Wednesday 28 October 2020

ಇಂಥ ಪೋಸ್ಟರನ್ನು ಮಸೀದಿ, ಮದ್ರಸಗಳ ಎದುರು ತೂಗು ಹಾಕೋಣ..



ಈ ಬಾರಿಯ ನೀಟ್ (NEET) ಪರೀಕ್ಷಾ ಫಲಿತಾಂಶ ಪ್ರಕಟವಾದ ಕೂಡಲೇ ನೆಟ್ಟಿಗರು ಸುದರ್ಶನ್ ಟಿ.ವಿ.ಯ ಸುರೇಶ್  ಚಾವ್ಲಾಂಕೆಯ ಕಾಲೆಳೆದಿದ್ದರು. `ನೀಟ್ ಜಿಹಾದ್' ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡು ಎಂದು ಕುಟುಕಿದ್ದರು. ಇದಕ್ಕೆ ಕಾರಣ  ಏನೆಂದರೆ, ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಒಡಿಸ್ಸಾದ ಶುಐಬ್ ಅಖ್ತರ್ ಮೊದಲ ರಾಂಕ್  ಪಡೆದಿರುವುದು. ಒಟ್ಟು 720  ಅಂಕಗಳ ಈ ಪರೀಕ್ಷೆಯಲ್ಲಿ ಪೂರ್ತಿ 720 ಅಂಕಗಳನ್ನೂ ಪಡೆಯುವ ಮೂಲಕ ಈ ವಿದ್ಯಾರ್ಥಿ ದೇಶದ ಗಮನ ಸೆಳೆದಿದ್ದಾರೆ. 

ಈ  ಪರೀಕ್ಷಾ ಫಲಿತಾಂಶಕ್ಕಿಂತ ಒಂದು ತಿಂಗಳ ಹಿಂದಷ್ಟೇ ಸುದರ್ಶನ್ ಟಿ.ವಿ. ಸುದ್ದಿಯಲ್ಲಿತ್ತು. ಯುಪಿಎಸ್‍ಸಿ ಜಿಹಾದ್ ಎಂಬ ಹೆಸರಲ್ಲಿ  ಅದು ಕಾರ್ಯಕ್ರಮಗಳನ್ನು ಪ್ರಸಾರ ಮಾಡಿತ್ತು. ಅದೊಂದು ಸರಣಿ ಕಾರ್ಯಕ್ರಮವಾಗಿದ್ದು, 4 ಕಾರ್ಯಕ್ರಮಗಳು ಪ್ರಸಾರವಾದ  ಕೂಡಲೇ ಸುಪ್ರೀಮ್ ಕೋರ್ಟು ಮಧ್ಯಪ್ರವೇಶಿಸಿ ಮುಂದಿನ ಕಾರ್ಯಕ್ರಮದ ಮೇಲೆ ತಡೆ ವಿಧಿಸಿತ್ತು. ಯುಪಿಎಸ್‍ಸಿ ಪರೀಕ್ಷೆಯಲ್ಲಿ  ತೇರ್ಗಡೆಯಾದವರನ್ನು ವಿದೇಶಾಂಗ, ಪೊಲೀಸ್ ಸೇರಿದಂತೆ ದೇಶದ ಆಡಳಿತಾಂಗ ವ್ಯವಸ್ಥೆಗೆ ಭರ್ತಿ ಮಾಡಲಾಗುತ್ತಿದ್ದು, ಇಲ್ಲೊಂದು ಜಿಹಾದ್ ನಡೆಯುತ್ತಿದೆ ಎಂಬುದು ಚಾವ್ಲಾಂಕೆಯ ಆರೋಪವಾಗಿತ್ತು. ದೆಹಲಿಯ ಜಾಮಿಯಾ ವಿವಿ, ಮುಂಬೈಯ ಝಕಾತ್  ಫೌಂಡೇಶನ್‍ಗಳು ಮುಸ್ಲಿಮ್ ಸಮುದಾಯದ ವಿದ್ಯಾರ್ಥಿಗಳಿಗಾಗಿ ಯುಪಿಎಸ್‍ಸಿ ಪರೀಕ್ಷಾ ತರಬೇತಿ ನೀಡುವ ಮೂಲಕ ಸಂಚು  ರೂಪಿಸುತ್ತಿದೆ ಎಂಬುದು ಅವರ ವಾದವಾಗಿತ್ತು. ವಿಶೇಷ ಏನೆಂದರೆ, 

ಸಂಘಪರಿವಾರದ ಹಿಡಿತದಲ್ಲಿರುವ ಸಂಕಲ್ಪ್ ಫೌಂಡೇಶನ್  ಎಂಬ ಸಂಸ್ಥೆಯು 1986ರಿಂದಲೇ ಯುಪಿಎಸ್‍ಸಿಗಾಗಿ ಭಾರೀ ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾ ಬರುತ್ತಿದೆ.  ಮಾತ್ರವಲ್ಲ, ಪ್ರತಿವರ್ಷದ ಫಲಿತಾಂಶದಲ್ಲಿ ಸಿಂಹಪಾಲು ಈ ಸಂಸ್ಥೆಯ ವಿದ್ಯಾರ್ಥಿಗಳೇ ಪಡೆಯುತ್ತಿದ್ದಾರೆ. ಯುಪಿಎಸ್‍ಸಿ ಪರೀಕ್ಷೆಯಲ್ಲಿ  ತೇರ್ಗಡೆಯಾದ ಒಟ್ಟು ವಿದ್ಯಾರ್ಥಿಗಳ ಪೈಕಿ ಸುಮಾರು 60% ವಿದ್ಯಾರ್ಥಿಗಳು ಸಂಕಲ್ಪ್ ಫೌಂಡೇಶನ್‍ನಲ್ಲಿ ತರಬೇತಿ ಪಡೆದವರೇ  ಆಗಿರುತ್ತಾರೆ. ಸುರೇಶ್ ಚಾವ್ಲಾಂಕೆ ಹೇಳದೇ ಹೋದ ಈ ಸತ್ಯವು ಬಹಿರಂಗಕ್ಕೆ ಬಂದದ್ದೂ ಯುಪಿಎಸ್‍ಸಿ ಜಿಹಾದ್ ಕಾರ್ಯಕ್ರಮದಿಂದಾಗಿ ಎಂಬುದೂ ಬಹುಮುಖ್ಯ.

ದೇಶದಲ್ಲಿ 542 ಸರಕಾರಿ ಮತ್ತು ಖಾಸಗಿ ಮೆಡಿಕಲ್ ಕಾಲೇಜುಗಳಿವೆ. ಇಲ್ಲಿರುವ ಒಟ್ಟು 80,035 ಸೀಟುಗಳನ್ನು  ತುಂಬಿಸಿಕೊಳ್ಳುವುದು ನೀಟ್ ಪರೀಕ್ಷೆಯ ಫಲಿತಾಂಶದ ಆಧಾರದಲ್ಲಿ. ವೈದ್ಯಕೀಯ (ಎಂಬಿಬಿಎಸ್) ಮತ್ತು ದಂತ ವೈದ್ಯಕೀಯ  (ಬಿಡಿಎಸ್) ಕಲಿಯಲಿಚ್ಛಿಸುವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಕೊರೋನಾದ ಕಾರಣದಿಂದಾಗಿ ಈ ಬಾರಿ ನೀಟ್ ಪರೀಕ್ಷೆ ತೂಗುಯ್ಯಾಲೆಯಲ್ಲಿತ್ತು. ಕೊನೆಗೆ ಸೆ. 13 ಮತ್ತು 14ರಂದು ಪರೀಕ್ಷೆಗಳು ನಡೆದುವು ಮತ್ತು  ಅಕ್ಟೋಬರ್ 16ರಂದು ಫಲಿತಾಂಶವೂ ಪ್ರಕಟವಾಯಿತು. ಈ ಪರೀಕ್ಷೆ ಬರೆಯುವುದಾಗಿ ಒಟ್ಟು 15,97,435 ಮಂದಿ ತಮ್ಮ ಹೆಸರನ್ನು  ನೋಂದಾಯಿಸಿದ್ದರು. ಆದರೆ, ಪರೀಕ್ಷೆಗೆ ಹಾಜರಾಗಿರುವುದು 13,66,945 ಮಂದಿ. ಈ ವ್ಯತ್ಯಾಸಕ್ಕೆ ಮುಖ್ಯ ಕಾರಣ ಕೊರೋನಾ.  ಅಂದಹಾಗೆ, 

ಹಿಂದಿನ ವರ್ಷದಂಥ  ವಾತಾವರಣ ಈ ಬಾರಿಯದ್ದಲ್ಲ. ಸಹಜ ಸಂಚಾರಕ್ಕೂ ತೊಡಕಿದೆ. ಗುಂಪು ಕಲಿಕೆಗೂ ಅಡಚಣೆಯಿದೆ. ದೈಹಿಕ ಅಂತರ, ಮಾಸ್ಕ್,  ಸ್ಯಾನಿಟೈಸರ್ ಇತ್ಯಾದಿ ರಗಳೆಗಳ ನಡುವೆ ಈ ಬಾರಿಯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಆದ್ದರಿಂದಲೇ, ಪರೀಕ್ಷೆಯಲ್ಲಿ  ಪೂರ್ಣಾಂಕವನ್ನು ಪಡೆದ ಶುಐಬ್ ಅಖ್ತರ್ ಮತ್ತು ದೆಹಲಿಯ ಆಕಾಂಕ್ಷಾ ಸಿಂಗ್‍ರಿಗೆ ವಿಶೇಷ ಅಭಿನಂದನೆಯನ್ನು ಸಲ್ಲಿಸಬೇಕು.  ಮುಖ್ಯವಾಗಿ ಸುರೇಶ್ ಚಾವ್ಲಾಂಕೆಯ ಯುಪಿಎಸ್‍ಸಿ ಜಿಹಾದ್ ಕಾರ್ಯಕ್ರಮಕ್ಕೆ ಸಡ್ಡು ಹೊಡೆಯಲೋ ಎಂಬಂತೆ ಶುಐಬ್ ಅಖ್ತರ್  ಅದ್ಭುತ ಸಾಧನೆ ಮಾಡಿದ್ದಾನೆ. ನೀಟ್ ಪರೀಕ್ಷೆಯಲ್ಲಿ ಮೊದಲಿಗನಾಗಿ ಗುರುತಿಸಿಕೊಳ್ಳುವುದೆಂದರೆ, ಅದು ಸುಲಭದ ಸಾಧನೆಯಲ್ಲ.  ಅಂಚಿನಲ್ಲಿರುವ ಸಮುದಾಯದ ವ್ಯಕ್ತಿ ಎಂಬ ನೆಲೆಯಲ್ಲಿ ಈ ಸಾಧನೆ ಬಹಳ ಮಹತ್ವಪೂರ್ಣ. ಅದೇರೀತಿಯಲ್ಲಿ, 12ನೇ ರಾಂಕ್  ಪಡೆದ ಕೇರಳದ ಆಯಿಷಾ, 18ನೇ ರಾಂಕ್  ಪಡೆದ ಆಂಧ್ರಪ್ರದೇಶದ ಶೈಕ್ ಕೊಥವಲ್ಲಿ, 25ನೇ ರಾಂಕ್  ಪಡೆದ ಕೇರಳದ ಸಾನಿಶ್  ಅಹ್ಮದ್, 66ನೇ ರಾಂಕ್  ಪಡೆದ ಕೇರಳದ ಫರ್‍ಹೀನ್, 8ನೇ ರಾಂಕ್  ಪಡೆದ ಉತ್ತರ ಪ್ರದೇಶದ ಮುಹಮ್ಮದ್ ಶಾಹಿದ್-  ಇವರೆಲ್ಲರನ್ನೂ ಸ್ಮರಿಸಿಕೊಳ್ಳುವುದು ಇಲ್ಲಿ ಬಹುಮುಖ್ಯ. ಇವರ ಜೊತೆಗೇ 922ನೇ ರಾಂಕ್  ಪಡೆದು ಗೋವಾಕ್ಕೆ ಟಾಪರ್ ಆಗಿ  ಮೂಡಿ ಬಂದಿರುವ ಶೈಕ್ ರುಬಿಯಾ, 2306ನೇ ರಾಂಕ್ ನೊಂದಿಗೆ ಲಕ್ಷದ್ವೀಪಕ್ಕೆ ಟಾಪರ್ ಆಗಿರುವ ಮುಹಮ್ಮದ್ ಅಫ್ರೋಜ್  ಮತ್ತು 35,673ನೇ ರಾಂಕ್  ಪಡೆದು ಲಡಾಕ್‍ಗೆ ಟಾಪರ್ ಆಗಿರುವ ಮುರ್ತಝಾ ಅಲಿಯವರನ್ನೂ ಇಲ್ಲಿ ಸ್ಮರಿಸಿಕೊಳ್ಳಬೇಕು.  ಅಂದಹಾಗೆ,

ಇವರೆಲ್ಲರನ್ನೂ ಇಲ್ಲಿ ಉಲ್ಲೇಖಿಸುವುದಕ್ಕೆ ಎರಡು ಕಾರಣಗಳಿವೆ. ಒಂದು- ಸಾಧನೆ ಎಂಬ ನೆಲೆಯಲ್ಲಿ.  ಎರಡನೆಯದ್ದು- ನಕಾರಾತ್ಮಕ  ಪ್ರತಿಕ್ರಿಯೆಗಳಿಗೆ ನೀಡಬಹುದಾದ ಸಮರ್ಪಕ ಉತ್ತರ ಎಂಬ ನೆಲೆಯಲ್ಲಿ.

ಅಷ್ಟಕ್ಕೂ, ಯುಪಿಎಸ್‍ಸಿ ಜಿಹಾದ್ ಎಂಬ ಕಾರ್ಯಕ್ರಮವನ್ನು ಪ್ರಸಾರ ಮಾಡಲು ಹೊರಟ ಸುರೇಶ್ ಚಾವ್ಲಾಂಕೆಗೆ ನಿಜ ಏನು  ಎಂಬುದು ಗೊತ್ತಿರಲಿಲ್ಲ ಎಂದಲ್ಲ. ಅಲ್ಲದೆ, ಕಳೆದ ವರ್ಷ ದೆಹಲಿಯ ಜಾಮಿಯಾ ವಿವಿಯಿಂದ ಯುಪಿಎಸ್‍ಸಿ ತೇರ್ಗಡೆಯಾದ  ಒಟ್ಟು 31 ವಿದ್ಯಾರ್ಥಿಗಳ ಪೈಕಿ 16 ಮಂದಿ ಮುಸ್ಲಿಮೇತರರಾಗಿದ್ದರು ಎಂಬುದನ್ನು ತಿಳಿದುಕೊಳ್ಳುವುದಕ್ಕೆ ಮಹಾನ್ ಪಾಂಡಿತ್ಯವೇನೂ  ಅಗತ್ಯವೂ ಬೇಕಾಗಿಲ್ಲ. ಕನಿಷ್ಠ ಅಕ್ಷರ ಜ್ಞಾನವುಳ್ಳ ಯಾರಿಗೂ ಗೂಗಲ್‍ನಲ್ಲಿ ಜಾಲಾಡಿದರೆ ಸಂಗತಿ ಗೊತ್ತಾಗುತ್ತದೆ. ಚಾವ್ಲಾಂಕೆಯಲ್ಲಿ  ಗೂಗಲ್ ಬ್ಯಾನ್ ಮಾಡಿಲ್ಲದೇ ಇರುವುದರಿಂದ ಅವರಿಗೂ ಈ ಮಾಹಿತಿ ಲಭಿಸಿಯೇ ಇರುತ್ತದೆ. ಮತ್ತೇಕೆ ಅವರು ಅಂಥದ್ದೊಂದು   ಕಾರ್ಯಕ್ರಮ ಮಾಡಿದರೆಂದರೆ, ಅದೊಂದು ಸಂಚು. ಮುಸ್ಲಿಮರು ನಿಧಾನಕ್ಕೆ ಶೈಕ್ಷಣಿಕವಾಗಿ ಮುಂದೆ ಬರುತ್ತಿದ್ದಾರೆ ಎಂಬುದನ್ನು  ಸಹಿಸಲು ಸಾಧ್ಯವಾಗದೇ ಹೆಣೆದಿರುವ ಸಂಚು. ಮುಸ್ಲಿಮರನ್ನು ಹಣಿಯಲು ಮತ್ತು ಕೀಳರಿಮೆ ಹಾಗೂ ಸ್ವಾಭಿಮಾನ ರಹಿತವಾಗಿ  ಬದುಕಲು ಆಡಳಿತಾತ್ಮಕವಾಗಿಯೇ ಪ್ರಯತ್ನಗಳು ನಡೆಯುತ್ತಿರುವುದರ ಹೊರತಾಗಿಯೂ ಅವರು ಸ್ವಪ್ರಯತ್ನದಿಂದ ಈ ಎಲ್ಲ  ಒತ್ತಡಗಳನ್ನು ಮೀರಿ ಚಿಮ್ಮತೊಡಗಿದ್ದಾರೆ ಎಂಬ ಸತ್ಯವನ್ನು ಅರಗಿಸಿಕೊಳ್ಳಲಾಗದೇ ಹೆಣೆದ ಸಂಚು. ಹಾಗಂತ,

ಇಂಥ ಸನ್ನಿವೇಶಗಳಿಗೆ ಯಾವುದೇ ರಾಷ್ಟ್ರದ ಅಲ್ಪಸಂಖ್ಯಾತ ಸಮುದಾಯ ತುತ್ತಾಗಿರುವುದು ಇದು ಹೊಸತಲ್ಲ. ಐತಿಹಾಸಿಕವಾಗಿ,  ಇಂಥ ಘಟನೆಗಳಿಗೆ ಸಾಲು ಸಾಲು ಉದಾಹರಣೆಗಳೇ ಇವೆ. ಮಹತ್ವದ ಅಂಶ ಏನೆಂದರೆ, ಇಂಥ ಸಂದರ್ಭದಲ್ಲಿ ಈ ಪುಟ್ಟ  ಸಮುದಾಯ ಅದಕ್ಕೆ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದರ ಅದರ ಆಧಾರದಲ್ಲೇ ಆ ಸಮುದಾಯದ ಸೋಲು-ಗೆಲುವು  ನಿರ್ಧಾರವಾಗುತ್ತದೆ. ಇಂಥ ಸಂದರ್ಭದಲ್ಲಿ ನಕಾರಾತ್ಮಕವಾದ ಪ್ರತಿಕ್ರಿಯೆಯನ್ನು ಸಂಚು ಹೆಣೆದವರು ಬಯಸುತ್ತಿರುತ್ತಾರೆ.  ಯುಪಿಎಸ್‍ಸಿ ಅಥವಾ ನೀಟ್‍ನಂಥ ಸ್ಮರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸುವುದನ್ನೇ ನಿಲ್ಲಿಸುವುದು ಅಥವಾ ಅದಕ್ಕೆ ಮಹತ್ವ ಕೊಡದಿರುವುದು ಅಥವಾ ಚಿಪ್ಪಿನೊಳಗೆ ಮುದುಡಿಕೊಂಡು ಇನ್ನಷ್ಟು ಒಂಟಿಯಾಗುವುದು ಅಥವಾ ಬಹುಸಂಖ್ಯಾತರನ್ನು ವಿರೋಧಿಸುವ,  ದ್ವೇಷಿಸುವ, ಹಗೆ ಸಾಧಿಸುವ ರೀತಿಯಲ್ಲಿ ಪ್ರತಿಕ್ರಿಯಿಸುವುದು ಸಂಚು ಹೆಣೆದವರ ಬಯಕೆಯಾಗಿರುತ್ತದೆ. ಒಂದುವೇಳೆ, ಅಲ್ಪಸಂಖ್ಯಾತ  ಸಮುದಾಯ ಇದನ್ನೇ ಉತ್ತರವಾಗಿ ಆಯ್ಕೆ ಮಾಡಿಕೊಂಡರೆ, ಆ ಬಳಿಕ ಸಂಚುಕೋರರ ಬಲೆಯೊಳಗೆ ಬಿದ್ದಂತೆ. ಸಂಚು ಹೆಣೆದಿರುವವರ ಯಶಸ್ಸು ಅಡಗಿರುವುದೇ ಈ ಬಗೆಯ ನಕಾರಾತ್ಮಕ ಮತ್ತು ದೂರದೃಷ್ಟಿ ರಹಿತ ಪ್ರತಿಕ್ರಿಯೆಗಳಲ್ಲಿ. ಆದ್ದರಿಂದಲೇ, 

ನೀಟ್ ಪರೀಕ್ಷೆಯ ಫಲಿತಾಂಶ ಮುಖ್ಯವಾಗುತ್ತದೆ. ಇದು ಯುಪಿಎಸ್‍ಸಿ ಜಿಹಾದ್ ಎಂಬಂಥ ಸಾವಿರ ಬಗೆಯ ಸಂಚನ್ನು ಹೆಣೆದಿರುವವರಿಗೆ ಮುಸ್ಲಿಮ್ ಸಮುದಾಯ ನೀಡಬಹುದಾದ ಅತ್ಯಂತ ಪರಿಣಾಮಕಾರಿ ಉತ್ತರ. ಯಾವುದೇ ಸಂಚಿಗೆ  ಸಕಾರಾತ್ಮಕ ಉತ್ತರಕ್ಕೆ ಸಮುದಾಯ ಸಿದ್ಧವಾದಾಗ ಸಂಚು ಮಾತ್ರ ವಿಫಲವಾಗುವುದಲ್ಲ, ಜೊತೆಗೇ ಆ ಸಮುದಾಯ ಬೆಳೆಯುತ್ತಲೂ  ಹೋಗುತ್ತದೆ. ಸಂಚು ಹೆಣೆದವರನ್ನೇ ವಿರೋಧಿಸುವ ಹಂತಕ್ಕೆ ಬಹುಸಂಖ್ಯಾತರನ್ನು ಈ ಸಕಾರಾತ್ಮಕ ಪ್ರತಿಕ್ರಿಯೆ ಪ್ರೇರೇಪಿಸುತ್ತದೆ.  ಸದ್ಯದ ಅಗತ್ಯ ಇದು. ಸಾಧ್ಯವಾದರೆ, ಯುಪಿಎಸ್‍ಸಿ, ನೀಟ್ ಸಹಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳ  ಪೋಸ್ಟರ್‍ ಗಳನ್ನು ಮದ್ರಸ, ಪರೀಕ್ಷೆ ಮಸೀದಿಗಳ ಮುಂದೆ ಪ್ರದರ್ಶಿಸುವುದಕ್ಕೆ ಆಯಾ ಜಮಾಅತ್‍ಗಳು ಮುಂದೆ ಬರಲಿ. ಇದರಿಂದ  ಉಳಿದ ಮಕ್ಕಳಿಗೂ ಪ್ರೇರಣೆ ದೊರೆಯಬಹುದು. ಅವರಂತೆ ನಾವಾಗಬೇಕೆಂಬ ಕನಸನ್ನು ಹೊತ್ತುಕೊಂಡು ಈ ಮಕ್ಕಳು ನಡೆಯುವುದಕ್ಕೂ ಇದು  ಕಾರಣವಾಗಬಹುದು.

ಪರೀಕ್ಷೆಯಲ್ಲಿ ಸಾಧನೆ ಮಾಡಿದ ಎಲ್ಲರಿಗೂ ಅಭಿನಂದನೆಗಳು.

No comments:

Post a Comment