Monday 13 May 2024

ಧರ್ಮದ್ವೇಷದ ಮನಸ್ಥಿತಿಯನ್ನು ಬೆತ್ತಲೆಗೊಳಿಸಿದ ಓಂಕಾರಪ್ಪ

 




ಧರ್ಮದ್ವೇಷದ  ಕರಾಳ ಮುಖವನ್ನು ಮೀನಾ ಎಂಬ ಅಪ್ರಾಪ್ತೆ ಸಮಾಜದ ಮುಂದಿಟ್ಟಿದ್ದಾಳೆ. ಇದಕ್ಕಾಗಿ ಆಕೆ ತನ್ನ ರುಂಡವನ್ನೇ ತ್ಯಾಗ  ಮಾಡಿದ್ದಾಳೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಖುಷಿಯಲ್ಲಿ ಬೆಳಿಗ್ಗೆ ಲವಲವಿಕೆಯಿಂದಿದ್ದ ಈಕೆಯನ್ನು ಸಂಜೆಯ ವೇಳೆ ಓಂಕಾರಪ್ಪ  ಎಂಬವ ರುಂಡ ಕಡಿದು ಹತ್ಯೆ ಮಾಡಿದ್ದಾನೆ. ಮದುವೆಗೆ ನಿರಾಕರಿಸಿದ್ದೇ  ಈ ಹತ್ಯೆಗೆ ಕಾರಣ. 18 ವರ್ಷಕ್ಕಿಂತ ಮೊದಲು ಮದುವೆಯಾಗುವುದು  ಕಾನೂನಿನ ಪ್ರಕಾರ ಅಪರಾಧ ಎಂಬುದನ್ನು ಅಧಿಕಾರಿಗಳು ಮನವರಿಕೆ ಮಾಡಿಕೊಟ್ಟ ಕಾರಣ ಮೀನಾ ಮತ್ತು ಓಂಕಾರಪ್ಪ ನಡುವಿನ ಮದುವೆ  ಸ್ಥಗಿತಗೊಂಡಿತ್ತು. ಇದೀಗ ಮೀನಾಳ ರುಂಡ ಪತ್ತೆಯಾಗಿದೆ. ಓಂಕಾರಪ್ಪನ ಬಂಧನವಾಗಿದೆ. ಆದರೆ,

ಈ ಪ್ರಕರಣ ನಡೆದ ಕೊಡಗಿನ ಸೋಮವಾರಪೇಟೆ ತಣ್ಣಗಿದೆ. ಸಾರ್ವಜನಿಕರ ಬಾಯಲ್ಲಿ ಈ ಕ್ರೌರ್ಯ ಚರ್ಚೆಯ ವಸ್ತುವಾಗಿದ್ದನ್ನು ಬಿಟ್ಟರೆ  ಉಳಿದಂತೆ ಹುಬ್ಬಳ್ಳಿಯ ನೇಹಾಳ ಹತ್ಯೆಗೆ ಸಿಕ್ಕ ಆಕ್ರೋಶದ ಒಂದು ಶೇಕಡಾ ಪ್ರತಿಕ್ರಿಯೆಯೂ ಈ ಹತ್ಯೆಗೆ ಸಿಕ್ಕಿಲ್ಲ. ಕ್ರೌರ್ಯದ ಪ್ರಮಾಣಕ್ಕೆ  ಹೋಲಿಸಿದರೆ ಈ ಎರಡೂ ಪ್ರಕರಣಗಳು ಒಂದನ್ನೊಂದು  ಮೀರಿಸುವಂಥವು. ಒಂದು ಹಂತದಲ್ಲಿ ಮೀನಾ ಹತ್ಯೆಯು ನೇಹಾ ಹತ್ಯೆಗಿಂತಲೂ  ಹೆಚ್ಚು ಭೀಕರ ಮತ್ತು ಭಯಾನಕವಾದುದು. ಓಂಕಾರಪ್ಪ ತನ್ನ ಪ್ರಿಯತಮೆಯ ರುಂಡವನ್ನೇ ಕತ್ತರಿಸಿದ್ದಾನೆ. ಫಯಾಝï ತನ್ನ ಪ್ರಿಯತಮೆಯನ್ನು  ಚೂರಿಯಿಂದ ಇರಿದು ಇರಿದು ಹತ್ಯೆ ಮಾಡಿದ್ದಾನೆ. ಹತ್ಯೆಗೆ ಇಬ್ಬರು ನೀಡಿರುವ ಕಾರಣಗಳೂ ಒಂದೇ- ಪ್ರೇಮ. ಆದರೆ,

ಈ ಎರಡೂ ಪ್ರಕರಣಗಳಿಗೆ ನಾಗರಿಕ ಸಮಾಜ ವ್ಯಕ್ತಪಡಿಸಿದ ಪ್ರತಿಕ್ರಿಯೆಯಲ್ಲಿ ಮಾತ್ರ ಭೂಮಿ-ಆಕಾಶದಷ್ಟು ವ್ಯತ್ಯಾಸವಿದೆ. ನೇಹ ಹತ್ಯೆಯ ಬೆನ್ನಿಗೇ ಟಿ.ವಿ. ಚಾನೆಲ್‌ಗಳು ಚುರುಕಾದವು. ಹತ್ಯೆ ನಡೆದ ಕಾಲೇಜು ಕ್ಯಾಂಪಸ್‌ನಲ್ಲಿ ನಿಂತು ಲೈವ್ ವರದಿಗಾರಿಕೆ ಮಾಡಿದುವು. ಕಾಲೇಜಿನ  ಅಧ್ಯಾಪಕರನ್ನು ಮಾತಾಡಿಸಿ ಅಭಿಪ್ರಾಯವನ್ನು ಪ್ರಸಾರ ಮಾಡಿದವು. ನೇಹಾ ಸಹಪಾಠಿಗಳ ಬಾಯಿಗೆ ಮೈಕ್ ಇಟ್ಟವು. ನಾಗರಿಕರನ್ನು ಮಾತಾಡಿಸಿ  ಅಭಿಪ್ರಾಯ ಪಡಕೊಂಡವು. ನೇಹಾ ತಾಯಿ ಮತ್ತು ತಂದೆ ಹಾಗೂ ಫಯಾಝï‌ನ ತಂದೆ ಮತ್ತು ತಾಯಿಯ ಅಭಿಪ್ರಾಯಗಳನ್ನು  ಸಮಾಜಕ್ಕೆ ತಲುಪಿಸಿದುವು. ಒಂದು ವಾರಕ್ಕಿಂತಲೂ ಅಧಿಕ ಸಮಯ ಈ ಹತ್ಯೆಯನ್ನು ರಾಜ್ಯದ ಅತಿ ಪ್ರಮುಖ ಚರ್ಚಾವಸ್ತುವಾಗಿ ಇವು  ಜೀವಂತ ಇಟ್ಟವು. ಚಾನೆಲ್‌ನಲ್ಲಿ ಸಂವಾದ, ಚರ್ಚೆ, ಸ್ಟೋರಿ ಇತ್ಯಾದಿಗಳನ್ನು ನಿರಂತರ ಪ್ರಸಾರ ಮಾಡಿ ಈ ಕ್ರೌರ್ಯದ ಕಾವು ಆರದಂತೆ  ನೋಡಿಕೊಂಡವು. ಕೇವಲ ಕನ್ನಡ ಚಾನೆಲ್‌ಗಳಷ್ಟೇ ಅಲ್ಲ, ರಾಷ್ಟ್ರ ಮಟ್ಟದ ಹಿಂದಿ ಮತ್ತು ಇಂಗ್ಲಿಷ್ ಚಾನೆಲ್‌ಗಳಲ್ಲೂ ನೇಹಾ ಹತ್ಯೆ ಸುದ್ದಿಗೆ  ಒಳಗಾಯಿತು. ಇದರ ಜೊತೆಜೊತೆಗೇ, ಬಿಜೆಪಿ ರಂಗಕ್ಕಿಳಿಯಿತು. ರಾಷ್ಟ್ರಾಧ್ಯಕ್ಷ ನಡ್ಡಾ ಅವರು ನೇರವಾಗಿ ದೆಹಲಿಯಿಂದ ಹುಬ್ಬಳ್ಳಿಗೆ ಬಂದರು.  ನೇಹಾ ಮನೆಗೆ ಭೇಟಿ ಕೊಟ್ಟದ್ದಲ್ಲದೇ ಮಾಧ್ಯಮಗಳಿಗೂ ಹೇಳಿಕೆಯನ್ನು ಕೊಟ್ಟರು. ಅಮಿತ್ ಶಾ ಅವರ ಚುನಾವಣಾ ರ‍್ಯಾಲಿಯಲ್ಲಿ ನೇಹಾ  ಹೆತ್ತವರರನ್ನು ತಂದು ಕೂರಿಸಿದರು. ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಫಯಾಝï‌ನನ್ನು ಗಲ್ಲಿಗೇರಿಸಿ ಎಂಬ ಕೂಗನ್ನು ಎಬ್ಬಿಸಿತು.  ನೇಹಾ ಓದಿನಲ್ಲಿ ಹೇಗಿದ್ದಳು, ಕ್ರೀಡೆಯಲ್ಲಿ ಎಷ್ಟು ಆಸಕ್ತಿ ಹೊಂದಿದ್ದಳು, ಭವಿಷ್ಯದಲ್ಲಿ ಏನಾಗಬೇಕೆಂಬ ಗುರಿ ಇಟ್ಟುಕೊಂಡಿದ್ದಳು ಎಂಬಲ್ಲಿಂದ   ತೊಡಗಿ ಫಯಾಝï ಎಂಥ ಕ್ರೂರಿಯಾಗಿದ್ದ, ಆತನ ಹಿನ್ನೆಲೆ ಏನು, ಆತ ಧರ್ಮಾಂಧನೇ, ಡ್ರಗ್ಸ್ ಚಟ ಹೊಂದಿದ್ದನೇ, ಕ್ರಿಮಿನಲ್ ಕೃತ್ಯಗಳ  ಪೂರ್ವ ಇತಿಹಾಸ ಆತನಿಗಿತ್ತೇ, ಕ್ರೌರ್ಯದ ಬಳಿಕ ಆತನ ಮುಖಭಾವದಲ್ಲಿ ಪಶ್ಚಾತ್ತಾಪ ಭಾವ ಇತ್ತೇ, ಆತ ಎಷ್ಟು ಸಮಯದಿಂದ ಈ ಹತ್ಯೆಗೆ  ಸಂಚು ನಡೆಸಿದ್ದ, ಹತ್ಯೆಗೆ ಬಳಸಿದ ಚೂರಿಯನ್ನು ಎಲ್ಲಿಂದ, ಯಾವಾಗ ಖರೀದಿಸಿದ್ದ, ಆತನ ಜೊತೆ ಆತನ ಹೆತ್ತವರು ಭಾಗಿಯಾಗಿದ್ದಾರಾ,  ತಂದೆಯನ್ನೇ ಆತ ಹತ್ಯೆ ಮಾಡಲು ಯತ್ನಿಸಿದ್ದನಾ... ಇತ್ಯಾದಿ ಇತ್ಯಾದಿ ಪ್ರಶ್ನೆಗಳೊಂದಿಗೆ ಮಾಧ್ಯಮಗಳು ತನಿಖೆಗಿಳಿದುವು. ಇದೇವೇಳೆ, ಸಿನಿಮಾ  ನಟ-ನಟಿಯರೂ ರಂಗಕ್ಕಿಳಿದರು. ಹೆಣ್ಮಕ್ಕಳ ಸುರಕ್ಷಿತತೆಯ ಕುರಿತು ಆತಂಕ ತೋಡಿಕೊಂಡರು. ಆದರೆ,

ಇವರೆಲ್ಲರ ಈ ಆಕ್ರೋಶ, ಪ್ರತಿಭಟನೆ, ಕಣ್ಣೀರು ಬರೇ ಬೂಟಾಟಿಕೆ ಎಂಬುದನ್ನು ಇದೀಗ ಈ ಓಂಕಾರಪ್ಪ ಸಾಬೀತುಪಡಿಸಿದ್ದಾನೆ. ಈತ ಮೀನಾಳ ರುಂಡ ಕಡಿದು ದಿನಗಳೇ ಕಳೆದಿವೆ. ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಬಿಡಿ ಬಿಜೆಪಿಯ ಒಬ್ಬನೇ ಒಬ್ಬ ರಾಜ್ಯ ಮುಖಂಡ ಈ ಮೀನಾಳ ಮನೆಗೆ  ಭೇಟಿ ಕೊಟ್ಟಿಲ್ಲ. ಹೇಳಿಕೆ ನೀಡಿಲ್ಲ. ನೇಹಾಳ ಹತ್ಯೆಯನ್ನು ಖಂಡಿಸಿ ರಾಜ್ಯಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಬಿಜೆಪಿ, ಮೀನಾಳಿಗಾಗಿ ಕನಿಷ್ಠ  ಸೋಮವಾರಪೇಟೆಯಲ್ಲಾದರೂ ಒಂದು ಖಂಡನಾ ಮೆರವಣಿಗೆ ನಡೆಸಿಲ್ಲ. ಓಂಕಾರಪ್ಪನನ್ನು ನೇಣಿಗೇರಿಸಿ ಎಂದು ಕೂಗು ಹಾಕಿಲ್ಲ. ಅದರ  ವಿದ್ಯಾರ್ಥಿ ಘಟಕವಾದ ಎಬಿವಿಪಿಯೂ ಮೌನವಾಗಿದೆ. ನೇಹಾ ಹತ್ಯೆಯನ್ನು ಖಂಡಿಸಿ ಬೀದಿಗಿಳಿದಿದ್ದ ಮತ್ತು ಪ್ಲಕಾರ್ಡ್ ಹಿಡಿದು ಪ್ರತಿಭಟಿಸಿದ್ದ  ಎಬಿವಿಪಿಯು ಮೀನಾ ಹತ್ಯೆಯನ್ನು ಕಂಡೇ ಇಲ್ಲದಂತೆ ವರ್ತಿಸುತ್ತಿದೆ. ಸಿನಿಮಾ ನಟ-ನಟಿಯರೂ ಕಾಣೆಯಾಗಿದ್ದಾರೆ. ನೇಹಾಳ ಹತ್ಯೆಯಲ್ಲಿ  ಹೆಣ್ಣು ಮಕ್ಕಳ ಅಸುರಕ್ಷಿತತೆಯನ್ನು ಕಂಡಿದ್ದ ಅವರೆಲ್ಲ ಈಗ ಮೀನಾ ಹತ್ಯೆಗೆ ಒಂದಕ್ಷರ ಪ್ರತಿಕ್ರಿಯಿಸಲೂ ಪುರುಸೊತ್ತು ಇಲ್ಲದವರಂತೆ  ಬ್ಯುಝಿಯಾಗಿದ್ದಾರೆ. ಮಾಧ್ಯಮಗಳಂತೂ ಸೋಮವಾರಪೇಟೆಯನ್ನೇ ಮರೆತಿವೆ. ಓಂಕಾರಪ್ಪನ ವ್ಯಕ್ತಿತ್ವ, ರುಂಡ ಕತ್ತರಿಸುವುದಕ್ಕೆ ಬಳಸಿದ  ಮಚ್ಚುನ ಹಿನ್ನೆಲೆ, ಅದನ್ನು ತಯಾರಿಸಿದ ವ್ಯಕ್ತಿಯ ಪೂರ್ವಾಪರ, ಓಂಕಾರಪ್ಪನ ತಂದೆ-ತಾಯಿಯ ಅಭಿಪ್ರಾಯ, ಅವರ ವೃತ್ತಿ, ಈ ಹತ್ಯೆಗೆ ಓಂಕಾರಪ್ಪ  ನಡೆಸಿರುವ ಸಂಚು, ಈ ಹತ್ಯೆಯಲ್ಲಿ ಭಾಗಿಯಾಗಿರಬಹುದಾದ ಇನ್ನಿತರರ ಮಾಹಿತಿ, ಈತ ಕುಡುಕನೇ, ಡ್ರಗ್ಸ್ ಹಿನ್ನೆಲೆ ಇದೆಯೇ, ಮೀನಾಳ  ಮನೆಯಿಂದ ಆತ ಬಂದೂಕು ಏಕೆ ಅಪಹರಿಸಿದ, ಆತ ದರೋಡೆಕೋರನೇ, ಆತನ ವಿಚಾರಧಾರೆ ಏನು, ಆತ ಓದಿರುವ ಗ್ರಂಥ ಯಾವುದು,  ಆತ ಮಂದಿರಕ್ಕೆ ಹೋಗುತ್ತಿದ್ದನೇ, ಪ್ರಾರ್ಥನೆ ಮಾಡುತ್ತಿದ್ದನೇ, ಮನೆಯಲ್ಲಿ ದೇವರ ಮೂರ್ತಿಗಳು ಇವೆಯೇ, ಯಾವ ಧರ್ಮಗ್ರಂಥವನ್ನು ಆತ  ಅನುಸರಿಸುತ್ತಿದ್ದ, ಬಂಧನ ವೇಳೆ ಆತನ ಮುಖಭಾವ ಹೇಗಿತ್ತು, ಆತನಿಗೆ ಮೀನಾಳ ಕುಟುಂಬವನ್ನೇ ಹತ್ಯೆ ಮಾಡುವ ಉದ್ದೇಶ ಇತ್ತಾ, ಆತ  ಎಷ್ಟು ಓದಿದ್ದಾನೆ, ಸ್ವಂತ ಹೆತ್ತವರನ್ನೇ ಹತ್ಯೆ ಮಾಡಲು ಈ ಹಿಂದೆ ಪ್ರಯತ್ನಿಸಿದ್ದನಾ, ಈ ಮೀನಾ ಹೇಗಿದ್ದಳು, ಕಲಿಕೆಯಲ್ಲಿ ಎಷ್ಟು ಮುಂದಿದ್ದಳು,  ಕ್ರೀಡೆಯಲ್ಲಿ ಎಷ್ಟು ಚುರುಕಾಗಿದ್ದಳು, ಆಕೆಯ ಕನಸುಗಳೇನಿತ್ತು, ಎಸೆಸ್ಸೆಲ್ಸಿ ನಂತರ ಆಕೆ ವೈದ್ಯೆಯಾಗುವ ಹಂಬಲ ಹೊಂದಿದ್ದಳೇ, ಅದನ್ನು ಆಕೆ  ಯಾರೊಂದಿಗೆ ತೋಡಿಕೊಂಡಿದ್ದಳು, ಆಕೆಗೆ ಕಲಿಸಿದ ಶಿಕ್ಷಕರ ಅಭಿಪ್ರಾಯವೇನು, ಗೆಳತಿಯರು ಏನು ಹೇಳುತ್ತಾರೆ, ಪರೀಕ್ಷೆಯಲ್ಲಿ  ತೇರ್ಗಡೆಯಾದ ವಿಷಯವನ್ನು ಹಂಚುವುದಕ್ಕಾಗಿ ತಂದ ಲಾಡು ಹಾಗೆಯೇ ಅನಾಥವಾಗಿ ಬಿದ್ದಿದೆಯಾ... ಎಂಬಿತ್ಯಾದಿ ತನಿಖಾ ವರದಿಗಾರಿಕೆ  ಮಾಡಿ ಕ್ರೌರ್ಯವನ್ನು ಜೀವಂತವಾಗಿ ಇಡಬೇಕಿದ್ದ ಮಾಧ್ಯಮಗಳು ಸಂಪೂರ್ಣ ಮೌನವಾಗಿವೆ. ಮಾತ್ರವಲ್ಲ, ಒಂದು ಸಾಮಾನ್ಯ ಕ್ರಿಮಿನಲ್ ಕೃತ್ಯ  ಎಂಬ ಭಾವದಿಂದ ಈ ಕ್ರೌರ್ಯ ಮೇಲೆದ್ದೇ  ಇಲ್ಲ. ರಾಜಕಾರಣಿಗಳಿಗೂ ಸೆಲೆಬ್ರಿಟಿಗಳಿಗೂ ಮತ್ತು ಮಾಧ್ಯಮ ಮಂದಿಗೂ ಇದೊಂದು  ಚರ್ಚಿಸಬೇಕಾದ ಮತ್ತು ಪ್ರಶ್ನಿಸಬೇಕಾದ ಕೃತ್ಯ ಎಂದು ಅನಿಸಿಯೇ ಇಲ್ಲ. ನಿಜವಾಗಿ,

ನೇಹಾ ಹತ್ಯೆಯ ವಿರುದ್ಧ ಕಾಣಿಸಿಕೊಂಡ ಆಕ್ರೋಶದ ಹಿಂದೆ ಹತ್ಯೆಗಿಂತ ಹತ್ಯೆ ಮಾಡಿದವನ ಧರ್ಮವೇ ಕಾರಣವಾಗಿತ್ತು ಎಂಬುದನ್ನು ಇವೆಲ್ಲ  ಸಾಬೀತುಪಡಿಸುತ್ತದೆ. ಸಮಾಜದ ಮನಸ್ಥಿತಿ ಇಷ್ಟೊಂದು ಗಬ್ಬೆದ್ದು ಹೋಗಲು ಕಾರಣ ಏನು? ಹತ್ಯೆಯನ್ನು ಖಂಡಿಸುವುದಕ್ಕಿಂತ  ಮೊದಲು  ಹತ್ಯೆಗೈದವನ ಧರ್ಮ ನೋಡುವಂಥ ಹೀನಾಯ ಮತ್ತು ಕಡು ಕೆಟ್ಟ ಮನಸ್ಸನ್ನು ನಾವೇಕೆ ಹೊಂದಿದ್ದೇವೆ? ನಾವು ಕಳಕೊಂಡದ್ದು ಇಬ್ಬರು  ಹೆಣ್ಣು ಮಕ್ಕಳನ್ನು. ಇವರಿಗೆ ಬದುಕುವ ಪೂರ್ಣ ಹಕ್ಕನ್ನು ಖಾತರಿಪಡಿಸಬೇಕಿದ್ದುದು ಇಲ್ಲಿನ ವ್ಯವಸ್ಥೆ. ಸಮಾಜ ಪ್ರಶ್ನಿಸಬೇಕಾದದ್ದು ಮತ್ತು  ಪ್ರತಿಭಟಿಸಬೇಕಾದದ್ದು ಈ ಖಾತರಿಯಲ್ಲಿ ಲೋಪವಾಗಿರುವುದನ್ನು. ಆದರೆ, ಈ ವಿವೇಕವನ್ನು ಪ್ರದರ್ಶಿಸುವ ಬದಲು ಧರ್ಮವನ್ನು ನೋಡಿ  ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವ ವಾತಾವರಣ ಯಾಕೆ ನಿರ್ಮಾಣವಾಯಿತು? ರಾಜಕಾರಣಿಗಳ ಅಧಿಕಾರ ದಾಹದ ದಾಳವಾಗಿ  ನಾಗರಿಕ ಸಮಾಜ ಯಾಕೆ ಮಾರ್ಪಾಟಾಗಿದೆ? ನೇಹಾಳ ಹತ್ಯೆಯನ್ನು ತನಿಖಿಸುವುದಕ್ಕೆ ತ್ವರಿತಗತಿ ನ್ಯಾಯಾಲಯದ ಸ್ಥಾಪನೆಯಾಗುವುದಾದರೆ  ಅಂಥದ್ದೇ ನ್ಯಾಯ ಮೀನಾಳಿಗೂ ಸಿಗಬೇಡವೇ? ಫಯಾಝï‌ನನ್ನು ಗಲ್ಲಿಗೇರಿಸಲು ಸಮಾಜ ತೋರಿದ ಉತ್ಸಾಹವನ್ನು ಓಂಕಾರಪ್ಪನ  ವಿಷಯದಲ್ಲೂ ತೋರಬೇಡವೇ?

ಅಪರಾಧವನ್ನು ಧರ್ಮಾಧಾರಿತವಾಗಿ ವಿಭಜಿಸುವುದರಿಂದ ಅಂತಿಮವಾಗಿ ರಾಜಕೀಯ ಅಧಿಕಾರದಾಹಿಗಳಿಗೆ ಲಾಭವಾಗಬಹುದೇ ಹೊರತು  ಅಪರಾಧ ಕೃತ್ಯಗಳನ್ನು ಮಟ್ಟ ಹಾಕುವುದಕ್ಕೆ ಅದು ಯಾವ ಕೊಡುಗೆಯನ್ನೂ ನೀಡದು. ಹೆಣ್ಣು ಮಕ್ಕಳ ಪ್ರಾಣಕ್ಕೂ ಮಾನಕ್ಕೂ ಈ ವಿಭಜನೆಯಿಂದ ಯಾವ ರಕ್ಷಣೆಯನ್ನೂ ನೀಡಲಾಗದು. 

Saturday 11 May 2024

ಸನ್ಮಾರ್ಗಕ್ಕೆ 46 ವರ್ಷ: ಸಾಗಿ ಬಂದ ಹಾದಿ ಮತ್ತು ಸಾಗಬೇಕಾದ ಹಾದಿ





ಸನ್ಮಾರ್ಗಕ್ಕೆ 46 ವರ್ಷಗಳು ತುಂಬಿವೆ. 47ನೇ ವರ್ಷದ ಈ ಮೊದಲ ಸಂಚಿಕೆಯನ್ನು ಓದುವವರಲ್ಲಿ 1978 ಎಪ್ರಿಲ್ 23ರ ಚೊಚ್ಚಲ  ಸಂಚಿಕೆಯನ್ನು ಓದಿದವರೂ ಇರಬಹುದು. ಅವರ ಭಾವನೆಗಳು ಏನಿರಬಹುದು ಅನ್ನುವ ಕುತೂಹಲ ಈಗಿನದು. ಯಾಕೆಂದರೆ,

46 ವರ್ಷಗಳ ಹಿಂದೆ ಪತ್ರಿಕೆಯೊಂದನ್ನು ಪ್ರಾರಂಭಿಸುವುದೇ ಬಹುದೊಡ್ಡ ಸಾಹಸದ ಕೆಲಸವಾಗಿತ್ತು. ಶೈಕ್ಷಣಿಕವಾಗಿ ಹಿಂದುಳಿದಿದ್ದ, ಅದರಲ್ಲೂ  ಮುಸ್ಲಿಮ್ ಸಮುದಾಯವಂತೂ ಇನ್ನಷ್ಟು ಪ್ರಪಾತದಲ್ಲಿದ್ದ ಕಾಲ. ಅಕ್ಷರ ಬಲ್ಲವರೂ ಪತ್ರಿಕೆಯನ್ನು ಖರೀದಿಸಿ ಓದುವ ಉಮೇದು ತೋರದಿದ್ದ  ಕಾಲ ಅದು. ಹಾಗಾದರೆ, ಇಂಥ ಸ್ಥಿತಿಯಲ್ಲಿ ಸನ್ಮಾರ್ಗ ಪತ್ರಿಕೆಯನ್ನು ಪ್ರಾರಂಭಿಸುವ ಸಾಹಸಕ್ಕೆ ಯಾಕೆ ಕೈ ಹಾಕಲಾಯಿತು ಎಂಬ ಪ್ರಶ್ನೆ  ಸಹಜವಾದುದು. ಸನ್ಮಾರ್ಗ ಆ ಕಾಲದ ಅಗತ್ಯವಾಗಿತ್ತು. ಮುಖ್ಯ ವಾಹಿನಿಯ ಕನ್ನಡ ದಿನಪತ್ರಿಕೆಗಳು ಮತ್ತು ಕೆಲವೊಂದು ಸಾಪ್ತಾಹಿಕಗಳು ಸುದ್ದಿ  ಮತ್ತು ವಿಶ್ಲೇಷಣೆಯ ಹೆಸರಲ್ಲಿ ತೀರಾ ಏಕಮುಖವಾದ ಅಭಿಪ್ರಾಯಗಳನ್ನು ಪ್ರಕಟಿಸುತ್ತಿದ್ದುವು. ಮುಖ್ಯವಾಗಿ, ಇಸ್ಲಾಮ್‌ಗೆ ಸಂಬಂಧಿಸಿ ಅವು  ಪ್ರಕಟಿಸುತ್ತಿದ್ದ ಸುದ್ದಿಗಳಲ್ಲಿ ಸತ್ಯವನ್ನು ದುರ್ಬೀನು ಹಿಡಿದು ಹುಡುಕಬೇಕಾಗಿತ್ತು. ಮುಸ್ಲಿಮರ ವಿರುದ್ಧ ಮತ್ತು ಇಸ್ಲಾಮ್ ವಿರುದ್ಧ  ಬಹುಸಂಖ್ಯಾತರ ಭಾವನೆಗಳನ್ನು ಬಡಿದೆಬ್ಬಿಸಿ ಎತ್ತಿಕಟ್ಟುವ ಪ್ರಯತ್ನಗಳನ್ನು ನಿರ್ದಿಷ್ಟ ಪತ್ರಿಕೆಗಳು ಯೋಜಿತವಾಗಿ ಮಾಡುತ್ತಿದ್ದುವು. ಯಾವುದೋ  ಘಟನೆಯನ್ನು ಎತ್ತಿಕೊಂಡು ಮುಸ್ಲಿಮ್ ಸಮುದಾಯವನ್ನು ಕಟಕಟೆಯಲ್ಲಿ ನಿಲ್ಲಿಸುವುದು ಮಾಮೂಲು ಎಂಬಂತಾಗಿತ್ತು. ಭಾರತವನ್ನಾಳಿದ  ವಿವಿಧ ಮುಸ್ಲಿಮ್ ದೊರೆಗಳನ್ನು ನೆಪ ಮಾಡಿಕೊಂಡು ಭಾರತೀಯ ಮುಸ್ಲಿಮ್ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬುದ್ಧಿವಂತಿಕೆಯ ಬರಹಗಳೂ ಪ್ರಕಟವಾಗುತ್ತಿದ್ದುವು. ಇವನ್ನು ಪ್ರತಿಭಟಿಸಿ ಪ್ರತಿಕ್ರಿಯಿಸಿದರೆ ಅವು ಪ್ರಕಟಣೆಯ ಭಾಗ್ಯ ವನ್ನೂ ಕಾಣುತ್ತಿರಲಿಲ್ಲ. ‘ಆನೆ  ನಡೆದದ್ದೇ  ದಾರಿ’ ಎಂಬ ರೀತಿಯಲ್ಲಿ ನಡಕೊಳ್ಳುತ್ತಿದ್ದ ಈ ಪತ್ರಿಕೆಗಳ ಬಣ್ಣ ಬಯಲುಗೊಳಿಸುವ ಮತ್ತು ಸಾರ್ವಜನಿಕರಿಗೆ ಸತ್ಯ ಮಾಹಿತಿಯನ್ನು  ತಿಳಿಸುವ ಜರೂರತ್ತು ಆಗಿನ ಕಾಲದಲ್ಲಿ ಬಹಳವೇ ಇತ್ತು. ಹಾಗೆಯೇ,

ಮುಸ್ಲಿಮ್ ಸಮುದಾಯಲ್ಲಿ ಬರಹಗಾರರನ್ನು ತಯಾರಿಸುವ ಅಗತ್ಯವೂ ಇತ್ತು. ಜೊತೆಗೇ, ಇಸ್ಲಾಮಿನ ಬಗ್ಗೆ ಇರುವ ತಪ್ಪು ಅಭಿಪ್ರಾಯಗಳನ್ನು  ನೀಗಿಸುವ ಹಾಗೂ ಸಮಾಜಕ್ಕೆ ಇಸ್ಲಾಮ್‌ನ ಸಮಗ್ರ ಪರಿಚಯ ಮಾಡಿಸುವ ಅನಿವಾರ್ಯತೆಯೂ ಇತ್ತು. ಈ ಎಲ್ಲವನ್ನೂ ಮನಗಂಡು 1978  ಎಪ್ರಿಲ್ 23ರಂದು ಸನ್ಮಾರ್ಗ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಹಾಗಂತ,
ಸ್ಥಾಪಕ ಸಂಪಾದಕ ಇಬ್ರಾಹೀಮ್ ಸಈದ್‌ರಿಂದ ಹಿಡಿದು ನೂರ್ ಮುಹಮ್ಮದ್, ಸಾದುಲ್ಲಾ, ಕೆ.ಎಂ. ಶರೀಫ್ ಮತ್ತು ಇನ್ನಿತರ ಕನಸುಗಾರ  ಯುವಕರಲ್ಲಿ ಬತ್ತದ ಉತ್ಸಾಹ ಮತ್ತು ಮಹತ್ವಾಕಾಂಕ್ಷೆಯನ್ನು ಬಿಟ್ಟರೆ ಇನ್ನಾವ ಪತ್ರಿಕಾ ಅನುಭವವೂ ಇರಲಿಲ್ಲ. ಕನ್ನಡ, ಉರ್ದು, ಇಂಗ್ಲಿಷ್,  ಮಲಯಾಳಂ, ಅರಬಿ, ಹಿಂದಿ ಭಾಷೆ ತಿಳಿದಿದ್ದ ಈ ತಂಡ ಸನ್ಮಾರ್ಗ ಪತ್ರಿಕೆಯನ್ನು ಕಟ್ಟುವ ಕೆಲಸದಲ್ಲಿ ತೊಡಗಿದಾಗ ಕರಾವಳಿಯಲ್ಲಿ ಅದಾಗಲೇ  ಇಂಥ ಒಂದೆರಡು ಪತ್ರಿಕೆಗಳು ಹುಟ್ಟಿ ತೆವಲುತ್ತಿದ್ದುವು. ಅವುಗಳ ಆರ್ಥಿಕ ಪರಿಸ್ಥಿತಿಯನ್ನು ಬಲ್ಲ ಯಾರೂ ಇನ್ನೊಂದು ಪತ್ರಿಕೆಯನ್ನು  ಆರಂಭಿಸುವ ಸಾಹಸ ಮಾಡಲಾರರು ಎಂಬಷ್ಟು ಅವು ದಯನೀಯ ಸ್ಥಿತಿಯಲ್ಲಿದ್ದುವು. ಬುದ್ಧಿವಂತರಾದ ಯಾರೂ ಕೂಡಾ ಪತ್ರಿಕೆಗೆ ಬಂಡವಾಳ ಹೂಡಲಾರರು ಎಂಬ ವಾತಾವರಣ ಎಷ್ಟು ಸಹಜವಾಗಿತ್ತೆಂದರೆ, ಅದನ್ನು ತಿರಸ್ಕರಿಸಿ ವಾದ ಮಂಡಿಸುವುದಕ್ಕೆ ಪೂರಕವಾದ ಏನೂ ಇರಲಿಲ್ಲ. ಅಲ್ಲದೇ,

ಇಬ್ರಾಹೀಮ್ ಸಈದ್ ಮತ್ತು ಅವರ ಬೆಂಬಲಿಗ ತಂಡದಲ್ಲಿ ಉತ್ಸಾಹ ಇತ್ತೇ ಹೊರತು ಆರ್ಥಿಕವಾಗಿ ಯಾವ ಶಕ್ತಿಯೂ ಇರಲಿಲ್ಲ. ಒಂದೈದು  ವರ್ಷಗಳ ವರೆಗೆ ಪತ್ರಿಕೆಯನ್ನು ಆರ್ಥಿಕವಾಗಿ ತಾಳಿಕೊಳ್ಳಬಲ್ಲಷ್ಟು ಬಂಡವಾಳ ಸಿದ್ಧಪಡಿಸಿಕೊಂಡೂ ಇರಲಿಲ್ಲ. ಈ ಎಲ್ಲ ‘ಇಲ್ಲ’ಗಳ ನಡುವೆಯೂ  ಈ ತಂಡ ಪತ್ರಿಕೆಯನ್ನು ಪ್ರಾರಂಭಿಸುವ ಧೈರ್ಯ ತೋರಿರುವುದಕ್ಕೆ ‘ಸತ್ಯವನ್ನು ಹೇಳಲೇಬೇಕು ಮತ್ತು ಸುಳ್ಳಿನ ಬಣ್ಣ ಬಯಲುಗೊಳಿಸಲೇ  ಬೇಕು’ ಎಂಬ ಹಠವೊಂದೇ ಕಾರಣವಾಗಿತ್ತು. ‘ಎಷ್ಟು ವರ್ಷ ಈ ಪತ್ರಿಕೆ ಉಳಿಯುತ್ತದೆ ಎಂದಲ್ಲ, ಉಳಿದಷ್ಟು ವರ್ಷ ಈ ಪತ್ರಿಕೆ ಏನನ್ನು  ಮಾಡಿದೆ ಎಂಬುದೇ ಮುಖ್ಯ...’ ಅನ್ನುವ ನಿಲುವು ಪತ್ರಿಕೆಯದ್ದಾಗಿತ್ತು. ಹೀಗೆ ಪ್ರಾರಂಭವಾದ ಪತ್ರಿಕೆ ಹತ್ತು-ಹಲವು ಸವಾಲುಗಳನ್ನು  ಎದುರಿಸಿಯೂ 46 ವರ್ಷಗಳನ್ನು ಪೂರೈಸಿದೆ. ಮಾತ್ರವಲ್ಲ, ಈ ಪತ್ರಿಕೆಯ ಮೊದಲು ಮತ್ತು ನಂತರ ಹುಟ್ಟಿಕೊಂಡ ಅನೇಕ ಪತ್ರಿಕೆಗಳ ಸಾವಿಗೂ  ಸನ್ಮಾರ್ಗ ಸಾಕ್ಷಿಯಾಗಿದೆ. ಆದರೆ, ಓದುಗರು ಈವರೆಗೂ ಸನ್ಮಾರ್ಗವನ್ನು ಉಳಿಸಿ ಬೆಳೆಸಿದ್ದಾರೆ. ಆರ್ಥಿಕವಾಗಿ ನೆರವಾಗಿದ್ದಾರೆ. ಓದುಗರು ಮತ್ತು  ಹಿತೈಷಿಗಳೇ ಸನ್ಮಾರ್ಗದ ಶಕ್ತಿ ಎಂಬುದಕ್ಕೆ ಈ 46 ವರ್ಷಗಳೇ ಅತೀ ಪ್ರಮುಖ ಸಾಕ್ಷಿ.

ಕಳೆದ 46 ವರ್ಷಗಳ ಜರ್ನಿಯನ್ನು ಪರಿಶೀಲಿಸಿದರೆ, ಸನ್ಮಾರ್ಗ ಹೆಮ್ಮೆಪಟ್ಟುಕೊಳ್ಳುವುದಕ್ಕೆ ಹತ್ತು-ಹಲವು ಕಾರಣಗಳಿವೆ. ಮುಸ್ಲಿಮ್  ಸಮುದಾಯದಲ್ಲಿ ಅಕ್ಷರ ಪ್ರೀತಿಯನ್ನು ಹುಟ್ಟಿಸಿದ ಶ್ರೇಯಸ್ಸು ಸನ್ಮಾರ್ಗಕ್ಕೆ ಸಲ್ಲಬೇಕು. ಮುಸ್ಲಿಮ್ ಸಮುದಾಯದ ಬರಹಗಾರರನ್ನು ಸಂಪಾದಕರ  ಪತ್ರ ವಿಭಾಗಕ್ಕೆ ಸೀಮಿತಗೊಳಿಸಿದ್ದ ಮುಖ್ಯವಾಹಿನಿಯ ಪತ್ರಿಕೆಗಳು ಬೆರಗುಗೊಳ್ಳುವಂತೆ ಸಮುದಾಯದಲ್ಲಿ ಬರಹಗಾರರನ್ನು, ಜರ್ನಲಿಸ್ಟ್ಗಳನ್ನು  ಮತ್ತು ಸಾಹಿತಿಗಳನ್ನು ತಯಾರಿಸಿದ ಹೆಗ್ಗಳಿಕೆಯೂ ಸನ್ಮಾರ್ಗದ್ದು. ಮಹಿಳಾ ಬರಹಗಾರರನ್ನು ದೊಡ್ಡ ಮಟ್ಟದಲ್ಲಿ ಬೆಳೆಸಿದ ಕೀರ್ತಿಯೂ ಸ ನ್ಮಾರ್ಗದ್ದೇ. ಮಹಿಳಾ ಬರಹಗಾರರನ್ನು ಪ್ರತಿವಾರ ತನ್ನ ಪುಟದಲ್ಲಿಟ್ಟು ಗೌರವಿಸಿದ ಸನ್ಮಾರ್ಗವು ಅಂತಿಮವಾಗಿ ‘ಅನುಪಮ’ ಎಂಬ ಮಹಿಳಾ  ಮಾಸಿಕದ ಪ್ರಾರಂಭಕ್ಕೂ ನೇತೃತ್ವ ನೀಡಿತು. ಸಂಪಾದಕರಿಂದ  ಹಿಡಿದು ಸಂಪಾದಕೀಯ ಬಳಗದ ವರೆಗೆ ಪ್ರತಿಯೊಂದನ್ನೂ ಮಹಿಳೆಯರೇ  ನಿರ್ವಹಿಸುತ್ತಿರುವ ಈ ಪತ್ರಿಕೆಯ ಯಶಸ್ಸು ಕನ್ನಡ ಪತ್ರಿಕಾ ರಂಗದಲ್ಲೇ  ವಿಶಿಷ್ಟ ಪ್ರಯೋಗ. 2 ದಶಕಗಳನ್ನು ದಾಟಿ ಅನುಪಮ  ಮುಂದುವರಿಯುತ್ತಿರುವಾಗಲೇ, 2019ರಲ್ಲಿ ಸನ್ಮಾರ್ಗ ಇನ್ನೂ ಒಂದು ಸಾಹಸಕ್ಕೆ ಕೈ ಹಾಕಿತು. ಇಂಟರ್‌ನೆಟ್ ಯುಗದ ಬೇಡಿಕೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಸನ್ಮಾರ್ಗ ನ್ಯೂಸ್‌ಪೋರ್ಟಲನ್ನು ಆರಂಭಿಸಿತು. ಸುಳ್ಳು ಸುದ್ದಿಗಳೇ ಪಾರಮ್ಯ ಸಾಧಿಸಿರುವ ಡಿಜಿಟಲ್ ಲೋಕದಲ್ಲಿ ‘ಸತ್ಯ  ಸುದ್ದಿ’ಯನ್ನು ತಲುಪಿಸುವ ಗುರಿ ಇದರ ಹಿಂದಿತ್ತು. ಇದರ ಬೆನ್ನಿಗೇ 2020ರಲ್ಲಿ ಸನ್ಮಾರ್ಗ ನ್ಯೂಸ್ ಚಾನೆಲನ್ನೂ ಆರಂಭಿಸಿತು. ಟಿ.ವಿ. ಚಾ ನೆಲ್‌ಗಳು ಮಂಕಾಗುತ್ತಿರುವ ಮತ್ತು ಡಿಜಿಟಲ್ ಚಾನೆಲ್‌ಗಳೇ ಜನರ ಪಾಲಿಗೆ ಅಚ್ಚುಮೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ಸನ್ಮಾರ್ಗ ನ್ಯೂಸ್  ಚಾನೆಲ್ ತೀರಾ ಸಣ್ಣ ಅವಧಿಯಲ್ಲೇ  ಭಾರೀ ಜನಪ್ರೀತಿಗೂ ಒಳಗಾಗಿದೆ. ಲಕ್ಷವನ್ನೂ ದಾಟಿದ ಚಂದಾದಾರರು ಮತ್ತು ರಾಜ್ಯದಾದ್ಯಂತದಿಂದ  ಜನರು ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆ ಹಾಗೂ ಬೆಂಬಲಗಳೇ ಈ ಚಾನೆಲ್ ಕಾಲದ ಅಗತ್ಯವಾಗಿತ್ತು ಅನ್ನುವುದನ್ನು ಹೇಳುತ್ತದೆ. ಹಾಗಂತ,

ಎಲ್ಲವೂ ಸರಾಗವಾಗಿದೆ ಎಂದಲ್ಲ. ಸನ್ಮಾರ್ಗ ಪತ್ರಿಕೆ, ಅನುಪಮ ಪತ್ರಿಕೆ, ಸನ್ಮಾರ್ಗ ವೆಬ್ ಪೋರ್ಟಲ್ ಮತ್ತು ಸನ್ಮಾರ್ಗ ನ್ಯೂಸ್ ಚಾನೆಲ್-  ಇವೆಲ್ಲವನ್ನೂ ನಿರ್ವಹಿಸುವುದಕ್ಕೆ ಅಪಾರ ಹಣಕಾಸಿನ ಅಗತ್ಯ ಇದೆ. ಸಿಬಂದಿಗಳು, ಅವರ ವೇತನ, ಪತ್ರಿಕೆಯ ಮುದ್ರಣ ವೆಚ್ಚ, ಸಾಗಾಟದ  ವೆಚ್ಚ, ಚಾನೆಲ್‌ಗೆ ಬೇಕಾದ ಉಪಕರಣಗಳು.. ಇತ್ಯಾದಿಗಳನ್ನೆಲ್ಲ ಭರಿಸುವುದು ಸುಲಭ ಅಲ್ಲ. ಪ್ರತಿ ತಿಂಗಳು ಇವುಗಳಿಗೆಂದೇ ಬಹುದೊಡ್ಡ  ಮೊತ್ತವನ್ನು ಎತ್ತಿ ಇಡಬೇಕಾಗುತ್ತದೆ. ಕೇವಲ ಪತ್ರಿಕೆಯ ಚಂದಾದಾರಿಕೆಯಿಂದ  ಈ ಎಲ್ಲ ವೆಚ್ಚಗಳನ್ನು ಸರಿದೂಗಿಸುವುದಕ್ಕೆ ಸಾಧ್ಯವೂ ಇಲ್ಲ.  ಅಲ್ಲದೇ, ಜಾಹೀರಾತುಗಳನ್ನು ಅಳೆದೂ ತೂಗಿ ಸ್ವೀಕರಿಸುವ ನಿಯಮವನ್ನು ಸನ್ಮಾರ್ಗ ತನಗೆ ತಾನೇ ವಿಧಿಸಿಕೊಂಡಿದೆ. ಮದ್ಯ, ಬ್ಯಾಂಕ್,  ಜೂಜು, ಜ್ಯೋತಿಷ್ಯ, ಸಿನಿಮಾ ಇತ್ಯಾದಿ ಇತ್ಯಾದಿ ಜಾಹೀರಾತುಗಳನ್ನು ಸನ್ಮಾರ್ಗ ಪ್ರಕಟಿಸುವುದೂ ಇಲ್ಲ. ಹೆಚ್ಚಿನ ಜಾಹೀರಾತುಗಳು ಒಂದಲ್ಲ  ಒಂದು ರೀತಿಯಲ್ಲಿ ‘ಪ್ರಕಟಿಸಬಾರದ ಕೆಟಗರಿಯಲ್ಲೇ ’ ಇರುತ್ತವಾದ್ದರಿಂದ ಜಾಹೀರಾತುಗಳ ಮೂಲಕ ಆದಾಯ ಗಳಿಸುವ ಅವಕಾಶಗಳೂ  ಕಡಿಮೆ. ಆದ್ದರಿಂದ, ಸನ್ಮಾರ್ಗ ದಾನಿಗಳನ್ನೇ ಅವಲಂಬಿಸಿದೆ. ಅಂದಹಾಗೆ,

ಸನ್ಮಾರ್ಗದ ಪಾಲಿಗೆ ಓದುಗರು ಮತ್ತು ಹಿತೈಷಿಗಳ ದೊಡ್ಡದೊಂದು ಅಭಿಮಾನಿ ಬಳಗವಿದೆ. ಈ ಅಭಿಮಾನಿಗಳೇ ಸನ್ಮಾರ್ಗದ ಪಾಲಿಗೆ  ಆಮ್ಲಜನಕ. ಸನ್ಮಾರ್ಗ ಈ ವರೆಗೆ ಉಳಿದಿರುವುದು ಮತ್ತು ಕಾಲದ ಅಗತ್ಯಕ್ಕೆ ಅನುಸಾರವಾಗಿ ಅನುಪಮ, ವೆಬ್ ಪೋರ್ಟಲ್ ಮತ್ತು ನ್ಯೂಸ್  ಚಾನೆಲ್ ಆರಂಭಿಸಿರುವುದೆಲ್ಲ ಅಲ್ಲಾಹನ ಅನುಗ್ರಹ ಮತ್ತು ಈ ಅಭಿಮಾನಿ ಬಳಗದ ಆರ್ಥಿಕ ಬೆಂಬಲ, ಪ್ರೋತ್ಸಾಹದಿಂದಾಗಿದೆ. ಈ ಬೆಂಬಲ  ಇನ್ನು ಮುಂದಕ್ಕೂ ಸದಾ ಇರಲಿ ಎಂದು ಸನ್ಮಾರ್ಗ ಬಯಸುತ್ತದೆ. ಮಾತ್ರವಲ್ಲ, ಸನ್ಮಾರ್ಗ ಎಂಬ ಮಾಧ್ಯಮ ಪ್ಯಾಕೇಜನ್ನು ಇನ್ನಷ್ಟು  ಪ್ರಬಲವಾಗಿ ಕಟ್ಟುವುದಕ್ಕೆ ಆರ್ಥಿಕವಾಗಿ ಸದಾ ನೆರವಾಗುತ್ತಲಿರಿ ಎಂದು ವಿನಂತಿಸುತ್ತದೆ.

Thursday 9 May 2024

ಅನ್ಯಾಯದ ಬುಡದಲ್ಲೇ ಸ್ಫೋಟಿಸಿದ ನ್ಯಾಯಪರ ಘರ್ಜನೆ




ಗಾಝಾದ ಮೇಲೆ ಇಸ್ರೇಲ್ ದಾಳಿಯನ್ನು ಖಂಡಿಸಿ ಅಮೇರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆ ಇದೀಗ  ಯುರೋಪ್‌ಗೂ ಹರಡಿದೆ. ಆಸ್ಟ್ರೇಲಿಯಾ ಮತ್ತು ಕೆನಡಾದ ವಿಶ್ವವಿದ್ಯಾಲಯಗಳಲ್ಲೂ ಪ್ರತಿಭಟನೆ ನಡೆಯತೊಡಗಿದೆ. ಅಮೇರಿಕದ ಅಟ್ಲಾಂಟಾದ  ಎಮೊರಿ ವಿವಿ ಆವರಣದಲ್ಲಿ ನಡೆದ ಪ್ರತಿಭಟನೆ ಘರ್ಷಣೆಗೆ ತಿರುಗಿದೆ. ಪೊಲೀಸರು ಮತ್ತು ವಿದ್ಯಾರ್ಥಿಗಳ ನಡುವಿನ ಈ ಘರ್ಷಣೆಯನ್ನು  ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ರಬ್ಬರ್ ಗುಂಡುಗಳನ್ನು ಸಿಡಿಸಿದ್ದಾರೆ. ಬ್ಲೂಮಿಂಗ್ಟನ್‌ನ ಇಂಡಿಯಾ ವಿವಿಯ ಕ್ಯಾಂಪಸ್  ಆವರಣದಲ್ಲಿ ಟೆಂಟ್ ಸ್ಥಾಪಿಸಿ ಧರಣಿ ನಡೆಸುತ್ತಿದ್ದ 20ಕ್ಕಿಂತಲೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಅರಿರೇನ ರಾಜ್ಯದ ವಿವಿ  ಆವಣರದಲ್ಲೂ ಪ್ರತಿಭಟನೆ ನಡೆದಿದೆ. ಟೆಂಟ್ ಹಾಕಿ ಪ್ರತಿಭಟಿಸುತ್ತಿದ್ದ 70ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಸೈಂಟ್  ಲೂಯಿಸ್‌ನಲ್ಲಿರುವ ವಾಷಿಂಗ್ಟನ್ ವಿಶ್ವವಿದ್ಯಾಲಯದಲ್ಲಿ ಅಮೇರಿಕದ ಅಧ್ಯಕ್ಷೀಯ ಅಭ್ಯರ್ಥಿ ಜೆಲ್ ಸ್ಟೆಯಿನ್ ಅವರೇ ಪ್ರತಿಭಟನೆಗೆ ನೇತೃತ್ವ  ನೀಡಿದ್ದಾರೆ. ಇಲ್ಲಿ 80ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದೊಂದು ವಾರದಿಂದ ಅಮೇರಿಕದ ಯೇಲ್  ವಿಶ್ವವಿದ್ಯಾಲಯ, ದಕ್ಷಿಣ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾಲಯ, ವಾಂಡರ್ ಬಿಟ್ ವಿಶ್ವವಿದ್ಯಾಲಯ, ಮಿನ್ನಿಸೋಟಾ ವಿವಿಯೂ ಸೇರಿದಂತೆ  ಅಮೇರಿಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನೆ ನಡೆಯುತ್ತಿದೆ. ಎಲ್ಲಿಯ ವರೆಗೆಂದರೆ ಪ್ರತಿಭಟನೆಯ ತೀವ್ರತೆಗೆ ಭಯಪಟ್ಟು ಕೆಲವು  ವಿಶ್ವವಿದ್ಯಾಲಯಗಳಿಗೆ ರಜೆ ಸಾರಲಾಗಿದೆ. ಕೆಲವು ವಿದ್ಯಾರ್ಥಿಗಳನ್ನು ಈಗಾಗಲೇ ವಿವಿಯಿಂದ ಅಮಾನತುಗೊಳಿಸಲಾಗಿದೆ. ಇವರಲ್ಲಿ ತಮಿಳು ನಾಡಿನವರಾದ ಅಚಿಂತ್ಯ ಶಿವಲಿಂಗA ಕೂಡಾ ಒಬ್ಬರು. ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರುವ ಇವರು ಇತರ 100ಕ್ಕಿಂತಲೂ  ಅಧಿಕ ವಿದ್ಯಾರ್ಥಿಗಳ ಜೊತೆ ಸೇರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇವರನ್ನು ಮತ್ತು ಹಸನ್ ಝೈದಿ ಎಂಬ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದರು. ಇದನ್ನು ಖಂಡಿಸಿ ಪ್ರತಿಭಟನಾಕಾರರೊಂದಿಗೆ ಇನ್ನೂ 200ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ  ಸೇರಿಕೊಂಡರು. ಇದೇವೇಳೆ, ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಇನ್ನೂ ಒಂದು ವಿಶೇಷ ಘಟನೆ ನಡೆದಿದೆ. ಇಸ್ರೇಲ್ ವಿರುದ್ಧ ಪ್ರತಿಭಟನಾ  ರ‍್ಯಾಲಿಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿ, ಆತನ ಎರಡೂ ಕೈಗಳನ್ನು ಬೆನ್ನಿಗೆ ಕಟ್ಟಿ ಕರೆದೊಯ್ಯಲು ಸಿದ್ಧವಾಗಿದ್ದರು.  ಈ ಸಂದರ್ಭದಲ್ಲಿ ಆ ವಿದ್ಯಾರ್ಥಿ ನಮಾಝï‌ಗೆ ಸಿದ್ಧವಾದದ್ದು ಮತ್ತು ಅದೇ ಸ್ಥಿತಿಯಲ್ಲಿ ನಮಾಝï ನಿರ್ವಹಿಸಿದ ವೀಡಿಯೋ ಸೋಶಿಯಲ್  ಮೀಡಿಯಾದಲ್ಲಿ ಭಾರೀ ಹಂಚಿಕೆಯಾಯಿತು. ಇದೇವೇಳೆ, ಕೆನಡಾದ ಮಾಂಟ್ರಿಯಲ್‌ನಲ್ಲಿರುವ ಮ್ಯಾಕ್‌ಗಿಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು  ಪ್ರತಿಭಟನಾ ಟೆಂಟ್ ನಿರ್ಮಿಸಿz್ದÁರೆ. ಇಸ್ರೇಲ್‌ನ ಜೊತೆಗಿರುವ ಎಲ್ಲ ಶೈಕ್ಷಣಿಕ ಸಂಬಂಧಗಳನ್ನು ಕೆನಡಾ ಕಡಿದುಕೊಳ್ಳಬೇಕು ಎಂದು ಈ  ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ಒಂದುಕಡೆ, ಅಮೇರಿಕ ಮತ್ತು ಮಿತ್ರ ರಾಷ್ಟ್ರಗಳು ಇಸ್ರೇಲ್ ಪರ ನಿಲ್ಲುವಾಗ, ಅಲ್ಲಿನ ನಾಗರಿಕರು ಗಾಝಾದ ಜೊತೆ ನಿಲ್ಲುವ ಕೌತುಕ ಇನ್ನೊಂದು ಕಡೆಯಿದೆ. ಅಮೇರಿಕದ ಅಧ್ಯಕ್ಷ  ಜೋ ಬೈಡನ್ ಇಸ್ರೇಲನ್ನು ಎಷ್ಟೇ ಸಮರ್ಥಿಸಿಕೊಂಡರೂ ಮತ್ತು ಏನೇ ನೆರವು ಒದಗಿಸಿದರೂ ಅ ಲ್ಲಿಯದೇ ನಾಗರಿಕರು ದಿನೇ ದಿನೇ ಅವರನ್ನು ಬೆತ್ತಲಾಗಿಸುತ್ತಿದ್ದಾರೆ. ಬೈಡನ್ ಕರೆದ ಇಫ್ತಾರ್ ಕೂಟವನ್ನು ಅಲ್ಲಿನ ಮುಸ್ಲಿ ಮರು ಬಹಿಷ್ಕರಿಸಿದ  ಅಪರೂಪದ ಘಟನೆಯೂ ಇದರಲ್ಲಿ ಒಂದು. ಸಾಮಾನ್ಯವಾಗಿ ದೇಶದ ಅಧ್ಯಕ್ಷರ ಜೊತೆ ನಾಗರಿಕರು ಹೀಗೆ ನಡಕೊಳ್ಳುವುದಿಲ್ಲ. ಏನೇ ಭಿನ್ನಾಭಿ ಪ್ರಾಯ ಇದ್ದರೂ ಅಧ್ಯಕ್ಷರು ಕರೆದ ಔತಣ ಕೂಟದಲ್ಲಿ ನಾಗರಿಕರು ಭಾಗವಹಿಸುತ್ತಾರೆ. ಅದು ಅವರ ಹುದ್ದೆಗಿರುವ ಘನತೆಯ ದ್ಯೋತ ಕವೂ  ಹೌದು. ಆದರೆ ಬೈಡನ್ ಅವರ ಇಸ್ರೇಲ್ ಪರ ಏಕಮುಖ ಧೋರಣೆ ಅಲ್ಲಿನ ನಾಗರಿಕರಲ್ಲಿ ಎಂಥ ಅಸಮಾಧಾನ ಹುಟ್ಟುಹಾಕಿದೆಯೆಂದರೆ,  ಅವರ ಆಹ್ವಾನವನ್ನೇ ತಿರಸ್ಕರಿಸುವಷ್ಟು. ಅಮೇರಿಕದ ಘನತೆಯನ್ನು ಮತ್ತು ಅಧ್ಯಕ್ಷೀಯ ಹುದ್ದೆಯ ಗೌರವವನ್ನು ಬೈಡನ್ ಮಣ್ಣುಪಾಲು  ಮಾಡಿದ್ದಾರೆ ಎಂಬ ಭಾವನೆ ಅಮೇರಿಕದಾದ್ಯಂತ ವ್ಯಾಪಕವಾಗುತ್ತಿದೆ. ಇಸ್ರೇಲ್‌ನ ಪ್ರತಿ ಕ್ರೌರ್ಯಕ್ಕೂ ಅಧ್ಯಕ್ಷ ಬೈಡನ್ ಕಣ್ಣು ಮುಚ್ಚಿ ಬೆಂಬಲ  ಸಾರುತ್ತಿದ್ದಾರೆ. ವಿಶ್ವಸಂಸ್ಥೆಯಲ್ಲಿ ಮಂಡನೆಯಾಗುವ ಇಸ್ರೇಲ್ ವಿರುದ್ಧದ ಯಾವುದೇ ಮಸೂದೆಗೂ ಅಮೇರಿಕ ವಿಟೋ ಪ್ರಯೋಗಿಸುತ್ತಿದೆ. 34  ಸಾವಿರಕ್ಕಿಂತಲೂ ಅಧಿಕ ನಾಗರಿಕರನ್ನು ಹತ್ಯೆಗೈದಿರುವ ಮತ್ತು ಅದರ ಹಲವು ಪಟ್ಟು ನಾಗರಿಕರನ್ನು ಹಸಿವೆಗೆ ದೂಡಿರುವ ಹಾಗೂ ಲಕ್ಷಾಂತರ  ಮಂದಿಯನ್ನು ನಿರ್ವಸಿತರನ್ನಾಗಿಸಿರುವ ರಾಷ್ಟ್ರವೊಂದಕ್ಕೆ ಬೈಡನ್ ಕಾವಲುಗಾರನಾಗಿ ನಿಂತಿರುವುದು ಈ ಶತಮಾನದ ಅತಿದೊಡ್ಡ ಕ್ರೌರ್ಯ.

ಒಂದುಕಡೆ ರಶ್ಯಾದ ದಾಳಿಗೊಳಗಾಗಿರುವ ಉಕ್ರೇನ್‌ಗೆ ಬೆಂಬಲವಾಗಿ ನಿಂತಿರುವ ಅಮೇರಿಕವು ಇನ್ನೊಂದು ದಾಳಿಕೋರ ಇಸ್ರೇಲನ್ನೂ ಬೆಂಬಲಿಸುತ್ತಿದೆ. ಸಂತ್ರಸ್ತ ರಾಷ್ಟ್ರ ಎಂಬ ನೆಲೆಯಲ್ಲಿ ಉಕ್ರೇನ್ ಪರ ಅಮೇರಿಕ ನಿಂತಿದೆ ಎಂಬುದೇ ನಿಜವಾಗಿದ್ದರೆ, ಯಾವ ಕಾರಣಕ್ಕೂ ಇಸ್ರೇಲ್ ಪರ  ಅಮೇರಿಕ ನಿಲ್ಲುವುದಕ್ಕೆ ಅರ್ಥವೇ ಇಲ್ಲ. ಅದು ನಿಲ್ಲಬೇಕಾದುದು ಗಾಝಾ ಅಥವಾ ಫೆಲೆಸ್ತೀನ್ ಪರ. ಉಕ್ರೇನ್ ಹೇಗಿದ್ದರೂ ಒಂದು  ಸಾರ್ವಭೌಮ ರಾಷ್ಟ್ರ. ಅದಕ್ಕೆ ಅದರದ್ದೇ  ಆದ ಸುಸಜ್ಜಿತ ಸೇನೆ, ಪೊಲೀಸ್ ವ್ಯವಸ್ಥೆ, ಗಡಿ ಇತ್ಯಾದಿ ಎಲ್ಲವೂ ಇದೆ. ವಿಶ್ವಸಂಸ್ಥೆ ಮಾನ್ಯ ಮಾಡಿರುವ  ರಾಷ್ಟ್ರಗಳ ಪಟ್ಟಿಯಲ್ಲಿ ಉಕ್ರೇನ್ ಇದೆ. ಆದರೆ, ಫೆಲೆಸ್ತೀನ್ ಕಳೆದ 70 ವರ್ಷಗಳಿಂದ ರಾಷ್ಟçದ ಮಾನ್ಯತೆಗಾಗಿ ವಿಶ್ವಸಂಸ್ಥೆಯಲ್ಲಿ ಹೋರಾಡುತ್ತಿದೆ.  ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವನ್ನು ಬಯಸುತ್ತಿದೆ. ಆದರೆ, ವಿಶ್ವಸಂಸ್ಥೆಯಲ್ಲಿ ಈ ಕುರಿತಂತೆ ಮಂಡನೆಯಾಗುವ ಯಾವುದೇ ಮಸೂದೆಗೂ ಅಮೇರಿಕ  ಅಡ್ಡಗಾಲು ಹಾಕುತ್ತಲೇ ಬಂದಿದೆ. ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರಕ್ಕೆ ಅನುಮತಿಸಲಾರೆ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಬಹಿರಂಗವಾಗಿ ಹೇಳಿಕೆ  ನೀಡಿರುವ ಹೊರತಾಗಿಯೂ ಅಮೇರಿಕದ ನಿಲುವಿನಲ್ಲಿ ಬದಲಾವಣೆ ಆಗುತ್ತಿಲ್ಲ. ವಿಶಾಲ ಫೆಲೆಸ್ತೀನ್ ಮಣ್ಣಿನಲ್ಲಿ ಇಸ್ರೇಲ್ ರಾಷ್ಟ್ರವನ್ನು   1948ರಲ್ಲೇ  ಸ್ಥಾಪಿಸಲು ವಿಶ್ವಸಂಸ್ಥೆಗೆ ಸಾಧ್ಯವಾಗಿದೆ ಎಂದಾದರೆ 70 ವರ್ಷಗಳ ನಂತರವೂ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವನ್ನು ಸ್ಥಾಪಿಸಲು  ವಿಶ್ವಸಂಸ್ಥೆಗೆ ಯಾಕೆ ಸಾಧ್ಯವಾಗಿಲ್ಲ? 70 ವರ್ಷಗಳ ಹಿಂದೆ ಇಸ್ರೇಲ್ ರಾಷ್ಟ್ರಸ್ಥಾಪನೆಗೆ ಬೆಂಬಲಿಸಿರುವ ರಾಷ್ಟçಗಳು ಯಾಕೆ ಆ ಬಳಿಕ ಸ್ವತಂತ್ರ  ಫೆಲೆಸ್ತೀನ್ ರಾಷ್ಟç ನಿರ್ಮಾಣಕ್ಕೆ ಬೆಂಬಲಿಸುತ್ತಿಲ್ಲ? ಫೆಲೆಸ್ತೀನ್ ಎಂಬುದು ಫೆಲೆಸ್ತೀನಿಯರದ್ದು. ಹೇಗೆ ಅಮೇರಿಕ ಅಮೇರಿಕನ್ನರದ್ದೋ  ಹಾಗೆಯೇ.  ಆದರೆ, ಇದೇ ಫೆಲೆಸ್ತೀನಿಯರು ಇವತ್ತು ಆ ಮಣ್ಣಿನಲ್ಲಿ ಹೊರಗಿನಿಂದ ಬಂದು ಕುಳಿತವರ ಜೊತೆ ರಾಷ್ಟ್ರಕ್ಕಾಗಿ ಅಂಗಲಾಚುವಂಥ ಪರಿಸ್ಥಿತಿಯನ್ನು  ತಂದವರು ಯಾರು? ಯಾಕೆ? ಇಸ್ರೇಲ್ ರಾಷ್ಟ್ರ ಸ್ಥಾಪಿಸಿದ ವಿಶ್ವಸಂಸ್ಥೆಗೆ ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪಿಸುವ ಸಾಮರ್ಥ್ಯ ಇಲ್ಲ ಎಂದಾದರೆ,  ಅದು ಅಸ್ತಿತ್ವದಲ್ಲಿರಬೇಕಾದ ಅಗತ್ಯವಾದರೂ ಏನಿದೆ?

ನ್ಯಾಯ ಎಂಬ ಎರಡಕ್ಷರದ ಆರಂಭದಲ್ಲಿ ಅ ಎಂಬ ಒಂದಕ್ಷರವನ್ನು ಸೇರಿಸಿದರೆ, ಜಗತ್ತೇ ಇಷ್ಟಪಡದ ಪದವಾಗಿ ಅದು ಮಾರ್ಪಡುತ್ತದೆ.  ನ್ಯಾಯ ಈ ಜಗತ್ತಿನ ಬಯಕೆ. ಈ ಜಗತ್ತಿನಲ್ಲಿ ಮಾನವರ ಬದುಕು ನ್ಯಾಯ ಎಂಬ ನಿರೀಕ್ಷೆಯನ್ನು ಆಧರಿಸಿದೆ. ನ್ಯಾಯದ ನಿರೀಕ್ಷೆಯೇ ಇಲ್ಲದ  ಭೂಮಿಯಲ್ಲಿ ಅನ್ಯಾಯವೇ ರಾಜನಾಗಿರುತ್ತದೆ. ಅನ್ಯಾಯಕ್ಕೆ ದೀರ್ಘ ಆಯುಷ್ಯ ಇರುವುದಿಲ್ಲ. ಪ್ರಕೃತಿಯ ಗುಣವೇ ನ್ಯಾಯದ್ದಾಗಿದೆ. ‘ನ್ಯಾಯ  ನಿಮ್ಮ ಹೆತ್ತವರ ವಿರುದ್ಧವಿದ್ದರೂ ನೀವು ನ್ಯಾಯದ ಜೊತೆ ನಿಲ್ಲಬೇಕೇ ಹೊರತು ಹೆತ್ತವರ ಜೊತೆ ಅಲ್ಲ..’ ಎಂದು ಪವಿತ್ರ ಕುರ್‌ಆನ್ ಬೋಧಿಸುತ್ತದೆ. ‘ಓರ್ವ ವ್ಯಕ್ತಿಯನ್ನು ಅನ್ಯಾಯವಾಗಿ ಕೊಂದವ ಸಕಲ ಮಾನವ ಕೋಟಿಯನ್ನು ಕೊಂದ ಪಾತಕಿಯಾಗುತ್ತಾನೆ..’ ಎಂದೂ ಪವಿತ್ರ ಕುರ್‌ಆ ನ್ ಎಚ್ಚರಿಸುತ್ತದೆ. ಜಗತ್ತು ಉಸಿರಾಡುತ್ತಿರುವುದೇ ನ್ಯಾಯ ಮತ್ತು ಅನ್ಯಾಯಗಳ ನಡುವೆ. ನ್ಯಾಯವನ್ನು ನೆಲೆ ನಿಲ್ಲಿಸುವುದು ಮತ್ತು ಅ ನ್ಯಾಯವನ್ನು ತೊಲಗಿಸುವುದೇ ಸಕಲ ಪ್ರವಾದಿಗಳ ಮತ್ತು ಅನುಭಾವಿಗಳ ಗುರಿಯಾಗಿತ್ತು. ಬಹುಶಃ, ನ್ಯಾಯ ಮೇಲುಗೈ ಪಡೆದೇ ತೀರುತ್ತದೆ  ಎಂಬ ಅಪಾರ ನಿರೀಕ್ಷೆಯೇ ಇವತ್ತು ಫೆಲೆಸ್ತೀನಿಯರನ್ನು ಹೋರಾಟದ ಕಣದಲ್ಲಿ ನಿಲ್ಲಿಸಿದೆ ಎಂದೇ ಹೇಳಬಹುದು. ಅಮೇರಿಕ ಇರಲಿ, ಇಸ್ರೇಲ್  ಇರಲಿ ಅಥವಾ ವಿಶ್ವಸಂಸ್ಥೆಯೇ ಇರಲಿ, ಅನ್ಯಾಯದ ನೊಗ ಹೊತ್ತವರಿಗೆ ಕೊನೆ ಎಂಬುದಿರುತ್ತದೆ. ಅನ್ಯಾಯ ಪ್ರಕೃತಿ ವಿರೋಧಿ  ಆಗಿರುವುದರಿಂದ ಅಂತಿಮ ಗೆಲುವು ಅನ್ಯಾಯದ್ದಾಗಿರಲು ಸಾಧ್ಯವೇ ಇಲ್ಲ. ಒಂದು ದಿನ ಅನ್ಯಾಯದ ವಿರುದ್ಧ ನ್ಯಾಯ ಗೆಲುವು ಸಾಧಿಸಲಿದೆ. ಆ  ಶುಭ ದಿನಕ್ಕಾಗಿ ಫೆಲೆಸ್ತೀನಿಯರು ಕಾಯುತ್ತಿದ್ದಾರೆ.

ಹುಬ್ಬಳ್ಳಿ ಘಟನೆಗೆ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆ ಅತಿಯಾಯಿತೇ?

 ಸನ್ಮಾರ್ಗ ಸಂಪಾದಕೀಯ


ಬಹುಸಂಖ್ಯಾತರ ಭಾವನೆಯನ್ನು ಕೆರಳಿಸಿ ಧರ್ಮಧ್ರುವೀಕರಣ ನಡೆಸಬಯಸಿದವರನ್ನು ಹುಬ್ಬಳ್ಳಿಯ ಮುಸ್ಲಿಮರು ಗಾಢ ನಿರಾಶೆಗೆ ತಳ್ಳಿದ್ದಾರೆ.  ನೇಹಾ ಹಿರೇಮಠ್ ಹತ್ಯೆಗೆ ಸಂಬಂಧಿಸಿ ಹುಬ್ಬಳ್ಳಿಯ ಮುಸ್ಲಿಮ್ ಸಂಘಟನೆಗಳು ಮತ್ತು ನಾಗರಿಕರು ವ್ಯಕ್ತಪಡಿಸಿದ ಪ್ರತಿಕ್ರಿಯೆ ಅತ್ಯಂತ ಪ್ರಬುದ್ಧ  ಮತ್ತು ಮಾದರಿಯೋಗ್ಯ. ಘಟನೆ ನಡೆದ ಬೆನ್ನಿಗೇ ಅಲ್ಲಿನ ಅಂಜುಮನೆ ಇಸ್ಲಾಮ್ ಎಂಬ ಪ್ರಭಾವಿ ಸಂಘಟನೆಯ ವಿವಿಧ ಶಾಖೆಯ  ಅಧ್ಯಕ್ಷರುಗಳ ನಿಯೋಗ ಜಿಲ್ಲಾ ಪೊಲೀಸ್ ಕಮೀಶನರನ್ನು ಭೇಟಿಯಾಗಿ ಕ್ರಮಕ್ಕೆ ಒತ್ತಾಯಿಸಿತು. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದು  ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿತು. ಹತ್ಯೆಯನ್ನು ಖಂಡಿಸಿ ಶುಕ್ರವಾರದ ಜುಮಾ ನಮಾಝï‌ನ ಬಳಿಕ ಮುಸ್ಲಿಮರು ಸವದತ್ತಿಯಲ್ಲಿ  ಬೃಹತ್ ರ‍್ಯಾಲಿ ನಡೆಸಿದರು. ಫಯಾಝï‌ನ ತಂದೆ ಮತ್ತು ತಾಯಿಯೇ ಮಗನಿಂದ ಅಂತರ ಕಾಯ್ದುಕೊಂಡರು. ಆತನಿಗೆ ಶಿಕ್ಷೆಯಾಗಲಿ ಎಂದು  ಒತ್ತಾಯಿಸಿದರು. ಮಾತ್ರವಲ್ಲ, ಧಾರವಾಡ ಬಂದ್‌ಗೂ ಮುಸ್ಲಿಮ್ ಸಮುದಾಯ ಕರೆಕೊಟ್ಟಿತು. ಈ ಕ್ಷಿಪ್ರ ಬೆಳವಣಿಗೆಯಿಂದಾಗಿ ಆರೋಪಿ  ಫಯಾಝï‌ನನ್ನು ಎತ್ತಿಕೊಂಡು ಆ ಕ್ರೌರ್ಯವನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಲು ಸಂಚು ಹೆಣೆದವರು ನಿರುತ್ತರರಾದರು. ಅಂದಹಾಗೆ,

ಮುಸ್ಲಿಮ್ ಸಮುದಾಯದ ಈ ಪ್ರತಿಕ್ರಿಯೆ ಕೆಲವು ಪ್ರಶ್ನೆಗಳನ್ನೂ ಎತ್ತುತ್ತದೆ. 

‘ವ್ಯಕ್ತಿಯ ತಪ್ಪಿಗೆ ಮುಸ್ಲಿಮ್ ಸಮುದಾಯ ಈ ಬಗೆಯಲ್ಲಿ  ಪ್ರತಿಕ್ರಿಯಿಸುವ ಅಗತ್ಯ ಏನಿದೆ? ಅದೊಂದು ಕ್ರಿಮಿನಲ್ ಕೃತ್ಯ. ಕ್ರಿಮಿನಲ್‌ಗೆ ಧರ್ಮವೇ ಇರುವುದಿಲ್ಲ. ಹೀಗಿರುವಾಗ, ಮುಸ್ಲಿಮ್ ಸಮುದಾಯ  ಬೀದಿಗಿಳಿದು ಪ್ರತಿಕ್ರಿಯಿಸಬೇಕಾದ ಅಗತ್ಯ ಏನಿದೆ? ಮುಸ್ಲಿಮ್ ಸಮುದಾಯದಲ್ಲಿ ಅಪರಾಧಿ ಭಾವ ಸೃಷ್ಟಿಯಾಗಿದೆಯೇ? ಪ್ರಜಾತಂತ್ರ ಭಾರತದಲ್ಲಿ  ವ್ಯಕ್ತಿಯ ನಿಯಂತ್ರಣ ಸಮುದಾಯದ ಕೈಯಲ್ಲಿಲ್ಲ. ವ್ಯಕ್ತಿಯನ್ನು ಶಿಕ್ಷಿಸುವ ಅಧಿಕಾರವೂ ಸಮುದಾಯಕ್ಕಿಲ್ಲ. ಅದನ್ನು ನೋಡಿಕೊಳ್ಳಬೇಕಾದುದು  ನ್ಯಾಯಾಂಗ ಮತ್ತು ಪೊಲೀಸ್ ಇಲಾಖೆ. ಹೀಗಿರುತ್ತಾ, ಮುಸ್ಲಿಮ್ ಸಮುದಾಯದ ಈ ಪ್ರತಿಕ್ರಿಯೆ ಏನನ್ನು ಸೂಚಿಸುತ್ತದೆ? ಈ ಪ್ರಕರಣಕ್ಕಿಂತ  ಒಂದು ದಿನ ಮೊದಲು ಪ್ರದೀಪ್ ಎಂಬವನನ್ನು ಬೆಂಗಳೂರಿನ ಪೊಲೀಸರು ಬಂಧಿಸಿದರು. ರುಕ್ಸಾನ ಎಂಬ 21 ವರ್ಷದ ಯುವತಿಯನ್ನು  ಪ್ರೀತಿಸಿ, ಆಕೆಯ ಮಗುವಿಗೆ ತಂದೆಯೂ ಆಗಿದ್ದ ಈತ ಮಾರ್ಚ್ 31ರಂದು ಆಕೆಯನ್ನು ಸುಟ್ಟು ಹಾಕಿದ್ದ. ಆಕೆಯ ಮಗುವನ್ನು ತಳ್ಳುಗಾಡಿಯಲ್ಲಿ  ಬಿಟ್ಟು ಪರಾರಿಯಾಗಿದ್ದ. ಮಾತ್ರವಲ್ಲ, ತನಗೆ ಅದಾಗಲೇ ಮದುವೆಯಾಗಿರುವುದನ್ನು ರುಕ್ಸಾನಳಿಂದ ಅಡಗಿಸಿಯೂ ಇಟ್ಟಿದ್ದ. ಆದರೆ, ಆತನ ಅಪರಾಧವನ್ನು ಹಿಂದೂ ಸಮುದಾಯ ವಹಿಸಿಕೊಳ್ಳಲಿಲ್ಲ. ಪ್ರತಿಭಟನೆಯಾಗಲಿ, ರ‍್ಯಾಲಿಯಾಗಲಿ ಅಥವಾ ಬಂದ್‌ಗಾಗಲಿ ಕರೆಯನ್ನೂ ಕೊಡಲಿಲ್ಲ.  ಅದೊಂದು ಮಾಮೂಲಿ ಕ್ರಿಮಿನಲ್ ಪ್ರಕರಣವಾಗಿ ಹತ್ತರಲ್ಲಿ ಹನ್ನೊಂದು ಎಂಬಂತೆ ಕಳೆದು ಹೋಯಿತು. ಇದಕ್ಕಿಂತ 5 ತಿಂಗಳ ಹಿಂದೆ  ಉಡುಪಿಯ ನೇಜಾರಿನಲ್ಲಿ ಪ್ರವೀಣ್ ಚೌಗಲೆ ಎಂಬವ ತನ್ನ ಸಹೋದ್ಯೋಗಿ ಸಹಿತ ಮೂವರು ಮಹಿಳೆಯರು ಮತ್ತು ಓರ್ವ ಬಾಲಕನನ್ನು  ಇರಿದು ಹತ್ಯೆ ಮಾಡಿದ. ಏಕಮುಖ ಪ್ರೇಮ ಪ್ರಕರಣದಿಂದಾದ ಈ ಕ್ರೌರ್ಯವನ್ನು ಖಂಡಿಸಿ ಹಿಂದೂ ಸಮುದಾಯ ಬೀದಿಗಿಳಿಯಲಿಲ್ಲ.  ಬಂದ್‌ಗೆ ಕರೆ ಕೊಡಲಿಲ್ಲ. ರ‍್ಯಾಲಿಯನ್ನೂ ನಡೆಸಲಿಲ್ಲ. ಅದಕ್ಕಿಂತ ಮೊದಲು, ಜೀವಾವಧಿ ಶಿಕ್ಷೆಗೊಳಗಾಗಿದ್ದ 11 ಮಂದಿ ಅತ್ಯಾಚಾರಿ ಅಪರಾಧಿಗಳನ್ನು ಗುಜರಾತ್ ಸರಕಾರವೇ ಸನ್ನಡತೆಯ ಆಧಾರದಲ್ಲಿ ಬಿಟ್ಟು ಬಿಟ್ಟಾಗಲೂ ಹಿಂದೂ ಸಮುದಾಯ ಅದನ್ನು ವಹಿಸಿಕೊಳ್ಳಲಿಲ್ಲ. ಅಪರಾಧಿಗಳೆಲ್ಲ ಹಿಂದೂ ಮತ್ತು ಸಂತ್ರಸ್ತೆಯಾದ ಬಿಲ್ಕಿಸ್ ಬಾನು ಮುಸ್ಲಿಮ್ ಎಂಬ ಕಾರಣಕ್ಕಾಗಿ ಹಿಂದೂ ಸಮುದಾಯ ಅಪರಾಧಿ ಭಾವದಿಂದ  ಪ್ರತಿಕ್ರಿಯಿಸಲಿಲ್ಲ. ಅದು ಕಾನೂನು ವ್ಯವಸ್ಥೆಯ ಭಾಗವೆಂಬಂತೆ ನಡಕೊಂಡಿತು. ಬೌದ್ಧಿಕ ವಲಯದ ವಿರೋಧವನ್ನು ಬಿಟ್ಟರೆ ಪ್ರತಿಭಟನೆಯಾಗಲಿ,  ರ‍್ಯಾಲಿಯಾಗಲಿ ನಡೆಯಲೇ ಇಲ್ಲ. ಹೀಗಿರುವಾಗ, ಮುಸ್ಲಿಮ್ ಸಮುದಾಯವೇಕೆ ವ್ಯಕ್ತಿಯ ಅಪರಾಧವನ್ನು ಸ್ವಯಂ ವಹಿಸಿಕೊಂಡಂತೆ  ವರ್ತಿಸುತ್ತಿದೆ? ಕಾನೂನು ನೋಡಿಕೊಳ್ಳಲಿ ಎಂದು ಸಹಜವಾಗಿ ಇದ್ದು ಬಿಡುವುದು ಒಳಿತಲ್ಲವೇ.. ಎಂಬೆಲ್ಲಾ ಪ್ರಶ್ನೆಗಳಿಗೂ ಇಂಥ ಪ್ರತಿಕ್ರಿಯೆಗಳು  ಅವಕಾಶವನ್ನು ಒದಗಿಸುತ್ತದೆ. ನಿಜವಾಗಿ,

ಹುಬ್ಬಳ್ಳಿಯದ್ದಾಗಲಿ, ಬೆಂಗಳೂರು, ಗುಜರಾತ್ ಅಥವಾ ಜಮ್ಮುವಿನ ಆಸಿಫಾ ಎಂಬ 8ರ ಹರೆಯದ ಬಾಲೆಯದ್ದಾಗಲಿ ಎಲ್ಲವೂ ಕಾನೂನಿಗೆ  ಸಂಬಂಧಿಸಿದ ಸಂಗತಿಗಳೇ ಹೊರತು ಹಿಂದೂ-ಮುಸ್ಲಿಮ್ ವಿಷಯಗಳಲ್ಲ. ಯಾವುದೇ ಅಪರಾಧವೂ ಅಪರಾಧವಾಗಿ ಗುರುತಿಸಿಕೊಳ್ಳಬೇಕೇ  ಹೊರತು ಹಿಂದೂ ಅಪರಾಧಿ ಅಥವಾ ಮುಸ್ಲಿಮ್ ಅಪರಾಧಿ ಎಂದು ಗುರುತಿಸಿಕೊಳ್ಳುವುದು ಸಾಮಾಜಿಕ ಸೌಖ್ಯದ ದೃಷ್ಟಿ ಯಿಂದ ಅ ಪಾಯಕಾರಿ. ಅಪರಾಧಕ್ಕೂ ಧರ್ಮಕ್ಕೂ ಹೇಗೆ ಸಂಬಂಧ ಇಲ್ಲವೋ ಹಾಗೆಯೇ ಅಪರಾಧಿಗೂ ಸಮುದಾಯಕ್ಕೂ ಸಂಬಂಧ ಇಲ್ಲ.  ಆದ್ದರಿಂದಲೇ, ಯಾವುದೇ ಸಮುದಾಯ ಸಾಧಕರನ್ನು ಸನ್ಮಾನಿಸಿ ಅವರೊಂದಿಗೆ ಗುರುತಿಸಿಕೊಳ್ಳುತ್ತದೆಯೇ ಹೊರತು ಅಪರಾಧಿಯೊಂದಿಗಲ್ಲ.  ವಿಷಾದ ಏನೆಂದರೆ,

ಈ ದೇಶದಲ್ಲಿ ಬಹುಸಂಖ್ಯಾತರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಪ್ರಯತ್ನಗಳು ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ನಡೆಯುತ್ತಿದೆ.  ಮುಸ್ಲಿಮರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ. ಬಹು ಸಂಖ್ಯಾತ ಹಿಂದೂಗಳಲ್ಲಿ ಅಭದ್ರತಾ ಭಾವನೆಯನ್ನು ವ್ಯವಸ್ಥಿತವಾಗಿ  ಬಿತ್ತಲಾಗುತ್ತಿದೆ. ಈ ಅಭದ್ರತೆಗೆ 20 ಕೋಟಿಯಷ್ಟಿರುವ ಮುಸ್ಲಿಮರೇ ಕಾರಣ ಎಂಬ ಅಪ್ಪಟ ಸುಳ್ಳನ್ನು ಹರಡಲಾಗುತ್ತಿದೆ. ಮುಸ್ಲಿಮ್ ದ್ವೇಷದ  ಹತ್ತು ಹಲವು ಸುಳ್ಳುಗಳನ್ನು ಸೋಶಿಯಲ್ ಮೀಡಿಯಾ ಸಹಿತ ಲಭ್ಯವಿರುವ ಎಲ್ಲ ಮಾಧ್ಯಮ ಗಳ ಮೂಲಕ ಹಂಚಲಾಗುತ್ತಿದೆ. ಮುಸ್ಲಿಮರನ್ನು  ಕ್ರಿಮಿನಲ್‌ಗಳು, ಹಿಂದೂ ಯುವತಿಯರನ್ನು ಪ್ರೀತಿಯ ಹೆಸರಲ್ಲಿ ವಂಚಿಸುವವರು, ಹಿಂದೂಗಳನ್ನು ಅವಮಾನಿಸುವುದಕ್ಕಾಗಿಯೇ ಗೋಮಾಂಸ  ಸೇವಿಸುವವರು, ಹಿಂದೂ ಧರ್ಮವನ್ನು ದ್ವೇಷಿಸುವವರು, ಭಾರತವನ್ನು ಇಸ್ಲಾಮ್ ರಾಷ್ಟ್ರವಾಗಿಸುವ ಸಂಚು ಹೆಣೆಯುತ್ತಿರುವವರು ಎಂಬಲ್ಲಿಂದ   ತೊಡಗಿ ಈ ಹಿಂದೆ ಈ ಉಪಭೂಖಂಡವನ್ನು ಆಳಿದ್ದ ಮುಸ್ಲಿಮ್ ದೊರೆ ಗಳ ವರೆಗೆ ಅತ್ಯಂತ ಹೀನಾಯ ಕಟ್ಟುಕತೆಗಳನ್ನು ಹೇಳಲಾಗುತ್ತಿದೆ.  ಇವಕ್ಕೆ ಫಯಾಝï‌ನಂಥ ಕ್ರಿಮಿನಲ್‌ಗಳು ನಡೆಸುವ ಕ್ರೌರ್ಯಗಳನ್ನು ಆಧಾರವಾಗಿ ನೀಡಲಾಗುತ್ತಿದೆ. ಒಂದುವೇಳೆ,

ಇದು ಕಾನೂನು ಸಂಬಂಧಿ ವಿಷಯ ಎಂದು ಇಂಥ ಸಂದರ್ಭಗಳಲ್ಲಿ ಮುಸ್ಲಿಮ್ ಸಮುದಾಯ ಮೌನವಾದರೆ, ಅದನ್ನೇ ಈ ಮಂದಿ ಅಪ ಪ್ರಚಾರಕ್ಕೆ ಬಳಸಿಕೊಳ್ಳುತ್ತಾರೆ. ಈ ಮೌನವೇ ಮುಸ್ಲಿಮ್ ಸಮುದಾಯ ಅಪರಾಧಿಯ ಜೊತೆಗಿದೆ ಅನ್ನುವುದಕ್ಕೆ ಪುರಾವೆ ಎಂಬಂತೆ ಪ್ರಚಾರ  ನಡೆಸುತ್ತಾರೆ. ಮಾತ್ರ ವಲ್ಲ, ಜನಸಾಮಾನ್ಯರು ಇದನ್ನು ನಂಬಿಬಿಡುವ ಸಂಭವವೂ ಇದೆ. ಇಂಥ ಸನ್ನಿವೇಶದಲ್ಲಿ ಮುಸ್ಲಿಮ್ ಸಮುದಾಯ ಭಿನ್ನ  ನಿಲುವನ್ನು ಸ್ವೀಕರಿಸುವುದೇ ಹೆಚ್ಚು ಯೋಗ್ಯವಾದುದು. ಆದ್ದರಿಂದಲೇ, ಹುಬ್ಬಳ್ಳಿ ಪ್ರಕರಣದಲ್ಲಿ ಮುಸ್ಲಿಮ್ ಸಮುದಾಯದ ಪ್ರತಿಕ್ರಿಯೆ  ಅತ್ಯಂತ  ಸಮಯೋಚಿತ ಮತ್ತು ಪ್ರಬುದ್ಧವಾಗಿ ಕಾಣಿಸುತ್ತದೆ. ಫಯಾಝï‌ನ ಕ್ರೌರ್ಯದ ಹೊಣೆಯನ್ನು ಮುಸ್ಲಿಮ್ ಸಮುದಾಯದ ಮೇಲೆ ಹೊರಿಸಿ  ಅಪಪ್ರಚಾರ ಮಾಡುವವರನ್ನು ಹುಬ್ಬಳ್ಳಿ ಮುಸ್ಲಿಮರ ಸಮಯೋಚಿತ ಪ್ರತಿಕ್ರಿಯೆ ಮಣ್ಣುಪಾಲು ಮಾಡಿದೆ. ಒಂದುವೇಳೆ, ಅದೊಂದು ಕ್ರಿಮಿನಲ್  ಕೃತ್ಯ ಮತ್ತು ಅದಕ್ಕೂ ಸಮುದಾಯಕ್ಕೂ ಸಂಬಂಧವೇ ಇಲ್ಲ ಎಂಬಂತೆ ಮುಸ್ಲಿಮ್ ಸಮುದಾಯ ಮೌನಕ್ಕೆ ಜಾರಿರುತ್ತಿದ್ದರೆ ಇವತ್ತು ಹುಬ್ಬಳ್ಳಿ  ಬಿಡಿ, ಇಡೀ ಕರ್ನಾಟಕವನ್ನೇ ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಕ್ಕೆ ದುಷ್ಟ ಶಕ್ತಿಗಳು ಯಶಸ್ವಿಯಾಗುತ್ತಿದ್ದರು. ನಿಜವಾಗಿ,

ಯಾವುದೇ ಅಪರಾಧ ಕೃತ್ಯವು ಹಿಂದೂ-ಮುಸ್ಲಿಮರಲ್ಲಿ ವಿಭಜನೆಯಾಗುವುದು ಸಮಾಜದ ಮತ್ತು ದೇಶದ ಹಿತದೃಷ್ಟಿಯಿಂದ ಅಪಾಯಕಾರಿ.  ಉಡುಪಿ ನೇಜಾರಿನ ಪ್ರಕರಣಕ್ಕೆ ಹೇಗೆ ಹಿಂದೂ ಸಮುದಾಯ ಹೊಣೆಯಲ್ಲವೋ ಹುಬ್ಬಳ್ಳಿ ಪ್ರಕರಣಕ್ಕೆ ಮುಸ್ಲಿಮ್ ಸಮುದಾಯವೂ  ಹೊಣೆಯಲ್ಲ. 140 ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಬರೇ 20 ಕೋಟಿಯಷ್ಟಿರುವ ಮುಸ್ಲಿಮ್ ಸಮುದಾಯದಿಂದ ಮಾತ್ರ ಸಂಪೂರ್ಣ  ಕಾನೂನುಬದ್ಧ ಮತ್ತು ಶಿಸ್ತಿನ ನಡವಳಿಕೆಯನ್ನು ಬಯಸುವುದು ಅಪ್ರಾಯೋಗಿಕ ಮತ್ತು ಅತಾರ್ಕಿಕ. ಉಳಿದ 120 ಕೋಟಿ ಬೃಹತ್ ಜನಸಂಖ್ಯೆಯುಳ್ಳ ಸಮುದಾಯದಲ್ಲಿ ಕ್ರಿಮಿನಲ್ ಕೃತ್ಯಗಳು ಹೇಗೆ ಸಹಜವೋ ಈ 20 ಕೋಟಿ ಜನಸಂಖ್ಯೆಯ ಸಮುದಾಯದಲ್ಲೂ ಅವೆಲ್ಲ  ಸಹಜ. ಇವನ್ನು ಈ ದೇಶದ ಪೊಲೀಸ್ ಇಲಾಖೆ ಮತ್ತು ನ್ಯಾಯಾಂಗ ವ್ಯವಸ್ಥೆಯು ಮಟ್ಟ ಹಾಕಬೇಕೇ ಹೊರತು ಸಮುದಾಯಗಳಲ್ಲ. ಕಾನೂನಿನೊಂದಿಗೆ ಸಹಕರಿಸುವುದಷ್ಟೇ ನಾಗರಿಕರ ಕರ್ತವ್ಯ. ಸದ್ಯ ಈ ಸತ್ಯವನ್ನು ಮರೆಮಾಚಿ ಒಂದು ಸಮುದಾಯವನ್ನು ಕ್ರಿಮಿನಲೈಸ್ ಮಾಡುವ  ಸಂಚು ನಡೆಯುತ್ತಿದೆ. ಮುಸ್ಲಿಮ್ ವ್ಯಕ್ತಿಯ ಕ್ರಿಮಿನಲ್ ಕೃತ್ಯವನ್ನು ಹಿಂದೂ ವಿರೋಧಿಯಂತೆ ಬಿಂಬಿಸಲಾಗುತ್ತಿದೆ. ಇದನ್ನು ತಡೆಯಬೇಕಿದ್ದರೆ  ಮುಸ್ಲಿಮ್ ಸಮುದಾಯ ಮೌನ ಮರೆತು ಮಾತಾಡಲೇಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಹುಬ್ಬಳ್ಳಿ ನಾಗರಿಕರು ಮತ್ತು ಅಂಜುಮನೆ  ಇಸ್ಲಾಮ್ ಶ್ಲಾಘನೆಗೆ ಅರ್ಹವೆನಿಸುತ್ತದೆ.

ಪ್ರಧಾನಿ ಸ್ಥಾನದ ಘನತೆಗೆ ಕಳಂಕ ತಂದ ಮೋದಿ

 



ಸನ್ಮಾರ್ಗ ಸಂಪಾದಕೀಯ


1. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಹೆಚ್ಚು ಮಕ್ಕಳಿರುವ ಸಮುದಾಯಕ್ಕೆ ಹಂಚಲಿದೆ. ನಿಮ್ಮ ಪರಿಶ್ರಮದ ಹಣ  ನುಸುಳುಕೋರರಲ್ಲಿ ಹಂಚಿಕೆಯಾಗಬೇಕೇ?

2. ದಲಿತ್ ಮತ್ತು ಓಬಿಸಿ ಮೀಸಲಾತಿಯನ್ನು ಕಿತ್ತು ಅದನ್ನು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಬಯಸುತ್ತಿದೆ.

ಈ ಎರಡೂ ಹೇಳಿಕೆಗಳು ಕಲ್ಲಡ್ಕ ಪ್ರಭಾಕರ ಭಟ್ರದ್ದೋ, ಅನಂತ ಕುಮಾರ್ ಹೆಗ್ಡೆಯದ್ದೋ, ಜಗದೀಶ್ ಕಾರಂತರದ್ದೋ ಅಥವಾ ದ್ವೇಷ  ಭಾಷಣಗಳಲ್ಲಿ ಕುಖ್ಯಾತಿಯನ್ನು ಪಡೆದಿರುವ ಪ್ರಜ್ಞಾಸಿಂಗ್ ಠಾಕೂರ್, ಗೋಲಿ ಮಾರೋ ಸಾಲೋಂಕೋ ಕುಖ್ಯಾತಿಯ ಅನುರಾಗ್ ಠಾಕೂರ್,  ಶಂಕರ್ ಬಿದೂರಿಯದ್ದೋ ಅಲ್ಲ. 140 ಕೋಟಿ ಭಾರತೀಯರನ್ನು ಸರಿಸಮಾನವಾಗಿ ನೋಡುವ ಪ್ರತಿಜ್ಞೆಯೊಂದಿಗೆ ಪ್ರಧಾನಿ ಹುದ್ದೆಯನ್ನು  ಅಲಂಕರಿಸಿರುವ ನರೇಂದ್ರ ಮೋದಿಯದ್ದು. ಮೊದಲ ಹೇಳಿಕೆಯನ್ನು ರಾಜಸ್ತಾನದ ಚುನಾವಣಾ ಸಭೆಯಲ್ಲಿ ನೀಡಿದ್ದರೆ ಎರಡನೇ ಹೇಳಿಕೆಯನ್ನು  ತೆಲಂಗಾಣದಲ್ಲಿ ನೀಡಿದ್ದಾರೆ. ಭಾರತೀಯ ಮುಸ್ಲಿಮರನ್ನು ಬಹುಸಂಖ್ಯಾತ ಹಿಂದೂಗಳ ವಿರುದ್ಧ ಓರ್ವ ಪ್ರಧಾನಿಯೇ ಈ ರೀತಿಯಲ್ಲಿ ಎತ್ತಿ  ಕಟ್ಟುತ್ತಾರೆಂದರೆ, ಅವರ ಸಬ್ಕಾ ಸಾಥ್ ಘೋಷಣೆಯ ಅರ್ಥವೇನು?

ಪ್ರಧಾನಿ ಒಂದು ಪಕ್ಷದ ಪ್ರತಿನಿಧಿಯಲ್ಲ. ದೇಶದ ಎಲ್ಲ ನಾಗರಿಕರ ಪ್ರತಿನಿಧಿ. ಅವರ ಮಾತು ಮತ್ತು ವರ್ತನೆಗಳಲ್ಲಿ ಈ ಸಮಗ್ರಭಾವ  ಬಿಂಬಿತವಾಗಬೇಕು. ದೇಶದ ಪ್ರತಿಯೋರ್ವ ನಾಗರಿಕರಲ್ಲೂ `ನಾನು ನಿಮ್ಮವನು' ಎಂಬ ಭದ್ರತಾ ಭಾವವನ್ನು ತುಂಬುವಂತಿರಬೇಕು. ಆದರೆ,  ಪ್ರಧಾನಿ ಮೋದಿಯ ಮಾತುಗಳಲ್ಲಿ ಈ ಭಾವ ಇದೆಯೇ? ಅವರೇಕೆ ಭಾರತೀಯ ಮುಸ್ಲಿಮರನ್ನು ಪದೇ ಪದೇ ನಿಂದಿಸುವ, ಅವಮಾನಿಸುವ  ಮತ್ತು ಅಪರಾಧಿಗಳಂತೆ ಬಿಂಬಿಸುವ ಮಾತುಗಳನ್ನು ಆಡುತ್ತಿದ್ದಾರೆ? ಹೀಗೆ ಹೇಳುವುದರಿಂದ ಹಿಂದೂಗಳು ತನಗೆ ಮತ ಚಲಾಯಿಸುತ್ತಾರೆ  ಎಂಬ ನಂಬಿಕೆಯೇ? ಒಂದು ವೇಳೆ ಹೀಗೆ ಮುಸ್ಲಿಮರನ್ನು ನಿಂದಿಸುವುದರಿಂದ ಓಟು ಲಭಿಸಿದರೂ ಮತ್ತು ಮತ್ತೆ ಪ್ರಧಾನಿಯಾಗುವ ಅವಕಾಶ  ಲಭ್ಯವಾದರೂ `ಮುಸ್ಲಿಮ್ ನಿಂದಕ, ದ್ವೇಷ ಭಾಷಣಕಾರ' ಎಂಬ ಕಳಂಕದಿಂದ ಮುಕ್ತವಾಗಲು ಅವರಿಗೆ ಸಾಧ್ಯವಿದೆಯೇ? ಪ್ರಧಾನಿ ಪಟ್ಟ ಶಾಶ್ವತವಲ್ಲ; ಒಂದಿನ ಆ ಪಟ್ಟದಿಂದ ಕೆಳಗಿಳಿಯಲೇಬೇಕು ಮತ್ತು ಇತಿಹಾಸದ ಪುಟದಲ್ಲಿ `ಪ್ರಧಾನಿ'ಯಾಗಿ ಗುರುತಿಸಿಕೊಳ್ಳಲೇಬೇಕು. ಆದರೆ, ` ಪ್ರಧಾನಿ ಮೋದಿ' ಎಂದು ಇತಿಹಾಸದ ಪುಸ್ತಕಗಳಲ್ಲಿ ಓದುವಾಗಲೋ, ಕೇಳುವಾಗಲೋ ಅಥವಾ ದೃಶ್ಯ ಮಾಧ್ಯಮಗಳಲ್ಲಿ ವೀಕ್ಷಿಸು ವಾಗಲೋ,  ಈ ದೇಶದ ಬೃಹತ್ ಸಮುದಾಯವೊಂದು ಹೆಮ್ಮೆ ಪಡದ ಮತ್ತು ಅಸಮಾಧಾನ ಸೂಚಿಸುವ ವಾತಾವರಣವೊಂದು ನಿರ್ಮಾಣವಾಗುವುದು  ಒಳ್ಳೆಯದೇ? ಇತಿಹಾಸವನ್ನು ಅಧ್ಯಯನ ಮಾಡುವ ಭವಿಷ್ಯದ ವಿದ್ಯಾರ್ಥಿಗಳು ನೆಹರೂ, ಶಾಸ್ತ್ರಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ,  ದೇವೇಗೌಡ, ಮನ್‌ಮೋಹನ್ ಸಿಂಗ್ ಇತ್ಯಾದಿ ಹೆಸರುಗಳನ್ನು ಯಾವ ಭಾವದಲ್ಲಿ ಓದುತ್ತಾರೋ ಅದೇ ಭಾವದಲ್ಲಿ ನರೇಂದ್ರ ಮೋದಿ ಹೆಸರನ್ನು ಓದಲಾಗದಿದ್ದರೆ ಅದಕ್ಕೆ ಯಾರು ಹೊಣೆ?
ಈ ದೇಶದಲ್ಲಿ ಮುಸ್ಲಿಮರು 25 ಕೋಟಿಯಷ್ಟಿದ್ದಾರೆ ಮತ್ತು ಮೋದಿಯಾಗಲಿ ಇನ್ನಾರೇ ಆಗಲಿ ಎಷ್ಟೇ ಅವಮಾನಿಸಿದರೂ, ನಿಂದಿಸಿದರೂ  ಮತ್ತು ಗೇಲಿ ಮಾಡಿದರೂ ಈ ಬೃಹತ್ ಸಮುದಾಯವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಕ್ಕೋ ಸಮೂಲ ನಾಶ ಮಾಡುವುದಕ್ಕೋ ಸಾಧ್ಯವೇ  ಇಲ್ಲ. ಅಂದರೆ, ಒಂದು ಸಮುದಾಯವನ್ನು ದ್ವೇಷಿಸುವುದರಿಂದ ಒಂದು ನಿರ್ದಿಷ್ಟ ಗುಂಪಿನ ಮನಸ್ಸನ್ನು ತಾತ್ಕಾಲಿಕವಾಗಿ ತೃಪ್ತಿಪಡಿಸಬಹುದು  ಮತ್ತು ನಿರ್ದಿಷ್ಟ ಅವಧಿವರೆಗೆ ಅಧಿಕಾರ ಹಿಡಿಯಬಹುದು. ಆದರೆ, ಅಧಿಕಾರಕ್ಕಾಗಿ ಮಾಡುವ ಈ ವಿಭಜನವಾದಿ ತಂತ್ರವು ದೇಶದ ಅಭಿವೃದ್ಧಿ ಮತ್ತು ಒಗ್ಗಟ್ಟಿನ ಮೇಲೆ ಬೀರುವ ಅಡ್ಡ ಪರಿಣಾಮಗಳು ಇಷ್ಟೇ ತಾತ್ಕಾಲಿಕವಾಗಿರುತ್ತದೆಯೇ? 25 ಕೋಟಿಯಷ್ಟಿರುವ ಸಮುದಾಯವೊಂದನ್ನು 80 ಕೋಟಿಯಷ್ಟಿರುವ ಸಮುದಾಯದ  ವೈರಿ ಎಂದು ಬಿಂಬಿಸುವುದೇ  ದೇಶದ ನಾಗರಿಕರ ನಡುವೆ ಇರಲೇಬೇಕಾದ ವಿಶ್ವಾಸಾರ್ಹತೆಗೆ ಅತಿ ದೊಡ್ಡ ಪೆಟ್ಟು. ದೇಶದ ಅಭಿವೃದ್ಧಿ ನಾಗರಿಕರ ಒಗ್ಗಟ್ಟನ್ನು ಅವಲಂಬಿಸಿದೆ.

ಈ ದೇಶದಲ್ಲಿ ನಾಗರಿಕನೋರ್ವ ಉತ್ತು ಬಿತ್ತಿ ಬೆಳೆಯಬೇಕಾದರೆ, ಮೊದಲು ಆತ/ಕೆಯಲ್ಲಿ ಭದ್ರತಾಭಾವ ಮೂಡಿರಬೇಕು. ತನಗೆ ಈ ದೇಶದಲ್ಲಿ  ರಕ್ಷಣೆಯಿದೆ ಮತ್ತು ತನ್ನನ್ನು ಯಾವುದೇ ಪಕ್ಷಪಾತ ಭಾವವಿಲ್ಲದೇ ಇಲ್ಲಿನ ಸರ್ಕಾರ ನಡೆಸಿಕೊಳ್ಳುತ್ತದೆ ಎಂಬ ನಂಬಿಕೆ ಅವರಲ್ಲಿರಬೇಕು. ಈ ದೇಶದಲ್ಲಿ ಹೂಡಿಕೆ ಮಾಡುವವರೂ ಮೊದಲು ಇಂಥ ಭಾವ ಸೃಷ್ಟಿಯನ್ನೇ ಬಯಸುತ್ತಾರೆ. ತನ್ನ ದೇಶದ ಬಗ್ಗೆ ಓರ್ವ ನಾಗರಿಕ ಹೆಮ್ಮೆಪಡುವುದಕ್ಕೆ  ಆ ದೇಶ ಅವನನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದು ಮುಖ್ಯವಾಗುತ್ತದೆ. ರಾಜಕೀಯ ಕಾರಣಕ್ಕಾಗಿ ತನ್ನ ದೇಶ ತನ್ನನ್ನು `ಹೊರೆ' ಎಂಬಂತೆ   ಬಿಂಬಿಸತೊಡಗಿದರೆ ಮತ್ತು ತನ್ನ ಕೊಡುಗೆಯನ್ನು ನಿಕೃಷ್ಟವಾಗಿ ಕಾಣತೊಡಗಿದರೆ, ಆತ/ಕೆ ಆ ದೇಶದ ಬಗ್ಗೆ ಹೆಮ್ಮೆಪಡುವುದಕ್ಕೆ ಸಾಧ್ಯವೇ ಇಲ್ಲ.  ಪ್ರಧಾನಿ ನರೇಂದ್ರ ಮೋದಿಯವರ ವರ್ತನೆಯು ಇಂಥ ನಕಾರಾತ್ಮಕ ರೂಪದಲ್ಲಿದೆ. ಈ ದೇಶದ ಮುಸ್ಲಿಮರಲ್ಲಿ ಅಭದ್ರತೆಯನ್ನು ಹುಟ್ಟು  ಹಾಕುವುದು ಅವರ ಉದ್ದೇಶದಂತಿದೆ. ತಾತ್ಕಾಲಿಕವಾಗಿ ಈ ತಂತ್ರ ಯಶಸ್ಸು ತಂದುಕೊಟ್ಟರೂ ದೀರ್ಘಕಾಲಿಕ ದೃಷ್ಟಿಯಿಂದ ಈ ತಂತ್ರ ಅತ್ಯಂತ  ಅಪಾಯಕಾರಿ.

ಅಧಿಕಾರ ಲಾಭಕ್ಕಾಗಿ ದೇಶದ ನಾಗರಿಕರನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸುವುದರಿಂದ ದೇಶದ ಐಕ್ಯ ಭಾವಕ್ಕೆ ಆಳ ಗಾಯವಾಗುತ್ತದೆ.  ಒಂದು ಸಮುದಾಯವನ್ನು ಇನ್ನೊಂದು ಸಮುದಾಯ ಅನುಮಾನದಿಂದ ನೋಡತೊಡಗುತ್ತದೆ. ಸಣ್ಣ ವಯಸ್ಸಿನ ಮಕ್ಕಳು ಈ ಅನುಮಾನಿತ  ವಾತಾವರಣದಲ್ಲಿ ಬೆಳೆಯ ತೊಡಗುತ್ತಾರೆ. ಅವರ ಮನಸ್ಸಿನಲ್ಲಿ ಇನ್ನೊಂದು ಸಮುದಾಯದ ಬಗ್ಗೆ ಆತಂಕ ಮತ್ತು ದುರಾಭಿಪ್ರಾಯ ಅಚ್ಚೊತ್ತ  ತೊಡಗುತ್ತದೆ. ಇದು ಏಕ ಮುಖ ಅಲ್ಲ. ಮುಸ್ಲಿಮ್ ಸಮುದಾಯವನ್ನು ಯಾರು ನಿಂದಿಸುತ್ತಾರೋ ಅದೇ ವ್ಯಕ್ತಿಗೆ ಮತ್ತೆ ಮತ್ತೆ ಅಧಿಕಾರ  ಸಿಗತೊಡಗಿದಾಗ ಬಹುಸಂಖ್ಯಾತ ಸಮುದಾಯದ ಕುರಿತು ಮುಸ್ಲಿಮ್ ಸಮುದಾಯದಲ್ಲೂ ದುರಾಭಿಪ್ರಾಯ ಮೂಡ ತೊಡಗುತ್ತದೆ. ಅವರೆಲ್ಲ  ಮುಸ್ಲಿಮರನ್ನು ದ್ವೇಷಿಸುತ್ತಾರೆ ಎಂಬ ಭಾವದೊಂದಿಗೆ ಆ ಸಮುದಾಯದ ಎಳೆ ಪೀಳಿಗೆಯೂ ಬೆಳೆಯ ತೊಡಗುತ್ತದೆ. ಈ ಎರಡೂ  ಬೆಳವಣಿಗೆಯೂ ಅಪಾಯಕಾರಿ. ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಒಂದು ಸಮುದಾಯವನ್ನು ಅನ್ಯಗೊಳಿಸುವ ಈ ತಂತ್ರವು ಮೋದಿ ಅಧಿಕಾರಿಂದ ಇಳಿದ ಬಳಿಕವೂ ನಾಗರಿಕರಲ್ಲಿ ಸುಪ್ತವಾಗಿ ಉಳಿದುಕೊಳ್ಳಲಾರದು ಎನ್ನುವ ಹಾಗಿಲ್ಲ. ಯಾವುದಾದರೊಂದು ಘಟನೆ ಸಂಭವಿಸಿದಾಗ  ಈ ಸುಪ್ತಭಾವ ಮತ್ತೆ ಜಾಗೃತಗೊಳ್ಳಬಹುದು. ಮುಸ್ಲಿಮ್ ಹುಡುಗಿಯೊಂದಿಗೆ ಹಿಂದೂ ಯುವಕ ಪರಾರಿಯಾದಾಗ ಅಥವಾ ಇದಕ್ಕೆ ತದ್ವಿರುದ್ಧ  ಘಟನೆ ಸಂಭವಿಸಿದಾಗ, ಈ ಸುಪ್ತಭಾವ ಮತ್ತೆ ಎಚ್ಚರಗೊಂಡು ಸಾರ್ವಜನಿಕ ಭಾವವಾಗಿ ಪರಿವರ್ತನೆಯಾಗಬಹುದು. ಪ್ರತಿಭಟನೆಗಳು, ಬಂದ್  ಕರೆಗಳು, ವದಂತಿಗಳು ಉಂಟಾಗಬಹುದು. ಇದು ಬರೇ ಊಹೆ ಅಲ್ಲ.

ಈಗಾಗಲೇ ಈ ದೇಶದಲ್ಲಿ ಇಂಥ ಭಾವ ಜಾಗೃತವಾಗಿಯೇ ಇದೆ. ಮತ್ತು ಬಹಿರಂಗದಲ್ಲೂ ಕಾಣಿಸಿಕೊಳ್ಳುತ್ತಿದೆ. ತೀರಾ ತೀರಾ ವೈಯಕ್ತಿಕ  ಪ್ರಕರಣಕ್ಕೂ ಹಿಂದೂ-ಮುಸ್ಲಿಮ್ ಬಣ್ಣವನ್ನು ಕಟ್ಟಿ ಸಮಾಜದ ಶಾಂತಿಯನ್ನು ಕೆಡಿಸುವುದಕ್ಕೆ ಇವತ್ತು ಸಾಧ್ಯವಾಗಿರುವುದೇ ಸಮಾಜದಲ್ಲಿ ಈ  ಭಾವ ಆಳವಾಗಿ ಬೇರೂರಿರುವುದನ್ನು ಸೂಚಿಸುತ್ತದೆ. ಈ ದ್ವೇಷ ಭಾವ ಇರುವಷ್ಟು ಸಮಯ ಈ ದೇಶ ಜಾಗತಿಕ ಶಕ್ತಿಯಾಗಲು ಸಾಧ್ಯವೇ  ಇಲ್ಲ. ಒಂದು ಬೃಹತ್ ಸಮುದಾಯವನ್ನು ಅನ್ಯರಂತೆ ಮತ್ತು ವೈರಿಗಳಂತೆ ಕಾಣುವ ದೇಶವು ಅಂತಿಮವಾಗಿ ಆ ವಿಭಜನೆ ಹುಟ್ಟು ಹಾಕುವ  ಸಮಸ್ಯೆಗಳಲ್ಲೇ ಬಿದ್ದುಕೊಂಡು ಸ್ವಯಂ ಕುಸಿದು ಹೋಗುತ್ತದೆ. ಇದಕ್ಕೆ ನೆರೆಯ ಮ್ಯಾನ್ಮಾರ್, ಶ್ರೀಲಂಕಾಗಳಿಂದ  ಹಿಡಿದು ಸುಡಾನ್, ಸೋಮಾ ಲಿಯಗಳ ವರೆಗೆ ಧಾರಾಳ ಉದಾಹರಣೆಗಳಿವೆ.

ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಪ್ರಧಾನಿ ಮೋದಿ ತನ್ನ ಸಾಧನೆಗಳ ಆಧಾರದಲ್ಲಿ ಮತಯಾಚಿಸುವುದನ್ನು ಬಿಟ್ಟು ಮುಸ್ಲಿಮರ ವಿರುದ್ಧ  ಹಿಂದೂಗಳನ್ನು ಎತ್ತಿ ಕಟ್ಟುವ ಮೂಲಕ ಮತ ಯಾಚಿಸುತ್ತಿದ್ದಾರೆಂದರೆ, ಅವರು ಈ ದೇಶವನ್ನಾಳುವುದಕ್ಕೆ ಅನರ್ಹರು ಎಂದೇ ಅರ್ಥ. ಈ ದೇ ಶದಲ್ಲಿ ಮುಸ್ಲಿಮರು 2014 ರಿಂದ ದಿಢೀರ್ ಉದ್ಭವವಾದವರಲ್ಲ. ಅವರಿಗೆ ಈ ಮಣ್ಣಿನಲ್ಲಿ ಸಾವಿರ ವರ್ಷಗಳಿಗಿಂತಲೂ ಅಧಿಕ ಪೂರ್ವ  ಇತಿಹಾಸವಿದೆ. ಈ ದೇಶದ ಸ್ವಾತಂತ್ರ್ಯ  ಸಂಗ್ರಾಮದಲ್ಲಿ ಅತಿ ಪ್ರಾಮುಖ್ಯ ಹೊಣೆಗಾರಿಕೆ ನಿಭಾಯಿಸಿದ ಕೀರ್ತಿಯೂ ಇವರಿಗಿದೆ. 800 ವರ್ಷಗಳ  ಕಾಲ ಈ ಮಣ್ಣಿನಲ್ಲಿ ಆಡಳಿತ ನಡೆಸಿದ ಮತ್ತು ಈ ಮಣ್ಣಿಗೆ ಹತ್ತು ಹಲವು ಗಮನಾರ್ಹ ಕೊಡುಗೆಗಳನ್ನು ನೀಡಿದವರ ಇತಿಹಾಸವೂ ಇದೆ.  ಅವರ ಕೊಡುಗೆಯ ಕುರುಹಾಗಿ ತಾಜ್‌ಮಹಲೂ ಇದೆ. ಗೋಲ್‌ಗುಂಬಜೂ ಇದೆ ಮತ್ತು ರೇಶ್ಮೆ ಕೃಷಿ, ಬಡ್ಡಿರಹಿತ ರೈತ ಸಾಲ, ರಾಕೆಟ್  ತಂತ್ರಜ್ಞಾನದ ಅಭಿವೃದ್ಧಿಯಂಥ ನೂರಾರು ಸಾಕ್ಷಿಗಳೂ ಇವೆ. ಇವೆಲ್ಲವನ್ನೂ ನಿರಾಕರಿಸಿಕೊಂಡ ರೀತಿಯಲ್ಲಿ ಪ್ರಧಾನಿ ಮಾತು ಆಡುತ್ತಾರೆಂದರೆ  ಅದು ಅವರ ಸಣ್ಣತನಕ್ಕೆ ಆಧಾರವೇ ಹೊರತು ಇನ್ನೇನಲ್ಲ.