Wednesday 28 October 2020

ಇಂಥ ಪೋಸ್ಟರನ್ನು ಮಸೀದಿ, ಮದ್ರಸಗಳ ಎದುರು ತೂಗು ಹಾಕೋಣ..



ಈ ಬಾರಿಯ ನೀಟ್ (NEET) ಪರೀಕ್ಷಾ ಫಲಿತಾಂಶ ಪ್ರಕಟವಾದ ಕೂಡಲೇ ನೆಟ್ಟಿಗರು ಸುದರ್ಶನ್ ಟಿ.ವಿ.ಯ ಸುರೇಶ್  ಚಾವ್ಲಾಂಕೆಯ ಕಾಲೆಳೆದಿದ್ದರು. `ನೀಟ್ ಜಿಹಾದ್' ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡು ಎಂದು ಕುಟುಕಿದ್ದರು. ಇದಕ್ಕೆ ಕಾರಣ  ಏನೆಂದರೆ, ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಒಡಿಸ್ಸಾದ ಶುಐಬ್ ಅಖ್ತರ್ ಮೊದಲ ರಾಂಕ್  ಪಡೆದಿರುವುದು. ಒಟ್ಟು 720  ಅಂಕಗಳ ಈ ಪರೀಕ್ಷೆಯಲ್ಲಿ ಪೂರ್ತಿ 720 ಅಂಕಗಳನ್ನೂ ಪಡೆಯುವ ಮೂಲಕ ಈ ವಿದ್ಯಾರ್ಥಿ ದೇಶದ ಗಮನ ಸೆಳೆದಿದ್ದಾರೆ. 

ಈ  ಪರೀಕ್ಷಾ ಫಲಿತಾಂಶಕ್ಕಿಂತ ಒಂದು ತಿಂಗಳ ಹಿಂದಷ್ಟೇ ಸುದರ್ಶನ್ ಟಿ.ವಿ. ಸುದ್ದಿಯಲ್ಲಿತ್ತು. ಯುಪಿಎಸ್‍ಸಿ ಜಿಹಾದ್ ಎಂಬ ಹೆಸರಲ್ಲಿ  ಅದು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿತ್ತು. ಅದೊಂದು ಸರಣಿ ಕಾರ್ಯಕ್ರಮವಾಗಿದ್ದು, 4 ಕಾರ್ಯಕ್ರಮಗಳು ಪ್ರಸಾರವಾದ  ಕೂಡಲೇ ಸುಪ್ರೀಮ್ ಕೋರ್ಟು ಮಧ್ಯಪ್ರವೇಶಿಸಿ ಮುಂದಿನ ಕಾರ್ಯಕ್ರಮದ ಮೇಲೆ ತಡೆ ವಿಧಿಸಿತ್ತು. ಯುಪಿಎಸ್‍ಸಿ ಪರೀಕ್ಷೆಯಲ್ಲಿ  ತೇರ್ಗಡೆಯಾದವರನ್ನು ವಿದೇಶಾಂಗ, ಪೊಲೀಸ್ ಸೇರಿದಂತೆ ದೇಶದ ಆಡಳಿತಾಂಗ ವ್ಯವಸ್ಥೆಗೆ ಭರ್ತಿ ಮಾಡಲಾಗುತ್ತಿದ್ದು, ಇಲ್ಲೊಂದು ಜಿಹಾದ್ ನಡೆಯುತ್ತಿದೆ ಎಂಬುದು ಚಾವ್ಲಾಂಕೆಯ ಆರೋಪವಾಗಿತ್ತು. ದೆಹಲಿಯ ಜಾಮಿಯಾ ವಿವಿ, ಮುಂಬೈಯ ಝಕಾತ್  ಫೌಂಡೇಶನ್‍ಗಳು ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳಿಗಾಗಿ ಯುಪಿಎಸ್‍ಸಿ ಪರೀಕ್ಷಾ ತರಬೇತಿ ನೀಡುವ ಮೂಲಕ ಸಂಚು  ರೂಪಿಸುತ್ತಿದೆ ಎಂಬುದು ಅವರ ವಾದವಾಗಿತ್ತು. ವಿಶೇಷ ಏನೆಂದರೆ, 

ಸಂಘಪರಿವಾರದ ಹಿಡಿತದಲ್ಲಿರುವ ಸಂಕಲ್ಪ್ ಫೌಂಡೇಶನ್  ಎಂಬ ಸಂಸ್ಥೆಯು 1986ರಿಂದಲೇ ಯುಪಿಎಸ್‍ಸಿಗಾಗಿ ಭಾರೀ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬರುತ್ತಿದೆ.  ಮಾತ್ರವಲ್ಲ, ಪ್ರತಿವರ್ಷದ ಫಲಿತಾಂಶದಲ್ಲಿ ಸಿಂಹಪಾಲು ಈ ಸಂಸ್ಥೆಯ ವಿದ್ಯಾರ್ಥಿಗಳೇ ಪಡೆಯುತ್ತಿದ್ದಾರೆ. ಯುಪಿಎಸ್‍ಸಿ ಪರೀಕ್ಷೆಯಲ್ಲಿ  ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಸುಮಾರು 60% ವಿದ್ಯಾರ್ಥಿಗಳು ಸಂಕಲ್ಪ್ ಫೌಂಡೇಶನ್‍ನಲ್ಲಿ ತರಬೇತಿ ಪಡೆದವರೇ  ಆಗಿರುತ್ತಾರೆ. ಸುರೇಶ್ ಚಾವ್ಲಾಂಕೆ ಹೇಳದೇ ಹೋದ ಈ ಸತ್ಯವು ಬಹಿರಂಗಕ್ಕೆ ಬಂದದ್ದೂ ಯುಪಿಎಸ್‍ಸಿ ಜಿಹಾದ್ ಕಾರ್ಯಕ್ರಮದಿಂದಾಗಿ ಎಂಬುದೂ ಬಹುಮುಖ್ಯ.

ದೇಶದಲ್ಲಿ 542 ಸರಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಇಲ್ಲಿರುವ ಒಟ್ಟು 80,035 ಸೀಟುಗಳನ್ನು  ತುಂಬಿಸಿಕೊಳ್ಳುವುದು ನೀಟ್ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ. ವೈದ್ಯಕೀಯ (ಎಂಬಿಬಿಎಸ್) ಮತ್ತು ದಂತ ವೈದ್ಯಕೀಯ  (ಬಿಡಿಎಸ್) ಕಲಿಯಲಿಚ್ಛಿಸುವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಕೊರೋನಾದ ಕಾರಣದಿಂದಾಗಿ ಈ ಬಾರಿ ನೀಟ್ ಪರೀಕ್ಷೆ ತೂಗುಯ್ಯಾಲೆಯಲ್ಲಿತ್ತು. ಕೊನೆಗೆ ಸೆ. 13 ಮತ್ತು 14ರಂದು ಪರೀಕ್ಷೆಗಳು ನಡೆದುವು ಮತ್ತು  ಅಕ್ಟೋಬರ್ 16ರಂದು ಫಲಿತಾಂಶವೂ ಪ್ರಕಟವಾಯಿತು. ಈ ಪರೀಕ್ಷೆ ಬರೆಯುವುದಾಗಿ ಒಟ್ಟು 15,97,435 ಮಂದಿ ತಮ್ಮ ಹೆಸರನ್ನು  ನೋಂದಾಯಿಸಿದ್ದರು. ಆದರೆ, ಪರೀಕ್ಷೆಗೆ ಹಾಜರಾಗಿರುವುದು 13,66,945 ಮಂದಿ. ಈ ವ್ಯತ್ಯಾಸಕ್ಕೆ ಮುಖ್ಯ ಕಾರಣ ಕೊರೋನಾ.  ಅಂದಹಾಗೆ, 

ಹಿಂದಿನ ವರ್ಷದಂಥ  ವಾತಾವರಣ ಈ ಬಾರಿಯದ್ದಲ್ಲ. ಸಹಜ ಸಂಚಾರಕ್ಕೂ ತೊಡಕಿದೆ. ಗುಂಪು ಕಲಿಕೆಗೂ ಅಡಚಣೆಯಿದೆ. ದೈಹಿಕ ಅಂತರ, ಮಾಸ್ಕ್,  ಸ್ಯಾನಿಟೈಸರ್ ಇತ್ಯಾದಿ ರಗಳೆಗಳ ನಡುವೆ ಈ ಬಾರಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದ್ದರಿಂದಲೇ, ಪರೀಕ್ಷೆಯಲ್ಲಿ  ಪೂರ್ಣಾಂಕವನ್ನು ಪಡೆದ ಶುಐಬ್ ಅಖ್ತರ್ ಮತ್ತು ದೆಹಲಿಯ ಆಕಾಂಕ್ಷಾ ಸಿಂಗ್‍ರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಬೇಕು.  ಮುಖ್ಯವಾಗಿ ಸುರೇಶ್ ಚಾವ್ಲಾಂಕೆಯ ಯುಪಿಎಸ್‍ಸಿ ಜಿಹಾದ್ ಕಾರ್ಯಕ್ರಮಕ್ಕೆ ಸಡ್ಡು ಹೊಡೆಯಲೋ ಎಂಬಂತೆ ಶುಐಬ್ ಅಖ್ತರ್  ಅದ್ಭುತ ಸಾಧನೆ ಮಾಡಿದ್ದಾನೆ. ನೀಟ್ ಪರೀಕ್ಷೆಯಲ್ಲಿ ಮೊದಲಿಗನಾಗಿ ಗುರುತಿಸಿಕೊಳ್ಳುವುದೆಂದರೆ, ಅದು ಸುಲಭದ ಸಾಧನೆಯಲ್ಲ.  ಅಂಚಿನಲ್ಲಿರುವ ಸಮುದಾಯದ ವ್ಯಕ್ತಿ ಎಂಬ ನೆಲೆಯಲ್ಲಿ ಈ ಸಾಧನೆ ಬಹಳ ಮಹತ್ವಪೂರ್ಣ. ಅದೇರೀತಿಯಲ್ಲಿ, 12ನೇ ರಾಂಕ್  ಪಡೆದ ಕೇರಳದ ಆಯಿಷಾ, 18ನೇ ರಾಂಕ್  ಪಡೆದ ಆಂಧ್ರಪ್ರದೇಶದ ಶೈಕ್ ಕೊಥವಲ್ಲಿ, 25ನೇ ರಾಂಕ್  ಪಡೆದ ಕೇರಳದ ಸಾನಿಶ್  ಅಹ್ಮದ್, 66ನೇ ರಾಂಕ್  ಪಡೆದ ಕೇರಳದ ಫರ್‍ಹೀನ್, 8ನೇ ರಾಂಕ್  ಪಡೆದ ಉತ್ತರ ಪ್ರದೇಶದ ಮುಹಮ್ಮದ್ ಶಾಹಿದ್-  ಇವರೆಲ್ಲರನ್ನೂ ಸ್ಮರಿಸಿಕೊಳ್ಳುವುದು ಇಲ್ಲಿ ಬಹುಮುಖ್ಯ. ಇವರ ಜೊತೆಗೇ 922ನೇ ರಾಂಕ್  ಪಡೆದು ಗೋವಾಕ್ಕೆ ಟಾಪರ್ ಆಗಿ  ಮೂಡಿ ಬಂದಿರುವ ಶೈಕ್ ರುಬಿಯಾ, 2306ನೇ ರಾಂಕ್ ನೊಂದಿಗೆ ಲಕ್ಷದ್ವೀಪಕ್ಕೆ ಟಾಪರ್ ಆಗಿರುವ ಮುಹಮ್ಮದ್ ಅಫ್ರೋಜ್  ಮತ್ತು 35,673ನೇ ರಾಂಕ್  ಪಡೆದು ಲಡಾಕ್‍ಗೆ ಟಾಪರ್ ಆಗಿರುವ ಮುರ್ತಝಾ ಅಲಿಯವರನ್ನೂ ಇಲ್ಲಿ ಸ್ಮರಿಸಿಕೊಳ್ಳಬೇಕು.  ಅಂದಹಾಗೆ,

ಇವರೆಲ್ಲರನ್ನೂ ಇಲ್ಲಿ ಉಲ್ಲೇಖಿಸುವುದಕ್ಕೆ ಎರಡು ಕಾರಣಗಳಿವೆ. ಒಂದು- ಸಾಧನೆ ಎಂಬ ನೆಲೆಯಲ್ಲಿ.  ಎರಡನೆಯದ್ದು- ನಕಾರಾತ್ಮಕ  ಪ್ರತಿಕ್ರಿಯೆಗಳಿಗೆ ನೀಡಬಹುದಾದ ಸಮರ್ಪಕ ಉತ್ತರ ಎಂಬ ನೆಲೆಯಲ್ಲಿ.

ಅಷ್ಟಕ್ಕೂ, ಯುಪಿಎಸ್‍ಸಿ ಜಿಹಾದ್ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಹೊರಟ ಸುರೇಶ್ ಚಾವ್ಲಾಂಕೆಗೆ ನಿಜ ಏನು  ಎಂಬುದು ಗೊತ್ತಿರಲಿಲ್ಲ ಎಂದಲ್ಲ. ಅಲ್ಲದೆ, ಕಳೆದ ವರ್ಷ ದೆಹಲಿಯ ಜಾಮಿಯಾ ವಿವಿಯಿಂದ ಯುಪಿಎಸ್‍ಸಿ ತೇರ್ಗಡೆಯಾದ  ಒಟ್ಟು 31 ವಿದ್ಯಾರ್ಥಿಗಳ ಪೈಕಿ 16 ಮಂದಿ ಮುಸ್ಲಿಮೇತರರಾಗಿದ್ದರು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಮಹಾನ್ ಪಾಂಡಿತ್ಯವೇನೂ  ಅಗತ್ಯವೂ ಬೇಕಾಗಿಲ್ಲ. ಕನಿಷ್ಠ ಅಕ್ಷರ ಜ್ಞಾನವುಳ್ಳ ಯಾರಿಗೂ ಗೂಗಲ್‍ನಲ್ಲಿ ಜಾಲಾಡಿದರೆ ಸಂಗತಿ ಗೊತ್ತಾಗುತ್ತದೆ. ಚಾವ್ಲಾಂಕೆಯಲ್ಲಿ  ಗೂಗಲ್ ಬ್ಯಾನ್ ಮಾಡಿಲ್ಲದೇ ಇರುವುದರಿಂದ ಅವರಿಗೂ ಈ ಮಾಹಿತಿ ಲಭಿಸಿಯೇ ಇರುತ್ತದೆ. ಮತ್ತೇಕೆ ಅವರು ಅಂಥದ್ದೊಂದು   ಕಾರ್ಯಕ್ರಮ ಮಾಡಿದರೆಂದರೆ, ಅದೊಂದು ಸಂಚು. ಮುಸ್ಲಿಮರು ನಿಧಾನಕ್ಕೆ ಶೈಕ್ಷಣಿಕವಾಗಿ ಮುಂದೆ ಬರುತ್ತಿದ್ದಾರೆ ಎಂಬುದನ್ನು  ಸಹಿಸಲು ಸಾಧ್ಯವಾಗದೇ ಹೆಣೆದಿರುವ ಸಂಚು. ಮುಸ್ಲಿಮರನ್ನು ಹಣಿಯಲು ಮತ್ತು ಕೀಳರಿಮೆ ಹಾಗೂ ಸ್ವಾಭಿಮಾನ ರಹಿತವಾಗಿ  ಬದುಕಲು ಆಡಳಿತಾತ್ಮಕವಾಗಿಯೇ ಪ್ರಯತ್ನಗಳು ನಡೆಯುತ್ತಿರುವುದರ ಹೊರತಾಗಿಯೂ ಅವರು ಸ್ವಪ್ರಯತ್ನದಿಂದ ಈ ಎಲ್ಲ  ಒತ್ತಡಗಳನ್ನು ಮೀರಿ ಚಿಮ್ಮತೊಡಗಿದ್ದಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಹೆಣೆದ ಸಂಚು. ಹಾಗಂತ,

ಇಂಥ ಸನ್ನಿವೇಶಗಳಿಗೆ ಯಾವುದೇ ರಾಷ್ಟ್ರದ ಅಲ್ಪಸಂಖ್ಯಾತ ಸಮುದಾಯ ತುತ್ತಾಗಿರುವುದು ಇದು ಹೊಸತಲ್ಲ. ಐತಿಹಾಸಿಕವಾಗಿ,  ಇಂಥ ಘಟನೆಗಳಿಗೆ ಸಾಲು ಸಾಲು ಉದಾಹರಣೆಗಳೇ ಇವೆ. ಮಹತ್ವದ ಅಂಶ ಏನೆಂದರೆ, ಇಂಥ ಸಂದರ್ಭದಲ್ಲಿ ಈ ಪುಟ್ಟ  ಸಮುದಾಯ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಅದರ ಆಧಾರದಲ್ಲೇ ಆ ಸಮುದಾಯದ ಸೋಲು-ಗೆಲುವು  ನಿರ್ಧಾರವಾಗುತ್ತದೆ. ಇಂಥ ಸಂದರ್ಭದಲ್ಲಿ ನಕಾರಾತ್ಮಕವಾದ ಪ್ರತಿಕ್ರಿಯೆಯನ್ನು ಸಂಚು ಹೆಣೆದವರು ಬಯಸುತ್ತಿರುತ್ತಾರೆ.  ಯುಪಿಎಸ್‍ಸಿ ಅಥವಾ ನೀಟ್‍ನಂಥ ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವುದನ್ನೇ ನಿಲ್ಲಿಸುವುದು ಅಥವಾ ಅದಕ್ಕೆ ಮಹತ್ವ ಕೊಡದಿರುವುದು ಅಥವಾ ಚಿಪ್ಪಿನೊಳಗೆ ಮುದುಡಿಕೊಂಡು ಇನ್ನಷ್ಟು ಒಂಟಿಯಾಗುವುದು ಅಥವಾ ಬಹುಸಂಖ್ಯಾತರನ್ನು ವಿರೋಧಿಸುವ,  ದ್ವೇಷಿಸುವ, ಹಗೆ ಸಾಧಿಸುವ ರೀತಿಯಲ್ಲಿ ಪ್ರತಿಕ್ರಿಯಿಸುವುದು ಸಂಚು ಹೆಣೆದವರ ಬಯಕೆಯಾಗಿರುತ್ತದೆ. ಒಂದುವೇಳೆ, ಅಲ್ಪಸಂಖ್ಯಾತ  ಸಮುದಾಯ ಇದನ್ನೇ ಉತ್ತರವಾಗಿ ಆಯ್ಕೆ ಮಾಡಿಕೊಂಡರೆ, ಆ ಬಳಿಕ ಸಂಚುಕೋರರ ಬಲೆಯೊಳಗೆ ಬಿದ್ದಂತೆ. ಸಂಚು ಹೆಣೆದಿರುವವರ ಯಶಸ್ಸು ಅಡಗಿರುವುದೇ ಈ ಬಗೆಯ ನಕಾರಾತ್ಮಕ ಮತ್ತು ದೂರದೃಷ್ಟಿ ರಹಿತ ಪ್ರತಿಕ್ರಿಯೆಗಳಲ್ಲಿ. ಆದ್ದರಿಂದಲೇ, 

ನೀಟ್ ಪರೀಕ್ಷೆಯ ಫಲಿತಾಂಶ ಮುಖ್ಯವಾಗುತ್ತದೆ. ಇದು ಯುಪಿಎಸ್‍ಸಿ ಜಿಹಾದ್ ಎಂಬಂಥ ಸಾವಿರ ಬಗೆಯ ಸಂಚನ್ನು ಹೆಣೆದಿರುವವರಿಗೆ ಮುಸ್ಲಿಮ್ ಸಮುದಾಯ ನೀಡಬಹುದಾದ ಅತ್ಯಂತ ಪರಿಣಾಮಕಾರಿ ಉತ್ತರ. ಯಾವುದೇ ಸಂಚಿಗೆ  ಸಕಾರಾತ್ಮಕ ಉತ್ತರಕ್ಕೆ ಸಮುದಾಯ ಸಿದ್ಧವಾದಾಗ ಸಂಚು ಮಾತ್ರ ವಿಫಲವಾಗುವುದಲ್ಲ, ಜೊತೆಗೇ ಆ ಸಮುದಾಯ ಬೆಳೆಯುತ್ತಲೂ  ಹೋಗುತ್ತದೆ. ಸಂಚು ಹೆಣೆದವರನ್ನೇ ವಿರೋಧಿಸುವ ಹಂತಕ್ಕೆ ಬಹುಸಂಖ್ಯಾತರನ್ನು ಈ ಸಕಾರಾತ್ಮಕ ಪ್ರತಿಕ್ರಿಯೆ ಪ್ರೇರೇಪಿಸುತ್ತದೆ.  ಸದ್ಯದ ಅಗತ್ಯ ಇದು. ಸಾಧ್ಯವಾದರೆ, ಯುಪಿಎಸ್‍ಸಿ, ನೀಟ್ ಸಹಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ  ಪೋಸ್ಟರ್‍ ಗಳನ್ನು ಮದ್ರಸ, ಪರೀಕ್ಷೆ ಮಸೀದಿಗಳ ಮುಂದೆ ಪ್ರದರ್ಶಿಸುವುದಕ್ಕೆ ಆಯಾ ಜಮಾಅತ್‍ಗಳು ಮುಂದೆ ಬರಲಿ. ಇದರಿಂದ  ಉಳಿದ ಮಕ್ಕಳಿಗೂ ಪ್ರೇರಣೆ ದೊರೆಯಬಹುದು. ಅವರಂತೆ ನಾವಾಗಬೇಕೆಂಬ ಕನಸನ್ನು ಹೊತ್ತುಕೊಂಡು ಈ ಮಕ್ಕಳು ನಡೆಯುವುದಕ್ಕೂ ಇದು  ಕಾರಣವಾಗಬಹುದು.

ಪರೀಕ್ಷೆಯಲ್ಲಿ ಸಾಧನೆ ಮಾಡಿದ ಎಲ್ಲರಿಗೂ ಅಭಿನಂದನೆಗಳು.

Monday 19 October 2020

ಒಂದಾನೊಂದು ಕಾಲದಲ್ಲಿ ಕಾವಲುನಾಯಿ ಇತ್ತು..


ಸನ್ಮಾರ್ಗ ಸಂಪಾದಕೀಯ 

ಮಾಧ್ಯಮಗಳಿಗೆ ಸಂಬಂಧಿಸಿ ಕಳೆದವಾರ ಎರಡು ಪ್ರಮುಖ ಬೆಳವಣಿಗೆಗಳು ನಡೆದಿವೆ. ಒಂದು- ತಬ್ಲೀಗಿ ಜಮಾಅತ್‍ಗೆ ಸಂಬಂಧಿಸಿದ್ದರೆ, ಇನ್ನೊಂದು- ಟಿಆರ್ಪಿಗೆ ಸಂಬಂಧಿಸಿದ್ದು. ಈ ಎರಡರ ಕೇಂದ್ರ ಬಿಂದುವೂ ಮಾಧ್ಯಮವೇ.

ದೇಶದಲ್ಲಿ ಮಾರ್ಚ್ 24ರಂದು ಕೇಂದ್ರ ಸರಕಾರ ದಿಢೀರ್ ಲಾಕ್‍ಡೌನ್ ಘೋಷಿಸಿದ ಬಳಿಕ ಮಾಧ್ಯಮಗಳು ಅದರಲ್ಲೂ ಟಿ.ವಿ. ವಾಹಿನಿಗಳು ಕೊರೋನಾದ ಬದಲು ತಬ್ಲೀಗಿ ಜಮಾಅತ್‍ನ ಬೆನ್ನು ಬಿದ್ದಿದ್ದುವು. ಈ ಲಾಕ್‍ಡೌನ್ ಘೋಷಣೆಯ ವೇಳೆ ತಬ್ಲೀಗಿ  ಜಮಾಅತ್‍ನ ಕೇಂದ್ರ ಕಚೇರಿಯಾದ ದೆಹಲಿಯ ನಿಝಾಮುದ್ದೀನ್ ಮರ್ಕಜ್ ನಲ್ಲಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಾವಿರಾರು  ಮಂದಿ ಸೇರಿಕೊಂಡಿದ್ದರು. ಪ್ರತಿ ತಿಂಗಳೂ ಇಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಮತ್ತು ದೇಶ-ವಿದೇಶಗಳಿಂದ ದೊಡ್ಡಮಟ್ಟದಲ್ಲಿ ಪ್ರತಿ ನಿಧಿಗಳು ಭಾಗವಹಿಸುತ್ತಾರೆ. ಈ ದಿಢೀರ್ ಲಾಕ್‍ಡೌನ್‍ನಿಂದ ಈ ಸಾವಿರಾರು ಮಂದಿ ಬಂಧನಕ್ಕೊಳಗಾದ ಸ್ಥಿತಿಗೆ ತಲುಪಿದರು.  ರೈಲು, ವಿಮಾನ ಸೇವೆಗಳು ಸ್ಥಗಿತಗೊಂಡುದು ಮಾತ್ರವಲ್ಲ, ರಸ್ತೆಗಳೂ ಮೌನವಾದುವು. ಈ ಮರ್ಕಝïಗಿಂತ ಕೇವಲ 50  ಮೀಟರ್ ದೂರದಲ್ಲೇ  ಪೊಲೀಸ್ ಠಾಣೆಯೂ ಇದೆ. ಅಲ್ಲಿಗೆ ಸ್ಥಿತಿಗತಿಯ ವಿವರಗಳನ್ನೂ ನೀಡಲಾಯಿತು. ಮರ್ಕಜ್ ನಲ್ಲಿ  ಸಿಲುಕಿಕೊಂಡವರ ಆರೋಗ್ಯ ತಪಾಸಣೆಗಾಗಿ ಸರಕಾರದ ವತಿಯಿಂದ ವ್ಯವಸ್ಥೆಯೂ ನಡೆಯಿತು. ಆದರೆ,

ಮಾರ್ಚ್ 28-29ರ ಬಳಿಕ ಒಟ್ಟು ಚಿತ್ರಣವೇ ಬದಲಾಯಿತು. ಕೊರೋನಾ ಹಾಟ್‍ಸ್ಪಾಟ್ ಕೇಂದ್ರವಾಗಿ ಮರ್ಕಝï  ಬಿಂಬಿತವಾಯಿತು. ಟಿ.ವಿ. ವಾಹಿನಿಗಳ ಕ್ಯಾಮರಾಗಳು ಅಲ್ಲೇ  ಠಿಕಾಣಿ ಹೂಡಿದುವು. ಪತ್ರಿಕೆಗಳಲ್ಲೂ ಅಸಹನೀಯ ಮತ್ತು ಸತ್ಯಕ್ಕೆ  ದೂರವಾದ ವರದಿಗಳು ಪುಂಖಾನುಪುಂಖ ಬರತೊಡಗಿದುವು. ಕೊರೋನಾ ಜಿಹಾದ್, ತಬ್ಲೀಗಿ ವೈರಸ್, ಕೊರೋನಾ ಟೆರರಿಸಂ  ಎಂಬಿತ್ಯಾದಿ ಕಡು ಕೆಟ್ಟ ಪದಪ್ರಯೋಗಳೊಂದಿಗೆ ಟಿ.ವಿ. ಮತ್ತು ಪತ್ರಿಕಾ ಮಾಧ್ಯಮಗಳು ಸುದ್ದಿಗಳನ್ನು ಕೊಡತೊಡಗಿದುವು. ತಬ್ಲೀಗಿ  ಜಮಾಅತ್‍ನ ಮುಖ್ಯಸ್ಥ ಮೌಲಾನಾ ಸಾದ್‍ರನ್ನು ಸಾವಿನ ಮೌಲಾನಾ ಎಂದೂ ಹೇಳಲಾಯಿತು. ಮರ್ಕಜ್ ಗಾಗಲಿ,  ತಬ್ಲೀಗಿಗಳಿಗಾಗಲಿ ಯಾವ ಸಂಬಂಧವೂ ಇಲ್ಲದ ಮತ್ತು ಹಳೆಯದಾದ ವೀಡಿಯೋಗಳನ್ನು ಯುಟ್ಯೂಬ್‍ನಿಂದ ಹೆಕ್ಕಿ ತೆಗೆದು ಅದನ್ನು ತಬ್ಲೀಗಿಗಳ ವೀಡಿಯೋ ಎಂದು ಪ್ರಚಾರ ಮಾಡಲಾಯಿತು. ಮೌಲಾನಾ ಸಾದ್‍ರದ್ದೆಂದು ಮುದ್ರೆಯೊತ್ತಲಾದ ಹಳೆಯ  ವೀಡಿಯೋವನ್ನು ತಿರುಚಿ ಕೊರೋನಾ ಕಾಲದ ವೀಡಿಯೋವೆಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯವಸ್ಥಿತವಾಗಿ  ಹರಿಯಬಿಡಲಾಯಿತು. ಜಗತ್ತಿನಲ್ಲಿರುವ ಎಲ್ಲ ಕೆಟ್ಟ ವೀಡಿಯೋಗಳನ್ನು, ಸುದ್ದಿಗಳನ್ನು ಹೆಕ್ಕಿಕೊಂಡು ಅದನ್ನು ತಬ್ಲೀಗಿಗಳ ತಲೆಗೆ  ಕಟ್ಟುವ ಅತ್ಯಂತ ಹೀನಾಯ ಕೃತ್ಯದಲ್ಲಿ ಮಾಧ್ಯಮದ ಮಂದಿಯೇ ತೊಡಗಿಸಿಕೊಂಡರು...  

ಈ ಸಂದರ್ಭದಲ್ಲಿ ಮಾಧ್ಯಮಗಳ ಈ  ಬೇಜವಾಬ್ದಾರಿಯುತ ಪ್ರವೃತ್ತಿಗೆ ಆಕ್ಷೇಪ ವ್ಯಕ್ತಪಡಿಸಿದ ಜಮೀಯತೆ ಉಲೆಮಾಯೆ ಹಿಂದ್, ಎಪ್ರಿಲ್ 6ರಂದು ಸುಪ್ರೀಮ್ ಕೋರ್ಟಿನ  ಬಾಗಿಲು ಬಡಿಯಿತು. ಮಾಧ್ಯಮಗಳು ಕೊರೋನಾವನ್ನು ಕೋಮುವಾದೀಕರಣಗೊಳಿಸಿದೆ ಮತ್ತು ಅವುಗಳ ವಿರುದ್ಧ ಕ್ರಮ  ಕೈಗೊಳ್ಳಬೇಕು ಎಂದು ಅದು ದೂರಿನಲ್ಲಿ ಮನವಿ ಮಾಡಿಕೊಂಡಿತು. ಕಳೆದವಾರ ಈ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಸುಪ್ರೀಮ್  ಕೋರ್ಟ್‍ನ ಮುಖ್ಯ ನ್ಯಾಯಮೂರ್ತಿ ಬೊಬ್ಡೆ ಅವರ ನೇತೃತ್ವದಲ್ಲಿ ಮೂವರು ಸದಸ್ಯರ ಪೀಠವು ಕೇಂದ್ರ ಸರಕಾರವನ್ನು ತರಾಟೆಗೆ  ಎತ್ತಿಕೊಂಡಿದೆ. ಕೋರ್ಟನ್ನು ಲಘುವಾಗಿ ಪರಿಗಣಿಸಬೇಡಿ ಎಂದು ಎಚ್ಚರಿಸಿದೆ. ಇದೇ ಸಂದರ್ಭದಲ್ಲಿ 

ಹಾರಾಷ್ಟ್ರ ಹೈಕೋರ್ಟೂ  ಮಾಧ್ಯಮಗಳ ಮೇಲೆ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ನಟ ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ಮಾಧ್ಯಮಗಳ  ವರ್ತನೆ ಸರಿಯಾಗಿರಲಿಲ್ಲ ಎಂದೂ ಹೇಳಿದೆ. ಹೇಗೆ ತನಿಖೆ ಮಾಡಬೇಕು ಎಂಬುದನ್ನು ನಿರ್ಧರಿಸಬೇಕಾದವರು ಯಾರು- ತ ನಿಖಾಧಿಕಾರಿಯೋ ಅಥವಾ ಮಾಧ್ಯಮವೋ ಎಂದು ಖಾರವಾಗಿ ಪ್ರಶ್ನಿಸಿದೆ. ವಿಶೇಷ ಏನೆಂದರೆ,

ಇದೇ ಸಂದರ್ಭದಲ್ಲಿ ಆಜ್‍ತಕ್, ಝೀನ್ಯೂಸ್, ನ್ಯೂಸ್ 24 ಮತ್ತು ಇಂಡಿಯಾ ಟಿ.ವಿ.ಗಳು ಕ್ಷಮೆ ಯಾಚಿಸಬೇಕೆಂದು ಸುದ್ದಿ ಪ್ರಸಾರ  ಮಾನದಂಡಗಳ ಪ್ರಾಧಿಕಾರ (NBSA) ಸೂಚಿಸಿರುವುದು. ಅಲ್ಲದೇ, ನಕಲಿ ಟ್ವೀಟ್ ಮಾಡಿರುವುದಕ್ಕಾಗಿ ಆಜ್‍ತಕ್ ಟಿ.ವಿ.ಗೆ 1 ಲಕ್ಷ  ರೂಪಾಯಿ ದಂಡವನ್ನೂ ವಿಧಿಸಿದೆ. ಸುಶಾಂತ್ ಪ್ರಕರಣವನ್ನು ಸಂವೇದನಾರಹಿತವಾಗಿ ಈ ಎಲ್ಲ ಟಿ.ವಿ. ಚಾನೆಲ್‍ಗಳು ಪ್ರಸಾರ  ಮಾಡಿವೆ ಎಂದು NBSA ದೂಷಿಸಿದೆ. ಇದರ ಜೊತೆಗೇ ಇನ್ನೊಂದು ಪ್ರಮುಖ ಬೆಳವಣಿಗೆಯೂ ನಡೆದಿದೆ. ಅದೇನೆಂದರೆ,  ಮುಂಬೈ ಪೊಲೀಸ್ ಆಯುಕ್ತ ಪರಮ್‍ವೀರ್ ಸಿಂಗ್ ನಡೆಸಿದ ಪತ್ರಿಕಾಗೋಷ್ಠಿ. ಟೆಲಿವಿಷನ್ ರೇಟಿಂಗ್ ಪಾಯಿಂಟ್ (ಟಿಆರ್‍ ಪಿ)ಗಾಗಿ  ರಿಪಬ್ಲಿಕ್ ಟಿ.ವಿ. ಸಹಿತ ಮೂರು ಚಾನೆಲ್‍ಗಳು ವಂಚನೆಯ ದಾರಿಯನ್ನು ಹಿಡಿದಿವೆ ಎಂಬುದಾಗಿ ಅವರು ಪತ್ರಿಕಾಗೋಷ್ಠಿಯಲ್ಲಿ  ಬಹಿರಂಗಪಡಿಸಿದ್ದಾರೆ.

ಟಿಆರ್‍ ಪಿ  ಎಂಬುದು ಟಿ.ವಿ.ಗಳ ಜಾಹೀರಾತು ದರವನ್ನು ನಿರ್ಧರಿಸುವ ಮಾನದಂಡ. ನಿಗದಿತ ಅವಧಿಯಲ್ಲಿ ಎಷ್ಟು ಮಂದಿ ಯಾವ  ಟಿ.ವಿ. ಚಾನೆಲ್‍ನ ಯಾವ ಕಾರ್ಯಕ್ರಮವನ್ನು ವೀಕ್ಷಿಸುತ್ತಾರೆ ಆ ಮತ್ತು ಆ ಕಾರ್ಯಕ್ರಮವನ್ನು ಎಷ್ಟು ಸಮಯ ನೋಡುತ್ತಾರೆ  ಎಂಬುದನ್ನು ಆಧರಿಸಿ ಟಿಆರ್‍ಪಿ ನಿಗದಿಯಾಗುತ್ತದೆ. ಟಿಆರ್‍ಪಿಯು ಜಾಹೀರಾತು ದರವನ್ನು ನಿಗದಿ ಮಾಡುವ  ಸಂಗತಿಯಾಗಿರುವುದರಿಂದ ಭಾರತೀಯ ಬ್ರಾಡ್‍ಕಾಸ್ಟಿಂಗ್ ಫೌಂಡೇಶನ್ ಜೊತೆ ವಿವಿಧ ಭಾರತೀಯ ಜಾಹೀರಾತು ಏಜೆನ್ಸಿಗಳು  ಸೇರಿಕೊಂಡು ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ (BARC)ನ್ನು ಸ್ಥಾಪಿಸಿವೆ. ದೇಶದೆಲ್ಲೆಡೆ ಆಯ್ದ 44 ಸಾವಿರ ಮನೆಗಳ  ಟಿವಿ ಸೆಟ್ ಬಾಕ್ಸ್‍ಗಳ ಜೊತೆ ಬಾರೋಮೀಟರ್ ಎಂಬ ವಿಶೇಷ ಸಾಧನವನ್ನು ಈ ಃಂಖಅ ಸಂಸ್ಥೆ ಅಳವಡಿಸುತ್ತದೆ. ಮತ್ತು ಈ  ಮನೆಗಳಿಂದ ಪಡೆಯಲಾಗುವ ದತ್ತಾಂಶವನ್ನು ಇಡೀ ದೇಶಕ್ಕೆ ಅನ್ವಯಿಸಲಾಗುತ್ತದೆ. ಆದ್ದರಿಂದಲೇ ಒಂದು ವಾಹಿನಿಯು ತಮ್ಮ  ಕಾರ್ಯಕ್ರಮ ವೀಕ್ಷಿಸುವಂತೆ ಒಂದೆರಡು ಮನೆಗಳನ್ನು ಪುಸಲಾಯಿಸಿದರೂ ಸಾಕು, ಲಕ್ಷಾಂತರ ಮಂದಿ ವೀಕ್ಷಿಸಿದ ದತ್ತಾಂಶ  ಲಭ್ಯವಾಗುವುದಲ್ಲದೇ, ಭಾರೀ ಮಟ್ಟದಲ್ಲಿ ಟಿಆರ್‍ಪಿ ಏರಿಕೆ ಆಗುತ್ತದೆ. ಹಾಗಂತ, 

ಬಾರೋಮೀಟರ್ ಅಳವಡಿಸಲಾಗಿರುವ ಮ ನೆಗಳೂ ನಿಗೂಢವಾಗಿರುವುದಿಲ್ಲ. ಯಾವ ಮನೆಯಲ್ಲಿ ಬಾರೋಮೀಟರ್ ಅಳವಡಿಸಲಾಗಿದೆಯೋ ಅವರಿಗೆ ಪ್ರತ್ಯೇಕ ಗುರುತಿನ  ಬಟನ್ ನೀಡಲಾಗುತ್ತದೆ. ಅವರು ಟಿ.ವಿ. ನೋಡುವ ಸಮಯದಲ್ಲಿ ತಮ್ಮ ಗುರುತಿನ ಬಟನ್ ಒತ್ತಬೇಕು. ಆಗ ಆ ವ್ಯಕ್ತಿ ಯಾವ  ಕಾರ್ಯಕ್ರಮ ವೀಕ್ಷಿಸುತ್ತಿದ್ದಾರೆ ಎಂಬುದು ಬಾರೋ ಮೀಟರ್‍ನಲ್ಲಿ ದಾಖಲಾಗುತ್ತದೆ. ಈಗಿರುವ ಆರೋಪ ಏನೆಂದರೆ, ಇಂಥ ಮ ನೆಗಳನ್ನು ರಿಪಬ್ಲಿಕ್ ಸಹಿತ ಮೂರು ಚಾನೆಲ್‍ಗಳು ಸಂಪರ್ಕಿಸಿವೆ. ತಮ್ಮ ಚಾನೆಲ್‍ನ ಕಾರ್ಯಕ್ರಮಗಳನ್ನೇ ವೀಕ್ಷಿಸುವಂತೆ ಅವರಿಗೆ  ಹಣ ನೀಡಿವೆ. ಆ ಮೂಲಕ ಕಳ್ಳದಾರಿಯಲ್ಲಿ ಟಿಆರ್‍ಪಿ ಹೆಚ್ಚಿಸಿಕೊಂಡಿವೆ.

ಮಾಧ್ಯಮಗಳು ಪ್ರಾಮಾಣಿಕವಾಗಿಲ್ಲ ಎಂಬುದು ಈ ಟಿಆರ್‍ಪಿ ವಿವಾದಕ್ಕಿಂತ ಮೊದಲೇ ಈ ದೇಶದ ಜನರಿಗೆ ಗೊತ್ತಿತ್ತು. ನಿರ್ದಿಷ್ಟ  ವಿಚಾರಧಾರೆಯ ಮತ್ತು ಪಕ್ಷದ ಪರ ಹಾಗೂ ನಿರ್ದಿಷ್ಟ ಸಮುದಾಯದ ವಿರುದ್ಧ ದೇಶದ ಪ್ರಮುಖ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‍ಗಳು ಅಸಂಖ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾ ಬಂದಿರುವುದು ಮತ್ತು ಬರುತ್ತಿರುವುದೂ ಎಲ್ಲರಿಗೂ ಗೊತ್ತು.  ಮುಂಬೈ ಪೊಲೀಸ್ ಆಯುಕ್ತರು ಈ ಅಭಿಪ್ರಾಯಕ್ಕೆ ಪುಷ್ಠಿಯನ್ನಷ್ಟೇ ನೀಡಿದ್ದಾರೆ. ಮಾಧ್ಯಮಗಳು ಸಾರ್ವಜನಿಕರನ್ನು ವಂಚಿಸುತ್ತಿವೆ  ಎಂಬುದಕ್ಕೆ ಅವರು ಸಾಕ್ಷ್ಯ ಸಮೇತ ಆಧಾರವನ್ನು ಕೊಟ್ಟಿದ್ದಾರೆ. ಇದೇವೇಳೆ, ಸುಪ್ರೀಮ್ ಕೋರ್ಟು ಮತ್ತು ಮುಂಬೈ  ಹೈಕೋರ್ಟ್‍ಗಳೂ ಮಾಧ್ಯಮಗಳ ಕಾರ್ಯನಿರ್ವಹಣೆಯ ಮೇಲೆ ಅಸಮಾಧಾನ ಸೂಚಿಸಿವೆ. NBSA ಅಂತೂ ಪ್ರಮುಖ ಟಿ.ವಿ.  ಚಾನೆಲ್‍ನ ಮೇಲೆಯೇ ದಂಡ ಹಾಕಿದೆ. ಕ್ಷಮೆ ಯಾಚಿಸುವಂತೆ ಹಲವು ಚಾನೆಲ್‍ಗಳಿಗೆ ಆಗ್ರಹಿಸಿದೆ. ಇವೆಲ್ಲ ಈ ದೇಶದ  ಮಾಧ್ಯಮಗಳ ಹೀನಾಯ ಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ.
ಪ್ರಜಾತಂತ್ರದ ಕಾವಲುನಾಯಿ ಎಂಬ ಗೌರವದಿಂದ ಆಡಳಿತಗಾರರ ಸಾಕು ನಾಯಿ ಎಂಬ ಅವಮಾನದೆಡೆಗೆ ಭಾರತೀಯ  ಮಾಧ್ಯಮಗಳು ಸಾಗಿರುವುದು ಅತ್ಯಂತ ವಿಷಾದಕರ, ಆಘಾತಕಾರಿ ಮತ್ತು ದುಃಖಕರ ಸಂಗತಿ. ಜನಾಕ್ರೋಶವೇ ಇದನ್ನು  ಬದಲಾಯಿಸುವುದಕ್ಕಿರುವ ಸೂಕ್ತ ದಾರಿ.

Saturday 17 October 2020

ದಣಿಗಳ ಬೆನ್ನು ಮಾಲೀಶು ಮಾಡುವ ಕಾನೂನು



ರೈತರಿಗೆ ಸಂಬಂಧಿಸಿದ 3 ಮಸೂದೆಗಳು ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಧ್ವನಿಮತದಿಂದ  ಅಂಗೀಕಾರಗೊಂಡು ಇದೀಗ ರಾಷ್ಟ್ರಪತಿಯವರೂ ಸಹಿ ಹಾಕುವುದರೊಂದಿಗೆ ಕಾನೂನಾಗಿ  ಪರಿವರ್ತನೆಯಾಗಿದೆ. ವಿಶೇಷ ಏನೆಂದರೆ, ಈ ಮೂರೂ ಮಸೂದೆಗಳನ್ನು ಜಾರಿಗೊಳಿಸಿದ್ದು ಕಳೆದ  ಜೂನ್ ತಿಂಗಳಲ್ಲಿ- ಸುಗ್ರೀವಾಜ್ಞೆಯ ಮೂಲಕ. ಇದನ್ನು ವಿರೋಧಿಸಿ ರೈತರು ಬೀದಿಗಿಳಿದ  ಸಂದರ್ಭದಲ್ಲೇ  ಪ್ರತಿಪಕ್ಷಗಳ ಆಕ್ಷೇಪವನ್ನು ಪರಿಗಣಿಸದೇ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ  ಅಂಗೀಕರಿಸಿಕೊಂಡ ಕೇಂದ್ರ ಸರಕಾರ, ಅಷ್ಟಕ್ಕೇ ಸಾಕು ಮಾಡದೇ ರೈತರು ಕರೆ ನೀಡಿರುವ ಕ ರ್ನಾಟಕ ಬಂದ್‍ಗಿಂತ ಒಂದು ದಿನ ಮೊದಲೇ ರಾಷ್ಟ್ರಪತಿಯವರಿಂದಲೂ ಅಂಗೀಕಾರ  ಪಡೆದುಕೊಂಡಿದೆ. ನಿಜಕ್ಕೂ ಕೇಂದ್ರ ಸರಕಾರವು ತನ್ನ ಮೂರು ಮಸೂದೆಗಳಾದ ರೈತರ ಉತ್ಪನ್ನ  ಮಾರಾಟ ಮತ್ತು ವಾಣಿಜ್ಯ (ಉತ್ತೇಜನ ಮತ್ತು ಸೌಲಭ್ಯ) ಮಸೂದೆ, ಬೆಲೆ ಭರವಸೆ ಮತ್ತು ಕೃಷಿ  ಸೇವೆಗಳ ಕುರಿತು ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆ ಹಾಗೂ ಅಗತ್ಯ  ಸಾಮಗ್ರಿಗಳ (ತಿದ್ದುಪಡಿ) ಮಸೂದೆಗಳ ಬಗ್ಗೆ ಪ್ರಾಮಾಣಿಕವಾಗಿದ್ದಿದ್ದರೆ, ಅದರ ಜಾರಿಗೆ ಇಷ್ಟೊಂದು  ಅವಸರದ ಅಗತ್ಯ ಏನಿತ್ತು? ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತರಬೇಕಾದ ಯಾವ ಅ ನಿವಾರ್ಯತೆ ಸೃಷ್ಟಿಯಾಗಿತ್ತು? ರಾಜ್ಯಸಭೆಯ 8 ಸದಸ್ಯರನ್ನು ಅಮಾನತು ಮಾಡಿ ಮತ್ತು ವಿಪಕ್ಷ  ಸದಸ್ಯರ ಮೈಕ್ ಅನ್ನು ಮ್ಯೂಟ್ ಮಾಡಿ ಮಸೂದೆಯನ್ನು ಅಂಗೀಕರಿಸಿಕೊಂಡ ಉದ್ದೇಶವೇನು?  ಅಂದಹಾಗೆ, ಸರಕಾರದ ಮೇಲೆ ಇಂಥದ್ದೊಂದು ಒತ್ತಡವನ್ನು ರೈತರು ತಂದಿಲ್ಲ. ವಿಪಕ್ಷಗಳೂ ತಂದಿಲ್ಲ. ಹಾಗಿದ್ದರೆ, ಈ ಮಸೂದೆಗಳನ್ನು ತರಾತುರಿಯಿಂದ ಜಾರಿ ಮಾಡುವಂತೆ ಸರಕಾರದ ಮೇಲೆ  ಒತ್ತಡ ಹಾಕಿದವರು ಯಾರು? ಅವರಿಗೂ ಸರಕಾರಕ್ಕೂ ಏನು ಸಂಬಂಧ?

ಈ ದೇಶದ ರೈತರಿಗೂ ಕೃಷಿ ಉತ್ಪನ್ನ ಮಾರಾಟ ಸಮಿತಿಗಳಿಗೂ (ಎಪಿಎಂಸಿ) ಬಿಟ್ಟಿರಲಾರದ  ನಂಟಿದೆ. ರೈತರು, ಮಧ್ಯವರ್ತಿಗಳು ಮತ್ತು ವ್ಯಾಪಾರಿಗಳನ್ನು ಒಳಗೊಂಡಿರುವ ಈ ಸಮಿತಿಗಳಿಂದ  ರೈತರಿಗೆ ಆಗುವ ಲಾಭ ಏನೆಂದರೆ, ಅವರ ಬೆಳೆಗಳಿಗೆ ಖಚಿತ ಆದಾಯವನ್ನು ಇವು ಖಾತರಿ ಪಡಿಸುತ್ತವೆ. ಸರಕಾರ ಕನಿಷ್ಠ ಬೆಂಬಲ ಬೆಲೆಯನ್ನು ಕೊಟ್ಟು ಈ ಮಂಡಿಗಳಿಂದ ಸರಕುಗಳನ್ನು  ಖರೀದಿಸುತ್ತದೆ ಮತ್ತು ದೇಶದಾದ್ಯಂತದ ಮಾರುಕಟ್ಟೆಗಳಿಗೆ ವಿತರಿಸುತ್ತದೆ. ಇದು ಈಗಿನ ವ್ಯವಸ್ಥೆ.  ಇಲ್ಲಿಂದ ಖರೀದಿಸಲಾದ ಆಹಾರ ಉತ್ಪನ್ನಗಳನ್ನು ಸಂಗ್ರಹಿಸಿಡುವುದು ಮತ್ತು ರಿಯಾಯಿತಿ ದರದಲ್ಲಿ  ದೇಶದ ಜನರಿಗೆ ಒದಗಿಸುವ ವ್ಯವಸ್ಥೆಯನ್ನೂ ಸರಕಾರ ಮಾಡುತ್ತಿದೆ. ಈ ದೇಶದಲ್ಲಿ ಇಂಥ 7000  ಎಪಿಎಂಸಿಗಳಿವೆ. ಅಲ್ಲದೇ, ಗೋಧಿ ಮತ್ತು ಅಕ್ಕಿಯನ್ನು ಬೆಳೆಯುವ ಬಹುಮುಖ್ಯ ರಾಜ್ಯಗಳೆಂದರೆ  ಪಂಜಾಬ್ ಮತ್ತು ಹರ್ಯಾಣ. ಪಂಜಾಬಿನ ಒಟ್ಟು ಗೋಧಿ ಮತ್ತು ಅಕ್ಕಿ ಉತ್ಪಾದನೆಯ ಪೈಕಿ 85%  ಮತ್ತು ಹರ್ಯಾಣದ 75% ಉತ್ಪನ್ನವು ಮಾರಾಟವಾಗುವುದೇ ಎಪಿಎಂಸಿಗಳ ಮೂಲಕ. ಅಂದರೆ  ಸರಕಾರದ ಕನಿಷ್ಠ ಬೆಂಬಲ ಬೆಲೆಯನ್ನು ಆಶ್ರಯಿಸಿಯೇ ರೈತರು ಬೆಳೆ ಬೆಳೆಯುತ್ತಿದ್ದಾರೆ.  ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾದರೂ ಸರಕಾರವು ಕನಿಷ್ಠ ಬೆಂಬಲ ಬೆಲೆ ನೀಡುವ ಮೂಲಕ  ರೈತರನ್ನು ಆದರಿಸುವ ಕ್ರಮ ಎಪಿಎಂಸಿ ಮೂಲಕ ಮಾಡುತ್ತಿದೆ. ಆದ್ದರಿಂದಲೇ,
 
ಸದ್ಯ ಮೂರು  ಮಸೂದೆಗಳ ಮೇಲೆ ಎದ್ದಿರುವ ಆಕ್ಷೇಪಗಳಲ್ಲಿ ಈ ಕನಿಷ್ಠ ಬೆಂಬಲ ಬೆಲೆಗೆ ಮುಖ್ಯ ಪಾತ್ರ ಇದೆ.  ಈ ಮಸೂದೆಗಳ ಪ್ರಕಾರ, ಇನ್ನು ಮುಂದೆ ರೈತರು ತಮ್ಮ ಬೆಳೆಯನ್ನು ಮಾರಾಟ ಮಾಡಲು  ಎಪಿಎಂಸಿಯನ್ನು ಆಶ್ರಯಿಸಬೇಕಿಲ್ಲ. ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಹಾಗೆ  ಮಾರಾಟ ಮಾಡುವ ರೈತರನ್ನು ಆಕ್ಷೇಪಿಸುವ ಯಾವ ಹಕ್ಕೂ ಎಪಿಎಂಸಿಗಳಿಗೆ ಇಲ್ಲ. ನಾಳೆ  ಯಾವುದೇ ಕಾರ್ಪೋರೇಟ್ ಕಂಪೆನಿ ಬಂದು ರೈತರಿಂದ ನೇರವಾಗಿ ಉತ್ಪನ್ನ ಖರೀದಿಸಬಹುದು.  ಎಪಿಎಂಸಿಗಿಂತ ಹೆಚ್ಚಿನ ಬೆಲೆಯನ್ನು ಕೊಟ್ಟು ಅವು ಖರೀದಿಸುವುದಕ್ಕೂ ಅವಕಾಶ ಇದೆ.  ಒಂದುವೇಳೆ, ಈ ಕಂಪೆನಿಗಳು ಎಪಿಎಂಸಿ ನಿಗದಿಪಡಿಸಿದ ಬೆಲೆಗಿಂತ ಕಡಿಮೆ ಬೆಲೆಯನ್ನು ನಿಗದಿ ಪಡಿಸಿದರೆ ರೈತ ತನ್ನ ಉತ್ಪನ್ನಗಳನ್ನು ಅವರಿಗೆ ಮಾರದೇ ಎಪಿಎಂಸಿಗಳ ಮೂಲಕವೇ  ಮಾರಬಹುದು ಎಂಬ ಅವಕಾಶವೂ ಮಸೂದೆಯಲ್ಲಿದೆ. ಒಂದುರೀತಿಯಲ್ಲಿ, ಮುಕ್ತ ಮಾರುಕಟ್ಟೆಗೆ  ರೈತರನ್ನು ದೂಡುವ ಪ್ರಯತ್ನ ಇದು ಎಂಬುದು ಸ್ಪಷ್ಟ. ಆದರೆ,

ರೈತರ ಆತಂಕವಿರುವುದೂ ಇಲ್ಲೇ. ಬೃಹತ್ ಕಾರ್ಪೋರೇಟ್ ಕಂಪೆನಿಗಳು ನಾಳೆ ರೈತರಿಂದ ಹೆಚ್ಚಿನ  ಬೆಲೆಗೆ ಉತ್ಪನ್ನಗಳನ್ನು ಖರೀದಿಸಬಹುದು. ಇದರಿಂದ ಉತ್ತೇಜಿತಗೊಳ್ಳುವ ರೈತರು ಎಪಿಎಂಸಿಯ ನ್ನು ನಿರ್ಲಕ್ಷಿಸಿ ಕಂಪೆನಿಗಳನ್ನೇ ಆಶ್ರಯಿಸಬಹುದು. ಇದರಿಂದಾಗಿ ಕೆಲವೇ ವರ್ಷಗಳಲ್ಲಿ  ಎಪಿಎಂಸಿಗಳು ನಾಶವಾಗಬಹುದು. ಇದರ ಬಳಿಕ ಕಾರ್ಪೋರೇಟ್ ಕಂಪೆನಿಗಳು ತಮ್ಮ ನಿಜವಾದ  ಮುಖವನ್ನು ಪ್ರದರ್ಶಿಸುವುದಕ್ಕೆ ಪ್ರಾರಂಭಿಸಬಹುದು. ರೈತರ ಉತ್ಪನ್ನಗಳಿಗೆ ತೀರಾ ಕನಿಷ್ಠ ಬೆಲೆಯನ್ನು ನಿಗದಿಗೊಳಿಸಿ, ಇಕ್ಕಟ್ಟಿಗೆ ಸಿಲುಕಿಸಬಹುದು. ಆದರೆ, ಇದನ್ನು ತಿರಸ್ಕರಿಸಿ ಎಪಿಎಂಸಿಗೆ  ಹೋಗುವ ಅವಕಾಶವೂ ಇರುವುದಿಲ್ಲ. ಯಾಕೆಂದರೆ, ಅದು ಆ ಮೊದಲೇ ನಾಶವಾಗಿರುತ್ತದೆ. ಆ  ಮೂಲಕ ಸರಕಾರ ಆವರೆಗೆ ರೈತ ಉತ್ಪನ್ನಗಳಿಗೆ ನೀಡುತ್ತಾ ಬಂದಿರುವ ಕನಿಷ್ಠ ಬೆಂಬಲ ಬೆಲೆಯೂ  ತನ್ನಿಂತಾನೇ ನಿಂತು ಹೋಗಿರುತ್ತದೆ. ಆದ್ದರಿಂದ ರೈತ ಅನ್ಯದಾರಿಯಿಲ್ಲದೇ ಕಾರ್ಪೋರೇಟ್ ಕಂಪೆ ನಿಗಳು ನಿಗದಿಗೊಳಿಸಿದ ಬೆಲೆಗೆ ತನ್ನ ಉತ್ಪನ್ನಗಳನ್ನು ಮಾರಲೇಬೇಕಾಗುತ್ತದೆ. ಬೆಳೆಯನ್ನು  ಬೆಳೆಯುವುದಕ್ಕೆ ತಗಲುವ ವೆಚ್ಚವು ಉತ್ಪನ್ನ ಮಾರಾಟದಲ್ಲಿ ಸರಿದೂಗದೇ ಹೋದಾಗ ರೈತ  ಒಂದೋ ಆತ್ಮಹತ್ಯೆ ಮಾಡಿಕೊಳ್ಳಬೇಕು ಅಥವಾ ತನ್ನ ಜಮೀನನ್ನು ಕಾರ್ಪೋರೇಟ್ ಕಂಪೆನಿಗಳಿಗೆ  ಬಿಟ್ಟುಕೊಟ್ಟು ಕೂಲಿಯಾಳಾಗಿ ದುಡಿಯಬೇಕು. ಒಂದುರೀತಿಯಲ್ಲಿ ಇದು ಪುನಃ ಹಿಮ್ಮುಖವಾಗಿ  ಚಲಿಸಿದಂತೆ. 

ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಗೊಳ್ಳುವ ಮೊದಲು ಈ  ದೇಶದಲ್ಲಿ ಬೃಹತ್ ಜಮೀನ್ದಾರರು ಮತ್ತು ಕೂಲಿಯಾಳುಗಳು ಎಂಬ ಪದ್ಧತಿ ಚಾಲ್ತಿಯಲ್ಲಿತ್ತು. ದಣಿ  ಮತ್ತು ಒಕ್ಕಲು ಎಂಬುದಾಗಿ ಸಾಮಾನ್ಯವಾಗಿ ಅದು ಗುರುತಿಸಿಕೊಳ್ಳುತ್ತಿತ್ತು. ಜಮೀನ್ದಾರ ಕೂತು  ಉಣ್ಣುತ್ತಿದ್ದ. ಆತನ ಜಮೀನಿನಲ್ಲಿ ಹಗಲೂ ರಾತ್ರಿ ಬೆವರು ಸುರಿಸುವ ರೈತ ಮತ್ತು ಕಾರ್ಮಿಕ ಋಣ  ಸಂದಾಯದಲ್ಲೇ  ಆಯುಷ್ಯವನ್ನು ಕಳೆಯುತ್ತಿದ್ದ. ಕೇಂದ್ರ ಸರಕಾರದ ಈ ಮಸೂದೆಗಳು  ಸುಮಾರಾಗಿ ರೈತರನ್ನು ಅದೇ ಸ್ಥಿತಿಗೆ ದೂಡುವ ಎಲ್ಲ ಸಾಧ್ಯತೆಗಳಿವೆ ಅನ್ನುವುದು ರೈತರ ಆತಂಕ.  ಅಲ್ಲದೇ ಕರ್ನಾಟಕದಲ್ಲಿ ಭೂಸುಧಾರಣಾ ಕಾಯ್ದೆಯನ್ನು ಇದರ ಜೊತೆಗೇ ಅಂಗೀಕರಿಸಲಾಗಿದೆ.  ರೈತರ ಕೃಷಿ ಭೂಮಿಯನ್ನು ಕಾರ್ಪೋರೇಟ್ ದೊರೆಗಳಿಗೆ ಖರೀದಿಸುವ ಅವಕಾಶ ಇನ್ನು ಮುಂದೆ  ಈ ಕಾಯ್ದೆಯ ಮೂಲಕ ಲಭ್ಯವಾಗಲಿದೆ. ಒಂದುಕಡೆ ರೈತರ ಉತ್ಪನ್ನಗಳನ್ನು ನೇರವಾಗಿ ಈ ಕಂ ಪೆನಿಗಳಿಗೆ ಖರೀದಿಸಲು ಮುಕ್ತ ಅವಕಾಶ ನೀಡುತ್ತಾ, ಇನ್ನೊಂದು ಕಡೆ ಇದೇ ಕಂಪೆನಿಗಳಿಗೆ ರೈತರ  ಕೃಷಿ ಭೂಮಿಯನ್ನು ಖರೀದಿಸುವುದಕ್ಕೂ ಬಾಗಿಲು ತೆರೆದುಕೊಂಡಂತಾಗುತ್ತದೆ. ಇದರಿಂದ ರೈತರಿಗೆ  ಲಾಭವಾಗುವ ಬದಲು ಅಂತಿಮವಾಗಿ ಅವರನ್ನು ಶೋಷಿಸುವುದಕ್ಕೆ ಈ ಕಂಪೆನಿಗಳಿಗೆ ಅವಕಾಶ  ಒದಗಬಹುದು ಎಂಬ ಭಯ ರೈತರಲ್ಲಿದೆ. ಈ ಆತಂಕ ನಿರ್ಲಕ್ಷಿಸುವಂಥದ್ದೂ ಅಲ್ಲ. ಆದ್ದರಿಂದ,  ಸರಕಾರಕ್ಕೆ ರೈತರ ಮೇಲೆ ಕಾಳಜಿ ಇರುವುದೇ ಆಗಿದ್ದಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು  ಎಪಿಎಂಸಿಯಂತೆಯೇ ಎಪಿಎಂಸಿ ಹೊರಗೂ ನಿಗದಿಗೊಳಿಸಿದರೆ ಮತ್ತು ಸರಕಾರ ನಿಗದಿಪಡಿಸುವ  ಬೆಲೆಗಿಂತ ಕಡಿಮೆ ಬೆಲೆಗೆ ಯಾವ ಕಾರ್ಪೋರೇಟ್ ಕಂಪೆನಿಯೂ ರೈತರಿಂದ ಉತ್ಪನ್ನ ಖರೀ ದಿಸದಂತೆ ಮಾಡುವ ನಿಯಮಗಳನ್ನು ಈ ಮಸೂದೆಗಳಲ್ಲಿ ಸೇರಿಸಬೇಕಿತ್ತು. ಹೀಗಾದರೆ ರೈತರನ್ನು  ಶೋಷಿಸುವುದಕ್ಕೆ ಕಂಪೆನಿಗಳಿಗೆ ಅವಕಾಶ ಇಲ್ಲದಂತಾಗುತ್ತದೆ. ವಿಪಕ್ಷಗಳೂ ಇದೇ ಬೇಡಿಕೆಯನ್ನು  ಮುಂದಿಟ್ಟಿವೆ.

ಬಹುಶಃ ಕೇಂದ್ರ ಸರಕಾರದ ಈಗಿನ ಅವಸರವನ್ನು ಮತ್ತು ದಮನಕಾರಿ ನೀತಿಯನ್ನು ನೋಡಿದರೆ  ಈ ಮೂಲ ಕಾನೂನುಗಳು ರೈತರ ಬದಲು ಕಾರ್ಪೋರೇಟ್ ಕಂಪೆನಿಗಳ ಹಿತವನ್ನು ದೃಷ್ಟಿಯ ಲ್ಲಿಟ್ಟುಕೊಂಡು ರೂಪಿಸಿರುವಂತಿದೆ. ರೈತರನ್ನು ದೇಶದ ಬೆನ್ನೆಲುಬು ಎಂದು ಕೊಂಡಾಡುತ್ತಲೇ ಉ ಪಾಯವಾಗಿ ಅವರ ಬೆನ್ನೆಲುಬನ್ನು ಮುರಿದು ಕಾರ್ಪೋರೇಟ್ ದಣಿಗಳ ಬೆನ್ನೆಲುಬನ್ನು ಮಾಲೀಶು  ಮಾಡುವ ಉದ್ದೇಶ ಹೊಂದಿರುವಂತಿದೆ. ಈ ನಡೆ ಅಪಾಯಕಾರಿ.

Thursday 1 October 2020

ಇದರಾಚೆಗೆ ಏನೂ ಹೇಳಬೇಕಿಲ್ಲ



ಯಾವುದೇ ಹೋರಾಟವನ್ನು ದಮನಿಸುವುದಕ್ಕೆ ಪ್ರಭುತ್ವ ಸಾಮಾನ್ಯವಾಗಿ ಎರಡು ತಂತ್ರಗಳನ್ನು ಹೆಣೆಯುತ್ತದೆ.

 1. ಹೋರಾಟದ ಮುಂಚೂಣಿಯಲ್ಲಿರುವವರನ್ನು ಖರೀದಿಸುವುದು. 
2. ಪೋಲೀಸ್ ಬಲವನ್ನು ಪ್ರಯೋಗಿಸುವುದು.

ಪ್ರಭುತ್ವದ ಜನವಿರೋಧಿ ನೀತಿಯನ್ನು ಪ್ರಶ್ನಿಸಿ ಹುಟ್ಟಿಕೊಳ್ಳುವ ಎಲ್ಲ ಹೋರಾಟಗಳಿಗೂ ಎದುರಾಗುವ ಸವಾಲು ಇದು. ಅನೇಕ ಹೋರಾಟಗಳು ಈ ಸವಾಲಿನ ಮುಂದೆ ಮಂಡಿಯೂರಿವೆ.  ಶರಣಾಗಿವೆ. ಪ್ರಭುತ್ವದ ಆಮಿಷವನ್ನು ಒಪ್ಪಿಕೊಂಡು ಹೋರಾಟದ ಕಣದಿಂದಲೇ ಮಾಯವಾದ ಹೋರಾಟಗಾರರೂ ಇದ್ದಾರೆ. ಇದೇವೇಳೆ, ಯಾವ ಕಾರಣಕ್ಕೂ ಪ್ರಭುತ್ವದೊಂದಿಗೆ  ರಾಜಿಯಾಗದೇ ಮತ್ತು ಖರೀದಿಗೆ ಒಳಗಾಗದೇ ಉಳಿದ ಹೋರಾಟಗಳೂ ಇವೆ. ಹೋರಾಟಗಾರರೂ ಇದ್ದಾರೆ. ಇಂಥವರನ್ನು ಬಗ್ಗುಬಡಿಯುವುದಕ್ಕೆ ಪ್ರಭುತ್ವ ಕಳ್ಳ ದಾರಿಯನ್ನು  ಹಿಡಿಯುತ್ತದೆ. ಅವರ ಮೇಲೆ ಸುಳ್ಳು ಕೇಸುಗಳನ್ನು ದಾಖಲಿಸುತ್ತದೆ. ಸಂಬಂಧವೇ ಇಲ್ಲದ ಪ್ರಕರಣಗಳನ್ನು ಅವರಿಗೆ ಜೋಡಿಸಿ ಕಿರುಕುಳ ಕೊಡುತ್ತದೆ.

ಉತ್ತರ ಪ್ರದೇಶದ ಡಾ. ಕಫೀಲ್ ಖಾನ್ ಇದಕ್ಕೊಂದು ಇತ್ತೀಚಿನ ಉದಾಹರಣೆ. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಅವರ ಮೇಲೆ ಸುಳ್ಳು ಕೇಸನ್ನು ದಾಖಲಿಸುವಾಗ, ಇದು ಸುಳ್ಳು ಎಂಬುದು  ಪೊಲೀಸರಿಗೂ ಗೊತ್ತಿರಲೇ ಬೇಕು. ಆದರೆ ಅಂಥದ್ದೊಂದು  ಕೇಸನ್ನು ದಾಖಲಿಸದೇ ಅವರ ಮುಂದೆ ಅನ್ಯ ದಾರಿ ಇರುವುದಿಲ್ಲ. ಆ ಕೇಸು ಪ್ರಭುತ್ವದ ಬಯಕೆ. ಆ ಬಯಕೆಯನ್ನು  ತಿರಸ್ಕರಿಸುವುದರಿಂದ ಮುಂದೆ ಏನೇನು ಸಮಸ್ಯೆಗಳು ಎದುರಾಗಬಹುದು ಎಂಬುದು ಪೊಲೀಸರಿಗೆ ಗೊತ್ತಿರುತ್ತದೆ. ಒಂದೋ ಸಸಿಕಾಂತ್ ಸೆಂಥಿಲ್‍ರಂತೆ ಅಥವಾ ಕಣ್ಣನ್ ಗೋಪಿನಾಥ ನ್‍ರಂತೆ ಆ ವರ್ತುಲದಿಂದ ಹೊರಬರಬೇಕು. ಇದು ಆಡಿದಷ್ಟು ಸುಲಭ ಅಲ್ಲ ಮತ್ತು ಹಾಗೆ ಹೊರಬರುವುದು ಸಮಸ್ಯೆಗೆ ಪರಿಹಾರವೇ ಎಂಬ ಪ್ರಶ್ನೆಯೂ ಹುಟ್ಟಿಕೊಳ್ಳುತ್ತದೆ. ಮಿಥ್ಯವೇ  ತುಂಬಿಕೊಂಡಿರುವ ಮನೆಯಲ್ಲಿ ಸತ್ಯ ಅವಮಾನವನ್ನಲ್ಲದೇ ಯಶಸ್ಸನ್ನು ಸಾಧಿಸದು ಎಂದು ವಾದಿಸುವವರು ಇರುವಂತೆಯೇ ಸತ್ಯ ಅಲ್ಲೇ ಇದ್ದು ತನಗಿರುವ ಸೀಮಿತ ಅವಕಾಶವನ್ನು  ಬಳಸಿಕೊಂಡೇ ಮಿಥ್ಯದ ವಿರುದ್ಧ ಸಮರ ಸಾರಬೇಕು ಎಂದು ವಾದಿಸುವವರೂ ಇದ್ದಾರೆ. ಇವೆರಡೂ ತಿರಸ್ಕರಿಸಲಾಗದ ವಾದಗಳು. ಡಾ. ಕಫೀಲ್ ಖಾನ್‍ರ ಮೇಲೆ ರಾಷ್ಟ್ರೀಯ ಭದ್ರತಾ  ಕಾಯ್ದೆಯಡಿ ಪ್ರಕರಣ ದಾಖಲಿಸುವಾಗ ಪೊಲೀಸರ ಒಳಮನಸ್ಸನ್ನು ಇವು ಕಾಡಿರಬಹುದು. ತಾವು ಅಸತ್ಯಕ್ಕೆ ಸಾಕ್ಷ್ಯ ವಹಿಸುತ್ತಿದ್ದೇವೆ ಎಂಬ ಅಪರಾಧಿ ಭಾವ ಸುಳಿದು ಹೋಗಿರಲೂ ಬಹುದು.  ಆದರೆ ಪ್ರಭುತ್ವವನ್ನು ಎದುರು ಹಾಕಿಕೊಳ್ಳುವುದು ಸುಲಭವಲ್ಲ. ಹಾಗಂತ,

ಇದು ಕೇವಲ ಕಫೀಲ್ ಖಾನ್‍ಗೆ ಸಂಬಂಧಿಸಿ ಮಾತ್ರ ಹೇಳಬೇಕಾದುದಲ್ಲ. ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ಪ್ರಭುತ್ವ ಶತ್ರುಗಳಂತೆ ಬೆನ್ನಟ್ಟುತ್ತಿದೆ. ಸಿಎಎ ಪ್ರತಿಭಟನೆಯಲ್ಲಿ  ತೊಡಗಿಸಿಕೊಂಡಿದ್ದವರನ್ನು ದೆಹಲಿ ಸಂಘರ್ಷದೊಂದಿಗೆ ಜೋಡಿಸಿ ಬಂಧಿಸುತ್ತಿದೆ. ದೆಹಲಿ ಗಲಭೆಗೆ ಸಿಎಎ ವಿರೋಧಿ ಪ್ರತಿಭಟನಾಕಾರರೇ ಕಾರಣ ಎಂಬ ರೀತಿಯಲ್ಲಿ ಪ್ರಭುತ್ವ ವರ್ತಿಸುತ್ತಿದೆ.  ಸೆಪ್ಟೆಂಬರ್ ಒಂದರಂದು ಅಲಿಘರ್ ಜೈಲಿನಿಂದ ಬಿಡುಗಡೆಗೊಂಡ ಶರ್ಜೀಲ್ ಉಸ್ಮಾನಿಯ ಪ್ರಕರಣ ಇದರಲ್ಲಿ ಒಂದು. ಸಿಎಎ ಪ್ರತಿಭಟನೆಯ ವೇಳೆ ಅಲೀಘರ್ ವಿವಿಯ ವಿದ್ಯಾರ್ಥಿಗಳನ್ನು  ಉಸ್ಮಾನಿ ಪ್ರಚೋದಿಸಿದ್ದಾನೆ ಎಂಬ ಆರೋಪದಲ್ಲಿ ಜುಲೈಯಲ್ಲಿ ಪೊಲೀಸರು ಬಂಧಿಸಿದ್ದರು. 10 ವರ್ಷದ ಹಿಂದೆ ಭಾರತದ ಗುಪ್ತಚರ ಇಲಾಖೆಯು ನೇಪಾಳದಲ್ಲಿ ಭಯೋತ್ಪಾದಕರನ್ನು ಸೆರೆ  ಹಿಡಿದಿತ್ತು. ಅವರ ಬಗ್ಗೆ ನಿನಗೆ ಎಷ್ಟು ಗೊತ್ತಿದೆ, ಅವರೆಲ್ಲ ನಿನ್ನ ಊರಿನವರಾಗಿದ್ದಾರೆ.. ಎಂಬಿತ್ಯಾದಿ ಪ್ರಶ್ನೆಗಳನ್ನು ನನ್ನಲ್ಲಿ ಕೇಳಲಾಗಿತ್ತು ಎಂದಾತ ದಿ ಹಿಂದೂ ಪತ್ರಿಕೆಯೊಂದಿಗೆ ಮಾತಾಡುತ್ತಾ  ಹೇಳಿದ್ದಾರೆ. ಮಾತ್ರವಲ್ಲ, ಸಿಎಎ ಅಥವಾ ಅಲೀಘರ್ ವಿವಿಯ ಹಿಂಸೆಯ ಬಗ್ಗೆ ನನ್ನಲ್ಲಿ ಒಂದೇ ಒಂದು ಪ್ರಶ್ನೆಯನ್ನೂ ಕೇಳಿಲ್ಲ ಎಂದೂ ಆತ ಹೇಳಿದ್ದಾನೆ. ಅಂದರೆ ಇದೊಂದು ಬಗೆಯ  ದಬ್ಬಾಳಿಕೆ. ಭೀತಿ ಹುಟ್ಟಿಸುವ ಪ್ರಕ್ರಿಯೆ. ಮುಂದೆಂದೂ ಇಂಥ ಹೋರಾಟಗಳಲ್ಲಿ ತೊಡಗಿಸಿಕೊಳ್ಳಬಾರದು ಎಂಬ ಪರೋಕ್ಷ ಎಚ್ಚರಿಕೆ. ಅಂದಹಾಗೆ,

ಸಿಎಎ ವಿರೋಧಿ ಹೋರಾಟಕ್ಕೆ ಆಮ್ಲಜನಕ ದೊರಕಿದ್ದೇ  ವಿಶ್ವವಿದ್ಯಾಲಯಗಳಿಂದ. ಅಲಿಘರ್ ವಿವಿಯಲ್ಲಿ ಹುಟ್ಟಿಕೊಂಡ ಹೋರಾಟದ ಈ ಕಿಡಿ ಆ ಬಳಿಕ ಜಾಮಿಯಾ ಮಿಲ್ಲಿಯಾ  ವಿಶ್ವವಿದ್ಯಾಲಯದಲ್ಲಿ ಬೃಹದಾಕಾರವನ್ನು ಪಡೆದುಕೊಂಡು ಅಲ್ಲಿಂದ ದೇಶವ್ಯಾಪಿಯಾಗಿ ಹರಡಿಕೊಂಡಿತು. ಮುಸ್ಲಿಮರ ಹೋರಾಟವಾಗಿ ಮಾರ್ಪಡಬೇಕಾದ ಪ್ರತಿಭಟನೆಯೊಂದು ವಿದ್ಯಾರ್ಥಿಗಳ  ಚಳವಳಿಯಾಗಿ ನಿಧಾನಕ್ಕೆ ರೂಪಾಂತರ ಹೊಂದುತ್ತಿರುವುದನ್ನು ಕಂಡು ಪ್ರಭುತ್ವ ಭಯಕ್ಕೆ ಬಿತ್ತು. ಈ ಹೋರಾಟದ ನೊಗವನ್ನು ವಿದ್ಯಾರ್ಥಿಗಳು ಎತ್ತಿಕೊಳ್ಳುವುದೆಂದರೆ, ಅದಕ್ಕೆ ಪಕ್ಷರಹಿತ ಮತ್ತು  ಧರ್ಮರಹಿತ ವರ್ಚಸ್ಸು ಲಭ್ಯವಾಗಬಹುದು ಎಂಬ ಆತಂಕ ಎದುರಾಯಿತು. ಆದ್ದರಿಂದಲೇ, ಚಳವಳಿಯ ನೇತೃತ್ವವನ್ನು ವಿದ್ಯಾರ್ಥಿಗಳು ವಹಿಸಿಕೊಂಡಿದ್ದರೂ ಅದನ್ನು ಬರೇ ಮುಸ್ಲಿಮರ  ಹೋರಾಟವೆಂಬಂತೆ ಬಿಂಬಿಸುವುದಕ್ಕೆ ಪ್ರಭುತ್ವ ತಂತ್ರ ಹೂಡಿತು. ಪ್ರಭುತ್ವವನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳು ಕೇವಲ ಮುಸ್ಲಿಮರನ್ನು ಮಾತ್ರ ಗುರಿಯಾಗಿಸಿಕೊಂಡು ಹೇಳಿಕೆ  ನೀಡತೊಡಗಿದರು. ದೆಹಲಿಯ ಶಾಹೀನ್‍ಭಾಗ್‍ನ ಪ್ರತಿಭಟನೆಯನ್ನು ನಿರಂತರ ಪ್ರಶ್ನೆಗೆ ಗುರಿಪಡಿಸಲಾಯಿತು. ಶಾಹೀನ್‍ಬಾಗ್ ಪ್ರತಿಭಟನೆಯನ್ನು ಮತ್ತೆ ಮತ್ತೆ ಉಲ್ಲೇಖಿಸುವುದರಿಂದ ಮತ್ತು  ಅಲ್ಲಿನ ಪ್ರತಿಭಟನಾ ನಿರತರನ್ನು ಪದೇ ಪದೇ ಟಿ.ವಿ. ಮಾಧ್ಯಮಗಳಲ್ಲಿ ತೋರಿಸುವುದರಿಂದ ಪ್ರತಿಭಟನೆಗೆ ನಿರ್ದಿಷ್ಟ ಧರ್ಮದ ಬಣ್ಣ ಬಳಿಯಲು ಸುಲಭ ಎಂಬುದಾಗಿ ಪ್ರಭುತ್ವ  ಭಾವಿಸಿಕೊಂಡಿತು. ಕೊನೆಗೆ,

ಶಾಹೀನ್‍ಬಾಗ್, ಜಾಫ್ರಾಬಾದ್ ಇತ್ಯಾದಿ ಪ್ರತಿಭಟನಾ ನಿರತರನ್ನು ಆರೋಪಿ ಸ್ಥಾನದಲ್ಲಿ ಕೂರಿಸಿಕೊಂಡೇ ದೆಹಲಿ ಗಲಭೆಗೆ ಕಾರಣಗಳನ್ನು ಹುಡುಕಲಾಯಿತು. ಸಿಎಎ ವಿರೋಧಿ ಪ್ರತಿಭಟ ನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಒಬ್ಬೊಬ್ಬರನ್ನೇ ಗುರಿ ಮಾಡಿಕೊಂಡು ಬಂಧಿಸಲಾಯಿತು. ಸಫೂರಾ ಝರ್ಗರ್, ನತಾಶಾ ನರ್ವಾಲ್, ದೇವಾಂಗನಾ ಕಲಿಟ್ರಾ, ಮೀರಾನ್ ಹೈದರ್,  ಗುಲ್‍ಫಿಶಾ ಖಾತೂನ್, ಇಕ್ಬಾಲ್ ತನ್ಹಾ ಮುಂತಾದ ಅನೇಕರು ಬಂಧನಕ್ಕೊಳಗಾದರು. ಅಲ್ಲದೇ, ಉಮರ್ ಖಾಲಿದ್ ಸಹಿತ ಅನೇಕ ವಿದ್ಯಾರ್ಥಿ ಹೋರಾಟಗಾರರಿಗೆ ದೆಹಲಿ ಪೆÇಲೀಸರು  ನಿರಂತರ ಸಮನ್ಸ್ ಕಳುಹಿಸುತ್ತಿದ್ದಾರೆ. ಈ ಬಗ್ಗೆ ದೆಹಲಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಯೋಗೇಂದ್ರ ಯಾದವ್, ಹರ್ಷ ಮಂದರ್, ಕವಲ್‍ಪ್ರೀತ್ ಕೌರ್, ಉಮರ್ ಖಾಲಿದ್  ಮುಂತಾದವರು ವಿವರಗಳನ್ನು ಹಂಚಿಕೊಂಡಿದ್ದಾರೆ.

ಪ್ರಭುತ್ವ ಮತ್ತು ಪ್ರತಿಭಟನೆ- ಇವೆರಡೂ ಶತ್ರುಗಳಲ್ಲ. ಪ್ರಜಾತಂತ್ರದಲ್ಲಿ ನಂಬಿಕೆಯಿಲ್ಲದವರಿಗೆ ಮಾತ್ರ ಪ್ರತಿಭಟನೆಯನ್ನು ಶತ್ರುವಿನಂತೆ ಕಾಣುವುದಕ್ಕೆ ಸಾಧ್ಯ. ಪ್ರತಿಭಟನೆಗೆ ಅವಕಾಶ ಇಲ್ಲದ ಕಡೆ  ನಿರಂಕುಶತೆ ಬೆಳೆಯುತ್ತದೆ. ನಿಜವಾಗಿ, ಸಿಎಎ ಕಾಯ್ದೆಯನ್ನು ರಚಿಸುವ ಸ್ವಾತಂತ್ರ್ಯ ಪ್ರಭುತ್ವಕ್ಕೆ ಇರುವಂತೆಯೇ ಅದನ್ನು ವಿರೋಧಿಸುವ ಸ್ವಾತಂತ್ರ್ಯ ಆ ಪ್ರಭುತ್ವವನ್ನು ಚುನಾಯಿಸಿದ  ನಾಗರಿಕರಿಗೂ ಇದೆ. ಆ ಪ್ರತಿಭಟನಾ ಧ್ವನಿಯನ್ನು ಸಂಯಮದಿಂದ ಆಲಿಸಬೇಕಾದುದು ಪ್ರಭುತ್ವದ ಕರ್ತವ್ಯ. ಆದರೆ, ಸಿಎಎ ಕಾಯ್ದೆಯನ್ನು ಜಾರಿಗೆ ತಂದ ಪ್ರಭುತ್ವವನ್ನು ಅದಕ್ಕೆ ಎದುರಾದ  ವಿರೋಧವನ್ನು ಸಹಿಸಿಕೊಳ್ಳಲು ಸಿದ್ಧವಾಗಲಿಲ್ಲ. ವಿರೋಧವನ್ನೇ ದೇಶದ್ರೋಹದಂತೆ ಮತ್ತು ಷಡ್ಯಂತ್ರದಂತೆ ಬಿಂಬಿಸಲು ಯತ್ನಿಸಿತು. ಗೋಲೀಬಾರನ್ನು ನಡೆಸಿತು. ತನ್ನದೇ ನಾಗರಿಕರನ್ನು  ಇಷ್ಟೊಂದು ಕೆಟ್ಟದಾಗಿ ನಡೆಸಿಕೊಂಡ ಘಟನೆ ತುರ್ತುಸ್ಥಿತಿಯ ಬಳಿಕದ ಭಾರತದಲ್ಲಿ ಬಹುಶಃ ಇದೇ ಮೊದಲು. ತಾನು ಮಾಡಿದ್ದೇ  ಕಾನೂನು ಮತ್ತು ಹೇಳಿದ್ದೇ  ನ್ಯಾಯ ಎಂಬ ರೀತಿಯಲ್ಲಿ  ಯಾವುದೇ ಪ್ರಭುತ್ವ ವರ್ತಿಸುವುದು ಪ್ರಜಾತಂತ್ರದ ಉಳಿವಿನ ದೃಷ್ಟಿಯಿಂದ ಅತ್ಯಂತ ಅಪಾಯಕಾರಿ. ಪ್ರಜಾತಂತ್ರದಲ್ಲಿ ನಾಗರಿಕರ ಅಭಿಪ್ರಾಯವೇ ಅಂತಿಮ. ನಾಗರಿಕರನ್ನು ಹೊರತುಪಡಿಸಿ  ಪ್ರಭುತ್ವವೇ ಇಲ್ಲ. ಇದೊಂದು ಉದಾತ್ತ ಪರಿಕಲ್ಪನೆ. ಆದರೆ 

ಕೆಲವೊಮ್ಮೆ ಪ್ರಭುತ್ವ ಪ್ರಜಾತಂತ್ರದ ಈ ಮೂಲ ಆಶಯವನ್ನೇ ತಾರುಮಾರುಗೊಳಿಸಿ ಬೀಗುವುದಿದೆ. ನಾಗರಿಕರ ಮೇಲೆಯೇ  ದಬ್ಬಾಳಿಕೆ, ದೌರ್ಜನ್ಯ ನಡೆಸುವುದಿದೆ. 1975ರಲ್ಲಿ ಇಂದಿರಾಗಾಂಧಿ ಈ ಸಾಹಸಕ್ಕೆ ಕೈ ಹಾಕಿದ್ದರು ಮತ್ತು ಬಳಿಕ ಎಂದೂ ಮರೆಯಲಾಗದ ಉತ್ತರವನ್ನೂ ಈ ದೇಶದ ನಾಗರಿಕರು ಕೊಟ್ಟಿದ್ದರು.  ಇದರಾಚೆಗೆ ಏನೂ ಹೇಳಬೇಕಿಲ್ಲ.