Monday 26 February 2018

ಒಂದು ನೋಟು ನಿಷೇಧದ ಕತೆ

       
ಪೊರೆಯೊಂದು ಕಳಚಿದೆ. ಸುಳ್ಳು ಸುಳ್ಳೇ ಹುಟ್ಟು ಹಾಕಲಾಗಿದ್ದ ಭ್ರಮೆಯೊಂದರ ಭಾಗವಾಗಿ ಬದುಕಿದ ಪ್ರಧಾನಿ ನರೇಂದ್ರ ಮೋದಿಯವರು ಸಧ್ಯ ಆ ಭ್ರಮೆಗಳಿಂದ ಮುಕ್ತವಾಗಿ ದೇಶದ ಮುಂದೆ ನಿಂತಿದ್ದಾರೆ. ಅವರ ಮಾತು ಕಟ್ಟಿದೆ. ಮುಖ ಬಿಳುಚಿದೆ. ವರ್ಷದ ಹಿಂದೆ ಅವರು ಈ ದೇಶದ ಕಟ್ಟ ಕಡೆಯ ನಾಗರಿಕನ ಜೇಬನ್ನು ಸ್ಪರ್ಶಿಸಿದ್ದರು. ಈ ಹಿಂದಿನ ಯಾವ ಪ್ರಧಾನ ಮಂತ್ರಿಗಳೂ ತೋರದ ಧೈರ್ಯವೋಂದು ಅದನ್ನು ಬಣ್ಣಿಸಲಾಗಿತ್ತು. ಬಡವನನ್ನು ಬಲವಂತವಾಗಿ ಅವರು ಬ್ಯಾಂಕಿನೆದುರು ಸರತಿ ಸಾಲಲ್ಲಿ ನಿಲ್ಲಿಸಿದರು. `50 ದಿನ ಕೊಡಿ, ಕ್ರಾಂತಿ ಮಾಡುತ್ತೇನೆ’ ಎಂದು ಬಡವನಲ್ಲಿ ಆಸೆ ಹುಟ್ಟಿಸಿದರು. ತಮ್ಮ ಕೈಯಲ್ಲಿರುವ ಹಣವನ್ನೆಲ್ಲ ಬ್ಯಾಂಕಿನಲ್ಲಿಟ್ಟು ಕ್ರಾಂತಿಗಾಗಿ ಕಾದ ಬಡವರಿಗೆ ವಿಜಯ್ ಮಲ್ಯ ಪ್ರಥಮವಾಗಿ ಆ ಕ್ರಾಂತಿಯ ದರ್ಶನ ಮಾಡಿದರು. ಇದೀಗ ನೀರವ್ ಮೋದಿ. ಈ ಎರಡು ಕ್ರಾಂತಿಕಾರಿ ಬೆಳವಣಿಗೆಗಳಿಂದ ಈ ದೇಶಕ್ಕಾದ ನಷ್ಟ 33 ಸಾವಿರ ಕೋಟಿ ರೂಪಾಯಿಗಿಂತಲೂ ಅಧಿಕ ಎಂದು ಹೇಳಲಾಗುತ್ತದೆ. 2016 ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿಯವರು ದಿಢೀರ್ ಆಗಿ ನೋಟ್ ನಿಷೇಧ ಮಾಡಿರುವುದರ ಹಿಂದೆ ನಿಜಕ್ಕೂ ಯಾರಿದ್ದಾರೆ? ಅವರಿಗೆ ಅಂಥದ್ದೊಂದು ಸಲಹೆಯನ್ನು ಕೊಟ್ಟವರು ಯಾರು? ಆರ್‍ಬಿಐ ಗವರ್ನರ್ ರಘುರಾಂ ರಾಜನ್ ಈ ನೋಟ್ ನಿಷೇಧ ಕ್ರಾಂತಿಗೆ ವಿರೋಧವಾಗಿದ್ದರು ಎಂಬುದೇ ಅವರನ್ನು ಆ ಹುದ್ದೆಯಲ್ಲಿ ಮುಂದುವರಿಸದಿರುವುದಕ್ಕೆ ಕಾರಣವೇ? ಅವರ ವಿರೋಧವನ್ನು ನಿರ್ಲಕ್ಷಿಸುವಂತೆ ನರೇಂದ್ರ ಮೋದಿಯವರಿಗೆ ಸೂಚನೆ ಕೊಟ್ಟವರು ಯಾರು? ಆ ಸೂಚಕರಿಗೂ ಕೇಂದ್ರ ಸಚಿವ ಸಂಪುಟಕ್ಕೂ ಏನು ಸಂಬಂಧ ಇದೆ? ಅವರು ಸಂಪುಟದಿಂದ ಹೊರಗಿನವರೋ? ಪ್ರಧಾನಿಯವರು ವಿದೇಶ ಪ್ರವಾಸ ಕೈಗೊಳ್ಳುವಾಗ ಜೊತೆಗೊಯ್ಯುವ ಉದ್ಯಮಿಗಳೇ ಈ ಸೂಚನೆ ನೀಡಿದ್ದರೋ? ಪ್ರಧಾನಿಯವರ ಜೊತೆ ತೆರಳುವ ಉದ್ಯಮಿಗಳ ಹೆಸರನ್ನು ಬಹಿರಂಗಪಡಿಸಲು ಪ್ರಧಾನಿ ಕಾರ್ಯಾಲಯ ನಿರಾಕರಿಸುತ್ತಿರುವುದು ಯಾಕೆ? ನೀರವ್ ಮೋದಿಯಂಥ ಇನ್ನಷ್ಟು ಮೋದಿಗಳು ನೋಟ್ ನಿಷೇಧದ ಲಾಭ ಪಡೆದುಕೊಂಡಿದ್ದಾರೆಯೇ? ಸಿಬಿಐ ದಾಖಲಿಸಿದ ಎಫ್‍ಐಆರ್‍ ನ  ಆಧಾರದಲ್ಲಿ ಹೇಳುವುದಾದರೆ, ನೀರವ್‍ಗೆ ನೀಡಲಾದ ಸಾಲ ಸಂಬಂಧಿ ಎಲ್ಲ ತಿಳುವಳಿಕಾ ಪತ್ರಗಳಿಗೆ ಸಹಿ ಹಾಕಿದ್ದು 2017ರಲ್ಲಿ. ಪ್ರಧಾನಿಯವರ ಕಾರ್ಯಾಲಯದ ಗಮನಕ್ಕೆ ಬಂದ ಬಳಿಕವೂ ದಾವೋಸ್ ಶೃಂಗ ಸಭೆಗೆ ತೆರಳಿದ ನಿಯೋಗದಲ್ಲಿ ನೀರವ್ ಮೋದಿ ಇದ್ದರಲ್ಲವೇ? ಇದು ಹೇಗೆ ಸಾಧ್ಯ?
          ಇಲ್ಲೊಂದು ಕ್ರೂರ ತಮಾಷೆಯಿದೆ. ಮಲ್ಯ, ನೀರವ್‍ರಂಥ ಅನೇಕರು ಮೊದಲು ಉದ್ಯಮಿಗಳ ವೇಷ ಧರಿಸುತ್ತಾರೆ. ನಕಲಿ ಕಂಪೆನಿಗಳನ್ನು ಹುಟ್ಟು ಹಾಕುತ್ತಾರೆ. ಭಾರೀ ಗಾತ್ರದ ಯೋಜನೆಗಳನ್ನು ರೂಪಿಸುತ್ತಾರೆ. ಆ ಬಳಿಕ ಬ್ಯಾಂಕುಗಳಿಂದ ಬೃಹತ್ ಪ್ರಮಾಣದಲ್ಲಿ ಸಾಲ ಎತ್ತುವ ಹುನ್ನಾರ ನಡೆಸುತ್ತಾರೆ. ಸೂಟು-ಬೂಟು-ಟೈಗಳಿಂದ ಬಿಗಿದಿರುವ ಮನುಷ್ಯ ಎಂಬ ನೆಲೆಯಲ್ಲಿ ಇವರಿಗೆ ಬ್ಯಾಂಕುಗಳಲ್ಲೂ ವಿಶೇಷ ಆಕರ್ಷಣೆ ಮತ್ತು ಗೌರವ ಇರುತ್ತದೆ. ಇವರ ಗಾಂಭೀರ್ಯಕ್ಕೆ ಮತ್ತು ಕೋಟ್ಯಾಂತರ ರೂಪಾಯಿಗಳ ಯೋಜನೆಗೆ ಬ್ಯಾಂಕ್‍ಗಳಲ್ಲಿರುವ ‘ಗೋಕುಲ್ ನಾಥ್ ಶೆಟ್ಟಿ’ಯಂಥ ಉದ್ಯೋಗಿಗಳು ಬೇಗನೇ ಶರಣಾಗುತ್ತಾರೆ. ಹೀಗೆ ಸಾಲ ಪಡೆದುಕೊಂಡು ವಂಚಿಸಿದ ಬಳಿಕ ಬ್ಯಾಂಕುಗಳು ಅವರ ಆಸ್ತಿಯನ್ನು ಜಪ್ತಿ ಮಾಡುತ್ತವೆ. ಬಳಿಕ ಅದನ್ನು ಹರಾಜಿಗಿಡುತ್ತವೆ. ತಮಾಷೆ ಇರುವುದೂ ಇಲ್ಲೇ. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳು ಆ ಹರಾಜಿನಲ್ಲಿ ತೀರಾ ಕಡಿಮೆ ಬೆಲೆಗೆ ಮಾರಾಟವಾಗುತ್ತವೆ ಅನ್ನುವುದು ಈ ಸಾಲಗಾರ ಉದ್ಯಮಿಗೆ ಗೊತ್ತು. ಆತ ಬೇನಾಮಿ ಹೆಸರಲ್ಲಿ ಪುನಃ ಆ ಆಸ್ತಿಗಳನ್ನು ಖರೀದಿಸುತ್ತಾನೆ. ವ್ಯಾಪಾರ ಆರಂಭಿಸುತ್ತಾನೆ. ಸ್ವಲ್ಪ ಸಮಯದ ಬಳಿಕ ಪುನಃ ಸಾಲ ಎತ್ತುವಳಿ ನಡೆಯುತ್ತದೆ. ಉದ್ಯಮ ಆರಂಭಿಸುವಾಗ ಅತನಲ್ಲಿದ್ದುದು ಸೂಟು-ಬೂಟು ಮಾತ್ರ. ಬ್ಯಾಂಕ್ ಸಾಲದಿಂದಲೇ ಉದ್ಯಮ ಆರಂಭವಾಗುತ್ತದೆ. ವಂಚನೆ ನಡೆಯುತ್ತದೆ. ಬ್ಯಾಂಕ್‍ ತನ್ನದೇ ಆಸ್ತಿಯನ್ನು ಜಪ್ತಿ ಮಾಡಿ ಹರಾಜು ಕೂಗುತ್ತದೆ. ಆತ ಮತ್ತೊಂದು ಹೆಸರಲ್ಲಿ ಅದೇ ಬ್ಯಾಂಕ್‍ನ ವಂಚಿಸಿದ ಹಣದಿಂದ ಹರಾಜನ್ನು ಪಡೆದುಕೊಳ್ಳುತ್ತಾನೆ. ಇಲ್ಲಿ ಆತನಿಗೆ ನಯಾ ಪೈಸೆ ನಷ್ಟವಿಲ್ಲ. ನಷ್ಟ ಸಂಭವಿಸುವುದೆಲ್ಲ ಬ್ಯಾಂಕುಗಳಿಗೆ. ಹಾಗಂತ, ಬ್ಯಾಂಕ್‍ನಲ್ಲಿರುವ ಹಣವೂ ಬ್ಯಾಂಕ್‍ನದ್ದಲ್ಲ. ನರೇಂದ್ರ ಮೋದಿಯವರ `50 ದಿನಗಳ ಕ್ರಾಂತಿ’ಯಲ್ಲಿ ಹರಿದು ಬಂದ ನೋಟುಗಳು. ಇವೇ ನೋಟುಗಳನ್ನು ಓರ್ವ ರೈತ ಪಡಕೊಳ್ಳಬೇಕು ಎಂದರೆ ಬ್ಯಾಂಕುಗಳು ನೂರಾರು ತಕರಾರುಗಳನ್ನು ತೆಗೆಯುತ್ತವೆ. ಮೊದಲನೆಯದಾಗಿ ಉದ್ಯಮಿಯಂಥ ಸೂಟು-ಬೂಟು ರೈತನಲ್ಲಿಲ್ಲ. ಕೋಟ್ಯಾಂತರ ರೂಪಾಯಿಗಳ ಯೋಜನೆ ಮಾಡಲೂ ಅತನಿಗೆ ಬರಲ್ಲ. ಇಂಥ ಒರಟು ಚರ್ಮದ ಮನುಷ್ಯರಿಗೆ ಗೋಕುಲನಾಥ ಶೆಟ್ಟಿಯಂಥ ಬ್ಯಾಂಕ್ ಉದ್ಯೋಗಿಗಳು ಗೆಳೆಯರಾಗುವುದಕ್ಕೆ ಸಾಧ್ಯವೂ ಇಲ್ಲ. ಅಂದಹಾಗೆ, ಸರಕಾರಿ ಸ್ವಾಮ್ಯದ 21 ಬ್ಯಾಂಕುಗಳೇ ಈ ದೇಶದ ಹಣಕಾಸು ಮಾರುಕಟ್ಟೆಯನ್ನು ನಿಯಂತ್ರಿಸುತ್ತವೆ. ಹಾಗಂತ, ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಮಾತ್ರ ಈ ದೇಶದಲ್ಲಿರುವುದಲ್ಲ. ಧಾರಾಳ ಖಾಸಗಿ ಬ್ಯಾಂಕುಗಳಿವೆ. ಆದರೆ ಸಾಲ ಮರು ಪಾವತಿಸದ ಮೋದಿಯಂಥ ಉದ್ಯಮಿಗಳೆಲ್ಲ ಸರಕಾರಿ ಸ್ವಾಮ್ಯದ ಬ್ಯಾಂಕುಗಳನ್ನೇ ಸಾಲಕ್ಕಾಗಿ ಆಶ್ರಹಿಸಿಕೊಂಡಿದ್ದಾರೆ. ಖಾಸಗಿ ಬ್ಯಾಂಕ್‍ಗಳತ್ತ ಅವರು ಸುಳಿಯುವುದೇ ಇಲ್ಲ. ಇದರ ಅರ್ಥ ಇಷ್ಟೇ. ಉದ್ಯಮಿಗಳಿಗೂ ಸರಕಾರಿ ಸ್ವಾಮ್ಯದ ಬ್ಯಾಂಕುಗಳಿಗೂ ಉದ್ಯಮಕ್ಕಿಂತ ಹೊರತಾದ ತಿಳುವಳಿಕೆ ಇದೆ.
ಈ ತಿಳುವಳಿಕೆಗೆ ಅವರ ಉದ್ಯಮವಷ್ಟೇ ಕಾರಣ ಅಲ್ಲ. ಅವರಿಗೂ ಆಡಳಿತದ ಮಂದಿಗೂ ಸಂಬಂಧ ಇದೆ. ಅವರು ದೊಡ್ಡ ಮಟ್ಟದಲ್ಲಿ ರಾಜಕೀಯ ಪಕ್ಷಗಳಿಗೆ ಪಾರ್ಟಿ ಫಂಡ್ ನೀಡುತ್ತಾರೆ. ಚುನಾವಣೆಯನ್ನು ಎದುರಿಸಬೇಕಾದರೆ ರಾಜಕೀಯ ಪಕ್ಷಗಳಿಗೆ ಹಣ ಬೇಕೇ ಬೇಕು. ಅದು ಶೂನ್ಯದಿಂದ ಹುಟ್ಟುವುದಿಲ್ಲ. ಮೋದಿ-ಮಲ್ಯರಂಥವರು ಅದನ್ನು ಉತ್ಪಾದಿಸಿ ಹಂಚುತ್ತಾರೆ. ಅವರಿಗೆ ಆ ಮೊತ್ತವನ್ನು ಬ್ಯಾಂಕುಗಳು ಕೊಡುತ್ತವೆ. ಹಾಗೆ, ಬ್ಯಾಂಕುಗಳು ಕೊಡುವಂತೆ ಮಾಡಲು ದೇಣಿಗೆ ಪಡೆದುಕೊಂಡವರು ಸಹರಿಸುತ್ತಾರೆ. ಹೀಗೆ ಪಡೆದುಕೊಂಡ ಹಣವನ್ನು ಈ ಉದ್ಯಮಿಗಳು ಪಾವತಿಸದೇ ವಂಚಿಸಿದಾಗ ಬ್ಯಾಂಕುಗಳು ದಿವಾಳಿಯಾಗದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆಯನ್ನು ಇದೇ ದೇಣಿಗೆ ಪಡಕೊಂಡವರು ವಹಿಸಿಕೊಳ್ಳುತ್ತಾರೆ. ಅವರು ಮತ್ತೆ ಬ್ಯಾಂಕಿಗೆ ಹಣಕಾಸು ಮರುಪೂರಣ ಮಾಡುವುದಕ್ಕಾಗಿ ತೆರಿಗೆದಾರರ ಹಣವನ್ನು ಬಳಸಿಕೊಳ್ಳುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು 2016 ನವೆಂಬರ್ 8 ರಂದು ಮಾಡಿದ `ನೋಟ್ ನಿಷೇಧ ಕ್ರಾಂತಿ’ಯ ಹಿಂದಿನ ಉದ್ದೇಶಗಳಲ್ಲಿ ಇದೂ ಒಂದು ಅಥವಾ ಇದುವೇ. ಬ್ಯಾಂಕ್‍ಗಳಿಗೆ ಬೃಹತ್ ಪ್ರಮಾಣದಲ್ಲಿ ತೆರಿಗೆದಾರರ ಹಣವನ್ನು ಮರುಪೂರಣಗೊಳಿಸಿ ಬ್ಯಾಂಕ್‍ಗಳ ಹೊಟ್ಟೆ ತುಂಬಿಸುವುದು ಮತ್ತು ನೀರವ್‍ರಂಥ ದೇಣಿಗೆದಾರರಿಗೆ ಸಾಲ ಒದಗಿಸುವುದು. `ಮಲ್ಯ ವಂಚಿಸಿ ತಪ್ಪಿಸಿಕೊಂಡ ಬಳಿಕವೂ ನೀರವ್‍ರಂಥವರು ಹೇಗೆ ತಯಾರಾಗುತ್ತಾರೆ, ಬ್ಯಾಂಕ್‍ಗಳೇಕೆ ಜಾಗ್ರತೆ ಪಾಲಿಸುವುದಿಲ್ಲ’ ಎಂಬ ಪ್ರಶ್ನೆ ಇಂದು ನಾಗರಿಕರಲ್ಲಿದೆ. ನಿಜವಾಗಿ ದೇಣಿಗೆ ನೀಡುವ ಉದ್ಯಮಿಗಳು ಮತ್ತು ದೇಣಿಗೆ ಸ್ವೀಕರಿಸುವ ರಾಜಕೀಯ ಪಕ್ಷಗಳ ಮಟ್ಟಿಗೆ ಈ ಪ್ರಶ್ನೆಯೇ ಬಾಲಿಶತನದ್ದು. ಅದು ಉಭಯತ್ರರ ನಡುವಿನ ತಿಳುವಳಿಕೆ.
ನರೇಂದ್ರ ಮೋದಿ ಮತ್ತು ನೀರವ್ ಮೋದಿ ಎಂಬ ಹೆಸರುಗಳಲ್ಲಿ `ಮೋದಿ’ ಎಂಬ ಸಮಾನ ಪದವಿರುವುದಕ್ಕೆ ಕಾರ್ಯಕಾರಣ ಸಂಬಂಧ ಇಲ್ಲದೇ ಇರಬಹುದು. ಆದರೆ, ನರೇಂದ್ರ ಮೋದಿಯವರ ನೋಟ್ ನಿಷೇಧಕ್ಕೂ ಉದ್ಯಮಿಗಳಿಗೂ ಬಹುತೇಕ ಸಂಬಂಧ ಇದೆ. ಅವರು ಹೇಳಿದ 50 ದಿನಗಳು 10 ಬಾರಿ ಕಳೆದ ಬಳಿಕವೂ ನೋಟ್ ನಿಷೇಧದ ಪ್ರಯೋಜನಗಳನ್ನು ವಿವರಿಸಲು ಅವರು ವಿಫಲರಾಗಿರುವುದೇ ಇದಕ್ಕೆ ಉತ್ತಮ ಪುರಾವೆ. ಅವರನ್ನು ಸುತ್ತವರಿದಿದ್ದ ಭ್ರಮೆ ಕಳಚಿದೆ. ನೀರವ್ ಅದಕ್ಕೆ ನಿಮಿತ್ತ ಮಾತ್ರ.

Tuesday 20 February 2018

ಹೆಣ್ಣು: ಗೌರವ-ಅಗೌರವಗಳ ನಡುವೆ

     ನಿಜಕ್ಕೂ ಮಹಿಳೆಯನ್ನು ಗೌರವಿಸುವುದು ಅಂದರೆ ಹೇಗೆ? ಅದರ ವಿಧಾನ ಏನು? ಇತಿಹಾಸದ ಕಲ್ಪಿತ ಮಹಿಳಾ ಕಥಾ ಪಾತ್ರಗಳ ಕೆಲವು ಆಯ್ದ ಭಾಗಗಳನ್ನು ಎತ್ತಿಕೊಂಡು ಭಾವಪೂರ್ಣವಾಗಿ ಮಂಡಿಸುವುದು ಮತ್ತು ಆ ಪಾತ್ರಗಳನ್ನು ಸಮರ್ಥಿಸುವುದಕ್ಕಾಗಿ ಬೇರೊಂದು ಹೆಣ್ಣನ್ನು ಅತ್ಯಂತ ಕೀಳಾಗಿ ಪ್ರಸ್ತುತಪಡಿಸುವುದರ ವಿಧಿ ಏನು? ಪದ್ಮಾವತ್‍ನ ಪದ್ಮಿನಿ ಮತ್ತು ಅದನ್ನು ಅಭಿನಯಿಸಿದ ದೀಪಿಕಾ ಪಡುಕೋಣೆಯಿಂದ ಹಿಡಿದು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿಯವರೆಗೆ ಈ ಬಗೆಯ ಪ್ರಶ್ನೆಗಳು ಆಗಾಗ ನಮ್ಮನ್ನು ಎದುರುಗೊಳ್ಳುತ್ತಲೇ ಇರುತ್ತವೆ.  ರೇಣುಕಾ ಚೌಧರಿಯವರ ನಗುವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಸತ್‍ನಲ್ಲಿ ವ್ಯಂಗ್ಯಕ್ಕೆ ಒಳಪಡಿಸಿದರು. ‘ರಾಮಾಯಣ’ ಟಿವಿ ಧಾರಾವಾಹಿಯಲ್ಲಿ ಶೂರ್ಪನಖಿಯ ನಗುವಿಗೆ ರೇಣುಕಾರ ನಗುವನ್ನು ಪರೋಕ್ಷವಾಗಿ ಹೋಲಿಸಿದರು. ರಾಮಾಯಣದಲ್ಲಿ ಶೂರ್ಪನಖಿಯದು ಅತ್ಯಂತ ನಕಾರಾತ್ಮಕ ಪಾತ್ರ. ಅಂದಹಾಗೆ, ಓರ್ವ ಸಂಸದೆಯ ನಗುವನ್ನು ಪುರಾಣ ಕಾಲದ ನಕಾರಾತ್ಮಕ ಪಾತ್ರಕ್ಕೆ ಜೋಡಿಸಿ ನೋಡುವುದು ಏನನ್ನು ಸೂಚಿಸುತ್ತದೆ? ಇದು ಸಹಜವೇ, ಅಸಹಜವೇ, ತಕ್ಷಣದ ಆವೇಶವೇ? ಇದೇ ಪ್ರಶ್ನೆಯನ್ನು ಪದ್ಮಾವತ್‍ನ ಪದ್ಮಿನಿಯ ಕುರಿತಾದ ವಿವಾದಗಳವರೆಗೂ ಬೆಳೆಸಬಹುದು. ಅಲ್ಲೂ ಪದ್ಮಿನಿಯ ಪಾತ್ರಧಾರಿ ದೀಪಿಕಾ, ಕರ್ಣಿಸೇನಾದಿಂದ ಹೀನಾಯ ನಿಂದನೆಗೆ ಒಳಗಾದರು. ಆ ಸಮಯದಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷ ಅದನ್ನು ಆನಂದಿಸಿತೇ ಹೊರತು ವಿರೋಧಿಸಲಿಲ್ಲ. ವಿವಿಧ ರಾಜ್ಯಗಳಲ್ಲಿರುವ ಬಿಜೆಪಿಯ ಮುಖ್ಯಮಂತ್ರಿಗಳು ಕರ್ಣಿ ಸೇನಾದ ಕಾವಲುಗಾರರಂತೆ ವರ್ತಿಸಿದರು. ಅಲ್ಲದೇ, ಆ ಪಕ್ಷದ ಕೆಲವು ನಾಯಕರಂತೂ ಕರ್ಣಿಸೇನಾದ ಪ್ರತಿನಿಧಿಗಳಂತೆ ಮಾತಾಡಿದರು. ರೇಣುಕಾ ಚೌಧರಿಯವರ ನಗುವನ್ನು ಪ್ರಧಾನಿ ನರೇಂದ್ರ ಮೋದಿಯವರು ಯಾವ ಭಾವದಲ್ಲಿ ನೋಡಿದರೋ ಅದೇ ಭಾವದಲ್ಲಿ ಪದ್ಮಿನಿ ಪಾತ್ರಧಾರಿ ದೀಪಿಕಾರನ್ನು ಆ ಪಕ್ಪ ನೋಡಿದೆ ಅನ್ನುವುದಕ್ಕೆ ಆ ಪಕ್ಷ ವಿವಿಧ ಸಂದರ್ಭಗಳಲ್ಲಿ ನೀಡಿದ ಪ್ರತಿಕ್ರಿಯೆಗಳೇ ಸಾಕ್ಷಿ. ಆದ್ದರಿಂದಲೇ, ರೇಣುಕಾ ಚೌಧರಿಯವರು ಪ್ರಧಾನಿಯವರ ದೃಷ್ಟಿಯಲ್ಲಿ ಶೂರ್ಪನಖಿ ಆದುದು ಮುಖ್ಯವಾಗಬೇಕಾಗುತ್ತದೆ. ತ್ರಿವಳಿ ತಲಾಕನ್ನು ಎತ್ತಿಕೊಂಡು ಮುಸ್ಲಿಮ್ ಮಹಿಳಾ ವಿಮೋಚಕನಂತೆ ಬಿಂಬಿಸಿಕೊಂಡ ಅದೇ ವ್ಯಕ್ತಿ ಇನ್ನೊಂದು ಕಡೆ ಮಹಿಳೆಯ ನಗುವನ್ನು ಸಹಿಸಿಕೊಳ್ಳುವಷ್ಟೂ ಪ್ರಬುದ್ಧತೆ ತೋರುವುದಿಲ್ಲ. ಅಂದಹಾಗೆ, ಅವರ ಭಾಷಣದ ವೇಳೆ ಮಹಿಳೆ ನಗುವುದೆಂದರೆ ಅದು ಪುರುಷರು ನಕ್ಕಂತೆ ಅಲ್ಲ. ಪುರುಷರ ನಗುವನ್ನು ಸಹಿಸಿಕೊಳ್ಳುವ ಅವರು ಮಹಿಳೆಯ ನಗುವನ್ನು ಹಾಗೆಯೇ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಕ್ಷಣಕ್ಕೆ ಅವರ ಪುರುಷ ಮೇಲ್ಮೈ ಅಡ್ಡ ಬರುತ್ತದೆ. ಹೆಣ್ಣೊಬ್ಬಳು ತನ್ನ ಭಾಷಣಕ್ಕೆ ನಗುವುದು ಅವಮಾನವಾಗಿ ಬಿಡುತ್ತದೆ.
     ಹೆಣ್ಣನ್ನು ಗೌರವಿಸುವುದು ಮತ್ತು ಆಕೆಯ ಐಡೆಂಟಿಟಿಯನ್ನು ಮಾನ್ಯ ಮಾಡುವುದೆಂದರೆ, ‘ತನಗೆ ಶರಣಾಗಿ ಆಕೆ ನಡೆಯುವವರೆಗೆ’ ಎಂಬ ಶರತ್ತನ್ನು ಹೇರಿಕೊಂಡು ಅಲ್ಲ. ಹೆಣ್ಣು ಪುರುಷ ವಿಚಾರಧಾರೆಯ ಹೊರಗಿದ್ದಾಗಲೂ ಆಕೆ ಗೌರವಾರ್ಹ. ಪುರುಷ ವಿಚಾರಧಾರೆಯನ್ನು ಅಮಾನ್ಯ ಮಾಡಿದಾಗಲೂ ಆಕೆ ಗೌರವಾರ್ಹ. ತನ್ನ ವಿಚಾರಧಾರೆಯನ್ನು ಒಪ್ಪಿರುವವರೆಗೆ ಆಕೆ ಗೌರವಾರ್ಹಳೂ ಅದಕ್ಕೆ ವಿರುದ್ಧವಾದಾಗ ಅಗೌರವಾರ್ಹಗಳೂ ಆಗುವುದು ಮಹಿಳಾ ವಿರೋಧಿ ಮನಸ್ಥಿತಿಯ ಲಕ್ಷಣ. ತ್ರಿವಳಿ ತಲಾಕ್‍ನ ಮೇಲೆ ಪ್ರಧಾನಿಯವರು ಹಲವು ಬಾರಿ ಮಾತಾಡಿದ್ದಾರೆ. ಮುಸ್ಲಿಮ್ ಮಹಿಳೆಯರ ಬಗ್ಗೆ ಅತೀವ ಕಾಳಜಿ ಮತ್ತು ಗೌರವವನ್ನು ಈ ಎಲ್ಲ ಸಂದರ್ಭಗಳಲ್ಲಿ ಅವರು ವ್ಯಕ್ತಪಡಿಸಿದ್ದಾರೆ. ಇದೇ ವ್ಯಕ್ತಿ ದಶಕದ ಹಿಂದೆ ಮುಸ್ಲಿಮ್ ಮಹಿಳೆಯರನ್ನು ಯಾವ ಪರಿ ಅಣಕಿಸಿದ್ದರು ಎಂಬುದೂ ಈ ದೇಶಕ್ಕೆ ಗೊತ್ತು. ಗುಜರಾತ್ ಹತ್ಯಾಕಾಂಡದಲ್ಲಿ ಅತೀವ ದೌರ್ಜನ್ಯಗಳನ್ನು ಎದುರಿಸಿದವರು ಮಹಿಳೆಯರೇ. ಆದರೆ ಅವರು ಎಲ್ಲೂ ಆ ಮಹಿಳೆಯರಿಗೆ ಸಾಂತ್ವನವನ್ನು ವ್ಯಕ್ತಪಡಿಸಲಿಲ್ಲ. ಅವರ ಮಾತುಗಳಿಗೆ ಕಿವಿಯಾಗಲಿಲ್ಲ. ತಮ್ಮ ಮೇಲಿನ ದೌರ್ಜನ್ಯಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತೆ ಸಂತ್ರಸ್ಥರಿಗೆ ಅವರು ಧೈರ್ಯ ನೀಡಲಿಲ್ಲ. ಪ್ರಶ್ನಿಸಿದವರಿಗೆ ಜೀವಭದ್ರತೆಯನ್ನೂ ಒದಗಿಸಲಿಲ್ಲ. ತ್ರಿವಳಿ ತಲಾಕ್‍ನಿಂದ ಸಂತ್ರಸ್ತರಾದ ಮಹಿಳೆಯರಿಗೆ ಹೋಲಿಸಿದರೆ ಗುಜರಾತ್ ಹತ್ಯಾಕಾಂಡದಿಂದ ಸಂತ್ರಸ್ತರಾದವರ ಸ್ಥಿತಿ ಅತ್ಯಂತ ಗಂಭೀರ. ಆದರೆ ಆ ಬಗ್ಗೆ ಯಾವ ಕಾಳಜಿಯನ್ನೂ ತೋರದ ಮೋದಿಯವರು ತ್ರಿವಳಿ ತಲಾಕ್‍ಗೊಳಗಾದ ಮಹಿಳೆಯರ ಬಗ್ಗೆ ಅತೀವ ಕಾಳಜಿಯನ್ನು ತೋರಿದರು. ನಿಜವಾಗಿ, ಪ್ರಧಾನಿಯವರನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಅವರ ಬೆಂಬಲಿಗ ವರ್ಗವು ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನೂ ಎತ್ತಿಕೊಳ್ಳಬಹುದು. ಹೆಣ್ಣು ಮಕ್ಕಳು ಯಾರೊಂದಿಗೆ ಮಾತಾಡಬೇಕು, ಯಾವುದು ಶಿಸ್ತು, ಯಾವು ಅಶಿಸ್ತು, ಏನನ್ನು ಕುಡಿಯಬೇಕು.. ಇತ್ಯಾದಿಗಳನ್ನು ಈ ವರ್ಗ ಇವತ್ತು ಬೀದಿಯಲ್ಲಿ ನಿಂತು ನಿರ್ಧರಿಸುತ್ತದೆ. ಬಲವಂತದಿಂದ ತಮ್ಮ ನಿಲುವುಗಳನ್ನು ಹೆಣ್ಣು ಮಕ್ಕಳ ಮೇಲೆ ಹೇರುತ್ತಿದೆ. ಒಂದು ರೀತಿಯಲ್ಲಿ, ಹೆಣ್ಣನ್ನು ಆ ಪಕ್ಪ  ಎರಡು ರೀತಿಯಾಗಿ ವಿಭಜಿಸಿದೆ. ಒಂದು- ಶೂರ್ಪನಖಿಯಾದರೆ, ಇನ್ನೊಂದು- ಪದ್ಮಿನಿ. ಸಂದರ್ಭಕ್ಕೆ ತಕ್ಕಂತೆ ಈ ಪಾತ್ರಗಳ ಜೊತೆಯಿಟ್ಟು ಅದು ಆಗಾಗ ಹೆಣ್ಣಿಗೆ ವ್ಯಾಖ್ಯಾನಗಳನ್ನು ನೀಡುತ್ತಿದೆ. ತನ್ನ ನಿಯಮಕ್ಕೆ ಯಾರು ಅಧೀನವಾಗಿ ಬದುಕುತ್ತಾರೋ ಅವರು ಪದ್ಮಿನಿಯಾಗುತ್ತಾರೆ. ಅವರು ಅತ್ಯಂತ ಗೌರವಾರ್ಹರು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರು ಶೂರ್ಪನಖಿಯಾಗುತ್ತಾರೆ. ಅವರನ್ನು ಯಾವ ವೇದಿಕೆಯಲ್ಲೂ ಯಾವ ಕ್ಪಣದಲ್ಲೂ ಅಗೌರವಿಸಬಹುದು.      ರೇಣುಕಾ ಚೌಧರಿ ಮತ್ತು ದೀಪಿಕಾ ಪಡುಕೋಣೆ- ಈ ದೇಶದ ಮುಂದೆ ಕೆಲವು ಪ್ರಶ್ನೆಗಳನ್ನಿಟ್ಟಿದ್ದಾರೆ. ಹಾಗಂತ ಆ ಪ್ರಶ್ನೆಗಳಿಗೆ ಸ್ವತಃ ಅವರು ಕಾರಣರಲ್ಲ. ಅವರನ್ನು ಅದಕ್ಕೆ ಬಲವಂತಪಡಿಸಲಾಗಿದೆ. ಇತಿಹಾಸದ ಕಲ್ಪಿತ ಪಾತ್ರವೊಂದಕ್ಕೆ ಜೀವ ತುಂಬಿದ್ದನ್ನು ಬಿಟ್ಟರೆ ಉಳಿದಂತೆ ಪದ್ಮಾವತ್‍ನಲ್ಲಿ ದೀಪಿಕಾರ ಒಳಗೊಳ್ಳುವಿಕೆ ಶೂನ್ಯ. ಆದರೆ ಆ ಚಿತ್ರದ ನಿರ್ದೇಶನದಿಂದ ಹಿಡಿದು ಉಳಿದೆಲ್ಲ ವಿಷಯಗಳಲ್ಲಿ ಪುರುಷರ ದೊಡ್ಡ ಗುಂಪೇ ಭಾಗಿಯಾಗಿದೆ. ಸಂಸತ್‍ನಲ್ಲಿ ಪ್ರಧಾನಿಯವರ ಮಾತಿಗೆ ರೇಣುಕಾ ಒಬ್ಬರೇ ನಕ್ಕಿದ್ದಲ್ಲ. ಆಧಾರ್ ವಿಷಯದಲ್ಲಿ ಅವರು ಹೇಳಿದ ಸುಳ್ಳಿಗೆ ಸಂಸತ್‍ನಲ್ಲಿ ನಗದವರೇ ಕಡಿಮೆ. ಆದರೆ ಈ ಎರಡೂ ಸಂದರ್ಭಗಳಲ್ಲಿ ಅಗೌರವಕ್ಕೆ ಒಳಗಾದುದು ಇಬ್ಬರು ಮಹಿಳೆಯರು ಮಾತ್ರ. ಈ ಬಗೆಯ ಸನ್ನಿವೇಶಕ್ಕೆ ಕಾರಣವೇನು? ‘ಹೆಣ್ಣು ದ್ವಿತೀಯೆ’ ಎಂಬ ಮನಸ್ಥಿತಿಯ ಹೊರತು ಇನ್ನಾವುದನ್ನು ಇದಕ್ಕೆ ಕಾರಣವಾಗಿ ಕೊಡಬಹುದು? ರೇಣುಕಾ ಶೂರ್ಪನಖಿಯಾಗುವಾಗ ಇನ್ನೋರ್ವರ ತಲೆ, ಮೂಗು, ಕೈ-ಕಾಲುಗಳಿಗೆ ಬೆಲೆ ಕಟ್ಟಲಾಗುತ್ತದೆ. ಮಾತ್ರವಲ್ಲ, ಈ ಎರಡೂ ಪ್ರಕರಣಗಳಲ್ಲೂ ಪ್ರಧಾನಿಯವರ ಪಕ್ಪದ ದೇಹಭಾಷೆ ಇವನ್ನು ಸಮರ್ಥಿಸುವಂತೆಯೇ ಇರುತ್ತದೆ.
      ನಿಜವಾಗಿ, ಮಹಿಳೆಯರಿಗೆ ಸಂಬಂಧಿಸಿ ಬಿಜೆಪಿಯ ಪುರಾತನ ಮನಸ್ಥಿತಿಯನ್ನು ದೀಪಿಕಾ ಮತ್ತು ರೇಣುಕಾ ತೆರೆದಿಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು. 



Tuesday 13 February 2018

ನಿಜಕ್ಕೂ ಸಾದಿಯಾ ಯಾರು?

      ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. 4ರಂದು ಸದ್ದಿಲ್ಲದೇ ಬಿಡುಗಡೆಗೊಳಿಸಿದ್ದಾರೆ ಮತ್ತು ಪೋಷಕರಿಗೆ ಕೈಯಾರೆ ಒಪ್ಪಿಸಿದ್ದಾರೆ. ಜನವರಿ 24 ಮತ್ತು 25ರ ನಡುವೆ ಬಹುತೇಕ ಎಲ್ಲ ಸುದ್ದಿ ಮಾಧ್ಯಮಗಳು ಸಾದಿಯಾ ಅನ್ವರ್ ಶೇಖ್ ಎಂಬ ಈ 18ರ ಹರೆಯದ ಯುವತಿಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ್ದವು. ‘ಗಣರಾಜೋತ್ಸವ ಪೆರೇಡ್ ಮೇಲೆ ಸಿಡಿಯಲಿದ್ದ ಶಂಕಿತ ಆತ್ಮಹತ್ಯಾ ಬಾಂಬರ್ ಬಂಧನ’ ಎಂಬ ರೀತಿಯ ಶೀರ್ಷಿಕೆಯಲ್ಲಿ ಹೆಚ್ಚಿನ ಇಂಗ್ಲಿಷ್ ಪತ್ರಿಕೆಗಳು ಸುದ್ದಿಗೆ ಭಾರೀ ಮಹತ್ವ ಕೊಟ್ಟು ಮುದ್ರಿಸಿದ್ದುವು. ಡಿಎನ್‍ಎ ಪತ್ರಿಕೆಯಂತೂ ‘How a convent educated girl from Pune became a Suicide bomber idolizing Burhan Wani’  (ಬುರ್‍ಹಾನ್ ವಾನಿಯನ್ನು ಆರಾಧಿಸುತ್ತಿದ್ದ ಕಾನ್ವೆಂಟ್ ಶಿಕ್ಷಿತ ಯುವತಿ ಹೇಗೆ ಆತ್ಮಹತ್ಯಾ ಬಾಂಬರ್ ಆದಳು) ಎಂಬ ಆಕರ್ಷಕ ಶೀರ್ಷಿಕೆಯಲ್ಲಿ ಜನವರಿ 26ರಂದು ವಿಶೇಷ ವರದಿಯನ್ನೇ ಪ್ರಕಟಿಸಿತ್ತು. ಸಾದಿಯಾಳನ್ನು ಬಿಡುಗಡೆಗೊಳಿಸಲಾದ ಈ ಹೊತ್ತಿನಲ್ಲಿ ಮತ್ತೊಮ್ಮೆ ಆ ವರದಿಯನ್ನು ಓದುವಾಗ ನಗು ಬರುತ್ತದೆ. ಕಲ್ಪಿತ ಕತೆಗಳು, ವದಂತಿಗಳು ಮತ್ತು ಪುರಾವೆ ರಹಿತ ಮಾಹಿತಿಗಳ ಆಧಾರದಲ್ಲಿ ಮಾಡಲಾಗುವ ವರದಿಗಳು ಹೇಗೆ ಆತ್ಮಹತ್ಯಾ ಬಾಂಬರ್ ಗಿಂತಲೂ ಅಪಾಯಕಾರಿ ಅನ್ನುವುದನ್ನು ಮತ್ತೆ ಮತ್ತೆ ಅದು ಸ್ಪಷ್ಟಪಡಿಸುತ್ತದೆ. ಆಕೆ ಸಿರಿಯಕ್ಕೆ ಪ್ರಯಾಣಿಸಲು ತಯಾರಿ ನಡೆಸಿದ್ದಳು ಎಂದು ಒಂದು ಪತ್ರಿಕೆ ಬರೆದರೆ, ಇನ್ನೊಂದು, ಐಸಿಸ್‍ಗೆ ಸೇರ್ಪಡೆಗೊಳಿಸುವ ಜಾಲದೊಂದಿಗೆ ಆಕೆ ಸಂಪರ್ಕದಲ್ಲಿದ್ದಳು ಎಂದು ಬರೆಯಿತು. ಆಕೆಯನ್ನು ಮೂಲಭೂತವಾದಿ ಎನ್ನಲಾಯಿತು. ತನ್ನ ಪ್ರಿಯಕರನ ಜೊತೆ ಇದ್ದಾಗಲೇ ಪೊಲೀಸರು ಆಕೆಯನ್ನು ಬಂಧಿಸಿದರು ಎಂದೂ ಹೇಳಲಾಯಿತು.
     ಸಾದಿಯಾ ಮಹಾರಾಷ್ಟ್ರದ ಪುಣೆ ಮೂಲದವಳು. ಜನವರಿ 16ರಂದು ಆಕೆ ಶ್ರೀನಗರಕ್ಕೆ ಬಂದಿಳಿದಳು, ಫೇಸ್‍ಬುಕ್ ನಲ್ಲಿ ಪರಿಚಯವಾದ ಶ್ರೀನಗರದ ಲಾಲ್ ಬಝಾರ್ ನಲ್ಲಿರುವ ಯುವಕನನ್ನು ಭೇಟಿಯಾಗುವುದು ಆಕೆಯ ಉದ್ದೇಶವಾಗಿತ್ತು ಎಂದೆಲ್ಲಾ ಹೇಳಲಾಗುತ್ತದೆ. ಶ್ರೀನಗರದ ಬಿಜ್‍ಬೇರಾದಲ್ಲಿ ಆಕೆ ಉಳಿದುಕೊಂಡಿದ್ದಳು. ಆದರೆ  ಪೊಲೀಸರು ಹುಡುಕುತ್ತಿರುವ ಸುದ್ದಿಯನ್ನು ಸ್ಥಳೀಯ ಪತ್ರಿಕೆಗಳಲ್ಲಿ ಓದಿ ಸ್ವತಃ ಅವಂತಿಪುರ ಠಾಣೆಯನ್ನು ಆಕೆ ಸಂಪರ್ಕಿಸಿದಳು ಎಂದೂ ಹೇಳಲಾಗುತ್ತದೆ. ಆದರೆ, ಇದೀಗ ಗುಪ್ತಚರ ಮಾಹಿತಿಯನ್ನು ಅರ್ಥೈಸುವಲ್ಲಿ ಕಾಶ್ಮೀರ ಪೊಲೀಸರಿಂದ ಆದ ಎಡವಟ್ಟೇ ಇವೆಲ್ಲಕ್ಕೂ ಕಾರಣ ಎಂದು ಮುಖ್ಯ ವಾಹಿನಿಯ ಪತ್ರಿಕೆಗಳು ಬರೆದಿವೆ. ನಿಜವಾಗಿ ಅನುಮಾನ ಹುಟ್ಟಿಕೊಳ್ಳುವುದೂ ಇಲ್ಲೇ. 18ರ ಹರೆಯದ ಯುವತಿಯನ್ನು ಎರಡು ವಾರಗಳ ತನಕ ಶಂಕೆಯ ಮೊನೆಯಲ್ಲಿರಿಸಿ ವಿಚಾರಣೆಗೆ ಒಳಪಡಿಸಿದ್ದರ ಹಿಂದೆ ಯಾವ ದುರುದ್ದೇಶವೂ ಇದ್ದಿರಲಿಲ್ಲವೇ? ಇದು ಬರೇ ಎಡವಟ್ಟೇ? ಇಂಥ ಎಡವಟ್ಟು ಈ ಹಿಂದೆ ಎಷ್ಟು ಬಾರಿ ಆಗಿದೆ? ಎಷ್ಟು ಮಂದಿ ಇಂಥ ಎಡವಟ್ಟಿನಿಂದ ಎನ್‍ಕೌಂಟರ್‍ ಗೆ  ಒಳಗಾಗಿದ್ದಾರೆ? ಎಷ್ಟು ಮಂದಿಯ ಬಂಧನವಾಗಿದೆ? ಎಷ್ಟು ಮಂದಿಯ ಬಿಡುಗಡೆಯಾಗಿದೆ? ಎಡವಟ್ಟನ್ನು ಎಡವಟ್ಟು ಎಂದು ಒಪ್ಪಿಕೊಳ್ಳದೇ ಇರುವ ಪ್ರಕರಣಗಳು ಎಷ್ಟಿವೆ? ಅದರ ಪರಿಣಾಮವನ್ನು ಎದುರಿಸುತ್ತಾ ಜೈಲಲ್ಲಿ ಕೊಳೆಯುತ್ತಿರುವ ಮಂದಿ ಎಷ್ಟಿದ್ದಾರೆ? ಅಷ್ಟಕ್ಕೂ, ಗಣರಾಜ್ಯೋತ್ಸವದ ಸಮಯದಲ್ಲೇ ಈ ಎಡವಟ್ಟು ಸಂಭವಿಸಲು ಕಾರಣಗಳೇನು? ಸಾದಿಯಾ- ಗಣರಾಜೋತ್ಸವ ಪೆರೇಡನ್ನು ಸ್ಫೋಟಿಸುತ್ತಾಳೆ ಎಂಬ ಭಯವನ್ನು ತೇಲಿಸಿಬಿಟ್ಟ ಗುಪ್ತಚರ ಇಲಾಖೆಯ ಎಡವಟ್ಟುದಾರರು ಯಾರು? ಅವರು ಎಲ್ಲಿಂದ ಈ ಎಡವಟ್ಟು ಮಾಹಿತಿ ಪಡೆದುಕೊಂಡರು? ನಿಜಕ್ಕೂ ಕಾಶ್ಮೀರದಲ್ಲಿ ಆತ್ಮಹತ್ಯಾ ಬಾಂಬರ್ ಒಬ್ಬಳು ಇದ್ದಳೇ? ಗಣರಾಜ್ಯೋತ್ಸವ ಪೆರೇಡ್ ಮೇಲೆ ದಾಳಿಯೆಸಗುವ ಉದ್ದೇಶವನ್ನು ಆಕೆ ಹೊಂದಿದ್ದಳೇ? ಗುಪ್ತಚರ ಇಲಾಖೆಗೂ ಆಕೆ ಯಾರೆಂದು ಗೊತ್ತಿತ್ತೇ? ಅನಿವಾರ್ಯ ಕಾರಣದಿಂದಾಗಿ ಆ ಯೋಜನೆಯನ್ನು ಕೈ ಬಿಡಲಾಯಿತೇ ಮತ್ತು ಸಾದಿಯಾ ಎಂಬ ಡಮ್ಮಿ ಬಾಂಬರ್ ಅನ್ನು ಉದ್ದೇಶಪೂರ್ವಕ ತೇಲಿಸಿಬಿಡಲಾಯಿತೇ? ಇನ್ನಾವುದನ್ನೋ ಮುಚ್ಚಿಡುವ ಕಾರ್ಯತಂತ್ರದ ಭಾಗವೇ ಈ ಆತ್ಮಹತ್ಯಾ ಬಾಂಬರ್?
      ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮುಂತಾದ ಸಂದರ್ಭಗಳಲ್ಲಿ ಈ ದೇಶದಲ್ಲಿ ಕಟ್ಟೆಚ್ಚರವನ್ನು ಘೋಷಿಸುವುದು ಇತ್ತೀಚಿನ ವರ್ಷಗಳಲ್ಲಿ ಮಾಮೂಲಾಗಿದೆ. ಸಂಭಾವ್ಯ ಭಯೋತ್ಪಾದನಾ ದಾಳಿಗಳ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆಗಳಾಗುತ್ತವೆ. ಈ ಹಿಂದೆ 2009 ಜನವರಿ 25ರಂದು ನೊಯಿಡಾದಲ್ಲಿ ಇಬ್ಬರನ್ನು ಎನ್‍ಕೌಂಟರ್ ಮಾಡಿ ಕೊಲ್ಲಲಾಗಿತ್ತು. ಮರುದಿನ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‍ನ ಮೇಲೆ ದಾಳಿ ಎಸಗಲು ಈ ಇಬ್ಬರು ಪಾಕಿಸ್ತಾನಿಗಳು ಸಂಚು ಹೂಡಿದ್ದರು ಎಂದು ಉತ್ತರ ಪ್ರದೇಶದ ಪೊಲೀಸರು ಹೇಳಿಕೊಂಡಿದ್ದರು. ಆದರೆ ಈ ಘಟನೆಯ ಬಳಿಕ ಟೈಮ್ಸ್ ಆಫ್ ಇಂಡಿಯಾ, ದಿ ಟೆಲಿಗ್ರಾಫ್‍ನಂತಹ ಮುಖ್ಯವಾಹಿನಿಯ ಪತ್ರಿಕೆಗಳೇ ಈ ಎನ್‍ಕೌಂಟರ್‍ ನ  ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದುವು. Noida encounter: Many loopholes in Police theory ಎಂಬಂಥ ಶೀರ್ಷಿಕೆಗಳಲ್ಲಿ ಆ ಕುರಿತಂತೆ ವರದಿಗಳನ್ನೂ ಪ್ರಕಟಿಸಿದ್ದುವು. ಇದೀಗ ಸಾದಿಯಾ ಈ ಕುರಿತಾದ ಚರ್ಚೆಯನ್ನು ಮತ್ತೊಮ್ಮೆ ಮುನ್ನೆಲೆಗೆ ತಂದಿದ್ದಾಳೆ. ನಮ್ಮ ವ್ಯವಸ್ಥೆಗೆ ಆತ್ಮಹತ್ಯಾ ಬಾಂಬರ್ ಗಳ, ಭಯೋತ್ಪಾದಕರ ಅಗತ್ಯ ಆಗಾಗ ಬೀಳುತ್ತದೆಯೇ? ಜನರ ಗಮನವನ್ನು ಬೇರೆಡೆ ಸೆಳೆಯುವುದಕ್ಕೆ ಇಂಥ ಭೀತಿಗಳನ್ನು ಹುಟ್ಟು ಹಾಕಿ ಸಂದರ್ಭಕ್ಕೆ ತಕ್ಕಂತೆ ಸಾರ್ವಜನಿಕರಿಗೆ ರಸವತ್ತಾಗಿ ಹಂಚಲಾಗುತ್ತದೆಯೇ? ಅಂದಹಾಗೆ, ಭಯೋತ್ಪಾದಕರನ್ನು ತಯಾರಿಸುವ ಜಾಲವೊಂದು ವ್ಯವಸ್ಥೆಯೊಳಗಡೆಯೇ ಇದೆಯೇ? ಅಗತ್ಯ ಕಂಡಾಗಲೆಲ್ಲ ಈ ಜಾಲವನ್ನು ಸಕ್ರಿಯಗೊಳಿಸಿ ಬ್ರೇಕಿಂಗ್ ನ್ಯೂಸ್‍ಗಳನ್ನು ತಯಾರಿಸಲಾಗುತ್ತದೆಯೇ?
ಸಾದಿಯಾ ಸದ್ಯ ಮನೆಗೆ ಹಿಂತಿರುಗಿದ್ದಾಳೆ. ಆಕೆಯನ್ನು ಬಂಧಿಸಿದ್ದೇವೆಂದು ಹೇಳಿಕೊಂಡವರೇ ಕೈಯಾರೆ ಆಕೆಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಆತ್ಮಹತ್ಯಾ ಬಾಂಬರ್ ಆಗುವ ಯಾವ ಯೋಗ್ಯತೆಯೂ ಆಕೆಗಿಲ್ಲ ಅನ್ನುವುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಎರಡು ಮುಖ್ಯ ಪ್ರಶ್ನೆಗಳಿಗೆ ಉತ್ತರವನ್ನು ಬಯಸುತ್ತದೆ. 1. ಹಾಗಿದ್ದರೆ ಆಕೆಯ ಸುತ್ತ ಹುಟ್ಟಿಕೊಂಡ ವದಂತಿಗಳ ಹಿಂದೆ ಯಾರಿದ್ದಾರೆ? ಅವರೇಕೆ ಅಂಥದ್ದೊಂದು ಅಪಾಯಕಾರಿ ವದಂತಿಯನ್ನು ಹುಟ್ಟು ಹಾಕಿದ್ದಾರೆ? ಆತ್ಮಹತ್ಯಾ ಬಾಂಬರ್ ಎಂಬ ಗಂಭೀರ ವದಂತಿ ಹುಟ್ಟು ಹಾಕಲು ಅವರನ್ನು ಪ್ರಚೋದಿಸಿದ್ದು ಯಾರು ಮತ್ತು ಯಾವುದು? 2. ನಿಜಕ್ಕೂ ಆಕೆ ಸ್ವಯಂ ಪ್ರೇರಿತವಾಗಿ ಕಾಶ್ಮೀರಕ್ಕೆ ಬಂದಿದ್ದಳೋ ಅಥವಾ ಆಕೆಯನ್ನು ಅಲ್ಲಿಗೆ ಕರೆ ತರಲಾಗಿತ್ತೋ? ಆತ್ಮಹತ್ಯಾ ಬಾಂಬರ್ ಎಂಬುದು ಸುಳ್ಳಾದಂತೆ ಆಕೆ ಯುವಕರನ್ನು ಭೇಟಿಯಾಗಲು ಕಾಶ್ಮೀರಕ್ಕೆ ಬಂದಿದ್ದಳು ಎಂಬುದೂ ಸುಳ್ಳೇ? ಇದರ ಹಿಂದೆಯೂ ಒಂದು ರೋಚಕ ಕತೆಯಿರಬಹುದೇ?    
        ಈ ದೇಶವು ಹಲವಾರು ಭಯೋತ್ಪಾದನಾ ಕೃತ್ಯಗಳಿಗೆ ಸಾಕ್ಷಿಯಾಗಿದೆ. ಅಸಂಖ್ಯ ಮಂದಿ ತಮ್ಮ ಬದುಕನ್ನು ಕಳಕೊಂಡಿದ್ದಾರೆ. ಬಸ್ಸು, ರೈಲು, ವಿಮಾನ, ಮಾರುಕಟ್ಟೆ ಎಲ್ಲಕ್ಕೂ ಭಯದಿಂದ ಪ್ರವೇಶಿಸುವ ಸಂದರ್ಭ ಅನೇಕ ಬಾರಿ ಎದುರಾಗಿದೆ. ಅಲ್ಲದೇ ಇದೇ ಹೆಸರಲ್ಲಿ ಅನೇಕರನ್ನು ಬಂಧಿಸಲಾಗಿದೆ. ಶಿಕ್ಷಿಸಲಾಗಿದೆ. ಬಿಡುಗಡೆಯನ್ನೂ ಮಾಡಲಾಗಿದೆ. ಸತ್ತವರಿಗಂತೂ ತಾವು ಯಾವ ಕಾರಣಕ್ಕಾಗಿ ಹತ್ಯೆಗೊಳಗಾದೆವು ಎಂಬುದು ಗೊತ್ತಿರುವುದಿಲ್ಲ. ಜೀವಂತ ಇರುವವರು ವ್ಯವಸ್ಥೆ ತೋರಿಸಿಕೊಟ್ಟವರನ್ನು ಶಪಿಸುತ್ತಾ ದಿನ ದೂಡುತ್ತಿದ್ದಾರೆ. ಆದರೆ ಇದರಾಚೆಗೆ ಏನೋ ಇದೆ ಅನ್ನುವುದನ್ನು ಸಾದಿಯಾ ಪ್ರಕರಣ ಎತ್ತಿ ತೋರಿಸುತ್ತಿದೆ. ಈ ಬಗೆಗಿನ ಗೊಂದಲ ಮುಂದುವರಿದಷ್ಟೂ ವ್ಯವಸ್ಥೆ ತನ್ನ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಾ ಹೋಗಬಹುದು.



Monday 5 February 2018

ಝೈಬುನ್ನಿಸಾ: ಯಾರು ಬರೆದ ಚಿತ್ರಕತೆ?

 
      ಝೈಬುನ್ನಿಸಾ ಎಂಬ ಪುಟ್ಟ ಬಾಲಕಿ ಈ ಸಮಾಜದ ಮುಂದೆ ಕೆಲವು ಪ್ರಶ್ನೆಗಳನ್ನೆಸೆದು ಹೊರಟು ಹೋಗಿದ್ದಾಳೆ. ಇದರ ಬೆನ್ನಿಗೇ ರಚನಾ ಎಂಬ ಯುವತಿಯೂ ಹೊರಟು ಹೋಗಿದ್ದಾಳೆ. ಎರಡು ದಿನಗಳ ನಡುವೆ ನಡೆದ ಇಬ್ಬರ ಹಠಾತ್ ನಿರ್ಗಮನಕ್ಕೆ `ಆತ್ಮಹತ್ಯೆ’ ಎಂಬ ಬಹೂಪಯೋಗಿ ಆರೋಪವನ್ನು ಹೊರಿಸಿ ಈ ಸಮಾಜ ಕೈ ತೊಳೆದುಕೊಳ್ಳುವ ಸ್ಥಿತಿಯಲ್ಲಿದೆ. ರಚನಾ- ಮೂಡಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕಾಲೇಜು ವಿದ್ಯಾರ್ಥಿನಿ. ಝೈಬುನ್ನಿಸಾ- ಮಂಡ್ಯದ ಕೆ.ಆರ್. ಪೇಟೆಯಲ್ಲಿರುವ ಅಲ್ಪಸಂಖ್ಯಾತ ವಸತಿ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ. ಈ ಇಬ್ಬರಲ್ಲಿ ಝೈಬುನ್ನಿಸಾ ನಮ್ಮನ್ನು ಮತ್ತೆ ಮತ್ತೆ ಕಾಡುತ್ತಾಳೆ. ಅದಕ್ಕಿರುವ ಕಾರಣ- ಒಂದು ಆಡಿಯೋ. ಸಾವಿಗಿಂತ ಕೆಲವು ಗಂಟೆಗಳ ಮೊದಲು ಈ ಮಗು ತನ್ನ ತಾಯಿಯೊಂದಿಗೆ ದೂರವಾಣಿಯಲ್ಲಿ ಮಾತಾಡಿದೆ. ಆ ಮಾತುಕತೆಯನ್ನು ಆ ತಾಯಿ ರೆಕಾರ್ಡ್ ಮಾಡಿಕೊಂಡಿದ್ದಾರೆ. ಎಳೆಯ ಪ್ರಾಯದ ಈ ಮಗು ತನ್ನ ಶಾಲೆಯ ಬಗ್ಗೆ ಮತ್ತು ರವಿ ಎಂಬ ಶಿಕ್ಷಕನ ಬಗ್ಗೆ ಅತ್ಯಂತ ಆತಂಕದಿಂದ ಮಾತಾಡಿದೆ. ತನ್ನ ಮೇಲಾಗುತ್ತಿರುವ ದೌರ್ಜನ್ಯವನ್ನು ಹೇಳಿಕೊಂಡಿದೆ. ಯಾರ ಹೃದಯವನ್ನೂ ಅಲುಗಾಡಿಸುವಷ್ಟು ನೋವು ಆ ಮಗುವಿನ ಧ್ವನಿಯಲ್ಲಿದೆ. ವಿಶೇಷ ಏನೆಂದರೆ, ಈ ಮಗುವಿನ ಓರ್ವ ತಂಗಿ ಮತ್ತು ತಮ್ಮ ಇದೇ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಒಂದು ರೀತಿಯಲ್ಲಿ, ಮೂವರ ಪುಟ್ಟ ತಂಡವೇ ಆ ವಸತಿ ಶಾಲೆಯಲ್ಲಿತ್ತು. ಮನೆಯಿಂದ ದೂರ ಇದ್ದು ಕಲಿಯುವ ಮಕ್ಕಳ ಪಾಲಿಗೆ ಇಂಥ ಸಂದರ್ಭಗಳು ಸೃಷ್ಟಿಯಾಗುವುದು ತೀರಾ ತೀರಾ ಕಡಿಮೆ. ಹೀಗೆ ಮಾನಸಿಕವಾಗಿ ಧೈರ್ಯವನ್ನು ತುಂಬಬಲ್ಲ ವಾತಾವರಣ ಇದ್ದಾಗ್ಯೂ ಝೈಬುನ್ನಿಸಾ ಆತ್ಮಹತ್ಯೆ ಮಾಡಿಕೊಂಡಳೇ ಅಥವಾ ಇನ್ನೇನಾದರೂ ನಡೆದಿದೆಯೇ? ನಾಲ್ವರು ಶಿಕ್ಷಕಿಯರು ಮತ್ತು ಓರ್ವ ಶಿಕ್ಷಕನಿರುವ ಈ ವಸತಿ ಶಾಲೆಯಿಂದ ತಿಂಗಳ ಹಿಂದೆ ಪ್ರವಾಸ ಕೈಗೊಳ್ಳಲಾಗಿತ್ತು. ಝೈಬುನ್ನಿಸಾ ಆ ಪ್ರವಾಸದಲ್ಲಿ ಭಾಗಿಯಾಗಿದ್ದಳು. ಮಾತ್ರವಲ್ಲ, ಪ್ರವಾಸದಿಂದ ಹಿಂತಿರುಗಿ ಬಂದ ಬಳಿಕ ಮಂಕಾಗಿದ್ದಳು ಎಂಬ ನೋವು ಹೆತ್ತವರದ್ದು. ಈ ಮಂಕುತನಕ್ಕೆ ಕಾರಣವೇನು? ಆಕೆಯೊಳಗೆ ರಹಸ್ಯವೇನಾದರೂ ಇತ್ತೇ? ಆ ರಹಸ್ಯ ಬಹಿರಂಗವಾಗುವ ಬಗ್ಗೆ ಯಾರಿಗಾದರೂ ಭಯವಿತ್ತೇ? ಆ ಭಯವೇ ಆಕೆಯನ್ನು ಹತ್ಯೆ ಮಾಡಿತೆ?
       ಕೆಲವು ತಿಂಗಳುಗಳ ಹಿಂದೆ ಕಾವ್ಯ ಎಂಬ ಬಾಲಕಿ ಸಾವಿಗೀಡಾಗಿದ್ದಳು. ಅದಕ್ಕೂ ಆತ್ಮಹತ್ಯೆ ಎಂಬ ನಾಲ್ಕಕ್ಪರವನ್ನೇ ಆರೋಪಿ ಸ್ಥಾನದಲ್ಲಿ ಕೂರಿಸಲಾಗಿತ್ತು. ರಚನಾ ಓದಿದ ಅದೇ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿಯಾಗಿದ್ದ ಕಾವ್ಯ ಸಾವಿಗಿಂತ ಮೊದಲು ತನ್ನ ತಾಯಿಯೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಳು. ಆ ತಾಯಿಯೂ ಆ ಸಂಭಾಷಣೆಯನ್ನು ದಾಖಲಿಸಿಕೊಂಡಿದ್ದರು. ಆ ಸಂಭಾಷಣೆಯನ್ನು ಆಲಿಸುವ ಯಾರೂ ಈ ಮಗು ಆತ್ಮಹತ್ಯೆ ಮಾಡಿಕೊಳ್ಳುತ್ತದೆ ಎಂಬುದನ್ನು ಒಪ್ಪಲಾರರು. ಅಷ್ಟು ಲವಲವಿಕೆಯಿಂದ ಆ ಮಗು ತನ್ನ ತಾಯಿಯೊಂದಿಗೆ ಮಾತಾಡಿತ್ತು. ಆದರೆ ಮರುದಿನ ಆ ಮಗು ನಿರ್ಜೀವವಾಗಿ ಮಲಗಿಕೊಂಡಿತ್ತು. ನಿಜಕ್ಕೂ ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೇ? ಅಷ್ಟೊಂದು ಒತ್ತಡ ಅವರ ಮೇಲಿರುತ್ತದೆಯೇ? ಹೌದು ಎಂದಾದರೆ, ಆ ಒತ್ತಡವನ್ನು ಯಾರು ಹೇರುತ್ತಿದ್ದಾರೆ? ಆ ಒತ್ತಡದ ಹುಟ್ಟು ಎಲ್ಲಿ? ಯಾವ ಕಾರಣಕ್ಕಾಗಿ ಒತ್ತಡವಿದೆ? ಈ ಒತ್ತಡದಲ್ಲಿ ಮನೆಯವರ ಪಾಲು ಎಷ್ಟು, ಶಿP್ಷÀಕರ ಪಾಲು ಎಷ್ಟು, ಕಲಿಕೆಯ ಪಾಲು ಎಷ್ಟು ಅಥವಾ ಬಾಹ್ಯ ಜಗತ್ತಿನ ಪಾಲು ಎಷ್ಟು? ಯಾವುದೇ ಪಠ್ಯಪುಸ್ತಕವು ಆತ್ಮಹತ್ಯೆಗೆ ಪ್ರಚೋದಿಸುವಷ್ಟು ಅಪಾಯಕಾರಿಯಾಗಿಲ್ಲ. ಅಲ್ಲದೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ಎಲ್ಲ ಮಕ್ಕಳೂ ರಾಂಕ್  ಪಡೆಯಬಲ್ಲಷ್ಟು ಪ್ರತಿಭಾವಂತರೂ ಆಗಿರುವುದಿಲ್ಲ. ಪ್ರಕೃತಿ ಸಹಜವಾದ ಈ ಸತ್ಯವನ್ನು ಶಿಕ್ಷಕರಂತೂ ಖಂಡಿತ ಅರಿತಿರುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳ ಸಾವಿಗೆ ‘ಕಲಿಕಾ ಒತ್ತಡ’ ಎಂಬ ಕಾರಣವನ್ನು ಒಪ್ಪಲು ಸಾಧ್ಯವೇ ಇಲ್ಲ. ಕಲಿಕಾ ಒತ್ತಡ ಎಂಬುದೇ ಕೃತಕ ಸೃಷ್ಟಿ. ಕಲಿಕೆ ಸಹಜವಾಗಿ ದಕ್ಕಬೇಕಾದುದು. ಕೆಲವರಿಗೆ ಬೇಗ ಮತ್ತು ಹೆಚ್ಚು ದಕ್ಕುತ್ತದೆ ಮತ್ತು ಇನ್ನೂ ಕೆಲವರಿಗೆ ಕಡಿಮೆ ದಕ್ಕುತ್ತದೆ ಎಂಬುದನ್ನು ಬಿಟ್ಟರೆ ಉಳಿದಂತೆ ಸಾವಿಗೂ ಶಿಕ್ಷಣಕ್ಕೂ ಸಂಬಂಧ ಕಲ್ಪಿಸಬೇಕಿಲ್ಲ. ನಿಜವಾಗಿ, ಒತ್ತಡ ರಹಿತವಾದ ಶಿಕ್ಷಣವನ್ನು ಒತ್ತಡಭರಿತವನ್ನಾಗಿ ಮಾಡುವುದೇ ಶಿಕ್ಷಣ ಸಂಸ್ಥೆಗಳು ಮತ್ತು ಶಿಕ್ಷಕರು. ಶಿಕ್ಷಣ ಸಂಸ್ಥೆಗಳ ಪ್ರತಿಷ್ಠೆಗಾಗಿ ವಿದ್ಯಾರ್ಥಿಗಳ ಮೇಲೆ ತಾಳಲಾಗದ ಒತ್ತಡವನ್ನು ಹೇರಲಾಗುತ್ತದೆ. ರಾಂಕು, ಡಿಸ್ಟಿಂಕ್ಷನ್‍ಗಾಗಿ ವಿದ್ಯಾರ್ಥಿಗಳನ್ನು ಖೈದಿಗಳಂತೆ ನಡೆಸಿಕೊಳ್ಳಲಾಗುತ್ತದೆ. ಒಂದು ವೇಳೆ ಈ ಒತ್ತಡವನ್ನು ತಾಳಲಾರದೇ ಮಗುವೊಂದು ಮೃತಪಟ್ಟರೆ ತಕ್ಷಣ ಅದಕ್ಕೆ ಆತ್ಮಹತ್ಯೆ ಎಂಬ ಲೇಬಲ್ಲನ್ನು ಹಚ್ಚಿಬಿಟ್ಟು ಎಲ್ಲರೂ ಹೊಣೆಗಾರಿಕೆಯಿಂದ ಮುಕ್ತರಾಗುತ್ತಾರೆ. ಆದ್ದರಿಂದ ಮಕ್ಕಳ ಸಾವನ್ನು ‘ಆತ್ಮಹತ್ಯೆ’ ಎಂಬ ಭರಣಿಯಲ್ಲಿಟ್ಟು ಮುಚ್ಚಿಡುವುದನ್ನು ಈ ಸಮಾಜ ಮೊಟ್ಟಮೊದಲು ಪ್ರಶ್ನಿಸಬೇಕು. ಆತ್ಮಹತ್ಯೆ ಎಂಬುದು ಮಕ್ಕಳನ್ನು ಸಾಯಿಸುವುದಕ್ಕೆ ದೊಡ್ಡವರು ಕಂಡುಕೊಂಡ ಸುಲಭ ಪರಿಹಾರವಾಗಿರಬಹುದೇ ಎಂಬ ಅನುಮಾನವೊಂದನ್ನು ಸದಾ ತಮ್ಮ ಬಳಿ ಸಮಾಜ ಇಟ್ಟುಕೊಳ್ಳಬೇಕು. ಕಾವ್ಯ, ರಚನಾ ಮತ್ತು ಝೈಬುನ್ನಿಸಾ ನಮಗೆ ಮುಖ್ಯವಾಗಬೇಕಾದುದು ಈ ಕಾರಣಕ್ಕಾಗಿಯೇ. ಈ ಮೂವರಲ್ಲಿ ಕಾವ್ಯ ಮತ್ತು ಝೈಬುನ್ನಿಸಾ ತಮ್ಮ ಸಾವಿಗಿಂತ ಕೆಲವು ಗಂಟೆಗಳ ಮೊದಲು ಹೆತ್ತವರೊಂದಿಗೆ ದೂರವಾಣಿಯಲ್ಲಿ ಮಾತಾಡಿz್ದÁರೆ. ಕಾವ್ಯ ಅತ್ಯಂತ ಲವಲವಿಕೆಯಿಂದ ಮಾತಾಡಿದರೆ, ಝೈಬು ಅತ್ಯಂತ ಆತಂಕದಿಂದ ಮಾತಾಡಿz್ದÁಳೆ. ನಿಜವಾಗಿ, ಲವಲವಿಕೆ ಮತ್ತು ಆತಂಕ ಎರಡೂ ವಿರುದ್ಧಾರ್ಥ ಪದಗಳು. ಆದರೆ ಈ ಎರಡರ ಅಂತ್ಯವೂ ಒಂದೇ ರೀತಿಯಲ್ಲಿ ಆಗಿದೆ. ಬಹುಶಃ, ಕಲಿಕೆಗಿಂತ ಹೊರತಾದ ಇನ್ನಾವುದೋ ಒತ್ತಡವೊಂದು ಈ ಮಕ್ಕಳ ಮೇಲಾಗಿದೆ ಅಥವಾ ಅವರು ಸಾಯಲೇಬೇಕಾದ ಅಗತ್ಯವೊಂದು ಇನ್ನಾರಿಗೋ ಉಂಟಾಗಿದೆ. ಅವರೇ ಆತ್ಮಹತ್ಯೆ ಎಂಬ ಕತೆ, ಚಿತ್ರಕತೆಯನ್ನು ರಚಿಸಿ ಸಮಾಜಕ್ಕೆ ಅರ್ಪಿಸಿದ್ದಾರೆ.
     ಝೈಬುನ್ನಿಸಾ ತನ್ನ ಶಿಕ್ಷಕನ ಮೇಲೆ ಕೆಲವು ಗಂಭೀರ ಆರೋಪಗಳನ್ನು ಹೊರಿಸಿದ್ದಾಳೆ. ಬಹುಶಃ, ಇದು ಆಕೆಯೊಬ್ಬಳ ಆರೋಪವಾಗಿರುವ ಸಾಧ್ಯತೆ ಇಲ್ಲ. ಆ ವಸತಿ ಶಾಲೆಯಲ್ಲಿ ಇನ್ನೆಷ್ಟು ಝೈಬುಗಳಿದ್ದಾರೆ ಮತ್ತು ಅವರೊಳಗಿರುವ ಆತಂಕಗಳು ಏನೇನು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನಗಳಾಗಬೇಕು. ಹೆತ್ತವರೊಂದಿಗೆ ಹಂಚಿಕೊಳ್ಳಲಾಗದ ಮತ್ತು ದೂರವಾಣಿಯಲ್ಲಿ ಹೇಳಿಕೊಳ್ಳಲಾಗದ ದೂರುಗಳು ಆಕೆಯೊಳಗಿದ್ದುವೇ, ಗೆಳತಿಯರೊಂದಿಗೆ ಆಕೆ ಅದನ್ನು ಹಂಚಿಕೊಂಡಿದ್ದಳೇ, ಸಂಭಾವ್ಯ ಅಪಾಯವನ್ನು ಆಕೆ ಗ್ರಹಿಸಿದ್ದಳೇ.. ಇತ್ಯಾದಿಗಳು ತನಿಖೆಗೆ ಒಳಪಡಬೇಕು. ಅಲ್ಪಸಂಖ್ಯಾತ ವಸತಿ ಶಾಲೆ, ಮೊರಾರ್ಜಿ ದೇಸಾಯಿ ವಸತಿ ಶಾಲೆ.. ಮುಂತಾದ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವುದು ಬಡವರ ಮಕ್ಕಳು. ತಮ್ಮ ಮಕ್ಕಳನ್ನು ಇಂಥ ಶಾಲೆಯಲ್ಲಿ ಬಿಟ್ಟು ಬರುವ ಹೆತ್ತವರಲ್ಲಿ ನೋವು ಮತ್ತು ಖುಷಿ ಎರಡೂ ಇರುತ್ತದೆ. ಕರುಳಕುಡಿಯನ್ನು ಅಗಲುವ ನೋವು ಒಂದು ಕಡೆಯಾದರೆ, ಮಗುವಿಗೆ ಶಿಕ್ಷಣ ಸಿಗುತ್ತದೆ ಅನ್ನುವ ಖುಷಿ ಇನ್ನೊಂದೆಡೆ. ಈ ಹಿನ್ನೆಲೆಯಲ್ಲಿ, ಸರಕಾರವು ಝೈಬುನ್ನಿಸಾ ಸಾವನ್ನು ಗಂಭೀರವಾಗಿ ಪರಿಗಣಿಸಬೇಕು. ಬಡವರ ಪಾಲಿನ ಖುಷಿಯನ್ನು ಕಸಿದು ಬಿಡುವ ಇಂಥ ಘಟನೆಗಳು ಇನ್ನೆಂದೂ ನಡೆಯಬಾರದು. ಮಕ್ಕಳು ಈ ಭೂಮಿಯ ನಕ್ಷತ್ರಗಳು. ಅವಕ್ಕೆ ಈ ಜಗತ್ತಿನ ರಾಗ-ದ್ವೇಷಗಳು ಗೊತ್ತಿರುವುದಿಲ್ಲ. ದೊಡ್ಡವರ ಸಂಚುಗಳನ್ನು ಅರ್ಥ ಮಾಡಿಕೊಳ್ಳುವಷ್ಟು ಅವು ಪ್ರಬುದ್ಧವೂ ಆಗಿರುವುದಿಲ್ಲ. ಝೈಬು ಅಂಥದ್ದೇ ಒಂದು ನಕ್ಷತ್ರ. ಇಂಥ ನಕ್ಷತ್ರಗಳು ಈ ದೇಶದಲ್ಲಿ ಕೋಟ್ಯಂತರ ಇವೆ. ಅವೆಲ್ಲವೂ ಮಿಂಚಬೇಕು. ದೊಡ್ಡವರು ಈ ನಕ್ಷತ್ರಗಳಿಗೆ ಕಾವಲು ನಿಲ್ಲಬೇಕು. ಯಾರು ಈ ನಕ್ಷತ್ರಗಳನ್ನು ಚಿವುಟಿ ಹಾಕಬಯಸುತ್ತಾರೋ ಅವರ ಹೆಸರು, ಧರ್ಮ, ಪ್ರಭಾವವನ್ನು ಪರಿಗಣಿಸದೆಯೇ ತೀವ್ರವಾಗಿ ದಂಡಿಸಬೇಕು. ಅಂದಹಾಗೆ, ಝೈಬುನ್ನಿಸಾಳನ್ನು ಮರಳಿ ಬದುಕಿಸಿಕೊಳ್ಳುವುದಕ್ಕೆ ಈ ಸಮಾಜದಿಂದ ಸಾಧ್ಯವಿಲ್ಲ. ಆದರೆ ಆಕೆ ಬಿಟ್ಟು ಹೋದ ಪ್ರಶ್ನೆಗಳನ್ನು ಗಂಭೀರವಾಗಿ ಪರಿಗಣಿಸಿದರೆ ಇನ್ನಷ್ಟು ಮಕ್ಕಳು ಝೈಬುಗಳಾಗುವುದನ್ನು ತಡೆಯಬಹುದು.