Saturday 18 December 2021

ಎಪಿಸಿಆರ್ ವರದಿ ಮತ್ತು ಕಟಕಟೆಯಲ್ಲಿರುವ ಕ್ರೈಸ್ತ, ಮುಸ್ಲಿಮರು




ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಅಥವಾ ಎಪಿಸಿಆರ್ ನೇತೃತ್ವದ ಸರಕಾರೇತರ ಸಂಸ್ಥೆಯು ಇನ್ನೆರಡು  ಸಂಸ್ಥೆಗಳ ಸಹಕಾರದೊಂದಿಗೆ ಸತ್ಯಶೋಧನಾ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ‘ಭಾರತದಲ್ಲಿ ದಾಳಿಗೊಳಗಾದ ಕ್ರೈಸ್ತರು ’  ಎಂಬುದು ವರದಿಯ ಶೀರ್ಷಿಕೆ. ಇದರಲ್ಲಿ ರಾಜ್ಯಕ್ಕೆ ಸಂಬಂಧಿಸಿ ಆರು ಚರ್ಚ್ ಗಳ  ಉಲ್ಲೇಖ ಇದೆ. ಕಳೆದ ಎರಡು ತಿಂಗಳಲ್ಲಿ 5  ಚರ್ಚ್ ಗಳ  ಮೇಲೆ ದಾಳಿ ನಡೆದಿರುವುದನ್ನು ಈ ವರದಿಯಲ್ಲಿ ಎತ್ತಿ ಹೇಳಲಾಗಿದೆ. ಜನವರಿ 3ರಂದು ಕೊಪ್ಪಳದಲ್ಲಿ, ಅಕ್ಟೋಬರ್  10ರಂದು ಉಡುಪಿ ಮತ್ತು ಉತ್ತರ ಕರ್ನಾಟಕದ ಹಳಿಯಾಳದಲ್ಲಿ, ನವೆಂಬರ್ 10ರಂದು ಬೆಳಗಾವಿಯಲ್ಲಿ, ನವೆಂಬರ್ 14ರಂದು  ಬೆಂಗಳೂರಿನ ರಾಜನಕುಂಟೆಯಲ್ಲಿ ಮತ್ತು ಇದೇ ದಿನ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಹಾಗೂ ನವೆಂಬರ್ 29ರಂದು ಹಾಸ ನದ ಬೇಲೂರಿನಲ್ಲಿ ಕ್ರೈಸ್ತ ವಿರೋಧಿ ಘಟನೆಗಳು ನಡೆದಿವೆ. ಕ್ರೈಸ್ತರ ಪ್ರಾರ್ಥನಾ ಚಟುವಟಿಕೆಗಳಿಗೆ ಅಡ್ಡಿಪಡಿಸುವ, ಪಾದ್ರಿಗಳ ಮೇಲೆ ಹಲ್ಲೆ  ನಡೆಸುವ ಹಾಗೂ ಚರ್ಚ್ ಗಳಿಗೆ  ಹಾನಿಯೆಸಗುವ ಪ್ರಕರಣಗಳು ನಡೆದಿರುವುದನ್ನು ವರದಿಯಲ್ಲಿ ಆಧಾರ ಸಮೇತ ಉಲ್ಲೇಖಿಸಲಾಗಿದೆ.  ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮತ್ತು 
ಯುನೈಟೆಡ್ ಅಗೈನ್ಸ್ಟ್ ಹೇಟ್ ಎಂಬೆರಡು ಸಂಸ್ಥೆಗಳೂ ಈ ವರದಿಯನ್ನು ತಯಾರಿಸುವಲ್ಲಿ  ನೆರವಾಗಿವೆ. ಹಾಗಂತ,

ಎಪಿಸಿಆರ್ ನೇತೃತ್ವದಲ್ಲಿ ತಯಾರಿಸಲಾದ ಈ ವರದಿಯನ್ನು ಓದಿ ರಾಜ್ಯ ಸರಕಾರ ಇಲ್ಲವೇ ರಾಜ್ಯದ ನಾಗರಿಕರು ಬೆಚ್ಚಿ ಬೀಳುತ್ತಾರೆ  ಎಂದು ನಿರೀಕ್ಷಿಸುವ ಸನ್ನಿವೇಶವೇನೂ ಈಗಿಲ್ಲ. ಈಗಾಗಲೇ ಈ ದೇಶದ ಮುಸ್ಲಿಮರು ಇದಕ್ಕಿಂತಲೂ ಕ್ರೂರವಾದ ದೌರ್ಜನ್ಯ ಮತ್ತು  ಹಿಂಸೆಗಳಿಗೆ ನಿತ್ಯ ತುತ್ತಾಗುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡುತ್ತಲೇ ಇವೆ. ಪ್ರತಿ ಶುಕ್ರವಾರ ಮುಸ್ಲಿಮರ ಜುಮಾ ನಮಾಜ್ ಗೆ  ಅಡ್ಡಿಪಡಿಸುವ ವರದಿ ಹರ್ಯಾಣದಿಂದ ವರದಿಯಾಗುತ್ತಿದೆ. ತೆರೆದ ಬಯಲಲ್ಲಿ ನಮಾಜ್  ಮಾಡುವುದಕ್ಕೆ ಸರಕಾರ ಅನುಮತಿಸಿರುವ  ಹೊರತಾಗಿಯೂ ಸಂಘಪರಿವಾರ ಅಡ್ಡಿಪಡಿಸುತ್ತಿದೆ. ಮುಸ್ಲಿಮರನ್ನು ಥಳಿಸುವ, ಅವರ ಗಡ್ಡ ಬೋಳಿಸುವ ಮತ್ತು ವಿವಿಧ ದೌರ್ಜನ್ಯ,  ಅವಮಾನಗಳಿಗೆ ತುತ್ತಾಗಿಸುವ ಕೃತ್ಯಗಳು ಅಲ್ಲಲ್ಲಿ ಪ್ರತಿನಿತ್ಯವೆಂಬಂತೆ  ನಡೆಯುತ್ತಿವೆ. ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷಭಾಷಣ  ಮಾಡಲಾಗುತ್ತಿದೆ. ಮುಸ್ಲಿಮರ ವಿರುದ್ಧ ಹಿಂಸೆಗೆ ಅಕಾರಣವಾಗಿ ಪ್ರಚೋದಿಸಲಾಗುತ್ತಿದೆ. ಅಂದಹಾಗೆ,

ಮುಸ್ಲಿಮರ ಮೇಲೆ ನಡೆದಿರುವ ದೌರ್ಜನ್ಯಗಳ ಮೊತ್ತಕ್ಕೆ ಹೋಲಿಸಿದರೆ ಕ್ರೈಸ್ತರ ಮೇಲೆ ನಡೆದಿರುವ ದೌರ್ಜನ್ಯಗಳು ಕಡಿಮೆ. ಹಾಗಂತ,  ಇದಕ್ಕೆ ಕ್ರೈಸ್ತರ ಮೇಲೆ ಈ ದುಷ್ಕರ್ಮಿಗಳಿಗಿರುವ ಪ್ರೇಮಭಾವ ಕಾರಣ ಅಲ್ಲ. ಕ್ರೈಸ್ತರು ಮತ್ತು ಮುಸ್ಲಿಮರು ಈ ದುಷ್ಕರ್ಮಿಗಳ ಪಾಲಿಗೆ  ಸಮಾನ ಗುರಿ. ಈ ದುಷ್ಕರ್ಮಿಗಳು ಬೆಂಬಲಿಸುವ ಅಥವಾ ಈ ದುಷ್ಕರ್ಮಿಗಳನ್ನು ಸಾಕುವ ರಾಜಕೀಯ ಪಕ್ಷದ ಪಾಲಿಗೆ ಇವರೇ  ಆಮ್ಲಜನಕ. ಯಾವಾಗ ಈ ದುಷ್ಕರ್ಮಿಗಳೆಂಬ ಆಮ್ಲಜನಕದ ನಳಿಗೆಯ ಸಂಪರ್ಕವನ್ನು ಆ ರಾಜಕೀಯ ಪಕ್ಷದಿಂದ  ತಪ್ಪಿಸಿಬಿಡಲಾಗುತ್ತೋ ಆಗಲೇ ಆ ಪಕ್ಷದ ಆಯುಷ್ಯ ಕೊನೆಗೊಳ್ಳುತ್ತದೆ. ಇದು ಈ ದುಷ್ಕರ್ಮಿಗಳಿಗೂ ಗೊತ್ತು. ಆ ರಾಜಕೀಯ ಪಕ್ಷಕ್ಕೂ  ಗೊತ್ತು. ಆದ್ದರಿಂದ,

ಈ ದೌರ್ಜನ್ಯಕೋರರನ್ನು ಸದಾ ಬ್ಯುಝಿಯಾಗಿಡಬೇಕಾದ ಒತ್ತಡವೊಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೇಲಿದೆ. ಪ್ರತಿದಿನ ಏ ನಾದರೊಂದು ಗುರಿಯನ್ನು ಈ ದೌರ್ಜನ್ಯಕೋರರಿಗೆ ನೀಡದಿದ್ದರೆ ತಮ್ಮ ಅಸ್ತಿತ್ವ ಕಷ್ಟಸಾಧ್ಯ ಎಂಬ ಅರಿವೂ ಅದಕ್ಕಿದೆ. ಆದ್ದರಿಂದಲೇ,  ಮುಸ್ಲಿಮ್ ದ್ವೇಷದ ಕಟ್ಟುಕತೆಗಳನ್ನು ತಯಾರಿಸಿ ಈ ಗುಂಪಿಗೆ ಹಂಚುತ್ತಾರೆ. ಎಂದೋ ಕಳೆದು ಹೋದ ರಾಜರ ಹೆಸರಿನಿಂದ ತೊಡಗಿ  ಈಗಿನ ಮುಸ್ಲಿಮರ ವರೆಗೆ ಸುಳ್ಳುಗಳನ್ನು ಪೋಣಿಸಿ ಸಮಾಜಕ್ಕೆ ಹಂಚುತ್ತಿರುತ್ತಾರೆ. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು  ಇಂಥ ಅಸಂಖ್ಯ ಸುಳ್ಳುಗಳಲ್ಲಿ ಒಂದಾದರೆ ಇನ್ನೊಂದು, ಕ್ರೈಸ್ತರು ಮತಾಂತರ ಮಾಡುತ್ತಾರೆ ಎನ್ನುವುದು. ಮುಸ್ಲಿಮರನ್ನು ಗುರಿಯಾಗಿಸಿ  ಆಗಾಗ ಸಮಾನ ನಾಗರಿಕ ಸಂಹಿತೆಯ ಜಪ ಮಾಡುವ ಈ ರಾಜಕೀಯ ಪಕ್ಷವು ಕ್ರೈಸ್ತರನ್ನು ನೋಡಿಕೊಂಡು ‘ಮತಾಂತರ ನಿಷೇಧ  ಕಾಯ್ದೆ’ಯ ಬಗ್ಗೆ ಮಾತಾಡುತ್ತಿರುತ್ತದೆ. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಬಿಜೆಪಿ ಸಂಸದರೊಬ್ಬರು ಸಮಾನ ನಾಗರಿಕ ಸಂಹಿತೆ  ಮಸೂದೆಯನ್ನು ಖಾಸಗಿಯಾಗಿ ಮಂಡಿಸಿದ್ದಾರೆ. ತನ್ನ ಬೆಂಬಲಿಗ ಪರಿವಾರವನ್ನು ಸಂತಸಪಡಿಸುವುದು ಮತ್ತು ಸಾರ್ವಜನಿಕವಾಗಿ ಹಿಂದೂ-ಮುಸ್ಲಿಮ್ ಚರ್ಚೆಯೊಂದಿಗೆ ಧಾರ್ಮಿಕ ವಿಭಜನೆಯನ್ನು ಊರ್ಜಿತದಲ್ಲಿಡುವುದೇ ಇದರ ಉದ್ದೇಶ. ಇದು ಸರಕಾರ  ಮಂಡಿಸಿದ ಮಸೂದೆ ಅಲ್ಲ ಮತ್ತು ಇಂಥ ಮಸೂದೆಯನ್ನು ಯಾರಿಗೆ ಬೇಕಾದರೂ ಮಂಡಿಸಬಹುದು ಎಂಬುದು ಮಂಡಿಸಿದವರಿಗೂ  ಗೊತ್ತು. ಸರ್ಕಾರಕ್ಕೂ ಗೊತ್ತು. ಆದರೆ, ಸರಕಾರ ಶೀಘ್ರವೇ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಿದೆ ಎಂದು  ತನ್ನ ಬೆಂಬಲಿಗ ಪರಿವಾರದ ಮೂಲಕ ಸಾರ್ವಜನಿಕವಾಗಿ ಆಡಿಕೊಳ್ಳುವುದಕ್ಕೆ ಆಧಾರವನ್ನು ಕೊಡುವುದು ಇದರ ಉದ್ದೇಶ.

ಸಿಎಎ ಕಾಯ್ದೆಯ ವ್ಯಾಪ್ತಿಯಿಂದ ಮುಸ್ಲಿಮರನ್ನು ಹೊರಗಿರಿಸಿ ಕ್ರೈಸ್ತರನ್ನು ಸೇರಿಸಿಕೊಳ್ಳಲಾಯಿತು. ಡಿಸೆಂಬರ್ 31, 2014ಕ್ಕಿಂತ  ಮೊದಲು ಪಾಕ್, ಬಾಂಗ್ಲಾ ಮತ್ತು ಅಫಘಾನ್‌ನಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲದ ಉಳಿದೆಲ್ಲ ಧರ್ಮೀಯರಿಗೂ ಪೌರತ್ವ ಕೊಡುವ  ಈ ಕಾಯ್ದೆಯನ್ನು ಸಂವಿಧಾನ ಪ್ರೇಮಿಗಳು ವಿರೋಧಿಸಬಹುದು ಎಂಬುದು ಆಡಳಿತಗಾರರಿಗೆ ತಿಳಿದಿಲ್ಲ ಎಂದು ಹೇಳುವ ಹಾಗಿಲ್ಲ. ಈ  ಕಾನೂನಿನ ವಿರುದ್ಧ ದೇಶದಲ್ಲಿ ಪ್ರತಿಭಟನೆ ಏಳಬೇಕು ಮತ್ತು ಆ ಇಡೀ ಪ್ರತಿಭಟನೆಯನ್ನು ಮುಸ್ಲಿಮ್ ಓಲೈಕೆಯಾಗಿ ಪ್ರತಿಬಿಂಬಿಸಬೇಕು  ಎಂಬುದು ಆಡಳಿತಗಾರರ ಹುನ್ನಾರವಾಗಿರಬಹುದು. ಇದೀಗ ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ  ಕಾಯ್ದೆಯೂ ಇಂಥದ್ದೇ  ಒಂದು ಹುನ್ನಾರ. ಈ ಕಾಯ್ದೆಯನ್ನು ತರುತ್ತೇವೆ ಎಂದು ಹೇಳುವ ಮೊದಲು ರಾಜ್ಯದ ಹಲವು ಕಡೆ ಕ್ರೈಸ್ತ  ಪ್ರಾರ್ಥನಾ ಮಂದಿರಗಳ ಮೇಲೆ ಮತ್ತು ಪಾದ್ರಿಗಳ ಮೇಲೆ ದಾಳಿ ನಡೆಸಲಾಯಿತು. ಶಾಸಕ ಗೂಳಿಹಟ್ಟಿ ಶೇಖರ್ ಅವರು ವಿಧಾ ನಸಭೆಯಲ್ಲಿ ತನ್ನ ತಾಯಿಯ ಮತಾಂತರವನ್ನು ಹೇಳಿಕೊಂಡರು. ಅದರ ಬೆನ್ನಿಗೇ ಕ್ರೈಸ್ತರು ಮತಾಂತರ ಮಾಡುತ್ತಿದ್ದಾರೆ ಎಂಬ  ಹೇಳಿಕೆಗಳನ್ನು ಹಲವು ನಾಯಕರು ಬೆನ್ನುಬೆನ್ನಿಗೇ ನೀಡತೊಡಗಿದರು. ಆ ಮೂಲಕ ರಾಜ್ಯದ ಗಮನವನ್ನು ಮುಸ್ಲಿಮರಿಂದ ಕ್ರೈಸ್ತರ  ಕಡೆಗೆ ತಿರುಗಿಸುವ ಪ್ರಯತ್ನ ನಡೆಸಲಾಯಿತು. ಹಾಗಂತ,

ಇದು ಮೊದಲ ಘಟನೆ ಅಲ್ಲ. ಒಂದೋ ಮುಸ್ಲಿಮರು ಅಥವಾ ಕ್ರೈಸ್ತರು ರಾಜ್ಯದಲ್ಲಿ ಸದಾ ದೂಷಣೆಗೆ ಒಳಗಾಗುತ್ತಿರಬೇಕು ಮತ್ತು  ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ದಂಡಿಸುತ್ತಿರಬೇಕು ಎಂದು ಆಡಳಿತದಲ್ಲಿರುವವರು ತೀರ್ಮಾನಿಸಿದ್ದಾರೆ. ಹಾಗೆ ಮಾಡದಿದ್ದರೆ ತಮ್ಮ  ಬೆಂಬಲಿಗ ಪರಿವಾರದಲ್ಲಿ ಉತ್ಸಾಹ ಕುಗ್ಗುತ್ತದೆ. ಹಾಗೇನಾದರೂ ಆದರೆ ಸರ್ಕಾರದ ಆಡಳಿತ ವೈಫಲ್ಯವನ್ನು ಜನರು ಚರ್ಚಿಸುವುದಕ್ಕೆ  ಪ್ರಾರಂಭಿಸುತ್ತಾರೆ. ಅಂಥ ಬೆಳವಣಿಗೆಯೇನಾದರೂ ಯಶಸ್ವಿಯಾಗಿಬಿಟ್ಟರೆ ಹಿಂದೂ-ಮುಸ್ಲಿಮ್-ಕ್ರೈಸ್ತರೆಲ್ಲ ಒಟ್ಟಾಗುವ ಸನ್ನಿವೇಶ  ನಿರ್ಮಾಣವಾಗಬಹುದು ಮತ್ತು ಅದು ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂಬ ಭೀತಿ ಸರ್ಕಾರಕ್ಕಿದೆ. ನಿಜವಾಗಿ,

ಎಪಿಸಿಆರ್ ಬಿಡುಗಡೆಗೊಳಿಸಿರುವ ವರದಿಯು ಈ ದೇಶದ ನಾಗರಿಕ ಸಮೂಹವೊಂದಕ್ಕೆ ಸಂಬಂಧಿಸಿದ್ದು. ಆದ್ದರಿಂದ ಅದನ್ನು ಕ್ರೆÊಸ್ತ  ಸಮುದಾಯಕ್ಕೆ ಸಂಬಂಧಿಸಿದ ವರದಿ ಎಂದು ಪ್ರತ್ಯೇಕಿಸುವುದು ಮತ್ತು ಅದನ್ನು ಕ್ರೈಸ್ತರು ನೋಡಿಕೊಳ್ಳಲಿ ಎಂದು ಉಳಿದವರು ಸುಮ್ಮ ನಿದ್ದು ಬಿಡುವುದು ಅತ್ಯಂತ ಅಪಾಯಕಾರಿ. ಈ ದೇಶದ ನಾಗರಿಕರ ಸಮಸ್ಯೆಗಳು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಹಣೆಪಟ್ಟಿಯನ್ನು  ಅಂಟಿಸಿಕೊಂಡು ಗುರುತಿಗೀಡಾಗಬೇಕು ಎಂಬುದು ಈ ಸಮಸ್ಯೆಗೆ ಕಾರಣರಾದವರ ಬಯಕೆ. ಅವರ ಯಶಸ್ಸು ಇರುವುದೇ ಇದರಲ್ಲಿ.  ಯಾವಾಗ ಕ್ರೈಸ್ತರ ಮೇಲಿನ ದಾಳಿಗಳನ್ನು ಕ್ರೈಸ್ತರಿಗೆ ಮತ್ತು ಮುಸ್ಲಿಮರ ಮೇಲಿನ ದಾಳಿಗಳನ್ನು ಮುಸ್ಲಿಮರಿಗೆ ನಾವು  ಸೀಮಿತಗೊಳಿಸಿಬಿಡುತ್ತೇವೋ ಅಲ್ಲಿವರೆಗೆ ಆ ದೌರ್ಜನ್ಯಕೋರರು ಯಶಸ್ವಿಯಾಗುತ್ತಲೇ ಹೋಗುತ್ತಾರೆ. ಆದ್ದರಿಂದ ಎಪಿಸಿಆರ್‌ನ ವರ ದಿಯು 6 ಕೋಟಿ ಕನ್ನಡಿಗರ ಧ್ವನಿಯಾಗಬೇಕು. ತಮ್ಮ ಮೇಲೆ ನಡೆದ ದೌರ್ಜನ್ಯ ಎಂಬಂತೆ  ಅವರೆಲ್ಲ ಅಂದುಕೊಳ್ಳಬೇಕು ಮತ್ತು  ಸರ್ಕಾರದ ವಿಭಜಿಸಿ ಆಳುವ ತಂತ್ರವನ್ನು ಸೋಲಿಸಬೇಕು.

ನಾಗಬನ: ದುರ್ಜನರಲ್ಲಿರುವ ಸೌಹಾರ್ದ ಸಜ್ಜನರಲ್ಲೇಕಿಲ್ಲ?




ಅಕ್ಷರ ಸಂತ ಹಾಜಬ್ಬ ಮಂಗಳೂರಿನಿಂದ  ದೆಹಲಿಗೆ ತೆರಳಿ ಪದ್ಮಶ್ರೀ ಪ್ರಶಸ್ತಿಯನ್ನು ಪಡಕೊಂಡುದುದಕ್ಕೆ ರೋಮಾಂಚನಗೊಂಡು   ಸಂಭ್ರಮಿಸಿದ ದಕ್ಷಿಣ ಕನ್ನಡಕ್ಕೆ, ಈ ಖುಷಿಯ ಬಳಿಕದ ದಿನಗಳೇನೂ ನೆಮ್ಮದಿದಾಯಕವಾಗಿರಲಿಲ್ಲ. ಹಾಗಂತ,

ಹಾಜಬ್ಬ ದೆಹಲಿಗೆ ಹೋಗುವುದಕ್ಕಿಂತ ಮೊದಲೂ ಈ ಜಿಲ್ಲೆಯ ಸ್ಥಿತಿಯೇನೂ ಉತ್ತಮವಾಗಿರಲಿಲ್ಲ. ಒಂದು ತಿಂಗಳ ಒಳಗೆ ಒಂದು  ಡಝನ್‌ನಷ್ಟು ಅನೈತಿಕ ಪೊಲೀಸ್‌ಗಿರಿಗೆ ಸಾಕ್ಷ್ಯ  ವಹಿಸಿದ ಈ ಜಿಲ್ಲೆ, ಹಾಜಬ್ಬ ಪದ್ಮಶ್ರೀ ಪಡೆದ ಬಳಿಕ ನಡೆದ ನಾಗಬನ ಧ್ವಂಸ ಘಟನೆಯು ಹಾಜಬ್ಬರನ್ನು ಮರೆತು ಈ ಜಿಲ್ಲೆ ಆತಂಕವನ್ನು ಹೊದ್ದುಕೊಳ್ಳುವಂತೆ ಮಾಡಿತು. ಜಿಲ್ಲೆಯ ಕೂಳೂರಿನಲ್ಲಿ ನಾಗಬನ  ಧ್ವಂಸಗೊಳಿಸಲಾದರೆ, ಕೋಡಿಕಲ್ ಎಂಬಲ್ಲಿ ನಾಗಬನದ ಕಲ್ಲು ಕಿತ್ತೆಸೆದ ಪ್ರಕರಣ ನಡೆಯಿತು. ಈ ಎರಡೂ ಘಟನೆಗಳು ಹಿಂದೂ  ಸಮುದಾಯಕ್ಕೆ ಸಂಬಂಧಿಸಿದವುಗಳಾಗಿರುವುದರಿಂದ  ಮುಸ್ಲಿಮ್ ಸಮುದಾಯವನ್ನು ಸಂದೇಹಿಸುವ ಮತ್ತು ಪರೋಕ್ಷ  ವಾಗ್ದಾಳಿಗಳನ್ನು  ನಡೆಸುವ ರೂಪದಲ್ಲೇ  ಹೇಳಿಕೆಗಳು ಬರತೊಡಗಿದುವು. ಘಟನೆಯನ್ನು ಖಂಡಿಸಿ ಸ್ಥಳೀಯವಾಗಿ ಬಂದ್ ಕೂಡಾ ನಡೆಯಿತು. ಪ್ರತಿಭಟನೆಗಳೂ ನಡೆದುವು. ಇದೀಗ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ವಿಶೇಷ ಏನೆಂದರೆ,

ಬಂಧಿತರಲ್ಲಿ ನಾಲ್ಕು ಮಂದಿ ಹಿಂದೂಗಳಾದರೆ ಮೂವರು ಮುಸ್ಲಿಮರು ಮತ್ತು ಓರ್ವ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸಿದ್ದಾನೆ.  ಅಂದಹಾಗೆ, ಅಪರಾಧ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರ ಈ ಧಾರ್ಮಿಕ ಸೌಹಾರ್ದವನ್ನು ಅನೇಕರು ವ್ಯಂಗ್ಯದಿಂದ ಇರಿದರು. ಇದಾಗಿ  ಮರ‍್ನಾಲ್ಕು ದಿನಗಳ ಬಳಿಕ 9 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದರು. ಇವರೆಲ್ಲರ ಮೇಲೆ ರ‍್ಯಾಗಿಂಗ್ ಆರೋಪವಿತ್ತು.  ಇಬ್ಬರು ಕಿರಿಯ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಲವಂತವಾಗಿ ತಮ್ಮ ಕೊಠಡಿಗೆ ಕರೆದೊಯ್ದು ಅವರಲ್ಲಿ ಹಾಡು ಹಾಡಿಸಿ, ಗಡ್ಡ  ಬೋಳಿಸಿ, ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿದ ಆರೋಪ ಇವರ ಮೇಲಿದೆ. ಇಲ್ಲೂ ನಾಗಬನ ಧ್ವಂಸ ಘಟನೆಯಲ್ಲಿ ಮೆರೆದ  ಅದೇ ಸೌಹಾರ್ದವಿದೆ. ಬಂಧಿತರಲ್ಲಿ ಮುಸ್ಲಿಮರೂ ಇದ್ದಾರೆ, ಕ್ರೈಸ್ತ ಮತ್ತು ಹಿಂದೂಗಳೂ ಇದ್ದಾರೆ. ನಿಜವಾಗಿ,

ಕೆಡುಕನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿ, ಆರೋಪ-ಪ್ರತ್ಯಾರೋಪ ಹೊರಿಸುವ ಸರ್ವರೂ ಆತ್ಮಾವಲೋಕನ ನಡೆಸಬೇಕಾದ  ಘಟನೆಗಳಿವು. ನಾಗಬನ ಹಿಂದೂಗಳ ಪಾಲಿಗೆ ಕಾರಣಿಕದ ಸ್ಥಳಗಳು. ಆದರೆ ಇವನ್ನು ಧ್ವಂಸಗೊಳಿಸುವಲ್ಲಿ ಹಿಂದೂ-ಮುಸ್ಲಿಮ್-ಕ್ರೈಸ್ತ  ನಾಮಧೇಯವುಳ್ಳ ಎಲ್ಲರೂ ಸೇರಿದ್ದಾರೆ. ರ‍್ಯಾಗಿಂಗ್‌ಗೆ ಒಳಗಾಗಿರುವುದು ಇಬ್ಬರು ಹಿಂದೂ ವಿದ್ಯಾರ್ಥಿಗಳು. ಆದರೆ ಇವರ ಮೇಲೆ  ರ‍್ಯಾಗಿಂಗ್ ನಡೆಸಿರುವ ಆರೋಪಿಗಳಲ್ಲಿ ಹಿಂದೂ-ಮುಸ್ಲಿಮ್-ಕ್ರೈಸ್ತ ಎಲ್ಲರೂ ಇದ್ದಾರೆ. ಒಂದು ರೀತಿಯಲ್ಲಿ,

ರೊಚ್ಚಿಗೇಳುವ ಸಮಾಜಕ್ಕೆ ಇದೊಂದು ಪಾಠ. ನಾಗಬನ ಧ್ವಂಸಗೊಳಿಸಿದ ಮತ್ತು ರ‍್ಯಾಗಿಂಗ್ ನಡೆಸಿದ ಅಷ್ಟೂ ಆರೋಪಿಗಳಲ್ಲಿ ಒಂದು  ಸಮಾನ ಅಂಶವಿದೆ. ಅದುವೇ ಮಾದಕ ವಸ್ತು ಸೇವನೆ ಮತ್ತು ಮದ್ಯಪಾನ. ಆದರೆ ಮಸೀದಿ ಮೇಲೆ ದಾಳಿಯಾದಾಗ ಹಿಂದೂಗಳ ಬಗ್ಗೆ  ಅನುಮಾನ ಪಡುವ ಮತ್ತು ಮಂದಿರದ ಮೇಲೆ ದಾಳಿಯಾದಾಗ ಮುಸ್ಲಿಮರ ಬಗ್ಗೆ ಸಂದೇಹ ಪಡುವ ಸಮಾಜ, ಇಷ್ಟೇ ತೀವ್ರತೆಯಿಂದ  ಗಾಂಜಾ ಮತ್ತು ಮದ್ಯದ ವಿರುದ್ಧ ಚಳವಳಿ ನಡೆಸುವುದಕ್ಕೆ ಮುಂದಾಗುವುದೇ ಇಲ್ಲ. ಅಂದಹಾಗೆ, ಈ ಎರಡು ಪ್ರಕರಣಗಳಿಗೆ ಸಂಬAಧಿಸಿ  ಮಾತ್ರವೇ ಗಾಂಜಾ ಮತ್ತು ಮದ್ಯವು ಅಪರಾಧಿ ಸ್ಥಾನದಲ್ಲಿ ನಿಂತಿರುವುದಲ್ಲ. ಈ ದೇಶದಲ್ಲಿ ನಡೆಯುವ ಹೆಚ್ಚಿನೆಲ್ಲ ಅತ್ಯಾಚಾರ, ಹತ್ಯೆ,  ಧರ್ಮದ್ವೇಷದ ಕೃತ್ಯಗಳ ಹಿಂದಿನ ಬಲುದೊಡ್ಡ ಚಾಲಕ ಶಕ್ತಿ ಈ ಮದ್ಯ ಮತ್ತು ಮಾದಕ ವಸ್ತುಗಳೇ. ಅತ್ಯಾಚಾರ ಪ್ರಕರಣಗಳಲ್ಲಂತೂ  ಸಾಲು ಸಾಲಾಗಿ ಈ ಸತ್ಯ ಮತ್ತೆ ಮತ್ತೆ ಸಾಬೀತುಗೊಳ್ಳುತ್ತಲೇ ಇದೆ. ದೇಶದಲ್ಲಿ ನಿರ್ಭಯ ಪ್ರಕರಣದಿಂದ ಹಿಡಿದು ಹೈದರಾಬಾದ್‌ನ ದಿಶಾಳ ವರೆಗೆ ಮತ್ತು ಮೈಸೂರಿನ ಚಾಮುಂಡೇಶ್ವರಿ ಅತ್ಯಾಚಾರ ಪ್ರಕರಣದಿಂದ ಹಿಡಿದು ಮಂಗಳೂರಿನ ಉಳಾಯಿಬೆಟ್ಟುವಿನಲ್ಲಿ 8  ವರ್ಷದ ಬಾಲೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವಲ್ಲಿ ವರೆಗೆ ಮದ್ಯವೇ ಪ್ರಧಾನ ಆರೋಪಿ. ಅಷ್ಟಕ್ಕೂ,

ತನಗೆ ಸಂಬಂಧವೇ ಇಲ್ಲದ, ಪರಿಚಿತರೇ ಅಲ್ಲದ ಮತ್ತು ಯಾವ ದ್ವೇಷವನ್ನೂ ಹೊಂದಿಲ್ಲದ ವ್ಯಕ್ತಿಯನ್ನು ಇನ್ನೋರ್ವ ವ್ಯಕ್ತಿ ವಿನಾ  ಕಾರಣ ಹತ್ಯೆ ಮಾಡುವುದಕ್ಕೆ ಏನು ಪ್ರಚೋದನೆ? ಅಂಥದ್ದೊಂದು ಧೈರ್ಯ ಅವರಲ್ಲಿ ಮೂಡುವುದಾದರೂ ಹೇಗೆ? ಎಂಟೋ ಐದೋ  ಮೂರೋ ವರ್ಷದ ಬಾಲೆಯನ್ನು ಅತ್ಯಾಚಾರ ಮಾಡಿ ಕೊಲೆಗೈಯಲು ಸಹಜ ಸ್ಥಿತಿಯಲ್ಲಿರುವ ಓರ್ವ ವ್ಯಕ್ತಿಗೆ ಸಾಧ್ಯವೇ? ದೈಹಿಕ  ಕಾಮನೆ ಅರಳುವುದಕ್ಕೂ ಒಂದು ಕಾರಣ ಇದೆ. ಯಾವ ದೃಷ್ಟಿಕೋನದಿಂದ ವಿಶ್ಲೇಷಿಸಿದರೂ ಮಕ್ಕಳು ಈ ಕಾರಣದ ಚೌಕಟ್ಟಿನೊಳಗೆ  ಬರುವುದಕ್ಕೆ ಸಾಧ್ಯವೇ ಇಲ್ಲ. ಹಾಗಿದ್ದರೂ ಹಸುಳೆಗಳ ಮೇಲೆ ಅತ್ಯಾಚಾರ ಏಕಾಗುತ್ತದೆ? ಎಲ್ಲೋ  ನಡೆದುಕೊಂಡು ಹೋಗುತ್ತಿರುವ  ವ್ಯಕ್ತಿಯನ್ನು ಅವರಿಗೆ ಪರಿಚಯವೇ ಇಲ್ಲದ ವ್ಯಕ್ತಿಗಳೇಕೆ ಥಳಿಸುತ್ತಾರೆ? ಅವರಿಬ್ಬರ ಧರ್ಮ ಬೇರೆ ಬೇರೆಯಾಗಿರುವುದು ಇದಕ್ಕೆ  ಕಾರಣವೇ? ಹಸುಳೆಗಳ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿಯೂ ಇಂಥದ್ದೇ  ಪ್ರಶ್ನೆಗಳಿವೆ. ಲೈಂಗಿಕ ಆಕರ್ಷಣೆಗೆ ಈಡು ಮಾಡುವ  ಯಾವ ದೈಹಿಕ ಬೆಳವಣಿಗೆಗಳು ಮಕ್ಕಳಲ್ಲಿದ್ದುವು? ಆಟವಾಡುವ ಹಸುಳೆಗಳ ಮೇಲಿನ ಅತ್ಯಾಚಾರಕ್ಕೆ ಏನು ಕಾರಣ? ನಿಜವಾಗಿ,

ಅಪರಾಧಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಕ್ಕಿಂತ ಮೊದಲು ನಾವೆಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ  ಸಂಗತಿಗಳಿವು. ನಿಜವಾದ ಧರ್ಮಾನುಯಾಯಿ ಕೆಡುಕಿನಲ್ಲಿ ಭಾಗಿಯಾಗಲಾರ. ನಾಗಬನವಾಗಲಿ, ಮಂದಿರವಾಗಲಿ ಅಥವಾ ಹಿಂದೂ  ಆಚಾರ-ಸಂಪ್ರದಾಯಗಳಾಗಲಿ, ಓರ್ವ ಮುಸ್ಲಿಮನ ಪಾಲಿಗೆ ಗೌರವಾರ್ಹವೇ ಹೊರತು ಇನ್ನಾವುದೂ ಆಗಿರಲು ಸಾಧ್ಯವೇ ಇಲ್ಲ.  ಮಸೀದಿ, ಚರ್ಚ್ಗಳ ಕುರಿತು ಹಿಂದೂಗಳ ನಿಲುವೂ ಇದಕ್ಕಿಂತ ಭಿನ್ನವಲ್ಲ. ಹತ್ಯೆ, ಅತ್ಯಾಚಾರ, ಸುಳ್ಳು ಪ್ರಚಾರ, ದ್ವೇಷದ ಹಂಚುವಿಕೆ

ಇತ್ಯಾದಿಗಳೆಲ್ಲ ಸರ್ವರ ಪಾಲಿಗೂ ಕೆಡುಕುಗಳೇ ಹೊರತು ಒಳಿತುಗಳಲ್ಲ. ಇಷ್ಟಿದ್ದೂ ಮಂದಿರ, ಮಸೀದಿ, ಇಗರ್ಜಿಗಳು ಅಪವಿತ್ರಕ್ಕೋ  ಹಾನಿಗೋ ಒಳಗಾಗುತ್ತಲೇ ಇರುತ್ತದೆ. ಅತ್ಯಾಚಾರಗಳೂ ನಡೆಯುತ್ತಲಿರುತ್ತದೆ. ಧರ್ಮದ ಹೆಸರಿನಲ್ಲಿ ಹಗೆ, ಹಲ್ಲೆ, ಹತ್ಯೆಗಳನ್ನೂ  ನಡೆಸಲಾಗುತ್ತದೆ. ಹೀಗೆ ದುಷ್ಕೃತ್ಯಗಳಲ್ಲಿ ಭಾಗಿಯಾಗುವವರು ಮನುಷ್ಯರೇ ಆಗಿರುವುದರಿಂದ ಮತ್ತು ಅವರಿಗೊಂದು ಹೆಸರಿರುವುದರಿಂದ  ತಕ್ಷಣಕ್ಕೆ ಆ ಹೆಸರು ಯಾವ ಧರ್ಮದ ಜೊತೆ ಗುರುತಿಸಿಕೊಂಡಿರುತ್ತೋ ಆ ಧರ್ಮವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ.  ಅಸಲಿಗೆ ಆ ಧರ್ಮಕ್ಕೂ ಆತನ ಹೆಸರಿಗೂ ಹೆಸರಿನ ಹೊರತಾಗಿ ಯಾವ ಸಂಬಂಧವೂ ಇರುವುದಿಲ್ಲ. ಹೆಚ್ಚಿನ ಬಾರಿ ಮಾದಕ ವಸ್ತು  ಮತ್ತು ಮದ್ಯದ ಜೊತೆಗೆ ಅವರಿಗಿರುವಷ್ಟು ನಂಟು ಅವರು ಗುರುತಿಸಿಕೊಂಡಿರುವ ಧರ್ಮದ ಜೊತೆಗಿರುವುದಿಲ್ಲ. ಒಂದುವೇಳೆ,

ಮದ್ಯವನ್ನು ಅವರಿಗೆ ಅಲಭ್ಯಗೊಳಿಸಿದರೆ, ಅವರು ಅಂಥ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಯೇ ಇಲ್ಲ. ಆದರೆ, ಮಂದಿರ,  ಮಸೀದಿ, ಚರ್ಚ್ಗಳ ಕುರಿತಂತೆ ಅಪಾರ ಕಾಳಜಿ ತೋರುವ ಸಮಾಜವು ಅಪರಾಧ ಕೃತ್ಯಗಳಿಗೆ ಮೂಲ ಪ್ರೇರಣೆಯಾಗಿರುವ ಈ ಮದ್ಯ  ಮತ್ತು ಮಾದಕ ವಸ್ತುಗಳ ಕುರಿತಂತೆ ಆತಂಕ ಪಡುವುದಿಲ್ಲ. ಒಂದುವೇಳೆ ಆರೋಪಿಯ ಹೆಸರನ್ನು ನೋಡಿಕೊಂಡು ಅಪರಾಧಗಳನ್ನು  ಹಿಂದೂ-ಮುಸ್ಲಿಮ್ ಖಾತೆಗೆ ವರ್ಗಾಯಿಸುವುದಕ್ಕಿಂತ ಮದ್ಯ ಮತ್ತು ಮಾದಕ ವಸ್ತು ಎಂಬ ಏಕಖಾತೆಗೆ ವರ್ಗಾಯಿಸತೊಡಗಿದರೆ ಫ ಲಿತಾಂಶ ಇದಕ್ಕಿಂತ ಖಂಡಿತ ಉತ್ತಮವಾಗಬಹುದು. ಎಲ್ಲರೂ ತಮ್ಮ ಪಾಲಿನ ಸಮಾನ ಶತ್ರುವಾಗಿ ಮದ್ಯ ಮತ್ತು ಮಾದಕ ವಸ್ತುಗಳನ್ನು  ಯಾವಾಗ ಪರಿಗಣಿಸುತ್ತಾರೋ ಆಗ ಅಪರಾಧ ಕೃತ್ಯಗಳಲ್ಲಿ ಖಂಡಿತ ಇಳಿಮುಖವಾಗಲು ಪ್ರಾರಂಭವಾಗುತ್ತದೆ. ಅಮಲು ಪದಾರ್ಥಗಳು  ಅಲಭ್ಯವಾಗುವಂತಹ ಗ್ರಾಮ, ಪಟ್ಟಣ, ಜಿಲ್ಲೆಗಳನ್ನು ಕಟ್ಟುವ ಪ್ರಯತ್ನ ಸಾಗಿದರೆ ನಿಧಾನಕ್ಕೆ ಆರೋಗ್ಯಪೂರ್ಣ ಸಮಾಜ ತನ್ನಿಂತಾನೇ  ನಿರ್ಮಾಣವಾಗಬಲ್ಲುದು.
ಈಗ ಅಪರಾಧಿಗಳ ನಡುವೆ ಧಾರ್ಮಿಕ ಸೌಹಾರ್ದವಿದೆ. ಎಲ್ಲಿವರೆಗೆ ಅಮಲು ಪದಾರ್ಥಗಳು ಲಭ್ಯವಿರುತ್ತದೋ ಅಲ್ಲಿವರೆಗೆ ಈ  ಸೌಹಾರ್ದಕ್ಕೆ ಯಾವ ಅಡ್ಡಿಯೂ ಎದುರಾಗಲಾರದು. ಯಾವಾಗ ಇವು ಅಲಭ್ಯಗೊಳ್ಳುತ್ತೋ ಆಗ ಅವರ ನಡುವಿನ ಸೌಹಾರ್ದಕ್ಕೆ ಭಂಗ  ಬರಬಹುದಲ್ಲದೇ, ಸಾಮಾಜಿಕವಾಗಿ ಧಾರ್ಮಿಕ ಸೌಹಾರ್ದ ನೆಲೆಗೊಳ್ಳಬಹುದು.

 ನಾಗಬನ ಮತ್ತು ರ‍್ಯಾಗಿಂಗ್ ಪ್ರಕರಣಗಳು ಸ್ಪಷ್ಟಪಡಿಸುವುದು ಇದನ್ನೇ.