Thursday 28 October 2021

ಕ್ರಿಯೆಗೆ ಪ್ರತಿಕ್ರಿಯೆ: ಮುಸ್ಲಿಮ್ ಸಮುದಾಯಕ್ಕೆ ಅಭಿನಂದನೆ


ಸನ್ಮಾರ್ಗ ಸಂಪಾದಕೀಯ 

ಕ್ರಿಯೆ ಎಂಬ ಎರಡಕ್ಷರಕ್ಕೆ ಹೋಲಿಸಿದರೆ, ಪ್ರತಿಕ್ರಿಯೆ ಎಂಬ ಪದದಲ್ಲಿ ಎರಡಕ್ಷರ ಮಾತ್ರ ಅಧಿಕವಿದೆ. ಆದರೆ ‘ಪ್ರತಿಕ್ರಿಯೆ’ಯನ್ನು ಈ  ಹೆಚ್ಚುವರಿ ಎರಡಕ್ಷರವುಳ್ಳ ಕೇವಲ ಪದವಾಗಿಯಷ್ಟೇ ನಾವು ನೋಡಬೇಕಾದುದಲ್ಲ. ಸಾವಿರಾರು ಪದಗಳನ್ನು ಒಳಗೊಂಡ ಅಪಾರ  ಸಾಧ್ಯತೆಯ ಪುಟ್ಟ ಪದವಿದು. ಯಾವುದೇ ಕ್ರಿಯೆಗೆ ವ್ಯಕ್ತವಾಗುವ ಪ್ರತಿಕ್ರಿಯೆಯು ಆ ಕ್ರಿಯೆಯ ಸೋಲು-ಗೆಲುವನ್ನು ನಿರ್ಧರಿಸುತ್ತದೆ.  ಕ್ರಿಯೆ ಕೆಲವೊಮ್ಮೆ ಉದ್ದೇಶಪೂರ್ವಕವಾಗಿಯೇ ನಡೆಯುವುದಿದೆ. ಅನೇಕ ಬಾರಿ ಅಚಾನಕ್ ಆಗಿಯೂ ನಡೆದು ಬಿಡುತ್ತದೆ. ಆದ್ದರಿಂದ  ಪ್ರತಿಕ್ರಿಯೆಗೆ ಕ್ರಿಯೆಗಿಂತ ಹೆಚ್ಚು ಜವಾಬ್ದಾರಿ ಇರುತ್ತದೆ. ಯಾವುದು ಉದ್ದೇಶಪೂರ್ವಕ ಕ್ರಿಯೆ ಮತ್ತು ಯಾವುದು ಅಲ್ಲ ಎಂಬುದಾಗಿ  ವಿಶ್ಲೇಷಿಸುವ ಬುದ್ಧಿವಂತಿಕೆ ಪ್ರತಿಕ್ರಿಯಿಸುವವರಲ್ಲಿ ಇರಬೇಕಾಗುತ್ತದೆ. ಈ ದಿಸೆಯಲ್ಲಿ ತುಸು ಎಡವಿದರೂ ಲಾಭವಾಗುವುದು ಕ್ರಿಯೆಗೇ.  ಆದ್ದರಿಂದಲೇ ಪ್ರತಿಕ್ರಿಯೆ ಎಂಬುದು ಕ್ರಿಯೆಗಿಂತ ಸಾವಿರ ಪಾಲು ಮಹತ್ವದ್ದು. ಈ ಹಿನ್ನೆಲೆಯಲ್ಲಿ ನೋಡುವುದಾದರೆ ಮುಸ್ಲಿಮ್  ಸಮುದಾಯವನ್ನು ಅಭಿನಂದಿಸಬೇಕು.


ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅದರಲ್ಲೂ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಕ್ರಿಯೆಗಳಿಗೆ ಮುಸ್ಲಿಮ್ ಸಮುದಾಯ ವ್ಯಕ್ತಪಡಿಸುತ್ತಿರುವ ಪ್ರತಿಕ್ರಿಯೆ ಅತ್ಯಂತ ಜಾಣತನದ್ದು. ಬೆಂಗಳೂರಿನಲ್ಲಿ ನಡೆದ ಅನೈತಿಕ ಪೊಲೀಸ್‌ಗಿರಿಯಿಂದ ತೊಡಗಿ ಉಡುಪಿಯ ದುರ್ಗಾ  ದೌಡ್‌ನ ವರೆಗೆ ಕಳೆದ ಒಂದು ತಿಂಗಳ ನಡುವೆ ಈ ಭಾಗದಲ್ಲಿ ಹಲವು ಬೆಳವಣಿಗೆಳು ನಡೆದಿವೆ. ಬೆಂಗಳೂರು ಘಟನೆಯ ಬಳಿಕ  ಮಂಗಳೂರಿನ ಸುರತ್ಕಲ್‌ನಲ್ಲಿ ಅನೈತಿಕ ಪೊಲೀಸ್‌ಗಿರಿ ನಡೆಯಿತು. ಆ ಬಳಿಕ ಅಲ್ಲೇ ಬೃಹತ್ ಸಭೆಯೂ ನಡೆಯಿತು. ಈ ಸಭೆಯಲ್ಲಿ  ಮುಸ್ಲಿಮರನ್ನು ಅತ್ಯಂತ ಹೀನಾಯವಾಗಿ ನಿಂದಿಸಲಾಯಿತು. ಅವರ ಉದ್ಯೋಗ ಮತ್ತು ಬದುಕನ್ನು ಹೀಯಾಳಿಸಲಾಯಿತು. ಆ ಬಳಿಕ  ಗಂಗೊಳ್ಳಿಯಲ್ಲಿ ಇಂಥದ್ದೇ ಸಭೆ ನಡೆಯಿತು. ಅಲ್ಲಿ ಮುಸ್ಲಿಮರನ್ನಷ್ಟೇ ಅಲ್ಲ, ಪ್ರವಾದಿ ಮುಹಮ್ಮದ್(ಸ)ರನ್ನೂ ಮತ್ತು ಅಲ್ಲಾಹನನ್ನೂ  ನಿಂದಿಸಲಾಯಿತು. ಆ ಭಾಷಣಕ್ಕೆ ಚಪ್ಪಾಳೆ, ಶಿಳ್ಳೆಗಳೂ ಬಿದ್ದುವು. ನಂತರದ ದಿನಗಳಲ್ಲಿ ಸುಮಾರು ಹತ್ತರಷ್ಟು ಅನೈತಿಕ ಪೊಲೀಸ್‌ಗಿರಿ  ಪ್ರಕರಣಗಳು ನಡೆದುವು. ಆ ಬಳಿಕ ಮಂಗಳೂರಿನ ಕದ್ರಿಯಲ್ಲಿರುವ ವಿಶ್ವ ಹಿಂದೂ ಪರಿಷತ್‌ನ ಕಚೇರಿಯಲ್ಲಿ ತ್ರಿಶೂಲ ವಿತರಣೆ  ನಡೆಯಿತು. ಆಯುಧ ಪೂಜೆಯ ನೆಪದಲ್ಲಿ ವಿಹಿಂಪ ಮುಖಂಡರೇ ತಮ್ಮ ಕಾರ್ಯಕರ್ತರಿಗೆ ಈ ಆಯುಧ ವಿತರಣೆ ನಡೆಸಿದರು. ಇದರ  ಬೆನ್ನಿಗೆ ಉಡುಪಿಯಲ್ಲಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ದುರ್ಗಾ ದೌಡ್ ಪಾದಯಾತ್ರೆ ನಡೆಯಿತು. ಈ ಯಾತ್ರೆಯಲ್ಲಿ  ತಲವಾರುಗಳನ್ನು ಪ್ರದರ್ಶಿಸುತ್ತಾ ಸಾಗಲಾಯಿತು. ಮಾತ್ರವಲ್ಲ ಈ ಯಾತ್ರೆಯಲ್ಲಿ ಸಚಿವ ಸುನಿಲ್ ಕುಮಾರ್ ಮತ್ತು ಸ್ಥಳೀಯ ಶಾಸಕ  ರಘುಪತಿ ಭಟ್ ಕೂಡಾ ಇದ್ದರು. ಅಲ್ಲದೇ ಮುಸ್ಲಿಮರನ್ನು ನಿಂದಿಸುವ ಭಾಷಣವೂ ನಡೆಯಿತು. ಅಂದಹಾಗೆ,

ಸುರತ್ಕಲ್‌ನ ಅನೈತಿಕ ಪೊಲೀಸ್‌ಗಿರಿಯಿಂದ ಹಿಡಿದು ಉಡುಪಿಯ ದುರ್ಗಾ ದೌಡ್‌ನ ತಲವಾರು ಮತ್ತು ಭಾಷಣಗಳವರೆಗೆ ಎಲ್ಲವೂ  ಮುಸ್ಲಿಮರನ್ನು ಪ್ರತ್ಯಕ್ಷವೋ ಪರೋಕ್ಷವೋ ಗುರಿಯಾಗಿಟ್ಟುಕೊಂಡ ಮತ್ತು ಪ್ರಚೋದಿಸುವ ಉದ್ದೇಶದ ಕ್ರಿಯೆಗಳು ಎಂಬುದು ಸ್ಪಷ್ಟ.  ನಿಜವಾಗಿ, ಬಹುತ್ವದ ಭಾರತದಲ್ಲಿ ಹಿಂದೂ ಯುವಕ-ಮುಸ್ಲಿಮ್ ಯುವತಿ ಮತ್ತು ಮುಸ್ಲಿಮ್ ಯುವಕ-ಹಿಂದೂ ಯುವತಿ ಪರಸ್ಪರ  ಮಾತಾಡುವುದೋ ಗೆಳೆತನದಲ್ಲಿರುವುದೋ ಅಸಹಜವೂ ಅಲ್ಲ, ಅಪರಾಧವೂ ಅಲ್ಲ. ಶಾಲೆಯಿಂದ ತೊಡಗಿ ಉದ್ಯೋಗ ಸ್ಥಳದವರೆಗೆ  ಹೆಣ್ಣು-ಗಂಡು ಧರ್ಮ ಭೇದವಿಲ್ಲದೆ ಜೊತೆಯಾಗಿರುವ ದೇಶ ವೊಂದರಲ್ಲಿ ಅವರು ಪರಸ್ಪರ ಮಾತಾಡುವುದನ್ನೇ ಅಪರಾಧವೆನ್ನುವುದು  ಅತ್ಯಂತ ಬಾಲಿಷ. ಹಾಗಂತ,

ಇದು ಅನೈತಿಕ ಪೊಲೀಸ್‌ಗಿರಿಯಲ್ಲಿ ಭಾಗಿಯಾದವರಿಗೂ ಗೊತ್ತು. ಅವರನ್ನು ಅದಕ್ಕಾಗಿ ಪ್ರಚೋ ದಿಸುವವರಿಗೂ ಗೊತ್ತು. ಮತ್ತೂ  ಯಾಕೆ ಇಂಥದ್ದು ನಡೆಯುತ್ತದೆ ಎಂದರೆ, ಅದರ ಹಿಂದೆ ಒಳ ಉದ್ದೇಶವೊಂದು ಇರುತ್ತದೆ. ಮುಸ್ಲಿಮರು ಇಂಥದ್ದೇ ಪ್ರತಿಕ್ರಿಯೆಗೆ  ಇಳಿಯಬೇಕು ಮತ್ತು ಆ ಮುಖಾಂತರ ಸಂಘರ್ಷದ ಸ್ಥಿತಿ ನಿರ್ಮಾಣವಾಗಬೇಕು ಎಂಬುದೇ ಆ ಉದ್ದೇಶ. ತಲವಾರು ಹಿಡಿದು  ಮೆರವಣಿಗೆಯಲ್ಲಿ ಸಾಗುವುದಾಗಲಿ; ಮುಸ್ಲಿಮರನ್ನು, ಪ್ರವಾದಿಯನ್ನು ಮತ್ತು ಅಲ್ಲಾಹನನ್ನು ಹೀನಾತಿ ಹೀನವಾಗಿ ನಿಂದಿಸುವುದಾಗಲಿ  ಯಾವುದೂ ಸಹಜ ಕ್ರಿಯೆಗಳಲ್ಲ. ಯಾಕೆಂದರೆ,

ಅAಥದ್ದೊಂದು  ತೀವ್ರ ವಾಗ್ದಾಳಿಗೋ ನಿಂದನೆಗೋ ಗುರಿಯಾಗಬೇಕಾದ ಮತ್ತು ಆಯುಧ ಝಳಪಿಸಿ ಬೆದರಿಸಬೇಕಾದ ಯಾವ ಅ ಪರಾಧವನ್ನು ಮುಸ್ಲಿಮರು ಮಾಡಿದ್ದಾರೆ? ಉಡುಪಿಯಲ್ಲಿರುವುದು ಐದೋ ಏಳೋ ಶೇಕಡಾ ಮುಸ್ಲಿಮರು. ಇಡೀ ಕರಾವಳಿ ಭಾಗವನ್ನು  ಎತ್ತಿಕೊಂಡರೂ ಈ ಶೇಕಡಾ ವಾರು ಸಂಖ್ಯೆಯಲ್ಲಿ ಭಾರೀ ಏರಿಕೆಯೇನೂ ಆಗುವುದಿಲ್ಲ. ಇಷ್ಟೊಂದು ಸಣ್ಣ ಸಮುದಾಯವನ್ನು ಈ ಪರಿ  ಬೆದರಿಸುವುದೇಕೆ? ನಿಂದಿಸುವ ಮತ್ತು ಅವಮಾನಿಸುವ ಅಗತ್ಯವಾದರೂ ಏನು? ಈ ಸಣ್ಣ ಸಂಖ್ಯೆ ಯಾರಿಗೆ ಬೆದರಿಕೆ? ಅಪ್ಪಟ  ಧಾರ್ಮಿಕ ಸಭೆಯಲ್ಲೂ ಮುಸ್ಲಿಮರನ್ನೇ ಗುರಿಯಾಗಿಸಿ ಭಾಷಣ ಮಾಡುವುದೇಕೆ? ಇಲ್ಲಿನ ಕಾನೂನಿಗಾಗಲಿ, ಸಂವಿಧಾನಕ್ಕಾಗಲಿ ಎಲ್ಲೂ  ಎದುರಾಡದ ಮತ್ತು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಮಾಧ್ಯಮ ರಂಗ ಇತ್ಯಾದಿ ಎಲ್ಲದರಲ್ಲೂ ಅತ್ಯಂತ ನಗಣ್ಯ ಪಾಲ ನ್ನಷ್ಟೇ ಹೊಂದಿರುವ ಮುಸ್ಲಿಮರು ಇಲ್ಲಿನ ಬಹುಸಂಖ್ಯಾತರಿಗೆ ಬೆದರಿಕೆಯಾಗಿರುವುದಾದರೂ ಹೇಗೆ? ಸಂವಿಧಾನವೇ ಇರದಿದ್ದ  ಕಾಲದಲ್ಲಿ 800 ವರ್ಷಗಳಷ್ಟು ದೀರ್ಘಕಾಲ ಮುಸ್ಲಿಮ್ ದೊರೆಗಳೇ ಇಲ್ಲಿ ಅಧಿಕಾರ ನಡೆಸಿದ ಹೊರತೂ ಮುಸ್ಲಿಮ್ ಜನಸಂಖ್ಯೆ ಶೇ.  15ನ್ನೂ ದಾಟದಿರುವಾಗ ಸಂವಿಧಾನ ಇರುವ ಮತ್ತು ಯಾವ ಅಧಿಕಾರವೂ ಇಲ್ಲದ ಈ ಹೊತ್ತಿನಲ್ಲಿ ಮುಸ್ಲಿಮರು  ಬಹುಸಂಖ್ಯಾತರಾಗುವುದೋ ಬೆದರಿಕೆಯಾಗುವುದೋ ಹೇಗೆ? ಹಾಗಂತ,

ಇಂಥ  ಪ್ರಶ್ನೆಗಳು ಮತ್ತು ವಾಸ್ತವ ಆಧಾರಿತ ವಿಶ್ಲೇಷಣೆಗಳು ಈ ಮಣ್ಣಿನಲ್ಲಿ ನೂರಾರು ಬಾರಿ ನಡೆದಿವೆ. ಮಾತ್ರವಲ್ಲ, ಕೈಯಲ್ಲಿ ತಲವಾರು  ಹಿಡಿದವರಿಗೂ ವೇದಿಕೆಯೇರಿ ಭಾಷಣ ಮಾಡುವವರಿಗೂ ಈ ವಾಸ್ತವದ ಅರಿವು ಖಂಡಿತ ಇದೆ. ಅವರ ಒಳಮನಸ್ಸು ಈ ಸತ್ಯವನ್ನು  ಒಪ್ಪಿಕೊಳ್ಳದಷ್ಟು ಕಠೋರ ಎಂದು ಹೇಳುವಂತೆಯೂ ಇಲ್ಲ. ಆದರೆ ಅವರ ಮುಂದಿರುವ ಸವಾಲುಗಳು ಬೇರೆ. ಈ ಸವಾಲು ಈ ಸತ್ಯದ  ಆಚೆಗಿನದು. ರಾಜಕೀಯ ಅಧಿಕಾರ ಕೈವಶವಾಗಬೇಕಾದರೆ ಇಂಥ ಅವಾಸ್ತವಿಕ ಕ್ರಿಯೆಗಳ ಅನಿವಾರ್ಯತೆ ಅವರಿಗಿದೆ. ಮಾತ್ರವಲ್ಲ,  ಕ್ರಿಯೆಗಳಿಗೆ ಇದೇ ರೀತಿಯ ಮತ್ತು ಇಷ್ಟೇ ತೀವ್ರವಾದ ಪ್ರತಿಕ್ರಿಯೆಯನ್ನೂ ಅವರು ಬಯಸುತ್ತಿರುತ್ತಾರೆ. ಮುಸ್ಲಿಮ್ ಸಮುದಾಯ ಕೂಡ  ತಲವಾರನ್ನು ಝಳಪಿಸಿ ಮೆರವಣಿಗೆ ನಡೆಸುವುದು, ಹಿಂದೂಗಳನ್ನು ನಿಂದಿಸುವ ಭಾಷಣ, ಅನೈತಿಕ ಪೊಲೀಸ್‌ಗಿರಿಯಲ್ಲಿ  ತೊಡಗಿಸಿಕೊಳ್ಳುವುದು... ಇತ್ಯಾದಿಗಳನ್ನೇ ಪ್ರತಿಕ್ರಿಯೆಯ ರೂಪದಲ್ಲಿ ಆರಿಸಿಕೊಂಡಾಗ ಅವರ ಉದ್ದೇಶ ಈಡೇರುತ್ತದೆ. ಜೊತೆಗೇ ಇಡೀ  ದೇಶವನ್ನೇ ಕಾಡುವ, ಹಸಿವು, ನಿರುದ್ಯೋಗ, ಬೆಲೆಏರಿಕೆಗಳಂಥ ಮುಖ್ಯ ವಿಷಯಗಳು ಚರ್ಚೆಯ ವ್ಯಾಪ್ತಿಯಿಂದ ಹೊರಬೀಳುತ್ತವೆ. ಇವು  ಈ ಎಲ್ಲ ಬೆಳವಣಿಗೆಗಳ ಹಿಂದಿರುವ ಮುಖ್ಯ ಗುರಿ. ಆದ್ದರಿಂದಲೇ,

ಮುಸ್ಲಿಮ್ ಸಮುದಾಯ ಅಭಿನಂದನೆಗೆ ಅರ್ಹ. ಬೆಂಗಳೂರಿನ ಅನೈತಿಕ ಪೊಲೀಸ್‌ಗಿರಿ ಘಟನೆಯ ಆರೋಪಿಗಳಾದ ಮುಸ್ಲಿಮರನ್ನು  ಬೆಂಬಸುವುದಾಗಲಿ, ಅವರ ಬಂಧನವನ್ನು ಪ್ರಶ್ನಿಸಿ ಸಭೆ ನಡೆಸುವುದನ್ನಾಗಲಿ ಮಾಡದೇ ಪ್ರಜ್ಞಾವಂತಿಕೆಯನ್ನು ಮೆರೆದ ಮುಸ್ಲಿಮ್  ಸಮುದಾಯ, ಆ ಬಳಿಕದ ಇಷ್ಟೂ ಬೆಳವಣಿಗೆಗಳ ಬಗ್ಗೆ ಅತ್ಯಂತ ಪ್ರಬುದ್ಧ ಪ್ರತಿಕ್ರಿಯೆಯನ್ನೇ ವ್ಯಕ್ತಪಡಿಸಿದೆ. ಎಲ್ಲೂ ಅದು ಕಾನೂನನ್ನು  ಕೈಗೆತ್ತಿಕೊಂಡಿಲ್ಲ. ಹಿಂದೂ ಸಮುದಾಯಕ್ಕೆ ಘಾಸಿಯಾಗುವ ಯಾವ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿಲ್ಲ. ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಎಂಬ  ನೆಲೆಯಲ್ಲಿ ವ್ಯಕ್ತಪಡಿಸಬಹುದಾದ ಯಾವ ಪ್ರಚೋದನಕಾರಿ ಚಟುವಟಿಕೆಯಲ್ಲೂ ಭಾಗಿಯಾಗಿಲ್ಲ. ಕ್ರಿಯೆಯ ಮರ್ಮವನ್ನು  ಅರಿತುಕೊಳ್ಳುತ್ತಾ ಪ್ರತಿಕ್ರಿಯೆ ವ್ಯಕ್ತಪಡಿಸುವ ಈ ಬುದ್ಧಿವಂತಿಕೆಯೇ ಬಹುದೊಡ್ಡ ಯಶಸ್ಸು. ಮುಂದಿನ ದಿನಗಳಲ್ಲಿ ಮುಸ್ಲಿಮರ ಬು ದ್ಧಿವಂತಿಕೆಗೆ ಸವಾಲೆಸೆಯುವ ಕ್ರಿಯೆಗಳು ಖಂಡಿತ ನಡೆಯಬಹುದು. ಸ್ಥಳೀಯ ಸಂಸ್ಥೆ ಮತ್ತು ವಿಧಾನಸಭಾ ಚುನಾವಣೆ  ಹತ್ತಿರವಿರುವುದರಿಂದ ಪ್ರಚೋದನಾತ್ಮಕ ಕ್ರಿಯೆಗಳು ಅನಿರೀಕ್ಷಿತವಲ್ಲ. ಆದ್ದರಿಂದ,


 ಮುಸ್ಲಿಮ್ ಸಮುದಾಯ ಎಲ್ಲೂ ತಾಳ್ಮೆಗೆಡಬಾರದು.  ಜಾಣತನದ ಪ್ರತಿಕ್ರಿಯೆಯು ಎಂಥ ಪ್ರಚೋದನಾತ್ಮಕ ಕ್ರಿಯೆಯನ್ನೂ ಸೋಲಿಸಬಲ್ಲುದು.

Tuesday 19 October 2021

ಮುಈನುಲ್ ಹಕ್‌ನ ಆತಂಕವನ್ನು ಸಮರ್ಥಿಸಿದ ಲಾಠಿ ಮತ್ತು ಫೋಟೋಗ್ರಾಫರ್




ಶಸ್ತ್ರ  ಸಜ್ಜಿತ 20ರಿಂದ 30ರಷ್ಟು ಪೊಲೀಸರನ್ನು ವಿರೋಧಿಸುತ್ತಾ, ಆಕ್ರೋಶದಿಂದ ಬಿದಿರು ಕೋಲನ್ನು ಹಿಡಿದು ಅವರೆದುರು ಓಡಿ ಬರುವ  ಒಂಟಿ ಸಣಕಲು ಕಾರ್ಮಿಕನನ್ನು ನೀವು ಹೇಗೆ ವ್ಯಾಖ್ಯಾನಿಸುತ್ತೀರಿ? ಆತ ಆ ಬಿದಿರು ಕೋಲಿನಿಂದ ಮೂರು ಡಜನ್ ಬಂದೂಕುಧಾರಿ  ಪೊಲೀಸರನ್ನು ಸಾಯಿಸಲು ಸಮರ್ಥನೇ? ಪೊಲೀಸರ ಕೈಯಲ್ಲಿ ಬಂದೂಕಿದೆ ಎಂಬುದನ್ನು ತಿಳಿದೂ ಆತ ಹಾಗೆ ಓಡಿ ಬರುತ್ತಾನೆಂದರೆ,  ಆತನೊಳಗೆ ಮಡುಗಟ್ಟಿರುವ ಸಂಕಟವೇನು? ಬಿದಿರುಕೋಲು ಮತ್ತು ಬಂದೂಕುಗಳ ನಡುವೆ ಸಮರವಾದರೆ ಬಂದೂಕೇ ಗೆಲ್ಲುತ್ತದೆ  ಎಂಬುದು ಆತನಿಗೆ ಬಿಡಿ, ಪುಟ್ಟ ಮಕ್ಕಳಿಗೆ ಗೊತ್ತು. ಮತ್ತೂ ಯಾಕೆ ಆತ ಆ ದುರ್ಬಲ ಕೋಲನ್ನು ಹಿಡಿದು ಪೊಲೀಸರತ್ತ ನುಗ್ಗಿದ  ಅಂದರೆ,

ಅದು ಆತನ ಅಸ್ತಿತ್ವದ ಪ್ರಶ್ನೆ. ಪುಟ್ಟ ಗುಡಿಸಲು ಕಟ್ಟಿ ಬದುಕುತ್ತಿದ್ದವನ ಕನಸನ್ನು ಪ್ರಭುತ್ವದ ಬುಲ್ಡೋಜರು ನಾಶ ಮಾಡಿದೆ. ಮುಂದೇನು  ಅನ್ನುವುದು ಗೊತ್ತಿಲ್ಲ. ಪತ್ನಿ ಇದ್ದಾಳೆ, ಮಕ್ಕಳಿದ್ದಾರೆ. ಮತ್ತು ಹೀಗೆ ಬುಲ್ಡೋಜರ್‌ಗೆ ಉರುಳಿದ ಮನೆಗಳು 800ರಷ್ಟು ಇವೆ. ನಿರ್ವಸಿತರ  ದಂಡೇ ಸೃಷ್ಟಿಯಾಗಿದೆ. ಮುಂದೇನು ಎಂಬುದನ್ನು ಬುಲ್ಡೋಜರೂ ಹೇಳುತ್ತಿಲ್ಲ. ಬುಲ್ಡೋಜರನ್ನು ಕಳುಹಿಸಿದವರೂ ಹೇಳುತ್ತಿಲ್ಲ.  ಸೋಶಿಯಲ್ ಮೀಡಿಯಾಗಳು ಕೂಡಾ ಇವರನ್ನು ಅಕ್ರಮ ವಾಸಿಗಳು, ಬಾಂಗ್ಲಾದೇಶೀಯರು ಎಂದು ಕರೆಯುತ್ತಿವೆಯೇ ಹೊರತು  ಅವರಿಗೂ ಆ ಮಣ್ಣಿಗೂ ನಡುವಿನ ಸಂಬಂಧ ಮತ್ತು ಅವರ ಸದ್ಯದ ಸಂಕಟಕ್ಕೂ ಧ್ವನಿ ನೀಡುತ್ತಿಲ್ಲ. ಒಂದುಕಡೆ,

ಬಿದಿರುಕೋಲು ಹಿಡಿದು ಓಡಿ ಬಂದ ಮುಈನುಲ್ ಹಕ್ ಮತ್ತು ಆತ ಗುರುತಿಸಿಕೊಂಡಿರುವ ಸಮುದಾಯವನ್ನು ಗುರಿಯಾಗಿಸಿಕೊಂಡೇ  ಎನ್‌ಆರ್‌ಸಿಯನ್ನು ಜಾರಿ ಮಾಡುತ್ತಿರುವ ಪ್ರಭುತ್ವ ಹಾಗೂ ಇನ್ನೊಂದೆಡೆ, ಯಾವ ಪರ್ಯಾಯವನ್ನೂ ಕಲ್ಪಿಸದೆಯೇ ಗುಡಿಸಲುಗಳನ್ನು  ನೆಲಸಮಗೊಳಿಸಿದ ಸ್ಥಳೀಯಾಡಳಿತ- ಇಂಥ ಸನ್ನಿವೇಶದಲ್ಲಿ ಬಿದಿರನ್ನು ಎತ್ತಿಕೊಂಡ ಸಂತ್ರಸ್ತನನ್ನು ಪೊಲೀಸರು ಹೇಗೆ ಸಂಭಾಳಿಸಬೇಕು?  ಆ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಬೇಕಾದ ಫೋಟೋಗ್ರಾಫರ್ ಯಾವುದಕ್ಕೆ ಮಹತ್ವ ನೀಡಬೇಕು? ಅಂದಹಾಗೆ,

ನಿರೀಕ್ಷೆ ಮತ್ತು ಭರವಸೆಗಳನ್ನು ಕಳಕೊಂಡ ಹಾಗೂ ಹತಾಶೆಯ ಪರಮಾವಧಿಗೆ ತಲುಪಿದ ವ್ಯಕ್ತಿ ಮಾತ್ರ ತನ್ನೆದುರು ಯಾರಿದ್ದಾರೆ ಮತ್ತು  ಅವರ ಕೈಗಳಲ್ಲಿ ಏನೇನಿವೆ ಎಂಬುದನ್ನು ಲೆಕ್ಕಿಸದೇ ಮುನ್ನುಗ್ಗಬಲ್ಲ. ಯಾಕೆಂದರೆ, ಬದುಕುವುದಕ್ಕಾಗಿ ಅದವನ ಕೊನೆಯ ಪ್ರಯತ್ನ.  ಆದ್ದರಿಂದ ಯಾಕೆ ಇಂಥದ್ದೊಂದು  ಹತಾಶೆ ಮುಈನುಲ್ ಹಕ್‌ನಲ್ಲಿ ನಿರ್ಮಾಣವಾಗಿರಬಹುದು ಎಂಬ ಬಗ್ಗೆ ಆತನ ಎದೆಗೆ ಗುಂಡು  ಹೊಡೆದವರನ್ನು ಮತ್ತು ಆತನ ಜಡ ಶರೀರದ ಮೇಲೆ ನರ್ತನ ಮಾಡಿದ ಫೋಟೋಗ್ರಾಫರನ್ನು ಸಮರ್ಥಿಸುತ್ತಿರುವವರು ಸ್ವಯಂ  ಪ್ರಶ್ನಿಸಿಕೊಳ್ಳಬೇಕು.

ಅಸ್ಸಾಮ್‌ನಲ್ಲಿರುವ ಮುಸ್ಲಿಮರನ್ನು ಅವಹೇಳನ, ವ್ಯಂಗ್ಯಕ್ಕೆ ಗುರಿಪಡಿಸುವ ಮತ್ತು ಅನ್ಯರೆಂದು ಬಿಂಬಿಸುವ ತಂತ್ರವು ಅಲ್ಲಿ ಮತ್ತು  ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವ್ಯವಸ್ಥಿತವಾಗಿ ನಡೆಯತೊಡಗಿದೆ. ಅಸ್ಸಾಮ್‌ನಲ್ಲಿ 40 ಲಕ್ಷದಷ್ಟು ಅಕ್ರಮ  ಬಾಂಗ್ಲಾದೇಶಿ ವಲಸಿಗರಿದ್ದಾರೆ ಎಂದು ಎನ್‌ಆರ್‌ಸಿಯ ಮೊದಲ ಪಟ್ಟಿಯಲ್ಲಿ ಹೇಳಲಾಗಿತ್ತು. ಹಾಗೆ ಹೇಳುವಾಗ ಅವರೆಲ್ಲ ಮುಸ್ಲಿಮರು  ಎಂಬ ಹುಸಿ ಅರ್ಥವನ್ನು ಅದಕ್ಕೆ ಕೊಡುವ ಪ್ರಯತ್ನ ನಡೆಯಿತು. ಅಸ್ಸಾಮ್‌ನಲ್ಲಿ ಲಕ್ಷಾಂತರ ಮುಸ್ಲಿಮರು ಅಕ್ರಮವಾಗಿ ವಾಸಿಸುತ್ತಿದ್ದು,  ಇದರಿಂದಾಗಿ ಸ್ಥಳೀಯರ ಉದ್ಯೋಗ, ಆಹಾರ, ಅಧಿಕಾರಕ್ಕೆ ಕುತ್ತು ಬರುತ್ತಿದೆ ಎಂಬ ಹುಸಿ ಸುಳ್ಳನ್ನು ಸೋಶಿಯಲ್ ಮೀಡಿಯಾಗಳಲ್ಲಿ  ಮತ್ತು ಮುಖ್ಯವಾಹಿನಿಯ ಟಿ.ವಿ. ಚಾನೆಲ್‌ಗಳಲ್ಲೂ ಸಂದರ್ಭಕ್ಕೆ ತಕ್ಕಂತೆ ಪ್ರಚಾರ ಮಾಡುವ ಪ್ರಕ್ರಿಯೆ  ನಿರಂತರ ನಡೆಯತೊಡಗಿತು.  ಬಿಜೆಪಿ ಅಸ್ಸಾಮ್‌ನಲ್ಲಿ ಚುನಾವಣೆಯನ್ನು ಎದುರಿಸಿರುವುದೇ ಅಕ್ರಮ ಮುಸ್ಲಿಮರು ಎಂಬ ಧ್ಯೇಯದ ಅಡಿಯಲ್ಲಾಗಿರುವುದರಿಂದ ಮತ್ತು  ಅದನ್ನು ಮುಂದಿಟ್ಟು ಸರ್ವ ಮುಸ್ಲಿಮರನ್ನು ಅಪರಾಧಿ ಭಾವದಲ್ಲಿ ಬದುಕುವಂತೆ ಮಾಡುವ ಹುನ್ನಾರದ ಭಾಷಣಗಳು  ಪ್ರತ್ಯಕ್ಷವೋ  ಪರೋಕ್ಷವೋ ನಡೆಯುತ್ತಿದ್ದುದರಿಂದ ಸಾಮಾಜಿಕವಾಗಿ ಮುಸ್ಲಿಮರೆಂದರೆ ಅನ್ಯರು ಎಂಬ ಭಾವ ಸೃಷ್ಟಿಯಾಗುವುದಕ್ಕೆ  ಸಾಧ್ಯವಾಗತೊಡಗಿತು. ಮುಸ್ಲಿಮರ ಮೇಲೆ ನಡೆಯುವ ಯಾವುದೇ ಅನ್ಯಾಯವೂ ‘ಅಕ್ರಮ ವಲಸಿಗ’ ಎಂಬ ಹಣೆಪಟ್ಟಿಯೊಂದಿಗೆ  ನ್ಯಾಯೀಕರಿಸಲ್ಪಡುವ ಸನ್ನಿವೇಶ ನಿರ್ಮಾಣವಾಗತೊಡಗಿತು. ಮುಸ್ಲಿಮರಿಗೆ ಹೊಡೆದಷ್ಟೂ ಓಟುಗಳು ಹೆಚ್ಚಾಗುತ್ತವೆ ಎಂಬ ಅಂಶ ಅಧಿಕಾರಸ್ಥರಿಗೆ ಸ್ಪಷ್ಟವಾಗುವುದರೊಂದಿಗೆ, ಹೊಡೆತವನ್ನು ಸಹಿಸಿಕೊಳ್ಳುವ ಸಂದರ್ಭಗಳೂ ಸೃಷ್ಟಿಯಾಗತೊಡಗಿದುವು. ಎಲ್ಲಿಯವರೆಗೆಂದರೆ,

ಅಂತಿಮ ಹಂತದ ಎನ್‌ಆರ್‌ಸಿ ಪಟ್ಟಿ ಬಿಡುಗಡೆಗೊಂಡು, ಅದರಲ್ಲಿ ಅಕ್ರಮ ವಲಸಿಗರಾಗಿ ಮುಸ್ಲಿಮರಿಗಿಂತ ಹಿಂದೂಗಳ ಸಂಖ್ಯೆಯೇ  ಅಧಿಕವಿರುವುದು ಬಹಿರಂಗವಾದಾಗ ಆ ಇಡೀ ಎನ್‌ಆರ್‌ಸಿ ಪಟ್ಟಿಯನ್ನೇ ತಿರಸ್ಕರಿಸಲು ಅಧಿಕಾರದಲ್ಲಿರುವವರು ಮುಂದಾದರು. ಇಡೀ  ದೇಶದಲ್ಲೇ  ಎನ್‌ಆರ್‌ಸಿ ಮಾಡುವಾಗ ಅಸ್ಸಾಮ್‌ನಲ್ಲೂ ಹೊಸದಾಗಿ ಎನ್‌ಆರ್‌ಸಿ ಮಾಡುವೆವು ಎಂಬ ಅರ್ಥದಲ್ಲಿ ಕೇಂದ್ರ ಗೃಹಸಚಿವರೇ  ಹೇಳಿಕೆಯನ್ನೂ ಕೊಟ್ಟರು. ಹಾಗಂತ,

ಕಳೆದ ಆರೇಳು ವರ್ಷಗಳಲ್ಲಿ ನಡೆದಿರುವ ಬೆಳವಣಿಗೆಗಳು ಇವು. ದಕ್ಷಿಣ ಭಾರತದ ಪಾಲಿಗೆ ಈ ಬೆಳವಣಿಗೆಗಳು ಅಷ್ಟೇನೂ ಪರಿಚಿತ  ಮತ್ತು ಬಹುಚರ್ಚಿತ ಅಲ್ಲವಾಗಿದ್ದರೂ ಉತ್ತರ ಭಾರತದ ಪಾಲಿಗೆ ಹಾಗಿಲ್ಲ. ಅಸ್ಸಾಮ್‌ನ ಮಟ್ಟಿಗಂತೂ ಇದೊಂದು ಸಿಡಿಯಲಿರುವ  ಲಾವಾರಸ. ಅಲ್ಲಿಯ ಮುಸ್ಲಿಮರ ಒಳಗಿನ ಬೇಗುದಿ. ಅವರು ಅನ್ಯ, ಅಕ್ರಮ ವಲಸಿಗ, ಬಾಂಗ್ಲಾದೇಶಿ ಎಂಬೆಲ್ಲಾ ಹೀನೈಕೆಯನ್ನು ಪ್ರತಿನಿತ್ಯ ಅನುಭವಿಸುತ್ತಾ ಬದುಕುವುದು ಸುಲಭ ಸಾಧ್ಯವಲ್ಲ. ತಾವು ಅಕ್ರಮ ವಲಸಿಗರಲ್ಲದಿದ್ದರೂ ಮತ್ತು ತಲೆತಲಾಂತರಗಳಿಂದ ಅದೇ  ಮಣ್ಣಿನಲ್ಲಿ ದುಡಿಯುತ್ತಾ ಬದುಕುತ್ತಿದ್ದರೂ ಹಾಗೂ ಎಲ್ಲರಂತೆ ತೆರಿಗೆ ಪಾವತಿಸುತ್ತಾ ನೆಲದ ಕಾನೂನಿಗೆ ಬದ್ಧವಾಗುತ್ತಾ ಜೀವಿಸುತ್ತಿದ್ದರೂ  ಪ್ರತಿನಿತ್ಯ ಕೇಳಬೇಕಾದ ಕೊಂಕುನುಡಿಗಳನ್ನು ಅವರು ಸಹಿಸಬೇಕು. ಹಾಗಂತ,

ಇಂಥ  ಅಪಪ್ರಚಾರಗಳು ಮುಸ್ಲಿಮರ ಪಾಲಿಗೆ ಹಿಂಸಕವಾದರೆ, ಮುಸ್ಲಿಮೇತರರ ಪಾಲಿಗೆ ಅದು ಅಪಪ್ರಚಾರವಾಗಿ  ಗುರುತಿಸಿಕೊಂಡಿರಬೇಕಾದ ಅಗತ್ಯವೂ ಇಲ್ಲ. ಅವರದನ್ನು ನಿಜ ಎಂದೇ ನಂಬಿರಬಹುದು. ಅಥವಾ ನಂಬಿಸುವಂಥ  ಪ್ರಯತ್ನಗಳು  ವ್ಯವಸ್ಥಿತವಾಗಿ ನಡೆಯುತ್ತಿರಬಹುದು. ಆದ್ದರಿಂದ ಮುಸ್ಲಿಮರನ್ನು ಅವರು ಅಕ್ರಮ ವಲಸಿಗರೆಂದೇ ನಿಜವಾಗಿಯೂ ನಂಬುವ  ವಾತಾವರಣವೂ ಸೃಷ್ಟಿಯಾಗಿರಬಹುದು. ಆ ಕಾರಣಕ್ಕಾಗಿಯೇ ಮುಸ್ಲಿಮರ ಮೇಲೆ ಅಸಂತೋಷವನ್ನು ಹೃದಯದಲ್ಲಿ  ಬಚ್ಚಿಟ್ಟುಕೊಂಡಿರಬಹುದು. ತಮ್ಮ ಉದ್ಯೋಗ, ಭೂಮಿ, ಹಕ್ಕನ್ನು ಕಸಿಯುತ್ತಿರುವವರು ಎಂಬ ಬೇಗುದಿಯೊಂದಿಗೆ ಅವರು  ಬದುಕುತ್ತಿರಬಹುದು. ಅದಕ್ಕೆ ಪೂರಕವಾಗುವ ಸುಳ್ಳು ಚಿತ್ರ ಮತ್ತು ವೀಡಿಯೋಗಳನ್ನು ಶಂಕರ್ ವಿಜಯ್ ಪೂನಿಯಾನಂಥ  ಫೋಟೋಗ್ರಾಫರ್‌ಗಳು ಒದಗಿಸುತ್ತಲೂ ಇರಬಹುದು. ಅಂದಹಾಗೆ, 

ಈಗ ಆ ಬಿದಿರಿನಂಥ ದೇಹದ ಮುಈನುಲ್ ಹಕ್ಕನ್ನು ಮತ್ತೆ  ಕಣ್ಣೆದುರು ತಂದುಕೊಳ್ಳಿ. ಏನನಿಸುತ್ತದೆ? ಆ ಬಿದಿರು ಕೋಲು ಮುಳುಗುತ್ತಿರುವವನ ಪಾಲಿನ ಹುಲ್ಲುಕಡ್ಡಿಯಂತೆ ಕಾಣಿಸದೇ? ಭರವಸೆ  ಇಟ್ಟುಕೊಳ್ಳುವುದಕ್ಕೆ ಏನೇನೂ ಇಲ್ಲದಿರುವಾಗ ಓರ್ವ ನಿರ್ವಸಿತ ಮತ್ತು ಸಂತ್ರಸ್ತ ಬೇರೆ ಏನು ಮಾಡಿಯಾನು? ತನ್ನ ಸುತ್ತಲಿರುವವರು  ತಾನು ಹುಟ್ಟಿ ಬೆಳೆದ ಮಣ್ಣಿನಿಂದ ಹೊರಕ್ಕಟ್ಟುವುದಕ್ಕಾಗಿ ಸಂಚು ನಡೆಸುತ್ತಿದ್ದಾರೆ ಎಂಬುದು ಸ್ಪಷ್ಟವಾದಾಗ ತನ್ನೆದುರು ಇರುವವರಲ್ಲಿ  ಬಂದೂಕಿದೆಯೋ ಬಾಂಬಿದೆಯೋ ಎಂಬುದನ್ನು ಪರಿಗಣಿಸಲಾರರು ಎಂಬುದಕ್ಕೆ ಉದಾಹರಣೆಯಲ್ಲವೇ ಆ ಮುಈನುಲ್ ಹಕ್?  ಗುಂಡೇಟಿನಿಂದ ನೆಲಕ್ಕುರುಳಿದ ಆತನ ಮೇಲೆ 20ರಷ್ಟು ಪೊಲೀಸರು ಲಾಠಿಯಿಂದ ಹೊಡೆದರಲ್ಲ ಮತ್ತು ಆ ಫೋಟೋಗ್ರಾಫರ್ ಆತನ  ಮೇಲೆ ಜಿಗಿದನಲ್ಲ, ಅದು ಈ ಮುಈನುಲ್ ಹಕ್‌ನ ಆತಂಕದ ಸಮರ್ಥನೆಯಲ್ಲವೇ?
ಈ ಮಣ್ಣಿನಲ್ಲಿ ತನ್ನವರೆಂಬುವವರು ಯಾರೂ ಇಲ್ಲ ಎಂಬ ಭಾವ ಆತನಲ್ಲಿ ಸೃಷ್ಟಿಯಾಗಿದ್ದರೆ ಅದು ನಿರಾಧಾರ ಅಲ್ಲ. ಆತನಿಗೆ ಗುಂಡಿಟ್ಟ  ಪೊಲೀಸರು ಮತ್ತು ಆತನ ಮೇಲೆ ನರ್ತನ ಮಾಡಿದವನೇ ಅದಕ್ಕೆ ಪ್ರತ್ಯಕ್ಷ ಆಧಾರ. ಪೊಲೀಸರು ಪ್ರಭುತ್ವವನ್ನು ಪ್ರತಿನಿಧಿಸಿದರೆ,  ಫೋಟೋಗ್ರಾಫರ್ ಮಾಧ್ಯಮವನ್ನು ಪ್ರತಿನಿಧಿಸುತ್ತಾನೆ. ಪ್ರಭುತ್ವ ಮತ್ತು ಮಾಧ್ಯಮ ಕೈಕೈ ಜೋಡಿಸಿದರೆ, ಬೆಕ್ಕೂ ಹುಲಿಯಾದೀತು.  ಪ್ರಾಮಾಣಿಕರೂ ಪರಮ ಪಾಪಿಗಳಾದಾರು.