Thursday 16 January 2020

ನರೇಶ್ ಕೊಂಚ್, ಸುಬೋದ್ ಡೇ, ದುಲಾಲ್ ಚಂದ್ ಮತ್ತು NRC, CAA



ನರೇಶ್ ಕೊಂಚ್ ಎಂಬ ಬಾಂಗ್ಲಾ ನಿರಾಶ್ರಿತ ಬಡವನನ್ನು ಅಸ್ಸಾಮ್‍ನ ಡಿಟೆನ್ಶನ್ ಸೆಂಟರ್‍ ನಲ್ಲಿ (ಬಯಲು ಬಂಧೀಖಾನೆ) ಕೂಡಿ ಹಾಕಿ ಕಳೆದವಾರ ಸಾವನ್ನು ಕರುಣಿಸಲಾಗಿದೆ. ಈತ ಕಳೆದ 35 ವರ್ಷಗಳಿಂದ ಈ ದೇಶವನ್ನೇ ತನ್ನ ತಾಯ್ನಾಡಾಗಿ ಪರಿಗಣಿಸಿದ್ದ. ಇಲ್ಲೇ ದುಡಿದು ಬದುಕುತ್ತಿದ್ದ. ಹಾಗಂತ, ಅಸ್ಸಾಮ್‍ನ ಡಿಟೆನ್ಶನ್ ಸೆಂಟರ್ ನಲ್ಲಿ ಸಾವಿಗೀಡಾದವರಲ್ಲಿ ಈತ ಮೊದಲನೆಯವನಲ್ಲ. ಕಳೆದ 3 ವರ್ಷಗಳಲ್ಲಿ 28 ಮಂದಿ ಡಿಟೆನ್ಶನ್ ಸೆಂಟರ್ ಎಂಬ ಸಾವಿನ ಕೂಪದಲ್ಲಿ ತಮ್ಮ ಪ್ರಾಣವನ್ನು ಕಳಕೊಂಡಿದ್ದಾರೆ. ಇವರಲ್ಲಿ ಸುಬೋದ್ ಡೇ ಎಂಬ ನತದೃಷ್ಟನೂ ಒಬ್ಬ. ದುಲಾಲ್ ಚಂದ್ ಇನ್ನೊಬ್ಬ. ಗೂಡಂಗಡಿ ಚಹಾ ಮಾರಾಟಗಾರನಾದ ಸುಬೋದ್ ಡೇಯ ಹೆಸರನ್ನು ಸುಬ್ರತ್ ಡೇ ಎಂದು ತಪ್ಪಾಗಿ ಬರೆದುಕೊಂಡ ಎನ್‍ಆರ್ ಸಿ ಅಧಿಕಾರಿಗಳು ಆತನನ್ನು ವಿದೇಶಿ ಪ್ರಜೆ ಎಂದು ಘೋಷಿಸಿದರು. ಬಳಿಕ ಡಿಟೆನ್ಶನ್ ಸೆಂಟರ್‍ಗೆ ಆತನನ್ನು ತಳ್ಳಲಾಯಿತು. ಆ ಬಳಿಕ ಆತ ಹೊರಬಂದದ್ದು ಹೆಣವಾಗಿ. ಅವನ ಪತ್ನಿ ಕಾಮಿನಿ ಡೇ ಅವರ ಪ್ರಕಾರ, 1951ರ ಪೌರತ್ವ ಪಟ್ಟಿಯಲ್ಲಿ ಅವರ ಕುಟುಂಬಸ್ಥರ ಹೆಸರೂ ಇದೆ. ಆದರೆ, ಅಧಿಕಾರಿಗಳ ಎಡವಟ್ಟಿನಿಂದ ಸುಬೋದ್ ಡೇಯು ಸುಬ್ರತ್ ಡೇ ಆಗಿ ಬಯಲು ಬಂಧೀಖಾನೆಗೆ ತಳ್ಳಲ್ಪಟ್ಟು ಕೊರಗಿ ಕೊರಗಿ ಸಾವಿಗೀಡಾಗುತ್ತಾನೆ. ದುಲಾಲ್ ಚಂದ್‍ನ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಆತ ನಿರಾಶ್ರಿತ ಅನ್ನುವುದನ್ನು ಬಿಟ್ಟರೆ ಉಳಿದಂತೆ ಈ ದೇಶದಲ್ಲೇ ತುತ್ತು ಅನ್ನಕ್ಕೆ ದಾರಿಯನ್ನು ಕಂಡಕೊಂಡವ. ಆದ್ದರಿಂದ,

ಕೆಲವು ಪ್ರಶ್ನೆಗಳಿಗೆ ಈ ದೇಶದ ನಾಗರಿಕರು ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಈ ದೇಶದಲ್ಲಿ ಡಿಟೆನ್ಶನ್ ಸೆಂಟರೇ ಇಲ್ಲ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಸ್ಸಾಮ್‍ನ ಡಿಟೆನ್ಶನ್ ಸೆಂಟರ್ ನಿಂದ  ಹೆಣವಾಗಿ ಬಂದ ನರೇಶ್ ಕೊಂಚ್- ಈ ಇಬ್ಬರಲ್ಲಿ ಯಾರು ನಿಜ? ನರೇಶ್ ಕೊಂಚ್ ಸತ್ತಿಲ್ಲವೇ? ಆತನನ್ನು ಡಿಟೆನ್ಶನ್ ಸೆಂಟರ್ ಗೆ ದಾಖಲಿಸಿರಲಿಲ್ಲವೇ? ಅಸ್ಸಾಮ್‍ನಲ್ಲಿ ಕಳೆದ 3 ವರ್ಷಗಳಿಂದ 29 ಮಂದಿ ನಿರಾಶ್ರಿತರು ಡಿಟೆನ್ಶನ್ ಸೆಂಟರ್‍ನಲ್ಲಿ ಸಾವಿಗೀಡಾಗಿದ್ದಾರೆ ಎಂದು ಅಸ್ಸಾಮ್‍ನ ಬಿಜೆಪಿ ಸರಕಾರವೇ ದಾಖಲೆ ಸಮೇತ ಪಟ್ಟಿ ಬಿಡುಗಡೆಗೊಳಿಸಿರುವುದು ಸುಳ್ಳೇ? ಅಸ್ಸಾಮ್‍ನ ಡಿಟೆನ್ಶನ್ ಸೆಂಟರ್ ನಲ್ಲಿ ಸಾವಿರದಷ್ಟು ಮಂದಿ ಈಗಲೂ ಇದ್ದಾರೆ ಎಂಬ ಅಸ್ಸಾಮ್ ಸರಕಾರದ ವಿವರಣೆ ಸುಳ್ಳೇ? ಸಿಎಎಯು ಪೌರತ್ವವನ್ನು ಕಸಿಯುವ ಕಾಯ್ದೆ ಅಲ್ಲ ಎಂದು ಹೇಳುತ್ತಿರುವ ಕೇಂದ್ರ ಸರಕಾರವು ಕಸಿಯುತ್ತಿರುವುದೇನನ್ನು- ಪ್ರಾಣವನ್ನೇ? ‘ಸಿಎಎಯು ಮುಸ್ಲಿಮೇತರ ವಲಸಿಗರಿಗೆ ಪೌರತ್ವ ಕೊಡುವ ಕಾನೂನು’ ಎಂದು ಭಾರತೀಯರನ್ನು ನಂಬಿಸುತ್ತಿರುವವರು ನರೇಶ್ ಕೊಂಚ್‍ಗೆ ಪೌರತ್ವ ಕೊಡದೇ ಡಿಟೆನ್ಶನ್ ಸೆಂಟರ್ ನಲ್ಲಿಟ್ಟು ಸಾಯಿಸಿದ್ದೇಕೆ? ಸುಬೋದ್ ಡೇಯನ್ನು ಸುಬ್ರತ್ ಡೇಯೆಂದು ಕರೆದು ಪ್ರಾಣ ಕಸಿದುಕೊಂಡದ್ದೇಕೆ? ಅಸ್ಸಾಮ್‍ನ ಡಿಟೆನ್ಶನ್ ಸೆಂಟರ್ ನಲ್ಲಿ ಮುಸ್ಲಿಮೇತರರನ್ನೇ ಕೂಡಿಟ್ಟು ಸಾಯಿಸುತ್ತಾ- ಸಿಎಎಯು ಮುಸ್ಲಿಮೇತರರಿಗೆ ಪೌರತ್ವ ಕೊಡುವ ಕಾಯ್ದೆ ಎಂದು ಹೇಳುತ್ತೀರಲ್ಲ, ಸುಳ್ಳಲ್ಲವೇ?
ಈ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆ- ಸಿಎಎನೂ ಅಲ್ಲ, ಎನ್‍ಆರ್ ಸಿನೂ ಅಲ್ಲ. ನಿರುದ್ಯೋಗ, ಕಂಪೆನಿಗಳ ಮುಚ್ಚುಗಡೆ, ಬಂಡವಾಳ ಹೂಡಿಕೆ ಹಿಂತೆಗೆತ, ಬೆಲೆ ಏರಿಕೆ, ಆರ್ಥಿಕ ಹಿಂಜರಿತ, ಪಾಕ್-ಬಾಂಗ್ಲಾಗಳ ಜಿಡಿಪಿಗಿಂತ ಅರ್ಧಕ್ಕಿಳಿದಿರುವ ಭಾರತದ ಜಿಡಿಪಿ ಮಟ್ಟ ಇತ್ಯಾದಿ ಇತ್ಯಾದಿಗಳು ನಿಜವಾದ ಸಮಸ್ಯೆ. ಸರಕಾರಕ್ಕೆ ಉದ್ಯೋಗ ಸೃಷ್ಟಿಸಲಾಗದ ಹತಾಶೆ ಒಂದು ಕಡೆಯಾದರೆ, ನೋಟ್ ಬ್ಯಾನ್ ಮತ್ತು ಜಿಎಸ್‍ಟಿಯಿಂದಾಗಿ ಬಾಗಿಲು ಮುಚ್ಚುತ್ತಿರುವ ಕಂಪೆನಿಗಳು ಇನ್ನೊಂದು ಕಡೆ. ಇದರಿಂದಾಗಿ ಕೋಟ್ಯಂತರ ಉದ್ಯೋಗಿಗಳು ನಿರುದ್ಯೋಗಿಗಳ ಪಟ್ಟಿ ಸೇರಿಕೊಂಡರು. ಹೂಡಿಕೆದಾರರನ್ನು ಆಕರ್ಷಿಸುವುದಕ್ಕಾಗಿ ಕರವಿನಾಯಿತಿ ಘೋಷಿಸಿದರೂ ನಿರೀಕ್ಷಿತ ಪರಿಣಾಮ ಬೀರುತ್ತಿಲ್ಲ. ಬಂಡವಾಳ ಹೂಡುವ ಬದಲು ಹೂಡಿಕೆ ಹಿಂತೆಗೆತದ ಸದ್ದೇ ಜೋರಾಗಿ ಬಿಟ್ಟಿದೆ. ಬೆಲೆ ಏರಿಕೆಯಿಂದಾಗಿ ಸಾಮಾನ್ಯ ನಾಗರಿಕ ಕಂಗಾಲಾಗಿದ್ದಾನೆ. ತೈಲ ಬೆಲೆಯಲ್ಲಿ ದಿನಂಪ್ರತಿ ಏರಿಕೆಯಾಗುತ್ತಿದೆ. ಇದು ಈ ದೇಶದ ಸದ್ಯದ ಸ್ಥಿತಿ. ಇದಕ್ಕೆ ನೆರೆಯ ಮೂರು ರಾಷ್ಟ್ರಗಳಿಂದ ಭಾರತಕ್ಕೆ ಬಂದಿರುವ ಬಡ ನಾಗರಿಕರು ಕಾರಣ ಅಲ್ಲ. ಮೈಮುರಿದು ದುಡಿದು ಬದುಕುತ್ತಿರುವ ಇವರನ್ನು ಕಳ್ಳರಂತೆ ಚಿತ್ರಿಸಿ ಡಿಟೆನ್ಶನ್ ಸೆಂಟರ್ ಗೆ ಅಟ್ಟುವುದು ಇದಕ್ಕೆ ಪರಿಹಾರವೂ ಅಲ್ಲ. ಯಾರಾದರೂ,
ಎನ್‍ಪಿಆರ್, ಎನ್‍ಆರ್ ಸಿ ಮತ್ತು ಸಿಎಎಯ ಜಾರಿಯೇ ಈಗಿನ ತುರ್ತು ಅಗತ್ಯ ಎಂದು ವಾದಿಸುವುದಾದರೆ ಅವರು ಈ ದೇಶವನ್ನು ಮನಸಾರೆ ದ್ವೇಷಿಸುತ್ತಿದ್ದಾರೆ ಎಂದೇ ಅರ್ಥ. ಆಫ್ರಿಕನ್ ಖಂಡದ ಬಡ ರಾಷ್ಟ್ರಗಳಾದ ನೈಜೀರಿಯಾ, ಜಿಂಬಾಬ್ವೆ, ಕೀನ್ಯಾಗಳ ಸಾಲಿಗೆ ಭಾರತವನ್ನು ಸೇರಿಸಬೇಕೆಂದು ಸಂಚು ಹೂಡಿರುವವರು ಮಾತ್ರ ಇಂಥ ಮಾತುಗಳನ್ನು ಆಡಲು ಸಾಧ್ಯ. ಈ ದೇಶದ ಈಗಿನ ತುರ್ತು ಅಗತ್ಯ ಏನೆಂದರೆ, ಕುಸಿದಿರುವ ಅರ್ಥ ವ್ಯವಸ್ಥೆಗೆ ಬಲ ತುಂಬುವುದು. ಉದ್ಯೋಗ ಸೃಷ್ಟಿಸುವುದು. ಮುಚ್ಚಿರುವ ಮತ್ತು ಮುಚ್ಚುತ್ತಿರುವ ಸಾವಿರಾರು ಸಣ್ಣ, ಮಧ್ಯಮ ಮತ್ತು ದೊಡ್ಡ ಉದ್ಯಮಗಳ ಸಮಸ್ಯೆಗಳಿಗೆ ಕಿವಿಯಾಗಿ ಬಾಗಿಲು ತೆರೆಸುವುದು. ಆದರೆ ನಮ್ಮನ್ನಾಳುವವರಿಗೆ ಸಮಸ್ಯೆಗಳನ್ನು ಸೃಷ್ಟಿಸುವುದು ಗೊತ್ತಿದೆಯೇ ಹೊರತು ಪರಿಹರಿಸುವುದನ್ನಲ್ಲ. ತಮಾಷೆ ಏನೆಂದರೆ, ನೀರುಳ್ಳಿ ತುಟ್ಟಿಯಾದುದನ್ನು ಭಾರತೀಯರು ಪ್ರಶ್ನಿಸತೊಡಗಿದಾಗ- ‘ನಾನು ನೀರುಳ್ಳಿ ತಿನ್ನುವವಳಲ್ಲ’ ಎಂದು ಹೇಳುವುದು ಅರ್ಥಮಂತ್ರಿಯ ಪರಿಹಾರ ಸೂತ್ರ. ಎನ್‍ಆರ್ ಸಿಯ ಮೂಲಕ ಅಸ್ಸಾಮ್ ಒಂದರಲ್ಲೇ ಸಾವಿರದಷ್ಟು ಮಂದಿಯನ್ನು ಡಿಟೆನ್ಶನ್ ಸೆಂಟರ್ ನಲ್ಲಿ ಕೂಡಿ ಹಾಕಿರುವುದರ ಹೊರತಾಗಿಯೂ ‘ದೇಶದಲ್ಲಿ ಡಿಟೆನ್ಶನ್ ಸೆಂಟರೇ ಇಲ್ಲ’ ಎಂದು ಹೇಳುವುದು ಪ್ರಧಾನಿಯವರ ಎನ್‍ಆರ್ ಸಿ ಪರಿಹಾರ ಸೂತ್ರ. ನರೇಶ್ ಕೊಂಚ್‍ನ ಶವವನ್ನು ಕಣ್ಣೀರಿನೊಂದಿಗೆ ಅವರ ಕುಟುಂಬ ಸ್ವೀಕರಿಸುತ್ತಿರುವ ಸಂಕಟವನ್ನು ಈ ದೇಶ ಗಮನಿಸುತ್ತಿದ್ದರೂ ‘ಸಿಎಎಯಿಂದ ಹಿಂದೂಗಳಿಗೆ ತೊಂದರೆಯಿಲ್ಲ’ ಎಂದು ಹೇಳುವುದು ಗೃಹಮಂತ್ರಿಯವರ ಸಿಎಎ ಪರಿಹಾರ ಸೂತ್ರ. ಉದ್ಯೋಗ ಕೊಡಿ ಎಂದ ಯುವ ಪ್ರತಿಭೆಗಳಿಗೆ ‘ಪಕೋಡ ಮಾರಿ ಬದುಕಿಕೊಳ್ಳಿ’ ಎನ್ನುತ್ತಾರೆ ನಮ್ಮ ಪ್ರಧಾನಿಗಳು. ಸಿಎಎ ವಿರುದ್ಧ ಸಂವಿಧಾನಬದ್ಧ ಪ್ರತಿಭಟನಾ ಹಕ್ಕನ್ನು ಚಲಾಯಿಸುವವರನ್ನು ‘ಪಾಕಿಸ್ತಾನಕ್ಕೆ ಹೋಗಿ’ ಎಂಬ ಪರಿಹಾರವನ್ನು ತೋರಿಸುತ್ತದೆ ಈ ಸರಕಾರ. ಇದೂ ಒಂದು ಆಡಳಿತ ನೀತಿಯೇ?
ಸಿಎಎ ಮತ್ತು ಎನ್‍ಆರ್ ಸಿ- ಈ ಎರಡೂ ಈ ದೇಶದ ಈಗಿನ ಅಗತ್ಯ ಅಲ್ಲವೇ ಅಲ್ಲ. ಹಾಗೆಯೇ, ಈ ಕಾಯ್ದೆಯು ಕೇವಲ ಮುಸ್ಲಿಮರಿಗೆ ಮಾತ್ರ ತೊಂದರೆ ಕೊಡುವ ಮತ್ತು ಮುಸ್ಲಿಮೇತರರನ್ನು ಸುರಕ್ಷಿತ ವಲಯದಲ್ಲಿ ಕೂರಿಸುವ ಒಂದೂ ಅಲ್ಲ. ಈ ದೇಶದಲ್ಲಿ 30 ಕೋಟಿಯಷ್ಟು ಭೂಹೀನರಿದ್ದಾರೆ ಎಂಬ ವರದಿಯಿದೆ. 1 ಕೋಟಿ 70 ಲಕ್ಷದಷ್ಟು ಮನೆ ರಹಿತರೂ, 25 ಕೋಟಿಯಷ್ಟು ಅಲೆಮಾರಿಗಳೂ 8 ಕೋಟಿಯಷ್ಟು ಆದಿವಾಸಿಗಳೂ ಮತ್ತು ಕೋಟ್ಯಾಂತರ ಮಂದಿ ಅನಕ್ಷರಸ್ಥರೂ ಈ ದೇಶದಲ್ಲಿದ್ದಾರೆ. ಈಗಲೂ ಈ ದೇಶದ 50ರಿಂದ 60%ದಷ್ಟು ಮಂದಿಯಲ್ಲಿ ಮಾತ್ರ ಜನನ ಪ್ರಮಾಣ ಪತ್ರ ಇದೆ. 1970ರ ಕಾಲದಲ್ಲಿ ಸುಮಾರು 60%ದಷ್ಟು ಅಕ್ಷರಸ್ಥರಷ್ಟೇ ಇದ್ದರು ಎಂಬುದೇ ಆ ಕಾಲದಲ್ಲಿ ಜನಿಸಿದವರ ದಾಖಲೆ ಪ್ರಮಾಣ ಪತ್ರಗಳು ಹೇಗಿರಬಹುದು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದ್ದರಿಂದ,
ಭೂಮಿಯೇ ಇಲ್ಲದವರು, ಜನನ ದಿನಾಂಕವೇ ಗೊತ್ತಿಲ್ಲದವರು, ಮನೆ ಇಲ್ಲದವರು, ಅಲೆಮಾರಿಗಳು, ಬುಡಕಟ್ಟುಗಳು, ಕೋಟ್ಯಾಂತರ ಬಡವರು, ದಲಿತರು, ಅನಕ್ಷರಸ್ಥರು ಎನ್‍ಆರ್‍ಸಿಯ ಸಂದರ್ಭದಲ್ಲಿ ತಮ್ಮ ಪೌರತ್ವವನ್ನು ಸಾಬೀತುಪಡಿಸುವುದಕ್ಕಾಗಿ ಕಚೇರಿಯಿಂದ ಕಚೇರಿಗೆ ಅಲೆದೂ ಅಲೆದೂ ಸುಸ್ತಾಗಬೇಕಾಗುತ್ತದೆ. ಇವರೆಲ್ಲರೂ ತಮ್ಮ ಪೌರತ್ವ ಸಾಬೀತಿಗಾಗಿ ಭೂದಾಖಲೆ, ಜನನ ದಿನಾಂಕ, ವಾಸ್ತವ್ಯ ದಾಖಲೆ ಇತ್ಯಾದಿ ಇತ್ಯಾದಿಗಳನ್ನು ಅಧಿಕಾರಿಗಳಿಗೆ ಒಪ್ಪಿಸಲೇ ಬೇಕಾಗುತ್ತದೆ. ಈ ದಾಖಲೆಗಳು ಇಲ್ಲದವರ ಹಣೆಬರಹವನ್ನು ತೀರ್ಮಾನಿಸುವುದು ಎನ್‍ಆರ್ ಸಿ ಅಧಿಕಾರಿ. ಈ ದೇಶದ ಶ್ರೀಮಂತರು ಎನ್‍ಆರ್ ಸಿಯಿಂದ ಸುಲಭದಲ್ಲಿ ಪಾರಾಗಬಹುದು. ಆದರೆ ಎಲ್ಲ ಧರ್ಮಕ್ಕೆ ಸೇರಿರುವ ಬಹುಸಂಖ್ಯಾತ ಬಡವರು ಎನ್‍ಆರ್ ಸಿಯಿಂದ ಸುರಕ್ಷಿತವಾಗಿ ಪಾರಾಗುವುದು ಸುಲಭ ಅಲ್ಲ. ಅವರು ತಮ್ಮ ದಾಖಲೆಗಳನ್ನು ಪಡಕೊಳ್ಳುವುದಕ್ಕಾಗಿ ದಿನಗಟ್ಟಲೆ ಸರಕಾರಿ ಕಚೇರಿಗಳ ಮುಂದೆ ಸರತಿಯಲ್ಲಿ ನಿಲ್ಲಬೇಕಾದೀತು. ಲಂಚ ಕೊಡಬೇಕಾದೀತು. ದಾಖಲೆಗಳನ್ನು ಒದಗಿಸುವುದಕ್ಕಾಗಿ ಮಧ್ಯವರ್ತಿಗಳು ಹುಟ್ಟಿಕೊಂಡಾರು. ಒಂದೊಂದು ಕಾಗದ ಪತ್ರವೂ ಲಕ್ಷಾಂತರ ಬೆಲೆಬಾಳುವ ಹಂತಕ್ಕೆ ತಲುಪೀತು. ಲಂಚ ಕೊಡಲು ಸಾಧ್ಯವಿಲ್ಲದ ಕೋಟ್ಯಂತರ ಭಾರತೀಯರು ಅಂತಿಮವಾಗಿ ಡಿಟೆನ್ಶನ್ ಸೆಂಟರ್ ನತ್ತ ತೆರಳಬೇಕಾದೀತು. ಇದು ಬರೇ ಊಹೆಯಲ್ಲ. ನರೇಶ್ ಕೊಂಚ್, ಸುಬೋದ್ ಡೇ, ದುಲಾಲ್ ಚಂದ್ ಅವರೇ ಇದಕ್ಕೆ ಪ್ರತ್ಯಕ್ಷ ಸಾಕ್ಷಿ.

Friday 10 January 2020

NPR, NRC, CAA= ಹಿಟ್ಟು, ರೊಟ್ಟಿ ಮತ್ತು ಕಾದ ಕಾವಲಿ



ಹಿಟ್ಟನ್ನು ರುಬ್ಬುತ್ತಿರುವ ವ್ಯಕ್ತಿಯು ತಾನು ರೊಟ್ಟಿ ತಯಾರಿಸುವುದಿಲ್ಲ ಮತ್ತು ಅದನ್ನು ಬಾಣಲೆಯಲ್ಲಿಟ್ಟು ಕಾಯಿಸಿ ತಿನ್ನಲು ಯೋಗ್ಯವಾಗುವಂತೆ ಮಾಡುವುದಿಲ್ಲ ಎಂದರೆ ಅದನ್ನು ಯಾರು ನಂಬಬಹುದು? ಹಿಟ್ಟನ್ನು ರುಬ್ಬುವುದೇ ರೊಟ್ಟಿ ತಯಾರಿಸುವುದಕ್ಕೆ. ರೊಟ್ಟಿ ತಯಾರಿಸುವ ಉದ್ದೇಶವೇ ಇಲ್ಲ ಎಂದಾದರೆ ಹಿಟ್ಟನ್ನು ರುಬ್ಬಬೇಕಾದ ಅಗತ್ಯವೇ ಇಲ್ಲ. ಇನ್ನು ತಯಾರಿಸಿದ ರೊಟ್ಟಿಯನ್ನು ಕಾಯಿಸದಿದ್ದರೆ ಅದನ್ನು ತಿನ್ನುವಂತೆಯೂ ಇಲ್ಲ. ಮಾತ್ರವಲ್ಲ ಅದರಿಂದಾಗಿ ಆ ಇಡೀ ಪ್ರಕ್ರಿಯೆಯೇ ವ್ಯರ್ಥವಾಗುತ್ತದೆ. ಇದು ಸಾಮಾನ್ಯ ಜ್ಞಾನ. ಆದರೆ, ಈ ದೇಶದ ನಾಗರಿಕರಿಗೆ ಸಾಮಾನ್ಯ ಜ್ಞಾನವೂ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಂದುಕೊಂಡಿರುವಂತಿದೆ. ಎನ್.ಆರ್.ಸಿ.ಯ ಕುರಿತು ಪಾರ್ಲಿಮೆಂಟಿನಲ್ಲಾಗಲಿ, ಸಚಿವ ಸಂಪುಟದ ಸಭೆಯಲ್ಲಾಗಲಿ ಚರ್ಚಿಸಿಯೇ ಇಲ್ಲ ಎಂದು ಪ್ರಧಆನಿ ಹೇಳಿದ್ದಾರೆ. ಎನ್‍ಪಿಆರ್ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ)ಗೂ ಎನ್‍ಆರ್ ಸಿಗೂ ಸಂಬಂಧವೇ ಇಲ್ಲ ಎಂದು ಗೃಹಸಚಿವರು ಹೇಳುತ್ತಿದ್ದಾರೆ. ಮಾತ್ರವಲ್ಲ, 2010ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಎನ್‍ಪಿಆರ್ ಕೈಗೊಂಡಿತ್ತು ಎಂದೂ ಸಮರ್ಥಿಸುತ್ತಿದ್ದಾರೆ. ನಿಜವಾಗಿ, ಇಲ್ಲಿ ಪ್ರಧಾನಿ ಮತ್ತು ಗೃಸಚಿವರು ಹೇಳದೇ ಅಡಗಿಸಿಟ್ಟಿರುವ ಎರಡು ಪ್ರಮುಖ ಅಂಶಗಳಿವೆ. ಅದರಲ್ಲಿ,
1. ಎನ್‍ಆರ್ ಸಿಯ ಕುರಿತು ಸಚಿವ ಸಂಪುಟ ಅಥವಾ ಪಾರ್ಲಿಮೆಂಟ್‍ನಲ್ಲಿ ಚರ್ಚಿಸಿಯೇ ಇಲ್ಲ ಎಂದು ಪ್ರಧಾನಿ ಹೇಳಿರುವರೇ ಹೊರತು ಎನ್‍ಆರ್ ಸಿಯನ್ನು ದೇಶವ್ಯಾಪಿಯಾಗಿ ಕೈಗೊಳ್ಳುವುದಿಲ್ಲ ಎಂದು ಹೇಳುತ್ತಲೇ ಇಲ್ಲ.
2. ಯುಪಿಎ ಅವಧಿಯಲ್ಲಿ ಎನ್‍ಪಿಆರ್ ಅನ್ನು ಕೈಗೊಳ್ಳಲಾಗಿದೆ ಎಂದು ಹೇಳುವ ಗೃಹಸಚಿವರು, ಆಗಿನ ಎನ್‍ಪಿಆರ್ ಗೂ ಈಗಿನ ಎನ್‍ಪಿಆರ್ ಗೂ ನಡುವೆ ಇರುವ ವ್ಯತ್ಯಾಸವೇನು ಎಂದು ಹೇಳುವುದೇ ಇಲ್ಲ. ಅಂದಹಾಗೆ,
ಎನ್‍ಪಿಆರ್ ಎಂಬುದು ದೇಶದ್ರೋಹಿಯೂ ಅಲ್ಲ, ಅಪಾಯಕಾರಿಯೂ ಅಲ್ಲ. ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದಕ್ಕೆ ಎನ್‍ಪಿಆರ್ ಸುಲಭಗೊಳಿಸುತ್ತದೆ. ಈ ದೇಶದಲ್ಲಿ ಎಷ್ಟು ನಾಗರಿಕರು ವಾಸವಿದ್ದಾರೆ, ಅವರ ಉದ್ಯೋಗ, ಮನೆಯ ಸ್ಥಿತಿ ಇತ್ಯಾದಿ ಸಾಮಾನ್ಯ ಮಾಹಿತಿಗಳನ್ನು ಸಂಗ್ರಹಿಸುವುದು ಎನ್‍ಪಿಆರ್ ನ ಉದ್ದೇಶ. ಆದರೆ, ದುರುದ್ದೇಶವುಳ್ಳ ವ್ಯಕ್ತಿಯೋರ್ವ ಈ ಎನ್‍ಪಿಆರ್ ನ ಮೂಲಕವೇ ತನ್ನ ಗುರಿಯನ್ನು ಸಾಧಿಸಿಕೊಳ್ಳಬಬಹುದು. ಅದಕ್ಕೆ ಬಹಳ ಶ್ರಮ ಪಡಬೇಕಾದ ಅಗತ್ಯವಿಲ್ಲ. ಎನ್‍ಪಿಆರ್ ನ ಮೂಲಕ ಯಾವೆಲ್ಲ ಮಾಹಿತಿಗಳನ್ನು ನಾಗರಿಕರಿಂದ ಸಂಗ್ರಹಿಸಲಾಗುತ್ತದೋ ಅವೇ ಮಾಹಿತಿಗಳ ಜೊತೆ ತಮ್ಮ ದುರುದ್ದೇಶಕ್ಕೆ ಪೂರಕವಾದ ಮಾಹಿತಿಗಳನ್ನು ಸಂಗ್ರಹಿಸಿದರೂ ಸಾಕಾಗುತ್ತದೆ. ಅಮಿತ್ ಶಾರ ಎನ್‍ಪಿಆರ್ ಅಪಾಯಕಾರಿ ಎನಿಸಿರುವುದು ಈ ಕಾರಣಕ್ಕೆ. ಉದಾಹರಣೆ,
ಈ ಹಿಂದಿನ ಯಾವ ಎನ್‍ಪಿಆರ್ ನಲ್ಲೂ ತಂದೆ ಮತ್ತು ತಾಯಿ ಹುಟ್ಟಿದ ಸ್ಥಳದ ಮಾಹಿತಿ ಸಂಗ್ರಹ ಆಗಿರಲಿಲ್ಲ. ಕೇವಲ ಜನಸಂಖ್ಯಾ ನೋಂದಣಿಗೆ ಈ ಮಾಹಿತಿಯ ಅಗತ್ಯವೂ ಇಲ್ಲ. ಆದರೆ, ಕೇಂದ್ರದ ಹೊಸ ಎನ್‍ಪಿಆರ್ ನಲ್ಲಿ ಈ ಪ್ರಶ್ನೆಯೂ ಸೇರಿದಂತೆ ಐದಾರು ಹೊಸ ಪ್ರಶ್ನೆಗಳೂ ಇವೆ. ಎನ್‍ಆರ್ ಸಿಗೆ ಈ ಪ್ರಶ್ನೆಗಳು ಅಗತ್ಯವೇ ಹೊರತು ಎನ್‍ಪಿಆರ್ ಗಲ್ಲ. ಅಂದರೆ, ಎನ್‍ಆರ್ ಸಿಯನ್ನು ಕೈಗೊಳ್ಳಲು ಕೇಂದ್ರ ಉತ್ಸುಕವಾಗಿಲ್ಲ ಎಂಬ ಸಂದೇಶವನ್ನು ಕೊಡುತ್ತಲೇ ಹಿಂಬಾಗಿಲ ಮೂಲಕ ಅದನ್ನು ಜಾರಿಯಲ್ಲಿಡುವ ಪ್ರಯತ್ನ ಇದು. ಎನ್‍ಪಿಆರ್ ಎಂಬುದು ಎನ್‍ಆರ್ ಸಿಯ ಪ್ರಾಥಮಿಕ ಮೆಟ್ಟಿಲು. ಎನ್‍ಪಿಆರ್ ಮೂಲಕ ಪಡೆದ ಮಾಹಿತಿಯನ್ನು ಎನ್‍ಆರ್ ಸಿಗಾಗಿ ಬಳಸಿಕೊಳ್ಳಲಾಗುತ್ತದೆ. ಆ ಬಳಿಕ ಸಿಎಎಯ ಆಧಾರದಲ್ಲಿ ಭಾರತೀಯರ ಪೌರತ್ವವನ್ನು ನಿರ್ಧರಿಸಲಾಗುತ್ತದೆ. ಇದನ್ನು ಇನ್ನಷ್ಟು ಸುಲಭವಾಗಿ ಅರ್ಥ ಮಾಡಿಕೊಳ್ಳುವ ವಿಧಾನ ಏನೆಂದರೆ, ಎನ್‍ಪಿಆರ್ ಎಂಬುದು ಹಿಟ್ಟು. ಎನ್‍ಆರ್ ಸಿ ಎಂಬುದು ರೊಟ್ಟಿ ಮತ್ತು ಸಿಎಎ ಎಂಬುದು ರೊಟ್ಟಿಯನ್ನು ಸುಡುವ ಕ್ರಿಯೆ. ಸದ್ಯ ಎನ್‍ಪಿಆರ್ ಎಂಬ ಹಿಟ್ಟನ್ನು ರುಬ್ಬುವ ಕೆಲಸಕ್ಕೆ ಕೇಂದ್ರ ಸರಕಾರ ಕೈಹಾಕಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ತನ್ನ 6 ವರ್ಷಗಳ ಅವಧಿಯಲ್ಲೇ ಅತೀ ದೊಡ್ಡದಾದ ನಾಗರಿಕ ಪ್ರತಿರೋಧವನ್ನು ಎದುರಿಸುತ್ತಿದೆ. ಈ ಪ್ರತಿರೋಧ ಆರಂಭವಾದದ್ದು ಅಸ್ಸಾಮ್‍ನಿಂದ. ಅನೇಕ ಸಂಕಟ, ಸವಾಲು, ಸಮಸ್ಯೆಗಳಿಗೆ ಮುಖಾಮುಖಿಯಾಗಿಯೂ ಎನ್‍ಆರ್‍ಸಿಗೆ ಸಹಕರಿಸಿದ್ದ ಅಸ್ಸಾಮ್‍ನ ಜನತೆಯು ಸಿಎಎಯನ್ನು ಕಂಡು ಹೌಹಾರಿತು. 1951ರಿಂದ 1971 ಮಾರ್ಚ್ 24ರ ಒಳಗೆ ಅಸ್ಸಾಮ್ ಪ್ರವೇಶಿಸಿರುವ ಎಲ್ಲ ವಲಸಿಗರಿಗೂ ಭಾರತೀಯ ಪೌರತ್ವವನ್ನು ಕೊಡುವುದು ಮತ್ತು ಆ ಬಳಿಕ ಅಸ್ಸಾಮ್ ಪ್ರವೇಶಿಸಿದ ಎಲ್ಲರಿಗೂ ಪೌರತ್ವ ನಿರಾಕರಿಸುವುದು ಅಸ್ಸಾಮ್ ಎನ್‍ಆರ್ ಸಿಯ ಗುರಿಯಾಗಿತ್ತು. ವಲಸಿಗರ ವಿರುದ್ಧ 70ರ ದಶಕದಲ್ಲಿ ಅಸ್ಸಾಮ್‍ನಲ್ಲಿ ಹುಟ್ಟಿಕೊಂಡ ಚಳವಳಿಯ ಬಯಕೆಯೂ ಇದುವೇ ಆಗಿತ್ತು. ಆದರೆ, ಕೇಂದ್ರ ಸರಕಾರ ಜಾರಿಗೆ ತಂದ ಸಿಎಎ (ಪೌರತ್ವ ತಿದ್ದುಪಡಿ ಕಾನೂನು) ಈ ಮೂಲ ಆಶಯದ ಮೇಲೆಯೇ ಸವಾರಿ ಮಾಡಿತು. 2014 ಡಿಸೆಂಬರ್ 31ರೊಳಗೆ ಅಸ್ಸಾಮ್ ಸಹಿತ ದೇಶಕ್ಕೆ ವಲಸೆ ಬಂದವರಲ್ಲಿ ಮುಸ್ಲಿಮರನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಪೌರತ್ವ ಕೊಡುವ ಸಿಎಎ ಕಾಯ್ದೆಯನ್ನು ಜಾರಿಗೆ ತಂದಿತು. ಇದು ಅಸ್ಸಾಮಿಗರ ಬೇಡಿಕೆಯಲ್ಲ. 1971 ಮಾರ್ಚ್ 24ರ ಬಳಿಕ ಅಸ್ಸಾಮ್ ಪ್ರವೇಶಿಸಿದ ಎಲ್ಲರನ್ನೂ ಹೊರಹಾಕುವುದು ಅವರ ಗುರಿ. ಅಲ್ಲದೇ, ಪೌರತ್ವ ನೀಡುವ ಅಂತಿಮ ದಿನಾಂಕವನ್ನು 1971 ಮಾರ್ಚ್ 24ರ ಬದಲು 2014 ಡಿಸೆಂಬರ್ 31ರ ವರೆಗೆ ಕೇಂದ್ರ ಸರಕಾರ ವಿಸ್ತರಿಸಿದ್ದೂ ಅಸ್ಸಾಮಿಗರನ್ನು ಕೆರಳಿಸಿತು. ಕೃಷಕ್ ಮುಕ್ತಿ ಸಂಗ್ರಾಮ್ ಸಮಿತಿ, ಆಲ್ ಅಸ್ಸಾಮ್ ಸ್ಟೂಡೆಂಟ್ ಯೂನಿಯನ್ ಮತ್ತು ಅಸೊಮ್ ಜಾತಿಯ ತಾಬಡಿ ಯುವ ಛಾತ್ರಾ ಪರಿಷದ್ ಸೇರಿದಂತೆ ಸುಮಾರು 30ರಷ್ಟು ಪ್ರಮುಖ ಸಂಘಟನೆಗಳು ಬೀದಿಗಿಳಿದುವು. ಇದರಲ್ಲಿ ಚಹಾ ಕಾರ್ಮಿಕ ಬುಡಕಟ್ಟು ಸಂಘಟನೆಗಳು, ಸರ್ಕಾರಿ ಉದ್ಯೋಗಿ ಸಂಘಟನೆಗಳು ಮತ್ತು ಅಲ್ಪಸಂಖ್ಯಾತ ಸಂಘಟನೆಗಳೂ ಭಾಗಿಯಾದುವು. ಇದೇವೇಳೆ, ಸಿಎಎಯನ್ನು ಸಮರ್ಥಿಸುವುದಕ್ಕೆ ಸಂಘಪರಿವಾರ ಪ್ರಾರಂಭಿಸಿದ ತಕ್ಷಣವೇ ಪ್ರತಿಭಟನಾಕಾರರು ಅವರ ವಿರುದ್ಧ ತಿರುಗಿ ಬಿದ್ದರು. ಆರೆಸ್ಸೆಸ್ ಕಚೇರಿಯನ್ನೇ ಧ್ವಂಸಗೊಳಿಸಿದರು. ಎಲ್ಲಿಯ ವರೆಗೆಂದರೆ, ಅದರ ಕಾರ್ಯಕರ್ತರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದರಿಂದ ತಪ್ಪಿಸಿಕೊಂಡರು. ಸಿಎಎ ಪರ ಒಂದು ರಾಲಿ ನಡೆಸಿದ ಬಿಜೆಪಿಯ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿಯಲ್ಲಿ ಆ ಬಳಿಕ ಆಂತರಿಕ ಸಂಘರ್ಷ ಸ್ಫೋಟಿಸಿತು. ಅನೇಕ ನಾಯಕರು ಎಬಿವಿಪಿಯನ್ನು ತ್ಯಜಿಸಿದರು. ನಿಜವಾಗಿ,
ದೇಶದಾದ್ಯಂತ ಸುನಾಮಿಯ ರೂಪದಲ್ಲಿ ಎದ್ದಿರುವ ಪ್ರತಿಭಟನೆಗೆ ಕೇಂದ್ರ ಸರಕಾರ ಭಯಪಟ್ಟಿದೆ. ಆದ್ದರಿಂದಲೇ, ಎನ್‍ಆರ್ ಸಿಯ ಬಗ್ಗೆ ಎಲ್ಲೂ ಚರ್ಚಿಸಿಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಪ್ರತಿಭಟನಾಕಾರರಿಗೆ ದಕ್ಕಿದ ಮೊದಲ ಅಭೂತಪೂರ್ವ ಜಯ ಇದು. ನೋಟು ನಿಷೇಧ ಮತ್ತು ಜಿಎಸ್‍ಟಿ ತಂದ ಸಂಕಟವನ್ನು ನುಂಗಿಕೊಂಡು ಬದುಕಿದ ಭಾರತೀಯರ ಸಹನೆಯನ್ನು ಕೇಂದ್ರ ಸರಕಾರ ಅತ್ಯಂತ ತಪ್ಪಾಗಿ ಅರ್ಥೈಸಿತ್ತು. ನಾಗರಿಕರ ಸಹನೆಯನ್ನು ತನಗೆ ತಪ್ಪು ನಡೆಗೆ ಸಿಕ್ಕ ಸಮ್ಮತಿ ಎಂದು ಅಂದುಕೊಂಡಿತ್ತು. ಆ ಧೈರ್ಯವೇ ದೇಶದಲ್ಲಿ ಎನ್‍ಆರ್‍ಸಿ ಮತ್ತು ಸಿಎಎಯ ಜಾರಿಗೆ ಕಾರಣವೂ ಆಗಿತ್ತು. ಆದರೆ ಇಂದು ಭಾರತದ ಚಿತ್ರಣವೇ ಬದಲಾಗಿದೆ. ನೋಟು ನಿಷೇಧ ಮತ್ತು ಜಿಎಸ್‍ಟಿಯನ್ನು ನಡೆಸಿದ ನಾಗರಿಕರು ಇನ್ನು ಸಹಿಸಲ್ಲ ಎಂದು ಬೀದಿಗಿಳಿದಿದ್ದಾರೆ. ಈ ಜನಾಕ್ರೋಶಕ್ಕೆ ಹೆದರಿ ಕೇಂದ್ರ ಸರಕಾರ ಅಡ್ಡಡ್ಡ ಮಾತಾಡುತ್ತಿದೆ. ಒಂದುವೇಳೆ, ಜನರ ಧ್ವನಿ ಹೀಗೆಯೇ ಮುಂದುವರಿದರೆ ಕೇಂದ್ರವು ತನ್ನ ವಿಭಜನವಾದಿ ನೀತಿಯನ್ನು ಸಂಪೂರ್ಣವಾಗಿ ಕೈ ಬಿಡಬೇಕಾದ ಒತ್ತಡಕ್ಕೆ ಸಿಲುಕಬಹುದು. ಎನ್‍ಆರ್ ಸಿ, ಸಿಎಎಗಳನ್ನು ರದ್ದುಗೊಳಿಸಬಹುದಲ್ಲದೇ, ಎನ್‍ಪಿಆರ್ ನಿಂದ ವಿವಾದಿತ ಅಂಶಗಳನ್ನು ಕೈಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ಹರಿಸಬಹುದು. ಸದ್ಯದ ಅಗತ್ಯ ಇದು. ಪ್ರತಿಭಟನೆಗಳು ಚಿರಾಯುವಾಗಲಿ.

Friday 3 January 2020

ತಿದ್ದುಪಡಿಗೊಳಗಾಗಬೇಕಾದ ಕಾನೂನು ಯಾವುದು?



ಪೌರತ್ವ ತಿದ್ದುಪಡಿ ಕಾನೂನಿನ ಬಗ್ಗೆ ಬಿಜೆಪಿ ನೀಡುತ್ತಿರುವ ಸಮರ್ಥನೆ ಎಷ್ಟು ನಯವಂಚಕತನದ್ದು ಮತ್ತು ಮೋಸದ್ದು ಅನ್ನುವುದಕ್ಕೆ ಕಾಶ್ಮೀರವೊಂದೇ ಧಾರಾಳ ಸಾಕು. ಕಾಶ್ಮೀರದ ಸಾಂಸ್ಕೃತಿಕ ಮತ್ತು ಭಾಷಿಕ ಅನನ್ಯತೆಗೆ ರಕ್ಷಾಕವಚದಂತಿದ್ದ 370ನೇ ವಿಧಿಯನ್ನು ಕಳೆದ ಆಗಸ್ಟ್ ನಲ್ಲಿ ರದ್ದುಪಡಿಸುವಾಗ ಅದಕ್ಕೆ ಕೇಂದ್ರ ಸರಕಾರ ಕೊಟ್ಟ ಕಾರಣ ಹೀಗಿತ್ತು:
ಒಂದು ದೇಶ ಮತ್ತು ಸಮಾನ ಕಾನೂನು.
ಕಾಶ್ಮೀರಕ್ಕೆ ಸಾಂವಿಧಾನಿಕವಾಗಿ ನೀಡಲಾಗಿರುವ 370ನೇ ವಿಧಿ ಮತ್ತು ಆ ಮೂಲಕ ಕಾಶ್ಮೀರಿಗಳಿಗೆ ಲಭ್ಯವಾಗಿದ್ದ ಸಾಂಸ್ಕೃತಿಕ ಭದ್ರತೆಯನ್ನು ಗೃಹಸಚಿವ ಅಮಿತ್ ಶಾ ಅವರು ಸಂವಿಧಾನಕ್ಕೆ ಅಪಚಾರವೆಂಬಂತೆ ಚಿತ್ರಿಸಿದ್ದರು. 370ನೇ ವಿಧಿಯನ್ನು ರದ್ದುಪಡಿಸುವ ಮೂಲಕ ಕಾಶ್ಮೀರವು ಭಾರತಕ್ಕೆ ಸೇರ್ಪಡೆಗೊಂಡಿತು ಎಂದು ಅವರು ಸಮರ್ಥಿಸಿಕೊಂಡಿದ್ದರು. ಮಾತ್ರವಲ್ಲ, ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ಬೇರ್ಪಡಿಸಿದ್ದರು. ಆದರೆ ಈಗ ಅದೇ ಅಮಿತ್ ಶಾರ ಮುತುವರ್ಜಿಯಲ್ಲಿ ಕಾನೂನಾಗಿ ಪರಿವರ್ತನೆಯಾದ ಪೌರತ್ವ ತಿದ್ದುಪಡಿ ಮಸೂದೆಯು ಈ ಏಕದೇಶ ಮತ್ತು ಸಮಾನ ಕಾನೂನು ಎಂಬುದಕ್ಕೆ ಗೌರವವನ್ನೇ ಕೊಟ್ಟಿಲ್ಲ. ಈಶಾನ್ಯ ರಾಜ್ಯಗಳಾದ ಮೇಘಾಲಯ, ತ್ರಿಪುರ, ಅರುಣಾಚಲ, ನಾಗಾಲ್ಯಾಂಡ್ ಮತ್ತು ಅಸ್ಸಾಂಗಳಿಗೆ ಈ ಕಾನೂನಿನಲ್ಲಿ ವಿಶೇಷ ರಿಯಾಯಿತಿ ಇದೆ. ಅವರ ಸಾಂಸ್ಕೃತಿಕ ಅನನ್ಯತೆಗೆ ಭಂಗ ಬರದಂತೆ ನೋಡಿಕೊಳ್ಳುವುದಕ್ಕೆ ಅಲ್ಲಿನ ಬುಡಕಟ್ಟು ಪ್ರದೇಶಗಳನ್ನು ಈ ಕಾನೂನಿನ ವ್ಯಾಪ್ತಿಯಿಂದ ಹೊರಗಿಡಲಾಗಿದೆ. 371ನೇ ವಿಧಿಯ ಪ್ರಕಾರ ಈಶಾನ್ಯ ಭಾಗದ ರಾಜ್ಯಗಳು ಅನುಭವಿಸುತ್ತಿರುವ ವಿಶೇಷ ಸ್ವಾಯತ್ತ ಹಕ್ಕನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಬುಡಕಟ್ಟು ಸಂಸ್ಕೃತಿ ಮತ್ತು ಭಾಷಿಕ ವೈವಿಧ್ಯತೆಗೆ ಭಂಗ ಉಂಟಾಗದಂತೆ ನೋಡಿಕೊಳ್ಳುವುದಾಗಿ ಅಮಿತ್ ಶಾ ಪದೇ ಪದೇ ಭರವಸೆಯನ್ನೂ ನೀಡುತ್ತಿದ್ದಾರೆ. ಅಂದರೆ, 370ನೇ ವಿಧಿಯ ಪ್ರಕಾರ ಕಾಶ್ಮೀರಿಗಳಿಗೆ ಲಭ್ಯವಾಗಿದ್ದ ಸ್ವಾಯತ್ತತೆ ತಪ್ಪು, ಆದರೆ ಈಶಾನ್ಯ ರಾಜ್ಯಗಳು 371ನೇ ವಿಧಿ ಪ್ರಕಾರ ಪಡೆಯುತ್ತಿರುವ ಸ್ವಾಯತ್ತತೆ ಸರಿ. ಕಾಶ್ಮೀರಿಗಳಿಗೆ ಪ್ರತ್ಯೇಕ ಸ್ಥಾನಮಾನ ಮತ್ತು ಕಾನೂನುಗಳು ತಪ್ಪು, ಆದರೆ ಪೌರತ್ವ ತಿದ್ದುಪಡಿ ಕಾನೂನಿನಿಂದಲೂ ಈಶಾನ್ಯ ಭಾಗದ ರಾಜ್ಯಗಳ ಕೆಲವು ಪ್ರದೇಶಗಳಿಗೆ ವಿನಾಯಿತಿ ನೀಡುವುದು ಸರಿ. ಕಾನೂನು ಕಾಶ್ಮೀರಿಗಳಿಗೂ ಕೇರಳಿಗರಿಗೂ ಸಮಾನ ಎಂದಾದರೆ ಮತ್ತು ಇದುವೇ ಏಕ ಭಾರತದ ಸರಿಯಾದ ಪರಿಕಲ್ಪನೆ ಎಂದಾದರೆ ಈಶಾನ್ಯ ಭಾಗದ ರಾಜ್ಯಗಳಲ್ಲೇಕೆ ಇನ್ನೂ 371ನೇ ವಿಧಿಯನ್ನು ಉಳಿಸಿಕೊಳ್ಳಲಾಗಿದೆ? ಅಲ್ಲಿನ ಬುಡಕಟ್ಟುಗಳ ಸಾಂಸ್ಕೃತಿಕ ಅನನ್ಯತೆಯನ್ನು ಕೇಂದ್ರ ಸರಕಾರ ಮಾನ್ಯ ಮಾಡುತ್ತದೆಂದಾದರೆ, ಕಾಶ್ಮೀರಿಗಳೇಕೆ ಅಮಾನ್ಯರಾಗುತ್ತಾರೆ? ಭಿನ್ನ ಸಂಸ್ಕೃತಿಯ ಹೊರತಾಗಿಯೂ ಪೌರತ್ವ ತಿದ್ದುಪಡಿ ಕಾನೂನು ಕಾಶ್ಮೀರಿಗಳಿಗೆ ಅನ್ವಯಿಸುತ್ತದೆಂದರೆ, ಈಶಾನ್ಯ ರಾಜ್ಯಗಳಿಗೇಕೆ ಅದು ಏಕಪ್ರಕಾರವಾಗಿ ಅನ್ವಯಿಸುವುದಿಲ್ಲ? ಅವರಲ್ಲಿ ಕೆಲವು ಪ್ರದೇಶಗಳನ್ನು ಗುರುತಿಸಿ ಪೌರತ್ವ ತಿದ್ದುಪಡಿ ಕಾನೂನಿನಿಂದ ವಿನಾಯಿತಿ ತೋರುವುದು ಯಾಕಾಗಿ? ಒಂದೇ ದೇಶ ಮತ್ತು ಸಮಾನ ಕಾನೂನು ಅನ್ನುವುದು ಮುಸ್ಲಿಮರನ್ನು ಕಂಡಾಗ ಮಾತ್ರ ಕೆರಳುವುದು ಮತ್ತು ಉಳಿದವರ ಬಗ್ಗೆ ಶಾಂತವಾಗುವುದು ಏನನ್ನು ಸೂಚಿಸುತ್ತದೆ?
ಕಳೆದವಾರ 300ರಷ್ಟು ದಲಿತರು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪಟ್ಟಿಕೊಂಡ ಎಂಬಲ್ಲಿಂದ ನಾಲ್ಕು ಕಿಲೋಮೀಟರ್ ನಷ್ಟು ದೂರ ಮೆರವಣಿಗೆಯಲ್ಲಿ ಸಾಗಿ ಹೂಸೂರು ಎಂಬಲ್ಲಿಯ ವೀರಭದ್ರ ಸ್ವಾಮಿ ದೇಗುಲವನ್ನು ಪ್ರವೇಶಿಸಿದರು. ಈ ಮೆರವಣಿಗೆ ಮತ್ತು ದೇಗುಲ ಪ್ರವೇಶವು ಮಾಧ್ಯಮ ಸುದ್ದಿಗೂ ಒಳಗಾಯಿತು. ಸಹಜ ಸ್ಥಿತಿಯಲ್ಲಿ ಯಾರೂ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಹೋಗುವುದಿಲ್ಲ. ಆದರೆ ಗ್ರಾಮದ ದಲಿತರಿಗೆ ಕಳೆದ 200 ವರ್ಷಗಳಿಂದ ಈ ದೇಗುಲ ಪ್ರವೇಶದಿಂದ ತಡೆಯಲಾಗಿತ್ತು. ಕಳೆದ ಸೆಪ್ಟೆಂಬರ್ ನಲ್ಲಿ ಗ್ರಾಮದ ದಲಿತರು ಇದನ್ನು ಪ್ರತಿಭಟಿಸಿದರು. ದೇಗುಲದ ಹಬ್ಬದ ಸಮಿತಿಯಲ್ಲಿ ತಮ್ಮನ್ನೂ ಸೇರಿಸಬೇಕೆಂದು ಪಟ್ಟು ಹಿಡಿದರು. ಈ ಕಾರಣಕ್ಕಾಗಿ ಮೇಲ್ಜಾತಿಗಳು ಮತ್ತು ದಲಿತರ ಮಧ್ಯೆ ಘರ್ಷಣೆ, ಹೊೈಕೈಗಳೂ ನಡೆದುವು. ಅದು ಮಾಧ್ಯಮಗಳ ಗಮನ ಸೆಳೆಯಿತಲ್ಲದೆ, ದಲಿತರ ಮೇಲೆ ಆ ಗ್ರಾಮದಲ್ಲಿ ನಡೆಯುತ್ತಿರುವ ದೌರ್ಜನ್ಯ, ಮಾನವ ಹಕ್ಕು ನಿರಾಕರಣೆಯ ಕುರಿತಾದ ಸಂಗತಿಗಳ ಬಹಿರಂಗಕ್ಕೂ ಬಂತು. ಆ ಬಳಿಕ ಜಿಲಾಧಿಕಾರಿಗಳು ಸಭೆ ಸೇರಿಸಿದರು. ದಲಿತರ ದೇಗುಲ ಪ್ರವೇಶಕ್ಕೆ ಮೇಲ್ಜಾತಿಗಳನ್ನು ಒಪ್ಪಿಸುವುದಕ್ಕಾಗಿ ನಾಲ್ಕು ಸಭೆಗಳು ಬೇಕಾದುವು. ಕೊನೆಗೆ ಕಳೆದವಾರ ದಲಿತರು ತಮಗೆ ಸಿಕ್ಕ ಪ್ರವೇಶಾಧಿಕಾರವನ್ನು ಹಬ್ಬದಂತೆ ಆಚರಿಸಿದರು. ನಿಜವಾಗಿ,
ಪೌರತ್ವವನ್ನು ಸಾಬೀತುಪಡಿಸುವಂತೆ ಮುಸ್ಲಿಮರನ್ನು ಒತ್ತಾಯಿಸುವುದಕ್ಕಿಂತ ಮೊದಲು ಈ ದೇಶದ ಮೂಲ ನಿವಾಸಿಗಳಾದ ದಲಿತರಿಗೆ ಘನತೆಯ ಮತ್ತು ಸ್ವಾಭಿಮಾನದ ಬದುಕನ್ನು ಖಾತರಿಪಡಿಸುವುದು ಕೇಂದ್ರ ಸರಕಾರದ ಆದ್ಯತೆಯ ವಿಷಯವಾಗಬೇಕಿತ್ತು. ಈ ದೇಶದಲ್ಲಿ ಅಕ್ರಮ ವಾಸಿಗಳು ಇದ್ದಾರೋ ಅನ್ನುವುದಕ್ಕಿಂತ ಸಕ್ರಮ ವಾಸಿಗಳು ಕ್ಷೇಮವಾಗಿದ್ದಾರೋ ಅನ್ನುವುದು ಮುಖ್ಯ. ದಲಿತರು ಶತಮಾನಗಳಿಂದ ಈ ದೇಶದ ನಾಗರಿಕರು. ಅವರಿಲ್ಲದ ಭಾರತವನ್ನು ಕಲ್ಪಿಸುವುದಕ್ಕೂ ಸಾಧ್ಯವಿಲ್ಲ. ಹೆಚ್ಚಿನ ಮುಸ್ಲಿಮರ ಮೂಲ ಬೇರನ್ನು ಹುಡುಕುತ್ತಾ ಹೊರಟರೆ ಅದು ಕೊನೆಗೊಳ್ಳುವುದು ದಲಿತ ಕೇರಿಗಳಲ್ಲಿ. ಆದರೂ ಅವರನ್ನು ನಾಗರಿಕವಾಗಿ ನಡೆಸಿಕೊಳ್ಳುವುದಕ್ಕೆ ನಮ್ಮ ಪ್ರಭುತ್ವಕ್ಕೆ ಸಾಧ್ಯವಾಗುತ್ತಿಲ್ಲ. ದಲಿತ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರುವುದಕ್ಕೆ ಸರ್ವೋಚ್ಚ ನ್ಯಾಯಾಲಯ ಮುಂದಾದಾಗ ಮರುಪರಿಶೀಲನಾ ಅರ್ಜಿ ಹಾಕುವುದಕ್ಕೆ ಮೀನ-ಮೇಷ ಎಣಿಸಿದ ಸರಕಾರ ಇದು. ದಲಿತರಿಗೆ ಗೌರವಾರ್ಹ ಮತ್ತು ಮಾನ್ಯ ಬದುಕನ್ನು ಒದಗಿಸಲು ಕಾನೂನು ರೂಪಿಸುವುದನ್ನೋ ಅಥವಾ ಇರುವ ಕಾನೂನಿಗೆ ತಿದ್ದುಪಡಿಯನ್ನು ತರುವುದನ್ನೋ ಮಾಡದ ಕೇಂದ್ರ ಸರಕಾರವು ಮುಸ್ಲಿಮರನ್ನು ನಾಗರಿಕ ರಹಿತರನ್ನಾಗಿ ಮಾಡುವುದು ಹೇಗೆ ಎಂದು ಚಿಂತಿಸುತ್ತದೆಂದರೆ ಅದರ ಅರ್ಥವೇನು? ಈ ದೇಶದ ಮೂಲ ನಿವಾಸಿಗಳಾದ ಹೂಸೂರಿನ ದಲಿತರು ದೇಗುಲ ಪ್ರವೇಶಿಸುವುದಕ್ಕೆ 200 ವರ್ಷಗಳಷ್ಟು ದೀರ್ಘ ಅವಧಿಯ ವರೆಗೆ ಕಾಯಬೇಕಾದ ಮತ್ತು ಸಭೆಗಳ ಮೇಲೆ ಸಭೆ ನಡೆಸಿ ಕೊನೆಗೂ ಪ್ರವೇಶಾನುಮತಿ ಗಿಟ್ಟಿಸಿಕೊಳ್ಳಬೇಕಾದ ಸನ್ನಿವೇಶ ಸೃಷ್ಟಿಯಾಗಿರುವಾಗ, ತಿದ್ದುಪಡಿಗೊಳ್ಳಬೇಕಾದ ಕಾನೂನಾದರೂ ಯಾವುದು? ಪೌರತ್ವ ಕಾನೂನೋ ಅಥವಾ ದಲಿತ ಕಾನೂನೋ? ದಲಿತರ ಕ್ಷೇಮಕ್ಕಾಗಿ ಮತ್ತು ಅವರ ಮೇಲಿನ ದೌರ್ಜನ್ಯವನ್ನು ತಡೆಯುವುದಕ್ಕಾಗಿ ಕಾನೂನನ್ನು ಬಿಗಿಗೊಳಿಸುವುದನ್ನು ಬಿಟ್ಟು ಪೌರತ್ವ ಕಾನೂನಿಗೆ ತಿದ್ದುಪಡಿ ತರುವುದೆಂದರೆ ಏನು? ಕೇಂದ್ರ ಸರಕಾರ ದಲಿತರನ್ನು ಮತ್ತು ಮುಸ್ಲಿಮರನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡುತ್ತಿರುವುದಕ್ಕೆ ಇದು ಪುರಾವೆಯಾಗದೇ? ದಲಿತರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಸಾಮಾಜಿಕ ಮನಸ್ಥಿತಿಯನ್ನು ಹಾಗೆಯೇ ಇರಗೊಟ್ಟು ಅಥವಾ ಕಾನೂನನ್ನು ಬಲಗೊಳಿಸದೆಯೇ ಮುಸ್ಲಿಮರನ್ನು ಕಾನೂನಿನ ಮೂಲಕ ದಲಿತರದೇ ಸ್ಥಿತಿಗೆ ದೂಡುವ ಸಂಚು ಇದಲ್ಲವೇ? ಮುಸ್ಲಿಮರನ್ನು ಅಕ್ರಮ ವಲಸಿಗರಂತೆ ಬಿಂಬಿಸುವ ಮೂಲಕ ದಲಿತರಂತೆ ಮಾನಸಿಕ ಮತ್ತು ದೈಹಿಕ ದೌರ್ಜನ್ಯಕ್ಕೆ ಒಳಗಾಗುವಂತೆ ಮಾಡುವುದಕ್ಕೆ ಈ ಪೌರತ್ವ ತಿದ್ದುಪಡಿ ಕಾನೂನಿನ ಮರೆಯಲ್ಲಿ ಪ್ರಯತ್ನ ಮಾಡಲಾಗಿದೆಯೇ?
ಪೌರತ್ವ ತಿದ್ದುಪಡಿ ಕಾನೂನು ಮತ್ತು ಹೂಸೂರಿನ ದಲಿತರ ದೇಗುಲ ಪ್ರವೇಶ- ಇವೆರಡೂ ಸಮಾನ ರೇಖೆಗಳಲ್ಲ. ಇವು ಎಲ್ಲೋ ಒಂದು ಕಡೆ ಸಂದಿಸುತ್ತದೆ. ಮುಸ್ಲಿಮರಲ್ಲಿ ಭಯ ಹುಟ್ಟು ಹಾಕುವ ಮತ್ತು ಅವರಲ್ಲಿ ದ್ವಿತೀಯ ದರ್ಜೆಯ ನಾಗರಿಕ ಪ್ರಜ್ಞೆಯನ್ನು ಮೂಡಿಸುವ ಪ್ರಯತ್ನ ಒಂದು ಕಡೆ ಪ್ರಾರಂಭವಾಗಿದ್ದರೆ ಇನ್ನೊಂದು ಕಡೆ, ದ್ವಿತೀಯ ದರ್ಜೆಯ ನಾಗರಿಕರಂತೆ ಬದುಕುತ್ತಿರುವ ದಲಿತರನ್ನು ಹಾಗೆಯೇ ಉಳಿಸಿಕೊಳ್ಳುವುದು ಅಥವಾ ಅವರ ಕ್ಷೇಮಕ್ಕಾಗಿ ಆದ್ಯತೆಯನ್ನು ಕೊಡದಿರುವುದು- ಇವೆರಡನ್ನೂ ಮಾಡಲಾಗುತ್ತಿದೆ. ಎಚ್ಚೆತ್ತುಕೊಳ್ಳುವ ಸರದಿ ಎಲ್ಲರದು.

Thursday 2 January 2020

ಅವರೆಲ್ಲರ ಬೆನ್ನಿಗೆ ಗುಂಡು ಹಾರಿಸಲಾಗಿತ್ತು... ಒಂದು ಎನ್‍ಕೌಂಟರ್ ಕತೆ



ಏಳೂವರೆ ವರ್ಷಗಳ ಹಿಂದೆ ಛತ್ತೀಸ್‍ಗಢದಲ್ಲಿ 17 ಮಂದಿ ಗ್ರಾಮಸ್ಥರ ಹತ್ಯೆ ನಡೆದಿತ್ತು. ಸತ್ತವರೆಲ್ಲ ನಕ್ಸಲೀಯರೆಂದು ಪೊಲೀಸರು ಹೇಳಿದ್ದರು. ನಕ್ಸಲೀಯರು ರಾತ್ರಿ ಸಭೆ ನಡೆಸುತ್ತಿದ್ದಾಗ ದಿಢೀರ್ ಆಗಿ ದಾಳಿ ಮಾಡಿದ ಡಿಐಜಿ ನೇತೃತ್ವದ ಎರಡು ತಂಡಗಳು ಗುಂಡು ಹಾರಿಸಿವೆ. ಪ್ರತಿಯಾಗಿ ನಕ್ಸಲೀಯರೂ ಗುಂಡು ಹಾರಿಸಿದ್ದಾರೆ. ಈ ಮುಖಾಮುಖಿಯಲ್ಲಿ (ಎನ್‍ಕೌಂಟರ್) ರಕ್ಷಣಾ ಪಡೆಯ ಆರು ಮಂದಿಗೂ ಗಾಯಗಳಾಗಿವೆ. ಇರುಳು ಸರಿದು ಹಗಲು ಮೂಡಿದ ಬಳಿಕ ಈ ಎಲ್ಲ 17 ಮಂದಿ ನಕ್ಸಲೀಯರ ಶವಗಳು ದೊರಕಿವೆ ಎಂದು ಈ ಕಾರ್ಯಾಚರಣೆ ನಡೆಸಿದ ಸಿ ಆರ್ ಪಿ ಎಫ್ ಮತ್ತು ಪೊಲೀಸ್ ತಂಡಗಳ ಜಂಟಿ ಹೇಳಿಕೆಗಳು ತಿಳಿಸಿದ್ದುವು. ಛತ್ತೀಸ್‍ಗಢದ ಬಿಜಾಪುರ್ ಮತ್ತು ಸುಕ್ಮಾ ಜಿಲ್ಲೆಯ ಸರ್ಕೇಗುಡ ಗ್ರಾಮದಲ್ಲಿ 2012, ಜೂನ್ 28-29ರ ರಾತ್ರಿ ಈ ಕಾರ್ಯಾಚರಣೆ ನಡೆದಿತ್ತು. ಛತ್ತೀಸ್‍ಗಢದಲ್ಲಿ ಆಗ ಅಧಿಕಾರದಲ್ಲಿದ್ದುದು ಬಿಜೆಪಿ. ವಿಪಕ್ಷದಲ್ಲಿದ್ದ ಕಾಂಗ್ರೆಸ್ ಪಕ್ಷವು ಈ ಹತ್ಯೆಯ ಕುರಿತಂತೆ ಅನುಮಾನಗಳನ್ನು ವ್ಯಕ್ತಪಡಿಸಿತ್ತು. ಆ ಎನ್‍ಕೌಂಟರ್ ನ ಬಗ್ಗೆ ತನಿಖೆಯಾಗಬೇಕೆಂದು ಒತ್ತಾಯಿಸಿತ್ತು. ಕೊನೆಗೆ ಮಧ್ಯಪ್ರದೇಶದ ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶರಾದ ವಿ.ಕೆ. ಅಗರ್ವಾಲ್ ಅವರ ನೇತೃತ್ವದಲ್ಲಿ ಸರಕಾರವು ತನಿಖಾ ತಂಡವನ್ನು ನೇಮಿಸಿತು. ಇದೀಗ ಆ ತನಿಖಾ ವರದಿ ಬಹಿರಂಗವಾಗಿದೆ. ಆದರೆ, ಹೈದರಾಬಾದ್‍ನ ಪಶುವೈದ್ಯೆಯನ್ನು ಹತ್ಯೆಗೈದ ಆರೋಪಿಗಳನ್ನು ಎನ್‍ಕೌಂಟರ್ ನಲ್ಲಿ ಸಾಯಿಸಲಾದ ಎರಡ್ಮೂರು ದಿನಗಳ ಮೊದಲು ಬಹಿರಂಗವಾದ ಈ ವರದಿಯು ಎನ್‍ಕೌಂಟರ್ ಹತ್ಯೆಯನ್ನು ಸಂಭ್ರಮಿಸುವ ಸರ್ವರನ್ನೂ ಸ್ವವಿಮರ್ಶೆಗೆ ಒಡ್ಡುವಂತಿದೆ. ನಿಜವಾಗಿ,
ಆ 17 ಮಂದಿಯನ್ನು ಎನ್‍ಕೌಂಟರ್ ಮೂಲಕ ಹತ್ಯೆಗೈಯಲಾಗಿದೆ ಎಂಬ ಪೊಲೀಸ್ ವರದಿಯನ್ನು ಪೋಸ್ಟ್ ಮಾರ್ಟಮ್ ವರದಿ ಒಪ್ಪುವುದೇ ಇಲ್ಲ. ಈ 17 ಮಂದಿಯ ಪೈಕಿ 10 ಮಂದಿಯನ್ನೂ ಹತ್ತಿರದಿಂದ ಗುಂಡಿಕ್ಕಿ ಕೊಲ್ಲಲಾಗಿದೆ ಮತ್ತು ಅವರು ಓಡುತ್ತಿರುವ ಸ್ಥಿತಿಯಲ್ಲಿ ಗುಂಡಿಕ್ಕಲಾಗಿದೆ ಎಂಬುದು ಪೋಸ್ಟ್ ಮಾರ್ಟಮ್ ವರದಿಯಿಂದ ಸ್ಪಷ್ಟವಾಗುವುದಾಗಿ ತನಿಖಾ ತಂಡವು ವಿವರಿಸಿದೆ. ಅವರೆಲ್ಲರ ಬೆನ್ನಿನಲ್ಲಿ ಗುಂಡಿನ ಗಾಯವಿತ್ತೇ ಹೊರತು ಮುಂಭಾಗದಲ್ಲಿ ಅಲ್ಲ. ಸರ್ಕೆಗುಡದಲ್ಲಿ ಗುಂಡಿನ ಚಕಮಕಿ ನಡೆದಿರಲಿಲ್ಲ ಮತ್ತು ಏಕಮುಖವಾಗಿ ಗುಂಡು ಹಾರಿಸಿ ಆ ಗ್ರಾಮಸ್ಥರನ್ನು ಕೊಲ್ಲಲಾಗಿದೆ ಎಂಬ ಅಭಿಪ್ರಾಯಕ್ಕೆ ತನಿಖಾ ತಂಡವು ಬಂದಿದೆ. ಪ್ರತಿದಾಳಿ ನಡೆಸುವ ಸಾಮಥ್ರ್ಯ ಇಲ್ಲದ ಗ್ರಾಮಸ್ಥರನ್ನು ಗುಂಡು ಹೊಡೆದು ಕೊಲ್ಲಲಾಗಿದೆ ಎಂದು ಮಾತ್ರವಲ್ಲ, ಮೃತದೇಹದಲ್ಲಿ ಬಂದೂಕಿನಿಂದ ತಿವಿದ ಗಾಯಗಳೂ ಇರುವುದರಿಂದ ಕೊಲ್ಲುವ ಮೊದಲು ದೈಹಿಕ ಹಿಂಸೆಯನ್ನೂ ನೀಡಲಾಗಿದೆ ಎಂಬ ಅಭಿಪ್ರಾಯವನ್ನು ತನಿಖಾ ತಂಡವು ವ್ಯಕ್ತಪಡಿಸಿದೆ. ಸತ್ತವರಲ್ಲಿ ತೀರಾ ಹತ್ತಿರದಿಂದ ಹಣೆಗೆ ಗುಂಡೇಟು ಬಿದ್ದು ಸತ್ತವರೂ ಇದ್ದಾರೆ. ಅಲ್ಲದೇ ಸತ್ತವರಲ್ಲಿ 6 ಮಂದಿ ಅಪ್ರಾಪ್ತರು. ಗುಂಡಿನ ಚಕಮಕಿ ನಡೆಯದ ಮತ್ತು ಸ್ವರಕ್ಷಣೆಗಾಗಿ ಗುಂಡು ಹಾರಿಸಿದ್ದೇವೆ ಎಂಬ ಪೊಲೀಸ್ ಹೇಳಿಕೆಯನ್ನು ಒಪ್ಪುವುದಕ್ಕೆ ಸಾಕ್ಷ್ಯಗಳು ಲಭ್ಯವಾಗದ ಹತ್ಯೆ ಇದು ಎಂಬ ನಿಲುವು ತನಿಖಾ ತಂಡದ್ದು. ಪೊಲೀಸರಿಗಾದ ಗಾಯಕ್ಕೆ ಫ್ರೆಂಡ್ಲೀ ಫೈರ್ (ತಮ್ಮವರ ಗುಂಡಿನಿಂದಲೇ ಆದ ಗಾಯ) ಕಾರಣವೇ ಹೊರತು ಎದುರಿನವರ ದಾಳಿಯಲ್ಲ ಎಂಬ ಅಭಿಪ್ರಾಯಕ್ಕೂ ತನಿಖಾ ತಂಡ ಬಂದಿದೆ. ವಿಶೇಷ ಏನೆಂದರೆ, 2012ರಲ್ಲಿ ಈ ಹತ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಧ್ವನಿಯೆತ್ತಿದ ಕಾಂಗ್ರೆಸ್ ಪಕ್ಷವು 2018ರಲ್ಲಿ ಅಧಿಕಾರಕ್ಕೆ ಬಂದ ನಂತರ ಮಾಡಿದ್ದೇನೆಂದರೆ, ಪೊಲೀಸಧಿಕಾರಿ ಕಲ್ಲೂರಿ ಅವರಿಗೆ ಭಡ್ತಿಯನ್ನು ದಯಪಾಲಿಸಿದ್ದು. 2018ರಲ್ಲಿ ಸೋರಿಕೆಯಾಗಿರುವ ಸಿಬಿಐ ತನಿಖಾ ವರದಿಯ ಪ್ರಕಾರ, ಸರ್ಕೆಗುಡ ಕಾರ್ಯಾಚರಣೆ ಮತ್ತು ತಡಮೇಟ್ಲ ಕಾರ್ಯಾಚರಣೆ- ಈ ಎರಡರಲ್ಲೂ ಇವರು ತಪ್ಪಿತಸ್ಥರು. ಅಂದಹಾಗೆ,
ಸರ್ಕೆಗುಡ ಗ್ರಾಮದಲ್ಲಿ ಆ ರಾತ್ರಿ ನಡೆದ ಗ್ರಾಮಸ್ಥರ ಸಭೆಯು ಸಂಪೂರ್ಣ ನಕ್ಸಲ್ ಮುಕ್ತವಾಗಿತ್ತು ಎಂಬುದು ತನಿಖಾ ತಂಡದ ಅಭಿಪ್ರಾಯವಲ್ಲ. ಕ್ರಿಮಿನಲ್ ಹಿನ್ನೆಲೆಯವರು ಆ ಸಭೆಯಲ್ಲಿ ಭಾಗವಹಿಸಿರುವ ಸಾಧ್ಯತೆಯನ್ನು ವರದಿ ಅಲ್ಲಗಳೆಯುವುದೂ ಇಲ್ಲ. ನಾಟಿ ಹಬ್ಬದ ಹಿನ್ನೆಲೆಯಲ್ಲಿ ಆ ಸಭೆಯನ್ನು ಆಯೋಜಿಸಲಾಗಿತ್ತು. ನಕ್ಸಲರು ಆ ಸಭೆಯಲ್ಲಿ ಭಾಗವಹಿಸುತ್ತಾರೆ ಅನ್ನುವ ಮಾಹಿತಿ ಆ ಗ್ರಾಮಸ್ಥರಲ್ಲಿ ಇದ್ದಿರಲಾರದು ಎಂದು ಹೇಳುವಂತೆಯೂ ಇಲ್ಲ. ಹಾಗಂತ, ಆ ಸಭೆಯನ್ನು ನಿರ್ಲಕ್ಷಿಸಿ ಬದುಕುವುದು ಅವರ ಪಾಲಿಗೆ ಸುರಕ್ಷಿತವೂ ಆಗಿರಲಿಲ್ಲ. ಒಂದುಕಡೆ, ನಕ್ಸಲೀಯರು ಮತ್ತು ಇನ್ನೊಂದು ಕಡೆ ಶರಣಾಗತ ನಕ್ಸಲರನ್ನೇ ಸೇರಿಸಿಕೊಂಡು ಸರಕಾರ ಕಟ್ಟಿರುವ ಸಲ್ವಾಜುಡುಂ ಎಂಬ ನಕ್ಸಲ್ ವಿರೋಧಿ ಪಡೆ- ಈ ಎರಡರ ನಡುವೆ ಏಗುವುದು ಗ್ರಾಮಸ್ಥರಿಗೆ ಸುಲಭವಾಗಿರಲಿಲ್ಲ. ನಕ್ಸಲರಲ್ಲಾಗಲಿ, ಸಲ್ವಾಜುಡುಮ್‍ನಲ್ಲಾಗಲಿ- ಎರಡರಲ್ಲೂ ಬಂದೂಕು ಇದೆ. ಬಾಯಿಗಿಂತ ಹೆಚ್ಚು ಬಂದೂಕಿನಿಂದ ಮಾತಾಡುವ ಈ ಎರಡೂ ಪಡೆಗಳನ್ನು ಎದುರು ಹಾಕಿಕೊಳ್ಳುವುದೆಂದರೆ ಸಾವಿಗೆ ಮುಖಾಮುಖಿಯಾದಂತೆ. ಹಾಗಂತ, ಈ ಇಬ್ಬರ ವಿಶ್ವಾಸವನ್ನು ಗಳಿಸಿಕೊಳ್ಳುವುದಕ್ಕೆ ಪ್ರಯತ್ನಿಸುವುದು ಕೂಡಾ ಎರಡು ದೋಣಿಗೆ ಕಾಲಿಟ್ಟಂತೆ. ಗ್ರಾಮಸ್ಥರನ್ನು ಕಾಡುವ ಈ ಸಾವು-ಬದುಕಿನ ಸಮಸ್ಯೆಯನ್ನು ಅರ್ಥ ಮಾಡಿಕೊಂಡಾಗ ಮಾತ್ರ ಗ್ರಾಮಸ್ಥರೇಕೆ ನಕ್ಸಲರಿರುವ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಲಭಿಸುತ್ತದೆ.
ಪೊಲೀಸರು ತಮ್ಮ ಸ್ವರಕ್ಷಣೆಗಾಗಿ ಹಾರಿಸಿದ ಗುಂಡು ತಾಗಿ ಉಂಟಾಗುವ ಸಾವನ್ನು ‘ಎನ್‍ಕೌಂಟರ್‍ಗೆ ಬಲಿ’ ಎಂದು ಹೇಳಲಾಗುತ್ತದೆಯೇ ವಿನಃ ನಿರಾಯುದ್ಧ ಅಥವಾ ಪ್ರತಿರೋಧ ತೋರದ ವ್ಯಕ್ತಿಯ ಮೇಲೆ ಗುಂಡು ಹಾರಿಸುವುದನ್ನಲ್ಲ. ಅದು ಅಪರಾಧ. ವ್ಯಕ್ತಿಯನ್ನು ಅಪರಾಧಿಯೋ ನಿರಪರಾಧಿಯೋ ಎಂದು ತೀರ್ಮಾನಿಸಬೇಕಾದುದು ನ್ಯಾಯಾಲಯ. ಪೊಲೀಸರು ಆ ಹೊಣೆಗಾರಿಕೆಯನ್ನು ವಹಿಸಿಕೊಂಡರೆ ಏನಾಗಬಹುದು ಅನ್ನುವುದಕ್ಕೆ ಸರ್ಕೆಗುಡದ 17 ಮಂದಿ ಗ್ರಾಮಸ್ಥರೇ ಉತ್ತಮ ಪುರಾವೆ. ಹೈದರಾಬಾದ್‍ನ ಪಶುವೈದ್ಯೆಯನ್ನು ಹತ್ಯೆಗೈದ ಆರೋಪಿಗಳನ್ನು ಪೊಲೀಸರು ಗುಂಡು ಹೊಡೆದು ಸಾಯಿಸಿದಾಗ ಪಟಾಕಿ ಸಿಡಿಸಿ ಮತ್ತು ಸಿಹಿ ಹಂಚಿ ಸಂಭ್ರಮಿಸಿದವರು ಭಾವುಕತೆಯಿಂದ ಹೊರಬಂದು ಆಲೋಚಿಸಬೇಕಾದ ಸಂದರ್ಭ ಇದು. ಆರೋಪಿಯನ್ನು ಆರೋಪಮುಕ್ತಗೊಳಿಸುವುದು ಅಥವಾ ಅಪರಾಧಿಯನ್ನಾಗಿಸುವುದು ನ್ಯಾಯಾಲಯದಿಂದ ಸಾಧ್ಯವೇ ಹೊರತು ಪೊಲೀಸರಿಂದಲ್ಲ. ಪೊಲೀಸರು ಒದಗಿಸುವ ಸಾಕ್ಷ್ಯ ಎಷ್ಟು ನ್ಯಾಯಬದ್ಧ ಎಂಬುದನ್ನು ಪರಿಶೀಲಿಸಿ ನ್ಯಾಯಾಲಯ ತೀರ್ಪು ನೀಡುತ್ತದೆ. ಕೆಲವೊಮ್ಮೆ ಬಾಹ್ಯ ಒತ್ತಡದಿಂದಾಗಿ ಪೊಲೀಸರಿಂದಲೇ ತಪ್ಪುಗಳು ಸಂಭವಿಸುವುದಿದೆ. ಅತ್ಯಾಚಾರದ ದೂರನ್ನೇ ಪೊಲೀಸರು ದಾಖಲಿಸಿಕೊಳ್ಳದ ಪ್ರಕರಣಗಳು ಆಗಾಗ ಸುದ್ದಿಯಾಗುತ್ತಿರುವುದಕ್ಕೆ ಇಂಥ ಒತ್ತಡ, ರಾಜಕೀಯ ಪ್ರಭಾವಗಳೇ ಮೂಲ ಕಾರಣ. ಪ್ರಭಾವಿಗಳ ತೋಳ್ಬಲ-ಹಣ ಬಲದಿಂದಾಗಿ ನಿಜ ಪ್ರಕರಣವೊಂದು ನ್ಯಾಯಾಲಯದಲ್ಲಿ ಬಿದ್ದು ಹೋಗುವ ಪ್ರಸಂಗಗಳೂ ಇಲ್ಲದಿಲ್ಲ. ಆದರೆ, ಇದಕ್ಕೆ ಎನ್‍ಕೌಂಟರ್ ಹತ್ಯೆ ಪರಿಹಾರ ಅಲ್ಲ. ಎನ್‍ಕೌಂಟರ್ ಗೆ  ಸಾರ್ವಜನಿಕರಿಂದ ಬೆಂಬಲ ಗಿಟ್ಟುತ್ತಾ ಹೋದರೆ ರಾಜಕಾರಣಿಗಳು, ಪ್ರಭಾವಿಗಳು ಮತ್ತು ಕ್ರಿಮಿನಲ್‍ಗಳು ಪೊಲೀಸ್ ವ್ಯವಸ್ಥೆಯನ್ನು ಬಳಸಿಕೊಂಡು ತಮಗಾಗದವರನ್ನು ಮುಗಿಸಲು ಎನ್‍ಕೌಂಟರನ್ನು ದುರುಪಯೋಗಿಸಬಹುದು. ಎನ್‍ಕೌಂಟರ್ ಕತೆ ಕಟ್ಟಿ ಪೊಲೀಸರ ಮೂಲಕ ನಿರಪರಾಧಿಗಳ ಹತ್ಯೆ ನಡೆಸಬಹುದು. ಮಾತ್ರವಲ್ಲ, ಅಂಥ ಹತ್ಯೆಗಿಂತ ಮೊದಲು ಆ ವ್ಯಕ್ತಿಯ ವಿರುದ್ಧ ಗಂಭೀರ ಆರೋಪಗಳನ್ನು ಮಾಧ್ಯಮಗಳ ಮೂಲಕ ತೇಲಿಬಿಟ್ಟು ಸಾರ್ವಜನಿಕರ ಬೆಂಬಲವನ್ನು ಗಿಟ್ಟಿಸಿಕೊಳ್ಳುವುದಕ್ಕೆ ಯತ್ನಿಸಬಹುದು. ಆದ್ದರಿಂದಲೇ,
ಹೈದರಾಬಾದ್ ಎನ್‍ಕೌಂಟರ್ ಗೆ  ಲಭ್ಯವಾದ ಬೆಂಬಲ ಮತ್ತು ಸಂಭ್ರಮವನ್ನು ನಾವು ಆತಂಕದಿಂದ ನೋಡಬೇಕಾಗಿದೆ. ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಒತ್ತಾಯಿಸುವುದು ಬೇರೆ, ಪೊಲೀಸರೇ ಗಲ್ಲಿಗೇರಿಸುವುದು ಬೇರೆ. ಗಲ್ಲಿಗೇರಿಸುವವರೇ ಗಲ್ಲಿಗೇರಿಸಲಿ ಮತ್ತು ತನಿಖೆ ನಡೆಸುವವರೇ ತನಿಖೆ ನಡೆಸಲಿ. ಈ ಕರ್ತವ್ಯ ನಿರ್ವಹಣೆಯಲ್ಲಿ ಉಲ್ಲಂಘನೆ ನಡೆದರೆ, ಆಗಬಾರದ ಅನಾಹುತಗಳು ನಡೆಯುವುದಕ್ಕೆ ಅವಕಾಶ ಇದೆ. ಸರ್ಕೆಗುಡ ಅದಕ್ಕೆ ಇರುವ ಹಲವು ಉದಾಹರಣೆಗಳಲ್ಲಿ ಒಂದು ಉದಾಹರಣೆ ಮಾತ್ರ.

ಅತ್ಯಾಚಾರ: ಮರಣ ದಂಡನೆ ಎಂಬ ಔಷಧ ಮತ್ತು ಅದರಾಚೆಗಿನ ಸತ್ಯ



ಅತ್ಯಾಚಾರ ಮತ್ತು ಬರ್ಬರ ಅತ್ಯಾಚಾರ ಎಂಬೆರಡು ಪ್ರಬೇಧಗಳಲ್ಲಿ ಬರ್ಬರ ಅತ್ಯಾಚಾರಕ್ಕೆ ಮಾತ್ರ ಇವತ್ತು ಒಂದೆರಡು ದಿನವಾದರೂ ಚರ್ಚೆಯಲ್ಲಿ ಉಳಿಯುವ ಭಾಗ್ಯ ಲಭ್ಯವಾಗುತ್ತಿದೆ. ಬರೇ ಅತ್ಯಾಚಾರವು ಈ ಚರ್ಚಾವ್ಯಾಪ್ತಿಯಿಂದ ಈಗಾಗಲೇ ಹೊರಬಿದ್ದಿದೆ. ಇದಕ್ಕೆ ಕಾರಣ ಏನೆಂದರೆ, ಅತ್ಯಾಚಾರವೆಂಬುದು ಕಿಸೆಗಳ್ಳತನ, ದರೋಡೆ, ಬೀದಿ ಜಗಳ, ವಂಚನೆ ಇತ್ಯಾದಿಗಳಂತೆ ಸಾಮಾನ್ಯ ಅನ್ನಿಸಿಕೊಂಡಿರುವುದು. ಆತಂಕ, ಆಘಾತ, ಭಯ, ಸಂಕಟ ಇತ್ಯಾದಿ ಇತ್ಯಾದಿ ಭಾವಗಳನ್ನು ಹುಟ್ಟು ಹಾಕಬೇಕಾದ ಮತ್ತು ಮನುಷ್ಯರೆಲ್ಲರೂ ಬೀದಿಯಲ್ಲಿ ನಿಂತು ರಕ್ಷಣೆ ಕೋರಬೇಕಾದ ಸಂಗತಿಯೊಂದು ಹೀಗೆ ‘ಸಾಮಾನ್ಯ ಸ್ಥಿತಿ’ಗೆ ತಲುಪಿರುವುದು ಅತ್ಯಂತ ಅಪಾಯಕಾರಿ. ಹೈದರಾಬಾದ್‍ನ ಪಶುವೈದ್ಯೆಯ ಮೇಲೆ ನಡೆದ ಬರ್ಬರ ಅತ್ಯಾಚಾರದ ಸುದ್ದಿಯನ್ನು ಪ್ರಕಟಿಸಿರುವ ಹೆಚ್ಚಿನ ಪತ್ರಿಕೆಗಳು, ಆ ಸುದ್ದಿಯ ಜೊತೆಜೊತೆಗೇ ದೇಶದ ಬೇರೆ ಬೇರೆ ಕಡೆ ನಡೆದ ಐದಾರು ಅತ್ಯಾಚಾರ ಪ್ರಕರಣಗಳ ಕುರಿತೂ ಬರೆದಿದ್ದುವು. ಅದರಲ್ಲಿ ಕೇರಳದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ನಡೆದ ಅತ್ಯಾಚಾರವೂ ಒಂದು. ಹುಟ್ಟು ಹಬ್ಬದ ಸಂತಸದಲ್ಲಿದ್ದ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿತ್ತು. ನಿಜವಾಗಿ,
ಇದೊಂದು ಕಾಯಿಲೆ. ಅತ್ಯಂತ ಅಪಾಯಕಾರಿ ಮಾನಸಿಕ ಕಾಯಿಲೆ. ಈ ಕಾಯಿಲೆಗೆ ತುತ್ತಾದವರು ಎರಡು ರೀತಿಯಲ್ಲಿ ಗುರುತಿಸಿಕೊಳ್ಳುತ್ತಾರೆ.
1. ಸಾಮಾನ್ಯ ಡ್ರೆಸ್ ತೊಟ್ಟು ಸಾಮಾನ್ಯರಂತೆ ಬದುಕುವವರು.
2. ಒರಟಾಗಿ ಡ್ರೆಸ್ ತೊಟ್ಟು ಒರಟಾಗಿಯೇ ಬದುಕುವವರು.
ಇವರಲ್ಲಿ ಒಂದನೇ ವರ್ಗ ಅತ್ಯಾಚಾರವನ್ನಷ್ಟೇ ಮಾಡುವುದಲ್ಲ, ಆ ಕ್ರೌರ್ಯವನ್ನು ಮೊಬೈಲ್‍ಗಳಲ್ಲಿ ಸೆರೆ ಹಿಡಿದಿರುತ್ತದೆ. ಅತ್ಯಾಚಾರಕ್ಕೆ ತುತ್ತಾದವಳನ್ನು ಆ ವೀಡಿಯೋ ತೋರಿಸಿ ಬೆದರಿಕೆ ಹಾಕುತ್ತದೆ. ಪೋಲೀಸರಿಗೆ ದೂರು ನೀಡಿದರೆ ವೀಡಿಯೋವನ್ನು ಬಹಿರಂಗಪಡಿಸುವುದಾಗಿ ಹೆದರಿಕೆ ಹುಟ್ಟಿಸುತ್ತದೆ. ಸಂತ್ರಸ್ತೆ ದುರ್ಬಲೆ ಎಂದಾದರೆ, ಆ ಕ್ರೌರ್ಯದ ಬಳಿಕವೂ ಆ ವೀಡಿಯೋದ ಹೆಸರಲ್ಲಿ ಬೆದರಿಸಿ ಮತ್ತೂ ಬಳಸಿಕೊಳ್ಳುತ್ತದೆ ಮತ್ತು ಹೊರ ಜಗತ್ತಿನ ಪಾಲಿಗೆ ಎಂದೂ ಗೊತ್ತಾಗದೇ ಆ ಕ್ರೌರ್ಯ ಸತ್ತು ಹೋಗುತ್ತದೆ. ಎರಡನೇ ವರ್ಗದಲ್ಲಿ ಇಷ್ಟು ತಾಳ್ಮೆಯಿಲ್ಲ. ಅವರ ಜೀವನ ಕ್ರಮಕ್ಕೆ ತಕ್ಕಂತೆ ವರ್ತನೆಯೂ ಒರಟೇ. ಅದು ವೀಡಿಯೋವನ್ನೂ ಮಾಡಲ್ಲ. ಸಂತ್ರಸ್ತೆಯನ್ನು ಜೀವ ಸಹಿತ ಉಳಿಸುವುದೂ ಇಲ್ಲ. ಅತ್ಯಂತ ಬರ್ಬರವಾಗಿ ಅವು ತಮ್ಮ ಆಸೆಯನ್ನು ತೀರಿಸಿಕೊಳ್ಳುತ್ತವೆ. ದೆಹಲಿಯ ನಿರ್ಭಯ ಪ್ರಕರಣ ಮತ್ತು ಅದರಲ್ಲಿ ಭಾಗಿಯಾದ ಆರೋಪಿಗಳ ಹಿನ್ನೆಲೆ, ಉದ್ಯೋಗಗಳನ್ನು ನೋಡುವಾಗಲೂ ಹಾಗೂ ಹೈದರಾಬಾದ್‍ನ ಪಶುವೈದ್ಯೆಯ ಮೇಲಿನ ಕ್ರೌರ್ಯದಲ್ಲಿ ಭಾಗಿಯಾದವರ ಹಿನ್ನೆಲೆ ಮತ್ತು ಉದ್ಯೋಗಗಳನ್ನು ನೋಡುವಾಗಲೂ ಇದು ಸ್ಪಷ್ಟವಾಗುತ್ತದೆ. ಅಂದಹಾಗೆ,
2012ರ ನಿರ್ಭಯ ಪ್ರಕರಣದಿಂದ 2019ರ ಈ ಪಶುವೈದ್ಯೆಯ ಪ್ರಕರಣದ ನಡುವೆ ಇಂಥ ಇನ್ನೊಂದಿಷ್ಟು ಬರ್ಬರ ಪ್ರಕರಣಗಳು ನಡೆದಿವೆ. ಇವುಗಳ ಸಂಖ್ಯೆ ಭಾರೀ ಅನ್ನುವಷ್ಟು ಇಲ್ಲ. ಆದರೆ ಈ 2012-19ರ ನಡುವೆ ಭಾರೀ ಅನ್ನುವಷ್ಟು ಪ್ರಮಾಣದಲ್ಲಿ ಅತ್ಯಾಚಾರ ಪ್ರಕರಣಗಳು ನಡೆದಿವೆ. ಕೆಲವು ಸುದ್ದಿಗೀಡಾಗಿವೆ ಮತ್ತು ಹಲವು ಸುದ್ದಿಗೀಡಾಗದೇ ಸತ್ತು ಹೋಗಿವೆ. ಆದ್ದರಿಂದ ಈ ಎರಡೂ ಬಗೆಯ ಸ್ಥಿತಿಗಳೂ ಅತ್ಯಂತ ಗಹನ ಚರ್ಚೆಗೆ ಒಳಪಡಬೇಕು.
ಹೈದರಾಬಾದ್ ಪ್ರಕರಣದ ನಾಲ್ವರು ಆರೋಪಿಗಳ ಚಿತ್ರವೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಅವರೇನೂ ಅನ್ಯಗೃಹದ ಜೀವಿಗಳಲ್ಲ. ನಮ್ಮದೇ ಸಮಾಜದ ಉತ್ಪನ್ನಗಳು. ಅವರಿಗೆ ಮನೆ ಇದೆ, ತಂದೆ-ತಾಯಿ ಇದ್ದಾರೆ. ಪತ್ನಿ (ಎಲ್ಲರಿಗಿಲ್ಲ) ಇದ್ದಾಳೆ. ಒಟ್ಟಿನಲ್ಲಿ ಕುಟುಂಬ ಅನ್ನುವ ಚೌಕಟ್ಟು ಇದೆ. ಆದರೆ, ಸಭ್ಯ ನಾಗರಿಕರಾಗಿ ಅವರನ್ನು ಬೆಳೆಸುವುದಕ್ಕೆ ಇವಿಷ್ಟೇ ಸಾಕಾಗುವುದಿಲ್ಲ. ಶಿಕ್ಷಣ, ಉದ್ಯೋಗ, ಸಾಮಾಜಿಕ ಮನ್ನಣೆ, ಲೈಂಗಿಕ ಸಹಿತ ಇತರ ಆಶಯಗಳನ್ನು ಸರ್ವಮಾನ್ಯ ರೀತಿಯಲ್ಲಿ ತೀರಿಸಿಕೊಳ್ಳುವುದಕ್ಕಿರುವ ಅವಕಾಶ ಇತ್ಯಾದಿ ಇತ್ಯಾದಿಗಳೂ ಅವರನ್ನು ಸಭ್ಯಗೊಳಿಸುವಲ್ಲಿ ಪಾತ್ರವಹಿಸುತ್ತವೆ. ನಿರ್ಭಯ ಪ್ರಕರಣದಲ್ಲಾಗಲಿ ಅಥವಾ ಹೈದರಾಬಾದ್ ಪ್ರಕರಣದಲ್ಲಾಗಲಿ ಈ ಎರಡರಲ್ಲೂ ಆರೋಪಿಗಳು ಅತ್ಯಂತ ಒರಟು ವೃತ್ತಿಯಲ್ಲಿ ತೊಡಗಿಸಿಕೊಂಡವರು. ಅವರ ಉದ್ಯೋಗಕ್ಕೆ ಭದ್ರತೆ ಇಲ್ಲ. ಸರಿಯಾದ ಶಿಕ್ಷಣ ಇಲ್ಲ. ಸರಿಯಾದ ಸಮಯಕ್ಕೆ ಮನೆ ಸೇರುವಂತಹ ಉದ್ಯೋಗವೂ ಅದಲ್ಲ. ಇನ್ನು, ಮನೆಯೂ ಅಷ್ಟೇ. ಬಿಡುವಿನ ಸಮಯದಲ್ಲಿ ದಣಿವಾರಿಸಿಕೊಳ್ಳುವುದಕ್ಕೆ ಇರುವ ಒಂದು ತಾಣವೆಂಬುದರ ಹೊರತಾಗಿ ಮನೆಗೂ ಈ ಮನುಷ್ಯರಿಗೂ ಸಂಬಂಧವೂ ಅಷ್ಟಕ್ಕಷ್ಟೇ ಇರುತ್ತದೆ. ಹೆಂಡ, ಮಾದಕ ದ್ರವ್ಯ ಮತ್ತು ದೇಹದ ಅತೃಪ್ತ ಆಸೆಗಳನ್ನು ಕೆರಳಿಸಿ ಹುಚ್ಚುಚ್ಚಾಗಿ ಯೋಚಿಸುವಂತೆ ಮಾಡುವ ವೀಡಿಯೋಗಳನ್ನು ನೋಡುತ್ತಾ ಅವರು ದಿನ ಕಳೆಯುತ್ತಿರುತ್ತಾರೆ. ನಾಳೆಯ ಬಗ್ಗೆ ಚಿಂತಿಸದ ಮತ್ತು ಇಂದಿನ ಸುಖಕ್ಕಾಗಿ ತವಕಿಸುವ ಇವರಲ್ಲಿ ಎಲ್ಲರೂ ಅತ್ಯಾಚಾರಿಗಳಾಗುತ್ತಾರೆ ಎಂದಲ್ಲ. ಆದರೆ ಬರ್ಬರ ಅತ್ಯಾಚಾರಗಳಲ್ಲಿ ಭಾಗಿಯಾಗುವವರಲ್ಲಿ ಇಂಥವರೇ ಹೆಚ್ಚಿರುತ್ತಾರೆ. ಇವರಲ್ಲಿ ಶಿಕ್ಷೆಯ ಭಯ ಕಡಿಮೆ. ತನ್ನ ಸುತ್ತಮುತ್ತಲಿನ ಸೌಂದರ್ಯ-ಬೆಡಗು-ಬಿನ್ನಾಣಗಳನ್ನು ಕಂಡು, ತನ್ನ ಹತ್ತಿಕ್ಕಿದ ಆಸೆಗಳಿಗೆ ಜೀವ ಕೊಡುತ್ತಾ ಸಂದರ್ಭ ಸಿಕ್ಕಾಗ ಅಥವಾ ಸಂದರ್ಭವನ್ನು ಸೃಷ್ಟಿಸಿಕೊಂಡೇ ತಮ್ಮ ಆಸೆಗಳನ್ನು ಪೂರೈಸುವುದಕ್ಕೆ ಮುಂದಾಗುವ ಇವರನ್ನು ಮರಣ ದಂಡನೆಯೊಂದೇ ನಿಯಂತ್ರಿಸಬಲ್ಲುದು ಎಂದು ಹೇಳುವ ಹಾಗಿಲ್ಲ. ಮದ್ಯ ಮತ್ತು ಮಾದಕದ ನಶೆಯು ಎಂಥವರನ್ನೂ ಮೃಗೀಯವಾಗಿ ಯೋಚಿಸುವಂತೆ ಮಾಡುತ್ತದೆ. ಅವರನ್ನು ಮೊದಲು ಆ ನಶೆಯಿಂದ ಹೊರತರುವ ಪ್ರಯತ್ನಗಳಾಗಬೇಕು. ಹಾಗೆ ಆಗಬೇಕಾದರೆ, ಆ ಗುಂಪಿನ ಜೀವನ ಕ್ರಮಗಳ ಬಗ್ಗೆ ಅಧ್ಯಯನ ನಡೆಯಬೇಕು. ಅವರ ಯೋಚನೆ, ಯೋಜನೆ, ಕೌಟುಂಬಿಕ ಬದುಕು, ಮನೆಯ ವಾತಾವರಣ, ಉದ್ಯೋಗ ಭದ್ರತೆ ಇತ್ಯಾದಿ ಇತ್ಯಾದಿಗಳು ಪರಿಶೀಲನೆಗೆ ಒಳಪಡಬೇಕು. ಸರಕಾರೇತರ ಸಂಸ್ಥೆಗಳ ಮೂಲಕ ಅವರನ್ನು ಸಾಮಾಜಿಕ ಕಾರ್ಯಗಳಲ್ಲಿ ಭಾಗಿಯಾಗುವಂತೆ ನೋಡಿಕೊಳ್ಳಬೇಕು.
ಅತ್ಯಾಚಾರ ಈ ದೇಶದ ಸಮಸ್ಯೆಯಷ್ಟೇ ಅಲ್ಲ. ಅದೊಂದು ಜಾಗತಿಕ ಪಿಡುಗು. ಅಂದಹಾಗೆ, ಹೆಣ್ಣು ಮತ್ತು ಗಂಡು ಬೇರೆ ಬೇರೆ ಗೃಹಗಳಲ್ಲಿ ಬದುಕುವ ಮತ್ತು ಪರಸ್ಪರ ಅಚಾನಕ್ಕಾಗಿ ಭೇಟಿಯಾಗುವ ಜೀವಿಗಳಲ್ಲ. ಬಹುತೇಕ ಎಲ್ಲ ಮನೆಗಳಲ್ಲೂ ಹೆಣ್ಣು ಮತ್ತು ಗಂಡು ಇಬ್ಬರೂ ಇದ್ದಾರೆ. ಆದ್ದರಿಂದ ಹೆಣ್ಣು ಯಾವ ಗಂಡಿಗೂ ಅಪರಿಚಿತಳಲ್ಲ. ಆಕೆಯ ಬದುಕು, ಭಾವವನ್ನು ಕಂಡೇ ಗಂಡು ಬೆಳೆಯುತ್ತಾನೆ. ಆಕೆಯ ಪ್ರೀತಿ, ಮಮತೆಯನ್ನು ಅನುಭವಿಸಿಯೇ ಬದುಕುತ್ತಿರುತ್ತಾನೆ. ಇಷ್ಟಿದ್ದೂ, ಆತ ಇನ್ನೋರ್ವ ಹೆಣ್ಣನ್ನು ಅತ್ಯಂತ ಬರ್ಬರವಾಗಿ ನಡೆಸಿಕೊಳ್ಳುವುದನ್ನು ಸಹಜಸ್ಥಿತಿ ಎಂದು ಹೇಳುವಂತಿಲ್ಲ. ಅಂಥ ಕ್ರೌರ್ಯಕ್ಕೆ ಬೇರೆಯದೇ ಆದ ಹಿನ್ನಲೆ ಇರಬೇಕು. ಹೆಣ್ಣಿನ ಬಗ್ಗೆ, ಆಕೆಯ ನಗು, ನಡೆಗಳ ಬಗ್ಗೆ ಅತ್ಯಂತ ತಪ್ಪಾದ ಮತ್ತು ಮನುಷ್ಯ ವಿರೋಧಿಯಾದ ಅಭಿಪ್ರಾಯಗಳು ಅವರಲ್ಲಿರುವ ಸಾಧ್ಯತೆ ಇದೆ. ಅದಕ್ಕೆ ಸಿನಿಮಾದ ತುಂಡು ದೃಶ್ಯಗಳೋ, ಅವರು ಮೊಬೈಲ್‍ನಲ್ಲಿ ವೀಕ್ಷಿಸುವ ವೀಡಿಯೋಗಳೋ ಪ್ರಚೋದಕವಾಗಿ ಕೆಲಸ ಮಾಡಿರುವುದಕ್ಕೂ ಅವಕಾಶ ಇದೆ. ಇದರ ಜೊತೆ ಮದ್ಯ-ಮಾದಕಗಳ ನಶೆಯೂ ಸೇರಿಕೊಂಡರೆ
ಅವರು ಮೃಗಗಳಾಗಿ ಪರಿವರ್ತನೆಯಾಗುವುದು ಕಷ್ಟಕರವಲ್ಲ. ಆದ್ದರಿಂದ, ‘ಮರಣ ದಂಡನೆ’ ಎಂಬ ಶಿಕ್ಷೆಯ ಭೀತಿಯನ್ನು ಸಾಮಾಜಿಕವಾಗಿ ಹರಡುವುದರ ಜೊತೆಜೊತೆಗೇ ಹೆಣ್ಣಿನ ಬಗ್ಗೆ ಗಂಡು ಸಮಾಜದಲ್ಲಿ ಇರಬಹುದಾದ ತಪ್ಪಭಿಪ್ರಾಯಗಳನ್ನೂ ನೀಗಿಸುವುದಕ್ಕೆ ಗಂಭೀರ ಪ್ರಯತ್ನಗಳಾಗಬೇಕು. ಪ್ರತಿ ಮನೆಯಲ್ಲೂ ಹೆಣ್ಣಿನ ಬಗ್ಗೆ ಸಕಾರಾತ್ಮಕ ಅಭಿಪ್ರಾಯಗಳನ್ನು ಹೆತ್ತವರು ಸದಾ ರವಾನಿಸುತ್ತಿರಬೇಕು. ಮನೆಯ ಗಂಡು ಮಕ್ಕಳ ಮುಂದೆ ‘ಸಾಧಕ ಹೆಣ್ಣು ಮಕ್ಕಳ’ ಬಗ್ಗೆ ಹೆತ್ತವರು ಪ್ರಸ್ತಾವಿಸುತ್ತಿರಬೇಕು. ಹೆಣ್ಣು ಮತ್ತು ಗಂಡಿನಲ್ಲಿ ಯಾರು ಮೇಲೂ ಅಲ್ಲ, ಕೀಳೂ ಅಲ್ಲ ಅನ್ನುವ ಸಂದೇಶವನ್ನು ಮಕ್ಕಳಿಗೆ ತಲುಪಿಸುತ್ತಿರಬೇಕು. ಒಂದು ಚಳವಳಿ ರೂಪದಲ್ಲಿ ನಡೆಯಬೇಕಾದ ಕ್ರಮ ಇದು. ಅಲ್ಲದೇ, ಬರೇ ಮರಣ ದಂಡನೆಯೊಂದೇ ಪರಿಸ್ಥಿತಿಯನ್ನು ಬದಲಿಸದು.