Saturday 18 December 2021

ನಾಗಬನ: ದುರ್ಜನರಲ್ಲಿರುವ ಸೌಹಾರ್ದ ಸಜ್ಜನರಲ್ಲೇಕಿಲ್ಲ?




ಅಕ್ಷರ ಸಂತ ಹಾಜಬ್ಬ ಮಂಗಳೂರಿನಿಂದ  ದೆಹಲಿಗೆ ತೆರಳಿ ಪದ್ಮಶ್ರೀ ಪ್ರಶಸ್ತಿಯನ್ನು ಪಡಕೊಂಡುದುದಕ್ಕೆ ರೋಮಾಂಚನಗೊಂಡು   ಸಂಭ್ರಮಿಸಿದ ದಕ್ಷಿಣ ಕನ್ನಡಕ್ಕೆ, ಈ ಖುಷಿಯ ಬಳಿಕದ ದಿನಗಳೇನೂ ನೆಮ್ಮದಿದಾಯಕವಾಗಿರಲಿಲ್ಲ. ಹಾಗಂತ,

ಹಾಜಬ್ಬ ದೆಹಲಿಗೆ ಹೋಗುವುದಕ್ಕಿಂತ ಮೊದಲೂ ಈ ಜಿಲ್ಲೆಯ ಸ್ಥಿತಿಯೇನೂ ಉತ್ತಮವಾಗಿರಲಿಲ್ಲ. ಒಂದು ತಿಂಗಳ ಒಳಗೆ ಒಂದು  ಡಝನ್‌ನಷ್ಟು ಅನೈತಿಕ ಪೊಲೀಸ್‌ಗಿರಿಗೆ ಸಾಕ್ಷ್ಯ  ವಹಿಸಿದ ಈ ಜಿಲ್ಲೆ, ಹಾಜಬ್ಬ ಪದ್ಮಶ್ರೀ ಪಡೆದ ಬಳಿಕ ನಡೆದ ನಾಗಬನ ಧ್ವಂಸ ಘಟನೆಯು ಹಾಜಬ್ಬರನ್ನು ಮರೆತು ಈ ಜಿಲ್ಲೆ ಆತಂಕವನ್ನು ಹೊದ್ದುಕೊಳ್ಳುವಂತೆ ಮಾಡಿತು. ಜಿಲ್ಲೆಯ ಕೂಳೂರಿನಲ್ಲಿ ನಾಗಬನ  ಧ್ವಂಸಗೊಳಿಸಲಾದರೆ, ಕೋಡಿಕಲ್ ಎಂಬಲ್ಲಿ ನಾಗಬನದ ಕಲ್ಲು ಕಿತ್ತೆಸೆದ ಪ್ರಕರಣ ನಡೆಯಿತು. ಈ ಎರಡೂ ಘಟನೆಗಳು ಹಿಂದೂ  ಸಮುದಾಯಕ್ಕೆ ಸಂಬಂಧಿಸಿದವುಗಳಾಗಿರುವುದರಿಂದ  ಮುಸ್ಲಿಮ್ ಸಮುದಾಯವನ್ನು ಸಂದೇಹಿಸುವ ಮತ್ತು ಪರೋಕ್ಷ  ವಾಗ್ದಾಳಿಗಳನ್ನು  ನಡೆಸುವ ರೂಪದಲ್ಲೇ  ಹೇಳಿಕೆಗಳು ಬರತೊಡಗಿದುವು. ಘಟನೆಯನ್ನು ಖಂಡಿಸಿ ಸ್ಥಳೀಯವಾಗಿ ಬಂದ್ ಕೂಡಾ ನಡೆಯಿತು. ಪ್ರತಿಭಟನೆಗಳೂ ನಡೆದುವು. ಇದೀಗ 8 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ವಿಶೇಷ ಏನೆಂದರೆ,

ಬಂಧಿತರಲ್ಲಿ ನಾಲ್ಕು ಮಂದಿ ಹಿಂದೂಗಳಾದರೆ ಮೂವರು ಮುಸ್ಲಿಮರು ಮತ್ತು ಓರ್ವ ಕ್ರೈಸ್ತ ಸಮುದಾಯವನ್ನು ಪ್ರತಿನಿಧಿಸಿದ್ದಾನೆ.  ಅಂದಹಾಗೆ, ಅಪರಾಧ ಕ್ಷೇತ್ರದಲ್ಲಿ ಸಕ್ರಿಯವಾಗಿರುವವರ ಈ ಧಾರ್ಮಿಕ ಸೌಹಾರ್ದವನ್ನು ಅನೇಕರು ವ್ಯಂಗ್ಯದಿಂದ ಇರಿದರು. ಇದಾಗಿ  ಮರ‍್ನಾಲ್ಕು ದಿನಗಳ ಬಳಿಕ 9 ಮಂದಿ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದರು. ಇವರೆಲ್ಲರ ಮೇಲೆ ರ‍್ಯಾಗಿಂಗ್ ಆರೋಪವಿತ್ತು.  ಇಬ್ಬರು ಕಿರಿಯ ನರ್ಸಿಂಗ್ ವಿದ್ಯಾರ್ಥಿಗಳನ್ನು ಬಲವಂತವಾಗಿ ತಮ್ಮ ಕೊಠಡಿಗೆ ಕರೆದೊಯ್ದು ಅವರಲ್ಲಿ ಹಾಡು ಹಾಡಿಸಿ, ಗಡ್ಡ  ಬೋಳಿಸಿ, ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿದ ಆರೋಪ ಇವರ ಮೇಲಿದೆ. ಇಲ್ಲೂ ನಾಗಬನ ಧ್ವಂಸ ಘಟನೆಯಲ್ಲಿ ಮೆರೆದ  ಅದೇ ಸೌಹಾರ್ದವಿದೆ. ಬಂಧಿತರಲ್ಲಿ ಮುಸ್ಲಿಮರೂ ಇದ್ದಾರೆ, ಕ್ರೈಸ್ತ ಮತ್ತು ಹಿಂದೂಗಳೂ ಇದ್ದಾರೆ. ನಿಜವಾಗಿ,

ಕೆಡುಕನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸಿ, ಆರೋಪ-ಪ್ರತ್ಯಾರೋಪ ಹೊರಿಸುವ ಸರ್ವರೂ ಆತ್ಮಾವಲೋಕನ ನಡೆಸಬೇಕಾದ  ಘಟನೆಗಳಿವು. ನಾಗಬನ ಹಿಂದೂಗಳ ಪಾಲಿಗೆ ಕಾರಣಿಕದ ಸ್ಥಳಗಳು. ಆದರೆ ಇವನ್ನು ಧ್ವಂಸಗೊಳಿಸುವಲ್ಲಿ ಹಿಂದೂ-ಮುಸ್ಲಿಮ್-ಕ್ರೈಸ್ತ  ನಾಮಧೇಯವುಳ್ಳ ಎಲ್ಲರೂ ಸೇರಿದ್ದಾರೆ. ರ‍್ಯಾಗಿಂಗ್‌ಗೆ ಒಳಗಾಗಿರುವುದು ಇಬ್ಬರು ಹಿಂದೂ ವಿದ್ಯಾರ್ಥಿಗಳು. ಆದರೆ ಇವರ ಮೇಲೆ  ರ‍್ಯಾಗಿಂಗ್ ನಡೆಸಿರುವ ಆರೋಪಿಗಳಲ್ಲಿ ಹಿಂದೂ-ಮುಸ್ಲಿಮ್-ಕ್ರೈಸ್ತ ಎಲ್ಲರೂ ಇದ್ದಾರೆ. ಒಂದು ರೀತಿಯಲ್ಲಿ,

ರೊಚ್ಚಿಗೇಳುವ ಸಮಾಜಕ್ಕೆ ಇದೊಂದು ಪಾಠ. ನಾಗಬನ ಧ್ವಂಸಗೊಳಿಸಿದ ಮತ್ತು ರ‍್ಯಾಗಿಂಗ್ ನಡೆಸಿದ ಅಷ್ಟೂ ಆರೋಪಿಗಳಲ್ಲಿ ಒಂದು  ಸಮಾನ ಅಂಶವಿದೆ. ಅದುವೇ ಮಾದಕ ವಸ್ತು ಸೇವನೆ ಮತ್ತು ಮದ್ಯಪಾನ. ಆದರೆ ಮಸೀದಿ ಮೇಲೆ ದಾಳಿಯಾದಾಗ ಹಿಂದೂಗಳ ಬಗ್ಗೆ  ಅನುಮಾನ ಪಡುವ ಮತ್ತು ಮಂದಿರದ ಮೇಲೆ ದಾಳಿಯಾದಾಗ ಮುಸ್ಲಿಮರ ಬಗ್ಗೆ ಸಂದೇಹ ಪಡುವ ಸಮಾಜ, ಇಷ್ಟೇ ತೀವ್ರತೆಯಿಂದ  ಗಾಂಜಾ ಮತ್ತು ಮದ್ಯದ ವಿರುದ್ಧ ಚಳವಳಿ ನಡೆಸುವುದಕ್ಕೆ ಮುಂದಾಗುವುದೇ ಇಲ್ಲ. ಅಂದಹಾಗೆ, ಈ ಎರಡು ಪ್ರಕರಣಗಳಿಗೆ ಸಂಬAಧಿಸಿ  ಮಾತ್ರವೇ ಗಾಂಜಾ ಮತ್ತು ಮದ್ಯವು ಅಪರಾಧಿ ಸ್ಥಾನದಲ್ಲಿ ನಿಂತಿರುವುದಲ್ಲ. ಈ ದೇಶದಲ್ಲಿ ನಡೆಯುವ ಹೆಚ್ಚಿನೆಲ್ಲ ಅತ್ಯಾಚಾರ, ಹತ್ಯೆ,  ಧರ್ಮದ್ವೇಷದ ಕೃತ್ಯಗಳ ಹಿಂದಿನ ಬಲುದೊಡ್ಡ ಚಾಲಕ ಶಕ್ತಿ ಈ ಮದ್ಯ ಮತ್ತು ಮಾದಕ ವಸ್ತುಗಳೇ. ಅತ್ಯಾಚಾರ ಪ್ರಕರಣಗಳಲ್ಲಂತೂ  ಸಾಲು ಸಾಲಾಗಿ ಈ ಸತ್ಯ ಮತ್ತೆ ಮತ್ತೆ ಸಾಬೀತುಗೊಳ್ಳುತ್ತಲೇ ಇದೆ. ದೇಶದಲ್ಲಿ ನಿರ್ಭಯ ಪ್ರಕರಣದಿಂದ ಹಿಡಿದು ಹೈದರಾಬಾದ್‌ನ ದಿಶಾಳ ವರೆಗೆ ಮತ್ತು ಮೈಸೂರಿನ ಚಾಮುಂಡೇಶ್ವರಿ ಅತ್ಯಾಚಾರ ಪ್ರಕರಣದಿಂದ ಹಿಡಿದು ಮಂಗಳೂರಿನ ಉಳಾಯಿಬೆಟ್ಟುವಿನಲ್ಲಿ 8  ವರ್ಷದ ಬಾಲೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವಲ್ಲಿ ವರೆಗೆ ಮದ್ಯವೇ ಪ್ರಧಾನ ಆರೋಪಿ. ಅಷ್ಟಕ್ಕೂ,

ತನಗೆ ಸಂಬಂಧವೇ ಇಲ್ಲದ, ಪರಿಚಿತರೇ ಅಲ್ಲದ ಮತ್ತು ಯಾವ ದ್ವೇಷವನ್ನೂ ಹೊಂದಿಲ್ಲದ ವ್ಯಕ್ತಿಯನ್ನು ಇನ್ನೋರ್ವ ವ್ಯಕ್ತಿ ವಿನಾ  ಕಾರಣ ಹತ್ಯೆ ಮಾಡುವುದಕ್ಕೆ ಏನು ಪ್ರಚೋದನೆ? ಅಂಥದ್ದೊಂದು ಧೈರ್ಯ ಅವರಲ್ಲಿ ಮೂಡುವುದಾದರೂ ಹೇಗೆ? ಎಂಟೋ ಐದೋ  ಮೂರೋ ವರ್ಷದ ಬಾಲೆಯನ್ನು ಅತ್ಯಾಚಾರ ಮಾಡಿ ಕೊಲೆಗೈಯಲು ಸಹಜ ಸ್ಥಿತಿಯಲ್ಲಿರುವ ಓರ್ವ ವ್ಯಕ್ತಿಗೆ ಸಾಧ್ಯವೇ? ದೈಹಿಕ  ಕಾಮನೆ ಅರಳುವುದಕ್ಕೂ ಒಂದು ಕಾರಣ ಇದೆ. ಯಾವ ದೃಷ್ಟಿಕೋನದಿಂದ ವಿಶ್ಲೇಷಿಸಿದರೂ ಮಕ್ಕಳು ಈ ಕಾರಣದ ಚೌಕಟ್ಟಿನೊಳಗೆ  ಬರುವುದಕ್ಕೆ ಸಾಧ್ಯವೇ ಇಲ್ಲ. ಹಾಗಿದ್ದರೂ ಹಸುಳೆಗಳ ಮೇಲೆ ಅತ್ಯಾಚಾರ ಏಕಾಗುತ್ತದೆ? ಎಲ್ಲೋ  ನಡೆದುಕೊಂಡು ಹೋಗುತ್ತಿರುವ  ವ್ಯಕ್ತಿಯನ್ನು ಅವರಿಗೆ ಪರಿಚಯವೇ ಇಲ್ಲದ ವ್ಯಕ್ತಿಗಳೇಕೆ ಥಳಿಸುತ್ತಾರೆ? ಅವರಿಬ್ಬರ ಧರ್ಮ ಬೇರೆ ಬೇರೆಯಾಗಿರುವುದು ಇದಕ್ಕೆ  ಕಾರಣವೇ? ಹಸುಳೆಗಳ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿಯೂ ಇಂಥದ್ದೇ  ಪ್ರಶ್ನೆಗಳಿವೆ. ಲೈಂಗಿಕ ಆಕರ್ಷಣೆಗೆ ಈಡು ಮಾಡುವ  ಯಾವ ದೈಹಿಕ ಬೆಳವಣಿಗೆಗಳು ಮಕ್ಕಳಲ್ಲಿದ್ದುವು? ಆಟವಾಡುವ ಹಸುಳೆಗಳ ಮೇಲಿನ ಅತ್ಯಾಚಾರಕ್ಕೆ ಏನು ಕಾರಣ? ನಿಜವಾಗಿ,

ಅಪರಾಧಗಳನ್ನು ಹಿಂದೂ-ಮುಸ್ಲಿಮ್ ಆಗಿ ವಿಭಜಿಸುವುದಕ್ಕಿಂತ ಮೊದಲು ನಾವೆಲ್ಲರೂ ಗಂಭೀರವಾಗಿ ಆಲೋಚಿಸಬೇಕಾದ  ಸಂಗತಿಗಳಿವು. ನಿಜವಾದ ಧರ್ಮಾನುಯಾಯಿ ಕೆಡುಕಿನಲ್ಲಿ ಭಾಗಿಯಾಗಲಾರ. ನಾಗಬನವಾಗಲಿ, ಮಂದಿರವಾಗಲಿ ಅಥವಾ ಹಿಂದೂ  ಆಚಾರ-ಸಂಪ್ರದಾಯಗಳಾಗಲಿ, ಓರ್ವ ಮುಸ್ಲಿಮನ ಪಾಲಿಗೆ ಗೌರವಾರ್ಹವೇ ಹೊರತು ಇನ್ನಾವುದೂ ಆಗಿರಲು ಸಾಧ್ಯವೇ ಇಲ್ಲ.  ಮಸೀದಿ, ಚರ್ಚ್ಗಳ ಕುರಿತು ಹಿಂದೂಗಳ ನಿಲುವೂ ಇದಕ್ಕಿಂತ ಭಿನ್ನವಲ್ಲ. ಹತ್ಯೆ, ಅತ್ಯಾಚಾರ, ಸುಳ್ಳು ಪ್ರಚಾರ, ದ್ವೇಷದ ಹಂಚುವಿಕೆ

ಇತ್ಯಾದಿಗಳೆಲ್ಲ ಸರ್ವರ ಪಾಲಿಗೂ ಕೆಡುಕುಗಳೇ ಹೊರತು ಒಳಿತುಗಳಲ್ಲ. ಇಷ್ಟಿದ್ದೂ ಮಂದಿರ, ಮಸೀದಿ, ಇಗರ್ಜಿಗಳು ಅಪವಿತ್ರಕ್ಕೋ  ಹಾನಿಗೋ ಒಳಗಾಗುತ್ತಲೇ ಇರುತ್ತದೆ. ಅತ್ಯಾಚಾರಗಳೂ ನಡೆಯುತ್ತಲಿರುತ್ತದೆ. ಧರ್ಮದ ಹೆಸರಿನಲ್ಲಿ ಹಗೆ, ಹಲ್ಲೆ, ಹತ್ಯೆಗಳನ್ನೂ  ನಡೆಸಲಾಗುತ್ತದೆ. ಹೀಗೆ ದುಷ್ಕೃತ್ಯಗಳಲ್ಲಿ ಭಾಗಿಯಾಗುವವರು ಮನುಷ್ಯರೇ ಆಗಿರುವುದರಿಂದ ಮತ್ತು ಅವರಿಗೊಂದು ಹೆಸರಿರುವುದರಿಂದ  ತಕ್ಷಣಕ್ಕೆ ಆ ಹೆಸರು ಯಾವ ಧರ್ಮದ ಜೊತೆ ಗುರುತಿಸಿಕೊಂಡಿರುತ್ತೋ ಆ ಧರ್ಮವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತದೆ.  ಅಸಲಿಗೆ ಆ ಧರ್ಮಕ್ಕೂ ಆತನ ಹೆಸರಿಗೂ ಹೆಸರಿನ ಹೊರತಾಗಿ ಯಾವ ಸಂಬಂಧವೂ ಇರುವುದಿಲ್ಲ. ಹೆಚ್ಚಿನ ಬಾರಿ ಮಾದಕ ವಸ್ತು  ಮತ್ತು ಮದ್ಯದ ಜೊತೆಗೆ ಅವರಿಗಿರುವಷ್ಟು ನಂಟು ಅವರು ಗುರುತಿಸಿಕೊಂಡಿರುವ ಧರ್ಮದ ಜೊತೆಗಿರುವುದಿಲ್ಲ. ಒಂದುವೇಳೆ,

ಮದ್ಯವನ್ನು ಅವರಿಗೆ ಅಲಭ್ಯಗೊಳಿಸಿದರೆ, ಅವರು ಅಂಥ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಸಾಧ್ಯತೆಯೇ ಇಲ್ಲ. ಆದರೆ, ಮಂದಿರ,  ಮಸೀದಿ, ಚರ್ಚ್ಗಳ ಕುರಿತಂತೆ ಅಪಾರ ಕಾಳಜಿ ತೋರುವ ಸಮಾಜವು ಅಪರಾಧ ಕೃತ್ಯಗಳಿಗೆ ಮೂಲ ಪ್ರೇರಣೆಯಾಗಿರುವ ಈ ಮದ್ಯ  ಮತ್ತು ಮಾದಕ ವಸ್ತುಗಳ ಕುರಿತಂತೆ ಆತಂಕ ಪಡುವುದಿಲ್ಲ. ಒಂದುವೇಳೆ ಆರೋಪಿಯ ಹೆಸರನ್ನು ನೋಡಿಕೊಂಡು ಅಪರಾಧಗಳನ್ನು  ಹಿಂದೂ-ಮುಸ್ಲಿಮ್ ಖಾತೆಗೆ ವರ್ಗಾಯಿಸುವುದಕ್ಕಿಂತ ಮದ್ಯ ಮತ್ತು ಮಾದಕ ವಸ್ತು ಎಂಬ ಏಕಖಾತೆಗೆ ವರ್ಗಾಯಿಸತೊಡಗಿದರೆ ಫ ಲಿತಾಂಶ ಇದಕ್ಕಿಂತ ಖಂಡಿತ ಉತ್ತಮವಾಗಬಹುದು. ಎಲ್ಲರೂ ತಮ್ಮ ಪಾಲಿನ ಸಮಾನ ಶತ್ರುವಾಗಿ ಮದ್ಯ ಮತ್ತು ಮಾದಕ ವಸ್ತುಗಳನ್ನು  ಯಾವಾಗ ಪರಿಗಣಿಸುತ್ತಾರೋ ಆಗ ಅಪರಾಧ ಕೃತ್ಯಗಳಲ್ಲಿ ಖಂಡಿತ ಇಳಿಮುಖವಾಗಲು ಪ್ರಾರಂಭವಾಗುತ್ತದೆ. ಅಮಲು ಪದಾರ್ಥಗಳು  ಅಲಭ್ಯವಾಗುವಂತಹ ಗ್ರಾಮ, ಪಟ್ಟಣ, ಜಿಲ್ಲೆಗಳನ್ನು ಕಟ್ಟುವ ಪ್ರಯತ್ನ ಸಾಗಿದರೆ ನಿಧಾನಕ್ಕೆ ಆರೋಗ್ಯಪೂರ್ಣ ಸಮಾಜ ತನ್ನಿಂತಾನೇ  ನಿರ್ಮಾಣವಾಗಬಲ್ಲುದು.
ಈಗ ಅಪರಾಧಿಗಳ ನಡುವೆ ಧಾರ್ಮಿಕ ಸೌಹಾರ್ದವಿದೆ. ಎಲ್ಲಿವರೆಗೆ ಅಮಲು ಪದಾರ್ಥಗಳು ಲಭ್ಯವಿರುತ್ತದೋ ಅಲ್ಲಿವರೆಗೆ ಈ  ಸೌಹಾರ್ದಕ್ಕೆ ಯಾವ ಅಡ್ಡಿಯೂ ಎದುರಾಗಲಾರದು. ಯಾವಾಗ ಇವು ಅಲಭ್ಯಗೊಳ್ಳುತ್ತೋ ಆಗ ಅವರ ನಡುವಿನ ಸೌಹಾರ್ದಕ್ಕೆ ಭಂಗ  ಬರಬಹುದಲ್ಲದೇ, ಸಾಮಾಜಿಕವಾಗಿ ಧಾರ್ಮಿಕ ಸೌಹಾರ್ದ ನೆಲೆಗೊಳ್ಳಬಹುದು.

 ನಾಗಬನ ಮತ್ತು ರ‍್ಯಾಗಿಂಗ್ ಪ್ರಕರಣಗಳು ಸ್ಪಷ್ಟಪಡಿಸುವುದು ಇದನ್ನೇ.

No comments:

Post a Comment