ಉದ್ದೇಶ ಮುಂತಾದುವುಗಳ ಬಗ್ಗೆ ಪುಂಖಾನುಪುಂಖ ವರದಿಗಳು ಬರುತ್ತಿವೆ. ಜವಾಹಿರಿಯ ಟೇಪು ಬಿಡುಗಡೆಯಾಗುತ್ತಿವೆ. ಅಮೇರಿಕ ಮತ್ತು ಬ್ರಿಟನ್‍ನ ನೂರಾರು ನಾಗರಿಕರು ಈ ಹೋರಾಟಗಾರರ ಗುಂಪಿನಲ್ಲಿದ್ದಾರೆ ಎಂಬ ಸುದ್ದಿಗಳೂ ಬರುತ್ತಿವೆ. ಇಷ್ಟೆಲ್ಲಾ ಇದ್ದರೂ ಭಾರತೀಯರು ಈ ಗುಂಪಿನಲ್ಲಿಲ್ಲ ಎಂಬ ಮಾಹಿತಿಗಳೂ ಪ್ರಕಟವಾಗುತ್ತಿವೆ. ಈ ದೇಶದ ಪಾಲಿಗೆ ಇದು ಅತ್ಯಂತ ಸ್ವಾಗತಾರ್ಹ ಮತ್ತು ಆಹ್ಲಾದಕರ ಸಂಗತಿಯಾದರೂ ಅದನ್ನೇ ಅತ್ಯಂತ ವಿಷಾದದ ಸುದ್ದಿಯಾಗಿ ಪರಿಗಣಿಸುವವರೂ ಇಲ್ಲಿದ್ದಾರೆ. ಅಬ್ದುಲ್ ಕಾದರ್‍ನನ್ನು 'ಸಿರಿಯನ್ ಭಯೋತ್ಪಾದಕನನ್ನಾಗಿಸಿರುವುದರ ಹಿಂದೆ ಈ ಮನಸ್ಥಿತಿ ಕೆಲಸ ಮಾಡಿರುವಂತಿದೆ. ಲಷ್ಕರ್‍ಗೋ ಇಂಡಿಯನ್ ಮುಜಾಹಿದೀನ್‍ಗೋ ಅಬ್ದುಲ್ ಕಾದರ್‍ನನ್ನು ಜೋಡಿಸಿದರೆ ಅದು ಉಂಟು ಮಾಡುವ ತಲ್ಲಣ ಸಿರಿಯಕ್ಕೆ ಹೋಲಿಸಿದರೆ ತೀರಾ ಕಡಿಮೆ. ಇವತ್ತು ಲಷ್ಕರ್ ತನ್ನ ಮಹತ್ವವನ್ನು ಕಳಕೊಂಡಿದೆ. ಇಂಡಿಯನ್ ಮುಜಾಹಿದೀನ್‍ಗೂ ಹಿಂದಿನ ಆಕರ್ಷಣೆಯಿಲ್ಲ. ಸದ್ಯ ಸಿರಿಯನ್ ಕ್ರೌರ್ಯವೇ ಸುದ್ದಿಗಳ ಮಾರುಕಟ್ಟೆಯಲ್ಲಿ ಬೆಲೆ ಬಾಳುತ್ತಿರುವುದು. ಒಂದು ವೇಳೆ ಇವತ್ತು ಸಿರಿಯದಲ್ಲಿ ಆಂತರಿಕ ಘರ್ಷಣೆಯು ಕೊನೆಗೊಂಡಿದ್ದಿದ್ದರೆ ಮತ್ತು ಲಿಬಿಯದಲ್ಲೋ, ಈಜಿಪ್ಟ್ ನಲ್ಲೋ ಹೋರಾಟ ನಡೆಯುತ್ತಿದ್ದರೆ ಅಬ್ದುಲ್ ಕಾದರ್‍ನ ಬಡಪಾಯಿ ಟ್ಯಾಬ್ ಮತ್ತು ಉಗುರುಸುತ್ತಿನ ಔಷಧಿಯು (ಹೈಡ್ರೋಜನ್ ಪೆರಾಕ್ಸೈಡ್) ಲಿಬಿಯದ ಬಾಂಬ್ ಆಗಿ ಸುದ್ದಿಗೊಳಗಾಗುತ್ತಿತ್ತೋ ಏನೋ.
   ಪಿಂಕಿ ಪ್ರಮಾಣಿಕ್ ಮತ್ತು ಅಬ್ದುಲ್ ಕಾದರ್ ವಿಭಿನ್ನ ಧರ್ಮದ, ವಿಭಿನ್ನ ರಾಜ್ಯದ ಮತ್ತು ವಿಭಿನ್ನ ವೃತ್ತಿಯ ವ್ಯಕ್ತಿತ್ವಗಳಾದರೂ ಅನುಭವಿಸಿದ ಯಾತನೆಗಳು ಬಹುತೇಕ ಒಂದೇ. ಇಬ್ಬರ ಮಾನಹಾನಿಯಲ್ಲೂ ಪತ್ರಕರ್ತರಿಗೆ ಮತ್ತು ಅಧಿಕಾರಿಗಳಿಗೆ ಪಾತ್ರವಿದೆ. ಒಂದು ಪ್ರಕರಣವನ್ನು ಹೇಗೆ ಕೆಟ್ಟದಾಗಿ ನಿಭಾಯಿಸಬಹುದು ಎಂಬುದನ್ನು ಇವು ಸ್ಪಷ್ಟವಾಗಿ ಸೂಚಿಸುತ್ತವೆ. ಆದ್ದರಿಂದ ಇಂಥ ಪ್ರಕರಣಗಳ ಕುರಿತಂತೆ ಸರಕಾರವು ಕೂಲಂಕಷ ಅಧ್ಯಯನಕ್ಕೆ ಮುಂದಾಗಬೇಕು. ಪತ್ರಕರ್ತರು ಮತ್ತು ಅಧಿಕಾರಿಗಳ ನಡುವೆ ಇಂಥ ವೈರಸನ್ನು ಅಂಟಿಸಿಕೊಂಡವರ ಗುರುತು ಪತ್ತೆ ಹಚ್ಚಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಯಾ ಸಂಸ್ಥೆಗಳ ಮೇಲೆ ಒತ್ತಡ ಹೇರಬೇಕು. ಓದುಗರ ಪಾತ್ರವೂ ಇದರಲ್ಲಿ ಬಹಳ ಮುಖ್ಯ. ವೈರಸ್ ಪೀಡಿತರಿಂದ ಮಾಧ್ಯಮ ಮತ್ತು ಪೊಲೀಸ್ ವ್ಯವಸ್ಥೆಯನ್ನು ಪ್ರತ್ಯೇಕಿಸಲು ಸಂವಿಧಾನಬದ್ಧ ಸಕಲ ವಿಧಾನಗಳನ್ನೂ ಬಳಸಿಕೊಳ್ಳಬೇಕು. ನಾನು ಓದುವ ಮತ್ತು ನೋಡುವ ಮಾಧ್ಯಮ ವೈರಸ್ ಪೀಡಿತ ಪ್ರಮಾದಗಳಿಂದ ಮುಕ್ತವಾಗಿರಬೇಕು ಎಂಬ ಸೂಚನೆ ಮಾಧ್ಯಮ ಸಂಸ್ಥೆಗಳಿಗೆ ರವಾನೆಯಾಗಬೇಕು. ನಮಗೆ ಅಬ್ದುಲ್ ಕಾದರ್ ಬೇರೆಯಲ್ಲ, ಪಿಂಕಿಯೂ ಬೇರೆಯಲ್ಲ. ಅವರಿಬ್ಬರ ಮಾನವೂ ಗೌರವಾರ್ಹವಾದುದು.

Wednesday 10 September 2014

ಇಂಥ ಪ್ರತಿಭಟನೆಗಳು ಹೆಚ್ಚೆಚ್ಚು ವ್ಯಕ್ತಗೊಳ್ಳುತ್ತಲೇ ಇರಲಿ

   ಈ ಬಾರಿಯ ಯು.ಎಸ್. ಓಪನ್ ಟೆನ್ನಿಸ್ ಟೂರ್ನಿಯ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿಯನ್ನು ತನ್ನ ದೇಶವಾದ ಭಾರತಕ್ಕೆ ಮತ್ತು ತನ್ನ ತವರು ರಾಜ್ಯವಾದ ತೆಲಂಗಾಣಕ್ಕೆ ಅರ್ಪಿಸುವ ಮೂಲಕ ಟೆನಿಸ್ ತಾರೆ ಸಾನಿಯಾ ಮಿರ್ಝಾ ಬಿಜೆಪಿಯ ‘ದೇಶನಿಷ್ಠೆ'ಗೆ ಸವಾಲೊಡ್ಡಿದ್ದಾರೆ. ಮೂರು ತಿಂಗಳ ಹಿಂದೆ ಸಾನಿಯಾರ ರಾಷ್ಟ್ರೀಯತೆ ಮತ್ತು ದೇಶನಿಷ್ಠೆಯನ್ನು ತೆಲಂಗಾಣದ ವಿಧಾನಸಭೆಯ ವಿರೋಧ ಪಕ್ಷವಾದ ಬಿಜೆಪಿ ನಾಯಕ ಕೆ. ಲಕ್ಷ್ಮಣ್ ಪ್ರಶ್ನಿಸಿದ್ದರು. ಅವರು ಸಾನಿಯಾರನ್ನು ಪಾಕಿಸ್ತಾನದ ಸೊಸೆ ಎಂದಿದ್ದರು. ತೆಲಂಗಾಣದ ‘ಬ್ರಾಂಡ್ ಅಂಬಾಸಡರ್’ (ರಾಯಭಾರಿ) ಆಗುವ ಅರ್ಹತೆ ಸಾನಿಯಾರಿಗಿಲ್ಲ ಎಂದಿದ್ದರು. ಮಹಾರಾಷ್ಟ್ರ ಮೂಲದ ಮತ್ತು ಹೈದರಾಬಾದ್‍ಗೆ ವಲಸೆ ಬಂದಿರುವ ಸಾನಿಯಾರನ್ನು ರಾಯಭಾರಿ ಮಾಡಿರುವುದು ತಪ್ಪು ಎಂದು ವಾದಿಸಿ ಚರ್ಚೆಯೊಂದಕ್ಕೆ ಕಾರಣರಾಗಿದ್ದರು. ಇದರಿಂದ ಸಾನಿಯಾ ತೀವ್ರವಾಗಿ ನೊಂದಿದ್ದರು. ಮಾಧ್ಯಮಗಳೆದುರೇ ಕಣ್ಣೀರಿಳಿಸಿದ್ದರು. ಹೈದರಾಬಾದ್‍ನ ನಿಝಾಮರ ಆಡಳಿತ ಕಾಲದಲ್ಲೇ ತನ್ನ ಮುತ್ತಜ್ಜ ಅಝೀಝ್ ಮಿರ್ಝ ಗೃಹ ಕಾರ್ಯದರ್ಶಿಯಾಗಿದ್ದುದು, ತನ್ನ ಅಜ್ಜ ಮುಹಮ್ಮದ್ ಅಹ್ಮದ್ ಮಿರ್ಝಾ ಹೈದರಾಬಾದ್‍ನ ಖ್ಯಾತ ಗಂಡಿಪೇಟ್ ಅಣೆಕಟ್ಟಿನ ನಿರ್ಮಾಣದಲ್ಲಿ ಇಂಜಿನಿಯರ್ ಕೆಲಸವನ್ನು ನಿರ್ವಹಿಸಿದ್ದು.. ಮುಂತಾದುವುಗಳನ್ನು ವಿವರಿಸುತ್ತಾ ತನ್ನ ಕುಟುಂಬದ ಮೂಲವನ್ನು ಸ್ಪಷ್ಟಪಡಿಸಿದ್ದರು. ಮಾತ್ರವಲ್ಲ, ಉಸಿರಿರುವವರೆಗೆ ತಾನು ಭಾರತೀಯಳಾಗಿರುತ್ತೇನೆ ಎಂಬ ನಿಷ್ಠೆಯನ್ನೂ ವ್ಯಕ್ತಪಡಿಸಿದ್ದರು. ಇದೀಗ ಆ ಚರ್ಚೆಗೆ ಸಾನಿಯಾ ಒಂದೊಳ್ಳೆಯ ತಿರುವನ್ನು ಕೊಟ್ಟಿದ್ದಾರೆ. ಪ್ರಶಸ್ತಿಯನ್ನು ದೇಶಕ್ಕೆ ಅರ್ಪಿಸುವ ಮೂಲಕ ತನ್ನ ದೇಶನಿಷ್ಠೆಯನ್ನು ಅನುಮಾನಿಸಿದವರ ವಿರುದ್ಧ ಪ್ರತಿಭಟನೆ ಸಲ್ಲಿಸಿದ್ದಾರೆ. ಅನಂತಮೂರ್ತಿಯವರಿಗೆ, ಗೋ ಸಾಗಾಟಕ್ಕೆ, ಹೆಣ್ಣು-ಗಂಡು ಮಾತಾಡಿದ್ದಕ್ಕೆಲ್ಲ ಲಕ್ಷ್ಮಣ್‍ರ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಈ ದೇಶದಲ್ಲಿ ವ್ಯಕ್ತಪಡಿಸಿದ ಪ್ರತಿಭಟನೆಗೆ ಹೋಲಿಸಿದರೆ ಸಾನಿಯಾ ಪ್ರತಿಭಟನೆ ಅತ್ಯಂತ ಸ್ವಾಗತಾರ್ಹ ಮತ್ತು ಶ್ಲಾಘನಾರ್ಹವಾದದ್ದು. ಒಂದು ಕಡೆ, ಸಾವನ್ನೂ ಸಂಭ್ರಮಿಸುವ, ಕಾನೂನನ್ನೇ ಉಲ್ಲಂಘಿಸುವ ವಿಕೃತಿ. ಇನ್ನೊಂದು ಕಡೆ, ದೇಶದ ಗೌರವ ಮತ್ತು ಪ್ರತಿಷ್ಠೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸುವ ನಡೆ.. ಇವುಗಳಲ್ಲಿ ಯಾವುದು ಮಾದರಿಯಾಗಿ ಗುರುತಿಸಿಕೊಳ್ಳಬೇಕು? ನಿಜವಾಗಿ, ಲಕ್ಷ್ಮಣ್‍ರ ಪಕ್ಷದ ಕಾರ್ಯಕರ್ತರ ಪ್ರತಿಭಟನಾ ಮಾದರಿಯಲ್ಲೇ ಪ್ರತಿಭಟನೆ ಹಮ್ಮಿಕೊಳ್ಳುವುದಕ್ಕೆ ಸಾನಿಯಾರಿಗೂ ಅವಕಾಶ ಇತ್ತು. ಲಕ್ಷ್ಮಣ್‍ರ ಪ್ರತಿಕೃತಿಯನ್ನು ಸುಡಬಹುದಿತ್ತು. ಅವರ ನಿವಾಸದ ಮೇಲೆ ದಾಳಿ ಮಾಡಬಹುದಿತ್ತು. ಅವರ ಮೇಲೆ ಹಲ್ಲೆ ನಡೆಸಬಹುದಿತ್ತು. ಬಿಜೆಪಿಯ ಕಚೇರಿಗೆ ಬೆಂಕಿ ಕೊಡಬಹುದಿತ್ತು. ಕರಾಚಿಯಲ್ಲಿ ಹುಟ್ಟಿದ ಅಡ್ವಾಣಿಯರ ಮೂಲವನ್ನು ಪ್ರಶ್ನಿಸಿ ಮುಜುಗರಕ್ಕೆ ಒಳಪಡಿಸಬಹುದಿತ್ತು. ಆದರೆ, ದೇಶದ ಪ್ರತಿಷ್ಠೆಯನ್ನು ಕುಂದಿಸುವ ಮತ್ತು ಕಾನೂನನ್ನು ಉಲ್ಲಂಘಿಸುವ ಈ ಮಾದರಿಗಿಂತ ದೇಶದ ಗೌರವವನ್ನು ಹೆಚ್ಚಿಸುವ ಭಿನ್ನ ಮಾದರಿಯನ್ನು ಸಾನಿಯಾ ಆಯ್ಕೆ ಮಾಡಿಕೊಂಡರು. ಅದಕ್ಕೆ ಧಾರಾಳ ಬೆವರು ಮತ್ತು ಅಪಾರ ದೇಶನಿಷ್ಠೆಯ ಅಗತ್ಯ ಇತ್ತು. ಇದೀಗ ಆ ಬೆವರು ಮತ್ತು ದೇಶನಿಷ್ಠೆಗೆ ಪಾರಿತೋಷಕ ಲಭಿಸಿದೆ. ಆ ಪಾರಿತೋಷಕವನ್ನು ಅವರು ಈ ದೇಶಕ್ಕೆ ಅರ್ಪಿಸಿದ್ದಾರೆ. ಆ ಮೂಲಕ ಬೆವರು ಮತ್ತು ಶ್ರಮವೇ ಅಂತಿಮವಾಗಿ ಮೇಲುಗೈ ಪಡೆಯುತ್ತದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
 ಈ ದೇಶದಲ್ಲಿ ಮುಸ್ಲಿಮರು ತಮ್ಮ ದೇಶನಿಷ್ಠೆಯನ್ನು ಆಗಾಗ ಸಾಬೀತುಪಡಿಸುತ್ತಾ ಇರಬೇಕಾದ ವಾತಾವರಣವೊಂದನ್ನು ಇಲ್ಲಿನ ಒಂದು ವರ್ಗ ಆಗಾಗ ಸೃಷ್ಟಿಸುತ್ತಾ ಬರುತ್ತಿದೆ. ಬಾಂಬ್ ಸ್ಫೋಟವಾದ ತಕ್ಷಣ ಈ ವರ್ಗ ಮುಸ್ಲಿಮರಿಂದ ದೇಶನಿಷ್ಠೆಯ ಫತ್ವವನ್ನು ಆಗ್ರಹಿಸುತ್ತದೆ. ಈ ದೇಶದ ಯಾವುದೇ ಮೂಲೆಯಲ್ಲಿ ತಲಾಕ್‍ನ ದುರುಪಯೋಗವಾದರೆ, ಮಾವನಿಂದ ಸೊಸೆಯ ಮೇಲೆ ಅತ್ಯಾಚಾರವಾದರೆ, ಶರೀಅತ್‍ನ ಹೆಸರಲ್ಲೋ ಪರ್ದಾದ ಹೆಸರಲ್ಲೋ ಅನ್ಯಾಯ ನಡೆದರೆ.. ಇವೆಲ್ಲಕ್ಕೂ ಇಸ್ಲಾಮ್ ಧರ್ಮವೇ ಕಾರಣ ಎಂಬ ರೀತಿಯಲ್ಲಿ ಈ ವರ್ಗ ವ್ಯಾಖ್ಯಾನಿಸುತ್ತದೆ. ಮುಸ್ಲಿಮರ ಹಿಂದುಳಿಯುವಿಕೆಗೆ ಇವನ್ನು ಪ್ರಮುಖ ಕಾರಣವಾಗಿ ಎತ್ತಿ ತೋರಿಸಲಾಗುತ್ತದೆ. ಮಾತ್ರವಲ್ಲ, ಅಬ್ದುಲ್ ಕಲಾಮ್‍ರನ್ನೋ ಅಝೀಮ್ ಪ್ರೇಮ್‍ಜಿಯನ್ನೋ ಅಥವಾ ನಜ್ಮಾ ಹೆಫ್ತುಲ್ಲಾರನ್ನೋ ತೋರಿಸಿ, ‘ನೀವು ಅವರಂತೆ ಆಗಿ’ ಎಂಬ ಸಲಹೆಯನ್ನೂ ನೀಡುತ್ತದೆ. ಹಾಗಂತ, ಖಾಪ್ ಪಂಚಾಯತ್‍ನ ಆದೇಶಗಳನ್ನು ಇಂಥ ಸಂದರ್ಭಗಳಲ್ಲಿ ಈ ಮಂದಿ ಉಲ್ಲೇಖಿಸುವುದೇ ಇಲ್ಲ. ಅದರ ತಪ್ಪುಗಳನ್ನು ಹಿಂದೂ ಧರ್ಮದ ದೌರ್ಬಲ್ಯಗಳಾಗಿ ಕಾಣುವುದೂ ಇಲ್ಲ. ನಿಜವಾಗಿ, ಖಾಪ್ ಪಂಚಾಯತೋ ಅಥವಾ ಫತ್ವಾಗಳನ್ನು ಹೊರಡಿಸುವ ಹಿರಿಯರ ಸಭೆಗಳೋ ಯಾವುದೇ ಧರ್ಮದ ಪ್ರತಿನಿಧಿಯಾಗಲು ಸಾಧ್ಯವೇ ಇಲ್ಲ. ಸ್ಥಳೀಯ ಸಂಪ್ರದಾಯ, ಆಚರಣೆಗಳನ್ನು ಎದುರಿಟ್ಟುಕೊಂಡು ಅವು ಆದೇಶಗಳನ್ನು ಹೊರಡಿಸುತ್ತವೆಯೇ ಹೊರತು ಇಸ್ಲಾಮ್‍ನದ್ದೋ ಹಿಂದೂ ಧರ್ಮದ್ದೋ ಮೂಲ ಗ್ರಂಥಗಳನ್ನು ನಿಕಷಕ್ಕೆ ಒಡ್ಡಿಯಲ್ಲ. ಅಷ್ಟಕ್ಕೂ, ಇದು ಈ ವರ್ಗಕ್ಕೆ ಖಂಡಿತ ಗೊತ್ತು. ಈ ಹಿಂದೆ ಸಾನಿಯಾಳ ಉಡುಪಿನ ಬಗ್ಗೆ ತಕರಾರೆತ್ತಿದ ವಿದ್ವಾಂಸರೊಬ್ಬರನ್ನು ಹೀನಾಯವಾಗಿ ನಿಂದಿಸಿದ ಮಂದಿಯೇ ಆಕೆಯ ದೇಶನಿಷ್ಠೆಯನ್ನು ಇವತ್ತು ಪ್ರಶ್ನಾರ್ಹಗೊಳಿಸಿದ್ದು. ಹಾಗಂತ, ಅಂದು ಶೋಯೆಬ್ ಮಲಿಕ್‍ನನ್ನು ಸಾನಿಯಾ ಮದುವೆ ಆಗಿರಲಿಲ್ಲ ಎಂದು ಈ ವರ್ಗ ಆ ಘಟನೆಯನ್ನು ಸಮರ್ಥಿಸಿಕೊಳ್ಳಬಹುದು. ಆದರೆ ಈ ವರ್ಗದ ಈ ವರೆಗಿನ ನಿಲುವುಗಳನ್ನು ಅವಲೋಕಿಸಿದರೆ ಅಂಥ ಸಮರ್ಥನೆ ಅಪ್ಪಟ ಸುಳ್ಳೆಂಬುದು ಸ್ಪಷ್ಟವಾಗುತ್ತದೆ. ಅವತ್ತು ಮುಸ್ಲಿಮರನ್ನು ನಿಂದಿಸುವುದಕ್ಕೆ ವಿದ್ವಾಂಸರನ್ನು ಬಳಸಿಕೊಂಡಿದ್ದರು. ಈಗ ಶೋಯೆಬ್‍ನನ್ನು ಬಳಸಿಕೊಂಡಿದ್ದಾರೆ. ಎರಡರಲ್ಲೂ ಸಮಯ ಸಾಧಕತನ ಇದೆಯೇ ಹೊರತು ಪ್ರಾಮಾಣಿಕತೆ ಕಾಣಿಸುತ್ತಿಲ್ಲ.
 ಈ ದೇಶದಲ್ಲಿ ಸಚಿನ್ ತೆಂಡುಲ್ಕರ್, ಮಹೇಶ್ ಭೂಪತಿ, ಸೈನಾ ನೆಹ್ವಾಲ್, ಜ್ವಾಲಾ ಗುಟ್ಟಾರಿಗಿರುವ ಸ್ವಾತಂತ್ರ್ಯ ಸಾನಿಯಾ, ಇರ್ಫಾನ್ ಪಠಾಣ್, ಪರ್ವೇಝ್ ರಸೂಲ್‍ಗೆ ಇಲ್ಲ. ಸಚಿನ್ ತೆಂಡುಲ್ಕರ್ ತನ್ನ ಶತಕವನ್ನು ತನ್ನ ತಂದೆಗೋ, ಪತ್ನಿಗೋ ಅರ್ಪಿಸುವಂತೆ ಪರ್ವೇಝ್ ರಸೂಲ್ ಅರ್ಪಿಸುವಂತಿಲ್ಲ. ಆತ ದೇಶಕ್ಕೇ ಅರ್ಪಿಸಬೇಕು. ಡೇವಿಸ್ ಕಪ್‍ನಲ್ಲಿ ಮಹೇಶ್ ಭೂಪತಿ ಆಡದೇ ಇರುವುದನ್ನೂ ಸಾನಿಯಾ ಆಡದಿರುವುದನ್ನೂ ಒಂದೇ ತಟ್ಟೆಯಲ್ಲಿ ಇಟ್ಟು ತೂಗಲಾಗುತ್ತಿಲ್ಲ. ಒಂದನ್ನು ವೈಯಕ್ತಿಕ ಕಾರಣಗಳ ಮೂಲಕ ಸಮರ್ಥಿಸಲಾದರೆ ಇನ್ನೊಂದನ್ನು ದೇಶನಿಷ್ಠೆಯ ನೆಪದಲ್ಲಿ ಟೀಕಿಸಲಾಗುತ್ತದೆ. ಬಹುಶಃ ಈ ಸಮಸ್ಯೆ ಮೊನ್ನೆ ಸಾನಿಯಾಳನ್ನೂ ಕಾಡಿರಬೇಕು. ಮೂರು ತಿಂಗಳ ಹಿಂದೆ ಆಕೆಯ ದೇಶನಿಷ್ಟೆಯನ್ನು ಪ್ರಶ್ನಿಸಲಾದ ಘಟನೆ ಪ್ರಶಸ್ತಿ ಗೆದ್ದ ಸಂದರ್ಭದಲ್ಲಿ ಸ್ಮರಣೆಗೆ ಬಂದಿರಬೇಕು. ಆದ್ದರಿಂದಲೇ, ಬ್ರೂನೋ ಸೋರ್ಸ್‍ರ ಜೊತೆಗೂಡಿ ಡಬಲ್ಸ್ ಪ್ರಶಸ್ತಿ ಗೆದ್ದ ತಕ್ಷಣ ಆಕೆ ಪ್ರಶಸ್ತಿಯನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಒಂದು ವೇಳೆ, ಶತಕಗಳನ್ನು ತಂತಮ್ಮ ಪತ್ನಿಯರಿಗೆ ಅರ್ಪಿಸಿದ ಧೋನಿ, ಸಚಿನ್‍ರಂತೆ ಸಾನಿಯಾ ತನ್ನ ಪ್ರಶಸ್ತಿಯನ್ನು ಶೋಯೆಬ್ ಮಲಿಕ್‍ಗೆ ಅರ್ಪಿಸಿರುತ್ತಿದ್ದರೆ ಏನಾಗುತ್ತಿತ್ತು? ದೇಶನಿಷ್ಠೆಯ ಚರ್ಚೆ ಹೇಗೆಲ್ಲ ನಡೆಯುತ್ತಿತ್ತು?
   ಏನೇ ಆಗಲಿ, ಪ್ರತಿಭಟನೆಯ ಸುಂದರ ಮಾದರಿಯೊಂದನ್ನು ಲಕ್ಷ್ಮಣ್‍ ಮತ್ತು ಅವರ ಬೆಂಬಲಿಗರಿಗೆ ಸಾನಿಯಾ ಮಿರ್ಝಾ ತೋರಿಸಿಕೊಟ್ಟಿದ್ದಾರೆ. ಇಂಥ ಸಕಾರಾತ್ಮಕ ಪ್ರತಿಭಟನೆಗಳು ಈ ದೇಶದಲ್ಲಿ ಹೆಚ್ಚೆಚ್ಚು ವ್ಯಕ್ತವಾಗುತ್ತಿರಲಿ ಮತ್ತು ಮುಸ್ಲಿಮರ ದೇಶನಿಷ್ಠೆಯನ್ನು ಪ್ರಶ್ನಾರ್ಹಗೊಳಿಸುವವರ ಪ್ರಯತ್ನಗಳು ಮತ್ತೆ ಮತ್ತೆ ಸೋಲುತ್ತಲೇ ಇರಲಿ ಎಂದೇ ಹಾರೈಸೋಣ.