Saturday 18 December 2021

ಎಪಿಸಿಆರ್ ವರದಿ ಮತ್ತು ಕಟಕಟೆಯಲ್ಲಿರುವ ಕ್ರೈಸ್ತ, ಮುಸ್ಲಿಮರು




ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಅಥವಾ ಎಪಿಸಿಆರ್ ನೇತೃತ್ವದ ಸರಕಾರೇತರ ಸಂಸ್ಥೆಯು ಇನ್ನೆರಡು  ಸಂಸ್ಥೆಗಳ ಸಹಕಾರದೊಂದಿಗೆ ಸತ್ಯಶೋಧನಾ ವರದಿಯೊಂದನ್ನು ಬಿಡುಗಡೆಗೊಳಿಸಿದೆ. ‘ಭಾರತದಲ್ಲಿ ದಾಳಿಗೊಳಗಾದ ಕ್ರೈಸ್ತರು ’  ಎಂಬುದು ವರದಿಯ ಶೀರ್ಷಿಕೆ. ಇದರಲ್ಲಿ ರಾಜ್ಯಕ್ಕೆ ಸಂಬಂಧಿಸಿ ಆರು ಚರ್ಚ್ ಗಳ  ಉಲ್ಲೇಖ ಇದೆ. ಕಳೆದ ಎರಡು ತಿಂಗಳಲ್ಲಿ 5  ಚರ್ಚ್ ಗಳ  ಮೇಲೆ ದಾಳಿ ನಡೆದಿರುವುದನ್ನು ಈ ವರದಿಯಲ್ಲಿ ಎತ್ತಿ ಹೇಳಲಾಗಿದೆ. ಜನವರಿ 3ರಂದು ಕೊಪ್ಪಳದಲ್ಲಿ, ಅಕ್ಟೋಬರ್  10ರಂದು ಉಡುಪಿ ಮತ್ತು ಉತ್ತರ ಕರ್ನಾಟಕದ ಹಳಿಯಾಳದಲ್ಲಿ, ನವೆಂಬರ್ 10ರಂದು ಬೆಳಗಾವಿಯಲ್ಲಿ, ನವೆಂಬರ್ 14ರಂದು  ಬೆಂಗಳೂರಿನ ರಾಜನಕುಂಟೆಯಲ್ಲಿ ಮತ್ತು ಇದೇ ದಿನ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಹಾಗೂ ನವೆಂಬರ್ 29ರಂದು ಹಾಸ ನದ ಬೇಲೂರಿನಲ್ಲಿ ಕ್ರೈಸ್ತ ವಿರೋಧಿ ಘಟನೆಗಳು ನಡೆದಿವೆ. ಕ್ರೈಸ್ತರ ಪ್ರಾರ್ಥನಾ ಚಟುವಟಿಕೆಗಳಿಗೆ ಅಡ್ಡಿಪಡಿಸುವ, ಪಾದ್ರಿಗಳ ಮೇಲೆ ಹಲ್ಲೆ  ನಡೆಸುವ ಹಾಗೂ ಚರ್ಚ್ ಗಳಿಗೆ  ಹಾನಿಯೆಸಗುವ ಪ್ರಕರಣಗಳು ನಡೆದಿರುವುದನ್ನು ವರದಿಯಲ್ಲಿ ಆಧಾರ ಸಮೇತ ಉಲ್ಲೇಖಿಸಲಾಗಿದೆ.  ಯುನೈಟೆಡ್ ಕ್ರಿಶ್ಚಿಯನ್ ಫೋರಂ ಮತ್ತು 
ಯುನೈಟೆಡ್ ಅಗೈನ್ಸ್ಟ್ ಹೇಟ್ ಎಂಬೆರಡು ಸಂಸ್ಥೆಗಳೂ ಈ ವರದಿಯನ್ನು ತಯಾರಿಸುವಲ್ಲಿ  ನೆರವಾಗಿವೆ. ಹಾಗಂತ,

ಎಪಿಸಿಆರ್ ನೇತೃತ್ವದಲ್ಲಿ ತಯಾರಿಸಲಾದ ಈ ವರದಿಯನ್ನು ಓದಿ ರಾಜ್ಯ ಸರಕಾರ ಇಲ್ಲವೇ ರಾಜ್ಯದ ನಾಗರಿಕರು ಬೆಚ್ಚಿ ಬೀಳುತ್ತಾರೆ  ಎಂದು ನಿರೀಕ್ಷಿಸುವ ಸನ್ನಿವೇಶವೇನೂ ಈಗಿಲ್ಲ. ಈಗಾಗಲೇ ಈ ದೇಶದ ಮುಸ್ಲಿಮರು ಇದಕ್ಕಿಂತಲೂ ಕ್ರೂರವಾದ ದೌರ್ಜನ್ಯ ಮತ್ತು  ಹಿಂಸೆಗಳಿಗೆ ನಿತ್ಯ ತುತ್ತಾಗುತ್ತಿರುವುದನ್ನು ಮಾಧ್ಯಮಗಳು ವರದಿ ಮಾಡುತ್ತಲೇ ಇವೆ. ಪ್ರತಿ ಶುಕ್ರವಾರ ಮುಸ್ಲಿಮರ ಜುಮಾ ನಮಾಜ್ ಗೆ  ಅಡ್ಡಿಪಡಿಸುವ ವರದಿ ಹರ್ಯಾಣದಿಂದ ವರದಿಯಾಗುತ್ತಿದೆ. ತೆರೆದ ಬಯಲಲ್ಲಿ ನಮಾಜ್  ಮಾಡುವುದಕ್ಕೆ ಸರಕಾರ ಅನುಮತಿಸಿರುವ  ಹೊರತಾಗಿಯೂ ಸಂಘಪರಿವಾರ ಅಡ್ಡಿಪಡಿಸುತ್ತಿದೆ. ಮುಸ್ಲಿಮರನ್ನು ಥಳಿಸುವ, ಅವರ ಗಡ್ಡ ಬೋಳಿಸುವ ಮತ್ತು ವಿವಿಧ ದೌರ್ಜನ್ಯ,  ಅವಮಾನಗಳಿಗೆ ತುತ್ತಾಗಿಸುವ ಕೃತ್ಯಗಳು ಅಲ್ಲಲ್ಲಿ ಪ್ರತಿನಿತ್ಯವೆಂಬಂತೆ  ನಡೆಯುತ್ತಿವೆ. ಮುಸ್ಲಿಮರನ್ನು ಗುರಿಯಾಗಿಸಿ ದ್ವೇಷಭಾಷಣ  ಮಾಡಲಾಗುತ್ತಿದೆ. ಮುಸ್ಲಿಮರ ವಿರುದ್ಧ ಹಿಂಸೆಗೆ ಅಕಾರಣವಾಗಿ ಪ್ರಚೋದಿಸಲಾಗುತ್ತಿದೆ. ಅಂದಹಾಗೆ,

ಮುಸ್ಲಿಮರ ಮೇಲೆ ನಡೆದಿರುವ ದೌರ್ಜನ್ಯಗಳ ಮೊತ್ತಕ್ಕೆ ಹೋಲಿಸಿದರೆ ಕ್ರೈಸ್ತರ ಮೇಲೆ ನಡೆದಿರುವ ದೌರ್ಜನ್ಯಗಳು ಕಡಿಮೆ. ಹಾಗಂತ,  ಇದಕ್ಕೆ ಕ್ರೈಸ್ತರ ಮೇಲೆ ಈ ದುಷ್ಕರ್ಮಿಗಳಿಗಿರುವ ಪ್ರೇಮಭಾವ ಕಾರಣ ಅಲ್ಲ. ಕ್ರೈಸ್ತರು ಮತ್ತು ಮುಸ್ಲಿಮರು ಈ ದುಷ್ಕರ್ಮಿಗಳ ಪಾಲಿಗೆ  ಸಮಾನ ಗುರಿ. ಈ ದುಷ್ಕರ್ಮಿಗಳು ಬೆಂಬಲಿಸುವ ಅಥವಾ ಈ ದುಷ್ಕರ್ಮಿಗಳನ್ನು ಸಾಕುವ ರಾಜಕೀಯ ಪಕ್ಷದ ಪಾಲಿಗೆ ಇವರೇ  ಆಮ್ಲಜನಕ. ಯಾವಾಗ ಈ ದುಷ್ಕರ್ಮಿಗಳೆಂಬ ಆಮ್ಲಜನಕದ ನಳಿಗೆಯ ಸಂಪರ್ಕವನ್ನು ಆ ರಾಜಕೀಯ ಪಕ್ಷದಿಂದ  ತಪ್ಪಿಸಿಬಿಡಲಾಗುತ್ತೋ ಆಗಲೇ ಆ ಪಕ್ಷದ ಆಯುಷ್ಯ ಕೊನೆಗೊಳ್ಳುತ್ತದೆ. ಇದು ಈ ದುಷ್ಕರ್ಮಿಗಳಿಗೂ ಗೊತ್ತು. ಆ ರಾಜಕೀಯ ಪಕ್ಷಕ್ಕೂ  ಗೊತ್ತು. ಆದ್ದರಿಂದ,

ಈ ದೌರ್ಜನ್ಯಕೋರರನ್ನು ಸದಾ ಬ್ಯುಝಿಯಾಗಿಡಬೇಕಾದ ಒತ್ತಡವೊಂದು ನಿರ್ದಿಷ್ಟ ರಾಜಕೀಯ ಪಕ್ಷದ ಮೇಲಿದೆ. ಪ್ರತಿದಿನ ಏ ನಾದರೊಂದು ಗುರಿಯನ್ನು ಈ ದೌರ್ಜನ್ಯಕೋರರಿಗೆ ನೀಡದಿದ್ದರೆ ತಮ್ಮ ಅಸ್ತಿತ್ವ ಕಷ್ಟಸಾಧ್ಯ ಎಂಬ ಅರಿವೂ ಅದಕ್ಕಿದೆ. ಆದ್ದರಿಂದಲೇ,  ಮುಸ್ಲಿಮ್ ದ್ವೇಷದ ಕಟ್ಟುಕತೆಗಳನ್ನು ತಯಾರಿಸಿ ಈ ಗುಂಪಿಗೆ ಹಂಚುತ್ತಾರೆ. ಎಂದೋ ಕಳೆದು ಹೋದ ರಾಜರ ಹೆಸರಿನಿಂದ ತೊಡಗಿ  ಈಗಿನ ಮುಸ್ಲಿಮರ ವರೆಗೆ ಸುಳ್ಳುಗಳನ್ನು ಪೋಣಿಸಿ ಸಮಾಜಕ್ಕೆ ಹಂಚುತ್ತಿರುತ್ತಾರೆ. ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು  ಇಂಥ ಅಸಂಖ್ಯ ಸುಳ್ಳುಗಳಲ್ಲಿ ಒಂದಾದರೆ ಇನ್ನೊಂದು, ಕ್ರೈಸ್ತರು ಮತಾಂತರ ಮಾಡುತ್ತಾರೆ ಎನ್ನುವುದು. ಮುಸ್ಲಿಮರನ್ನು ಗುರಿಯಾಗಿಸಿ  ಆಗಾಗ ಸಮಾನ ನಾಗರಿಕ ಸಂಹಿತೆಯ ಜಪ ಮಾಡುವ ಈ ರಾಜಕೀಯ ಪಕ್ಷವು ಕ್ರೈಸ್ತರನ್ನು ನೋಡಿಕೊಂಡು ‘ಮತಾಂತರ ನಿಷೇಧ  ಕಾಯ್ದೆ’ಯ ಬಗ್ಗೆ ಮಾತಾಡುತ್ತಿರುತ್ತದೆ. ಈ ಬಾರಿಯ ಸಂಸತ್ ಅಧಿವೇಶನದಲ್ಲಿ ಬಿಜೆಪಿ ಸಂಸದರೊಬ್ಬರು ಸಮಾನ ನಾಗರಿಕ ಸಂಹಿತೆ  ಮಸೂದೆಯನ್ನು ಖಾಸಗಿಯಾಗಿ ಮಂಡಿಸಿದ್ದಾರೆ. ತನ್ನ ಬೆಂಬಲಿಗ ಪರಿವಾರವನ್ನು ಸಂತಸಪಡಿಸುವುದು ಮತ್ತು ಸಾರ್ವಜನಿಕವಾಗಿ ಹಿಂದೂ-ಮುಸ್ಲಿಮ್ ಚರ್ಚೆಯೊಂದಿಗೆ ಧಾರ್ಮಿಕ ವಿಭಜನೆಯನ್ನು ಊರ್ಜಿತದಲ್ಲಿಡುವುದೇ ಇದರ ಉದ್ದೇಶ. ಇದು ಸರಕಾರ  ಮಂಡಿಸಿದ ಮಸೂದೆ ಅಲ್ಲ ಮತ್ತು ಇಂಥ ಮಸೂದೆಯನ್ನು ಯಾರಿಗೆ ಬೇಕಾದರೂ ಮಂಡಿಸಬಹುದು ಎಂಬುದು ಮಂಡಿಸಿದವರಿಗೂ  ಗೊತ್ತು. ಸರ್ಕಾರಕ್ಕೂ ಗೊತ್ತು. ಆದರೆ, ಸರಕಾರ ಶೀಘ್ರವೇ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೆ ತರಲಿದೆ ಎಂದು  ತನ್ನ ಬೆಂಬಲಿಗ ಪರಿವಾರದ ಮೂಲಕ ಸಾರ್ವಜನಿಕವಾಗಿ ಆಡಿಕೊಳ್ಳುವುದಕ್ಕೆ ಆಧಾರವನ್ನು ಕೊಡುವುದು ಇದರ ಉದ್ದೇಶ.

ಸಿಎಎ ಕಾಯ್ದೆಯ ವ್ಯಾಪ್ತಿಯಿಂದ ಮುಸ್ಲಿಮರನ್ನು ಹೊರಗಿರಿಸಿ ಕ್ರೈಸ್ತರನ್ನು ಸೇರಿಸಿಕೊಳ್ಳಲಾಯಿತು. ಡಿಸೆಂಬರ್ 31, 2014ಕ್ಕಿಂತ  ಮೊದಲು ಪಾಕ್, ಬಾಂಗ್ಲಾ ಮತ್ತು ಅಫಘಾನ್‌ನಿಂದ ಭಾರತಕ್ಕೆ ಬಂದ ಮುಸ್ಲಿಮರಲ್ಲದ ಉಳಿದೆಲ್ಲ ಧರ್ಮೀಯರಿಗೂ ಪೌರತ್ವ ಕೊಡುವ  ಈ ಕಾಯ್ದೆಯನ್ನು ಸಂವಿಧಾನ ಪ್ರೇಮಿಗಳು ವಿರೋಧಿಸಬಹುದು ಎಂಬುದು ಆಡಳಿತಗಾರರಿಗೆ ತಿಳಿದಿಲ್ಲ ಎಂದು ಹೇಳುವ ಹಾಗಿಲ್ಲ. ಈ  ಕಾನೂನಿನ ವಿರುದ್ಧ ದೇಶದಲ್ಲಿ ಪ್ರತಿಭಟನೆ ಏಳಬೇಕು ಮತ್ತು ಆ ಇಡೀ ಪ್ರತಿಭಟನೆಯನ್ನು ಮುಸ್ಲಿಮ್ ಓಲೈಕೆಯಾಗಿ ಪ್ರತಿಬಿಂಬಿಸಬೇಕು  ಎಂಬುದು ಆಡಳಿತಗಾರರ ಹುನ್ನಾರವಾಗಿರಬಹುದು. ಇದೀಗ ರಾಜ್ಯ ಸರ್ಕಾರ ತರಲು ಹೊರಟಿರುವ ಮತಾಂತರ ನಿಷೇಧ  ಕಾಯ್ದೆಯೂ ಇಂಥದ್ದೇ  ಒಂದು ಹುನ್ನಾರ. ಈ ಕಾಯ್ದೆಯನ್ನು ತರುತ್ತೇವೆ ಎಂದು ಹೇಳುವ ಮೊದಲು ರಾಜ್ಯದ ಹಲವು ಕಡೆ ಕ್ರೈಸ್ತ  ಪ್ರಾರ್ಥನಾ ಮಂದಿರಗಳ ಮೇಲೆ ಮತ್ತು ಪಾದ್ರಿಗಳ ಮೇಲೆ ದಾಳಿ ನಡೆಸಲಾಯಿತು. ಶಾಸಕ ಗೂಳಿಹಟ್ಟಿ ಶೇಖರ್ ಅವರು ವಿಧಾ ನಸಭೆಯಲ್ಲಿ ತನ್ನ ತಾಯಿಯ ಮತಾಂತರವನ್ನು ಹೇಳಿಕೊಂಡರು. ಅದರ ಬೆನ್ನಿಗೇ ಕ್ರೈಸ್ತರು ಮತಾಂತರ ಮಾಡುತ್ತಿದ್ದಾರೆ ಎಂಬ  ಹೇಳಿಕೆಗಳನ್ನು ಹಲವು ನಾಯಕರು ಬೆನ್ನುಬೆನ್ನಿಗೇ ನೀಡತೊಡಗಿದರು. ಆ ಮೂಲಕ ರಾಜ್ಯದ ಗಮನವನ್ನು ಮುಸ್ಲಿಮರಿಂದ ಕ್ರೈಸ್ತರ  ಕಡೆಗೆ ತಿರುಗಿಸುವ ಪ್ರಯತ್ನ ನಡೆಸಲಾಯಿತು. ಹಾಗಂತ,

ಇದು ಮೊದಲ ಘಟನೆ ಅಲ್ಲ. ಒಂದೋ ಮುಸ್ಲಿಮರು ಅಥವಾ ಕ್ರೈಸ್ತರು ರಾಜ್ಯದಲ್ಲಿ ಸದಾ ದೂಷಣೆಗೆ ಒಳಗಾಗುತ್ತಿರಬೇಕು ಮತ್ತು  ಅವರನ್ನು ಕಟಕಟೆಯಲ್ಲಿ ನಿಲ್ಲಿಸಿ ದಂಡಿಸುತ್ತಿರಬೇಕು ಎಂದು ಆಡಳಿತದಲ್ಲಿರುವವರು ತೀರ್ಮಾನಿಸಿದ್ದಾರೆ. ಹಾಗೆ ಮಾಡದಿದ್ದರೆ ತಮ್ಮ  ಬೆಂಬಲಿಗ ಪರಿವಾರದಲ್ಲಿ ಉತ್ಸಾಹ ಕುಗ್ಗುತ್ತದೆ. ಹಾಗೇನಾದರೂ ಆದರೆ ಸರ್ಕಾರದ ಆಡಳಿತ ವೈಫಲ್ಯವನ್ನು ಜನರು ಚರ್ಚಿಸುವುದಕ್ಕೆ  ಪ್ರಾರಂಭಿಸುತ್ತಾರೆ. ಅಂಥ ಬೆಳವಣಿಗೆಯೇನಾದರೂ ಯಶಸ್ವಿಯಾಗಿಬಿಟ್ಟರೆ ಹಿಂದೂ-ಮುಸ್ಲಿಮ್-ಕ್ರೈಸ್ತರೆಲ್ಲ ಒಟ್ಟಾಗುವ ಸನ್ನಿವೇಶ  ನಿರ್ಮಾಣವಾಗಬಹುದು ಮತ್ತು ಅದು ತಮ್ಮನ್ನು ಅಧಿಕಾರದಿಂದ ಕೆಳಗಿಳಿಸಬಹುದು ಎಂಬ ಭೀತಿ ಸರ್ಕಾರಕ್ಕಿದೆ. ನಿಜವಾಗಿ,

ಎಪಿಸಿಆರ್ ಬಿಡುಗಡೆಗೊಳಿಸಿರುವ ವರದಿಯು ಈ ದೇಶದ ನಾಗರಿಕ ಸಮೂಹವೊಂದಕ್ಕೆ ಸಂಬಂಧಿಸಿದ್ದು. ಆದ್ದರಿಂದ ಅದನ್ನು ಕ್ರೆÊಸ್ತ  ಸಮುದಾಯಕ್ಕೆ ಸಂಬಂಧಿಸಿದ ವರದಿ ಎಂದು ಪ್ರತ್ಯೇಕಿಸುವುದು ಮತ್ತು ಅದನ್ನು ಕ್ರೈಸ್ತರು ನೋಡಿಕೊಳ್ಳಲಿ ಎಂದು ಉಳಿದವರು ಸುಮ್ಮ ನಿದ್ದು ಬಿಡುವುದು ಅತ್ಯಂತ ಅಪಾಯಕಾರಿ. ಈ ದೇಶದ ನಾಗರಿಕರ ಸಮಸ್ಯೆಗಳು ಹಿಂದೂ-ಮುಸ್ಲಿಮ್-ಕ್ರೈಸ್ತ ಎಂಬ ಹಣೆಪಟ್ಟಿಯನ್ನು  ಅಂಟಿಸಿಕೊಂಡು ಗುರುತಿಗೀಡಾಗಬೇಕು ಎಂಬುದು ಈ ಸಮಸ್ಯೆಗೆ ಕಾರಣರಾದವರ ಬಯಕೆ. ಅವರ ಯಶಸ್ಸು ಇರುವುದೇ ಇದರಲ್ಲಿ.  ಯಾವಾಗ ಕ್ರೈಸ್ತರ ಮೇಲಿನ ದಾಳಿಗಳನ್ನು ಕ್ರೈಸ್ತರಿಗೆ ಮತ್ತು ಮುಸ್ಲಿಮರ ಮೇಲಿನ ದಾಳಿಗಳನ್ನು ಮುಸ್ಲಿಮರಿಗೆ ನಾವು  ಸೀಮಿತಗೊಳಿಸಿಬಿಡುತ್ತೇವೋ ಅಲ್ಲಿವರೆಗೆ ಆ ದೌರ್ಜನ್ಯಕೋರರು ಯಶಸ್ವಿಯಾಗುತ್ತಲೇ ಹೋಗುತ್ತಾರೆ. ಆದ್ದರಿಂದ ಎಪಿಸಿಆರ್‌ನ ವರ ದಿಯು 6 ಕೋಟಿ ಕನ್ನಡಿಗರ ಧ್ವನಿಯಾಗಬೇಕು. ತಮ್ಮ ಮೇಲೆ ನಡೆದ ದೌರ್ಜನ್ಯ ಎಂಬಂತೆ  ಅವರೆಲ್ಲ ಅಂದುಕೊಳ್ಳಬೇಕು ಮತ್ತು  ಸರ್ಕಾರದ ವಿಭಜಿಸಿ ಆಳುವ ತಂತ್ರವನ್ನು ಸೋಲಿಸಬೇಕು.

No comments:

Post a Comment