Tuesday 20 February 2018

ಹೆಣ್ಣು: ಗೌರವ-ಅಗೌರವಗಳ ನಡುವೆ

     ನಿಜಕ್ಕೂ ಮಹಿಳೆಯನ್ನು ಗೌರವಿಸುವುದು ಅಂದರೆ ಹೇಗೆ? ಅದರ ವಿಧಾನ ಏನು? ಇತಿಹಾಸದ ಕಲ್ಪಿತ ಮಹಿಳಾ ಕಥಾ ಪಾತ್ರಗಳ ಕೆಲವು ಆಯ್ದ ಭಾಗಗಳನ್ನು ಎತ್ತಿಕೊಂಡು ಭಾವಪೂರ್ಣವಾಗಿ ಮಂಡಿಸುವುದು ಮತ್ತು ಆ ಪಾತ್ರಗಳನ್ನು ಸಮರ್ಥಿಸುವುದಕ್ಕಾಗಿ ಬೇರೊಂದು ಹೆಣ್ಣನ್ನು ಅತ್ಯಂತ ಕೀಳಾಗಿ ಪ್ರಸ್ತುತಪಡಿಸುವುದರ ವಿಧಿ ಏನು? ಪದ್ಮಾವತ್‍ನ ಪದ್ಮಿನಿ ಮತ್ತು ಅದನ್ನು ಅಭಿನಯಿಸಿದ ದೀಪಿಕಾ ಪಡುಕೋಣೆಯಿಂದ ಹಿಡಿದು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿಯವರೆಗೆ ಈ ಬಗೆಯ ಪ್ರಶ್ನೆಗಳು ಆಗಾಗ ನಮ್ಮನ್ನು ಎದುರುಗೊಳ್ಳುತ್ತಲೇ ಇರುತ್ತವೆ.  ರೇಣುಕಾ ಚೌಧರಿಯವರ ನಗುವನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಸತ್‍ನಲ್ಲಿ ವ್ಯಂಗ್ಯಕ್ಕೆ ಒಳಪಡಿಸಿದರು. ‘ರಾಮಾಯಣ’ ಟಿವಿ ಧಾರಾವಾಹಿಯಲ್ಲಿ ಶೂರ್ಪನಖಿಯ ನಗುವಿಗೆ ರೇಣುಕಾರ ನಗುವನ್ನು ಪರೋಕ್ಷವಾಗಿ ಹೋಲಿಸಿದರು. ರಾಮಾಯಣದಲ್ಲಿ ಶೂರ್ಪನಖಿಯದು ಅತ್ಯಂತ ನಕಾರಾತ್ಮಕ ಪಾತ್ರ. ಅಂದಹಾಗೆ, ಓರ್ವ ಸಂಸದೆಯ ನಗುವನ್ನು ಪುರಾಣ ಕಾಲದ ನಕಾರಾತ್ಮಕ ಪಾತ್ರಕ್ಕೆ ಜೋಡಿಸಿ ನೋಡುವುದು ಏನನ್ನು ಸೂಚಿಸುತ್ತದೆ? ಇದು ಸಹಜವೇ, ಅಸಹಜವೇ, ತಕ್ಷಣದ ಆವೇಶವೇ? ಇದೇ ಪ್ರಶ್ನೆಯನ್ನು ಪದ್ಮಾವತ್‍ನ ಪದ್ಮಿನಿಯ ಕುರಿತಾದ ವಿವಾದಗಳವರೆಗೂ ಬೆಳೆಸಬಹುದು. ಅಲ್ಲೂ ಪದ್ಮಿನಿಯ ಪಾತ್ರಧಾರಿ ದೀಪಿಕಾ, ಕರ್ಣಿಸೇನಾದಿಂದ ಹೀನಾಯ ನಿಂದನೆಗೆ ಒಳಗಾದರು. ಆ ಸಮಯದಲ್ಲೂ ಪ್ರಧಾನಿ ನರೇಂದ್ರ ಮೋದಿಯವರ ಪಕ್ಷ ಅದನ್ನು ಆನಂದಿಸಿತೇ ಹೊರತು ವಿರೋಧಿಸಲಿಲ್ಲ. ವಿವಿಧ ರಾಜ್ಯಗಳಲ್ಲಿರುವ ಬಿಜೆಪಿಯ ಮುಖ್ಯಮಂತ್ರಿಗಳು ಕರ್ಣಿ ಸೇನಾದ ಕಾವಲುಗಾರರಂತೆ ವರ್ತಿಸಿದರು. ಅಲ್ಲದೇ, ಆ ಪಕ್ಷದ ಕೆಲವು ನಾಯಕರಂತೂ ಕರ್ಣಿಸೇನಾದ ಪ್ರತಿನಿಧಿಗಳಂತೆ ಮಾತಾಡಿದರು. ರೇಣುಕಾ ಚೌಧರಿಯವರ ನಗುವನ್ನು ಪ್ರಧಾನಿ ನರೇಂದ್ರ ಮೋದಿಯವರು ಯಾವ ಭಾವದಲ್ಲಿ ನೋಡಿದರೋ ಅದೇ ಭಾವದಲ್ಲಿ ಪದ್ಮಿನಿ ಪಾತ್ರಧಾರಿ ದೀಪಿಕಾರನ್ನು ಆ ಪಕ್ಪ ನೋಡಿದೆ ಅನ್ನುವುದಕ್ಕೆ ಆ ಪಕ್ಷ ವಿವಿಧ ಸಂದರ್ಭಗಳಲ್ಲಿ ನೀಡಿದ ಪ್ರತಿಕ್ರಿಯೆಗಳೇ ಸಾಕ್ಷಿ. ಆದ್ದರಿಂದಲೇ, ರೇಣುಕಾ ಚೌಧರಿಯವರು ಪ್ರಧಾನಿಯವರ ದೃಷ್ಟಿಯಲ್ಲಿ ಶೂರ್ಪನಖಿ ಆದುದು ಮುಖ್ಯವಾಗಬೇಕಾಗುತ್ತದೆ. ತ್ರಿವಳಿ ತಲಾಕನ್ನು ಎತ್ತಿಕೊಂಡು ಮುಸ್ಲಿಮ್ ಮಹಿಳಾ ವಿಮೋಚಕನಂತೆ ಬಿಂಬಿಸಿಕೊಂಡ ಅದೇ ವ್ಯಕ್ತಿ ಇನ್ನೊಂದು ಕಡೆ ಮಹಿಳೆಯ ನಗುವನ್ನು ಸಹಿಸಿಕೊಳ್ಳುವಷ್ಟೂ ಪ್ರಬುದ್ಧತೆ ತೋರುವುದಿಲ್ಲ. ಅಂದಹಾಗೆ, ಅವರ ಭಾಷಣದ ವೇಳೆ ಮಹಿಳೆ ನಗುವುದೆಂದರೆ ಅದು ಪುರುಷರು ನಕ್ಕಂತೆ ಅಲ್ಲ. ಪುರುಷರ ನಗುವನ್ನು ಸಹಿಸಿಕೊಳ್ಳುವ ಅವರು ಮಹಿಳೆಯ ನಗುವನ್ನು ಹಾಗೆಯೇ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಕ್ಷಣಕ್ಕೆ ಅವರ ಪುರುಷ ಮೇಲ್ಮೈ ಅಡ್ಡ ಬರುತ್ತದೆ. ಹೆಣ್ಣೊಬ್ಬಳು ತನ್ನ ಭಾಷಣಕ್ಕೆ ನಗುವುದು ಅವಮಾನವಾಗಿ ಬಿಡುತ್ತದೆ.
     ಹೆಣ್ಣನ್ನು ಗೌರವಿಸುವುದು ಮತ್ತು ಆಕೆಯ ಐಡೆಂಟಿಟಿಯನ್ನು ಮಾನ್ಯ ಮಾಡುವುದೆಂದರೆ, ‘ತನಗೆ ಶರಣಾಗಿ ಆಕೆ ನಡೆಯುವವರೆಗೆ’ ಎಂಬ ಶರತ್ತನ್ನು ಹೇರಿಕೊಂಡು ಅಲ್ಲ. ಹೆಣ್ಣು ಪುರುಷ ವಿಚಾರಧಾರೆಯ ಹೊರಗಿದ್ದಾಗಲೂ ಆಕೆ ಗೌರವಾರ್ಹ. ಪುರುಷ ವಿಚಾರಧಾರೆಯನ್ನು ಅಮಾನ್ಯ ಮಾಡಿದಾಗಲೂ ಆಕೆ ಗೌರವಾರ್ಹ. ತನ್ನ ವಿಚಾರಧಾರೆಯನ್ನು ಒಪ್ಪಿರುವವರೆಗೆ ಆಕೆ ಗೌರವಾರ್ಹಳೂ ಅದಕ್ಕೆ ವಿರುದ್ಧವಾದಾಗ ಅಗೌರವಾರ್ಹಗಳೂ ಆಗುವುದು ಮಹಿಳಾ ವಿರೋಧಿ ಮನಸ್ಥಿತಿಯ ಲಕ್ಷಣ. ತ್ರಿವಳಿ ತಲಾಕ್‍ನ ಮೇಲೆ ಪ್ರಧಾನಿಯವರು ಹಲವು ಬಾರಿ ಮಾತಾಡಿದ್ದಾರೆ. ಮುಸ್ಲಿಮ್ ಮಹಿಳೆಯರ ಬಗ್ಗೆ ಅತೀವ ಕಾಳಜಿ ಮತ್ತು ಗೌರವವನ್ನು ಈ ಎಲ್ಲ ಸಂದರ್ಭಗಳಲ್ಲಿ ಅವರು ವ್ಯಕ್ತಪಡಿಸಿದ್ದಾರೆ. ಇದೇ ವ್ಯಕ್ತಿ ದಶಕದ ಹಿಂದೆ ಮುಸ್ಲಿಮ್ ಮಹಿಳೆಯರನ್ನು ಯಾವ ಪರಿ ಅಣಕಿಸಿದ್ದರು ಎಂಬುದೂ ಈ ದೇಶಕ್ಕೆ ಗೊತ್ತು. ಗುಜರಾತ್ ಹತ್ಯಾಕಾಂಡದಲ್ಲಿ ಅತೀವ ದೌರ್ಜನ್ಯಗಳನ್ನು ಎದುರಿಸಿದವರು ಮಹಿಳೆಯರೇ. ಆದರೆ ಅವರು ಎಲ್ಲೂ ಆ ಮಹಿಳೆಯರಿಗೆ ಸಾಂತ್ವನವನ್ನು ವ್ಯಕ್ತಪಡಿಸಲಿಲ್ಲ. ಅವರ ಮಾತುಗಳಿಗೆ ಕಿವಿಯಾಗಲಿಲ್ಲ. ತಮ್ಮ ಮೇಲಿನ ದೌರ್ಜನ್ಯಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತೆ ಸಂತ್ರಸ್ಥರಿಗೆ ಅವರು ಧೈರ್ಯ ನೀಡಲಿಲ್ಲ. ಪ್ರಶ್ನಿಸಿದವರಿಗೆ ಜೀವಭದ್ರತೆಯನ್ನೂ ಒದಗಿಸಲಿಲ್ಲ. ತ್ರಿವಳಿ ತಲಾಕ್‍ನಿಂದ ಸಂತ್ರಸ್ತರಾದ ಮಹಿಳೆಯರಿಗೆ ಹೋಲಿಸಿದರೆ ಗುಜರಾತ್ ಹತ್ಯಾಕಾಂಡದಿಂದ ಸಂತ್ರಸ್ತರಾದವರ ಸ್ಥಿತಿ ಅತ್ಯಂತ ಗಂಭೀರ. ಆದರೆ ಆ ಬಗ್ಗೆ ಯಾವ ಕಾಳಜಿಯನ್ನೂ ತೋರದ ಮೋದಿಯವರು ತ್ರಿವಳಿ ತಲಾಕ್‍ಗೊಳಗಾದ ಮಹಿಳೆಯರ ಬಗ್ಗೆ ಅತೀವ ಕಾಳಜಿಯನ್ನು ತೋರಿದರು. ನಿಜವಾಗಿ, ಪ್ರಧಾನಿಯವರನ್ನು ಇನ್ನಷ್ಟು ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕೆಂದರೆ ಅವರ ಬೆಂಬಲಿಗ ವರ್ಗವು ಹೆಣ್ಣು ಮಕ್ಕಳನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನೂ ಎತ್ತಿಕೊಳ್ಳಬಹುದು. ಹೆಣ್ಣು ಮಕ್ಕಳು ಯಾರೊಂದಿಗೆ ಮಾತಾಡಬೇಕು, ಯಾವುದು ಶಿಸ್ತು, ಯಾವು ಅಶಿಸ್ತು, ಏನನ್ನು ಕುಡಿಯಬೇಕು.. ಇತ್ಯಾದಿಗಳನ್ನು ಈ ವರ್ಗ ಇವತ್ತು ಬೀದಿಯಲ್ಲಿ ನಿಂತು ನಿರ್ಧರಿಸುತ್ತದೆ. ಬಲವಂತದಿಂದ ತಮ್ಮ ನಿಲುವುಗಳನ್ನು ಹೆಣ್ಣು ಮಕ್ಕಳ ಮೇಲೆ ಹೇರುತ್ತಿದೆ. ಒಂದು ರೀತಿಯಲ್ಲಿ, ಹೆಣ್ಣನ್ನು ಆ ಪಕ್ಪ  ಎರಡು ರೀತಿಯಾಗಿ ವಿಭಜಿಸಿದೆ. ಒಂದು- ಶೂರ್ಪನಖಿಯಾದರೆ, ಇನ್ನೊಂದು- ಪದ್ಮಿನಿ. ಸಂದರ್ಭಕ್ಕೆ ತಕ್ಕಂತೆ ಈ ಪಾತ್ರಗಳ ಜೊತೆಯಿಟ್ಟು ಅದು ಆಗಾಗ ಹೆಣ್ಣಿಗೆ ವ್ಯಾಖ್ಯಾನಗಳನ್ನು ನೀಡುತ್ತಿದೆ. ತನ್ನ ನಿಯಮಕ್ಕೆ ಯಾರು ಅಧೀನವಾಗಿ ಬದುಕುತ್ತಾರೋ ಅವರು ಪದ್ಮಿನಿಯಾಗುತ್ತಾರೆ. ಅವರು ಅತ್ಯಂತ ಗೌರವಾರ್ಹರು. ಯಾರು ಈ ನಿಯಮವನ್ನು ಉಲ್ಲಂಘಿಸುತ್ತಾರೋ ಅವರು ಶೂರ್ಪನಖಿಯಾಗುತ್ತಾರೆ. ಅವರನ್ನು ಯಾವ ವೇದಿಕೆಯಲ್ಲೂ ಯಾವ ಕ್ಪಣದಲ್ಲೂ ಅಗೌರವಿಸಬಹುದು.      ರೇಣುಕಾ ಚೌಧರಿ ಮತ್ತು ದೀಪಿಕಾ ಪಡುಕೋಣೆ- ಈ ದೇಶದ ಮುಂದೆ ಕೆಲವು ಪ್ರಶ್ನೆಗಳನ್ನಿಟ್ಟಿದ್ದಾರೆ. ಹಾಗಂತ ಆ ಪ್ರಶ್ನೆಗಳಿಗೆ ಸ್ವತಃ ಅವರು ಕಾರಣರಲ್ಲ. ಅವರನ್ನು ಅದಕ್ಕೆ ಬಲವಂತಪಡಿಸಲಾಗಿದೆ. ಇತಿಹಾಸದ ಕಲ್ಪಿತ ಪಾತ್ರವೊಂದಕ್ಕೆ ಜೀವ ತುಂಬಿದ್ದನ್ನು ಬಿಟ್ಟರೆ ಉಳಿದಂತೆ ಪದ್ಮಾವತ್‍ನಲ್ಲಿ ದೀಪಿಕಾರ ಒಳಗೊಳ್ಳುವಿಕೆ ಶೂನ್ಯ. ಆದರೆ ಆ ಚಿತ್ರದ ನಿರ್ದೇಶನದಿಂದ ಹಿಡಿದು ಉಳಿದೆಲ್ಲ ವಿಷಯಗಳಲ್ಲಿ ಪುರುಷರ ದೊಡ್ಡ ಗುಂಪೇ ಭಾಗಿಯಾಗಿದೆ. ಸಂಸತ್‍ನಲ್ಲಿ ಪ್ರಧಾನಿಯವರ ಮಾತಿಗೆ ರೇಣುಕಾ ಒಬ್ಬರೇ ನಕ್ಕಿದ್ದಲ್ಲ. ಆಧಾರ್ ವಿಷಯದಲ್ಲಿ ಅವರು ಹೇಳಿದ ಸುಳ್ಳಿಗೆ ಸಂಸತ್‍ನಲ್ಲಿ ನಗದವರೇ ಕಡಿಮೆ. ಆದರೆ ಈ ಎರಡೂ ಸಂದರ್ಭಗಳಲ್ಲಿ ಅಗೌರವಕ್ಕೆ ಒಳಗಾದುದು ಇಬ್ಬರು ಮಹಿಳೆಯರು ಮಾತ್ರ. ಈ ಬಗೆಯ ಸನ್ನಿವೇಶಕ್ಕೆ ಕಾರಣವೇನು? ‘ಹೆಣ್ಣು ದ್ವಿತೀಯೆ’ ಎಂಬ ಮನಸ್ಥಿತಿಯ ಹೊರತು ಇನ್ನಾವುದನ್ನು ಇದಕ್ಕೆ ಕಾರಣವಾಗಿ ಕೊಡಬಹುದು? ರೇಣುಕಾ ಶೂರ್ಪನಖಿಯಾಗುವಾಗ ಇನ್ನೋರ್ವರ ತಲೆ, ಮೂಗು, ಕೈ-ಕಾಲುಗಳಿಗೆ ಬೆಲೆ ಕಟ್ಟಲಾಗುತ್ತದೆ. ಮಾತ್ರವಲ್ಲ, ಈ ಎರಡೂ ಪ್ರಕರಣಗಳಲ್ಲೂ ಪ್ರಧಾನಿಯವರ ಪಕ್ಪದ ದೇಹಭಾಷೆ ಇವನ್ನು ಸಮರ್ಥಿಸುವಂತೆಯೇ ಇರುತ್ತದೆ.
      ನಿಜವಾಗಿ, ಮಹಿಳೆಯರಿಗೆ ಸಂಬಂಧಿಸಿ ಬಿಜೆಪಿಯ ಪುರಾತನ ಮನಸ್ಥಿತಿಯನ್ನು ದೀಪಿಕಾ ಮತ್ತು ರೇಣುಕಾ ತೆರೆದಿಟ್ಟಿದ್ದಾರೆ. ಅವರಿಗೆ ಅಭಿನಂದನೆಗಳು. 



No comments:

Post a Comment